ಸಾಕೇತ್ ರಾಜನ್
ಕನ್ನಡಕ್ಕೆ: ಡಾ. ಅಶೋಕ್. ಕೆ. ಆರ್
ರೈತಾಪಿ ಜನರು ಬಂದೂಕು ಹಿಡಿದರು
ಮೂರನೇ ರೀತಿಯ ಸಶಸ್ತ್ರ ಹೋರಾಟದಲ್ಲಿ ರೈತ ಕಾರ್ಮಿಕರು ನೇತೃತ್ವ ವಹಿಸಿದರು. ಹತ್ತೊಂಭತ್ತನೇ ಶತಮಾನದ ಮೊದಲರ್ಧದಲ್ಲಿ ಕರ್ನಾಟಕದ ವಿಮೋಚನಾ ಹೋರಾಟದಲ್ಲಿ ಇದು ಅತ್ಯಂತ ಮಹತ್ವದ ವಿಚಾರ. ಕರ್ನಾಟಕದ ರೈತಾಪಿ ಸಮೂಹ ವಸಾಹತು ವಿರೋಧಿ ಹೋರಾಟದ ಹಾದಿಯಲ್ಲಿ ದೀವಿಗೆ ಹಿಡಿದು ಬೆಳಕು ಚೆಲ್ಲಿದರು. ನಾಯಕರು ಹುಟ್ಟಿದರು. ಸಂಗೊಳ್ಳಿ ರಾಯಣ್ಣ ಇವರೆಲ್ಲರಲ್ಲಿ ಮುಂಚೂಣಿಯಲ್ಲಿದ್ದರು. ಅವರ ಹೋರಾಟ ವಸಾಹತುಶಾಹಿ ಮತ್ತವರ ಊಳಿಗಮಾನ್ಯ ಮಿತ್ರರ ಮೇಲೂ ದಾಳಿ ನಡೆಸಿತು ಮತ್ತು ರೈತ – ಕಾರ್ಮಿಕ ಸಮೂಹದಾಧಾರದಲ್ಲಿ ಗೆರಿಲ್ಲಾ ಯುದ್ಧ ನಡೆಸಿ ವಿಮೋಚನಾ ಹಾದಿಯನ್ನು ರೂಪಿಸಿತು. ನಾವೀಗ ಇವುಗಳಲ್ಲಿ ಮೂರು ಪ್ರಮುಖ ಹೋರಾಟಗಳನ್ನು ಗಮನಿಸೋಣ, ಈ ಮೂರೂ ನಿರಂತರ ಚಳುವಳಿಯಾಗಿತ್ತು, ಒಂದಾದ ನಂತರ ಮತ್ತೊಂದು ನಡೆದಿತ್ತು ಮತ್ತು 1829 ಹಾಗು 1837ರ ಅವಧಿಯ ಮಧ್ಯೆ ನಡೆದಿತ್ತು – ಸಂಗೊಳ್ಳಿ ರಾಯಣ್ಣನ ಗೆರಿಲ್ಲಾ ಯುದ್ಧ, ನಗರದ ಸಶಸ್ತ್ರ ಬಂಡಾಯ ಹಾಗೂ ಕಲ್ಯಾಣಸ್ವಾಮಿ ಮುನ್ನಡೆಸಿದ ಸಶಸ್ತ್ರ ಹೋರಾಟ. ಕರ್ನಾಟಕದ ಜನಸಮೂಹದ ಶ್ರೀಮಂತ ಅನುಭವದಿಂದ ನಾವು ಕಲಿಯೋಣ. ರಕ್ತ ಮತ್ತು ಕಣ್ಣೀರು, ಅತ್ಯಂತ ಅಮೂಲ್ಯವಾದ – ಜೀವದ – ತ್ಯಾಗವೇ ಅಲ್ಲವೇ ಇತಿಹಾಸವನ್ನು ಮುಂದಿನ ಪೀಳಿಗೆಗೆ ಸಮೃದ್ಧಗೊಳಿಸುವುದು?