ಆಗ 22, 2016

ಆಜಾದಿ

ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
22/08/2016
ಆಜಾದಿ ಬೇಕೆಂದೆ.
ಯಾವುದರಿಂದ ಎಂದು ಕೇಳಿದ್ದರೆ ಹೇಳಬಹುದಿತ್ತು:
ನಿಮ್ಮ ಸನಾತನ ಧರ್ಮದ ವರ್ಣವ್ಯವಸ್ಥೆಯಿಂದ
ನಿಮ್ಮ ಜಾತಿ ವೈಷಮ್ಯದ ಕ್ರೂರತೆಯಿಂದ
ನಿಮ್ಮ ಸಿರಿವಂತಿಕೆಯ ತೆವಲಿನ ಶೋಷಣೆಯಿಂದ
ನಿಮ್ಮ ಅಧಿಕಾರದ ಅಮಲಿನಿಂದ ನಡೆಸುವ ದಬ್ಬಾಳಿಕೆಯಿಂದ
ನಿಮ್ಮ ದೊಡ್ಡಸ್ತಿಕೆಯ ದೌರ್ಜನ್ಯದಿಂದ.
ಅವರದೇನನ್ನೂ ಕೇಳಲಿಲ್ಲ
ಮರುಮಾತಾಡದೆ ದೇಶದ್ರೋಹಿಯ ಪಟ್ಟ ಕಟ್ಟಿದರು
ಸಾರ್ವಜನಿಕ ವೃತ್ತದಲಿ ನೇಣುಗಂಬವನೊಂದ ನೆಟ್ಟು
ನಮ್ಮನ್ನೆಲ್ಲ ಸರತಿಯ ಸಾಲಲ್ಲಿ ನಿಲ್ಲಿಸಿದರು.

ಎಲ್ಲ ಮುಗಿದಾದ ಮೇಲೆ-
ನ್ಯಾಯಾಧೀಶರೊಬ್ಬರನ್ನು ಕರೆತಂದು ವಿಚಾರಣೆ ಮಾಡಿಸಲಾಯಿತು.
ಶಿಕ್ಷೆಯನ್ನು ಊರ್ಜಿತಗೊಳಿಸಲಾಗಿದೆಯೆಂದು ಷರಾ ಬರೆಯಲಾಯಿತು
ಇದೀಗ ಊರ ನೆತ್ತಿಯ ತುಂಬಾ ಹದ್ದುಗಳ ಗಸ್ತು...
ಈಗ ದೇಶಭಕ್ತಿಗೆ ಹೊಸ ವ್ಯಾಖ್ಯಾನ ಬರೆಯಲಾಗಿದೆ
ಪ್ರಶ್ನೆಗಳನ್ನು ನಿಷೇಧಿಸಲಾಗಿದೆ.

ಈ ಕವಿತೆ ಬರೆದ ಕವಿಯ ಹುಡುಕಲಾಗುತ್ತಿದೆ
ಹುಡುಕಿಕೊಡುವವರಿಗೆ ಬಹುಮಾನ ಘೋಷಿಸಲಾಗಿದೆ.
(ದೇಶದ್ರೋಹದ ಬಗ್ಗೆ ಮತ್ತೆಂದಾದರು ಬರೆಯಲಾಗುವುದು!)

ಆಗ 19, 2016

ಅಂತರರಾಷ್ಟ್ರೀಯ ಕ್ರೀಡಾಕೂಟಗಳ ಕಳಪೆ ಸಾಧನೆಯ ಹಿಂದಿನ ನಗ್ನಸತ್ಯಗಳು

ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
19/08/2016

ಒಲಂಪಿಕ್ಸ್ ಸೇರಿದಂತೆ ಯಾವುದೇ ಅಂತರರಾಷ್ಟ್ರೀಯ ಕ್ರೀಡಾಕೂಟಗಳು ನಡೆದಾಗ ನಮ್ಮ ದೇಶದ ಕ್ರೀಡಾಪಟುಗಳ ಕಳಪೆ ಸಾಧನೆಗಳ ಬಗ್ಗೆ ಜೋರುದನಿಯ ಚರ್ಚೆಗಳ ಜೊತೆಜೊತೆಗೆ ಕ್ರೀಡಾಪಟುಗಳನ್ನು, ಕ್ರೀಡಾವ್ಯವಸ್ಥೆಯನ್ನು ಟೀಕಿಸುವುದು ನಮ್ಮ ಸಂಪ್ರದಾಯವಾಗಿ ಬಿಟ್ಟಿದೆ. ಬಹುಶ: ಸ್ವಾತಂತ್ರ ದೊರೆತ ಇಷ್ಟು ವರ್ಷಗಳ ನಂತರವೂ ನಾವು ಪರಸ್ಪರ ದೋಷಾರೋಪಣೆಯಲ್ಲಿ ಮುಳುಗಿದ್ದೇವೆಯೇ ಹೊರತು ನಮ್ಮ ವೈಫಲ್ಯಗಳಿಗಿರಬಹುದಾದ ಕಾರಣಗಳನ್ನು ಹೆಕ್ಕಿ ತೆಗೆದು ಪರಿಹಾರ ಕಂಡು ಕೊಳ್ಳುವ ಪ್ರೌಢಿಮೆಯನ್ನು ತೋರಿಲ್ಲ. ಆ ನಿಟ್ಟಿನಲ್ಲಿ ನನಗೆ ಕಂಡುಬಂದ ಸಮಸ್ಯೆಗಳನ್ನು ಇಲ್ಲಿ ಪಟ್ಟಿ ಮಾಡಲು ಪ್ರಯತ್ನಿಸಿದ್ದೇನೆ:

ನಮ್ಮ ಕ್ರೀಡಾವೈಫಲ್ಯಕ್ಕೆ ಕಾರಣಗಳು:

1. ಕ್ರೀಡಾಸಂಸ್ಕೃತಿಯ ಕೊರತೆ:

ನನಗನ್ನಿಸುವಂತೆ ನಮ್ಮ ಕ್ರೀಡಾವೈಫಲ್ಯಕ್ಕೆ ಬಹುಮುಖ್ಯ ಕಾರಣವೆಂದರೆ ಇದೆ! ಯಾಕೆಂದರೆ ಬೇರೆ ಹಲವು ರಾಷ್ಟ್ರಗಳಲ್ಲಿರುವಂತೆ ಕ್ರೀಡೆಗಳು ನಮ್ಮ ಸಂಸ್ಕೃತಿಯ ಒಂದು ಭಾಗವಾಗಿ ಬೆಳೆಯಲು ನಾವು ಅವಕಾಶ ಕೊಟ್ಟಿಲ್ಲ. ಮೊದಲು ಬಡರಾಷ್ಟ್ರವಾಗಿದ್ದು, ಇದೀಗ ಅಭಿವೃದ್ದಿಶೀಲರಾಷ್ಟ್ರದ ಮಿತಿಯನ್ನು ದಾಟಿ ಬಲಿಷ್ಠ ಆರ್ಥಿಕ ಶಕ್ತಿಯಾಗುವ ದಿಸೆಯಲ್ಲಿ ದಾಪುಗಾಲು ಹಾಕುತ್ತಿರುವ ನಾವಿವತ್ತಿಗೂ ಕ್ರೀಡೆಗಳನ್ನು ಸಮಯ ಕಳೆಯುವ ಮತ್ತು ವ್ಯರ್ಥ ಮನೋರಂಜನೆಯ ಭಾಗವನ್ನಾಗಿ ಮಾತ್ರ ನೋಡುತ್ತಿದ್ದೇವೆ. ನಮ್ಮ ಒಟ್ಟು ಜನಸಂಖ್ಯೆಯ ಶೇಕಡಾ ಎಪ್ಪತ್ತು ಜನರು ಹಳ್ಳಿಗಳಲ್ಲಿ ವಾಸವಿದ್ದು ಕೃಷಿಯನ್ನು, ಕೃಷಿಯಾಧಾರಿತ ಕಸುಬುಗಳನ್ನು ಅವಲಂಬಿಸಿಯೇ ಬದುಕುತ್ತಿದ್ದಾರೆ. ಅವರ ದೈನಂದಿನ ಚಟುವಟಿಕೆಗಳು ಶುರುವಾಗುವುದೇ ಅವತ್ತಿನ ತುತ್ತಿನ ಚೀಲ ತುಂಬಿಸಿಕೊಳ್ಳುವ ಸಲುವಾಗಿ. ಹಾಗಾಗಿ ಅಂತಲ್ಲಿನ ಬಹುತೇಕ ಪೋಷಕರ ಮುಖ್ಯ ಗುರಿ ತಮ್ಮ ಮಕ್ಕಳನ್ನು ಯಾವುದಾದರೊಂದು ಉದ್ಯೋಗದಲ್ಲಿ ತೊಡಗಿಸಿ ಅವರಿಗೆ ಆರ್ಥಿಕ ಭದ್ರತೆಯನ್ನು ಒದಗಿಸುವುದಾಗಿರುತ್ತದೆ. ಇಂತಹ ಸನ್ನಿವೇಶದಲ್ಲಿ ಬದುಕುತ್ತಿರುವ ಅವರಿಗೆ ಕ್ರೀಡೆಗಳು ವ್ಯರ್ಥ ಸಮಯ ಕಳೆಯುವ ಸಾದನಗಳೆಂದು ಅನಿಸಿದ್ದರೆ ಅವರ ತಪ್ಪೇನು ಇಲ್ಲ. ಇನ್ನು ನಮ್ಮ ಸರಕಾರಗಳು ಏನೇ ಬಡಾಯಿ ಕೊಚ್ಚಿಕೊಂಡರೂ ಗ್ರಾಮೀಣ ಭಾಗದ ಶೇಕಡಾ 60ರಷ್ಟು ಶಾಲೆಗಳಲ್ಲಿ ಇವತ್ತಿಗು ದೈಹಿಕ ಶಿಕ್ಷಕರುಗಳಿಲ್ಲ. ಅಕಸ್ಮಾತ್ ಇದ್ದರೂ ಮಕ್ಕಳಿಗೆ ಆಟವಾಡಲು ಬೇಕಾದ ಕ್ರೀಡಾ ಸಲಕರಣೆಗಳೇ ಇರುವುದಿಲ್ಲ. ಹಾಗಾಗಿ ಬಹುತೇಕ ಹಳ್ಳಿಗಳಲ್ಲಿ ಆಟದ ಸಮಯದಲ್ಲಿ ಜೂಟಾಟ, ಕೋಕೋಗಳನ್ನು, ಕಬಡ್ಡಿಯನ್ನು ಮಾತ್ರ ಆಡಿಸುವುದನ್ನು ಕಾಣಬಹುದಾಗಿದೆ.ನಮ್ಮ ದುರದೃಷ್ಟವೆಂದರೆ ಜೂಟಾಟ ಮತ್ತು ಖೋಖೋಗಳನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಆಡಿಸುವುದಿಲ್ಲವೆನ್ನುವುದಾಗಿದೆ. ಶಾಲೆಗಳಲ್ಲಿ ಹೆಚ್ಚೆಂದರೆ ನಮ್ಮ ಹೆಣ್ಣಮಕ್ಕಳಿಗೆ ಆಡಲು ಒಂದು ರಿಂಗ್ ಅನ್ನು ಅಥವಾ ಒಂದು ಥ್ರೋಬಾಲ್ ನೀಡಲಾಗಿರುತ್ತದೆ. ಇಷ್ಟಲ್ಲದೆಶಾಲೆಗಳಲ್ಲಿ ಪ್ರತಿದಿನಕ್ಕೆ ಎಂಟು ಪಿರಿಯಡ್ಗಳಿದ್ದರೆ ಆಟಕ್ಕೆಂದು ಕೇವಲ ಒಂದು ಪಿರಿಯಡ್ ಇದ್ದು ಅದನ್ನೂ ಸಂಜೆ ಶಾಲೆ ಬಿಡುವ ಮುಂಚೆ ನಿಗದಿ ಪಡಿಸಲಾಗಿರುತ್ತದೆ. ಆಗ ಎಲ್ಲಾ ತರಗತಿಯ ಮಕ್ಕಳೂ ಒಮ್ಮೆಲೆ ಮೈದಾನಕ್ಕೆ ನುಗ್ಗುವುದರಿಂದ ಯಾವ ಆಟವನ್ನೂ ಏಕಾಗ್ರತೆಯಿಂದ ಕಲಿಯಲಾಗಲಿ ಆಡಲಾಗಲಿ ಸಾದ್ಯವಿಲ್ಲ. ಇದರ ಜೊತೆಗೆ ಬೆಳೆಗ್ಗೆಯಿಂದ ಅಭ್ಯಾಸದಲ್ಲಿ ಸುಸ್ತಾಗಿ ಮನೆಗೆ ಮರಳುವ ಅವಸರದಲ್ಲಿರುವ ಮಕ್ಕಳಿಗೆ ಆಟಗಳ ಬಗ್ಗೆ ಆಟದಲ್ಲಿ ಆಸಕ್ತಿ ಇರುವುದಿಲ್ಲ. ಜೊತೆಗೆ ದೂರದ ಹಳ್ಳಿಗಳಿಂದ ಶಾಲೆಗೆ ಬರುವ ಮಕ್ಕಳು-ಮುಖ್ಯವಾಗಿ ಹೆಣ್ಣುಮಕ್ಕಳು- ಕತ್ತಲಾಗುವುದರ ಒಳಗೆ ನಡೆದುಕೊಂಡು ಮನೆ ಸೇರಬೇಕಿರುವುದರಿಂದ ಅವರುಗಳು ಸಹ ಸಕ್ರಿಯವಾಗಿ ಕ್ರೀಡೆಗಳಲ್ಲಿ ಬಾಗವಹಿಸಲಾರರು. ಪ್ರೌಢಶಾಲೆಯ ಹಂತದ ಕೊನೆಯವರೆಗೆ ಬರುವ ತನಕವೂ ನಮ್ಮ ಮಕ್ಕಳಿಗೆ ಕ್ರೀಡೆಯ ನೈಜಮಹತ್ವ ತಿಳಿಯುವುದೇ ಇಲ್ಲ. ಹಾಗೆ ಅವರಿಗೆ ತಿಳಿದು ಕ್ರೀಡೆಯನ್ನು ಗಂಭೀರವಾಗಿ ತೆಗೆದುಕೊಳ್ಳುವ ಹೊತ್ತಿಗೆ ಅವರ ಶಿಕ್ಷಣ ಮುಗಿಯುತ್ತ ಬಂದಿರುತ್ತದೆ. ಇನ್ನು ನಾನು ಮೊದಲೇ ಹೇಳಿದಂತೆ ನಮ್ಮ ಪೋಷಕರಿಗೆ ಕ್ರೀಡೆಗಿಂತ ದೈನಂದಿನ ಬದುಕೇ ಮುಖ್ಯವಾಗಿದ್ದು ಕ್ರೀಡೆಯನ್ನು ಗಂಭೀರವಾಗಿ ತೆಗೆದುಕೊಳ್ಳುವ ಅಬ್ಯಾಸವಿಲ್ಲವಾಗಿದೆ.

2. ಮೂಲ ಸೌಕರ್ಯಗಳ ಕೊರತೆ:

ಸರಕಾರದ ಬೇರೆಲ್ಲ ಕ್ಷೇತ್ರಗಳಂತೆಯೇ ಇಲ್ಲಿಯೂ ಮೂಲಸೌಕರ್ಯಗಳ ಕೊರತೆಯಿದೆ. ಮೊದಲೇ ಹೇಳದಂತೆ ಬಹಳಷ್ಟು ಶಾಲೆಗಳಲ್ಲಿ ದೈಹಿಕ ಶಿಕ್ಷಕರುಗಳೇ ಇರುವುದಿಲ್ಲ. ಒಂದೊಮ್ಮೆ ಇದ್ದರೂ ಮಕ್ಕಳಿಗೆ ಆಟದ ಮೈದಾನವೇ ಇರುವುದಿಲ್ಲ. ಇನ್ನು ಕ್ರೀಡಾ ಉಪಕರಣಗಳ ಬಗ್ಗೆ ನೋಡಿದರೆ ಎಷ್ಟೊ ವರ್ಷಕ್ಕೊಮ್ಮೆ ಸರಕಾರ ಪೂರೈಸುವ ಸಲಕರಣೆಗಳು ಸಹ ಉತ್ತಮ ಗುಣಮಟ್ಟದ್ದಾಗಿರುವುದಿಲ್ಲ. ಇನ್ನು ಈಗಾಗಲೇ ಕರ್ತವ್ಯ ನಿರ್ವಹಿಸುವ ದೈಹಿಕ ಶಿಕ್ಷಕರುಗಳಿಗೆ ಆಧುನಿಕವಾಗಿ, ವೈಜ್ಞಾನಿಕ ರೀತಿಯಲ್ಲಿ ಕ್ರೀಡಾಳುಗಳನ್ನು ತಯಾರು ಮಾಡುವ ಕುರಿತಂತೆ ತರಬೇತಿಗಳನ್ನು ಆಗಿಂದ್ಹಾಗೆ ನೀಡಲಾಗುತ್ತಿಲ್ಲ. ಇನ್ನು ಶಾಲೆಗಳಲ್ಲಿ ಕನಿಷ್ಠ ಪ್ರಥಮ ಚಿಕಿತ್ಸೆಯ ಪೆಟ್ಟಿಗೆಯೂ ಲಭ್ಯವಿರುವುದಿಲ್ಲ. ಇದಕ್ಕೆ ಪೂರಕವಾಗಿ ಅಪೌಷ್ಠಿಕತೆಯಿಂದ ಬಳಲುತ್ತಿರುವ ನಮ್ಮ ಮಕ್ಕಳ ದೈಹಿಕ ಶಕ್ತಿಯು ಅಷ್ಟಕ್ಕಷ್ಟೇ ಇರುತ್ತದೆ.ಇನ್ನು ನಮ್ಮ ಸರಕಾರಗಳು ಆಯವ್ಯಯದಲ್ಲಿ ಕ್ರೀಡೆಗಳಿಗಾಗಿ ಮೀಸಲಿರಿಸುವ ಅನುದಾನದ ಮೊತ್ತ ಒಟ್ಟು ಆಯವ್ಯಯದ ಶೇಕಡಾ 2 ಅನ್ನು ದಾಟುತ್ತಿಲ್ಲ.

3. ಕ್ರೀಡಾಪಟುಗಳಿಗೆ ಉದ್ಯೋಗಾವಕಾಶಗಳ, ಜೀವನ ಭದ್ರತೆಯ ಗ್ಯಾರಂಟಿ ಇಲ್ಲದಿರುವುದು.

ತನ್ನ ಮಗುವೊಂದು ಕ್ರೀಡಾಪಟುವಾಗಿ ಒಂದು ಹಂತದವರೆಗು ಯಶಸ್ಸಿನತ್ತ ಹೋದರೆ ಅವನಿಗೊಂದು ಉದ್ಯೋಗ ದೊರೆತು ಆತನ ಬದುಕು ನೆಲೆ ಕಾಣುತ್ತದೆಯೆಂಬ ಯಾವ ಭರವಸೆಯೂ ನಮ್ಮ ಪೋಷಕರಿಗೆ ಇಲ್ಲದಿರುವುದು ಸಹ ಮಕ್ಕಳನ್ನು ಕ್ರೀಡೆಗೆ ಕಳಿಸಲು ಹಿಂಜರಿಯಲಿರುವ ಒಂದು ಮುಖ್ಯ ಕಾರಣವಾಗಿದೆ. ಸರಕಾರಿ ಉದ್ಯೋಗಗಳಲ್ಲಿ ಕ್ರೀಡಾಪಟುಗಳಿಗೆ ಈಗಿರುವ ಮೀಸಲಾತಿಯ ಪ್ರಮಾಣ ಬಹಳ ಕಡಿಮೆಯಿದ್ದು ಅದೂ ಕೂಡ ರಾಜ್ಯ ಮತ್ತು ರಾಷ್ಟ್ರ ಮಟ್ಟದ ಕ್ರೀಡಾಪಟುಗಳಿಗಷ್ಟೆ ಮೀಸಲಾಗಿದೆ. ಇರುವ ಆ ಅಲ್ಪ ಮೀಸಲಾತಿಯನ್ನೂ ಕ್ರಿಕೇಟಿನಂತಹ ಜನಪ್ರಿಯ ಹಾಗು ಶ್ರೀಮಂತ ಆಟಗಳೇ ನುಂಗಿ ಹಾಕುತ್ತಿರುವುದು ಮತ್ತೊಂದು ವಿಪರ್ಯಾಸ. ಇನ್ನು ನಮ್ಮ ಖಾಸಗಿ ಉದ್ಯಮಗಳು ಕ್ರಿಕೇಟ್ ಮತ್ತು ಹಾಕಿಯನ್ನು ಹೊರತು ಪಡಿಸಿದಂತೆ ಬೇರಿನ್ನಾವ ಕ್ರೀಡೆಗಳ ಬಗ್ಗೆಯೂ ಆಸಕ್ತಿ ತೋರದೆ ಇರುವುದು. ಉಳಿದ ಕ್ರೀಡೆಗಳ ಆಟಗಾರರಿಗೆ ಕೆಲಸ ನೀಡುವ ಮಾತು ದೂರದ್ದಾಯಿತು. ಹೀಗೆ ಯಾವುದೇ ರೀತಿಯ ಬದುಕಿನ ಭದ್ರತೆಯಿಲ್ಲದ ಕ್ರೀಡೆಯನ್ನು ತಮ್ಮ ಮಕ್ಕಳು ವೃತ್ತಿಪರವಾಗಿ ತೆಗೆದುಕೊಳ್ಳುವುದನ್ನು ಯಾವ ಪೋಷಕರೂ ಆಶಿಸುವುದಿಲ್ಲ. ಇನ್ನು ಬೇರೇ ಉದ್ಯೋಗದಲ್ಲಿರುವವರು ತಮ್ಮ 60ನೇ ವಯಸ್ಸಿಗೆ ನಿವೃತ್ತರಾಗಿ ಪಿಂಚಣಿಯ ಸೌಲಭ್ಯ ಪಡೆದರೆ ಕ್ರೀಡಾಪಡುಗಳು ತಮ್ಮ 30ರಿಂದ 40ನೇ ವಯಸ್ಸಿನ ಒಳಗೇ ನಿವೃತ್ತಿಯಾಗಬೇಕಿದ್ದು ನಂತರದಲ್ಲಿ ಅವರು ಜೀವನ ಸಾಗಿಸಲು ಕ್ರೀಡೆಯ ಭಾಗವಾದ ತರಭೇತಿದಾರರ ಅಥವಾ ಸಹಾಯಕರ ಕೆಲಸ ಮಾಡಬೇಕೇ ಹೊರತು ಬೇರಿನ್ನಾವ ಕೆಲಸಗಳೂ ಅವರಿಗೆ ದೊರೆಯುವುದು ಕಷ್ಟ. ಅದೂ ಅಲ್ಲದೆ ಕ್ರೀಡಾಬ್ಯಾಸದ ನೆಪದಲ್ಲಿ ಅವರ ಶಿಕ್ಷಣವೂ ಮೊಟಕಾಗಿರುತ್ತದೆ. ತರಭೇತುದಾರರ ಹುದ್ದೆಯೂ ಪ್ರಭಾವಶಾಲಿಗಳಿಗೆ ಬಿಟ್ಟರೆ ಎಲ್ಲರಿಗೂ ದೊರೆಯುವುದು ಕಷ್ಟ.

4. ಕ್ರೀಡಾ ಸಂಸ್ಥೆಗಳಲ್ಲಿನ ಭ್ರಷ್ಟಾಚಾರಗಳು ಮತ್ತು ರಾಜಕಾರಣಿಗಳ ಆಡಳಿತ.

ಬೇರೆಲ್ಲೆಡೆಯಂತೆ ನಮ್ಮ ಕ್ರೀಡಾ ಸಂಸ್ಥೆಗಳು ಸಹ ಭ್ರಷ್ಟಾಚಾರಗಳ ಕೂಪಗಳಾಗಿ ಪರಿಣಮಿಸಿವೆ.ನಮ್ಮ ದೇಶದ ಶೇಕಡಾ 60ರಷ್ಟು ಕ್ರೀಡಾಸಂಸ್ಥೆಗಳು ರಾಜಕಾರಣಿಗಳ ಹಿಡಿತದಲ್ಲಿಯೇ ಇದ್ದು, ಕ್ರೀಡಾಪಟುಗಳ ಮಾತಿಗೆ ಬೆಲೆ ಇಲ್ಲದಂತಾಗಿದೆ.ಸದಾ ಯಾವುದಾದರು ಒಂದು ಅಧಿಕಾರದ ಕುರ್ಚಿಯಲ್ಲಿ ಕೂತಿರಬೇಕೆಂದು ಬಯಸುವ ನಮ್ಮ ರಾಜಕಾರಣಿಗಳು ತಮ್ಮ ಪ್ರಭಾವ, ಸಂಪರ್ಕ, ಹಣ ಬಳಸಿ ಕ್ರೀಡಾಸಂಸ್ಥೆಗಳ ಮುಖ್ಯಸ್ಥರ ಹುದ್ದೆಯಲ್ಲಿ ಕೂರುತ್ತಾರೆ. ತಾವು ಖರ್ಚು ಮಾಡಿದ ಹಣವನ್ನು ಪಡೆಯಲು ಮತ್ತು ತಮಗೆ ಬೇಕಾದ ಕ್ರೀಡಾಪಟುಗಳನ್ನು ಆಯ್ಕೆ ಮಾಡಲು ವಾಮಮಾರ್ಗಗಳನ್ನು ಅನುಸರಿಸುವುದರಿಂದ ಪ್ರತಿಭಾವಂತ ಕ್ರೀಡಾಪಟುಗಳಿಗೆ ಅನ್ಯಾಯವಾಗುತ್ತಿದೆ.

5. ಕ್ರೀಡೋಪಕರಣಗಳ ದುಬಾರಿ ವೆಚ್ಚ:

ಇದೀಗ ಅಂತರರಾಷ್ಟ್ರೀಯ ಮಟ್ಟದಲ್ಲಿ ಉಪಯೋಗಿಸುವ ಕ್ರೀಡೋಪಕರಣಗಳು ಬಹಳ ದುಬಾರಿಯಾಗಿದ್ದು ಭಾರತೀಯ ಆಟಗಾರರಿಗೆ ಅವು ದುರ್ಲಬವಾಗಿವೆ. ಜೊತೆಗೆ ಕ್ರೀಡಾಪಡುಗಳ ದೈಹಿಕ ಶಕ್ತಿಗೆ ಬೇಕಾದ ವಿಶೇಷ ಔಷದಿಗಳು,ಪಾನೀಯಗಳು ಸಹ ನಮ್ಮ ಆಟಗಾರರಿಗೆ ಎಟುಕದ ಬೆಲೆ ಹೊಂದಿವೆ.

6.ಅಲ್ಪಸಂಬಾವನೆ:

ಇನ್ನು ಕ್ರಿಕೇಟ್ ಹೊರತು ಪಡಿಸಿದರೆ ಉಳಿದ ಕ್ರೀಡಾಪಟುಗಳಿಗೆ ದೊರೆಯುವ ಸಂಬಾವನೆಯೂ ತೀರಾ ಅಲ್ಪಪ್ರಮಾಣದ್ದಾಗಿದೆ. ಇಂಡಿಯಾವು ವಿಶಾಲವಾದ ರಾಷ್ಟ್ರವಾಗಿದ್ದು ಇಲ್ಲಿ ಒಂದು ಪ್ರದೇಶದಿಂದ ಕ್ರೀಡಾಕೂಟ ನಡೆಯುವ ಇನ್ನೊಂದು ಪ್ರದೇಶಕ್ಕೆ ದುಬಾರಿ ಪ್ರಯಾಣವೆಚ್ಚವಿದ್ದು ಬಹಳಷ್ಟು ಸರಿ ಆಟಗಾರರೇ ಭರಿಸಬೇಕಾದ ಸ್ಥಿತಿಯಿದೆ.

7. ವೈಯುಕ್ತಿಕ ಪ್ರಾಯೋಜಕರ ಕೊರತೆ:

ಬಹುತೇಕ ಕ್ರೀಡಾಪಟುಗಳಿಗೆ ವೈಯುಕ್ತಿಕವಾದ ಪ್ರಾಯೋಜಕರೇ ಸಿಗದಂತಹ ಸ್ಥಿತಿ ಇದ್ದು, ಆಸಕ್ತಿಯುಳ್ಳ ಕ್ರೀಡಾಪಟುಗಳು ಸಾಲಸೋಲ ಮಾಡಿ ಕ್ರೀಡಾಕೂಟಗಳಲ್ಲಿ ಬಾಗವಹಿಸಬೇಕಾದ ಪರಿಸ್ಥಿತಿ ಇದೆ.

8. ವೈಜ್ಞಾನಿಕ ತರಭೇತಿ ಮತ್ತು ವೈಥದ್ಯಕೀಯ ಸಹಾಯದ ಕೊರತೆ:

ಇವತ್ತು ವಿಜ್ಞಾನ ಬಹಳ ವೇಗವಾಗಿ ಬೆಳೆಯುತ್ತಿದ್ದು, ಕ್ರೀಡೆಗಳು ಸಹ ಅದರ ಪ್ರಭಾವಕ್ಕೆ ಒಳಗಾಗಿವೆ. ಕ್ರೀಡಾಪಟುಗಳ ತರಭೇತಿಯನ್ನು ವೈಜ್ಞಾನಿಕವಾಗಿ ನೀಡುವ ಹಲವಾರು ವಿದಾನಗಳನ್ನು ವಿಶ್ವದ ಅನೇಕ ದೇಶಗಳು ಅಳವಡಿಸಿಕೊಂಡಿವೆ. ಕ್ರೀಡಾಪಟು ಒಬ್ಬನನ್ನು ವೈಜ್ಞಾನಿಕವಾಗಿ ತಯಾರು ಮಾಡುವ ದಿಸೆಯಲ್ಲಿ ನಾವು ಅಂತಹ ತರಭೇತಿ ಸಂಸ್ಥೆಗಳನ್ನು ಹುಟ್ಟುಹಾಕಲು ಮುಂದಾಗಿಯೇ ಇಲ್ಲ. ಅದೂ ಅಲ್ಲದೆ ಕ್ರೀಡಾಪಟುಗಳಿಗೆ ಆಧುನಿಕ ವೈದ್ಯಕೀಯ ಸವಲತ್ತುಗಳನ್ನು ಒದಗಿಸುವಲ್ಲಿಯೂ ನಾವು ಹಿಂದೆ ಬಿದ್ದಿದ್ದೇವೆ. ಹಾಗೆಯೇ ಕ್ರೀಡಾಪಟುಗಳನ್ನು ಮಾನಸಿಕವಾಗಿ ಗಟ್ಟಿಗೊಳಿಸುವ ಕ್ರೀಡಾ ಮನೋವಿಜ್ಞಾನಿಗಳ ಕೊರತೆಯು ನಮ್ಮಲ್ಲಿದೆ. ಇವತ್ತು ವಿಶ್ವದ ತೀರಾ ಪುಟ್ಟ ರಾಷ್ಟ್ರಗಳು ಸಹ ಕ್ರೀಡೆಯಲ್ಲಿ ಹೆಚ್ಚಿನ ಸಾಧನೆ ತೋರುತ್ತಿದ್ದು ಅದಕ್ಕಾಗಿ ಬೇಕಾದ ಎಲ್ಲ ಆಧುನಿಕ ಅವಿಷ್ಕಾರಗಳನ್ನೂ ಬಳಸಿಕೊಳ್ಳುತ್ತಿದ್ದರೆ ನಾವು ಆ ವಿಷಯದಲ್ಲಿ ಆಸಕ್ತಿಯನ್ನೇ ತೋರಿಸದೆ ಹಿಂದೆ ಬಿದ್ದಿದ್ದೇವೆ.

9. ಕ್ರೀಡಾಪಟುಗಳಲ್ಲಿ ವೃತ್ತಿಪರತೆಯ ಕೊರತೆ:

ಇಂಡಿಯಾದಂತ ರಾಷ್ಟ್ರಗಳಲ್ಲಿ ಕ್ರೀಡಾಪಟುವೊಬ್ಬ ಮಾಡುವ ಅಲ್ಪಸಾಧನೆಯೂ ಅಗಾಧವಾಗಿ ಬಿಂಬಿಸಲ್ಪಟ್ಟು ಅವನನ್ನು ತಾರಾಪಟ್ಟಕ್ಕೆ ಕೊಂಡೊಯ್ಯುತ್ತದೆ. ಹೀಗೆ ಮಾಧ್ಯಮಗಳಲ್ಲಿ ತಾರಾ ಪಟ್ಟ ಪಡೆದ ಆಟಗಾರರು ನಂತರದ ದಿನಗಳಲ್ಲಿ ಅಲ್ಪತೃಪ್ತರಂತೆ ತಮ್ಮ ಕ್ರೀಡಾವೃತ್ತಿಯನ್ನು ನಿರ್ಲಕ್ಷಿಸತೊಡಗುತ್ತಾರೆ. ಮಹತ್ವಾಕಾಂಕ್ಷೆಯ ಯಾವ ಮನೋಬಾವವನ್ನೂ ಅವರಲ್ಲಿ ನಾವು ಕಾಣಲು ಸಾದ್ಯವಿಲ್ಲ. ನಮ್ಮ ಬಹುತೇಕ ಕ್ರೀಡಾಪಟುಗಳು ಕ್ರೀಡೆಯನ್ನು ಹವ್ಯಾಸಿ ಮಟ್ಟದಲ್ಲಿಯೇ ನೋಡುವುದರಿಂದ ವೃತ್ತಿಪರ ಸಾಧನೆಯ ಅಗತ್ಯ ಅವರಿಗೆ ಇರದಂತಾಗಿದೆ. ಒಂದಷ್ಟು ಜನಪ್ರಿತೆ ದೊರೆತೊಡನೆ ಅವರಿಗೆ ದೊರೆಯುವ ಜಾಹಿರಾತುಗಳು ಮತ್ತಿತರೆ ಸೌಲಭ್ಯಗಳ, ಸಿರಿವಂತಿಕೆಯಲ್ಲಿ ಮೈಮರೆಯುವ ಕ್ರೀಡಾಪಟುಗಳು ಸಾಧನೆಯ ಉತ್ತುಂಗಕ್ಕೆ ತಲುಪಲು ಬೇಕಾದ ಏಕಾಗ್ರತೆಗಳನ್ನು ಕಳೆದುಕೊಳ್ಳುವುದು ಇಂಡಿಯಾದಲ್ಲಿ ಸಾಮಾನ್ಯವಾಗಿದೆ. ಕಳೆದ ಒಲಂಪಿಕ್ಷ್ ನಲ್ಲಿ ಕಂಚಿನ ಪದಕ ಗೆದ್ದ ನಂತರ ಸೈನಾ ನೆಹ್ವಾಲರಿಗೆ ದೊರೆತ ಅಬ್ಬರದ ಪ್ರಚಾರ, ಜಾಹಿರಾತುಗಳು ಆಕೆಯನ್ನು ಮತ್ತಷ್ಟು ಸಾಧನೆ ಮಾಡುವತ್ತ ಕರೆದೊಯ್ಯಬೇಕಾಗಿತ್ತು, ಆದರೆ ಹಾಗಾಲಿಲ್ಲ. ಇಂಡಿಯಾದ ಬಹಳಷ್ಟು ಕ್ರೀಡಾಪಟುಗಳ ವಿಷಯದಲ್ಲಿ ಹೀಗಾಗಿದೆ. ಸಾಧನೆಯ ಒಂದು ಹಂತದ ನಂತರ ಮತ್ತಷ್ಟು ಮುಂದುವರೆದು ವಿಶ್ವಮಟ್ಟಕ್ಕೇರುವ ಛಲವಾಗಲಿ, ಅದಕ್ಕೆ ಬೇಕಾದ ಮಾನಸಿಕ ಸಿದ್ದತೆಯಾಗಲಿ ನಮ್ಮ ಕ್ರೀಡಾಪಟುಗಳು ತೋರಿಸುತ್ತಿಲ್ಲವೆಂಬುದು ಸಹ ನಿಜ.

10. ವಂಶವಾಹಿನಿಗಳ ಸಮಸ್ಯೆ:

ಕ್ರೀಡೆಗಳ ಕುರಿತಾದ ಭಾರತೀಯರ ಮನೋಬಾವನೆಯೂ ಇದಕ್ಕೆ ಕಾರಣ. ಇತ್ತೀಚೆಗಿನ ವೈಜ್ಞಾನಿಕ ಸಂಶೋದನೆಗಳ ಪ್ರಕಾರ ನಮ್ಮ ದೇಹರಚನೆಗಳು ಹಾಗು ಆಹಾರ ಪದ್ದತಿಗಳು ಕ್ರೀಡೆಗಳಿಗೆ ಪೂರಕವಾಗಿಲ್ಲವೆಂದು ಹೇಳಿವೆ. ಸಾವಿರಾರು ವರ್ಷಗಳಿಂದಲೂ ನಡೆಯುತ್ತ ಬಂದಿರುವ ಸ್ವಜಾತೀಯ ಮದುವೆಗಳಿಂದಾಗಿ ಭಾರತೀಯರ ವಂಶವಾಹಿನಿಯಲ್ಲಿ ಅನ್ಯ ಗುಂಪಿನೊಂದಿಗೆ ಕೊಟ್ಟು ಪಡೆಯುವ ಕ್ರಿಯೆಗಳ ನಡೆಯದೇ ಇರುವುದು ಸಹ ಭಾರತೀಯರಲ್ಲಿ ಕ್ರೀಡಾ ಚಟುವಟಿಕೆಗಳಿಗೆ ಅಗತ್ಯವಾದ ಮಾನಸಿಕ ಮತ್ತು ದೈಹಿಕ ಸ್ವರೂಪಗಳ ಕೊರತೆ ಉಂಟಾಗಲು ಕಾರಣವೆಂದೂ ಇತ್ತೀಚೆಗೆ ನಡೆದ ಹಲವು ಸಂಶೋದನೆಗಳು ತೋರಿಸಿಕೊಟ್ಟಿವೆ.

11. ಮಾಧ್ಯಮಗಳ ನಿರಾಸಕ್ತಿ:

ಯಾವುದಾದರು ಅಂತರರಾಷ್ಟ್ರೀಯ ಕ್ರೀಡಾಕೂಟಗಳು ನಡೆದಾಗಲಷ್ಟೆ ಕ್ರೀಡೆಗಳ ಬಗ್ಗೆ ಆಸಕ್ತಿ ತೋರಿಸಿ ಅವುಗಳನ್ನು ವರದಿ ಮಾಡುವ ನಮ್ಮ ಮಾಧ್ಯಮಗಳು, ಸ್ಥಳೀಯವಾಗಿ ನಡೆಯುವ ರಾಜ್ಯ ರಾಷ್ಟ್ರೀಯ ಕ್ರೀಡಾಕೂಟಗಳನ್ನು ನಾಮಕಾವಸ್ತೆಗಷ್ಟೇ ವರದಿ ಮಾಡಿ ಕೈ ತೊಳೆದು ಕೊಳ್ಳುತ್ತಿವೆ. ಕ್ರಿಕೇಟಿಗೆ ನೀಡುವ ಪ್ರಚಾರದಲ್ಲಿ ಶೇಕಡಾ ಒಂದರಷ್ಟನ್ನೂ ಇತರೇ ಕ್ರೀಡೆಗಳಿಗೆ ನೀಡದ ಮಾಧ್ಯಮಗಳು, ಒಲಂಪಿಕ್ಸ್ ಕೂಟದಲ್ಲಿ ಪದಕ ಬಾರದೇ ಇದ್ದಾಗ ಮಾತ್ರ ನಮ್ಮ ಕ್ರೀಡಾಪಟುಗಳನ್ನು, ಕ್ರೀಡಾ ವ್ಯವಸ್ಥೆಯನ್ನು ಹಿಗ್ಗಾಮುಗ್ಗಾ ಟೀಕಿಸುವ ಚಾಳಿ ಹೊಂದಿವೆ. ಇದೀಗ ಎಲೆಕ್ಟ್ರಾನಿಕ್ ಮಾಧ್ಯಮಗಳು ಬಂದಮೇಲೂ ಚಿತ್ರಣವೇನೂ ಬದಲಾಗಿಲ್ಲ. ನಮ್ಮ ಬಹುತೇಕ ಸುದ್ದಿ ವಾಹಿನಿಗಳಲ್ಲಿ ಇವತ್ತಿಗೂ ಕ್ರೀಡಾ ಸುದ್ದಿಗೆಂದು ಒಂದು ನಿಗದಿತ ಸಮಯವನ್ನು ಕಲ್ಪಿಸಿ ಕ್ರೀಡಾ ಸುದ್ದಿಗಳನ್ನು ಹೇಳುವ-ತೋರಿಸುವ ಪರಿಪಾಠ ಬೆಳೆಸಿಕೊಂಡಿಲ್ಲ.ಕ್ರಿಕೇಟ್ ಸರಣಿಗಳು ಇದ್ದಾಗ ಮಾತ್ರ ಆಟ ಪ್ರಾರಂಭವಾಗುವುದಕ್ಕೆ ಮೊದಲಿನ ಒಂದು ಗಂಟೆ ಅದರ ಬಗ್ಗೆ ವಿಶ್ಲೇಷಣಾ ಕಾರ್ಯಕ್ರಮಗಳನ್ನು ತೋರಿಸುವ ನಮ್ಮ ವಾಹಿನಿಗಳಿಗೆ ಕ್ರೀಡೆಗಳಿಗೆ ಪ್ರಾಮುಖ್ಯತೆ ನೀಡಬೇಕೆಂಬ ಅರಿವಾಗಲಿ, ಆಶಯವಾಗಲಿ ಇಲ್ಲವಾಗಿದೆ.ಹಾದಿಬೀದಿಯ ಗಂಡಹೆಂಡತಿಯರ ಜಗಳಗಳನ್ನು ತೋರಿಸುವ ವಾಹಿನಿಗಳಿಗೆ ಕ್ರೀಡೆಗಳು ಸುದ್ದಿಯೆನಿಸುವುದೇ ಇಲ್ಲ. ಹೀಗಾಗಿ ನಮ್ಮ ಕ್ರೀಡೆಗಳಿಗೆ ಸಿಗಬೇಕಾದಷ್ಟು ಪ್ರಚಾರವಾಗಲಿ, ಪ್ರಸಾರದ ಸಮಯವಾಗಲಿ ದೊರೆಯುತ್ತಿಲ್ಲ. ಇವತ್ತಿಗೂ ನಮಗೆ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಕ್ರೀಡೆಗಳ ತಾಜಾ ಮಾಹಿತಿ ಬೇಕೆಂದರೆ ಕ್ರೀಡಾಚಾನೆಲ್ಲುಗಳಿಗೆ ಹೋಗಿ ನೋಡಬೇಕಾದ ಸ್ಥಿತಿಯಿದೆ. ಸಾರ್ವಜನಿಕವಾಗಿ ಮನ್ನಣೆ ದೊರೆಯದೆ ಇರುವ ಕ್ರೀಡೆಗಳ ಬಗ್ಗೆ ಜನರು ಆಸಕ್ತಿ ತೋರಿಸದೇ ಇರುವುದಕ್ಕೆ ಇದೂ ಒಂದು ಕಾರಣ.

ಹೀಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತ ವಿಫಲವಾಗಿರುವುದಕ್ಕೆ ಹಲವಾರು ಕಾರಣಗಳಿವೆ. ನಮ್ಮೀ ವಿಫಲತೆಯಲ್ಲಿ ಸರಕಾರ, ಕ್ರೀಡಾವ್ಯವಸ್ಥೆ, ಮಾಧ್ಯಮಗಳು, ಜನತೆ ಹಾಗು ಸ್ವತ: ಕ್ರೀಡಾಪಟುಗಳು ಸಹ ಕಾರಣೀಭೂತರಾಗಿದ್ದಾರೆ. ಹಾಗಾಗಿ ನಮ್ಮ ವೈಫಲ್ಯಕ್ಕೆ ಯಾರೋ ಒಬ್ಬರನ್ನು, ಒಂದು ಕ್ಷೇತ್ರವನ್ನು ಬೆರಳು ಮಾಡಿ ತೋರಿಸುವುದು ಮೂರ್ಖತನವಾಗುತ್ತದೆ. 

ಮೇಕಿಂಗ್ ಹಿಸ್ಟರಿ: ಎರಡನೇ ಭಾಗ - ವಸಾಹತುಶಾಹಿಯ ವಿರುದ್ಧ ನಡೆದ ಖ್ಯಾತ ಸಶಸ್ತ್ರ ಹೋರಾಟ (1800-1857)

making history
ಸಾಕೇತ್ ರಾಜನ್ 
ಕನ್ನಡಕ್ಕೆ: ಡಾ. ಅಶೋಕ್. ಕೆ. ಆರ್
19/08/2016
ಬ್ರಿಟೀಷ್ ವಸಾಹತುಶಾಹಿ ಆಳ್ವಿಕೆಯ ತೀವ್ರತೆ ಜನರ ಕಡೆಯಿಂದ ಆ ತೀವ್ರತೆಯನ್ನು ಸರಿಗಟ್ಟುವ ಪ್ರತಿರೋಧವನ್ನು ಬಯಸಿತು. ಈ ಸತತ ಪ್ರತಿರೋಧವನ್ನು ಮತ್ತು ತನ್ನಾಡಳಿತಕ್ಕೆ ಎದುರಾಗುವವರನ್ನು ಸಾಧ್ಯವಿರುವ ಎಲ್ಲಾ ರೀತಿಯ ಕ್ರಮಗಳಿಂದ ದಮನಿಸುವುದರಿಂದಷ್ಟೇ ಬ್ರಿಟೀಷ್ ರಾಜ್ ತನ್ನ ಲೂಟಿಯ ಆಳ್ವಿಕೆಯನ್ನು ಉಳಿಸಿಕೊಳ್ಳಬಹುದಿತ್ತು. ಅದೆಷ್ಟೇ ಪ್ರಯತ್ನಿಸಿದರೂ, ಕರ್ನಾಟಕದ ಜನರು ಬ್ರಿಟೀಷ್ ವಸಾಹತುಶಾಹಿಗೆ ತಮ್ಮನುಕೂಲಕ್ಕೆ ಮತ್ತು ಶಾಂತಿಯಿಂದ ಲೂಟಿ ಮಾಡಲು ಅವಕಾಶ ನೀಡಲಿಲ್ಲ. 

ಹೈದರ್ ಮತ್ತು ಟಿಪ್ಪು ವಿದೇಶಿಗರು ನಮ್ಮ ನೆಲದಲ್ಲಿ ಕಾಲಿಡಲು ಪ್ರಯತ್ನಿಸಿದ್ದಕ್ಕೇ ವಸಾಹತುಶಾಹಿಯ ವಿರುದ್ಧ ಧೀರೋದ್ಧಾತವಾಗಿ ಹೋರಾಡಿದ್ದನ್ನು ನಾವೀಗಾಗಲೇ ನೋಡಿದ್ದೇವೆ. ಈ ನಲವತ್ತು ವರುಷಗಳ ವಸಾಹತುಶಾಹಿ ವಿರೋಧಿ ಮೈಸೂರು ಆಳ್ವಿಕೆಯನ್ನೊರತುಪಡಿಸಿದರೆ, 1857ರವರೆಗೆ, ಶತ್ರುಗಳ ವಿರುದ್ಧ ಸಶಸ್ತ್ರ ಹೋರಾಟಗಳು ಸತತವಾಗಿ ನಡೆಯುತ್ತಿದ್ದವು, ಈ ಹೋರಾಟಗಳು ಕರ್ನಾಟಕಕ್ಕೆ ಯುರೋಪ್ ಆಕ್ರಮಣಕಾರರ ವಿರುದ್ಧದ ಪ್ರತಿರೋಧದ ಶ್ರೀಮಂತ ಇತಿಹಾಸವನ್ನು ನೀಡಿತು. 1799ರಲ್ಲಿ ಟಿಪ್ಪುವಿನ ಸರಕಾರ ನಾಶಗೊಂಡ ಕೆಲವು ದಿನಗಳಲ್ಲೇ ಶುರುವಾದ ಹೋರಾಟ, 1857ರವರೆಗೆ ಮುಂದುವರೆಯಿತು; ಇಡೀ ಭಾರತದಲ್ಲಿ ಆಕ್ರಮಣಕೋರರ ವಿರುದ್ಧ ನಡೆದ ಹೋರಾಟಗಳ ಜೊತೆಗೂಡಿತು. ನಮ್ಮ ಬಳಿಯಿರುವ ದಾಖಲೆಗಳು, ಸಶಸ್ತ್ರ ಹೋರಾಟ 1799 – 1802ರಲ್ಲಿ ನಡೆಯಿತೆಂದು ತಿಳಿಸುತ್ತದೆ, 1806, 1810-11, 1819, 1820, 1824ರಲ್ಲಿ ಎರಡು, 1829-30. 1830, 1837, 1840, 1841, 1849, 1852 ಮತ್ತು 1857-58ರಲ್ಲಿ ಕೆಲವು ಹೋರಾಟಗಳು ನಡೆದವು. ನಾವೀಗ ನೋಡಿದಂತೆ, ಹೋರಾಟಗಳು ಸಮನಾಗಿ ಹರಡಿದ್ದವು ಮತ್ತು ಕೆಲವು ವರುಷಗಳ ಅಂತರದಲ್ಲಿ ಗಂಭೀರ ಹೋರಾಟ ನಡೆಯುತ್ತಿತ್ತು. 

ಈ ಹೋರಾಟಗಳಲ್ಲಿ ಮೂರು ವಿಧ. ಮೊದಲನೆಯ ಹೋರಾಟ ಟಿಪ್ಪುವಿನ ಮಾಜಿ ಸೈನ್ಯದ್ದು. ಸೈನಿಕರಲ್ಲಿದ್ದ ರಾಷ್ಟ್ರೀಯತೆ ಭಾವನೆಯನ್ನು ಉಪಯೋಗಿಸಿಕೊಂಡು ಹೆಚ್ಚಿನ ಸಂಖೈಯ ಜನರನ್ನು ಒಟ್ಟುಗೂಡಿಸಿದರು. ಈ ವಿಧಾನದ ಹೋರಾಟದಲ್ಲಿ ಸೈನಿಕರೇ ಪ್ರಮುಖ ಹೋರಾಟ ಶಕ್ತಿ. ಈ ರೀತಿಯ ಸಶಸ್ತ್ರ ಹೋರಾಟ ಮೊದಲಿಗೆ ಪ್ರಾರಂಭವಾದದ್ದಷ್ಟೇ ಅಲ್ಲ, ಮೊದಲಿಗೆ ಕೊನೆಯಾಗಿದ್ದೂ ಹೌದು; ಮೈಸೂರಿನಲ್ಲಿ ವಿದೇಶಿ ಆಳ್ವಿಕೆ ಪ್ರಾರಂಭವಾದ ಮೊದಲ ದಶಕದ ಕೆಲವು ವರುಷಗಳಷ್ಟೇ ಈ ಹೋರಾಟ ಚಾಲ್ತಿಯಲ್ಲಿತ್ತು. ಹಾಗಾಗ್ಯೂ, ಈ ಹೋರಾಟದ ಕ್ಷೀಣ ಪ್ರತಿಧ್ವನಿಯನ್ನು ಆಗಷ್ಟ್ 1857ರಲ್ಲಿ ಬ್ರಿಟೀಷ್ ಇಂಡಿಯನ್ ಸೈನ್ಯದ ಬೆಳಗಾವಿ ತುಕಡಿ ಯೋಜಿಸಿದ ಬಂಡಾಯದಲ್ಲಿ ಕಾಣಬಹುದು. ಈ ಯೋಜನೆ ವಿಫಲವಾಯಿತು ಮತ್ತದರ ಮುಖಂಡರನ್ನು ಗಲ್ಲಿಗೇರಿಸಲಾಯಿತು. (1A) 

ಎರಡನೇ ವಿಧದ ಹೋರಾಟವನ್ನು ಮುನ್ನಡೆಸಿದ್ದು ಊಳಿಗಮಾನ್ಯ ದೊರೆಗಳು. ಈ ಮಾಜಿ ಪಾಳೇಗಾರರು ತಮ್ಮಲ್ಲಿದ್ದ, ತಮ್ಮ ಸೇವೆಗೈದಿದ್ದ ಶಸ್ತ್ರದಾರಿಗಳನ್ನು ಸಜ್ಜುಗೊಳಿಸಿ ಊಳಿಗಮಾನ್ಯ ಸೈನ್ಯವನ್ನು ಕಟ್ಟಿದರು. 

ಮೂರನೇ ವಿಧದ ಹೋರಾಟ, ನಿಧಾನಕ್ಕೆ ರೂಪು ಪಡೆದುಕೊಂಡರೂ ಹೆಚ್ಚು ಕಾಲ ಉಳಿದ ಹೋರಾಟ, ಈ ಹೋರಾಟಗಳನ್ನು ಮುನ್ನಡೆಸಿದವರು ರೈತ ಸಮೂಹದ ಸದಸ್ಯರು ಮತ್ತಿವರ ಹೋರಾಟದ ಶಕ್ತಿ ಶೋಷಣೆಗೊಳಗಾದ ರೈತ – ಕಾರ್ಮಿಕರಾಗಿದ್ದರು. 

ಕೆಲವು ಇತಿಹಾಸಕಾರರು, ಉದಾಹರಣೆಗೆ ಶ್ಯಾಮ್ ಭಟ್ ರಂತವರು, ಊಳಿಗಮಾನ್ಯ ದೊರೆಗಳ ಮುಂದಾಳತ್ವದ ಹೋರಾಟಗಳನ್ನು ವಸಾಹತುಶಾಹಿ ವಿರೋಧಿ ಹೋರಾಟವಲ್ಲ ಎಂದು ಪರಿಗಣಿಸುತ್ತಾರೆ, ಯಾಕೆಂದರೆ ಇದರ ಮುಂದಾಳತ್ವ ವಹಿಸಿದ್ದವರು ಮಾಜಿ ಪಾಳೇಗಾರರು ಮತ್ತವರ ಏಕೈಕ ಗುರಿ ತಾವು ಕಳೆದುಕೊಂಡಿದ್ದ ಊಳಿಗಮಾನ್ಯತೆಯ ಸೌಕರ್ಯಗಳನ್ನು ಗಳಿಸುವುದಾಗಿತ್ತೇ ಹೊರತು ಮತ್ತೇನಲ್ಲ. ಆದ್ದರಿಂದ ಈ ಹೋರಾಟಗಳನ್ನು ಶ್ಯಾಮ್ ಭಟ್ ಪ್ರತಿಗಾಮಿ ಗುಣದ ಹೋರಾಟಗಳು ಎಂದು ಕರೆಯುತ್ತಾರೆ. 

ಭಾರತದ 1857ರ ಬಂಡಾಯವನ್ನು “ಸ್ವಾತಂತ್ರ್ಯಕ್ಕಾಗಿ ಭಾರತದ ಯುದ್ಧ” ಎಂದು ಮೊದಲು ಗುರುತಿಸಿದ್ದು ಮಾರ್ಕ್ಸ್ ಮತ್ತು ಏಂಜೆಲ್ಸ್. ಅದನ್ನವರು ತಮ್ಮದೇ ಪರಿಭಾಷೆಯಲ್ಲಿ ಹೊಗಳಿದರು. ಮಾರ್ಕ್ಸಿಸಂ ಅನ್ನು ಸ್ಥಾಪಿಸಿದವರಿಗೆ 1857ರ ಬಂಡಾಯವನ್ನು ಮುನ್ನಡೆಸಿದ್ದು ಊಳಿಗಮಾನ್ಯ ದೊರೆಗಳು ಮತ್ತು ತಮ್ಮ ಪ್ರಾಂತ್ಯ ಮತ್ತು ಅನುಕೂಲತೆಗಳನ್ನು ಉಳಿಸಿಕೊಳ್ಳುವ ಸಲುವಾಗಿ ಹೋರಾಡುತ್ತಿದ್ದ ರಾಜ – ರಾಣಿಯರು ಎನ್ನುವುದರ ಅರಿವಿರಲಿಲ್ಲವೇ? ಅಂತಿಮವಾಗಿ, ಈ ಚಳುವಳಿ ಮೊಘಲರ ವ್ಯಂಗ್ಯಚಿತ್ರದಂತಿದ್ದ, ಕೊನೆಯ ಹಾಗೂ ದುರ್ಬಲ ಬಹಾದ್ದೂರ್ ಶಾ ಝಾಫರನನ್ನು ಪೀಠದ ಮೇಲೆ ಕೂರಿಸಿತು. 

ಮಾರ್ಕ್ಸಿಸಂನ ಸ್ಥಾಪಕರು ಈ ಹೋರಾಟವನ್ನು ಮುನ್ನಡೆಸುತ್ತಿದ್ದ ವರ್ಗಗಳನ್ನು ಮಾತ್ರ ನೋಡುತ್ತಿರಲಿಲ್ಲ ಅಥವಾ ಬಿರುಸಿನ ದಾಳಿ ನಡೆಸಲು ಉತ್ತೇಜಿಸಿದ ಪ್ರಜ್ಞೆಯನ್ನು ಮಾತ್ರ ಗಮನಿಸುತ್ತಿರಲಿಲ್ಲ. ಅವರು ಈ ಹೋರಾಟದ ವ್ಯಾಪ್ತಿಯನ್ನು ಅರ್ಥಮಾಡಿಕೊಳ್ಳುತ್ತಿದ್ದರು. ನಿಜವಾದ ಐತಿಹಾಸಿಕ ಭೌತವಾದಿಗಳಾದ ಅವರು ಈ ಹೋರಾಟದ ನೈಜತೆ ಮತ್ತು ಗುರಿಗಳ ಪರಿಣಾಮಗಳನ್ನು ಅಂದಾಜಿಸಿದರು. 

ಒಂದು ನಿರ್ದಿಷ್ಟ ಐತಿಹಾಸಿಕ ಕಾಲಘಟ್ಟದಲ್ಲಿ ಯಾವುದು ‘ಪ್ರಗತಿ’ ಮತ್ತು ‘ಪ್ರತಿಕ್ರಿಯೆ’ಯ ಅರ್ಥವೇನು ಎನ್ನುವಂತಹ ಪ್ರಧಾನ ಪ್ರಶ್ನೆಗಳಿಗೆ ಉತ್ತರಿಸಬೇಕು. 

ಈ ಹೋರಾಟಗಳ ಸಫಲತೆ – ಅದು ಚೆನ್ನಮ್ಮಳ ಮುಂದಾಳತ್ವದಲ್ಲಿ ನಡೆದಿರಬಹುದು ಅಥವಾ ಶೋಷಕ ಊಳಿಗಮಾನ್ಯ ಪಾಳೇಗಾರ ಮುನ್ನಡೆಸಿರಬಹುದು – ಈ ಹೋರಾಟಗಳ ತಾತ್ವಿಕ ತೀರ್ಮಾನಗಳು ಬ್ರಿಟೀಷ್ ವಸಾಹತುಶಾಹಿಯನ್ನು ನಮ್ಮ ಭೂಮಿಯಿಂದ ಹೊರಗಾಕುವುದಾಗಿತ್ತೇ ಹೊರತು ಅದಕ್ಕಿಂತ ಕಡಿಮೆಯೇನಲ್ಲ. 

ವಿದೇಶಿ ಶತ್ರುವಿನ ವಿರುದ್ಧದ ಹೋರಾಟದಲ್ಲಿ ಜಯವಾಗಿದ್ದರೆ, ಊಳಿಗಮಾನ್ಯ ವ್ಯವಸ್ಥೆಯ ಆಳ್ವಿಕೆಗೆ ನಾವು ಸಿಲುಕಿಕೊಂಡಿದ್ದರೂ, ಮಧ್ಯಮವರ್ಗದ ಪ್ರಜಾಪ್ರಭುತ್ವ ಕ್ರಾಂತಿಗೆ ಪೋಷಣೆ ಸಿಗುತ್ತಿತ್ತು. 

ಮತ್ತು, ಈ ಪ್ರಜಾಪ್ರಭುತ್ವ ಕ್ರಾಂತಿ ಪ್ರಗತಿಯೇ ಅಲ್ಲವೇ, ವಸಾಹತು – ಊಳಿಗಮಾನ್ಯ ಪ್ರಾಬಲ್ಯಕ್ಕಿಂತ ರಾಷ್ಟ್ರೀಯವಾದಿ ಊಳಿಗಮಾನ್ಯ ಆಳ್ವಿಕೆ ಪ್ರಗತಿಕಾರಕವಲ್ಲವೇ? ಈ ಇತಿಹಾಸಕಾರರು ಜಪಾನಿನ ಇತಿಹಾಸದ ಪುಟಗಳನ್ನು ಓದಿಕೊಂಡರೆ ಒಳ್ಳೆಯದು ಮತ್ತು 1868ರಲ್ಲಿ ಮೈಜಿ ಸಾಮ್ರಾಜ್ಯ ಮತ್ತೆ ಅಧಿಕಾರಕ್ಕೆ ಬಂದ ಮಹತ್ವವನ್ನು ಅರಿತುಕೊಳ್ಳಬೇಕು; ಇದು ಹೇಗೆ ಜಪಾನಿನ ಸ್ಥಳೀಯ ಮಾರುಕಟ್ಟೆಯ ರಕ್ಷಣೆಯನ್ನು ನಡೆಸಿ ನಿಧಾನವಾಗಿ ದೇಶೀ ಬಂಡವಾಳಶಾಹಿತ್ವವನ್ನು ಬೆಳೆಸಿತು ಎನ್ನುವುದನ್ನು ಅರಿತುಕೊಳ್ಳಬೇಕು. ಭಾರತೀಯ ಜನಸಮೂಹ ವಸಾಹತಿನ ಬೆಂಬಲವಿಲ್ಲದ ಊಳಿಗಮಾನ್ಯ ವ್ಯವಸ್ಥೆಯನ್ನು ಇನ್ನೂ ಸುಲಭವಾಗಿ ನಾಶ ಪಡಿಸಿಬಿಡುತ್ತಿದ್ದರು. ಬ್ರಿಟೀಷರ ಬಲದ ಕಾರಣದಿಂದಾಗಿ ಸಾವಿನಿಂದೆದ್ದು ಬಂದ ಊಳಿಗಮಾನ್ಯತೆಯನ್ನು ಎದುರು ಹಾಕಿಕೊಳ್ಳುವುದಕ್ಕಿಂತ ಅದು ಸುಲಭವಾಗಿತ್ತು. ವಸಾಹತುಶಾಹಿ ಪ್ರಮುಖ ಶತ್ರು ಮತ್ತು ಅದಕ್ಕೆ ಯಾವುದೇ ಮೂಲೆಯಿಂದ ಯಾವುದೇ ಗುರಿಯಿಟ್ಟುಕೊಂಡು ಹೊಡೆದ ಏಟೂ ಸಹಿತ ಅದನ್ನು ಮತ್ತಷ್ಟು ದುರ್ಬಲಗೊಳಿಸುತ್ತಿತ್ತು. 

ಎಲ್ಲಿಯವರೆಗೂ ಈ ಹೋರಾಟಗಳೆಲ್ಲವೂ ಕರ್ನಾಟಕ ಮತ್ತು ಭಾರತದ ಪ್ರಮುಖ ವೈರಿಯಾದ ಬ್ರಿಟೀಷ್ ವಸಾಹತುಶಾಹಿಯ ವಿರುದ್ಧವಿದ್ದವೋ ಅಲ್ಲಿಯವರೆಗೂ ಇವು ಪ್ರಗತಿಪರ ಗುಣವನ್ನು ಹೊಂದಿದೆಯೆನ್ನಬಹುದು, ಸಮಾಜವನ್ನು ಮುನ್ನಡೆಸುವ ಗುಣ. ವಸಾಹತುಶಾಹಿಯ ವಿರುದ್ಧ ಊಳಿಗಮಾನ್ಯ ದೊರೆಗಳ ಗೆಲುವು ಸಹ ಕ್ರಾಂತಿಕಾರಕ ಸಾಧ್ಯತೆಯನ್ನು ಹೊಂದಿರುತ್ತದೆ; ಕಾರಣ ಇದು ಸ್ಥಳೀಯ ಬಂಡವಾಳಶಾಹಿಯನ್ನು ಬೆಳೆಸಿ ಮುಂದಕ್ಕೆ ಊಳಿಗಮಾನ್ಯ ಸಮಾಜವನ್ನು ಕಿತ್ತುಹಾಕುವ ಮತ್ತು ರೈತರನ್ನು ತಮ್ಮ ನೊಗದ ಭಾರದಿಂದ ಬಿಡುಗಡೆಗೊಳಿಸುತ್ತದೆ. ರಾಜ್ಯದ ಅಧಿಕಾರದ ಗುಣಮಟ್ಟದಲ್ಲಿ ಬದಲಾವಣೆಯಾಗಲೇಬೇಕಾದ ಅನಿವಾರ್ಯತೆ ಮತ್ತು ಬ್ರಿಟೀಷ್ ಆಕ್ರಮಣ ಆಳುವ ಮೈತ್ರಿಕೂಟದಲ್ಲಿ ತಂದ ಬದಲಾವಣೆಗಳನ್ನು ಮನಗಾಣದಿದ್ದರೆ, ಕುರುಡು ಮೈತ್ರಿಕೂಟಕ್ಕಷ್ಟೇ ದಾರಿಯಾಗಿಬಿಡುತ್ತದೆ. 

ಪ್ರಗತಿಪರ ಹೋರಾಟಗಳ ಬದ್ಧತೆಯನ್ನು ಕಡೆಗಣಿಸಿ ವಸಾಹತುಶಾಹಿ ವಿರೋಧಿ ಮುಂದಾಳತ್ವದಲ್ಲಿನ ವರ್ಗ ಬೇರುಗಳನ್ನಷ್ಟೇ ಹೊರತೆಗೆಯುವುದು ಅತಿಯಾದ ಮಾರ್ಕ್ಸಿಸಂ ಎಂದೆನ್ನಿಸುತ್ತದೆ. ಆದರಿದೇ ಮಾರ್ಕ್ಸಿಸಂ ಮತ್ತು ರಿವಿಷನಿಸಂ ನಡುವಿರುವ ವ್ಯತ್ಯಾಸ. ರಿವಿಷನಿಷ್ಟ್ ಇತಿಹಾಸ ಯಾಂತ್ರಿಕವಾಗಿರುತ್ತದೆ, ಮೇಲ್ಮಟ್ಟದ್ದಾಗಿರುತ್ತದೆ. ಅದರ ಕೊನೆಯ ಉದ್ದೇಶ ವಸಾಹತು ಆಕ್ರಮಣವನ್ನು ನ್ಯಾಯಬದ್ಧವೆನ್ನಿಸಿಬಿಡುವುದೇ ಆಗಿದೆ. ಮಾರ್ಕ್ಸಿಸ್ಟ್ ಇತಿಹಾಸ ವರ್ಗ ಗುಣಗಳನ್ನು ಗಣನೆಗೆ ತೆಗೆದುಕೊಳ್ಳುತ್ತದೆ, ಐತಿಹಾಸಿಕ ಸನ್ನಿವೇಶದಲ್ಲದನ್ನು ಇಡುತ್ತದೆ ಮತ್ತು ಜಿಜ್ಞಾಸೆಯ(dialectical) ಕಾರ್ಯವಿಧಾನಗಳನ್ನು ಪರಿಗಣಿಸುತ್ತದೆ. 

ಇವೆಲ್ಲವನ್ನೂ ನಾವು ನೆನಪಿನಲ್ಲಿಟ್ಟುಕೊಂಡಾಗ ಮಾತ್ರ, ಇತಿಹಾಸದ ದಿಕ್ಕಿನ ಗುರಿಯನ್ನು ಗ್ರಹಿಸಿದಾಗ ಮತ್ತು ಪ್ರತಿಯೊಂದು ಐತಿಹಾಸಿಕ ತಿರುವಿನಲ್ಲೂ ಆಳುವ ವರ್ಗದ ಗುಣಗಳೇನಿದ್ದವು ಎನ್ನುವುದನ್ನು ಅರ್ಥೈಸಿಕೊಂಡಾಗ, ಕೆಲವೊಮ್ಮೆ ತದ್ವಿರುದ್ಧದ ಅಭಿಪ್ರಾಯವೆನ್ನಿಸಿದರೂ ಇತಿಹಾಸವನ್ನು ನಿಶ್ಚಿತತೆಯಿಂದ ಒಪ್ಪಬಹುದು. ಬ್ರಿಟೀಷರ ನೆರವಿನಿಂದ, ತಮ್ಮ ಪ್ರಾಂತ್ಯವನ್ನುಳಿಸಿಕೊಳ್ಳಲು ಟಿಪ್ಪುವಿನ ವಿರುದ್ಧ ಹೋರಾಡಿದ ಪಾಳೇಗಾರರು ಇತಿಹಾಸವನ್ನು ಹಿಂದಕ್ಕೆಳೆಯಲು ಪ್ರಯತ್ನಿಸುತ್ತಿದ್ದರು; ಅದೇ ಸಂದರ್ಭದಲ್ಲಿ, ಬ್ರಿಟೀಷ್ ವಸಾಹತುಶಾಹಿಯ ವಿರುದ್ಧ ಶಸ್ತ್ರ ಸಜ್ಜಿತರಾಗಿ ತಮ್ಮ ಪ್ರಾಂತ್ಯವನ್ನುಳಿಸಿಕೊಳ್ಳಲು ನಿಂತ ಪಾಳೇಗಾರರು ಇತಿಹಾಸವನ್ನು ಮುಂದೆ ತಳ್ಳುತ್ತಿದ್ದರು.

ಮುಂದಿನ ವಾರ:
ಸೈನ್ಯದ ಮುನ್ನಡೆ

ಆಗ 17, 2016

ಡಿಜಿಟಲ್ ಇಂಡಿಯಾ - ಘೋಷಣೆಗೆ ಮಾತ್ರ ಸೀಮಿತ

ಸಾಂದರ್ಭಿಕ ಚಿತ್ರ
ಆನಂದ ಪ್ರಸಾದ್
17/08/2016
ಭಾರತದಲ್ಲಿ ಅಂತರ್ಜಾಲ ಮೂಲಕ ವಿವಿಧ ಸೇವೆ, ಮನರಂಜನೆ, ಆರೋಗ್ಯ, ಶಿಕ್ಷಣ ನೀಡುವ ಮೋದಿಯವರ ಡಿಜಿಟಲ್ ಇಂಡಿಯಾ ಯೋಜನೆ ಕೇವಲ ಘೋಷಣೆಗೆ ಸೀಮಿತವಾಗಿದೆ. ಭಾರತವು ತನ್ನ ಜನಸಂಖ್ಯೆಯ 34% ಶೇಕಡಾ ಜನರಿಗೆ ಮಾತ್ರ ಅಂತರ್ಜಾಲ ಸೌಲಭ್ಯ ಒದಗಿಸಲು ಶಕ್ತವಾಗಿದೆ. ಉಳಿದ 66% ಶೇಕಡಾ ಜನ ಅಂತರ್ಜಾಲ ಸೌಲಭ್ಯದಿಂದ ವಂಚಿತರಾಗಿದ್ದಾರೆ. ಏಷಿಯಾ -ಪ್ಯಾಸಿಫಿಕ್ ವಲಯದಲ್ಲಿ ಭಾರತವು ಅತ್ಯಂತ ಕಡಿಮೆ ವೇಗದ ಅಂತರ್ಜಾಲ ಸೌಲಭ್ಯ ನೀಡುವ ದೇಶ ಎನಿಸಿಕೊಂಡಿದೆ. ಮೋದಿಯವರ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದು ಎರಡು ವರ್ಷಗಳೇ ಉರುಳಿದರೂ ಭಾರತದ ಗ್ರಾಮೀಣ ಭಾಗಗಳಲ್ಲಿ ಅಂತರ್ಜಾಲ ಸೌಲಭ್ಯ ಲಭ್ಯತೆಯಲ್ಲಿ ಯಾವುದೇ ಸುಧಾರಣೆಯೂ ಆಗಿಲ್ಲ. ಗ್ರಾಮೀಣ ಭಾಗಗಳಲ್ಲಿ ಇಂದಿಗೂ ಬಹುತೇಕ ತೆವಳುವ ವೇಗದ 2ಜಿ ಮೊಬೈಲ್ ಇಂಟರ್ನೆಟ್ ಮಾತ್ರ ಲಭ್ಯವಿದೆ. ಭಾರತದ ನಗರಗಳು 4ಜಿ ಮೊಬೈಲ್ ಇಂಟರ್ನೆಟ್ ಸೌಲಭ್ಯವನ್ನು ಪಡೆಯುತ್ತಿರುವಾಗ ಗ್ರಾಮೀಣ ಭಾಗಗಳು ಇಂದಿಗೂ ತೆವಳುವ ವೇಗದ 2ಜಿ ಮೊಬೈಲ್ ಇಂಟರ್ನೆಟ್ ಪಡೆಯುತ್ತಾ ನಗರ ಹಾಗೂ ಹಳ್ಳಿಗಳ ಡಿಜಿಟಲ್ ಕಂದಕ ಮತ್ತಷ್ಟು ಅಗಲವಾಗುತ್ತಿದೆ.

ಖಾಸಗಿ ಬಂಡವಾಳ ಹಾಗೂ ಖಾಸಗಿ ಉದ್ಯಮಗಳು ಬರುವುದರಿಂದ ಮೂಲಭೂತ ಸೌಲಭ್ಯಗಳು ಹೆಚ್ಚುತ್ತವೆ ಎಂಬ ಮಾತಿದೆ. ಈ ವಿಷಯ ಗ್ರಾಮೀಣ ಭಾಗಗಳಲ್ಲಿ ನಿಜವಾಗಿಲ್ಲ. ಭಾರತದ ಖಾಸಗಿ ಮೊಬೈಲ್ ಕಂಪನಿಗಳು ಶೇಕಡಾ 60ಕ್ಕೂ ದೇಶದ ಶೇಕಡಾ 60ಕ್ಕೂ ಹೆಚ್ಚು ಜನ ವಾಸಿಸುವ ಗ್ರಾಮೀಣ ಭಾಗಗಳಿಗೆ ಸೂಕ್ತ ವೇಗದ ಮೊಬೈಲ್ ಇಂಟರ್ನೆಟ್ ಸೇವೆ ಒದಗಿಸುವಲ್ಲಿ ಸಂಪೂರ್ಣ ವಿಫಲವಾಗಿವೆ. ಲಾಭದ ಮೇಲೆ ಮಾತ್ರ ಕಣ್ಣಿಟ್ಟಿರುವ ಖಾಸಗಿ ಕಂಪನಿಗಳು ಹೆಚ್ಚು ಲಾಭವಿಲ್ಲದ ಗ್ರಾಮೀಣ ಪ್ರದೇಶಗಳಲ್ಲಿ ಮೊಬೈಲ್ 3ಜಿ ಇಂಟರ್ನೆಟ್ ಸೇವೆ ಒದಗಿಸುವಲ್ಲಿ ಆಸಕ್ತಿ ವಹಿಸುತ್ತಿಲ್ಲ. ಏರ್ಟೆಲ್ ಕಂಪನಿ ತನ್ನ 'ಓಪನ್ ನೆಟ್ವರ್ಕ್' ವೆಬ್ ಸೈಟ್ ಮೂಲಕ ಕರ್ನಾಟಕದ ಹಲವು ಗ್ರಾಮೀಣ ಭಾಗಗಳಲ್ಲಿ 3ಜಿ ಸೇವೆ ಒದಗಿಸುತ್ತಿದ್ದೇನೆ ಎಂದು ಭೂಪಟದಲ್ಲಿ ತೋರಿಸುತ್ತಿದ್ದರೂ ಅದರ 3ಜಿ ಸೇವೆ ಟವರಿನ ಒಂದೆರಡು ಕಿ.ಮೀ. ದೂರಕ್ಕೂ ಲಭ್ಯವಾಗುವುದಿಲ್ಲ. ಇದರಿಂದಾಗಿ ಟವರಿನ ಬುಡದ ಸ್ವಲ್ಪ ದೂರದವರೆಗೆ ಮಾತ್ರ 3ಜಿ ಮೊಬೈಲ್ ಇಂಟರ್ನೆಟ್ ಲಭ್ಯವೇ ಹೊರತು ದೂರದ ಪ್ರದೇಶಗಳಿಗೆ 3ಜಿ ಮೊಬೈಲ್ ಇಂಟರ್ನೆಟ್ ಲಭ್ಯವಿಲ್ಲ. 3ಜಿ ತರಂಗಾಂತರ ಹರಾಜು ನಡೆದು ಆರು ವರ್ಷಗಳೇ ಉರುಳಿದರೂ ಅದನ್ನು ಪಡೆದ ಖಾಸಗಿ ಮೊಬೈಲ್ ಕಂಪನಿಗಳು ಇನ್ನೂ ದೇಶಾದ್ಯಂತ 3ಜಿ ಮೊಬೈಲ್ ಸೇವೆ ಒದಗಿಸಲು ಹಿಂದೇಟು ಹಾಕುತ್ತಿವೆ. ಸರ್ಕಾರದ ಯೋಜನೆಗಳು ಆರಂಭವಾಗಿ ಮುಗಿಯಲು ಹಲವಾರು ವರ್ಷಗಳೇ ಬೇಕಾಗುತ್ತವೆ. ಈಗ ಆ ಜಾಡ್ಯ ಖಾಸಗಿ ಕಂಪನಿಗಳಿಗೂ ಅಂಟಿಕೊಂಡಿದೆ. ರಿಲಯನ್ಸ್ ಜಿಯೋ ಕಂಪನಿ ಕಳೆದ ವರ್ಷದಿಂದಲೇ ದೇಶಾದ್ಯಂತ ತನ್ನ 4ಜಿ ಮೊಬೈಲ್ ಇಂಟರ್ನೆಟ್ ಸೇವೆಯನ್ನು ಸದ್ಯದಲ್ಲಿಯೇ ಆರಂಭಿಸುತ್ತೇನೆ ಎಂದು ಹೇಳುತ್ತಿದ್ದರೂ ಇನ್ನೂ ಅದನ್ನು ಆರಂಭಿಸಿಲ್ಲ. ಅದು ದೇಶಾದ್ಯಂತ ನಗರಗಳಲ್ಲಿ ತನ್ನ ಸೇವೆ ಆರಂಭಿಸಬಹುದಾದರೂ ಗ್ರಾಮೀಣ ಪ್ರದೇಶಗಳಲ್ಲಿ ತನ್ನ ಸೇವೆಯನ್ನು ಆರಂಭಿಸಲು ಇನ್ನೂ ಕೆಲವು ವರ್ಷಗಳು ಬೇಕಾಗಬಹುದು.

ಭಾರತದಲ್ಲಿ ವೇಗದ ಮೊಬೈಲ್ ಇಂಟರ್ನೆಟ್ ಸೇವೆಯ ವಿಸ್ತರಣೆಗೆ ಅಡ್ಡಿಯಾಗಿರುವುದು ಅದರ ದುಬಾರಿ ದರ. ಒಂದು ಜಿಬಿ 3ಜಿ ಇಂಟರ್ನೆಟ್ 250 ರೂಪಾಯಿಗಳಷ್ಟು ದುಬಾರಿಯಾಗಿದ್ದು ಇದು ಜನಸಾಮಾನ್ಯರು ಉಪಯೋಗಿಸಲು ಹಿಂಜರಿಯುವಂತಿದೆ ಏಕೆಂದರೆ ಗ್ರಾಮೀಣ ಹಾಗೂ ನಗರವಾಸಿ ಮಧ್ಯಮ ಹಾಗೂ ಕೆಳಮಧ್ಯಮ ವರ್ಗದ ಜನ ಇಷ್ಟು ಹಣ ಕೊಟ್ಟು ಇಂಟರ್ನೆಟ್ ಉಪಯೋಗಿಸುವ ಪರಿಸ್ಥಿತಿಯಲ್ಲಿ ಇಲ್ಲ. ಈ ರೀತಿಯ ದುಬಾರಿ ಇಂಟರ್ನೆಟ್ ದರಕ್ಕೆ ಖಾಸಗಿ ಕಂಪನಿಗಳು ದುಬಾರಿ ಹಣ ನೀಡಿ ತರಂಗಾಂತರ ಖರೀದಿಸಿರುವುದೂ ಒಂದು ಪ್ರಧಾನ ಕಾರಣವಾಗಿದೆ. 'ಮದುವೆಯಾಗದೆ ಹುಚ್ಚು ಬಿಡದು, ಹುಚ್ಚು ಬಿಡದೆ ಮದುವೆಯಾಗದು' ಎಂಬ ನಾಣ್ಣುಡಿಯಂತೆ ಹೆಚ್ಚು ಜನ ಹೆಚ್ಚು ಮೊಬೈಲ್ ಇಂಟರ್ನೆಟ್ ಬಳಸದೆ ದರ ಇಳಿಯದು, ದರ ಇಳಿಯದೆ ಹೆಚ್ಚು ಜನ ಹೆಚ್ಚು ಇಂಟರ್ನೆಟ್ ಬಳಸಲಾರರು ಎಂಬ ಪರಿಸ್ಥಿತಿ ದೇಶದಲ್ಲಿದೆ. ಮೊಬೈಲ್ ಕಂಪನಿಗಳು ವೇಗದ ಇಂಟರ್ನೆಟ್ ದರವನ್ನು ಜಿಬಿ ಒಂದಕ್ಕೆ ಐವತ್ತು ರೂಪಾಯಿಗಳಿಗಿಂಥ ಕಡಿಮೆ ಮಾಡದೆ ಹೋದರೆ ಇದು ಜನಸಾಮಾನ್ಯರಿಗೆ ಎಟುಕಲಾರದು.

ಭಾರತ ಸರ್ಕಾರವು ರಾಷ್ಟ್ರೀಯ ಆಪ್ಟಿಕ್ ಫೈಬರ್ ಜಾಲ ರೂಪಿಸಿ ದೇಶದ ಎಲ್ಲ ಗ್ರಾಮಗಳಿಗೆ ವೇಗದ ಇಂಟರ್ನೆಟ್ ಸೇವೆಯನ್ನು ವಿಸ್ತರಿಸುವ ಯೋಜನೆಯನ್ನು 2010ರಲ್ಲಿಯೇ ರೂಪಿಸಿದ್ದರೂ ಅದು ಆರು ವರ್ಷಗಳ ನಂತರವೂ ಕುಂಟುತ್ತಾ ಸಾಗಿದೆ. ಈ ಯೋಜನೆಯನ್ವಯ ಕರ್ನಾಟಕದಲ್ಲಿ 5500 ಗ್ರಾಮ ಪಂಚಾಯತಿಗಳ ಪೈಕಿ ಅಂದಾಜು 3000 ಗ್ರಾಮಪಂಚಾಯತಿಗಳಿಗೆ ಆಪ್ಟಿಕ್ ಫೈಬರ್ ಅಳವಡಿಸುವ ಕಾಮಗಾರಿ ಮುಗಿದಿದ್ದರೂ ಗ್ರಾಮೀಣ ಜನರಿಗೆ ಅದರ ಪ್ರಯೋಜನ ಲಭ್ಯವಾಗುವಂತೆ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಕೇವಲ ಗ್ರಾಮ ಪಂಚಾಯತಿಗಳಲ್ಲಿ ಮಾತ್ರ ವೇಗದ ಇಂಟರ್ನೆಟ್ ಲಭ್ಯವಾಗಿದೆಯೇ ಹೊರತು ಈ ಆಪ್ಟಿಕ್ ಫೈಬರ್ ಜಾಲವನ್ನು ಉಪಯೋಗಿಸಿ ಗ್ರಾಮೀಣ ಪ್ರದೇಶಗಳಲ್ಲಿ ಜನರಿಗೆ ಎಟಕುವ ದರದಲ್ಲಿ 3ಜಿ ಅಥವಾ 4ಜಿ ಮೊಬೈಲ್ ಸೇವೆ ರೂಪಿಸಲು ಬಿಎಸ್ಸೆನ್ನೆಲ್ ಯಾವುದೇ ಕ್ರಮಗಳನ್ನೂ ಕೈಗೊಂಡಿಲ್ಲ. ಹೀಗಾಗಿ ಆಪ್ಟಿಕ್ ಫೈಬರ್ ಜಾಲ ಅಳವಡಿಸಿದರೂ ಅದು ಜನಸಾಮಾನ್ಯರ ಪಾಲಿಗೆ ವ್ಯರ್ಥವೇ ಸರಿ. ಕೇಂದ್ರ ಸರ್ಕಾರಕ್ಕೆ ವೈಜ್ಞಾನಿಕ ಸಲಹೆ ನೀಡುವ ಯಾವುದೇ ಯೋಗ್ಯ ವ್ಯಕ್ತಿಗಳು ಇಂದು ಇಲ್ಲದಿರುವುದೇ ಇದಕ್ಕೆ ಕಾರಣವಾಗಿರುವಂತೆ ಕಾಣುತ್ತದೆ. ರಾಜೀವ ಗಾಂಧಿಯವರು ಪ್ರಧಾನಿಯಾಗಿದ್ದಾಗ ಸ್ಯಾಮ್ ಪಿಟ್ರೋಡಾ ಅವರು ಸೂಕ್ತ ಯೋಜನೆ ಹಾಗೂ ಸಲಹೆ ನೀಡಿ ದೇಶದಲ್ಲಿ ಟೆಲಿಕಾಂ ಸೌಲಭ್ಯ ಬೆಳೆಯಲು ಕಾರಣರಾದರು. ಇಂದು ಮೋದಿಯವರಿಗೆ ಗ್ರಾಮೀಣ ಜನರ ಬಗ್ಗೆ ಕಾಳಜಿ ಉಳ್ಳ ಸೂಕ್ತ ಸಲಹೆ ನೀಡುವ ವೈಜ್ಞಾನಿಕ ಸಲಹೆಗಾರರು ಇಲ್ಲದಿರುವುದು ದುರಂತವೇ ಸರಿ. ಇದರಿಂದಾಗಿ ಡಿಜಿಟಲ್ ಇಂಡಿಯಾ ಎಂಬ ಯೋಜನೆ ಕುಂಟುತ್ತಾ ಸಾಗುತ್ತಿದೆ. ಬಿಎಸ್ಸೆನ್ನೆಲ್ ಬಹುತೇಕ ಗ್ರಾಮೀಣ ಪ್ರದೇಶಗಳಲ್ಲಿ 2ಜಿ ಮೊಬೈಲ್ ಟವರುಗಳನ್ನು ಈಗಾಗಲೇ ಹೊಂದಿದ್ದು ಇವುಗಳನ್ನು ಮೇಲ್ದರ್ಜೆಗೆ ಏರಿಸುವುದು ಸರ್ಕಾರದ ಸಹಾಯದಿಂದ ಶೀಘ್ರವಾಗಿ ಸಾಧ್ಯ.

ಖಾಸಗಿ ಕಂಪನಿಗಳು ಸೌಲಭ್ಯ ಒದಗಿಸಲು ಹಿಂಜರಿಯುವ ಗ್ರಾಮೀಣ ಪ್ರದೇಶಗಳಲ್ಲಿ ಸೌಲಭ್ಯ ಒದಗಿಸುವುದು ಸರ್ಕಾರದ ಬಾಧ್ಯತೆ ಆಗಿದೆ. ಉದಾಹರಣೆಗೆ ಹೆಚ್ಚು ಕಲೆಕ್ಷನ್ ಇಲ್ಲದ ಕಡೆ ಖಾಸಗಿಯವರು ಬಸ್ಸು ಓಡಿಸುವುದಿಲ್ಲ. ಇಂಥಲ್ಲಿ ಸರ್ಕಾರವು ಸರ್ಕಾರೀ ಬಸ್ಸುಗಳನ್ನು ಓಡಿಸುತ್ತದೆ. ಸರ್ಕಾರೀ ಬಸ್ಸುಗಳಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಣಕ್ಕಾಗಿ ಪೇಟೆಗೆ ಹೋಗಿ ಬರಲು ರಿಯಾಯತಿ ದರದ ಪಾಸ್ ಸೌಲಭ್ಯ ಒದಗಿಸುತ್ತದೆ. ಅದೇ ರೀತಿ ಗ್ರಾಮೀಣ ರಸ್ತೆ, ಗ್ರಾಮೀಣ ವಿದ್ಯುದೀಕರಣ ಮೊದಲಾದವುಗಳನ್ನು ಹೆಸರಿಸಬಹುದು. ಇದು ಸರಕಾರಕ್ಕೆ ಇರಬೇಕಾದ ಬಾಧ್ಯತೆ. ಅದೇ ರೀತಿ ಖಾಸಗಿ ಮೊಬೈಲ್ ಕಂಪನಿಗಳು ಬರಲು ಹಿಂಜರಿಯುವ ಗ್ರಾಮೀಣ ಪ್ರದೇಶಗಳಿಗೆ ಬಿಎಸ್ಸೆನ್ನೆಲ್ ಮೂಲಕ 3ಜಿ ಅಥವಾ 4ಜಿಯಂಥ ವೇಗದ ಅಂತರ್ಜಾಲ ಸೌಲಭ್ಯ ಒದಗಿಸುವುದು ಸರ್ಕಾರದ ಬಾಧ್ಯತೆ ಆಗಿದೆ. ಇದಕ್ಕೆ ತರಂಗಾಂತರ ಹರಾಜಿನಲ್ಲಿ ಸರ್ಕಾರ ಸಂಗ್ರಹಿಸಿದ ಲಕ್ಷಾಂತರ ರೂಪಾಯಿಗಳ ಒಂದು ಅಂಶವನ್ನು ಬಿಎಸ್ಸೆನ್ನೆಲ್ ಸಂಸ್ಥೆಗೆ ಒದಗಿಸಿದರೆ ಸಾಕು. ಇಂದು 4ಜಿ ಮೊಬೈಲ್ಗಳು ರೂಪಾಯಿ 3000ಕ್ಕೆ ಲಭ್ಯ ಇವೆ. ಇದು ಒಂದು ಮಿನಿ ಕಂಪ್ಯೂಟರಿಗೆ ಸಮ. ಇದರ ಮೂಲಕ 20,000 ರೂಪಾಯಿ ಕೊಟ್ಟು ಕಂಪ್ಯೂಟರ್ ಕೊಳ್ಳಲಾಗದವರು ಕೂಡ ವೇಗದ ಇಂಟರ್ನೆಟ್ ಸೌಲಭ್ಯ ಇದ್ದಲ್ಲಿ ಗ್ರಾಮೀಣ ಪ್ರದೇಶಗಳಲ್ಲಿಯೂ ನಗರಗಳಲ್ಲಿ ಲಭ್ಯವಾಗುವ ಮಾಹಿತಿ, ಶಿಕ್ಷಣ, ಆರೋಗ್ಯ ಮಾಹಿತಿಗಳನ್ನು ಪಡೆಯಬಹುದು. ಗ್ರಾಮೀಣ ವಿದ್ಯಾರ್ಥಿಗಳು 3ಜಿ/4ಜಿ ಮೊಬೈಲ್ ಮೂಲಕ ವೇಗದ ಇಂಟರ್ನೆಟ್ ಸೌಲಭ್ಯ ಇದ್ದಲ್ಲಿ ಸೂಕ್ತ ಮಾಹಿತಿ, ಪಠ್ಯ, ಇಂಗ್ಲೀಷ್ ಶಿಕ್ಷಣವನ್ನು ವಿಡಿಯೋಗಳನ್ನು ನೋಡುವುದರ ಮೂಲಕ ಪಡೆಯಬಹುದು. ಇಂದು ಯುಟ್ಯೂಬ್, ಫೇಸ್ಬುಕ್ಗಳಲ್ಲಿ ಕೃಷಿಗೆ ಸಂಬಂಧಿಸಿದ ಬೇರೆ ಬೇರೆ ದೇಶಗಳ, ಬೇರೆ ಬೇರೆ ರಾಜ್ಯಗಳ ಕೃಷಿಗೆ ಸಂಬಂಧಿಸಿದ ಲಕ್ಷಾಂತರ ವಿಡಿಯೋಗಳು ಲಭ್ಯ ಇವೆ. ಇವುಗಳನ್ನು ವೇಗದ ಇಂಟರ್ನೆಟ್ ಸೌಲಭ್ಯ ಲಭ್ಯವಿದ್ದಲ್ಲಿ ನೋಡಿ ಪರಸ್ಪರ ಸಂವಹನದ ಮೂಲಕ ತಮ್ಮ ಕೃಷಿ ಪದ್ಧತಿಯನ್ನು ಬದಲಾಯಿಸಿಕೊಳ್ಳಬಹುದು. ಟಿವಿ, ಪತ್ರಿಕೆಗಳಂತಲ್ಲದೆ ಅಂತರ್ಜಾಲದಲ್ಲಿ ಪರಸ್ಪರ ಸಂವಹನಕ್ಕೆ ಅವಕಾಶ ಇರುವುದು ಹಾಗೂ ಕೂಡಲೇ ಪ್ರತಿಕ್ರಿಯೆ ಲಭ್ಯವಾಗುವುದು ಗ್ರಾಮೀಣ ಜನರಲ್ಲಿ ಜಾಗೃತಿ ಮೂಡಿಸಲು ಸಹಕಾರಿ. ಪತ್ರಿಕೆಗಳು ಗ್ರಾಮೀಣ ಜನರನ್ನು ಬಹಳ ಕಡಿಮೆ ಪ್ರಮಾಣದಲ್ಲಿ ತಲುಪುತ್ತವೆ. ಅಂತರ್ಜಾಲದಲ್ಲಿ ಮೊಬೈಲ್ ಹಾಗೂ ಇ-ಆವೃತ್ತಿ ಲಭ್ಯವಿರುವುದರಿಂದ ವೇಗದ ಅಂತರ್ಜಾಲ ಸೌಲಭ್ಯ ಇದ್ದಲ್ಲಿ ಯಾವುದೇ ಹಳ್ಳಿ ಮೂಲೆಗೂ ಪತ್ರಿಕೆಗಳ ಮಾಹಿತಿ ತಲುಪಲು ಸಾಧ್ಯ. ಅದೇ ರೀತಿ ವೇಗದ ಅಂತರ್ಜಾಲ ಲಭ್ಯವಿದ್ದರೆ ಅಂತರ್ಜಾಲ ಪತ್ರಿಕೆಗಳು, ಬ್ಲಾಗುಗಳು ಹೆಚ್ಚು ಹೆಚ್ಚು ಜನರನ್ನು ತಲುಪಲು ತನ್ಮೂಲಕ ಪರಸ್ಪರ ಚರ್ಚೆ, ಸಂವಹನದಿಂದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜಾಗೃತಿ ರೂಪುಗೊಳ್ಳಲು ಸಹಾಯಕ.

ಉನ್ನತ ಶಿಕ್ಷಣದ ಮೋಹದಲ್ಲಿ ದುರ್ಗತಿ ಕಾಣುತ್ತಿರುವ ಪ್ರಾಥಮಿಕ ಶಿಕ್ಷಣ ವ್ಯವಸ್ಥೆ!

ಸಾಂದರ್ಭಿಕ ಚಿತ್ರ; ದಿ ಹಿಂದೂ
ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
17/08/2016
ಇಂಡಿಯಾದಂತಹ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿನ ಸರಕಾರವೊಂದಕ್ಕಿರಬಹುದಾದ ಜನಪರ ಕಾಳಜಿಯನ್ನು ಅರ್ಥ ಮಾಡಿಕೊಳ್ಳಲು ಆ ಸರಕಾರ ಸೇವಾ ಕ್ಷೇತ್ರಗಳಿಗೆ ನೀಡಿರುವ ಆಧ್ಯತೆಯನ್ನು, ಕೊಡಮಾಡಿರುವ ಅನುದಾನದ ಪ್ರಮಾಣಗಳನ್ನು ಅವಲೋಕಿಸಬೇಕಾಗುತ್ತದೆ. ಕರ್ನಾಟಕದಂತಹ ಕಲ್ಯಾಣರಾಜ್ಯದ ಮಟ್ಟಿಗೆ ಇಲ್ಲಿನ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳಿಗೆ ಸರಕಾರ ನೀಡುತ್ತಿರುವ ಪ್ರಾಮುಖ್ಯತೆಯ ಆಧಾರದ ಮೇಲೆ ಸರಕಾರವೊಂದಕ್ಕಿರುವ ಜನಪರ ಕಾಳಜಿಯ ಪ್ರಮಾಣ ಅನಾವರಣವಾಗುತ್ತದೆ. ಕರ್ನಾಟಕದ ಶಿಕ್ಷಣ ಕ್ಷೇತ್ರದ ಬಗ್ಗೆ ಅದ್ಯಯನ ಮಾಡುತ್ತಾ ಹೋದರೆ ತೀರಾ ವಿಚಿತ್ರವಾದ ಅಂಶವೊಂದು ಬೆಳಕಿಗೆ ಬರುತ್ತದೆ, ಯಾವುದೇ ರಾಜ್ಯವೊಂದು ಶೈಕ್ಷಣಿಕವಾಗಿ ನಿಜವಾದ ಪ್ರಗತಿ ಸಾದಿಸಲು ಅದು ಪ್ರಾಥಮಿಕ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕಾಗುತ್ತದೆ. ಭದ್ರ ಬುನಾದಿಯ ಪ್ರಾಥಮಿಕ ಶಿಕ್ಷಣವನ್ನು ತನ್ನ ಜನಸಮುದಾಯಕ್ಕೆ ನೀಡುವ ಮೂಲಕ ಅದು ಇತರೇ ಕ್ಷೇತ್ರಗಳಲ್ಲಿ ಪ್ರಗತಿಯನ್ನು ಸಾದಿಸಬಹುದಾಗಿದೆ. ಇಂದು ನಾಡನ್ನು ಆಧುನಿಕವಾಗಿ ಕಟ್ಟಲು ಬೇಕಾದ ಉನ್ನತ ಶಿಕ್ಷಣವನ್ನು ನೀಡುವ ಮುನ್ನ ಪ್ರಾಥಮಿಕ ಶಿಕ್ಷಣವನ್ನು ಗುಣಮಟ್ಟದ ಆಧಾರದಲ್ಲಿ ನೀಡಬೇಕಾಗುತ್ತದೆ. ಕರ್ನಾಟಕದ ಮಟ್ಟಿಗೆ ನಮ್ಮ ಪ್ರಾಥಮಿಕ ಶಿಕ್ಷಣಕ್ಕೆ ನಮ್ಮ ರಾಜ್ಯ ಸರಕಾರ ನೀಡಿರುವ ಪ್ರಾಮುಖ್ಯತೆಯನ್ನು ಗಮನಿಸುತ್ತಾ ಹೋದರೆ ನಮ್ಮ ಎದೆ ಒಡೆಯುವಂತಹ ಆಂಶಗಳು ಬೆಳಕಿಗೆ ಬರುತ್ತವೆ.

ಇವತ್ತು ಕರ್ನಾಟಕದ ಶಿಕ್ಷಣ ನೀತಿ ಸಂಪೂರ್ಣವಾಗಿ ಉನ್ನತ ಶಿಕ್ಷಣ ನೀತಿಯಾಗಿ ಮಾತ್ರ ಕೆಲಸ ಮಾಡುತ್ತಿದೆ. ಯಾವ ಸರಕಾರ ಪ್ರಾಥಮಿಕ ಶಿಕ್ಷಣಕ್ಕೆ ಹೆಚ್ಚಿನ ಗಮನ ನೀಡಬೇಕಾಗಿತ್ತೊ ಆ ಸರಕಾರ ಇಂದು ಪ್ರಾಥಮಿಕ ಶಿಕ್ಷಣವನ್ನು ಸಂಪೂರ್ಣವಾಗಿ ಕಡೆಗಣಿಸಿ ಉನ್ನತ ಶಿಕ್ಷಣ ನೀಡುವ ದಲ್ಲಾಳಿಯಂತೆ ಕೆಲಸ ಮಾಡುತ್ತಿದೆ. ಸರಕಾರಿ ಕನ್ನಡ ಶಾಲೆಗಳನ್ನು ನಡೆಸಲು ಬೇಕಾದ ಇಚ್ಚಾಶಕ್ತಿಯನ್ನೆಂದೊ ಕಳೆದುಕೊಂಡಿರುವ ಸರಕಾರ ಕೇವಲ ಇಂಜಿನಿಯರಿಂಗ್ ಮತ್ತು ವೈದ್ಯಕೀಯ ಶಿಕ್ಷಣಗಳಿಗೆ ಪ್ರಾದಾನ್ಯತೆ ನೀಡುತ್ತಿದೆ. ಇದರಿಂದಾಗಿ ರಾಷ್ಟ್ರ ಮಟ್ಟದಲ್ಲಿ ಕರ್ನಾಟಕವೆಂದರೆ ಉನ್ನತ ಶಿಕ್ಷಣದ ದಂದೆ ನಡೆಸುವ ರಾಜ್ಯವೆಂಬಂತಾಗಿ ಹೋಗಿದೆ. 1980ರವರೆಗು ಇದ್ದ ಸರಕಾರಿ ಇಂಜಿನಿಯರಿಂಗ್ ಕಾಲೇಜುಗಳು ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ್ದವು ಹಾಗಾಗಿ ಹೊರಗಿನವರು ಕರ್ನಾಟಕದಲ್ಲಿ ಶಿಕ್ಷಣ ಪಡೆಯಲು ಹಾತೊರೆಯುತಿದ್ದರು. ಇದನ್ನು ಬಳಸಿಕೊಂಡ ಸರಕಾರಗಳು ತದನಂತರದಲ್ಲಿ ನೂರಾರು ಖಾಸಗಿ ಇಂಜಿನಿಯರಿಂಗ್ ಹಾಗು ವೈದ್ಯಕೀಯ ಕಾಲೇಜುಗಳನ್ನು ಪ್ರಾರಂಬಿಸಲು ಅನುಮತಿ ನೀಡಿದವು. ಎಂಬತ್ತರ ದಶಕದ ನಂತರ ಎಲ್ಲ ಸರಕಾರಗಳು ರಾಜಕಾರಣಿಗಳಿಗೆ, ಹಲವು ಜಾತಿಯ ಮಠಗಳಿಗೆ, ಇತರೇ ಕ್ಷೇತ್ರಗಳ ಉದ್ಯಮಪತಿಗಳಿಗೆ ಇಂಜಿನಿಯರಿಂಗ್ ಮತ್ತು ವೈದ್ಯಕೀಯ ಶಿಕ್ಷಣ ಕಾಲೇಜು ಶುರು ಮಾಡಲು ಅನುಮತಿ ನೀಡುವ ಮೂಲಕ ಉನ್ನತ ಶಿಕ್ಷಣದ ವ್ಯಾಪಾರಿಕರಣಕ್ಕೆ ರಹದಾರಿ ನೀಡಿದವು ಇವತ್ತು ನೋಡಿ: ಬಹುತೇಕ ಮೇಲ್ಜಾತಿಗಳ ಮಠಗಳು ವೈದ್ಯಕೀಯ ಮತ್ತು ಇಂಜಿನಿಯರಿಂಗ್ ಕಾಲೇಜುಗಳನ್ನು ನಡೆಸುತ್ತಿವೆ. ಇನ್ನು ಎಲ್ಲಾ ಪಕ್ಷಗಳಲ್ಲಿರುವ ಬಲಿಷ್ಠ ರಾಜಕಾರಣಿಗಳು ಕೂಡ ಇದೇ ಕೆಲಸ ಮಾಡುತ್ತಿದ್ದಾರೆ. ಶಿಕ್ಷಣ ಕ್ಷೇತ್ರದ ಗಂಧಗಾಳಿಯೂ ಇಲ್ಲದ ಹತ್ತಾರು ಉದ್ಯಮಿಗಳು ಸಹ ಇವತ್ತು ಉನ್ನತ ಶಿಕ್ಷಣದ ಕಾಲೇಜುಗಳ ಒಡೆಯರಾಗಿ ತಮ್ಮ ಕಪ್ಪು ಹಣವನ್ನು ಬಿಳಿಯನ್ನಾಗಿ ಪರಿವರ್ತಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಇವತ್ತು ಇಂಜಿನಿಯರಿಂಗ್ ಮತ್ತು ವೈದ್ಯಕೀಯ ಕಾಲೇಜುಗಳನ್ನು ನಡೆಸುವುದು ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಈ ಬಗ್ಗೆ ಒಂದಷ್ಟು ಅಂಕಿಅಂಶಗಳನ್ನು ಗಮನಿಸಿದರೆ ಮಾತ್ರ ನಿಮಗೆ ನಿಜಸ್ಥಿತಿ ಅರ್ಥವಾಗುತ್ತದೆ.

ಇವತ್ತು ಕರ್ನಾಟಕದಲ್ಲಿ ಸರಿಸುಮಾರು 205 ಇಂಜಿನಿಯರಿಂಗ್ ಕಾಲೇಜುಗಳಿವೆ. ಅಚ್ಚರಿಯ ಸಂಗತಿಯೆಂದರೆ ಇವುಗಳಲ್ಲಿ ಕೇವಕ 8 ಕಾಲೇಜುಗಳು ಮಾತ್ರ ಸರಕಾರಿ ಒಡೆತನದ್ದಾಗಿದ್ದು, ಉಳಿದವು ಖಾಸಗಿಯವರ ಕೈಲಿವೆ. ಇನ್ನು ನಮ್ಮ ರಾಜ್ಯ ಪ್ರತಿವರ್ಷ ಸುಮಾರು 83 ಸಾವಿರ ಇಂಜಿನಯರಿಂಗ್ ಪದವೀಧರರನ್ನು ತಯಾರು ಮಾಡುತ್ತಿದೆ. ದೇಶದ ಒಟ್ಟು ಜನಸಂಖ್ಯೆಯ ಶೇಕಡಾ ಎಂಟರಷ್ಟನ್ನು ಮಾತ್ರ ಹೊಂದಿರುವ ಕರ್ನಾಟಕ ರಾಷ್ಟ್ರದ ಒಟ್ಟು ಇಂಜಿನಿಯರಿಂಗ್ ಪದವೀಧರರಲ್ಲಿ ಶೇಕಡಾ 40ರಷ್ಟನ್ನು ಉತ್ಪಾದಿಸುತ್ತಿದೆ. ಇನ್ನು ವೈದ್ಯಕೀಯ ಶಿಕ್ಷಣ ಕ್ಷೇತ್ರಕ್ಕೆ ಬಂದರೆ 47 ವೈದ್ಯಕೀಯ ಕಾಲೇಜುಗಳಿದ್ದು ಪ್ರತಿವರ್ಷ 7 ಸಾವಿರದಷ್ಟು ವೈದ್ಯರು ಪದವಿ ಪಡೆದು ಹೊರಬರುತ್ತಿದ್ದಾರೆ.

ಯಾಕೆ ಹೀಗೆ? ಹೇಳುತ್ತಾ ಹೋದರೆ ಅದೇ ಒಂದು ಸುದೀರ್ಘ ಪ್ರಬಂದ ಬರೆಯಬೇಕಾಗುತ್ತದೆ. ಇಂತಹ ಉನ್ನತ ಶಿಕ್ಷಣ ಸಂಸ್ಥೆಗಳಿಂದ ಅದರ ಮಾಲೀಕರಿಗೆ ಅಪಾರ ಲಾಭವಿದೆ. ಸರಕಾರದ ಕೋಟಾ ಕಳೆದು ಉಳಿಯುವ ಆಡಳಿತ ಮಂಡಳಿಯ ಸೀಟುಗಳನ್ನು ಹಣಕ್ಕಾಗಿ ಮಾರಿಕೊಳ್ಳಲಾಗುತ್ತಿದೆ. ಜೊತೆಗೆ ಸರಕಾರದ ಯಾವುದೇ ನಿಯಮಗಳಿಗು ಬೆಲೆ ಕೊಡದೆಖಾಸಗಿ ಕಾಲೇಜುಗಳಲ್ಲಿ ಹೆಚ್ಚುವರಿ ಶುಲ್ಕವನ್ನು ಸುಲಿಗೆ ಮಾಡಲಾಗುತ್ತಿದೆ.ಖಾಸಗಿ ಕಾಲೇಜುಗಳ ಕ್ಯಾಪಿಟೇಶನ್ ದಂದೆ ತಡೆಯಲು ಯಾವ ಸರಕಾರಗಳಿಗುಸಾದ್ಯವಿಲ್ಲ ಮತ್ತು ಮನಸ್ಸೂ ಇಲ್ಲ. ಯಾಕೆಂದರೆ ಎಲ್ಲ ಪಕ್ಷಗಳಲ್ಲೂ ಖಾಸಗಿ ಸಂಸ್ಥೆಗಳ ಮಾಲೀಕರು ಶಾಸಕರಾಗಿಯೊ ಸಚಿವರಾಗಿಯೊ ಇದ್ದೇ ಇರುತ್ತಾರೆ. ಹೇಗೆ ಸರಕಾರದ ವ್ಯವಸ್ಥೆಯಲ್ಲಿ ಈಗಿರುವ ಸಕ್ಕರೆ ಲಾಬಿ ಸರಕಾರವನ್ನು ನಿಯಂತ್ರಿಸುತ್ತಿದೆಯೊ ಅದೇ ರೀತಿ ಖಾಸಗಿ ಶಿಕ್ಷಣ ಸಂಸ್ಥೆಗಳ ಲಾಬಿ ಸಹ ಕೆಲಸ ಮಾಡುತ್ತಿದೆ, ಕಳೆದ ಎರಡು ದಶಕಗಳಿಂದಲೂ ನಮ್ಮನ್ನಾಳುತ್ತ ಬಂದಿರುವ ಎಲ್ಲ ಸರಕಾರಗಳು ಈ ಉನ್ನತ ಶಿಕ್ಷಣ ದಂದೆಯ ನೆರವಿಗೆ ನಿಂತು ಪ್ರಾಥಮಿಕ ಶಿಕ್ಷಣವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿರುವುದು ಎದ್ದು ಕಾಣುತ್ತಿದೆ. ಪ್ರತಿವರ್ಷದ ಆಯವ್ಯಯದಲ್ಲಿ ಪ್ರಾಥಮಿಕ ಶಿಕ್ಷಣಕ್ಕೆ ಶೇಕಡಾ ಹತ್ತಕ್ಕಿಂತ ಹೆಚ್ಚು ಅನುದಾನ ದೊರೆಯುತ್ತಿಲ್ಲ. ಮತ್ತು ಹೀಗೆ ದೊರೆತ ಅನುದಾನ ಕೂಡ ಸಿಬ್ಬಂದಿಯ ಸಂಬಳ ಇತ್ಯಾದಿಗಳಿಗೆ ಬಹುಪಾಲು ಖರ್ಚಾಗುತ್ತಿದೆ.ಸರಿ ಸುಮಾರು 57 ಸಾವಿರದಷ್ಟಿರುವ ಸರಕಾರಿ ಪ್ರಾಥಮಿಕ ಶಾಲೆಗಳ ದುಸ್ಥಿತಿಯನ್ನು ತಿಳಿಯಲುಅವುಗಳ ಕಟ್ಟಡಗಳನ್ನು ನೋಡಿದರೆ ಸಾಕು. ಬಹಳಷ್ಟು ಶಾಲೆಗಳು ದಶಕಗಳ ಹಿಂದೆ ಕಟ್ಟಲ್ಪಟ್ಟವಾಗಿದ್ದು ಅವುಗಳ ಒಳ ಹೋಗುವ ಯಾವ ಆಕರ್ಷಣೆಯು ಮಕ್ಕಳಿಗೆ ಉಳಿದಿರುವಂತೆ ಕಾಣುವುದಿಲ್ಲ. ಸುಸ್ಥಿತಿಯಲ್ಲಿರುವ, ಮಕ್ಕಳಿಗೆ ಆಕರ್ಷಕವಾಗಿರುವ ಕಟ್ಟಡಗಳನ್ನು ಹೊಂದಿರದ ಶಾಲೆಗಳನ್ನು ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಹೋಲಿಸಿ ನೋಡಿ. ಇವತ್ತು ಬಹುತೇಕ ಖಾಸಗಿ ಸಂಸ್ಥೆಗಳ ಕಾಲೇಜುಗಳು ಪಂಚತಾರಾ ಹೋಟೆಲುಗಳ ರೀತಿಯಲ್ಲಿ ವಿನ್ಯಾಸಗೊಂಡಿರುತ್ತವೆ. ನಮ್ಮ ಸರಕಾರಿ ಶಾಲೆಗಳ ಹೆಂಚಿನ ಕಟ್ಟಡಗಳು ಸುಣ್ಣಬಣ್ಣ ಕಾಣದೆ, ಮಳೆ ಬಂದರೆ ಸೋರುವ ಸ್ಥಿತಿಯಲ್ಲೇ ಇರುತ್ತವೆ. ಮಕ್ಕಳು ಸ್ವಯಂಆಕರ್ಷಣೆಯಿಂದ ಶಾಲೆಗೆ ಬಂದು ಕಲಿಯುವಂತಹ ಕಟ್ಟಡಗಳನ್ನಾಗಲಿ, ಅವರ ಪಠ್ಯಕ್ಕೆ ಪೂರಕಾದ ಮತ್ತು ಪಠ್ಯೇತರ ಚಟುವಟಿಕೆಗಳಿಗೆ ಬೇಕಾದ ಉಪಕರಣಗಳ ಸೌಲಭ್ಯಗಳಾಗಲಿ ಇರದ ಸರಕಾರಿ ಶಾಲೆಗಳನ್ನು ಸರಕಾರ ತನ್ನ ಅನಿವಾರ್ಯ ಕರ್ಮವೆಂಬಂತೆ ನಡೆಸುತ್ತಿದೆ. ಪ್ರಾಥಮಿಕ ಶಿಕ್ಷಣ ಸೃಜನಶೀಲವಾಗಿದ್ದರೆ ಮಾತ್ರ ಮಕ್ಕಳ ಬೌದ್ದಿಕ ಬದುಕು ಚೆನ್ನಾಗಿರುತ್ತದೆ. ಆದರೆ ನಾನು ಕಂಡಂತೆ ಸರಕಾರಿ ಶಾಲೆಗಳಲ್ಲಿರುವ ಅವ್ಯವಸ್ಥೆಗಳು ಮಕ್ಕಳು ಶಾಲೆಯಿಂದ ವಿಮುಖರಾಗುವಂತೆ ಮಾಡುತ್ತಿವೆ. ಇದರ ಜೊತೆಗೆ ಇವತ್ತಿಗೂ ಬಹಳಷ್ಟು ಶಾಲೆಗಳು ಏಕೋಪಾದ್ಯಾಯ ಶಾಲೆಗಳಾಗಿದ್ದು ಅವುಗಳಲ್ಲಿ ಕರ್ತವ್ಯ ನಿರ್ವಹಿಸುವ ಶಿಕ್ಷಕನೊಬ್ಬ ಶಿಕ್ಷಕ ವೃತ್ತಿಯ ಜೊತೆಜೊತೆಗೆ ಆಡಳಿತದ ವಿಷಯಗಳನ್ನೂ , ಈಗೀಗ ಬಿಸಿಯೂಟದ ಜವಾಬ್ದಾರಿಗಳನ್ನು ನಿಬಾಯಿಸಬೇಕಾಗಿದ್ದು ಆತ ಕ್ರಿಯಾಶೀಲನಾಗಿ ಮಕ್ಕಳಿಗೆ ಪಾಠಮಾಡುವ ಉತ್ಸಾಹವನ್ನೇ ಕಳೆದುಕೊಂಡಿರುತ್ತಾನೆ. ಇನ್ನು ಶಿಕ್ಷಕರುಗಳ ಪಾಡು ಹೇಳ ತೀರದು ಯಾವುದೇ ಗಣತಿಯ ಕಾರ್ಯವಿರಲಿ, ಚುನಾವಣೆಯ ಕಾರ್ಯವಾಗಲಿ ಆತನೇ ಮಾಡಬೇಕಾದ ಒತ್ತಡಗಳಿವೆ. ಒಂದು ಹಳ್ಳಿಯಲ್ಲಿ ಏಕ ಉಪಾದ್ಯಾಯ ಶಾಲೆಯಿದೆ ಅಂದುಕೊಂಡರೆ, ಆ ಶಾಲೆಯ ಶಿಕ್ಷಕಬೆಳಿಗ್ಗೆ ಎದ್ದು ಶಾಲೆಗೆ ಬಂದು, ಮೊದಲಿಗೆ ಬಿಸಿಯೂಟದ ಸಿಬ್ಬಂದಿಗೆ ದವಸದಾನ್ಯ ನೀಡಿ ಅದರ ಉಸ್ತುವಾರಿಯನ್ನು ನೋಡುತ್ತಲೇ ಪಾಠ ಮಾಡಬೇಕು. ಇನ್ನು ವರ್ಷದ ಆರಂಭದಲ್ಲಿ ಮಕ್ಕಳನ್ನು ದಾಖಲಾತಿ ಮಾಡುವ ಮತ್ತು ಉತ್ತೀರ್ಣರಾಗಿ ಹೊರಹೋಗುವ ಮಕ್ಕಳಿಗೆ ಟಿ.ಸಿ. ನೀಡುವುದನ್ನೂ ಮಾಡಬೇಕು. ಇದೆಲ್ಲದರ ಜೊತೆಗೆ ತಾಲ್ಲೂಕು ಕೇಂದ್ರಕ್ಕೆ ಹೋಗಿ ಮಕ್ಕಳಿಗೆ ಬಂದಿರುವ ಉಚಿತ ಪುಸ್ತಕಗಳನ್ನು ಸಮವಸ್ತ್ರಗಳನ್ನು ಹೊತ್ತು ತರಬೇಕು. ಒಮ್ಮೊಮ್ಮೆ ಇಂತಹ ಕೆಲಸಗಳಿಗಾಗಿ ಆತ ಬಹಳಷ್ಟು ಸಾರಿ ಅಲೆದಾಡಬೇಕು. ಈ ಅವಧಿಯಲ್ಲಿ ಆತ ಲಭ್ಯವಿರುವ ಪಕ್ಕದ ಶಾಲೆಯ ಶಿಕ್ಷಕನನ್ನು ಓಓಡಿ ಹಾಕಿಸಿಕೊಳ್ಳಬೇಕು ಇದು ಸಾದ್ಯವಾಗದೇ ಹೋದರೆ ಶಾಲೆಯನ್ನು ಆ ದಿನ ಮುಚ್ಚ ಬೇಕು. ಇದರ ಅರಿವಿರದ ಪೋಷಕರಿಂದ ಆತ ಬಯ್ಗುಳಗಳನ್ನು ಕೇಳಬೇಕಾಗುತ್ತದೆ. ಹೀಗೆ 21ನೇ ಶತಮಾನದಲ್ಲೂ ನಮ್ಮ ಸರಕಾರಗಳು ಏಕೋಪಾದ್ಯಾಯ ಶಾಲೆಗಳನ್ನು ನಡೆಸುತ್ತಿವೆಯೆಂದರೆ ಅದಕ್ಕಿಂತ ನಾಚಿಕೆಗೇಡಿನ ಮಾತು ಬೇರಿಲ್ಲ. ವಿದ್ಯಾರ್ಥಿಗಳ ಸಂಖ್ಯೆಗನುಗುಣವಾಗಿ ಶಿಕ್ಷಕರನ್ನು ನೇಮಿಸದೆ ಕಾಲಕಳೆಯುವ ಸರಕಾರ ಇಲಾಖೆಗೆ ಹೊಸದಾಗಿ ಬರುವ ಶಿಕ್ಷಣ ಮಂತ್ರಿಯ ಮರ್ಜಿಗನುಗುಣವಾಗಿ ಬದಲಿಸುವ ಪರೀಕ್ಷಾಕ್ರಮಗಳಿಂದ ಶಿಕ್ಷಕರು ಮತ್ತು ಮಕ್ಕಳಿಗೆ ತೊಂದರೆಯಾಗುತ್ತಿದೆ. ಇವತ್ತಿಗು ಶಾಲೆಗಳಲ್ಲಿ ಅಗತ್ಯ ಪೀಠೋಪಕರಣಗಳಾಗಲಿ, ಶೌಚಾಲಯಗಳಾಗಲಿ, ಆಟದ ಮೈದಾನಗಳಾಗಲಿ ಇಲ್ಲ. ಮನಸ್ಸು ಮಾಡಿದ್ದರೆ ಕಳೆದ ಅರವತ್ತು ವರ್ಷಗಳಲ್ಲಿ ಪ್ರಾಥಮನಿಕ ಶಿಕ್ಷಣವನ್ನು ವಿಶ್ವ ದರ್ಜೆಗೇರಿಸಬಹುದಾಗಿದ್ದ ಸರಕಾರಗಳು ಕೇವಲ ಉನ್ನತ ಶಿಕ್ಷಣಕ್ಕೆ ಮಹತ್ವ ನೀಡುತ್ತ ಪದವೀಧರರನ್ನು ಉತ್ಪಾದಿಸುವ ಕಾರ್ಖಾನೆಗಳನ್ನು ಪ್ರಾರಂಬಿಸಿದೆಯಷ್ಟೆ!

ಪ್ರಾಥಮಿಕ ಶಾಲೆಗಳು ಮಕ್ಕಳ ವಯೋಸಹಜ ಕುತೂಹಲಗಳನ್ನು ತಣಿಸಿ, ಅವರ ಬೌದ್ದಿಕ ಬೆಳವಣಿಗೆಗಳಿಗೆ ಸಹಕಾರಿಯಾಗಿ ಕಾರ್ಯನಿರ್ವಹಿಸಬೇಕಾಗಿದ್ದ ನಮ್ಮಲ್ಲಿರುವ ಶಾಲೆಗಳು ಸೂಕ್ತ ಕಟ್ಟಡಗಳಿರದೆ, ಸಾಕಷ್ಟು ಶಿಕ್ಷಕರುಗಳಿರದೆ- ಶಿಕ್ಷಕರುಗಳ ಮೇಲಿರುವ ಪಠ್ಯೇತರ ಚಟುವಟಿಕೆಗಳ ಒತ್ತಡಗಳಿಂದಾಗಿ ಅಂತಹ ಮಹತ್ವಪೂರ್ಣ ಕೆಲಸಗಳಾಗುತ್ತಿಲ್ಲ. ಇದಕ್ಕೆ ಪೂರಕವೆಂಬಂತೆ ಶಾಲೆಗಳು ಪ್ರಾರಂಬವಾಗಿ ಮೂರು ತಿಂಗಳಾದರು ಮಕ್ಕಳ ಕೈ ತಲುಪಬೇಕಾದ ಪಠ್ಯಪುಸ್ತಕಗಳು ತಲುಪಿಯೇ ಇರುವುದಿಲ್ಲ. ಇನ್ನು ಸರಕಾರ ನೀಡುವ ಸಮವಸ್ತ್ರ ತಲುಪುವಾಗ ಕನಿಷ್ಠ ಐದಾರು ತಿಂಗಳಾದರು ಆಗಿರುತ್ತದೆ.

ಪ್ರಾಥಮಿಕ ಶಿಕ್ಷಣ ಕ್ಷೇತ್ರದಲ್ಲಿನ ಸರಕಾರದ ಇಂತಹ ವೈಫಲ್ಯಗಳನ್ನು ತಮ್ಮ ಬಂಡವಾಳ ಮಾಡಿಕೊಂಡ ಖಾಸಗಿಯವರು ಕಾನ್ವೆಂಟುಗಳೆಂಬ ಅಂಗಡಿಗಳನ್ನು ತೆಗೆದು ಶಿಸ್ತಿನ ಹೆಸರಲ್ಲಿ, ಉತ್ತಮ ಇಂಗ್ಲೀಷ್ ಶಿಕ್ಷಣದ ಹೆಸರಲ್ಲಿ ಪೋಷಕರನ್ನು ಸುಲಿಗೆ ಮಾಡುತ್ತಿವೆ. ಇದನ್ನು ಕಂಡು ಪ್ರಭಾವಿತರಾದ ಮದ್ಯಮವರ್ಗ ಮತ್ತು ಬಡವರು ಸಾಲಸೋಲ ಮಾಡಿ ಖಾಸಗಿ ಶಾಲೆಗಳಿಗೆ ತಮ್ಮ ಮಕ್ಕಳನ್ನು ಸೇರಿಸುತ್ತಿದ್ದಾರೆ. ಇವತ್ತು ಹಳ್ಳಿಗಳ ಬಹಳಷ್ಟು ಜನರು ಇಂತಹ ಖಾಸಗಿ ಶಾಲೆಗಳ ಆಕರ್ಷಣೆಗೆ ಬಲಿಯಾಗಿ ತಮ್ಮ ಮಕ್ಕಳನ್ನು ಪಟ್ಟಣಗಳ ಶಾಲೆಗಳಿಗೆ ಕಳಿಸುತ್ತಿದ್ದಾರೆ. ಹೀಗಾಗಿ ಬಹುತೇಕ ಸರಕಾರಿ ಶಾಲೆಗಳಲ್ಲಿನ ಮಕ್ಕಳ ದಾಖಲಾತಿ ಕಡಿಮೆಯಾಗುತ್ತಿದೆ. ಇದನ್ನೇ ಕಾಯುತ್ತಿದ್ದವರಂತೆ ಸರಕಾರ ಕಡಿಮೆ ಮಕ್ಕಳ ನೆಪ ಹೇಳಿ ಸರಕಾರಿ ಶಾಲೆಗಳನ್ನು ಮುಚ್ಚುತ್ತಿವೆ. ಅಥವಾ ಸಚಿವರ ಬಾಷೆಯಲ್ಲಿಯೇ ಹೇಳುವುದಾದರೆ ವಿಲೀನಗೊಳಿಸುತ್ತಿವೆ.

ಒಟ್ಟಿನಲ್ಲಿ ನಮ್ಮ ಸರಕಾರಗಳು ಉನ್ನತ ಶಿಕ್ಷಣಕ್ಕೆ ನೀಡುತ್ತಿರುವ ಪ್ರದಾನ್ಯತೆಯನ್ನು ಪ್ರಾಥಮಿಕ ಶಿಕ್ಷಣಕ್ಕೆ ನೀಡದೆ ನಮ್ಮ ಮಕ್ಕಳ ಭವಿಷ್ಯದ ಜೊತೆ ಆಟವಾಡುತ್ತಿದ್ದಾರೆ.

ಆಗ 15, 2016

ಬಲಪಂಥೀಯರ ಕಪಟ ದೇಶಭಕ್ತಿಯೂ ನಮ್ಮ ಯುವ ಪೀಳಿಗೆಯೂ

ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
15/08/2016
ಕಳೆದ ಇಪ್ಪತ್ತೆಂಟು ತಿಂಗಳ ಬಾಜಪದ ಆಡಳಿತ ನನ್ನಲ್ಲಿ ತೀವ್ರವಾದ ಭ್ರಮನಿರಸನವನ್ನಾಗಲಿ, ನಿರಾಸೆಯನ್ನಾಗಲಿ ಉಂಟುಮಾಡಿಲ್ಲ, ವಿಷಾದದ ಹೊರತಾಗಿ! ಇವತ್ತೇನು ರಾಷ್ಟ್ರದಾದ್ಯಂತ ದಲಿತರ, ಅಲ್ಪಸಂಖ್ಯಾತರ ಮೇಲೆ ಅಮಾನವೀಯ ಹಲ್ಲೆಗಳು ನಡೆಯುತ್ತಿವೆಯೊ ಅವೆಲ್ಲವೂ ನಿರೀಕ್ಷಿತವೇ ಆಗಿದ್ದವು. ಇನ್ನು ಅಸಹಿಷ್ಣುತೆಯ ವಿಚಾರದಲ್ಲಿ ಬಾಜಪದಿಂದ ಇದಕ್ಕಿಂತ ಭಿನ್ನ ನಡೆಗಳನ್ನೇನಾದರು ಯಾರಾದರು ನಿರೀಕ್ಷಿಸಿದ್ದೇ ಆಗಿದ್ದರೆ ಅವರು ಇತಿಹಾಸದ ಗಂಧಗಾಳಿ ಗೊತ್ತಿಲ್ಲದವರೇ ಇರಬೇಕು. ಯಾಕೆಂದರೆ ಬಲಪಂಥೀಯ ನಿಲುವಿನ ಫ್ಯಾಸಿಸ್ಟ್ ಪಕ್ಷವೊಂದು ಹೇಗೆಲ್ಲ ನಡೆದುಕೊಳ್ಳಬಹುದೋ ಹಾಗೆಯೇ ಅದು ನಡೆದುಕೊಳ್ಳುತ್ತಿದೆ.

2014ರವರೆಗು ಅಂಬೇಡ್ಕರ್ ಬಗೆಗೆ ಯಾವುದೇ ಪ್ರೀತಿ, ಗೌರವಗಳನ್ನು ಇಟ್ಟುಕೊಂಡಿರದ ಬಾಜಪ ದಿಡೀರನೆ ಅವರ ಬಗ್ಗೆ ತೋರಿಸುವ ಕಾಳಜಿಯ ಹಿಂದಿರುವ ನೈಜ ಕಾರಣಗಳನ್ನೂ ಹಾಗು ಇದೀಗ ಎಚ್ಚೆತ್ತವರಂತೆ ಪ್ರದಾನಿ ಮೋದಿಯವರು ದಲಿತರ ಮೀಸಲಾತಿ ಹಕ್ಕುಗಳ ಬಗ್ಗೆ ಮಾತಾಡುತ್ತಿರುವುದರ ಹಿಂದಿನ ತಂತ್ರಗಾರಿಕೆಯ ಕುಟಿಲತೆಗಳನ್ನು ನಾವು ಸೂಕ್ಷ್ಮವಾಗಿ ಆದರೆ ತಣ್ಣಗಿನ ಮನಸ್ಥಿತಿಯಲ್ಲಿ ವಿಶ್ಲೇಷಿಸಿ ನೋಡಬೇಕಾದ ಐತಿಹಾಸಿಕ ಅನಿವಾರ್ಯತೆಯಿದೆ. ಸ್ವಲ್ಪ ಹಿಂದಕ್ಕೆ ಹೋಗಿ ನೋಡಿ:

ವಸಾಹತುಶಾಹಿಗಳ ವಿರುದ್ದ ನಡೆದ ನಮ್ಮ ಸುದೀರ್ಘ ಸ್ವಾತಂತ್ರ ಹೋರಾಟದಲ್ಲಿ ಬಾಜಪದ ಹಿಂದಿನ ತಲೆಮಾರಿನ ನಾಯಕರುಗಳಾಗಲಿ, ಅದರ ಸೋದರ ಸಂಘಟನೆಗಳಾಗಲಿ ಯಾವತ್ತೂ ಪಾಲ್ಗೊಂಡಿರಲಿಲ್ಲ. ಹೀಗಾಗಿ ಇವತ್ತು ಅದಕ್ಕೆ ಸ್ವಾತಂತ್ರ ಹೋರಾಟದ ಬಗ್ಗೆ ಮಾತನಾಡುವ ಹಕ್ಕಾಗಲಿ ಹಾಗು ಅದರ ನೇತೃತ್ವ ವಹಿಸಿದ್ದರು ಎಂದು ಹೇಳಿಕೊಳ್ಳಲು ಬೇಕಾದ ಒಬ್ಬನೇ ಒಬ್ಬ ನಾಯಕನೂ ಇಲ್ಲ. ಆದರೆ ಈ ಪೀಳಿಗೆಯ ಮುಂದೆ ಅದನ್ನು ಒಪ್ಪಿಕೊಳ್ಳಲು ತಯಾರಿರದ ಸಂಘಪರಿವಾರ ಒಂದಷ್ಟು ಐತಿಹಾಸಿಕ ವ್ಯಕ್ತಿಗಳನ್ನು ಹೈಜಾಕ್ ಮಾಡಿ ಅವರುಗಳು ತಮ್ಮ ಸಿದ್ದಾಂತಕ್ಕೆ ಪೂರಕ ನಿಲುವು ತಳೆದಿದ್ದರೆಂಬ ಭ್ರಮೆ ಹುಟ್ಟಿಸಲು ಪ್ರಯತ್ನಿಸುತ್ತಿದೆ. ಇದರ ಭಾಗವಾಗಿಯೇ ಹಿಂದಿನಿಂದಲೂ ಅದು ಹುತಾತ್ಮ ಶ್ರೀ ಭಗತ್ ಸಿಂಗ್ ಅವರನ್ನು, ಸ್ವಾಮಿ ವಿವೇಕಾನಂದ ಅವರನ್ನು ತನ್ನ ಪಕ್ಷದ ವ್ಯಾಪ್ತಿಯೊಳಗೆ ಸೇರಿಸಿಕೊಳ್ಳುವ ಎಲ್ಲ ನಾಟಕಗಳನ್ನೂ ಮಾಡಿದೆ. ಭಗತ್ ಸಿಂಗ್ ಒಬ್ಬ ಅಪ್ಪಟ ದೇಶಪ್ರೇಮಿಯಾಗಿದ್ದು ಅವನ ಹೆಸರನ್ನು ಬಳಸಿಕೊಂಡು ಯುವಜನೆಗೆ ಹಿಂದುತ್ವದ ಮತಾಂಧತೆಯ ಪಾಠ ಹೇಳುತ್ತ ಬಂದಿದೆ. ಹಾಗೆ ನೋಡಿದರೆ ಕ್ರಾಂತಿಕಾರಿ ಭಗತ್ ಸಿಂಗ್ ಸಮಾಜವಾದಿ ಆಶಯಗಳನ್ನು ಹೊಂದಿದ್ದ ದೇಶಪ್ರೇಮಿ ಯುವಕನಾಗಿದ್ದು ಸಮಾಜವಾದಿ ಗಣವಾದಿ ಸಂಘಟನೆಯ ಮೂಲಕ ಮಾರ್ಕ್ಸ್ ವಾದಿ ತತ್ವಗಳನ್ನು ಆಧರಿಸಿದ ರೈತ-ಕಾರ್ಮಿಕ ಹೋರಾಟಗಳ ಮೂಲಕ ಬ್ರಿಟೀಶರಿಂದ ಸ್ವಾತಂತ್ರ ಪಡೆಯಲು ಕ್ರಾಂತಿಯ ಹಾದಿ ಹಿಡಿದು ಹುತಾತ್ಮನಾದವನು. ಬಾಜಪದ ಹಿಂದುತ್ವದ ತತ್ವಗಳಿಗಾಗಲಿ, ಬಲಪಂಥೀಯ ಶಕ್ತಿಗಳ ಪ್ರಭಾವವಾಗಲಿ ಆತನ ಮೇಲಿರಲಿಲ್ಲ. ಆದರೆ ಇವತ್ತು ಬಾಜಪದವರು ಅವನ ಪೋಟೋಗೆ ಕುಂಕುಮ ಹಚ್ಚಿ ಇವನು ಹಿಂದು ರಾಷ್ಟ್ರದ ಕನಸು ಕಂಡವನೆಂದು, ಈತನ ಕನಸು ನನಸು ಮಾಡುವುದು ಇಂದಿನ ಯುವಕರ ಗುರಿಯಾಗಬೇಕೆಂದು ಹೇಳಿಕೊಳ್ಳುತ್ತ ತನ್ನ ವಿದ್ಯಾರ್ಥಿ ಸಂಘಟನೆಗಳ ಮೂಲಕ ಕಾಲೇಜು ಯುವಕ ಯುವತಿಯರನ್ನು ದಾರಿತಪ್ಪಿಸುತ್ತ ಬಂದಿದೆ. ಇನ್ನು ಈ ನೆಲದ ಕೆಳವರ್ಗಗಳನ್ನು ಶೋಷಿಸುತ್ತ ಬಂದ ಪುರೋಹಿತಶಾಹಿ ಶಕ್ತಿಗಳ ವಿರುದ್ದದ ನಿಲುವುಗಳನ್ನು ಹೊಂದಿದ್ದ ಸ್ವಾಮಿ ವಿವೇಕಾನಂದರವರನ್ನು ಬಾಜಪ ತನ್ನ ಪಕ್ಷದ ಪರಿಧಿಯೊಳಗೆ ಎಳೆತಂದು, ಅವರನ್ನು ಹಿಂದುತ್ವದ ಪುನರುಥ್ಥಾನದ ಪ್ರವರಕರೆಂದು ಘೋಷಿಸಿ ಯುವ ಜನತೆಯ ದಿಕ್ಕು ತಪ್ಪಿಸುತ್ತಲೇ ಬಂದಿದೆ. ಇದರಿಂದ ಪ್ರಭಾವಿತರಾದ ನಮ್ಮ ನೆಲದ ಲಕ್ಷಾಂತರ ತಳಜಾತಿಯ ಯುವಕರು ಸಂಘಪರಿವಾರದ ಮತಾಂಧ ಚಿಂತನೆಗಳನ್ನು ಅನುಷ್ಠಾನಗೊಳಿಸುವ ಆಯುಧಗಳಾಗಿ ಬಳಕೆಯಾಗುತ್ತಿದ್ದಾರೆ. ಎಷ್ಟರ ಮಟ್ಟಿಗೆ ಅಂತಹ ಯುವಕರು ಬಾಜಪದ ಹಿಂದುತ್ವವನ್ನು ನಂಬಿದ್ದಾರೆಂದರೆ ನಮ್ಮ ಹಳ್ಳಿಗಳ ಯುವಕರಿಗೆ ವಿವೇಕಾನಂದರ, ಭಗತ್ ಸಿಂಗ್ ಅವರುಗಳ ನೈಜ ಚಿಂತನೆಯ ಪುಸ್ತಕಗಳನ್ನು ಕೊಟ್ಟು ಓದಿಸಿದರೂ, ಇವುಗಳು ಎಡಪಂಥೀಯರು ಬರೆದ ಕಪೋಲಕಲ್ಪಿತ ಇತಿಹಾಸದ ಸೃಷ್ಠಿಯೆಂದು ವಾದಿಸುತ್ತಾರೆ. ಬಾಜಪ ಮತ್ತದರ ಸಂಘಪರಿವಾರದವರ ಇಂತಹ ಸುಳ್ಳುಗಳು ಒಂದು ಪೀಳಿಗೆಯ ಯೋಚನಾದಾಟಿಯನ್ನೇ ಬದಲಾಯಿಸಿರುವುದನ್ನು, ಅದರ ಪರಿಣಾಮಗಳನ್ನು ನಾವೀಗಾಗಲೇ ಗಮನಿಸಿದ್ದೇವೆ.

ಇನ್ನು ಅಂಬೇಡ್ಕರ್ ವಿಷಯಕ್ಕೆ ಬರುವ ಮುಂಚೆ, ಮಹಾತ್ಮಗಾಂದಿಯವರ ಬಗೆಗಿನ ಇವರುಗಳ ನಿಲುವುಗಳನ್ನೇ ನೋಡಿ ಇವರೆಂದೂ ಗಾಂದಿಯನ್ನು ರಾಷ್ಟ್ರಪಿತ ಎಂದು ಒಪ್ಪಿಕೊಂಡವರಲ್ಲ. ಬದಲಿಗೆ ಅವರು ಮುಸ್ಲಿಮರನ್ನು ಓಲೈಸುತ್ತಾರೆಂದೂ, ದೇಶವಿಭಜನೆಗೆ ಅವರೇ ಕಾರಣವೆಂದು ಇವತ್ತಿಗೂ ಆರೋಪಿಸುತ್ತಾರೆ. ನನಗೆ ತಿಳಿದ ಹಾಗೆ ಬಾಜಪದ ಹಿಂದಿನ ಅವತಾರವಾದ ಜನಸಂಘ ಇರುವವರೆಗೂ ಇವರುಗಳು ತಮ್ಮ ಚುನಾವಣೆಗಳಲ್ಲಾಗಲಿ, ಪ್ರಚಾರ-ಪ್ರಣಾಳಿಕೆಗಳಲ್ಲಾಗಲಿ ಗಾಂದಿಯವರನ್ನ ಪ್ರಸ್ತಾಪಿಸಿದವರೇ ಅಲ್ಲ. ಎಂಭತ್ತರ ದಶಕದಲ್ಲಿ ಬಾಜಪದ ಉದಯವಾದ ನಂತರವೇ 1984 ರಲ್ಲಿ ಇವರು ಮೊತ್ತಮೊದಲಬಾರಿಗೆ ಗಾಂದಿವಾದಿ ಸಮಾಜವಾದಿ ಚಿಂತನೆಗಳನ ಬಗ್ಗೆ ಮಾತಾಡಿದ್ದರು. ಹೀಗೆ ಕಾಲಕಾಲಕ್ಕೆ ದೇಶದ ಹಿರಿಯ ಐತಿಹಾಸಿಕ ವ್ಯಕ್ತಿಗಳನ್ನು ತಮ್ಮವರೆಂದು ಬಿಂಬಿಸಿಕೊಳ್ಳುವ ಪ್ರಯುತ್ನ ನಡೆಸುತ್ತ ಬಂದಿರುವ ಬಾಜಪದವರು ನರೇಂದ್ರ ಮೋದಿಯವರ ಕಾಲದಲ್ಲಿ ಒಂದು ಹೆಜ್ಜೆ ಮುಂದೆ ಹೋಗಿ, ಆರ್.ಎಸ್.ಎಸ್. ಅನ್ನು ನಿಷೇಧಿಸಿದ್ದ ಅಂದಿನ ಗೃಹ ಮಂತ್ರಿ ಸರದಾರ್ ವಲ್ಲಬಾಯಿ ಪಟೇಲರನ್ನು ತಮ್ಮವರೆಂದು ಬಿಂಬಿಸಿ, ಗುಜರಾತಿನ ನರ್ಮದಾ ಸರೋವರದಲ್ಲಿ ಅವರ ಬೃಹತ್ ಪ್ರತಿಮೆಯೊಂದನ್ನು ಸ್ಥಾಪಿಸಿ, ತಾವು ಮಾತ್ರ ದೇಶಭಕ್ತರೆಂಬ ಭ್ರಮೆಯೊಂದನ್ನು ಭಾರತೀಯರಲ್ಲಿ ಹುಟ್ಟು ಹಾಕಲು ಪ್ರಯತ್ನಿಸಿದ್ದರು. ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರನ್ನೇ ಬಿಡದ ಬಾಜಪದವರಿನ್ನು ಕಾಂಗ್ರೆಸ್ಸನ್ನು ಕಠೋರವಾಗಿ ಟೀಕಿಸುತ್ತಿದ್ದ ಬಿ.ಆರ್.ಅಂಬೇಡ್ಕರ್ ಅವರನ್ನು ಬಿಟ್ಟಾರೆಯೇ? ಅದರ ವರಸೆಯನ್ನೂ ಒಂದಿಷ್ಟು ನೋಡಿ:

2014ರಲ್ಲಿ ಬಹುಮತಗಳಿಸಿ ಅಧಿಕಾರಕ್ಕೇರಿದ ಬಾಜಪ ತಾನು ಅಖಿಲ ಭಾರತೀಯ ಮಟ್ಟದಲ್ಲಿ ಬೇರು ಬಿಡಲು ದಲಿತ ಮತ್ತು ಆದಿವಾಸಿ ಸಮುದಾಯಗಳ ಮತ ಪಡೆಯುವುದು ಸಹ ಮುಖ್ಯವೆಂದು ಬಾವಿಸಿ ಆ ದಿಸೆಯಲ್ಲಿ ತನ್ನ ಕಾರ್ಯ ಪ್ರಾರಂಬಿಸಿತು. ಇದರ ಒಂದು ಭಾಗವಾಗಿಯೇ ಮೋದಿಯವರು ಕಳೆದ ಮಾರ್ಚ ತಿಂಗಳಲ್ಲಿ ತಾನು ಸಹ ಅಂಬೇಡ್ಕರ್ ಅವರ ಅನುಯಾಯಿಯೆಂದೂ, ಅವರ ಆದರ್ಶಗಳನ್ನು ಅನುಷ್ಠಾನಗೊಳಿಸುವುದೇ ತನ್ನ ಪರಮ ಕರ್ತವ್ಯವೆಂದು ಬಾಷಣ ಮಾಡಿ, ಈ ನಾಡಿನ ಶೇಕಡಾ 25ರಷ್ಟಿರುವ ದಲಿತರನ್ನು ಓಲೈಸುವ ಕ್ರಮಕ್ಕೆ ನಾಂದಿ ಹಾಡಿದ್ದರು. ಯಾರೇ ಹೇಳಿದರೂ ದಲಿತರ ಮೀಸಲಾತಿಯನ್ನು ನಿಲ್ಲಿಸುವುದಿಲ್ಲ, ಸ್ವತ: ಅಂಬೇಡ್ಕರವರೇ ಮತ್ತೆ ಹುಟ್ಟಿ ಬಂದು ಹೇಳಿದರೂ ತಾವು ಮಾತ್ರ ಮೀಸಲಾತಿಯನ್ನು ಸ್ಥಗಿತಗೊಳಿಸುವುದಿಲ್ಲವೆಂಬ ಉಗ್ರ ಹೇಳಿಕೆಯನ್ನು ನೀಡಿ ದಲಿತರ ಕಣ್ಣಲ್ಲಿ ಹೀರೋ ಆಗಲು ಹೊರಟಿದ್ದರು. ಇದಕ್ಕೆ ಕಾರಣ ಕೆಲವೇ ದಿನಗಳ ಹಿಂದೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮೋಹನ್ ಬಾಗವತ್ ಅವರು ಮೀಸಲಾತಿಯನ್ನು ಪುನರ್ ಪರಿಶೀಲಿಸುವ ಅಗತ್ಯವಿದೆಯೆಂದು ಹೇಳಿ ದಲಿತರ ಕೆಂಗಣ್ಣಿಗೆ ಗುರಿಯಾಗಿದ್ದರು. ಅದಾಗಲೇ ಬಿಹಾರದಲ್ಲಿ ವಿದಾನಸಭಾ ಚುನಾವಣೆಗಳು ಘೋಷಣೆಯಾಗಿದ್ದ ಹಿನ್ನೆಲೆಯಲ್ಲಿ, ಇಂತಹ ಹೇಳಿಕೆಯಿಂದ ಪಕ್ಷಕ್ಕೆ ಹಿನ್ನಡೆಯಾಗುವ ಬೀತಿಯಿಂದಷ್ಟೇ ಮೋದಿಯವರು ಅಂಬೇಡ್ಕರರ ಭಕ್ತರಾಗಿ ಪರಿವರ್ತನೆಯಾಗಿದ್ದರು. ಅಂಬೇಡ್ಕರ್ ಅವರು ಬದುಕಿದ್ದಾಗಲು ಅವರೆಂದು ಹಿಂದೂ ಧರ್ಮದ ಪುರೋಹಿತಶಾಹಿಯನ್ನ ಮೆಚ್ಚಿದವರಲ್ಲ, ಬದಲಿಗೆ ಹಿಂದೂಧರ್ಮದ ಜಾತಿ ವ್ಯವಸ್ಥೆಯ ಹಾಗು ಅದರು ಅವಮಾನಗಳನ್ನು ತಿರಸ್ಕರಿಸಿ ಬೌದ್ದ ಧರ್ಮಕ್ಕೆ ಮತಾಂತರವಾಗಿದ್ದವರು. ಅಂತಹ ಅಂಬೇಡ್ಕರ್ ಅವರನ್ನೂ ಬಿಡದ ಬಾಜಪ ಇದೀಗ ತಾನು ಅಂಬೇಡ್ಕರ್ ಅವರ ಆಶಯಗಳನ್ನು, ಆದರ್ಶಗಳನ್ನು ಅನುಸರಿಸಲು ಬದ್ದವಾಗಿದ್ದೇನೆಂದು ಹೇಳಿಕೊಂಡರೆ ಅದನ್ನು ನಂಬಿ ಮತ ಕೊಡಲು ಇವತ್ತು ದಲಿತರೇನು ದಡ್ಡರಾಗಿ ಉಳಿದಿಲ್ಲ. ಹೀಗೆ ಅಧಿಕಾರದಾಸೆಗಾಗಿ ಎಂತಹ ಸುಳ್ಳುಗಳನ್ನಾದರು ಹೇಳಬಲ್ಲ ಬಾಜಪ ಇದೀಗ ಮತ್ತೊಂದು ಸುಳ್ಳನ್ನು ಹೇಳಿದೆ. ಇತ್ತೀಚೆಗೆ ಗುಜರಾತಿನ ಊನಾದಲ್ಲಿ ನಡೆದ ದಲಿತ ಯುವಕರ ಮೇಲಿನ ಹಲ್ಲೆಯ ತರುವಾಯ ದೇಶದಾದ್ಯಂತ ಹೆಚ್ಚುತ್ತಾ ಹೋದ ಪ್ರತಿಭಟನೆಗಳಿಂದಾಗಿ ಮುಂದಿನ ವರ್ಷದ ರಾಜ್ಯ ವಿದಾನಸಭೆಗಳ ಚುನಾವಣೆಗಳಲ್ಲಿ ಎಲ್ಲಿ ದಲಿತರು ತಮ್ಮ ವಿರುದ್ದವಾಗಿ ನಿಲ್ಲುತ್ತಾರೊ ಎಂಬ ಭಯದಿಂದ ಮೋದಿಯವರ ಸರಕಾರ ದಲಿತರ ಬಗ್ಗೆ ಇನ್ನಷ್ಟು ಮೊಸಳೆ ಕಣ್ಣೀರು ಸುರಿಸಲು ತೊಡಗಿದೆ. ಇದರ ಭಾಗವಾಗಿಯೇ ಅದೀಗ, ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಖಾಸಗಿ ಕ್ಷೇತ್ರದ ಮೀಸಲಾತಿಯ ಮಸೂದೆಯನ್ನು, ಮತ್ತು ಸರಕಾರಿ ನೌಕರಿಯಲ್ಲಿ ಪದೋನ್ನತಿಯಲ್ಲಿನ ಮೀಸಲಾತಿಯ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸುವ ಮಾತಾಡುತ್ತಿದೆ. ಜೊತೆಗೆ ಕಳೆದೊಂದು ವರ್ಷದಿಂದ ಕೇಂದ್ರದ ಅಸಹಿಷ್ಣುತೆಯ ನೀತಿಯನ್ನು ವಿರೋಧಿಸುತ್ತಲೇ ಬಂದ ಕಲಾವಿದರ,ಬರಹಗಾರರನ್ನು ಸಮಾದಾನ ಪಡಿಸಲು ಅಖಿಲ ಭಾರತೀಯ ದಲಿತ ಬರಹಗಾರರ ಸಮಾವೇಶವೊಂದನ್ನು ಆಯೋಜಿಸುವ ಬಗ್ಗೆ ಹೇಳಿಕೆ ನೀಡಲಾಗಿದೆ. 

ಇಷ್ಟಲ್ಲದೆ ಸ್ವಯಂಘೋಷಿತ ಹಿಂದುತ್ವದ ವಕ್ತಾರ ಸಂಘಟನೆಗಳ ಸದಸ್ಯರುಗಳು ಗೋರಕ್ಷಣೆಯ ನೆಪದಲ್ಲಿ ದಲಿತರ ಅಲ್ಪಸಂಖ್ಯಾತರ ಮಲೆ ನಡೆಸುತ್ತಿರುವ ಅಮಾನವೀಯ ಹಲ್ಲೆಗಳ ವಿರುದ್ದ ದೇಶದಾದ್ಯಂತ ರೂಪುಗೊಳ್ಳುತ್ತಿರುವ ಜನಾಭಿಪ್ರಾಯದಿಂದ ಬೆದರಿದ ಮೋದಿಯವರು ಇದೀಗ ಕಪಟ ಗೋರಕ್ಷಕರ ವಿರುದ್ದ ಕಠಿಣಕ್ರಮ ಕೈಗೊಳ್ಳುವುದಾಗಿ ಹೇಳಿದ್ದು, ಈ ಸಂಬಂದ ರಾಜ್ಯಸರಕಾರಗಳಿಗೆ ಪತ್ರ ಬರೆದಿದ್ದಾರೆ. ಮೇಲ್ನೋಟಕ್ಕೆ ಇದೊಂದು ಒಳ್ಳೆಯ ಬೆಳವಣಿಗೆಯೆನಿಸಿದರೂ ಆಳದಲ್ಲಿ ಗೂಡಾರ್ಥವೇ ಬೇರೆ ಇದೆ. ಗೋರಕ್ಷಣೆಯ ಬಗ್ಗೆ ಮಾತಾಡುವ ನಾಯಕರು ದಲಿತರ ಆಹಾರ ಹಕ್ಕುಗಳನ್ನು ಸಂರಕ್ಷಿಸುವ ಮಾತಾಡುವುದಿಲ್ಲ. ದಲಿತ ಮತ್ತು ಅಲ್ಪಸಂಖ್ಯಾತ ಸಮುದಾಯಕ್ಕಿರುವ ಆಹಾರ ಸೇವನೆಯ ಮೂಲಭೂತ ಹಕ್ಕಿನ ಬಗ್ಗೆ ಮಾತಾಡದೆ ಕಪಟ ಗೋರಕ್ಷಕರ ಬಗ್ಗೆ ಮಾತಾಡುವ ಮೋದಿ ತಾವು ದಲಿತರ ಮೇಲಿನ ಹಲ್ಲೆಯನ್ನು ತಡೆಯುವಲ್ಲಿ ನೂರಕ್ಕೆ ನೂರರಷ್ಟು ಪ್ರಯತ್ನ ಮಾಡುತ್ತೇನೆಂದು ಭರವಸೆ ನೀಡಲು ವಿಫಲರಾಗಿದ್ದಾರೆ. ಜೊತೆಗೆ ದಲಿತರ ಮೇಲಿನ ಹಲ್ಲೆಗೆ ಗೋರಕ್ಷಣೆಯೊಂದೇ ಕಾರಣವೆಂಬಂತೆ ಮಾತಾಡಿದ್ದಾರೆ. ಅದರ ಹೊರತಾಗಿಯೂ ದಲಿತರ ಮೇಲೆ ನಿತ್ಯ ನಡೆಯುತ್ತಿರುವ ಇತರೇ ಕಾರಣಗಳ ಹಲ್ಲೆಗಳ ಬಗ್ಗೆ ಮೋದಿಯವರು ಮಾತಾಡುತ್ತಿಲ್ಲ. 

ಬಾಜಪ ತಾನು ಗಳಿಸಿರುವ ಅಧಿಕಾರವನ್ನು ಉಳಿಸಿಕೊಳ್ಳಲು ಮತ್ತು ಇಡೀ ರಾಷ್ಟ್ರದಾದ್ಯಂತ ತನ್ನ ಬೇರುಗಳನ್ನು ಬಿಡಲು ಬೇಕಾದ ಮತಗಳನ್ನು ಸೆಳೆಯಲು ಅಗತ್ಯವಿರುವ ಎಲ್ಲ ತಂತ್ರಗಳನ್ನೂ ಹೆಣೆಯುತ್ತಿದೆ. ಅದರ ಒಂದು ಭಾಗವಾಗಿಯೇ ಇವತ್ತು ಬಾಜಪ ಅಂಬೇಡ್ಕರ್ ಅವರನ್ನು ತನ್ನ ಆದರ್ಶವೆಂದು ಹೇಳುತ್ತಿರುವುದು ಮತ್ತು ದಲಿತ ಮೀಸಲಾತಿಯನ್ನು ಮುಂದುವರೆಸುವ ನಾಟಕದ ಮಾತಾಡುತ್ತಿರುವುದು. ಅದರ ಇಂತಹ ಗುಪ್ತಕಾರ್ಯಸೂಚಿಗಳ್ನು ವಿಫಲಗೊಳಿಸಲು ಇರುವ ದಾರಿಯೆಂದರೆ: ನನಗನಿಸಿದ ಹಾಗೆ ನಮ್ಮ ತಳಜಾತಿಯ ಯುವಕರುಗಳು ಬಲಪಂಥೀಯ ಸಂಘಟನೆಗಳ ತೆಕ್ಕೆಗೆ ಜಾರದಂತೆ ನೋಡಿಕೊಳ್ಳುವುದಾಗಿದೆ. ನಮ್ಮೆಲ್ಲ ಪ್ರಗತಿಪರ ಸಂಘಟನೆಗಳು ನಿರ್ದಿಷ್ಠ ಗುರಿಯೊಂದಿಗೆ ನಮ್ಮ ಯುವ ಪೀಳಿಗೆಯನ್ನು ಈ ದಿಸೆಯಲ್ಲಿ ತಯಾರು ಮಾಡಬೇಕಾಗಿದೆ. ಯಾಕೆಂದರೆ ಇವತ್ತಿನ ದೇಶದ ಒಟ್ಟು ಮತದಾರರ ಪೈಕಿ ಶೇಕಡಾ 50ರಷ್ಟಿರುವ ಯುವಜನತೆಯನ್ನು ಬಳಸಿಕೊಳ್ಳುತ್ತಿರುವ ಬಾಜಪವನ್ನು ತಡೆಯಲು ಇದೊಂದೇ ಮಾರ್ಗವೆಂದು ನನ್ನ ನಂಬಿಕೆ.

ಆಗ 12, 2016

ಮೇಕಿಂಗ್ ಹಿಸ್ಟರಿ: ಬಲವಂತ ಮತ್ತು ಲೂಟಿ

making history
ಸಾಕೇತ್ ರಾಜನ್ 
ಕನ್ನಡಕ್ಕೆ: ಡಾ. ಅಶೋಕ್. ಕೆ. ಆರ್
12/08/2016
ಬಿಕ್ಕಟ್ಟನ್ನು ಮತ್ತಷ್ಟು ತೀವ್ರವಾಗಿಸಿದ ಮತ್ತು ಬ್ರಿಟೀಷ್ ಆಳ್ವಿಕೆಯ ವಿರುದ್ಧ ಜನಸಮೂಹದ ಧಿಕ್ಕಾರವನ್ನಾಹ್ವಾನಿಸಿದ ಮತ್ತೊಂದು ಅಂಶವೆಂದರೆ, ಬ್ರಿಟೀಷರು ತಮಗೆ ಬೇಕಾಗಿದ್ದನ್ನು ತೆಗೆದುಕೊಳ್ಳುತ್ತಿದ್ದ ರೀತಿ. ಜನಸಮೂಹದ ಅತ್ಯಮೂಲ್ಯ ಚಿಕ್ಕ ಪುಟ್ಟ ಸಂಪನ್ಮೂಲಗಳನ್ನು ಅವರು ದೈಹಿಕವಾಗಿ ಲೂಟಿ ಮಾಡಿದ್ದಷ್ಟೇ ಅಲ್ಲದೆ, ಅದೇ ಸಮಯದಲ್ಲೆ ತಮಗೆ ಬೇಕಾದ ಕೂಲಿಯನ್ನೂ ಸಹಿತ ಬಲವಂತದಿಂದ ಮಾಡಿಸಿಕೊಳ್ಳುತ್ತಿದ್ದರು. 

ಮೈಸೂರು ಕುಸಿತ ಕಂಡ ಕೆಲದಿನಗಳಲ್ಲಿ ವೆಲ್ಲೆಸ್ಲಿ ಬರೆಯುತ್ತಾನೆ: “ಸೈನ್ಯದ ಅಧಿಕಾರಿಗಳು ದೇಶದ ಜನರನ್ನು ಕೂಲಿಯಾಳುಗಳಾಗಿ ಕೆಲಸ ಮಾಡುವಂತೆ ಒತ್ತಾಯಿಸುತ್ತಾರೆ, ಸೈನಿಕರು ಅಟ್ಟಾಡಿಸುತ್ತಾರೆ, ಕೆಲಸವಾದ ನಂತರ ಕೂಲಿ ಕಾಸನ್ನೂ ಕೊಡದೆ ಕಳಿಸಿಬಿಡುತ್ತಾರೆ ಎಂದು ಪೂರ್ಣಯ್ಯ ಹಲವಾರು ದೂರುಗಳನ್ನು ನೀಡಿದ್ದರು”. (264) 

ಕೆಲ ವರುಷಗಳ ನಂತರ ಮನ್ರೋ ಬರೆಯುತ್ತಾರೆ: “….ಕ್ಯಾಂಪಿನವರಲ್ಲಷ್ಟೇ ಅಲ್ಲ, ಎತ್ತು ಸಾಕಿದ ಎಲ್ಲರೂ ಮಾಡುತ್ತಿದ್ದ ಸಾಮಾನ್ಯ ಕೆಲಸವೆಂದರೆ ಕಂಪನಿಯ ಹೆಸರಿನಲ್ಲಿ ಸ್ಥಳೀಯರ ಬಳಿ ಬಲವಂತದಿಂದ ಹುಲ್ಲನ್ನು ತೆಗೆದುಕೊಳ್ಳುತ್ತಿದ್ದು, ಕೆಲವೊಮ್ಮೆ ಏನೂ ಹಣ ಕೊಡದೆ ತೆಗೆದುಕೊಳ್ಳುತ್ತಿದ್ದರು ಅಥವಾ ಹಣ ಕೊಟ್ಟರೂ ಅದು ಹುಲ್ಲಿನ ಬೆಲೆಗಿಂತ ಕಡಿಮೆಯಿರುತ್ತಿತ್ತು….” (265) 

ಮತ್ತೆ ಮನ್ರೋ ಬರೆಯುತ್ತಾನೆ “ಸ್ಥಳೀಯ ವ್ಯಕ್ತಿಗಳು ಮತ್ತವರ ಸಂಪತ್ತನ್ನು” ವಸಾಹತು ಸೈನ್ಯದ ತುಕಡಿಗಳು ಬಲವಂತದಿಂದ ವಶಕ್ಕೆ ತೆಗೆದುಕೊಳ್ಳುತ್ತಿದ್ದರು. “ಈ ಪಾಪದ ಕೆಲಸದ ಬಗ್ಗೆ ಬಹಳ ಹಿಂದಿನಿಂದಲೇ ದೂರುಗಳು ಬರುತ್ತಿದ್ದವು, ನಮ್ಮ ಶಕ್ತಿ ಹೆಚ್ಚಿದಂತೆ ಇದು ಹೆಚ್ಚುತ್ತಾ ಹೋಯಿತು….ಬಹಳಷ್ಟು ದೇಶಗಳಲ್ಲಿ ಒಂದು ಉತ್ತಮ ರಸ್ತೆಯು, ಅದರ ಹತ್ತಿರವಿರುವ ಹಳ್ಳಿಗಳಿಗೆ ಅನುಕೂಲಕರವಾಗಿದ್ದರೆ, ಈ ದೇಶದಲ್ಲದು ತದ್ವಿರುದ್ಧವಾಗಿಬಿಟ್ಟಿದೆ. ರಸ್ತೆಗೆ ಹತ್ತಿರವಿರುವ ಹಳ್ಳಿಗಳು ಸಾಮಾನ್ಯವಾಗಿ ತನ್ನ ಕೆಲವು ನಿವಾಸಿಗಳನ್ನು ಕಳೆದುಕೊಳ್ಳುತ್ತದೆ ಅಥವಾ ಅಲ್ಲಿನ ಕೆಲಸಗಾರರು ಕೂಲಿಗಳಾಗಿ ನೇಮಕವಾಗುತ್ತಾರೆ ಮತ್ತು ಕೆಲವು ಸಂದರ್ಭದಲ್ಲಿ ಇಡೀ ರೈತಾಪಿ ವರ್ಗ ಈ ಉಪಟಳದಿಂದ ತಪ್ಪಿಸಿಕೊಳ್ಳುವ ಸಲುವಾಗಿ ಹಳ್ಳಿಯನ್ನು ತೊರೆದು ರಸ್ತೆಯಿಂದ ತುಂಬ ದೂರವಿರುವ ಹೊಸ ಜಾಗದಲ್ಲಿ ಬದುಕು ಕಟ್ಟಿಕೊಳ್ಳುತ್ತಾರೆ”. (266) 

ಈ ನೀತಿಗಳು ಟಿಪ್ಪು ಮತ್ತು ಹೈದರನ ನೀತಿಗಳಿಗಿಂತ ಸಂಪೂರ್ಣ ಭಿನ್ನವಾಗಿತ್ತು. ಈ ಇಬ್ಬರೂ ರಾಜರು ತಮ್ಮಾಳ್ವಿಕೆಯ ಬಹುಕಾಲವನ್ನು ಯುದ್ಧದಲ್ಲೇ ಕಳೆದರೂ ಕೂಡ, ತಮ್ಮ ಸೈನಿಕ ಅವಶ್ಯಕತೆಗಳನ್ನು ಪೂರೈಸಿಕೊಳ್ಳುವ ಸಲುವಾಗಿ ಜನರ ಮೇಲೆ ಶೋಷಣೆ ನಡೆಸಿದ ಉದಾಹರಣೆಗಳಿಲ್ಲ. 

ಮೇವು ಮತ್ತು ಗಂಡಸರನ್ನು ಇಷ್ಟು ಸುಲಭವಾಗಿ ದಕ್ಕಿಸಿಕೊಳ್ಳುವುದು ಸಾಧ್ಯವಾದ ಮೇಲೆ, ರಣಹದ್ದಿನಂತಹ ಬಿಳಿ ಗಂಡಸರ ಸೈನ್ಯ ಮಹಿಳೆಯರನ್ನು ಬಿಟ್ಟೀತೆ? 

ಭಾರತದ ಘಟನೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದವರೊಬ್ಬರು 1858ರಲ್ಲಿ ಬರೆಯುತ್ತಾರೆ: “ವಾಸ್ತವವೆಂದರೆ, ಇಡೀ ಯುರೋಪಿನಲ್ಲಾಗಲೀ ಅಥವಾ ಅಮೆರಿಕಾದಲ್ಲಾಗಲೀ ಬ್ರಿಟೀಷ್ ಸೈನ್ಯದಷ್ಟು ಕ್ರೂರವಾದ ಸೈನ್ಯವಿಲ್ಲ. ಉಳಿದೆಡೆ ಶಿಸ್ತಾಗಿ ಮತ್ತು ಸಂಪೂರ್ಣವಾಗಿ ರದ್ದು ಮಾಡಲಾಗಿರುವ - ಲೂಟಿ, ಹಿಂಸೆ, ಸಾಮೂಹಿಕ ಹತ್ಯೆ – ಬ್ರಿಟೀಷ್ ಸೈನಿಕನ ಹೆಮ್ಮೆಯ ವಿಶೇಷಾಧಿಕಾರ, ಜನ್ಮದಾತ ಹಕ್ಕಾಗಿತ್ತು.” (267) 

ಋ. ರಾಜಕೀಯ ರೂಪ ಪಡೆದುಕೊಂಡ ಬಿಕ್ಕಟ್ಟು

ಹತ್ತೊಂಭತ್ತನೇ ಶತಮಾನದ ಎರಡನೇ ದಶಕದಲ್ಲಿ ಸರ್ವವ್ಯಾಪಿಯಾಗಿಬಿಟ್ಟಿದ್ದ ಬಿಕ್ಕಟ್ಟು ರಾಜಕೀಯ ರೂಪ ಪಡೆದುಕೊಳ್ಳುವುದಕ್ಕೆ ತಡವಾಗಲಿಲ್ಲ. 

ಜನರು, ಅದರಲ್ಲೂ ರೈತರು, ಈ ಶತ್ರುಗಳ ವಿರುದ್ಧ ಸಶಸ್ತ್ರ ಹೋರಾಟ ಕೈಗೊಂಡರು, ಮೂರನೇ ದಶಕದ ಪ್ರಾರಂಭದೊಂದಿಗೆ, ಗೆರಿಲ್ಲಾ ಯುದ್ಧ ಪ್ರಾರಂಭವಾಗಿಬಿಟ್ಟಿತು; ವಸಾಹತು ಶಕ್ತಿಗಳ ಮತ್ತವರ ಊಳಿಗಮಾನ್ಯ ಆಳುಗಳ ವಿರುದ್ಧ ಇದರ ತೀರ್ವತೆ ಮತ್ತು ಛಲ ಎಷ್ಟಿತ್ತೆಂದರೆ ಇದು ಆ ಸಮಯದಲ್ಲಿ ಭಾರತ ಕಂಡ ಅತಿ ದೊಡ್ಡ ಬಂಡಾಯ ಹೋರಾಟವಾಗಿತ್ತು, ಬಹುಶಃ ಬ್ರಿಟೀಷರು ಭಾರತದ ಮಣ್ಣ ಮೇಲೆ ಕಾಲಿಟ್ಟ ನಂತರ ಕಂಡ ಅತಿ ದೊಡ್ಡ ಬಂಡಾಯ. ಇದನ್ನು ನಗರ ಬಂಡಾಯ ಎಂದು ಕರೆಯಲಾಗುತ್ತದೆ, ಕಾರಣ ಈ ಬಂಡಾಯದ ಕೇಂದ್ರಬಿಂದು ಮಲೆನಾಡಿನ ಶಿವಮೊಗ್ಗ ಮತ್ತು ಚಿಕ್ಕಮಗಳೂರನ್ನೊಳಗೊಂಡ ನಗರ ಕಂದಾಯ ವಿಭಾಗವಾಗಿತ್ತು. 

ಜನಸಮೂಹದ ಸಶಸ್ತ್ರ ಹೋರಾಟ ವ್ಯಾಪಕವಾಗುತ್ತಿದ್ದಂತೆ ಆಳುವ ವರ್ಗಗಳಲ್ಲಿ ತೀರ್ವತರವಾದ ಬಿಕ್ಕಟ್ಟು ಪ್ರಾರಂಭವಾಯಿತು ಮತ್ತಿದು ವಸಾಹತುಶಾಹಿಗೆ ಕೈಗೊಂಬೆ ರಾಜರೊಂದಿಗಿನ ತನ್ನ ಮೈತ್ರಿಯನ್ನು ಮತ್ತಷ್ಟು ತೀಕ್ಷ್ಣ ದೃಷ್ಟಿಯೊಂದಿಗೆ ವಿಮರ್ಶಿಸುವಂತೆ ಮಾಡಿತು. 1831ರಲ್ಲಿ ಜನಸಮೂಹ ದಂಗೆಯೆದ್ದ ಕೆಲವೇ ವಾರಗಳಲ್ಲಿ, ಮೈಸೂರು ರಾಜನ ಆಳ್ವಿಕೆಯನ್ನು ಕೊನೆಗಾಣಿಸಿದ ಕಂಪನಿ, ಬೆಂಗಳೂರಿನಲ್ಲಿದ್ದ ತನ್ನ ಕಮಿಷನರ್ರುಗಳ ಮೂಲಕ ಇಡೀ ಸಾಮ್ರಾಜ್ಯದ ಆಳ್ವಿಕೆಯನ್ನು ವಹಿಸಿಕೊಂಡಿತು. ಹೀಗೆ ಮಾಡುವುದರ ಮೂಲಕ, ಜನರ ಒಳಿತಿಗಾಗಿ ಕೆಟ್ಟ ಆಳ್ವಿಕೆ ನೀಡಿದ ಕೈಗೊಂಬೆ ರಾಜನನ್ನು ನಾವು ಶಿಕ್ಷಿಸಿದ್ದೇವೆ ಎನ್ನುವ ಅಭಿಪ್ರಾಯ ಮೂಡುವಂತೆ ಮಾಡಿದರು. ವೆಲ್ಲೆಸ್ಲಿ 1799ರಲ್ಲಿ ಮಾಡಿದ ವ್ಯವಸ್ಥೆಗಳನ್ನು ಈಗ ಜಾರಿಗೆ ತರಲಾಗಿತ್ತು ಮತ್ತದನ್ನು ವಸಾಹತುಶಾಹಿ ಪರೀಕ್ಷಿಸುತ್ತಿತ್ತು. ಈ ‘ಸರಕಾರದ ಬದಲಾವಣೆಯ’ ಹಿಂದಿದ್ದ ಸಂಗತಿಗಳಲ್ಲೊಂದರ ಹಿಂದಿದ್ದ ವಾಸ್ತವದ ಬಗ್ಗೆ ಮನ್ರೋ ಚೆನ್ನಾಗಿ ವಿವರಿಸುತ್ತಾನೆ: “ಯುರೋಪಿಯನ್ನರಲ್ಲಿ ಭ್ರಷ್ಟಾಚಾರದ ಕೆಲವೊಂದು ಸಂದರ್ಭಗಳಿದ್ದವು…. ಭ್ರಷ್ಟಾಚಾರವಿದ್ದರೆ ಅದು ನಮ್ಮಲ್ಲಿರುವುದೇ ಸೊಗಸು (ಅಂದರೆ ರಹಸ್ಯವಾಗಿ) ಯಾಕೆಂದರೆ ಜನರು ಆ ಪಾಪದ ಆರೋಪವನ್ನು ಸ್ಥಳೀಯರ ಮೇಲೆಯೇ ಹೊರಿಸಿಬಿಡುತ್ತಾರೆ: ನಮ್ಮ ಬಗ್ಗೆ, ನಮ್ಮ ವ್ಯಕ್ತಿತ್ವದ ಬಗ್ಗೆ ಆ ಜನರಲ್ಲಿ ಉನ್ನತ ಉತ್ತಮ ಭಾವವೇ ನೆಲೆಸಿರುತ್ತದೆ, ಈ ಭಾವವೇ ನಮ್ಮಧಿಕಾರವನ್ನುಳಿಸಲು ಇರುವ ಶಕ್ತಿಯುತವಾದ ಬೆಂಬಲ”. (268) 

ನಿಗ್ರಹಕ್ಕಾಗಿ ಒಪ್ಪಂದದ ಮತ್ತೊಂದು ಕಲಮನ್ನು ಜಾರಿಗೊಳಿಸಲಾಯಿತು. ಆದರೆ ಹಾಗೆ ಮಾಡುವಾಗ, ಕೇಂದ್ರೀಕೃತ ಬ್ರಿಟೀಷ್ ಸರಕಾರ ಮತ್ತು ವಿವಿಧ ರಾಜ್ಯದ ರಾಜವಂಶಸ್ಥರ ನಡುವೆ ನಿಗ್ರಹಕ್ಕಾಗಿ ಒಪ್ಪಂದವನ್ನು ಜೀವಂತವಾಗಿಡಲಾಯಿತು. ಇದು 150 ವರುಷಗಳಿಗೂ ಹೆಚ್ಚು ಕಾಲ ಅಸ್ತಿತ್ವದಲ್ಲಿತ್ತು ಮತ್ತಿದನ್ನು ‘ಸ್ವತಂತ್ರ’ ಭಾರತದಲ್ಲಿ ರಾಜ್ಯ ಮತ್ತು ಕೇಂದ್ರ ಸರಕಾರದ ನಡುವಿನ ಸಂಬಂಧಕ್ಕಾಗಿ ಉಳಿಸಿಕೊಳ್ಳಲಾಯಿತು ಎಂದು ಹೇಳಲಾಯಿತು. ಸ್ವತಂತ್ರ ಭಾರತದ ರಾಜ್ಯಗಳ ರಾಜ್ಯಪಾಲರು ಹಳೆಯ ಬ್ರಿಟೀಷ್ ರೆಸಿಡೆಂಟರ ಪಾತ್ರವನ್ನಭಿನಯಿಸುತ್ತಿದ್ದಾರೆ ಮತ್ತು ಕೇಂದ್ರ ಸರಕಾರ ಅತಿ ದೊಡ್ಡ ಮಧ್ಯವರ್ತಿಯಾಗಿ ಕೆಲಸ ಮಾಡುತ್ತ ಭಾರತದ ಬ್ರಿಟೀಷ್ ಸರಕಾರದ ಬೂಟಿನಲ್ಲಿ ಕಾಲಿರಿಸಿದೆ. ನಿಗ್ರಹಕ್ಕಾಗಿ ಒಪ್ಪಂದ ಈಗಲೂ ಭಾರತದ ಸಂವಿಧಾನದ ಮೂಲಕ ಜಾರಿಯಲ್ಲಿದೆ, ಅದನ್ನು ಸಂಪೂರ್ಣವಾಗಿ ಮರೆತಿಲ್ಲ. ಅದು ಜೀವಂತವಿದೆ, ಭಾರತೀಯರ ಮೇಲೆ ಛಡಿ ಏಟು ನೀಡುತ್ತಿದೆ, ಕೇಂದ್ರ ಮತ್ತು ರಾಜ್ಯ ಸರಕಾರದ ನಡುವಿನ ಸಂಬಂಧದ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ. ಅದರ ಬಗೆಗಿನ ಹೆಚ್ಚಿನ ಮಾಹಿತಿಯನ್ನು ಮೇಕಿಂಗ್ ಹಿಸ್ಟರಿಯ ಮೂರನೇ ಸಂಫುಟದಲ್ಲ ನೋಡೋಣ. 

ವರುಷಗಳ ಕಾಲದಿಂದ ಈ ಬಿಕ್ಕಟ್ಟನ್ನು ಸೃಷ್ಟಿಸಲು ನೆರವಾದ ಶತ್ರುವೇ ಮೈಸೂರಿನ ಸ್ವಾತಂತ್ರ್ಯ ಹರಣದಿಂದ ಹೆಚ್ಚಿನ ಲಾಭವನ್ನು ಮಾಡಿಕೊಂಡಿದ್ದು; ಪ್ರತಿಯೊಂದನ್ನೂ ರೆಸಿಡೆಂಟ್ ಮುಖಾಂತರ ನಿರ್ದೇಶಿಸಲಾಗುತ್ತಿತ್ತು, ರೆಸೆಡೆಂಟ್ ಪ್ರಮುಖ ಪಾತ್ರಧಾರಿಯಾಗಿದ್ದ. ಈಗ ರೆಸಿಡೆಂಟ್ ಬ್ರಿಟೀಷ್ ಲೂಟಿಯನ್ನು ಮರೆಮಾಚಿದ, ಕೈಗೊಂಬೆ ರಾಜನ ಕಡೆ ಕೈ ತೋರಿದ, ತನ್ನ ರಕ್ತವಂಟಿದ ಕೈಗಳನ್ನು ಮರೆಮಾಚುತ್ತ. ಆದರೂ ಬಂಡಾಯವನ್ನೆದುರಿಸಿದ ಬಿಳಿ ಅಧಿಕಾರಿಗಳು, ರೈತ ಸಮೂಹವನ್ನು ಶೋಷಿಸುತ್ತ, ನೂರಾರು ಸಂಖೈಯಲ್ಲಿ ಕೊಲ್ಲುತ್ತ, ರೆಸಿಡೆಂಟರು ಕಾಪಾಡಿದ್ದ ರಹಸ್ಯಕ್ಕೆ ದ್ರೋಹ ಮಾಡುತ್ತ, ರಾಜ್ಯದ ನಿಜವಾದ ವ್ಯಕ್ತಿತ್ವವನ್ನು ಮತ್ತು ವಸಾಹತು ಆಳ್ವಿಕೆಯ ಪ್ರೇತಕಳೆಯನ್ನು ಬಹಿರಂಗಗೊಳಿಸಿದರು.

ಮೇಕಿಂಗ್ ಹಿಸ್ಟರಿ ಎರಡನೇ ಸಂಪುಟದ ಮೊದಲನೇ ಭಾಗದ ಮುಕ್ತಾಯ

ಮುಂದಿನ ವಾರ: 
ಎರಡನೇ ಭಾಗ - ವಸಾಹತುಶಾಹಿಯ ವಿರುದ್ಧ ನಡೆದ ಖ್ಯಾತ ಸಶಸ್ತ್ರ ಹೋರಾಟ

ಆಗ 11, 2016

ಶಹಜನಾಪುರದಲ್ಲೊಂದು Snow Plough!

ಸಾಂದರ್ಭಿಕ ಚಿತ್ರ
11/08/2016
ಈ ಚಿತ್ರದಲ್ಲಿ ಕಾಣುತ್ತಿರುವ ವಾಹನದ ಹೆಸರು ‘ಸ್ನೋ ಪ್ಲೋ’ (Snow Plough). ಇದರ ಕೆಲಸವೇನೆಂದರೆ ಹಿಮ ಬೀಳುವ ಸಮಯದಲ್ಲಿ ರಸ್ತೆಯ ಮೇಲೆ ಬಿದ್ದಿರುವ ಹಿಮವನ್ನು ಬದಿಗೆ ಸರಿಸಿ ವಾಹನಗಳು ಓಡಾಡುವಂತೆ ಅನುವು ಮಾಡಿಕೊಡುವುದು. ಹಿಮ ಬೀಳುವ ಕೆನಡಾದಂತಹ ದೇಶಗಳಲ್ಲಿ ಹೆಚ್ಚಾಗಿ ಉಪಯೋಗಿಸಲ್ಪಡುವ ಇಂತಹ ವಾಹನವನ್ನು ಭಾರತದಲ್ಲೂ ತರಿಸಲಾಗಿದೆ. ಎಲ್ಲೋ ಹಿಮಾಲಯದ ಕಡೆಗೆ ಉಪಯೋಗಿಸೋಕೆ ತರಿಸಿದ್ದಾರೆ ಎಂದು ನೀವು ಭಾವಿಸಿದ್ದರೆ ಅದು ತಪ್ಪು. ನಲವತ್ತೈದು ಡಿಗ್ರಿಗಳಿಗಿಂತಲೂ ಅಧಿಕ ತಾಪಮಾನವಿರುವ ಹಿಮವೆಂದರೇನೆಂದೇ ಗೊತ್ತಿರದ ಉತ್ತರಪ್ರದೇಶದ ಶಹಜನಾಪುರದ ಮುನಿಸಿಪಾಲಿಟಿಯವರು ಇಂತಹ ವಾಹನವನ್ನು ತರಿಸಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾದಲ್ಲಿ ವರದಿಯಾಗಿದೆ!

ಇಂತಹ ವಾಹನವನ್ನು ದೂರದೃಷ್ಟಿಯನ್ನು ನಿಜಕ್ಕೂ ಮೆಚ್ಚಬೇಕು! ಜಾಗತಿಕವಾಗಿ ತಾಪಮಾನ ಏರಿಕೆಯಾಗುತ್ತಿದೆ, ಮುಂದೊಂದು ದಿನ ‘ice age’ ಬರುವ ಸಾಧ್ಯತೆಗಳು ಹೆಚ್ಚಾಗುತ್ತಿದೆ ಎಂದು ವಿಜ್ಞಾನಿಗಳು ಹೇಳುತ್ತಿದ್ದಾರೆ. ಮುಂದೆಂದೋ ಬರುವ ‘ice age’ ದಿನಗಳಿಗೆ ಈಗಲೇ ತಯಾರಾಗಿಬಿಟ್ಟಿದೆ ಶಹಜನಾಪುರದ ಮುನಿಸಿಪಾಲಿಟಿ! ಅಷ್ಟರಳೊಗೆ ಈ ವಾಹನ ತುಕ್ಕು ಹಿಡಿದು ಬಿಡುವುದಿಲ್ಲವೋ ಎಂದೆಲ್ಲ ನೀವು ಪ್ರಶ್ನೆ ಮಾಡುವಂತಿಲ್ಲ!

ನಗರ ಪಾಲಿಕೆಯ ಇಂಜಿನಿಯರ್ ವರದಿಗಾರರು ಕೇಳಿದ ಪ್ರಶ್ನೆಗೆ ‘ಎಲ್ಲಾ ರೀತಿಯ ಸವಾಲುಗಳನ್ನೂ ಎದುರಿಸಲು ನಾವು ಸಿದ್ಧರಾಗಿರಬೇಕು’ ಎಂದು ಉತ್ತರ ಕೊಟ್ಟಿದ್ದಾರೆಂದು ವರದಿಯಾಗಿದೆ!

ಮುಂದಿನ ಟೆಂಡರಿನಲ್ಲಿ ಇನ್ಯಾವ್ಯಾವ ವಸ್ತುಗಳನ್ನು ತಂದು ಮುಂದಿನ ಜನಾಂಗವನ್ನು ‘ರಕ್ಷಿಸುತ್ತಾರೋ’ ಕಾದು ನೋಡಬೇಕಿದೆ.


ಸುಳ್ ಸುದ್ದಿ: ಜನರ ಹಣವನ್ನು ಹೆಂಗೆಲ್ಲ ನುಂಗಿ ಅರಗಿಸಿಕೊಳ್ಳಬಹುದು ಎನ್ನುವುದರ ಬಗ್ಗೆ ವಿಶೇಷ ತರಬೇತಿಯನ್ನು ಶಹಜನಾಪುರ ನಗರ ಪಾಲಿಕೆ ಹಮ್ಮಿಕೊಂಡಿದೆ. ಆಸಕ್ತರು ನೇರವಾಗಿ ಪಾಲಿಕೆಯವರನ್ನು ಸಂಪರ್ಕಿಸಬೇಕು.

ಆಗ 10, 2016

ರಾಷ್ಟ್ರೀಯತೆ ಸಾಂಸ್ಕೃತಿಕ ರಾಜಕಾರಣ: ವಿಚಾರ ಸಂಕಿರಣ.

10/08/2016
ಮೂರು ವರುಷದಿಂದ ಮಂಗಳೂರಿನಲ್ಲಿ "ಜನನುಡಿ", ನುಡಿಯು ಸಿರಿಯಲ್ಲ ಬದುಕು ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಂಡು ಬಂದಿರುವ ಅಭಿಮತ ಬಳಗವು ಈಗ ಬೆಂಗಳೂರಿಗೆ ಆಗಮಿಸಿದೆ! ಸ್ವಾತಂತ್ರೋತ್ಸವಕ್ಕೂ ಎರಡು ದಿನ ಮುಂಚೆ ಆಗಷ್ಟ್ ಹದಿಮೂರರಂದು ಸೆಂಟ್ರಲ್ ಕಾಲೇಜಿನ ಸೆನೆಟ್ ಸಭಾಂಗಣದಲ್ಲಿ "ರಾಷ್ಟ್ರೀಯತೆ ಸಾಂಸ್ಕೃತಿಕ ರಾಜಕಾರಣ"ದ ಬಗ್ಗೆ ವಿಚಾರ ಸಂಕೀರ್ಣವನ್ನೇರ್ಪಡಿಸಿದೆ


ಹಿವ್ರೆ ಬಜಾರ್ ಗ್ರಾಮ - ಮಳೆನೆರಳಿನ ಗ್ರಾಮಗಳಿಗೆ ಒಂದು ಮಾದರಿ

ಹಿವ್ರೆ ಬಜಾರಿನಲ್ಲಿರುವ ಇಂಗುಗುಂಡಿ
ಆನಂದ ಪ್ರಸಾದ್
10/08/2016
ಮಹಾರಾಷ್ಟ್ರದ ಔರಂಗಾಬಾದ್ ಜಿಲ್ಲೆಯಲ್ಲಿರುವ ಒಂದು ಗ್ರಾಮ ಹಿವ್ರೆ ಬಜಾರ್. ಇಲ್ಲಿ ಬೀಳುವ ಮಳೆಯ ಪ್ರಮಾಣ ವಾರ್ಷಿಕ 300-400 ಮಿ. ಮೀ. ಇಷ್ಟು ಕಡಿಮೆ ಪ್ರಮಾಣದ ಮಳೆಯನ್ನು ಪಡೆದರೂ ಈ ಗ್ರಾಮ ಈ ವರ್ಷದ ಭೀಕರ ಬರಗಾಲದಲ್ಲಿಯೂ ಕುಡಿಯುವ ನೀರಿಗಾಗಿ ಟ್ಯಾಂಕರ್ ನೀರನ್ನು ಅವಲಂಬಿಸಲಿಲ್ಲ. ಈ ಪವಾಡ ಸಾಧ್ಯವಾದದ್ದು ಮಳೆ ನೀರಿನ ಕೊಯ್ಲು ಹಾಗೂ ಸಮರ್ಪಕ ಬೆಳೆ ಪದ್ಧತಿ ಅಳವಡಿಸಿಕೊಂಡಿರುವುದರಿಂದ. ಇಲ್ಲಿ ಪ್ರತಿ ವರ್ಷ ಡಿಸೆಂಬರ್ 31ರಂದು ಆ ವರ್ಷದ ಮಳೆಯ ಪ್ರಮಾಣ ಹಾಗೂ ನೀರಿನ ಲಭ್ಯತೆಯನ್ನು ಪರಾಮರ್ಶಿಸಲು ಗ್ರಾಮಸ್ಥರ ಸಭೆ ನಡೆಸಲಾಗುತ್ತದೆ. ಕಳೆದ ವರ್ಷ ಇಂಥ ಸಭೆಯಲ್ಲಿ ಬರಗಾಲದ ಪರಿಸ್ಥಿತಿಯನ್ನು ಮನಗಂಡು ಮುಂದಿನ ಮಳೆಗಾಲದವರೆಗೆ ಯಾವುದೇ ಬೆಳೆಯನ್ನು ಬೆಳೆಯದೇ ಇರುವ ತೀರ್ಮಾನ ತೆಗೆದುಕೊಳ್ಳಲಾಯಿತು. ಇದರಿಂದಾಗಿಯೇ ಇಡೀ ಔರಂಗಾಬಾದ್ ಜಿಲ್ಲೆಯಲ್ಲಿ ಕುಡಿಯುವ ನೀರಿನ ಕೊರತೆ ಆದರೂ ಹಿವ್ರೆ ಬಜಾರ್ ಗ್ರಾಮದಲ್ಲಿ ಕುಡಿಯುವ ನೀರಿನ ಕೊರತೆ ಆಗಲಿಲ್ಲ. ಈ ಗ್ರಾಮದಲ್ಲಿ ಕೊಳವೆ ಬಾವಿ ಕೊರೆಯುವುದನ್ನು ನಿಷೇಧಿಸಲಾಗಿದೆ. ಹೀಗಾಗಿ 20ರಿಂದ 40 ಆಳದಲ್ಲಿ ತೆರೆದ ಬಾವಿಗಳಲ್ಲಿ ಬರಗಾಲದಲ್ಲಿಯೂ ಕುಡಿಯುವ ನೀರು ಲಭ್ಯ.

ಈ ಹಿವ್ರೆ ಬಜಾರ್ ಗ್ರಾಮದಲ್ಲಿ ಇಂಥ ಪವಾಡ ನಡೆಸಿದ ರೂವಾರಿ ಪೋಪಟ್ ರಾವ್ ಪವಾರ್. ಇವರ ಮುತುವರ್ಜಿ ಹಾಗೂ ಮಾರ್ಗದರ್ಶನದಿಂದ 20 ವರ್ಷಗಳ ಅವಧಿಯಲ್ಲಿ ಒಣಗಿ ಬೆಂಗಾಡಾಗಿದ್ದ ಹಿವ್ರೆ ಬಜಾರ್ ನಂದನವನವಾಗಿ ಹಸುರಿನಿಂದ ತುಂಬಿ ಕಂಗೊಳಿಸುತ್ತಿದೆ. ಹಿವ್ರೆ ಬಜಾರ್ ಇಂದು ಇಡೀ ದೇಶದಲ್ಲಿಯೇ ಇಂದು ಮಾದರಿ ಗ್ರಾಮವಾಗಿ ಗುರುತಿಸಿಕೊಂಡಿದೆ ಹಾಗೂ ಗಾಂಧೀಜಿಯವರ ಗ್ರಾಮ ಸ್ವರಾಜ್ಯವನ್ನು ನನಸಾಗಿಸಿದೆ. ಇಂದು ಹಿವ್ರೆ ಬಜಾರ್ ಗ್ರಾಮದಲ್ಲಿ 60 ಜನ ಮಿಲಿಯಾಧೀಶ್ವರ ರೈತರು ಇದ್ದಾರೆ. 1994ಕ್ಕೂ ಮೊದಲು ಈ ಗ್ರಾಮ ಬರಗಾಲ ಹಾಗೂ ನೀರಿನ ಕೊರತೆಯಿಂದ ಬಳಲಿ ಜನ ಕೆಲಸ ಅರಸಿ ನಗರಗಳಿಗೆ ಹೋಗುತ್ತಿದ್ದರು. ಹಾಗೆ ವಲಸೆ ಹೋದ ಸಾಕಷ್ಟು ಮಂದಿ ಇಂದು ನಗರಗಳಿಂದ ವಾಪಸ್ ಬಂದು ಗ್ರಾಮದಲ್ಲಿ ನೆಲೆಸಿದ್ದಾರೆ. ಪೋಪಟ್ ರಾವ್ ಅವರು ನಗರದಲ್ಲಿ ವಾಣಿಜ್ಯ ಸ್ನಾತಕೋತ್ತರ ಪದವಿ ಪಡೆದರೂ ನಗರ ಜೀವನದ ಆರಾಮ ಬದುಕಿನ ಸಾಧ್ಯತೆ ಇದ್ದರೂ ಮರಳಿ ಗ್ರಾಮಕ್ಕೆ ಬಂದು ಇಡೀ ಗ್ರಾಮದ ಚಿತ್ರಣವನ್ನೇ ಬದಲಿಸಿದರು. ಸರಕಾರಿ ಯೋಜನೆಯನ್ನು ಉಪಯೋಗಿಸಿಕೊಂಡು ಹಾಗೂ ಗ್ರಾಮಸ್ಥರ ಶ್ರಮದಾನದ ಮೂಲಕ ಗ್ರಾಮದಲ್ಲಿ ೪೦,೦೦೦ ಮಳೆ ನೀರು ತಡೆ ಹಿಡಿಯುವ ಕಣಿ ಹಾಗೂ ಬದುಗಳನ್ನು ನಿರ್ಮಿಸಲು ಮುಂದಾಳತ್ವ ವಹಿಸಿದರು. ಗ್ರಾಮದಲ್ಲಿ 10 ಲಕ್ಷಕ್ಕೂ ಅಧಿಕ ಮರಗಳನ್ನು ಬೆಳೆಸಿದರು. ಮಳೆನೀರು ತಡೆಹಿಡಿದು ನೀರಿಂಗಿಸುವ ತಡೆಗಟ್ಟ, ಇಂಗು ಗುಂಡಿ, ಕೆರೆಗಳ ಹೂಳೆತ್ತಿ ನೀರು ನಿಲ್ಲುವಂತೆ ಮಾಡಿ ಅಂತರ್ಜಲ ಹೆಚ್ಚುವಂತೆ ಮಾಡಿದರು. ಇದರ ಪರಿಣಾಮಾವಾಗಿ ಮೊದಲು ಬಹಳ ಆಳದಲ್ಲಿದ್ದ ನೀರಿನ ಮಟ್ಟ 15-20 ಅಡಿಗೆ ಏರಿತು. ಗ್ರಾಮದಲ್ಲಿ ಹೆಚ್ಚು ನೀರು ಬೇಡುವ ಭತ್ತ, ಬಾಳೆ, ಕಬ್ಬು ಮೊದಲಾದ ಬೆಳೆ ಬೆಳೆಯುವುದನ್ನು ನಿಷೇಧಿಸಿದರು. ಕಡಿಮೆ ನೀರು ಬಳಸಿ ಅಥವಾ ಹನಿ ನೀರಾವರಿ ಬಳಸಿ ಬೆಳೆಯುವ ಜೋಳ, ಬಾಜ್ರಾ, ನೀರುಳ್ಳಿ, ದ್ವಿದಳ ಧಾನ್ಯಗಳು, ಹೂವು, ಹಣ್ಣು, ತರಕಾರಿ ಬೆಳೆಗಳನ್ನು ಬೆಳೆಯುವ ಯೋಜನೆ ರೂಪಿಸಿ ಗ್ರಾಮಸ್ಥರ ಆದಾಯ ಹೆಚ್ಚುವಂತೆ ಮಾಡಿದರು. ಜೊತೆಗೇ ಹೈನುಗಾರಿಕೆ ಅಭಿವೃದ್ಧಿಪಡಿಸಿ ಇಂದು ಗ್ರಾಮದಲ್ಲಿ ಬರಗಾಲದ ಪರಿಸ್ಥಿತಿಯಲ್ಲಿಯೂ ದೈನಿಕ 4000 ಲೀ. ಹಾಲು ಉತ್ಪಾದನೆ ಆಗುವಂತೆ ಆಗಿದೆ. ಹೈನುಗಾರಿಕೆಗೆ ಬೇಕಾಗುವ ಹುಲ್ಲು ಗ್ರಾಮದಲ್ಲಿಯೇ ಉತ್ಪಾದನೆಯಾಗುತ್ತದೆ.

ಇಷ್ಟೆಲ್ಲಾ ಆಗಿರುವುದು ಕೇವಲ 300-400 ಮಿ. ಮೀ. ವಾರ್ಷಿಕ ಮಳೆಯ ನೀರನ್ನು ಇಂಗಿಸಿ ತೆರೆದ ಬಾವಿ, ಕೆರೆಗಳಲ್ಲಿ ಲಭ್ಯವಾಗುವ ನೀರಿನಿಂದ ಮಾತ್ರವೇ ಹೊರತು ಯಾವುದೇ ಅಣೆಕಟ್ಟಿನ ನೀರು ಅಥವಾ ಕಾಲುವೆಗಳ ನೀರಿನಿಂದ ಅಥವಾ ಕೊಳವೆ ಬಾವಿ ನೀರಿನಿಂದ ಅಲ್ಲ. ಇದನ್ನೆಲ್ಲ ಸಾಧಿಸಲು ಪೋಪಟ್ ರಾವ್ ಪವಾರ್ ಅವರಿಗೆ ಸ್ಫೂರ್ತಿ ಹಾಗೂ ಮಾದರಿ ಹಿವ್ರೆ ಬಜಾರ್ ಗ್ರಾಮದಿಂದ 35 ಕಿ.ಮೀ. ದೂರದಲ್ಲಿರುವ ಅಣ್ಣಾ ಹಜಾರೆಯವರ ರಾಲೇಗಾವ್ ಸಿದ್ಧಿ ಗ್ರಾಮದಲ್ಲಿ ಅವರು ನೀರಿಂಗಿಸುವಿಕೆ ಹಾಗೂ ಮರ ಬೆಳೆಸಿ ಸಾಧಿಸಿದ ಯಶಸ್ಸು. ಕರ್ನಾಟಕದಲ್ಲಿ ಕಳಸಾ ಬಂಡೂರಿ ಯೋಜನೆ ಅನುಷ್ಠಾನಕ್ಕೆ ಇರುವ ತಡೆ, ನೀರಿಗಾಗಿ ಹೋರಾಟ, ನ್ಯಾಯಾಧಿಕರಣದ ಕರ್ನಾಟಕಕ್ಕೆ ಅನುಕೂಲಕರವಲ್ಲದ ಮಧ್ಯಂತರ ತೀರ್ಪು, ಎತ್ತಿನ ಹೊಳೆ ಯೋಜನೆಗಾಗಿ ನಡೆಯುತ್ತಿರುವ ಹೋರಾಟ, ಅದಕ್ಕಾಗಿ ವೆಚ್ಚವಾಗುವ ಅಪಾರ ಹಣ ಇವುಗಳನ್ನೆಲ್ಲ ನೋಡಿದಾಗ ನಮ್ಮ ರಾಜ್ಯದ ಮಳೆ ಕಡಿಮೆ ಬೀಳುವ ಹಾಗೂ ಆಣೆಕಟ್ಟು ಹಾಗೂ ಕಾಲುವೆ ನೀರು ಲಭ್ಯವಿಲ್ಲದ ಪ್ರದೇಶಗಳಿಗೆ ಮಹಾರಾಷ್ಟ್ರದ ರಾಲೇಗಾವ್ ಸಿದ್ಧಿ ಹಾಗೂ ಹಿವ್ರೆ ಬಜಾರ್ ಗ್ರಾಮಗಳು 300-500 ಮೀ.ಮೀ. ವಾರ್ಷಿಕ ಮಳೆಯನ್ನು ಪಡೆದೂ ನೀರಿನ ಮಿತವ್ಯಯ ಹಾಗೂ ಮರ ಬೆಳೆಸಿ ಸಾಧಿಸಿದ ಯಶಸ್ಸು ಮಾದರಿಯೆನಿಸುತ್ತದೆ. ಏಕೆಂದರೆ ಕರ್ನಾಟಕದಲ್ಲಿ 500 ಮಿ.ಮೀ.ಗಿಂಥ ಕಡಿಮೆ ಮಳೆಯಾಗುವ ಜಿಲ್ಲೆಗಳು ಇಲ್ಲ (ಬರಗಾಲದ ವರ್ಷಗಳನ್ನು ಹೊರತುಪಡಿಸಿ).

ರಾಲೇಗಾವ್ ಸಿದ್ಧಿ ಹಾಗೂ ಹಿವ್ರೆ ಬಜಾರ್ ಗ್ರಾಮಗಳಲ್ಲಿ ನಡೆದ ಮಳೆ ನೀರಿಂಗಿಸುವ ಹಾಗೂ ಹಸುರು ಬೆಳೆಸುವ ಯೋಜನೆಯನ್ನು ಅನುಸರಿಸಲು ಕೋಟ್ಯಂತರ ರೂಪಾಯಿಗಳ ಅಗತ್ಯವಿಲ್ಲ. ಸರಕಾರದ ಯೋಜನೆಗಳನ್ನು ಬಳಸಿಕೊಂಡು ಮತ್ತು ಗ್ರಾಮೀಣ ಜನರ ಶ್ರಮದಾನದಿಂದ ಇಂಥ ಯೋಜನೆಗಳನ್ನು ಗ್ರಾಮಸ್ಥರೇ ನಡೆಸಲು ಸಾಧ್ಯವಿದೆ. ನೂರಾರು ಅಥವಾ ಸಾವಿರಾರು ಕೋಟಿ ರೂಪಾಯಿಗಳ ಯೋಜನೆ ಮುಗಿಯಲು ಹಲವಾರು ವರ್ಷಗಳನ್ನೇ ತೆಗೆದುಕೊಳ್ಳುವ ಕಾಮಗಾರಿಗಳ ಬದಲು ಅಥವಾ ನ್ಯಾಯಾಧಿಕರಣದ ತೀರ್ಪಿಗಾಗಿ ಕಾಯುತ್ತಾ ಹಲವಾರು ವರ್ಷಗಳನ್ನೇ ವ್ಯರ್ಥ ಮಾಡುವ ಬದಲು ಹಿವ್ರೆ ಬಜಾರ್ ಗ್ರಾಮದ ಯಶಸ್ಸನ್ನು ನಮ್ಮ ರಾಜ್ಯದ ಮಳೆ ಕಡಿಮೆ ಬೀಳುವ ಪ್ರದೇಶಗಳಲ್ಲಿ ಅಳವಡಿಸಿಕೊಳ್ಳಲು ಸಾಧ್ಯವಿದೆ. ಇದಕ್ಕಾಗಿ ನಮ್ಮ ರೈತ ಸಂಘಟನೆಗಳು, ಕನ್ನಡ ಸಂಘಟನೆಗಳು ಜನರಲ್ಲಿ ಅರಿವನ್ನು ಮೂಡಿಸುವ ಅಗತ್ಯ ಇದೆ. ನಮ್ಮ ಮಾಧ್ಯಮಗಳು ಈ ವಿಚಾರವಾಗಿ ನಿರಂತರವಾಗಿ ಜಾಗೃತಿ ರೂಪಿಸುವ ಅಗತ್ಯ ಇದೆ.