ನವೆಂ 12, 2015

ಸತ್ತವರ ಹೆಸರಲ್ಲಿ ಸಾವಿನ ಆಚರಣೆ.

Dr Ashok K R
ಟಿಪ್ಪು ಬಗೆಗಿನ ಚರ್ಚೆ ಅನವಶ್ಯಕ ಎಂದೇ ನಂಬಿದ್ದವನು ನಾನು. ನಾವು ದಿನನಿತ್ಯ ವ್ಯವಹರಿಸುವ, ಸಂವಹಿಸುವ ಜನರ ಒಳ್ಳೆಯತನದ ಬಗ್ಗೆಯೇ ನಮಗೆ ಅರಿವಾಗದಿರುವಾಗ ಇನ್ನೂರು ಮುನ್ನೂರು ವರ್ಷದ ಹಿಂದೆ ಸತ್ತು ಹೋದ ವ್ಯಕ್ತಿಯೊಬ್ಬ ದೇವರಷ್ಟೇ ಒಳ್ಳೆಯವನು ದೆವ್ವದಷ್ಟೇ ಕೆಟ್ಟವನು ಎಂದು ವಾದಿಸುವುದು ಇವತ್ತಿನ ವರ್ತಮಾನಕ್ಕೆ ಎಷ್ಟರ ಮಟ್ಟಿಗೆ ಅವಶ್ಯಕ? ಟಿಪ್ಪುವಿನ ಹೆಸರಲ್ಲಿ ಸಾವು ನಡೆದುಹೋಗಿದೆ. ಸಾವಿನ ನೆಪದಲ್ಲಿ ಪೊಲಿಟಿಕಲ್ ಮೈಲೇಜ್ ತೆಗೆದುಕೊಳ್ಳುವವರ ಸಂಖೈಯೂ ಹೆಚ್ಚಾಗಿಬಿಟ್ಟಿದೆ. ಜನರನ್ನು ಉದ್ರೇಕಗೊಳಿಸುವಂತಹ ಬರಹಗಳು ಫೇಸ್ ಬುಕ್ ತುಂಬ ರಾರಾಜಿಸುತ್ತಿವೆ. ಈಗಲೂ ಮನಸ್ಸಿಗೆ ಅನ್ನಿಸಿದ್ದನ್ನು ಬರೆಯದಿರುವುದು ಸರಿಯಲ್ಲ ಎಂಬ ಕಾರಣಕ್ಕೆ ಈ ಬರಹ. ಮೊದಲು ಟಿಪ್ಪು ಜಯಂತಿಯ ವಿರೋಧಿಗಳ ವಾದದಲ್ಲಿರುವ ದ್ವಂದ್ವಗಳನ್ನು ಗುರುತಿಸೋಣ.

ಇದನ್ನೂ ಓದಿ: ಟಿಪ್ಪು ಎಂಬ ಅನವಶ್ಯಕ ಚರ್ಚೆ

ಟಿಪ್ಪು ಒಬ್ಬ ಧರ್ಮದ್ರೋಹಿ, ಸಾವಿರಾರು ಹಿಂದೂಗಳನ್ನು ಕೊಂದು ಸಾವಿರಾರು ಜನರನ್ನು ಮತಾಂತರಿಸಿದ, ಅವನ ಕೈಯೆಲ್ಲ ರಕ್ತಮಯ: ಟಿಪ್ಪು ವಿರೋಧಿಗಳು ಹೇಳಿರುವುದೆಲ್ಲವೂ ಸತ್ಯ. ಆತ ಸಾವಿರಾರು ಜನರನ್ನು ಕೊಂದಿರುವುದೂ ಹೌದು, ಮತಾಂತರಿಸಿರುವುದೂ ಹೌದು. ಟಿಪ್ಪು ಪ್ರಜಾಪ್ರಭುತ್ವ ರೀತಿಯಿಂದ ಆಯ್ಕೆಯಾದ ‘ರಾಜ’ನಲ್ಲ ಎನ್ನುವುದನ್ನು ನೆನಪಿಡಬೇಕು. ಆತ ಅರಮನೆಯ ಸುಖದೊಳಗೆ ಬಂಧಿಯಾಗಿದ್ದ ರಾಜನೂ ಅಲ್ಲ. ಹೆಚ್ಚಿನ ದಿನಗಳನ್ನು ಯುದ್ಧಗಳಲ್ಲೇ ಕಳೆದ; ಯುದ್ಧದ ಉದ್ದೇಶ ಸಾಮ್ರಾಜ್ಯ ವಿಸ್ತರಣೆ ಮತ್ತು ಸಾಮ್ರಾಜ್ಯ ರಕ್ಷಣೆ. ಯುದ್ಧವೆಂದ ಮೇಲೆ ಸಾವಿರುವುದು ಸತ್ಯವಲ್ಲವೇ. ಇಡೀ ದೇಶದ ರಾಜರೆಲ್ಲ ಯುದ್ಧವನ್ನು ‘ಶಾಂತಿ’ಯಿಂದ ನಡೆಸಿಬಿಟ್ಟಿದ್ದರೆ ಟಿಪ್ಪು ಅಪರಾಧಿಯಾಗಿಬಿಡುತ್ತಿದ್ದ. ಯುದ್ಧದಲ್ಲಿದ್ದ ಯಾವ ರಾಜ ಶಾಂತಿಯಿಂದ ಕಾರ್ಯನಿರ್ವಹಿಸಿದ? ನಮ್ ದೇಶದ ಬಾವುಟದಲ್ಲಿ ಮಧ್ಯದಲ್ಲೊಂದು ನೀಲಿ ಚಕ್ರವಿದೆಯಲ್ಲ, ಅಶೋಕ ಚಕ್ರ, ಆ ಅಶೋಕನೇನು ಶಾಂತಿಯ ದೂತನೇ? ಸಾವಿರಾರು ಜನರನ್ನು ಕಳಿಂಗ ಯುದ್ಧದಲ್ಲಿ ಕೊಂದ ನಂತರವಷ್ಟೇ ಆತ ಬೌದ್ಧ ಧರ್ಮ ಸ್ವೀಕರಿಸಿದ್ದು ಅಲ್ಲವೇ. ಅವನಿಂದ ಹತರಾದ ಜನರ ವಂಶಜರು ಅಶೋಕ ಚಕ್ರವನ್ನು ಬಾವುಟದಿಂದ ಕಿತ್ತು ಹಾಕಿ ಎಂದರದು ಒಪ್ಪಿತವೇ? ಪ್ರಧಾನ ಮಂತ್ರಿ, ಮುಖ್ಯಮಂತ್ರಿಗಳೇ ಹಿಂಸೆಯನ್ನು ಬೆಂಬಲಿಸಿದ ಅನೇಕ ನಿದರ್ಶನಗಳನ್ನು ಸ್ವತಂತ್ರ ಭಾರತದಲ್ಲಿ ನಾವು ಕಂಡಿರುವಾಗ ರಾಜರು ಶಾಂತಿ ಪಾಲಿಸಿದರೆಂದರೆ ನಂಬಲು ಸಾಧ್ಯವೇ?

ಇನ್ನು ಟಿಪ್ಪು ಮತಾಂತರ ಮಾಡಿದ ಎನ್ನುವುದರ ಬಗ್ಗೆ. ಅದು ರಾಜರ ಕಾಲ. ರಾಜನ ಧರ್ಮವನ್ನು ಜನರ ಮೇಲೆ ‘ಹೇರುತ್ತಿದ್ದ’ ಕಾಲ. ಹಿಂದೂ ಧರ್ಮದ ಜಾತಿ ಪದ್ಧತಿಯೂ ಮತಾಂತರಕ್ಕೆ ಪೂರಕವಾಗಿ ಕೆಲಸ ಮಾಡುತ್ತಿತ್ತು. ಕೇರಳದಲ್ಲಿ ಟಿಪ್ಪು ಮತಾಂತರಿಸಿದ ಎಂದು ಅರ್ಧ ಸತ್ಯ ಹೇಳುವವರೆಲ್ಲ ಮತ್ತರ್ಧವನ್ನು ಉದ್ದೇಶಪೂರ್ವಕವಾಗಿ ಮರೆತುಬಿಡುತ್ತಾರೆ. ಕೇರಳದಲ್ಲಿ ದಲಿತರು ಮೊಳಕಾಲಿನ ಕೆಳಗೆ ಮತ್ತು ಸೊಂಟದ ಮೇಲೆ ಬಟ್ಟೆಯನ್ನೇ ಧರಿಸುವಂತಿರಲಿಲ್ಲ. ದಲಿತ ಮಹಿಳೆಯರು ತಮ್ಮ ಎದೆಯನ್ನು ಮುಚ್ಚಿಕೊಳ್ಳುವಂತಿರಲಿಲ್ಲ. ದಲಿತ ಮಹಿಳೆಯೊಬ್ಬಳು ಮಗುವಿಗೆ ಜನ್ಮ ನೀಡಿದಾಗ ಮಗುವಿಗೆ ಹಾಲು ಕುಡಿಸುವ ಮೊದಲು ಮೇಲ್ಜಾತಿಯ ಜನರ ಮುಂದೆ ಬಂದು ನಿಲ್ಲಬೇಕಿತ್ತು. ಮೇಲ್ಜಾತಿಯ ಬ್ರಹಸ್ಪತಿಗಳು ಆಕೆಯ ಮೊಲೆಯನ್ನು ಅಳೆದು ‘ಮೊಲೆ ತೆರಿಗೆ’ ವಿಧಿಸುತ್ತಿದ್ದರು. ಮೊಲೆ ತೆರಿಗೆ ಕಟ್ಟಿದ ನಂತರವಷ್ಟೆ ಮಗುವಿಗೆ ಹಾಲು ಕುಡಿಸುವ ಅನುಮತಿ ಸಿಕ್ಕುತ್ತಿತ್ತು. ಒಬ್ಬ ದಲಿತ ಹೆಣ್ಣುಮಗಳು ಪ್ರತಿಭಟನೆಯ ರೂಪದಲ್ಲಿ ತನ್ನೆರಡೂ ಮೊಲೆಗಳನ್ನೇ ಕಡಿದು ಇದನ್ನೇ ನಿಮ್ಮ ತೆರಿಗೆಗೆ ವಜಾ ಮಾಡಿಕೊಳ್ಳಿ ಎಂದು ಹೇಳಿಬಿಟ್ಟಳು. ಮತಾಂತರಕ್ಕೆ ಟಿಪ್ಪು ಎಷ್ಟು ಕಾರಣನೋ ಈ ಶೋಷಣೆಯೂ ಅಷ್ಟೇ ಕಾರಣವಲ್ಲವೇ? ವಾದಕ್ಕೆ ಕೇಳ್ತೀನಿ, ಮತಾಂತರ ನಡೆಸಿದ ಟಿಪ್ಪುವಿನ ಜಯಂತಿಯನ್ನು ಸರಕಾರ ಆಚರಿಸಬಾರದು ಎನ್ನುತ್ತೀರಲ್ಲ ಬ್ರಾಹ್ಮಣ, ಕುರುಬ, ದಲಿತ ಸಮುದಾಯದಿಂದ ಲಿಂಗಾಯತ ಧರ್ಮಕ್ಕೆ ಮತಾಂತರಿಸಿದ ಬಸವಣ್ಣನ ಜಯಂತಿಯನ್ನು ಸರಕಾರವೇ ಆಚರಿಸುತ್ತದೆಯಲ್ಲವೇ? ಅದು ಸರಿಯಾದರೆ ಇದು ಹೇಗೆ ತಪ್ಪಾಯಿತು?

ಇನ್ನು ಟಿಪ್ಪು ಕನ್ನಡ ವಿರೋಧಿ ಎಂಬ ವಾದ. ಹೌದು ಆತ ಪಾರ್ಸಿ ಭಾಷೆಯನ್ನೋ ಮತ್ತೊಂದು ಭಾಷೆಯನ್ನೋ ಉಪಯೋಗಿಸುತ್ತಿದ್ದ. ರಾಜನ ಆಳ್ವಿಕೆಯ ಕಾನೂನುಗಳನ್ನು ಇವತ್ತಿನ ದೃಷ್ಟಿಯಿಂದ ಅಳೆಯುವುದೇ ತಪ್ಪಲ್ಲವೇ? ಶ್ರೀ ಕೃಷ್ಣದೇವರಾಯ ತೆಲುಗಿಗೆ ಹೆಚ್ಚಿನ ಮಹತ್ವ ಕೊಡುತ್ತಿದ್ದ ಅನ್ನುವುದು ಇತಿಹಾಸದಲ್ಲಿದೆ. ಆ ಕಾರಣಕ್ಕೆ ಹಂಪಿ ಉತ್ಸವವನ್ನು ವಿರೋಧಿಸಬೇಕೆ? ಹಿಂದಿ ಹೇರಿಕೆಯನ್ನು ಕಂಡೂ ಕಾಣದಂತಿರುವ, ಹಿಂದಿ ಹೇರಿಕೆಯನ್ನು ಸಮರ್ಥಿಸುವ, ಹಿಂದಿ ರಾಷ್ಟ್ರಭಾಷೆಯೆಂದು ಸುಳ್ಳು ಸುಳ್ಳೇ ಜನರನ್ನು ನಂಬಿಸುವ ಜನರಿಗೆಲ್ಲ ಇದ್ದಕ್ಕಿದ್ದಂತೆ ಕನ್ನಡ ಪ್ರೇಮ ಮೂಡಿಬಿಟ್ಟಿರುವುದು ಸೋಜಿಗ! 

ಟಿಪ್ಪುವನ್ನು ವಿರೋಧಿಸಲು ಇವ್ಯಾವುದೂ ನೈಜ ಕಾರಣವಲ್ಲ. ಇವೆಲ್ಲ ಜನರನ್ನು ಮೂರ್ಖರನ್ನಾಗಿಸಲು ಬಿಜೆಪಿ ಮತ್ತದರ ಬೆಂಬಲಿತ ಸಂಘಟನೆಗಳು ಉಪಯೋಗಿಸುತ್ತಿರುವ ನೆಪಗಳಷ್ಟೆ. ಟಿಪ್ಪು ಸುಲ್ತಾನ್ ಮುಸ್ಲಿಂ ಅದಕ್ಕೆ ನಮಗವನನ್ನ ಕಂಡರೆ ಆಗಲ್ಲ ಎಂದು ಬಹಿರಂಗವಾಗಿ ಹೇಳಲಾಗದವರು ಹುಡುಕುವ ನೆಪಗಳಷ್ಟೇ. 

ವೈಯಕ್ತಿಕವಾಗಿ ನನಗೆ ಈ ಯಾವ ಜಯಂತಿ, ಉತ್ಸವಗಳಲ್ಲಿಯೂ ನಂಬಿಕೆಯಿಲ್ಲ. ಸುಖಾಸುಮ್ಮನೆ ನಮ್ಮ ನಿಮ್ಮಂತೆಯೇ ಒಳಿತು ಕೆಡುಕುಗಳಿದ್ದ ಮನುಷ್ಯರನ್ನು ಆಕಾಶದೆತ್ತರಕ್ಕೆ ಏರಿಸುವ, ರಣಭಯಂಕರವಾಗಿ ಹೊಗಳುವ ಇಂತಹ ಜಯಂತಿಗಳು ಇರದಿದ್ದರೆ ಪ್ರಪಂಚವೇನು ಮುಳುಗಲಾರದು. ಇದರ ಜೊತೆಜೊತೆಗೆ ವ್ಯಕ್ತಿ ಮತ್ತು ಮೂರ್ತಿ ಪೂಜೆಯಿಂದ ಹೊರಬರಲಾರದ ನಮ್ಮ ಜನರಿಗೆ ಇಂತಹ ಜಯಂತಿಗಳು ಆತ್ಮಸ್ಥೈರ್ಯ ತುಂಬುವ ಕೆಲಸವನ್ನು ಮಾಡುತ್ತವೆ ಎನ್ನುವುದೂ ಸತ್ಯ. ಅಂಬೇಡ್ಕರ್ ಜಯಂತಿ, ಬಸವ ಜಯಂತಿ, ವಾಲ್ಮೀಕಿ ಜಯಂತಿ, ಕನಕದಾಸ ಜಯಂತಿಗಳೆಲ್ಲವೂ ದೊಡ್ಡ ದೊಡ್ಡ ವ್ಯಕ್ತಿಗಳನ್ನು ಒಂದು ಸಮುದಾಯಕ್ಕೆ ಸೀಮಿತಗೊಳಿಸಿಬಿಡುವ ಕೆಟ್ಟ ಕೆಲಸವನ್ನು ಮಾಡುತ್ತಲೇ ಆ ಸಮುದಾಯದ ಜನರ ಮನೋಸ್ಥೈರ್ಯವನ್ನು ಹಿಗ್ಗಿಸುವ ಕೆಲಸವನ್ನು ಮಾಡುತ್ತಿರುವುದು ಸುಳ್ಳಲ್ಲ. ಟಿಪ್ಪು ಜಯಂತಿ ಕೂಡ ಮುಸ್ಲಿಮರಲ್ಲಿ ಅಂತದೊಂದು ಸ್ಥೈರ್ಯ ತುಂಬುತ್ತಿತ್ತೋ ಏನೋ? ತುಂಬಬಾರದು ಎನ್ನುವುದು ವಿರೋಧಿಗಳ ಉದ್ದೇಶ. ಇಂತಹುದೊಂದು ಸರಕಾರ ಪ್ರಾಯೋಜಿತ ಜಯಂತಿಯ ಸಂದರ್ಭದಲ್ಲಿ ಮಡಿಕೇರಿಯಲ್ಲಿ ಮೂವರು ಸಾವನ್ನಪ್ಪಿದ್ದಾರೆ. ವಿ.ಎಚ್.ಪಿಯ ಮುಖಂಡ ಕುಟ್ಟಪ್ಪ, ರಾಜು ಮತ್ತು ಸಾವುಲ್ ಹಮೀದ್ ಎಂಬ ಯುವಕ ಸಾವನ್ನಪ್ಪಿದ್ದಾರೆ. ಕುಟ್ಟಪ್ಪ ಮತ್ತು ರಾಜುನನ್ನು ಸಾಬರು ಕಲ್ಲು ಹೊಡೆದು ಕೊಂದರು ಎನ್ನುವುದು ಹಿಂದೂ ಸಂಘಟನೆಗಳ ವಾದವಾದರೆ ಸಾವುಲ್ ಹಮೀದನನ್ನು ಹಿಂದೂಗಳು ಗುಂಡಿಟ್ಟು ಕೊಂದಿದ್ದಾರೆ ಎನ್ನುವುದು ಮುಸ್ಲಿಂ ಸಂಘಟನೆಗಳ ವಾದ. ಪೋಲೀಸರ ಪ್ರಕಾರ ಕುಟ್ಟಪ್ಪ ಓಡುವಾಗ ಹತ್ತಡಿ ಎತ್ತರದ ಕಾಂಪೌಂಡು ಗೋಡೆಯಿಂದ ಬಿದ್ದು ಸತ್ತಿದ್ದು. ಇನ್ನು ರಾಜು ಆಸ್ಪತ್ರೆಯಲ್ಲಿದ್ದ ರೋಗಿ. ಗಲಭೆಯನ್ನು ವೀಕ್ಷಿಸುವಾಗ ಮೇಲಿನಿಂದ ಕೆಳಗೆ ಬಿದ್ದಿದ್ದು ಸತ್ತಿದ್ದು. ಸಾವುಲ್ ಹಮೀದನ ಮೇಲೆ ಯಾರೂ ಗುಂಡು ಹಾರಿಸಿಲ್ಲ. ಲಾಠಿ ಚಾರ್ಜಿನ ಸಮಯದಲ್ಲಿ ಬಿದ್ದ ಪೆಟ್ಟಿನಿಂದ ಸತ್ತಿದ್ದು. ಸಾವು ಯಾವ ರೀತಿಯಿಂದಲೇ ಆಗಿರಲಿ, ಪರೋಕ್ಷವಾಗಿ ಎಲ್ಲಾ ಸಾವುಗಳು ಟಿಪ್ಪು ಜಯಂತಿಯ ಕಾರಣಕ್ಕೇ ಆಗಿದೆ. 

ಪೋಲೀಸ್ ಚಾರ್ಜ್ ಶೀಟು ರೀತಿಯಲ್ಲೇ ಈ ಸಾವುಗಳಿಗೆ ಯಾರು ಹೊಣೆ ಎಂದರೆ ಎ1 ಸ್ಥಾನದಲ್ಲಿ ಸಿದ್ಧರಾಮಯ್ಯ ಮತ್ತು ಕಾಂಗ್ರೆಸ್, ಎ2 ಆಗಿ ಪ್ರತಾಪಸಿಂಹ ಮತ್ತು ಬಿಜೆಪಿ, ಎ3 ಆಗಿ ಪೋಲೀಸರನ್ನು ನಿಲ್ಲಿಸಬಹುದು. ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಟಿಪ್ಪು ಜಯಂತಿಯನ್ನು ಆಚರಿಸುವುದಕ್ಕೆ ವೋಟ್ ಬ್ಯಾಂಕ್ ರಾಜಕೀಯದ ಹೊರತಾಗಿ ಮತ್ಯಾವ ಕಾರಣವೂ ಇರಲಿಲ್ಲ. ಎಲ್ಲರೂ ಮಾಡುವುದು ವೋಟ್ ಬ್ಯಾಂಕ್ ರಾಜಕೀಯ ಇದರಲ್ಲೇನು ತಪ್ಪು ಎಂಬ ಪ್ರಶ್ನೆಯನ್ನು ಖಂಡಿತವಾಗಿ ಕಾಂಗ್ರೆಸ್ಸಿನವರ ಕೇಳುತ್ತಾರೆ. ವೋಟಿನ ನೆಪದಲ್ಲಿ ಮೂವರ ಹತ್ಯೆಯ ಹೊಣೆಯನ್ನು ಹೊತ್ತಿಕೊಳ್ಳುತ್ತಾರ? ಮುಸ್ಲಿಮರ ಮತಕ್ಕಾಗಿಯಷ್ಟೇ ಈ ಜಯಂತಿ ಮಾಡಿದ್ದು ಎಂದು ಸರಕಾರ ಎಷ್ಟು ನಿಖರವಾಗಿ ಹೇಳಿದೆ ಗೊತ್ತೆ? ಟಿಪ್ಪು ಜಯಂತಿಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದಲೋ ಪ್ರವಾಸೋದ್ಯಮ ಖಾತೆಯ ವತಿಯಿಂದಲೋ ಮಾಡಿಸಿಲ್ಲ ಮಾಡಿಸಿರುವುದು ಅಲ್ಪಸಂಖ್ಯಾತ ಇಲಾಖೆಯ ವತಿಯಿಂದ. ಅದರಲ್ಲೇ ಗೊತ್ತಾಗುವುದಿಲ್ಲವೇ ಇವರ ಯೋಗ್ಯತೆ. ಟಿಪ್ಪು ಜಯಂತಿಯನ್ನು ಘೋಷಿಸಿದರೆ ಅದಕ್ಕೆ ಮತ್ತದೆ ವೋಟ್ ಬ್ಯಾಂಕ್ ರಾಜಕೀಯದ ಕಾರಣದಿಂದ ಬಿಜೆಪಿಯವರು ವಿರೋಧಿಸುತ್ತಾರೆ ಎನ್ನುವುದನ್ನು ತಿಳಿಯದಷ್ಟು ಅಮಯಾಕರೇನಲ್ಲವಲ್ಲ ಸಿದ್ಧರಾಮಯ್ಯನವರು. ವಿರೋಧ ವ್ಯಕ್ತವಾಗಲಿ ಎನ್ನುವುದೇ ಅವರ ಉದ್ದೇಶವಾಗಿತ್ತು. ಬಿಜೆಪಿಯವರು ವಿರೋಧಿಸಿದಷ್ಟೂ ಮುಸ್ಲಿಮರ ವೋಟುಗಳು ಕಾಂಗ್ರೆಸ್ ತೆಕ್ಕೆಗೆ ಬರುತ್ತದೆ ಎನ್ನುವುದರ ಅರಿವೂ ಇತ್ತು. ಎಲ್ಲವೂ ಅವರಂದುಕೊಂಡಂತೆಯೇ ಆಯಿತು; ಮೂವರ ಹೆಣದ ಮೇಲೆ. 

ಇನ್ನು ಎ2 ಸ್ಥಾನದಲ್ಲಿರುವ ಪ್ರತಾಪಸಿಂಹ ಮತ್ತು ಬಿಜೆಪಿ ಕೂಡ ಎ1 ಆರೋಪಿಗಳಷ್ಟೇ ಅಪಾಯಕಾರಿಯಾಗಿ ದ್ವೇಷ ಬಿತ್ತುವ ಕೆಲಸ ಮಾಡಿದ್ದಾರೆ. ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಜಾತಿ ಪ್ರಜ್ಞೆ ಜಾಗ್ರತವಾಗಿ ಗೌಡ ಗೌಡ ಎಂದುಕೊಂಡು ಓಟು ಗಿಟ್ಟಿಸಿಕೊಂಡ ಪ್ರತಾಪಸಿಂಹರಿಗೆ ಈಗ ಧರ್ಮದ್ವೇಷದ ಆಧಾರದಲ್ಲಿ ‘ಹಿಂದೂ ಹೃದಯ ಸಾಮ್ರಾಟ್’ ಎಂದು ಕರೆಸಿಕೊಳ್ಳುವ ಹಪಾಹಪಿ. ಟಿಪ್ಪು ಜಯಂತಿಯನ್ನು ನಖಶಿಖಾಂತ ವಿರೋಧಿಸಲು ಅವರು ಆಯ್ಕೆ ಮಾಡಿಕೊಂಡಿದ್ದು ಮಡಿಕೇರಿ. ಕಾರಣ ಅಲ್ಲಿ ಬಿಜೆಪಿಗೆ ಬೆಂಬಲವೂ ಇದೆ, ಟಿಪ್ಪುವನ್ನು ದ್ವೇಷಿಸಲು ಕಾರಣವೂ ಇದೆ. ಲೋಕಸಭಾ ಸದಸ್ಯರ ಘನತೆಗೆ ತಕ್ಕದಲ್ಲದ ‘ಟಿಪ್ಪು ಸುಲ್ತಾನ್ ಕುರುಬರನ್ನು ಕೊಂದಿದ್ರೂ ಸಿದ್ಧರಾಮಯ್ಯ ಟಿಪ್ಪು ಜಯಂತಿ ಮಾಡುತ್ತಿದ್ದರಾ?’ ಎಂಬಂತಹ ವಿಚ್ಛಿದ್ರಕಾರಿ ಹೇಳಿಕೆಗಳೂ ಅವರ ಬಾಯಿಂದ ಉದುರಿದವು. ಜನರನ್ನು ಧರ್ಮದ ಹೆಸರಿನಲ್ಲಿ ಉದ್ರಿಕ್ತಗೊಳಿಸಿ ಪ್ರತಿಭಟಿಸುವಂತೆ ಮಾಡಿ, ಸಾಯುವಂತೆ ಮಾಡಿ ಅವರು ಬಹುಶಃ ಮೈಸೂರಿನ ತಮ್ಮ ಮನೆಯಲ್ಲಿ ಬೆಚ್ಚಗೆ ಕುಳಿತಿರಬೇಕು. ಚಳಿಗಾಲ ಬೇರೆ ಶುರುವಾಗಿದೆಯಲ್ಲ.

ಎ3 ಸ್ಥಾನದಲ್ಲಿರುವ ಪೋಲೀಸರನ್ನು ಬಯ್ಯುವುದಾದರೂ ಹೇಗೆ? ಒಂದು ಕಡೆ ಆಡಳಿತ ಪಕ್ಷ, ಇನ್ನೊಂದು ಕಡೆ ಮುಂದೆ ಆಡಳಿತಕ್ಕೆ ಬರಬಹುದಾದ ವಿರೋಧ ಪಕ್ಷ, ಈ ಪಕ್ಷಗಳ ತಾಳಕ್ಕೆ ಕುಣಿಯುವುದೇ ಕಸುಬಾಗಿಬಿಟ್ಟಿರುವಾಗ ಅವರು ಸರಿಯಾಗಿ ಕಾರ್ಯನಿರ್ವಹಿಸುವುದಾದರೂ ಹೇಗೆ? ಮಡಿಕೇರಿಯಲ್ಲಿ ನಡೆಯುವ ಗಲಭೆಯ ಬಗ್ಗೆ ಅವರಿಗೆ ಮಾಹಿತಿಯಿತ್ತು. ಗುಪ್ತಚರ ಮಾಹಿತಿಯೇನು ಬೇಕಿರಲಿಲ್ಲ, ಸಂಘಟನೆಗಳ ಮುಖಂಡರ ಮಾತುಗಳೇ ಸಾಕಿತ್ತು ಗಲಭೆಗೆ ಹೇಗೆ ಎರಡೂ ಗುಂಪುಗಳು ತಯಾರಾಗಿವೆ ಎಂದು ಅರಿಯುವುದಕ್ಕೆ. ಕೆಲವು ದಿನಗಳ ಹಿಂದೆ ಶ್ರೀರಂಗಪಟ್ಟಣದಲ್ಲಿ ಹಿಂದೂ ಸಂಘಟನೆಗಳು ಟಿಪ್ಪು ಸಮಾಧಿಗೆ ಮುತ್ತಿಗೆ ಹಾಕಲು ಪ್ರಯತ್ನಿಸಿದ ಮಾಹಿತಿಯೂ ಅವರಲ್ಲಿತ್ತು (ಈ ಘಟನೆ ಯಾವ ಮಾಧ್ಯಮದಲ್ಲೂ ಪ್ರಸಾರವೇ ಆಗಲಿಲ್ಲ). ಶ್ರೀರಂಗಪಟ್ಟಣ ಮತ್ತು ಮಂಡ್ಯದಲ್ಲಿ ಶಾಂತಿಯುತವಾಗಿ ಜಯಂತೋತ್ಸವ ನಡೆದಿರುವಾಗ ಮಡಿಕೇರಿಯಲ್ಲಿ ಶಾಂತಿಯುತವಾಗಿ ನಡೆಸುವ ಸ್ಥೈರ್ಯವನ್ನು ಪೋಲೀಸರು ತೋರಿಸಬೇಕಿತ್ತು. ದುರದೃಷ್ಟವಶಾತ್ ಇವರ ಈ ವೈಫಲ್ಯಕ್ಕೆ ಮೂರು ಹೆಣಗಳುರುಳಿವೆ.

ಒಂದು ಗಮನಿಸಿದಿರೋ ಇಲ್ಲವೋ. ಈ ರೀತಿಯ ಗಲಭೆ ನಡೆಯಬಹುದೆನ್ನುವ ಅನುಮಾನ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳೆರಡಕ್ಕೂ ಇತ್ತು. ಕುಳಿತು ಮಾತನಾಡಿ ಶಾಂತಿ ಕಾಪಿಡುವಂತೆ ಮಾಡಬೇಕಿದ್ದ ಮುಖಂಡರು ಗಲಭೆ ಮತ್ತಷ್ಟು ಹೆಚ್ಚಾಗುವಂತಹ ಮೂರ್ಖತನದ ಹೇಳಿಕೆ ನೀಡುವುದರಲ್ಲಿಯೇ ಬ್ಯುಸಿಯಾಗಿಬಿಟ್ಟರು. ಕಾಂಗ್ರೆಸ್ ಮತ್ತು ಬಿಜೆಪಿಗಳೆರಡಕ್ಕೂ ತಮ್ಮ ತಮ್ಮ ವೋಟ್ ಬ್ಯಾಂಕ್ ಗಟ್ಟಿಮಾಡಿಕೊಳ್ಳುವ ನಿಟ್ಟಿನಲ್ಲಿ ಈ ಗಲಭೆ ಮತ್ತು ಹತ್ಯೆಗಳು ಅವಶ್ಯಕವೆನ್ನಿಸಿರಬೇಕು. ಇಬ್ಬರೂ ತಮ್ಮ ತಮ್ಮ ಉದ್ದೇಶ ಈಡೇರಿಸಿಕೊಂಡಿದ್ದಾರೆ ಮೂವರ ಹೆಣದ ಮೇಲೆ.

ನವೆಂ 9, 2015

ಬಂಜಗೆರೆ ಮತ್ತು ಕುಂವೀಯವರಿಗೊಂದು ಬಹಿರಂಗ ಪತ್ರ.

kum veerabhadrappa
ಹಿರಿಯರೂ, ಮಾರ್ಗದರ್ಶಕರೂ ಆಗಿರುವ ಡಾ ಬಂಜಗೆರೆ ಜಯಪ್ರಕಾಶ್ ಮತ್ತು ಕುಂ ವೀರಭದ್ರಪ್ಪನವರಿಗೆ,

ಆಳ್ವಾಸ್ ನುಡಿಸಿರಿಯ ಆಹ್ವಾನ ಪತ್ರಿಕೆ ನೋಡಿದ ಬಳಿಕ ತಮಗೆ ಪತ್ರ ಬರೆಯುತ್ತಿದ್ದೇವೆ. ತಾವು ಈ ನೆಲದಲ್ಲಿ ಎಷ್ಟೋ ಕಾಲದಿಂದ ಜಾತ್ಯಾತೀತತೆ ಕೋಮುಸೌಹಾರ್ಧತೆ, ಸಾಮಾಜಿಕ ಸಮಾನತೆ ಮತ್ತು ಸಮಾನ ಅವಕಾಶದ ಸ್ವಾಭಿಮಾನಿ ಬದುಕಿಗಾಗಿ ತಮ್ಮ ಮಾತು-ಕೃತಿಗಳ ಮೂಲಕ ಹೋರಾಟ ಮಾಡುತ್ತಾ ಬಂದವರು. ಈ ಮೂಲಕ ಯುವಪೀಳಿಗೆಗೆ ಆದರ್ಶಪ್ರಾಯರಾಗಿರುವವರು. 

ನೀವು ಹೀಗೆ ಎಡವಬಹುದೇ? ಅದೂ ಈ ಕಾಲದಲ್ಲಿ. ಇದೀಗ ದೇಶಾದ್ಯಂತ ಸಾಹಿತ್ಯ ವಲಯ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕಾಗಿ ಚಳುವಳಿಯಲ್ಲಿ ತೊಡಗಿದೆ. ಹೆಚ್ಚುತ್ತಿರುವ ಅಸೈರಣೆಯ ವಾತಾವರಣದ ವಿರುದ್ಧ ಸಿಡಿದೆದ್ದಿದೆ. ದೇಶದಲ್ಲೆಡೆ ಭುಗಿಲೆದ್ದಿರುವ ಅಸಹಿಷ್ಣುತೆಯ ವಾತಾವರಣದ ವಿರುದ್ದ ಸಾಹಿತಿಗಳು, ನಟ-ನಟಿಯರು, ವಿಜ್ಞಾನಿಗಳು ಹೋರಾಟಕ್ಕಿಳಿದಿದ್ದಾರೆ. ದೇಶದಾದ್ಯಂತ ಪ್ರಶಸ್ತಿ ವಾಪ್ಸಿ ಚಳುವಳಿ ನಡೆಯುತ್ತಿದೆ. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ವಾಪಸು ಮಾಡುವ ಮೂಲಕ ಕುಂ.ವೀರಭದ್ರಪ್ಪ ಅವರೇ ಈ ಹೋರಾಟವನ್ನು ರಾಜ್ಯದಲ್ಲಿ ಮುನ್ನಡೆಸಿದ್ದಾರೆ. ನುಡಿಸಿರಿಯಲ್ಲಿ ಪಾಲ್ಗೊಳ್ಳುವ ನಿಮ್ಮ ನಿರ್ಧಾರವನ್ನು ಈ ಹಿನ್ನೆಲೆಯಲ್ಲಿ ಪುನರ್ ಪರಿಶೀಲಿಸುವುದು ಸೂಕ್ರವಲ್ಲವೇ? 

ದಕ್ಷಿಣ ಕನ್ನಡ ಜಿಲ್ಲೆ ಎನ್ನುವುದು ಇತ್ತೀಚಿನ ವರ್ಷಗಳಲ್ಲಿ ಹಿಂದುತ್ವದ ಪ್ರಯೋಗಶಾಲೆಯಾಗಿ ರಾಷ್ಟ್ರಮಟ್ಟದಲ್ಲಿ ಕುಖ್ಯಾತಿ ಗಳಿಸಿರುವುದು ನಿಮಗೆ ತಿಳಿದಿದೆ. ಆದರೆ ಇಂತಹ ಬೆಳವಣಿಗೆಗೆ ಕಾರಣಗಳೇನು ಎಂಬ ಬಗ್ಗೆ ಆಳವಾದ ಅಧ್ಯಯನ ನಡೆದಿಲ್ಲ. ಮೇಲ್ನೋಟಕ್ಕೆ ಬಜರಂಗಿಗಳು ಸೇರಿದಂತೆ ಒಂದಿಷ್ಟು ಕೇಸರಿಪಡೆಯ ಸದಸ್ಯರು ಈ ಗಲಭೆಗಳ ರೂವಾರಿಗಳಂತೆ ಕಾಣುತ್ತಾರೆ. ಆದರೊ ಹಿಂದುಳಿದ ಮತ್ತು ದಲಿತ ವರ್ಗಕ್ಕೆ ಸೇರಿರುವ ಅಮಾಯಕ ಯುವಕರನ್ನು ದಾಳಗಳಂತೆ ಬಳಸಿಕೊಂಡು ರಾಜಕೀಯದ ಆಟವನ್ನು ಆಡುತ್ತಿರುವ ಸೂತ್ರಧಾರಿಗಳು ಯಾರ ಕಣ್ಣಿಗೂ ಕಾಣಿಸುತ್ತಿಲ್ಲ. ಇಂತಹ ಸೂತ್ರಧಾರರನ್ನು ಗುರುತಿಸುವ ವೈಚಾರಿಕ ಸ್ಪಷ್ಟತೆಯನ್ನು ನಿಮ್ಮಂತಹವರ ಬರವಣಿಗೆಗಳಿಂದಲೇ ನಾವು ಗಳಿಸಿಕೊಂಡದ್ದು. ಅದಕ್ಕಾಗಿ ನಿಮಗೆ ಋಣಿಯಾಗಿದ್ದೇವೆ.

banjagere jayaprakash
ವಿಶ್ವ ಹಿಂದೂ ಪರಿಷತ್ 50 ವರ್ಷಗಳನ್ನು ಈ ನೆಲದಲ್ಲಿ ಪೂರೈಸುತ್ತಿರುವುದಕ್ಕೂ ಈ ದೇಶದಲ್ಲಿ ಕಾಡ್ಗಿಚ್ಚಿನಂತೆ ಹರಡುತ್ತಿರುವ ಅಸಹಿಷ್ಣುತೆಗೂ ಸಂಬಂಧವಿದೆ ಎಂದು ನಿಮಗೆ ಅನಿಸುವುದಿಲ್ಲವೇ? ನೀವು ಗಮನಿಸದೆ ಇರಬಹುದಾದ ಕೆಲವು ಸಂಗತಿಗಳ ಕಡೆ ಗಮನ ಸೆಳೆಯುವ ಪ್ರಯತ್ನ ನಮ್ಮದು. ವಿಶ್ವಹಿಂದೂ ಪರಿಷತ್ತಿನ ಸುವರ್ಣ ಮಹೋತ್ಸವ ಸಮಿತಿಯ ರಾಜ್ಯ ಅಧ್ಯಕ್ಷರಾಗಿರುವವರು ನುಡಿಸಿರಿಯ ರೂವಾರಿಯಾಗಿರುವ ಡಾ ಎಂ ಮೋಹನ ಆಳ್ವರು. ಆ ಸಮಿತಿಯ ರಾಷ್ಟ್ರೀಯ ಅಧ್ಯಕ್ಷರಾಗಿರುವವರು ಡಾ ಡಿ ವೀರೇಂದ್ರ ಹೆಗ್ಗಡೆಯವರು. ಇತ್ತೀಚೆಗಷ್ಟೇ ಸುವರ್ಣ ಮಹೋತ್ಸವದ ಹೆಸರಿನಲ್ಲಿ ಮೂರು ತಿಂಗಳು ದೇಶದಾದ್ಯಂತ ಸಮಾವೇಶಗಳನ್ನು ವಿಶ್ವ ಹಿಂದೂ ಪರಿಷತ್ ನಡೆಸಿತ್ತು. ಕರ್ನಾಟಕದ ಬೇರೆ ಬೇರೆ ಜಿಲ್ಲೆಗಳಲ್ಲಿ ಸಮಾಜೋತ್ಸವಗಳನ್ನು ಆಯೋಜಿಸಲಾಗಿತ್ತು.

ಕರ್ನಾಟಕದಲ್ಲಿ ನಡೆದ ಎಲ್ಲಾ ಸಮಾವೇಶಗಳ ಯಜಮಾನಿಕೆ ಡಾ ಎಂ ಮೋಹನ ಆಳ್ವರದ್ದಾದರೆ, ರಾಷ್ಟ್ರಮಟ್ಟದ ಸಮಾವೇಶಗಳ ಯಜಮಾನಿಕೆ ಡಾ ಡಿ ವೀರೇಂದ್ರ ಹೆಗ್ಗಡೆಯವರದ್ದು. ಇದರ ನಂತರ ಕರ್ನಾಟಕವೂ ಸೇರಿದಂತೆ ದೇಶಾದ್ಯಂತ ಕೋಮುದ್ವೇಷದ ವಿಷಮಯ ವಾತಾವರಣ ನಿರ್ಮಾಣವಾಗಿರುವುದನ್ನು ತಾವು ಅಲ್ಲಗಳೆಯಲಾರಿರಿ ಎಂದು ನಂಬಿದ್ದೇವೆ. ದೇಶದಾದ್ಯಂತ ನಡೆಯುತ್ತಿರುವ ಕೋಮುಗಲಭೆ ಮತ್ತು ಧಾರ್ಮಿಕ ಅಸಹಿಷ್ಣುತೆಯ ಘಟನೆಗಳಿಗೂ ಈ ಸಮಾವೇಶಗಳಿಗೂ ಸಂಬಂಧವಿದೆ ಎಂದು ನಿಮಗೆ ಅನಿಸುವುದಿಲ್ಲವೇ? ಹೆಸರೇ ಸೂಚಿಸುವಂತೆ ಆಳ್ವಾಸ್ ನುಡಿಸಿರಿಯ ಯಜಮಾನಿಕೆ ಡಾ ಎಂ ಮೋಹನ ಆಳ್ವ ಅವರದ್ದು. ಈ ವ್ಯಕ್ತಿ ಕೇಂದ್ರಿತ ಸಾಹಿತ್ಯದ ಜಾತ್ರೆಗೆ ಡಾ ಡಿ ವೀರೇಂದ್ರ ಹೆಗ್ಗಡೆಯವರದ್ದೇ ಆಶೀರ್ವಚನ. ಆಮಂತ್ರಣ ಪತ್ರಿಕೆಯ ಮುಖಪುಟದಲ್ಲಿ ಫೋಟೋ ಕೂಡಾ ಅಚ್ಚು ಹಾಕಲಾಗಿದೆ.

ಸತ್ಯ ಇಷ್ಟೊಂದು ಸ್ಪಷ್ಟವಾಗಿ ನಮ್ಮ ಕಣ್ಣೆದುರು ಇರುವಾಗ ಕೋಮುವಾದದ ಸೂತ್ರಧಾರರ ಯಜಮಾನಿಕೆಯಲ್ಲಿ ನಡೆಯುತ್ತಿರುವ ಆಳ್ವಾಸ್ ನುಡಿಸಿರಿಯಲ್ಲಿ ನೀವು ಹೇಗೆ ಭಾಗವಹಿಸಲು ಸಾಧ್ಯ? ಇದು ನಮ್ಮನ್ನು ಕಾಡುತ್ತಿರುವ ಪ್ರಶ್ನೆ. ಆಮಂತ್ರಣ ಪತ್ರಿಕೆಯಲ್ಲಿ ಡಾ ಬಂಜಗೆರೆ ಜಯಪ್ರಕಾಶ ಸರ್ ``ಸಾಮಾಜಿಕ ನ್ಯಾಯ-ಹೊಸತನದ ಹುಡುಕಾಟ’’ ಎಂಬ ವಿಚಾರದ ಬಗ್ಗೆ ವಿಶೇಷೋಪನ್ಯಾಸ ನೀಡಿಲಿದ್ದಾರೆ ಎಂದಿದೆ. ಊಳಿಗಮಾನ್ಯ ಪದ್ದತಿ, ವ್ಯಕ್ತಿಪೂಜೆ ಮತ್ತು ಧರ್ಮದ ಹೆಸರಲ್ಲಿ ನಡೆಯುತ್ತಿರುವ ಶೋಷಣೆಯನ್ನು ವಿರೋಧಿಸಿಕೊಂಡು ಬಂದ ಈ ಆಹ್ಹಾನವನ್ನು ಹೇಗೆ ಒಪ್ಪಿಕೊಳ್ಳಲು ಸಾಧ್ಯ? 

ಕಳೆದ ಎರಡು ವರ್ಷ ಆಳ್ವಾಸ್ ನುಡಿಸಿರಿಯಲ್ಲಿ ದಲಿತರ ಅವಹೇಳನ ಮಾಡಲಾಗಿತ್ತು. ಈ ಬಗ್ಗೆ ದಲಿತ ಸಂಘಟನೆಗಳು ಪ್ರತಿಭಟನೆ ನಡೆಸಿರುವುದು ತಮ್ಮ ಗಮನಕ್ಕೆ ಬಂದಿರುವಂತಿಲ್ಲ. ತಾವು ಈಗಲೂ ಗೂಗಲ್ ಮೂಲಕ ಹುಡುಕಿದರೆ ಈ ಬಗ್ಗೆ ಮಾಹಿತಿ ದೊರೆಯುತ್ತದೆ. ಪಕ್ಕಾ ಶಿಕ್ಷಣದ ವ್ಯಾಪಾರಿಯಾಗಿರುವ ಡಾ ಎಂ ಮೋಹನ ಆಳ್ವರು ಇದೀಗ ಬಿಲ್ಡರ್ ಆಗಿಯೂ ಬೆಳೆದಿದ್ದಾರೆ. ಕುದುರೆಮುಖ ರಾಷ್ಟ್ರೀಯ ಉದ್ಯಾನವನದಲ್ಲಿ ರೆಸಾರ್ಟ್ ಸ್ಥಾಪಿಸಲು ಹೊರಟಿರುವ ಆಳ್ವರ ವಿರುದ್ಧ ಈಗಾಗಲೇ ಪರಿಸರ ಸಂಘಟನೆಗಳು ನ್ಯಾಯಾಲಯದ ಮೊರೆ ಹೋಗಿದೆ. ಜಮೀನ್ದಾರಿ ಪಳಿಯುಳಿಕೆಯಾಗಿರೋ ಡಾ ಎಂ ಮೋಹನ ಅಳ್ವರು ತಮ್ಮ ಶಿಕ್ಷಣ ವ್ಯಾಪಾರಕ್ಕಾಗಿ ಇಂತಹ ಸುಂದರವಾದ ವರ್ಣರಂಜಿತ ವಿಷಯಗಳನ್ನು ಇಟ್ಟುಕೊಂಡು ನುಡಿಸಿರಿ ಜಾತ್ರೆ ನಡೆಸುತ್ತಿದ್ದಾರೆ.

ಈ ಬಾರಿಯ ನುಡಿಸಿರಿಯಲ್ಲಿ ಸಾಮರಸ್ಯ- ಹೊಸತನದ ಹುಡುಕಾಟ ಎಂಬ ವಿಷಯದ ಬಗ್ಗೆ ನಮ್ಮ ನೆಚ್ಚಿನ ಮೇಷ್ಟ್ರಾಗಿರುವ ಕುಂ ವೀರಭದ್ರಪ್ಪನವರು ಮಾತನಾಡಲಿದ್ದಾರೆ ಎಂದು ತಿಳಿದು ಆಘಾತವಾಯಿತು. ಈ ಬಾರಿ 12 ನೇ ನುಡಿಸಿರಿ ನಡೆಯುತ್ತಿದೆ. ಕಳೆದ 11 ವರ್ಷಗಳಿಂದಲೂ ನುಡಿಸಿರಿಯಲ್ಲಿ ಇಂತಹ ಪ್ರಗತಿಪರ ವಿಷಯಗಳ ಮೇಲೆ ಆಳ್ವರು ಭಾಷಣ ಮಾಡಿಸಿದ್ದಾರೆ. ಆದರೆ ಇದರಿಂದ ಸಾಮಾಜಿಕ ಸಾಮರಸ್ಯ ಇನ್ನಷ್ಟು ಹಾಳಾಗುತ್ತಾ ಹೋಯಿತೇ ಹೊರತು ಸುಧಾರಣೆಯಾಗಲಿಲ್ಲ. ನಿಮ್ಮಂತಹ ಗೌರವಾನ್ವಿತ ಸಾಹಿತಿಗಳು ನುಡಿಸಿರಿಯ ವೇದಿಕೆ ಹತ್ತಿ ಭಾಷಣ ಮಾಡುವುದರಿಂದ ಆಳ್ವರಿಗೆ ವಿಶ್ವಾಸಾರ್ಹತೆ ತಂದುಕೊಂಡುತ್ತಿದ್ದಾರೆ. ಈ ರೀತಿ ಗಳಿಸಿಕೊಂಡ ವಿಶ್ವಾಸಾರ್ಹ ನಾಯಕತ್ವದ ಲಾಭವನ್ನು ಅವರು ಹಿಂದೂ ಸಂಘಟನೆಗಳಿಗೆ ಧಾರೆ ಎರೆಯುತ್ತಿದ್ದಾರೆ. ಸರ್, ದಯವಿಟ್ಟು ಯೋಚನೆ ಮಾಡಿ.

ದಕ್ಷಿಣ ಕನ್ನಡದ ಇತಿಹಾಸದಲ್ಲೇ ಕೋಮುಗಲಭೆ ನಡೆಯದ ಏಕೈಕ ವಿಧಾನಸಭಾ ಕ್ಷೇತ್ರವೆಂದರೆ ಅದು ಮೂಡಬಿದ್ರೆ. ಜೊತೆಗೆ ಕರಾವಳಿಯ ಇತಿಹಾಸದಲ್ಲೇ ಒಂದೇ ಒಂದು ಬಾರಿಯೂ ಬಿಜೆಪಿ ಗೆಲ್ಲಲಾಗದ ಕ್ಷೇತ್ರವಿದ್ದರೆ ಅದೂ ಮೂಡಬಿದ್ರೆಯೇ. ಇಂತಹ ಮೂಡಬಿದ್ರೆಯಲ್ಲಿ ಇತ್ತೀಚೆಗೆ ಕೋಮುಗಲಭೆಗಳು ನಡೆದುಹೋಯಿತು. ದನ ಸಾಗಾಟದ ಹೆಸರಿನಲ್ಲಿ ಹಲ್ಲೆಗಳಾಯಿತು. ಕೊಲೆ ನಡೆಯಿತು. ಇದನ್ನೇ ಬಳಸಿಕೊಂಡು ಮುಸ್ಲಿಮರ ಅಂಗಡಿ ಮನೆಗಳ ದ್ವಂಸ ಮಾಡಲಾಯಿತು. ಈ ಎಲ್ಲಾ ಸಾಮರಸ್ಯ ಕದಡುವ ಘಟನೆಗಳಿಗೂ ಹಿಂದೂ ಸಮಾಜೋತ್ಸವಗಳಿಗೂ, ವಿಶ್ವ ಹಿಂದೂ ಪರಿಷತ್ ಸುವರ್ಣ ಮಹೋತ್ಸವಕ್ಕೂ, ಅದರ ಸಂಘಟಕರ ತೆರೆಯಮರೆಯ ನೆರವು-ಬೆಂಬಲಕ್ಕೂ ಸಂಬಂಧವಿಲ್ಲ ಎನ್ನುವಿರಾ ಸರ್ ? 

"ನಮ್ಮ ಪ್ರಗತಿಪರ ವಿಚಾರಧಾರೆಗಳನ್ನು ಅವರ ವೇದಿಕೆಯಲ್ಲೇ ಹೋಗಿ ಹೇಳ್ತೀವಿ’’ ಎಂದು ಕಳೆದ ಹತ್ತು ವರ್ಷಗಳಲ್ಲಿ ಅಲ್ಲಿ ಹೋಗಿ ಭಾಷಣ ಮಾಡಿದವರು ಹೇಳುತ್ತಲೇ ಇದ್ದಾರೆ. ಇದರಿಂದ ಛದ್ಮವೇಷಧಾರಿಗಳಾದ ಬಲಪಂಥೀಯರು ಲಾಭ ಮಾಡಿಕೊಂಡರೇ ಹೊರತು ಪ್ರಗತಿಪರ ಹೋರಾಟಗಳಿಗೆ ಯಾವ ಲಾಭಗಳೂ ಆಗಿಲ್ಲ. ಶಿಕ್ಷಣದ ವ್ಯಾಪಾರಿಗಳಿಗೆ, ಧರ್ಮಾಧಿಕಾರಿಗಳಿಗೆ, ರಿಯಲ್ ಎಸ್ಟೇಟ್ ಮಾಫೀಯಾಕ್ಕೆ ಇದರಿಂದ ಸಮಾಜದಲ್ಲಿ ಗೌರವ ದೊರೆಯುತ್ತಿದೆಯೇ ಹೊರತು ಬೇರಾವ ಸಾಧನೆಯೂ ಆಗಿಲ್ಲ ಎಂಬುದು ನಾವು ಕಂಡುಕೊಂಡ ಸತ್ಯ.

ನಮ್ಮೆಲ್ಲರ ಗುರುಗಳಂತಿದ್ದ ಯು.ಆರ್. ಅನಂತಮೂರ್ತಿಯವರು ತೀರಿಕೊಂಡ ದಿನವನ್ನು ನಾವು ಮರೆಯುವಂತಿಲ್ಲ. ಇಡೀ ರಾಜ್ಯದ ಶಾಲಾ ಕಾಲೇಜುಗಳಿಗೆ ಮರುದಿನ ರಜೆ ಘೋಷಿಸಲಾಗಿತ್ತು. ರಾಜ್ಯದಲ್ಲಿ ಒಂದು ರೀತಿಯ ಸೂತಕದ ವಾತಾವರಣ ಇತ್ತು. ಆದರೆ ಕರಾವಳಿ ಮತ್ತ್ತು ಮಲೆನಾಡು ಭಾಗದಲ್ಲಿ ಕೋಮುವಾದಿಗಳು ಪಟಾಕಿ ಸಿಡಿಸಿದರು. ಈ ಪಟಾಕಿ ಸಿಡಿಸಿದ ಕೋಮುವಾದಿಗಳ ಪೋಷಕರು ಯಾರೆಂದು ಮತ್ತೆ ಬಿಡಿಸಿ ಹೇಳಬೇಕಿಲ್ಲ. ಇರಲಿ. ರಾಜ್ಯಾಧ್ಯಂತ ಶಾಲಾ ಕಾಲೇಜಿಗೆ ರಜೆ ಘೋಷಿಸಿದ್ದರೂ ಆಳ್ವಾಸ್ ಶಿಕ್ಷಣ ಸಂಸ್ಥೆಗೆ ರಜೆ ಘೋಷಿಸಿರಲಿಲ್ಲ. ರಜೆ ಕೊಟ್ಟೇ ಸಂತಾಪ ಸೂಚಿಸಬೇಕು ಎಂದೇನಿಲ್ಲ ಎನ್ನುವುದು ನಿಜ, ಆದರೆ ಅಂತಹದ್ದೊಂದು ರಜೆ ಕೋಮುವಾದಿಗಳ ಆರ್ಭಟಕ್ಕೆ ಒಂದು ಸಣ್ಣ ಪ್ರತಿರೋಧ ವ್ಯಕ್ತಪಡಿಸಿದಂತಾಗುತ್ತಿತ್ತು. ಸಾಹಿತಿಗಳನ್ನು ಪಲ್ಲಕ್ಕಿ ಮೇಲೆ ಕೂರಿಸಿ ಮೆರವಣಿಗೆ ಮಾಡುವ ಆಳ್ವಾರ ಮನಸ್ಸನ್ನು ಒಬ್ಬ ಹಿರಿಯ ಸಾಹಿತಿಯ ಸಾವು ಮತ್ತು ಅದನ್ನು ಸಂಭ್ರಮಿಸಿದ ದುಷ್ಟರ ಅಟ್ಟಹಾಸ ಕಲಕಲಿಲ್ಲ ಎನ್ನುವುದು ಎಷ್ಟೊಂದು ವಿಚಿತ್ರ ಅಲ್ಲವೇ? 

ಇದೆಲ್ಲದರ ಹೊರತಾಗಿಯೂ ಡಾ ಎಂ ಮೋಹನ ಆಳ್ವರು ತಾವು ಸಾಹಿತ್ಯದ ಪೋಷಕರು ಹೇಳಿಕೊಳ್ಳುತ್ತಾರೆ. ಅನಂತ ಮೂರ್ತಿಯವರ ಸಾವಿನ ನಂತರ ನಮ್ಮನ್ನೆಲ್ಲ ಆಘಾಥಕ್ಕೀಡುಮಾಡಿರುವುದು ಡಾ ಎಂ ಎಂ ಕಲ್ಬುರ್ಗಿ ಕೊಲೆ. ಆದರೆ ಸಾಹಿತ್ಯ ಪ್ರೇಮಿಗಳು, ಪೋಷಕರೂ ಆಗಿರುವ ಡಾ.ಆಳ್ವರು ಕನಿಷ್ಠ ನೂರು ಜನರನ್ನು ಸೇರಿಸಿ ಕಲ್ಪುರ್ಗಿಯವರ ಹತ್ಯೆಂiÀiನ್ನು ಖಂಡಿಸಲು ಮುಂದಾಗದಿರುವುದು ಏನನ್ನೂ ಸೂಚಿಸುತ್ತದೆ. ಹಾಗೆ ಮಾಡಿದರೆ ವಿಶ್ವಹಿಂದು ಪರಿಷತ್ ನಾಯಕರನ್ನು ಎದುರುಹಾಕಿಕೊಂಡಂತಾಗುತ್ತದೆ ಎಂದು ಅವರು ಭಯಪಟ್ಟಿರಬಹುದೇ? 

ಈ ಬಾರಿಯ ಆಳ್ವಾಸ್ ನುಡಿಸಿರಿಯನ್ನು ಉದ್ಘಾಟನೆ ಮಾಡಬೇಕು ಎಂದು ಹಿರಿಯ ರೈತ ಚಳುವಳಿಗಾರ ಕಡಿದಾಳು ಶ್ಯಾಮಣ್ಣರನ್ನು ಮೋಹನ ಆಳ್ವರು ಆಮಂತ್ರಿಸಿದ್ದರಂತೆ. ಶ್ಯಾಮಣ್ಣ ಅದನ್ನು ನಿರಾಕರಿಸಿದ್ದಾರೆ. ಸಾಮಾಜಿಕ ನ್ಯಾಯ ಮತ್ತು ಹೊಸತನದ ಹುಡುಕಾಟದ ಬಗ್ಗೆ ಮಾತನಾಡಲು ಡಾ ಸಿ ಎಸ್ ದ್ವಾರಕನಾಥ್ ಅವರನ್ನು ಕೇಳಿದ್ದರು. ಅವರೂ ಕೂಡಾ ಆಳ್ವರ ವಿಹಿಂಪ, ಆರ್ ಎಸ್ ಎಸ್ ನಂಟಿನ ಕಾರಣ ನೀಡಿ ಆಹ್ವಾನವನ್ನು ನೇರವಾಗಿಯೇ ನಿರಾಕರಿಸಿದ್ದಾರೆ. 

ಕಳೆದ ಕೆಲವು ವರ್ಷಗಳಿಂದ ನುಡಿಸಿರಿಯ ಬಣ್ಣ ಬಯಲಾಗುತ್ತಿರುವುದರಿಂದ ಎಚ್ಚೆತ್ತಿರುವ ನಮ್ಮ ಬಹುತೇಕ ಸಾಹಿತಿಗಳು, ಚಿಂತಕರು ಡಾ.ಆಳ್ವ ಅವರ ಆಹ್ಹಾನವನ್ನು ತಿರಸ್ಕರಿಸಿ ದೂರ ಉಳಿದಿದ್ದಾರೆ. ಇದರಿಂದಾಗಿ ಬಲಪಂಥೀಯ ಗುಂಪು ಬೌದ್ದಿಕ ಅಪೌಷ್ಠಿಕತೆಯಿಂದ ನರಳುವಂತಾಗಿದೆ. ಈ ಎಲ್ಲ ಸಂಗತಿಗಳು ನಿಮ್ಮ ಗಮನಕ್ಕೆ ಬಾರದೆಯೂ ಇರಬಹುದು. ಇದಕ್ಕಾಗಿ ಈ ಪತ್ರ ಬರೆಯುತ್ತಿದ್ದೇವೆ. ಕೊನೆಗೂ ನಿರ್ಧಾರ ನಿಮ್ಮದು. ನಿಮ್ಮನ್ನು ಅಪಾರ ಗೌರವದಿಂದ ಕಾಣುತ್ತಿರುವ ನಮ್ಮ ಮನಸ್ಸಿಗೆ ನೀವು ನೋವುಂಟುಮಾಡುವ ನಿರ್ಧಾರ ಕೈಗೊಳ್ಳಲಾರಿರಿ ಎಂದು ನಂಬಿದ್ದೇವೆ.

ವಿಶ್ವಾಸದಿಂದ,

ಅಕ್ಷತಾ ಹುಂಚದಕಟ್ಟೆ, ಡಾ ಅರುಣ್ ಜೋಳದಕೂಡ್ಲಿಗಿ, ಬಿ ಶ್ರೀಪಾದ ಭಟ್, ಟಿ ಕೆ ದಯಾನಂದ, ನವೀನ್ ಸೂರಿಂಜೆ, ಮುನೀರ್ ಕಾಟಿಪಳ್ಳ, ಅನಂತ್ ನಾಯಕ್, ಮುದ್ದು ತೀರ್ಥಹಳ್ಳಿ, ಇರ್ಷಾದ್ ಉಪ್ಪಿನಂಗಡಿ, ಲಿಂಗರಾಜ್ ಪ್ರಜಾಸಮರ, ಪೀರ್ ಬಾಷಾ, ಕಾವ್ಯಾ ಅಚ್ಯುತ್, ಜೀವನ್ ರಾಜ್ ಕುತ್ತಾರ್, ಟಿ ಎಸ್ ಗೊರವರ, ಜಯಶಂಕರ್ ಅಲಗೂರು, ಅಬ್ಬಾಸ್ ಕಿಗ್ಗ, ಕೈದಾಳ ಕೃಷ್ಣಮೂರ್ತಿ, ಸೈಫ್ ಜಾನ್ಸೆ ಕೊಟ್ಟೂರು, ಬಿ ಶ್ರೀನಿವಾಸ, ಪಂಪರೆಡ್ಡಿ ಅರಳಹಳ್ಳಿ, ಅಭಿನಂದನ್ ಬಳ್ಳಾರಿ, ಬಸವರಾಜ್ ಪೂಜಾರ್.

ಟಿಪ್ಪು ಎಂಬ ಅನವಶ್ಯಕ ಚರ್ಚೆ

Dr Ashok K R
ಹೆಚ್ಚು ಕಡಿಮೆ ಪ್ರತಿ ವರುಷವೂ ಟಿಪ್ಪುವಿನ ಪರ ವಿರೋಧದ ಚರ್ಚೆ ಪ್ರಾರಂಭವಾಗುತ್ತದೆ. ಚರ್ಚೆಯ ಎರಡೂ ಬದಿಯಿರುವವರ ಮಾತು – ಹೇಳಿಕೆ – ಬರಹಗಳು ಒಂದು ಅತಿಯಲ್ಲಿಯೇ ಇರುತ್ತವೆ. ಒಂದೆಡೆ ಟಿಪ್ಪು ಅಪ್ರತಿಮ ದೇಶಪ್ರೇಮಿ, ಬ್ರಿಟೀಷರ ವಿರುದ್ಧ ಹೋರಾಡಿದಾತ, ಹಿಂದೂ ದೇವಾಲಯಗಳಿಗೆ ದಾನ ಧರ್ಮ ನೀಡಿದ ಧರ್ಮ ಸಹಿಷ್ಣು ಎಂಬ ವಾದಗಳು ಕೇಳಿಬಂದರೆ ಮತ್ತೊಂದೆಡೆ ಟಿಪ್ಪು ದೇಶದ್ರೋಹಿ, ನೂರಾರು ಹಿಂದೂ ದೇವಾಲಯಗಳನ್ನು ಕೆಡವಿದಾತ, ಸಾವಿರಾರು ಹಿಂದೂಗಳನ್ನು ಮುಸ್ಲಿಂ ಧರ್ಮಕ್ಕೆ ಮತಾಂತರಿಸಿದಾತ ಎಂಬ ವಾದಗಳು ಚಾಲ್ತಿಯಲ್ಲಿವೆ. ನೋಡಿದರೆ ಎರಡೂ ವಾದಗಳಲ್ಲೂ ಸತ್ಯಗಳಿವೆ. ಈ ಬಾರಿ ಕರ್ನಾಟಕದಲ್ಲಿರುವ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಟಿಪ್ಪುವಿನ ಜಯಂತಿಯನ್ನು ಸರಕಾರದ ವತಿಯಿಂದ ನಡೆಸಲು ನಿರ್ಧರಿಸಿರುವುದು ಮತ್ತೊಂದು ರೌಂಡು ಟಿಪ್ಪು ಪರ ವಿರೋಧದ ಚರ್ಚೆಗೆ ಸರಕು ಒದಗಿಸಿದೆ. ಈ ಚರ್ಚೆಗಳು ಅವಶ್ಯಕವೇ?

ಟಿಪ್ಪು ಸಾಹಸಿ, ತನ್ನ ಸಾಮ್ರಾಜ್ಯವನ್ನು ವಿಸ್ತರಿಸಿದಾತ, ಬ್ರಿಟೀಷರ ಬೆದರಿಕೆಗೆ ಮಣಿಯದೆ ಹೋರಾಡಿ ಸತ್ತವನು ಎನ್ನುವುದೆಲ್ಲ ಸತ್ಯವೇ ಆದರೆ ಅಷ್ಟಕ್ಕೆ ಟಿಪ್ಪುವನ್ನು ದೇಶಪ್ರೇಮಿ ಎಂದೆಲ್ಲ ಹೊಗಳುವ ಅವಶ್ಯಕತೆಯೇನಿದೆ? ಅದು ಟಿಪ್ಪುಯಿರಬಹುದು ಮತ್ತೊಬ್ಬ ಮಗದೊಬ್ಬ ರಾಜರಿರಬಹುದು. ಅವರ್ಯಾರು ದೇಶಪ್ರೇಮಿಗಳಲ್ಲ, ದೇಶದ್ರೋಹಿಗಳಲ್ಲ; ಅವರೆಲ್ಲ ಅವರವರ ಸಾಮ್ರಾಜ್ಯಪ್ರೇಮಿಗಳಷ್ಟೇ. ಅವರ ಸಾಮ್ರಾಜ್ಯಕ್ಕೆ ಧಕ್ಕೆ ತರುವಂತಹ ವೈರಿಯನ್ನು ಎದುರಿಸಿ ನಿಲ್ಲುತ್ತಿದ್ದರು, ಕೆಲವೊಮ್ಮೆ ಗೆಲ್ಲುತ್ತಿದ್ದರು ಕೆಲವೊಮ್ಮೆ ಸೋಲುತ್ತಿದ್ದರು. ಇಷ್ಟಕ್ಕೂ ಟಿಪ್ಪುವನ್ನು ದೇಶಪ್ರೇಮಿಯೆಂದು ಕರೆಯಲು ಅವನ ಕಾಲಘಟ್ಟದಲ್ಲಿ ‘ಭಾರತ’ವೆಂಬ ದೇಶವಾದರೂ ಎಲ್ಲಿತ್ತು. ನೂರಾರು ರಾಜರ ನಡುವ ಹಂಚಿಹೋಗಿದ್ದ ದೇಶವನ್ನು ಒಗ್ಗೂಡಿಸಿ ನಂತರ ಮತ್ತೆ ಒಡೆದ ಖ್ಯಾತಿ ಬ್ರಿಟೀಷರದ್ದು, ಮತ್ಯಾರದೂ ಅಲ್ಲ. ಇಷ್ಟು ಕಾಮನ್ ಸೆನ್ಸ್ ಇಟ್ಕೊಳ್ಳದೆ ನೂರಿನ್ನೂರು ವರುಷಗಳ ಹಿಂದೆ ಸತ್ತು ಹೋದವರ ನೆನಪಿನಲ್ಲಿ ‘ಚರ್ಚೆ’ ಮಾಡುವುದು ಯಾವ ಸಂಭ್ರಮಕ್ಕೆ. ಬ್ರಿಟೀಷರ ವಿರುದ್ಧ ಹೋರಾಡಿದವರನ್ನು ದೇಶಪ್ರೇಮಿ ಎಂದು ಗುರುತಿಸುವುದಾದರೆ ಟಿಪ್ಪುವನ್ನೂ ದೇಶಪ್ರೇಮಿಯೆಂದು ಹೊಗಳಲು ಅಡ್ಡಿಯಿಲ್ಲ.

ಮೊನ್ನೆ ಗೆಳೆಯನೊಬ್ಬ ಮೆಸೇಜು ಕಳಿಸಿದ್ದ. ಟಿಪ್ಪು ಜಯಂತಿ ಸರಕಾರ ಆಚರಿಸೋದು ತಪ್ಪು ಅಂತ. ಮೈಸೂರು ಸಂಸ್ಥಾನದ ಕುರುಹಾದ ದಸರಾವನ್ನು ಸರಕಾರ ಪ್ರತೀ ವರ್ಷ ಆಚರಿಸುತ್ತದೆ, ‘ರಾಜ’ ಕುಟುಂಬಕ್ಕೆ ಲಕ್ಷ ಲಕ್ಷ ಎಣಿಸಿ ಕೊಡುತ್ತದೆ, ಹಂಪಿ ಉತ್ಸವ ಆಚರಿಸುತ್ತದೆ ಇನ್ನೂ ಹತ್ತಲವು ಜಯಂತಿಗಳನ್ನು ಆಚರಿಸುತ್ತದೆ ಆಗೆಲ್ಲ ಸರಕಾರದ ವತಿಯಿಂದ ಜಯಂತಿಗಳನ್ನು ನಡೆಸುವುದು ತಪ್ಪು ಎನ್ನಿಸದೆ ಈಗ ಟಿಪ್ಪು ಜಯಂತಿಯ ವಿಷಯಕ್ಕೆ ಮಾತ್ರ ವಿರೋಧ ವ್ಯಕ್ತವಾಗುವುದು ಯಾಕೆ? ಟಿಪ್ಪು ಸುಲ್ತಾನ್ ಮುಸ್ಲಿಮನೆಂಬ ಕಾರಣಕ್ಕೆ ತಾನೇ ಈ ವಿರೋಧ. ಟಿಪ್ಪು ಸುಲ್ತಾನ್ ಕೇರಳದಲ್ಲಿ, ಮಲೆನಾಡಿನಲ್ಲಿ ಬಲವಂತದ ಮತಾಂತರ ನಡೆಸಿದ್ದಾನೆ ಎಂದು ಬೊಬ್ಬೆಯೊಡೆಯುವವರು ಕೇರಳದಲ್ಲಿ ದಲಿತರ ಮೇಲಿದ್ದ ‘ತಲೆ ತೆರಿಗೆ’ ‘ದೇಹ ತೆರಿಗೆ’ ‘ಮೊಲೆ ತೆರಿಗೆ’ಯ ಬಗ್ಗೆ ಚಕಾರವೆತ್ತುವುದಿಲ್ಲ. ಬಲವಂತದಿಂದಲೂ ಮತಾಂತರ ನಡೆದಿರುವುದನ್ನು ನಿರಾಕರಿಸದೆಯೇ ಹಿಂದೂ ಧರ್ಮದೊಳಗಿನ ಜಾತಿ ಪದ್ಧತಿ ಕೂಡ ಈ ಮತಾಂತರಕ್ಕೆ ಪೂರಕವಾಯಿತು ಎನ್ನುವುದನ್ನು ಮರೆಯಬಾರದು. 

ಸರಕಾರ ಹಿಂಗೆ ಇರೋ ಬರೋ ರಾಜರ ಹೆಸರಿನಲ್ಲೆಲ್ಲಾ ಜಯಂತಿ ಉತ್ಸವಗಳನ್ನು ಆಚರಿಸಬೇಕೆ ಎಂಬ ಪ್ರಶ್ನೆಗೆ ಉತ್ತರ ಹೌದು ಮತ್ತು ಇಲ್ಲ. ಇಂತಹ ಉತ್ಸವಗಳನ್ನೆಲ್ಲ ಆಚರಿಸೋದು ಸರಕಾರದ ಕೆಲಸವಲ್ಲ ಇನ್ನು ಮುಂದೆ ಸರಕಾರದ ವತಿಯಿಂದ ಮೈಸೂರು ದಸರವನ್ನು ನಡೆಸಲಾಗುವುದಿಲ್ಲ ಎಂದು ಹೇಳುವ ಧೈರ್ಯವಂತ ಸರಕಾರವನ್ನು ಕರ್ನಾಟಕದಲ್ಲಿ ಕಾಣಬಹುದೆ? ಹಾಗೆ ಹೇಳಿದರೆ ಇದೇ ಟಿಪ್ಪು ಜಯಂತಿಯನ್ನು ವಿರೋಧಿಸುತ್ತಿರುವವರು ಹೇಗೆ ಪ್ರತಿಕ್ರಿಯೆ ನೀಡಬಹುದು? ಹಾಗೆ ನೋಡಿದರೆ ಮೈಸೂರು ಸಂಸ್ಥಾನ ಬ್ರಿಟೀಷರ ವಿರುದ್ಧ ಗಟ್ಟಿ ನೆಲೆಯಲ್ಲಿ ಹೋರಾಡಿದ್ದೇ ಇಲ್ಲ. ‘ದೇಶದ್ರೋಹಿ’ ಕುಟುಂಬಕ್ಕೆ ವರುಷ ವರುಷ ಜನರ ತೆರಿಗೆ ದುಡ್ಡಿನಿಂದ ಲಕ್ಷ ಲಕ್ಷ ಎಣಿಸುತ್ತಾರಲ್ಲ ಅದನ್ನೂ ನಿಲ್ಲಿಸಬೇಕಲ್ಲವೇ? ಸರಕಾರಗಳಿಗೆ ಈ ಉತ್ಸವ, ಜಯಂತಿಗಳೆಲ್ಲವೂ ಮತ ಬ್ಯಾಂಕ್ ಮತ್ತು ಹಣ ಮಾಡುವ ದಂಧೆಗಳಷ್ಟೇ. ದಸರೆಯ ನೆಪದಲ್ಲಿ ಟಾರು ಬಳಿಯಲು, ರಸ್ತೆಗಳನ್ನು ಸಿಂಗರಿಸಲು ಪ್ರತೀ ವರುಷ ಹಣ ಬಿಡುಗಡೆಯಾಗುತ್ತದೆ. ವರುಷ ಮುಗಿಯುವದರೊಳಗೆ ಕೀಳುವಂತಹ ಟಾರನ್ನು ಹಾಕುವುದು ದುಡ್ಡು ಮಾಡುವ ಉದ್ದೇಶದಿಂದಲೇ ಅಲ್ಲವೇ? ಈ ಮತ ಬ್ಯಾಂಕ್, ಭ್ರಷ್ಟಾಚಾರದ ಲೆಕ್ಕದಲ್ಲಿ ನೋಡಿದರೆ ಸರಕಾರ ಎಲ್ಲ ಉತ್ಸವ ಜಯಂತಿಗಳನ್ನೂ ನಿಲ್ಲಿಸಿಬಿಡಬೇಕು. ಆದರೆ ಈ ಉತ್ಸವಗಳಿಂದ ಒಂದು ಅನುಕೂಲವೂ ಇದೆ. ಅದು ಪಾರಂಪರಿಕ ತಾಣಗಳ ಕಟ್ಟುನಿಟ್ಟು ನಿರ್ವಹಣೆ, ಕಾಲಕಾಲಕ್ಕೆ ನಡೆಯುವ ನವೀಕರಣ ಮತ್ತು ಪ್ರವಾಸೋದ್ಯಮಕ್ಕೆ ಅಪಾರ ಪ್ರೋತ್ಸಾಹ. ಮೈಸೂರಿಗೆ ವರುಷದಿಂದ ವರುಷಕ್ಕೆ ಪ್ರವಾಸಿಗರ ಸಂಖೈ ಹೆಚ್ಚುವುದಕ್ಕೆ ದಸರಾ ಮೆರವಣಿಗೆಯ ಕೊಡುಗೆಯನ್ನು ಕಡೆಗಣಿಸಲಾಗದು. ಅದೇ ಲೆಕ್ಕದಲ್ಲಿ ಟಿಪ್ಪು ಜಯಂತಿಯಿಂದ ಶ್ರೀರಂಗಪಟ್ಟಣ ಒಂದಷ್ಟು ಸಿಂಗಾರಗೊಂಡು ಪ್ರವಾಸಿಗರ ಸಂಖೈ ಹೆಚ್ಚಿ ವ್ಯಾಪಾರ ವಹಿವಾಟು ಹೆಚ್ಚಿದರೆ ಯಾಕೆ ಬೇಡವೆನ್ನಬೇಕು? ಟಿಪ್ಪು ಜಯಂತಿಯ ಹೆಸರಿನಲ್ಲಿ ಎಲ್ಲಾ ಜಿಲ್ಲೆ ತಾಲ್ಲೂಕುಗಳಿಗೆ ದುಡ್ಡು ಹಂಚುವುದನ್ನು ಬಿಟ್ಟು ಅಷ್ಟೂ ದುಡ್ಡನ್ನು ಶ್ರೀರಂಗಪಟ್ಟಣದ ಪಾರಂಪರಿಕ ತಾಣಗಳ ಅಭಿವೃದ್ಧಿಗೆ ಬಳಸಿದರೆ ಪ್ರವಾಸೋದ್ಯಮ ಬೆಳೆಯುತ್ತದೆಯೆನ್ನುವುದನ್ನು ಮರೆಯಬಾರದು.

ನವೆಂ 7, 2015

ಇಲ್ಲಿ ಎಲ್ಲರೂ ಸಮಾನರು; ದಲಿತರು ಮಾತ್ರ ನಿಕೃಷ್ಟರು....

ಮೀಸಲಾತಿಯ ವಿರುದ್ಧದ ಮೇಲಿನ ಚಿತ್ರವನ್ನು ನಿಮ್ಮಲ್ಲಿ ಬಹಳಷ್ಟು ಜನರು ಫೇಸ್ ಬುಕ್ಕಿನಲ್ಲೋ ಮತ್ತೊಂದು ಕಡೆಯೋ ಗಮನಿಸಿರುತ್ತೀರಿ. ಒಂದು ಲೈಕನ್ನೂ ಒತ್ತಿರುತ್ತೀರಿ, ಶೇರ್ ಕೂಡ ಮಾಡಿರುತ್ತೀರಿ. 'ನೋಡ್ರಿ ನೋಡ್ರಿ ಮೀಸಲಾತಿ ಇಲ್ಲದ ಅಮೆರಿಕಾದಲ್ಲಿ ಹೇಗೆಲ್ಲ ಅಭಿರುದ್ಧಿಯಾಗಿದೆ, ನಾವು ನೋಡಿ ಎಷ್ಟು ಹಿಂದುಳಿದಿದ್ದೀವಿ' ಎಂದು ನೊಂದುಕೊಂಡಿರುತ್ತೀರಿ. ಆ ಚಿತ್ರವನ್ನು ಸೃಷ್ಟಿಸಿದವನಿಗೆ ಮತ್ತು ಅದನ್ನು ಮೆಚ್ಚಿ ಹಂಚಿಕೊಂಡವರಿಗೆಲ್ಲ ಭಾರತದಲ್ಲಿನ್ನೂ ಇರುವ ಸಾಮಾಜಿಕ ಅಸಮಾನತೆಯ ಸಂಪೂರ್ಣ ಅರಿವಿದೆ. ಬಹಿರಂಗವಾಗಿ ತೋರಿಸಿಕೊಳ್ಳದಿದ್ದರೂ ಅಂತರಂಗದಲ್ಲಿ ದಲಿತರನ್ನು ಕೀಳಾಗಿ ಕಾಣಬೇಕೆಂದು ಕಲಿಸಿರುವ ಚಾತುರ್ವರ್ಣ್ಯದ ಕುರಿತಾಗಿ ಅಪಾರ ಗೌರವವಿದೆ. ಅಂತದ್ದೇ ಗೌರವಾನ್ವಿತ ಊರಿನಿಂದ ಬಂದಿರುವ ಥರ್ಡ್ ಕ್ಲಾಸ್ ಸುದ್ದಿಯಿದು.
ಸರಕಾರೀ ಕೆಲಸದಲ್ಲಿ ಸರಿಯಾಗಿ ಕೆಲಸ ಮಾಡದಿದ್ದರೂ ಪ್ರತಿ ದಿನ ಏನೇನು ಕೆಲಸ ಮಾಡಿದರೆಂದು ಬರೆದಿಡುವುದನ್ನು ಮಾತ್ರ ಮರೆಯಬಾರದು. ಕೋಲಾರದ ಕಗ್ಗನಹಳ್ಳಿಯ ಸರಕಾರಿ ಶಾಲೆಯ ಅಡುಗೆ ಕೆಲಸದ ಮುಖ್ಯಸ್ಥೆ ರಾಧಮ್ಮನಿಗೂ ಒಂದು ನೋಟ್ ಪುಸ್ತಕ ನೀಡಲಾಗಿದೆ. ತಪ್ಪದೇ ಪ್ರತೀ ದಿನ ರಾಧಮ್ಮಳೂ ಒಂದು ಸಾಲು ಬರೆಯುತ್ತಾಳೆ. 'ಇವತ್ತು ಯಾರೂ ಊಟ ಮಾಡಿಲ್ಲ' ಎಂಬ ಸಾಲು ಇಡೀ ಡೈರಿಯನ್ನು ತುಂಬಿಹೋಗಿದೆ. ಸರಕಾರೀ ಶಾಲೆಯೆಂದು ಊರಿನವರು ಮಕ್ಕಳನ್ನು ಕಳುಹಿಸುತ್ತಿಲ್ಲವೇನೋ, ಅಕ್ಕಪಕ್ಕದ ಖಾಸಗಿ ಶಾಲೆಗೆ ಕಳುಹಿಸುತ್ತಿರಬೇಕೆಂದುಕೊಂಡರೆ ಅದೂ ಸುಳ್ಳು. ಊರಿನ ಮಕ್ಕಳು ಹೋಗುವುದು ಪಕ್ಕದ ಹಳ್ಳಿಯ ಸರಕಾರೀ ಶಾಲೆಗೆ. ಊರಿನಲ್ಲೇ ಉತ್ತಮವಾದ ಶಾಲೆಯಿದ್ದರೂ ಪಕ್ಕದ ಶಾಲೆಗೆ ಮಕ್ಕಳು ಹೋಗುವುದ್ಯಾಕೆ?
ಕಗ್ಗನಹಳ್ಳಿಯ ರಾಧಮ್ಮ
ಯಾಕೆಂದರೆ ರಾಧಮ್ಮ ಚಾತುರ್ವಣ್ಯದ ಒಳಗೂ ಪ್ರವೇಶ ಪಡೆಯದ 'ನಿಕೃಷ್ಟ' ದಲಿತ ಜಾತಿಗೆ ಸೇರಿದ ಹೆಣ್ಣುಮಗಳು. 2014ರಲ್ಲಿ ರಾಧಮ್ಮಳನ್ನು ಅಡುಗೆಯ ಕೆಲಸಕ್ಕೆ ನೇಮಿಸಿದ ನಂತರ ಇದುವರೆಗೆ ಒಟ್ಟು ನೂರು ವಿದ್ಯಾರ್ಥಿಗಳನ್ನು ಅವರ ಹೆತ್ತವರು ಶಾಲೆಯಿಂದ ಬಿಡಿಸಿಬಿಟ್ಟಿದ್ದಾರೆ. 'ಆದಿ ಕರ್ನಾಟಕ ಜಾತಿಗೆ ಸೇರಿದ ಮಹಿಳೆ ಮಾಡಿದ ಅಡುಗೆಯನ್ನು ನಮ್ಮ ಮಕ್ಕಳು ತಿನ್ನುವುದು ಹೇಗೆ ಸಾಧ್ಯ?' ಎಂಬ ಜಾತಿ ಶ್ರೇಷ್ಟತೆಯೇ ಇದಕ್ಕೆಲ್ಲ ಕಾರಣ. ಚೆನ್ನಾಗಿದ್ದ ಶಾಲೆಯನ್ನು ಹಾಳು ಮಾಡಿದ್ದೇ ಈ ರಾಧಮ್ಮ ಎಂದು ದೂಷಿಸುವ ಮಟ್ಟಿಗೆ ಅಲ್ಲಿನ ಊರಿನವರು ಮಾತನಾಡುತ್ತಿದ್ದಾರೆ ಎಂದು ವರದಿ ಮಾಡಿದೆ ಇಂಡಿಯನ್ ಎಕ್ಸ್ ಪ್ರೆಸ್.
ಈಗಲ್ಲಿರುವ ವಿದ್ಯಾರ್ಥಿಗಳ ಸಂಖೈ ಹದಿನೆಂಟು ಮಾತ್ರ. ಇನ್ನೊಂದು ಎಂಟು ಜನರು ಶಾಲೆ ಬಿಟ್ಟರೆ ಶಾಲೆಯನ್ನೇ ಮುಚ್ಚುವ ಪರಿಸ್ಥಿತಿ ಸೃಷ್ಟಿಯಾಗುತ್ತೆ. 'ಥೂ ಈ ಹಾಳಾದ್ ರಾಧಮ್ಮನಿಂದ ಇರೋ ಒಂದು ಶಾಲೇನೂ ಮುಚ್ಚೋಯ್ತು' ಅಂತ ಬಿಟ್ಟಿಯಾಗಿ ಸಿಗುವ ದಲಿತರನ್ನು ಬಯ್ದಾಡುತ್ತಾ ಊರವರೆಲ್ಲ ಕುಸಿ ಪಡಬಹುದು. ಹಿಂದೂ ಧರ್ಮ ನಾಶವಾಗುವವರೆಗೆ ದಲಿತರಿಗೆ ಮುಕ್ತಿಯಿಲ್ಲ ಎಂದ್ಹೇಳಿದ್ದು ಅಂಬೇಡ್ಕರ್ ಅಲ್ಲವೇ?

ಅಕ್ಟೋ 29, 2015

ದಲಿತ ಜಾತಿ ಹುಟ್ಟಿದ್ದು ಸಾಬರಿಂದ: ಬಿಜೆಪಿ ವಕ್ತಾರ

bizoy sonkar shastri
ಬಿಜೆಪಿಯ ವಕ್ತಾರ ಬಿಝಯ್ ಸಂಕರ ಶಾಸ್ತ್ರಿ ಹೊಸದೊಂದು ವಿಚಾರವನ್ನು 'ಕಂಡು ಹಿಡಿದಿದ್ದಾರೆ'. ಭಾರತದಲ್ಲಿ ದಮನಿತ ದಲಿತ ಜಾತಿ ಹುಟ್ಟಿದ್ದೇಗೆ ಎನ್ನುವುದರ ಕುರಿತು ಬೆಳಕು ಚೆಲ್ಲಿದ್ದಾರೆ. ಎಲ್ಲದಕ್ಕೂ ಮುಸ್ಲಿಮರೇ ಕಾರಣ ಎನ್ನುವ ಸಿದ್ಧಾಂತವನ್ನು ನಂಬುವಂತೆ ಮಾತನಾಡುವ ಬಿಜೆಪಿಯವರಾದ ಬಿಝಯ್ ಅವರ ಅಧ್ಯಯನದ ಪ್ರಕಾರ ಸಾಬರು ಬರುವುದಕ್ಕೆ ಮುಂಚೆ ಭಾರತದಲ್ಲಿದ್ದ ಬ್ರಾಹ್ಮಣರು ದೇಶದ ಸಂಸ್ಕೃತಿ ಮತ್ತು ಧರ್ಮವನ್ನು ರಕ್ಷಿಸುವುದರಲ್ಲಿ ನಿರತರಾಗಿದ್ದರೆ ಕ್ಷತ್ರಿಯರು ಭಾರತದ ಗಡಿಯ ರಕ್ಷಣೆಯಲ್ಲಿ ಬ್ಯುಸಿಯಾಗಿದ್ದರು. ಆಗ ಬಂದ ಸಾಬರು ಈ ಬ್ರಾಹ್ಮಣ ಮತ್ತು ಕ್ಷತ್ರಿಯರ ಮೇಲೆ ಭಯಂಕರವಾಗಿ ಹಲ್ಲೆ ನಡೆಸಿ ಅವರು ಇಸ್ಲಾಮಿಗೆ ಮತಾಂತರವಾಗುವಂತೆ ಮಾಡಿದರಂತೆ. ಧರ್ಮ ಮತ್ತು ತಮ್ಮ ಕುಲದ ಬಗ್ಗೆ ಅಪಾರ ಭಯ ಭಕ್ತಿ ಇಟ್ಟುಕೊಂಡಿದ್ದ ಕೆಲವು ಬ್ರಾಹ್ಮಣರು ಮತ್ತು ಕ್ಷತ್ರಿಯರು ಮತಾಂತರವಾಗಲು ಒಪ್ಪಲಿಲ್ಲವಂತೆ. ಇವರ ಆತ್ಮಾಭಿಮಾನವನ್ನು ತೊಡೆದು ಹಾಕುವ ಕಾರಣಕ್ಕೆ ಮುಸ್ಲಿಮರು ಇವರಿಗೆ ಮಲ ಹೊರುವ ಕೆಲಸವನ್ನು ಮತ್ತು ಪ್ರಾಣಿ ಚರ್ಮವನ್ನು ಹದಗೊಳಿಸುವ ಕೆಲಸವನ್ನು ಮಾಡಿಸಿದರಂತೆ. ಇಂತಹ ಕೆಲಸ ಮಾಡುವವರು ಪರಿಶಿಷ್ಟ ಜಾತಿಯವರಾದರೆಂದು ಬಿಝಯ್ ರವರ ಅಭಿಪ್ರಾಯ! ಸಾಬರು ದಾಳಿ ನಡೆಸಿದಾಗ ಕೆಲವು ಬ್ರಾಹ್ಮಣರು ಮತ್ತು ಕ್ಷತ್ರಿಯರು ಬೆಟ್ಟಗಳಿಗೆ ಓಡಿ ಹೋದರಂತೆ; ಅವರೇ ಇವತ್ತಿರುವ ಪರಿಶಿಷ್ಟ ಪಂಗಡದವರಂತೆ!
ಇಂತಹ ಬ್ರಹಸ್ಪತಿಗಳ ಮಾತುಗಳನ್ನು ಕೇಳಿದಾಗ ಯಾವ ಯಾವ ಕಡೆಯಿಂದ ನಗಬೇಕೋ ಗೊತ್ತಾಗುವುದಿಲ್ಲ. ಮನುಷ್ಯ ಮೂಲತಃ ಕಾಡುವಾಸಿ, ನಂತರ ಕಾಡು ಕಡಿದು ಕಾಡು ತೊರೆದು ಊರುಗಳನ್ನು ನಿರ್ಮಿಸಿದಾತ ಎನ್ನುವಷ್ಟೂ ಸಾಮಾನ್ಯ ಜ್ಞಾನ ಇವರಿಗೆ ಇರುವುದಿಲ್ಲವಾ? ಸಾಬರ ದಾಳಿಯಲ್ಲಿ ಮತಾಂತರಗೊಳ್ಳದೇ ಇರುವವರೆಲ್ಲ ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿಕೊಂಡುಬಿಟ್ಟಿದ್ದರೆ ಇವತ್ತು ಭಾರತದ ಬಹುಭಾಗದಲ್ಲಿ ಮುಸ್ಲಿಮರು ಮತ್ತು ದಲಿತರಷ್ಟೇ ಇರಬೇಕಿತ್ತಲ್ಲವೇ? ಅದೇಕೆ ಇನ್ನೂ ಇಲ್ಲಿ ಬ್ರಾಹ್ಮಣರಿದ್ದಾರೆ? ಕ್ಷತ್ರಿಯರಿದ್ದಾರೆ? ಇವರ ಅಧ್ಯಯನದಲ್ಲಿ ಶೂದ್ರರೇ ಇಲ್ಲವಲ್ಲ! ಶೂದ್ರ ಜಾತಿಯ ಹುಟ್ಟಿಗೆ ಕಾರಣಗಳಾವುದು? ಬಹುಶಃ ಕ್ರಿಶ್ಚಿಯನ್ನರ ದಾಳಿಯಿಂದ ಶೂದ್ರ ಸಮುದಾಯ ಹುಟ್ಟಿರಬಹುದು! ಒಂದು ಕ್ಷಣ ಇವರ ನಗೆಪಾಟಲಿನ ಹೇಳಿಕಗಳನ್ನೆಲ್ಲ ಒಪ್ಪಿಕೊಂಡುಬಿಡೋಣ. ಸಾಬರೇ ದಲಿತ ಜಾತಿಯ ಹುಟ್ಟಿಗೆ ಕಾರಣ ಎಂದು ನಂಬೋಣ. ದಲಿತ ಜಾತಿಯನ್ನು ಹುಟ್ಟಿಸಿದ ಸಾಬರಿಗೆ ದಲಿತರನ್ನು ಕಂಡರೆ ಅಸ್ಪ್ರಶ್ಯ ಮನೋಭಾವವಿಲ್ಲ. ಆ ಅಸ್ಪ್ರಶ್ಯ ಮನೋಭಾವ ಇರೋದು ಬ್ರಾಹ್ಮಣ, ಕ್ಷತ್ರಿಯ ಮತ್ತು ಶೂದ್ರರಿಗೆ. ದಲಿತ ಜಾತಿಯವರೆಲ್ಲ ಬ್ರಾಹ್ಮಣ ಮತ್ತು ಕ್ಷತ್ರಿಯ ಜಾತಿಯಿಂದಲೇ ಬಂದವರೆಂದ ಮೇಲೆ ಈ ಜಾತಿಯವರಿಗೇ ದಲಿತರ ಮೇಲಿರುವ ಅಸ್ಪ್ರಶ್ಯತೆ ಅಚ್ಚರಿ ಮೂಡಿಸುವ ವಿಷಯವಲ್ಲವೇ?! ಸಾಬರ ಮೇಲೆ ಎಲ್ಲದಕ್ಕೂ ಗೂಬೆ ಕೂರಿಸುವ ಪ್ರಯತ್ನದ ಜೊತೆಜೊತೆಗೆ ದಲಿತರಿಗೆ 'ನೋಡಿ ನೀವು ಬ್ರಾಹ್ಮಣ ಮತ್ತು ಕ್ಷತ್ರಿಯ ಜಾತಿಯ ಪೂರ್ವಜರಿಂದ ಬೇರ್ಪಟ್ಟವರು. ನೀವು ಸಾಬರ ಹತ್ತಿರ ಚೆನ್ನಾಗಿರಬಾರದು' ಎಂದು ಬ್ರೈನ್ ವಾಶ್ ಮಾಡುವ ಹುನ್ನಾರವೇ? ಉಳಿದವರ ಬಗ್ಗೆ ಗೊತ್ತಿಲ್ಲ ಬಿಜೆಪಿಯ ವಕ್ತಾರ ಬಿಝಯ್ ರವರ ತಲೆಯಂತೂ ಚೆನ್ನಾಗಿ ತೊಳೆಯಲ್ಪಟ್ಟಿದೆ!
ಸುದ್ದಿಮೂಲ: ದಿಹಿಂದೂ

ಅಕ್ಟೋ 27, 2015

Amazon, don't make us 'bankrupt'

Dear Amazon,
I have been seeing your ads in many kannada newspapers from past 2 days. 'The Great Indian Sale' in view of Deepavali festival is appreciable for all those purchasers who wait for the 'deals'. I am very much disappointed with those advertisements. The festival of lights is termed as 'Diwali' in your ads. Though this festival is famous as Diwali in Non Karnataka states it is called as Deepavali in Karnataka. Use of the word 'Diwali' in Karnataka is really absurd because the word 'Diwali' in Kannada means 'bankrupt'! You should have a team to understand the local language and use local language properly before placing ads in News papers of that particular state. Or do you really mean that whoever purchases in Amazon will go 'bankrupt'? If that is the case then please continue with the present ads or make proper arrangements to change the ads. Thought of purchasing few items this time but seeing your callousness towards the Local Language i won't be purchasing anything this time.
Happy Deepavali in advance.
With Regards,
Kannadiga.

Copy and send this to amazon customer service: click here
amazon india facebook page: click here

ಅಕ್ಟೋ 23, 2015

ಕಾಣೆಯಾಗಿದ್ದಾರೆ: ಕೆ.ಜೆ.ಜಾರ್ಜ್, ಗೃಹಮಂತ್ರಿಗಳು ಕರ್ನಾಟಕ.

ಕರ್ನಾಟಕದಲ್ಲಿ ಹಿಂಸೆಯ ಚಕ್ರ ಯಶಸ್ವಿಯಾಗಿ ತಿರುಗಲಾರಂಭಿಸಿದೆ. ಜಾತಿ ಮತ್ತು ಧರ್ಮದ ಕಾರಣಕ್ಕೆ ತಿರುಗಲಾರಂಭಿಸಿರುವ ಈ ಹಿಂಸೆಯ ಚಕ್ರ ನಿಲ್ಲುವ ಯಾವ ಸೂಚನೆಯೂ ಕಾಣುತ್ತಿಲ್ಲ. ಹಿಂಸೆಯನ್ನು ತಡೆಯಲಾರದ ಪೋಲೀಸ್ ಇಲಾಖೆಯ ವೈಫಲ್ಯದಿಂದ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕಿದ್ದ ಜಾರ್ಜ್ ಎನ್ನುವ ನಾಲಾಯಕ್ ಗೃಹಮಂತ್ರಿ ಎಷ್ಟು ಜನರು ರೇಪ್ ಮಾಡಿದರೆ ಗ್ಯಾಂಗ್ ರೇಪ್ ಎಂಬುದರ ಬಗ್ಗೆ ಅಧ್ಯಯನ ನಡೆಸುವುದರಲ್ಲಿ ಬ್ಯುಸಿಯಾಗಿದ್ದಾರೆ ಎಂದು ನಂಬಲನರ್ಹವಾದ ಮೂಲಗಳಿಂದ ತಿಳಿದು ಬಂದಿದೆ. ಈ ಗೃಹಮಂತ್ರಿಯ ಉಸ್ತುವಾರಿಲ್ಲಿ ಇಬ್ಬರು ಪೋಲೀಸರೂ ಕಳ್ಳರಿಂದ ಹತ್ಯೆಯಾಗಿಬಿಟ್ಟರು. ಪೋಲೀಸರ ನೈತಿಕ ಸ್ಥೈರ್ಯ ಹೆಚ್ಚಿಸುವ ಮಾತುಗಳನ್ನು ಇವರಿಂದಾಗಲೀ ಅಥವಾ ಇವರ ಮೇಲಿರುವ ಸಿದ್ಧರಾಮಯ್ಯನವರಿಂದಾಗಲೀ ಕೇಳಿ ಬರಲೇ ಇಲ್ಲ. ಹಾಡು ಹಗಲೇ ಪುಡಿಗಳ್ಳರಿಂದ ರೌಡಿಗಳಿಂದ ಪೋಲೀಸರು ಹತ್ಯೆಯಾಗುವ ಸಮಾಜದಲ್ಲಿ ಕಾನೂನು ಸುವ್ಯವಸ್ಥೆ ಇದೆಯೇ?

ಡಾ.ಎಂ.ಎಂ.ಕಲಬುರ್ಗಿಯವರ ಹತ್ಯೆಯಾಗಿ ತಿಂಗಳುಗಳೇ ಕಳೆಯಿತು. ಆರೋಪಿಗಳು ಪತ್ತೆಯಾಗಲಿಲ್ಲ. ಅವರ ಹತ್ಯೆಯ ಸಮರ್ಥಕರು ಕೇಕೆ ಹಾಕಿ ನಗುತ್ತಿದ್ದಾರೆ. ಕೆ.ಎಸ್.ಭಗವಾನರಿಗೆ ಬೆದರಿಕೆಯ ಮೇಲೆ ಬೆದರಿಕೆ ಬರುತ್ತಿವೆ. ಬೆದರಿಕೆ ಹಾಕಿದವರ‍್ಯಾರು ಎನ್ನುವುದೇ ಗೊತ್ತಾಗುತ್ತಿಲ್ಲ. ಪೇಜಾವರ ಸ್ವಾಮೀಜಿಗಳ ಕಾರಿನ ಮೇಲೆ ಹಾಡಹಗಲೇ ಕಲ್ಲು ತೂರಲಾಗುತ್ತದೆ, ಅವರ ಬಂಧನವೂ ಸಾಧ್ಯವಾಗಿಲ್ಲ. ಧರ್ಮದ ಹುಳುಕುಗಳನ್ನು ಎತ್ತಿ ತೋರುವ ಲೇಖಕರ ವಿರುದ್ಧ ಕತ್ತಿ ಮಸೆಯುವವರ ಸಂಖೈ ಹೆಚ್ಚಾಗಿದೆ. ಪೋಲೀಸರ ಮತ್ತು ಸರಕಾರದ ನಿಷ್ಕ್ರಿಯತೆ ಇಂತಹ ಮತಾಂಧರಿಗೆ ಮತ್ತಷ್ಟು ಮಗದಷ್ಟು ಹಲ್ಲೆ ನಡೆಸುವ ಆ ಮೂಲಕ ಧರ್ಮರಕ್ಷಕರ ಪಟ್ಟ ಕಟ್ಟಿಕೊಳ್ಳುವಂತೆ ಪ್ರೇರೇಪಿಸುತ್ತಿದೆ. ಕಲಬುರ್ಗಿಯವರ ಹತ್ಯೆಯಾದ ಸ್ಥಳದಿಂದ ನೂರು ಕಿಮಿ ದೂರದಲ್ಲಿ ಉಚ್ಛಂಗಿ ಪ್ರಸಾದ್ ಎಂಬ ಯುವಕನ ಮೇಲೆ ಹಲ್ಲೆಯಾಗಿದೆ. ಕಾರಣ ‘ಒಡಲ ಕಿಚ್ಚು’ ಎಂಬ ಕವನ ಸಂಕಲನದಲ್ಲಿ ಹಿಂದೂ ಧರ್ಮದ ಜಾತಿ ಪದ್ಧತಿಯ ವಿರುದ್ಧ ಉಚ್ಛಂಗಿ ಪ್ರಸಾದ್ ಕಿಡಿಕಾರಿರುವುದು. ಇನ್ನೊಮ್ಮೆ ಹೀಗೆಲ್ಲ ಬರೆದ್ರೆ ಬೆರಳುಗಳಿರೋರಿದಿಲ್ಲ ಬರೆಯೋದಕ್ಕೆ ಎಂದು ಧಮಕಿ ಹಾಕಿ ಹೋಗಿದ್ದಾರೆ. ಶೋಷಿತ ದಲಿತನೊಬ್ಬ ಜಾತಿಯ ವಿರುದ್ಧ ಬರೆಯೋದು ಇವರಿಗೆ ಧರ್ಮ ವಿರೋಧದ ಘಟನೆಯಾಗಿ ಕಾಣಿಸುತ್ತದೆ! ಇನ್ನು ಮೂಡಬಿದರೆಯಲ್ಲಿ ಕಸಾಯಿಖಾನೆಯ ವಿರುದ್ಧ ಹೋರಾಟ ರೂಪಿಸುತ್ತಿದ್ದ ಭಜರಂಗದಳದ ಕಾರ್ಯಕರ್ತ ಪ್ರಶಾಂತ್ ಪೂಜಾರಿಯನ್ನು ಮತಿಗೆಟ್ಟ ಮುಸ್ಲಿಮರು ಕೊಂದುಹಾಕಿದ್ದಾರೆ. ಆ ಹತ್ಯೆಗೆ ಸಾಕ್ಷಿಯಾದವನು ಹೆಚ್ಚೇನು ಕಾರಣವಿಲ್ಲದೆ ಆತ್ಮಹತ್ಯೆ ಮಾಡಿಕೊಂಡುಬಿಡುತ್ತಾನೆ. ಪುಣ್ಯಕ್ಕೆ ಕೋಮುಗಲಭೆಯ ವಿಷಯದಲ್ಲಿ ಒಂದಷ್ಟು ಸೋಮಾರಿತನ ತೋರುವ ದಕ್ಷಿಣ ಕನ್ನಡ ಪೋಲೀಸರು ಈ ಪ್ರಕರಣದಲ್ಲಿ ಹಂತಕರನ್ನು ಶೀಘ್ರವಾಗಿ ಬಂಧಿಸಿದ್ದಾರೆ.

ರಾಜ್ಯದಲ್ಲಿ ವ್ಯವಸ್ಥಿತವಾಗಿ ಹಲ್ಲೆಗಳು, ಹತ್ಯೆಗಳು, ಅತ್ಯಾಚಾರಗಳು ನಡೆಯುತ್ತಿರುವಾಗ ಅದರ ಬಗ್ಗೆ ಪ್ರತಿಕ್ರಯಿಸುವ, ಪೋಲೀಸರನ್ನು ಚುರುಕುಗೊಳಿಸಿ ಜನರ ನಂಬಿಕೆಯನ್ನು ಉಳಿಸಿಕೊಳ್ಳುವ ಕೆಲಸ ಮಾಡಬೇಕಾದ ಗೃಹಮಂತ್ರಿಗಳು ‘ಇಬ್ರು ರೇಪ್ ಮಾಡಿದ್ರೆ ಗ್ಯಾಂಗ್ ರೇಪ್ ಅಲ್ಲ ಕಣ್ರೀ’ ಎಂದು ಅಸಂಬದ್ಧವಾಗಿ ಮಾತನಾಡುತ್ತಾರೆ. ಇದನ್ನು ನಖಶಿಖಾಂತ ವಿರೋಧಿಸಬೇಕಾದ ವಿರೋಧ ಪಕ್ಷದ ಮುಖಂಡ ಈಶ್ವರಪ್ಪ ‘ನಿನ್ನನ್ನು ಹೊತ್ಕೊಂಡು ಹೋಗಿ ರೇಪ್ ಮಾಡುದ್ರೆ ನಾವೇನ್ ಮಾಡೋಕಾಗುತ್ತಮ್ಮ’ ಎಂದು ನುಡಿಮುತ್ತು ಉದುರಿಸುತ್ತಾರೆ. ಕಲಬುರ್ಗಿ ಹತ್ಯೆಯ ಬಗ್ಗೆ ಮಾತೇ ಆಡದ ಬಿಜೆಪಿಯವರು ತಮಗೆ ಅನುಕೂಲವೆನ್ನಿಸುವ ಪ್ರಶಾಂತ್ ಪೂಜಾರಿಯ ಬಗ್ಗೆ ಬೊಬ್ಬೆ ಹೊಡೆಯುತ್ತಾರೆ. ಇನ್ನು ನಾಡಿನ ಅಹಿಂದೋದ್ಧಾರಕ ಸಿದ್ಧರಾಮಯ್ಯ ‘ಕೆಲ್ಸ ಮಾಡ್ರೀ ಕೆಲ್ಸ ಮಾಡ್ರೀ’ ಎನ್ನುತ್ತಲೇ ತಮ್ಮ ಶಕ್ತಿ ವ್ಯಯಿಸುತ್ತಾರೆ. ಒಟ್ಟಿನಲ್ಲಿ ಕರ್ನಾಟಕ ಉದ್ಧಾರ.

ಅಕ್ಟೋ 20, 2015

ದಲಿತರ ಮೇಲೆ ದೌರ್ಜನ್ಯವೆಸಗಲು ಇವಕ್ಕೊಂದು ನೆಪ ಬೇಕಷ್ಟೇ.

hulivana atrocity on dalits
Dr Ashok K R
ಕಳೆದ ತಿಂಗಳು ಮಂಡ್ಯ ಜಿಲ್ಲೆಯ ಹುಲಿವಾನದಲ್ಲಿ ಜಾತಿ ಗಲಭೆ ನಡೆಯುತ್ತದೆ. ಪತ್ರಿಕೆಗಳಲ್ಲಿ ಸಣ್ಣ ಕಾಲಮ್ಮುಗಳಲ್ಲಿ ಅಂತರಜಾತಿ ವಿವಾಹದಿಂದ ಸವರ್ಣೀಯರು ಮತ್ತು ದಲಿತರ ನಡುವೆ ಘರ್ಷಣೆ ಎಂದು ವರದಿಯಾಗುತ್ತದೆ. ಪತ್ರಿಕಾ ವರದಿಗಳು ಅಂತರಜಾತಿ ವಿವಾಹವಾಗದೇ ಇದ್ದಿದ್ದರೆ ಗಲಭೆ ನಡೆಯುತ್ತಿರಲಿಲ್ಲ ಎನ್ನುವ ದನಿಯಲ್ಲಿರುತ್ತವೆ. ಮಂಡ್ಯದ ಸನ್ಮಾನ್ಯ ಶಾಸಕರಾದ ಮಂತ್ರಿಗಳೂ ಆದ ಅಂಬರೀಶ್ ರವರು ಹತ್ತು ದಿನದ ವಿರಾಮದ ನಂತರ ಹುಲಿವಾನಕ್ಕೆ ಹೋಗಿ ಬರುತ್ತಾರೆ. ದೊಡ್ಡ ಮಟ್ಟದ ಗಲಭೆಯೊಂದು ಸುದ್ದಿಯೇ ಆಗದೆ ಸದ್ದೂ ಮಾಡದೆ ದೌರ್ಜನ್ಯಕ್ಕೊಳಗಾದ ದಲಿತರು ಸೂರು ಒಡೆದುಹೋದ ಮನೆಯೊಳಗೆ ಕುಳಿತು ದುಃಖಿಸುವಂತೆ ಮಾಡಿದೆ. ಕೇಸುಗಳನ್ನು ಮೈಮೇಲೆ ಹಾಕಿಸಿಕೊಂಡರೂ ಶ್ರೇಷ್ಟತೆಯ ವ್ಯಸನದಲ್ಲಿ ಮುಳುಗಿಹೋಗಿರುವ ಒಕ್ಕಲಿಗರು ಮತ್ತು ಅವರ ಮರೆಯಲ್ಲಿನ ಲಿಂಗಾಯತರು ತಾವು ಮಾಡಿದ ‘ಘನಕಾರ್ಯಕ್ಕೆ’ ಮೀಸೆ ತಿರುವುತ್ತಿದ್ದಾರೆ. 

ಹುಲಿವಾನದಲ್ಲಿ ನಡೆದದ್ದಾದರೂ ಏನು?

ಹುಲಿವಾನದಲ್ಲೇ ವಾಸವಿರುವ ದಲಿತ ಹುಡುಗ ಮತ್ತು ಲಿಂಗಾಯತ ಹುಡುಗಿ ಪರಸ್ಪರ ಪ್ರೀತಿಸುತ್ತಿದ್ದರು. ಧೈರ್ಯ ಮಾಡಿ ಲಿಂಗಾಯತ ಹುಡುಗಿಯೇ ತನ್ನ ಮನೆಯಲ್ಲಿ ಪ್ರೀತಿಯ ವಿಷಯವನ್ನು ತಿಳಿಸಿದ್ದಾಳೆ. ಶ್ರೇಷ್ಟತೆಯ ವ್ಯಸನದಲ್ಲಿ ಬ್ರಾಹ್ಮಣರನ್ನು ಬಿಟ್ಟರೆ ಲಿಂಗಾಯತರೇ ತಾನೆ? ಪ್ರೀತಿಗೇ ಮನೆಗಳಲ್ಲಿ ವಿರೋಧವಿರುತ್ತೆ, ಇನ್ನು ದಲಿತ ಹುಡುಗನನ್ನು ಪ್ರೀತಿಸುವುದೆಂದರೆ ಲಿಂಗ ಮೆಚ್ಚುವುದೇ? ಮನೆಯಲ್ಲಿ ರಂಪ ರಾಮಾಯಣವಾಗಿದೆ. ಹುಲಿವಾನದ ಲಿಂಗಾಯತರಿಗೆ ನೇರವಾಗಿ ದಲಿತರನ್ನು ಎದುರು ಹಾಕಿಕೊಳ್ಳುವುದು ಕಷ್ಟ. ಕಾರಣ ಹುಲಿವಾನದಲ್ಲಿ ದಲಿತರ ಸಂಖೈಗೆ ಹೋಲಿಸಿದರೆ ಲಿಂಗಾಯತರೇ ಅಲ್ಪಸಂಖ್ಯಾತರು. ಇನ್ನು ಊರಿನಲ್ಲಿ ಬಹುಸಂಖ್ಯಾತರೆಂದರೆ ಒಕ್ಕಲಿಗರು. ಲಿಂಗಾಯತರಿಂದ ಕೀಳೆಂದು ಅನ್ನಿಸಿಕೊಂಡರೂ ದಲಿತರಿಗಿಂತ ಮೇಲೆಂಬ ವ್ಯಸನವನ್ನು ನರನರದಲ್ಲೂ ತುಂಬಿಕೊಂಡಿರುವ ಒಕ್ಕಲಿಗರಿಗೆ ತಮ್ಮ ‘ಪೌರುಷ’ ತೋರಿಸಲು ಇದಕ್ಕಿಂತ ಒಳ್ಳೆಯ ಸಂದರ್ಭ ದಕ್ಕುವುದೆ? ಹಿಂದೂ ಧರ್ಮದ ಚಾತುರ್ವರ್ಣ ಪದ್ಧತಿಯನ್ನು ಉಳಿಸಿ ಬೆಳೆಸುವ ಸುಸಂದರ್ಭವನ್ನು ಬಿಡುವುದುಂಟೆ. ಲಿಂಗಾಯತ ಹುಡುಗಿಯನ್ನು ರಾಜಿ ಪಂಚಾಯಿತಿಗೆ ಕರೆಯಲಾಯಿತು. ಊರ ಪ್ರಮುಖರ ಮುಂದೆಯೂ ನಾನು ಪ್ರೀತಿಸಿದ ಹುಡುಗನನ್ನೇ ಮದುವೆಯಾಗೋದು ಎನ್ನುವ ಹುಡುಗಿಯ ಧೈರ್ಯ ಶ್ರೇಷ್ಟರಿಗೆ ಸಿಟ್ಟು ಬರಿಸದೇ ಇದ್ದೀತೆ. ಸರಿ ದಲಿತರಿಗೆ ‘ಬುದ್ಧಿ’ ಕಲಿಸಬೇಕೆಂದು ಈ ಬುದ್ಧಿಗೇಡಿಗಳು ನಿರ್ಧರಿಸಿದ್ದಾಯಿತು.

atrocity on dalits
ಕತ್ತಲಾಗುತ್ತಿದ್ದಂತೆ ದಲಿತ ಕೇರಿಯ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಲಾಯಿತು. ಒಕ್ಕಲಿಗ ಮತ್ತು ಲಿಂಗಾಯತ ಹುಡುಗರು ಒಂದಷ್ಟು ಜನ ದಲಿತ ಕೇರಿಗೆ ಮುಖ ಮುಚ್ಚಿಕೊಂಡು ಹೋಗಿ ‘ನಮ್ ಮನೆ ಹುಡುಗೀರ ಮೇಲೆ ಕಣ್ಣು ಹಾಕಿದ್ರೆ ಅದು ಕಿತ್ಬಿಡ್ತೀವಿ ಇದು ಕಿತ್ಬಿಡ್ತೀವಿ’ ಎಂದು ಕೂಗಾಡಿದರು. ದಲಿತರು ಪೋಲೀಸರಿಗೆ ಫೋನಿನ ಮುಖಾಂತರ ದೂರು ನೀಡಿದರು. ಪೋಲೀಸರ ಆಗಮನವಾಯಿತು. ಘಟನೆಯ ಗಂಭೀರತೆಯನ್ನು ಅರಿತು ಒಂದು ವ್ಯಾನ್ ಪೋಲೀಸ್ ತುಕಡಿಯನ್ನು ದಲಿತರ ಕೇರಿಯ ಬಳಿಯೇ ನಿಲ್ಲಿಸಲಾಯಿತು. ದಲಿತ ಹುಡುಗ – ಲಿಂಗಾಯತ ಹುಡುಗಿಯನ್ನು ಪೋಲೀಸ್ ಠಾಣೆಗೆ ಕರೆಸಿ ಮಾತನಾಡಲಾಯಿತು. ಇಬ್ಬರೂ ಜೊತೆಗೆ ಬಾಳುವ ನಿರ್ಧಾರ ಮಾಡಿಯಾಗಿತ್ತು. ಪ್ರೌಢ ವಯಸ್ಸಿನವರಿಬ್ಬರು ಪ್ರೀತಿಸಿ ಮದುವೆಯಾಗಿ ಜೊತೆಯಲ್ಲಿರುತ್ತೇವೆಂದರೆ ಪೋಲೀಸರು ಏನು ಮಾಡಲು ಸಾಧ್ಯ. ‘ಸರಿ ಹೋಗ್ರಪ್ಪ. ಮದುವೆಯಾಗಿ ಚೆನ್ನಾಗಿರಿ’ ಎಂದು ಹರಸಿ ಕಳಿಸಿದ್ದಾರೆ. ಇಬ್ಬರೂ ಊರಿಗೆ ಬರದೆ ಪರಾರಿಯಾಗಿದ್ದಾರೆ. ಹುಲಿವಾನದ ಶ್ರೇಷ್ಟರಿಗೆ ಈ ವಿಷಯ ತಿಳಿದು ಮತ್ತಷ್ಟು ಕ್ರುದ್ಧರಾಗಿದ್ದಾರೆ. 

ಗದ್ದೆಗೆ ಹೋಗುವ ದಲಿತರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಬಸ್ಸು ಹತ್ತುತ್ತಿದ್ದ ದಲಿತ ಹುಡುಗಿಗೆ ‘ಏನೇ ಕರೀ…..’ ಎಂದು ತಮ್ಮ ಸಂಸ್ಕೃತಿಯನ್ನು ಹೊರಗೆಡವಿದ್ದಾರೆ. ದಲಿತರನ್ನು ಬಸ್ಸಿಗೆ ಹತ್ತಿಸಿಕೊಂಡ ಕಾರಣಕ್ಕೆ ಡ್ರೈವರನಿಗೆ ಎರಡೇಟು ಬಿಗಿದಿದ್ದಾರೆ. ಇವೆಲ್ಲ ಘಟನೆಗಳ ಜೊತೆಗೆ ಒಳಗೊಳಗೆ ಮಸಲತ್ತು ಮಾಡಲು ಪ್ರಾರಂಭಿಸಿದ್ದಾರೆ ಶ್ರೇಷ್ಟ ಒಕ್ಕಲಿಗರು ಮತ್ತು ಲಿಂಗಾಯತರು. ಮಧ್ಯಾಹ್ನ ಮೂರಕ್ಕೆ ಊರಿನ ಎಲ್ಲಾ ಅಂಗಡಿಗಳು ಬಾಗಿಲು ಹಾಕಲಾರಂಭಿಸಿದವು. ಬಂದ್ ವಾತಾವರಣ ಸೃಷ್ಟಿಯಾಯಿತು. ದಲಿತ ಕೇರಿಯ ಮುಂದಿದ್ದ ಪೋಲೀಸ್ ತುಕಡಿಗೂ ಅಸಹನೆಯ ವಾತಾವರಣ ಗಮನಕ್ಕೆ ಬಂದಿದೆ. ಮತ್ತಷ್ಟು ಪೋಲೀಸರನ್ನು ಆಗಲೇ ಕರೆಸಿದ್ದರೆ ಅನಾಹುತಗಳು ತಪ್ಪುತ್ತಿತ್ತೇನೋ. ಪೋಲೀಸರಿದ್ದಾಗ ಯಾರೇನು ಗಲಭೆ ಮಾಡಲು ಸಾಧ್ಯ ಎಂದು ಅತಿ ವಿಶ್ವಾಸಕ್ಕೆ ಒಳಗಾಗಿಬಿಟ್ಟರಾ?

atrocity on dalit
ಕತ್ತಲಾಗುತ್ತಿದ್ದಂತೆ ಮತ್ತೆ ದಲಿತ ಕೇರಿಯ ವಿದ್ಯುತ್ ತಂತಿಯನ್ನು ಕಡಿಯಲಾಗಿದೆ. ನೂರಿನ್ನೂರು ಜನರ ಗುಂಪು ದಲಿತ ಕೇರಿಗೆ ಮತ್ತೊಂದು ಬದಿಯಿಂದ ನುಗ್ಗಿದೆ. ಇರುವ ಎಪ್ಪತ್ತು ಚಿಲ್ಲರೆ ಮನೆಗಳ ಮೇಲೆ ತಮ್ಮ ‘ಪೌರುಷ’ ತೋರಿಸಿದ್ದಾರೆ. ದಿಂಡುಗಲ್ಲುಗಳಿಂದ ಮನೆಯ ಮಾಡನ್ನು ಒಡೆಯಲಾಗಿದೆ. ಬಾಗಿಲುಗಳನ್ನು ಒಡೆದು ಹಾಕಿ ಹೆಂಗಸು ಮಕ್ಕಳು ಬಾಣಂತಿಯೆನ್ನದೆ ಹಲ್ಲೆ ನಡೆಸಿದ್ದಾರೆ. ವಾಹನಗಳನ್ನು ಪುಡಿ ಪುಡಿ ಮಾಡಿದ್ದಾರೆ. ಹುಲ್ಲಿನ ಮೆದೆಗಳಿಗೆ ಬೆಂಕಿ ಹಚ್ಚಿದ್ದಾರೆ. ‘ಹೊಲೆ ಸೂಳೆಮಕ್ಳಾ. ನಮ್ ಹೆಣ್ ಮಕ್ಳ ಮೇಲೆ ಕಣ್ಣು ಹಾಕಿದ್ರೆ ಒಬ್ರನ್ನೂ ಜೀವಂತ ಉಳಿಸಲ್ಲ’ ಎಂದು ಅರಚಿದ್ದಾರೆ. ಗಲಭೆ ಪ್ರಾರಂಭವಾಗುತ್ತಿದ್ದಂತೆ ಪೋಲೀಸರು ಗಲಭೆಕೋರರಿಗೆ ಎದುರಾಗಿದ್ದಾರೆ. ಕಡಿಮೆ ಸಂಖೈಯಲ್ಲಿದ್ದ ಪೋಲೀಸರು ಮತಿಗೆಟ್ಟ ಗಲಭೆಕೋರರಿಗೆ ಭಯ ಹುಟ್ಟಿಸಿಲ್ಲ. ಪೋಲೀಸರ ಮೇಲೂ ಹಲ್ಲೆ ನಡೆಸಿದ್ದಾರೆ. ಇಷ್ಟರಲ್ಲಿ ಪೋಲೀಸ್ ಠಾಣೆಗೆ ಮತ್ತೆ ಸುದ್ದಿ ತಲುಪಿದೆ. ಪೋಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳೇ ಖುದ್ದು ದೊಡ್ಡ ತುಕಡಿಯೊಂದಿಗೆ ಹುಲಿವಾನದ ಕಡೆಗೆ ಹೊರಟಿದ್ದಾರೆ. ಯಾರೋ ಇನ್ಸ್ ಪೆಕ್ಟರ್ ಬಂದಿರಬೇಕು ಎಂದುಕೊಂಡ ಮತಾಂಧರು ಊರು ಪ್ರವೇಶಿಸಿದ ಪೋಲೀಸ್ ವಾಹನವನ್ನು ತಡೆಗಟ್ಟಿ ‘ಇಲ್ಲಿ ಒಕ್ಕಲಿಗರದೇ ನಡೆಯೋದು. ಮುಚ್ಕೊಂಡು ಹಿಂದಕ್ಕೋಗಿ’ ಎಂದಿದ್ದಾರೆ. ಯಾರ್ಯಾರು ಗಲಾಟೆ ಮಾಡಿದ್ದಾರೋ ಎಲ್ರನ್ನೂ ಹುಡುಕಿ ಹುಡುಕಿ ಎಳೆತನ್ನಿ ಎಂದಿದ್ದಾರೆ ಆ ಹಿರಿಯ ಅಧಿಕಾರಿ. 

ಒಕ್ಕಲಿಗರ ಲಿಂಗಾಯತರ ಕೇರಿಗಳಿಗೆ ನುಗ್ಗಿದ ಪೋಲೀಸರು ಮತಾಂಧರನ್ನೆಲ್ಲಾ ಒಂದು ಸುತ್ತು ಎಳೆದೆಳೆದು ತಂದು ಬಾರಿಸಿದ್ದಾರೆ. ಗಲಭೆಯಲ್ಲಿ ಭಾಗವಹಿಸದ ಅಮಾಯಕರಿಗೂ ಅಲ್ಲೊಂದು ಇಲ್ಲೊಂದು ಏಟು ಬಿದ್ದಿದೆ. ಈ ಅಮಾಯಕರಿಗೆ ಅವತ್ತು ನಡೆಯುವ ದಲಿತ ದೌರ್ಜನ್ಯದ ಅರಿವಿತ್ತಾ? ದಲಿತ ಸಂಘಟನೆಯವರು ಹುಲಿವಾನಕ್ಕೆ ಬಂದು ನೆರವು ನೀಡಿದ್ದಾರೆ. ಪ್ರಕರಣದ ಗಂಭೀರತೆಯನ್ನರಿತು ಜಿಲ್ಲಾಧಿಕಾರಿ ಮಧ್ಯರಾತ್ರಿ ಹುಲಿವಾನಕ್ಕೆ ಆಗಮಿಸಿದ್ದಾರೆ. ‘ಅಲ್ಲವರಿಬ್ಬರು ಮದುವೆಯಾಗಿ ಹನಿಮೂನ್ ಮಾಡ್ತಿದ್ರೆ ಇಲ್ಲೀ ಗಾಂಡುಗಳು ಹೊಡೆದಾಡ್ಕೊಂಡು ಕುಂತವ್ರೆ’ ಎಂದು ಒಂದೇ ಸಾಲಿನಲ್ಲಿ ಜಿಲ್ಲಾಧಿಕಾರಿಗಳಿಗೆ ಅವತ್ತಿನ ಪರಿಸ್ಥಿತಿಯನ್ನು ವಿವರಿಸಲಾಯಿತು!

ಪ್ರೀತಿಯ ಕಾರಣಕ್ಕೆ ಗಲಭೆಗಳು ನಡೆಯುವುದು ನಮ್ಮಲ್ಲಿ ತುಂಬಾ ಅಪರೂಪದ ಸಂಗತಿಯೇನಲ್ಲ. ಆದರೆ ಈ ಘಟನೆಗೆ ಪ್ರತಿಕ್ರಿಯಿಸುವುದರಲ್ಲಿ ಒಂದು ಸಮಾಜ ಹೇಗೆ ವಿಫಲವಾಗಿದೆ ಎನ್ನುವುದು ಸಮ ಸಮಾಜದ ಭವಿಷ್ಯತ್ತಿನ ಆಶಾಭಾವನೆಯನ್ನು ಉಳಿಯಗೊಡುವುದಿಲ್ಲ. ಮತ್ತು ಈ ರೀತಿಯ ಪ್ರತಿಕ್ರಿಯೆಗೆ ಮುಖ್ಯ ಕಾರಣ ಹುಲಿವಾನದಲ್ಲಿ ಮತ್ತು ಮಂಡ್ಯದಲ್ಲಿ ಬಹುಸಂಖ್ಯಾತರಾಗಿರುವ ಒಕ್ಕಲಿಗರನ್ನು ಎದುರು ಹಾಕಿಕೊಳ್ಳುವುದು ಯಾಕೆ ಎನ್ನುವ ಪ್ರಶ್ನೆ. ಮಂಡ್ಯದ ಶಾಸಕ ಅಂಬರೀಷ್ ರವರಾಗಲೀ ಸಂಸದ ಪುಟ್ಟರಾಜುರವರಾಗಲೀ ಘಟನೆ ನಡೆದ ಮರುದಿನವೇ ಹುಲಿವಾನಕ್ಕೆ ಹೋಗಿ ಪರಿಸ್ಥಿತಿಯನ್ನು ತಿಳಿಗೊಳಿಸುವ ಯತ್ನ ಮಾಡುವುದಿಲ್ಲ. ಪರಿಸ್ಥಿತಿಯನ್ನು ತಿಳಿಗೊಳಿಸುವುದೆಂದರೆ ಒಕ್ಕಲಿಗರ ಮತ್ತವರ ಬೆಂಬಲ ಪಡೆದ ಲಿಂಗಾಯತರ ದಬ್ಬಾಳಿಕೆಯನ್ನು ವಿರೋಧಿಸುವುದು. ಬರೀ ಲಿಂಗಾಯತರ ದೌರ್ಜನ್ಯವಾಗಿದ್ದರೆ ಎಲ್ಲರೂ ದೌಡಾಯಿಸಿಬಿಡುತ್ತಿದ್ದರು, ಕಾರಣ ಇಲ್ಲಿರುವುದೇ ಮೂವತ್ತು ನಲವತ್ತು ಲಿಂಗಾಯತ ಕುಟುಂಬಗಳು. ಬಹುಸಂಖ್ಯಾತರಾಗಿರುವ ಒಕ್ಕಲಿಗರ ದಬ್ಬಾಳಿಕೆಯನ್ನು ವಿರೋಧಿಸಿ ಮತ ಬ್ಯಾಂಕಿಗ್ಯಾಕೆ ತೊಂದರೆ ಮಾಡಿಕೊಳ್ಳಬೇಕು ಎಂದು ಸುಮ್ಮನೆ ಇದ್ದರು. ಅಂದಹಾಗೆ ಹುಲಿವಾನವೇನು ಮಂಡ್ಯದ ಮೂಲೆಯಲ್ಲೆಲ್ಲೋ ಇರುವ ಊರೂ ಅಲ್ಲ. ಮಂಡ್ಯ ಬಸ್ ಸ್ಟಾಪಿನಲ್ಲಿ ನಿಂತು ‘ಯಾಕ್ರಲಾ ಬಡ್ಡೆತ್ತವಾ’ ಎಂದು ಅಂಬರೀಷ್ ಕೂಗುವಷ್ಟರಲ್ಲಿ ಹುಲಿವಾನ ಬಂದುಬಿಡುತ್ತದೆ. ಜನ ಪ್ರತಿನಿಧಿಗಳದು ಈ ಕತೆಯಾದರೆ ನಮ್ಮ ಮುಖ್ಯವಾಹಿನಿಯ ಮಾಧ್ಯಮಗಳ್ಯಾವುವೂ ಇಂತಹುದೊಂದು ಹೀನಕೃತ್ಯವನ್ನು ಹೆಚ್ಚೇನು ಸುದ್ದಿ ಮಾಡಲಿಲ್ಲ. ಸವರ್ಣೀಯರು ಮತ್ತು ದಲಿತರ ನಡುವಿನ ಜಗಳ ಎಂದು ಬಹುತೇಕ ಪತ್ರಿಕೆಗಳು ಬರೆದಿದ್ದವು. ಡೆಕ್ಕನ್ ಹೆರಾಲ್ಡಿನಲ್ಲಿ ಲಿಂಗಾಯತರು ಮತ್ತು ದಲಿತರ ನಡುವಿನ ಗಲಭೆ ಎಂದು ಬರೆದಿದ್ದರೇ ಹೊರತು ದೌರ್ಜನ್ಯದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಒಕ್ಕಲಿಗ ಹೆಸರನ್ನು ಮರೆತುಬಿಟ್ಟಿದ್ದರು. ಈ ಎಲ್ಲಾ ಪತ್ರಿಕೆಗಳು ದಲಿತರ ಮೇಲಿನ ಹಲ್ಲೆಯನ್ನು ಪ್ರಮುಖವಾಗಿಸುವುದರ ಬದಲಾಗಿ ಪ್ರೇಮ ಪ್ರಕರಣದಿಂದ ಈ ಕೃತ್ಯ ನಡೆಯಿತು ಎಂದು ಎಲ್ಲಾ ಅಪವಾದವನ್ನು ದಲಿತರ ತಲೆಗೇ ಕಟ್ಟುವಂತೆ ಬರೆದಿರುವುದು ಎಷ್ಟರ ಮಟ್ಟಿಗೆ ಸರಿ? ದೂರದ ಸಿರಿಯಾ ದೇಶದ ಮಗು ಸತ್ತ ಫೋಟೋವನ್ನು ಮುಖಪುಟದಲ್ಲಿ ಪ್ರಕಟಿಸುವ ನಮ್ಮ ಮಾಧ್ಯಮಗಳು ನಮ್ಮದೇ ಹಳ್ಳಿಯ ದಲಿತ ಮಹಿಳೆಯೊಬ್ಬಳು ಒಕ್ಕಲಿಗರು ಮತ್ತು ಲಿಂಗಾಯತರು ಒಡೆದು ಹಾಕಿದ ಮನೆಯ ಬಾಗಿಲಿನ ಮುಂದೆ ಚಿಂತಾಕ್ರಾಂತರಾಗಿ ಕುಳಿತಿರುವುದನ್ನು ಮುಖಪುಟದಲ್ಲಿರಲಿ ಒಳಪುಟಗಳಲ್ಲೂ ಪ್ರಕಟಿಸುವುದಿಲ್ಲವಲ್ಲ. ಅರಚುವ ದೃಶ್ಯ ಮಾಧ್ಯಮಗಳೂ ಇದರ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲವಲ್ಲ. ಪರದೇಶದ ಮಗುವಿಗಿಂತ ನಮ್ಮ ದೇಶದ ದಲಿತರು ಕೀಳಾಗಿ ಹೋದರೇ?

ಅಕ್ಟೋ 19, 2015

ಬೇಳೆ ಬೇಯುವುದು ಕಷ್ಟ ಕಷ್ಟ...

high pulses price
ಸಾಮಾಜಿಕ ಜಾಲತಾಣಗಳಲ್ಲಿ ಒಂದು ಸುತ್ತು ಮೋದಿ ಪರವಾಗಿ ವಿರುದ್ಧವಾಗಿ, ಸಿದ್ಧು ಪರವಾಗಿ ವಿರೋಧವಾಗಿ, ದನದ ಮಾಂಸ, ಸಸ್ಯಾಹಾರ, ಕಲಬುರ್ಗಿ ಎಕ್ಸೆಟ್ರಾ ಎಕ್ಸೆಟ್ರಾ ಕಿತ್ತಾಡಿಕೊಂಡು ರಾತ್ರಿ ಸಾರು ಮಾಡಲು ಅಂಗಡಿಗೆ ಹೋಗಿ ಅರ್ಧ ಕೆ.ಜಿ ತೊಗರಿ ಬೇಳೆ ಜೊತೆಗೆ ಹತ್ತು ರುಪಾಯಿಯ 50:50 ಬಿಸ್ಕೆಟ್ ಪ್ಯಾಕ್ ಖರೀದಿಸಿ ನೂರು ರುಪಾಯಿ ಕೊಟ್ಟು ಚಿಲ್ಲರೆಗೆ ಕಾಯುತ್ತಾ ನಿಂತಾಗ ಅಂಗಡಿಯವನ ವಿಚಿತ್ರ ನೋಟದಿಂದ ಅರಿವಾಯಿತು ಬೇಳೆ ಕೆಜಿಗೆ 190 ರುಪಾಯಿ ಮುಟ್ಟಿದೆ ಎಂದು! ವರುಷದ ಹಿಂದೆ ಅರವತ್ತರಿಂದ ಎಂಭತ್ತು ರುಪಾಯಿಯಷ್ಟಿದ್ದ ಬೇಳೆಯ ಬೆಲೆ ಇನ್ನೂರರ ಗಡಿ ದಾಟುವ ದಿನಗಳೂ ದೂರವಿಲ್ಲ.
ಬೇಳೆ ಬೆಲೆ ಹೀಗೆ ಕಂಡಾಪಟ್ಟೆ ಏರಿಕೆಯಾಗಲು ಪ್ರಮುಖ ಕಾರಣ ಉತ್ಪಾದನೆಯಲ್ಲಾದ ಕಡಿತವೆಂದು ಹೇಳಲಾಗುತ್ತಿದೆ. 2013-2014ರ ಸಾಲಿನಲ್ಲಿ 19.78 ಮಿಲಿಯನ್ ಟನ್ನುಗಳಷ್ಟಿದ್ದ ತೊಗರಿ ಬೇಳೆ ಉತ್ಪಾದನೆ 2014 - 2015ರಲ್ಲಿ 17.38 ಮಿಲಿಯನ್ ಟನ್ನುಗಳಿಗೆ ಕುಸಿದಿದೆ. ಈ ಬಾರಿ ಮಳೆ ಕಡಿಮೆಯಾಗಿರುವುದರಿಂದ ಮುಂದಿನ ವರುಷ ಬೇಳೆಯ ಬೆಲೆಯಲ್ಲಿ ಮತ್ತಷ್ಟು ಏರಿಕೆಯುಂಟಾಗುವ ಸಾಧ್ಯತೆಗಳನ್ನು ತಳ್ಳಿಹಾಕಲಾಗದು. ಭಾರತದಲ್ಲಿ ವರುಷಕ್ಕೆ ಇಪ್ಪತ್ತೆರಡು ಮಿಲಿಯನ್ ಟನ್ನುಗಳಷ್ಟು ಬೇಳೆಗೆ ಬೇಡಿಕೆಯಿದೆ. ಆ ಲೆಕ್ಕದಲ್ಲಿ ಈ ಬಾರಿ ಒಟ್ಟು ಐದು ಮಿಲಿಯನ್ ಟನ್ನಿನಷ್ಟು ಬೇಳೆಯ ಕೊರತೆಯುಂಟಾಗಿರುವುದೇ ಬೆಲೆ ಏರಿಕೆಗೆ ಕಾರಣ. ಈ ಮೇಲ್ನೋಟದ ಕಾರಣದ ಜೊತೆಗೆ ಶೇಖರಿಸಿಟ್ಟರೂ ಸುಲಭವಾಗಿ ಕೆಡದ ಬೇಳೆಯ ಗುಣವೂ ಬೆಲೆಯೇರಿಕೆಗೆ ಕಾರಣವಾಗಿದೆ. ಹೆಚ್ಚೆಚ್ಚು ದಾಸ್ತಾನು ಮಾಡಿ ಬೆಲೆ ಮತ್ತಷ್ಟು ಹೆಚ್ಚಿದಾಗ ಮಾರುಕಟ್ಟೆಗೆ ಬಿಡುವ ವ್ಯಾಪಾರೀ ತಂತ್ರ ಕೂಡ ಇದಕ್ಕೆ ಕಾರಣ.
ಬೇಳೆಯ ಬೆಲೆ ಕಡಿಮೆಯಾಗುವಂತೆ ನೋಡಿಕೊಳ್ಳುವುದು ಮುಖ್ಯವಾಗಿ ಕೇಂದ್ರದ ಕರ್ತವ್ಯ. ಈಗಾಗಲೇ ಐದು ಸಾವಿರ ಟನ್ನುಗಳಷ್ಟು ಬೇಳೆಯನ್ನು ಆಮದು ಮಾಡಿಕೊಳ್ಳಲಾಗಿದೆ. ಮತ್ತೆರಡು ಟನ್ನುಗಳನ್ನು ಆಮದು ಮಾಡಿಕೊಳ್ಳಲು ನಿರ್ಧಾರ ಮಾಡಲಾಗಿದೆ. ಜೊತೆಗೆ ಬೇಳೆಯನ್ನು ದಾಸ್ತಾನು ಮಾಡಿಕೊಳ್ಳುವುದನ್ನು ನಿಷೇಧಿಸಲಾಗಿದೆ. ಕೇಂದ್ರದ ಇಷ್ಟೆಲ್ಲ ಕ್ರಮಗಳ ನಂತರವೂ ಬೆಲೆ ಇಳಿಯುತ್ತಿಲ್ಲ. ಏರುತ್ತಲೇ ಇದೆ. ಡಿಸೆಂಬರ್ ವರೆಗೂ ಬೇಳೆಯ ಬೆಲೆಯಲ್ಲಿ ಇಳಿತವಾಗುವುದು ಕಷ್ಟವೆಂದು ಹೇಳಲಾಗುತ್ತಿದೆ. ಸದ್ಯಕ್ಕೆ ತಮಿಳುನಾಡು ಮತ್ತು ಆಂಧ್ರಪ್ರದೇಶ ಮಾತ್ರ ಕೇಂದ್ರ ಸರಕಾರ ತರಿಸುತ್ತಿರುವ ವಿದೇಶಿ ಬೇಳೆಯನ್ನು ಜನರಿಗೆ ತಲುಪಿಸುವ ಕೆಲಸ ಮಾಡುತ್ತಿದೆ. ಉಳಿದ ರಾಜ್ಯಗಳು ಬೇಳೆಯನ್ನು ತರಿಸಿಕೊಳ್ಳಲು ಹಿಂದೇಟು ಹೊಡೆಯುತ್ತಿವೆ. ಕಾರಣ ವಿದೇಶದಿಂದ ಬರುತ್ತಿರುವ ಈ ಬೇಳೆಯನ್ನು ಸಂಸ್ಕರಿಸಲಾಗಿಲ್ಲ. ಮತ್ತು ಬೇಳೆ ಸಂಸ್ಕರಣೆ ಹೆಚ್ಚಾಗಿ ಖಾಸಗಿಯವರ ಕೈಯಲ್ಲೇ ಇದ್ದು ಸರಕಾರೀ ಸಂಸ್ಕರಣಾ ಘಟಕಗಳು ಇಲ್ಲವೇ ಇಲ್ಲ. ತರಿಸಿಕೊಂಡು ಮಾಡುವುದೇನು ಎನ್ನುವ ಪ್ರಶ್ನೆ ರಾಜ್ಯ ಸರಕಾರಗಳದ್ದು.
ಒಟ್ಟಿನಲ್ಲಿ ಸದ್ಯಕ್ಕಂತೂ ಬೇಳೆ ಬೆಲೆ ಆಕಾಶದೆತ್ತರದಲ್ಲೇ ಇರಲಿದೆ. ಬೇಳೆಯ ಬೆಲೆಯ ಮತ್ತೆ ಇಳಿಯುವಷ್ಟರಲ್ಲಿ (ಅಕಸ್ಮಾತ್ ಇಳಿದರೆ) ದೇಶದಲ್ಲಿ ಮತ್ತಷ್ಟು ಅಪೌಷ್ಟಿಕತೆ ಹೆಚ್ಚುವುದರಲ್ಲಿ ಅನುಮಾನವಿಲ್ಲ. ಅದರಲ್ಲೂ ಕೆಳಮಧ್ಯಮ ಮತ್ತು ಬಡವರ್ಗದ ಜನರಿಗೆ ಪ್ರೋಟೀನು, ವಿಟಮಿನ್ನುಗಳನ್ನು ನೀಡುವುದರಲ್ಲಿ ಈ ಬೇಳೆಗಳದ್ದೇ ಮೇಲುಗೈ. ಬೇಳೆಯ ಬೆಲೆ ಕೊಂಡುಕೊಳ್ಳಲಾರದಷ್ಟು ಹೆಚ್ಚಾಗಿರುವಾಗ ಅಪೌಷ್ಟಿಕತೆ ಹೆಚ್ಚುವುದು ಖಂಡಿತ. ಬೇಳೆಯ ಬೆಲೆ ಇಳಿಸುವುದಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಲೇ ಅಪೌಷ್ಟಿಕತೆ ನಿವಾರಣೆಗೂ ಕ್ರಮಗಳನ್ನು ಕೈಗೊಳ್ಳಬೇಕಾದ ತುರ್ತು ಸರಕಾರಕ್ಕಿದೆ. 

ಅಕ್ಟೋ 17, 2015

ಪ್ರಜಾಪ್ರಭುತ್ವದಲ್ಲಿ ಪ್ರತಿಭಟಿಸುವುದು ತಪ್ಪೇ?

sahitya academy
ಒಬ್ಬರ ನಂತರ ಮತ್ತೊಬ್ಬರು ತಮಗೆ ಕೇಂದ್ರ ಮತ್ತು ರಾಜ್ಯ ಸಾಹಿತ್ಯ ಅಕಾಡೆಮಿಯಿಂದ ಸಿಕ್ಕಿದ್ದ ಪ್ರಶಸ್ತಿಗಳನ್ನು ವಾಪಸ್ಸು ಮಾಡುತ್ತಿದ್ದಾರೆ. ಪ್ರಶಸ್ತಿಯ ಜೊತೆಗೆ ಕೊಟ್ಟಿದ್ದ ಹಣವನ್ನೂ ಹಿಂದಿರುಗಿಸುತ್ತಿದ್ದಾರೆ. ಕೆಲವರ ಮೆಚ್ಚುಗೆಗೆ ಪಾತ್ರವಾಗುತ್ತಲೇ ಕೆಲವರ ಅಪಹಾಸ್ಯಕ್ಕೂ ಸಾಹಿತಿಗಳು ಈಡಾಗುತ್ತಿದ್ದಾರೆ. ಪ್ರಶಸ್ತಿಗಳನ್ನು ವಾಪಸ್ಸಾಗಿಸುವುದಕ್ಕೆ ಪ್ರಸಕ್ತ ಇರುವ ದುರಿತ ಕಾಲಘಟ್ಟ ಕಾರಣವೆಂದು ಹಿಂದಿರುಗಿಸಿದವರನೇಕರು ಪತ್ರ ಬರೆದಿದ್ದಾರೆ. ಈ ಪ್ರಶಸ್ತಿ ವಾಪಸ್ಸು ಮಾಡುವಿಕೆ ಒಂದು ರಾಜ್ಯಕ್ಕೆ ಸೀಮಿತವಾಗಿ ಉಳಿದಿಲ್ಲ; ಕಾಶ್ಮೀರದಿಂದ ಹಿಡಿದು ಕೇರಳದವರೆಗೂ ಪ್ರಶಸ್ತಿ ವಾಪಸ್ಸು ಮಾಡುವವರ ಸಂಖೈ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಪ್ರಶಸ್ತಿಗಳನ್ನು ವಾಪಸ್ಸು ಕೊಡುವುದು ಸಮೂಹ ಸನ್ನಿಯಂತಾಗಿದೆಯೇ? ಪ್ರಶಸ್ತಿಗಳನ್ನು ತೆಗೆದುಕೊಳ್ಳುವಾಗ ಸಮಾಜ ಸಂಪೂರ್ಣ ಸ್ವಸ್ಥವಾಗಿತ್ತೇ? ರಾಜಕೀಯ ಅಸಹನೆಯನ್ನು ಸಾಹಿತಿಗಳು ಈ ರೀತಿಯಾಗಿ ಹೊರಹಾಕುತ್ತಿದ್ದಾರೆಯೇ? ಅಂತರಾಷ್ಟ್ರೀಯ ಮಟ್ಟದಲ್ಲಿ ದೇಶದ ಹೆಸರನ್ನು ಹಾಳುಗೆಡವುವಂತಹ ಇಂತಹ ಹಾದಿ ಸರಿಯೇ? ನರೇಂದ್ರ ಮೋದಿ ಪ್ರಧಾನಿಯಾಗಬಾರದೆಂದು ಬಯಸಿದ್ದ ಅನೇಕ ಸಾಹಿತಿಗಳು ಮೋದಿಯವರ ಹೆಸರನ್ನು ಹಾಳುಗೆಡವಲು ಈ ರೀತಿ ಮಾಡುತ್ತಿದ್ದಾರೆಯೇ? ಪ್ರಶ್ನೆಗಳ ಮೇಲೆ ಪ್ರಶ್ನೆಗಳು ಮೂಡುತ್ತಿವೆ. ಕೆಲವೊಂದಕ್ಕೆ ಸಮಾಧಾನಕರ ಉತ್ತರ ದೊರಕಿದರೆ ಹಲವಕ್ಕೆ ದೊರಕುವ ಉತ್ತರದಿಂದ ಕಷ್ಟಪಟ್ಟು ಸಮಾಧಾನ ಮಾಡಿಕೊಳ್ಳಬೇಕು. 

ರಾಜ್ಯದ ವ್ಯಾಪ್ತಿಯಲ್ಲಿ ನಡೆಯುವ ಕ್ರಿಮಿನಲ್ ಚಟುವಟಿಕೆಗಳಿಗೆ ಆ ರಾಜ್ಯದಲ್ಲಧಿಕಾರದಲ್ಲಿರುವ ಸರಕಾರ ಉತ್ತರದಾಯಿತ್ವ ವಹಿಸಬೇಕೇ ಹೊರತು ಕರ್ನಾಟಕದ ಮೂಲೆಯಲ್ಲಿನ ಹಳ್ಳಿಯಲ್ಲಿ ನಡೆಯುವ ಘಟನೆಯನ್ನೂ ನರೇಂದ್ರ ಮೋದಿಯವರ ತಲೆಗೆ ಕಟ್ಟುವುದರಲ್ಲಿ ಯಾವ ರೀತಿಯ ಪುರುಷಾರ್ಥವಿದೆ ಎಂದು ಪ್ರಶ್ನಿಸುವವರ ಸಂಖೈ ಅಧಿಕವಿದೆ. ಮೇಲ್ನೋಟಕ್ಕೆ ಆ ಪ್ರಶ್ನೆಯಲ್ಲಿ ಸತ್ಯವೂ ಇದೆ. ರಾಜ್ಯದ ಕಾನೂನು ಸುವ್ಯವಸ್ಥೆಯ ಜವಾಬ್ದಾರಿ ರಾಜ್ಯ ಸರಕಾರದ್ದಾಗಿರುವಾಗ ಕೇಂದ್ರವೇಗೆ ಜವಾಬ್ದಾರಿ ಹೊತ್ತುಕೊಳ್ಳಲು ಸಾಧ್ಯ? ಏನೋ ಪರದೇಶದ ಭಯೋತ್ಪಾದಕರು ದೇಶದ ಗಡಿ ದಾಟಿ ನುಗ್ಗಿ ಬಂದರೆ ಅದು ಕೇಂದ್ರ ಸರಕಾರದ ವೈಫಲ್ಯವಾಗುತ್ತದೆ. ಕರ್ನಾಟಕದಲ್ಲಿ ಎಂ.ಎಂ.ಕಲಬುರ್ಗಿಯವರ ಮೇಲೆ ಅನಾಮಿಕರು ಬಂದು ಗುಂಡು ಹಾರಿಸಿ ಕೊಂದರೆ ಅದು ಸಿದ್ಧರಾಮಯ್ಯ ನೇತೃತ್ವದ ರಾಜ್ಯ ಸರಕಾರದ ಗುಪ್ತಚರ ಇಲಾಖೆಯ ವೈಫಲ್ಯವೇ ಹೊರತು ಕೇಂದ್ರದ್ದಲ್ಲ ಅಲ್ಲವೇ? ಇನ್ನು ಸಾಹಿತಿಗಳು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಹಿಂದಿರುಗಿಸಿದ್ದಕ್ಕೆ ಮತ್ತೊಂದು ಪ್ರಮುಖ ಕಾರಣ ದಾದ್ರಿಯಲ್ಲಿ ನಡೆದ ಮೊಹಮದ್ ಇಖ್ಲಾಕನ ಹತ್ಯೆ. ಗೋಮಾಂಸ ಸಂಗ್ರಹಿಸಿದ್ದನೆಂಬ ಅನುಮಾನದಿಂದ ಊರಿನ ದೇವಸ್ಥಾನದಲ್ಲಿ ಇಖ್ಲಾಕನ ವಿರುದ್ಧ ಘೋಷಣೆ ಕೂಗುತ್ತಾರೆ, ನೂರಿನ್ನೂರು ಜನರ ಗುಂಪು ಇಖ್ಲಾಕನ ಮನೆಗೆ ನುಗ್ಗಿ ಸಾಮಾನುಗಳನ್ನೆಲ್ಲ ಚೆಲ್ಲಾಪಿಲ್ಲಿ ಮಾಡಿ ಮನೆಯವರಿಗೆಲ್ಲ ಹೊಡೆದು ಹೊರಗಟ್ಟುತ್ತಾರೆ. ಇಖ್ಲಾಕನನ್ನು ಹೊಡೆದು ಹೊಡೆದೇ ಸಾಯಿಸಿಬಿಡುತ್ತಾರೆ. ದಾದ್ರಿ ಇರುವುದು ಉತ್ತರ ಪ್ರದೇಶದಲ್ಲಿ. ಉತ್ತರಪ್ರದೇಶದಲ್ಲಿ ಆಡಳಿತದಲ್ಲಿರುವುದು ಅಖಿಲೇಶ್ ನೇತೃತ್ವದ ಸಮಾಜವಾದಿ ಸರಕಾರ. ಆ ಘಟನೆಗೂ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರವನ್ಯಾಕೆ ದೂಷಿಸಬೇಕು? ದೇಗುಲ ಪ್ರವೇಶಿಸಲು ಪ್ರಯತ್ನಿಸಿದನೆಂದು ದಲಿತನೊಬ್ಬನನ್ನು ಸುಟ್ಟು ಹಾಕಿದರೂ ಪ್ರಧಾನಿಯತ್ತ ಬೆರಳು ತೋರಿಸುವುದ್ಯಾಕೆ? ಪ್ರತಿಯೊಂದು ದುರ್ಘಟನೆಗೂ ಪ್ರಧಾನಿ ಯಾಕೆ ಜವಾಬ್ದಾರಿ ಹೊತ್ತುಕೊಂಡು ಉತ್ತರಿಸಬೇಕು?

ಇದನ್ನೂ ಓದಿ: ದನ ತಿಂದ್ರೆ ತಪ್ಪು ಜನಾನ್ ಬೇಕಾದ್ರೆ ತಿವ್ಕೊಳ್ಳಿ

ಯಾಕೆ ಉತ್ತರಿಸಬೇಕೆಂದರೆ ನಮ್ಮ ಈಗಿನ ಪ್ರಧಾನಿ ನರೇಂದ್ರ ಮೋದಿಯವರು ಹಿಂದಿನ ಪ್ರಧಾನಿ ಮನಮೋಹನ್ ಸಿಂಗರಂತೆ ‘ದುರ್ಬಲ’ರಲ್ಲ. ಭಾರತ ಕಂಡ ಸಶಕ್ತ ಪ್ರಧಾನಿ ಎಂಬ ಬಿರುದಾಂಕಿತ ನರೇಂದ್ರ ಮೋದಿಯವರು ಅವರ ಕಛೇರಿಯ ಸಿಬ್ಬಂದಿಗಳ, ವಿವಿಧ ಪಕ್ಷಗಳ ರಾಜಕಾರಣಿಗಳ ಹುಟ್ಟುಹಬ್ಬವನ್ನು ನೆನಪಿಟ್ಟುಕೊಂಡು ಟ್ವೀಟಿಸುತ್ತಾರೆ, ಪರದೇಶದವರಿಗೆ ಅವರದೇ ಭಾಷೆಯಲ್ಲಿ ಶುಭಾಷಯ ಬರೆಯುತ್ತಾರೆ, ದೇಶವಾಸಿಗಳಿಗೆ ಹಬ್ಬದ ಪ್ರಯುಕ್ತ ಶುಭ ಕೋರುತ್ತಾರೆ, ನವಜೋತ್ ಸಿಂಗ್ ಅಸ್ವಸ್ಥವಾಗಿದ್ದನ್ನು ಟ್ವೀಟಿಸಿ ಎಲ್ಲರ ಗಮನಕ್ಕೂ ತರುತ್ತಾರೆ. ಇಷ್ಟೆಲ್ಲ ಚಟುವಟಿಕೆಯಿಂದಿರುವ ಪ್ರಧಾನಿಯವರು ಸಾಮಾಜಿಕ ಸ್ವಾಸ್ಥ್ಯವನ್ನು ಹಾಳುಗೆಡವುವ ಘಟನೆಗಳು ನಡೆದಾಗ ಪ್ರತಿಕ್ರಯಿಸದೆ ಉಳಿದು ಬಿಟ್ಟರೆ ಪ್ರಶ್ನಿಸಬೇಕೆಂದು ಅನ್ನಿಸುವುದಿಲ್ಲವೇ? ಅನ್ನಿಸುವುದಿಲ್ಲ ಎನ್ನುವವರು ನೀವಾಗಿದ್ದರೆ ಕಣ್ಣಿಗೆ ಕಟ್ಟಿರುವ ಅಂಧ ಭಕ್ತಿಯ ಪಟ್ಟಿಯನ್ನು ತೊಡೆದು ಹಾಕಿ. ಯಾವ್ಯಾವುದೋ ಕೆಲಸಕ್ಕೆ ಬಾರದಕ್ಕೆಲ್ಲ ಪ್ರತಿಕ್ರಯಿಸುವ ಪ್ರಧಾನಿಯವರು ವಿದ್ವಾಂಸರ ಹತ್ಯೆಗೆ, ಆಹಾರದ ಆಧಾರದ ಮೇಲೆ ಸಮಾಜ ಒಡೆಯುವ ಶಕ್ತಿಗಳ ಮೇಲುಗೈ ಬಗೆಗೆ, ದಲಿತನ ಹತ್ಯೆಯ ಬಗೆಗೆ ಪ್ರತಿಕ್ರಯಿಸದೆ ಮೌನವಾಗಿರುವುದು ಅವರ ಸಮ್ಮತಿಯನ್ನು ಸೂಚಿಸುತ್ತದೆಯೇ? ಹಿಂದಿನ ಪ್ರಧಾನಿಯ ಮೌನವನ್ನು ದೌರ್ಬಲ್ಯದಂತೆ ಬಿಂಬಿಸಲಾಗುತ್ತಿತ್ತು, ಈಗಿನ ಪ್ರಧಾನಿಗಳ ಮೌನವನ್ನು ಜಾಣ ರಾಜಕೀಯ ನಡೆಯಂತೆ ಬಿಂಬಿಸಲಾಗುತ್ತಿದೆ ಎಂದು ಗೆಳೆಯನೊಬ್ಬ ಮೆಸೇಜಿಸಿದ್ದ. ಸತ್ಯವಲ್ಲವೇ?

ಯಾಕೆ ಉತ್ತರಿಸಬೇಕೆಂದರೆ ಈ ಎಲ್ಲಾ ಘಟನೆಗಳನ್ನು ಅವರದೇ ಸರಕಾರದ ಭಾಗವಾಗಿರುವ ಅನೇಕ ಸಂಸದರು, ಸಚಿವರು ಬಹಿರಂಗವಾಗಿಯೇ ಸಮರ್ಥಿಸುವ ಮಾತನಾಡುತ್ತಿದ್ದಾರೆ. ಮತ್ತು ಈ ಎಲ್ಲಾ ಘಟನೆಗಳು ಏಕ ಧರ್ಮ ಏಕ ಸಂಸ್ಕೃತಿ ಎಂದು ಬೊಬ್ಬೆಯೊಡೆಯುವ ಆರ್ ಎಸ್ ಎಸ್ಸಿನ ಧಾರ್ಮಿಕ ರಾಜಕೀಯದ ಭಾಗವಾಗಿಯೇ ಇದೆ. ಅನ್ಯ ಧರ್ಮ ದ್ವೇಷ, ವಿಚಾರವಾದಿಗಳೆಡೆಗಿನ ದ್ವೇಷ, ಚಾತುರ್ವರ್ಣದ ಪ್ರತಿಪಾದನೆ, ಇತರರ ಆಹಾರ ಪದ್ಧತಿಯನ್ನು ಕೀಳಾಗಿ ಕಾಣುವುದೆಲ್ಲವೂ ಅವರ ಧಾರ್ಮಿಕ ರಾಜಕಾರಣದ ಭಾಗವೇ ಅಲ್ಲವೇ? ಅಂತಹುದೊಂದು ಧಾರ್ಮಿಕ ರಾಜಕೀಯದ ತಳಹದಿಯೊಂದಿಗೇ ಪ್ರಧಾನಿ ಪಟ್ಟವಲಂಕರಿಸಿರುವ ನರೇಂದ್ರ ಮೋದಿಯವರು ಎಲ್ಲದಕ್ಕೂ ಕೇಂದ್ರವೇಗೆ ಕಾರಣ, ನನ್ನ ಜವಾಬ್ದಾರಿಯಲ್ಲವಿದು ಎಂದು ತಪ್ಪಿಸಿಕೊಳ್ಳುವ ಮಾತುಗಳನ್ನು ಆಡಿದರೆ ಒಪ್ಪಬಹುದೇ?

ಯಾಕೆ ಈ ಮಾತುಗಳನ್ನು ಒಪ್ಪಲಾಗುವುದಿಲ್ಲ ಎನ್ನುವುದಕ್ಕೆ ಉತ್ತರಪ್ರದೇಶದ ಮುಜಾಫರ್ ನಗರದಲ್ಲಿ ನಡೆದ ಕೋಮುಗಲಭೆಯನ್ನು ಗಮನಿಸಬೇಕು. ತುಂಬ ವ್ಯವಸ್ಥಿತವಾಗಿ ಜನರ ನಡುವೆ ಧರ್ಮದ ಹೆಸರಿನಲ್ಲಿ, ಲವ್ ಜಿಹಾದಿನ ನೆಪದಲ್ಲಿ ಹಂತಹಂತವಾಗಿ ವಿಷ ಭಿತ್ತಲಾಗುತ್ತದೆ. ಎಂಟತ್ತು ತಿಂಗಳ ನಿರಂತರ ಪ್ರಯತ್ನದ ನಂತರ ಕೋಮುಗಲಭೆ ತನ್ನ ಅಟ್ಟಹಾಸವನ್ನು ತೋರಿಸುತ್ತದೆ. ಸಾವಿರಾರು ಜನರು ನೆಲೆ ಕಳೆದುಕೊಂಡು ನಿರಾಶ್ರಿತರಾಗುತ್ತಾರೆ. ಎರಡು ನಿರಾಶ್ರಿತ ಶಿಬಿರಗಳು ನೆಲೆ ಕಳೆದುಕೊಂಡ ದಲಿತರಿಗಾಗಿ ಇದ್ದರೆ ಉಳಿದ ಎಲ್ಲಾ ಶಿಬಿರಗಳಲ್ಲೂ ನೆಲೆ ಕಳೆದುಕೊಂಡ ಮುಸ್ಲಿಮರಿರುತ್ತಾರೆ. ಈಗಿನ ಬಿಜೆಪಿಯ ಅಧ್ಯಕ್ಷ ಅಮಿತ್ ಶಾರವರನ್ನೂ ಒಳಗೊಂಡಂತೆ ಅನೇಕ ಬಿಜೆಪಿ ಧುರೀಣರು ಬಹಿರಂಗ ಸಭೆಗಳಲ್ಲಿ ಮುಸ್ಲಿಮರ ವಿರುದ್ಧ ದ್ವೇಷ ಕಾರುತ್ತಾರೆ. ಸೇಡು ತೀರಿಸಿಕೊಳ್ಳಲು ಈ ಚುನಾವಣೆಗಿಂತ ಒಳ್ಳೆಯ ಅವಕಾಶ ಸಿಗಲಾರದು ಎಂದು ವೀರಾವೇಷದ ಮಾತನಾಡುತ್ತಾರೆ. ಮತ್ತೊಂದೆಡೆ ಸಮಾಜವಾದಿ ಪಕ್ಷದ ಅಜಂ ಖಾನ್, ಒವೈಸಿ ಈ ದ್ವೇಷವನ್ನೆಚ್ಚಿಸಲು ಹಿಂದೂ ವಿರೋಧಿ ಮಾತುಗಳನ್ನಾಡುತ್ತಾರೆ. ಒಟ್ಟಿನಲ್ಲಿ ಧರ್ಮದ ಆಧಾರದಲ್ಲಿ ಮತಗಳನ್ನು ಧ್ರುವೀಕರಿಸುವುದಕ್ಕೆ ಏನೇನು ಗಬ್ಬೆಬ್ಬಿಸಬೇಕೋ ಅದೆಲ್ಲವನ್ನೂ ಮಾಡಲಾಗುತ್ತದೆ. ಇದೇ ಬಿಜೆಪಿ ಪಕ್ಷವಲ್ಲವೇ ಕಾಂಗ್ರೆಸ್ಸನ್ನು ಪದೇ ಪದೇ ‘ವೋಟ್ ಬ್ಯಾಂಕ್ ರಾಜಕೀಯ’ ಮಾಡುವವರು ಎಂದು ಹೀಗಳೆಯುವುದು? ಕಾಂಗ್ರೆಸ್ಸಿಗೂ ಬಿಜೆಪಿಗೂ ಇರುವ ವ್ಯತ್ಯಾಸವೇನೋ ನನಗಂತೂ ತಿಳಿಯದು. ಮುಜಾಫರ್ ನಗರದ ಕೋಮುಗಲಭೆಗಳೆಲ್ಲವೂ ಬಿಜೆಪಿಯ ಮತ್ತದರ ಹಿಂದೂ ಸಿದ್ಧಾಂತದ ಬೆಂಬಲಿಕ್ಕಿರುವ ಸಂಘಟನೆಗಳ ಕುತಂತ್ರ. ಈ ಕುತಂತ್ರಕ್ಕೆ ಅವರಿಗೆ ಸಿಕ್ಕ ಬಹುಮಾನ ಲೋಕಸಭಾ ಚುನಾವಣೆಯಲ್ಲಿ ಉತ್ತರಪ್ರದೇಶದಲ್ಲಿ ಅತ್ಯಧಿಕ ಸ್ಥಾನಗಳಲ್ಲಿನ ಗೆಲುವು. ಈಗ ಹೇಳಿ ದಾದ್ರಿಗೂ ಕೇಂದ್ರದಲ್ಲಿರುವ ಸರಕಾರಕ್ಕೂ ಏನೂ ಸಂಬಂಧವಿಲ್ಲ ಎನ್ನುವುದನ್ನು ಒಪ್ಪುವುದಾದರೂ ಹೇಗೆ? ಕೇಂದ್ರ ಸರಕಾರಕ್ಕಲ್ಲದಿದ್ದರೂ ಆ ಸರಕಾರವನ್ನು ರಚಿಸಿರುವ ಬಿಜೆಪಿಗೂ ಈ ಘಟನೆಗೂ ಸಂಬಂಧವಿಲ್ಲ ಎನ್ನುವುದನ್ನು ಒಪ್ಪುವುದು ಹೇಗೆ?

ಸಾಹಿತಿಗಳು ಪ್ರಶಸ್ತಿ ಹಿಂದಿರುಗಿಸುವುದಕ್ಕೆ ಪ್ರಮುಖ ಕಾರಣ ಕೇಂದ್ರದಲ್ಲಿ ಬಿಜೆಪಿ ಸರಕಾರವಿದೆ ಎನ್ನುವುದಲ್ಲ. ಸಾಹಿತಿ- ವಿದ್ವಾಂಸರೊಬ್ಬರ ಹತ್ಯೆಯಾದಾಗ ಸಾಹಿತಿಗಳ ಪರವಾಗಿರಬೇಕಾದ ಸಾಹಿತ್ಯ ಅಕಾಡೆಮಿಗಳು ಮೌನಕ್ಕೆ ಶರಣಾಗಿರುವುದು ಅಸಹನೆ ಮೂಡಿಸಿದೆ. ಕೇಂದ್ರ ಸಾಹಿತ್ಯ ಅಕಾಡೆಮಿಯ ಸದಸ್ಯರೇ ಆಗಿದ್ದಂತಹ ಎಂ.ಎಂ.ಕಲಬುರ್ಗಿಯವರ ಹತ್ಯೆಯನ್ನು ಖಂಡಿಸುವುದಕ್ಕೂ ಸಾಹಿತ್ಯ ಅಕಾಡೆಮಿ ಹಿಂಜರಿಯುತ್ತದೆಯೆಂದರೆ ಅದನ್ನು ಪ್ರತಿಭಟಿಸಬೇಕಲ್ಲವೇ? ಆಟೋದವರಿಗೆ ಅನ್ಯಾಯವಾದಾಗ ಆಟೋದವರು, ರೈತರಿಗೆ ಅನ್ಯಾಯವಾದಾಗ ರೈತರು, ವೈದ್ಯರಿಗೆ ಅನ್ಯಾಯವಾದಾಗ ವೈದ್ಯರು ಪ್ರತಿಭಟಿಸುವುದಿಲ್ಲವೇ? ಅದೇ ರೀತಿಯ ಹಕ್ಕು ಸಾಹಿತಿಗಳಿಗೂ ಇದೆಯಲ್ಲವೇ? ಸರಕಾರೀ ವೈದ್ಯರು ಸಾಮೂಹಿಕ ರಾಜೀನಾಮೆ ಕೊಟ್ಟು ಪ್ರತಿಭಟಿಸುವುದು ತಪ್ಪಲ್ಲವಾದರೆ ಸಾಹಿತಿಗಳು ಪ್ರಶಸ್ತಿ ಹಿಂದಿರುಗಿಸಿ ಪ್ರತಿಭಟಿಸುವುದು ಹೇಗೆ ತಪ್ಪಾಗುತ್ತದೆ? ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆಗೆ ನಾನಾ ದಾರಿ. ಸತ್ಯಾಗ್ರಹ, ಉಪವಾಸ ಸತ್ಯಾಗ್ರಹ, ಸರದಿ ಉಪವಾಸ ಸತ್ಯಾಗ್ರಹ, ರಸ್ತೆ ತಡೆ, ಘೋಷಣೆ, ಬಂದ್ ಗಳೆಲ್ಲವೂ ಪ್ರತಿಭಟನೆಯ ದಾರಿಗಳೇ. ವಿಭಿನ್ನ ರೀತಿಯ ಕೆಲವೊಮ್ಮೆ ತಮಾಷೆಯೆನ್ನಿಸುವ ಪ್ರತಿಭಟನೆಯನ್ನು ನಡೆಸುವುದಕ್ಕೆ ನಮ್ಮ ವಾಟಾಳ್ ನಾಗರಾಜ್ ಫೇಮಸ್ಸು. ಅವರ ಪ್ರತಿಭಟನೆಯ ರೀತಿ ತಮಾಷೆಯೆನ್ನಿಸಿದರೂ ಅದರಿಂದ ಉಪಯೋಗವೇನು ಎನ್ನಿಸಿದರೂ ಪ್ರಜಾಪ್ರಭುತ್ವದಲ್ಲಿ ಸರಿಯಿರದ ಸಂಗತಿಯ ವಿರುದ್ಧ ಮೌನವಾಗುಳಿಯುವುದಕ್ಕಿಂತ ಪ್ರತಿಭಟಿಸುವುದು ಹೆಚ್ಚು ಸೂಕ್ತ. ಪ್ರಜಾಪ್ರಭುತ್ವದಲ್ಲಿ ಲವಲವಿಕೆ ತರಲು, ಹಾದಿ ತಪ್ಪುವ ಪ್ರಜಾಪ್ರಭುತ್ವವನ್ನು ಮತ್ತೆ ಸರಿದಾರಿಗೆ ಮರಳಿಸಲೂ ಈ ಪ್ರತಿಭಟನೆಗಳು ಅತ್ಯವಶ್ಯಕ. ಸಿಕ್ಕ ಪ್ರಶಸ್ತಿಯನ್ನು ಮರಳಿಸುವುದೂ ಕೂಡ ಪ್ರತಿಭಟನೆಯ ಒಂದು ಮಾರ್ಗವೆನ್ನುವುದನ್ನು ಅಪಹಾಸ್ಯ ಮಾಡುವುದನ್ನೇ ಪ್ರವೃತ್ತಿಯಾಗಿಸಿಕೊಂಡವರು ಅರಿಯಬೇಕು. ಒಬ್ಬರು ಹಿಂದಿರುಗಿಸಿದರೆಂದು ಮತ್ತೊಬ್ಬರು ಹಿಂದಿರುಗಿಸಲು ಮನಸ್ಸು ಮಾಡುವುದು ನಡೆದೇ ನಡೆಯುತ್ತದೆ. ಸಾಹಿತಿಗಳು ಪ್ರಶಸ್ತಿಗಳನ್ನು ಹಿಂದಿರುಗಿಸಿರುವುದರಿಂದ ಏನು ಬದಲಾಗಿಬಿಟ್ಟಿತು?

ಇದನ್ನೂ ಓದಿ: ನಾವೇಕೆ ಪ್ರಶಸ್ತಿಗಳನ್ನು ಹಿಂದಿರುಗಿಸಿದೆವು? ಅಶೋಕ್ ವಾಜಪೇಯಿ

ಪ್ರಶಸ್ತಿ ಹಿಂದಿರುಗಿದಾಕ್ಷಣ ಕಲಬುರ್ಗಿಯ ಹಂತಕರು ‘ನಮ್ಮದು ತಪ್ಪಾಯಿತು’ ಎಂದು ಓಡಿ ಬಂದು ಶರಣಾಗಲಿಲ್ಲ. ದಾದ್ರಿಯ ಹಂತಕರು, ದಲಿತರನ್ನು ಸುಟ್ಟ ಹಂತಕರು, ದಲಿತರನ್ನು ಬೆತ್ತಲು ಮಾಡಿದವರು ಪಶ್ಚಾತ್ತಾಪ ಪಡಲಿಲ್ಲ. ಮತ್ತೇನು ಉಪಯೋಗವಾಯಿತು? ಏನು ಉಪಯೋಗವಾಯಿತೆಂದರೆ ಹಾದಿ ತಪ್ಪುತ್ತಿರುವ ಸಮಾಜದ ಬಗ್ಗೆ ಮುಖ್ಯಮಂತ್ರಿ, ಪ್ರಧಾನಮಂತ್ರಿಯವರು ಮೌನ ಮುರಿದು ಮಾತನಾಡುವಂತೆ ಮಾಡಿತು. ಆ ಮಾತುಗಳು ನಿರಾಸೆ ಮೂಡಿಸುವಂತಿದೆಯೆನ್ನುವುದು ಸತ್ಯವಾದರೂ ಕೊನೇ ಪಕ್ಷ ಪ್ರತಿಕ್ರಿಯೆ ನೀಡುವಂತಾದರೂ ಮಾಡುವಲ್ಲಿ ಈ ಪ್ರಶಸ್ತಿ ವಾಪಸ್ಸಾತಿ ಯಶ ಸಾಧಿಸಿದೆ. ‘ಪ್ರಶಸ್ತಿ ವಾಪಸ್ಸು ಮಾಡುತ್ತಿರುವುದು ಸರಿಯಲ್ಲ. ಹಂತಕರನ್ನು ಹಿಡಿಯಲು ಪ್ರಯತ್ನಿಸುತ್ತಿದ್ದೀವಿ’ ಎಂದು ಸಿದ್ಧರಾಮಯ್ಯ ಹೇಳಿದ್ದಾರೆ. ಹಂತಕರನ್ನು ಹಿಡಿಯಲು ರಾಜ್ಯ ಪೋಲೀಸರು ಹಿಡಿಯಲು ಪ್ರಯತ್ನಿಸುತ್ತಿರುವುದು ನಿಜ, ಆ ಪ್ರಯತ್ನ ಅಷ್ಟು ಯಶಸ್ಸು ಕಾಣುತ್ತಿಲ್ಲವೆನ್ನುವುದೂ ಸದ್ಯದ ವಾಸ್ತವ. ರಾಜ್ಯ ಗುಪ್ತಚರ ಇಲಾಖೆಯ ವೈಫಲ್ಯವಿದು ಎಂದು ಸಿದ್ಧರಾಮಯ್ಯನವರಿಗೆ ಯಾಕೆ ಅನ್ನಿಸುವುದಿಲ್ಲ? ಗುಪ್ತಚರ ಇಲಾಖೆಯನ್ನು ಬಲಪಡಿಸುವ ಇಚ್ಛಾಶಕ್ತಿಯನ್ನು ಯಾಕೆ ತೋರಿಸುವುದಿಲ್ಲ? ಮೊದಲು ಈ ರಾಜ್ಯದ ಗುಪ್ತಚರ ಇಲಾಖೆಗಳನ್ನು ವಿರೋಧ ಪಕ್ಷದ ಮೇಲೆ ನಿಗಾ ಇಡುವ, ತಮ್ಮದೇ ಪಕ್ಷದೊಳಗಿರುವ ವಿರೋಧಿಗಳ ನಡೆನುಡಿಗಳನ್ನು ಗಮನಿಸುವ ಕೆಲಸದಿಂದ ವಿಮೋಚಿಸಬೇಕಿದೆ. ವಿಚಾರದ ದೃಷ್ಟಿಯಿಂದ ಸಿದ್ಧರಾಮಯ್ಯನವರು ಹಂತಕ ಮನಸ್ಥಿತಿಯವರಿಗೆ ಬೆಂಬಲ ನೀಡುವುದಿಲ್ಲವೆಂದು ನಂಬಬಹುದಾದರೂ ಕೋಮುವಾದಿಗಳ ಅಟ್ಟಹಾಸವನ್ನು ನಿಗ್ರಹಿಸುವುದರಲ್ಲಿ ಅವರು ಸಂಪೂರ್ಣ ವಿಫಲರಾಗಿದ್ದಾರೆ. ಇನ್ನು ದಾದ್ರಿ ಘಟನೆಯ ಹತ್ತು ದಿನಗಳ ನಂತರ ನರೇಂದ್ರ ಮೋದಿಯವರು ಪ್ರತಿಕ್ರಿಯಿಸಿದ್ದಾರೆ. ಈ ಪ್ರತಿಕ್ರಿಯೆಗೆ ಪ್ರಮುಖ ಕಾರಣ ಸಾಹಿತಿಗಳ ಪ್ರಶಸ್ತಿ ವಾಪಸ್ಸಾತಿ. ನೇರವಾಗಿ ದಾದ್ರಿ ಘಟನೆಯನ್ನು ಖಂಡಿಸುವುದಕ್ಕೆ ಇಚ್ಛೆ ಪಡದ ಪ್ರಧಾನಿಗಳು ಅದೊಂದು ದುರದೃಷ್ಟದ ಘಟನೆ, ಮುಸ್ಲಿಮರು ಹಿಂದೂಗಳು ಒಟ್ಟಾಗಿ ಬಡತನದ ವಿರುದ್ಧ ಹೋರಾಡಬೇಕು ಎಂಬ ಮಾತುಗಳನ್ನಾಡಿದ್ದರೆ. ಅವರನ್ನು ಆರಾಧಿಸುವ ಸಂಘಟನೆಗಳು ವಿಷವುಣ್ಣಿಸುವ ಕಾರ್ಯದಲ್ಲಿ ತೊಡಗಿದ್ದಾಗ ಒಟ್ಟಾಗಿ ಬಡತನದ ವಿರುದ್ಧ ಹೋರಾಡುವುದು ಹೇಗೆ? ಸಾಹಿತಿಗಳು ರಾಜಕೀಯ ದುರುದ್ದೇಶದಿಂದ ಪ್ರಶಸ್ತಿ ವಾಪಸ್ಸು ಮಾಡಿದ್ದಾರೆ ಎನ್ನುವುದಕ್ಕೂ ಮರೆಯಲಿಲ್ಲ. ರಾಜಕೀಯ ದುರುದ್ದೇಶವೇ ಇದ್ದರೂ ಪ್ರತಿಭಟನೆಯ ಉದ್ದೇಶ ಸರಿಯಾಗಿಯೇ ಇದೆಯಲ್ಲವೇ? ಪ್ರಶಸ್ತಿ ಹಿಂದಿರುಗಿಸಿದ ಅಶೋಕ್ ವಾಜಪೇಯಿ ಸಾಹಿತಿಗಳು ಪ್ರಭುತ್ವದ ತಪ್ಪುಗಳ ವಿರುದ್ಧವೇ ಇರುತ್ತಾರೆ. ಎಮರ್ಜೆನ್ಸಿ, ಸಿಖ್ ಗಲಭೆ, ಬಾಬ್ರಿ ಮಸೀದಿ ಧ್ವಂಸ, ಗುಜರಾತ್ ಗಲಭೆಯ ಸಂದರ್ಭದಲ್ಲೆಲ್ಲ ಸಾಹಿತಿಗಳು ಪ್ರಭುತ್ವದ ವಿರುದ್ಧ ಪ್ರತಿಭಟಿಸಿದ್ದಾರೆ ಎಂದು ಬರೆಯುತ್ತಾರೆ. ಸಿಖ್ ಗಲಭೆಯಾದಾಗ ಖುಷವಂತ್ ಸಿಂಗ್ ಪ್ರಶಸ್ತಿ ಹಿಂದಿರುಗಿಸಿದ್ದು ಭಕ್ತರಿಗೆ ಹೋಗಲಿ ಪ್ರಧಾನಿಯವರಿಗಾದರೂ ಗೊತ್ತಿರಬೇಕಿತ್ತಲ್ಲ. ಈ ಪ್ರಶಸ್ತಿ, ಅದರ ವಾಪಸ್ಸಾತಿ, ಅದರ ಜೊತೆಜೊತೆಗೇ ಅಂಟಿಕೊಳ್ಳುವ ರಾಜಕೀಯ ಚರ್ಚೆಗಳು ಮುಖ್ಯ ವಿಷಯವನ್ನೇ ಮರೆಮಾಡಿಸುತ್ತಿವೆ.

ಮರೆಯಾಗಿಬಿಡುತ್ತಿರುವ ಮುಖ್ಯವಿಷಯವೆಂದರೆ ಸಮಾಜದಲ್ಲಿ ಅಸಹನೆಯ ಹೆಚ್ಚುವಿಕೆಯ ಸಮನಾಗಿ ಆ ಅಸಹನೆ ಮೂಡಿಸಿದ ಹಿಂಸೆಯನ್ನು ಬೆಂಬಲಿಸುವವರ ಸಂಖೈ ಅಧಿಕವಾಗುತ್ತಿದೆ. ‘ಕಲಬುರ್ಗಿಯವರ ಹತ್ಯೆಯನ್ನು ಖಂಡಿಸುತ್ತೇನೆ. ಆದರೂ ಅವರು ಆ ರೀತಿಯೆಲ್ಲ ಬರೆಯುವ ಮುನ್ನ ಯೋಚಿಸಬೇಕಿತ್ತು’ ಎನ್ನುವ ಧಾಟಿಯಲ್ಲಿ ಮಾತನಾಡುವವರಿಗೂ ‘ಚಾರ್ಲಿ ಹೆಬ್ಡೋ ಪತ್ರಿಕೆಯವರು ಮುಸ್ಲಿಮರನ್ನು ನೋಯಿಸುವ ಕಾರ್ಟೂನುಗಳನ್ನು ಪ್ರಕಟಿಸಬಾರದಿತ್ತು’ ಎನ್ನುವವರಿಗೂ ವ್ಯತ್ಯಾಸವಿದೆಯೇ? ನನಗಂತೂ ಯಾವ ವ್ಯತ್ಯಾಸವೂ ಕಾಣಿಸುತ್ತಿಲ್ಲ. ಸ್ವಾತಂತ್ರ್ಯಕ್ಕೂ ಸ್ವೇಚ್ಛಾಚ್ಛಾರಕ್ಕೂ ಇರುವ ವ್ಯತ್ಯಾಸ ತುಂಬ ಕಡಿಮೆ. ಸ್ವೇಚ್ಛಾಚ್ಛಾರವನ್ನು ವಿರೋಧಿಸಲು ಹಿಂಸೆ ಮಾರ್ಗವಲ್ಲ ಎಂದು ಪ್ರಜಾಪ್ರಭುತ್ವದ ಪ್ರಜೆಗಳಿಗೆ ಅರ್ಥವಾಗಬೇಕು. ಇನ್ನು ದಾದ್ರಿ ಘಟನೆಯನ್ನು ಖಂಡಿಸುತ್ತ ‘ಪಾಪ ಆತನ ಮನೆಯಲ್ಲಿದ್ದದ್ದು ದನದ ಮಾಂಸವಲ್ಲವಂತೆ ಕಣ್ರೀ’ ಎಂದು ಹೇಳುವವರು ಪರೋಕ್ಷವಾಗಿ ದನದ ಮಾಂಸವಿದ್ದಿದ್ದರೆ ಕೊಂದದ್ದು ತಪ್ಪೇನಲ್ಲ ಎಂದು ಹೇಳುತ್ತಿದ್ದಾರೆಯೇ? ಕೊನೆಗೆ ಆ ಇಖ್ಲಾಕ್ ಪಾಕಿಸ್ತಾನೀ ಏಜೆಂಟ್ ಎಂದೆಲ್ಲ ಬರೆಯಲಾಯಿತು. ಆತ ಪಾಕಿಸ್ತಾನಕ್ಕೆ ಹೋಗೇ ಇರಲಿಲ್ಲ ಎಂದು ಪಾಸ್ ಪೋರ್ಟ್ ಸಮೇತ ಕುಟುಂಬದವರು ಮಾಧ್ಯಮದ ಮುಂದೆ ಕೂರಬೇಕಾಯಿತು. ಅಂದಹಾಗೆ ಇಖ್ಲಾಕನ ಮಗ ಭಾರತೀಯ ವಾಯುಪಡೆಯಲ್ಲಿ ಉದ್ಯೋಗಿ. ಹತ್ಯೆಯನ್ನು ಸಮರ್ಥಿಸುವಂತಹ ಮನಸ್ಥಿತಿ ಹೆಚ್ಚುತ್ತಿರುವುದು ಕೊನೆಗೆ ಎಲ್ಲಿಗೆ ಹೋಗಿ ಮುಟ್ಟುತ್ತದೆ?

ಎಲ್ಲಿಗೆ ಹೋಗಿ ಮುಟ್ಟುತ್ತದೆ ಎನ್ನುವುದನ್ನು ಅರಿಯಲು ಮಹಾರಾಷ್ಟ್ರದತ್ತ ಗಮನಹರಿಸಬೇಕು. ಪಾಕಿಸ್ತಾನೀ ಗಾಯಕನೊಬ್ಬನ ಸಮಾರಂಭಕ್ಕೆ ವಿರೋಧ ವ್ಯಕ್ತವಾಗಿ ಆ ಸಮಾರಂಭ ರದ್ದಾಯಿತು. ಪಾಕಿಸ್ತಾನದ ಮಾಜೀ ವಿದೇಶಾಂಗ ಸಚಿವರ ಪುಸ್ತಕವೊಂದರ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಳ್ಳಬೇಕಿದ್ದ ಸುದೀಂಧ್ರ ಕುಲಕರ್ಣಿಯವರ ಮೇಲೆ ಶಿವಸೇನೆಯ ಕಾರ್ಯಕರ್ತರು ಮಸಿ ಬಳಿದರು. ವಿಚಲಿತರಾಗದ ಸುದೀಂದ್ರ ಕುಲಕರ್ಣಿ ಆ ಮಸಿ ಹೊತ್ತ ಮುಖದಲ್ಲೇ ಪತ್ರಿಕಾಗೋಷ್ಟಿ ನಡೆಸಿದರು. ಅವರ ಪಕ್ಕದಲ್ಲಿ ಪಾಕಿಸ್ತಾನದ ವಿದೇಶಾಂಗ ಸಚಿವರು! ಭಾರತದ ‘ಸಹಿಷ್ಣುತೆ’ಯ ಪೊಳ್ಳುತನ ವಿದೇಶದಲ್ಲೆಲ್ಲಾ ಪ್ರಚಾರ ಪಡೆಯಲು ಇಷ್ಟು ಸಾಕಲ್ಲವೇ? ಅಂದ ಹಾಗೆ ಈ ಸುದೀಂಧ್ರ ಕುಲಕರ್ಣಿ ಕೂಡ ಒಂದು ಹಂತದಲ್ಲಿ ಬಿಜೆಪಿಯ ಪಾಳಯದಲ್ಲಿದ್ದವರು. ವಾಜಪೇಯಿ, ಅಡ್ವಾಣಿಗೆ ಹತ್ತಿರವಿದ್ದವರು. ಈ ರೀತಿಯ ಅಸಹನೆ ಒಳ್ಳೆಯದಲ್ಲ ಎಂದು ಹೇಳಿದ್ದು ಅಡ್ವಾಣಿ! ರಥಯಾತ್ರೆ, ಬಾಬ್ರಿ ಮಸೀದಿ, ಅಯೋಧ್ಯೆ, ರಾಮಮಂದಿರವೆಂದು ವಿಷದ ಬೀಜ ಬಿತ್ತವರಲ್ಲಿ ಅಡ್ವಾಣಿ ಪ್ರಮುಖರು. ಅವರ ವಿಷ ಬೀಜ ಈಗ ಫಲ ಕೊಡಲಾರಂಭಿಸಿದೆ, ಬೀಜ ಬಿತ್ತಿದ್ದನ್ನೇ ಮರೆತವರು ಈಗ ಮುತ್ಸದ್ಧಿಯಾಗುವ ಪ್ರಯತ್ನ ನಡೆಸಿದ್ದಾರೆ. ಜೈಲಿನಿಂದ ಜಾಮೀನಿನ ಮೇಲೆ ಹೊರಬಂದ ಮಸಿ ಬಳಿದವರಿಗೆ ಶಿವಸೇನೆ ಸತ್ಕಾರ ಮಾಡಿದೆ. ದೇಶದ್ರೋಹಿಗಳಿಗೆ ಇದೇ ಶಿಕ್ಷೆ ಎಂದಬ್ಬರಿಸಿದೆ. ಇದು ತಪ್ಪು ಎಂದ ಬಿಜೆಪಿಯವರಿಗೆ ನರೇಂದ್ರ ಮೋದಿ ಖ್ಯಾತರಾಗಿದ್ದೇ ಗೋದ್ರೋತ್ತರ ಹತ್ಯಾಕಾಂಡದಿಂದ ಸುಮ್ಕಿರಿ ಎಂದು ಅಪಹಾಸ್ಯ ಮಾಡಿದೆ. ದ್ವೇಷಿಸಲೊಂದು ದೇಶವಿದ್ದರೆ ದೇಶಪ್ರೇಮಕ್ಕೆ ಬೆಲೆ ದ್ವೇಷಿಸಲೊಂದು ಧರ್ಮವಿದ್ದರೆ ಧರ್ಮರಕ್ಷಣೆಗೆ ಬೆಲೆ ಎಂದು ನಂಬಿದವರಿಂದು ಕೇಂದ್ರದಲ್ಲಿ ಅಧಿಕಾರದಲ್ಲಿದ್ದಾರೆ. ದ್ವೇಷವುಂಡವರ ಮನಸ್ಸನ್ನು ನಿಯಂತ್ರಿಸುವುದು ವಿಷ ಬಿತ್ತಿ ಪೊರೆದವರಿಗೂ ಸಾಧ್ಯವಿಲ್ಲ ಎಂದು ರಾಜಕಾರಣಿಗಳಿಗೆ ಮತ್ತವರ ಅಂಧ ಭಕ್ತರಿಗೆ ಶೀಘ್ರವಾಗಿ ಅರಿವಾದರೆ ಒಳ್ಳೆಯದು.