ಜುಲೈ 12, 2012

ಆಡಾಡತ ಆಯುಷ್ಯ ನೋಡನೋಡತ ದಿನಮಾನ....


ಡಾ.ಅಶೋಕ್. ಕೆ. ಆರ್.
ಪಿ.ಯು.ಸಿಯಲ್ಲಿ ‘ಯಯಾತಿ’ ನಾಟಕ ಪಠ್ಯವಾಗಿತ್ತು. ಯಯಾತಿ ನಾಟಕ ನಮ್ಮನ್ನು ಪುಳಕಿಗೊಳಿಸಿದ್ದಕ್ಕೆ ಕಾರಣ ಗಿರೀಶ್ ಕಾರ್ನಾಡರೋ ಅಥವಾ ನಮಗೆ ಆ ಪಾಠ ಮಾಡಿದ ಮೇಷ್ಟರೋ [ಅವರ ಹೆಸರು ನೆನಪಾಗಲೊಲ್ಲದು] ಕಾರಣರೋ ಕರಾರುವಕ್ಕಾಗಿ ಹೇಳುವುದು ಕಷ್ಟ. ನಂತರ ಕನ್ನಡದ ಪ್ರಮುಖ ಕಥೆ ಕಾದಂಬರಿಗಳನ್ನು ಓದಲಾರಂಭಿಸಿದೆನಾದರೂ ನಾಟಕಗಳ ಕಡೆಗೆ ಹೆಚ್ಚು ಗಮನಕೊಟ್ಟಿರಲಿಲ್ಲ. ಗೆಳೆಯೊಬ್ಬನಿಂದ ಎರವಲು ಪಡೆದು ಓದಿದ ಟಿ.ಪಿ.ಕೈಲಾಸಂರ ನಾಟಕಗಳು ಅವುಗಳಲ್ಲಿನ ವಿಡಂಬನಾತ್ಮಕ ದೃಷ್ಟಿಕೋನದಿಂದ ಆಕರ್ಷಿಸಿದವು. ಮೈಸೂರಿನಲ್ಲಿ ದಸರಾ ಸಮಯದಲ್ಲಿ ನಾಟಕಗಳನ್ನು ನೋಡಿ ಮತ್ತಷ್ಟು ಆಕರ್ಷಣೆ ಹೆಚ್ಚಿತಾದರೂ ನಾಟಕದ ಪುಸ್ತಕ ‘ಕಾಸು’ ಕೊಟ್ಟು ಕೊಂಡುಕೊಳ್ಳುವಷ್ಟು ಯೋಗ್ಯವಲ್ಲ ಎಂಬ ಅಪನಂಬುಗೆಯಲ್ಲೇ ಇದ್ದೆ. ಆ ಅಪನಂಬುಗೆ ನಿಧಾನವಾಗಿ ಕ್ಷೀಣಿಸಿ ಶೇಕ್ಸ್ ಪಿಯರ್ ನ ಪುಸ್ತಕಗಳನ್ನು ಕೊಂಡೆನಾದರೂ ಓದಿ ಮುಗಿಸಿದ್ದು ಕಿಂಗ್ ಲಿಯರ್ ನಾಟಕವನ್ನು ಮಾತ್ರ!