Jun 16, 2014

ಬಣ್ಣ ಬಯಲಾಗತೊಡಗಿದೆ.

Muneer Katipalla

ಇಂಡಿಯಾ ದೇಶದ ಜನಸಾಮಾನ್ಯರ, ಬಡವರ ನಾಯಕ, ಬಡತನ, ಅಸಮಾನತೆಯ ನಿವಾರಕ ಎಂಬ ವರ್ಚಸ್ಸಿನೊಂದಿಗೆ, ದೇಶದ ಎಲ್ಲಾ ವಿಭಾಗದ ಜನತೆಯ ಬೆಂಬಲ ಪಡೆದು ಗೆದ್ದುಬಂದು ದೆಹಲಿ ಸಿಂಹಾಸನ ಏರಿದ ನರೇಂದ್ರ ಮೋದಿ ಬಣ್ಣ ಬಹಳ ವೇಗವಾಗಿ ಬಯಲಾಗತೊಡಗಿದೆ. ಪ್ರಮಾಣವಚನ ಸ್ವೀಕರಿಸಿ ವಾರದೊಳಗಡೆ ಆಯಕಟ್ಟಿನ ಕ್ಷೇತ್ರಗಳಲ್ಲಿ ವಿದೇಶಿ ನೇರ ಹೂಡಿಕೆಗೆ ಮುಂದಾದ ಇಂಡಿಯಾದ ನೂತನ ಚಕ್ರಾಧಿಪತಿ ಈಗ ಇನ್ನೂ ಒಂದು ಹೆಜ್ಜೆ ಮುಂದಿಟ್ಟಿದ್ದಾರೆ. ದೇಶದ ಆರ್ಥಿಕತೆ ಗಟ್ಟಿಗೊಳಿಸಲು ಕೆಲವು ಕಠಿನ ನಿರ್ಧಾರ ತೆಗೆದು ಕೊಳ್ಳಬೇಕಾಗಿದೆ, ಇದು ನನ್ನನ್ನು ಬೆಂಬಲಿಸಿದ ಜನಸಾಮಾನ್ಯರಿಗೆ ಅಪ್ರಿಯ ಆಗಬಹುದು. ದೇಶದ ಭವಿಷ್ಯದ ಧೃಷ್ಟಿಯಿಂದ ಎಲ್ಲರೂ ತನ್ನೊಂದಿಗೆ ಕೈಜೋಡಿಸಬೇಕು ಅಂದಿದ್ದಾರೆ.

ಮೋದಿ ಪ್ರಕಾರ ಬರಿದಾಗಿರುವ ಖಜಾನೆ ತುಂಬಿಸಲು ಜನತೆಗೆ ನೀಡುವ ರಿಯಾಯಿತಿಗಳನ್ನು ( ಇದು ವಿಶ್ವಬ್ಯಾಂಕ್ ಸಹಿತ ಮೂರನೆ ಜಗತ್ತಿನ ರಾಷ್ಟ್ರಗಳಿಗೆ ಸಾಲ ನೀಡುವ ವಿದೇಶಿ ಹಣಕಾಸು ಸಂಸ್ಥೆಗಳ ಹಳೆಯ ರಾಗ)ಕಡಿತಗೊಳ್ಳಿಸಬೇಕು. ಅಂದರೆ ಸಬ್ಸಿಡಿ ದರದ ಅಡುಗೆ ಅನಿಲ ಸಿಲಿಂಡರ್ ಗಳ ಸಂಖ್ಯೆಯನ್ನು ಅರ್ಧದಷ್ಟು ಕಡಿಮೆಗೊಳಿಸುವುದು, ಜೊತೆಗೆ ದರ ಏರಿಸುವುದು, ಡೀಸೆಲ್ ಸಬ್ಸಿಡಿ ಸಂಪೂರ್ಣ ನಿಲ್ಲಿಸುವುದು, ಪೆಟ್ರೋಲಿಯಂ ಉತ್ಪನ್ನಗಳ ಮೇಲೆ ಹಾಕುತ್ತಿರುವ ತೆರಿಗೆ ಕಡಿತಮಾಡದೆ ಅಂತರ್ರಾಷ್ರೀಯ ಬೆಲೆ ಏರಿಕೆಯಂತೆ ಇಲ್ಲಿಯೂ ಬೆಲೆ ಏರಿಸುವುದು. ಶಿಕ್ಷಣ, ಆರೋಗ್ಯ ಕ್ಷೇತ್ರದಲ್ಲಿ ಸರಕಾರಿ ಪಾಲು ಕಡಿಮೆಗೊಳಿಸಿ ಖಾಸಗಿ ಉದ್ದಿಮೆದಾರರಿಗೆ ಬಿಟ್ಟುಕೊಡುವುದು ಆ ಮೂಲಕ ಸರಕಾರದ ಹಣ ಉಳಿಸುವುದು. ಹೀಗೆ ದೇಶದ ಉದ್ದಾರಕ್ಕಾಗಿ, ಭವಿಷ್ಯದ ಒಳ್ಳೆಯ ದಿನಗಳಿಗಾಗಿ ಈಗ ಹೊಟ್ಟೆಗೆ ಬಟ್ಟೆ ಕಟ್ಟಿಕೊಳ್ಳಿ ಎಂದು ಒಳ್ಳೆಯ ದಿನಗಳ ವಾಗ್ದಾನ ಮಾಡಿದ್ದ ನರೇಂದ್ರ ಮೋದಿ ಜನತೆಯ ಬದುಕಿಗೆ ಗದಾ ಪ್ರಹಾರದ ಮುನ್ಸೂಚನೆ ನೀಡಿದ್ದಾರೆ.
ಅದೇ ಸಂಧರ್ಭದಲ್ಲಿ ಇಂಡಿಯಾದ ಧಣಿಗಳ ವಿವಿದ ಒಕ್ಕೂಟಗಳೊಂದಿಗೆ ಬಜೆಟ್ ಪೂರ್ವ ಸರಣಿ ಸಭೆಗಳನ್ನು ನಡೆಸಿದ್ದಾರೆ. ಆ ಸಭೆಗಳಲ್ಲಿ ಹೂಡಿಕೆಗಳನ್ನು ಹೆಚ್ಚಿಸಬೇಕಾದರೆ, ಉದ್ಯಮಪತಿಗಳ ವಲಯದಲ್ಲಿ ಉತ್ಸಾಹ ಮೂಡಬೇಕಾದರೆ ಬೃಹತ್ ಹೂಡಿಕೆದಾರಿಗೆ ಇನ್ನಷ್ಟು ರಿಯಾಯಿತಿಗಳನ್ನು ನೀಡಬೇಕು(ಈಗಾಗಲೆ ಅತಿ ಎನ್ನುವಷ್ಟು ರಿಯಾಯಿತಿ ನೀಡಲಾಗುತ್ತಿದೆ.)ಎಂದು ಇಂಡಿಯಾದ ಧಣಿಗಳ ಪ್ರತಿನಿಧಿಗಳು ಮೋದಿ ಅವರಿಗೆ ಒತ್ತಾಯಿಸಿದ್ದಾರೆ(ಆದೇಶಿಸಿದ್ದಾರೆ) ಅದಕ್ಕೆ ದೊರೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ.
ಅಂದರೆ ನರೇಂದ್ರ ಮೋದಿ ಸರಕಾರವು ಹಿಂದಿನ ಕಾಂಗ್ರೆಸ್ ಸರಕಾರದ ಮುಂದುವರಿದ ಭಾಗದಂತಿರುತ್ತದೆ ಎಂಬುವುದು ಸ್ಪಷ್ಟವಾದಂತಾಯಿತು. ಬಡವರ, ಜನಸಾಮಾನ್ಯರ, ದುಡಿಯುವ ವರ್ಗದಿಂದ ಹೆಚ್ಚು ಹೆಚ್ಚು ಕಿತ್ತುಕೊಳ್ಳುವದು, ಟಾಟ, ಬಿರ್ಲಾ, ಅಂಬಾನಿ, ಅದಾನಿ ಸಹಿತ ಮಾಲಿಕ ವರ್ಗದ ಸಂಪತ್ತನ್ನು ಆಕಾಶದೆತ್ತರಕ್ಕೆ ಹೆಚ್ಚಿಸುವುದು ಈ ಸರಕಾರದ ಆದ್ಯತೆ ಎಂಬ ಮಾತನ್ನು ಮೋದಿ ಅಗತ್ಯಕ್ಕಿಂತ ಬಹಳ ಮುಂಚಿತವಾಗಿ ಪ್ರಕಟಿಸಿಬಿಟ್ಟಿದ್ದಾರೆ.ಮೋದಿ ಕುರಿತ ರಂಗು ರಂಗಿನ ಕಥೆಗಳನ್ನು ನಂಬಿ ಬಣ್ಣ ಬಣ್ಣದ ಕನಸುಗಳನ್ನು ಕಟ್ಟಿ ಕೊಂಡ ಜನತೆಗೆ ಭ್ರಮನಿರಸನವಾಗಲು ಹೆಚ್ಚು ದಿನಬೇಕಿಲ್ಲ.
ಮುಂದಿನ ದಿನಗಳು ಖಂಡಿತ ಹತಾಶ ಜನತೆಯ ಹೋರಾಟದ ದಿನಗಳು, ಜನಪರ, ಪ್ರಜಾಪ್ರಭತ್ವವಾದಿ ಶಕ್ತಿಗಳಿಗೆ ಅಗ್ನಿ ಪರೀಕ್ಷೆಯ ದಿನಗಳು.ಬಂಡವಾಳಶಾಹಿಗಳು, ಆಳವ ವರ್ಗಗಳು ಭ್ರಮನಿರಸನಗೊಂಡ ಜನತೆಯನ್ನು ದಿಕ್ಕುತಪ್ಪಿಸಲು ಅವಕಾಶಕೊಡದೆ ಜನತೆಯನ್ನು ಪ್ರಭುತ್ವದ ವಿರುದ್ದ ಒಂದುಗೂಡಿಸಲು ಜಾಗರೂಕತೆಯಿಂದ ಮುಂದಡಿ ಇಡಬೇಕಾಗಿದೆ.

1 comment:

  1. ಅಷ್ಟೊಂದು ಬೇಗನೆ ಈ ನಿರ್ಧಾರಕ್ಕೆ ಬರುವುದು ಬೇಡವೆನಿಸುತ್ತದೆ .ಪೂರ್ತಿ ಹದಗೆಟ್ಟ ಪರಿಸ್ಥಿತಿಯನ್ನು ತಹಬದಿಗೆ ತರಲು ಸಾಕಷ್ಟು ಸಮಯಬೇಕು .ಮಾತು ಮಾತಿಗೆ ತಮ್ಮದೇ ಆದ ಅರ್ಥ ಕಲ್ಪಿಸಿಕೊಂಡು ಹತಾಶೆಗೊಳಗಾಗುವ ಅಗತ್ಯವಿಲ್ಲ.ಎರಡು ಮಕ್ಕಳ ಸಣ್ಣ ಕುಟುಂಬಕ್ಕೆ ವರ್ಷಕ್ಕೆ 12 ಸಿಲಿಂಡರ್ ಅಡುಗೆ ಅನಿಲ ಅಗತ್ಯ ಇಲ್ಲ ,ಇದರ ದುರುಪಯೋಗ ಎಲ್ಲೆಡೆ ಕಾಣುತ್ತಿದೆ ಅಡುಗೆ ಅನಿಲವನ್ನು ಕಾರಿಗೆ ಜೀಪಿಗೆ ಅಳವಡಿಸಿಕೊಂಡು ಹೋಗುವುದು ಎಲ್ಲರಿಗೂ ಗೊತ್ತಿರುವ ವಿಚಾರವೇ ಆಗಿದೆ .ಶಿಕ್ಷಣ ಮತ್ತೆ ಆರೋಗ್ಯ ವಿಚಾರಗಳಲ್ಲಿ ಈಗಾಗಲೇ ಖಾಸಗಿಯವರ ಪಾಲು ಇದೆ ಇದು ಹೊಸತೇನು ಅಲ್ಲ

    ReplyDelete