ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
ಇಂಡಿಯಾದಂತಹ ಒಕ್ಕೂಟ ವ್ಯವಸ್ಥೆಯೊಳಗಿನ ಅತಿ ದೊಡ್ಡ ದೋಷವೆಂದರೆ ಕೇಂದ್ರ ಸರಕಾರ ಅತೀವ ಬಲಿಷ್ಠವಾಗಿದ್ದು, ರಾಜ್ಯಗಳು ಕೇಂದ್ರದ ಮರ್ಜಿಗನುಗುಣವಾಗಿ ಬದುಕಬೇಕಾಗಿರುವುದು. ವೈವಿದ್ಯತೆಯಲ್ಲಿ ಏಕತೆ ಎಂಬ ಬಾವನಾತ್ಮಕ ಘೋಷಣೆಯ ಮೂಲಕವೇ ಇಂಡಿಯಾವನ್ನು ಹಿಡಿದಿಟ್ಟುಕೊಂಡಿರುವ ರಾಜಕೀಯ ವ್ಯವಸ್ಥೆ ರಾಜ್ಯಗಳನ್ನು ದುರ್ಬಲಗೊಳಿಸುತ್ತ ಸಮಗ್ರತೆಯ ಹೆಸರಲ್ಲಿ ಕೇಂದ್ರವನ್ನು ಬಲಿಷ್ಠವನ್ನಾಗಿಸುತ್ತ ನಡೆಯುತ್ತಿರುವ ರಾಜಕಾರಣದಲ್ಲಿ ರಾಷ್ಟ್ರೀಯ ಪಕ್ಷಗಳ ಸರಕಾರಗಳನ್ನು ಹೊಂದಿದ ಹಲವು ರಾಜ್ಯಗಳು ಕೇಂದ್ರದ ಮಲತಾಯಿ ಧೋರಣೆಗೆ ತುತ್ತಾಗಿವೆ. ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಯ ಬಹುದೊಡ್ಡ ಈ ದೋಷವನ್ನು ಮನಗಂಡ ಅನೇಕ ರಾಜ್ಯಗಳು ರಾಜಕೀಯವಾಗಿ ಬಲಿಷ್ಠವಾಗುತ್ತ ತಮ್ಮ ಹಕ್ಕುಗಳನ್ನು ಪಡೆದುಕೊಳ್ಳುವ ದಾರಿ ಕಂಡುಕೊಂಡಿವೆ. ನಮ್ಮ ನೆರೆ ರಾಜ್ಯಗಳಾದ ಆಂದ್ರಪ್ರದೇಶ, ತಮಿಳುನಾಡುಗಳು ಹಾಗೂ ಪಶ್ಚಿಮ ಬಂಗಾಳ, ಬಿಹಾರ, ಉತ್ತರಪ್ರದೇಶ, ಒರಿಸ್ಸಾಗಳು ಸಹ ತಮ್ಮದೇ ಆದ ಪ್ರಾದೇಶಿಕ ಪಕ್ಷಗಳನ್ನು ರಚಿಸಿಕೊಂಡು ದೆಹಲಿಯ ರಾಜಕಾರಣದಲ್ಲಿ ತಮ್ಮ ಛಾಪು ಮೂಡಿಸುವಲ್ಲಿ ಯಶಸ್ವಿಯಾಗಿವೆ.ಇದರಲ್ಲಿ ತಮಿಳುನಾಡು ಮೊದಲಿನಿಂದಲೂ ಪ್ರಾದೇಶಿಕ ಪಕ್ಷಗಳನ್ನು ಹೊಂದಿದ್ದು ಯಾವುದೇ ವಿಚಾರದಲ್ಲಿಯೂ ಅದು ಕೇಂದ್ರದ ವಂಚನೆಗೆ ಒಳಗಾಗದ ರೀತಿಯಲ್ಲಿ ತನ್ನ ರಾಜಕೀಯ ದಾಳಗಳನ್ನು ಉರುಳಿಸುತ್ತಿದೆ. ಉಳಿದೆಲ್ಲ ರಾಜ್ಯಗಳು ಎಂಭತ್ತರ ದಶಕದ ನಂತರ ಕ್ಷಿಪ್ರವಾಗಿ ಬದಲಾದ ರಾಜಕೀಯ ಸನ್ನಿವೇಶದಲ್ಲಿ, ಒಂದು ರಾಷ್ಟ್ರೀಯ ಪಕ್ಷವಾಗಿ ದುರ್ಬಲವಾಗುತ್ತ ಸಾಗಿರುವ ಕಾಂಗ್ರೆಸ್ಸಿನ ದೌರ್ಬಲ್ಯದ ಲಾಭ ಪಡೆದು ತಮ್ಮದೇ ನೆಲದ ಸೊಗಡಿನ ಪ್ರಾದೇಶಿಕ ಪಕ್ಷಗಳನ್ನು ಕಟ್ಟಿಕೊಳ್ಳುತ್ತ ಬಲಾಢ್ಯವಾಗಿ ಹೋಗುತ್ತಿವೆ ಇತ್ತೀಚೆಗಿನ ದಿನಗಳಲ್ಲಿ ಕರ್ನಾಟಕದಂತ ರಾಜ್ಯದಲ್ಲಿಯೂ ಪ್ರಾದೇಶಿಕ ಪಕ್ಷವೊಂದು ಬೇಕೆನ್ನುವ ಕೂಗು ಕೇಳಿ ಬರುತ್ತಿದ್ದು,ಮುಂದಿನ ದಿನಮಾನಗಳಲ್ಲಿ ಇದು ದೊಡ್ಡದಾಗುವ ಸಾದ್ಯತೆ ಹೆಚ್ಚಾಗಿದೆ.