ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
(ಇದೀಗ ಕರ್ನಾಟಕದ ಉದ್ದಗಲಕ್ಕೂ ಅತೃಪ್ತ ಆತ್ಮಗಳು ಅಡ್ಡಾಡುತ್ತಿದ್ದು ಸ್ವಪಕ್ಷೀಯರಿಂದ ಅತೃಪ್ತಿ ಶಮನವಾಗದಿದ್ದ ಆತ್ಮಗಳು ಪರಪಕ್ಷಗಳ ಸೆರಗಿನ ಚುಂಗು ಹಿಡಿದು ತಮ್ಮ ಅತೃಪ್ತಿಯನ್ನು ತಣಿಸಿಕೊಳ್ಳಲು ಪ್ರಯತ್ನಿಸುತ್ತಿವೆ, ಹಾಗೆಯೇ ಇಂತಹ ಆತ್ಮಗಳನ್ನು ಹಿಡಿದು ತಂದು ಅವಕ್ಕೊಂದು ಭದ್ರನೆಲೆ ಕಲ್ಪಿಸುವಲ್ಲಿ ನಮ್ಮ ರಾಜಕೀಯ ಪಕ್ಷಗಳು ಅಪಾರವಾಗಿ ಶ್ರಮಿಸುತ್ತಿವೆ. ಆ ಬಗ್ಗೆ ಒಂದು ಟಿಪ್ಪಣಿ)
ಅವೇ ಕ್ಷೇತ್ರಗಳು, ಅವೇ ಹೆಸರುಗಳು, ಅವೇ ಮುಖಗಳು, ಆದರೆ-ಪಕ್ಷದ ಬಾವುಟ ಮತ್ತು ಚಿಹ್ನೆ ಬೇರೆ. ಮೇ ಹನ್ನೆರಡನೆ ತಾರೀಖಿನಂದು ನಡೆಯಲಿರುವ ಕರ್ನಾಟಕ ವಿದಾನಸಭೆಯ ಚುನಾವಣೆಗಳಿಗೆ ಸ್ಪರ್ದಿಸಿರುವ ಸಾಕಷ್ಟು ಕ್ಷೇತ್ರಗಳಲ್ಲಿ ಈ ಮಾತು ನಿಜವಾಗುತ್ತಿದೆ. 2013ರ ಚುನಾವಣೆಯನ್ನು, ಆಗ ಯಾವ್ಯಾವ ಪಕ್ಷದಿಂದ ಯಾರ್ಯಾರು ಸ್ಪರ್ದಿಸಿದ್ದರೆಂಬುದನ್ನು ನಿಖರವಾಗಿ ನೆನಪಿಟ್ಟುಕೊಂಡವರಿಗೆ ನನ್ನ ಮಾತುಗಳು ಸ್ಪಷ್ಟವಾಗಿ ಅರ್ಥವಾಗುತ್ತವೆ.