“ಹೇಳಿದ್ನಪ್ಪ. ಬರಲಿಲ್ಲ ನಿಮ್ಮಮ್ಮ” ಮೂರು ಪದ ಜೊತೆಗೂಡಿಸಲು ಮೂರು ನಿಮಿಷದಷ್ಟು ಸಮಯ ತೆಗೆದುಕೊಂಡು ರಾಮೇಗೌಡ ಅಂಕಲ್ ಹೇಳುವಾಗ ಆಸ್ಪತ್ರೆಯ ರೂಮಿನೊಳಗಿದ್ದವರೆಲ್ಲರ ಕಣ್ಣಲ್ಲಿ ನೀರಾಡಿತ್ತು. ಸೋನಿಯಾಳನ್ನೊಬ್ಬಳನ್ನ ಹೊರತುಪಡಿಸಿ.
"ಆ ಪಾಪಿ ಪಿಂಡ ಹೋದ್ರೆ ಹೋಗ್ಲಿ ಬಿಡಿ" ಅಂದಿರಬೇಕಲ್ಲ ಎಂದು ವ್ಯಂಗ್ಯದಿಂದ ಕೇಳಿದ್ದಕ್ಕೆ ಅಂಕಲ್ ಪ್ರತಿಯಾಡಲಿಲ್ಲ. ಸೋನಿಯಾಳ ವ್ಯಂಗ್ಯದಲ್ಲಿ ಸತ್ಯವಿದ್ದಿರಲೇಬೇಕು. ಅಲ್ಲ, ತೀರ ತಾಯಿ ಆದವಳಿಗೆ ಇಷ್ಟರಮಟ್ಟಿಗೆ ದ್ವೇಷ ಇರೋದಕ್ಕಾದರೂ ಹೇಗೆ ಸಾಧ್ಯ? ಮಗಳೂ ತಾಯಿಯಾಗುವುದರಲ್ಲಿದ್ದಾಳೆ. ಅದೇನೋ ರಕ್ತ ಹೋಗ್ತಿದ್ಯಂತೆ. ಅಬಾರ್ಷನ್ ಆದರೂ ಆಗಿಬಿಡಬಹುದು. ಮಗಳೂ ಅಂತ ಬೇಡ, ಗೊತ್ತಿರೋ ಒಬ್ಬ ಹೆಣ್ಣುಮಗಳು ಅಂತಾದರೂ ಮನ ಕರಗಲಾರದಾ? ಕರಗಬಾರದಾ? ಸೋನಿಯಾಳ ಕಣ್ಣಲ್ಲಿ ಮೂಡದ ಕಣ್ಣೀರು ಮುಂದಿನ ದಿನಗಳಲ್ಲಿ ಅವಳು ಅವರಮ್ಮನ ಜೊತೆ ನಡೆದುಕೊಳ್ಳುವ ರೀತಿಯನ್ನು ವಿವರಿಸುತ್ತಿತ್ತು.
ಅಂಕಲ್ ಮತ್ತು ಸೋನಿಯಾಳನ್ನು ಮಾತನಾಡಿಕೊಳ್ಳಲು ಬಿಟ್ಟು ನಾನೂ, ಶಶಿ, ಅಪ್ಪ, ಅಮ್ಮ ಹೊರಬಂದೆವು. ಮೌನ ಅಸಹನೀಯವಾಗಿತ್ತು. ಮೌನ ಮುರಿಯುತ್ತ ಅಮ್ಮ "ರಾತ್ರಿ ನಾನೇ ಉಳಿದುಕೊಳ್ಳಲಾ ಇಲ್ಲಿ?" ಎಂದು ಕೇಳಿದರು.
"ಏನ್ ಬೇಡ. ನಾನೇ ಇರ್ತೀನಿ ಬಿಡಿ" ಎಂದ ಶಶಿ.
"ಹಂಗಲ್ವೋ.... ನಾವ್ಯಾರಾದ್ರೂ ಹೆಂಗಸ್ರು ಇದ್ರೆ ಉತ್ತಮ ಅಲ್ವ"
"ಯಾಕ್ ಗಂಡಸ್ರು ಇಂಥ ವಿಷಯ ಎಲ್ಲಾ ನೋಡ್ಕೋಬಾರ್ದು ಅಂತಾನಾ?"