ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
ಇದೇ ಏಪ್ರಿಲ್ ಒಂಭತ್ತನೇ ತಾರೀಖಿನಂದು ಕರ್ನಾಟಕದ ಎರಡು ವಿದಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆಗಳು ನಡೆಯಲಿವೆ. ಇವುಗಳಲ್ಲಿ ಮೈಸೂರು ಜಿಲ್ಲೆಯ ಗುಂಡ್ಲುಪೇಟೆಯ ಶಾಸಕರಾಗಿದ್ದ ಶ್ರೀ ಮಹದೇವ ಪ್ರಸಾದ್ ನಿಧನರಾಗಿದ್ದರೆ, ಇದೇ ಜಿಲ್ಲೆಯ ನಂಜನಗೂಡು ಕ್ಷೇತ್ರದಲ್ಲಿ ಶಾಸಕರಾಗಿದ್ದ ಶ್ರೀ ಶ್ರೀನಿವಾಸ್ಪ್ರಸಾದ್ ತಾವು ಆಯ್ಕೆಯಾಗಿ ಬಂದಿದ್ದ ಕಾಂಗ್ರೆಸ್ ಪಕ್ಷಕ್ಕೆ ರಾಜಿನಾಮೆ ನೀಡಿದ್ದರ ಮುಂದುವರೆದ ಭಾಗವಾಗಿ ತಮ್ಮ ಶಾಸಕನ ಸ್ಥಾನಕ್ಕೂ ರಾಜೀನಾಮೆ ಸಲ್ಲಿಸಿದ್ದರು. ಹೀಗಾಗಿ ತೆರವಾದ ಈ ಎರಡೂ ಕ್ಷೇತ್ರಗಳಿಗೆ ಇದೀಗ ಉಪಚುನಾವಣೆಗಳು ನಡೆಯುತ್ತಿವೆ.
ಇರಲಿ, ನಮ್ಮ ರಾಜ್ಯದ ವಿದಾನಸಭೆಯ ಐದು ವರ್ಷಗಳ ಅವಧಿ ಮುಗಿಯುವುದು ಮುಂದಿನ ವರ್ಷದ ಅಂದರೆ 2018ರ ಮೇ ತಿಂಗಳಿಗೆ. ಅಂದರೆ ಈ ಸದನದ ಅವಧಿ ಬಾಕಿ ಇರುವುದು ಇನ್ನು ಕೇವಲ ಹದಿನಾಲ್ಕು ತಿಂಗಳುಗಳು ಮಾತ್ರವಾದರು, ಮೂರು ತಿಂಗಳ ಮುಂಚೆಯೇ ಚುನಾವಣೆಯ ಅಧಿಕೃತ ಅದಿಸೂಚನೆ ಹೊರಬೀಳುವುದರಿಂದ ಶಾಸಕರು ಸಕ್ರಿಯವಾಗಿ ಕೆಲಸ ಮಾಡಲು ಉಳಿದಿರುವುದು ಕೇವಲ 11 ತಿಂಗಳುಗಳು ಮಾತ್ರ. ಇಷ್ಟು ಕಡಿಮೆ ಅವಧಿಗಾಗಿ ಒಂದು ಚುನಾವಣೆ ನಡೆಸಬೇಕೇ ಮತ್ತು ಸರಕಾರವೊಂದು ಅದಕ್ಕಾಗಿ ಕೋಟ್ಯಾಂತರ ರೂಪಾಯಿ ಖರ್ಚು ಮಾಡಬೇಕೇ ಎಂಬ ಸರಳ ಪ್ರಶ್ನೆ ಜನತೆಯಲ್ಲಿ ಉದ್ಭವವಾದರೆ ಅಚ್ಚರಿಯೇನಿಲ್ಲ. ಆದರೆ ಪ್ರಜಾಪ್ರಭುತ್ವದಲ್ಲಿ, ಸರಕಾರದಲ್ಲಿ ಜನರ ಬಾಗವಹಿಸುವಿಕೆ ಬಹಳ ಮುಖ್ಯವಾಗಿರುವುದರಿಂದ ಇಂತಹ ಚುನಾವಣೆಗಳಿಗೆ ಸರಕಾರ ವೆಚ್ಚ ಮಾಡಲೇ ಬೇಕಾದುದು ಅನಿವಾರ್ಯವಾಗಿದೆ ಎಂಬುದು ಸಹ ಅಷ್ಟೇ ಸತ್ಯ. ನನ್ನ ತಕರಾರು ಇರುವುದು ಈ ವೆಚ್ಚದ ಬಗೆಗಲ್ಲ. ಬದಲಿಗೆ ಉಪಚುನಾವಣೆಗಳಿಗೆ ಕಾರಣವಾಗುವ ವಿಷಯಗಳ ಬಗ್ಗೆ. ಅದರ ಬಗ್ಗೆ ಒಂದಿಷ್ಟು ನೋಡೋಣ: