"ನೀವ್ ಹೋಗಿ ಅಕ್ಕ. ಇವರಿರ್ತಾರೆ ರಾತ್ರಿಗೆ" ಸೋನಿಯಾಳ ದನಿ ಎಂದಿನಂತಿರಲಿಲ್ಲ ಎನ್ನುವುದೇನೋ ಅರಿವಿಗೆ ಬಂತು. ಆಸ್ಪತ್ರೆ ವಾಸ, ಅದರಲ್ಲೂ ಗರ್ಭ ನಿಲ್ಲದೇ ಹೋದರೆ ಅನ್ನೋ ಟೆನ್ಶನ್ನು ಎಲ್ಲಾ ಸೇರಿದಾಗ ದನಿ ಮಾಮೂಲಿನಂತಿರಲು ಸಾಧ್ಯವಿಲ್ಲವಲ್ಲ. ಗಂಡ ಇದ್ರೆ ಧೈರ್ಯ ಜಾಸ್ತಿಯಿರ್ತದೋ ಏನೋ.
ʻಪರವಾಗಿಲ್ಲ ಬಿಡು ಸೋನಿಯಾ. ನಾನೇ ಇರ್ತೀನಿʼ
"ಹೇಳಿದ್ನಲ್ಲಕ್ಕ. ಇವರಿರ್ತಾರೆ ಅಂತ. ನೀವಿದ್ದು ನನ್ನ ನೋಡೋದೇನು ಬೇಡ. ನೀವ್ ದಯವಿಟ್ಟು ಹೋಗಿ" ಎಂದವಳು ಖಂಡತುಂಡವಾಗಿ ಹೇಳಿದಾಗ ಎಲ್ಲೋ ಏನೋ ತಪ್ಪಾಗಿದೆ, ಏನಂತ ಗೊತ್ತಾಗದ ಪರಿಸ್ಥಿತಿಯಲ್ಲಿ ನಾನಿದ್ದೀನಿ ಅನ್ನುವುದರ ಅರಿವಾಯಿತು. ಅವಳಿಷ್ಟು ಕಟುವಾಗಿ ಹೇಳಿದ ಮೇಲೆ ಮತ್ತೆ ಅಲ್ಲಿ ನಿಲ್ಲುವ ಮನಸ್ಸಾಗಲಿಲ್ಲ ನನಗೆ. ʻಟೇಕ್ ಕೇರ್ʼ ಎಂದ್ಹೇಳಿದಾಗಲೂ ಅವಳ ಮುಖದಲ್ಲೊಂದು ನಗು ಮೂಡಲಿಲ್ಲ. ಹೊರಬಿದ್ದೆ. ನಿನ್ನೆ ರಾತ್ರಿಯೆಲ್ಲ ಚೆಂದವಾಗಿ ಮಾತನಾಡುತ್ತಾ ಗರ್ಭದ ದಿನಗಳ ಭಯ ಸಂತಸ ಖುಷಿ ಆತಂಕದ ಬಗ್ಗೆಯೆಲ್ಲ ಲವಲವಿಕೆಯಿಂದ ಮಾತನಾಡುತ್ತಿದ್ದವಳಿಗೆ ಒಂದೇ ದಿನದಲ್ಲಿ ನನ್ನ ಮೇಲೆ ಸಿಟ್ಟು ಮಾಡಿಕೊಳ್ಳುವಂತದ್ದೇನಾಯಿತು? ತಿಳಿಯಲಿಲ್ಲ. ನನ್ನಿಂದೇನಾದರೂ ತಪ್ಪಾಯಿತಾ? ನನ್ನ ಪ್ರಜ್ಞೆಗೆ ಬಂದಂತೆ ಯಾವ ತಪ್ಪೂ ಆಗಿಲ್ಲ. ರಾತ್ರಿ ಮಾತನಾಡುತ್ತಾ ಮಲಗಿದ್ದು ಹನ್ನೊಂದೂವರೆಯ ಮೇಲಾಗಿತ್ತು. ಬೆಳಿಗ್ಗೆ ಎದ್ದಾಗ ಮತ್ತೊಂದಷ್ಟು ರಕ್ತಸ್ರಾವವಾಗಿತ್ತು. ಜಯಂತಿ ಮೇಡಮ್ಮಿಗೆ ಫೋನ್ ಮಾಡಿದ್ದೆ. "ತೊಂದರೆಯೇನಿರಲ್ಲಮ್ಮ. ಕೆಲವರಿಗೆ ವಾರದವರೆಗೆ ರಕ್ತ ಹೋಗ್ತದೆ. ಬಂದು ನೋಡ್ತೀನಿ. ನೋಡುವ. ಬೇಕಿದ್ರೆ ನಿಮ್ಮ ಸಮಾಧಾನಕ್ಕೆ ಮತ್ತೊಂದು ಸ್ಕ್ಯಾನ್ ಮಾಡಿಸುವ" ಎಂದರು.