ಮಾರ್ಚ್ 7, 2014

ನದಿ ತಿರುಗಿಸುವ ದುಸ್ಸಾಹಸ.....

ಡಾ.ಅಶೋಕ್.ಕೆ.ಆರ್.

ನಾಗರೀಕತೆಗೆ ಮೂಲವಾದ ನದಿಗಳ ಬಗೆಗಿನ ಮನುಷ್ಯನ ನೋಟ ದಿಕ್ಕುತಪ್ಪಿಹೋಗಿದೆ. ಪ್ರಪಂಚದೆಲ್ಲರಿಗಿಂತ ಬುದ್ಧಿವಂತ ಜೀವಿ ಎಂದು ನಮ್ಮ ಬೆನ್ನು ನಾವೇ ತಟ್ಟಿಕೊಂಡರೂ ಪ್ರಕೃತಿಯ ಮುಂದೆ ನಾವೆಲ್ಲರೂ ತೃಣಮಾತ್ರರೆಂಬುದನ್ನು ಮರೆಯಬಾರದು. ಪ್ರಕೃತಿ ಪ್ರತಿಯೊಂದನ್ನೂ ಕಾರಣವಿಲ್ಲದೆ ಮಾಡುವುದಿಲ್ಲ, ಅದು ನದಿಯ ಹರಿವಿನ ಜಾಡಿರಬಹುದು, ನದಿ ಸಮುದ್ರಕ್ಕೆ ಸೇರುವ ಬಗೆಯಿರಬಹುದು ಪ್ರತಿಯೊಂದಕ್ಕೂ ಕಾರಣವಿದ್ದೇ ಇದೆ; ಜೀವಸಂಕುಲವನ್ನು ಪೊರೆಯುವ ಪ್ರಕೃತಿಯ ಪ್ರೀತಿಯ ಸಿಂಚನವಿದೆ. ಇಂತಹ ಪರಿಸರವನ್ನು ಮಲಿನಗೊಳಿಸಿದ ಮೊದಲ ಶ್ರೇಯಸ್ಸು ಶತಶತಮಾನಗಳ ಹಿಂದೆ ಕೃತಕವಾಗಿ ಬೆಂಕಿ ಸೃಷ್ಟಿಸಿದ ಆದಿಮಾನವನದು. ಪ್ರಕೃತಿಯ ವಿರುದ್ಧ ಈಜಲು ತೊಡಗಿದ್ದು ಅಲೆಮಾರಿತನವನ್ನು ತೊರೆದು ಒಂದೆಡೆ ನೆಲೆ ನಿಂತು ವ್ಯವಾಸಾಯ ಆರಂಭಿಸಿದ ತಲೆಮಾರಿನದು. ಅಂದಿನಿಂದ ಇಂದಿನವರೆಗೂ ವಿವಿಧ ರೂಪದಲ್ಲಿ ನಾವೆಲ್ಲರೂ ಪ್ರಕೃತಿಯ ವಿರುದ್ಧ ಈಜುತ್ತಲೇ ಇದ್ದೇವೆ, ನಮ್ಮ ಶಕ್ತಿಗೆ ತಕ್ಕಷ್ಟು ಪರಿಸರ ನಾಶಗೊಳಿಸುತ್ತಲೇ ಸಾಗಿದ್ದೇವೆ.