Oct 30, 2017

ಸುಡುಗಾಡು ಕವಿತೆಗಳು

ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
ಮರಣಪತ್ರವನ್ನೂ ಕೇಳುತ್ತಿಲ್ಲ
ಸುದೀರ್ಘ ಸಂಜೆಗಳ ಉದ್ದುದ್ದ ನೆರಳುಗಳು
ಅಂಗಳದ ತುಂಬಾ ಹರಡಿಕೊಂಡವು
ಎಲ್ಲಿಂದಲೋ ಸುಟ್ಟವಾಸನೆಯ ಘಮಲು
ಮಧುಬಟ್ಟಲಿಗೆ ಕಾತರಿಸುತಿಹ ಕೆಂಡದ ತುಟಿಗಳು

ದೂರ ತೀರದಿಂದ ಕೇಳುತಿದೆ ಯಾರದೊ ಕೊರಳು
ಅದೇನು ಶೃತಿಯಿರದ ಹಾಡಲ್ಲ ಸಾವಿನ ಮೊದಲ ನರಳು
ಎಂದೊ ಸತ್ತವರೆದೆಯೊಳಗೆ ಹೇಗೆ ಮೂಡಿಯಾವು ಹಾಡುಗಳು
ಅಗ್ನಿಕುಂಡದೊಳಗೆ ಆತ್ಮಾಹುತಿಗೀಡಾದ ಹೂಗಳು.

ಹೊಯ್ಯಲೇಬೇಕೆಂದೇನಿಲ್ಲ ಹೆಣಗಳನ್ನೀಗ ಸುಡುಗಾಡಿಗೆ
ಊರುಗಳನ್ನೇ ಮಾದರಿ ಮಸಣಗಳನ್ನಾಗಿಸಲಾಗಿದೆ
ಯಾರ ಗೋರಿಗಳ ಮೇಲೂ ಯಾರ ಹೆಸರನ್ನೂ ಬರೆಯಲಾಗುತ್ತಿಲ್ಲ
ಸತ್ತವರ ಹೆಸರಿನಲ್ಲಿ ಯಾರೂ ಮರಣ ಪತ್ರವನ್ನೂ ಕೇಳುತ್ತಿಲ್ಲ
=======
ಕತ್ತಿಗಳಂತಾಗುತ್ತವೆ
ದುರಿತ ಕಾಲದ ದನಿಗಳು
ಉಡುಗುವುದಿಲ್ಲ
ಕೋಟೆ ಕೊತ್ತಲಗಳ ಗೋಡೆಗಳಿಗೆ
ದೇವಳಗಳ ಎತ್ತರದ ಪಾಗಾರಗಳಿಗೆ
ಬಡಿದು ಪ್ರತಿದ್ವನಿಸುತ್ತವೆ
ಊರ ನಡೂವಿನ ಸಂತೆಗಳ ಬಯಲುಗಳಲ್ಲಿ
ರಾಗಿಜೋಳ ಸೊಪ್ಪು ಸದೆ ತರಕಾರಿಗಲ ಮಾರಿ
ಎಣ್ಣೆ ಸೋಪು, ಪಂಚೆ ನಿಕ್ಕರುಗಳ ಖರೀಧಿಸುತ್ತಿರುವ
ನಮ್ಮ ಜನಗಳ ಹೃದಯಗಳೊಳಗೆ
ಇಳಿದು ಜನಪದಗಳಾಗುತ್ತವೆ
ದುಡಿದು ತಿನ್ನುವ ಕೈಗಳಿಗೆ ಲಕ್ವಾಹೊಡೆಸಿದಂತೆ
ಕೂಲಿಯಿರದಂತೆ ಮಾಡಿ ರಾಮನಾಮ ಸ್ಮರಣೆಗೆ ಕೂರಿಸಿದ 
ಉಂಡವರ ಕಿವಿ ತೂತಾಗುವಂತೆ ಮರುದ್ವನಿಸಿ
ಈ ನೆಲದ ಉದ್ದಗಲಕ್ಕೂ
ಶಬುದಗಳು ಚೆಲ್ಲಾಡುತ್ತವೆ.
ವ್ಯರ್ಥವಾಗುವುದಿಲ್ಲ ದುರಿತಕಾಲದ ಹಾಡುಗಳು!
ಊರಾಚೆಯ ಸ್ಮಶಾನದ ಚಿತೆಯ ಬೆಂಕಿಯಲ್ಲಿಯೇ
ಕಾದು ಕೆಂಪಾಗಿ ಕತ್ತಿಗಳಂತಾಗುತ್ತವೆ!
(ಇದೀಗ ಕವಿತೆಗಳೂ ಸುಡುಗಾಡು ಸೇರಿಕೊಳ್ಳುತ್ತಿರುವ ಸುದ್ದಿಬಂದಿದೆ)

No comments:

Post a Comment