ಯಶವಂತ್ ಸಿನ್ಹಾ
ಬಿಜೆಪಿ ಸದಸ್ಯ, ಮಾಜಿ ಹಣಕಾಸು ಸಚಿವ.
ಕನ್ನಡಕ್ಕೆ: ಡಾ. ಅಶೋಕ್. ಕೆ. ಆರ್
ನಮ್ಮ ಹಣಕಾಸು ಸಚಿವರು ದೇಶದ ಆರ್ಥಿಕತೆಯನ್ನು ಗಬ್ಬೆಬ್ಬಿಸಿಬಿಟ್ಟಿರುವುದರ ಬಗ್ಗೆ ನಾನು ಈಗಲೂ ಮಾತನಾಡದೇ ಹೋದರೆ ದೇಶದೆಡೆಗಿನ ನನ್ನ ಕರ್ತವ್ಯಕ್ಕೆ ದ್ರೋಹ ಬಗೆದಂತೆ. ನಾನೀಗ ಹೇಳಲೊರಟಿರುವ ವಿಷಯವು ಬಿಜೆಪಿಯ ಬಹಳಷ್ಟು ಜನರ ಅಭಿಪ್ರಾಯವು ಹೌದು, ಆದರವರು ಭೀತಿಯ ಕಾರಣದಿಂದಾಗಿ ಮಾತನಾಡುತ್ತಿಲ್ಲ ಅಷ್ಟೇ.
ಈ ಸರಕಾರದಲ್ಲಿ ಅರುಣ್ ಜೇಟ್ಲಿಯವರನ್ನು ಅತ್ಯುತ್ತಮ ಮಂತ್ರಿ ಎಂದು ಪರಿಗಣಿಸಲಾಗಿದೆ. ೨೦೧೪ರ ಚುನಾವಣೆ ನಡೆಯುವುದಕ್ಕೆ ಮೊದಲೇ ಹೊಸ ಸರ್ಕಾರದಲ್ಲಿ ಅರುಣ್ ಜೇಟ್ಲಿ ಹಣಕಾಸು ಸಚಿವರಾಗುತ್ತಾರೆನ್ನುವುದು ನಿರ್ಧಾರವಾಗಿಬಿಟ್ಟಿತ್ತು. ಅವರು ಅಮೃತಸರದ ಲೋಕಸಭಾ ಚುನಾವಣೆಯಲ್ಲಿ ಸೋತಿದ್ದು ಅವರ ಮಂತ್ರಿ ಪದವಿಗೆ ಅಡ್ಡಿಯಾಗಲಿಲ್ಲ. ಇದೆ ರೀತಿಯ ಪರಿಸ್ಥಿತಿ ೧೯೯೮ರಲ್ಲೂ ಉಂಟಾಗಿತ್ತು. ಆಗ ಚುನಾವಣೆ ಸೋತಿದ್ದ ಜಸ್ವಂತ್ ಸಿಂಗ್ ಮತ್ತು ಪ್ರಮೋದ್ ಮಹಾಜನ್ ಅಟಲ್ ಬಿಹಾರಿ ವಾಜಪೇಯಿಯವರಿಗೆ ಹತ್ತಿರದವರಾಗಿದ್ದರೂ ಕೂಡ ಅಟಲ್ ಬಿಹಾರಿ ವಾಜಪೇಯಿ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲು ನಿರಾಕರಿಸಿದರು. ಆದರೆ ಅರುಣ್ ಜೇಟ್ಲಿಯವರ ವಿಷಯದಲ್ಲಿ ಇದಾಗಲಿಲ್ಲ. ಬದಲಿಗೆ ಪ್ರಧಾನ ಮಂತ್ರಿಯವರು ಅರುಣ್ ಜೇಟ್ಲಿಯವರಿಗೆ ಹಣಕಾಸು ಸಚಿವಾಲಯದ ಜೊತೆಗೆ, ಡಿಸ್ ಇನ್ವೆಸ್ಟ್ಮೆಂಟ್, ರಕ್ಷಣೆ ಮತ್ತು ಕಾರ್ಪೊರೇಟ್ ಕಾರುಬಾರಿನ ಸಚಿವಾಲಯವನ್ನೂ ನೀಡಿದರು. ಒಂದೇ ಏಟಿಗೆ ಒಟ್ಟು ನಾಲ್ಕು ಸಚಿವಾಲಯಗಳನ್ನು ಪಡೆದುಕೊಂಡರು. ಈಗಲೂ ಅವರ ಬಳಿ ಮೂರೂ ಖಾತೆಗಳಿವೆ. ನಾನೂ ಕೂಡ ಹಣಕಾಸು ಸಚಿವನಾಗಿದ್ದವನು. ಆ ಸಚಿವಾಲಯದಲ್ಲಿ ಎಷ್ಟು ಶ್ರಮ ಬೀಳಬೇಕೆನ್ನುವುದು ನನಗೆ ಗೊತ್ತಿದೆ. ಹಣಕಾಸು ಸಚಿವಾಲಯ ಸರಿಯಾಗಿ ಕಾರ್ಯನಿರ್ವಹಿಸಲು ಅದರ ಸಚಿವರು ತಮ್ಮೆಲ್ಲ ಗಮನವನ್ನು ಅತ್ತಲೇ ಕೇಂದ್ರೀಕರಿಸಬೇಕಾದ ಅವಶ್ಯಕತೆಯಿದೆ. ಸವಾಲಿನ ಸಮಯದಲ್ಲಿ ಇಲ್ಲಿನದು ೨೪/೭ ಗಿಂತಲೂ ಹೆಚ್ಚಿನ ಕೆಲಸ ಮಾಡಬೇಕಾಗುತ್ತದೆ ಎಂದರದು ಅತಿಶಯೋಕ್ತಿಯೇನಲ್ಲ. ಸಹಜವಾಗಿ, ಜೇಟ್ಲಿಯಂತಹ ಸೂಪರ್ ಮ್ಯಾನ್ ಕೂಡ ಈ ಕಾರ್ಯದಲ್ಲಿ ನ್ಯಾಯ ಒದಗಿಸಲು ಸಾಧ್ಯವಾಗಲಿಲ್ಲ.