ಅಕ್ಟೋ 29, 2015

ದಲಿತ ಜಾತಿ ಹುಟ್ಟಿದ್ದು ಸಾಬರಿಂದ: ಬಿಜೆಪಿ ವಕ್ತಾರ

bizoy sonkar shastri
ಬಿಜೆಪಿಯ ವಕ್ತಾರ ಬಿಝಯ್ ಸಂಕರ ಶಾಸ್ತ್ರಿ ಹೊಸದೊಂದು ವಿಚಾರವನ್ನು 'ಕಂಡು ಹಿಡಿದಿದ್ದಾರೆ'. ಭಾರತದಲ್ಲಿ ದಮನಿತ ದಲಿತ ಜಾತಿ ಹುಟ್ಟಿದ್ದೇಗೆ ಎನ್ನುವುದರ ಕುರಿತು ಬೆಳಕು ಚೆಲ್ಲಿದ್ದಾರೆ. ಎಲ್ಲದಕ್ಕೂ ಮುಸ್ಲಿಮರೇ ಕಾರಣ ಎನ್ನುವ ಸಿದ್ಧಾಂತವನ್ನು ನಂಬುವಂತೆ ಮಾತನಾಡುವ ಬಿಜೆಪಿಯವರಾದ ಬಿಝಯ್ ಅವರ ಅಧ್ಯಯನದ ಪ್ರಕಾರ ಸಾಬರು ಬರುವುದಕ್ಕೆ ಮುಂಚೆ ಭಾರತದಲ್ಲಿದ್ದ ಬ್ರಾಹ್ಮಣರು ದೇಶದ ಸಂಸ್ಕೃತಿ ಮತ್ತು ಧರ್ಮವನ್ನು ರಕ್ಷಿಸುವುದರಲ್ಲಿ ನಿರತರಾಗಿದ್ದರೆ ಕ್ಷತ್ರಿಯರು ಭಾರತದ ಗಡಿಯ ರಕ್ಷಣೆಯಲ್ಲಿ ಬ್ಯುಸಿಯಾಗಿದ್ದರು. ಆಗ ಬಂದ ಸಾಬರು ಈ ಬ್ರಾಹ್ಮಣ ಮತ್ತು ಕ್ಷತ್ರಿಯರ ಮೇಲೆ ಭಯಂಕರವಾಗಿ ಹಲ್ಲೆ ನಡೆಸಿ ಅವರು ಇಸ್ಲಾಮಿಗೆ ಮತಾಂತರವಾಗುವಂತೆ ಮಾಡಿದರಂತೆ. ಧರ್ಮ ಮತ್ತು ತಮ್ಮ ಕುಲದ ಬಗ್ಗೆ ಅಪಾರ ಭಯ ಭಕ್ತಿ ಇಟ್ಟುಕೊಂಡಿದ್ದ ಕೆಲವು ಬ್ರಾಹ್ಮಣರು ಮತ್ತು ಕ್ಷತ್ರಿಯರು ಮತಾಂತರವಾಗಲು ಒಪ್ಪಲಿಲ್ಲವಂತೆ. ಇವರ ಆತ್ಮಾಭಿಮಾನವನ್ನು ತೊಡೆದು ಹಾಕುವ ಕಾರಣಕ್ಕೆ ಮುಸ್ಲಿಮರು ಇವರಿಗೆ ಮಲ ಹೊರುವ ಕೆಲಸವನ್ನು ಮತ್ತು ಪ್ರಾಣಿ ಚರ್ಮವನ್ನು ಹದಗೊಳಿಸುವ ಕೆಲಸವನ್ನು ಮಾಡಿಸಿದರಂತೆ. ಇಂತಹ ಕೆಲಸ ಮಾಡುವವರು ಪರಿಶಿಷ್ಟ ಜಾತಿಯವರಾದರೆಂದು ಬಿಝಯ್ ರವರ ಅಭಿಪ್ರಾಯ! ಸಾಬರು ದಾಳಿ ನಡೆಸಿದಾಗ ಕೆಲವು ಬ್ರಾಹ್ಮಣರು ಮತ್ತು ಕ್ಷತ್ರಿಯರು ಬೆಟ್ಟಗಳಿಗೆ ಓಡಿ ಹೋದರಂತೆ; ಅವರೇ ಇವತ್ತಿರುವ ಪರಿಶಿಷ್ಟ ಪಂಗಡದವರಂತೆ!
ಇಂತಹ ಬ್ರಹಸ್ಪತಿಗಳ ಮಾತುಗಳನ್ನು ಕೇಳಿದಾಗ ಯಾವ ಯಾವ ಕಡೆಯಿಂದ ನಗಬೇಕೋ ಗೊತ್ತಾಗುವುದಿಲ್ಲ. ಮನುಷ್ಯ ಮೂಲತಃ ಕಾಡುವಾಸಿ, ನಂತರ ಕಾಡು ಕಡಿದು ಕಾಡು ತೊರೆದು ಊರುಗಳನ್ನು ನಿರ್ಮಿಸಿದಾತ ಎನ್ನುವಷ್ಟೂ ಸಾಮಾನ್ಯ ಜ್ಞಾನ ಇವರಿಗೆ ಇರುವುದಿಲ್ಲವಾ? ಸಾಬರ ದಾಳಿಯಲ್ಲಿ ಮತಾಂತರಗೊಳ್ಳದೇ ಇರುವವರೆಲ್ಲ ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿಕೊಂಡುಬಿಟ್ಟಿದ್ದರೆ ಇವತ್ತು ಭಾರತದ ಬಹುಭಾಗದಲ್ಲಿ ಮುಸ್ಲಿಮರು ಮತ್ತು ದಲಿತರಷ್ಟೇ ಇರಬೇಕಿತ್ತಲ್ಲವೇ? ಅದೇಕೆ ಇನ್ನೂ ಇಲ್ಲಿ ಬ್ರಾಹ್ಮಣರಿದ್ದಾರೆ? ಕ್ಷತ್ರಿಯರಿದ್ದಾರೆ? ಇವರ ಅಧ್ಯಯನದಲ್ಲಿ ಶೂದ್ರರೇ ಇಲ್ಲವಲ್ಲ! ಶೂದ್ರ ಜಾತಿಯ ಹುಟ್ಟಿಗೆ ಕಾರಣಗಳಾವುದು? ಬಹುಶಃ ಕ್ರಿಶ್ಚಿಯನ್ನರ ದಾಳಿಯಿಂದ ಶೂದ್ರ ಸಮುದಾಯ ಹುಟ್ಟಿರಬಹುದು! ಒಂದು ಕ್ಷಣ ಇವರ ನಗೆಪಾಟಲಿನ ಹೇಳಿಕಗಳನ್ನೆಲ್ಲ ಒಪ್ಪಿಕೊಂಡುಬಿಡೋಣ. ಸಾಬರೇ ದಲಿತ ಜಾತಿಯ ಹುಟ್ಟಿಗೆ ಕಾರಣ ಎಂದು ನಂಬೋಣ. ದಲಿತ ಜಾತಿಯನ್ನು ಹುಟ್ಟಿಸಿದ ಸಾಬರಿಗೆ ದಲಿತರನ್ನು ಕಂಡರೆ ಅಸ್ಪ್ರಶ್ಯ ಮನೋಭಾವವಿಲ್ಲ. ಆ ಅಸ್ಪ್ರಶ್ಯ ಮನೋಭಾವ ಇರೋದು ಬ್ರಾಹ್ಮಣ, ಕ್ಷತ್ರಿಯ ಮತ್ತು ಶೂದ್ರರಿಗೆ. ದಲಿತ ಜಾತಿಯವರೆಲ್ಲ ಬ್ರಾಹ್ಮಣ ಮತ್ತು ಕ್ಷತ್ರಿಯ ಜಾತಿಯಿಂದಲೇ ಬಂದವರೆಂದ ಮೇಲೆ ಈ ಜಾತಿಯವರಿಗೇ ದಲಿತರ ಮೇಲಿರುವ ಅಸ್ಪ್ರಶ್ಯತೆ ಅಚ್ಚರಿ ಮೂಡಿಸುವ ವಿಷಯವಲ್ಲವೇ?! ಸಾಬರ ಮೇಲೆ ಎಲ್ಲದಕ್ಕೂ ಗೂಬೆ ಕೂರಿಸುವ ಪ್ರಯತ್ನದ ಜೊತೆಜೊತೆಗೆ ದಲಿತರಿಗೆ 'ನೋಡಿ ನೀವು ಬ್ರಾಹ್ಮಣ ಮತ್ತು ಕ್ಷತ್ರಿಯ ಜಾತಿಯ ಪೂರ್ವಜರಿಂದ ಬೇರ್ಪಟ್ಟವರು. ನೀವು ಸಾಬರ ಹತ್ತಿರ ಚೆನ್ನಾಗಿರಬಾರದು' ಎಂದು ಬ್ರೈನ್ ವಾಶ್ ಮಾಡುವ ಹುನ್ನಾರವೇ? ಉಳಿದವರ ಬಗ್ಗೆ ಗೊತ್ತಿಲ್ಲ ಬಿಜೆಪಿಯ ವಕ್ತಾರ ಬಿಝಯ್ ರವರ ತಲೆಯಂತೂ ಚೆನ್ನಾಗಿ ತೊಳೆಯಲ್ಪಟ್ಟಿದೆ!
ಸುದ್ದಿಮೂಲ: ದಿಹಿಂದೂ

ಅಕ್ಟೋ 27, 2015

Amazon, don't make us 'bankrupt'

Dear Amazon,
I have been seeing your ads in many kannada newspapers from past 2 days. 'The Great Indian Sale' in view of Deepavali festival is appreciable for all those purchasers who wait for the 'deals'. I am very much disappointed with those advertisements. The festival of lights is termed as 'Diwali' in your ads. Though this festival is famous as Diwali in Non Karnataka states it is called as Deepavali in Karnataka. Use of the word 'Diwali' in Karnataka is really absurd because the word 'Diwali' in Kannada means 'bankrupt'! You should have a team to understand the local language and use local language properly before placing ads in News papers of that particular state. Or do you really mean that whoever purchases in Amazon will go 'bankrupt'? If that is the case then please continue with the present ads or make proper arrangements to change the ads. Thought of purchasing few items this time but seeing your callousness towards the Local Language i won't be purchasing anything this time.
Happy Deepavali in advance.
With Regards,
Kannadiga.

Copy and send this to amazon customer service: click here
amazon india facebook page: click here

ಅಕ್ಟೋ 23, 2015

ಕಾಣೆಯಾಗಿದ್ದಾರೆ: ಕೆ.ಜೆ.ಜಾರ್ಜ್, ಗೃಹಮಂತ್ರಿಗಳು ಕರ್ನಾಟಕ.

ಕರ್ನಾಟಕದಲ್ಲಿ ಹಿಂಸೆಯ ಚಕ್ರ ಯಶಸ್ವಿಯಾಗಿ ತಿರುಗಲಾರಂಭಿಸಿದೆ. ಜಾತಿ ಮತ್ತು ಧರ್ಮದ ಕಾರಣಕ್ಕೆ ತಿರುಗಲಾರಂಭಿಸಿರುವ ಈ ಹಿಂಸೆಯ ಚಕ್ರ ನಿಲ್ಲುವ ಯಾವ ಸೂಚನೆಯೂ ಕಾಣುತ್ತಿಲ್ಲ. ಹಿಂಸೆಯನ್ನು ತಡೆಯಲಾರದ ಪೋಲೀಸ್ ಇಲಾಖೆಯ ವೈಫಲ್ಯದಿಂದ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕಿದ್ದ ಜಾರ್ಜ್ ಎನ್ನುವ ನಾಲಾಯಕ್ ಗೃಹಮಂತ್ರಿ ಎಷ್ಟು ಜನರು ರೇಪ್ ಮಾಡಿದರೆ ಗ್ಯಾಂಗ್ ರೇಪ್ ಎಂಬುದರ ಬಗ್ಗೆ ಅಧ್ಯಯನ ನಡೆಸುವುದರಲ್ಲಿ ಬ್ಯುಸಿಯಾಗಿದ್ದಾರೆ ಎಂದು ನಂಬಲನರ್ಹವಾದ ಮೂಲಗಳಿಂದ ತಿಳಿದು ಬಂದಿದೆ. ಈ ಗೃಹಮಂತ್ರಿಯ ಉಸ್ತುವಾರಿಲ್ಲಿ ಇಬ್ಬರು ಪೋಲೀಸರೂ ಕಳ್ಳರಿಂದ ಹತ್ಯೆಯಾಗಿಬಿಟ್ಟರು. ಪೋಲೀಸರ ನೈತಿಕ ಸ್ಥೈರ್ಯ ಹೆಚ್ಚಿಸುವ ಮಾತುಗಳನ್ನು ಇವರಿಂದಾಗಲೀ ಅಥವಾ ಇವರ ಮೇಲಿರುವ ಸಿದ್ಧರಾಮಯ್ಯನವರಿಂದಾಗಲೀ ಕೇಳಿ ಬರಲೇ ಇಲ್ಲ. ಹಾಡು ಹಗಲೇ ಪುಡಿಗಳ್ಳರಿಂದ ರೌಡಿಗಳಿಂದ ಪೋಲೀಸರು ಹತ್ಯೆಯಾಗುವ ಸಮಾಜದಲ್ಲಿ ಕಾನೂನು ಸುವ್ಯವಸ್ಥೆ ಇದೆಯೇ?

ಡಾ.ಎಂ.ಎಂ.ಕಲಬುರ್ಗಿಯವರ ಹತ್ಯೆಯಾಗಿ ತಿಂಗಳುಗಳೇ ಕಳೆಯಿತು. ಆರೋಪಿಗಳು ಪತ್ತೆಯಾಗಲಿಲ್ಲ. ಅವರ ಹತ್ಯೆಯ ಸಮರ್ಥಕರು ಕೇಕೆ ಹಾಕಿ ನಗುತ್ತಿದ್ದಾರೆ. ಕೆ.ಎಸ್.ಭಗವಾನರಿಗೆ ಬೆದರಿಕೆಯ ಮೇಲೆ ಬೆದರಿಕೆ ಬರುತ್ತಿವೆ. ಬೆದರಿಕೆ ಹಾಕಿದವರ‍್ಯಾರು ಎನ್ನುವುದೇ ಗೊತ್ತಾಗುತ್ತಿಲ್ಲ. ಪೇಜಾವರ ಸ್ವಾಮೀಜಿಗಳ ಕಾರಿನ ಮೇಲೆ ಹಾಡಹಗಲೇ ಕಲ್ಲು ತೂರಲಾಗುತ್ತದೆ, ಅವರ ಬಂಧನವೂ ಸಾಧ್ಯವಾಗಿಲ್ಲ. ಧರ್ಮದ ಹುಳುಕುಗಳನ್ನು ಎತ್ತಿ ತೋರುವ ಲೇಖಕರ ವಿರುದ್ಧ ಕತ್ತಿ ಮಸೆಯುವವರ ಸಂಖೈ ಹೆಚ್ಚಾಗಿದೆ. ಪೋಲೀಸರ ಮತ್ತು ಸರಕಾರದ ನಿಷ್ಕ್ರಿಯತೆ ಇಂತಹ ಮತಾಂಧರಿಗೆ ಮತ್ತಷ್ಟು ಮಗದಷ್ಟು ಹಲ್ಲೆ ನಡೆಸುವ ಆ ಮೂಲಕ ಧರ್ಮರಕ್ಷಕರ ಪಟ್ಟ ಕಟ್ಟಿಕೊಳ್ಳುವಂತೆ ಪ್ರೇರೇಪಿಸುತ್ತಿದೆ. ಕಲಬುರ್ಗಿಯವರ ಹತ್ಯೆಯಾದ ಸ್ಥಳದಿಂದ ನೂರು ಕಿಮಿ ದೂರದಲ್ಲಿ ಉಚ್ಛಂಗಿ ಪ್ರಸಾದ್ ಎಂಬ ಯುವಕನ ಮೇಲೆ ಹಲ್ಲೆಯಾಗಿದೆ. ಕಾರಣ ‘ಒಡಲ ಕಿಚ್ಚು’ ಎಂಬ ಕವನ ಸಂಕಲನದಲ್ಲಿ ಹಿಂದೂ ಧರ್ಮದ ಜಾತಿ ಪದ್ಧತಿಯ ವಿರುದ್ಧ ಉಚ್ಛಂಗಿ ಪ್ರಸಾದ್ ಕಿಡಿಕಾರಿರುವುದು. ಇನ್ನೊಮ್ಮೆ ಹೀಗೆಲ್ಲ ಬರೆದ್ರೆ ಬೆರಳುಗಳಿರೋರಿದಿಲ್ಲ ಬರೆಯೋದಕ್ಕೆ ಎಂದು ಧಮಕಿ ಹಾಕಿ ಹೋಗಿದ್ದಾರೆ. ಶೋಷಿತ ದಲಿತನೊಬ್ಬ ಜಾತಿಯ ವಿರುದ್ಧ ಬರೆಯೋದು ಇವರಿಗೆ ಧರ್ಮ ವಿರೋಧದ ಘಟನೆಯಾಗಿ ಕಾಣಿಸುತ್ತದೆ! ಇನ್ನು ಮೂಡಬಿದರೆಯಲ್ಲಿ ಕಸಾಯಿಖಾನೆಯ ವಿರುದ್ಧ ಹೋರಾಟ ರೂಪಿಸುತ್ತಿದ್ದ ಭಜರಂಗದಳದ ಕಾರ್ಯಕರ್ತ ಪ್ರಶಾಂತ್ ಪೂಜಾರಿಯನ್ನು ಮತಿಗೆಟ್ಟ ಮುಸ್ಲಿಮರು ಕೊಂದುಹಾಕಿದ್ದಾರೆ. ಆ ಹತ್ಯೆಗೆ ಸಾಕ್ಷಿಯಾದವನು ಹೆಚ್ಚೇನು ಕಾರಣವಿಲ್ಲದೆ ಆತ್ಮಹತ್ಯೆ ಮಾಡಿಕೊಂಡುಬಿಡುತ್ತಾನೆ. ಪುಣ್ಯಕ್ಕೆ ಕೋಮುಗಲಭೆಯ ವಿಷಯದಲ್ಲಿ ಒಂದಷ್ಟು ಸೋಮಾರಿತನ ತೋರುವ ದಕ್ಷಿಣ ಕನ್ನಡ ಪೋಲೀಸರು ಈ ಪ್ರಕರಣದಲ್ಲಿ ಹಂತಕರನ್ನು ಶೀಘ್ರವಾಗಿ ಬಂಧಿಸಿದ್ದಾರೆ.

ರಾಜ್ಯದಲ್ಲಿ ವ್ಯವಸ್ಥಿತವಾಗಿ ಹಲ್ಲೆಗಳು, ಹತ್ಯೆಗಳು, ಅತ್ಯಾಚಾರಗಳು ನಡೆಯುತ್ತಿರುವಾಗ ಅದರ ಬಗ್ಗೆ ಪ್ರತಿಕ್ರಯಿಸುವ, ಪೋಲೀಸರನ್ನು ಚುರುಕುಗೊಳಿಸಿ ಜನರ ನಂಬಿಕೆಯನ್ನು ಉಳಿಸಿಕೊಳ್ಳುವ ಕೆಲಸ ಮಾಡಬೇಕಾದ ಗೃಹಮಂತ್ರಿಗಳು ‘ಇಬ್ರು ರೇಪ್ ಮಾಡಿದ್ರೆ ಗ್ಯಾಂಗ್ ರೇಪ್ ಅಲ್ಲ ಕಣ್ರೀ’ ಎಂದು ಅಸಂಬದ್ಧವಾಗಿ ಮಾತನಾಡುತ್ತಾರೆ. ಇದನ್ನು ನಖಶಿಖಾಂತ ವಿರೋಧಿಸಬೇಕಾದ ವಿರೋಧ ಪಕ್ಷದ ಮುಖಂಡ ಈಶ್ವರಪ್ಪ ‘ನಿನ್ನನ್ನು ಹೊತ್ಕೊಂಡು ಹೋಗಿ ರೇಪ್ ಮಾಡುದ್ರೆ ನಾವೇನ್ ಮಾಡೋಕಾಗುತ್ತಮ್ಮ’ ಎಂದು ನುಡಿಮುತ್ತು ಉದುರಿಸುತ್ತಾರೆ. ಕಲಬುರ್ಗಿ ಹತ್ಯೆಯ ಬಗ್ಗೆ ಮಾತೇ ಆಡದ ಬಿಜೆಪಿಯವರು ತಮಗೆ ಅನುಕೂಲವೆನ್ನಿಸುವ ಪ್ರಶಾಂತ್ ಪೂಜಾರಿಯ ಬಗ್ಗೆ ಬೊಬ್ಬೆ ಹೊಡೆಯುತ್ತಾರೆ. ಇನ್ನು ನಾಡಿನ ಅಹಿಂದೋದ್ಧಾರಕ ಸಿದ್ಧರಾಮಯ್ಯ ‘ಕೆಲ್ಸ ಮಾಡ್ರೀ ಕೆಲ್ಸ ಮಾಡ್ರೀ’ ಎನ್ನುತ್ತಲೇ ತಮ್ಮ ಶಕ್ತಿ ವ್ಯಯಿಸುತ್ತಾರೆ. ಒಟ್ಟಿನಲ್ಲಿ ಕರ್ನಾಟಕ ಉದ್ಧಾರ.

ಅಕ್ಟೋ 20, 2015

ದಲಿತರ ಮೇಲೆ ದೌರ್ಜನ್ಯವೆಸಗಲು ಇವಕ್ಕೊಂದು ನೆಪ ಬೇಕಷ್ಟೇ.

hulivana atrocity on dalits
Dr Ashok K R
ಕಳೆದ ತಿಂಗಳು ಮಂಡ್ಯ ಜಿಲ್ಲೆಯ ಹುಲಿವಾನದಲ್ಲಿ ಜಾತಿ ಗಲಭೆ ನಡೆಯುತ್ತದೆ. ಪತ್ರಿಕೆಗಳಲ್ಲಿ ಸಣ್ಣ ಕಾಲಮ್ಮುಗಳಲ್ಲಿ ಅಂತರಜಾತಿ ವಿವಾಹದಿಂದ ಸವರ್ಣೀಯರು ಮತ್ತು ದಲಿತರ ನಡುವೆ ಘರ್ಷಣೆ ಎಂದು ವರದಿಯಾಗುತ್ತದೆ. ಪತ್ರಿಕಾ ವರದಿಗಳು ಅಂತರಜಾತಿ ವಿವಾಹವಾಗದೇ ಇದ್ದಿದ್ದರೆ ಗಲಭೆ ನಡೆಯುತ್ತಿರಲಿಲ್ಲ ಎನ್ನುವ ದನಿಯಲ್ಲಿರುತ್ತವೆ. ಮಂಡ್ಯದ ಸನ್ಮಾನ್ಯ ಶಾಸಕರಾದ ಮಂತ್ರಿಗಳೂ ಆದ ಅಂಬರೀಶ್ ರವರು ಹತ್ತು ದಿನದ ವಿರಾಮದ ನಂತರ ಹುಲಿವಾನಕ್ಕೆ ಹೋಗಿ ಬರುತ್ತಾರೆ. ದೊಡ್ಡ ಮಟ್ಟದ ಗಲಭೆಯೊಂದು ಸುದ್ದಿಯೇ ಆಗದೆ ಸದ್ದೂ ಮಾಡದೆ ದೌರ್ಜನ್ಯಕ್ಕೊಳಗಾದ ದಲಿತರು ಸೂರು ಒಡೆದುಹೋದ ಮನೆಯೊಳಗೆ ಕುಳಿತು ದುಃಖಿಸುವಂತೆ ಮಾಡಿದೆ. ಕೇಸುಗಳನ್ನು ಮೈಮೇಲೆ ಹಾಕಿಸಿಕೊಂಡರೂ ಶ್ರೇಷ್ಟತೆಯ ವ್ಯಸನದಲ್ಲಿ ಮುಳುಗಿಹೋಗಿರುವ ಒಕ್ಕಲಿಗರು ಮತ್ತು ಅವರ ಮರೆಯಲ್ಲಿನ ಲಿಂಗಾಯತರು ತಾವು ಮಾಡಿದ ‘ಘನಕಾರ್ಯಕ್ಕೆ’ ಮೀಸೆ ತಿರುವುತ್ತಿದ್ದಾರೆ. 

ಹುಲಿವಾನದಲ್ಲಿ ನಡೆದದ್ದಾದರೂ ಏನು?

ಹುಲಿವಾನದಲ್ಲೇ ವಾಸವಿರುವ ದಲಿತ ಹುಡುಗ ಮತ್ತು ಲಿಂಗಾಯತ ಹುಡುಗಿ ಪರಸ್ಪರ ಪ್ರೀತಿಸುತ್ತಿದ್ದರು. ಧೈರ್ಯ ಮಾಡಿ ಲಿಂಗಾಯತ ಹುಡುಗಿಯೇ ತನ್ನ ಮನೆಯಲ್ಲಿ ಪ್ರೀತಿಯ ವಿಷಯವನ್ನು ತಿಳಿಸಿದ್ದಾಳೆ. ಶ್ರೇಷ್ಟತೆಯ ವ್ಯಸನದಲ್ಲಿ ಬ್ರಾಹ್ಮಣರನ್ನು ಬಿಟ್ಟರೆ ಲಿಂಗಾಯತರೇ ತಾನೆ? ಪ್ರೀತಿಗೇ ಮನೆಗಳಲ್ಲಿ ವಿರೋಧವಿರುತ್ತೆ, ಇನ್ನು ದಲಿತ ಹುಡುಗನನ್ನು ಪ್ರೀತಿಸುವುದೆಂದರೆ ಲಿಂಗ ಮೆಚ್ಚುವುದೇ? ಮನೆಯಲ್ಲಿ ರಂಪ ರಾಮಾಯಣವಾಗಿದೆ. ಹುಲಿವಾನದ ಲಿಂಗಾಯತರಿಗೆ ನೇರವಾಗಿ ದಲಿತರನ್ನು ಎದುರು ಹಾಕಿಕೊಳ್ಳುವುದು ಕಷ್ಟ. ಕಾರಣ ಹುಲಿವಾನದಲ್ಲಿ ದಲಿತರ ಸಂಖೈಗೆ ಹೋಲಿಸಿದರೆ ಲಿಂಗಾಯತರೇ ಅಲ್ಪಸಂಖ್ಯಾತರು. ಇನ್ನು ಊರಿನಲ್ಲಿ ಬಹುಸಂಖ್ಯಾತರೆಂದರೆ ಒಕ್ಕಲಿಗರು. ಲಿಂಗಾಯತರಿಂದ ಕೀಳೆಂದು ಅನ್ನಿಸಿಕೊಂಡರೂ ದಲಿತರಿಗಿಂತ ಮೇಲೆಂಬ ವ್ಯಸನವನ್ನು ನರನರದಲ್ಲೂ ತುಂಬಿಕೊಂಡಿರುವ ಒಕ್ಕಲಿಗರಿಗೆ ತಮ್ಮ ‘ಪೌರುಷ’ ತೋರಿಸಲು ಇದಕ್ಕಿಂತ ಒಳ್ಳೆಯ ಸಂದರ್ಭ ದಕ್ಕುವುದೆ? ಹಿಂದೂ ಧರ್ಮದ ಚಾತುರ್ವರ್ಣ ಪದ್ಧತಿಯನ್ನು ಉಳಿಸಿ ಬೆಳೆಸುವ ಸುಸಂದರ್ಭವನ್ನು ಬಿಡುವುದುಂಟೆ. ಲಿಂಗಾಯತ ಹುಡುಗಿಯನ್ನು ರಾಜಿ ಪಂಚಾಯಿತಿಗೆ ಕರೆಯಲಾಯಿತು. ಊರ ಪ್ರಮುಖರ ಮುಂದೆಯೂ ನಾನು ಪ್ರೀತಿಸಿದ ಹುಡುಗನನ್ನೇ ಮದುವೆಯಾಗೋದು ಎನ್ನುವ ಹುಡುಗಿಯ ಧೈರ್ಯ ಶ್ರೇಷ್ಟರಿಗೆ ಸಿಟ್ಟು ಬರಿಸದೇ ಇದ್ದೀತೆ. ಸರಿ ದಲಿತರಿಗೆ ‘ಬುದ್ಧಿ’ ಕಲಿಸಬೇಕೆಂದು ಈ ಬುದ್ಧಿಗೇಡಿಗಳು ನಿರ್ಧರಿಸಿದ್ದಾಯಿತು.

atrocity on dalits
ಕತ್ತಲಾಗುತ್ತಿದ್ದಂತೆ ದಲಿತ ಕೇರಿಯ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಲಾಯಿತು. ಒಕ್ಕಲಿಗ ಮತ್ತು ಲಿಂಗಾಯತ ಹುಡುಗರು ಒಂದಷ್ಟು ಜನ ದಲಿತ ಕೇರಿಗೆ ಮುಖ ಮುಚ್ಚಿಕೊಂಡು ಹೋಗಿ ‘ನಮ್ ಮನೆ ಹುಡುಗೀರ ಮೇಲೆ ಕಣ್ಣು ಹಾಕಿದ್ರೆ ಅದು ಕಿತ್ಬಿಡ್ತೀವಿ ಇದು ಕಿತ್ಬಿಡ್ತೀವಿ’ ಎಂದು ಕೂಗಾಡಿದರು. ದಲಿತರು ಪೋಲೀಸರಿಗೆ ಫೋನಿನ ಮುಖಾಂತರ ದೂರು ನೀಡಿದರು. ಪೋಲೀಸರ ಆಗಮನವಾಯಿತು. ಘಟನೆಯ ಗಂಭೀರತೆಯನ್ನು ಅರಿತು ಒಂದು ವ್ಯಾನ್ ಪೋಲೀಸ್ ತುಕಡಿಯನ್ನು ದಲಿತರ ಕೇರಿಯ ಬಳಿಯೇ ನಿಲ್ಲಿಸಲಾಯಿತು. ದಲಿತ ಹುಡುಗ – ಲಿಂಗಾಯತ ಹುಡುಗಿಯನ್ನು ಪೋಲೀಸ್ ಠಾಣೆಗೆ ಕರೆಸಿ ಮಾತನಾಡಲಾಯಿತು. ಇಬ್ಬರೂ ಜೊತೆಗೆ ಬಾಳುವ ನಿರ್ಧಾರ ಮಾಡಿಯಾಗಿತ್ತು. ಪ್ರೌಢ ವಯಸ್ಸಿನವರಿಬ್ಬರು ಪ್ರೀತಿಸಿ ಮದುವೆಯಾಗಿ ಜೊತೆಯಲ್ಲಿರುತ್ತೇವೆಂದರೆ ಪೋಲೀಸರು ಏನು ಮಾಡಲು ಸಾಧ್ಯ. ‘ಸರಿ ಹೋಗ್ರಪ್ಪ. ಮದುವೆಯಾಗಿ ಚೆನ್ನಾಗಿರಿ’ ಎಂದು ಹರಸಿ ಕಳಿಸಿದ್ದಾರೆ. ಇಬ್ಬರೂ ಊರಿಗೆ ಬರದೆ ಪರಾರಿಯಾಗಿದ್ದಾರೆ. ಹುಲಿವಾನದ ಶ್ರೇಷ್ಟರಿಗೆ ಈ ವಿಷಯ ತಿಳಿದು ಮತ್ತಷ್ಟು ಕ್ರುದ್ಧರಾಗಿದ್ದಾರೆ. 

ಗದ್ದೆಗೆ ಹೋಗುವ ದಲಿತರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಬಸ್ಸು ಹತ್ತುತ್ತಿದ್ದ ದಲಿತ ಹುಡುಗಿಗೆ ‘ಏನೇ ಕರೀ…..’ ಎಂದು ತಮ್ಮ ಸಂಸ್ಕೃತಿಯನ್ನು ಹೊರಗೆಡವಿದ್ದಾರೆ. ದಲಿತರನ್ನು ಬಸ್ಸಿಗೆ ಹತ್ತಿಸಿಕೊಂಡ ಕಾರಣಕ್ಕೆ ಡ್ರೈವರನಿಗೆ ಎರಡೇಟು ಬಿಗಿದಿದ್ದಾರೆ. ಇವೆಲ್ಲ ಘಟನೆಗಳ ಜೊತೆಗೆ ಒಳಗೊಳಗೆ ಮಸಲತ್ತು ಮಾಡಲು ಪ್ರಾರಂಭಿಸಿದ್ದಾರೆ ಶ್ರೇಷ್ಟ ಒಕ್ಕಲಿಗರು ಮತ್ತು ಲಿಂಗಾಯತರು. ಮಧ್ಯಾಹ್ನ ಮೂರಕ್ಕೆ ಊರಿನ ಎಲ್ಲಾ ಅಂಗಡಿಗಳು ಬಾಗಿಲು ಹಾಕಲಾರಂಭಿಸಿದವು. ಬಂದ್ ವಾತಾವರಣ ಸೃಷ್ಟಿಯಾಯಿತು. ದಲಿತ ಕೇರಿಯ ಮುಂದಿದ್ದ ಪೋಲೀಸ್ ತುಕಡಿಗೂ ಅಸಹನೆಯ ವಾತಾವರಣ ಗಮನಕ್ಕೆ ಬಂದಿದೆ. ಮತ್ತಷ್ಟು ಪೋಲೀಸರನ್ನು ಆಗಲೇ ಕರೆಸಿದ್ದರೆ ಅನಾಹುತಗಳು ತಪ್ಪುತ್ತಿತ್ತೇನೋ. ಪೋಲೀಸರಿದ್ದಾಗ ಯಾರೇನು ಗಲಭೆ ಮಾಡಲು ಸಾಧ್ಯ ಎಂದು ಅತಿ ವಿಶ್ವಾಸಕ್ಕೆ ಒಳಗಾಗಿಬಿಟ್ಟರಾ?

atrocity on dalit
ಕತ್ತಲಾಗುತ್ತಿದ್ದಂತೆ ಮತ್ತೆ ದಲಿತ ಕೇರಿಯ ವಿದ್ಯುತ್ ತಂತಿಯನ್ನು ಕಡಿಯಲಾಗಿದೆ. ನೂರಿನ್ನೂರು ಜನರ ಗುಂಪು ದಲಿತ ಕೇರಿಗೆ ಮತ್ತೊಂದು ಬದಿಯಿಂದ ನುಗ್ಗಿದೆ. ಇರುವ ಎಪ್ಪತ್ತು ಚಿಲ್ಲರೆ ಮನೆಗಳ ಮೇಲೆ ತಮ್ಮ ‘ಪೌರುಷ’ ತೋರಿಸಿದ್ದಾರೆ. ದಿಂಡುಗಲ್ಲುಗಳಿಂದ ಮನೆಯ ಮಾಡನ್ನು ಒಡೆಯಲಾಗಿದೆ. ಬಾಗಿಲುಗಳನ್ನು ಒಡೆದು ಹಾಕಿ ಹೆಂಗಸು ಮಕ್ಕಳು ಬಾಣಂತಿಯೆನ್ನದೆ ಹಲ್ಲೆ ನಡೆಸಿದ್ದಾರೆ. ವಾಹನಗಳನ್ನು ಪುಡಿ ಪುಡಿ ಮಾಡಿದ್ದಾರೆ. ಹುಲ್ಲಿನ ಮೆದೆಗಳಿಗೆ ಬೆಂಕಿ ಹಚ್ಚಿದ್ದಾರೆ. ‘ಹೊಲೆ ಸೂಳೆಮಕ್ಳಾ. ನಮ್ ಹೆಣ್ ಮಕ್ಳ ಮೇಲೆ ಕಣ್ಣು ಹಾಕಿದ್ರೆ ಒಬ್ರನ್ನೂ ಜೀವಂತ ಉಳಿಸಲ್ಲ’ ಎಂದು ಅರಚಿದ್ದಾರೆ. ಗಲಭೆ ಪ್ರಾರಂಭವಾಗುತ್ತಿದ್ದಂತೆ ಪೋಲೀಸರು ಗಲಭೆಕೋರರಿಗೆ ಎದುರಾಗಿದ್ದಾರೆ. ಕಡಿಮೆ ಸಂಖೈಯಲ್ಲಿದ್ದ ಪೋಲೀಸರು ಮತಿಗೆಟ್ಟ ಗಲಭೆಕೋರರಿಗೆ ಭಯ ಹುಟ್ಟಿಸಿಲ್ಲ. ಪೋಲೀಸರ ಮೇಲೂ ಹಲ್ಲೆ ನಡೆಸಿದ್ದಾರೆ. ಇಷ್ಟರಲ್ಲಿ ಪೋಲೀಸ್ ಠಾಣೆಗೆ ಮತ್ತೆ ಸುದ್ದಿ ತಲುಪಿದೆ. ಪೋಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳೇ ಖುದ್ದು ದೊಡ್ಡ ತುಕಡಿಯೊಂದಿಗೆ ಹುಲಿವಾನದ ಕಡೆಗೆ ಹೊರಟಿದ್ದಾರೆ. ಯಾರೋ ಇನ್ಸ್ ಪೆಕ್ಟರ್ ಬಂದಿರಬೇಕು ಎಂದುಕೊಂಡ ಮತಾಂಧರು ಊರು ಪ್ರವೇಶಿಸಿದ ಪೋಲೀಸ್ ವಾಹನವನ್ನು ತಡೆಗಟ್ಟಿ ‘ಇಲ್ಲಿ ಒಕ್ಕಲಿಗರದೇ ನಡೆಯೋದು. ಮುಚ್ಕೊಂಡು ಹಿಂದಕ್ಕೋಗಿ’ ಎಂದಿದ್ದಾರೆ. ಯಾರ್ಯಾರು ಗಲಾಟೆ ಮಾಡಿದ್ದಾರೋ ಎಲ್ರನ್ನೂ ಹುಡುಕಿ ಹುಡುಕಿ ಎಳೆತನ್ನಿ ಎಂದಿದ್ದಾರೆ ಆ ಹಿರಿಯ ಅಧಿಕಾರಿ. 

ಒಕ್ಕಲಿಗರ ಲಿಂಗಾಯತರ ಕೇರಿಗಳಿಗೆ ನುಗ್ಗಿದ ಪೋಲೀಸರು ಮತಾಂಧರನ್ನೆಲ್ಲಾ ಒಂದು ಸುತ್ತು ಎಳೆದೆಳೆದು ತಂದು ಬಾರಿಸಿದ್ದಾರೆ. ಗಲಭೆಯಲ್ಲಿ ಭಾಗವಹಿಸದ ಅಮಾಯಕರಿಗೂ ಅಲ್ಲೊಂದು ಇಲ್ಲೊಂದು ಏಟು ಬಿದ್ದಿದೆ. ಈ ಅಮಾಯಕರಿಗೆ ಅವತ್ತು ನಡೆಯುವ ದಲಿತ ದೌರ್ಜನ್ಯದ ಅರಿವಿತ್ತಾ? ದಲಿತ ಸಂಘಟನೆಯವರು ಹುಲಿವಾನಕ್ಕೆ ಬಂದು ನೆರವು ನೀಡಿದ್ದಾರೆ. ಪ್ರಕರಣದ ಗಂಭೀರತೆಯನ್ನರಿತು ಜಿಲ್ಲಾಧಿಕಾರಿ ಮಧ್ಯರಾತ್ರಿ ಹುಲಿವಾನಕ್ಕೆ ಆಗಮಿಸಿದ್ದಾರೆ. ‘ಅಲ್ಲವರಿಬ್ಬರು ಮದುವೆಯಾಗಿ ಹನಿಮೂನ್ ಮಾಡ್ತಿದ್ರೆ ಇಲ್ಲೀ ಗಾಂಡುಗಳು ಹೊಡೆದಾಡ್ಕೊಂಡು ಕುಂತವ್ರೆ’ ಎಂದು ಒಂದೇ ಸಾಲಿನಲ್ಲಿ ಜಿಲ್ಲಾಧಿಕಾರಿಗಳಿಗೆ ಅವತ್ತಿನ ಪರಿಸ್ಥಿತಿಯನ್ನು ವಿವರಿಸಲಾಯಿತು!

ಪ್ರೀತಿಯ ಕಾರಣಕ್ಕೆ ಗಲಭೆಗಳು ನಡೆಯುವುದು ನಮ್ಮಲ್ಲಿ ತುಂಬಾ ಅಪರೂಪದ ಸಂಗತಿಯೇನಲ್ಲ. ಆದರೆ ಈ ಘಟನೆಗೆ ಪ್ರತಿಕ್ರಿಯಿಸುವುದರಲ್ಲಿ ಒಂದು ಸಮಾಜ ಹೇಗೆ ವಿಫಲವಾಗಿದೆ ಎನ್ನುವುದು ಸಮ ಸಮಾಜದ ಭವಿಷ್ಯತ್ತಿನ ಆಶಾಭಾವನೆಯನ್ನು ಉಳಿಯಗೊಡುವುದಿಲ್ಲ. ಮತ್ತು ಈ ರೀತಿಯ ಪ್ರತಿಕ್ರಿಯೆಗೆ ಮುಖ್ಯ ಕಾರಣ ಹುಲಿವಾನದಲ್ಲಿ ಮತ್ತು ಮಂಡ್ಯದಲ್ಲಿ ಬಹುಸಂಖ್ಯಾತರಾಗಿರುವ ಒಕ್ಕಲಿಗರನ್ನು ಎದುರು ಹಾಕಿಕೊಳ್ಳುವುದು ಯಾಕೆ ಎನ್ನುವ ಪ್ರಶ್ನೆ. ಮಂಡ್ಯದ ಶಾಸಕ ಅಂಬರೀಷ್ ರವರಾಗಲೀ ಸಂಸದ ಪುಟ್ಟರಾಜುರವರಾಗಲೀ ಘಟನೆ ನಡೆದ ಮರುದಿನವೇ ಹುಲಿವಾನಕ್ಕೆ ಹೋಗಿ ಪರಿಸ್ಥಿತಿಯನ್ನು ತಿಳಿಗೊಳಿಸುವ ಯತ್ನ ಮಾಡುವುದಿಲ್ಲ. ಪರಿಸ್ಥಿತಿಯನ್ನು ತಿಳಿಗೊಳಿಸುವುದೆಂದರೆ ಒಕ್ಕಲಿಗರ ಮತ್ತವರ ಬೆಂಬಲ ಪಡೆದ ಲಿಂಗಾಯತರ ದಬ್ಬಾಳಿಕೆಯನ್ನು ವಿರೋಧಿಸುವುದು. ಬರೀ ಲಿಂಗಾಯತರ ದೌರ್ಜನ್ಯವಾಗಿದ್ದರೆ ಎಲ್ಲರೂ ದೌಡಾಯಿಸಿಬಿಡುತ್ತಿದ್ದರು, ಕಾರಣ ಇಲ್ಲಿರುವುದೇ ಮೂವತ್ತು ನಲವತ್ತು ಲಿಂಗಾಯತ ಕುಟುಂಬಗಳು. ಬಹುಸಂಖ್ಯಾತರಾಗಿರುವ ಒಕ್ಕಲಿಗರ ದಬ್ಬಾಳಿಕೆಯನ್ನು ವಿರೋಧಿಸಿ ಮತ ಬ್ಯಾಂಕಿಗ್ಯಾಕೆ ತೊಂದರೆ ಮಾಡಿಕೊಳ್ಳಬೇಕು ಎಂದು ಸುಮ್ಮನೆ ಇದ್ದರು. ಅಂದಹಾಗೆ ಹುಲಿವಾನವೇನು ಮಂಡ್ಯದ ಮೂಲೆಯಲ್ಲೆಲ್ಲೋ ಇರುವ ಊರೂ ಅಲ್ಲ. ಮಂಡ್ಯ ಬಸ್ ಸ್ಟಾಪಿನಲ್ಲಿ ನಿಂತು ‘ಯಾಕ್ರಲಾ ಬಡ್ಡೆತ್ತವಾ’ ಎಂದು ಅಂಬರೀಷ್ ಕೂಗುವಷ್ಟರಲ್ಲಿ ಹುಲಿವಾನ ಬಂದುಬಿಡುತ್ತದೆ. ಜನ ಪ್ರತಿನಿಧಿಗಳದು ಈ ಕತೆಯಾದರೆ ನಮ್ಮ ಮುಖ್ಯವಾಹಿನಿಯ ಮಾಧ್ಯಮಗಳ್ಯಾವುವೂ ಇಂತಹುದೊಂದು ಹೀನಕೃತ್ಯವನ್ನು ಹೆಚ್ಚೇನು ಸುದ್ದಿ ಮಾಡಲಿಲ್ಲ. ಸವರ್ಣೀಯರು ಮತ್ತು ದಲಿತರ ನಡುವಿನ ಜಗಳ ಎಂದು ಬಹುತೇಕ ಪತ್ರಿಕೆಗಳು ಬರೆದಿದ್ದವು. ಡೆಕ್ಕನ್ ಹೆರಾಲ್ಡಿನಲ್ಲಿ ಲಿಂಗಾಯತರು ಮತ್ತು ದಲಿತರ ನಡುವಿನ ಗಲಭೆ ಎಂದು ಬರೆದಿದ್ದರೇ ಹೊರತು ದೌರ್ಜನ್ಯದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಒಕ್ಕಲಿಗ ಹೆಸರನ್ನು ಮರೆತುಬಿಟ್ಟಿದ್ದರು. ಈ ಎಲ್ಲಾ ಪತ್ರಿಕೆಗಳು ದಲಿತರ ಮೇಲಿನ ಹಲ್ಲೆಯನ್ನು ಪ್ರಮುಖವಾಗಿಸುವುದರ ಬದಲಾಗಿ ಪ್ರೇಮ ಪ್ರಕರಣದಿಂದ ಈ ಕೃತ್ಯ ನಡೆಯಿತು ಎಂದು ಎಲ್ಲಾ ಅಪವಾದವನ್ನು ದಲಿತರ ತಲೆಗೇ ಕಟ್ಟುವಂತೆ ಬರೆದಿರುವುದು ಎಷ್ಟರ ಮಟ್ಟಿಗೆ ಸರಿ? ದೂರದ ಸಿರಿಯಾ ದೇಶದ ಮಗು ಸತ್ತ ಫೋಟೋವನ್ನು ಮುಖಪುಟದಲ್ಲಿ ಪ್ರಕಟಿಸುವ ನಮ್ಮ ಮಾಧ್ಯಮಗಳು ನಮ್ಮದೇ ಹಳ್ಳಿಯ ದಲಿತ ಮಹಿಳೆಯೊಬ್ಬಳು ಒಕ್ಕಲಿಗರು ಮತ್ತು ಲಿಂಗಾಯತರು ಒಡೆದು ಹಾಕಿದ ಮನೆಯ ಬಾಗಿಲಿನ ಮುಂದೆ ಚಿಂತಾಕ್ರಾಂತರಾಗಿ ಕುಳಿತಿರುವುದನ್ನು ಮುಖಪುಟದಲ್ಲಿರಲಿ ಒಳಪುಟಗಳಲ್ಲೂ ಪ್ರಕಟಿಸುವುದಿಲ್ಲವಲ್ಲ. ಅರಚುವ ದೃಶ್ಯ ಮಾಧ್ಯಮಗಳೂ ಇದರ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲವಲ್ಲ. ಪರದೇಶದ ಮಗುವಿಗಿಂತ ನಮ್ಮ ದೇಶದ ದಲಿತರು ಕೀಳಾಗಿ ಹೋದರೇ?

ಅಕ್ಟೋ 19, 2015

ಬೇಳೆ ಬೇಯುವುದು ಕಷ್ಟ ಕಷ್ಟ...

high pulses price
ಸಾಮಾಜಿಕ ಜಾಲತಾಣಗಳಲ್ಲಿ ಒಂದು ಸುತ್ತು ಮೋದಿ ಪರವಾಗಿ ವಿರುದ್ಧವಾಗಿ, ಸಿದ್ಧು ಪರವಾಗಿ ವಿರೋಧವಾಗಿ, ದನದ ಮಾಂಸ, ಸಸ್ಯಾಹಾರ, ಕಲಬುರ್ಗಿ ಎಕ್ಸೆಟ್ರಾ ಎಕ್ಸೆಟ್ರಾ ಕಿತ್ತಾಡಿಕೊಂಡು ರಾತ್ರಿ ಸಾರು ಮಾಡಲು ಅಂಗಡಿಗೆ ಹೋಗಿ ಅರ್ಧ ಕೆ.ಜಿ ತೊಗರಿ ಬೇಳೆ ಜೊತೆಗೆ ಹತ್ತು ರುಪಾಯಿಯ 50:50 ಬಿಸ್ಕೆಟ್ ಪ್ಯಾಕ್ ಖರೀದಿಸಿ ನೂರು ರುಪಾಯಿ ಕೊಟ್ಟು ಚಿಲ್ಲರೆಗೆ ಕಾಯುತ್ತಾ ನಿಂತಾಗ ಅಂಗಡಿಯವನ ವಿಚಿತ್ರ ನೋಟದಿಂದ ಅರಿವಾಯಿತು ಬೇಳೆ ಕೆಜಿಗೆ 190 ರುಪಾಯಿ ಮುಟ್ಟಿದೆ ಎಂದು! ವರುಷದ ಹಿಂದೆ ಅರವತ್ತರಿಂದ ಎಂಭತ್ತು ರುಪಾಯಿಯಷ್ಟಿದ್ದ ಬೇಳೆಯ ಬೆಲೆ ಇನ್ನೂರರ ಗಡಿ ದಾಟುವ ದಿನಗಳೂ ದೂರವಿಲ್ಲ.
ಬೇಳೆ ಬೆಲೆ ಹೀಗೆ ಕಂಡಾಪಟ್ಟೆ ಏರಿಕೆಯಾಗಲು ಪ್ರಮುಖ ಕಾರಣ ಉತ್ಪಾದನೆಯಲ್ಲಾದ ಕಡಿತವೆಂದು ಹೇಳಲಾಗುತ್ತಿದೆ. 2013-2014ರ ಸಾಲಿನಲ್ಲಿ 19.78 ಮಿಲಿಯನ್ ಟನ್ನುಗಳಷ್ಟಿದ್ದ ತೊಗರಿ ಬೇಳೆ ಉತ್ಪಾದನೆ 2014 - 2015ರಲ್ಲಿ 17.38 ಮಿಲಿಯನ್ ಟನ್ನುಗಳಿಗೆ ಕುಸಿದಿದೆ. ಈ ಬಾರಿ ಮಳೆ ಕಡಿಮೆಯಾಗಿರುವುದರಿಂದ ಮುಂದಿನ ವರುಷ ಬೇಳೆಯ ಬೆಲೆಯಲ್ಲಿ ಮತ್ತಷ್ಟು ಏರಿಕೆಯುಂಟಾಗುವ ಸಾಧ್ಯತೆಗಳನ್ನು ತಳ್ಳಿಹಾಕಲಾಗದು. ಭಾರತದಲ್ಲಿ ವರುಷಕ್ಕೆ ಇಪ್ಪತ್ತೆರಡು ಮಿಲಿಯನ್ ಟನ್ನುಗಳಷ್ಟು ಬೇಳೆಗೆ ಬೇಡಿಕೆಯಿದೆ. ಆ ಲೆಕ್ಕದಲ್ಲಿ ಈ ಬಾರಿ ಒಟ್ಟು ಐದು ಮಿಲಿಯನ್ ಟನ್ನಿನಷ್ಟು ಬೇಳೆಯ ಕೊರತೆಯುಂಟಾಗಿರುವುದೇ ಬೆಲೆ ಏರಿಕೆಗೆ ಕಾರಣ. ಈ ಮೇಲ್ನೋಟದ ಕಾರಣದ ಜೊತೆಗೆ ಶೇಖರಿಸಿಟ್ಟರೂ ಸುಲಭವಾಗಿ ಕೆಡದ ಬೇಳೆಯ ಗುಣವೂ ಬೆಲೆಯೇರಿಕೆಗೆ ಕಾರಣವಾಗಿದೆ. ಹೆಚ್ಚೆಚ್ಚು ದಾಸ್ತಾನು ಮಾಡಿ ಬೆಲೆ ಮತ್ತಷ್ಟು ಹೆಚ್ಚಿದಾಗ ಮಾರುಕಟ್ಟೆಗೆ ಬಿಡುವ ವ್ಯಾಪಾರೀ ತಂತ್ರ ಕೂಡ ಇದಕ್ಕೆ ಕಾರಣ.
ಬೇಳೆಯ ಬೆಲೆ ಕಡಿಮೆಯಾಗುವಂತೆ ನೋಡಿಕೊಳ್ಳುವುದು ಮುಖ್ಯವಾಗಿ ಕೇಂದ್ರದ ಕರ್ತವ್ಯ. ಈಗಾಗಲೇ ಐದು ಸಾವಿರ ಟನ್ನುಗಳಷ್ಟು ಬೇಳೆಯನ್ನು ಆಮದು ಮಾಡಿಕೊಳ್ಳಲಾಗಿದೆ. ಮತ್ತೆರಡು ಟನ್ನುಗಳನ್ನು ಆಮದು ಮಾಡಿಕೊಳ್ಳಲು ನಿರ್ಧಾರ ಮಾಡಲಾಗಿದೆ. ಜೊತೆಗೆ ಬೇಳೆಯನ್ನು ದಾಸ್ತಾನು ಮಾಡಿಕೊಳ್ಳುವುದನ್ನು ನಿಷೇಧಿಸಲಾಗಿದೆ. ಕೇಂದ್ರದ ಇಷ್ಟೆಲ್ಲ ಕ್ರಮಗಳ ನಂತರವೂ ಬೆಲೆ ಇಳಿಯುತ್ತಿಲ್ಲ. ಏರುತ್ತಲೇ ಇದೆ. ಡಿಸೆಂಬರ್ ವರೆಗೂ ಬೇಳೆಯ ಬೆಲೆಯಲ್ಲಿ ಇಳಿತವಾಗುವುದು ಕಷ್ಟವೆಂದು ಹೇಳಲಾಗುತ್ತಿದೆ. ಸದ್ಯಕ್ಕೆ ತಮಿಳುನಾಡು ಮತ್ತು ಆಂಧ್ರಪ್ರದೇಶ ಮಾತ್ರ ಕೇಂದ್ರ ಸರಕಾರ ತರಿಸುತ್ತಿರುವ ವಿದೇಶಿ ಬೇಳೆಯನ್ನು ಜನರಿಗೆ ತಲುಪಿಸುವ ಕೆಲಸ ಮಾಡುತ್ತಿದೆ. ಉಳಿದ ರಾಜ್ಯಗಳು ಬೇಳೆಯನ್ನು ತರಿಸಿಕೊಳ್ಳಲು ಹಿಂದೇಟು ಹೊಡೆಯುತ್ತಿವೆ. ಕಾರಣ ವಿದೇಶದಿಂದ ಬರುತ್ತಿರುವ ಈ ಬೇಳೆಯನ್ನು ಸಂಸ್ಕರಿಸಲಾಗಿಲ್ಲ. ಮತ್ತು ಬೇಳೆ ಸಂಸ್ಕರಣೆ ಹೆಚ್ಚಾಗಿ ಖಾಸಗಿಯವರ ಕೈಯಲ್ಲೇ ಇದ್ದು ಸರಕಾರೀ ಸಂಸ್ಕರಣಾ ಘಟಕಗಳು ಇಲ್ಲವೇ ಇಲ್ಲ. ತರಿಸಿಕೊಂಡು ಮಾಡುವುದೇನು ಎನ್ನುವ ಪ್ರಶ್ನೆ ರಾಜ್ಯ ಸರಕಾರಗಳದ್ದು.
ಒಟ್ಟಿನಲ್ಲಿ ಸದ್ಯಕ್ಕಂತೂ ಬೇಳೆ ಬೆಲೆ ಆಕಾಶದೆತ್ತರದಲ್ಲೇ ಇರಲಿದೆ. ಬೇಳೆಯ ಬೆಲೆಯ ಮತ್ತೆ ಇಳಿಯುವಷ್ಟರಲ್ಲಿ (ಅಕಸ್ಮಾತ್ ಇಳಿದರೆ) ದೇಶದಲ್ಲಿ ಮತ್ತಷ್ಟು ಅಪೌಷ್ಟಿಕತೆ ಹೆಚ್ಚುವುದರಲ್ಲಿ ಅನುಮಾನವಿಲ್ಲ. ಅದರಲ್ಲೂ ಕೆಳಮಧ್ಯಮ ಮತ್ತು ಬಡವರ್ಗದ ಜನರಿಗೆ ಪ್ರೋಟೀನು, ವಿಟಮಿನ್ನುಗಳನ್ನು ನೀಡುವುದರಲ್ಲಿ ಈ ಬೇಳೆಗಳದ್ದೇ ಮೇಲುಗೈ. ಬೇಳೆಯ ಬೆಲೆ ಕೊಂಡುಕೊಳ್ಳಲಾರದಷ್ಟು ಹೆಚ್ಚಾಗಿರುವಾಗ ಅಪೌಷ್ಟಿಕತೆ ಹೆಚ್ಚುವುದು ಖಂಡಿತ. ಬೇಳೆಯ ಬೆಲೆ ಇಳಿಸುವುದಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಲೇ ಅಪೌಷ್ಟಿಕತೆ ನಿವಾರಣೆಗೂ ಕ್ರಮಗಳನ್ನು ಕೈಗೊಳ್ಳಬೇಕಾದ ತುರ್ತು ಸರಕಾರಕ್ಕಿದೆ. 

ಅಕ್ಟೋ 17, 2015

ಪ್ರಜಾಪ್ರಭುತ್ವದಲ್ಲಿ ಪ್ರತಿಭಟಿಸುವುದು ತಪ್ಪೇ?

sahitya academy
ಒಬ್ಬರ ನಂತರ ಮತ್ತೊಬ್ಬರು ತಮಗೆ ಕೇಂದ್ರ ಮತ್ತು ರಾಜ್ಯ ಸಾಹಿತ್ಯ ಅಕಾಡೆಮಿಯಿಂದ ಸಿಕ್ಕಿದ್ದ ಪ್ರಶಸ್ತಿಗಳನ್ನು ವಾಪಸ್ಸು ಮಾಡುತ್ತಿದ್ದಾರೆ. ಪ್ರಶಸ್ತಿಯ ಜೊತೆಗೆ ಕೊಟ್ಟಿದ್ದ ಹಣವನ್ನೂ ಹಿಂದಿರುಗಿಸುತ್ತಿದ್ದಾರೆ. ಕೆಲವರ ಮೆಚ್ಚುಗೆಗೆ ಪಾತ್ರವಾಗುತ್ತಲೇ ಕೆಲವರ ಅಪಹಾಸ್ಯಕ್ಕೂ ಸಾಹಿತಿಗಳು ಈಡಾಗುತ್ತಿದ್ದಾರೆ. ಪ್ರಶಸ್ತಿಗಳನ್ನು ವಾಪಸ್ಸಾಗಿಸುವುದಕ್ಕೆ ಪ್ರಸಕ್ತ ಇರುವ ದುರಿತ ಕಾಲಘಟ್ಟ ಕಾರಣವೆಂದು ಹಿಂದಿರುಗಿಸಿದವರನೇಕರು ಪತ್ರ ಬರೆದಿದ್ದಾರೆ. ಈ ಪ್ರಶಸ್ತಿ ವಾಪಸ್ಸು ಮಾಡುವಿಕೆ ಒಂದು ರಾಜ್ಯಕ್ಕೆ ಸೀಮಿತವಾಗಿ ಉಳಿದಿಲ್ಲ; ಕಾಶ್ಮೀರದಿಂದ ಹಿಡಿದು ಕೇರಳದವರೆಗೂ ಪ್ರಶಸ್ತಿ ವಾಪಸ್ಸು ಮಾಡುವವರ ಸಂಖೈ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಪ್ರಶಸ್ತಿಗಳನ್ನು ವಾಪಸ್ಸು ಕೊಡುವುದು ಸಮೂಹ ಸನ್ನಿಯಂತಾಗಿದೆಯೇ? ಪ್ರಶಸ್ತಿಗಳನ್ನು ತೆಗೆದುಕೊಳ್ಳುವಾಗ ಸಮಾಜ ಸಂಪೂರ್ಣ ಸ್ವಸ್ಥವಾಗಿತ್ತೇ? ರಾಜಕೀಯ ಅಸಹನೆಯನ್ನು ಸಾಹಿತಿಗಳು ಈ ರೀತಿಯಾಗಿ ಹೊರಹಾಕುತ್ತಿದ್ದಾರೆಯೇ? ಅಂತರಾಷ್ಟ್ರೀಯ ಮಟ್ಟದಲ್ಲಿ ದೇಶದ ಹೆಸರನ್ನು ಹಾಳುಗೆಡವುವಂತಹ ಇಂತಹ ಹಾದಿ ಸರಿಯೇ? ನರೇಂದ್ರ ಮೋದಿ ಪ್ರಧಾನಿಯಾಗಬಾರದೆಂದು ಬಯಸಿದ್ದ ಅನೇಕ ಸಾಹಿತಿಗಳು ಮೋದಿಯವರ ಹೆಸರನ್ನು ಹಾಳುಗೆಡವಲು ಈ ರೀತಿ ಮಾಡುತ್ತಿದ್ದಾರೆಯೇ? ಪ್ರಶ್ನೆಗಳ ಮೇಲೆ ಪ್ರಶ್ನೆಗಳು ಮೂಡುತ್ತಿವೆ. ಕೆಲವೊಂದಕ್ಕೆ ಸಮಾಧಾನಕರ ಉತ್ತರ ದೊರಕಿದರೆ ಹಲವಕ್ಕೆ ದೊರಕುವ ಉತ್ತರದಿಂದ ಕಷ್ಟಪಟ್ಟು ಸಮಾಧಾನ ಮಾಡಿಕೊಳ್ಳಬೇಕು. 

ರಾಜ್ಯದ ವ್ಯಾಪ್ತಿಯಲ್ಲಿ ನಡೆಯುವ ಕ್ರಿಮಿನಲ್ ಚಟುವಟಿಕೆಗಳಿಗೆ ಆ ರಾಜ್ಯದಲ್ಲಧಿಕಾರದಲ್ಲಿರುವ ಸರಕಾರ ಉತ್ತರದಾಯಿತ್ವ ವಹಿಸಬೇಕೇ ಹೊರತು ಕರ್ನಾಟಕದ ಮೂಲೆಯಲ್ಲಿನ ಹಳ್ಳಿಯಲ್ಲಿ ನಡೆಯುವ ಘಟನೆಯನ್ನೂ ನರೇಂದ್ರ ಮೋದಿಯವರ ತಲೆಗೆ ಕಟ್ಟುವುದರಲ್ಲಿ ಯಾವ ರೀತಿಯ ಪುರುಷಾರ್ಥವಿದೆ ಎಂದು ಪ್ರಶ್ನಿಸುವವರ ಸಂಖೈ ಅಧಿಕವಿದೆ. ಮೇಲ್ನೋಟಕ್ಕೆ ಆ ಪ್ರಶ್ನೆಯಲ್ಲಿ ಸತ್ಯವೂ ಇದೆ. ರಾಜ್ಯದ ಕಾನೂನು ಸುವ್ಯವಸ್ಥೆಯ ಜವಾಬ್ದಾರಿ ರಾಜ್ಯ ಸರಕಾರದ್ದಾಗಿರುವಾಗ ಕೇಂದ್ರವೇಗೆ ಜವಾಬ್ದಾರಿ ಹೊತ್ತುಕೊಳ್ಳಲು ಸಾಧ್ಯ? ಏನೋ ಪರದೇಶದ ಭಯೋತ್ಪಾದಕರು ದೇಶದ ಗಡಿ ದಾಟಿ ನುಗ್ಗಿ ಬಂದರೆ ಅದು ಕೇಂದ್ರ ಸರಕಾರದ ವೈಫಲ್ಯವಾಗುತ್ತದೆ. ಕರ್ನಾಟಕದಲ್ಲಿ ಎಂ.ಎಂ.ಕಲಬುರ್ಗಿಯವರ ಮೇಲೆ ಅನಾಮಿಕರು ಬಂದು ಗುಂಡು ಹಾರಿಸಿ ಕೊಂದರೆ ಅದು ಸಿದ್ಧರಾಮಯ್ಯ ನೇತೃತ್ವದ ರಾಜ್ಯ ಸರಕಾರದ ಗುಪ್ತಚರ ಇಲಾಖೆಯ ವೈಫಲ್ಯವೇ ಹೊರತು ಕೇಂದ್ರದ್ದಲ್ಲ ಅಲ್ಲವೇ? ಇನ್ನು ಸಾಹಿತಿಗಳು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಹಿಂದಿರುಗಿಸಿದ್ದಕ್ಕೆ ಮತ್ತೊಂದು ಪ್ರಮುಖ ಕಾರಣ ದಾದ್ರಿಯಲ್ಲಿ ನಡೆದ ಮೊಹಮದ್ ಇಖ್ಲಾಕನ ಹತ್ಯೆ. ಗೋಮಾಂಸ ಸಂಗ್ರಹಿಸಿದ್ದನೆಂಬ ಅನುಮಾನದಿಂದ ಊರಿನ ದೇವಸ್ಥಾನದಲ್ಲಿ ಇಖ್ಲಾಕನ ವಿರುದ್ಧ ಘೋಷಣೆ ಕೂಗುತ್ತಾರೆ, ನೂರಿನ್ನೂರು ಜನರ ಗುಂಪು ಇಖ್ಲಾಕನ ಮನೆಗೆ ನುಗ್ಗಿ ಸಾಮಾನುಗಳನ್ನೆಲ್ಲ ಚೆಲ್ಲಾಪಿಲ್ಲಿ ಮಾಡಿ ಮನೆಯವರಿಗೆಲ್ಲ ಹೊಡೆದು ಹೊರಗಟ್ಟುತ್ತಾರೆ. ಇಖ್ಲಾಕನನ್ನು ಹೊಡೆದು ಹೊಡೆದೇ ಸಾಯಿಸಿಬಿಡುತ್ತಾರೆ. ದಾದ್ರಿ ಇರುವುದು ಉತ್ತರ ಪ್ರದೇಶದಲ್ಲಿ. ಉತ್ತರಪ್ರದೇಶದಲ್ಲಿ ಆಡಳಿತದಲ್ಲಿರುವುದು ಅಖಿಲೇಶ್ ನೇತೃತ್ವದ ಸಮಾಜವಾದಿ ಸರಕಾರ. ಆ ಘಟನೆಗೂ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರವನ್ಯಾಕೆ ದೂಷಿಸಬೇಕು? ದೇಗುಲ ಪ್ರವೇಶಿಸಲು ಪ್ರಯತ್ನಿಸಿದನೆಂದು ದಲಿತನೊಬ್ಬನನ್ನು ಸುಟ್ಟು ಹಾಕಿದರೂ ಪ್ರಧಾನಿಯತ್ತ ಬೆರಳು ತೋರಿಸುವುದ್ಯಾಕೆ? ಪ್ರತಿಯೊಂದು ದುರ್ಘಟನೆಗೂ ಪ್ರಧಾನಿ ಯಾಕೆ ಜವಾಬ್ದಾರಿ ಹೊತ್ತುಕೊಂಡು ಉತ್ತರಿಸಬೇಕು?

ಇದನ್ನೂ ಓದಿ: ದನ ತಿಂದ್ರೆ ತಪ್ಪು ಜನಾನ್ ಬೇಕಾದ್ರೆ ತಿವ್ಕೊಳ್ಳಿ

ಯಾಕೆ ಉತ್ತರಿಸಬೇಕೆಂದರೆ ನಮ್ಮ ಈಗಿನ ಪ್ರಧಾನಿ ನರೇಂದ್ರ ಮೋದಿಯವರು ಹಿಂದಿನ ಪ್ರಧಾನಿ ಮನಮೋಹನ್ ಸಿಂಗರಂತೆ ‘ದುರ್ಬಲ’ರಲ್ಲ. ಭಾರತ ಕಂಡ ಸಶಕ್ತ ಪ್ರಧಾನಿ ಎಂಬ ಬಿರುದಾಂಕಿತ ನರೇಂದ್ರ ಮೋದಿಯವರು ಅವರ ಕಛೇರಿಯ ಸಿಬ್ಬಂದಿಗಳ, ವಿವಿಧ ಪಕ್ಷಗಳ ರಾಜಕಾರಣಿಗಳ ಹುಟ್ಟುಹಬ್ಬವನ್ನು ನೆನಪಿಟ್ಟುಕೊಂಡು ಟ್ವೀಟಿಸುತ್ತಾರೆ, ಪರದೇಶದವರಿಗೆ ಅವರದೇ ಭಾಷೆಯಲ್ಲಿ ಶುಭಾಷಯ ಬರೆಯುತ್ತಾರೆ, ದೇಶವಾಸಿಗಳಿಗೆ ಹಬ್ಬದ ಪ್ರಯುಕ್ತ ಶುಭ ಕೋರುತ್ತಾರೆ, ನವಜೋತ್ ಸಿಂಗ್ ಅಸ್ವಸ್ಥವಾಗಿದ್ದನ್ನು ಟ್ವೀಟಿಸಿ ಎಲ್ಲರ ಗಮನಕ್ಕೂ ತರುತ್ತಾರೆ. ಇಷ್ಟೆಲ್ಲ ಚಟುವಟಿಕೆಯಿಂದಿರುವ ಪ್ರಧಾನಿಯವರು ಸಾಮಾಜಿಕ ಸ್ವಾಸ್ಥ್ಯವನ್ನು ಹಾಳುಗೆಡವುವ ಘಟನೆಗಳು ನಡೆದಾಗ ಪ್ರತಿಕ್ರಯಿಸದೆ ಉಳಿದು ಬಿಟ್ಟರೆ ಪ್ರಶ್ನಿಸಬೇಕೆಂದು ಅನ್ನಿಸುವುದಿಲ್ಲವೇ? ಅನ್ನಿಸುವುದಿಲ್ಲ ಎನ್ನುವವರು ನೀವಾಗಿದ್ದರೆ ಕಣ್ಣಿಗೆ ಕಟ್ಟಿರುವ ಅಂಧ ಭಕ್ತಿಯ ಪಟ್ಟಿಯನ್ನು ತೊಡೆದು ಹಾಕಿ. ಯಾವ್ಯಾವುದೋ ಕೆಲಸಕ್ಕೆ ಬಾರದಕ್ಕೆಲ್ಲ ಪ್ರತಿಕ್ರಯಿಸುವ ಪ್ರಧಾನಿಯವರು ವಿದ್ವಾಂಸರ ಹತ್ಯೆಗೆ, ಆಹಾರದ ಆಧಾರದ ಮೇಲೆ ಸಮಾಜ ಒಡೆಯುವ ಶಕ್ತಿಗಳ ಮೇಲುಗೈ ಬಗೆಗೆ, ದಲಿತನ ಹತ್ಯೆಯ ಬಗೆಗೆ ಪ್ರತಿಕ್ರಯಿಸದೆ ಮೌನವಾಗಿರುವುದು ಅವರ ಸಮ್ಮತಿಯನ್ನು ಸೂಚಿಸುತ್ತದೆಯೇ? ಹಿಂದಿನ ಪ್ರಧಾನಿಯ ಮೌನವನ್ನು ದೌರ್ಬಲ್ಯದಂತೆ ಬಿಂಬಿಸಲಾಗುತ್ತಿತ್ತು, ಈಗಿನ ಪ್ರಧಾನಿಗಳ ಮೌನವನ್ನು ಜಾಣ ರಾಜಕೀಯ ನಡೆಯಂತೆ ಬಿಂಬಿಸಲಾಗುತ್ತಿದೆ ಎಂದು ಗೆಳೆಯನೊಬ್ಬ ಮೆಸೇಜಿಸಿದ್ದ. ಸತ್ಯವಲ್ಲವೇ?

ಯಾಕೆ ಉತ್ತರಿಸಬೇಕೆಂದರೆ ಈ ಎಲ್ಲಾ ಘಟನೆಗಳನ್ನು ಅವರದೇ ಸರಕಾರದ ಭಾಗವಾಗಿರುವ ಅನೇಕ ಸಂಸದರು, ಸಚಿವರು ಬಹಿರಂಗವಾಗಿಯೇ ಸಮರ್ಥಿಸುವ ಮಾತನಾಡುತ್ತಿದ್ದಾರೆ. ಮತ್ತು ಈ ಎಲ್ಲಾ ಘಟನೆಗಳು ಏಕ ಧರ್ಮ ಏಕ ಸಂಸ್ಕೃತಿ ಎಂದು ಬೊಬ್ಬೆಯೊಡೆಯುವ ಆರ್ ಎಸ್ ಎಸ್ಸಿನ ಧಾರ್ಮಿಕ ರಾಜಕೀಯದ ಭಾಗವಾಗಿಯೇ ಇದೆ. ಅನ್ಯ ಧರ್ಮ ದ್ವೇಷ, ವಿಚಾರವಾದಿಗಳೆಡೆಗಿನ ದ್ವೇಷ, ಚಾತುರ್ವರ್ಣದ ಪ್ರತಿಪಾದನೆ, ಇತರರ ಆಹಾರ ಪದ್ಧತಿಯನ್ನು ಕೀಳಾಗಿ ಕಾಣುವುದೆಲ್ಲವೂ ಅವರ ಧಾರ್ಮಿಕ ರಾಜಕಾರಣದ ಭಾಗವೇ ಅಲ್ಲವೇ? ಅಂತಹುದೊಂದು ಧಾರ್ಮಿಕ ರಾಜಕೀಯದ ತಳಹದಿಯೊಂದಿಗೇ ಪ್ರಧಾನಿ ಪಟ್ಟವಲಂಕರಿಸಿರುವ ನರೇಂದ್ರ ಮೋದಿಯವರು ಎಲ್ಲದಕ್ಕೂ ಕೇಂದ್ರವೇಗೆ ಕಾರಣ, ನನ್ನ ಜವಾಬ್ದಾರಿಯಲ್ಲವಿದು ಎಂದು ತಪ್ಪಿಸಿಕೊಳ್ಳುವ ಮಾತುಗಳನ್ನು ಆಡಿದರೆ ಒಪ್ಪಬಹುದೇ?

ಯಾಕೆ ಈ ಮಾತುಗಳನ್ನು ಒಪ್ಪಲಾಗುವುದಿಲ್ಲ ಎನ್ನುವುದಕ್ಕೆ ಉತ್ತರಪ್ರದೇಶದ ಮುಜಾಫರ್ ನಗರದಲ್ಲಿ ನಡೆದ ಕೋಮುಗಲಭೆಯನ್ನು ಗಮನಿಸಬೇಕು. ತುಂಬ ವ್ಯವಸ್ಥಿತವಾಗಿ ಜನರ ನಡುವೆ ಧರ್ಮದ ಹೆಸರಿನಲ್ಲಿ, ಲವ್ ಜಿಹಾದಿನ ನೆಪದಲ್ಲಿ ಹಂತಹಂತವಾಗಿ ವಿಷ ಭಿತ್ತಲಾಗುತ್ತದೆ. ಎಂಟತ್ತು ತಿಂಗಳ ನಿರಂತರ ಪ್ರಯತ್ನದ ನಂತರ ಕೋಮುಗಲಭೆ ತನ್ನ ಅಟ್ಟಹಾಸವನ್ನು ತೋರಿಸುತ್ತದೆ. ಸಾವಿರಾರು ಜನರು ನೆಲೆ ಕಳೆದುಕೊಂಡು ನಿರಾಶ್ರಿತರಾಗುತ್ತಾರೆ. ಎರಡು ನಿರಾಶ್ರಿತ ಶಿಬಿರಗಳು ನೆಲೆ ಕಳೆದುಕೊಂಡ ದಲಿತರಿಗಾಗಿ ಇದ್ದರೆ ಉಳಿದ ಎಲ್ಲಾ ಶಿಬಿರಗಳಲ್ಲೂ ನೆಲೆ ಕಳೆದುಕೊಂಡ ಮುಸ್ಲಿಮರಿರುತ್ತಾರೆ. ಈಗಿನ ಬಿಜೆಪಿಯ ಅಧ್ಯಕ್ಷ ಅಮಿತ್ ಶಾರವರನ್ನೂ ಒಳಗೊಂಡಂತೆ ಅನೇಕ ಬಿಜೆಪಿ ಧುರೀಣರು ಬಹಿರಂಗ ಸಭೆಗಳಲ್ಲಿ ಮುಸ್ಲಿಮರ ವಿರುದ್ಧ ದ್ವೇಷ ಕಾರುತ್ತಾರೆ. ಸೇಡು ತೀರಿಸಿಕೊಳ್ಳಲು ಈ ಚುನಾವಣೆಗಿಂತ ಒಳ್ಳೆಯ ಅವಕಾಶ ಸಿಗಲಾರದು ಎಂದು ವೀರಾವೇಷದ ಮಾತನಾಡುತ್ತಾರೆ. ಮತ್ತೊಂದೆಡೆ ಸಮಾಜವಾದಿ ಪಕ್ಷದ ಅಜಂ ಖಾನ್, ಒವೈಸಿ ಈ ದ್ವೇಷವನ್ನೆಚ್ಚಿಸಲು ಹಿಂದೂ ವಿರೋಧಿ ಮಾತುಗಳನ್ನಾಡುತ್ತಾರೆ. ಒಟ್ಟಿನಲ್ಲಿ ಧರ್ಮದ ಆಧಾರದಲ್ಲಿ ಮತಗಳನ್ನು ಧ್ರುವೀಕರಿಸುವುದಕ್ಕೆ ಏನೇನು ಗಬ್ಬೆಬ್ಬಿಸಬೇಕೋ ಅದೆಲ್ಲವನ್ನೂ ಮಾಡಲಾಗುತ್ತದೆ. ಇದೇ ಬಿಜೆಪಿ ಪಕ್ಷವಲ್ಲವೇ ಕಾಂಗ್ರೆಸ್ಸನ್ನು ಪದೇ ಪದೇ ‘ವೋಟ್ ಬ್ಯಾಂಕ್ ರಾಜಕೀಯ’ ಮಾಡುವವರು ಎಂದು ಹೀಗಳೆಯುವುದು? ಕಾಂಗ್ರೆಸ್ಸಿಗೂ ಬಿಜೆಪಿಗೂ ಇರುವ ವ್ಯತ್ಯಾಸವೇನೋ ನನಗಂತೂ ತಿಳಿಯದು. ಮುಜಾಫರ್ ನಗರದ ಕೋಮುಗಲಭೆಗಳೆಲ್ಲವೂ ಬಿಜೆಪಿಯ ಮತ್ತದರ ಹಿಂದೂ ಸಿದ್ಧಾಂತದ ಬೆಂಬಲಿಕ್ಕಿರುವ ಸಂಘಟನೆಗಳ ಕುತಂತ್ರ. ಈ ಕುತಂತ್ರಕ್ಕೆ ಅವರಿಗೆ ಸಿಕ್ಕ ಬಹುಮಾನ ಲೋಕಸಭಾ ಚುನಾವಣೆಯಲ್ಲಿ ಉತ್ತರಪ್ರದೇಶದಲ್ಲಿ ಅತ್ಯಧಿಕ ಸ್ಥಾನಗಳಲ್ಲಿನ ಗೆಲುವು. ಈಗ ಹೇಳಿ ದಾದ್ರಿಗೂ ಕೇಂದ್ರದಲ್ಲಿರುವ ಸರಕಾರಕ್ಕೂ ಏನೂ ಸಂಬಂಧವಿಲ್ಲ ಎನ್ನುವುದನ್ನು ಒಪ್ಪುವುದಾದರೂ ಹೇಗೆ? ಕೇಂದ್ರ ಸರಕಾರಕ್ಕಲ್ಲದಿದ್ದರೂ ಆ ಸರಕಾರವನ್ನು ರಚಿಸಿರುವ ಬಿಜೆಪಿಗೂ ಈ ಘಟನೆಗೂ ಸಂಬಂಧವಿಲ್ಲ ಎನ್ನುವುದನ್ನು ಒಪ್ಪುವುದು ಹೇಗೆ?

ಸಾಹಿತಿಗಳು ಪ್ರಶಸ್ತಿ ಹಿಂದಿರುಗಿಸುವುದಕ್ಕೆ ಪ್ರಮುಖ ಕಾರಣ ಕೇಂದ್ರದಲ್ಲಿ ಬಿಜೆಪಿ ಸರಕಾರವಿದೆ ಎನ್ನುವುದಲ್ಲ. ಸಾಹಿತಿ- ವಿದ್ವಾಂಸರೊಬ್ಬರ ಹತ್ಯೆಯಾದಾಗ ಸಾಹಿತಿಗಳ ಪರವಾಗಿರಬೇಕಾದ ಸಾಹಿತ್ಯ ಅಕಾಡೆಮಿಗಳು ಮೌನಕ್ಕೆ ಶರಣಾಗಿರುವುದು ಅಸಹನೆ ಮೂಡಿಸಿದೆ. ಕೇಂದ್ರ ಸಾಹಿತ್ಯ ಅಕಾಡೆಮಿಯ ಸದಸ್ಯರೇ ಆಗಿದ್ದಂತಹ ಎಂ.ಎಂ.ಕಲಬುರ್ಗಿಯವರ ಹತ್ಯೆಯನ್ನು ಖಂಡಿಸುವುದಕ್ಕೂ ಸಾಹಿತ್ಯ ಅಕಾಡೆಮಿ ಹಿಂಜರಿಯುತ್ತದೆಯೆಂದರೆ ಅದನ್ನು ಪ್ರತಿಭಟಿಸಬೇಕಲ್ಲವೇ? ಆಟೋದವರಿಗೆ ಅನ್ಯಾಯವಾದಾಗ ಆಟೋದವರು, ರೈತರಿಗೆ ಅನ್ಯಾಯವಾದಾಗ ರೈತರು, ವೈದ್ಯರಿಗೆ ಅನ್ಯಾಯವಾದಾಗ ವೈದ್ಯರು ಪ್ರತಿಭಟಿಸುವುದಿಲ್ಲವೇ? ಅದೇ ರೀತಿಯ ಹಕ್ಕು ಸಾಹಿತಿಗಳಿಗೂ ಇದೆಯಲ್ಲವೇ? ಸರಕಾರೀ ವೈದ್ಯರು ಸಾಮೂಹಿಕ ರಾಜೀನಾಮೆ ಕೊಟ್ಟು ಪ್ರತಿಭಟಿಸುವುದು ತಪ್ಪಲ್ಲವಾದರೆ ಸಾಹಿತಿಗಳು ಪ್ರಶಸ್ತಿ ಹಿಂದಿರುಗಿಸಿ ಪ್ರತಿಭಟಿಸುವುದು ಹೇಗೆ ತಪ್ಪಾಗುತ್ತದೆ? ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆಗೆ ನಾನಾ ದಾರಿ. ಸತ್ಯಾಗ್ರಹ, ಉಪವಾಸ ಸತ್ಯಾಗ್ರಹ, ಸರದಿ ಉಪವಾಸ ಸತ್ಯಾಗ್ರಹ, ರಸ್ತೆ ತಡೆ, ಘೋಷಣೆ, ಬಂದ್ ಗಳೆಲ್ಲವೂ ಪ್ರತಿಭಟನೆಯ ದಾರಿಗಳೇ. ವಿಭಿನ್ನ ರೀತಿಯ ಕೆಲವೊಮ್ಮೆ ತಮಾಷೆಯೆನ್ನಿಸುವ ಪ್ರತಿಭಟನೆಯನ್ನು ನಡೆಸುವುದಕ್ಕೆ ನಮ್ಮ ವಾಟಾಳ್ ನಾಗರಾಜ್ ಫೇಮಸ್ಸು. ಅವರ ಪ್ರತಿಭಟನೆಯ ರೀತಿ ತಮಾಷೆಯೆನ್ನಿಸಿದರೂ ಅದರಿಂದ ಉಪಯೋಗವೇನು ಎನ್ನಿಸಿದರೂ ಪ್ರಜಾಪ್ರಭುತ್ವದಲ್ಲಿ ಸರಿಯಿರದ ಸಂಗತಿಯ ವಿರುದ್ಧ ಮೌನವಾಗುಳಿಯುವುದಕ್ಕಿಂತ ಪ್ರತಿಭಟಿಸುವುದು ಹೆಚ್ಚು ಸೂಕ್ತ. ಪ್ರಜಾಪ್ರಭುತ್ವದಲ್ಲಿ ಲವಲವಿಕೆ ತರಲು, ಹಾದಿ ತಪ್ಪುವ ಪ್ರಜಾಪ್ರಭುತ್ವವನ್ನು ಮತ್ತೆ ಸರಿದಾರಿಗೆ ಮರಳಿಸಲೂ ಈ ಪ್ರತಿಭಟನೆಗಳು ಅತ್ಯವಶ್ಯಕ. ಸಿಕ್ಕ ಪ್ರಶಸ್ತಿಯನ್ನು ಮರಳಿಸುವುದೂ ಕೂಡ ಪ್ರತಿಭಟನೆಯ ಒಂದು ಮಾರ್ಗವೆನ್ನುವುದನ್ನು ಅಪಹಾಸ್ಯ ಮಾಡುವುದನ್ನೇ ಪ್ರವೃತ್ತಿಯಾಗಿಸಿಕೊಂಡವರು ಅರಿಯಬೇಕು. ಒಬ್ಬರು ಹಿಂದಿರುಗಿಸಿದರೆಂದು ಮತ್ತೊಬ್ಬರು ಹಿಂದಿರುಗಿಸಲು ಮನಸ್ಸು ಮಾಡುವುದು ನಡೆದೇ ನಡೆಯುತ್ತದೆ. ಸಾಹಿತಿಗಳು ಪ್ರಶಸ್ತಿಗಳನ್ನು ಹಿಂದಿರುಗಿಸಿರುವುದರಿಂದ ಏನು ಬದಲಾಗಿಬಿಟ್ಟಿತು?

ಇದನ್ನೂ ಓದಿ: ನಾವೇಕೆ ಪ್ರಶಸ್ತಿಗಳನ್ನು ಹಿಂದಿರುಗಿಸಿದೆವು? ಅಶೋಕ್ ವಾಜಪೇಯಿ

ಪ್ರಶಸ್ತಿ ಹಿಂದಿರುಗಿದಾಕ್ಷಣ ಕಲಬುರ್ಗಿಯ ಹಂತಕರು ‘ನಮ್ಮದು ತಪ್ಪಾಯಿತು’ ಎಂದು ಓಡಿ ಬಂದು ಶರಣಾಗಲಿಲ್ಲ. ದಾದ್ರಿಯ ಹಂತಕರು, ದಲಿತರನ್ನು ಸುಟ್ಟ ಹಂತಕರು, ದಲಿತರನ್ನು ಬೆತ್ತಲು ಮಾಡಿದವರು ಪಶ್ಚಾತ್ತಾಪ ಪಡಲಿಲ್ಲ. ಮತ್ತೇನು ಉಪಯೋಗವಾಯಿತು? ಏನು ಉಪಯೋಗವಾಯಿತೆಂದರೆ ಹಾದಿ ತಪ್ಪುತ್ತಿರುವ ಸಮಾಜದ ಬಗ್ಗೆ ಮುಖ್ಯಮಂತ್ರಿ, ಪ್ರಧಾನಮಂತ್ರಿಯವರು ಮೌನ ಮುರಿದು ಮಾತನಾಡುವಂತೆ ಮಾಡಿತು. ಆ ಮಾತುಗಳು ನಿರಾಸೆ ಮೂಡಿಸುವಂತಿದೆಯೆನ್ನುವುದು ಸತ್ಯವಾದರೂ ಕೊನೇ ಪಕ್ಷ ಪ್ರತಿಕ್ರಿಯೆ ನೀಡುವಂತಾದರೂ ಮಾಡುವಲ್ಲಿ ಈ ಪ್ರಶಸ್ತಿ ವಾಪಸ್ಸಾತಿ ಯಶ ಸಾಧಿಸಿದೆ. ‘ಪ್ರಶಸ್ತಿ ವಾಪಸ್ಸು ಮಾಡುತ್ತಿರುವುದು ಸರಿಯಲ್ಲ. ಹಂತಕರನ್ನು ಹಿಡಿಯಲು ಪ್ರಯತ್ನಿಸುತ್ತಿದ್ದೀವಿ’ ಎಂದು ಸಿದ್ಧರಾಮಯ್ಯ ಹೇಳಿದ್ದಾರೆ. ಹಂತಕರನ್ನು ಹಿಡಿಯಲು ರಾಜ್ಯ ಪೋಲೀಸರು ಹಿಡಿಯಲು ಪ್ರಯತ್ನಿಸುತ್ತಿರುವುದು ನಿಜ, ಆ ಪ್ರಯತ್ನ ಅಷ್ಟು ಯಶಸ್ಸು ಕಾಣುತ್ತಿಲ್ಲವೆನ್ನುವುದೂ ಸದ್ಯದ ವಾಸ್ತವ. ರಾಜ್ಯ ಗುಪ್ತಚರ ಇಲಾಖೆಯ ವೈಫಲ್ಯವಿದು ಎಂದು ಸಿದ್ಧರಾಮಯ್ಯನವರಿಗೆ ಯಾಕೆ ಅನ್ನಿಸುವುದಿಲ್ಲ? ಗುಪ್ತಚರ ಇಲಾಖೆಯನ್ನು ಬಲಪಡಿಸುವ ಇಚ್ಛಾಶಕ್ತಿಯನ್ನು ಯಾಕೆ ತೋರಿಸುವುದಿಲ್ಲ? ಮೊದಲು ಈ ರಾಜ್ಯದ ಗುಪ್ತಚರ ಇಲಾಖೆಗಳನ್ನು ವಿರೋಧ ಪಕ್ಷದ ಮೇಲೆ ನಿಗಾ ಇಡುವ, ತಮ್ಮದೇ ಪಕ್ಷದೊಳಗಿರುವ ವಿರೋಧಿಗಳ ನಡೆನುಡಿಗಳನ್ನು ಗಮನಿಸುವ ಕೆಲಸದಿಂದ ವಿಮೋಚಿಸಬೇಕಿದೆ. ವಿಚಾರದ ದೃಷ್ಟಿಯಿಂದ ಸಿದ್ಧರಾಮಯ್ಯನವರು ಹಂತಕ ಮನಸ್ಥಿತಿಯವರಿಗೆ ಬೆಂಬಲ ನೀಡುವುದಿಲ್ಲವೆಂದು ನಂಬಬಹುದಾದರೂ ಕೋಮುವಾದಿಗಳ ಅಟ್ಟಹಾಸವನ್ನು ನಿಗ್ರಹಿಸುವುದರಲ್ಲಿ ಅವರು ಸಂಪೂರ್ಣ ವಿಫಲರಾಗಿದ್ದಾರೆ. ಇನ್ನು ದಾದ್ರಿ ಘಟನೆಯ ಹತ್ತು ದಿನಗಳ ನಂತರ ನರೇಂದ್ರ ಮೋದಿಯವರು ಪ್ರತಿಕ್ರಿಯಿಸಿದ್ದಾರೆ. ಈ ಪ್ರತಿಕ್ರಿಯೆಗೆ ಪ್ರಮುಖ ಕಾರಣ ಸಾಹಿತಿಗಳ ಪ್ರಶಸ್ತಿ ವಾಪಸ್ಸಾತಿ. ನೇರವಾಗಿ ದಾದ್ರಿ ಘಟನೆಯನ್ನು ಖಂಡಿಸುವುದಕ್ಕೆ ಇಚ್ಛೆ ಪಡದ ಪ್ರಧಾನಿಗಳು ಅದೊಂದು ದುರದೃಷ್ಟದ ಘಟನೆ, ಮುಸ್ಲಿಮರು ಹಿಂದೂಗಳು ಒಟ್ಟಾಗಿ ಬಡತನದ ವಿರುದ್ಧ ಹೋರಾಡಬೇಕು ಎಂಬ ಮಾತುಗಳನ್ನಾಡಿದ್ದರೆ. ಅವರನ್ನು ಆರಾಧಿಸುವ ಸಂಘಟನೆಗಳು ವಿಷವುಣ್ಣಿಸುವ ಕಾರ್ಯದಲ್ಲಿ ತೊಡಗಿದ್ದಾಗ ಒಟ್ಟಾಗಿ ಬಡತನದ ವಿರುದ್ಧ ಹೋರಾಡುವುದು ಹೇಗೆ? ಸಾಹಿತಿಗಳು ರಾಜಕೀಯ ದುರುದ್ದೇಶದಿಂದ ಪ್ರಶಸ್ತಿ ವಾಪಸ್ಸು ಮಾಡಿದ್ದಾರೆ ಎನ್ನುವುದಕ್ಕೂ ಮರೆಯಲಿಲ್ಲ. ರಾಜಕೀಯ ದುರುದ್ದೇಶವೇ ಇದ್ದರೂ ಪ್ರತಿಭಟನೆಯ ಉದ್ದೇಶ ಸರಿಯಾಗಿಯೇ ಇದೆಯಲ್ಲವೇ? ಪ್ರಶಸ್ತಿ ಹಿಂದಿರುಗಿಸಿದ ಅಶೋಕ್ ವಾಜಪೇಯಿ ಸಾಹಿತಿಗಳು ಪ್ರಭುತ್ವದ ತಪ್ಪುಗಳ ವಿರುದ್ಧವೇ ಇರುತ್ತಾರೆ. ಎಮರ್ಜೆನ್ಸಿ, ಸಿಖ್ ಗಲಭೆ, ಬಾಬ್ರಿ ಮಸೀದಿ ಧ್ವಂಸ, ಗುಜರಾತ್ ಗಲಭೆಯ ಸಂದರ್ಭದಲ್ಲೆಲ್ಲ ಸಾಹಿತಿಗಳು ಪ್ರಭುತ್ವದ ವಿರುದ್ಧ ಪ್ರತಿಭಟಿಸಿದ್ದಾರೆ ಎಂದು ಬರೆಯುತ್ತಾರೆ. ಸಿಖ್ ಗಲಭೆಯಾದಾಗ ಖುಷವಂತ್ ಸಿಂಗ್ ಪ್ರಶಸ್ತಿ ಹಿಂದಿರುಗಿಸಿದ್ದು ಭಕ್ತರಿಗೆ ಹೋಗಲಿ ಪ್ರಧಾನಿಯವರಿಗಾದರೂ ಗೊತ್ತಿರಬೇಕಿತ್ತಲ್ಲ. ಈ ಪ್ರಶಸ್ತಿ, ಅದರ ವಾಪಸ್ಸಾತಿ, ಅದರ ಜೊತೆಜೊತೆಗೇ ಅಂಟಿಕೊಳ್ಳುವ ರಾಜಕೀಯ ಚರ್ಚೆಗಳು ಮುಖ್ಯ ವಿಷಯವನ್ನೇ ಮರೆಮಾಡಿಸುತ್ತಿವೆ.

ಮರೆಯಾಗಿಬಿಡುತ್ತಿರುವ ಮುಖ್ಯವಿಷಯವೆಂದರೆ ಸಮಾಜದಲ್ಲಿ ಅಸಹನೆಯ ಹೆಚ್ಚುವಿಕೆಯ ಸಮನಾಗಿ ಆ ಅಸಹನೆ ಮೂಡಿಸಿದ ಹಿಂಸೆಯನ್ನು ಬೆಂಬಲಿಸುವವರ ಸಂಖೈ ಅಧಿಕವಾಗುತ್ತಿದೆ. ‘ಕಲಬುರ್ಗಿಯವರ ಹತ್ಯೆಯನ್ನು ಖಂಡಿಸುತ್ತೇನೆ. ಆದರೂ ಅವರು ಆ ರೀತಿಯೆಲ್ಲ ಬರೆಯುವ ಮುನ್ನ ಯೋಚಿಸಬೇಕಿತ್ತು’ ಎನ್ನುವ ಧಾಟಿಯಲ್ಲಿ ಮಾತನಾಡುವವರಿಗೂ ‘ಚಾರ್ಲಿ ಹೆಬ್ಡೋ ಪತ್ರಿಕೆಯವರು ಮುಸ್ಲಿಮರನ್ನು ನೋಯಿಸುವ ಕಾರ್ಟೂನುಗಳನ್ನು ಪ್ರಕಟಿಸಬಾರದಿತ್ತು’ ಎನ್ನುವವರಿಗೂ ವ್ಯತ್ಯಾಸವಿದೆಯೇ? ನನಗಂತೂ ಯಾವ ವ್ಯತ್ಯಾಸವೂ ಕಾಣಿಸುತ್ತಿಲ್ಲ. ಸ್ವಾತಂತ್ರ್ಯಕ್ಕೂ ಸ್ವೇಚ್ಛಾಚ್ಛಾರಕ್ಕೂ ಇರುವ ವ್ಯತ್ಯಾಸ ತುಂಬ ಕಡಿಮೆ. ಸ್ವೇಚ್ಛಾಚ್ಛಾರವನ್ನು ವಿರೋಧಿಸಲು ಹಿಂಸೆ ಮಾರ್ಗವಲ್ಲ ಎಂದು ಪ್ರಜಾಪ್ರಭುತ್ವದ ಪ್ರಜೆಗಳಿಗೆ ಅರ್ಥವಾಗಬೇಕು. ಇನ್ನು ದಾದ್ರಿ ಘಟನೆಯನ್ನು ಖಂಡಿಸುತ್ತ ‘ಪಾಪ ಆತನ ಮನೆಯಲ್ಲಿದ್ದದ್ದು ದನದ ಮಾಂಸವಲ್ಲವಂತೆ ಕಣ್ರೀ’ ಎಂದು ಹೇಳುವವರು ಪರೋಕ್ಷವಾಗಿ ದನದ ಮಾಂಸವಿದ್ದಿದ್ದರೆ ಕೊಂದದ್ದು ತಪ್ಪೇನಲ್ಲ ಎಂದು ಹೇಳುತ್ತಿದ್ದಾರೆಯೇ? ಕೊನೆಗೆ ಆ ಇಖ್ಲಾಕ್ ಪಾಕಿಸ್ತಾನೀ ಏಜೆಂಟ್ ಎಂದೆಲ್ಲ ಬರೆಯಲಾಯಿತು. ಆತ ಪಾಕಿಸ್ತಾನಕ್ಕೆ ಹೋಗೇ ಇರಲಿಲ್ಲ ಎಂದು ಪಾಸ್ ಪೋರ್ಟ್ ಸಮೇತ ಕುಟುಂಬದವರು ಮಾಧ್ಯಮದ ಮುಂದೆ ಕೂರಬೇಕಾಯಿತು. ಅಂದಹಾಗೆ ಇಖ್ಲಾಕನ ಮಗ ಭಾರತೀಯ ವಾಯುಪಡೆಯಲ್ಲಿ ಉದ್ಯೋಗಿ. ಹತ್ಯೆಯನ್ನು ಸಮರ್ಥಿಸುವಂತಹ ಮನಸ್ಥಿತಿ ಹೆಚ್ಚುತ್ತಿರುವುದು ಕೊನೆಗೆ ಎಲ್ಲಿಗೆ ಹೋಗಿ ಮುಟ್ಟುತ್ತದೆ?

ಎಲ್ಲಿಗೆ ಹೋಗಿ ಮುಟ್ಟುತ್ತದೆ ಎನ್ನುವುದನ್ನು ಅರಿಯಲು ಮಹಾರಾಷ್ಟ್ರದತ್ತ ಗಮನಹರಿಸಬೇಕು. ಪಾಕಿಸ್ತಾನೀ ಗಾಯಕನೊಬ್ಬನ ಸಮಾರಂಭಕ್ಕೆ ವಿರೋಧ ವ್ಯಕ್ತವಾಗಿ ಆ ಸಮಾರಂಭ ರದ್ದಾಯಿತು. ಪಾಕಿಸ್ತಾನದ ಮಾಜೀ ವಿದೇಶಾಂಗ ಸಚಿವರ ಪುಸ್ತಕವೊಂದರ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಳ್ಳಬೇಕಿದ್ದ ಸುದೀಂಧ್ರ ಕುಲಕರ್ಣಿಯವರ ಮೇಲೆ ಶಿವಸೇನೆಯ ಕಾರ್ಯಕರ್ತರು ಮಸಿ ಬಳಿದರು. ವಿಚಲಿತರಾಗದ ಸುದೀಂದ್ರ ಕುಲಕರ್ಣಿ ಆ ಮಸಿ ಹೊತ್ತ ಮುಖದಲ್ಲೇ ಪತ್ರಿಕಾಗೋಷ್ಟಿ ನಡೆಸಿದರು. ಅವರ ಪಕ್ಕದಲ್ಲಿ ಪಾಕಿಸ್ತಾನದ ವಿದೇಶಾಂಗ ಸಚಿವರು! ಭಾರತದ ‘ಸಹಿಷ್ಣುತೆ’ಯ ಪೊಳ್ಳುತನ ವಿದೇಶದಲ್ಲೆಲ್ಲಾ ಪ್ರಚಾರ ಪಡೆಯಲು ಇಷ್ಟು ಸಾಕಲ್ಲವೇ? ಅಂದ ಹಾಗೆ ಈ ಸುದೀಂಧ್ರ ಕುಲಕರ್ಣಿ ಕೂಡ ಒಂದು ಹಂತದಲ್ಲಿ ಬಿಜೆಪಿಯ ಪಾಳಯದಲ್ಲಿದ್ದವರು. ವಾಜಪೇಯಿ, ಅಡ್ವಾಣಿಗೆ ಹತ್ತಿರವಿದ್ದವರು. ಈ ರೀತಿಯ ಅಸಹನೆ ಒಳ್ಳೆಯದಲ್ಲ ಎಂದು ಹೇಳಿದ್ದು ಅಡ್ವಾಣಿ! ರಥಯಾತ್ರೆ, ಬಾಬ್ರಿ ಮಸೀದಿ, ಅಯೋಧ್ಯೆ, ರಾಮಮಂದಿರವೆಂದು ವಿಷದ ಬೀಜ ಬಿತ್ತವರಲ್ಲಿ ಅಡ್ವಾಣಿ ಪ್ರಮುಖರು. ಅವರ ವಿಷ ಬೀಜ ಈಗ ಫಲ ಕೊಡಲಾರಂಭಿಸಿದೆ, ಬೀಜ ಬಿತ್ತಿದ್ದನ್ನೇ ಮರೆತವರು ಈಗ ಮುತ್ಸದ್ಧಿಯಾಗುವ ಪ್ರಯತ್ನ ನಡೆಸಿದ್ದಾರೆ. ಜೈಲಿನಿಂದ ಜಾಮೀನಿನ ಮೇಲೆ ಹೊರಬಂದ ಮಸಿ ಬಳಿದವರಿಗೆ ಶಿವಸೇನೆ ಸತ್ಕಾರ ಮಾಡಿದೆ. ದೇಶದ್ರೋಹಿಗಳಿಗೆ ಇದೇ ಶಿಕ್ಷೆ ಎಂದಬ್ಬರಿಸಿದೆ. ಇದು ತಪ್ಪು ಎಂದ ಬಿಜೆಪಿಯವರಿಗೆ ನರೇಂದ್ರ ಮೋದಿ ಖ್ಯಾತರಾಗಿದ್ದೇ ಗೋದ್ರೋತ್ತರ ಹತ್ಯಾಕಾಂಡದಿಂದ ಸುಮ್ಕಿರಿ ಎಂದು ಅಪಹಾಸ್ಯ ಮಾಡಿದೆ. ದ್ವೇಷಿಸಲೊಂದು ದೇಶವಿದ್ದರೆ ದೇಶಪ್ರೇಮಕ್ಕೆ ಬೆಲೆ ದ್ವೇಷಿಸಲೊಂದು ಧರ್ಮವಿದ್ದರೆ ಧರ್ಮರಕ್ಷಣೆಗೆ ಬೆಲೆ ಎಂದು ನಂಬಿದವರಿಂದು ಕೇಂದ್ರದಲ್ಲಿ ಅಧಿಕಾರದಲ್ಲಿದ್ದಾರೆ. ದ್ವೇಷವುಂಡವರ ಮನಸ್ಸನ್ನು ನಿಯಂತ್ರಿಸುವುದು ವಿಷ ಬಿತ್ತಿ ಪೊರೆದವರಿಗೂ ಸಾಧ್ಯವಿಲ್ಲ ಎಂದು ರಾಜಕಾರಣಿಗಳಿಗೆ ಮತ್ತವರ ಅಂಧ ಭಕ್ತರಿಗೆ ಶೀಘ್ರವಾಗಿ ಅರಿವಾದರೆ ಒಳ್ಳೆಯದು.

ಅಕ್ಟೋ 16, 2015

ಕ್ರಾಂತಿವೀರ ಖೇಣಿ ಕಣಿಯಲ್ಲಿ ಸುಳ್ಳೆಲ್ಲಿದೆ!

ಬೀದರಿನ ಶಾಸಕರಾದ ಮಾನ್ಯ ಅಶೋಕ್ ಖೇಣಿಯವರು ಒಂದು ಅಮೋಘ ಅಧ್ಯಯನ ಕೈಗೊಂಡು ರೈತರ ಆತ್ಮಹತ್ಯೆಗೆ ಕಾರಣಗಳನ್ನು ಕಂಡುಹಿಡಿದಿದ್ದಾರೆ. ಸನ್ಮಾನ್ಯ ಅಶೋಕ್ ಖೇಣಿಯವರನ್ನು ರೈತ ಸಮುದಾಯ ತಮ್ಮ ನಾಯಕರನ್ನಾಗಿ ಆಯ್ಕೆ ಮಾಡಿಕೊಂಡು ಉದ್ಧಾರವಾಗುವ ದಾರಿಯನ್ನು ಹಿಡಿಯುವುದನ್ನು ಬಿಟ್ಟು ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸನ್ಮಾನ್ಯರ ಅತ್ಯಮೋಘ ಕೊಡುಗೆಯಾದ ನೈಸಲ್ಲದ ನೈಸ್ ರಸ್ತೆಯ 'ಅಭಿರುದ್ಧಿ'ಗೆಂದು ಕಟ್ಟಲಾಗಿದ್ದ ಟೋಲ್ ಬೂತನ್ನು 'ಕಿಡಿಗೇಡಿಗಳು' ಧ್ವಂಸ ಮಾಡಿ ಅಶೋಕ್ ಖೇಣಿಯವರ ಮನ ನೋಯಿಸುವಂತಹ ಕೃತ್ಯವನ್ನೆಸಗಿರುವುದು ಅಕ್ಷಮ್ಯವೇ ಸರಿ. ಇಷ್ಟಕ್ಕೂ ಅಶೋಕ್ ಖೇಣಿ ಅಧ್ಯಯನದಲ್ಲಿದ್ದದಾದರೂ ಏನು?
ಜೂನ್ ಜುಲೈ ತಿಂಗಳಲ್ಲಿ ಹೆಚ್ಚಿನ ರೈತರು ಆತ್ಮಹತ್ಯೆ ಮಾಡಿಕೊಳ್ಳುವುದ್ಯಾಕೆ ಎಂದು ನಮ್ಮ ನಾಡಿನ ಮುಖ್ಯಮಂತ್ರಿಗಳೇ ತಲೆ ಕೆರೆದುಕೊಂಡಿದ್ದರು. ತಲೆ ಕೆರೆದುಕೊಳ್ಳುವುದರ ಬದಲು ಖೇಣಿಯವರನ್ನು ಕರೆಸಿ ಕೇಳಿದ್ದರೆ ಎಲ್ಲವೂ ಪರಿಹಾರವಾಗಿಬಿಡುತ್ತಿತ್ತು. ಇರಲಿ, ಖೇಣಿ ಅಧ್ಯಯನ ಸಂಸ್ಥೆಯ ವರದಿಯ ಪ್ರಕಾರ ಆತ್ಮಹತ್ಯೆ ಮಾಡಿಕೊಂಡ 700 ರೈತರಲ್ಲಿ 500 ಮಂದಿ ರೈತರು ಆತ್ಮಹತ್ಯೆ ಮಾಡಿಕೊಳ್ಳಲು ಅವರ ಜೂಜು ಪ್ರವೃತ್ತಿ ಕಾರಣವಂತೆ. ಬೆಳೆ ಬೆಳೆಯುತ್ತೀನೆಂದು ಬ್ಯಾಂಕುಗಳಿಗೆ, ಬಡ್ಡಿ ಸಾಲ ನೀಡುವವರಿಗೆ ನಂಬಿಸಿ ಹಣ ಪಡೆದು ಆ ಹಣವನ್ನೆಲ್ಲಾ ಜೂಜಿನಲ್ಲಿ ಕಳೆದು ಸಾಲ ತೀರಿಸಲಾಗದೆ ನೇಣಿಗೆ, ವಿಷಕ್ಕೆ ಶರಣಾಗಿದ್ದಾರಂತೆ. ರೈತ ಬಂಧು ಖೇಣಿ ಹೇಳಿರುವುದರಲ್ಲಿ ಸುಳ್ಳೆಲ್ಲಿದೆ? ಇದನ್ನರಿಯದವರು ಅನಾವಶ್ಯಕವಾಗಿ ಖೇಣಿಯವರ ಮಾನ ಹರಾಜಾಕುತ್ತಿರುವುದನ್ನು ಭಯಾನಕ ಮಾತುಗಳಲ್ಲಿ ಖಂಡಿಸಬೇಕೆಂದು ಹೊಟ್ಟೆಗೆ ಅನ್ನ ತಿನ್ನದವರೆಲ್ಲರನ್ನೂ ಈ ಮೂಲಕ ಕೇಳಿಕೊಳ್ಳುತ್ತೇವೆ.
Freedictionary ವೆಬ್ ಪುಟದ ಪ್ರಕಾರ ಜೂಜು ಅಂದರೆ gamblingಗೆ ಈ ಕೆಳಗಿನ ಅರ್ಥಗಳನ್ನು ನೀಡಲಾಗಿದೆ
1. To bet on an uncertain outcome, as of a contest
2. To play a game of chance for stakes.
3. To take a risk in the hope of gaining an advantage or a benefit.

ಪ್ರತಿಫಲದ ಬಗ್ಗೆ ಚಿಂತಿಸದೆ ಹಣವನ್ನೂಡುವುದು, ಅದೃಷ್ಟ ನಂಬಿ ದುಡ್ಡು ಸುರಿಯುವುದು, ಲಾಭವಾಗಬಹುದೆಂಬ ನಿರೀಕ್ಷೆಯಿಂದ ಅಪಾಯಕ್ಕೆದುರಾಗುವುದು ಜೂಜುಗಾರನ ಪ್ರಮುಖ ಲಕ್ಷಣಗಳು. ಹೂಡಿದ ದುಡ್ಡು ಮರಳುವುದು ನಿರ್ಧಾರವಾಗುವುದು ಹೂಡಿಕೆದಾರನಿಂದಲ್ಲ, ಬೇರೊಬ್ಬನಿಂದ. ನಮ್ಮ ರೈತರಲ್ಲೂ ಈ ಎಲ್ಲಾ ಲಕ್ಷಣಗಳು ಇದೆಯಲ್ಲ? ಬೆಳೆ ಬರುತ್ತೋ ಇಲ್ಲವೋ ಎಂದು ಯೋಚಿಸದೆ ಬೀಜ ಬಿತ್ತುತ್ತಾನೆ, ಮಳೆಯೆಂಬ ಅದೃಷ್ಟವನ್ನು ನಂಬಿ ದುಡ್ಡು ಸುರಿಯುತ್ತಾನೆ, ಲಾಭವಾಗಬಹುದೆಂಬ ನಿರೀಕ್ಷೆಯಿಂದ ಎಲ್ಲಾ ರೀತಿಯ ಅಪಾಯಗಳನ್ನೂ ಎದುರುಗೊಳ್ಳುತ್ತಾನೆ; ಕೊನೆಗೆ ಕೈಹತ್ತಿದ ಬೆಳೆಗೆ ಬೆಲೆ ನಿರ್ಧರಿಸುವುದು ದಲ್ಲಾಳಿ/ವರ್ತಕ/ಸರಕಾರ. ರೈತರಿಗಿಂತ ದೊಡ್ಡ ಜೂಜುಕೋರ ಯಾರಿದ್ದಾರೋ ತೋರಿಸಿ. ಸನ್ಮಾನ್ಯ ಅಶೋಕ್ ಖೇಣಿಯವರನ್ನು ವಿರೋಧಿಸುವವರು ಇಂತಹ ಒಳಾರ್ಥಗಳನ್ನೆಲ್ಲ ಯೋಚಿಸಬೇಕು. ಯೋಚಿಸಿದ ನಂತರ ಇಂತಹ ಸನ್ಮಾನ್ಯರನ್ನು ಶಾಸಕರನ್ನಾಗಿ ಆಯ್ಕೆ ಮಾಡುವ ನಮ್ಮ ಮುಟ್ಟಾಳತನಕ್ಕೆ ನಾವೇ ನಮ್ಮ ಕೆನ್ನೆಗೆರಡು ಬಾರಿಸಿಕೊಳ್ಳಬೇಕು.

ಮುಹಮ್ಮದರನ್ನು ಜನಪದವಾಗಿಸುವ ‘ಓದಿರಿ’

odiri
Dr Ashok K R
ಸ್ನಾತಕೋತ್ತರ ಪದವಿ ಓದುತ್ತಿದ್ದ ದಿನಗಳಲ್ಲಿ ಒಂದು ಸುತ್ತು ಭಗವದ್ಗೀತೆ ಓದಿ ಮುಗಿಸಿದ್ದೆ. ಕುರಾನ್ ಓದೋಣವೆನ್ನಿಸಿತ್ತು. ಇಂಗ್ಲೀಷಿನಲ್ಲಿ ಓದೋ ಕಷ್ಟವ್ಯಾಕೆ ಎಂದುಕೊಂಡು ಕನ್ನಡ ಕುರಾನ್ ಹುಡುಕಿದವನಿಗೆ ಪುಸ್ತಕ ಸಿಕ್ಕಿತ್ತಾದರೂ ಮುನ್ನೂರು ರುಪಾಯಿ ಜೇಬಿನಲ್ಲಿರಲಿಲ್ಲ! ಮುಂದೆ ಯಾವಾಗಲಾದರೂ ಓದಿದರಾಯಿತು ಎಂದುಕೊಂಡೆ. ಓದಲಿಲ್ಲ. ರಂಜಾನ್ ಮಾಸದಲ್ಲಿ ಕಲಬುರಗಿಯ ವಿದ್ಯಾರ್ಥಿಗಳು ಇಫ್ತಿಯಾರ್ ಕೂಟ ಏರ್ಪಡಿಸುತ್ತಿದ್ದರು. ಆ ಸಮಯದಲ್ಲಿ ಇಸ್ಲಾಮಿನ ಬಗೆಗಿನ ಪುಸ್ತಕಗಳನ್ನು ಉಚಿತವಾಗಿ ಹಂಚುತ್ತಿದ್ದರು. ಆಂಗ್ಲದಲ್ಲಿದ್ದ ಆ ಪುಸ್ತಕಗಳನ್ನು ಓದುವುದಕ್ಕೆ ಯಮಹಿಂಸೆಯಾಗುತ್ತಿತ್ತು. ಕಾರಣ ಎಲ್ಲೆಲ್ಲಿ Prophet ಎಂದು ಬರೆಯುತ್ತಾರೋ ಅಲ್ಲೆಲ್ಲಾ Peace be upon him ಅಥವಾ ಅದರ ಸಂಕ್ಷಿಪ್ತ ರೂಪವಾದ pbuh ಎಂಬ ಅಕ್ಷರಗಳು. ಸರಾಗ ಓದಿಗೆ ಅಡ್ಡಿಯುಂಟಾದರೆ ಪುಸ್ತಕ ಓದುವ ಆಸಕ್ತಿ ಉಳಿಯುವುದಾದರೂ ಹೇಗೆ? ಪ್ರವಾದಿ/ ಇಸ್ಲಾಮಿನ ಬಗ್ಗೆ ಇರುವ ಪುಸ್ತಕಗಳು/ಲೇಖನಗಳು ಒಂದೋ ಅತಿಯಾದ ಧಾರ್ಮಿಕ ಪ್ರಜ್ಞೆಯ ಭಾರದಿಂದ ನಲುಗಿರುತ್ತವೆ, ಇಲ್ಲ ಇಸ್ಲಾಮೋಫೋಬಿಯಾದ ಪ್ರಭಾವಕ್ಕೆ ಒಳಗಾದವರ ಸುಳ್ಳಿನ ಕಂತೆಯಾಗಿರುತ್ತದೆ. ಎರಡೂ ರೀತಿಯ ಬರಹಗಳು ಧಾರ್ಮಿಕ ನಂಬುಗೆಯಿರದ ದ್ವೇಷದ ಮನಸ್ಥಿತಿಯಿರದ ಓದುವ ಕುತೂಹಲವಷ್ಟೇ ಇರುವ ವ್ಯಕ್ತಿಗೆ ರುಚಿಸಲಾರದು. ಇಂತವರ ಓದಿಗೆ ಅನುಕೂಲಕರವಾಗಲೆಂದೇ ಬೋಳೂವಾರ ಮಹಮದ್ ಕುಂಞಿ ‘ಓದಿರಿ’ ಪುಸ್ತಕವನ್ನು ಬರೆದಿದ್ದಾರೆ. ಪೂರ್ಣವಾಗಲ್ಲದಿದ್ದರೂ ಪ್ರವಾದಿಯನ್ನು ರವಷ್ಟು ಮಟ್ಟಿಗಾದರೂ ಕನ್ನಡದ ಓದುಗರಿಗೆ ಪರಿಚಯಿಸುವ ಹತ್ತಿರವಾಗಿಸುವ ಕೆಲಸವನ್ನು ಓದಿರಿ ಮಾಡುತ್ತದೆ. ಯಾವ ಕಾಲದ ಯಾವ ಪ್ರವಾದಿಯಾದರೂ ಆಗ ಪ್ರಚಲಿತದಲ್ಲಿದ್ದ ಅಂಧಾಚರಣೆಗಳ ವಿರುದ್ಧ ಹೋರಾಡುತ್ತ ಹೊಸ ಧರ್ಮವನ್ನು ಹುಟ್ಟುಹಾಕುತ್ತಾರೆ. ಕಾಲ ಸವೆದಂತೆ ಆ ಹೊಸ ಧರ್ಮವೂ ಕೂಡ ಅಂಧಾಚರಣೆಯ ಕೂಪದಲ್ಲಿ ಬಿದ್ದು ಬಿಡುವುದು ಕೂಡ ಕಾಲ ತಿಳಿಸಿದ ಸತ್ಯವೇ!

ಪ್ರವಾದಿಯನ್ನು ಚಿತ್ರ ರೂಪದಲ್ಲಿ ಮೂಡಿಸುವುದು ಬಿಡಿ ಮಾತನಾಡುವುದು, ಚರ್ಚಿಸುವುದು, ಬರೆಯುವುದು ಕೂಡ ಅಪರಾಧವೆಂದು ನಂಬುವ ಅನೇಕ ಮುಸ್ಲಿಮರಿದ್ದಾರೆ. ಇಸ್ಲಾಮಿನ ವಿಚಾರಗಳನ್ನು ಪ್ರಶ್ನಿಸಿದವರ ಕೈಕತ್ತರಿಸುವವರು, ಕೊಲೆಗೈಯ್ಯುವವರು ಮತ್ತವರನ್ನು ಬೆಂಬಲಿಸುವವರ ಸಂಖೈಯೇನೂ ಕಡಿಮೆಯಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಬೋಳುವಾರು ಮಹಮದ್ ಕುಂಞಿಯವರ ‘ಓದಿರಿ’ ಕಾದಂಬರಿ ಯಾವ ರೀತಿಯಾಗಿ ಪ್ರವಾದಿ ಮುಹಮ್ಮದರನ್ನು ಚಿತ್ರಿಸಿರಬಹುದು ಎನ್ನುವ ಕುತೂಹಲದಿಂದಲೇ ಪುಸ್ತಕವನ್ನು ಕೈಗೆತ್ತಿಕೊಂಡೆ. ಮೊದಲ ನೆಮ್ಮದಿ ಮುಹಮ್ಮದರ ಹೆಸರು ಬಂದಲ್ಲೆಲ್ಲ peace be upon him ಎಂಬ ಸಾಲುಗಳಿಲ್ಲದಿರುವುದು! ಇದು ಶುದ್ಧಾನುಶುದ್ಧ ಕಾದಂಬರಿಯೇ ಹೊರತು ಧಾರ್ಮಿಕ ಪ್ರಜ್ಞೆಯ ಭಾರದಿಂದ ರೂಪಿತವಾಗಿರುವ ಪುಸ್ತಕವಲ್ಲ. ಬೋಳುವಾರರ ಕಥೆಗಳು ಯಾವ ರೀತಿಯಿಂದ ಓದಿಸಿಕೊಳ್ಳುವ ಗುಣವನ್ನಳವಡಿಸಿಕೊಂಡಿವೆಯೋ ‘ಓದಿರಿ’ ಕೂಡ ಸರಾಗವಾಗಿ ಓದಿಸಿಕೊಳ್ಳುತ್ತದೆ ಅಲ್ಲೊಂದು ಇಲ್ಲೊಂದು ಅಡೆತಡೆಗಳನ್ನೊರತುಪಡಿಸಿ. ಅಂತರಂಗ, ಬಹಿರಂಗ ಮತ್ತು ಚದುರಂಗದಲ್ಲಿ ಪ್ರವಾದಿಯವರ ವಿವಿಧ ಕಾಲಘಟ್ಟದ ಕಥೆಗಳನ್ನು ಹೆಣೆಯಲಾಗಿದೆ. ಅಂತರಂಗ ಬಾಲಕ ಮುಹಮ್ಮದರಲ್ಲಿ ನಿಧನಿಧಾನಕ್ಕೆ ರೂಪುಗೊಳ್ಳುವ ಪ್ರವಾದಿತನದ ಬಗೆಗಿದ್ದರೆ ಬಹಿರಂಗ ಮುಹಮ್ಮದರು ಕೊನೆಯ ಪ್ರವಾದಿಯೆಂಬ ಘೋಷಣೆಯೊಂದಿಗೆ ಇಸ್ಲಾಂ ಧರ್ಮ ಸ್ಥಾಪನೆಯಾಗಿ ಆಗ ಅಸ್ತಿತ್ವದಲ್ಲಿದ್ದ ಇನ್ನಿತರೆ ಧರ್ಮಗಳು ಇಸ್ಲಾಂ ಅನ್ನು ನಾಶಪಡಿಸಬೇಕೆಂದು ನಿರ್ಧರಿಸುವ ಬಗ್ಗೆ. ಸುಳ್ಳು ಹೇಳದ, ಕೆಡಕು ಬಯಸದ, ಕೆಟ್ಟತನವನ್ನೇನೂ ಚಟವಾಗಿಸಿಕೊಳ್ಳದ ಮುಹಮ್ಮದ್ ಮಕ್ಕಾದ ಎಲ್ಲರಿಗೂ ಪ್ರೀತಿ ಪಾತ್ರ ಹುಡುಗ. ಬಡ್ಡಿ ವ್ಯವಹಾರದ ವಿರುದ್ಧ, ವ್ಯಭಿಚಾರದ ವಿರುದ್ಧ, ಮದ್ಯಸೇವನೆಯ ವಿರುದ್ಧದ ಆತನ ನಿಲುವುಗಳನ್ನು ಯಾರೂ ಪಾಲಿಸದಿದ್ದರೂ ಎಲ್ಲರಿಗೂ ಈ ಸತ್ಯಸಂಧನನ್ನು ಕಂಡರೆ ಗೌರವ – ಆದರ. ಈ ಗೌರವಾದರಗಳೆಲ್ಲವೂ ಮಣ್ಣುಪಾಲಾಗುವುದು ಬಹಿರಂಗದಲ್ಲಿ. ದೇವರ ದರ್ಶನವಾಗಿ ಹಿಂದಿನ ಧರ್ಮಗ್ರಂಥಗಳಲ್ಲಿ ಹೇಳಿರುವ ಕೊನೆಯ ಪ್ರವಾದಿ ನಾನೇ ಎಂಬ ಸಂಗತಿ ಮುಹಮ್ಮದರಿಗೆ ತಿಳಿದ ನಂತರ ಅಲ್ಲಿಯವರೆಗೆ ಪಾಲಿಸಿದ ಧರ್ಮಾಚರಣಗೆಗಳನ್ನು ತೊರೆದು ದಿನಕ್ಕೈದು ಬಾರಿ ನಮಾಜು ಮಾಡುವ ಮೂಲಕ ಅಲ್ಲಾಹು ಕೊಟ್ಟ ಸಂದೇಶಗಳನ್ನು ಜನರಿಗೆ ತಲುಪಿಸುವ ಮೂಲಕ ಹೊಸ ಧರ್ಮದ ಹುಟ್ಟಿಗೆ ಕಾರಣರಾಗುತ್ತಾರೆ. ಕೆಲವರು ಈ ಹೊಸ ಧರ್ಮವನ್ನು ಅಪ್ಪಿದರೆ, ಹಲವರು ಅಪ್ಪದಿದ್ದರೂ ಒಪ್ಪಿ ದೂರವುಳಿಯುತ್ತಾರೆ, ಬಹುತೇಕರು ಅಲ್ಲಿಯವರೆಗೆ ಗೌರವಿಸುತ್ತಿದ್ದ ಮುಹಮ್ಮದರನ್ನು ದ್ವೇಷಿಸಲಾರಂಭಿಸುತ್ತಾರೆ.

ಈ ದ್ವೇಷ, ಅನಾದಾರ, ಅಪಹಾಸ್ಯಗಳನ್ನೆಲ್ಲಾ ಎದುರಿಸಿ ಮುಹಮ್ಮದರು ಹೇಗೆ ಇಸ್ಲಾಂ ಧರ್ಮ ಹಬ್ಬಲು ಕಾರಣವಾದರು ಎನ್ನುವುದು ಚದುರಂಗದ ಭಾಗ. ಅಂತರಂಗ ಮತ್ತು ಬಹಿರಂಗದಲ್ಲಿ ಮುಗ್ಧರಂತೆ, ಕೆಲವು ಕಡೆ ದಡ್ಡರಂತೆಯೂ ಕಾಣಿಸಿಬಿಡುವ ಮುಹಮ್ಮದ್ ಚದುರಂಗದಲ್ಲಿ ಚಾಣಾಕ್ಷ್ಯ ಧಾರ್ಮಿಕ ನಾಯಕರಾಗಿ ರೂಪುಗೊಳ್ಳುತ್ತಾರೆ. ಈಗ ಮುಸ್ಲಿಮರ ಪವಿತ್ರ ಸ್ಥಳವೆನ್ನಿಸಿಕೊಳ್ಳುವ ಮಕ್ಕಾದಲ್ಲಿಯೇ ಪ್ರವಾದಿಗೆ ಮತ್ತವರ ಹೊಸ ಧರ್ಮದ ಹಿಂಬಾಲಕರಿಗೆ ರಕ್ಷಣೆಯಿರುವುದಿಲ್ಲ. ತಾತ್ಕಾಲಿಕವಾಗಿ ಮಕ್ಕಾ ತೊರೆದು ಮದೀನಾ ಸೇರುತ್ತಾರೆ. ಇಸ್ಲಾಂ ಧರ್ಮ ವ್ಯಾಪಕವಾಗಿಸಲು ಪ್ರವಾದಿ ವಿರೋಧಿಸುವವರ ಮೇಲಿನ ಯುದ್ಧಗಳಲ್ಲಿ ಗೆದ್ದಿದ್ದಕ್ಕಿಂತ ಆ ಮಧ್ಯ ಪ್ರಾಚ್ಯ ರಾಷ್ಟ್ರಗಳಲ್ಲಿ ಅಸ್ತಿತ್ವದಲ್ಲಿದ್ದ ಗುಲಾಮಗಿರಿ ಪದ್ಧತಿ ಮತ್ತು ಶ್ರೇಷ್ಟ ಗೋತ್ರದ ವ್ಯಸನ ಪ್ರಮುಖ ಕಾರಣವಿರಬೇಕು. ಗುಲಾಮರಿಗೆ ಸ್ವಂತಿಕೆಯ ಧರ್ಮವಿರಲಿಲ್ಲ. ತಮ್ಮ ಒಡೆಯರ ಧರ್ಮವನ್ನೇ ಪಾಲಿಸಬೇಕಾದ ಅನಿವಾರ್ಯತೆ. ಗುಲಾಮಗಿರಿಯೇ ತಪ್ಪೆಂದು ಸಾರಿದ ಪ್ರವಾದಿಯ ಧರ್ಮ ಅವರನ್ನು ಸೆಳೆದಿದ್ದರೆ ಅಚ್ಚರಿಯಿಲ್ಲ. 

ಅಂತರಂಗ ಮತ್ತು ಬಹಿರಂಗದಲ್ಲಿ ಕಾಣುವ ಮುಹಮ್ಮದರ ವಿಮರ್ಶೆ ಚದುರಂಗದಲ್ಲಿ ನಿಧಾನಕ್ಕೆ ಕಣ್ಮರೆಯಾಗಿಬಿಟ್ಟಿದೆ. ಘೋಷಿತ ಪ್ರವಾದಿಯ ಬಗ್ಗೆ ವಿಮರ್ಶಾತ್ಮಕ ಅಂಶಗಳು ಕಡಿಮೆಯಿರಬೇಕು ಎಂದು ಲೇಖಕರು ಬಯಸಿರಬೇಕು ಅಥವಾ ಕಾದಂಬರಿಯ ಪಾತ್ರಗಳು ಬಯಸಿರಬೇಕು! ಪ್ರವಾದಿಯನ್ನು ಸಂಪೂರ್ಣ ಸರಿಯಾಗಿಸಿಬಿಡುವ ಪ್ರಯತ್ನದಲ್ಲಿ ಅಲ್ಲಿಯವರೆಗೂ ಇದ್ದ ಧರ್ಮದ ಜನರನ್ನು ಸಂಪೂರ್ಣ ತಪ್ಪೆಂದು ಬಿಂಬಿಸುವುದೂ ನಡೆದಿದೆ. ಒಂದೇ ಒಂದು ಕಡೆ ಇಸ್ಲಾಮಿಗೆ ಪರಿವರ್ತನೆಗೊಂಡ ಮಗನ ಮನೆಯನ್ನು ತೊರೆದು ಹೋಗುವ ವಯಸ್ಸಾದ ತಾಯಿ ನನ್ನ ಧರ್ಮ ನನಗೆ ಎಂದು ಸೆಡ್ಡುಹೊಡೆಯುವ ಧೈರ್ಯ ತೋರುತ್ತಾಳೆ. ಪ್ರವಾದಿ ಮುಹಮ್ಮದರ ಪ್ರಕಾರ ಕುರ್ ಆನ್ ಅಂತಿಮ ಸತ್ಯವಿರಬಹುದು. ಆದರೆ ಅಂತಿಮ ಸತ್ಯವೆಂಬುದಿದೆಯೇ? ‘ಪ್ರವಾದಿಯ ಅಲ್ಲಾ ದಿನಕ್ಕೆ ಐವತ್ತು ಸಲ ನಮಾಜು ಮಾಡಲು ಹೇಳಿದ್ದನಂತೆ. ಅಷ್ಟೊಂದು ಸಲ ನಮಾಜು ಮಾಡಿದರೆ ಉಳಿದ ಕೆಲಸಗಳಿಗೆ ಸಮಯವಿರುವುದಿಲ್ಲ ಎಂದು ಐದು ಸಲಕ್ಕೆ ಇಳಿಸಲು ಕೇಳಿಕೊಂಡರಂತೆ’ ಎಂಬಂತಹ ಹಾಸ್ಯಾತ್ಮಕ ವಿಮರ್ಶೆಗಳು ಬಹಿರಂಗದ ನಂತರದ ಭಾಗದಲ್ಲಿ ಕಾಣಿಸುವುದಿಲ್ಲ. ಪುಸ್ತಕದ ಕೊನೆಯಲ್ಲಿ ಮುಗಿಯಿತು ಎನ್ನುವುದರ ಬದಲಾಗಿ ‘ಸಶೇಷ’ ಎಂದು ಬೋಳುವಾರರು ಬರೆದಿರುವುದರಿಂದ ‘ನಿರೀಕ್ಷಿಸಬಹುದು’! 

ನಮಗೆ ಪರಿಚಿತವೇ ಇಲ್ಲದ ಪರಿಸರ ಸಂಸ್ಕೃತಿಯನ್ನು ಸರಾಗವಾಗಿ ಓದುವಂತೆ ಮಾಡಿದೆ ಬೋಳುವಾರರ ಲೇಖನಿ. ಪ್ರವಾದಿಯ ಕತೆ ಓದುತ್ತಿದ್ದರೆ ನಮ್ಮ ದೇಶದ ಬುದ್ಧ, ಬಸವಣ್ಣ ನೆನಪಾಗದೆ ಇರಲಾರರು. ಅಂಧಾಚರಣೆಯ ವಿರುದ್ಧದ ಹೋರಾಟದಲ್ಲಿ ಇವರೆಲ್ಲರೂ ಪ್ರಮುಖರೇ ಅಲ್ಲವೇ? ಕಾಲ ಸರಿದಂತೆಲ್ಲ ಇವರು ಪ್ರಾರಂಭಿಸಿದ ಧರ್ಮ ಯಾವ ರೂಪ ಪಡೆದಿದೆ? ಅಂಧಾಚರಣೆಗಳಿಂದ ಮುಕ್ತವಾಗಿದೆಯಾ ಎಂದು ನೋಡಿದರೆ ನಿರಾಶೆಯೇ ಆಗುತ್ತದೆ. ಬಹುದೈವತ್ವವನ್ನು, ಮನುಷ್ಯ ರೂಪಿತ ದೇವಾರಾಧನೆಯನ್ನು ವಿರೋಧಿಸಿದ ಪ್ರವಾದಿ ಮುಹಮ್ಮದ್ ಮಕ್ಕಾದ ಕಅಬಾವನ್ನು, ಮದೀನಾವನ್ನು ಪವಿತ್ರ ಸ್ಥಳ ಮಾಡಿಬಿಡುತ್ತಾರೆ. ಮನುಷ್ಯ ರೂಪಿತ ದೈವದ ಜಾಗವನ್ನು ಮನುಷ್ಯ ನಿರ್ಮಿತ ದುಬಾರಿ ಮಸೀದಿಗಳು ಆಕ್ರಮಿಸಿಕೊಳ್ಳುತ್ತವೆ. ತಮ್ಮ ದೇವ ಮೂರ್ತಿಯನ್ನು ಘಾಸಿಗೊಳಿಸಿದವರ ಮೇಲೆ ಕೋಪಗೊಳ್ಳುತ್ತಿದ್ದ ಕುರೈಶರು ಮುಹಮ್ಮದರನ್ನು ವಿರೋಧಿಸಿದವರಲ್ಲಿ ಪ್ರಮುಖರು. ರೂಪವಿಲ್ಲದ ದೇವರನ್ನು ಮುಹಮ್ಮದರು ಸ್ಥಾಪಿಸಿದರು. ಮಸೀದಿಯನ್ನು ಹಾನಿಗೊಳಿಸಿದವರ ಮೇಲೆ, ‘ಅಪವಿತ್ರ’ಗೊಳಿಸಿದವರ ಮೇಲೆ ಇವತ್ತಿನ ಮುಸ್ಲಿಮರಿಗೂ ಕೋಪವುಕ್ಕುತ್ತದೆ. ಅಲ್ಲಿಗೆ ಬದಲಾದದ್ದೇನು? ಎಂಬಂತಹ ಪ್ರಶ್ನೆಗಳನ್ನು ನಮ್ಮೊಳಗೆ ಮೂಡಿಸುವುದರಲ್ಲಿಯೇ ‘ಓದಿರಿ’ಯ ಯಶಸ್ಸಿದೆ. ಇನ್ನೇನು ಹೇಳುವುದಕ್ಕಿಲ್ಲ. ಒಮ್ಮೆ ಓದಿರಿ!
ಬೆಲೆ: 220/- ನವಕರ್ನಾಟಕದ ಮೂಲಕ ಆನ್ ಲೈನಿನಲ್ಲಿ 176 ರುಪಾಯಿಗೆ ತರಿಸಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ

ಅಕ್ಟೋ 15, 2015

ಬ್ರಾಹ್ಮಣರಿಗೆ 'ಬೈಲ್' ಕೊಡಿಸುವ ಈ ಸಂಪ್ರದಾಯವಾದಿ ವಾದ ಸರಿಯಲ್ಲ: ಶ್ರೀಧರ್ ಪ್ರಭು.

ನಿನ್ನೆ ಪ್ರಕಟಿಸಲಾಗಿದ್ದ ಚಂದ್ರಶೇಖರ್ ಐಜೂರರ ಲೇಖನಕ್ಕೆ (ಶೂದ್ರರೆ ಅಲ್ಲವೇ ಹಿಂದೂತ್ವದ ಬ್ರಾಹ್ಮಣ್ಯದ ನಿಜವಾದ ಬಾಡಿಗಾರ್ಡುಗಳು? ) ಶ್ರೀದರ್ ಪ್ರಭುರವರು ಈ ಕೆಳಗಿನಂತೆ ಪ್ರತಿಕ್ರಿಯಿಸಿದ್ದರು. ಪ್ರತಿಕ್ರಿಯೆ ಐಜೂರರ ಲೇಖನದ ಆಶಯಕ್ಕೆ ಪೂರಕವಾಗಿಯೂ ಇರುತ್ತಾ ಆ ಲೇಖನದ ಕೆಲವು ವಿಚಾರಗಳು ಯಾಕೆ ಸರಿಯಿಲ್ಲ ಎಂದು ತಿಳಿಸುತ್ತಿವೆ. ಹಾಗಾಗಿ ಪ್ರತಿಕ್ರಿಯೆಯನ್ನು ಹೆಚ್ಚು ಜನರಿಗೆ ತಲುಪಲಿ ಎಂಬ ಉದ್ದೇಶದಿಂದ ಲೇಖನವಾಗಿ ಪ್ರಕಟಿಸಲಾಗುತ್ತಿದೆ. 

ಪ್ರಿಯ ಚಂದ್ರು,

ದಲಿತ ಮತ್ತು ಶೂದ್ರರ ನಡುವೆ ಇಲ್ಲದ ಕಂದಕ ನಿರ್ಮಿಸಿ ಶುದ್ರರೇ ದಲಿತರ ಶತ್ರುಗಳು ಎಂದು ಬಿಂಬಿಸಿ ಬ್ರಾಹ್ಮಣರಿಗೆ 'ಬೈಲ್' ಕೊಡಿಸುವ ಈ ಸಂಪ್ರದಾಯವಾದಿ ವಾದಕ್ಕೆ ನನ್ನ ಸಂಪೂರ್ಣ ವಿರೋಧವಿದೆ.

ಮಹಾತ್ಮಾ ಫುಲೆ ಈ ಸತ್ಯವನ್ನು ಸಾಕ್ಷಾತ್ಕರಿಸಿಕೊಂಡ ಅಪ್ರತಿಮ ಚಿಂತಕ. ಹೀಗಾಗಿಯೇ ತಮ್ಮ ಚಳುವಳಿಯ ಪ್ರಣಾಳಿಕೆಯಾದ "ಚಮಚ ಏಜ್" ಪುಸ್ತಕವನ್ನು ಮಾನ್ಯವರ ಕಾನ್ಶಿರಾಂ ಮಹಾತ್ಮಾ ಫುಲೆಯವರಿಗೆ ಸಮರ್ಪಿಸುತ್ತಾರೆ. ಅಷ್ಟೇ ಅಲ್ಲ, ಬುದ್ಧ, ಫುಲೆ, ಅಂಬೇಡ್ಕರ್ ಹಾದಿಯಲ್ಲೇ ಸಾಗಿ ತಮ್ಮ ಚಳುವಳಿಯನ್ನು ವೈದಿಕರ ಮೂರು ವರ್ಣಗಳನ್ನು ಬಿಟ್ಟು ಉಳಿದವರ ಮಧ್ಯೆ ಕಟ್ಟಿ ಅದನ್ನು ಬಹುಜನ ಸಮಾಜದ ಸಮಷ್ಥಿ ಆಶಯಗಳಿಗೆ ಮುಡಿಪಿಡುತ್ತಾರೆ.

ಶೂದ್ರ ರು ನಮ್ಮ ದೇಶದಲ್ಲಿ ಬೌದ್ಧಿಕವಾಗಿ (ಗಮನಿಸಿ- ಬೌದ್ಧಿಕವಾಗಿ ಮಾತ್ರ) ಅತ್ಯಂತ ಹೆಚ್ಚು ಶೋಷಣೆಗೊಳಗಾದ ವರ್ಗ. ಇವರನ್ನು ಅನೇಕಾನೇಕ ವರ್ಷಗಳಿಂದ ಅನೇಕಾನೇಕ 'ಮಹಾತ್ಮರು' ಹಾದಿ ತಪ್ಪಿಸಿದ್ದಾರೆ. ಶೂದ್ರರು ಬಹುಜನ ಚಳುವಳಿಯ ಟ್ರಂಪ್ ಕಾರ್ಡ್ ಇದ್ದ ಹಾಗೆ, ಇವರನ್ನು ಬಿಟ್ಟರೆ ನಾವು ಮುಳುಗಿದ ಲೆಕ್ಕವೇ!

ಶೂದ್ರರ ಮತ್ತು ದಲಿತರ ಸಾಂಸ್ಕೃತಿಕ ಐಕ್ಯತೆ ಮತ್ತು ತಾದಾತ್ಮ್ಯವನ್ನು ಕಾಂಚ ಐಲಯ್ಯ ತಮ್ಮ "Why I am not a Hindu" ಎಂಬ ಐತಿಹಾಸಿಕ ಪುಸ್ತಕದಲ್ಲಿ ಅತ್ಯಂತ ಸ್ಫುಟವಾಗಿ ದಾಖಲಿಸುತ್ತಾರೆ. ತಮ್ಮ ಕುರುಬ ಸಮಾಜಕ್ಕೂ ಮಾದಿಗರ ಸಮಾಜಕ್ಕೂ (ಒಂದು ಉದಾಹರೆಣೆಗಾಗಿ ಈ ನಿದರ್ಶನ) ಇರುವ ಸಾಂಸ್ಕೃತಿಕ ಮತ್ತು ಸಾಮಾಜಿಕ ಸಾಮ್ಯತೆಗಳನ್ನು ಹೇಳುತ್ತಾ, ನಾವೆಲ್ಲರೂ ಹೇಗೆ ಒಂದೇ ವರ್ಗ ಎಂಬುದನ್ನು ಬಹು ಚೆನ್ನಾಗಿ ಸಾಬೀತು ಪಡಿಸುತ್ತಾರೆ.

ನಾವು ಸಂಘಟಿಸಬೇಕಿರುವ ವರ್ಗವನ್ನು ಬೇರೆಯವರ ತೆಕ್ಕೆಗೆ ನಾವು ಬಿಟ್ಟಿದ್ದರಿಂದ ನಮಗೆ ಈ ಸ್ಥಿತಿ ಬಂದಿದೆ. ನೋಡಿ, ಉತ್ತರ ಪ್ರದೇಶದಲ್ಲಿ ಶೂದ್ರರು ನಮ್ಮೊಂದಿಗೆ ಬರದಿರುವ ಕಾರಣದಿಂದ ಬ್ರಾಹ್ಮಣರನ್ನು ಸೇರಿಸಿಕೊಳ್ಳುವ ರಾಜಕೀಯ ಅನಿವಾರ್ಯತೆ ಸೃಷ್ಟಿಯಾಯಿತು. ಇದನ್ನು ಕೇವಲ ರಾಜಕೀಯ ಅನಿವಾರ್ಯವಾಗಿ ನೋಡಬೇಕೇ ವಿನಃ ಮೂಲ ತತ್ವಕ್ಕೆ ಚ್ಯುತಿಯಾಗಿ ಅಲ್ಲ.

ಇಂದು ಶುದ್ರರಿಗೆ ನಾವು ಹೊರಗಿಟ್ಟ ಕಾರಣ ಅವರು ನಮ್ಮ ವಿರೋಧಿ ಪಾಳಯದಲ್ಲಿದ್ದಾರೆ. ಅದರಿಂದ ತಾತ್ಕಾಲಿಕ ಅಧಿಕಾರ ಸಿಕ್ಕಿರಬಹುದು ಆದರೆ ಮತ್ತಷ್ಟು ಸಾಂಸ್ಕೃತಿಕವಾಗಿ ಮತ್ತು ಬೌದ್ಧಿಕವಾಗಿ ಶೋಷಣೆಗೆ ಗುರಿಯಾಗಿದ್ದಾರೆ. ಇವರ ಚಮಚಾ ಯುಗ ಬಹುದಿನ ಸಾಗದು. ಹಾಗೆಯೇ ಶುದ್ರರನ್ನು ತಬ್ಬದ ನಮ್ಮ ಅಸ್ಪ್ರುಶ್ಯತೆಯೂ ಕೊನೆಯಾಗಲೇ ಬೇಕು.

ಪೆರಿಯಾರ್, ಶಾಹು ಮಹಾರಾಜ್, ನಾಲ್ವಡಿ ಯಂಥಹ ಆದರಣೀಯರನ್ನು ಹೊರಗಿಟ್ಟ ಬಹುಜನ ಪರ ಚಿಂತನೆ ಇದೆಯೇ? ಬಹುಜನ ಚಳುವಳಿಯ ಮುಂಚೂಣಿಯಲ್ಲಿ ದಲಿತರು ಇರಬೇಕು ಎಂಬುದು ಎಷ್ಟು ಅನಿವಾರ್ಯವೋ ಅಷ್ಟೇ ಮುಖ್ಯ ಶೂದ್ರರ ನೇತೃತ್ವ ಮತ್ತು ಅಧಿಕಾರ ಹಂಚಿಕೆ.

ಉತ್ತರ ಪ್ರದೇಶದ ಶುದ್ರರಿಗಿಂತ ನಮ್ಮವರು ಎಷ್ಟೋ ಮೇಲು. ಹಾಗಿದ್ದೂ,
'ಜಿಸ್ ಕಿ ಜಿತ್ನಿ ಸಂಖ್ಯಾ ಭಾರಿ ಉಸ್ಕಿ ಉತನಿ ಭಾಗೇದಾರಿ' (ಅವರವರ ಸಂಖ್ಯೆಯಷ್ಟು ಅವರವರ ಅಧಿಕಾರ ಸಹಭಾಗಿತ್ವ) ಎಂದು ದಾರಿ ತೋರಿಸಿದ ಮಾನ್ಯವರರ ವಾಣಿ ನಾವು ಮರೆಯದಿರೋಣ.

ಅಕ್ಟೋ 14, 2015

ಯಾಕೆ ಕಾಡುತಿದೆ ಸುಮ್ಮನೆ ನನ್ನನು: ಪುಸ್ತಕ ಬಿಡುಗಡೆ.

ಅವಧಿ ವೆಬ್ ಪತ್ರಿಕೆಯಲ್ಲಿ ಪ್ರಕಟವಾದ ಸಂಧ್ಯಾ ರಾಣಿಯವರ ಆಯ್ದ ಬರಹಗಳ ಸಂಗ್ರಹ "ಯಾಕೆ ಕಾಡುತಿದೆ ಸುಮ್ಮನೆ ನನ್ನನು" ಇದೇ ಭಾನುವಾರ (18, ಅಕ್ಟೋಬರ್) ಬಿಡುಗಡೆಗೊಳ್ಳಲಿದೆ. ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀ ಕೃಷ್ಣರಾಜ ಪರಿಷನ್ಮಂದಿರದಲ್ಲಿ ಹತ್ತು ಘಂಟೆಗೆ ಕಾರ್ಯಕ್ರಮ ನಡೆಯಲಿದೆ. ಪುಸ್ತಕ ಪಲ್ಲವ ಪ್ರಕಾಶನದಿಂದ ಪ್ರಕಟಿತವಾಗಿದೆ.