ಮಾರ್ಚ್ 4, 2016

ಮೇಕಿಂಗ್ ಹಿಸ್ಟರಿ: ಬ್ರಿಟೀಷ್ ರಾಜ್ ನ ಸಾಮಾಜಿಕ ಸ್ಥಂಭಗಳು

making history
ಸಾಕೇತ್ ರಾಜನ್
ಕನ್ನಡಕ್ಕೆ: ಡಾ. ಅಶೋಕ್. ಕೆ. ಆರ್

04/03/2016
ಹದಿನೇಳನೇ ಶತಮಾನದಲ್ಲಿ ಬ್ರಿಟನ್ನಿನ ಮಧ್ಯಮವರ್ಗದ ಪ್ರಜಾಪ್ರಭುತ್ವ ಕ್ರಾಂತಿ ಪೂರ್ಣವಾಗಿದ್ದು ಊಳಿಗಮಾನ್ಯ ಪದ್ಧತಿಯ ವಿರುದ್ಧ ನಿಂತ ರೈತರಿಗೆ ಮಧ್ಯಮವರ್ಗದ ಮುಂದಾಳತ್ವ ಜೊತೆಯಾದಾಗ. ಬ್ರಿಟನ್ನಿನಲ್ಲಿ ಬಂಡವಾಳಶಾಹಿತನ ಪ್ರಾರಂಭವಾಗಿದ್ದು ಇದೇ ಕ್ರಾಂತಿಯಿಂದ. ಆದರೆ ನಾವು ನೋಡುವಂತೆ ಕರ್ನಾಟಕ ಮತ್ತು ಭಾರತದಲ್ಲಿ ಇದೇ ಬ್ರಿಟೀಷ್ ಬಂಡವಾಳ ಊಳಿಗಮಾನ್ಯ ಪದ್ಧತಿಯ ಜೊತೆಗೆ ಸಖ್ಯ ಬೆಳೆಸಿಕೊಂಡ ಊಳಿಗಮಾನ್ಯ ಪದ್ಧತಿ ಕೊಳೆಯುವಿಕೆಯಿಂದ ಜೀವಂತಿಕೆಯತ್ತ ಹೊರಳಿತು. ಇದು ನಮ್ಮ ದೇಶದ ಬಂಡವಾಳಶಾಹಿತನದ ಅಭಿವೃದ್ಧಿಯ ಇತಿಹಾಸದಲ್ಲಿನ ಅತಿ ಮುಖ್ಯ ಘಟ್ಟ ಮತ್ತು ನಮ್ಮ ನೆಲದಲ್ಲಿ ಹೂಡಲಾದ ವಿದೇಶಿ ಬಂಡವಾಳದ ವಿಶಿಷ್ಟ ಲಕ್ಷಣ. ಸಾಮಾಜಿಕ ಪರಿಸ್ಥಿತಿ ಮತ್ತಷ್ಟು ಜಟಿಲವಾಯಿತು. ಈ ಅಂಶ ಮಾರ್ಕ್ಸ್ – ಲೆನಿನ್ – ಮಾವೋವಾದಿಗಳನ್ನು ವಿಚಲಿಸಿದ ಕಾರಣಕ್ಕೆ ರಿವಿಷನಿಸ್ಟ್ ಇತಿಹಾಸ ಮುಕ್ಕಾಯಿತು. ಈ ಅಂಶ ಮೂಡಲು ಕಾರಣರಾದವರ ಬಗ್ಗೆ ಮೊದಲು ತಿಳಿದು ನಂತರ ಇತಿಹಾಸಕಾರರೊಡನೆ ಚರ್ಚೆಗೆ ಮರಳೋಣ.

ಮೈಸೂರನ್ನು ವಶಕ್ಕೆ ತೆಗೆದುಕೊಳ್ಳುವಾಗ ಮದ್ರಾಸ್ ಸರಕಾರಕ್ಕೆ ಗವರ್ನರ್ ಜೆನರಲ್ ಎರಡು ಮುಖ್ಯ ಸೂಚನೆಗಳನ್ನು ನೀಡುತ್ತಾನೆ. ಅವುಗಳಲ್ಲೊಂದು “ಅಸ್ತಿತ್ವದಲ್ಲಿರುವ ಸ್ಥಳೀಯ ಸಂಸ್ಥೆಗಳನ್ನು ಜಾಗರೂಕತೆಯಿಂದ ನೋಡಿಕೊಳ್ಳಬೇಕು” ಎನ್ನುವುದಾಗಿತ್ತು. (62) ಗವರ್ನರ್ ಜೆನರಲ್ ಈ ಸಲಹೆಗೆ ಯಾವುದೇ ವಿವರಣೆ ನೀಡಿರಲಿಲ್ಲ; ಬಹುಶಃ ವಸಾಹತು ಕಟ್ಟುವ ಮನ್ರೋರಂತವರಿಗೆ ಇದರ ಬಗೆಗಿನ ಮಾಹಿತಿ ಮೊದಲೇ ಇತ್ತು.

1812-13ರಲ್ಲಿ ಬರೆದ ಪತ್ರವೊಂದರಲ್ಲಿ ಮನ್ರೋ: “ವ್ಯವಸ್ಥೆಯ ಒಳಚೌಕಟ್ಟನ್ನು ಹಿಡಿದಿಡುವ ರಾಜಕಾರಣದ ವಸ್ತುಗಳಾಗಿ ಪ್ರತೀ ಹಳ್ಳಿಯ ಪಟೇಲರು ಮತ್ತು ಶಾನುಭೋಗರು ಸರಕಾರಕ್ಕೆ ತುಂಬಾ ಉಪಯುಕ್ತರು.”(63) ಇದು ತುಂಬ ಸಂಕ್ಷಿಪ್ತ ನೋಟವಾದರೂ ನ್ಯಾಯಸಮ್ಮತವಾದದ್ದು! ಬ್ರಿಟೀಷ್ ವಸಾಹತುಶಾಹಿ, ಊಳಿಗಮಾನ್ಯ ವರ್ಗವನ್ನು ಅತಿಯಾಗಿ ಮುದ್ದಿಸುವ ಹಿಂದಿನ ಪ್ರೇರಣೆಯನ್ನು ಇದು ಹೊರಹಾಕಿತ್ತು.

ಮನ್ರೋನ ವಾದಗಳನ್ನು ಹೆಚ್ಚಿನ ವಿವರಗಳೊಂದಿಗೆ ನೋಡೋಣ. ಜಮೀನ್ದಾರರು ಮತ್ತು ಊಳಿಗಮಾನ್ಯ ಪದ್ಧತಿಯ ಉಳಿಯುವಿಕೆಯ ಬಗ್ಗೆ ಸ್ಪಷ್ಟವಾಗಿ ಮಾತನಾಡುತ್ತಾನೆ. “ನಮ್ಮ ಅಧಿಕಾರ ಶೈಶಾವಸ್ಥೆಯಲ್ಲಿದ್ದಾಗ, ದೊಡ್ಡ ಜಮೀನ್ದಾರರು ಒಡ್ಡುತ್ತಿದ್ದ ಸಶಕ್ತ ಪ್ರತಿರೋಧವನ್ನು ಕುಗ್ಗಿಸಲು ಅವರ ಸಾಮ್ರಾಜ್ಯದ ವ್ಯಾಪ್ತಿಯನ್ನು ಕಿರಿದುಗೊಳಿಸುವುದು ಸರಿಯಾದ ಮಾರ್ಗವಾಗಿತ್ತು. ನಮ್ಮ ಇವತ್ತಿನ ಅಧಿಕಾರ ಶಕ್ತವಾಗಿರುವ ಪರಿಸ್ಥಿತಿಯಲ್ಲಿ ಅವರನ್ನು ಎಷ್ಟು ಸಾಧ್ಯವೋ ಅಷ್ಟು ಪೂರ್ಣವಾಗಿ ಉಳಿಸಿಕೊಳ್ಳುವುದು ನಮ್ಮ ಗುರಿಯಾಗಬೇಕು. ಜಮೀನ್ದಾರರ ಸಂತತಿ ಪೂರ್ಣ ನಾಶವಾಗಿಬಿಟ್ಟರೆ, ದೇಶದ ಆಳ್ವಿಕೆಯಲ್ಲಿ ಸ್ಥಳೀಯರಾರೂ ಇರುವುದಿಲ್ಲ. ಎಲ್ಲಾ ಉದ್ಯೋಗ ಮತ್ತು ಅಧಿಕಾರ ಕೆಲವೇ ಕೆಲವು ಯುರೋಪಿಯನ್ನರ ಜವಾಬ್ದಾರಿಯಾಗುತ್ತದೆ. ಆ ರೀತಿಯ ಪರಿಸ್ಥಿತಿ ಸರಕಾರದ ಭದ್ರತೆಗೆ ಅಪಾಯಕಾರಿ; ಸ್ಥಳೀಯರು, ಆಳುವ ವಿದೇಶಿ ಜನರ ಐಷಾರಾಮಿತನ ಮತ್ತು ತಮ್ಮ ಹೀನ ಸ್ಥಿತಿಯನ್ನು ತುಲನೆ ಮಾಡದೆ ಇರಲಾರರು. ಎಲ್ಲಾದರೂ ಒಂದೆಡೆ ಅಸಹನೆ ಪ್ರತಿಭಟನೆಯ ಸ್ವರೂಪ ಪಡೆದುಕೊಂಡರೆ, ಅದು ಶೀಘ್ರವಾಗಿ ಇತರೆಡೆಗೂ ಹರಡುತ್ತದೆ. ಒಂದೆಡೆ ಪ್ರತಿಭಟನೆಯನ್ನು ಹತ್ತಿಕ್ಕುವುದು ಮತ್ತೊಂದೆಡೆ ಪ್ರತಿಭಟನೆಗೆ ಪ್ರಚೋದನೆ ನೀಡುತ್ತದೆ. ನಮ್ಮೆಡೆಗೆ ಅವರಿಗೆ ಕರುಣೆಯೇನಿಲ್ಲ. ತಮ್ಮ ಬದುಕಿನ ನಿರ್ವಹಣೆಗೆ ಕೆಲವರು ನಮ್ಮ ಮೇಲೆ ಅವಲಂಬಿತರಾಗಿರುವುದನ್ನು ಬಿಟ್ಟರೆ ಉಳಿದವರಿಗೆ ಸರಕಾರದ ಜೊತೆಗೆ ಯಾವುದೇ ಬಂಧವಿಲ್ಲ. ಕೆಳವರ್ಗದ ಅಧಿಕಾರಿಗಳಿಗೆ, ಮತ್ತಿತರ ಅವಲಂಬಿತ ಯುರೋಪಿಯನ್ನರಿಗೆ ಪುರಾತನ ಕುಟುಂಬಗಳ ಆಸ್ತಿಪಾಸ್ತಿ ಸಿಕ್ಕುಬಿಟ್ಟಿದೆ ಎನ್ನುವ ಅಂಶವಷ್ಟೇ ಸಾಕು ಅವರು ನಮ್ಮ ವಿರುದ್ಧ ಸಿಡಿದೇಳಲು.

ಜಮೀನ್ದಾರರಿಂದ ಏನನ್ನಾದರೂ ದಸ್ತಗಿರಿ ಮಾಡುವಷ್ಟು ನಮ್ಮ ಶಕ್ತಿ ಬೆಳೆದಿದೆ. ವಿರೋಧಿಸಲಾಗುವುದಿಲ್ಲ ಎನ್ನುವುದವರಿಗೆ ಗೊತ್ತಿದೆ; ಅವರಿಗಿರುವ ಸಂತಸದ ಹಕ್ಕುಗಳನ್ನು ಮೊಟಕುಗೊಳಿಸುವ ಕೆಲಸಗಳನ್ನು ನಾವು ಮಾಡುವುದಿಲ್ಲ ಎನ್ನುವುದೂ ಅವರಿಗೆ ಗೊತ್ತಿದೆ. ಜಮೀನ್ದಾರಿ ಆಸ್ತಿಯನ್ನು ತಮ್ಮ ಪುಟ್ಟ ಅಥವಾ ದೊಡ್ಡ ಸೈನಿಕ ಶಕ್ತಿಯ ಮೂಲಕ ಅವರು ರಕ್ಷಿಸಿಕೊಳ್ಳಲು ಬೇಕಾದ ಭದ್ರತೆ ಸಿಗುತ್ತದೆ. ಈ ಸುರಕ್ಷಾ ಭಾವದ ಬಗ್ಗೆ ಸ್ವಲ್ಪ ಸ್ವಲ್ಪವಾಗಿ ಅವರಿಗೆ ನಂಬಿಕೆ ಮೂಡುತ್ತಿದ್ದಂತೆ ಸೈನ್ಯ ಸಾಕುವ ಅಭ್ಯಾಸಗಳನ್ನು ಮರೆತು ಆಸ್ತಿ ಪಾಸ್ತಿಯನ್ನು ಹೆಚ್ಚಿಸುವ ಕಡೆಗೆ ಗಮನಹರಿಸುತ್ತಾರೆ. ಮತ್ತು ಅವರ ಒಳಿತಿಗಾಗಿ ಬೇರೆಲ್ಲಾ ವರ್ಗಗಳಿಗಿಂತಲೂ ಹೆಚ್ಚಾಗಿ ಯಾವುದೇ ಆತಂಕದ ಸಮಯದಲ್ಲಿ ಸರಕಾರದ ನೆರವಿಗೆ ಬರುತ್ತಾರೆ. ದೂರದ ಬೆಟ್ಟದ ಮೇಲಿನ ಮುಖ್ಯಸ್ಥರಲ್ಲಿ ಈ ರೀತಿಯ ಬದಲಾವಣೆ ಕೊನೆಗೆ ಬರಬಹುದು, ಆದರೆ ಎಲ್ಲರಲ್ಲೂ ಈ ಬದಲಾವಣೆ ಆಗೇ ಆಗುತ್ತದೆ. ನಮ್ಮ ಪ್ರಭಾವಳಿಯಿಂದ ಈ ಬದಲಾವಣೆ ವೇಗ ಪಡೆಯುತ್ತದೆ…..ನಮ್ಮ ಸಂಯಮದ ನಡವಳಿಕೆ ಪ್ರಭಾವಳಿಗಿಂತಲೂ ಮುಖ್ಯವಾದುದು.

ಜಮೀನುದಾರರ ಭೂಮಿಯಷ್ಟೇ ಅಲ್ಲ, ಹಳ್ಳಿಯಲ್ಲಿರುವ ಸೇವಕರ ಅಧಿಕೃತ ಜಮೀನನ್ನು ವಿಭಾಗಿಸಿ ಹಂಚಲಾಗುತ್ತಿದೆ. ಈ ಪಾಪ ಕಾರ್ಯವನ್ನು ತಡೆಯುವ ಕಾರ್ಯಕ್ರಮಗಳನ್ನು ಅಳವಡಿಸಿಕೊಳ್ಳದಿದ್ದರೆ ಪ್ರತೀ ಭೂಮಾಲೀಕನೂ ಸಾಮಾನ್ಯ ಕೃಷಿಕನ ಸ್ಥಾನಕ್ಕೆ ಇಳಿದುಬಿಡುತ್ತಾನೆ. ಮೇಲ್ವರ್ಗದ ಪತನದೊಂದಿಗೆ ಜನರ ವ್ಯಕ್ತಿತ್ವವೂ ಕುಗ್ಗಿ ಹೋಗುತ್ತದೆ; ಸರಕಾರದ ಜೊತೆಗಿನ ಬಂಧ ಸಡಿಲವಾಗುತ್ತದೆ, ಅವರನ್ನು ಉದ್ಧರಿಸುವ ನಮ್ಮ ಕಾರ್ಯಕ್ರಮಗಳ ಬಗೆಗಿನ ಆಸಕ್ತಿಯನ್ನು ಅವರು ಕಳೆದುಕೊಂಡುಬಿಡುತ್ತಾರೆ ಮತ್ತು ಸರಕಾರ ನಡೆಸುವುದು ದಿನೇ ದಿನೇ ಕಷ್ಟಕರವಾಗುತ್ತದೆ. ಈ ಕಾರಣಗಳಿಂದ ಪುರಾತನ ಜಮೀನುದಾರರನ್ನು ಉಳಿಸಲು ನಮ್ಮ ಅಧಿಕಾರಶಕ್ತಿಯಲ್ಲಿ ಸಾಧ್ಯವಾದದ್ದೆಲ್ಲವನ್ನೂ ಮಾಡಬೇಕು ಮತ್ತು ಅಧಿಕೃತ ಎಸ್ಟೇಟುಗಳು ಮುರಿದು ಬೀಳದಂತೆ ನೋಡಿಕೊಳ್ಳಬೇಕು. ಇದು ಸಮಾಜದಲ್ಲಿ ಉನ್ನತ ಮತ್ತು ಕೆಳ ವರ್ಗವನ್ನು ಉಳಿಸುತ್ತದೆ ಮತ್ತು ಈ ಉಳಿಯುವಿಕೆಯಿಂದಷ್ಟೇ ಇಲ್ಲಿನ ಪರಿಸ್ಥಿತಿಯನ್ನು ಸುಧಾರಿಸಬಹುದಾಗಿದೆ.

ಆ ನಿಯಮಗಳ ಪ್ರಕಾರ ಭೂಮಿ ಹೊಂದದ ಭೂಮಾಲೀಕರಿಗೆ ಅಥವಾ ಹಳೆಯ ಜಮೀನುದಾರರಿಂದ ಭೂಮಿ ಖರೀದಿಸಿರುವ ಅಪರಿಚಿತರಿಗೆ ಇದು ಅನ್ವಯವಾಗದು.

ಬಾಕಿ ತೆರಿಗೆಯ ವಸೂಲಿಗಾಗಿ ಜಮೀನುದಾರರ ಭೂಮಿಯನ್ನು ಮಾರಾಟ ಮಾಡುವುದನ್ನು ಗೌರವಾನ್ವಿತ ನಿರ್ದೇಶಕ ಮಂಡಳಿ ಈಗಾಗಲೇ ನಿಷೇಧಿಸಿದೆ.”(64)

ಪುರಾತನ ಊಳಿಗಮಾನ್ಯ ಪದ್ಧತಿಯ ಆಸ್ತಿ ಮತ್ತದನ್ನು ಹೊಂದಿದ್ದ ಜಮೀನ್ದಾರ ವರ್ಗವನ್ನು ರಕ್ಷಿಸುವಾಗ ಮನ್ರೋ ಮೇಲ್ಮಟ್ಟದ ಅಧಿಕಾರಸ್ಥರ ಒಪ್ಪಿಗೆಗೆ ಮಾತ್ರ ಕಾಯುತ್ತಿದ್ದ. ಬ್ರಿಟೀಷ್ ರಾಜ್ ನ ಆಳ್ವಿಕೆಗೊಳಪಟ್ಟಿದ್ದ ಒಂದು ದೊಡ್ಡ ರಾಜಸಮೂಹ ಶಿರಸಾವಹಿಸಿ ಒಪ್ಪಿಬಿಡುತ್ತದೆ.

ಇಲ್ಲಿಯವರೆಗೆ ಊಳಿಗಮಾನ್ಯ ಪದ್ಧತಿಯ ಆರ್ಥಿಕ ಬುನಾದಿಯನ್ನು ತಲುಪುವ ಮನ್ರೋನ ವಿಧಾನವನ್ನು ನೋಡಿದೆವು. ಬ್ರಿಟೀಷ್ ಸಾಮ್ರಾಜ್ಯದ ಅನುಕೂಲಕ್ಕೆ ತಕ್ಕಂತೆ ಅವನದನ್ನು ಅಭ್ಯಸಿಸಿದ್ದನ್ನು ಈಗ ನೋಡೋಣ.

ಭಾರತದಲ್ಲಿ ಕೆಲಸ ಮಾಡಲು ಬ್ರಿಟೀಷ್ ಸಿವಿಲ್ ಸರ್ವೀಸಿಗೆ ಹೊಸತಾಗಿ ಸೇರಿದವರಿಗೆ ತಮಗೆ ಎದುರಾದ ಫ್ಯೂಡಲ್ ಮೂರ್ಖರನ್ನು ಬದಲಿಸುವ ಉತ್ಸುಕತೆಯಿತ್ತು. ಇದಕ್ಕಿದ್ದ ಕಾರಣ ಸರಳ ಸಾಂಸ್ಕೃತಿಕ ದ್ವೇಷ. ಮದ್ರಾಸ್ ಪ್ರಾಂತ್ಯದ ಗವರ್ನರಾಗಿದ್ದ ಮನ್ರೋ ಇವರು ಸಾಗಬೇಕಾದ ದಾರಿಯನ್ನು ಹಾಕಿಕೊಟ್ಟಿದ್ದರು. 

“ಸ್ವತಂತ್ರ ದೇಶದಲ್ಲಿನ ಬುನಾದಿಯ ಮೇಲೆ ನಮ್ಮ ಸಂಸ್ಥೆಗಳು ನಿಂತಿಲ್ಲವಾದ್ದರಿಂದ ಸ್ವತಂತ್ರ ದೇಶದಲ್ಲಿ ಕಾರ್ಯನಿರ್ವಹಿಸಿದಂತೆಯೇ ಕೆಲಸ ಮಾಡುವುದು ಸಾಧ್ಯವಿಲ್ಲ. ಸತ್ತ ಹೆಣದಿಂದ ಜೀವಂತ ದೇಹದ ಕೆಲಸಗಳನ್ನು ಮಾಡಿಸುವುದು ಅಸಾಧ್ಯ. ಹಾಗಾಗಿ ನೀತಿ ನಿಯಮಗಳನ್ನಿಲ್ಲಿ ರಚಿಸುವಾಗ ಈ ದೇಶದ ಮೇಲೆ ಅದರ ಸಂಭಾವ್ಯ ಪರಿಣಾಮಗಳೇನು ಎನ್ನುವುದರ ಬಗ್ಗೆ ಯೋಚಿಸಬೇಕೇ ಹೊರತು ಈ ರೀತಿಯ ನೀತಿ – ನಿಯಮಗಳು ಇಂಗ್ಲೆಂಡಿನ ಮೇಲೆ ಯಾವ ಪರಿಣಾಮಗಳನ್ನುಂಟುಮಾಡುತ್ತಿತ್ತು ಎಂಬುದನ್ನಲ್ಲ…….”(65)

ಬ್ರಿಟೀಷ್ ಅಧಿಕಾರಿಗಳು ಮನ್ರೋಗೆ ಪತ್ರದ ಮೇಲೆ ಪತ್ರ ಬರೆದು ಜನರಿಗೆ ಆತ ತೆರೆದುಕೊಂಡ ರೀತಿ ಉಂಟುಮಾಡಬಹುದಾದ ದಾಳಿಯ ಬಗ್ಗೆ ಕೇಳುತ್ತಿದ್ದಾಗ 1801ರ ಡಿಸೆಂಬರಿನಲ್ಲಿ ಊಳಿಗಮಾನ್ಯ ಪದ್ಧತಿ ವಸಾಹತುಶಾಹಿ ಆಳ್ವಿಕೆಯ ಸುಭದ್ರತೆಗೆ ಎಷ್ಟು ಮುಖ್ಯ ಎನ್ನುವುದನ್ನು ವಿವರಿಸುತ್ತ: “ಗುರ್ರಂಕೊಂಡದ ಎಲ್ಲಾ ಪಾಳೇಗಾರರು ಮತ್ತವರ ಹಿಂಬಾಲಕರು ಸೇರಿದ್ದ ಸಭೆಗೆ ಹೋದಾಗ ನನ್ನ ಜೊತೆ ಒಬ್ಬೇ ಒಬ್ಬ ವ್ಯಕ್ತಿ ಇರಲಿಲ್ಲ, ಕಳೆದ ವರ್ಷ ಹೋದಾಗಲೂ ಇರಲಿಲ್ಲ. ಅವರಿಗೆ ಸಿಗುವ ತೆರಿಗೆಯ ಹಣವನ್ನು (cowle) ನಾನು ಕಡಿತಗೊಳಿಸಿದ್ದೆ ಮತ್ತು ನಾನವರನ್ನು ಪಟೇಲರ ಮಟ್ಟಕ್ಕೆ ಇಳಿಸುತ್ತೇನೆನ್ನುವುದೂ ಅವರಿಗೆ ಗೊತ್ತಿತ್ತು. ಆದರೂ ಒಂದಿನಿತೂ ಅಗೌರವ ತೋರಲಿಲ್ಲ. ಸಾಮಾನ್ಯವಾಗಿ ಭಾರತೀಯ ಸಂಜಾತರು ಸಾರ್ವಜನಿಕ ಅಧಿಕಾರಿಗಳೆಡೆಗೆ ಭಯ ಭಕ್ತಿಯಿಂದ ಕೂಡಿದ ಪೂಜ್ಯ ಭಾವನೆ ಹೊಂದಿರುತ್ತಾರೆ.” (66)

ಮಧ್ಯಮವರ್ಗದ ಪ್ರಜಾಪ್ರಭುತ್ವ ಇಂಗ್ಲೆಂಡ್ ಮತ್ತು ಅರೆಊಳಿಗಮಾನ್ಯ ಭಾರತದ ನಡುವಿನ ಗೆರೆಯನ್ನು ಮನ್ರೋ ಗುರುತಿಸಿದ್ದ. ಅವನಿಗೆ ಊಳಿಗಮಾನ್ಯ ಪದ್ಧತಿ ಮುಂದುವರೆಯಬೇಕಿತ್ತು. ಅದರ ಬಗ್ಗೆ ಅನುಮಾನ ಬೇಡ. ವರ್ಗ, ಜಾತಿ, ಲಿಂಗ ಮತ್ತಿನ್ಯಾವ ಭೇದಗಳಿವೆಯೋ ಹೆಸರಿಸಿ – ಅವೆಲ್ಲವೂ ಮುಂದುವರಿಯುವುದು ಆತನಿಗೆ ಬೇಕಿತ್ತು. ಸ್ಥಿರಾಸ್ಥಿಯ ಹಕ್ಕುಗಳನ್ನು ಕೀಲಿಕೈಯಾಗಿ ಬಳಸಿ ಊಳಿಗಮಾನ್ಯತೆಯ ಉಳಿವಿಗಾಗಿ ಆತ ಕೆಲಸ ಮಾಡಿದ. ಈ ಉಳಿಯುವಿಕೆಯನ್ನು ಸಾಧಿಸಲು ವಸಾಹತುಶಾಹಿಯಡಿಯ ನಿಯಮಗಳನ್ನು ಉಪಯೋಗಿಸಿಕೊಂಡ. ಊಳಿಗಮಾನ್ಯ ಪದ್ಧತಿ ವಸಾಹತುಶಾಹಿಯ ಸೇವೆ ಮಾಡಿಕೊಂಡಿರಬೇಕೆಂಬುದು ಆತನ ಆಸೆಯಾಗಿತ್ತು. ಊಳಿಗಮಾನ್ಯ ಪದ್ಧತಿಯು ಭಾರತವನ್ನು ಒಂದು ತಟ್ಟೆಯಲ್ಲಿಟ್ಟು ಬ್ರಿಟೀಷರಿಗೆ ಲೂಟಿ ಮಾಡಲು ಕೊಡುವುದನ್ನು ಆತ ನೋಡಬೇಕಿತ್ತು. ಕೆಲವು ಬದಲಾವಣೆಗಳೊಂದಿಗೆ ಊಳಿಗಮಾನ್ಯ ಪದ್ಧತಿ ಮುಂದುವರಿಯಬೇಕಿತ್ತೆಂದು ಹೇಳಬಹುದು. ಅರೆಊಳಿಗಮಾನ್ಯ ಪದ್ಧತಿಯನ್ನು ಪ್ರತಿಷ್ಠಾಪಿಸಬೇಕಿತ್ತು.

ಒಂದೆಡೆ ದೊಡ್ಡ ದೊಡ್ಡ ಭೂಮಾಲೀಕತ್ವ ಒಡೆದು ಹೋಗುವುದನ್ನು ತಡೆದು ಊಳಿಗಮಾನ್ಯ ಪದ್ಧತಿಯ ಆರ್ಥಿಕತೆಯನ್ನು ಉಳಿಸಿದ ವಸಾಹತುಶಾಹಿಗಳು ಮತ್ತೊಂದೆಡೆ ವೈಯಕ್ತಿಕವಾಗಿ ಅವರಿಗೆ ಅಸಹ್ಯವೇ ಹುಟ್ಟಿಸಿದ್ದ ಅಸ್ಪ್ರಶ್ಯತೆ, ಮೂಢನಂಬಿಕೆ, ನಿರಕ್ಷರತೆ, ಬಾಲ್ಯವಿವಾಹ, ವಿಧವಾ ಹತ್ಯೆ, ಬಸದಿ ಬಿಡುವುದು ಮತ್ತು ಇನ್ನಿತರೆ ಸನಾತನ ಪದ್ಧತಿಗಳನ್ನು ತಡೆಯುವುದಕ್ಕೆ ಬೇಕಾದ ಸಾಮಾಜಿಕ ಮತ್ತು ಸಾಂಸ್ಕೃತಿಕ ಬದಲಾವಣೆಗಳನ್ನು ಜಾರಿಗೊಳಿಸುವುದಕ್ಕೆ ಹಿಂದೇಟು ಹಾಕಿದರು. ಬದಲಿಗೆ ಈ ಪ್ರತಿಗಾಮಿ ಮೂಢನಂಬಿಕೆಗಳ ಮುಂದುವರಿಕೆಗೆ ತಮ್ಮ ಪೂರ್ಣ ಸಹಕಾರ ನೀಡಿದರು; ವಸಾಹತು ಆಳ್ವಿಕೆಗೆ ತೊಂದರೆಯಾಗಬಾರದೆಂಬ ಕಾರಣಕ್ಕೆ. ವರುಷಗಳ ಆಡಳಿತದಿಂದ ಬ್ರಿಟೀಷ್ ಆಳ್ವಿಕೆ ಪ್ರಬುದ್ಧತೆ ಪಡೆದುಕೊಂಡಾಗ, ಜನಪ್ರಿಯ ಹೋರಾಟಗಳ ದೆಸೆಯಿಂದ ಸಾಮಾಜಿಕ ಅನಿಷ್ಟಗಳ ವಿರುದ್ಧ ಕಾನೂನು ಜಾರಿಗೊಳಿಸುವುದನ್ನು ಕಲಿತುಕೊಂಡರು. ಆದರೆ ಅವುಗಳ ಜಾರಿಗೆ ತಮ್ಮ ರೆಟ್ಟೆಗೆ ಶ್ರಮ ಕೊಡಲಿಲ್ಲ. ಇದನ್ನು ಬ್ರಿಟೀಷರ ಹಗ್ಗದ ಮೇಲಿನ ನಡಿಗೆ ಎಂದು ಕರೆಯಬಹುದೇನೋ?! ಆದರಿದು ಭಾರತದ ಫಕೀರರು ಮತ್ತು ದೊಂಬರಾಟದವರ ಆಟಕ್ಕಿಂತ ಹೆಚ್ಚು ಕೃತ್ರಿಮವಾಗಿತ್ತು. ಇದು ಭಾರತದ ಜನ ಸಮುದಾಯದ ಮೇಲೆ ಮಾಡಿದ ಮೋಡಿ – ಈ ಮೋಡಿಯನ್ನು ಇವತ್ತು ಭಾರತವನ್ನಾಳುತ್ತಿರುವವರು ಕೊಂಚ ಉತ್ತಮಪಡಿಸಿಕೊಂಡು ಮುಂದುವರೆಸಿದ್ದಾರೆ. ಈ ರಾಜಕೀಯ ಯುಕ್ತಿಯ ನಡೆ ಸಂವಿಧಾನದ ಬದಲಾವಣೆ ಬಯಸಿದವರು ಮತ್ತು ಪ್ರಗತಿಪರರು ವೈಯಕ್ತಿಕವಾಗಿ ಬ್ರಿಟೀಷ್ ರಾಜ್ ಅನ್ನು ಹೊಗಳುವಂತೆ ಮಾಡಿತು. ಸಾರ್ವಜನಿಕ ಬೆಂಬಲ ಸಿಗುವಂತೆ ಮಾಡಿತು.

ಊಳಿಗಮಾನ್ಯ ಪದ್ಧತಿಯ ಬುಡ ತಲುಪಿದ ಬ್ರಿಟೀಷರು, ಭಾರತದ ಜನಸಮೂಹದ ವಿರುದ್ಧ ಅವರು ಉಪಯೋಗಿಸುತ್ತಿದ್ದ ಕಬ್ಬಿಣದ ಕೈಗವಸನ್ನು ತಾವು ಧರಿಸಿದರು. ಊಳಿಗಮಾನ್ಯ ಪದ್ಧತಿಯ ಮೇಲ್ರಚನೆಯನ್ನು ಉಳಿಸಿ ನೆಲೆ ನಿಂತರು.

ಊಳಿಗಮಾನ್ಯ ಪದ್ಧತಿಯ ಅಸ್ತಿತ್ವ, ಶ್ರಮಿಕ ವರ್ಗವನ್ನು ದಮನಿಸಲು ಮತ್ತು ಆಕ್ರಮಿಸಿಕೊಂಡ ದೇಶವನ್ನಾಳಲು ನೀಡುತ್ತಿದ್ದ ರಾಜಕೀಯ ಅನುಕೂಲ ಉಳಿದೆಲ್ಲಕ್ಕಿಂತಲೂ ದೊಡ್ಡದು. ಊಳಿಗಮಾನ್ಯ ಆರ್ಥಿಕತೆಯಲ್ಲಿ ನೇರ ಸಂಬಂಧ, ವಲಸೆಗೆ ಅವಕಾಶವಿಲ್ಲದಿರುವುದು ಮತ್ತು ಜೀತದ ಕಾರಣದಿಂದ ಕೂಲಿಯವನನ್ನು ಯಜಮಾನನಿಗೆ ಬಂಧಿಸುತ್ತಿತ್ತು ಮತ್ತು ಇಬ್ಬರೂ ಜಮೀನಿನ ಬಂಧಿಗಳಾಗಿದ್ದರು; ಇದು ವಸಾಹತುಶಾಹಿ ಸರಾಗವಾಗಿ ತನ್ನ ಯೋಜನೆಗಳನ್ನು ಜಾರಿಗೊಳಿಸಲು, ಬದಲಿಸಲು ಅವಕಾಶ ನೀಡುತ್ತಿತ್ತು. ಊಳಿಗಮಾನ್ಯ ಪದ್ಧತಿಯನ್ನು ಭೂಹಂಚಿಕೆಯ ಮೂಲಕ ನಾಶಗೊಳಿಸಿದ್ದರೆ ಬಂಡವಾಳಶಾಹಿತನದ ಪ್ರವೇಶವಾಗುತ್ತಿತ್ತು, ಮತ್ತಿದು ಕೂಲಿಕಾರ್ಮಿಕರಲ್ಲಿ ರಾಜಕೀಯ ಹಕ್ಕಿನ ಪ್ರಜ್ಞೆಯನ್ನು ಜಾಗ್ರತಗೊಳಿಸುತ್ತಿತ್ತು. ಇದಕ್ಕೆ ಜಪಾನ್ ದೇಶ ಉದಾಹರಣೆಯಾಗಿದೆ. ವಸಾಹತುಶಾಹಿಯ ಆಕ್ರಮಣ ಮತ್ತು ಜಪಾನ್ ಮಾರುಕಟ್ಟೆಯ ದೋಚುವಿಕೆ ಹೆಚ್ಚು ಕಾಲ ನಡೆಯಲಿಲ್ಲ; ಕಾರಣ, ಜಾಗ್ರತ ಕಾರ್ಮಿಕರು ನಗರ ಪ್ರದೇಶದ ಬಡವರ ಜೊತೆಗೆ ಕೈಜೋಡಿಸಿ ಊಳಿಗಮಾನ್ಯ ಪದ್ಧತಿಯ ವಿರುದ್ಧ ಹೋರಾಡಲಾರಂಭಿಸಿದ್ದರು. ಪಾಶ್ಚಿಮಾತ್ಯ ವಸಾಹತುಶಾಹಿಗಳು ಜಪಾನಿಗೆ ಕಾಲಿಟ್ಟು ಅಲ್ಲಿನ ಊಳಿಗಮಾನ್ಯ ದೊರೆಗಳು ಮತ್ತವರ ಹಿಂಬಾಲಕರ ಜೊತೆಗೆ ಒಪ್ಪಂದ ಮಾಡಿಕೊಂಡರೂ ಹೋರಾಟವನ್ನು ಹತ್ತಿಕ್ಕಲಾಗಲಿಲ್ಲ, ಊಳಿಗಮಾನ್ಯ ಪದ್ಧತಿಯ ವಿರುದ್ಧ ಪ್ರಾರಂಭವಾದ ಸಣ್ಣ ಮಟ್ಟದ ಹೋರಾಟ ರಾಷ್ಟ್ರೀಯತೆಯ ಭಾವನೆಯ ಜಾಗ್ರತಿಯೊಂದಿಗೆ ವೇಗ ಪಡೆದುಕೊಂಡು ಊಳಿಗಮಾನ್ಯ ಪದ್ಧತಿಯನ್ನು ಉಳಿಸಿ – ಬೆಳೆಸಿ ಜಪಾನ್ ದೇಶವನ್ನು ವಶಪಡಿಸಿಕೊಳ್ಳಬೇಕೆಂದಿದ್ದ ವಸಾಹತುಶಾಹಿಗಳನ್ನು ಹೊಡೆದೋಡಿಸಿದರು. (67)

ಮಸುದ್ ದನ್ಮೋಲೆಯ ಪುಸ್ತಕ ‘The Heritage of Imperialism’ ಎರಡು ಭಿನ್ನ ಸಾಮಾಜಿಕ ವ್ಯವಸ್ಥೆಗಳಾದ ಊಳಿಗಮಾನ್ಯತೆ ಮತ್ತು ವಸಾಹತುಶಾಹಿ ಹೇಗೆ ಮೇಲ್ಮಟ್ಟದಲ್ಲಿ ಒಂದಕ್ಕೊಂದು ಹೊಂದಿಕೊಂಡವು ಎನ್ನುವುದನ್ನು ವಿಶ್ಲೇಷಿಸುತ್ತದೆ. “ಭಾರತದ ಮಟ್ಟಿಗೆ…..ಸಾಮಾಜಿಕ ಹೋರಾಟದ ತಿರಸ್ಕಾರದ ಬೇರುಗಳು ಹಿಂದೂ ಧರ್ಮದ ಸಾಂಸ್ಕೃತಿಕ ರಚನೆಯಲ್ಲಿದೆ. ಒಂದು ಜಾತಿ ಮತ್ತೊಂದರ ಸ್ವಾತಂತ್ರ್ಯವನ್ನು ಮೊಟಕುಗೊಳಿಸುವುದಕ್ಕೆ ಅಥವಾ ಕೆಳ ಜಾತಿಯನ್ನು ಮೇಲ್ಜಾತಿ ಲೂಟಿ ಮಾಡುವುದಕ್ಕೆ ಹಿಂದೂ ಧರ್ಮದಲ್ಲೇ ಅವಕಾಶವಿದೆ! ಆದಕಾರಣ ವಸಾಹತುಶಾಹಿ ಸಾಮಾಜಿಕ ಸಂಬಂಧಗಳಲ್ಲಿ ಮೇಲು ಕೀಳಿನ ವ್ಯವಸ್ಥೆಯನ್ನು ಪರಿಚಯಿಸಿದ್ದು ಜನರಲ್ಲಿ ಅದಾಗಲೇ ಇದ್ದ ಮಾನಸಿಕ ಸಮ್ಮತಿ ಮತ್ತು ಆ ವ್ಯವಸ್ಥೆಯನ್ನು ಒಪ್ಪಿಕೊಳ್ಳುವ ಸಾಮಾಜಿಕ ರಚನೆ ಅಸ್ತಿತ್ವದಲ್ಲಿದ್ದದ್ದು ವಸಾಹತುಶಾಹಿಗೆ ಅನುಕೂಲವನ್ನೇ ಮಾಡಿತು.” (68)

ಎಲ್ಫಿನ್ ಸ್ಟೋನ್ ದೇವಾಲಯಗಳಿಗೆ ದತ್ತಿ ಕೊಟ್ಟದ್ದು ಮತ್ತು ಮನ್ರೋ ಮಠಗಳ ಬಗ್ಗೆ ಆದರದ ಭಾವನೆ ಹೊಂದಿದ್ದರ ಹಿಂದಿನ ಉದ್ದೇಶಗಳನ್ನು ವಿಶ್ಲೇಷಿಸಿದ ದನ್ಮೋಲೆ: “ವಸಾಹತುಶಾಹಿಯ ದಬ್ಬಾಳಿಕೆಯ ಶಕ್ತಿಗಳು ಸನಾತದ ದೊರೆ ಮತ್ತವನ ವ್ಯವಸ್ಥೆಯ ಮಾಯಾಪರದೆಯ ಹಿಂದವಿತು ರಕ್ಷಣೆ ಪಡೆಯಿತು.”(69)

“……ಪುರಾತನ ಸಿದ್ಧಾಂತಗಳು ಸಮುದಾಯದ ಸಾಮಾಜಿಕ ಮೌಲ್ಯಗಳ ಮುಂದುವರಿಕೆಗೆ ಮತ್ತು ಅದರಿಂದ ಸಾಮಾಜಿಕ ಸಮತೋಲನವನ್ನು ಕಾಪಿಡುವುದಕ್ಕೆ ಸಹಕಾರಿ ಎಂದು ಮೇಲ್ನೋಟಕ್ಕೆ ಕಾಣಿಸುತ್ತಾದರೂ, ವರ್ಗ ಪಕ್ಷಪಾತವಿರುವಾಗ ದಬ್ಬಾಳಿಕೆ ಶಕ್ತಿಯಾಗಿ ಬೆಳೆಯುತ್ತದೆ. ಪ್ರಶ್ನಿಸುವ ಹಕ್ಕನ್ನು ಕಿತ್ತುಕೊಳ್ಳಲಾಗುತ್ತದೆ. ಮೌಡ್ಯತೆಯನ್ನು ಮುಂದುವರೆಸಲಾಗುತ್ತದೆ. ಶೋಷಕ ವಿದೇಶೀ ಶಕ್ತಿಗಳು ಪುರಾತನ ಸಿದ್ಧಾಂತಗಳ ಜೊತೆ ಹೊಂದಿಕೊಂಡಿದ್ದು ವಸಾಹತಶಾಹಿ ಸಿದ್ಧಾಂತ ಸಶಕ್ತವಾಗಿ ಕಾರ್ಯನಿರ್ವಹಿಸಲೆಂದು. ಈ ಕಾರ್ಯನಿರ್ವಹಣೆಗೆ ಪುರಾತನ ಸಿದ್ಧಾಂತಗಳು ಒಂದು ಚೌಕಟ್ಟು ನಿರ್ಮಿಸಿಕೊಟ್ಟಿದೆ” ಎಂದು ತಮ್ಮ ಮಾತು ಮುಗಿಸುತ್ತಾರೆ ದನ್ಮೋಲೆ. (70)

ಕರ್ನಾಟಕ ಮತ್ತು ಭಾರತದ ಜನಸಮೂಹ, ಅದರಲ್ಲೂ ರೈತ – ಕಾರ್ಮಿಕರನ್ನು ಉಸಿರೆತ್ತದಂತೆ ಮಾಡುವ ಸಲುವಾಗಿ ಬ್ರಿಟೀಷರು ಊಳಿಗಮಾನ್ಯ ಪದ್ಧತಿಯೊಂದಿಗೆ ಜೊತೆಯಾದರು ಮತ್ತು ಅವಸಾನದತ್ತ ಸಾಗುತ್ತಿದ್ದ ಫ್ಯೂಡಲಿಸಂ ಮತ್ತೆ ಪುಟಿದೇಳುವಂತೆ ಮಾಡಿದರು. ವಸಾಹತುಶಾಹಿ ತನ್ನೆಲ್ಲಾ ಆರ್ಥಿಕ ಮತ್ತು ಸೈನಿಕ ಶಕ್ತಿಯೊಂದಿಗೆ ಅರೆ ಊಳಿಗಮಾನ್ಯ ಪದ್ಧತಿಯನ್ನು ಬೆಳೆಸಿ – ಉಳಿಸಿ, ಬೆಂಬಲಿಸಿ ವಿಸ್ತರಿಸಿತು.

ಇಂಗ್ಲೆಂಡಿನಲ್ಲಿ ಡಾ. ಜೆಕಿಲ್, ಭಾರತದಲ್ಲಿ ಮಿ.ಹೈಡ್ ಈ ವಿರೋಧಾತ್ಮಕ ವಿಭಾಗವನ್ನು ಮಧ್ಯಮವರ್ಗದ ವಸಾಹತುಶಾಹಿ ದುರಾಸೆ ಮತ್ತು ಬೂಟಾಟಿಕೆಯನ್ನು ಪೋಷಿಸಿದವು.

ಮುಂದಿನ ವಾರ: 
ತಲ್ಲೂರು ದೇಶಗತಿಯ ಸೂಕ್ಷ್ಮಜಗತ್ತು

Disclaimer: ಮೇಕಿಂಗ್ ಹಿಸ್ಟರಿ ಆಂಗ್ಲ ಪುಸ್ತಕದ ಅನುವಾದಿಸಲು ಬೇಕಾದ ಅಧಿಕೃತ ಹಕ್ಕುಗಳು ನನ್ನಲ್ಲಿಲ್ಲ. ಅನುವಾದದ ಹಕ್ಕನ್ನು ಕೊಡುವವರಲ್ಲನೇಕರು ಜೈಲಿನಲ್ಲಿದ್ದಾರಂತೆ. ಯಾರಲ್ಲಾದರೂ ಅಧಿಕೃತ ಅನುವಾದದ ಹಕ್ಕುಗಳು ಇದ್ದು ಆಕ್ಷೇಪಣೆ ಎತ್ತಿದರೆ ಕ್ಷಮಾಪಣೆಯೊಂದಿಗೆ ಅನುವಾದದ ಕಾರ್ಯವನ್ನು ನಿಲ್ಲಿಸಲಾಗುವುದು. ಸಾಕೇತ್ ರಾಜನ್ ದೃಷ್ಟಿಯ ಕರ್ನಾಟಕದ ಇತಿಹಾಸ ಕನ್ನಡ ಬಲ್ಲವರಿಗೂ ತಲುಪಲಿ ಎಂಬ ಉದ್ದೇಶದಿಂದ ಇದನ್ನು ಪ್ರಕಟಿಸಲಾಗುತ್ತಿದೆಯೇ ಹೊರತು ಯಾವುದೇ ವಾಣಿಜ್ಯ ಉದ್ದೇಶದಿಂದಲ್ಲ - ಡಾ. ಅಶೋಕ್. ಕೆ. ಆರ್.

ಮಾರ್ಚ್ 3, 2016

ಕನ್ಹಯ್ಯನಿಗೆ ಜಾಮೀನು ಕೊಟ್ಟ ಹೈಕೋರ್ಟ್ ಹೇಳಿದ್ದೇನು?

ಡಾ. ಅಶೋಕ್.ಕೆ.ಆರ್
03/03/2016
ದಿನದಿನಕ್ಕೂ ಹೊಸ ತಿರುವು ಪಡೆಯುತ್ತಲೇ ಇದ್ದ ಕನ್ಹಯ್ಯ ಬಂಧನ ಪ್ರಕರಣ ಒಂದು ಹಂತಕ್ಕೆ ಬಂದು ನಿಂತಿದೆ. ‘ದೇಶದ್ರೋಹ’ದ ಆರೋಪ ಎದುರಿಸುತ್ತಿದ್ದ ಜೆ.ಎನ್.ಯು ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ಹಯ್ಯ ಕುಮಾರನಿಗೆ ಹೈಕೋರ್ಟ್ ಆರು ತಿಂಗಳ ಜಾಮೀನು ನೀಡಿದೆ. ಬಡತನದ ಕುಟುಂಬದಿಂದ ಬಂದವನೆಂಬ ಕಾರಣದಿಂದ ಹತ್ತು ಸಾವಿರ ರುಪಾಯಿಗಳ ವೈಯಕ್ತಿಕ ಬಾಂಡ್ ಕಟ್ಟಲು ಸೂಚಿಸಿದೆ. ಕನ್ಹಯ್ಯನೇ ದೇಶದ್ರೋಹಿ ಘೋಷಣೆಗಳು ಕೂಗಿದನೆಂಬ ವೀಡಿಯೋಗಳು ಮೊದಲೆರಡು ದಿನ ಹರಿದಾಡಿದವು, ವಾಹಿನಿಗಳಲ್ಲೂ ಅದೇ ಪ್ರಸಾರವಾಯಿತು. ಕನ್ಹಯ್ಯನ ಪರವಾಗಿ ಮಾತನಾಡಿದವರಿಗೆಲ್ಲ ‘ದೇಶದ್ರೋಹಿ’ ಸರ್ಟಿಫಿಕೇಟುಗಳನ್ನು ಹಂಚುವಲ್ಲಿ ‘ದೇಶಪ್ರೇಮಿ’ಗಳು ಬ್ಯುಸಿಯಾಗಿಬಿಟ್ಟರು. ನಂತರದ ದಿನಗಳಲ್ಲಿ ಘೋಷಣೆ ಕೂಗಿದ್ದು ಎಬಿವಿಪಿಯವರು ಎಂದರು, ಇಲ್ಲ ಘೋಷಣೆ ಕೂಗಿದ್ದು ಕಾಶ್ಮೀರಿಗಳು ಎಂದರು. ಕನ್ಹಯ್ಯನ ವೀಡಿಯೋ ನಕಲಿ, ಅವನು ಮನುವಾದದ ವಿರುದ್ಧ ಬ್ರಾಹ್ಮಣವಾದದ ವಿರುದ್ಧ ಬಡತನದ ವಿರುದ್ಧ ಜಾತೀಯತೆಯ ವಿರುದ್ಧ ಕೂಗಿದ್ದ ಘೋಷಣೆಗಳ ವೀಡಿಯೋದ ಧ್ವನಿ ಬದಲಿಸಿ ದೇಶದ್ರೋಹಿಯಾಗಿ ಬಿಂಬಿಸಲು ಝೀ ನ್ಯೂಸಿನಂತಹ ಕೆಲವು ಮಾಧ್ಯಮಗಳು ನಡೆಸಿದ್ದ ಪ್ರಯತ್ನವನ್ನು ಇಂಡಿಯಾ ಟುಡೇ ಬಯಲಿಗೆಳೆಯಿತು. ಫೊರೆನ್ಸಿಕ್ ವರದಿಗಳು ಕೂಡ ಏಳು ವೀಡಿಯೋಗಳಲ್ಲಿ ಎರಡು ನಕಲಿ ಎಂದ್ಹೇಳಿತು. ಝೀ ನ್ಯೂಸಿನ ವರದಿಗಾರ ಘಟನೆ ನಡೆಯುವ ಒಂದು ಘಂಟೆ ಮೊದಲೇ ಎಬಿವಿಪಿ ಮುಖಂಡನ ಆಹ್ವಾನದ ಮೇರೆಗೆ ಜೆ.ಎನ್.ಯು ಒಳಗೆ ಹೋಗಿದ್ದರು ಎಂಬಂಶ ಜೆ.ಎನ್.ಯು entry bookನಿಂದ ಪತ್ತೆಯಾಯಿತು. ಹಿಂಗೆ ದಿನಕ್ಕೊಂದು ತಿರುವು ಪಡೆಯುತ್ತಿದ್ದ, ‘ದೇಶದ್ರೋಹ’ದ ಕೆಲಸವನ್ನು ಕನ್ಹಯ್ಯ ಮಾಡಿದ್ದನೇ ಇಲ್ಲವೇ ಎಂಬ ಗೊಂದಲಗಳು ಚಾಲ್ತಿಯಲ್ಲಿರುವಾಗಲೇ ಹೈಕೋರ್ಟ್ ಕನ್ಹಯ್ಯನನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಿದೆ. ನಮ್ಮ ಚರ್ಚೆಗಳು ವಾದಗಳು ಏನೇ ಇರಲಿ ನ್ಯಾಯಾಲಯ ಕನ್ಹಯ್ಯನ ಬಿಡುಗಡೆಯ ಸಂದರ್ಭದಲ್ಲಿ ಹೇಳಿದ ಪ್ರಮುಖ ಅಂಶಗಳೇನು ಎನ್ನುವುದನ್ನು ನೋಡೋಣ.

ಎಫ್ ಐ ಆರಿನ ಪ್ರಕಾರವೇ ಜೆ.ಎನ್.ಯುನಲ್ಲಿ ದೇಶವಿರೋಧಿ ಹೇಳಿಕೆಗಳನ್ನು ಕೂಗಿದರೆನ್ನಲಾದ ದಿನ ಯಾವುದೇ ರೀತಿಯ ಹಿಂಸೆ ನಡೆದಿಲ್ಲ. ಕನ್ಹಯ್ಯ ಕುಮಾರ್ ತನಿಖೆಗೆ ಪೂರ್ಣ ಸಹಕರಿಸಿದ್ದಾನೆ, ಸದ್ಯಕ್ಕೆ ಈ ಪ್ರಕರಣದ ತನಿಖೆಗೆ ಅವನ ಅವಶ್ಯಕತೆಯಿಲ್ಲ ಎಂದು ಕನ್ಹಯ್ಯನ ಪರ ವಕೀಲರಾದ ಕಪಿಲ್ ಸಿಬಲ್ ವಾದಿಸಿದರು. ಕೆಲವು ಪಟ್ಟಭದ್ರ ಹಿತಾಸಕ್ತಿಗಳ ಕಾರಣದಿಂದ ಕನ್ಹಯ್ಯನ ಮೇಲೆ ಆರೋಪ ಹೊರಿಸಲಾಗಿದೆ. ದಿನಾಂಕ 11ರಂದು (ಘಟನೆ ನಡೆದ ಎರಡು ದಿನಗಳ ನಂತರ) ಮಾಡಿದ ಭಾಷಣದಲ್ಲಿ ಕನ್ಹಯ್ಯಕುಮಾರ್ ದೇಶದ ಸಂವಿಧಾನದ ಪರವಾಗಿ ಮಾತನಾಡಿದ್ದಾನೆ. ಕಾರ್ಯಕ್ರಮದ ಆಯೋಜನೆಯಲ್ಲಿ ಕನ್ಹಯ್ಯನ ಪಾತ್ರವಿರಲಿಲ್ಲ, ಆ ಕಾರ್ಯಕ್ರಮದ ಪೋಸ್ಟರುಗಳಲ್ಲಿ ಕನ್ಹಯ್ಯನ ಹೆಸರಿರಲಿಲ್ಲ. ಕನ್ಹಯ್ಯನಿಗೂ ಅವತ್ತಿನ ಘಟನೆಗೂ ಯಾವುದೇ ರೀತಿಯ ಸಂಬಂಧವೂ ಇರಲಿಲ್ಲ. ಝೀ ವಾಹಿನಿ ಹತ್ತನೇ ಫೆಬ್ರವರಿಯಂದು ಪ್ರಸಾರ ಮಾಡಿದ ವೀಡಿಯೋದಲ್ಲಿ ‘ಪಾಕಿಸ್ತಾನ್ ಜಿಂದಾಬಾದ್’ ಎಂಬ ಘೋಷಣೆಗಳಿದ್ದವು. ಆದರೆ ಅದನ್ನೇ ಆಧಾರವಾಗಿಟ್ಟುಕೊಂಡು ಪ್ರಕರಣ ದಾಖಲಿಸಿದ ಪೋಲೀಸರ ಎಫ್.ಐ.ಆರಿನಲ್ಲಿ ನಮೂದಾಗಿರುವ ಮೂವತ್ತು ಘೋಷಣೆಗಳಲ್ಲಿ ‘ಪಾಕಿಸ್ತಾನ್ ಜಿಂದಾಬಾದ್’ ಎಂಬ ಘೋಷಣೆಯೇ ಇಲ್ಲ! ಎರಡು ಗುಂಪುಗಳ ನಡುವೆ ಘರ್ಷಣೆ ನಡೆಯಬಹುದೆಂಬ ಕಾರಣದಿಂದ ವಿದ್ಯಾರ್ಥಿ ಸಂಘದ ಅಧ್ಯಕ್ಷನಾಗಿದ್ದ ಕನ್ಹಯ್ಯ ಗಲಭೆ ತಪ್ಪಿಸುವ ಸಲುವಾಗಿ ಘಟನಾ ಸ್ಥಳಕ್ಕೆ ಹೋಗಿ ಪರಿಸ್ಥಿತಿ ಶಾಂತವಾದ ಮೇಲೆ ವಾಪಸ್ಸಾದ. ಮತ್ತು ದಿನಾಂಕ 11ರಂದು ಕನ್ಹಯ್ಯ ಮಾಡಿದ ಭಾಷಣ ದೇಶದ ಸಂವಿಧಾನ ಕೊಟ್ಟ ಅಭಿವ್ಯಕ್ತಿ ಸ್ವಾತಂತ್ರ್ಯದ ಪರಿಧಿಯೊಳಗೇ ಇತ್ತು, ಅದನ್ನು ದೇಶದ್ರೋಹವೆಂದು ಕರೆಯಲು ಬರುವುದಿಲ್ಲವೆಂಬುದು ಕನ್ಹಯ್ಯ ಪರ ವಕೀಲರ ವಾದವಾಗಿತ್ತು.

ಇನ್ನು ಸರಕಾರವನ್ನು ಪ್ರತಿನಿಧಿಸುತ್ತಿದ್ದ ವಕೀಲರಾದ ತುಷಾರ್ ಮೆಹ್ತಾ ದಿನಾಂಕ 9ರಂದು ಎರಡು ಗುಂಪುಗಳ ನಡುವೆ ಘರ್ಷಣೆ, ಸಣ್ಣಪುಟ್ಟ ತಳ್ಳಾಟ ಮತ್ತು ಘೋಷಣೆಗಳು ನಡೆದವು. ಪೋಲೀಸರ ಮಧ್ಯಪ್ರವೇಶದಿಂದ ಪರಿಸ್ಥಿತಿ ತಣ್ಣಗಾದ ನಂತರ ಎಲ್ಲರೂ ವಾಪಸ್ಸಾದರು ಎಂದು ತಿಳಿಸಿದರು. ಝೀ ವಾಹಿನಿ ಪ್ರಸಾರ ಮಾಡಿದ ವೀಡೀಯೋವನ್ನು ಪಡೆದ ನಂತರ ಪೋಲೀಸರು ಎಫ್.ಐ.ಆರ್ ದಾಖಲಿಸಿದರು (ಈಗ ಆ ವೀಡಿಯೋದ ಅಸಲಿಯತ್ತೇ ಪ್ರಶ್ನಾರ್ಹವಾಗಿಬಿಟ್ಟಿದೆ!). ಅಫ್ಜಲ್ ಗುರು ಮತ್ತು ಮಕ್ಬೂಲ್ ಭಟ್ ನ ಫೋಟೋಗಳನ್ನು ಹಿಡಿದುಕೊಂಡಿದ್ದ ಕೆಲವು ವಿದ್ಯಾರ್ಥಿಗಳು ಅವರ ಪರವಾಗಿ ಘೋಷಣೆ ಕೂಗುತ್ತಿದ್ದರು ಎಂಬಂಶವನ್ನು ತಿಳಿಸಿದರು. ಕಾರ್ಯಕ್ರಮಕ್ಕೆ ಕೊಟ್ಟ ಅನುಮತಿಯನ್ನು ಜೆ.ಎನ್.ಯು ವಾಪಸ್ಸು ತೆಗೆದುಕೊಂಡದ್ದರ ಬಗ್ಗೆ ಕನ್ಹಯ್ಯ ಕುಮಾರ್ ಅಸಂತೋಷ ವ್ಯಕ್ತಪಡಿಸಿದ್ದರ ಬಗ್ಗೆ ಸಾಕ್ಷಿದಾರರು ಹೇಳಿದ್ದನ್ನು ನ್ಯಾಯಾಲಯದ ಗಮನಕ್ಕೆ ತಂದರು ತುಷಾರ್ ಮೆಹ್ತಾ. ತುಷಾರ್ ಮೆಹ್ತಾರ ಪ್ರಕಾರ ದಿನಾಂಕ 11ರಂದು ಕನ್ಹಯ್ಯ ಮಾಡಿದ ಭಾಷಣ ಘಟನೆ ನಡೆದ ನಂತರ ತನ್ನನ್ನು ತಾನು ರಕ್ಷಿಸಿಕೊಳ್ಳಲು ನಡೆಸಿದ ಯೋಜನೆಯ ಭಾಗವಾಗಿತ್ತು. ವೀಡಿಯೋದ ಜೊತೆಗೆ ಸಾಕ್ಷಿಗಳ ಹೇಳಿಕೆಗಳನ್ನು ಆಧಾರವಾಗಿಟ್ಟುಕೊಂಡು ಮತ್ತು ಗಂಭೀರ ಕಾಯಿದೆಗಳಡಿಯಲ್ಲಿ ಕನ್ಹಯ್ಯನನ್ನು ಬಂಧಿಸಿರುವುದರಿಂದ ಆತನಿಗೆ ಜಾಮೀನು ಕೊಡಬಾರದೆಂಬುದು ಸರಕಾರೀ ವಕೀಲರ ವಾದವಾಗಿತ್ತು.

ವಾದ ಪ್ರತಿವಾದಗಳನ್ನೆಲ್ಲವನ್ನೂ ಆಲಿಸಿದ ನ್ಯಾಯಾಲಯ ಘಟನೆ ನಡೆದ ದಿನ ಕನ್ಹಯ್ಯ ಅದೇ ಜಾಗದಲ್ಲಿದ್ದುದನ್ನು ಯಾರೂ ನಿರಾಕರಿಸುತ್ತಿಲ್ಲ, ಆದರಾತ ಇದ್ದದ್ದು ಸಂಭವನೀಯ ಗಲಭೆ ನಡೆಯದಂತೆ ನೋಡಿಕೊಳ್ಳಲೇ ಹೊರತು ದೇಶವಿರೋಧಿ ಘೋಷಣೆ ಕೂಗಲಲ್ಲ. ಅಫ್ಝಲ್ ಗುರು, ಮಕ್ಬೂಲ್ ಭಟ್ ನ ಪರವಾಗಿ ಘೋಷಣೆ ಕೂಗಿದ್ದು, ಭಾರತವನ್ನು ವಿಭಜಿಸುವ ಘೋಷಣೆ ಕೂಗಿದ್ದೆಲ್ಲವೂ ಎಫ್.ಐ.ಆರ್ ನಲ್ಲಿ ದಾಖಲಾಗಿದೆ. ಆ ದಿನ ಕನ್ಹಯ್ಯ ಅದೇ ಜಾಗದಲ್ಲಿದ್ದ ಎನ್ನುವುದಕ್ಕೆ ಫೋಟೋ ದಾಖಲೆಗಳಿವೆ. ಆದರೆ ಸರಕಾರೀ ವಕೀಲರು ಕೂಡ ಅವತ್ತಿನ ವೀಡಿಯೋದಲ್ಲಿ ಕನ್ಹಯ್ಯಕುಮಾರ್ ದೇಶವಿರೋಧಿ ಘೋಷಣೆ ಕೂಗಿಲ್ಲ ಎಂಬಂಶದ ಬಗ್ಗೆ ತಕರಾರು ಎತ್ತಿಲ್ಲ. ಸ್ವತಂತ್ರ ಸಾಕ್ಷಿಗಳು ಆತನೂ ಅದರಲ್ಲಿ ಭಾಗವಹಿಸಿದ್ದ ಎಂದಿದ್ದಾರೆ, ಅದರ ಬಗ್ಗೆ ತನಿಖೆಯಾಗಬೇಕಷ್ಟೇ. ಇನ್ನು ದಿನಾಂಕ ಹನ್ನೊಂದರಂದು ಕನ್ಹಯ್ಯ ಕುಮಾರ್ ಮಾಡಿದ ಭಾಷಣ ತನ್ನನ್ನು ತಾನು ರಕ್ಷಿಸಿಕೊಳ್ಳಲು ಹೂಡಿದ ಯೋಜನೆಯಾಗಿತ್ತು ಎನ್ನುವುದನ್ನು ಈ ಸಂದರ್ಭದಲ್ಲಿ ನ್ಯಾಯಾಲಯ ಪರೀಕ್ಷಿಸಲು ಸಾಧ್ಯವಾಗುವುದಿಲ್ಲ. ತನಿಖೆ ಪೂರ್ಣವಾದ ಮೇಲಷ್ಟೇ ಕನ್ಹಯ್ಯ ಕುಮಾರನ ಮೇಲಿನ ದೇಶದ್ರೋಹದ ಆರೋಪ ಸರಿಯೋ ತಪ್ಪೋ ಎಂದು ನಿರ್ಧರಿತವಾಗುವುದು. ತನಿಖೆ ಈಗಷ್ಟೇ ಪ್ರಾರಂಭವಾಗಿದೆ, ವಿಡೀಯೋ ಆಧಾರಗಳು ಕನ್ಹಯ್ಯ ಘಟನಾ ಸ್ಥಳದಲ್ಲಿದ್ದ ಎನ್ನುತ್ತಿವೆ, ಗಂಭೀರ ಆಪಾದನೆ ಆತನ ಮೇಲಿದೆ, ಇದರ ಮೇಲೆ ಆತನನ್ನು ಜೈಲಿನಲ್ಲಿಡುವುದೇ ಸೂಕ್ತವೆಂಬ ಭಾವನೆ ಬರುತ್ತದೆ. ವಿದ್ಯಾರ್ಥಿ ಸಂಘದ ಅಧ್ಯಕ್ಷನಾಗಿರುವ ಕಾರಣ ಕ್ಯಾಂಪಸ್ಸಿನಲ್ಲಿ ನಡೆಯುವ ಘಟನೆಗಳಿಗೆ ಕನ್ಹಯ್ಯ ಜವಾಬ್ದಾರಿಯಾಗುತ್ತಾನೆ. ಸಂವಿಧಾನದ ಚೌಕಟ್ಟಿನೊಳಗೆ ಅಭಿವ್ಯಕ್ತಿ ಸ್ವಾತಂತ್ರ್ಯ ಪ್ರತಿಯೊಬ್ಬರಿಗೂ ಇದೆ. ಪ್ರತಿಯೊಬ್ಬರೂ ತಮ್ಮ ಇಷ್ಟಾನಿಷ್ಟದ ಸಿದ್ಧಾಂತವನ್ನು ಸಂವಿಧಾನದ ಚೌಕಟ್ಟಿನೊಳಗೆ ಪಾಲಿಸಲು ಸ್ವತಂತ್ರರು. ಈ ಅಭಿವ್ಯಕ್ತಿ ಸ್ವಾತಂತ್ರ್ಯ ಉಳಿದಿರುವುದು ನಮ್ಮ ಗಡಿಗಳಲ್ಲಿ ಸೈನಿಕರು ಮಳೆ ಚಳಿ ಹಿಮವೆನ್ನದೆ ಕಾಯುತ್ತಿರುವ ಕಾರಣದಿಂದ ಎನ್ನುವುದನ್ನು ಮರೆಯದಿರೋಣ. ಅಫ್ಜಲ್ ಗುರು, ಮಕ್ಬೂಲ್ ಭಟ್ ಪರವಾಗಿ ಕೂಗುವ ಘೋಷಣೆಗಳು, ದೇಶವಿರೋಧಿ ಕೂಗುಗಳು ದೇಶದ ಸಮಗ್ರತೆಗೆ ಅಪಾಯ ತರುತ್ತವೆಂದು ಹೇಳಿದ ನ್ಯಾಯಾಧೀಶರು ಇಂತಹ ಕೂಗುಗಳು ನಮ್ಮನ್ನು ಕಾಯುವ ಸಲುವಾಗಿ ಹುತಾತ್ಮರಾದವರ ಕುಟುಂಬಗಳಲ್ಲಿ ಮೂಡಿಸುವ ಭಾವನೆಗಳೇನು ಎನ್ನುವುದರ ಕುರಿತು ಕಳವಳ ವ್ಯಕ್ತಪಡಿಸಿದರು. ಸಂವಿಧಾನ ಕೊಟ್ಟ ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಹೇಳಿರುವ ಕನ್ಹಯ್ಯಕುಮಾರನಿಗೆ ಅದೇ ಸಂವಿಧಾನ ಹೇಳಿರುವ ಕರ್ತವ್ಯಗಳ ಬಗ್ಗೆಯೂ ನೆನಪಿಸಲು ಬಯಸುತ್ತೇನೆ. ಅಫ್ಜಲ್ ಗುರು, ಮಕ್ಬೂಲ್ ಭಟ್ ನ ಫೋಟೋಗಳನ್ನು ಹಿಡಿದು ನಿಂತಿರುವ ಚಿತ್ರಗಳು ನಮ್ಮ ಮುಂದಿವೆ, ಇಂತಹ ವಿದ್ಯಾರ್ಥಿ ಸಮುದಾಯ ಮತ್ತೊಮ್ಮೆ ಆತ್ಮಾವಲೋಕನ ಮಾಡಿಕೊಳ್ಳಬೇಕು. ಇಂತಹ ಘಟನೆಗಳು ಮತ್ತೆ ನಡೆಯದಂತೆ ಜೆ.ಎನ್.ಯು ಆಡಳಿತ ಮಂಡಳಿ ನೋಡಿಕೊಳ್ಳಬೇಕು. ತನಿಖೆ ಪ್ರಾರಂಭಿಕ ಹಂತದಲ್ಲಿದೆ. ಕೆಲವು ವಿದ್ಯಾರ್ಥಿಗಳು ಕೂಗಿದ ಘೋಷಣೆಗಳು ಸರ್ವವ್ಯಾಪಿಯಾಗದಂತೆ ತಡೆಯುವ ಕೆಲಸಗಳಾಗಬೇಕು. ಕಾಲಿಗೆ ಗಾಯವಾಗಿದೆ, ಗಾಯ ಮಾಯಲು ಮೊದಲು ಔಷಧ ಕೊಡಬೇಕು; ಮಾಯದಿದ್ದರೆ ಶಸ್ತ್ರಚಿಕಿತ್ಸೆಯ ಮೂಲಕವೇ ತೆಗೆಯಬೇಕಾಗುತ್ತದೆ. ಬಂಧನದ ದಿನಗಳಲ್ಲಿ ಕನ್ಹಯ್ಯಕುಮಾರ್ ಘಟನೆಗಳ ಬಗ್ಗೆ ಆತ್ಮಾವಲೋಕನ ಮಾಡಿಕೊಂಡಿರಬಹುದು. ಆತ ಮುಖ್ಯವಾಹಿನಿಯಲ್ಲಿ ಉಳಿಯಲಿ ಎಂಬುದ್ದೇಶದಿಂದ ಔಷಧ ಕೊಡುವ ಕೆಲಸವನ್ನು ಮಾಡಬಯಸುತ್ತೇನೆ. ಹಾಗಾಗಿ ಕನ್ಹಯ್ಯನಿಗೆ ಆರು ತಿಂಗಳ ಮಧ್ಯಂತರ ಜಾಮೀನನ್ನು ಮಂಜೂರು ಮಾಡುತ್ತಿದ್ದೇನೆ. ಕನ್ಹಯ್ಯ ಹನ್ನೊಂದರದು ಮಾಡಿದ ಭಾಷಣದಲ್ಲಿ ತನ್ನ ಮನೆ ನಡೆಯುತ್ತಿರುವುದು ಮೂರು ಸಾವಿರ ರುಪಾಯಿಯ ಸಂಬಳದಿಂದ ಎಂದು ತಿಳಿಸಿದ್ದಾನೆ. ಹಾಗಾಗಿ ಬಾಂಡಿನ ಮೊತ್ತವನ್ನು ಕಡಿಮೆ ಇಡುವುದಕ್ಕೆ ನಿರ್ಧರಿಸಿದ್ದೇನೆ. ಯಾವುದೇ ದೇಶದ್ರೋಹಿ ಚಟುವಟಿಕೆಗಳಲ್ಲಿ ಭಾಗವಹಿಸುವುದಿಲ್ಲ ಎಂದು ಮುಚ್ಚಳಿಕೆ ಬರೆದುಕೊಡಬೇಕಾಗಬಹುದು. ಜೆ.ಎನ್.ಯು ವಿದ್ಯಾರ್ಥಿ ಸಂಘದ ಅಧ್ಯಕ್ಷನಾಗಿ ತನ್ನ ಕೈಲಾದ ಮಟ್ಟಿಗೆ ಕ್ಯಾಂಪಸ್ಸಿನೊಳಗೆ ದೇಶದ್ರೋಹಿ ಚಟುವಟಿಕೆಗಳು ನಡೆಯದಂತೆ ನೋಡಿಕೊಳ್ಳಬೇಕು. ಹತ್ತು ಸಾವಿರದ ಬಾಂಡ್ ಕಟ್ಟಿಸಿಕೊಂಡು ಆರು ತಿಂಗಳ ಜಾಮೀನು ನೀಡಲಾಗಿದೆ. ಇಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳೆಲ್ಲವೂ ಜಾಮೀನಿಗೆ ಸಂಬಂಧಪಟ್ಟಂತೆಯೇ ಹೊರತು ಇಡೀ ಪ್ರಕರಣಕ್ಕೆ ಸಂಬಂಧಿಸಿದಂತಲ್ಲ ಎಂದ್ಹೇಳಿದ ನ್ಯಾಯಾಧೀಶರು ಪ್ರತಿಯನ್ನು ಜೈಲಿನ ಅಧಿಕಾರಿಗಳಿಗೆ ತಲುಪಿಸುವಂತೆ ತಿಳಿಸಿ ತಮ್ಮ ಹೇಳಿಕೆಯನ್ನು ಮುಗಿಸಿದರು.

ಮೂಲ: http://indiankanoon.org/doc/77368780/

ಮಾರ್ಚ್ 2, 2016

ಕರೆಂಟು ಕೇಳುದ್ರೆ ಕೈಕೋಳ ಗ್ಯಾರಂಟಿ!

02/03/2016
ಎಲ್ಲಾ ಸರಕಾರಗಳಲ್ಲೂ ಸೂಪರ್ ಸಿಎಂ ಅಂತೊಬ್ಬರು ಇದ್ದೇ ಇರುತ್ತಾರೆ. ಸಿದ್ಧರಾಮಯ್ಯ ನೇತೃತ್ವದ ಕರ್ನಾಟಕ ಸರಕಾರದಲ್ಲಿ ಸೂಪರ್ ಸಿಎಂ ಪಟ್ಟಕ್ಕೆ ಏರುವುದಕ್ಕೆ ಡಿ.ಕೆ.ಶಿವಕುಮಾರ್ ತುಂಬಾನೇ ಕಷ್ಟಪಡುತ್ತಿದ್ದಾರೆ. ಸಿದ್ಧರಾಮಯ್ಯನವರಿಗೆ ಶಿವಕುಮಾರರನ್ನು ಸಂಪುಟಕ್ಕೆ ತೆಗೆದುಕೊಳ್ಳಲು ಇಷ್ಟವಿಲ್ಲದಿದ್ದರೂ ಹೈಕಮ್ಯಾಂಡಿನಿಂದಲೇ ಶಿವಕುಮಾರ್ ಸಚಿವರಾದವರು. ಇಂಧನವೆಂದರೆ ಪವರ್ರು, ನಾನು ಪವರ್ ಫುಲ್ಲಾಗಿರಬೇಕು ಎಂದು ಯಾರು ಅವರ ಕಿವಿಯೂದಿದರೋ ಇಂಧನ ಮೂಲಗಳನ್ನು ಹೆಚ್ಚಿಸುವುದರ ಕಡೆಗೆ ಗಮನ ಕೊಡದೆ ಪವರ್ರಿನ ಬಗ್ಗೆಯೇ ಅವರ ಗಮನವೆಲ್ಲಾ 'ಸೋರಿ' ಹೋಗುತ್ತಿದೆ. ವರುಷದ ಕೆಳಗೆ ಟಿವಿ 9 ವಾಹಿನಿಯ ವರದಿಗಾರರಿಬ್ಬರು ಕುಟುಕು ಕಾರ್ಯಾಚರಣೆ ನಡೆಸಲು ಡಿ.ಕೆ.ಶಿಯ ಬಳಿಗೆ ಹೋಗಿದ್ದಾಗ ಬೋಗಸ್ ಕಂಪನಿಯಿಂದ ಲಂಚ ಕೊಡಲು ಬಂದಿದ್ದಾರೆ ಎಂದು ದೂರು ನೀಡಿ ಅವರ ಬಂಧನವಾಗುವಂತೆ ನೋಡಿಕೊಂಡಿದ್ದರು ಶಿವಕುಮಾರ್. ಅಷ್ಟಕ್ಕೇ ಸುಮ್ಮನಾಗದೇ ಮತ್ತೆ ಕೇಬಲ್ ಆಪರೇಟುರಗಳ ಮೂಲಕ ಟಿವಿ 9 ವಾಹಿನಿ ಪ್ರಸಾರವಾಗದಂತೆ ಮಾಡಿದ್ದರು ಎಂಬ ವದಂತಿಯೂ ಹರಡಿತ್ತು. ರಾಮನಗರ, ಕನಕಪುರದಲ್ಲಿ ಡಿ.ಕೆ.ಶಿವಕುಮಾರ್ ಮತ್ತು ಡಿ.ಕೆ.ಸುರೇಶ್ ರವರ ಪ್ರಾಬಲ್ಯ ಹೆಚ್ಚುತ್ತಿದ್ದಂತೆ 'ಪವರ್ರೂ' ಹೆಚ್ಚಿಸಿಕೊಳ್ಳಬೇಕೆಂದುಕೊಂಡುಬಿಟ್ಟರಾ? 
ಗಿರಿಧರ್ ರೈ
ದಕ್ಷಿಣ ಕನ್ನಡದ ಸುಳ್ಯ ತಾಲ್ಲೂಕಿನ ಬೆಳ್ಳಾರೆಯ ನಿವಾಸಿ ವರ್ತಕರ ಸಂಘದ ಮಾಜಿ ಅಧ್ಯಕ್ಷ ಸಾಯಿ ಗಿರಿಧರ್ ರೈ ಅಲ್ಲಿನ ವಿದ್ಯುತ್ ಸಮಸ್ಯೆಯಿಂದ ಬೇಸತ್ತು ಆಗಿದ್ದಾಗೋಗ್ಲೀ ಅಂತ ಇಂಧನ ಸಚಿವರಾದ ಪವರ್ ಫುಲ್ ಡಿ.ಕೆ.ಶಿವಕುಮಾರರಿಗೆ ಫೋನಾಯಿಸಿದ್ದಾರೆ. ಸಮಸ್ಯೆ ಕೇಳಿ ಬಗೆಹರಿಸುತ್ತೇವೆಂದು ಭರವಸೆ ಕೊಟ್ಟರೂ ಮುಗಿಯುತ್ತಿತ್ತು. 'ನನಗೆ ಅವಾಚ್ಯ ಶಬ್ದಗಳಿಂದ ಬಯ್ದರು. ಹಂಗಾಗಿ ಕಂಪ್ಲೇಂಟ್ ಕೊಟ್ಟೆ' ಎಂದು ಡಿ.ಕೆ.ಶಿ ಹೇಳಿದ್ದರೆ, 'ಮೊದಲು ಮಂತ್ರಿಗಳೇ ಕೆಟ್ಟ ಮಾತುಗಳಿಂದ ಬಯ್ದರು, ನನಗೂ ಸಿಟ್ಟು ಬಂದು ತಿರುಗಿಸಿ ಕೆಟ್ಟದಾಗಿ ಬಯ್ದೆ' ಎಂದು ಗಿರಿಧರ್ ರೈ ಹೇಳಿಕೆ ಕೊಟ್ಟಿದ್ದಾರೆ. ಹೋಕ್ಕೋಳ್ಳಿ ಡಿ.ಕೆ.ಶಿ ಪ್ರಕಾರ ಗಿರಿಧರ್ ರೈಯವರೇ ಬಯ್ದಿದ್ದು, ಮಂತ್ರಿಗಳು 'ಸಭ್ಯತೆ'ಯಿಂದಿದ್ದರು ಎಂದೇ ನಂಬೋಣ. ಡಿ.ಕೆ.ಶಿಯವರು ದೂರು ಕೊಟ್ಟಿದ್ದನ್ನೂ ಒಪ್ಪಿಬಿಡೋಣ. ಆದರೆ ಪೋಲೀಸರು ಮಧ್ಯರಾತ್ರಿ ಗಿರಿಧರ್ ರೈಯವರ ಮನೆಗೆ ಹೋಗಿ ಚಾವಣಿ ಹತ್ತಿ ಹೆಂಚು ತೆಗೆದು ಒಳಗಿಳಿದು ದೊಡ್ಡ ದರೋಡೆಕೋರನನ್ನು ಹಿಡಿಯುವಂತೆ ದೂರುದಾರರನ್ನು ಹಿಡಿಯುವ ಅವಶ್ಯಕತೆ ಇತ್ತಾ? ಇದು ಪವರ್ ಫುಲ್ಲೆನ್ನಿಸಿಕೊಳ್ಳಲು ಸೂಪರ್ ಸಿಎಂ ಆಗಲು ಡಿ.ಕೆ.ಶಿ ಮಾಡುತ್ತಿರುವ ಕಿತಾಪತಿಗಳಲ್ಲವೇ? ಪೋಲೀಸರ ಮೇಲೆ ಹಾಕುತ್ತಿರುವ ಒತ್ತಡವಲ್ಲವೇ? ಇಷ್ಟೇ ಅತ್ಯುತ್ಸಾಹವನ್ನು ಇಂಧನ ಮೂಲವನ್ನು ಹೆಚ್ಚಿಸಲು ಉಪಯೋಗಿಸಿದ್ದರೆ ಬೆಂಗಳೂರನ್ನು ಹೊರತುಪಡಿಸಿದ ಕರ್ನಾಟಕ ಕತ್ತಲಲ್ಲಿರುತ್ತಿರಲಿಲ್ಲ. ಸರ್ವಾಧಿಕಾರದ ಧೋರಣೆ ತಾತ್ಕಾಲಿಕವಾಗಿ ಯಶಸ್ಸಿನತ್ತ ಕೊಂಡೊಯ್ಯುತ್ತಿದೆ ಎನ್ನುವ ಭಾವನೆ ಮೂಡಿಸಬಹುದು ಆದರದು ಶಾಶ್ವತವಲ್ಲ ಎನ್ನುವುದು 'ಪವರ್' ಮಂತ್ರಿಗಳಿಗೆ ನೆನಪಿದ್ದರೆ ಒಳ್ಳೆಯದು. ಉದಾಹರಣೆಯಾಗಿ ಅವರದೇ ಪಕ್ಷದಲ್ಲಿ ಮೂಲೆಗುಂಪಾದ ಅನೇಕ ಧುರೀಣರಿದ್ದಾರೆ.

ದೆಹಲಿ ಸರಕಾರವೇಕೆ ಕರ್ನಾಟಕದಲ್ಲಿ ಜಾಹೀರಾತು ನೀಡಬೇಕು?

delhi government ad in karnataka
02/03/2016
ದೆಹಲಿಯಲ್ಲಿನ ಅರವಿಂದ್ ಕೇಜ್ರಿವಾಲ್ ನೇತೃತ್ವದ ಎಎಪಿ ಸರಕಾರ ಒಂದು ವರ್ಷ ಪೂರೈಸಿದೆಯಂತೆ. ಸಂತೋಷ. ಒಂದಷ್ಟು ಒಳ್ಳೆಯ ಕೆಲಸಗಳನ್ನೂ ಮಾಡಿದ್ದಾರೆ ಒಂದಷ್ಟು ಬೇಡದ ಕೆಲಸಗಳನ್ನೂ ಮಾಡಿದ್ದಾರೆ. ಉಳಿದ ರಾಜಕಾರಣಿಗಳಿಗಿಂತ ಯಾವುದರಲ್ಲೂ ಕಡಿಮೆಯಿಲ್ಲ ಎಂದು ಅರವಿಂದ್ ಕೇಜ್ರಿವಾಲ್ ಮತ್ತವರ ಸಹೋದ್ಯೋಗಿಗಳು ಹತ್ತಲವು ಸಲ ತೋರಿಸಿದ್ದಾರೆ. ಅವೆಲ್ಲ ಹೇಗಾದರೂ ಇರಲಿ ಅರವಿಂದರು ಕೇಜ್ರಿವಾಲಾರದು ದೆಹಲಿಯ ಸ್ಥಳೀಯ ಸರಕಾರ. ದೆಹಲಿಗೆ ರಾಜ್ಯದ ಸ್ಥಾನಮಾನವಿಲ್ಲದೇ ಹೋದರೂ ಭಾರತದ ರಾಜಧಾನಿಯಾಗಿರುವುದರಿಂದ ಒಂದಷ್ಟು ಹೆಚ್ಚು ಸುದ್ದಿಯಾಗುತ್ತದೆ. ಎಎಪಿ ರಾಜಕೀಯಕ್ಕೆ ಬಂದ ನಂತರ ಸುದ್ದಿಗಳು ಮತ್ತಷ್ಟು ಹೆಚ್ಚಾಗಿವೆ. 

ಒಂದು ವರುಷ ತುಂಬಿದ ಸಂಭ್ರಮಕ್ಕೆ ಸ್ಥಳೀಯವಾಗಿ ಜಾಹೀರಾತು ಕೊಡುವುದನ್ನೇನೋ ಒಪ್ಪಬಹುದು. ಅವರ ಸರಕಾರದ ಕೆಲಸಗಳನ್ನು ಜನರಿಗೆ ನೆನಪಿಸಲು, ನಾವೂ ಕೆಲಸ ಮಾಡುತ್ತಿದ್ದೇವೆಂದು ತೋರಿಸಲು ಅದು ಅವಶ್ಯಕ. ಆದರೆ ದೆಹಲಿಯ ಸರಕಾರವೊಂದು ಲಕ್ಷಾಂತರ, ಕೋಟ್ಯಾಂತರ ಹಣ ಖರ್ಚು ಮಾಡಿ ದೂರದ ಕರ್ನಾಟಕದ ವಾಹಿನಿಗಳಲ್ಲಿ ಜಾಹೀರಾತು ನೀಡುವ ಅನಿವಾರ್ಯತೆ ಏನಿದೆ? ದೆಹಲಿಯ ಆಪ್ ಸರಕಾರದ ಈ ನಡೆ ನಾಳೆ ದಿನ ಎಲ್ಲ ರಾಜ್ಯ ಸರಕಾರಗಳಿಗೂ ವ್ಯಾಪಿಸಿಬಿಟ್ಟರೆ ಜನರ ಹಣದ ಗತಿಯೇನು? ಸರಕಾರಕ್ಕೆ, ಪಕ್ಷಕ್ಕೆ ಒಂದಷ್ಟು ಪ್ರಚಾರ ಬೇಕೇ ಬೇಕು. ಆದರೆ ದೂರದ ರಾಜ್ಯದಲ್ಲೂ ಪ್ರಚಾರ ನಡೆಸುವ ಸಂಪ್ರದಾಯ ಖಂಡಿತ ಒಳ್ಳೆಯದಲ್ಲ. ಆಪ್ ಸರಕಾರ ಏನು ಒಳ್ಳೆಯದನ್ನು ಮಾಡಿತೋ ಬಿಟ್ಟಿತೋ, ಜನರ ಹಣವನ್ನು ಪೋಲು ಮಾಡಲು ಹೊಸ ಹೊಸ ವಿಧಾನಗಳನ್ನಂತು ಕಂಡುಹಿಡಿದಿದೆ.  

ಎಎಪಿ ಎಂದರೆ ಆಮ್ ಆದ್ಮಿ ಪಕ್ಷವೋ ಅಥವಾ Always advertising partyಯೋ?

ಫೆಬ್ರ 29, 2016

ಇಲ್ಲಿ ಕಾರು ತೊಳೆದರೆ ಕಟಕಟೆ ಹತ್ತಬೇಕಾದೀತು

29/02/2016
ಜಾಟರು ಮೀಸಲಾತಿಗಾಗಿ ನಡೆಸುತ್ತಿರುವ ಹೋರಾಟ ಹಿಂಸೆಯ ಮಡಿಲಿಗೆ ಜಾರಿ ಹೋಗಿದೆ. ದಲಿತ ಮಹಿಳೆಯರ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿರುವಂತಹ ಗಂಭೀರ ಆರೋಪಗಳೂ ಕೇಳಿ ಬಂದಿವೆ. ಮೀಸಲಾತಿಯ ಹೋರಾಟಗಾರರು ಪ್ರಮುಖ ನಗರಗಳಿಗೆ ನೀರು ಪೂರೈಸುವ ಪೈಪುಗಳನ್ನು ಒಡೆದು ಹಾಕಿದ್ದಾರೆ. ಈ ಬೇಸಿಗೆ ಸಮಯಕ್ಕೆ ಮುಂಚೆಯೇ ಆಗಮಿಸುತ್ತಿರುವಾಗ ಪೈಪುಗಳನ್ನು ಒಡೆದು ಹಾಕಿರುವುದು ಗಾಯದ ಮೇಲೆ ಬರೆ ಎಳೆದಂತೆ ಮಾಡಿದೆ. ದೆಹಲಿ ಗುರಗಾಂವ್ ನಂತಹ ನಗರಗಳಲ್ಲಿ ನೀರಿಗೆ ಹಾಹಾಕಾರ ಎದ್ದಿದೆ. ನೀರನ್ನು ಮಿತವಾಗಿ ಬಳಸಲು ಅನುವಾಗುವಂತೆ ಗುರಗಾಂವ್ ಆಡಳಿತ ಹೊಸ ಹೊಸ ನಿಯಮಗಳನ್ನು ಜಾರಿಗೆ ತರುತ್ತಿದೆ.
ಈ ಹೊಸ ನಿಯಮಗಳ ಅನುಸಾರ ಕಾರು ತೊಳೆಯುವುದು ಕೂಡ ಕಾನೂನುಬಾಹಿರ! ಕುಡಿಯಲು ನೀರಿಗೆ ತತ್ವಾರವಾಗಿರುವಾಗ ಕಾರು ತೊಳೆಯುವುದಕ್ಕೆಲ್ಲ ನೀರು ಪೋಲು ಮಾಡುವುದನ್ನು ತಡೆಗಟ್ಟಲು ಅಲ್ಲಿನ ಆಡಳಿತ ಈ ಕ್ರಮಕ್ಕೆ ಮುಂದಾಗಿದೆ. ಇದರ ಜೊತೆಜೊತೆಗೆ ಮನೆಯಲ್ಲಿ ಕುಂಡಗಳಲ್ಲಿ ಬೆಳೆಸಿದ ಗಿಡಗಳಿಗೆ ನೀರಾಕುವುದು ಕೂಡ ಅಪರಾಧವಾಗಿಬಿಡುತ್ತದೆ. ಮೂರನೇ ವಿಶ್ವಯುದ್ಧ ನಡೆಯುವುದು ನೀರಿಗಾಗಿ ಎಂಬ ಮಾತನ್ನು ನೆನಪಿಸುತ್ತದೆ ನೀರು ಉಳಿಸುವ ಈ ಕ್ರಮಗಳು. 
Image source: indiatoday

ಅಡ್ಮಿರಲ್ ಎಲ್. ರಾಮದಾಸ್: ಅತಿರೇಕದ ರಾಷ್ಟ್ರವಾದ ನಮ್ಮನ್ನು ಸುರಕ್ಷಿತವಾಗಿಸುವುದಿಲ್ಲ.

admiral ramdas at jnu
ಅಡ್ಮಿರಲ್ ಎಲ್. ರಾಮದಾಸ್, ಭಾರತೀಯ ನೌಕಾಪಡೆಯ ಮಾಜಿ ಮುಖ್ಯಸ್ಥ. 
ಕನ್ನಡಕ್ಕೆ: ಡಾ. ಅಶೋಕ್. ಕೆ. ಆರ್
(ಲಂಕೇಶ್ ಪ್ರಕಾಶನ ರೋಹಿತ್ ವೇಮುಲ ಮತ್ತು ಜೆ.ಎನ್.ಯು ಬಗ್ಗೆ ಹೊರತರುತ್ತಿರುವ ಪುಸ್ತಕವೊಂದಕ್ಕೆ ಮಾಡಿಕೊಟ್ಟ ಅನುವಾದವಿದು. ಕರಡು ತಿದ್ದಿದ ಹರ್ಷನಿಗೆ ಧನ್ಯವಾದಗಳು)
29/02/2016
ಭಾರತೀಯ ನೌಕಾಪಡೆಯ ಮುಖ್ಯಸ್ಥನಾಗಿ 1993ರಲ್ಲಿ ನಿವೃತ್ತನಾಗುವ ಮೊದಲು ಸರಿಸುಮಾರು ನಲವತ್ತೈದು ವರ್ಷಗಳ ಸುದೀರ್ಘ ಅವಧಿಯವರೆಗೆ ಸಮವಸ್ತ್ರಧಾರಿ ಸೇನಾ ಭ್ರಾತ್ವತ್ವದ ಹೆಮ್ಮೆಯ ಸದಸ್ಯ ನಾನಾಗಿದ್ದೇನೆ. 

ಸದ್ಯ ನಮ್ಮ ಅತ್ಯುನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಉಂಟಾಗಿರುವ ಪ್ರಕ್ಷುಬ್ದ ಸ್ಥಿತಿ ಮತ್ತು ಅವುಗಳ ಸುತ್ತ ಮುಂದುವರೆದೇ ಇರುವ ದೊಂಬಿ, ಹಿಂಸೆ, ನಿರಂಕುಶ ವರ್ತನೆ ಇವೆಲ್ಲವನ್ನು ನೋಡಿ ನಾನು ಮತ್ತೊಮ್ಮೆ ಧ್ವನಿಯೆತ್ತಲ ನನ್ನ ಕಾಳಜಿಯನ್ನು ಈ ಬಹಿರಂಗ ಪತ್ರದ ಮೂಲಕ ವ್ಯಕ್ತಪಡಿಸಲು ಪ್ರೇರೇಪಿಸಿದೆ. ಇತ್ತೀಚೆಗೆ ರಾಷ್ಟ್ರಪತಿ ಮತ್ತು ಪ್ರಧಾನಿಗಳಿಗೆ ಬರೆದ ನನ್ನ ಎರಡು ಪತ್ರಗಳಿಗೆ ಅಧಿಕಾರಶಾಹಿಯ ಎಂದಿನ ಪ್ರತಿಕ್ರಿಯೆಯ ಹೊರತಾಗಿ ಮತ್ತೇನೂ ಸಿಗಲಿಲ್ಲ. ಸೈನ್ಯದಿಂದ ನಿವೃತ್ತಿ ಹೊಂದಿದ ನಂತರ ಸರಕಾರದ ನೀತಿಯ ವಿರುದ್ಧ ಬಹಿರಂಗವಾಗಿ ನಿಲ್ಲುವ ಕೆಲವೇ ಕೆಲವರಲ್ಲಿ ನಾನೂ ಒಬ್ಬ ಎನ್ನುವ ಅರಿವಿದೆ. ಮಾಜಿ ಸೈನಿಕನಾಗಿ, ನಾಗರೀಕನಾಗಿ ಇದು ನನ್ನ ಹಕ್ಕು ಮತ್ತು ಕರ್ತವ್ಯ ಎನ್ನುವುದು ನನ್ನ ದೃಷ್ಟಿಕೋನ. ಸೇವೆಯ ನೀತಿ ನಿಯಮದ ಕಾರಣಗಳಿಂದ ಕರ್ತವ್ಯದಲ್ಲಿರುವ ಸೈನಿಕರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುವಂತಿಲ್ಲ. ಸಮವಸ್ತ್ರ ಕಳಚಿದ ಮಾಜಿಗಳಾದ ನಾವು ಅಭಿಪ್ರಾಯ ವ್ಯಕ್ತಪಡಿಸಬಹುದು, ವ್ಯಕ್ತಪಡಿಸಬೇಕು ಕೂಡ. ನನ್ನಂತಹವರು ಈಗ ಮೌನಕ್ಕೆ ಶರಣಾಗಿಬಿಟ್ಟರೆ ನನ್ನ ಮೊಮ್ಮಗ ಕೇಳುತ್ತಾನೆ ``ನೀವಲ್ಲದಿದ್ದರೆ ಇನ್ಯಾರು?'', ``ಈಗಲ್ಲದಿದ್ದರೆ ಇನ್ಯಾವಾಗ'' ``ತಾತ?” ಎಂದು.

ನಾನು ಹೇಳುತ್ತಿರುವುದು ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾನಿಲಯ (ಹೆಚ್.ಸಿ.ಯು) ರೋಹಿತ್ ವೇಮುಲನ ದುರಂತ ಆತ್ಮಹತ್ಯೆಯಿಂದ ಪ್ರಾರಂಭವಾಗಿ ಈಗ ಜೆ.ಎನ್.ಯುನಲ್ಲಿ ನಡೆಯುತ್ತಿರುವ ಇನ್ನೂ ಬಗೆಹರಿಯದ ಘಟನಾವಳಿಗಳ ಕುರಿತು. ಪೋಲೀಸರ ಅನಪೇಕ್ಷಿತ ಪ್ರವೇಶ, ಈ ಪ್ರವೇಶ ಉಂಟುಮಾಡಿದ ``ಮಾಧ್ಯಮಗಳ ಪಾಟೀಸವಾಲು'', ತದನಂತರ ಗಂಭೀರ ಆರೋಪಗಳಾದ ದೇಶದ್ರೋಹ, ರಾಷ್ಟ್ರವಿರೋಧಿ ಮತ್ತು ಭಯೋತ್ಪಾದಕತೆಯ ಹೆಸರಿನಲ್ಲಿ ನಡೆದ ವಿದ್ಯಾರ್ಥಿಗಳ ಬಂಧನ ದೇಶಾದ್ಯಂತ ಪ್ರಮುಖ ಸುದ್ದಿಯಾಗಿದೆ. ಇದು ಅಭಿಪ್ರಾಯಗಳ ಆಧಾರದಲ್ಲಿ ದ್ರುವೀಕರಣವನ್ನು ಮಾಡಿಬಿಟ್ಟಿದೆ, ಈ ಧ್ರುವೀಕರಣವನ್ನು ತಡೆಯಬಹುದಾಗಿತ್ತು; ಇಡೀ ಪ್ರಕರಣವನ್ನು ನಿಭಾಯಿಸುವಲ್ಲಿ ಎದ್ದು ಕಾಣಿಸುವ ಸೂಕ್ಷ್ಮತೆಯ ಕೊರತೆ ಮತ್ತು ವಿದ್ಯಾರ್ಥಿಗಳನ್ನು ಸೈತಾನರಂತೆ ಚಿತ್ರಿಸಿದ ನಡೆಸಿದ ಪಿತೂರಿಗಳೆಲ್ಲವೂ ಧ್ರುವೀಕರಣಕ್ಕೆ ಕಾರಣವಾಗುತ್ತ ಸಂಪೂರ್ಣ ಬಿಕ್ಕಟ್ಟಿನ ಪರಿಸ್ಥಿತಿಯನ್ನು ಸೃಷ್ಟಿಮಾಡಿದೆ. ಇತ್ತೀಚಿನ ದಿನಗಳಲ್ಲಿ ನಡೆದ ದೊಡ್ಡ ಶಾಂತಿಯುತ ಪ್ರತಿಭಟನಾ ಮೆರವಣಿಗೆಯ ಭಾಗವಾಗುತ್ತ ಸಹಸ್ರಾರು ವಿದ್ಯಾರ್ಥಿಗಳು, ನಾಗರೀಕ ಸಮಾಜದ ಗುಂಪುಗಳು, ಹಲವಾರು ಪತ್ರಕರ್ತರು ದೆಹಲಿಯ ಬೀದಿಗಿಳಿದಿದ್ದಾರೆ. 

ಹಿಂತಿರುಗಿ ನೋಡುವುದಾದರೆ,

ನನ್ನ ವೈಯಕ್ತಿಕ ಜೀವನದ ಕುರಿತಾದ ಸಂಕ್ಷಿಪ್ತ ವಿವರಣೆ ನಾನೆಲ್ಲಿಂದ ಬಂದಿದ್ದೇನೆ ಎನ್ನುವುದರ ಕುರಿತು ತಿಳಿಸುತ್ತದೆ.

ಜನವರಿ 1949ರಲ್ಲಿ ಭಾರತೀಯ ನೌಕಾಪಡೆಗೆ ಸೇರಿದೆ? ನಮಗೆ ಸ್ವಾತಂತ್ರ್ಯ ಸಿಕ್ಕು ಹದಿನಾರು ತಿಂಗಳಾಗಿತ್ತಷ್ಟೇ. ಅದು ಅಪಾರ ನಿರೀಕ್ಷೆಗಳು, ದೊಡ್ಡ ಕನಸುಗಳ, ಅವಕಾಶಗಳ ಸಮಯ. ಬ್ರಿಟೀಷ್ ವಸಾಹತುವಿನ ವಿರುದ್ಧದ ನಿರಂತರ ಹೋರಾಟದಿಂದ ಸ್ವಾತಂತ್ರ್ಯ ಪಡೆದು ಪುಟಿದೆದ್ದ ಭಾರತದ ಸೈನ್ಯಕ್ಕೆ ಆಯ್ಕೆಯಾಗುವುದು ಹದಿನೈದರ ಹರೆಯದ ಹುಡುಗನಿಗೆ ನಿಜಕ್ಕೂ ತಲೆತಿರುಗಿಸುವಂತಹ ಸಂಭ್ರಮ ತರುವಂತದ್ದು. ಭಾರತೀಯ ನೌಕಾಪಡೆಯಲ್ಲಿ ಕಳೆದ ಆ ನಲವತ್ತೈದು ವರುಷಗಳು ಪ್ರಪಂಚದಾದ್ಯಂತ ನಡೆದ ಘಟನಾವಳಿಗಳ ವಿಹಂಗಮ ನೋಟವನ್ನು ನನಗೆ ನೀಡಿದೆ. ದೇಶ ವಿಭಜನೆಯ ದಿನಗಳ ಊಹಿಸಲಾಗದ ಹಿಂಸೆಯನ್ನು ಹತ್ತಿರದಿಂದ ನೋಡಿದೆ. ಅದರ ನೆನಪುಗಳು ಇನ್ನೂ ನನ್ನನ್ನು ಮತ್ತು ಗಡಿಯ ಎರಡೂ ಕಡೆ ಇರುವವರನ್ನು ಕಾಡುತ್ತಿವೆ. ಇಟ್ಟಿಗೆಯ ಮೇಲೆ ಇಟ್ಟಿಗೆ ಜೋಡಿಸಿ, ಹೆಜ್ಜೆಯ ಮೇಲೊಂದೆಜ್ಜೆ ಇಟ್ಟು ನಮ್ಮ ನಾಯಕರು ಮತ್ತು ನಾಗರೀಕರು ಜೊತೆಯಾಗಿ ಸ್ವತಂತ್ರ ಭಾರತಕ್ಕೊಂದು ದೃಷ್ಟಿಕೋನ ಕಟ್ಟಿದರು. ಹಲವು ಬಗೆಗಳಲ್ಲಿ ಆಲೋಚಿಸುವ ಮುತ್ಸದ್ಧಿಗಳಿಂದ, ಬಂದ ಭಿನ್ನಭಿನ್ನ ದೃಷ್ಟಿಕೋನಗಳನ್ನು ಒಳಗೊಂಡು ಭಾರತದ ಸಂವಿಧಾನವು ಸಂಕುಚಿತವಾದ ಮತ್ತು ಸಮುದಾಯಗಳನ್ನು ಹೊರಗಿಡುವ ಏಕಸಂಸ್ಕøತಿಯನ್ನು ಮುಲಾಜಿಲ್ಲದೆ ತಿರಸ್ಕರಿಸಿ ಸಮುದಾಯಗಳನ್ನು ಒಳಗೊಳ್ಳವಂತಹ, ವಿಶ್ವಾಸ ಮೂಡಿಸುವ, ಪರಿವರ್ತನೆಗೆ ಸಹಕಾರಿಯಾದ ಕ್ರಾಂತಿಕಾರಿ ನೋಟದ ರಾಷ್ಟ್ರದ ಪರಿಕಲ್ಪನೆಯನ್ನು ಒಪ್ಪಿಕೊಂಡಿತು. 

ಸೈನಿಕ ಶಕ್ತಿ ಮತ್ತು ದೇಶ

ಸ್ವತಂತ್ರ ದೇಶದ ಸೈನ್ಯ ದೇಶ ಕಟ್ಟುವಿಕೆಗೆ ವಿವಿಧ ರೀತಿಯಲ್ಲಿ ಜೊತೆಯಾಯಿತು. ನಮಗೆ ತರಬೇತುಗೊಳಿಸಿದ ರೀತಿಯಲ್ಲಿ ಶಿಸ್ತಿನಿಂದ, ವೃತ್ತಿಪರತೆಯಿಂದ ಕೆಲಸ ಮಾಡುವುದರ ಜೊತೆಗೆ ಸಹಾನುಭೂತಿಯಿಂದ ಮತ್ತು ಮನುಷ್ಯತ್ವದಿಂದ ಕಾರ್ಯನಿರ್ವಹಿಸಿದೆವು.

ಸೈನ್ಯದಲ್ಲಿರುವವರು ರಾಜಕೀಯ ಮಾಡುವುದಿಲ್ಲ ಎನ್ನುವುದು ಹೇಳಬೇಕಿಲ್ಲದ ಸಂಗತಿ. ಸತ್ಯವೆಂದರೆ ಸೈನ್ಯಕ್ಕೆ ಸೇರುತ್ತಿದ್ದಂತೆ ನಾಗರೀಕರಿಗೆ ಸಂವಿಧಾನ ನೀಡಿರುವ ಹಲವಾರು ಹಕ್ಕುಗಳನ್ನು ನಾವು ಕಳೆದುಕೊಂಡುಬಿಡುತ್ತೇವೆ. ಸ್ವಾತಂತ್ರ್ಯ ಬಂದಾಗಿನಿಂದಲೂ ಸೈನ್ಯದ ಮೇಲೆ ರಾಜಕೀಯ (ಸರಕಾರದ) ನಿಯಂತ್ರಣವನ್ನು ಸಂಪೂರ್ಣವಾಗಿ ಒಪ್ಪಿಕೊಂಡಿದ್ದೇವೆ. ಈ ಒಪ್ಪಿಗೆಯ ಅಲಿಖಿತ ಅರ್ಥವೆಂದರೆ ಸರಕಾರಗಳು ಜನರೆಡೆಗಿನ ತಮ್ಮ ಜವಾಬ್ದಾರಿಯನ್ನು (ಸೈನ್ಯವನ್ನೂ ಸೇರಿಸಿ) ಗೌರವದಿಂದ ಮತ್ತು ಸಮಗ್ರತೆಯೊಂದಿಗೆ ನಿರ್ವಹಿಸುತ್ತಾರೆ ಎಂಬುದು.

ನಿವೃತ್ತಿಯ ನಂತರ ನಾವೆಲ್ಲರೂ (ಸೈನ್ಯದವರು) ಮತ್ತೆ ಭಾರತೀಯ ನಾಗರೀಕರಾಗುತ್ತೇವೆ, ಹಕ್ಕು, ಕರ್ತವ್ಯ ಮತ್ತು ಜವಾಬ್ದಾರಿಗಳನ್ನೊಂದಿದ ಭಾರತೀಯ ನಾಗರೀಕರಾಗುತ್ತೇವೆ. ನೌಕಾಪಡೆ, ವಾಯುಪಡೆ, ಸೈನ್ಯ ವಿಧಿಸಿದ್ದ ನಿಯಮಗಳೀಗ ನಮಗೆ ಅನ್ವಯವಾಗುವುದಿಲ್ಲ. ಸಮವಸ್ತ್ರದಲ್ಲಿದ್ದೆವೋ ಇಲ್ಲವೋ ಪ್ರಜಾಪ್ರಭುತ್ವದ ಹೆಗ್ಗುರುತಾದ ಚುನಾವಣೆಗಳಲ್ಲಿ ಮತ ಚಲಾಯಿಸುವ ಹಕ್ಕನ್ನು ಯಾವತ್ತಿಗೂ ಗೌರವಿಸಿದ್ದೇವೆ. ಮತ ಚಲಾಯಿಸುತ್ತಿದ್ದದ್ದು ನಮ್ಮಲ್ಲಿನ ಪ್ರತಿಯೊಬ್ಬರೂ ನಿರ್ದಿಷ್ಟ ರಾಜಕೀಯ ಪಕ್ಷವನ್ನು ಅಥವಾ ದೃಷ್ಟಿಕೋನವನ್ನು ಆಯ್ದುಕೊಂಡಿದ್ದೇವೆಂಬುದನ್ನು ಸೂಚಿಸುತ್ತಿತ್ತು. ಪ್ರಬುದ್ಧತೆ ಹೊಂದುತ್ತಿದ್ದ, ಆದರೂ ಪ್ರಕ್ಷುಬ್ದವಾಗಿದ್ದ ಪ್ರಜಾಪ್ರಭುತ್ವದಲ್ಲಿ ನಾಲ್ಕು ದಶಕಗಳ ಕಾಲ ಸೇವೆಗೈದದ್ದು ನಿವೃತ್ತಿಯ ನಂತರದ ನನ್ನ ರಾಜಕೀಯ ಯೋಚನೆಗಳ ಮೇಲೆ ಗಮನಾರ್ಹ ಪ್ರಭಾವ ಬೀರಿದೆ.

ಯುದ್ಧದಿಂದ ಶಾಂತಿಯೆಡೆಗೆ

ಸೆಪ್ಟೆಂಬರ್ 1993ರಲ್ಲಿ ನಿವೃತ್ತನಾದ ನಂತರ ಮಹಾರಾಷ್ಟ್ರದ ಆಲಿಬಾಗಿನ ಹಳ್ಳಿಗೆ ಹೋಗಿ ಸಾವಯವ ಕೃಷಿಯಲ್ಲಿ ತೊಡಗಿಸಿಕೊಂಡೆ, ಈಗಲೂ ನನ್ನ ಜೀವನ ಅಲ್ಲೇ. ಗ್ರಾಮೀಣ ಭಾರತದಲ್ಲಿ ಬದುಕುವುದು ಸಂಪೂರ್ಣ ಶಿಕ್ಷಣವನ್ನು ಹೊಸದಾಗಿ ಪಡೆದಂತೆ, ಈ ಬದುಕು ನನಗೆ ಹಲವಾರು ಪ್ರಮುಖ ಒಳನೋಟಗಳನ್ನು ನೀಡಿದೆ. ಸಾಮಾನ್ಯ ರೈತನೊಬ್ಬ ಅನುಭವಿಸುವ ಏರಿಳಿತಗಳ ಜೊತೆಯಾಗಿದ್ದೇನೆ. ಹವಾಮಾನ ವೈಪರೀತ್ಯ, ಮಾಲಿನ್ಯ, ಸ್ಥಳೀಯ ರಾಜಕೀಯ, ಎಸ್.ಇ.ಝಡ್ ಎಂಬ `ಅಭಿವೃದ್ಧಿಯ' ಹೆಸರಿನಲ್ಲಿ ನಮ್ಮನ್ನು ಎತ್ತಂಗಡಿ ಮಾಡುವ ಬೆದರಿಕೆ, ಹೀಗೆ ಹಲವಾರು ವಿಷಯಗಳು ರೈತನ ಏರಿಳಿತವನ್ನು ಪ್ರಭಾವಿಸುತ್ತವೆ. ಸೈನ್ಯದಲ್ಲಿದ್ದ ವರ್ಷಗಳು, ಎರಡು ಯುದ್ಧಗಳಲ್ಲಿ ನೇರವಾಗಿ ಭಾಗವಹಿಸಿದ್ದಾಗಿನ ಅನುಭವದ ಜೊತೆಗೆ ದೇಶದ ಎಪ್ಪತ್ತು ಪ್ರತಿಶತಃ ಜನರ ಬದುಕಿನ ಮೇಲೆ ನೇರ ಪರಿಣಾಮ ಬೀರುವ ಕೃಷಿ ಬಿಕ್ಕಟ್ಟುಗಳನ್ನು ಹತ್ತಿರದಿಂದ ಕಂಡು ನಂತರ ಬಡತನ ಮತ್ತು ಹಸಿವಿನಿಂದ ನಿಜವಾದ ಬಿಡುಗಡೆ ಅಥವಾ `ಆಜಾದಿ' ದೊರೆಯುವುದು ಈ ನಾಡಿನ ಗಣ್ಯರು ತಮ್ಮ ಸ್ವಾರ್ಥವನ್ನು ಕಡಿಮೆಮಾಡಿಕೊಳ್ಳುತ್ತ ಸಮಗ್ರತೆಯನ್ನು ತೋರಿಸಿದಾಗ ಎನ್ನುವ ನನ್ನ ನಂಬಿಕೆಯನ್ನು ಪ್ರಭಾವಿಸಿದೆ. ಮಾಹಿತಿ ಹಕ್ಕು ಕಾಯ್ದೆಯಡಿ ಆರ್.ಬಿ.ಐ ಇಂಡಿಯನ್ ಎಕ್ಸ್‍ಪ್ರೆಸ್ಸಿಗೆ ನೀಡಿದ ಮಾಹಿತಿಯು ಕೈಗಾರಿಕೆಗಳು ಸಾರ್ವಜನಿಕ ಬ್ಯಾಂಕುಗಳಿಗೆ ನೀಡಬೇಕಾದ ಸಾಲದ ಮೊತ್ತ 2.11 ಲಕ್ಷ ಕೋಟಿ ಎಂದು ಬಹಿರಂಗಪಡಿಸಿತು. ಇದರಲ್ಲಿನ ಅರ್ಧದಷ್ಟು ಮೊತ್ತವನ್ನು 2013 - 2015ರ ಅವಧಿಯಲ್ಲಿ ವಸೂಲಾಗದ ಸಾಲ ಪಟ್ಟಿಗೆ ಸೇರಿಸಿ ಸಾಲ ಮನ್ನಾ ಮಾಡಲಾಗಿದೆ ಎಂದು ವರದಿಯಾಗಿದೆ. ಅಚ್ಚರಿಯೆಂದರೆ ಈ ಮಾಹಿತಿಯನ್ನಾಗಲೀ ಅಥವಾ ಇದು ಒಟ್ಟಾರೆ ಆರ್ಥಿಕತೆಯ ಮೇಲೆ ಉಂಟು ಮಾಡುವ ಪರಿಣಾಮದ ಬಗ್ಗೆಯಾಗಲೀ ಆರ್ಥಿಕ ಸಚಿವಾಲಯ ಮಾತೇ ಆಡುವುದಿಲ್ಲ. ಆದರೆ ದುರ್ಬಲ ವರ್ಗಗಳ ವಿದ್ಯಾರ್ಥಿಗಳ ಓದಿಗೆಂದು ಜೆ.ಎನ್.ಯು ಮತ್ತು ಇತರೆ ವಿಶ್ವವಿದ್ಯಾನಿಲಯಗಳಲ್ಲಿ ಕೊಡುವ ಜುಜುಬಿ ಮೊತ್ತದ ಹಣದ ಬಗ್ಗೆ ಗಂಭೀರ ಟೀಕೆಗಳನ್ನು ಕೇಳುತ್ತಿದ್ದೇವೆ. ತೆರಿಗೆದಾರರ ತೆರಿಗೆ ಹಣವನ್ನು ಪೋಲು ಮಾಡಲಾಗುತ್ತಿದ ಎಂದು ಹೇಳಲು ಇದನ್ನು ಉದಾಹರಣೆಯಾಗಿ ಬಳಸುತ್ತಿದ್ದಾರೆ! ಆದರೆ ಮನ್ನಾ ಮಾಡಲಾದ ಸಾಲವನ್ನು ಕೂಡ ತೆರಿಗೆದಾರರ ಹಣದಿಂದಲೇ ಕೊಡಲಾಗಿರುತ್ತದೆಯಲ್ಲವೇ? ಇದನ್ನು ನಾವು ಪ್ರಶ್ನಿಸುವುದಿಲ್ಲ.

ಸುಸ್ಥಿರ ಅಭಿವೃದ್ಧಿಯ ತಳಹದಿಯ ಮೇಲೆ ನ್ಯಾಯಬದ್ಧ ಸಮಾಜವನ್ನು ನಿರ್ಮಿಸಲು ನೆರೆಹೊರೆಯವರೊಂದಿಗೆ ಶಾಂತಿಯನ್ನು ಬೆಳೆಸಬೇಕು. ಇದರರ್ಥ ಪ್ರಸ್ತುತ ಸಮಸ್ಯೆಗಳಿಗೆ ರಾಜಕೀಯ ಪರಿಹಾರಗಳನ್ನು ಕಂಡುಕೊಳ್ಳುವುದು. ಇದಾದ ನಂತರವಷ್ಟೇ ನಾವು ಶಸ್ತ್ರಗಳ ಮೇಲಿನ ಖರ್ಚುಗಳನ್ನು ಕಡಿಮೆ ಮಾಡಿಕೊಳ್ಳಬಹುದು, ಬಳಕೆಯನ್ನು ನಿಯಂತ್ರಿಸಬಹುದು, ವಿದ್ಯುತ್ತಿನ ಬೇಡಿಕೆಯನ್ನು ಪೂರೈಸಬಹುದು ಮತ್ತು ನಾಗರೀಕರಿಗೆ ಆಹಾರ, ಸೂರು, ಶಿಕ್ಷಣ, ಆರೋಗ್ಯ ಮತ್ತು ಉದ್ಯೋಗವನ್ನು ನೀಡಬಹುದು. ನಾನು ರಾಯಗಡದಲ್ಲಿ ಎಸ್.ಇ.ಝೆಡ್ ವಿರುದ್ಧ ನಡೆದ ಹೋರಾಟದ ಭಾಗವಾಗಿದ್ದೇನೆ, ಮುನ್ನಡೆಸಿದ್ದೇನೆ. ನವೀಕರಿಸಬಹುದಾದ ಇಂಧನ ಮೂಲವನ್ನು ಪ್ರೋತ್ಸಾಹಿಸಬೇಕೆಂದು ನಿರಂತರವಾಗಿ ಆಗ್ರಹಿಸುತ್ತಿದ್ದೇನೆ. ಅಣು ವಿದ್ಯುತ್ ಕೇಂದ್ರಗಳ ವೆಚ್ಚ, ಸುರಕ್ಷತೆಯ ಬಗೆಗಿನ ಪ್ರಶ್ನೆಗಳು, ಅಣು ಕಸದ ವಿಲೇವಾರಿಯ ಸಮಸ್ಯೆಗಳೆಲ್ಲವೂ ನನ್ನನ್ನು ಅಣು ವಿದ್ಯುತ್ತಿನ ವಿರುದ್ಧದ ಹೋರಾಟದಲ್ಲಿ ಭಾಗವಹಿಸುವಂತೆ, ಕಾರ್ಬನ್ ಮುಕ್ತ ಅಣು ಮುಕ್ತ ಪರಿಹಾರಗಳನ್ನು ಹುಡುಕಲು ಆಗ್ರಹಿಸುವಂತೆ ಮಾಡಿದೆ. ಶಾಂತಿಯನ್ನು ಶಕ್ತಗೊಳಿಸುವ ಪ್ರಯತ್ನಗಳು ನನ್ನನ್ನು ಪಿ.ಐ.ಪಿ.ಎಫ್.ಪಿ.ಡಿ (Pakistan India Peoples Forum for peace and democracy -ಶಾಂತಿ ಮತ್ತು ಪ್ರಜಾಪ್ರಭುತ್ವಕ್ಕಾಗಿ ಪಾಕಿಸ್ತಾನ ಮತ್ತು ಭಾರತೀಯ ಜನರ ಸಂಘ) ಮತ್ತು ಐ.ಪಿ.ಎಸ್.ಐ (India Pakistan Soldiers Initiative for Peace, ಶಾಂತಿಗಾಗಿ ಭಾರತೀಯ ಮತ್ತು ಪಾಕಿಸ್ತಾನೀ ಸೈನಿಕರು) ಸಂಘಟನೆಗಳ ಮುಂದಾಳತ್ವ ವಹಿಸುವಂತೆ ಮಾಡಿದೆ. ಇವರೆಡೂ ಸಂಘಟನೆಗಳು ಎರಡೂ ದೇಶದ ಜನರ ನಡುವೆ ಸಂಪರ್ಕವೇರ್ಪಡಿಸುತ್ತ ಪಾಕಿಸ್ತಾನದ ಜೊತೆಗೆ ಉತ್ತಮ ಬಾಂಧವ್ಯ ಹೊಂದುವಂತೆ ಮಾಡಿವೆ. ಮರಣದಂಡನೆಯನ್ನೂ ನಾನೂ ವಿರೋಧಿಸುತ್ತೇನೆ, ಜೊತೆಗೆ ಸತತವಾಗಿ ಎ.ಎಫ್.ಎಸ್.ಪಿ.ಎ (Armed Forces Special Powers Act)ಯನ್ನು ಹೇರುವುದನ್ನು ವಿರೋಧಿಸುತ್ತೇನೆ. ಇದರ ಬಗ್ಗೆ ಬರೆದಿದ್ದೇನೆ ಮತ್ತು ಅನೇಕ ಸಾರ್ವಜನಿಕ ವೇದಿಕೆಗಳಲ್ಲಿ ಹೇಳಿದ್ದೇನೆ.

ನನ್ನ ಪ್ರಕಾರ ಮೇಲಿನ ಸಂಗತಿಗಳು ಚರ್ಚೆಗೆ ಯೋಗ್ಯವಾದವು, ನಾಗರೀಕರಾಗಿ ಇದರ ಬಗ್ಗೆ ಮಾತನಾಡುವುದು ಹಕ್ಕಿನ ಪ್ರಶ್ನೆಯಷ್ಟೇ ಅಲ್ಲ, ಕರ್ತವ್ಯವೂ ಹೌದು. ಅದು ಆ ದಿನದ ಸರಕಾರದ ನೀತಿಗಳ ವಿರುದ್ಧವಾಗಿದ್ದರೂ ಸಹ. ಈ ಮೇಲಿನ ಸಂಗತಿಗಳು ನನ್ನನ್ನಾಗಲೀ ಅಥವಾ ಯಾರನ್ನೇ ಆಗಲಿ ರಾಷ್ಟ್ರವಿರೋಧಿಯಾಗಿಸುತ್ತದಾ? ದೇಶದ್ರೋಹಿಯಾಗಿಸುತ್ತದಾ? ದೇಶಪ್ರೇಮವನ್ನು ಕಡಿಮೆಯಾಗಿಸುತ್ತದಾ? 

ಇಲ್ಲ ಎಂದೇ ನಾನು ನಂಬಿದ್ದೇನೆ.

ರಾಜಕೀಯ ಪಕ್ಷಗಳು ಮತ್ತು ಸರಕಾರಗಳು ನಾಡಿನ ಸಂವಿಧಾನಕ್ಕೆ ನಮ್ಮಂತೆಯೇ ಬದ್ಧವಾಗಿರಬೇಕೆಂಬುದೇ ನನ್ನ ಈ ನಿಲುವಿಗೆ ಕಾರಣ. ಪ್ರತಿಯೊಬ್ಬ ನಾಗರೀಕನಿಗೂ ಚಿಂತಿಸುವ ಸ್ವಾತಂತ್ರ್ಯವಿದೆ, ದಮನದ ಭಯವಿಲ್ಲದೇ ತನ್ನಭಿಪ್ರಾಯವನ್ನು ವ್ಯಕ್ತಪಡಿಸುವ ಸ್ವಾತಂತ್ರ್ಯವಿದೆ. ಆಧುನಿಕ ಪ್ರಜಾಪ್ರಭುತ್ವದಲ್ಲಿ ವಸಾಹತುಶಾಹಿ ದಿನಗಳ ದೇಶದ್ರೋಹದ ಕಾನೂನು ಮಾನ್ಯವಾಗಬಾರದು.

ಹಾಗಾಗಿ ಪ್ರಶ್ನೆ ಹುಟ್ಟುತ್ತದೆ: ರೋಹಿತ್ ವೇಮುಲ, ಕನ್ಹಯ್ಯ ಕುಮಾರ್, ಉಮರ್ ಖಾಲಿದನ ಮೇಲೆ ರಾಷ್ಟ್ರವಿರೋಧಿ, ದೇಶದ್ರೋಹಿ, ಭಯೋತ್ಪಾದಕ ಕೃತ್ಯಗಳ ಆರೋಪಗಳನ್ನು ನಾವ್ಯಾಕೆ ಮಾಡುತ್ತಿದ್ದೇವೆ? ಸದ್ಯಕ್ಕೆ ಲಭ್ಯವಿರುವ ಮಾಹಿತಿಗಳು, ಈ ಮೂರೂ ಯುವಕರು ನಮ್ಮ ಸಂವಿಧಾನದ ಗುರಿಗಳನ್ನು ಮುಂದೊಯ್ಯುವ ಪ್ರಯತ್ನ ಮಾಡುತ್ತಿದ್ದರೇ ಹೊರತು ಯಾವುದೇ ರಾಷ್ಟ್ರವಿರೋಧಿ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿರಲಿಲ್ಲ ಎನ್ನುವುದನ್ನು ತೋರಿಸುತ್ತವೆ. 

ರಾಷ್ಟ್ರವಾದವನ್ನು ವ್ಯಾಖ್ಯಾನಿಸುವುದ್ಯಾರು?

ರೋಹಿತನ ಸಾವು, ಕನ್ಹಯ್ಯನ ಬಂಧನ ಮತ್ತು ಉಮರ್ ಖಾಲಿದನನ್ನು ಹುಡುಕುತ್ತಿರುವುದು ರಾಷ್ಟ್ರವಾದ ಎಂದರೇನು? ರಾಷ್ಟ್ರವಿರೋಧಿ ಎಂದರೇನು ಎಂಬುದರ ಕುರಿತು ಸಾರ್ವಜನಿಕ ಚರ್ಚೆಗೆ ಅವಕಾಶ ಮಾಡಿಕೊಟ್ಟಿರುವುದು ಒಂದು ರೀತಿಯಲ್ಲಿ ಒಳ್ಳೆಯದೇ. ಜೊತೆಗೆ ಸಮಾಜದಲ್ಲಿರುವ ಜಾತಿ, ಧರ್ಮ ಮತ್ತು ತಾರತಮ್ಯದ ಬಗೆಗೂ ಚರ್ಚೆಗಳಾಗುತ್ತಿವೆ. ನನ್ನಲ್ಲಿನ ರಾಷ್ಟ್ರೀಯತೆಯನ್ನು ಅಥವಾ ರಾಷ್ಟ್ರೀಯತಾ ಭಾವದ ಕೊರತೆಯನ್ನು ನಿರ್ಧರಿಸುವ ಹಕ್ಕು ಯಾರಿಗಾದರೂ ಇದ್ದರೆ ಅದು ಯಾರಿಗಿದೆ ಎನ್ನುವ ಕುರಿತು ಮತ್ತಷ್ಟು ದೀರ್ಘ ಹಾಗೂ ಪ್ರಬುದ್ಧ ಚರ್ಚೆಗಳಾಗಬೇಕು. ನನ್ನರಿವಿನ ಮಟ್ಟಿಗೆ ಸ್ವಾತಂತ್ರ್ಯದ ದಿನಗಳಿಂದಲೂ ಇಂತಹುದೊಂದು ಚರ್ಚೆ ನಡೆದಿಲ್ಲ. ಇರುವ ಕಾನೂನುಗಳು ಮತ್ತು ಅಭ್ಯಾಸಗಳೆಲ್ಲವೂ ವಸಾಹತು ಸಂದರ್ಭದಿಂದ ಎರವಲು ಪಡೆದಿರುವುದೇ ಹೊರತು ಸಮಕಾಲೀನ ಚೌಕಟ್ಟಿನೊಳಗೆ ಅದನ್ನು ಸಂಭೋದಿಸಲಾಗಿಲ್ಲ. ಇದು ಪ್ರಬುದ್ಧ ಪ್ರಜಾಪ್ರಭುತ್ವಕ್ಕೆ ಅತ್ಯವಶ್ಯ. ಅಬ್ಬರದ ಅತಿರೇಕತನ, ರಾಷ್ಟ್ರಧ್ವಜವನ್ನು ಬೀಸುವುದು ಮತ್ತು ಘೋಷಣೆಗಳನ್ನು ಕೂಗುವುದು ದೇಶಭಕ್ತಿಯನ್ನು ಪ್ರಮಾಣೀಕರಿಸುವುದಿಲ್ಲ. ದೇಶದ್ರೋಹದ ಆರೋಪವನ್ನು ಹೊರಿಸುವುದಾಗಲೀ, ಭಯೋತ್ಪಾದಕರ ಜೊತೆ ನಂಟಿದೆ ಎಂದು ಕೂಗುವುದಾಗಲೀ ನ್ಯಾಯಾಲಯದ ಸೂಕ್ಷ್ಮ ಪರಿಶೀಲನೆಯಲ್ಲಿ ಪಾಸಾಗುವ ಸಾಧ್ಯತೆಗಳಿರುವುದಿಲ್ಲ. ಘೋಷಣೆಗಳ ಬಗ್ಗೆ, ಪ್ರತಿಭಟನೆಯ ರೀತಿಯ ಬಗ್ಗೆ ಹಲವರು ಸಾರ್ವಜನಿಕವಾಗಿ ಅಸಮ್ಮತಿ ತೋರ್ಪಡಿಸಿದ್ದಾರೆ, ಆದರೆ ಇದ್ಯಾವುದೂ ಹೊಸದಲ್ಲ ಮತ್ತು ತೀವ್ರಗಾಮಿತ್ವವೂ ಅಲ್ಲ. ಕೆಲವು ಮಾಧ್ಯಮಗಳು ಮತ್ತವರ ಹಿಂದಿರುವ ಅದೃಶ್ಯ ಮಾಲೀಕರು ಕೆಲವು ವಿದ್ಯಾರ್ಥಿಗಳು ದೇಶದ ಒಗ್ಗಟ್ಟಿಗೆ ಅಪಾಯಕಾರಿ ಎಂದು ಬಿಂಬಿಸಲು ಪ್ರಯತ್ನಿಸುತ್ತಿರುವುದು ನಗೆಪಾಟಲಿನ ವಿಷಯ.

ನನ್ನಂತವನಿಗೆ ಕಳವಳಕ್ಕೆ ದೂಡುವ ಸಂಗತಿಯೆಂದರೆ, ಕಾನೂನನ್ನು ಕಾಪಿಡುವ ವೃತ್ತಿಯಲ್ಲಿರುವವರೆನ್ನಲಾದ ಕೆಲವರು ನ್ಯಾಯಾಲಾಯದ ಆವರಣದಲ್ಲಿ ಗಲಭೆಯೆಬ್ಬಿಸಿ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಕನ್ಹಯ್ಯಕುಮಾರನ ಮೇಲೆ ಹಾಕಿದ ಬೆದರಿಕೆ ಮತ್ತು ನಡೆಸಿದ ಹಲ್ಲೆ. ಇದೆಲ್ಲವೂ ನಡೆದಿದ್ದು ಏನೂ ಮಾಡದೇ ಕಲ್ಲಿನಂತೆ ನಿಂತುಬಿಟ್ಟಿದ್ದ ದೊಡ್ಡ ಸಂಖೈಯ ಪೋಲೀಸರ ಸಮ್ಮುಖದಲ್ಲಿ. ಸಮವಸ್ತ್ರ ಧರಿಸಿದ, ಶಿಸ್ತಿನವರೆಂದು ಹೇಳಲಾದ ಪೋಲೀಸ್ ಇಲಾಖೆಯ ಈ ನಡೆಯನ್ನು ಒಪ್ಪುವುದು ಸಾಧ್ಯವೇ ಇಲ್ಲ.

ಜೆ.ಎನ್.ಯು ಮತ್ತು ಹೆಚ್.ಸಿ.ಯುನ ಕಳವಳಗಳ ಬಗ್ಗೆ ಸಾರ್ವಜನಿಕವಾಗಿ ಲಭ್ಯವಿರುವ ಅನೇಕ ಲಿಖಿತ ವರದಿಗಳು ಮತ್ತು ಅನೇಕ ವೀಡಿಯೋಗಳನ್ನು ಗಮನಿಸಿದ್ದೇನೆ. ನಿಜವಾದ ದುರಂತವೆಂದರೆ ವಿದೇಶಿ ಹಣದಿಂದ ನಡೆಯುತ್ತಿರುವ ಈ `ಭಯೋತ್ಪಾದಕ' `ದೇಶದ್ರೋಹಿ' ಚಟುವಟಿಕೆಗಳ ವಿರುದ್ಧದ ಕೂಗನ್ನು ಉಪಯೋಗಿಸಲಾಗುತ್ತಿರುವುದು ದೇಶದ ಪ್ರತಿಷ್ಟಿತ ವಿಶ್ವವಿದ್ಯಾನಿಲಯಗಳನ್ನು ಮುಚ್ಚುವಂತೆ, `ಶುದ್ಧ'ಗೊಳಿಸುವಂತೆ ಆಗ್ರಹಿಸುವುದಕ್ಕಾಗಿ! ಇದಿವರ ಗುಪ್ತ ಕಾರ್ಯಾಚರಣೆಯ ರೀತಿ ಎಂದು ಹೇಳಲೇಬೇಕಾಗಿದೆ. ಮತ್ತಿದು ಗಂಭೀರವಾದ ವಿಷಯ. ಎಲ್ಲಾ ರೀತಿಯಿಂದಲೂ ಘಟನೆಯನ್ನು ತನಿಖೆಗೊಳಪಡಿಸಿ; ವಿಶ್ವವಿದ್ಯಾನಿಲಯದ ಅಧಿಕಾರಿಗಳು ವಿದ್ಯಾರ್ಥಿಗಳ ಮೇಲೆ ಸೂಕ್ತ ಶಿಸ್ತು ಕ್ರಮವನ್ನೂ ತೆಗೆದುಕೊಳ್ಳಲಿ. ಆದರೆ ಪೋಲೀಸರನ್ನು ಕರೆಸುವ ಮುಂಚೆ, ದೇಶದ್ರೋಹದಂತ ಗಂಭೀರ ಆರೋಪಗಳನ್ನು ಹೊರಿಸುವ ಮುನ್ನ ವಿವೇಚನೆಯಿರಬೇಕು. 

ಮುಂದಿನ ದಾರಿ

ಜೆ.ಎನ್.ಯುವನ್ನು `ಮುಚ್ಚಿಬಿಡಿ' (ShutdownJNU) ಅಥವಾ ಜೆ.ಎನ್.ಯುವನ್ನು `ಶುದ್ಧಗೊಳಿಸಿ' ಎಂದು ಕೂಗಾಡುತ್ತಿರುವವರಿಗೆ, ಕೂಗಾಟವನ್ನು ಮುನ್ನಡೆಸುತ್ತಿರುವವರಿಗೆ ಇದರ ಪರಿಣಾಮವೇನೆಂದು ತಿಳಿದಂತಿಲ್ಲ, ಕುರುಡಾಗಿ ಗುಂಪಿನ ಹಿಂದೆ ಹೋಗುವ ಭೀತಗೊಳಿಸುವ ಪ್ರವೃತ್ತಿಯನ್ನವರು ತೋರಿಸುತ್ತಿದ್ದಾರೆ.

ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರುವಾಸಿಯಾಗಿರುವುದರ ಜೊತೆಗೆ, ಮಿಲಿಟರಿ ಸಂಸ್ಥೆಗಳಾದ ಎನ್.ಡಿ.ಎ, ಎನ್.ಡಿ.ಸಿ, ನೇವಲ್ ಅಕಾಡೆಮಿ ನಡೆಸುವ ಕೋರ್ಸುಗಳಿಗೆ ಜೆ.ಎನ್.ಯು ಮತ್ತು ಭಾರತದ ಕೆಲ ವಿಶ್ವವಿದ್ಯಾನಿಲಯಗಳು ಮಾನ್ಯತೆ ಕೊಟ್ಟಿದೆ ಎಂದು ನೆನಪಿಸಿಕೊಳ್ಳುವುದು ಈ ಸಂದರ್ಭಕ್ಕೆ ಸೂಕ್ತವಾದದ್ದು ಎನ್ನಿಸುತ್ತದೆ. ವಿಶ್ವವಿದ್ಯಾನಿಲಯಗಳು ಮತ್ತು ಮಿಲಿಟರಿ ಸಂಸ್ಥೆಗಳ ನಡುವಿನ ಈ ಸಂಬಂಧವನ್ನು ನಮ್ಮ ಸೈನ್ಯದಲ್ಲಿನ ಉದ್ಯೋಗಿಗಳು ಇಲ್ಲಿ ನಡೆವ ಸಂವಾದಗಳಿಂದ ಉಪಯೋಗ ಪಡೆದುಕೊಂಡು ನವೀನ ಚಿಂತನೆಗಳನ್ನು ಅಳವಡಿಸಿಕೊಳ್ಳಲು ಸಾಧ್ಯವಾಗಿದೆ. ಹಲವಾರು ಸೈನಿಕ ಸಿಬ್ಬಂದಿ ಜೆ.ಎನ್.ಯುನಲ್ಲಿನ ಅಕಾಡೆಮಿಕ್ ಕೋರ್ಸುಗಳಲ್ಲಿ ಭಾಗವಹಿಸುವುದರಿಂದ ಲಾಭ ಪಡೆದುಕೊಂಡಿದ್ದಾರೆ ಮತ್ತು ಅವರು ಇಲ್ಲಿನ ಹಳೆಯ ವಿದ್ಯಾರ್ಥಿಗಳು. ಹಲವು ನಾಗರೀಕ ಸೇವೆಯಲ್ಲಿರುವ ಅಧಿಕಾರಿಗಳು, ಪೋಲೀಸರು ಇದೇ ಗುಂಪಿಗೆ ಸೇರುತ್ತಾರೆ. ಇದನ್ನು ನಾನು ಉದ್ದೇಶಪೂರ್ವಕವಾಗಿ ಪ್ರಸ್ತಾಪಿಸುತ್ತಿದ್ದೇನೆ. ಡಿಗ್ರಿ ಮತ್ತು ಪ್ರಶಸ್ತಿಗಳನ್ನು ಹಿಂದಿರುಗಿಸುವ ಆತುರದ ನಿರ್ಧಾರಗಳು ಉಂಟುಮಾಡಬಹುದಾದ ಪರಿಣಾಮಗಳನ್ನು ಕೂಲಂಕುಷವಾಗಿ ನನ್ನ ಸೋದರ, ಸೋದರಿಯರು ಮತ್ತು ಮಾಜಿ ಸೈನಿಕರು ವಿವೇಚಿಸಬೇಕೆಂದು ತಿಳಿಸುವ ಉದ್ದೇಶದಿಂದ.

ಇದನ್ನಿವತ್ತು ಯಾಕೆ ಬರೆದಿದ್ದೇನೆ ಎನ್ನುವುದರ ಬಗ್ಗೆ ಹಲವಾರು ಕಾರಣಗಳನ್ನು ವಿವರಿಸಿದ್ದೇನೆ. ಹಿರಿಯರಾದ ನನ್ನಂತವರು ಮಾತನಾಡಬೇಕು, ತಡವಾಗುವ ಮುನ್ನ ಎಚ್ಚರ ಮೂಡಿಸಬೇಕಾದುದು ಅತ್ಯಗತ್ಯ. ನಿರಂಕುಶ ಆಡಳಿತ ಆಳ್ವಿಕೆ ನಡೆಸುವಂತಾಗುವುದು ಒಳ್ಳೆಯ ಜನರು ಮೌನದಿಂದಿರುವುದರಿಂದ ಎನ್ನುವುದನ್ನು ಇತ್ತೀಚಿನ ಇತಿಹಾಸ ನಮಗೆ ತೋರಿಸಿಕೊಟ್ಟಿದೆ. ನಮ್ಮ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಪ್ರಜಾಪ್ರಭುತ್ವವನ್ನು, ಸ್ವಾತಂತ್ರ್ಯವನ್ನು, ಪ್ರಶ್ನಿಸುವ ಹಕ್ಕನ್ನು, ಭಿನ್ನಮತೀಯತೆಯನ್ನು, ಚರ್ಚೆ, ಸಂವಾದಗಳನ್ನು ಉಳಿಸುವ ಸಲುವಾಗಿ ಇದು ಅತ್ಯಗತ್ಯ. ಭೀತಿಯಿಲ್ಲದೆ ಮಾತನಾಡಬಲ್ಲ ಚಿಂತಕರನ್ನು ಮತ್ತು ವೃತ್ತಿಪರರನ್ನು ರೂಪಿಸುವಲ್ಲಿ ಜೆ.ಎನ್.ಯು ಮುಂಚೂಣಿಯಲ್ಲಿದೆ. ನಿರ್ಬಿಡೆಯಿಂದ ಹೇಳಬೇಕೆಂದರೆ, ಯುವ ವಿದ್ಯಾರ್ಥಿ ನಾಯಕ ಕನ್ಹಯ್ಯನ ಮಾತುಗಳನ್ನು ಕೇಳಿದ ಮೇಲೆ - ಸಂಕೀರ್ಣತೆಯ, ಅಸಮಾನತೆಯ ದೇಶದಲ್ಲಿ ಇಪ್ಪತ್ತರ ಆಸುಪಾಸಿನ ಯುವಕನೊಬ್ಬ ಇಷ್ಟೊಂದು ಸಹಾನುಭೂತಿಯಿಂದ, ಬುದ್ಧಿವಂತಿಕೆಯಿಂದ, ಉತ್ಕುಟತೆಯಿಂದ ದೇಶ ಎದುರಿಸುತ್ತಿರುವ ನಿಜವಾದ ಸವಾಲುಗಳು ಮತ್ತು ಆತಂಕಗಳ ಬಗ್ಗೆ ಮಾತನಾಡುತ್ತಾನೆ ಎಂದರೆ - ಇಲ್ಲಿ ಎಲ್ಲವೂ ಸರಿಯಾಗಿದೆ ಎಂಬ ನಂಬಿಕೆಯನ್ನು ನನ್ನಲ್ಲಿ ಗಾಢಗೊಳಿಸಿದೆ. 

ರಾಷ್ಟ್ರಧ್ವಜಕ್ಕೆ ವಂದಿಸುವುದರ ಆಚೆಗೂ (ಧ್ವಜಕ್ಕೆ ಹೆಮ್ಮೆ ಮತ್ತು ಗೌರವದಿಂದ ವಂದಿಸುವುದನ್ನು ನಾನೆಂದೂ ಬಿಡುವುದಿಲ್ಲ) ನೋಡಿದಾಗ ಈ ದೇಶದಲ್ಲಿ ರಾಷ್ಟ್ರೀಯವಾದ ಮತ್ತು ದೇಶಪ್ರೇಮದ ನಿಜದ್ಯೋತಕವೆಂದರೆ ಯುವ ಚಿಂತಕರಾದ ರೋಹಿತ್ ವೇಮುಲ, ಕನ್ಹಯ್ಯ ಕುಮಾರ್, ಶೀಲಾ ರಷೀದ್, ಉಮರ್ ಖಾಲೀದ್ ಮತ್ತು ಇವರೊಟ್ಟಿಗೆ ದೇಶದಾದ್ಯಂತ ಇರುವ ಅನಾಮಿಕ ಯುವಕ, ಯುವತಿಯರ ಚಿಂತನೆಗಳೇ. ರೋಹಿತ್ ವೇಮುಲನ ರೀತಿ ದುಡುಕು ನಿರ್ಧಾರ ತೆಗೆದುಕೊಳ್ಳುವುದನ್ನು ತಡೆಗಟ್ಟುವುದನ್ನು ನಾವು ಒಟ್ಟಾಗಿ ಮಾಡುವುದರ ಜೊತೆಗೆ ಈಗ ಬಂಧನದಲ್ಲಿರುವ, ಪ್ರಾಣಭೀತಿಯಿಂದ ಅವಿತುಕೊಂಡಿರುವವರಿಗೆ ನ್ಯಾಯ ಸಿಗುವುಂತೆಯೂ ನೋಡಿಕೊಳ್ಳಬೇಕು.

ಅಂತಿಮವಾಗಿ ನೋಡಿದರೆ ರಾಷ್ಟ್ರೀಯ ಭದ್ರತೆಗೆ ಇರುವ ಅತ್ಯುತ್ತಮ ಖಾತ್ರಿ ಎಂದರೆ ಮನುಷ್ಯನ ಸುರಕ್ಷತೆಯೇ ಆಗಿದೆ. 

ಫೆಬ್ರ 27, 2016

ಪಂಚಾಯತಿ ಚುನಾವಣೆಗೆ ಸುರಿದ ಹಣವೆಷ್ಟು? ನೀವೂ ಲೆಕ್ಕ ಹಾಕಿ!

karnataka panchayat elections 2016
ಭಾರತದ ರಾಜಕೀಯ ವ್ಯವಸ್ಥೆಯ ಬುನಾದಿ ಪಂಚಾಯತಿ ವ್ಯವಸ್ಥೆ ಎಂದಿದ್ದರು ಮಹಾತ್ಮ ಗಾಂಧಿ. ಪಾಪ! ಆ ಮಹಾತ್ಮ ಯಾವ ಅರ್ಥದಲ್ಲಿ ಹೇಳಿದ್ದರೋ ಏನೋ ಇವತ್ತು ಭಾರತದ ಭ್ರಷ್ಟ ರಾಜಕೀಯ ವ್ಯವಸ್ಥೆಯ ಬುನಾದಿಯಾಗಿಬಿಟ್ಟಿದೆ ಪಂಚಾಯತಿ ವ್ಯವಸ್ಥೆ. ಎಲ್ಲಾ ಕೆಲಸಕ್ಕೂ ಶಾಸಕ, ಸಂಸದರ ಬಳಿಗೆ ಜನರು ತೆರಳುವಂತಾಗಬಾರದು; ಪ್ರತಿಯೊಂದು ಹಳ್ಳಿಯಲ್ಲೂ, ತಾಲ್ಲೂಕಿನಲ್ಲೂ, ಜಿಲ್ಲೆಯಲ್ಲೂ ಸರಕಾರವನ್ನು ಪ್ರತಿನಿಧಿಸುವವ ಜನಪ್ರತಿನಿಧಿಗಳಿರಬೇಕು, ಸ್ಥಳೀಯ ಬೇಕು ಬೇಡಗಳನ್ನು ಅವರು ನೋಡಿಕೊಳ್ಳಬೇಕು ಎಂಬ ಉದ್ದೇಶದ ಪಂಚಾಯತಿ ವ್ಯವಸ್ಥೆಯನ್ನು ಹಾಳುಗೆಡವಿದವರ್ಯಾರು? ಇತ್ತೀಚೆಗಷ್ಟೇ ಕರ್ನಾಟಕದಲ್ಲಿ ಮುಗಿದ ತಾಲ್ಲೂಕು ಮತ್ತು ಜಿಲ್ಲಾ ಪಂಚಾಯತ್ ಚುನಾವಣೆಗಳಲ್ಲಿ ಖರ್ಚಾಗಿರಬಹುದಾದ ಅಂದಾಜು ಮೊತ್ತವೆಷ್ಟು?

ಕೋಳಿ ಮೊದಲಾ ಮೊಟ್ಟೆ ಮೊದಲಾ ಎಂಬ ಪ್ರಶ್ನೆಗೆ ವಿಜ್ಞಾನಿಗಳು ಏನೇನೋ ತಿಪ್ಪರಲಾಗ ಹಾಕಿ ಉತ್ತರ ಕಂಡುಹಿಡಿದುಬಿಡಬಹುದು ಆದರೆ ಚುನಾವಣೆಗಳನ್ನು ಭ್ರಷ್ಟರಾಗಿಸಿದ್ದು ಮತದಾರರಾ ಅಥವಾ ಅಭ್ಯರ್ಥಿಗಳಾ ಎಂಬ ಪ್ರಶ್ನೆಗೆ ಉತ್ತರ ಕಂಡುಹಿಡಿಯುವುದು ಕಷ್ಟ ಕಷ್ಟ. ಅಭ್ಯರ್ಥಿಗಳನ್ನು ಕೇಳಿ ನೋಡಿ ‘ಏನ್ ಮಾಡೋದ್ ಹೇಳಿ. ವೋಟು ಕೇಳಕ್ಕೆ ಹೋದ್ರೆ ಆ ಕೆಲ್ಸ ಆಗಿಲ್ಲ, ಈ ಕೆಲ್ಸ ಆಗಿಲ್ಲ ಅಂತ ಹತ್ತು ನಿಮಿಷ ಬಯ್ತಾರೆ. ಕೆಲ್ಸ ಮಾಡ್ಕೊಡ್ತೀವಿ ನಮಗೆ ವೋಟ್ ಹಾಕಿ ಎಂದು ಹೊರಟರೆ ಏನ್ ಹಂಗೆ ಹೊಂಟುಬಿಟ್ರಿ ಅಂತ ನೇರವಾಗೇ ದುಡ್ಡು ಕೇಳ್ತಾರೆ’ ಎನ್ನುತ್ತಾರೆ. ‘ಅಯ್ಯೋ ಗೆದ್ದ ಮೇಲೆ ಸರಿಯಾಗಿ ಕಮಿಷನ್ ಹೊಡೆಯಲ್ವಾ? ಕೊಡ್ಲಿ ಬಿಡಿ’ ಅನ್ನುತ್ತಾರೆ ಮತದಾರರು. ‘ಈ ಪಂಚಾಯತಿಯವ್ರು ಎಂ.ಎಲ್.ಸಿ ಎಲೆಕ್ಷನ್ನಿನಲ್ಲಿ ಸರಿಯಾಗಿ ದುಡ್ಡು ಮಾಡಿಕೊಂಡಿಲ್ವಾ? ಹಂಗೇ ನಾವೂವೇ’ ಅನ್ನೋರೂ ಇದ್ದಾರೆ. ಹಣ ಕೊಟ್ಟವರಿಗೇ ಮತ ಚಲಾಯಿಸುತ್ತಾರೆ ಎಂದೆಲ್ಲ ನಂಬುವುದು ಕಷ್ಟವಾದರೂ ಹಣ ತೆಗೆದುಕೊಳ್ಳಲು ಹಿಂಜರಿಯುವವರ ಸಂಖೈ ದಿನೇ ದಿನೇ ಕಡಿಮೆಯಾಗುತ್ತಿರುವುದು ಸುಳ್ಳಲ್ಲ. 

ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಗೆದ್ದ ಅಭ್ಯರ್ಥಿ ಒಂದೂಕಾಲು ಒಂದೂವರೆ ಕೋಟಿಯಷ್ಟು ಖರ್ಚು ಮಾಡಿದ್ದರೆ ಎರಡನೇ ಸ್ಥಾನ ಪಡೆದ ಅಭ್ಯರ್ಥಿ ಅರವತ್ತರಿಂದ ಎಂಭತ್ತು ಲಕ್ಷ ಖರ್ಚು ಮಾಡಿದ್ದಾರೆ, ಒಂದು ಕೋಟಿ ಖರ್ಚು ಮಾಡಿಯೂ ಸೋತವರಿದ್ದಾರೆ. ಇನ್ನು ಉಳಿದ ಅಭ್ಯರ್ಥಿಗಳೂ ಒಂದಷ್ಟು ಖರ್ಚು ಮಾಡಿದ್ದಾರೆ, ಅದನ್ನು ಬಿಟ್ಟುಬಿಡೋಣ ಬಿಡಿ. ಮೊದಲ ಸ್ಥಾನ ಪಡೆದ ಅಭ್ಯರ್ಥಿ ಒಂದು ಕೋಟಿ ಮತ್ತು ಎರಡನೇ ಸ್ಥಾನ ಪಡೆದ ಅಭ್ಯರ್ಥಿ ಐವತ್ತು ಲಕ್ಷ ಖರ್ಚು ಮಾಡಿದ್ದಾರೆಂದು ಇಟ್ಟುಕೊಳ್ಳೋಣ, ಅಲ್ಲಿಗೆ ಇಬ್ಬರೂ ಸೇರಿ ಮಾಡಿದ ಖರ್ಚು ಒಂದೂವರೆ ಕೋಟಿ. ಒಟ್ಟು 1083 ಜಿಲ್ಲಾ ಪಂಚಾಯತ್ ಸ್ಥಾನಗಳಿದ್ದವು. ಇನ್ನೂರು, ಬೇಡ ಮುನ್ನೂರು ಸ್ಥಾನಗಳಲ್ಲಿ ಹಣದ ವಹಿವಾಟೇ ನಡೆಯಲಿಲ್ಲ ಎಂದು ‘ನಂಬೋಣ’. ಅಲ್ಲಿಗೆ ಉಳಿದಿದ್ದು 783 ಸ್ಥಾನಗಳು. 

783 x 1.5 ಕೋಟಿ = 1174,50,00,000 ಕೋಟಿ ಹಣ ಜಿಲ್ಲಾ ಪಂಚಾಯತಿ ಚುನಾವಣೆಯಲ್ಲಿ ಹರಿದು ಹೋಗಿದೆ! (ಇಷ್ಟೊಂದು ಉದ್ದದ ಸಂಖೈ ಇದ್ದಾಗ ಎಷ್ಟು ಸಾವಿರ ಕೋಟಿ ಎಂದು ಲೆಕ್ಕ ಹಾಕುವುದು ಗೊತ್ತಿಲ್ಲ, ನಿಮಗೆ ಗೊತ್ತಾದರೆ ತಿಳಿಸಿ!)

ತಾಲ್ಲೂಕು ಪಂಚಾಯತಿಗೆ ಬರುವ ಅನುದಾನಗಳು ಕಡಿಮೆಯಂತೆ. ಹಾಗಾಗಿ ಇಲ್ಲಿ ಖರ್ಚಾಗುವ ಹಣವೂ ಕಡಿಮೆ. ಇಪ್ಪತ್ತು ಮೂವತ್ತು ಲಕ್ಷ ಖರ್ಚು ಮಾಡುವವರೂ ಇದ್ದಾರಾದರೂ ಅಂದಾಜು ಲೆಕ್ಕದ ಸಲುವಾಗಿ ಗೆದ್ದ ಅಭ್ಯರ್ಥಿ ಹದಿನೈದು ಲಕ್ಷ ಮತ್ತು ಎರಡನೇ ಸ್ಥಾನ ಪಡೆದ ಅಭ್ಯರ್ಥಿ ಐದು ಲಕ್ಷ ಖರ್ಚು ಮಾಡಿದ್ದಾರೆ ಎಂದುಕೊಳ್ಳೋಣ. ಅಲ್ಲಿಗೆ ಒಂದು ತಾಲ್ಲೂಕು ಪಂಚಾಯತಿ ಸ್ಥಾನಕ್ಕೆ ಇಪ್ಪತ್ತು ಲಕ್ಷ. ಒಟ್ಟು ತಾಲ್ಲೂಕು ಪಂಚಾಯತಿ ಸ್ಥಾನಗಳು 3884, ಅದರಲ್ಲಿ ಸಾವಿರ ಸ್ಥಾನಗಳಲ್ಲಿ ಯಾವುದೇ ದುಡ್ಡು ಹರಿಯಲಿಲ್ಲ ಎಂದು ಬಿಟ್ಟುಬಡೋಣ. ಉಳಿದಿದ್ದು 2884 ಸ್ಥಾನಗಳು.

2884 x 20 ಲಕ್ಷ = 576,80,00,000 ಕೋಟಿ ಹಣ ತಾಲ್ಲೂಕು ಪಂಚಾಯತಿಗಳಲ್ಲಿ ಖರ್ಚಾಗಿದೆ!

(ಇಷ್ಟೊಂದು ಉದ್ದದ ಸಂಖೈ ಇದ್ದಾಗ ಎಷ್ಟು ಸಾವಿರ ಕೋಟಿ ಎಂದು ಲೆಕ್ಕ ಹಾಕುವುದು ಗೊತ್ತಿಲ್ಲ, ನಿಮಗೆ ಗೊತ್ತಾದರೆ ತಿಳಿಸಿ!)

ನೆನಪಿರಲಿ, ಇಲ್ಲಿ ಎರಡು ಅಭ್ಯರ್ಥಿಗಳ ಖರ್ಚನ್ನು ಮಾತ್ರ ಲೆಕ್ಕಕ್ಕೆ ತೆಗೆದುಕೊಳ್ಳಲಾಗಿದೆ. ಕನಿಷ್ಟ ಖರ್ಚನ್ನು ಮಾತ್ರ ಪರಿಗಣಿಸಲಾಗಿದೆ. ಪೂರ್ಣ ಖರ್ಚು ಇದರ ಎರಡು ಮೂರು ನಾಲಕ್ಕು ಪಟ್ಟೇ ಹೆಚ್ಚಿರಬಹುದು.

ಅಲ್ಲಿಗೆ ಕನಿಷ್ಟ 1751 ಕೋಟಿ ರುಪಾಯಿ (ಲೆಕ್ಕಾ ಕರೆಕ್ಟಾ?!) ಖರ್ಚಾಗಿದೆ. ಈ ಪಂಚಾಯತಿ ಸದಸ್ಯರು ಇನ್ನೇನು ಸಮಾಜದ ಪರವಾಗಿ ಕಾರ್ಯನಿರ್ವಹಿಸುತ್ತಾರೆ? 

ಹಣ ಖರ್ಚಾಗಿರುವುದು ಭ್ರಷ್ಟತೆಯನ್ನು ಹೆಚ್ಚಿಸುವುದರ ಜೊತೆಜೊತೆಗೇ ಆರ್ಥಿಕ ಸಾಮರ್ಥ್ಯವಿಲ್ಲದವರಿಗೆ ಚುನಾವಣೆಯಲ್ಲಿ ಗೆಲ್ಲುವ, ಪಕ್ಷದಿಂದ ಸ್ಪರ್ಧಿಸುವ ಅವಕಾಶವನ್ನೂ ಕಸಿದುಕೊಳ್ಳುತ್ತಿದೆ. ಊರಿನಲ್ಲಿ ವಾಸವಿರುವ ಸ್ಥಳೀಯ ಅಭ್ಯರ್ಥಿಗಳಿಗಿಂತ ನಗರಗಳಲ್ಲಿ ವಾಸಿಸುತ್ತ ಚುನಾವಣೆಗೆ ನಿಂತವರ ಸಂಖೈ ಹೆಚ್ಚುತ್ತಿದೆ, ಜೊತೆಗೆ ವ್ಯಾಪಾರ ವಹಿವಾಟು ನಡೆಸುವ ವ್ಯಕ್ತಿಗಳಿಗೇ ಕರ್ನಾಟಕದ ಪ್ರಮುಖ ಮೂರೂ ಪಕ್ಷಗಳು ಮಣೆ ಹಾಕುತ್ತಿವೆ. ಅಲ್ಲಿಗೆ ಪಂಚಾಯತ್ ರಾಜ್ ಎಂಬ ಅಧಿಕಾರವನ್ನು ಜನರಿಗೆ ತಲುಪಿಸುವ ವಿಕೇಂದ್ರೀಕರಣದ ವ್ಯವಸ್ಥೆ ಸಂಪೂರ್ಣವಾಗಿ ಹಳ್ಳ ಹಿಡಿಯುವತ್ತ ದುಡುದುಡನೆ ಸಾಗುತ್ತಿದೆ.

ಫೆಬ್ರ 26, 2016

ಕು.ಸ.ಮಧುಸೂದನ್: ಭೂಸ್ವಾಧೀನತೆ ಮತ್ತು ಬದಲಾಗಬೇಕಾದ ಆರ್ಥಿಕನೀತಿ

(ಸಾಂದರ್ಭಿಕ ಚಿತ್ರ)
ಕು.ಸ.ಮಧುಸೂದನ ರಂಗೇನಹಳ್ಳಿ
ರಾಜ್ಯದಲ್ಲಿ ಆಯೋಜನೆಯಾಗುವ ಪ್ರತಿ ಗ್ಲೋಬಲ್ ಇನ್‍ವೆಸ್ಟ್ ಮೀಟ್‍ಗಳೂ ಈಗಾಗಲೇ ಆತ್ಮಹತ್ಯೆಗೆ ಶರಣಾಗುತ್ತಿರುವ ರೈತರಿಗೆ ಮತ್ತಷ್ಟು ಉತ್ತೇಜನ ಕೊಡುವ ದಿಕ್ಕಿನಲ್ಲಿ ಕೆಲಸ ಮಾಡುತ್ತಿವೆ. ಮೊನ್ನೆ ತಾನೇ ನಡೆದ ಬೆಂಗಳೂರಲ್ಲಿ ನಡೆದ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಸಾವಿರಾರು ಕೋಟಿ ರೂಪಾಯಿಗಳಷ್ಟು ಬಂಡವಾಳ ಹೂಡಿಕೆಗೆ ಉದ್ಯಮಿಗಳು ಒಪ್ಪಿದ್ದಾರೆಂದು ಹೇಳಿರುವ ಬಾರಿ ಕೈಗಾರಿಕಾ ಮಂತ್ರಿ ಶ್ರೀ. ಆರ್.ವಿ.ದೇಶಪಾಂಡೆಯವರು ಇಷ್ಟೊಂದು ಪ್ರಮಾಣದ ಕೈಗಾರಿಕೆಗಳಿಗೆ ಅಗತ್ಯವಾದ ಭೂಮಿಯ ಪ್ರಮಾಣವೆಷ್ಟು ಮತ್ತು ಅಷ್ಟು ಭೂಮಿಯನ್ನು ಹೇಗೆ ನೀಡುತ್ತೇವೆಯೆಂಬುದನ್ನು ಮಾತ್ರ ಹೇಳಿಲ್ಲ. ಇಷ್ಟೊಂದು ಪ್ರಮಾಣದ ಬಂಡವಾಳ ಹೂಡಿಕೆಗೆ ಸಿದ್ದರಾಗಿರುವ ಉದ್ಯಮಿಗಳು ಸರಕಾರದಿಂದ ಸಾಕಷ್ಟು ಭೂಮಿಯನ್ನು ಕೇಳುವುದು ಮಾಮೂಲು. ಉದ್ಯಮಿಗಳ ಇಂತಹ ಬೇಡಿಕೆಯನ್ನು ಈಡೇರಿಸಲು ಸರಕಾರ ರೈತರ ಭೂಮಿಯನ್ನು ಸಾಧೀನ ಪಡಿಸಿಕೊಳ್ಳುವ ಪ್ರಕ್ರಿಯೆಗೆ ಮುಂದಾಗುವುದು ಖಚಿತ! ಯಾಕೆಂದರೆ ಬೃಹತ್ ಕೈಗಾರಿಕೆಗಳಿಗೆ ಅಗತ್ಯವಾದ ಭೂಮಿಯನ್ನು ಒದಗಿಸುವುದು ಸರಕಾರವೇ ಒಪ್ಪಿಕೊಂಡ ಕರ್ತವ್ಯವಾಗಿದೆ. ಹೀಗೆ ಭೂಸ್ವಾಧೀನಕ್ಕೆ ಮುಂದಾಗುವ ಸರಕಾರಗಳು ಯಥಾಪ್ರಕಾರ ಅಭಿವೃದ್ದಿಯ, ಆರ್ಥಿಕ ಪ್ರಗತಿಯ, ನಿರುದ್ಯೋಗ ನಿವಾರಣೆಯ ಹುಸಿ ಮಾತುಗಳನ್ನಾಡುತ್ತವೆ. ಅಭಿವೃದ್ದಿಯ ಇಂತಹ ಮಾರ್ಗಗಳನ್ನು ವಿರೋಧಿಸುವವರಿಗೆ ತ್ಯಾಗದ ಪಾಠ ಮಾಡುತ್ತಾ ದೇಶದ ಸಮಗ್ರ ಪ್ರಗತಿಗೆ, ತಲಾ ಆದಾಯ ಹೆಚ್ಚಳಕ್ಕೆ ರೈತರು ತ್ಯಾಗ ಮಾಡುವುದು ಅನಿವಾರ್ಯವೆಂದೂ ಮತ್ತು ಅವರ ಮುಂದಿನ ಪೀಳಿಗೆಗೆ ಈ ತ್ಯಾಗದ ಫಲ ದೊರೆಯಲಿದೆಯೆಂದು ನಂಬಿಸಲು ಹೊರಡುತ್ತವೆ! ಇದು ಇವತ್ತು ನಿನ್ನೆಯ ಮಾತಲ್ಲ. ಇಂಡಿಯಾಕ್ಕೆ ಸ್ವಾತಂತ್ರ ದೊರಕಿದ ಪ್ರಾರಂಭದ ದಿನದಿಂದಲೂ ರೈತರಿಗೆ ಇಂತಹ ಮಾತುಗಳನ್ನು ಹೇಳಿಯೇ ಮೋಸ ಮಾಡಲಾಗುತ್ತಿದೆ.

ಸ್ವಾತಂತ್ರಾನಂತರದ ದಿನಗಳಲ್ಲಿ ಅಂದಿನ ಪ್ರದಾನಮಂತ್ರಿಯಾಗಿದ್ದ ಶ್ರೀ ಪಂಡಿತ್ ಜವಹರಲಾಲ್‍ ನೆಹರುರವರು ರಾಷ್ಟ್ರವನ್ನುದ್ದೇಶಿಸಿ ಮಾತನಾಡುತ್ತ, ಮುಂದಿನ ಜನಾಂಗಕ್ಕೆ ಭದ್ರವಾದ ಆರ್ಥಿಕ ಬುನಾದಿಯನ್ನು ಹಾಕಲು, ದೇಶದ ಸರ್ವಾಂಗೀಣ ಪ್ರಗತಿಯನ್ನು ಸಾಧಿಸಲು ರೈತರು ತಮ್ಮ ಭೂಮಿ, ಮನೆ-ಕಾಣಿಗಳನ್ನು ಸರಕಾರದ ಇಚ್ಛೆಯಂತೆ ನೀಡಿ, ಭಾರಿ ಕೈಗಾರಿಕೆಗಳು ಮತ್ತು ಅಣೆಕಟ್ಟುಗಳ ನಿರ್ಮಾಣಕ್ಕೆ ಸಹಕರಿಸಬೇಕೆಂದು ಹೇಳಿದ್ದರು. ತಮ್ಮ ಕನಸಿನ ಕೂಸಾದ ಪಂಚವಾರ್ಷಿಕ ಯೋಜನೆಗಳ ಅನುಷ್ಠಾನಕ್ಕೆ ಕೃಷಿ ಸಮುದಾಯ ಇಂತಹದೊಂದು ತ್ಯಾಗ ಬಲಿದಾನಕ್ಕೆ ಸಿದ್ದವಾಗುವುದು ಅಗತ್ಯವಾಗಿದ್ದು, ಜನತೆ ತಮಗೆ ಬೆಂಬಲ ನೀಡುತ್ತಾರೆಂಬುದು ನೆಹರೂರವರ ನಂಬಿಕೆಯಾಗಿತ್ತು. ನೆಹರೂರವರ ನಂಬಿಕೆ ಸುಳ್ಳಾಗಲಿಲ್ಲ. ಅದು ಸ್ವಾತಂತ್ರ ಬಂದ ಹೊಸತಾದ್ದರಿಂದ ಸರಕಾರಗಳಿಂದ ಜನ ಭ್ರಮನಿರಸನರಾಗಿರಲಿಲ್ಲ. ಅವರಿಗಿನ್ನೂ ಸ್ವಾತಂತ್ರಪೂರ್ವದ ಆದರ್ಶಗಳು ತಮ್ಮ ಅಸ್ಮಿತೆಗಿಂತ ಮುಖ್ಯವಾಗಿದ್ದವು ಅನಿಸಿದ್ದವು. ಹಾಗಾಗಿ ಶೇಕಡಾ 90ಕ್ಕೂ ಅಧಿಕ ಜನ ಯಾವುದೇ ಪ್ರತಿರೋಧ ಒಡ್ಡದೆ, ಪ್ರಶ್ನೆಗಳನ್ನು ಕೇಳದೆ ತಮ್ಮ ಭೂಮಿಯ್ನು ಸರಕಾರಕ್ಕೆ ನೀಡಿದರು. ಜೊತೆಗೆ ಅಂದಿನ ದಿನಮಾನದಲ್ಲಿ ಬಹುತೇಕ ಯೋಜನೆಗಳು ಸರಕಾರದ ಒಡೆತನದವೇ ಆಗಿದ್ದು, ಖಾಸಗಿಯವರ ಪಾತ್ರವಿರಲಿಲ್ಲ. ಹೀಗಾಗಿ ಜನರು ಸಹ ತಾವು ತಮ್ಮ ಸರಕಾರಕ್ಕೆ ಭೂಮಿಯನ್ನು ತ್ಯಾಗ ಮಾಡಿದ ಸಂತೃಪ್ತಿಯನ್ನು ಕಂಡುಕೊಂಡಿದ್ದರು. ಆದರೆ ಸರಕಾರದ ಕೆಂಪುಪಟ್ಟಿಯ ವ್ಯವಸ್ಥೆ ಮತ್ತು ರಾಜಕೀಯ ಇಚ್ಚಾಶಕ್ತಿಯಿಲ್ಲದ ಕಾರಣವಾಗಿ ಜನರು ಬಹುಬೇಗ ನಿರಾಶರಾಗಬೇಕಾಯಿತು. ತಮ್ಮ ಮನೆಮಠ ಕಳೆದುಕೊಂಡು ನಿರಾಶ್ರಿತರಾದ ಲಕ್ಷಾಂತರ ಜನರಿಗೆ ಸೂಕ್ತ ಸಮಯದಲ್ಲಿ ಸೂಕ್ತ ಪರಿಹಾರ ದೊರೆಯಲೇ ಇಲ್ಲ. ತಾವು ಯಾವುದಕ್ಕಾಗಿ ಮಾಡಿದ್ದೇವೆಂದು ರೈತರು ಬಾವಿಸಿದ್ದರೋ ಅಂತಹ ಫಲ ಅವರಿಗಿರಲಿ, ಅವರ ಮುಂದಿನ ಪೀಳಿಗೆಗೂ ದೊರೆಯಲಿಲ್ಲ. ಇದರಿಂದ ಇಂಡಿಯಾದ ಒಟ್ಟಾರೆ ಕೃಷಿಕ ವರ್ಗ ಭ್ರಮನಿರಸನಕ್ಕೆ ಒಳಗಾಯಿತು. ತದನಂತರದಲ್ಲಿನ ಸರಕಾರದ ಭೂಸ್ವಾಧೀನ ಪ್ರಕ್ರಿಯೆಗಳು ಎಲ್ಲೆಲ್ಲಿ ನಡೆಯಲು ಪ್ರಾರಂಭವಾಯಿತೊ ಅಲ್ಲೆಲ್ಲಾ ರೈತಾಪಿ ವರ್ಗದ ಪ್ರತಿಭಟನೆಗಳು ಶುರುವಾದವು.

ಈ ಹಿನ್ನೆಲೆಯಲ್ಲಿ ನೋಡಿದರೆ 1970ರಿಂದ 1990ವರೆಗಿನ ಎರಡು ದಶಕಗಳೂ ದೇಶದಲ್ಲಿ ಅಂತಹ ಯಾವುದೇ ಮಹತ್ವವಾದ ಭೂಸ್ವಾಧೀನ ಪ್ರಕ್ರಿಯೆಗಳು ನಡೆಯಲಿಲ್ಲ. ಆದರೆ ತೊಂಭತ್ತರ ದಶಕದಲ್ಲಿ ಅಂದಿನ ಪ್ರದಾನಮಂತ್ರಿಯವರಾಗಿದ್ದ ದಿವಂಗತ ಶ್ರೀ ಪಿ.ವಿ. ನರಸಿಂಹರಾಯರ ಸಂಪುಟದಲ್ಲಿ ವಿತ್ತ ಸಚಿವರಾಗಿದ್ದ ಮತ್ತು ನಂತರ ದೇಶದ ಪ್ರದಾನ ಮಂತ್ರಿಯೂ ಆದಂತಹ ಶ್ರೀ ಮನಮೋಹನ್ ಸಿಂಗ್ ರವರು ಜಾರಿಗೆ ತಂದ ಮುಕ್ತ ಆರ್ಥಿಕ ನೀತಿಯು ವಿದೇಶಿ ಮತ್ತು ಸ್ವದೇಶಿ ಬಂಡವಾಳಿಗರನ್ನು ದೇಶದಲ್ಲಿ ಬೃಹತ್ ಕೈಗಾರಿಕೆಗಳಿಗೆ ಬಂಡವಾಳ ಹೂಡಲು ಕೆಂಪುಹಾಸು ಹಾಸಿ ಕರೆಯಿತು. ಆಗ ದೇಶಕ್ಕೆ ಕಾಲಿಟ್ಟ ಬಹುರಾಷ್ಟ್ರೀಯ ಕಂಪನಿಗಳು ತಮ್ಮ ಉಧ್ಯಮಗಳನ್ನು ಸ್ಥಾಪಿಸಲು ಉಚಿತವಾದ ಭೂಮಿಯ ಬೇಡಿಕೆಯನ್ನಿಟ್ಟವು. ಅವರೊಂದಿಗೆ ಒಡಂಬಡಿಕೆಗಳನ್ನು ಮಾಡಿಕೊಂಡ ಸರಕಾರ ರೈತರ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳುಲು ಪ್ರಾರಭಿಸಿತು. ಮೊದಲಿಗೆ ಕೃಷಿಚಟುವಟಿಕೆಗಳಿಲ್ಲದಂತಹ ಬಂಜರು ಭೂಮಿಯನ್ನು ವಶಪಡಿಸಿಕೊಳ್ಳುತ್ತಿದ್ದ ಸರಕಾರ ಬೇಡಿಕೆ ಜಾಸ್ತಿಯಾದಂತೆ ಕೃಷಿ ಭೂಮಿಗೂ ಕೈಹಾಕಲು ತೊಡಗಿತು. ಈ ನಿಟ್ಟಿನಲ್ಲಿ ವಿರೋಧ ವ್ಯಕ್ತ ಪಡಿಸಿದವರಿಗೆ, ಇದೀಗ ತ್ಯಾಗದ ಕಥೆಯ ಜೊತೆಗೆ ಇನ್ನಷ್ಟು ಸುಳ್ಳುಗಳನ್ನು ಹೇಳಲು ಪ್ರಾರಂಭಿಸಿತು: 

ಕೃಷಿಗೆ ಯಾವುದೇ ಭವಿಷ್ಯವಿಲ್ಲ. ಅದು ಹಳ್ಳಿಗಳ ಎಲ್ಲ ಜನರಿಗೂ ಉದ್ಯೋಗ ಕಲ್ಪಿಸುವಲ್ಲಿ ವಿಫಲವಾಗಿದೆ. ಅಲ್ಲದೇ ಕೃಷಿಯಿಂದ ಬರುವ ಅಲ್ಪ ಆದಾಯದಿಂದ ರಾಷ್ಟ್ರೀಯ ವರಮಾನಕ್ಕೆ ಯಾವುದೇ ಉಪಯೋಗವಿಲ್ಲ. ಅದೂ ಅಲ್ಲದೇ ಭೂಮಿಯಿಲ್ಲದೇ ಕೈಗಾರಿಕೆಗಳನ್ನು ಹೇಗೆ ಸ್ಥಾಪಿಸುವುದು? ಹೀಗೆ ಸ್ಥಾಪಿತವಾದ ಕೈಗಾರಿಕೆಗಳಿಂದ ಭೂಮಿ ಕಳೆದುಕೊಂಡ ರೈತರಿಗೆ ಉದ್ಯೋಗಗಳು ದೊರೆತು ಅವರ ತಲಾ ಆದಾಯ ಹೆಚ್ಚಳವಾಗಿ ರಾಷ್ಟ್ರೀಯ ಸಂಪತ್ತು ದ್ವಿಗುಣಗೊಳ್ಳುತ್ತದೆಯೆಂಬ ಕಪೋಲಕಲ್ಪಿತ ಸುಳ್ಳುಗಳನ್ನು ಸರಕಾರಗಳು ಆಡತೊಡಗಿದವು. ಅದೂ ಅಲ್ಲದೆ ಕಳೆದುಕೊಂಡ ಭೂಮಿಗೆ ಹೆಚ್ಚು ಪರಿಹಾರ ನೀಡುತ್ತಿರುವುದರಿಂದ ಅಂತಹ ರೈತರೂ ಸಹ ಸ್ವಯಂ ಉದ್ಯೋಗಗಳನ್ನು ಪ್ರಾರಂಬಿಸಿ ಆರ್ಥಿಕ ಪ್ರಗತಿಯನ್ನು ಸಾಧಿಸಬಹುದೆಂಬ ಆಮಿಷವನ್ನೂ ಒಡ್ಡತೊಡಗಿತು. ಆದರೆ ಸರಕಾರದ ಇಂತಹ ಹಸಿ ಸುಳ್ಳುಗಳನ್ನು ಜನರೀಗ ನಂಬುವ ಸ್ಥಿತಿಯಲ್ಲಿಲ್ಲ. ಯಾಕೆಂದರೆ ಎಪ್ಪತ್ತರ ದಶಕಕ್ಕೆ ಮುಂಚೆ ಭೂಮಿ ಕಳೆದುಕೊಂಡ ಲಕ್ಷಾಂತರ ಕುಟುಂಬಗಳಿಗಿವತ್ತಿಗೂ ಸೂಕ್ತ ಪರಿಹಾರ ದೊರೆತಿಲ್ಲ. ಹಾಗು ಅವರುಗಳಿಗೆ ಸರಕಾರ ಅಂದು ನೀಡಿದ ಯಾವುದೇ ಆಶ್ವಾಸನೆಗಳೂ ಇವತ್ತಿಗೂ ಈಡೇರಿಲ್ಲ. ಅದೂ ಅಲ್ಲದೇ ಕೃಷಿಯ ಬಗ್ಗೆ ಅದರ ಉತ್ಪಾದನೆಯ ಶಕ್ತಿಯ ಬಗ್ಗೆ ಸರಕಾರ ಆಡುತ್ತಿರುವುದೆಲ್ಲ ಸುಳ್ಳುಗಳೆಂದು ಗ್ರಾಮೀಣ ಭಾಗದ ರೈತಾಪಿ ಕುಟುಂಬಗಳಿಗೆ ಮನವರಿಕೆಯಾಗಿದೆ.

ಇವತ್ತು ಕೃಷಿಯ ಉತ್ಪಾದನಾ ಸಾಮರ್ಥ್ಯ ಕುಸಿದಿದ್ದಲ್ಲಿ ಅದಕ್ಕೆ ಸರಕಾರವೇ ನೇರ ಹೊಣೆಯಾಗಿದೆ. ಯಾಕೆಂದರೆ ಕೈಗಾರಿಕೆಗಳಿಗೆ ಕೊಡಮಾಡುವಷ್ಟು ಆದ್ಯತೆಗಳನ್ನು ಸೌಕರ್ಯಗಳನ್ನು ಸರಕಾರ ಕೃಷಿಕ್ಷೇತ್ರಕ್ಕೆ ನೀಡದೆ ಅದನ್ನು ಕಡೆಗಣಿಸಿರುವುದೇ ಇವತ್ತಿನ ಕೃಷಿಯ ದುರಂತವಾಗಿದೆ. ಸರಿಯಾಗಿ ಕಲ್ಪಿಸದ ನೀರಾವರಿ ವ್ಯವಸ್ಥೆ, ನಿಗದಿತವಾಗಿ- ನಿರಂತರವಾಗಿ ವಿದ್ಯುತ್ ಪೂರೈಸಲಾಗದಿರುವುದು. ರೈತರಿಗೆ ಸುಲಭದರದಲ್ಲಿ ಗುಣಮಟ್ಟದ ಬೀಜ ಗೊಬ್ಬರಗಳನ್ನು ಪೂರೈಸದಿರುವುದು, ಬೆಳೆದ ಬೆಳೆಗೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಮಾಡದಿರುವುದು. ನ್ಯಾಯಯುತ ಬೆಲೆ ಕೊಡಿಸುವಲ್ಲಿ ವಿಫಲವಾಗಿರುವುದೇ ಇವತ್ತಿನ ಕೃಷಿಯ ಉತ್ಪಾದಕತೆ ಕಡಿಮೆಯಾಗಿರಲು ಕಾರಣವೆಂಬ ಅಂಶವನ್ನು ಸರಕಾರಗಳು ಮರೆಮಾಚಿ ಕೃಷಿಕ್ಷೇತ್ರದ ಎಲ್ಲ ಬಿಕ್ಕಟ್ಟುಗಳಿಗೂ ರೈತರೇ ಹೊಣೆಯೆಂಬಂತೆ ಬಿಂಬಿಸುತ್ತಿವೆ. ನಗರವಾಸಿ ಅಕ್ಷರಸ್ಥ ಮಧ್ಯಮವರ್ಗ ಕೂಡ ಸರಕಾರಗಳ ಇಂತಹ ಸುಳ್ಳುಗಳನ್ನು ನಂಬಿಕೊಂಡು, ಭೂಸ್ವಾಧೀನದ ವಿರುದ್ದದ ಹೋರಾಟಗಳನ್ನು ಅಭಿವೃದ್ದಿಯ ವಿರುದ್ದದ ದೇಶದ್ರೋಹಿ ಹೋರಾಟಗಳೆಂಬಂತೆ ನೋಡುತ್ತಿದೆ. ಹೀಗಾಗಿ ಸಂಕಷ್ಟಕ್ಕೀಡಾದ ಇಂಡಿಯಾದ ರೈತಾಪಿ ವರ್ಗ ಏಕಾಕಿಯಾಗಿಯೇ ತನ್ನ ಹೋರಾಟವನ್ನು ನಡೆಸಬೇಕಾದ ಅನಿವಾರ್ಯತೆಯಲ್ಲಿ ಸಿಲುಕಿದೆ.

ಕೈಗಾರಿಕರಣವೇ ದೇಶದ ಪ್ರಗತಿಗೆ, ಆರ್ಥಿಕ ಅಭಿವೃದ್ದಿಗಿರುವ ಏಕೈಕ ಮಾರ್ಗವೆಂದು ನಂಬಿಸಲು ಹೊರಟಿರುವ ಪ್ರಭುತ್ವದ ಮುಂದೆಯೂ ಇಂದು ಯಾವುದೇ ಅನ್ಯಮಾರ್ಗವಿರುವಂತೆ ಕಾಣುತ್ತಿಲ್ಲ. ಕಾರಣ ಆರ್ಥಿಕ ಪ್ರಗತಿಗೆ ಪಶ್ಚಿಮ ಮಾದರಿಯ ಅಭಿವೃದ್ದಿಪಥವೇ ಶ್ರೇಷ್ಠವೆಂದು ನಂಬಿಕೊಂಡು ಮುಕ್ತ ಆರ್ಥಿಕನೀತಿಯನ್ನು ಒಪ್ಪಿಕೊಂಡಾಗಿದೆ. ಜೊತಗೆ ರಾಷ್ಟ್ರ ಅಭಿವೃದ್ದಿಯ ಫಲ, ಸಮುದಾಯದ ತಳಮಟ್ಟದ ಪ್ರತೀ ವ್ಯಕ್ತಿಯನ್ನೂ ತಲುಪತ್ತದೆಯೆಂಬ ಸರಕಾರಗಳ ನಿಲುವು ಇವತ್ತು ಸುಳ್ಳಾಗುತ್ತಿದೆ. ಭೂಮಿ ಕಳೆದುಕೊಂಡ ರೈತನ ತ್ಯಾಗದ ಫಲ ಕೇವಲ ಸಮಾಜದ ಮೇಲ್ವರ್ಗಗಳಿಗೆ ಮಾತ್ರ ದೊರಕುತ್ತಿದೆ. .

ದುರಂತವೆಂದರೆ ಮುಕ್ತ ಆರ್ಥಿಕ ನೀತಿಗೆ ಶರಣಾಗಿ, ಜಾಗತೀಕರಣದ ಗುಲಾಮಿ ವ್ಯವಸ್ಥೆ ಅಡಿಯಾಳಾಗಿರುವ ನಾವೀಗ ಭೂಸ್ವಾಧೀನದ ವಿರೋಧಿ ಹೋರಾಟವನ್ನು ನಡೆಸುವುದು ಕೇವಲ ಸಾಂಕೇತಿಕ ಪ್ರತಿಭಟನೆಯ ಹಂತ ತಲುಪುತ್ತಿದೆ. ಆದ್ದರಿಂದ ನಮ್ಮ ಗುರಿ ಬೇರೆಯದೇ ಆಗಬೇಕಿದೆ. ಅಭಿವೃದ್ದಿಯ ಪರಿಕಲ್ಪನೆಯನ್ನೇ ಬುಡಮೇಲುಮಾಡಿರುವ ಮುಕ್ತ ಆರ್ಥಿಕನೀತಿಯ ಮೂಲವನ್ನೇ ಪ್ರಶ್ನಿಸಬೇಕಾದ ಸಂದರ್ಭವಿಂದು ಒದಗಿ ಬಂದಿದೆ. ನಾವೀಗ ಅಪ್ಪಿಕೊಂಡಿರುವ ಆರ್ಥಿಕ ನೀತಿಯಿಂದ ಹೊರಬಾರದೆ ನಮ್ಮ ಕೃಷಿ ಬಿಕ್ಕಟ್ಟಾಗಲಿ, ಭೂಮಿ ಕಳೆದುಕೊಳ್ಳುವ ರೈತರ ಸಂಕಷ್ಟವಾಗಲಿ ಪರಿಹಾರವಾಗುವ ಯಾವ ಲಕ್ಷಣಗಳೂ ನನಗಂತೂ ಗೋಚರವಾಗುತ್ತಿಲ್ಲ. 

ಆದ್ದರಿಂದ ಈಗ ನಮ್ಮ ಮುಂದಿರುವುದು ಒಂದೇ ದಾರಿ: ಪರ್ಯಾಯ ಆರ್ಥಿಕ ನೀತಿಯೊಂದನ್ನು ಕಂಡುಕೊಳ್ಳಬೇಕಿರುವುದಾಗಿದೆ. ಇದಕ್ಕಾಗಿ ನಾವು ಒಂಷ್ಟು ಹಿಂದಕ್ಕೆ ಹೋಗಲೇ ಬೇಕಾದ ಅನಿವಾರ್ಯತೆಯಿದೆ. ಸಮಾಜವಾದಿ ಚಿಂತನೆ ಮತ್ತು ಗಾಂದಿವಾದಗಳನ್ನು ಬಳಸಿಕೊಂಡು ಹೊಸದಾದ ಆರ್ಥಿಕನೀತಿಯನ್ನು ಕಂಡುಕೊಳ್ಳಬೇಕಿದೆ. ಸದ್ಯದ ಸಂಕಷ್ಟಗಳಂದ ಪಾರಾಗಲು ನಮಗೆ ಬೇರಿನ್ನಾವ ಮಾರ್ಗಗಳೂ ಇರುವಂತೆ ಕಾಣುತ್ತಿಲ್ಲ.

ಮೇಕಿಂಗ್ ಹಿಸ್ಟರಿ: ವಸಾಹತುಶಾಹಿ ಮತ್ತು ಫ್ಯೂಡಲಿಸಂ ನಡುವಿನ ಕಲ್ಯಾಣ ಭಾಗ 2.

ಸಾಕೇತ್ ರಾಜನ್
ಕನ್ನಡಕ್ಕೆ: ಡಾ. ಅಶೋಕ್. ಕೆ. ಆರ್
ಬರ್ಟನ್ ಸ್ಟೈನಿನ ಮಾಹಿತಿ ವಸಾಹತುಶಾಹಿ, ಭೂಮಾಲೀಕರೊಟ್ಟಿಗೆ ಸರಳ ಗೆಳೆತನ ಬೆಳೆಸಿಕೊಳ್ಳುವುದರ ಜೊತೆಗೆ ದೇವಸ್ಥಾನದ ಆಸ್ತಿಯ ಒಡೆತನ ಹೊಂದಿದ್ದ ಬ್ರಾಹ್ಮಣರೊಟ್ಟಿಗೂ ಸಖ್ಯ ಬೆಳೆಸಿದ್ದನ್ನು ತಿಳಿಸುತ್ತದೆ. ಬ್ರಾಹ್ಮಣರ ಮಂತ್ರಾಕ್ಷತೆಯ ಶುಭ ಆಶೀರ್ವಾದದೊಂದಿಗೆ ವಸಾಹತುಶಾಹಿ ಮತ್ತು ಫ್ಯೂಡಲಿಸಂನ ನಡುವೆ ಐತಿಹಾಸಿಕ ವಿವಾಹವಾಗಿತ್ತು. 

ಬರ್ಟನ್ ಬರೆಯುತ್ತಾನೆ: “1800ರ ಮನ್ರೋನ ವರದಿಗಳಿಗೆ ಆದಾಯ ತೆರಿಗೆ ಇಲಾಖೆಯಲ್ಲಿದ್ದ ಮೇಲಧಿಕಾರಿಗಳಿಂದ ಮತ್ತು ಮದ್ರಾಸಿನ ಗವರ್ನರಾಗಿದ್ದ ಲಾರ್ಡ್ ಕ್ಲೈವ್ ರಿಂದ ಶೀಘ್ರ ಅನುಮೋದನೆ ದೊರಕಿತು. ಕೆನರಾದ ಬಗ್ಗೆ ಮನ್ರೋ ಕೊಟ್ಟ ವರದಿ ಮೈಸೂರಿನ ಸಂಶಾಯಾಸ್ಪದ ಆಡಳಿತ ಕೆನರಾದ ಭೂ ಮಾಲೀಕತ್ವದ ವಿಚಾರವಾಗಿ ಪುರಾತನ ಹಿಂದೂ ಸರಕಾರವನ್ನು ಹೇಗೆ ಭ್ರಷ್ಟಗೊಳಿಸಿತು ಎಂದು ತಿಳಿಸಿಕೊಟ್ಟಿದ್ದಾಗಿ ಹೇಳುತ್ತಾನೆ ಲಾರ್ಡ್ ಕ್ಲೈವ್. ಮದ್ರಾಸಿನ ಆದಾಯ ತೆರಿಗೆ ಬೋರ್ಡು ಮನ್ರೋನ ಶಿಫಾರಸ್ಸುಗಳನ್ನು ಪಾಲಿಸಬೇಕೆಂದು ಕ್ಲೈವ್ ವಾದಿಸಿದ. ಮನ್ರೋನ ನಿಯಮಗಳಲ್ಲೊಂದಕ್ಕೆ ಅಚ್ಚರಿ ವ್ಯಕ್ತವಾಗುವ ನಿರೀಕ್ಷೆಯಿತ್ತು. ಇದು ಕೆನರಾದ ಇನಾಂ ಭೂಮಿಗೆ (ತೆರಿಗೆ ರಹಿತ ಭೂಮಿ) ಸಂಬಂಧಿಸಿದ್ದಾಗಿತ್ತು. ಇನಾಂ ಭೂಮಿಗಿದ್ದ ಸವಲತ್ತುಗಳನ್ನು ಟಿಪ್ಪು ಸುಲ್ತಾನ್ ವಾಪಸ್ಸು ಪಡೆದಿದ್ದ; ಟಿಪ್ಪು ಸುಲ್ತಾನನ ನಂತರ ಅಧಿಕಾರವಿಡಿದ ಕಂಪನಿಗೆ ಟಿಪ್ಪುವಿನ ನೀತಿ ನಿಯಮಗಳನ್ನು ಮುಂದುವರೆಸುವ ಹಕ್ಕಿರಬೇಕಾದರೆ ಮನ್ರೋ ಯಾಕೆ ಮತ್ತೆ ಇನಾಂ ಹಕ್ಕನ್ನು ದಯಪಾಲಿಸಬೇಕು ಎನ್ನುವುದು ಗವರ್ನರ್ ರ ಪ್ರಶ್ನೆಯಾಗಿತ್ತು. ಈ ಇನಾಮನ್ನು ದಯಪಾಲಿಸುವುದರಿಂದ ಹೈದರ್ ಅಲಿ, ಟಿಪ್ಪು ಮತ್ತು ಹಿಂದಿನ ಆಡಳಿತಗಾರರ ಸಮಯದಲ್ಲಿ ಬರುತ್ತಿದ್ದ ಆದಾಯಕ್ಕಿಂತಲೂ ಕಂಪನಿಗೆ ಬರುವ ಆದಾಯ ಕಡಿಮೆಯಾಗಿಬಿಡುವುದರಿಂದ ಇದನ್ಯಾಕೆ ಜಾರಿಗೊಳಿಸಬೇಕು?

ಕೆನರಾದ ಇನಾಂ ಭೂಮಿಗೆ ಸಂಬಂಧಿಸಿದ ಈ ಆಕ್ಷೇಪಣೆಗಳಿಗೆ ಉತ್ತರ ಸಿಕ್ಕಿತಾ ಎನ್ನುವುದರ ಬಗ್ಗೆ ಯಾವುದೇ ದಾಖಲೆಗಳು ಲಭ್ಯವಿಲ್ಲ. ಇದೇ ತರಹದ ಆಕ್ಷೇಪಣೆಗಳು ಮನ್ರೋ ಕಾರ್ಯನಿರ್ವಹಿಸಿದ ಇತರೆ ಜಿಲ್ಲೆಗಳಲ್ಲಿಯೂ ಕೇಳಿ ಬಂದಿತ್ತು. ಕೆನರಾಗೆ ಸಂಬಂಧಪಟ್ಟಂತೆ 1804ರಲ್ಲಿ – ವರದಿ ಸಲ್ಲಿಕೆಯಾದ ಬಹುಕಾಲದ ನಂತರ – ಮನ್ರೋನ ಕೆನರಾ ವರದಿಗೆ ಕಂಪನಿಯ ನಿರ್ದೇಶಕ ಮಂಡಳಿಯಿಂದ ಪೂರ್ಣ ಒಪ್ಪಿಗೆ ಸಿಕ್ಕಿತು….” (48)

ದೇವಾಲಯ ಮತ್ತು ಬಸದಿಗಳಿಗೆ ಇನಾಂ ಹಕ್ಕುಗಳನ್ನು ಮರುಜಾರಿಗೊಳಿಸುವುದರ ಕುರಿತಾಗಿ ಮನ್ರೋ ನಿರ್ದಿಷ್ಟ ವಿವರಣೆಯನ್ನು ನೀಡಿಲ್ಲವಾದರೂ, ತನ್ನ ಬರವಣಿಗೆಯಲ್ಲಿ ಈ ನಿರ್ಧಾರದ ಬಗ್ಗೆ ಪ್ರಸ್ತಾಪಿಸಿದ್ದಾನೆ. ಮುಂದಿನ ಭಾಗಗಳಲ್ಲಿ ಇದರ ಬಗ್ಗೆ ತಿಳಿಯೋಣ. ಬುದ್ಧಿವಂತ ನಿರ್ದೇಶಕ ಮಂಡಳಿ ಮತ್ತವರ ಅಧಿಕಾರಿಗಳು ನಂತರದ ದಿನಗಳಲ್ಲಿ ಇದನ್ನು ನೋಡಿ ಒಪ್ಪಿಗೆ ನೀಡಿ ಚಪ್ಪಾಳೆ ಗಿಟ್ಟಿಸಿಕೊಂಡರು.

ಈ ಸಮಯದಲ್ಲಿ ಚಿತ್ರಾಪುರ ಬ್ರಾಹ್ಮಣರಲ್ಲಿ ಭೂಮಾಲೀಕರ ಹೊಸ ವರ್ಗ ರೂಪುಗೊಂಡಿದ್ದರ ಬಗ್ಗೆ ಸೂರ್ಯನಾತ ಕಾಮತ್: “1799ರಿಂದ ಕೆನರಾ ಜಿಲ್ಲೆಯಲ್ಲಿ ಬ್ರಿಟೀಷ್ ಆಡಳಿತ ಪ್ರಾರಂಭವಾದಾಗ ಚಿತ್ರಾಪುರ ಸಮುದಾಯದ ಜನರು ಉತ್ತರ ಮತ್ತು ದಕ್ಷಿಣ ಕೆನರಾದ ಬಹುತೇಕ ಹಳ್ಳಿಗಳಲ್ಲಿ ಶಾನುಭೋಗರಾಗಿ ನೇಮಕಗೊಂಡರು. ಈ ಕಾರಣದಿಂದಾಗಿ ಚಿತ್ರಾಪುರ ಸಾರಸ್ವತರಲ್ಲನೇಕರಿಗೆ ಈ ಎರಡು ಜಿಲ್ಲೆಯ ಹಳ್ಳಿಗಳ ಹೆಸರು ಸರ್ ನೇಮ್ ಆಗಿದೆ.” (49)

ಈಗ ಬೆಳಗಾವಿ, ಬಿಜಾಪುರ ಮತ್ತು ಧಾರವಾಡ ಜಿಲ್ಲೆಗಳನ್ನೊಳಗೊಂಡ ಬಾಂಬೆ – ಕರ್ನಾಟಕ ಭಾಗದಲ್ಲಿ ವಸಾಹತುಶಾಹಿ ಫ್ಯೂಡಲಿಸಂನ ಜೊತೆಗೆ ಕೈಜೋಡಿಸಿದ ರೀತಿಯನ್ನು ನೋಡೋಣ.

ಪೇಶ್ವೆಯ ಆಡಳಿತವನ್ನುನಭವಿಸಿದ್ದ ಈ ಮೂರೂ ಜಿಲ್ಲೆಗಳಲ್ಲಿ ಊಳಿಗಮಾನ್ಯ ಪದ್ಧತಿಯ ಮಧ್ಯಮವರ್ತಿಗಳಾಗಿ ಮತ್ತು ಮರಾಠರಿಗೆ ತೆರಿಗೆ ವಸೂಲಿ ಮಾಡಿಕೊಡುವವರಾಗಿ ದೇಸಾಯಿ ಮತ್ತು ದೇಶಮುಖರಿದ್ದರು. ರೈತ ಕಾರ್ಮಿಕರ ವಿರೋಧದ ನಡುವೆಯೂ ಊಳಿಗಮಾನ್ಯ ಪದ್ಧತಿ ಇಲ್ಲಿ ಸುಭದ್ರವಾಗಿತ್ತೆಂಬುದನ್ನು ಮೇಕಿಂಗ್ ಹಿಸ್ಟರಿಯ ಮೊದಲ ಸಂಪುಟದ ಕೊನೆಯ ಅಧ್ಯಾಯದಲ್ಲಿ ನೋಡಿದ್ದೇವೆ. ಈ ಭಾಗವನ್ನು ವಶಪಡಿಸಿಕೊಂಡ ಬ್ರಿಟೀಷ್ ಸೈನ್ಯದ ಮುಂದಾಳತ್ವವನ್ನು ಥಾಮಸ್ ಮನ್ರೋ ವಹಿಸಿಕೊಂಡಿದ್ದ. ಮನ್ರೋ ಮೊದಲು ಬಳ್ಳಾರಿಯ ಕಲೆಕ್ಟರಾಗಿ (ಜಿಲ್ಲಾಧಿಕಾರಿ) ನಂತರ ಉತ್ತರ ಮತ್ತು ದಕ್ಷಿಣ ಕನ್ನಡದ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು.

ಹಾಗಾಗಿ ಕರ್ನಾಟಕದ ಬಹುಭಾಗಗಳಲ್ಲಿ ಎರಡು ಭಿನ್ನ ಸಾಮಾಜಿಕ ವ್ಯವಸ್ಥೆಯ ನಡುವೆ ಮದುವೆ ಮಾಡಿಸುವ ಜವಾಬ್ದಾರಿ ಮತ್ತು ಕರ್ನಾಟಕವನ್ನು ವಸಾಹತುಶಾಹಿ ನೆಲೆಯಾಗಿ ಬದಲಿಸುವ ಕೆಲಸ ಮನ್ರೋದ್ದಾಗಿತ್ತು. ಕರ್ನಾಟಕದ ಭವಿಷ್ಯವನ್ನು ನಿರ್ಧರಿಸುವ ಐತಿಹಾಸಿಕ ನಿರ್ಣಯಗಳಲ್ಲಿ ಮನ್ರೋನ ನೇರ ಪಾತ್ರವಿತ್ತು. ಮನ್ರೋನ ಪತ್ರಗಳು, ವರದಿಗಳು ಮತ್ತು ಟಿಪ್ಪಣಿಗಳೆಲ್ಲವೂ ವಸಾಹತುಶಾಹಿತನದ ಮನಸ್ಥಿತಿಯ ಬಗೆಗಿನ ಅರಿವನ್ನು ಹೆಚ್ಚಿಸುತ್ತವೆ.

1826ರಲ್ಲಿ ಈ ಭಾಗದಲ್ಲಿ ಜನ್ಮತಳೆದ ಊಳಿಗಮಾನ್ಯ ಪದ್ಧತಿಯ ಮಧ್ಯವರ್ತಿಗಳ ಬಗ್ಗೆ ಮನ್ರೋ ವಿವರಿಸುತ್ತಾನೆ:” ಬಹುತೇಕ ಜಾಗೀರುದಾರರು ಕೊಂಕಣದ ಕಡೆಯಿಂದ ಬಂದ ಆಗುಂತಕರು ಮತ್ತು ಕೃಷ್ಣ ನದಿಯಾಚೆಗಿನ ದೇಶದವರು…. ಜಾಗೀರುದಾರರಲ್ಲಿ ಪ್ರಮುಖರಾದ ಪಟವರ್ಧನರು ನನ್ನ ನಂಬಿಕೆಯ ಪ್ರಕಾರ ಧಾರವಾಡಕ್ಕೆ ಅಪರಿಚಿತರು. ಪರಸುರಾಮ ರಾವ್ ನ ತಂದೆ ಅಥವಾ ಬಹುಶಃ ಪರಸುರಾಮ ರಾವ್ ನ ಕಾಲದವರೆಗೆ ಇವರ ಬಗ್ಗೆ ಯಾರೂ ಕೇಳಿಯೇ ಇರಲಿಲ್ಲ….

ಇದನ್ನೆಲ್ಲ ಅಭ್ಯಸಿಸಿದ ಉದ್ದೇಶ ಧಾರವಾಡ ಮರಾಠ ಪ್ರಾಂತ್ಯಕ್ಕೆ ಸೇರಿರಲಿಲ್ಲ, ಬದಲಿಗೆ ಕೆನರಾ ಪ್ರಾಂತ್ಯಕ್ಕೆ ಸೇರಿತ್ತು, ಈ ಜಾಗೀರುದಾರರೆಲ್ಲ ಅಲ್ಲಿ ಅಪರಿಚಿತರಾಗಿದ್ದರು. ಬ್ರಿಟೀಷರ ಆಕಸ್ಮಿಕ ಮಧ್ಯಪ್ರವೇಶದಿಂದ ಅವರ ಜಾಗೀರು ಉಳಿದಿತ್ತು. ಬಳ್ಳಾರಿಯ ಗೋರಪರಿ (ಘೋರ್ಪಡೆ?) ಕುಟುಂಬದ ಸುಂದರ್ ಜಾಗೀರದಾರ ಮರಾಠ ಮುಖ್ಯಸ್ಥರೆಲ್ಲೆಲ್ಲಾ ಪ್ರಮುಖವಾಗಿದ್ದವರು. ಹರಪನಹಳ್ಳಿ ಮತ್ತು ಬಳ್ಳಾರಿ ನಡುವಿರುವ ತಮ್ಮ ಜಾಗೀರಿನಲ್ಲಿ ವಾಸಿಸುತ್ತಿರುವ ಅವರಲ್ಲಿ ಪೂನಾದಿಂದ ಬೇರಾಗಿರುವುದಕ್ಕೆ ಸಂತಸವೇ ಇದೆ.” (50)

1818ರಲ್ಲಿ ಮನ್ರೋ ಎಲ್ಫಿನ್ ಸ್ಟೋನಿಗೆ ಬರೆದ ಮತ್ತೊಂದು ಪತ್ರದಲ್ಲಿ: “ಪೇಶ್ವೆಗಳನ್ನು ಹಿಂಬಾಲಿಸುವ, ಗೌರವಿಸುವ ಮತ್ತು ಸೇವೆ ಸಲ್ಲಿಸುವ ಮನಸ್ಥಿತಿಯನ್ನು ಬದಲಿಸಲು ಮಾಡಬೇಕಾದ ಮೊದಲ ಕೆಲಸವೆಂದರೆ ಪೇಶ್ವೆಗಳ ಅಧಿಕಾರವನ್ನು ಬ್ರಿಟೀಷರು ವಶಪಡಿಸಿಕೊಳ್ಳುವುದು. ನನ್ನ ನಂಬಿಕೆಯ ಪ್ರಕಾರ ಈ ಕಾರ್ಯಗಳನ್ನು ಜಾಗೀರುದಾರರಲ್ಲಿರುವ ದೊರೆಗಳ ಚಿತ್ರಣವನ್ನು ಬದಲಿಸುತ್ತದೆ. ಮತ್ತು ಬ್ರಿಟೀಷ್ ಸರಕಾರದ ಕರೆಯ ಮೇರೆಗೆ ತಮ್ಮ ಸೈನ್ಯವನ್ನು ಕಳುಹಿಸಿಕೊಡಲು ತಯಾರಿರುತ್ತಾರೆ.” (51)

ಇವೆಲ್ಲವೂ ಸೈನ್ಯ ಶಕ್ತಿಯ ಮೈತ್ರಿಗೆ ತೆಗೆದುಕೊಂಡ ನಿರ್ಣಯಗಳು. ಈ ಸಂಬಂಧದಿಂದ ಜಾಗೀರುದಾರರೊಡನೆ ರಾಜಕೀಯ ಮತ್ತು ಆರ್ಥಿಕ ನೀತಿಗಳ ಕುರಿತೂ ಒಪ್ಪಂದಗಳಾಯಿತು.

ಬರ್ಟನ್ ಸ್ಟೈನನ ಮಾತುಗಳನ್ನು ಉಲ್ಲೇಖಿಸುವುದಾದರೆ: “ಆಗಸ್ಟ್ 28, 1818ರಲ್ಲಿ ಮನ್ರೋ ಎಲ್ಫಿನ್ ಸ್ಟೋನನಿಗೆ ಧಾರವಾಡ – ಬೆಳಗಾವಿ ಪ್ರದೇಶದ ರಾಜಕೀಯ ಪರಿಸ್ಥಿತಿಯ ಬಗ್ಗೆ ನಂಬಿಕೆಯ ಮಾತುಗಳನ್ನೇಳುತ್ತಿದ್ದ. ಅಲ್ಲಿನ ಪರಿಸ್ಥಿತಿ ಹತೋಟಿಯಲ್ಲಿದೆ ಮತ್ತೀ ಪರಿಸ್ಥಿತಿ ಮುಂದುವರಿಯಲು ಪ್ರಮುಖ ಜಾಗೀರುದಾರರಿಗೆ (ಗೋಖಲೆಯನ್ನು ಹೊರತುಪಡಿಸಿ; ಗೋಖಲೆಯ ಭೂಮಿಯನ್ನು ವಶಪಡಿಸಿಕೊಳ್ಳಲಾಗಿತ್ತು) ಮತ್ತು ಹಲವು ಸಣ್ಣಮಟ್ಟದ ಮುಖ್ಯಸ್ಥರಿಗೆ ಮನ್ರೋ ಕೊಟ್ಟ ಮಾತನ್ನು ಉಳಿಸಿಕೊಳ್ಳುವುದು ಅಗತ್ಯ ಮತ್ತು ದೊಡ್ಡ ಮಟ್ಟದ ಬದಲಾವಣೆಗಳನ್ನು ಪರಿಚಯಿಸಬಾರದು……ಅವರಿಗೆಲ್ಲ ಸೈನ್ಯವನ್ನಿಟ್ಟುಕೊಳ್ಳುವ ಅವಕಾಶವಿರಬೇಕು – ಮುಂಚೆ ಅವರ ಬಳಿ ಇದ್ದ ಸೈನ್ಯದ ಕಾಲುಭಾಗದಷ್ಟು ಮಾತ್ರ. ಇದು ಅವರ ಮಿಲಿಟರಿ ಶಕ್ತಿಯನ್ನು ಕುಂಠಿತಗೊಳಿಸುತ್ತದೆ.

ಧಾರವಾಡ – ಬೆಳಗಾವಿಯ ರಾಜಕೀಯ ಬುನಾದಿ ತಾನು ಹಾಕಿದ ರೀತಿಯಲ್ಲೇ ಉಳಿಯಬೇಕೆಂದು ಬಯಸಿದ ಮನ್ರೋ ಆ ಬುನಾದಿಯನ್ನು ಶಿಥಿಲವಾಗಿಸಬಹುದಾದ ಯಾವುದೇ ಬದಲಾವಣೆಯನ್ನು ಮಾಡದಿರುವಂತೆ ಎಲ್ಫಿನ್ ಸ್ಟೋನರಿಗೆ ಶಿಫಾರಸು ಮಾಡಿದ. ಈ ಶಿಫಾರಸುಗಳಿಗೆ ಎಲ್ಫಿನ್ ಸ್ಟೋನರ ಸಮ್ಮತಿಯಿತ್ತು….

ಜಿಲ್ಲೆ ಮತ್ತು ಹಳ್ಳಿಯ ಮುಖ್ಯಸ್ಥರು, ಲೆಕ್ಕಪತ್ರ ನೋಡುವವರು ಗಣನೀಯ ಪ್ರಮಾಣದ ಇನಾಂ ಹೊಂದಿದ್ದರು! ಇವುಗಳ ಗೋಜಿಗೆ ಹೋಗಬಾರದು; ಯಾಕೆಂದರೆ ಅವರೆಲ್ಲರೂ ಗೌರವಾನ್ವಿತ ಭೂಮಾಲೀಕರು ಮತ್ತು ಸಮಾಜದ ಮೇಲ್ವರ್ಗದವರು. ಬ್ರಿಟೀಷರು ಅವಲಂಬಿಸಬೇಕಾದ ಜಿಲ್ಲೆ ಮತ್ತು ಹಳ್ಳಿಯ ಅಧಿಕಾರಿಗಳ ಅಧಿಕಾರದ ರಕ್ಷಣೆ ಇದರಿಂದ ಸಾಧ್ಯವಾಗುತ್ತದೆ. ಮರಾಠ ಪ್ರಾಂತ್ಯಗಳಲ್ಲಿದ್ದ ಇನಾಂ ಭೂಮಿಯ ಬಗ್ಗೆ ಸುಮ್ಮನಿದ್ದುಬಿಡಬೇಕು ಎನ್ನುವುದು ಮನ್ರೋನ ಶಿಫಾರಸ್ಸಾಗಿತ್ತು.

ವಹಿವಾಟಿಗೆ ಅಡ್ಡಿಯಾಗಿರುವ ಜಾಗೀರುದಾರರ ಹಣ ವಸೂಲಾತಿ, ವ್ಯವಹಾರ ತೆರಿಗೆ ಪದ್ಧತಿಯನ್ನು ರದ್ದು ಪಡಿಸಬೇಕು ಮತ್ತು ‘ತಮ್ಮ ಹಕ್ಕನ್ನು ತ್ಯಾಗ ಮಾಡಿದ’ ಜಾಗೀರುದಾರರಿಗೆ ಸೂಕ್ತ ಪರಿಹಾರ ನೀಡಬೇಕು.” (52)

ಆದಾಯ ತೆರಿಗೆ ನೀತಿಗಳನ್ನು ರೂಪಿಸುವುದರ ಹೊಣೆ ಹೊತ್ತ ಎಲ್ಫಿನ್ ಸ್ಟೋನ್ ಮನ್ರೋನ ಸಲಹೆಗಳನ್ನು ಗಂಭೀರವಾಗಿ ಪರಿಗಣಿಸಿದ. ಅವನ ಸಲಹೆಗಳಿಗಿಂತ ಒಂದಡಿ ಹೆಚ್ಚೇ ಇಟ್ಟ.

ಜಾರ್ಜ್ ಫಾರೆಸ್ಟ್ ಬರೆಯುತ್ತಾರೆ: “ವಂಶಪಾರಂಪರ್ಯ ಹಕ್ಕುಗಳ ಬಗ್ಗೆ ಎಲ್ಫಿನ್ ಸ್ಟೋನ್ ಗೆ ಗೌರವವಿತ್ತು; ಮಾಲೀಕರಿಗೆ ಅವರವರ ಜಾಗೀರು ಭೂಮಿ ಹಿಂದಿರುಗಿಸುವುದರ ಜೊತೆಗೆ ಬಾಡಿಗೆ ರಹಿತ ಭೂಮಿ, ಪಿಂಚಣಿ, ಧಾರ್ಮಿಕ ಸವಲತ್ತುಗಳನ್ನು ಮತ್ತೆ ಕೊಡಲಾಯಿತು. ‘ಧಾರ್ಮಿಕ ಸವಲತ್ತುಗಳನ್ನು ಉಳಿಸುವುದು ಆಕ್ರಮಿಸಿದ ದೇಶದಲ್ಲಿ ಅವಶ್ಯಕ. ದೀರ್ಘಕಾಲದಿಂದ ಅಧಿಕಾರದಲ್ಲಿ ಬ್ರಾಹ್ಮಣರು ಇದ್ದಿದ್ದರಿಂದ ಇದು ಅತ್ಯಗತ್ಯ (ಪೇಶ್ವೆಗಳು ಬ್ರಾಹ್ಮಣರು). ಪೇಶ್ವೆಗಳ ದಾನ ಮತ್ತವರ ಧಾರ್ಮಿಕ ವೆಚ್ಚಗಳು ಹತ್ತಿರತ್ತಿರ ಹದಿನೈದು ಲಕ್ಷಗಳಷ್ಟಿತ್ತು. ಇದನ್ನು ಮುಂದುವರೆಸುವುದು ಮೂರ್ಖತನದಂತೆ ಕಂಡರೂ, ಈ ವೆಚ್ಚಗಳನ್ನು ಅನಿವಾರ್ಯವೆಂದು ಪರಿಗಣಿಸಬೇಕು….” (53) ಬ್ರಿಟೀಷರ ಆಳ್ವಿಕೆ ಬ್ರಾಹ್ಮಣರ ಪ್ರಾಬಲ್ಯವನ್ನು ಮುರಿಯಿತು ಎಂದೇಳುವವರಿಗೆ ಇಷ್ಟು ವಿವರಣೆ ಸಾಕೇನೋ?! ಅಸಲಿಗೆ ನಡೆದಿದ್ದು ತದ್ವಿರುದ್ದ. ಕರ್ನಾಟಕದಲ್ಲಿ ಬ್ರಾಹ್ಮಣರ ಪ್ರಾಬಲ್ಯದಲ್ಲಿ ಇತಿಹಾಸದ ಚಲನೆ ಬಿರುಕು ಮೂಡಿಸಲಾರಂಭಿಸಿದಾಗ ಕಾಪಾಡಿ ಮರುಸ್ಥಾಪಿತವಾಗುವಂತೆ ಮಾಡಿದ್ದೇ ವಸಾಹತುಶಾಹಿ.

ಫಾರೆಸ್ಟ್ ಮುಂದುವರೆಸುತ್ತ: “ಹಳ್ಳಿಯ ಅಧಿಕಾರಿಗಳ ಪ್ರಭಾವವನ್ನು ಎಲ್ಫಿನ್ ಸ್ಟೋನ್ ಉಳಿಸಿದ….. ನ್ಯಾಯಪಾಲನೆಯಂತಹ ಪ್ರಮುಖವಾದ ಸಂಗತಿಗಳಲ್ಲಿ ಆಂಗ್ಲರನ್ನು ಅಥವಾ ಬ್ರಿಟೀಷ್ ಮಾದರಿಯನ್ನು ಶೀಘ್ರವಾಗಿ ಪರಿಚಯಿಸಲು ಎಲ್ಫಿನ್ ಸ್ಟೋನ್ ಹಿಂಜರಿದ….. ಹಳ್ಳಿಗಳಲ್ಲಿ ಪಟೇಲರು ಅಥವಾ ಮುಖ್ಯಸ್ಥರು, ಪಟ್ಟಣಗಳಲ್ಲಿ ವ್ಯಾಪಾರಿ ಸಮೂಹದ ಮುಖಂಡರಿಗೆ ಪಂಚಾಯತಿ ಕರೆಯುವ ಅಧಿಕಾರವಿರಬೇಕೆಂದು ಪ್ರಸ್ತಾಪಿಸಿದ.” (54)

ಈ ನೀತಿಗಳಿಂದ ಸಿಕ್ಕ ಫಲಿತಾಂಶವನ್ನು ಗಮನಿಸೋಣ. 1819ರಲ್ಲಿ ಜೆ. ಮೆಕ್ ಲಾಯ್ಡ್ ವಿವಿಧ ತೆರಿಗೆ ರಹಿತ ಭೂಮಿ ಮತ್ತದನ್ನನುಭವಿಸಿದ ಭೂಮಾಲೀಕರ ವಿವರಗಳನ್ನು ದಾಖಲಿಸಿದ. ಫಾರೆಸ್ಟ್ ಈ ದಾಖಲೆಗಳನ್ನು ಉಲ್ಲೇಖಿಸುತ್ತಾನೆ: (55)

ಬಾಂಬೆ ಕರ್ನಾಟಕದ ತೆರಿಗೆ ರಹಿತ ಭೂಮಿಗಳು


ಈ ಮೊತ್ತ ಕಡಿಮೆಯದ್ದೇನಲ್ಲ. ಫ್ಯೂಡಲಿಸಂ ಬ್ರಿಟೀಷರ ಮೇಲಿಟ್ಟಿದ್ದ ನಂಬಿಕೆಯನ್ನು ಇದು ತಿಳಿಸುತ್ತದೆ. ದೊಡ್ಡ ರಿಯಾಯತಿಗಳು ಇನಾಮಿನ ಮೂಲಕ ಮತ್ತು ಜಮೀನುದಾರರ ಭೂಮಿ ಹಾಗೂ ಕಟ್ಟಡಗಳಿಗೆ ಸಿಕ್ಕಿತ್ತು. ಇವುಗಳಿಗೆ ನೀಡಿದ ತೆರಿಗೆ ವಿನಾಯಿತಿಯ ಒಟ್ಟು ಮೊತ್ತ 4,10,451 ರುಪಾಯಿಗಳಷ್ಟಿತ್ತು. ಇದು ಆಗ ತೆರಿಗೆ ವಿನಾಯಿತಿ ಪಡೆದಿದ್ದ ಭೂಮಿಯ 54 ಶೇಕಡಾ ಆಗಿತ್ತು. ಇದರ ಜೊತೆಗೆ ಧಾರ್ಮಿಕ ಕೇಂದ್ರಗಳಾದ ದೇಗುಲಗಳಿಗೆ ಕೊಟ್ಟ ಭೂಮಿಯೂ ಸೇರಿತ್ತು. ಈ ಪ್ರತಿಷ್ಟಿತ ಭೂ ಮಾಲೀಕರು ಮತ್ತು ಧಾರ್ಮಿಕ ಮುಖಂಡರು ಬಹಳಷ್ಟು ಬಾರಿ ಒಂದಾಗಿರುತ್ತಿದ್ದರು – ತಮಗೆ ಸಿಕ್ಕ ಸೌಕರ್ಯಗಳನ್ನು ವಿರಾಮದಿಂದ ಅನುಭವಿಸುತ್ತ. 

1857ರಲ್ಲಿ ಕೆಲವು ಭೂಮಾಲೀಕರು ಬ್ರಿಟೀಷರ ವಿರುದ್ಧ ದಂಗೆಯೆದ್ದಾಗ ಅವರ ಬಳಿ ಇದ್ದ ಇನಾಂ ಭೂಮಿಯನ್ನು ಕಸಿದುಕೊಳ್ಳಲಾಯಿತು. 

ಈ ಪಟ್ಟಿಯನ್ನು ಕೃಷ್ಣರಾವ್ ಮತ್ತು ಹಾಲಪ್ಪ ನಮಗೆ ಒದಗಿಸುತ್ತಾರೆ. ಈ ಸಂಕ್ಷಿಪ್ತ ಪಟ್ಟಿ ಇನಾಂ ಭೂಮಿ ಹೇಗೆ ವಸಾಹತುಶಾಹಿಗಳ ಜೊತೆಗೆ ಹೊಂದಿಕೊಂಡಿದ್ದವರಿಗೆ ಲಭಿಸಿತ್ತು ಎನ್ನುವುದನ್ನು ತಿಳಿಸುತ್ತದೆ. 

ಬಾಂಬೆ ಕರ್ನಾಟಕ ಭಾಗದಲ್ಲಿ ಇನಾಂ ಪಡೆದಿದ್ದವರ ವಿವರ

ಊಳಿಗಮಾನ್ಯತೆಯ ಬುನಾದಿಗಳು ವಸಾಹತುಶಾಹಿಯೊಂದಿಗೆ ಎಷ್ಟು ಸಶಕ್ತವಾಗಿ ಸೇರಿಹೋಗಿತ್ತೆನ್ನುವುದಕ್ಕೆ “ಧಾರವಾಡದಲ್ಲಿರುವ ಹಳ್ಳಿಗಳಲ್ಲಿ 30% ಇನಾಂ ಹಳ್ಳಿಗಳು” ಎಂಬ ಫುಕಝೂವನ ಹೇಳಿಕೆಯೊಂದೇ ಸಾಕು. ಪೇಶ್ವೆಗಳ ಆಳ್ವಿಕೆಯಲ್ಲಿ ಚದುರಿ ಹೋದ ಪಟವರ್ಧನ ಬ್ರಾಹ್ಮಣರು ಬ್ರಿಟೀಷರ ಕೃಪೆಗೆ ಪಾತ್ರರಾದರು ಎಂದು ಎರಿಕ್ ಸ್ಟೋಕ್ಸ್ ನಿಂದ ಕಲಿಯಬಹುದು. ಬೆಳಗಾವಿ ಜಿಲ್ಲೆಯೊಂದರಲ್ಲೇ ಚಿಂಚೋಳಿ, ನಿಪ್ಪಾಣಿ, ಮೀರಜ್, ತಸ್ ಗಾಂವ್ ಮತ್ತು ಕಾಗೇವಾಡಗಳನ್ನು ಪುಣೆಯ ಒಳಸಂಚಿನಲ್ಲಿ ಭಾಗಿಯಾಗಿದ್ದವರಿಗೆ ಉಡುಗೊರೆಯಾಗಿ ನೀಡಲಾಯಿತು.

ಬೆಳಗಾವಿ ಜಿಲ್ಲೆಯ ಶಿರಸಂಗಿ ದೇಶಗತಿಯರ ಬಗ್ಗೆ ಅಧ್ಯಯನ ನಡೆಸಿದ ವಿರೂಪಾಕ್ಷ ಬಡಿಗೇರ ಕರ್ನಾಟಕದ ಈ ಭಾಗದಲ್ಲಿ ಊಳಿಗಮಾನ್ಯ ಸಂತತಿ ಸಮೃದ್ಧಿಯಾಗಿ ಹರಡಿಕೊಂಡಿದ್ದರ ಬಗ್ಗೆ ತಿಳಿಸುತ್ತಾರೆ. 1922ರಲ್ಲಿ ಬೆಳಗಾವಿಯೊಂದರಲ್ಲೇ ಇನಾಮಿನ ಮೇಲಿದ್ದ 122 ದೇಶಗತಿ ಕುಟುಂಬಗಳಿದ್ದವು ಎಂದು ಬರೆಯುತ್ತಾನೆ. (58)

ಹೈದರಾಬಾದ್ – ಕರ್ನಾಟಕ ಭಾಗದಲ್ಲಿ ಈ ವ್ಯವಸ್ಥೆಯನ್ನು ಗೌರವಾದರದೊಂದಿಗೆ ರಕ್ಷಿಸಲಾಗಿತ್ತು. ಇಡೀ ಪ್ರಾಂತ್ಯವನ್ನು ನಿಯಂತ್ರಿಸುತ್ತಿದ್ದ ಇನಾಂದಾರರು ಮತ್ತು ಜಾಗೀರುದಾರರು ನಿಜಾಮರಿಗೆ ತೆರಿಗೆ ಸಂಗ್ರಹಿಸಿ ಕೊಡುತ್ತಿದ್ದರು ಮತ್ತು ಬ್ರಿಟೀಷರಿಗೆ ನಿಜಾಮರು ತಲೆತಗ್ಗಿಸಿ ಶರಣಾದ ನಂತರ ಫ್ಯೂಡಲ್ ವ್ಯವಸ್ಥೆ ವಸಾಹತುಶಾಹಿಯನ್ನು ಲಗ್ನವಾಯಿತು.

ಕೊಡಗಿನಲ್ಲಿ ಬ್ರಿಟೀಷರು ಫ್ಯೂಡಲ್ ಕೊಡವ ಕುಟುಂಬಗಳಿಂದ ಅಪ್ಪರಂದ್ರ, ಚೆಪ್ಪುದಿರ ಮತ್ತು ಬಿಡ್ಡಂದ್ರದವರೊಡನೆ ಸಖ್ಯ ಬೆಳೆಸಿದರು. ಜೊತೆಗೆ ಬಿಟ್ಟಿಯಂದ್ರ, ಮಡಂದ್ರ, ಕೊಲೊವಂಡ್ರ, ಕುಟ್ಟೆತೀರ ಮತ್ತು ಮನಬಂಡ ಕುಟುಂಬಗಳೊಡನೆ ಒಪ್ಪಂದ ಮಾಡಿಕೊಂಡರು. (59) ಈ ಕುಟುಂಬಗಳು ನಂತರದ ದಿನಗಳಲ್ಲಿ “ನೂರಾರು ಎಕರೆ ಕಾಫಿ ಎಸ್ಟೇಟ್ ಮತ್ತು ಹಸಿ ಭೂಮಿಯ ಒಡೆಯರಾದರು ಹಾಗೂ ಸಾರ್ವಜನಿಕ ಜೀವನದಲ್ಲಿ ದೊಡ್ಡ ಮಟ್ಟದ ಪ್ರಭಾವ ಬೀರಲು ಶಕ್ತರಾದರು.”(60)

ಬ್ರಿಟೀಷ್ ವಸಾಹತುಶಾಹಿ ಭಾರತದ ಊಳಿಗಮಾನ್ಯ ಪದ್ಧತಿಯನ್ನು ಮುರಿದು ಹಾಕಿ ಬಂಡವಾಳಶಾಹಿತನ ಅಡೆತಡೆಯಿಲ್ಲದೆ ಬೆಳೆಯಿತೆಂಬ ಭಾವನೆ ನವ ಭಾರತದ ಲಿಬರಲ್ ಇತಿಹಾಸಕಾರರು ಮತ್ತು ರಿವಿಷನಿಷ್ಟ್ (revisionist) ಇತಿಹಾಸಕಾರರಲ್ಲನೇಕರಿಗಿದೆ. (ರಿವಿಷನಿಷ್ಟ್: ದಾಖಲೆಗಳನ್ನು ಓದಿ ಇತಿಹಾಸ ರಚಿಸುವವರು). ವಸಾಹತುಶಾಹಿಯ ಇತಿಹಾಸದ ಬಗೆಗಿನ ಈ ತಪ್ಪು ತಿಳುವಳಿಕೆಯನ್ನು ಹೋಗಲಾಡಿಸುವ ಸಲುವಾಗಿ ವಸಾಹತುಶಾಹಿಗಳ ಬಾಯಿಂದಲೇ ಉದುರಿಬಿದ್ದ ಅಕ್ಷರಗಳನ್ನು ಅಪಾರ ಶ್ರಮದಿಂದ ಸಂಗ್ರಹಿಸಿ ಉಲ್ಲೇಖಿಸಿದ್ದೇವೆ. ಬ್ರಿಟೀಷರು ಭೂಮಾಲೀಕ ವರ್ಗದೊಂದಿಗೆ ಮೃದುತ್ವದಿಂದ ವರ್ತಿಸಿದರು. ಫ್ಯೂಡಲ್ ದೊರೆಗಳು ಸಬಲರಾಗುವಂತೆ ನೋಡಿಕೊಂಡರು. ಮುಂದಿನ ದಿನಗಳಲ್ಲಿ ಈ ಸಬಲ ಬುನಾದಿಯ ನೆರವಿನಿಂದಲೇ ವಸಾಹತುಶಾಹಿ ವ್ಯಾಪ್ತಿ ಹಿಗ್ಗಿಸಿಕೊಂಡಿತು. ಈ ಬುನಾದಿ ಇರದಿದ್ದರೆ ಕೊಳ್ಳೆ ಹೊಡೆಯುವುದು ಸಾಧ್ಯವಿರಲಿಲ್ಲ ಎಂಬಂಶವನ್ನು ಹೇಳುವ ಅವಶ್ಯಕತೆ ಇಲ್ಲವೇನೋ.

ಊಳಿಗಮಾನ್ಯ ಪದ್ಧತಿ ವಸಾಹತುಶಾಹಿ ಮೇಲುಗೈ ಪಡೆಯಲಿಕ್ಕಿದ್ದ ಸಾಮಾಜಿಕ ಆಧಾರವಾಗಿತ್ತು. ಹಳೆಯ ಸಾಮಾಜಿಕ ರಚನೆಯಲ್ಲಿದ್ದ ಆಳುವ ವರ್ಗದೊಂದಿಗೆ ಮೈತ್ರಿ ಮಾಡಿಕೊಂಡ ವಸಾಹತುಶಾಹಿಗಳು ಬಂಡವಾಳಶಾಹಿತನದ ಪುರಾತನ ರೂಪದಲ್ಲಿದ್ದ ದಬ್ಬಾಳಿಕೆ ಮತ್ತು ಶೋಷಣೆಯನ್ನು ಮುಂದುವರಿಸಲು ನಿರ್ಧರಿಸಿದರು. ಈ ಸಾರ್ವತ್ರಿಕ ಇತಿಹಾಸಕ್ಕೆ ಕರ್ನಾಟಕವೂ ಹೊರತಾಗಿರಲಿಲ್ಲ. (61)

ಫೆಬ್ರ 24, 2016

ಪೆಟ್ರೋಲ್ ಬೆಲೆ ಎಷ್ಟಿರಬೇಕಿತ್ತು? ಎಷ್ಟಿದೆ ಗೊತ್ತಾ?

ಇಂಧನ ಖಾತೆ ಸಚಿವರಾದ ಧರ್ಮೇಂದ್ರ ಪ್ರಧಾನ್ ರವರು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗೆ ಸಂಬಂಧಪಟ್ಟ ಪ್ರಶ್ನೆಗೆ ರಾಜ್ಯಸಭೆಯಲ್ಲಿ ಉತ್ತರ ಕೊಟ್ಟಿದ್ದಾರೆ. ಈ ಉತ್ತರದ ಆಧಾರದಲ್ಲೇ ನೋಡುವುದಾದರೆ ನಮಗಿವತ್ತು ಪೆಟ್ರೋಲ್ ಮತ್ತು ಡೀಸೆಲ್ ಐವತ್ತು ರುಪಾಯಿಗೆ ಮತ್ತು ಮೂವತ್ತೈದು ರುಪಾಯಿಗೆ ಸಿಗಬೇಕಿತ್ತು. ಹೇಗಂತೀರಾ?
2014ರ ಮೇ ತಿಂಗಳಿನಲ್ಲಿ (ಅಂದರೆ ಅಚ್ಛೇ ದಿನ್ ಸರಕಾರ ಶುಭಾರಂಭ ಮಾಡಿದ ತಿಂಗಳು) ಭಾರತ ಒಂದು ಬ್ಯಾರೆಲ್ ಸಂಸ್ಕರಿಸದ ತೈಲಕ್ಕೆ 106.85 ಡಾಲರ್ ಕೊಡುತ್ತಿತ್ತು. ಈ ತಿಂಗಳು, ಅಂದರೆ ಫೆಬ್ರವರಿ 2016 ರಲ್ಲಿ ಈ ಬೆಲೆ 29.80 ಡಾಲರ್ರಿನಷ್ಟಿದೆ. ಅಲ್ಲಿಗೆ ಹೆಚ್ಚು ಕಡಿಮೆ 66% ಕಡಿಮೆಯಾಗಿದೆ. ಅದೇ ಮೇ 2014ರಲ್ಲಿ ಪೆಟ್ರೋಲಿನ ಬೆಲೆ 71.41 ರುಪಾಯಿ ಇದ್ದಿದ್ದು ಈಗ 59.95 ರುಪಾಯಿಯಾಗಿದೆ. ಡೀಸೆಲ್ಲಿನ ಬೆಲೆ 2014ರಲ್ಲಿ 55.49 ರುಪಾಯಿಯಷ್ಟಿದ್ದರೆ ಈಗ 44.68 ರುಪಾಯಿ (ಬೆಲೆಗಳು- ದೆಹಲಿಯದ್ದು, ಕರ್ನಾಟಕದಲ್ಲಿ ಇನ್ನೂ ಜಾಸ್ತಿ).
ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲದ ಬೆಲೆ 66 % ಕಡಿಮೆಯಾಗಿದ್ದರೆ ಪೆಟ್ರೋಲ್ ಮತ್ತು ಡೀಸೆಲ್ಲಿನ ಬೆಲೆಯಲ್ಲಿ ಕೇವಲ 16 % ಕಡಿಮೆಯಾಗಿದೆ. ಕಾರಣ?
ಕಾರಣ, ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆಯನ್ನು ಯದ್ವಾತದ್ವಾ ಏರಿಸಿರುವ ಕೇಂದ್ರ ಸರಕಾರ ಅಂತರಾಷ್ಟ್ರೀಯ ಮಾರುಕಟ್ಟೆಯ ಏರಿಳಿತಕ್ಕೆ ಅನುಗುಣವಾಗಿ ತೈಲ ಬೆಲೆ ಇಳಿಯದ ಹಾಗೆ ನೋಡಿಕೊಂಡುಬಿಟ್ಟಿದೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಮಾರುಕಟ್ಟೆಯಾಧಾರಿತವಾಗಿರುವಂತೆ ಮಾಡಿದ್ದು ಬೆಲೆ ಏರಿಸುವುದಕ್ಕಷ್ಟೇ ಸೀಮಿತವಾಗಿ ಬೆಲೆ ಇಳಿಸಲು ಉಪಯುಕ್ತವಾಗಿಲ್ಲ. ಬೆಲೆ ಇಳಿಯುವ ಸಂದರ್ಭ ಬಂದಾಗೆಲ್ಲ ತೆರಿಗೆಯನ್ನು ಹೆಚ್ಚಿಸಲಾಗಿದೆ. ಮುಂದೆ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಏರಿದಾಗ ತೆರಿಗೆಯನ್ನು ಇಳಿಸಿ ಬೆಲೆ ಏರದಂತೆ ನೋಡಿಕೊಳ್ಳುತ್ತಾರಾ? ಮೇ 2014ರಿಂದ ಇಲ್ಲಿಯವರೆಗೆ ಕೇಂದ್ರ ಸರಕಾರ ಪೆಟ್ರೋಲಿನ ಮೇಲಿನ ತೆರಿಗೆಯನ್ನು ಹನ್ನೆರಡು ರುಪಾಯಿಯಷ್ಟು ಏರಿಸಿದ್ದರೆ ಡೀಸೆಲ್ಲಿನ ಮೇಲಿನ ತೆರಿಗೆಯನ್ನು ಹತ್ತು ರುಪಾಯಿಯಷ್ಟು ಏರಿಸಿದೆ. ರುಪಾಯಿ ಮೌಲ್ಯದಲ್ಲಿ ಸ್ವಲ್ಪ ಕುಸಿತವಿರುವುದು ಹೌದಾದರೂ ತೆರಿಗೆಯನ್ನು ಯದ್ವಾ ತದ್ವ ಏರಿಸದಿದ್ದಲ್ಲಿ ಜೇಬು ಒಂದಷ್ಟು ಭಾರವಾಗುತ್ತಿತ್ತೇನೋ?!
Correction: In the picture showing the details the rupee value has been interchanged. In May 2014 one dollar equated to 59 dollars and in Feb 2016 it is 68. Thanks Anant Rao for correcting the mistake.