Sep 29, 2014

ಹೆಸರಲ್ಲೆಲ್ಲಾ ಇದೆ!

religion
ಡಾ ಅಶೋಕ್ ಕೆ ಆರ್
ಇಂಡಿಯನ್ ಮುಜಾಹಿದ್ದೀನೋ ಹಿಜ್ಬುಲ್ ಮುಜಾಹಿದ್ದೀನೋ ಹೆಸರಿನ ಮುಸ್ಲಿಂ ಸಂಘಟನೆಯೊಂದರ ನಾಮಧೇಯದಿಂದ ಪೋಲೀಸರಿಗೆ ಬೆದರಿಕೆಯ ಈ-ಮೇಲ್ ಸಂದೇಶಗಳು ತಲುಪುತ್ತವೆ. ಇಡೀ ಮೈಸೂರು ದಸರಾ ಹಬ್ಬದ ಸಂಭ್ರಮದಲ್ಲಿ ಮೈಮರೆತಾಗ, ದೂರದೂರಿನ ಜನರೆಲ್ಲ ಮೈಸೂರಿಗೆ ಬಂದು ದಸರಾದ ವೈಭವವನ್ನು ಸವಿಯುತ್ತಿರುವಾಗ ಮೈಸೂರಿನ ಹಲವೆಡೆ ಸ್ಪೋಟಗೊಳ್ಳುವಂತೆ ಟೈಂ ಬಾಂಬುಗಳನ್ನು ಇಟ್ಟಿದ್ದೇವೆ. ತಾಕತ್ತಿದ್ದರೆ ತಡೆಯಿರಿ ಎಂಬ ಬೆದರಿಕೆ ಮತ್ತು ಪಂಥಾಹ್ವಾನದ ಸಂದೇಶವದು. ದಸರಾ ಹಬ್ಬದ ಸಂದರ್ಭದಲ್ಲಿ ಬಾಂಬ್ ಸ್ಪೋಟವೆಂದರೆ ಹೈಅಲರ್ಟ್ ಘೋಷಿಸಬೇಕಾದ ಸಂದರ್ಭವಂತೂ ಹೌದು. ಮೈಸೂರಿನ ಪೋಲೀಸರು ತಕ್ಷಣ ಕಾರ್ಯಪ್ರವೃತ್ತರಾಗುತ್ತಾರೆ. ಈ – ಮೇಲ್ ಕಳುಹಿಸಿದ ಐ.ಪಿ ಅಡ್ರೆಸ್ಸನ್ನು ಪತ್ತೆ ಹಚ್ಚಿ ಆ ಕಂಪ್ಯೂಟರ್ ಅಂಗಡಿಯ ಬಳಿಯಲ್ಲಿನ ಮನೆಯಲ್ಲಿದ್ದ ಬೆದರಿಕೆ ಸಂದೇಶವನ್ನು ಕಳುಹಿಸಿದ ವ್ಯಕ್ತಿಯನ್ನು ಬಂಧಿಸುತ್ತಾರೆ.
ಮೇಲಿನದಷ್ಟು ನಡೆದ ಘಟನಾವಳಿ. ಪತ್ರಿಕೆಗಳು ಮತ್ತು ಮಾಧ್ಯಮದಲ್ಲಿ ಈ ಘಟನೆ ಯಾವ ರೀತಿ ವರದಿಯಾಗುತ್ತದೆ?

“ದಸರಾದಲ್ಲಿ ಸ್ಪೋಟಕ್ಕೆ ಸಂಚು – ಉಗ್ರನ ಬಂಧನ”
“ಸ್ಪೋಟ ಸಂಚು – ಐ.ಎಮ್ ಉಗ್ರನ ಬಂಧನ
ಐಎಸ್ಐಎಸ್ ಜೊತೆಗೆ ನಂಟು?
ಉಗ್ರನ ಬಂಧನ – ಸ್ಪೋಟ ಸಂಚು ವಿಫಲ
ಜೆಹಾದಿ ಪ್ರಕಟಣೆಗಳಿದ್ದ ಹಾರ್ಡ್ ಡಿಸ್ಕ್ ವಶಕ್ಕೆ
ಇನ್ನೂ ಮುಂತಾದ ಅನೇಕ ವಿಶೇಷಣಗಳಿಂದ ಕೂಡಿದ ಹೆಡ್ ಲೈನುಗಳು ಪತ್ರಿಕೆಗಳ ಮುಖಪುಟದಲ್ಲೇ ರಾರಾಜಿಸಬೇಕಿತ್ತು. ಸುದ್ದಿವಾಹಿನಿಗಳು ದಿನವಿಡೀ ಹಾಲಿ-ಮಾಜಿಗಳನ್ನು ಕರೆದು ಕೂರಿಸಿ ಚರ್ಚೆ ಮಾಡಬೇಕಿತ್ತು. ಕಳೆದೆರಡು ದಿನಗಳಲ್ಲಿ ಈ ರೀತಿಯ ವರದಿಯನ್ನು ಎಷ್ಟು ಜನರು ಓದಿದ್ದೀರಾ? ಅಥವಾ ನೋಡಿದ್ದೀರಾ?

ತುಂಬಾ ಕಡಿಮೆ ಅಥವಾ ಓದೇ ಇಲ್ಲ ಅಲ್ಲವೇ! ಕಾರಣ ಪತ್ರಿಕೆಗಳ ಒಳಪುಟದಲ್ಲಿ ಸಣ್ಣ ಕಾಲಮ್ಮಿನಲ್ಲಿ ಆಪಾದಿತನ ಪುಟ್ಟ ಫೋಟೋದೊಂದಿಗೆ ಘಟನೆ ವರದಿಯಾಗಿದೆ! ಇದೇನಪ್ಪ ಇದ್ದಕ್ಕಿದ್ದಂತೆ ಉಗ್ರಗಾಮಿಗಳ ಮೇಲೆ ಪತ್ರಿಕೆಯವರಿಗೆ ಅಸಡ್ಡೆ ಬೆಳೆದುಬಿಟ್ಟಿತಾ ಎಂದುಕೊಂಡು ವರದಿ ಓದಿದಾಗ ಸತ್ಯದ ಅರಿವಾಯಿತು! ಬೆದರಿಕೆ ಸಂದೇಶ ಕಳುಹಿಸಿದವನು ಇಕ್ಬಾಲನೂ ಅಲ್ಲ, ರಿಜ್ವಾನನೂ ಅಲ್ಲ ಕಳುಹಿಸಿದ್ದು ಪ್ರದೀಪ! ಹಿಂದೂವೊಬ್ಬ ಉಗ್ರನಾಗಲು ಹೇಗೆ ಸಾಧ್ಯ? ಸಾಮಾಜಿಕ ವ್ಯವಸ್ಥೆಯಿಂದ ಬೇಸರಗೊಂಡು ಈ ರೀತಿಯ ಸಂದೇಶ ಕಳುಹಿಸಿದ್ದಾನಂತೆ! ಇಂಡಿಯನ್ ಮುಜಾಹಿದ್ದೀನ್ ಹೆಸರಿನಲ್ಲಿ ಮೇಲ್ ಕಳುಹಿಸಿದ ನಂತರದಲ್ಲಿ ಸಾಮಾಜಿಕ ವ್ಯವಸ್ಥೆ ಸರಿಹೋಯಿತಾ ಗೊತ್ತಾಗಿಲ್ಲ. ಮುಸ್ಲಿಮನೊಬ್ಬ ‘ವ್ಯವಸ್ಥೆಯಿಂದ ಜಿಗುಪ್ಸೆಗೊಂಡು’ ಈ ರೀತಿಯ ಮೇಲ್ ಕಳುಹಿಸಿದ್ದರೆ ಅನಾಚೂನವಾಗಿ ಉಗ್ರಗಾಮಿಯ ‘ಪಟ್ಟ’ ದೊರಕುತ್ತಿತ್ತು. ಹಿಂದೂ ಹುಡುಗರಿಗೆ ಆ ‘ಪಟ್ಟ’ವೂ ದೊರೆಯದು ಪಾಪಚ್ಚೆ!

No comments:

Post a Comment