Aug 11, 2018

ನಮ್ಮನ್ನಗಲಿದ ಸುಮತೀಂದ್ರ ನಾಡಿಗರ ನೆನಪಿನಲ್ಲಿ….

sumateendra nadig
ಸುಮತೀಂದ್ರ ನಾಡಿಗ್
ಕು.ಸ.ಮಧುಸೂದನ ರಂಗೇನಹಳ್ಳಿ 
ಸುಮತೀಂದ್ರ ನಾಡಿಗ್ ಇನ್ನಿಲ್ಲವಾದ ಸುದ್ದಿ ಕೇಳಿ ಮನಸಿಗೆ ಪಿಚ್ಚೆನ್ನಿಸಿ ಬಿಟ್ಟಿತ್ತು. ಬಹುಶ: ಈ ಪೀಳಿಗೆಯ ಬಹುತೇಕರಿಗೆ ನಾಡಿಗರು ಅಪರಿಚಿತರೇ ಎನ್ನ ಬಹುದು. 

ಯಾವತ್ತಿಗೂ ನಾನವರನ್ನು ಬೇಟಿಯಾಗಲೇ ಇಲ್ಲ. ಅದೊಂದು ನೋವು ಸದಾ ನನ್ನನ್ನು ಕಾಡುವುದು ಖಂಡಿತ! ಕೇವಲ ಪತ್ರಗಳ ಮೂಲಕವೇ ನನಗವರು ಕೆಲಕಾಲ ನನ್ನ ಹಿತೈಷಿಯಾಗಿ, ನಾನು ತೀವ್ರವಾದ ಅನಾರೋಗ್ಯ ಪೀಡಿತನಾಗಿದ್ದ ಸಮಯದಲ್ಲಿ ಬದುಕುವ ಧೈರ್ಯ ತುಂಬಿದಂತವರು. 

2000ನವೆಂಬರಿನಲ್ಲಿ ನನ್ನ ದೇಹದ ಎಡಭಾಗಕ್ಕೆ ಆದ ಪಾರ್ಶ್ವವಾಯುವಿನಿಂದ ಸತತ ಎರಡು ವರ್ಷ ಆಸ್ಪತ್ರೆಯಲ್ಲಿ ಅಕ್ಷರಶ: ಜೀವ ಶವದಂತೆ ಮಲಗಿದ್ದೆ. ನಂತರ ನಿದಾನವಾಗಿ ಎದ್ದು ಓಡಾಡುವಂತಾದಾಗ ಎಂದೂ ಸುಮ್ಮನೆ ಕೂರದ ನಾನು ಕವಿತೆಗಳಿಗೆ ಮಾತ್ರ ಮೀಸಲಾಗಿದ್ದ ಕಾವ್ಯ ಖಜಾನೆ( ಕಾವ್ಯ ಕನ್ನಡಿ) ಎನ್ನುವ ಖಾಸಗಿ ಪತ್ರಿಕೆಯೊಂದನ್ನು ಶುರು ಮಾಡಿದ್ದೆ.
ಕು.ಸ.ಮಧುಸೂದನ ರಂಗೇನಹಳ್ಳಿಯವರ ಮತ್ತಷ್ಟು ಬರಹಗಳನ್ನು ಓದಲು ಇಲ್ಲಿ ಕ್ಲಿಕ್ಕಿಸಿ. 

ಆಗ ನಾಡಿಗರ ವಿಳಾಸ ಹುಡುಕಿ ನನ್ನ ಬಗ್ಗೆ ವಿವರವಾಗಿ ಬರೆದು ಅವರ ಕವಿತೆಗಳನ್ನು ಕಳಿಸಲು ಕೋರಿ ಕೊಂಡಿದ್ದೆ. ತಕ್ಷಣವೇಪ್ರತಿಕ್ರಿಯೆ ನೀಡಿದ ಅವರು ತಮ್ಮ ಎರಡು ಕವಿತೆಗಳನ್ನು ಕಳಿಸಿ ನನ್ನ ಆರೋಗ್ಯದ ಬಗ್ಗೆ ಕಾಳಜಿ ತೋರಿಸಿ ತಮ್ಮ ಹೃದಯ ವೈಶಾಲ್ಯತೆ ಮೆರೆದಿದ್ದರು. ನಂತರವೂ ಪತ್ರಿಕೆ ನಡೆದ ಮೂರು ವರ್ಷಗಳ ಕಾಲ ಸುಮಾರು ಕವಿತೆಗಳನ್ನು ಪ್ರಕಟಿಸಲು ನೀಡಿದ್ದರು. ಅದರಲ್ಲಿ ಬಹುಮುಖ್ಯವಾಗಿ ಬಂಗಾಳಿ ಕವಿ ಜೀವನದಾಸ್ ಅವರ ಕವಿತೆಗಳನ್ನುಅನುವಾದಿಸಿ ಕೊಟ್ಟಿದ್ದರು. ಆ ಸಮಯದಲ್ಲಿ ಪ್ರತಿ ತಿಂಗಳೂ ಕವಿತೆ ಕಳಿಸುವಾಗ ನನಗೆ ಸಾಹಿತ್ಯ ಪತ್ರಿಕೆಯೊಂದನ್ನು ನಡೆಬೇಕಾದ ರೀತಿಯ ಬಗ್ಗೆ ಕಿವಿ ಮಾತು ಹೇಳುತ್ತಾ, ನನ್ನ ಆರೋಗ್ಯದ ಬಗ್ಗೆ ವಿಚಾರಿಸುತ್ತ ಪ್ರೀತಿ ತೋರಿಸಿದ್ದರು. ( ಆ ದಿನಗಳಲ್ಲಿ ಜಿ.ಎಸ್.ಶಿವರುದ್ರಪ್ಪ, ಚನ್ನವೀರ ಕಣವಿ, ಎಂ. ಆರ್.ಕಮಲಾ, ಜಯಂತ್ ಕಾಯ್ಕಿಣಿ, ಮುಂಬೈನಲ್ಲಿದ್ದ ಹಾ.ಮ.ಕನಕ, ಹೆಚ್.ಎಸ್.ಶಿವಪ್ರಕಾಶ್. ಮುಂತಾದ ಘಟಾನುಘಟಿ ಕವಿಗಳು ನನ್ನ ಪತ್ರಿಕೆಗೆ ಕವಿತೆ ಕಳಿಸಿದ್ದು ಇವತ್ತಿಗೂ ನನಗೆ ಹೆಮ್ಮೆಯ ವಿಚಾರ). 

ನಂತರ ಪತ್ರಿಕೆ ನಿಂತು ಹೋದರೂ, ಒಂದಷ್ಟು ಕಾಲ ಪತ್ರ ಬರೆಯುವುದು ಮಾತಾಡುವುದು ನಡೆದಿತ್ತು. ಬಹುಶ: ನಂತರ ನಡೆದ ನನ್ನ ಖಾಸಗಿ ಬದುಕಿನ ಹಲವು ಏರುಪೇರುಗಳು ನಾನು ಸಾಹಿತ್ಯ ಕ್ಷೇತ್ರವಿರಲಿ, ಯಾರೊಂದಿಗೂ ಸಂಪರ್ಕವನ್ನೇ ಇಟ್ಟುಕೊಳ್ಳಲಾಗದಂತಹ ಖಿನ್ನತೆಗೆ ದೂಡಿಬಿಟ್ಟವು. ಮತ್ತೆ ನಾನೆಂದೂ ನಾಡಿಗರಿಗೆ ಪತ್ರ ಬರೆಯುವ ಮಾತಾಡಿಸುವ ಪ್ರಯತ್ನ ಮಾಡಲಿಲ್ಲ. ಇವತ್ತಿಗೂ ನನಗೀ ಬಗ್ಗೆ ಒಂದು ಸಣ್ಣದಾದ ಅಪರಾಧಿ ಪ್ರಜ್ಞೆ ಕಾಡುತ್ತಿದೆ. ಇವತ್ತಿನ ಪೀಳಿಗೆಯ ಕವಿಗಳು ಸುಮತೀದ್ರ ನಾಡಿಗರ ಸರಳತೆಯನ್ನು ಮೈಗೂಡಿಸಿಕೊಳ್ಳಬೇಕಿದೆ. 

ಕೊನೆಯದಾಗಿ: ಹೋಗಿಬನ್ನಿ ಸರ್, ನಿಮ್ಮ ಕವಿತೆಗಳು ನಮ್ಮ ಜೊತೆಗಿವೆ ನಿಮ್ಮ ನೆನಪುಗಳಾಗಿ! 

ಕವಿತೆಗಳನ್ನು ಬರೆದು ಓದಿಸಿದ್ದಕ್ಕೆ ನಾವು ಋಣಿಯಾಗಿರುತ್ತೇವೆ.

No comments:

Post a Comment