ಆಗ 15, 2013

ಅಮರ ಸುಳ್ಯದ ಕ್ರಾಂತಿ- ತುಳುನಾಡಿನ ರೈತಾಪಿ ಜನರ ಸ್ವಾತಂತ್ರ್ಯ ಹೋರಾಟ

bellare
ಸ್ವತಂತ್ರ ಧ್ವಜ ಹಾರಾಡಿದ ಬೆಳ್ಳಾರೆಯ ಕೋಟೆ
 ಲಕ್ಷ್ಮಿ ವಾರಾಣಸಿ
1857ರಲ್ಲಿ ಝಾನ್ಸಿರಾಣಿ ಲಕ್ಷ್ಮೀಬಾಯಿಯ ನೇತೃತ್ವದಲ್ಲಿ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ನಡೆಯಿತೆಂಬುದು ಎಲ್ಲರಿಗೂ ಗೊತ್ತಿರುವ ವಿಚಾರವೇ ಆಗಿದೆ. ಆದರೆ ಅದಕ್ಕೂ ಮೊದಲು ಬ್ರಿಟಿಷರ ದಬ್ಬಾಳಿಕೆಯನ್ನು ಯಾರೂ ಪ್ರಶ್ನಿಸಿಲ್ಲ ಎಂದರ್ಥವಲ್ಲ. ಬ್ರಿಟಿಷ್ ಗವರ್ನರ್ ಜನರಲ್ ಡಾಲ್ಹೌ್ಸಿ ಬಳಕೆಗೆ ತಂದ ನಿಯಮಾವಳಿಯ ಪ್ರಕಾರ ಮಕ್ಕಳಿಲ್ಲದ ಭಾರತೀಯ ರಾಜರುಗಳು ಬ್ರಿಟಿಷರ ಅನುಮತಿ ಇಲ್ಲದೆ ದತ್ತು ತೆಗೆದುಕೊಳ್ಳುವಂತಿರಲಿಲ್ಲ. ದತ್ತು ತೆಗೆದುಕೊಳ್ಳುವುದಕ್ಕೆ ಮೊದಲೇ ರಾಜನು ಸತ್ತರೆ ಅಥವಾ ಆತನಿಗೆ ದತ್ತು ತೆಗೆದುಕೊಳ್ಳಲು ಅನುಮತಿ ಸಿಗದೆ ಇದ್ದರೆ ಆ ರಾಜನ ರಾಜ್ಯವು ಬ್ರಿಟಿಷರಿಗೆ ಸೇರುತ್ತಿತ್ತು. ಡಾಲ್ಹೌ ಷಿ ತಂದ ನಿಯಮದಿಂದಾಗಿ ಕೊಡಗು ರಾಜ್ಯ ಕೂಡ ಬ್ರಿಟಿಷರ ಪಾಲಾಗಬೇಕಾಗುತ್ತದೆ.
 

ಕೊಡಗಿನ ಕೊನೆಯ ಅರಸ ಚಿಕ್ಕವೀರ ರಾಜೇಂದ್ರನು ಆಡಳಿತ ನಡೆಸುತ್ತಿದ್ದಾಗ ಸಮಯವನ್ನು ಹೊಂಚುಹಾಕುತ್ತಿದ್ದ ಬ್ರಿಟಿಷರು ಚಿಕ್ಕವೀರ ರಾಜೇಂದ್ರವನ್ನು ಪದಚ್ಯುತಗೊಳಿಸುತ್ತಾರೆ. ಕೊಡಗಿನ ಅರಸರ ವಂಶಕ್ಕೆ ಸೇರಿದವರು ಯಾರು ಇಲ್ಲದ್ದರಿಂದ ಕೊಡಗು ರಾಜ್ಯವನ್ನು ಬ್ರಿಟಿಷರು ವಶಪಡಿಸಿಕೊಳ್ಳುತ್ತಾರೆ. ಆ ಸಮಯದಲ್ಲಿ ಬೆಳ್ಳಾರೆ, ಸುಳ್ಯ ಸೇರಿದಂತೆ ಪಂಜ ಸೀಮೆಯನ್ನು ದಕ್ಷಿಣ ಕನ್ನಡ ಜಿಲ್ಲೆಗೆ ಸೇರಿಸಿದರು. ಕೊಡಗಿನ ಭಾಗವಾಗಿದ್ದ ಸುಳ್ಯವನ್ನು ಕೊಡಗಿನಿಂದ ಬೇರ್ಪಡಿಸಿದ್ದು ಸುಳ್ಳದ ಜನತೆಗೆ ಇಷ್ಟದ ವಿಚಾರವಾಗಿರಲಿಲ್ಲಿ.