ಜುಲೈ 1, 2016

ಮೇಕಿಂಗ್ ಹಿಸ್ಟರಿ: ಕೃಷಿ ಕಂದಾಯ ಮತ್ತದರ ಶೋಷಕ ಶರಾತ್: ಭಾಗ 2

saketh rajan ashok kr
ಸಾಕೇತ್ ರಾಜನ್ 
ಕನ್ನಡಕ್ಕೆ: ಡಾ. ಅಶೋಕ್. ಕೆ. ಆರ್
01/07/2016
1809 – 10ರಲ್ಲಿ ಇಡೀ ಕೆನರಾ ಪ್ರಾಂತ್ಯದಲ್ಲಿ ಬೆಳೆ ಕಡಿಮೆಯಾಗಿತ್ತು ಮತ್ತದರ ಬೆಲೆಯೂ ಕುಸಿದು ಬಿದ್ದಿತ್ತು. ಈ ಕುಸಿದ ಆರ್ಥಿಕ ಪರಿಸ್ಥಿತಿಯ ಕಾರಣದಿಂದಾಗಿ ದಕ್ಷಿಣ ಕೆನರಾದ ರೈತರು ಸರಕಾರಕ್ಕೆ ಕಟ್ಟಬೇಕಾದ ತೆರಿಗೆಯನ್ನು ಮನ್ನಾ ಮಾಡಬೇಕೆಂದು ಒತ್ತಾಯಿಸಿದರು. ಕರ ನಿರಾಕರಣೆಯ ಅವರ ಹೋರಾಟ ಆ ಕ್ಷಣದ ಅವರ ತೊಂದರೆಗಳಿಗೆ ಮತ್ತು ಕಂದಾಯ ನೀತಿಗಳು ಮತ್ತು ಕಂಪನಿ ಸರಕಾರದ ಆಡಳಿತ ವೈಖರಿಯ ಕಾರಣಕ್ಕೆ ಶುರುವಾಯಿತು. ಪರಿಣಾಮವಾಗಿ ಭೂಕಂದಾಯದ ಸಂಗ್ರಹ ಮತ್ತು ಇತರೆ ಆದಾಯವೂ ಗಮನಾರ್ಹವಾಗಿ ಕಡಿಮೆಯಾಯಿತು….1820 ಮತ್ತು 1825ರ ನಡುವೆ ಭೂ ಕಂದಾಯದ ಸಂಗ್ರಹ ನಿಧಾನಕ್ಕೆ ಏರಿಕೆ ಕಂಡಿತು, ಆದರೆ ನಂತರ ಕಡಿಮೆಯಾಗುತ್ತಾ ಸಾಗಿ 1830-31ರಲ್ಲಿ ಕನಿಷ್ಟ ಮಟ್ಟ ತಲುಪಿತು”. (220) 

ಆಗಿನ ಜಿಲ್ಲಾಧಿಕಾರಿ ಹ್ಯಾರಿಸ್ ಅನ್ನು ಉಲ್ಲೇಖಿಸುತ್ತ ಶ್ಯಾಮ್ ಭಟ್ ಬರೆಯುತ್ತಾರೆ: “’ಇದು ಬೇಳೆ ಕಾಳುಗಳು ಬೆಲೆ ಕಡಿಮೆಯಾಗಿರುವ ಮೂರನೇ ವರುಷ; ಮತ್ತು ಕಳೆದ ಮೂರು ವರ್ಷಗಳಿಗೆ ಹೋಲಿಸಿದರೆ ಈ ಬಾರಿಯ ಬೆಲೆ ಕನಿಷ್ಟವಾಗಿದೆ, ರೈತರನ್ನು ಪುನಶ್ಚೇತನಗೊಳ್ಳಲಾಗದ ದೈನೇಸಿ ಸ್ಥಿತಿ ದೂಡಿಬಿಟ್ಟಿದೆ; ಕೆಲವು ಉತ್ತಮವಾಗಿರುವ ರೈತರು ಭೂಕಂದಾಯವನ್ನು ಕಟ್ಟಿದ್ದಾರಾದರೂ, ಅವರಲ್ಲೂ ಅನೇಕರು ಆ ಮೊತ್ತವನ್ನು ಕಟ್ಟಿರುವುದು ತಮ್ಮ ಭೂಮಿಯನ್ನು ಮಾರಾಟ ಮಾಡಿ ಅಥವಾ ಅಡ ಇಟ್ಟು’. ಕೆಲವು ಸಂದರ್ಭದಲ್ಲಿ ಮಾರಾಟಕ್ಕಿಟ್ಟ ಭೂಮಿಯ ಬೆಲೆ ಅದರ ಬೆಲೆಯ ಅರ್ಧಕ್ಕಿಂತಲೂ ಕಡಿಮೆಗೆ ಮಾರಾಟವಾಗಿತ್ತು. ಜಿಲ್ಲೆಯ ರೈತರ ಈ ಹೀನಾಯ ಪರಿಸ್ಥಿತಿಗೆ ಹೆಚ್ಚಾಗಿ ಅಂದಾಜಿಸಿದ್ದಷ್ಟೇ ಕಾರಣವಲ್ಲವೆನ್ನುವುದು ಹ್ಯಾರಿಸ್ ಅಭಿಪ್ರಾಯವಾಗಿತ್ತು. ಅವನ ಪ್ರಕಾರ ಇದು ವ್ಯಾಪಾರ ವಹಿವಾಟಿನಲ್ಲಾದ ಸ್ಥಗಿತತೆ ಮತ್ತು ಸಮಾಜದ ಬಡ್ಡಿವ್ಯಾಪಾರಿಗಳ ಪಾತ್ರವೂ ಇತ್ತು. 

ಆದರೆ ಹೆಚ್ಚಾಗಿ ಅಂದಾಜಿಸಿದ್ದ ಪರಿಣಾಮ ಮತ್ತು ಬಾಕಿ ಮನ್ನಾ ಸಲೀಸಾಗಿ ಮಾಡದೇ ಇದ್ದ ಕಾರಣದಿಂದ ರೈತರ ಮೇಲೀಗಾಗಲೇ ಇದ್ದ ತೊಂದರೆಗಳ ಜೊತೆಗೆ ಆರ್ಥಿಕ ಬಿಕ್ಕಟ್ಟೂ ಜೊತೆಯಾಗುವಂತಾಯಿತು. ರೈತರ ಬಡತನ ಅವರನ್ನು ಬಡ್ಡಿವ್ಯಾಪಾರಿಗಳ ಬಳಿಗೋಗುವಂತೆ ಮಾಡಿತು. ಸರಕಾರದ ಬೇಡಿಕೆಗಳನ್ನು ಈಡೇರಿಸುವ ಸಲುವಾಗಿ ರೈತರು ತಮ್ಮ ಭೂಮಿಯನ್ನು ಬಡ್ಡಿವ್ಯಾಪಾರಿಗಳ ಬಳಿ ಅಡವಿಟ್ಟರು. ದಕ್ಷಿಣ ಕೆನರಾದಲ್ಲಿ ಎರಡು ರೀತಿಯ ಅಡವುಗಳಿದ್ದವು; ಭೂಮಿ ಮತ್ತದರ ಬೆಳೆಯನ್ನು ಪ್ರತ್ಯೇಕವಾಗಿ ಅಡಕ್ಕೆ ಇಟ್ಟುಕೊಳ್ಳಲಾಗುತ್ತಿತ್ತು. ಭೂಮಿಯನ್ನು ಅಡಕ್ಕೆ ಇಟ್ಟುಕೊಂಡರೆ ಅದಕ್ಕೆ ಭೋಗ್ಯವೆಂದು ಅಥವಾ ಜೀವಂತ ಒತ್ತೆಯೆಂದು ಕರೆಯುತ್ತಿದ್ದರು ಮತ್ತು ಬೆಳೆಯನ್ನು ಒತ್ತೆ ಇಟ್ಟುಕೊಂಡರೆ ತೊರದೂ ಅಥವಾ ತೊರದೂವೂ ಅಥವಾ ಸತ್ತ ಒತ್ತೆಯೆಂದು ಕರೆಯುತ್ತಿದ್ದರು. 

ಕೊಟ್ಟ ಸಾಲಕ್ಕೆ ಬಡ್ಡಿವ್ಯಾಪಾರಿಗಳು ವಿಧಿಸುತ್ತಿದ್ದ ಬಡ್ಡಿ ವಾರ್ಷಿಕ 6 ರಿಂದ 12%ವರೆಗಿರುತ್ತಿತ್ತು; ಇದು ನಿರ್ಧರಿತವಾಗುತ್ತಿದ್ದುದು ಸಾಲದ ಮೊತ್ತವೆಷ್ಟು ಎನ್ನುವುದರ ಮೇಲೆ; ಸಾಲದ ಮೊತ್ತ ಕಡಿಮೆಯಾಗಿದ್ದರೆ ಬಡ್ಡಿ ಅಧಿಕವಾಗಿರುತ್ತಿತ್ತು ಮತ್ತು ಸಾಲದ ಮೊತ್ತ ಹೆಚ್ಚಿನದ್ದಾಗಿದ್ದರೆ ಬಡ್ಡಿ ಕಡಿಮೆಯಿರುತ್ತಿತ್ತು. ಬಹುತೇಕ ಪ್ರಕರಣಗಳಲ್ಲಿ ರೈತರು ಸಾಲ ತೀರಿಸುವಲ್ಲಿ ವಿಫಲರಾಗುತ್ತಿದ್ದರು ಮತ್ತು ಕೊನೆಗೆ ವಿಧಿ ಇಲ್ಲದೆ ತಮ್ಮ ಭೂಮಿಯನ್ನು ಬಡ್ಡಿವ್ಯಾಪಾರಿಗಳಿಗೆ ಮಾರಿಬಿಡುತ್ತಿದ್ದರು, ಇಡೀ ಗ್ರಾಮೀಣ ಭಾರತದಲ್ಲಿ ಕಾಣಬರುವ ಸಾಮಾನ್ಯ ಚಿತ್ರವಿದು. 1820ರ ಸಮಯದಲ್ಲಿ ಕಂಡುಬಂದ ಮತ್ತೊಂದು ಚಿತ್ರವೆಂದರೆ ತೆರಿಗೆ ಬಾಕಿಯನ್ನು ವಸೂಲು ಮಾಡುವ ಸಲುವಾಗಿ ಸರಕಾರವೇ ಭೂಮಿಯನ್ನು ಸಾರ್ವಜನಿಕ ಹರಾಜಿನ ಮೂಲಕ ಮಾರಾಟ ಮಾಡುತ್ತಿದ್ದುದು. 

ಈ ರೀತಿಯ ಸತತ ಕಡೆಗಣನೆಯ ಸಂದರ್ಭದಲ್ಲಿ ರೈತರು ಜೇಡರ ಬಲೆಯಲ್ಲಿ ಸಿಕ್ಕಂತಾದರು ಮತ್ತು 1820ರ ಕೊನೆಯ ಭಾಗದಲ್ಲಿ, ಪುರಾತನ ಮೂಲಗಾರರ ಆಸ್ತಿ ಬಡ್ಡಿವ್ಯಾಪಾರಿಗಳ ದೋಚುವ ಕೈಗಳ ವಶವಾಗುತ್ತಿದ್ದದ್ದು ಕೆನರಾ ಜಿಲ್ಲೆ ಮತ್ತು ಕೆನರಾ ಪ್ರಾಂತ್ಯದರೆಡರಲ್ಲೂ ಸಾಮಾನ್ಯವಾದ ಸಂಗತಿಯಾಗಿಬಿಟ್ಟಿತ್ತು. 

1831ರ ಫೆಬ್ರವರಿ 1ರಂದು ಕೆನರಾದ ಜಿಲ್ಲಾಧಿಕಾರಿ ಡಿಕಿನ್ಸನ್ ನಿರ್ದೇಶಕ ಮಂಡಳಿಗೆ ಬರೆಯುತ್ತಾರೆ. ‘ಈ ಜಿಲ್ಲೆಯ ಕಂದಾಯ ಸಂಗ್ರಹ ಮೇಲೆ ಕಳೆದ ಮೂರು ಅಥವಾ ನಾಲ್ಕು ವರ್ಷದ ಮಾರುಕಟ್ಟೆಯಿಂದ ಪ್ರಭಾವಿತವಾಗಿದೆ ಎಂದು ಸರಕಾರಕ್ಕೆ ತಿಳಿಸುವುದು ನನ್ನ ಕರ್ತವ್ಯವೆನ್ನುವುದು ಸತ್ಯ. ಕಂದಾಯ ಎಷ್ಟು ಹೆಚ್ಚಿದೆಯೆಂದರೆ ರೈತರಿಗೆ ಅದನ್ನು ಕಟ್ಟುವುದು ಅಸಾಧ್ಯವೇ ಆಗಿದೆ. ಅವರಲ್ಲೀಗ ಗರಿಷ್ಟ ಮಟ್ಟದ ಬಿಕ್ಕಟ್ಟಿನ ಪರಿಸ್ಥಿತಿಯಿದೆ ಮತ್ತು ಅವರನ್ನು ಉಳಿಸುವ ಸಲುವಾಗಿ ಹಾಗೂ ಅವರು ದಿವಾಳಿಯಾಗುವುದನ್ನು ತಡೆಯುವ ಸಲುವಾಗಿ ಕಂದಾಯದ ದೊಡ್ಡ ಮೊತ್ತವನ್ನು ಮನ್ನಾ ಮಾಡುವುದು ಅತ್ಯವಶ್ಯಕ ಎಂದು ಹೇಳುವುದಕ್ಕೆ ನನಗೆ ಯಾವುದೇ ರೀತಿಯ ಹಿಂಜರಿಕೆಯಿಲ್ಲ….ಕೆನರಾದ ಕೆಲ ಪ್ರದೇಶಗಳಲ್ಲಿನ ಜನರ ಬಡತನ ಮತ್ತವರ ಬಿಕ್ಕಟ್ಟಿನ ಪರಿಸ್ಥಿತಿಯನ್ನು ಕಣ್ಣಾರೆ ಕಾಣುವುದು ಅಪಾರ ನೋವಿನ ಸಂಗತಿ; ಪೂರ್ವ ಕರಾವಳಿಯ ರೈತರನ್ನಷ್ಟೇ ನೋಡಿರುವ ಮಹನೀಯರಿಗೆ ಇಲ್ಲಿನ ಪರಿಸ್ಥಿತಿಯ ಕಲ್ಪನೆಯೂ ಮೂಡಲಾರದು…’ 

ಕೂಟಿನ ಪ್ರತಿರೋಧದ ಸದ್ದಡಗಿಸಿದ ನಂತರ ಮಂಡಳಿ ದ್ವಿಮುಖ ನೀತಿಯನ್ನು ಅನುಸರಿಸಲಾರಂಭಿಸಿತು, ಸಂತ್ರಸ್ತ ರೈತರ ವಾರ್ಷಿಕ ಬಾಕಿ ಮನ್ನಾ ಮಾಡುತ್ತಿತ್ತು ಅಥವಾ ನಾಲ್ಕು ಅಥವಾ ಐದು ವರುಷದಷ್ಟು ಸುದೀರ್ಘ ಅವಧಿಗೆ ಬಾಕಿ ಉಳಿಸಿಕೊಂಡ ರೈತರ ಭೂಮಿಯನ್ನು ವಶಪಡಿಸಿಕೊಳ್ಳುತ್ತಿತ್ತು. ನೀತಿಯಲ್ಲಾದ ಈ ಬದಲಾವಣೆಯನ್ನು ಸ್ಪಷ್ಟವಾಗಿ 1830ರ ಆಡಳಿತಾತ್ಮಕ ದಾಖಲೆಗಳಲ್ಲಿ ಕಾಣಬಹುದು, ಹೆಚ್ಚಾಗಿ ಭೂಮಿಯನ್ನು ವಶಪಡಿಸಿಕೊಳ್ಳಲಾಗುತ್ತಿತ್ತು. ಸಾರ್ವಜನಿಕ ಹರಾಜನ್ನು ಸರಕಾರವೇ ನಡೆಸುತ್ತಿತ್ತು ಮತ್ತು ಬಹುತೇಕ ಪ್ರಕರಣಗಳಲ್ಲಿ ಮಾಲೀಕತ್ವ ಹಣವಿದ್ದವರ ವರ್ಗಕ್ಕೆ ಹೋಗುತ್ತಿತ್ತು, ಬಡ್ಡಿವ್ಯಾಪಾರಿಗಳಂತವರಿಗೆ. ಈ ರೀತಿಯ ಬಲವಂತದ ಮಾರಾಟ ಪ್ರಕರಣಗಳು ಬಡತನ ಹೆಚ್ಚಿದ್ದ ತಾಲ್ಲೂಕುಗಳಾದ ಬಂಟ್ವಾಳ, ಬೇಕಲ್ ಮತ್ತು ಮಂಗಳೂರಿನಲ್ಲಿ ಅಧಿಕವಾಗಿ ಕಾಣಬಹುದಿತ್ತು…. 

ಸರಕಾರೀ ಅಧಿಕಾರಿಗಳು ಮತ್ತು ಬಡ್ಡಿವ್ಯಾಪಾರಿಗಳ ನಡುವಿದ್ದ ಸಂಬಂಧ ಕೆನರಾದ ಉಪ ಜಿಲ್ಲಾಧಿಕಾರಿಯಾಗಿದ್ದ ಎ.ಎಫ್. ಹಡಲ್ ಸ್ಟೋನ್ 1826ರ ಜುಲೈ 29ರಂದು ಮಂಡಳಿಗೆ ಬರೆದ ವರದಿಯಿಂದ ಸ್ಪಷ್ಟವಾಗುತ್ತದೆ: 

‘ಬಾರ್ಕೂರು ತಾಲ್ಲೂಕಿನಲ್ಲಿ ಮುಂದಾಗಿ ಕೊಳ್ಳುವ ಪದ್ಧತಿ ಕೆಲವು ವರುಷಗಳಿಂದ ಸಂಪೂರ್ಣವಾಗಿತ್ತು. ಕರಾವಳಿಯ ವರ್ತಕರ ದಲ್ಲಾಳಿ, ಒಂದಷ್ಟು ಹಣದೊಂದಿಗೆ ಶಾನುಬಾಗರ ಜೊತೆಗೂಡುತ್ತಿದ್ದ; ಶಾನುಬಾಗರು ತೆರಿಗೆ ಸಂಗ್ರಹಿಸಲೋಗುವ ದಿನಗಳಲ್ಲಿ. ಈ ಎರಡೂ ಪಕ್ಷಗಳು ಒಬ್ಬರನ್ನೊಬ್ಬರು ಚೆನ್ನಾಗಿ ಅರಿತುಕೊಂಡಿದ್ದರು. ಶಾನುಬಾಗರು ಈಗಾಗಲೇ ಬಿಕ್ಕಟ್ಟಿನಲ್ಲಿದ್ದ ರೈತನಿಗೆ ತೆರಿಗೆ ಕಟ್ಟದೇ ಇದ್ದಲ್ಲಿ ಯಾವ ರೀತಿಯ ಅನಪೇಕ್ಷಿತ ಪರಿಣಾಮಗಳಾಗುತ್ತವೆ ಎಂದು ಹೇಳಿದರೆ ದಲ್ಲಾಳಿ ಈ ಪರಿಣಾಮಗಳನ್ನು ತಡೆಯುವ ಸಲುವಾಗಿ ತಾನು ಕೊಡಲು ಸಿದ್ಧವಾಗಿರುವ ಸಾಲವನ್ನು ಪಡೆದರಾಯಿತು, ಮುಂದಿನ ವರುಷದ ಬೆಳೆಯ ಆಧಾರದ ಮೇಲೆ ಎಂದು ತಿಳಿಸುತ್ತಿದ್ದ. ಇವೆಲ್ಲವನ್ನೂ ಪಕ್ಕಾ ಮಾಡಿಕೊಳ್ಳಲು, ವರ್ತಕ ಮುಂದಿನ ವರುಷದ ಜುಮ್ಮಾಬಂಧಿಯನ್ನು ಕೊಡುವ ಜವಾಬ್ದಾರಿಯನ್ನು ಹೊತ್ತುಕೊಳ್ಳುತ್ತಿದ್ದ ಮತ್ತಿದರಿಂದ ಬೆಳೆಯ ಮೇಲೆ ಸಂಪೂರ್ಣ ಹಕ್ಕನ್ನು ಹೊಂದಿಬಿಡುತ್ತಿದ್ದ. ಒಂದು ಬಾರಿ ಬಡ್ಡಿವ್ಯಾಪಾರಿಗಳ ಹಿಡಿತಕ್ಕೆ ಸಿಕ್ಕಿಬಿಟ್ಟರೆ ಅದರಿಂದ ಬಿಡಿಸಿಕೊಳ್ಳಲು ರೈತನಿಗೆ ಸಾಧ್ಯವೇ ಆಗುತ್ತಿರಲಿಲ್ಲ – ಅವನ ಸಂಕಷ್ಟಗಳು ಹೆಚ್ಚುತ್ತಿತ್ತು, ಮತ್ತು ಕೊನೆಗೆ ವರ್ತಕ ಆ ಭೂಮಿಯನ್ನು ವಶಕ್ಕೆ ಪಡೆದುಕೊಳ್ಳುತ್ತಿದ್ದ ಮತ್ತಾ ರೈತನನ್ನು ಅಲ್ಲೇ ಗುತ್ತಿಗೆಗೆ ನೇಮಿಸಿಕೊಳ್ಳುತ್ತಿದ್ದ’.” (221) 

ಬೆಂಜಮಿನ್ ಹೇನ್ಸ್ 1802ರಷ್ಟು ಮೊದಲೇ ಬರೆದಿದ್ದ Report relative to the Mysore Surveyಯಲ್ಲಿ ಊಳಿಗಮಾನ್ಯತೆಯ ಸಾಲದಿಂದುಂಟಾದ ಪರಿಸ್ಥಿತಿಯನ್ನು ಮುಂಗಂಡಿದ್ದಾನೆ. ಅವನು ಬರೆಯುತ್ತಾನೆ: “ಕರಾವಳಿಯಲ್ಲಿ ಕೃಷಿಯನ್ನು ಹಾಳುಗೆಡವಿದ ದೊಡ್ಡ ತಲೆಬಿಸಿ ಸಂಗತಿಯೆಂದರೆ ಸರಕಾರಕ್ಕೆ ತೆರಿಗೆ ಹಣವನ್ನು ಮುಂಗಡವಾಗಿ ನೀಡುವುದು, ಬಿತ್ತನೆ ನಡೆಯುವ ಮೊದಲೇ ನೀಡುವುದು ಮತ್ತು ಪುನಃ ಬೆಳೆ ಕಟಾವಾಗುವ ಮೊದಲೇ ನಿಗದಿತ ಸಮಯಕ್ಕೆ ಹಣವನ್ನು ನೀಡುವುದು. ಯಾವ ಜಮೀನ್ದಾರ, ಗುತ್ತಿಗೆದಾರ ಅಥವಾ ಕೃಷಿಕನ ಬಳಿ ಮುಂಗಡವಾಗಿ ಕೊಡಲು ಹಣವಿರುತ್ತಿರಲಿಲ್ಲವಾದ್ದರಿಂದ ಹಣಕ್ಕಾಗಿ ಅವರು ಸಾಹುಕಾರರ ಅಥವಾ ಬಡ್ಡಿವ್ಯಾಪಾರಿಗಳ ಬಳಿಯೇ ಕೈಚಾಚಬೇಕಿತ್ತು. ಹಣ ಬೇಡುತ್ತಿರುವ ವ್ಯಕ್ತಿಯ ಪ್ರಾಮಾಣಿಕತೆಗೆ ಅನುಗುಣವಾಗಿ ಹಣವನ್ನು ಮುಂಗಡವಾಗಿ ನೀಡುತ್ತಿದ್ದರು, 2% ಬಡ್ಡಿ ಪ್ರತಿ ತಿಂಗಳಿಗೆ ನಿಗದಿಯಾಗುತ್ತಿತ್ತು ಮತ್ತು ಮುಂಗಡ ಹಣದಲ್ಲಿ ಐದು ಪ್ರತಿಶತಃದಷ್ಟನ್ನು ಮುರಿದುಕೊಳ್ಳುತ್ತಿದ್ದರು. ಎರಡನೇ ಮತ್ತು ಮೂರನೇ ಕಂತಿಗೆ (ಅಷ್ಟರಲ್ಲಿ ಬೆಳೆಗಳು ಬೆಳೆದಿರುತ್ತಿದ್ದವು) ಮುಂಗಡ ಹಣದಲ್ಲೇನನ್ನೂ ಮುರಿದುಕೊಳ್ಳುತ್ತಿರಲಿಲ್ಲ, ಆದರೆ ನಾಲ್ಕನೇ ಬಾರಿ ಹಣ ಪಡೆಯುವಾಗ ಬೆಳೆಯನ್ನು ಒತ್ತೆ ಇಡಬೇಕಿತ್ತು. ಬಹಳಷ್ಟು ಬಡ್ಡಿವ್ಯಾಪಾರಿಗಳು ತತ್ ಕ್ಷಣ ಮಾರುವುದಕ್ಕೆ ಒತ್ತಾಯಿಸುತ್ತಿದ್ದರು ಮತ್ತು ತಾವೇ ಖರೀದಿದಾರರಾಗಿಬಿಡುತ್ತಿದ್ದರು, ಮಾರುಕಟ್ಟೆಯಲ್ಲಿರುವ ಮೌಲ್ಯಕ್ಕಿಂತ ಐದರಿಂದ ಹತ್ತು ಪರ್ಸೆಂಟಿನಷ್ಟು ಕಡಿಮೆ ಬೆಲೆಗೆ ಕೊಂಡುಕೊಳ್ಳುತ್ತಿದ್ದರು”. (222) 

ವಸಾಹತುಶಾಹಿಯ ಕೃಷಿ ಕಂದಾಯ ಒಂದೆಡೆ ಕಂಪನಿಯನ್ನು ಶ್ರೀಮಂತಗೊಳಿಸಿದರೆ ಮತ್ತೊಂದೆಡೆ ಕೃಷಿ ಭೂಮಿಯನ್ನು ಆಕ್ರಮಣಕಾರಿ ಹದ್ದಿನಂತಹ ಬಡ್ಡಿವ್ಯಾಪಾರಿಗಳ ಕೈವಶ ಮಾಡಿಬಿಟ್ಟಿತು; ಈ ಬಡ್ಡಿವ್ಯಾಪಾರಿಗಳು ಕರಾವಳಿಯ ಭೂಮಾಲೀಕರಾಗಿ ಹೊರಹೊಮ್ಮಿದರು, ವಸಾಹತು ಲೂಟಿಯಿಂದ ಉದ್ಭವವಾದ ಹೊಸ ಊಳಿಗಮಾನ್ಯ ವರ್ಗ. ಭಟ್ ಮತ್ತು ಹಡಲ್ ಸ್ಟೋನ್ ಉಲ್ಲೇಖಿಸುವ ಈ ಬಡ್ಡಿ ವ್ಯಾಪಾರಿಗಳು ಬೇರ್ಯಾರೂ ಅಲ್ಲ, ಕರಾವಳಿಯ ವರ್ತಕರು – ನಾವೀಗಾಗಲೇ ಉಲ್ಲೇಖಿಸಿರುವ ಮಧ್ಯಮವರ್ತಿ ಗೌಡ ಸಾರಸ್ವತ ಬ್ರಾಹ್ಮಣರು. ಮೊದಲಿಗೆ ಬಂದರು ಪಟ್ಟಣದ ಮಧ್ಯಮವರ್ತಿ ವರ್ತಕರಾಗಿದ್ದ, ನಂತರ ಬಡ್ಡಿವ್ಯಾಪಾರಿಗಳಾಗಿ ಪೂರ್ವದ ಹಳ್ಳಿಗಳತ್ತ ವಲಸೆ ಹೋದ ಗೌಡ ಸಾರಸ್ವತ ಬ್ರಾಹ್ಮಣರು ಭೂಮಿಯನ್ನು ಕಬಳಿಸುತ್ತ ಊಳಿಗಮಾನ್ಯ ಭೂಮಾಲೀಕರ ಹೊಸ ಪದರವಾದರು; ಅವರ ಶೋಷಕ ಹಿಡಿತದಲ್ಲಿ ಕರಾವಳಿಯ ಬಹಳಷ್ಟು ಜನರು ಬಂಧಿಯಾದರು. ಈ ಪೂರ್ವದ ಪಯಣದಲ್ಲಿ, ಕೆಲವರು ಘಟ್ಟದ ಮೇಲೇರಿ ಸಮೃದ್ಧ ಮಲೆನಾಡಿನಲ್ಲೂ ಮೇಯಲಾರಂಭಿಸಿದರು. 

ವಸಾಹತು – ಮಧ್ಯಮವರ್ತಿ – ಊಳಿಗಮಾನ್ಯ ಬಂಧವನ್ನು ಮತ್ತಷ್ಟು ವಿವರವಾಗಿ ತಿಳಿಸುತ್ತಾ, ಶ್ಯಾಮ್ ಭಟ್ ಹೇಳುತ್ತಾರೆ: “ಈ ಬಡ್ಡಿವ್ಯಾಪಾರಿಗಳ ಜನನ ಮತ್ತವರು ಸಮಾಜದಲ್ಲಿ ವಿಶಿಷ್ಟ ಪ್ರಭಾವಿ ಗುಂಪಾಗಿ ಬೆಳೆದದ್ದು ವಿಚಿತ್ರವಾದ ವಸಾಹತು ಪರಿಸ್ಥಿತಿಯ ಕಾರಣದಿಂದ… 

ಹೊಸ ಭೂಮಾಲೀಕರು, ಬಡ್ಡಿವ್ಯಾಪಾರಿಗಳು ಮತ್ತು ಅಧಿಕಾರಿಗಳು (ಬ್ರಾಹ್ಮಣ, ಸಾರಸ್ವತ ಮತ್ತು ಬಂಟ್ ಕುಟುಂಬಗಳಿಂದ ಬಂದವರು) ಬ್ರಿಟೀಷ್ ಅಧಿಕಾರಶಾಹಿಯ ಜೊತೆಗೆ ಹತ್ತಿರದ ನಂಟನ್ನು ಬೆಳೆಸಿಕೊಂಡಿದ್ದರು; ಬ್ರಿಟೀಷರ ಕಂದಾಯ ಮತ್ತು ನ್ಯಾಯಂಗ ತಮಗೆ ಎಲ್ಲ ವಿಧದಲ್ಲೂ ಅನುಕೂಲಕರವಾಗಿರುವಂತೆ ನೋಡಿಕೊಂಡರು. 1799 – 1800 ನಂತರ ಅಸ್ತವ್ಯಸ್ತಗೊಂಡ ರಾಜಕೀಯ ವ್ಯವಸ್ಥೆಯು, ಭೂಮಿ ಹೊಂದಿದ ಬ್ರಾಹ್ಮಣರಿಗೆ, ಬಂಟರಿಗೆ ಮತ್ತು ವರ್ತಕರಿಗೆ ಕಂಪನಿ ಮತ್ತು ಕೃಷಿಕರ ನಡುವೆ ಪ್ರಭಾವಿ ಮತ್ತು ಸಂಕೀರ್ಣ ವ್ಯಕ್ತಿಗಳಾಗಿ ಬೆಳೆಯುವ ಎಲ್ಲಾ ಸಾಧ್ಯತೆಗಳನ್ನೂ ಒದಗಿಸಿಕೊಟ್ಟಿತು. 1826ರಲ್ಲಿ ಕೊಟ್ಟ ವರದಿಯೊಂದರಲ್ಲಿ ಕೆನರಾದ ಉಪಜಿಲ್ಲಾಧಿಕಾರಿ ಎ.ಎಫ್. ಹಡಲ್ ಸ್ಟೋನ್ ದಕ್ಷಿಣ ಕೆನರಾದ ಶಾನುಭಾಗರು ನಡೆಸಿದ ಮೋಸದ ಕೆಲಸಗಳನ್ನು ತಿಳಿಸುತ್ತಾರೆ. ಕೃಷಿಕರ ಅಜ್ಞಾನವನ್ನೇ ಬಂಡವಾಳ ಮಾಡಿಕೊಂಡು ಒತ್ತೆ ಪತ್ರಗಳನ್ನು ಮಾರಾಟ ಪತ್ರಗಳನ್ನಾಗಿ ಪರಿವರ್ತಿಸಿ, ಅವರ ಸಹಿ ಪಡೆದುಕೊಂಡು ಮೋಸ ಮಾಡಿದರು. ಈ ಸ್ಥಳೀಯ ಕಂದಾಯ ಅಧಿಕಾರಿಗಳು ಮಾಡಿದ ಇನ್ನೂ ಹೆಚ್ಚಿನ ಅನಾಹುತಕಾರಿ ಕಾರ್ಯವೆಂದರೆ ಸ್ಥಳೀಯ ವರ್ತಕ ಬಡ್ಡಿವ್ಯಾಪಾರಿಗಳ ಜೊತೆಗೆ ಅನೈತಿಕ ಮೈತ್ರಿ ಮಾಡಿಕೊಂಡಿದ್ದು…. ವರ್ತಕ ವರ್ಗಕ್ಕೆ ಸೇರಿದ ಕೆಲವರು ಆಡಳಿತದಲ್ಲಿದ್ದರು, ಮತ್ತವರು ಸರಕಾರೀ ಅಧಿಕಾರಿಗಳಾಗಿ ಹಾಗು ಬಡ್ಡಿವ್ಯಾಪಾರಿಗಳಾಗಿ ಎರಡೆರಡು ಕೆಲಸ ಮಾಡುತ್ತಿದ್ದ ಎಲ್ಲಾ ಸಾಧ್ಯತೆಗಳೂ ಇತ್ತು. ಈ ವರ್ತಕ ಬಡ್ಡಿ ವ್ಯಾಪಾರಿಗಳು ಕಂದಾಯ ಅಧಿಕಾರಿಗಳೇ ಆಗಿರಲಿಲ್ಲ ಎನ್ನುವುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಅವರಲ್ಲಿ ಕೆಲವರು, ಉದಾಹರಣೆಗೆ ಬಂಟ್ವಾಳದ ಕೊಂಕಣಿಗಳು ಆ ಪ್ರದೇಶದಲ್ಲಿ ಉನ್ನತಿ ಹೊಂದುತ್ತಿದ್ದ ವರ್ತಕರಾಗಿದ್ದರು”. (223) 

ತುಳುನಾಡಿನ ಪರಿಸ್ಥಿತಿಯನ್ನು ಒಟ್ಟಾರೆಯಾಗಿ ಅವಲೋಕಿಸುತ್ತ, ಶ್ಯಾಮ್ ಭಟ್ “ವಸಾಹತು ಮಾಲೀಕರ ಸ್ಪಷ್ಟ ಆಸಕ್ತಿ ಸ್ಥಳೀಯರು ಸಂಪೂರ್ಣವಾಗಿ ಕುಸಿಯುವಂತೆ ಮಾಡುವುದಾಗಿತ್ತು” ಎಂದ್ಹೇಳಿ ಮುಕ್ತಾಯಗೊಳಿಸುತ್ತಾರೆ. (224) 

ನೇರವಾಗಿ ಮದ್ರಾಸ್ ಪ್ರಾಂತ್ಯದ ಆಡಳಿತದಲ್ಲಿದ್ದ ಬಳ್ಳಾರಿಯ ಪರಿಸ್ಥಿತಿ, ದಕ್ಷಿಣ ಕನ್ನಡದ ಪರಿಸ್ಥಿತಿಗಿಂತ ಬೇರೆಯಾಗಿರಲಿಲ್ಲ. 1824ರಲ್ಲಿ ದಕ್ಷಿಣದ ಜಿಲ್ಲೆಗಳಲ್ಲಿದ್ದ ಪರಿಸ್ಥಿತಿಯ ಬಗ್ಗೆ ಪ್ರಾಂತ್ಯದ ಗವರ್ನರ್ ಆಗಿದ್ದ ಮನ್ರೋ ಟಿಪ್ಪಣಿ ಮಾಡಿಕೊಂಡಿದ್ದ; ಇಲ್ಲಿನ ಕಂದಾಯ ಪದ್ಧತಿಯನ್ನು ಎರಡು ದಶಕಗಳ ಹಿಂದೆ ಕಿರಿಯ ಅಧಿಕಾರಿಯಾಗಿದ್ದಾಗ ಮನ್ರೋನೇ ನಿರ್ಧರಿಸಿದ್ದ. “ಬಳ್ಳಾಯಿಯಲ್ಲಿ….. ಸತತವಾದ ಶಾಂತಿಯ ದಿನಗಳಲ್ಲಿ ಉತ್ತಮಗೊಳ್ಳಬೇಕಿದ್ದ ಇಲ್ಲಿನ ಜನರ ಪರಿಸ್ಥಿತಿ ಕಳೆದ ಇಪ್ಪತ್ತು ವರುಷಗಳಿಂದ ಕುಸಿದು ಹೋಗಿದೆ. ಇದಕ್ಕೆ ಹತ್ತಲವು ಕಾರಣಗಳನ್ನು ನೀಡಬಹುದು…. (ಒಂದು) ಮೂರು ಮತ್ತು ಹತ್ತು ವರುಷದ ಗುತ್ತಿಗೆ ಪದ್ಧತಿಯಲ್ಲಿ, ಗುತ್ತಿಗೆಯ ಮೊತ್ತ ಎಲ್ಲಾ ವರುಷಗಳಿಗೂ ಒಂದೇ ಇರುತ್ತಿತ್ತು, ಇದು ಹವಾಮಾನದಲ್ಲಾಗುತ್ತಿದ್ದ ವೈಪರೀತ್ಯಗಳ ಸಂದರ್ಭವನ್ನು ಪರಿಗಣನೆಗೆ ತೆಗೆದುಕೊಳ್ಳದಿದ್ದ ಕಾರಣ ಗುತ್ತಿಗೆದಾರನಿಗೆ ಯಾವುದೇ ಸಹಾಯವಾಗುತ್ತಿರಲಿಲ್ಲ. ಹವಾಮಾನ ವೈಪರೀತ್ಯ ಕಂಡ ಸಂದರ್ಭದಲ್ಲೆಲ್ಲ ರೈತರು ದಿವಾಳಿಯಾದರು….” (225) 

ಮುಂದಿನ ತಿಂಗಳಿನಲ್ಲೇ, ಬಳ್ಳಾರಿಯ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿದ್ದರಿಂದ ಎಚ್ಚರಗೊಂಡು, on the depressed condition in the bellari district ಎಂಬ ಮತ್ತೊಂದು ಟಿಪ್ಪಣಿಯಲ್ಲಿ ಈ ವಿಷಯಗಳನ್ನು ಗಮನಿಸುತ್ತಾನೆ: “ಭೂ ಕಂದಾಯವನ್ನು ಐದನೇ ಒಂದಂಶದಷ್ಟು ಹೆಚ್ಚಿಸಿದ ಕಾರಣದಿಂದ ಬಡ ರೈತರಲ್ಲಿ ಕೆಲವೇ ಕೆಲವರು ಮಾತ್ರ ಪೂರ್ತಿ ಬಾಡಿಗೆಯನ್ನು ಕಟ್ಟಿದ್ದಾರೆ – ಬಹಳಷ್ಟು ಮಂದಿ 10 ರಿಂದ 50% ಅಥವಾ 60% ಮನ್ನಾ ಮಾಡಿಸಿಕೊಂಡಿದ್ದಾರೆ; ಇಷ್ಟೆಲ್ಲ ಆದ ನಂತರವೂ ಬಹಳಷ್ಟು ಮಂದಿ ಮತ್ತೆ ಸುಧಾರಿಸಿಕೊಳ್ಳಲೇ ಆಗಲಿಲ್ಲ, ಬಾಡಿಗೆ ಕಟ್ಟುವುದು ದೂರದ ಮಾತು. ಬಹುತೇಕರು ಪ್ರತಿ ವರುಷವೂ ಹಣ ಕಟ್ಟಲು ವಿಫಲರಾದರು, ಮತ್ತವರ ಭೂಮಿಯನ್ನು ತೊರೆದು ನಿಂತರು….ಗುತ್ತಿಗೆಯ ಸಮಯದಲ್ಲಿ ಬಡ ರೈತರ ಸಂಖೈ ಹೇರಿಕೆ ಕಂಡಿರುವುದು ಹೌದು, ಮತ್ತು ಭೂಮಿಯನ್ನು ತೊರೆದುಬಿಡುವ ಮತ್ತು ಭೂಮಿಯನ್ನು ಹಸ್ತಾಂತರಿಸುವ ಸಂದರ್ಭಗಳು ಹೆಚ್ಚಾದವು”. (226) 

ಬಾಂಬೆ ಸರಕಾರದ ಕೈಕೆಳಗೆ ಬಂದ ಉತ್ತರ ಕರ್ನಾಟಕದಲ್ಲೂ ಕೂಡ ಇಂತಹುದೇ ವಿದ್ಯಮಾನ ಕಂಡುಬಂತು. ಕಿತ್ತೂರಿನ ದೇಸಾಯಿಗಳು 1818ರಲ್ಲಿ ಬ್ರಿಟೀಷರಿಗೆ ವಾರ್ಷಿಕವಾಗಿ 1,75,000 ರುಪಾಯಿಗಳನ್ನು ಕಕ್ಕಲು ಒಪ್ಪಿಕೊಂಡಿದ್ದನ್ನು ನಾವೀಗಾಗಲೇ ನೋಡಿದ್ದೇವೆ. ಈ ಮೊತ್ತ ಕಿತ್ತೂರಿನ ದೇಸಾಯಿಗಳು ಪೇಶ್ವೆಗಳಿಗೆ ಕೊಡುತ್ತಿದ್ದ ಮೊತ್ತಕ್ಕಿಂತ ಎರಡು ಪಟ್ಟಷ್ಟಿತ್ತು ಮತ್ತು ಕಿತ್ತೂರಿನ ವಾರ್ಷಿಕ ಆದಾಯ 3,50,000 ರುಪಾಯಿಗಳಷ್ಟಿತ್ತು. ಇದರಿಂದ ಸ್ಪಷ್ಟವಾಗುವುದೇನೆಂದರೆ ಬ್ರಿಟೀಷರು ಕರ್ನಾಟಕದಲ್ಲಿದ್ದ ತಮ್ಮ ಕೈಗೊಂಬೆ ಸರಕಾರಗಳ ಅರ್ಧದಷ್ಟು ಆದಾಯವನ್ನು ದೋಚುತ್ತಿತ್ತು, ಕಡಿಮೆ ಮೊತ್ತವನ್ನಲ್ಲ. (227) 

ಇದೇ ಸಮಯದಲ್ಲಿ ಬಾಂಬೆ ಕರ್ನಾಟಕದಲ್ಲಿ ಬ್ರಿಟೀಷ್ ಕಂದಾಯ ಆಡಳಿತದ ಬಗ್ಗೆ ಫುಕಝಾವಾ ಹೇಳುತ್ತಾರೆ: “….1818ರಲ್ಲಿ ಭೂಕಂದಾಯ ನಿಗದಿಪಡಿಸುವಾಗ ಬ್ರಿಟೀಷರು ಮರಾಠರ ಕಾಲದ ಕೊನೆಯಲ್ಲಿದ್ದ ಅಧಿಕ ಕಂದಾಯವನ್ನು ಆಧಾರವಾಗಿಟ್ಟುಕೊಂಡರು. ರೈತರು ತಮ್ಮಿಡೀ ಬೆಳೆಯನ್ನು ಬಡ್ಡಿವ್ಯಾಪಾರಿಗಳ ಬಳಿ ಒತ್ತೆ ಇಡಬೇಕಾಗಿತ್ತು. ಬೆಳೆ ವೈಫಲ್ಯ ಸಾಮಾನ್ಯವಾಗಿತ್ತು ಮತ್ತು ಬೆಳೆ ಉತ್ತಮವಾಗಿ ಬಂದಾಗ ಬೆಲೆ ಕುಸಿದುಬಿಡುತ್ತಿತ್ತು. ಇಪ್ಪತ್ತು ವರುಷಗಳ ಕಾಲ ಈ ರೀತಿಯ ಹೆಚ್ಚಿನ ಕಂದಾಯದ ಕಾರಣದಿಂದ ಇಡೀ ಡೆಕ್ಕನ್ ಕಷ್ಟವನ್ನನುಭವಿಸಿತು ಎಂದು ಅಧಿಕೃತವಾಗಿಯೇ ಒಪ್ಪಿಕೊಳ್ಳಲಾಗಿತ್ತು, ಜನರು ಬಡತನದಿಂದ ನರಳಿದರು, ಹಳ್ಳಿಗಳು ನಾಶವಾಗಿದ್ದವು ಮತ್ತು ಭೂಮಿಯಲ್ಲಿ ಕೃಷಿ ಚಟುವಟಿಕೆಗಳೇ ನಿಂತುಹೋಗಿತ್ತು. ತೆರಿಗೆ ಮನ್ನಾ ಮಾಡುವುದವಶ್ಯಕವಾಗಿತ್ತು, ಆದರೆ ಈ ಮನ್ನಾ ನಿಜವಾಗಿಯೂ ರೈತರಿಗೆ ತಲುಪುವುದರ ಬಗ್ಗೆ ಯಾವ ಖಾತರಿಯೂ ಇರಲಿಲ್ಲ. ಹತ್ತಿ ಬೆಳೆಗೆ ಸೂಕ್ತವಾಗಿದ್ದ, ಕೃಷಿ ಮತ್ತಷ್ಟು ವಿಸ್ತರಿಸುವುದು ಸಾಧ್ಯವಿದ್ದ ಧಾರವಾಡದ ಪರಿಸ್ಥಿತಿಯಿದು. ಕರಾಬು ಭೂಮಿಯಲ್ಲಿ ಕೃಷಿ ಮಾಡಲೊರಡುವ ರೈತರಿಗೆ ಕೆಲವು ವರುಷಗಳ ಕಾಲ ಕಡಿಮೆ ಕಂದಾಯವನ್ನು ವಿಧಿಸುತ್ತಿದ್ದರಾದರೂ ನೆರೆಹೊರೆಯ ರಾಜರಾಳ್ವಿಕೆಯ ರಾಜ್ಯಗಳಲ್ಲಿ ಈ ಭೂ ಕಂದಾಯ ಮತ್ತಷ್ಟು ಕಡಿಮೆಯಿರುತ್ತಿತ್ತು. ಆದ್ದರಿಂದ ಈ ಹೊಸ ನೀತಿಗಳು ಕೃಷಿಯನ್ನೆಚ್ಚಿಸಲು ಹೆಚ್ಚಿನ ಸಹಾಯವನ್ನು ಮಾಡಲಿಲ್ಲ. ಹತ್ತೊಂಬತ್ತನೇ ಶತಮಾನದ ಮಧ್ಯಭಾಗದವರೆಗೂ ಧಾರವಾಡದ ಮೂರನೇ ಒಂದರಷ್ಟು ಸರಕಾರೀ ಭೂಮಿ ಕರಾಬಾಗಿ ಉಳಿದಿತ್ತು, ಜನಸಂಖೈಯಲ್ಲಿ ಅಪಾರ ಹೆಚ್ಚಳವಾಗಿದ್ದರೂ ಕೂಡ”. (228) 

ಧರ್ಮ ಕುಮಾರ್ ನಮಗೆ ಆ ಪ್ರದೇಶದ ರೈತರ ವಸ್ತುಸ್ಥಿತಿಯನ್ನು ಕುರಿತು ತಿಳಿಸುತ್ತಾರೆ: “ಭೂಕಂದಾಯ ಪ್ರಮಾಣ ಜಿಲ್ಲೆಯಿಂದ ಜಿಲ್ಲೆಗೆ ಬಹಳವೇ ವ್ಯತ್ಯಾಸವಾಗುತ್ತಿತ್ತು, ಮತ್ತು ಹಳ್ಳಿಯಿಂದ ಹಳ್ಳಿಗೂ ವ್ಯತ್ಯಾಸವಿರುತ್ತಿತ್ತು. ಯಾಕೆಂದರೆ ಕಂದಾಯ ಇಲಾಖೆ ಇನ್ನೂ ಅವ್ಯವಸ್ಥಿತವಾಗಿತ್ತು ಮತ್ತು ನಿರಂಕುಶವಾಗಿತ್ತು. ಭೂಕಂದಾಯ ಮತ್ತು ಸಮುದಾಯದ ಉಪಯೋಗಕ್ಕೆ ಹಾಗೂ ಹಳ್ಳಿಯ ಅಧಿಕಾರಿಗಳಿಗೆ ಅಧಿಕೃತವಾಗಿ ನಿಗದಿಮಾಡಿದ್ದ ಹಣವನ್ನೊರತುಪಡಿಸಿ ಕಂದಾಯ ಇಲಾಖೆಗಳು ಮಾಡುತ್ತಿದ್ದ ಸುಲಿಗೆ ಕೂಡ ಇತ್ತು. ಹೀಗಾಗಿ ಕೃಷಿಕನಿಗೆ ಕೊನೆಯಲ್ಲಿ ಉಳಿಯುತ್ತಿದ್ದುದು ಅತ್ಯಲ್ಪವಷ್ಟೇ; ಕಂದಾಯ ಮಂಡಳಿಯೇ 1818ರಲ್ಲಿ ಒಪ್ಪಿಕೊಂಡಂತೆ ಕೃಷಿಕನಿಗೆ ದಕ್ಕುತ್ತಿದ್ದುದು ಬೆಳೆಯ ಐದನೇ ಒಂದಂಶದಷ್ಟು ಅಥವಾ ಅದಕ್ಕಿಂತಲೂ ಕಡಿಮೆ”. (229) 

ಇದೇ ಪ್ರಶ್ನೆ ಮತ್ತು ಇದೇ ಪ್ರದೇಶದ ಬಗ್ಗೆ ಬರೆಯುತ್ತ, ನೀಲ್ ಚಾರ್ಲ್ಸ್ ವರ್ಥ್ ಹೇಳುತ್ತಾನೆ: “ಪುಣೆಯ ಪೇಶ್ವೆಗಳನ್ನು 1818ರಲ್ಲಿ ಪದಚ್ಯುತಿಗೊಳಿಸಿದ ನಂತರದ ಎರಡು ಮೂರು ದಶಕಗಳಲ್ಲಿ ಕಂಡು ಬಂದ ಪ್ರಮುಖ ಸಂಗತಿಯೆಂದರೆ ಕೃಷಿಯ ವ್ಯಾಪಕ ಕುಸಿತ….

ಮುಂದಿನ ವಾರ
ಕೃಷಿ ಕಂದಾಯ ಮತ್ತದರ ಶೋಷಕ ಶರಾತ್: ಭಾಗ 3

ಜೂನ್ 30, 2016

ಖುಲಾಸೆಗೊಂಡ ‘ಬಾಂಬ್ ಎಸ್.ಐ’ ನೆನಪಿಸಿದ ದಿನಗಳು

ಡಾ. ಅಶೋಕ್. ಕೆ. ಆರ್.
ಆಗಿನ್ನೂ ಎರಡನೇ ವರುಷದ ಎಂ.ಬಿ.ಬಿ.ಎಸ್ ವಿದ್ಯಾರ್ಥಿ. ಮಾವೋವಾದದ ಎಬಿಸಿಡಿಯಾಗಲೀ ನಕ್ಸಲ್ ವಾದದ ಅಆಇಈಯಾಗಲೀ ಸರಿಯಾಗಿ ಗೊತ್ತಿರಲಿಲ್ಲವಾದರೂ ನಿಧಾನಕ್ಕೆ ಮನಸ್ಸು ಅವೆರಡೂ ವಾದಗಳೆಡೆಗೆ ಆಕರ್ಷಿತವಾಗುತ್ತಿದ್ದ ದಿನಗಳವು. ಚುನಾವಣೆ ಪ್ರಕ್ರಿಯೆಗಳಿಂದಾಗಲೀ, ಮತದಾನದ ಮೂಲಕವಾಗಲೀ ಯಾವುದೇ ಬದಲಾವಣೆ ಸಾಧ್ಯವೇ ಇಲ್ಲ ಎಂದು ಧೃಡವಾಗಿ ನಂಬಿದ್ದ ದಿನಗಳವು. ಕ್ರಾಂತಿಯೆಂಬುದು ಬಂದೂಕಿನ ನಳಿಕೆಯ ಮೂಲಕವೇ ಆಗುವಂತದ್ದು ಎಂಬ ನಂಬಿಕೆ ಕಚ್ಚಿಕೊಂಡಿತ್ತು. ಸಿದ್ಧಾಂತಗಳ ಗಾಢ ಪ್ರಭಾವಗಳೇನು ಇರದಿದ್ದ ಹೊತ್ತಿನಲ್ಲಿ ಬಂದೂಕಿನ ಮೂಲಕ ಕ್ರಾಂತಿಯೆಂಬುದು ಭ್ರಷ್ಟ ರಾಜಕಾರಣಿಗಳು ಮತ್ತು ಅಧಿಕಾರಿಗಳನ್ನು ಗುಂಡಿಟ್ಟು ಕೊಂದುಬಿಟ್ಟರೆ ಸಾಕು, ಕ್ರಾಂತಿ ಸಫಲವಾಗಿ ದೇಶ ಫಳ ಫಳ ಹೊಳೆಯುತ್ತ ನಳನಳಿಸುತ್ತದೆ ಎಂಬುದಷ್ಟೇ ಯೋಚನೆ. ಬಂದೂಕೆಲ್ಲಿ ಹೊಂದಿಸೋದು, ಯಾವ ರಾಜಕಾರಣಿಯನ್ನು – ಅಧಿಕಾರಿಯನ್ನು ಮೊದಲು ಮುಗಿಸೋದು ಎನ್ನುವ ಕನಸುಗಳಲ್ಲಿ ತೇಲುತ್ತಿದ್ದಾಗಲೇ ರೋಮಾಂಚನಗೊಳಿಸುವಂತ ಸುದ್ದಿ ಬೆಂಗಳೂರಿನಿಂದ ಬಂತಲ್ಲ: “ಶಾಸಕರ ಭವನದಲ್ಲಿ ಬಾಂಬ್ ಪತ್ತೆ!”. ಆ ಸುದ್ದಿ ಓದಿದ ನಂತರ ಮೂಡಿದ ಒಂದೇ ಬೇಸರವೆಂದರೆ ಆ ಬಾಂಬ್ ಸ್ಪೋಟಗೊಳ್ಳುವ ಮೊದಲೇ ಪತ್ತೆಯಾಗಿಬಿಟ್ಟಿದ್ದು. ಎರಡೋ ಮೂರೋ ದಿನದ ನಂತರ ಬಾಂಬ್ ಇಟ್ಟವನ ಪತ್ತೆಯೂ ಆಯಿತು, ಪೋಲೀಸ್ ಇಲಾಖೆಯಲ್ಲೇ ಇದ್ದ ಎಸ್.ಐ ಆಗಿ ಕಾರ್ಯವನಿರ್ವಹಿಸುತ್ತಿದ್ದ ಗಿರೀಶ್ ಮಟ್ಟೆಣ್ಣನವರ್ ಬಾಂಬ್ ಇಟ್ಟಿದ್ದು.

ಆಗಿನ್ನೂ ಕೈಯಲ್ಲಿ ಮೊಬೈಲಿರಲಿಲ್ಲ. ಸ್ಮಾರ್ಟ್ ಫೋನುಗಳ ಭರಾಟೆಯೂ ಇರಲಿಲ್ಲ. ಗೂಗಲಿಸಿ ಗಿರೀಶ್ ಮಟ್ಟೆಣ್ಣನವರ್ ಬಗ್ಗೆ ತಿಳಿದುಕೊಳ್ಳಲು ಇಂಟರ್ನೆಟ್ ಸೆಂಟರ್ರಿಗೆ ಹೋಗಬೇಕಿತ್ತು. ಘಂಟೆಗೆ ಇಪ್ಪತ್ತು ರುಪಾಯಿ ತೆತ್ತು ಇಂಟರ್ನೆಟ್ಟಿನಲ್ಲಿ ಹುಡುಕುವುದಕ್ಕಿಂತ ಮಾರನೇ ದಿನದ ಎಲ್ಲಾ ಪತ್ರಿಕೆಗಳನ್ನು ತೆಗೆದುಕೊಂಡರೆ ಹೆಚ್ಚಿನ ವಿಷಯಗಳು ತಿಳಿಯುತ್ತವೆ ಎಂಬುದರ ಅರಿವಿತ್ತು. ಒಂದು ದಿನ ತಡೆದು ಕನ್ನಡದ ಅಷ್ಟೂ ದಿನಪತ್ರಿಕೆಗಳನ್ನು ಗುಡ್ಡೆ ಹಾಕಿಕೊಂಡು ಕುಳಿತೆ. ಪ್ರಾಮಾಣಿಕ ಅಧಿಕಾರಿ, ವ್ಯವಸ್ಥೆಯಿಂದ ಬೇಸತ್ತು ಇಂತಹ ಕೆಲಸ ಮಾಡಿದ್ದಾನೆ ಎಂಬ ವರದಿ ಎಲ್ಲಾ ಪತ್ರಿಕೆಗಳಲ್ಲೂ ಇತ್ತು. ಗಿರೀಶ್ ಮಟ್ಟೆಣ್ಣನವರ್ ಬಗ್ಗೆ ಒಂದಷ್ಟು ಅನುಕಂಪದಿಂದಲೇ ಬರೆದಿದ್ದರು. ವರದಿಯ ಕೊನೆಗೆ ಆದರೂ ಬಾಂಬಿಡುವುದು ಪ್ರಜಾಪ್ರಭುತ್ವದಲ್ಲಿ ಸರಿಯಾದ ಕೆಲಸವಲ್ಲ, ಹೋರಾಡಲು ಪ್ರಜಾಪ್ರಭುತ್ವದಲ್ಲಿ ಅನೇಕಾನೇಕ ದಾರಿಗಳಿವೆ ಎಂಬರ್ಥದ ಸಾಲುಗಳಿರುತ್ತಿದ್ದವು. ಥೂತ್ತೇರಿಕೆ ಇಂತಹ ಪತ್ರಿಕೆಗಳಿರೋವರ್ಗೂ ಕ್ರಾಂತಿಯಾಗಲ್ಲ ಅಂತ ಬಯ್ಕೊಂಡು ಇನ್ನೊಂದು ಸುತ್ತು ಗಿರೀಶ್ ಮಟ್ಟೆಣ್ಣನವರ್ ಬಗ್ಗೆ ಓದಿಕೊಂಡಿದ್ದಾಯಿತು. ಗಿರೀಶ್ ಮಟ್ಟೆಣ್ಣನವರ್ ಬಗ್ಗೆ ಅಭಿಮಾನ ಮೂಡಿತು.

ಕೆಲವು ದಿನಗಳಲ್ಲಿ ಗಿರೀಶ್ ಮಟ್ಟೆಣ್ಣನವರ್ ಜಾಮೀನಿನ ಮೇಲೆ ಬಿಡುಗಡೆಗೊಂಡರು. ವಾರಕ್ಕೊಮ್ಮೆ ಹಾಯ್ ಬೆಂಗಳೂರ್, ಲಂಕೇಶ್ ಪತ್ರಿಕೆ ಓದುವ ಹವ್ಯಾಸವಿತ್ತಲ್ಲ. ಹಾಯ್ ಬೆಂಗಳೂರಿನ ಸಂಪಾದಕೀಯ ‘ಹಲೋ’ದಲ್ಲಿ ಗಿರೀಶ್ ಮಟ್ಟೆಣ್ಣನವರ್ ಎಂಬ ಪ್ರಾಮಾಣಿಕನ ಪ್ರಾಮಾಣಿಕತೆ ಹೀಗೆ ಬಾಂಬು ಇಡುವಂತಹ ದುಸ್ಸಾಹಸದಲ್ಲಿ ಕಳೆದುಹೋಗಬಾರದು, ಜನರ ದನಿಯಾಗುವಂತಹ ವ್ಯಕ್ತಿಯಾಗಿ ಆತ ಬೆಳೆಯಬೇಕು ಎಂದು ತುಂಬಾ ಕಕ್ಕುಲಾತಿಯಿಂದ ರವಿ ಬೆಳೆಗೆರೆ ಬರೆದುಕೊಂಡಿದ್ದರು. ಜೊತೆಗೆ ಹಾಯ್ ಬೆಂಗಳೂರ್ ಕಛೇರಿಯಿಂದಲೇ ಗಿರೀಶ್ ಮಟ್ಟೆಣ್ಣನವರ್ ನೇತೃತ್ವದಲ್ಲಿ ‘ನಿಮ್ಮೊಂದಿಗೆ’ ಎಂಬ ಸಂಘಟನೆ ಮಾಡುವ, ನೀವು ಬನ್ನಿ ಕೈ ಜೋಡಿಸಿ, ಭ್ರಷ್ಟಾಚಾರದ ವಿರುದ್ಧ ಹೋರಾಡುವ ಎಂಬ ಕರೆಯೂ ಇತ್ತು. ಒಂದು ಸಂಜೆ ಆರಕ್ಕೆ ಹಾಯ್ ಬೆಂಗಳೂರ್ ಕಛೇರಿಯಲ್ಲಿ ಸಭೆ ಕರೆಯಲಾಗಿತ್ತು. ಕ್ರಾಂತಿ ಆಗೋ ಸಮಯದಲ್ಲಿ ಸುಮ್ನೆ ಕೂರೋಕ್ಕಾಗುತ್ಯೇ? ಕಾಲೇಜಿಗೆ ಬಂಕ್ ಹೊಡೆದು, ಮೈಸೂರು ಬಸ್ ಸ್ಟ್ಯಾಂಡಿಗೆ ಹೋಗಿ ‘ಮೈಸೂರು ಮಲ್ಲಿಗೆ – 180’ ಹತ್ತಿದೆ. ಒಂದರಷ್ಟೊತ್ತಿಗೆ ನಾಯಂಡನಹಳ್ಳಿಯಲ್ಲಿ ಇಳಿದು ಅಲ್ಲೇ ರಸ್ತೆ ಬದಿಯಿದ್ದ ಹೋಟೆಲ್ಲೊಂದರಲ್ಲಿ ಅನ್ನ ಸಾಂಬಾರ್ ತಿಂದು ದೇವೇಗೌಡ ಪೆಟ್ರೋಲ್ ಬಂಕಿನ ಕಡೆಗೋಗುವ ಬಿಎಂಟಿಸಿ ಹತ್ತಿದೆ. ಪೆಟ್ರೋಲ್ ಬಂಕ್ ಸ್ಟಾಪಿನಲ್ಲಿ ಇಳಿದು ಅವರಿವರನ್ನು ಹಾಯ್ ಬೆಂಗಳೂರ್ ಆಫೀಸಿನ ವಿಳಾಸ ಕೇಳಿಕೊಂಡು ಅದರ ಹತ್ತಿರ ಹೋದಾಗ ಎರಡೂವರೆಯಾಗಿತ್ತು. ಸಭೆಗಿನ್ನೂ ಸಾಕಷ್ಟು ಸಮಯವಿತ್ತು. ಅಲ್ಲಿಲ್ಲಿ ಅಡ್ಡಾಡುತ್ತ, ಯಾವುದೋ ಪಾರ್ಕಿನಲ್ಲಿ ಕುಳಿತು ಬ್ಯಾಗಿನಲ್ಲಾಕಿಕೊಂಡು ಬಂದಿದ್ದ ಪುಸ್ತಕವನ್ನೋದುತ್ತಾ ಕಾಲ ಕಳೆದು ಸಭೆಯ ಸಮಯಕ್ಕೆ ಹಾಯ್ ಬೆಂಗಳೂರು ಆಫೀಸಿಗೆ ಬಂದೆ. ಟೆರೇಸಿನಲ್ಲಿ ಸಭೆಯಿತ್ತು. ಇನ್ನೂರು ಮುನ್ನೂರು ಜನ ಸೇರಿದ್ದರು. ದೂರದ ಬೀದರ್ರಿನಿಂದಲೂ ಜನರು ಬಂದಿದ್ದರು; ಬಳ್ಳಾರಿ, ಹೊಸಪೇಟೆ, ಗುಲ್ಬರ್ಗ, ಮಂಗಳೂರು ಹೀಗೆ ಹತ್ತಲವು ಜಿಲ್ಲೆಗಳಿಂದ ಜನರು ಬಂದಿದ್ದರು. ಯುವಕರೇ ಹೆಚ್ಚಿದ್ದದ್ದು, ನಿವೃತ್ತರಾಗಿದ್ದ ಆಯುರ್ವೇದಿಕ್ ವೈದ್ಯರೊಬ್ಬರೂ ಬಂದಿದ್ದರು. ಒಂದಷ್ಟೊತ್ತು ರವಿ ಬೆಳಗೆರೆ ಮಾತನಾಡಿದರು. ನಂತರ ಗಿರೀಶ್ ಮಟ್ಟೆಣ್ಣನವರ್ ಮಾತನಾಡಿದರು. ಸಂಘಟನೆ ಯಾವ ರೀತಿ ಇರಬೇಕು, ಯಾವ ರೀತಿಯಲ್ಲಿ ಭ್ರಷ್ಟಾಚಾರದ ವಿರುದ್ಧ ಹೋರಾಡಬೇಕು. ಮೊದಲಿಗೆ ಪ್ರತಿ ಜಿಲ್ಲೆಯಲ್ಲಿ, ನಂತರ ಪ್ರತಿ ತಾಲ್ಲೂಕಿನಲ್ಲಿ ಐದಾರು ಜನರ ಪುಟ್ಟ ಪುಟ್ಟ ತಂಡಗಳನ್ನು ಮಾಡಿಕೊಂಡು ಹೋರಾಡಬೇಕಾದ ರೀತಿಯ ಬಗ್ಗೆ ಮಾತನಾಡಿದರು. ಒಂದು ಒಂದೂವರೆ ಘಂಟೆಯ ನಂತರ ಕಾರ್ಯಕ್ರಮ ಮುಗಿಯಿತು. ಬಂದೂಕಿನ ನಳಿಕೆಯ ಮೂಲಕ ಬರುವ ಕ್ರಾಂತಿಯಷ್ಟು ಪ್ರಖರವಾಗಿರುವುದಿಲ್ಲ, ಆದರೂ ಇದ್ದುದರಲ್ಲೇ ವಾಸಿ ಎಂದುಕೊಳ್ಳುತ್ತ ಜೇಬಿನಲ್ಲಿದ್ದ ಚಿಕ್ಕ ಪುಸ್ತಕಕ್ಕೆ ಗಿರೀಶ್ ಮಟ್ಟೆಣ್ಣನವರ ಆಟೋಗ್ರಾಫ್ ಪಡೆದುಕೊಂಡೆ. ನಾನು ಪಡೆದುಕೊಂಡ ಮೊಟ್ಟಮೊದಲ ಹಾಗೂ ಕಟ್ಟಕಡೆಯ ಆಟೋಗ್ರಾಫದು! ಆ ಪುಸ್ತಕ ಎಲ್ಲಿದೆಯೋ ಈಗ ಮರೆತುಹೋಗಿದೆ. ಮತ್ತೆ ನಾಯಂಡನಹಳ್ಳಿಗೆ ಬಂದು ಮೈಸೂರಿನ ಬಸ್ ಹತ್ತಿ ರೂಮು ಸೇರಿದಾಗ ಮಧ್ಯರಾತ್ರಿಯಾಗಿತ್ತು. ಇನ್ನೇನು ನಾಳೆಯಿಂದ ಕ್ರಾಂತಿ ಶುರುವಾಯ್ತಲ್ಲ ಎಂದುಕೊಂಡು ಮಲಗಿದೆ.

ನಿಮ್ಮೊಂದಿಗೆ ಸಂಘಟನೆಯ ಹೋರಾಟ ಯಾವ ರೀತಿ ಇರುತ್ತದೆ, ಯಾವ ರೀತಿ ಇರಬೇಕು ಎಂದು ಹಗಲುಗನಸು ಕಾಣುವುದೂ ಸರಿಯಾಗಿ ಪ್ರಾರಂಭವಾಗಿರಲಿಲ್ಲ, ಗಿರೀಶ್ ಮಟ್ಟೆಣ್ಣನವರ್ ‘ನಿಮ್ಮೊಂದಿಗೆ’ ಇರುವುದಿಲ್ಲ ಎಂದು ನಿರ್ಧರಿಸಿ ಬಿಜೆಪಿ ಪಕ್ಷಕ್ಕೆ ಹಾರಿಬಿಟ್ಟರು! ಅಲ್ಲಿಗೆ ಶಾಸಕರ ಭವನಕ್ಕೆ ಬಾಂಬಿಟ್ಟಿದ್ದು ಪ್ರಚಾರಕ್ಕೇ ಹೊರತು ಬೇರೆ ಕಾರಣಕ್ಕಲ್ಲ ಎಂದರಿವಾಗಿ ಪಿಗ್ಗಿ ಬಿದ್ದಿದ್ದಕ್ಕೆ ಬಯ್ದುಕೊಂಡು ಸುಮ್ಮನಾದೆ. ಮುಂದೆ ಬರೆದ ‘ಆದರ್ಶವೇ ಬೆನ್ನು ಹತ್ತಿ’ ಕಾದಂಬರಿಯಲ್ಲಿ ಒಂದು ಪಾತ್ರಕ್ಕೆ ಪ್ರೇರಣೆಯಾದರು ಗಿರೀಶ್ ಮಟ್ಟೆಣ್ಣನವರ್. ಇಷ್ಟೆಲ್ಲ ನೆನಪಾಗಿದ್ದು ಮೊನ್ನೆ ನ್ಯಾಯಾಲಯ ಸಾಕ್ಷ್ಯಾಧಾರದ ಕೊರತೆಯಿಂದಾಗಿ ಗಿರೀಶ್ ಮಟ್ಟೆಣ್ಣನವರನ್ನು ಖುಲಾಸೆಗೊಳಿಸಿ ತೀರ್ಪು ಪ್ರಕಟಿಸಿದಾಗ.

ಉತ್ತರಪ್ರದೇಶ: ಮಾಯಾವತಿ ಮತ್ತು ಮುಸ್ಲಿಂ ಸಮುದಾಯ!

ಕು.ಸ.ಮಧುಸೂದನ ನಾಯರ್

ದೇಶದ ಹಿಂದಿ ಹೃದಯಭಾಗವಾದ ಬಿಹಾರವನ್ನು ಕಳೆದುಕೊಂಡ ನಂತರದಲ್ಲಿ ಉತ್ತರಪ್ರದೇಶ ರಾಜ್ಯವನ್ನು ಗೆಲ್ಲಲೇಬೇಕಾಗಿರುವುದು ಪ್ರದಾನಮಂತ್ರಿಗಳಾದ ಶ್ರೀ ನರೇಂದ್ರಮೋದಿಯವರು ಮತ್ತು ಬಾಜಪದ ರಾಷ್ಟ್ರಾದ್ಯಕ್ಷರಾದ ಶ್ರೀ ಅಮಿತ್ ಷಾರವರಿಗೆ ಪ್ರತಿಷ್ಟೆಯ ಪ್ರಶ್ನೆಯಾಗಿಬಿಟ್ಟಿದೆ. ಈ ದಿಸೆಯಲ್ಲವರು ಹಲವು ಚುನಾವಣಾ ಪೂರ್ವ ತಂತ್ರಗಳನ್ನು ಹೆಣೆಯುತ್ತ ಸಾದ್ಯವಿರಬಹುದಾದ ಎಲ್ಲ ನಡೆಗಳನ್ನೂ ನಡೆಸಲು ಪ್ರಾರಂಬಿಸಿದ್ದಾರೆ. ಮೊದಲಿನಿಂದಲೂ ಉತ್ತರಪ್ರದೇಶ ಜಾತಿಯಾಧಾರಿತ ರಾಜಕಾರಣಕ್ಕೆ ಹೆಸರು ವಾಸಿಯಾಗಿದ್ದು, ತೊಂಬತ್ತರ ದಶಕದ ನಂತರ ಜಾತಿ ರಾಜಕಾರಣದ ಜೊತೆಗೆ ಧರ್ಮ ರಾಜಕಾರಣವೂ ದೊಡ್ಡ ಮಟ್ಟದಲ್ಲಿ ಕೆಲಸ ಮಾಡುತ್ತಿದೆ. ಹೀಗಾಗಿ ಉತ್ತರಪ್ರದೇಶದಲ್ಲಿರುವ ಶೇಕಡಾ 28 ರಷ್ಟು ಮುಸ್ಲಿಂ ಮತದಾರರು ಮುಂದಿನ ವಿದಾನಸಭಾ ಚುನಾವಣೆಯಲ್ಲಿ ಬಹುಮುಖ್ಯ ಪಾತ್ರ ವಹಿಸಲಿದ್ದಾರೆಂಬುದು ಖಚಿತ. ಅದೂ ಅಲ್ಲದೆ ಸುಮಾರು 73 ಕ್ಷೇತ್ರಗಳಲ್ಲಿ ಅವರ ಮತಗಳೇ ನಿರ್ಣಾಯಕವೂ ಆಗಿದೆ. ಹಾಗಾಗಿ ಈ 28ರಷ್ಟು ಮತವನ್ನು ಯಾವ ಪಕ್ಷ ಹೆಚ್ಚು ಸೆಳೆಯುತ್ತದೆಯೊ ಆ ಪಕ್ಷ ಬಹುಮತ ಪಡೆಯುವುದು ಸಾದ್ಯವಾಗುತ್ತದೆಯೆಂಬುದು ಒಂದು ಲೆಕ್ಕಾಚಾರ. ಈ ದೃಷ್ಠಿಯಿಂದ ಎಲ್ಲ ಪಕ್ಷಗಳು ಮುಸ್ಲಿಂ ಮತದಾರರನ್ನು ಓಲೈಸುವ ಮಾತುಗಳನ್ನಾಡುತ್ತಿವೆ.

ಇದುವರೆಗೂ ಬಹುತೇಕ ಮುಸ್ಲಿಂ ಮತದಾರರು ಸಮಾಜವಾದಿ ಪಕ್ಷದ ಕಟ್ಟಾ ಬೆಂಬಲಿಗರಾಗಿದ್ದರು. ಕಳೆದ ವಿದಾನಸಭಾ ಚುನಾವಣೆಯಲ್ಲಿ ಅಂದರೆ 2012ರಲ್ಲಿ ಸಮಾಜವಾದಿ ಪಕ್ಷವು ಶೇಕಡಾ 54ರಷ್ಟು ಮುಸ್ಲಿಂ ಮತಗಳನ್ನು ಪಡೆದು ನಿಚ್ಚಳ ಬಹುಮತ ಪಡೆದಿತ್ತು. ಆದರೆ 2014ರ ಲೋಕಸಭಾ ಚುನಾವಣೆಗಳ ನಂತರ ಈ ಸಮೀಕರಣ ಬಹಳಷ್ಟು ಬದಲಾದಂತೆ ಕಾಣುತ್ತಿದೆ. ಈ ಹಿಂದಿನಂತೆ ಮುಸ್ಲಿಂ ಸಮುದಾಯ ಸಂಪೂರ್ಣವಾಗಿ ಸಮಾಜವಾದಿ ಪಕ್ಷದ ಜೊತೆಗಿಲ್ಲ. ಅದು ಕಳೆದ ನಾಲ್ಕೂವರೆ ವರುಷಗಳ ಅಖಿಲೇಶ್ ಯಾದವ್ ಆಳ್ವಿಕೆಯಿಂದ ಭ್ರಮನಿರಸವಗೊಂಡಿದೆ. ಸಮಾಜವಾದಿ ಪಕ್ಷವು ಮುಜಾಫರ್ ನಗರದ ಗಲಬೆಗಳನ್ನು, ಮತ್ತು ದಾದ್ರಿ ಪ್ರಕರಣವನ್ನು ನಿರ್ವಹಿಸಿದ ರೀತಿ ಮುಸ್ಲಿಂ ಸಮುದಾಯದ ಕೋಪಕ್ಕೆ ಕಾರಣವಾಗಿದೆ. ಮುಜಾಫರ್ ನಗರದ ಗಲಬೆಗಳಾದ ಸುಮಾರು ಆರು ತಿಂಗಳ ನಂತರ ಮುಲಾಯಂ ಸಿಂಗ್ ಯಾದವ್ ಮತ್ತು ಅಖಿಲೇಶ್ ಅಲ್ಲಿಗೆ ಬೇಟಿ ನೀಡುವ ಮನಸ್ಸು ಮಾಡಿದ್ದರು, ಅದೂ ಲೋಕಸಭಾ ಚುನಾವಣೆಗೆ ಮತ ಕೇಳಲು. ಹೀಗಾಗಿ ಗಲಬೆಯಾದ ತಕ್ಷಣ ಸ್ಥಳಕ್ಕೆ ದಾವಿಸದ ಸಮಾಜವಾದಿ ಪಕ್ಷದ ತಂದೆ ಮಕ್ಕಳ ಬಗ್ಗೆ ಮುಸ್ಲಿಂ ಸಮುದಾಯ ತೀವ್ರ ಅಸಮಾದಾನಗೊಂಡಿದೆ. ನಂತರದಲ್ಲಿ ನಡೆದ ದಾದ್ರಿ ಪ್ರಕರಣವನ್ನು ಬಾಜಪಕ್ಕೆ ಅನುಕೂಲವಾಗುವ ರೀತಿಯಲ್ಲಿ ನಿರ್ವಹಿಸಿದ ಉತ್ತರಪ್ರದೇಶದ ಸರಕಾರದ ಬಗ್ಗೆ ಆ ಸಮುದಾಯ ಮತ್ತಷ್ಟು ಕೋಪಗೊಂಡು ದೂರ ಸರಿಯುವಲ್ಲಿ ಕಾರಣವಾಯಿತು. ಇದರ ಜೊತೆಗೆ ಬಿಹಾರದಲ್ಲಿ ನಡೆದ ಮಹಾಘಟಬಂದನ್ ಜೊತೆ ಸೇರದೆ ಬಾಜಪಕ್ಕೆ ಅನುಕೂಲ ಮಾಡಿಕೊಡುವ ರೀತಿಯಲ್ಲಿ ನಡೆದುಕೊಂಡ ಮುಲಾಯಂ ಸಿಂಗ್ ಅವರ ನಡವಳಿಕೆ ಮುಸ್ಲಿಂ ಸಮುದಾಯಕ್ಕೆ ಸಮಾಜವಾದಿ ಪಕ್ಷದ ಬಗ್ಗೆ ದಶಕಗಳಿಂದ ಇದ್ದ ನಂಬಿಕೆ ಕುಸಿಯುವಂತೆ ಮಾಡಿತು.

ಇಂತಹ ಪರಿಸ್ಥಿತಿಯಲ್ಲ್ಲಿ ಬಾಜಪವನ್ನು ಸೋಲಿಸಬಲ್ಲ ಒಂದು ಪಕ್ಷವನ್ನು ಮುಸ್ಲಿಂ ಸಮುದಾಯ ಬೆಂಬಲಿಸುವ ಯೋಚನೆಯಲ್ಲಿದೆ ಮತ್ತು ಅಂತಹ ಪಕ್ಷದ ಹುಡುಕಾಟದಲ್ಲಿ ತೊಡಗಿರುವಾಗಲೇ ಬಹುಜನ ಪಕ್ಷದ ಮಾಯಾವತಿಯವರು ಮುಸ್ಲಿಂ ಸಮುದಾಯದ ಬೆಂಬಲ ಪಡೆಯಲು ಬೇಕಾದ ತಂತ್ರಗಾರಿಕೆಯಲ್ಲಿ ತೊಡಗಿದ್ದಾರೆ. ಈ ಕಾರ್ಯಕ್ಕೆ ಪೂರ್ವಬಾವಿಯಾಗಿಯೇ ಅವರು ಉತ್ತರಕಾಂಡದಲ್ಲಿ ಇತ್ತೀಚೆಗೆ ನಡೆದ ವಿಶ್ವಾಸ ಮತ ಯಾಚನೆಯಲ್ಲಿ ತಮ್ಮ ಪಕ್ಷದ ಶಾಸಕರುಗಳು ಕಾಂಗ್ರೆಸ್ಸಿಗೆ ಮತಚಲಾಯಿಸುವಂತೆ ನೋಡಿಕೊಂಡರು. ಹೀಗೆ ತಾನು ಕಾಂಗ್ರೆಸ್ಸಿನ ಪರವಾಗಿರುವುದನ್ನು ಸಾರ್ವಜನಿಕವಾಗಿ ತೋರಿಸಿಕೊಡುವುದರ ಮೂಲಕ ತಮ್ಮ ಪಕ್ಷ ಭವಿಷ್ಯದಲ್ಲಿ ಬಾಜಪವನ್ನು ಯಾವ ಕಾರಣಕ್ಕೂ ಬೆಂಬಲಿಸುವುದಿಲ್ಲವೆಂಬ ಸ್ಪಷ್ಟ ಸಂದೇಶವನ್ನು ಮುಸ್ಲಿಂ ಸಮುದಾಯಕ್ಕೆ ನೀಡುವಲ್ಲಿ ಯಶಸ್ವಿಯಾದರು. ಸಮಾಜವಾದಿ ಪಕ್ಷದಿಂದ ದೂರ ಸರಿಯುತ್ತಿರುವ ಮುಸ್ಲಿಂ ಸಮುದಾಯವನ್ನು ಸೆಳೆಯಲು ನಿರ್ದರಿಸಿರುವ ಮಾಯಾವತಿಯವರು ತಾವು ಹಿಂದೆ ಪ್ರಯೋಗಿಸಿದ ದಲಿತ ಮತ್ತು ಮುಸ್ಲಿಂ ಸಮೀಕರಣವನ್ನು ಮತ್ತೊಮ್ಮೆ ಪ್ರಯೋಗಿಸಲು ಸಿದ್ದತೆ ನಡೆಸಿದ್ದಾರೆ. 2007ರಲ್ಲಿ ಅವರು 206 ಸ್ಥಾನಗಳನ್ನು ಗೆದ್ದು ಮುಖ್ಯಮಂತ್ರಿಯಾಗಲು ಸಹಾಯ ಮಾಡಿದ್ದೇ ಈ ದಲಿತ-ಮುಸ್ಲಿಂ-ಬ್ರಾಹ್ಮಣ ಸಮೀಕರಣ. ಈಗಾಗಲೇ ಟಿಕೇಟ್ ಹಂಚಿಕೆಯನ್ನು ಪ್ರಾರಂಬಿಸಿರುವ ಬಹುಜನ ಪಕ್ಷವು ಸುಮಾರು 100 ಸ್ಥಾನಗಳನ್ನು ಮುಸ್ಲಿಮರಿಗು, 50 ಸ್ಥಾನಗಳನ್ನು ಬ್ರಾಹ್ಮಣರಿಗೂ ಮೀಸಲಿಟ್ಟಿದ್ದು ಒಟ್ಟು ಸ್ಥಾನಗಳ ಪೈಕಿ ಶೇಕಡಾ ಇಪ್ಪತ್ತೈದರಷ್ಟನ್ನು ಮುಸ್ಲಿಂ ಸಮುದಾಯಕ್ಕೆ ಮೀಸಲಿಟ್ಟು , ತಾನು ಅಧಿಕಾರಕ್ಕೆ ಬಂದರೆ ಅಲ್ಪಸಂಖ್ಯಾತರಿಗೆ ಮೀಸಲಾತಿ ಕಲ್ಪಿಸುವ ನಿಟ್ಟಿನಲ್ಲಿ ಕೆಲಸ ಮಾಡುವಂತಹ ಸೂಚನೆಯನ್ನು ನೀಡಿದ್ದಾರೆ. 

ಈ ದಿಸೆಯಲ್ಲಿ ಅವರು ಬಾಜಪವನ್ನು ಸೋಲಿಸಲು ಕಾಂಗ್ರೆಸ್ ಜೊತೆಗೆ ಕೈಜೋಡಿಸುವ ಇರಾದೆಯನ್ನು ಹೊಂದಿದ್ದಾರೆ. ಇಂತಹ ಮೈತ್ರಿಯ ವಿಚಾರದಲ್ಲಿ ಕಾಂಗ್ರೆಸ್ ತಗೆದುಕೊಳ್ಳಬಹುದಾದ ನಿರ್ದಾರ ಬಹಳ ಮುಖ್ಯವಾಗಿರುತ್ತದೆ. ಈ ನಿಟ್ಟಿನಲ್ಲಿ ನೋಡಿದರೆ ಮುಂದಿನ ವಿದಾನಸಭಾ ಚುನಾವಣೆಗಳಲ್ಲಿ ಜಾತಿ ಲೆಕ್ಕಾಚಾರದ ಜೊತೆಜೊತೆಗೆ ಧಾರ್ಮಿಕ ಧ್ರವೀಕರಣಗಳೂ ನಡೆಯುವುದು ಖಂಡಿತಾ. ಪ್ರಜಾಪ್ರಭುತ್ವದ ಆರೋಗ್ಯದ ದೃಷ್ಠಿಯಿಂದ ಇಂತಹ ಬೆಳವಣಿಗೆಗಳು ಒಳ್ಳೆಯದಲ್ಲವಾದರೂ, ಇಂಡಿಯಾದ ರಾಜಕಾರಣ ನಡೆಯುತ್ತಿರುವುದೇ ಇಂತಹ ಜಾತಿ ಧರ್ಮಗಳ ಆಧಾರದ ಮೇಲೆ ಎನ್ನುವುದು ವಿಷಾದದ ವಿಷಯವಾಗಿದೆ.

ಜೂನ್ 25, 2016

2017ರ ಪಂಜಾಬ್ ವಿದಾನಸಭಾ ಚುನಾವಣೆಗಳು ಊರಿಗೆ ಮುಂಚೆಯೇ ಸಿದ್ದಗೊಳ್ಳುತ್ತಿರುವ ರಾಜಕೀಯ ಪಕ್ಷಗಳು!

punjab elections
ಕು.ಸ.ಮಧುಸೂದನ ನಾಯರ್
25/06/2016
ಪಂಜಾಬ್ ವಿದಾನಸಭಾ ಚುನಾವಣೆಗಳು ನಡೆಯುವುದು ಮುಂದಿನ ವರ್ಷದಲ್ಲಾದರು (2017) ಅದು ಸೃಷ್ಠಿಸಿರುವ ಕುತೂಹಲ ಮಾತ್ರ ಅಗಾಧ. ಯಾಕೆಂದರೆ ಉತ್ತರಪ್ರದೇಶದಂತೆ ಇಲ್ಲಿಯೂ ತಾನು ಗೆಲ್ಲಲೇ ಬೇಕು ಮತ್ತು ತನ್ಮೂಲಕ ಇಡೀ ಉತ್ತರ ಭಾರತದಲ್ಲಿ ಕಾಂಗ್ರೆಸ್ಸನ್ನು ಅಧಿಕಾರದಿಂದ ದೂರವಿಡಲೇಬೇಕೆಂಬ ಹಟಕ್ಕೆ ಬಿದ್ದ ಬಾಜಪ ಆ ನೆಲೆಯಲ್ಲಿಯೇ ತನ್ನ ಮಿತ್ರಪಕ್ಷವಾದ ಶಿರೋಮಣಿ ಅಕಾಲಿದಳದ ಜೊತೆ ಸೇರಿ ಚುನಾವಣಾ ತಯಾರಿಮಾಡಿಕೊಳ್ಳುತ್ತಿತ್ತು. ಇಷ್ಟಲ್ಲದೆ ಕಾಂಗ್ರೆಸ್ ಕೂಡಾ ತನ್ನ ಮುಂದಿನ ನಡೆಗಳ ಕುರಿತು ಲೆಕ್ಕಾಚಾರ ಹಾಕುತ್ತಿತ್ತು.  ಆದರೆ ಈ ಎರಡೂಪಕ್ಷಗಳಿಗೆ ಆಘಾತಕಾರಿಯಾಗವಂತಹ ಸುದ್ದಿಯೊಂದೀಗ ಹೊರಬಿದ್ದಿದೆ: ಹಫ್ ಪೋಸ್ಟ್-ಸಿ-ವೋಟರ್ ಒಂದು ಸಮೀಕ್ಷೆಯನ್ನು ನಡೆಸಿದ್ದು ಅದರ ಪ್ರಕಾರ ಮುಂದಿನ ಚುನಾವಣೆಯಲ್ಲಿ  ದೆಹಲಿಯ ಮುಖ್ಯಮಂತ್ರಿಯಾದ ಶ್ರೀ ಅರವಿಂದ್ ಕೇಜ್ರೀವಾಲರ ಆಮ್ ಆದ್ಮಿ ಪಕ್ಷ ಒಟ್ಟು 117 ಸ್ಥಾನಗಳ ಪೈಕಿ 94ರಿಂದ100 ಸ್ಥಾನಗಳನ್ನು ಗಳಿಸುತ್ತದೆಯೆಂಬ ಪಲಿತಾಂಶ ಬಿಡುಗಡೆ ಮಾಡಿದೆ. ಇಷ್ಟಲ್ಲದೆ ಪಂಜಾಬಿ ಜನ ತಮ್ಮ ಮುಖ್ಯಮಂತ್ರಿಯನ್ನಾಗಿ ಕೇಜ್ರಿವಾಲರನ್ನು ಮೊದಲ ಸ್ಥಾನದಲ್ಲಿಯೂ, ಕಾಂಗ್ರೆಸ್ಸಿನ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರನ್ನು ಎರಡನೇ ಸ್ಥಾನದಲ್ಲಿಯೂ ನೋಡಲು ಬಯಸಿದ್ದಾರೆಂಬ ಮಾಹಿತಿಯನ್ನೂ ನೀಡಿದೆ. ಶೇಕಡಾ 51ರಷ್ಟು ಜನ ಕೇಜ್ರಿವಾಲರನ್ನು, ಶೇಕಡಾ35 ರಷ್ಟು ಜನ ಅಮರಿಂದರ್ ಸಿಂಗ್ ಅನ್ನು ಆರಿಸುವ ಬಯಕೆ ಹೊಂದಿರುವುದು  ಸಮೀಕ್ಷೆಯಲ್ಲಿ ಗೊತ್ತಾಗಿದ್ದು  ಈ ಪಟ್ಟಿಯಲ್ಲಿ ಬಾಜಪದ ಅಥವಾ ಅಕಾಲಿದಳದ ಯಾವೊಬ್ಬ ನಾಯಕನೂ ಇಲ್ಲದಿರುವುದೇ ಬಾಜಪದ ತಲೆನೋವಿಗೆ ಕಾರಣವಾಗಿದೆ.
       ಈ ಬೆಳವಣಿಗೆಗಳಿಂದ ಕಂಗೆಟ್ಟಂತಾಗಿರುವ ಬಾಜಪ ಪಂಜಾಬ್ ರಾಜಕಾರಣದಲ್ಲಿ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಬೇರೊಂದು ತಂತ್ರಗಾರಿಕೆ ಅನುಸರಿಸಲು ಸಿದ್ದವಾಗಿ ನಿಂತಿದೆ. ಪಂಜಾಬ್ ಬಾಜಪದ ರಾಜ್ಯಾದ್ಯಕ್ಷರಾದ ಕಮಲ್ ಶರ್ಮಾ ಮತ್ತು ಇತರೇ ಸ್ಥಳೀಯ ನಾಯಕರುಗಳು ಅಕಾಲಿದಳದೊಂದಿಗಿನ ಮೈತ್ರಿ ಮುರಿದುಕೊಂಡು ಬಾಜಪ ಏಕಾಂಗಿಯಾಗಿ ಚುನಾವಣೆ ಎದುರಿಸುವುದರಿಂದ  ಮೋದಿಯವರ ಅಭಿವದ್ದಿಯ ಮಂತ್ರ ಮತ್ತು ಅವರ ವರ್ಚಸ್ಸಿನಿಂದ ಚುನಾವಣೆ ಗೆಲ್ಲಲು ಸಾದ್ಯವೆಂದು ರಾಷ್ಟ್ರೀಯ ಅದ್ಯಕ್ಷರಾದ ಅಮಿತ್ ಷಾಗೆ ಮನವಿ ಸಲ್ಲಿಸಿದ್ದಾರೆ.  ಈ ವರ್ಷ ಅದ್ಯಕ್ಷ ಶರ್ಮಾರವರ ಅವಧಿ ಮುಗಿಯಲಿದ್ದು ಸಂಸತ್ ಸದಸ್ಯ ಮತ್ತು ಮಾಜಿ ಕ್ರಿಕೇಟಿಗ ಶ್ರೀ ನವಜೋತ್ ಸಿಂಗ್ ಸಿದ್ದುರವರನ್ನು ಪಕ್ಷಾದ್ಯಕ್ಷರನ್ನಾಗಿ ಮಾಡಲು ಸಹ  ಒಂದುವರ್ಗ ಕೋರಿಕೆಯನ್ನಿಟ್ಟಿದೆ. ಇಷ್ಟು ದಿನ ಪಂಜಾಬಿನಲ್ಲಿ ನೆಲೆ ಕಂಡುಕೊಳ್ಳಲು ಮತ್ತು ಅಧಿಕಾರ ನಡೆಸಲು ಸಹಾಯ ಮಾಡಿದ ಅಕಾಲಿದಳಕ್ಕೆ ಕೈಕೊಡುವುದು ಮಾತ್ರವಲ್ಲದೆ, ಇಷ್ಟು ದಿನದ ದುರಾಡಳಿತಕ್ಕೆ ಮತ್ತೆಲ್ಲ ಕೆಡುಕುಗಳಿಗೂ ಅಕಾಲಿದಳವನ್ನೇ ಹೊಣೆಯಾಗಿಸಿ ತಾನು ಸ್ಪಟಿಕದಂತೆ ಸ್ವಚ್ಚ ಎಂಬ  ಘೊಷಣೆಯೊಂದಿಗೆ ಜನತೆಯ ಮುಂದೆ ಹೋಗುವುದು ಬಾಜಪದ ಸದ್ಯದ ಲೆಕ್ಕಾಚಾರವಾಗಿದೆ. ಕಳೆದ ಹತ್ತು ವರ್ಷಗಳಿಂದ ಪಂಜಾಬಿನ ಅಧಿಕಾರದ ಗದ್ದುಗೆಯನ್ನು ಹಿಡಿದಿರುವ ಬಾಜಪ-ಅಕಾಲಿದಳದ ಮೈತ್ರಿಕೂಟ ಈಗಾಗಲೆ ಜನರಿಂದ ದೂರವಾಗುತ್ತಿದ್ದು ಮುಂದಿನ ಚುನಾವಣೆಯಲ್ಲಿ  ಸೋಲುವ ಬೀತಿಯಲ್ಲಿದ್ದು, ತಾನು ಗೆಲ್ಲಲು ಸಾದ್ಯವಿಲ್ಲವೆಂಬ ಅಂಶವನ್ನು ತಿಳಿದೇ ಅಕಾಲಿದಳವನ್ನು  ದೂರ ಮಾಡಿ ಆಗಿರುವ ಅನಾಹುತಕ್ಕೆಲ್ಲ ಅದೇ ಹೊಣೆ ತಾನಲ್ಲ ಎಂಬ ಅಂಶವನ್ನು ಜನರಿಗೆ ರವಾನಿಸಲು ಸಿದ್ದವಾಗಿ ನಿಂತಿದೆ.
ಇದೆಲ್ಲದರ ನಡುವೆ ಆಡಳಿತ ವಿರೋಧಿ ಅಲೆಯ ಲಾಭ ಪಡೆಯಬಹುದಾಗಿದ್ದ ಕಾಂಗ್ರೆಸ್ ಅನಾಹುತವೊಂದನ್ನು ಮಾಡಿಕೊಂಡಿತು. ಚುನಾವಣೆ ನಡೆಯಲಿರುವ ರಾಜ್ಯಗಳಿಗೆ ಉಸ್ತುವಾರಿ ಕಾರ್ಯದರ್ಶಿಗಳನ್ನು ನೇಮಿಸಿದ ಕಾಂಗ್ರೆಸ್ ಪಂಜಾಬಿನ ಉಸ್ತುವಾರಿಯನ್ನು  ಶ್ರೀ ಕಮಲ್‍ನಾಥ್ ಅವರಿಗೆ ನೀಡಿತು. ಕ್ಯಾಪ್ಟನ್ ಅಮರಿಂದರ್ ಸಿಂಗ್ ಈ ನೇಮಕವನ್ನು ಸಮರ್ಥಿಸಿಕೊಂಡರೂ ಪಂಜಾಬಿನ ಕಾಂಗ್ರೆಸ್ ಕಾರ್ಯಕರ್ತರಿಗೆ ಇದು ಬಿಸಿ ತುಪ್ಪವಾಗಿ ಪರಿಣಮಿಸಿಬಿಟ್ಟಿತು. ಯಾಕೆಂದರೆ 1984 ರಲ್ಲಿ ನಡೆದ ಸಿಖ್  ನರಮೇಧದ ಹಿಂದೆ ಕಮಲ್‍ನಾಥ್ ಕೈವಾಡವಿದೆಯೆಂಬ ಆರೋಪವಿದ್ದು ಪಂಜಾಬಿನ ಜನತೆ ಅದನ್ನಿನ್ನೂ ಮರೆತಿಲ್ಲ. ಈ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ಸ್ಥಳೀಯ ನಾಯಕರುಗಳ ಅಭಿಪ್ರಾಯವನ್ನು ಕೇಳಿಲ್ಲವೆಂಬ ಅಸಮಧಾನ ಅಲ್ಲಿನ ನಾಯಕರಲ್ಲಿ ಮೂಡಿದ್ದು ಸುಳ್ಳಲ್ಲ. ಯಾಕೆಂದರೆ ಈ ಹಿಂದೆ ಕಮಲ್ ನಾಥ್ ಅಮೇರಿಕಾ ಪ್ರವಾಸ ಕೈಗೊಂಡಾಗಲೂ ಅಲ್ಲಿನ ಸಿಖ್ ಜನತೆ ಅವರ ವಿರುದ್ದ ಪ್ರತಿಭಟನೆ ನಡೆಸಿದ್ದರು.  ಇದನ್ನು ಅರಿತ ಕಮಲ್ ನಾಥ್ ಕೇವಲ ಮೂರೇ ದಿನಕ್ಕೆ ತಮ್ಮ ಹುದ್ದೆಗೆ ಸ್ವಯಂಪ್ರೇರಿತರಾಗಿ ರಾಜೀನಾಮೆ ನೀಡಿದರು. ನಂತರದಲ್ಲಿ ಶ್ರೀ ಗುಲಾಂನಬಿ ಆಜಾದ್ ಅವರನ್ನು ಆ ಹುದ್ದೆಗೆ ನೇಮಿಸಲಾಯಿತು. ಹೀಗೆ ಸಿಖ್ ಜನಾಂಗದವರ ಬಾವನಾತ್ಮಕ ವಿಚಾರವನ್ನು ಪರಿಗಣಿಸದೆ ಮಾಡಿದ ಒಂದು ನೇಮಕ ಒಂದಷ್ಟು ದಿನಗಳ ಕಾಲ ಕಾಂಗ್ರೆಸ್ಸಿಗೆ ಇರುಸುಮುರುಸನ್ನು ಉಂಟು ಮಾಡಿತು.
 ಇನ್ನು ಅಕಾಲಿದಳ ಎಂದಿನಂತೆ  ಬಾಜಪ ಜೊತೆಗಿನ ಮೈತ್ರಿಯ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆಮ್‍ಆದ್ಮಿಪಕ್ಷ ಮಾತ್ರ  ಮುಂದಿನ ಚುನಾವಣೆಯನ್ನು ಎದುರಿಸಲು ಸರ್ವಸಿದ್ದತೆಗಳನ್ನೂ ಮಾಡಿಕೊಳ್ಳುತ್ತಿದೆ. ಇದರ ಒಂದು ಭಾಗವಾಗಿ ಅದು ಎಲ್ಲ 117 ಕ್ಷೇತ್ರಗಳಲ್ಲಿಯೂ ತನ್ನ ಕಾರ್ಯಕರ್ತರ ಪಡೆ ಸಿದ್ದಗೊಳಿಸಲು ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಕಾರ್ಯಕರ್ತರ ಹೊಣೆಗಾರಿಕೆಗಳ ಬಗ್ಗೆ ಕೈಪಿಡಿಯೊಂದನ್ನು ಸಿದ್ದಪಡಿಸಿ ಅವನ್ನು ಕಾರ್ಯಕರ್ತರಿಗೆ ತಲುಪಿಸುವ ಯತ್ನವನ್ನೂ ಅದು ಮಾಡುತ್ತಿದೆ.
ಎಂದಿನಂತೆ ಬಾಜಪ ತನ್ನ ಹಳೆಯ ಚಾಳಿಯನ್ನು ಇಲ್ಲಿಯೂ ಮಂದುವರೆಸುವಂತೆ ಕಾಣುತ್ತಿದೆ. ಈ ಹಿಂದೆ ಅದು ಮಹಾರಾಷ್ಟ್ರದಲ್ಲಿ ಚುನಾವಣೆಗೂ ಮುಂಚೆ  ಶಿವಸೇನೆಯಿಂದ ಮೈತ್ರಿ ಕಡಿದುಕೊಂಡು ಹಿಂದಿನ ಎಲ್ಲ ತಪ್ಪುಗಳಿಗೂ ಅದನ್ನು ಹೊಣೆಯಾಗಿಸಿ ತಾನು ಮಾತ್ರ ಸರ್ವಸಂಪನ್ನ ಪಕ್ಷವೆಂಬಂತೆ ಜನರ ಮುಂದೆ ಹೋಗಿ ನಿಂತು ಸರಳ ಬಹುಮತದತ್ತ ಹೋಗುವಲ್ಲಿ ಯಶಸ್ವಿಯಾಗಿತ್ತು. ಆಡಳಿತ ವಿರೋಧಿ ಅಲೆಯ ಭಯವಿರುವುದರಿಂದ ಪಂಜಾಬಿನಲ್ಲಯೂ ಅದು ಅಕಾಲಿದಳದೊಂದಿಗಿನ ಮೈತ್ರಿಗೆ ತಿಲಾಂಜಲಿ ಬಿಟ್ಟು ಹೊಸ ಮುಖವಾಡದೊಂದಿಗೆ ಚುನಾವಣೆ ಎದುರಿಸುವ ನಿರೀಕ್ಷೆಯಲ್ಲಿರುವಂತೆ ಕಾಣುತ್ತಿದೆ.  ಬಾಜಪ ಹೈಕಮ್ಯಾಂಡಿನ ಈ ನಿರ್ದಾರಕ್ಕೆ ಮೂಲ ಕಾರಣ ಸ್ಥಳೀಯ ಬಾಜಪ ನಾಯಕರ ಮನವಿ ಎಂದು ಸಾರ್ವಜನಿಕರಿಗೆ ತೋರಿಸಲು ಅದು ರಾಜ್ಯ ನಾಯಕರುಗಳು ಈ ಬಗ್ಗೆ ಅಮಿತ್‍ ಷಾಗೆ ಮನವಿ ಮಾಡಿಕೊಂಡಂತಹ ಒಂದು ಪೂರ್ವನಿಯೋಜಿತ ನಾಟಕವನ್ನು ಈಗಾಗಲೇ ಮಾಡಿ ಮುಗಿಸಿದೆ.
ಇವೆಲ್ಲವನ್ನೂ ನೋಡಿದರೆ ಯಾವಾಗಲು ಕಾಂಗ್ರೆಸ್ ಮತ್ತು ಬಾಜಪ ಮೈತ್ರಿಕೂಟದ ನಡುವೆ ನಡೆಯುತ್ತಿದ್ದ ನೇರ ಸ್ಪರ್ದೆಯ ಬದಲಿಗೆ ಈ ಬಾರಿ  ಚತುಷ್ಕೋನ ಸ್ಪರ್ದೆ ನಡೆಯುವ ಸಾದ್ಯತೆ ಹೆಚ್ಚಾಗಿದೆ. ಇದರಿಂದ ಯಾವ ಪಕ್ಷ ಶೇಕಡಾ 30ರಷ್ಟು ಮತ ಪಡೆಯುತ್ತದೆಯೊ ಅದು ದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ. ಆದರೂ ಈ ಬಗ್ಗೆ ನಾವು ಅಧಿಕೃತವಾಗಿ ಏನನ್ನೂ ನುಡಿಯಲು ಸಾದ್ಯವಿಲ್ಲ. ಮತ್ತು ನುಡಿಯಲೂಬಾರದು.

ಜೂನ್ 24, 2016

ಮೇಕಿಂಗ್ ಹಿಸ್ಟರಿ: ಸಾಮಾಜಿಕ ಕುಸಿತ ಮತ್ತು ಅರೆಊಳಿಗಮಾನ್ಯ – ವಸಾಯತು ಆಳ್ವಿಕೆಯಲ್ಲಿನ ಬಿಕ್ಕಟ್ಟು

ashok k r
ಸಾಕೇತ್ ರಾಜನ್ 
ಕನ್ನಡಕ್ಕೆ: ಡಾ. ಅಶೋಕ್. ಕೆ. ಆರ್
24/06/2016

ಕರ್ನಾಟಕವನ್ನಾಳಲು ಜೊತೆಯಾದ ಹೊಸ ಮೈತ್ರಿಕೂಟ ವೇಗವಾಗಿ ಜನರನ್ನು ಬಡತನಕ್ಕೆ ನೂಕಿ ಭೂಮಿಯನ್ನು ಪಾಳು ಬೀಳಿಸಿತು. ತನ್ನಾಳ್ವಿಕೆಯ ಸ್ವಲ್ಪ ಸಮಯದಲ್ಲೇ ಕೆಟ್ಟದಾಗಿ ನಿರ್ವಹಿಸಿದ ಸಾಮಾಜಿಕತೆಯ ಮೇಲೆ ಗೂಡು ಕಟ್ಟಿರುವುದನ್ನರಿತು, ತೀರ್ವ ಬಿಕ್ಕಟ್ಟಿನ ಪರಿಸ್ಥಿತಿಯಿಂದ ತನ್ನನ್ನು ತಾನೇ ಬಚಾಯಿಸಿಕೊಳ್ಳಲು ಪ್ರಯತ್ನಪಟ್ಟಿತು. ಇಂತಹ ಉದಾಹರಣೆಯನ್ನು ಶತಮಾನಗಳುದ್ದಕ್ಕೂ ಕರ್ನಾಟಕದ ಇತಿಹಾಸ ಕಂಡಿರಲಿಲ್ಲ. ವಸಾಹತುಶಾಹಿಯ ಸರಪಳಿಗಳಿಂದ ಬಂಧಿಸಲ್ಪಟ್ಟು ನಾಲ್ಕು ದಶಕಗಳು ಕಳೆಯುವಷ್ಟರಲ್ಲಿ, ಕರ್ನಾಟಕದ ಜನರ ಸಹನೆಯ ಕಟ್ಟೆ ಒಡೆದಿತ್ತು ಮತ್ತು ಶತ್ರುವನ್ನು ಒಡೆದೋಡಿಸಲು ಬೇಕಿದ್ದ ರಾಜಕೀಯ ವಿಸ್ತೀರ್ಣತೆಯನ್ನು ಪಡೆದುಕೊಳ್ಳಲಾರಂಭಿಸಿತ್ತು. 1830ರ ದಶಕದ ಮೊದಲರ್ಧವನ್ನು ಕರ್ನಾಟಕದ ಭವ್ಯ 1857 ಎಂದು ಪರಿಗಣಿಸಬಹುದು.

ನಾವೀಗಾಗಲೇ ನೋಡಿರುವಂತೆ, ಊಳಿಗಮಾನ್ಯತೆ – ವಸಾಹತುಶಾಹಿಯ ಆಳ್ವಿಕೆಯ ಬಿಕ್ಕಟ್ಟು ಆಕ್ರಮಣ ಮಾಡಿದ ಕೆಲವೇ ದಿನಗಳಲ್ಲಿ ಪ್ರಾರಂಭವಾಗಿತ್ತು, ಮೈಸೂರು ಸೈನ್ಯದ ವಿಸರ್ಜನೆಯೊಂದಿಗೆ. ಸಾಮಾಜಿಕ ರಚನೆ ವಸಾಹತುಶಾಹಿಯ ಲೂಟಿಗೆ ಪ್ರತಿಕ್ರಿಯಿಸಲಾರಂಭಿಸಿತ್ತು ಮತ್ತು ಒಂದು ದಶಕದೊಳಗೆ ಪ್ರತಿಕ್ರಿಯೆಗಳು ಆಳ ಪಡೆದುಕೊಳ್ಳಲಾರಂಭಿಸಿತ್ತು (ಗಹನತೆ ಪಡೆದುಕೊಳ್ಳಲಾರಂಭಿಸಿತ್ತು). 1820ರಷ್ಟರಲ್ಲಿ, ಬಿಕ್ಕಟ್ಟು ತೀರ್ವವಾಯಿತು ಮತ್ತು ರಾಜಕೀಯ ಸ್ವರೂಪ ಪಡೆದುಕೊಳ್ಳಲಾರಂಭಿಸಿತ್ತು. 1820ರ ದಶಕದುದ್ದಕ್ಕೂ ಕ್ರಾಂತಿಯ ಕಿಡಿಗಳು ಅಲ್ಲಲ್ಲಿ ನಿಯಮಿತವಾಗಿ ಕಾಣಿಸಿಕೊಳ್ಳುತ್ತಿತ್ತು, ದಶಕ ಮುಗಿಯುವಷ್ಟರಲ್ಲಿ ಎಲ್ಲೆಡೆಯೂ ಕ್ರಾಂತಿಯ ಬೆಂಕಿ ಹೊತ್ತಿಕೊಳ್ಳುವುದರ ಸೂಚನೆಯಾಗಿ.

ವಸಾಹತುಶಾಹಿ ಕರ್ನಾಟಕಕ್ಕೆ ಹತ್ತೊಂಬತ್ತನೇ ಶತಮಾನದು ಆದಿಭಾಗದಲ್ಲಿ ಪರಿಚಯಿಸಿದ ಬಿಕ್ಕಟ್ಟು ಇವತ್ತಿನವರೆಗೂ ಮುಂದುವರೆದಿದೆ. ರಾಜ್ಯಕ್ಕೆ ಅಂಟಿಕೊಂಡ ಈ ಮೊದಲ ಬಿಕ್ಕಟ್ಟು, ಕೆಲವೊಂದು ಸಾಮ್ಯತೆಗಳಿದ್ದಾಗ್ಯೂ, ಭವಿಷ್ಯದಲ್ಲಿ ಇಂಪೀರಿಯಲಿಸಂ ವಿರುದ್ಧ ಏಕೀಕೃತಗೊಂಡ ಹೋರಾಟಗಳಿಗೆ ಹೋಲಿಸಿದರೆ ಬಹಳಷ್ಟು ಭಿನ್ನವಾಗಿತ್ತು. ಈ ಬಿಕ್ಕಟ್ಟಿನ ವೈಶಿಷ್ಟ್ಯತೆಯೆಂದರೆ ಆಕ್ರಮಣಕಾರಿ ದೇಶವಾದ ಬ್ರಿಟನ್ನಿನಲ್ಲಿ ಕೈಗಾರಿಕಾ ಬಂಡವಾಳ ವರ್ತಕ ಬಂಡವಾಳಕ್ಕಿಂತ ಮೇಲುಗೈ ಪಡೆಯುವ ಪ್ರಕ್ರಿಯೆಯಿನ್ನೂ ನಡೆದಿರುವಾಗಲೇ ಕರ್ನಾಟಕದಲ್ಲಿ ವಸಾಹತುಶಾಹಿಯ ಸುದೀರ್ಘ ಇನ್ನಿಂಗ್ಸ್ ಪ್ರಾರಂಭವಾಗಿಬಿಟ್ಟಿತ್ತು. ಇದರಿಂದಾಗಿ ವಿವಿಧ ಬಗೆಯ ಲೂಟಿಗಳು ಮತ್ತು ಆ ಲೂಟಿಗೆ ಪ್ರತಿಕ್ರಿಯೆಯಾಗಿ ಬಿಕ್ಕಟ್ಟಿನ ಉದ್ಭವವಾಗುತ್ತಿತ್ತು; ಬಂಡವಾಳದಲ್ಲಿ ಬದಲಾವಣೆಯಾದಾಗ ಅಥವಾ ಮತ್ತೊಂದು ಬಗೆಯಲ್ಲಿ ಹೇಳುವುದಾದರೆ ಕೊಳ್ಳೆ ಹೊಡೆಯುವವರ ಸಾಮಾಜಿಕ ಅಸ್ತಿತ್ವದಲ್ಲಿ ಬದಲಾವಣೆಯಾದಾಗ ಬಿಕ್ಕಟ್ಟಿನ ರೂಪವೂ ಬದಲಾಗುತ್ತಿತ್ತು.

ಕರ್ನಾಟಕಕ್ಕೆ ಹೊರೆಯಾದ ವಸಾಹತುಶಾಹಿ ಮಾಡಿದ ಒಂದು ದೊಡ್ಡ ವಿಧ್ವಂಸಕ ಕೃತ್ಯವೆಂದರೆ ಕೃಷಿ ಕಂದಾಯ ಪದ್ಧತಿಯನ್ನು ಬಹಳ ಅಚ್ಚುಕಟ್ಟಾಗಿ ಮಾಡಿಬಿಟ್ಟಿದ್ದು. ಆಕ್ರಮಿಸಿದ ಮೊದಲ ಹಲವು ದಶಕಗಳಲ್ಲಿ ಈ ತೆರಿಗೆ ವಸಾಹತಿಗೆ ದೊಡ್ಡ ಮಟ್ಟದ ಆದಾಯ ಮೂಲವಾಗಿಬಿಟ್ಟಿತ್ತು.

ಅ. ಕೃಷಿ ಕಂದಾಯ ಮತ್ತದರ ಶೋಷಕ ಶರಾತ್ (Revenue farming and its oppressive sharat)

ಕರಾವಳಿ ಮತ್ತು ಮಲೆನಾಡು ಭಾಗದಿಂದ ಸಾಂಬಾರ ಪದಾರ್ಥ ಹಾಗು ಉತ್ತರದ ಜಿಲ್ಲೆಗಳಿಂದ ಹತ್ತಿಯನ್ನು ತೆಗೆದುಕೊಳ್ಳುವುದನ್ನು ಬಿಟ್ಟರೆ ಬ್ರಿಟೀಷರು ಮೊದಲ ಐದು ದಶಕ ಕೃಷಿಯ ಬಗ್ಗೆ ತುಂಬಾ ಕಡಿಮೆ ಆಸಕ್ತಿ ತೋರಿಸುತ್ತಿತ್ತು. ಆದರೂ ರಾಜ್ಯವನ್ನಾಕ್ರಮಿಸಿದ ಕೆಲವೇ ವರ್ಷಗಳಲ್ಲಿ ಈ ಭಾಗದ ಕೃಷಿಯನ್ನಷ್ಟೇ ಅಲ್ಲದೇ ನಮ್ಮ ಭೂಮಿಯ ಇಂಚಿಂಚು ಭೂಮಿಯಲ್ಲೂ ಕೃಷಿಯನ್ನು ಹಾಳುಗೆಡವಿತು. ವಸಾಹತುಶಾಹಿ ಕೃಷಿಯನ್ನು ಹಾಳುಗೆಡವಿದ್ದಕ್ಕೆ ಮುಖ್ಯ ಕಾರಣ ಇಂಬಳದಂತೆ ರೈತರ ಶಕ್ತಿಯನ್ನೆಲ್ಲ ಹೀರಿ ಬಿಸಾಕಿದ ಕಂದಾಯ ಆಡಳಿತ. ಲಾಭವನ್ನು ಎಷ್ಟು ಕಾರುಣ್ಯರಹಿತವಾಗಿ ಹೀರಿಬಿಡಲಾಗುತ್ತಿತ್ತೆಂದರೆ ಮತ್ತೆ ಕೃಷಿ ಮಾಡಲು ಬಂಡವಾಳವೇ ಇರುತ್ತಿರಲಿಲ್ಲ. ಲಾಭದಾಯಕ ಕೃಷಿಯನ್ನು ಅಸ್ತಿತ್ವ ಉಳಿಸಿಕೊಳ್ಳಲು ಏದುಸಿರು ಬಿಡುವ ಕೃಷಿಯನ್ನಾಗಿ ಮಾಡಿಬಿಡಲಾಯಿತು ಮತ್ತಲ್ಲಿಂದ ಅದು ಸಂಪೂರ್ಣ ನಾಶದ ಹಾದಿ ಹಿಡಿಯಿತು. ವಸಾಹತುಶಾಹಿಯೊಂದಿಗೆ ರೈತ ಸಮೂಹಕ್ಕಾದ ಮೊದಲ ಕಹಿ ಅನುಭವವೆಂದರೆ ಬ್ರಿಟೀಷರ ಪರಾವಲಂಬಿ ಕೃಷಿ ಕಂದಾಯ ಪದ್ಧತಿ. ಈ ಲೂಟಿ ಕಂಪನಿಗೆ ಎಷ್ಟೊಂದು ಉಪಯುಕ್ತವಾಗಿತ್ತೆಂದರೆ, ಭೂಮಿಗಾಕುವ ತೆರಿಗೆಯಿಂದ ಕಂಪನಿಗೆ ಬರುವ ಆದಾಯ ಉಳಿದೆಲ್ಲ ಆದಾಯ ಮೂಲಕ್ಕಿಂತಲೂ ಅಧಿಕವಾಗಿತ್ತು ಮತ್ತು ಪರಿಚಯಿಸಿದ ದಶಕದಲ್ಲಿ ವಸಾಹತು ಪ್ರದೇಶದಿಂದ ಬ್ರಿಟಿಷರಿಗೆ ಸಿಗುತ್ತಿದ್ದ ಆದಾಯ ಮೂಲವಾಗಿತ್ತು. ಈ ಕೃಷಿ ಕಂದಾಯದ ಅಗಾಧತೆಯನ್ನು ನಾವು ಗಮನಿಸೋಣ, ಅದರ ವಿವಿಧ ರೂಪ ಮತ್ತು ಈ ಲೂಟಿಯಲ್ಲಿದ್ದ ಕ್ರೌರ್ಯತೆಯೊಂದಿಗೆ; ಇದನ್ನು ಅರಿಯುವ ಮೂಲಕ ಊಳಿಗಮಾನ್ಯ – ವಸಾಹತು ಆಳ್ವಿಕೆ ಮೂಡಿಸಿದ ಬಿಕ್ಕಟ್ಟಿನ ಸ್ವರೂಪಗಳನ್ನು ತಿಳಿಯಬಹುದು. 

ನಾವೀಗಾಗಲೇ ಗಮನಿಸಿರುವಂತೆ, ಸಹಕಾರಿ ಒಪ್ಪಂದಕ್ಕೆ ಸಹಿ ಹಾಕುವುದರ ಮೂಲಕ ತಮಗೆ ಶರಣಾದ ರಾಜರು ಮತ್ತು ಪಾಳೇಗಾರರಿಗೆ ಬ್ರಿಟೀಷರು ಹಾಕಿದ ಮೊದಲ ಶರತ್ತು ವಾರ್ಷಿಕ ಕಾಣ್ಕೆಯ ಕುರಿತಾಗಿತ್ತು. ವಾರ್ಷಿಕ ಕಾಣ್ಕೆಯನ್ನು ತಿಂಗಳ ಕಂತುಗಳಲ್ಲಿ ಬ್ರಿಟೀಷ್ ಸಾಮ್ರಾಜ್ಯಕ್ಕೆ ಉಡುಗೊರೆಯಂತೆ ನೀಡಬೇಕಿತ್ತು. ತಮ್ಮ ನೇರ ಆಡಳಿತವಿದ್ದ ಪ್ರದೇಶಗಳಲ್ಲಿ ಈ ಮೊತ್ತವನ್ನು ತಮ್ಮದೇ ತೆರಿಗೆ ಪದ್ಧತಿಯಿಂದ ಪಡೆಯುತ್ತಿದ್ದರು; ಅಧಿಕಾರಶಾಹಿಗೆ ಇಷ್ಟು ಮೊತ್ತವನ್ನು ಸಂಗ್ರಹಿಸಬೇಕೆಂದು ಗುರಿ ನೀಡಲಾಗುತ್ತಿತ್ತು. ಕರ್ನಾಟಕದಲ್ಲಿದ್ದ ಈ ಹೆಚ್ಚಿನ ತೆರಿಗೆ ಪದ್ಧತಿಯ ಕುರಿತು ಸೆಬಾಸ್ಟಿಯನ್ ಜೋಸೆಫ್ ತಿಳಿಸುತ್ತಾರೆ: “1799ರ ಸಹಕಾರಿ ಒಪ್ಪಂದದ ಎರಡನೇ ಆರ್ಟಿಕಲ್ಲಿನನುಸಾರ ಮೈಸೂರಿನ ಮೇಲೆ 24.5 ಲಕ್ಷ ರುಪಾಯಿಗಳಷ್ಟು ಕಪ್ಪ ಕಾಣ್ಕೆಯನ್ನು ವಿಧಿಸಲಾಯಿತು…ನಂತರ 1881ರಲ್ಲಿ ಇದನ್ನು ಹತ್ತೂವರೆ ಲಕ್ಷದಷ್ಟು ಏರಿಸಿ, ಒಟ್ಟು ಮೂವತ್ತೈದು ಲಕ್ಷವನ್ನು ಮುಂದಿನ 32 ವರುಷಗಳವರೆಗೆ ನಿಯಮಿತವಾಗಿ ಪಡೆಯಲಾಯಿತು, 1896ರಿಂದ 1928ರವರೆಗೆ. 1928ರಲ್ಲಿ ಮತ್ತೆ ಈ ಮೊತ್ತವನ್ನು 24.5 ಲಕ್ಷ ರುಪಾಯಿಗಳಿಗೆ ಇಳಿಸಲಾಯಿತು, ಮೂಲ ಒಪ್ಪಂದದಲ್ಲಿದ್ದಂತೆ. ಈ ಪದ್ಧತಿ 136 ವರುಷಗಳಿಗಿಂತ ಹೆಚ್ಚು ಮುಂದುವರಿಯಿತು…. ಮೈಸೂರಿನ ಈ ಕಾಣ್ಕೆ ವಸಾಹತಿಗೆ ಕಾಣ್ಕೆ ನೀಡುತ್ತಿದ್ದ 198 ರಾಜ್ಯಗಳ ಒಟ್ಟು ಮೊತ್ತದ 50 ಪರ್ಸೆಂಟಿನಷ್ಟಿತ್ತು.” (208) ಮೈಸೂರು ಚಿನ್ನದ ಮೊಟ್ಟೆ ಇಡುವ ಕೋಳಿಯಾಗಿಬಿಟ್ಟಿತ್ತು.

ಈ ಕಾಣ್ಕೆ ಎಷ್ಟು ಅಗಾಧವಾಗಿತ್ತು ಎಂದರಿವಾಗಲು ಸಾಮ್ರಾಜ್ಯದ ತೆರಿಗೆ ಸಂಗ್ರಹದ ಬಗ್ಗೆ ಗಮನ ಹರಿಸಬೇಕು. 1809-10 ರಲ್ಲಿ ಸಂಗ್ರಹವಾದ ತೆರಿಗೆ 28,24,646 ರುಪಾಯಿ, 1811-12ರಲ್ಲಿ ತೆರಿಗೆ ಸಂಗ್ರಹ ಹೆಚ್ಚಿ 37,18,633 ರುಪಾಯಿಗೆ ತಲುಪಿದರೆ ಮತ್ತೆ 1825-26ರಷ್ಟೊತ್ತಿಗೆ 28,64,950 ರುಪಾಯಿಗಳಿಗೆ ನಿಧಾನಕ್ಕೆ ಕುಸಿಯಿತು. (209)

ಹಾಗಾಗಿ ಕೆಲವೊಮ್ಮೆ ಸಂಗ್ರಹವಾದ ತೆರಿಗೆಯ ಮೊತ್ತ ಬ್ರಿಟೀಷರಿಗೆ ಕೊಡಬೇಕಾದ ಕಾಣ್ಕೆಯ ಮೊತ್ತ ಮತ್ತು ಕಮಿಷನ್ ರೂಪದಲ್ಲಿ ಕೈಗೊಂಬೆ ರಾಜ ಮತ್ತವನ ದಿವಾನನಿಗೆ ಸಿಗುತ್ತಿದ್ದ ಮೊತ್ತಕ್ಕಿಂತಲೂ ಕಡಿಮೆಯಿರುತ್ತಿತ್ತು. 

ಆದಾಗ್ಯೂ, 1831-32ರಲ್ಲಿ, ತೆರಿಗೆ ಸಂಗ್ರಹ 43,97,035 ರುಪಾಯಿಗೆ ಏರಿಕೆಯಾಯಿತು ಮತ್ತು 1848-49ರಲ್ಲಿ ಹೆಚ್ಚು ಕಡಿಮೆ ದ್ವಿಗುಣವಾಗಿ 80,08,339 ರುಪಾಯಿ ಸಂಗ್ರಹವಾಯಿತು. ಮೂರನೇ ದಶಕದವರೆಗಿನ ತೆರಿಗೆ ಸಂಗ್ರಹದ ವಿವರವನ್ನು ಜಾಳು ಜಾಳಾದ ಲೆಕ್ಕಾಚಾರ ಎಂದು ತಪ್ಪು ತಿಳುವಳಿಕೆ ಬರಬಾರದು. ತಪ್ಪು ತಿಳುವಳಿಕೆಗೆ ವ್ಯತಿರಿಕ್ತವಾಗಿತ್ತು ಎನ್ನುವುದಕ್ಕೆ ಸಾಕಷ್ಟು ಸಾಕ್ಷ್ಯಗಳಿವೆ. ಟಿಪ್ಪುವಿನ ತೆರಿಗೆ ಪದ್ಧತಿಯನ್ನು ನಿಂದಿಸುವುದಕ್ಕೆ ಮೈಸೂರು ಇತಿಹಾಸದ ಮೇಲಿನ ತನ್ನ ಮೂರು ಸಂಪುಟಗಳನ್ನು ಸಮರ್ಥವಾಗಿ ಉಪಯೋಗಿಸಿಕೊಂಡ ವಿಲ್ಕ್ಸ್ ತನ್ನ ವರದಿಗಳಲ್ಲಿ ಬ್ರಿಟೀಷರ ಲೂಟಿ ಮಾಡಿದ ಅಂಕಿಸಂಖೈಗಳ ಬಗ್ಗೆ ವಿವರ ಒದಗಿಸುತ್ತಾನೆ.

1792ರಲ್ಲಿ, ಟಿಪ್ಪು ಸುಲ್ತಾನನ ಆಳ್ವಿಕೆಯಿದ್ದ ಕಾಲದಲ್ಲಿ, ಮುಂದಿನ ದಿನಗಳಲ್ಲಿ ಮೈಸೂರು ಸಂಸ್ಥಾನವನ್ನು ಸೇರಿದ ಜಿಲ್ಲೆಗಳು ಒಟ್ಟು 14,12,533 ಕಾಂತರೇಯ ಪಗೋಡಾಗಳನ್ನು ತೆರಿಗೆ ರೂಪದಲ್ಲಿ ನೀಡಿತ್ತು. 1802-03ನೇ ಸಾಲಿನಲ್ಲಿ ಇದು ದ್ವಿಗುಣವಾಗಿ 25,41,571 ಕಾಂತರೇಯ ಪಗೋಡಾಗಳಷ್ಟಾಗಿತ್ತು. (210) ಈ ಹೆಚ್ಚಳ ನಡೆದ ಕಾಲದಲ್ಲಿ ಆರ್ಥಿಕತೆ ದುಸ್ಥಿತಿಯಲ್ಲಿತ್ತು ಮತ್ತು ಉತ್ಪಾದನೆ ಗಣನೀಯವಾಗಿ ಕುಸಿದುಹೋಗಿತ್ತು.

ರೈತರನ್ನು ಎಷ್ಟು ಸುಲಿಗೆ ಮಾಡಲಾಗಿತ್ತೆಂದರೆ 1811ರಲ್ಲಿ ಪೂರ್ಣಯ್ಯ ಬ್ರಿಟೀಷರ ಸೇವೆಯಿಂದ ನಿವೃತ್ತಿಯೊಂದುವಷ್ಟರಲ್ಲಿ ರಾಜ್ಯದ ಬೊಕ್ಕಸದಲ್ಲಿ ಎರಡು ಕೋಟಿ ರುಪಾಯಿಯಷ್ಟು ಅಧಿಕ ಹಣ ಸಂಗ್ರಹವಾಗಿತ್ತು! ಇದರ ಬಗ್ಗೆ ಲಿವಿಸ್ ರೈಸ್ ಹೇಳುತ್ತಾನೆ: “ಪೂರ್ಣಯ್ಯನವರ ಆಡಳಿತ ವೈಖರಿ ನಿರಂಕುಶವಾಗಿತ್ತು ಅನುಮಾನವಿಲ್ಲ; ಮತ್ತು, ಫೈನಾನ್ಶಿಯರ್ ಆಗಿ, ಅಧಿಕ ಆದಾಯವನ್ನು ಸಂಗ್ರಹಿಸುವುದು ಅವರ ಗುರಿಯಾಗಿತ್ತು. ಜನರ ಸಂಪನ್ಮೂಲಕ್ಕೆ ಕೈಇಟ್ಟು ರಾಜ್ಯದ ವೆಚ್ಚದಲ್ಲಿ ಖಜಾನೆಯನ್ನು ಭರ್ತಿ ಮಾಡಿದ್ದಾರಲ್ವಾ ಎಂದು ಪ್ರಶ್ನಿಸಬಹುದು. 1811ರಷ್ಟರಲ್ಲಿ ಸಾರ್ವಜನಿಕ ಗೋರಿಗಳಲ್ಲಿ ಎರಡು ಕೋಟಿ ರುಪಾಯಿಗಳನ್ನು ಕೂಡಿಹಾಕಿದ್ದರು”. (211)

ಎಂ.ಹೆಚ್.ಗೋಪಾಲ್ ಹೇಳುತ್ತಾರೆ: “ಪೂರ್ಣಯ್ಯನವರ ಆಡಳಿತ ಒಂದು ದೊಡ್ಡ ಟೀಕೆಗೆ ಒಳಗಾಗಿದೆ. 1815ರಷ್ಟು ಮೊದಲೇ ಮಹಾರಾಜ ಬರೆಯುತ್ತಾರೆ: ‘ಮಾಜಿ ದಿವಾನ್ ಪೂರ್ಣಯ್ಯ, ತೆರಿಗೆ ಸಂಗ್ರಹದಲ್ಲಷ್ಟೇ ಪ್ರತಿಭೆ ಹೊಂದಿದ್ದ ಪೂರ್ಣಯ್ಯ, ಹಣವನ್ನು ಸಂಗ್ರಹಿಸುವುದರೆಡೆಗೇ ಗಮನ ಹರಿಸಿದ್ದು ಆಡಳಿತದ ಈ ವಿಭಾಗದಲ್ಲಿ ತಮಗಿರುವ ಆಸಕ್ತಿಯನ್ನು ಪ್ರದರ್ಶಿಸುವ ಸಲುವಾಗಿ. ಹನ್ನೆರಡು ವರುಷಗಳಲ್ಲಿ ಪ್ರತ್ಯೇಕ ನಿಧಿಯನ್ನೇ ಇದಕ್ಕಾಗಿ ಸ್ಥಾಪಿಸಿದ್ದರು. ಆದರೆ ಪೂರ್ಣಯ್ಯ ಜನರ ವಿಚಾರಗಳೆಡೆಗೆ ನಿರಾಸಕ್ತರಾಗಿದ್ದರು ಮತ್ತು ಪ್ರಾಂತ್ಯದ ಜನರನ್ನು ವಿಪರೀತದ ಕಷ್ಟ ನಷ್ಟಗಳಿಗೆ ದೂಡಿಬಿಟ್ಟರು’. ಈ ಟೀಕೆಯನ್ನು 1832-33ರಲ್ಲಿ ಮೈಸೂರಿನ ದಂಗೆಯ ಬಗ್ಗೆ ತನಿಖೆ ನಡೆಸಿದ ಸಮಿತಿಯೂ ಪ್ರತಿಧ್ವನಿಸಿತು. ಸಮಿತಿಯ ವರದಿ ಹೇಳುತ್ತದೆ: ‘ದೇಶದ ಸಂಪತ್ತು ಪೂರ್ಣಯ್ಯನವರ ಆಡಳಿತದಲ್ಲಿ ಹೆಚ್ಚಾಯಿತೆಂದು ತೋರುವುದಿಲ್ಲ. ತೂಕದ ಹೇಳಿಕೆಯೆಂದು ಪರಿಗಣಸಿಸಬಹುದಾದ ಒಬ್ಬ ಸಾಕ್ಷಿದಾರ ಸಮಿತಿಗೆ, ಈ ಅವಧಿಯಲ್ಲಿ ರೈತರ ಪರಿಸ್ಥಿತಿ ತೀರ ಹದಗೆಟ್ಟು ಹೋಯಿತೆಂದು ತಿಳಿಸುತ್ತಾನೆ. ಅವನ ತೀಕ್ಷ್ಣ ಮಾತುಗಳನ್ನೇ ಉಲ್ಲೇಖಿಸುವುದಾದರೆ, ‘ಹೆಚ್ಚಿನ ಸಂಖೈಯ ರೈತರು ಈ ಆಡಳಿತದ ಶುರುವಿನಲ್ಲಿ ಆರಾಮಾಗೇ ಇದ್ದರು ಮತ್ತು ಅವರಲ್ಲಿ ಅರ್ಧದಷ್ಟು ಮಂದಿ ಆಡಳಿತಾವಧಿ ಮುಗಿಯುವಷ್ಟರಲ್ಲಿ ಬಡತನದ ಹತ್ತಿರಕ್ಕೆ ತಳ್ಳಲ್ಪಟ್ಟಿದ್ದರು’.” (212)

ಈ ಸುಲಿಯುವಿಕೆಯ ಮೊದಲ ನೋಟಗಳು ಬುಚನನ್ನಿನ ವಾಸದ ಸಮಯದಲ್ಲೇ ಕಾಣಿಸಲಾರಂಭಿಸಿತ್ತು. ಅಸ್ತಿತ್ವಕ್ಕೆ ಬಂದ ಕೆಲವು ತಿಂಗಳುಗಳಲ್ಲೇ ಕೈಗೊಂಬೆ ಸರಕಾರದ ಕುರಿತು ರೈತರ ಮನಸ್ಥಿತಿ ಬದಲಾಗಿದ್ದನ್ನು ಬುಚನನ್ ಗಮನಿಸುತ್ತಾನೆ. ಇದು ತ್ರಿಮೂರ್ತಿ ಆಳ್ವಿಕೆ ಮುಂದಿನ ದಿನಗಳಲ್ಲಿ ಎದುರಿಸಬೇಕಾದ ಸನ್ನಿವೇಶಗಳನ್ನು ಸೂಚಿಸುತ್ತಿತ್ತು. ಕೋಲಾರದ ಬೆತ್ತಮಂಗಲದ ರೈತರ ಅಭಿಪ್ರಾಯಗಳನ್ನು ದಾಖಲಿಸಿದ ಬುಚನನ್ ಹೇಳುತ್ತಾನೆ “ಇಲ್ಲಿನ ಜನರು….. ಮೈಸೂರು ಸರಕಾರದ ಅಮಲ್ದಾರರು ಟಿಪ್ಪು ಆಡಳಿತಾವಧಿಯಲ್ಲಿ ತೆಗೆದುಕೊಳ್ಳುತ್ತಿದ್ದ ಹಣಕ್ಕಿಂತ ಹೆಚ್ಚು ತೆಗೆದುಕೊಳ್ಳುತ್ತಾರೆ ಎಂದು ದೂರು ನೀಡಿದರು….” (213)

ಒಂದೆಡೆ ಕೃಷ್ಣರಾಜ ಒಡೆಯರ್, ಮತ್ತೊಂದೆಡೆ ಬ್ರಿಟೀಷ್ ಆಡಳಿತ ಇಷ್ಟೊತ್ತಿಗಾಗಲೇ ಸತ್ತು ಹೋಗಿದ್ದ ಪೂರ್ಣಯ್ಯನವರನ್ನು ದುಷ್ಟನೆಂದು ಚಿತ್ರಿಸಲು ಪ್ರಯತ್ನಿಸುತ್ತಿತ್ತು. ಆದರೆ ಪೂರ್ಣಯ್ಯನವರ ಕುಟಿಲತೆಯನ್ನು ಮೌನದಿಂದ ಒಪ್ಪಿ ಮತ್ತು ಬ್ರಿಟೀಷರು ಆ ಕುಟಿಲ ನೀತಿಗಳನ್ನು ಮೆಚ್ಚಿ ಪ್ರೋತ್ಸಾಹಿಸುತ್ತಿದ್ದರು!

ಕೃಷಿ ಕಂದಾಯ ರೈತರ ಮೇಲೆ ಗಮನ ಕೇಂದ್ರೀಕರಿಸಿತು. ಕಾಲ ಸರಿದಂತೆ ಇದರ ವ್ಯಾಪ್ತಿ ಇನ್ನುಳಿದ ಜನರನ್ನೂ ಒಳಗೊಂಡಿತು. ಯಾವ ಯಾವ ವಸ್ತುಗಳ ಮೇಲೆ ಬ್ರಿಟೀಷರು ತೆರಿಗೆ ವಿಧಿಸಿದರೆಂದರೆ, ಬ್ರಿಟೀಷರ ಈ ತೆರಿಗೆ ಪದ್ಧತಿ ಹದಿನೇಳನೇ ಶತಮಾನದ ಕೊನೆಯ ಭಾಗದಲ್ಲಿ ಚಿಕ್ಕದೇವರಾಜ ಒಡೆಯರರ ಮೋಸದ ತೆರಿಗೆಯನ್ನೂ ಮೀರಿಸಲಾರಂಭಿಸಿತ್ತು. ರೈಸ್ ಪ್ರಕಾರ ಮೊದಲ ಮೂರು ದಶಕಗಳಲ್ಲಿ “769 ಸಣ್ಣಪುಟ್ಟ ವಸ್ತುಗಳಿಗೂ ತೆರಿಗೆ ಹೇರಲಾಯಿತು”. “ಇದರಲ್ಲಿ ಮದುವೆಗೆ, ಮಗು ಹುಟ್ಟಿದ್ದಕ್ಕೆ, ಅದರ ನಾಮಕರಣಕ್ಕೆ ಮತ್ತು ತಲೆ ಬೋಳಿಸಿದ್ದಕ್ಕೂ ತೆರಿಗೆ ವಿಧಿಸಲಾಯಿತು. ಒಂದು ಹಳ್ಳಿಯಲ್ಲಿ, ಅಲ್ಲಿನ ಜನರ ಪೂರ್ವಿಕರು ಪಾಳೇಗಾರರ ಕುದುರೆಯನ್ನು ಪತ್ತೆ ಹಚ್ಚಿರಲಿಲ್ಲ ಎಂಬ ಕಾರಣಕ್ಕೆ ತೆರಿಗೆ ವಿಧಿಸಲಾಗಿತ್ತು. ನಗರದ ಒಂದು ನಿರ್ದಿಷ್ಟ ಸ್ಥಳವನ್ನು ದಾಟುವ ಜನರು ತಮ್ಮ ಕೈಗಳನ್ನು ದೇಹಕ್ಕಂಟಿಕೊಂಡಂತೆ ಇಟ್ಟುಕೊಂಡು ನಡೆಯದಿದ್ದರೆ ತೆರಿಗೆ ಕಟ್ಟಬೇಕಿತ್ತು. ಈ ಎಲ್ಲಾ ತೆರಿಗೆಗಳ ಬಗ್ಗೆಯೂ ಅಧಿಕೃತವಾಗಿ ಸರಕಾರದ ದಾಖಲೆಗಳಲ್ಲಿ ರಾಜ್ಯದ ಸಂಪನ್ಮೂಲದ ಭಾಗವೆಂದು ನಮೂದಾಗಿದೆ”. (214)

ಹೈದರ್ ಮತ್ತು ಟಿಪ್ಪುವಿನ ಕಾಲದಲ್ಲಿ ರೈತರು ಬೆಳೆದ ಬೆಳೆಯ ಆರನೇ ಒಂದಂಶದಷ್ಟು ತೆರಿಗೆ ರೂಪದಲ್ಲಿ ಸರಕಾರಕ್ಕೆ ಪಾವತಿಯಾಗುತ್ತಿದ್ದುದನ್ನು ನಾವು ನೋಡಿದ್ದೇವೆ; ಎಂ.ಹೆಚ್.ಗೋಪಾಲ್ ಕೈಗೊಂಬೆ ಸರಕಾರದ ಆಳ್ವಿಕೆಯಲ್ಲಿನ ತೆರಿಗೆಯನ್ನು ಅಂದಾಜಿಸುತ್ತಾ “ಒಟ್ಟು ಉತ್ಪನ್ನದ ಐದನೇ ಎರಡರಷ್ಟು ಭಾಗ ಸರಕಾರದ ಪಾಲಾಗುತ್ತಿತ್ತು” ಎಂದು ತಿಳಿಸುತ್ತಾರೆ. (215)

ಮದ್ರಾಸಿನ ಗವರ್ನರ್ ಲಷಿಂಗ್ಟನ್ ತಮ್ಮ ಟಿಪ್ಪಣಿಯೊಂದರಲ್ಲಿ ಮೈಸೂರಿನ ಬಗ್ಗೆ ಈ ರೀತಿಯಾಗಿ ಬರೆದುಕೊಂಡಿದ್ದಾರೆ: “ಬೇರೆ ಸರಕಾರವನ್ನು ರಚಿಸಿಕೊಂಡ ದೇಶಗಳು ವಿಭಜನೆಯ ಸಮಯದಲ್ಲಿ ಮಾಡಿಕೊಂಡ ಒಪ್ಪಂದದಲ್ಲಿದ್ದ ಆದಾಯಕ್ಕಿಂತ ದ್ವಿಗುಣದಷ್ಟು ಆದಾಯವನ್ನು ಪಡೆದುಕೊಳ್ಳಲಾರಂಭಿಸಿದವು”. (216) 1791ರಲ್ಲಿ ಟಿಪ್ಪು ಸುಲ್ತಾನನ ಆಡಳಿತಾವಧಿಯಲ್ಲಿ ಮೈಸೂರು ಸರಕಾರದ ಒಟ್ಟು ತೆರಿಗೆ ಆದಾಯ 42 ಲಕ್ಷ ರುಪಾಯಿಗಳಷ್ಟಿದ್ದರೆ, 1809ರಷ್ಟರಲ್ಲಿ ದ್ವಿಗುಣಗೊಂಡು 93 ಲಕ್ಷ ರುಪಾಯಿಗಳಾಯಿತು; ನಗರದ ದಂಗೆ ಮತ್ತು ಆಡಳಿತ ಯಂತ್ರದ ಕುಸಿತದ ಕಾರಣದಿಂದ 1831ರಲ್ಲಿ ಇದು ಕುಸಿತಗೊಂಡು 76ಲಕ್ಷ ರುಪಾಯಿಗಳಷ್ಟಾಯಿತು. (217)

ಆರ್.ಡಿ.ಚೋಕ್ಸಿ ಹೇಳುತ್ತಾರೆ: “ವಿವಿಧ ತೆರಿಗೆಗಳ ಹೊರತಾಗಿ, ಅದರಲ್ಲೂ ದಕ್ಷಿಣ ಕೆನರಾದಲ್ಲಿ, ಸರಕಾರ ಒಟ್ಟು ಉತ್ಪನ್ನದ ಮೂವತ್ತರಿಂದ ಐವತ್ತು ಪರ್ಸೆಂಟಿನಷ್ಟನ್ನು ತೆಗೆದುಕೊಂಡುಬಿಡುತ್ತಿತ್ತು”. (218)

ಆಡಳಿತದ ಮೊದಲ ಹಂತದಲ್ಲಿ ತುಳುನಾಡಿನ ಮೇಲೆ ವಸಾಹತುಶಾಹಿ ಮಾಡಿದ ಪರಿಣಾಮಗಳ ಬಗ್ಗೆ ಶ್ಯಾಮ್ ಭಟ್ ವಿವರಣಾತ್ಮಕ ಚಿತ್ರಣವನ್ನು ಕೊಡುತ್ತಾರೆ. ಅವರು ಹೇಳುತ್ತಾರೆ: “ಭೂ ಕಂದಾಯ ಆಡಳಿತವನ್ನು ಅಭ್ಯಸಿಸಿದ ನಂತರ ತಿಳಿದು ಬರುವ ಅಂಶವೆಂದರೆ ಸರಕಾರಕ್ಕೆ ಬರುತ್ತಿದ್ದ ಆದಾಯದ ಪಾಲು ಆಡಳಿತಗಾರರು ಅಂದಾಜಿಸಿದ್ದಕ್ಕಿಂತ ಹೆಚ್ಚಿರುತ್ತಿತ್ತು. ಭೂ ಕಂದಾಯವನ್ನು ಎಷ್ಟು ಸಾಧ್ಯವೋ ಅಷ್ಟು ಗರಿಷ್ಟ ಮಟ್ಟದಲ್ಲಿ ಇಡುವುದು ಬ್ರಿಟೀಷ್ ರಾಜ್ ವ್ಯವಸ್ಥೆ ಮುಂದುವರಿಯಲಿದ್ದ ಒಂದು ಶಕ್ತಿಯಾಗಿದ್ದನ್ನು ದಕ್ಷಿಣ ಕೆನರಾದಲ್ಲಿ ಕಾಣಬಹುದೆಂದು ಇರ್ಫಾನ್ ಹಬೀಬ್ ಗುರುತಿಸಿದ್ದರು”. (219)

ಅದೇ ಸಮಯದಲ್ಲಿ ಕರಾವಳಿಯಲ್ಲಿ ನಡೆಯುತ್ತಿದ್ದ ಕಂದಾಯ ಕೃಷಿಯ ಬಗ್ಗೆ ತಿಳಿಸುತ್ತ ಅವರೆನ್ನುತ್ತಾರೆ: “ಭೂ ಕಂದಾಯದಲ್ಲಾದ ಹೆಚ್ಚಳಕ್ಕೆ ಸರಕಾರ ಪಡೆಯುತ್ತಿದ್ದ ಭಾಗದಲ್ಲಾದ ಹೆಚ್ಚಳವು ಕಾರಣವೇ ಹೊರತು ಕರಾಬು ಭೂಮಿಯಲ್ಲಿ ಕೃಷಿ ಮಾಡಿದ್ದಾಗಲೀ ಅಥವಾ ಇಡೀ ಪ್ರದೇಶ ಸಮೃದ್ಧಿಯಾಗಿದ್ದಾಗಲೀ ಕಾರಣವಲ್ಲ.

ರೈತನೊಬ್ಬ ತನ್ನ ಕಂದಾಯ ಬಾಕಿಯನ್ನು ನಾಲ್ಕೈದು ವರುಷಗಳಾದರೂ ಕಟ್ಟದೇ ಇದ್ದ ಪಕ್ಷದಲ್ಲಿ ಅವನ ಆಸ್ತಿಯನ್ನು ಸರಕಾರ ಹರಾಜು ಹಾಕುತ್ತಿತ್ತು, ಬರಬೇಕಿದ್ದ ಬಾಕಿಯನ್ನು ವಸೂಲು ಮಾಡುವ ಸಲುವಾಗಿ. ಆದಾಗ್ಯೂ, ಬಾಕಿ ಮೊತ್ತ ತುಂಬ ಕಡಿಮೆಯಾಗಿದ್ದರೆ, ಅಧಿಕಾರಿಗಳು ಆ ಬಾಕಿಯನ್ನು ಮನ್ನಾ ಮಾಡುತ್ತಿದ್ದರು. ಈ ರೀತಿಯಾಗಿ ರೈತರ ಬಾಕಿಯನ್ನು ಮನ್ನಾ ಮಾಡುವುದರಲ್ಲಿ ಒಂದು ಪ್ರಮುಖ ದೋಷವಿತ್ತು. ಬಾಕಿ ಮನ್ನಾ ಗುತ್ತಿಗೆ ಪಡೆದು ಕೃಷಿ ಮಾಡುತ್ತಿದ್ದವರಿಗೆ ಅನ್ವಯವಾಗದೆ ಭೂಮಾಲೀಕರಿಗಷ್ಟೇ ಅನ್ವಯಿಸುತ್ತಿತ್ತು. ಸ್ವತಃ ಕೃಷಿ ನಡೆಸದೆ ಗುತ್ತಿಗೆ ಕೊಟ್ಟ ಭೂಮಾಲೀಕರಿಗೂ ಸರಕಾರ ಬಾಕಿ ಮನ್ನಾ ಮಾಡುತ್ತಿತ್ತು. ಹಾಗಾಗಿ ಇದು ನಿಜವಾಗಿ ಕೃಷಿ ಮಾಡುತ್ತಿದ್ದ ಕೃಷಿಕನಿಗೆ ಅನುಕೂಲಕರವಾಗಿರಲಿಲ್ಲ, ಕೃಷಿಕನೇ ಭೂಮಾಲೀಕನಾಗಿದ್ದರಷ್ಟೇ ಅನುಕೂಲವಾಗುತ್ತಿತ್ತು. ಇದು ತತ್ ಕ್ಷಣದ ಮಟ್ಟಿಗೆ ಕೃಷಿಯ ಹಿತಾಸಕ್ತಿಗಳಿಗೆ ಪೂರಕವಾಗಿರಲಿಲ್ಲ…

ಮುಂದಿನ ವಾರ
ಕೃಷಿ ಕಂದಾಯ ಮತ್ತದರ ಶೋಷಕ ಶರಾತ್: ಭಾಗ 2

ಜೂನ್ 23, 2016

ಮೂವರು ನಾಯಕರು ಮೂರು ದಾರಿಗಳು....

ಕು.ಸ.ಮಧುಸೂದನ ನಾಯರ್
23/06/2017
ಒಂದು ರಾಜ್ಯದ ವಿದಾನಸಬಾ ಚುನಾವಣೆಯನ್ನು ಗೆಲ್ಲಲು ರಾಜಕೀಯ ಪಕ್ಷವೊಂದು ತನ್ನ ಸಿದ್ದಾಂತಗಳ ಪರಿಧಿಯಲ್ಲಿ ತಂತ್ರಗಳನ್ನು ಹೆಣೆಯುವುದು ಸಹಜ ಕ್ರಿಯೆ. ಪ್ರಜಾಪ್ರಭುತ್ವದಲ್ಲಿ ಮತದಾರರನ್ನು ಒಲಿಸಿಕೊಳ್ಳಲು ಅಂತಹ ಕಸರತ್ತುಗಳನ್ನು ಮಾಡುವುದು ಅನಿವಾರ್ಯವೂ ಹೌದು. ಆದರೆ ತಂತ್ರಗಾರಿಕೆಯೇ ರಾಜಕಾರಣವಾಗಿಬಿಟ್ಟರೆ ಅದು ಅಪಾಯಕಾರಿಯೂ ಆಗಿಬಿಡುವುದುಂಟು. ಯಾಕೆಂದರೆ ವಾಸ್ತವದ ರಾಜಕಾರಣ ಯಾವುದು, ಚುನಾವಣಾ ತಂತ್ರಗಾರಿಕೆ ಯಾವುದು ಎನ್ನುವ ಗೊಂದಲದಲ್ಲಿ ಬೀಳುವ ಮತದಾರ ರಾಜಕೀಯದ ತಂತ್ರಗಾರಿಕೆಯೇ ನಿಜವಾದ ರಾಜನೀತಿಯೆಂದು ಭ್ರಮಿಸುತ್ತಾನೆ. ಇವತ್ತು ಕಾಂಗ್ರೆಸ್ಸಾಗಲಿ, ಬಾಜಪವಾಗಲಿ ಇಂತಹ ತಂತ್ರಗಾರಿಗಳನ್ನು ನಂಬಿಯೇ ರಾಜಕಾರಣ ಮಾಡುತ್ತಿವೆ. ಈ ಮಾತನ್ನು ನಾನೀಗ ಹೇಳಲು ಕಾರಣ ಉತ್ತರಪ್ರದೇಶದ ಮುಂದಿನ ವಿದಾನಸಭಾ ಚುನಾವಣೆಗಳನ್ನು ಗೆಲ್ಲಲು ಬಾಜಪ ಈಗಿನಿಂದಲೆ ಕಸರತ್ತು ಆರಂಬಿಸಿದೆ. ಈಗ ಅದು ಇನ್ನೂ ಮುಂದೆ ಹೋಗಿ, ತನ್ನ ಮೂರು ಮುಖ್ಯ ನಾಯಕರನ್ನು ಮೂರು ರೀತಿಯಲ್ಲಿ ಬಳಸಿಕೊಳ್ಳಲು ತೀರ್ಮಾನಿಸಿ ಅದರಂತೆ ಚುನಾವಣಾ ಸಿದ್ದತೆ ನಡೆಸುತ್ತಿದೆ.

ಈ ತಂತ್ರಗಾರಿಕೆಯಲ್ಲಿ ಬಹುಮುಖ್ಯವಾದ ಮೂರು ಪಾತ್ರ ವಹಿಸಲಿರುವ ನಾಯಕರುಗಳೆಂದರೆ ಪ್ರದಾನಮಂತ್ರಿಗಳಾದ ಶ್ರೀ ನರೇಂದ್ರ ಮೋದಿ, ಕೇಂದ್ರ ಗೃಹಸಚಿವರಾದ ಶ್ರೀ ರಾಜನಾಥ್ ಸಿಂಗ್, ಬಾಜಪದ ರಾಷ್ಟ್ರೀಯ ಅದ್ಯಕ್ಷರಾದ ಶ್ರೀ ಅಮಿತ್ ಷಾ ಅವರುಗಳಾಗಿದ್ದಾರೆ. ಈಗಾಗಲೆ ರಾಜಕೀಯ ರ್ಯಾಲಿಗಳ ಮೂಲಕ ಪ್ರಚಾರ ಸಭೆಗಳನ್ನು ನಡೆಸುತ್ತಿರುವ ಬಾಜಪ ಆ ಸಭೆಗಳಲ್ಲಿ ಈ ಮೂವರಲ್ಲಿ ಯಾರು ಯಾವ ವಿಷಯವನ್ನು ಮಾತನಾಡಬೇಕೆಂಬುದನ್ನು ನಿರ್ದರಿಸಿ ತನ್ಮೂಲಕ ಜನರನ್ನು ಸೆಳೆಯಲು ಪ್ರಯತ್ನಿಸುತ್ತಿದೆ. ಹೀಗೆ ಮಾತನಾಡುವ ವಿಷಯಗಳನ್ನು ಹಂಚಿಕೊಂಡಿರುವ ಈ ನಾಯಕತ್ರಯರುಗಳು ಉತ್ತರ ಪ್ರದೆಶದ ಜನರ ಮನಗೆಲ್ಲಲು ಇನ್ನಿಲ್ಲದ ಪ್ರಯತ್ನ ಮಾಡುತ್ತಿದ್ದಾರೆ. ಈಗ ಅವರುಗಳಿಗೆ ನಿಗದಿ ಮಾಡಲ್ಪಟ್ಟಿರುವ ವಿಷಯಗಳ ಬಗ್ಗೆ ಒಂದಿಷ್ಟು ನೋಡೋಣ:

ಮೊದಲನೆಯದಾಗಿ, ಶ್ರೀ ನರೇಂದ್ರ ಮೋದಿಯವರ ಮಾತುಗಳು ಕೇವಲ ಅಭಿವೃದ್ದಿಯ ಕುರಿತಾಗಿ ಮಾತ್ರವಿರುತ್ತವೆ. ರಾಷ್ಟ್ರದ ಆರ್ಥಿಕ ಪ್ರಗತಿ, ಕೈಗಾರಿಕೆಗಳ ಸಬಲೀಕರಣ, ವಿದೇಶಿ ಬಂಡವಾಳ ತರುವ ಬಗ್ಗೆ ಮತ್ತು ಜನರಿಗೆ ವಿಶೇಷ ಸೌಲಭ್ಯಗಳನ್ನು ಒದಗಿಸುವ ಬಗ್ಗೆ ಮಾತ್ರ ತಮ್ಮ ಬಾಷಣವನ್ನು ಸೀಮಿತಗೊಳಿಸಿಕೊಳ್ಳುವ ಮೋದಿಯವರು ಇವುಗಳ ಜೊತೆಗೆ ಆಗಾಗ ವಿದೇಶದಲ್ಲಿರುವ ಕಪ್ಪು ಹಣವನ್ನು ಇಂಡಿಯಾಗೆ ತರುವಲ್ಲಿ ತಾವು ವಿದೇಶಿ ಪ್ರವಾಸ ಕೈಗೊಳ್ಳುತ್ತಿರುವುದಾಗಿ ಸಮಜಾಯಿಷಿ ನೀಡುತ್ತಾ, ಜನರನ್ನು ಮರುಳುಗೊಳಿಸುವಂತಹ ಬಾಷಣಗಳನ್ನು ಮಾಡುತ್ತಾರೆ. ಅಲ್ಲಿಗೆ ಮೋದಿಯವರ ವ್ಯಕ್ತಿತ್ವಕ್ಕೆ ಹಿಂದುತ್ವದ ಪರವಾದ ಮನುಷ್ಯನೆಂಬ ಹಣೆಪಟ್ಟಿ ಬೀಳದಂತೆ ನೋಡಿಕೊಳ್ಳುವ ಕೆಲಸವಾಗುತ್ತದೆ. ಜನರು ನಮ್ಮ ಪ್ರದಾನಿಯವರು ಕೇವಲ ಜನರ ಜೀವನಮಟ್ಟ ಸುಧಾರಣೆಯ ಬಗ್ಗೆ ಮತ್ತು ದೇಶದ ಪ್ರಗತಿಯ ಬಗ್ಗೆ ಮಾತ್ರ ಯೋಚಿಸುವ ವ್ಯಕ್ತಿಯೆಂದು ಪರಿಗಣಿಸುವಂತೆ ಮಾಡುವ ಒಂದು ತಂತ್ರಗಾರಿಕೆ ಇದಾಗಿದೆ. ಮೋದಿ ಅಪ್ಪಿ ತಪ್ಪಿಯೂ ಆಯೋದ್ಯೆಯ ವಿವಾದದ ಬಗ್ಗೆಯಾಗಲಿ ಹೆಚ್ಚುತ್ತಿರುವ ದಲಿತ ಅಲ್ಪಸಂಖ್ಯಾತರ ಮೇಲಿನ ಹಲ್ಲೆಗಳ ಬಗ್ಗೆಯಾಗಲಿ, ಇತ್ತೀಚೆಗೆ ವಿಷಾದನೀಯ ಘಟನೆಗಳು ನಡೆದ ಹೈದರಾಬಾದ್ ಮತ್ತು ಜವಹರಲಾಲ್ ನೆಹರು ವಿಶ್ವ ವಿದ್ಯಾನಿಲಯಗಳ ಘಟನೆಗಳ ಬಗ್ಗೆಯಾಗಲಿ ಸೊಲ್ಲೆತ್ತುವುದಿಲ್ಲ. ಅವರದೇನಿದ್ದರು ಅಭಿವೃದ್ದಿ ಮತ್ತು ಜನಕಲ್ಯಾಣ ಕಾರ್ಯಕ್ರಮಗಳು ಮತ್ತು ವಿದೇಶಿ ರಾಷ್ಟ್ರಗಳೊಂದಿಗಿನ ಸಂಬಂದ ಸುಧಾರಣೆಯ ದೊಡ್ಡ ದೊಡ್ಡ ಮಾತುಗಳು ಮಾತ್ರ. ಅಲ್ಲಿಗೆ ಬಾಜಪದ ಸಾಂಸ್ಕೃತಿಕ ರಾಜಕಾರಣವಾಗಲಿ, ಪಕ್ಷದ ಎರಡನೇ ಸಾಲಿನ ನಾಯಕರುಗಳು ನೀಡುವ ಮತಾಂಧತೆಯ ಹೇಳಿಕೆಗಳಾಗಲಿ ಮೋದಿಯವರದಲ್ಲ ಮತ್ತು ಅವುಗಳ ಹೊಣೆಗಾರಿಕೆಯೂ ಅವರದಲ್ಲವೆಂಬ ಸಂದೇಶವನ್ನು ಜನತೆಗೆ ನೀಡುವ ಬಾಜಪದ ಉದ್ದೇಶ ಸಫಲವಾಗುತ್ತದೆ.

ಇನ್ನು ಪಕ್ಷದ ರಾಷ್ಟ್ರಾದ್ಯಕ್ಷರಾದ ಶ್ರೀ ಅಮಿತ್ ಷಾರವರು ತಮ್ಮ ಬಾಷಣದ ಉದ್ದಕ್ಕೂ ಖೈರಾನದಲ್ಲಿನ ಹಿಂದೂ ಕುಟುಂಬಗಳ ವಾಪಸಾತಿ ಬಗ್ಗೆ, ಅಲ್ಪಸಂಖ್ಯಾತರಿಂದ ಬಹುಸಂಖ್ಯಾತ ಹಿಂದುಗಳಿಗಿರುವ ಆತಂಕಗಳ ಬಗ್ಗೆ ಘಂಟಾಘೋಷವಾಗಿ ಮಾತನಾಡುತ್ತಾರೆ. ಜೊತೆಗೆ ಈಗಿರುವ ಮುಲಾಯಂಸಿಂಗ್ ಯಾದವರ ಸಮಾಜವಾದಿ ಪಕ್ಷವು ಮುಸ್ಲಿಮರನ್ನು ಓಲೈಸುವ ಕೆಲಸದಲ್ಲಿ ತೊಡಗಿದೆಯೆಂದೂ ಕಾಂಗ್ರೆಸ್ ಕೂಡ ಅದನ್ನು ಸಮರ್ಥಿಸುವ ಹಾದಿಯಲ್ಲಿ ಕೆಲಸ ಮಾಡುತ್ತಿದೆಯೆಂಬ ಅರ್ಥದಲ್ಲಿ ಮಾತಾಡುತ್ತ ಜನರ ಬಾವನೆಗಳನ್ನು ಬಡಿದೆಬ್ಬಿಸುವ ಬಾಷಣ ಮಾಡುತ್ತಾರೆ. ಜೊತೆಗೆ ಸಂಘ ಪರಿವಾರದ ಮುಖವಾಣಿಯಂತೆ, ವಿಶ್ವ ಹಿಂದೂಪರಿಷತ್ತಿನ ದ್ವನಿಯಲ್ಲಿ ಮಾತಾಡುತ್ತಾರೆ. ಅಲ್ಲಿಗೆ ಜನರ ಬಾವನಾತ್ಮಕ ವಿಷಯಗಳನ್ನು ಪ್ರಸ್ತಾಪಿಸಿ ಅವನ್ನು ಹಿಂದೂ ಸಮುದಾಯಕ್ಕೆ ತಲುಪಿಸುವ ಬಾಜಪದ ಎರಡನೇ ಗುರಿಯೂ ಸಫಲವಾದಂತಾಗುತ್ತದೆ.

ಉಳಿದಂತೆ ಬಾಜಪದ ಮಾಜಿ ಅದ್ಯಕ್ಷರೂ, ಕೇಂದ್ರದ ಹಾಲಿ ಗೃಹ ಸಚಿವರೂ ಆಗಿರುವ ಶ್ರೀ ರಾಜನಾಥ್ ಸಿಂಗ್ ಅವರು ಉತ್ತರಪ್ರದೇಶದ ಕಾನೂನು ಸುವ್ಯವಸ್ಥೆಯ ಬಗ್ಗೆ ಬಾಷಣ ಮಾಡುತ್ತಾರೆ. ಅವರ ಪ್ರಕಾರ ಸಮಾಜವಾದಿ ಪಕ್ಷದ ಮುಖ್ಯಮಂತ್ರಿಯಾದ ಶ್ರೀ ಅಖಿಲೇಶ್ ಯಾದವರು ರಾಜ್ಯದ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ಸಂಪೂರ್ಣವಾಗಿ ವಿಫಲರಾಗಿದ್ದಾರೆ ಮತ್ತು ಜನತೆ ಇದರಿಂದ ಬೇಸತ್ತಿದ್ದಾರೆ. ಇದಕ್ಕೆ ಪೂರಕವಾಗಿ ಅವರು ಮುಜಾಫರ್ ನಗರದ ಕೋಮುಗಲಭೆಗಳನ್ನು ಮತ್ತು ಇತ್ತೀಚೆಗೆ ನಡೆದ ಮಥುರಾ ಹಿಂಸಾಚಾರವನ್ನು ಉಲ್ಲೇಖಿಸುತ್ತಾರೆ. ಉತ್ತರ ಪ್ರದೇಶವು ಜಂಗಲ್ ರಾಜ್ಯವಾಗುತ್ತಿದೆಯೆಂದು ಜನರಲ್ಲಿ ಸರಕಾರದ ಉದ್ದೇಶಗಳ ಬಗ್ಗೆ ಅನುಮಾನ ಹುಟ್ಟಿಸುವ ಮಾತಾಡುತ್ತಿದ್ದಾರೆ. 

ಕಳೆದ ವಾರ ಅಹಮದಾಬಾದಿನಲ್ಲಿ ನಡೆದ ಬೃಹತ್ ರ್ಯಾಲಿಯೊಂದರಲ್ಲಿ ಈ ಮೂವರು ಸಹ ಇಂತಹುದೇ ಬಾಷಣ ಮಾಡಿದ್ದು, ಈ ವರ್ಷದ ಕೊನೆಯ ವೇಳೆಗೆ ಉತ್ತರ ಪ್ರದೇಶದಾದ್ಯಂತ ಇನ್ನೂ ಇಪ್ಪತ್ತು ರ್ಯಾಲಿಗಳನ್ನು ಆಯೋಜಿಸುವ ಯೋಜನೆಯನ್ನು ಬಾಜಪ ಹೊಂದಿದೆಯೆಂದು ಅದರ ವಕ್ತಾರರು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿಯೇ ಬಾಜಪ ಇವತ್ತಿನವರೆಗು ತಮ್ಮ ಮುಖ್ಯಮಂತ್ರಿ ಅಭ್ಯರ್ಥಿ ಯಾರೆಂದು ಘೋಷಿಸಿಲ್ಲ. ಬಾಜಪದ ಒಂದು ವರ್ಗ ರಾಜನಾಥ್ ಸಿಂಗ್ ಅವರೇ ಸೂಕ್ತವೆಂದು ಹೇಳುತ್ತಾ ಬಂದಿದ್ದರೂ ಸ್ವತ: ರಾಜನಾಥ್ ಅದನ್ನು ನಿರಾಕರಿಸಿ ತಮಗೆ ರಾಜ್ಯದ ಮುಖ್ಯಮಂತ್ರಿಯ ಪಟ್ಟ ಇಷ್ಟವಿಲ್ಲವೆಂದು ಹೇಳಿಕೊಂಡಿದ್ದಾರೆ. ಇನ್ನುಪಕ್ಷದ ಇನ್ನೊಂದುವರ್ಗ ಯುವನಾಯಕ ವರುಣ್ ಗಾಂದಿಯವರನ್ನು ಮುಖ್ಯಮಂತ್ರಿ ಗಾದಿಗೆ ಹೆಸರಿಸುವಂತೆ ಒತ್ತಡ ಹೇರುತ್ತಿದೆ. ಇತ್ತೀಚೆಗೆ ನಡೆದ ರಾಷ್ಟ್ರೀಯ ಕಾರ್ಯಕಾರಿಣಿಯ ಸಭೆಯಲ್ಲಿ ಈ ವಿಷಯ ಪ್ರಸ್ತಾಪವಾದರು ಬಾಜಪ ಯಾವ ನಿರ್ದಾರವನ್ನೂ ಪ್ರಕಟಿಸಿಲ್ಲ.

ಬಹುಶ: ಈ ವಿಚಾರದಲ್ಲಿ ಮಾಯಾವತಿಯವರ ಬಹುಜನ ಪಕ್ಷದ ಮುಂದಿನ ನಡೆಯನ್ನು ಬಾಜಪ ಕಾದು ನೋಡುತ್ತಿದೆ. ಯಾಕೆಂದರೆ ಇವತ್ತಿನವರೆಗು ಮಾಯಾವತಿಯವರು ಮುಂದಿನ ಚುನಾವಣೆಯ ಬಗ್ಗೆ ಒಂದೇ ಒಂದು ಮಾತನ್ನೂ ಆಡಿಲ್ಲ. ಸದ್ಯದ ಪರಿಸ್ಥಿತಿಯಲ್ಲ್ಲಿ ಮಾಯಾವತಿಯವರು ದಲಿತ ಮತ್ತು ಮುಸ್ಲಿಂ ಮತ ಬ್ಯಾಂಕಿನ ಮೇಲೆ ಹಿಡಿತ ಹೊಂದಿರುವಂತೆ ಕಂಡುಬರುತ್ತಿದ್ದು ಕಾಂಗ್ರೆಸ್ ಜೊತೆ ಅದು ಹೊಂದಾಣಿಕೆ ಮಾಡಿಕೊಳ್ಳಬಹುದಾದ ಸಾದ್ಯತೆಗಳು ಗೋಚರಿಸುತ್ತಿವೆ. ಈ ದೃಷ್ಠಿಯಿಂದಲೇ ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷಗಳ ವಿರುದ್ದ ಹರಿಹಾಯುತ್ತಿರುವ ಬಾಜಪ ಬಹುಜನ ಪಕ್ಷದ ಬಗ್ಗೆ ಚಕಾರವೆತ್ತುತ್ತಿಲ್ಲ. ತನ್ನ ವಿರುದ್ದವಿರುವ ಮೂರೂ ಪಕ್ಷಗಳು ಪ್ರತ್ಯೇಕವಾಗಿ ಸ್ಪರ್ದಿಸಿದರೆ ಆಗುವ ಅನುಕೂಲವನ್ನು ಮನಗಂಡಿರುವ ಬಾಜಪ ಆ ದಿಸೆಯಲ್ಲಿ ಕೆಲಸ ಮಾಡುತ್ತಿದೆ. ಸದ್ಯದ ಪರಿಸ್ಥಿತಿಯೂ ಅದಕ್ಕೆ ಪೂರಕವಾಗಿಯೇ ಇದೆ. ಆದರೆ ಮಾಯಾವತಿಯವರ ಕಾರ್ಯವೈಖರಿಯೇ ಹಾಗೆ. ಅವರು ಬಾಯಿ ಬಿಟ್ಟು ಹೇಳದೆ ಪಕ್ಷವನ್ನು ಗಟ್ಟಿಗೊಳಿಸುವ ಕೆಲಸವನ್ನು ಸದ್ದಿರದೆ ಮಾಡುತ್ತಿದ್ದಾರೆ. ಇದನ್ನು ಅರಿತಿರುವ ಬಾಜಪ ಮಾಯಾವತಿಯವರ ಕಾರ್ಯಾಚರಣೆ ಬಹಿರಂಗವಾಗುವ ಸಂದರ್ಭಕ್ಕಾಗಿ ಕಾಯುತ್ತಿದೆ.

ಒಟ್ಟಿನಲ್ಲಿ ಬಾಜಪ 1999ರಲ್ಲಿ ಮಾಜಿ ಪ್ರದಾನಮಂತ್ರಿ ಶ್ರೀ ಅಟಲ್ ಬಿಹಾರಿ ವಾಜಪೇಯಿಯವರಿಗೆ ತೊಡಿಸಿದ ಜಾತ್ಯಾತೀತ ಮುಖವಾಡವನ್ನು ಮೋದಿಯವರಿಗೆ ತೊಡಿಸಿ ಉತ್ತರ ಪ್ರದೇಶದ ಚುನಾವಣೆ ಗೆಲ್ಲುವ ಪ್ರಯತ್ನದಲ್ಲಿದೆ.

ಜೂನ್ 21, 2016

ಕಾಂಗ್ರೆಸ್ ಮತ್ತು ನೆಹರು ಕುಟುಂಬ: ಯಾರು ಯಾರಿಗೆ ಅನಿವಾರ್ಯ?

ಕು.ಸ.ಮಧುಸೂದನ ನಾಯರ್
21/06/2016
ಕಳೆದ ನಾಲ್ಕೂವರೆ ದಶಕಗಳಿಂದಲೂ ಕಾಂಗ್ರೆಸ್ಸೇತರ ಪಕ್ಷಗಳು ಕಾಂಗ್ರೆಸ್ಸಿನ ವಂಶಪಾರಂಪರ್ಯ ರಾಜಕಾರಣದ ಬಗ್ಗೆ ಟೀಕಿಸುತ್ತ, ಕುಟುಂಬ ರಾಜಕಾರಣವನ್ನು ಕೆಲವೊಮ್ಮೆ ತೀರಾ ಕೀಳುಬಾಷೆಯಲ್ಲಿ ಲೇವಡಿ ಮಾಡುತ್ತಲೆ ಬರುತ್ತಿವೆ. ಆದರೀಗ ನೋಡಿದರೆ ಕುಟುಂಬ ರಾಜಕಾರಣದ ಬಗ್ಗೆ ಮಾತಾಡುವ ಎಲ್ಲ ಯೋಗ್ಯತೆಗಳನ್ನೂ ಇಂಡಿಯಾದ ಬಹಳಷ್ಟು ರಾಜಕೀಯ ಪಕ್ಷಗಳು ಕಳೆದುಕೊಂಡಿವೆಯೆನಿಸುತ್ತೆ. ಯಾಕೆಂದರೆ ನೆಹರು ಕುಟುಂಬವನ್ನು ವಿರೋದಿಸುತ್ತಲೇ ರಾಜಕೀಯ ಮಾಡಿದ ನಾಯಕರುಗಳು, ಪಕ್ಷಗಳು ಕೂಡ ಕುಟುಂಬ ರಾಜಕಾರಣದ ಬಲೆಯಲ್ಲಿ ಬಿದ್ದಿವೆ. ಹೀಗಾಗಿ ಇವತ್ತು ಕುಟುಂಬ ರಾಜಕಾರಣದ ಬಗ್ಗೆ ಯಾರಾದರು ಮಾತಾಡಿದರೆ ಅದನ್ನು ಜನತೆ ಗಂಬೀರವಾಗಿ ಸ್ವೀಕರಿಸುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲೂ ಕೆಲವರು ಕಾಂಗ್ರೆಸ್ ಮತ್ತೆ ಸುದಾರಿಸಿಕೊಳ್ಳಬೇಕಾದರೆ ಆ ಪಕ್ಷ ಸೋನಿಯಾಗಾಂದಿ ಮತ್ತು ರಾಹುಲಗಾಂದಿಯವರ ಹಿಡಿತದಿಂದ ಹೊರಬರಬೇಕೆಂದು ಕಿರುಚುತಿದ್ದಾರೆ. ನೆಹರು ಕುಟುಂಬದ ಹೊರತಾದ ಕಾಂಗ್ರೆಸ್ ಭವಿಷ್ಯ ಏನಾಗಬಹುದೆಂಬುದನ್ನು ಈಗ ಒಂದಿಷ್ಟು ನೋಡೋಣ:

ಇವತ್ತು ನೂರು ವರ್ಷಗಳ ನಂತರವೂ ಕಾಂಗ್ರೆಸ್ ತನ್ನ ಅಸ್ತಿತ್ವ ಅಂತೇನಾದರು ಉಳಿಸಿಕೊಂಡು ಉಸಿರಾಡುತ್ತಿದ್ದರೆ ಅದಕ್ಕೆ ಕಾರಣ ನೆಹರು ಕುಟುಂಬದ ಆಕರ್ಷಣೆ ಕಾರಣವೇ ಹೊರತು ಬೇರೆಯೇನಲ್ಲ. ಇದು ಸತ್ಯವಾದ ಸಂಗತಿ. ನೆಹರು ಕುಟುಂಬದಾಚೆಗೆ ಪಕ್ಷ ಬಂದು ನಿಂತರೆ ಕೆಲವೆ ವರ್ಷದಲ್ಲಿ ಅದು ತನ್ನ ರಾಷ್ಟ್ರೀಯ ಐಡೆಂಟಿಟಿಯನ್ನು ಕಳೆದು ಕೊಂಡು ಹತ್ತಾರೇನು, ನೂರಾರು ಚೂರುಗಳಾಗಿ ಒಡೆದು ಛಿದ್ರಗೊಳ್ಳುವುದು ಖಚಿತ. ಯಾಕೆಂದರೆ ಎಲ್ಲಿಯವರೆಗು ನೆಹರು ಕುಟುಂಬದ ಸದಸ್ಯರು ಅದನ್ನು ಮುನ್ನಡೆಸುತ್ತಾರೊ ಅಲ್ಲಿಯವರೆಗೂ ಅದರ ಒಗ್ಗಟ್ಟು ಬಲವಾಗಿರುತ್ತದೆ. ಆ ಕುಟಂಬವೇ ಅದಕ್ಕೆ ಶಕ್ತಿಕೇಂದ್ರವಾಗಿದೆ. ಅದು ನಾಶವಾದರೆ ಪಕ್ಷವೂ ನಾಶವಾಗುವುದರಲ್ಲಿ ಅನುಮಾನವೇನಿಲ್ಲ. ಇದಕ್ಕೆ ಬಹಳ ಜನ ರಾಜಕೀಯ ಪಂಡಿತರುಗಳು, ನಾಯಕರುಗಳು ಕಾಂಗ್ರೆಸ್ ಬೇರೆ ನಾಯಕರನ್ನು ಬೆಳೆಸಲಿಲ್ಲವೆಂದು ಆರೋಪಿಸುತ್ತಾರೆ. ಆದರೆ ಇಂಡಿಯಾದಂತಹ ವಿಶಾಲ ರಾಷ್ಟ್ರದಲ್ಲಿ ನಾಲ್ಕೂ ದಿಕ್ಕುಗಳಿಗೂ ಒಪ್ಪಿತವಾಗುವಂತ ನಾಯಕನನ್ನು ಯಾರೂ ಬೆಳೆಸಲಾಗುವುದಿಲ್ಲ. ಹಾಗೆ ಬೆಳಸುವ ನಾಯಕ ಬಹಳ ದಿನ ಬಾಳಿಕೆ ಬರಲಾರ. ನಾಯಕನಾದವನು ಸ್ವಯಂ ಸೃಷ್ಠಿಯಾಗಬೇಕು. ಬೇಕಾದರೆ ನೀವೇ ನೋಡಿ; ನರೇಂದ್ರ ಮೋದಿಯವರನ್ನು ಬಾಜಪವೇನು ಬೆಳೆಸಲಿಲ್ಲ, ಬದಲಿಗೆ ಬೆಳೆದ ಮೋದಿಯವರನ್ನು ಬಾಜಪ ಬಳಸಿಕೊಂಡಿತಷ್ಟೇ! ಪ್ರಾದೇಶಿಕ ನಾಯಕರುಗಳು ಬೆಳೆಯಬಹುದೆ ಹೊರತು ರಾಷ್ಟ್ರನಾಯಕರುಗಳನ್ನು ಯಾರೂ ಬೆಳೆಸಲಾಗುವುದಿಲ್ಲ. ಇವತ್ತು ನಿತೀಶ್ ಕುಮಾರ್ ಅವರನ್ನೇ ನೋಡಿ ಅವರೆಷ್ಟೇ ದೊಡ್ಡ ನಾಯಕರಾದರು ದಕ್ಷಿಣದಲ್ಲಿ ಅವರನ್ನು ಒಪ್ಪಿಕೊಳ್ಳುವುದು ಕಷ್ಟದ ಕೆಲಸ. ಹೀಗಾಗಿ ಇಂಡಿಯಾದಂತಹ ಬಹು ಸಂಸ್ಕೃತಿಯ ದೇಶದಲ್ಲಿ ಒಬ್ಬ ನಾಯಕ ಬಾವನಾತ್ಮಕವಾಗಿ ಜನರನ್ನು ಒಲಿಸಿಕೊಂಡು ಬೆಳೆಯಬಹುದೇ ಹೊರತು ಬೇರ್ಯಾವ ಶಕ್ತಿಗಳು ಅಂತಹ ನಾಯಕನನ್ನು ಸೃಷ್ಟಿಸಲಾರವು. ಹೀಗಾಗಿಯೇ ನಾನು ಹೇಳುವುದು ಸೋನಿಯ ಆಗಲಿ ರಾಹುಲ್ ಆಗಲಿ ಕಾಂಗ್ರೆಸ್ಸಿನ ನಾಯಕತ್ವವನ್ನು ಬಿಟ್ಟುಕೊಟ್ಟರೆ ಅದು ಬಾಜಪದಂತಹ ಪಕ್ಷಗಳಿಗೆ ಹಾಸಿಕೊಡುವ ಕೆಂಪುಹಾಸಿನ ಸ್ವಾಗತವಾಗುತ್ತದೆ. ಜೊತೆಗೆ ಏಕ ಪಕ್ಷದ ಸರ್ವಾಧಿಕಾರಿ ಆಡಳಿತಕ್ಕೂ ಹಾದಿಯಾಗುತ್ತದೆ. ಪ್ರಜಾಪ್ರಭುತ್ವದ ಆರೋಗ್ಯದ ದೃಷ್ಠಿಯಿಂದ ಇದು ಒಳ್ಳೆಯದಲ್ಲದಿದ್ದರೂ ಪ್ರಜಾಪ್ರಭುತ್ವ ಬದುಕಿರಲಾದರೂ ಕಾಂಗ್ರೆಸ್ ಜೀವಂತವಾಗಿರುವ ಅಗತ್ಯವಿದೆ. ಹಾಗೇನಾದರು ನಾಳೆ ಸೋನಿಯಾ ಮತ್ತು ರಾಹುಲ್ ಕಾಂಗ್ರೆಸ್ಸಿನ ಅಧಿಕಾರ ಬಿಟ್ಟುಕೊಟ್ಟು ಹೊರಬಂದರೆ ಬಹುಶ: ಕರ್ನಾಟಕದಲ್ಲಿಯೇ ಸಿದ್ದರಾಮಯ್ಯನವರ ಕಾಂಗ್ರೆಸ್, ಪರಮೇಶ್ವರ್ ಕಾಂಗ್ರೆಸ್, ವೀರಪ್ಪ ಮೊಯ್ಲಿ ಕಾಂಗ್ರೆಸ್ ಎಂಬಂತಹ ಹತ್ತಾರು ಕಾಂಗ್ರೆಸ್ಸುಗಳು ಜನಿಸುವುದು ಗ್ಯಾರಂಟಿ. ಉದಾಹರಣೆಗಾಗಿ ಇತಿಹಾಸವನ್ನೊಮ್ಮೆ ತಿರುವಿ ಹಾಕಿ ನೋಡಿ. ಎಪ್ಪತ್ತರ ದಶಕದಿಂದ ಇದುವರೆಗೂ ಯಾರ್ಯಾರು ಕಾಂಗ್ರೆಸ್ ತೊರೆದು ಮರಿ ಕಾಂಗ್ರೆಸ್ ಪಕ್ಷಗಳನ್ನು ಕಟ್ಟಿದರೋ ಅವರೆಲ್ಲ ರಾಜಕೀಯದಲ್ಲಿ ಮೇಲೆರಲು ಸಾದ್ಯವೇ ಆಗಿಲ್ಲ. ಜೊತೆಗೆ ಅವರಲ್ಲಿ ಬಹಳಷ್ಟು ಜನ ಮತ್ತೆ ಕಾಂಗ್ರೆಸ್ಸಿನ ತೆಕ್ಕೆಗೆ ಹೋಗಿದ್ದಾರೆ. 

ಇವೆಲ್ಲವನ್ನೂ ನೋಡುತ್ತಿದ್ದರೆ ಸೋನಿಯಾ ಗಾಂದಿಯೊ, ರಾಹುಲ್ ಗಾಂದಿಯೊ ಮಾತ್ರ ಕಾಂಗ್ರೆಸ್ಸನ್ನು ಕಾಪಾಡಬಲ್ಲರೆನಿಸುತ್ತೆ. ನೆಹರೂ ಕುಟುಂಬದವರ ಬಗ್ಗೆ ಪೂರ್ವಗ್ರಹವಿಲ್ಲದೆ ನೋಡಿದರೆ ಮಾತ್ರ ಈ ಸತ್ಯ ಅರ್ಥವಾಗುತ್ತದೆ. 
ಎರಡು ಕಾರಣಗಳಿಗಾಗಿ ಕಾಂಗ್ರೆಸ್ ಮುಂದೆಯೂ ಅಸ್ಥಿತ್ವವನ್ನು ಉಳಿಸಿಕೊಂಡಿರಬೇಕು:

ಮೊದಲನೆಯದು, ಕಾಂಗ್ರೆಸ್ ನಮ್ಮ ಸ್ವಾತಂತ್ರ ಹೋರಾಟದ ನೆನಪಾಗಿದ್ದು ಅದು ನಮ್ಮ ಜೊತೆ ಬಾವನಾತ್ಮಕವಾಗಿ ಥಳುಕು ಹಾಕಿಕೊಂಡಿದೆ (ಈ ಪೀಳಿಗೆಯನ್ನ ಹೊರತುಪಡಿಸಿ). 
ಎರಡನೆಯದು, ಕಾಂಗ್ರೆಸ್ ಇಲ್ಲವಾಗಿ ಬಿಟ್ಟರೆ ಬಾಜಪ ಏಕೈಕ ರಾಷ್ಟ್ರೀಯ ಪಕ್ಷವಾಗಿ ಹಿಂದೆ ಕಾಂಗ್ರೆಸ್ ಹೇಗೆ ಆರು ದಶಕಗಳವರೆಗು ನಮ್ಮನ್ನು ಆಳಿತೊ ಅದೇ ರೀತಿ ಬಾಜಪವೂ ಸಹ ಆಗಿಬಿಡುವ ಸಾದ್ಯತೆಯಿದೆ. ಬಾಜಪಕ್ಕೊಂದು ಪರ್ಯಾಯ ರಾಜಕೀಯಶಕ್ತಿಯನ್ನು ಕಂಡುಕೊಳ್ಳಲಾಗದೆ ಭಾರತೀಯ ಮತದಾರ ಅಸಹಾಯಕನಾಗಬೇಕಾಗುತ್ತದೆ.

ಆದ್ದರಿಂದಲೇ ಕಾಂಗ್ರೆಸ್ಸಿನ ಉಳಿವು ಈ ನೆಲದ ಪ್ರಜಾತಂತ್ರದ ಉಳಿವಿಗೂ ಸಂಬಂದವಿದೆಯೆಂಬುದನ್ನು ಕಾಂಗ್ರೆಸ್ಸಿಗರು ಮರೆಯಬಾರದು.

ಜೂನ್ 18, 2016

ಬಲಪಂಥೀಯ ಕೊಲೆಗಡುಕರ ಬಗ್ಗೆ ಸರ್ಕಾರಕ್ಕೆ ಹಾಗೂ ರಾಜಕೀಯ ಪಕ್ಷಗಳಿಗೆ ಮಮಕಾರವೇಕೆ?

vinayak baliga
ವಿನಾಯಕ ಬಾಳಿಗ
ಆನಂದ್ ಪ್ರಸಾದ್
18/06/2016
ಮಂಗಳೂರಿನ ಮಾಹಿತಿ ಹಕ್ಕು ಕಾರ್ಯಕರ್ತ ವಿನಾಯಕ ಬಾಳಿಗಾರ ಬರ್ಬರ ಕೊಲೆ ನಡೆದು ಮೂರು ತಿಂಗಳುಗಳು ಆಗುತ್ತಾ ಬಂದವು ಆದರೆ ಕೊಲೆಯ ಸೂತ್ರಧಾರಿಗಳ ಬಂಧನ ಇನ್ನೂ ಆಗಿಲ್ಲ. ಪೊಲೀಸರು ಇಂಥ ಬರ್ಬರ ಕೊಲೆಯ ಸೂತ್ರಧಾರರನ್ನು ಬಂಧಿಸಿ ಅವರಿಗೆ ಕಠಿಣ ಶಿಕ್ಷೆ ವಿಧಿಸದೆ ಹೋದರೆ ಸಮಾಜದಲ್ಲಿರುವ ದುಷ್ಟ ಶಕ್ತಿಗಳಿಗೆ ಹಣ ಹಾಗೂ ರಾಜಕೀಯ ಬೆಂಬಲ ಇದ್ದರೆ ಎಷ್ಟು ಕೊಲೆಯನ್ನಾದರೂ ಮಾಡಿ ತಪ್ಪಿಸಿಕೊಳ್ಳಬಹುದು ಎಂಬ ತಪ್ಪು ಸಂದೇಶ ಹೋಗಿ ಇಂಥ ಘಟನೆಗಳು ಹೆಚ್ಚಿ ಸಮಾಜದಲ್ಲಿ ಅನ್ಯಾಯ ಹಾಗೂ ಅಕ್ರಮಗಳು ಹೆಚ್ಚಲಿವೆ. ವಿನಾಯಕ ಬಾಳಿಗಾರ ಕೊಲೆಯ ವಿಷಯದಲ್ಲಿ ರಾಜ್ಯದ ಮುಖ್ಯ ವಾಹಿನಿಯ ಮಾಧ್ಯಮಗಳು ಬಾಯಿ ಮುಚ್ಚಿ ಕುಳಿತಿರುವುದು ಪರಮಾಶ್ಚರ್ಯವೇ ಸರಿ. ಇನ್ನೂ ಆಶ್ಚರ್ಯದ ವಿಷಯವೆಂದರೆ ಬಿಜೆಪಿ ಪಕ್ಷದ ಒಬ್ಬ ನಿಷ್ಟಾವಂತ ಕಾರ್ಯಕರ್ತ ಹಾಗೂ ಪರಮ ಧಾರ್ಮಿಕ ಮನೋಭಾವದ ವ್ಯಕ್ತಿಯು ಅನ್ಯಾಯ ಹಾಗೂ ಅಕ್ರಮಗಳ ವಿರುದ್ಧ ಹೋರಾಡಿ ಬಲಿದಾನ ಮಾಡಿದರೂ ಅದೇ ಪಕ್ಷದ ಎಲ್ಲಾ ನಾಯಕರು, ಕಾರ್ಯಕರ್ತರು ಈ ಭೀಕರ ಕೊಲೆಯ ವಿಷಯದಲ್ಲಿ ಮೌನ ವಹಿಸಿರುವುದು. ರಾಜಕೀಯದಲ್ಲಿ ವಿರುದ್ಧ ಪಕ್ಷದ ವ್ಯಕ್ತಿಗಳ ಕೊಲೆ ಕೆಲವು ರಾಜ್ಯಗಳಲ್ಲಿ ನಡೆಯುತ್ತದೆ ಆದರೆ ತಮ್ಮದೇ ಪಕ್ಷದ ನಿಷ್ಟಾವಂತ ಕಾರ್ಯಕರ್ತರನ್ನು ಕೊಲ್ಲುವುದು ಬಹಳ ವಿರಳ ಅಥವಾ ಇಲ್ಲವೆಂದೇ ಹೇಳಬಹುದು. ಧರ್ಮದ ವಿಷಯದಲ್ಲಿ ದೊಡ್ಡ ದೊಡ್ಡ ಭಾಷಣ ಬಿಗಿಯುವ ಧಾರ್ಮಿಕ ನಾಯಕರು, ಸ್ವಾಮೀಜಿಗಳು ಮೊದಲಾದವರು ಈ ಕೊಲೆಯ ವಿಷಯದಲ್ಲಿ ಚಕಾರ ಎತ್ತುವುದು ಕಂಡುಬರಲಿಲ್ಲ. ಇದನ್ನೆಲ್ಲಾ ನೋಡುವಾಗ ಧರ್ಮಗ್ಲಾನಿಯಾಗಿದೆ ಎಂದು ಯಾರಿಗಾದರೂ ಅನಿಸುತ್ತದೆ.

ಮಂಗಳೂರಿನಂಥ ಸುಶಿಕ್ಷಿತರ ನಗರದಲ್ಲಿ ಮಾಹಿತಿ ಹಕ್ಕು ಕಾರ್ಯಕರ್ತ ಅನ್ಯಾಯದ ವಿರುದ್ಧದ ಹೋರಾಟದಲ್ಲಿ ಭೀಕರವಾಗಿ ಕೊಲೆಯಾದರೂ ಹೆಚ್ಚಿನ ಪ್ರತಿಭಟನೆ ರೂಪುಗೊಳ್ಳಲಿಲ್ಲ. ಯಾವುದೇ ಧಾರ್ಮಿಕರು, ದೇವಭಕ್ತರು ಇಂಥ ಅನ್ಯಾಯ ನಡೆದರೂ ದನಿ ಎತ್ತಲಿಲ್ಲ. ಇದರ ವಿರುದ್ಧ ದನಿ ಎತ್ತಿ ಮಂಗಳೂರಿನ ಮಾನ ಕಾಪಾಡಿದ್ದು ದೇವರನ್ನು ನಂಬದ ವಿಚಾರವಾದಿ ನರೇಂದ್ರ ನಾಯಕರು ಹಾಗೂ ಕೆಲ ಎಡ ಪಕ್ಷಗಳವರು ಮಾತ್ರ. ಇವರು ಎರಡು ಸಲ ಪ್ರತಿಭಟನಾ ಮೆರವಣಿಗೆ ನಡೆಸಿ ಪ್ರತಿಭಟಿಸಿ ಇಡೀ ಮಂಗಳೂರಿನ ಮಾನ ಉಳಿಸಿದ್ದಾರೆ. ವಿನಾಯಕ ಬಾಳಿಗಾರನ್ನು ಕೊಲೆಗೈದ ಬಲಪಂಥೀಯ ಕೊಲೆಗಡುಕರು ನಿರೀಕ್ಷಣಾ ಜಾಮೀನಿಗೆ ಜಿಲ್ಲಾ ಮಟ್ಟದಲ್ಲಿ ಹಾಗೂ ಹೈಕೋರ್ಟ್ ಮಟ್ಟದಲ್ಲಿ ಅರ್ಜಿ ಸಲ್ಲಿಸಿದರೂ ನ್ಯಾಯಾಂಗ ಇವುಗಳನ್ನು ತಿರಸ್ಕರಿಸಿದೆ. ಹೀಗಿದ್ದರೂ ಕೊಲೆಯ ಸೂತ್ರಧಾರರನ್ನು ಬಂಧಿಸುವಲ್ಲಿ ಪೋಲೀಸರ ಕೈಯನ್ನು ಕಟ್ಟಲಾಗಿದೆ ಎಂಬುದು ಜನಸಾಮಾನ್ಯರ ಅಭಿಪ್ರಾಯ. ಈ ಕೊಲೆಯ ಸೂತ್ರಧಾರರು ಯಾರು ಎಂಬುದು ಬಹುತೇಕ ಪೊಲೀಸರಿಗೆ ಗೊತ್ತಿದೆ ಮತ್ತು ಜನಸಾಮಾನ್ಯರಿಗೂ ಗೊತ್ತಿದೆ. ಇವರೇನು ನಕ್ಸಲರಂತೆ ಕಾಡಿನಲ್ಲಿ ಇಲ್ಲ. ಬಲಪಂಥೀಯ ಸಂಘಟನೆಗಳ ಸಹಕಾರದಿಂದ ಎಲ್ಲೋ ಅಡಗಿ ಕುಳಿತಿದ್ದಾರೆ. ನಕ್ಸಲರ ವಿಷಯದಲ್ಲಿ ಅತ್ಯಂತ ಕಠಿಣವಾಗಿ ವರ್ತಿಸಿ ಎನ್ಕೌಂಟರ್ ಮಾಡಿ ಕೊಲ್ಲುವ ಪೊಲೀಸರು ಬಲಪಂಥೀಯ ಕೊಲೆಗಡುಕರನ್ನು ತಪ್ಪಿಸಿಕೊಳ್ಳಲು ಬಿಟ್ಟಿರುವುದು ಸಮಾಜಕ್ಕೆ ಕೊಡುವ ಸಂದೇಶವಾದರೂ ಏನು ಎಂಬ ಬಗ್ಗೆ ರಾಜ್ಯದ ಮಾಧ್ಯಮಗಳು ಪ್ರಶ್ನಿಸಬೇಕಾಗಿತ್ತು. ಕೆಲವೇ ಕೆಲವು ಪತ್ರಿಕೆಗಳನ್ನು ಬಿಟ್ಟರೆ ಮುಖ್ಯ ವಾಹಿನಿಯ ಟಿವಿ ಮಾಧ್ಯಮಗಳು ಈ ವಿಚಾರದಲ್ಲಿ ಮೌನವಾಗಿವೆ. ಮಾಧ್ಯಮಗಳ ಈ ಮೌನ ಪ್ರಜಾಪ್ರಭುತ್ವ ವ್ಯವಸ್ಥೆಗೆ ಹಾಗೂ ಮಧ್ಯಮ ಧರ್ಮಕ್ಕೆ ವಿರುದ್ಧವಾದದ್ದು.

ಪೊಲೀಸರು ಕೊಲೆಯಂಥ ಘೋರ ಅಪರಾಧದಲ್ಲಿ ಪರಾರಿಯಾದ, ತಲೆಮರೆಸಿಕೊಂಡ ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸಿ ಕಾನೂನಿನ ಕ್ರಮ ಕೈಗೊಳ್ಳಲು ವಿಶೇಷ ತನಿಖಾ ತಂಡ ರಚಿಸಬೇಕಾಗಿತ್ತು. ಆದರೆ ವಿನಾಯಕ ಬಾಳಿಗಾರ ಕೊಲೆ ತನಿಖೆ ವಿಷಯದಲ್ಲಿ ಪೋಲೀಸರು ಇಂಥ ಯಾವ ಕ್ರಮಗಳನ್ನೂ ಕೈಗೊಂಡಿಲ್ಲ. ಪರಾರಿಯಾಗಿ ತಲೆಮರೆಸಿಕೊಂಡ ಆರೋಪಿಗಳ ಎಲ್ಲ ಆಸ್ತಿಪಾಸ್ತಿಗಳನ್ನು ಪೊಲೀಸರು ಮುಟ್ಟುಗೋಲು ಹಾಕುವ ಮೂಲಕ ಆರೋಪಿ ಕಾನೂನಿನ ಮುಂದೆ ಶರಣಾಗುವಂತೆ ಮಾಡುವ ಅವಕಾಶ ಇದೆ ಎಂದು ನರೇಂದ್ರ ನಾಯಕರು ಸಾಮಾಜಿಕ ಮಾಧ್ಯಮದಲ್ಲಿ ಪ್ರತಿಪಾದಿಸಿದ್ದಾರೆ. ಆದರೆ ಈ ನಿಟ್ಟಿನಲ್ಲಿ ಕೂಡ ಪೊಲೀಸರು ಸೂಕ್ತ ಕಾನೂನು ಕ್ರಮ ಕೈಗೊಂಡಿಲ್ಲ. ನಕ್ಸಲೀಯರ ವಿರುದ್ಧ ಕಠಿಣವಾಗಿ ವರ್ತಿಸುವ ಪೊಲೀಸರು ಬಲಪಂಥೀಯ ಕೊಲೆಗಡುಕರ ಬಗ್ಗೆ ಯಾಕೆ ಮೃದು ಧೋರಣೆ ತಳೆದಿದ್ದಾರೆ ಎಂದು ರಾಜ್ಯದ ಪ್ರಜ್ಞಾವಂತರು ಪ್ರಶ್ನಿಸುವ ಅಗತ್ಯ ಇದೆ.

ಕಾಂಗ್ರೆಸ್ ಪಕ್ಷದ ಪುನಶ್ಚೇತನ: ಕಾಂಗ್ರೆಸ್ಸಿನ ರಾಷ್ಟ್ರೀಯ ಅದ್ಯಕ್ಷರಾಗಲಿರುವ ರಾಹುಲ್‍ಗಾಂಧಿ?

ಕು. ಸ. ಮಧುಸೂದನ್
18/06/2016
ಚುನಾವಣೆಯ ಸೋಲಿನ ಹೊಣೆ ಹೊತ್ತುಕೊಳ್ಳುವುದರ ಜೊತೆಗೆ ಮುಂದಿನ ದಿನಗಳಲ್ಲಿ ಪಕ್ಷವನ್ನು ಪುನಶ್ಚೇತನಗೊಳಿಸಲು ಅಗತ್ಯವಾದ ಕ್ರಮಗಳನ್ನು ಕೈಗೊಳ್ಳಲಾಗುವುದು: ಶ್ರೀಮತಿ ಸೋನಿಯಾ ಗಾಂಧಿ, ಅದ್ಯಕ್ಷರು, ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ನವದೆಹಲಿ, 19-05-2016.

ರಾಜಕೀಯ ಪಕ್ಷವೊಂದು ಸತತವಾಗಿ ಚುನಾವಣೆಗಳನ್ನು ಸೋಲುತ್ತಾ ಬಂದಾಗ, ಪಕ್ಷವನ್ನು ಪುನಶ್ಚೇತನಗೊಳಿಸುವ ಮತ್ತು ತಳ ಪಟ್ಟದಿಂದ ಪಕ್ಷವನ್ನು ಬಲಪಡಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸಲಾಗುವುದು ಎಂಬ ಹಳಸಲು ಹೇಳಿಕೆಯನ್ನು ನೀಡುವುದು ಸಾಮಾನ್ಯವಾಗಿ ಬಿಟ್ಟಿದೆ. ಪ್ರಜಾಪ್ರಭುತ್ವದಲ್ಲಿ ಇದು ಸಹಜವೂ ಕೂಡ. ಆದರೆ ಕಾಂಗ್ರೆಸ್ ಪಕ್ಷ ಕಳೆದ ಐದು ವರ್ಷಗಳಲ್ಲಿ ಬಹಳಷ್ಟು ಸಾರಿ ಇಂತಹ ಹೇಳಿಕೆಗಳನ್ನು ನೀಡಿದ್ದು, ಪುನಶ್ಚೇತನದ ಯಾವುದೇ ಲಕ್ಷಣಗಳು ಕಂಡುಬರದೇ ಇರುವುದರಿಂದ ಜನರಿರಲಿ, ಆ ಪಕ್ಷದ ಕಾರ್ಯಕರ್ತರೇ ಈ ಮಾತನ್ನು ಗಂಬೀರವಾಗಿ ತೆಗೆದುಕೊಂಡಂತೆ ಕಾಣುತ್ತಿಲ್ಲ. ಇದು ಆ ಪಕ್ಷದ ದುರಂತ ಮಾತ್ರವಲ್ಲ ಪ್ರಜಾಸತ್ತೆಯಲ್ಲಿ ನಂಬುಗೆಯಿಟ್ಟ ಭಾರತೀಯರ ದುರಂತವೂ ಹೌದು! 2011ರ ಕೆಲವು ರಾಜ್ಯಗಳ ವಿದಾನಸಭಾ ಚುನಾವಣೆಗಳ ನಂತರ ಸೋನಿಯಾ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರುಗಳು ಇಂತಹುದೇ ಮಾತುಗಳನ್ನಾಡಿದ್ದರು. ಆದರೆ ನಂತರದ ದಿನದಲ್ಲಿ ಪಕ್ಷದಲ್ಲಾದ ಏಕೈಕ ಬದಲಾವಣೆ ಎಂದರೆ 2013ರ ಜವರಿಯಲ್ಲಿ ರಾಹುಲ್ ಗಾಂದಿಯವರನ್ನು ಕಾಂಗ್ರೆಸ್ ಪಕ್ಷದ ಉಪಾದ್ಯಕ್ಷರನ್ನಾಗಿ ನೇಮಕ ಮಾಡಿದ್ದು  ಮಾತ್ರ. ಆದರೆ ಈ ಬಾರಿಯಾದರೂ ಕಾಂಗ್ರೆಸ್ ತನ್ನ ಮಾತುಗಳನ್ನು ಗಂಬೀರವಾಗಿ ಪರಿಗಣಿಸಿ ಅಗತ್ಯ ಕ್ರಮಕೈಗೊಳ್ಳಬಹುದೆಂಬ ಭಾವನೆ ಮೂಡಿರುವುದು, ಅದು ಪಕ್ಷಾದ್ಯಕ್ಷರನ್ನು ಬದಲಾಯಿಸಲು ತೆಗೆದುಕೊಂಡಿದೆಯೆಂದು ಹೇಳಲಾಗುತ್ತಿರುವ ತೀರ್ಮಾನದ ಕಾರಣದಿಂದ. 

ಕೊನೆಗೂ ಪಕ್ಷವನ್ನು ಸಂಪೂರ್ಣವಾಗಿ ರಾಹುಲ್ ಗಾಂಧಿಯವರ ಕೈಗಿಡಲು ಕಾಂಗ್ರೆಸ್ ಪಕ್ಷ ನಿರ್ದರಿಸಿದಂತಿದೆ. ಇದು ಮೊನ್ನೆತಾನೆ ಮುಗಿದ ಐದು ರಾಜ್ಯಗಳ ವಿದಾನಸಭಾ ಚುನಾವಣೆಗಳ ಪಲಿತಾಂಶಗಳ ಪರಿಣಾಮವೆಂದರೆ ತಪ್ಪಾಗಲಾರದು. ಸೋನಿಯಾಗಾಂಧಿ ಪಕ್ಷದ ಅದ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಸರಿಸುಮಾರು ಹದಿನೆಂಟು ವರ್ಷಗಳ ನಂತರ ಮೊದಲ ಬಾರಿಗೆ ಅವರ ಸ್ಥಾನದಲ್ಲಿ ಮತ್ತೊಬ್ಬ ವ್ಯಕ್ತಿಯನ್ನು ಪ್ರತಿಷ್ಠಾಪಿಸುವ ಕಾರ್ಯಕ್ಕೆ ಪಕ್ಷ ಸಿದ್ಧವಾದಂತಿದೆ. 2014ರ ಲೋಕಸಭಾ ಚುನಾವಣೆಯಲ್ಲಿ ಬಾಜಪದ ಎದುರು ಅನುಭವಿಸಿದ ಹೀನಾಯ ಸೋಲು, ಮತ್ತದರ ನಂತರವೂ ಅನೇಕ ದೊಡ್ಡ ರಾಜ್ಯಗಳ ವಿದಾನಸಭಾ ಚುನಾವಣೆಗಳಲ್ಲಿ ಸೋತಿದ್ದು, ಮತ್ತೀಗ ಐದು ರಾಜ್ಯಗಳ ವಿದಾನಸಭಾ ಚುನಾವಣೆಗಳಲ್ಲಿ ಮುಖಭಂಗ ಅನುಭವಿಸಿ ಅಧಿಕಾರದಲ್ಲಿದ್ದ ಎರಡೂ ರಾಜ್ಯಗಳನ್ನು ಕಳೆದುಕೊಂಡು ಮುಂದೇನು ಎನ್ನುವ ಗೊಂದಲದಲ್ಲಿರುವ ಕಾಂಗ್ರೆಸ್ಸಿಗೆ ಒಂದಷ್ಟು ಪುನಶ್ಚೇಚೇತನ ನೀಡುವುದು ಅಗತ್ಯವೂ, ಅನಿವಾರ್ಯವೂ ಆಗಿತ್ತು. ಪಕ್ಷದಾಚೆಗಿನ ರಾಜಕೀಯ ಪಂಡಿತರುಗಳು, ರಾಜಕೀಯ ವಿಶ್ಲೇಷಕರು ಇಂತಹ ಮಾತುಗಳನ್ನಾಡಿದಾಗ ಕುಟುಂಬ ರಾಜಕಾರಣದ ಭಟ್ಟಂಗಿತನಕ್ಕೆ ಒಗ್ಗಿ ಹೋಗಿರುವ ಕಾಂಗ್ರೆಸ್ ನಾಯಕರುಗಳಿಗೆ, ಇದು ಆಳದಲ್ಲಿ ಸರಿಯೆನಿಸಿದರು, ಬಹಿರಂಗವಾಗಿ ಇದನ್ನು ಒಪ್ಪುವ ಮನಸ್ಥಿತಿಯಿರಲಿಲ್ಲ. ಗಾಂಧಿ ಕುಟುಂಬವನ್ನು ಹೊರತುಪಡಿಸಿ ರಾಜಕಾರಣ ಮಾಡುವ ಕೆಲವೇ ಕೆಲವು ಪ್ರಾದೇಶಿಕ ನಾಯಕರುಗಳನ್ನು ಹೊರತು ಪಡಿಸಿ ಉಳಿದವವರಿಗೆ ಸೋನಿಯಾ ನಾಯಕತ್ವ ಅಗತ್ಯವಾಗಿದ್ದಕ್ಕೆ ಕಾರಣ ಇಂದಲ್ಲಾ ನಾಳೆ ಅವರ ವರ್ಚಸ್ಸಿನಿಂದ ಮತ್ತೆ ಅಧಿಕಾರ ಹಿಡಿಯಬಹುದೆಂಬ ನಂಬಿಕೆ.

ಹಾಗೆ ನೋಡಿದರೆ ಕಾಂಗ್ರೆಸ್ಸಿನ ನಾಯಕರುಗಳಿಗೆ ಅದನ್ನು ಬಿಟ್ಟರೆ ಇವತ್ತಿಗೂ ಬೇರೆ ದಾರಿ ಇರುವಂತೆ ಕಾಣುತ್ತಿಲ್ಲ. ಇಂಡಿಯಾದ ರಾಜಕಾರಣದ ಮಟ್ಟಿಗೆ ವಾಸ್ತವತೆ ಏನೆಂದರೆ ಗಾಂಧಿ ಕುಟುಂಬದ ನಿಯಂತ್ರಣ ತಪ್ಪಿದೊಡನೆ ಕಾಂಗ್ರೆಸ್ ತನ್ನೆಲ್ಲ ರಾಷ್ಟ್ರೀಯ ಐಡೆಂಟಿಟಿಯನ್ನು ಕಳೆದುಕೊಂಡು ಚೂರು ಚೂರಾಗುತ್ತದೆ ಎಂಬ ಭ್ರಮೆ! 1991 ರಲ್ಲಿ ರಾಜೀವ್ ಗಾಂಧಿಯವರ ಹತ್ಯೆಯಾದ ನಂತರ ನರಸಿಂಹರಾಯರು ಪ್ರದಾನಿಯಾದರೂ, ಕಾಂಗ್ರೆಸ್ಸಿನ ಮೇಲೆ ಗಾಂಧಿ ಕುಟುಂಬದ ಹಿಡಿತ ತೆರೆಮರೆಯಲ್ಲಿ ಇದ್ದುದರಿಂದ ಮತ್ತು ಇಂದಲ್ಲ ನಾಳೆ ಸೋನಿಯಾ ಮುಂಚೂಣಿಗೆ ಬಂದು ಪಕ್ಷವನ್ನು ಮುನ್ನಡೆಸುತ್ತಾರೆಂಬ ನಂಬಿಕೆ ಕಾಂಗ್ರೆಸ್ಸಿಗರಿಗೆ ಇದ್ದುದರಿಂದಲೇ 1998 ರವರೆಗು ಶ್ರೀ ನರಸಿಂಹರಾಯರು ಮತ್ತು ಶ್ರೀ ಸೀತಾರಾಂ ಕೇಸರಿಯವರು ಅದ್ಯಕ್ಷರಾಗಿ ಕಾರ್ಯನಿರ್ವಹಿಸಲು ಸಾದ್ಯವಾಯಿತು. ಆದರೆ 1996ರಲ್ಲಿ ಕೇಂದ್ರದಲ್ಲಿ ಅಧಿಕಾರ ಕಳೆದುಕೊಂಡಾಕ್ಷಣ ಯಥಾ ಪ್ರಕಾರ ಕಾಂಗ್ರೆಸ್ ನಾಯಕನಿರದ ನಾವೆಯಂತಾಗಿ ಗುಂಪುಗಾರಿಕೆಗಳು ಶುರುವಾದವು. ಅಂದಿನ ಅದ್ಯಕ್ಷ ಸೀತಾರಾಂ ಕೇಸರಿಯವರ ವಿರುದ್ದ ತಾರೀಖ್ ಅನ್ವರ್, ಕುಮಾರಮಂಗಳಂ ಮುಂತಾದವರು ಬಂಡೆದ್ದು ಸೋನಿಯಾರವರು ಪಕ್ಷದ ಚುಕ್ಕಾಣಿ ಹಿಡಿಯಬೇಕೆಂದು ಒತ್ತಾಯಿಸತೊಡಗಿದರು. ಆದರೆ ಸೋನಿಯಾರವರು ಸುಲಭವಾಗಿ ಈ ಮಾತಿಗೆ ಒಪ್ಪದೆ, ಸೀತಾರಾಂ ಕೇಸರಿಯವರು ತಾವಾಗಿಯೇ ಅದ್ಯಕ್ಷ ಗಾದಿ ತೊರೆದು ತಮ್ಮನ್ನು ಆಹ್ವಾನಿಸಿದರೆ ಮಾತ್ರ ಪಕ್ಷಾದ್ಯಕ್ಷರ ಜವಾಬ್ದಾರಿಯನ್ನು ಹೊರುವುದಾಗಿ ಹೇಳಿದರು. ಆದರೆ ಕೇಸರಿಯವರು ಈ ಮಾತಿಗೆ ಮಣಿಯಲಿಲ್ಲ. ಈ ಸಂದರ್ಭದಲ್ಲಿ ಜಿತೇಂದ್ರಪ್ರಸಾದ್, ಏ.ಕೆ.ಆಂಟೋನಿ ಮತ್ತು ಪ್ರಣಬ್ ಮುಖರ್ಜಿಯವರು ರಹಸ್ಯ ಸಭೆಗಳ ಮೂಲಕ ಕೇಸರಿಯವರನ್ನುಇಳಿಸುವ ಕಾರ್ಯತಂತ್ರ ರೂಪಿಸತೊಡಗಿದರು. ಆಗ ಶರದ್ ಪವಾರ್ ಅವರು ಸಹ ಕೇಸರಿಯವರನ್ನು ಇಳಿಸಲು ಮುಂದಾದರು. ಎಲ್ಲಿಯವರೆಗೆ ಕೇಸರಿಯವರು ಅದ್ಯಕ್ಷರಾಗಿರುತ್ತಾರೊ ಅಲ್ಲಿಯವರೆಗು ಉದ್ಯಮಿಗಳ ಬೆಂಬಲ ಪವಾರ್ ಅವರಿಗೆ ಸಿಗಲಾರದೆಂಬ ಉದ್ಯಮಿಗಳ ಎಚ್ಚರಿಕೆಯ ಮಾತು ಪವಾರರು ಕಣಕ್ಕಿಳಿಯಲು ಕಾರಣವಾಯಿತು. ನಂತರ 1998 ರಲ್ಲಿ ಕಾಂಗ್ರೆಸ್ ಕಾರ್ಯಕಾರಿಣಿಗೆ ಕೆಲವೊಂದು ತಿದ್ದುಪಡಿ ತರುವುದರ ಮೂಲಕ ಲೋಕಸಭಾ ಸದಸ್ಯೆಯೂ ಆಗಿರದ ಶ್ರೀಮತಿ ಸೋನಿಯಾ ಗಾಂದಿಯವರನ್ನು ಪಕ್ಷದ ಅದ್ಯಕ್ಷರನ್ನಾಗಿ ಮಾಡಲಾಯಿತು.

ನಂತರ 1999ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ 21 ಪಕ್ಷಗಳ ಬಾಜಪ ನೇತೃತ್ವದ ಎನ್.ಡಿ.ಎ. ಗೆದ್ದರೂ 140 ಸ್ಥಾನ ಗಳಿಸಲು ಶಕ್ತವಾದ ಕಾಂಗ್ರೆಸ್ ತನ್ನ ಮತಬ್ಯಾಂಕು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿ, ಗೌರವ ಉಳಿಸಿಕೊಂಡಿತ್ತು. ಆಮೇಲೆ ಸುಮಾರು ಹದಿನಾಲ್ಕು ವರ್ಷಗಳ ಕಾಲ ಅಂದರೆ 2014ರ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲುವ ತನಕವೂ ಸೋನಿಯಾರವರು ಕಾಂಗ್ರೆಸ್ ಪಕ್ಷದ ಪ್ರಶ್ನಾತೀತ ನಾಯಕಿಯಾಗಿ ಆಡಳಿತ ನಡೆಸಿದರು. 2004ರಲ್ಲಿ ಪ್ರದಾನಿಯಾಗಬಹುದಾಗಿದ್ದ ಅವಕಾಶವನ್ನು ನಿರಾಕರಿಸಿದ ಸೋನಿಯಾರವರು ಸಾಮಾನ್ಯ ಭಾರತೀಯರ ದೃಷ್ಠಿಯಲ್ಲಿ ತ್ಯಾಗಮಯಿಯಂತೆ ಕಂಡಿದ್ದರು. ತದ ನಂತರದ ಯು.ಪಿ.ಎ. ಎರಡರ ಅವಧಿಯಲ್ಲಿ ನಡೆದ ಅಗಾಧವಾದ ಭ್ರಷ್ಟಾಚಾರ ಪ್ರಕರಣಗಳು ಮತ್ತು ಬಾಜಪದ ಆಕ್ರಮಣಕಾರಿ ಮತಾಂಧ ರಾಜಕಾರಣದಿಂದಾಗಿ ಹಾಗು ಬಲಪಂಥೀಯ ಮತ್ತು ಬಂಡವಾಳಶಾಹಿ ಹಿಡಿತದಲ್ಲಿದ್ದ ಮಾದ್ಯಮಗಳ ಬಾಜಪ ಪರವಾದ ಪ್ರಚಾರ ತಂತ್ರಗಳಿಂದಾಗಿ 2013ರಲ್ಲಿ ಕಾಂಗ್ರೆಸ್ ತೀರಾ ಅವಮಾನಕಾರಿಯಾಗಿ ಸೋಲುಂಡಿತಲ್ಲದೆ. ಅದರ ಜೊತೆ ಜೊತೆಗೆ ನಡೆದ ಕೆಲವು ರಾಜ್ಯ ವಿದಾನಸಭಾ ಚುನಾವಣೆಗಳಲ್ಲಿಯೂ ಕಾಂಗ್ರೆಸ್ ವಿಫಲವಾಯಿತು. ತೀರಾ ಇತ್ತೀಚೆಗೆ ನಡೆದ ಐದು ರಾಜ್ಯಗಳ ಚುನಾವಣೆಗಳಲ್ಲಿಯು ಕಾಂಗ್ರೆಸ್ ಸೋಲನ್ನಪ್ಪಿ ಪಕ್ಷದ ಕೆಲ ವಲಯಗಳಲ್ಲಿ ನಾಯಕತ್ವ ಬದಲಾವಣೆಯ ಮಾತುಗಳು ಕೇಳಿ ಬಂದವು. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಬದಲಾವಣೆ ಎಂದರೆ ಅದ್ಯಕ್ಷರ ಹುದ್ದೆಯ ಬದಲಾವಣೆ ಮಾತ್ರ. ಅದೂ ಸೋನಿಯಾರವರಿಂದ ರಾಹುಲರಿಗೆ ಎಂದಷ್ಟೆ ಆಗಿದೆ.

ಮೊನ್ನೆಯ ಚುನಾವಣೆಗಳನ್ನು ಸೋತ ಕೂಡಲೆ ಕಾಂಗ್ರೆಸ್ಸಿನ ಹಿರಿಯ ನಾಯಕರಾದ ಶ್ರೀ ದಿಗ್ವಿಜಯಸಿಂಗ್ ಮತ್ತು ಕಮಲನಾಥ್ ಅವರುಗಳು ಮೊದಲ ಬಾರಿಗೆ ರಾಹುಲ್ ಗಾಂದಿಯವರನ್ನು ಪಕ್ಷದ ಅದ್ಯಕ್ಷರನ್ನಾಗಿ ಮಾಡುವ ಪ್ರಸ್ತಾಪ ಮಾಡಿದರು. ಈ ಬಗ್ಗೆ ಕಾಂಗ್ರೆಸ್ಸಿನ ಬಹುತೇಕ ನಾಯಕರುಗಳಿಗೆ ಅಭ್ಯಂತರವಿರದೇ ಹೋದರು, ಕೆಲವು ಹಳೆಯ ತಲೆಗಳಿಗಳಿಗೆ ಮತ್ತು ಸೋನಿಯಾರವರಿಗೆ ಬಹಳ ಆಪ್ತರಾಗಿರುವ ಕೆಲವರಿಗೆ ಮಾತ್ರ ಸೋನಿಯಾರವರೆ ಮುಂದುವರೆಯಬೇಕೆಂಬ ಬಯಕೆಯಿದೆ. ರಾಹುಲರನ್ನು ಅದ್ಯಕ್ಷರನ್ನಾಗಿಸಲು ತೀರ್ಮಾನಿಸುವುದರ ಹಿಂದೆ ಸ್ವತ: ರಾಹುಲರ ಬಯಕೆಯೂ ಕಾಣವಿದೆಯೆಂದು ನಂಬಲಾಗುತ್ತಿದೆ. ಯಾಕೆಂದರೆ ಅವರು ಉಪಾದ್ಯಕ್ಷರಾದ ನಂತರದ ಎಲ್ಲ ಸೋಲುಗಳಿಗೂ ಅವರನ್ನೇ ಗುರಿಯನ್ನಾಗಿಸಲಾಗುತ್ತಿದೆ. ಚುನಾವಣೆಗಳ ಕಾರ್ಯತಂತ್ರಗಳ ನಿರ್ದಾರ ತಮ್ಮದಲ್ಲವಾದರೂ, ಸೋಲಿಗೆ ಮಾತ್ರ ತಾವು ತಲೆಕೊಡಬೇಕಾಗಿ ಬಂದಿರುವುದು ರಾಹುಲರಿಗೆ ಬೇಸರ ಮೂಡಿಸಿರುವುದಂತು ಸತ್ಯ. ಈ ಕಾರಣಕ್ಕಾಗಿಯೇ ಅವರ ಅನುಮತಿಯಿಂದಲೇ ನಾಯಕರುಗಳು ಅವರಿಗೆ ಅದ್ಯಕ್ಷ ಸ್ಥಾನ ನೀಡಬೇಕೆಂದು ಧೈರ್ಯವಾಗಿ ಹೇಳುತ್ತಿರುವುದು. ರಾಹುಲರ ಅನಿಸಿಕೆಯಲ್ಲಿ ಯಾವುದೇ ತಪ್ಪಿಲ್ಲ. ಯಾಕೆಂದರೆ ಚುನಾವಣೆಯ ಕಾರ್ಯತಂತ್ರಗಳನ್ನು ರೂಪಿಸುವಲ್ಲಿ ಮತ್ತು ಟಿಕೇಟ್ ಹಂಚುವಲ್ಲಿ ನಿರ್ದಾರಗಳನ್ನು ತಗೆದುಕೊಳ್ಳುತ್ತಿದ್ದ ಕಾಂಗ್ರೆಸ್ಸಿನ ಹಿರಿಯ ನಾಯಕರುಗಳು ರಾಹುಲ್ ಗಾಂದಿಯವರ ಅಭಿಪ್ರಾಯಗಳಿಗೆ ಸಾಕಷ್ಟು ಮನ್ನಣೆ ನೀಡುತ್ತಿರಲಿಲ್ಲವೆಂಬುದಂತು ನಿಜ. ಉದಾಹರಣೆಗೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾದ ಮಮತಾ ಬ್ಯಾನರ್ಜಿಯವರ ಜೊತೆ ಸುಮಧುರ ಬಾಂದವ್ಯ ಹೊಂದಿರುವ ರಾಹುಲರಿಗೆ ಅವರ ಜೊತೆ ಮೈತ್ರಿಮಾಡಿಕೊಳ್ಳುವ ಇಚ್ಚೆಯಿದ್ದರೂ ಸ್ಥಳೀಯ ನಾಯಕರುಗಳ ಒತ್ತಾಯದ ಮೇಲೆ ಎಡರಂಗದ ಜೊತೆ ಹೋಗಿ ಸೋಲಬೇಕಾಯಿತು. ಅದೇ ರೀತಿ ಅಸ್ಸಾಮಿನಲ್ಲಿ ಎ.ಐ.ಡಿ.ಯಿ.ಎಫ್. ಜೊತೆ ಮೈತ್ರಿಗೆ ರಾಹುಲ್ ಸಿದ್ದರಿದ್ದರೂ ಗೋಗೋಯ್ ಅವರ ನಿರಾಕರಣೆಯಿಂದ ಅಲ್ಲಿಯೂ ಪಕ್ಷ ಸೋಲಬೇಕಾಯಿತು. ಇದು ಇತ್ತೀಚೆಗೆ ರಾಹುಲ್ ಗಾಂದಿಯವರಲ್ಲಿ ಅಸಮಾದಾನ ಮೂಡಿಸಿದ್ದನ್ನು ಅವರ ನಾಯಕರುಗಳೇ ಒಪ್ಪಿ ಕೊಳ್ಳುತ್ತಾರೆ. ಪಕ್ಷದಲ್ಲಿನ ಎರಡು ಅಧಿಕಾರ ಕೇಂದ್ರಗಳ ಪರಿಣಾಮವನ್ನು ಈಗ ಅರಿತಂತಿರುವ ಕಾಂಗ್ರೆಸ್ಸಿಗರಿಗೆ ರಾಹುಲರಿಗೆ ಪಕ್ಷದ ಸಂಪೂರ್ಣ ಜವಾಬ್ದಾರಿಯನ್ನು ಕೊಟ್ಟು ಪಕ್ಷ ಕಟ್ಟುವ ಆಸೆ ಬಂದಿದ್ದರೆ ತಪ್ಪೇನಲ್ಲ. ಅದೂ ಅಲ್ಲದೆ ಒಂದು ಪಕ್ಷದಲ್ಲಿ ಎರಡು ಅಧಿಕಾರ ಕೇಂದ್ರಗಳಿರುವುದರಿಂದ ಆಗಬಹುದಾದ ಮತ್ತು ಈಗಾಗಲೇ ಆಗಿರುವ ಅನಾಹುತಗಳ ಬಗ್ಗೆ ಕಾಂಗ್ರೆಸ್ ನಾಯಕರುಗಳಿಗೆ ಮನವರಿಕೆಯಾಗಿರುವುದು ಸಹ ಇಂತಹದೊಂದು ನಿರ್ದಾರಕ್ಕೆ ಕಾರಣವೆನ್ನಲಾಗುತ್ತಿದೆ. ಇದು ವಾಸ್ತವವೂ ಹೌದು. ಉದಾಹರಣೆಗೆ ಸೋನಿಯಾ ತೆಗೆದುಕೊಳ್ಳು ನಿರ್ಣಯಗಳ ರೀತಿ ಒಂದು ತರನದ್ದಾದರೆ ರಾಹುಲರ ರಾಜಕೀಯ ತೀರ್ಮಾನಗಳೇ ಬೇರೆ ರೀತಿಯಲ್ಲಿ ಇರುತ್ತಿದ್ದವು. ಇಂತಹ ಸಂದಿಗ್ದ ಸನ್ನಿವೇಶದಲ್ಲಿ ಸೋನಿಯಾರ ನಿರ್ದಾರಗಳೇ ಜಾರಿಯಾದರೂ ಅದರ ವೈಫಲ್ಯದ ಹೊಣೆಗಾರಿಕೆ ಮಾತ್ರ ರಾಹುಲರ ಹೆಗಲೇರುತ್ತಿತ್ತು. ಬಹಳಷ್ಟು ಬಾರಿ ಇಂತಹ ಮುಜುಗರಗಳಿಂದ ಪಾರಾಗಲೆಂದೇ ರಾಹುಲರು ಯಾರಿಗೂ ಮಾಹಿತಿ ನೀಡದೆ ವಿದೇಶಗಳಿಗೆ ತರಳಿ ಬಿಡುತ್ತಿದ್ದರು. ಇತ್ತೀಚೆಗೆ ಇದನ್ನು ಅರ್ಥಮಾಡಿಕೊಂಡಂತೆ ಕಾಣುತ್ತಿರುವ ಸೋನಿಯಾರವರು ತಮ್ಮ ಏರುತ್ತಿರುವ ವಯಸ್ಸು ಮತ್ತು ಅನಾರೋಗ್ಯಗಳ ಕಾರಣದಿಂದ ಇದಕ್ಕೆ ಹಸಿರು ನಿಶಾನೆ ತೋರಿಸಿದಂತಿದೆ.

ಆದರೆ ಕಾಂಗ್ರೆಸ್ಸಿನ ನಿಜವಾದ ಸಮಸ್ಯೆ ಇರುವುದೇ ಇಲ್ಲಿ ಕಾಂಗ್ರೆಸ್ಸಿನಂತಹ ದೊಡ್ಡ ಪಕ್ಷವನ್ನು ನಿಬಾಯಿಸುವಷ್ಟು ಶಕ್ತಿ ಮತ್ತು ರಾಜಕೀಯ ಚಾಣಾಕ್ಷತೆ ರಾಹುಲರಿಗಿದೆಯೇ ಎನ್ನುವುದಾಗಿದೆ. ಯಾಕೆಂದರೆ ಸೋನಿಯಾರವರಿಗಾದರೆ ತನ್ನ ಅತ್ತೆ ಮಾಜಿ ಪ್ರದಾನಿ ಶ್ರೀಮತಿ ಇಂದಿರಾಗಾಂದಿಯವರ ಕಾಲದಿಂದಲೂ ತೀರಾ ಹತ್ತಿರದಿಂದ ಕಾಂಗ್ರೆಸ್ಸಿನ ಬೆಳವಣಿಗೆಗಳನ್ನು ನೋಡಿದ ಅನುಭವವಿತ್ತು. ತದನಂತರ ತಮ್ಮ ಪತಿಯ ನಿಧನಾ ನಂತರವೂ ಪಕ್ಷದಲ್ಲಿ ಯಾವುದೇ ಅಧಿಕಾರ ಸ್ಥಾನವನ್ನು ಹಿಡಿಯದೇ ಇದ್ದರೂ ಪಕ್ಷದ ಆಗುಹೋಗುಗಳನ್ನು ಅವರ ಗಮನಕ್ಕೆ ತಂದು ಸೂಕ್ತ ಸಲಹೆ ಪಡೆಯುವ ಒಂದು ಅನಧಿಕೃತ ವ್ಯವಸ್ಥೆಯು ಪಕ್ಷದಲ್ಲಿತ್ತು. ಇದು ಮುಂದೆ ಸೋನಿಯಾರವರಿಗೆ ಅನುಕೂಲಕರವಾಗಿ ಪರಿಣಮಿಸಿತು. ಹೀಗಾಗಿಯೇ ಸುಮಾರು ಹದಿನೆಂಟು ವರ್ಷಗಳ ಕಾಲ ಅವರು ಯಶಸ್ವಿಯಾಗಿ ಪಕ್ಷವನ್ನು ಮುನ್ನಡೆಸಿಕೊಂಡು ಬಂದರು. ಬಹಳ ಜನ ಸೋನಿಯಾರವರು ಪಕ್ಷವನ್ನು ಯಶಸ್ವಿಯಾಗಿ ನಡೆಸಿಕೊಂಡು ಬಂದರು ಎನ್ನುವ ಮಾತನ್ನು ಒಪ್ಪದೇ ಇರಬಹುದು. ಹಲವು ಚುನಾವಣೆಗಳನ್ನು ಅವರು ಸೋತಿರಬಹುದು. ಆದರೆ ಕಾಂಗ್ರೆಸ್ಸಿನಂತಹ ದೊಡ್ಡ ಪಕ್ಷವೊಂದನ್ನು ಹದಿನೆಂಟು ವರ್ಷಗಳ ಕಾಲ ಒಗ್ಗೂಡಿಸಿ ಇಟ್ಟುಕೊಳ್ಳುವುದೇ ಒಂದು ಸಾಧನೆಯಾಗುವುದರ ನಡುವೆ, ಬಾಜಪದ ಮತಾಂಧ ರಾಜಕಾರಣವನ್ನು, ಪ್ರಾದೇಶಿಕ ಪಕ್ಷಗಳ ಪಾಳೇಗಾರಿಕೆಯ ಐಲುತನಗಳನ್ನು ಏಕಕಾಲಕ್ಕೆ ನಿಬಾಯಿಸುವುದು ನಿಜಕ್ಕೂ ಒಂದು ಸವಾಲೇ ಸರಿ. ಈಗ ರಾಹುಲ್ ಗಾಂದಿಯವರಿಗೆ ಕಾಂಗ್ರೆಸ್ಸಿನಂತಹ ರಾಷ್ಟ್ರೀಯ ಪಕ್ಷದ ಆಗುಹೋಗುಗಳನ್ನು ನಿಬಾಯಿಸುವಷ್ಟು ಪ್ರೌಢಿಮೆ ಬಂದಿದೆಯೇ ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳಬೇಕಾಗಿದೆ. ಹಾಗೆ ನೋಡಿದರೆ ರಾಹುಲರು ಅವರ ತಂದೆ ರಾಜೀವ್ ಗಾಂದಿಯವರಂತೆಯೇ ಸಂಕೋಚದ ಸ್ವಬಾವದವರು. ಅಷ್ಟು ಸುಲಭವಾಗಿ ಒಂದು ನಾಯಕತ್ವವನ್ನು ಒಪ್ಪಿಕೊಂಡು ಮುನ್ನಡೆಸುವ ತೆರೆದ ಮನಸ್ಸಿನ ಸ್ವಬಾವದವರೇನಲ್ಲ. ಆದರೆ ರಾಜೀವ್ ಗಾಂದಿಯವರು ಅಂದಿನ ಸನ್ನಿವೇಶವನ್ನು ಬೇಗ ಅರ್ಥಮಾಡಿಕೊಂಡು ಕಾಂಗ್ರೆಸ್ಸಿನ ಚುಕ್ಕಾಣಿ ಹಿಡಿದು ನಾಯಕತ್ವದ ಹೊಣೆ ನಿಬಾಯಿಸಿದ್ದರು. ಇದರ ಜೊತೆಗೆ ಅವತ್ತು ರಾಜೀವ್ ಗಾಂದಿಗೆ ಸವಾಲಾಗಿ ನಿಲ್ಲಬಲ್ಲ ವಿರೋದ ಪಕ್ಷಗಳಲ್ಲಿ ಯಾರದೇ ನಾಯಕತ್ವವೂ ಇರಲಿಲ್ಲ. ಹೀಗಾಗಿ ರಾಜೀವರು ಸುಲಭವಾಗಿ ರಾಜಕಾರಣದ ಕೇಂದ್ರಬಿಂದುವಾಗಿ ಎದ್ದು ನಿಲ್ಲಲು ಸಾದ್ಯವಾಗಿತ್ತು. ಆದರೆ ರಾಹುಲ್ ಗಾಂದಿಗೆ ತಕ್ಷಣಕ್ಕೆ ಅದ್ಯಕ್ಷತೆಯ ಯಾವ ಅನಿವಾರ್ಯತೆಯೂ ಇಲ್ಲವಾಗಿದೆ. ಜೊತೆಗೆ 2004ರಲ್ಲಿ ರಾಜಕೀಯ ಪ್ರವೇಶಿಸಿದಾಗಿನಿಂದಲೂ ಅವರು ಒಂದು ಹೆಜ್ಜೆ ಮುಂದಿಡಲೂ ಮೀನಾಮೇಷ ಎಣಿಸುತ್ತಲೇ ಬಂದಿದ್ದಾರೆ. ಅವರು ನಿಜಕ್ಕೂ ನಾಯಕತ್ವದ ಲಕ್ಷಣಗಳನ್ನು ತೋರಿಸುವವರಾಗಿದ್ದರೆ ಯು.ಪಿ.ಎ. ಸರಕಾರದಲ್ಲಿ ಯಾವುದಾದರು ಸಚಿವಗಿರಿಯನ್ನು ವಹಿಸಿಕೊಂಡು ಆಡಳಿತದ ಒಂದಿಷ್ಟು ಪಾಠಗಳನ್ನು ಕಲಿಯುತ್ತ ಜನರ ನಡುವೆ ಕೆಲಸ ಮಾಡಬಹುದಿತ್ತು. ಆದರೆ ತಮ್ಮ ಸರಕಾರದ ಎರಡು ಅವಧಿಯಲ್ಲೂ ಅವರು ಸರಕಾರಿ ಯಂತ್ರದ ಒಂದು ಭಾಗವಾಗಲೇ ಇಲ್ಲ. ಚುನಾವಣೆ ಬಂದಾಗ ಪ್ರಚಾರ ಮಾಡುವಷ್ಟಕ್ಕೆ ತಮ್ಮನ್ನು ಸೀಮಿತಗೊಳಿಸಿಕೊಂಡು ಬಿಟ್ಟರು. ಅದೂ ಅಲ್ಲದೆ ರಾಹುಲರು ರಾಜಕಾರಣಕ್ಕೆ ಪ್ರವೇಶಿಸುವ ಹೊತ್ತಿಗಾಗಲೇ ಶ್ರೀ ಎಲ್.ಕೆ. ಅದ್ವಾನಿ ಅಂತವರು ಬಹು ಎತ್ತರದ ನಾಯಕರಾಗಿ ಬೆಳೆದು ನಿಂತಿದ್ದರು. ತದ ನಂತರದಲ್ಲೂ ಇಂದಿನ ಪ್ರದಾನಿಗಳಾದ ಶ್ರೀ ನರೇಂದ್ರಮೋದಿಯವರು ಬಲಿಷ್ಠ ರಾಷ್ಟ್ರೀಯ ನಾಯಕರಾಗಿ ಬಳೆದು ನಿಂತು ರಾಹುಲ್ ಗಾಂದಿಯನ್ನು ರಾಷ್ಟ್ರೀಯ ನಾಯಕರದು ಒಪ್ಪಿಕೊಳ್ಳಲು ಜನ ಹಿಂದೆ ಮುಂದೆ ನೋಡುವಂತಹ ಸನ್ನಿವೇಶ ಸೃಷ್ಠಿಯಾಗಿತ್ತು. ಜೊತೆಗೆ ಮತಾಂಧ ರಾಜಕಾರಣದ ಆವೇಶದ ನಡುವೆ ರಾಹುಲರಂತ ಸೌಮ್ಯ ಸ್ವಬಾವದ ನಾಯಕರು ಎದ್ದು ನಿಲ್ಲುವುದು ದುಸ್ತರವಾಗುವಂತ ಪರಿಸ್ಥಿತಿ ಬಂದು ನಿಂತಿತ್ತು. ಈಗಲೂ ಸಹ ರಾಹುಲರು ಅಧ್ಯಕ್ಷರಾದ ತಕ್ಷಣ ಕಾಂಗ್ರೆಸ್ಸಿನ ಕಷ್ಟಗಳೆಲ್ಲ ಬಗೆಹರಿಯುತ್ತವೆಯೆಂಬ ಭ್ರಮೆಯನ್ನು ಯಾರೂ ಇಟ್ಟುಕೊಳ್ಳಲು ಸಾದ್ಯವಿಲ್ಲ. ಯಾಕೆಂದರೆ ಸೋನಿಯಾರವರಿಗಿದ್ದ ಪಕ್ಷದ ಮೇಲಿನ ಹಿಡಿತವನ್ನು ಸಾಧಿಸಲು ರಾಹುಲರು ಶಕ್ತರಾಗಿದ್ದಾರೆಯೇ ಎಂಬುದಿನ್ನು ಸಾಬೀತಾಗಿಲ್ಲ. ಜೊತೆಗೆ ರಾಹುಲರ ಸಮೀಪವರ್ತಿಗಳೇ ಹೇಳುವಂತೆ ಅವರು ಪೂರ್ವನಿಗದಿತ ವೇಳಾ ಪಟ್ಟಿಯ ಪ್ರಕಾರ ಕೆಲಸ ಮಾಡುವಲ್ಲಿ ಆಸಕ್ತಿ ತೋರುವುದಿಲ್ಲ. ಜೊತೆಗೆ ಯಾವುದೇ ನಾಯಕರುಗಳನ್ನು, ಅವರ ಹೆಸರುಗಳನ್ನು ನೆನಪಿಟ್ಟಿಕೊಂಡು ಅವರುಗಳು ಬಂದಾಗ ಬೇಟಿಯಾಗುವ ಸೌಜನ್ಯವನ್ನು ತೋರುವಲ್ಲಿಯೂ ಅವರು ನಿರ್ಲಕ್ಷ್ಯ ವಹಿಸುತ್ತಾರೆಂಬ ಮಾತಿದೆ. ಅದೂ ಅಲ್ಲದೆ ರಾಹುಲರಿಗೆ ಕಾಂಗ್ರೆಸ್ಸಿನ ಹಿರಿಯ ನಾಯಕರುಗಳ ಮಾತಿಗಿಂತ ತಮ್ಮ ಜೊತೆಯೇ ರಾಜಕಾರಣಕ್ಕೆ ಬಂದ ಯುವಪೀಳಿಗೆಯ ಜ್ಯೋತಿರಾದಿತ್ಯ ಸಿಂದಿಯಾ, ಸಚಿನ್ ಪೈಲಟ್ ಮುಂತಾದವರ ಅಪಕ್ವ, ಅನನುಭವಿ ಸಲಹೆಗಳಿಗೆ ಹೆಚ್ಚು ಮಾನ್ಯತೆ ನೀಡುತ್ತಾರೆ ಎಂಬ ಮಾತು ಕೇಳಿ ಬರುತ್ತಿದೆ. ಪದೇ ಪದೆ ಹೇಳದೆ ಕೇಳದೆ ವಿದೇಶಗಳಿಗೆ ಅನಧಿಕೃತವಾಗಿ ಹೋಗಿ ಪಕ್ಷದವರಲ್ಲಿ ಗೊಂದಲ ಸೃಷ್ಠಿಸುವುದು ಸಹ ರಾಹುಲರ ಅಬ್ಯಾಸವಾಗಿದೆ. ಇದೆಲ್ಲದರ ಪರಿಣಾಮವಾಗಿ ರಾಹುಲರು ಅದ್ಯಕ್ಷರಾಗಲಿ ಎಂದು ಬಯಸುವವರಿಗೇನೆ ಅವರ ಸಫಲತೆಯ ಬಗ್ಗೆ ಸಂಶಯವಿದೆ, ಇರಲಿ.

ಇದೀಗ ರಾಹುಲರನ್ನು ಪಕ್ಷದ ಅದ್ಯಕ್ಷ ಸ್ಥಾನಕ್ಕೆ ತಂದು ಪಕ್ಷದ ಸಂಘಟನೆಯಲ್ಲಿ ಅವರಿಗೆ ಸಂಪೂರ್ಣ ಸ್ವಾತಂತ್ರವನ್ನು ನೀಡಲು ತಯಾರಾಗಿರುವ ಮೂಲಕ ಕಾಂಗ್ರೆಸ್ ತನ್ನ ನೂರು ವರ್ಷಗಳ ಇತಿಹಾಸದಲ್ಲಿ ಮತ್ತೊಂದು ಹೊಸ ಅದ್ಯಾಯ ಬರೆಯಲು ಹೊರಟಿದೆ. ಆದರೆ ಪಕ್ಷದ ಅದ್ಯಕ್ಷತೆಯನ್ನು ರಾಹುಲ್ ಗಾಂದಿಯವರಿಗೆ ನೀಡುವುದರಿಂದ ಮಾತ್ರಕ್ಕೆ ಕಾಂಗ್ರೆಸ್ಸಿನ ಕಷ್ಟಗಳು ಇಲ್ಲವಾಗುತ್ತವೆಯೇ? ಎಂಬುದೆ ಎಲ್ಲರನ್ನೂ ಕಾಡುತ್ತಿರುವ ಮುಖ್ಯ ಪ್ರಶ್ನೆಯಾಗಿದೆ.  ಕೇವಲ ಪಕ್ಷದ ಅದ್ಯಕ್ಷರನ್ನು ಬದಲಾಯಿಸುವುದರಿಂದ ಪಕ್ಷದ ಬಲವರ್ದನೆ ಸಾದ್ಯವಿಲ್ಲ. ತಳಮಟ್ಟದಿಂದಲೂ ಈ ಬದಲಾವಣೆ ಪ್ರಾರಂಭವಾಗ ಬೇಕಾಗಿದೆ. ಜೊತೆಗೆ ಬದಲಾಗುತ್ತಿರುವ ಕಾಲಮಾನಕ್ಕೆ ತಕ್ಕಂತೆ ಅದು ತನ್ನ ಒಟ್ಟು ಸ್ವರೂಪದಲ್ಲಿಯೇ ಭಿನ್ನತೆಯತ್ತ ಸಾಗಬೇಕಿದೆ. ಇದು ಕೇವಲ ಕಾಂಗ್ರೆಸ್ ಎನ್ನುವ ಪಕ್ಷದ ಲಾಭದ ದೃಷ್ಠಿಯಿಂದ ಮಾತ್ರವಲ್ಲ, ರಾಷ್ಟ್ರ ರಾಜಕೀಯದ ಒಳಿತಿಗಾಗಿಯೂ ಆಗಬೇಕಾದ ಕಾರ್ಯವಾಗಿದೆ. ಯಾಕೆಂದರೆ ಇವತ್ತಿನ ರಾಜಕೀಯ ಪರಿಸ್ಥಿತಿ ಅಷ್ಟೊಂದು ಆಶಾದಾಯಕವಾಗಿಲ್ಲ. ಬಾಜಪ ಪ್ರಬಲವಾದ ಒಂದು ಶಕ್ತಿಯಾಗಿ ಬೆಳೆದು ಮತಾಂಧತೆ ಮತ್ತು ಖಾಸಗಿ ಬಂಡವಾಳಶಾಹಿ ಎಂಬೆರಡು ಶಕ್ತಿಗಳ ಅಭೂತ ಪೂರ್ವ ಬೆಂಬಲದೊಂದಿಗೆ ದೈತ್ಯಾಕಾರವಾಗಿ ಬೆಳೆದು ನಿಂತಿದ್ದರೆ, ಹಲವು ರಾಜ್ಯಗಳಲ್ಲಿ ಪ್ರಾದೇಶಿಕ ನಾಯಕರುಗಳು ರಾಷ್ಟ್ರೀಯ ಹಿತಾಸಕ್ತಿಯ ಬಗ್ಗೆ ಯೋಚಿಸಲೂ ಪುರುಸೊತ್ತಿಲ್ಲದವರಂತೆ ಮೆರೆಯುತ್ತಿದ್ದಾರೆ. ಇವೆರಡೂ ಶಕ್ತಿಗಳನ್ನು ಎದುರಿಸಿ ನಿಂತು ಜನಪರ ರಾಜಕೀಯ ಮಾಡುತ್ತ ಚುನಾವಣೆಗಳನ್ನುಗೆಲ್ಲುವುದು ಅಂದು ಕೊಂಡಷ್ಟು ಸುಲಭವಲ್ಲ. ಹೊಸತನದ ರಾಜಕಾರಣವನ್ನು ಕಾಂಗ್ರೆಸ್ ಶುರು ಮಾಡುವುದೇ ಆದಲ್ಲಿ 2019 ಅದರ ಗುರಿಯಾಗುವುದಕ್ಕಿಂತ 2024 ಅದರ ನೈಜ ಗುರಿಯಾಗಬೇಕು. ಯಾಕೆಂದರೆ ಅಸಾದ್ಯವಾದ ಸಮೀಪದ ಗುರಿಗಿಂತ ಸಾದ್ಯವಾಗಬಹುದಾದ ದೀರ್ಘಕಾಲೀನ ಗುರಿ ಅತ್ಯುತ್ತಮವಾದುದು.

ಈ ದಿಸೆಯಲ್ಲಿ ಆದಷ್ಟು ಬಗ ಕಾಂಗ್ರೆಸ್ ತನ್ನ ಬದಲಾವಣೆಯ ಕಾರ್ಯವನ್ನು ಪ್ರಾರಂಬಿಸುವುದು ಉತ್ತಮ!

ಜೂನ್ 17, 2016

ಮೇಕಿಂಗ್ ಹಿಸ್ಟರಿ: ಪುರುಷ ಸಮಾಜದ ದಬ್ಬಾಳಿಕೆ

ಸಾಕೇತ್ ರಾಜನ್ 
ಕನ್ನಡಕ್ಕೆ: ಡಾ. ಅಶೋಕ್. ಕೆ. ಆರ್
17/06/2016

ಟಿಪ್ಪುವಿನ ನಿಯಮಗಳು ವೇಶ್ಯಾವಾಟಿಕೆ ಮತ್ತು ಮಹಿಳೆಯರ ಮಾರಾಟವನ್ನು ನಿಷೇಧಿಸಿತ್ತು. ಚಾಮುಂಡಿ ದೇವಸ್ಥಾನಕ್ಕೆ ನರಹತ್ಯೆಯ ನೆಪದಲ್ಲಿ ಕನ್ಯೆಯರ ಜೀವಹರಣವಾಗುವುದನ್ನು ತಪ್ಪಿಸಲು ಕಠಿಣ ಕ್ರಮಗಳನ್ನು ಆತ ತೆಗೆದುಕೊಂಡಿದ್ದ ಎನ್ನುವ ವರದಿಗಳೂ ಇವೆ. (204)

ವಸಾಹತುಶಾಹಿ ಮತ್ತವರ ಕೈಗೊಂಬೆ ಸರಕಾರದ ಅಧಿಕಾರಕ್ಕೆ ಬರುವುದರೊಂದಿಗೆ ಇಂತಹ ಹೇಯ ಆಚರಣೆಗಳು ಮತ್ತೆ ಪ್ರಾರಂಭವಾದವು, ಮಹಿಳೆಯರಿಗೆ ವಿಪರೀತದ ಉಪದ್ರ ಕೊಡುವ ಕಾಲವಾಯಿತು. ಕೈಗೊಂಬೆ ಸರಕಾರ ಮಹಿಳೆಯರನ್ನು ಶೋಷಿಸಿದ ಬಗ್ಗೆ ಸೆಬಾಸ್ಟಿಯನ್ ಜೋಸೆಫ್ ಹೇಳುತ್ತಾನೆ: “ಮಹಿಳೆಯರ ಸ್ಥಾನಮಾನ ತುಂಬ ಚರ್ಚೆಗೆ ಒಳಗಾಗಿದೆ, ಆದರೆ, ಕರ್ನಾಟಕದ ಇತಿಹಾಸದ ಶೋಧದಲ್ಲಿ ತುಂಬ ಕಡಿಮೆ ಸ್ಥಳವನ್ನು ಪಡೆದಿದೆ. ಪರೋಕ್ಷವಾಗಿಯಾದರೂ ಈ ವಿಷಯದ ಬಗ್ಗೆ ಮಾತನಾಡಿರುವ ಪ್ರತಿಯೊಬ್ಬ ವಿದ್ವಾಂಸರೂ ನವಯುಗ ಪೂರ್ವ ಕರ್ನಾಟಕದಲ್ಲಿ ಮಹಿಳೆಯ ಸ್ಥಾನಮಾನವನ್ನು ವೈಭವೀಕರಿಸಿಯೇ ಚಿತ್ರಿಸಿದ್ದಾರೆ. ಒಬ್ಬರಾದ ನಂತರ ಒಬ್ಬರು ವಿದ್ವಾಂಸರು ಇದೇ ವಾದವನ್ನು ಒಂದೇ ರೀತಿಯಲ್ಲಿ ಮಂಡಿಸಿರುವುದು, ಚಿಕಿತ್ಸಕ ದೃಷ್ಟಿಯ ಓದುಗನಿಗೆ ಈ ಯೋಚನಾ ಲಹರಿಯಲ್ಲಿಯೇ ಏನೋ ಒಂದು ದೋಷವಿರಬೇಕೆಂಬ ಅನುಮಾನ ಮೂಡಿಸುತ್ತದೆ. ಬಹಳ ಸಲ, ಸಮಾಜದಲ್ಲಿ ಮಹಿಳೆಯ ಸ್ಥಾನವನ್ನಳೆಯಲು ಅಲ್ಲೊಂದಿಲ್ಲೊಂದು ರಾಣಿ ಅಥವಾ ನರ್ತಕಿಯ ಉದಾಹರಣೆಯನ್ನು ಬಳಸಲಾಗುತ್ತದೆ. ಆದರೆ, ಒಬ್ಬ ಅಕ್ಕಾದೇವಿ (ಅಕ್ಕಮಹಾದೇವಿ?) ಅಥವಾ ಲಕ್ಷ್ಮಿದೇವಿಯ ಉದಾಹರಣೆಯೊಂದಿಗೆ ಸಾಮಾಜಿಕ ಗತಿಯನ್ನು ಗುರುತಿಸಲು ಅಥವಾ ಐತಿಹಾಸಿಕ ಸತ್ಯಗಳನ್ನು ಸಮರ್ಥಿಸಲು ಸಾಧ್ಯವಾಗುವುದಿಲ್ಲ ಎನ್ನುವುದು ನೆನಪಿರಬೇಕು.

ಶೃಂಗೇರಿ ಧರ್ಮಸ್ಥಾನದಲ್ಲಿರುವ ದಾಖಲೆಗಳಲ್ಲಿ ಮಹಿಳೆಯ ಸ್ಥಾನಮಾನದ ಬಗ್ಗೆಯಿರುವ ಮಾಹಿತಿಯನ್ನು ಗಮನಿಸಿದಾಗ ಅಘಾತವಾಗುತ್ತದೆ. ಶೃಂಗೇರಿ ಮಠದ ಕಡತಗಳು ಅನಾಥ ಮಹಿಳೆ, ಬಡ – ಅಸಹಾಯಕ ಮಹಿಳೆ, ಜಾರಿದ ನೀತಿಗೆಟ್ಟ ಮಹಿಳೆಯರ ಅಸ್ತಿತ್ವದ ಬಗ್ಗೆ ಮಾತನಾಡುತ್ತದೆ. ಮನುಷ್ಯನ ಆಧ್ಯಾತ್ಮಿಕ ಅವಶ್ಯಕತೆಗಳ ಬಗ್ಗೆ ಕಾಳಜಿ ವಹಿಸುವ ಧರ್ಮಸಂಸ್ಥಾನದೊಳಗೆ ಇಷ್ಟೊಂದು ವಿಭಾಗದ ಮಹಿಳೆಯರು ಹೆಚ್ಚಿನ ಸಂಖೈಯಲ್ಲಿರುವುದೇ ಅಚ್ಚರಿ, ಮಠಕ್ಕೆ ಅವರನ್ನು ವಶಕ್ಕೆ ತೆಗೆದುಕೊಳ್ಳುವ ಮತ್ತು ಅವರನ್ನು ಇನ್ನಿತರೆ ವಸ್ತುಗಳಂತೆ ಮಾರಿಬಿಡುವ ಹಕ್ಕಿತ್ತು ಎನ್ನುವುದು ಮತ್ತಷ್ಟು ವಿಚಲಿತರನ್ನಾಗಿ ಮಾಡುತ್ತದೆ. ಕಡತಗಳ ಪ್ರಕಾರ, ಇಂತಹ ಮಹಿಳೆಯರು ತಾವಾಗಿಯೇ ಚಾವಡಿಗೆ (ಹಳ್ಳಿಯ ನ್ಯಾಯಕಟ್ಟೆ) ಬರಬೇಕಿತ್ತು ಅಥವಾ ಬೇರೆಯವರು ಅವರನ್ನು ಎಳೆತರಬಹುದಿತ್ತು. ನಂತರ ಅವರ ಬಗ್ಗೆ ಮಠ ‘ಕಾಳಜಿ’ ತೆಗೆದುಕೊಳ್ಳುತ್ತಿತ್ತು.

ನಂತರ ಆ ಮಹಿಳೆಯರಿಂದ ಮಠದ ಚಾಕರಿ ಮಾಡಿಸುವುದು ಸಾಮಾನ್ಯ ಕ್ರಮವಾಗಿತ್ತು. ಕೆಲವೊಮ್ಮೆ ಈ ಮಹಿಳೆಯರನ್ನು ಇತರೆ ವ್ಯಕ್ತಿಗಳಿಗೆ ಮಾರಾಟ ಮಾಡಲಾಗುತ್ತಿದೆ, ಬಹುಶಃ ಅವರೂ ಕೂಡ ಈ ಮಹಿಳೆಯರಿಗೆ ಕೈತೋಟದಲ್ಲಿ ಕೆಲಸಕ್ಕೆ ಹಚ್ಚುತ್ತಿದ್ದರು. 1818ರಲ್ಲಿ, ಶೃಂಗೇರಿ ಮಠದ ಪಾರುಪತ್ತೇಗಾರರಾದ ವೆಂಕಟಾಚಲ ಶಾಸ್ತ್ರಿ ವಿಧವೆ ಮಂಜು ಎನ್ನುವವರನ್ನು ಮೂರು ವರಹಗಳಿಗೆ ಅಹೋಬಲ ಸೋಮಯಾಜಿ ಎನ್ನುವವರಿಗೆ ಮಾರಾಟ ಮಾಡಿದ್ದರ ಬಗ್ಗೆ ದಾಖಲೆಗಳಾಧಾರವಿದೆ.

ಮೈಸೂರಿನ ರಾಜ ಕೃಷ್ಣರಾಜ ಒಡೆಯರ್ 1826 – 27ರಲ್ಲಿ ಮಹಿಳೆಯರನ್ನು ವಶಪಡಿಸಿಕೊಂಡು ಮಾರಾಟ ಮಾಡುವುದರಲ್ಲಿ ಭಾಗಿಯಾದ. ಎಲ್ಲಾ ಅಮಲ್ದಾರರು ಮತ್ತು ಕಿಲ್ಲೇದಾರರಿಗೆ ಭಕ್ತರ ಕುಟುಂಬದಲ್ಲಿ ‘ಜಾರಿದ’/ ಸೋತ ಹೆಣ್ಣುಮಕ್ಕಳನ್ನು ಮಠಕ್ಕೆ ಒಪ್ಪಿಸಬೇಕೆಂದು ರಾಜನು ಆದೇಶ ಹೊರಡಿಸುತ್ತಾನೆ! ಬದಲಿಗೆ, ಮಠ ‘ಜಾರಿದ’ ಹೆಣ್ಣುಮಕ್ಕಳನ್ನು ತನಗೊಪ್ಪಿಸಿದ ಅಮಲ್ದಾರರು ಮತ್ತು ಕಿಲ್ಲೇದಾರರಿಗೆ ರಸೀದಿಗಳನ್ನು ಕೊಡುವ ಇಚ್ಛೆ ವ್ಯಕ್ತಪಡಿಸುತ್ತದೆ. ಈ ಮಹಿಳೆಯರ ಮನಪರಿವರ್ತನೆ ಮಾಡುವುದರಲ್ಲಿ ಮಠ ಆಸಕ್ತವಾಗಿದೆಯೆಂದು ಹೇಳಲಾಗುತ್ತದೆ. ಇರಲಿ, ನಂಬದವರ ಮನಸ್ಸಿನಲ್ಲಿ ಒಂದು ಅನುಮಾನ ಉಳಿದುಬಿಡುತ್ತದೆ. ಯಾಕೆ ಮಹಿಳೆಯನ್ನಷ್ಟೇ ‘ಜಾರಿದ’ವರೆಂದು ಪರಿಗಣಿಸಬೇಕು? ‘ಜಾರಿದ’ ಗಂಡಸರ ಗತಿಯೇನು? ಅವರನ್ನೂ ಮಠ ಪರಿವರ್ತಿಸಬೇಕಿತ್ತಲ್ಲವೇ? ಅವರನ್ನೂ ಪರಿವರ್ತನೆಯ ಹೆಸರಿನಲ್ಲಿ ವರ್ತಕರಿಗೆ ನಿಗದಿತ ಬೆಲೆಗೆ ಮಾರಾಟಬೇಕಿತ್ತಲ್ಲವೇ?

1834ರಲ್ಲಿ ಬ್ರಿಟೀಷ್ ಕಮಿಷನರ್ರಿನ ಕೈಕೆಳಗೆ ಕಾರ್ಯನಿರ್ವಹಿಸುತ್ತಿದ್ದ ನಗರದ ಫೌಜುದಾರ ತಿಮ್ಮಪ್ಪ ರಾವ್ ‘ಜಾರಿದ’ ಮಹಿಳೆಯರ ಚಲನವಲನಗಳ ಮೇಲೆ ಕಣ್ಣಿಡಬೇಕೆಂದು ತನ್ನ ಕೈಕೆಳಗಿನ ಅಮಲ್ದಾರರು ಮತ್ತು ಕಿಲ್ಲೇದಾರರಿಗೆ ಸುತ್ತೋಲೆ ಕಳುಹಿಸುತ್ತಾನೆ. ಇಲ್ಲಿ ಲಭ್ಯವಿರುವ ದಾಖಲೆಗಳು ಯಾವ ಯಾವ ಕಾರಣಕ್ಕೆ ಮಹಿಳೆಯನ್ನು ‘ಜಾರಿಣಿ’ ಎಂದು ಕರೆಯಬಹುದು ಎನ್ನುವುದಕ್ಕೆ ಆಸಕ್ತಿಕರ ವಿಷಯಗಳನ್ನು ತಿಳಿಸುತ್ತದೆ. ಬಹಳಷ್ಟು ಸಲ ನೈತಿಕತೆಯನ್ನು ಮರೆತದ್ದಾಗಲೀ, ಪರಿಶುದ್ಧತೆಯನ್ನು ಕಳೆದುಕೊಂಡದ್ದಾಗಲೀ ಮಹಿಳೆಯರನ್ನು ಮಠದ ದೈವದತ್ತ ಕೈಗಳ ವಶಕ್ಕೆ ಕೊಡುವುದಕ್ಕೆ ಕಾರಣವಾಗುತ್ತಿರಲಿಲ್ಲ. ಬದಲಿಗೆ, ಕಿಲ್ಲೇದಾರ ಅಥವಾ ಅಮಲುದಾರರಿಗೆ ಒಂದು ಹೆಂಗಸು ತನ್ನ ಜಾತಿಯ ನಿಯಮಗಳನ್ನು ಮೀರಿದ್ದು ಕಂಡುಬಂದರೆ, ಅವಳನ್ನು ಬಲವಂತವಾಗಿ ಮಠಕ್ಕೆ ಮನಪರಿವರ್ತನೆಯ ಸಲುವಾಗಿ ಕಳುಹಿಸಿಬಿಡುತ್ತಿದ್ದರು. ಪರಿವರ್ತನೆಯ ಕ್ರಮದಲ್ಲಿ ಮೊದಲಿಗೆ ಮಠದ ಚಾಕರಿಗಳನ್ನು ಮಾಡಿಸಿದರೆ, ನಂತರ ‘ಪರಿವರ್ತಕರಾದ’ ಅಹೋಬಲ ಸೋಮಯಾಜಿ ಅಂತವರಿಗೆ ಮಾರಿಬಿಡಲಾಗುತ್ತಿತ್ತು. ಇದೆಲ್ಲವೂ 1834ರಲ್ಲಿ ಕಮಿಷನರ್ ಬ್ರಿಗ್ಸ್ ಹೊರಡಿಸಿದ ಆದೇಶಕ್ಕೆ ಅನುಗುಣವಾಗಿಯೇ ಇತ್ತು.

ಬ್ರಿಟೀಷ್ ಆಡಳಿತ ವಿಧಿಸಿದ ಒಂದೇ ಒಂದು ಶರತ್ತೆಂದರೆ ಮಹಿಳೆಯರನ್ನು ಖರೀದಿಸುವುದಕ್ಕೂ ಅಥವಾ ಮಾರುವುದಕ್ಕೂ ಮೊದಲು ಮಠ ಸರಕಾರೀ ಅಧಿಕಾರಿಗಳಿಂದ ಅನುಮತಿ ಪಡೆಯಬೇಕಿತ್ತು.

‘ಜಾರಿದ’ ಹೆಣ್ಣುಮಕ್ಕಳ ಮನಪರಿವರ್ತನೆಗಾಗಿ ಅವರನ್ನು ವಶಪಡಿಸಿಕೊಳ್ಳುವುದರಲ್ಲಿ ಶೃಂಗೇರಿ ಮಠದ ಜೊತೆಗೆ ಬೇರೆ ಮಠಗಳೂ ಇದ್ದವು ಎನ್ನುವ ಅಂಶ ಕೆಲವು ದಾಖಲೆಗಳಿಂದ ತಿಳಿಯುತ್ತದೆ. ಪಂಚಗ್ರಾಮಕ್ಕೆ ಸೇರಿದ, ತಮ್ಮ ಜಾತಿಯನ್ನು ಕಳೆದುಕೊಂಡಿದ್ದ ಮಹಿಳೆಯರನ್ನು ಬಲವಂತವಾಗಿ ಬೇರೆ ಮಠದ ಜನರು ಕರೆದುಕೊಂಡು ಹೋಗಿಬಿಡುತ್ತಿದ್ದರು. ಹಾಗಾಗಿ ಈ ಮಹಿಳೆಯರ ಮೇಲಿನ ತನ್ನ ಹಕ್ಕನ್ನು ಅಮಲ್ದಾರರು ಮತ್ತು ಇತರೆ ಅಧಿಕಾರಿ ವರ್ಗದ ಮುಂದೆ ಶೃಂಗೇರಿ ಮಠ ಪ್ರತಿಪಾದಿಸಿತು. ಧರ್ಮಸಂಸ್ಥಾನದೊಳಗೆ, ಪುರುಷ ನಿರ್ಮಿತ ಜಾತಿಯ ನೀತಿಗಳಿಂದ ದೌರ್ಜನ್ಯಕ್ಕೊಳಗಾದ ಮುಗ್ಧ ಹುಡುಗಿಯರನ್ನು ಮಾರಾಟದ ಸರಕಾಗಿ ಬದಲಿಸಬಹುದಿತ್ತು. ಅವರನ್ನು ಮಠ ತಿರಸ್ಕರಿಸಲಾಗದ ಹಕ್ಕೆಂಬಂತೆ ವಶಕ್ಕೆ ಪಡೆಯಬಹುದಿತ್ತು. ಮತ್ತು ಇತರರು ಅವರನ್ನು ಪ್ರಾಣಿಗಳಂತೆ ಕೊಂಡು ಮಾರಾಟ ಮಾಡಬಹುದಿತ್ತು.

ಮೈಸೂರಿನ ನಗರ ವಿಭಾಗದ ವರದಿಯಲ್ಲಿ ಹೆಚ್.ಸ್ಟೋಕ್ಸ್ ಬರೆಯುತ್ತಾನೆ:

‘ಶುದ್ಧತೆ ಕಳೆದುಕೊಂಡ ನೆಪದಿಂದ ವಿಧವೆಯರನ್ನು ಮಾರಾಟ ಮಾಡುವ ಪದ್ಧತಿಯನ್ನು ಸರ್ಕಾರ ರದ್ದು ಮಾಡಿದೆ, ಆದರದನ್ನು ಮಠಗಳು ಕೆಲವೊಮ್ಮೆ ಬಲವಂತದಿಂದ ಹೇರುತ್ತಿವೆ. ಎಲ್ಲೋ ಕೆಲವೊಮ್ಮೆ ಮಹಿಳೆಯರನ್ನು ಅವರ ಸಂಬಂಧಿಕರೇ ಖರೀದಿಸುತ್ತಾರೆ, ಮೂರರಿಂದ ಹನ್ನೆರಡು ಪಗೋಡಾಗಳ ಮಾಮೂಲಿ ಮೊತ್ತವನ್ನು ಕಟ್ಟಿ. ಬೇಲಿ ಅನ್ನವನ್ನು ತಿನ್ನುವ ಮಹಿಳೆಯರು ತಮ್ಮ ಕೆಳಜಾತಿಯನ್ನು ಕೆಲವು ಪಗೋಡಾಗಳಿಗೆ ಕಳೆದುಕೊಳ್ಳುತ್ತಾರೆ ಮತ್ತು ಪಗೋಡಾದಿಂದ ರಕ್ಷಣೆ ಪಡೆಯುತ್ತಾರೆ. ಅವರು ನಂತರ ಅಲ್ಲೇ ಉಳಿದು ಚಿಕ್ಕಪುಟ್ಟ ಚಾಕರಿ ಮಾಡಿಕೊಂಡಿರಬೇಕು ಅಥವಾ ಬೇರೆಡೆ ಬದುಕುವ ಇಚ್ಛೆಯಿದ್ದರೆ ವಾರ್ಷಿಕ ಇಷ್ಟೆಂದು ದುಡ್ಡು ನೀಡಬೇಕು. ಅವರಲ್ಲಿನ ಅನೇಕರು ಸೂಳೆಯರಾಗುತ್ತಾರೆ’.” (205)

ಮಹಿಳೆಯರನ್ನು ಗುಲಾಮರನ್ನಾಗಿಸುವುದು ಮಠಗಳಿಗಷ್ಟೇ ಸೀಮಿತವಾಗಿರಲಿಲ್ಲ, ಕೃಷ್ಣರಾಜ ಒಡೆಯರರ ಆಳ್ವಿಕೆಯಲ್ಲಿ ಅದು ವಾಡಿಕೆಯಂತಾಗಿ ಹೋಗಿತ್ತು. ಈ ಭಯಾನಕ ಸಂಸ್ಕೃತಿಯ ಪ್ರಾಬಲ್ಯದ ಬಗ್ಗೆ ರೈಸ್ ತಿಳಿಸುತ್ತಾರೆ:

“ಹಿಂದಿನ ಆಡಳಿತದ ಅವಧಿಯಲ್ಲಿ, ಅದರಲ್ಲೂ ಹಿಂದೂ ರಾಜರ ಆಳ್ವಿಕೆಯಲ್ಲಿ ಮಹಿಳೆಯರ ಸ್ಥಿತಿ ಮತ್ತವರನ್ನು ನೋಡಿಕೊಳ್ಳುತ್ತಿದ್ದ ರೀತಿ ಶೋಚನೀಯವಾಗಿತ್ತು. ಸತತ ಮೂದಲಿಕೆಯಲ್ಲಿ ಬದುಕುವುದು, ವಿಪರೀತದ ಅವಮಾನಗಳನ್ನೆದುರಿಸುವುದು, ಅನುಮಾನಸ್ಪದ ಮಾಹಿತಿದಾರರ ಹೀನ ಆರೋಪಗಳಿಗೆ ಬಲಿಯಾಗುವುದು, ಗುಲಾಮರಂತೆ ಮಾರುಕಟ್ಟೆಯಲ್ಲಿ ಮಾರಾಟವಾಗುವುದು, ನಂತರದಲ್ಲಿ ಸೇವಕಿಯಾಗಿ ಸುದೀರ್ಘ ಕಾಲ ನರಳುವುದು. ದೊಡ್ಡ ನಗರಗಳಲ್ಲಿ ಸರಕಾರದ ಆದಾಯದ ಮೂಲವಾಗಿದ್ದ ‘ಸಮಯಾಚಾರಿ’ನ ಲಾಭದ ಭಾಗದಲ್ಲಿ ಅಶುದ್ಧತೆಯ ಹೆಸರಿನಲ್ಲಿ ಮಹಿಳೆಯರನ್ನು ಮಾರುವುದರಿಂದ ಬರುವ ಹಣ ಅಥವಾ ಅಶುದ್ಧತೆಯ ಕಾರಣಕ್ಕೆ ವಿಧಿಸಲಾಗುವ ದಂಡದ ಹಣವಿರುತ್ತಿತ್ತು. ಅಪರಾಧ ಎಸಗಿದವರ ನೇರ ಬೆಂಬಲವನ್ನು ಪಡೆಯುವ ಸ್ಥಿತಿಯಲ್ಲಿತ್ತು ಸರಕಾರ, ಇನ್ನೂ ದುರಂತವೆಂದರೆ ಮಾಹಿತಿದಾರರ ಜೊತೆಗೆ ಸೇರಿ ಈ ಹೀನ ಲೂಟಿಯನ್ನು ಹಂಚಿಕೊಳ್ಳುತ್ತಿದ್ದರು.

ಈ ವ್ಯವಸ್ಥೆಯಲ್ಲಿನ ನೀತಿ ನಿಯಮಗಳು ಅಪಾದಿತೆಯ ಜಾತಿಯ ಆಧಾರದಲ್ಲಿ ನಿರ್ಧರಿತವಾಗುತ್ತಿದ್ದವು. ಬ್ರಾಹ್ಮಣರಲ್ಲಿ ಮತ್ತು ಕೊಮ್ಟಿಗಳಲ್ಲಿ, ಮಹಿಳೆಯರನ್ನು ಮಾರಲಾಗುತ್ತಿರಲಿಲ್ಲ ಆದರೆ ತಮ್ಮ ಜಾತಿಯಿಂದ ಹೊರಹಾಕಿಬಿಡುತ್ತಿದ್ದರು ಮತ್ತವರಿಗೆ ಸೂಳೆ ಪಟ್ಟ ಕಟ್ಟಿಬಿಡುತ್ತಿದ್ದರು; ನಂತರ ಈ ಮಹಿಳೆಯರು ಜೀವಿತಾವಧಿಯುದ್ದಕ್ಕೂ ಇಜಾರುದಾರರಿಗೆ ವರುಷಾ ವರುಷ ದುಡ್ಡು ಕಟ್ಟಬೇಕಿತ್ತು. ಮಹಿಳೆ ಸತ್ತಾಗ, ಅವಳ ಆಸ್ತಿಯೆಲ್ಲ ಇಜಾರುದಾರರ ಪಾಲಾಗುತ್ತಿತ್ತು. ಇನ್ನಿತರೆ ಹಿಂದೂ ಜಾತಿಯ ಮಹಿಳೆಯರನ್ನು ಯಾವೊಂದು ಪಶ್ಚಾತ್ತಾಪವೂ ಇಲ್ಲದೆ ಇಜಾರುದಾರರ ಮಾರಿಬಿಡುತ್ತಿದ್ದ; ತನ್ನ ಆಸೆಗಳನ್ನು ಪೂರೈಸಿಕೊಳ್ಳಲು ಯಾರಾದರೂ ಇಜಾರುದಾರ ಮುಂದೆ ಬಂದರೆ ಮಾರಾಟ ನಡೆಯುತ್ತಿರಲಿಲ್ಲ. ಕಳ್ಳನ ಹೆಂಡತಿ ಮತ್ತು ಕುಟುಂಬವನ್ನೂ ಬಂಧಿಸಿ ಗಂಡನ ಜೊತೆಗೆ ಜೈಲಿಗೆ ನೂಕಿಬಿಡುತ್ತಿದ್ದರು. ಅವರನ್ನು ಬಂಧಿಸಲು ಯಾವುದೇ ಕಾರಣಗಳು ಇಲ್ಲದಿದ್ದಾಗ್ಯೂ. ಈ ಮಾರಾಟಗಳು ಅಂದುಕೊಂಡಂತೆ ಕಳ್ಳತನದಲ್ಲಾಗಲೀ, ಸಾಮಾನ್ಯರ ಕಣ್ಣು ತಪ್ಪಿಸಿ ದೂರದ ಸ್ಥಳದಲ್ಲಾಗಲೀ ನಡೆಯುತ್ತಿರಲಿಲ್ಲ; ಬೆಂಗಳೂರಿನಂತಹ ದೊಡ್ಡ ನಗರಗಳಲ್ಲಿ, ಯುರೋಪಿಯನ್ನರ ಕಣ್ಣಳತೆಯೊಳಗೆ ದೊಡ್ಡ ದೊಡ್ಡ ಕಟ್ಟಡಗಳನ್ನು ಇಂತಹ ದುರದೃಷ್ಟದ ಮಹಿಳೆಯರ ವಸತಿಗೆ ಉಪಯೋಗಿಸಿಕೊಂಡು ಅಲ್ಲೇ ಮಾರಲಾಗುತ್ತಿತ್ತು…..”(206)

ಮಂಡ್ಯ ಜಿಲ್ಲೆಯಲ್ಲಿ ಕೃಷ್ಣರಾಜ ಒಡೆಯರರ ಆಳ್ವಿಕೆಯ ಕಾಲದಲ್ಲಿದ್ದ ಸತಿ ಪದ್ಧತಿಯ ಬಗ್ಗೆ ಶಾಮ ರಾವ್ ತಿಳಿಸುತ್ತಾರೆ. ಇದರ ಬಗ್ಗೆ ಪ್ರತಿಕ್ರಯಿಸುವುದಿರಲಿ, ಪ್ರತಿಕ್ರಯಿಸುವ ಬಗ್ಗೆ ಯೋಚಿಸುವುದೂ ಯೋಗ್ಯವಲ್ಲ ಎಂದು ರಾಜ ಅಂದುಕೊಂಡಿದ್ದ. ಮುಂದುವರಿಸುತ್ತಾ ರೈಸ್ ಹೇಳುತ್ತಾನೆ: “ಮೊರಲು ವಕ್ಕಲಿಗರ ಒಂದು ವರ್ಗದಲ್ಲಿ ವಿಚಿತ್ರ ಆಚರಣೆಯೊಂದು ಚಾಲ್ತಿಯಲ್ಲಿತ್ತು; ಮಹಿಳೆಯರ ಬಲಗೈಯಲ್ಲಿನ ಉಂಗುರ ಬೆರಳು ಮತ್ತು ಕಿರುಬೆರಳನ್ನು ತೆಗೆದುಬಿಡಲಾಗುವ ಆಚರಣೆ. ದೊಡ್ಡ ಮಗಳನ್ನು ಮದುವೆಗೆ ತಯಾರಾಗಿಸಲು ಕಿವಿ ಚುಚ್ಚುವ ಮುನ್ನ ಪ್ರತಿ ಮಹಿಳೆಯೂ ಈ ಅಂಗಹೀನತೆಯ ಪ್ರಕ್ರಿಯೆಗೆ ಒಳಗಾಗಲೇಬೇಕಿತ್ತು. ಹಳ್ಳಿಯ ಅಕ್ಕಸಾಲಿಗ ಈ ಶಸ್ತ್ರಚಿಕಿತ್ಸೆಯನ್ನು ಅತ್ಯಂತ ಒರಟೊರಟಾಗಿ ಮಾಡಿಬಿಡುತ್ತಿದ್ದ, ನಿರ್ದಿಷ್ಟ ಮೊತ್ತವನ್ನು ಕಟ್ಟಿಸಿಕೊಂಡು. ತೆಗೆಯಲಾಗುವ ಬೆರಳನ್ನು ಕಲ್ಲಿನ ಮೇಲಿರಿಸಿ, ಅಕ್ಕಸಾಲಿಗ ಉಳಿಯನ್ನು ಕೀಲಿನ ಮೇಲಿಟ್ಟು ಒಂದೇ ಹೊಡೆತಕ್ಕೆ ಬೆರಳನ್ನು ಬೇರೆ ಮಾಡಿಬಿಡುತ್ತಿದ್ದ. ಮದುವೆಗೆ ಸಿದ್ಧವಾಗಿರುವ ಹುಡುಗಿಗೆ ಅಮ್ಮನಿಲ್ಲದಿದ್ದರೆ, ಆಕೆಯೇ ಈ ತ್ಯಾಗಕ್ಕೆ ಸಿದ್ಧವಾಗಬೇಕಾಗುತ್ತಿತ್ತು.” (207) ಇಂತಹ ಪದ್ಧತಿಗಳನ್ನು ವಿರೋಧಿಸುವುದನ್ನು ಬಿಟ್ಟು, ಸರಕಾರ ಮೌನವಾಗುಳಿದಿತ್ತು ಅಥವಾ ತನ್ನ ಬೆಂಬಲವನ್ನು ನೀಡಿ ಮಹಿಳೆಯರ ಜೀವನವನ್ನು ಬರ್ಬರವನ್ನಾಗಿಸಿತ್ತು.

ಪುರುಷ ಪ್ರಧಾನ ಸಮಾಜ ಊಳಿಗಮಾನ್ಯತೆಯ ಕೈಕೆಳಗೆ ಅನೇಕ ಕುರೂಪಗಳನ್ನು ಪಡೆದುಕೊಂಡಿತು. ಊಳಿಗಮಾನ್ಯತೆಯ ಪೌರುಷತ್ವ ಹೈದರ್ ಅಲಿ ಮತ್ತು ಟಿಪ್ಪು ಸುಲ್ತಾನನ ಕಾಲದಲ್ಲೂ ಸಶಕ್ತವಾಗಿಯೇ ಕಾರ್ಯನಿರ್ವಹಿಸುತ್ತಿದ್ದಾದರೂ, ಇಂತಹ ಅಮಾನವೀಯ ಪದ್ಧತಿಗಳಲ್ಲಿ ಕೆಲವನ್ನಾದರೂ ತಡೆಯಲು ನಡೆದಂತಹ ಪ್ರಯತ್ನಗಳನ್ನು ಗಮನಿಸಬಹುದು. ಕನ್ಯೆಯರನ್ನು ಬಲಿಕೊಡುವುದನ್ನು ನಿಷೇಧಿಸಲಾಯಿತು, ಸೂಳೆಗಾರಿಕೆಯನ್ನು ಬಹಿಷ್ಕರಿಸಲಾಯಿತು ಮತ್ತು ವಯನಾಡು ಹಾಗೂ ಮಲಬಾರಿನಲ್ಲಿ ಮೊಲೆ ತೋರಿಸಿಕೊಂಡೇ ಓಡಾಡಬೇಕಿದ್ದ ಮಹಿಳೆಯರಿಗೆ ಬಟ್ಟೆ ಹಾಕಿಕೊಳ್ಳಲು ಸೂಚಿಸಲಾಯಿತು. ಆದರೆ ವಸಾಹತಿನ ಮೇಲುಗೈ ಈ ಪ್ರಗತಿಪರತೆಯನ್ನು ತಡೆಹಿಡಿಯಿತು ಮತ್ತು ಬ್ರಾಹ್ಮಣ ಧಾರ್ಮಿಕ ಸಂಸ್ಥೆಗಳು ಹಾಗೂ ಪ್ರತಿಗಾಮಿ ಊಳಿಗಮಾನ್ಯತೆಯ ಆಸಕ್ತಿಗಳು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸುವುದಕ್ಕೆ ನೆರವಾಯಿತು. ಕರ್ನಾಟಕ ವಸಾಹತು ಆಳ್ವಿಕೆಗೆ ಒಳಪಟ್ಟಿದ್ದರಿಂದ ಉಂಟಾದ ಪರಿಣಾಮಗಳಲ್ಲಿ ಪುರುಷ ಸಮಾಜ ಮಹಿಳೆಯರ ಮೇಲೆ ನಡೆಸುವ ದೌರ್ಜನ್ಯದ ಹೆಚ್ಚಳವೂ ಒಂದು ಎಂದರದು ತಪ್ಪಾಗಲಾರದು.

ಮುಂದಿನ ವಾರ:
ಸಾಮಾಜಿಕ ಕುಸಿತ ಮತ್ತು ಅರೆಊಳಿಗಮಾನ್ಯ – ವಸಾಯತು ಆಳ್ವಿಕೆಯಲ್ಲಿನ ಬಿಕ್ಕಟ್ಟು