ನವೆಂ 17, 2018
ನವೆಂ 13, 2018
ಮೇರ್ಕು ತೊಡರ್ಚಿ ಮಲೈ ಎಂಬ ದೃಶ್ಯ ಕಾವ್ಯ.
ಡಾ. ಅಶೋಕ್. ಕೆ. ಆರ್.
ಜಾತಿ ವ್ಯವಸ್ಥೆಯ ಬಗ್ಗೆ ವರ್ಗ ವ್ಯವಸ್ಥೆಯ ಬಗ್ಗೆ ನಮ್ಮಲ್ಲಿ ಆವಾಗವಾಗ ಒಂದೊಂದು ಚಿತ್ರ ಬಂದಿದೆಯಾದರೂ ಭೂರಹಿತ ಕಾರ್ಮಿಕರನ್ನೇ ಮುಖ್ಯಭೂಮಿಯಲ್ಲಿರಿಸಿಕೊಂಡು ಬಂದ ಚಿತ್ರಗಳು ಇಲ್ಲವೇ ಇಲ್ಲವೆನ್ನುವಷ್ಟು ಕಡಿಮೆಯೆಂದು ಹೇಳಬಹುದು. ಜಾತಿ ವರ್ಗ ವ್ಯವಸ್ಥೆಯ ಕುರಿತಾದ ಚಿತ್ರಗಳಲ್ಲಿ ಕೆಲವೊಂದು ವಾಸ್ತವಿಕತೆಯನ್ನು ನಮ್ಮ ಕಣ್ಣ ಮುಂದೆ ಇರಿಸುತ್ತಾದರೂ ವಾಸ್ತವಿಕತೆಯನ್ನು ತಲುಪಿಸುವ ನಿಟ್ಟಿನಲ್ಲಿ ಅದನ್ನು ವೈಭವೀಕರಿಸುವ ಕೆಲಸ ಮಾಡುತ್ತವೆ, ನಾಯಕ ಪಾತ್ರದ ಒಳಿತನ್ನು ಋಜುವಾತುಪಡಿಸುವುದಕ್ಕೆ ಪ್ರತಿನಾಯಕರ ರಕ್ತದಲ್ಲೇ ಕೆಟ್ಟತನವಿದೆಯೆನ್ನುವಂಶವನ್ನು ಒತ್ತಿ ಒತ್ತಿ ಹೇಳುವ ಕ್ರಮವನ್ನೇ ಬಹಳಷ್ಟು ಸಿನಿಮಾಗಳು ಅಳವಡಿಸಿಕೊಂಡಿರುತ್ತವೆ. ಈ ಚಿತ್ರಗಳ ಇನ್ನೊಂದು ದೌರ್ಬಲ್ಯ (ಅದನ್ನು ಈ ಚಿತ್ರಗಳ ಶಕ್ತಿಯೆಂದೂ ಕರೆಯಬಹುದು!) ಅತಿ ಭಾವುಕತೆ. ನಿಜ ಜೀವನದಲ್ಲಿ ಕಂಡುಬರದಷ್ಟು ಭಾವುಕತೆಯನ್ನು ಚಿತ್ರಗಳಲ್ಲಿ ತುಂಬಿಬಿಡಲಾಗುತ್ತದೆ. ಅತಿ ಭಾವುಕತೆ ಅತಿ ವಾಸ್ತವತೆಯ ಕ್ರಮದಿಂದೊರತಾಗಿ ನಿಂತು, ಅತಿ ಎನ್ನುವಷ್ಟು ಒಳ್ಳೆಯ ನಾಯಕ, ಅತಿ ಎನ್ನಿಸುವಷ್ಟು ಕೆಟ್ಟ ವಿಲನ್ನು ಎಂಬ ಕ್ರಮದಿಂದಲೂ ಹೊರತಾಗಿದ್ದು ದೀರ್ಘಕಾಲದವರೆಗೆ ಕಾಡುವಂತಹ ದೃಶ್ಯಕಾವ್ಯವೇ ‘ಮೇರ್ಕು ತೊಡರ್ಚಿ ಮಲೈ’ (ಅರ್ಥಾತ್ ಪಶ್ಚಿಮ ಘಟ್ಟ).
ಲೆನಿನ್ ಭಾರತಿ ನಿರ್ದೇಶನದ ಚಿತ್ರವನ್ನು ನಿರ್ಮಿಸಿರುವುದು ವಿಜಯ್ ಸೇತುಪತಿ. ಸ್ವತಃ ಉತ್ತಮ ನಟನಾದರೂ ವಿಜಯ್ ಸೇತುಪತಿ ಈ ಚಿತ್ರದಲ್ಲಿ ಅಭಿನಯಿಸಿಲ್ಲ. ಒಂದು ಚಿಕ್ಕ ಪಾತ್ರದಲ್ಲಾದರೂ ವಿಜಯ್ ಸೇತುಪತಿ ನಟಿಸಿದ್ದರೆ ಇಂತಹುದೊಂದು ಚಿತ್ರ ಹೆಚ್ಚು ಜನರನ್ನು ತಲುಪುತ್ತಿತ್ತು ಎನ್ನುವುದು ಸತ್ಯ. ಚಿತ್ರದ ನಾಯಕ ರಂಗಸ್ವಾಮಿ. ಭೂರಹಿತ ಕಾರ್ಮಿಕ. ತಮಿಳುನಾಡು ಕೇರಳ ಗಡಿಪ್ರದೇಶದ ಘಟ್ಟ ಪ್ರದೇಶದಲ್ಲಿ ಆತನ ವಾಸ. ಏಲಕ್ಕಿ ಕಾಯಿಯ ಮೂಟೆಯನ್ನು ಹೆಗಲ ಮೇಲೊತ್ತು ಘಟ್ಟದಿಂದ ಮಾರುಕಟ್ಟೆಗೆ ಸಾಗಿಸುವ ಕೆಲಸ ಆತನದು. ಘಟ್ಟ ಪ್ರದೇಶವನ್ನು ಹೊಸತಾಗಿ ದಾಟುವವರಿಗೆ ದಾರಿಯಾಗುತ್ತಾನೆ, ಆಸರೆಯಾಗುತ್ತಾನೆ. ಎಲ್ಲರ ಮೆಚ್ಚಿನ ವ್ಯಕ್ತಿ ರಂಗಸ್ವಾಮಿ ತನ್ನೂರಿನ ಮನೆಯಲ್ಲಿ ಅಮ್ಮನೊಂದಿಗೆ ವಾಸವಾಗಿದ್ದಾನೆ. ಇಂತಿಪ್ಪ ರಂಗಸ್ವಾಮಿಗೆ ಒಂದು ತುಂಡು ಭೂಮಿಯನ್ನು ಖರೀದಿಸಬೇಕೆಂಬುದೇ ಜೀವನದ ಗುರಿ. ಯಾವುದೇ ದುಶ್ಚಟಗಳಿಲ್ಲದ ರಂಗಸ್ವಾಮಿ ಕೂಡಿಹಾಕಿದ್ದ ಹಣದಿಂದ ಇನ್ನೇನು ಭೂಮಿ ಖರೀದಿಸಿಯೇಬಿಟ್ಟ ಎನ್ನುವಾಗ ಭೂಮಿಯ ಒಡೆಯರ ಕೌಟುಂಬಿಕ ಜಗಳದಿಂದ ಆಸೆಗೆ ಕಲ್ಲು ಬೀಳುತ್ತದೆ. ಮತ್ತೆ ಏಲಕ್ಕಿ ಮೂಟೆಯನ್ನು ಘಟ್ಟದಿಂದಿಳಿಸುವ ಕೆಲಸಕ್ಕೆ ರಂಗಸ್ವಾಮಿ ಮುಂದಾಗುತ್ತಾನೆ.
ನವೆಂ 12, 2018
ಡ್ರಾಫ್ಟ್ ಮೇಲ್: ಭಾಗ 2 - ಡ್ರಾಫ್ಟ್ ಸೇರಿದ ಮೊದಲ ಪತ್ರ
ಚೇತನ ತೀರ್ಥಹಳ್ಳಿ.
ಡಿಯರ್ ಫೆಲೋಟ್ರಾವೆಲರ್,
ನನ್ನ ತಿರುವಿನಲ್ಲಿ ತಿರುಗುತ್ತಿದ್ದೇನೆ. ಈ ತಿರುವೇ ನನ್ನ ನಿಲ್ದಾಣವೂ ಆಗಲಿದೆ.
ನಂಗೆ ಸತ್ತುಹೋಗಬೇಕು ಅನಿಸುತ್ತಿದೆ. ಇದನ್ನು ನನ್ನ ಕೊನೆಯ ಪತ್ರ ಅಂದುಕೋ.
ನೀನು ವಾಪಸ್ ಬರುವ ಹೊತ್ತಿಗೆ ನಾನು ಇರೋದಿಲ್ಲ. ಶೋಕೇಸಿನಲ್ಲಿ ನಿನ್ನ ಫೋಟೋ ಹಿಂದೆ ಡೆತ್ ನೋಟ್ ಬರೆದಿಟ್ಟಿದ್ದೀನಿ. ಅದನ್ನು ಪೊಲೀಸರಿಗೆ ಕೊಡು.
ಅದರಲ್ಲೂ ವಿಶೇಷವೇನಿಲ್ಲ. ಯಾಕೆ ಬದುಕಬೇಕು ಅಂತ ಗೊತ್ತಿಲ್ಲದ ಕಾರಣ ಸತ್ತು ಹೋಗ್ತಿದ್ದೀನಿ ಅಂತ ಬರೆದಿದ್ದೀನಿ.
ಇತ್ತೀಚೆಗೆ ನಮ್ಮ ನಡುವೆ ಜಗಳ ಜಾಸ್ತಿಯಾಗ್ತಿದೆ. ನೀನು ಇಷ್ಟು ಅಸಹನೆ ಮಾಡಿದರೆ ನಾನು ಹೇಗೆ ಬದುಕಿರಲಿ? ಖುಷಿಗೆ, ಬದುಕಿಗೆ, ಧೈರ್ಯಕ್ಕೆ ಜೊತೆ ಯಾರಿದ್ದಾರೆ?
ಆದರೆ ಡೆತ್ ನೋಟಿನಲ್ಲಿ ಇದನ್ನೆಲ್ಲ ಬರೆದಿಲ್ಲ.
ನವೆಂ 9, 2018
ಖಾಸಗಿ ಬ್ಯಾಂಕಿನ ಅಮಾನವೀಯ ನಡೆ! ಮುಕ್ತ ಆರ್ಥಿಕ ನೀತಿಯ ಫಲ
ಕು.ಸ.ಮಧುಸೂದನ ರಂಗೇನಹಳ್ಳಿ
ಜಾಗತೀಕರಣದ ಮತ್ತೊಂದು ಮಾರಕಾಯುಧ ನಮ್ಮ ರೈತರ ಬಲಿ ಪಡೆಯುವತ್ತ ಮುಂದಾಗಿದೆ.ಅದೇ ಆಕ್ಸಿಸ್ ಬ್ಯಾಂಕ್!
ತೊಂಭತ್ತರ ದಶಕದಲ್ಲಿ ಜಾರಿಗೊಂಡ ಮುಕ್ತ ಆರ್ಥಿಕ ನೀತಿಯ ಫಲವಾಗಿ 1993ರಲ್ಲಿ ಜನ್ಮ ತಳೆದ ಖಾಸಗಿ ವಲಯದ ಈ ಬ್ಯಾಂಕ್ ದೇಶದಾದ್ಯಂತ 1947 ಶಾಖೆಗಳನ್ನು ಹೊಂದಿದೆ. ಖಾಸಗಿ ವಲಯದ ಅತ್ಯಂತ ಪ್ರಮುಖ ಬ್ಯಾಂಕ್ ಎಂದು ಹೆಸರು ಮಾಡಿರುವ ಇದು ದೇಶದ ಬೇರೆಲ್ಲ ಬ್ಯಾಂಕುಗಳಿಗಿಂತ ಹೆಚ್ಚು ಎ.ಟಿ.ಎಂ. ಗಳನ್ನು ಸಹ ಹೊಂದಿದೆ. ಇದರ ಕೇಂದ್ರಕಛೇರಿ ಮುಂಬೈನಲ್ಲಿದೆ..ಇರಲಿ ನಾನೇನು ಇಲ್ಲಿಈ ಬ್ಯಾಂಕಿನ ಮಾಹಿತಿ ನೀಡಲು ಇದನ್ನು ಬರೆಯುತ್ತಿಲ್ಲ. ವಿಷಯಕ್ಕೆ ಹೋಗುವ ಮೊದಲು ಈ ಬ್ಯಾಂಕಿನ ಬಗ್ಗೆ ಒಂದಿಷ್ಟು ಮಾಹಿತಿ ನಿಮಗಿರಲೆಂದು ಹೇಳಿದೆ.
ಇದೀಗ ಈ ಬ್ಯಾಂಕು ಕನಾಟಕ ರಾಜ್ಯದ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲ್ಲೂಕಿನ ಸುಮಾರು 181 ರೈತರ ವಿರುದ್ದ ಸಾಲ ಮರುಪಾವತಿ ಮಾಡಿಲ್ಲವೆಂದು ಕೋರ್ಟಿನಿಂದ ಬಂಧನದ ಆದೇಶವನ್ನು ಹೊರಡಿಸಿ ತನ್ನ ರಾಕ್ಷಸೀತನವನ್ನು ಮೆರೆದಿದೆ. ಇದೀಗ ರೈತಸಂಘ ಮತ್ತು ರಾಜ್ಯ ಸರಕಾರಗಳ ಮದ್ಯಸ್ಥಿಕೆಯಿಂದ ತನ್ನ ಕಾನೂನು ಹೋರಾಟವನ್ನು ಸ್ಥಗಿತಗೊಳಿಸುವುದಾಗಿ ಬ್ಯಾಂಕಿನ ಸ್ಥಳೀಯ ಅಧಿಕಾರಿಗಳು ಭರವಸೆ ನೀಡಿದ್ದಾರೆ. ಆದರೆ ಅಷ್ಟು ಸುಲಭಕ್ಕೆ ಈ ಬಂಧನದ ವಾರೆಂಟುಗಳು ರದ್ದಾಗುವುದಿಲ್ಲ. ಯಾಕೆಂದರೆ ಈ ವಾರೆಂಟುಗಳನ್ನು ಹೊರಡಿಸಿರುವುದು ಎರಡು ಸಾವಿರ ಮೈಲುಗಳಷ್ಟು ದೂರವಿರುವ ಕೊಲ್ಕತ್ತಾದ ನ್ಯಾಯಾಲಯಗಳು. ಕಾರಣ ಕರ್ನಾಟಕದಲ್ಲಿನ ಈ ಬ್ಯಾಂಕುಗಳು ಕೊಲ್ಕತ್ತಾದ ಆಡಳಿತವಲಯಕ್ಕೆ ಸೇರಿರುವುದು. ಈಗ ಅಲ್ಲಿ ನ್ಯಾಯಾಲಯಗಳಿಗೆ ದೀಪಾವಳಿಯ ರಜೆ ಇರುವುದರಿಂದ ಅವುಗಳು ಮತ್ತೆ ತಮ್ಮಕಲಾಪಗಳನ್ನು ಪ್ರಾರಂಭಿಸುವವರೆಗು ನಮ್ಮ ರೈತರು ಬಂಧನದ ಭೀತಿಯಲ್ಲಿಯೇ ಬದುಕುವ ಅನಿವಾರ್ಯ ಸೃಷ್ಠಿಯಾಗಿದೆ.
ನವೆಂ 8, 2018
ನವೆಂ 5, 2018
ಡ್ರಾಫ್ಟ್ ಮೇಲ್: ಭಾಗ 1
ಚೇತನ ತೀರ್ಥಹಳ್ಳಿ.
ಚಿನ್ಮಯಿ ಕಾಲು ನೀಡಿಕೊಂಡು, ಲ್ಯಾಪ್ಟಾಪ್ ತೆರೆದು ಕುಳಿತಿದ್ದಾಳೆ. ನಡು ಮಧ್ಯಾಹ್ನದ ಬಿಸಿಲು ಗೋಡೆಗೆ ಅಪ್ಪಳಿಸಿ, ಬಾಗಿಲುದ್ದ ನೆಲದ ಮೇಲೆ ಅಂಗಾತ ಬಿದ್ದಿದೆ.“ಅರೆ! ಬೆಳಕಿನ ಬಾಗಿಲು..” ತನ್ನೊಳಗೆ ಬೆರಗಾಗುತ್ತಾಳೆ.
ಹಗೂರ ಎದ್ದು, ಹೊಸ್ತಿಲಾಚೆ ಬಿಸಿಲಿಗೆ ಬೆನ್ನಾಗಿ ನಿಲ್ಲುತ್ತಾಳೆ. ಮನೆಯೊಳಗೆ ನೆಲದಲ್ಲಿ ಅವಳ ನೆರಳು!
ಮೊಬೈಲ್ ಕ್ಯಾಮೆರಾ ಆನ್ ಮಾಡಿ, ಸೆಲ್ಫಿ ಮೋಡಿನಿಂದ ಮಾಮೂಲಿಗೆ ಬರುತ್ತಾಳೆ.
ಯಾವ ಕೋನದಿಂದ ತೆಗೆದರೆ ಫೋಟೋ ಚೆನ್ನಾಗಿ ಬರುತ್ತದೆ ಅನ್ನೋದು ಅವಳಿಗೆ ಗೊತ್ತಿದೆ.
ತಮ್ಮದೇ ಫೋಟೋ ತೆಗೆದುಕೊಳ್ಳುವವರು ಛಾಯಾಗ್ರಹಣವನ್ನ ವಿಶೇಷವಾಗಿ ಅಭ್ಯಾಸ ಮಾಡಬೇಕಿಲ್ಲ.. ನಾರ್ಸಿಸಿಸ್ಟ್ಗಳಾದರೆ ಸಾಕು ಅನ್ನೋದು ಅವಳ ನಂಬಿಕೆ.
ಚಿನ್ಮಯಿ ತೆಗೆದ ಫೋಟೋ ಅದ್ಭುತವಾಗಿ ಬಂದೇಬಂದಿದೆ. ‘ದೇಹ ಮೀರಿದರೂ ನೆರಳಿಗೆ ಹೊಸ್ತಿಲು ದಾಟಲಾರದ ಭಯ’ ಅನ್ನುವ ಒಕ್ಕಣೆ ಕೊಟ್ಟು ಇನ್ಸ್ಟಾಗ್ರಾಮಿನಲ್ಲಿ ಶೇರ್ ಮಾಡುತ್ತಾಳೆ.
ಅವಳು ತೀರ ಪುರುಸೊತ್ತಿನಲ್ಲಿ ಇದ್ದಾಳೆಂದು ಇದನ್ನೆಲ್ಲ ಮಾಡುತ್ತಿಲ್ಲ. ಮಾಡಲೇಬೇಕಿರುವ ಕೆಲಸವೊಂದನ್ನು ಎಷ್ಟು ಸಾಧ್ಯವೋ ಅಷ್ಟು ಹೊತ್ತು ಮುಂದೂಡಲಿಕ್ಕಾಗಿ ಮಾಡುತ್ತಿದ್ದಾಳೆ. ಅದೊಂದು ಮಾಡಿಬಿಟ್ಟರೆ ಈ ದಿನದ ಕೆಲಸವೇ ಮುಗಿದುಹೋಗುತ್ತದೆ. ಆದರೆ ಚಿನ್ಮಯಿ ಯಾವುದನ್ನು ವಿಪರೀತ ಇಷ್ಟಪಡುತ್ತಾಳೋ ಅದನ್ನು ಹೊಂದಲು ಭಯಪಡುತ್ತಾಳೆ.
ಅವಳಿಗೆ ಖಾಲಿಯಾಗುವುದೆಂದರೆ ಇಷ್ಟ.
ಅವಳಿಗೆ ಖಾಲಿಯಾಗುವುದೆಂದರೆ ಭಯ.
ನವೆಂ 4, 2018
ಧಗಧಗಿಸುವೊಂದು ಮದ್ಯಾಹ್ನ!
ಕು.ಸ.ಮಧುಸೂದನ್
ನಕ್ಷತ್ರಗಳು ಬೂದಿಯಾಗಿ
ಚಂದ್ರ ಕರಗಿ
ಸೂರ್ಯ ನಿಗಿನಿಗಿ ಕೆಂಡವಾಗಿ
ತೆಂಗಿನ ಮರಕೆ ಬಡಿದು ಸಿಡಿಲು
ನಾಲ್ಕಂಕಣದ ಮನೆತೊಲೆಗಳಿಗೆ ಗೆದ್ದಲು
ನೆಲ ಮಾಳಿಗೆಯೊಲು ಹೂತಿಟ್ಟ ಹೆಣಗಳು ತೂಗಿ
ಹುಳು ಬಿದ್ದು ಅನ್ನದ ತಟ್ಟೆಯೊಳಗೆ
ಹದ್ದುಗಳು ಹಣಕುತ್ತ ಅಮೃತದ
ಬಟ್ಟಲೊಳಗೆ ಬಾಗಿ
ಅಕ್ಟೋ 31, 2018
ಮೀಟೂ ಮತ್ತು ಶಬರಿಮಲೆ ವಿವಾದಗಳ ನಡುವೆ ನಾವು ಮರೆತದ್ದೇನು?
ಕು.ಸ.ಮಧುಸೂದನ ರಂಗೇನಹಳ್ಳಿ
ಇಂಡಿಯಾದ ಸಂಸದೀಯ ಪ್ರಜಾಸತ್ತೆಯ ದೌರ್ಬಲ್ಯ ಮತ್ತು ದುರಂತವಿರುವುದೇ ನಮ್ಮ ಈ ತೆರನಾದ ನಡವಳಿಕೆಗಳಲ್ಲಿ. ಈ ನೆಲದ ಪ್ರಜಾಪ್ರಭುತ್ವ ವಿರೋಧಿ ಶಕ್ತಿಗಳು ಕಾಲಕಾಲಕ್ಕೆ ಇಂತಹ ಹುಸಿಕ್ರಾಂತಿಗಳ ಹೆಸರಿನಲ್ಲಿ ಪ್ರಜಾಸತ್ತಾತ್ಮಕ ಚುನಾವಣೆಗಳನ್ನು, ಅವುಗಳ ಸುತ್ತ ಚರ್ಚೆಯಾಗಬೇಕಾದ ವಿಚಾರಗಳ ದಾರಿ ತಪ್ಪಿಸುತ್ತ ಹೋಗುವುದು ನಡೆದುಕೊಂಡೇ ಬಂದಿದೆ.ನಾವು ಸಹ ನಮಗರಿವಿದ್ದೊ ಇಲ್ಲದೆಯೊ ದಾರಿ ತಪ್ಪುತ್ತಲೇ ಬರುತ್ತಿದ್ದೇವೆ.
ಇದೀಗ ಎರಡು ವಿಷಯಗಳು ಇಡೀದೇಶದ ಗಮನವನ್ನು ಸೆಳೆದಿದ್ದು ನಮ್ಮ ಗಮನ ಮತ್ತು ಚರ್ಚೆಗಳನ್ನು ಆ ಎರಡು ವಿಚಾರಗಳೇ ಆವರಿಸಿಕೊಂಡಿವೆ. ಮೊದಲನೆಯದು ಮಾಜಿ ನಟಿ ತನುಶ್ರೀ ದತ್ತಾ ಶುರು ಮಾಡಿದ ಮೀಟೂ ಅಭಿಯಾನವಾದರೆ ಎರಡನೆಯದು, ಶಬರಿಮಲೆಗೆ ಮಹಿಳೆಯರ ಮುಕ್ತ ಪ್ರವೇಶದ ಬಗ್ಗೆ ಎದ್ದಿರುವ ವಿವಾದ ಮತ್ತು ಅದರ ಪರ-ವಿರೋಧ ಪ್ರತಿಭಟನೆಗಳು!.
ಉಂಟೆ !?
ಪ್ರವೀಣಕುಮಾರ್ ಗೋಣಿ
ಮಾಯೆಯೆನ್ನುವ ಮಿಥ್ಯದ
ನರ್ತನದ ತೆಕ್ಕೆಗೆ ಸಿಕ್ಕಿ
ದುರುಳ ಮನಸಿನ
ವಶವಾಗುವ ಸ್ಥಿತಿಗಿಂತ
ಹೀನತೆ ಬೇರೊಂದು ಉಂಟೆ ?
ತೀರದ ದಾಹಕ್ಕೆ
ತೊರೆಯಲಾಗದ ಮೋಹಕ್ಕೆ
ಅಂತ್ಯವಿರದ ವಾಸನೆಗಳ
ಸೆರೆಯಿಂದ ಬಿಡಿಸಿಕೊಳ್ಳಲಾಗದ
ಪಾಮರತೆಗಿಂತ ಬೇರೆ ನಿಕೃಷ್ಟತೆಯುಂಟೆ ?
ಮಸ್ತಕದೊಳಗಿನ ಮಣಭಾರದ
ಜ್ಞಾನವನ್ನೇ ಅರಿವ ಕಿರೀಟವಾಗಿಸಿಕೊಂಡು
ತನ್ನ ತಾನೇ ಜ್ಞಾನಿಯೆಂದು
ಭಾವಿಸಿಕೊಂಡು ಬೀಗುವ ಭ್ರಮೆಗಿಂತ
ಮತ್ತೊಂದು ಅಜ್ಞಾನ ಉಂಟೆ ?