Oct 4, 2018

'ವಿದಾನಸಭೆ ವಿಸರ್ಜನೆಯಾದ ಕ್ಷಣದಿಂದಲೇ ನೀತಿ ಸಂಹಿತೆ ಜಾರಿ': ಕೇಂದ್ರ ಚುನಾವಣಾ ಆಯೋಗದ ಅಪರೂಪದ ನಿರ್ದಾರದ ಹಿಂದಿರುವುದೇನು?

ಕು.ಸ.ಮಧುಸೂದನ ರಂಗೇನಹಳ್ಳಿ
ತೆಲಂಗಾಣ ವಿದಾನಸಭೆ ವಿಸರ್ಜನೆಯಾದ ಕ್ಷಣದಿಂದಲೇ ಆ ರಾಜ್ಯದಲ್ಲಿ ನೀತಿಸಂಹಿತೆ ಜಾರಿಯಾಗಿದ್ದು, ತೆಲಂಗಾಣದ ಉಸ್ತುವಾರಿ ಸರಕಾರವಾಗಲಿ ಅಥವಾ ಆ ರಾಜ್ಯ ಕುರಿತಂತೆ ಕೇಂದ್ರ ಸರಕಾರವಾಗಲಿ ಯಾವುದೇ ಹೊಸ ಯೋಜನೆಗಳನ್ನು ಘೋಷಿಸಬಾರದೆಂಬ ಆದೇಶವನ್ನು ಹೊರಡಿಸಿದೆ. 

ಕೇಂದ್ರ ಸರಕಾರದ ಆಜ್ಞಾಪಾಲಕನಂತೆ ವರ್ತಿಸುವ ಸಾಂವಿಧಾನಿಕ ಸಂಸ್ಥೆಯೊಂದು ತೆಗೆದುಕೊಳ್ಳಬಹುದಾದ ಅವೈಜ್ಞಾನಿಕ ಮತ್ತು ಪ್ರಜಾಪ್ರಭುತ್ವ ವಿರೋಧಿ ನಿರ್ದಾರವನ್ನು ನಮ್ಮ ಕೇಂದ್ರ ಚುನಾವಣಾ ಆಯೋಗ ಈಗ ತೆಗೆದುಕೊಂಡಿದೆ. ತೆಲಂಗಾಣದಲ್ಲಿ ಹಾಲಿ ಇರುವ ಕೆ.ಚಂದ್ರಶೇಖರ್ ರಾವ್ ಅವರ ಸರಕಾರವು ಉಸ್ತುವಾರಿ ಸರಕಾರವಾಗಿದ್ದು, ಜನಪರವಾದ ಯಾವುದೇ ಜನಪ್ರಿಯ ಯೋಜನೆಗಳನ್ನು ಹೊಸದಾಗಿ ಘೋಷಿಸಲು ಅದು ಅಧಿಕಾರ ಹೊಂದಿಲ್ಲವೆಂದು ಚುನಾವಣಾ ಆಯೋಗ ತನ್ನ ಆದೇಶದಲ್ಲಿ ಸ್ಪಷ್ಟವಾಗಿ ತಿಳಿಸಿದೆ.

ತೆಲಂಗಾಣದ ಮುಖ್ಯಮಂತ್ರಿಗಳಾದ ಶ್ರೀ ಕೆ.ಚಂದ್ರಶೇಖರರಾವ್ ಇದೇ ಸೆಪ್ಟೆಂಬರ್ ಆರನೇ ತಾರೀಖು ವಿದಾನಸಭೆಯನ್ನು ಅವಧಿಗೆ ಮುನ್ನವೇ ವಿಸರ್ಜಿಸಿದ್ದನ್ನು ನಾವಿಲ್ಲಿ ನೆನಪಿಸಿಕೊಳ್ಳಬಹುದು. ಹಾಗೆ ವಿದಾನಸಭೆಯನ್ನು ವಿಸರ್ಜಿಸಿದಾಗ ಶ್ರೀ ರಾವ್ ಅವರು ಬಹುಶ: ಅಕ್ಟೋಬರ್ ತಿಂಗಳಲ್ಲಿ ರಾಜ್ಯದಲ್ಲಿ ಚುನಾವಣೆಗಳು ಘೋಷಣೆಯಾಗಬಹುದು ಮತ್ತು ಡಿಸೆಂಬರ್ ಮದ್ಯಭಾಗದ ಹೊತ್ತಿಗೆ ಚುನಾವಣೆಗಳು ನಡೆಯಬಹುದು. ಈ ಬಗ್ಗೆ ನಾನು ಚುನಾವಣಾ ಆಯೋಗದ ಜೊತೆ ಚರ್ಚಿಸಿದ್ದೇನೆಂದೂ ಹೇಳಿದ್ದರು.
2019ರ ಲೋಕಸಭಾ ಚುನಾವಣೆಯ ಜೊತೆಗೆ ತೆಲಂಗಾಣ ವಿದಾನಸಭೆಗು ಚುನಾವಣೆಗಳು ನಡೆದರೆ ಪ್ರದಾನಮಂತ್ರಿಗಳಾದ ಶ್ರೀ ನರೇಂದ್ರಮೋದಿಯವರ ಜನಪ್ರಿಯತೆಯನ್ನು ಬಂಡವಾಳವನ್ನಾಗಿಸಿಕೊಂಡು ಬಾಜಪ ತೆಲಂಗಾಣ ರಾಷ್ಟ್ರೀಯ ಸಮಿತಿಯನ್ನು ಸೋಲಿಸಬಹುದೆಂಬ ಆತಂಕ ಶ್ರೀರಾವ್ ಅವರಿಗಿತ್ತು. ಇದರ ಜೊತೆಗೆ ಎನ್.ಡಿ.ಎ ಮೈತ್ರಿಕೂಟದಿಂದ ಹೊರಬಂದ ತೆಲುಗುದೇಶಂ ಪಕ್ಷ ಕಾಂಗ್ರೆಸ್ ಜೊತೆಗೆ ಮೈತ್ರಿಮಾಡಿಕೊಂಡು ತನ್ನ ಗೆಲುವಿಗೆ ಅಡ್ಡಿಯನ್ನುಂಟು ಮಾಡಬಹುದೆಂಬ ಹೆದರಿಕೆಯೂ ರಾವ್ ಅವರಿಗೆ ಇತ್ತು. ಹೀಗಾಗಿಯೇ ಅವರು ಯಾರೂ ನಿರೀಕ್ಷಿಸದ ರೀತಿಯಲ್ಲಿ ವಿದಾನಸಭೆಯನ್ನು ವಿಸರ್ಜಿಸಿ ಎಲ್ಲ ರಾಜಕೀಯ ಪಕ್ಷಗಳಿಗೂ ಶಾಕ್ ನೀಡಿದ್ದರು. ಕಾಂಗ್ರೆಸ್, ತೆಲುಗುದೇಶಂ ಮಾತ್ರವಲ್ಲದೆ ಬಾಜಪ ಸಹ ಚಂದ್ರಶೇಖರ್ ರಾವ್ ಅವರ ಈ ನಿರ್ದಾರವನ್ನು ವಿರೋಧಿಸಿದ್ದವು. ಬಾಜಪದ ರಾಷ್ಟ್ರೀಯ ಅದ್ಯಕ್ಷರಾದ ಶ್ರೀ ಅಮಿತ್ ಷಾ ರವರು ಇತ್ತೀಚೆಗೆ ಹೈದರಾಬಾದಿಗೆ ಬೇಟಿ ನೀಡಿದ ಸಂದರ್ಭದಲ್ಲಿ ರಾವ್ ಅವರ ಈ ನಡೆಯನ್ನು ಕಟುಶಬ್ದಗಳಲ್ಲಿ ಟೀಕಿಸಿದ್ದರು.

ಆದರೆ ರಾವ್ ಅವರು ಡಿಸೆಂಬರ್ ತಿಂಗಳಲ್ಲಿ ಚುನಾವಣೆ ನಡೆಯಬಹುದೆಂದು ನೀಡಿದ ಹೇಳಿಕೆಯಿಂದ ಮುಜುಗರಕ್ಕೀಡಾದ ಚುನಾವಣಾ ಆಯೋಗ ಈಗ ರಾವ್ ಅವರ ಹೇಳಿಕೆ ವಿರುದ್ದ ಖಾರವಾಗಿ ಪ್ರತಿಕ್ರಿಯಿಸಿದೆ ಮಾತ್ರವಲ್ಲದೆ ರಾವ್ ಅವರು ಒಬ್ಬ ಜ್ಯೋತಿಷಿಯಂತೆ ಚುನಾವಣಾ ದಿನಾಂಕಗಳನ್ನು ಊಹಿಸಿ ಹೇಳಿಕೆ ನೀಡಿದ್ದು ಸಂವಿದಾನ ವಿರೋಧಿ ನಡವಳಿಕೆಯೆಂದು ಟೀಕಿಸಿದೆ.

ಚಂದ್ರಶೇಖರ್ ರಾವ್ ಅವರ ಈ ಅತಿಬುದ್ದಿವಂತಿಕೆಯ ನಿರ್ದಾರಕ್ಕೆ ಎದುರೇಟು ಎನ್ನುವಂತೆ ಕೇಂದ್ರ ಚುನಾವಣಾ ಆಯೋಗವು ತೆಲಂಗಾಣ ವಿದಾನಸಭೆ ವಿಸರ್ಜನೆಯಾದ ಕ್ಷಣದಿಂದಲೇ ಅ ರಾಜ್ಯದಲ್ಲಿ ನೀತಿ ಸಂಹಿತೆ ಜಾರಿಯಾಗಿದೆ ಎಂಬ ಆದೇಶ ಹೊರಡಿಸಿದೆ. ಬಹುಶ: ಭಾರತದ ಸಂಸದೀಯ ಪ್ರಜಾಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿಯೇ ಮೊದಲಬಾರಿಗೆ ಚುನಾವಣೆಯ ದಿನಾಂಕಗಳು ಘೋಷಣೆಯಾಗುವ ಮೊದಲೇ ನೀತಿಸಂಹಿತೆ ಜಾರಿಗೊಳಿಸಿದ ನಿದರ್ಶನವಾಗಿದೆ. ಹೀಗೆ ಮಾಡಲು ಚುನಾವಣಾ ಆಯೋಗಕ್ಕಿರಬಹುದಾದ ಅಧಿಕಾರದ ಬಗ್ಗೆ ಚರ್ಚೆ ನಡೆಯಬೇಕಿರುವುದು ಒಂದು ಕಡೆಯಾದರೆ, ಈ ವಿಷಯದಲ್ಲಿ ಚುನಾವಣಾ ಆಯೋಗ ಕೇಂದ್ರ ಸರಕಾರಕ್ಕೆ ಗೊತ್ತಿಲ್ಲದಂತೆಯೇ ಇಂತಹದೊಂದು ಆದೇಶ ಹೊರಡಿಸಿದೆಯೇ? ಎನ್ನುವುದೇ ಬಹಳ ಗಂಭೀರವಾದ ಪ್ರಶ್ನೆಯಾಗಿದೆ. ದಿನೇ ದಿನೇ ಬಲಿಷ್ಠವಾಗುತ್ತಿರುವ ಕೇಂದ್ರ ಸರಕಾರ ಇಂತಹ ಅಸಂವಿದಾನಿಕ ಆದೇಶಗಳ ಮೂಲಕ ತನ್ನ ಕೈಕೆಳಗಿನ ರಾಜ್ಯಗಳ ಪರಮಾಧಿಕಾರಕ್ಕೆ ದಕ್ಕೆ ತರುವ ರೀತಿಯಲ್ಲಿ ವರ್ತಿಸುವುದು ಎಷ್ಟು ಸರಿ ಎನ್ನುವುದರ ಬಗ್ಗೆಯೂ ಸವಿವರವಾದ ಚರ್ಚೆಯಾಗಬೇಕಿದೆ. ಜೊತೆಗೆ ಜನತೆ ನೀಡಿದ ಐದು ವರ್ಷಗಳ ಕಾಲದ ಆಡಳಿತದ ಪರಮಾಧಿಕಾರವನ್ನು ತಮ್ಮ ಹಾಗು ತಮ್ಮ ಪಕ್ಷದ ಸ್ವಾರ್ಥಕ್ಕಾಗಿ ಹೀಗೆ ಧಿಕ್ಕರಿಸಿದ ರಾವ್ ಅವರ ರಾಜಕೀಯ ನಡೆ ಎಷ್ಟರಮಟ್ಟಿಗೆ ಅಸಂವಿಧಾನಿಕ ಮತ್ತು ಜನವಿರೋಧಿ ಎಂಬುದರ ಬಗ್ಗೆಯೂ ಚರ್ಚೆಯಾಗಬೇಕಿದೆ.

No comments:

Post a Comment