ನವೆಂ 17, 2019

ಒಂದು ಬೊಗಸೆ ಪ್ರೀತಿ - 40

ಡಾ. ಅಶೋಕ್.‌ ಕೆ. ಆರ್.‌
ಹಿಂಗಿಂಗಾಯ್ತು ಅಂತ ಮೆಸೇಜ್ ಮಾಡಿದೆ. “ಮ್" ಎಂದೊಂದು ಪ್ರತಿಕ್ರಿಯೆ ಕಳಿಸಿದನಷ್ಟೇ. ಅವನಾದರೂ ಏನು ಹೇಳಿಯಾನು? ಏನು ಹೇಳಿದರೂ ಅದರಿಂದ ನನಗುಪಯೋಗವಾಗುವುದು ಅಷ್ಟರಲ್ಲೇ ಇದೆ. ಮೆಸೇಜುಗಳಿಂದ ಸುಳ್ಳು ಸುಳ್ಳೇ ಸಮಾಧಾನ ಆಗಬಹುದೇನೋ ಅಷ್ಟೇ. “ಜಾಸ್ತಿ ತಲೆ ಕೆಡಿಸಿಕೊಳ್ಳಬೇಡವೇ. ಆದಂಗ್ ಆಗ್ತದೆ. ಒಂದೆರಡು ತಿಂಗಳು ಹೆಂಗೋ ನಿಮ್ಮ ಮನೆಯಲ್ಲೋ ನಿನ್ನ ತಮ್ಮನ ಹತ್ತಿರವೋ ಒಂದಷ್ಟು ದುಡ್ಡು ತೆಗೆದುಕೊಂಡು ಸಂಭಾಳಿಸು. ನೋಡುವ, ಅಷ್ಟರಲ್ಲಿ ನಿನ್ ಗಂಡನ ಫಾರ್ಮಸಿಯಿಂದ ಲಾಭ ಬರ್ತದೆ ಅನ್ಸುತ್ತೆ. ಅಷ್ಟರೊಳಗೆ ನಾನೂ ಕೆಲಸಕ್ಕೆ ಸೇರಿರ್ತೀನಿ. ಕೊಡ್ತೀನಿ" ಎಂದು ಮೆಸೇಜ್ ಮಾಡಿದ. 

'ಇಲ್ವೋ. ನಮ್ಮಿಬ್ಬರ ಸಂಬಂಧದಲ್ಲಿ ಹಣ ಬರೋದು ನನಗಿಷ್ಟವಿಲ್ಲ. ದುಡ್ಡು ಹೆಂಗೋ ಹೊಂಚಿಕೊಳ್ಳಬಹುದು ಬಿಡು. ನೀನೇ ಹೇಳಿದಂಗೆ ಅವರ ಮನೆಯವರು ನಮ್ಮ ಮನೆಯವರು ಇದ್ದೇ ಇದ್ದಾರಲ್ಲ. ಬೇಜಾರ್ ಅಂದ್ರೆ ಕೆಲಸ ಬಿಡೋ ದೊಡ್ಡ ನಿರ್ಧಾರವನ್ನು ಕೂಡ ನನಗೆ ತಿಳಿಸದೇ ಹೋದರಿವರು. ಅಷ್ಟೊಂದು ದೂರದವಳಾಗಿಬಿಟ್ಟೆ ನೋಡು. ನೀ ಇವರಂಗೆ ಆಗಬೇಡ್ವೋ. ನಿನ್ನ ಹೆಂಡತಿ ಒಪ್ತಾಳೋ ಬಿಡ್ತಾಳೋ ಅವಳಿಗೊಂದು ಮಾತು ಎಲ್ಲದರ ಬಗ್ಗೆಯೂ ಹೇಳು... ನೀ ಹೇಳ್ತಿ ಬಿಡು' 

“ಹ ಹ. ಅದೆಂಗೆ ಅಷ್ಟು ಖಡಕ್ಕಾಗಿ ಹೇಳ್ತಿ" 

'ಮ್. ನೀ ಚೆಂದ ಅರ್ಥ ಮಾಡ್ಕೋತಿ ಅದಿಕ್ಕೆ ಹೇಳ್ದೆ' 

“ಏನೋ ನೋಡುವ ಬಿಡು. ನೀ ಜಾಸ್ತಿ ಬೇಸರ ಮಾಡಬೇಡ್ವೆ. ನಂಗೂ ದುಃಖವಾಗ್ತದೆ" 

'ಹು ಕಣೋ. ಅದ್ಸರಿ ಪರೀಕ್ಷೆ ಹೆಂಗ್ ಆಯ್ತು. ನನ್ನ ಚಿಂತೆಯಲ್ಲೇ ಪರೀಕ್ಷೆ ಕೆಟ್ಟದಾಗಿ ಮಾಡಲಿಲ್ಲ ತಾನೆ'

ಒಂದೊಂದೇ ಎಪಿಸೋಡು ಹುಡುಕುಡುಕಿ ಓದೋಕೆ ಬೇಸರವಾ? ಪೂರ್ತಿ ಇ - ಪುಸ್ತಕ ತೆಗೆದುಕೊಳ್ಳಲು ಇಲ್ಲಿ ಕ್ಲಿಕ್ಕಿಸಿ.

ನವೆಂ 10, 2019

ಒಂದು ಬೊಗಸೆ ಪ್ರೀತಿ - 39

ಡಾ. ಅಶೋಕ್.‌ ಕೆ. ಆರ್.‌
ಬಹಳ ದಿನಗಳ ನಂತರ ನಮ್ಮ ಮೆಡಿಕಲ್ ಸೂಪರಿಂಟೆಂಡೆಂಟ್ ಫೋನು ಮಾಡಿದ್ದರು. ಬೆಳಗಿನ ಡ್ಯೂಟಿಯಲ್ಲಿದ್ದೆ ಅವರ ಫೋನು ಬಂದಾಗ. ಪುರುಷೋತ್ತಮನ ಜೊತೆ ಗಲಾಟೆ ನಡೆಯುವಾಗ ನನಗೆ ಬಹಳಷ್ಟು ಮಾನಸಿಕ ಬೆಂಬಲ ಕೊಟ್ಟು ಆರ್.ಬಿ.ಐಗೆ ವರ್ಗ ಮಾಡಿಕೊಟ್ಟಿದ್ದರವರು. ಹಿಂಗಾಗಿ ಒಂಚೂರು ಹೆಚ್ಚೇ ಗೌರವವೆಂದರೂ ತಪ್ಪಾಗಲಾರದು. ಸರ್ ಫೋನು ಮಾಡಿದವರೇ ನನಗೆ ಹಲೋ ಎನ್ನಲೂ ಪುರುಸೊತ್ತು ನೀಡದೆ "ನೋಡಮ್ಮ ಧರಣಿ. ನಮ್ಮಲ್ಲಿ ಒಂದ್ ಡಿ.ಎನ್.ಬಿ ಪೀಡಿಯಾಟ್ರಿಕ್ಸ್ ಸೀಟು ಖಾಲಿ ಉಳಿದುಕೊಂಡಿದೆ ಈ ವರ್ಷ. ನಾ ಮ್ಯಾನೇಜುಮೆಂಟಿನವರಿಗೆ ಹೇಳಿಟ್ಟಿದ್ದೀನಿ. ನಮ್ಮಲ್ಲೇ ಕೆಲಸ ಮಾಡೋ ಧರಣೀಗೇ ಆ ಸೀಟು ಕೊಡಬೇಕೆಂದು. ಇಲ್ಲೇ ಕೆಲಸ ಮಾಡ್ತಿರೋ ಒಳ್ಳೆ ಹುಡುಗಿ. ಫೀಸೆಲ್ಲಾ ಏನೂ ತಗೋಬೇಡಿ ಅಂತಾನೂ ಹೇಳಿದ್ದೀನಿ. ಒಪ್ಪಿಕೊಂಡಿದ್ದಾರೆ. ಈ ಸಲ ಯಾವುದೇ ನೆಪ ಹೇಳದೆ ಬಂದು ಸೇರ್ತಿದ್ದಿ ಅಷ್ಟೇ. ಇವತ್ತು ಸಂಜೆ ಐದರ ಸುಮಾರಿಗೆ ಆಸ್ಪತ್ರೆಯ ಹತ್ತಿರ ಬಂದು ಅದೇನೇನೋ ಫಾರಮ್ಮುಗಳಿದ್ದಾವೆ, ಅವನ್ನ ಫಿಲ್ ಮಾಡಿ ಹೋಗಬೇಕು ಅಷ್ಟೇ. ಆಯ್ತ. ಸರಿ ಇಡ್ತೀನಿ" ಎಂದವರೇ ಫೋನಿಟ್ಟೇ ಬಿಟ್ಟರು. 

ಒಳ್ಳೆ ಕತೆಯಲ್ಲ ಇವರದು. ನನ್ನಭಿಪ್ರಾಯ ಏನೂ ಅಂತಾನೂ ಕೇಳದೆ ಫೋನಿಟ್ಟುಬಿಟ್ಟರಲ್ಲ. ನನ್ನ ಕಷ್ಟ ಇವರಿಗೆ ಹೇಗೆ ಅರ್ಥ ಮಾಡಿಸೋದು. ನಂಗೇನೋ ಈ ಡಿ.ಎನ್.ಬಿಗಿಂತ ಮೇಲ್ಮಟ್ಟದ್ದು ಅಂತಲೆ ಪರಿಗಣಿಸೋ ಎಂ.ಡಿ ಮಾಡೋಕೇ ಹೆಚ್ಚು ಆಸೆ. ಆದರೆ ಈಗಿರೋ ಪರಿಸ್ಥಿತಿಯಲ್ಲಿ ಎಂ.ಡಿಗೆ ಪರೀಕ್ಷೆ ಕಟ್ಟಿ, ಅದಕ್ಕೆ ಬಹಳಷ್ಟನ್ನು ಓದಿ, ಕೊನೆಗೆ ಸೀಟು ಗಿಟ್ಟಿಸಿದರೂ ವರುಷ ವರುಷ ಕಟ್ಟಬೇಕಾದ ಫೀಸಿನ ದುಡ್ಡಿಗೆ, ಬೇರೆ ಊರಿನಲ್ಲಿ ಸೀಟು ದೊರೆತರೆ ಹಾಸ್ಟಲ್ ಫೀಸು ಮತ್ತೊಂದಕ್ಕೆ ಪುನಃ ಅಪ್ಪ ಅಮ್ಮನ ಮುಂದೆ ಕೈಚಾಚಬೇಕಾಗ್ತದೆ. ಜೊತೆಗೆ ಪ್ರೈವೇಟ್ ಕಾಲೇಜಲ್ಲಿ ಸೀಟು ಸಿಕ್ಕಿದರೆ ಸ್ಟೈಪೆಂಡೂ ನಾಸ್ತಿ. ರಾಜೀವನ ಸಂಬಳ ನೆಚ್ಚಿಕೊಂಡು ಅಂತಹ ರಿಸ್ಕು ತೆಗೆದುಕೊಳ್ಳುವುದು ಅಸಾಧ್ಯದ ಮಾತೇ ಸರಿ. ಆ ಲೆಕ್ಕಕ್ಕೆ ಡಿ.ಎನ್.ಬಿ ವಾಸಿ. ನಮ್ಮ ಆಸ್ಪತ್ರೆಯಲ್ಲೇ ಇರೋದು. ಇದರ ಫೀಸೂ ವರುಷಕ್ಕೆ ಐವತ್ತು ಸಾವಿರದಷ್ಟಿರಬೇಕಷ್ಟೇ. ಅದನ್ನೂ ಮಾಫಿ ಮಾಡಿಸ್ತೀನಿ ಅಂದಿದ್ದಾರೆ ಸರ್ರು. ಮಾಫಿ ಅಂದರೆ ಬಹುಶಃ ಒಂದು ವರುಷಕ್ಕೋ ಎರಡು ವರುಷಕ್ಕೋ ಬಾಂಡ್ ಬರೆಸಿಕೊಳ್ಳಬಹುದು. ತೊಂದರೆಯಿಲ್ಲ. ಗೊತ್ತಿರೋ ಜಾಗವೇ ಅಲ್ಲವೇ ಇದು. ಕೆಲಸ ಮಾಡುವುದಕ್ಕೆ ತಕರಾರಿಲ್ಲ. ಎಲ್ಲ ಸರಿ ಕಾಣ್ತದೆ ಅನ್ನುವಾಗ ಹಣದ ಕೊರತೆಯದ್ದೇ ಚಿಂತೆ. ಈಗ ಬರುವ ಸಂಬಳದಲ್ಲಿ ಅರ್ಧದಷ್ಟು ಸ್ಟೈಪೆಂಡ್ ಬಂದರೆ ಅದೇ ಪುಣ್ಯ. ಎಲ್ಲಾ ಸೇರಿ ಇಪ್ಪತ್ತು ಇಪ್ಪತ್ತೈದು ಸಾವಿರ ಬರ್ತದೇನೋ ಅಷ್ಟೇ. ನಲವತ್ತೈದು ಸಾವಿರದಿಂದ ತಟ್ಟಂತ ತಿಂಗಳಾ ತಿಂಗಳು ಬರೋದ್ರಲ್ಲಿ ಇಪ್ಪತ್ತು ಸಾವಿರ ಕಡಿಮೆಯಾಗಿಬಿಟ್ಟರೆ? ಕಾರು ಲೋನು, ಮನೆ ಬಾಡಿಗೆ, ಮನೆ ಖರ್ಚು......ಇದನ್ನೆಲ್ಲ ಹೇಗೆ ಸರಿದೂಗಿಸೋದು? ಉಹ್ಞೂ. ಸದ್ಯಕ್ಕೆ ಯಾವ ಡಿ.ಎನ್.ಬಿ ಕೂಡ ಬೇಡ. ಸಂಜೆ ಸರ್‍‍ನ ಭೇಟಿಯಾಗಲು ಹೋಗಲೇಬೇಕು. ಅದನ್ನು ತಪ್ಪಿಸಿಕೊಳ್ಳುವಂತಿಲ್ಲ. ಅವರಿಗೊಂದು ಸಶಕ್ತ ಕಾರಣವನ್ನೇಳದೆ ಹೋದರೆ ಬೇಸರಿಸಿಕೊಳ್ಳುತ್ತಾರೆ. ಕಷ್ಟದ ದಿನಗಳಲ್ಲಿ ಸಹಾಯ ಮಾಡಿದವರಿಗೆ, ಈಗಲೂ ನನ್ನ ಭವಿತವ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡೆ ಸಹಾಯ ಮಾಡುತ್ತಿರುವವರಿಗೆ ಬೇಸರ ಮಾಡುವುದು ಕೂಡ ಸರಿಯಲ್ಲ. ಹಿಂಗಿಂಗೆ ಹಣದ ಸಮಸ್ಯೆಯ ಕಾರಣದಿಂದಾಗಿ ಸೇರಲಾಗುತ್ತಿಲ್ಲ ಅಂತ ನಿಜ ಹೇಳುವುದೇ ಒಳ್ಳೆಯದೇನೋ. ಯಾವೊಂದು ನಿರ್ಧಾರಕ್ಕೂ ಬರಲಾಗಲಿಲ್ಲ. ಇಂತಹ ಗೊಂದಲದ ಸಮಯದಲ್ಲಿ ಸಾಗರನಿಗಲ್ಲದೇ ಮತ್ಯಾರಿಗೆ ಫೋನು ಮಾಡುವುದು.

ಒಂದೊಂದೇ ಎಪಿಸೋಡು ಹುಡುಕುಡುಕಿ ಓದೋಕೆ ಬೇಸರವಾ? ಪೂರ್ತಿ ಇ - ಪುಸ್ತಕ ತೆಗೆದುಕೊಳ್ಳಲು ಇಲ್ಲಿ ಕ್ಲಿಕ್ಕಿಸಿ.

ನವೆಂ 3, 2019

ಒಂದು ಬೊಗಸೆ ಪ್ರೀತಿ - 38

ಡಾ. ಅಶೋಕ್.‌ ಕೆ. ಆರ್.‌
“ಹೇಳಪ್ಪ ಏನ್ ಬಂದಿದ್ದು ಇಷ್ಟೊತ್ತಿನಲ್ಲಿ" ಅಪ್ಪನ ದನಿಯಲ್ಲಿ ಅಗತ್ಯಕ್ಕಿಂತಲೂ ಹೆಚ್ಚಿನ ತಾಳ್ಮೆಯಿತ್ತು. 

“ಅದೇ ಅಂಕಲ್. ಧರಣಿಗೆ ಮದುವೆ ಗೊತ್ತು ಮಾಡಿದ್ರಿ ಅಂತ ಗೊತ್ತಾಯ್ತು....” 

“ಯಾರ್ ಹೇಳಿದ್ರು?” ಪುರುಷೋತ್ತಮ ನನ್ನ ಕಡೆಗೆ ನೋಡಿದ. ಅಪ್ಪ ಅಮ್ಮನ ಸಿಟ್ಟಿನ ಕಣ್ಣುಗಳು, ತಮ್ಮನ ಅಸಹಾಯಕ ಕಣ್ಣುಗಳು ನನ್ನತ್ತ ಚಲಿಸಿದವು. 

“ಹೂನಪ್ಪ. ಗೊತ್ತು ಮಾಡಿದ್ವಿ. ನಮ್ಮ ಬಲವಂತವೇನೂ ಇಲ್ಲ. ಅವಳು ಒಪ್ಪಿಗೆ ನೀಡಿದ ಮೇಲೆಯೇ ಗೊತ್ತು ಮಾಡಿದ್ದು" 

“ಅದೂ ಗೊತ್ತಿದೆ ಅಂಕಲ್. ನಿಮ್ಮದೂ ಲವ್ ಮ್ಯಾರೇಜೇ ಅಂತಿದ್ಲು ಧರಣಿ. ಆರು ವರ್ಷದ ಲವ್ ಅಂಕಲ್....ಕಷ್ಟವಾಗ್ತದೆ" 

“ನನ್ನ ನಿರ್ಧಾರ ನಿಂಗೆ ಗೊತ್ತೇ ಇರಬೇಕಲ್ಲಪ್ಪ. ನಿಮ್ಮಮ್ಮನನ್ನು ಒಪ್ಪಿಸಿ ಕರೆದುಕೊಂಡು ಬಾ. ಧಾಂ ಧೂಂ ಅಂತ ಮದುವೆ ಮಾಡಿಕೊಡೋ ಜವಾಬ್ದಾರಿ ನಂದು. ನಮ್ಮ ಮನೆಯಲ್ಲಿ ಇನ್ಯಾರೂ ಒಪ್ಪದಿದ್ರೂ ಚಿಂತೆಯಿಲ್ಲ" 

“಻ಅಪ್ಪ ಮಗಳು ಅದೇ ಕಿತ್ತೋದ ಡೈಲಾಗ್ ಹೇಳಿ ಹೇಳಿ ನನ್ನ ಸಾಯಿಸ್ತೀರ. ನಿಮ್ಮ ಮಗಳಿಗೆ ನನ್ನ ಜೊತೆ ಲವ್ ಮಾಡ್ಬೇಕಾದ್ರೆ ಇದೆಲ್ಲ ನೆನಪಾಗಲಿಲ್ಲವಾ? ನನ್ನ ಕೈಲಿ ಪಾರ್ಟಿ ಕೊಡಿಸ್ಕೊಂಡು, ಚಾಕಲೇಟು ಐಸ್ಕ್ರೀಮು ಕೊಡಿಸ್ಕೊಂಡು ದುಡ್ಡು ಖರ್ಚು ಮಾಡಬೇಕಾದ್ರೆ ಇದೆಲ್ಲ ನೆನಪಾಗಲಿಲ್ಲವಾ? ಆವಾಗ ನಿಮ್ಮಮ್ಮನ್ನ ಕೇಳ್ಕೊಂಡು ಬಾ ಅಂತ ಕಳಿಸಿದ್ಲಾ ಇವ್ಳು.....” ಕತ್ತೆತ್ತಿ ನನ್ನ ಕಡೆಗೆ ನೋಡಿದ. ಮನಸಲ್ಲೇ ಚಿನಾಲಿ ಎಂದು ಉಗಿದ. ಕಣ್ಣು ನನ್ನ ಬೆನ್ನ ಹಿಂದಿದ್ದ ಶೋಕೇಸಿನತ್ತ ಸರಿಯಿತು. ಅದರೆಡೆಗೆ ಕೈ ತೋರುತ್ತಾ "ಆ ನಿಮ್ ಶೋಕೇಸಿನಲ್ಲಿರೋ ಮುಕ್ಕಾಲು ಗಿಫ್ಟುಗಳು ನಾ ಕೊಟ್ಟಿರೋದು. ಅದನ್ನೆಲ್ಲ ತೆಗೆದುಕೋಬೇಕಾದ್ರೆ ನಿಮ್ಮಮ್ಮನ್ನ ಕೇಳ್ಕೊಂಡು ಬಾ ಅಂತ ಕಳಿಸಿದ್ಲಾ .....” ಅವನ ಮಾತು ಮುಗಿಯುವ ಮುನ್ನವೇ ಅಪ್ಪ ದಡಕ್ಕನೆ ಮೇಲೆದ್ದು ನನ್ನ ಕಡೆಗೆ ನಡೆದು ಬಂದರು. ಬಿತ್ತು ಏಟು ಕೆನ್ನೆಗೆ ಎಂದುಕೊಂಡೆ. ನನ್ನನ್ನು ಬದಿಗೆ ತಳ್ಳಿ ಶೋಕೇಸಿನ ಬಾಗಿಲು ತೆಗೆದು "ಅದ್ಯಾವ್ಯಾವ ಗಿಫ್ಟು ಕೊಡಿಸಿದ್ದೆ ತಗಳಪ್ಪ. ಲೋ ಶಶಿ ಒಳಗೋಗಿ ಒಂದು ದೊಡ್ಡ ಕವರ್ ತಗಂಡ್ ಬಾ" ಅಂದುಬಿಟ್ಟರು. ನಮ್ಮೆಲ್ಲರಿಗಿಂತ ಹೆಚ್ಚು ಆಘಾತಕ್ಕೊಳಗಾದವನು ಪುರುಷೋತ್ತಮ. ಅಪ್ಪ ಹಿಂಗೆಲ್ಲ ವರ್ತಿಸಬಹುದು ಎಂದು ನಿರೀಕ್ಷೆ ಮಾಡಿರಲಿಲ್ಲ. ಹೇಳಿದ್ದಾಗೋಗಿದೆ. ಇನ್ನೇನು ಮಾಡೋದು ಎನ್ನುವವನಂತೆ ಎದ್ದು ಬಂದು ಒಂದೊಂದಾಗಿ ಗಿಫ್ಟುಗಳನ್ನೆಲ್ಲ ಎತ್ತಿಕೊಳ್ಳುತ್ತಿದ್ದ. ಐದು ವ್ಯಾಲೆಂಟೈನ್ಸ್ ಡೇಗೆ ಕೊಟ್ಟಿದ್ದು, ಆರು ನನ್ನುಟಿದಬ್ಬಕ್ಕೆ ಕೊಟ್ಟಿದ್ದು, ಎರಡು ಅವನ ಹುಟ್ಟಿದ ಹಬ್ಬದಂದು ಕೊಡಿಸಿದ್ದು, ಹೊಸ ವರ್ಷದಂದು ಕೊಡಿಸಿದ್ದ ನಾಲಕ್ಕು, ಯುಗಾದಿಗೆ ಕೊಡಿಸಿದ್ದ ಎರಡು, ಸುಮ್ಮನೆ ನನಗಿಷ್ಟವಾಯ್ತು ಅಂತ ಕೊಡಿಸಿದ್ದ ಐದು ಗಿಫ್ಟುಗಳನ್ನೂ ನೆನಪಿಟ್ಟುಕೊಂಡು ಎತ್ತಿಕೊಂಡ. ಅಂತಹ ಗಂಭೀರ ಸನ್ನಿವೇಶದಲ್ಲೂ ನನಗಿವರ ಮಕ್ಕಳಾಟ ನಗು ಮೂಡಿಸುತ್ತಿತ್ತು. ಜೋರು ನಗಲಿಲ್ಲ ಅಷ್ಟೇ. ಕವರ್ರಿಗಾಕಿಕೊಂಡವನಿಗೆ ಇನ್ನೇನು ಮಾತನಾಡಬೇಕೆಂದು ತೋಚಲಿಲ್ಲ. ಅಪ್ಪನೇ ಮಾತನಾಡಿದರು.

ಒಂದೊಂದೇ ಎಪಿಸೋಡು ಹುಡುಕುಡುಕಿ ಓದೋಕೆ ಬೇಸರವಾ? ಪೂರ್ತಿ ಇ - ಪುಸ್ತಕ ತೆಗೆದುಕೊಳ್ಳಲು ಇಲ್ಲಿ ಕ್ಲಿಕ್ಕಿಸಿ.

ಅಕ್ಟೋ 27, 2019

ಒಂದು ಬೊಗಸೆ ಪ್ರೀತಿ - 37

ಡಾ. ಅಶೋಕ್.‌ ಕೆ. ಆರ್.‌
“ಎಲ್ಲಿಗೆದ್ದೋಗ್ತಿ.....ಮುಚ್ಕಂಡ್ ಕೂತ್ಕೊಳ್ಳೇ ಚಿನಾಲಿ" ಪುರುಷೋತ್ತಮನ ದನಿಗೆ ಬೆಚ್ಚಿ ಬಿದ್ದೆ. ಪುರುಷೋತ್ತಮನ ಪೊಸೆಸಿವ್ನೆಸ್ ಅನುಭವಿಸಿದ್ದೀನಿ. ಅವನು ಸಿಟ್ಟಿಗೆ ಬಂದು ನನಗೆ ಹೊಡೆದಿದ್ದೂ ಇದೆ. ಆದರೆ ಇವತ್ತಿನ ದನಿಯಲ್ಲವನು ಹಿಂದೆಂದೂ ಮಾತನಾಡಿರಲಿಲ್ಲ. ಇಲ್ಲಿ ಕುಳಿತಿರುವವನು ನಿಜ್ಜ ಅವನೇನಾ ಅಂತೆಲ್ಲ ಅನುಮಾನ ಮೂಡಿಬಿಟ್ಟಿತು. ಎದ್ದೋಗುವ ಮನಸ್ಸಾಗಲಿಲ್ಲ ಈ ಚಿನಾಲಿಗೆ. ಕುಳಿತುಕೊಂಡೆ. ಜೋರಾಗಿ ಉಸಿರು ಬಿಡುತ್ತಿದ್ದ. ಸಿಗರೇಟಿನ ಘಮದ ಜೊತೆಗೆ ಮತ್ತೊಂದು ದುರ್ವಾಸನೆಯೂ ಸೇರಿಕೊಂಡಿತ್ತು. ಮೊದಲಿಗದು ಏನೆಂದು ತಿಳಿಯಲಿಲ್ಲ. ತೀರ ಅಪರಿಚಿತ ವಾಸನೆಯೂ ಆಗಿರಲಿಲ್ಲ. ಕ್ಷಣದ ನಂತರ ಮನೆಯಲ್ಲಿ ಅಪ್ಪ ಕುಡಿಯುವಾಗ ಬರುತ್ತಿದ್ದ ವಾಸನೆಯದು ಎಂದು ತಿಳಿಯಿತು. ಅಲ್ಲಿಯವರೆಗೂ ಒಂದು ತೊಟ್ಟನ್ನೂ ಬಾಯಿಗೆ ಬಿಟ್ಟುಕೊಳ್ಳದ ನನ್ನ ಪುರುಷೋತ್ತಮ ಕುಡಿದು ಬಂದಿದ್ದ.... ಅವನು ಕುಡಿದಿರೋದಕ್ಕೆ ನಾನೇ ಕಾರಣ.....ಪಾಪವೆನ್ನಿಸಿತ್ತು ಅವನ ಬಗ್ಗೆ. ಆದರೆ ನಿಜ ಹೇಳ್ತೀನಿ ಸಾಗರ ಅಷ್ಟೆಲ್ಲ ಪಾಪವೆಂಬ ಭಾವ ಅವನ ಬಗ್ಗೆ ಮೂಡಿದ ಕ್ಷಣದಲ್ಲೂ ನಾ ಬೇರೆಯವರನ್ನ ಮದುವೆಯಾಗೋ ನಿರ್ಧಾರ ತೆಗೆದುಕೊಂಡಿರೋದು ತಪ್ಪು.... ನಾ ಪ್ರೀತಿಸಿರೋದು ಪುರುಷೋತ್ತಮನನ್ನು..... ಅವನನ್ನು ಬಿಟ್ಟು ಬೇರೆಯವರನ್ನು ಮದುವೆಯಾಗಬಾರದು ನಾನು..... ಇವನಲ್ಲೀಗ ಕ್ಷಮೆ ಕೇಳಿ ಇವನನ್ನೇ ಮದುವೆಯಾಗಬೇಕು..... ಉಹ್ಞೂ.... ಈ ರೀತಿಯ ಒಂದೇ ಒಂದು ಯೋಚನೆಯೂ ನನ್ನಲ್ಲಿ ತೇಲಿಹೋಗುವ ಮೋಡದಂತೆಯೂ ಮೂಡಲಿಲ್ಲ. ಅವನ ಮೇಲಿನ ಪ್ರೀತಿ ಸತ್ತೋಯ್ತ..... ಇಲ್ಲ..... ಇವತ್ತಿಗೂ ಅವನ ಮೇಲೆ ನನಗೆ ಪ್ರೀತಿ ಇದ್ದೇ ಇದೆ. ಅವನಷ್ಟು ಉತ್ಕಟವಾಗಿ ನನ್ನನ್ನು ಪ್ರೀತಿಸೋಕೆ ಯಾರಿಂದಲೂ ಸಾಧ್ಯವಿಲ್ಲ....... ಆ ಕ್ಷಣದಲ್ಲಿ..... ನನ್ನ ಪುರುಷೋತ್ತಮ ನನ್ನಿಂದಾಗಿ ಕುಡಿದು ಬಂದಿದ್ದಾನೆ ಅನ್ನೋ ಸತ್ಯ ಅರಿವಾದ ಸಂದರ್ಭದಲ್ಲಿ ಅವನ ಮೇಲಿನ ಪ್ರೀತಿ ಹೆಚ್ಚಾಗಲಿಲ್ಲ..... ನನ್ನ ನಿರ್ಧಾರವನ್ನು ಪುನರ್ ಪರಿಶೀಲಿಸುವ ಯೋಚನೆಯೂ ಹತ್ತಿರದಲ್ಲಿ ಸುಳಿಯಲಿಲ್ಲ.... ಅವನು ಇನ್ನೂ ಏನೇನು ಮಾಡಬಹುದು ಎನ್ನುವುದನ್ನು ಕಲ್ಪನೆಯೂ ಮಾಡಿಕೊಳ್ಳದ ನಾನು ಇನ್ನೂ ಅನೇಕನೇಕ ತಪ್ಪುಗಳನ್ನು ಅವತ್ತು ಮಾಡಿದೆ. ಅದನ್ನೆಲ್ಲ ಕೇಳಿ ನೀ ನಗದೇ ಹೋದರೆ ಹೇಳ್ತೀನಿ....' 

“ಪಾಪ ಇಷ್ಟೊಂದು ಗಂಭೀರದ ವಿಷಯಗಳನ್ನೇಳುವಾಗ ನಗೋಕಾಗ್ತದಾ? ಹೇಳು"

ಒಂದೊಂದೇ ಎಪಿಸೋಡು ಹುಡುಕುಡುಕಿ ಓದೋಕೆ ಬೇಸರವಾ? ಪೂರ್ತಿ ಇ - ಪುಸ್ತಕ ತೆಗೆದುಕೊಳ್ಳಲು ಇಲ್ಲಿ ಕ್ಲಿಕ್ಕಿಸಿ.

ಅಕ್ಟೋ 20, 2019

ಒಂದು ಬೊಗಸೆ ಪ್ರೀತಿ - 36

ಡಾ. ಅಶೋಕ್.‌ ಕೆ. ಆರ್.‌
'ರಾಜೀವನ ಜೊತೆ ಮೆಸೇಜ್ ಮಾಡಿದ್ದನ್ನು. ನಮ್ಮ ಮನೆಯವರನ್ನು ಒಪ್ಪಿಸು ಅಂತ ಕಾಲೆಳೆದಿದ್ದನ್ನು ಹೇಳಿದ್ದೆ ಅಲ್ವ'

“ಹು" ನನ್ನೆದೆಯ ಮೇಲೆ ಕೈಯಾಡಿಸುತ್ತಾ ಹೇಳಿದ ಸಾಗರ.

'ನಾ ಏನೋ ತಮಾಷೆಗೆ ಅನ್ನುವಂತೆ ಹೇಳಿದ್ದು. ಅವನೂ ತಮಾಷೆಯಾಗೇ ತಗೊಂಡಿರ್ತಾನೆ ಅಂತಂದುಕೊಂಡಿದ್ದೆ. ನನ್ನೆಣಿಕೆ ಸುಳ್ಳಾಗಿತ್ತು. ಸರೀ ಒಂದು ವಾರಕ್ಕೆ ಮತ್ತೊಮ್ಮೆ ಅವನಿಂದ ಮೆಸೇಜು ಬಂತು. ನಮ್ಮ ಮನೆಯಲ್ಲಿ ಮಾತನಾಡಿ ಒಪ್ಪಿಸಿದ್ದೀನಿ. ಇದೇ ಭಾನುವಾರ ನಿಮ್ಮ ಮನೆಗೆ ಬರ್ತೇವೆ. ಇವತ್ತೋ ನಾಳೆಯೋ ನಮ್ಮಮ್ಮ ನಿಮ್ಮಮ್ಮನಿಗೆ ಫೋನ್ ಮಾಡಬಹುದು ಎಂದಿದ್ದ. ಅವತ್ತು ನನ್ನ ಮನಸ್ಸಲ್ಲಿ ಗೊಂದಲವಿತ್ತಾ, ಗಾಬರಿಯಿತ್ತಾ, ಸಂತಸವಿತ್ತಾ ಅಥವಾ ಇವೆಲ್ಲದರ ಮಿಶ್ರಭಾವವಿತ್ತಾ? ಒಂದೂ ನೆನಪಾಗ್ತಿಲ್ಲ ಈಗ. ಅವತ್ತೇ ಅವರಮ್ಮ ನಮ್ಮಮ್ಮನಿಗೆ ಫೋನ್ ಮಾಡಿದ್ದರು. ಅಪ್ಪ ಅಮ್ಮ ಈ ವಿಷಯವನ್ನು ಗುಟ್ಟು ಗುಟ್ಟಲ್ಲಿ ಚರ್ಚಿಸಿದ್ದು ನನ್ನರಿವಿಗೂ ಬಂದಿತ್ತು. ರಾತ್ರಿ ಊಟಕ್ಕೆ ಕುಳಿತಾಗ ಅಪ್ಪ "ನೋಡಮ್ಮ. ರಾಜೀವನ ಮನೆಯವರು ಫೋನ್ ಮಾಡಿದ್ರು. ಧರಣೀನ ನಮ್ಮ ರಾಜೀವನಿಗೆ ತೋರಿಸುತ್ತೀರಾ ಅಂತ. ಒಳ್ಳೆ ಮನೆತನ. ಆಸ್ತಿಗೆಲ್ಲ ಏನೂ ತೊಂದರೆ ಇಲ್ಲದ ಮನೆ. ಜೊತೆಗೆ ರಾಜೀವ ನಾವು ಕಂಡಂತೆ ಒಳ್ಳೆ ಹುಡುಗ. ಆದರೆ ಡಾಕ್ಟರಲ್ಲ. ಇಷ್ಟೆಲ್ಲ ತಲೇಲಿ ಯೋಚನೆ ಬಂದ್ರೂ ಹೆಣ್ಣು ತೋರಿಸೋದಿಲ್ಲ ಅಂತೇಳೋದಿಕ್ಕೆ ಮನಸ್ಸಾಗಲಿಲ್ಲ. ತೋರಿಸ್ತೀವಿ ಅಂತ ಹೇಳಿದ್ದೀವಿ. ಮುಂಚೆ ಬಂದ ಗಂಡುಗಳತ್ರ ನೀ ಕೆಟ್ಟದಾಗಿ ನಡ್ಕೊಂಡಿದ್ದಿದೆ....”

'ಇವಾಗೆಲ್ಲಿ ಹಂಗಿದ್ದೀನಿ?'

“ಹು. ಇತ್ತೀಚೆಗೆ ಹಂಗೆಲ್ಲ ಮಾಡಿಲ್ಲ ನೀನು. ಅಂದ್ರೂ ನೆನಪಿಸಬೇಕು ಅನ್ನಿಸಿತು. ಇಷ್ಟು ದಿನ ಬಂದಿದ್ದವರು ಅಪರಿಚಿತರು. ನೀ ಆಡಿದ್ದೆಲ್ಲ ನಡೀತು. ಇವರು ಪರಿಚಿತರು. ನೀ ಒಪ್ತೀಯೋ ಬಿಡ್ತೀಯೋ ನಂತರದ ಪ್ರಶ್ನೆ. ನಮಗಾಗಲೀ ಅವರಿಗಾಗಲೀ ಅವಮಾನವಾಗುವಂತೆ ಮಾತ್ರ ನಡೆದುಕೊಳ್ಳಬೇಡ" ಎಂದು ಬೇಡುವ ದನಿಯಲ್ಲಿ ಕೇಳಿಕೊಂಡರು. ಇವರಿಗೆ ನಾನು ರಾಜೀವ ಮಾತಾಡಿಕೊಂಡಿದ್ದರ ಅರಿವಿದ್ದಂತಿರಲಿಲ್ಲ. ರಾಜೀವನೂ ಅವರ ಮನೆಯಲ್ಲಿ ಹೇಳಿಲ್ಲವೋ ಏನೋ. ನಾನು ಅದರ ಬಗ್ಗೆ ಸೊಲ್ಲೆತ್ತಲಿಲ್ಲ. ಯಾವಾಗ ಬರ್ತಾರಂತೆ ಅಂತ ಕೇಳಿದೆ. ಭಾನುವಾರ ಻ಅಂತ ತಿಳಿಸಿದರು.

ಒಂದೊಂದೇ ಎಪಿಸೋಡು ಹುಡುಕುಡುಕಿ ಓದೋಕೆ ಬೇಸರವಾ? ಪೂರ್ತಿ ಇ - ಪುಸ್ತಕ ತೆಗೆದುಕೊಳ್ಳಲು ಇಲ್ಲಿ ಕ್ಲಿಕ್ಕಿಸಿ.

ಅಕ್ಟೋ 15, 2019

‘ಅಸುರನ್’: ಸಹಜತೆಗೆ ಹತ್ತಿರವಿರುವ ಒಳ್ಳೆಯ ಪ್ರಯತ್ನದ ಚಲನಚಿತ್ರ

ನಂದಕುಮಾರ್ ಕೆ ಎನ್. ಕುಂಬ್ರಿಉಬ್ಬು
ಅಸುರನ್ ಇಂದಿನ ದಿನಗಳಲ್ಲಿ ಬಂದಿರುವ ವಿರಳ ಚಿತ್ರಕಥೆ ಹೊಂದಿರುವ ಸಿನಿಮಾ. ವೆಟ್ರಿಮಾರನ್ ಇದರ ನಿರ್ದೇಶಕ. ಒಳ್ಳೆಯ ಛಾಯಾಗ್ರಹಣ, ಒಳ್ಳೆಯ ದೃಶ್ಯಸಂಯೋಜನೆ. ಚಿತ್ರದಲ್ಲಿ ಸಹಜತೆ ಹೆಚ್ಚು ಇದೆ.. ಪರವಾಗಿಲ್ಲ ಎನ್ನಬಹುದಾದ ಸಂಗೀತವಿದೆ.

ತಮಿಳಿನ ಧನುಷ್ ಹಾಗೂ ಮಲೆಯಾಳಂ ನ ಮಂಜು ವಾರಿಯರ್ ಮುಖ್ಯ ತಾರಾಗಣದಲ್ಲಿರುವ ಈ ಸಿನಿಮಾ ಜಾತೀಯತೆಯ ಮನಸುಗಳು ಹಾಗೂ ಕ್ರೌರ್ಯಗಳ ಕೆಲವು ಮುಖಗಳನ್ನು ಅನಾವರಣಗೊಳಿಸುತ್ತದೆ. ಕಥಾನಾಯಕನ ಕುಟುಂಬದ ಸುತ್ತಾ ಈ ಕಥೆಯನ್ನು ಹೆಣೆಯಲಾಗಿದೆ. ತಮಿಳಿನ ಪೂಮಣಿ ಬರೆದ ವೆಕೈ ಎಂಬ ಕಾದಂಬರಿ ಆದಾರಿತ ಚಿತ್ರವಿದು.

ಧನುಷ್ ರ ಅಭಿನಯ ಚೆನ್ನಾಗಿದೆ. ಎಲ್ಲಾ ಪಾತ್ರಧಾರಿಗಳು ತಮ್ಮ ತಮ್ಮ ಪಾತ್ರಗಳಿಗೆ ನ್ಯಾಯ ಸಲ್ಲಿಸಲು ಪ್ರಾಮಾಣಿಕ ಪ್ರಯತ್ನ ನಡೆಸಿದ್ದಾರೆ.

ಆರಂಭದ ಅಂದರೆ ಫ್ಲಾಶ್ ಬ್ಯಾಕ್ ಬರುವವರೆಗೂ ಚಿತ್ರದಲ್ಲಿ ಬಿಗಿತನ ಕಾಣುವುದಿಲ್ಲ. ಆ ಸನ್ನಿವೇಶಗಳಿಗೆ ತಕ್ಕಂತಹ ಭಾವಗಳನ್ನು, ಗಾಢತೆಗಳನ್ನು ವೀಕ್ಷಕರಿಗೆ ಮೂಡಿಸುವಲ್ಲಿ ಯಶಸ್ಸು ಕಾಣುವುದಿಲ್ಲ. ನಂತರದ ಚಿತ್ರ ನಿರ್ದೇಶಕರ ಹಿಡಿತ, ಪಾತ್ರಧಾರಿಗಳ ಅಭಿನಯ ಗಾಢತೆಯನ್ನು ಸನ್ನಿವೇಶಗಳನ್ನು ವೀಕ್ಷಕರಿಗೆ ಗಾಢವಾಗಿ ತಟ್ಟುವಂತೆ ಕಥೆಯನ್ನು ನಿರೂಪಿಸುತ್ತಾ ಹೋಗುತ್ತದೆ.

ಅಕ್ಟೋ 13, 2019

ಒಂದು ಬೊಗಸೆ ಪ್ರೀತಿ - 35

ಡಾ. ಅಶೋಕ್.‌ ಕೆ. ಆರ್.‌
ಬೆಳಿಗ್ಗೆ ಆರೂವರೆಗೆದ್ದು ಮೊಬೈಲ್ ನೋಡಿದಾಗ ಸಾಗರನ ಮೆಸೇಜು ಕಂಡಿತು. ಐದೂವರೆಯಷ್ಟೊತ್ತಿಗೆ "ಗುಡ್ ಮಾರ್ನಿಂಗ್. ತಲುಪಿದೆ" ಅಂತ ಮೆಸೇಜು ಮಾಡಿದ್ದ. ಪ್ರತಿಯಾಗಿ 'ಗುಡ್ ಮಾರ್ನಿಂಗ್' ಅಂತ ಕಳಿಸಿ ತಿಂಡಿ ಮಾಡಲು ಮೇಲೆದ್ದೆ. ರಾಜೀವ ತಿಂಡಿ ತಿಂದುಕೊಂಡು ಏಳೂಕಾಲಷ್ಟೊತ್ತಿಗೆ ಹೊರಟರು. ಆಗಲೇ ಫೋನ್ ಮಾಡುವ ಸಾಗರನಿಗೆ ಎಂದುಕೊಂಡವಳಿಗೆ ನಾನಿನ್ನೂ ಸ್ನಾನ ಕೂಡ ಮಾಡಿಲ್ಲ ಎನ್ನುವುದು ನೆನಪಾಯಿತು. ದಡಬಡಾಯಿಸಿ ಸ್ನಾನ ಮಾಡಿಕೊಂಡು ಹೊರಬಂದು ಸಾಗರನಿಗೆ ಫೋನ್ ಮಾಡಿದೆ. ಮೊದಲ ರಿಂಗಿಗೇ ಫೋನೆತ್ತಿಕೊಂಡ. 

'ಏನ್ ಮಾಡ್ತಿದ್ಯೋ'

“ಏನಿಲ್ಲ. ನಿನ್ನ ಫೋನಿಗೇ ಕಾಯ್ತಿದ್ದೆ"

'ಅಲ್ಲ ಫ್ರೆಂಡ್ ಮುಂದೇನೇ ಮಾತಾಡಿದ್ರೆ ಯಾರಂತ ಕೇಳೋಲ್ವ'

“ಹ ಹ. ರೂಮಿನೊರಗಿದ್ದೀನಿ ಹೇಳು"

'ಹೇಳೋಕೇನಿದೆಯೋ ಗೂಬೆ. ಒಂಟಿಕೊಪ್ಪಲು ದೇವಸ್ಥಾನದ ಹತ್ತಿರ ಬಂದು ಫೋನ್ ಮಾಡು. ಗಾಡೀಲ್ ಬರ್ತೀಯಾ ಹೆಂಗೆ?'

“ಹು ಕಣೆ. ಬೈಕಿದೆ ಫ್ರೆಂಡ್ದು"

'ಸರಿ ಬಂದ್ ಫೋನ್ ಮಾಡು. ದೇವಸ್ಥಾನದಿಂದ ದಾರಿ ಹೇಳ್ತೀನಿ'

ಫೋನಿಟ್ಟು ಕನ್ನಡಿಯ ಎದುರಿಗೆ ನಿಂತೆ. ಸುತ್ತಿಕೊಂಡಿದ್ದ ಟವಲನ್ನು ತೆಗೆದುಹಾಕಿದೆ. ಅಲ್ಲಲ್ಲಿ ಇನ್ನೂ ನೀರಿತ್ತು, ಬಿಸಿಯಿತ್ತು. ಚೆಂದ ಒರೆಸಿಕೊಂಡು ಹಾಗೇ ದೇಹವನ್ನು ನೋಡ್ತಾ ನಿಂತುಕೊಂಡೆ. ಅಯ್ಯಪ್ಪ ಎಷ್ಟು ದೊಡ್ಡದಿದೆ ನನ್ನ ಮೊಲೆಗಳು ಎಂದು ನನಗೇ ಅನ್ನಿಸಿತು. ಎದುರು ಹೋಗುವ ಗಂಡಸರೆಲ್ಲ ಒಮ್ಮೆ ಅದರತ್ತ ನೋಡದೇ ಇರೋದಿಲ್ಲ. ಎಷ್ಟು ಮುಜುಗರವಾಗ್ತದೆ ಆಗ. ಇಷ್ಟವಾದವರು ನೋಡ್ದಾಗ ಖುಷಿಯಾಗೋದೂ ಹೌದು. ಇವತ್ತಿಗೆ ಈ ಬೆತ್ತಲನ್ನು ನೋಡಿದವರ ಸಂಖೈ ಮೂರು ಎಂಬ ಯೋಚನೆ ಬಂದು ಬೆಚ್ಚಿ ಬಿದ್ದೆ. ಇದೆಂತ ಯೋಚನೆ? ಪುರುಷೋತ್ತಮನ ಎದುರಿಗೆ ಯಾವತ್ತಿಗೂ ಪೂರ್ತಿ ಬೆತ್ತಲಾಗಿರಲಿಲ್ಲ. ಅವನಾಗೇ ಕೇಳಿಕೊಂಡಿದ್ದಾಗಲೂ ಆಗಿರಲಿಲ್ಲ. 'ಹೆಂಗಿದ್ರೂ ಸೆಕ್ಸ್ ಮಾಡಲ್ಲವಲ್ಲ ಮತ್ಯಾಕೆ ಪೂರ್ತಿ ಬೆತ್ತಲಾಗೋದು ಅನ್ನುತ್ತಿದ್ದೆ' ಸುಮ್ಮನಾಗುತ್ತಿದ್ದ. ರಾಜೀವನೊಡನೆ ಶುರುವಿನಲ್ಲಿದ್ದಷ್ಟು ದೇಹದುಡುಕಾಟ ಈಗಿಲ್ಲ. ಮದುವೆಯಾಗಿ ಸುಮಾರು ವರುಷಗಳು ಉರುಳಿ ಹೋದ ಮೇಲೆ ಎಲ್ಲರ ಸಂಸಾರದಲ್ಲೂ ಹೀಗೆಯೋ ಏನೋ.

ಒಂದೊಂದೇ ಎಪಿಸೋಡು ಹುಡುಕುಡುಕಿ ಓದೋಕೆ ಬೇಸರವಾ? ಪೂರ್ತಿ ಇ - ಪುಸ್ತಕ ತೆಗೆದುಕೊಳ್ಳಲು ಇಲ್ಲಿ ಕ್ಲಿಕ್ಕಿಸಿ.

ಅಕ್ಟೋ 7, 2019

ಒಂದು ಬೊಗಸೆ ಪ್ರೀತಿ - 34

ಡಾ. ಅಶೋಕ್.‌ ಕೆ. ಆರ್.‌
ರಾತ್ರಿ ಇವ್ರು ಎಷ್ಟು ಘಂಟೆಗೆ ಬಂದು ಮಲಗಿದರೋ ಗೊತ್ತಾಗದಷ್ಟು ನಿದ್ರೆ. ಬೆಳಿಗ್ಗೆ ಎದ್ದಾಗ ಅವರ ಬಾಯಿಂದಷ್ಟೇ ಅಲ್ಲ ಇಡೀ ದೇಹದಿಂದಲೇ ರಮ್ಮಿನ ವಾಸನೆ ಬರುವಂತಿತ್ತು. ನಾ ಡ್ಯೂಟಿಗೆ ಹೋಗಲು ತಯಾರಾಗುತ್ತಿರುವಾಗ ಎಚ್ಚರವಾಗಿದ್ದರು. 'ಇದ್ಯಾಕೆ ಮಲಗೇ ಇದ್ದೀರ. ಹೋಗಲ್ವ ಕೆಲಸಕ್ಕೆ' ಎಂದು ಕೇಳಿದೆ. 

“ಆ ದರಿದ್ರ ಕೆಲಸಕ್ಕೆ ಯಾರ್ ಹೋಗ್ತಾರೆ ಬಿಡು" ಮಲಗಿದ್ದಲ್ಲಿಂದಲೇ ಹೇಳಿದ. 

'ಮಾಡೋ ಕೆಲಸಾನ ದರಿದ್ರ ಅಂದ್ರೆ ಆಗ್ತದಾ?' 

“ಓಹೋ. ನನಗಿಂತ ಜಾಸ್ತಿ ದುಡೀತೀನಿ ಅನ್ನೋ ಅಹಂಕಾರದಲ್ಲಿ ಬುದ್ಧಿವಾದ ಹೇಳೋಕೆಲ್ಲ ಬರಬೇಡಿ ಮೇಡಂ. ನನಗ್ ಗೊತ್ತು ಯಾವುದು ಒಳ್ಳೇದು ಯಾವುದು ದರಿದ್ರದ್ದು ಅಂತ.....” 

'ಸರಿ ನಿಮ್ಮಿಷ್ಟ' ಬೆಳಿಗ್ಗೆ ಬೆಳಿಗ್ಗೆ ಜಗಳವಾಡುವ ಮನಸ್ಸಿರಲಿಲ್ಲ ನನಗೆ. ಇಡೀ ದಿನ ಹಾಳಾಗ್ತದೆ. 

“ಇಷ್ಟೇ ಅಲ್ವ ಜೀವನ. ಮೊದಲೆಲ್ಲ ಕೆಲಸದ ವಿಷಯಕ್ಕೆ ನಾ ಗೋಳಾಡ್ವಾಗ ಮುದ್ದುಗರೆದು ಸಮಾಧಾನ ಮಾಡ್ತಿದ್ದೆ. ಈಗ ಸರಿ ನಿಮ್ಮಿಷ್ಟ ಅಂತಂದು ಸುಮ್ಮನಾಗ್ತಿ" 

'ಬೆಳಿಗ್ಗೆ ಬೆಳಿಗ್ಗೆ ಮಾತಿಗೆ ಮಾತು ಬೆಳೆದು ಜಗಳವಾಡುವ ಮನಸ್ಸಿಲ್ಲ ರೀ...'

ಒಂದೊಂದೇ ಎಪಿಸೋಡು ಹುಡುಕುಡುಕಿ ಓದೋಕೆ ಬೇಸರವಾ? ಪೂರ್ತಿ ಇ - ಪುಸ್ತಕ ತೆಗೆದುಕೊಳ್ಳಲು ಇಲ್ಲಿ ಕ್ಲಿಕ್ಕಿಸಿ.

ಅಕ್ಟೋ 4, 2019

ಗಾಂಧಿ ಜಯಂತಿಯ ದಿನ ಪ್ರಧಾನಿ ಹೇಳಿದ ಸುಳ್ಳು.

ಡಾ. ಅಶೋಕ್. ಕೆ. ಆರ್. 
ಗಾಂಧಿ ಜಯಂತಿಯ ದಿನ ಸಾಬರಮತಿ ಆಶ್ರಮದಲ್ಲಿ ನಡೆದ 'ಸ್ವಚ್ಛ ಭಾರತ ದಿನ’ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಪ್ರಧಾನಿ ನರೇಂದ್ರ ಮೋದಿಯವರು ಭಾರತ ಈಗ ಬಯಲು ಶೌಚ ಮುಕ್ತ ರಾಷ್ಟ್ರವಾಗಿದೆ ಎಂದು ಹೇಳಿದ್ದಾರೆ. ೬೦ ತಿಂಗಳುಗಳಲ್ಲಿ ಹನ್ನೊಂದು ಕೋಟಿ ಶೌಚಾಲಯಗಳು ನಿರ್ಮಾಣವಾಗಿರುವುದನ್ನು ನೆಪವಾಗಿಟ್ಟುಕೊಂಡು ಪ್ರಧಾನಿಯವರು ಬಯಲು ಶೌಚ ಮುಕ್ತ ರಾಷ್ಟ್ರದ ಘೋಷಣೆ ಮಾಡಿದ್ದಾರೆ. ನಿಜಕ್ಕೂ ವಾಸ್ತವದಲ್ಲಿ, ಭಾರತ ಬಯಲು ಶೌಚ ಮುಕ್ತ ರಾಷ್ಟ್ರವಾಗಿದೆಯಾ? 

ನಮ್ಮ ರಾಜಕಾರಣಿಗಳು - ಅದು ಮುಖ್ಯಮಂತ್ರಿಯಾದರೂ ಸರಿ, ಪ್ರಧಾನಮಂತ್ರಿಯಾದರೂ ಸರಿ - ಚುನಾವಣೆಯ ಸಂದರ್ಭದಲ್ಲಿ ಸುಳ್ಳುಗಳನ್ನೇಳುವುದು ಅಥವಾ ಇರುವ ಸತ್ಯವನ್ನೇ ಊಹಿಸಲಾರದಷ್ಟು ದೊಡ್ಡ ಮಟ್ಟದಲ್ಲಿ ವೈಭವೀಕರಿಸಿ ಹೇಳುವುದು ಸಹಜ ಸಂಗತಿಯಂತೇ ಆಗಿ ಹೋಗಿದೆ. My experiments with truth ಅನ್ನೋ ಹೆಸರಿನ ಆತ್ಮಚರಿತ್ರೆ ಬರೆದ, ಸತ್ಯಕ್ಕಾಗಿ ಆಗ್ರಹಿಸುವ ಹೊಸ ಹೊಸ ವಿಧಾನಗಳನ್ನು ಅಳವಡಿಸಿಕೊಳ್ಳಲು ಪ್ರಯತ್ನಿಸಿದ ಗಾಂಧೀಜಿಯ ಜನ್ಮದಿನವೇ ಅನಾವಶ್ಯಕ ಸುಳ್ಳೇಳುವ ಅನಿವಾರ್ಯತೆಯಾದರೂ ಪ್ರಧಾನಿಗೇನಿತ್ತು? ಅಥವಾ ನಿಜಕ್ಕೂ ಯಾರೋ ಒಬ್ಬ ಅಧಿಕಾರಿಯೋ ಮತ್ತೊಬ್ಬರೋ ವೈಭವೀಕರಿಸಿ ಕೊಟ್ಟ ವರದಿಯನ್ನೇ ನಂಬಿಬಿಡುವಷ್ಟು ನಮ್ಮ ಪ್ರಧಾನಿ ಮುಗ್ದರೇ? 

ಈ ಮುಂಚೆ ಇದ್ದ ನಿರ್ಮಲ ಭಾರತ ಯೋಜನೆಯಡಿ, ತದನಂತರ ಬಂದ ಸ್ವಚ್ಛ ಭಾರತ ಯೋಜನೆಯಡಿ ಬಹಳಷ್ಟು ಗ್ರಾಮಗಳಲ್ಲಿ ಮನೆಗೊಂದು ಶೌಚಾಲಯ ನಿರ್ಮಾಣಗೊಂಡಿರುವುದು ಎದ್ದು ಕಾಣಿಸುತ್ತದೆ (ಕೊನೇ ಪಕ್ಷ ಕರ್ನಾಟಕದ ಹಳ್ಳಿಗಳಲ್ಲಿ), ಅದರಲ್ಲೇನೂ ಅನುಮಾನವಿಲ್ಲ. ಅಷ್ಟಿದ್ದರೂ ಹಳ್ಳಿಯಂಚಿನ ಕೆರೆ ಬದಿಗಳಲ್ಲಿ, ಗದ್ದೆ ಹೊಲದ ಬದುವಿನಲ್ಲಿ, ಕಾಲುವೆಯಂಚಿನಲ್ಲಿ, ಹಳ್ಳಗಳತ್ತಿರ ಬಯಲು ಶೌಚ ಯಥಾಸ್ಥಿತಿಯಲ್ಲೇ ಮುಂದುವರೆದಿರುವುದಂತೂ ಹೌದು. ಶೌಚಾಲಯಗಳ ನಿರ್ಮಾಣ ನಡೆಯುತ್ತಿದ್ದರೂ ಬಯಲು ಶೌಚ ಯಾಕೆ ಮುಂದುವರೆಯುತ್ತಿದೆ?

ಅಕ್ಟೋ 2, 2019

ಬಲಾಡ್ಯ ರಾಜಕೀಯ ಶಕ್ತಿಯಾಗಬೇಕಿರುವ ಕನ್ನಡ ಭಾಷಿಕ ಸಮುದಾಯ

ಕು.ಸ.ಮಧುಸೂದನ ರಂಗೇನಹಳ್ಳಿ 
ಬೃಹತ್ ಬೆಂಗಳೂರು ಮಹಾನಗರಪಾಲಿಕೆಯ ಮೇಯರ್ ಸ್ಥಾನ ಕನ್ನಡೇತರರ ಪಾಲಾಗಿರುವ ಹಿನ್ನೆಲೆಯಲ್ಲಿ ‘ಕನ್ನಡಿಗ’ರೆಂದರೆ ಯಾರು? ಕನ್ನಡಿಗ ಎಂದು ಹೇಳಲು ಇರುವ ಮಾನದಂಡವೇನು ಎಂಬುದರ ಬಗ್ಗೆ ಬಿಸಿಬಿಸಿ ಚರ್ಚೆಗಳು ನಡೆಯುತ್ತಿರುವ ಈ ಸನ್ನಿವೇಶದಲ್ಲಿಯೇ ಕನ್ನಡ ಭಾಷಿಕ ಜನಾಂಗ ತನ್ನನ್ನು ತಾನು ಆಳಿಕೊಳ್ಳಲು ಸಶಕ್ತವಾಗಿದೆಯೇ ಮತ್ತು ಅದಕ್ಕೆ ಬೇಕಾಗಿರುವುದು ಏನು ಎಂಬುದರ ಬಗ್ಗೆ ಒಂದಿಷ್ಟು ಚಿಂತನೆ ಮಾಡಬೇಕಾದ ಅನಿವಾರ್ಯತೆ ಬಂದೊದಗಿದೆ 

ನಿಜವಾದ ಅರ್ಥದಲ್ಲಿ ಇವತ್ತು ಕನ್ನಡ ಚಳುವಳಿಗಳು ಸಂಪೂರ್ಣವಾಗಿ ಸ್ಥಗಿತಗೊಂಡಂತೆ ಕಾಣುತ್ತಿವೆ. ಇಂತಹ ಚಳುವಳಿಗಳ ಆತ್ಮವಾಗಿರಬೇಕಾಗಿದ್ದ ಅಕ್ಷರಸ್ಥ ಮದ್ಯಮವರ್ಗ ಸ್ವತ: ಜಡಗೊಂಡಿರುವ ಈ ಸನ್ನಿವೇಶದಲ್ಲಿ ನಮ್ಮ ಕನ್ನಡ ಚಳುವಳಿ ಸಹ ನಿಸ್ತೇಜಗೊಂಡಂತೆ ನಮಗೆ ಭಾಸವಾಗುತ್ತಿದ್ದರೆ ಅಚ್ಚರಿಯೇನಲ್ಲ. ಇಂತಹ ನಿರಾಶಾದಾಯಕ ಸನ್ನಿವೇಶದಲ್ಲಿಯೂ ಕನ್ನಡ ಚಳುವಳಿಯ ಕುರಿತು ಒಂದಿಷ್ಟು ಆಶಾಬಾವನೆ ಒಡಮೂಡಿದ್ದು ಕೆಲವರ್ಷಗಳ ಹಿಂದೆ ನಡೆದ ಕಳಸಾ ಬಂಡೂರಿ ಮತ್ತು ಕಾವೇರಿ ನದಿ ನೀರಿನ ಹಂಚಿಕೆಯ ವಿವಾದಗಳ ಬಗ್ಗೆ ನಡೆದ ಹೋರಾಟದ ಕ್ಷಣದಲ್ಲಿ ಮಾತ್ರ. 

ಹಾಗೆ ನೋಡಿದರೆ ನಾವು ಕನ್ನಡ ಚಳುವಳಿಯ ಒಟ್ಟು ಅರ್ಥವನ್ನೇ ಸಂಕುಚಿತಗೊಳಿಸಿ ನೋಡುವ ವಿಷಯದಲ್ಲಿಯೇ ಎಡವಿದ್ದೇವೆ. ಯಾಕೆಂದರೆ ಕನ್ನಡ ಚಳುವಳಿ ಎಂದರೆ ಅದು ಕೇವಲ ಕನ್ನಡ ಬಾಷೆಗೆ ಸೀಮಿತವಲ್ಲ. ಬದಲಿಗೆ ಕರ್ನಾಟಕದ ನೆಲ, ಜಲ, ಬಾಷೆ, ನೈಸರ್ಗಿಕ ಸಂಪನ್ಮೂಲಗಳೂ ಸೇರಿದಂತೆ ಒಟ್ಟು ಕನ್ನಡ ನಾಡಿನ ಚಳುವಳಿಯೇ ನಿಜವಾದ ಕನ್ನಡ ಚಳುವಳಿ! ಆದರೆ ಇದುವರೆಗು ನಡೆದ ಕನ್ನಡ ಚಳುವಳಿಗಳು ಕೇವಲ ಬಾಷಿಕ ಚಳುವಳಿಗಳಾಗಿ: ಆಡಳಿತ ಬಾಷೆ ಕನ್ನಡವಾಗಬೇಕು, ಕನ್ನಡ ಮಾದ್ಯಮದಲ್ಲಿ ಶಿಕ್ಷಣ ನೀಡಬೇಕು, ನಾಮಫಲಕಗಳು ಕನ್ನಡದಲ್ಲಿ ಇರಬೇಕೆಂಬ ಬೇಡಿಕೆಗಳಿಗೆ ಮಾತ್ರ ಸೀಮಿತವಾಗಿ ನಡೆಯುತ್ತ ಬಂದಿವೆ. ಇಂತಹ ಏಕಮುಖ ಚಳುವಳಿಯ ಅಪಾಯವೆಂದರೆ ಕನ್ನಡ ಚಳುವಳಿ ಏಕಾಕಿಯಾಗಿ ಉಳಿದುಬಿಡುವುದು ಮತ್ತು ಕನ್ನಡದ ನೆಲ, ಜಲ, ಸಂಪನ್ಮೂಲಗಳ ವಿಷಯ ತನಗೆ ಸಂಬಂದಿಸಿದ್ದಲ್ಲವೆಂಬ ಅಭಿಪ್ರಾಯ ಬೆಳೆಸಿಕೊಂಡು ಬಿಡುವುದಾಗಿದೆ. ಹೀಗಾದಾಗ ಇಡಿ ಕನ್ನಡ ಚಳುವಳಿ ಕೇವಲ ಭಾಷಾ ದುರಭಿಮಾನದ ಸಂಕೇತವಾಗಿ ಮಾತ್ರ ಉಳಿದು ಬಿಡುವ ಅಪಾಯವಿದೆ.