Jun 28, 2012

ಮುಖ್ಯವಾಹಿನಿಯ ಜಾಣಗುರುಡು


ಡಾ ಅಶೋಕ್ ಕೆ ಆರ್        
 ಹೆಂಡತಿ ಗಂಡನಿಗೆ ಹೊಡೆದರೆ ‘ಬ್ರೇಕಿಂಗ್ ನ್ಯೂಸ್’, ಗಂಡ ಹೆಂಡತಿಗೆ ಹೊಡೆದರೆ ‘ಬ್ರೇಕಿಂಗ್ ನ್ಯೂಸ್’, ಪೂನಂ ಪಾಂಡೆ ಬೆತ್ತಲಾದದ್ದು, ಐಶ್ವರ್ಯ ರೈ ದಪ್ಪಗಾಗಿದ್ದು ಮುಖಪುಟ ಸುದ್ದಿ! ಅಧಿಕಾರಿ, ರಾಜಕಾರಣಿ, ಸನ್ಯಾಸಿ ಮಾಡಿದ ತಪ್ಪುಗಳು ‘ಬ್ರೇಕಿಂಗ್ ನ್ಯೂಸ್’ [ofcourse ಯಾವ ವಾಹಿನಿ ವೀಕ್ಷಿಸುತ್ತಿದ್ದೀರೆಂಬುದರ ಮೇಲೆ ಈ ಕೊನೆಯ ಬ್ರೇಕಿಂಗ್ ನ್ಯೂಸ್ ಬದಲಾಗುತ್ತಿರುತ್ತದೆ!]. ಪತ್ರಕರ್ತನೊಬ್ಬ ನೆಲದ ಕಾನೂನಿಗೆ ಗೌರವ ಕೊಡದೆ ನಡೆದುಕೊಂಡಾಗ? ಅದು ಸುದ್ದಿಯೂ ಅಲ್ಲ, ರದ್ದಿಗೆ ಹಾಕುವಂಥ ವಿಷಯ ಎಂಬುದು ನಮ್ಮ ಮುಖ್ಯವಾಹಿನಿ ಮಾಧ್ಯಮಗಳ ನಿಲುವು!

          ಪತ್ರಕರ್ತ ಅದರಲ್ಲೂ ಪತ್ರಿಕೆಯೊಂದರ ಸಂಪಾದಕನೆಂದ ಮೇಲೆ ಮಾನನಷ್ಟ ಮೊಕದ್ದಮೆಯ ಆರೋಪಿಯಾಗುವುದು ಸಹಜ. ಕೆಲವೊಮ್ಮೆ ವೈಯಕ್ತಿಕ ದ್ವೇಷದಿಂದ ಸಂಪಾದಕರೇ ಸುಳ್ಳು ಮಾಹಿತಿಯನ್ನು ವೈಭವೀಕರಿಸುತ್ತಾರೆ. ಇನ್ನು ಕೆಲವೊಮ್ಮೆ ನಂಬಿದ ವರದಿಗಾರರೇ ಸುಳ್ಳು ಅಥವಾ ಅರ್ಧ ಸತ್ಯದ ಮಾಹಿತಿಯನ್ನು ನೀಡಿ ಸಂಪಾದಕರ ದಾರಿ ತಪ್ಪಿಸುತ್ತಾರೆ. ಸತ್ಯ ತನ್ನ ಪರವಾಗಿದೆಯೆಂಬ ಧೃಡತೆ ಇರುವ ವ್ಯಕ್ತಿ ಪತ್ರಿಕೆ, ಅದರ ವರದಿಗಾರ-ಸಂಪಾದಕರ ಮೇಲೆ ಮಾನನಷ್ಟ ಮೊಕದ್ದಮೆ ಹೂಡುತ್ತಾರೆ. ವರದಿ ಅಪ್ಪಟ ಸುಳ್ಳಾಗಿದ್ದರೆ ಪತ್ರಿಕೆ ಅಥವಾ ಸುದ್ದಿವಾಹಿನಿಯಲ್ಲಿ ತಪ್ಪೊಪ್ಪಿಗೆ ನೀಡಬೇಕಾಗುತ್ತದೆ. ಮಾನಸಿಕ ಹಿಂಸೆ, ಸಾಮಾಜಿಕ ನೆಲೆಯಲ್ಲಾದ ಅವಮಾನಗಳನ್ನು ಪರಿಗಣಿಸಿ ಪರಿಹಾರ ಕೊಡಿಸುವುದೂ ಉಂಟು. ಜೈಲು ಪಾಲಾಗುವ ಸಾಧ್ಯತೆಯೂ ಇದೆಯಾದರೂ ಅದು ಬಹಳವೇ ಅಪರೂಪ.
ಹೊಸ ದಿಗಂತದಲ್ಲಿ ಪ್ರಕಟವಾಗಿದ್ದ ಸುದ್ದಿ

          ಇವೆಲ್ಲವನ್ನೂ ಹೇಳಲು ಕಾರಣ ಹಾಲಿ ಕನ್ನಡ ಪ್ರಭ ಪತ್ರಿಕೆಯ ಸಂಪಾದಕರೂ, ಸುವರ್ಣ ಸುದ್ದಿ ವಾಹಿನಿಯ ಮುಖ್ಯಸ್ಥರೂ ಆದ ವಿಶ್ವೇಶ್ವರ ಭಟ್ಟರು ನಿನ್ನೆ [ಜೂನ್ 27] ಬಂಧಿತರಾಗಿ ಮಧ್ಯಾಹ್ನದ ನಂತರ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದಾರೆ. 2008ರಲ್ಲಿ ವಿಜಯ ಕರ್ನಾಟಕದ ಸಂಪಾದಕರಾಗಿದ್ದ ಸಮಯದಲ್ಲಿನ ಒಂದು ವರದಿಯ ಕುರಿತಂತೆ ಮಾನನಷ್ಟ ಮೊಕದ್ದಮೆ ಎದುರಿಸುತ್ತಿದ್ದರು. ನ್ಯಾಯಾಲಯದಿಂದ ಪದೇ ಪದೇ ಸಮನ್ಸ್ ಜಾರಿಯಾದಾಗ್ಯೂ ಕೂಡ ಹಾಜರಾಗಲಿಲ್ಲ. ಕೊನೆಗೆ ಬೇಸತ್ತ ನ್ಯಾಯಾಲಯ ಅರೆಸ್ಟ್ ವಾರೆಂಟ್ ಜಾರಿ ಮಾಡಿತು. ಭಟ್ಟರ ಬಂಧನವಾಯಿತು.

ಇದು ಸುದ್ದಿಯಲ್ಲವಾ?
          ಸಮಾಜವನ್ನು ತಿದ್ದುವ ಸರಿಪಡಿಸುವ ಕೆಲಸ ಮಾಧ್ಯಮಗಳಿಂದಾಗಬೇಕಿತ್ತು. ಎರಡು ಪ್ರಮುಖ ಮಾಧ್ಯಮದ ಮುಖ್ಯಸ್ಥನಾಗಿರುವ ವ್ಯಕ್ತಿಯೇ ನ್ಯಾಯಾಲಯದ ಆದೇಶಗಳಿಗೆ ಬೆಲೆ ಕೊಡುವುದಿಲ್ಲವೆಂದ ಮೇಲೆ ತನ್ನ ಮುಂದಾಳತ್ವದ ಪತ್ರಿಕೆ, ವಾಹಿನಿಗಳಲ್ಲಿ ಸಮಾಜ ಪರ, ನ್ಯಾಯ ಪರ ಸುದ್ದಿಗಳನ್ನು ಹೇಗೆ ತಾನೇ ನೀಡಬಲ್ಲ? ನೈತಿಕತೆಯ ಪ್ರಶ್ನೆಯೇ ಇವರಿಗೆ ಕಾಡುವುದಿಲ್ಲವಾ? ಅವರನ್ನು ಬಿಡಿ; ಉಳಿದ ವಾಹಿನಿಗಳು? ವಾರ್ತಾ ಭಾರತಿ, ದಿ ಹಿಂದೂ, ಡೆಕ್ಕನ್ ಹೆರಾಲ್ಡ್ ಪತ್ರಿಕೆಗಳ ಒಳಪುಟಗಳಲ್ಲಿ [ಕನ್ನಡಪ್ರಭದ ಮುಖಪುಟದಲ್ಲೂ ಈ ಬಗ್ಗೆ ಒಂದು ವರದಿ ಮುಖಪುಟದಲ್ಲಿದೆ-ಕೊನೆಯಲ್ಲಿ ಸ್ಪಷ್ಟನೆ ನೋಡಿ] ಈ ಸುದ್ದಿ ಬಂದಿದೆಯಷ್ಟೇ. ಉಳಿದ ಪತ್ರಿಕೆಗಳು, ವಾಹಿನಿಗಳು? ಎಂದಿನಂತೆ ದಿವ್ಯ ಮೌನ! ಅವರ ಬಣ್ಣ ಬಯಲು ಮಾಡಿದರೆ ನಮ್ಮ ಬಣ್ಣವೂ ಬಯಲಾಗಬಹುದೆಂಬ ಭೀತಿಯೇ? 

          ನನಗೀ ವಿಷಯದ ಅರಿವಾಗಿದ್ದು ನಮ್ಮ ಮುಖ್ಯ ಮಾಧ್ಯಮಗಳು ತುಚ್ಛವಾಗಿ ಕಾಣುವ ವೆಬ್ ಸೈಟ್ ಬ್ಲಾಗುಗಳಿಂದ [ದಟ್ಸ್ ಕನ್ನಡ, ವರ್ತಮಾನ]. ನಾನಿರುವ ಜಾಗದಲ್ಲಿ ಮಂಗಳೂರಿನ ಆವೃತ್ತಿಯ ಪತ್ರಿಕೆಗಳು ಬರುತ್ತವೆ. ಬೆಂಗಳೂರಿನ ಆವೃತ್ತಿಗಳಲ್ಲಾದರೂ  ಬಂದಿರಬಹುದೋ ಏನೋ ಎಂದು ಗೆಳೆಯನೊಬ್ಬನಿಗೆ ಫೋನಿಸಿದರೆ ಅವನಿಗೆ ಬಂಧನದ ವಿಷಯವೇ ಗೊತ್ತಿರಲಿಲ್ಲ! ಪಬ್ಲಿಕ್ ಟಿವಿಯಲ್ಲಿ ಕೆಲಸ ಮಾಡುತ್ತಿರುವ ಇನ್ನೋರ್ವ ಸ್ನೇಹಿತನಿಗೆ ‘ನಿಮ್ಮ ವಾಹಿನಿಯಲ್ಲಿ ಬಂಧನದ ಸುದ್ದಿ ಪ್ರಸಾರ ಮಾಡಿದರಾ?’ ಎಂದು ಮೆಸೇಜಿಸಿದೆ. ‘ಇಲ್ಲ. ಯಾವ ವಾಹಿನಿಯಲ್ಲೂ ಬಂದಿಲ್ಲ’ ಎಂದು ಹೇಳಿದ. ಕಾರಣ ಕೇಳಿ ಮಾಡಿದ ಮೆಸೇಜಿಗೆ ಇನ್ನೂ ಉತ್ತರಿಸಿಲ್ಲ. ನಿಜಕ್ಕೂ ಪ್ರಾಮಾಣಿಕನಾಗಿರುವ ಈ ಗೆಳೆಯನಾದರೂ ಉತ್ತರಿಸುತ್ತಾನೆಂಬ ನಿರೀಕ್ಷೆಯಲ್ಲಿದ್ದೇನೆ.

ಹಿಂಗ್ಯಾಕೆ?! – ಪ್ರಜೆಗಳ ಜೊತೆಗಿದ್ದು ಕಾರ್ಯನಿರ್ವಹಿಸಬೇಕಾದ ಮುಖ್ಯವಾಹಿನಿ ಮಾಧ್ಯಮಗಳು ಪ್ರಭುಗಳ ಜೊತೆ ಸೇರಿ ತಿರುಚಿದ ಸುದ್ದಿಯನ್ನು ಪ್ರಜೆಗಳ ಮೇಲೆ ಸುರಿಯುತ್ತಿರುವಾಗ ‘ಪ್ರಜಾಪ್ರಭುತ್ವ’ವನ್ನು ನಂಬುವುದಾದರೂ ಹೇಗೆ ಮತ್ತು ಯಾಕೆ?

ನಮ್ಮಿಂದಲೂ ಒಂದು ಸ್ಪಷ್ಟನೆ! ಫೇಸ್ ಬುಕ್ಕಿನ ಗೆಳೆಯರೊಬ್ಬರು ಕನ್ನಡಪ್ರಭದಲ್ಲೂ ಇದರ ಬಗ್ಗೆ ಮುಖಪುಟದಲ್ಲೇ ವರದಿಯಾಗಿದೆ ಎಂದು ತಿಳಿಸಿದ್ದಾರೆ.  ಪ್ರಕಟಿಸಿಕೊಂಡಿದ್ದಾರೆ ಸಂತೋಷ. ಆದರೆ ಭಾಷೆಯಲ್ಲಿರುವ ಮೃದುತ್ವಆಶ್ಚರ್ಯ ತರಿಸುತ್ತದೆ! ಅಕಸ್ಮಾತ್ ನಾವೇನಾದರೂ ಆ ಪರಿಸ್ಥಿತಿಯಲ್ಲಿದಿದ್ದರೆ "ಸಮನ್ಸ್ ಧಿಕ್ಕರಿಸಿದ ______ ಬಂಧನ" ಎಂದು ದೊಡ್ಡದಾಗಿ ಬರೆದು ಕೆಳಗೆ ಚಿಕ್ಕ ಅಕ್ಷರಗಳಲ್ಲಿ "ಜಾಮೀನಿನ ಮೇಲೆ ಬಿಡುಗಡೆ" ಎಂದು ಬರೆಯುತ್ತಿದ್ದರಲ್ಲವೇ?!! ಇಂಥ ಧೋರಣೆಯ ಬಗ್ಗೆ ನನ್ನ ವಿರೋಧವೇ ಹೊರತು ಭಟ್ಟರ ವಿರುದ್ಧವಲ್ಲ.

2 comments:

  1. ಆದರೆ, ಅಶೋಕ್ ರವರೆ, ಬೆಂಗಳೂರಿನ ಆವೃತ್ತಿಯ ಕನ್ನಡ ಪ್ರಭ ದ ಮುಖಪುಟದಲ್ಲೇ ಈ ವರದಿ ಪ್ರಕಟವಾಗಿದೆ. ತಪ್ಪಾಗಿದ್ದನ್ನು ಹೀಗೆ ಮುಖಪುಟದಲ್ಲಿ ಪ್ರಕಟಿಸಿಕೊಂಡಿದ್ದು ಸ್ವಾಗತಾರ್ಹವಲ್ಲವೇ ??? ಭಟ್ಟರು ತಪ್ಪೆಸಗಿದರೋ ಇಲ್ಲವೋ ಎಂದು ನ್ಯಾಯಾಲಯ ನಿರ್ಧರಿಸುತ್ತದೆ :)

    ReplyDelete
  2. ಮುಖಪುಟದಲ್ಲಿ ಹಾಕಿದ್ದೇನೋ ನಿಜ. ಆದರೆ ನಾಲ್ಕಾರು ವರ್ಷಗಳಿಂದ ಯಾಕೆ ನ್ಯಾಯಾಲಯಕ್ಕೆ ಗೌರವ ಕೊಡಲಿಲ್ಲ ಅಂಥ ಅವರು ವಿವರ ನೀಡಲೇ ಇಲ್ಲ. ಅದೇ ನಿತ್ಯಾನಂದ ಕೋರ್ಟ್‌ ನೋಟಿಸ್ ತಗೊಂಡಿಲ್ಲ ಅಂತ ಎಷ್ಟು ದೊಡ್ಡ ರಾದ್ಧಾಂತ ಮಾಡಿದರು. ನ್ಯಾಯ ಎಲ್ಲರಿಗೂ ಒಂದೇ ಇರಬೇಕು.

    ReplyDelete