ನವೆಂ 12, 2018

ಡ್ರಾಫ್ಟ್ ಮೇಲ್: ಭಾಗ 2 - ಡ್ರಾಫ್ಟ್ ಸೇರಿದ ಮೊದಲ ಪತ್ರ


ಚೇತನ ತೀರ್ಥಹಳ್ಳಿ. 

ಡಿಯರ್ ಫೆಲೋಟ್ರಾವೆಲರ್,

ನನ್ನ ತಿರುವಿನಲ್ಲಿ ತಿರುಗುತ್ತಿದ್ದೇನೆ. ಈ ತಿರುವೇ ನನ್ನ ನಿಲ್ದಾಣವೂ ಆಗಲಿದೆ. 

ನಂಗೆ ಸತ್ತುಹೋಗಬೇಕು ಅನಿಸುತ್ತಿದೆ. ಇದನ್ನು ನನ್ನ ಕೊನೆಯ ಪತ್ರ ಅಂದುಕೋ. 

ನೀನು ವಾಪಸ್ ಬರುವ ಹೊತ್ತಿಗೆ ನಾನು ಇರೋದಿಲ್ಲ. ಶೋಕೇಸಿನಲ್ಲಿ ನಿನ್ನ ಫೋಟೋ ಹಿಂದೆ ಡೆತ್ ನೋಟ್ ಬರೆದಿಟ್ಟಿದ್ದೀನಿ. ಅದನ್ನು ಪೊಲೀಸರಿಗೆ ಕೊಡು. 

ಅದರಲ್ಲೂ ವಿಶೇಷವೇನಿಲ್ಲ. ಯಾಕೆ ಬದುಕಬೇಕು ಅಂತ ಗೊತ್ತಿಲ್ಲದ ಕಾರಣ ಸತ್ತು ಹೋಗ್ತಿದ್ದೀನಿ ಅಂತ ಬರೆದಿದ್ದೀನಿ. 

ಇತ್ತೀಚೆಗೆ ನಮ್ಮ ನಡುವೆ ಜಗಳ ಜಾಸ್ತಿಯಾಗ್ತಿದೆ. ನೀನು ಇಷ್ಟು ಅಸಹನೆ ಮಾಡಿದರೆ ನಾನು ಹೇಗೆ ಬದುಕಿರಲಿ? ಖುಷಿಗೆ, ಬದುಕಿಗೆ, ಧೈರ್ಯಕ್ಕೆ ಜೊತೆ ಯಾರಿದ್ದಾರೆ?

ಆದರೆ ಡೆತ್ ನೋಟಿನಲ್ಲಿ ಇದನ್ನೆಲ್ಲ ಬರೆದಿಲ್ಲ.

ನವೆಂ 9, 2018

ಖಾಸಗಿ ಬ್ಯಾಂಕಿನ ಅಮಾನವೀಯ ನಡೆ! ಮುಕ್ತ ಆರ್ಥಿಕ ನೀತಿಯ ಫಲ

ಕು.ಸ.ಮಧುಸೂದನ ರಂಗೇನಹಳ್ಳಿ
ಜಾಗತೀಕರಣದ ಮತ್ತೊಂದು ಮಾರಕಾಯುಧ ನಮ್ಮ ರೈತರ ಬಲಿ ಪಡೆಯುವತ್ತ ಮುಂದಾಗಿದೆ.ಅದೇ ಆಕ್ಸಿಸ್ ಬ್ಯಾಂಕ್! 

ತೊಂಭತ್ತರ ದಶಕದಲ್ಲಿ ಜಾರಿಗೊಂಡ ಮುಕ್ತ ಆರ್ಥಿಕ ನೀತಿಯ ಫಲವಾಗಿ 1993ರಲ್ಲಿ ಜನ್ಮ ತಳೆದ ಖಾಸಗಿ ವಲಯದ ಈ ಬ್ಯಾಂಕ್ ದೇಶದಾದ್ಯಂತ 1947 ಶಾಖೆಗಳನ್ನು ಹೊಂದಿದೆ. ಖಾಸಗಿ ವಲಯದ ಅತ್ಯಂತ ಪ್ರಮುಖ ಬ್ಯಾಂಕ್ ಎಂದು ಹೆಸರು ಮಾಡಿರುವ ಇದು ದೇಶದ ಬೇರೆಲ್ಲ ಬ್ಯಾಂಕುಗಳಿಗಿಂತ ಹೆಚ್ಚು ಎ.ಟಿ.ಎಂ. ಗಳನ್ನು ಸಹ ಹೊಂದಿದೆ. ಇದರ ಕೇಂದ್ರಕಛೇರಿ ಮುಂಬೈನಲ್ಲಿದೆ..ಇರಲಿ ನಾನೇನು ಇಲ್ಲಿಈ ಬ್ಯಾಂಕಿನ ಮಾಹಿತಿ ನೀಡಲು ಇದನ್ನು ಬರೆಯುತ್ತಿಲ್ಲ. ವಿಷಯಕ್ಕೆ ಹೋಗುವ ಮೊದಲು ಈ ಬ್ಯಾಂಕಿನ ಬಗ್ಗೆ ಒಂದಿಷ್ಟು ಮಾಹಿತಿ ನಿಮಗಿರಲೆಂದು ಹೇಳಿದೆ. 

ಇದೀಗ ಈ ಬ್ಯಾಂಕು ಕನಾಟಕ ರಾಜ್ಯದ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲ್ಲೂಕಿನ ಸುಮಾರು 181 ರೈತರ ವಿರುದ್ದ ಸಾಲ ಮರುಪಾವತಿ ಮಾಡಿಲ್ಲವೆಂದು ಕೋರ್ಟಿನಿಂದ ಬಂಧನದ ಆದೇಶವನ್ನು ಹೊರಡಿಸಿ ತನ್ನ ರಾಕ್ಷಸೀತನವನ್ನು ಮೆರೆದಿದೆ. ಇದೀಗ ರೈತಸಂಘ ಮತ್ತು ರಾಜ್ಯ ಸರಕಾರಗಳ ಮದ್ಯಸ್ಥಿಕೆಯಿಂದ ತನ್ನ ಕಾನೂನು ಹೋರಾಟವನ್ನು ಸ್ಥಗಿತಗೊಳಿಸುವುದಾಗಿ ಬ್ಯಾಂಕಿನ ಸ್ಥಳೀಯ ಅಧಿಕಾರಿಗಳು ಭರವಸೆ ನೀಡಿದ್ದಾರೆ. ಆದರೆ ಅಷ್ಟು ಸುಲಭಕ್ಕೆ ಈ ಬಂಧನದ ವಾರೆಂಟುಗಳು ರದ್ದಾಗುವುದಿಲ್ಲ. ಯಾಕೆಂದರೆ ಈ ವಾರೆಂಟುಗಳನ್ನು ಹೊರಡಿಸಿರುವುದು ಎರಡು ಸಾವಿರ ಮೈಲುಗಳಷ್ಟು ದೂರವಿರುವ ಕೊಲ್ಕತ್ತಾದ ನ್ಯಾಯಾಲಯಗಳು. ಕಾರಣ ಕರ್ನಾಟಕದಲ್ಲಿನ ಈ ಬ್ಯಾಂಕುಗಳು ಕೊಲ್ಕತ್ತಾದ ಆಡಳಿತವಲಯಕ್ಕೆ ಸೇರಿರುವುದು. ಈಗ ಅಲ್ಲಿ ನ್ಯಾಯಾಲಯಗಳಿಗೆ ದೀಪಾವಳಿಯ ರಜೆ ಇರುವುದರಿಂದ ಅವುಗಳು ಮತ್ತೆ ತಮ್ಮಕಲಾಪಗಳನ್ನು ಪ್ರಾರಂಭಿಸುವವರೆಗು ನಮ್ಮ ರೈತರು ಬಂಧನದ ಭೀತಿಯಲ್ಲಿಯೇ ಬದುಕುವ ಅನಿವಾರ್ಯ ಸೃಷ್ಠಿಯಾಗಿದೆ.

ನವೆಂ 8, 2018

ಕಾಯುತ್ತಲೇ ಇರುತ್ತೇವೆ!

ಕು.ಸ.ಮಧುಸೂದನ ರಂಗೇನಹಳ್ಳಿ
ಯಾವತ್ತೂ ಅಚಲವಾಗಿ ಎದ್ದು ನಿಲ್ಲದೆ
ಗಟ್ಟಿ ದ್ವನಿಯಲ್ಲಿ ಮಾತಾಡದೆ
ನಡುಬಾಗಿಸಿ ನಿಂತವರಿಗೆ
ನೋವುಗಳೇನು ಅಪರಿಚಿತ ನೆಂಟರಲ್ಲ
ಒಡಹುಟ್ಟಿದ ಒಡನಾಡಿಗಳು.
ಮೂಗು ಹಿಡಿದರೆ ಬಾಯಿ ತಾನಾಗೆ ಬಿಡುತ್ತದೆಯೆಂದು ಗೊತ್ತಿದ್ದರು
ಹಿಡಿಯುವ ಧೈರ್ಯ ಸಾಲದೆ
ಕಾಯುತ್ತಿದ್ದೇವೆ ಬೆಕ್ಕಿಗೆ ಗಂಟೆ ಕಟ್ಟಬಲ್ಲ ನಾಯಕನಿಗಾಗಿ.

ನವೆಂ 5, 2018

ಡ್ರಾಫ್ಟ್ ಮೇಲ್: ಭಾಗ 1

ಚೇತನ ತೀರ್ಥಹಳ್ಳಿ. 
ಚಿನ್ಮಯಿ ಕಾಲು ನೀಡಿಕೊಂಡು, ಲ್ಯಾಪ್‍ಟಾಪ್ ತೆರೆದು ಕುಳಿತಿದ್ದಾಳೆ. ನಡು ಮಧ್ಯಾಹ್ನದ ಬಿಸಿಲು ಗೋಡೆಗೆ ಅಪ್ಪಳಿಸಿ, ಬಾಗಿಲುದ್ದ ನೆಲದ ಮೇಲೆ ಅಂಗಾತ ಬಿದ್ದಿದೆ.

“ಅರೆ! ಬೆಳಕಿನ ಬಾಗಿಲು..” ತನ್ನೊಳಗೆ ಬೆರಗಾಗುತ್ತಾಳೆ.

ಹಗೂರ ಎದ್ದು, ಹೊಸ್ತಿಲಾಚೆ ಬಿಸಿಲಿಗೆ ಬೆನ್ನಾಗಿ ನಿಲ್ಲುತ್ತಾಳೆ. ಮನೆಯೊಳಗೆ ನೆಲದಲ್ಲಿ ಅವಳ ನೆರಳು!

ಮೊಬೈಲ್ ಕ್ಯಾಮೆರಾ ಆನ್ ಮಾಡಿ, ಸೆಲ್ಫಿ ಮೋಡಿನಿಂದ ಮಾಮೂಲಿಗೆ ಬರುತ್ತಾಳೆ.

ಯಾವ ಕೋನದಿಂದ ತೆಗೆದರೆ ಫೋಟೋ ಚೆನ್ನಾಗಿ ಬರುತ್ತದೆ ಅನ್ನೋದು ಅವಳಿಗೆ ಗೊತ್ತಿದೆ.

ತಮ್ಮದೇ ಫೋಟೋ ತೆಗೆದುಕೊಳ್ಳುವವರು ಛಾಯಾಗ್ರಹಣವನ್ನ ವಿಶೇಷವಾಗಿ ಅಭ್ಯಾಸ ಮಾಡಬೇಕಿಲ್ಲ.. ನಾರ್ಸಿಸಿಸ್ಟ್‍ಗಳಾದರೆ ಸಾಕು ಅನ್ನೋದು ಅವಳ ನಂಬಿಕೆ.

ಚಿನ್ಮಯಿ ತೆಗೆದ ಫೋಟೋ ಅದ್ಭುತವಾಗಿ ಬಂದೇಬಂದಿದೆ. ‘ದೇಹ ಮೀರಿದರೂ ನೆರಳಿಗೆ ಹೊಸ್ತಿಲು ದಾಟಲಾರದ ಭಯ’ ಅನ್ನುವ ಒಕ್ಕಣೆ ಕೊಟ್ಟು ಇನ್ಸ್ಟಾಗ್ರಾಮಿನಲ್ಲಿ ಶೇರ್ ಮಾಡುತ್ತಾಳೆ.

ಅವಳು ತೀರ ಪುರುಸೊತ್ತಿನಲ್ಲಿ ಇದ್ದಾಳೆಂದು ಇದನ್ನೆಲ್ಲ ಮಾಡುತ್ತಿಲ್ಲ. ಮಾಡಲೇಬೇಕಿರುವ ಕೆಲಸವೊಂದನ್ನು ಎಷ್ಟು ಸಾಧ್ಯವೋ ಅಷ್ಟು ಹೊತ್ತು ಮುಂದೂಡಲಿಕ್ಕಾಗಿ ಮಾಡುತ್ತಿದ್ದಾಳೆ. ಅದೊಂದು ಮಾಡಿಬಿಟ್ಟರೆ ಈ ದಿನದ ಕೆಲಸವೇ ಮುಗಿದುಹೋಗುತ್ತದೆ. ಆದರೆ ಚಿನ್ಮಯಿ ಯಾವುದನ್ನು ವಿಪರೀತ ಇಷ್ಟಪಡುತ್ತಾಳೋ ಅದನ್ನು ಹೊಂದಲು ಭಯಪಡುತ್ತಾಳೆ.

ಅವಳಿಗೆ ಖಾಲಿಯಾಗುವುದೆಂದರೆ ಇಷ್ಟ.

ಅವಳಿಗೆ ಖಾಲಿಯಾಗುವುದೆಂದರೆ ಭಯ.

ನವೆಂ 4, 2018

ಧಗಧಗಿಸುವೊಂದು ಮದ್ಯಾಹ್ನ!


ಕು.ಸ.ಮಧುಸೂದನ್

ನಕ್ಷತ್ರಗಳು ಬೂದಿಯಾಗಿ
ಚಂದ್ರ ಕರಗಿ
ಸೂರ್ಯ ನಿಗಿನಿಗಿ ಕೆಂಡವಾಗಿ

ತೆಂಗಿನ ಮರಕೆ ಬಡಿದು ಸಿಡಿಲು
ನಾಲ್ಕಂಕಣದ ಮನೆತೊಲೆಗಳಿಗೆ ಗೆದ್ದಲು
ನೆಲ ಮಾಳಿಗೆಯೊಲು ಹೂತಿಟ್ಟ ಹೆಣಗಳು ತೂಗಿ

ಹುಳು ಬಿದ್ದು ಅನ್ನದ ತಟ್ಟೆಯೊಳಗೆ
ಹದ್ದುಗಳು ಹಣಕುತ್ತ ಅಮೃತದ 
ಬಟ್ಟಲೊಳಗೆ ಬಾಗಿ
ಕು.ಸ.ಮಧುಸೂದನ್ ರವರ ಮತ್ತಷ್ಟು ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ಕಿಸಿ. 

ಅಕ್ಟೋ 31, 2018

ಮೀಟೂ ಮತ್ತು ಶಬರಿಮಲೆ ವಿವಾದಗಳ ನಡುವೆ ನಾವು ಮರೆತದ್ದೇನು?

ಕು.ಸ.ಮಧುಸೂದನ ರಂಗೇನಹಳ್ಳಿ 
ಇಂಡಿಯಾದ ಸಂಸದೀಯ ಪ್ರಜಾಸತ್ತೆಯ ದೌರ್ಬಲ್ಯ ಮತ್ತು ದುರಂತವಿರುವುದೇ ನಮ್ಮ ಈ ತೆರನಾದ ನಡವಳಿಕೆಗಳಲ್ಲಿ. ಈ ನೆಲದ ಪ್ರಜಾಪ್ರಭುತ್ವ ವಿರೋಧಿ ಶಕ್ತಿಗಳು ಕಾಲಕಾಲಕ್ಕೆ ಇಂತಹ ಹುಸಿಕ್ರಾಂತಿಗಳ ಹೆಸರಿನಲ್ಲಿ ಪ್ರಜಾಸತ್ತಾತ್ಮಕ ಚುನಾವಣೆಗಳನ್ನು, ಅವುಗಳ ಸುತ್ತ ಚರ್ಚೆಯಾಗಬೇಕಾದ ವಿಚಾರಗಳ ದಾರಿ ತಪ್ಪಿಸುತ್ತ ಹೋಗುವುದು ನಡೆದುಕೊಂಡೇ ಬಂದಿದೆ.ನಾವು ಸಹ ನಮಗರಿವಿದ್ದೊ ಇಲ್ಲದೆಯೊ ದಾರಿ ತಪ್ಪುತ್ತಲೇ ಬರುತ್ತಿದ್ದೇವೆ. 

ಇದೀಗ ಎರಡು ವಿಷಯಗಳು ಇಡೀದೇಶದ ಗಮನವನ್ನು ಸೆಳೆದಿದ್ದು ನಮ್ಮ ಗಮನ ಮತ್ತು ಚರ್ಚೆಗಳನ್ನು ಆ ಎರಡು ವಿಚಾರಗಳೇ ಆವರಿಸಿಕೊಂಡಿವೆ. ಮೊದಲನೆಯದು ಮಾಜಿ ನಟಿ ತನುಶ್ರೀ ದತ್ತಾ ಶುರು ಮಾಡಿದ ಮೀಟೂ ಅಭಿಯಾನವಾದರೆ ಎರಡನೆಯದು, ಶಬರಿಮಲೆಗೆ ಮಹಿಳೆಯರ ಮುಕ್ತ ಪ್ರವೇಶದ ಬಗ್ಗೆ ಎದ್ದಿರುವ ವಿವಾದ ಮತ್ತು ಅದರ ಪರ-ವಿರೋಧ ಪ್ರತಿಭಟನೆಗಳು!. 

ಉಂಟೆ !?


ಪ್ರವೀಣಕುಮಾರ್ ಗೋಣಿ
ಮಾಯೆಯೆನ್ನುವ ಮಿಥ್ಯದ 
ನರ್ತನದ ತೆಕ್ಕೆಗೆ ಸಿಕ್ಕಿ 
ದುರುಳ ಮನಸಿನ 
ವಶವಾಗುವ ಸ್ಥಿತಿಗಿಂತ 
ಹೀನತೆ ಬೇರೊಂದು ಉಂಟೆ ?

ತೀರದ ದಾಹಕ್ಕೆ 
ತೊರೆಯಲಾಗದ ಮೋಹಕ್ಕೆ 
ಅಂತ್ಯವಿರದ ವಾಸನೆಗಳ 
ಸೆರೆಯಿಂದ ಬಿಡಿಸಿಕೊಳ್ಳಲಾಗದ 
ಪಾಮರತೆಗಿಂತ ಬೇರೆ ನಿಕೃಷ್ಟತೆಯುಂಟೆ ?

ಮಸ್ತಕದೊಳಗಿನ ಮಣಭಾರದ 
ಜ್ಞಾನವನ್ನೇ ಅರಿವ ಕಿರೀಟವಾಗಿಸಿಕೊಂಡು
ತನ್ನ ತಾನೇ ಜ್ಞಾನಿಯೆಂದು 
ಭಾವಿಸಿಕೊಂಡು ಬೀಗುವ ಭ್ರಮೆಗಿಂತ 
ಮತ್ತೊಂದು ಅಜ್ಞಾನ ಉಂಟೆ ?

ಅಕ್ಟೋ 19, 2018

ಛತ್ತೀಸ್ ಗಡ್ ಮತ್ತು ರಾಜಸ್ಥಾನಗಳಲ್ಲಿ ಬಾಜಪದ ಹಿನ್ನಡೆಗೆ ಇರಬಹುದಾದ ಕಾರಣಗಳು?

ಕು.ಸ.ಮಧುಸೂದನ ರಂಗೇನಹಳ್ಳಿ  
ಛತ್ತೀಸ್ ಗಡ 
ಇತ್ತೀಚೆಗೆ ಹೊರಬಿದ್ದಿರುವ ಚುನಾವಣಾಪೂರ್ವ ಸಮೀಕ್ಷೆಗಳನ್ನೇ ನಂಬುವುದಾದಲ್ಲಿ ಕಳೆದ ಐದು ವರ್ಷಗಳಿಂದ ಬಾಜಪದ ತೆಕ್ಕೆಯಲ್ಲಿರುವ ಛತ್ತೀಸ್ಗಡ ರಾಜ್ಯ ಈ ಬಾರಿ ಕಾಂಗ್ರೆಸ್ಸಿನ ಮಡಿಲಿಗೆ ಜಾರಿ ಬೀಳಲಿದೆ. 

ಛತ್ತೀಸ್ ಗಡ ರಾಜ್ಯದ ಒಟ್ಟು 90 ಸ್ಥಾನಗಳ ಪೈಕಿ ಕಾಂಗ್ರೆಸ್ 47 ಸ್ಥಾನಗಳನ್ನು ಗೆದ್ದು ಅಧಿಕಾರದ ಗದ್ದುಗೆ ಏರಿದರೆ, ಬಾಜಪ 40 ಸ್ಥಾನಗಳೊಂದಿಗೆ ವಿಪಕ್ಷದಲ್ಲಿ ಕೂರಬೇಕಾಗುತ್ತದೆ. 2013ರಲ್ಲಿ ಬಾಜಪ 49 ಸ್ಥಾನಗಳನ್ನು, ಕಾಂಗ್ರೆಸ್ 39 ಸ್ಥಾನಗಳನ್ನು ಗೆದ್ದಿದ್ದನ್ನು ನಾವಿಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ. ಐದು ವರ್ಷಗಳ ಹಿಂದೆಯೂ ಬಾಜಪ ಮತ್ತು ಕಾಂಗ್ರೆಸ್ಸಿನ ನಡುವಿನ ಮತಗಳಿಕೆಯ ಪ್ರಮಾಣದಲ್ಲಿ ಹೆಚ್ಚೇನು ವ್ಯತ್ಯಾಸವಿರಲಿಲ್ಲ.ಈ ಸಮೀಕ್ಷೆಗಳ ಪ್ರಕಾರ ಈ ಬಾರಿಯೂ ಎರಡೂ ರಾಷ್ಟ್ರೀಯ ಪಕ್ಷಗಳ ಮತಗಳಿಕೆಯ ಪ್ರಮಾಣದಲ್ಲಿ ಅಂತಹ ಅಗಾಧ ಅಂತರವೇನು ಇರುವುದಿಲ್ಲ. ಎರಡು ಪಕ್ಷಗಳ ಮತಗಳಿಕೆಯ ವ್ಯತ್ಯಾಸ ಶೇಕಡಾ 0.7ರಷ್ಟು ಮಾತ್ರ ಇರುತ್ತದೆ ಎಂದು ಹೇಳಲಾಗಿದ್ದು. ತೀವ್ರವಾದ ಹಣಾಹಣಿಯ ಕಾಳಗ ಇದಾಗಲಿರುವುದು ಖಚಿತ! 

ಈ ಹಿನ್ನೆಲೆಯಲ್ಲಿ ಛತ್ತೀಸ್ ಗಡ್ ರಾಜ್ಯದಲ್ಲಿನ ಬಾಜಪ ಸೋಲಿಗೆ ಕಾರಣಗಳೇನಾಗಿರಬಹುದೆಂಬುದನ್ನು ವಿಶ್ಲೇಷಿಸಿ ನೋಡಬೇಕಾಗುತ್ತದೆ. 

ಅಕ್ಟೋ 15, 2018

ಬಾಜಪಕ್ಕೆ ಲಾಭ ತರಲಿರುವ ಕಾಂಗ್ರೆಸ್-ಜನತಾದಳದ ಉಪಚುನಾವಣಾ ಮೈತ್ರಿ!

ಕು.ಸ.ಮಧುಸೂದನ ರಂಗೇನಹಳ್ಳಿ
ಕಾಂಗ್ರೆಸ್ ಮತ್ತು ಜನತಾದಳದ ಮೈತ್ರಿಯ ದೆಸೆಯಿಂದ ಹಳೆಯ ಮೈಸೂರು ಭಾಗದಲ್ಲಿ ಬಾಜಪ ಬೇರೂರಲು ಸುವರ್ಣಾವಕಾಶವೊಂದು ಸೃಷ್ಠಿಯಾಗಿದೆಯೇ? ಹೌದೆನ್ನುತ್ತಾರೆ, ಹಳೆ ಮೈಸೂರು ಪ್ರದೇಶದ ಕಾಂಗ್ರೆಸ್ ಕಾರ್ಯಕರ್ತರು! ಅವರುಗಳ ಈ ಭಯ ಅಕಾರಣವೇನಲ್ಲ.

ನವೆಂಬರ್ ಮೊದಲ ವಾರದಲ್ಲಿ ನಡೆಯಲಿರುವ ಮೂರು ಸಂಸತ್ ಸ್ಥಾನಗಳ ಮತ್ತು ಎರಡು ವಿದಾನಸಭಾ ಸ್ಥಾನಗಳಿಗೆ ನಡೆಯಲಿರುವ ಉಪಚುನಾವಣೆಗಳಿಗೆ ಕಾಂಗ್ರೆಸ್ ಮತ್ತು ಜಾತ್ಯಾತೀತ ಜನತಾದಳ ಮೈತ್ರಿಮಾಡಿಕೊಂಡು ಚುನಾವಣಾ ಕಣಕ್ಕೆ ಇಳಿಯುವುದು ಬಹುತೇಕ ಸ್ಪಷ್ಟವಾಗಿದೆ. ರಾಮನಗರ ವಿದಾನಸಭಾ ಕ್ಷೇತ್ರದಲ್ಲಿ ಜನತಾದಳವು (ಮುಖ್ಯಮಂತ್ರಿಗಳಾದ ಶ್ರೀ ಹೆಚ್.ಡಿ.ಕುಮಾರಸ್ವಾಮಿಯವರ ಪತ್ನಿ, ಮಾಜಿ ಶಾಸಕಿ ಶ್ರೀಮತಿ ಅನಿತಾ ಕುಮಾರಸ್ವಾಮಿ ಅಭ್ಯರ್ಥಿ!) ಮಂಡ್ಯಮತ್ತು ಶಿವಮೊಗ್ಗ ಸಂಸತ್ ಕ್ಷೇತ್ರಗಳಲ್ಲಿ ಬಹುತೇಕ ಜನತಾದಳದ ಅಭ್ಯರ್ಥಿಗಳೇ ಕಣಕ್ಕಿಳಿಯಲಿರುವುದು ಖಚಿತವಾಗಿದೆ. ಅದರಲ್ಲೂ ಮಂಡ್ಯ ಮತ್ತು ರಾಮನಗರ ಕ್ಷೇತ್ರಗಳಲ್ಲಿ ಇದುವರೆಗು ಕಾಂಗ್ರೆಸ್ ಮತ್ತು ಜನತಾದಳಗಳೇ ಸಾಂಪ್ರದಾಯಿಕ ಎದುರಾಳಿಗಳಾಗಿದ್ದು ಬಾಜಪ ಯಾವತ್ತಿಗೂ ಮೂರನೇ ಸ್ಥಾನದಲ್ಲಿರುತ್ತಿತ್ತು. ಇನ್ನು ಶಿವಮೊಗ್ಗದಲ್ಲಿ ಕಾಂಗ್ರೆಸ್ ಮತ್ತು ಬಾಜಪದ ನಡುವೆ ಹೋರಾಟವಿರುತ್ತಿದ್ದರೂ ಜನತಾದಳಕ್ಕೂ ಇಲ್ಲಿ ಬೇರು ಮಟ್ಟಿನ ಕಾರ್ಯಕರ್ತರುಗಳ ಪಡೆ ಇದೆ ಎನ್ನಬಹುದು. 

ಅಕ್ಟೋ 4, 2018

'ವಿದಾನಸಭೆ ವಿಸರ್ಜನೆಯಾದ ಕ್ಷಣದಿಂದಲೇ ನೀತಿ ಸಂಹಿತೆ ಜಾರಿ': ಕೇಂದ್ರ ಚುನಾವಣಾ ಆಯೋಗದ ಅಪರೂಪದ ನಿರ್ದಾರದ ಹಿಂದಿರುವುದೇನು?

ಕು.ಸ.ಮಧುಸೂದನ ರಂಗೇನಹಳ್ಳಿ
ತೆಲಂಗಾಣ ವಿದಾನಸಭೆ ವಿಸರ್ಜನೆಯಾದ ಕ್ಷಣದಿಂದಲೇ ಆ ರಾಜ್ಯದಲ್ಲಿ ನೀತಿಸಂಹಿತೆ ಜಾರಿಯಾಗಿದ್ದು, ತೆಲಂಗಾಣದ ಉಸ್ತುವಾರಿ ಸರಕಾರವಾಗಲಿ ಅಥವಾ ಆ ರಾಜ್ಯ ಕುರಿತಂತೆ ಕೇಂದ್ರ ಸರಕಾರವಾಗಲಿ ಯಾವುದೇ ಹೊಸ ಯೋಜನೆಗಳನ್ನು ಘೋಷಿಸಬಾರದೆಂಬ ಆದೇಶವನ್ನು ಹೊರಡಿಸಿದೆ. 

ಕೇಂದ್ರ ಸರಕಾರದ ಆಜ್ಞಾಪಾಲಕನಂತೆ ವರ್ತಿಸುವ ಸಾಂವಿಧಾನಿಕ ಸಂಸ್ಥೆಯೊಂದು ತೆಗೆದುಕೊಳ್ಳಬಹುದಾದ ಅವೈಜ್ಞಾನಿಕ ಮತ್ತು ಪ್ರಜಾಪ್ರಭುತ್ವ ವಿರೋಧಿ ನಿರ್ದಾರವನ್ನು ನಮ್ಮ ಕೇಂದ್ರ ಚುನಾವಣಾ ಆಯೋಗ ಈಗ ತೆಗೆದುಕೊಂಡಿದೆ. ತೆಲಂಗಾಣದಲ್ಲಿ ಹಾಲಿ ಇರುವ ಕೆ.ಚಂದ್ರಶೇಖರ್ ರಾವ್ ಅವರ ಸರಕಾರವು ಉಸ್ತುವಾರಿ ಸರಕಾರವಾಗಿದ್ದು, ಜನಪರವಾದ ಯಾವುದೇ ಜನಪ್ರಿಯ ಯೋಜನೆಗಳನ್ನು ಹೊಸದಾಗಿ ಘೋಷಿಸಲು ಅದು ಅಧಿಕಾರ ಹೊಂದಿಲ್ಲವೆಂದು ಚುನಾವಣಾ ಆಯೋಗ ತನ್ನ ಆದೇಶದಲ್ಲಿ ಸ್ಪಷ್ಟವಾಗಿ ತಿಳಿಸಿದೆ.

ತೆಲಂಗಾಣದ ಮುಖ್ಯಮಂತ್ರಿಗಳಾದ ಶ್ರೀ ಕೆ.ಚಂದ್ರಶೇಖರರಾವ್ ಇದೇ ಸೆಪ್ಟೆಂಬರ್ ಆರನೇ ತಾರೀಖು ವಿದಾನಸಭೆಯನ್ನು ಅವಧಿಗೆ ಮುನ್ನವೇ ವಿಸರ್ಜಿಸಿದ್ದನ್ನು ನಾವಿಲ್ಲಿ ನೆನಪಿಸಿಕೊಳ್ಳಬಹುದು. ಹಾಗೆ ವಿದಾನಸಭೆಯನ್ನು ವಿಸರ್ಜಿಸಿದಾಗ ಶ್ರೀ ರಾವ್ ಅವರು ಬಹುಶ: ಅಕ್ಟೋಬರ್ ತಿಂಗಳಲ್ಲಿ ರಾಜ್ಯದಲ್ಲಿ ಚುನಾವಣೆಗಳು ಘೋಷಣೆಯಾಗಬಹುದು ಮತ್ತು ಡಿಸೆಂಬರ್ ಮದ್ಯಭಾಗದ ಹೊತ್ತಿಗೆ ಚುನಾವಣೆಗಳು ನಡೆಯಬಹುದು. ಈ ಬಗ್ಗೆ ನಾನು ಚುನಾವಣಾ ಆಯೋಗದ ಜೊತೆ ಚರ್ಚಿಸಿದ್ದೇನೆಂದೂ ಹೇಳಿದ್ದರು.