ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
ಈಗಾಗಲೇ ದೆಹಲಿಯ ಗದ್ದುಗೆಯನ್ನು ಹಿಡಿದಿರುವ ಶ್ರೀ ಅರವಿಂದ್ ಕೇಜ್ರೀವಾಲಾರವರ ಆಮ್ ಆದ್ಮಿ ಪಕ್ಷ ಇದೀಗ ಮುಂದಿನ ವರ್ಷದ ಪೂರ್ವಾರ್ದದಲ್ಲಿ ನಡೆಯಲಿರುವ ಪಂಜಾಬ್ ಮತ್ತು ಗೋವಾ ರಾಜ್ಯಗಳ ವಿದಾನಸಭಾ ಚುನಾವಣೆಗಳ ಮೇಲೆ ಕಣ್ಣು ನೆಟ್ಟಿದೆ. ಅಷ್ಟು ಮಾತ್ರವಲ್ಲದೆ ಈಗಾಗಲೇ ಈ ಎರಡೂ ರಾಜ್ಯಗಳಲ್ಲಿ ಕೆಲವು ಪ್ರಮುಖ ಸ್ಥಾನಗಳಿಗೆ ಅಭ್ಯರ್ಥಿಗಳ ಹೆಸರುಗಳನ್ನೂ ಘೋಷಿಸಿದೆ. ಜೊತೆಗೆ ಲಭ್ಯವಿರುವ ಮಾಹಿತಿ ತಂತ್ರಜ್ಞಾನವನ್ನು ಬಳಸಿಕೊಂಡು ಚುನಾವಣಾ ಪ್ರಚಾರವನ್ನೂ ಪ್ರಾರಂಭಿಸಿದೆ. ಈಗಾಗಲೇ ಕಳೆದ 2014ರ ಸಾರ್ವತ್ರಿಕ ಚುನಾವಣೆಗಳಲ್ಲಿ ನಾಲ್ಕು ಸ್ಥಾನಗಳನ್ನು ಗೆದ್ದಿರುವ ಪಂಜಾಬನ್ನು ಹೊರತು ಪಡಿಸಿ ಇದೇ ಮೊದಲ ಬಾರಿಗೆ ಚುನಾವಣಾ ರಂಗಕ್ಕೆ ಕಾಲಿರಿಸಿರುವ ಗೋವಾ ರಾಜ್ಯದಲ್ಲಿ ಆ ಪಕ್ಷ ತೀರಾ ಆಕ್ರಮಣಾ ಕಾರಿ ರಾಜಕಾರಣ ಶುರು ಮಾಡಿದೆ. ಈಗಾಗಲೇ ಗೋವಾದಲ್ಲಿ ಒಂದು ರ್ಯಾಲಿಯನ್ನೂ ನಡೆಸಿರುವ ಅರವಿಂದ್ ಕೇಜ್ರೀವಾಲರ ಸಿದ್ದತೆಗಳನ್ನು ಮತ್ತು ಪಕ್ಷದ ನಾಯಕರುಗಳ ಉತ್ಸಾಹವನ್ನು ನೋಡಿದರೆ ಈ ಬಾರಿ ಕಾಂಗ್ರೆಸ್ ಮತ್ತು ಬಾಜಪಕ್ಕೆ ಈ ಚುನಾವಣೆ ಕಷ್ಟವಾಗುವುದಂತು ಖಚಿತವೆನಿಸುತ್ತಿದೆ.