ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
ಇವತ್ತು ಮಾಹಿತಿ ಹಕ್ಕು ಕಾಯಿದೆ ದೇಶದಾದ್ಯಂತ ಸಂಚಲನ ಮೂಡಿಸಿದೆ. ಒಂದು ದಶಕದ ಹಿಂದೆ ಶಾಸನವಾಗಿ ಜಾರಿಗೆ ಬಂದಮಾಹಿತಿ ಹಕ್ಕು ಕಾಯಿದೆಯಡಿ ಕೇಂದ್ರ ಹಾಗು ಹಲವು ರಾಜ್ಯ ಸರಕಾರಗಳ ಭ್ರಷ್ಟತೆಯ ಹಲವು ಪ್ರಕರಣಗಳು ಬಯಲಾಗಿವೆ,ಆಗುತ್ತಿವೆ.ಅದರಲ್ಲೂ ಪತ್ರಕರ್ತರುಗಳ ಹಾಗು ನಮ್ಮವರೇ ಆದ ಭ್ರಷ್ಟಾಚಾರದ ವಿರುದ್ದ ಸತತವಾಗಿ ಹೋರಾಡುತ್ತಿರುವ ಶ್ರೀಯುತ ಹಿರೇಮಠರಂತವರ ಕೈಲಿ ಸಿಕ್ಕ ಈ ಆಯುಧ ಬಹುತೇಕ ಎಲ್ಲ ರಾಜಕೀಯ ಪಕ್ಷಗಳ ನಿದ್ದೆಗೆಡಿಸಿದೆ.. ದೇಶದಾದ್ಯಂತ ಇರುವ ನೂರಾರು ಮಾಹಿತಿ ಹಕ್ಕು ಕಾರ್ಯಕರ್ತರು ಈ ಕಾಯಿದೆಯನ್ನು ಬಳಸಿ ಜನರಲ್ಲಿ ಭ್ರಷ್ಟಾಚಾರದ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಯಶಸ್ವಿಯಾಗುತ್ತಿದ್ದಾರೆ. ಮಾಹಿತಿ ಹಕ್ಕು ಹೋರಾಟಗಾರರೆಂಬ ಹೊಸದೊಂದು ಸಮುದಾಯವೇ ಸೃಷ್ಠಿಯಾಗಿದೆ. ಯಾಕಾದರೂ ಈ ಕಾಯಿದೆಯನ್ನು ಜಾರಿಗೆ ತಂದೆವೋ ಎಂದು ರಾಜಕಾರಣಿಗಳು ಇವತ್ತು ಪರಿತಪಿಸುತ್ತಿದ್ದರೆ ಅದರಲ್ಲಿ ಆಶ್ಚರ್ಯವೇನಿಲ್ಲ. ಇದರ ಜೊತೆಗೆ ಕೆಲವು ಅಡ್ಡ ಪರಿಣಾಮಗಳೂ ಈ ಕಾಯಿದೆಯಿಂದಾಗಿವೆ. ಸಮಾಜಸೇವಕರ ಮುಖವಾಡ ಹಾಕಿಕೊಂಡ ಕೆಲವರು ಈ ಕಾಯ್ದೆಯನ್ನು ಬಳಸಿಕೊಂಡು ಪಡೆದ ಅಧಿಕೃತ ಮಾಹಿತಿಗಳನ್ನೇ ಆಧಾರವಾಗಿಟ್ಟುಕೊಂಡು ಸರಕಾರದ ಅಧಿಕಾರಿಗಳನ್ನು ಬ್ಲಾಕ್ ಮೇಲ್ ಮಾಡುತ್ತ ದುಡ್ಡು ಮಾಡುವ ದಂದೆಯೊಂದನ್ನು ಸಹ ಶುರು ಮಾಡಿರುವುದು ಕೆಲವೆಡೆ ಕಂಡು ಬರುತ್ತಿದೆ. ಇಂತಹ ಕೆಲವು ದೌರ್ಬಲ್ಯಗಳ ಹೊರತಾಗಿಯೂ ಆಡಳಿತದಲ್ಲಿ ಪಾರದರ್ಶಕತೆಯನ್ನು ತರುವ ನಿಟ್ಟಿನಲ್ಲಿ ಈ ಕಾಯಿದೆ ಸ್ವಲ್ಪ ಮಟ್ಟಿಗಾದರು ಧನಾತ್ಮಕವಾಗಿ ಕಾರ್ಯನಿರ್ವಹಿಸುತ್ತಿದೆ.