ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
ಆಡಳಿತಾರೂಢ ಪಕ್ಷವೊಂದು ತನ್ನ ಅಧಿಕಾರದ ಅವಧಿ ಮುಗಿದ ನಂತರ ನಡೆಯಲಿರುವ ಚುನಾವಣೆಗಳಲ್ಲಿ ಗೆಲ್ಲುವ ಭರವಸೆ ಕಳೆದುಕೊಂಡಾಗ, ತನ್ನ ಅನುಕೂಲಕ್ಕೆ ತಕ್ಕಂತೆ ಅವಧಿಗೆ ಮುಂಚಿತವಾಗಿಯೇ ಚುನಾವಣೆಗಳನ್ನು ನಡೆಸಿ ಗೆಲ್ಲಲೆತ್ನಿಸುವುದು ಇಂಡಿಯಾದ ರಾಜಕಾರಣದಲ್ಲಿ ಸಹಜವಾಗಿ ನಡೆದು ಬಂದ ಬೆಳವಣಿಗೆ. ಅದಿಕಾರದಲ್ಲಿ ಇರುವ ಪಕ್ಷವೊಂದು ತನಗೆ ಬೇಕಾದಾಗ ವಿದಾನಸಭೆಯನ್ನು ವಿಸರ್ಜಿಸಿ ಚುನಾವಣೆ ನಡೆಸಲು ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸುವುದರಲ್ಲಿ ಯಾವ ಕಾನೂನಿನ ತೊಡಕೂ ಇಲ್ಲ. ಸರಕಾರ ಕೇಳಿದಾಗ ಚುನಾವಣೆ ನಡೆಸುವುದಷ್ಟೆ ಆಯೋಗದ ಕೆಲಸವಾಗಿದ್ದು, ಒಂದು ವಿದಾನಸಭೆಯ ಅವಧಿಯನ್ನು ಪೂರ್ಣಗೊಳಿಸಿದ ನಂತರವಷ್ಟೇ ತಾನು ಚುನಾವಣೆ ನಡೆಸುವುದೆಂದು ಹೇಳುವ ಅಧಿಕಾರ ಆಯೋಗಕ್ಕೆ ಇಲ್ಲವಾಗಿರುವುದೆ ಇದಕ್ಕೆ ಕಾರಣ ಎನ್ನಬಹುದು. ಕಳೆದ ಎಪ್ಪತ್ತು ವರ್ಷಗಳಲ್ಲಿ ಬಹಳಷ್ಟು ರಾಜ್ಯಗಳಲ್ಲಿ ಈ ತೆರನಾದ ಅವಧಿಪೂರ್ವ ಚುನಾವಣೆಗಳು ನಡೆದಿವೆ. ತನ್ಮೂಲಕ ಸರಕಾರದ ಬೊಕ್ಕಸಕ್ಕೆ ಹೊರೆಯಾಗಿದ್ದು ಮಾತ್ರವಲ್ಲದೆ, ಜನರ ವಿಶ್ವಾಸಕ್ಕೆ ದ್ರೋಹ ಬಗೆಯುವಲ್ಲಿಯೂ ಸಫಲವಾಗಿವೆ. ಇಂತಹ ವಿಷಯಗಳಲ್ಲಿ ಕಾಂಗ್ರೆಸ್ ಪಕ್ಷದ ನಡವಳಿಕೆಗಳನ್ನು ಕಟುವಾಗಿ ಟೀಕಿಸುತ್ತಿದ್ದ ಬಾಜಪ ಕೂಡ ಇದೀಗ ಅದೇ ದಾರಿಯಲ್ಲಿ ನಡೆಯಲು ತೀರ್ಮಾನಿಸಿದ್ದು, ತಾನು ಯಾವ ವಿಚಾರದಲ್ಲು ಕಾಂಗ್ರೆಸ್ಸಿಗಿಂತ ಭಿನ್ನವೇನಲ್ಲ ಎಂಬುದನ್ನು ಸಾಬೀತು ಪಡಿಸಲು ಹೊರಟಿದೆ.