ಕು.ಸ.ಮಧುಸೂದನ ರಂಗೇನಹಳ್ಳಿ
ಜಾಗತೀಕರಣದ ಮತ್ತೊಂದು ಮಾರಕಾಯುಧ ನಮ್ಮ ರೈತರ ಬಲಿ ಪಡೆಯುವತ್ತ ಮುಂದಾಗಿದೆ.ಅದೇ ಆಕ್ಸಿಸ್ ಬ್ಯಾಂಕ್!
ತೊಂಭತ್ತರ ದಶಕದಲ್ಲಿ ಜಾರಿಗೊಂಡ ಮುಕ್ತ ಆರ್ಥಿಕ ನೀತಿಯ ಫಲವಾಗಿ 1993ರಲ್ಲಿ ಜನ್ಮ ತಳೆದ ಖಾಸಗಿ ವಲಯದ ಈ ಬ್ಯಾಂಕ್ ದೇಶದಾದ್ಯಂತ 1947 ಶಾಖೆಗಳನ್ನು ಹೊಂದಿದೆ. ಖಾಸಗಿ ವಲಯದ ಅತ್ಯಂತ ಪ್ರಮುಖ ಬ್ಯಾಂಕ್ ಎಂದು ಹೆಸರು ಮಾಡಿರುವ ಇದು ದೇಶದ ಬೇರೆಲ್ಲ ಬ್ಯಾಂಕುಗಳಿಗಿಂತ ಹೆಚ್ಚು ಎ.ಟಿ.ಎಂ. ಗಳನ್ನು ಸಹ ಹೊಂದಿದೆ. ಇದರ ಕೇಂದ್ರಕಛೇರಿ ಮುಂಬೈನಲ್ಲಿದೆ..ಇರಲಿ ನಾನೇನು ಇಲ್ಲಿಈ ಬ್ಯಾಂಕಿನ ಮಾಹಿತಿ ನೀಡಲು ಇದನ್ನು ಬರೆಯುತ್ತಿಲ್ಲ. ವಿಷಯಕ್ಕೆ ಹೋಗುವ ಮೊದಲು ಈ ಬ್ಯಾಂಕಿನ ಬಗ್ಗೆ ಒಂದಿಷ್ಟು ಮಾಹಿತಿ ನಿಮಗಿರಲೆಂದು ಹೇಳಿದೆ.
ಇದೀಗ ಈ ಬ್ಯಾಂಕು ಕನಾಟಕ ರಾಜ್ಯದ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲ್ಲೂಕಿನ ಸುಮಾರು 181 ರೈತರ ವಿರುದ್ದ ಸಾಲ ಮರುಪಾವತಿ ಮಾಡಿಲ್ಲವೆಂದು ಕೋರ್ಟಿನಿಂದ ಬಂಧನದ ಆದೇಶವನ್ನು ಹೊರಡಿಸಿ ತನ್ನ ರಾಕ್ಷಸೀತನವನ್ನು ಮೆರೆದಿದೆ. ಇದೀಗ ರೈತಸಂಘ ಮತ್ತು ರಾಜ್ಯ ಸರಕಾರಗಳ ಮದ್ಯಸ್ಥಿಕೆಯಿಂದ ತನ್ನ ಕಾನೂನು ಹೋರಾಟವನ್ನು ಸ್ಥಗಿತಗೊಳಿಸುವುದಾಗಿ ಬ್ಯಾಂಕಿನ ಸ್ಥಳೀಯ ಅಧಿಕಾರಿಗಳು ಭರವಸೆ ನೀಡಿದ್ದಾರೆ. ಆದರೆ ಅಷ್ಟು ಸುಲಭಕ್ಕೆ ಈ ಬಂಧನದ ವಾರೆಂಟುಗಳು ರದ್ದಾಗುವುದಿಲ್ಲ. ಯಾಕೆಂದರೆ ಈ ವಾರೆಂಟುಗಳನ್ನು ಹೊರಡಿಸಿರುವುದು ಎರಡು ಸಾವಿರ ಮೈಲುಗಳಷ್ಟು ದೂರವಿರುವ ಕೊಲ್ಕತ್ತಾದ ನ್ಯಾಯಾಲಯಗಳು. ಕಾರಣ ಕರ್ನಾಟಕದಲ್ಲಿನ ಈ ಬ್ಯಾಂಕುಗಳು ಕೊಲ್ಕತ್ತಾದ ಆಡಳಿತವಲಯಕ್ಕೆ ಸೇರಿರುವುದು. ಈಗ ಅಲ್ಲಿ ನ್ಯಾಯಾಲಯಗಳಿಗೆ ದೀಪಾವಳಿಯ ರಜೆ ಇರುವುದರಿಂದ ಅವುಗಳು ಮತ್ತೆ ತಮ್ಮಕಲಾಪಗಳನ್ನು ಪ್ರಾರಂಭಿಸುವವರೆಗು ನಮ್ಮ ರೈತರು ಬಂಧನದ ಭೀತಿಯಲ್ಲಿಯೇ ಬದುಕುವ ಅನಿವಾರ್ಯ ಸೃಷ್ಠಿಯಾಗಿದೆ.