ಸೆಪ್ಟೆಂ 18, 2016

ಅಡ್ಗೆ ಮನೆ: ಅಣಬೆ ಮಸಾಲಾ.

ತಾಜಾ ಆಯ್ಸ್ಟರ್ ಅಣಬೆಯನ್ನು ಬಳಸಿಕೊಂಡು ರುಚಿಯಾದ ಅಣಬೆ ಮಸಾಲಾ ಮಾಡುವ ವಿಧಾನ. ಬಟನ್ ಅಣಬೆ ಬಳಸಿದರೂ ರುಚಿಯಾಗಿರುತ್ತದೆ.
ಒಂದು ಪ್ಯಾಕೆಟ್ ಆಯ್ಸ್ಟರ್ ಅಣಬೆಯನ್ನು ಸ್ವಲ್ಪ ಸಣ್ಣಗೆ ಹೆಚ್ಚಿಕೊಳ್ಳಿ.

ಸೆಪ್ಟೆಂ 17, 2016

ಮರಳಿ ಭೂಮಿ ಪಡೆದ ಸಿಂಗೂರಿನ ರೈತರು: ಕೃಷಿವಲಯಕ್ಕೆ ಸಂದ ಜಯ!

ಸಾಂದರ್ಭಿಕ ಚಿತ್ರ
ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
17/09/2016
ಸುದ್ದಿ-ನಿನ್ನೆ ಮಮತಾಬ್ಯಾನರ್ಜಿಯವರು ಸಿಂಗೂರಿನ ರೈತರಿಗೆ ಅವರ ಕೃಷಿಭೂಮಿಯನ್ನು ಪರಿಹಾರದ ಸಮೇತ ಮರಳಿಸಿದ್ದಾರೆ!

ಇಡೀ ಇಂಡಿಯಾ ಮುಕ್ತ ಆರ್ಥಿಕ ನೀತಿಗೆ ತನ್ನನ್ನು ತೆರದುಕೊಂಡು ತನ್ನ ಸಮಾಜವಾದಿ ಆಶಯಗಳನ್ನೆಲ್ಲ ಗಾಳಿಗೆ ತೂರುವ ರೀತಿಯಲ್ಲಿ ಹೊಸ ಹೊಸ ಶಾಸನಗಳನ್ನು ರೂಪಿಸುತ್ತಿರುವ ಈ ಹೊತ್ತಿನಲ್ಲಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾದ ಕುಮಾರಿ ಮಮತಾ ಬ್ಯಾನರ್ಜಿಯವರ ಈ ನಡೆ ನನ್ನ ಮಟ್ಟಿಗಂತು ಐತಿಹಾಸಿಕವೆನಿಸುತ್ತಿದೆ. ಏಕೆಂದರೆ ಚುನಾವಣೆಗಳಲ್ಲಿ ನೀಡುವ ಜನಪರ ಆಶ್ವಾಸನೆಗಳನ್ನು ನೆನಪಲ್ಲಿಟ್ಟುಕೊಂಡು ರಾಜಕಾರಣ ಮಾಡುವವರ ಸಂಖ್ಯೆ ವಿರಳವಾಗುತ್ತಿರುವ ಈ ದಿನಗಳಲ್ಲಿ, ತಾವು ಅಧಿಕಾರದಲ್ಲಿರದೆ ಹೋದಾಗ ಸಿಂಗೂರು ರೈತರ ಹೋರಾಟದಲ್ಲಿ ಬಾಗವಹಿಸಿ ಅವರಿಗೆ ಭೂಮಿಯನ್ನು ಮರಳಿಸುವುದಾಗಿ ಭರವಸೆ ನೀಡಿಯೇ ಅಧಿಕಾರದ ಖುರ್ಚಿಗೆ ಲಗ್ಗೆ ಹಾಕಿದ ಅವರು ತಮ್ಮ ಮಾತನ್ನು ಉಳಿಸಿಕೊಳ್ಳುವುದರ ಮೂಲಕ ಎರಡು ಅಂಶಗಳನ್ನು ಭಾರತೀಯರಿಗೆ ಮನದಟ್ಟು ಮಾಡಿಕೊಟ್ಟಿದ್ದಾರೆ.

ಸೆಪ್ಟೆಂ 16, 2016

ಮೇಕಿಂಗ್ ಹಿಸ್ಟರಿ: ಐಜೂರ್ - ಕೊಪ್ಪಳ - ಬೀದರ್ - ಸಿಂಧಗಿ.

Making history
ಸಾಕೇತ್ ರಾಜನ್ 
ಕನ್ನಡಕ್ಕೆ: ಡಾ. ಅಶೋಕ್. ಕೆ. ಆರ್
16/09/2016
ಶ್ರೀರಂಗಪಟ್ಟಣದಿಂದ ಓಡಿಹೋದ ಮೇಲೆ ದೊಂಡಿಯಾ ಮೊದಲಿಗೆ ತಲುಪಿದ್ದು ಬ್ರಿಟೀಷರ ವಿರುದ್ಧ ಹೋರಾಡಲು ತಯಾರಿ ಮಾಡಿಕೊಳ್ಳುತ್ತಿದ್ದ ಪಾಳೇಗಾರ ವೆಂಕಟಾದ್ರಿ ನಾಯಕರ ಪ್ರಾಂತ್ಯವಾದ ಐಜೂರಿಗೆ. 

ಹಾಸನದ ಸಕಲೇಶಪುರ ತಾಲ್ಲೂಕಿನ ಐಜೂರಿನ ಪಾಳೇಗಾರರು ಇಕ್ಕೇರಿಯ ನಾಯಕರ ಸಾಮಂತರು. ಕೊಡವರನ್ನು ನಿಗ್ರಹಿಸಲು ಪ್ರಯತ್ನಿಸಿ ಕಲಿತ ಪಾಠಗಳಿಂದ, ಟಿಪ್ಪು ಐಜೂರಿನ ಪಾಳೇಗಾರ ಕೃಷ್ಣಪ್ಪ ನಾಯಕನೊಡನೆ ಗೆಳೆತನ ಬೆಳೆಸಿಕೊಂಡು; ಐಜೂರಿನ ಪಾಳೇಗಾರ ಕೃಷ್ಣಪ್ಪ ನಾಯಕ ಬ್ರಿಟೀಷರಿಗೆ ಬೆಂಬಲ ಕೊಡುತ್ತಿದ್ದರೂ ಅವನೊಡನೆ ಗೆಳೆತನ ಬೆಳೆಸಿಕೊಂಡ ಟಿಪ್ಪು, ಅವನಿಗೆ ತನ್ನ ಪ್ರಾಂತ್ಯವನ್ನು ಉಳಿಸಿಕೊಳ್ಳಲು ಅನುಮತಿ ನೀಡಿದ, ವಾರ್ಷಿಕ ಕಪ್ಪ ಕಾಣಿಕೆಯನ್ನು ಶ್ರೀರಂಗಪಟ್ಟಣಕ್ಕೆ ನೀಡಬೇಕು ಎಂಬ ಶರತ್ತಿನೊಂದಿಗೆ. ನಂತರ, ಬೆಂಗಳೂರು ಮಂಗಳೂರು ರಸ್ತೆಯಲ್ಲಿರುವ ಬಲ್ಲಂ ಪ್ರದೇಶದಲ್ಲಿ ಮಂಜರಾಬಾದ್ ಕೋಟೆಯನ್ನು ಕಟ್ಟಿದ, ಕರಾವಳಿಯೊಡನೆ ತೊಂದರೆಯಿಲ್ಲದ ವಾಣಿಜ್ಯಕ ವ್ಯವಹಾರವನ್ನು ಸಾಧಿಸಿದ.

ರೋಗಗ್ರಸ್ತ ಸಾರ್ವಜನಿಕ ಉದ್ದಿಮೆಗಳಿಗೆ ಅಂತಿಮ ಸಂಸ್ಕಾರ! ನೀತಿ ಆಯೋಗದಿಂದ ಸರಕಾರಕ್ಕೆ ಸೂಚನೆ

ಕು.ಸ. ಮಧುಸೂದನ್ ರಂಗೇನಹಳ್ಳಿ.
16/09/2016
ನಷ್ಟದಲ್ಲಿವೆಯೆಂದು ಹೇಳಲಾಗುತ್ತಿರುವ ಸುಮಾರು 74 ಸಾರ್ವಜನಿಕ ಕ್ಷೇತ್ರದ ಉದ್ದಿಮೆಗಳ ಪಟ್ಟಿಯನ್ನು ಸರಕಾರಕ್ಕೆ ನೀಡಿರುವ ನೀತಿ ಆಯೋಗವು ಬಹುತೇಕ ಅವುಗಳನ್ನು ಮುಚ್ಚುವ ಅಥವಾ ಖಾಸಗಿಯವರಿಗೆ ವಹಿಸಿಕೊಡುವ ಪ್ರಸ್ತಾವನೆಯನ್ನು ಸಲ್ಲಿಸಿದೆ.

ತೊಂಭತ್ತರ ದಶಕದಲ್ಲಿ ಆರಂಭಗೊಂಡ ಜಾಗತೀಕರಣದ ಪ್ರಕ್ರಿಯೆಯನ್ನು ಅರ್ಥಮಾಡಿಕೊಂಡವರ್ಯಾರಿಗೂ ನೀತಿ ಆಯೋಗದ ಇವತ್ತಿನ ಈ ನಡೆ ಅಚ್ಚರಿಯನ್ನೇನು ಉಂಟು ಮಾಡುವುದಿಲ್ಲ. ಯಾಕೆಂದರೆ ಮುಕ್ತ ಆರ್ಥಿಕ ನೀತಿಯ ಮೂಲ ಉದ್ದೇಶವೇ ಸರಕಾರಿ ಸ್ವಾಮ್ಯದ ಎಲ್ಲ ಉದ್ದಿಮೆಗಳನ್ನು ಖಾಸಗಿ ಬಂಡವಾಳಶಾಹಿಗಳ ಪಾದಗಳಿಗೆ ಸಮರ್ಪಿಸುವುದಾಗಿತ್ತು. ಸರಕಾರದ ಕೆಂಪು ಪಟ್ಟಿಗಳ, ಲೈಸೆನ್ಸ್ ರಾಜ್ ಬಗ್ಗೆ ಮಾತಾಡುವ ಮುಕ್ತ ಆರ್ಥಿಕ ನೀತಿಯ ಪರವಾದ ಬಂಡವಾಳಶಾಹಿಗಳ ಹುನ್ನಾರವೇ ಸಮಾಜವಾದಿ ವ್ಯವಸ್ತೆಯಲ್ಲಿರಬಹುದಾದ ದೋಷಗಳನ್ನು ಭೂತಗನ್ನಡಿಯಲ್ಲಿ ತೋರಿಸುತ್ತ, ಜನರ ದೃಷ್ಠಿಯಲ್ಲಿ ಸರಕಾರಿ ಸ್ವಾಮ್ಯದ ಉದ್ದಿಮೆಗಳೆಂದರೆ ಭ್ರಷ್ಟಾಚಾರದ ಕೂಪಗಳೆಂಬ ಅನುಮಾನ ಮೂಡಿಸಿ, ಖಾಸಗಿಯವರು ಮಾತ್ರ ಅವುಗಳನ್ನು ಉದ್ದಾರ ಮಾಡಬಲ್ಲರೆಂಬ ನಂಬಿಕೆಯೊಂದನ್ನು ಹುಟ್ಟು ಹಾಕುವುದಾಗಿದೆ.ಕಳೆದ 25 ವರ್ಷಗಳಲ್ಲಿ ಆಗಿ ಹೋದ ಎಲ್ಲ ಸರಕಾರಗಳ ನೀತಿಗಳೂ ಸಹ ಇಂತಹದೊಂದು ಕ್ರಿಯೆಗೆ ಉತ್ತೇಜನ ನೀಡುತ್ತಲೇ ಬಂದವು.

ಸೆಪ್ಟೆಂ 12, 2016

ನವಜೋತ್ ಸಿಂಗ್ ಸಿದ್ದು: ಬಾಜಪದ ಪಾಲಿನ ಮತ್ತೊಬ್ಬ ಯಡಿಯೂರಪ್ಪಆಗಲಿದ್ದಾರೆಯೇ

ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
12/09/2016
ನವಜೋತ್ ಸಿಂಗ್ ಸಿದ್ದು ಪಂಜಾಬಿನ ಬಾಜಪದ ಪಾಲಿಗೆ ಮತ್ತೊಬ್ಬ ಯಡಿಯೂರಪ್ಪ ಆಗಲಿದ್ದಾರೆಯೇ?

ಈಗೊಂದು ಸಂಶಯ, ಪಂಜಾಬ್ ರಾಜ್ಯದ ರಾಜಕೀಯ ವಲಯಗಳಲ್ಲಿ, ಬಿರುಸಿನ ಚರ್ಚೆಗಳಲ್ಲಿ ವ್ಯಕ್ತವಾಗುತ್ತಿದೆ. 2013ರ ಕರ್ನಾಟಕದ ವಿದಾನಸಭಾ ಚುನಾವಣೆಗಳಿಗೆ ಮುಂಚೆ ಯಡಿಯೂರಪ್ಪನವರು ಬಾಜಪ ತೊರೆದು ಕೆಜೆಪಿ ಕಟ್ಟಿ ಚುನಾವಣೆಗಳಲ್ಲಿ ಬಾಗವಹಿಸಿದ ಕಾರಣ ಬಾಜಪದ ಸಾಂಪ್ರದಾಯಿಕ ಮತಗಳು ಚದುರಿ ಕಾಂಗ್ರೆಸ್ ಅಧಿಕಾರಕ್ಕೆ ಏರುವಂತಾಗಿದ್ದು ನಿಮಗೆ ನೆನಪಿರಬಹುದು. ಸದ್ಯಕ್ಕೆ ಪಂಜಾಬ್‍ನಲ್ಲಿಯೂ ಅಂತಹುದೇ ಒಂದು ಸನ್ನಿವೇಶ ನಿರ್ಮಾಣವಾಗುತ್ತಿರುವಂತಿದೆ. ಕೆಲ ತಿಂಗಳ ಹಿಂದೆ ತನ್ನ ರಾಜ್ಯಸಭಾ ಸ್ಥಾನಕ್ಕೆ ರಾಜಿನಾಮೆ ನೀಡಿ ಹೊರಬಂದ ಸಿದ್ದುರವರು ಪಂಜಾಬ್ ಮಟ್ಟಿಗೆ ಬಾಜಪದ ತಾರಾ ಮೆರುಗು ಹೊಂದಿದ ನಾಯಕರಾಗಿದ್ದರು. ಸತತವಾಗಿ ಅಮೃತಸರದಿಂದ ಲೋಕಸಭೆಗೆ ಆಯ್ಕೆಯಾಗುತ್ತ ಬಂದಿದ್ದ ಅವರನ್ನು 2014ರಲ್ಲಿ ಕಡೆಗಣಿಸಿ ಅರುಣ್ ಜೇಟ್ಲಿಯವರಿಗೆ ಟಿಕೇಟು ನೀಡಿದ್ದರ ಪರಿಣಾಮವಾಗಿ ಸಿದ್ದು ಚುನಾವಣಾ ಪ್ರಚಾರದಿಂದ ದೂರ ಉಳಿದು ಜೇಟ್ಲಿಯವರ ಸೋಲಿಗೆ ಪರೋಕ್ಷವಾಗಿ ಕಾರಣರಾಗಿದ್ದರು. ತದನಂತರ ಸಿದ್ದುರವರನ್ನು ಸಮಾದಾನ ಪಡಿಸಲು ಅವರನ್ನು ರಾಜ್ಯಸಭೆಗೆ ಆರಿಸಲಾಯಿತಾದರು, ಪ್ರಂಜಾಬಿನ ರಾಜ್ಯ ರಾಜಕೀಯದಲ್ಲಿ ಅಕಾಲಿದಳಕ್ಕೆ ಕಿರಿಯ ಪಾಲುದಾರ ಪಕ್ಷವಾಗಿರುವ ಬಾಜಪ ಸಿದ್ದುರವರಿಗೆ ಕೊಡಬೇಕಾದಷ್ಟು ಪ್ರಾಧಾನ್ಯತೆ ಕೊಡದೆ ಅವರನ್ನು ನಿರ್ಲಕ್ಷಿಸತೊಡಗಿತ್ತು. ಬಾಜಪದ ರಾಜ್ಯಘಟಕದ ಯಾವೊಂದು ಚಟುವಟಿಕೆಗಳಿಗೂ ಅವರನ್ನು ಬಳಸಿಕೊಳ್ಳದೆ ಅವರನ್ನು ಕೇವಲ ತಾರಾ ಪ್ರಚಾರಕರನ್ನಾಗಿ ಬಳಸಿಕೊಳ್ಳುವ ಬಾಜಪದ ನಡೆಯಿಂದ ಬೇಸರಗೊಂಡ ಸಿದ್ದು ಪಕ್ಷ ತ್ಯಜಿಸಿದಾಗ, ಅವರು ಅರವಿಂದ್ ಕೇಜ್ರೀವಾಲಾರ ಆಮ್ ಆದ್ಮಿ ಪಕ್ಷವನ್ನು ಸೇರುತ್ತಾರೆಂದು ಬಾವಿಸಲಾಗಿತ್ತು. ಅದಕ್ಕೆ ಪೂರಕವಾಗಿ ಸ್ವತ: ಕೇಜ್ರೀವಾಲರೇ ಸಿದ್ದುರವರನ್ನು ಹೊಗಳುತ್ತ ತಮ್ಮ ಪಕ್ಷಕ್ಕೆ ಅವರನ್ನು ಸ್ವಾಗತಿಸುವುದಾಗಿ ಹೇಳಿಕೊಂಡಿದ್ದರು. ಆದರೆ ಈ ಬಗ್ಗೆ ಸಾರ್ವಜನಿಕವಾಗಿ ಯಾವ ಪ್ರತಿಕ್ರಿಯೆಗಳನ್ನೂ ನೀಡದ ಸಿದ್ದುರವರು ಮೌನಕ್ಕೆ ಶರಣಾಗಿಬಿಟ್ಟಿದ್ದರು.

ಸೆಪ್ಟೆಂ 9, 2016

ಮೇಕಿಂಗ್ ಹಿಸ್ಟರಿ: ಊಳಿಗಮಾನ್ಯ ದೊರೆಗಳು ಮುನ್ನಡೆಸಿದ ಸಶಸ್ತ್ರ ಹೋರಾಟ

making history
ಸಾಕೇತ್ ರಾಜನ್ 
ಕನ್ನಡಕ್ಕೆ: ಡಾ. ಅಶೋಕ್. ಕೆ. ಆರ್
09/09/2016
ಬ್ರಿಟೀಷರಾಳ್ವಿಕೆಯಲ್ಲಿ ಊಳಿಗಮಾನ್ಯ ದೊರೆಗಳು ತಮ್ಮ ಹಳೆಯ ಸೌಕರ್ಯಗಳನ್ನೆಲ್ಲ ಕಳೆದುಕೊಂಡರು. ಉತ್ತರಾಧಿಕಾರತ್ವದ ಬಗೆಗಿನ ಬ್ರಿಟೀಷರ ನೀತಿಗಳಿಂದಾಗಿ ಕೆಲವು ಕುಟುಂಬಗಳು ನಿರ್ವೀರ್ಯರಾಗುವ ಹಂತಕ್ಕೆ ಬಂದು ನಿಂತಿದ್ದವು. ತಮ್ಮ ಕಳೆದುಹೋದ ಘನತೆಯನ್ನು ಮರಳಿ ಗಳಿಸುವುದಕ್ಕಾಗಿ ಅವರು ಬ್ರಿಟೀಷರನ್ನು ಕಿತ್ತೆಸೆಯುವ ನಿರ್ಧಾರ ಮಾಡಿದ್ದು, 1857ರವರೆಗೆ ನಡೆದ ಸಶಸ್ತ್ರ ಹೋರಾಟಗಳನ್ನು ಅವರು ಮುನ್ನಡೆಸಿದರು. ನಾವೀಗ ಈ ರೀತಿಯ ಪ್ರತಿಯೊಂದು ಹೋರಾಟವನ್ನೂ ಗಮನಿಸೋಣ, ತದನಂತರ ಕರ್ನಾಟಕ ಬ್ರಿಟೀಷ್ ವಸಾಹತುಶಾಹಿಯ ವಿರುದ್ಧ ನಡೆಸಿದ ಯುದ್ಧಗಳಲ್ಲಿನ ಅವರ ತ್ಯಾಗದ ಅನುಭವಗಳನ್ನು ಒಟ್ಟುಗೂಡಿಸೋಣ.

ಸೆಪ್ಟೆಂ 8, 2016

ದಲಿತ ಮತ್ತು ಮಹಿಳೆಯನ್ನು ಒಂದು ಪ್ರಬಲ ರಾಜಕೀಯ ಶಕ್ತಿಯಾಗಿ ನೋಡಲು ಇಚ್ಚಿಸದ ನಮ್ಮ ರಾಜಕೀಯ ವ್ಯವಸ್ಥೆ: ಮಾಯಾವತಿಯವರ ವಿರುದ್ದ ಮೂರೂ ಪಕ್ಷಗಳ ಕೆಂಗಣ್ಣು!

ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
08/09/2016
ಇಂಡಿಯಾದ ರಾಜಕಾರಣ ಕಳೆದ ಏಳು ದಶಕಗಳಲ್ಲಿ ಸಾಕಷ್ಟು ಪ್ರಬುದ್ದತೆಯನ್ನು ಪಡೆದಿದೆಯೆಂಬ ಮಾತು ಕೆಲ ಮಟ್ಟಿಗೆ ನಿಜವಾದರು, ಅದರ ಸಮಯಸಾಧಕತನದ ಕನಿಷ್ಠಬುದ್ದಿಯೇನೂ ಕಡಿಮೆಯಾಗಿಲ್ಲವೆಂಬ ಮಾತು ಸಹ ನಿಜ. ಇದರ ಜೊತೆಗೆ ಜಾತಿ ತಾರತಮ್ಯದ ರಾಜಕಾರಣ ಹಿಂದೆಂದಿಗಿಂತಲೂ ಹೆಚ್ಚಾಗಿ ತನ್ನ ಇರುವಿಕೆಯನ್ನು ತೋರಿಸುತ್ತಿರುವುದು ಕೂಡ ಅಷ್ಟೇ ಸತ್ಯ. ಕಾಲದಿಂದ ಕಾಲಕ್ಕೆ ಚುನಾವಣೆಯಿಂದ ಚುನಾವಣೆಗೆ ಇದು ಮತ್ತೆ ಮತ್ತೆ ಸಾಬೀತಾಗುತ್ತ ಬರುತ್ತಿದೆ. ಜಾತಿ ರಾಜಕಾರಣದ ಜೊತೆಜೊತೆಗೆ ಲಿಂಗ ತಾರತಮ್ಯದ ರಾಜಕಾರಣವೂ ಸಹ ನಮ್ಮ ದೇಶದ ರಾಜಕಾರಣಕ್ಕೆ ಅಂಟಿರುವ ಒಂದು ಕಳಂಕವೆನ್ನಬಹುದಾಗಿದೆ. ಏಳು ದಶಕಗಳ ನಂತರವೂ ನಾವು ಮಹಿಳೆಯರಿಗೆ ಶೇಕಡಾವಾರು ಮೀಸಲಾತಿಯನ್ನು ನೀಡುವ ಮಾತಾಡುತ್ತಿದ್ದೇವೆಯೇ ಹೊರತು ಸಮಾನತೆಯನ್ನಲ್ಲ. ಜೊತೆಗೆ ಯಾವುದೆ ಪ್ರತಿಷ್ಠಿತ ಕುಟುಂಬದ ಹಿನ್ನೆಲೆಯಿಲ್ಲದ ಹೆಣ್ಣುಮಗಳೊಬ್ಬಳು ಈ ನೆಲದಲ್ಲಿ ಸ್ವತಂತ್ರವಾಗಿ ತನ್ನದೇ ಸಿದ್ದಾಂತಗಳಿಗನುಗುಣವಾಗಿ ರಾಜಕೀಯ ಮಾಡುವ ವಾತಾವರಣ ನಮ್ಮಲ್ಲಿನ್ನೂ ಸೃಷ್ಠಿಯಾಗಿಲ್ಲ. ಈ ಮಾತುಗಳನ್ನು ನಾನು ಹೇಳುವುದಕ್ಕೆ ಮುಖ್ಯ ಕಾರಣ ಉತ್ತರಪ್ರದೇಶದ ಮಾಜಿ ಮುಖ್ಯಮಂತ್ರಿಯಾದ, ಬಹುಜನ ಪಕ್ಷದ ನಾಯಕಿ ಕುಮಾರಿ ಮಾಯಾವತಿಯವರಿಗೆ ಇಂದು ಎದುರಾಗುತ್ತಿರುವ ಅಡೆತಡೆಗಳು. ಯಾಕೆಂದರೆ ಮೇಲೆ ನಾನು ಹೇಳಿದ ಜಾತಿ ಮತ್ತು ಲಿಂಗ ತಾರತಮ್ಯದ ಎರಡೂ ಕೆಡುಕುಗಳು ಇವತ್ತು ಮಾಯಾವತಿಯವರ ರಾಜಕೀಯ ಜೀವನವನ್ನು ಮುಗಿಸಲು ಬಳಕೆಯಾಗುತ್ತಿವೆ. ಮೊದಲಿಗೆ ಆಕೆ ಒಬ್ಬ ದಲಿತ ಮಹಿಳೆಯೆನ್ನುವ ಕಾರಣವಾದರೆ, ಎರಡನೆಯದು ಆಕೆ ಒಬ್ಬ ಮಹಿಳೆ ಎನ್ನುವುದಾಗಿದೆ. ಇವತ್ತೇನು ಉತ್ತರ ಪ್ರದೇಶದ ಮಟ್ಟಿಗೆ ಸಮಾಜವಾದಿ ಪಕ್ಷದ ನಾಯಕ ಮಾಜಿ ಮುಖ್ಯಮಂತ್ರಿ ಶ್ರೀ ಮುಲಾಯಂ ಸಿಂಗ್ ಯಾದವರ ವರ್ಚಸ್ಸಿಗೆ ಸರಿಸಮಾನವಾಗಿರುವವರು ಯಾರಾದರು ಇದ್ದರೆ ಅದು ಮಾಯಾವತಿಯವರು ಮಾತ್ರ. ಜನಪ್ರಿಯತೆಯಲ್ಲಿ ಹಾಗು ಸಮುದಾಯಗಳ ನಾಯಕರಾಗಿ ಮತ ಸೆಳೆಯುವ ತಾಕತ್ತಿನಲ್ಲಿ, ಹಾಗು ಹಿಡಿದ ಹಟ ಸಾಧನೆಯಲ್ಲಿ ಮುಲಾಯಮರಿಗೆ ಜಿದ್ದಾಜಿದ್ದಿಯಾಗಿ ನಿಲ್ಲಬಲ್ಲವರೆಂದರೆ ಅದು ಮಾಯಾವತಿಯವರು ಮಾತ್ರ. ಅಷ್ಟಲ್ಲದೆ ಚುನಾವಣಾ ತಂತ್ರಗಾರಿಕೆಯಲ್ಲಿ ಕೂಡ ಅವರು ಅಸಾಮಾನ್ಯರಾಗಿದ್ದಾರೆ.

ಗೋಹತ್ಯೆ – ಒಂದು ಪರಾಮರ್ಶೆ: ಭಾಗ 3.

ನಾಗೇಶ್ ಹೆಗಡೆ
25/08/2016
ಗೋಹತ್ಯೆ – ಒಂದು ಪರಾಮರ್ಶೆ: ಭಾಗ 1 ಓದಲು ಇಲ್ಲಿ ಕ್ಲಿಕ್ಕಿಸಿ
ಗೋಹತ್ಯೆ – ಒಂದು ಪರಾಮರ್ಶೆ: ಭಾಗ 2 ಓದಲು ಇಲ್ಲಿ ಕ್ಲಿಕ್ಕಿಸಿ
ಅಂಥದ್ದೇನೂ ಆಗುವುದಿಲ್ಲ; ದನಕರುಗಳು ಶಾಶ್ವತವೇನಲ್ಲವಲ್ಲ! ಅವು ಸಹಜವಾಗಿ ಸಾಯುತ್ತಿರುತ್ತವೆ. ಈಗಿನಷ್ಟೇ ಸಂಖೈಯಲ್ಲಿ ಆಗಲೂ ಸಾಯುತ್ತಿರುತ್ತವೆ. ಅವುಗಳ ಮಾಂಸ ತೆಗೆದು ಮಾರಲು ಅಥವಾ ಮೃಗಾಲಯಕ್ಕೆ ಸಾಗಿಸಲು ಅನುಮತಿ ಸಿಕ್ಕೇ ಸಿಗುತ್ತದೆ. ನೀವು ಉತ್ಪ್ರೇಕ್ಷೆ ಮಾಡಬೇಡಿ.
ಉತ್ಪ್ರೇಕ್ಷೆ ಅಲ್ಲ. ಈಗಿನ ವ್ಯವಸ್ಥೆಯಲ್ಲಿ ಅಲ್ಲಲ್ಲಿ ಕೇಂದ್ರೀಕೃತ ಕಸಾಯಿಖಾನೆಗಳಲ್ಲಿ ದಿನವೂ ಇಷ್ಟಿಷ್ಟೆಂಬಂತೆ ಮಾಂಸ ಲಭಿಸುತ್ತಿದೆ. ಎಲ್ಲೆಲ್ಲಿ ಎಂದೆಂದು ಎಷ್ಟೆಷ್ಟು ಡಿಮಾಂಡ್ ಇದೆಯೊ ಅಂದಂದು ಅಷ್ಟಷ್ಟು ಪೂರೈಕೆ ಆಗುತ್ತಿದೆ. ಗೋಹತ್ಯೆ ನಿಷೇಧಿಸಿದರೆ ಈ ಸಪ್ಲೈ ಚೇನ್ ನಲ್ಲಿ ಅವ್ಯವಸ್ಥೆ ಉಂಟಾಗುತ್ತದೆ. ಏಕೆಂದರೆ ಎಲ್ಲಿ, ಯಾವ ದಿನ ಎಷ್ಟು ದನಕರುಗಳು ಸಾಯಲಿವೆ ಎಂಬುದು ಯಾರಿಗೂ ಗೊತ್ತಾಗಲು ಸಾಧ್ಯವಿಲ್ಲ. ದನಗಳ ಕಳೇಬರದ ಸಾಗಾಣಿಕೆಗೆ ಸಂಬಂಧಿಸಿದಂತೆ ಪೊಲೀಸ್ ಕಿರುಕುಳ ಹೆಚ್ಚುವುದರಿಂದ, ಇಂಥ ರಗಳೆಯೇ ಬೇಡವೆಂದು ರೈತರು ತಮ್ಮ ದನ ಸತ್ತಾಗ ಯಾರಿಗೂ ತಿಳಿಸದೇ ಮಣ್ಣು ಮಾಡುವ ಸಾಧ್ಯತೆ ಹೆಚ್ಚುತ್ತದೆ. ಹೀಗಾದರೆ ಚರ್ಮೋದ್ಯಮವೂ ತತ್ತರಿಸಬಹುದು. ಪಶು ಆಹಾರ, ಔಷಧ ಉತ್ಪಾದನೆ ಮತ್ತು ಔದ್ಯಮಿಕ ಕಚ್ಚಾಪದಾರ್ಥ, ಸೌಂದರ್ಯವರ್ಧಕ ರಸವಸ್ತುಗಳ ತಯಾರಿಕೆ ಹೀಗೆ ಎಲ್ಲಕ್ಕೂ ನಾವು ವಿದೇಶೀ ಆಮದನ್ನೇ ಅವಲಂಬಿಸಲಬೇಕಾಗುತ್ತದೆ. ನಾಡಿನುದ್ದಕ್ಕೂ ಹಳ್ಳಿಗಳಲ್ಲಿ ಅಲ್ಲಲ್ಲಿ ಆಗಾಗ ಒಂದೋ ಎರಡೋ ರಾಸುಗಳು ಸತ್ತಿದ್ದು ಗೊತ್ತಾದರೂ ಅದರ ಮಾಂಸವನ್ನು ಸಾಗಿಸಿ ತಂದು ಆಹಾರವಾಗಿ ವಿಲೇವಾರಿ ಮಾಡುವುದಾದರೆ ಗುಣಮಟ್ಟ ಕೆಟ್ಟು ರೋಗರುಜಿನ ಹಬ್ಬಲು ಕಾರಣವಾಗಬಹುದು. ಬನ್ನೇರುಘಟ್ಟದಲ್ಲಿ ಐದು ಹುಲಿಗಳು ‘ಸಾಲ್ಮೊನೆಲ್ಲಾ’ ವಿಷಾಣು ಸೇರಿದ್ದ ರೋಗಗ್ರಸ್ತ ಮಾಂಸವನ್ನ ತಿಂದೇ ಸತ್ತಿವೆ.

ಸೆಪ್ಟೆಂ 7, 2016

ರಿಲಾಯನ್ಸ್ ಜಿಯೋ - ಹುಸಿಯಾದ ನಿರೀಕ್ಷೆ

ಆನಂದ ಪ್ರಸಾದ್

07/09/2016

ಕಳೆದ ಕೆಲವು ತಿಂಗಳುಗಳಿಂದ ಭಾರೀ ನಿರೀಕ್ಷೆ ಮೂಡಿಸಿದ್ದ ಮುಖೇಶ್ ಅಂಬಾನಿ ಒಡೆತನದ ರಿಲಾಯನ್ಸ್ ಜಿಯೋ ಕೊನೆಗೂ ತನ್ನ ವಾಣಿಜ್ಯ ಸೇವೆಯನ್ನು ಸೆಪ್ಟೆಂಬರ್ 5ರಿಂದ ಆರಂಭಿಸಿದೆ. ರಿಲಾಯನ್ಸ್ ಜಿಯೋ ತನ್ನ ವೆಬ್ಸೈಟಿನಲ್ಲಿ ಕೊಟ್ಟಿರುವ ಪ್ಲಾನ್, ಡಾಟಾ ದರಗಳನ್ನು ಪರಿಶೀಲಿಸಿದಾಗ ನರೇಂದ್ರ ಮೋದಿಯವರ 'ಡಿಜಿಟಲ್ ಇಂಡಿಯಾ' ಘೋಷಣೆ ಸಾಕಾರವಾಗುವ ಸಂಭವ ಕಡಿಮೆ. ಏಕೆಂದರೆ ಡಾಟಾ ದರಗಳು ಸಾಮಾನ್ಯ ಗ್ರಾಹಕನಿಗೆ ಅನುಕೂಲಕರವಾಗಿ ಇಲ್ಲ. 149 ರೂಪಾಯಿಗಳಿಗೆ 28 ದಿನಗಳ ಅವಧಿಗೆ 300 ಎಂಬಿ ಡಾಟಾ ಹಾಗೂ ಉಚಿತ ದೇಶೀಯ ಕರೆ ರೋಮಿಂಗ್ ವೆಚ್ಚವಿಲ್ಲದೆ ಹಾಗೂ ದಿನಕ್ಕೆ 100 ಎಸ್ಸೆಮ್ಮೆಸ್ ಕೊಡುಗೆ ನೀಡಿದೆ. ಉಚಿತ ಕರೆ ಮಾಡಬೇಕಿದ್ದರೆ ಗ್ರಾಹಕ 4ಜಿ ಮೊಬೈಲ್ ಹೊಂದಿರಬೇಕು. ಹೀಗಾಗಿ 2ಜಿ ಅಥವಾ 3ಜಿ ಮೊಬೈಲ್ ಹೊಂದಿರುವ ಸಾಮಾನ್ಯ ಗ್ರಾಹಕ ರಿಲಾಯನ್ಸ್ ಜಿಯೋ 4ಜಿಗೆ ಬದಲಾಗಲು ಕನಿಷ್ಠ 3000 ರೂಪಾಯಿಗಳನ್ನು ವ್ಯಯಿಸಬೇಕು. ಇದು 4ಜಿ ಸೌಲಭ್ಯವುಳ್ಳ ರಿಲಾಯನ್ಸ್ ಫ್ಲೇಮ್ ಬ್ರಾಂಡಿನ ಅತಿ ಕಡಿಮೆ ದರದ ಮೊಬೈಲ್ ಆಗಿದೆ. ಇನ್ನೂ ಹೆಚ್ಚಿನ ಸೌಲಭ್ಯವುಳ್ಳ 4ಜಿ ಮೊಬೈಲ್ ಬೇಕಿದ್ದರೆ 7,000ದಿಂದ 10,000 ರೂಪಾಯಿ ತೆರಬೇಕು. ಇಷ್ಟು ಹಣ ಖರ್ಚು ಮಾಡಿ ರಿಲಾಯನ್ಸ್ ಜಿಯೋ 4ಜಿ ನೆಟ್ವರ್ಕಿಗೆ ಬದಲಾಯಿಸಿಕೊಳ್ಳಲು ಸಾಮಾನ್ಯ ಭಾರತೀಯ ಗ್ರಾಹಕರು ಹಿಂದೇಟು ಹಾಕುತ್ತಾರೆ. ಏಕೆಂದರೆ ಭಾರತೀಯರು ಈಗಾಗಲೇ ಉತ್ತಮ ಸ್ಥಿತಿಯಲ್ಲಿರುವ 2ಜಿ/3ಜಿ ಮೊಬೈಲ್ ಫೋನ್ ಅನ್ನು ತ್ಯಜಿಸಿ ಹೊಸದನ್ನು ಕೊಳ್ಳುವ ಪ್ರವೃತ್ತಿಯನ್ನು ಹೊಂದಿಲ್ಲ. ತಮ್ಮ 2ಜಿ/3ಜಿ ಮೊಬೈಲ್ ಫೋನ್ ಹಾಳಾದ ನಂತರವೇ ಸಾಮಾನ್ಯ ಜನರು ಹೊಸ ಮೊಬೈಲ್ ಕೊಳ್ಳುವ ಬಗ್ಗೆ ಯೋಚಿಸುತ್ತಾರೆ. ಏಕೆಂದರೆ ಜನಸಾಮಾನ್ಯರ ಆದಾಯ ಮಟ್ಟವು ಕಡಿಮೆ ಇರುತ್ತದೆ. ಇದರಿಂದಾಗಿ ರಿಲಾಯನ್ಸ್ ಜಿಯೋ ಉಚಿತ ಕರೆ ರೋಮಿಂಗ್ ಸಹಿತ, ಉಚಿತ ಎಸ್ಸೆಮ್ಮೆಸ್ ದಿನಕ್ಕೆ 100 ಕೊಡುಗೆ ನೀಡಿದರೂ ಇದಕ್ಕೆ ಬದಲಾಗಲು ಸಾಕಷ್ಟು ಸಮಯ ಹಿಡಿಯಬಹುದು.

ಕಾವೇರಿದರೆ ಪ್ರಯೋಜನವಿದೆಯೇ?

ಡಾ. ಅಶೋಕ್. ಕೆ. ಆರ್
07/09/2016
ಪ್ರಜಾಪ್ರಭುತ್ವದಲ್ಲಿ ಬಂದ್, ಮುಷ್ಕರ, ಕೆಲಸಕ್ಕೆ ಹಾಜರಾಗದೇ ಇರುವುದು, ರಸ್ತೆತಡೆ, ರೈಲುತಡೆಗಳೆಲ್ಲವೂ ಪ್ರತಿಭಟಿಸುವ ವಿವಿಧ ಮಾರ್ಗಗಳು. ಬೇಡಿಕೆ ಈಡೇರಲು, ಆಳುವ ಸರ್ಕಾರದ, ಕಂಪನಿಗಳ ತಪ್ಪು ನಡೆಗಳನ್ನು ಖಂಡಿಸಲು – ಆ ನಡೆಯನ್ನು ಅವರು ಪುನರ್ ಪರಿಶೀಲಿಸುವಂತೆ ಮಾಡಲು ಈ ಪ್ರತಿಭಟನೆಯ ಮಾರ್ಗಗಳು ಇರಲೇಬೇಕು. ಬೆಂಗಳೂರಿನ ಗಾರ್ಮೆಂಟ್ ನೌಕರರು ಎರಡು ದಿನ ನಡೆಸಿದ ಪ್ರತಿಭಟನೆಯು ಸರಕಾರವು ಪಿ.ಎಫ್ ನೀತಿಯನ್ನು ಪುನರ್ ಪರಿಶೀಲಿಸುವಂತೆ ಮಾಡಿದ್ದು, ರಸ್ತೆ ಸಾರಿಗೆ ನೌಕರರು ನಡೆಸಿದ ಪ್ರತಿಭಟನೆಯಿಂದ ಒಂದಷ್ಟು ಬೇಡಿಕೆಗಳನ್ನಾದರೂ ಸರಕಾರ ಒಪ್ಪುವಂತೆ ಮಾಡಿದ ಇತ್ತೀಚಿನ ಉದಾಹರಣೆಗಳು ನಮ್ಮ ಕಣ್ಣ ಮುಂದಿದೆ. ಸರ್ಕಾರದ ವಿರುದ್ಧ, ಖಾಸಗಿ ಕಂಪನಿಗಳ ವಿರುದ್ಧ ನಡೆಯುವ ಪ್ರತಿಭಟನೆಗಳು ಯಶಸ್ವಿಯಾಗಬಹುದು, ಒಂದು ಮಟ್ಟದ ಒಪ್ಪಂದಕ್ಕಾದರೂ ಕಾರಣವಾಗಬಹುದು. ಆದರೆ ನ್ಯಾಯಾಧೀಕರಣದ, ನ್ಯಾಯಾಲಯದ ವಿರುದ್ಧ ನಡೆಯುವ ಪ್ರತಿಭಟನೆಗಳಿಂದ ಪ್ರಯೋಜನವಿದೆಯೇ? ಪ್ರತಿಭಟನೆಯ ಬಿಸಿಯಿಂದಾಗಿ ನ್ಯಾಯಾಲಯಗಳು ಯಾವುದೇ ಕಾರಣಕ್ಕೂ ತಮ್ಮ ತೀರ್ಪನ್ನು ಪುನರ್ ಪರಿಶೀಲಿಸುವುದಾಗಲೀ, ನೀಡಿದ ತೀರ್ಪನ್ನು ವಾಪಸ್ಸು ಪಡೆದುಬಿಡುವುದಾಗಲೀ ಸಾಧ್ಯವಿದೆಯೇ? ಸಾಧ್ಯವಿಲ್ಲ ಎನ್ನುವುದು ಸ್ಪಷ್ಟವಾಗಿರುವಾಗ ಕಾವೇರಿಯ ವಿಚಾರದಲ್ಲಿ ನಮ್ಮ ಕಾವೇರಿದ ಪ್ರತಿಭಟನೆಯು, ಶುಕ್ರವಾರ ಕರೆ ನೀಡಲಾಗಿರುವ ಬಂದ್ ಯಾವುದಕ್ಕಾಗಿ? ಯಾರ ವಿರುದ್ಧ?

ನಿನ್ನೆ ಮಂಡ್ಯದಲ್ಲಿ ನಡೆದ ಬಂದ್ ಇರಬಹುದು, ರಾಜ್ಯದ ವಿವಿದೆಡೆ ನಡೆದ ಪ್ರತಿಭಟನೆಗಳಿರಬಹುದು ಅದು ರಾಜ್ಯ ಸರಕಾರ ನೀರು ಬಿಡಬಾರದು ಎಂಬ ಬೇಡಿಕೆಯನ್ನೊಳಗೊಂಡಿದೆ. 1991ರಲ್ಲಿ ಮುಖ್ಯಮಂತ್ರಿಯಾಗಿದ್ದ ಬಂಗಾರಪ್ಪ ನ್ಯಾಯಾಧೀಕರಣದ ತೀರ್ಪನ್ನು ಧಿಕ್ಕರಿಸಿದ್ದರು, ಸಿದ್ಧರಾಮಯ್ಯ ಕೂಡ ಅದೇ ರೀತಿ ಮಾಡಬೇಕು ಎನ್ನುವ ಬೇಡಿಕೆಗಳೂ ಇವೆ. ಧಿಕ್ಕರಿಸುವುದು ಸಾಧ್ಯವೇ? ಒಂದು ವೇಳೆ ಸಿದ್ಧರಾಮಯ್ಯ ನೀರು ನೀಡದೇ ಹೋದರೆ, ಸಹಜವಾಗಿ ತಮಿಳುನಾಡು ಮತ್ತೆ ಸುಪ್ರೀಂ ಕೋರ್ಟಿನ ಮೊರೆ ಹೋಗುತ್ತದೆ, ಕರ್ನಾಟಕದ ಮೇಲೆ ನ್ಯಾಯಾಂಗ ನಿಂದನೆಯ ಆಪಾದನೆ ಬರುತ್ತದೆ. ರಾಜ್ಯ ಸರಕಾರ ವಜಾಗೊಳ್ಳಬಹುದು, ಕೆ.ಆರ್.ಎಸ್ ಕೇಂದ್ರದ ಸುಪರ್ದಿಗೆ ಅಂದರೆ ಮಿಲಿಟರಿ/ಪ್ಯಾರಾ ಮಿಲಟರಿ ಪಡೆಗಳು ಅಣೆಕಟ್ಟನ್ನು ವಶಕ್ಕೆ ತೆಗೆದುಕೊಳ್ಳಬಹುದು. ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ನೀರು ಬಿಡುವ ಎಲ್ಲಾ ಸಾಧ್ಯತೆಗಳೂ ಇವೆ. ಈಗಾಗಲೇ ಸುಪ್ರೀಂ ಕೋರ್ಟಿನ ಆದೇಶದಂತೆ 15,000 ಕ್ಯುಸೆಕ್ಸ್ ನೀರು ಹರಿದು ಹೋಗಿರಲಿಕ್ಕೂ ಸಾಕು. ಎಸ್.ಎಂ.ಕೃಷ್ಣ ಮುಖ್ಯಮಂತ್ರಿಯಾಗಿದ್ದ ಸಮಯದಲ್ಲೂ ನೀರು ಬಿಡೆನು ಎಂದು ಬೆಂಗಳೂರಿನಿಂದ ಮಂಡ್ಯದವರೆಗೂ ಪಾದಯಾತ್ರೆ ನಡೆಸಿದರು, ನಂತರ ಕದ್ದು ಮುಚ್ಚಿ ನೀರು ಬಿಟ್ಟುಬಿಟ್ಟಿದ್ದರು. 

ಕಾವೇರಿಯ ವಿಷಯದಲ್ಲಿ ಕರ್ನಾಟಕ ಸಂಪೂರ್ಣವಾಗಿ ಸೋತು ಹೋಗಿ ಬಹಳ ಕಾಲವಾಗಿದೆ ಎನ್ನುವುದನ್ನು ಮೊದಲು ಅರ್ಥೈಸಿಕೊಳ್ಳಬೇಕು. ಸ್ವಾತಂತ್ರಪೂರ್ವದಲ್ಲೂ ಸೋತಿದೆ, ಸ್ವಾತಂತ್ರ್ಯಾನಂತರದಲ್ಲಿ 2007ರಲ್ಲಿ ನ್ಯಾಯಾಧೀಕರಣ ಕೊಟ್ಟ ತೀರ್ಪಿನ ನಂತರ ಪೂರ್ಣವಾಗಿ ಸೋತು ಹೋಗಿದೆ. ಸ್ವಾತಂತ್ರ್ಯ ಪೂರ್ವದಲ್ಲಿ ಟಿಪ್ಪು ಸುಲ್ತಾನನ್ನು ಬ್ರಿಟೀಷರು ಸೋಲಿಸಿದ ನಂತರ ಸ್ಥಾಪನೆಯಾಗಿದ್ದು ಮೈಸೂರು ಒಡೆಯರ್ ಗಳ ಆಡಳಿತ. ಹೆಸರಿಗಿಲ್ಲಿ ಮೈಸೂರಿನ ಒಡೆಯರ್ ಗಳು ರಾಜರಾದರೂ ಪರೋಕ್ಷವಾಗಿ ಆಡಳಿತ ನಡೆಸುತ್ತಿದ್ದಿದ್ದು ಬ್ರಿಟೀಷರು. ಅತ್ತ ಕಡೆ ಮದ್ರಾಸಿನಲ್ಲಿ ಬ್ರಿಟೀಷರದೇ ನೇರ ಆಡಳಿತವಿತ್ತು. ಸಹಜವಾಗಿ ಕಾವೇರಿಯ ವಿಷಯದಲ್ಲಿ ಬ್ರಿಟೀಷರು ತಮ್ಮ ನೇರ ಆಳ್ವಿಕೆಯಿದ್ದ ಪ್ರದೇಶಕ್ಕೆ ಹೆಚ್ಚು ಅನುಕೂಲ ಮಾಡಿಕೊಡುವಂತಹ ಕಾನೂನುಗಳನ್ನು ಜಾರಿಗೆ ತಂದರು. ಬ್ರಿಟೀಷರ ಕೃಪೆಯಲ್ಲಿದ್ದ ಮೈಸೂರು ರಾಜರಿಗೆ ಅದನ್ನು ಒಪ್ಪದೇ ಬೇರೆ ನಿರ್ವಾಹವಿರಲಿಲ್ಲ. ಕೆ.ಆರ್.ಎಸ್ ಅಣೆಕಟ್ಟೆಯನ್ನು ಕಟ್ಟುವಾಗಲೂ ಬ್ರಿಟೀಷರ ಅರ್ಥಾತ್ ಮದ್ರಾಸಿನ ಕಟ್ಟಪ್ಪಣೆಗಳಿಗೆ ಒಪ್ಪಲಾಗಿತ್ತು. ಸ್ವಾತಂತ್ರ್ಯ ನಂತರದಲ್ಲಾದರೂ ನಮಗೆ ಬೇಕಾದಂತೆ ಅಣೆಕಟ್ಟೆ ಕಟ್ಟುವುದು ಸಾಧ್ಯವಾಯಿತೇ? ಇಲ್ಲ. 1968ರಲ್ಲಿ ಹಾರಂಗಿ ಮತ್ತು ಕಬಿನಿ ಜಲಾಶಯಗಳನ್ನು ‘ಆರು ತಿಂಗಳಿಗಿಂತ ಹೆಚ್ಚಾಗಿ ಈ ಅಣೆಕಟ್ಟೆಗಳಲ್ಲಿ ನೀರು ಇಟ್ಟುಕೊಳ್ಳುವುದಿಲ್ಲ’ ಎನ್ನುವ ಶರತ್ತಿನೊಂದಿಗೇ ಕಟ್ಟಿದ್ದು. ಕರ್ನಾಟಕ ಸರಿಯಾಗಿ ನೀರು ಬಿಡುತ್ತಿಲ್ಲ ಎಂದು ಆರೋಪಿಸಿ ತಮಿಳುನಾಡು ನ್ಯಾಯಾಲಯಕ್ಕೆ ಹೋಯಿತು. ನೆಲ ಜಲ ಭಾಷೆಯ ವಿಷಯ ಬಂದಾಗ ತಮಿಳರಿಗೆ ತಮಿಳರೇ ಸಾಟಿ. ಪಕ್ಷ ಬೇಧ ಮರೆತು ಸಂಸತ್ತಿನಲ್ಲಿ ಒಗ್ಗಟ್ಟು ಪ್ರದರ್ಶಿಸುತ್ತಾರೆ, ಕೇಂದ್ರ ಸರಕಾರದ ಮೇಲೆ ಒತ್ತಡ ಹೇರುತ್ತಾರೆ, ಪ್ರಬಲವಾಗಿ ಲಾಬಿ ಮಾಡುತ್ತಾರೆ. ತಮಿಳುನಾಡಿನ ಪಕ್ಷಗಳಿಗಿರುವ ಮತ್ತೊಂದು ಅನುಕೂಲತೆಯೆಂದರೆ, ‘ನೀವು ಈ ವಿಷಯ ಮಾತಾಡ್ಬೇಡಿ, ಬಾಯ್ಮುಚ್ಚಿ’ ಎಂದು ಅಲ್ಲಿನ ಶಾಸಕ – ಸಂಸದರಿಗೆ ಹೇಳಲು ದೆಹಲಿಯಲ್ಲಿ ಯಾವುದೇ ಹೈಕಮ್ಯಾಂಡ್ ಇಲ್ಲ. ಅವರ ಹೈಕಮ್ಯಾಂಡುಗಳೆಲ್ಲ ಚೆನ್ನೈನಲ್ಲೇ ಇವೆ. ಪ್ರಾದೇಶಿಕ ಪಕ್ಷವಿಲ್ಲದ ಕರ್ನಾಟಕ ಹೈಕಮ್ಯಾಂಡಿನ ಮರ್ಜಿಗೆ ಬಿದ್ದಿರುವುದು ನಾವು ಸೋತು ಹೋಗಿರುವುದಕ್ಕೆ ಕಾರಣವೆಂದರೆ ತಪ್ಪಲ್ಲ. ಇನ್ನು ನ್ಯಾಯಾಲಯಗಳಲ್ಲಿ, ಟ್ರಿಬ್ಯುನಲ್ ಗಳ ಮುಂದೆ ಕರ್ನಾಟಕದ ವಕೀಲರು ಯಾವತ್ತೂ ಸರಿಯಾಗಿ ವಾದಿಸುವುದೇ ಇಲ್ಲ ಎನ್ನುವ ಆರೋಪವೂ ಇದೆ. ಜಲದ ವಿಷಯದಲ್ಲಿ ನಾವು ಪದೇ ಪದೇ ಸೋಲುತ್ತಿರುವುದು ನೋಡಿದರೆ ವಕೀಲರ ಅದಕ್ಷತೆಯೂ ನಮ್ಮ ಸೋಲಿಗೆ ಕಾರಣ ಎನ್ನಿಸದೇ ಇರದು. ಮೊನ್ನಿನ ತೀರ್ಪಿನ ಸಂದರ್ಭದಲ್ಲೂ ಕರ್ನಾಟಕ ಹತ್ತು ಸಾವಿರ ಕ್ಯೂಸೆಕ್ಸ್ ನೀರು ಬಿಡುತ್ತೇವೆ ಎಂದು ಹೇಳಿಕೆ ನೀಡಿತು, ತಮಿಳುನಾಡು ಇಪ್ಪತ್ತು ಸಾವಿರ ಕ್ಯುಸೆಕ್ಸ್ ನೀರು ಕೇಳಿತು. ಚೌಕಾಶಿ ಮಾಡಿದ ನ್ಯಾಯಾಲಯ ಹದಿನೈದು ಸಾವಿರ ಕ್ಯುಸೆಕ್ಸ್ ನೀರು ಬಿಡಬೇಕೆಂದು ತೀರ್ಪು ನೀಡಿತು. ನ್ಯಾಯಾಧೀಕರಣದ ಅಂತಿಮ ತೀರ್ಪಿನ ಪ್ರಕಾರ ಇನ್ನೂ ಬಹಳಷ್ಟು ನೀರು ಬಿಡಬೇಕಿದ್ದ ಕರ್ನಾಟಕವು ಬರ ಬಿದ್ದ ಕಾರಣ ನೀರು ಬಿಟ್ಟಿರಲಿಲ್ಲ. ನೀರು ಕೊಡುವುದಕ್ಕೆ ಸಾಧ್ಯವೇ ಇಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಿಬಿಟ್ಟರೆ, ನ್ಯಾಯಾಲಯ ಅದನ್ನು ಅಮಾನವೀಯ ನಿರ್ಣಯ ಎಂದು ತೀರ್ಮಾನಿಸಿ ತಮಿಳುನಾಡಿನ ಬೇಡಿಕೆಯನ್ನೇ ಮನ್ನಿಸಿಬಿಡಬಹುದು ಎನ್ನುವ ಕಾರಣಕ್ಕೆ ಹತ್ತು ಸಾವಿರ ಕ್ಯುಸೆಕ್ಸ್ ನೀರು ಬಿಡುವ ಮಾತನಾಡಿತಾ? 

ಒಟ್ಟಿನಲ್ಲಿ ಇವೆಲ್ಲದರಿಂದಲೂ ಸ್ಪಷ್ಟವಾಗುವ ಅಂಶವೆಂದರೆ ಕಾವೇರಿ ಕರ್ನಾಟಕದಲ್ಲೇ ಹುಟ್ಟಿ, ತಮಿಳುನಾಡಿಗಿಂತ ಹೆಚ್ಚಾಗಿ ಕರ್ನಾಟಕದಲ್ಲೇ ಹರಿದರೂ ಕೂಡ ಕಾವೇರಿ ನದಿ ನೀರಿನ ಮೇಲೆ ಹೆಚ್ಚು ಹಕ್ಕು ಹೊಂದಿರುವುದು ತಮಿಳುನಾಡು. ಟ್ರಿಬ್ಯುನಲ್ಲಿನ ಕೊನೆಯ ತೀರ್ಪು ತಮಿಳುನಾಡಿನ ಪರವಾಗೇ ಬಂದಿದೆ, ನಾವದರಲ್ಲಿ ಸೋತುಹೋಗಿದ್ದೇವೆ ಎನ್ನುವುದನ್ನು ಒಪ್ಪಿಕೊಳ್ಳಲೇಬೇಕು. ಮಳೆಯಾದ ದಿನಗಳಲ್ಲಿ ಇವ್ಯಾವುದೂ ನೆನಪಾಗುವುದಿಲ್ಲವಾದರೂ ಬರ ಬಿದ್ದ ಸಮಯದಲ್ಲಿ ಮತ್ತೆ ಭಾವನಾತ್ಮಕವಾಗಿ ನಾವೆಷ್ಟೇ ಪ್ರತಿಭಟಿಸಿದರೂ ಕೊನೆಗೆ ನೀರು ಬಿಡಲೇಬೇಕು ಎನ್ನುವ ವಾಸ್ತವವನ್ನು ಅರ್ಥೈಸಿಕೊಂಡಾದ ಮೇಲೆ ಇದಕ್ಕೆ ಯಾವುದೇ ರೀತಿಯ ಪರಿಹಾರವೂ ಇಲ್ಲವೇ ಎನ್ನುವ ಪ್ರಶ್ನೆಗಳೇಳುತ್ತವೆ. ನನ್ನ ಪ್ರಕಾರ ಕಾವೇರಿ ಸಮಸ್ಯೆಗೆ ಮೂರು ರೀತಿಯ ಪರಿಹಾರವಿದೆ.

1. ಕರ್ನಾಟಕ ರಾಜ್ಯವು ಭಾರತದಿಂದ ಬೇರ್ಪಟ್ಟು ಪ್ರತ್ಯೇಕ ದೇಶವಾಗುವುದು

ತಮಿಳುನಾಡು ಕೇಂದ್ರದ ಮಟ್ಟದಲ್ಲಿ ಮಾಡುವ ಲಾಬಿ, ಅಲ್ಲಿನ ಪ್ರಾದೇಶಿಕ ಪಕ್ಷಗಳು ಕೇಂದ್ರದ ಮೇಲೆ ನಡೆಸುವ ಸವಾರಿ, ನಮ್ಮಲ್ಲಿ ಯಾವುದೇ ಪ್ರಾದೇಶಿಕ ಪಕ್ಷವಿಲ್ಲದಿರುವುದರಿಂದ ಭಾರತ ದೇಶದೊಳಗೆ ಕರ್ನಾಟಕ ಒಂದು ರಾಜ್ಯವಾಗಿ ಇರುವವರೆಗೂ ಈ ಸಮಸ್ಯೆ ಬಗೆಹರಿಯುವುದಿಲ್ಲ. ಕರ್ನಾಟಕ ಪ್ರತ್ಯೇಕ ದೇಶವಾಗಿಬಿಟ್ಟರೆ ಈಗಿರುವ ಯಾವ ಕಾನೂನೂ ಅನ್ವಯವಾಗುವುದಿಲ್ಲ, ಅಂತರರಾಷ್ಟ್ರೀಯ ಟ್ರಿಬ್ಯುನಲ್ ಗಳಲ್ಲಿ ವಾದ ವಿವಾದ ನಡೆಯಬಹುದು. ಕರ್ನಾಟಕ ದೇಶದ ಸೈನ್ಯ ಬಲವಾಗಿದ್ದರೆ ಆ ಟ್ರಿಬ್ಯುನಲ್ಲಿನ ತೀರ್ಪನ್ನು ಒಪ್ಪಬೇಕೆಂಬ ಕಟ್ಟಪ್ಪಣೆಯೂ ಇರುವುದಿಲ್ಲ. ಕಾವೇರಿಯ ನೀರು ಬರ್ತಾ ಬರ್ತಾ ಬೆಂಗಳೂರಿನ ಕುಡಿಯುವ ನೀರಾಗಷ್ಟೇ ಉಳಿದುಹೋಗುತ್ತಿದೆ. ಇದಕ್ಕೆ ಅನ್ಯರಾಜ್ಯಗಳ ವಲಸಿಗರ ಹೆಚ್ಚಳವೂ ಕಾರಣ. ಪ್ರತ್ಯೇಕ ದೇಶವಾಗಿಬಿಟ್ಟರೆ ಆ ಸಮಸ್ಯೆಗೂ ಪರಿಹಾರ ಸಿಗುತ್ತದೆ. 

2. ಅಣೆಕಟ್ಟೆಗಳನ್ನು ರೈತರ – ಜನರ ಸುಪರ್ದಿಗೆ ಬಿಟ್ಟುಬಿಡುವುದು

ರಾಜಕೀಯವೇ ಮುಖ್ಯವಾದ ರಾಜಕಾರಣಿಗಳು ಇದಕ್ಕೊಂದು ಪರಿಹಾರ ಕಂಡುಹಿಡಿಯುವುದಿಲ್ಲ, ನ್ಯಾಯಾಲಯಗಳು ಕೊಡುವ ಪರಿಹಾರ ನ್ಯಾಯಬದ್ಧವಾಗಿದೆಯೆಂದು ಎರಡೂ ಕಡೆಯವರಿಗೆ ಅನ್ನಿಸುವುದಿಲ್ಲ. ಸರಕಾರ ಮತ್ತು ನ್ಯಾಯಾಲಯದ ಮಟ್ಟದಲ್ಲಿ ಪರಿಹಾರವಾಗದ ಸಮಸ್ಯೆಯನ್ನು ಜನರೇ ಪರಿಹರಿಸಿಕೊಳ್ಳಲು ಸರಕಾರಗಳ ನಿಯಂತ್ರಣದಲ್ಲಿರುವ ಅಣೆಕಟ್ಟೆಗಳನ್ನು ರೈತರ – ಜನರ ಸುಪರ್ದಿಗೆ ಬಿಟ್ಟುಬಿಡಬೇಕು. ಎರಡೂ ರಾಜ್ಯಗಳ ರೈತರು – ಜನರು ಎರಡೂ ರಾಜ್ಯಗಳಲ್ಲಾಗಿರುವ ಮಳೆ, ಅಣೆಕಟ್ಟೆಯಲ್ಲಿರುವ ನೀರನ್ನು ಅಳೆದು ತೂಗಿ ಆಯಾ ವರುಷಕ್ಕೆ ನಿಯಮಗಳನ್ನು ರೂಪಿಸಿಕೊಳ್ಳುವುದು. ನದಿಪಾತ್ರದ ಜನರು ಈ ವರ್ಷ ಯಾವ ಯಾವ ಬೆಳೆಗಳನ್ನು ಬೆಳೆಯಬಹುದು, ಎಷ್ಟು ಬೆಳೆ ಬೆಳೆಯಬಹುದು ಎನ್ನುವ ಒಪ್ಪಂದವು ಪ್ರತಿ ವರುಷ ನವೀಕರಣವಾಗುತ್ತಲೇ ಇರಬೇಕು. ಇಲ್ಲಿನ ರೈತರ ಕಷ್ಟ ಅಲ್ಲಿನವರಿಗೆ, ಅಲ್ಲಿನ ರೈತರ ಕಷ್ಟ ಇಲ್ಲಿನವರಿಗೆ ಅರ್ಥವಾದರೆ ಅರ್ಧಕ್ಕರ್ಧ ಸಮಸ್ಯೆ ಪರಿಹಾರವಾಗಿಬಿಡುತ್ತದೆ. 

3. ತಮಿಳುನಾಡಿನ ಮಾದರಿಯನ್ನು ಅನುಸರಿಸುವುದು

ಮೇಲಿನೆರಡೂ ಪರಿಹಾರಗಳು ಎಷ್ಟು ಅವಾಸ್ತವಿಕ ಎನ್ನುವುದು ನಿಮ್ಮ ಅರಿವಿಗೂ ಬಂದಿರಬೇಕು. ಕರ್ನಾಟಕ ಭಾರತದಿಂದ ಬೇರ್ಪಟ್ಟು ಪ್ರತ್ಯೇಕ ದೇಶವಾಗುವುದಿಲ್ಲ, ಭಾವನಾತ್ಮಕವಾಗಿ ಉಪಯೋಗಕ್ಕೆ ಬರುವ ವಿಷಯದಲ್ಲಿ ತಟಸ್ಥರಾಗಿ ನೀವೇ ಪರಿಹರಿಸಿಕೊಳ್ಳಿ ಎಂದು ಯಾವ ಸರಕಾರವೂ –ಯಾವ ಪಕ್ಷವೂ ಈ ಸಂಗತಿಯನ್ನು ಜನರೇ ಪರಿಹರಿಸಿಕೊಳ್ಳುವುದಕ್ಕೆ ಬಿಡುವುದಿಲ್ಲ. ಮತ್ತಿದಕ್ಕಿರುವ ಪರಿಹಾರವೇನು? ತಮಿಳುನಾಡಿನ ಮಾದರಿಯೇ ಇದಕ್ಕೆ ಪರಿಹಾರ! ತಮಿಳುನಾಡು ನಡೆಸುವ ಲಾಬಿ, ಚಾಕಚಕ್ಯತೆಯಿಂದ ವಾದ ಮುಂದಿಡುವ ಅವರ ವಕೀಲರು, ನೆಲ-ಜಲ-ಭಾಷೆಯ ವಿಷಯಲ್ಲಿ ಅಲ್ಲಿನ ರಾಜಕಾರಣಿಗಳಲ್ಲಿರುವ ಒಗ್ಗಟ್ಟಿನ ಮಾದರಿಯನ್ನು ಕರ್ನಾಟಕವೀಗ ಅನುಸರಿಸಿದರೂ ಹೆಚ್ಚಿನ ಪ್ರಯೋಜನವಿಲ್ಲ. ಯಾಕೆಂದರೆ ಈಗಾಗಲೇ ಹೇಳಿರುವಂತೆ, ಕಾವೇರಿ ವಿಷಯದಲ್ಲಿ ಕರ್ನಾಟಕ ಸೋತು ಹೋಗಿ ಬಹಳ ವರುಷಗಳಾಗಿಬಿಟ್ಟಿದೆ. ಮತ್ಯಾವುದಿದು ನಾವು ಅನುಸರಿಸಬೇಕಿರುವ ತಮಿಳುನಾಡು ಮಾದರಿ?

ಗೂಗಲ್ ಮ್ಯಾಪ್ ತೆರೆಯಿರಿ. ಕಾವೇರಿ ಉಗಮವಾಗುವ ತಲಕಾವೇರಿಯಿಂದ ಕಾವೇರಿ ಸಮುದ್ರ ಸೇರುವವರೆಗೂ ಸ್ಕ್ರಾಲ್ ಮಾಡಿಕೊಂಡು ಸಾಗಿ. ನದಿಯ ಅಕ್ಕಪಕ್ಕದಲ್ಲಿ ಹಲವು ನೀಲಿ ಪ್ರದೇಶಗಳು ಕಾಣುತ್ತವೆ. ಕರ್ನಾಟಕದಲ್ಲಿ ವಿರಳವಾಗಿ ಕಂಡುಬರುವ ಈ ನೀಲಿ ಪ್ರದೇಶಗಳು, ಕಾವೇರಿ ನದಿ ತಮಿಳುನಾಡಿಗೆ ಪ್ರವೇಶಿಸಿದ ನಂತರ ಹೆಚ್ಚಾಗುತ್ತದೆ. ಮೆಟ್ಟೂರು ದಾಟಿ ಸಮುದ್ರದ ಬಳಿ ಸಾಗುತ್ತಿದ್ದಂತೆ ಮತ್ತಷ್ಟು ಮಗದಷ್ಟು ಹೆಚ್ಚಾಗುತ್ತದೆ. ಏನಿದು ನೀಲಿ ಪ್ರದೇಶಗಳು? ಚಿಕ್ಕ ಚಿಕ್ಕ ಕೆರಗಳನ್ನು ಸೂಚಿಸುತ್ತವೆ ಈ ನೀಲಿ ಪ್ರದೇಶಗಳು. ಕಾವೇರಿ ನದಿಯ ವಿಷಯದಲ್ಲಿ ಕರ್ನಾಟಕಕ್ಕೆ ಏನಾದರೂ ಪರಿಹಾರ ಅಂತ ಇದ್ದರೆ ಅದು ಕೆರೆಗಳಲ್ಲಿದೆ. ನಮ್ಮ ನೀರಾವರಿ ತಜ್ಞರು, ಜಲ ತಜ್ಞರು, ನೀರಾವರಿ ಇಲಾಖೆಯ ಅಧಿಕಾರಿಗಳು ನೀರಿನ ವಿಷಯದಲ್ಲಿ ಮುಂದಾಗಿ ಯೋಚಿಸದೆ ಹಲವು ಶತಮಾನಗಳ ಹಿಂದಾಗಿ ಯೋಚಿಸಿದರಷ್ಟೇ ನೀರಿನ ಸಮಸ್ಯೆಗೊಂದು ಪರಿಹಾರ ಕಂಡುಕೊಳ್ಳಬಹುದು. ಕರ್ನಾಟಕದಲ್ಲಿ ಕಾವೇರಿ ನದಿ ಹರಿಯುವ ಊರುಗಳಲ್ಲಿನ ಕೆರೆಗಳು ಮಾಯವಾಗಿಬಿಟ್ಟಿವೆ, ನಾಲೆ ನೀರು ಕೊಂಡೊಯ್ಯುವ ಪ್ರದೇಶಗಳಲ್ಲಿನ ಬಹುತೇಕ ಕೆರೆಗಳಲ್ಲಿ ಒಂದೋ ಹೂಳು ತುಂಬಿಕೊಂಡಿದೆ, ಇಲ್ಲಾ ಒತ್ತುವರಿಯಾಗಿಬಿಟ್ಟಿದೆ. ಮಂಡ್ಯ ನಗರದಲ್ಲಿರುವ ನಮ್ಮ ಮನೆಯಲ್ಲಿರುವ ಬಾವಿಯಲ್ಲಿ ನೀರು ಬತ್ತಿದ್ದೇ ಇಲ್ಲ. ಆ ಬಾವಿಯೇನೂ ಆಳವಾದದ್ದಲ್ಲ, ಕೇವಲ ಹದಿಮೂರು ಅಡಿಯ ಬಾವಿಯದು. ಮಂಡ್ಯದ ಬಸ್ ನಿಲ್ದಾಣದಿಂದ ಎರಡು ಕಿಲೋಮೀಟರುಗಳ ಅಂತರದಲ್ಲಿದ್ದ ಚಿಕ್ಕಮಂಡ್ಯ ಕೆರೆಯನ್ನು ಮುಚ್ಚಿ ಹಾಕಿ ಅಲ್ಲಿ ನಿವೇಶನಗಳನ್ನು ಮಾಡಿಬಿಡೋಣ ಎಂಬ ಭಯಂಕರ ಯೋಚನೆ ಯಾರಿಗೆ ಬಂತೋ ಏನೋ ಕೆರೆ ಮುಚ್ಚಿ ಹೋಯಿತು. ನಮ್ಮ ಮನೆಯ, ಮಂಡ್ಯದ ಬಹುತೇಕ ಮನೆಗಳ ಕಡಿಮೆ ಆಳದ ಬಾವಿಗಳೂ ನೀರಿಲ್ಲದಂತಾಗಿಬಿಟ್ಟವು. ಈಗ ಮಂಡ್ಯಕ್ಕೂ ಪೈಪುಗಳ ಮೂಲಕ ಬರುವ ಕಾವೇರಿ ನೀರೇ ಬೇಕು, ಇಲ್ಲಾ ಅಂತರ್ಜಲವನ್ನು ಮೇಲೆತ್ತುವ ಬೋರ್ ವೆಲ್ಲುಗಳೇ ಬೇಕು. ಬೆಂಗಳೂರಿನಲ್ಲಿನ ಕೆರೆ ಒತ್ತುವರಿಯೂ ಇಲ್ಲಿನ ನೀರಿನ ಸಮಸ್ಯೆಗೆ ಕಾರಣವೆನ್ನುವುದು ತಿಳಿದೇ ಇದೆಯಲ್ಲ. ಇರೋ ಕೆರೆಗಳ ಹೂಳೆತ್ತುವುದಕ್ಕೆ ಆಸಕ್ತಿ ತೋರಿಸದ ಸರಕಾರ, ಊರಲ್ಲಿರುವ – ಊರಲ್ಲಿದ್ದ ಕೆರೆಗಳನ್ನು ಉಳಿಸಿಕೊಳ್ಳುವುದಕ್ಕೆ ಆಸಕ್ತಿ ತೋರಿಸದ ಸ್ಥಳೀಯರ ಸಂಖೈ ಹೆಚ್ಚಿರುವಾಗ ತಮಿಳುನಾಡಿನ ಮಾದರಿಯನ್ನು ಅನುಸರಿಸುತ್ತೀವಾ? ಹಳೆಯ ಕೆರೆಗಳನ್ನೇ ಉಳಿಸಿಕೊಳ್ಳದವರು ಹೊಸ ಕೆರೆಗಳನ್ನು ನಿರ್ಮಿಸಿ ಶಾಶ್ವತ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡುತ್ತೀವಾ? ಕೆರೆಗಳ ಬಗ್ಗೆ ಯೋಚಿಸದ ಸರಕಾರ ಮೇಕೆದಾಟುವಿನಲ್ಲಿ ಮತ್ತೊಂದು ಅಣೆಕಟ್ಟೆ ಕಟ್ಟುವ ಮಾತನ್ನಾಡುತ್ತದೆ. ಮತ್ತೊಂದು ಅಣೆಕಟ್ಟೆಯೆಂದರೆ ತಮಿಳುನಾಡಿನ ಜೊತೆಗೆ ಮತ್ತೊಂದು ಸುತ್ತಿನ ವಾದ ವಿವಾದಕ್ಕೆ ದಾರಿಯೆಂದೇ ಅರ್ಥವಲ್ಲವೇ? 

ಕೆರೆಗಳನ್ನು ನಿರ್ಮಿಸುವುದರಿಂದ ನೀರಿನ ಸಮಸ್ಯೆ ಅರ್ಧಕ್ಕರ್ಧ ಬಗೆಹರಿಯುತ್ತದೆ. ಆದರದಲ್ಲಿ ಅಣೆಕಟ್ಟೆಯ ನಿರ್ಮಾಣಕ್ಕೆ ಖರ್ಚಾಗುವಷ್ಟು ದುಡ್ಡಿಲ್ಲ, ಭಾವನಾತ್ಮಕವಾಗಿಯೂ ಕೆರೆಯ ನೀರು ನಮ್ಮನ್ನು ತಟ್ಟುವುದಿಲ್ಲ. ಮುಂದಿನ ವರುಷ ಮಳೆ ಚೆನ್ನಾಗಿ ಆದಾಗ ಕಾವೇರಿ ಸಮಸ್ಯೆಯೂ ಮರೆತುಹೋಗಿರುತ್ತದೆ, ತಮಿಳುನಾಡೂ ಮರೆತುಹೋಗಿರುತ್ತದೆ – ಐದಾರು ವರುಷಗಳ ನಂತರ ಮತ್ತೆ ಬರ ಬಿದ್ದಾಗ ಮತ್ತಿದೇ ಘಟನೆಗಳು ಪುನರಾವರ್ತನೆಯಾಗುತ್ತವೆ……

ಕಾವೇರಿಯ ವಿಷಯದಲ್ಲಿ ನಾವು ಸೋತು ಬಹಳ ಕಾಲವಾಗಿದೆ…… ಹೊಸ ಕೆರೆಗಳ ನಿರ್ಮಾಣ ಮತ್ತು ಇರುವ ಕೆರೆಗಳ ನವೀಕರಣದಿಂದಷ್ಟೇ ನಮ್ಮ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಸಾಧ್ಯ…….

(ಕಾವೇರಿ ನದಿ ವಿವಾದದ ಬಗ್ಗೆ ಪೂರ್ಣವಾಗಿ ತಿಳಿದುಕೊಳ್ಳಲು ವಸಂತಬಂದಾ ಬ್ಲಾಗಿನ ಈ ಲೇಖನಗಳನ್ನೂ ಓದಿ: ಭಾಗ 1, ಭಾಗ 2, ಭಾಗ 3, ಭಾಗ 4)