ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
ಎನ್.ಡಿ.ಎ. ಮೈತ್ರಿಕೂಟದಲ್ಲಿ ಬಾಜಪದ ಬಹುಮುಖ್ಯ ಮಿತ್ರಪಕ್ಷಗಳೆಂದರೆ ಶಿವಸೇನೆ, ಅಕಾಲಿದಳ ಮತ್ತು ತೆಲುಗುದೇಶಂ! ಇದೀಗ ಬಾಜಪದ ದೊಡ್ಡಣ್ಣನ ರೀತಿಯ ನಡವಳಿಕೆಯಿಂದ ಅದರ ಮಿತ್ರಪಕ್ಷಗಳಲ್ಲಿ ನಿದಾನವಾಗಿ ಅಸಮಾದಾನ ಹೊಗೆಯಾಡುತ್ತಿದ್ದು, 2019ರ ಸಾರ್ವತ್ರಿಕ ಚುನಾವಣೆಗಳ ಹೊತ್ತಿಗೆ ಈ ಮೈತ್ರಿಕೂಟದಲ್ಲಿ ಬಹಳಷ್ಟು ಬದಲಾವಣೆಗಳಾಗುವ ಎಲ್ಲ ಲಕ್ಷಣಗಳೂ ಕಾಣುತ್ತಿವೆ. ಅದರ ಬಗ್ಗೆ ಒಂದಿಷ್ಟು ನೋಡೋಣ:
ಚುನಾವಣೆಗಳನ್ನು ಗೆಲ್ಲಲು ಪ್ರಾದೇಶಿಕ ಪಕ್ಷಗಳ ಜೊತೆ ಮೈತ್ರಿಮಾಡಿಕೊಳ್ಳುವ ಮೂಲಕ, ತಮ್ಮ ಅಸ್ತಿತ್ವ ಇಲ್ಲದ ರಾಜ್ಯಗಳಲ್ಲಿ ಬೇರು ಬಿಡಲು ಪ್ರಯತ್ನಿಸುವುದು ನಮ್ಮ ಎರಡೂ ರಾಷ್ಟ್ರೀಯ ಪಕ್ಷಗಳ ಮಾಮೂಲಿ ವರಸೆಯಾಗಿದೆ. ಕಾಂಗ್ರೆಸ್ ಪಕ್ಷದ ಏಕಸ್ವಾಮ್ಯತೆ ಅಂತ್ಯಗೊಂಡ ನಂತರದಲ್ಲಿ ಎಂಭತ್ತರ ದಶಕದಿಂದೀಚೆಗೆ ಇಂತಹ ಮೈತ್ರಿಗಳು ಸರ್ವೇಸಾದಾರಣವಾಗಿವೆ. ತೊಂಭತ್ತರ ದಶಕದಲ್ಲಿ ರಾಷ್ಟ್ರದಾದ್ಯಂತ ಬಲಿಷ್ಠ ಶಕ್ತಿಯಾಗಿ ಬೆಳೆಯುತ್ತಿದ್ದ ತೃತೀಯ ರಂಗವನ್ನು ಇಲ್ಲವಾಗಿಸಲು ಕಾಂಗ್ರೆಸ್ ಮತ್ತು ಬಾಜಪಗಳು ನಿದಾನವಾಗಿ ತಮ್ಮ ಪ್ರಯತ್ನ ಪ್ರಾರಂಭಿಸಿದವು ತೃತೀಯ ರಂಗದ ಅಂಗಪಕ್ಷಗಳನ್ನು ( ಎಡಪಕ್ಷಗಳನ್ನು ಹೊರತು ಪಡಿಸಿ) ಒಂದೊಂದಾಗಿ ತಮ್ಮ ತೆಕ್ಕೆಗೆ ಸೆಳೆಯುತ್ತ ತಾವು ಗಟ್ಟಿಯಾಗಿ ಬೆಳೆಯುತ್ತ ಹೋದವು.