ಮೇ 24, 2020

ಒಂದು ಬೊಗಸೆ ಪ್ರೀತಿ - 65

ರಾಜೀವ ಅವತ್ತು ರಾತ್ರಿಯಾದರೂ ಬರಲಿಲ್ಲ. ಫೋನೂ ಮಾಡಲಿಲ್ಲ. ಮನೆಯಲ್ಲಿ ಅಮ್ಮ ಎಲ್ಲಿ ಅವರು ಎಲ್ಲಿ ಅವರು? ಎಂದು ಕೇಳಿದ್ದೇ ಕೇಳಿದ್ದು. ʻಅವರ ನಂಬರ್‌ ನಿಮ್ಮತ್ರವೇ ಇದ್ಯಲ್ಲ. ನೀವೇ ಫೋನ್‌ ಮಾಡಿ ವಿಚಾರಿಸಿಕೊಳ್ಳಿʼ ಎಂದು ರೇಗಿದ ಮೇಲೆಯೇ ಅಮ್ಮ ಸುಮ್ಮನಾಗಿದ್ದು. ಸುಮ್ಮನಾಗುವ ಮುಂಚೆ "ಗಂಡ ಹೆಂಡತಿ ಗಲಾಟೆ ಏನಾದ್ರೂ ಇರಲಿ. ಮಗಳು ಹುಷಾರಿಲ್ಲಾಂತನಾದ್ರೂ ಬರಬಾರದಾ?" ಎಂದು ಗೊಣಗಿಕೊಂಡರು. 

ಬೆಳಿಗ್ಗೆ ಎದ್ದವಳೇ ಮೊಬೈಲ್‌ ಕೈಗೆತ್ತಿಕೊಂಡು ʻಮಗಳನ್ನು ನೋಡೋಕಂತೂ ಬರಲಿಲ್ಲ. ಕೊನೇ ಪಕ್ಷ ಬಂದು ಕೈಗೊಂದಷ್ಟು ದುಡ್ಡಾದರೂ ಕೊಟ್ಟು ಹೋಗಿ. ರಾಮ್‌ಪ್ರಸಾದ್‌ಗೆ ಹಣ ವಾಪಸ್ಸು ಮಾಡಬೇಕು. ಅಪ್ಪನಿಗೂ ದುಡ್ಡು ಕೊಡೋದಿದೆʼ ಎಂದು ಮೆಸೇಜು ಮಾಡಿದೆ. ಪ್ರತಿಕ್ರಿಯೆ ಬರಲಿಲ್ಲ. ಬರುವ ನಿರೀಕ್ಷೆಯೂ ಇರಲಿಲ್ಲ. ಹಣ ತೆಗೆದುಕೊಂಡೂ ಇವರು ಬರದೇ ಹೋದಲ್ಲಿ ಶಶಿ ಹತ್ರ ದುಡ್ಡು ತೆಗೆದುಕೊಂಡು ರಾಮ್‌ಪ್ರಸಾದ್‌ಗೆ ಕೊಟ್ಟುಬಿಡಬೇಕು ಎಂದುಕೊಂಡೆ. ಮಗಳು ಲವಲವಿಕೆಯಿಂದಿದ್ದಳು. ʻಡ್ಯೂಟಿಗೆ ಹೋಗ್ಲಾ ಪುಟ್ಟʼ ಎಂದಿದ್ದಕ್ಕೆ ಹು ಎಂಬಂತೆ ತಲೆಯಾಡಿಸಿದ್ದಳು. "ಇವತ್ತೊಂದಿನ ರಜಾ ಹಾಕಂಡಿದ್ರಾಗ್ತಿರಲಿಲ್ಲವಾ" ಎಂಬ ಅಮ್ಮನ ಸಲಹೆಗೆ ಅಪ್ಪ "ಅವಳಿಗೆಂಗಿದ್ರೂ ಮಗು ನೋಡ್ಕೊಳ್ಳೋಕ್‌ ಬರಲ್ವಲ್ಲೇ. ಅವಳಿದ್ದು ಏನಾಗಬೇಕಿದೆ. ನೀನಿದೀಯಲ್ಲ ಎಕ್ಸ್ಪರ್ಟು" ಎಂದು ನಗಾಡಿದ್ದರು. "ನಾನು ಅಂದ್ರೆ ನಿಮ್ಮಲ್ರಿಗೂ ಸಸಾರ" ಅಮ್ಮ ನಕ್ಕು ನುಡಿದಿದ್ದಳು. ತಿಂಡಿ ತಿನ್ನುವ ಹೊತ್ತಿಗೆ ರಾಜೀವ ಮನೆಗೆ ಬಂದು ಮಗಳ ಬಳಿ ಹೋಗಿ ಹೆಸರಿಗೊಮ್ಮೆ ಮಾತನಾಡಿಸಿ ಅಲ್ಲೇ ಟೀಪಾಯಿಯ ಮೇಲೆ ದುಡ್ಡಿಟ್ಟು ಹೊರಟುಹೋದರು. ನನ್ನ ಜೊತೆ ಒಂದು ಮಾತಿಲ್ಲದೆ, ತಿಂಡಿ ತಿನ್ನಿ ಅಂದ ಅಮ್ಮನ ಮಾತಿಗೂ ಉತ್ತರ ನೀಡದೆ ಹೊರಟು ಹೋದರು. ಕೋಪದಲ್ಲಿ ನನ್ನ ಡೆಬಿಟ್‌ ಕಾರ್ಡನ್ನೂ ಇಟ್ಟುಬಿಟ್ಟಿದ್ದಾರೋ ಏನೋ ಎಂದುಕೊಂಡು ಟೀಪಾಯಿಯ ಕಡೆಗೆ ಕಣ್ಣಾಡಿಸಿದೆ. ಇರಲಿಲ್ಲ. ಹಣ ಮಾತ್ರವಿತ್ತು. 

ಮೇ 10, 2020

ಒಂದು ಬೊಗಸೆ ಪ್ರೀತಿ - 64

ರಾಧ ಬೇಗ ಚೇತರಿಸಿಕೊಂಡಳು. ವಾಂತಿ ಪೂರ್ತಿ ನಿಂತು ಹೋಗಿತ್ತು. ಚೂರ್‌ ಚೂರ್‌ ಭೇದಿಯಾಗುತ್ತಿತ್ತು. ಅಮ್ಮ ತಂದ ಅಷ್ಟೂ ಗಂಜಿಯನ್ನು ತಿಂದು ಮುಗಿಸಿದ್ದಳು. ಜೊತೆಗೊಂದು ಸೇಬಿನಹಣ್ಣು ತಿಂದಳು. ಸಾಕಷ್ಟು ನೀರು ಕುಡಿದಳು. ಪ್ರಶಾಂತ್‌ ಡಾಕ್ಟರ್‌ ಹನ್ನೊಂದರಷ್ಟೊತ್ತಿಗೆ ರೌಂಡ್ಸಿಗೆ ಬಂದವರು. "ಆರಾಮಿದ್ದಾಳಲ್ಲ ಮಗಳು. ಸಾಕಿನ್ನು ಆಸ್ಪತ್ರೆ. ನಿಮಗೇ ಗೊತ್ತಿರುತ್ತಲ್ಲ. ಆಸ್ಪತ್ರೆಯಲ್ಲೇ ಅರ್ಧ ಹೊಸ ಹೊಸ ಖಾಯಿಲೆ ಶುರುವಾಗಿಬಿಡ್ತವೆ ಈಗೆಲ್ಲ. ಡಿಸ್ಚಾರ್ಜ್‌ ಮಾಡಿಸಿಕೊಂಡು ಹೋಗಿ. ಬೇಕಿದ್ರೆ ಇವತ್ತೊಂದಿನ ವ್ಯಾಸೋಫಿಕ್ಸ್‌ ಇರಲಿ. ಜಾಸ್ತಿ ಏನೂ ತಿನ್ನಲಿಲ್ಲ ಕುಡಿಯಲಿಲ್ಲ ಅಂದ್ರೆ ಮನೆಯಲ್ಲೇ ಒಂದು ಐ.ವಿ ಹಾಕೊಳ್ಳಿ. ಬೇಕಾಗಲ್ಲ. ಇರಲಿ ಒಂದು ದಿನದ ಮಟ್ಟಿಗೆ" ಎಂದೇಳಿ ಹೋದರು. 

ಅಪ್ಪ ಹೋಗಿ ಉಳಿಕೆ ಬಿಲ್ಲು, ಫಾರ್ಮಸಿಯ ಬಿಲ್ಲನ್ನು ಕಟ್ಟಿ ಬರುವಷ್ಟರಲ್ಲಿ ಡಿಸ್ಚಾರ್ಜ್‌ ಸಮ್ಮರಿ ತಯಾರಾಗಿತ್ತು. ಹನ್ನೆರಡರಷ್ಟೊತ್ತಿಗೆ ಆಸ್ಪತ್ರೆಯಿಂದ ಹೊರಟೆವು. 

"ನಿಮ್ಮ ಮನೆಗ್ಯಾಕೆ ನಮ್ಮಲ್ಲೇ ಇರಲಿ. ನಿನಗೆಲ್ಲಿ ಗಂಜಿ ಅಂಬಲಿ ಎಲ್ಲಾ ನೆಟ್ಟಗೆ ಮಾಡೋಕೆ ಬರ್ತದೆ" ಅಮ್ಮನ ಮಾತಿಗೆ ನಾನು ಅಪ್ಪ ನಕ್ಕೆವು. ಅಮ್ಮನ ಮನೆಗೇ ಮಗಳನ್ನು ಕರೆದುಕೊಂಡು ಹೋದೆ. ಮಗಳ ಬಟ್ಟೆ ಬರೆ ವಗೈರೆಗಳೆಲ್ಲವೂ ನಮ್ಮ ಮನೆಯಲ್ಲೇ ಇದ್ದುವಲ್ಲ. ಮಗಳು ಇನ್ನೊಂದು ಸ್ವಲ್ಪ ಗಂಜಿ ಕುಡಿದು ಮಲಗಿದ ಮೇಲೆ ಮನೆ ಕಡೆ ಹೋಗಿ ಬರ್ತೇನೆ ಎಂದ್ಹೇಳಿ ಹೊರಟೆ. ಮನೆ ತಲುಪಿ ನಿನ್ನೆ ಮಾಡಿದ್ದ ಅಡುಗೆಯ ಪಾತ್ರೆಗಳನ್ನೆಲ್ಲ ತೊಳೆದಿಡುವಾಗ ರಾಜೀವನ ಫೋನು ಬಂತು "ಎಲ್ಲಿದ್ದೀಯಾ? ಯಾವ ರೂಮು?" 

ʻರೂಮಾ?! ನಾವಾಗಲೇ ಡಿಸ್ಚಾರ್ಜ್‌ ಮಾಡಿಸಿಕೊಂಡು ಮನೆಗೆ ಬಂದೊ!ʼ 

"ಡಿಸ್ಚಾರ್ಜ್‌ ಮಾಡಿಸಿಕೊಂಡೋದ್ರ..... ಎಲ್ಲಿದ್ದೀರಾ ಈಗ?" 

ʻಅಮ್ಮನ ಮನೆಗೆ ಹೋದೆವು. ರಾಧ ಅಲ್ಲೇ ಮಲಗಿದ್ದಾಳೆ. ನಾ ಮನೆಗೆ ಬಂದೆ, ಒಂದಷ್ಟು ಬಟ್ಟೆ ಬರೆ ಮಾತ್ರೆಗಳನ್ನೆಲ್ಲ ತೆಗೆದುಕೊಂಡು ಹೋಗಬೇಕಿತ್ತುʼ 

"ಸರಿ ಬರ್ತೀನಿರು ಅಲ್ಲಿಗೇ" 

ಪಾತ್ರೆ ತೊಳೆದಿಟ್ಟು ಸ್ಟೌವ್‌ ಒರೆಸಿ ಮಗಳ ಬಟ್ಟೆ, ನನ್ನವೊಂದೆರಡು ಜೊತೆ ಬಟ್ಟೆ ಜೋಡಿಸಿಕೊಳ್ಳುವಾಗ ರಾಜೀವ ಮನೆಗೆ ಬಂದರು. ಬಾಗಿಲು ತೆಗೆದು ಒಂದೂ ಮಾತನಾಡದೆ ರೂಮಿನೊಳಗೋದೆ. 

ಮೇ 4, 2020

ಒಂದು ಬೊಗಸೆ ಪ್ರೀತಿ - 63

ಸಿಸ್ಟರ್‌ ಹೋದ ಮೇಲೆ ಹೊರಗೆ ಬಂದು ನೋಡಿದೆ. ರಾಮ್ ಪ್ರಸಾದ್‌ ಅಲ್ಲೇ ಹೊರಗಿದ್ದ ಬೆಂಚಿನಂತ ಕುರ್ಚಿಯ ಮೇಲೆ ಕುಳಿತು ನಿದ್ರೆ ಹೋಗಿದ್ದರು. ಅಯ್ಯೋ ಪಾಪ, ಇವರ ಬಗ್ಗೆ ಸುಖಾಸುಮ್ಮನೆ ಮುನಿಸು ಬೆಳೆಸಿಕೊಂಡಿದ್ನಲ್ಲ. ರಾಜೀವನ ಜೊತೆ ಒಂದಷ್ಟು ಕುಡಿದಿರುವುದು ಬಿಟ್ಟರೆ ನಮಗಿರುವ ಪರಿಚಯ ಅಷ್ಟಕಷ್ಟೇ. ಆಸ್ಪತ್ರೆಯಲ್ಲಿ ಅಪರೂಪಕ್ಕೆ ಸಿಕ್ಕಾಗ ಒಂದು ನಗು, ಒಂದು ಹಾಯ್‌ ಹೊರತುಪಡಿಸಿದರೆ ಮಾತನಾಡಿದ್ದೂ ಇಲ್ಲ. ತೀರ ಇತ್ತೀಚೆಗೆ ನಮ್ಮ ಮನೆಯಲ್ಲೇ ಕುಳಿತು ಕುಡಿಯುತ್ತಿದ್ದುದನ್ನು ನೋಡಿ ಸಿಟ್ಟು ಬಂದ ಮೇಲೆ ಎದುರಿಗೆ ಸಿಕ್ಕಾಗ ಪರಿಚಯದ ನಗು ನಗುವುದನ್ನೂ ಕಡಿಮೆ ಮಾಡಿಬಿಟ್ಟಿದ್ದೆ. ಹತ್ತಿರ ಹೋಗಿ ʼರಾಮ್‌ಪ್ರಸಾದ್‌ʼ ಎಂದು ಕೂಗಿದೆ. ಅರೆನಿದ್ರೆಯಲ್ಲಿದ್ದರೆನ್ನಿಸುತ್ತೆ ಪಟ್ಟಂತ ಎದ್ದು ಬಿಟ್ಟರು. 

"ಈಸ್‌ ಎವೆರಿತಿಂಗ್‌ ಓಕೆ" ಎಂದವರ ದನಿಯಲ್ಲಿ ರಾಧಳ ಕುರಿತು ಕಾಳಜಿಯಿತ್ತು. 

ʼಹು. ಮಗಳು ಮಲಗಿದ್ದಾಳೆ. ಸಿಸ್ಟರ್‌ ಈಗಷ್ಟೇ ಮತ್ತೊಂದು ಡ್ರಿಪ್‌ ಬದಲಿಸಿ ಹೋದರು. ಪುಣ್ಯಕ್ಕೆ ಆಗಿಂದ ವಾಂತಿ ಭೇದಿಯಾಗಿಲ್ಲ. ಅಷ್ಟರಮಟ್ಟಿಗೆ ಹುಷಾರಾದಂತಿದ್ದಾಳೆʼ 

"ಗುಡ್‌ ಗುಡ್.‌ ಹೆಂಗೋ ಸರಿ ಹೋದರೆ ಸಾಕು. ಚಿಕ್ಕ ಮಕ್ಕಳು ಹುಷಾರು ತಪ್ಪಿದರೆ ವಿಪರೀತ ಗಾಬರಿಯಾಗ್ತದೆ" 

ʼಅದ್‌ ಹೌದು. ನೀವ್ಯಾಕೆ ಮನೆಗೆ ಹೋಗದೆ ಇಲ್ಲೇ ಕುಳಿತುಬಿಟ್ರಿʼ 

"ಅಯ್ಯೋ. ನೀವೂ ಒಬ್ಬರೇ ಇದ್ರಲ್ಲ. ಏನಾದ್ರೂ ಬೇಕಾದರೆ ಅಂತ ಇಲ್ಲೇ ಉಳಿದೆ" 

ʼಒಳಗೇ ಇನ್ನೊಂದು ಮಂಚವಿತ್ತಲ್ಲ. ಅಲ್ಲೇ ಮಲಗೋದಲ್ವʼ 

"ಹೇ ಇರಲಿ. ಪರವಾಗಿಲ್ಲ" 

ʼಈಗೇನು ಹುಷಾರಾಗಿದ್ದಾಳಲ್ವ. ನೀವ್‌ ಹೋಗಿ ಮನೆಗೆ. ವೃಥಾ ತೊಂದರೆಯಾಯಿತು ನಮ್ಮಿಂದ ನಿಮಗೆʼ 

"ಅಯ್ಯೋ. ತೊಂದರೆ ಏನಿದೆ. ಮನೆ ಎಲ್ಲಿದೆ. ನಾ ರೂಂ ಮಾಡಿಕೊಂಡಿರೋದು ಇಲ್ಲಿ" 

ʼಓʼ 

ಸಮಯ ನೋಡಿದರು. ಒಂದೂವರೆಯಾಗಿತ್ತು. "ಸರಿ ಆಗಿದ್ರೆ. ನಾ ರೂಮಿಗೆ ಹೋಗಿ ಬರ್ತೀನಿ. ಹೇಗೂ ಹುಷಾರಾಗಿದ್ದಾಳಲ್ಲ. ಏನಾದ್ರೂ ಇದ್ರೆ ಫೋನ್‌ ಮಾಡಿ. ಇಲ್ಲೇ ಕಾಲು ಘಂಟೆ ನನ್ನ ರೂಮಿರೋದು. ಪಟ್ಟಂತ ಬಂದುಬಿಡ್ತೀನಿ" 

ಏಪ್ರಿ 26, 2020

ಒಂದು ಬೊಗಸೆ ಪ್ರೀತಿ - 62

ಪ್ರಶಾಂತ್‌ ನರ್ಸಿಂಗ್‌ ಹೋಮ್‌ ತಲುಪುವಷ್ಟರಲ್ಲಿ ರಾಜೀವ ಆಸ್ಪತ್ರೆಯ ಫಾರ್ಮಸಿಯಲ್ಲಿದ್ದ ತನ್ನ ಗೆಳೆಯನಿಗೆ ನಾ ಬರುವ ವಿಷಯ ತಿಳಿಸಿದ್ದರು. ನಾ ಅಡ್ಮಿಶನ್‌ ಮಾಡಿಸುವಾಗ ಆದರ್ಶ್‌ ಹೆಸರಿನ ಆ ವ್ಯಕ್ತಿ ಬಂದು "ಔಷಧಿ ದುಡ್ಡೆಲ್ಲ ಆಮೇಲ್‌ ಕೊಡೂರಿ ಮೇಡಂ. ಸದ್ಯ ಅಡ್ಮಿಷನ್‌ ದುಡ್ಡು ಕೊಟ್ಟುಬಿಡಿ. ಇಲ್ಲಾಂದ್ರೆ ಸುಮ್ನೆ ತರ್ಲೆ ಮಾಡ್ತಾರೆ ಇಲ್ಲಿ" ಎಂದು ಬಿಟ್ಟಿ ಸಲಹೆ ನೀಡಿದರು. ಅಡ್ಮಿಷನ್ನಿಗೆ ಐದು ಸಾವಿರ ಕಟ್ಟಬೇಕೆಂದರು. ನನ್ನ ಪರ್ಸಿನಲ್ಲಿದ್ದಿದ್ದು ಒಂದೂವರೆ ಸಾವಿರ ರುಪಾಯಿ ಮಾತ್ರ. ಹಿಂಗಿಂಗೆ, ನಾನೂ ಡಾಕ್ಟರ್ರೇ. ಅರ್ಜೆಂಟಲ್ಲಿ ಕಾರ್ಡೆಲ್ಲ ತರೋದು ಮರೆತೆ. ನನ್ನ ಹಸ್ಬೆಂಡು ಬಂದು ಕಟ್ತಾರೆ ಅಂದೆ. ಡಾಕ್ಟರ್‌ ಅಂತ ತಿಳಿದ ಮೇಲೆ ಮುಖದ ಮೇಲೆ ನಗು ತಂದುಕೊಂಡು "ಓಕೆ ಮೇಡಂ. ಟ್ರೀಟ್ಮೆಂಟ್‌ ಹೇಗಿದ್ರೂ ಶುರುವಾಗಿದ್ಯಲ್ಲ. ಆಮೇಲ್‌ ಬಂದ್‌ ಕಟ್ಟಿ. ಸದ್ಯ ಇರೋದನ್ನ ಕಟ್ಟಿರಿ ಸಾಕು ಎಂದರು" 

ರಾಧಳ ಕೈಯಿಗೆ ವ್ಯಾಸೋಫಿಕ್ಸ್‌ ಹಾಕಿ ಐ.ವಿ ಫ್ಲೂಯಿಡ್ಸ್‌ ಶುರು ಮಾಡಿದರು. ಇನ್ನೇನು ವಾಂತಿ ಭೇದಿಗೆ ಹೆಚ್ಚು ಔಷಧಿಯಿಲ್ಲವಲ್ಲ. ದೇಹದ ನೀರಿನಂಶ ಅಪಾಯ ಮಟ್ಟಕ್ಕೆ ಕುಸಿಯದಂತೆ ನೋಡಿಕೊಂಡರೆ ಸಾಕು. ಜ್ವರ ಇದ್ದಿದ್ದರಿಂದ ಒಂದು ಯಾಂಟಿಬಯಾಟಿಕ್‌, ವಾಂತಿಗೊಂದು ಇಂಜೆಕ್ಷನ್‌ ನೀಡಿದರು. ಸುಸ್ತಿನಿಂದ ನಿದ್ರೆ ಹೋಗಿದ್ದಳು ರಾಧ. ಅಲ್ಲಿಂದಲೇ ರಾಜೀವನಿಗೊಂದು ಫೋನು ಮಾಡಿದೆ ಸುಮಾರೊತ್ತು ರಿಂಗಾದ ಬಳಿಕ ಫೋನೆತ್ತಿಕೊಂಡರು. 

ʼಎಲ್ಲಿದ್ದೀರಾ?ʼ 

"ಇಲ್ಲೇ" 

ʼಬಂದ್ರಾʼ 

"ಇಲ್ಲ" 

ʼಯಾಕೆ?ʼ 

"ಯಾಕೋ ಕುಡಿದಿದ್ದು ಜಾಸ್ತಿ ಆದಂಗಿದೆ. ಬರೋಕಾಗಲ್ಲ" 

ಏಪ್ರಿ 19, 2020

ಒಂದು ಬೊಗಸೆ ಪ್ರೀತಿ - 61

ಊಟಿ, ಕೊಡೈ, ಮುನ್ನಾರ್‌, ಕೊಡಗು ನೋಡಿದ್ದ ನನಗಾಗಲೀ ರಾಜೀವನಿಗಾಗಲೀ ಯರ್ಕಾಡು ಅಷ್ಟೇನೂ ಆಕರ್ಷಣೀಯವೆನ್ನಿಸಲಿಲ್ಲ. ಇಲ್ಲೆಲ್ಲ ಇರುವಷ್ಟು ದಟ್ಟ ಕಾಡುಗಳಾಗಲೀ ಕಣ್ಣು ಚಾಚುವವರೆಗೂ ಹರಡಿಕೊಂಡಿರುವ ಟೀ ಕಾಫಿ ಎಸ್ಟೇಟುಗಳಾಗಲೀ ಯರ್ಕಾಡಿನಲ್ಲಿರಲಿಲ್ಲ. ನಮಗೆ ರುಚಿಸದ ಯರ್ಕಾಡು ಮಗಳಿಗೆ ವಿಪರೀತ ಇಷ್ಟವಾಯಿತು. ಕಿರಿಯೂರು ಜಲಪಾತವನ್ನು ಅಚ್ಚರಿಯ ಕಂಗಳಿಂದ ನೋಡಿದಳು, ಅದಕ್ಕಿಂತ ಹೆಚ್ಚು ಇಷ್ಟವಾಗಿದ್ದು ಎಮೆರಾಲ್ಡ್‌ ಕೆರೆಯಲ್ಲಿ ಬೋಟಿಂಗ್‌ ಹೋಗಿದ್ದು. ಕುಣಿದು ಕುಪ್ಪಳಿಸಿದ್ದೇ ಕುಪ್ಪಳಿಸಿದ್ದು. ಸಾಗರನ ಮದುವೆ ಮೂಡಿಸಿದ ಮಿಶ್ರಭಾವಗಳನ್ನು ರಾಧಳ ಖುಷಿ ದೂರಾಗಿಸಿತು. ಅದಕ್ಕಿಂತ ಖುಷಿ ರಾಜೀವ ರಾಧಳೊಡನೆ ಖುಷಿಖುಷಿಯಾಗಿ ಆಟವಾಡಿದ್ದು. ಅಪ್ಪ ಮಗಳು ಹಿಂಗೇ ಇರಬಾರದಾ? 

ಯರ್ಕಾಡಿನಿಂದ ಹೊರಟಾಗ ಮಧ್ಯಾಹ್ನ ಮೂರರ ಮೇಲಾಗಿತ್ತು. 'ಬೆಂಗಳೂರು ತಲುಪೋದೆ ಸುಮಾರೊತ್ತಾಗ್ತದೆ ನಡೀರಿ ನನ್ನ ಕಸಿನ್ ಮನೆಗೆ ಹೋಗಿ ನಾಳೆ ಬೆಳಿಗ್ಗೆ ಹೋಗುವ' ಅಂದಿದ್ದೇ ತಡ ರಾಜೀವನ ಗೊಣಗಾಟ ಸಣ್ಣದಾಗಿ ಶುರುವಾಯಿತು. ತೀರ ಅನಿರೀಕ್ಷಿತವೇನಲ್ಲ! ನಮ್ಮ ಕಡೆಯವರ ಮನೆಗೆ ಹೋಗುವ ಸಂದರ್ಭ ಬಂದಾಗೆಲ್ಲ ರಾಜೀವ ಹಿಂಗಾಡೋದು ಸಾಮಾನ್ಯ! ನಾ ಅವರ ಮನೆಯವರ ಕಡೆಗೆ ಹೋಗುವಾಗ ಆಡ್ತೀನಲ್ಲ ಥೇಟ್ ಹಂಗೆ! ನನ್ನ ಕಸಿನ್ ಮನೆಯಿದ್ದಿದ್ದು ಮಲ್ಲೇಶ್ವರದಲ್ಲಿ. ಹೊಸೂರುವರೆಗೇನೋ ಆರಾಮಾಗಿ ತಲುಪಿಬಿಟ್ಟೊ. ಅಲ್ಲಿಂದ ವಿಪರೀತ ಟ್ರಾಫಿಕ್ಕು. ಎಲೆಕ್ಟ್ರಾನಿಕ್ ಸಿಟಿಗೆ ಬರುವಷ್ಟರಲ್ಲಿ ಸಾಕು ಸಾಕಾಗಿತ್ತು. ಇನ್ನು ಮಲ್ಲೇಶ್ವರಕ್ಕೆ ಹೋಗುವಷ್ಟರಲ್ಲಿ ಮತ್ತಷ್ಟು ಸುಸ್ತಾಗ್ತದೆ. ನೈಸ್ ರೋಡಲ್ ಮೈಸೂರ್ ರಸ್ತೆ ತಲುಪಿ ಮನೆಗೆ ಹೋಗುವ ಅಂತ ರಾಜೀವ ಹೇಳಿದಾಗ ನನಗೂ ಹೌದೆನ್ನಿಸಿತು. ಕಸಿನ್ನಿಗೆ ಫೋನ್ ಮಾಡಿ 'ಸಡನ್ನಾಗಿ ಯಾವ್ದೋ ಅರ್ಜೆಂಟ್ ಕೆಲಸ ಬಂದಿದೆ. ಊರಿಗೆ ಹೊರಟುಬಿಟ್ಟೊ. ಇನ್ನೊಂದ್ಸಲ ಬರ್ತೀವಿ' ಅಂತೊಂದು ನೆಪ ಹೇಳಿ ಅವಳಿಂದ ಒಂದೈದು ನಿಮಿಷ ಬಯ್ಯಿಸಿಕೊಂಡಿದ್ದಾಯಿತು. 

'ಖುಷಿಯೇನಪ್ಪ ಈಗ' ಅಂತ ಕಿಚಾಯಿಸಿದೆ. 

"ಹು. ಡಾರ್ಲಿಂಗ್" ಅಂತ ಕೆನ್ನೆ ಗಿಲ್ಲಿದರು. 

ಏಪ್ರಿ 12, 2020

ಒಂದು ಬೊಗಸೆ ಪ್ರೀತಿ - 60

ಡಾ. ಅಶೋಕ್.‌ ಕೆ. ಆರ್.‌
ರಾಜೀವ ಮೊದಲು ನಾನ್ಯಾಕೆ ಮದುವೆಗೆ? ನೀ ಬೆಳಿಗ್ಗೆ ಹೋಗಿ ಬಂದುಬಿಡು ಸಂಜೆಯಷ್ಟೊತ್ತಿಗೆ ಎಂದು ರಾಗ ಎಳೆದನಾದರೂ ʼನಡೀರಿ. ಹಂಗೆ ಒಂದೆರಡ್‌ ದಿನ ಸುತ್ತಾಡ್ಕಂಡ್‌ ಬರೋಣ. ಅದೇ ಕೆಲಸ ಅದೇ ಮನೆ ಅದದೇ ಜಗಳಗಳು ಬೋರಾಗೋಗಿದೆʼ ಅಂದಿದ್ದಕ್ಕೆ ನಕ್ಕು "ಬೆಂಗಳೂರಿನವರೇ ಇತ್ಲಾಕಡೆಗೆ ಬರ್ತಾರೆ ಸುತ್ತೋಕೆ. ನಾವಿನ್ನೆಲ್ಲಿ ಅಲ್ಲಿ ಸುತ್ತೋದು?" ಎಂದರು. 

ʼಬೆಂಗಳೂರಿಂದ ಇನ್ನೂರ್‌ ಇನ್ನೂರೈವತ್ ಕಿಲೋಮೀಟ್ರು ದೂರದಲ್ಲಿ ಯರ್ಕಾಡ್‌ ಅಂತ ಯಾವ್ದೋ ಜಾಗ ಇದ್ಯಂತೆ. ಚೆನ್ನಾಗಿದೆ ಅಂತಿದ್ರು. ಮದುವೆ ಮುಗ್ಸಿ ಮಧ್ಯಾಹ್ನ ಹೊರಟರೆ ರಾತ್ರಿ ತಲುಪಬಹುದು. ರಾತ್ರಿ ಇದ್ದು ಮಾರನೇ ದಿನ ಅಲ್ಲೇನೇನಿದ್ಯೋ ನೋಡಿಕೊಂಡು ಸಂಜೆಯಂಗೊರಡೋಣ. ಆದ್ರೆ ಅವತ್ತೇ ಮೈಸೂರು ತಲುಪೋಣ. ಇಲ್ಲ ಬೆಂಗಳೂರಲ್ಲಿ ನನ್‌ ಕಸಿನ್‌ ಮನೇಲಿದ್ದು ಮಾರನೇ ದಿನ ಹೊರಟರಾಯಿತುʼ 

"ಅಷ್ಟೆಲ್ಲ ರಜ ಸಿಗುತ್ತಾ ನಿನಗೆ" 

ʼಎಲ್ರೀ! ರಜಾನೇ ಹಾಕಿಲ್ಲ ನಾನು. ಅಕಸ್ಮಾತ್‌ ರಾಧ ಹುಷಾರು ತಪ್ಪಿದರೆ ಅಂತ ಇರೋ ಚೂರುಪಾರು ರಜೆಗಳನ್ನೆಲ್ಲ ಹಂಗೇ ಇಟ್ಟುಕೊಂಡಿದ್ದೀನಿ. ನಿಮಗೆ ಸಿಗುತ್ತಾ?ʼ 

"ನಂದೇನ್‌ ಲಾರ್ಡ್‌ ಲಬಕ್‌ ದಾಸ್‌ ಕೆಲಸ ನೋಡು. ರಜ ಸಿಗದೇ ಹೋದ್ರೆ ರಾಜೀನಾಮೆ ಬಿಸಾಕ್‌ ಬರೋದಪ್ಪ" 

ʼಈ ಅದದೇ ಮಾತುಗಳು ಮರೆಯಾಗ್ಲಿ ಅಂತಲೇ ಈ ಚಿಕ್ಕ ಟ್ರಿಪ್ಪು. ಅಪ್ಪಿ ತಪ್ಪಿ ರಾಜೀನಾಮೆ ಕೊಟ್ಬಿಟ್ಟೀರಾ ಮತ್ತೆ ಈಗ. ನನ್‌ ಪಿಜಿ ಮುಗಿಯೋವರ್ಗಾದ್ರೂ ಕಾಯಿರಿʼ 

"ಅದಕ್ಕೇ ಕಾಯ್ತಿರೋದು ನಾನು" ಅಂತ ಕಣ್ಣು ಹೊಡೆದರು. 

ಏಪ್ರಿ 5, 2020

ಒಂದು ಬೊಗಸೆ ಪ್ರೀತಿ - 59

ʼಏನ್‌ ನಡೀತಿದೆ ಅಂತಲೇ ಗೊತ್ತಾಗ್ತಿಲ್ಲ ಕಣೋʼ ಸಾಗರನಿಗೆ ಬಹಳ ದಿನಗಳ ನಂತರ ನಾನೇ ಮೊದಲಾಗಿ ಮೆಸೇಜು ಮಾಡಿದೆ. ಬ್ಯುಸಿ ಇದ್ನೋ ಏನೋ ಸುಮಾರೊತ್ತು ಮೆಸೇಜಿಗೆ ಪ್ರತಿಕ್ರಿಯೆ ಬರಲಿಲ್ಲ. ಎರಡು ಮೂರು ಘಂಟೆಯೇ ಆಗಿಹೋಯಿತೇನೋ. ನಾ ಕೂಡ ಆಸ್ಪತ್ರೆಯ ಕೆಲಸದಲ್ಲಿ ತೊಡಗಿಕೊಂಡುಬಿಟ್ಟಿದ್ದೆ. ಊಟದ ಸಮಯದಲ್ಲಿ ಮೊಬೈಲು ಆಚೆ ತೆಗೆದಾಗ "ಏನಾಯ್ತೇ?" ಎಂದವನ ಮೆಸೇಜು ಬಂದಿತ್ತು. ಆನ್‌ ಲೈನ್‌ ಇದ್ದ. 

ರಾಜೀವ ಮಗಳ ಜೊತೆ ನಡೆದುಕೊಳ್ಳುವ ರೀತಿಯನ್ನೆಲ್ಲ ಹೇಳಿಕೊಂಡೆ. ಅವನಿಗೋ ಅಚ್ಚರಿ. "ಅಲ್ವೇ ಇಬ್ರೂ ಮಗು ಬೇಕು ಅಂತಂದುಕೊಂಡು ತಾನೇ ಮಕ್ಕಳು ಮಾಡಿಕೊಂಡಿದ್ದು, ಮಕ್ಕಳು ಮಾಡಿಕೊಳ್ಳಲು ಟ್ರೀಟ್ಮೆಂಟ್‌ ತೆಗೆದುಕೊಂಡಿದ್ದು. ಈಗೇನಂತೆ?" 

ʼಮ್.‌ ಏನಂತ ಹೇಳಲಿ. ಅವರಿಗೆ ಮೈಸೂರಲ್ಲಿರೋದೇ ಇಷ್ಟವಿಲ್ಲ. ಬೆಂಗಳೂರಿಗೆ ಹೋಗುವ ಬೆಂಗಳೂರಿಗೆ ಹೋಗುವ ಅಂತ ಒಂದೇ ಸಮನೆ ಗೋಳು ಮದುವೆಯಾದಾಗಿಂದʼ 

"ಅಲ್ಲಾ ಅವರಿಗೆ ಅಷ್ಟೊಂದು ಇಷ್ಟ ಇದ್ರೆ, ಬೆಂಗಳೂರಿಗೆ ಬರದೇ ಇರುವುದರಿಂದಲೇ ಈ ತೊಂದರೆ ಎಲ್ಲಾ ಅಂದರೆ ಬಂದೇ ಬಿಡಿ ಬೆಂಗಳೂರಿಗೆ" 

ʼಬರಬಾರದು ಅಂತ ನನಗೂ ಇಲ್ಲ ಕಣೋ. ಬರೀ ಎಂಬಿಬಿಎಸ್‌ ಡಿಗ್ರಿ ಇಟ್ಕಂಡು ಬರೋ ಮನಸ್ಸು ನನಗಿರಲಿಲ್ಲ. ಈಗ ಡಿ.ಎನ್.ಬಿ ಸೇರಾಗಿದೆ. ಇನ್ನೇನು ಮುಗಿದೇ ಹೋಗುತ್ತೆ. ಅದಾದ ಮೇಲೆ ಹೋಗುವ ಅಂತ ಹೇಳಿದ್ದೆ. ಸರಿ ಅಂತಲೂ ಅಂದಿದ್ದರು. ಈಗ ನೋಡಿದ್ರೆ ಹಿಂಗೆ. ಮೂರೊತ್ತೂ ಕುಡಿತ, ತುಂಬಾನೇ ಜಾಸ್ತಿ ಮಾಡ್ಕೊಂಡಿದ್ದಾರೆ ಕುಡಿಯೋದನ್ನ. ಅದೆಂಗಾದ್ರೂ ಹಾಳಾಗೋಗ್ಲಿ ಅಂದರೆ ಬಾಯಿಗೆ ಬಂದಂಗೆ ಮಾತುʼ 

ಮಾರ್ಚ್ 29, 2020

ಒಂದು ಬೊಗಸೆ ಪ್ರೀತಿ - 58

ಬಹಳ ದಿನಗಳ ನಂತರ ಆಸ್ಪತ್ರೆಯಲ್ಲಿ "ಭಾನುವಾರ ರಜೆ ತಕೋ ಹೋಗಮ್ಮ" ಅಂದಿದ್ರು. ಅಮ್ಮನ ಮನೆಯಲ್ಲಿದ್ದು ಕೂಡ ತುಂಬಾ ದಿನವಾಗಿತ್ತಲ್ಲ ಎಂದು ಶನಿವಾರವೇ ಅಮ್ಮನ ಮನೆಗೆ ಹಾಜರಾಗಿಬಿಟ್ಟೆ. ಏನೇ ಅಮ್ಮನ ಮನೆ ಅಂದ್ರೂ ಅಪರೂಪಕ್ಕೆ ಹೋದಾಗ ಸಿಗೋ ಮರ್ಯಾದೆಯೇ ಬೇರೆ! ರಾಜೀವನಿಗೂ ʼಬನ್ರೀ ಹೋಗುವʼ ಎಂದಿದ್ದೆ. "ಇಲ್ಲ, ನನಗೆ ಕೆಲಸವಿದೆ. ನೀ ಹೋಗಿರು" ಎಂದು ಸಾಗ ಹಾಕಿದ್ದರು. ಇನ್ನೇನು ಕೆಲಸ? ಗೆಳೆಯರೊಟ್ಟಿಗೆ ಸೇರಿ ಕುಡಿಯೋದು ಅಷ್ಟೇ! ಬಹಳ ದಿನಗಳ ನಂತರ ಮಗಳು ಮನೆಯಲ್ಲುಳಿಯುತ್ತಿದ್ದಾಳೆಂದು ಅಪ್ಪ ಒಂದೆರಡು ಕೆಜಿ ಚಿಕನ್‌ ತಂದಿದ್ದರು. ಹೆಚ್ಚು ಕಡಿಮೆ ನಾ ಹೋಗುವಷ್ಟೊತ್ತಿಗೆ ಸೋನಿಯಾ ಅಮ್ಮ ಸೇರಿಕೊಂಡು ಒಂದು ಕೆಜಿಯಷ್ಟು ಚಿಕನ್ನನ್ನು ಚಾಪ್ಸ್‌ ಮಾಡಿದ್ದರು. ಇನ್ನುಳಿದ ಒಂದು ಕೆಜಿ ಚಿಕನ್‌ ನನ್ನ ಬರುವಿಕೆಗಾಗಿ ಕಾಯುತ್ತಿತ್ತು. ಬಿರಿಯಾನಿಯಾಗಲು ಬಿರಿಯಾನಿ ಸ್ಪೆಷಲಿಸ್ಟ್‌ಗೆ ಕಾಯುತ್ತಿತ್ತು. "ಫ್ರೈ ಏನಾದ್ರೂ ಮಾಡಿ. ಬಿರಿಯಾನಿ ಮಾತ್ರ ನನ್ನ ಮಗಳೇ ಬಂದು ಮಾಡಬೇಕು" ಎಂದು ತಾಕೀತು ಮಾಡಿದ್ದರಂತೆ. ʼಏನೋ ಅಪ್ರೂಪಕ್ಕೆ ಅಮ್ಮನ ಮನೆಗೆ ಬಂದರೆ ನನ್ನ ಬಿರಿಯಾನಿ ಮಾಡೋಳನ್ನಾಗಿ ಮಾಡ್ಬಿಟ್ರಲ್ಲʼ ಎಂದು ನಗಾಡುತ್ತಾ ಮಗಳನ್ನೆತ್ತಿ ಮುತ್ತಿಟ್ಟು ಅಪ್ಪನ ಬಳಿ ಬಿಟ್ಟು ಅಡುಗೆ ಮನೆಗೆ ಹೋದೆ. ಅಮ್ಮ ಅವರ ದೂರದ ನೆಂಟರ ವಿಷಯಗಳೇನನ್ನೋ ಹೇಳುತ್ತಿದ್ದರು. ಅವರಲ್ಲರ್ಧ ಜನ ಯಾರ್ಯಾರು ಅಂತ ನನಗೆ ಗೊತ್ತೇ ಇರಲಿಲ್ಲ. ಆದರೂ ಎಲ್ಲಾ ಗೊತ್ತಾದವಳಂತೆ ಹೂ ಹೂ ಎಂದು ತಲೆದೂಗುತ್ತಿದ್ದೆ. ನನಗೇ ಅರ್ಥವಾಗದ ಮೇಲೆ ಇನ್ನು ಸೋನಿಯಾಗೇನು ಅರ್ಥವಾಗಬೇಕು! ಸುಮ್ನೆ ತಲೆತಗ್ಗಿಸಿಕೊಂಡು ಮೊಸರುಬಜ್ಜಿಗೆ ಈರುಳ್ಳಿ ಟೊಮೋಟೊ ಕತ್ತರಿಸುತ್ತಿದ್ದಳು. "ಈ ಅತ್ತೆ ಏನ್‌ ಹಿಂಗ್‌ ತಲೆ ತಿಂತಾರೆ" ಅಂತ ಮನಸ್ಸಲ್ಲೇ ಅಂದುಕೊಳ್ಳುತ್ತಿದ್ದಳೋ ಏನೋ. ಅತ್ತೆಯಷ್ಟೇ ಯಾಕೆ? ನಮ್ಮ ಮನೆಯಲ್ಲಿ ನಾನು, ಅಮ್ಮ, ಅಪ್ಪ ಎಲ್ಲಾ ಮಾತೋ ಮಾತು. ಶಶೀನೇ ಮುಂಚಿಂದಾನೂ ಗೂಬೆ ತರ, ಮಾತಿರಲ್ಲ, ಕತೆ ಇರಲ್ಲ ಅವನದು. ಹೂ, ಸರಿ, ಇಲ್ಲ, ಆಯ್ತುಗಳಲ್ಲೇ ದಿನ ದೂಡಿಬಿಡ್ತಾನೆ! ಕುಕ್ಕರ್‌ ಮುಚ್ಚಳ ಮುಚ್ಚಿ ವಿಷಲ್‌ ಮೇಲಿಟ್ಟು ʼಏನ್‌ ಇವತ್ತು ಇಷ್ಟೊತ್ತಾದರೂ ಆಸ್ಪತ್ರೆಯಿಂದ ಯಾರೂ ಯಾವುದಕ್ಕೂ ಫೋನೇ ಮಾಡಲಿಲ್ಲವಲ್ಲʼ ಎಂದುಕೊಳ್ಳುತ್ತಾ ವ್ಯಾನಿಟಿ ಬ್ಯಾಗ್‌ ತೆರೆದು ನೋಡಿದರೆ ಎಲ್ಲಿದೆ ಫೋನು? ಎಲ್ಲೋ ಬಿಟ್ಟು ಬಂದುಬಿಟ್ಟಿದ್ದೀನಿ. ಎಲ್ಲಿ? ಆಸ್ಪತ್ರೆಯಿಂದ ಬರುವಾಗ ತಂದಿದ್ದೆ. ಮನೆಗೆ ತಲುಪಿ ಹತ್ತು ನಿಮಿಷದಲ್ಲಿ ಆಸ್ಪತ್ರೆಯಿಂದ ಫೋನು ಬಂದಿತ್ತು. ಫೋನು ರಿಸೀವ್‌ ಮಾಡಿದ ಮೇಲೆ ಬ್ಯಾಟರಿ ಕಡಿಮೆಯಾಗಿದೆ ಎನ್ನುವುದರಿವಾಗಿ ಚಾರ್ಜಿಗೆ ಇಟ್ಟೆ. ಚಾರ್ಜಿಗೆ ಇಟ್ಟವಳು ಅಲ್ಲೇ ಬಿಟ್ಟು ಬಂದೆ! ಶಶಿ ಫೋನ್‌ ತೆಗೆದುಕೊಂಡು ರಾಜೀವನಿಗೆ ಫೋನ್‌ ಮಾಡಿದೆ, ಒಂದು ಸಲ, ಎರಡು ಸಲ, ಮೂರು ಸಲ. ಫೋನ್‌ ರಿಸೀವೇ ಮಾಡಲಿಲ್ಲ. ಎಲ್ಲೋ ಹೊರಗೆ ಗಾಡಿ ಓಡಿಸ್ತಿದ್ದಾರೋ ಏನೋ. 

ಮಾರ್ಚ್ 25, 2020

ದಿ ಕ್ಯೂರಿಯಸ್‌ ಕೇಸ್‌ 1: ಟ್ಯಾಕ್ಸೋಪ್ಲಾಸ್ಮ ಮತ್ತು ಇಲಿ.

ಡಾ. ಅಶೋಕ್.‌ ಕೆ. ಆರ್ 
ಸದ್ಯಕ್ಕೆ ಎಲ್ಲಿ ನೋಡಿದರೂ ಕೊರೋನಾದೇ ಸುದ್ದಿ. ಹಂಗಾಗಿ ಕೊರೋನಾ ಮೂಲಕವೇ ಈ ಕೇಸನ್ನು ಪ್ರಾರಂಭಿಸೋಣ. ಈ ಕೊರೋನಾ ಎಂಬ ವೈರಸ್ಸು ನಮ್ಮ ದೇಹ ಪ್ರವೇಶಿಸಿದಾಗ ಏನಾಗ್ತದೆ? ಕೊರೋನಾ ಇನ್‌ಫೆಕ್ಷನ್ನಿನಿಂದ ಸದ್ಯಕ್ಕೆ ಮನುಷ್ಯರಲ್ಲಿ ಸಾಮಾನ್ಯವಾಗಿ ಕಂಡುಬರುವ ರೋಗಲಕ್ಷಣಗಳೆಂದರೆ ಜ್ವರ, ನೆಗಡಿ, ಕೆಮ್ಮು, ಭೇದಿ. ನಮ್ಮ ಸದ್ಯದ ತಿಳುವಳಿಕೆಯ ಪ್ರಕಾರ ಈ ರೀತಿಯ ರೋಗಲಕ್ಷಣಗಳಿಗೆ ಕಾರಣ ವೈರಸ್ಸಿಗೆ ಪ್ರತಿರೋಧ ತೋರುವ ನಮ್ಮ ದೇಹದ ರಕ್ಷಣಾ ವ್ಯವಸ್ಥೆ, ಅಂದರೆ ಇಮ್ಯುನಿಟಿ ಸಿಸ್ಟಮ್ಮು. ವೈರಸ್ಸನ್ನು ದೇಹದಿಂದ ಹೊರಗೋಡಿಸುವ ನಿಟ್ಟಿನಲ್ಲಿ ದೇಹ ತನ್ನೆಲ್ಲಾ ಪ್ರಯತ್ನವನ್ನೂ ಈ ಇಮ್ಯುನಿಟಿ ವ್ಯವಸ್ಥೆಯ ಮೂಲಕ ಮಾಡಲೆತ್ನಿಸುತ್ತದೆ. ಈ ಪ್ರತಿರೋಧ ಕಡಿಮೆ ಇದ್ದರೆ ‍ಶ್ವಾಸಕೋಶದೊಳಗೆ ನುಗ್ಗುವ ವೈರಸ್ಸುಗಳು ನಿಧಾನಕ್ಕೆ ಮನುಷ್ಯನನ್ನು ಸಾವಿನಂಚಿಗೆ ದೂಡುತ್ತದೆ. 

ಇದಿಷ್ಟೂ ಮನುಷ್ಯನ ದೃಷ್ಟಿಯಿಂದ ವೈರಸ್ಸಿನ ದಾಳಿಯನ್ನು ಕಂಡಾಗ ಅರ್ಥವಾಗುವ ಸಂಗತಿಗಳು. ಅದೇ ಕಣ್ಣಿಲ್ಲದ ವೈರಸ್ಸಿನ ದೃಷ್ಟಿಯಿಂದ ನೋಡಿದರೆ? ವೈರಸ್ಸಿಗೆ ನಮ್ಮಗಳ ಹಾಗೆ ಮನೆ ಕಟ್ಟು, ಬೈಕ್‌ ತಗೋ, ಕಾರ್‌ ತಗೋ, ಮೊಬೈಲ್‌ ತಗೋ, ಇಪ್ಪತ್ತೈದು ದಾಟಿದ ಮೇಲೆ ಮದುವೆಯಾಗು, ಮನಸ್ಸಾದರೆ ಒಂದೋ ಎರಡೋ ಮಕ್ಕಳು ಮಾಡಿಕೋ, ಸೆಟಲ್‌ ಆಗು ಅನ್ನೋ ಯೋಚನೆಗಳೆಲ್ಲ ಇರೋದಿಲ್ಲ. ಪ್ರಕೃತಿಯ ಲೆಕ್ಕದಲ್ಲಿ ವೈರಸ್ಸಿಗಿರುವ ಒಂದೇ ಒಂದು ಗುರಿ ಸಾಧ್ಯವಾದಷ್ಟು ತನ್ನ ಬಳಗವನ್ನು ಹೆಚ್ಚಿಸಿಕೊಳ್ಳುತ್ತ ಪರಿಸರದಲ್ಲಿ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳುವುದು ಮಾತ್ರ! ಮನುಷ್ಯನ ದೇಹದೊಳಗೆ ಪ್ರವೇಶಿಸುತ್ತಿದ್ದಂತೆ ವೈರಸ್ಸು ತನ್ನ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುತ್ತದೆ. ಒಬ್ಬ ಮನುಷ್ಯನಲ್ಲಿ ತನ್ನ ಸಂಖೈಯನ್ನು ಹೆಚ್ಚಿಸಿಕೊಂಡರೆ ಸಾಕಾಗುವುದಿಲ್ಲವಲ್ಲ? ಮತ್ತಷ್ಟು ಅಭಿವೃದ್ಧಿಯಾಗಲು ಆ ಮನುಷ್ಯನಿಂದ ಬಿಡುಗಡೆಯಾಗಿ ಮತ್ತೊಬ್ಬ ಮನುಷ್ಯನನ್ನು ಅಪ್ಪಿಕೊಳ್ಳುವ ಅನಿವಾರ್ಯತೆ ವೈರಸ್ಸಿಗೆ. ಆಗ ವೈರಸ್ಸು ಮನುಷ್ಯನ ದೇಹದ ರಕ್ಷಣಾ ವ್ಯವಸ್ಥೆಯನ್ನು ತನ್ನ ಸುಪರ್ದಿಗೆ ತೆಗೆದುಕೊಂಡು ʻನೋಡಪ್ಪಾ ಇಮ್ಯುನಿಟಿ. ಈಗ ನೀನೇನು ಮಾಡಬೇಕಂದ್ರೆ ವಿಪರೀತ ಯಾಕ್ಟೀವ್‌ ಆಗು. ಆಗ್ಬಿಟ್ಟು ನಿನ್ನ ಹಳೆ ಯಜಮಾನ ಮನುಷ್ಯ ಕೆಮ್ಮುವಂತೆ ಮಾಡು, ಸಿಂಬಳ ಸುರಿಯುವಷ್ಟು ನೆಗಡಿ ಬರಿಸು, ಸೀನುವಂಗೆ ಮಾಡು, ವಾಂತಿ ಭೇದಿಯಾಗುವಂತೆ ನೋಡಿಕೊ. ನಾ ಆರಾಮ್ವಾಗಿ ನನ್ನ ಸಂಖೈ ಹೆಚ್ಚಿಸಿಕೊಳ್ತೀನಿʼ ಅಂತ ತಾಕೀತು ಮಾಡುತ್ತದೆ. ವೈರಸ್ಸಿಗೆ ಸಂಪೂರ್ಣ ಶರಣಾಗತವಾದ ನಮ್ಮ ದೇಹದ ಇಮ್ಯುನಿಟಿ ವ್ಯವಸ್ಥೆ ವೈರಸ್ಸಿನ ಆಜ್ಞೆಗೆ ತಲೆಬಾಗುತ್ತಾ ಅದೇಳಿದ್ದನ್ನೆಲ್ಲವನ್ನೂ ಚಾಚೂ ತಪ್ಪದೆ ಪಾಲಿಸುತ್ತದೆ. ವೈರಸ್ಸಿಗೂ ಪಾಪ ಮನುಷ್ಯನನ್ನು ಸಾಯಿಸುವ ಉದ್ದೇಶವಿರುವುದಿಲ್ಲ. ಸತ್ತ ಮನುಷ್ಯನಿಗಿಂತ ನಿರಂತರವಾಗಿ ಕೆಮ್ಮುತ್ತಾ ಸೀನುತ್ತಾ ಸಿಂಬಳ ಸುರಿಸುತ್ತಿರುವ ಮನುಷ್ಯನೇ ವೈರಸ್ಸಿಗೆ ಹೆಚ್ಚು ಪ್ರಿಯ. ವೈರಸ್ಸಿನ ದೃಷ್ಟಿಯಲ್ಲಿ ಮನುಷ್ಯನ ಸಾವಿಲ್ಲಿ ಕೊಲ್ಯಾಟರಲ್‌ ಡ್ಯಾಮೇಜ್‌ ಅಷ್ಟೇ! 

ಮಾರ್ಚ್ 22, 2020

ಒಂದು ಬೊಗಸೆ ಪ್ರೀತಿ - 57

ನಾಮಕರಣ ಹುಟ್ಟಿದ ಹಬ್ಬ ಮುಗಿದ ಮೇಲೆ ಹೆಚ್ಚು ದಿನ ಕಾಯದೆ ನಮ್ಮ ಪುಟ್ಟ ಮನೆಗೆ ಸಾಮಾನು ಸಾಗಿಸಿದೆ. ಮಗಳ ಸಾಮಾನೇ ರಾಶಿಯಾಗಿತ್ತು. ಅರ್ಧ ನಮ್ಮ ಮನೆಗೆ ಸಾಗಿಸಿ ಇನ್ನರ್ಧ ಅಮ್ಮನ ಮನೆಯಲ್ಲೇ ಇಟ್ಟೆ. ಅಮ್ಮನ ಮನೆಯಲ್ಲಿ ದಿನಕ್ಕರ್ಧ ದಿನ ಇರ್ತಾಳಲ್ಲ ಮಗಳು. ರಾಜೀವನಿಗೆ ನಾ ಮನೆಗೆ ಹಿಂದಿರುಗುವುದು, ಇಷ್ಟು ಬೇಗ ಹಿಂದಿರುಗುವುದು ನೆಚ್ಚಿನ ಸಂಗತಿಯೇನಾಗಿರಲಿಲ್ಲ. ʼಇಷ್ಟು ಬೇಗ ಯಾಕೆ? ಇನ್ನಷ್ಟು ದಿನ ಕಳೀಲಿ ಬಿಡುʼ ಎಂದು ಪದೇ ಪದೇ ಹೇಳುತ್ತಲೇ ಇದ್ದರು. ಎಲ್ಲ ಕಾರಣವನ್ನೂ ಅವರಿಗೆ ಬಿಡಿಸಿ ಬಿಡಿಸಿ ಹೇಳುವುದಕ್ಕಾಗ್ತದಾ? ಒಂದಷ್ಟು ಜಗಳ ಮಾಡಿಕೊಂಡೇ ಮನೆಗೆ ಬಂದೆ. ಅಮ್ಮ ನಾ ಹೋಗೋದನ್ನೇ ಕಾಯ್ತಿದ್ದಿದ್ದೇನೋ ಹೌದು, ಆದರೆ ಹೊರಟ ಮೊದಲ ದಿನ ರಾತ್ರಿ ನನಗೆ ನಿದ್ರೆ ಬರುವವರೆಗೂ ಐದೈದು ನಿಮಿಷಕ್ಕೊಮ್ಮೆ ಫೋನು ಮಾಡಿ ವಿಚಾರಿಸಿಕೊಳ್ಳುತ್ತಿದ್ದರು. “ಬೆಳಿಗ್ಗೆ ಬೇಗ ಕರೆತಂದುಬಿಡು, ಪಾಪ ರಾಧ, ನಮಗೆಲ್ಲ ಒಗ್ಗಿ ಹೋಗಿದ್ದಳು. ಈಗ ನಾವ್ಯಾರೂ ಕಾಣದೇ ಹೋದರೆ ಬೇಸರಿಸಿಕೊಳ್ತದೆ” ಎಂದರು. ʼಸರಿ ಅಮ್ಮ. ಫೋನ್‌ ಇಡು. ನಿದ್ರೆ ಬರ್ತಿದೆʼ ಎಂದು ಫೋನಿಟ್ಟ ಮರುಕ್ಷಣವೇ ಮತ್ತೆ ಫೋನ್‌ ರಿಂಗಣಿಸಿತು “ತಿಂಡಿ ಎಲ್ಲ ಮಾಡಿಕೊಳ್ಳೋಕ್‌ ಹೋಗ್ಬೇಡ. ಇಲ್ಲೇ ಬಂದ್ಬಿಡಿ”. ನಾನೆಲ್ಲಿ ತಿಂಡಿ ಎಲ್ಲಾ ಮಾಡ್ಕೋತೀನಿ ಅಂದಿದ್ದೆ? ಮನೇಲ್ಯಾವ ಸಾಮಾನೂ ಇಲ್ಲ ತಿಂಡಿ ಮಾಡಬೇಕೆಂದರೆ. ಒಂದಷ್ಟು ಹಣ್ಣು ತರಕಾರಿ ತಂದಿಡಿ ಅಂತ ಇವರಿಗೆ ಹೇಳಿದ್ದೇ ಬಂತು. ಏನೂ ತಂದಿರಲಿಲ್ಲ. ಕೊನೆಗೆ ಮಗಳು ಮಧ್ಯರಾತ್ರಿ ಎದ್ದರೆ ಕುಡಿಸಲೊಂದಷ್ಟು ಹಾಲಾದರೂ ತೆಗೆದುಕೊಂಡು ಬನ್ನಿ ಎಂದ್ಹೇಳಿದ್ದಾಯಿತು. ಇರೋ ಹಾಲಲ್ಲಿ ತಿಂಡಿ ಏನ್‌ ಮಾಡ್ಕೋತಿದ್ದೆ ಬೆಳಿಗ್ಗೆ ಬೆಳಿಗ್ಗೆ? ಇನ್ನೂ ಒಂದಷ್ಟು ತಿಂಗಳು ಅಮ್ಮನ ಮನೆಯಲ್ಲೇ ತಿಂಡಿ ಊಟ, ಕೊನೇ ಪಕ್ಷ ಸಾರಂತೂ ಅಮ್ಮನ ಮನೆಯದ್ದೇ ಹೌದು.