ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
ಈ ವಿಷಯವಾಗಿ ನಾವೀಗ ಮಾತಾಡುವುದು ತೀರಾ ಅವಸರದ ವಿಚಾರವೆನಿಸಿದರು, ಇನ್ನು ಹದಿನೈದು ತಿಂಗಳಲ್ಲಿ ಬರಲಿರುವ ರಾಜ್ಯ ವಿದಾನಸಭಾ ಚುನಾವಣೆಗಳ ಹೊತ್ತಿಗೆ ಅಹಿಂದ ರಾಜಕಾರಣದ ವಿರುದ್ದ ಸೃಷ್ಠಿಯಾಗಬಹುದಾದ ಮೇಲ್ವರ್ಗದ ರಾಜಕಾರಣದ ಹೆಜ್ಜೆಗಳನ್ನು ಅರ್ಥ ಮಾಡಿಕೊಳ್ಳಬೇಕಾದ ಅನಿವಾರ್ಯತೆಯ ದೃಷ್ಠಿಯಿಂದ ಇದನ್ನು ಬರೆಯಲೆಬೇಕಾಗಿದೆ.
ಕಳೆದ ಐದು ವರ್ಷಗಳಿಂದ ಅಂದರೆ ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದು ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾದ ಕ್ಷಣದಿಂದಲೇ ಹುಟ್ಟಿಕೊಂಡ ಅಹಿಂದಕ್ಕೆ ಪರ್ಯಾಯವಾದ ಒಂದು ರಾಜಕಾರಣ ಯಾವುದೇ ಗೊತ್ತು ಗುರಿಯಿಲ್ಲದೆ ನಡೆಯುತ್ತ ಬಂದಿದ್ದು, ಇದುವರೆಗೂ ಒಂದು ಪ್ರಬಲ ಪರ್ಯಾಯವಾಗಿ ಬೆಳೆದಿರಲಿಲ್ಲ. ಆದರೆ ವಿದಾನಸಭಾ ಚುನಾವಣೆಗಳು ಹತ್ತಿರವಾಗತೊಡಗಿದಂತೆ ಅಹಿಂದವನ್ನು ವಿರೋಧಿಸುವ ರಾಜಕೀಯ ಶಕ್ತಿಗಳಿಗೆ ತಾವು ಒಂದಾಗಿ ರಾಜಕೀಯ ಮಾಡುವ ಅನಿವಾರ್ಯತೆ ಎದುರಾಗಿದ್ದು, ಆ ನಿಟ್ಟಿನಲ್ಲಿ ಆ ಶಕ್ತಿಗಳು ಕೆಲಸ ಮಾಡತೊಡಗಿವೆ. ಇದು ಕರ್ನಾಟಕದ ಮಟ್ಟಿಗೆ ಹೊಸ ಬೆಳವಣಿಗೆ ಏನಲ್ಲ.ಎಪ್ಪತ್ತರ ದಶಕದಲ್ಲಿ ಕಾಂಗ್ರೆಸ್ಸಿನ ಮುಖ್ಯಮಂತ್ರಿಗಳಾಗಿದ್ದ ಶ್ರೀದೇವರಾಜ್ ಅರಸುರವರು ಜಾರಿಗೆ ತಂದ ಹಲವಾರು ಜನಪರ ಯೋಜನೆಗಳು ತಮ್ಮ ಆರ್ಥಿಕ, ಸಾಮಾಜಿಕ, ರಾಜಕೀಯಹಿತಾಸಕ್ತಿಗಳಿಗೆ ಮಾರಕವಾಗಿ ಪರಿಣಮಿಸಿದಾಗ ರಾಜ್ಯದ ಮೇಲ್ವರ್ಗಗಳು ಜನತಾ ಪರಿವಾರದ ರೂಪದಲ್ಲಿ ಕಾಂಗ್ರೆಸ್ಸಿಗೆ ಪರ್ಯಾಯವಾದ ಒಂದು ರಾಜಕೀಯ ಶಕ್ತಿಯಾಗಿ ರೂಪುಗೊಳ್ಳಲು ಕಾರಣವಾಗಿದ್ದವು.