ಮೇ 14, 2019

ಒಂದು ಬೊಗಸೆ ಪ್ರೀತಿ - 16

ಡಾ. ಅಶೋಕ್.‌ ಕೆ. ಆರ್.‌


ಒಂದು ಬೊಗಸೆ ಪ್ರೀತಿಯ ಹಿಂದಿನ ಅಧ್ಯಾಯಗಳನ್ನು ಓದಲು ಇಲ್ಲಿ ಕ್ಲಿಕ್ಕಿಸಿ.

‘ಅಯ್ಯೋ ಹಂಗೆಲ್ಲ ಏನಿಲ್ಲಪ್ಪ. ರಜೆಯಲ್ಲಿ ಅಜ್ಜಿ ಮನೆಗೆ ಹೋಗಿಬಿಟ್ಟಿದ್ದೆ. ಅಲ್ಲಿ ಕಸಿನ್ಸ್ ಜೊತೆಯೆಲ್ಲ ಆಟ ಸುತ್ತಾಟ. ಸಮಯ ಕಳೆದಿದ್ದೇ ಗೊತ್ತಾಗಲಿಲ್ಲ. ನನ್ನಲ್ಲಿನ್ನೂ ಪುರುಷೋತ್ತಮನ ಬಗ್ಗೆ ಪ್ರೀತಿ ಪ್ರೇಮದ ಭಾವನೆಗಳು ಹುಟ್ಟಿರಲಿಲ್ಲವಲ್ಲ ಹಾಗಾಗಿ ಹೆಚ್ಚೇನು ಅವನ ನೆನಪಾಗಲಿಲ್ಲ. ಅವನು ಹೇಳಿದ್ದು ನೆನಪಾದಾಗಲೆಲ್ಲ ನನಗೆ ಅಶ್ವಿನಿಯನ್ನು ಹೇಗೆ ಎದುರಿಸುವುದು ಅವಳಿಗೆ ಹೇಗೆ ಹೇಳುವುದು ಎನ್ನುವುದೇ ಹೆಚ್ಚು ಕಾಡುತ್ತಿತ್ತು. ಅವಳಿಗೆ ಊಹಿಸಲು ಸಾಧ್ಯವಾಗಿದ್ದು ನನಗಾಗಲಿಲ್ಲವಲ್ಲ ಎಂದು ಬೇಸರವಾಗುತ್ತಿತ್ತು. ರಜೆಯ ಮಜದ ನಡುವೆ ಅದನ್ನೆಲ್ಲ ಜಾಸ್ತಿ ಯೋಚಿಸಲೂ ಇಲ್ಲ ಬಿಡು. ರಜೆ ಮುಗಿಸಿ ಬಂದ ಮೇಲೆ ಮನೆಯ ಬಳಿಯೇ ಅಶ್ವಿನಿ ಸಿಕ್ಕಿದಳು. ಅವಳ ಮನೆಗೇ ಹರಟಲು ಹೋದೆವು. ಮನೆಯಲ್ಯಾರೂ ಇರಲಿಲ್ಲ. ಹಾಲಿನಲ್ಲಿ ಟಿವಿ ಹಾಕಿ ಕುಳಿತೆವು. ಅದೂ ಇದೂ ಮಾತನಾಡಲು ಪ್ರಾರಂಭಿಸಿದೆವು. ನಾನು ಮುಖಕ್ಕೆ ಮುಖ ಕೊಟ್ಟು ಮಾತನಾಡದೆ ಇದ್ದುದು ಅವಳ ಗಮನಕ್ಕೆ ಬಂತು. ಜನರ ಜೊತೆ ಹೆಚ್ಚು ಬೆರೆಯದೆ ಮೂರೊತ್ತೂ ಓದ್ತಾನೇ ಕೂರ್ತಿದ್ದ ಅವಳಿಗೆ ಬೇರೆಯವರ ನಡವಳಿಕೆಯಿಂದಾನೇ ಅರ್ಧ ವಿಷಯ ಗೊತ್ತಾಗಿಬಿಡುವುದಾದರೂ ಹೇಗೆ ಎಂದು ಕೆಲವೊಮ್ಮೆ ಅಚ್ಚರಿಯಾಗುತ್ತದೆ. “ಏನಾಯ್ತೆ?” ಎಂದು ಕೇಳಿದಳು.

ಒಂದೊಂದೇ ಎಪಿಸೋಡು ಹುಡುಕುಡುಕಿ ಓದೋಕೆ ಬೇಸರವಾ? ಪೂರ್ತಿ ಇ - ಪುಸ್ತಕ ತೆಗೆದುಕೊಳ್ಳಲು ಇಲ್ಲಿ ಕ್ಲಿಕ್ಕಿಸಿ.

ಮೇ 9, 2019

ಶಕ್ತಿ ನೀಡು!

ಕು.ಸ.ಮಧುಸೂದನ ರಂಗೇನಹಳ್ಳಿ. 
ಹಿತವೆನಿಸುತ್ತಿದೆ ನಿನ್ನೀ ಮೆದು ಸ್ಪರ್ಶ
ಮೆಲು ಮಾತು
ಅಂತೂ ಬಂದೆಯಲ್ಲ ಮರಣಶಯ್ಯೆಯಡೆಗಾದರು
ಅದೇ ಸಂತಸ
ಷ್ಟು ಸನಿಹವಿದ್ದೀಯವೆಂದರೆ ದೂರದ ಪರಲೋಕವೂ ಇದೀಗ ಹತ್ತಿರವೆನಿಸುತ್ತಿದೆ
ಕ್ಷಮಿಸಿಬಿಡಿ ಹಳೆಯ ಮಾತುಗಳನ್ನೂ ಮುನಿಸುಗಳನ್ನೂ
ದಾಟಿದ ಮೇಲೂ ಹೊಳೆಯ ಅಂಬಿಗನ ನೆನಪೇಕೆ
ಏನೂ ಕೊಡಲಿಲ್ಲವೆಂಬ ಕೊರಗೇಕೆ ನಿನಗೆ
ಕೊಡುವುದು ಮುಖ್ಯ ಕೊಟ್ಟದ್ದೇನೆಂದಲ್ಲ
ಸುಖವೋ ದು:ಖವೊ
ಬೇಡಬಿಡು ಯಾಕೆ ವೃಥಾ ವಾದವಿವಾದ
ಹೋಗಿಬಿಡುವ ಸಮಯದಲ್ಲೇಕೆ ತೋರುವೆ ಇಷ್ಟೊಂದು ಪ್ರೀತಿಯ
ಸ್ವರ್ಗವೊ ನರಕವೊ
ನೀನಿರದೆಯೂಬದುಕಬಲ್ಲ ಶಕ್ತಿಯ ನೀಡು!
ಕು.ಸ.ಮಧುಸೂದನರವರ ಮತ್ತಷ್ಟು ಬರಹಗಳನ್ನು ಓದಲು ಇಲ್ಲಿ ಕ್ಲಿಕ್ಕಿಸಿ. 

ಮೇ 7, 2019

ಒಂದು ಬೊಗಸೆ ಪ್ರೀತಿ - 15

ಡಾ. ಅಶೋಕ್.‌ ಕೆ. ಆರ್.‌

ಒಂದು ಬೊಗಸೆ ಪ್ರೀತಿಯ ಹಿಂದಿನ ಅಧ್ಯಾಯಗಳನ್ನು ಓದಲು ಇಲ್ಲಿ ಕ್ಲಿಕ್ಕಿಸಿ.
ಕತೆ ಅರ್ಧಕ್ಕೆ ನಿಲ್ಲಿಸಿದ ಕಾರಣ ನಿದಿರೆ ಬರಲಿಲ್ಲ. ಎಷ್ಟು ಚೆಂದದ ದಿನಗಳಲ್ವ ಅವು. ಪೂರ್ತಿಯಾಗಿ ಹೇಳಿದರಷ್ಟೇ ನನಗೂ ಸಲೀಸು. ಇವನು ನೋಡಿದರೆ ನಿದ್ರೆ ಬರುತ್ತೆ ಅಂದುಬಿಟ್ಟ. ಅದೇನು ನಿಜವಾಗ್ಲೂ ನಿದ್ರೆ ಬಂದಿತ್ತೊ ಅಥವಾ ನಾನೇ ಜಾಸ್ತಿ ಹೇಳಿ ತಲೆ ತಿಂದೆನೋ? ಫೋನಿನಲ್ಲಿ ಹೇಗೆ ಗೊತ್ತಾಗುತ್ತೆ? ಏನೇ ಅಂದ್ರೂ ಸಾಗರ್ ಸುಳ್ಳೇಳೋ ಪೈಕಿ ಅಲ್ಲ. ಬೋರಾಗಿದ್ರೂ ನಿಜಾನೇ ಹೇಳ್ತಿದ್ದ. ನಾಳೆ ಹೇಳೋದಿಕ್ಕಾಗಲ್ಲ. ನಾಡಿದ್ದು ನೈಟ್ ಡ್ಯೂಟಿ ದಿನ ಬ್ಯುಸಿ ಇದ್ದರೆ ಮತ್ತೆ ಕಷ್ಟ. ಮತ್ಯಾವಾಗ ಹೇಳ್ತೀನೋ ಹೇಳೋದೇ ಇಲ್ವೋ ನೋಡೋಣ. ಮೊಬೈಲ್ ಗುಣುಗುಟ್ಟಿತು.

“ಯಾಕೋ ನಿದ್ರೆ ಬರ್ತಿಲ್ಲ ಕಣೇ. ಪೂರ್ತಿ ಇವತ್ತೇ ಕೇಳ್ಬೇಕು ಅನ್ನಿಸ್ತಿದೆ. ನೀನು ಮಲಗಿಬಿಟ್ಟೋ ಏನೋ. ಗುಡ್ ನೈಟ್” ಎಂದು ಸಾಗರ್ ಮೆಸೇಜು ಕಳುಹಿಸಿದ್ದ. ನನಗೆ ಅನಿಸಿದ್ದೇ ಇವನಿಗೂ ಅನ್ನಿಸಿದೆ. ಹತ್ತಿರದಲ್ಲಿದ್ದಿದ್ದರೆ ತಬ್ಬಿ ಮುದ್ದಾಡುವಷ್ಟು ಖುಷಿಯಾಯಿತು. ತಕ್ಷಣವೇ ಫೋನ್ ಮಾಡಿದೆ.

‘ಹಲೋ’

“ಹಲೋ… ನಿನಗೂ ನಿದ್ದೆ ಬಂದಿಲ್ವ?”

‘ಅರ್ಧ ಕೇಳಿಸ್ಕೊಂಡ ನಿನಗೇ ನಿದ್ದೆ ಬಂದಿಲ್ಲ. ಇನ್ನು ಅರ್ಧ ಹೇಳಿದ ನನಗೆ ಎಲ್ಲಿಂದ ಬರ್ಬೇಕು’

“ಸರಿ ಮುಂದುವರಿಸು”
ಒಂದೊಂದೇ ಎಪಿಸೋಡು ಹುಡುಕುಡುಕಿ ಓದೋಕೆ ಬೇಸರವಾ? ಪೂರ್ತಿ ಇ - ಪುಸ್ತಕ ತೆಗೆದುಕೊಳ್ಳಲು ಇಲ್ಲಿ ಕ್ಲಿಕ್ಕಿಸಿ.

ಖಾಲಿಯಾಗುತ್ತೇನೆ.

ಅನಿತಾ ಗೌಡ 
ಮೌನ ಪಾಳಿ ಮುಗಿಸಿ
ಮಾತಿಗೆಡೆ ಮಾಡಿಕೊಟ್ಟ ಗಳಿಗೆಯಲ್ಲಿ
ತೂತಾದಂತೆ ಆಕಾಶ ಮಾತುಗಳ ಮಳೆ

ಕಟ್ಟಿಕೊಂಡ ಗೋಡೆಗಳನೊಡೆದು
ಮುಚ್ಚಿಕೊಂಡ ಚಿಪ್ಪುಗಳ ತೆರೆದು
ನೆಲ ಮುಗಿಲುಗಳ ಕಿವಿಗಡಚಿಕ್ಕುವಂತ
ಶಬ್ದಗಳ ದೀಪಾವಳಿ
ಕೇಳಿದ್ದಕ್ಕೆ ಉತ್ತರ
ಮತ್ತದಕ್ಕೆ ಪ್ರತಿ ಪ್ರಶ್ನೆ

ಮೇ 1, 2019

ಇಂಡಿಯಾದ ಚುನಾವಣೆಗಳು: ಡಿಸ್ಕೌಂಟ್ ಸೇಲಿನ ಬಿಗ್ ಬಜಾರುಗಳು

ಕು.ಸ.ಮಧುಸೂದನ ರಂಗೇನಹಳ್ಳಿ
ಇವತ್ತು ಇಂಡಿಯಾದಲ್ಲಿನ ಸಾರ್ವತ್ರಿಕ ಚುನಾವಣೆಗಳು ತಮ್ಮ ಸಾಂಪ್ರದಾಯಿಕ ಮೌಲ್ಯ ಮತ್ತು ಮಹತ್ವವನ್ನು ಕಳೆದು ಕೊಳ್ಳುತ್ತಿವೆಯೆಂದರೆ ತಪ್ಪಾಗಲಾರದು. ಹಾಗೆಂದು ಕಳೆದ ಏಳು ದಶಕಗಳಲ್ಲಿ ನಡೆದ ಎಲ್ಲ ಚುನಾವಣೆಗಳ ಬಗ್ಗೆಯೂ ಈ ಮಾತು ಹೇಳಲಾಗದು. 

ಆದರೆ ತೊಂಭತ್ತರ ದಶಕದ ನಂತರದಲ್ಲಿ ನಡೆದ ಬಹುತೇಕ ಚುನಾವಣೆಗಳು ತಮ್ಮ ಮೂಲ ಸ್ವರೂಪವನ್ನು ಕಳೆದುಕೊಂಡು ಒಂದು ಬೃಹತ್ ಸಂತೆಯ ಸ್ವರೂಪ ಪಡೆದುಕೊಂಡಿವೆ. ಬದಲಾದ ಆರ್ಥಿಕ ನೀತಿಯ ಫಲವಾಗಿ ಪ್ರವರ್ದಮಾನಕ್ಕೆ ಬಂದ ಎಲೆಕ್ಟ್ರಾನಿಕ್ ಮಾಧ್ಯಮಗಳು ಒಂದು ದೊಡ್ಡ ಉದ್ದಿಮೆಯಾಗಿ ಬೆಳೆದು ನಿಂತಿತು. ಆಗ ನಾಯಿಕೊಡೆಗಳಂತೆ ಹುಟ್ಟಿಕೊಂಡ ಇಂಗ್ಲೀಷ್ ಮತ್ತು ಪ್ರಾದೇಶಿಕ ಭಾಷೆಗಳ ದೃಶ್ಯ ಮಾಧ್ಯಮಗಳು ನಮ್ಮ ಇಡೀ ಚುನಾವಣೆಯ ಪ್ರಕ್ರಿಯೆಯನ್ನು ಹೈಜಾಕ್ ಮಾಡಿಬಿಟ್ಟಿವೆ.

ಇನ್ನೂ ಸ್ಪಷ್ಟವಾಗಿ ಹೇಳುವುದಾದಲ್ಲಿ, ನಮ್ಮ ಸಮೂಹ ಮಾದ್ಯಮಗಳು (ಮುಖ್ಯವಾಗಿ ಎಲೆಕ್ಟ್ರಾನಿಕ್ ಮಾದ್ಯಮಗಳು) ಇಡೀ ದೇಶವನ್ನು ಒಂದು ಮಾರುಕಟ್ಟೆಯನ್ನಾಗಿಸಿ (ನಗರದ ಬಾಷೆಯಲ್ಲಿ ಹೇಳುವುದಾದರೆ ಮಾಲ್ ಅನ್ನಾಗಿಸಿ) ಮತದಾರರನ್ನು ಗ್ರಾಹಕರನ್ನಾಗಿಸಿ, ರಾಜಕೀಯ ಪಕ್ಷಗಳು, ಮತ್ತವುಗಳ ನಾಯಕರುಗಳನ್ನು ಮಾರಾಟದ ಸರಕುಗಳನ್ನಾಗಿಸಿ ಬಿಟ್ಟಿವೆ. ಇದಕ್ಕೆ ಕಾರಣವೂ ಸ್ಪಷ್ಟ: ಮುಕ್ತ ಆರ್ಥಿಕ ನೀತಿಯ ನಂತರ ಪ್ರಾರಂಭವಾದ ಬಹುತೇಕ ಸುದ್ದಿವಾಹಿನಿಗಳು ಒಂದಲ್ಲಾ ಒಂದು ಕಾರ್ಪೋರೇಟ್-ಬಂಡವಾಳಶಾಹಿಗಳ ಒಡೆತನದಲ್ಲಿವೆ. ಅಂತಹ ಬಲಾಢ್ಯ ಶಕ್ತಿಗಳು ತಮ್ಮ ಹಿತಾಸಕ್ತಿಯನ್ನು ಕಾಪಾಡುವ ರಾಜಕೀಯ ಪಕ್ಷಗಳ ಮತ್ತು ಅವುಗಳ ನಾಯಕರುಗಳನ್ನು ತಮ್ಮ ಮಾಧ್ಯಮಗಳ ಮೂಲಕ ಪ್ರಮೋಟ್ ಮಾಡುತ್ತ, ಚುನಾವಣೆಗಳನ್ನು, ಮತ್ತದರ ಪಲಿತಾಂಶಗಳನ್ನು ತಮಗೆ ಬೇಕಾದ ರೀತಿಯಲ್ಲಿ ಬರುವಂತೆ ನೋಡಿಕೊಳ್ಳುವ ಪ್ರಯತ್ನದಲ್ಲಿವೆ. ತಮಗೆ ಬೇಕಾದ ಪಕ್ಷಗಳು,ನಾಯಕರುಗಳನ್ನು ಬಣ್ಣಬಣ್ಣದ ಜಾಹಿರಾತುಗಳ ಮೂಲಕ ಪರಿಣಾಮಕಾರಿಯಾಗಿ ಬಿಂಬಿಸುತ್ತ ಮತದಾರರಿಗೆ ಮಾರುತ್ತಿದ್ದಾರೆ. ಇದರ ಕಾರ್ಯವೈಖರಿ ಹೀಗಿದೆ:

ಏಪ್ರಿ 30, 2019

ಒಂದು ಬೊಗಸೆ ಪ್ರೀತಿ - 14

ಡಾ. ಅಶೋಕ್.‌ ಕೆ. ಆರ್.‌

ಒಂದು ಬೊಗಸೆ ಪ್ರೀತಿಯ ಹಿಂದಿನ ಅಧ್ಯಾಯಗಳನ್ನು ಓದಲು ಇಲ್ಲಿ ಕ್ಲಿಕ್ಕಿಸಿ.
‘ಮೊದಲ ಭೇಟಿ ಅಂತೆಲ್ಲ ಏನೂ ಇಲ್ಲ ಕಣೋ. ಅವನು ನಾನು ಒಂದೇ ಶಾಲೇಲಿ ಓದಿದ್ದು. ಬೇರೆ ಬೇರೆ ಸೆಕ್ಷನ್ ಇದ್ದೋ. ಮುಖ ಪರಿಚಯ ಇದ್ದೇ ಇತ್ತು’

“ಓ! ಲವ್ ಅಟ್ ಫಸ್ಟ್ ಸೈಟ್ ಅಲ್ಲ ಅನ್ನಪ್ಪ”

‘ಮೊದಲ ನೋಟಕ್ಕೇ ಪ್ರೇಮ ಹುಟ್ಟಿಸುವಷ್ಟೇನು ಚೆನ್ನಾಗಿಲ್ಲಪ್ಪ ನಾನು’

“ನೀನೆಷ್ಟು ಚೆನ್ನಾಗಿದ್ದೀಯ ಅಂತ ನನಗೂ ಗೊತ್ತು. ಕತೆ ಮುಂದುವರಿಸು. ನಾನು ಆ ಹ್ಞೂ ಅಂತ ಏನೂ ಹೇಳಲ್ಲ. ಸುಮ್ನೆ ಕೇಳ್ತಿರ್ತೀನಿ. ಹೇಳುವಂತವಳಾಗು ಧರಣಿ”

‘ಸರಿ ಗುರುಗಳೇ’ ಎಂದ್ಹೇಳಿ ಎಲ್ಲಿಂದ ಪ್ರಾರಂಭಿಸಿವುದೆಂದು ಯೋಚಿಸಿದೆ. ಪಿಯುಸಿಯ ದಿನಗಳಿಂದಲೇ ಪ್ರಾರಂಭಿಸಬೇಕಲ್ಲ ಎಂದುಕೊಂಡು ಹೇಳಲಾರಂಭಸಿದೆ.

‘ಪುರುಷೋತ್ತಮ್ ನಾನು ಒಂದೇ ಶಾಲೇಲಿ ಇದ್ದಿದ್ದು. ಆಗ್ಲೇ ಹೇಳಿದ್ನಲ್ಲ ಬೇರೆ ಬೇರೆ ಸೆಕ್ಷನ್ ಅಂತ. ಅವನ ಗೆಳೆಯನೊಬ್ಬನಿದ್ದ ಅಶೋಕ್ ಅಂತ. ಅವನು ನಮ್ಮ ತಂದೆ ಸ್ನೇಹಿತನ ಮಗ. ಅವಾಗಿವಾಗ ಅಪ್ಪ ಅಮ್ಮನ ಜೊತೆ ಮನೆಗೆ ಬರ್ತಿದ್ದರಿಂದ ಹಾಯ್ ಹೇಗಿದ್ದೀಯ ಅನ್ನುವಷ್ಟು ಪರಿಚಯ. ಶಾಲೆ ಮುಗೀತು. ಕಾಲೇಜು ಸೇರಿದೊ. ಕಾಲೇಜಿನಲ್ಲೂ ಪುರುಷೋತ್ತಮನದು ಬೇರೆ ಸೆಕ್ಷನ್. ಅಶೋಕ್ ಕೂಡ ಅವನದೇ ಸೆಕ್ಷನ್. ಮೊದಲ ವರುಷದ ಪಿಯುಸಿ ಇನ್ನೇನು ಮುಗಿಯುತ್ತಿದ್ದ ಸಮಯ. ನಿನಗೇ ಗೊತ್ತಲ್ಲ, ಮೊದಲ ವರ್ಷ ಓದೋದೆಲ್ಲ ಕಡಿಮೆ ಇರುತ್ತೆ. ಯೂನಿಫಾರ್ಮಿನ ಶಾಲೆಯಿಂದ ಕಲರ್ ಕಲರ್ ಬಟ್ಟೆ ಹಾಕಿಕೊಂಡು ಖುಷಿ ಪಡೋ ಪಿಯುಸಿಗೆ ಸೇರಿದಾಗ ಓದುವ ಮನಸ್ಸೇ ಇರಲ್ಲ. ಈಗ ಬಿಡು ಪಿಯುಸಿಗೂ ಯೂನಿಫಾರ್ಮ್ ಮಾಡಿಬಿಟ್ಟಿದ್ದಾರೆ ಸುಮಾರು ಕಡೆ. ಪರೀಕ್ಷೆ ಹತ್ತಿರವಾದಾಗ ಭಯವಾಗಲು ಶುರುವಾಯಿತು. ಓದಿರೋದು ಇಷ್ಟೇ ಇಷ್ಟು. ಸಿಲಬಸ್ ನೋಡಿದ್ರೆ ಅಷ್ಟೊಂದಿದೆ. ಹತ್ತನೇ ಕ್ಲಾಸಲ್ಲಿ ತೊಂಭತ್ತು ಪರ್ಸೆಂಟ್ ತಗಂಡು ಈಗ ಡುಮ್ಕಿ ಹೊಡ್ದುಬಿಡ್ತೀನೇನೋ ಅಂತ ಭಯ ಆಗೋಯ್ತು. ಇನ್ನು ದೊಡ್ಡ ದೊಡ್ಡ ಪುಸ್ತಕ ಓದುವಷ್ಟಂತೂ ಸಮಯವಿಲ್ಲ. ಗೈಡುಗಳನ್ನು ತೆರೆದು ನೋಡಿದರೂ ಭಯವಾಗುತ್ತಿತ್ತು. ಸೀನಿಯರ್ಸ್ ಹತ್ತಿರ ಸಹಪಾಠಿಗಳತ್ರ ಒಂದಷ್ಟು ನೋಟ್ಸುಗಳಿತ್ತು. ಅದನ್ನೇ ಝೆರಾಕ್ಸ್ ಮಾಡಿಸಿಕೊಳ್ಳೋಣ ಅಂತ ಕಾಲೇಜಿನ ಎದುರುಗಡೆ ಬ್ಯಾಕ್ ಟು ಬ್ಯಾಕ್ ಮೂವತ್ತು ಪೈಸೆಗೆ ಸೀಮೆಎಣ್ಣೆ ಝೆರಾಕ್ಸ್ ಮಾಡಿಕೊಡುತ್ತಿದ್ದ ಅಂಗಡಿಗೆ ಹೋಗಿದ್ದೆ. ಅವತ್ತು ಶನಿವಾರ. ಮಧ್ಯಾಹ್ನ ಒಂದೂ ಮೂವತ್ತಾಗಿತ್ತು. ಕಾಲೇಜಿನವರೆಲ್ಲ ಹೊರಟುಹೋಗಿದ್ದರು. ಅಂಗಡಿಯ ಬಳಿ ಕೂಡ ಹೆಚ್ಚು ಜನರಿರಲಿಲ್ಲ. ಝೆರಾಕ್ಸ್ ಮಾಡಲು ಕೊಟ್ಟು ಅಲ್ಲೇ ಅಂಗಡಿಯ ಕಟ್ಟೆಯ ಮೇಲೆ ಕುಳಿತಿದ್ದೆ. ಮಧ್ಯೆ ಮಧ್ಯೆ ಹ್ಞೂ ಅನ್ನೋ’
ಒಂದೊಂದೇ ಎಪಿಸೋಡು ಹುಡುಕುಡುಕಿ ಓದೋಕೆ ಬೇಸರವಾ? ಪೂರ್ತಿ ಇ - ಪುಸ್ತಕ ತೆಗೆದುಕೊಳ್ಳಲು ಇಲ್ಲಿ ಕ್ಲಿಕ್ಕಿಸಿ.

ಏಪ್ರಿ 28, 2019

ಚುನಾವಣಾ ನೀತಿಸಂಹಿತೆ ಎಂಬ ಪ್ರಹಸನ

ಕು.ಸ.ಮಧುಸೂದನರಂಗೇನಹಳ್ಳಿ
ನಮ್ಮದು ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ.

ಇಲ್ಲಿನ ಮತದಾರರ ಸಂಖ್ಯೆ ತೊಂಭತ್ತು ಕೋಟಿ.ಇಪ್ಪತ್ತು ಲಕ್ಷ ಮತಯಂತ್ರಗಳು. ಒಂದೂಕಾಲು ಕೋಟಿಗೂ ಅಧಿಕ ಮತಗಟ್ಟೆಯನ್ನು ನಿರ್ವಹಿಸುವ ಸಿಬ್ಬಂದಿಗಳು, ಎರಡೂವರೆ ಕೋಟಿಗೂ ಅಧಿಕ ಭದ್ರತಾ ಸಿಬ್ಬಂದಿ. ಅಧಿಕೃತವಾಗಿ ಇಷ್ಟಲ್ಲದೆ ಚುನಾವಣೆಗಳಿಗೆ ಪರೋಕ್ಷವಾಗಿ ನೆರವಾಗುವ ಮೂರು ಕೋಟಿ ಇತರೇ ನೌಕರರು. ಇಷ್ಟು ದೊಡ್ಡ ಮಟ್ಟದ ಚುನಾವಣಾ ವ್ಯವಸ್ಥೆ ಹೊಂದಿರುವ ನಮ್ಮ ದೇಶದಲ್ಲಿ ಇದುವರೆಗು ಬಹುತೇಕ ಚುನಾವಣೆಗಳು ಶಾಂತಿಯುತವಾಗಿ (ಜಮ್ಮು ಮತ್ತು ಕಾಶ್ಮೀರದಲ್ಲಿ ಕೆಲವು ಚುನಾವಣೆಗಳನ್ನು ಹೊರತು ಪಡಿಸಿದರೆ) ನಡೆದಿದ್ದು ತಮ್ಮ ವಿಸ್ವಾಸಾರ್ಹತೆಯನ್ನು ಉಳಿಸಿಕೊಂಡು ಬರುತ್ತಿವೆ.

ಅದರೆ ಈ ಬಾರಿ ನಡೆದ ಇದುವರೆಗಿನ ಮೂರು ಹಂತದ ಚುನಾವಣೆಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಚುನಾವಣಾ ನೀತಿ ಸಂಹಿತೆ ಎನ್ನುವುದು ಹಾಸ್ಯಾಸ್ಪದ ವಿಷಯವಾಗಿ ಬಿಟ್ಟಿದೆ. ತಾನೆ ವಿಧಿಸಿದ ಚುನಾವಣಾ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವಲ್ಲಿ ಚುನಾವಣಾ ಆಯೋಗ ವಿಫಲವಾಗುತ್ತಿಯೆಂಬ ಅನುಮಾನ ತಲೆದೋರುತ್ತಿದೆ. ನೀತಿ ಸಂಹಿತೆ ಉಲ್ಲಂಘಿಸುವವರ ವಿರುದ್ದ ಕಠಿಣ ಕ್ರಮಗಳನ್ನು ಕೈಗೊಳ್ಳಬಹುದಾದಂತ ದತ್ತ ಅಧಿಕಾರವನ್ನು ಹೊಂದಿರುವ ಆಯೋಗ ಯಾಕೊ ಈ ಅಧಿಕಾರವನ್ನು ಉಪಯೋಗಿಸಿಕೊಳ್ಳುವಲ್ಲಿ ಆಸಕ್ತಿಯನ್ನೇನು ತೋರುತ್ತಿಲ್ಲ. ಚುನಾವಣಾ ಆಯೋಗದ ಈ ಕ್ರಿಯಾಹೀನತೆಯನ್ನು ಕಂಡ ಸುಪ್ರೀಂ ಕೋರ್ಟ ಮದ್ಯಪ್ರವೇಶಿಸಿ ನೀತಿಸಂಹಿತೆ ಉಲ್ಲಂಘಿಸಿದವರ ವಿರುದ್ದಕ್ರಮ ತೆಗೆದುಕೊಳ್ಳಲು ಆಯೋಗಕ್ಕೆ ಸೂಚನೆ ನೀಡಬೇಕಾಗಿ ಬಂದಿತು.

ಏಪ್ರಿ 23, 2019

ಒಂದು ಬೊಗಸೆ ಪ್ರೀತಿ - 13

ಡಾ. ಅಶೋಕ್.‌ ಕೆ. ಆರ್.‌
ಬೆಳಿಗ್ಗೆ ಡ್ಯೂಟಿ ಇಲ್ಲ. ಎದ್ದು ಗಂಡನಿಗೆ ಅಡುಗೆ ಮಾಡಿಕೊಡುವ ಕೆಲಸವೂ ಇಲ್ಲ. ಸೋಮಾರಿ ತರ ಹತ್ತರವರೆಗೆ ಬಿದ್ದುಕೊಂಡಿದ್ದೆ. ಬೆಳಗಾಗೆದ್ದು ಗಂಡನನ್ನು ನೋಡ್ತೀನೋ ದೇವರನ್ನು ನೋಡ್ತೀನೋ ಗೊತ್ತಿಲ್ಲ ಮೊಬೈಲು ನೋಡುವುದು ಅಭ್ಯಾಸವಾಗಿಬಿಟ್ಟಿದೆ. ಏಳು ಮೆಸೇಜುಗಳು ಬಂದಿದ್ದವು ಸಾಗರನಿಂದ. ಒಂದು ಮೆಸೇಜು ರಾಜೀವನಿಂದ ಬಂದಿತ್ತು. “ಗುಡ್ ಮಾರ್ನಿಂಗ್ ಡಿಯರ್” ಎಂದು ರಾಜೀವ್ ಮೆಸೇಜ್ ಕಳುಹಿಸಿದ್ದ. ‘ಗುಡ್ ಮಾರ್ನಿಂಗ್ ರಾಜಿ’ ಎಂದುತ್ತರಿಸಿ ಸಾಗರನ ಮೆಸೇಜುಗಳನ್ನು ತೆರೆದೆ.
“ಇನ್ಯಾವತ್ತೂ ನನಗೆ ಮೆಸೇಜ್ ಮಾಡ್ಬೇಡ. ನಮ್ಮಿಬ್ಬರ ನಡುವೆ ಗೆಳೆತನವೂ ಬೇಡ ಪರಿಚಯವೂ ಬೇಡ”

“ಸಾರಿ ನಿನ್ನೆ ರಾತ್ರಿ ನನ್ನ ಕತೆಯೆಲ್ಲ ಹೇಳಿ ನನ್ನ ಬಗ್ಗೆ ನಿನಗೆ ಅನುಕಂಪ ಮೂಡುವಂತೆ ಮಾಡಿಬಿಟ್ಟೆ ಎನ್ನಿಸುತ್ತೆ. ಸಾರಿ ಸಾರಿ”

“ನಾವಿಬ್ಬರೂ ತಪ್ಪು ಮಾಡ್ತಿದ್ದೀವಿ”

“ಅದೇನು ರಾತ್ರಿಯ ಪರಿಣಾಮವೋ ಇಷ್ಟು ದಿನದ ಹರಟೆಯ ಪರಿಣಾಮವೋ ಗೊತ್ತಿಲ್ಲ. ನಮ್ಮಿಬ್ಬರ ನಿನ್ನೆಯ ವರ್ತನೆ ನನಗೇ ಸರಿಕಾಣುತ್ತಿಲ್ಲ”

“ನನ್ನದೇನೋ ಬಿಡು ನೀನಂತೂ ಈ ರೀತಿ ಮಾಡಬಾರದಿತ್ತು”

“ನಿನಗ್ಯಾಕೆ ಮಧು ಕಂಡರೆ ಹೊಟ್ಟೆಯುರಿಯಬೇಕು, ನನಗ್ಯಾಕೆ ಪುರುಷೋತ್ತಮ್ ಮತ್ತು ರಾಜೀವ್ ಕಂಡರೆ ಜೆಲಸಿಯಾಗಬೇಕು? ಇದೆಲ್ಲ ತಪ್ಪು ಧರಣಿ. ಇಬ್ಬರೂ ಎಲ್ಲೆ ಮೀರಿ ಹೋಗುತ್ತಿದ್ದೇವೆ ಎನ್ನಿಸುತ್ತಿದೆ. ಮತ್ತು ಈ ರೀತಿ ಎಲ್ಲೆ ಮೀರಿ ಹೋಗುವುದು ನನಗಂತೂ ಸ್ವಲ್ಪವೂ ಸರಿ ಕಾಣಿಸುತ್ತಿಲ್ಲ”

ಒಂದೊಂದೇ ಎಪಿಸೋಡು ಹುಡುಕುಡುಕಿ ಓದೋಕೆ ಬೇಸರವಾ? ಪೂರ್ತಿ ಇ - ಪುಸ್ತಕ ತೆಗೆದುಕೊಳ್ಳಲು ಇಲ್ಲಿ ಕ್ಲಿಕ್ಕಿಸಿ.

ಏಪ್ರಿ 7, 2019

ಒಂದು ಬೊಗಸೆ ಪ್ರೀತಿ - 12

ಡಾ. ಅಶೋಕ್.‌ ಕೆ. ಆರ್.‌

ಒಂದು ಬೊಗಸೆ ಪ್ರೀತಿಯ ಹಿಂದಿನ ಅಧ್ಯಾಯಗಳನ್ನು ಓದಲು ಇಲ್ಲಿ ಕ್ಲಿಕ್ಕಿಸಿ.
“ಓ! ಹಂಗಾದ್ರೆ ನಿನ್ದೂ ಲವ್ ಮ್ಯಾರೇಜಾ”

‘ಹೇಳೋದು ಕಷ್ಟ. ರಾಜೀವ್ ನನ್ನನ್ನು ಮುಂಚಿನಿಂದ ಇಷ್ಟಪಟ್ಟಿದ್ದರು. ಹೈಸ್ಕೂಲು ಮುಗಿಸುವವರೆಗೆ ಅವರ ಮನೆ ನಮ್ಮ ಮನೆ ಅಕ್ಕಪಕ್ಕವೇ ಇತ್ತು. ಅವರು ನಮ್ಮ ಮನೆಗೆ ಆಟವಾಡಲು ಬರುತ್ತಿದ್ದರು, ನಾನು ಅಲ್ಲಿಗೆ ಹೋಗುತ್ತಿದ್ದೆ. ನಾನು ಒಂಭತ್ತನೇ ತರಗತಿಯಲ್ಲಿದೆ ಅನ್ನಿಸುತ್ತೆ. ಕೇರಮ್ ಆಡುತ್ತಿದ್ದಾಗ ‘ಧರಣಿ ಐ ಲವ್ ಯೂ’ ಎಂದುಬಿಟ್ಟಿದ್ದರು. ‘ಏ ಹೋಗೋ’ ಎಂದುತ್ತರಿಸಿ ಎದ್ದುಬಂದಿದ್ದೆ. ಪಿಯುಸಿಗೆ ಬರುವಷ್ಟರಲ್ಲಿ ಸ್ವಂತ ಮನೆಗೆ ಬಂದುಬಿಟ್ಟಿದ್ದೊ. ನಂತರ ರಾಜೀವ್ ಹೆಚ್ಚಾಗಿ ಸಿಗುತ್ತಿರಲಿಲ್ಲ. ಮದುವೆ ನಿಶ್ಚಯವಾಗುವವರೆಗೆ’

“ಇದರಲ್ಲೇನು ಒರಟುತನವಿದೆ?”

‘ಒರಟುತನ ಇರುವುದು ಇದರಲ್ಲಲ್ಲ. ನಾನು ಪ್ರೀತಿಸಿದ್ದು ರಾಜೀವನನ್ನೂ ಅಲ್ಲ’

“ಮತ್ತೆ”

‘ನಾನು ಪ್ರೀತಿಸಿದ ಹುಡುಗನ ಹೆಸರು ಪುರುಷೋತ್ತಮ್ ಅಂತ’ ಅತ್ತ ಕಡೆಯಿಂದ ಹತ್ತು ನಿಮಿಷವಾದರೂ ಏನೂ ಪ್ರತಿಕ್ರಿಯೆ ಬರಲಿಲ್ಲ. ‘ಏನಾಯ್ತು’ ಎಂದು ಕಳುಹಿಸಿದ ಮೆಸೇಜಿಗೂ ರಿಪ್ಲೈ ಬರಲಿಲ್ಲ. ಮಲಗಿಬಿಟ್ಟನೇನೋ ಎಂದುಕೊಂಡೆ. ಇಪ್ಪತ್ತು ನಿಮಿಷದ ನಂತರ “ಸಾರಿ” ಎಂದು ಮೆಸೇಜು ಕಳುಹಿಸಿದ.

ಒಂದೊಂದೇ ಎಪಿಸೋಡು ಹುಡುಕುಡುಕಿ ಓದೋಕೆ ಬೇಸರವಾ? ಪೂರ್ತಿ ಇ - ಪುಸ್ತಕ ತೆಗೆದುಕೊಳ್ಳಲು ಇಲ್ಲಿ ಕ್ಲಿಕ್ಕಿಸಿ.

ಏಪ್ರಿ 1, 2019

ಅಳಲು ಅಳುಕುತ್ತಾಳೆ

ಕು.ಸ.ಮಧುಸೂದನ್
ಜನಜಂಗುಳಿಯ ದಟ್ಟಾರಣ್ಯದಲ್ಲಿ
ಒತ್ತೊತ್ತಾಗಿ ಕಟ್ಟಿದ ಮನೆಗಳ ಓಣಿಯೊಳಗೀಗ
ನಾಚುತ್ತಾನೆ ಚಂದ್ರ ಹಣಕಲು
ಅಳುಕುತ್ತಾಳವಳು ಬಿಕ್ಕಲು.

ಬಡಿದ ಬಾಗಿಲುಗಳಿಂದಲೂ ತಲೆ ಒಳಹಾಕುತ್ತವೆ
ಮುಚ್ಚಿದ ಕಿಟಕಿಗಳಿಂದೆಯೂ ಕಿವಿಗಳಿರುತ್ತವೆ ಕದ್ದು ಕೇಳಲು
ಆತ್ಮಸಂಗಾತದ ಮಾತು ಉಸುರಿ
ಮೃದು ಮಾಂಸಖಂಡಗಳ ಗೆಬರಿ
ಉರಿಯುವ ಗಾಯಕ್ಕೆ ಸವರಿದಂತೆ ಉಪ್ಪು