ಏಪ್ರಿ 26, 2016

ಬರಗಾಲದ ಭೂತವೂ ಪರಿಹಾರವೆಂಬ ನಾಟಕವೂ!

(ಸಾಂದರ್ಭಿಕ ಚಿತ್ರ)
ಕು.ಸ.ಮಧುಸೂದನರಂಗೇನಹಳ್ಳಿ
26/04/2016
ಇವತ್ತು ಇಡೀ ರಾಜ್ಯ ಭೀಕರ ಬರಗಾಲಕ್ಕೆ ಸಿಲುಕಿ ತತ್ತರಿಸುತ್ತಿದೆ. ಜಾನುವಾರುಗಳಿಗೆ ಮೇವಿರಲಿ, ಬಹಳಷ್ಟು ಗ್ರಾಮಗಳಲ್ಲಿ ಕುಡಿಯುವ ನೀರಿಗೂ ಜನ ಪರದಾಡುವ ಸ್ಥಿತಿ ತಲೆದೋರಿದೆ. ಬಹುತೇಕ ಮಳೆಯನ್ನೇ ನಂಬಿ ಬದುಕುವ ರೈತಾಪಿ ಮತ್ತು ಕೃಷಿಕಾರ್ಮಿಕರು ಬದುಕುವುದೇ ಕಷ್ಟವಾಗಿದೆ. ನಿಗದಿತ ಸಮಯಕ್ಕೆ ಮಳೆಬಾರದೆ ಎರಡು ಮೂರು ವರ್ಷಗಳಿಗೊಮ್ಮೆ ಬರಗಾಲದ ಸುಳಿಗೆ ಸಿಕ್ಕಿ ನರಳುವುದು ಕರ್ನಾಟಕದ ಜನತೆಗೆ ಮಾಮೂಲಾಗಿ ಬಿಟ್ಟಿದೆ. ರಾಜ್ಯದ ಒಟ್ಟು ಅರಣ್ಯಪ್ರದೇಶ ನಾಶವಾಗುತ್ತಾ ಬಂದ ಪರಿಣಾಮವಾಗಿ ಕಾಡುತ್ತಿರುವ ಈ ಬರಗಾಲದ ಭೀಕರ ಚಕ್ರದ ಸುಳಿಯ ಬಗ್ಗೆ ಅರಿವಿದ್ದರೂ ಅರಿವಿಲ್ಲದಂತೆ ವರ್ತಿಸುವ ನಮ್ಮ ಪ್ರಭುತ್ವ ತನ್ನ ಎಂದಿನ ನಿದಾನಗತಿಯ ಧೋರಣೆಗಳಿಂದ ಪರಿಸ್ಥಿತಿಯನ್ನು ಇನ್ನಷ್ಟು ಘೋರಗೊಳಿಸುತ್ತಿದೆ. ಇಂತಹ ಸಮಯದಲ್ಲಿ ಸಕ್ರಿಯವಾಗಿ ಕೆಲಸ ನಿರ್ವಹಿಸಲು ಬೇಕಾದ ರಾಜಕೀಯ ಇಚ್ಛಾಶಕ್ತಿಯನ್ನು ಪ್ರದರ್ಶಿಸದ ರಾಜಾಕಾರಣಿಗಳು, ಆತ್ಮಸಾಕ್ಷಿಯನ್ನು ಕಳೆದುಕೊಂಡ ಅಧಿಕಾರಶಾಹಿಗಳ ಆಟಾಟೋಪಗಳು ಜನತೆಯನ್ನು ರೊಚ್ಚಿಗೇಳಿಸುವ ಮಟ್ಟಿಗೆ ನಿರ್ಲಜ್ಜ ನಿಶ್ಯಕ್ತಿಯನ್ನು ಪ್ರದರ್ಶಿಸುತ್ತಿವೆ.
ಹೀಗೆ ಸರದಿಯಂತೆ ಬಂದೆರಗುತ್ತಿರುವ ಬರಗಾಲಗಳೆಲ್ಲ ಬಹುತೇಕ ಮಾನವ ನಿರ್ಮಿತವಾದವೆಂಬುನ್ನು ನಾವು ಅರ್ಥಮಾಡಿಕೊಳ್ಳಬೇಕು. ಬರಗಾಲದ ಮೂಲ ಕಾರಣ ಮಳೆ ಬಾರದೆ ಇರುವುದಾದರೂ, ಮಳೆ ಬಾರದೇ ಇರುವುದಕ್ಕೆ ಕಾರಣ ಮಾತ್ರ ಮನುಷ್ಯನ ಆಧುನಿಕ ಬದುಕಿನ ಶೈಲಿಯಾಗಿದೆ. ಆದರೆ ಹೀಗೆ ಬರದ ಕಾರಣ ಹುಡುಕುತ್ತಾ ಅದರ ಪರಿಹಾರಕ್ಕೆ ಹೊರಡುವುದು ಸದ್ಯಕ್ಕೆ ಆಗದ ಮಾತು. ಈಗಿನ ತುರ್ತಿರುವುದು ಬಂದೆರಗಿದ ಬರಗಾಲವನ್ನೆದರಿಸಲು ನಾವು ಅಂದರೆ ಸರಕಾರ ಏನು ಮಾಡಬೇಕೆಂಬುದಾಗಿದೆ. ಆದ್ದರಿಂದ ಕಳೆದ ವರ್ಷ ಬಿದ್ದ ಅತಿ ಕಡಿಮೆ ಮಳೆಯ ಪ್ರಮಾಣದಿಂದಾಗಿ ಈ ವರ್ಷ ಬರಗಾಲ ಎದುರಾಗುವುದು ಎಲ್ಲರಿಗೂ ಮೊದಲೇ ಗೊತ್ತಾಗಿತ್ತು. ಹಾಗಾಗಿ ನಮ್ಮ ಸರಕಾರಗಳು ಇದನ್ನು ಎದುರಿಸಿ,ಬರನಿರ್ವಹಣೆ ಮಾಡಲು ಹಾಕಿಕೊಂಡಿರಬಹುದಾದ ಕಾರ್ಯಕ್ರಮಗಳ ಸ್ವರೂಪವನ್ನು ಅವಲೋಕಿಸುವುದು ನನ್ನ ಉದ್ದೇಶವಾಗಿದೆ.
ಮೊದಲಿಗೆ ನಾವು ಕರ್ನಾಟಕ ರಾಜ್ಯದೊಳಗಿನ ಬರಗಾಲದ ವ್ಯಾಪ್ತಿ ಎಷ್ಟು, ಎಷ್ಟು ಜನ ಮತ್ತು ಜಾನುವಾರುಗಳು ಬರದಿಂದ ಸಂಕಷ್ಟಕ್ಕೀಡಾಗಿವೆ ಎಂಬುದನ್ನು ಅದ್ಯಯನ ಮಾಡಿ ನಂತರ ಸರಕಾರ ರೂಪುಗೊಳಿಸಿದ ಯೋಜನೆಗಳನ್ನು ಮತ್ತು ಅವನ್ನು ಕಾರ್ಯರೂಪಕ್ಕಿಳಿಸಿದ ಬಗೆಗಿನ ವಿವರಗಳನ್ನು ವಿಶ್ಲೇಷಿಸಬೇಕಾಗುತ್ತದೆ.
ಕಳೆದ ವರ್ಷದ ಸೆಪ್ಟೆಬಂರ್ ಅಂತ್ಯದ ಹೊತ್ತಿಗೆ ಸ್ವತ: ಕರ್ನಾಟಕ ಸರಕಾರವೇ 30 ಜಿಲ್ಲೆಗಳ ಒಟ್ಟು 98 ತಾಲೂಕುಗಳು ಬರಪೀಡಿತವೆಂದು ಅಧಿಕೃತವಾಗಿ ಘೋಷಿಸಿತ್ತು. ಜೊತೆಗೆ ಬರದ ನಿರ್ವಹಣೆಗಾಗಿ ಕೇಂದ್ರಸರಕಾರವು ಸುಮಾರು 3050 ಕೋಟಿ ರೂಪಾಯಿಗಳ ಸಹಾಯಧನ ಬಿಡುಗಡೆ ಮಾಡಬೇಕೆಂದು ಕೇಳಿಕೊಂಡಿತ್ತು. ತಾಂತ್ರಿಕವಾಗಿ ನೋಡಿದರೆ ಕರ್ನಾಟಕದ ಸುಮಾರು 12 ಜಿಲ್ಲೆಗಳು ತೀರಾ ಕನಿಷ್ಠ ಮಳೆಯನ್ನು ಪಡೆದಿದ್ದು ಬರದ ಛಾಯೆ ಅಂದೇ ಆವರಿಸತೊಡಗಿತ್ತು. ವಿವಿಧ ಸಚಿವಾಲಯದ ಜಂಟಿ ಸಮಿತಿಗಳು ಪರಿಸ್ಥಿತಿಯ ಅಧ್ಯಯನಕ್ಕೆ ಬೇಟಿಯನ್ನೂ ನೀಡಿದವು. ಕಳೆದ ನಲವತ್ತು ವರ್ಷಗಳಲ್ಲೇ ಅತ್ಯಂತ ಬೀಕರ ಬರಗಾಲ ಬಂದೆರಗುವ ಮುನ್ಸೂಚನೆ ಅಂದೇ ಸಿಕ್ಕಿತ್ತು. ಇವತ್ತು ರಾಜ್ಯದ ಜಲಾಶಯಗಳ ನೀರಿನ ಮಟ್ಟವನ್ನು ನಾವು ಸುಮ್ಮನೆ ಗಮನಿಸಿದರೂ ಸಾಕು ಇದರ ಅರಿವಾಗುತ್ತದೆ. ಎಂದಿನಂತೆ ನಮ್ಮ ಮುಖ್ಯಮಂತ್ರಿಗಳು ಬರ ಪರಿಹಾರಕ್ಕಾಗಿ ಕೇಂದ್ರ ನೆರವು ನೀಡಬೇಕೆಂದು ಕೇಳಿ ಪತ್ರವನ್ನೂ ಬರೆದಿದ್ದಾಯಿತು. ಹಾಗು ತಕ್ಷಣಕ್ಕೆ200 ಕೋಟಿರೂಪಾಯಿಗಳನ್ನು ರಾಜ್ಯ ಸರಕಾರ ಬಿಡುಗಡೆಯನ್ನೂ ಮಾಡಿತು. ನಂತರದಲ್ಲಿ ಜನವರಿಯ ಹೊತ್ತಿಗೆ ಕೇಂದ್ರ ಸರಕಾರ ಬರಪರಿಹಾರಕ್ಕೆಂದು 1450 ಕೋಟಿರೂಪಾಯಿಗಳನ್ನು ಬಿಡುಗಡೆ ಮಾಡಿತು.ಇದಕ್ಕೆ ಪೂರಕವಾಗಿ ರಾಜ್ಯ ಸರಕಾರವೂ 300 ಕೋಟಿರೂಪಾಯಿಗಳನ್ನು ಬಿಡುಗಡೆ ಮಾಡಿತು. ಈ ಹಣವನ್ನು ರೈತರಿಗೆ ಬೆಳೆ ನಷ್ಟದ ಪರಿಹಾರವಾಗಿ ನೀಡಿ ,ಉಳಿದ ಹಣವನ್ನು ಕುಡಿಯುವ ನೀರಿನ ತುರ್ತು ಯೋಜನೆಗಳಿಗೆ ಬಳಸುವುದಾಗಿ ಕಂದಾಯ ಸಚಿವ ಶ್ರೀ ಶ್ರೀನಿವಾಸ್ ಪ್ರಸಾದ್ ಸಾರ್ವಜನಿಕರಿಗೆ ಮಾಹಿತಿ ನೀಡಿದ್ದೂ ಆಯಿತು. ಆದರೆ ಈ ಹಣ ಎಷ್ಟರ ಮಟ್ಟಿಗೆ ಪರಿಣಾಮಕಾರಿಯಾಗಿ ರೈತರನ್ನು ಕೂಲಿ ಕಾರ್ಮಿಕರನ್ನು ತಲುಪಿತೆಂಬುದರ ಬಗ್ಗೆ ಸರಕಾರ ನೀಡುವ ಅಂಕಿಅಂಶಗಳು ನಂಬುವ ಅರ್ಹತೆ ಹೊಂದಿಲ್ಲ.
ನಾನಿಲ್ಲಿ ಬಿಡುಗಡೆಯಾದ ಹಣವೆಷ್ಟು? ಖರ್ಚು ಮಾಡಿದ ಹಣವೆಷ್ಟು? ಮತ್ತು ಅದನ್ನು ಹೇಗೆ ಯಾಕೆ ಖರ್ಚು ಮಾಡಿದರೆಂದು ಅಂಕಿಸಂಖ್ಯೆಗಳನ್ನು ನೀಡುತ್ತಾ ರೆವಿನ್ಯೂ ಇಲಾಖೆಯ ಗುಮಾಸ್ತನ ರೀತಿಯಲ್ಲಿ ವರದಿ ಬರೆಯಲು ಕೂತಿಲ್ಲ. ಬದಲಿಗೆ ನಮ್ಮ ಸರಕಾರಗಳ ಬರ ಪರಿಹಾರ ನಿರ್ವಃಹಣೆಯ ಕಾರ್ಯವೈಖರಿ ಎಂತಹುದು ಮತ್ತು ವೈಜ್ಞಾನಿಕವಾಗಿ ಅದು ವಿಪತ್ತು ನಿರ್ವಹಣೆಗೆ ಬಳಸುತ್ತಿರುವ ಕಾರ್ಯಕ್ರಮಗಳಾದರು ಎಂತವು ಎಂಬುದನ್ನು ವಿಶ್ಲೇಷಿಸಲು ಬಯಸುತ್ತೇನೆ. ಸರಕಾರ ಖರ್ಚು ಮಾಡಿರುವ ಒಟ್ಟು ಹಣವನ್ನೂ ಹಾಗು ಸಂತ್ರಸ್ತರ ಜನಸಂಖ್ಯೆಯನ್ನು ತಾಳೆ ಹಾಕಿ ನೋಡಿದರೆ ಒಬ್ಬ ವ್ಯಕ್ತಿಗೆ ದಿನಕ್ಕೆ ತಲಾ ನೂರೈವತ್ತು ರೂಪಾಯಿಗಳನ್ನೂ ಜಾನುವಾರುಗಳ ಮೇವಿಗೆ ಹತ್ತು ರೂಪಾಯಿಗಳನ್ನು ಖರ್ಚು ಮಾಡಿದ್ದಾರೆಂದು ಲೆಕ್ಕ ಹಾಕಬಹುದು( ಇದರಲ್ಲಿ ಒಂದೆರಡು ರೂಪಾಯಿಗಳ ವ್ಯತ್ಯಾಸವಿರುವುದು ಸಹಜವಿರಬಹುದು!)
ಇನ್ನೂ ಮುಂದುವರೆದು ನೋಡಿದರೆ ರಾಜ್ಯದ ಮುಕ್ಕಾಲುಭಾಗ ಬರದಿಂದ ತತ್ತರಿಸುತ್ತಿರುವಾಗ ನಾವು ಅದರ ನಿರ್ವಹಣೆಗೆ ಖರ್ಚು ಮಾಡಿರುವುದು ನಮ್ಮ ಒಟ್ಟು ವಹಿವಾಟಿನ ಶೇಕಡಾ 12ರಷ್ಟನ್ನು ಮಾತ್ರ. ಇದು ನಿಜಕ್ಕೂ ಸಮರ್ಥನೀಯವೇ?ಭೀಕರ ಬರಗಾಲದ ಸಮಯದಲ್ಲಾದರು ನಾವು ನಮ್ಮ ಎಂದಿನ ಸಾಂಪ್ರದಾಯಿಕ ವೆಚ್ಚಗಳನ್ನು ನಿಯಂತ್ರಿಸಿ ಆ ಹಣವನ್ನು ಬರಪರಿಹಾರಕ್ಕೆ ವೆಚ್ಚ ಮಾಡುವುದು ನಮ್ಮ ಸರಕಾರಗಳ ನೈತಿಕ ಕ್ರಿಯೆಯಾಗಬೇಕಿತ್ತೆಂಬುದನ್ನು ವ್ಯವಸ್ಥೆಯ ಒಳಗಿನ ಯಾರೂ ಒಪ್ಪಲು ತಯಾರಿಲ್ಲ. ಇದರ ಜೊತೆಗೆ ಸರಕಾರ ಬರಪರಿಹಾರ ನಿಧಿಯನ್ನು ಖರ್ಚು ಮಾಡಲು ಯಾವ ಮಾನದಂಡವನ್ನು ಅನುಸರಿಸುತ್ತಿದೆಯೆಂಬುದನ್ನು ನೋಡಿದರೆ ಎದೆದಸಕ್ಕೆನ್ನುತ್ತದೆ. ಬೆಳೆನಾಶ ಪರಿಹಾರವಾಗಿ ರೈತನಿಗೆ ನೀಡಿದ ಮೊತ್ತ ಆತನ ಒಟ್ಟು ವಾರ್ಷಿಕ ಉತ್ಪಾದನೆಯ ಶೇಕಡಾ 20ರಷ್ಟು ಸಹ ಇಲ್ಲ.ಇನ್ನು ಕುಡಿಯುವ ನೀರಿಗೆ ಖರ್ಚು ಮಾಡುವ ಹಣದಿಂದ ಯಾವುದೇ ಶಾಶ್ವತ ಪರಿಹಾರದ ವ್ಯವಸ್ಥೆಯಂತು ಆಗುವುದೇ ಇಲ್ಲ. ಜಲಕ್ಷಾಮವಿರುವ ಹಳ್ಳಿಗಳಿಗೆ ಪಟ್ಟಣಗಳಿಗೆ ಖಾಸಗಿಯವರ ಟ್ಯಾಂಕರುಗಳಿಂದ ನೀರು ಪೂರೈಸಲು ಖರ್ಚು ಮಾಡುವ ಹಣದಿಂದ ಪ್ರತಿ ಊರಿಗೂ ಶಾಶ್ವತ ವ್ಯವಸ್ಥೆ ಮಾಡುವಷ್ಟಾಗಿರುತ್ತದೆ. ಯಾಕೆಂದರೆ ಹೀಗೆ ಖಾಸಗಿಯವರಿಗೆ ಗುತ್ತಿಗೆ ನೀಡುವ ಸಂದರ್ಭದಲ್ಲಿ ದರ ನಿಗದಿಗೆ ಯಾವುದೇ ವೈಜ್ಞಾನಿಕ ಮಾನದಂಡವಿರುವುದಿಲ್ಲ.
ಇನ್ನುಳಿದಂತೆ ನಮ್ಮ ರಾಜಕೀಯ ಪ್ರಭೃತಿಗಳಿಗೆ ಮತ್ತು ನೌಕರಶಾಹಿಗೆ ಒಂದು ಕಲ್ಪನೆಯಿದೆ: ಬರಪರಿಹಾರವೆಂದರೆ, ಕೆರೆಗಳ ಹೂಳೆತ್ತುವುದು, ಶಾಲೆ ಅಂಗನವಾಡಿ, ಸಮುದಾಯ ಭವನಗಳನ್ನು ರಿಪೇರಿ ಮಾಡಿ ಸುಣ್ಣ ಬಣ್ನ ಹೊಡೆಸುವುದು, ಜಿಲ್ಲಾ ಹೆದ್ದಾರಿಗಳ ಗುಂಡಿಗಳಿಗೆ ಮಣ್ಣು ಹಾಕುವುದು, ಮಾತ್ರವೆಂದಾಗಿದೆ. ವಿಪರ್ಯಾಸವೆಂದರೆ ಇವತ್ತು ಇವೇ ಕೆಲಸಗಳು ಉದ್ಯೋಗಖಾತ್ರಿ ಯೋಜನೆಯಡಿಯಲ್ಲಿಯೂ ನಡೆಯುತ್ತಿದ್ದು, ಯಾವ ಕಾಮಗಾರಿ ಯಾವ ಹಣದಲ್ಲಿ ಆಗುತ್ತಿದೆಯೆಂಬ ಮಾಹಿತಿ ಸರಕಾರಿ ಅಧಿಕಾರಿಗಳಿಗೆ ಬಿಟ್ಟರೆ ಇನ್ಯಾರಿಗೂ ಗೊತ್ತಾಗುವುದೇ ಇಲ್ಲ. ಆದರೆ ಈ ಯೋಜನೆಗಳ ಅಡಿಯಲ್ಲಿಯೂ ಜನರಿಗೆಸಂಪೂರ್ಣ ಉದ್ಯೋಗ ದೊರೆಯುತ್ತಿಲ್ಲವೆಂಬುದು ಸಹ ವಾಸ್ತವವಾಗಿದೆ. ಜೊತೆಗೆ ಇಂತಹ ಕಾಮಗಾರಿಗಳು ಸಹ ಆಯಾ ಊರಿನ ಬಲಿಷ್ಠ ವರ್ಗಗಳಿಗೆ ಮಾತ್ರ ದೊರೆಯುತ್ತಿದ್ದು ತೀರಾ ಕೆಳಸ್ಥರದ ಕೂಲಿಕಾರ್ಮಿಕರಿಗೆ ಇದರ ಲಾಭವೂ ಸಿಗುತ್ತಿಲ್ಲ. ಆಯಾ ಹಳ್ಳಿಯ ಬಲಾಢ್ಯ ಜಾತಿಗಳು ತಮ್ಮ ರಾಜಕೀಯ ಶಕ್ತಿ ಮತ್ತು ಪ್ರಭಾವಗಳನ್ನು ಬಳಸಿಕೊಂಡು ಬರಪರಿಹಾದ ದೊಡ್ಡ ಮೊತ್ತವನ್ನು ತಮ್ಮ ಉಡಿಗೆ ಹಾಕಿಕೊಳ್ಳುವುದು ಸಹ ಇದರ ವೈಫಲ್ಯತೆಯ ಇನ್ನೊಂದು ಮುಖವಾಗಿದೆ.
ಪ್ರತಿ ವರ್ಷವೂ ಬರಗಾಲ ಬಂದಾಗ ರಾಜ್ಯ ಸರಕಾರಗಳು ಒಂದಷ್ಟು ಹಣ ಬಿಡುಗಡೆ ಮಾಡುವುದು, ಕೇಂದ್ರ ಸರಕಾರದ ನೆರವು ಕೇಳುವುದು, ಅದು ರಾಜ್ಯ ಕೇಳಿದ್ದರಲ್ಲಿ ಅರ್ದದಷ್ಟನ್ನು ನೀಡಿ ಕೈತೊಳೆದುಕೊಳ್ಳುವುದು ನಿತ್ಯ ಪೂಜೆಯಂತೆ ನಡೆಯುತ್ತಿದೆ. ಇವತ್ತಿನವರೆಗೂ ಬರಪರಿಹಾರದ ಹಣ ಹೇಗೆಲ್ಲ ಖರ್ಚಾಯಿತೆಂದು ಸಾರ್ವಜನಿಕರಿಗೆ ತಿಳಿಯಪಡಿಸುವ ಒಂದು ಆಡಿಟ್ ಸಹ ನಡೆದಿಲ್ಲ. ಈ ವಿಷಯದಲ್ಲಿ ಎಲ್ಲ ಪಕ್ಷಗಳ, ಎಲ್ಲ ನಾಯಕರುಗಳ ಸರಕಾರಗಳೂ ಗುಪ್ತ್ ಗುಪ್ತ್!
ಆದ್ದರಿಂದ ಬರಪರಿಹಾರದ ಎಲ್ಲ ಕಾರ್ಯಕ್ರಮಗಳೂ ಸಮಗ್ರ ಹಳ್ಳಿಯನ್ನು, ಎಲ್ಲ ಸಮುದಾಯವನ್ನು ಒಳಗೊಂಡು ನಡೆಸುವಂತಿರಬೇಕು. ಜೊತೆಗೆ ಬರಪರಿಹಾರದ ಕಾರ್ಯಕ್ರಮಗಳು ದೀರ್ಘಾವಧಿಯ ಗುರಿಗಳನ್ನು ಹೊಂದಿರಬೇಕಾಗುತ್ತದೆ. ಪ್ರತಿವರ್ಷವೂ ನಾವು ಬರಗಾಲ ಬರುವುದನ್ನು ಕಾದವರಂತೆ ಕೂತಿದ್ದು ಸಂಕಷ್ಟ ಎದುರಾದ ತಕ್ಷಣ ಒಂದಷ್ಟು ಕೋಟಿಗಳನ್ನು ಖರ್ಚು ಮಾಡಿ ರಾಜಕೀಯ ಮತ್ತು ಅಧಿಕಾರಶಾಹಿಯ ಜೇಬು ತುಂಬಿಸುವ ಕೆಲಸವನ್ನು ಮೊದಲು ಕೈಬಿಡಬೇಕಿದೆ. ಬದಲಿಗೆ ಬರಗಾಲದ ತಕ್ಷಣದ ಕಾರಣವಾದ ಕನಿಷ್ಠ ಮಳೆಯ ಪರಿಸ್ಥಿತಿಯನ್ನು ಎದುರಿಸಲು ಶಾಶ್ವತ ನೀರಾವರಿ ವ್ಯವಸ್ಥೆಯ ಕಡೆ ಗಮನ ಕೊಡಬೇಕಿದೆ. ಇಲ್ಲಿ ಇನ್ನೊಂದು ತೊಡಕಿದೆ: ನೀವು ಯಾರಿಗಾದರು ಆಳುವವರ ಎದುರು ಶಾಶ್ವತ ನೀರಾವರಿ ಎಂದು ಹೇಳಿದ ಕೂಡಲೇ ಅವರು ಹೇಳುವುದು ದೊಡ್ಡ ದೊಡ್ಡ ಅಣೆಕಟ್ಟುಗಳನ್ನು ಕಟ್ಟುವ ಬಗ್ಗೆ ಮತ್ತು ನದಿಜೋಡಣೆಯಂತಹ ಬೃಹತ್ ವಿಚಾರಗಳ ಬಗ್ಗೆ. ಯಾಕೆಂದರೆ ಅಂತಹ ಯೋಜನೆಗಳು ಮಾತ್ರ ಅವರಿಗೂ ಅವರನ್ನು ನಂಬಿದ ಅಧಿಕಾರಶಾಹಿಗೂ, ಗುತ್ತಿಗೆದಾರರಿಗೂ ಲಾಭದಾಯಕವಾಗಿರುತ್ತದೆ. ಆದ್ದರಿಂದ ಇಂತಹ ವಿಚಾರಗಳ ಬಗ್ಗೆ ನಾವು ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಕಿರು ನೀರಾವರಿ ಯೋಜನೆಗಳು, ಕೆರೆಗಳ ಪುನಶ್ಚೇತನದಂತಹ ಕಡಿಮೆ ಬಂಡವಾಳದ ಕಾರ್ಯಕ್ರಮಗಳನ್ನು ರೂಪಿಸುವುದು ಮತ್ತು ಪ್ರತಿ ಗ್ರಾಮಗಳ ಸುತ್ತ ಸಾಮಾಜಿಕ ಅರಣ್ಯಗಳನ್ನು ಬೆಳೆಸಿ ನಿರ್ವಹಿಸುವಂತ ಕಾರ್ಯಕ್ರಮಗಳ ಮೂಲಕ ಬರಗಾಲದ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸ ಬೇಕಾಗಿದೆ.
ಆದರೆ ಸದ್ಯಕ್ಕಿರುವ ನಮ್ಮ ರಾಜಕೀಯ ವ್ಯವಸ್ಥೆ ಹಾಗು ಜಡಗಟ್ಟಿರುವ ಅಧಿಕಾರಶಾಹಿಯಿಂದ ಇಂತಹ ಕ್ರಮಗಳನ್ನು ನಿರೀಕ್ಷಿಸುವುದು ತಪ್ಪಾಗುತ್ತದೆ. ಆದರೆ ಅಧಿಕಾರಶಾಹಿಯ ಹಿಡಿತದಿಂದ ಹೊರಬರಲಾಗದೆ ತಮ್ಮ ರಾಜಕೀಯ ಇಚ್ಚಾಶಕ್ತಿಯನ್ನು ಕಳೆದುಕೊಂಡ ರಾಜಕೀಯನಾಯಕರುಗಳು ಮನಸ್ಸು ಮಾಡಿದರೆ ಮಾತ್ರ ಇಂತಹದೊಂದು ಬದಲಾವಣೆಯನ್ನು ತರಲು ಸಾದ್ಯ ಇದಾಗದೇ ಹೋದಲ್ಲಿ ಜನರೇ ಹೊಸ ಪರ್ಯಾಯ ಮಾರ್ಗಗಳನ್ನು ಕಂಡುಕೊಳ್ಳುವತ್ತ ಯೋಚಿಸುವ ದಿನಗಳು ಬರುತ್ತವೆ. ಅಂತಹದೊಂದು ನಿರೀಕ್ಷೆ ತಪ್ಪೇನು ಅಲ್ಲವೆನಿಸುತ್ತದೆ.

ಏಪ್ರಿ 22, 2016

ಮೇಕಿಂಗ್ ಹಿಸ್ಟರಿ: ಕೃಷಿಗೆ ಲಕ್ವ ಹೊಡೆದದ್ದು ಭಾಗ 2

ಸಾಕೇತ್ ರಾಜನ್
ಕನ್ನಡಕ್ಕೆ: ಡಾ. ಅಶೋಕ್. ಕೆ. ಆರ್
22/04/2016


ಇ. ಮರುಕಳಿಸಿದ ಊಳಿಗಮಾನ್ಯತೆ

ವಸಾಹತುಶಾಹಿ ಪಿತೃವಾತ್ಸಲ್ಯದಿಂದ ಊಳಿಗಮಾನ್ಯತೆಯನ್ನು ರಕ್ಷಿಸಿದ ಬಗೆಯನ್ನು ನಾವು ನೋಡಿದ್ದೇವೆ. ಇದರ ಪರಿಣಾಮವಾಗಿ ಮುಳುಗುವ ಹಂತದಲ್ಲಿದ್ದ ಈ ಪ್ರತಿಗಾಮಿ ವ್ಯವಸ್ಥೆ ಒಟ್ಟಾಯಿತು, ಬಲಗೊಂಡಿತು. ಇರಲಿ, ವಸಾಹತು – ಊಳಿಗಮಾನ್ಯ ಮೈತ್ರಿಯ ಮೊದಲರ್ಧ ಶತಮಾನ ಐತಿಹಾಸಿಕ ಚಳುವಳಿ ಹಿಮ್ಮುಖವಾಗಿ ಚಲಿಸುವಂತೆ ಮಾಡಿತು. ಅಸ್ತಿತ್ವದಲ್ಲಿದ್ದ ಊಳಿಗಮಾನ್ಯತೆಯನ್ನೇ ಹೊಸದಾಗಿ ಕಟ್ಟುವ ಪ್ರಕ್ರಿಯೆಯೂ ಚಾಲ್ತಿಯಲ್ಲಿತ್ತು. ವಸಾಹತುಶಾಹಿಗೆ ಕರ್ನಾಟಕದ ಸಾಮಾಜಿಕ ರಚನೆ ಕೊಟ್ಟ ತತ್ ಕ್ಷಣದ ಪ್ರತಿಕ್ರಿಯೆಯಿದು. ಈ ಐತಿಹಾಸಿಕ ಪ್ರಕ್ರಿಯೆಗೆ ಎರಡು ಅಂಶಗಳು ಕಾರಣವಾದವು. ಪ್ರಜ್ಞಾಪೂರ್ವಕ ಉದ್ದೇಶದ ಪರಿಣಾಮ ಮೊದಲಂಶವಾದರೆ ನಮ್ಮ ನಾಡಿನಲ್ಲಿ ವಸಾಹತು ವ್ಯವಸ್ಥೆಯನ್ನು ನೆಟ್ಟು ಬೆಳೆಸಿದ ಪರಿಣಾಮ ಎರಡನೇ ಅಂಶ. ಮೊದಲ ಅಂಶದಲ್ಲಿ, ಕೈಗೊಂಬೆ ಊಳಿಗಮಾನ್ಯತೆ ವಸಾಹತುಶಾಹಿಯ ನಂಬುಗೆಯನ್ನು ತನ್ನನುಕೂಲಕ್ಕೆ ಬಳಸಿಕೊಂಡಿತು. ಈ ಹಿಮ್ಮುಖದ ಚಳುವಳಿ ವಸಾಹತು ಆಕ್ರಮಣದ ಮೊದಲ ಮೂರು ದಶಕಗಳಿಗೂ ವ್ಯಾಪಿಸಿತು. ಎರಡನೇ ಅಂಶದಲ್ಲಿ ಬ್ರಿಟೀಷರು ವಸಾಹತು ಪೂರ್ವ ಸಂಸ್ಥೆಗಳನ್ನೆಲ್ಲಾ ಬುಡಮೇಲು ಮಾಡಿದ್ದರಿಂದ ಅನಿರೀಕ್ಷಿತವಾಗಿ ನಿರುದ್ಯೋಗಿಗಳ ದೊಡ್ಡ ಸಮುದಾಯವೊಂದರ ಸೃಷ್ಟಿಯಾಯಿತು. ಈ ನಿರುದ್ಯೋಗಿಗಳಿಗೆ ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲು ಇದ್ದ ಒಂದೇ ಒಂದು ದಾರಿಯೆಂದರೆ ಹಳ್ಳಿಗಳಿಗೆ ವಲಸೆ ಹೋಗಿ ಕೃಷಿ ಚಟುವಟಿಕೆಯ ಭಾಗವಾಗುವುದು. ಇದರಿಂದ ಆರ್ಥಿಕತೆಯಲ್ಲಿ ಊಳಿಗಮಾನ್ಯತೆ ಮತ್ತಷ್ಟು ಬಲಶಾಲಿಯಾಯಿತು. ಈ ಚಲನೆಯನ್ನು ಹದಿನೆಂಟನೇ ಶತಮಾನದ ದ್ವಿತೀಯಾರ್ಧದಲ್ಲೂ ಕಾಣಬಹುದು. ವಸಾಹತು – ಊಳಿಗಮಾನ್ಯತೆಯ ಬಂಧ ಮುಂದೆ ಚಲಿಸುತ್ತಿದ್ದ ಸಮಾಜದ ಚಲನೆಗೆ ಅಡ್ಡಿಯಾಗುವುದರ ಜೊತೆಗೆ ತಾತ್ಕಾಲಿಕವಾದ ಹಿಮ್ಮುಖ ಚಲನೆಗೂ ಕಾರಣವಾಯಿತು.

ಮೊದಲ ಏಳು ವರ್ಷ ಬ್ರಿಟೀಷರು ಜಾತಿಯಿಂದ ಬ್ರಾಹ್ಮಣನಾದ ಪೂರ್ಣಯ್ಯನ ಸೇವೆಯನ್ನು ಖರೀದಿಸಿದರು. ಪೂರ್ಣಯ್ಯ ಟಿಪ್ಪುವಿನ ಆಸ್ಥಾನದಲ್ಲಿ ಮಂತ್ರಿಯಾಗಿದ್ದ. ಪೂರ್ಣಯ್ಯನಿಗೆ ಸಾಮಾಜಿಕ ವ್ಯವಸ್ಥೆಯ ಬಗ್ಗೆ ಇದ್ದ ಸಂಪೂರ್ಣ ಜ್ಞಾನ ಮತ್ತು ಮುಖ್ಯವಾಗಿ ಮೈಸೂರಿನ ತೆರಿಗೆ ಆಡಳಿತದ ಬಗ್ಗೆ ಇದ್ದ ತಿಳಿವು ಬ್ರಿಟೀಷರಾತನನ್ನು ನೇಮಿಸಿಕೊಳ್ಳಲು ಕಾರಣವಾಯಿತು. ಮೊಲದ ಜೊತೆಗೋಡುತ್ತಲೇ ಬೇಟೆನಾಯಿಯೊಡಗೂಡಿ ಬೇಟೆಯಲ್ಲಿ ತೊಡಗಿಸಿಕೊಂಡಂತಿದ್ದರು ಪೂರ್ಣಯ್ಯ. ಬ್ರಿಟೀಷರು ಶ್ರೀರಂಗಪಟ್ಟಣದ ಮೇಲೆ ದಾಳಿ ನಡೆಸಿದ ಸಂದರ್ಭದಲ್ಲಿ ಪೂರ್ಣಯ್ಯ ಬ್ರಿಟೀಷರಿಗೆ ಪ್ರೋತ್ಸಾಹ ನೀಡಿದರು ಎಂಬ ‘ಜನಪ್ರಿಯ’ ನಂಬಿಕೆಯೂ ಇದೆ. ಈ ಮೋಸದ ಕೆಲಸಕ್ಕೆ ಪೂರ್ಣಯ್ಯನವರಿಗೆ ಚೆಂದದ ಮರ್ಯಾದೆಯನ್ನೇ ಮಾಡಲಾಯಿತು. ಅವರ ವಾರ್ಷಿಕ ಆದಾಯ 18,000 ರುಪಾಯಿಗಳೆಂದು ನಿಗದಿಪಡಿಸಲಾಗಿತ್ತು. ಸಾಮ್ರಾಜ್ಯಕ್ಕೆ ಬರುವ ಒಟ್ಟು ಆದಾಯದಲ್ಲಿ ಒಂದು ಪರ್ಸೆಂಟನ್ನು ಕೂಡ ಅವರಿಗೆ ನೀಡಲಾಗುತ್ತಿತ್ತು. ಇದು ವಾರ್ಷಿಕವಾಗಿ 62,000 ರುಪಾಯಿಗಳಷ್ಟಾಗುತ್ತಿತ್ತು. (121)

1807ರಲ್ಲಿ ಮೂರನೇ ಕೃಷ್ಣರಾಜ ಒಡೆಯರ್ ಸಾಮ್ಯಾಜ್ಯದ ಜವಾಬ್ದಾರಿಗಳನ್ನು ವಹಿಸಿಕೊಂಡಾಗ ಪೂರ್ಣಯ್ಯನವರು ನಿವೃತ್ತರಾದರು. ನಿವೃತ್ತರಾಗುವುದಕ್ಕೂ ಮೂರು ವರುಷಗಳ ಹಿಂದೆ ಪೂರ್ಣಯ್ಯನವರ ಮೇಲೆ ಬ್ರಿಟೀಷರು ಹೊಗಳಿಕೆಯ ಸುರಿಮಳೆಯನ್ನೇ ಸುರಿದರು; ಸಾಮ್ರಾಜ್ಯದ ಆಗುಹೋಗುಗಳನ್ನು ಅಚ್ಚುಕಟ್ಟಾಗಿ ತಮ್ಮ ಆಸಕ್ತಿಯಂತೆ ನಡೆಸಿಕೊಂಡು ಹೋಗಿದ್ದಕ್ಕೆ ಮತ್ತದಕ್ಕಿಂತ ಹೆಚ್ಚಾಗಿ ಅತ್ಯುತ್ಸಾಹದಿಂದ ಜನರ – ಮಧ್ಯವರ್ತಿ ಊಳಿಗಮಾನ್ಯತೆಯ ಪ್ರಮುಖ ಆದಾಯ ಮೂಲವಾದ - ರೈತರ ಬಳಿ ಹಣವನ್ನೀರಿ ತಮಗೆ ಕೊಟ್ಟಿದ್ದಕ್ಕೆ. ಪೂರ್ಣಯ್ಯ ದಿವಾನರ ಕಛೇರಿಯನ್ನು ವಂಶಪಾರಂಪರ್ಯ ಆಸ್ತಿಯನ್ನಾಗಿ ಮಾಡಬೇಕೆಂದು ಆಸೆ ವ್ಯಕ್ತಪಡಿಸಿದಾಗ ಅದನ್ನು ಬ್ರಿಟೀಷರು ನಯವಾಗಿಯೇ ತಿರಸ್ಕರಿಸಿದರು. ಆದರೂ ಪೂರ್ಣಯ್ಯನ ನಿಷ್ಠೆಗೆ ಸೋತು ತನಗಿಷ್ಟವಾದ, ಸಾಮ್ಯಾಜ್ಯದ ಯಾವುದಾದರೂ ತಾಲ್ಲೂಕನ್ನು ಜಾಗೀರಾಗಿ ಪಡೆದುಕೊಳ್ಳಬಹುದು, ಮತ್ತದು ಅವರ ವಂಶದಲ್ಲೇ ಉಳಿಯುತ್ತದೆ ಎಂದು ತಿಳಿಸಿದ್ದರು. (122) ಪೂರ್ಣಯ್ಯ ಯಳಂದೂರನ್ನು ಆಯ್ದುಕೊಂಡದ್ದರ ಕುರಿತು ಪೂರ್ಣಯ್ಯನಿಂದ ಉಪಕೃತರಾದ ನರಸಿಂಹ ಮೂರ್ತಿ ಬರೆಯುತ್ತಾರೆ: “ಪೂರ್ಣಯ್ಯನವರು ತಮ್ಮ ಜಾಗೀರಿಗೆ ಆಯ್ದುಕೊಂಡ ಯಳಂದೂರು ತಾಲ್ಲೂಕು ಚಿಕ್ಕದಾದರೂ ಸಂಪನ್ಮೂಲಭರಿತವಾಗಿದೆ. ಮೈಸೂರಿನಲ್ಲಿ ಅತಿ ದಟ್ಟ ಜನಸಂದಣಿಯಿರುವ ಮತ್ತು ಅತ್ಯಂತ ಫಲವತ್ತಾದ ತಾಲ್ಲೂಕಿನಲ್ಲೊಂದಾಗಿದೆ.….. ಬೆಟ್ಟದ ಮೇಲಿರುವ ಕಾಡುಗಳಲ್ಲಿ ಹೊನ್ನೆ, ಶ್ರೀಗಂಧ, ತೇಗ ಮತ್ತು ಇತರೆ ಅತ್ಯಮೂಲ್ಯ ಮರಗಳು ಹೇರಳ ಸಂಖೈಯಲ್ಲಿವೆ, ಇವೆಲ್ಲವೂ ಜಾಗೀರಿಗೆ ಆದಾಯ ತಂದು ಕೊಡುವ ಮೂಲಗಳು. ತಾಲ್ಲೂಕಿನ ಹೆಚ್ಚಿನ ಭಾಗದಲ್ಲಿ ಸಮತಟ್ಟಾದ ಭೂಮಿಯಿದೆ. ಸುವರ್ಣಾವತಿ ನದಿ ಇಲ್ಲಿ ಹಾದು ಹೋಗುತ್ತದೆ, ಇಲ್ಲಿನ ನೀರಾವರಿಗೆ ಇದೇ ಮೂಲ ನದಿ. ಇಲ್ಲಿನ ಫಲವತ್ತಾದ ಭೂಮಿ ವೀಳ್ಯದೆಲೆ, ಅಡಿಕೆ ಮತ್ತು ತೆಂಗಿನ ತೋಟಗಳನ್ನು ಮಾಡಲು ಹೇಳಿಮಾಡಿಸಿದಂತಿದೆ. ನೇರಳೆ ಹಣ್ಣನ್ನಿಲ್ಲಿ ಯಥೇಚ್ಛವಾಗಿ ಬೆಳೆಯಲಾಗುತ್ತದೆ ಮತ್ತು ಭಾರೀ ಪ್ರಮಾಣದಲ್ಲಿ ರೇಷ್ಮೆಯನ್ನು ಉತ್ಪಾದಿಸಲಾಗುತ್ತದೆ.” (123) ತಾಲ್ಲೂಕಿನ ವಾರ್ಷಿಕ ತೆರಿಗೆಯ ಆದಾಯ 30,000 ರುಪಾಯಿಗಳಷ್ಟಿತ್ತು. ಆದರೆ ಅಂಟಿಕೊಂಡಿದ್ದ ಕಾಡಿನ ಅತ್ಯಮೂಲ್ಯ ಸಂಪತ್ತು ಜಾಗೀರುದಾರರ ಆದಾಯಕ್ಕಿಂತಲೂ ಹೆಚ್ಚಿನ ಆದಾಯವನ್ನು ತರಬಲ್ಲುದಾಗಿತ್ತು. (124)

1807ರ ಡಿಸೆಂಬರಿನಲ್ಲಿ ರಾಜನ ಪರವಾಗಿ ರೆಸೆಡೆಂಟ್ ಜಾನ್ ಮಾಲ್ಕಮ್ ಹೊರಡಿಸಿದ ಸನ್ನದಿನಲ್ಲಿ ಈ ರೀತಿ ಇತ್ತು: “…… ನಮ್ಮ ಆಸೆಗಳನ್ನು ಪೂರೈಸುವ ಸಲುವಾಗಿ, ಸಕಲ ಅಧಿಕಾರವೊಂದಿದ ಮಂತ್ರಿಯೊಬ್ಬನನ್ನು ನೇಮಿಸುವುದು ಅನಿವಾರ್ಯವಾಗಿತ್ತು. ಈ ಮಂತ್ರಿಯ ಪ್ರಾಮಾಣಿಕತೆ ಮತ್ತು ಅಧಿಕಾರ ನಡೆಸುವ ಸಾಮರ್ಥ್ಯದ ಮೇಲೆ ನಂಬುಗೆ ಇಡಬೇಕಿತ್ತು. ಗೌರವಾನ್ವಿತ ಪೂರ್ಣಯ್ಯನವರ ನೇರವಂತಿಕೆ, ಸಚ್ಚಾರಿತ್ಯ ಮತ್ತು ಪ್ರಾಮಾಣಿಕತೆಯನ್ನು ಗಮನಿಸಿದ್ದೇವೆ. ಅವರ ಸಾಮರ್ಥ್ಯ ಮತ್ತು ವ್ಯವಹಾರಿಕತೆ ಸಾಬೀತಾಗಿದೆ. ಆದ್ದರಿಂದ ನಂಬಿಕೆಯ ಮತ್ತು ಗೌರವಾನ್ವಿತ ಹುದ್ದೆಯಾದ ಮಂತ್ರಿ ಪದವಿಯನ್ನು ಮೇಲೆ ತಿಳಿಸಿದ ಗೌರವಾನ್ವಿತರಿಗೆ ನೀಡುತ್ತಿದ್ದೇವೆ. (ಹುದ್ದೆಯ ಘನತೆ ಈಗ ದ್ವಿಗುಣಗೊಂಡಿದೆ) ಮತ್ತು ಅವರು ತಮ್ಮ ಕರ್ತವ್ಯದಲ್ಲಿ ತೋರಿದ ನೇರವಂತಿಕೆ, ಪ್ರಾಮಾಣಿಕತೆ ಮತ್ತು ಸ್ವಾಮಿಭಕ್ತಿ ಮತ್ತು ಇಂಗ್ಲೀಷ್ ಕಂಪನಿ ಸರಕಾರಕ್ಕೆ ಅವರು ತೋರಿದ ನಿಷ್ಠೆಗಳೆಲ್ಲವೂ ಅವರಿಗೆ ಈ ಪದವಿ ಸಿಕ್ಕಿರುವುದಕ್ಕಿರುವ ಕಾರಣಗಳು.

ಈ ಗೌರವಾನ್ವಿತ ವ್ಯಕ್ತಿ ನಮಗೆ ನೀಡಿದ ಸೇವೆಗಳು ಮತ್ತು ಮಾಡಿದ ಕೆಲಸಗಳು ಕಾಲದ ಪುಟಗಳಿಂದ ಅಳಿಸಿಹೋಗಬಾರದು ಮತ್ತು ಈ ಗೌರವಾನ್ವಿತ ವ್ಯಕ್ತಿಯ ಮಕ್ಕಳು ಸರ್ವಕಾಲಕ್ಕೂ ಆರಾಮವಾಗಿ, ಸುಲಭದಿಂದ ಬದುಕಲು ಸಾಧ್ಯವಾಗಬೇಕು. ಹಾಗಾಗಿ ಬ್ರಿಟೀಷ್ ಸರಕಾರದ ಸಲಹೆ ಮತ್ತು ಒಪ್ಪಿಗೆಯ ಮೇರೆಗೆ ನಾವು ಯಳಂದೂರು ತಾಲ್ಲೂಕನ್ನು ಮೇಲೆ ಹೆಸರಿಸಿದ ಗೌರವಾನ್ವಿತ ವ್ಯಕ್ತಿಯ ವಂಶಕ್ಕೆ ಇನಾಂ ಆಗಿ ನೀಡುತ್ತಿದ್ದೇವೆ. ಜಗತ್ತು ಬೆಳಗುವ ಸೂರ್ಯ ಚಂದ್ರರಿರುವರೆಗೂ ಈ ಇನಾಂ ಅವರದಾಗಿರುತ್ತದೆ.

ಯಳಂದೂರನ್ನು ಮೈಸೂರಿನ ದಿವಾನರಾದ ಪೂರ್ಣಯ್ಯನವರಿಗೆ ಮೈಸೂರಿನ ರಾಜ ಜಾಗೀರಾಗಿ ನೀಡಿರುತ್ತಾರೆ, ಬ್ರಿಟೀಷ್ ಸರಕಾರದ ಶಿಫಾರಸ್ಸಿನ ಮೇರೆಗೆ. ಪೂರ್ಣಯ್ಯನವರ ನಿಷ್ಠಾವಂತ ಸೇವೆಗೆ ಪ್ರತಿಯಾಗಿ ಈ ಜಾಗೀರು ನೀಡಲು ಮೈಸೂರಿನಲ್ಲಿ ಬ್ರಿಟೀಷ್ ರೆಸೆಡೆಂಟಾದ ನಾನು ಪೂರ್ಣ ಸಮ್ಮತಿಯೊಂದಿಗೆ ಅನುಮೋದಿಸುತ್ತ ಈ ಒಪ್ಪಂದಕ್ಕೆ ಸಹಿ ಹಾಕಿ ನನ್ನ ಹೆಸರು ಬರೆದಿರುತ್ತೇನೆ.” (125)

ನಿವೃತ್ತರಾಗುವ ಸಮಯದಲ್ಲಿ ಪೂರ್ಣಯನವರು ಸರಕಾರಕ್ಕೆ 14,15,729 ಕಂತಾರೇಯ ಪಗೋಡಾಗಳನ್ನು ಪಾವತಿಸಬೇಕಾಗಿತ್ತು (1 ಕಂತಾರೇಯ ಪಗೋಡ = 2.86 ರುಪಾಯಿ). ಈ ಮೊತ್ತವನ್ನು ಕಟ್ಟುವಂತೆ ಪೂರ್ಣಯ್ಯನವರಿಗೆ ಕೇಳಿದಾಗ, 6,69,750 ಕಂತಾರೇಯ ಪಗೋಡಾಗಳನ್ನು ಹಣದ ರೂಪದಲ್ಲಿ ನೀಡಿ, ಅವನ ನೆಂಟರು ಟ್ರೆಷರಿಯಿಂದ ಕದ್ದಿದ್ದ 1,14,00 ಕಂತಾರೇಯ ಪಗೋಡಾಗಳಷ್ಟು ಬೆಲೆ ಬಾಳುತ್ತಿದ್ದ ಒಡವೆಗಳನ್ನು ಹಿಂದಿರುಗಿಸಿದರು. ಉಳಿಕೆ 6,31,978 ಕಂತಾರೇಯ ಪಗೋಡಾಗಳನ್ನು ಕಟ್ಟಲು ನಿರಾಕರಿಸಿದರು. (126) ಮೈಸೂರು ಸಾಮ್ರಾಜ್ಯ ಬ್ರಿಟೀಷರಿಗೆ ವಾರ್ಷಿಕವಾಗಿ ಕೊಡುತ್ತಿದ್ದ ಹಣದಷ್ಟು ಮೊತ್ತವನ್ನು ದುರುಪಯೋಗಪಡಿಸಿಕೊಂಡಿದ್ದ ಪೂರ್ಣಯ್ಯ, ಹಣ ಕೊಡಲಾಗುವುದಿಲ್ಲವೆಂದು ಒಂದೇ ಏಟಿಗೆ ನಿರಾಕರಿಸಿಬಿಟ್ಟರು!

ಪೂರ್ಣಯ್ಯ ಸರಕಾರಕ್ಕೆ ಕೊಡಬೇಕಿದ್ದ ಬಾಕಿ ಹಣವನ್ನು ಎಲ್ಲೆಲ್ಲಿ ಖರ್ಚು ಮಾಡಿದ್ದನೆಂಬ ಈ ಲೆಕ್ಕ, ಲೂಟಿ ಹೊಡೆದ ಹಣವನ್ನು ಬ್ರಾಹ್ಮಣರಿಗೆ ಕೊಟ್ಟು ಅತಿಯಾಗಿ ಮುದ್ದಿಸಿ ಹಾಳು ಮಾಡಿದ್ದನ್ನು ತೋರಿಸಿಕೊಡುತ್ತದೆ. 
 

ಯಳಂದೂರಿನಲ್ಲಿ ಕುಸಿತದ ಹಂತದಲ್ಲಿರುವ ಪೂರ್ಣಯ್ಯನವರ ಅರಮನೆಯಂತಹ ಮನೆಯಲ್ಲಿ ಚಿನ್ನ ತುಂಬಿದ ಮಡಿಕೆಗಳು ಆಗಾಗ್ಗೆ ದೊರಕುತ್ತಿದ್ದವು ಎಂಬುದು ಆಸಕ್ತಿಕರ. ತೀರ ಇತ್ತೀಚೆಗೆ 1980ರಲ್ಲೂ ಚಿನ್ನದ ಮಡಿಕೆಗಳು ಸಿಕ್ಕಿದ್ದವು.

‘ಗೌರವಾನ್ವಿತ’ ‘ನೇರವಂತಿಕೆ’ಯ ‘ಘನತೆಯುಳ್ಳ’ ವ್ಯಕ್ತಿಯ ಬಗ್ಗೆ ಇಷ್ಟು ಸಾಕೇನೋ!?!

ಸನ್ನದ್ ಕೊಡುವ ಒಂದು ತಿಂಗಳ ಮುಂಚೆ ಮದ್ರಾಸಿನ ಬ್ರಿಟೀಷ್ ಸರಕಾರಕ್ಕೆ ಬರೆದ ಪತ್ರವೊಂದರಲ್ಲಿ ಮಾಲ್ಕಮ್: “ಪೂರ್ಣಯ್ಯನವರು ಕೇಳಿದ ವಿಪರೀತದ ಬೇಡಿಕೆಗಳಿಗೆ ಹೋಲಿಸಿದರೆ ನಾವು ಕೊಟ್ಟ ಉಡುಗೊರೆಯ ಮೊತ್ತ ಒಪ್ಪತಕ್ಕದ್ದು. ಅದು ದೊಡ್ಡದಲ್ಲ ಮತ್ತಷ್ಟು ಸಾಕು. ಮೈಸೂರು ಸರಕಾರ ಅಸ್ತಿತ್ವದಲ್ಲಿರುವವರೆಗೆ ಪೂರ್ಣಯ್ಯನ ಕುಟುಂಬವನ್ನು ಸಾಕಲು ಇಷ್ಟು ಸಾಕು. ಇಷ್ಟೆಲ್ಲವನ್ನೂ ಕೊಟ್ಟ ಹಿಂದಿನ ಕಾರಣಗಳು ಅದನ್ನನುಭವಿಸುವ ಮುಂದಿನ ಜನಾಂಗದವರಲ್ಲೂ ಗೌರವ ಮೂಡಿಸುತ್ತದೆ.” (128)

ಮತ್ತೆ ಮುಂದಕ್ಕೆ ಇದೇ ರೀತಿಯ ‘ಬಹುಮಾನ’ಗಳನ್ನು ಕೊಟ್ಟುಬಿಟ್ಟರೆ ಎಂಬ ಅನ್ನಿಸಿಕೆಯಿಂದ ಗವರ್ನರ್ ಜೆನರಲ್ ತತ್ ಕ್ಷಣ ಇಂತಹ ವಿಷಯಗಳ ಬಗ್ಗೆ ಯಾವ ನೀತಿಯನ್ನನುಸರಿಬೇಕೆಂದು ಸೂಚನೆ ನೀಡಿದರು: “ಪ್ರಸ್ತುತ ಸಂದರ್ಭದಲ್ಲಿ ಈ ರೀತಿಯ ಕೊಡುವಿಕೆಗೆ ಮುಂದೆ ಅನುಸರಿಸಬೇಕಾದ ನೀತಿಗಳನ್ನು ಗೊತ್ತುಪಡಿಸುವುದು ಸೂಕ್ತವಾದ ಕೆಲಸ. ಮೈಸೂರು ಸರಕಾರಕ್ಕೆ ಈ ಪ್ರಕರಣದಲ್ಲಿ ಸ್ವಲ್ಪ ಸ್ವಾತಂತ್ರ್ಯವಿದ್ದರೆ, ಬಲಹೀನ ನಾಮಕಾವಸ್ಥೆ ರಾಜ ಅಥವಾ ಮಂತ್ರಿ ಕೊಟ್ಟುಬಿಡಬಹುದಾದ ಉಡುಗೊರೆಗಳು ಆ ರಾಜ್ಯ ಬ್ರಿಟೀಷ್ ಸರಕಾರದೊಂದಿಗೆ ಮಾಡಿಕೊಂಡಂತಹ ಒಪ್ಪಂದಗಳ ಅಸ್ತಿತ್ವಕ್ಕೇ ಸಂಚಕಾರ ಉಂಟುಮಾಡಿಬಿಡಬಹುದು. ಮತ್ತೊಂದೆಡೆ ಈ ರೀತಿಯ ಕೊಡುವಿಕೆಯನ್ನು ಸಂಪೂರ್ಣವಾಗಿ ನಿಲ್ಲಿಸಿಬಿಡುವುದು ಬುದ್ಧಿವಂತಿಕೆಯ ನಡೆಯಲ್ಲ. ಅತ್ಯಮೂಲ್ಯ ಸೇವೆ ಸಲ್ಲಿಸಿದವರಿಗೆ ಗೌರವ ಸಲ್ಲಿಸಲು, ಉಡುಗೊರೆ ನೀಡಲು ಅಲ್ಲಿನ ಸ್ಥಳೀಯ ಸರಕಾರಗಳಿಗೆ ಅಧಿಕಾರವಿರಲೇಬೇಕು. ನಮ್ಮ ಪ್ರಕಾರ ಒಂದು ನಿರ್ದಿಷ್ಟ ಮೊತ್ತವನ್ನು/ ಜಾಗವನ್ನು ನಿಗದಿಪಡಿಸಬೇಕು, ಮೈಸೂರು ಸಾಮ್ರಾಜ್ಯದ ಒಳಗಿನ ಜಾಗವನ್ನು ಸೇವೆ ಸಲ್ಲಿಸಿದಾತ ಜೀವಿತವಿರುವವರೆಗೆ ಅಥವಾ ವಂಶಪಾರಂಪರ್ಯ ಗುತ್ತಿಗೆಯ ಮೇಲೆ ನೀಡಬೇಕು ಮತ್ತಿದಕ್ಕೆ ಕಂಪನಿ ಸರಕಾರದ ಒಪ್ಪಿಗೆ ಕೊಡುವಂತಿರಬಾರದು.” (129)

ಮಾಲ್ಕಮ್ ಮದ್ರಾಸಿಗೆ ಬರೆದ – ಈಗಾಗಲೇ ನಾವು ಉಲ್ಲೇಖಿಸಿರುವ – ಪತ್ರದಲ್ಲಿ ಈ ಪ್ರಶ್ನೆಗೆ ಉತ್ತರ ಕೊಡುವುದು ಹೀಗೆ: “ಪೂರ್ಣಯ್ಯನವರಿಗೆ ಕೊಟ್ಟ ಈ ಜಾಗೀರನ್ನು ನಿದರ್ಶನವನ್ನಾಗಿ ಬಳಸಿಕೊಳ್ಳಬಾರದು. ಯಾಕೆಂದರೆ ಈ ರಾಜ್ಯದ ಸೇವೆಯಲ್ಲಿರುವ ಯಾವುದೇ ವ್ಯಕ್ತಿಗೂ ಇಂತಹುದೊಂದು ಅವಕಾಶ ಲಭಿಸುವುದಿಲ್ಲ, ಪೂರ್ಣಯ್ಯನವರಿಗೆ ಕೊಟ್ಟಂತೆ ಮತ್ಯಾರಿಗೂ ಕೊಡುವ ಪರಿಸ್ಥಿತಿ ಉದ್ಭವಿಸುವುದಿಲ್ಲ.” (130)

ಹಾಗಾಗಿ ಇದು ಬ್ರಿಟೀಷರು ಉಡುಗೊರೆಯಾಗಿ ಕೊಟ್ಟ ಮೊದಲ ಉದಾಹರಣೆ ಮತ್ತದನ್ನವರು ಕೊನೆಯ ಉದಾಹರಣೆಯಾಗಿಸಬಯಸಿದ್ದರು ಎಂಬುದು ಸ್ಪಷ್ಟವಾಗುತ್ತದೆ. ಅವರಿಗೆ ಸಾಮ್ರಾಜ್ಯವನ್ನು, ಹದಿನೇಳನೇ ಶತಮಾನಕ್ಕೂ ಮುಂಚಿದ್ದ ಹಳೆಯ ಊಳಿಗಮಾನ್ಯತೆಯ ದಿನಗಳಿಗೆ ತಳ್ಳಲ್ಪಡುವುದನ್ನು ನೋಡುವ ಇಚ್ಛೆಯಿರಲಿಲ್ಲ. ಆದರೆ ಕೃಷ್ಣರಾಜ ಈ ಕೊಡುವಿಕೆಯಿಂದ ಗತಕಾಲದ ಚಕ್ರವರ್ತಿಗಳಂತೆ ಉತ್ಸುಕನಾಗಿದ್ದ ಮತ್ತಿದನ್ನು ಪುನರಾವರ್ತಿಸಲು ಆಸಕ್ತನಾಗಿದ್ದ. ಈ ರೀತಿಯ ಬಹುಮಾನಗಳ ಕೊಡುವಿಕೆ ರಾಜನೆಂಬ ಗುರುತನ್ನು ಪ್ರಕಾಶಮಾನವಾಗಿಸುತ್ತಿತ್ತು. ಇದು 1810ರ ನಂತರದ ಲಕ್ಷಣವಷ್ಟೇ ಆಗಿರದೆ, 1799ರಲ್ಲೇ ಶುರುವಾಗಿತ್ತು.

ಪೂರ್ಣಯ್ಯನ ಆರಂಭಿಕ ಕಾರ್ಯದ ಬಗ್ಗೆ ಶಾಮ ರಾವ್ ತಿಳಿಸುತ್ತಾರೆ. “ಜನರನ್ನು ಒಲಿಸಿಕೊಳ್ಳುವ ಸಲುವಾಗಿ” ಪೂರ್ಣಯ್ಯ “ಟಿಪ್ಪುವಿನ ಕೊನೆಯ ದಿನಗಳಲ್ಲಿ ಸರಕಾರ ವಶಪಡಿಸಿಕೊಂಡಿದ್ದ ಎಲ್ಲಾ ಇನಾಂ ಭೂಮಿ ಮತ್ತು ಹಣವನ್ನು ಆಯಾ ದೇವಸ್ಥಾನ, ಮಠ, ದರ್ಗಾ ಮತ್ತು ಇತರೆ ಪೂಜಾ ಸ್ಥಳಗಳು ಹಾಗು ದಾನಧರ್ಮದ ಸಂಸ್ಥೆಗಳಿಗೆ ಹಿಂದಿರುಗಿಸಬೇಕೆಂಬುದಾಗಿತ್ತು.” (131) ಮುಂದುವರೆಸುತ್ತಾ ಶಾಮ ರಾವ್ ಹೇಳುತ್ತಾರೆ: “ದೇಶದ ವಿವಿಧ ಭಾಗಗಳಲ್ಲಿನ ಪಾಳೇಗಾರರು, ನಕಲಿ ಪಾಳೇಗಾರರು ಸಾಮ್ರಾಜ್ಯದ ಎಲ್ಲಾ ಭಾಗದ ಮೇಲೂ ತಮ್ಮ ಹಕ್ಕಿದೆ ಎಂದು ಹೇಳಲಾರಂಭಿಸಿದರು. ಪಟೇಲರು, ಪೋಲೀಸ್ ಅಧಿಕಾರಿಗಳು ಮತ್ತು ಲಂಚ ಕೊಡುವ ತಾಕತ್ತಿರುವ ರೈತರೂ ಸಹಿತ ತಮ್ಮಳ್ಳಿಯ ಜಾಗವನ್ನು ತಮ್ಮದೆಂದು ಹೇಳತೊಡಗಿದರು, ಅವರದಾಗಿಲ್ಲದೇ ಹೋದರೂ ಸಹ…..”(132)

ಪೂರ್ಣಯ್ಯ ಜನರನ್ನು ಅದರಲ್ಲೂ ವೈದಿಕ ಬ್ರಾಹ್ಮಣರನ್ನು “ಒಲಿಸಿಕೊಳ್ಳಲು” ತೆಗೆದುಕೊಂಡ ಕ್ರಮಗಳ ಬಗ್ಗೆ ವಿಲ್ಕ್ಸ್ ಬರೆಯುತ್ತಾನೆ: “1778ರಲ್ಲಿ ಟಿಪ್ಪು ಸುಲ್ತಾನ್ ಈ ಜಮೀನುಗಳನ್ನು ವಾಪಸ್ಸು ಪಡೆದುಕೊಳ್ಳಬೇಕೆಂದು ಸೂಚಿಸುತ್ತ, ಅದರಿಂದ ಬರುವ ಹಣವನ್ನು ಜುಮ್ಮಾಬಂದಿಗೆ ಸೇರಿಸಬೇಕು ಎಂದು ಆದೇಶಿಸುತ್ತಾನೆ. ದಿವಾನರಾಗುತ್ತಿದ್ದಂತೆ ಪೂರ್ಣಯ್ಯ ಮಾಡಿದ ಮೊದಲ ಕೆಲಸ ಈ ಭತ್ಯೆಗಳನ್ನು ಮತ್ತೆ ಮರುಸ್ಥಾಪಿಸಿದ್ದು…..”(133)

ಇದರಲ್ಲಿ ಹಳ್ಳಿಯ ದೇವಸ್ಥಾನಗಳು, ಜ್ಯೋತಿಷಿಗಳಿಗೆ ಮಠಗಳಿಗೆ ಮಠಗಳ ಗುರುಗಳಿಗೆ ಕೊಟ್ಟಿದ್ದ ಭೂಮಿ, ಕೆರೆ ಕಟ್ಟಲು ಭೂಮಾಲೀಕರಿಗೆ ಕೊಟ್ಟಿದ್ದ ಜಾಗ, ಉದ್ಯಾನವನ ನಿರ್ಮಿಸಲು ಜಾಗೀರುದಾರರಿಗೆ ಕೊಟ್ಟಿದ್ದ ಜಾಗ ಮತ್ತು ರಾಜರ ಸ್ವಂತ ಉದ್ಯಾನಕ್ಕೆ ಕೊಟ್ಟಿದ್ದ ಜಾಗವೆಲ್ಲವೂ ಸೇರಿತ್ತು. ಇವೆಲ್ಲದರ ಒಟ್ಟು ಮೊತ್ತ 2,68,467 ರುಪಾಯಿಗಳಷ್ಟಿತ್ತು. (134)

ಇನಾಮುದಾರರಿಗೆ ವಿವಿಧ ಕಾಲಘಟ್ಟದಲ್ಲಿ ಕೊಟ್ಟ ಇನಾಮುಗಳ ಬಗ್ಗೆ ಲುವಿಸ್ ರೈಸ್ ಆಸಕ್ತಿಕರ ಮಾಹಿತಿಗಳನ್ನು ನಮಗೆ ಕೊಡುತ್ತಾರೆ. (135)


ರೈಸಿನ ಟೇಬಲ್ಲಿನಿಂದ ಒಂದಂಶ ಸ್ಪಷ್ಟವಾಗುತ್ತದೆ, ಒಟ್ಟು 15,90,539 ರುಪಾಯಿಗಳಷ್ಟಾಗಿದ್ದ ಇನಾಮಿನಲ್ಲಿ ಹೆಚ್ಚಿನಂಶವನ್ನು ಮೊದಲ ದಶಕದಲ್ಲಿ ಕೊಡಲಾಗಿತ್ತು. ಊಳಿಗಮಾನ್ಯ ಸ್ಥಿತಿಗೆ ಮರಳಿಸುವುದಕ್ಕೆ ಹೆಚ್ಚು ಪ್ರಯತ್ನ ಪಡಲಾಗಿತ್ತು. ಕೈಗೊಂಬೆ ರಾಜನಡಿಯಲ್ಲಿ ಇನಾಮು ಕೊಡುವ ಪದ್ಧತಿ ಕಡಿಮೆಯಾಯಿತು, 1831ರ ನಂತರ ಅದು ಸಂಪೂರ್ಣ ಮಾಯವಾಯಿತು. 1831ರಷ್ಟರಲ್ಲಿ ಬ್ರಿಟೀಷ್ ಸರಕಾರ ಇದರ ಕುರಿತು ಸ್ಪಷ್ಟ ಹೆಜ್ಜೆ ಇಟ್ಟಿದ್ದನ್ನು ರೆಸಿಡೆಂಟ್ ಮತ್ತು ಗವರ್ನರ್ ನಡುವೆ ನಡೆದ ಪತ್ರ ವಿನಿಮಯದಲ್ಲಿ ಕಾಣಬಹುದು. ಕೃಷ್ಣರಾಜರು “ಭೂಮಿಯನ್ನು ಸನ್ನದಾಗಿ ನೀಡುವುದನ್ನು” ತಡೆಯುವ ಪ್ರಯತ್ನ ಈ ವಿನಿಮಯದಲ್ಲಿತ್ತು. (136)

ರಾಷ್ಟ್ರೀಯತೆಯ ಸೋಗಿನಲ್ಲಿ ಮಧ್ಯವರ್ತಿ ಅಧಿಕಾರಶಾಹಿಯು ಯೋಚಿಸುತ್ತಿದ್ದ ಬಗೆಯನ್ನು ಸಂಗ್ರಹಿಸಿ ಬರೆದಿರುವ ವೆಂಕಟಸುಬ್ಬ ಶಾಸ್ತ್ರಿ ಈ ರೀತಿಯ ಇನಾಂಗಳ ಗುಣಸ್ವರೂಪ ಮತ್ತು ಅದು ಉಂಟು ಮಾಡಿದ ಪರಿಣಾಮಗಳ ಬಗ್ಗೆ ಇನ್ನಷ್ಟು ಒಳನೋಟಗಳನ್ನು ನೀಡುತ್ತಾರೆ. ಅವರು ಹೇಳುತ್ತಾರೆ: “ಇನಾಮಿನ ಹೆಚ್ಚಿನ ಭಾಗ ಕಾವೇರಿ ಮತ್ತು ಹೇಮಾವತಿ ತಟದ ಫಲವತ್ತ ಹಳ್ಳಿಗಳಲ್ಲಿರುತ್ತಿತ್ತು ಅಥವಾ ಉದ್ಯಾನನಗರಿ ಬೆಂಗಳೂರಿನಲ್ಲಿರುತ್ತಿತ್ತು. ಇದರ ಬಗ್ಗೆ ಸರಿಯಾದ ದಾಖಲೆಗಳನ್ನು ಇಟ್ಟಿರಲಿಲ್ಲವಾಗಿ ಇನಾಂ ಆಗಿ ಕೊಟ್ಟ ಭೂಮಿಗಿಂತ ಹೆಚ್ಚನ್ನು ಆಕ್ರಮಿಸಿಕೊಂಡರು. ಜಿಲ್ಲೆಯೊಳಗೆ ಫೌಜಿದಾರರು ಮತ್ತು ಅಮಲ್ದಾರರ ಪ್ರಾಬಲ್ಯದ ಕಾರಣದಿಂದ ಈ ಇನಾಂ ಭೂಮಿ ಮತ್ತಷ್ಟು ವಿಸ್ತಾರಗೊಂಡಿತು. ಪರಿಣಾಮವಾಗಿ ಸರಕಾರಕ್ಕೆ ಅಂದುಕೊಂಡಿದ್ದಕ್ಕಿಂತ ಹೆಚ್ಚಿನ ಆದಾಯ ಕೈತಪ್ಪಿಹೋಯಿತು.

ಈ ಅರಾಜಕ ಪರಿಸ್ಥಿತಿಯಲ್ಲಿ ಕೃಷಿ ಸಂಕಟಕ್ಕೊಳಗಾಯಿತು. ಕೃಷಿಕ ತನಗುತ್ತಮವೆನ್ನಿಸಿದ ಬೆಳೆಯನ್ನು ಬೆಳೆದುಕೊಳ್ಳಲು ಸ್ವತಂತ್ರನಾಗಿದ್ದ ಮತ್ತು ತನ್ನ ತ್ಯಾಗದ ಫಲವನ್ನು ಪಡೆದುಕೊಳ್ಳಬಲ್ಲವನಾಗಿದ್ದ. ಆದರೆ ವಾಸ್ತವದಲ್ಲಿ ಈ ಬೆಳೆಯಷ್ಟೇ ಅವನ ಸ್ವತ್ತಾಗಿತ್ತು. ಸರಕಾರದ ಬೇಡಿಕೆಗಳ ಜೊತೆಗೆ, ಕಳೆದ ವರ್ಷದ ತೆರಿಗೆ ಕಟ್ಟಲು, ಬೀಜ ಮತ್ತು ಎತ್ತು ಕೊಳ್ಳಲು ಸಹಾಯ ಮಾಡಿದ್ದ ಬಡ್ಡಿ ವ್ಯಾಪಾರಿ ಹೆಚ್ಚಿನ ಬೆಳೆಯನ್ನು ಕಬಳಿಸಿಬಿಡುತ್ತಿದ್ದ. ಮತ್ತೆ ಹೊಚ್ಚ ಹೊಸ ಕರಾರಿನ ಮೇಲೆ ಸಾಲ ನೀಡುತ್ತಿದ್ದ.” (137)

ತುಳುನಾಡಿನ ಆರ್ಥಿಕತೆಯ ಬಗ್ಗೆ ಅಧ್ಯಯನ ನಡೆಸಿದ ಶ್ಯಾಮ್ ಭಟ್ 1830ರಲ್ಲಿನ ಅಲ್ಲಿನ ಬೆಳವಣಿಗೆಗಳ ಬಗ್ಗೆ ಇದೇ ರೀತಿಯ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾರೆ. ಅವರು ಬರೆಯುತ್ತಾರೆ: “ಸರಕಾರದ ಕಂದಾಯ ನೀತಿಗಳು ಹಳೆ ಊಳಿಗಮಾನ್ಯ ಮುಖ್ಯಸ್ಥರ ಜಾಗದಲ್ಲಿ ಹೊಸ ಭೂಮಾಲೀಕರ ವರ್ಗವನ್ನು ಸೃಷ್ಟಿಸಿತು. ಜೊತೆಯಲ್ಲಿ ವರ್ತಕ ಬಡ್ಡಿ ವ್ಯಾಪಾರಿಗಳು ಮತ್ತವರ ಸಹವರ್ತಿಗಳ ವರ್ಗವನ್ನು ಈ ಹೊಸ ಪದ್ಧತಿ ಸೃಷ್ಟಿಸಿತು”. (138) ಇವರು ಮುಂದಿನ ದಿನಗಳಲ್ಲಿ ಕೃಷಿಕರ ಭೂಮಿಯ ಒಡೆತನ ತಮ್ಮದೆಂದು ಹೇಳಿಕೊಳ್ಳಲಾರಂಭಿಸಿದರು.

ಕರಾವಳಿಯ ವ್ಯಾಪಾರದ ಬಗ್ಗೆ ಬರೆಯುತ್ತ ಮಾಲತಿ ಕೆ ಮೂರ್ತಿ ಹೀಗೆ ನಿರ್ಧರಿಸುತ್ತಾರೆ: “ಬ್ರಿಟೀಷ್ ಆಳ್ವಿಕೆಯಲ್ಲಿ ಸಂಪನ್ನತೆ ಹೆಚ್ಚಿಬಿಟ್ಟಿತ್ತು ಎನ್ನುವುದನ್ನು ನಂಬಲಾಗುವುದಿಲ್ಲ ಎನ್ನುವುದಕ್ಕೆ ಈ ಭಾಗದ ಆರ್ಥಿಕ ಇತಿಹಾಸವೇ ಸಾಕ್ಷಿ ಒದಗಿಸುತ್ತದೆ. ಕೊನೇಪಕ್ಷ ಹತ್ತೊಂಬತ್ತನೇ ಶತಮಾನದ ಮೊದಲ ಎರಡು ಮೂರು ದಶಕಗಳಲ್ಲಿ.”(139)

ತನ್ನ ಪುಸ್ತಕ Peasants and Imperial Ruleನಲ್ಲಿ ನ್ಹೀಲ್ ಚಾರ್ಲ್ಸ್ ವರ್ಥ್, ಬಾಂಬೆ ಕರ್ನಾಟಕ ಭಾಗದಲ್ಲಿ ಊಳಿಗಮಾನ್ಯತೆಯ ಮರಳುವಿಕೆಯೊಂದಿಗೆ ಸರಕಾರದ ಆದಾಯ ಕಡಿಮೆಯಾಗಿದ್ದನ್ನು ವಿವರಿಸುತ್ತಾನೆ. ಅವನು ಬರೆಯುತ್ತಾನೆ: “ಹದಿನೆಂಟನೇ ಶತಮಾನದ ಕೊನೆಯಲ್ಲಿ ಮತ್ತು ಹತ್ತೊಂಭತ್ತನೇ ಶತಮಾನದ ಪ್ರಾರಂಭದಲ್ಲಿ ಬಾಂಬೆ ಪ್ರಾಂತ್ಯದಲ್ಲಿ ಸರಕಾರದ ಕಣ್ಣಿಂದ ಪ್ರತ್ಯೇಕವಾದ ಭೂಮಿ ಮತ್ತು ಆದಾಯ ಬಹಳಷ್ಟಿತ್ತು. ಇಡೀ ಹಳ್ಳಿಗಳು, ಹತ್ತಲವು ಹಳ್ಳಿಗಳ ಗುಂಪುಗಳನ್ನು ಜಾಗೀರು ಮತ್ತು ಇನಾಮು ಮಾಡಲಾಗಿತ್ತು; ಇದರ ಜೊತೆಗೆ ಪ್ರತಿ ಹಳ್ಳಿಯ ಭೂಮಿಯಲ್ಲೂ ಮಹತ್ತರ ಭಾಗವನ್ನು ಪ್ರತ್ಯೇಕಗೊಳಿಸಿಬಿಡಲಾಗಿತ್ತು. 1850ರಲ್ಲಿ ನಡೆದ ಅಧಿಕೃತ ಅಂದಾಜಿನ ಪ್ರಕಾರ ಬಾಂಬೆಯಲ್ಲಿ ಈ ರೀತಿಯಲ್ಲಿ ಪ್ರತ್ಯೇಕಗೊಂಡ ಆದಾಯ ಪ್ರಾಂತ್ಯದ ಒಟ್ಟು ಆದಾಯದ ಮೂರನೇ ಒಂದಂಶದಷ್ಟಿತ್ತು. 82 ಲಕ್ಷ ಬೆಲೆಬಾಳುವ ಭೂಮಿಯಿತ್ತು. ಶತಮಾನದ ಮಧ್ಯಭಾಗದಲ್ಲಿ ಸರಕಾರದ ಆದಾಯ ಇಡೀ ಪ್ರಾಂತ್ಯದಲ್ಲಿ ಕೃಷಿ ಮಾಡಲ್ಪಟ್ಟ ಭೂಮಿಯ 20 ರಿಂದ 30 %ನಷ್ಟು ಮಾತ್ರ ಇತ್ತು ಎಂದು ಸುಲಭವಾಗಿ ಊಹಿಸಿಬಿಡಬಹುದು. ಇದರಲ್ಲಿ ಹೆಚ್ಚಿನಂಶ ಬಹುಶಃ ಗುಜರಾತಿನಲ್ಲಿತ್ತು, ಆದರೆ ದಖ್ಖನಿ ಮತ್ತು ದಕ್ಷಿಣ ಮರಾಠ ದೇಶಗಳಲ್ಲೂ ಇಂತಹ ಪ್ರತ್ಯೇಕಗೊಂಡ ಭೂಮಿಗಳು ಬಹಳಷ್ಟಿದ್ದವು. 1828ರಲ್ಲಿ ಸೈಕ್ಸ್ ಪೂನಾ, ಅಹಮದನಗರ, ಖಂದೇಶ್ ಮತ್ತು ಧಾರವಾಡದಲ್ಲಿ ಐದನೇ ಒಂದಂಶದಷ್ಟು ಪಟ್ಟಣಗಳು ಮತ್ತು ಹಳ್ಳಿಗಳು ಪ್ರತ್ಯೇಕಗೊಂಡಿದ್ದನ್ನು ಗುರುತಿಸುತ್ತಾನೆ; ಜೊತೆಗೆ ಹೆಚ್ಚುಕಡಿಮೆ ಪ್ರತಿ ಹಳ್ಳಿಯಲ್ಲೂ ಪಟೇಲರು, ಕುಲಕರ್ಣಿಗಳು, ಮಹರ್ ಗಳು ಬಾಡಿಗೆ ರಹಿತ ಭೂಮಿಯನ್ನು ಹೊಂದಿದ್ದರು.(140) ಪ್ರಾಂತ್ರದೊಳಗೆ ಈ ರೀತಿಯ ಪ್ರತ್ಯೇಕತೆ ಪುಣೆಯಿಂದ ಮುಂದಕ್ಕೋದರೆ ಮತ್ತಷ್ಟು ಹೆಚ್ಚಾಗಿರುವುದು ತಿಳಿಯುತ್ತಿತ್ತು. ದಕ್ಷಿಣದಲ್ಲಿ, ಧಾರವಾಡ ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ಮರಾಠ ಸೈನ್ಯದ ಮುಖ್ಯಸ್ಥರು ಮತ್ತವರ ವಂಶಸ್ಥರು ಅಗಾಧ ಎಸ್ಟೇಟುಗಳನ್ನು ಹೊಂದಿದ್ದರು, ಅನೇಕ ಹಳ್ಳಿಗಳನ್ನು ಜಾಗೀರಾಗಿ ಅಥವಾ ಸುರಿಂಜಮ್ (surinjam) ಆಗಿ ಪಡೆದುಕೊಂಡಿದ್ದರು. ಇಲ್ಲಿನ ಸರಕಾರೀ ಹಳ್ಳಿಗಳಲ್ಲೂ ಹೆಚ್ಚಿನ ಭೂಮಿ ಇನಾಂದಾರರ ನಿಯಂತ್ರಣದಲ್ಲಿತ್ತು. ಒಂದು ಅಂದಾಜಿನಂತೆ 1848ರಲ್ಲಿ ಸರಿಸುಮಾರು 60,000 ಸಣ್ಣ ಪುಟ್ಟ ಭೂಮಿ ಪ್ರತ್ಯೇಕವಾಗಿತ್ತು. ದಕ್ಷಿಣದಲ್ಲಿ ಅಧ್ಯಯನ ನಡೆಸಲು ಬೆಳಗಾವಿ ಜಿಲ್ಲೆಯ ಬಾದಾಮಿ ತಾಲ್ಲೂಕು ಉತ್ತಮವಾದುದು. ಇಲ್ಲಿ 76 ಹಳ್ಳಿಗಳು ಸಂಪೂರ್ಣವಾಗಿ ಪ್ರತ್ಯೇಕಗೊಂಡಿದ್ದವು ಮತ್ತು 151 ಹಳ್ಳಿಗಳಲ್ಲಿ ಸರಕಾರ ಹಕ್ಕು ಸಾಧಿಸಿತ್ತು ಎಂದು 1852ರಲ್ಲಿ ಗಮನಿಸುತ್ತಾರೆ ವಿನ್ ಗೇಟ್. ಸರಕಾರದ ಹಕ್ಕಿದ್ದ ಹಳ್ಳಿಗಳಲ್ಲಿ ಕೃಷಿಗೆ ಯೋಗ್ಯವಾದ ಭೂಮಿಯಲ್ಲಿ 42%ನಷ್ಟು ಇನಾಂ ಭೂಮಿಯಾಗಿತ್ತು ಅಥವಾ ಒಂದು ಸಣ್ಣ ಮೊತ್ತದ ಬಾಡಿಗೆ ಕಟ್ಟಿದರೆ ಮುಗಿದುಹೋಗುತ್ತಿತ್ತು.” (141)

ಮುಂದುವರೆಸುತ್ತಾ ಚಾರ್ಲ್ಸ್ ವರ್ಥ್: “ಪ್ರತ್ಯೇಕಗೊಂಡ ಭೂಮಿಯಲ್ಲಿ ಅನೇಕವು ಸರಕಾರದ ಉಡುಗೊರೆಯಿಂದಲೇ ಸೃಷ್ಟಿಯಾಗಿತ್ತಾದರೂ ಅಧಿಕಾರಶಾಹಿಗೆ, ಅದನ್ನು ಮಿತಿಗೊಳಿಸಬೇಕೆಂಬ ಆಸಕ್ತಿಯೂ ಗಣನೀಯ ಪ್ರಮಾಣದಲ್ಲಿತ್ತು.”(142)

ಈ ಮೇಲಿನ ಎಲ್ಲಾ ಮಾಹಿತಿಯಿಂದ ಸ್ಪಷ್ಟವಾಗುವ ಅಂಶವೆಂದರೆ ವಸಾಹತು ಆಳ್ವಿಕೆಯ ಮೊದಲ ಕೆಲವು ದಶಕಗಳು ಊಳಿಗಮಾನ್ಯತೆಯನ್ನು ಶಕ್ತಗೊಳಿಸುವುದರ ಜೊತೆಗೆ ಕರ್ನಾಟಕದ ಉದ್ದಗಲಕ್ಕೂ ಊಳಿಗಮಾನ್ಯತೆ ಹೊಸ ಹೊಸತಾಗಿ ಚಿಗುರಿಕೊಳ್ಳುವ ಅವಕಾಶವನ್ನೂ ಒದಗಿಸಿತು. ಈ ಅಂಶಕ್ಕೆ ಪೂರಕವಾಗಿ ನಾವು ಒದಗಿಸಿರುವ ಇತಿಹಾಸದ ಪುರಾವೆಗಳು ಸರಕಾರ – ಧಾರ್ಮಿಕ, ಭೂಮಾಲೀಕ, ರಾಜಸ್ವ, ಮಿಲಿಟರಿ – ಜನರಿಗೆ ಭೂಮಿ ಮತ್ತು ಹಳ್ಳಿಯನ್ನು ದೇಣಿಗೆಯಾಗಿ ನೀಡಿ ಊಳಿಗಮಾನ್ಯತೆಯ ಆಸಕ್ತಿಯನ್ನು ಕಾಪಿಡಿದರು. ಈ ಹಿಮ್ಮುಖ ಚಲನೆಯಿಂದಾಗಿ ದೊಡ್ಡ ಮಟ್ಟದ ಜನಸಂಖ್ಯೆ ಮತ್ತೆ ಕೃಷಿಯೆಡೆಗೆ ಹೆಜ್ಜೆ ಹಾಕಿದರು. ಮೈಸೂರೊಂದಲ್ಲೇ ಸುಮಾರು ಮೂರು ಲಕ್ಷ ಜನರು (ಒಟ್ಟು ಜನಸಂಖೈಯ 12%ನಷ್ಟು) ಈ ಹಿಮ್ಮುಖ ಚಲನೆಯ ಭಾಗವಾದರು. ಈಗಾಗಲೇ ಉಲ್ಲೇಖಿಸಿರುವ ಬುಚನನ್ ನ ಮಾಹಿತಿಯಂತೆ ಈ ಹಿಮ್ಮುಖ ಚಲನೆಗೆ ಕಾರಣ ವ್ಯಾಪಾರ ವಹಿವಾಟು ಮತ್ತು ಕೈಗಾರಿಕೆಯಲ್ಲುಂಟಾದ ಬಿರುಕುಗಳು ಮತ್ತು ಸೈನ್ಯವನ್ನು ವಿಸರ್ಜಿಸಿದ್ದು. ಬಂಡವಾಳಶಾಹಿತನದ ಉದಯದ ಲಕ್ಷಣವೆಂದರೆ ಕೈಗಾರಿಕೆಯನ್ನು ಕೃಷಿಯಿಂದ ಬೇರ್ಪಡಿಸುವುದು ಮತ್ತು ಪಟ್ಟಣ ಹಾಗೂ ನಗರಗಳ ಶೀಘ್ರ ಬೆಳವಣಿಗೆ; ಹದಿನೆಂಟನೇ ಶತಮಾನದ ಮೊದಲರ್ಧದಲ್ಲಿ ನಡೆದದ್ದು ಇದಕ್ಕೆ ಸಂಪೂರ್ಣ ವಿರುದ್ಧವಾದ ಪ್ರಕ್ರಿಯೆ – ಕೈಗಾರಿಕೆ ಕೃಷಿಯೊಂದಿಗೆ ಕೈಜೋಡಿಸಿತು, ನಗರದ ಜನರು ಹಳ್ಳಿಗಳ ಕಡೆಗೆ ಗುಳೇ ಹೋದರು. ಈ ಐತಿಹಾಸಿಕ ಹಿಮ್ಮುಖ ಚಲನೆ ಕಾರ್ಮಿಕರ ವೇತನವನ್ನು ಗಣನೀಯವಾಗಿ ಕಡಿಮೆ ಮಾಡಿತು ಮತ್ತು ಕಾರ್ಮಿಕರನ್ನು ಭೂಮಾಲೀಕ ವರ್ಗದ ಕೃಪಾಕಟಾಕ್ಷಕ್ಕೆ ನೂಕಿ ಬಿಟ್ಟಿತು. ಈ ಪ್ರಕ್ರಿಯೆಯನ್ನು ಭೂಮಾಲೀಕರು ತಮ್ಮನುಕೂಲಕ್ಕೆ ಬಳಸಿಕೊಂಡರು; ಕೂಲಿಯನ್ನು ಕಡಿಮೆ ಮಾಡಿ ಎಂದು ಬುಚನನ್ನ ತಿಳಿಸುತ್ತಾರೆ. ಬ್ರಿಟೀಷ್ ವಸ್ತುಗಳು ಕೊಟ್ಟ ಪೈಪೋಟಿಯಿಂದಾಗಿ ಪತನ ಕಂಡ ಬಾಂಬೆ ಕರ್ನಾಟಕ ಭಾಗದಲ್ಲಿನ ಕಸುಬುದಾರರು(ನೇಕಾರರು) ಬರ್ಬಾದಾದ ಬಗ್ಗೆ ಡಿಕೆ ಚೋಕ್ಸಿ ಬರೆಯುತ್ತಾರೆ: “ನೇಕಾರರು ತಮ್ಮ ಕೈಮಗ್ಗ ತೊರೆದು ಉಳುವುದಕ್ಕೆ ಹೊರಟರು, ಸೈನಿಕರಂತೆ ಹೊರಟರು, ಭೂಮಿಗೆ ಭಾರವಾದರು. ಅವರು ಉತ್ತ ಭೂಮಿ ಮ್ಯಾಂಚೆಸ್ಟರ್ರಿನ ದೈತ್ಯ ವಸ್ತ್ರ ತಯಾರಿಕಾ ಕಂಪನಿಗಳಿಂತ ಕಚ್ಛಾ ವಸ್ತುಗಳನ್ನು ಪೂರೈಸುತ್ತಿತ್ತು. ಭಾರತದ ಮಿಲಿಯನ್ನುಗಟ್ಟಲೆ ಜನರು ತಮ್ಮ ಹೊಸ ಮಾಲೀಕರ ದುರಾಸೆಗಳನ್ನು ಈಡೇರಿಸಲು ಉಳುಮೆ ಮಾಡುತ್ತಿದ್ದರು, ಹೊಸ ಮಾಲೀಕರ ಲಾಭದಿಂದ ಇಂಗ್ಲೆಂಡ್ ಪ್ರಪಂಚದ ಶ್ರೀಮಂತ ರಾಷ್ಟ್ರವಾದರೆ ಭಾರತದ ರೈತ ಬಡತನದ ಬೇಗೆಯಲ್ಲಿ ಬೆಂದು ಮತ್ತೊಂದು ದಾರಿಯನ್ನು ಹುಡುಕುವುದಕ್ಕೂ ಕಷ್ಟಪಡಬೇಕಾದ ಸ್ಥಿತಿಗೆ ಬಂದು ನಿಂತ.”(143)

Historical Premises for India’s transition to capitalismನಲ್ಲಿ ಆರನೇ ಪಾವ್ಲಾವ್ ಈ ಪ್ರಕ್ರಿಯೆಯನ್ನು “ನಿರಂತರ ಅ-ಕೈಗಾರೀಕರಣ”(progressive deindustrialization) ಎಂದು ಕರೆಯುತ್ತಾನೆ. ಅವನು ಹೇಳುತ್ತಾನೆ: “ಮಹಾರಾಷ್ಟ್ರದ ಕಾರ್ಮಿಕ ಶಕ್ತಿ ಕೈಗಾರಿಕೆಗಳಿಂದ ಕೃಷಿಯ ಕಡೆಗೆ ಹೊರಳಿದ್ದನ್ನು ಬ್ರಿಟೀಷ್ ಆಡಳಿತಾಧಿಕಾರಿಗಳೂ ಒಪ್ಪಿಕೊಳ್ಳುತ್ತಾರೆ. ಅವರಲ್ಲೊಬ್ಬರು 1830ರಲ್ಲಿ ಅನೇಕ ನೇಕಾರರು ಅಸ್ತಿತ್ವದ ಹುಡುಕಾಟದಲ್ಲಿ ಮರಳಿ ಕೃಷಿ ಕ್ಷೇತ್ರಕ್ಕೆ ತೆರಳಿದರು ಎಂದು ಬರೆಯುತ್ತಾರೆ. ಈಗಾಗಲೇ ಭೂಮಿಯ ಮೇಲಿದ್ದ ಅವಲಂಬನೆಯ ಭಾರ, ಅವನ ಅಭಿಪ್ರಾಯದಂತೆ ಬಹಳಷ್ಟು ಹೆಚ್ಚಿತ್ತು.”(144)

ಈ ಹಿಮ್ಮುಖ ಚಲನೆಯಿಂದಾಗಿ ಗುಳೇ ಹೋದವರು ಅನೇಕ ವಿಧದ ಬಂಧಕ್ಕೊಳಗಾಗಿದ್ದರ ಬಗ್ಗೆ ಅನುಮಾನವೇ ಬೇಡ. ಈ ಪ್ರಕ್ರಿಯೆಯಿಂದಾಗಿ ಅತಿ ಹೆಚ್ಚಿನ ಹೊಡೆತ ಅನುಭವಿಸಿದ್ದು ಆಗಷ್ಟೇ ಶತಶತಮಾನಗಳ ಬಂಧನವನ್ನು ಕಳಚಿಕೊಳ್ಳಲಾರಂಭಿಸಿದ್ದ ದಲಿತ ಜೀತದಾಳುಗಳು. ಹಾಗಾಗಿ ಇದು ಇಡೀ ಕರ್ನಾಟಕದಲ್ಲಿ ಕಾಣಿಸಿಕೊಂಡ ಊಳಿಗಮಾನ್ಯತೆಯ ಪ್ರತಿಗಾಮಿ ಅಲೆ. ದಿನನಿತ್ಯದ ಉಪಯೋಗದ ವಸ್ತುಗಳನ್ನು ಅತಿ ಹೆಚ್ಚು ಪ್ರಮಾಣದಲ್ಲಿ ಉತ್ಪಾದಿಸುತ್ತಿದ್ದ ಹಳೆ ಮೈಸೂರು ಪ್ರಾಂತ್ಯದಲ್ಲಿ ಇದರ ಪರಿಣಾಮಗಳು ಹೆಚ್ಚಾಗಿ ಕಂಡವು. ಕ್ರೂರ ಅಟ್ಲಾಂಟಿಕ್ ಸಾಗರದ ಅಲೆಯ ಕಾರಣದಿಂದ ಊಳಿಗಮಾನ್ಯತೆಯ ದಡಕ್ಕೆ ಬಂದು ಬಿದ್ದ ನಿಸ್ಸಹಾಯಕ ಗಂಡಸು, ಹೆಂಗಸು, ಮಕ್ಕಳನ್ನು ‘ಮೊತ್ತವಾಗಿ’ ಪರಿವರ್ತಿಸಿಕೊಳ್ಳುವುದಕ್ಕೆ ಭೂಮಾಲೀಕರ ನಡುವೆಯೇ ತೀವ್ರ ಪೈಪೋಟಿ ಏರ್ಪಟ್ಟಿತು. 
 
ಮುಂದಿನ ವಾರ
ಕೃಷಿಗೆ ಲಕ್ವ ಹೊಡೆದದ್ದು ಭಾಗ 3

ಏಪ್ರಿ 20, 2016

ಮಾಹಿತಿ ಹಕ್ಕು ಕಾಯಿದೆ ಮತ್ತು ರಾಜಕೀಯ ಪಕ್ಷಗಳ ಸ್ವಹಿತಾಸಕ್ತಿ!

ಕು.ಸ.ಮಧುಸೂದನ ರಂಗೇನಹಳ್ಳಿ
20/04/2016
೨೦೦೫ರಲ್ಲಿ ಜಾರಿಗೆ ಬಂದ ಮಾಹಿತಿ ಹಕ್ಕು ಕಾನೂನಿಗೆ ಮೊದಮೊದಲು ರಾಜಕಾರಣಿಗಳಿಂದ ಮತ್ತು ಅಧಿಕಾರಶಾಹಿಯಿಂದ ತೀವ್ರ ವಿರೋಧ ವ್ಯಕ್ತವಾದರೂ ಬಹುತೇಕ ಮಾಧ್ಯಮಗಳು ಮತ್ತು ಸಾರ್ವಜನಿಕರು ಇದನ್ನು ಮುಕ್ತ ಮನಸ್ಸಿನಿಂದ ಸ್ವಾಗತಿಸಿದರು. ಯಾಕೆಂದರೆ ಆಡಳಿತದಲ್ಲಿ ಪಾರದರ್ಶಕತೆ ತರಲು ಮತ್ತು ಹೊಣೆಗಾರಿಕೆಯನ್ನು ಹೇರಲು ಈ ಕಾನೂನನ್ನು ರೂಪಿಸಲಾಗಿತ್ತು. ತನ್ಮೂಲಕ ಜನತೆಯ ಕೈಗೆ ಮಹತ್ತರ ಆಯುಧವೊಂದನ್ನು ನೀಡುವ ಉದ್ದೇಶ ಸರಕಾರಕ್ಕಿತ್ತು. ಸರಕಾರದ ಪ್ರತಿ ಚಟುವಟಿಕೆಗಳ ಮಾಹಿತಿಯೂ ಜನರಿಗೆ ಗೊತ್ತಿರಬೇಕೆಂಬುದೇ ಕಾಯಿದೆಯ ಮೂಲ ಮಂತ್ರವಾಗಿತ್ತು.

ಕಳೆದ ಹನ್ನೊಂದು ವರ್ಷಗಳಲ್ಲಿ ಈ ಮಾಹಿತಿಹಕ್ಕು ಕಾಯಿದೆ ಹಲವು ರೀತಿಯಲ್ಲಿ ಕ್ರಾಂತಿಯನ್ನುಂಟು ಮಾಡಿರುವುದು ನಿಜವಾದರೂ, ಸದರಿ ಕಾಯಿದೆಯ ಸದುಪಯೋಗ ಮತ್ತು ದುರುಪಯೋಗಗಳು ಸಮಾನವಾಗಿ ನಡೆದಿದ್ದು ಕಾಯಿದೆಯ ಮೂಲ ಉದ್ದೇಶವನ್ನಿನ್ನೂ ಸಾದಿಸಲಾಗಿಲ್ಲವೆಂಬುದೇ ವಿಷಾದದ ಸಂಗತಿ. ಹತ್ತು ವರ್ಷಗಳ ಹಿಂದೆ ಜಾರಿಗೆ ಬಂದ ಮಾಹಿತಿ ಹಕ್ಕು ಕಾಯಿದೆ ಕೇಂದ್ರ ಮತ್ತು ಹಲವು ರಾಜ್ಯ ಸರಕಾರಗಳ ಭ್ರಷ್ಟಾಚಾರ ಪ್ರಕರಣಗಳನ್ನು ಬಹಿರಂಗಗೊಳಿಸಿದೆ. ದೇಶದಾದ್ಯಂತ ಸೃಷ್ಠಿಯಾದ ನೂರಾರು ಆರ್.ಟಿ.ಐ. ಕಾರ್ಯಕರ್ತರು ಇದನ್ನು ಬಳಸಿ ಹಲವು ರಾಜಕಾರಣಿಗಳ ಮತ್ತು ಅಧಿಕಾರಿಗಳ ನಿದ್ದೆಗೆಡಿಸುತ್ತಿದ್ದಾರೆ. ಆದರೆ ದುರಂತವೆಂದರೆ ಮಾಹಿತಿ ಹಕ್ಕು ಕಾಯಿದೆ ಹಲವು ಕ್ಷೇತ್ರಗಳಿಗೆ ಅನ್ವಯವಾಗದಿರುವುದು. ಹೀಗಾಗಿ ಈ ಕಾಯಿದೆಯ ಮೂಲಮಂತ್ರವಾದ ಸಂಪೂರ್ಣ ಮಾಹಿತಿ ಎನ್ನುವುದು ಹುಸಿಯಾಗಿದೆ.

ಸಾರ್ವಜನಿಕ ಹಣದಲ್ಲಿ ನಡೆಯುವ ಎನ್.ಜಿ.ಒ.ಗಳನ್ನು, ಖಾಸಗಿ ಟ್ಟಸ್ಟ್‌ಗಳನ್ನು, ಶಿಕ್ಷಣ ಸಂಸ್ಥೆಗಳನ್ನು ಮತ್ತು ಸರಕಾರದ ಪರೋಕ್ಷ ಹಿಡಿತದಲ್ಲಿರುವ ಹಲವು ಕ್ರೀಡಾ ಪ್ರಾಧಿಕಾರಗಳನ್ನು ಈ ಕಾಯಿದೆಯ ವ್ಯಾಪ್ತಿಯಿಂದ ಹೊರಗಿಟ್ಟು ಮಾಹಿತಿ ಪಡೆಯುವ ಜನತೆಯ ಹಕ್ಕನ್ನು ಮೊಟಕುಗೊಳಿಸಲಾಗಿದೆ. ಇದೆಲ್ಲಕ್ಕಿಂತ ಮಿಗಿಲಾಗಿ ನಮ್ಮ ದೇಶದ ಆರ್ಥಿಕ ನೀತಿಯನ್ನೇ ನಿರ್ದೇಶಿಸುವ ಮಟ್ಟಕ್ಕೆ ಬೆಳೆದು ನಿಂತಿರುವ ಕಾರ್ಪೋರೇಟ್ ಕಂಪನಿಗಳನ್ನು ಈ ಕಾಯಿದೆಯಿಂದ ಹೊರಗಿಟ್ಟು ಇದರ ಮೂಲ ಆಶಯವನ್ನೇ ಮಣ್ಣುಪಾಲು ಮಾಡಲಾಗಿದೆ.

ಇವೆಲ್ಲದರ ಹೊರತಾಗಿಯೂ ಈ ಕಾಯಿದೆಯ ಹಿಡಿತದಿಂದ ತಪ್ಪಿಸಿಕೊಳ್ಳಲು ನಮ್ಮ ಸರಕಾರಗಳು ಅದರ ಕಾರ್ಯಾಂಗದ ಭಾಗವಾಗಿರುವ ಅಧಿಕಾರಿಗಳು ಹೊಸ ಹೊಸ ತಂತ್ರಗಳನ್ನು ಹೆಣೆಯುತ್ತ ವಾಮಮಾರ್ಗಗಳನ್ನು ಅನುಸರಿಸುತ್ತಿವೆ. ಇದಕ್ಕಾಗಿಯೇ ಸರಕಾರ ಮತ್ತು ಖಾಸಗಿ ಸಹಬಾಗಿತ್ವ ಎನ್ನುವ ಹೆಸರಿನಡಿಯಲ್ಲಿ ಹೊಸಯೋಜನೆಗಳನ್ನು ಜಾರಿಗೆ ತರುತ್ತಾ ಜನರ ಕಣ್ಣಿಗೆ ಮಣ್ಣೆರಚುವ ಕಾರ್ಯದಲ್ಲಿ ತೊಡಗಿವೆ. ಹೀಗೆ ಸರಕಾರ ಸಾರ್ವಜನಿಕರ ಸಾವಿರಾರು ಕೋಟಿ ರೂಪಾಯಿಗಳನ್ನು ಮತ್ತು ರೈತರ ನೂರಾರು ಏಕರೆ ಭೂಮಿಯನ್ನು ಟೋಲ್ ರಸ್ತೆಗಳ ನಿರ್ಮಾಣಕ್ಕೆ, ರೈಲು, ವಿಮಾನ ನಿಲ್ದಾಣಗಳ ನಿರ್ಮಾಣಕ್ಕೆ ಸರಕಾರಿ-ಖಾಸಗಿ ಸಹಬಾಗಿತ್ವದ ಹೆಸರಲ್ಲಿ ಕಾರ್ಪೋರೇಟ್ ಕಂಪನಿಗಳಿಗೆ ನೀಡುತ್ತಿವೆ. ಇದರಲ್ಲಿ ರಾಜಕೀಯ ನಾಯಕರುಗಳು ಮತ್ತು ಸರಕಾರದ ಉನ್ನತ ಹುದ್ದೆಯಲ್ಲಿರುವ ಅಧಿಕಾರಿಗಳು ಮಾಡುವ ಭ್ರಷ್ಟತೆಯ ವಿಷಯ ಸಾರ್ವಜನಿಕರಿಗೆ ಗೊತ್ತಾಗದ ರೀತಿಯಲ್ಲಿ ನಡೆಯುತ್ತಿದೆ. ಮಾಹಿತಿ ಹಕ್ಕು ಕಾಯಿದೆಯು ಇಂತಹ ಯೋಜನೆಗಳಿಗೆ ಅನ್ವಯವಾಗುವುದಿಲ್ಲವಾದ್ದರಿಂದ ಇದರ ಬಗ್ಗೆ ಜನತೆಗೆ ಯಾವುದೇ ಸಣ್ಣ ಮಾಹಿತಿಯೂ ಅಧಿಕೃತವಾಗಿ ದೊರೆಯುತ್ತಿಲ್ಲ.

ಇದೆಲ್ಲಕ್ಕೂ ಕಳಸವಿಟ್ಟಂತೆ ನಮ್ಮ ರಾಜಕೀಯ ಪಕ್ಷಗಳನ್ನು ಸಹ ಮಾಹಿತಿ ಹಕ್ಕು ಕಾಯಿದೆಯ ವ್ಯಾಪ್ತಿಯಿಂದ ಹೊರಗಿಟ್ಟು ದೊಡ್ಡ ಪ್ರಮಾದವೊಂದನ್ನು ಎಸಗಲಾಗಿದೆ. ಹೀಗಾಗಿ ಪ್ರತಿ ರಾಜಕೀಯ ಪಕ್ಷವೂ ಖಾಸಗಿ ಕಾರ್ಪೋರೇಟ್ ಕಂಪನಿಗಳಿಂದ ಕೋಟ್ಯಾಂತರ ರೂಪಾಯಿಗಳ ದೇಣಿಗೆಯನ್ನು ಪಡೆದರೂ, ಅದು ಸಾರ್ವಜನಿಕರಿಗೆ ಗೊತ್ತಾಗುತ್ತಿಲ್ಲ. ಹೀಗೆ ಖಾಸಗಿ ಕಂಪನಿಗಳು ಕೊಡುವ ಹಣದ ಬಗ್ಗೆ ಅವರಾಗಲಿ, ಪಡೆಯುವ ರಾಜಕೀಯ ಪಕ್ಷಗಳಾಗಲಿ ಸಾರ್ವಜನಿಕರಿಗೆ ಅಧಿಕೃತ ಮಾಹಿತಿ ನೀಡಬೇಕಾದ ಕಟ್ಟುಪಾಡಿಗೆ ಒಳಪಡದೇ ಇರುವುದರಿಂದ ಅಲ್ಲಿಯೂ ಸ್ವಹಿತಾಸಕ್ತಿಗಳೇ ಕೆಲಸ ಮಾಡುತ್ತಿವೆ. ಹೀಗಾಗಿಯೇ ಎಲ್ಲ ರಾಜಕೀಯ ಪಕ್ಷಗಳೂ ಸಹ ಚುನಾವಣೆಯ ಸಂದರ್ಭದಲ್ಲಿ ಸಾವಿರಾರು ರೂಪಾಯಿಗಳನ್ನು ಖರ್ಚು ಮಾಡುತ್ತಾ ನಮ್ಮ ಚುನಾವಣಾ ವ್ಯವಸ್ಥೆಯನ್ನು ಭ್ರಷ್ಟಗೊಳಿಸಿಬಿಟ್ಟಿವೆ. ಹೀಗಾಗಿಯೇ ಅಧಿಕಾರಕ್ಕೇರಿದ ಎಲ್ಲ ರಾಜಕೀಯ ಪಕ್ಷಗಳೂ ಕಾರ್ಪೋರೇಟ್ ಕಂಪನಿಗಳ ಹಿತ ಕಾಯುವಲ್ಲಿ ಆಸಕ್ತಿ ವಹಿಸಿ ಕೆಲಸ ಮಾಡುತ್ತವೆ.

ವಿಷಾದವೆಂದರೆ ೨೦೦೫ರಲ್ಲಿ ಯು.ಇ.ಎ. ಸರಕಾರ ಈ ಕಾಯಿದೆಯನ್ನು ಸಂಸತ್ತಿನಲ್ಲಿ ಮಂಡಿಸಿದಾಗ ರಾಜಕೀಯ ಪಕ್ಷಗಳನ್ನು ಕೈಬಿಟ್ಟ ಬಗ್ಗೆ ದೊಡ್ಡ ಗಲಾಟೆ ಮಾಡಿದ ಬಾಜಪ ಇವತ್ತು ಅಧಿಕಾರಕ್ಕೆ ಬಂದು ಎರಡು ವರ್ಷಗಳೇ ಕಳೆದರೂ ಈ ಕಾಯಿದೆಯನ್ನು ತಿದ್ದುಪಡಿ ಮಾಡಿ ಇದರ ವ್ಯಾಪ್ತಿಗೆ ರಾಜಕೀಯ ಪಕ್ಷಗಳನ್ನೂ, ಕಾರ್ಪೋರೇಟ್ ಕಂಪನಿಗಳನ್ನೂ ತರುವ ಯಾವ ಪ್ರಯತ್ನವನ್ನೂ ಮಾಡಲು ಮನಸ್ಸು ಮಾಡುವಂತೆ ಕಾಣುತ್ತಿಲ್ಲ. ಹೀಗಾಗಿ ಇಂತಹ ವಿಷಯಗಳಲ್ಲಿ ಎಲ್ಲ ರಾಜಕೀಯ ಪಕ್ಷಗಳೂ ಒಂದೇ ರೀತಿಯಲ್ಲಿ ಆಲೋಚಿಸುತ್ತವೆ ಮತ್ತುಒಂದೇ ದಿಕ್ಕಿನಲ್ಲಿ ನಡೆಯುತ್ತವೆ ಎನ್ನುವುದು ಖಾತ್ರಿಯಾಗುತ್ತದೆ.

ಏಪ್ರಿ 16, 2016

ಆ ಜ್ಯೂಸಂಗಡಿ ಬಾಗಿಲು ಹಾಕೊಂಡಿದ್ಯಾಕೆ?

untouchability
ಡಾ. ಅಶೋಕ್. ಕೆ. ಆರ್
16/04/2016

ಮೊನ್ನೆ ದಿನ ಅಂಬೇಡ್ಕರ್ ಜಯಂತಿಯಂದು ಮಲ್ಲಿಕಾರ್ಜುನ ಖರ್ಗೆ ಹೇಳಿದೊಂದು ಮಾತು ಇನ್ನೂ ಕಾಡುತ್ತಿದೆ. ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ ‘ನಮ್ಮ ಪ್ರಧಾನಿ ಯಾವಾಗಲೂ ನಾನು ಚಹಾ ಮಾರುತ್ತಿದ್ದೆ ಎನ್ನುತ್ತಿರುತ್ತಾರೆ, ನಾನೊಮ್ಮೆ ಹೇಳಿದೆ – ನಾವು ಚಹಾ ಮಾರಿದರೆ ಅದನ್ನು ಯಾರೂ ತೆಗೆದುಕೊಳ್ಳುತ್ತಲೇ ಇರಲಿಲ್ಲ’ ಎಂದು ಹೇಳಿದ್ದಾರೆ ಖರ್ಗೆ. ಖರ್ಗೆ ಹಾಲಿ ವಿರೋಧ ಪಕ್ಷದ ನಾಯಕ, ಅಂಬೇಡ್ಕರ್ ಜಯಂತಿಯ ಸಂದರ್ಭದಲ್ಲೂ ಮೋದಿಯವರನ್ನು ಗೇಲಿ ಮಾಡುತ್ತ ರಾಜಕೀಯ ಮಾಡುತ್ತಿದ್ದಾರೆ ಎಂದು ಮೇಲ್ನೋಟಕ್ಕೆ ಅನ್ನಿಸಬಹುದು, ಅದು ಭಾಗಶಃ ಸತ್ಯವೂ ಇರಬಹುದು. ಆದರೆ ‘ನಾವು ಚಹಾ ಮಾರಿದರೆ ಅದನ್ನು ಯಾರೂ ತೆಗೆದುಕೊಳ್ಳುತ್ತಲೇ ಇರಲಿಲ್ಲ’ ಎಂಬ ಮಾತಿದೆಯಲ್ಲ ಅದು ಕೇವಲ ರಾಜಕೀಯದ ಮಾತಲ್ಲ. ದಲಿತನೊಬ್ಬನ ನೋವಿನ, ಅಸಹಾಯಕತೆಯ ಮಾತದು. ಎಷ್ಟೇ ವರ್ಷದ ರಾಜಕೀಯ ಅನುಭವ, ಶ್ರೀಮಂತಿಕೆ ಇದ್ದರೂ ಮಲ್ಲಿಕಾರ್ಜುನ ಖರ್ಗೆ ಕೂಡ ದಲಿತರೇ ಅಲ್ಲವೇ? ಯಾಕೋ ಮಲ್ಲಿಕಾರ್ಜುನ ಖರ್ಗೆಯವರ ಮಾತನ್ನು ರಾಜಕೀಯ ಹೇಳಿಕೆ ಎಂದು ಕಡೆಗಣಿಸಿಬಿಡಲಾಗಿದೆಯೇ ಹೊರತು ತುಂಬ ಹೆಚ್ಚು ಚರ್ಚೆಗೊಳಪಡಲಿಲ್ಲ. ಸಮಾಜದ ಮನಸ್ಥಿತಿಯ ವಿಶ್ಲೇಷಣೆ ನಡೆಯಲಿಲ್ಲ. ಖರ್ಗೆಯವರ ಹೇಳಿಕೆ ಮಂಡ್ಯದ ಘಟನೆಯೊಂದರ ಬಗ್ಗೆ ಗೆಳೆಯ ಎಸ್.ಅಭಿ ಗೌಡ ಹನಕೆರೆ ನೀಡಿದ ಮಾಹಿತಿಯೊಂದನ್ನು ಮತ್ತೆ ನೆನಪಿಸಿತು.

ಆ ಹುಡುಗರು ಅಲ್ಲಿ ಇಲ್ಲಿ ದುಡ್ಡು ಕೂಡಿಸಿ, ಚೂರು ಪಾರು ಸಾಲ ಮಾಡಿಕೊಂಡು ಒಂದು ವ್ಯಾಪಾರ ಪ್ರಾರಂಭಿಸಿಯೇಬಿಡಬೇಕೆಂದು ನಿರ್ಧಾರ ಮಾಡಿದರು. ನಿರ್ಧಾರವನ್ನು ಕಾಯಿಸದೆ ಅತಿ ಶೀಘ್ರವಾಗೇ ಜನನಿಬಿಡ ಸ್ಥಳದಲ್ಲಿ ಒಂದು ಅಂಗಡಿ ಬಾಡಿಗೆಗೆ ಹಿಡಿದು ತಾಜಾ ಹಣ್ಣಿನ ಜ್ಯೂಸ್ ಅಂಗಡಿಯನ್ನು ತೆರೆದರು. ಮಂಡ್ಯದಲ್ಲೇನು ಬಿಸಿಲ ಝಳಕ್ಕೆ ಕೊರತೆಯಿಲ್ಲವಲ್ಲ. ತಾಜಾ ಹಣ್ಣಿನ ಜ್ಯೂಸ್ ಅಂಗಡಿಯಲ್ಲಿ ವ್ಯಾಪಾರ ಕಚ್ಚಿಕೊಳ್ಳಲು ಹೆಚ್ಚು ಸಮಯವೇನು ಬೇಕಾಗಲಿಲ್ಲ. ಜ್ಯೂಸ್ ಅಂಗಡಿಯನ್ನು ಸ್ವಚ್ಛವಾಗಿಡದಿದ್ದರೆ ನೊಣ, ಜೇನ್ನೊಣಗಳೆಲ್ಲ ಮುತ್ತಿಬಿಡುತ್ತವೆಂದು ಗೊತ್ತಿತ್ತಲ್ಲ, ಈ ಉತ್ಸಾಹಿ ಹುಡುಗರು ಸ್ವಚ್ಛತೆಯನ್ನು ಮುತುವರ್ಜಿ ವಹಿಸಿ ಕಾಪಾಡಿದರು. ವ್ಯಾಪಾರ ಜೋರಿತ್ತು. ಜೋರಿದ್ದ ವ್ಯಾಪಾರ ಕೆಲವು ದಿನಗಳ ನಂತರ ಇದ್ದಕ್ಕಿದ್ದಂತೆ ಕುಸಿಯಲಾರಂಭಿಸಿತು. ಜ್ಯೂಸ್ ಅಂಗಡಿ ಸ್ವಚ್ಛವಾಗಿಲ್ಲವಾ? ಸ್ವಚ್ಛವಾಗೇ ಇದೆ. ತಾಜಾ ಜ್ಯೂಸ್ ಕೊಡ್ತಿಲ್ಲವಾ? ತಾಜಾ ಜ್ಯೂಸೇ ಸಿಗ್ತಿದೆ. ದುಡ್ಡು ಜಾಸ್ತಿ ಮಾಡಿಬಿಟ್ಟರಾ? ಇಲ್ಲ, ದುಡ್ಡು ಮೊದಲಿನಷ್ಟೇ ಇದೆ. ಹತ್ತಿರದಲ್ಲಿ ಮತ್ಯಾವುದಾದರೂ ಜ್ಯೂಸ್ ಅಂಗಡಿ ಶುರುವಾಗಿ ಹೋಯಿತಾ? ಯಾವುದೂ ಇಲ್ಲ. ಹಾಗಿದ್ದರೆ ಜೋರಿದ್ದ ವ್ಯಾಪಾರ ಕೆಲವೇ ದಿನಗಳ ನಂತರ ಕುಸಿತ ಕಂಡಿದ್ದಾದರೂ ಯಾಕೆ?

ಆ ಹುಡುಗರ ಜಾತಿ ಬಗ್ಗೆ ಮೊದಲಿಗೆ ಯಾರಿಗೂ ಗೊತ್ತಿರಲಿಲ್ಲ. ಮಂಡ್ಯದಂತಹ ಚಿಕ್ಕ ನಗರದಲ್ಲಿ ಅಂಗಡಿ ನಡೆಸುವವರ ಜಾತಿ ಗೊತ್ತಾಗುವುದಕ್ಕೆ ಹೆಚ್ಚಿನ ಸಮಯವೇನು ಬೇಕಿಲ್ಲವಲ್ಲ. ಅಂಗಡಿಗೆ ಬಂದು ಜ್ಯೂಸು ಕುಡಿದವನೊಬ್ಬ ತನ್ನ ಗೆಳೆಯನಿಗೆ ‘ಇದು ದಲಿತ್ರು ಅಂಗ್ಡಿ’ ಅಂದಿದ್ದಾನೆ. ದಲಿತ್ರು ಅಂಗ್ಡಿ ಅನ್ನೋ ಮಾತು ಹಣ್ಣಿನ ಪರಿಮಳಕ್ಕಿಂತ ವೇಗವಾಗಿ ಹಬ್ಬಿಬಿಟ್ಟಿದೆ. ಊಳಿಗಮಾನ್ಯತೆಯನ್ನು ಹೊದ್ದು ಮಲಗಿರುವ ಒಕ್ಕಲಿಗರ ಸಂಖೈ ಅಧಿಕವಾಗಿರುವ ಮಂಡ್ಯದ ಜಾತಿ ವ್ಯವಸ್ಥೆಯಲ್ಲಿ ಜ್ಯೂಸ್ ಕುಡಿಯಲು ಬರುತ್ತಿದ್ದವರು ‘ದಲಿತ್ರು ಅಂಗ್ಡಿ’ ಅಂತ ಗೊತ್ತಾಗುತ್ತಿದ್ದಂತೆ ಬಿಸಿಲ ಝಳಕ್ಕೆ ಸತ್ತರೂ ಸರಿ ದಲಿತ್ರು ಅಂಗ್ಡಿಗೆ ಕಾಲಿಡಬಾರದು ಎಂದು ನಿರ್ಧರಿಸಿಬಿಟ್ಟಿದ್ದಾರೆ! ಪರಿಣಾಮ, ಉತ್ಸಾಹಿ ಹುಡುಗರ ಜ್ಯೂಸಂಗಡಿ ಬಾಗಿಲು ಹಾಕೊಂಡಿದೆ. ಅಸ್ಪೃಶ್ಯತೆ ಈಗಿಲ್ಲ ಎಂದರೆ ಅದು ಆ ಜ್ಯೂಸಂಗಡಿಯ ದಲಿತ ಹುಡುಗರಲ್ಲಿ ಯಾವ ಭಾವನೆ ಮೂಡಿಸಬಹುದು?

ತುಂಬಾ ನಿರಾಶೆಯೂ ಬೇಕಿಲ್ಲ ಅನ್ನಿಸುತ್ತೆ. ಮೊದಮೊದಲು ಬ್ರಾಹ್ಮಣ್ ಕೆಫೆ, ಹಾಸನ ಅಯ್ಯಂಗಾರರ ಬೇಕರಿಗಳ ಹೆಸರುಗಳಷ್ಟೇ ಇತ್ತು, ಜೊತೆಗೆ ಸಾಬರ ಹೆಸರಿನ ಬಿರಿಯಾನಿ ಹೋಟೆಲ್ಲುಗಳಿದ್ದವು; ಉತ್ತರ ಕರ್ನಾಟಕದಲ್ಲಿ ಹೆಚ್ಚಾಗಿ ಕಾಣುತ್ತಿದ್ದ ಲಿಂಗಾಯತ ಖಾನಾವಳಿಗಳು ಈಗೀಗ ಬೆಂಗಳೂರಿನಲ್ಲೂ ಕಾಣಿಸುತ್ತಿವೆ. ಕಳೆದೊಂದೈದು ವರುಷಗಳಿಂದ ಗೌಡ್ರು ಮುದ್ದೆ ಮನೆ, ಗೌಡ್ರು ಮಿಲಿಟ್ರಿ ಹೋಟೆಲ್ಲು ಕಾಣಿಸಿಕೊಳ್ಳಲಾರಂಭಿಸಿವೆ. ಇದೇ ಲೆಕ್ಕದಲ್ಲಿ ನೋಡಿದರೆ ಇನ್ನೊಂದೈದತ್ತು ವರುಷಕ್ಕೆ ಕುರುಬರ ಕೋಳಿ ಕಾರ್ನರ್ ಶುರುವಾಗಬಹುದು. ಮಾದಿಗರ ಮಾಂಸದ ಹೋಟೆಲ್, ಮಾದಿಗರ ಮುದ್ದೆ ಮನೆ ಕೂಡ ಮುಂದೊಂದು ದಿನ ಬರಬಹುದೆಂದು ನಿರೀಕ್ಷಿಸಬಹುದು. ಈ ಜಾತಿ ವ್ಯವಸ್ಥೆಯಲ್ಲಿ ಅದು ಹತ್ತಿರದಲ್ಲಿ ನಡೆಯುವ ಸಾಧ್ಯತೆಗಳು ಇಲ್ಲವೆನ್ನಿಸುತ್ತಾದರೂ ನಿರೀಕ್ಷೆ ಮಾಡುವುದರಲ್ಲಿ ತಪ್ಪೇನಿದೆ ಅಲ್ಲವೇ…..ನಲವತ್ತು ವರುಷದಿಂದ ಒಂದಿಲ್ಲೊಂದು ಅಧಿಕಾರದಲ್ಲಿದ್ದ, ಕಡೇ ಪಕ್ಷ ವಿರೋಧ ಪಕ್ಷದಲ್ಲಿದ್ದ ಮಲ್ಲಿಕಾರ್ಜುನ ಖರ್ಗೆ ಅಂತಹ ದಲಿತರೇ ‘ನಾವು ಚಹಾ ಮಾರಿದರೆ ಯಾರು ತೆಗೆದುಕೊಳ್ಳುವುದಿಲ್ಲ’ ಎಂದು ಹೇಳುತ್ತಾರೆಂದರೆ ಆ ನಿರೀಕ್ಷೆ ಸತ್ಯವಾಗುವುದೇ ಸುಳ್ಳು ಎಂಬನುಮಾನವೂ ಬಂದುಬಿಡುತ್ತದೆ. ಜಾತಿ ಹೆಸರಿನ ಹೋಟೆಲ್ಲುಗಳು ಮತ್ತಷ್ಟು ಜಾತೀಯತೆಯನ್ನು ತುಂಬಿಬಿಡುತ್ತದೆ ಎಂಬ ಪ್ರಶ್ನೆಯೂ ಮೂಡಬಹುದು. ಭಾರತದ ಸಮಾಜದಲ್ಲಿನ ಮನಸ್ಥಿತಿಯಲ್ಲಿ ಜಾತಿ ನಾಶವೆಂಬುದು ಹಗಲುಗನಸಷ್ಟೇ, ಭೂಮಿ ನಾಶವಾಗುವವರೆಗೂ ಇಲ್ಲಿ ಜಾತಿ ನಾಶವಾಗುವುದು ಅನುಮಾನ. ಜಾತಿಯ ಅಸ್ತಿತ್ವವನ್ನು ಒಪ್ಪಿಕೊಳ್ಳುತ್ತಲೇ ಜಾತಿ ಸಮಾನತೆಗಾಗಿ ನಾವು ಹೋರಾಡಬೇಕು.

ಏಪ್ರಿ 15, 2016

ನೀ ಸಿಗದ ಬಾಳೊಂದು ಬಾಳೆ

Praveen Goni

ದಿವಿನಾಗಿ ನಿನ್ನ ಕಂಗಳಲಿ
ತುಂಬಿಕೊಳಬೇಕು ಆ ಹೊಳಪಲ್ಲೇ
ಹೊಸ ಹುರುಪ ನನ್ನೆದೆಯ
ಗೂಡಲ್ಲಿ ಮೊಳೆಯಿಸಿ ಕೊಳಬೇಕು .

ನಿನ್ನ ಅನುಪಸ್ತಿತಿಯಲಿ
ಸೊಗಸಿಗೆಲ್ಲಿಯ ಹಾದಿ
ನೆನಪ ಮಜ್ಜನದಲೇ
ಮನದ ಮಬ್ಬ ನೀಗಿಸಿಕೊಳಬೇಕು .

ನಿನ್ನ ಬರುವೆಗೆ ಹೃದಯ
ಕಾತರಿಸಿ ಕೂತಿಹುದು
ಕೂಗಲದು ಕೋಗಿಲೆಯು
ವಸಂತದ ಹಾದಿಯ ಕಾಯ್ವಂತೆ .

ಎದೆಯ ಅಂಗಳದಿ ನಿನ್ನ
ಸವಿ ನೆನಪ ರಂಗೋಲಿ
ನೀ ಇರಲು ಬದುಕು ಅರಳಿ
ತಾ ನಿಲ್ಲುವುದು ಬಾಡದ ಸುಮವಾಗಿ .

ಮೇಕಿಂಗ್ ಹಿಸ್ಟರಿ: ಕೃಷಿಗೆ ಲಕ್ವ ಹೊಡೆದದ್ದು ಭಾಗ 1

making history
ಸಾಕೇತ್ ರಾಜನ್
ಕನ್ನಡಕ್ಕೆ: ಡಾ. ಅಶೋಕ್. ಕೆ. ಆರ್
15/04/2016


ಹೊಸ ಮೈತ್ರಿ ಅಧಿಕಾರಕ್ಕೆ ಬಂದ ನಂತರ ಕೃಷಿ ವಿಭಾಗ ಅನೇಕ ಏಳುಬೀಳುಗಳನ್ನು ಕಂಡಿತು, ತಿರುಚಿದ ಸ್ಥಿತಿಗೆ ತಲುಪಿತು. ಇದರ ಒಟ್ಟು ಪರಿಣಾಮವೆಂದರೆ ಬಿಕ್ಕಟ್ಟಿನ ಸ್ಥಿತಿ ಉಂಟಾಗಿ ರೈತ – ಕಾರ್ಮಿಕರನ್ನು ವಿಚಲಗೊಳಿಸಿದ್ದು.

ಅ. ಬೆಳೆ ತೆರಿಗೆಯನ್ನು ಭೂತೆರಿಗೆಯನ್ನಾಗಿಸಿದ್ದು (Taxing land in place of yield)

ಬ್ರಿಟೀಷ್ ರಾಜ್ ನ ಮೊದಲ ಪರಿಣಾಮ ಕೃಷಿ ತೆರಿಗೆಯ ರೀತಿಯಲ್ಲಾದ ಬದಲಾವಣೆ. ಹೊಸ ಆಡಳಿತಶಾಹಿ ರೈತರೊಡನೆ ನಡೆಸಿದ ಎಲ್ಲಾ ಮಾತುಕತೆಗಳು, ಒಪ್ಪಂದಗಳನ್ನೂ ಪ್ರೇರೇಪಿಸಿದ್ದು ಬೆಲೆಕಟ್ಟುವಿಕೆಯ ವಿಧಾನವನ್ನು ಬದಲಿಸಬೇಕೆಂಬ ಹಂಬಲ.

ಈ ಹೊಸ ವಿಧಾನದಲ್ಲಿ “ರಾಜ್ಯದೆಲ್ಲೆಡೆ ಇದ್ದ ಒಣ ಭೂಮಿಯವರು ಸರಕಾರಕ್ಕೆ ಒಂದು ನಿರ್ದಿಷ್ಟ ಮೊತ್ತವನ್ನು ಪಾವತಿಸಬೇಕಿತ್ತು. ಈ ಮೊತ್ತ ಬೆಳೆಯ ಮೌಲ್ಯದ ಮೂರನೇ ಒಂದಂಶದಷ್ಟಿತ್ತು” ಎಂದು ಶಾಮ ರಾವ್ ತಿಳಿಸುತ್ತಾರೆ. (116)

ಬ್ರಿಟಿಷರ ಪರಾವಲಂಬಿ ಮನಸ್ಥಿತಿ ಖಾಯಂ ಗುತ್ತ (ಗುತ್ತಿಗೆ) ಎಂಬ ಹೊಸ ಗೇಣಿ ಪದ್ಧತಿಯನ್ನು ಹುಟ್ಟು ಹಾಕಿತು. ಖಾಯಂ ಗುತ್ತಿಗೆಯಲ್ಲಿ ನಿಗದಿಪಡಿಸಿದ ಮೊತ್ತದಲ್ಲಿ ಏರುಪೇರುಗಳಿಗೆ ಅವಕಾಶವಿರಲಿಲ್ಲ. (117)

ಬೆಲೆಕಟ್ಟುವಿಕೆಯ ಈ ಹೊಸ ವಿಧಾನ ಹಿಂದಿನಂತಿರಲಿಲ್ಲ. ಮುಂಚೆ ತೆರಿಗೆಯನ್ನಂದಾಜಿಸಲು ಬಿತ್ತಿದ ಬೀಜಗಳೆಷ್ಟು ಎಂಬುದನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತಿತ್ತು; ಆದರೂ ಕಟಾವಾದ ನಂತರ ಬಂದ ಬೆಳೆಯ ಪ್ರಮಾಣವನ್ನು ನೋಡಿಕೊಂಡು ತೆರಿಗೆಯನ್ನು ಅಂತಿಮಗೊಳಿಸಲಾಗುತ್ತಿತ್ತು. ಈ ರೀತಿಯ ಕೃಷಿ ತೆರಿಗೆ ಪದ್ಧತಿ ಕರ್ನಾಟಕದಲ್ಲಷ್ಟೇ ಅಲ್ಲ, ವಸಾಹತುಪೂರ್ವ ಭಾರತದಾದ್ಯಂತ ಕಾಣಬಹುದಾಗಿತ್ತು. ಪ್ರದೇಶದಿಂದ ಪ್ರದೇಶಕ್ಕೆ ಎಷ್ಟು ಪ್ರತಿಶತಃ ತೆರಿಗೆ ಎಂಬುದರಲ್ಲಿ ವ್ಯತ್ಯಾಸವಿರುತ್ತಿತ್ತು. ವಸಾಹತು ಪೂರ್ವ ಕರ್ನಾಟಕದಲ್ಲಿ ಸಾಮಾನ್ಯವಾಗಿ ಆರನೇ ಒಂದಂಶದಷ್ಟನ್ನು ಸರಕಾರಕ್ಕೆ ಕೊಡಬೇಕಿತ್ತು. ಆರರಲ್ಲಿ ಎರಡು ಅಥವಾ ಮೂರಂಶದಷ್ಟನ್ನು ವಿವಿಧ ಊಳಿಗಮಾನ್ಯ ದೊರೆಗಳಿಗೆ ನೀಡಿದರೆ ಉಳಿದಿದ್ದು ಕೃಷಿ ಮಾಡಿದ ರೈತನಿಗೆ.

ಹೊಸ ವಿಧಾನ ಬೆಳೆಯ ಪ್ರಮಾಣವನ್ನು ಲೆಕ್ಕಕ್ಕೆ ಇಟ್ಟುಕೊಳ್ಳಲಿಲ್ಲ. ಕಾರಣ? ಕೃಷಿಯಿಂದ ಏರುಮುಖದ ವಾರ್ಷಿಕ ಆದಾಯದ ಹುಡುಕಾಟದಲ್ಲಿದ್ದದ್ದು.

ಹಳೆಯ ವಿಧಾನ ಲೂಟಿ ಮಾಡುವಂತೆ, ಪೀಡಿಸುವಂತೆ ಇದ್ದರೂ ಕೆಟ್ಟ ವರ್ಷಗಳಲ್ಲಿ ರೈತರಿಗೊಂದಷ್ಟು ಉಸಿರಾಡಲು ಅವಕಾಶ ಮಾಡಿಕೊಡುತ್ತಿತ್ತು. ಬೆಳೆಯ ಪ್ರಮಾಣವನ್ನು ಲೆಕ್ಕಕ್ಕೆ ತೆಗೆದುಕೊಳ್ಳದ ಹೊಸ ವಿಧಾನ ಇರುವ ಎಕರೆಗಳ ಆಧಾರದಲ್ಲಿ ತೆರಿಗೆಯನ್ನು ವಿಧಿಸಿತು. ಜೊತೆಗೆ ಸರಕಾರಕ್ಕೆ ಸಿಗಬೇಕಾದ ಮೊತ್ತದ ಶೇಕಡಾವನ್ನು ಹೆಚ್ಚಿಸಿತು. ಹಾಗಾಗಿ ಬೆಳೆ ಕೈಹತ್ತದ ವರ್ಷಗಳಲ್ಲೂ ತನ್ನ ಪಾಲಿನ ತೆರಿಗೆ ಹಣವನ್ನು ಕಟ್ಟಲೇಬೇಕಾದ ಒತ್ತಡಕ್ಕೆ ರೈತ ಸಿಲುಕಿದ್ದ. ತೆರಿಗೆ ಭಾಗ್ಯದಲ್ಲಿ ಕಡಿಮೆಯಾಗಬಹುದೆಂದು ಕಾಯುತ್ತಿದ್ದ ಅಥವಾ ಸಶಕ್ತ ವಸಾಹತುಶಾಹಿಯ ಪೆಟ್ಟು ಅನುಭವಿಸುತ್ತಿದ್ದ.

ಆ. ರೈತವಾರಿ ಪದ್ಧತಿ, ಇಲ್ಲಿ ಕರುಣೆಗೆ ಅವಕಾಶವಿಲ್ಲ (Ryotwari: nothing benign)

ಬ್ರಿಟೀಷರು ಪರಿಚಯಿಸಿದ ರೈತವಾರಿ ತೆರಿಗೆ ಸಂಗ್ರಹ ವ್ಯವಸ್ಥೆಯ ಬಗ್ಗೆ ಸ್ವಲ್ಪ ಗೊಂದಲಗಳಿವೆ ಮತ್ತು ಅನೇಕ ತಪ್ಪು ಅಭಿಪ್ರಾಯಗಳಿವೆ. ‘ಮಾಂಸಾಹಾರಿ’ ಜಮೀನ್ದಾರಿ ತೆರಿಗೆ ಪದ್ಧತಿಗೆ ಹೋಲಿಸಿದರೆ ‘ಸಸ್ಯಾಹಾರಿ’ ರೈತವಾರಿ ಪದ್ಧತಿ ರೈತರ ‘ಹಕ್ಕುಗಳನ್ನು ಗುರುತಿಸಿದ’ ‘ಪ್ರಗತಿಪರ’ ‘ನ್ಯಾಯಸಮ್ಮತ’ ವ್ಯವಸ್ಥೆ ಎಂಬಭಿಪ್ರಾಯವನ್ನು ಅನೇಕರು ವ್ಯಕ್ತಪಡಿಸಿದ್ದಾರೆ. ಕರ್ನಾಟಕದ ಎಲ್ಲಾ ಇತಿಹಾಸಕಾರರು ಕೆ.ಎನ್.ವೆಂಕಟಸುಬ್ಬ ಶಾಸ್ತ್ರಿಯವರ ಸ್ವಾಮಿಭಕ್ತಿ ಮತ್ತು ಲಿಖಿತ ಸಮರ್ಥನೆಯನ್ನು ಸರಿಗಟ್ಟಲಾರರು. ನಮ್ಮ ಭೂಮಿಯ ಮೇಲಿನ ಬ್ರಿಟೀಷ್ ಆಳ್ವಿಕೆಯನ್ನು ಮಧ್ಯವರ್ತಿ ದೃಷ್ಟಿಕೋನದಿಂದ ಸಮರ್ಥಿಸಿಕೊಂಡ ಇತಿಹಾಸದ ಪುಸ್ತಕಗಳಲ್ಲಿ ಅವರ ಪುಸ್ತಕಗಳು ಅತಿ ಉತ್ತಮ ಉದಾಹರಣೆ.

ರೈತವಾರಿ ತೆರಿಗೆ ಪದ್ಧತಿಯನ್ನು ಪ್ರಾರಂಭಿಸಿದ್ದು ಕೊಲೋನಲ್ ರೀಡ್. ರೀಡ್ 1792ರಲ್ಲಿ ಬರ್ಮಹಲ್ ಜಿಲ್ಲೆಯ ಪ್ರಥಮ ಬ್ರಿಟೀಷ್ ಕಲೆಕ್ಟರ್ ಆಗಿದ್ದ. ತಮಿಳು ದೇಶದ ಬರ್ಮಹಲ್ ಅನ್ನು ಬ್ರಿಟೀಷರು ಮೂರನೇ ಮೈಸೂರು ಯುದ್ಧದಲ್ಲಿ ಟಿಪ್ಪು ಸುಲ್ತಾನನನ್ನು ಸೋಲಿಸಿದ ನಂತರ ವಶಪಡಿಸಿಕೊಂಡಿದ್ದರು. ಮನ್ರೋ, ರೀಡ್ ನ ಕೈಕೆಳಗೆ ಕೆಲಸ ಮಾಡಿದ್ದ. ರೈತವಾರಿ ಪದ್ಧತಿಯ ಬಗ್ಗೆ ಮನ್ರೋ ರೀಡ್ ನ ಕಿವಿಯೂದಿದನೋ ಅಥವಾ ರೀಡ್ ಮನ್ರೋನ ಕಿವಿಕಚ್ಚಿದನೋ ನಮಗೆ ಅಷ್ಟೊಂದು ಮುಖ್ಯವಲ್ಲ. ಇಲ್ಲಿ ಟಿಪ್ಪಣಿ ಮಾಡಿಕೊಳ್ಳಬೇಕಾದ ಅಂಶವೆಂದರೆ ಮೈಸೂರು ಸಾಮ್ರಾಜ್ಯದ ಭಾಗವೊಂದನ್ನು ಆಕ್ರಮಿಸಿದ ಕ್ಷಣವೇ ಬ್ರಿಟೀಷರಿಗೆ ಜಮೀನ್ದಾರಿ ತೆರಿಗೆ ಪದ್ಧತಿಯನ್ನು ಮುಂದುವರಿಸುವುದು ಸಾಧ್ಯವಿಲ್ಲ ಎನ್ನುವುದರ ಅರಿವಾಗಿತ್ತು. ಕಾರಣ ಸ್ಪಷ್ಟವಿತ್ತು. ಮೈಸೂರಿನಲ್ಲಾಗಲೇ ಹಳೆಯ ಜಮೀನ್ದಾರರು ನಿರ್ನಾಮವಾಗಿದ್ದರು. ಅವರ ನಿರ್ನಾಮದ ನಂತರ ತೆರಿಗೆ ಸಂಗ್ರಹಿಸುತ್ತಿದ್ದುದು ಮೈಸೂರು ಕಂದಾಯ ಇಲಾಖೆಯೇ ಹೊರತು ಪಾಳೇಗಾರರಲ್ಲ. ರೈತವಾರಿ ಪದ್ಧತಿಯ ರೀತಿಯಲ್ಲಿಯೇ – ಸರಕಾರ ಕೃಷಿಕರಿಂದ ನೇರವಾಗಿ ತೆರಿಗೆ ಕಟ್ಟಿಸಿಕೊಳ್ಳುವುದು, ಊರ ಪಟೇಲರ ಮತ್ತು ಶಾನುಭೋಗರ ಸಹಾಯದಿಂದ – ಒಂದು ಪದ್ಧತಿ ಅದಾಗಲೇ ರೂಢಿಯಲ್ಲಿತ್ತು. ವಾಸ್ತವದಲ್ಲಿ ಬ್ರಿಟೀಷರು ಕೊಯಮತ್ತೂರು ಜಿಲ್ಲೆಯಲ್ಲಿ ಜಮೀನ್ದಾರಿ ಪದ್ಧತಿಯನ್ನು ಜಾರಿಗೆ ತರಲು ಪ್ರಯತ್ನಿಸಿದರು. ಅದಕ್ಕೆ ತಕ್ಷಣವೇ ಪ್ರತಿರೋಧ ಎದುರಾಯಿತು. ಜಿಲ್ಲೆಯ ಗೆಜೆಟೀಯರ್ ಹೇಳುತ್ತಾರೆ – ಹಳ್ಳಿಗಳ ಭೂಮಾಲೀಕರು ಮತ್ತು ಕೃಷಿ ಕಾರ್ಮಿಕರು ಈ ಪದ್ಧತಿಯನ್ನು ವಿರೋಧಿಸಿದ್ದಕ್ಕೆ ಕಾರಣ ಭೂಮಿಯ ಮೇಲಿನ ಅವರ ಹಕ್ಕುಗಳಿಗೆ ಚ್ಯುತಿ ಬರುತ್ತದೆ ಎಂಬುದು. ಈ ಹಳೆಯ ತೆರಿಗೆ ಪದ್ಧತಿಯನ್ನೇ ಮುಂದುವರಿಸಿದ ಥಾಮಸ್ ಮನ್ರೋ ಕೆಲವು ನವೀನ ಅಂಶಗಳನ್ನು ಸೇರಿಸಿ ಬ್ರಿಟೀಷ್ ಗುರುತು ಅಚ್ಚಾಗುವಂತೆ ಮಾಡುವಲ್ಲಿ ಸಫಲನಾದ. ಉದಾಹರಣೆಗೆ ಹಿಂದಿನ ಭಾಗದಲ್ಲಿ ನೋಡಿದಂತೆ ಕೃಷಿ ತೆರಿಗೆ ಪದ್ಧತಿ ಭೂಮಿಯ ಮೇಲೆ ನಿರ್ಧರಿಸಲಾಯಿತೇ ಹೊರತು ಬೆಳೆಯ ಮೇಲಲ್ಲ. ರೈತವಾರಿ ಪದ್ಧತಿಯಲ್ಲಿ ಭೂತೆರಿಗೆಯನ್ನು ನಿರ್ಧರಿಸುವಲ್ಲಿ ಬ್ರಿಟೀಷರ ನಿರಂಕುಶ ವ್ಯಕ್ತಿತ್ವ ಎದ್ದು ಕಾಣಿಸಿತು.

ಕುರುಪ್ ಮತ್ತು ಶ್ಯಾಮ್ ಭಟ್ ಹೇಳುವಂತೆ ರೈತವಾರಿ ಪದ್ಧತಿ ಉಳುವವನೊಡನೆ ಸರಕಾರ ಮಾಡಿಕೊಂಡ ಒಪ್ಪಂದವಾಗಿರಲಿಲ್ಲ. ರೈತವಾರಿ ಪದ್ಧತಿ ಭೂಮಾಲೀಕನೊಡನೆ ಒಪ್ಪಂದ ಮಾಡಿಕೊಂಡಿತು. ಹತ್ತೊಂಬತ್ತನೇ ಶತಮಾನದ ಮೊದಲ ಭಾಗದಲ್ಲಿ ಭೂಮಿಯ ಒಡೆತನ ಪ್ರಮುಖವಾಗಿದ್ದದ್ದು ಭೂಮಾಲೀಕರ ಬಳಿ; ಸ್ವಲ್ಪ ಭಾಗ ಮಾತ್ರ ನೇರವಾಗಿ ರೈತರ ಒಡೆತನದಲ್ಲಿತ್ತು. ತುಳುನಾಡಿನ ಕೃಷಿ ಸಂಬಂಧಗಳ ಬಗ್ಗೆ ಅಧ್ಯಯನ ನಡೆಸಿದ ಚಂದ್ರಶೇಖರ ಬಿ ದಾಮ್ಲೆ ಹೇಳುತ್ತಾರೆ: “…. ಅಸ್ತಿತ್ವದಲ್ಲಿದ್ದ ಭೋಗ್ಯವನ್ನು ನಿಯಮದಡಿ ತರುವ ಮೂಲಕ ಪಟ್ಟೇದಾರರು ಮತ್ತು ಭೂಮಾಲೀಕರ ಅಂತಸ್ತನ್ನು ಮರುಸ್ಥಾಪಿಸಲಾಯಿತು. ಗುತ್ತಿಗೆದಾರ/ ಬಾಡಿಗೆದಾರರ ವಿಚಾರವನ್ನು ಇತ್ಯರ್ಥಗೊಳಿಸಲಿಲ್ಲ.” (119A) ಹಾಗಾಗಿ ರೈತವಾರಿ ಪದ್ಧತಿಯಲ್ಲಿ “ಪ್ರಗತಿಪರ” “ನ್ಯಾಯಪರ” “ರಾಜನೀತಿ”ಗಳ್ಯಾವುದೂ ಇರಲಿಲ್ಲ. ಜಮೀನ್ದಾರಿ ಪದ್ಧತಿ ಮಾಡಿದಂತೆಯೇ ಈ ರೈತವಾರಿ ಪದ್ಧತಿಯೂ ಅಸ್ತಿತ್ವದಲ್ಲಿದ್ದ ಭೂಮಾಲೀಕರ ಕಡೆಗೆ ಸ್ನೇಹಹಸ್ತ ಚಾಚಿತು; ಭಾರತದ ಇತರೆ ಭಾಗಗಳಲ್ಲಿ ಮಹಲ್ ವಾರಿ ಮತ್ತು ಮಿರಸ್ ದಾರಿ ಪದ್ಧತಿಗಳು ಮಾಡಿದಂತೆ. ತೆರಿಗೆಯಲ್ಲಿನ ಅಪಾರ ಏರಿಕೆ ರೈತರನ್ನು ಸಾಲಗಾರರನ್ನಾಗಿ ಮಾಡಿತು ಮತ್ತು ನಿಧಾನವಾಗಿ ಭೂಮಿಯು ಬಡ್ಡಿ ವ್ಯಾಪಾರಿಗಳ ಕೈಸೇರಿತು. ಮತ್ತೊಂದು ರೀತಿಯಲ್ಲಿ ಹೇಳುವುದಾದರೆ ಬಾಂಬೆ, ಮದ್ರಾಸ್ ಪ್ರಾಂತ್ಯದಲ್ಲಿ ಮತ್ತು ಮೈಸೂರು ಸಾಮ್ರಾಜ್ಯದಲ್ಲಿ ಜಾರಿಗೆ ಬಂದ ರೈತವಾರಿ ಪದ್ಧತಿ ಅರೆಊಳಿಗಮಾನ್ಯ ಪದ್ಧತಿಯ ಚಲನೆಗೆ ನೆರವಾಯಿತು.

ಥಾಮಸ್ ಮನ್ರೋ ಜೊತೆಗೆ ಹೊರಬಂದ ಮತ್ತೊಬ್ಬ ಮದ್ರಾಸ್ ಮೂಲದ ಇಂಗ್ಲೀಷ್ ತಿಮಿಂಗಲ ಆರ್. ರಿಚರ್ಡ್ಸ್ ರೈತವಾರಿ ಪದ್ಧತಿಯ ಕಾರ್ಯವೈಖರಿಯ ಬಗ್ಗೆ ಹಲವಾರು ಉಪಯುಕ್ತ ಒಳನೋಟಗಳನ್ನು ನೀಡುತ್ತಾನೆ. ಸೆಂಟ್ ಜಾರ್ಜ್ ಕೋಟೆಯೊಳಗೆ ನಡೆಯುತ್ತಿದ್ದ ಹಾರಾಟಗಳ ಬಗ್ಗೆ ಬ್ರಿಟೀಷನೊಬ್ಬ ಹೀಗೂ ಬರೆದುಬಿಡಬಹುದಾ? ಎಂಬ ಅಚ್ಚರಿ ಮೂಡಿಸುತ್ತಾನೆ: “ರೈತವಾರಿ ಪದ್ಧತಿಯ ಮೂಲೋದ್ದೇಶ ದೇಶದಿಂದ ಸಾಧ್ಯವಾದಷ್ಟು ಹೆಚ್ಚಿನ ಆದಾಯವನ್ನು ಲೂಟಿ ಮಾಡುವುದು…..ಈ ಪದ್ಧತಿಯಲ್ಲಿ ತೆರಿಗೆ ಕಟ್ಟುವುದು ವರುಷದಿಂದ ವರ್ಷಕ್ಕೆ ಕಷ್ಟವಾಗುತ್ತದೆಂಬ ಅರಿವು ನಿಧಾನಕ್ಕೆ ಆಗುತ್ತದೆ. ವ್ಯವಸ್ಥೆ ಕೊಳೆಯುವುದನ್ನು ಯಾರೂ ತಡೆಗಟ್ಟಲಾರರು.” (118)

ತಲೆತೂರಿಸಿದ ಈ ರೈತವಾರಿ ಪದ್ಧತಿ ಮತ್ತಷ್ಟು ಹೀನವಾದ ಶರಾತ್ (Sharat) ಪದ್ಧತಿಗೆ ಕೆಂಪು ಹಾಸಿನ ಸ್ವಾಗತವನ್ನು ಕೋರಿತು ಎಂಬುದರ ಕುರಿತು ಕುರುಡಾಗಲು ಸಾಧ್ಯವಿಲ್ಲ.

ರೈತವಾರಿ ಪದ್ಧತಿಯ ಮೂಲಕ ಊಳಿಗಮಾನ್ಯತೆಯ ಕಡೆ ಸ್ನೇಹ ಹಸ್ತ ಚಾಚಲಾಯಿತು. ಮಾಜಿ ಭೂಮಾಲೀಕರ ಬೆಳವಣಿಗೆಯ ಜೊತೆಗೆ ಹೊಸ ಬಡ್ಡಿವ್ಯಾಪಾರಿ ಭೂಮಾಲೀಕರು ತಲೆಎತ್ತಿದರು, ಸ್ವಾರ್ಥದ ಪಕ್ಕೆಯಿಂದ.

ಕಟಾವಿನ ಮೊದಲೇ ಸರಕಾರಕ್ಕೆ ಹಣ ಪಾವತಿಸಬೇಕಾದ ಅನಿವಾರ್ಯತೆಯಿಂದ ರೈತರ ಮೇಲಾದ ಹೊರೆಯ ಬಗ್ಗೆ ಸಿದ್ಧಲಿಂಗ ಸ್ವಾಮಿ ವಿವರಿಸುತ್ತಾರೆ. ಹಣ ತುಂಬಲು ರೈತರು ಸಾಹುಕಾರರ ಮೊರೆ ಹೋದರು ಮತ್ತು ಸ್ವಲ್ಪ ಸಮಯದಲ್ಲೇ ಈ ಬಡ್ಡಿ ವ್ಯಾಪಾರಿಗಳ ಬಳಿ ದೊಡ್ಡ ಸಾಲಗಾರರಾಗಿಬಿಟ್ಟರು. ರೈತರು ತಮ್ಮ ‘ಹುಜೂರ್’ (ಮೈಸೂರು ರಾಜ) ಬಳಿಗೆ ಗುಂಪಿನಲ್ಲೋಗಿ ದೂರು ನೀಡಿದರು. ವ್ಯಂಗ್ಯವೆಂದರೆ 1826ರಲ್ಲಿ ಮೈಸೂರು ಪೀಠದ ಮೇಲೆ ಆಸೀನರಾಗಿದ್ದ ಇವರ ‘ಜೀ ಹುಜೂರ್’ ಬಡ್ಡಿವ್ಯಾಪಾರಿಗಳ ಬಳಿ 4 ಲಕ್ಷ ಕೆಪಿ (ಕಂತಾರೇಯ ಪಗೋಡ) ಸಾಲ ಮಾಡಿಕೊಂಡಿದ್ದ! (119)

ಕರಾವಳಿಯಲ್ಲಿನ ಬೆಳವಣಿಗೆಗಳು ಇದೇ ರೀತಿಯಲ್ಲಿದ್ದವು ಎಂದು ತಿಳಿಸುತ್ತಾರೆ ಮಾಲತಿ ಕೆ ಮೂರ್ತಿ. 1800ರ ಸ್ಟೋಕ್ಸ್ ವರದಿಯ ಆಧಾರದಲ್ಲಿ ಮಾಲತಿ ನಿರ್ದಿಷ್ಟವಾಗಿ ಗೌಡ ಸಾರಸ್ವತರ ಬಗ್ಗೆ ಬರೆಯುತ್ತಾರೆ: “ಜಿಲ್ಲೆಗೆ ವರ್ತಕರಾಗಿ ಬಂದ ಜನರಿಗೆ ಭೂಮಿ ಖರೀದಿಸುವುದು ಲಾಭದಾಯಕ ಮತ್ತು ಗೌರವ ತರುವಂತದು ಎನ್ನಿಸಿತು. ಭೂಮಿಯನ್ನು ಹೊಂದಿದ್ದರೆ ನಿರ್ದಿಷ್ಟ ಮೊತ್ತವನ್ನು ಪಾವತಿಸಿದ ನಂತರ ಒಟ್ಟು ಉತ್ಪಾದನೆಯ ಬಹುಭಾಗವನ್ನು ಸಂತಸದಿಂದನುಭವಿಸಬಹುದೆಂದು ತಿಳಿದುಕೊಂಡರು. ಹಾಗಾಗಿ ಭೂಮಿ ಖರೀದಿಸುವುದು ಅವರಿಗೆ ಪ್ರಿಯವಾದ ಕೆಲಸವಾಯಿತು. ಸರಕಾರೀ ಕೆಲಸದಲ್ಲಿರುವವರೂ ಭೂಮಿ ಖರೀದಿಸುವ ಸ್ಪರ್ಧೆಯ ಮುಂಚೂಣಿಯಲ್ಲಿದ್ದರು. ಈ ಪ್ರಕ್ರಿಯೆಯಲ್ಲಿ ಅರಿವಿಲ್ಲದ ರೈತರು ಹೊರದೂಡಲ್ಪಟ್ಟರು; ಭೂಮಿಯ ಹೆಚ್ಚಿನ ಭಾಗ ಕೃಷಿಕ ವರ್ಗದ ಕೈಯಿಂದ ವರ್ತಕ ವರ್ಗ ಮತ್ತು ಇತರೆ ವರ್ಗಗಳ ಕೈಸೇರಿತು.” (120)

ರೈತವಾರಿ ಪದ್ಧತಿ ಪೀಡಿಸುವ ಪದ್ಧತಿ. ಅದರಲ್ಲಿ ಕರುಣೆಯ ಅಂಶವಿರಲಿಲ್ಲ. ಅದೇ ರೀತಿ ಥಾಮಸ್ ಮನ್ರೋನ ಬಗ್ಗೆ ‘ಗೌರವಾನ್ವಿತ’ ಅಂಶಗಳಿಲ್ಲ. ಅಡಿಯಾಳಾಗಿದ್ದ ಭಾರತದ ರೈತರ ಮೇಲೆ ಯುದ್ಧ ಸಾರಿದ್ದ ಬ್ರಿಟೀಷ್ ‘ಝಾರ್’ ಆಗಿದ್ದನಾತ. (ಝಾರ್/czar: ರಷ್ಯಾದ ಚಕ್ರವರ್ತಿ) 
 
ಮುಂದಿನ ವಾರ :
ಕೃಷಿಗೆ ಲಕ್ವ ಹೊಡೆದದ್ದು ಭಾಗ 2

ಏಪ್ರಿ 12, 2016

ಸಿದ್ಧು ಕೆಲಸ ಸಲೀಸಾಗಿಸಲು ಯಡ್ಡಿ ಪ್ರವೇಶ!

ಡಾ. ಅಶೋಕ್. ಕೆ. ಆರ್
12/04/2016
ಕರ್ನಾಟಕ ರಾಜಕೀಯದಲ್ಲಿ ಎಲ್ಲವೂ ಒಂದು ಸುತ್ತು ತಿರುಗಿ ನಿಂತಿದೆ. ಲೋಕಾಯುಕ್ತದವರು ಬಿಜೆಪಿ ಸರಕಾರದ ವ್ಯಕ್ತಿಗಳ ವಿರುದ್ಧ ದಾಖಲಿಸಿಕೊಂಡಿದ್ದ ಪ್ರಕರಣಗಳು, ನಡೆಸಿದ ತನಿಖೆಗಳ ಆಧಾರದಲ್ಲಿ ಆಗ ವಿರೋಧ ಪಕ್ಷದಲ್ಲಿದ್ದ ಕಾಂಗ್ರೆಸ್ಸಿನ ಸಿದ್ಧರಾಮಯ್ಯ ಬಳ್ಳಾರಿಯವರೆಗೆ ಪಾದಯಾತ್ರೆ ನಡೆಸಿದ್ದರು. ಇದೊಂದು ಸಂದರ್ಭ ಬಿಟ್ಟರೆ ಕಾಂಗ್ರೆಸ್ ಸಶಕ್ತ ವಿರೋಧ ಪಕ್ಷವಾಗಿ ಕೆಲಸ ನಿರ್ವಹಿಸಿದ್ದೇ ಕಡಿಮೆ. ಒಂದು ಹಂತದವರೆಗೆ ವಿರೋಧ ಪಕ್ಷವಾಗಿ ಕೆಲಸ ಮಾಡಿದ್ದು ಜೆ.ಡಿ.ಎಸ್ಸಿನ ಕುಮಾರಸ್ವಾಮಿ. ನಂತರದ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಲು ಬಿಜೆಪಿ ಸರಕಾರದ ಭ್ರಷ್ಟ ಕೆಲಸಗಳ ಪಾಲು ಒಂದತ್ತು ಪರ್ಸೆಂಟ್ ಇರಬಹುದಷ್ಟೇ. ಉಳಿದಂತೆ ಕಾಂಗ್ರೆಸ್ ಅಧಿಕಾರದ ಗದ್ದುಗೆ ಹಿಡಿದು ಬಿಜೆಪಿ ಅಧಿಕಾರ ಕಳೆದುಕೊಳ್ಳುವಂತೆ ಮಾಡಿದ್ದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ. ಯಾವ ಲೋಕಾಯುಕ್ತದ ವರದಿಯ ಆಧಾರದಲ್ಲಿ ಭ್ರಷ್ಟರನ್ನು ಸೋಲಿಸಿ ಎಂದು ಸಿದ್ಧು ಮತ ಕೇಳಿದರೋ ಇವತ್ತು ಅದೇ ಸಿದ್ಧು ಲೋಕಾಯುಕ್ತವನ್ನ ಶಾಶ್ವತವಾಗಿ ಇಲ್ಲವಾಗಿಸಲು ಪಣ ತೊಟ್ಟು ನಿಂತಿದ್ದಾರೆ. ಅಂದು ಬಿಜೆಪಿಯ ಸೋಲಿಗೆ ಅದೇ ಪಕ್ಷದಿಂದ ಮುಖ್ಯಮಂತ್ರಿಯಾಗಿದ್ದ ಯಡ್ಡಿಯೇ ಕಾರಣವಾಗಿದ್ದರೆ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಸೋಲಲು ಅದೇ ಪಕ್ಷದಿಂದ ಮುಖ್ಯಮಂತ್ರಿಯಾಗಿರುವ ಸಿದ್ಧು ಕಾರಣವಾಗುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ. ಅದಕ್ಕೆ ಪೂರಕವಾಗುವಂತೆ ಬಿಜೆಪಿಯ ಹೈಕಮಾಂಡ್ ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ಯಡಿಯೂರಪ್ಪನವರನ್ನು ನೇಮಿಸಿದೆ. ಭ್ರಷ್ಟ ಕಾಂಗ್ರೆಸ್ ಸರಕಾರ ತೊಲಗಿಸುವುದೇ ನನ್ನ ಗುರಿ ಎಂದು ಕೂಗುವ ಸರದಿಯೀಗ ಯಡಿಯೂರಪ್ಪನವರದು!

ಕಳೆದ ಸಾಲಿನಲ್ಲಿ ಎಷ್ಟೆಲ್ಲ ಭ್ರಷ್ಟಾಚಾರದ ಆರೋಪಗಳನ್ನು ಹೊತ್ತಿದ್ದಾಗ್ಯೂ ಬಿಜೆಪಿ ಸೋಲುವುದು ಕಷ್ಟವಿತ್ತು. ಕಾರಣ, ಕಾಂಗ್ರೆಸ್ಸಿನವರಿಂದ ಅಂತಹ ಹೇಳಿಕೊಳ್ಳುವಂತಹ ಚಟುವಟಿಕೆಯಿರಲಿಲ್ಲ. ಬಿಜೆಪಿಗೆ ದೊಡ್ಡ ಹೊಡೆತ ಕೊಟ್ಟಿದ್ದು ಭ್ರಷ್ಟಾಚಾರದ ಆರೋಪದ ಮೇಲೆ ಅಧಿಕಾರ ಕಳೆದುಕೊಂಡು ಜೈಲಿಗೂ ಹೋಗಿಬಂದಿದ್ದ ಯಡಿಯೂರಪ್ಪ ಬಿಜೆಪಿ ತೊರೆದು ಕೆಜೆಪಿ ಸೇರಿದ್ದು, ತಮ್ಮ ಕಟ್ಟಾ ಬೆಂಬಲಿಗರನ್ನೂ ಕೆಜೆಪಿಗೆ ಎಳೆದುಕೊಂಡು ಹೋಗಿದ್ದು. ಜನರಿಗೆ ಭ್ರಷ್ಟಾಚಾರದ ಆರೋಪಗಳಿಗಿಂತ, ಕಣ್ಣಿಗೆ ರಾಚುವ ಭ್ರಷ್ಟಾಚಾರಕ್ಕಿಂತ ಜಾತಿ ಪ್ರೀತಿಯೇ ಮುಖ್ಯ ಎನ್ನುವುದೂ ಕಳೆದ ಚುನಾವಣೆಯಲ್ಲಿ ಸಾಬೀತಾಯಿತು. ಕೆಜೆಪಿ ಬಿಜೆಪಿಯ ಮತಗಳನ್ನು ಕಿತ್ತುಕೊಂಡು ಕಾಂಗ್ರೆಸ್ ಗೆಲುವು ಕಾಣುವುದರಲ್ಲಿ ಪ್ರಮುಖ ಪಾತ್ರ ವಹಿಸಿತು. ಯಡಿಯೂರಪ್ಪ ಬಿಜೆಪಿ ತೊರೆಯದೇ ಹೋಗಿದ್ದರೆ ಬಿಜೆಪಿಯೇ ಮತ್ತೆ ಅಧಿಕಾರವಿಡಿಯುವ ಎಲ್ಲಾ ಸಾಧ್ಯತೆಗಳೂ ಇತ್ತು. ಇದರ ಅರಿವು ಬಿಜೆಪಿ ಮುಖಂಡರಿಗೂ ಇತ್ತಲ್ಲ. ಲೋಕಸಭಾ ಚುನಾವನೆಯೊತ್ತಿಗೆ ಯಡಿಯೂರಪ್ಪನವರನ್ನು ಬಿಜೆಪಿಗೆ ಕರೆತರುವ ಸಕಲ ಪ್ರಯತ್ನಗಳೂ ನಡೆದವು. ಒಂದೆಡೆ ಬಿಜೆಪಿ ಕೇಂದ್ರ ಮಟ್ಟದಲ್ಲಿ ಯುಪಿಎ ಸರಕಾರದ ಭ್ರಷ್ಟಾಚಾರದ ವಿರುದ್ಧ ದೊಡ್ಡ ದನಿಯಲ್ಲಿ ಮಾತನಾಡುತ್ತಿದ್ದರೆ ಇಲ್ಲಿ ಕರ್ನಾಟಕದಲ್ಲಿ ಭ್ರಷ್ಟಾಚಾರದ ಆರೋಪ ಹೊತ್ತ ಯಡ್ಡಿಯನ್ನ ಮತ್ತೆ ಪಾರ್ಟಿಗೆ ಸೇರಿಸಿಕೊಳ್ಳಲು ತುದಿಗಾಲಲ್ಲಿ ನಿಂತಿತ್ತು. ಭ್ರಷ್ಟಾಚಾರ, ಅಭಿವೃದ್ಧಿಯ ಮಾತುಗಳಿಗಿಂತ ಜಾತಿ ಸಮೀಕರಣವೇ ಮುಖ್ಯ ಎಂಬರಿವು ಬಿಜೆಪಿಯವರಿಗೂ ಇತ್ತು, ಆರಕ್ಕೇರದ ಮೂರಕ್ಕಿಳಿಯದ ಜೆ.ಡಿ.ಎಸ್ಸಿನಂತೆ ಆಗುವುದು ಒಮ್ಮೆ ಅಧಿಕಾರದ ಸವಿ ಕಂಡಿದ್ದ ಯಡ್ಡಿಗೂ ಬೇಡವಾಗಿತ್ತು. ಯಡ್ಡಿಯ ಬಿಜೆಪಿ ಪುನರ್ ಪ್ರವೇಶ ಕರ್ನಾಟಕದಲ್ಲಿ ಬಿಜೆಪಿಯ ಲೋಕಸಭಾ ಗೆಲುವನ್ನು ಮತ್ತಷ್ಟು ಸುಗಮವಾಗಿಸಿತು. ಕೇಂದ್ರ ಸಚಿವ ಸಂಪುಟಕ್ಕೆ ಸೇರುವ ಅರ್ಹತೆಗಳನ್ನು ಹೊಂದಿದ್ದಾಗ್ಯೂ ಯಡ್ಡಿಯನ್ನು ಸಂಪುಟಕ್ಕೆ ಸೇರಿಸಿಕೊಳ್ಳದೇ ಇದ್ದುದಕ್ಕೆ ಅವರ ಮೇಲಿನ ಭ್ರಷ್ಟಾಚಾರ ಆರೋಪಗಳೇ ಕಾರಣವೆಂದರೆ ಸುಳ್ಳಲ್ಲ. ಮತಕ್ಕೆ ಬೇಕಿದ್ದ ಯಡ್ಡಿ ಸಂಪುಟಕ್ಕೆ ಬೇಡವಾದರು. ಪಕ್ಷದಲ್ಲೊಂದು ಹುದ್ದೆಯನ್ನು ನೀಡಿದರಾದರೂ ಅವರಿಗದು ಬೇಕಿರಲಿಲ್ಲ. ಸಂಪುಟ ಸ್ಥಾನ ಸಿಗದಿದ್ದರಷ್ಟೇ ಹೋಯ್ತು ಮತ್ತೆ ಕರ್ನಾಟಕದ ಬಿಜೆಪಿ ಅಧ್ಯಕ್ಷನಾಗುವ ಆಸೆಯನ್ನು ಬಹಿರಂಗವಾಗಿಯೇ ವ್ಯಕ್ತಪಡಿಸಿದ್ದರು. ಕಾಂಗ್ರೆಸ್ಸಿನ ಹೈಕಮಾಂಡ್ ಮನಸ್ಥಿತಿಯನ್ನು ಹೀನಾಮಾನವಾಗ ಟೀಕಿಸುತ್ತಿದ್ದ ಬಿಜೆಪಿಯಲ್ಲೀಗ ಹೈಕಮಾಂಡ್ ಪರಿಸ್ಥಿತಿ ಜೋರಾಗಿಯೇ ಇದೆಯಲ್ಲವೇ!

ಹೈಕಮಾಂಡಿನವರು ಅಳೆದು ತೂಗಿ ನೋಡಿದ್ದಾರೆ, ಯಾವ ಲೆಕ್ಕಾಚಾರದಿಂದ ನೋಡಿದರೂ ರಾಜ್ಯ ಬಿಜೆಪಿಗೆ ಯಡ್ಡಿಯೇ ಸೂಕ್ತವಾಗಿ ಕಂಡಿದ್ದಾರೆ. ಲಿಂಗಾಯತರ ಮತಗಳನ್ನು ಸೆಳೆಯುವುದಕ್ಕೆ ಯಡ್ಡಿಯೇ ಬಿಸ್ಟು ಎನ್ನುವುದವರಿಗೆ ಅರ್ಥವಾಗಿದೆ. ಭ್ರಷ್ಟಾಚಾರದ ಆರೋಪಗಳು, ಆಡಳಿತದಲ್ಲಿದ್ದಾಗ ನಡೆಸಿದ ಅನಾಚಾರಗಳನ್ನೆಲ್ಲ ಮರೆತುಬಿಡಲು ಜನರಿಗೆ ಐದು ವರುಷ ಸಾಕು, ಕಾರಣ ಆ ಐದು ವರುಷದ ಹೊಸ ಆಡಳಿತದಲ್ಲಿ ಹೊಸ ಹೊಸ ಅನಾಚಾರಗಳನ್ನು ಜನರು ಅನುಭವಿಸಿರುತ್ತಾರೆ. ಮತಬ್ಯಾಂಕಿನ ಆಧಾರದಲ್ಲಿ ಲಿಂಗಾಯತ ಸಮುದಾಯ ಸಶಕ್ತವಾಗಿದೆ. ಬಿಜೆಪಿಗೆ ಲಿಂಗಾಯತರ ಬಹುತೇಕ ಮತಗಳು ಬೀಳುವುದರಲ್ಲಿ ಹೆಚ್ಚಿನ ಸಂಶಯ ಬೇಡ. ಇದು ಮುಂದಿನ ಚುನಾವಣೆಯಲ್ಲಿ ಬಿಜೆಪಿ ಗೆಲುವಿಗೆ ಸಹಾಯ ಮಾಡಬಹುದು. ಜೊತೆಗೆ ಹೇಳಿಕೊಳ್ಳುವಂತಹ ಕೆಲಸ ಮಾಡದ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರದ ನಡೆನುಡಿಗಳೂ ಕೂಡ ಬಿಜೆಪಿಯ ಗೆಲುವಿಗೆ ಪೂರಕವಾಗಿ ಕೆಲಸ ಮಾಡುತ್ತದೆ, ಉಳಿದಿರುವ ಎರಡು ವರುಷಗಳಲ್ಲೂ ಕಾಂಗ್ರೆಸ್ ಇದೇ ರೀತಿಯ ಕೆಲಸ ಮಾಡಿದರೆ ಕಾಂಗ್ರೆಸ್ ಸೋಲುವುದರಲ್ಲಿ ಯಾವುದೇ ಅನುಮಾನ ಬೇಡ. ಒಂದು ಪ್ರಬಲ ಪ್ರಾದೇಶಿಕ ಪಕ್ಷವಾಗಿ ಬೆಳೆಯಬಹುದಾದ ಎಲ್ಲಾ ಸಾಧ್ಯತೆಗಳಿದ್ದ ಜೆ.ಡಿ.ಎಸ್, ಅಪ್ಪ ಮಕ್ಕಳ ಅಹಂನಲ್ಲಿ ಮಂಡ್ಯ ಮತ್ತು ಹಾಸನ ಜಿಲ್ಲೆಯ ಒಕ್ಕಲಿಗರ ಪ್ರಾಬಲ್ಯವಿರುವ ಪ್ರದೇಶಗಳಲ್ಲಷ್ಟೇ ರಾಷ್ಟ್ರೀಯ ಪಕ್ಷವಾಗಿ ಉಳಿದುಬಿಟ್ಟಿದೆ. ಅಲ್ಲೂ ತನ್ನ ನೆಲೆಯನ್ನು ಕಳೆದುಕೊಳ್ಳುವುದಕ್ಕೆ ಹೆಚ್ಚಿನ ಸಮಯದ ಅವಶ್ಯಕತೆಯಿಲ್ಲ ಎನ್ನುವುದರರಿವು ಆ ಪಕ್ಷದ ಮುಖಂಡರಿಗಿನ್ನೂ ಬಂದಿಲ್ಲ. ಬಿಜೆಪಿಯ ಸರಾಗ ಗೆಲುವಿಗೆ ಅಡ್ಡಗಾಲಾಕುವ ಸಾಧ್ಯತೆ ಇರುವುದೂ ಯಡಿಯೂರಪ್ಪನವರಿಗೇ! ಬಿಜೆಪಿಗೆ ಲಿಂಗಾಯತರ ಮತಗಳು ಕ್ರೋಡೀಕರಣವಾಗಿ ಮತ್ತೊಮ್ಮೆ ಯಡಿಯೂರಪ್ಪ ಮುಖ್ಯಮಂತ್ರಿಯಾಗಿಬಿಡಬಹುದು ಎನ್ನುವ ಯೋಚನೆ ಉಳಿದ ಜಾತಿಗಳ ಮತಗಳ ಕ್ರೋಡೀಕರಣಕ್ಕೂ ಕಾರಣವಾಗುತ್ತದೆ ಎನ್ನುವುದನ್ನು ಮರೆಯಬಾರದು. ಹಂಚಿ ಹೋಗಬಹುದಾದ ಅಹಿಂದ ಮತಗಳು, ಜೆ.ಡಿ.ಎಸ್ಸಿಗೆ ಚೂರು ಪಾಲು ಕೊಡುತ್ತಿದ್ದ ಮುಸ್ಲಿಂ ಮತಗಳು ಬಿಜೆಪಿಯ ಸೋಲಿನ ಸಲುವಾಗಿ ಇನ್ನೊಂದ್ಸಲ ಸಿದ್ಧು ಬರ್ಲಿ ಬಿಡಿ ಎಂದು ಕಾಂಗ್ರೆಸ್ಸಿಗೇ ಮತವಾಕಿಬಿಡಬಹುದು! ಚುನಾವಣೆ ಇನ್ನೂ ದೂರವಿರುವಾಗ ಇವೆಲ್ಲವೂ ಸದ್ಯಕ್ಕೆ ಲೆಕ್ಕಾಚಾರಗಳಷ್ಟೇ ಬಿಡಿ! ಇನ್ನೆರಡು ವರುಷದ ಘಟನಾವಳಿಗಳ ಮೇಲೆ ಮುಂದಿನ ಚುನಾವಣೆಯ ಭವಿಷ್ಯ ನಿರ್ಧರಿತವಾಗುತ್ತೆ. ಕಳೆದ ಮೂರು ವರ್ಷದಿಂದ ಬಿಜೆಪಿ ಸಶಕ್ತ ವಿರೋಧ ಪಕ್ಷದಂತೆ ಕಾರ್ಯನಿರ್ವಹಿಸಿದ್ದು ಧರ್ಮಾಧಾರಿತ ಸಂಗತಿಗಳಿಗೆ ಸಂಬಂಧಪಟ್ಟಂತೆ ಮಾತ್ರ. ಯಡ್ಡಿಯ ನೇತೃತ್ವದಲ್ಲಾದರೂ ಬಿಜೆಪಿ ವಿಷಯಾಧಾರಿತ ಸಂಗತಿಗಳನ್ನೆತ್ತಿಕೊಂಡು ಆಡಳಿತ ಪಕ್ಷಕ್ಕೆ ಬಿಸಿ ಮುಟ್ಟಿಸುವ ಕೆಲಸ ಮಾಡುತ್ತ ಬಿಜೆಪಿ ಸಶಕ್ತ ವಿರೋಧ ಪಕ್ಷವಾಗಿಯೂ ಕೆಲಸ ಮಾಡಬಲ್ಲದು ಎನ್ನುವುದನ್ನು ನಿರೂಪಿಸಲಿ.

ಏಪ್ರಿ 8, 2016

ಮೇಕಿಂಗ್ ಹಿಸ್ಟರಿ: ಅಧ್ಯಾಯ 3 - ಜನಸಮೂಹದ ಮೇಲೆ ವಸಾಹತುಶಾಹಿ ಮಾಡಿದ ಪರಿಣಾಮ

saketh rajan
ಸಾಕೇತ್ ರಾಜನ್
ಕನ್ನಡಕ್ಕೆ: ಡಾ. ಅಶೋಕ್. ಕೆ. ಆರ್
08/04/2016

ಹಿಂದಿನ ಅಧ್ಯಾಯದಲ್ಲಿ ಬ್ರಿಟೀಷ್ ವಸಾಹತುಶಾಹಿ ಕರ್ನಾಟಕದ ಆಳುವ ವರ್ಗಗಳ ಮೇಲುಂಟು ಮಾಡಿದ ಪರಿಣಾಮಗಳನ್ನು ನೋಡಿದೆವು. ಈಗ ಜನಸಮೂಹದ ಮೇಲೆ ವಸಾಹತುಶಾಹಿ ಉಂಟುಮಾಡಿದ ಪರಿಣಾಮವನ್ನು ನೋಡೋಣ. ಸಾಮಾಜಿಕ ಜೀವನದ ವಿವಿಧ ವರ್ಗಗಳ ಮೇಲುಂಟು ಮಾಡಿದ ಪರಿಣಾಮ ಮತ್ತು ಹೇಗೆ ವಸಾಹತು ತನ್ನಾಡಳಿತದ ಮೊದಲ ಕೆಲ ದಶಕಗಳಲ್ಲಿ ಮುನ್ನಡೆಯನ್ನು ಹಿನ್ನಡೆಯಾಗಿಸಿತು ಮತ್ತು ವಸಾಹತುಶಾಹಿ ಪೂರ್ವದ ದಿನಗಳ ಮುನ್ನಡೆಯನ್ನು ಉಲ್ಟಂಪಲ್ಟ ಮಾಡಿತು ಎನ್ನುವುದನ್ನು ಗಮನಿಸೋಣ.

1. ಸೈನ್ಯದ ವಿಸರ್ಜನೆ
(Dissolution of the Army)
ವಸಾಹತಿನ ಪ್ರಭಾವಳಿ ಬೆಳಗಲಾರಂಭಿಸಿದಾಗಾದ ಮೊದಲ ಮತ್ತು ಕಣ್ಣಿಗೆ ರಾಚಿದ ಪರಿಣಾಮವೆಂದರೆ ಶೀಘ್ರವಾಗಿ ಸೈನ್ಯವನ್ನು - ಊಳಿಗಮಾನ್ಯ ದೊರೆಗಳಿಗಿಂತ ಹೆಚ್ಚಾಗಿ ಮೈಸೂರಿನದ್ದು – ಭಗ್ನಗೊಳಿಸಿದ್ದು. ಈ ಸೈನ್ಯವನ್ನು ವಿಸರ್ಜಿಸಲು ತೋರಿಸಿದ ಅತ್ಯಾತುರಕ್ಕೆ ಕಾರಣ ಕಳೆದ ನಾಲ್ಕು ವರ್ಷಗಳಿಂದ ಇದೇ ಸೈನ್ಯ, ವಸಾಹತು ವಿರೋಧಿ ಹೋರಾಟದ ಮುಂಚೂಣಿಯಲ್ಲಿತ್ತು. ಬ್ರಿಟೀಷರಿಗೆ ಪೆಟ್ಟು ಕೊಡಲು ಮೈಸೂರು ಸೈನ್ಯವೇ ಕೇಂದ್ರ ಸಂಸ್ಥೆಯಾಗಿತ್ತು. ಅದಕ್ಕೆ ತಕ್ಕ ಸಾಮರ್ಥ್ಯವಿತ್ತು, ಆಂತರಿಕ ಒಗ್ಗಟ್ಟು ಮತ್ತು ವಸಾಹತು ವಿರೋಧಿ ಅಸ್ತಿತ್ವಕ್ಕೆ ಬೇಕಾದ ನಿಯಂತ್ರಿತ ಕ್ರಮಾಗತ ವ್ಯವಸ್ಥೆ (Hierarchy) ಈ ಸಾಮರ್ಥ್ಯಕ್ಕೆ ಕಾರಣ. ಟಿಪ್ಪುವಿನ ಸೋಲಿನ ನಂತರವೂ ಹೋರಾಟ ಮುಂದುವರೆಯುವ ಸಾಧ್ಯತೆ ಇತ್ತು. ಹಾಗಾಗಿ ಸೈನ್ಯವನ್ನು ಒಡೆದುಹಾಕುವುದು ಸುಲ್ತಾನನ ಸಾವಿನ ನಂತರ ಬ್ರಿಟೀಷರು ಮಾಡಬೇಕಿದ್ದ ಮೊದಲ ಕೆಲಸವಾಗಿತ್ತು.

ಟಿಪ್ಪು ಸುಲ್ತಾನನ ಸೈನ್ಯದಲ್ಲಿ ಸುಮಾರು 1.4 ಲಕ್ಷ ಜನರಿದ್ದರು. (107) ಇದನ್ನು ವಿಸರ್ಜಿಸಿದ ನಂತರ ಮೈಸೂರು ರಾಜನ ಬಳಿ ಉಳಿದ ಜನರ ಸಂಖೈ ಕೇವಲ ಹನ್ನೆರಡು ಸಾವಿರ. ಟಿಪ್ಪುವಿನ ಕಾಲದಲ್ಲಿ ಕಂದಚಾರ ಸೈನ್ಯದಲ್ಲಿ 1,80,000 ಜನರಿದ್ದರು. (108) ಇದನ್ನೂ ವಿಸರ್ಜಿಸಲಾಯಿತು. ಅವರು ಗಲಭೆಗೆ ಕಾರಣವಾಗಿಬಿಡಬಹುದು ಎಂಬ ಭಯದಿಂದ ಕೈಗೊಂಬೆ ಸರಕಾರ ಮೊದಲ ವರ್ಷದ ಆಳ್ವಿಕೆಯಲ್ಲಿ ಇಪ್ಪತ್ತು ಸಾವಿರ ಜನರನ್ನು ಉಳಿಸಿಕೊಂಡಿತ್ತು. (109)

ಸೈನ್ಯವನ್ನು ಛಿದ್ರಗೊಳಿಸುವ ಕಾರ್ಯ ವಹಿಸಿದ್ದು ಲೆಫ್ಟಿನೆಂಟ್ ಕೊಲೊನಲ್ ಕ್ಲೋಸ್. ಕ್ಲೋಸ್ ನಂತರ ಒಡೆಯರ್ ಅರಮನೆಯ ರಕ್ಷಿತ ಕೊಠಡಿಯಲ್ಲಿ ರೆಸಿಡೆಂಟರಾಗಿ ಕಾರ್ಯನಿರ್ವಹಿಸಿದರು. ಕಮೀಷನರರೊಬ್ಬರಿಗೆ ಬರೆದ ಪತ್ರದಲ್ಲಿ ಈ ಛಿದ್ರಗೊಳಿಸುವ ಪ್ರಕ್ರಿಯೆಯನ್ನು ಹೇಗೆ ಸಂಭ್ರಮದ ವಾತಾವರಣದಲ್ಲಿ ಮತ್ತು ಹುಚ್ಚು ವಸಾಹತು ಹೆಮ್ಮೆಯಿಂದ ಮಾಡಲಾಯಿತು ಎನ್ನುವುದನ್ನು ವಿವರಿಸುತ್ತಾನೆ: “ತನ್ನ ಸರಕಾರದ ವಿವಿಧ ಇಲಾಖೆಗಳಲ್ಲಿ ಬಲಿಷ್ಠ ಮುಸಲ್ಮಾನರನ್ನು ಟಿಪ್ಪು ನೇಮಿಸಿದ್ದನ್ನು ನಿರಾಕರಿಸಲು ಆಗುವುದಿಲ್ಲ, ಆದರೆ ಅವನ ಆಳ್ವಿಕೆಯ ವಿಶೇಷವೆಂದರೆ ಎಲ್ಲಾ ಅಧಿಕಾರವನ್ನು ತನ್ನ ಕೈಯಲ್ಲೇ ಇಟ್ಟುಕೊಳ್ಳುತ್ತಿದ್ದ ಮತ್ತು ವಂಶಪಾರಂಪರ್ಯಕ್ಕೆ ಅಥವಾ ಒಂದೇ ಕಛೇರಿಯಲ್ಲಿ ತಳವೂರಿಬಿಡುವುದಕ್ಕೆ ಅವಕಾಶ ಕೊಡುತ್ತಿರಲಿಲ್ಲ…… ಪ್ರಮುಖ ಕಛೇರಿಗಳಲ್ಲಿದ್ದ ವ್ಯಕ್ತಿಗಳು ಅಧಿಕಾರ ಚಲಾಯಿಸುತ್ತಿದ್ದುದರ ಬಗ್ಗೆ ಅನುಮಾನ ಬೇಡ ಮತ್ತಾ ಅಧಿಕಾರದಿಂದ ಅವರು ಸ್ವಲ್ಪ ಪ್ರಭಾವಶಾಲಿಗಳೂ ಆಗಿದ್ದರು. ಆದರಿವರಲ್ಲಿ ಎಷ್ಟು ಜನ ಉಳಿದಿದ್ದಾರೆ? ಬಹರುದ್ದೀನ್ ಶ್ರೀರಂಗಪಟ್ಟಣದಲ್ಲಿ ಹತನಾದ. ಬೆಂಕಿ ನವಾಬ ಸಿದ್ದೇಶ್ವರದಲ್ಲಿ ಸೋತ. ಸೈಯದ್ ಸಾಹಿಬ್, ಮೀರ್ ಸಾದಿಕ್ ಮತ್ತು ಸೈಯದ್ ಗಫರ್ ಶ್ರೀರಂಗಪಟ್ಟಣದ ಬಿರುಗಾಳಿಯಲ್ಲಿ ಉರುಳಿಹೋದರು. ಪೂರ್ಣಯ್ಯ ನಮ್ಮ ಇಷ್ಟಾನಿಷ್ಟದ ಮೇಲೆ ನಿಂತಿದ್ದಾರೆ. ಕಮ್ರುದ್ದೀನ್ ನಮ್ಮ ಔದಾರ್ಯದ ಮೇಲಿದ್ದಾರೆ ಮತ್ತು ನಮ್ಮ ಭಕ್ತಮಂಡಳಿಯವರಾಗಿದ್ದಾರೆ.”(110)

ಕಮ್ರುದ್ದೀನ್ ಗೆ ಗುರ್ರಂಕೊಂಡದಲ್ಲಿ ಜಾಗೀರುಗಳನ್ನು ಉಡುಗೊರೆಯಾಗಿ ನೀಡಲಾಗಿತ್ತು: ಕಂಪನಿಯಿಂದೊಂದು, ಮತ್ತೊಂದು ನಿಜಾಮರಿಂದ. ‘ಮೈಸೂರು ಸೈನ್ಯದ ಮುಖ್ಯ ಕಮಾಂಡರ್’ ಶರತ್ತಿಲ್ಲದೆ ಶರಣಾಗಲು 2000 ಪೌಂಡ್ ನೀಡಲಾಗಿತ್ತು ಎಂದು ಮಾರ್ಕ್ಸ್ ದಾಖಲಿಸುತ್ತಾರೆ. ಮಾರ್ಕ್ಸ್ ಹೇಳುತ್ತಿರುವುದು ವಿದ್ರೋಹಕ್ಕಾಗಿ ಸಾಯಿಸಲಾದ ಮೀರ್ ಸಾದಿಕ್ ಬಗ್ಗೆಯಾ ಎನ್ನುವುದು ಸ್ಪಷ್ಟವಾಗುವುದಿಲ್ಲ. ಕಮ್ರುದ್ದೀನ್ ಅಷ್ಟೊಂದು ದೊಡ್ಡ ಮೊತ್ತವನ್ನು ಪಡೆದಿರುವ ಸಾಧ್ಯತೆಗಳು ಕಡಿಮೆ. (111)

ಅದು ಎಂತಹ ಪರಿಸ್ಥಿತಿಯಾಗಿತ್ತೆಂದರೆ ಕ್ಲೋಸ್ ಮತ್ತೆ ಹೇಳುತ್ತಾರೆ: “ನಮ್ಮನ್ನು ಮುಜುಗರಗೊಳಿಸಲು ಅಥವಾ ರಾಜಕೀಯಕ್ಕೊಂದು ತಿರುವು ಕೊಡಲು ಮೊಹಮ್ಮದೀಯರು ಎಲ್ಲಿದ್ದಾರೆ? ಟಿಪ್ಪುವಿನ ಕಾಲಾಳು ಸೈನ್ಯವನ್ನು ವಿಸರ್ಜಿಸಲಾಯಿತು. ಅವನ ಸಿಲ್ಲೇದಾರ ಕುದುರೆಗಳನ್ನು ಕರಗಿಸಲಾಯಿತು, ಅವನ ಕಿಲ್ಲೇದಾರರು ನಮಗೆ ಮುಜುರೆ ಸಲ್ಲಿಸುತ್ತಾರೆ. ಅವನ ಅಸೋಫರಿಗೆ (asophs) ನಮ್ಮನ್ನು ಎದುರಿಸಲು ಅವಕಾಶಗಳಿಲ್ಲ, ಶಕ್ತ ಕುದುರೆಗಳು ಉಳಿದಿವೆ ಮತ್ತು ಉಳಿಯುವಿಕೆಗೆ ನಮ್ಮೆಡೆಗೆ ನೋಡುತ್ತಿವೆ. ಬಿಡಿ ಬಿಡಿ ವ್ಯಕ್ತಿಗಳಿದ್ದಾರೆ, ತಲೆಯಿಲ್ಲದೆ, ವಿವಿಧ ಉದ್ದೇಶಗಳಿಂದ ಬೇರೆ – ಬೇರೆಯಾಗಿ. ಅವರು ನಮ್ಮ ಸೇವೆಗೈಯಲು ಒಂದು ಇಶಾರೆ ಸಾಕು.” (112)

ಪೂರ್ಣಯ್ಯನವರ ಸೃಷ್ಟಿಯಲ್ಲೊಬ್ಬರಾದ ನರಸಿಂಹ ಮೂರ್ತಿ ಮೈಸೂರು ಪ್ರಾಂತ್ಯದ ಸೈನ್ಯಕ್ಕೊಂದು ಗತಿ ಕಾಣಿಸಬೇಕೆಂದು ಕಮಿಷನರ್ರಿಗೆ ಪತ್ರ ಬರೆಯುತ್ತಾನೆ. ಮೈಸೂರು ಪ್ರಾಂತ್ರದ ಸದಸ್ಯರಾದ ಬ್ರಾರ್ರಿ ಕ್ಲೋಸ್ ರನ್ನು 8 ಜೂನ್ 1799ರಂದು ಶ್ರೀರಂಗಪಟ್ಟಣದಲ್ಲಿ ಭೇಟಿಯಾಗುತ್ತಾನೆ. ಕಮ್ರುದ್ದೀನ್ ತಾನು ಪಡೆದುಕೊಂಡಿದ್ದಕ್ಕೆ ಪ್ರತಿಯಾಗಿ ನೆಮ್ಮದಿಯಿಂದ ಹಿಂದೆ ಸರಿದರೆ, ಇತರ ಮುಖ್ಯ ಅಧಿಕಾರಿಗಳು ತಮ್ಮ ಹಳೆಯ ಸಂಬಳದ ಮೇಲೆ ನಿವೃತ್ತರಾದರು. ಯುದ್ಧದಲ್ಲಿ ಸಾವನ್ನಪ್ಪಿದ ಅಧಿಕಾರಿಗಳ ಕುಟುಂಬಳಿಗೆ ಸೂಕ್ತ ಸವಲತ್ತನ್ನು ನೀಡಲಾಯಿತು, ಅಸಹನೆ ಬೆಳೆಯುವುದನ್ನು ತಡೆಗಟ್ಟಲು. ಟಿಪ್ಪುವಿನ ನಾಗರೀಕ ಸೇವೆಯ ಅಧಿಕಾರಿಗಳಿಗೆ ಪಿಂಚಣಿ ನೀಡಲಾಯಿತು ಮತ್ತು ಫ್ರೆಂಚರನ್ನು ಯುದ್ಧಖೈದಿಗಳನ್ನಾಗಿ ಬಂಧಿಸಲಾಯಿತು. (113)

ತಮ್ಮ ಗ್ರಂಥದಲ್ಲಿ ಮೀರಾ ಸೆಬಾಸ್ಟಿಯನ್ ಉಳಿಕೆ ಸೈನ್ಯವನ್ನು ಹೇಗೆ ನಿರ್ನಾಮ ಮಾಡಲಾಯಿತು ಎಂದು ತಿಳಿಸುತ್ತಾರೆ. 1831ರಷ್ಟರಲ್ಲಿ ಅದು ಪರಿಣಾಮಕಾರಿಯಲ್ಲದ ಇತಿಹಾಸದ ಸ್ಮಾರಕವಾಗಷ್ಟೇ ಉಳಿದಿತ್ತು. (114)

ಮಿಲಿಟರಿಯ ಉನ್ನತಾಧಿಕಾರಿಗಳನ್ನು ಖರೀದಿಸಲಾಯಿತು. ಕೆಳಹಂತದ ಸೈನಿಕರನ್ನು ಸುಮ್ಮನೆ ಪ್ರಪಾತಕ್ಕೆ ತಳ್ಳಿಬಿಡಲಾಯಿತು. ವಸಾಹತುಶಾಹಿಯ ವಿರುದ್ಧದ ಸೈನ್ಯ ರಾತ್ರಿ ಬೆಳಗಾಗುವುದರಲ್ಲಿ ನಿರುದ್ಯೋಗಿಗಳ ಸೈನ್ಯವಾಗಿಬಿಟ್ಟಿತ್ತು. ಸಂಪನ್ಮೂಲ ನಾಶವಾಯಿತು.

ಬ್ರಿಟೀಷರ ಮೊದಲ ಹೊಡೆತ ಮೈಸೂರಿನ ಮುಸ್ಲಿಮರಿಗೆ. ಆಳ್ವಿಕೆಯಲ್ಲಿದ್ದ, ವಿದೇಶೀ ಆಕ್ರಮಣಕಾರನ ವಿರುದ್ಧದ ಹೋರಾಟಕ್ಕೆ ಸಾವಿರಾರು ಮಕ್ಕಳನ್ನು ಕಳೆದುಕೊಂಡ, ಶೋಷಿತ ಜಾತಿಗಳಿಗೆ ಆಸರೆಯಾಗಿದ್ದ ವೀರ ಸಮುದಾಯ ವಸಾಹತು ಶಕ್ತಿಯ ಏಳಿಗೆಯೊಂದಿಗೆ ಬ್ರಿಟೀಷ್ ರಾಜ್ ನ ಕೋಟೆಯಡಿಯಲ್ಲಿ ಸಿಲುಕಿ ನಲುಗಿತು. ಮುಸ್ಲಿಂ ಸಮುದಾಯ ಇದ್ದಕ್ಕಿದ್ದಂತೆ ಸಾವನ್ನಪ್ಪಿತು. ಯುರೋಪಿನ ಆಕ್ರಮಣ ಸೈನ್ಯವನ್ನು ವಿಸರ್ಜಿಸಿತು; ಇದು ಒಂದೇ ಏಟಿನಲ್ಲಿ ಸೈನ್ಯಕ್ಕೆ ಸೇರಿ ಅಭ್ಯುದಯ ಹೊಂದುತ್ತಿದ್ದ ಮೈಸೂರಿನ ಮುಸ್ಲಿಮರ ಭವಿಷ್ಯದ ಮೇಲೆ ಮಂಕು ಕವಿಸಿತು. ಸೈನ್ಯ ಮೈಸೂರು ಮುಸ್ಲಿಮರಿಗೆ ಬಹುಮುಖ್ಯ ನೌಕರಿಯ ಸೆಲೆಯಾಗಿತ್ತು. ಮೈಸೂರಿನ ಸೋಲು ಮುಸ್ಲಿಮರ ಐತಿಹಾಸಿಕ ಕುಸಿತಕ್ಕೆ ಕಾರಣವಾಯಿತು. ಆ ಕುಸಿತ ಮೂಡಿಸಿದ ಮಂಪರಿನ ಚಿನ್ಹೆಗಳನ್ನು ಇವತ್ತಿಗೂ ಕಾಣಬಹುದು……

ಮುಸ್ಲಿಮರು ಅಸ್ಪ್ರಶ್ಯರಾದರು, ಸಮಾಜದ ಕಸಕ್ಕೆ ದೂಡಲ್ಪಟ್ಟರು. 1799ರ ವಸಾಹತು ಆಕ್ರಮಣ ತನ್ನ ಪ್ರಭಾವವನ್ನು ಎರಡು ಶತಮಾನದ ನಂತರವೂ ಉಳಿಸಿದೆ. ಮುಸ್ಲಿಮರು ಆರ್ಥಿಕತೆಯ ಒಂದು ನಿರ್ದಿಷ್ಟ ವಿಭಾಗದಲ್ಲಿ ಇವತ್ತಿಗೂ ‘ಏಕಸ್ವಾಮ್ಯತೆ’ ಹೊಂದಿದ್ದಾರೆ – ಕಸವಾಯುವ ಕಾಯಕದಲ್ಲಿ.

ಈ ಕುಸಿತಕ್ಕೆ ಬುಚನನ್ ಆಗಲೇ ಸಾಕ್ಷಿಯಾಗಿದ್ದ. ಒಂದು ಚಿಟಿಕೆ ಅನುಕಂಪ, ಚೂರು ತಿರಸ್ಕಾರದೊಂದಿಗೆ ಬುಚನನ್ ಹುಣಸೂರು ತಾಲ್ಲೂಕಿನ ಹುಸೇನ್ ಪುರ ಮತ್ತು ಮುಲ್ಲೂರಿನ ಬಗ್ಗೆ ಬರೆಯುತ್ತಾನೆ: “ಟಿಪ್ಪುವಿನ ಸೇವೆಯಲ್ಲಿದ್ದ ಮುಸಲ್ಮಾನರು ಪ್ರತಿ ನಿತ್ಯ ದೇಶದ ಈ ಭಾಗಕ್ಕೆ ಬರುತ್ತಿದ್ದಾರೆ. ಸಾಧ್ಯವಿದ್ದವರು ಕಾಳುಗಳನ್ನು ತಂದು ಸಣ್ಣಪುಟ್ಟ ವ್ಯಾಪಾರ ಮಾಡುತ್ತಿದ್ದಾರೆ; ಬಡವರಾದವರು ರೈತರ ಬಳಿ ಸೇವಕರಾಗೋ ಅಥವಾ ದಿನಗೂಲಿಯಾಗೋ ಕೆಲಸ ಮಾಡುತ್ತಿದ್ದಾರೆ. ಕೃಷಿ ಕೆಲಸ ಗೊತ್ತಿಲ್ಲದ ಇವರನ್ನು ಕೆಲಸಕ್ಕೆ ಬೇರ್ಯಾರೂ ಸಿಗದಿದ್ದಾಗಷ್ಟೇ ನೇಮಿಸಿಕೊಳ್ಳಲಾಗುತ್ತದೆ. ಅವರಿಗೆ ಸಿಗುವ ಸಂಬಳ ಕಡಿಮೆ. ಅವರಿಗೆ ತಿಂಗಳಿಗೆ ಮೂವತ್ತು ಸೇರು ಕಾಳು ನೀಡಲಾಗುತ್ತಿದೆ (ಮೂರು ಫನಂಗೆ ಸಮ) ಹಾಗು ಒಂದು ಫನಂ ಹಣವನ್ನು ನೀಡಲಾಗುತ್ತದೆ…….ಅದಾಗ್ಯೂ ಈ ಮುಸ್ಲಿಮರು ತಮ್ಮ ನಾಯಕನನ್ನು ಕೊಂದ ಕಾಫಿರ ಬ್ರಿಟೀಷರ ಸೇವೆ ಮಾಡುವುದಕ್ಕಿಂತ ಇದನ್ನೇ ಉತ್ತಮವೆಂದು ಭಾವಿಸಿದ್ದಾರೆ.” (115)

ಬೆಂಗಳೂರಿನ ಮುಸ್ಲಿಮರಲ್ಲೂ ಇದೇ ರೀತಿಯ ವ್ಯಥೆಯಿರುವುದನ್ನು ಬುಚನನ್ ಗಮನಿಸಿದ್ದಾರೆ. ನಗರ ಆರ್ಥಿಕತೆಯ ಭಾಗವಾಗುವ ಭರದಲ್ಲಿ ಸಣ್ಣ ಪುಟ್ಟ ವ್ಯಾಪಾರ ಮಾಡಲಾರಂಭಿಸಿದರು. ಈ ವ್ಯಾಪಾರ ಕೆಳಮುಖವಾಗಿ ಚಲಿಸುತ್ತ ಅವರನ್ನು ಶೀಘ್ರವಾಗಿ ಕಸದ ವರ್ತಕರನ್ನಾಗಿಸಿತು.
ಮುಂದಿನ ವಾರ:
ಕೃಷಿಗೆ ಲಕ್ವ ಹೊಡೆದದ್ದು

ಏಪ್ರಿ 1, 2016

ಮೇಕಿಂಗ್ ಹಿಸ್ಟರಿ: ಶೋಷಕ ತ್ರಿಮೂರ್ತಿಗಳು ಮತ್ತು ಪ್ರತಿಗಾಮಿ ಸರಕಾರ

saket rajan ashok kr
ಸಾಕೇತ್ ರಾಜನ್
ಕನ್ನಡಕ್ಕೆ: ಡಾ. ಅಶೋಕ್. ಕೆ. ಆರ್
01/04/2016
ವಸಾಹತಿನ ವಿಜಯ ಆಳ್ವಿಕೆಯ ಮೈತ್ರಿಗಳನ್ನು ಬದಲಿಸಿತು. ಬ್ರಿಟೀಷ್ ಆಳ್ವಿಕೆಗೂ ಮುನ್ನ ಊಳಿಗಮಾನ್ಯ ಮತ್ತು ವರ್ತಕ ವರ್ಗ ಮೈಸೂರು ಸಾಮ್ರಾಜ್ಯದ ಅಧಿಕಾರಗಳನ್ನಂಚಿಕೊಂಡಿತ್ತು. ಕರ್ನಾಟಕದ ಉಳಿದ ಭಾಗಗಳಲ್ಲಿ ಊಳಿಗಮಾನ್ಯ ವರ್ಗ ಏಕಸಾಮ್ಯತೆ ಮೆರೆದಿತ್ತು. ಬ್ರಿಟೀಷರ ಆಗಮನ ಇದನ್ನು ಬದಲಿಸಿತು. ಊಳಿಗಮಾನ್ಯ ವರ್ಗಗಳನ್ನು ಉಳಿಸಿಕೊಂಡ ಬ್ರಿಟೀಷರು ವರ್ತಕರ ಒಂದು ವರ್ಗವನ್ನಷ್ಟೇ ಉಳಿಸಿಕೊಂಡು ಉಳಿದವರನ್ನು ಬುಡಸಮೇತ ಕಿತ್ತುಹಾಕಿದರು. ಇಡೀ ಕರ್ನಾಟಕದಲ್ಲಿ ಆಳ್ವಿಕೆಯ ಜಾಗಕ್ಕೆ ಬಂದದ್ದು ವಸಾಹತು – ಮಧ್ಯವರ್ತಿ – ಊಳಿಗಮಾನ್ಯ ಮೈತ್ರಿ.

ಹದಿನೆಂಟನೇ ಶತಮಾನದ ಕೊನೆಯಲ್ಲಿ ಮೈಸೂರು ಸಂಸ್ಥಾನದ ಭೂಮಾಲೀಕ ವರ್ಗ – ಈಗಾಗಲೇ ವರ್ತಕರ ಜೊತೆಗಿದ್ದ ಭೂಮಾಲೀಕ ವರ್ಗ – ಹೊಸ ಮೈತ್ರಿಯ ನಾಯಕತ್ವಕ್ಕೆ ಶರಣಾಯಿತು.

ಈ ಹೊಸ ವಿಧಾನದಲ್ಲಿ, ವಸಾಹತು ಆಕ್ರಮಣದ ನಂತರ ಮೈತ್ರಿಯ ಮುಂದಾಳತ್ವ ವಹಿಸಿದ್ದು ವಸಾಹತುಶಾಹಿ; ತ್ರಿಮೂರ್ತಿಗಳ ಆಳ್ವಿಕೆಯಲ್ಲಿ ಊಳಿಗಮಾನ್ಯ ದೊರೆಗಳು ಮತ್ತು ಮಧ್ಯವರ್ತಿಗಳು ಸಹಕಾರ ನೀಡುತ್ತ ತಮ್ಮ ಮಿತಿಯಿದ್ದ ಸ್ಥಾನದಲ್ಲೇ ಸಂತಸ ಕಂಡುಕೊಂಡರು.

ಈ ಎರಡು ಯುಗಗಳ ಮಧ್ಯೆ ಸರಕಾರದ ರಚನೆ ಮತ್ತು ನೀತಿಯಲ್ಲಿ ಗಮನಾರ್ಹ ಬದಲಾವಣೆಗಳಾಗಿತ್ತು.

ಈ ಮೈತ್ರಿಯನ್ನು ಮುನ್ನಡೆಸುತ್ತಿದ್ದವರಲ್ಲಿದ್ದ ಪ್ರಮುಖ ಅಂಶವೆಂದರೆ, ಮೈತ್ರಿಯನ್ನು ಕಟ್ಟುವುದಕ್ಕೂ ಅವರು ಮುಖ್ಯ ಕಾರಣವಾಗಿದ್ದರು. ಜೊತೆಗೆ ತಮ್ಮ ರಾಜಕೀಯ ಮತ್ತು ಆರ್ಥಿಕ ಅವಶ್ಯಕತೆಗಳಿಗನುಗುಣವಾಗಿ ಮೈತ್ರಿಯ ಪಾಲುದಾರರಾಗಿದ್ದರು. ಇಲ್ಲಿ ವಸಾಹತು ಬಂಡವಾಳದ ಅವಶ್ಯಕತೆಗಳಿಗನುಗುಣವಾಗಿ. ನಾವೀಗಾಗಲೇ ನೋಡಿದಂತೆ, ವಿವಿಧ ಊಳಿಗಮಾನ್ಯ ದೊರೆಗಳು ಮೈತ್ರಿಯ ಭಾಗವಾಗಿದ್ದು ಬ್ರಿಟೀಷ್ ಕೈಗಾರಿಕಾ ಬಂಡವಾಳದ ಪರವಾಗಿರುತ್ತೇವೆಂದು ಒಪ್ಪಿದ ಮೇಲೆ ಮಾತ್ರ. ಈ ಋಣದ ಕಾರಣದಿಂದ ಊಳಿಗಮಾನ್ಯತೆಯಲ್ಲಿ ಬದಲಾವಣೆಗಳಾಯಿತು. ಭೂಮಾಲೀಕರು ತಮ್ಮ ಸೈನ್ಯವನ್ನು ಬಿಟ್ಟುಕೊಡಬೇಕಾಯಿತು, ತಮ್ಮ ನ್ಯಾಯದಾನದ ರೀತಿಯನ್ನು ವಸಾಹತಿನ ನ್ಯಾಯಾಲಯಗಳಿಗೆ ಬಿಟ್ಟುಕೊಟ್ಟರು, ಮುಂಚೆ ಅನುಭವಿಸುತ್ತಿದ್ದ ಅನೇಕ ಊಳಿಗಮಾನ್ಯ ಸೌಲತ್ತುಗಳನ್ನು ಶರಣಾಗಿಸಿದರು. ಊಳಿಗಮಾನ್ಯತೆಯ ಈ ಆಯ್ದ ಬದಲಾವಣೆಗಳು ಇತಿಹಾಸದುದ್ದಕ್ಕೂ ನಡೆದುಕೊಂಡು ಬಂದಿದೆ, ಮತ್ತು ಇಪ್ಪತ್ತನೇ ಶತಮಾನದಲ್ಲಿನ ಅಂತರಾಷ್ಟ್ರೀಯ ಬಂಡವಾಳದ ಏಕಸ್ವಾಮ್ಯತೆ ಮತ್ತು ಅರೆವಸಾಹತುಶಾಹಿತನದ ದಿನಗಳಲ್ಲಿ ಬದಲಾವಣೆ ಮತ್ತಷ್ಟು ಚುರುಕುಗೊಂಡಿದೆ; ಅದನ್ನು ಮೇಕಿಂಗ್ ಹಿಸ್ಟರಿಯ ಮೂರನೇ ಸಂಪುಟದಲ್ಲಿ ನೋಡೋಣ. ಉದಾಹರಣೆಗೆ, ಮಧ್ಯವರ್ತಿ ಬಂಡವಾಳಶಾಹಿಗಳು ಫ್ಯೂಡಲ್ ಮೂಲದಿಂದ ಬಂದಿದ್ದು ಸಾಮಾಜಿಕ ಹೊಕ್ಕುಬಳಕೆಯ ಕಾರಣದಿಂದ; ಫ್ಯೂಡಲ್ ದೊರೆಗಳು ತಮ್ಮ ಹಳೆಯ ವರ್ಗಸ್ಥಾನವನ್ನು ತ್ಯಜಿಸಿ ಸಂಪೂರ್ಣ ಹೊಸ ಸ್ಥಾನದಲ್ಲಿ ಸ್ಥಾಪಿತರಾಗಿ ಉತ್ಪಾದನೆಯ ಜೊತೆ ಹೊಸ ಸಂಬಂಧವೇರ್ಪಡಿಸಿಕೊಂಡರು. ಆದಾಗ್ಯೂ ಊಳಿಗಮಾನ್ಯತೆಯಲ್ಲಿ ಬದಲಾವಣೆಗಳನ್ನು ತಂದ ವಸಾಹತುಶಾಹಿ ಊಳಿಗಮಾನ್ಯ ಪದ್ಧತಿಯನ್ನು ಇಲ್ಲವಾಗಿಸುವ ಪ್ರಯತ್ನವನ್ನು ಮಾಡಿರಲಿಲ್ಲ ಎಂಬಂಶವನ್ನು ಮರೆಯಬಾರದು.

ವಸಾಹತುಶಾಹಿ ಭಾರತದಲ್ಲಿನ ಸರಕಾರಗಳ ರಚನೆಯನ್ನು ಮಾರ್ಪಡಿಸಿತು. ಭಾರತದ ಇತಿಹಾಸದಲ್ಲಿಯೇ ಪ್ರಥಮ ಬಾರಿಗೆ ಐಕ್ಯತೆಯ ಕೇಂದ್ರ ಸರಕಾರವೊಂದರ ರಚನೆಯಾಯಿತು. ಚದುರಿಹೋಗಿದ್ದ, ಭಾಗಗಳಾಗಿದ್ದ ಊಳಿಗಮಾನ್ಯ ರಾಜ್ಯಗಳನ್ನು ಪುನರ್ ರಚಿಸುವ ಮೂಲಕ ಈ ಹೊಸ ಕೇಂದ್ರ ಸರಕಾರದ ರಚನೆಯಾಯಿತು. ಈ ಸರಕಾರದ ರೂಪುಗೊಳ್ಳುವಿಕೆಗೆ ಕಾರಣವಾದದ್ದು ವಿಕೇಂದ್ರೀಕರಣದ ಆಧಾರದಲ್ಲಿ ರಚಿತವಾಗಿದ್ದ ಊಳಿಗಮಾನ್ಯ ಸೈನ್ಯದ ಅಳಿವು. ಕೆಲವರು ಇದು ಊಳಿಗಮಾನ್ಯತೆಯನ್ನು ನಿಶ್ಯಕ್ತಗೊಳಿಸಿತು ಎಂದು ಭಾವಿಸಿದರು. ಆದರೆ ವಾಸ್ತವವೆಂದರೆ ಇದು ಊಳಿಗಮಾನ್ಯತೆಗೆ ಹೊಸ ಶಕ್ತಿ ತುಂಬಿತು. ಮೇಲ್ನೋಟಕ್ಕೆ ಊಳಿಗಮಾನ್ಯರ ಸೈನ್ಯದ ಅಳಿವು ಊಳಿಗಮಾನ್ಯತೆಯನ್ನು ಬಲಹೀನರಂತೆ ಮಾಡಿದರೂ ವಾಸ್ತವ ಅದರ ವಿರುದ್ಧದಂತಿತ್ತು ಎನ್ನುವುದು ಸತ್ಯ. ಊಳಿಗಮಾನ್ಯ ಸೈನ್ಯವನ್ನು ವಿಸರ್ಜಿಸಿದ್ದು ಹೊಸ ಕೇಂದ್ರೀಕೃತ, ಶಕ್ತಿಶಾಲಿ ಸೈನ್ಯದ ನಿರ್ಮಾಣಕ್ಕಾಗಿ. ಭೂಮಾಲೀಕರನ್ನು ಪ್ರತಿಗಾಮಿ ವರ್ಗಗಳ ಮೈತ್ರಿಯ ಕಡೆಗೆ ಸೆಳೆದುಕೊಂಡ ಬ್ರಿಟೀಷ್ ವಸಾಹತುಶಾಹಿ ಹೊಸದಾಗಿ ರಚಿತವಾದ ಕೇಂದ್ರ ಸರಕಾರದ ನೆರವಿನಿಂದ ಊಳಿಗಮಾನ್ಯತೆಯನ್ನು ತಾನೇ ಮುಂದೆ ನಿಂತು ರಕ್ಷಿಸಿತು. ವಸಾಹತುಶಾಹಿ, ಭೂಮಾಲೀಕರು ಮತ್ತು ಮಧ್ಯವರ್ತಿಗಳ ಪರವಾಗಿತ್ತು. ವಸಾಹತುಶಾಹಿ ಭಾರತದ ಜನಸಮೂಹಕ್ಕೆ ಕೊಟ್ಟ ಬಹುದೊಡ್ಡ ಐತಿಹಾಸಿಕ ಹೊಡೆತವಾಗಿತ್ತಿದು. ಈಗಿನಿಂದ, ದೇಶದ ಯಾವುದೇ ಭಾಗದಲ್ಲಿ ಒಬ್ಬ ಸಣ್ಣ ಭೂಮಾಲೀಕನ ವಿರುದ್ಧದ ಹೋರಾಟವನ್ನು ದಮನಿಸಲು ಭಾರತದ ಕೇಂದ್ರ ಸರಕಾರವೇ ತತ್ ಕ್ಷಣ ಮಧ್ಯಪ್ರವೇಶಿಸುತ್ತಿತ್ತು. ಸಾಯುತ್ತಿದ್ದ ಭೂಮಾಲೀಕ ವರ್ಗಕ್ಕೆ ಹೊಸದಾಗಿ ಬಲ ತುಂಬಿ ಪುನರ್ಜನ್ಮ ನೀಡಲಾಯಿತು. ವಸಾಹತು ಬಂಡವಾಳದ ಶಕ್ತಿ ಮತ್ತು ಪ್ರತಿಗಾಮಿ ಭಾರತ ಸರಕಾರದ ಅಗಾಧ ಸಂಪನ್ಮೂಲಗಳು ಊಳಿಗಮಾನ್ಯತೆಯನ್ನು ರಕ್ಷಿಸಿ, ಎಚ್ಚೆತ್ತ ರೈತ ಕಾರ್ಮಿಕರನ್ನು ದಮನಿಸಲು ಉಪಯೋಗಿಸಬಹುದಾಗಿತ್ತು. ಕೆಲಸಕ್ಕೆ ಬಾರದ ಭೂಮಾಲೀಕರೆಲ್ಲ ರಾಣಿಯ ಪಾದದ ಬಳಿ ಎದ್ದು ನಿಂತರು. ಈ ಪ್ರಮುಖ ಐತಿಹಾಸಿಕ ಬದಲಾವಣೆಗಳು ಭಾರತದ ಜನಸಮೂಹದಲ್ಲಿನ ಊಳಿಗಮಾನ್ಯತೆ ವಿರೋಧಿ ಅಲೆಗಳ ಅಬ್ಬರವನ್ನು ಕಡಿಮೆಗೊಳಿಸಿಬಿಟ್ಟಿತು.

ಹದಿನೇಳನೇ ಶತಮಾನದ ಅಂತ್ಯದಲ್ಲಿ ಚಿಕ್ಕದೇವರಾಜ ಒಡೆಯರ್ ಪ್ರಾರಂಭಿಸಿದ್ದ ಸ್ಥಳೀಯತೆಯ ರೀತಿಯನ್ನು (Regional Phenomenon) ಇನ್ನು ಮುಂದೆ ನಿರೀಕ್ಷಿಸಲು ಸಾಧ್ಯವಿಲ್ಲ. ಕಾರಣ ಭಾರತದ ಭೂಮಾಲೀಕರೆಲ್ಲ ಆಂತರಿಕ ಬಂಧದ ಹೆಸರಿನಲ್ಲಿ ಒಂದಾಗಿಬಿಟ್ಟಿದ್ದರು. (106)

ಚಿಕ್ಕ ಪುಟ್ಟ ಪ್ರದೇಶಗಳು ಪ್ರತ್ಯೇಕ ರಾಷ್ಟ್ರೀಯತೆ ಘೋಷಿಸಿಕೊಂಡು ಸ್ವತಂತ್ರಕ್ಕಾಗಿ ಹೋರಾಡುವ ಕಾಲವೂ ಮುಗಿಯಿತು ಎನ್ನುವುದು ಇದರರ್ಥವಾಗಿತ್ತು. ರಾಷ್ಟ್ರೀಯತೆಯ ಭವಿಷ್ಯ ಪರಸ್ಪರರ ನಡುವಿನ ಐಕ್ಯತೆಯ ಮೇಲೆ ಅವಲಂಬಿತವಾಗಿತ್ತು. ಭಾರತದಾದ್ಯಂತ ಚದುರಿಹೋಗಿದ್ದ ರೈತ – ಕಾರ್ಮಿಕರಲ್ಲೂ ಏಕತೆಯ ಅವಶ್ಯಕತೆಯಿತ್ತು. ಊಳಿಗಮಾನ್ಯತೆ ವಿರೋಧಿ ಹೋರಾಟಗಳು ಇನ್ನೂ ಶೈಶಾವಸ್ಥೆಯಲ್ಲಿದ್ದ ಸಂದರ್ಭದಲ್ಲಿ ಊಳಿಗಮಾನ್ಯತೆ ರದ್ದಾಗಬೇಕಾದ ಅನಿವಾರ್ಯತೆಯಿತ್ತು. ಇತಿಹಾಸದ ದೃಷ್ಟಿಯಿಂದ ಹೇಳುವುದಾದರೆ ಸಮಗ್ರ ಭಾರತದ ಪ್ರಜ್ಞೆ ಕೆಲಸ ಮಾಡಿ ರೈತ ಕಾರ್ಮಿಕರಿಗೆ ಹಾದಿ ತೋರಬೇಕಿತ್ತು.

ಈ ಹೊಸ ಸರಕಾರದ ರಚನೆಯಿಂದ ಊಳಿಗಮಾನ್ಯ ವಿರೋಧಿ ಹೋರಾಟ ವಸಾಹತಿನ ವಿರುದ್ಧದ ಹೋರಾಟದೊಂದಿಗೆ ಮಿಳಿತವಾಗಬೇಕಾಯಿತು. ಒಂದನ್ನೊರತುಪಡಿಸಿ ಮತ್ತೊಂದಿರಲು ಸಾಧ್ಯವಿರಲಿಲ್ಲ, ಒಂದನ್ನು ಬುಡಸಮೇತ ಕಿತ್ತು ಹಾಕದೆ ಮತ್ತೊಂದನ್ನು ಇಲ್ಲವಾಗಿಸುವುದು ಸಾಧ್ಯವಿರಲಿಲ್ಲ. ಅದೇನು ಪ್ರಜ್ಞಾಪೂರ್ವಕವಾಗಿ ನಡೆಯಿತೋ ಅಥವಾ ತಕ್ಷಣದ ಪ್ರತಿಕ್ರಿಯೆಯೋ ಗೊತ್ತಿಲ್ಲ, ಈ ಅಂಶ ಸ್ವತಂತ್ರಕ್ಕಾಗಿ ಹಂಬಲಿಸಿದ ಕರ್ನಾಟಕ ಮತ್ತು ಭಾರತದ ಜನಸಮೂಹದಲ್ಲಿ ಅಚ್ಚಾದಂತೆ ಕಂಡುಬಂತು. ಇದು ದ್ವಂದ್ವ ಹೋರಾಟವಲ್ಲ, ಬದಲಿಗೆ ಒಗ್ಗಟ್ಟಾಗಿ ಶತ್ರುವನ್ನು ಎದುರಿಸಲು ಮಾಡಲೇಬೇಕಿದ್ದ ಎರಡು ಪದರಿನ ಹೋರಾಟ.

ಅಧ್ಯಾಯ 2 ಮುಗಿಯಿತು

ಮುಂದಿನ ವಾರ: 
ಅಧ್ಯಾಯ 3: ಜನಸಮೂಹದ ಮೇಲೆ ವಸಾಹತುಶಾಹಿ ಮಾಡಿದ ಪರಿಣಾಮ

Disclaimer: ಮೇಕಿಂಗ್ ಹಿಸ್ಟರಿ ಆಂಗ್ಲ ಪುಸ್ತಕದ ಅನುವಾದಿಸಲು ಬೇಕಾದ ಅಧಿಕೃತ ಹಕ್ಕುಗಳು ನನ್ನಲ್ಲಿಲ್ಲ. ಅನುವಾದದ ಹಕ್ಕನ್ನು ಕೊಡುವವರಲ್ಲನೇಕರು ಜೈಲಿನಲ್ಲಿದ್ದಾರಂತೆ. ಯಾರಲ್ಲಾದರೂ ಅಧಿಕೃತ ಅನುವಾದದ ಹಕ್ಕುಗಳು ಇದ್ದು ಆಕ್ಷೇಪಣೆ ಎತ್ತಿದರೆ ಕ್ಷಮಾಪಣೆಯೊಂದಿಗೆ ಅನುವಾದದ ಕಾರ್ಯವನ್ನು ನಿಲ್ಲಿಸಲಾಗುವುದು. ಸಾಕೇತ್ ರಾಜನ್ ದೃಷ್ಟಿಯ ಕರ್ನಾಟಕದ ಇತಿಹಾಸ ಕನ್ನಡ ಬಲ್ಲವರಿಗೂ ತಲುಪಲಿ ಎಂಬ ಉದ್ದೇಶದಿಂದ ಇದನ್ನು ಪ್ರಕಟಿಸಲಾಗುತ್ತಿದೆಯೇ ಹೊರತು ಯಾವುದೇ ವಾಣಿಜ್ಯ ಉದ್ದೇಶದಿಂದಲ್ಲ - ಡಾ. ಅಶೋಕ್. ಕೆ. ಆರ್.