ಜುಲೈ 25, 2020

ಒಂದು ಬೊಗಸೆ ಪ್ರೀತಿ - 72

ಭಾನುವಾರ ಹತ್ತೂವರೆಗೆಲ್ಲ ರೆಡಿಯಾಗಿರಲು ಹೇಳಿದ್ದರು ರಾಮ್.‌ ಅವರ ಕಾರಿನಲ್ಲೇ ಹುಡುಗಿ ಮನೆಗೆ ಹೊರಟೆವು. ನಮ್ಮ ಮನೆಯಿಂದ ಒಂದಿಪ್ಪತ್ತು ನಿಮಿಷದ ಹಾದಿ ಹುಡುಗಿಯ ಮನೆ. ಟೆರಿಶಿಯನ್‌ ಕಾಲೇಜಿನ ಬಳಿಯಿತ್ತು ಅವರ ಮನೆ. ಸ್ವಂತ ಮನೆ; ಮೊದಲ ಫ್ಲೋರಿನಲ್ಲಿ ಅವರಿದ್ದರು, ಕೆಳಗೊಂದು ಮನೆ ಬಾಡಿಗೆಗೆ ಕೊಟ್ಟಿದ್ದರು. 

ʻಇನ್ನೇನು ಮದುವೆಯಾದ ಮೇಲೆ ಕೆಳ್ಗಡೆ ಮನೇಲೇ ಇರ್ಬೋದು ಬಿಡ್ರಿʼ ಅಂತ ರೇಗಿಸಿದೆ ಮನೆಯೊಳಗೋಗುವಾಗ. 

"ಸುಮ್ನಿರಿ. ಮೊದಲು ಹುಡುಗಿ ನೋಡೋ ಶಾಸ್ತ್ರ ಮುಗಿಸಿ ಪಟ್ಟಂತ ಹೊರಟುಬಿಡುವ. ಫುಲ್‌ ಟೆನ್ಶನ್‌ ಆಗ್ತಿದೆ. ಯಾರಿಗ್‌ ಬೇಕ್‌ ಈ ಕರ್ಮವೆಲ್ಲ" ಎಂದೇಳುತ್ತಾ ಪ್ಯಾಂಟಿನ ಎಡಜೇಬಿನಲ್ಲಿದ್ದ ಕರ್ಚೀಫು ಹೊರತೆಗೆದು ಹಣೆ ಒರೆಸಿಕೊಂಡು ಬೆವೆತುಹೋಗಿದ್ದ ಹಸ್ತ ಒರೆಸಿಕೊಂಡರು. ನಮ್ಮಿಂದೆಯೇ ರಾಜೀವ್‌ ರಾಧಳನ್ನು ಎತ್ತಿಕೊಂಡು ಒಳಬಂದರು. ಬನ್ನಿ ಬನ್ನಿ ಕೂತ್ಕೊಳ್ಳಿ ಕೂತ್ಕೊಳ್ಳಿ ಅನ್ನೋ ಶಾಸ್ತ್ರವೆಲ್ಲ ಮುಗಿದು ನಾವು ಕುಳಿತುಕೊಂಡ ನಂತರ ಇವರ್ಯಾರು ಅನ್ನುವಂತ ಪ್ರಶ್ನೆಯನ್ನು ರಾಮ್‌ ಕಡೆಗೆಸೆದರು. ನನ್ನೆಡೆಗೆ ಕೈತೋರುತ್ತಾ "ಇವರು ನನ್‌ ಫ್ರೆಂಡ್ಸು. ಇವ್ರು ಧರಣಿ ಅಂತ, ನಮ್‌ ಆಸ್ಪತ್ರೆಯಲ್ಲೇ ಮಕ್ಕಳ ಡಾಕ್ಟರ್ರು. ಇವರವರ ಹಸ್ಬೆಂಡು, ರಾಜೀವ್‌ ಅಂತ. ಅವರ ಮಗಳು ರಾಧ ಪುಟ್ಟಿ". ಸರಿ ಸರಿಯೆಂಬಂತೆ ತಲೆಯಾಡಿಸಿದರು ಎಲ್ಲರೂ. 

"ನೀವೆಲ್ಲಿ ಕೆಲಸ ಮಾಡೋದು" ಎಂದವರು ಹುಡುಗಿಯ ಚಿಕ್ಕಪ್ಪನೋ ಮಾವನೋ ಇರಬೇಕು. 

ʻನಾನು ಇಲ್ಲೇ ಫಸ್ಟ್‌ ಹೆಲ್ತ್‌ನಲ್ಲಿದ್ದೀನಿʼ ಮಕ್ಕಳ ಡಾಕ್ಟರ್‌ ಆಗಿಲ್ಲ ಇನ್ನೂ ಓದ್ತಿದ್ದೀನಿ ಅಂತೆಲ್ಲ ಹೇಳಬೇಕೆಂದುಕೊಂಡವಳು ಅಷ್ಟೆಲ್ಲ ಪುರಾಣ ಇಲ್ಯಾಕೆ ಎಂದು ಸುಮ್ಮನಾದೆ. 

ಜುಲೈ 15, 2020

ಒಂದು ಬೊಗಸೆ ಪ್ರೀತಿ - 71

ಸುಮ ಮೂಡಿಸಿದ ಬೇಸರವನ್ನು ಮರೆಯಲನುವು ಮಾಡಿಕೊಟ್ಟದ್ದು ಮಗಳೊಂದಿಗಿನ ಒಡನಾಟ. ಮಗಳೊಂದಿಗೆ ನೆಟ್ಟಗೆ ಮಾತನಾಡಿ, ಆಟವಾಡಿ ತಿಂಗಳ ಮೇಲಾಗಿತ್ತು. ತಿಂಗಳ್ಯಾಕೆ, ಎರಡು ತಿಂಗಳೇ ಆಗಿಹೋಯಿತು. ಮಾತನಾಡಿ ಆಟವಾಡಿದರೂ ಅದೆಲ್ಲಾ ಯಾಂತ್ರಿಕತೆಯಿಂದ ಕೂಡಿತ್ತಷ್ಟೆ. ಎರಡ್ ತಿಂಗಳಲ್ಲಿ ಮಗಳು ಎಷ್ಟೊಂದೆಲ್ಲ ಹೊಸ ಹೊಸ ಪದ ಕಲಿತುಬಿಟ್ಟಿದ್ದಾಳೆ ಅಂತ ಅಚ್ಚರಿ. ಅಮ್ಮ, ಅಪ್ಪ, ಪಪ್ಪ, ಮಮ್ಮ, ತಾತ, ಅಜ್ಜಿ, ಮಾಮ, ಅತ್ತೆ ಎಲ್ಲಾ ಸಲೀಸು ಪದಗಳೀಗ. ಇಷ್ಟು ದಿನ ಅವಳನ್ನು ನೋಡಿಕೊಂಡಿದ್ದೇ ಒಂದು ತೂಕವಾದರೆ ಈಗ ಪುಟಪುಟನೆ ಹೆಜ್ಜೆ ಮೇಲೆ ಹೆಜ್ಜೆ ಹಾಕುತ್ತಾ ಅಲ್ಲಿಂದಿಲ್ಲಿಗೆ ಇಲ್ಲಿಂದಲ್ಲಿಗೆ ಚಿಮ್ಮುವ ಅವಳ ಉತ್ಸಾಹದ ಸರಿಸಮಕ್ಕೆ ನಾವು ದೊಡ್ಡವರು ನಿಲ್ಲುವುದಕ್ಕೆಲ್ಲಿ ಸಾಧ್ಯ! ಮಗಳ ಆಟೋಟಗಳನ್ನು ನೋಡುತ್ತಾ ಒಂದು ಒಂದೂವರೆ ಘಂಟೆ ಕಳೆದಿದ್ದೇ ತಿಳಿಯಲಿಲ್ಲ. ಫೋನು ರಿಂಗಣಿಸಿತು. ರಾಮ್ ಫೋನ್ ಮಾಡಿದ್ರು. ಮಗಳನ್ನು ಅವರಪ್ಪನ ಕೈಗೊಪ್ಪಿಸಿ ಫೋನ್ ಎತ್ತಿಕೊಂಡು ಹೊರಬಂದೆ. 

ʻಹೇಳಿ ರಾಮ್' 

"ಏನ್ರೀ ಹೇಗಾಯ್ತು ಎಕ್ಸಾಮ್ಸ್ ಎಲ್ಲ?" 

ʻಏನೋ ತಕ್ಕಮಟ್ಟಿಗೆ ಆಗಿದೆ. ನೋಡ್ಬೇಕು ರಿಸಲ್ಟ್ಸ್ ಏನಾಗುತ್ತೋ' 

"ನಿಮ್ಮಂತೋರೇ ಪಾಸಾಗದಿದ್ದರೆ ಇನ್ಯಾರು ಪಾಸಾಗ್ತಾರೆ ಹೇಳಿ...." 

ʻಬೇರೆ ಡೈಲಾಗ್ ಹೇಳೀಪ. ಈ ಡೈಲಾಗ್ ಕೇಳಿ ಕೇಳಿ ಸಾಕಾಗಿದೆ' 

"ಹ ಹ.... ಹೊಸ ಕಾರ್ ತಗಂಡೆ ರೀ" 

ʻಓ ಸೂಪರ್ ಅಲ್ಲ…. ಕಂಗ್ರಾಟ್ಸ್' 

"ಥ್ಯಾಂಕ್ಯು ಥ್ಯಾಂಕ್ಯು" 

ʻಬರೀ ಥ್ಯಾಂಕ್ಸ್ ಹೇಳಿಬಿಟ್ರೆ! ಪಾರ್ಟಿ ಗೀರ್ಟಿ ಕೊಡ್ಸಿ' 

"ನಿಜ ಹೇಳ್ಬೇಕು ಅಂದ್ರೆ ಅದಿಕ್ಕೇ ಫೋನ್ ಮಾಡಿದ್ದು" 

ʻಆಹಾ! ಪಟ್ಟಂತ ಚೆನ್ನಾಗಿ ಸುಳ್ಳೇಳ್ತೀರ' 

"ಇಲ್ಲ ರೀ ನಿಜವಾಗ್ಲೂ. ರಾಜೀವ್ ಹೇಳಲಿಲ್ವ?" 

ʻಇಲ್ವಲ್ಲ' 

ಜುಲೈ 8, 2020

ಒಂದು ಬೊಗಸೆ ಪ್ರೀತಿ - 70

ಕೊನೆಯ ಪರೀಕ್ಷೆ ಮುಗಿಸಿ ಹೊರಬರುವ ಸಂತಸ ವರ್ಣಿಸುವುದು ಕಡು ಕಷ್ಟದ ಕೆಲಸ. ಥಿಯರಿ ಪಾಸಾಗೋದು ಗ್ಯಾರಂಟಿ ಅನ್ನೋ ಖುಷಿಯಲ್ಲಿ ಹೊರಬಂದವಳಿಗೆ ಕಿವಿಯಿಂದ ಕಿವಿಯವರೆಗೆ ನಗು ಹರಡಿಕೊಂಡು ಬಂದ ಸುಮಾ ಜೊತೆಯಾದಳು. 

ಹತ್ತಿರ ಬಂದು ಕೈ ಹಿಡಿದುಕೊಂಡವಳು "ಹೆಂಗಾಯ್ತೆ" ಎಂದು ಕೇಳಿದವಳು ನಾ ಉತ್ತರಿಸುವ ಮೊದಲೇ "ನೀ ಬಿಡು ಚೆನ್ನಾಗೇ ಮಾಡಿರ್ತಿ" ಎಂದು ಅವಳೇ ಉತ್ತರಿಸಿಕೊಂಡಳು. 

ʻಹು. ಕಣವ್ವ. ಪೇಪರ್ ಸೆಟ್ ಮಾಡಿದ್ದು ನಮ್ ಸಂಬಂಧಿಕರೇ ನೋಡು. ಎಲ್ಲಾ ಗೊತ್ತಿರೋದೇ ಕೊಟ್ಬಿಟ್ಟಿದ್ರು' 

"ಹ ಹ. ನಿಂಗ್ ಗೊತ್ತಿಲ್ಲದಿರೋದು ಏನಾದ್ರೂ ಇತ್ತಾ" 

ʻಹೆ ಹೆ. ಇಲ್ಲ. ಎಲ್ಲಾ ಗೊತ್ತಿತ್ತು!' 

"ಹಂಗಾದ್ರೆ ನಿನ್ ಸಂಬಂಧಿಕರೇ ಸೆಟ್ ಮಾಡಿರ್ಬೇಕು ಬಿಡು" 

ʻಸರಿ ಕಣವ್ವ. ನಾನೇ ಸೋತೆ. ಥಿಯರಿ ಪಾಸಾಗೋದ್ರಲ್ಲಿ ಅನುಮಾನ ಇಲ್ಲ ಬಿಡೆ. ಇನ್ ಕ್ಲಿನಿಕ್ಸ್ ಹೆಂಗ್ ಆಗ್ತದೋ ನೋಡ್ಬೇಕು' 

"ನೀ ಓದಿರೋದಿಕ್ಕೆ ಫೇಲಾಗೋದಿಕ್ಕೆ ಸಾಧ್ಯವೇ ಇಲ್ಲ ಬಿಡು" 

ʻಡಿ.ಎನ್.ಬಿ ಕ್ಲಿನಿಕ್ಸಿನಲ್ಲಿ ಪಾಸಾಗೋದಿಕ್ಕೆ ಓದಿರೋದ್ರ ಜೊತೆಗೆ ಅದೃಷ್ಟ ಕೂಡ ಇರ್ಬೇಕಲ್ಲ' 

"ನಿನಗಿಂತ ಅದೃಷ್ಟವಂತೆ ಯಾರಿದ್ದಾರೆ ಬಿಡವ್ವ. ಪ್ರತೀ ಸಲ ಥಿಯರಿ ಎಕ್ಸಾಮು ಬೆಂಗಳೂರಲ್ಲೋ ಚೆನ್ನೈಯಲ್ಲೋ ಮುಂಬೈಯಲ್ಲೋ ಇರೋದಪ್ಪ. ಇದೇ ಮೊದಲ ಸಲ ಮೈಸೂರಲ್ಲಿ ಆಗಿರೋದು. ಅದೃಷ್ಟ ಅಲ್ಲದೇ ಮತ್ತೇನಿದು?" 

ಜುಲೈ 1, 2020

ಒಂದು ಬೊಗಸೆ ಪ್ರೀತಿ - 69

"ಇಲ್ಲೇ ಇದ್ದು ಓದ್ಕೋಬಾರ್ದಾ? ಪಾಪು ನನ್ಜೊತೆ ಮಲಗಿರುತ್ತಪ್ಪ, ನಿನ್ನ ಪಾಡಿಗೆ ನೀನು ಓದ್ಕೊಂಡ್ರಾಗದಾ?" ಅಮ್ಮ ಹೇಳುವಾಗ ಬಾಯಲ್ಲಿದ್ದದ್ದನ್ನು ಗಬಗಬನೆ ತಿನ್ನುತ್ತಾ ತೊಡೆಯಮೇಲಿಟ್ಟುಕೊಂಡಿದ್ದ ಪುಸ್ತಕವನ್ನು ತಿರುವಿಹಾಕುತ್ತಿದ್ದೆ. ಅಮ್ಮನ ಮಾತು ಕೇಳಿಸಿದ್ದೌದು. ಉತ್ತರಿಸಿದರೆಲ್ಲಿ ಎರಡು ಸಾಲು ಓದುವುದು ತಪ್ಪಿಹೋಗ್ತದೋ ಅಂತ ಸುಮ್ಮನಿದ್ದೆ. 

"ನಾನೇಳಿದ್ದು ಕೇಳಿಸ್ತಾ ಇಲ್ವಾ?" ನನ್ನ ಮೌನಕ್ಕೆ ಅಮ್ಮನ ಜೋರಿನ ಮಾತುಗಳು. 

"ಶ್.‌ ಮೆಲ್ಲಗೆ. ಪಾಪು ನಿದ್ರೆ ಮಾಡ್ತಿದೆ" ಅಪ್ಪನ ಗದರಿಕೆ. 

"ನನಗೆ ಮಾತ್ರ ರೇಗಿ. ಅವಳು ನಾ ಕೇಳಿದ್ರೆ ಬದಲೂ ಹೇಳ್ತಿಲ್ಲ. ಕಾಣಲ್ವ ನಿಮಗೆ" ಅಮ್ಮನ ಗೋಳಾಟ. 

ʻಅಯ್ಯೋ ಅಮ್ಮ. ಸುಮ್ನಿರಿ. ಇಲ್ಲೇನೋ ಓದ್ತಿಲ್ವ! ಇಷ್ಟು ದಿನ ಮಗಳನ್ನೂ ಜೊತೆಗೇ ಕರೆದುಕೊಂಡು ಹೋಗ್ತಿರಲಿಲ್ವ? ಇನ್ನೊಂದೇ ವಾರ ಇರೋದು. ಈಗಷ್ಟೇ ರಿವಿಷನ್‌ ಶುರು ಹಚ್ಕೊಂಡಿದ್ದೀನಿ. ಓದೋಕೆ ಇನ್ನೂ ಬೆಟ್ಟದಷ್ಟಿದೆ. ಎರಡ್‌ ತಿಂಗಳಿಂದ ಓದಿರೋದು ಅದೆಷ್ಟು ನೆನಪಿದೆಯೋ ಏನೋ ಅನ್ನೋದು ಗೊತ್ತಿಲ್ಲ. ಸುಮ್ನೆ ಟೆನ್ಶನ್‌ ಕೊಡ್ಬೇಡಿ ಈಗ. ನಾ ಪಾಸಾಗ್ಬೇಕೋ ಬೇಡ್ವೋ?ʼ 

"ಪಾಸಾಗ್ದೇ ಫೇಲ್‌ ಆಗ್ಲಿ ಅಂತ ಬಯಸ್ತೀನಾ? ಇಲ್ಲೆ ಇನ್ನೊಂದ್‌ ರೂಮಲ್‌ ಓದ್ಕೋ. ನಿನ್ನತ್ರ ಮಗಳನ್ನ ಮಲಗಿಸಿಕೋ ಅಂತೇನೂ ಹೇಳ್ತಿಲ್ಲವಲ್ಲ ನಾನು" ಅಮ್ಮನದೂ ಮತ್ತದೇ ಸಾಲುಗಳು. ಏನಾದ್ರೂ ಮಾತಾಡ್ಕೊಳ್ಳಲಿ, ನನ್ನ ಪಾಡಿಗೆ ನಾ ತಿಂದು ಮುಗಿಸಿ ಎದ್ದು ಹೋಗ್ತೀನಿ ಅಂತ ಸುಮ್ಮನಾದೆ. 

ಜೂನ್ 23, 2020

ಒಂದು ಬೊಗಸೆ ಪ್ರೀತಿ - 68

ಬೆಳಿಗ್ಗೆಯಿಂದ ಓದು ಚೆಂದ ಸಾಗ್ತಿತ್ತು. ಮಧ್ಯಾಹ್ನ ರಾಮ್ ಜೊತೆ ಊಟ ಮುಗಿಸಿ ಮತ್ತೆ ಓದಲು ಕುಳಿತವಳಿಗೆ ಹಿಂದಿನ ವಾರವಷ್ಟೇ ಓದಿದ್ದ ಪಾಠ ಮನಸ್ಸಲ್ಲಿ ಮೂಡಿತು. ಕಳೆದ ವಾರವಷ್ಟೇ ಓದಿದ್ದ ಸಂಗತಿಗಳು ಹೆಚ್ಚು ಕಡಿಮೆ ಮರೆತೇ ಹೋದಂತಾಗಿಬಿಟ್ಟಿತ್ತು! ಇಲ್ಲ ಇಲ್ಲ ನೆನಪಿರ್ತದೆ, ಸುಮ್ನೆ ಹಂಗೆ ಮರೆತಂಗಾಗಿದೆ ಅಷ್ಟೇ ಅಂದಕೊಂಡು ಪುಸ್ತಕ ಮುಚ್ಚಿ ಕಣ್ಣು ಮುಚ್ಚಿ ಓದಿದ್ದ ಪಾಠವನ್ನು ನೆನಪಿಸಿಕೊಳ್ಳಲು ಪ್ರಯತ್ನಿಸಿದೆ. ಉಹ್ಞೂ... ನೆನಪಾಗಲೊಲ್ಲದು! ನೂರರಷ್ಟು ಬೇಡ, ಐವತ್ತು ಪರ್ಸೆಂಟ್ ಹೋಕ್ಕೊಳ್ಳಿ ಹತ್ತು ಪರ್ಸೆಂಟ್, ಬೇಡ ಐದು ಪರ್ಸೆಂಟ್... ಉಹ್ಞೂ... ಪಾಠದ ಹೆಸರು ಬಿಟ್ಟು ಮತ್ತೇನೂ ನೆನಪಾಗುತ್ತಿಲ್ಲ. ಸಬ್ ಹೆಡ್ಡಿಂಗ್ಸ್ ನೋಡ್ಕಂಡರೆ ಎಲ್ಲಾ ಪಟ್ಟಂತ ನೆನಪಾಗಿಬಿಡ್ತದೆ ಅಂತ ಧೈರ್ಯ ತಂದುಕೊಂಡು ನಿಧಾನಕ್ಕೆ ಭಯದಿಂದಲೇ ಪಾಠದ ಪುಟ ತಿರುವಿ ಬೇರ್ಯಾವುದರ ಮೇಲೂ ಕಣ್ಣಾಡಿಸದೆ ಇದ್ದ ಆರು ಸಬ್ ಹೆಡ್ಡಿಂಗಿನ ಮೇಲೆ ಕಣ್ಣಾಡಿಸಿದೆ. ಉಹ್ಞೂ.... ಸಬ್ ಹೆಡ್ಡಿಂಗುಗಳಿಗೆ ಕೂಡ ತಲೆಯಲ್ಲಿನ ಬಲ್ಬು ಉರಿಸುವ ಶಕ್ತಿ ಇರಲಿಲ್ಲ. ಅಳುವೇ ಬಂದಂತಾಯಿತು. ಇದು ಹೊಸ ಟಾಪಿಕ್, ಪರೀಕ್ಷೆಗಷ್ಟೇ ಮುಖ್ಯವಾದ ಟಾಪಿಕ್ಕೇನೋ ಹೌದು. ಆದರೆ ಕಳೆದ ವಾರವಷ್ಟೇ ಓದಿದ್ದ ಪಾಠದ ಗತಿಯೇ ಈ ರೀತಿಯಾದರೆ ಇನ್ನೊಂದದಿನೈದು ದಿನದಲ್ಲಿರುವ ಪರೀಕ್ಷೆಯಲ್ಲಿ ಏನು ಬರೆಯುವುದು? ಕಳೆದ ತಿಂಗಳು ಓದಿದ ಪಾಠಗಳ ಗತಿಯೇನು? ಕಳೆದ ತಿಂಗಳು ಓದಿದ ಪಾಠಗಳೆಲ್ಲವೂ ಸ್ಮೃತಿ ಪಟಲದಲ್ಲಿ ಮಿಂಚಿತು, ಪಾಠದೊಳಗಿನ ವಿಷಯಗಳೆಲ್ಲ ಮರೆಯಾಗಿತ್ತು. ಅಳು ಬಂದಂತಾಗುವುದೇನು, ಬಂದೇಬಿಟ್ಟಿತು. ಪುಸ್ತಕವನ್ನು ಬದಿಗೆ ಸರಿಸಿ ಮೇಜಿಗೆ ಹಣೆಕೊಟ್ಟು ಮೇಜನ್ನೊಂದಷ್ಟು ತೇವವಾಗಿಸಿದೆ. ʻಪರವಾಗಿಲ್ಲ ಧರಣಿ, ಇದು ಪರೀಕ್ಷೆ ಸಮಯದಲ್ಲಿ ಮಾಮೂಲಿ. ಎಂಬಿಬಿಎಸ್‌ನಲ್ಲೂ ಇಂತದ್ದು ಎಷ್ಟು ಸಲ ಆಗಿಲ್ಲ. ಕೊನೆಗೆ ಪರೀಕ್ಷೆಯ ದಿನ ಎಲ್ಲವೂ ನೆನಪಾಗೇ ಆಗ್ತದೆ ಅನ್ನೋದನ್ನ ಮರೀಬೇಡ. ಇಲ್ಲೂ ಅಷ್ಟೇ ಆಗಿರೋದು. ಮತ್ತೇನೂ ಅಲ್ಲ. ಗಾಬರಿ ಆಗೋದೇನೂ ಇಲ್ಲ. ಗಾಬರಿ ಆದರೆ ಮುಂದಕ್ಕೆ ಓದಲಾಗುವುದಿಲ್ಲ. ಓದದೇ ಹೋದರೆ ಮತ್ತಷ್ಟು ಗಾಬರಿ ಆಗ್ತದೆ. ಮತ್ತೆ ಓದೋದಿಕ್ಕಾಗುವುದಿಲ್ಲ. ಮತ್ತಷ್ಟು ಗಾಬರಿ. ಅಂತ್ಯವಾಗದ ವೃತ್ತದ ಸುಳಿಗೆ ಸಿಲುಕಬೇಡ. ಒಂದಷ್ಟು ಪಾಠಗಳು ಮರೆತರೇನು, ಇನ್ನೊಂದಷ್ಟು ಪಾಠ ಓದಿ ನಾಳೆ ಹಳೇ ಪಾಠಗಳ ಮೇಲೊಮ್ಮೆ ಕಣ್ಣಾಡಿಸಿದರಾಯಿತು. ಹಳೇದೇ ನೆನಪಿಲ್ಲ, ಹೊಸತು ಮತ್ತೆಲ್ಲಿ ನೆನಪಾಗ್ತದೆ? ಇಲ್ಲಿಲ್ಲ ಇಂತ ಆಲೋಚನೆಗಳನ್ನು ದೂರಕ್ಕೆ ತಳ್ಳುವುದೇ ಸರಿ. ಇಲ್ಲಾಂದ್ರೆ ಮುಗೀತು ಕತೆ. ಫೇಲಾಗ್ತೀನಿ. ಫೇಲಾದ್ರೆ ಮನೇಲಿ ರಾಜೀವನ ಕಿರಿಕಿರಿ! ಹಣದ ಸಮಸ್ಯೆ! ಅಯ್ಯಪ್ಪ... ಅದನ್ನೆಲ್ಲಾ ನೆನೆಸಿಕೊಂಡರೇನೇ ಭಯವಾಗ್ತದೆ. ಸಮಸ್ಯೆಗಳಿಗೊಂದಷ್ಟು ಪರಿಹಾರ ಸಿಗಬೇಕೆಂದರೆ ನಾ ಪಾಸಾಗಲೇಬೇಕು. ಅದಕ್ಕೋಸ್ಕರನಾದರೂ ಓದು ಮುಂದುವರಿಸಲೇಬೇಕು. ಇನ್ನದಿನೈದು ದಿನವಿರುವಾಗ ಅರ್ಧ ದಿನವನ್ನು ಕಳೆದುಕೊಳ್ಳುವುದು ಯುಕ್ತಿಯ ಕೆಲಸವಲ್ಲ. ಕಮಾನ್ ಧರಣಿ ಯು ಕ್ಯಾನ್ ಡು ಇಟ್. ಕಮಾನ್' ಅಂತ ನನಗೆ ನಾನೇ ಹುರಿದುಂಬಿಸಿಕೊಂಡು ತಲೆ ಮೇಲೆತ್ತುವಷ್ಟರಲ್ಲಿ ಅಳು ನಿಂತಿತ್ತು. ಬಿಡದಂತೆ ಒಂದು ಪುಟ ಓದಿ ಮುಗಿಸಿದೆ, ಅದಕ್ಕಿಂತ ಮುಂದಕ್ಕೋಗಲಾಗಲಿಲ್ಲ. ಮನದಲ್ಲಿ ವಿವರಿಸಲಾಗದ ಭೀತಿ. ʻಏನ್ ಅಬ್ಬಬ್ಬಾ ಅಂದ್ರೆ ಆರು ತಿಂಗಳು ಹೋಗ್ತದೆ ಅಷ್ಟೇ. ಅದಕ್ಯಾಕೆ ಇಷ್ಟೊಂದು ಚಿಂತೆ' ಸುಳ್ಳು ಸುಳ್ಳೇ ವೈರಾಗ್ಯದ ಮೊರೆ ಹೊಕ್ಕು ನೋಡಿದೆ. ಉಪಯೋಗವಾಗಲಿಲ್ಲ. ಒಂದ್ ಕಾಫಿ ಕುಡಿದ್ರೆ ಎಲ್ಲಾ ಸರಿ ಹೋಗಿಬಿಡ್ತದೆ ಅನ್ನೋ ಸಂಗತಿ ಹೊಳೆದು ಲವಲವಿಕೆಯಿಂದ ಎದ್ದು ಟಾಯ್ಲೆಟ್ಟಿಗೆ ಹೋಗಿ ಹೊಟ್ಟೆ ಹಗುರಾಗಿಸಿಕೊಂಡು ಕ್ಯಾಂಟೀನಿನಲ್ಲಿ ಒಂದು ಸ್ಟ್ರಾಂಗ್ ಫಿಲ್ಟರ್ ಕಾಫಿ ಮಾಡಿಸಿಕೊಂಡು ಕುಡಿದೆ. ಓದುವ ಉತ್ಸಾಹ ಮೂಡಿತು. ಲೈಬ್ರರಿಗೆ ಹಿಂದಿರುಗಿದೆ. ಮತ್ತರ್ಧ ಘಂಟೆ ಹಂಗೂ ಹಿಂಗೂ ಕಷ್ಟ ಪಟ್ಟು ಓದಿದೆ. ಮತ್ತದೇ ಹೇಳತೀರದ ಗೋಳು. 

ಜೂನ್ 11, 2020

ಒಂದು ಬೊಗಸೆ ಪ್ರೀತಿ - 67

ಮೊದಲಿಂದಾನೂ ಚೆನ್ನಾಗಿ ಕೆಲ್ಸ ಮಾಡಿದ್ದಾಳೆ ಅನ್ನೋ ಕಾರಣಕ್ಕೋ, ನಮ್ ಆಸ್ಪತ್ರೆಯಲ್ಲೇ ಇದ್ದೋಳಲ್ವ ಅನ್ನೋ ಕಾರಣಕ್ಕೋ ಅಥವಾ ಪಾಪ ಚಿಕ್ ಮಗು ಇಟ್ಕಂಡು ಇಷ್ಟೊಂದ್ ದುಡ್ದಿದ್ದಾಳೆ, ಓದೋಕ್ ಟೈಮ್ ಕೊಡೋದ್ ಬೇಡ್ವೇ ಅನ್ನೋ ಅನುಕಂಪದಿಂದಲೋ ಒಟ್ನಲ್ಲಿ ಥಿಯರಿ ಪರೀಕ್ಷೆಗೆ ಇನ್ನೂ ಎರಡು ತಿಂಗಳು ಇರುವಾಗಲೇ ಡ್ಯೂಟಿಯಿಂದ ರಿಲೀವ್ ಮಾಡಿದ್ರು. "ಅಯ್ಯೋ ಹೆಣ್ಮಕ್ಳಿಗೆ ಬಿಡಪ್ಪ ಸಲೀಸು' ಅಂತ ಜೂನಿಯರ್ ಹುಡುಗ್ರು ಪಿಜಿಗಳು, ʻಅವಳೇನ್ ಕಿಸ್ಕಂಡ್ ಮಾತಾಡ್ತಾಳಲ್ಲ ಅದ್ಕೆ ' ಅಂತ ಜೂನಿಯರ್ ಹುಡ್ಗೀರ್ ಪೀಜಿಗಳು ನಾನಿಲ್ಲದಾಗ ಮಾತಾಡಿಕೊಂಡಿದ್ದು ಸುಮಾಳ ಮೂಲಕ ಕಿವಿಗೆ ಬಿತ್ತು. ಯಾರ್ ಏನ್ ಮಾತಾಡ್ಕಂಡ್ರೇನು, ನನಗೆ ಓದೋಕೆ ಸಮಯ ಸಿಕ್ತಲ್ಲ ಅಷ್ಟು ಸಾಕಿತ್ತು ನನಗೆ. ಡಿ.ಎನ್.ಬಿಯಲ್ಲಿ ಥಿಯರಿ ಪಾಸೋಗೋದ್ ಸಲೀಸು, ಪ್ರ್ಯಾಕ್ಟಿಕಲ್ಸೇ ತಲೆನೋವು ಅಂತ ಎಲ್ರೂ ಹೇಳ್ತಾರೆ. ನಾನೀಗ ಓದಿರೋ ಮಟ್ಟಕ್ಕೆ ಪ್ರ್ಯಾಕ್ಟಿಕಲ್ಸ್ ಇರಲಿ ಥಿಯರಿ ಪಾಸಾಗೋದು ಕೂಡ ಅನುಮಾನವೇ ಸರಿ. ಇನ್ನೆರಡು ತಿಂಗಳು ಬಿಡದೆ ಓದಿದರೆ ತೊಂದರೆಯಿಲ್ಲ ಅನ್ಕೋತೀನಿ. ಆದರೆ ಓದೋದೆಲ್ಲಿ? ಮನೇಲಿ ಕುಳಿತು ಓದಲು ಕಷ್ಟ ಕಷ್ಟ. ಮನೇಲೇ ಇದ್ದೀಯಲ್ಲ, ಮಗಳನ್ನು ಸ್ವಲ್ಪ ಹೊತ್ತು ನೋಡ್ಕೋ ಅಂತ ಅಮ್ಮ ಹೇಳದೆ ಇರಲಾರರು. ಇನ್ನು ರಾಜೀವನಿಗೆ ತಿಂಡಿ ಊಟ ಕಾಫಿ ಟೀ ಅಂತ ಒಂದಷ್ಟು ಸಮಯ ಹಾಳಾಗೋದು ಖಂಡಿತ. ಇಲ್ಲಿ ಆಸ್ಪತ್ರೆಯಲ್ಲಿರೋ ಲೈಬ್ರರಿಗೇ ಬಂದು ಓದಬೇಕು. ಇನ್ನೆಲ್ಲಿ ಕುಳಿತರೂ ಕೆಲಸ ಕೆಡ್ತದೆ ಅಂದುಕೊಂಡೆ. ರಾಜೀವನಿಗೂ ಅದನ್ನೇ ಹೇಳಿದೆ. "ಅದೇ ಸರಿ. ಇಲ್ಲಾಂದ್ರೆ ಎಲ್ಲಿ ಓದೋಕಾಗುತ್ತೆ ಬಿಡು" ಅಂದರು. ಇತ್ತೀಚಿನ ದಿನಗಳಲ್ಲಿ ನಾನು ಅವರು ಯಾವ ಕಿತ್ತಾಟವೂ ಇಲ್ಲದೆ ಒಪ್ಪಿಕೊಂಡ ಸಂಗತಿಯಿದು! "ಸದ್ಯಕ್ಕೆ ನಿಮ್ಮ ಅಮ್ಮನಿಗೆ ಡ್ಯೂಟಿ ರಿಲೀವ್ ಮಾಡಿದ ಬಗ್ಗೆ ಹೇಳಬೇಡ. ಬಿಡುವಾಗಿದ್ರೂ ಬಂದು ಮಗಳನ್ನ ನೋಡದೆ ಓದ್ತಾ ಕೂತಿದ್ದಾಳೆ ಅಂತಂದ್ರೂ ಅಂದ್ರೆ" ಎಂದು ನಕ್ಕರು. ಪರವಾಗಿಲ್ಲ ಚೆನ್ನಾಗೇ ಅರ್ಥ ಮಾಡಿಕೊಂಡಿದ್ದಾರೆ ಅತ್ತೇನ! 

ರಾಜೀವ ಹೇಳಿದಂತೆಯೇ ಅಮ್ಮನಿಗೆ ಹೇಳಲೋಗಲಿಲ್ಲ. ʻಇನ್ನು ಮೇಲೆ ನೈಟ್ ಡ್ಯೂಟಿ ಇರಲ್ಲ. ಸಂಜೆ ಕೆಲಸ ಮುಗಿದ ಮೇಲೆ ಒಂದಷ್ಟು ಸಮಯ ಓದಿಕೊಂಡು ರಾತ್ರಿ ಎಂಟರಷ್ಟೊತ್ತಿಗೆ ಬರ್ತೀನಿ' ಎಂದಿದ್ದಕ್ಕೇ ಅಮ್ಮ ಉರ ಉರ ಅಂದು ಸುಮ್ಮನಾದರು. ಅಮ್ಮ ಏನಂದ್ರೂ ಏನ್ ಬಿಟ್ರು ಸುಮ್ಮನಿರಲೇಬೇಕಾಗಿತ್ತು, ನನ್ನ ಅನಿವಾರ್ಯತೆ. ಲೈಬ್ರರಿಯಲ್ಲಿ ಕುಳಿತು ಓದಿ ಅಭ್ಯಾಸವೇ ಇರಲಿಲ್ಲ ನನಗೆ. ಮುಂಚೆಯಿಂದ ಓದಿದ್ದೆಲ್ಲ ಮನೆಯಲ್ಲೇ. ಈಗ ವಿಧಿಯಿಲ್ಲ, ಹೊಸ ಜಾಗದಲ್ಲಿನ ಓದಿಗೆ ಹೊಂದಿಕೊಳ್ಳಲೇಬೇಕು. ಬೆಳಿಗ್ಗೆ ಐದಕ್ಕೆಲ್ಲ ಎದ್ದು ಒಂದು ಘಂಟೆ ಕಾಲ ಓದಿ, ಕಸ ಗುಡಿಸಿ, ಮನೆ ಒರಸಿ, ಬೆಳಗಿನ ತಿಂಡಿ ಮಾಡಿ ತಿಂದು ನನಗೂ ರಾಜೀವನಿಗೂ ಬಾಕ್ಸಿಗೆ ಹಾಕುವಷ್ಟರಲ್ಲಿ ಎದ್ದಿರುತ್ತಿದ್ದ ಮಗಳಿಗೆ ಸ್ನಾನ ಮಾಡಿಸಿ ಅವಳು ತಿಂದರೊಂದಷ್ಟು ತಿನ್ನಿಸಿ ಅಮ್ಮನ ಮನೆಗೋಗಿ ಮಗಳನ್ನು ಬಿಟ್ಟು ಆಸ್ಪತ್ರೆಯ ಲೈಬ್ರರಿಯನ್ನು ಒಂಭತ್ತಕ್ಕೆ ಮುಂಚೆ ಸೇರಿದರೆ ಮತ್ತೆ ಮೇಲೇಳುತ್ತಿದ್ದದ್ದು ಹನ್ನೊಂದೂವರೆಗೆ ಒಂದು ಕಾಫಿ ಕುಡಿಯುವ ನೆಪದಿಂದ. ಅಪರೂಪಕ್ಕೆ ಸುಮಾ ಜೊತೆಯಗುತ್ತಿದ್ದಳು. ಹೆಚ್ಚಿನ ದಿನ ಅವಳು ಮನೆಯಲ್ಲೇ ಓದಿಕೊಳ್ಳುತ್ತಿದ್ದಳು. ಕೆಲವೊಮ್ಮೆ ರಾಮ್ ಪ್ರಸಾದ್ ದಾರಿಯಲ್ಲಿ ಸಿಕ್ಕರೆ ಜೊತೆಗೆ ಬರುತ್ತಿದ್ದರು. ಲೋಕಾಭಿರಾಮ ಒಂದಷ್ಟು ಮಾತಾಡಿ ಕಾಫಿ ಕುಡಿದು ಮತ್ತೆ ಲೈಬ್ರರಿ ಸೇರಿ ಪುಸ್ತಕದೊಳಗೆ ತಲೆ ತೂರಿಸಿದರೆ ಮತ್ತೆ ತಲೆಯೆತ್ತುತ್ತಿದ್ದದ್ದು ಮಧ್ಯಾಹ್ನ ಒಂದೂವರೆಗೆ ಊಟಕ್ಕೆಂದು ಎದ್ದಾಗ. ತಂದಿದ್ದ ಒಂದು ಪುಟ್ಟ ಬಾಕ್ಸಿನ ತಿಂಡಿ ಸಾಲುತ್ತಿರಲಿಲ್ಲ, ಜೊತೆಗೊಂದು ಬೋಂಡಾನೋ ಮಂಗಳೂರು ಗೋಳಿಬಜ್ಜೀನೊ ತೆಗೆದುಕೊಳ್ಳಲೇಬೇಕು. ಹೆಚ್ಚು ಕಮ್ಮಿ ಪ್ರತಿ ಮಧ್ಯಾಹ್ನ ರಾಮ್ ಪ್ರಸಾದ್ ಅದೇ ಸಮಯಕ್ಕೆ ಕ್ಯಾಂಟೀನಿಗೆ ಬರೋರು, ಜೊತೆಯಾಗೋರು. ಲೈಬ್ರರಿಗೆ ಬಂದರೂ ಹೆಚ್ಚಿನ ಸಮಯ ಮನೆಗೆ ಊಟಕ್ಕೆ ಹೋಗಿಬಿಡುತ್ತಿದ್ದ ಸುಮಾ ಅಪರೂಪಕ್ಕೆ ನನ್ನ ಜೊತೆ ಕ್ಯಾಂಟೀನಿಗೆ ಬಂದಾಗೆಲ್ಲ ರಾಮ್ ಪ್ರಸಾದ್ ಇರೋದನ್ನ ನೋಡಿ "ಅದೇನ್ ನೀ ಊಟಕ್ ಬರೋ ಟೈಮಿಗೇ ಬರ್ತಾರಲ್ಲ ಅವರೂನು" ಅಂತ ಕಾಲೆಳೆಯೋಳು. ʻಅಯ್ಯೋ ಗೂಬೆ. ಕೊ ಇನ್ಸಿಡೆನ್ಸ್ ಅಷ್ಟೆ' ಅಂದರೆ "ಬರೀ ಕೋ ಇನ್ಸಿಡೆನ್ಸಾ...." ಅಂತ ರೇಗಿಸದೆ ಸುಮ್ಮನಿರುತ್ತಿರಲಿಲ್ಲ. 

ಜೂನ್ 4, 2020

ಬೇಸಿಕಲಿ ವಿ ಆರ್‌ ಬ್ಲಡಿ ಹಿಪೋಕ್ರೈಟ್ಸ್‌…



ಡಾ. ಅಶೋಕ್.‌ ಕೆ. ಆರ್ 
ಇತ್ತೀಚೆಗೆ ಚನ್ನಪಟ್ಟಣದಲ್ಲಿ ಕರಡಿಯೊಂದು ಮಹಿಳೆಯೊಬ್ಬರ ಮೇಲೆ ದಾಳಿ ನಡೆಸಿತು… ತುಮಕೂರು ಸಮೀಪದ ಊರಿನಲ್ಲಿ ಮೂರು ವರ್ಷದ ಮಗುವನ್ನು ಚಿರತೆ ಹೊತ್ತೊಯ್ದಿತು…. ಕುಣಿಗಲ್‌ ಸುತ್ತಮುತ್ತ ಹಸು, ಸಾಕಿದ ನಾಯಿಯನ್ನೊತ್ತಯ್ಯಲು ಬರುವ ಚಿರತೆಗಳ ಸಂಖೈ ಹೆಚ್ಚುತ್ತಿದೆ…. ಮೊನ್ನೆ ಕೇರಳದಲ್ಲಿ ಆನೆಯೊಂದು ಸತ್ತಿದೆ…. 

ಕೆಂಗೇರಿ ಹತ್ತಿರ ಕೊಮ್ಮಘಟ್ಟ ಅನ್ನೋ ಊರಿದೆ. ಆ ಊರಿಂದ ಹಿಡಿದು ಒಂದ್ಕಡೆ ಮೈಸೂರು ರಸ್ತೆಯವರೆಗೆ ಇನ್ನೊಂದ್ಕಡೆ ತಾವರೆಕೆರೆಯ ಗಡಿಯವರೆಗೆ ಬೃಹತ್ತಾದ (ಏಷಿಯಾಗೆ ದೊಡ್ಡದು ಅಂತಾರೆ, ಸರಿ ತಿಳಿದಿಲ್ಲ) ಕೆಂಪೇಗೌಡ ಲೇಔಟ್‌ ಆಗಿ ಪರಿವರ್ತನೆ ಆಗಿದೆ. ಗೆಳೆಯ ಅಭಿ ಆ ಕಡೆಯಲ್ಲೊಂದಷ್ಟು ದಿನ ತೋಟವೊಂದನ್ನು ಬಾಡಿಗೆ ಹಿಡಿದಿದ್ದ. ತೆಂಗು, ಮಾವು, ಹಲಸು, ಸಪೋಟಾ ಮರಗಳಿದ್ದ ತೋಟಗಳಲ್ಲೀಗ ಜೆಸಿಬಿಗಳದೇ ಕಲರವ. ತೋಟಗಳ ನಡುವೆ ಅಲ್ಲಲ್ಲಿ ಅನೇಕಾನೇಕ ಕುರುಚಲು ಕಾಡುಗಳೂ ಇದ್ದವು. ʻಇಲ್‌ ಸೈಟ್‌ ಮಾಡಿ, ಜನಕ್‌ ಅವಶ್ಯಕತೆ ಇದೆʼ ಅಂತ ಯಾರಾದ್ರೂ ಅರ್ಜಿ ಹಾಕಿದ್ರಾ? ಖಂಡಿತ ಇಲ್ಲ. ಬಿಡಿಎ ಸೈಟ್‌ ಮಾಡ್ತು, ಆ ಸೈಟುಗಳನ್ನ ಜನ ಕೊಂಡ್ಕೊಂಡೂ ಆಗಿದೆ. ಇನ್ನೇನೀಗ ವಿಶಾಲ ವೆಲ್‌ ಪ್ಲ್ಯಾನ್ಡ್‌ ರಸ್ತೆಗಳೂ, ದೊಡ್ಡ ಮನೆಗಳು, ಶಾಪಿಂಗ್‌ ಕಾಂಪ್ಲೆಕ್ಸುಗಳು ಬರೋ ಸಮಯ. ಅಷ್ಟೊಂದ್‌ ಒಳ್ಳೆ ಫಲವತ್ತಾದ ಭೂಮೀನ ಯಾಕ್ರೀ ಹಾಳುಗೆಡವ್ತೀರ ಅಂತ ಯಾರೂ ಮಾತಾಡಲಿಲ್ಲ. ಆ ಹಳ್ಳಿಗಳಲ್ಲಿನ ಜನ ಕೂಡ ಅದಕ್ಕೆ ವಿರೋಧ ವ್ಯಕ್ತಪಡಿಸಲಿಲ್ಲ. ಕಾರಣ ಎಕರೆಗೆ ತೊಂಭತ್ತು ಲಕ್ಷದವರೆಗೂ ಹಣ ನೀಡುತ್ತಿದ್ದರು. ಹೆಚ್ಚು ಎಕರೆ ಇರುವ ವ್ಯಕ್ತಿ ಒಂದಷ್ಟು ಗುಂಟೆ ಭೂಮಿಯನ್ನು ತನ್ನಲ್ಲೇ ಇಟ್ಟುಕೊಳ್ಳಬಹುದಿತ್ತು. ಅರ್ಧ ಮುಕ್ಕಾಲು ಎಕರೆ ಇದ್ದವರೂ ಕೂಡ ಲಕ್ಷಾಧೀಶರಾದರು. ಎಕರೆಗಿಂತ ಹೆಚ್ಚಿದ್ದವರೆಲ್ಲ ಕೋಟ್ಯಾಧೀಶರಾದರು. ಒಳ್ಳೇ ಅಮೌಂಟು ಸಿಗುವಾಗ ಮಾರುವುದು ಬುದ್ಧಿವಂತಿಕೆಯ ಲಕ್ಷಣ ಎನ್ನುವುದೇ ನಮ್ಮ ಆರ್ಥಿಕತೆಯ ಬುನಾದಿಯಲ್ಲವೇ? 

ಕುಣಿಗಲ್‌ ಮಾಗಡಿ ತುಮಕೂರಿನ ಕಡೆಯ ಎಷ್ಟೋ ಬೆಟ್ಟಗುಡ್ಡಗಳಲ್ಲಿ ಜಲ್ಲಿ ಕಲ್ಲು ಕ್ವಾರಿಗಳಿವೆ. ರಸ್ತೆಗಾಗಿ ಬೇಕಾದ ಜಲ್ಲಿ ಉತ್ಪಾದಿಸಲು ಸ್ಥಳೀಯವಾಗಿ ಶುರುವಾದ ಘಟಕಗಳು ರಸ್ತೆ ಮುಗಿದು ಎಷ್ಟೋ ವರ್ಷ ಕಳೆದ ನಂತರವೂ ಪರವಾನಗಿ ಪಡೆದುಕೊಂಡೋ ಲಂಚ ಕೊಟ್ಟುಕೊಂಡೋ ಕಲ್ಲು ಒಡೆಯುತ್ತಿವೆ. ರಾತ್ರೋ ರಾತ್ರಿ ಸಿಡಿವ ಡೈನಮೈಟು ಶಬ್ದಕ್ಕೆ ಎಲ್ಲರೂ ಬೆಚ್ಚಲೇಬೇಕು. ಇವರ್ಯಾಕೆ ಜಲ್ಲಿ ಹೊಡೀತಿದ್ದಾರೆ? ಇಲ್ಲಿ ಕಟ್ಟಿಸೋ ಹೊಸ ಹೊಸ ಸೈಟು ಅಪಾರ್ಟುಮೆಂಟುಗಳಿಗೆ ಜಲ್ಲಿ ಬೇಕೇ ಬೇಕಲ್ಲ. ಇಷ್ಟೊಂದ್ಯಾಕೆ ಅಪಾರ್ಟ್‌ಮೆಂಟು ಸೈಟು? ಒಂದಾದ ಮೇಲೆ ಒಂದನ್ನು ನಾವು ಕೊಂಡುಕೊಳ್ಳುತ್ತಾ ನಾವು ಸ್ಥಿತಿವಂತರಾಗಬೇಕಲ್ಲ? ಆಗಲೇ ತಾನೇ ಸಮಾಜದಲ್ಲಿ ನಮಗೂ ಒಂದು ʻಸ್ಥಾನಮಾನʼ ಅಂತ ಸಿಗೋದು…. 

ಒಂದು ಬೊಗಸೆ ಪ್ರೀತಿ - 66

ಡಾ. ಅಶೋಕ್.‌ ಕೆ. ಆರ್.‌
ಸದ್ಯ ರಾಧ ಯಾವುದೇ ಹೆಚ್ಚು ತೊಂದರೆಗಳಿಲ್ಲದೆ ಎರಡು ದಿನದಲ್ಲಿ ಗೆಲುವಾಗಿಬಿಟ್ಟಳು. ಅಷ್ಟರಮಟ್ಟಿಗೆ ನನಗೂ ನಿರಾಳ. ಇಲ್ಲವಾದರೆ ಆಸ್ಪತ್ರೆಗೆ ರಜೆ ಹಾಕಿ ಮಗಳನ್ನು ನೋಡಿಕೊಳ್ಳುವುದು ಕಷ್ಟವಾಗಿಬಿಡುತ್ತಿತ್ತು. ರಾಜೀವ ನೆಪಕ್ಕೆ ನಿನ್ನೆ ಬಂದು ಹೋಗಿದ್ದ. ನನ್ನೊಡನೆ ಮಾತುಕತೆಯಿರಲಿಲ್ಲ. ಅಮ್ಮನೊಡನೆ ಹು ಉಹ್ಞೂ ಎಂದಷ್ಟೇ ಮಾತನಾಡಿ ಹೊರಟುಬಿಟ್ಟ. ಏನಕ್ಕೆ ಈ ರೀತಿಯಾಗ್ತಿದೆಯೋ ಗೊತ್ತಿಲ್ಲ. ತೀರ ಜಗಳವಾಗುವಂತದ್ದೇನೂ ಇತ್ತೀಚೆಗೆ ನಡೆದೂ ಇಲ್ಲ. ಆದರೂ ಯಾಕೋ ನನ್ನ ಕಂಡರೆ ಅವರಿಗೆ ಮುನಿಸು, ಮಗಳನ್ನು ಕಂಡರಂತೂ ಬೇಡದ ಸಿಟ್ಟು. ಅವರಿಗೆ ಓದಿಗೆ ತಕ್ಕ ಕೆಲಸ ಸಿಗದಿದ್ದರೆ ನಾ ಹೇಗೆ ಹೊಣೆಯಾಗ್ತೀನಿ? ಅನ್ನೋ ಪ್ರಶ್ನೆಗೆ ಮದುವೆಯಾದಂದಿನಿಂದ ಉತ್ತರ ಹುಡುಕಲೆತ್ನಿಸುತ್ತಿದ್ದೀನಿ, ಇನ್ನೂ ಸಿಕ್ಕಿಲ್ಲ. ಒಂದು ವೇಳೆ ಅವರ ಓದಿಗೆ ತಕ್ಕ ಕೆಲಸ ಸಿಕ್ಕಿ, ನನ್ನ ಓದಿಗೆ ತಕ್ಕ ಕೆಲಸ ಸಿಗದೇ ʻನಡೀರಿ ಈ ಊರು ಬೇಡ. ಬೇರೆ ಊರಿಗೆ, ನನಗೆ ಸರಿಯಾದ ಕೆಲಸ ಸಿಗುವ ಊರಿಗೆ ಹೋಗುವʼ ಎಂದೇನಾದರೂ ನಾ ಹೇಳಿದ್ದರೆ ಅವರು ಒಪ್ಪಿ ಬಿಡುತ್ತಿದ್ದರಾ? ಖಂಡಿತ ಇಲ್ಲ. "ನಾ ದುಡೀತಿಲ್ವ. ಮುಚ್ಕಂಡ್‌ ಮನೇಲ್‌ ಬಿದ್ದಿರು, ಮಗು ನೋಡ್ಕಂಡು" ಅಂತಾನೋ ಅಥವಾ ಮೂಡು ಚೆನ್ನಾಗಿದ್ದಾಗ "ನಾ ದುಡೀತಿದ್ದೀನಲ್ಲ ಡಾರ್ಲಿಂಗ್.‌ ನೀ ಆರಾಮಿರು ಮನೇಲಿ" ಅಂತಾನೋ ಹೇಳಿ ಪುಸಲಾಯಿಸುತ್ತಿದ್ದರು. 

ಹೊಕ್ಕೊಳ್ಲಿ ನನಗೇನೂ ತೀರ ಮೈಸೂರಲ್ಲೇ ಇರಬೇಕು, ಬೆಂಗಳೂರಿಗೆ ಯಾವುದೇ ಕಾರಣಕ್ಕೂ ಹೋಗಲೇಬಾರದು ಅಂತೇನೂ ಇಲ್ಲ. ಒಳ್ಳೆ ಕೆಲಸ ಸಿಕ್ಕಿದರೆ ಮೈಸೂರಾದರೇನು, ಬೆಂಗಳೂರಾದರೇನು? ಎರಡೂ ಕಡೆ ನಡೀತದೆ. ಬರೀ ಎಂ.ಬಿ.ಬಿ.ಎಸ್‌ ಇಟ್ಕಂಡು ಬೆಂಗಳೂರಿಗೆ ಹೋಗೋ ಯೋಚನೆ ನನ್ನಲಿರಲಿಲ್ಲ. ಈ ಡಿ.ಎನ್.ಬಿಗೆ ಸೇರುವಾಗಲಾದರೂ ಪೂರ್ತಿ ಫೀಸು ಕಟ್ಟಿಬಿಟ್ಟಿದ್ದರೆ ಮುಗಿಸಿದ ತಕ್ಷಣ ಹೊರಡಬಹುದಿತ್ತೇನೋ, ಪೂರ್ತಿ ಫೀಸು ಕಟ್ಟಲು ಹಣವಿರಲಿಲ್ಲ, ಅವರಪ್ಪನ ಮನೇಲಿ ಹಣ ತರುವ ಮನಸ್ಸು ಇವರಿಗೂ ಇರಲಿಲ್ಲ. ಈಗ ವಿಧಿಯಿಲ್ಲ, ಇದೇ ಆಸ್ಪತ್ರೆಯಲ್ಲಿ ಬಾಂಡ್‌ ಪೂರೈಸಲೇಬೇಕು. ಒಂದ್‌ ವೇಳೆ ಪೂರ್ತಿ ಫೀಸು ಕಟ್ಟಿದ್ರೆ ತಾನೇ ಮೈಸೂರು ಬಿಟ್ಟೋಗಲು ಸಾಧ್ಯವಾಗ್ತಿತ್ತಾ? ಚಿಕ್ಕ ಮಗಳನ್ನು ಕಟ್ಟಿಕೊಂಡು. ಹೆಂಗೋ ಅಮ್ಮನ ಮನೆ ಹತ್ತಿರವಿದೆ, ಮಗಳನ್ನು ನೋಡಿಕೊಳ್ತಾರೆ. ಈ ಕಾರಣದಿಂದಲೇ ಅಲ್ಲವೇ ನಾನು ಓದಿಕೊಂಡು ಆಸ್ಪತ್ರೆಗೆ ಹೋಕ್ಕೊಂಡು ಇರೋಕೆ ಆಗಿರೋದು. ಅಮ್ಮನ ಮನೆ ಬೇರೆ ಕಡೆಯಿದ್ದಿದ್ದರೆ ಇದು ತಾನೇ ಎಲ್ಲಿ ಸಾಧ್ಯವಾಗುತ್ತಿತ್ತು. ರಾಜೀವನ ಮನೆಯವರಂತೂ ಮೊಮ್ಮಗಳನ್ನು ನೋಡಲು ಬರುವುದು ಅಪರೂಪದಲ್ಲಿ ಅಪರೂಪ. ಮಗಳಿಗಿಂಗೆ ಹುಷಾರಿಲ್ಲ ಅಂತ ರಾಜೀವ ಅವರ ಮನೆಯವರಿಗೆ ಹೇಳದೇ ಇರ್ತಾರಾ? ಹೇಳೇ ಇರ್ತಾರೆ. ಆದರೂ ನೋಡಲೊಬ್ಬರೂ ಬಂದಿಲ್ಲ. ಅಥವಾ ಇವರೇ ಹೇಳಿಲ್ಲವೋ? ತಿಳಿದುಕೊಳ್ಳುವುದೇಗೆ? ತಿಳಿದು ಆಗಬೇಕಾಗಿರುವುದಾದರೂ ಏನು. 

ಮೇ 24, 2020

ಒಂದು ಬೊಗಸೆ ಪ್ರೀತಿ - 65

ರಾಜೀವ ಅವತ್ತು ರಾತ್ರಿಯಾದರೂ ಬರಲಿಲ್ಲ. ಫೋನೂ ಮಾಡಲಿಲ್ಲ. ಮನೆಯಲ್ಲಿ ಅಮ್ಮ ಎಲ್ಲಿ ಅವರು ಎಲ್ಲಿ ಅವರು? ಎಂದು ಕೇಳಿದ್ದೇ ಕೇಳಿದ್ದು. ʻಅವರ ನಂಬರ್‌ ನಿಮ್ಮತ್ರವೇ ಇದ್ಯಲ್ಲ. ನೀವೇ ಫೋನ್‌ ಮಾಡಿ ವಿಚಾರಿಸಿಕೊಳ್ಳಿʼ ಎಂದು ರೇಗಿದ ಮೇಲೆಯೇ ಅಮ್ಮ ಸುಮ್ಮನಾಗಿದ್ದು. ಸುಮ್ಮನಾಗುವ ಮುಂಚೆ "ಗಂಡ ಹೆಂಡತಿ ಗಲಾಟೆ ಏನಾದ್ರೂ ಇರಲಿ. ಮಗಳು ಹುಷಾರಿಲ್ಲಾಂತನಾದ್ರೂ ಬರಬಾರದಾ?" ಎಂದು ಗೊಣಗಿಕೊಂಡರು. 

ಬೆಳಿಗ್ಗೆ ಎದ್ದವಳೇ ಮೊಬೈಲ್‌ ಕೈಗೆತ್ತಿಕೊಂಡು ʻಮಗಳನ್ನು ನೋಡೋಕಂತೂ ಬರಲಿಲ್ಲ. ಕೊನೇ ಪಕ್ಷ ಬಂದು ಕೈಗೊಂದಷ್ಟು ದುಡ್ಡಾದರೂ ಕೊಟ್ಟು ಹೋಗಿ. ರಾಮ್‌ಪ್ರಸಾದ್‌ಗೆ ಹಣ ವಾಪಸ್ಸು ಮಾಡಬೇಕು. ಅಪ್ಪನಿಗೂ ದುಡ್ಡು ಕೊಡೋದಿದೆʼ ಎಂದು ಮೆಸೇಜು ಮಾಡಿದೆ. ಪ್ರತಿಕ್ರಿಯೆ ಬರಲಿಲ್ಲ. ಬರುವ ನಿರೀಕ್ಷೆಯೂ ಇರಲಿಲ್ಲ. ಹಣ ತೆಗೆದುಕೊಂಡೂ ಇವರು ಬರದೇ ಹೋದಲ್ಲಿ ಶಶಿ ಹತ್ರ ದುಡ್ಡು ತೆಗೆದುಕೊಂಡು ರಾಮ್‌ಪ್ರಸಾದ್‌ಗೆ ಕೊಟ್ಟುಬಿಡಬೇಕು ಎಂದುಕೊಂಡೆ. ಮಗಳು ಲವಲವಿಕೆಯಿಂದಿದ್ದಳು. ʻಡ್ಯೂಟಿಗೆ ಹೋಗ್ಲಾ ಪುಟ್ಟʼ ಎಂದಿದ್ದಕ್ಕೆ ಹು ಎಂಬಂತೆ ತಲೆಯಾಡಿಸಿದ್ದಳು. "ಇವತ್ತೊಂದಿನ ರಜಾ ಹಾಕಂಡಿದ್ರಾಗ್ತಿರಲಿಲ್ಲವಾ" ಎಂಬ ಅಮ್ಮನ ಸಲಹೆಗೆ ಅಪ್ಪ "ಅವಳಿಗೆಂಗಿದ್ರೂ ಮಗು ನೋಡ್ಕೊಳ್ಳೋಕ್‌ ಬರಲ್ವಲ್ಲೇ. ಅವಳಿದ್ದು ಏನಾಗಬೇಕಿದೆ. ನೀನಿದೀಯಲ್ಲ ಎಕ್ಸ್ಪರ್ಟು" ಎಂದು ನಗಾಡಿದ್ದರು. "ನಾನು ಅಂದ್ರೆ ನಿಮ್ಮಲ್ರಿಗೂ ಸಸಾರ" ಅಮ್ಮ ನಕ್ಕು ನುಡಿದಿದ್ದಳು. ತಿಂಡಿ ತಿನ್ನುವ ಹೊತ್ತಿಗೆ ರಾಜೀವ ಮನೆಗೆ ಬಂದು ಮಗಳ ಬಳಿ ಹೋಗಿ ಹೆಸರಿಗೊಮ್ಮೆ ಮಾತನಾಡಿಸಿ ಅಲ್ಲೇ ಟೀಪಾಯಿಯ ಮೇಲೆ ದುಡ್ಡಿಟ್ಟು ಹೊರಟುಹೋದರು. ನನ್ನ ಜೊತೆ ಒಂದು ಮಾತಿಲ್ಲದೆ, ತಿಂಡಿ ತಿನ್ನಿ ಅಂದ ಅಮ್ಮನ ಮಾತಿಗೂ ಉತ್ತರ ನೀಡದೆ ಹೊರಟು ಹೋದರು. ಕೋಪದಲ್ಲಿ ನನ್ನ ಡೆಬಿಟ್‌ ಕಾರ್ಡನ್ನೂ ಇಟ್ಟುಬಿಟ್ಟಿದ್ದಾರೋ ಏನೋ ಎಂದುಕೊಂಡು ಟೀಪಾಯಿಯ ಕಡೆಗೆ ಕಣ್ಣಾಡಿಸಿದೆ. ಇರಲಿಲ್ಲ. ಹಣ ಮಾತ್ರವಿತ್ತು. 

ಮೇ 10, 2020

ಒಂದು ಬೊಗಸೆ ಪ್ರೀತಿ - 64

ರಾಧ ಬೇಗ ಚೇತರಿಸಿಕೊಂಡಳು. ವಾಂತಿ ಪೂರ್ತಿ ನಿಂತು ಹೋಗಿತ್ತು. ಚೂರ್‌ ಚೂರ್‌ ಭೇದಿಯಾಗುತ್ತಿತ್ತು. ಅಮ್ಮ ತಂದ ಅಷ್ಟೂ ಗಂಜಿಯನ್ನು ತಿಂದು ಮುಗಿಸಿದ್ದಳು. ಜೊತೆಗೊಂದು ಸೇಬಿನಹಣ್ಣು ತಿಂದಳು. ಸಾಕಷ್ಟು ನೀರು ಕುಡಿದಳು. ಪ್ರಶಾಂತ್‌ ಡಾಕ್ಟರ್‌ ಹನ್ನೊಂದರಷ್ಟೊತ್ತಿಗೆ ರೌಂಡ್ಸಿಗೆ ಬಂದವರು. "ಆರಾಮಿದ್ದಾಳಲ್ಲ ಮಗಳು. ಸಾಕಿನ್ನು ಆಸ್ಪತ್ರೆ. ನಿಮಗೇ ಗೊತ್ತಿರುತ್ತಲ್ಲ. ಆಸ್ಪತ್ರೆಯಲ್ಲೇ ಅರ್ಧ ಹೊಸ ಹೊಸ ಖಾಯಿಲೆ ಶುರುವಾಗಿಬಿಡ್ತವೆ ಈಗೆಲ್ಲ. ಡಿಸ್ಚಾರ್ಜ್‌ ಮಾಡಿಸಿಕೊಂಡು ಹೋಗಿ. ಬೇಕಿದ್ರೆ ಇವತ್ತೊಂದಿನ ವ್ಯಾಸೋಫಿಕ್ಸ್‌ ಇರಲಿ. ಜಾಸ್ತಿ ಏನೂ ತಿನ್ನಲಿಲ್ಲ ಕುಡಿಯಲಿಲ್ಲ ಅಂದ್ರೆ ಮನೆಯಲ್ಲೇ ಒಂದು ಐ.ವಿ ಹಾಕೊಳ್ಳಿ. ಬೇಕಾಗಲ್ಲ. ಇರಲಿ ಒಂದು ದಿನದ ಮಟ್ಟಿಗೆ" ಎಂದೇಳಿ ಹೋದರು. 

ಅಪ್ಪ ಹೋಗಿ ಉಳಿಕೆ ಬಿಲ್ಲು, ಫಾರ್ಮಸಿಯ ಬಿಲ್ಲನ್ನು ಕಟ್ಟಿ ಬರುವಷ್ಟರಲ್ಲಿ ಡಿಸ್ಚಾರ್ಜ್‌ ಸಮ್ಮರಿ ತಯಾರಾಗಿತ್ತು. ಹನ್ನೆರಡರಷ್ಟೊತ್ತಿಗೆ ಆಸ್ಪತ್ರೆಯಿಂದ ಹೊರಟೆವು. 

"ನಿಮ್ಮ ಮನೆಗ್ಯಾಕೆ ನಮ್ಮಲ್ಲೇ ಇರಲಿ. ನಿನಗೆಲ್ಲಿ ಗಂಜಿ ಅಂಬಲಿ ಎಲ್ಲಾ ನೆಟ್ಟಗೆ ಮಾಡೋಕೆ ಬರ್ತದೆ" ಅಮ್ಮನ ಮಾತಿಗೆ ನಾನು ಅಪ್ಪ ನಕ್ಕೆವು. ಅಮ್ಮನ ಮನೆಗೇ ಮಗಳನ್ನು ಕರೆದುಕೊಂಡು ಹೋದೆ. ಮಗಳ ಬಟ್ಟೆ ಬರೆ ವಗೈರೆಗಳೆಲ್ಲವೂ ನಮ್ಮ ಮನೆಯಲ್ಲೇ ಇದ್ದುವಲ್ಲ. ಮಗಳು ಇನ್ನೊಂದು ಸ್ವಲ್ಪ ಗಂಜಿ ಕುಡಿದು ಮಲಗಿದ ಮೇಲೆ ಮನೆ ಕಡೆ ಹೋಗಿ ಬರ್ತೇನೆ ಎಂದ್ಹೇಳಿ ಹೊರಟೆ. ಮನೆ ತಲುಪಿ ನಿನ್ನೆ ಮಾಡಿದ್ದ ಅಡುಗೆಯ ಪಾತ್ರೆಗಳನ್ನೆಲ್ಲ ತೊಳೆದಿಡುವಾಗ ರಾಜೀವನ ಫೋನು ಬಂತು "ಎಲ್ಲಿದ್ದೀಯಾ? ಯಾವ ರೂಮು?" 

ʻರೂಮಾ?! ನಾವಾಗಲೇ ಡಿಸ್ಚಾರ್ಜ್‌ ಮಾಡಿಸಿಕೊಂಡು ಮನೆಗೆ ಬಂದೊ!ʼ 

"ಡಿಸ್ಚಾರ್ಜ್‌ ಮಾಡಿಸಿಕೊಂಡೋದ್ರ..... ಎಲ್ಲಿದ್ದೀರಾ ಈಗ?" 

ʻಅಮ್ಮನ ಮನೆಗೆ ಹೋದೆವು. ರಾಧ ಅಲ್ಲೇ ಮಲಗಿದ್ದಾಳೆ. ನಾ ಮನೆಗೆ ಬಂದೆ, ಒಂದಷ್ಟು ಬಟ್ಟೆ ಬರೆ ಮಾತ್ರೆಗಳನ್ನೆಲ್ಲ ತೆಗೆದುಕೊಂಡು ಹೋಗಬೇಕಿತ್ತುʼ 

"ಸರಿ ಬರ್ತೀನಿರು ಅಲ್ಲಿಗೇ" 

ಪಾತ್ರೆ ತೊಳೆದಿಟ್ಟು ಸ್ಟೌವ್‌ ಒರೆಸಿ ಮಗಳ ಬಟ್ಟೆ, ನನ್ನವೊಂದೆರಡು ಜೊತೆ ಬಟ್ಟೆ ಜೋಡಿಸಿಕೊಳ್ಳುವಾಗ ರಾಜೀವ ಮನೆಗೆ ಬಂದರು. ಬಾಗಿಲು ತೆಗೆದು ಒಂದೂ ಮಾತನಾಡದೆ ರೂಮಿನೊಳಗೋದೆ.