ಫೆಬ್ರ 26, 2016

ಮೇಕಿಂಗ್ ಹಿಸ್ಟರಿ: ವಸಾಹತುಶಾಹಿ ಮತ್ತು ಫ್ಯೂಡಲಿಸಂ ನಡುವಿನ ಕಲ್ಯಾಣ ಭಾಗ 2.

ಸಾಕೇತ್ ರಾಜನ್
ಕನ್ನಡಕ್ಕೆ: ಡಾ. ಅಶೋಕ್. ಕೆ. ಆರ್
ಬರ್ಟನ್ ಸ್ಟೈನಿನ ಮಾಹಿತಿ ವಸಾಹತುಶಾಹಿ, ಭೂಮಾಲೀಕರೊಟ್ಟಿಗೆ ಸರಳ ಗೆಳೆತನ ಬೆಳೆಸಿಕೊಳ್ಳುವುದರ ಜೊತೆಗೆ ದೇವಸ್ಥಾನದ ಆಸ್ತಿಯ ಒಡೆತನ ಹೊಂದಿದ್ದ ಬ್ರಾಹ್ಮಣರೊಟ್ಟಿಗೂ ಸಖ್ಯ ಬೆಳೆಸಿದ್ದನ್ನು ತಿಳಿಸುತ್ತದೆ. ಬ್ರಾಹ್ಮಣರ ಮಂತ್ರಾಕ್ಷತೆಯ ಶುಭ ಆಶೀರ್ವಾದದೊಂದಿಗೆ ವಸಾಹತುಶಾಹಿ ಮತ್ತು ಫ್ಯೂಡಲಿಸಂನ ನಡುವೆ ಐತಿಹಾಸಿಕ ವಿವಾಹವಾಗಿತ್ತು. 

ಬರ್ಟನ್ ಬರೆಯುತ್ತಾನೆ: “1800ರ ಮನ್ರೋನ ವರದಿಗಳಿಗೆ ಆದಾಯ ತೆರಿಗೆ ಇಲಾಖೆಯಲ್ಲಿದ್ದ ಮೇಲಧಿಕಾರಿಗಳಿಂದ ಮತ್ತು ಮದ್ರಾಸಿನ ಗವರ್ನರಾಗಿದ್ದ ಲಾರ್ಡ್ ಕ್ಲೈವ್ ರಿಂದ ಶೀಘ್ರ ಅನುಮೋದನೆ ದೊರಕಿತು. ಕೆನರಾದ ಬಗ್ಗೆ ಮನ್ರೋ ಕೊಟ್ಟ ವರದಿ ಮೈಸೂರಿನ ಸಂಶಾಯಾಸ್ಪದ ಆಡಳಿತ ಕೆನರಾದ ಭೂ ಮಾಲೀಕತ್ವದ ವಿಚಾರವಾಗಿ ಪುರಾತನ ಹಿಂದೂ ಸರಕಾರವನ್ನು ಹೇಗೆ ಭ್ರಷ್ಟಗೊಳಿಸಿತು ಎಂದು ತಿಳಿಸಿಕೊಟ್ಟಿದ್ದಾಗಿ ಹೇಳುತ್ತಾನೆ ಲಾರ್ಡ್ ಕ್ಲೈವ್. ಮದ್ರಾಸಿನ ಆದಾಯ ತೆರಿಗೆ ಬೋರ್ಡು ಮನ್ರೋನ ಶಿಫಾರಸ್ಸುಗಳನ್ನು ಪಾಲಿಸಬೇಕೆಂದು ಕ್ಲೈವ್ ವಾದಿಸಿದ. ಮನ್ರೋನ ನಿಯಮಗಳಲ್ಲೊಂದಕ್ಕೆ ಅಚ್ಚರಿ ವ್ಯಕ್ತವಾಗುವ ನಿರೀಕ್ಷೆಯಿತ್ತು. ಇದು ಕೆನರಾದ ಇನಾಂ ಭೂಮಿಗೆ (ತೆರಿಗೆ ರಹಿತ ಭೂಮಿ) ಸಂಬಂಧಿಸಿದ್ದಾಗಿತ್ತು. ಇನಾಂ ಭೂಮಿಗಿದ್ದ ಸವಲತ್ತುಗಳನ್ನು ಟಿಪ್ಪು ಸುಲ್ತಾನ್ ವಾಪಸ್ಸು ಪಡೆದಿದ್ದ; ಟಿಪ್ಪು ಸುಲ್ತಾನನ ನಂತರ ಅಧಿಕಾರವಿಡಿದ ಕಂಪನಿಗೆ ಟಿಪ್ಪುವಿನ ನೀತಿ ನಿಯಮಗಳನ್ನು ಮುಂದುವರೆಸುವ ಹಕ್ಕಿರಬೇಕಾದರೆ ಮನ್ರೋ ಯಾಕೆ ಮತ್ತೆ ಇನಾಂ ಹಕ್ಕನ್ನು ದಯಪಾಲಿಸಬೇಕು ಎನ್ನುವುದು ಗವರ್ನರ್ ರ ಪ್ರಶ್ನೆಯಾಗಿತ್ತು. ಈ ಇನಾಮನ್ನು ದಯಪಾಲಿಸುವುದರಿಂದ ಹೈದರ್ ಅಲಿ, ಟಿಪ್ಪು ಮತ್ತು ಹಿಂದಿನ ಆಡಳಿತಗಾರರ ಸಮಯದಲ್ಲಿ ಬರುತ್ತಿದ್ದ ಆದಾಯಕ್ಕಿಂತಲೂ ಕಂಪನಿಗೆ ಬರುವ ಆದಾಯ ಕಡಿಮೆಯಾಗಿಬಿಡುವುದರಿಂದ ಇದನ್ಯಾಕೆ ಜಾರಿಗೊಳಿಸಬೇಕು?

ಕೆನರಾದ ಇನಾಂ ಭೂಮಿಗೆ ಸಂಬಂಧಿಸಿದ ಈ ಆಕ್ಷೇಪಣೆಗಳಿಗೆ ಉತ್ತರ ಸಿಕ್ಕಿತಾ ಎನ್ನುವುದರ ಬಗ್ಗೆ ಯಾವುದೇ ದಾಖಲೆಗಳು ಲಭ್ಯವಿಲ್ಲ. ಇದೇ ತರಹದ ಆಕ್ಷೇಪಣೆಗಳು ಮನ್ರೋ ಕಾರ್ಯನಿರ್ವಹಿಸಿದ ಇತರೆ ಜಿಲ್ಲೆಗಳಲ್ಲಿಯೂ ಕೇಳಿ ಬಂದಿತ್ತು. ಕೆನರಾಗೆ ಸಂಬಂಧಪಟ್ಟಂತೆ 1804ರಲ್ಲಿ – ವರದಿ ಸಲ್ಲಿಕೆಯಾದ ಬಹುಕಾಲದ ನಂತರ – ಮನ್ರೋನ ಕೆನರಾ ವರದಿಗೆ ಕಂಪನಿಯ ನಿರ್ದೇಶಕ ಮಂಡಳಿಯಿಂದ ಪೂರ್ಣ ಒಪ್ಪಿಗೆ ಸಿಕ್ಕಿತು….” (48)

ದೇವಾಲಯ ಮತ್ತು ಬಸದಿಗಳಿಗೆ ಇನಾಂ ಹಕ್ಕುಗಳನ್ನು ಮರುಜಾರಿಗೊಳಿಸುವುದರ ಕುರಿತಾಗಿ ಮನ್ರೋ ನಿರ್ದಿಷ್ಟ ವಿವರಣೆಯನ್ನು ನೀಡಿಲ್ಲವಾದರೂ, ತನ್ನ ಬರವಣಿಗೆಯಲ್ಲಿ ಈ ನಿರ್ಧಾರದ ಬಗ್ಗೆ ಪ್ರಸ್ತಾಪಿಸಿದ್ದಾನೆ. ಮುಂದಿನ ಭಾಗಗಳಲ್ಲಿ ಇದರ ಬಗ್ಗೆ ತಿಳಿಯೋಣ. ಬುದ್ಧಿವಂತ ನಿರ್ದೇಶಕ ಮಂಡಳಿ ಮತ್ತವರ ಅಧಿಕಾರಿಗಳು ನಂತರದ ದಿನಗಳಲ್ಲಿ ಇದನ್ನು ನೋಡಿ ಒಪ್ಪಿಗೆ ನೀಡಿ ಚಪ್ಪಾಳೆ ಗಿಟ್ಟಿಸಿಕೊಂಡರು.

ಈ ಸಮಯದಲ್ಲಿ ಚಿತ್ರಾಪುರ ಬ್ರಾಹ್ಮಣರಲ್ಲಿ ಭೂಮಾಲೀಕರ ಹೊಸ ವರ್ಗ ರೂಪುಗೊಂಡಿದ್ದರ ಬಗ್ಗೆ ಸೂರ್ಯನಾತ ಕಾಮತ್: “1799ರಿಂದ ಕೆನರಾ ಜಿಲ್ಲೆಯಲ್ಲಿ ಬ್ರಿಟೀಷ್ ಆಡಳಿತ ಪ್ರಾರಂಭವಾದಾಗ ಚಿತ್ರಾಪುರ ಸಮುದಾಯದ ಜನರು ಉತ್ತರ ಮತ್ತು ದಕ್ಷಿಣ ಕೆನರಾದ ಬಹುತೇಕ ಹಳ್ಳಿಗಳಲ್ಲಿ ಶಾನುಭೋಗರಾಗಿ ನೇಮಕಗೊಂಡರು. ಈ ಕಾರಣದಿಂದಾಗಿ ಚಿತ್ರಾಪುರ ಸಾರಸ್ವತರಲ್ಲನೇಕರಿಗೆ ಈ ಎರಡು ಜಿಲ್ಲೆಯ ಹಳ್ಳಿಗಳ ಹೆಸರು ಸರ್ ನೇಮ್ ಆಗಿದೆ.” (49)

ಈಗ ಬೆಳಗಾವಿ, ಬಿಜಾಪುರ ಮತ್ತು ಧಾರವಾಡ ಜಿಲ್ಲೆಗಳನ್ನೊಳಗೊಂಡ ಬಾಂಬೆ – ಕರ್ನಾಟಕ ಭಾಗದಲ್ಲಿ ವಸಾಹತುಶಾಹಿ ಫ್ಯೂಡಲಿಸಂನ ಜೊತೆಗೆ ಕೈಜೋಡಿಸಿದ ರೀತಿಯನ್ನು ನೋಡೋಣ.

ಪೇಶ್ವೆಯ ಆಡಳಿತವನ್ನುನಭವಿಸಿದ್ದ ಈ ಮೂರೂ ಜಿಲ್ಲೆಗಳಲ್ಲಿ ಊಳಿಗಮಾನ್ಯ ಪದ್ಧತಿಯ ಮಧ್ಯಮವರ್ತಿಗಳಾಗಿ ಮತ್ತು ಮರಾಠರಿಗೆ ತೆರಿಗೆ ವಸೂಲಿ ಮಾಡಿಕೊಡುವವರಾಗಿ ದೇಸಾಯಿ ಮತ್ತು ದೇಶಮುಖರಿದ್ದರು. ರೈತ ಕಾರ್ಮಿಕರ ವಿರೋಧದ ನಡುವೆಯೂ ಊಳಿಗಮಾನ್ಯ ಪದ್ಧತಿ ಇಲ್ಲಿ ಸುಭದ್ರವಾಗಿತ್ತೆಂಬುದನ್ನು ಮೇಕಿಂಗ್ ಹಿಸ್ಟರಿಯ ಮೊದಲ ಸಂಪುಟದ ಕೊನೆಯ ಅಧ್ಯಾಯದಲ್ಲಿ ನೋಡಿದ್ದೇವೆ. ಈ ಭಾಗವನ್ನು ವಶಪಡಿಸಿಕೊಂಡ ಬ್ರಿಟೀಷ್ ಸೈನ್ಯದ ಮುಂದಾಳತ್ವವನ್ನು ಥಾಮಸ್ ಮನ್ರೋ ವಹಿಸಿಕೊಂಡಿದ್ದ. ಮನ್ರೋ ಮೊದಲು ಬಳ್ಳಾರಿಯ ಕಲೆಕ್ಟರಾಗಿ (ಜಿಲ್ಲಾಧಿಕಾರಿ) ನಂತರ ಉತ್ತರ ಮತ್ತು ದಕ್ಷಿಣ ಕನ್ನಡದ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು.

ಹಾಗಾಗಿ ಕರ್ನಾಟಕದ ಬಹುಭಾಗಗಳಲ್ಲಿ ಎರಡು ಭಿನ್ನ ಸಾಮಾಜಿಕ ವ್ಯವಸ್ಥೆಯ ನಡುವೆ ಮದುವೆ ಮಾಡಿಸುವ ಜವಾಬ್ದಾರಿ ಮತ್ತು ಕರ್ನಾಟಕವನ್ನು ವಸಾಹತುಶಾಹಿ ನೆಲೆಯಾಗಿ ಬದಲಿಸುವ ಕೆಲಸ ಮನ್ರೋದ್ದಾಗಿತ್ತು. ಕರ್ನಾಟಕದ ಭವಿಷ್ಯವನ್ನು ನಿರ್ಧರಿಸುವ ಐತಿಹಾಸಿಕ ನಿರ್ಣಯಗಳಲ್ಲಿ ಮನ್ರೋನ ನೇರ ಪಾತ್ರವಿತ್ತು. ಮನ್ರೋನ ಪತ್ರಗಳು, ವರದಿಗಳು ಮತ್ತು ಟಿಪ್ಪಣಿಗಳೆಲ್ಲವೂ ವಸಾಹತುಶಾಹಿತನದ ಮನಸ್ಥಿತಿಯ ಬಗೆಗಿನ ಅರಿವನ್ನು ಹೆಚ್ಚಿಸುತ್ತವೆ.

1826ರಲ್ಲಿ ಈ ಭಾಗದಲ್ಲಿ ಜನ್ಮತಳೆದ ಊಳಿಗಮಾನ್ಯ ಪದ್ಧತಿಯ ಮಧ್ಯವರ್ತಿಗಳ ಬಗ್ಗೆ ಮನ್ರೋ ವಿವರಿಸುತ್ತಾನೆ:” ಬಹುತೇಕ ಜಾಗೀರುದಾರರು ಕೊಂಕಣದ ಕಡೆಯಿಂದ ಬಂದ ಆಗುಂತಕರು ಮತ್ತು ಕೃಷ್ಣ ನದಿಯಾಚೆಗಿನ ದೇಶದವರು…. ಜಾಗೀರುದಾರರಲ್ಲಿ ಪ್ರಮುಖರಾದ ಪಟವರ್ಧನರು ನನ್ನ ನಂಬಿಕೆಯ ಪ್ರಕಾರ ಧಾರವಾಡಕ್ಕೆ ಅಪರಿಚಿತರು. ಪರಸುರಾಮ ರಾವ್ ನ ತಂದೆ ಅಥವಾ ಬಹುಶಃ ಪರಸುರಾಮ ರಾವ್ ನ ಕಾಲದವರೆಗೆ ಇವರ ಬಗ್ಗೆ ಯಾರೂ ಕೇಳಿಯೇ ಇರಲಿಲ್ಲ….

ಇದನ್ನೆಲ್ಲ ಅಭ್ಯಸಿಸಿದ ಉದ್ದೇಶ ಧಾರವಾಡ ಮರಾಠ ಪ್ರಾಂತ್ಯಕ್ಕೆ ಸೇರಿರಲಿಲ್ಲ, ಬದಲಿಗೆ ಕೆನರಾ ಪ್ರಾಂತ್ಯಕ್ಕೆ ಸೇರಿತ್ತು, ಈ ಜಾಗೀರುದಾರರೆಲ್ಲ ಅಲ್ಲಿ ಅಪರಿಚಿತರಾಗಿದ್ದರು. ಬ್ರಿಟೀಷರ ಆಕಸ್ಮಿಕ ಮಧ್ಯಪ್ರವೇಶದಿಂದ ಅವರ ಜಾಗೀರು ಉಳಿದಿತ್ತು. ಬಳ್ಳಾರಿಯ ಗೋರಪರಿ (ಘೋರ್ಪಡೆ?) ಕುಟುಂಬದ ಸುಂದರ್ ಜಾಗೀರದಾರ ಮರಾಠ ಮುಖ್ಯಸ್ಥರೆಲ್ಲೆಲ್ಲಾ ಪ್ರಮುಖವಾಗಿದ್ದವರು. ಹರಪನಹಳ್ಳಿ ಮತ್ತು ಬಳ್ಳಾರಿ ನಡುವಿರುವ ತಮ್ಮ ಜಾಗೀರಿನಲ್ಲಿ ವಾಸಿಸುತ್ತಿರುವ ಅವರಲ್ಲಿ ಪೂನಾದಿಂದ ಬೇರಾಗಿರುವುದಕ್ಕೆ ಸಂತಸವೇ ಇದೆ.” (50)

1818ರಲ್ಲಿ ಮನ್ರೋ ಎಲ್ಫಿನ್ ಸ್ಟೋನಿಗೆ ಬರೆದ ಮತ್ತೊಂದು ಪತ್ರದಲ್ಲಿ: “ಪೇಶ್ವೆಗಳನ್ನು ಹಿಂಬಾಲಿಸುವ, ಗೌರವಿಸುವ ಮತ್ತು ಸೇವೆ ಸಲ್ಲಿಸುವ ಮನಸ್ಥಿತಿಯನ್ನು ಬದಲಿಸಲು ಮಾಡಬೇಕಾದ ಮೊದಲ ಕೆಲಸವೆಂದರೆ ಪೇಶ್ವೆಗಳ ಅಧಿಕಾರವನ್ನು ಬ್ರಿಟೀಷರು ವಶಪಡಿಸಿಕೊಳ್ಳುವುದು. ನನ್ನ ನಂಬಿಕೆಯ ಪ್ರಕಾರ ಈ ಕಾರ್ಯಗಳನ್ನು ಜಾಗೀರುದಾರರಲ್ಲಿರುವ ದೊರೆಗಳ ಚಿತ್ರಣವನ್ನು ಬದಲಿಸುತ್ತದೆ. ಮತ್ತು ಬ್ರಿಟೀಷ್ ಸರಕಾರದ ಕರೆಯ ಮೇರೆಗೆ ತಮ್ಮ ಸೈನ್ಯವನ್ನು ಕಳುಹಿಸಿಕೊಡಲು ತಯಾರಿರುತ್ತಾರೆ.” (51)

ಇವೆಲ್ಲವೂ ಸೈನ್ಯ ಶಕ್ತಿಯ ಮೈತ್ರಿಗೆ ತೆಗೆದುಕೊಂಡ ನಿರ್ಣಯಗಳು. ಈ ಸಂಬಂಧದಿಂದ ಜಾಗೀರುದಾರರೊಡನೆ ರಾಜಕೀಯ ಮತ್ತು ಆರ್ಥಿಕ ನೀತಿಗಳ ಕುರಿತೂ ಒಪ್ಪಂದಗಳಾಯಿತು.

ಬರ್ಟನ್ ಸ್ಟೈನನ ಮಾತುಗಳನ್ನು ಉಲ್ಲೇಖಿಸುವುದಾದರೆ: “ಆಗಸ್ಟ್ 28, 1818ರಲ್ಲಿ ಮನ್ರೋ ಎಲ್ಫಿನ್ ಸ್ಟೋನನಿಗೆ ಧಾರವಾಡ – ಬೆಳಗಾವಿ ಪ್ರದೇಶದ ರಾಜಕೀಯ ಪರಿಸ್ಥಿತಿಯ ಬಗ್ಗೆ ನಂಬಿಕೆಯ ಮಾತುಗಳನ್ನೇಳುತ್ತಿದ್ದ. ಅಲ್ಲಿನ ಪರಿಸ್ಥಿತಿ ಹತೋಟಿಯಲ್ಲಿದೆ ಮತ್ತೀ ಪರಿಸ್ಥಿತಿ ಮುಂದುವರಿಯಲು ಪ್ರಮುಖ ಜಾಗೀರುದಾರರಿಗೆ (ಗೋಖಲೆಯನ್ನು ಹೊರತುಪಡಿಸಿ; ಗೋಖಲೆಯ ಭೂಮಿಯನ್ನು ವಶಪಡಿಸಿಕೊಳ್ಳಲಾಗಿತ್ತು) ಮತ್ತು ಹಲವು ಸಣ್ಣಮಟ್ಟದ ಮುಖ್ಯಸ್ಥರಿಗೆ ಮನ್ರೋ ಕೊಟ್ಟ ಮಾತನ್ನು ಉಳಿಸಿಕೊಳ್ಳುವುದು ಅಗತ್ಯ ಮತ್ತು ದೊಡ್ಡ ಮಟ್ಟದ ಬದಲಾವಣೆಗಳನ್ನು ಪರಿಚಯಿಸಬಾರದು……ಅವರಿಗೆಲ್ಲ ಸೈನ್ಯವನ್ನಿಟ್ಟುಕೊಳ್ಳುವ ಅವಕಾಶವಿರಬೇಕು – ಮುಂಚೆ ಅವರ ಬಳಿ ಇದ್ದ ಸೈನ್ಯದ ಕಾಲುಭಾಗದಷ್ಟು ಮಾತ್ರ. ಇದು ಅವರ ಮಿಲಿಟರಿ ಶಕ್ತಿಯನ್ನು ಕುಂಠಿತಗೊಳಿಸುತ್ತದೆ.

ಧಾರವಾಡ – ಬೆಳಗಾವಿಯ ರಾಜಕೀಯ ಬುನಾದಿ ತಾನು ಹಾಕಿದ ರೀತಿಯಲ್ಲೇ ಉಳಿಯಬೇಕೆಂದು ಬಯಸಿದ ಮನ್ರೋ ಆ ಬುನಾದಿಯನ್ನು ಶಿಥಿಲವಾಗಿಸಬಹುದಾದ ಯಾವುದೇ ಬದಲಾವಣೆಯನ್ನು ಮಾಡದಿರುವಂತೆ ಎಲ್ಫಿನ್ ಸ್ಟೋನರಿಗೆ ಶಿಫಾರಸು ಮಾಡಿದ. ಈ ಶಿಫಾರಸುಗಳಿಗೆ ಎಲ್ಫಿನ್ ಸ್ಟೋನರ ಸಮ್ಮತಿಯಿತ್ತು….

ಜಿಲ್ಲೆ ಮತ್ತು ಹಳ್ಳಿಯ ಮುಖ್ಯಸ್ಥರು, ಲೆಕ್ಕಪತ್ರ ನೋಡುವವರು ಗಣನೀಯ ಪ್ರಮಾಣದ ಇನಾಂ ಹೊಂದಿದ್ದರು! ಇವುಗಳ ಗೋಜಿಗೆ ಹೋಗಬಾರದು; ಯಾಕೆಂದರೆ ಅವರೆಲ್ಲರೂ ಗೌರವಾನ್ವಿತ ಭೂಮಾಲೀಕರು ಮತ್ತು ಸಮಾಜದ ಮೇಲ್ವರ್ಗದವರು. ಬ್ರಿಟೀಷರು ಅವಲಂಬಿಸಬೇಕಾದ ಜಿಲ್ಲೆ ಮತ್ತು ಹಳ್ಳಿಯ ಅಧಿಕಾರಿಗಳ ಅಧಿಕಾರದ ರಕ್ಷಣೆ ಇದರಿಂದ ಸಾಧ್ಯವಾಗುತ್ತದೆ. ಮರಾಠ ಪ್ರಾಂತ್ಯಗಳಲ್ಲಿದ್ದ ಇನಾಂ ಭೂಮಿಯ ಬಗ್ಗೆ ಸುಮ್ಮನಿದ್ದುಬಿಡಬೇಕು ಎನ್ನುವುದು ಮನ್ರೋನ ಶಿಫಾರಸ್ಸಾಗಿತ್ತು.

ವಹಿವಾಟಿಗೆ ಅಡ್ಡಿಯಾಗಿರುವ ಜಾಗೀರುದಾರರ ಹಣ ವಸೂಲಾತಿ, ವ್ಯವಹಾರ ತೆರಿಗೆ ಪದ್ಧತಿಯನ್ನು ರದ್ದು ಪಡಿಸಬೇಕು ಮತ್ತು ‘ತಮ್ಮ ಹಕ್ಕನ್ನು ತ್ಯಾಗ ಮಾಡಿದ’ ಜಾಗೀರುದಾರರಿಗೆ ಸೂಕ್ತ ಪರಿಹಾರ ನೀಡಬೇಕು.” (52)

ಆದಾಯ ತೆರಿಗೆ ನೀತಿಗಳನ್ನು ರೂಪಿಸುವುದರ ಹೊಣೆ ಹೊತ್ತ ಎಲ್ಫಿನ್ ಸ್ಟೋನ್ ಮನ್ರೋನ ಸಲಹೆಗಳನ್ನು ಗಂಭೀರವಾಗಿ ಪರಿಗಣಿಸಿದ. ಅವನ ಸಲಹೆಗಳಿಗಿಂತ ಒಂದಡಿ ಹೆಚ್ಚೇ ಇಟ್ಟ.

ಜಾರ್ಜ್ ಫಾರೆಸ್ಟ್ ಬರೆಯುತ್ತಾರೆ: “ವಂಶಪಾರಂಪರ್ಯ ಹಕ್ಕುಗಳ ಬಗ್ಗೆ ಎಲ್ಫಿನ್ ಸ್ಟೋನ್ ಗೆ ಗೌರವವಿತ್ತು; ಮಾಲೀಕರಿಗೆ ಅವರವರ ಜಾಗೀರು ಭೂಮಿ ಹಿಂದಿರುಗಿಸುವುದರ ಜೊತೆಗೆ ಬಾಡಿಗೆ ರಹಿತ ಭೂಮಿ, ಪಿಂಚಣಿ, ಧಾರ್ಮಿಕ ಸವಲತ್ತುಗಳನ್ನು ಮತ್ತೆ ಕೊಡಲಾಯಿತು. ‘ಧಾರ್ಮಿಕ ಸವಲತ್ತುಗಳನ್ನು ಉಳಿಸುವುದು ಆಕ್ರಮಿಸಿದ ದೇಶದಲ್ಲಿ ಅವಶ್ಯಕ. ದೀರ್ಘಕಾಲದಿಂದ ಅಧಿಕಾರದಲ್ಲಿ ಬ್ರಾಹ್ಮಣರು ಇದ್ದಿದ್ದರಿಂದ ಇದು ಅತ್ಯಗತ್ಯ (ಪೇಶ್ವೆಗಳು ಬ್ರಾಹ್ಮಣರು). ಪೇಶ್ವೆಗಳ ದಾನ ಮತ್ತವರ ಧಾರ್ಮಿಕ ವೆಚ್ಚಗಳು ಹತ್ತಿರತ್ತಿರ ಹದಿನೈದು ಲಕ್ಷಗಳಷ್ಟಿತ್ತು. ಇದನ್ನು ಮುಂದುವರೆಸುವುದು ಮೂರ್ಖತನದಂತೆ ಕಂಡರೂ, ಈ ವೆಚ್ಚಗಳನ್ನು ಅನಿವಾರ್ಯವೆಂದು ಪರಿಗಣಿಸಬೇಕು….” (53) ಬ್ರಿಟೀಷರ ಆಳ್ವಿಕೆ ಬ್ರಾಹ್ಮಣರ ಪ್ರಾಬಲ್ಯವನ್ನು ಮುರಿಯಿತು ಎಂದೇಳುವವರಿಗೆ ಇಷ್ಟು ವಿವರಣೆ ಸಾಕೇನೋ?! ಅಸಲಿಗೆ ನಡೆದಿದ್ದು ತದ್ವಿರುದ್ದ. ಕರ್ನಾಟಕದಲ್ಲಿ ಬ್ರಾಹ್ಮಣರ ಪ್ರಾಬಲ್ಯದಲ್ಲಿ ಇತಿಹಾಸದ ಚಲನೆ ಬಿರುಕು ಮೂಡಿಸಲಾರಂಭಿಸಿದಾಗ ಕಾಪಾಡಿ ಮರುಸ್ಥಾಪಿತವಾಗುವಂತೆ ಮಾಡಿದ್ದೇ ವಸಾಹತುಶಾಹಿ.

ಫಾರೆಸ್ಟ್ ಮುಂದುವರೆಸುತ್ತ: “ಹಳ್ಳಿಯ ಅಧಿಕಾರಿಗಳ ಪ್ರಭಾವವನ್ನು ಎಲ್ಫಿನ್ ಸ್ಟೋನ್ ಉಳಿಸಿದ….. ನ್ಯಾಯಪಾಲನೆಯಂತಹ ಪ್ರಮುಖವಾದ ಸಂಗತಿಗಳಲ್ಲಿ ಆಂಗ್ಲರನ್ನು ಅಥವಾ ಬ್ರಿಟೀಷ್ ಮಾದರಿಯನ್ನು ಶೀಘ್ರವಾಗಿ ಪರಿಚಯಿಸಲು ಎಲ್ಫಿನ್ ಸ್ಟೋನ್ ಹಿಂಜರಿದ….. ಹಳ್ಳಿಗಳಲ್ಲಿ ಪಟೇಲರು ಅಥವಾ ಮುಖ್ಯಸ್ಥರು, ಪಟ್ಟಣಗಳಲ್ಲಿ ವ್ಯಾಪಾರಿ ಸಮೂಹದ ಮುಖಂಡರಿಗೆ ಪಂಚಾಯತಿ ಕರೆಯುವ ಅಧಿಕಾರವಿರಬೇಕೆಂದು ಪ್ರಸ್ತಾಪಿಸಿದ.” (54)

ಈ ನೀತಿಗಳಿಂದ ಸಿಕ್ಕ ಫಲಿತಾಂಶವನ್ನು ಗಮನಿಸೋಣ. 1819ರಲ್ಲಿ ಜೆ. ಮೆಕ್ ಲಾಯ್ಡ್ ವಿವಿಧ ತೆರಿಗೆ ರಹಿತ ಭೂಮಿ ಮತ್ತದನ್ನನುಭವಿಸಿದ ಭೂಮಾಲೀಕರ ವಿವರಗಳನ್ನು ದಾಖಲಿಸಿದ. ಫಾರೆಸ್ಟ್ ಈ ದಾಖಲೆಗಳನ್ನು ಉಲ್ಲೇಖಿಸುತ್ತಾನೆ: (55)

ಬಾಂಬೆ ಕರ್ನಾಟಕದ ತೆರಿಗೆ ರಹಿತ ಭೂಮಿಗಳು


ಈ ಮೊತ್ತ ಕಡಿಮೆಯದ್ದೇನಲ್ಲ. ಫ್ಯೂಡಲಿಸಂ ಬ್ರಿಟೀಷರ ಮೇಲಿಟ್ಟಿದ್ದ ನಂಬಿಕೆಯನ್ನು ಇದು ತಿಳಿಸುತ್ತದೆ. ದೊಡ್ಡ ರಿಯಾಯತಿಗಳು ಇನಾಮಿನ ಮೂಲಕ ಮತ್ತು ಜಮೀನುದಾರರ ಭೂಮಿ ಹಾಗೂ ಕಟ್ಟಡಗಳಿಗೆ ಸಿಕ್ಕಿತ್ತು. ಇವುಗಳಿಗೆ ನೀಡಿದ ತೆರಿಗೆ ವಿನಾಯಿತಿಯ ಒಟ್ಟು ಮೊತ್ತ 4,10,451 ರುಪಾಯಿಗಳಷ್ಟಿತ್ತು. ಇದು ಆಗ ತೆರಿಗೆ ವಿನಾಯಿತಿ ಪಡೆದಿದ್ದ ಭೂಮಿಯ 54 ಶೇಕಡಾ ಆಗಿತ್ತು. ಇದರ ಜೊತೆಗೆ ಧಾರ್ಮಿಕ ಕೇಂದ್ರಗಳಾದ ದೇಗುಲಗಳಿಗೆ ಕೊಟ್ಟ ಭೂಮಿಯೂ ಸೇರಿತ್ತು. ಈ ಪ್ರತಿಷ್ಟಿತ ಭೂ ಮಾಲೀಕರು ಮತ್ತು ಧಾರ್ಮಿಕ ಮುಖಂಡರು ಬಹಳಷ್ಟು ಬಾರಿ ಒಂದಾಗಿರುತ್ತಿದ್ದರು – ತಮಗೆ ಸಿಕ್ಕ ಸೌಕರ್ಯಗಳನ್ನು ವಿರಾಮದಿಂದ ಅನುಭವಿಸುತ್ತ. 

1857ರಲ್ಲಿ ಕೆಲವು ಭೂಮಾಲೀಕರು ಬ್ರಿಟೀಷರ ವಿರುದ್ಧ ದಂಗೆಯೆದ್ದಾಗ ಅವರ ಬಳಿ ಇದ್ದ ಇನಾಂ ಭೂಮಿಯನ್ನು ಕಸಿದುಕೊಳ್ಳಲಾಯಿತು. 

ಈ ಪಟ್ಟಿಯನ್ನು ಕೃಷ್ಣರಾವ್ ಮತ್ತು ಹಾಲಪ್ಪ ನಮಗೆ ಒದಗಿಸುತ್ತಾರೆ. ಈ ಸಂಕ್ಷಿಪ್ತ ಪಟ್ಟಿ ಇನಾಂ ಭೂಮಿ ಹೇಗೆ ವಸಾಹತುಶಾಹಿಗಳ ಜೊತೆಗೆ ಹೊಂದಿಕೊಂಡಿದ್ದವರಿಗೆ ಲಭಿಸಿತ್ತು ಎನ್ನುವುದನ್ನು ತಿಳಿಸುತ್ತದೆ. 

ಬಾಂಬೆ ಕರ್ನಾಟಕ ಭಾಗದಲ್ಲಿ ಇನಾಂ ಪಡೆದಿದ್ದವರ ವಿವರ

ಊಳಿಗಮಾನ್ಯತೆಯ ಬುನಾದಿಗಳು ವಸಾಹತುಶಾಹಿಯೊಂದಿಗೆ ಎಷ್ಟು ಸಶಕ್ತವಾಗಿ ಸೇರಿಹೋಗಿತ್ತೆನ್ನುವುದಕ್ಕೆ “ಧಾರವಾಡದಲ್ಲಿರುವ ಹಳ್ಳಿಗಳಲ್ಲಿ 30% ಇನಾಂ ಹಳ್ಳಿಗಳು” ಎಂಬ ಫುಕಝೂವನ ಹೇಳಿಕೆಯೊಂದೇ ಸಾಕು. ಪೇಶ್ವೆಗಳ ಆಳ್ವಿಕೆಯಲ್ಲಿ ಚದುರಿ ಹೋದ ಪಟವರ್ಧನ ಬ್ರಾಹ್ಮಣರು ಬ್ರಿಟೀಷರ ಕೃಪೆಗೆ ಪಾತ್ರರಾದರು ಎಂದು ಎರಿಕ್ ಸ್ಟೋಕ್ಸ್ ನಿಂದ ಕಲಿಯಬಹುದು. ಬೆಳಗಾವಿ ಜಿಲ್ಲೆಯೊಂದರಲ್ಲೇ ಚಿಂಚೋಳಿ, ನಿಪ್ಪಾಣಿ, ಮೀರಜ್, ತಸ್ ಗಾಂವ್ ಮತ್ತು ಕಾಗೇವಾಡಗಳನ್ನು ಪುಣೆಯ ಒಳಸಂಚಿನಲ್ಲಿ ಭಾಗಿಯಾಗಿದ್ದವರಿಗೆ ಉಡುಗೊರೆಯಾಗಿ ನೀಡಲಾಯಿತು.

ಬೆಳಗಾವಿ ಜಿಲ್ಲೆಯ ಶಿರಸಂಗಿ ದೇಶಗತಿಯರ ಬಗ್ಗೆ ಅಧ್ಯಯನ ನಡೆಸಿದ ವಿರೂಪಾಕ್ಷ ಬಡಿಗೇರ ಕರ್ನಾಟಕದ ಈ ಭಾಗದಲ್ಲಿ ಊಳಿಗಮಾನ್ಯ ಸಂತತಿ ಸಮೃದ್ಧಿಯಾಗಿ ಹರಡಿಕೊಂಡಿದ್ದರ ಬಗ್ಗೆ ತಿಳಿಸುತ್ತಾರೆ. 1922ರಲ್ಲಿ ಬೆಳಗಾವಿಯೊಂದರಲ್ಲೇ ಇನಾಮಿನ ಮೇಲಿದ್ದ 122 ದೇಶಗತಿ ಕುಟುಂಬಗಳಿದ್ದವು ಎಂದು ಬರೆಯುತ್ತಾನೆ. (58)

ಹೈದರಾಬಾದ್ – ಕರ್ನಾಟಕ ಭಾಗದಲ್ಲಿ ಈ ವ್ಯವಸ್ಥೆಯನ್ನು ಗೌರವಾದರದೊಂದಿಗೆ ರಕ್ಷಿಸಲಾಗಿತ್ತು. ಇಡೀ ಪ್ರಾಂತ್ಯವನ್ನು ನಿಯಂತ್ರಿಸುತ್ತಿದ್ದ ಇನಾಂದಾರರು ಮತ್ತು ಜಾಗೀರುದಾರರು ನಿಜಾಮರಿಗೆ ತೆರಿಗೆ ಸಂಗ್ರಹಿಸಿ ಕೊಡುತ್ತಿದ್ದರು ಮತ್ತು ಬ್ರಿಟೀಷರಿಗೆ ನಿಜಾಮರು ತಲೆತಗ್ಗಿಸಿ ಶರಣಾದ ನಂತರ ಫ್ಯೂಡಲ್ ವ್ಯವಸ್ಥೆ ವಸಾಹತುಶಾಹಿಯನ್ನು ಲಗ್ನವಾಯಿತು.

ಕೊಡಗಿನಲ್ಲಿ ಬ್ರಿಟೀಷರು ಫ್ಯೂಡಲ್ ಕೊಡವ ಕುಟುಂಬಗಳಿಂದ ಅಪ್ಪರಂದ್ರ, ಚೆಪ್ಪುದಿರ ಮತ್ತು ಬಿಡ್ಡಂದ್ರದವರೊಡನೆ ಸಖ್ಯ ಬೆಳೆಸಿದರು. ಜೊತೆಗೆ ಬಿಟ್ಟಿಯಂದ್ರ, ಮಡಂದ್ರ, ಕೊಲೊವಂಡ್ರ, ಕುಟ್ಟೆತೀರ ಮತ್ತು ಮನಬಂಡ ಕುಟುಂಬಗಳೊಡನೆ ಒಪ್ಪಂದ ಮಾಡಿಕೊಂಡರು. (59) ಈ ಕುಟುಂಬಗಳು ನಂತರದ ದಿನಗಳಲ್ಲಿ “ನೂರಾರು ಎಕರೆ ಕಾಫಿ ಎಸ್ಟೇಟ್ ಮತ್ತು ಹಸಿ ಭೂಮಿಯ ಒಡೆಯರಾದರು ಹಾಗೂ ಸಾರ್ವಜನಿಕ ಜೀವನದಲ್ಲಿ ದೊಡ್ಡ ಮಟ್ಟದ ಪ್ರಭಾವ ಬೀರಲು ಶಕ್ತರಾದರು.”(60)

ಬ್ರಿಟೀಷ್ ವಸಾಹತುಶಾಹಿ ಭಾರತದ ಊಳಿಗಮಾನ್ಯ ಪದ್ಧತಿಯನ್ನು ಮುರಿದು ಹಾಕಿ ಬಂಡವಾಳಶಾಹಿತನ ಅಡೆತಡೆಯಿಲ್ಲದೆ ಬೆಳೆಯಿತೆಂಬ ಭಾವನೆ ನವ ಭಾರತದ ಲಿಬರಲ್ ಇತಿಹಾಸಕಾರರು ಮತ್ತು ರಿವಿಷನಿಷ್ಟ್ (revisionist) ಇತಿಹಾಸಕಾರರಲ್ಲನೇಕರಿಗಿದೆ. (ರಿವಿಷನಿಷ್ಟ್: ದಾಖಲೆಗಳನ್ನು ಓದಿ ಇತಿಹಾಸ ರಚಿಸುವವರು). ವಸಾಹತುಶಾಹಿಯ ಇತಿಹಾಸದ ಬಗೆಗಿನ ಈ ತಪ್ಪು ತಿಳುವಳಿಕೆಯನ್ನು ಹೋಗಲಾಡಿಸುವ ಸಲುವಾಗಿ ವಸಾಹತುಶಾಹಿಗಳ ಬಾಯಿಂದಲೇ ಉದುರಿಬಿದ್ದ ಅಕ್ಷರಗಳನ್ನು ಅಪಾರ ಶ್ರಮದಿಂದ ಸಂಗ್ರಹಿಸಿ ಉಲ್ಲೇಖಿಸಿದ್ದೇವೆ. ಬ್ರಿಟೀಷರು ಭೂಮಾಲೀಕ ವರ್ಗದೊಂದಿಗೆ ಮೃದುತ್ವದಿಂದ ವರ್ತಿಸಿದರು. ಫ್ಯೂಡಲ್ ದೊರೆಗಳು ಸಬಲರಾಗುವಂತೆ ನೋಡಿಕೊಂಡರು. ಮುಂದಿನ ದಿನಗಳಲ್ಲಿ ಈ ಸಬಲ ಬುನಾದಿಯ ನೆರವಿನಿಂದಲೇ ವಸಾಹತುಶಾಹಿ ವ್ಯಾಪ್ತಿ ಹಿಗ್ಗಿಸಿಕೊಂಡಿತು. ಈ ಬುನಾದಿ ಇರದಿದ್ದರೆ ಕೊಳ್ಳೆ ಹೊಡೆಯುವುದು ಸಾಧ್ಯವಿರಲಿಲ್ಲ ಎಂಬಂಶವನ್ನು ಹೇಳುವ ಅವಶ್ಯಕತೆ ಇಲ್ಲವೇನೋ.

ಊಳಿಗಮಾನ್ಯ ಪದ್ಧತಿ ವಸಾಹತುಶಾಹಿ ಮೇಲುಗೈ ಪಡೆಯಲಿಕ್ಕಿದ್ದ ಸಾಮಾಜಿಕ ಆಧಾರವಾಗಿತ್ತು. ಹಳೆಯ ಸಾಮಾಜಿಕ ರಚನೆಯಲ್ಲಿದ್ದ ಆಳುವ ವರ್ಗದೊಂದಿಗೆ ಮೈತ್ರಿ ಮಾಡಿಕೊಂಡ ವಸಾಹತುಶಾಹಿಗಳು ಬಂಡವಾಳಶಾಹಿತನದ ಪುರಾತನ ರೂಪದಲ್ಲಿದ್ದ ದಬ್ಬಾಳಿಕೆ ಮತ್ತು ಶೋಷಣೆಯನ್ನು ಮುಂದುವರಿಸಲು ನಿರ್ಧರಿಸಿದರು. ಈ ಸಾರ್ವತ್ರಿಕ ಇತಿಹಾಸಕ್ಕೆ ಕರ್ನಾಟಕವೂ ಹೊರತಾಗಿರಲಿಲ್ಲ. (61)

ಫೆಬ್ರ 24, 2016

ಪೆಟ್ರೋಲ್ ಬೆಲೆ ಎಷ್ಟಿರಬೇಕಿತ್ತು? ಎಷ್ಟಿದೆ ಗೊತ್ತಾ?

ಇಂಧನ ಖಾತೆ ಸಚಿವರಾದ ಧರ್ಮೇಂದ್ರ ಪ್ರಧಾನ್ ರವರು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗೆ ಸಂಬಂಧಪಟ್ಟ ಪ್ರಶ್ನೆಗೆ ರಾಜ್ಯಸಭೆಯಲ್ಲಿ ಉತ್ತರ ಕೊಟ್ಟಿದ್ದಾರೆ. ಈ ಉತ್ತರದ ಆಧಾರದಲ್ಲೇ ನೋಡುವುದಾದರೆ ನಮಗಿವತ್ತು ಪೆಟ್ರೋಲ್ ಮತ್ತು ಡೀಸೆಲ್ ಐವತ್ತು ರುಪಾಯಿಗೆ ಮತ್ತು ಮೂವತ್ತೈದು ರುಪಾಯಿಗೆ ಸಿಗಬೇಕಿತ್ತು. ಹೇಗಂತೀರಾ?
2014ರ ಮೇ ತಿಂಗಳಿನಲ್ಲಿ (ಅಂದರೆ ಅಚ್ಛೇ ದಿನ್ ಸರಕಾರ ಶುಭಾರಂಭ ಮಾಡಿದ ತಿಂಗಳು) ಭಾರತ ಒಂದು ಬ್ಯಾರೆಲ್ ಸಂಸ್ಕರಿಸದ ತೈಲಕ್ಕೆ 106.85 ಡಾಲರ್ ಕೊಡುತ್ತಿತ್ತು. ಈ ತಿಂಗಳು, ಅಂದರೆ ಫೆಬ್ರವರಿ 2016 ರಲ್ಲಿ ಈ ಬೆಲೆ 29.80 ಡಾಲರ್ರಿನಷ್ಟಿದೆ. ಅಲ್ಲಿಗೆ ಹೆಚ್ಚು ಕಡಿಮೆ 66% ಕಡಿಮೆಯಾಗಿದೆ. ಅದೇ ಮೇ 2014ರಲ್ಲಿ ಪೆಟ್ರೋಲಿನ ಬೆಲೆ 71.41 ರುಪಾಯಿ ಇದ್ದಿದ್ದು ಈಗ 59.95 ರುಪಾಯಿಯಾಗಿದೆ. ಡೀಸೆಲ್ಲಿನ ಬೆಲೆ 2014ರಲ್ಲಿ 55.49 ರುಪಾಯಿಯಷ್ಟಿದ್ದರೆ ಈಗ 44.68 ರುಪಾಯಿ (ಬೆಲೆಗಳು- ದೆಹಲಿಯದ್ದು, ಕರ್ನಾಟಕದಲ್ಲಿ ಇನ್ನೂ ಜಾಸ್ತಿ).
ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲದ ಬೆಲೆ 66 % ಕಡಿಮೆಯಾಗಿದ್ದರೆ ಪೆಟ್ರೋಲ್ ಮತ್ತು ಡೀಸೆಲ್ಲಿನ ಬೆಲೆಯಲ್ಲಿ ಕೇವಲ 16 % ಕಡಿಮೆಯಾಗಿದೆ. ಕಾರಣ?
ಕಾರಣ, ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆಯನ್ನು ಯದ್ವಾತದ್ವಾ ಏರಿಸಿರುವ ಕೇಂದ್ರ ಸರಕಾರ ಅಂತರಾಷ್ಟ್ರೀಯ ಮಾರುಕಟ್ಟೆಯ ಏರಿಳಿತಕ್ಕೆ ಅನುಗುಣವಾಗಿ ತೈಲ ಬೆಲೆ ಇಳಿಯದ ಹಾಗೆ ನೋಡಿಕೊಂಡುಬಿಟ್ಟಿದೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಮಾರುಕಟ್ಟೆಯಾಧಾರಿತವಾಗಿರುವಂತೆ ಮಾಡಿದ್ದು ಬೆಲೆ ಏರಿಸುವುದಕ್ಕಷ್ಟೇ ಸೀಮಿತವಾಗಿ ಬೆಲೆ ಇಳಿಸಲು ಉಪಯುಕ್ತವಾಗಿಲ್ಲ. ಬೆಲೆ ಇಳಿಯುವ ಸಂದರ್ಭ ಬಂದಾಗೆಲ್ಲ ತೆರಿಗೆಯನ್ನು ಹೆಚ್ಚಿಸಲಾಗಿದೆ. ಮುಂದೆ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಏರಿದಾಗ ತೆರಿಗೆಯನ್ನು ಇಳಿಸಿ ಬೆಲೆ ಏರದಂತೆ ನೋಡಿಕೊಳ್ಳುತ್ತಾರಾ? ಮೇ 2014ರಿಂದ ಇಲ್ಲಿಯವರೆಗೆ ಕೇಂದ್ರ ಸರಕಾರ ಪೆಟ್ರೋಲಿನ ಮೇಲಿನ ತೆರಿಗೆಯನ್ನು ಹನ್ನೆರಡು ರುಪಾಯಿಯಷ್ಟು ಏರಿಸಿದ್ದರೆ ಡೀಸೆಲ್ಲಿನ ಮೇಲಿನ ತೆರಿಗೆಯನ್ನು ಹತ್ತು ರುಪಾಯಿಯಷ್ಟು ಏರಿಸಿದೆ. ರುಪಾಯಿ ಮೌಲ್ಯದಲ್ಲಿ ಸ್ವಲ್ಪ ಕುಸಿತವಿರುವುದು ಹೌದಾದರೂ ತೆರಿಗೆಯನ್ನು ಯದ್ವಾ ತದ್ವ ಏರಿಸದಿದ್ದಲ್ಲಿ ಜೇಬು ಒಂದಷ್ಟು ಭಾರವಾಗುತ್ತಿತ್ತೇನೋ?!
Correction: In the picture showing the details the rupee value has been interchanged. In May 2014 one dollar equated to 59 dollars and in Feb 2016 it is 68. Thanks Anant Rao for correcting the mistake.

ಪಿ.ಸಾಯಿನಾಥ್: ಗಾಂಧಿಯನ್ನು ಕೊಂದವರು ನಮ್ಮನ್ನು ದೇಶದ್ರೋಹಿಗಳು ಎನ್ನುತ್ತಿದ್ದಾರೆ!

ದಿನಾಂಕ 19-02-2016ರಂದು ಜೆ.ಎನ್.ಯುನಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಪಿ. ಸಾಯಿನಾಥ್ ಮಾತನಾಡಿದ್ದರು. ಅದರ ಕನ್ನಡ ಭಾವಾನುವಾದಾದ ಎರಡನೆಯ ಭಾಗ ಇವತ್ತಿನ ಹಿಂಗ್ಯಾಕೆಯಲ್ಲಿ.
ಮೂಲ ಭಾಷಣ-ಪಿ.ಸಾಯಿನಾಥ್
ಅನುವಾದ-ಕಿರಣ್. ಎಂ . ಗಾಜನೂರು

ನಮ್ಮ ನಡುವಿನ ಮೂಲಭೂತವಾದ ಬಹುತ್ವಕ್ಕೆ/ವಿವಿಧತೆಗೆ ಹೆದರುತ್ತದೆ. ಆ ಕಾರಣಕ್ಕೆ ಅದು ಯಾವಾಗಲೂ ಬಹುತ್ವವನ್ನು ಹತ್ತಿಕ್ಕಲು ಯತ್ನಿಸುತ್ತಿರುತ್ತದೆ. ಇಂದು ಅವನು ನಿನ್ನ ಉದ್ಯೋಗ ಕಿತ್ತುಕೊಂಡ, ಇವಳು ನಿನ್ನ ಉದ್ಯೋಗ ಕಿತ್ತುಕೊಂಡಳು, ನೀನು ಎಲ್ಲೋ ಇರಬೇಕಿತ್ತು ಇಂತವರ ಕಾರಣಕ್ಕೆ ಹೀಗೆ ಇಲ್ಲಿ ನಿಂತಿದ್ದೀಯ ಎಂಬ ಮೋಸದ ಮಾತಿನ ನೆಲೆಯಲ್ಲಿ ದೊಡ್ಡ ಸಂಖ್ಯೆಯ ಯುವಕರನ್ನು ಒಂದುಗೂಡಿಸಲು ಅಸಮಾನತೆಯನ್ನು ಬಳಸಿಕೊಳ್ಳುವ ಹಂತಕ್ಕೆ ಕೆಲವು ಜನ ಬಂದಿದ್ದಾರೆ. ಆದರೆ ವಾಸ್ತವ ಎಂದರೆ ಇಂದು ಉದ್ಯೋಗಗಳೇ ಇಲ್ಲ! ಅಧಿಕಾರಕ್ಕೆ ಬಂದ ಜನರು ಈ ದೇಶದ ಲಕ್ಷಾಂತರ ಜನರನ್ನು ಸ್ಥಳಾಂತರಿಸಿದ್ದಾರೆ, ಸಾವಿರಾರು ಜನರು ತಮ್ಮ ಮೂಲ ನೆಲೆ ಕಳೆದುಕೊಳ್ಳುವಂತೆ ಮಾಡಿದ್ದಾರೆ. ಆದರೆ ಒಂದೇ ಒಂದು ಉದ್ಯೋಗವನ್ನು ಸೃಷ್ಟಿಸಿಲ್ಲ. ಸೃಷ್ಟಿಸಿದ್ದರೆ ಅದು ನಮ್ಮ ನಿಮ್ಮ ಮನೆಗಳಲ್ಲಿ ಕೆಲಸ ಮಾಡುವ ಕೂಲಿಗಳನ್ನು ಸೃಷ್ಟಿಸಿದ್ದಾರೆಯೇ ಹೊರತು ಉದ್ಯೋಗಗಳನ್ನಲ್ಲ. . ..
ಮೊದಲ ಭಾಗವನ್ನೋದಲು ಇಲ್ಲಿ ಕ್ಲಿಕ್ಕಿಸಿ
ಒಂದು ಕಾಲದಲ್ಲಿ ಮುಂಬೈ ನಗರದ ಗಿರಣಿಗಳಲ್ಲಿ ಈ ದೇಶದ ಎಲ್ಲಾ ಭಾಗಗಳಿಂದ ಬಂದ ಜಾತ್ಯತೀತ ತತ್ವವನ್ನು ಬೆಂಬಲಿಸುವ ಬಹಳ ದೊಡ್ಡ ಕಾರ್ಮಿಕರ ವರ್ಗ ದುಡಿಯುತ್ತಿತ್ತು. ಆದರೆ ಇಂದು ಆ ಗಿರಣಿಗಳೇ ನಾಪತ್ತೆಯಾಗಿವೆ. ಆ ಜಾಗವೆಲ್ಲಾ ಇಂದು ರಿಯಲ್ ಎಸ್ಟೇಟ್ ಉದ್ಯಮಿಗಳ ಕೈ ಸೇರಿದೆ. ಅಲ್ಲಿರುವ ದೊಡ್ಡ ಸಂಖ್ಯೆಯ ರಿಯಲ್ ಎಸ್ಟೇಟ್ ಉದ್ಯಮಿ ಕಂಪೆನಿಯ ಹೆಸರು “ಪ್ಲಾನೇಟ್ ಗೋದ್ರೇಜ್” (ವಿಭಿನ್ನವಾದ ಗ್ರಹ). ಒಂದು ಅರ್ಥದಲ್ಲಿ ಅದು ನಿಜಕ್ಕೂ ಒಂದು ವಿಭಿನ್ನವಾದ ಗ್ರಹವೇ. . 

ಇಂದು ಮುಂಬಯಿಯ ಸ್ಮಾರಕವನ್ನು ಗೇಟ್ ವೇ ಆಫ್ ಇಂಡಿಯಾ ಬದಲಾಗಿ ಮುಖೇಶ್ ಅಂಬಾನಿಯ ಮನೆ ಎಂದು ಗುರುತಿಸಲಾಗುತ್ತಿದೆ. ನೀವು ನನ್ನಂತೆ ಹೆಮ್ಮೆಯ ಭಾರತೀಯರಾಗಿದ್ದರೆ ಯಾವುದೇ ಭಿನ್ನಭಿಪ್ರಾಯಗಳಿಲ್ಲದೆ ನಾವು ಹೆಮ್ಮೆಯಿಂದ ಅತಿ ಎತ್ತರಕ್ಕೆ ಕಟ್ಟಿದ ಅತ್ಯಂತ ಅಸಹ್ಯ ಕಟ್ಟಡ ಅದು ಎನ್ನುವುದನ್ನು ಒಪ್ಪುತ್ತೀರ ಅನ್ನಿಸುತ್ತದೆ .. 

40 ವರ್ಷಗಳ ಹಿಂದೆ ರಾಯಗಡದಿಂದ, ರತ್ನಗಿರಿಯಿಂದ ರೈತರು ಮುಂಬೈನ ಗಿರಣಿಗಳಲ್ಲಿ ಕೆಲಸ ಪಡೆದುಕೊಂಡು ಅಲ್ಲಿನ ತಮಿಳರು, ಮಲೆಯಾಳಿಗರು, ಮರಾಠರೊಂದಿಗೆ ಹೊಂದಿಕೊಂಡು ಕೆಲಸ ಮಾಡಿ ಸಂಸಾರ ಸಾಕುತ್ತಿದ್ದರು. ಆದರೆ ಇಂದು ಅದೇ ರೈತರು ಮುಂಬೈ ನಗರದ ಮನೆಗಳಲ್ಲಿ ಮನೆಗೆಲಸಕ್ಕೆ ಬರುತ್ತಿದ್ದಾರೆ. ನಾನು ನನ್ನದೇ ಅನುಭವವನ್ನು ಉದಾಹರಣೆಯಾಗಿಟ್ಟುಕೊಂಡು ಹೇಳುವುದಾದರೆ ಮುಂಬೈನ ನನ್ನ ಮನೆ ಮತ್ತು ಆ ಕಟ್ಟಡದ ಹತ್ತು ಮನೆಗಳನ್ನು ಸ್ವಚ್ಚಗೊಳಿಸಲು ಬರುವ ಹೆಣ್ಣುಮಗಳು ಒಂದು ಕಾಲದಲ್ಲಿ ತಾಲೇಗಾಂ ನ ಕೌಶಲ್ಯ ಹೊಂದಿದ ರೈತ ಮಹಿಳೆಯಾಗಿದ್ದವಳು! ಈಗ ಆಕೆ ನಮ್ಮೊಂದಿಗೆ ಇಲ್ಲ. ಆದರೆ ಈಗಲೂ ನಮ್ಮ ಮನೆಗೆ ಅತ್ಯುತ್ತಮ ಅಕ್ಕಿಯನ್ನು ವರ್ಷಕ್ಕೆ ಎರಡು ಬಾರಿ ನೀಡುತ್ತಿರುತ್ತಾಳೆ. . 

ನಾವು ಆರ್ಥಿಕತೆ ಮತ್ತು ನವ ಉದಾರವಾದಿ ನೀತಿಗಳು ಬೇರೆ ಬೇರೆ ವರ್ಗಗಳ ಜನರೊಂದಿಗೆ ಹೇಗೆ ವರ್ತಿಸುತ್ತವೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕಿದೆ. 80 ರ ದಶಕದಲ್ಲಿ ನಾನು ಮುಂಬೈ ತಲುಪಿದಾಗ ಕೋನೆಯ ಪತ್ರಿಕಾ ನೌಕರರ ಮುಷ್ಕರ ಇಂಡಿಯನ್ ಎಕ್ಸ್ ಪ್ರೆಸ್ಸಿನಲ್ಲಿ ನಡೆಯುತ್ತಿತ್ತು. ನನ್ನ ಸಹೋದ್ಯೋಗಿಗಳು 200 ರೂಪಾಯಿ ಹೆಚ್ಚುವರಿ ಭತ್ಯೆ ನೀಡಿ ಎಂದು ಹೋರಾಟ ಮಾಡುತ್ತಿದ್ದರು. ಆದರೆ ಸೇಠ್ ಜಿ ಅವರ ಬೇಡಿಕೆಯನ್ನು ಕೇಳಿಸಿಕೊಂಡೆ ಇರಲಿಲ್ಲ! ಸೇಠ್ ರು 200 ರೂಪಾಯಿ ಹೆಚ್ಚಿಸಿ ಎಂದು ಕೇಳಲು ನೀವು ಯಾರು ಎಂಬಂತೆ ವರ್ತಿಸುತ್ತಿದ್ದರು. ಅಂದು ನಾವು ನಮ್ಮ ಸಹೋದ್ಯೋಗಿಗಳ ಪರವಾಗಿ ಅಲ್ಲಿ ಕುಳಿತು ಅವರ ಹೋರಾಟದಲ್ಲಿ ಭಾಗಿಯಾಗಿದ್ದೆವು. ಅಂದು ಯಾರೆಲ್ಲಾ ಅಲ್ಲಿ ಕುಳಿತು ಹೋರಾಟ ಮಾಡಿದ್ದೆವೋ ಇಂದು ಅವರೆಲ್ಲರ ಬಳಿ ಖಾಸಗಿ ಕಾರಿದೆ. ಆದರೆ 80 ರ ದಶಕದಲ್ಲಿಯೇ ಬಂದು ನಮ್ಮ ಮನೆ ಸ್ವಚ್ಚ ಮಾಡುತ್ತಿದ್ದ ತಾಲೇಗಾಂ ನ ಆ ಕೌಶಲ್ಯ ಹೊಂದಿದ ರೈತ ಮಹಿಳೆಯ ಬದುಕು ದುರ್ಬರವಾಗಿದೆ; ನಮ್ಮ ಬದುಕಿಗೆ ಅಗತ್ಯವಾದ ಎಲ್ಲವೂ ಕಡಿಮೆ ಮೌಲ್ಯಕ್ಕೆ ಸಿಗುತ್ತಿದ್ದರೆ ಆಕೆಯ ಬದುಕಿಗೆ ಅಗತ್ಯವಾದ ಪ್ರತಿಯೊಂದು ವಸ್ತುವು ದುಬಾರಿಯಾಗುತ್ತಾ ಸಾಗುತ್ತಿದೆ. . 

ಇಂದು ಕಂಪ್ಯೂಟರ್, ಏರ್ ಕಂಡಿಷನರ್, ಕಾರುಗಳ ದರಗಳು ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದ್ದರೆ ಸಾಮಾನ್ಯರು ಓಡಾಡುವ ಬಸ್ ಪ್ರಯಾಣ ದರ ಅಧಿಕವಾಗುತ್ತಾ ಸಾಗುತ್ತಿದೆ. ಆಕೆ ಇಲ್ಲಿಗೆ ಬಂದಾಗ ಇಲ್ಲಿನ ಮಿನಿಮಮ್ ಬಸ್ಸಿನ ದರ 25 ಪೈಸೆ ಇತ್ತು. ಇಂದು ಅತಿ ಸಣ್ಣ ದೂರಕ್ಕೆ 7 ರಿಂದ 8 ರೂಪಾಯಿ ಇದೆ. ಇದರ ಅರ್ಥ ಒಂದು ಕಡೆ ಮಧ್ಯಮ ವರ್ಗದ ಬದುಕಿಗೆ ಅಗತ್ಯವಾದ ಎಲ್ಲಾ ಸರಕು ಸೇವೆಗಳ ಮೌಲ್ಯ ಇಳಿಮುಖವಾಗುತ್ತಿದ್ದರೆ ಸಾಮಾನ್ಯರ ಅಗತ್ಯಗಳ ಮೌಲ್ಯ ಎರಿಕೆಯಾಗುತ್ತಾ ಸಾಗುತ್ತಿದೆ. ನಾನು 1991 ರಲ್ಲಿ 24 ಎಂ.ಬಿ ಹಾರ್ಡ್‌ಡಿಸ್ಕ್ ಹೊಂದಿದ ಸುಂದರವಾದ ನನ್ನ ಮೊದಲ ಕಂಪ್ಯೂಟರ್ ತಂದಾಗ ನಮ್ಮ ಸುತ್ತಲಿನ ನಾಲ್ಕೈದು ಕಟ್ಟಡಗಳ ಜನ ಅದನ್ನು ನೋಡಲು ಸಾಲು ಗಟ್ಟಿ ನಿಂತಿದ್ದರು. ಇಂದು ನಾವು ನೀವು ಬಳಸುತ್ತಿರುವ ಮೊಬೈಲ್ಗಳು ಅದಕ್ಕಿಂತ ನೂರು, ಇನ್ನೂರು ಪಟ್ಟು ಹೆಚ್ಚು ಉತ್ತಮವಾಗಿವೆ. ಇದರ ಅರ್ಥ ಇಂದು ಈ ದೇಶದ ಮಧ್ಯಮ ವರ್ಗ ಮತ್ತು ಗಣ್ಯರನ್ನು ಕೇಂದ್ರವಾಗಿಟ್ಟುಕೊಂಡು ಎಲ್ಲವನ್ನೂ ತಯಾರಿಸಲಾಗುತ್ತಿದೆ, ಸರಳಗೊಳಿಸಲಾಗುತ್ತಿದೆ, ದರ ಕಡಿತಗೊಳಿಸಲಾಗುತ್ತಿದೆ. . 

ಇನ್ನೊಂದು ಕಡೆ ಈ ದೇಶದ 833 ಮಿಲಿಯನ್ ಜನರಿರುವ ಗ್ರಾಮೀಣ ಭಾರತದ ಶೇ 90 ರಷ್ಟು 5 ಸದಸ್ಯರನ್ನು ಹೊಂದಿದ ಕುಟುಂಬವೊಂದರ ಮುಖ್ಯಸ್ಥನ ಅದಾಯ ಕೇವಲ ೧೦ ಸಾವಿರ ರೂಪಾಯಿ ಮಾತ್ರ! ಯಾವ ರೀತಿಯ ಅಸಮಾನತೆಯನ್ನು ಸೃಷ್ಟಿಸಲಾಗಿದೆ ನಮ್ಮ ನಡುವೆ? ನಾವು ಆಶ್ಚರ್ಯಪಡುವಷ್ಟು ಅಸಮಾನತೆಯನ್ನು ಸೃಷ್ಟಿಸಲಾಗುತ್ತಿದೆ. ಜಾಗತಿಕ ಹಸಿವಿನ ಪಟ್ಟಿಯಲ್ಲಿ ನಮ್ಮ ಸ್ಥಾನ ನಿಜಕ್ಕೂ ನಾಚಿಕೆ ತರುವಂತಿದೆ. ನಾವು ಆಹಾರ ಭದ್ರತೆಯ ಹಿಂದಿನ ರಾಜಕೀಯದ ಕುರಿತು ಹೋರಾಡುತ್ತಿದ್ದೇವೆ, ಆದರೆ ನನಗೆ ಅನ್ನಿಸುವಂತೆ ಅದನ್ನು ಜಾರಿಗೆ ತರಬೇಕಿದೆ. 

ದೇಶದ ಅಂತರಿಕ ಸ್ಥಿತಿಯ ಕುರಿತಂತೆ ಸರ್ಕಾರದ ನ್ಯಾಷನಲ್ ಕ್ರೈಂ ರೆಕಾರ್ಡ್ ಬ್ಯುರೋದ ಅಂಕಿ-ಅಂಶಗಳು ನಿಜಕ್ಕೂ ಬಹಳ ಕೆಟ್ಟ ಸ್ಥಿತಿಯನ್ನು ನಮ್ಮೆದುರು ಇಡುತ್ತಿವೆ. ಆ ವರದಿಗಳು 1995ರ ನಂತರ ಮೂರು ಲಕ್ಷಕ್ಕೂ ಅಧಿಕ ಸಂಖ್ಯೆಯ ರೈತರು ಈ ದೇಶದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನುತ್ತಿವೆ. ಈ ಸ್ಥಿತಿಯನ್ನು ನಾವು ಇರುವುದರಲ್ಲಿಯೇ ಉತ್ತಮ ಎಂದುಕೊಳ್ಳುತ್ತಿದ್ದೇವೆ. 2001 ರಿಂದ 2011 ರ ಮಧ್ಯದ 10 ವರ್ಷಗಳಲ್ಲಿ ಪ್ರತಿ ಅರ್ಧ ಗಂಟೆಗೆ ಒಬ್ಬ ರೈತ ಆತ್ಮಹತ್ಯೆಗೆ ಶರಣಾಗುತ್ತಿದ್ದಾನೆ ಎಂದು ಅಂಕಿ-ಅಂಶಗಳು ವಿವರಿಸುತ್ತಿದ್ದರೆ ಇಂದಿನ ಪತ್ರಿಕೆಗಳ ಮುಖಪುಟಗಳಲ್ಲಿ ಬಿ.ಜೆ.ಪಿ ಶಾಸಕನೊಬ್ಬನ “ರೈತರಿಗೆ ಆತ್ಮಹತ್ಯೆ ಮಾಡಿಕೊಳ್ಳುವುದು ಒಂದು ಶೋಕಿಯಾಗಿ ಬಿಟ್ಟಿದೆ” ಎಂಬ ಹೇಳಿಕೆ ಕಣ್ಣಿಗೆ ರಾಚುತ್ತಿದೆ. . .

ಇವನೊಬ್ಬನೆ ಅಲ್ಲ ಹಲವಾರು ರಾಜಕಾರಣೆಗಳು ಹೀಗೆ ಮಾತನಾಡಿದ್ದಾರೆ. ಚಂದ್ರಬಾಬು ನಾಯ್ಡು ರೈತರು ಪರಿಹಾರದ ಆಸೆಗೆ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎಂಬ ಹೇಳಿಕೆ ನೀಡಿದ್ದರು. ನಿಮಗೆ ಗೊತ್ತಿರಲಿ ರೈತ ಆತ್ಮಹತ್ಯೆ ಮಾಡಿಕೊಂಡರೆ ಒಂದು ಲಕ್ಷ ರೂಪಾಯಿಗಳ ಪರಿಹಾರ ನೀಡಲಾಗುತ್ತದೆ. ನಿಮಗೆ ಆಶ್ಚರ್ಯ ಆಗಬಹದು ಇದುವರೆಗೂ ಆತ್ಮಹತ್ಯೆ ಮಾಡಿಕೊಂಡ ರೈತರಲ್ಲಿ ಕೇವಲ 12ಶೇ ಕುಟುಂಬಗಳಿಗೆ ಪರಿಹಾರ ನೀಡಲಾಗಿದೆ. ಆಂಧ್ರ ಮತ್ತು ಮಹಾರಾಷ್ಟ್ರದಲ್ಲಿ ನಾವು ಸ್ವಲ್ಪ ಹೋರಾಟ ಮಾಡಿದ್ದರಿಂದ ಪರಿಹಾರ ಪಡೆದ ಕುಟುಂಬಗಳ ಸಂಖ್ಯೆ ಹೆಚ್ಚಿದೆ. ಆದರೂ ಆತ್ಮಹತ್ಯೆಗೆ ಒಳಗಾದ ರೈತರ ಒಟ್ಟು ಕುಟುಂಬಗಳಲ್ಲಿ ಶೇ 12 ರಷ್ಟು ಕುಟುಂಬಗಳಿಗೆ ಮಾತ್ರ ಪರಿಹಾರ ನೀಡಲಾಗಿದೆ. ಈ ಪರಿಹಾರ ಹೇಗೆ ವಿತರಿಸಲಾಗುತ್ತದೆ ಎಂಬುದನ್ನು ಕೇಳಿ ನಿಮಗೆ ಇನ್ನೂ ಆಶ್ಚರ್ಯ ಆಗಬಹದು. ಸತ್ತ ರೈತನ ಮಡದಿಗೆ ನೀಡಲಾಗುವ ಆ ಒಂದು ಲಕ್ಷದಲ್ಲಿ 30 ಸಾವಿರ ಹಣದ ರೂಪದಲ್ಲಿ ನೀಡಲಾಗುತ್ತದೆ. ಇನ್ನುಳಿದ 70 ಸಾವಿರ ಆಕೆಯ ಹೆಸರಿನಲ್ಲಿ ಎಫ್.ಡಿ ಮಾಡಲಾಗುತ್ತದೆ. ಈ ಎಫ್.ಡಿ ಮಾಡುವ ಕ್ರಮವನ್ನು ನಾನು ಸ್ವಾಗತಿಸುತ್ತೇನೆ. ಏಕೆಂದರೆ ಪೂರ್ತಿ ಹಣ ಆ ವಿಧವೆಯ ಕೈಗೆ ಸಿಕ್ಕರೆ ಅದನ್ನು ದೋಚಲು ಅಲ್ಲಿನ ಸ್ಥಳೀಯ ಬಡ್ಡಿ ವ್ಯಾಪಾರಿಗಳು ಕಾಯುತ್ತಿರುತ್ತಾರೆ. ಅದೇನೆ ಇರಲಿ ಐದು ಜನರ ಕುಟುಂಬ ಆ 70 ಸಾವಿರಕ್ಕೆ ಬರುವ 446 ರೂಪಾಯಿ ಬಡ್ಡಿ ಹಣದಲ್ಲಿ ಬದುಕು ಸಾಗಿಸಬೇಕಾದ ಸ್ಥಿತಿ ನಿಜಕ್ಕೂ ದಾರುಣ. . .

ಇದು ಪರಿಸ್ಥಿತಿ. ನಮ್ಮ ಸುತ್ತ ಇಂತಹ ದಾರುಣವೇ ತುಂಬಿ ಹೋಗಿದೆ. ನಾನು ಯಾವಾಗಲೂ ಕೇಳುತ್ತಿರುತ್ತೇನೆ. ನಿನ್ನೆಯೂ ಕೃಷಿ ಸಮೀಕ್ಷೆಯ ತಂಡವೊಂದನ್ನು ನಮ್ಮ ನೈತಿಕ ಪ್ರಜ್ಞೆ ಏನಾಗಿದೆ ಎಂದು ಕೇಳಿದೆ! ಮೂರು ಲಕ್ಷ ಸತ್ತ ರೈತರನ್ನು ಬಿಡಿ, ಅದಕ್ಕಿಂತಲೂ ಹತ್ತು ಪಟ್ಟು ಜನ ಇತ್ತ ಬದುಕಲಾರದೆ, ಅತ್ತ ಆತ್ಮಹತ್ಯೆಗೆ ಮನಸ್ಸು ಒಪ್ಪದೆ ಅದೇ ದಾರುಣ ಸ್ಥಿತಿಯ ಬದುಕು ನಡೆಸುತ್ತಾ ಹೋರಾಡುತ್ತಿದ್ದಾರಲ್ಲ ಅವರುಗಳ ಕುರಿತ ನಮ್ಮ ನೈತಿಕ ಅಭಿವ್ಯಕ್ತಿ ಎಲ್ಲಿ ಹೋಗಿದೆ ಎಂಬ ಪ್ರಶ್ನೆಗಳನ್ನು ನಾವು ಕೇಳಿಕೊಳ್ಳಬೇಕಿದೆ. . .

ಒಂದು ಆಸಕ್ತಿಕರ ವಿಷಯ ಹೇಳಬೇಕು. ಈ ಸಮಸ್ಯೆಯ ಕುರಿತ ಸರ್ಕಾರ, ಬೌದ್ಧಿಕ ವರ್ಗ, ಮಾಧ್ಯಮಗಳು ಮತ್ತು ಸಾಮಾನ್ಯ ನಾಗರೀಕರಲ್ಲಿ ಈ ಸ್ಥಿತಿಗೆ ನಿಜಕ್ಕೂ ಮರುಗುತ್ತಿರುವವರು ಸಾಮಾನ್ಯ ನಾಗರೀಕರೆ ಹೊರತು ಮತ್ತಿನ್ಯಾರೂ ಅಲ್ಲ. ನಾನು ಕಳೆದ ಕೆಲವು ವರ್ಷಗಳಲ್ಲಿ ಈ ದೇಶದ ಡಿಫೆನ್ಸ್ ಮಿಲಿಟರಿ ಕಾಲೇಜ್, ಐಡಿಎಸ್ಎ, ಸ್ಕೂಲ್ ಆಫ್ ಏರ್ ವಾರ್ ಫೇರ್ ಇತ್ಯಾದಿ ಐದು ಪ್ರತಿಷ್ಟಿತ ಸೈನಿಕ ಸಂಸ್ಥೆಗಳಲ್ಲಿ ಕೃಷಿ ಬಿಕ್ಕಟ್ಟಿನ ಕುರಿತು ಮಾತನಾಡಿದೆ. ನನಗೆ ನಿಜಕ್ಕೂ ಆಶ್ಚರ್ಯವಾಯಿತು. ಈ ದೇಶದ ಸರ್ಕಾರ, ಭೌದ್ದಿಕ ವಲಯ, ಮಾಧ್ಯಮಗಳಿಗಿಂತ ಸೈನಿಕ ಅಧಿಕಾರಿಗಳು ಕೃಷಿ ಬಿಕ್ಕಟ್ಟಿನ ಕುರಿತು ತೀರ್ವ ಕಳವಳ ಹೊಂದಿದ್ದಾರೆ. ಏಕೆಂದರೆ ಇಂದು ಸೈನಿಕನ ಸಮವಸ್ತ್ರದಲ್ಲಿರುವ ಬಹುಪಾಲು ಯೋಧರು ಈ ದೇಶದ ರೈತನ ಮಕ್ಕಳು. ಆ ಕಾರಣಕ್ಕೆ ಈ ಬಿಕ್ಕಟ್ಟಿನ ಪರಿಣಾಮವನ್ನು ಅವರು ಕಡೆ ಪಕ್ಷ ಗ್ರಹಿಸಬಲ್ಲವರಾಗಿದ್ದಾರೆ. ನಿಜಕ್ಕೂ ನಮ್ಮ ಯೋಧರು ಈ ದೇಶದ ಕೃಷಿ ಬಿಕ್ಕಟ್ಟಿನ ಕುರಿತು ಕಳವಳ ಹೊಂದಿದ್ದಾರೆ. ಊರಿನಿಂದ ಕರೆ ಬಂದರೆ ಕೆಟ್ಟ ಸುದ್ದಿಯೇನೋ ಎಂದು ಅಲೋಚಿಸುವ ಸ್ಥಿತಿಯಲ್ಲಿ ಅವರು ಇರುವುದು ನನ್ನ ಗಮನಕ್ಕೆ ಬಂತು. . . 

ಇದನ್ನೆಲ್ಲಾ ನೋಡಿದ ಮೇಲೆ ನನಗೆ ಸರ್ಕಾರ, ಭೌದ್ದಿಕ ವಲಯ, ಮಾಧ್ಯಮಗಳು ನಮ್ಮ ದೇಶದ ಕೃಷಿ ಬಿಕ್ಕಟ್ಟಿನ ಕುರಿತು ಹೊಂದಿರುವ ಧೋರಣೆಗಳು ಬೇಸರವನ್ನು ಉಂಟುಮಾಡುತ್ತಿದೆ. ನಾನು ಸರ್ಕಾರ, ಭೌದ್ದಿಕ ವಲಯ, ಮಾಧ್ಯಮ ಮೂರು ವಲಯಗಳಲ್ಲಿ ಕೆಲವರು ಕೃಷಿಯ ಸ್ಥಿತಿಯ ಕುರಿತು ಕಳವಳ ಹೊಂದಿದ್ದಾರೆ ಎಂಬುದನ್ನು ಒಪ್ಪುತ್ತೇನೆ. ಆದರೆ ಅವರುಗಳ ಸಂಖ್ಯೆ ಬೆರಳೆಣಿಕೆಯಷ್ಟು ಮಾತ್ರ. ಆದರೆ ಭೌದ್ದಿಕ ವಲಯದಲ್ಲಿ ಈ ದೇಶದ ಕೃಷಿ ಬಿಕ್ಕಟ್ಟಿನ ಕುರಿತು ಕಳವಳ ಇರುವ ಕೆಲವರಲ್ಲಿ ಶೇ 90 ರಷ್ಟು ಮಂದಿ ಜೆ.ಎನ್.ಯು ಕ್ಯಾಂಪೇಸ್ ನಲ್ಲಿ ಕಲಿತವರು ಎಂಬುದು ಹೆಮ್ಮೆಯ ವಿಷಯ. ನಾನಿನ್ನೂ ಕೃಷಿ ಬಿಕ್ಕಟ್ಟಿನ ಕುರಿತು ಮಾತನಾಡಲು ಹಿಂಜರಿಯುತ್ತಿದ್ದ ಕಾಲದಲ್ಲಿ, ಅದು ನಮಗೆ ಅರ್ಥವಾಗದಿದ್ದ ಕಾಲದಲ್ಲಿ ಈ ದೇಶದಲ್ಲಿ ಕೃಷಿ ಬಿಕ್ಕಟ್ಟಿನ ದಾರುಣ ಪರಿಣಾಮಗಳನ್ನು ಊಹಿಸಿದವರು ಜೆ.ಎನ್.ಯು ನ ಪ್ರೋ. ಉತ್ಸಾಹ್ ಪಟ್ನಾಯಕ್. ಕಳೆದ ವರ್ಷದವರೆಗೆ ವರ್ಷದ ೨೫೦ದಿನಗಳನ್ನು ಕೃಷಿ ಕ್ಷೇತ್ರಕಾರ್ಯದಲ್ಲಿ ಕಳೆಯುತ್ತಿದ್ದ ನನಗೆ ಭಾರತದ ಕೃಷಿ ಬಿಕ್ಕಟ್ಟಿನ ಕುರಿತು ಸ್ಪಷ್ಟ ಚಿತ್ರಣವನ್ನು ಕೊಟ್ಟವರು, ಅದನ್ನು ಇರುವಂತೆಯೇ ಗ್ರಹಿಸುವ ನೋಟ ಒದಗಿಸಿದವರು ಪ್ರೊ.ಉತ್ಸವ್ ಪಟ್ನಾಯಕ್ ರವರು. ಇಂದು ನಾನು ಬೇರೆ ಯಾವ ಬುದ್ದಿಜೀವಿಯ ಕೆಲಸವೂ ಪ್ರೋ ಪಟ್ನಾಯಕ್ ಅವರ ಕೆಲಸದಷ್ಟು ನಿಖರತೆಯನ್ನು ಹೊಂದಿರಲು ಸಾಧ್ಯವಿಲ್ಲ ಎಂಬುದನ್ನು ಧೈರ್ಯವಾಗಿ ಹೇಳಬಲ್ಲೆ.  ಇನ್ನು ಮಾಧ್ಯಮ ರಂಗದಲ್ಲಿಯೂ ಕೆಲವರು ಇದ್ದಾರೆ ಜೆ.ಡಿ ಹರ್ಡಿಕರ್, ಪುರುಶೋತ್ತಮ್ ಠಾಕೋರ್, ಪ್ರಿಯಾಂಕ ಠಾಕೋರ್, ಇಂದು ಕೃಷಿ ಬಿಕ್ಕಟ್ಟಿನ ಕುರಿತು ಟೈಮ್ಸ್ ಆಫ್ ಇಂಡಿಯಾದಲ್ಲಿ ಬರುತ್ತಿರುವ ಮುಖಪುಟದ ವರದಿಗಳು,  ಇವೆಲ್ಲವನ್ನೂ ನಾವು ಕಡೆಗಣಿಸುವಂತಿಲ್ಲ ಆದರೆ ಅವು ಬೆರಳೆಣಿಕೆಯಷ್ಟು ಮಾತ್ರ. . .

ಆದರೆ ಈ ಕೆಲವು ಜನರನ್ನು ಹೊರತುಪಡಿಸಿ ಸರ್ಕಾರ, ಭೌದ್ದಿಕ ವಲಯ, ಮಾಧ್ಯಮಗಳಲ್ಲಿ ಕೃಷಿ ಬಿಕ್ಕಟ್ಟಿನ ಕುರಿತು ನಾಚಿಕೆಗೆಟ್ಟ ಧೋರಣೆಯೊಂದು ಪ್ರಭಾವಿಸಿಕೊಂಡಿದೆ. ವಿಚಾರಣಾ ಆಯೋಗದ ಇಬ್ಬರು ಉಪಕುಲತಿಗಳು...... ಈ ದೇಶದಲ್ಲಿ ಕೃಷಿ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ೩೦ಕ್ಕೂ ಹೆಚ್ಚು ವಿಚಾರಣಾ ಅಯೋಗಗಳು ರಚನೆಯಾಗಿವೆ. ಭಾರತದ ರಾಜಕಾರಣದ ಒಂದು ಒಳ್ಳೆಯ ಸಂಪ್ರದಾಯವಿದೆ. ಅದು ಯಾವುದೆಂದರೆ ಒಂದು ಸಮಸ್ಯೆಯ ಕುರಿತಂತೆ ಪ್ರಭುತ್ವ ನಿರೀಕ್ಷೆ ಮಾಡುವ ವರದಿಯನ್ನು ನೀಡುವ ಅಯೋಗವೊಂದು ಬರುವವರೆಗೂ ಆಯೋಗಗಳನ್ನು ರಚಿಸುತ್ತಲೇ ಹೋಗುವುದು. ಅವುಗಳ ಸಂಖ್ಯೆ ಎಷ್ಟಾದರೂ ಪರವಾಗಿಲ್ಲ! ನಾನು ಆಗಲೇ ಹೇಳುತ್ತಿದ್ದೆ ವಿಚಾರಣಾ ಆಯೋಗವೊಂದರ ಇಬ್ಬರು ಉಪಕುಲತಿಗಳು, ಒಬ್ಬರು ಕರ್ನಾಟಕದ ವಿರೇಶ್ ಎಂಬುವವರು ರೈತರ ಆತ್ಮಹತ್ಯೆಗೆ ಮೂಲ ಕಾರಣ ಕುಡಿತ ಎಂಬ ವರದಿಯನ್ನು ನೀಡಿದ್ದರು. ಇದನ್ನು ಆ ತಕ್ಷಣವೇ ಸುಮಾರು ಶೇ 90 ರಷ್ಟು ಮಾಧ್ಯಮಗಳು ಹೌದು ಹೌದು ಎಂದು ಬೆಂಬಲಿಸಿದ್ದವು. ಈ ವಾದದಲ್ಲಿನ ಸಮಸ್ಯೆ ಏನೆಂದರೆ ಆತ್ಮಹತ್ಯೆಗೆ ಒಂದು ಕಾರಣ ಅಂತ ಇರಬೇಕಿಲ್ಲ. ಒಬ್ಬ ವ್ಯಕ್ತಿಯ ಆತ್ಮಹತ್ಯೆಗೆ ಹಲವಾರು ಕಾರಣಗಳು ಇರುತ್ತವೆ ವೀರೇಶ್ ಹೇಳುವಂತೆ ವ್ಯಕ್ತಿಯ ಆತ್ಮಹತ್ಯೆಗೆ ಕುಡಿತವೇ ಮೂಲಕಾರಣ ಎಂಬುದು ಸತ್ಯವಾಗಿದ್ದರೆ ಅತಿಯಾದ ಕುಡುತ ಆತ್ಮಹತ್ಯೆಗೆ ವ್ಯಕ್ತಿಯನ್ನು ದೂಡುತ್ತದೆ ಎಂಬುದು ಸತ್ಯವಾಗಿದ್ದರೆ ಇಂದು ಜಗತ್ತಿನಲ್ಲಿ ಯಾವೊಬ್ಬ ಪತ್ರಕರ್ತನೂ ಬದುಕಿರುತ್ತಿರಲಿಲ್ಲ, ಕೆಲವೇ ಕೆಲವು ಬುದ್ದಿಜೀವಿಗಳು ಬದುಕಿರುತ್ತಿದ್ದರು, ಮಾನವ ಹಕ್ಕುಗಳ ಹೋರಾಟಗಾರರಂತೂ ಒಬ್ಬರು ಇರುತ್ತಿರಲಿಲ್ಲ. . .ಸೋ ಈ ಉಪಕುಲಪತಿಯನ್ನು ಬಿಡೋಣ ಮತ್ತೊಬ್ಬ ಉಪಕುಲಪತಿಯವರ ಬಳಿ ತೆರಳೋಣ. . .

ನಾನು ಮಹಾರಾಷ್ಟ್ರದ ವಿದರ್ಭದಲ್ಲಿನ ರೈತರ ಆತ್ಮಹತ್ಯೆಗಳ ಹಿನ್ನಲೆಯಲ್ಲಿ ವಿಲಾಸ್ ರಾವ್ ದೇಶ್ ಮುಖ್ ರವರನ್ನು ನನ್ನ ವರದಿಗಳ ಮೂಲಕ ತುಂಬಾ ಕಾಡುತ್ತಿದ್ದೆ. ನಿಮಗೆ ಗೊತ್ತಿರಲಿ ಸರ್ಕಾರಿ ವರದಿಗಳ ಪ್ರಕಾರವೇ ೯೫ರಿಂದ ಮಹಾರಾಷ್ಟ್ರಾದಲ್ಲಿ ಆತ್ಮಹತ್ಯೆಗೆ ಶರಣಾದ ರೈತರ ಸಂಖ್ಯೆ 63,000. ಆಗ ಇನ್ನೊಬ್ಬ ಮಹಾರಾಷ್ಟ್ರದ ಉಪಕುಲಪತಿ ಒಬ್ಬ ರೈತನನ್ನು ಭೇಟಿಯಾಗದೆ, ಒಂದೇ ಒಂದು ರೈತ ಕುಟುಂಬದ ಜೊತೆ ಸಂವಾದಿಸದೆ ವರದಿಯೊಂದನ್ನು ನೀಡಿದರು. ಅದರಲ್ಲಿ ಅವರು ಒಂದು ಪ್ಯಾರಾದ ಹೊರತಾಗಿ ರೈತರ ಆತ್ಮಹತ್ಯೆಗಳ ಕುರಿತು ಏನನ್ನೂ ಬರೆದಿರಲಿಲ್ಲ. ಅವರ ವರದಿಯ ಒಟ್ಟು ಪ್ರಯತ್ನ ನಾನು ರೈತರ ಆತ್ಮಹತ್ಯೆಗಳ ಕುರಿತು ಮಹಾರಾಷ್ಟ್ರದಲ್ಲಿ ಕೃತಕ ಭಯವೊಂದನ್ನು ಹುಟ್ಟುಹಾಕಿದ್ದೇನೆ ಎಂಬುದನ್ನು ಸಾಧಿಸುವುದಕ್ಕೆ ಸೀಮಿತವಾಗಿತ್ತು. ಅದನ್ನು ಅವರು ಸಾಧಿಸಿದರು. ಒಂದು ದಿನ ಬೆಳಗ್ಗೆ ಎದ್ದು ನೋಡುತ್ತೇನೆ. ಮುಂಬಯಿ ಮಿರರ್ ಪತ್ರಿಕೆಯ ಮೊದಲ ಪುಟದ ಮುಖ್ಯ ಹೆಡ್ ಲೈನ್ “ಸಾಯಿನಾಥ್ ರಾಜ್ಯದ ಶತ್ರು”!. ಆ ಅರ್ಥದಲ್ಲಿ ನನ್ನ ರಾಷ್ಟ್ರದ್ರೋಹ ಮಹಾರಾಷ್ಟ್ರಕ್ಕೆ ಸೀಮಿತವಾಗಿತ್ತು! ಇಡೀ ವರದಿ ಸಾಯಿನಾಥ್ ರಾಜ್ಯವನ್ನು ಅಪಮಾನಕ್ಕೆ ಈಡುಮಾಡಿದ್ದಾರೆ ಎನ್ನುವುದಾಗಿತ್ತು. ನಾನು ಆ ವರದಿಯನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ನಾನ್ಯಾಕೆ ಯಾರೂ ಅದನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ಏಕೆಂದರೆ ಅದು ಅಷ್ಟು ಮೂರ್ಖತನದಿಂದ ಕೂಡಿತ್ತು.  ಆ ವರದಿ ಮತ್ತು ಸುದ್ದಿಯಿಂದ ವಿಲಾಸ್ ರಾವ್ ಸಂತೋಷಗೊಂಡರು, ಆ ಕುಲಪತಿಗಳು ಸಂತೋಷಗೊಂಡರು. ಈ ವರದಿ ನೀಡಿದ ಮಹತ್ಕಾರ್ಯಕ್ಕೆ ಅವರನ್ನು ಮುಂದೆ ಯೋಜನಾ ಆಯೋಗದ ಸದಸ್ಯರನ್ನಾಗಿ ನೇಮಿಸಲಾಯಿತು.. .

ಇದು ನಮ್ಮ ಬೌದ್ಧಿಕತೆಯು ಬಿಕ್ಕಟ್ಟಿಗೆ ಸ್ಪಂದಿಸುತ್ತಿರುವ ರೀತಿ! ನೀವು ಕೃಷಿ ಕುಟುಂಬವೊಂದರ ಖರ್ಚು ವೆಚ್ಚಗಳನ್ನು ಒಮ್ಮೆ ಗಮನಿಸಬೇಕು. ಇಂದು ಕೃಷಿ ಕುಟುಂಬಗಳು ಅತಿ ಹೆಚ್ಚು ವೆಚ್ಚವನ್ನು ಆರೋಗ್ಯದ ಮೇಲೆ ಮಾಡುತ್ತಿವೆ.  ಪ್ರತಿಯೊಂದು ಕೃಷಿ ಕುಟುಂಬ ಶಿಕ್ಷಣಕ್ಕೆ ಮಾಡುತ್ತಿರುವ ವೆಚ್ಚದ ಎರಡರಷ್ಟನ್ನು ಆರೋಗ್ಯಕ್ಕೆ ವ್ಯಯಿಸುತ್ತಿವೆ. ನಿಮಗೆ ಗೊತ್ತಿರಲಿ ಜಗತ್ತಿನ ದೊಡ್ಡ ದೇಶಗಳಲ್ಲಿ ಆರೋಗ್ಯವನ್ನು ಖಾಸಗಿಕರಣ ಮಾಡಿದ ಮೋದಲ ರಾಷ್ಟ್ರ ಭಾರತ. ಈ ದೇಶದ ಆರೋಗ್ಯ ಉದ್ಯಮ ಗಳಿಸುತ್ತಿರುವ ಶೇ ೮೫ ರಷ್ಟು ಹಣ ಈ ದೇಶದ ಸಾಮಾನ್ಯನ ಜೇಬಿನ ಹಣ. ಇವರು ಸರ್ಕಾರಿ ಆಸ್ಪತ್ರೆಗಳು ಮತ್ತು ಪಾಥಮಿಕ ಆರೋಗ್ಯ ಕೇಂದ್ರಗಳನ್ನು ಖಾಸಗಿಕರಣ ಮಾಡುತ್ತಿದ್ದಾರೆ. ನಿಮಗೆ ಗೊತ್ತಿದೆಯೋ ಇಲ್ಲವೋ ಇ‌ತ್ತೀಚೆಗೆ 4000 ಅಂಗನವಾಡಿ ಕೇಂದ್ರಗಳನ್ನು ಖಾಸಗಿಕರಣಕ್ಕೆ ಒಳಪಡಿಸಲಾಗಿದೆ. ವೇದಾಂತ ಕಂಪೆನಿಯ ಮುಂಚೂಣಿಯ ಒಂದು ಸಂಸ್ಥೆಗೆ 4000 ಅಂಗನವಾಡಿಗಳನ್ನು ನೋಡಿಕೊಳ್ಳುವ ಹೊಣೆ ಹೊರಿಸಲಾಗಿದೆ. ಈ ವಿಷಯ ನಿಮ್ಮನ್ನು ಅಘಾತಕ್ಕೆ ಒಳಪಡಿಸುತ್ತದೆ ಎಂದು ನನಗೆ ಗೊತ್ತು. . .ಒಂದರಿಂದ ಆರು ವರ್ಷದ ವಯಸ್ಸೇನಿದೆ ಅದು ಈ ದೇಶ ಭವಿಷ್ಯದಲ್ಲಿ ಯಾವ ದಿಕ್ಕಿನಲ್ಲಿ ಕಟ್ಟಬೇಕು ಎಂಬುದನ್ನು ತಿಳಿಹೇಳುವ ವಯಸ್ಸಾಗಿದೆ. ಆ ಮಕ್ಕಳ ಆರೋಗ್ಯ, ಅಹಾರ, ಪೌಷ್ಟಿಕತೆಗಳನ್ನು ಸರ್ಕಾರವೆ ಖುದ್ದು ನಿರ್ವಹಿಸಬೇಕಾದ ಮಹತ್ವದ ಅಂಶವಾಗಿದೆ. ಏಕೆಂದರೆ ಅವರು ಈ ದೇಶದ ಭವಿಷ್ಯ! ಅಂತಹ ಜವಾಬ್ದಾರಿಯುತ ಸಂಸ್ಥೆಗಳನ್ನು ನೀವು ಲಾಭದ ಉದ್ದೇಶಹೊಂದಿರುವ ಒಂದು ಕಾರ್ಪೋರೇಟ್ ಕಂಪೆನಿಗೆ ನೀಡುತ್ತೀರ ಎಂಬುದೇ ಒಂದು ಸೋಜಿಗ. ಇಂದು 4000 ಅಂಗನವಾಡಿ ಕೊಟ್ಟಿರಬಹದು ಮುಂದೆ ಅವುಗಳ ಸಂಖ್ಯೆ ಏರಲಿದೆ. . .

ನಾವು ಇಂದು ಬೆಳೆಯ ವಿಮೆಯ ಕುರಿತು ಮಾತನಾಡುತ್ತಿದ್ದೇವೆ. ರೈತರು ಪರಿಹಾರದ ಆಸೆಗೆ, ವಿಮೆಯ ಆಸೆಗೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂದು ಅರೋಪಿಸುತ್ತಿರುವವರು ಇಂದು ರೈತರು ಆತ್ಮಹತ್ಯೆಗೆ ಶರಣಾಗುತ್ತಿರುವುದು ಕಾರ್ಪೊರೇಟ್ ಕಂಪೆನಿಗಳಿಗಾಗಿ ಎಂಬ ವಾಸ್ತವ ಸಂಗತಿಯನ್ನು ಅರ್ಥಮಾಡಿಕೊಳ್ಳಬೇಕಿದೆ. ಆದರೆ ಆಶ್ಚರ್ಯ ಅಂದರೆ ಇನ್ನು ಮುಂದೆ ಕೃಷಿ ಮತ್ತು ಬೆಳೆ ವಿಮೆಗಳ ಲೆಕ್ಕವನ್ನು ನೀಡುವ ಜವಾಬ್ದಾರಿಯನ್ನು ಆ ಕಾಂರ್ಪೊರೇಟ್ ಕಂಪೆನಿಗಳಿಗೆ ನೀಡಲಾಗಿದೆ.

1991ರಿಂದ 2011ರ ಅವಧಿಯಲ್ಲಿ ಭಾರತದ ಕೃಷಿಕನ ಅತಂತ್ರ ಸ್ಥಿತಿ ಎರಡು ಪಟ್ಟು ಧ್ವಿಗುಣಗೊಂಡಿದೆ. ನ್ಯಾಷನಲ್ ಸ್ಯಾಂಪೆಲ್ ಸರ್ವೇ ಅಂಕಿ-ಅಂಶಗಳು 1991 ಕ್ಕೆ ಹೋಲಿಸಿದರೆ 2011 ರಲ್ಲಿ ಸಾವಿಗೆ ಶರಣಾದವರ ಸಂಖ್ಯೆ ದ್ವಿಗುಣಗೊಂಡಿದೆ ಎಂಬುದನ್ನು ಹೇಳುತ್ತಿವೆ. 10 ವರ್ಷಗಳಲ್ಲಿ ಶೇ 26 ರಿಂದ ಶೇ 56.8 ಗೆ ಏರಿಕೆಯಾಗಿದೆ ಎನ್ನಲಾಗುತ್ತಿದೆ. ಈ ಸಂಖ್ಯೆಯನ್ನು ಒಪ್ಪುವುದಿಲ್ಲ ಅದೊಂದು ದೊಡ್ಡ ಹಾಸ್ಯ ಎಂದು ಜನರೇ ನಗುತ್ತಾರೆ. . .

ಕಳೆದ ವಾರ ನಬಾರ್ಡ್ (ನ್ಯಾಷನಲ್ ಬ್ಯಾಂಕ್ ಫಾರ್ ಅಗ್ರೀಕಲ್ಚರ್ ಅಂಡ್ ರೂರಲ್ ಡೆಮೆಲಪ್ಮೆಂಟ್) ಮಹಾರಾಷ್ಟ್ರದ ಕುರಿತಂತೆ ಒಂದು ವರದಿಯನ್ನು ಬಿಡುಗಡೆ ಮಾಡಿದೆ.  ಮಹಾರಾಷ್ಟ್ರಾದ ಒಟ್ಟು ಕೃಷಿ ಸಾಲದಲ್ಲಿ 51ಶೇ ಕೃಷಿ ಸಾಲಗಳು ಮುಂಬೈ ಮತ್ತು ಅದರ ಸುತ್ತಮುತ್ತಲಿನ ಜನರಿಗೆ ನೀಡಲಾಗಿದೆ ಎಂಬ ಮಾಹಿತಿ ನೀಡಲಾಗಿದೆ. ಇದು ಸೋರಿಕೆಯಾದ ವರದಿಯಲ್ಲ ಬದಲಾಗಿ ನಬಾರ್ಡ್ ಬಿಡಿಗಡೆಮಾಡಿದ ಅಧಿಕೃತ ವರದಿ ಇದರ ಮೂಲಕ ಅವರು ನಮಗೆ ಈ ದೇಶದಲ್ಲಿ ಕೃಷಿಗಿಂತ ಕೃಷಿ ಆಧರಿತ ಉದ್ಯಮ ಹೆಚ್ಚು ಮುಖ್ಯ ಎಂಬುದನ್ನು ಹೇಳುತ್ತಿದ್ದಾರೆ. ಇದನ್ನು ಕೇಳಿ ನಿಮಗೆ ಅಘಾತ ಆಗಬಹುದು ಆಗಲೇ ಬೇಕು ಕೂಡಾ ನಾನು ನಿಮ್ಮನ್ನು ಈ ಎಲ್ಲಾ ಸಂಗತಿಗಳನ್ನು ಹೇಳಿ ಉದ್ರೇಕಿಸುತ್ತಿದ್ದೇನೆ ಎಂದುಕೊಳ್ಳುತ್ತಿದ್ದರೆ ಅರ್ಥಮಾಡಿಕೊಳ್ಳಿ ನನ್ನ ಉದ್ದೇಶವೂ ಅದೆ ಆಗಿದೆ. . .

ಟಾಟಾ ಇನ್ಸ್ಟಿಟ್ಯೂಟ್ ಆಫ್ ಸೋಪಿಯಲ್ ಸೈನ್ಸ್ ನ ಪ್ರೋ.ಆರ್ ರಾಮಕುಮಾರ್ ಅವರು 55ಶೇ ಗ್ರಾಮೀಣ ಪ್ರದೇಶ ಹೊಂದಿರುವ ಮಹಾರಾಷ್ಟ್ರದಲ್ಲಿ ನೀಡಿರುವ ಒಟ್ಟು ಕೃಷಿ ಸಾಲದಲ್ಲಿ ಶೇ 53 ರಷ್ಟು ಮೂರು ನಗರಗಳಿಗೆ ಹಂಚಲಾಗಿದೆ ಎಂಬ ಅಂಶವನ್ನೂ ಹೋರಗೆಡವಿದ್ದಾರೆ 53ಶೇ ಕೃಷಿ ಸಾಲ ಮಹಾರಾಷ್ಟ್ರಾದ ಮೂರು ನಗರಗಳ ಪಾಲಾಗಿದೆ ನಿಮಗೆ ಆಶ್ಚರ್ಯವಾಗಬಹುದು ಅದರಲ್ಲಿ 38ಶೇ ಕೃಷಿ ಸಾಲಗಳು ಗ್ರಾಮೀಣ ಶಾಖೆಗಳಿಂದಲೇ ನೀಡಲಾಗಿದೆ. ಇದು ಪರಿಸ್ಥಿತಿ. . .

ಕೃಷಿ ಸಾಲದ ಅರ್ಧಕ್ಕಿಂತ ಹೆಚ್ಚು ಸಾಲ ಮುಂಬೈ, ಪುಣೆ, ಮಲಬಾರ್ ಜಿಲ್ಲೆಗಳ ಪ್ರಮುಖ ನಗರಗಳನ್ನು ತಲುಪಿವೆ. ಒಂದು ಅರ್ಥದಲ್ಲಿ ಅವರೂ ಕೃಷಿ ಮಾಡುತ್ತಾರೆ. ಅವರು ಕೃಷಿಯ ಗುತ್ತಿಗೆದಾರರಲ್ಲ, ಬದಲಾಗಿ ಕೃಷಿ ವ್ಯವಸ್ಥೆಯ ಗುತ್ತಿಗೆದಾರರು. ಪ್ರೊ.ರಾಮಕುಮಾರ್ ತೋರಿಸುವಂತೆ 50,000 ಒಳಗಿನ ಕೃಷಿ ಸಾಲಗಳ ಸಂಖ್ಯೆಯಲ್ಲಿ ತೀರ್ವ ಇಳಿಮುಖವಾಗಿದೆ ಅಂದರೆ 50,000 ಸಾವಿರ ಸಾಲ ಪಡೆಯುವವರು ಸಣ್ಣ ರೈತರು ಆ ಸಾಲ ಇಳಿಮುಖವಾಗಿದೆ. ಆದರೆ ನಿಮಗೆ ಅಘಾತವಾಗುತ್ತದೆ 10 ರಿಂದ 20 ಕೋಟಿ ಕೃಷಿ ಸಾಲಗಳನ್ನು ಪಡೆಯುವವರ ಸಂಖ್ಯೆ ವಿಪರೀತ ಏರಿಕೆಯಾಗಿದೆ. ನೀವು ಎಂದಾದರೂ ಬ್ಯಾಂಕಿನ ಮುಂದೆ ಹೇ ಒಂದು ನಿಮಿಷ ತಾಳು ನಾನು ನನ್ನ ೨೫ ಕೋಟಿ ಕೃಷಿ ಸಾಲ ಪಡೆದು ಬರುತ್ತೇನೆ ಎಂದು ನಿಂತಿರುವ ಸಣ್ಣ ರೈತನನ್ನು ನೋಡಿದ್ದಿರೇನು? ಆದರೆ ನಾನು ಇಬ್ಬರನ್ನು ನೊಡಿದ್ದೇನೆ ಒಬ್ಬರು ಮುಖೇಶ್ ಮತ್ತೊಬ್ಬರು ಅನಿಲ್ ಕಳೆದ ಇಪ್ಪತ್ತು ವರ್ಷಗಳಿಂದ ಕೃಷಿ ಕ್ಷೇತ್ರಕ್ಕೆ ಮೀಸಲಿಟ್ಟ ಸಂಪನ್ಮೂಲದ ಅರ್ಧಕ್ಕಿಂತ ಹೆಚ್ಚು ಕಾರ್ಪೋರೇಟ್ ವ್ಯವಸ್ಥೆ ನುಂಗಿಹಾಕುತ್ತಿದೆ . . .

ಇವೆಲ್ಲ ಸಂಗತಿಗಳು ನಮಗೆ ತಿಳಿಸುವುದು ಏನೆಂದರೆ ಇಂದು ನಾವು ನಿಧಾನವಾಗಿ ಕಾರ್ಪೋರೇಟ್ ರಾಜ್ಯವ್ಯವಸ್ಥೆಯ ಕಡೆಗೆ ಚಲಿಸುತ್ತಿದ್ದೇವೆ. ನಮಗೆ ಅರ್ಥವಾಗಬೇಕಾದ ಸಂಗತಿ ಎಂದರೆ ನಾವು ಇಂದು ಸಾಮಾಜಿಕ, ಧಾರ್ಮಿಕ ಮೂಲಭೂತವಾದ ಮತ್ತು ಆರ್ಥಿಕ, ಮಾರುಕಟ್ಟೆ ಮೂಲಭೂತವಾದವೆಂಬ ಶತ್ರುಗಳನ್ನು ಎದುರಿಸಬೇಕಿದೆ. ಇದು ಭಾರತಕ್ಕೆ ಮಾತ್ರ ಸೀಮಿತವಾದ ವಿದ್ಯಮಾನವಲ್ಲ. ಮಾರುಕಟ್ಟೆ ಮೂಲಭೂತವಾದದ ವ್ಯಾಟಿಕನ್ (ಪವಿತ್ರ ಭೂಮಿ) ಎಂದು ಕರೆಯಲ್ಪಡುವ ಅಮೇರಿಕಾ ಇಂದು ಜಗತ್ತಿನ ಅತ್ಯಂತ ಸಂಪ್ರದಾಯಿಕ ಧಾರ್ಮಿಕ ಮೂಲಭೂತವಾದಿ ರಾಷ್ಟ್ರಗಳಾದ ಇಸ್ರೇಲ್ ಮತ್ತು ಸೌಧಿ ಅರೇಭಿಯಾಗಳನ್ನು ಆಧರಿಸಿದೆ. ಇಡಿ ಅಮೇರಿಕಾದ ನೀತಿಗಳು ನಿರ್ಧಾರವಾಗುತ್ತಿವೆ. ಸೋ, ಮಾರುಕಟ್ಟೆ ಮತ್ತು ಧಾರ್ಮಿಕ ಮೂಲಭೂತವಾದದ ಮೈತ್ರಿ ನಮ್ಮ ದೇಶಕ್ಕೆ ಮಾತ್ರ ಸೀಮಿತವಾಗಿದೆ ಎಂದುಕೊಳ್ಳಬೇಡಿ. ಅವರು ತಮ್ಮ ಅಸ್ಥಿತ್ವಕ್ಕಾಗಿ ಒಬ್ಬರನ್ನೊಬ್ಬರು ಬಿಟ್ಟಿರಲಾರದ ಸ್ಥಿತಿಯಲ್ಲಿ ಇದ್ದಾರೆ . . .

ಇನ್ನು ಮಾಧ್ಯಮಗಳು ನಿಜಕ್ಕೂ ಅತಂಕ ಹುಟ್ಟಿಸುತ್ತಿವೆ. ಅವು ಕಳೆದ ೨೦-೨೫ ವರ್ಷಗಳ ಹಿಂದೆ ಇದ್ದದ್ದಕ್ಕಿಂತ ಬಹಳಷ್ಟು ಬದಲಾಗಿವೆ. ಇದನ್ನು ಬಹಳ ಸರಳವಾಗಿ ನಿಮ್ಮ ಮುಂದೆ ಹೀಗೆ ವಿವರಿಸುತ್ತೇನೆ. ಇಂದು ಎರಡು ರೀತಿಯ ಪತ್ರಿಕೋದ್ಯಮಗಳು ನಮ್ಮ ನಡುವೆ ಇವೆ. ಒಂದು ಪತ್ರಿಕೋದ್ಯಮ, ಇನ್ನೊಂದು ಸ್ಟೆನೋಗ್ರಫಿ(ಟೈಪಿಸಿ ವರದಿ ಮಾಡುವುದು)! ಅದರಲ್ಲಿಯೂ ಕಾರ್ಪೋರೇಟ್ ಸ್ಟೆನೋಗ್ರಫಿ. ನಾನು ತಮಿಳುನಾಡಿನಲ್ಲಿ ಮಾಧ್ಯಮಗಳನ್ನು ಹೀಗೆ ಸ್ಟೆನೋಗ್ರಾಫರ್ಸ್ ಎಂದು ಹೇಳುತ್ತಿದ್ದಾಗ ಒಬ್ಬ ಕೇಳುಗ ಎದ್ದು ಸಾರ್ ದಯಮಾಡಿ ಸ್ಟೆನೋಗ್ರಾಫರ್ಸ್ ರನ್ನು ನೀವು ಹೀಗೆ ಪತ್ರಿಕೋದ್ಯಮಕ್ಕೆ ಹೋಲಿಸಿ ತೆಗಳಬೇಡಿ ಎಂದು ಕೂಗಿದ. ನಾನು ಏಕೆ ಎಂದು ಕೇಳಿದೆ. ಆದಕ್ಕೆ ಆತ ನಾನು ವೃತ್ತಿಯಲ್ಲಿ ಒಬ್ಬ ಸ್ಟೆನೋಗ್ರಾಫರ್ ಸಾರ್ ನನ್ನನ್ನು ಅವರೊಂದಿಗೆ ಹೋಲಿಸಿ ಮಾತನಾಡಿದರೆ ತುಂಬಾ ನೋವಾಗುತ್ತದೆ ಎಂದ . . .

ನಾನು ಆತನಲ್ಲಿ ಕ್ಷಮೆ ಕೇಳಿದೆ. ಅವನು ತಾವು ಕ್ಷಮೆ ಕೇಳುವ ಅಗತ್ಯವಿಲ್ಲ ಸಾರ್ ಇಂದು ಪತ್ರಿಕೋದ್ಯಮಕ್ಕಿಂತ ಸ್ಟೆನೋಗ್ರಫಿ ಮಾಡುವವರು ನೈತಿಕವಾಗಿ ತುಂಬಾ ಉನ್ನತ ಹಂತದಲ್ಲಿ ಇದ್ದಾರೆ ಅವರು ಅರೋಪಿ, ಆಪಾದಿತ, ಆರೋಪಿ ಪರ/ವಿರೋಧ ವಕೀಲರುಗಳ ವಾದಗಳನ್ನು ಯಾವುದೇ ಭಾವಾವೇಶಕ್ಕೆ ಒಳಗಾಗದೆ ಟೈಪಿಸುತ್ತಾರೆ. ಆದರೆ ಪತ್ರಕರ್ತರು ಬಲಾಢ್ಯರು ಎನು ಹೇಳುತ್ತಾರೋ ಅದನ್ನು ಟೈಪಿಸುತ್ತಾರೆ ಆ ಅರ್ಥದಲ್ಲಿ ಸ್ಟೆನೋಗ್ರಫಿ ಮಾಡುವವರು ಒಳ್ಳೆಯವರು ಸಾರ್. . .

ಇಂದು ನೀವು ಮಾಧ್ಯಮಗಳ ಮಾಲೀಕತ್ವವನ್ನು ನೋಡಬೇಕು. ನಿಮಗೆ ಗೊತ್ತಿರಲಿ ಭಾರತದಲ್ಲಿನ ಅತಿ ದೊಡ್ಡ ಮಾಧ್ಯಮ ಸಂಸ್ಥೆಗಳ ಒಡೆಯ ಮುಖೇಶ್ ಅಂಬಾನಿ ಆಗಿದ್ದಾರೆ. ಇಂದು ನಾವು ಮಾಧ್ಯಮ ಜಗತ್ತಿನ್ನು ಹಿಂದಿನಂತೆ ನೋಡಲು ಸಾಧ್ಯವಿಲ್ಲ. ಹಿಂದೆ ಸುದ್ದಿ ಪತ್ರಿಕೆಗಳು ಮತ್ತು ಟಿ.ವಿ ವಾಹಿನಿಗಳು ಕೆಲವು ಹಿತಾಸಕ್ತಿಗಳನ್ನು ಹೊಂದಿದ್ದವು. ಆದರೆ ಇಂದು ಇಡಿ ಮಾಧ್ಯಮವೆಂಬುದು ಬಹಳ ದೊಡ್ಡ ಕಾರ್ಪೋರೇಟ್ ಪ್ರಪಂಚದ ಹಿತಾಸಕ್ತಿಯ ಅತಿ ಸಣ್ಣ ವಿಭಾಗವಾಗಿ ಬದಲಾಗಿದೆ. ಇದು ನಮಗೆ ಅರ್ಥವಾಗಬೇಕು. ನೆಟ್ ವರ್ಕ್ 18 ದೇಶದಲ್ಲಿ ಮಾಧ್ಯಮಗಳನ್ನು ಒಗ್ಗೂಡಿಸುವ ಬಹಳ ದೊಡ್ಡ ಜಾಲವನ್ನು ಹೊಂದಿದ್ದರೂ ಅದು ರಿಲಯನ್ಸ್ ಕಂಪೆನಿಯ ಅತಿ ಸಣ್ಣ ಉದ್ಯಮವಾಗಿದೆ ಎಂಬ ಸತ್ಯವನ್ನು ನಾವು ತಿಳಿಯಬೇಕಿದೆ. ಇಂದು ನಿಜಕ್ಕೂ ಷೋರ್ಥ್ ಸ್ಟೇಟ್ ಮತ್ತು ರಿಯಲ್ ಎಸ್ಟೇಟ್ ಗಳ ನಡುವಿನ ವ್ಯತ್ಯಾಸವನ್ನು ಗುರುತಿಸುವುದು ಬಹಳ ಕಷ್ಟವಾದ ಕೆಲಸವಾಗಿದೆ. ಇಂದು ಅಸಮಾನತೆಯನ್ನು ಪೋಷಿಸುವ ವ್ಯವಸ್ಥೆ ನಮ್ಮನ್ನು ಅಳುತ್ತಿದೆ. ನಾನು ನಿಮ್ಮೊಂದಿಗೆ ಇರುತ್ತೇನೆ, ನಿಮ್ಮ ಬದ್ಧತೆಯ ಕುರಿತು ನನಗೆ ಗೌರವವಿದೆ ಆದರೆ ಈ ದೇಶದ ಬೇರೆ ಬೇರೆ ವಿಶ್ವವಿದ್ಯಾನಿಲಯಗಳ ಅವರಣದಲ್ಲಿ ನಡೆಯುತ್ತಿರುವ ಘಟನೆಗಳನ್ನು ನಾವು ಗಮನಿಸಬೇಕಿದೆ . . .

ನಿಮಗೆ ನೆನಪಿರಲಿ ಕಳೆದ 105 ದಿನಗಳಿಂದ “ಫಿಲ್ಮ್ ಅಂಡ್ ಟೆಲಿವಿಷನ್ ಇನ್ಸ್ಟಿಟ್ಯೂಟ್” ಪುಣೆ ವಿಧ್ಯಾರ್ಥಿಗಳು ಈ ಸರ್ಕಾರದ ವಿರುದ್ಧ ವಿಶ್ವವಿದ್ಯಾನಿಲಯದ ಮೇಲೆ ಯುಧಿಷ್ಟರನ ಹೇರಿಕೆಯನ್ನು ವಿರೋಧಿಸಿ ಹೋರಾಡುತ್ತಿದ್ದಾರೆ. ನಿಮಗೆ ಗೊತ್ತಾ? ನೈಜವಾದ ಮಹಾಭಾರತದಲ್ಲಿ ಯುಧಿಷ್ಟಿರ ಎಷ್ಟು ಪರಿಶುಧ್ಧ ಆತ್ಮ ಎಂದರೆ ಅವನು ಎಂದೂ ಸುಳ್ಳನ್ನೆ ಹೇಳಿರಲಿಲ್ಲ! ಆ ಕಾರಣಕ್ಕೆ ಆತನ ರಥ ಭೂಮಿಯಿಂದ 6 ಇಂಚು ಮೇಲಕ್ಕೆ ಚಲಿಸುತ್ತಿತ್ತು. ಅವನು ದ್ರೋಣರಿಗೆ “ಅಶ್ವಥಾಮ ಸತ್ತ” ಎಂದು ಸುಳ್ಳು ಹೇಳಿದ ದಿನ ಅವನ ರಥ ನೆಲವನ್ನು ತಾಕಿತಂತೆ. ಆದರೆ ಫಿಲ್ಮ್ ಅಂಡ್ ಟೆಲಿವಿಷನ್ ಇನ್ಸ್ಟಿಟ್ಯೂಟ್” ನ ಯುಧಿಷ್ಟರರ ರಥ ಭೂಮಿಯಿಂದ ಮೇಲೆ ಎದ್ದೆ ಇಲ್ಲ! ಅದು ಕೆಸರಿನಲ್ಲಿ ಹೂತು ಹೋಗಿದೆ. ಆ ಕಾರಣಕ್ಕೆ ಅವರನ್ನು ಯಾರು ಗೌರವಿಸುತ್ತಿಲ್ಲ. . 

ಇನ್ನೂ ರೋಹಿತ್ ವೇಮುಲಾ ಪ್ರಕರಣ, ನಾನು ಜನಸಂಖ್ಯೆಯ ಒಂದು ಅಂಕಿ-ಅಂಶವನ್ನು ನಿಮಗೆ ನೀಡುವುದು ಮರೆತೆ. ಈ ದೇಶದಲ್ಲಿ ಸುಮಾರು 400 ಮಿಲಿಯನ್ ಜನರು ಇದುವರೆಗೂ ಯಾವುದೇ ಹಂತದ ಶಿಕ್ಷಣ ಸಂಸ್ಥೆಗಳ ಒಳಭಾಗವನ್ನು ನೋಡಿಯೇ ಇಲ್ಲ ! ಭಾರತದಲ್ಲಿ ಕೇವಲ 3 ಶೇಕಡಾ, ಕೇವಲ ಮೂರೇ ಮೂರು ಶೇಕಡಾ ಗ್ರಾಮೀಣ ಕುಟುಂಬಗಳಲ್ಲಿ ಮಾತ್ರ ಪದವೀಧರರಿದ್ದಾರೆ. ಇದು ಭಾರತದ ಒಟ್ಟು ಜನಸಂಖ್ಯೆಯ ಸರಾಸರಿ. ಇದನ್ನು ಆದಿವಾಸಿ ಮತ್ತು ದಲಿತರ ಹಿನ್ನಲೆಯಲ್ಲಿ ನೋಡಿದರೆ ಆ ಸಂಖ್ಯೆ ಇನ್ನೂ ಕೆಳಹಂತದಲ್ಲಿದೆ. ಭಾರತದ ಜನಗಣತಿಯ ವರದಿಗಳು ತೋರಿಸುವಂತೆ ಆ ಹಿನ್ನಲೆಯಿಂದ ಬಂದ ರೋಹಿತ್ ಮೆರಿಟ್ ಕೋಟಾದಲ್ಲಿ ಪಿ.ಹೆಚ್.ಡಿ ಹಂತಕ್ಕೆ ಬರುತ್ತಾನೆ ಎಂದರೆ ಅದಕ್ಕಿಂತ ಸಾಧನೆ ಏನಿದೆ! ಆದರೆ ದುರಂತ ಎಂದರೆ ಇಂದು ಈ ಸಮಾಜದ ನಿರಂತರ ಶೋಷಣೆಯನ್ನು, ತಾರತಮ್ಯವನ್ನು ಜಯಿಸಿ ಮೆರಿಟ್ ಆಧಾರದಲ್ಲಿ ಕೇಂದ್ರೀಯ ವಿಶ್ವವಿದ್ಯಾನಿಲಯದಲ್ಲಿ ಪಿ.ಹಚ್.ಡಿ ಹಂತಕ್ಕೆ ಬಂದ ರೋಹಿತನ ವಿರುದ್ಧ ನಿಂತಿರುವುದು ಕಾಲೇಜು ಡ್ರಾಪ್ ಔಟ್ ಆದ ಶಿಕ್ಷಣ ಸಚಿವರು! ಇವರು ಇಂದು ಸಂಸ್ಕೃತ ಹೇರಿಕೆಯನ್ನು ನಮ್ಮ ಮೇಲೆ ಮಾಡುತ್ತಿದ್ದಾರೆ. ..

ನನಗೆ ಅನ್ನಿಸುವಂತೆ ನಮ್ಮ ಶಿಕ್ಷಣ ಸಚಿವೆಯಾದ ಮಿಸ್ ಇರಾನಿಯವರು ಈ ಹಿಂದೆ ನಟಿಸಿರುವ ಎಲ್ಲಾ ಧಾರವಾಹಿಗಳನ್ನು ಸಂಸ್ಕೃತಕ್ಕೆ ಅನುವಾದಿಸಿ ಪ್ರದರ್ಶಿಸಬೇಕು. ಅದು ಸಂಸ್ಕೃತವನ್ನು ಪ್ರೋತ್ಸಾಹಿಸಲು ಬಹಳ ಸಹಕಾರಿಯಾಗಿರುತ್ತದೆ ಎಂಬುದು ನನ್ನ ಭಾವನೆ. ಅಲಹಾಬಾದ್ ವಿಶ್ವವಿದ್ಯಾನಿಲಯದಲ್ಲಿ ನನ್ನ ಸ್ನೇಹಿತ ಸಿದ್ಧಾರ್ಥ್ ವರದರಾಜ್ ಅವರನ್ನು ಕಟ್ಟಡದಲ್ಲಿ ಬಂಧನಕ್ಕೆ ಒಳಪಡಿಸಿತ್ತು. ಒಬ್ಬರು ಕುಲಪತಿಗಳನ್ನು ಮನಬಂದಂತೆ ಧಳಿಸಲಾಗಿತ್ತು, ಬಿದ್ದ ಹೊಡೆತಗಳನ್ನು ತಾಳಲಾರದೆ ಅವರು ಅಸುನೀಗಿದ್ದರು.. .

ನೀವು ಈ ಹೋರಾಟದಲ್ಲಿ ಒಬ್ಬರೆ ಅಲ್ಲ ಅಥವಾ ದಾಳಿಗಳು ನಿಮ್ಮ ಮೇಲೆ ಮಾತ್ರ ನಡೆಯುತ್ತಿಲ್ಲ. ಇದು ಇವರ ನಿಜವಾದ ಮುಖ. ಈ ದೇಶದ ಪಿತಾಮಹನಾದ ಗಾಂಧಿಯನ್ನು ಕೊಂದು ಭ್ರಾತೃತ್ವದ ಮಾತನಾಡುವ ಇವರು ನಮ್ಮನ್ನು ದೇಶದ್ರೋಹಿಗಳು ಎನ್ನುತ್ತಿದ್ದಾರೆ, ದಯಮಾಡಿ ಸೆರೆಯಿಂದ ನಮ್ಮನ್ನು ಬಿಟ್ಟುಬಿಡಿ. ನಾವು ಎಲ್ಲಾ ಬಿಟ್ಟು ಒಳ್ಳೆಯ ಹುಡುಗರಂತೆ ವರ್ತಿಸುತ್ತೇವೆ ಎಂದು ಬ್ರೀಟಿಷರ ಮುಂದೆ ಬೇಡಿಕೊಂಡ ನಾಯಕರನ್ನು ಹೊಂದಿದ ಸಂಘಟನೆಯವರು ಇಂದು ದೇಶಭಕ್ತಿಯ ಪಾಠ ಮಾಡುತ್ತಿದ್ದಾರೆ . . .

ಇಂದು ನಾವು ಸಾಮಾಜಿಕ, ಧಾರ್ಮಿಕ/ಆರ್ಥಿಕ, ಮಾರುಕಟ್ಟೆ ಮೂಲಭೂತವಾದಿಗಳನ್ನು ಎದುರಿಸಬೇಕಿದೆ. ಒಂದು ಅಂಶ ನಾನು ಕಳೆದ ಕೆಲವು ವರ್ಷಗಳಿಂದ ನೋಡುತ್ತಿದ್ದೇನೆ. ಜೆ,ಎನ್.ಯು ವಿವಿಧತೆಗೆ, ಭಿನ್ನಾಬಿಪ್ರಾಯದ ಚರ್ಚೆಗೆ ಹೆಸರಾಗಿದೆ. ಇಲ್ಲಿರುವ ಎಲ್ಲಾ ಸಂಘಟನೆಗಳು ತಮ್ಮ ಭಿನ್ನಾಭಿಪ್ರಾಯಗಳನ್ನು ಇಟ್ಟುಕೊಂಡೆ ಕಳೆದ ಹತ್ತು ವರ್ಷಗಳಿಂದ ಅತ್ಯಂತ ಕೆಟ್ಟ ಆಡಳಿತದ ವಿರುದ್ಧ ತಾವುಗಳು ಮಾಡುತ್ತಿರುವ ಹೋರಾಟ ನಿಜಕ್ಕೂ ಹೆಮ್ಮೆಯ ವಿಷಯ. ದಯಮಾಡಿ ಈ ಒಗ್ಗಟ್ಟನ್ನೂ ಕಳೆದುಕೊಳ್ಳಬೇಡಿ.  ನಿಮ್ಮ ನಿಮ್ಮ ಭಿನ್ನಾಭಿಪ್ರಾಯಗಳನ್ನು ಇಟ್ಟುಕೊಂಡೆ ಈ ಸಾಮಾಜಿಕ, ಧಾರ್ಮಿಕ/ಆರ್ಥಿಕ, ಮಾರುಕಟ್ಟೆ ಮೂಲಭೂತವಾದಿಗಳನ್ನು ಎದುರಿಸಿ. ನನಗೆ ನಿಜಕ್ಕೂ ನಿಮ್ಮಗಳ ಮೇಲೆ ಹೆಮ್ಮೆ ಇದೆ. . .
ಧನ್ಯವಾದಗಳು . . .

ಫೆಬ್ರ 20, 2016

ಪಿ.ಸಾಯಿನಾಥ್: ನಿಮ್ಮ ಹೋರಾಟ ಭಿನ್ನಾಭಿಪ್ರಾಯಗಳನ್ನೇ ಅಪರಾಧ ಎಂದು ಸಾಧಿಸಲು ಹೊರಟಿರುವ ಶಕ್ತಿಗಳ ವಿರುದ್ಧ...ಭಾಗ 1

ದಿನಾಂಕ-19-02-2016 ರಂದು ಜೆ.ಎನ್.ಯು ನಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಪಿ. ಸಾಯಿನಾಥ್ ಮಾತನಾಡಿದ್ದರು. ಅದರ ಕನ್ನಡ ಭಾವಾನುವಾದದ ಮೊದಲ ಭಾಗ ಇಲ್ಲಿದೆ.
ಮೂಲ ಭಾಷಣ: ಪಿ ಸಾಯಿನಾಥ್ 
ಅನುವಾದ: ಡಾ.ಕಿರಣ್ ಎಂ ಗಾಜನೂರು
ಇದುವರೆಗೂ ನನ್ನನ್ನು ಪರಿಚಯಿಸಿದವರು ನನ್ನ ಕುರಿತು ಬಹಳಷ್ಟು ವಿಷಯಗಳನ್ನು ಹೇಳಿದ್ದಾರೆ; ಅದಕ್ಕೆ, ನಾನು ಸಹ ಒಬ್ಬ ಜೆ.ಎನ್.ಯು ದ ಹಿರಿಯ ವಿದ್ಯಾರ್ಥಿಯಾಗಿದ್ದೇನೆ ಎಂಬ ಹೆಮ್ಮೆಯ ವಿಷಯವನ್ನು ಸೇರಿಸ ಬಯಸುತ್ತೇನೆ. ಆ ನಂತರ ಸುಮಾರು 25 ರಿಂದ 30 ವರ್ಷಗಳ ನಂತರ ಈ ವಿಶ್ವವಿದ್ಯಾನಿಲಯದ ಕಾರ್ಯಕಾರಿ ಮಂಡಳಿಯ ಸದಸ್ಯನಾಗಿ 5 ವರ್ಷಗಳ ಕಾಲ ಸೇವೆ ಸಲ್ಲಿಸಲು ಮತ್ತೆ ಇಲ್ಲಿಗೆ ಬಂದೆ. ಆದರೆ ನನ್ನ ಸೇವೆಯ ಶೇ 80 ರಷ್ಟು ಸಮಯ ಸುಪ್ರೀಂ ಕೋರ್ಟ್ ತೀರ್ಪು, ಸಂಸತ್ತಿನ ಕಾಯ್ದೆ ಎಲ್ಲವನ್ನೂ ಧಿಕ್ಕರಿಸಿ ಹಿಂದುಳಿದ ವರ್ಗಗಳಿಗೆ ನೀಡಬೇಕಿದ್ದ 27ಶೇ ಮೀಸಲಾತಿಯನ್ನು ಅಲ್ಲಗಳೆಯುತ್ತಿದ್ದ ಕೆಲವು ಜನರನ್ನು ಎದುರಿಸುವುದರಲ್ಲಿಯೇ ಕಳೆದು ಹೋಯಿತು. ಅಂತಿಮವಾಗಿ ನಾವು ಗೆದ್ದೆವು, ಅದು ಬೇರೆ ವಿಚಾರ. ನಿಜ ಹೇಳಬೇಕು ಎಂದರೆ ನಾನು ವಿದ್ಯಾರ್ಥಿಯಾಗಿ ಇಲ್ಲಿನ ಗಂಗಾ ವಸತಿ ನಿಲಯದ ಅಧ್ಯಕ್ಷನಾಗಿದ್ದಾಗ ಇದ್ದಷ್ಟು ಸಂತೋಷ ಇಲ್ಲಿನ ಕಾರ್ಯಕಾರಿ ಮಂಡಳಿಯ ಸದಸ್ಯನಾಗಿದ್ದಾಗ ಇರಲಿಲ್ಲ . .

ನಾನು ಇಂದು ದೆಹಲಿಗೆ ನಿಮಗಾಗಿಯೇ ಬಂದಿದ್ದೇನೆ. ನನಗೆ ದೆಹಲಿಯಲ್ಲಿ ಬೇರೆ ಯಾವ ಕೆಲಸವೂ ಇಲ್ಲ. ನಾನು ಏಕೆ ಇಂದು ನಿಮ್ಮ ಎದುರು ನಿಂತಿದ್ದೇನೆ ಎಂದರೆ ಇಂದು ನೀವು ಮಾಡುತ್ತಿರುವ ಹೋರಾಟ ನಿಮ್ಮ ಬೇಡಿಕೆಗಳಿಗೆ ಮಾತ್ರ ಸೀಮಿತವಾಗಿರದೆ ಅದಕ್ಕಿಂತಲೂ ಮೀರಿದ ವಿಶಾಲವಾದ ಸಂಗತಿಯೊಂದರ ಕಡೆಗೆ ನಮ್ಮನ್ನು ಸೆಳೆಯುತ್ತಿದೆ.

ಈ ದೇಶದಲ್ಲಿ ಇಂದು ನಡೆಯುತ್ತಿರುವ ಹೋರಾಟಗಳ ಕುರಿತು ಅದ್ಯತಾ ಪಟ್ಟಿಯೊಂದನ್ನು ತಯಾರು ಮಾಡಿಕೊಂಡರೆ ನಿಮ್ಮ ಹೋರಾಟ 3ನೇ ಸ್ಥಾನದಲ್ಲಿ ಇದೆ. ಆದರೆ ನಿಮಗೆ ನೆನಪಿರಲಿ ಈ ಹೋರಾಟವನ್ನು ಈ ದೇಶದ ಸಾಮಾನ್ಯ, ಬಡವ, ದಲಿತ ಕಳೆದ ಎರಡು ದಶಕಗಳಿಂದ ನಡೆಸುತ್ತಲೇ ಬರುತ್ತಿದ್ದಾರೆ. ಇಂದು ಆ ಹೋರಾಟ ಜೆ.ಎನ್.ಯು ಅಂತಹ ಎಲೈಟ್ ವಿಶ್ವವಿದ್ಯಾನಿಲಯಗಳ ಅಂಗಳವನ್ನು ತಲುಪಿದೆ ಅಷ್ಟೆ! ಇದು ನಿಮಗೆ ಅರ್ಥವಾಗಬೇಕು. ನೀವು ನಿಜವಾಗಿಯೂ ಹೋರಾಡುತ್ತಿರುವುದು ಭಿನ್ನಾಭಿಪ್ರಾಯಗಳನ್ನೆ ಅಪರಾಧ ಎಂದು ಸಾಧಿಸಲು ಹೊರಟಿರುವ ಪ್ರಕ್ರಿಯೆಯ ವಿರುದ್ಧ. ನಮ್ಮ ನಡುವೆ ನಡೆಯುತ್ತಿರುವ ಈ ಸಂಗತಿ ಕೇವಲ ಸಂವಿಧಾನಿಕ ಕಾನೂನಿನ ವಿರೋಧ ಅಥವಾ ಅತಿಕ್ರಮಣದ ಪ್ರಕ್ರಿಯೆ ಮಾತ್ರ ಆಗಿ ನೋಡಲಾಗದು, ಬದಲಾಗಿ ಇದು ನಮ್ಮ ನಡುವಿನ ಅಭಿಪ್ರಾಯ ಭಿನ್ನತೆ ಹೊಂದುವುವವರನ್ನು ಅಪರಾಧಿಗಳೆಂದು ವಿವರಿಸುತ್ತಿರುವ ಮಾದರಿಯ ವಿರುದ್ಧದ ಹೋರಾಟ ಎಂಬ ವಿಶಾಲ ಅರ್ಥದಲ್ಲಿ ನೋಡಬೇಕಿದೆ.

ಇಂದು ನೀವು ಬದುಕುತ್ತಿರುವ ಕಾಲಘಟ್ಟ ಕೇವಲ ಅಸಮಾನತೆಯ ಕಾಲ ಮಾತ್ರವಲ್ಲ ಬದಲಾಗಿ ಕಾರ್ಪೊರೇಟ್ ಶಕ್ತಿಗಳ ದಮನಕಾರಿ ನೀತಿಯನ್ನು ಎದುರಿಸುತ್ತಿದ್ದ ಧ್ವನಿಗಳನ್ನು ಹತ್ತಿಕ್ಕುತ್ತಿರುವ ಕಾಲಘಟ್ಟವೂ ಹೌದು. ಜೀವನದಲ್ಲಿ ಎಂದಿಗೂ ಪೋಲಿಸ್ ಠಾಣೆಯ ಮೆಟ್ಟಿಲು ಹತ್ತಿರದ ಒರಿಸ್ಸಾದ ಕಳಿಂಗಾ ನಗರದಲ್ಲಿನ, ಉತ್ಕಲ್ ವಿಶ್ವವಿದ್ಯಾನಿಲಯದಿಂದ ಪದವಿ ಪಡೆದಿರುವ ಅದಿವಾಸಿ ಕುಟುಂಬವೊಂದು ಟಾಟಾ ಕಂಪೆನಿಯನ್ನು ತಮ್ಮ ಭೂಮಿಯ ಹಕ್ಕಿಗಾಗಿ ಎದುರಿಸುತ್ತದೆ ಮತ್ತು ಅನ್ನ ನೀಡುವ ಭೂಮಿಯನ್ನು ಕೊಡಲು ನಿರಾಕರಿಸುತ್ತದೆ. ಪರಿಣಾಮ ಇಂದು ಆ ಕುಟುಂಬದ ಮೇಲೆ 91 ಪ್ರಕರಣಗಳು ದಾಖಲಾಗಿವೆ! ಎಷ್ಟು 91 ಪ್ರಕರಣಗಳು!

ಒಡಿಸ್ಸಾದ ಜಗತ್ ಸಿಂಗ್ಪುರ್ ನಲ್ಲಿ ಪೋಸ್ಕೋ ವಿರುದ್ಧದ ಹೋರಾಟದ ನಾಯಕ ಅಭಯ್ ಸಾಹು, ನಿಮಗೆ ನೆನಪಿರಲಿ ಈತ ಹೋರಾಡಿ ಪೋಸ್ಕೋವನ್ನು ಮಣಿಸಿದ್ದಾನೆ; ಪ್ರತಿಬಾರಿ ಅವನನ್ನು ಬೇಟಿ ಮಾಡಿದಾಗ ನಾನು ಎಷ್ಟಾದವು ಎಂದು ಆತನನ್ನು ಕೇಳುತ್ತೇನೆ, ಆತ ತನ್ನ ಮೇಲೆ ದಾಖಲಾಗಿರುವ ಪ್ರಕರಣಗಳ ಮಾಹಿತಿಯನ್ನು ನೀಡುತ್ತಿರುತ್ತಾನೆ ಕಳೆದ ಬಾರಿಯ ಭೇಟಿಯಲ್ಲಿ ಆತನ ಮೇಲೆ 56 ರಿಂದ 58 ಪ್ರಕರಣಗಳು ದಾಖಲಾಗಿದ್ದವು. ಆ ಹಳ್ಳಿಯ ಜನ ಪ್ರಕರಣಗಳಿಗೆ ಹೆದರಿ ಹಳ್ಳಿಯಿಂದ ಹೊರಬರುವುದನ್ನೆ ಬಿಟ್ಟು ಬಿಟ್ಟಿದ್ದಾರೆ ಆ ಕಾರಣಕ್ಕೆ ಅವರುಗಳಿಗೆ ಅಣ್ಣ, ತಮ್ಮ ಬಂಧುಗಳನ್ನು ಭೇಟಿಯಾಗಲು ಸಾಧ್ಯವಾಗುತ್ತಿಲ್ಲ.

ನೀವು ರಿಲಯನ್ಸ್ ಮತ್ತು ಎಸ್.ಇ.ಝೆಡ್ (ವಿಶೇಷ ಆರ್ಥಿಕ ವಲಯ) ಪ್ರಾಜೆಕ್ಟ್ ಗಳನ್ನು ವಿರೋಧಿಸುತ್ತಿರುವ ದೇಶದ ಯಾವುದೇ ಭಾಗವನ್ನು ಸಂದರ್ಶಿಸಿ ಇದು ನಿಮಗೆ ಕಾಣಿಸುತ್ತದೆ. ಇಂದು ಪ್ರಕರಣಗಳನ್ನು ದಾಖಲಿಸಿ ಹೋರಾಟಗಳನ್ನು ಹತ್ತಿಕ್ಕುವುದು ಒಂದು ತಂತ್ರವಾಗಿಬಿಟ್ಟಿದೆ. ಇದು ಇಲ್ಲಿ ಮಾತ್ರ ನಡೆಯುತ್ತಿಲ್ಲ, ಬದಲಾಗಿ ದೇಶದ ಎಲ್ಲಾ ಕಡೆ ನಡೆಯುತ್ತಿದೆ ಉದಾಹರಣೆಗೆ ನೀವು ಒಂದು ಸಂಗತಿಯನ್ನು ಎದುರಿಸಿ ಪ್ರತಿಭಟನೆ ನಡೆಸಿದರೆ ಪೋಲಿಸರು ಕನ್ಹಯ್ಯ ಕುಮಾರ್ ಮತ್ತು 800 ಇತರರು ಎಂದು ಪ್ರಕರಣ ದಾಖಲಿಸಿಬಿಡುತ್ತಾರೆ. ಇದು ಅವರಿಗೆ ಸುತ್ತ ಮುತ್ತಲಿನ ಹಳ್ಳಿಗಳನ್ನು ಮುಂದಿನ ಮೂರು ವರ್ಷಗಳ ಕಾಲ ದಾಳಿ ಮಾಡಲು ಮತ್ತು ಜನರನ್ನು ಹೆದರಿಸಲು ಸಹಕಾರಿಯಾಗುತ್ತದೆ ಎ.ಬಿ.ಸಿ ಮತ್ತು 800 ಇತರರು ಪೋಲಿಸರ ಮೇಲೆ ಹಲ್ಲೆ ನಡೆಸಿದರು ಎಂದು ಪ್ರಕರಣ ದಾಖಲಾಗುತ್ತದೆ.

ಕೋರಾಪುರದ ಜೈಲಿನಲ್ಲಿ ನಾನು ಒಬ್ಬರನ್ನು ಬೇಟಿಯಾಗಲು ಹೋಗಿದ್ದೆ. ವೃತ್ತಿಯಲ್ಲಿ ಅವರು ರಸಾಯನಶಾಸ್ತ್ರದ ಪ್ರಾಧ್ಯಾಪಕರು. ಆದರೆ ನಮಗೆ ಅವರನ್ನು ಬೇಟಿಯಾಗಲು ಸಾಧ್ಯವಾಗಲಿಲ್ಲ. ಆದರೆ ಅವರ ವಕೀಲರು ನಮ್ಮೊಡನೆ ಮಾತನಾಡಿದರು. ನಿಮಗೆ ಕೇಳಿ ಆಶ್ಚರ್ಯವಾಗುತ್ತದೆ, ಒಬ್ಬ ರಸಾಯನ ಶಾಸ್ತ್ರದ ಪ್ರಾಧ್ಯಾಪಕರ ಮೇಲೆ ಎಮ್ಮೆ ಕದ್ದ ಆರೋಪ ಹೋರಿಸಿ ಪ್ರಕರಣ ದಾಖಲಿಸಲಾಗಿದೆ. ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಈ ರೀತಿಯ ಪ್ರಕರಣಗಳು ನಮ್ಮಗಳ ಮೇಲೆಯೂ ದಾಖಲಾಗಿವೆ. ಇಲ್ಲಿ ಆ ಪ್ರಾಧ್ಯಾಪಕರನ್ನು ಮತ್ತು ಎಮ್ಮೆಯನ್ನು ನಮಗೆ ಭೇಟಿಯಾಗಲು ಸಾಧ್ಯವಾಗಲಿಲ್ಲ ಅದು ಬೇರೆ ವಿಚಾರ.

ಸಿತಾಕುಲಂ ಜಿಲ್ಲೆಯಲ್ಲಿನ ಪೋರ್ಟ್ ವಿರುಧ್ಧದ ಹೋರಾಟದಲ್ಲಿ 78 ವರ್ಷದ ಮಹಿಳೆಯ ಮೇಲೆ, ಈ ವರ್ಷ ಆಕೆಗೆ 80 ವರ್ಷ ತುಂಬುತ್ತದೆ. ಆಕೆಯ ಮೇಲೆ ಪೋಲಿಸರನ್ನು ಕೊಲ್ಲುವುದಕ್ಕೆ ಪ್ರಯತ್ನಿಸಿದ್ದು ಸೇರಿದಂತೆ 23 ಪ್ರಕರಣಗಳು ದಾಖಲಾಗಿವೆ. ಆಕೆ ಸುಮಾರು ಐದು ಅಡಿ ಇರಬಹುದು. 35 ಕೆ.ಜಿ ತೂಕವನ್ನು ಹೊಂದಿರಬಹದು. ಆಕೆ ದಾಳಿ ಮಾಡಲು ಬಂದ 20 ರಿಂದ 23 ಜನ ಪೋಲಿಸರನ್ನು ಕೊಲ್ಲಲು ಯತ್ನಿಸಿದಳು ಎಂಬ ಆರೋಪವನ್ನು ಹೊರಿಸಲಾಗಿದೆ. ಈ ಪ್ರವೃತ್ತಿಯೀಗ ಎಲೈಟ್ ವಿಶ್ವವಿದ್ಯಾನಿಲಯವನ್ನು ತಲುಪಿರುವುದನ್ನು ಸ್ವಾಗತಿಸಬೇಕಿದೆ ಮತ್ತು ಇಂತಹದರ ವಿರುಧ್ಧ ನಾವು ಪ್ರತಿಭಟಿಸಬೇಕಿದೆ.

ನಾನು ನಾಳೆಗೆ ಎಲ್ಲವೂ ಸರಿಹೋಗಿಬಿಡುತ್ತದೆ ಎಂದು ಹೇಳುತ್ತಿಲ್ಲ. ನನಗೆ ಅನ್ನಿಸುವಂತೆ ಮುಂದಿನ ದಿನಗಳಲ್ಲಿ ಪರಿಸ್ಥಿತಿ ಇನ್ನೂ ಭೀಕರವಾಗಲಿದೆ. ಆದರೆ ಭವಿಷ್ಯದಲ್ಲಿ ಖಂಡಿತ ಪರಿಸ್ಥಿತಿ ಉತ್ತಮಗೊಳ್ಳುತ್ತದೆ, ಆದರೆ ಅದಕ್ಕೂ ಮುಂಚೆ ಅತ್ಯಂತ ದುರ್ಗಮ ದಾರಿಯನ್ನು ಪರಿಸ್ಥಿತಿಯನ್ನು ನಾವು ನೋಡಬೇಕಿದೆ. ಆದರೆ ಭವಿಷ್ಯ ಹೇಗೆ ಬದಲಾಗುತ್ತದೆ ಎಂಬುದು ನಾವು ಮತ್ತು ನಮ್ಮ ಕಾನೂನು ಹೇಗೆ ಕೆಲಸ ಮಾಡುತ್ತೇವೆ ಎಂಬುದು ನಿರ್ಧರಿಸಲಿದೆ. ನನಗೆ ಜೆ.ಎನ್.ಯು ವಿಧ್ಯಾರ್ಥಿ ಸಮುದಾಯದಲ್ಲಿ ಅಪಾರವಾದ ನಂಬಿಕೆಯಿದೆ. ಆ ಕಾರಣಕ್ಕೆ ನಾನು ನಿಮ್ಮೊಳಗೆ ಒಬ್ಬನಾಗಿ ಇಂದು ಇಲ್ಲಿ ನಿಂತಿದ್ದೇನೆ ಈ ಹೋರಾಟದಲ್ಲಿ ನೀವು ಗೆದ್ದೇ ಗೆಲ್ಲುತ್ತೀರಾ ಎಂಬ ನಂಬಿಕೆ ನನಗಿದೆ.

ನೀವು ಇಂದು ಈ ದೇಶದ ಎಂದೂ ಕಂಡಿರದ ಅಸಮಾನತೆಯ ಕಾಲದಲ್ಲಿ ನಿಂತಿದ್ದೀರಾ ಜೊತೆಗೆ ಹೆಚ್ಚುತ್ತಿರುವ ಮೂಲಭೂತವಾದಿ ಶಕ್ತಿಗಳು ನಮ್ಮ ಮುಂದಿವೆ. ನನ್ನ ದೃಷ್ಟಿಯಲ್ಲಿ ಇಂದು ಭಾರತ ಸಾಮಾಜಿಕ ಮತ್ತು ಧಾರ್ಮಿಕ ಮೂಲಭೂತವಾದಿಗಳು ಮಾರುಕಟ್ಟೆ ಶಕ್ತಿಗಳೊಂದಿಗೆ ಸೇರಿ ಮಾಡಿಕೊಂಡಿರುವ ಮೈತ್ರಿಕೂಟದಿಂದ ಆಳಲ್ಪಡುತ್ತಿದೆ, ಇದು ನನ್ನ ಅಭಿಪ್ರಾಯ ಆಗಿದೆ ಈ ಕುರಿತ ಚರ್ಚೆಗೆ ನಾನು ಸಿದ್ಧನಿದ್ದೇನೆ. ಆ ಎರಡು ಶಕ್ತಿಗಳು (ಸಾಮಾಜಿಕ ಮತ್ತು ಧಾರ್ಮಿಕ ಮೂಲಭೂತವಾದಿಗಳು ಮತ್ತು ಮಾರುಕಟ್ಟೆ ಶಕ್ತಿಗಳು) ಪರಸ್ಪರ ಹೊಂದಿಕೊಂಡೆ ಸಾಗುವ ಅನಿವಾರ್ಯತೆಯನ್ನು ಹೊಂದಿವೆ. ತುಂಬಾ ಸಾರಿ ಬಹಳ ದೊಡ್ಡ ಸಂಖ್ಯೆಯ ಜನರು ಮಾರುಕಟ್ಟೆ ಮೂಲಭೂತವಾದಿಗಳು ಮತ್ತು ಧಾರ್ಮಿಕ ಮೂಲಭೂತವಾದಿಗಳಾಗಿರುವುದನ್ನು ನಾವು ಕಾಣಬಹುದಾಗಿದೆ . . .

ಮೊದಲು ನಾವು ಮಾರುಕಟ್ಟೆ ಮೂಲಭೂತವಾದಿಗಳು, ಯಾವ ಧಾರ್ಮಿಕ ಮೂಲಭೂತವಾದಿಗಳಿಂದ ಕಡಿಮೆ ಇಲ್ಲ ಎಂಬುದನ್ನು ಅರ್ಥಮಾಡಿಕೊಳ್ಳಬೇಕಿದೆ. ಈ ಎರಡು ಶಕ್ತಿಗಳು ತಮ್ಮದೇ ಆದ ಪವಿತ್ರ ಗ್ರಂಥಗಳು, ಪುರಾಣಗಳು, ದೈವವಾಣಿಗಳು ಮತ್ತು ಪಂಡಿತರನ್ನು ಹೊಂದಿವೆ. ಮಾರುಕಟ್ಟೆ ಮೂಲಭೂತವಾದಿಗಳು, ಧಾರ್ಮಿಕ ಮೂಲಭೂತವಾದಿಗಳಿಗಿಂತ ಹೆಚ್ಚು ಟಿ.ವಿ ವಕ್ತಾರರನ್ನು ಹೊಂದಿದ್ದಾರೆ ಅವರು ಪ್ರತಿದಿನ ಸಂಜೆ ಎಲ್ಲಾ ಚಾನೆಲ್ ಗಳಲ್ಲಿಯೂ ಕಾಣಲು ಸಿಗುತ್ತಾರೆ. . .

ಅಭಿವೃದ್ಧಿ, ಆಯ್ಕೆ ಎಂಬ ಮಾರುಕಟ್ಟೆ ಮೂಲಭೂತವಾದಿಗಳ ದೈವವಾಣಿಗಳು ಜೆ.ಎನ್.ಯು ವಿಧ್ಯಾರ್ಥಿಗಳಾದ ನಿಮಗೆ ಗೊತ್ತಿರುತ್ತವೆ. ಮಾರುಕಟ್ಟೆ ನಿಜಕ್ಕೂ ನಮಗೆ ಆಯ್ಕೆಯ ಸ್ವಾತಂತ್ರ‍್ಯ ನೀಡುತ್ತದೆಯೇ? ಈ ಕುರಿತು ವಿಸ್ತೃತ ಚರ್ಚೆಗಳು ಆಗುತ್ತಿರುತ್ತವೆ, ಇತ್ತೀಚೆಗೆ ವಾರ ಅಥವಾ ಹತ್ತು ದಿನಗಳ ಹಿಂದೆ ನಮ್ಮ ನಡುವಿನ ಇಬ್ಬರು ಮಾರುಕಟ್ಟೆ ಮೂಲಭೂತವಾದಿಗಳು ಒಂದು ಟಿ.ವಿ ವಾಹಿನಿಯಲ್ಲಿ ಥಾಮೇಸ್ ಪೀಕೆಟಿ ಅವರೊಂದಿಗೆ ಚರ್ಚಿಸುತ್ತಾ ಅಸಮಾನತೆ ಎಂಬುದು ಅಂಥ ತಲೆಕೆಡಿಸಿಕೊಳ್ಳಬೇಕಾದ ಸಂಗತಿಯಲ್ಲ ಮತ್ತು ಜನರ ಸಂಪತ್ತು ಮುಳುಗುತ್ತಿರುವುದು ದೊಡ್ಡ ವಿಷಯವಾಗಬೇಕಿಲ್ಲ ಎಂದು ವಾದಿಸುತ್ತಿದ್ದರು. ಹೀಗೆ ವಾದಿಸುತ್ತಿದ್ದವರು ವಿವೇಕ್ ಡಿಬ್ರಾಯ್ ಮತ್ತು ನಮ್ಮ ಸರ್ಕಾರದ ಮುಖ್ಯ ಆರ್ಥಿಕ ಸಲಹೆಗಾರರಾದ ಅರವಿಂದ ಸುಬ್ರಮ್ಹಣ್ಯ. ನನಗೆ ನೀತಿ ಅಯೋಗದ ವಿವೇಕ್ ಡಿಬ್ರಾಯ್ ಅವರೊಂದಿಗೆ ಯಾವುದೇ ಸಮಸ್ಯೆಗಳಿಲ್ಲ, ತಮಿಳುನಾಡಿನ ನನ್ನ ಸ್ನೇಹಿತರು “ನೀತಿ ಅಯೋಗ”ವನ್ನು “ನೀತಿ ಅಯ್ಯೂ” ಎಂದು ಕರೆಯುತ್ತಾರೆ. ಇವರು ಹೇಳುತ್ತಿದ್ದರು ಇಂದು ಮಾರುಕಟ್ಟೆಯಲ್ಲಿ ಹೂಡಿದ ಹಣವನ್ನು ಜನರು ಕಳೆದುಕೊಳ್ಳುತ್ತಿದ್ದರೆ ಅದು ಅವರ ವ್ಯವಹಾರ, ಅದಕ್ಕೂ ನಮಗೂ ಸಂಬಂಧವಿಲ್ಲ ಎನ್ನುತ್ತಿದ್ದಂತೆ ಅರವಿಂದ ಸುಬ್ರಮ್ಹಣ್ಯ ಅವರು ‘ವಿವೇಕ್ ಸರಿಯಾಗಿ ಹೇಳುತ್ತಿದ್ದಾರೆ’ ಎನ್ನುತ್ತಿದ್ದರು. ಅವರ ಇಬ್ಬರ ಅಲೋಚನೆಗಳು ಒಂದೆ ಆಗಿವೆ . . .

ನಾವು ಮಾರುಕಟ್ಟೆ ಮೂಲಭೂತವಾದದ ಕುರಿತು ನಮ್ಮೆದುರು ಬರುತ್ತಿರುವ ಅಸಮಾನತೆಯ ಮಾದರಿಗಳ ಕುರಿತು ಮಾತನಾಡುವಾಗ ಯುಪಿಎ ಮತ್ತು ಎನ್.ಡಿ.ಎ ನಿಲುವುಗಳಲ್ಲಿ ಅಂತಹ ಅಂತರ ಕಾಣಲಾಗುವುದಿಲ್ಲ. ಈ ಸಂದರ್ಭದಲ್ಲಿ ವೃತ್ತಿಯಲ್ಲಿ ನನ್ನ ಸಹೋದ್ಯೋಗಿಯಾದ ಅರುಣ್ ಶೌರಿ ಅವರ ಮಾತೊಂದು ನೆನಪಿಸಿಕೊಳ್ಳಬೇಕು. ಅವರು ಬಿ.ಜೆ.ಪಿ ಎಂದರೆ ಕಾಂಗ್ರೆಸ್+ಗೋವು ಎಂಬ ವಿಮರ್ಶೆಯನ್ನು ಅರುಣ್ ಶೌರಿ ಮಾಡಿದ್ದರು. ಅವರ ಪ್ರಕಾರ ದೇಶದ ನೀತಿಗಳ ರಚನೆಯ ವಿಷಯದಲ್ಲಿ ಬಿ.ಜೆ.ಪಿ ಎಂದರೆ ದನದ ವಿಷ್ಯವನ್ನು ಸೇರಿಸಿಕೊಂಡ ಮತ್ತೊಂದು ಕಾಂಗ್ರೆಸ್ ಅಷ್ಟೆ ಎಂದುಬಿಟ್ಟಿದ್ದರು. . . .

ನಾವು ಮಹಾರಾಷ್ಟ್ರಕ್ಕೆ ಬಂದರೆ ನೀವು ಪತ್ರಿಕೆಗಳಲ್ಲಿ ನೋಡುತ್ತಲೇ ಇರುತ್ತೀರ, ಅಲ್ಲಿ ಗೋಮಾಂಸ ಸೇವನೆಯನ್ನು ನಿಷೇಧಿಸಲಾಗಿದೆ. ಈ ನಿಷೇಧದ ಹಿಂದಿರುವ ಬಹಳ ಪ್ರಮುಖವಾದ ನಂಬಿಕೆ ಮೂಲಭೂತವಾದಿಗಳು ಗೋವನ್ನು ಪವಿತ್ರ ಎಂದು ಭಾವಿಸುತ್ತಾರೆ ಎಂಬುದು. ಉಳಿದೆಡೆಗಳಲ್ಲಿಯೂ ಗೋವನ್ನು ಬಹಳ ಪವಿತ್ರ ಎಂದು ಗುರುತಿಸಲಾಗುತ್ತದೆ. ಅದಕ್ಕಿಂತ ಮುಖ್ಯವಾಗಿ ಕೃಷಿ ಪ್ರಧಾನ ಸಮುದಾಯಗಳನ್ನು ಹೊಂದಿರುವ ಭಾರತದಲ್ಲಿ ಗೋವು ಕೃಷಿ ಆರ್ಥಿಕತೆಯಲ್ಲಿ ಮಹತ್ವದ ಸ್ಥಾನ ಹೊಂದಿದೆ. ಅದರಲ್ಲಿ ಯಾವುದೇ ಸಂಶಯವಿಲ್ಲ. . .

ಅದರೆ ಇಂದು ಜಾರಿಯಲ್ಲಿರುವ ಗೋವುಗಳನ್ನು ಮಾಂಸಕ್ಕಾಗಿ ಕೊಲ್ಲುವುದು ಮತ್ತು ಮಾರಾಟ ಮಾಡುವುದರ ಮೇಲಿನ ನಿಷೇಧ (ಈ ನಿಷೇಧ ಎಮ್ಮೆ ಕೋಣಗಳ ಮೇಲೂ ಹೆರಲಾಗುತ್ತಿದೆ) ಮೂಲಭೂತವಾದಿಗಳ ಅಲೋಚನೆಯಾಗಿದೆ. ಈ ಕುರಿತಂತೆ ನಾವು ಸ್ಪಲ್ಪ ತಿಳಿದುಕೊಳ್ಳಬೇಕಿದೆ. ನೀವು ನಮ್ಮ ಇತ್ತೀಚಿನ ಜನಸಂಖ್ಯೆ ವರದಿಯ ಅಂಕಿ-ಅಂಶಗಳನ್ನು ನೋಡಿದರೆ ಐಡಿಯಾಲಜಿಕಲಿ ಮತ್ತು ಧಾರ್ಮಿಕವಾಗಿ ಈ ದೇಶದ ಶೇ 42ರಷ್ಟು ಜನಸಂಖ್ಯೆಗೆ ಗೋ ಮಾಂಸ ಸೇವನೆಗೆ ಯಾವುದೇ ತಕರಾರು ಇಲ್ಲ. ಅದರಾಚೆಗೆ ಹಿಂದೂ ಎಂದು ಕರೆಯಲ್ಪಡಬಹುದಾದ ಬಹುದೊಡ್ಡ ಜನಸಂಖ್ಯೆಯ ಬಹಳಷ್ಟು ಮಂದಿಗೆ ಗೋ ಮಾಂಸ ಒಂದು ಸಮಸ್ಯೆಯೇ ಅಲ್ಲ! ಕೇರಳದಲ್ಲಿ ಬಿ.ಜೆ.ಪಿಯ ನಾಯಕರು ಗೋ ಮಾಂಸ ತಿನ್ನುತ್ತಿರುವ ವೀಡಿಯೋ ಅಂತರ್ಜಾಲದಲ್ಲಿ ಸಂಚಲನ ಸೃಷ್ಟಿಸಿದೆ. ಅದಕ್ಕೆ ಪ್ರತಿಯಾಗಿ ನಾನು ಗೋ ಮಾಂಸ ತಿನ್ನುತ್ತಿರುವುದು ಮೂರು ವರ್ಷಗಳ ಹಿಂದೆ! ಇಲ್ಲ ಇಲ್ಲ ಇದು ಗೋ ಮಾಂಸ ಅಲ್ಲ ಇದು ಈರುಳ್ಳಿ ಪಕೋಡಾ! ಎಂಬ ಕೆಲವು ವೀಡಿಯೋಗಳನ್ನು ಹರಿಬಿಡಲಾಗಿದೆ. ಆದರೆ ಈ ಸಂಗತಿಯಿಂದ ನಾವು ಅರ್ಥಮಾಡಿಕೊಳ್ಳಬಹುದಾದ ವಿಷಯ ಕೇರಳದಲ್ಲಿ ಬಹುಪಾಲು ಜನ ಪಕ್ಷಾತೀತವಾಗಿ ಗೋ ಮಾಂಸ ಸೇವಿಸುತ್ತಾರೆ ಎಂಬುದು . . . .

ಇನ್ನು ಮಹಾರಾಷ್ಟ್ರಕ್ಕೆ ಬರುವುದಾದರೆ ಅಲ್ಲಿ ಗೋ ಮಾಂಸ ನಿಷೇಧಿಸಿದ ಮೊದಲ ವಾರ ಭಜರಂಗ ದಳದ ಹುಡುಗರು ಎಲ್ಲಾ ರಸ್ತೆಗಳಲ್ಲಿ ನಿಂತು ವಾಹನಗಳಲ್ಲಿ ಯಾವ ಮಾಂಸ ಇದೆ ಎಂದು ಪರಿಶೀಲಿಸುತ್ತಿದ್ದರಿಂದ ಮುಂಬಯಿಯ ಮೃಗಾಲಯಗಳಲ್ಲಿನ ಹುಲಿ ಮತ್ತು ಸಿಂಹಗಳಿಗೆ ಚಿಕನ್ ಸರಬರಾಜು ಮಾಡಲಾಯಿತು. ಇಲ್ಲಿ ಇನ್ನೊಂದು ವಿಷಯವಿದೆ. ಈ ಬಿ.ಜೆ.ಪಿ ಭಜರಂಗದಳ, ವಿಶ್ವಹಿಂದೂ ಪರಿಷದ್, ಆರ್.ಎಸ್.ಎಸ್ ಎಲ್ಲವೂ ಬೇರೆ ಬೇರೆ ಸಂಘಟನೆಗಳು ಎಂಬ ಒಂದು ವಾದವನ್ನು ಮುಂದಿಡಲಾಗುತ್ತದೆ. ನಮ್ಮ ಸೆಕ್ಯಲಾರ್ ಮಿತ್ರರು ಇಲ್ಲ ಇಲ್ಲ ಅವೆಲ್ಲವೂ ಒಂದೆ ಎಂದು ಗಟ್ಟಿಯಾಗಿ ಹೇಳುತ್ತಿರುತ್ತಾರೆ. ಆದರೆ ವಾಸ್ತವದಲ್ಲಿ ಈ ಎಲ್ಲಾ ಸಂಘಟನೆಗಳು ಒಂದೇ ಅಲ್ಲ ಬದಲಾಗಿ ಬೇರೆ ಬೇರೆ, ಈ ಸತ್ಯವನ್ನು ನಾವು ಅರ್ಥಮಾಡಿಕೊಳ್ಳಬೇಕಿದೆ. ಇವರೆಲ್ಲಾ ಯಾರು ಎಂದು ನಾವು ನೋಡಿದರೆ ಬಿ.ಜೆ.ಪಿ ರಾಜಕೀಯ ರಂಗದಲ್ಲಿನ ಆರ್.ಎಸ್.ಎಸ್ ಆಗಿದ್ದರೆ, ವಿಶ್ವಹಿಂದೂ ಪರಿಷತ್ ಹುಡುಗರ ತಲೆಯಲ್ಲಿ ಧಾರ್ಮಿಕ ನಶೆಯನ್ನು ತುಂಬುವಲ್ಲಿ ಬಿ.ಜೆ.ಪಿ ತರ ಕೆಲಸ ಮಾಡುತ್ತದೆ, ಇನ್ನು ಭಜರಂಗದಳ ಕಟ್ಟಡಗಳನ್ನು, ಬದುಕುಗಳನ್ನು ಒಡೆಯುವುದರಲ್ಲಿ ವಿಶ್ವಹಿಂದೂ ಪರಿಷದ್ ನಂತೆ ಕೆಲಸ ಮಾಡುತ್ತದೆ. ಆದ್ದರಿಂದ ನಾವು ಇವುಗಳ ನಡುವಿನ ಈ ವ್ಯತ್ಯಾಸವನ್ನು ಗುರುತಿಸಬೇಕಿದೆ. . ..

ಇನ್ನು ನಾವು ಹುಲಿ ಸಿಂಹಗಳಿಗೆ ಚಿಕನ್ ತಿನ್ನಿಸಿದ ಘಟನೆಗೆ ಮರಳುವುದಾದರೆ ಮುಂಬಯಿಯ ಮೃಗಾಲಯದಲ್ಲಿ ಒಂದು ವಾರಗಳ ಕಾಲ ಹುಲಿ ಸಿಂಹಗಳಿಗೆ ಚಿಕನ್ ತಿನ್ನಿಸಿದ ಪರಿಣಾಮ ಸಮಸ್ಯೆಯಾಗಿ ಇಡಿ ಮಹಾರಾಷ್ಟ್ರದಲ್ಲಿನ ಪಶುಗಳ ಮಾರುಕಟ್ಟೆ ಕುಸಿದು ಬಿತ್ತು. ಹಿಂದೂ, ಮುಸ್ಲಿಂ,ಕ್ರಿಶ್ಚಿಯನ್ ಮತ್ತು ದಲಿತರು ಸೇರಿದಂತೆ ಸಾವಿರ ಸಾವಿರ ಜನ ತೊಂದರೆಗೆ ಅತಂಕಕ್ಕೆ ಒಳಗಾದರು. ಇವರ‍್ಯಾರಿಗೂ ಗ್ರಾಮೀಣ ಆರ್ಥಿಕತೆಯಲ್ಲಿ ಗೋವಿನ ಪಾತ್ರದ ಕುರಿತ ಕೊಂಚವೂ ಅರಿವಿರಲಿಲ್ಲ. ಹಾಗೆ ನೋಡಿದರೆ ಗ್ರಾಮೀಣ ಭಾರತದ ಆರ್ಥಿಕತೆಯಲ್ಲಿ ಗೋವು ಮಹತ್ವದ ಪಾತ್ರ ವಹಿಸುತ್ತದೆ. . .

ಇದನ್ನೆಲ್ಲಾ ಆಧರಿಸಿ ಮೊನ್ನೆ ಟೈಮ್ಸ್ ಆಫ್ ಇಂಡಿಯಾ ಕೊಲ್ಲಾಪುರದ ಚಪ್ಪಲಿ ಉದ್ಯಮ ಕುಸಿದು ಬಿದ್ದಿರುವ ಕುರಿತು ಬಹಳ ಅಧ್ಬುತವಾದ ವರದಿಗಳನ್ನು ಪ್ರಕಟಿಸಿತು. ಇದು ಒಂದು ಅರ್ಥದಲ್ಲಿ ಮೇಕ್ ಇನ್ ಇಂಡಿಯಾ, ಬ್ರೇಕ್ ಇನ್ ಇಂಡಿಯಾ ಎನ್ನುವಂತಿದೆ. ನಿಮಗೆ ಗೊತ್ತಿರಲಿ ಕೊಲ್ಲಾಪುರದ ಚಪ್ಪಲಿಗಳು ಅಂತರಾಷ್ಟ್ರೀಯ ಬ್ರಾಂಡ್ ಹೊಂದಿವೆ, ಜಾಗತೀಕರಣ, ಉದಾರಿಕರಣಕ್ಕೂ ಪೂರ್ವದಲ್ಲಿಯೇ ಜಗತ್ತಿನ ಎಲ್ಲಾ ಭಾಗಗಳಿಗೆ ತಮ್ಮ ಉತ್ಪನ್ನಗಳನ್ನು ರಫ್ತು ಮಾಡಿದ ಹಿರಿಮೆ ಕೊಲ್ಲಾಪುರದ ಚಪ್ಪಲಿ ಉದ್ಯಮಕ್ಕೆ ಇತ್ತು. ಆದರೆ ಇಂದು ಪ್ರಾಣಿ ಮತ್ತು ಗೋ ಹತ್ಯೆ ನಿಷೇಧದಿಂದ ಅ ನಿಷೇಧವನ್ನು ಎಮ್ಮೆ ಮತ್ತು ಕೋಣಗಳಿಗೂ ವಿಸ್ತರಿಸಿರುವುದರಿಂದ ಕೊಲ್ಲಾಪುರದ ಚಪ್ಪಲಿ ಉದ್ಯಮ ನೆಲ ಕಚ್ಚಿದೆ. ನಿಜವಾಗಿಯೂ ಕೊಲ್ಲಾಪುರದ ಚಪ್ಪಲಿ ಉದ್ಯಮವನ್ನು ನಡೆಸುತ್ತಿದ್ದವರು ಮುಸ್ಲಿಂ ಜನರಲ್ಲ ಬದಲಾಗಿ ದಲಿತರು. ಸರ್ಕಾರದ ಈ ಕ್ರಮದಿಂದ ಒಂದು ಕಡೆ ಮುಸ್ಲಿಮರು ತೊಂದರೆಗೆ ಒಳಗಾದರೆ ಮತ್ತೊಂದು ಕಡೆ ದಲಿತರನ್ನು ತುಳಿದು ಹಾಕಲಾಗಿದೆ. ಅದರ ಜೊತೆಗೆ ಪಶುಗಳ ಉದ್ಯಮಗಳಲ್ಲಿ ತೊಡಗಿದ್ದ ಮರಾಠ ಇತ್ಯಾದಿ ಹಿಂದುಳಿದ ವರ್ಗಗಳನ್ನು ನಾಶಮಾಡಲಾಗಿದೆ. ಒಂದು ಗುಂಪಿನ ದಾಳಿಗೆ/ಕೆಲಸಕ್ಕೆ ಇಂದು ನಾವು ಎಲ್ಲಾ ಕಡೆಗಳಿಂದ ಬಂಧನಕ್ಕೆ ಒಳಗಾಗುತ್ತಿದ್ದೇವೆ. . .

ನಾನು ಇಲ್ಲಿನ ವಿಷಯಕ್ಕೆ ಮರಳುವುದಾದರೆ ಕಳೆದ ಕೆಲ ದಿನಗಳಿಂದ ಕೆಲ ಸ್ನೇಹಿತರು ನನಗೆ ಕರೆ ಮಾಡಿ ನಿಜಕ್ಕೂ ಈ ಸಂಗತಿಗಳು ಘಟಿಸುತ್ತಿವೆಯೇ ಎಂದು ಕೇಳುತ್ತಿದ್ದಾರೆ ನಾವು ಅವರಿಗೆ ಬನ್ನಿ ಗೊತ್ತಾಗುತ್ತದೆ ಇವು ನಮ್ಮ ನಡುವೆ ಘಟಿಸುತ್ತಿರುವ ಸಂಗತಿಗಳೆಂದು ಹೇಳುತ್ತಿದ್ದೇನೆ. . .

ನಾನು ಇದನ್ನು ಹೀಗೆ ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತೇನೆ. ಇಂದು ಜೆ.ಎನ್.ಯು ಮತ್ತು ದೇಶದ ಇತರ ಕಡೆಗಳಲ್ಲಿ ನಡೆಯುತ್ತಿರುವ ಹೋರಾಟಗಳಿಂದ ಕೆಲವು ಜನ ಅತಂಕಕ್ಕೆ, ಬೇಸರಕ್ಕೆ ಒಳಗಾದಂತೆ ಕಾಣುತ್ತಾರೆ. ಆದರೆ ಈ ಘಟನೆಗಳು ಅವರಿಗೆ ಆಶ್ಚರ್ಯ ಉಂಟು ಮಾಡಿಲ್ಲ. ಅವರಿಗೆ ಇಂತಹ ಘಟನೆಗಳಿಂದ ಅತಂಕವಾಗುತ್ತದೆ. ಆದರೆ ಆಶ್ಚರ್ಯಕ್ಕೆ ಆಗುವುದಿಲ್ಲ. ಇದನ್ನು ಅರ್ಥಮಾಡಿಕೊಳ್ಳಲು ನಾವು ಸಮಕಾಲೀನ ಭಾರತದ ರಾಜಕೀಯದಲ್ಲಿ ಆದ ಬದಲಾವಣೆಗಳನ್ನು ಗುರುತಿಸಬೇಕು. ದಶಕಗಳ ಕಾಲ ಭಾರತದ ರಾಜಕಾರಣದಲ್ಲಿ ಅನೇಕ ಬದಲಾವಣೆಗಳು ಆಗಿವೆ. ಆದರೆ ಇಂದು ಈ ದೇಶದ ರಾಜಕಾರಣದಲ್ಲಿ ಆಗಿರುವ ಬಹಳ ಬದಲಾವಣೆಯ ಕುರಿತು ನಾವು ಯೋಚಿಸಬೇಕು. ಚಿಂತಿಸಬೇಕು. ಆ ಬದಲಾವಣೆ ಒಬ್ಬ ಸಕ್ರಿಯ ಆರ್.ಎಸ್.ಎಸ್. ಪ್ರಚಾರಕ ಬಹುಮತ ಪಡೆದು ಪ್ರಧಾನಿಯಾಗಿರುವುದು. ಇದು ಭಾರತದ ರಾಜಕಾರಣದಲ್ಲಿ ಆಗಿರುವ ಬಹಳ ದೊಡ್ಡ ಬದಲಾವಣೆ. ಈ ಹಿಂದೆಯೂ ಆರ್.ಎಸ್.ಎಸ್. ಪ್ರಚಾರಕರು ನಮ್ಮ ನಾಯಕರಾಗಿದ್ದಾರೆ, 40 ವರ್ಷಗಳ ಕಾಲ ಪ್ರಚಾರಕರಾಗಿದ್ದವರು. ಆದರೆ ಅವರು ಬಹುಮತವಿಲ್ಲದ ಸರ್ಕಾರವನ್ನು ನಡೆಸುತ್ತಿದ್ದರು. ಆ ಕಾರಣಕ್ಕೆ ಅವರು ಏನು ಮಾಡಬೇಕು, ಏನು ಮಾಡಬಾರದು ಎಂಬುದರ ಕುರಿತು ಕೆಲವು ಮಿತಿಗಳು ಇದ್ದವು. ಆ ಕಾರಣಕ್ಕೆ ಅವರು “ಸಮ್ಮಿಶ್ರ ಸರ್ಕಾರದ ಧರ್ಮ” ಇತ್ಯಾದಿ ಮಾತುಗಳನ್ನು ಆಡುತ್ತಿದ್ದರು. ಆದರೆ ಇಂದು ನಾವು ಬಹುಮತ ಪಡೆದಿರುವ ಒಬ್ಬ ಸಂಘದ ಪ್ರಚಾರಕ ಪ್ರಧಾನಿಯಾಗಿರುವುದನ್ನು ನೋಡುತ್ತಿದ್ದೇವೆ. ಈ ಅಂಶ ಅವರನ್ನು ನಿಜವಾಗಿಯೂ ತಾವು ಏನು ಎಂಬುದನ್ನು ವ್ಯಕ್ತಪಡಿಸಲು ವಾತಾವರಣ ಸೃಷ್ಟಿಮಾಡಿಕೊಟ್ಟಿದೆ. ಅದನ್ನೆ ಅವರು ಮಾಡುತ್ತಿದ್ದಾರೆ ಮತ್ತು ಮಾಡುತ್ತಾರೆ ಕೂಡಾ. ಇದರಿಂದ ನಾವು ಈ ಕುರಿತು ಅತಂಕಕ್ಕೆ ಒಳಗಾಗಿ ಚರ್ಚೆ ಮಾಡಬಹುದೇ ಹೊರತು ಆಶ್ಚರ್ಯಕ್ಕೆ ಒಳಗಾಗುಗುವ ಅಗತ್ಯ ಇಲ್ಲ. ಏಕೆಂದರೆ ಇದು ನೀರಿಕ್ಷಿತ. . .

ನಾವು ಇಂದು ಎಲ್ಲಾ ಕಡೆಗಳಿಂದ ನಂಬಲಾರದಂತಹ ಅಸಮಾನತೆ ಇರುವ ದೇಶದಲ್ಲಿ ಬದುಕುತ್ತಿದ್ದೇವೆ. ನಿಮ್ಮ ನೀತಿ ಅಯೋಗದ ಜನ, ನಿಮ್ಮ ಆರ್ಥಿಕ ಸಲಹೆಗಾರರು ಈ ಹೆಚ್ಚುತ್ತಿರುವ ಅಸಮಾನತೆಯನ್ನು ದೊಡ್ಡ ಸಮಸ್ಯೆಯಾಗಿ ಪರಿಗಣಿಸುವುದೇ ಇಲ್ಲ ಬದಲಾಗಿ, ಮಾರುಕಟ್ಟೆ ಭಾರತವನ್ನು ಬಿಡುಗಡೆಗೊಳಿಸಿದೆ, ಅಲ್ಪ ಪ್ರಮಾಣದ ಅಸಮಾನತೆ ಇರಬೇಕು, ಇದರಿಂದ ಸ್ಪರ್ಧಾತ್ಮಕ ಮನೋಭಾವ ಬೆಳೆಯುತ್ತದೆ ಎಂಬಿತ್ಯಾದಿ ಮಾತುಗಳನ್ನು ಆಡುತ್ತಿದ್ದಾರೆ . .

ಇಂದು ಈ ದೇಶದಲ್ಲಿ 2011ರ ಜನಗಣತಿಯ ಅಂಕಿ-ಅಂಶಗಳನ್ನು ಮುಂದಿರಿಸಿ ಕಳೆದ ಇಪ್ಪತ್ತನಾಲ್ಕು ತಿಂಗಳಲ್ಲಿ ಮಹತ್ವ ಎನ್ನಿಸುವ ನಾಲ್ಕರಿಂದ ಐದು ಅಂಕಿ-ಆಂಶ ಮತ್ತು ಮಾಹಿತಿಗಳ ವರದಿಗಳು ಬಂದಿವೆ. ಅವುಗಳಲ್ಲಿ ಬಹಳ ಪ್ರಮುಖವಾದವು ಜಾತಿಗಳ ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆಯ ಅಂಕಿ-ಅಂಶ. ವಾಸ್ತವದಲ್ಲಿ ಜಾತಿಗಳ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗತಿಗಳ ಮಾಹಿತಿ ಬಿಡುಗಡೆಗೊಳಿಸಿಲ್ಲ. ಆ ಕಾರಣಕ್ಕೆ ನಮಗೆ ಜಾತಿ ಆಧಾರಿತ ವಿಶ್ಲೇಷಣೆ ಸಾಧ್ಯವಿಲ್ಲ. ಆದರೆ ಇಂದು ವರ್ಗಗಳ ಆಧಾರದಲ್ಲಿನ ಮಾಹಿತಿಗಳನ್ನು, ಅಂಕಿ-ಅಂಶಗಳನ್ನು ನೋಡಿದರೆ ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆಯ ಅಂಕಿ-ಅಂಶ ಗಳ ಪ್ರಕಾರ ಇಂದು ದೇಶದ ಶೆ 75 ರಷ್ಟು ಗ್ರಾಮೀಣ ಕುಟುಂಬಗಳ ಮುಖ್ಯಸ್ಥ ಐದು ಸಾವಿರಕ್ಕಿಂತ ಕಡಿಮೆ ಮಾಸಿಕ ಅದಾಯ ಹೊಂದಿದ್ದಾನೆ. ಇದನ್ನು ನಾವು 10 ಸಾವಿರಕ್ಕೆ ಏರಿಸಿದರೆ ಈ ದೇಶದ 90ಶೇ ಗ್ರಾಮೀಣ ಕುಟುಂಬಗಳು 10 ಸಾವಿರಕ್ಕಿಂತ ಕಡಿಮೆ ವರಮಾನ ಹೊಂದಿವೆ. ಆದರೆ ಇದೇ ದೇಶದಲ್ಲಿ ಪೋರ್ಬ್ ಸಮೀಕ್ಷೆಯ ಶ್ರಿಮಂತರ ಪಟ್ಟಿಯಲ್ಲಿ ಈ ದೇಶದ ಮಿನಿಮಮ್ ಶ್ರೀಮಂತ 3.5 ಕೋಟಿ ಡಾಲರ್ ಹೊಂದಿದ್ದಾನೆ ಅತಿ ಹೆಚ್ಚು ಸಂಪತ್ತನ್ನು ಹೊಂದಿರುವ ದೇಶಗಳ ಪಟ್ಟಿಯಲ್ಲಿ ಈ ದೇಶ 4 ರಿಂದ 5ನೇ ಸ್ಥಾನದಲ್ಲಿದೆ. ನನ್ನ ಪ್ರಕಾರ ನಾವು ಎರಡನೆಯ ಸ್ಥಾನದಲ್ಲಿ ಇದ್ದೇವೆ. ಸದ್ಯಕ್ಕೆ ಐದನೇ ಸ್ಥಾನ ಎಂದುಕೊಳ್ಳಿ. ಯಾವ ದೇಶ ಒಂದು ಕಡೆ ಜಗತ್ತಿನ ಶ್ರಿಮಂತರ ಪಟ್ಟಿಯಲ್ಲಿ 5ನೇ ಸ್ಥಾನ ಗಳಿಸಿದೆಯೋ ಅದೇ ದೇಶ ವಿಶ್ವ ಸಂಸ್ಥೆಯ ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ 135ನೇ ಸ್ಥಾನ ಹೊಂದಿದೆ. ಲ್ಯಾಟೀನ್ ಅಮೇರಿಕಾದ ಎಲ್ಲಾ ದೇಶಗಳು ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಭಾರತಕ್ಕಿಂತ ಮೇಲಿವೆ. 30 ವರ್ಷಗಳ ಕಾಲ ನಾಗರೀಕ ಯುದ್ಧವನ್ನು ಅನುಭವಿಸಿದ ಶ್ರೀಲಂಕಾ, ಅಭಿವೃದ್ಧಿ ಸೂಚ್ಯಂಕದಲ್ಲಿ ನಮಗಿಂತ 20 ಸ್ಥಾನ ಮೇಲಿದ್ದರೆ ಜಗತ್ತಿನಲ್ಲಿಯೇ ಅತ್ಯಂತ ಕ್ರೌರ್ಯಯುತ ಯುಧ್ಧಕ್ಕೆ ಒಳಗಾಗಿ ಯುದ್ಧದಲ್ಲಿ ಬಳಸಿದ ರಾಸಾಯನಿಕ ಮತ್ತು ಅಸ್ತ್ರಗಳ ಕಾರಣಕ್ಕೆ ಇಂದಿಗೂ ಹಲವು ಪೀಳಿಗೆಗಳು ತೊಂದರೆಗೊಳಗಾಗಿರುವ ವಿಯೆಟ್ನಾಂ ನಮಗಿಂತ 50 ಸ್ಥಾನ ಮೇಲಿದೆ. ಈ ಎಲ್ಲಾ ದೇಶಗಳು ಮಾನವನ ಅಭಿವೃದ್ಧಿ ಸೂಚ್ಯಂಕದಲ್ಲಿ ನಮಗಿಂತ ಮುಂದಿವೆ ಇದಕ್ಕೆ ಕಾರಣ ಆ ದೇಶಗಳಲ್ಲಿ ಡಾಲರ್ ಮಿಲೇನಿಯರ್ ಗಳ ಉತ್ಪಾದನೆ ಆಗುತ್ತಿಲ್ಲ . . .

ನಿಮಗೆ ಆಶ್ಚರ್ಯ ಆಗಬಹದು. ನಾರ್ಡಿಕ್ ಮತ್ತು ಸ್ಕಾಂಡಿನೇವಿಯನ್ ದೇಶಗಳಾದ ಡೆನ್ಮಾರ್ಕ್, ಸ್ವೀಡೆನ್, ಫೀನ್ಲೆಂಡ್, ಐಸ್ಲೆಂಡ್, ನಾರ್ವೆ ಎಲ್ಲಾ ದೇಶಗಳಲ್ಲಿ ಭಾರತದ ಒಟ್ಟು ಡಾಲರ್ ಬಿಲೇನಿಯರ್ ಗಳ ಪೈಕಿ ಶೇ 3 ರಷ್ಟ ಮಾತ್ರ ಬಿಲೆನಿಯರ್ಗಳಿದ್ದಾರೆ. ಚೀನಾದಲ್ಲಿ ನಮಗಿಂತ ಜಾಸ್ತಿ ಇರಬಹದು. ರಷ್ಯದಲ್ಲಿ ಪ್ರತಿ ಐದು ವರ್ಷಕ್ಕೂಮ್ಮೆ ಎಲ್ಲಾ ಬಿಲೇನಿಯರ‍್ಗಳನ್ನು ಜೈಲಿಗೆ ಕಳುಹಿಸುತ್ತಾರೆ, ನಾವು ಪಾರ್ಲಿಮೆಂಟಿಗೆ ಕಳುಹಿಸುತ್ತೇವೆ ಅಷ್ಟೆ ವ್ಯತ್ಯಾಸ. ಹೌದು ಈ ಅರ್ಥದಲ್ಲಿ ನಮ್ಮದು ಪ್ರೌಢ ಪ್ರಜಾತಂತ್ರ. . .

ಇದರ ಜೊತೆಯಲ್ಲಿಯೇ ಪಾರ್ಲಿಮೆಂಟಿನಲ್ಲಿ ಇರುವ ಅಸಮಾನತೆಯ ಕುರಿತು ಕೆಲವು ವಿಷಯಗಳನ್ನು ನಾನು ನಿಮಗೆ ಹೇಳುತ್ತೇನೆ. 2014ರ ಚುನಾವಣೆಯ ಪ್ರಮಾಣ ಪತ್ರದಲ್ಲಿ ಘೋಷಿಸಿಕೊಂಡಂತೆ ನಮ್ಮ ದೇಶದ ಲೋಕಸಭೆಯ ಶೇ 82 ಸಂಸದರು ಕೋಟ್ಯಾಧಿಪತಿಗಳು. ಇದು ಅವರೇ ಸ್ವ-ಘೋಷಿಸಿಕೊಂಡಿರುವ ಸಂಗತಿ. ಹಾಗಾದರೆ ಐದು ಮತ್ತು ಹತ್ತು ವರ್ಷಗಳ ಹಿಂದಿನ ಪ್ರಮಾಣ ಏನಿತ್ತು ಎಂದು ನೋಡಿದರೆ 2004ರ ಸಂಧರ್ಭದಲ್ಲಿ ಒಟ್ಟು ಸಂಸದರಲ್ಲಿ ಶೇ 32 ಮಂದಿ ಕೋಟ್ಯಾಧಿಪತಿಗಳಿದ್ದರೆ 2009 ರಲ್ಲಿ ಅದು 53 ಶೇ ಕ್ಕೆ ಏರಿದೆ. 2014ರಲ್ಲಿ ನಾನು ಆಗಲೇ ಹೇಳಿದಂತೆ 82 ಶೇ ಸಂಸದರು ಕೋಟ್ಯಾಧಿಪತಿಗಳಿದ್ದಾರೆ. ಇದು ಚುನಾವಣೆಯ ಸಂದರ್ಭದಲ್ಲಿ ಸಲ್ಲಿಸಬೇಕಾದ ಪ್ರಮಾಣ ಪತ್ರಗಳನ್ನು ಆಧರಿಸಿದ ಲೆಕ್ಕ. ಇಲ್ಲಿ ನೀವು ಎಷ್ಟು ಬೇಕಾದರು ಬರೆಯಬಹದು. ನಿಮ್ಮ ಆದಾಯ ತೆರಿಗೆಯ ದಾಖಲೆಗಳನ್ನೇನು ಇಲ್ಲಿ ಕೇಳುವುದಿಲ್ಲ. ನಮ್ಮ ನಡುವಿನ ಸತ್ಯವಂತ ರಾಜಕಾರಣಿಯಾದ ಚಂದ್ರಬಾಬು ನಾಯ್ಡು ಅವರು 2014 ರಲ್ಲಿ ಘೋಷಿಸಿಕೊಂಡಿರುವ ಆಸ್ತಿ 2004ಕ್ಕಿಂತ ಕಡಿಮೆ ಇದೆ. ಇದು ನಿಜವಾದ ನಿಸ್ವಾರ್ಥ ಜೀವನ ಇದಕ್ಕೆ ಅವರು ಕೊಡುವ ಕಾರಣ ಕಳೆದ ಸಾರಿ ನನ್ನ ಮನೆಯನ್ನು ಮಾರುಕಟ್ಟೆಯ ಮೌಲ್ಯದಲ್ಲಿ ಲೆಕ್ಕ ಹಾಕಿದ್ದರು, ಆದರೆ ಈ ಬಾರಿ ಅದನ್ನು ನಾನು ಕೊಂಡ ಬೆಲೆಯಲ್ಲಿ ಲೆಕ್ಕ ಹಾಕಿದ್ದಾರೆ ಎಂದಿದ್ದಾರೆ. ಅದಕ್ಕೆ ನಾನು ಹೇಳಿದ್ದು ಮಾರುಕಟ್ಟೆ ನಿಮಗೆ ಆಯ್ಕೆಗಳನ್ನು ಕೊಡುತ್ತದೆ ಎಂದು ಹೇಳಿದ್ದು. . .. . 

ನಾವು ಮಾರುಕಟ್ಟೆ ಕೊಡುವ ಆಯ್ಕೆಗಳ ಕುರಿತಂತೆ ಮಾತನಾಡುತ್ತಿದ್ದೆವು. ಇಂದು ಜಗತ್ತಿನಾದ್ಯಂತ ಒಂದು ಬಿಲಿಯನ್ ಜನರು (‌ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಮಂಡಳಿ ಬೇರೆ ಬೇರೆ ವ್ಯಾಖ್ಯೆಗಳನ್ನು ನೀಡುವ ಮೂಲಕ ಆ ಸಂಖ್ಯೆಯನ್ನು 850 ಮಿಲಿಯನ್ ಎಂದು ಹೇಳುತ್ತಿದೆ) ಪ್ರತಿ ರಾತ್ರಿ ಹಸಿವಿನಿಂದಲೇ ಮಲಗುತ್ತಿದ್ದಾರೆ. ನಿಜವಾಗಲೂ ಮಾರುಕಟ್ಟೆ ಹಸಿವಿನಿಂದ ಕಂಗೆಟ್ಟರುವ ಒಂದು ಬಿಲಿಯನ್ ಜನರಿಗೆ ಆಯ್ಕೆಯ ಸ್ವಾತಂತ್ಯವನ್ನು ನೀಡಿದ್ದರೆ ಅವರ ಆಯ್ಕೆ ಆ ಹೊತ್ತಿನ ಆಹಾರವಾಗಿರುತ್ತಿತ್ತು. ಆದರೆ ಅದು ಸಾಧ್ಯವಾಗುತ್ತಿಲ್ಲ. ಆ ಕಾರಣಕ್ಕೆ ನಾವು ಮಾರುಕಟ್ಟೆ ಆಯ್ಕೆಯ ಸ್ವಾತಂತ್ರ‍್ಯವನ್ನು ನೀಡಿದೆ ಎಂಬ ಮಿಥ್ಯೆಯನ್ನು ತಿರಸ್ಕರಿಸಬೇಕಿದೆ. . .

ನಾವು ಆಗಲೇ ಚರ್ಚಿಸಿದಂತೆ ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆಯ ಅಂಕಿ-ಅಂಶ ಗಳ ಪ್ರಕಾರ ಇಂದು ದೇಶದ ಶೆ 75 ರಷ್ಟು ಗ್ರಾಮೀಣ ಕುಟುಂಬಗಳ ಮುಖ್ಯಸ್ಥ ಐದು ಸಾವಿರಕ್ಕಿಂತ ಕಡಿಮೆ ಅದಾಯ ಹೊಂದಿದ್ದಾನೆ. ಈ ದೇಶದ 90ಶೇ ಗ್ರಾಮೀಣ ಕುಟುಂಬಗಳು 10 ಸಾವಿರಕ್ಕಿಂತ ಕಡಿಮೆ ವರಮಾನ ಹೊಂದಿವೆ. ಕೇವಲ ಶೇ 8 ರಷ್ಟು ಗ್ರಾಮೀಣ ಕುಟುಂಬಗಳ ಮುಖ್ಯಸ್ಥ 10 ಸಾವಿರಕ್ಕಿಂತ ಹೆಚ್ಚಿನ ಅದಾಯವನ್ನು ಪಡೆಯುತ್ತಿದ್ದಾನೆ. ಇದು ನಮ್ಮ ನಡುವಿನ ಸ್ಥಿತಿ. . .

ಇನ್ನು ನ್ಯಾಷನಲ್ ಸ್ಯಾಂಪೆಲ್ ಸರ್ವೇ ಇಂಡಿಯಾದ ಅಂಕಿ-ಅಂಶಗಳನ್ನು ನೋಡುವುದಾದರೆ ಭಾರತದಲ್ಲಿನ ಐದು ಸದಸ್ಯರುಳ್ಳ ಕೃಷಿ ಕುಟುಂಬ ಕೃಷಿ ಮತ್ತು ಕೃಷೀಯೇತರ ಮೂಲಗಳಿಂದ ಗಳಿಸುವ ಮಾಸಿಕ ಅದಾಯ 6426 ರೂಪಾಯಿಗಳು. ಇದು ಇಂದಿನ 97 ಯು.ಎಸ್ ಡಾಲರ್ ಗೆ ಸಮನಾಗಿದೆ. ಒಂದು ಕಡೆ ಈ 6426 ರುಪಾಯಿ ಕೇರಳ, ಪಂಜಾಬ್ ನ ಕುಟುಂಬಗಳ ಸರಾಸರಿ ಗಳಿಕೆಯನ್ನು ತೋರಿಸಿದರೆ ಇನ್ನೂಂದು ಕಡೆ ಛತ್ತಿಸ್ಗಡ್, ಬಿಹಾರ್ ಕಡೆ ಆ ಪ್ರಮಾಣ 3500/4000 ಸಾವಿರ ಇದೆ. ಇದರ ಅರ್ಥ 3500 ರಿಂದ 9000 ದಿಂದ ಹತ್ತು ಸಾವಿರದ ಮಧ್ಯದ ಸರಾಸರಿಯಲ್ಲಿ ಗಳಿಸುವ ಎಲ್ಲಾ ಕೃಷಿ ಕುಟುಂಬಗಳನ್ನು 6426 ರೂಪಾಯಿ ಗಳಿಸುತ್ತಿವೆ ಎಂಬ ಈ ಲೆಕ್ಕದಲ್ಲಿ ನೋಡಲಾಗುತ್ತಿದೆ. ನಮ್ಮ ಗ್ರಾಮೀಣ ಭಾರತದ ಸ್ಥಿತಿ ಇಷ್ಟು ಕೆಟ್ಟದಾಗಿದೆ. ಅದು ಹಳ್ಳಿಯಲ್ಲಿನ ಜನ ಕೃಷಿಕರಾಗಿರಿಲಿ, ಕೃಷಿ ಕಾರ್ಮಿಕರಾಗಿರಿ ಏನಾದರೂ ಆಗಿರಲಿ, ಇದು ಕೆಟ್ಟ ಸ್ಥಿತಿ ಈ ರೀತಿಯ ಅಸಮಾನತೆ ಒಂದು ಕಡೆ ಇದ್ದರೆ. . .

ಮತ್ತೊಂದು ಕಡೆ 1991 ರಲ್ಲಿ ನಮ್ಮ ದೇಶದಲ್ಲಿ ಒಬ್ಬೆ ಒಬ್ಬ ಡಾಲರ್ ಬಿಲೇನಿಯರ್ ಇರಲಿಲ್ಲ. ಆದರೆ 2015ರ ಹೊತ್ತಿಗೆ ಪೋರ್ಬ್ ಪಟ್ಟಿಯಲ್ಲಿ ಭಾರತದ ನೂರು ಡಾಲೆರ್ ಬಿಲೇನಿಯರ‍್ಗಳು ಸ್ಥಾನ ಪಡೆದಿದ್ದಾ.ರೆ ಇತ್ತೀಚಿಗಿನ ಮಾರುಕಟ್ಟೆಯ ಹೊಡೆತಕ್ಕೆ ಅದರಲ್ಲಿ ಕೆಲವರ ಸ್ಪಲ್ಪ ಪ್ರಮಾಣದ ಸಂಪತ್ತು ಕರಗಿರಬಹುದು. ಇದು ನಮ್ಮ ದೇಶದ ಸ್ಥಿತಿ . . .

ಇದನ್ನೆ ನಾನು ಬೆಂಗಳೂರಿನ ಐಐಎಮ್ ವಿಧ್ಯಾರ್ಥಿಗಳೊಂದಿಗೆ ಹಂಚಿಕೊಳ್ಳುತ್ತಿದ್ದೆ. ನಾನು ಗ್ರಾಮೀಣ ಭಾರತದ ಕುರಿತು ಮಾಹಿತಿಗಳನ್ನು ಒಟ್ಟಾಗಿಸುವ ಕೆಲಸವೊಂದನ್ನು ಮಾಡುತ್ತಿದ್ದೇನೆ. ನೀವು ಎಷ್ಟು ಸುಂದರವಾದ ಸಮುದಾಯಗಳನ್ನು ಹಾಳು ಮಾಡುತ್ತಿದ್ದೀರಾ ಎಂದರೆ ಇಲ್ಲಿ ನಾವು ಭಯಪಡುವ, ಅಯ್ಯೋ ಹೀಗಿದೆಯಲ್ಲ ಸ್ಥಿತಿ ಎನ್ನುವ ಸಂಗತಿಗಳು ಇವೆ ಮತ್ತು ನಾವು ಆಶ್ಚರ್ಯಕ್ಕೆ ಒಳಗಾಗುವ ನಮ್ಮನ್ನು ಚಕಿತತೆಯ ಕಡೆಗೆ ನೂಕುವ ಸಂಗತಿಗಳು ಇವೆ ಆಶ್ಚರ್ಯ ಎಂದರೆ ಎರಡೂ ಭಾರತೀಯ ಮೂಲದವುಗಳು ಮತ್ತು ಇವು ನಮ್ಮ ವಾಸ್ತವಗಳಾಗಿವೆ. . .

ಇಲ್ಲಿ 833 ಮಿಲಿಯನ್ ಜನರು 718 ಜೀವಂತ ಭಾಷೆಗಳನ್ನು ಮಾತನಾಡುತ್ತಿದ್ದಾರೆ. ಅವುಗಳಲ್ಲಿ ಐದು ಬಾಷೆಗಳನ್ನು 15 ಮಿಲಿಯನ್ ಗೂ ಹೆಚ್ಚು ಮಂದಿ ಮಾತನಾಡುತ್ತಿದ್ದಾರೆ. 3 ಭಾಷೆಗಳನ್ನು ಸುಮಾರು 80 ಮಿಲಿಯನ್ ಜನರು ಮಾತನಾಡುತ್ತಿದ್ದಾರೆ. ಒಂದು ಭಾಷೆಯನ್ನು 600 ಮಿಲಿಯನ್ ಜನರು ಮಾತನಾಡುತ್ತಿದ್ದಾರೆ. ಒಂದು ಬಾಷೆಯನ್ನು 1ಶೇ ಜನರು ಅಂಡಮಾನ್ ನಲ್ಲಿ ಮಾತನಾಡುತ್ತಿದ್ದಾರೆ. ಒಂದು ಭಾಷೆಯನ್ನು 7 ಮಿಲಿಯನ್ ಜನರು ಸೈಮಾರ್ ಮತ್ತು ತ್ರಿಪುರಾಗಳಲ್ಲಿ ಮಾತನಾಡುತ್ತಿದ್ದಾರೆ. ಇದು ನಿಜಕ್ಕೂ ಆಶ್ಚರ್ಯ ಉಂಟುಮಾಡಬಹುದಾದ ವಿಭಿನ್ನತೆಗಳನ್ನು ಒಳಗೊಂಡಿರುವ ಸಮಾಜ. ಈ ಮಾದರಿಯನ್ನು ಜಗತ್ತಿನ ಇನ್ನೆಲ್ಲೂ ಕಾಣಲು ಸಾಧ್ಯವಿಲ್ಲ. ಕೆಲವು ಜನರಿಗೆ ಈ ವಿಭಿನ್ನತೆ ಭಯವನ್ನು ಹುಟ್ಟಿಸುತ್ತಿದೆ. ಆ ಕಾರಣಕ್ಕೆ ಅವರು ಒಂದು ಭಾಷೆಯನ್ನು ಎಲ್ಲರ ಮೇಲೆ ಹೇರುವ ಪ್ರಯತ್ನ ಮಾಡುತ್ತಿದ್ದಾರೆ. ಅವರಿಗೆ ಅವರದೇ ಸಂಸ್ಕೃತಿಯ ಮಹತ್ವ ಅರ್ಥವಾಗುತ್ತಿಲ್ಲ. ಹಿಂದಿ ಇವರಿಗೆ ಭಾಷೆಯಂತೆ ಕಾಣುತ್ತದೆ, ಆದರೆ ಉತ್ತರ ಭಾರತದ ಅತ್ಯುತ್ತಮ ಭಾಷೆಗಳಾದ ಭೋಜ್ ಪುರಿ, ಮಿಥಿಲಾ,ಬ್ರೀಜ್ ಬಾಷಾ, ಅವಧಿ ಇವರಿಗೆ ಡಯಲೆಕ್ಟ್ ರೀತಿ ಕಾಣುತ್ತದೆ. ಹಾಗೆ ನೋಡಿದರೆ ಹಿಂದಿಗೆ 150 ವರ್ಷಗಳ ಇತಿಹಾಸವೂ ಇಲ್ಲ. ಉತ್ತರ ಭಾರತದ ಮಹತ್ವದ ಸಾಹಿತ್ಯ ರಚನೆಯಾಗಿರುವುದು ಭೋಜ್ ಪುರಿ, ಮಿಥಿಲಾ, ಬ್ರೀಜ್ ಬಾಷಾ, ಅವಧಿ ಭಾಷೆಗಳಲ್ಲಿ ಇವು ಉತ್ತರ ಭಾರತದ ಪ್ರಾಚೀನ ಭಾಷೆಗಳು ಅವುಗಳನ್ನು ಗೌರವಿಸಿ, ಹೆಮ್ಮೆಪಡಿ . . . .

ಆದರೆ ಎರಡು ಬದಿಯ ಮೂಲಭೂತವಾದಿಗಳು ಸ್ಥಳೀಯ ಭಾಷೆಗಳನ್ನು ಕಡೆಗಣಿಸಿ ಉರ್ದುವನ್ನೂ ಪರ್ಶಿಯನ್ ಗೆ ಹತ್ತಿರ ಮಾಡಿದ್ದಾರೆ. ಎಲ್ಲಾ ಉರ್ದು ಮತ್ತು ಪರ್ಶಿಯನ್ ಪದಗಳನ್ನು ತೆಗೆದುಕೊಂಡು ಹಿಂದೂಸ್ಥಾನಿ ಅಥವಾ ಹಿಂದಿಯನ್ನು ಕಟ್ಟಲು ಬಳಸಲಾಯಿತು. ಈ ಪ್ರಕ್ರಿಯೆ ಕಳೆದ 100 ವರ್ಷಗಳಿಂದ ನಡೆಯುತ್ತಲೇ ಇದೆ. 60ರ ದಶಕದಲ್ಲಿ ನಾನು ಹುಡುಗನಾಗಿದ್ದಾಗ ಆಲ್ ಇಂಡಿಯಾ ರೇಡಿಯೋದ ಕುರಿತಂತೆ ಒಂದು ಹಾಸ್ಯ ಪ್ರಚಲಿತದಲ್ಲಿತ್ತು. ಅದು ಏನೆಂದರೆ ಆಲ್ ಇಂಡಿಯಾ ರೇಡಿಯೋ ಯಾರು ಮಾತನಾಡದ ಮೂರು ಭಾಷೆಗಳಲ್ಲಿ ಪ್ರಸಾರವಾಗುತ್ತದೆ. ಅವು ಕ್ವೀನ್ಸ್ ಇಂಗ್ಲೀಷ್, ಪರ್ಶೀಯನ್ ಉರ್ದು ಮತ್ತು ಸಂಸ್ಕೃತಿಕರಣಗೊಂಡ ಹಿಂದಿ! ಮೂಲಭೂತವಾದಿಗಳು ವಿವಿಧತೆಗೆ ಹೆದರುತ್ತಾರೆ. ಅವರಿಗೆ ಅರ್ಥವಾಗದ ತ್ರಿಪುರಾ, ನಾಗಾಲ್ಯಾಂಡ್ ಜನರ ಭಾಷೆಗಳು ಭಯ ಹುಟ್ಟಿಸುತ್ತವೆ. ಆದರೆ ನಾನು, ನೀವು ಅವು ಎಷ್ಟು ಸಮೃದ್ಧವಾಗಿವೆ ಅಲ್ಲವೇ ಎಂದು ಅಲೋಚಿಸುತ್ತೇವೆ. ನಾನು ಇಲ್ಲಿ ಗಂಗಾ ಹಾಸ್ಟೆಲ್ಲಿನಲ್ಲಿ ಇದ್ದಾಗ 24 ಭಾಷೆ ಮಾತನಾಡುವ ಸ್ನೇಹಿತರಿದ್ದರು. ಎಷ್ಟು ಸುಂದರ ಪ್ರಪಂಚ ಅದು. ಇದು ಸಹ ಜೆ.ಎನ್.ಯು ಭಾಗವೇ. ಒಂದು ವಿಷಯ ನಾನು ನಿಮಗೆ ಹೇಳಲೇ ಬೇಕು. ನಾನು ಈ ಕಾಲೇಜಿನ ಅವರಣದಲ್ಲಿ ನನ್ನ ಸ್ವಂತಕ್ಕಿಂತ ಮಿಗಿಲಾಗಿ ಬದುಕುವ ಗುಣ ಕಲಿತಿದ್ದೇನೆ. ವೃತ್ತಿ ಎಂದರೆ ಕೇವಲ ನನ್ನ ಪರಿಚಯ ಪತ್ರವಲ್ಲ ಮತ್ತು ಜೀವನದಲ್ಲಿ ಬೆಳೆಯುವುದು ಯಶಸ್ವಿಯಾಗೋದು ಅಂದರೆ ಅದರ ಪುಟಗಳನ್ನು ಹೆಚ್ಚಿಸಿಕೊಳ್ಳುವುದಲ್ಲ ಎಂಬುದನ್ನು ನಾವು ಕಲಿಯಬೇಕಿದೆ. . .

ಮುಂದುವರೆಯುವುದು. . . .

ಫೆಬ್ರ 19, 2016

ಮೇಕಿಂಗ್ ಹಿಸ್ಟರಿ: ವಸಾಹತುಶಾಹಿಯ ಆಳ್ವಿಕೆಗೆ ಫ್ಯೂಡಲಿಸಮ್ಮೇ ತಳಹದಿ

ಸಾಕೇತ್ ರಾಜನ್
ಕನ್ನಡಕ್ಕೆ: ಡಾ. ಅಶೋಕ್. ಕೆ. ಆರ್
ಈ ಅಧ್ಯಾಯ ಕಣ್ತಪ್ಪಿನಿಂದಾಗಿ ಅವಗಣನೆಗೊಳಗಾದ ಇತಿಹಾಸದ ಕಡೆಗೆ ಗಮನಹರಿಸುತ್ತದೆ. ಬ್ರಿಟೀಷ್ ಆಳ್ವಿಕೆಯ ಪ್ರಾರಂಭ ವಸಾಹತುಶಾಹಿ ಮತ್ತು ಫ್ಯೂಡಲ್ ಪದ್ಧತಿಯ ನಡುವೆ ಒಂದು ಗಟ್ಟಿ ಭಾಂದವ್ಯವನ್ನು ಸ್ಥಾಪಿಸಿತು. ಒಂದೆಡೆ ವಿದೇಶಿ ಬಂಡವಾಳಶಾಹಿತನ, ಮತ್ತೊಂದೆಡೆ ದೇಶೀ ಫ್ಯೂಡಲಿಸಂ; ಎರಡು ಭಿನ್ನ ಮತ್ತು ಐತಿಹಾಸಿಕವಾಗಿ ವಿರುದ್ಧ ನೆಲೆಯಲ್ಲಿ ಕಾರ್ಯನಿರ್ವಹಿಸಿದ ಶಕ್ತಿಗಳ ಸಂಬಂಧ ಭಾರತ ಮತ್ತು ಕರ್ನಾಟಕದ ಸಾಮಾಜಿಕ ಬೆಳವಣಿಗೆಯ ರೀತಿ ಮತ್ತು ವೇಗವನ್ನು ನಿರ್ಧರಿಸಿದವು, ಇವತ್ತಿಗೂ ನಿರ್ಧರಿಸುತ್ತಿವೆ. ಕರ್ನಾಟಕ ಮತ್ತು ಭಾರತದ ಇತಿಹಾಸದಲ್ಲಿ ಆರ್ಥಿಕ ಬದಲಾವಣೆಗಳು ಮತ್ತದಕ್ಕೆ ಸಂಬಂಧಪಟ್ಟಂತ ರಾಜಕೀಯ ಏರಿಳಿತಗಳಿಂದ ಮೂಡಿದ ಸಮುದಾಯದ ಚಳುವಳಿಗಳು ಫ್ಯೂಡಲಿಸಂನ ಸಾಮಾಜಿಕ ಬೇರುಗಳನ್ನು ಅಲುಗಾಡಿಸಿದ್ದನ್ನು ಮೇಕಿಂಗ್ ಹಿಸ್ಟರಿಯ ಮೊದಲ ಸಂಪುಟದಲ್ಲಿ ನೋಡಿದ್ದೇವೆ. ವಸಾಹತುಶಾಹಿ ಆಕ್ರಮಣ ಇದರ ವೇಗವನ್ನು ಬದಲಿಸಿತು. ಸಾಯುತ್ತಿದ್ದ ಫ್ಯೂಡಲ್ ವ್ಯವಸ್ಥೆಯ ಜೊತೆ ಹೊಂದಾಣಿಕೆ ಮಾಡಿಕೊಂಡ ವಸಾಹತುಶಾಹಿ ಫ್ಯೂಡಲಿಸಂನ ಅಂತ್ಯ ತಡೆಗಟ್ಟಲು ಬಂಡವಾಳಶಾಹಿತನದ ಗೆಳೆತನವನ್ನು ಉಪಯೋಗಿಸಿಕೊಂಡಿತು. ಈ ಅಧ್ಯಾಯದಲ್ಲಿ ಫ್ಯೂಡಲಿಸಂ ಮತ್ತು ವಸಾಹತುಶಾಹಿ ನಡುವಿನ ಅನೈತಿಕ ಮದುವೆ ಹುಟ್ಟಿಸುವ ಪ್ರಶ್ನೆಗಳ ಕಡೆಗೆ, ಅವರ ಸಂಬಂಧದ ರೀತಿ ನೀತಿಗಳು, ಒಬ್ಬರು ಮತ್ತೊಬ್ಬರನ್ನು ಪ್ರಭಾವಿಸಿದ ಬಗೆ, ಇಬ್ಬರೂ ಸೇರಿದ್ದರಿಂದ ರಾಜ್ಯದ ಮೇಲಾದ ಪರಿಣಾಮ, ಐತಿಹಾಸಿಕ ವೈರುಧ್ಯದ ಎರಡು ಶಕ್ತಿಗಳು ಒಂದೇ ಹಾಸಿಗೆ ಹಂಚಿಕೊಳ್ಳುವಷ್ಟು ಹತ್ತಿರವಾದ ಕಾರಣ ಮತ್ತು ಈ ಸಂಬಂಧದಿಂದ ದೇಶೀ ಫ್ಯೂಡಲಿಸಂ ವಿದೇಶಿ ವಸಾಹತುಶಾಹಿಯ ಅಧಿಕೃತ ವಕ್ತಾರನಾಗಿ ರೂಪುಗೊಂಡ ರೀತಿಯ ಕುರಿತು ಗಮನ ಹರಿಸೋಣ.

1. ವಸಾಹತುಶಾಹಿ ಮತ್ತು ಫ್ಯೂಡಲಿಸಂ ನಡುವಿನ ಕಲ್ಯಾಣ

ಬ್ರಿಟೀಷರು ಸಹಕಾರಿ ಒಪ್ಪಂದಕ್ಕೆ ಧಾರವಾಡ, ಬೆಳಗಾವಿ ಮತ್ತು ಬಿಜಾಪುರ ಜಿಲ್ಲೆಯ ದೇಸಾಯಿಗಳ ಜೊತೆಗೆ, ಮೈಸೂರಿನ ಒಡೆಯರು ಮತ್ತು ಹೈದರಾಬಾದಿನ ನಿಜಾಮರ ಜೊತೆಗೆ ಸಹಿ ಹಾಕಿದ್ದನ್ನು ನಾವೀಗಾಗಲೇ ನೋಡಿದ್ದೇವೆ. ಅವರೆಲ್ಲರೂ ಒಂದೋ ಊಳಿಗಮಾನ್ಯ ಪದ್ಧತಿಯನ್ನು ನೇರವಾಗಿ ಪ್ರತಿನಿಧಿಸಿದವರು ಅಥವಾ ಊಳಿಗಮಾನ್ಯ ನೆಲೆಯಿಂದ ಹುಟ್ಟಿಬಂದ ರಾಜರು. ವರುಷಗಳಿಂದ ಬೆಳೆದು ನಿಂತಿದ್ದ ಈ ಪ್ರತಿನಿಧಿಗಳು, ದೊರೆಯುವ ಸವಲತ್ತುಗಳಿಗಾಗಿ ಬ್ರಿಟೀಷರೊಡನೆ ಸಹಕಾರಿ ಒಪ್ಪಂದಕ್ಕೆ ಸಹಿ ಹಾಕಿದರು. ಮೈಸೂರಿನ ಹೈದರಾಲಿ ಮತ್ತು ಟಿಪ್ಪುವಿನಿಂದ ಸೋಲನುಭವಿಸಿ ತಮ್ಮ ನೆಲೆ ಕಳೆದುಕೊಂಡು ಓಡಿಹೋಗಿದ್ದ ಪಾಳೇಗಾರರು ಬ್ರಿಟೀಷರ ಆಶ್ರಯ ಪಡೆದರು. ವಸಾಹತುಶಾಹಿಯನ್ನು ಅಪ್ಪಿಕೊಳ್ಳಲು ತೋಳಗಲಿಸಿದವರಿಗೆ ಬ್ರಿಟೀಷರ ಸ್ನೇಹವಷ್ಟೇ ತಮ್ಮ ವರ್ಗವನ್ನು ಉಳಿಸಿಕೊಳ್ಳಲಿಕ್ಕಿರುವ ಕೊನೆಯ ಮಾರ್ಗ ಎನ್ನುವುದರ ಅರಿವಿತ್ತು. ಈ ಊಳಿಗಮಾನ್ಯ ದೊರೆಗಳು ಬ್ರಿಟೀಷರ ರಾಜಕೀಯ ವಿಸ್ತರಣೆಗೆ ಅತ್ಯಂತ ಮುಖ್ಯವಾದರು. ಇತಿಹಾಸದ ಚಲನೆಯಲ್ಲಿ ಅಸ್ತಿತ್ವವನ್ನೇ ಕಳೆದುಕೊಳ್ಳುತ್ತಿದ್ದ ಒಂದು ಸಾಮಾಜಿಕ ವರ್ಗಕ್ಕೆ ಬ್ರಿಟೀಷ್ ವಸಾಹತುಶಾಹಿ ಆಶ್ರಯ ಕೊಟ್ಟು, ಮುದ್ದಿಸಿ, ಮರಣಮಂಚದ ಮೇಲಿದ್ದ ವ್ಯಕ್ತಿ ಮತ್ತಷ್ಟು ವರುಷಗಳ ಕಾಲ ಬದುಕುಳಿಯುವಂತೆ ಮಾಡಿತು. ಪಾಳೇಗಾರರು ಮತ್ತು ದೇಶಗತಿಗಳ ಉಸಿರು ಕಾಪಾಡಿದ ವಸಾಹತುಶಾಹಿ ವಿದ್ರೋಹದ ಚಿಂತನೆಗಳು ಮತ್ತೆ ಮೊಳಕೆಯೊಡೆಯದಿರುವ ಕಡೆಗೂ ಗಮನ ಹರಿಸಿತು.

ಬೆಂಗಳೂರಿನ ಬಳಿಯ ಬಟ್ಟೆ ಉದ್ಯಮದ ಊರಾದ ವಲ್ಲೂರಿನ ಬಗ್ಗೆ ಫ್ರಾನ್ಸಿಸ್ ಬುಚನನ್ ಹೀಗೆ ಹೇಳುತ್ತಾನೆ: “ವಲ್ಲೂರಿನಲ್ಲಿ ಅರಮನೆಯಂತಹ ಒಂದು ಮನೆ, ಕೋಟೆ, ಕೋಟೆಯೊಳಗೊಂದು ನಗರ ಮತ್ತು ಪುಟ್ಟ ಉಪನಗರವಿತ್ತು. ಅರಮನೆಯಲ್ಲಿ ಹದಿನೈದು ಜನರ ರಾಜಪೂತ ಕುಟುಂಬವಿತ್ತು. ಇವರ ಹಿರೀಕರು ಈ ಜಾಗದ ಮತ್ತು ನೆರೆಹೊರೆಯ ಹಳ್ಳಿಗಳ ಜಾಗೀರುದಾರರಾಗಿದ್ದು; ಅವರ ವಾರ್ಷಿಕ ಆದಾಯ 11,000 ಪಗೋಡಾಗಳಷ್ಟಿತ್ತು (33,000 ರುಪಾಯಿ). ಹೈದರಾಲಿಯಿಂದ ಅವರು ಉಚ್ಛಾಟಿತರಾದರು; ಆದರೆ ಲಾರ್ಡ್ ಕಾರ್ನ್ ವಾಲ್ಲಿಸ್ ನಡೆಸಿದ ಯುದ್ಧದ ಸಂದರ್ಭದಲ್ಲಿ ಅವರನ್ನು ಮತ್ತೆ ಜಾಗೀರುದಾರರನ್ನಾಗಿ ಮಾಡಿದ್ದು ಕೊಲೊನಲ್ ರೀಡ್. ಶಾಂತಿಯ ದಿನಗಳ ನಂತರ ಪುನಃ ಅವರನ್ನು ಉಚ್ಛಾಟಿಸಿದ್ದು ಟಿಪ್ಪು….. ಈಗಿನ ಮೈಸೂರು ಸರಕಾರ (ಅಸಲಿಗೆ ಬ್ರಿಟೀಷರೇ ಆಡಳಿತ ನಡೆಸುತ್ತಿದ್ದವರು ಎನ್ನುವುದನ್ನು ಯಾವಾಗಲೂ ನೆನಪಿನಲ್ಲಿಟ್ಟುಕೊಳ್ಳಬೇಕು) ಆ ಕುಟುಂಬ ವಂಶಸ್ಥರಿಗೆ ವಾರ್ಷಿಕ 400 ಪಗೋಡಾಗಳನ್ನು (1200 ರುಪಾಯಿ) ನಿವೃತ್ತಿ ವೇತನದಂತೆ ನೀಡುತ್ತಾ ಅರಮನೆಯಲ್ಲಿ ಬದುಕು ನಡೆಸಲು ಅವಕಾಶ ಮಾಡಿಕೊಟ್ಟಿದೆ.” (37)

ಬುಚನನ್ನಿನ ಬರಹಗಳು ಮೈಸೂರಿನ ಪಾಳೇಗಾರರ ಇಂತಹ ಅನೇಕ ಕಥನಗಳನ್ನು ತೆರೆದಿಡುತ್ತದೆ. ಹೈದರಾಲಿ ಮತ್ತು ಟಿಪ್ಪುವಿನ ಆಡಳಿತಾವಧಿಯಲ್ಲಿ ಕೊನೆಯ ಉಸಿರನ್ನು ಬಿಗಿ ಹಿಡಿದುಕೊಂಡಿದ್ದವರು ಬ್ರಿಟೀಷರ ವಿಜಯದೊಂದಿಗೆ ಶಾಂತಿ ಒಪ್ಪಂದಗಳನ್ನು ಮಾಡಿಕೊಂಡು ಅಳಿದುಳಿದ ಊಳಿಗಮಾನ್ಯ ಪದ್ಧತಿಯ ವೈಭವಗಳನ್ನು ಮರಳಿ ಗಳಿಸಿಕೊಂಡರು.

ಕಿರ್ಮಾನಿ ಹೇಳುತ್ತಾರೆ: “ಗುಪ್ತಚರ ವಿಭಾಗದ ಮುಖ್ಯಸ್ಥ ಕೊಲೊನಲ್ ರೀಡ್ ಅಂಬೂರಿನ ಹೊಣೆ ಹೊತ್ತಿಕೊಂಡಾಗ ಹಣ, ಸಿಹಿ ಮಾತುಗಳು ಮತ್ತು ಕಾರುಣ್ಯದ ಕೆಲಸಗಳಿಂದ ಬಾಳಗಾಟಿನ ಎಲ್ಲಾ ಪಾಳೇಗಾರರನ್ನು ತನ್ನ ಕಡೆಗೆ ಸೆಳೆದುಕೊಳ್ಳುತ್ತಾನೆ. ನವಾಬರ ಕ್ರೌರ್ಯ ಮತ್ತು ದಬ್ಬಾಳಿಕೆಯಿಂದ ಸುಲ್ತಾನನ ನಿರಂಕುಶ ವ್ಯಕ್ತಿತ್ವ ಸಹಿಸಲಾಗದೆ ತಮ್ಮ ಸ್ವಂತ ದೇಶ ತೊರೆದಿದ್ದ ಪಾಳೇಗಾರರು ಕರ್ನಾಟಿಕ್ ಪಯನಗಾಟಿನಲ್ಲಿ ನಿರಾಶ್ರಿತರಾಗಿ ನೆಲೆ ಕಂಡುಕೊಂಡಿದ್ದರು. ಗುಂಗೂಂಡಿ ಪಾಳದ ಪಾಳೇಗಾರ, ಬೈರೇ ಕೋರಿನ ಮಕ್ಕಳು, ಚಿಕ್ಕಬಳ್ಳಾಪುರದ ಪಾಳೇಗಾರ, ವೆಂಕಟಗಿರಿ ಕೋಟೆಯ ಪಾಳೇಗಾರ ಪುದು ನಾಯರ್, ಪುಂಗಾನೂರಿನ ಮುಖ್ಯಸ್ಥರ ಜೊತೆಗೆ ಮದನಪಲ್ಲಿ, ಆನೇಕಲ್ಲಿನ ಪಾಳೇಗಾರರು ತಮ್ಮ ನೆಲೆ – ನೆಲವನ್ನು ಕಳೆದುಕೊಂಡಿದ್ದರು. ಇವರೆಲ್ಲರಿಗೂ ರಕ್ಷಣೆ ನೀಡುವುದಾಗಿ ಲಿಖಿತ ಭರವಸೆ ನೀಡಲಾಯಿತು. ಅವರವರ ಜಿಲ್ಲೆಗಳಿಗೆ ಸಂಪನ್ಮೂಲ ಮತ್ತು ಆಹಾರ ಪದಾರ್ಥಗಳನ್ನು ಸಂಗ್ರಹಿಸಿ ಬ್ರಿಟೀಷ್ ಸೈನ್ಯಕ್ಕೆ ರವಾನಿಸುವ ಶರತ್ತಿನ ಮೇಲೆ ಕಳುಹಿಸಲಾಯಿತು. ಯಾವುದೇ ಮಾರ್ಗದಿಂದ ತಮ್ಮ ತಮ್ಮ ಜಿಲ್ಲೆ ಮತ್ತು ತಾಲ್ಲೂಕುಗಳನ್ನು ವಶಪಡಿಸಿಕೊಳ್ಳುವ ಅಧಿಕಾರವೂ ದೊರೆಯಿತು….” (38)

ಮದ್ರಾಸಿನ ಗವರ್ನರ್ ಮೆಕ್ ಕಾರ್ಟ್ನಿ 1782ರಲ್ಲಿ ಬರೆದ ಪತ್ರದಲ್ಲಿ: “ಪಾಳೇಗಾರರ ಸಹಾಯದೊಂದಿಗೆ ನಿರೀಕ್ಷಿಸಬಹುದಾದ ಮುನ್ನಡೆಗಾಗಿ…… (ಪದಗಳು ಅಳಿಸಿಹೋಗಿವೆ)……..ಅವರಿಗೆ ಎಲ್ಲಾ ರೀತಿಯ ಪ್ರೋತ್ಸಾಹವನ್ನು ನೀಡಲಾಗುತ್ತಿದೆ……ಅವರ ನ್ಯಾಯಬದ್ಧ ಹಕ್ಕುಗಳನ್ನು ಕಂಪನಿ ಸರಕಾರ ರಕ್ಷಿಸುವುದೂ ಇದರ ಭಾಗವಾಗಿದೆ” (39)

ಪತ್ರದ ಮುಂದಿನ ಭಾಗದಲ್ಲಿ ಮೆಕ್ ಕಾರ್ಟ್ನಿ ಮತ್ತು ಚಾರ್ಲ್ಸ್ ಸ್ಮಿತ್ 1782ರಲ್ಲಿ 13 ಪಾಳೇಗಾರರಿಗೆ ನೀಡಿದ ಕರಾರು ಪತ್ರದ ವಿವರಗಳಿವೆ.

1782ರ ನವೆಂಬರಿನಲ್ಲಿ ಬರೆದ ಮತ್ತೊಂದು ಪತ್ರದಲ್ಲಿ ಮೆಕ್ ಕಾರ್ಟ್ನಿ: “ಹೈದರಾಲಿಯಿಂದ ನೆಲೆ ಕಳೆದುಕೊಂಡಿದ್ದ ಅನೇಕ ಪಾಳೇಗಾರರು ಮತ್ತು ಮುಖ್ಯಸ್ಥರಲ್ಲಿ ಕೆಲವರನ್ನು ಕಳೆದ ವರುಷ ಒಪ್ಪಂದಕ್ಕೆ ಒಳಪಡಿಸಿತ್ತು. ಇವರಿಗೆ ಹೈದರಾಲಿಯ ಸಾಮ್ರಾಜ್ಯದ ಮೇಲೆ ಪೂರ್ಣಪ್ರಮಾಣದ ಯುದ್ಧವನ್ನಲ್ಲದಿದ್ದರೂ ತಕ್ಕಮಟ್ಟಿಗಿನ ಗಲಭೆ – ಗೊಂದಲಗಳನ್ನು ಸೃಷ್ಟಿಸುವ ಆಸೆ ಮತ್ತು ಮನಸ್ಸಿದೆ….”(40)

ಹೈದರಾಲಿ ಮತ್ತು ಟಿಪ್ಪುವಿನ ವಿರುದ್ಧ ವಸಾಹತುಶಾಹಿ ಮತ್ತು ಫ್ಯೂಡಲಿಸಂ ಜೊತೆಯಾಗಿ ಯುದ್ಧ ಮಾಡಿತು.

ಬಳ್ಳಾರಿ ಜಿಲ್ಲೆಯಲ್ಲಿ ಪಾಳೇಗಾರ ಕುಟುಂಬಗಳಿಗೆ ಬ್ರಿಟೀಷರು ಘೋಷಿಸಿದ ಸವಲತ್ತುಗಳ ಬಗ್ಗೆ ಜೆ.ಸಿ.ದುವಾ ವಿವರವಾಗಿ ಬರೆಯುತ್ತಾರೆ. (41) ಪಾಳೇಗಾರರಿಗೆ ಕೊಡಲಾಗುತ್ತಿದ್ದ ಪಿಂಚಣಿ ಎಷ್ಟು ನಿರಂತರವಾಗಿತ್ತೆಂದರೆ ‘ಸ್ವಾತಂತ್ರ್ಯ’ ಬಂದ ಎರಡು ದಶಕಗಳ ನಂತರ 1969ರಲ್ಲಿ ತಹಸೀಲ್ದಾರ್ ಕಛೇರಿಗೆ ಭೇಟಿ ಕೊಟ್ಟಾಗ ಪಾಳೇಗಾರರ ವಂಶಸ್ಥರು ಸರಕಾರದಿಂದ ಇನ್ನೂ ಪಿಂಚಣಿ ನೀಡುತ್ತಿದ್ದ ವಿಷಯ ತಿಳಿಯಿತು! (42)

ಬುಚನನ್ ಹೇಳುತ್ತಾರೆ: “ಎಲ್ಲಾ ಪಾಳೇಗಾರರಿಗೆ ಅವರವರ ಆಸ್ತಿಪಾಸ್ತಿಯನ್ನು ಹಿಂದಿರುಗಿಸಲಾಯಿತು ಮತ್ತು ಬಂಗಾಲದ ಜಮೀನುದಾರರಿಗೆ ರೂಪಿಸಿದ ನೀತಿಗಳನ್ನು ಹೇರಲಾಯಿತು. ಒಂದು ನಿರ್ದಿಷ್ಟ ಮೊತ್ತವನ್ನು ಬಾಡಿಗೆಯಾಗಿ ನೀಡಬೇಕಿತ್ತು ಅಥವಾ ಕಪ್ಪಕಾಣಿಕೆಯನ್ನು ಒಪ್ಪಿಸಬೇಕಿತ್ತು. ಆದರೆ ಜನರ ಮೇಲೆ ಇವರಿಗೆ ಯಾವುದೇ ನ್ಯಾಯಾಧಿಕಾರ ನೀಡಲಿಲ್ಲ; ಜನರ ರಕ್ಷಣೆಗೆ ಶಿರಸ್ತೇದಾರರನ್ನು ಸಂಬಳದ ಮೇಲೆ ಸರಕಾರವೇ ನೇಮಿಸಿತು. ರೆವೆನ್ಯೂ ಮತ್ತು ಪೋಲೀಸ್ ಅಧಿಕಾರಿಗಳ ಖರ್ಚನ್ನು ಪಾಳೇಗಾರರು ನೋಡಿಕೊಳ್ಳಬೇಕಿತ್ತು. ಮೊದಲಿನ ಆದಾಯಕ್ಕೆ ಹೋಲಿಸಿದರೆ ಈಗವರಿಗೆ ಆಗುತ್ತಿದ್ದ ಲಾಭ ನಾಲ್ಕರಲ್ಲಿ ಒಂದರಷ್ಟಾದರೂ ದೇಶದ ಪರಿಸ್ಥಿತಿ ಸುಧಾರಿಸಿದಂತೆ ಆದಾಯ ಬಹಳಷ್ಟು ಹೆಚ್ಚಾಗುತ್ತದೆ.” (43)

ಹಳೆಯ ಮೈಸೂರಿನಲ್ಲಿ ಎರಡು ರೀತಿಯಿಂದ ವಸಾಹತುಶಾಹಿ ಫ್ಯೂಡಲಿಸಮ್ಮಿನ ಜೊತೆ ಹೊಂದಿಕೊಂಡಿತು. ಒಂದೆಡೆ ಮೈಸೂರು ಸಾಮ್ಯಾಜ್ಯದ ಹೃದಯ ಭಾಗದಲ್ಲಿ ಪಾಳೇಗಾರರ ನಿರ್ನಾಮವಾಗಿಬಿಟ್ಟಿತ್ತು. ಉಳಿದ ಕೆಲವೇ ಕೆಲವು ಪಾಳೇಗಾರರಿಗೆ ಪಿಂಚಣಿ ನೀಡಿ ಹಳ್ಳಿಗಳ ಪಟೇಲರನ್ನಾಗಿ ಮಾಡಲಾಯಿತು. ಮತ್ತೊಂದೆಡೆ ತಮಿಳುನಾಡು ಮತ್ತು ಆಂಧ್ರಪ್ರದೇಶದ ಗಡಿಗಳಿಗೆ ಹೊಂದಿಕೊಂಡ ಭಾಗಗಳಲ್ಲಿ ಪಾಳೇಗಾರ ಪದ್ಧತಿ ಇನ್ನೂ ಸಶಕ್ತವಾಗಿತ್ತು; ಕಾರಣ ಟಿಪ್ಪು ಸುಲ್ತಾನ ಅವರ ವಿರುದ್ಧ ಹೋರಾಡಲಾರಂಭಿಸಿದ್ದು ತುಂಬ ತಡವಾಗಿ. ಈ ಪಾಳೇಗಾರರು ಜಮೀನ್ದಾರರಾದರು ಮತ್ತು ರೈತ – ಕೂಲಿಯವರಿಂದ ತೆರಿಗೆ ವಸೂಲಿ ಮಾಡುತ್ತಿದ್ದರು.

ಮೇಕಿಂಗ್ ಹಿಸ್ಟರಿಯ ಮೊದಲ ಸಂಪುಟದಲ್ಲಿ ನೋಡಿದಂತೆ ಮಲೆನಾಡು ಮತ್ತು ಕರಾವಳಿ ದೊಡ್ಡ ದೊಡ್ಡ ಭೂಮಾಲೀಕರ ಪ್ರದೇಶವಾಗಿತ್ತು. ಕರಾವಳಿಯಲ್ಲಿ ದೊಡ್ಡ ಭೂಮಾಲೀಕರನ್ನು ಹೈದರಾಲಿ ಮತ್ತು ಟಿಪ್ಪು ಸುಲ್ತಾನ್ ಸಾಯಿಸಿದರು, ಬಂಧಿಸಿದರು, ಓಡಿಸಿದರು, “ಸ್ಥಳೀಯ ತೆರಿಗೆ ಸಂಗ್ರಹಕಾರರ ಜಾಗದಲ್ಲಿ ಹೈದರಾಲಿ ಮತ್ತು ಟಿಪ್ಪು ಸುಲ್ತಾನನ ಸೈನಿಕ ಅಧಿಕಾರಿಗಳು ನೇಮಕವಾಗಿದ್ದರು”; ಭೂಮಿಯನ್ನು ಗುತ್ತಿಗೆಗೆ ಪಡೆದಿದ್ದ ಮೂಲಗೇಣಿದಾರರು ಕೃಷಿ ಮಾಡುತ್ತಿದ್ದುದು ಕಡಿಮೆ. (44) ಉಪಗುತ್ತಿಗೆ ನೀಡುತ್ತದ್ದ ಮೂಲಗೇಣಿದಾರರು ಭೂಮಾಲೀಕರ ಅನುಪಸ್ಥಿತಿಯಲ್ಲಿ ತಾವೇ ಒಡೆಯರಾದರು. ಮೂಲಗೇಣಿದಾರರ ಬಳಿ ಜೀತದ ಕೆಲಸಗಾರರಿದ್ದರು.

ಕರಾವಳಿ 1800-1802ರಲ್ಲಿ ಬ್ರಿಟೀಷರ ಕೈವಶವಾದ ತಕ್ಷಣ ಅದರ ಕುರಿತು ನಿರ್ಣಯಗಳನ್ನು ತೆಗೆದುಕೊಂಡ ಮನ್ರೋ ತನ್ನ ಕೆಲಸವನ್ನು ಪೂರ್ಣಗೊಳಿಸಿದ ಕುರಿತು ಈ ರೀತಿ ಹೇಳುತ್ತಾನೆ: “ದೇಶವನ್ನು ದೊಡ್ಡ ಎಸ್ಟೇಟುಗಳಾಗಿ ವಿಭಾಗಿಸಿದ ಮೇಲೆ, ಪಟೇಲರಿಗೆ ಮತ್ತು ಚಿಕ್ಕ ಎಸ್ಟೇಟಿನ ಮಾಲೀಕರಿಗೆ ಒಪ್ಪಿಸಬೇಕು. ತನ್ನ ಭೂಭಾಗವನ್ನು ಬಿಟ್ಟು ಉಳಿದೆಡೆಯ ಸ್ಥಿರಾಸ್ತಿಯಲ್ಲಿ ಯಾವುದೇ ಪಾಲಿಲ್ಲದ ಕಾರಣ ಇವರು ಅವರ ಜಹಗೀರಿಗಷ್ಟೇ ದೊರೆಯ ರೀತಿ ಉಳಿಯುತ್ತಾರೆ. ವೈಫಲ್ಯಗಳಿಗೂ ಅವರೇ ಹೊಣೆಗಾರರಾಗುವುದರಿಂದ ಈ ಕೆಳಗಿನ ಸವಲತ್ತುಗಳನ್ನು ಅವರಿಗೆ ನೀಡಲಾಗುವುದು. ಮೊದಲನೆಯದಾಗಿ ಜಮಾ ಆದ ಹಣದಲ್ಲಿ ಎರಡು ಪರ್ಸೆಂಟಿನಷ್ಟು ರಿಯಾಯತಿಯನ್ನು ಈಗಾಗಲೇ ನಾನು ಪ್ರಸ್ತಾಪಿಸಿರುವ ಕಡಿತದಲ್ಲಿ ಸೇರಿಸಬೇಕು. ಉಳಿದದ್ದು ಚಿಕ್ಕ ಭೂಮಾಲೀಕರು ಮತ್ತು ರೈತರು ತುಂಬಿ ಕೊಡಬೇಕು. ಎರಡನೆಯದಾಗಿ ಒಣ ಭೂಮಿಯ ಮಾಲೀಕತ್ವ ಹೊಂದಿರುವವರೊಡನೆ ಏರ್ಪಾಟು ಮಾಡಿಕೊಂಡು ವ್ಯವಸಾಯ ಪ್ರಾರಂಭಿಸಿದ ಎರಡನೇ ವರ್ಷದಿಂದ ಬಿದನೂರು ಕಾಯ್ದೆಯ ಪ್ರಕಾರ ಹಣ ಪಾವತಿಸಬೇಕು. ಮೂರನೆಯದಾಗಿ ಕೆಳಜಾತಿಯವರಿಗೆ ಉತ್ತರಾಧಿಕಾರಿಗಳಿಲ್ಲದಿದ್ದಲ್ಲಿ ಇದುವರೆಗೆ ತಮ್ಮ ಆಸ್ತಿಯನ್ನು ಸರಕಾರಕ್ಕೆ ವಹಿಸುತ್ತಿದ್ದರು; ಇನ್ನು ಮುಂದೆ ಪಟೇಲರಿಗೆ ಒಪ್ಪಿಸಬೇಕು. ಮತ್ತು ಆ ಆಸ್ತಿ ಪಟೇಲರ ಸ್ವಂತ ಆಸ್ತಿಯಂತಾಗುತ್ತದೆ. 

…. ನಾನು ಅನುಮೋದಿಸಿದ ಈ ನಿಯಮಗಳು ಕೆನರಾದ ಎಲ್ಲಾ ಭಾಗಗಳಿಗೆ ಮತ್ತು ಅಂಕೋಲಾ, ಸುಂಡಾ ಹಾಗೂ ಬಿಳಗಿಯ ಬಹುತೇಕ ಭಾಗಗಳಿಗೆ ಅನ್ವಯಿಸುತ್ತದೆ….” (45) 

ಬ್ರಿಟೀಷರ ಎಲ್ಲಾ ಯತ್ನಗಳು ಸ್ಥಳೀಯ ಆಡಳಿತದಲ್ಲಿ ಭೂಮಾಲೀಕರ ವರ್ಗವನ್ನು ಸಬಲಗೊಳಿಸುವುದಾಗಿತ್ತು. ಈ ಭೂಮಾಲೀಕರು ಕೆಲವೇ ದಶಕಗಳ ಹಿಂದೆ ಹೈದರ್ ಅಲಿ ಮತ್ತು ಟಿಪ್ಪು ಸುಲ್ತಾನನ ಆಡಳಿತಾವಧಿಯಲ್ಲಿ ನಿರ್ನಾಮವಾಗಿಬಿಟ್ಟಿದ್ದರು. 

ಮೂಡಬಿದಿರೆಯಲ್ಲಿನ ಭೂವ್ಯಾಜ್ಯಗಳನ್ನು ಪರಿಹರಿಸುವ ಸಂದರ್ಭದಲ್ಲಿ (ಅಕ್ಟೋಬರ್ 1800) ಮನ್ರೋ ಬರೆದ ಪತ್ರವೊಂದರಲ್ಲಿ: “ಭೂವ್ಯಾಜ್ಯಗಳ ಪರಿಹಾರವನ್ನು ಭೂಮಾಲೀಕರೊಡನೆ ಮಾಡಲಾಯಿತು. ಭೂಮಾಲೀಕರಿಲ್ಲದ ಕಡೆಗಳಲ್ಲಿ ಮೂಲಗೇಣಿದಾರರೊಡನೆ ಭೂವ್ಯವಹಾರ ನಡೆಸಲಾಯಿತು….” (46) 

ಕುರುಪ್ ನ ಮಾತುಗಳನ್ನು ಉಲ್ಲೇಖಿಸುತ್ತ ಶಾಮ್ ಭಟ್ ಮನ್ರೋನ ಪರಿಹಾರಗಳ ಬಗ್ಗೆ: “ಕಾಸರಗೋಡಿನ (ಹಳೆಯ ಬೇಕಲ್) ಭೂಮಾಲೀಕತ್ವ ಮತ್ತು ಕೃಷಿ ವ್ಯವಸ್ಥೆಯ ಬಗ್ಗೆ ಅಧ್ಯಯನ ನಡೆಸಿದ ಕೆ.ಕೆ.ಎನ್.ಕುರುಪ್ ಹೇಳುತ್ತಾರೆ: ‘ವಿದ್ವಾಂಸರಾದ ಆರ್.ಸಿ.ದತ್ ರವರು ಮನ್ರೋನ ರೈತವಾರಿ ಪದ್ಧತಿ ಭೂಮಿಯ ಮಾಲೀಕತ್ವವನ್ನು ಗೇಣಿ ಮಾಡುತ್ತಿದ್ದ ರೈತರಿಗೆ ಮತ್ತು ಕೂಲಿಯವರಿಗೆ ನೀಡುವುದೆಂದು ಅಭಿಪ್ರಾಯ ಪಟ್ಟರೂ ಅಸಲಿಗೆ ಮನ್ರೋನ ರೈತವಾರಿ ಪದ್ಧತಿ ಭೂಮಿಯ ಏಕಸ್ವಾಮ್ಯವನ್ನು ಸಾರುತ್ತ, ಸಾವಿರಾರು ಎಕರೆ ಜಮೀನುಗಳನ್ನು ವ್ಯವಸಾಯವೇ ಮಾಡದ ಜಮೀನ್ದಾರರ ಪಾಲು ಮಾಡಿತ್ತು. 

ದಕ್ಷಿಣ ಕನ್ನಡದಲ್ಲಿ ಮನ್ರೋ ಮಾಡಿದ್ದೂ ಇದನ್ನೇ. 

ಕೆನರಾದಲ್ಲಿ ಥಾಮಸ್ ಮನ್ರೋ ಪರಿಚಯಿಸಿದ ರೈತವಾರಿ ಪದ್ಧತಿಯಲ್ಲಿ ‘ಭೂಮಿಯ ಮಾಲೀಕತ್ವದ ನಿರ್ಧಾರವಾಗುತ್ತಿದ್ದುದು ಹಕ್ಕು ಪತ್ರ ಅಥವಾ ಮೂಲಪಹಣಿ ಹೊಂದಿದ್ದ ಆಧಾರದ ಮೇಲೆ. ಕೃಷಿ ಮಾಡುತ್ತಿದ್ದರೇ ಇಲ್ಲವೇ ಎನ್ನುವುದು ಮುಖ್ಯವಾಗುತ್ತಿರಲಿಲ್ಲ’.” (47)

ಫೆಬ್ರ 18, 2016

ದೇಶದ್ರೋಹಿಗಳೆಂದರೆ ಯಾರು?

ಸಂಪತ್. ಜಿ
ದಿ ಹಿಂದೂ, 17/02/2015
ಕನ್ನಡಕ್ಕೆ: ಡಾ. ಅಶೋಕ್. ಕೆ. ಆರ್.

ರೋಹಿತ್ ವೇಮುಲ ಮತ್ತು ಕನ್ಹಯ್ಯ ಕುಮಾರ್ ಇಬ್ಬರಿಗೂ ರಾಷ್ಟ್ರೀಯತೆ ಎಂದರೆ ಭಾರತದ ಜನರ ಅಭಿವೃದ್ಧಿಯೇ ಹೊರತು ಭಾರತ ಸರಕಾರದ್ದಲ್ಲ. ಇವರ ಈ ರಾಜಕೀಯ ದೃಷ್ಟಿಕೋನ ಗೂಂಡಾ ರಾಷ್ಟ್ರೀಯವಾದಿಗಳ ಕಣ್ಣಲ್ಲವರನ್ನು ಅಪಾಯಕಾರಿಯಂತೆ ಚಿತ್ರಿಸಿತು.

ಪ್ರಪಂಚದ ಇತರೆಡೆ ಇತಿಹಾಸದ ಪುನರಾವರ್ತನೆ ಮೊದಲು ದುರಂತದಂತೆ ನಡೆದು ನಂತರ ಪ್ರಹಸನವಾಗುತ್ತದೆ. 21ನೇ ಶತಮಾನದ ಭಾರತದಲ್ಲಿ ಇತಿಹಾಸ ಪ್ರಹಸನದಂತೆ ಪುನರಾವರ್ತನೆಯಾಗಿ ನಂತರ ಪ್ರೈಮ್ ಟೈಮಿನಲ್ಲಿ ಮುಂದುವರೆಯುತ್ತದೆ!

ಉನ್ಮತ್ತ ಟಿವಿ ನಿರೂಪಕರ ಒಂದು ಸಣ್ಣ ಗುಂಪು ದೇಶದ ಅತ್ಯುತ್ತಮ ವಿಶ್ವವಿದ್ಯಾನಿಯಲದ ಪ್ರತಿಭಾವಂತ ವಿದ್ಯಾರ್ಥಿಗಳನ್ನು "ದೇಶದ್ರೋಹಿ"ಗಳೆಂದು ಮತ್ತವರನ್ನು ಹಿಡಿದು ಬಡಿಯಬಯಸುವವರನ್ನು "ರಾಷ್ಟ್ರೀಯವಾದಿಗಳೆಂದು" ಇಡೀ ದೇಶವನ್ನು ಮೂರ್ಖರನ್ನಾಗಿ ಮಾಡಿಬಿಡಲು ಸಾಧ್ಯವಾ? 'ದೇಶದ್ರೋಹಿ'ಗಳನ್ನಿಡಿಯುವ ಹಳೆಯ ಆಟದಲ್ಲಿ ಭಾರತದ ಕುಸಿತವನ್ನು, ಭಾರತದ 'ವೈವಿದ್ಯತೆ' - ಕೊನೇ ಪಕ್ಷ ಬುದ್ಧಿವಂತಿಕೆಯ ಮಟ್ಟದಲ್ಲಿನ ವೈವಿಧ್ಯತೆ - ತಡೆಯಬಲ್ಲದಾ? ಆಡಳಿತ ವೈಖರಿಯನ್ನು ನೋಡುತ್ತಿದ್ದರೆ ತಡೆಯುವ ಸಾಧ್ಯತೆಗಳು ಕಡಿಮೆ.

ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಕಾಂಗ್ರೆಸ್ಸಿನ ಉಪಾಧ್ಯಕ್ಷ ರಾಹುಲ್ ಗಾಂಧಿಯನ್ನು ರಾಷ್ಟ್ರದ್ರೋಹಿ ಎಂದು ಕರೆದದ್ದನ್ನು ನಾವೆಲ್ಲರೂ ಕೇಳಿದ್ದೇವೆ. ಯಾಕೆ? ಯಾಕೆಂದರೆ ರಾಹುಲ್ ಗಾಂಧಿ ಜೆ.ಎನ್.ಯು (Jawaharlal Nehru University)ನ ರಾಷ್ಟ್ರವಿರೋಧಿ ವಿದ್ಯಾರ್ಥಿಗಳ ಜೊತೆ ನಿಂತ ಕಾರಣಕ್ಕೆ. ಶಾರವರ ಆರೋಪದ ಹಿಂದಿರುವ ರಾಜಕೀಯ ಉದ್ದೇಶಗಳನ್ನು ತಪ್ಪಾಗಿ ಅರ್ಥೈಸುವುದು ಸಾಧ್ಯವಾಗದು. ದುರದೃಷ್ಟವಶಾತ್ ರಾಹುಲ್ ಗಾಂಧಿಯನ್ನು ದೇಶದ್ರೋಹಿ ಎಂದು ಕರೆಯುವ ಅಮಿತ್ ಶಾರವರ ಯೋಚನೆ ಹೆಚ್ಚೆಂದರೆ ಒಂದು ಅಚ್ಚರಿ; ಕಡಿಮೆಯೆಂದರೆ ಅವರ ಎದುರಿರುವ ಕಲ್ಪಿತ ಮಾದರಿ.

ಈಗಾಗಲೇ, ಸಂಘ ಪರಿವಾರದ ರಾಷ್ಟ್ರೀಯತೆಯ ವರ್ಗೀಕರಣದ ಪ್ರಕಾರ, ಮಧ್ಯ ಭಾರತದ ಆದಿವಾಸಿಗಳು, ದಲಿತ ವಿದ್ಯಾರ್ಥಿಗಳು, ಎಡ ಪಂಥೀಯ ಬುದ್ಧಿಜೀವಿಗಳು, ಮಾನವ ಹಕ್ಕು ಹೋರಾಟಗಾರರು, ಒಂದು ನಿರ್ದಿಷ್ಟ ಧಾರ್ಮಿಕ ಅಲ್ಪಸಂಖ್ಯಾತರು, ಅಣು ವಿರೋಧಿ ಕಾರ್ಯಕರ್ತರು, ಬೀಫ್ ತಿನ್ನುವವರು, ಪಾಕಿಸ್ತಾನವನ್ನು ದ್ವೇಷಿಸದವರು, ಅಂತರ ಧರ್ಮೀಯ ದಂಪತಿಗಳು, ಸಲಿಂಗಕಾಮಿಗಳು ಮತ್ತು ಕಾರ್ಮಿಕ ಹೋರಾಟಗಾರರೆಲ್ಲ ದೇಶದ್ರೋಹಿಗಳು. ಸೋಮವಾರ ನವದೆಹಲಿಯ ಪಟಿಯಾಲ ಹೌಸಿನಲ್ಲಿ ನಡೆದ ಗೂಂಡಾ ರಾಷ್ಟ್ರೀಯತೆಯನ್ನು ಪರಿಗಣಿಸುವುದಾದರೆ ಈ ಪಟ್ಟಿಗೆ ಪತ್ರಕರ್ತರು, ಜೆ ಎನ್ ಯು ವಿದ್ಯಾರ್ಥಿಗಳ ರೀತಿ ಬಟ್ಟೆ ಧರಿಸಿದವರು, ಐಡೆಂಟಿಟಿ ಕಾರ್ಡ್ ಇಲ್ಲದವರು, ಗೂಂಡಾ ರಾಷ್ಟ್ರೀಯವಾದಿಗಳ ಕಾರ್ಯವನ್ನು ರೆಕಾರ್ಡ್ ಮಾಡುತ್ತಿದ್ದವರು ಮತ್ತು ಗೂಂಡಾ ರಾಷ್ಟ್ರೀಯವಾದಿಗಳ ಮಾತನ್ನು ವಿರೋಧಿಸುವವರನ್ನೆಲ್ಲ ದೇಶದ್ರೋಹಿಗಳ ಪಟ್ಟಿಗೆ ಸೇರಿಸಬಹುದು.

ಇದ ವೇಗದಲ್ಲಿ ಮುಂದುವರೆದರೆ, ಎನ್.ಡಿ.ಎ ತನ್ನ ಅಧಿಕಾರಾವಧಿಯನ್ನು ಮುಗಿಸುವಷ್ಟರಲ್ಲಿ ‘ದುರದೃಷ್ಟ’ವಶಾತ್ ಸಂಘ ಪರಿವಾರದ ಸದಸ್ಯರಾಗದವರೆಲ್ಲರೂ ದೇಶದ್ರೋಹಿಗಳಾಗಿಬಿಟ್ಟಿರುತ್ತಾರೆ. ಈ ದೇಶದ್ರೋಹಕ್ಕಿರುವ ಒಂದೇ ಮುಲಾಮೆಂದರೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ರಾಷ್ಟ್ರೀಯತೆಯ ದಬ್ಬಾಳಿಕೆ ಅಥವಾ ಬಹಿರಂಗವಾಗಿ ಹಲ್ಲೆ ನಡೆಸುವ ಭಜರಂಗ ದಳ; ಈ ಸಂದರ್ಭದಲ್ಲಿ ಭಾರತದ ದೇಶಪ್ರೇಮಿ ಪೋಲೀಸರು ಶಾಂತಿಯಿಂದ ಹೆಜ್ಜೆ ಹಾಕುತ್ತಿರುತ್ತಾರೆ, ಹಲ್ಲೆಕೋರರ ಜೊತೆಗೆ.

ಏನಿದು ಗೂಂಡಾ ರಾಷ್ಟ್ರೀಯವಾದವೆಂದರೆ? ದೇಶದ ಪ್ರಜೆಗಳಿಗೆ ದೇಶದ್ರೋಹಿ ಸರ್ಟಿಫಿಕೇಟು ಕೊಡುವ ಕೆಲಸವನ್ನು ತನ್ನ ಮೇಲೆ ತಾನೇ ಅಹಂನಿಂದ ಹೊತ್ತುಕೊಂಡಿರುವಾತನೇ ಗೂಂಡಾ ರಾಷ್ಟ್ರೀಯವಾದಿ. ಬೀದಿಯಲ್ಲಿ ನೀವು ಹೋಗುತ್ತಿರುವಾಗ ನಿಮ್ಮ ಬಳಿಗೆ ಬಂದು, ಕೆನ್ನೆಗೊಂದು ಹೊಡೆದು, ನಿಮ್ಮ ಕಾಲರ್ ಪಟ್ಟಿಯನ್ನಿಡಿದೆಳೆದು ನೀವು ದೇಶದ್ರೋಹಿ ಎಂದು ಹೇಳಿದರೆ ನಾನು ಗೂಂಡಾ ರಾಷ್ಟ್ರೀಯವಾದಿ.

ಗೂಂಡಾ ರಾಷ್ಟ್ರೀಯತೆ ಹೊಸದೇನಲ್ಲ. ಜರ್ಮನಿಯ ಇತಿಹಾಸಕಾರ ಆರ್ಥರ್ ರೋಸ್ ಬರ್ಗ್, ತನ್ನ Fascism as a mass movement ಪುಸ್ತಕದಲ್ಲಿ ಫ್ಯಾಸಿಸಂನ ಹೆಚ್ಚಳವನ್ನು ಗುರುತಿಸುವುದಕ್ಕಿರುವ ಎರಡು ಸ್ಥಿತಿಗಳ ಬಗ್ಗೆ (ಉಳಿದ ಸ್ಥಿತಿಗಳ ಜೊತೆಗೆ) ತಿಳಿಸುತ್ತಾನೆ: ಒಂದು ಬಲಪಂಥೀಯ ರಾಷ್ಟ್ರೀಯತೆಯ ಹೆಚ್ಚಳ, ಮತ್ತೊಂದು ವ್ಯಕ್ತಿತ್ವದ ಮೇಲೆ ದಾಳಿ ನಡೆಸುವವರ ಕುರಿತು ಮೌನ ಸಮ್ಮತಿ ನೀಡುವ ಆಳ್ವಿಕೆ. ಕಳೆದ ಒಂದು ತಿಂಗಳಿನಿಂದ ಭಾರತ ಸಾಕ್ಷಿಯಾಗಿರುವ ಎರಡು ಘಟನೆಗಳು, ಮೊದಲು ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾನಿಲಯದಲ್ಲಿ ಮತ್ತೀಗ ಜೆ.ಎನ್.ಯುನಲ್ಲಿ ನಡೆದ ಘಟನೆಗಳು, ಮೇಲೆ ತಿಳಿಸಿದ ಎರಡು ಸ್ಥಿತಿಗಳ ಪ್ರಾರಂಭಿಕ ಹಂತಗಳು; ಗುಪ್ತ ನೀತಿಯನ್ನು ಮುಂದಕ್ಕೋಯ್ಯಲು ನಡೆಯುತ್ತಿರುವ ಈ ಘಟನೆಗಳನ್ನು ನಾವು ಫ್ಯಾಸಿಸ್ಟ್ ಎಂದು ಕರೆಯುವುದಿಲ್ಲ ಯಾಕೆಂದರೆ ಭಾರತದ ಖ್ಯಾತ ಉದಾರವಾದಿಗಳು ನಮಗೆ ಪದೇ ಪದೇ ಭರವಸೆ ನೀಡಿದ್ದಾರೆ, ಭಾರತ ತುಂಬ ವೈವಿಧ್ಯವಿರುವ ದೇಶ ಮತ್ತು ಭಾರತದ ಪ್ರಜಾಪ್ರಭುತ್ವಕ್ಕೆ ಚೇತರಿಸಿಕೊಳ್ಳುವ ಶಕ್ತಿ ತುಂಬಾ ಇದೆ ಎಂಬ ಭರವಸೆಗಳ ಕಾರಣಕ್ಕೆ ಫ್ಯಾಸಿಸ್ಟ್ ಪದವನ್ನು ಬಳಸದಿರೋಣ.

ಆದರೂ ಈ ನಮೂನೆ ಎಷ್ಟು ಕರಾರುವಕ್ಕಾಗಿಯೆಂದರೆ ಗಮನಿಸದಿರುವುದು ಕಷ್ಟ. ಹೈದರಾಬಾದಿನಲ್ಲಿ ಬಿಕ್ಕಟ್ಟಿನ ಕಿಡಿ ಪ್ರಾರಂಭವಾಗಿದ್ದು ವಿದ್ಯಾರ್ಥಿ ಸಂಘ ಯಾಕೂಬ್ ಮೆಮನನಿಗೆ ಅನುಕಂಪ ತೋರಿದಾಗ, ಕಾನೂನು ಬಲ್ಲ ಅನೇಕ ಪ್ರಭಾವಶಾಲಿಗಳು ಯಾಕೂಬನ ನೇಣನ್ನು ಪ್ರಶ್ನಿಸಿದ್ದಾರೆ. ಹೈದರಾಬಾದ್ ವಿಶ್ವವಿದ್ಯಾಲಯದ ಎಬಿವಿಪಿ ಘಟಕ ಈ ವಿದ್ಯಾರ್ಥಿಯನ್ನು ರಾಷ್ಟ್ರದ್ರೋಹಿ ಎಂದು ಕರೆಯುತ್ತ ಶಿಕ್ಷಿಸಬೇಕೆಂದು ಒತ್ತಾಯಿಸಲಾರಂಭಿಸಿದರು. ಈ ಸಂಗತಿಯನ್ನು ಕೈಗೆತ್ತಿಕೊಂಡ ಬಿಜೆಪಿಯ ಸಂಸದ ಬಂಡಾರು ದತ್ತಾತ್ರೇಯ, ಕೇಂದ್ರಕ್ಕೊಂದು ದೂರು ಕಳಿಸುತ್ತಾರೆ. ಪರಿಣಾಮ: ವಿಧೇಯ ಉಪಕುಲಪತಿ ಮತ್ತು ವಿಧೇಯ ಪೋಲೀಸರು ಎಬಿವಿಪಿ ಬೆರಳು ತೋರಿದ ವಿದ್ಯಾರ್ಥಿಗಳನ್ನು ಗುರಿಯಾಗಿಸುತ್ತಾರೆ. ಈ ಘಟನೆ ರಾಷ್ಟ್ರವ್ಯಾಪಿ ಸುದ್ದಿಯಾಗಿದ್ದು ರೋಹಿತ್ ವೇಮುಲನ ಆತ್ಮಹತ್ಯೆಯೊಂದಿಗೆ. ರೋಹಿತ್ ವೇಮುಲ ಎಬಿವಿಪಿಯನ್ನು ಮತ್ತದರ ಬಹುಸಂಖ್ಯಾತ ಹಿಂಸೆಯನ್ನು ಖಂಡಿಸುತ್ತಿದ್ದ.

ಜೆ.ಎನ್.ಯುನಲ್ಲಿ, ಬಿಕ್ಕಟ್ಟಿನ ಕಿಡಿ ಪ್ರಾರಂಭವಾಗಿದ್ದು ವಿದ್ಯಾರ್ಥಿಗಳ ಗುಂಪೊಂದು ಅಫ್ಜಲ್ ಗುರುವಿಗೆ ಬೆಂಬಲವಾಗಿ ಪ್ರತಿಭಟನಾ ಸಭೆಯನ್ನು ಆಯೋಜಿಸಿದಾಗ, ಕಾನೂನು ಬಲ್ಲ ಹಲವು ಪ್ರಭಾವಶಾಲಿಗಳು ಅಫ್ಜಲನ ನೇಣನ್ನು ಪ್ರಶ್ನಿಸಿದ್ದಾರೆ. ಎಬಿವಿಪಿ ಘಟಕ ಈ ವಿದ್ಯಾರ್ಥಿಗಳನ್ನು ರಾಷ್ಟ್ರದ್ರೋಹಿಗಳು ಎಂದು ಕರೆಯುತ್ತ ಶಿಕ್ಷಿಸಬೇಕೆಂದು ಒತ್ತಾಯಿಸಲಾರಂಭಿಸಿದರು. ಈ ಘಟನೆಯನ್ನು ಕೈಗೆತ್ತಿಕೊಂಡ ಬಿಜೆಪಿ ಸಂಸದ ಮಹೇಶ್ ಗಿರಿ, ದೂರು ನೀಡುತ್ತಾರೆ, ಆ ದೂರಿನನ್ವಯ ಎಫ್.ಐ.ಆರ್ ದಾಖಲಾಗುತ್ತದೆ. ಪರಿಣಾಮ: ವಿಧೇಯ ಉಪಕುಲಪತಿ ಮತ್ತು ವಿಧೇಯ ಪೋಲೀಸರು ಎಬಿವಿಪಿ ಬೆರಳು ತೋರಿಸಿದ ವಿದ್ಯಾರ್ಥಿಗಳನ್ನು ಗುರಿಯಾಗಿಸುತ್ತಾರೆ. ಈ ಘಟನೆ ರಾಷ್ಟ್ರವ್ಯಾಪಿ ಸುದ್ದಿಯಾಗಿದ್ದು ಜೆ.ಎನ್.ಯು ವಿದ್ಯಾರ್ಥಿ ಘಟಕದ ಅಧ್ಯಕ್ಷ ಕನ್ಹಯ್ಯ ಕುಮಾರನ ಬಂಧನದೊಂದಿಗೆ. ಕನ್ಹಯ್ಯ ಕುಮಾರ್ ಎಬಿವಿಪಿಯನ್ನು ಮತ್ತದರ ಬಹುಸಂಖ್ಯಾತ ಹಿಂಸೆಯನ್ನು ಖಂಡಿಸುತ್ತಿದ್ದ.

ಈ ಎರಡೂ ಘಟನೆಗಳಲ್ಲಿ ವಿದ್ಯಾರ್ಥಿಗಳನ್ನು ಬಡಿಯಲುಪಯೋಗಿಸಿದ ಬೆತ್ತ ರಾಷ್ಟ್ರೀಯವಾದದ್ದು – ಯಾವುದೋ ಒಂದು ರೀತಿಯ ರಾಷ್ಟ್ರೀಯವಾದವಲ್ಲ, ದೇಶದ ಒಂದು ನಿರ್ದಿಷ್ಟ ಗುಂಪಿನ ಜನರ ರಾಷ್ಟ್ರೀಯತೆಯನ್ನು ಅವರದೇ ದೇಶದಲ್ಲಿ ಅನುಮಾನದಿಂದ ನೋಡುವ ಬಲಪಂಥೀಯತೆಯ ರಾಷ್ಟ್ರೀಯವಾದ. ರೋಸನ್ ಬರ್ಗ್ ಗಮನಿಸಿದಂತೆ ಈ ಬೆತ್ತಕ್ಕೆ ರಕ್ಷಣೆ ಕೊಡುತ್ತಿರುವುದು ಸರಕಾರ, ರಕ್ಷಣೆ ಕೊಡುತ್ತಿರುವುದು ಎಬಿವಿಪಿಗೆ.

ಹಿಂದೆ ಈ ರೀತಿಯ ದಾಳಿ ಮಾಡುವವರ ಗುಂಪು ಸಂಘ ಪರಿವಾರದ ಬಹುಮುಖಗಳಲ್ಲಿ ಒಂದಾಗಿತ್ತು – ರಾಷ್ಟ್ರೀಯ ಸ್ವಯಂಸೇವಕ ಸಂಘ, ಭಜರಂಗ ದಳ, ವಿಶ್ವ ಹಿಂದೂ ಪರಿಷತ್ …… ಭಾರತದ ಉದಾರವಾದಿ ಬುದ್ಧಿಜೀವಿಗಳು – ಭಾರತದಲ್ಲಿ ಎಡಪಂಥೀಯರೆಂದು ಯಾರನ್ನು ಕರೆಯುತ್ತಾರೋ ಅವರು ರಾಜಕೀಯದಲ್ಲಿ ಉದಾರವಾದಿಗಳೇ ಹೊರತು ಎಡಪಂಥೀಯರಲ್ಲ – ರಾಜಕಾರಣಿಗಳ ಮುಖವಾಡಗಳನ್ನು ಹೊರಗೆಳೆಯಲು, ದಬ್ಬಾಳಿಕೆಯ ಹಿಂಸೆಯನ್ನು ಉಂಟುಮಾಡಿದವರಿಗೆ ಅವಮರ್ಯಾದೆ ತರಲು ಅಸಹಿಷ್ಣುತೆಯ ಅಸ್ತ್ರವನ್ನು ಉಪಯೋಗಿಸುವುದಕ್ಕೇ ತೃಪ್ತರಾಗಿಬಿಟ್ಟರು.

ಜೆ.ಎನ್.ಯು ಕ್ಯಾಂಪಸ್ಸಿನಲ್ಲಿ ನಡೆಯುತ್ತಿರುವ ಪೋಲೀಸು ರೈಡುಗಳು, ಜೊತೆಗೆ ಪಟಿಯಾಲ ಹೌಸಿನಲ್ಲಿ ಪತ್ರಕರ್ತರ ಮೇಲೆ ನಡೆದ ಹಲ್ಲೆ, ಎನ್.ಡಿ.ಎ ಸರಕಾರ ಸಹಿಷ್ಣುತೆಯನ್ನು ಎತ್ತಿಹಿಡಿಯದೇ ಇದ್ದಿದ್ದಕ್ಕಾಗಿ ಅನುಭವಿಸಿದ ಸಾರ್ವಜನಿಕ ಮುಖಭಂಗದ ನಂತರ ನಡೆದಂತವು. ಅಸಹಿಷ್ಣುತೆಯ ಬಗ್ಗೆ ಉದಾರವಾದಿಗಳ ಹಿಂಬಡಿತ ಎನ್.ಡಿ.ಎ ಮೇಲೆ ಯಾವುದೇ ಪರಿಣಾಮ ಬೀರಿಲ್ಲ. ಬಹುಶಃ ಪ್ರಶಸ್ತಿ ವಾಪಸಾತಿ ಚಳುವಳಿಯಿಂದ ಅದಕ್ಕೆ ಮತ್ತಷ್ಟು ಪ್ರೋತ್ಸಾಹ ಸಿಕ್ಕಿತೇನೋ. ಈಗ ಪ್ರಶಸ್ತಿಗಳು ವಾಪಸ್ಸಾಗಿದೆ, ಪಿಟಿಷನ್ನುಗಳಿಗೆ ಸಹಿ ಬಿದ್ದಾಗಿದೆ, ಪ್ರತಿಭಟನಾ ಮೆರವಣಿಗೆಗಳು ನಡೆದಾಗಿದೆ, ಸಹಿಷ್ಣುತೆಯ ಬಗ್ಗೆ ಸಂಪಾದಕೀಯಗಳನ್ನು ಬರೆದಾಗಿದೆ, ಉದಾರವಾದಿ ಬಹುತ್ವ ಭಾರತ ನಿರ್ದಯವಾಗಿ ಮುನ್ನಡೆಯುತ್ತಿರುವ ವಿಭಜನಾತ್ಮಕ ಏಕ ಸಂಸ್ಕೃತಿ ರಾಷ್ಟ್ರೀಯವಾದಕ್ಕೆ ಮತ್ತೇನು ಮಾಡಬಹುದು?

ನಂಬಿಕೆ ಉಳಸಿಕೊಳ್ಳದ ಉದಾರವಾದಿಗಳು

ಭಾರತದ ಕೇಡೆಂದರೆ, ಸ್ವಘೋಷಿತ ಸಂವಿಧಾನಾತ್ಮಕ ಉದಾರವಾದಿಗಳು ಹಿಂದುತ್ವದ ಶಕ್ತಿಗಳು ಮತ್ತು ಆರ್ಥಿಕ ಉದಾರವಾದಿತನ ಜೊತೆಯಾಗೇ ಬರುತ್ತದೆ ಎಂಬುದನ್ನು ಗುರುತಿಸಲು ವಿಫಲರಾಗಿರುವುದು. ಈ ವೈಫಲ್ಯದ ಕಾರಣದಿಂದಾಗಿಯೇ ಇಂತಹ ಹಿಂಸೆಯನ್ನು ಪದೇ ಪದೇ ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲಿನ ಹಲ್ಲೆ ಎಂದು ಸರಳವಾಗಿ ಹೇಳಿಬಿಡುತ್ತಾರೆ, ಈ ದಬ್ಬಾಳಿಕೆಯಲ್ಲಿರುವ ಆರ್ಥಿಕ ರಾಜಕೀಯದ ಕ್ಲಿಷ್ಟತೆಯೆಡೆಗೆ ಕುರುಡಾಗಿಬಿಡುತ್ತಾರೆ.

ಆರ್ಥಿಕ ಉದಾರೀಕರಣವನ್ನು ಅಪ್ಪಿಕೊಳ್ಳುವ ಭರದಲ್ಲಿ ಭಾರತದ ಉದಾರವಾದಿ ಮೇಲ್ವರ್ಗ, ಸರಕಾರ ಕಾರ್ಮಿಕರ, ನಗರ ಪ್ರದೇಶದ ಬಡವರ, ರೈತರ, ಭೂರಹಿತರ, ಭೂಮಿಯಿದ್ದ ಬಡವರ –ಇವರಲ್ಲಿನ ಹೆಚ್ಚಿನವರು ಸಾಮಾಜಿಕವಾಗಿ ಅಂಚಿನಲ್ಲಿದ್ದ ಜಾತಿಯವರು- ವಿರುದ್ಧ ನಡೆದುಕೊಂಡಾಗ ಅಥವಾ ಅವರನ್ನು ನಿರ್ಲಕ್ಷಿಸಿದಾಗ ಕತ್ತು ತಿರುಗಿಸಿದರು. ಈಗ ಅವರದೇ ಉದಾರವಾದಿ ಸ್ವಾತಂತ್ರ್ಯಗಳನ್ನು ಸರಕಾರ ಬೆಂಬಲಿತ ಶಕ್ತಿಗಳು ಹತ್ತಿಕ್ಕುತ್ತಿರುವಾಗ ಸರಕಾರ ಕತ್ತು ತಿರುಗಿಸುತ್ತಿರುವುದನ್ನು ನೋಡುತ್ತಿದ್ದಾರೆ.

ಆಕಸ್ಮಿಕವೆಂಬಂತೆ, ಹೈದರಾಬಾದ್ ವಿಶ್ವವಿದ್ಯಾಲಯದ ರೋಹಿತ್ ವೇಮುಲ ಮತ್ತು ಜೆ.ಎನ್.ಯುನ ಕನ್ಹಯ್ಯ ಕುಮಾರ್ ಇಬ್ಬರಿಗೂ ಸ್ವಹಿತಾಸಕ್ತಿಯ ಉದಾರವಾದಿಗಳ ಭ್ರಮೆಗಳನ್ನರಿಯುವ ಸ್ಪಷ್ಟತೆಯಿತ್ತು. ವೇಮುಲ ಎರಡು ಅಲ್ಪಸಂಖ್ಯಾತ ಸಮುದಾಯಗಳಾದ ದಲಿತರು ಮತ್ತು ಮುಸ್ಲಿಮರನ್ನು ಹೈದರಾಬಾದ್ ಕ್ಯಾಂಪಸ್ಸಿನಲ್ಲಿ ಒಂದುಗೂಡಿಸುವ ಪ್ರಯತ್ನ ಮಾಡಿದ. ಜೆ.ಎನ್.ಯುದೊಳಗೆ ಎಬಿವಿಪಿಯ ವಿಭಜನಾತ್ಮಕ ರಾಜಕೀಯದ ವಿರುದ್ಧ ಮತ್ತು ಹೊರಗೆ ನವ ಉದಾರವಾದಿ ಆರ್ಥಿಕ ನೀತಿಗಳ ವಿರುದ್ಧ ವಿದ್ಯಾರ್ಥಿ ಸಮೂಹ ಮತ್ತು ಅಸಂಘಟಿತ ಕಾರ್ಮಿಕ ವಲಯವನ್ನು ಒಂದುಗೂಡಿಸುವುದು ಕನ್ಹಯ್ಯ ಕುಮಾರನ ಉದ್ದಿಶ್ಯವಾಗಿತ್ತು. ಇವರ ಈ ತೀಕ್ಷ್ಣ ರಾಜಕೀಯ ದೃಷ್ಟಿಕೋನದ ಸ್ಪಷ್ಟತೆ ಗೂಂಡಾ ರಾಷ್ಟ್ರೀಯವಾದಿಗಳ ಕಣ್ಣಲ್ಲಿ ಅಪಾಯಕಾರಿ ಶಕ್ತಿಗಳಂತೆ ಕಾಣುವಂತೆ ಮಾಡಿತು.

ಪೋಲೀಸರು ವಿಶ್ವವಿದ್ಯಾಲಯದ ಕ್ಯಾಂಪಸ್ಸಿನ ತುಂಬೆಲ್ಲ ಬೇಟೆ ಹುಡುಕುತ್ತಾ ಅಲೆಯುವ ಕ್ಲೀಷೆಯ ಸಂಗತಿ ನೂರಾರು ಬಾರಿ ನಮ್ಮ ಸ್ವತಂತ್ರ ದೇಶದ ಸರಕಾರಗಳಡಿಯಲ್ಲಿ ನಡೆದು ಹೋಗಿದೆ. ಶೋಷಿತ ಜನರ ಆಸಕ್ತಿಯನ್ನು ಮರೆತು ಶೋಷಕ ಸರಕಾರೀ ಯಂತ್ರವನ್ನು ಸ್ಥಾಪಿಸುವುದಕ್ಕೆ ಉಗ್ರ ರಾಷ್ಟ್ರೀಯವಾದವನ್ನು ಉಪಯೋಗಿಸುವುದೂ ಕೂಡ ಅನೇಕ ಬಾರಿ ನಡೆದು ಹೋಗಿರುವ ಸಂಗತಿ. ಮತ್ತೊಂದು ರೀತಿಯಲ್ಲಿ ಹೇಳುವುದಾದರೆ, ರಾಷ್ಟ್ರೀಯತೆ ಎಂಬುದು ಭಾರತದ ಜನರ ಅಭ್ಯುದಯವಾ ಅಥವಾ ಭಾರತದ ಕಾರ್ಮಿಕರಿಗಿಂತ ವಿದೇಶಿ ಬಂಡವಾಳವನ್ನು ಎತ್ತಿ ಹಿಡಿಯುವ ಭಾರತ ಸರಕಾರದ ಅಭ್ಯುದಯವಾ? 

ಈ ಸಂದರ್ಭದಲ್ಲಿ ಕೇಳಿಕೊಳ್ಳಬೇಕಾದ ಬಹುಮುಖ್ಯ ಪ್ರಶ್ನೆಯೆಂದರೆ: ದೇಶದ್ರೋಹಿ ಎಂಬ ಹಣೆಪಟ್ಟಿ ಹಚ್ಚುವ ಹಕ್ಕು ಯಾರಿಗಿದೆ? ಮತ್ತು ಭಾರತದ ಸಾಮಾನ್ಯ ಪ್ರಜೆ ದೇಶದ್ರೋಹಿ ಎಂಬ ಆರೋಪ ಬಂದಾಗ ಹೇಗೆ ಪ್ರತಿಕ್ರಿಯಿಸಬೇಕು?

ದೇಶದ್ರೋಹದ ಆರೋಪ ಸುಳ್ಳು ಎಂದು ಉತ್ತರ ಕೊಡಬೇಕೆಂದು ಬಯಸುವುದೇ ಈ ಯುದ್ಧದಲ್ಲಿನ ಸೋಲು. ಸರಿಯಾದ ಪ್ರತಿಕ್ರಿಯೆ ಹೇಗಿರಬೇಕೆಂದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಕನ್ಹಯ್ಯ ಕುಮಾರನ ಅದ್ಭುತ ಭಾಷಣ ಉದಾಹರಣೆ. ಆಕ್ರಮಣಕಾರಿಯಾಗಿ, ಗೂಂಡಾ ರಾಷ್ಟ್ರೀಯವಾದಿಗಳಿಗೆ ದೇಶಭಕ್ತಿಯ ಸರ್ಟಿಫಿಕೇಟುಗಳನ್ನು ಕೊಡುವುದಕ್ಕಿರುವ ಯೋಗ್ಯತೆ ಏನೆಂದು ಪ್ರಶ್ನಿಸಿ ಮತ್ತು ಸರ್ಟಿಫಿಕೇಟು ಕೊಡಲವರನ್ನು ಬಿಟ್ಟ ಸರಕಾರದ ಉದ್ದೇಶಗಳನ್ನು ಪ್ರಶ್ನೆ ಮಾಡಿ.
(Article was first published in The Hindu on 17/02/2016, Translated to kannada with permission)

ಫೆಬ್ರ 13, 2016

ಬಂಧನಕ್ಕೂ ಮುನ್ನ ಜೆ.ಎನ್.ಯು ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ನಯ್ಯ ಕುಮಾರ್ ಹೇಳಿದ್ದೇನು?

ಜೆ.ಎನ್.ಯು ಸಾಮಾನ್ಯವಾಗಿ ಇಂತಹ ಗಲಭೆಗಳಿಂದಲೇ ಸುದ್ದಿಯಾಗಿಬಿಡುತ್ತದೆ. ಅಫ್ಜಲ್ ಗುರುನನ್ನು ನೇಣಿಗೇರಿಸಿದ ದಿನ ಸಭೆ ಆಯೋಜಿಸಿ ಭಾರತದ ವಿರುದ್ದ, ಪಾಕಿಸ್ತಾನದ ಪರವಾಗಿ, ಉಗ್ರಗಾಮಿಗಳ ಪರವಾಗಿ ಘೋಷಣೆ ಕೂಗಿದರೆಂಬ ಕಾರಣಕ್ಕೆ ವಿದ್ಯಾರ್ಥಿ ಸಂಘದ ಹಲವರ ಮೇಲೆ ಕೇಸು ಬಿದ್ದಿದೆ. Ofcourse ಸಂವಿಧಾನಬದ್ಧವಾಗಿ ನಡೆದ ವಿಚಾರಣೆಯಿಂದ ಗಲ್ಲು ಶಿಕ್ಷೆಗೊಳಗಾದ (ಗಲ್ಲು ಶಿಕ್ಷೆ ಸರಿಯೋ ತಪ್ಪೋ ಎನ್ನುವುದು ಬೇರೆಯೇ ಚರ್ಚೆ) ಅಪರಾಧಿಯೊಬ್ಬನ ಪರವಾಗಿ ಸಭೆ ನಡೆಸುವುದು, ದೇಶದ ವಿರುದ್ಧ ಘೋಷಣೆ ಕೂಗುವುದು, ವೈರಿ ರಾಷ್ಟ್ರದ ಪರವಾಗಿ ಕೂಗುವುದೆಲ್ಲವೂ ತಪ್ಪು ಕೆಲಸವೇ. ಆದರದು ವಿದ್ಯಾರ್ಥಿ ಸಂಘದ ಅಧ್ಯಕ್ಷನನ್ನು ರಾಷ್ಟ್ರದ್ರೋಹದ ಆರೋಪದಲ್ಲಿ ಬಂಧಿಸುವಷ್ಟು ಗಂಭೀರದ್ದೇ? ಹೌದೆನ್ನುವರು ನೀವಾದರೆ ಹದಿನೈದು ದಿನದ ಹಿಂದೆ ಜನವರಿ ಮೂವತ್ತರಂದು ಮಹಾತ್ಮ ಗಾಂಧಿಯನ್ನು ಕೊಂದ ಉಗ್ರ ನಾಥೂರಾಮ್ ಗೋಡ್ಸೆಯನ್ನು ಹೊಗಳುವ ಕಾರ್ಯಕ್ರಮವೊಂದನ್ನು ಅಖಿಲ ಭಾರತ ಹಿಂದೂ ಮಹಾಸಭಾ ಹಮ್ಮಿಕೊಂಡಿತ್ತು. ಅವರನ್ನೂ ರಾಷ್ಟ್ರದ್ರೋಹದ ಆರೋಪದ ಮೇಲೆ ಬಂಧಿಸಲಾಗಿದೆಯಾ? ಒಂದು ತಪ್ಪನ್ನು ಮತ್ತೊಂದು ತಪ್ಪಿನಿಂದ ಸಮರ್ಥಿಸಬಾರದು ಎಂಬ ಅರಿವಿನೊಂದಿಗೇ ಕೇಂದ್ರ ಸರಕಾರ ಉಗುರಲ್ಲಿ ಹೋಗುವುದಕ್ಕೆ ಕೊಡಲಿ ತೆಗೆದುಕೊಂಡಿದೆಯಾ ಎಂಬ ಅನುಮಾನ ಬರುವುದಂತೂ ಸಹಜ. ತಪ್ಪು ಯಾರು ಮಾಡಿದರೂ ತಪ್ಪೇ ಅಲ್ಲವೇ? ಒಂದು ಕಣ್ಣಿಗೆ ಬೆಣ್ಣೆ ಮತ್ತೊಂದು ಕಣ್ಣಿಗೆ ಸುಣ್ಣ ಹಚ್ಚುವ ವ್ಯವಸ್ಥೆ ಸರಿಯಾ ಎಂದು ಕೇಳಿಕೊಳ್ಳಬೇಕಾದ ಸಮಯವಿದು.

ಬಂಧನಕ್ಕೂ ಮುನ್ನ ಜೆ.ಎನ್.ಯು ವಿದ್ಯಾರ್ಥಿಗಳನ್ನುದ್ದೇಶಿಸಿ ಜೆ.ಎನ್.ಯು ವಿದ್ಯಾರ್ಥಿ ಸಂಘದ ಅಧ್ಯಕ್ಷ ಮಾಡಿದ ಭಾಷಣದ ಕನ್ನಡ ರೂಪವಿದು. ಇದನ್ನು ಕನ್ನಡಕ್ಕೆ ಅನುವಾದಿಸಿ ಹಿಂಗ್ಯಾಕೆಯಲ್ಲಿ ಪ್ರಕಟಿಸುತ್ತಿರುವುದಕ್ಕೆ ಮೂರು ಕಾರಣವಿದೆ. ಒಂದು ಜೆ.ಎನ್.ಯು ವಿದ್ಯಾರ್ಥಿ ಸಂಘದ ಅಧ್ಯಕ್ಷ ಸ್ಥಾನದಲ್ಲಿರುವವರನ್ನು ಬಂಧಿಸಿರುವುದು ಇದು ಎರಡನೇ ಸಲವಂತೆ. ಮೊದಲ ಸಲ ಬಂಧನವಾಗಿದ್ದು ಭಾರತದ ಕರಾಳ ಅಧ್ಯಾಯವಾದ ಕಾಂಗ್ರೆಸ್ಸಿನ ಇಂದಿರಾ ಗಾಂಧಿಯ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ. ಎರಡನೇ ಕಾರಣ ಭಾಷಣದ ವೀಡಿಯೋ ಮಾಡಿದಾತ ಗೆಳೆಯನೊಟ್ಟಿಗೆ ಇಷ್ಟು ವೀಡಿಯೋ ಸಾಕಾ? ಎಂದು ಕೇಳುತ್ತಾನೆ. ಅವನ ಗೆಳೆಯ ಮಾಧ್ಯಮದವರಿದನ್ನು ಹಾಕುವುದಿಲ್ಲ ಪೂರ್ತಿ ರೆಕಾರ್ಡ್ ಮಾಡಿಕೊಂಡು ಯೂಟ್ಯೂಬಿಗೆ ಹಾಕೋಣ ಅನ್ನುತ್ತಾನೆ. ಮುಖ್ಯವಾಹಿನಿಯ ಮಾಧ್ಯಮಗಳಲ್ಲಿ ಇದರ ಬಗ್ಗೆ ಯಾವುದೇ ಸುದ್ದಿಯಿಲ್ಲ. ದೇಶದ್ರೋಹದ ಕೂಗಷ್ಟೇ ಇದೆ. ಮೂರನೆಯ ಕಾರಣ ಜೆ.ಎನ್.ಯುನಲ್ಲಿ ಮಾರ್ಚಿ ತಿಂಗಳಿನಲ್ಲಿ ಚುನಾವಣೆ ಇದೆಯೆಂದು ಈ ಭಾಷಣದಲ್ಲಿ ಕನ್ನಯ್ಯ ಹೇಳುತ್ತಾನೆ. ಇದು ಎಬಿವಿಪಿಯ ಚುನಾವಣಾ ತಯಾರಿಯಾ? ಎಂಬ ಅನುಮಾನದೊಂದಿಗೆ ಕನ್ನಡ ರೂಪಕ್ಕಿಳಿಸಲಾಗಿದೆ. ದೇಶದ್ರೋಹಿಗಳನ್ನು, ಆತಂಕವಾದಿಗಳನ್ನು ವಿಶ್ವವಿದ್ಯಾನಿಲಯವೊಂದು ಸೃಷ್ಟಿಸಬಾರದು ಎಂಬ ಎಚ್ಚರಿಕೆಯೊಂದಿಗೇ ವಿಶ್ವವಿದ್ಯಾಲಯಗಳು ಹುಸಿ ರಾಷ್ಟ್ರೀಯತೆಯನ್ನು ಪೋಷಿಸುತ್ತ ಅರೆಬೆಂದ ದೇಶಭಕ್ತರನ್ನು ಬೆಳೆಸಬಾರದೆಂದ ಎಚ್ಚರಿಕೆಯೂ ಇರಬೇಕು – ಡಾ. ಅಶೋಕ್.ಕೆ.ಆರ್ 

ಜೆ.ಎನ್.ಯು,ಎಸ್.ಯುದ ಅಧ್ಯಕ್ಷ ಕನ್ನಯ್ಯ ಕುಮಾರ್
……….ಬ್ರಿಟೀಷರಿಂದ ಕ್ಷಮೆ ಕೇಳಿದ್ದ ಸಾವರ್ಕರನ ಚೇಲಾಗಳಿವರು. ಹರಿಯಾಣದಲ್ಲಿರುವ ಕಟ್ಟರ್ ಸರ್ಕಾರ ಶಹೀದ್ ಭಗತ್ ಸಿಂಗನ ಹೆಸರಲ್ಲಿದ್ದ ವಿಮಾನ ನಿಲ್ದಾಣಕ್ಕೆ ಸಂಘಿಯ ಹೆಸರನ್ನಿಟ್ಟುಬಿಟ್ಟರು. ನಾನು ಹೇಳುತ್ತಿರುವುದೇನೆಂದರೆ ನಮಗೆ ದೇಶಭಕ್ತಿಯ ಸರ್ಟಿಫಿಕೇಟ್ ಆರ್.ಎಸ್.ಎಸ್ ನಿಂದ ಬೇಕಾಗಿಲ್ಲ. ನಮಗೆ ನ್ಯಾಷನಲಿಷ್ಟ್ ಎಂಬ ಸರ್ಟಿಫಿಕೇಟ್ ಆರ್.ಎಸ್.ಎಸ್ ನಿಂದ ಬೇಕಾಗಿಲ್ಲ. ನಾವು ಈ ದೇಶದವರು, ಇದರ ಮಣ್ಣಿನ ಬಗ್ಗೆ ನಮಗೆ ಪ್ರೀತಿಯಿದೆ, ಈ ದೇಶದ ಒಳಗಿರುವ 80% ಬಡವರ ಪರವಾಗಿ ನಾವು ಹೋರಾಡುತ್ತೇವೆ. ನಮಗೆ ಇದೇ ದೇಶಪ್ರೇಮ. ನಮಗೆ ಸಂಪೂರ್ಣ ನಂಬಿಕೆಯಿದೆ ಬಾಬಾ ಸಾಹೇಬರ ಬಗ್ಗೆ, ನಮಗೆ ಸಂಪೂರ್ಣ ನಂಬಿಕೆಯಿದೆ ದೇಶದ ಸಂವಿಧಾನದ ಮೇಲೆ, ಬಹಳ ಸ್ಪಷ್ಟವಾಗಿ ಹೇಳುತ್ತೇನೆ ಈ ದೇಶದ ಸಂವಿಧಾನದ ಮೇಲೆ ಯಾರಾದರೂ ಬೆರಳ ತೋರಿಸಿದರೆ, ಆ ಬೆರಳು ಸಂಘಿಯದ್ದಾಗಲೀ ಆ ಬೆರಳು ಇನ್ಯಾರದೇ ಆಗಲಿ ನಾವದನ್ನು ಸಹಿಸುವುದಿಲ್ಲ. ನಾವು ಸಂವಿಧಾನವನ್ನ ನಂಬುತ್ತೇವೆ, ಆದರೆ ನಾಗಪುರದಲ್ಲಿ ಹೇಳಿಕೊಡಲಾಗುವ ಸಂವಿಧಾನದ ಮೇಲೆ ನಮಗೆ ಭರವಸೆಯಿಲ್ಲ. ನಮಗೆ ಮನುಸ್ಮ್ರತಿಯ ಬಗ್ಗೆ ಯಾವುದೇ ಭರವಸೆಯಿಲ್ಲ ನಮಗೆ ಈ ದೇಶದ ಒಳಗಿರುವ ಜಾತಿವಾದದ ಮೇಲೆ ಯಾವುದೇ ಭರವಸೆಯಿಲ್ಲ. 

ಇದೇ ಸಂವಿಧಾನದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರರು ಗಲ್ಲು ಶಿಕ್ಷೆಯನ್ನು ರದ್ದು ಮಾಡುವ ಬಗ್ಗೆ ಹೇಳುತ್ತಾರೆ, ಇದೇ ಬಾಬಾ ಸಾಹೇಬ್ ಅಂಬೇಡ್ಕರರು ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಹೇಳುತ್ತಾರೆ. ನಾವು ಸಂವಿಧಾನವನ್ನು ಎತ್ತಿ ಹಿಡಿಯುತ್ತಾ ನಮ್ಮ ಮೂಲಭೂತ ಹಕ್ಕನ್ನು ಸಾಂವಿಧಾನಿಕ ಹಕ್ಕನ್ನು ಎತ್ತಿ ಹಿಡಿಯಲು ಬಯಸುತ್ತೇವೆ. ಆದರಿದು ನಾಚಿಕೆಗೇಡಿನ ವಿಷಯ, ದುಃಖದ ವಿಷಯ ಇವತ್ತು ಎಬಿವಿಪಿ ತಮ್ಮ ಮಾಧ್ಯಮ ಮಿತ್ರರ ಜೊತೆ ಸೇರಿ ಪೂರ್ತಿ ವಿಷಯವನ್ನು ತಿರುಚಿಬಿಟ್ಟಿದೆ, ತೆಳುವಾಗಿಸಿಬಿಟ್ಟಿದೆ. ನಿನ್ನೆ ಎಬಿವಿಪಿಯ Joint secretary ಹೇಳ್ತಿದ್ರು ಫೆಲ್ಲೋಶಿಪ್ಪಿಗೆ ಹೋರಾಟ ನಡೆಸುತ್ತೀವೆಂದು. ಇದು ಎಷ್ಟು ಹಾಸ್ಯಾಸ್ಪದವೆಂದರೆ ಇವರದೇ ಸರಕಾರದ ಮೇಡಮ್ ಮನು ಸ್ಮೃತಿ ಇರಾನಿ ಫೆಲ್ಲೋಶಿಪ್ಪನ್ನು ರದ್ದು ಮಾಡಿಬಿಟ್ಟಿದ್ದಾರೆ. ಇವರೇಳುತ್ತಾರೆ ಫೆಲ್ಲೋಶಿಪ್ಪಿಗೆ ಹೋರಾಡುತ್ತೇವೆಂದು. ಇವರ ಸರಕಾರ ಉನ್ನತ ಶಿಕ್ಷಣಕ್ಕೆ ಮೀಸಲಿಡುವ ಹಣದಲ್ಲಿ 70% ಕಡಿತಗೊಳಿಸಿಬಿಟ್ಟಿದೆ. ಇದರಿಂದ ನಮ್ಮ ಹಾಸ್ಟೆಲ್ ಕಳೆದ ನಾಲ್ಕು ವರ್ಷದಿಂದ ಪೂರ್ಣವಾಗಿಲ್ಲ. ಇವತ್ತಿನವರೆಗೂ ವೈಫೈ ಕೊಡಲಾಗಿಲ್ಲ……………………… ಎಬಿವಿಪಿಯ ಜನರು ದೇವಾನಂದನ ತರ ಪೋಸು ಕೊಡುತ್ತಾ ಹಾಸ್ಟೆಲ್ ಕಟ್ಟಿಸುತ್ತೇವೆ, ವೈಫೈ ಕೊಡಿಸುತ್ತೇವೆ, ಫೆಲ್ಲೋಶಿಪ್ ಕೊಡಿಸುತ್ತೇವೆ ಎಂದು ಹೇಳುತ್ತಾರೆ. ಮೂಲಭೂತ ಹಕ್ಕಿನ ಬಗ್ಗೆ ಚರ್ಚೆಯಾದರೆ ಇವರ ಸತ್ಯಗಳೆಲ್ಲ ಹೊರಗೆ ಬಂದುಬಿಡುತ್ತವೆ. ಗೆಳೆಯರೇ ನಮಗೆ ಹೆಮ್ಮೆಯಿದೆ ಜೆ.ಎನ್.ಯು ಬಗ್ಗೆ. ನಾವು ಮೂಲಭೂತ ಹಕ್ಕಿನ ಬಗ್ಗೆ ಚರ್ಚೆ ನಡೆಸುತ್ತೇವೆ. ಇದರ ಬಗ್ಗೆ ಪ್ರಶ್ನೆ ಕೇಳುತ್ತೇವೆ. …………. ಆ ಸ್ವಾಮಿ ಹೇಳ್ತಾರೆ ಜೆ.ಎನ್.ಯುನಲ್ಲಿ ಜಿಹಾದಿಗಳಿದ್ದಾರೆ. ಜೆ.ಎನ್.ಯುನಲ್ಲಿರುವ ಜನ ಹಿಂಸೆ ಹಬ್ಬಿಸುತ್ತಾರೆ ಎಂದು. ಜೆ.ಎನ್.ಯುನಲ್ಲಿರುವ ಆರ್.ಎಸ್‍.ಎಸ್ ಹಿಂಬಾಲಕರಿಗೆ ನಾನು ಸವಾಲ ಹಾಕುತ್ತೇನೆ. ಬನ್ನಿ ಡಿಬೇಟ್ ಮಾಡೋಣ. ಹಿಂಸೆಯ ಬಗ್ಗೆ ಚರ್ಚಿಸೋಣ …………………….. ಎಬಿವಿಪಿ ನಾಚಿಕೆಯಿಲ್ಲದೆ ಹೇಳುತ್ತೆ ರಕ್ತದ ತಿಲಕ ಮಾಡಿ ಗುಂಡುಗಳಿಂದ ಆರತಿ ಎತ್ತಿ ಎಂದು. ಯಾರ ರಕ್ತ ಹರಿಸಬೇಕೆಂದಿದ್ದೀರಿ ಈ ಮಣ್ಣಿನಲ್ಲಿ? ನೀವು ಗುಂಡು ಹಾರಿಸಿದ್ದೀರಿ, ಬ್ರಿಟೀಷರ ಜೊತೆ ಸೇರಿಕೊಂಡು ಈ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿದ್ದವರ ಮೇಲ ಗುಂಡು ಹಾರಿಸಿದ್ದೀರಿ. ಈ ಮಣ್ಣಿನಲ್ಲಿ ಬಡವರು ಅನ್ನದ ಬಗ್ಗೆ ಮಾತನಾಡಿದಾಗ, ಹಕ್ಕಿನ ಬಗ್ಗೆ ಮಾತನಾಡಿದಾಗ ಅವರ ಮೇಲೆ ಗುಂಡು ಹಾರಿಸುತ್ತೀರಿ. ಮುಸ್ಲಿಮರ ಮೇಲೆ ಗುಂಡು ಹಾರಿಸಿದ್ದೀರಿ. ತಮ್ಮಧಿಕಾರದ ಬಗ್ಗೆ ಮಹಿಳೆಯರು ಮಾತನಾಡಿದಾಗ ನೀವೇಳುತ್ತೀರಿ ಐದು ಬೆರಳುಗಳು ಸಮನಾಗಿರುವುದಿಲ್ಲವೆಂದು. ಮಹಿಳೆಯರು ಸೀತೆಯ ಆಗಿರಬೇಕು ಮತ್ತು ಸೀತೆಯ ತರ ಅಗ್ನಿಪರೀಕ್ಷೆಗೊಳಗಾಗಬೇಕೆಂದು ಹೇಳುತ್ತೀರಿ. ಈ ದೇಶದಲ್ಲಿ ಲೋಕತಂತ್ರವಿದೆ, ಈ ಲೋಕತಂತ್ರ ಎಲ್ಲರಿಗೂ ಸಮಾನ ಹಕ್ಕು ನೀಡುತ್ತದೆ. ಅದು ವಿದ್ಯಾರ್ಥಿಯೇ ಇರಲಿ, ಕರ್ಮಚಾರಿಯೇ ಇರಲಿ, ಬಡವ – ಬಲ್ಲಿದನಿರಲಿ, ಕೂಲಿಯವನಿರಲಿ, ರೈತನಿರಲಿ, ಅಂಬಾನಿಯಿರಲಿ, ಅದಾನಿಯಿರಲಿ ಎಲ್ಲರಿಗೂ ಸಮಾನ ಹಕ್ಕಿದೆ. ಮಹಿಳೆಯ ಸಮಾನತೆಯ ಬಗ್ಗೆ ಮಾತನಾಡಿದರೆ ಹೇಳುತ್ತಾರೆ ಭಾರತೀಯ ಸಂಸ್ಕೃತಿಯನ್ನು ಹಾಳುಮಾಡುತ್ತಿದ್ದಾರೆಂದು. ನಾವು ಹಾಳುಮಾಡಬೇಕೆಂದಿದ್ದೇವೆ, ಶೋಷಣೆಯ ಸಂಸ್ಕೃತಿಯನ್ನು, ಜಾತಿವಾದದ ಸಂಸ್ಕೃತಿಯನ್ನು, ಮನುವಾದ ಮತ್ತು ಬ್ರಾಹ್ಮಣವಾದದ ಸಂಸ್ಕೃತಿಯನ್ನು ……………………….. ಇವರಿಗೆ ಕಷ್ಟವಾಗುವುದು ಈ ಮಣ್ಣಿನ ಜನರು ಲೋಕತಂತ್ರದ ಬಗ್ಗೆ ಮಾತನಾಡಿದಾಗ, ಲಾಲ್ ಸಲಾಮಿನ ಜೊತೆ ಜನರು ನೀಲಿ ಸಲಾಮ್ ಮಾಡಿದಾಗ, ಮಾರ್ಕ್ಸ್ ಜೊತೆ ಬಾಬಾ ಸಾಹೇಬ್ ಅಂಬೇಡ್ಕರ್ ಹೆಸರು ತೆಗೆದುಕೊಂಡಾಗ ………………….. ಇವರ ಹೊಟ್ಟೆಯಲ್ಲಿ ತಳಮಳವೇಳುತ್ತದೆ. ಇವರ ಕುತಂತ್ರವಿದು, ಇವರು ಬ್ರಿಟೀಷರ ಚಮಚಾಗಳು …….. ಹಾಕಿ ದೇಶದ್ರೋಹದ ಕೇಸನ್ನು. ನಾನೇಳುತ್ತೇನೆ ಆರ್.ಎಸ್.ಎಸ್ ಇತಿಹಾಸ ಬ್ರಿಟೀಷರ ಜೊತೆಗೆ ನಿಂತ ಇತಿಹಾಸ. ಈ ದೇಶದ್ರೋಹಿಗಳು ಇವತ್ತು ದೇಶಪ್ರೇಮದ ಸರ್ಟಿಫಿಕೇಟ್ ಕೇಳುತ್ತಿದ್ದಾರೆ. ನನ್ನ ಮೊಬೈಲ್ ನೋಡಿ ಗೆಳೆಯರೇ ನನ್ನ ತಾಯಿ ಮತ್ತು ತಂಗಿಗೆ ಕೆಟ್ಟಕೆಟ್ಟದಾಗಿ ಬಯ್ದಿದ್ದಾರೆ, ಬಯ್ಯುತ್ತಿದಾರೆ. ಯಾವ ಭಾರತ ಮಾತೆಯ ಬಗ್ಗೆ ಮಾತನಾಡುತ್ತಿದ್ದಿರಾ? ನಿಮ್ಮ ಭಾರತ ಮಾತೆಯಲ್ಲಿ ನಮ್ಮ ತಾಯಿ ಇಲ್ಲದಿದ್ದರೆ ನನಗೆ ಆ ಭಾರತ ಮಾತೆಯ ಪರಿಕಲ್ಪನೆ ಒಪ್ಪಿತವಲ್ಲ. ಈ ದೇಶದ ಬಡ ಮಹಿಳೆಯರು, ನನ್ನಮ್ಮ ಅಂಗನವಾಡಿಯಲ್ಲಿ ಕೆಲಸಕ್ಕಿದ್ದಾರೆ, ಮೂರು ಸಾವಿರದ ಮೇಲೆ ನಮ್ಮ ಕುಟುಂಬ ನಡೆಯುತ್ತದೆ. ಮತ್ತಿವರು ಅವರ ವಿರುದ್ಧ ಬಯ್ಗುಳ ಸುರಿಸುತ್ತಿದ್ದಾರೆ. ಇಂತಹ ದೇಶದ ಬಗ್ಗೆ ನನಗೆ ನಾಚಿಕೆಯಿದೆ. ಈ ದೇಶದೊಳಗಿರುವ ದಲಿತ, ಕಾರ್ಮಿಕ, ರೈತರ ತಾಯಿ ಭಾರತ ಮಾತೆಯಲ್ಲ. ನಾನು ಜೈಕಾರ ಹಾಕುತ್ತೇನೆ, ಭಾರತದ ತಾಯಂದರಿಗ, ಅಪ್ಪಂದರಿಗೆ, ತಾಯಿ ಸಹೋದರಿಗೆ ಜೈ, ರೈತ ಕಾರ್ಮಿಕ, ದಲಿತ ಆದಿವಾಸಿಗಳಿಗೆ ಜೈ. ನಿಮ್ಮಲ್ಲಿ ತಾಕತ್ತಿದ್ದರೆ ಹೇಳಿ ಇಂಕ್ವಿಲಾಬ್ ಜಿಂದಾಬಾದ್, ಹೇಳಿ ಭಗತ್ ಸಿಂಗ್ ಜಿಂದಾಬಾದ್, ಹೇಳಿ ಸುಖದೇವ್ ಜಿಂದಾಬಾದ್, ಹೇಳಿ ಅಶ್ವಾಕುಲ್ಲಾ ಖಾನ್ ಜಿಂದಾಬಾದ್, ಹೇಳಿ ಬಾಬಾ ಸಾಹೇಬ್ ಜಿಂದಾಬಾದ್.

ನೀವು ಬಾಬಾ ಸಾಹೇಬರ 125ನೇ ವರ್ಷಾಚರಣೆಯನ್ನಾಚರಿಸುವ ನಾಟಕವಾಡುತ್ತೀರಿ. ನಿಮ್ಮಲ್ಲಿ ತಾಕತ್ತಿದೆಯಾ? ಬಾಬಾ ಸಾಹೇಬರು ಜಾತಿವಾದ ಈ ದೇಶದ ದೊಡ್ಡ ಸಮಸ್ಯೆಯೆಂದು ಹೇಳಿದ್ದರು…………….. ಖಾಸಗಿ ಕ್ಷೇತ್ರದಲ್ಲಿ ಮೀಸಲಾತಿ ತೆಗೆದುಕೊಂಡು ಬನ್ನಿ …………… ದೇಶ ಕಟ್ಟುವಿಕೆ ನಡೆಯುವುದು ಅಲ್ಲಿರುವ ಜನರಿಂದ. ಈ ದೇಶದಲ್ಲಿ ಬಡವ – ಕಾರ್ಮಿಕರಿಗೆ ಜಾಗವಿಲ್ಲ……….. ನಿನ್ನೆ ಟಿವಿ ಡಿಬೇಟಿನಲ್ಲಿ ದೀಪಕ್ ಚೌರಾಸಿಯಾರವರಿಗೆ ಈ ಮಾತು ಹೇಳುತ್ತಿದ್ದೆ ‘ಇದು ಗಂಭೀರ ಸಮಯವೆಂದು ನೆನಪಿಟ್ಟುಕೊಳ್ಳಿ. ಇದೇ ರೀತಿಯ ಮೂಲಭೂತವಾದತನ ಮುಂದುವರೆದರೆ ಮಾಧ್ಯಮ ಕೂಡ ಸುರಕ್ಷಿತವಾಗಿರುವುದಿಲ್ಲ. ಸಂಘದ ಆಫೀಸಿನಿಂದ ಸ್ಕ್ರಿಪ್ಟ್ ಬರೆದುಕೊಂಡು ಬರುತ್ತಾರೆ. ಇಂದಿರಾಗಾಂಧಿಯ ಸಮಯದಲ್ಲಿ ಕಾಂಗ್ರೆಸ್ ಆಫೀಸಿನಿಂದ ಸ್ಕ್ರಿಪ್ಟ್ ಬರುತ್ತಿದ್ದಂತೆ ಬರುತ್ತದೆ ಎಂದು ನೆನಪಿರಲಿ’ ನೀವು ನಿಜಕ್ಕೂ ಈ ದೇಶದಲ್ಲಿರುವ ದೇಶಭಕ್ತಿಯನ್ನು ತೋರಿಸಬೇಕೆಂದರೆ, ಕೆಲವು ಮಾಧ್ಯಮಮಿತ್ರರು ಹೇಳುತ್ತಿದ್ದರು, ನಮ್ಮ ತೆರಿಗೆ ಹಣದಲ್ಲಿ, ಸಬ್ಸಿಡಿ ಹಣದಲ್ಲಿ ಜೆ.ಎನ್.ಯು ನಡೆಯುತ್ತಿದೆಯೆಂದು. ಹೌದು ನಿಜ, ತೆರಿಗೆ ಹಣದಲ್ಲಿ, ಸಬ್ಸಿಡಿಯ ಹಣದಲ್ಲಿ ಜೆ.ಎನ್.ಯು ನಡೆಯುತ್ತಿದೆ ಎನ್ನುವುದು ಸತ್ಯ. ಆದರೊಂದು ಪ್ರಶ್ನೆ ಕೇಳಬಯಸುತ್ತೇನೆ, ಈ ವಿಶ್ವವಿದ್ಯಾನಿಯಲಗಳು ಇರುವುದಾದರೂ ಏತಕ್ಕೆ, ಸಮಾಜದ ಆಗುಹೋಗುಗಳನ್ನು ವಿಶ್ಲೇಷಣೆ ಮಾಡಲು ……………… ವಿಶ್ವವಿದ್ಯಾನಿಲಯಗಳು ಇದರಲ್ಲಿ ವಿಫಲವಾದರೆ ದೇಶ ನಿರ್ಮಾಣವಾಗುವುದಿಲ್ಲ. ಆ ದೇಶದಲ್ಲಿ ಜನರ ಭಾಗವಹಿಸುವಿಕೆ ಇರುವುದಿಲ್ಲ………………….. ಲೂಟಿ ಮತ್ತು ಶೋಷಣೆಯೇ ಆ ದೇಶದಲ್ಲಿರುತ್ತದೆ. ದೇಶದೊಳಗಿನ ಜನರ ಸಂಸ್ಕೃತಿ, ವಿವಿಧತೆಯನ್ನು ಒಳಗೊಳ್ಳದಿದ್ದರೆ ಆ ದೇಶದ ನಿರ್ಮಾಣವಾಗುವುದಿಲ್ಲ. ನಾವು ದೇಶದ ಜೊತೆಗಿದ್ದೇವೆ. ಭಗತ್ ಸಿಂಗ್ ಮತ್ತು ಬಾಬಾ ಸಾಹೇಬ್ ಅಂಬೇಡ್ಕರರ ಕನಸುಗಳ ಜೊತೆಗಿದ್ದೇವೆ…………….ಸಮಾನತೆಯ ಹಕ್ಕು ಸಿಗಬೇಕು, ಎಲ್ಲರಿಗೂ ಜೀವಿಸುವ ಹಕ್ಕಿರಬೇಕೆಂಬ ಕನಸಿನ ಜೊತೆಗಿದ್ದೇವೆ. ಎಲ್ಲರಿಗೂ ಆಹಾರದ ಹಕ್ಕಿರಬೇಕೆಂಬ ಕನಸಿನ ಜೊತೆಗಿದ್ದೇವೆ. ಆ ಕನಸಿನ ಜೊತೆ ನಿಲ್ಲುವ ಕಾರಣಕ್ಕೆ, ರೋಹಿತ ತನ್ನ ಪ್ರಾಣ ನೀಡಿದ್ದಾನೆ. ಈ ಸಂಘಿಗಳಿಗೆ ನಾನು ಹೇಳಬಯಸುತ್ತೇನೆ ………………ರೋಹಿತನ ವಿಷಯದಲ್ಲಿ ನೀವು ಮಾಡಿದ್ದನ್ನು ಜೆ.ಎನ್.ಯು ವಿಷಯದಲ್ಲಿ ನಡೆಯಲು ಬಿಡುವುದಿಲ್ಲ………………….. ರೋಹಿತನ ತ್ಯಾಗವನ್ನು ನೆನೆಯುತ್ತಾ ನಾವು ಅಭಿವ್ಯಕ್ತಿ ಸ್ವಾತಂತ್ರ್ಯದ ಪರ ನಿಲ್ಲುತ್ತೇವೆ. ಪಾಕಿಸ್ತಾನದ ವಿಷಯ ಬಿಟ್ಟುಬಿಡಿ, ಬಾಂಗ್ಲಾದೇಶದ ವಿಷಯ ಬಿಟ್ಟುಬಿಡಿ, ನಾವು ಹೇಳುತ್ತೇವೆ ಇಡೀ ಜಗತ್ತಿನ ಬಡವರು ಒಂದು, ಜಗತ್ತಿನ ಕಾರ್ಮಿಕರು ಒಂದು, ಮಾನವೀಯತೆ ಜಿಂದಾಬಾದ್ ………………. ಮಾನವೀಯತೆಯ ವಿರುದ್ಧ ನಿಂತಿರುವವರಾರೆಂದು ನಾವಿವತ್ತು ಗುರುತಿಸಿಬಿಟ್ಟಿದ್ದೇವೆ. ಜಾತಿವಾದ, ಮನುವಾದ, ಬ್ರಾಹ್ಮಣವಾದದ ಮುಖಗಳನ್ನು ನಾವು ಬಹಿರಂಗಗೊಳಿಸಬೇಕು. ನಿಜವಾದ ಲೋಕತಂತ್ರ ನಿಜವಾದ ಸ್ವಾತಂತ್ರ್ಯವನ್ನು ದೇಶದಲ್ಲಿ ಸ್ಥಾಪಿಸಬೇಕಾಗಿದೆ. ……………. ಆ ಸ್ವಾತಂತ್ರ್ಯ ಬರುವುದು ಸಂವಿಧಾನದಿಂದ, ಲೋಕತಂತ್ರದಿಂದ, ಸಂಸತ್ತಿನಿಂದ ಎಂದು ಹೇಳಲಿಚ್ಛಿಸುತ್ತೇವೆ. ಇದಕ್ಕಾಗಿ ಇಲ್ಲಿರುವ ಕೇಳುಗರಲ್ಲಿ ವಿನಂತಿಸುತ್ತೇನೆ, ಸಣ್ಣಪುಟ್ಟ ಭಿನ್ನಾಭಿಪ್ರಾಯಗಳಿದ್ದರೂ ನಾವು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ, ನಮ್ಮ ಸಂವಿಧಾನ, ನಮ್ಮ ಭೂಮಿಯ ಏಕತೆಗಾಗಿ ನಾವು ಒಗ್ಗಟ್ಟಿನಿಂದರಬೇಕು. ದೇಶ ಒಡೆಯುವ, ಆತಂಕವಾದ ಹರಡುವ ಜನರಿಗೆ ಒಂದು ಪ್ರಶ್ನೆ, ಕೊನೆಯ ಪ್ರಶ್ನೆ ಕೇಳುತ್ತಾ ನನ್ನ ಮಾತು ಮುಗಿಸುತ್ತೇನೆ. ‘ಈ ಕಸಾಬ್ ಯಾರು? ಅಫ್ಜಲ್ ಗುರು ಯಾರು? ಇಂತಹ ಪರಿಸ್ಥಿತಿಯಲ್ಲಿರುವ ಈ ಜನರ್ಯಾರು? ತಮ್ಮ ದೇಹಕ್ಕೆ ಬಾಂಬು ಸಿಕ್ಕಿಸಿಕೊಂಡು ಕೊಲೆ ಮಾಡಲು ತಯಾರಾಗುವ ಈ ಜನರಾರು? ಈ ಪ್ರಶ್ನೆ ವಿಶ್ವವಿದ್ಯಾನಿಲಯದಲ್ಲಿ ಹುಟ್ಟದಿದ್ದರೆ ವಿಶ್ವವಿದ್ಯಾನಿಲಯಕ್ಕೆ ಅರ್ಥವೇ ಇಲ್ಲ ………. ನಾವು ನ್ಯಾಯವನ್ನು ವ್ಯಾಖ್ಯಾನಿಸದಿದ್ದರೆ, ನಾವು ಹಿಂಸೆಯನ್ನು ವ್ಯಾಖ್ಯಾನಿಸದಿದ್ದರೆ, ಹಿಂಸೆಯೆಂದರೆ ಬಂದೂಕೆತ್ತಿಕೊಂಡು ಕೊಲ್ಲುವುದಷ್ಟೇ ಅಲ್ಲ. ಸಂವಿಧಾನ ದಲಿತರಿಗೆ ಕೊಟ್ಟಿರುವ ಹಕ್ಕನ್ನು ಜೆ.ಎನ್.ಯು ಆಡಳಿತ ಕೊಡದಿರುವುದೂ ಹಿಂಸೆಯೇ, ವ್ಯವಸ್ಥೆಯ ಹಿಂಸೆ …………. ನ್ಯಾಯದ ಮಾತನಾಡುತ್ತೇವೆ, ಯಾರು ನಿರ್ಧರಿಸುತ್ತಾರೆ ಈ ನ್ಯಾಯವೇನೆಂಬುದನ್ನು. ಬ್ರಾಹ್ಮಣವಾದದ ವ್ಯವಸ್ಥೆಯಿದ್ದಾಗ ದಲಿತರನ್ನು ಮಂದಿರದೊಳಗೆ ಬಿಡುತ್ತಿರಲಿಲ್ಲ, ಅದೇ ನ್ಯಾಯವಾಗಿತ್ತು. ಬ್ರಿಟೀಷರಿದ್ದಾಗ ನಾಯಿಗಳಿಗೆ ಮತ್ತು ಭಾರತೀಯರಿಗೆ ಹೋಟೆಲ್ಲುಗಳೊಳಗೆ ಬಿಡುತ್ತಿರಲಿಲ್ಲ, ಅದೇ ನ್ಯಾಯವಾಗಿತ್ತು. ಈ ‘ನ್ಯಾಯ’ವನ್ನು ನಾವು ಪ್ರಶ್ನಿಸಿದೆವು ಮತ್ತಿವತ್ತೂ ಎಬಿವಿಪಿ ಮತ್ತು ಆರ್.ಎಸ್.ಎಸ್ ನ ನ್ಯಾಯವನ್ನು ಪ್ರಶ್ನಿಸುತ್ತೇವೆ………………..ನಿಮ್ಮ ನ್ಯಾಯದಲ್ಲಿ ನಮ್ಮ ನ್ಯಾಯಕ್ಕೆ ಜಾಗವಿರದಿದ್ದರೆ ನಿಮ್ಮ ನ್ಯಾಯವನ್ನು ನಾವು ಮಾನ್ಯ ಮಾಡುವುದಿಲ್ಲ. ನಿಮ್ಮ ಸ್ವತಂತ್ರವನ್ನು ನಾವು ಮಾನ್ಯ ಮಾಡುವುದಿಲ್ಲ. ಪ್ರತಿಯೊಬ್ಬನಿಗೂ ಅವನ ಸಂವಿಧಾನಿಕ ಹಕ್ಕು ಸಿಕ್ಕ ದಿನ ಸ್ವಾತಂತ್ರ್ಯ ಮಾನ್ಯ ಮಾಡುತ್ತೇವೆ. ಸಂವಿಧಾನದ ಹಕ್ಕು ಎಲ್ಲರಿಗೂ ಸಿಕ್ಕು ಸಮಾನರಾದ ದಿನ ನ್ಯಾಯವನ್ನು ಒಪ್ಪುತ್ತೇವೆ. ಗೆಳೆಯರೇ ತುಂಬಾ ಗಂಭೀರ ಪರಿಸ್ಥಿತಿಯಿದೆ. ಜೆ.ಎನ್.ಯು.ಎಸ್.ಯು ಯಾವುದೇ ಹಿಂಸೆ, ಆತಂಕವಾದ, ದೇಶದ್ರೋಹದ ಯಾವ ಕೆಲಸವನ್ನೂ ಸಮರ್ಥಿಸುವುದಿಲ್ಲ……………………..ಕೆಲವು ಅನಾಮಿಕ ಆಗುಂತಕರು ಪಾಕಿಸ್ತಾನ ಜಿಂದಾಬಾದ್ ಎಂದು ಕೂಗಿದ್ದಾರೆ. ಜೆ.ಎನ್.ಯು.ಎಸ್.ಯು ಅದನ್ನು ಕಠಿಣ ಮಾತುಗಳಲ್ಲಿ ಖಂಡಿಸುತ್ತದೆ. ಜೊತೆಜೊತೆಗೆ ಜೆ.ಎನ್.ಯು ಆಡಳಿತ ಮತ್ತು ಎಬಿವಿಪಿಗೊಂದು ಸವಾಲು. ಈ ಕ್ಯಾಂಪಸ್ಸಿನಲ್ಲಿ ಸಾವಿರ ತರಹದ ಘಟನೆಗಳು ನಡೆಯುತ್ತವೆ, ಗಮನವಿಟ್ಟು ಎಬಿವಿಪಿಯ ಘೋಷಣೆಗಳನ್ನು ಕೇಳಿಸಿಕೊಳ್ಳಿ, ಅವರು ಹೇಳುತ್ತಾರೆ ಕಮ್ಯುನಿಷ್ಟ್ ನಾಯಿ, ಹೇಳುತ್ತಾರೆ ಅಫ್ಜಲ್ ಗುರುವಿನ……….ಹೇಳುತ್ತಾರೆ ಜಿಹಾದಿಗಳ ಮಕ್ಕಳು……….. ಈ ಸಂವಿಧಾನ ನಮಗೆ ನಾಗರೀಕರಾಗುವ ಅಧಿಕಾರ ನೀಡಿದ್ದರೆ ನನ್ನ ತಂದೆಯನ್ನು ನಾಯಿಯೆಂದು ಕರೆಯುವುದು ಸಂವಿಧಾನದ ಹರಣವೇ ಅಲ್ಲವೇ? ಈ ಪ್ರಶ್ನೆ ನಾನು ಎಬಿವಿಪಿಗೆ ಕೇಳುತ್ತೇನೆ. ನೀವು ಯಾರಿಗಾಗಿ ಕೆಲಸ ಮಾಡುತ್ತಿದ್ದೀರೆಂದು ಜೆ.ಎನ್.ಯು ಆಡಳಿತಕ್ಕೆ ಕೇಳಬಯಸುತ್ತೇನೆ. ಯಾರ ಜೊತೆ ಕೆಲಸ ಮಾಡುತ್ತಿದ್ದೀರಾ? ಮತ್ತು ಯಾವ ಆಧಾರದ ಮೇಲೆ ಕೆಲಸ ಮಾಡುತ್ತಿದ್ದೀರಾ? ಇವತ್ತು ಒಂದಂಶ ಸ್ಪಷ್ಟವಾಗಿ ತಿಳಿದುಹೋಗಿದೆ. ಈ ಜೆ.ಎನ್.ಯು ಆಡಳಿತ ಮೊದಲು ಅನುಮತಿ ಕೊಡುತ್ತದೆ. ನಂತರ ನಾಗಪುರದಿಂದ ಫೋನ್ ಬಂದ ಮೇಲೆ ಅನುಮತಿಯನ್ನು ನಿರಾಕರಿಸಲಾಗುತ್ತದೆ. ಅನುಮತಿ ಕೊಡುವ ಮತ್ತು ವಾಪಸ್ಸು ತೆಗೆದುಕೊಳ್ಳುವ ಈ ಪ್ರಕ್ರಿಯೆಗಳು ಫೆಲ್ಲೋಶಿಪ್ ಕೊಡುವ ತೆಗೆದುಕೊಳ್ಳುವ ಪ್ರಕ್ರಿಯೆಯಂತೆಯೇ ಇದೆ. ಫೆಲ್ಲೋಶಿಪ್ ಜಾಸ್ತಿ ಮಾಡುತ್ತೇವೆಂದು ಘೋಷಣೆ ಮಾಡಲಾಗುತ್ತದೆ ಮತ್ತು ನಂತರ ಫೆಲ್ಲೋಶಿಪ್ ನಿಲ್ಲಿಸಿಬಿಡಲಾಗುತ್ತದೆ. ಇದು ಸಂಘಿಗಳ ರೀತಿ, ಎಬಿವಿಪಿ ಮತ್ತು ಆರ್.ಎಸ್.ಎಸ್ ರೀತಿ. ಈ ರೀತಿಯಿಂದ ಅವರು ದೇಶ ಮುನ್ನಡೆಸಬೇಕೆಂದಿದ್ದಾರೆ. ಮತ್ತಿದೇ ರೀತಿಯಿಂದ ಜೆ.ಎನ್.ಯು ಆಡಳಿತವನ್ನು ನಡೆಸಲಿಚ್ಛಿಸಿದ್ದಾರೆ. ಜೆ.ಎನ್.ಯು ಉಪಕುಲಪತಿಗಳಿಗೆ ನಮ್ಮ ಪ್ರಶ್ನೆಯಿದೆ, ಪೋಸ್ಟರ್ ಹಾಕಲಾಗಿತ್ತು ಗೋಡೆಗಳ ಮೇಲೆ, ಮೆಸ್ಸಿನಲ್ಲಿ; ತೊಂದರೆಯೆನಿಸಿದ್ದರೆ ಅನುಮತಿ ನೀಡಬಾರದಿತ್ತು. ಅನುಮತಿ ಕೊಟ್ಟ ಮೇಲೆ ಯಾರ ಮಾತು ಕೇಳಿ ಅನುಮತಿ ರದ್ದು ಮಾಡಿದಿರಿ? ಈ ವಿಷಯವನ್ನು ಜೆ.ಎನ್.ಯು ಆಡಳಿತ ಸ್ಪಷ್ಟಪಡಿಸಬೇಕೆಂದು ನಾನು ಕೇಳುತ್ತೇನೆ…………. ಜೊತೆಗೆ ಈ ಜನರ ಸತ್ಯಾಂಶವನ್ನು ತಿಳಿದುಕೊಳ್ಳಿ. ಇವರನ್ನು ದ್ವೇಷಿಸಬೇಡಿ. ಯಾಕೆಂದರೆ ದ್ವೇಷಿಸುವುದು ನಮ್ಮ ಗುಣವಲ್ಲ. ಇವರ ಪರಿಸ್ಥಿತಿಯ ಬಗ್ಗೆ ನನ್ನಲ್ಲಿ ದಯೆಯ ಭಾವನೆಯಿದೆ. ಇವರಿಷ್ಟೊಂದು ಕುಣಿಯುತ್ತಿದ್ದಾರೆ ಯಾಕೆ? ಇವರಿಗನ್ನಿಸುತ್ತೆ ಗಜೇಂದ್ರ ಚೌಹಾಣರನ್ನು ಕೂರಿಸಿದಂತೆ ಎಲ್ಲಾ ಕಡೆ ಚೌಹಾಣ್, ದಿವಾನ್, ಫರ್ಮಾನರನ್ನು ಕೂರಿಸ…………………. ಇವರು ಜೋರಾಗಿ ಭಾರತ ಮಾತಾಕಿ ಜೈ ಎಂದಾಗ ನೀವು ತಿಳಿದುಕೊಂಡುಬಿಡಿ ನಾಳೆ ಅವರಿಗೆ ಕೆಲಸದ ಸಂದರ್ಶನವಿದೆಯೆಂದು…………ಕೆಲಸ ಸಿಗುತ್ತಿದ್ದಂತೆ ದೇಶಭಕ್ತಿ ಹಿಂದಾಗಿಬಿಡುತ್ತದೆ. ಕೆಲಸ ದಕ್ಕುತ್ತಿದ್ದಂತೆ ಭಾರತ ಮಾತೆಯ ಚಿಂತೆಯಿರುವುದಿಲ್ಲ. ಕೆಲಸ ಸಿಗುತ್ತಿದ್ದಂತೆ…………….ತ್ರಿವರ್ಣದ ಧ್ವಜವನ್ನಿವರ್ಯಾವತ್ತೂ ಮಾನ್ಯ ಮಾಡಿಲ್ಲ. ಅವರಿಗೆ ಭಗವಾ ಧ್ವಜವಷ್ಟೇ ಮುಖ್ಯ. ನಾನು ಸವಾಲು ಹಾಕುತ್ತೇನೆ. ಇದು ಎಂತಹ ದೇಶಭಕ್ತಿ? ಮಾಲೀಕ ತನ್ನ ನೌಕರನೊಂದಿಗೆ ಸರಿಯಾಗಿ ನಡೆದುಕೊಳ್ಳದಿದ್ದರೆ, ರೈತ ತನ್ನ ಕಾರ್ಮಿಕನೊಂದಿಗೆ ಸರಿಯಾಗಿ ನಡೆದುಕೊಳ್ಳದಿದ್ದರೆ………………..ವಿವಿಧ ಚಾನೆಲ್ಲುಗಳಲ್ಲಿ ಹತ್ತದಿನೈದು ಸಾವಿರ ರುಪಾಯಿಗಳಿಗೆ ಪತ್ರಕರ್ತರ ಕೆಲಸ ಮಾಡುವವರೊಂದಿಗೆ ಅವರ ಸಿ.ಇ.ಓಗಳು ಸರಿಯಾಗಿ ನಡೆದುಕೊಳ್ಳದಿದ್ದರೆ…………… ಇವರ ದೇಶಭಕ್ತಿ ಭಾರತ ಪಾಕಿಸ್ತಾನದ ನಡುವಿನ ಮ್ಯಾಚಿನ ದಫನು ನಡೆಸುತ್ತದೆ. ಹೀಗಾಗಿ ರಸ್ತೆಯಲ್ಲಿ ನಡೆವಾಗ ಬಾಳೆಹಣ್ಣು ಮಾರುವವನೊಂದಿಗೆ ಕೆಟ್ಟದಾಗಿ ಅಹಂಕಾರದಿಂದ ಮಾತನಾಡುತ್ತಾರೆ. ಬಾಳೆಹಣ್ಣಿನವನು ಹೇಳುತ್ತಾನೆ ಒಂದು ಡಜನ್ನಿಗೆ ನಲವತ್ತು ರುಪಾಯಿ, ಇವರು ಹೇಳುತ್ತಾರೆ ನಡಿ ಅತ್ಲಾಗೆ, ನೀವು ಲೂಟಿ ಮಾಡುತ್ತಿದ್ದೀರಿ ಕಮ್ಮಿಗೆ ನೀಡು. ಬಾಳೆ ಮಾರುವವನು ನೀವೇ ದೊಡ್ಡ ಲೂಟಿಕೋರರು, ಕೋಟ್ಯಂತರ ಲೂಟಿ ಮಾಡಿದ್ದೀರಿ ಎಂದು ತಿರುಗಿಸಿ ಹೇಳಿದರೆ ಅವನನ್ನು ದೇಶದ್ರೋಹಿ ಎಂದುಬಿಡುತ್ತಾರೆ………………

ಎಬಿವಿಪಿಯ ಅನೇಕರು ನನಗೆ ಪರಿಚಿತರು. ಅವರಲ್ಲಿ ಕೇಳುತ್ತೇನೆ. ನಿಮ್ಮಲ್ಲಿ ನಿಜಕ್ಕೂ ದೇಶಭಕ್ತಿಯ ಭಾವನೆ ಪುಟಿಯುತ್ತದೆಯಾ? ಅವರು ಹೇಳುತ್ತಾರೆ ‘ಏನ್ ಮಾಡೋದಣ್ಣ ಐದು ವರ್ಷದ ಸರಕಾರ, ಎರಡು ವರ್ಷ ಮುಗಿದು ಹೋಗಿದೆ, ಮೂರು ವರ್ಷದ ಟಾಕ್ ಟೈಮ್ ಉಳಿದಿದೆ. ಏನೆಲ್ಲ ಮಾಡಬೇಕೋ ಅದನ್ನೀಗಲೇ ಮಾಡಿಬಿಡಬೇಕು.’ ನಾನು ಹೇಳಿದೆ ಸರಿ, ಮಾಡಿಕೊಳ್ಳಿ. ಜೆ.ಎನ್.ಯು ಬಗ್ಗೆ ಸುಳ್ಳು ಹೇಳಿದರೆ ನಾಳೆ ನಿಮ್ಮ ಸಂಗಾತಿಯೇ ನಿಮ್ಮ ಕುತ್ತಿಗೆ ಹಿಡಿದು, ಟ್ರೇನಿನಲ್ಲಿ ಬೀಫ್ ಹುಡುಕುವ ಸಂಗಾತಿ ನಿಮ್ಮ ಕುತ್ತಿಗೆ ಹಿಡಿದು ಹೇಳುತ್ತಾನೆ ‘ನೀನು ಜೆ.ಎನ್.ಯು ವಿದ್ಯಾರ್ಥಿ. ಹಾಗಾಗಿ ನೀನು ದೇಶದ್ರೋಹಿ’. ಇದರ ಅಪಾಯದ ಅರಿವಿದೆಯಾ ನಿನಗೆ? ಅದಕ್ಕವನು ಹೇಳುತ್ತಾನೆ ‘ಅರ್ಥವಾಗುತ್ತೆ ಅಣ್ಣ. ಇದೇ ಕಾರಣಕ್ಕೆ ನಾವು JNUShutdown ಎಂಬ ಹ್ಯಾಷ್ ಟ್ಯಾಗನ್ನು ವಿರೋದಿಸುತ್ತೇವೆ. ನಾನೇಳಿದೆ ತುಂಬ ಒಳ್ಳೆ ಕೆಲಸ ಸಾಹೇಬರೆ. ಮೊದಲು JNUShutdown ಎಂಬ ಹ್ಯಾಷ್ ಟ್ಯಾಗನ್ನು ಮಾಡಿ ಪ್ರಚಾರ ಮಾಡಿ ನಂತರ ಅದನ್ನು ವಿರೋಧಿಸುತ್ತೀರಿ. ಯಾಕೆಂದರೆ ಜೆ.ಎನ್.ಯುನಲ್ಲೇ ಇರಬೇಕಲ್ಲವೇ?! ಈ ಕಾರಣಕ್ಕೆ ನಾನು ಜೆ.ಎನ್.ಯುಗಳಿಗೆ ಹೇಳಲು ಬಯಸುತ್ತೇನೆ. ಮಾರ್ಚಿನಲ್ಲಿ ಚುನಾವಣೆಯಿದೆ. ಎಬಿವಿಪಿಯ ಜನರು ಓಂನ ಬಾವುಟ ತೆಗೆದುಕೊಂಡು ನಿಮ್ಮ ಬಳಿ ಬರುತ್ತಾರೆ. ಆಗವರಿಗೆ ಕೇಳಿ ‘ನಾವು ದೇಶದ್ರೋಹಿಗಳು. ನಾವು ಜಿಹಾದಿಗಳು. ನಾವು ಆತಂಕವಾದಿಗಳು. ನಮ್ಮ ಮತ ತೆಗೆದುಕೊಂಡು ನೀವು ದೇಶದ್ರೋಹಿಗಳಾಗುತ್ತೀರಾ?’ ಇದನ್ನವರಲ್ಲಿ ಖಂಡಿತವಾಗಿ ಕೇಳಿ. ಆಗವರು ಹೇಳುತ್ತಾರೆ ‘ಇಲ್ಲ ಇಲ್ಲ. ನೀವಲ್ಲ. ಯಾರೋ ಕೆಲವರು ಮಾತ್ರ’ ಆಗ ನಾವು ಹೇಳುತ್ತೇವೆ ‘ಅವರು ಕೆಲವರಿದ್ದರು ಎಂದು ನೀವು ಮಾಧ್ಯಮದಲ್ಲಿ ಹೇಳಲಿಲ್ಲ. ನಿಮ್ಮ ಕುಲಪತಿಗಳು ಹೇಳಲಿಲ್ಲ. ನಿಮ್ಮ ರಿಜಿಸ್ಟ್ರಾರ್ ಕೂಡ ಹೇಳುತ್ತಿಲ್ಲ. ಮತ್ತು ಆ ಕೆಲವರೇ ಹೇಳುತ್ತಿದ್ದಾರೆ ‘ಪಾಕಿಸ್ತಾನ್ ಜಿಂದಾಬಾದ್’ ಎಂದು ಕೂಗಲಿಲ್ಲವೆಂದು, ಆ ಕೆಲವರೇ ಹೇಳುತ್ತಿದ್ದಾರೆ ನಾವು ಆತಂಕವಾದಿಗಳ ಪಕ್ಷದವರಲ್ಲವೆಂದು. ಆ ಕೆಲವರೇ ಹೇಳುತ್ತಿದ್ದಾರೆ ನಮಗೆ ಅನುಮತಿ ಕೊಟ್ಟು ರದ್ದು ಮಾಡಿದ್ದು ಪ್ರಜಾಪ್ರಭುತ್ವದ ಹಕ್ಕಿನ ಮೇಲಿನ ಹಲ್ಲೆಯೆಂದು. ಈ ದೇಶದೊಳಗಿನ ಹೋರಾಟಗಳ ಜೊತೆಯಿರುತ್ತೇವೆಂದು ಆ ಕೆಲವರೇ ಹೇಳುತ್ತಿದ್ದಾರೆ. ಇಷ್ಟೆಲ್ಲ ಅವರಿಗೆ (ಎಬಿವಿಪಿ) ಅರ್ಥವಾಗುವುದಿಲ್ಲ. ನನಗೆ ಪೂರ್ಣ ನಂಬಿಕೆಯಿದೆ. ಅತಿ ಶೀಘ್ರ ನೋಟೀಸಿಗೆ ಇಷ್ಟೊಂದು ಜನರಿಲ್ಲಿ ಬಂದಿದ್ದೀರಿ. ಎಬಿವಿಪಿ ಈ ದೇಶವನ್ನು, ಜೆ.ಎನ್.ಯು ಅನ್ನು ಒಡೆಯುತ್ತಿದೆ ಎಂದು ತಿಳಿಸೋಣ. ಜೆ.ಎನ್.ಯು ಒಡೆಯಲು ನಾವು ಬಿಡುವುದಿಲ್ಲ. ಜೆ.ಎನ್.ಯು ಜಿಂದಾಬಾದ್, ಈ ದೇಶದೊಳಗಿನ ಸಂಘರ್ಷಗಳಲ್ಲಿ ಭಾಗವಹಿಸುತ್ತೇವೆ. ಈ ದೇಶದೊಳಗಿನ ಲೋಕತಂತ್ರದ ದನಿಯನ್ನು ಗಟ್ಟಿಗೊಳಿಸುತ್ತ ಸ್ವಾತಂತ್ರ್ಯದ ದನಿಯನ್ನು ಗಟ್ಟಿಗೊಳಿಸುತ್ತ, ಅಭಿವ್ಯಕ್ತಿ ಸ್ವಾತಂತ್ರ್ಯದ ದನಿಯನ್ನು ಗಟ್ಟಿಗೊಳಿಸುತ್ತ ಈ ಸಂಘರ್ಷವನ್ನು ಮುಂದುವರೆಸುತ್ತೇನೆ. ಸಂಘರ್ಷ ನಡೆಸುತ್ತೇವೆ, ಗೆಲ್ಲುತ್ತೇವೆ, ದೇಶದ ದ್ರೋಹಿಗಳನ್ನು ಮಟ್ಟ ಹಾಕುತ್ತೇವೆ.

ಧನ್ಯವಾದ.
ಇಂಕ್ವಿಲಾಬ್ ಜಿಂದಾಬಾದ್
ಜೈ ಭೀಮ್.
ಲಾಲ್ ಸಲಾಮ್.
ವೀಡಿಯೋ ಕೊಂಡಿ: https://www.youtube.com/watch?v=KMi0D__l7IE
(ಸುತ್ತಲಿದ್ದವರ ಚಪ್ಪಾಳೆ, ಘೋಷಣೆಗಳ ಕೂಗುವಿಕೆಯ ಸಮಯದಲ್ಲಿ ಒಂದಷ್ಟು ಮಾತುಗಳು ಸ್ಪಷ್ಟವಾಗಿ ಕೇಳಿಸಲಿಲ್ಲ. ಹಾಗಾಗಿ ಆ ಜಾಗಗಳನ್ನು .......... ಖಾಲಿ ಬಿಡಲಾಗಿದೆ. ನಿಮಗೆ ಗೊತ್ತಾದರೆ ತಿಳಿಸಿ - ಹಿಂಗ್ಯಾಕೆ)


ಫೆಬ್ರ 12, 2016

ಮೇಕಿಂಗ್ ಹಿಸ್ಟರಿ: ಬ್ರಿಟೀಷರ ವಿದೂಷಕ

saket rajan
ಸಾಕೇತ್ ರಾಜನ್
ಕನ್ನಡಕ್ಕೆ: ಡಾ. ಅಶೋಕ್. ಕೆ. ಆರ್
1857, ಭಾರತದ ಮೊಟ್ಟ ಮೊದಲ ಸ್ವಾತಂತ್ರ್ಯ ಸಂಗ್ರಾಮ ಸಾಧ್ಯವಾಗಿದ್ದು ಶಸ್ತ್ರಸಜ್ಜಿತ ದೀರೋದ್ದಾತ ಸೈನಿಕರು, ರೈತರು, ಕುಶಲಕರ್ಮಿಗಳಿಂದ ಮತ್ತವರಿಗೆ ಜೊತೆಯಾದ ಕೆಲವು ರಾಜ – ರಾಣಿಯರಿಂದ. ಬ್ರಿಟೀಷ್ ಸಾಮ್ರಾಜ್ಯವನ್ನು ಭಾರತದಿಂದ ಕಿತ್ತೊಗೆಯುವ ಬೆದರಿಕೆ ಹಾಕಿದ್ದ ಸಂಗ್ರಾಮವದು. ನಗರ ಪ್ರದೇಶದಲ್ಲಿ ಸಂಗ್ರಾಮವನ್ನು ಹತ್ತಿಕ್ಕಿದ ನಂತರ ಉತ್ತರ ಭಾರತದಲ್ಲಿ ಹೋರಾಟ ಹಳ್ಳಿಗಳಿಗೆ ತಲುಪಿತ್ತು. ಕರ್ನಾಟಕದ ಫ್ಯೂಡಲ್ ದೊರೆಗಳಾದ ದೇಸಾಯಿ ಮತ್ತು ದೇಶಮುಖರು ಬ್ರಿಟೀಷರ ವಿರುದ್ಧ ಹೋರಾಡುವ ಛಾತಿ ತೋರಿಸಿದರು; ಶತಮಾನಗಳಿಂದ ತಮ್ಮದಾಗಿದ್ದ ಭೂಮಿಯ ಒಡೆತನವನ್ನು ಮತ್ತೆ ದಕ್ಕಿಸಿಕೊಳ್ಳಲು. ಹೆಸರಿಗೆ ಮಾತ್ರ ಇದ್ದ ಚೂರು ಪಾರು ಅಧಿಕಾರವನ್ನೂ 1831ರಲ್ಲಿ ಬ್ರಿಟೀಷರು ಕಿತ್ತುಕೊಂಡಾಗ ಮೈಸೂರಿನ ಸಾಮ್ರಾಜ್ಯರಹಿತ ರಾಜರಾಗಿದ್ದ ಮೂರನೇ ಕೃಷ್ಣರಾಜ ಒಡೆಯರ್ ಒಳಗಣ ಕತ್ತಲ ಕೋಣೆಗಳಲ್ಲಿ ಬ್ರಾಹ್ಮಣ ಸಲಹೆಗಾರರೊಂದಿಗೆ ತನ್ನನ್ನು ಮತ್ತೆ ಪೀಠದ ಮೇಲೆ ಕುಳ್ಳಿರಿಸಬೇಕೆಂದು ಬ್ರಿಟೀಷರ ಬಳಿ ಹೇಗೆಲ್ಲಾ ಬೇಡಿಕೊಳ್ಳಬೇಕು ಎಂದು ತಾಲೀಮು ನಡೆಸದ ದಿನವೇ ಇರಲಿಲ್ಲ. 1857ರ ಸಂಗ್ರಾಮ, ಸಹಕಾರಿ ಒಪ್ಪಂದಕ್ಕೆ ಸಹಿ ಹಾಕಿದ್ದ ಕರ್ನಾಟಕದ ಅನೇಕ ಸೇವಕ ರಾಜರಿಗೆ ತಮ್ಮ ಸಾಮ್ರಾಜ್ಯವನ್ನು ಮರಳಿ ತಮ್ಮದಾಗಿಸಿಕೊಳ್ಳಲು ಅವಕಾಶ ಒದಗಿಸಿದರೆ ಮೈಸೂರಿನ ಕೈಗೊಂಬೆ ರಾಜ ಬ್ರಿಟೀಷರೆಡೆಗಿದ್ದ ತನ್ನ ನಿಯತ್ತನ್ನು ಇಂಚೂ ಸಡಿಲಿಸಲಿಲ್ಲ. ತನ್ನ ಅಸಹನೆಯನ್ನು ತುಂಬ ಜಾಗರೂಕ ಗೊಣಗಾಟದಿಂದ ತೋರಿಸುತ್ತಿದ್ದ; ಅದು ಪ್ರತಿಭಟನೆಯ ಕೂಗಿನಂತೆ ತೋರಬಾರದೆಂಬ ಎಚ್ಚರಿಕೆ ಇರುತ್ತಿತ್ತು. ಪ್ರತಿಭಟಿಸುವುದು ಅತ್ಲಾಗಿರಲಿ ಮೈಸೂರಿನ ರಾಜ ಬ್ರಿಟೀಷರ ಪರ ವಕಾಲತ್ತು ವಹಿಸುತ್ತ ಬ್ರಿಟೀಷರ ಪರವಾಗಿ ಇತರೆ ರಾಜರಿಗೆ ಪತ್ರ ಬರೆಯುತ್ತಿದ್ದ! ಬ್ರಿಟೀಷ್ ರಾಜ್ ಅಪಾಯದಲ್ಲಿರುವ ಈ ಸಂದರ್ಭದಲ್ಲಿ ಹಣ, ಸೈನ್ಯವನ್ನು ಕೊಟ್ಟು ವಸಾಹತುಶಾಹಿಯನ್ನು ರಕ್ಷಿಸಬೇಕು ಎಂದು ಕೇಳಿಕೊಳ್ಳುತ್ತಿದ್ದ!

ಶಾಮ ರಾವ್ ಬರೆಯುತ್ತಾರೆ: “1857ರಲ್ಲಿ ಭಾರತ ಸರ್ಕಾರ ಇನ್ನೂರು ಮಂದಿ ಸಿಲ್ಲೇದಾರರು ಈ ತಕ್ಷಣ ಹಿಂದೂಸ್ಥಾನಕ್ಕೆ ಹೋಗಬೇಕೆಂದು ನಿರ್ದೇಶಿಸಿತು. ಈ ನಿರ್ದೇಶನ ಮುಂದೆ ಅನೂರ್ಜಿತವಾದರೂ ಮೈಸೂರಿನ ಉತ್ತರಕ್ಕಿರುವ ಸುರಪುರದಲ್ಲಿ ಅಷ್ಟೇ ಸಂಖೈಯ ಜನರನ್ನು ನೇಮಿಸಲಾಗಿತ್ತು ಮತ್ತು ಆ ಭಾಗದಲ್ಲಿ 1857 – 58ರಲ್ಲಿ ನಡೆದ ಸಣ್ಣ ಪುಟ್ಟ ಯುದ್ಧಗಳಲ್ಲಿ ಭಾಗವಹಿಸಿದ್ದರು.” (32)

ಕರ್ನಾಟಕದ ಸುರಪುರದಲ್ಲಿ ನಡೆದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸತ್ತ ಐನೂರರಷ್ಟು ಜನರ ದೇಹಹೊಕ್ಕಿದ್ದು ಮೈಸೂರಿನ ಕೈಗೊಂಬೆ ರಾಜನ ಜನರ ಕೈಯಲ್ಲಿದ್ದ ಬಂದೂಕಿನ ಗುಂಡುಗಳು.

“ಗವರ್ನರ್ ಜನರಲ್ ರವರ ಪತ್ರಮುಖೇನ ದೆಹಲಿಯ ಬಂಡಾಯವನ್ನು ಹತ್ತಿಕ್ಕಿದ ಸುದ್ದಿ ತಲುಪಿದಾಗ ಮೈಸೂರಿನ ಮಹಾರಾಜ 1857ರ ಡಿಸೆಂಬರ್ 9ರಂದು ಅಭಿನಂದನಾ ಪತ್ರವನ್ನು ಬರೆದ. ‘ಬಂಗಾಲದ ದಂಗೆಕೋರರು ಮತ್ತು ಬಂಡಾಯಗಾರರು ನಡೆಸಿದ ವಿದ್ರೋಹದ ಬಗ್ಗೆ ತಿಳಿದಾಗ ನನಗಾದ ದುಃಖ ಸಣ್ಣದಲ್ಲ. ಭಾರತದಾಗಸದಲ್ಲಿ ಕಾರ್ಮೋಡಗಳು ಕವಿಯಿತಾದರೂ ಬ್ರಿಟೀಷರೆಂಬ ಪ್ರಖರ ಸೂರ್ಯ ಈ ಕಾರ್ಮೋಡಗಳನ್ನು ಸರಿಸಿಯೇ ಸರಿಸುತ್ತಾರೆ ಎನ್ನುವುದು ನನ್ನ ದೃಡ ನಂಬುಗೆಯಾಗಿತ್ತು. ಬ್ರಿಟೀಷರ ಬಲಶಾಲಿ ಸೈನ್ಯ ಸರಕಾರದ ವಿರುದ್ಧ ಬಂಡಾಯವೆದ್ದಿರುವ ದಂಗೆಕೋರರನ್ನು ಸದೆಬಡಿಯುತ್ತಾರೆ ಎಂಬ ನನ್ನ ನಿರೀಕ್ಷೆ ಸಂಪೂರ್ಣ ವಾಸ್ತವವಾಗಿ ಬದಲಾಗಿರುವುದು ನಿಮ್ಮ ಪತ್ರದಿಂದ ತಿಳಿದು ಕುಣಿದಾಡುವಷ್ಟು ಸಂತಸವಾಗಿದೆ. ಅನೇಕ ದೇಶೀ ರಾಜರು ಈ ದುರಿತ ಕಾಲದಲ್ಲಿ ಬ್ರಿಟೀಷ್ ಸರಕಾರಕ್ಕೆ ನಿಷ್ಟರಾಗಿದ್ದು ತಮ್ಮಿಂದಾದ ಸಹಾಯವನ್ನು ಮಾಡಿದ್ದನ್ನು ತಿಳಿದು ಸಮಾಧಾನವಾಯಿತು. ಹಿಂದೆ ಬ್ರಿಟೀಷರು ವಿಜಯಿಯಾದ ಸಂದರ್ಭದಲ್ಲಿ ಮಾಡಿದಂತೆಯೇ ಈ ಬಾರಿಯೂ ರಾಯಲ್ ಸೆಲ್ಯೂಟ್ ಸಲ್ಲಿಸಿ ಮೈಸೂರಿನ ಬೀದಿಗಳಲ್ಲಿ ಸಿಹಿ ಹಂಚಿದ್ದೇವೆ’.” (33)

ಮತ್ತೆ 1858ರ ಫೆಬ್ರವರಿಯಲ್ಲಿ, ಇಪ್ಪತ್ತು ವರುಷದ ಮುಂಚೆ ಮೈಸೂರಿನ ರೆಸಿಡೆಂಟರಾಗಿದ್ದ ಜನರಲ್ ಜೆ.ಎಸ್. ಫ್ರೇಸರ್ ಗೆ ಬರೆದ ಪತ್ರದಲ್ಲಿ ರಾಜ ತನ್ನ ಭಾವನೆಗಳನ್ನು ತೋಡಿಕೊಂಡಿದ್ದು ಹೀಗೆ: “ಈ ದೇಶದಲ್ಲಿ ನಡೆದ ದಂಗೆ ತಣ್ಣಗಾಗಿ ಶಾಂತಿಯ ಮರುಸ್ಥಾಪನೆಯಾಗುತ್ತಿರುವುದು ತೃಪ್ತಿಕರ ಸಂಗತಿ. ಉತ್ತರ ಮತ್ತು ಪಶ್ಚಿಮ ಪ್ರಾಂತ್ಯಗಳಲ್ಲಿ ಕವಿದಿದ್ದ ದಟ್ಟ ಮೋಡಗಳು ನಿಧಾನಕ್ಕೆ ಚದುರುತ್ತಿದೆ ಮತ್ತು ವಿದ್ರೋಹಿಗಳನ್ನು ಪ್ರತೀ ಹಳ್ಳಿ – ಪಟ್ಟಣಗಳಲ್ಲಿ ಹಿಡಿದು ಸದೆಬಡಿಯಲಾಗುತ್ತಿದೆ. ನನ್ನ ಸ್ವಂತ ದೇಶ (ಮೈಸೂರು) ಇಂತಹ ಮಲಿನ ಮನಸ್ಸಿನ ಜನರಿಂದ ಮುಕ್ತವಾಗಿದೆ ಎಂದು ತಿಳಿಸಲು ಹರ್ಷವಾಗುತ್ತಿದೆ; ಈ ಖುಷಿಗೆ ಬುದ್ಧಿವಂತ, ನ್ಯಾಯಪರ ನಿರ್ಣಯಗಳನ್ನು ತೆಗೆದುಕೊಂಡ ಸರ್ ಮಾರ್ಕ್ ಕಬ್ಬನ್ ಕಾರಣ. ಈ ದಂಗೆಯಿಂದ ನಡೆದ ರಕ್ತಪಾತದ ಭಯಭೀತ ದೃಶ್ಯಗಳು, ಮತ್ತೀ ದಂಗೆಯನ್ನತ್ತಿಕ್ಕಲು ಇಂಗ್ಲೆಂಡಿನ ಅತ್ಯುತ್ತಮ ಧೈರ್ಯಶಾಲಿ ಆಫೀಸರುಗಳು ಮಾಡಿದ ತ್ಯಾಗದ ಬಗ್ಗೆ ಸದ್ಯಕ್ಕೆ ಹೆಚ್ಚು ಹೇಳುವುದಿಲ್ಲ. ನನ್ನ ಏಳಿಗೆ ಮತ್ತು ಸಂತಸ ಬ್ರಿಟೀಷ್ ಸರಕಾರದ ಯಶಸ್ಸು ಮತ್ತು ಅಧಿಕಾರವನ್ನು ಅವಲಂಬಿಸಿರುವ ಕಾರಣ ಬ್ರಿಟೀಷ್ ಸರಕಾರವನ್ನು ನನ್ನ ಆಪ್ತ ಗೆಳೆಯನೆಂದೇ ಪರಿಗಣಿಸಿದ್ದೇನೆ.” (34)

ಆಕ್ರಮಣಕಾರರ ವಿರುದ್ಧ ಧೀರೋದ್ದಾತ ಹೋರಾಟ ನಡೆಸಿ ಹುತಾತ್ಮರಾದವರ ಬಗ್ಗೆ ಸಂತಸ ವ್ಯಕ್ತಪಡಿಸಿದ ಕೈಗೊಂಬೆ ರಾಜನ ಅಪಾರ ನಿಷ್ಠೆಗೆ ಬ್ರಿಟೀಷರ ಪ್ರತಿಕ್ರಿಯೆ ಹೇಗಿತ್ತು? 

ಭಾರತ ಸರಕಾರಕ್ಕೆ 1860ರ ಜೂನ್ ನಲ್ಲಿ ಬರೆದ ಪತ್ರದಲ್ಲಿ ಕಬ್ಬನ್: “ಈ ದುರಿತಕಾಲದುದ್ದಕ್ಕೂ ಮಹಾರಾಜರು ನಿಷ್ಟೆಯನ್ನು ತೋರಿಸಿದರು. ಬ್ರಿಟೀಷ್ ಆಳ್ವಿಕೆ ಸ್ಥಿರವಾಗಿರಬೇಕೆಂಬ ಆಸೆಯನ್ನು ಸಂದರ್ಭ ಸಿಕ್ಕಾಗಲೆಲ್ಲ ತೋರಿಸಿದರು. ಬ್ರಿಟೀಷ್ ಸರಕಾರಕ್ಕೆ ದ್ರೋಹವೆಸಗುವ, ನಮ್ಮ ವೈರಿಗಳಿಗೆ ಸಹಾಯ ಮಾಡುವ ಯಾವ ಕೆಲಸವನ್ನೂ ಮಹಾರಾಜ ಮಾಡಲಿಲ್ಲ.” (35)

ಕಬ್ಬನ್ನಿನ ಪತ್ರ ತಲುಪಿದ ನಂತರ ಆಗ ವೈಸರಾಯ್ ಆಗಿದ್ದ ಕ್ಯಾನಿಂಗ್ ಕೈಗೊಂಬೆ ರಾಜರಿಗೆ: “ಇತ್ತೀಚೆಗಷ್ಟೇ ಮೈಸೂರಿನ ಕಮಿಷನರ್ ರಿಂದ ಬಂದ ಪತ್ರದಲ್ಲಿ ಅವರ ಅಧಿಕಾರವಿದ್ದ ಜಿಲ್ಲೆಗಳಲ್ಲಿ ಶಾಂತಿ ಕಾಪಾಡಲು ನೀವು ಮಾಡಿದ ಸಹಾಯದ ಬಗ್ಗೆ ಉಲ್ಲೇಖಿಸಿದ್ದಾರೆ. ಈ ದಂಗೆಯ ಪ್ರಾರಂಭದಿಂದಲೂ ಮಹಾರಾಜರು ಬ್ರಿಟೀಷ್ ಸರಕಾರದ ಜೊತೆಯಲ್ಲಿರುತ್ತಾರೆಂಬ ಬಗ್ಗೆ ನನಗೆ ಅರಿವಿತ್ತು. ಪ್ರತೀ ಸಂದರ್ಭದಲ್ಲೂ ಇದು ಎದ್ದು ಕಾಣುತ್ತಿತ್ತು. ಮಹಾರಾಜರು ಬ್ರಿಟೀಷ್ ಆಳ್ವಿಕೆಯಲ್ಲಿಟ್ಟಿರುವ ನಂಬುಗೆ, ಆ ನಂಬಿಕೆಯ ಬಹಿರಂಗ ತೋರ್ಪಡಿಸುವಿಕೆ, ಬ್ರಿಟೀಷರೆಡೆಗೆ ನೀವು ತೋರಿದ ಕಾರುಣ್ಯ ಮತ್ತು ರಾಣಿಯ ಸೈನಿಕರಿಗೆ ನೀವು ಕೊಟ್ಟ ಅಪರಿಮಿತ ತತ್ ಕಾಲೀನ ಸಹಾಯವೆಲ್ಲವನ್ನೂ ತುಂಬು ಹೃದಯದ ಮೆಚ್ಚುಗೆಯೊಂದಿಗೆ ಕಮಿಷನರ್ ವಿವರಿಸಿ ಬರೆದಿದ್ದಾರೆ.” (36)

ಹೀಗೆ ಕೃಷ್ಣರಾಜ ಒಡೆಯರ್ ಬ್ರಿಟೀಷರು ಭಾರತವನ್ನು ಲೂಟಿ ಮಾಡುವುದಕ್ಕೆ, ಸಹವರ್ತಿ ಕನ್ನಡಿಗರು ಮತ್ತು ಭಾರತೀಯರನ್ನು ಕೊಲ್ಲುವುದಕ್ಕೆ ತಮ್ಮ ಕೈಲಾದ ಸಹಾಯ ಮಾಡಿದರು. 1857ರ ಸ್ವಾತಂತ್ರ್ಯ ಸಂಗ್ರಾಮವನ್ನು ಹತ್ತಿಕ್ಕಿದ್ದನ್ನು ಮೈಸೂರಿನ ಬೀದಿಬೀದಿಗಳಲ್ಲಿ ಸಿಹಿ ಹಂಚುವ ಮೂಲಕ ಸಂಭ್ರಮಿಸಿದರು. ಆದರವರನ್ನು ಚೂರೂ ಕರುಣೆಯಿಲ್ಲದೆ ವಿಮರ್ಶಿಸುವುದು ಸರಿಯಲ್ಲ. ಆ ಮನುಷ್ಯನಿಗೂ ಭಾವನೆಗಳಿದ್ದವು. ಉಳಿದ ಮನುಷ್ಯರಂತೆ ದುಃಖ ತೋಡಿಕೊಳ್ಳುತ್ತಿದ್ದ, ಕಣ್ಣೀರಿಡುತ್ತಿದ್ದ. ಆದರಾತನ ದುಃಖ ಬ್ರಿಟೀಷ್ ಆಫೀಸರುಗಳಿಗೆ ಮತ್ತು ವಸಾಹತುಶಾಹಿಯ ದುರಾಸೆಗೆ ಪೂರಕವಾಗಿದ್ದ ಜನರ ಸಾವಿಗಷ್ಟೇ ಸೀಮಿತವಾಗಿತ್ತು. ಅನುಮಾನವೇ ಬೇಡ, ಕರ್ನಾಟಕ ಕಂಡ ಅತ್ಯಂತ ಕೆಟ್ಟ ರಾಜರಲ್ಲಿ ಈತನೂ ಒಬ್ಬ. ರಕ್ತದ ಕಣಕಣದಲ್ಲೂ ಗುಲಾಮತ್ವವನ್ನು ಆವಾಹಿಸಿಕೊಂಡಿದ್ದ ರಾಜ ಕೊನೆಯುಸಿರೆಳೆಯುವ ಘಳಿಗೆಯಲ್ಲೂ ಬ್ರಿಟೀಷರ ಹೊಗಳುಭಟನಾಗಿಯೇ ಉಳಿದುಹೋದ.

ಕೊನೆಯ ಉಸಿರಿನವರೆಗೂ ದೇಶಪ್ರೇಮಿಯಾಗಿಯೇ ಇದ್ದ ಧೀರ ಟಿಪ್ಪು ಸುಲ್ತಾನನಿಗೂ ಈತನಿಗೂ ಜಿಗುಪ್ಸೆ ಮೂಡಿಸುವ ವ್ಯತ್ಯಾಸ.

ಬಹುಶಃ ಇತಿಹಾಸದ ವ್ಯಂಗ್ಯವೆಂದರೆ ಅಸಲಿ ವಜ್ರದ ಯೋಗ್ಯತೆಯನ್ನರಿಲು ಸಾಣೆ ಹಿಡಿದಾಗ ತುದಿಯ ಮತ್ತೊಂದು ಬದಿಯಲ್ಲಿ ಇಂತಹ ಮಾಗದ ತುರಿಕೆ ಗಾಯಗಳೂ ಇರುತ್ತವೆ.
ಅಧ್ಯಾಯ 1 ರ ಮುಕ್ತಾಯ.