ರಾತ್ರಿಯೆಲ್ಲ ಕನಸುಗಳು. ಪರಶು, ಸಾಗರ ಕನಸುಗಳನ್ನಾಳಿಬಿಟ್ಟರು. ನನ್ನವೇ ಮಾತುಗಳನ್ನು ತಿರುಗಿಸಿ ಮುರುಗಿಸಿ ನನಗೇ ಹೇಳುತ್ತಿದ್ದುದನ್ನು ಬಿಟ್ಟರೆ ಅವರವೇ ಮಾತುಗಳನ್ನು ಹೇಳಲೇ ಇಲ್ಲ. ಹೇಳಿದ್ದೆಲ್ಲವೂ ನನ್ನದೇ ದನಿಯಲ್ಲಿ ಕೇಳಿ ಮತ್ತಷ್ಟು ಹಿಂಸೆ. ನೀನ್ ಸರಿಯಿಲ್ಲ ಅಂತ ಹೇಳಿದವರೇ ಸರಿಯಾ? ನನ್ನ ಮನಸ್ಸು ಅಷ್ಟೊಂದು ಚಂಚಲವಾ? ನನಗೇ ಅನುಮಾನ ಮೂಡಿಸಿಬಿಟ್ಟ ಶಶಿ. ಎಷ್ಟೇ ವಿಶ್ಲೇಷಿಸಿದರೂ ರಾಮ್ ಬಗ್ಗೆ ನನ್ನಲ್ಲಿ ಯಾವತ್ತಿಗೂ ಸ್ನೇಹದ ಭಾವನೆ ಬಿಟ್ಟು ಮತ್ತೊಂದು ಮೂಡಲಿಲ್ಲ. ಸರಿಯಾಗಿ ನೆನಪಿಗೆ ತಂದುಕೊಂಡರೆ ಅವರ ಕುರಿತು ಸ್ನೇಹದ ಭಾವನೆ ಹುಟ್ಟಿದ್ದು ಕೂಡ ಅನಿವಾರ್ಯ ಕಾರಣಗಳಿಂದಾಗಿ. ರಾಜೀವ್ ಮನೆಯಿಂದ ದೂರವಿದ್ದಾಗ, ನಮ್ಮ ಮನೆಯವರೆಲ್ಲರೂ ಟ್ರಿಪ್ಪಿಗೆ ಹೋಗಿದ್ದಾಗ ಮಗಳು ಆಸ್ಪತ್ರೆಯಲ್ಲಿದ್ದ ಸಂದರ್ಭದಲ್ಲಿ ರಾಮ್ ಮಾಡಿದ ಸಹಾಯದಿಂದಲ್ಲವೇ ಅವರೊಡನೆ ಸ್ನೇಹ ಹಸ್ತ ಚಾಚಿದ್ದು. ಆ ಘಟನೆ ನಡೆಯದೇ ಹೋಗಿದ್ದಲ್ಲಿ ನಾ ರಾಮ್ ಜೊತೆಗೆ ಇನ್ನೂ ಅವರು ನಮ್ಮ ಮನೆಯಲ್ಲಿ ಬಂದು ಕುಡಿದ ಕಾರಣವನ್ನಿಟ್ಟುಕೊಂಡೇ ಮುನಿಸು ಸಾಧಿಸುತ್ತಿದ್ದುದೌದು. ರಾಮ್ ಇಸ್ ಸ್ಮಾರ್ಟ್, ಹ್ಯಾಂಡ್ಸಮ್.... ಇಲ್ಲ ಅನ್ನಲ್ಲ. ಆದರೆ ಅವರೊಟ್ಟಿಗೆ ಸಂಬಂಧ ಬೆಳೆಸಬೇಕು ಅಂತೆಲ್ಲ ಯಾವತ್ತೂ ಯೋಚನೆಯೂ ಸುಳಿದಿಲ್ಲ. ಇನ್ನೂ..... ಈಗಲ್ಲ...... ರಾಧ ಹುಟ್ಟುವ ಮುನ್ನ..... ಸಾಗರ ಪರಿಚಯವಾಗುವುದಕ್ಕೆ ಮೊದಲು......ಅಲ್ಲೆಲ್ಲೋ ಒಬ್ಬ ಅಪರಿಚಿತ ಕಂಡಾಗ ಪಟ್ಟಂತ ಇಷ್ಟವಾಗಿಬಿಟ್ಟರೆ...... ಅವನೊಡನೆ ಕಾಮಿಸಿದಂತೆ ಕಲ್ಪನೆ ಮೂಡುತ್ತಿತ್ತು......ಆ ಕಲ್ಪನೆ ಕೂಡ ನಿಜವಾಗಬೇಕೆಂಬ ಅನ್ನಿಸಿಕೆಯೇನೂ ಇರುತ್ತಿರಲಿಲ್ಲ.....ರಾಜೀವನೊಡನೆ ಮಲಗುವಾಗಲೂ ಆ ಅಪರಿಚಿತ ವ್ಯಕ್ತಿ ಸ್ಮೃತಿಪಟಲದಲ್ಲಿ ಮೂಡುತ್ತಿರಲಿಲ್ಲ. ಅದು ಸಹಜವಾಗಿ ಎಲ್ಲರಲ್ಲೂ ಮೂಡುವ ಭಾವನೆಗಳೇ ಹೌದು ಎಂದು ನಂಬಿದ್ದೆ. ಅಂತ ಯಾವ ಕಲ್ಪನೆ ಕೂಡ ರಾಮ್ ಬಗ್ಗೆ ನನಗಿದುವರೆಗೂ ಬಂದಿಲ್ಲ. ಆತನಿಗೆ ಬಂದಿರಬಹುದಾ? ಬಂದಿರಬಹುದು. ಬಂದಿದ್ದರೂ ಅದೇನೂ ತಪ್ಪಲ್ಲವಲ್ಲ. ಅವರೇ ಏನಾದರೂ ಆಸ್ಪತ್ರೆಯಲ್ಲಿ ಗುಲ್ಲೆಬ್ಬಿಸಲು ಸಹಕರಿಸಿಬಿಟ್ಟರಾ? ಗೆಳೆಯರ ಬಳಿ ಮಾತನಾಡುತ್ತಾ "ನಾನೂ ಅವ್ಳೂ ತುಂಬಾ ಕ್ಲೋಸು" ಅಂತೇಳಿ ಕಣ್ಣು ಹೊಡೆದುಬಿಟ್ಟರೂ ಸಾಕು.....ದೊಡ್ಡ ಸುದ್ದಿಯಾಗ್ತದೆ. ಆದರೆ ನನಗೆ ಗೊತ್ತಿರುವಂತೆ ರಾಮ್ ಅಂತಹ ಕೆಲಸ ಮಾಡುವವರಲ್ಲ. ಕಲ್ಪನೆಯಲ್ಲಿ ನನ್ನೊಡನೆ ಕಾಮಿಸಿದ್ದರೂ ಇರಬಹುದೇನೋ ಆದರೆ ಆ ಕಲ್ಪನೆ ನಿಜವಾಗಲಿ ಎಂಬುದ್ದೇಶ ಅವರಿಗೂ ಇದ್ದಿರಲಾರದು. ಮತ್ಯಾಕೆ ಜನರೀ ರೀತಿ ಸುಳ್ಳು ಸುಳ್ಳೇ ಸುದ್ದಿ ಹಬ್ಬಿಸುತ್ತಾರೆ? ನಾ ಸುಮಾಳೊಡನೆ ಹೋಗಿ ಕಾಫಿ ಕುಡಿದು ಹರಟೋದು ಎಷ್ಟು ಸಹಜವೋ ರಾಮ್ ಜೊತೆಗೆ ಹೋಗಿ ಕಾಫಿ ಕುಡಿದು ಹರಟೋದು ಕೂಡ ಅಷ್ಟೇ ಸಹಜ ಅಂತ ಇವರ್ಯಾಕೆ ಅರ್ಥೈಸಿಕೊಳ್ಳುವುದಿಲ್ಲ? ಕೆಲಸಕ್ಕೆ ಹೋಗಲೇ ಮನಸ್ಸು ಬಾರದಷ್ಟು ತಲೆ ನೋವು. ಕೆಲಸಕ್ಕೆ ಹೋಗಲಲ್ಲ ತಲೆ ನೋವು, ಕೆಲಸಕ್ಕೆ ಹೋದರೆ ಸೋನಿಯಾಳನ್ನು ಕಾಣಬೇಕಾಗುತ್ತದೆ ಎನ್ನುವ ಕಾರಣಕ್ಕೆ ತಲೆ ನೋವು. ಅವಳ ಮನದಲ್ಲೀಗ ನಾ ಕೆಟ್ಟವಳಾಗಿ ಹೋಗಿದ್ದೀನಿ. ಇವತ್ತಲ್ಲದಿದ್ದರೆ ನಾಳೆ, ನಾಳೆಯಲ್ಲದಿದ್ದರೆ ಮತ್ತೊಂದು ದಿನ ಅವಳನ್ನು ಎದುರಿಸಲೇಬೇಕಲ್ಲ ಎಂದು ಧೈರ್ಯ ತಂದುಕೊಳ್ಳುತ್ತಾ ಮೇಲೆದ್ದು ತಯಾರಾದೆ.
ಆಸ್ಪತ್ರೆಗೆ ಹೋಗಿ ನನ್ನ ಬೆಳಗಿನ ವಾರ್ಡ್ ಕೆಲಸಗಳನ್ನೆಲ್ಲ ಮುಗಿಸಿ ಸೋನಿಯಾಳ ರೂಮಿನ ಬಳಿ ಹೋದೆ. ನಿನ್ನೆಯ ಮುನಿಸು ಇವತ್ತಿಗೂ ಮುಂದುವರೆದಿತ್ತು. ಶಶಿಯ ಕಡೆಗೆ ನೋಡಿದೆ. ಅವನ ಕಣ್ಣುಗಳಲ್ಲೂ ನಾನು ಚಿಕ್ಕವಳಾಗಿ, ಎಲ್ಲಾ ರೀತಿಯ ಅನುಮಾನಗಳಿಗೆ ಅರ್ಹಳಾದ ರೀತಿಯಲ್ಲಿ ಕಂಡು ಕಸಿವಿಸಿಯಾಯಿತು. ಕೊನೇಪಕ್ಷ ಅವನಿಗಾದರೂ ನಾ ಯಾಕೆ ಪರಶುನನ್ನು ಬಿಟ್ಟು ರಾಜೀವನನ್ನು ಮದುವೆಯಾದೆ ಎನ್ನುವುದರ್ಥವಾಗಿದೆ ಎಂದುಕೊಂಡಿದ್ದೆ. ನಾವು ನಂಬಿದ್ದೆಲ್ಲವೂ ಸುಳ್ಳೆಂದು ಸಾಬೀತಾಗುವವರೆಗಷ್ಟೇ ಅದು ಸತ್ಯ. ನಮ್ಮ ಮೂವರ ನಡುವೆ ಉಸಿರುಕಟ್ಟಿಸುವಂತಿದ್ದ ಮೌನಕ್ಕೆ ಪರಿಹಾರವೆಂಬಂತೆ ಅಂದು ಜಯಂತಿ ಮೇಡಂ ಎಂದಿಗಿಂತ ಮುಂಚಿತವಾಗಿಯೇ ರೌಂಡ್ಸಿಗೆ ಬಂದರು. ಮೇಡಂ ಆಗಮನದೊಂದಿಗೆ ಸ್ಮಶಾನ ಕಳೆಯನ್ನೊತ್ತುಕೊಂಡಿದ್ದ ಮೂವರ ಮುಖದಲ್ಲೂ ಕಪಟ ನಗು ವಿಜೃಂಭಿಸಿತು.