ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
ಕರ್ನಾಟಕದಲ್ಲಿ ಪ್ರಾದೇಶಿಕ ಪಕ್ಷಗಳಿಗೆ ಮನ್ನಣೆ ಸಿಗುವುದಿಲ್ಲ ಮತ್ತು ಕರ್ನಾಟಕದ ಜನತೆ ಆ ವಿಷಯದ ಮಟ್ಟಿಗೆ ರಾಷ್ಟ್ರೀಯವಾಗಿ ಚಿಂತಿಸುತ್ತಾರೆಂಬ ಮಾತು ಮಾಮೂಲಿಯಾಗಿಬಿಟ್ಟಿದೆ. ಕರ್ನಾಟಕದ ಜನತೆ ಒಕ್ಕೂಟ ವ್ಯವಸ್ಥೆಗೆ ಎಷ್ಟು ಒಗ್ಗಿ ಹೋಗಿದ್ದಾರೆಂದರೆ ನಮ್ಮ ಜನತೆ ಇದುವರೆಗು ಯಾವುದೇ ಪ್ರಾದೇಶಿಕ ಪಕ್ಷವೊಂದನ್ನು ನಮ್ಮದೂ ಎಂದು ಒಪ್ಪಿಕೊಂಡು ಸಂಪೂರ್ಣವಾಗಿ ಅದನ್ನು ಬೆಂಬಲಿಸಿದ ನಿದರ್ಶನಗಳೇ ಸಿಗುವುದಿಲ್ಲ. ಕನ್ನಡದ ನೆಲಜಲಗಳ ಪ್ರಶ್ನೆ ಬಂದಾಗ ಪ್ರಾದೇಶಿಕ ಪಕ್ಷವೊಂದರ ಅನಿವಾರ್ಯತೆಯ ಬಗ್ಗೆ ಆವೇಶದಿಂದ ಮಾತಾಡುವ ಕನ್ನಡಿಗರು ಚುನಾವಣೆಯ ಸಂದರ್ಭದಲ್ಲಿ ಮಾತ್ರ ಬಾಜಪ ಅಥವಾ ಕಾಂಗ್ರೆಸ್ ಅನ್ನುವ ಎರಡು ರಾಷ್ಟ್ರೀಯ ಪಕ್ಷಗಳತ್ತ ವಾಲಿಬಿಡತ್ತಾರೆ ಎನ್ನುವ ಆರೋಪವೂ ಕನ್ನಡಿಗರ ಮೇಲಿದೆ. ಈ ವಿಚಾರದ ವಿಶ್ಲೇಷಣೆಯಲ್ಲಿ ನಾನು ಬಹಳ ಹಿಂದಕ್ಕೇನು ಹೋಗುವುದಿಲ್ಲ. ಎಂಭತ್ತರ ದಶಕದ ನಂತರದ ಕರ್ನಾಟಕದ ರಾಜಕಾರಣದ ಆಗು ಹೋಗುಗಳನ್ನು ಅದ್ಯಯನ ಮಾಡಿದರೆ ಸಾಕು ಇದು ಸ್ಪಷ್ಟವಾಗಿ ಅರ್ಥವಾಗುತ್ತದೆ. ಹಾಗಿದ್ದರೆ ಕರ್ನಾಟಕದ ಜನತೆಗೆ ಯಾಕೆ ಪ್ರಾದೇಶಿಕ ಪಕ್ಷಗಳ ಬಗ್ಗೆ ಈ ರೀತಿಯ ಅಸಡ್ಡೆ? ಯಾಕೆ ಕನ್ನಡಿಗರು ಪ್ರಾದೇಶಿಕ ಪಕ್ಷಗಳತ್ತ ಒಲವು ತೋರಿಸುವುದಿಲ್ಲವೆಂಬ ಪ್ರಶ್ನೆಗೆ ಎರಡು ನೆಲೆಯಲ್ಲಿ ಉತ್ತರ ಕಂಡುಕೊಳ್ಳಬಹುದು: