ಜುಲೈ 22, 2016

ಮೇಕಿಂಗ್ ಹಿಸ್ಟರಿ: ಉತ್ಪಾದನೆಯ ನಾಶ

ಸಾಕೇತ್ ರಾಜನ್
ಸಾಕೇತ್ ರಾಜನ್ 
ಕನ್ನಡಕ್ಕೆ: ಡಾ. ಅಶೋಕ್. ಕೆ. ಆರ್
22/07/2016
ನಾವೀಗಾಗಲೇ ನೋಡಿರುವಂತೆ, ಹತ್ತೊಂಭತ್ತನೇ ಶತಮಾನದ ಮೊದಲರ್ಧದಲ್ಲಿ ಉತ್ಪಾದನೆಯನ್ನು ದೊಡ್ಡ ಪ್ರಮಾಣದಲ್ಲಿ ನಾಶ ಮಾಡಲಾಯಿತು. ಇಡೀ ನೀರಾವರಿ ವ್ಯವಸ್ಥೆ, ಕೃಷಿ ಉತ್ಪನ್ನವನ್ನು ಸಂಸ್ಕರಿಸಲಿದ್ದ ನವೀನ ಉಪಕರಣಗಳು, ಶಸ್ತ್ರಾಸ್ತ್ರ ತಯಾರಿಸಲಿದ್ದ ಆಧುನಿಕ ಯಂತ್ರಗಳು, ನೂರಾರು ನೇಕಾರಿಕೆಗಳು, ಹಲವಾರು ಕುಲುಮೆಗಳು, ಅಸಂಖ್ಯಾತ ಭಟ್ಟಿಗಳು, ಅಸಂಖ್ಯಾತ ಎಣ್ಣೆ ಉತ್ಪಾದನಾ ಕೇಂದ್ರಗಳು – ಶತಮಾನಗಳಿಂದ ಜನಸಮೂಹದ ಶ್ರಮದಿಂದ ರೂಪಿಸಲ್ಪಟ್ಟ ವ್ಯವಸ್ಥೆಯನ್ನು ವಸಾಹತು ಚಂಡಮಾರುತ ಸೀಳಿ ಹಾಕಿತು. ಕನ್ನಡ ದೇಶದ ಸಂಪತ್ತಾಗಿದ್ದ ಈ ಉತ್ಪಾದನಾ ಮೂಲಗಳು ನಾಶವಾದವು. ಕಾರ್ಮಿಕರ, ಕಸುಬುದಾರರ, ರೂಪುಗೊಳ್ಳುತ್ತಿದ್ದ ಬಂಡವಾಳಶಾಯಿಗಳು ಮತ್ತು ವರ್ತಕರ ಕಾರ್ಯಕ್ಷೇತ್ರ, ಕಾರ್ಖಾನೆ ಮತ್ತು ವ್ಯಾಪಾರಸ್ಥಳಗಳೆಲ್ಲವೂ ಲೂಟಿಯಾದವು, ಗುಜರಿ ಸೇರಿದವು. ರೈತರ ಭೂಮಿ ಬಡ್ಡಿವ್ಯಾಪಾರಸ್ಥರ ಕೈವಶವಾಯಿತು ಮತ್ತವರು ಹೊಸ ಮಾಲೀಕರಾದರು. ಈ ಕಾಲಘಟ್ಟದಲ್ಲಿ ಉತ್ಪಾದನೆ ಕುಸಿತ ಕಂಡಿತು. ಸಾಮಾಜಿಕ ಸಂಪತ್ತಿನ ಈ ವ್ಯಾಪಕ ನಾಶ, ವಸಾಹತುಶಾಹಿ ಉದ್ಘಾಟಿಸಿದ ಬಿಕ್ಕಟ್ಟಿಗೆ ಪ್ರಮುಖ ಕಾರಣವಾಗಿತ್ತು. ಕಾರ್ಲ್ ಮಾರ್ಕ್ಸ್ ಈ ವಿನಾಶ ಉಂಟುಮಾಡುವ ಪರಿಣಾಮಗಳನ್ನು ಗ್ರಹಿಸಿದ್ದ. ತನ್ನ ಕಣ್ಣಮುಂದೆ ತೆರೆದುಕೊಂಡ ಅಪಾರ ಹಿಂಸೆಗೆ ಸಾಕ್ಷಿಯಾಗಿದ್ದ ಕಾರ್ಲ್ ಮಾರ್ಕ್ಸ್ ಬರೆಯುತತಾರೆ: “ಇಂಗ್ಲೆಂಡ್ ಭಾರತ ಸಮಾಜದ ಚೌಕಟ್ಟನ್ನು ಸಂಪೂರ್ಣವಾಗಿ ಮುರಿದು ಹಾಕಿದೆ. ಪುನರ್ ನಿರ್ಮಿಸುವ ಯಾವುದೇ ಚಿನ್ಹೆಯೂ ಸದ್ಯಕ್ಕೆ ಕಾಣಿಸುತ್ತಿಲ್ಲ. ಮುಂಚಿನ ದಿನಗಳ ಸರ್ವನಾಶ ಮತ್ತು ಹೊಸತೇನೂ ಸೃಷ್ಟಿಯಾಗದ ಕಾರಣ, ತನ್ನಳೆಯ ಪರಂಪರೆಯನ್ನು ಕಳೆದುಕೊಂಡ ಮತ್ತು ತನ್ನಡೀ ಇತಿಹಾಸವನ್ನು ಕಳೆದುಕೊಂಡ ಬ್ರಿಟನ್ನಿನ ಆಳ್ವಿಕೆಯಲ್ಲಿರುವ ಹಿಂದೂಸ್ತಾನದಲ್ಲಿ ಪ್ರಸ್ತುತ ದುಃಖದ ಜೊತೆಗೆ ವ್ಯಾಕುಲತೆಯೂ ಸೇರಿಕೊಂಡಿದೆ. 

ಬ್ರಿಟೀಷರು ಹಿಂದೂಸ್ಥಾನದ ಮೇಲೆ ಹೇರಿರುವ ಈ ದುಃಖಾವಸ್ಥೆ, ವಿಭಿನ್ನವಾಗಿದೆ ಮತ್ತು ಇದುವರೆಗೆ ಹಿಂದೂಸ್ಥಾನ ಅನುಭವಿಸಿದ ಎಲ್ಲಾ ದುಃಖಕ್ಕಿಂತಲೂ ಭೀಕರವಾಗಿದೆ ಎನ್ನುವುದರ ಬಗ್ಗೆ ಯಾವುದೇ ಅನುಮಾನವಿಲ್ಲ”. (248) 

ಈ ವಿನಾಶದ ಒಂದು ಪ್ರಮುಖ ಪರಿಣಾಮವೆಂದರೆ ಉತ್ಪಾದನೆಗೊಂಡ ವಸ್ತುಗಳ ಬೆಲೆ ಕುಸಿತ ಕಂಡಿದ್ದು, ಇದು ಉತ್ಪಾನೆಯಲ್ಲಿದ್ದ ಎಲ್ಲಾ ವರ್ಗದವರ ಮೇಲೂ ಗಂಭೀರ ಪರಿಣಾಮ ಉಂಟುಮಾಡಿತು ಮತ್ತು ಅಗತ್ಯವಸ್ತುಗಳ ಉತ್ಪಾದನೆಯ ಹೋರಾಟಕ್ಕೆ ತಡೆ ಹಾಕಿತು. ಶಾಮ ರಾವ್ ಈ ಬಿಕ್ಕಟ್ಟಿನ ಒಂದು ವಾಸ್ತವವನ್ನು ವಿವರಿಸುತ್ತಾರೆ. ಅವರು ಬರೆಯುತ್ತಾರೆ: “ಕೆಲವು ಆರ್ಥಿಕ ವಿಚಾರಗಳು ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸಿದ್ದು ಕೂಡ ಈ ಸಮಯದಲ್ಲಿ ಮುಜುಗರ ಮೂಡಿಸಲು ಕಾರಣವಾಯಿತು. ಹೈದರ್ ಮತ್ತು ಟಿಪ್ಪುವಿನ ಕಾಲದಲ್ಲಿ ದೊಡ್ಡ ಮಟ್ಟದ ಸೈನ್ಯವನ್ನು ನಿರ್ವಹಿಸಲಾಗುತ್ತಿತ್ತು, ಇವರ ಸಲುವಾಗಿ ಹೆಚ್ಚಿನ ಪ್ರಮಾಣದ ಧಾನ್ಯ ಕಾಳುಗಳು ಮತ್ತು ಇತರೆ ವಸ್ತುಗಳಿಗೆ ಬೇಡಿಕೆಯಿರುತ್ತಿತ್ತು. ದೇಶದಲ್ಲಲ್ಲಿ ಶಾಂತಿಯ ವಾತಾವರಣ ಇಲ್ಲದೇ ಹೋದರೂ ನಿರುದ್ಯೋಗದ ಕುರಿತು ದೂರುಗಳಿರಲಿಲ್ಲ, ಹಣ ಖರ್ಚಾಗುತ್ತಿತ್ತು, ಎಲ್ಲ ವರ್ಗದ ಜನರಿಗೆ ಅನುಕೂಲಕರವಾಗುತ್ತಿತ್ತು. ಪೂರ್ಣಯ್ಯರ ದಿನಗಳಲ್ಲೂ ಕೂಡ ದೊಡ್ಡ ಬ್ರಿಟೀಷ್ ಸೈನ್ಯವಿತ್ತು, ರಾಜ್ಯದ ವಿವಿಧ ಭಾಗಗಳಲ್ಲಿ ಚಿಕ್ಕ ಚಿಕ್ಕ ತುಕಡಿಗಳಾಗಿ ಕಾರ್ಯನಿರ್ವಹಿಸುತ್ತಿತ್ತು, ಇದೇ ರೀತಿ ಹಂಚಿಹೋಗಿದ್ದ ದೊಡ್ಡ ಸಂಖೈಯ ಮೈಸೂರು ಸೈನ್ಯದ ಕಾರಣದಿಂದ, ಕೃಷಿಕರು, ಉತ್ಪಾದಕರು, ಕಲಾವಿದರು, ವರ್ತಕರು ಮತ್ತು ಇತರೆ ವರ್ಗದವರಿಗೆ ತಮ್ಮ ಉತ್ಪನ್ನಗಳಿಗೆ ಮಾರುಕಟ್ಟೆ ಲಭ್ಯವಿತ್ತು. ಆದರೆ 1810ರಷ್ಟರಲ್ಲಿ, ಬ್ರಿಟೀಷ್ ಸೈನ್ಯವಿದ್ದ ಪ್ರದೇಶಗಳ ಸಂಖೈ ಗಣನೀಯವಾಗಿ ಕಡಿಮೆಯಾಯಿತು ಮತ್ತು ಬ್ರಿಟೀಷ್ ಸೈನಿಕರ ಸಂಖೈಯೂ ಕಡಿಮೆಯಾಯಿತು. ತತ್ಪರಿಣಾಮವಾಗಿ, ಉತ್ಪನ್ನಗಳಿಗಿದ್ದ ಬೇಡಿಕೆಯೂ ಕಡಿಮೆಯಾಯಿತು, ವೆಚ್ಚವಾಗುವ ಹಣದಲ್ಲೂ ಕುಸಿತವಾಯಿತು. ಜೊತೆಜೊತೆಗೆ, ಉತ್ಪನ್ನಗಳಿಗಿದ್ದ ಬೇಡಿಕೆ ಕಡಿಮೆಯಾದಾಗ ಕೃಷಿಯಲ್ಲಿ ಹೆಚ್ಚಳವಾಯಿತು, ಕೃಷಿ ಉತ್ಪನ್ನಗಳು ಮಾರುಕಟ್ಟೆಗೆ ಹೆಚ್ಚೆಚ್ಚು ಲಗ್ಗೆಯಿಟ್ಟಂತೆ ಅವುಗಳ ಬೆಲೆಯಲ್ಲೂ ಇಳಿತವಾಯಿತು. ವಾರ್ಷಿಕ ಸಬ್ಸಿಡಿಯನ್ನು ಮಾಸಿಕ ಕಂತುಗಳಲ್ಲಿ ಕಟ್ಟಬೇಕಿದ್ದದ್ದು ಕೂಡ ಈ ಬೆಲೆ ಕುಸಿತಕ್ಕೆ ಕಾರಣ…. 

ಮೈಸೂರು ಸರಕಾರ ಕಂಪನಿಯೊಂದಿಗೆ ಮಾಡಿಕೊಂಡಿದ್ದ ಒಪ್ಪಂದದ ಪ್ರಕಾರವೇ ನಿಯಮಿತವಾಗಿ ದುಡ್ಡು ಕಟ್ಟಲು ಯೋಗ್ಯವಾಗಿದೆಯಾ ಎಂದು ಗಮನಿಸುವುದು ಬ್ರಿಟೀಷ್ ರೆಸಿಡೆಂಟರಿಗಿದ್ದ ಆತಂಕವಾಗಿತ್ತು. ವ್ಯಾಪಾರದ ಇಳಿಮುಖದಿಂದಾಗಿ ಕಂದಾಯದ ಮೂಲವಾದ ಸೇಯರ್, ಅಬಕಾರಿ ಮತ್ತಿತರೆ ಆದಾಯ ಮೂಲಗಳಲ್ಲೂ ಕುಸಿತವಾಯಿತು ಮತ್ತು ಉಳಿದ ಏಕೈಕ ಮೂಲವೆಂದರೆ ಅದು ಭೂಮಿ….”(249) 

ಬೆಲೆ ಕುಸಿತದ ಕಾರಣದಿಂದಾಗಿ ಬಾಕಿಯಾದ ಮೊತ್ತವನ್ನು ತುಂಬುವ ಸಲುವಾಗಿ ಶರಾತ್ ವ್ಯವಸ್ಥೆ ಹೊರಹೊಮ್ಮಿತು ಎಂದು ಶಾಮ ರಾವ್ ಅಭಿಪ್ರಾಯ ಪಡುತ್ತಾರೆ. 

ಉತ್ಪಾದನೆಯ ಮೂಲಗಳಿಗಾದ ಹಾನಿ ಮತ್ತದರ ಜೊತೆಜೊತೆಗೆ ಕುಸಿದ ಬೆಲೆಗಳು ಉತ್ಪಾದನಾ ವರ್ಗವನ್ನು ಹೆಚ್ಚುಕಡಿಮೆ ಇಲ್ಲವಾಗಿಸಿಬಿಟ್ಟಿತ್ತು. ಸಾಲ ಮಾಡುವುದು, ವಸಾಹತು ಪೂರ್ವ ದಿನಗಳಲ್ಲೂ ಇದ್ದ ಸಂಗತಿಯೇ ಆಗಿತ್ತು; ಆದರೆ ಬಡತನ ಮತ್ತು ಉತ್ಪಾದನೆಯಿಂದ ದೂರ ಉಳಿಯುವಿಕೆಯ ಕಾರಣದಿಂದ ಈಗದ ಪೈಶಾಚಿಕ ರೂಪ ಪಡೆದುಕೊಂಡಿತ್ತು, ದಿವಾಳಿಯಾಗುವುದು ದ್ವಿಗುಣಗೊಂಡುಬಿಟ್ಟಿತ್ತು. ನಗರ ಮತ್ತು ಹಳ್ಳಿಯ ದೊಡ್ಡ ಜನಸಮೂಹ ಮೊದಲ ಬಾರಿಗೆ ಬಡ್ಡಿವ್ಯಾಪಾರಿಗಳ ಮತ್ತು ಕರ್ನಾಟಕದ ಮಾರುಕಟ್ಟೆಗೆ ಲಗ್ಗೆ ಇಟ್ಟ ಮಾರವಾಡಿ, ಸಿಂಧಿಯಾ ಮತ್ತು ಬನಿಯಾಗಳ ಕಾಲಿಗೆ ಸಿಕ್ಕ ಚೆಂಡಿನಂತಾದರು. ಅಮಿನಾ ಘೋಷ್ ಹೇಳುವಂತೆ “ಬ್ರಿಟೀಷರು ಹೇರಿದ ಹೊಸ ಪರಿಸ್ಥಿತಿಯಲ್ಲಿ…..ಬಡ್ಡಿವ್ಯಾಪಾರಿಗಳ ಬೆಳವಣಿಗೆ ಗಮನಾರ್ಹವಾಗಿತ್ತು”. (250) 

ಈ ಪರವಾಲಂಬಿ ಬಂಡವಾಳಶಾಹಿಗಳನ್ನು ಮೈಸೂರಿನ ಕಮಿಷನರ್ ಆಗುತ್ತಿದ್ದಂತೆ ಮಾರ್ಕ್ ಕಬ್ಬನ್ ಪ್ರೋತ್ಸಾಹ ನೀಡಿದರು, ಈ ಬೇಟೆಗಾರ ಸಮಾಜಕ್ಕೆ ರಾಜ್ಯವೇ ಬೆನ್ನೆಲುಬಾಗುವಂತೆ ನೋಡಿಕೊಂಡರು. ಫಣಿ ಮತ್ತಿತರರು ಕಬ್ಬನ್ ಪರಿಚಯಿಸಿದ ಈ ವಿಧಾನವನ್ನು ಮತ್ತು ತೆಗೆದುಕೊಂಡ ದುರಾಡಳಿತದ ಕ್ರಮಗಳನ್ನು ವಿವರಿಸಿದರು. 

“…..ಸಾಲ ಮಾಡುವುದು ಮತ್ತು ಸಾಲಗಾರರೊಂದಿಗೆ ನಡೆದುಕೊಳ್ಳುವ ರೀತಿಯಲ್ಲಿ ಅಪಾರ ಬದಲಾವಣೆಗಳಾಯಿತು… 

ಸರಕಾರದ ಹೊಸ ಕಾನೂನು ಹೇಳುತ್ತದೆ: ‘ಪೇಶ್ಕಾರ್ ಬಂದ ಅರ್ಜಿಯ ಆಧಾರದ ಮೇಲೆ ಒಂದು ಪುಸ್ತಕದಲ್ಲಿ ಸಾಲ ವಸೂಲಾತಿಗಾಗಿ ಅರ್ಜಿ ಹಾಕಿದವನ ಹೆಸರು ಬರೆದುಕೊಂಡು, ಸಾಲಗಾರನ ಹೆಸರು, ಸಾಲದ ಮೊತ್ತ, ಯಾವಾಗ ಮತ್ತು ಯಾಕಾಗಿ ಸಾಲ ನೀಡಲಾಗಿತ್ತು ಎನ್ನುವುದನ್ನು ನಮೂದಿಸಿಕೊಂಡ ನಂತರ ವಿಚಾರಣೆಗೆ ಒಂದು ದಿನವನ್ನು ಗೊತ್ತು ಮಾಡಬೇಕು. ವಿಚಾರಣೆಯನ್ನು ದೂರು ಸ್ವೀಕರಿಸಿದ ಎಂಟನೇ ದಿನಕ್ಕೆ ನಿಗದಿಪಡಿಸಲಾಗುತ್ತಿತ್ತು ಮತ್ತು ತೀರ್ಪು ಹೇಳಿದ ನಂತರ ತೀರ್ಪು ಜಾರಿಗೆ ಬರಲು 35 ದಿನಗಳ ಕಾಲಾವಕಾಶವಿರುತ್ತಿತ್ತು’. ಸಾಲ ಮರುಪಾವತಿಸಲಾಗದವರನ್ನು ಜೈಲಿಗೆ ನೂಕುವ ಕಾನೂನನ್ನು ಪ್ರಥಮ ಬಾರಿಗೆ ಪರಿಚಯಿಸಲಾಯಿತು ಮತ್ತು ಮುಂದಿನ ಹೆಜ್ಜೆಯಂತೆ, ‘ಸಾಲಗಾರ ಒಂದಾದರೂ ಕಂತನ್ನು ಕಟ್ಟಲು ವಿಫಲನಾದರೆ, ಸಾಲ ನೀಡಿದವನ ಅರ್ಜಿಯ ಆಧಾರದ ಮೇಲೆ ಸಾಲಗಾರನ ಆಸ್ತಿಯನ್ನು ಜಫ್ತಿ ಮಾಡಿ ನ್ಯಾಯಾಲಯದ ಮೂಲಕ ಹರಾಜು ಹಾಕಲಾಗುವುದು’. ನಿರೀಕ್ಷೆಯಂತೆ ಇದಕ್ಕೆ ಹೆಚ್ಚಿನ ವಿರೋಧವಿತ್ತು…..ಪ್ರತಿಭಟನೆಯ ನಡುವೆಯೂ ಸಾಲ ಮಾಡಿದ್ದಕ್ಕಾಗಿ ಜೈಲಿಗೆ ಹಾಕುವ ವ್ಯವಸ್ಥೆಯನ್ನು ಬ್ರಿಟೀಷರು ಪರಿಚಯಿಸಿದರು”. (251) 

ಈ ರೀತಿಯಾಗಿ ಕರ್ನಾಟಕದ ನ್ಯಾಯ ಮತ್ತು ಕಾನೂನು ವ್ಯವಸ್ಥೆ ಜಾರಿಗೆ ಬಂತು. ಕಾನೂನಿನ ರಚನೆ ನಡೆದಿದ್ದು ತೀರ್ವವಾದ ಬಿಕ್ಕಟ್ಟಿನ ನಡುವೆ, ಪ್ರತಿಭಟನೆಯ ನಡುವೆ ಮತ್ತು ಬಡವರು, ಸಾಲಗಾರ ಸಮೂಹದ ಆಸಕ್ತಿಗಳಿಗೆ ವಿರುದ್ಧವಾಗಿ. ರಕ್ತ ಹೀರುವ ಜೊತೆಗಾರರಿಗೆ ಅನುಕೂಲಕರವಾಗುವಂತಹ ವ್ಯವಸ್ಥೆಯನ್ನು ವಸಾಹತುಶಾಹಿ ಸ್ಥಾಪಿಸಿತು. 

ಕಾನೂನು ಭವನದೊಂದಿಗೆ ಗುರಿಯೂ ಬಂತು. ಕರಿ ಕೋಟು ಧರಿಸಿ ನ್ಯಾಯ ನೀಡಲು ಕುಳಿತ ವ್ಯಕ್ತಿ, ಜನಸಮೂಹದ ದೃಷ್ಟಿಯಿಂದ ತಮ್ಮನ್ನು ಸೆರೆಮನೆಗೆ ದೂಡುವ ಜೈಲರ್ ಮಾತ್ರ.

ಮುಂದಿನ ವಾರ
ಪರಾವಲಂಬಿ ಖರ್ಚುಗಳು, ಅಸ್ತವ್ಯಸ್ತಗೊಂಡ ಆರ್ಥಿಕತೆ

ಜುಲೈ 17, 2016

ಉತ್ತರ ಪ್ರದೇಶ: ಬ್ರಾಹ್ಮಣ ಸಮುದಾಯದ ಓಲೈಕೆಯಲ್ಲಿ ಮುಳುಗಿರುವ ರಾಜಕೀಯ ಪಕ್ಷಗಳ ಜಾತಿ ರಾಜಕಾರಣದ ಪರಾಕಾಷ್ಠೆ

ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
17/07/2016
ಮುಂದಿನ ವರ್ಷ ನಡೆಯಲಿರುವ ಉತ್ತರಪ್ರದೇಶದ ವಿಧಾನಸಭೆ ಚುನಾವಣೆಗಳಿಗೆ ಪೂರ್ವಬಾವಿಯಾಗಿ ಕಾಂಗ್ರೆಸ್ಸಿನ ಹಿರಿಯ ನಾಯಕಿಯು, ಕೇಂದ್ರದ ಮಾಜಿ ಸಚಿವೆಯೂ, ದೆಹಲಿ ರಾಜ್ಯದ ಮೂರು ಅವಧಿಯ ಮಾಜಿ ಮುಖ್ಯಮಂತ್ರಿಯೂ ಆದ ಶ್ರೀಮತಿ ಶೀಲಾದೀಕ್ಷಿತ್ ಅವರನ್ನು ಕಾಂಗ್ರೆಸ್ ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿಯೆಂದು ಘೋಷಿಸುವುದರ ಮೂಲಕ ಅದರ ಆಂತರಿಕ ತೊಳಲಾಟಕ್ಕೊಂದು ಅಂತ್ಯ ಹಾಡಿದೆ. ಇದು ಚುನಾವಣಾ ತಂತ್ರಗಾರಿಕೆಯ ನಿಪುಣನೆಂದು ಹೆಸರು ಮಾಡಿದ ಪ್ರಶಾಂತ್ ಕಿಶೋರ್ ಅವರ ಸಲಹೆಯೆಂದು ಹೇಳಲಾಗುತ್ತಿದೆ. ದೆಹಲಿಯ ಮುಖ್ಯಮಂತ್ರಿಯಾಗಿ ದೀಕ್ಷಿತ್ ಅವರು ಮಾಡಿದ ಅಭಿವೃದ್ದಿ ಪರ ಕೆಲಸಗಳನ್ನು ಚುನಾವಣೆಯ ಪ್ರಚಾರಕ್ಕೆ ಬಳಸಿಕೊಳ್ಳುವ ತಂತ್ರ ಇದೆಂದು ಹೇಳಲಾಗುತ್ತಿದೆಯಾದರು, ನಿಜವಾದ ವಿಷಯವೇ ಬೇರೆ ಇದೆ. ಎಂತ್ತರ ದಶಕದ ಉತ್ತರಾರ್ದದ ನಂತರ ಕಾಂಗ್ರೆಸ್ಸಿನಿಂದ ದೂರ ಹೋಗಿದ್ದ ಬ್ರಾಹ್ಮಣ ಸಮುದಾಯವನ್ನು ತನ್ನತ್ತ ಸೆಳೆದುಕೊಳ್ಳುವ ಉದ್ದೇಶವೇ ಈ ನಿರ್ದಾರದ ಹಿಂದಿನ ಕಾರಣವೆಂದು ಪಕ್ಷದ ಕೆಲವು ಮೂಲಗಳು ತಿಳಿಸಿವೆ. ಇದು ಬಹುತೇಕ ಸತ್ಯಕ್ಕೆ ಹತ್ತಿರವಾದ ವಿಚಾರವೆನಿಸುತ್ತದೆ. ಯಾಕೆಂದರೆ ತೊಂಭತ್ತರ ದಶಕದವರೆಗು ಕಾಂಗ್ರೆಸ್ಸಿನ ಬೆಂಬಲಿಗ ಸಮುದಾಯವಾಗಿದ್ದ ಬ್ರಾಹ್ಮಣ ಸಮುದಾಯ ೧೯೮೯ ರಿಂದ ೧೯೯೧ ರವರೆಗೆ ನಡೆದ ಮಂಡಲ ವರದಿ ವಿರೋಧಿ ಚಳುವಳಿ ಮತ್ತು ಬಾಬ್ರಿ ಮಸೀದಿಯ ವಿವಾದದ ನಂತರ ಬಾಜಪದತ್ತ ಮುಖ ಮಾಡಿತು. ಅಲ್ಲಿಂದ ಶುರುವಾದ ಕಾಂಗ್ರೆಸ್ಸಿನ ಸೋಲಿನ ಸರಮಾಲೆ ಉತ್ತರಪ್ರದೇಶದಲ್ಲಿ ಇಂದಿಗೂ ಮುಂದುವರೆಯುತ್ತಿದೆ. ರಾಜ್ಯದ ಒಟ್ಟು ಜನಸಂಖ್ಯೆಯ ಶೇಕಡಾ ಹತ್ತರಷ್ಟಿರುವ ಬ್ರಾಹ್ಮಣರು ಸುಮಾರು ನಲವತ್ತರಿಂದ ಐವತ್ತು ಕ್ಷೇತ್ರಗಳಲ್ಲಿ ನಿರ್ಣಾಯಕರಾಗಿದ್ದಾರೆ. ಈ ಹಿನ್ನೆಲೆಯಲ್ಲಿಯೇ ಕಾಂಗ್ರೆಸ್ ಬ್ರಾಹ್ಮಣ ಮತಗಳನ್ನು ತನ್ನತ್ತ ಸೆಳೆಯಲು ಶೀಲಾ ದೀಕ್ಷಿತರನ್ನು ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಬಿಂಬಿಸುತ್ತಿದೆ.

ಪಂಜಾಬಿನಲ್ಲಿ ಜನಿಸಿದ ಶ್ರೀಮತಿ ಶೀಲಾ ದೀಕ್ಷಿತ್ ಕಾಂಗ್ರೆಸ್ಸಿನ ಅತ್ಯಂತ ಹಿರಿಯ ನಾಯಕರೂ, ಕೇಂದ್ರದ ಮಾಜಿ ಸಚಿವರೂ, ರಾಜ್ಯಪಾಲರೂ ಆಗಿದ್ದ ಉತ್ತರಪ್ರದೇಶದ ದಿವಂಗತ ಉಮಾಶಂಕರ ದೀಕ್ಷಿತ್ ಅವರ ಸೊಸೆ. ಉಮಾಶಂಕರ ದೀಕ್ಷಿತರು ಉತ್ತರ ಪ್ರದೇಶದ ಬ್ರಾಹ್ಮಣ ಸಮುದಾಯದಲ್ಲಿ ಅತ್ಯಂತ ಗೌರವಾನ್ವಿತ ರಾಜಕಾರಣಿಯಾಗಿ ಹೆಸರು ಮಾಡಿದ್ದವರು.ಇಂತವರ ಸೊಸೆಯಾಗಿರುವ ದೀಕ್ಷಿತರು ಮೂರು ಅವಧಿಗೆ ದೆಹಲಿಯ ಮುಖ್ಯಮಂತ್ರಿಯಾಗಿ ಕೆಲಸ ಮಾಡಿ ೨೦೧೩ರಲ್ಲಿ ಆಮ್ ಆದ್ಮಿಯ ಅಲೆಯಲ್ಲಿ ಸೋತವರು. ದೆಹಲಿಯ ಆಡಳಿತದಲ್ಲಿ ತಮ್ಮದೇ ಛಾಪು ಮೂಡಿಸಿ ಜನಪ್ರಿಯರಾಗಿದ್ದ ಅವರ ಬಗ್ಗೆ ಅವರ ವಿರೋಧಿಗಳು ತೀರಾ ಕ್ಷುಲ್ಲಕವಾಗಿ ಮಾತಾಡುತ್ತಿರಲಿಲ್ಲ. ನೆಹರೂ ಕುಟುಂಬಕ್ಕೆ ಅತ್ಯಂತ ನಿಷ್ಠರಾಗಿರುವ ಶೀಲಾರವರು ಆಡಳಿತದ ವಿಚಾರದಲ್ಲಿ ಪರಿಣಿತರೆಂಬ ಮಾತು ಸಹ ಉತ್ತರಪ್ರದೇಶದ ಚುನಾವಣೆಯಲ್ಲಿ ಪ್ರಬಾವ ಬೀರಬಹುದಾಗಿದೆ. ಆದರೆ ಇತ್ತೀಚೆಗೆ ಅವರ ಮೇಲೆ ಮಾಡಲಾಗಿರುವ ವಾಟರ್ ಟ್ಯಾಂಕರ್ ಹಗರಣವನ್ನು ವಿರೋಧಪಕ್ಷಗಳು ಅದರಲ್ಲೂ ಬಾಜಪದವರು ಚುನಾವಣೆಯ ವಿಷಯವನ್ನಾಗಿ ಮಾಡುವ ನಿರೀಕ್ಷೆಯಿದೆ. ಆದರೆ ಕೆಲವು ಸ್ಥಳೀಯ ಕಾಂಗ್ರೆಸ್ಸಿಗರ ಪ್ರಕಾರ, ಬ್ರಾಹ್ಮಣರನ್ನೇ ಮುಖ್ಯಮಂತ್ರಿ ಅಭ್ಯಥಿಯನ್ನಾಗಿ ಘೋಷಿಸಲೇ ಬೇಕೆಂದಿದ್ದರೆ ಎಪ್ಪತ್ತು ವರ್ಷದ ಶೀಲಾದೀಕ್ಷಿತರಿಗಿಂತ ನಲವತ್ತೆರಡು ವರ್ಷದ ಜಿತೇಂದ್ರ ಪ್ರಸಾದ ಉತ್ತಮ ಆಯ್ಕೆಯಾಗುವುದು ಸಾದ್ಯವಿತ್ತು. ಈ ಬಗ್ಗೆ ಕಾಂಗ್ರೆಸ್ಸಿನ ಆಂತರಿಕ ವಲಯದಲ್ಲಿ ಒಂದಷ್ಟು ಪಿಸುಮಾತುಗಳೂ ಕೇಳಿ ಬರುತ್ತಿರುವುದು ನಿಜವಾದರು, ಅನುಭವ, ದಕ್ಷತೆಯ ವಿಚಾರದಲ್ಲಿ ಶೀಲಾರವರೆ ಮೇಲುಗೈ ಸಾದಿಸಿದ್ದಾರೆ. ಹಾಗಾದರೆ ತನ್ನ ಮಾಮೂಲಿ ಸಂಪ್ರದಾಯವನ್ನು ಮುರಿದು ಕಾಂಗ್ರೆಸ್ ಯಾಕೆ ಶೀಲಾದೀಕ್ಷಿತರನ್ನು ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಘೋಷಿಸಿತು ಎಂದು ನೋಡಿದರೆ ಹಲವು ಕಾರಣಗಳು ಕಂಡು ಬರುತ್ತವೆ.

ಮೊದಲನೆಯದಾಗಿ ಮೋದಿಯವರನ್ನು ಮತ್ತು ನಿತೀಶ್ ಕುಮಾರ್ ಯಾದವರನ್ನು ಚುನಾವಣೆಗಳಲ್ಲಿ ಗೆಲ್ಲಿಸುವ ತಂತ್ರಗಳನ್ನು ಹೆಣೆದರು ಎನ್ನಲಾದ ಪ್ರಶಾಂತ್ ಕಿಶೋರ್ ಅವರನ್ನು ಈ ಬಾರಿ ತನ್ನ ಬೆನ್ನಿಗಿಟ್ಟುಕೊಂಡ ಕಾಂಗ್ರೆಸ್ ಅವರ ಸಲಹೆಯಂತೆಯೇ ಶೀಲಾರನ್ನು ಆಯ್ಕೆ ಮಾಡಿದ್ದು ನೂರಕ್ಕೆ ನೂರರಷ್ಟು ಸತ್ಯವಾಗಿದೆ. ಇನ್ನು ಎರಡನೆಯದಾಗಿ ಶೀಲಾದೀಕ್ಷಿತರ ಬ್ರಾಹ್ಮಣ ಜಾತಿ ಅವರ ಆಯ್ಕೆಯಲ್ಲಿ ಕೆಲಸ ಮಾಡಿದೆ. ಮೂರನೆಯದಾಗಿ ಉತ್ತರಪ್ರದಶದ ಅತ್ಯಂತ ಹಿರಿಯ ಮತ್ತು ಗೌರವಾನ್ವಿತ ನಾಯಕರಾದ ಉಮಾಶಂಕರ ದೀಕ್ಷಿತರ ಕುಟುಂಬದ ಸೊಸೆ ಎಂಬುದು ಸಹ ಶೀಲಾರವರ ಆಯ್ಕೆಯಲ್ಲಿ ಪ್ರದಾನ ಪಾತ್ರ ವಹಿಸಿದೆ. ನಾಲ್ಕನೆಯದಾಗಿ ಉತ್ತರಪ್ರದೇಶದ ಕಾಂಗ್ರೆಸ್ ಮುಖ್ಯಸ್ಥೆಯಾಗಿ ೧೯೮೪ರಲ್ಲಿ ಆಕೆ ಪಕ್ಷವನ್ನು ಗೆಲ್ಲಿಸಿಕೊಂಡು ಬಂದಿದ್ದು ಉತ್ತರ ಪ್ರದೇಶದ ರಾಜಕೀಯ ಸ್ಥಿತಿಗತಿಗಳು ಮತ್ತು ಕಾರ್ಯಕರ್ತರು ಆಕೆಗೆ ಚಿರಪರಿಚಿತವಾಗಿರುವುದು. ಐದನೆಯದಾಗಿ ಆಕೆಯನ್ನು ಉತ್ತರಪ್ರದೇಶಕ್ಕೆ ಕಳಿಸುವುದರಿಂದ ದೆಹಲಿ ಕಾಂಗ್ರೆಸ್ಸಿನ ನಾಯಕತ್ವವನ್ನು ಇನ್ನೊಬ್ಬ ದೆಹಲಿಯ ನಾಯಕ ಅಜಯ್ ಮಕ್ವಾನರಿಗೆ ಹಸ್ತಾಂತರಿಸುವುದು ಸುಲಭದ ಕಾರ್ಯವಾಗಿದೆ. ಆರನೆಯದು ತೀರಾ ಇತ್ತೀಚೆಗೆ ಅವರ ಮೇಲೆ ಮಾಡಲಾದ ವಾಟರ್ ಟ್ಯಾಂಕರ್ ಹಗರಣದ ಹೊರತಾಗಿ ಅವರ ಮೇಲೆ ಇನ್ಯಾವ ಆಪಾದನೆಯೂ ಇಲ್ಲವಾಗಿದ್ದು ದೆಹಲಿಯಲ್ಲಿ ಸತತವಾಗಿ ಮೂರು ಬಾರಿ ಪಕ್ಚವನ್ನು ಗೆಲ್ಲಿಸಿದ ಕೀರ್ತಿ ಅವರ ಬೆನ್ನಿಗಿರುವುದಾಗಿದೆ. 

ಇನ್ನು ಈ ಬಾರಿ ಉತ್ತರಪ್ರದೇಶದ ಬಹುತೇಕ ಎಲ್ಲ ರಾಜಕೀಯ ಪಕ್ಷಗಳು ಬ್ರಾಹ್ಮಣರನ್ನು ಓಲೈಸುವ ಕಾರ್ಯಕ್ಕೆ ಮುಂದಾಗಿರುವುದು ವಿಶೇಷವಾಗಿದೆ, ಬಹುಶ: ತೊಂಭತ್ತರ ದಶಕದ ನಂತರ ಇದೇ ಮೊದಲಬಾರಿಗೆ ಬ್ರಾಹ್ಮಣ ಸಮುದಾಯಕ್ಕೆ ಈ ಮಟ್ಟಿಗಿನ ಪ್ರಾದಾನ್ಯತೆ ನೀಡಲಾಗುತ್ತಿದೆಯೆನ್ನಬಹುದು. ಈಗಾಗಲೇ ಬಹುಜನ ಪಕ್ಷದ ಮಾಯಾವತಿಯವರು ಐವತ್ತಕ್ಕು ಅಧಿಕ ಸ್ಥಾನಗಳಿಗೆ ಬ್ರಾಹ್ಮಣ ಅಭ್ಯರ್ಥಿಗಳನ್ನು ಘೋಷಣೆ ಮಾಡಿಯಾಗಿದ್ದು, ಈ ಸಮುದಾಯದ ಓಲೈಕೆಯಲ್ಲಿ ಮುಂದಿದ್ದಾರೆ. ಮೊನ್ನೆ ತಾನೇ ಬಾಜಪವು ಉತ್ತರಪ್ರದೇಶದ ಬ್ರಾಹ್ಮಣ ನಾಯಕರಾದ ಶ್ರೀ ಶಿವಪ್ರಕಾಶ್ ಶುಕ್ಲಾರವರನ್ನು ರಾಜ್ಯಸಭೆಗೆ ಕಳಿಸಿ, ಬ್ರಾಹ್ಮಣರ ಓಲೈಕೆಗೆ ತನ್ನ ಕಾಣಿಕೆಯನ್ನೂ ನೀಡಿದೆ. ಬಹಳ ಹಿಂದೆ ಕಲ್ಯಾಣ್ ಸಿಂಗ್ ಸರಕಾರದಲ್ಲಿ ಸಚಿವರಾಗಿದ್ದು ನಂತರ ಅಜ್ಞಾತವಾಸದಲ್ಲಿದ್ದ ಶುಕ್ಲಾರವರನ್ನು ಪುನ: ಸಕ್ರಿಯ ರಾಜಕಾರಣಕ್ಕೆ ತರುವುದರ ಹಿಂದೆ ಬಾಜಪದ ಬ್ರಾಹ್ಮಣ ಓಲೈಕೆಯ ತಂತ್ರವೇ ಅಡಗಿದೆ. ಇದೇ ರೀತಿ ಸಮಾಜವಾದಿ ಪಕ್ಷವು ಸಹ ಮೂರು ಜನ ಬ್ರಾಹ್ಮಣರನ್ನು ರಾಜ್ಯಸಬೆಗೆ ಕಳಿಸುವ ಮೂಲಕ ತಾವೇನು ಹಿಂದೆ ಬಿದ್ದಿಲ್ಲವೆಂಬುದನ್ನು ತೋರಿಸಿಕೊಟ್ಟಿದ್ದಾರೆ.

ಹೀಗೆ ಉತ್ತರಪ್ರದೇಶದಲ್ಲಿನ ನಾಲ್ಕೂ ಪಕ್ಷಗಳು ಬ್ರಾಹ್ಮಣ ಮತದಾರರನ್ನು ಓಲೈಸುವ ದಾರಿ ಹಿಡಿದಿದ್ದು ಅದು ಎಷ್ಟರ ಮಟ್ಟಿಗೆ, ಯಾವ ಪಕ್ಷಕ್ಕೆ ಸಫಲತೆಯನ್ನು ತಂದು ಕೊಡುತ್ತದೆಯೆಂಬವುದನ್ನು ನಾವು ಕಾದು ನೋಡಬೇಕಿದೆ.

ಜುಲೈ 15, 2016

ಮೇಕಿಂಗ್ ಹಿಸ್ಟರಿ: ತೆರಿಗೆ ವಸೂಲು ಮಾಡಲು ನಡೆಸಿದ ಶೋಷಣೆ

making history
ಸಾಕೇತ್ ರಾಜನ್ 
ಕನ್ನಡಕ್ಕೆ: ಡಾ. ಅಶೋಕ್. ಕೆ. ಆರ್
15/07/2016

ವಿಪರೀತದ ತೆರಿಗೆಯನ್ನು ಸಂಗ್ರಹಿಸುವ ಸಲುವಾಗಿ, ಫೌಜುದಾರನಿಂದ ಪಟೇಲ, ಶಾನುಭೋಗರವರೆಗಿನ ಎಲ್ಲ ಕಂದಾಯ ಅಧಿಕಾರಿಗಳು ಜನಸಮೂಹವನ್ನು ಶೋಷಣೆಗೊಳಪಡಿಸುವುದು ಸಾಮಾನ್ಯವಾಗಿಬಿಟ್ಟಿತು, ಕಾನೂನಾತ್ಮಕವಾಗಿಬಿಟ್ಟಿತು. 

ರೈತವಾರಿ ಪದ್ಧತಿಯಲ್ಲಿ ರೈತರು ನೇರವಾಗಿ ಅಧಿಕಾರಶಾಹಿಯೊಂದಿಗೆ ಸಂಪರ್ಕದಲ್ಲಿದ್ದರು. ಬಹಳಷ್ಟು ಸಲ ಹಳ್ಳಿಯ ಮಟ್ಟದಲ್ಲಿ ಭೂಮಾಲೀಕರಾದ ಮತ್ತು ತೆರಿಗೆ ಕಟ್ಟುವವರಾದ ಪಟೇಲರು ಮತ್ತು ಶಾನುಭೋಗರ ಅರ್ಜಿಯನ್ನು ಪರಿಶೀಲಿಸುವಾಗ ಖುದ್ದು ಶಿರಸ್ತೇದಾರರು ತಮ್ಮ ಪಡೆಯೊಂದಿಗೆ ಹಾಜರಿರುತ್ತಿದ್ದರು. ಶರಾತ್ ವ್ಯವಸ್ಥೆಯಲ್ಲಿ, ಶೋಷಣೆಯು ಸಾರ್ವತ್ರಿಕವಾಗಿಬಿಟ್ಟಿತು. ಶೋಷಣೆ ಮತ್ತು ದಬ್ಬಾಳಿಕೆಯ ಕತೆಗಳು ಸಹಜವೆಂಬಂತಾಗಿ, ಋತು ಬದಲವಾವಣೆಯೊಂದಿಗೆ ನಡೆಯುವ ವಾರ್ಷಿಕ ಸಂಗತಿಯಾಯಿತು. 

1832ರಲ್ಲಿ ರೈತವಾರಿ ಪದ್ಧತಿಯ ಲಕ್ಷಣಗಳ ಬಗ್ಗೆ ಬರೆಯುತ್ತ, ಆರ್. ರಿಚರ್ಡ್ ಹೇಳುತ್ತಾನೆ: “ಭೂಕಂದಾಯ ಸಂಗ್ರಹಿಸಲು ನೇಮಕವಾಗಿದ್ದ ಪ್ರತಿಯೊಬ್ಬ ಕಿರಿಯ ಅಧಿಕಾರಿಯೂ ಪೋಲೀಸ್ ಅಧಿಕಾರಿಯಂತಾಗಿದ್ದ; ತನ್ನಾಡಳಿತವಿದ್ದ ಪ್ರದೇಶದ ಯಾವುದೇ ವ್ಯಕ್ತಿಗೆ ದಂಡ ಹಾಕುವ ಅಧಿಕಾರವಿತ್ತು, ಬಂಧಿಸುವ, ಛಡಿ ಏಟು ಹೊಡೆಸುವ ಅಧಿಕಾರವಿತ್ತು. ಪ್ರಕರಣದ ಬಗ್ಗೆ ದಾಖಲಾದ ಯಾವ ಸಾಕ್ಷಿಯೂ ಇರದಿದ್ದರೂ, ಆಪಾದಿತನ ಯಾವೊಂದು ಹೇಳಿಕೆ ಇರದಿದ್ದರೂ ಶಿಕ್ಷೆಗೆ ಒಳಗಾಗಬಹುದಿತ್ತು” ಮುಂದುವರಿಸುತ್ತ, ಇದನ್ನು ನಂಬದವರಿಗಾಗಿ ಎಂಬಂತೆ ರಿಚರ್ಡ್ಸ್ ಹೇಳುತ್ತಾರೆ ಇದು “ಅತಿರಂಜಿತ” ಚಿತ್ರವಲ್ಲ. (342) 

ಬ್ರಿಟೀಷರಾಳ್ವಿಕೆಯ ಮೊದಲ ದಶಕ ಮುಗಿಯುತ್ತಿದ್ದಂತೆ ಮತ್ತು ಶರಾತ್ ವ್ಯವಸ್ಥೆ ಕಂದಾಯ ಸಂಗ್ರಾಹ ವ್ಯವಸ್ಥೆಯ ಮಾದರಿಯಾದಾಗ, ಶೋಷಣೆಗೆ ರೈತ ಸಮೂಹ ನೀಡಿದ ಮೊದಲ ಪ್ರತಿಕ್ರಿಯೆಗಳನ್ನು ನೋಡಬಹುದು. ಥಾಮಸ್ ಮನ್ರೋ ಮತ್ತವನ ಪಟಾಲಂ (ಬಿಳಿ ತೊಗಲಿನವರು ಅಥವಾ ಕಂದು ಚರ್ಮದವರು) ಮೈಸೂರಿನ ರೈತರು ಹವಾಮಾನ ವೈಪರೀತ್ಯದ ವರುಷಗಳಲ್ಲಿ ಹೇಗೆ ಗುಂಪು ಗುಂಪಾಗಿ ತಮ್ಮಳ್ಳಿಗಳಿಂದ ಬೆಳೆ ಕಟಾವಿನ ಸಮಯಕ್ಕೆ ಗುಳೇ ಹೋಗಿಬಿಡುತ್ತಿದ್ದರು ಎಂದು ಶ್ರಮವಹಿಸಿ ಹೇಳಿದ್ದಾರೆ. ಮತ್ತಿದರಿಂದಾಗಿ ಕಲೆಕ್ಟರುಗಳ ಮಾಡಬೇಕಿದ್ದ ವಾಕರಿಕೆ ಬರಿಸುವ ಕೆಲಸದ ಬಗ್ಗೆ ತಿಳಿಸಿದ್ದಾರೆ, ಈ ರೀತಿ ಓಡಿಹೋಗುತ್ತಿದ್ದವರನ್ನು ಕಷ್ಟಪಟ್ಟು ಹಿಡಿದು ಮತ್ತೆ ಅವರ ಹಳೆಯ ‘ಪ್ರೀತಿಪೂರ್ವಕ’ ಮಾಲೀಕರಿಗೆ ಒಪ್ಪಿಸುವ ಕೆಲಸ ಅವರದಾಗಿತ್ತು. 

ಆದರೆ ಈ ನಿರ್ಭಾಗ್ಯ ಆತ್ಮಗಳು ಯಾರಿಂದ ಮತ್ತು ಯಾಕಾಗಿ ಓಡುತ್ತಿದ್ದವು? ಬಾಕಿ ವಸೂಲಾಗುವ ಸಲುವಾಗಿ ಶರಾತ್ ವ್ಯವಸ್ಥೆ ಮುಂದಿನ ಹಂತವನ್ನು ಅನ್ವೇಷಿಸಿತು. “ಸಬಲ ರೈತರನ್ನು” – ಶ್ರೀಮಂತ ರೈತರನ್ನು – ಗುತ್ತಿಗೆದಾರರು ಮತ್ತು ಬಡ – ಮಧ್ಯಮ ರೈತರ ಜಾಮೀನಾಗಿರುವಂತೆ ಅದು ಕೇಳಿಕೊಂಡಿತು. 

ಆದರೆ ಈ ನಿಯಮವೂ ಆದಾಯ ತರುವಲ್ಲಿ ವಿಫಲವಾದಾಗ, ಊಳಿಗಮಾನ್ಯ ಅಧಿಕಾರಶಾಹಿ ಈ ವರ್ಗದ ಜನರನ್ನೂ ಶೋಷಿಸಿದರು, ಅವರ ಭೂಮಿಯನ್ನೂ ಕಿತ್ತುಕೊಳ್ಳಲಾರಂಭಿಸಿದರು. 1820ರ ಕೊನೆಯ ಭಾಗದಲ್ಲಿ ಈ ಕಟು ವಾಸ್ತವ ಸಂಗತಿಯನ್ನು ಸರಕಾರಕ್ಕೆ ಬಂದಿದ್ದ ಎಷ್ಟೋ ಅರ್ಜಿಗಳು ಧೃಡಪಡಿಸುತ್ತವೆ. 

1857ರ ಬಂಡಾಯ ಮುಗಿದ ತಕ್ಷಣವೇ, ಬ್ರಿಟೀಷ್ ಸರಕಾರ ಸಮಿತಿಯೊಂದನ್ನು ರಚಿಸಿ “ಕಂದಾಯ ಕಟ್ಟಿಸಿಕೊಳ್ಳುವ ಸಲುವಾಗಿ ಸಾಮಾನ್ಯವಾಗಿ ನಡೆದಿದೆಯೆನ್ನಲಾದ ಶೋಷಣೆಯನ್ನು” ತನಿಖೆ ಮಾಡಲು ಆದೇಶಿಸಿತು. 

ಈ ಶೋಷಣಾ ಸಮಿತಿ, ಬ್ರಿಟೀಷರ ಪೂರ್ವಾಗ್ರಹಪೀಡಿತ ಮನಸ್ಸಿನಂತೆಯೇ “ಒಂದಲ್ಲ ಒಂದು ರೀತಿಯಲ್ಲಿ ಕೆಳ ಹಂತದ ಅಧಿಕಾರಿಗಳು ಬ್ರಿಟೀಷರ ಪ್ರತಿ ಪ್ರಾಂತ್ಯದಲ್ಲೂ ಶೋಷಣೆ ನಡೆಸಿದ್ದಾರೆ” ಎಂದು ಒಪ್ಪಿಕೊಂಡಿತು. 

ಈ ಸಾಲುಗಳಿಗೆ ಪ್ರತಿಕ್ರಯಿಸುತ್ತ ಮಾರ್ಕ್ಸ್, ಸಭ್ಯ ನಾಗರೀಕನಂತಿದ್ದವನು ಅಸಲಿಗೆ ಬೆತ್ತಲೆ ಬೇಟೆಗಾರ ಎಂಬುದನ್ನು ಸಾಬೀತುಮಾಡುತ್ತ ಹೀಗೆ ಹೇಳಿದ: “ಶೋಷಣೆಯು ಬ್ರಿಟೀಷ್ ಇಂಡಿಯಾದಲ್ಲಿ ಸರ್ವವ್ಯಾಪಿಯಾಗಿದ್ದ ಆರ್ಥಿಕ ವ್ಯವಸ್ಥೆಯಾಗಿತ್ತು ಎನ್ನುವುದನ್ನು ಅಧಿಕೃತವಾಗಿ ಒಪ್ಪಿಕೊಳ್ಳಲಾಗಿದೆ.” (246) 

ನ್ಯಾಯಾಲಯದ ಇತಿಹಾಸಕಾರರಾದ ಶಾಮ ರಾವ್ ಮತ್ತು ಹಯವದನ ರಾವ್ ಹಾಗು ನಗರದ ಬಂಡಾಯವನ್ನು ತನಿಖೆ ಮಾಡಿದ ಬ್ರಿಟೀಷ್ ತನಿಖಾ ಸಮಿತಿ ಇದೇ ಮಾದರಿಯಲ್ಲಿ ರಾಜನನ್ನು ಮೈಸೂರು ರೇಷ್ಮೆ ಸೀರೆಯಲ್ಲಿ ಅಲಂಕರಿಸಿದರು. ಆದರೆ ಈ “ಆರ್ಥಿಕ ವ್ಯವಸ್ಥೆಯ” ಮೈಸೂರಿನ ಪ್ರಮುಖ ದಲ್ಲಾಳಿಯಾಗಿದ್ದ ಮೂರನೇ ಕೃಷ್ಣರಾಜ ಒಡೆಯರ್ ಬೆತ್ತಲಾಗಿ ನಿಂತರು, ಮಿಥ್ಯಾಕಥೆಗಳ ‘ಬಟ್ಟೆಯಿಲ್ಲದ ರಾಜನಂತೆ’. 

ಶೋಷಣೆಯ ಎಲ್ಲಾ ರೀತಿಯ ಮಾದರಿಗಳನ್ನೂ ಪಾಲಿಸಲಾಗುತ್ತಿತ್ತು. ಬೆನ್ನ ಮೇಲೆ ಮಣಭಾರದ ಕಲ್ಲನ್ನು ಹೇರಿ ಉರಿವ ಬಿಸಿಲಲ್ಲಿ ನಿಲ್ಲಿಸುವುದು ಹೆಚ್ಚು ಖ್ಯಾತವಾಗಿತ್ತು ಮತ್ತು ಮದ್ರಾಸ್ ಪ್ರಾಂತ್ಯದಲ್ಲೂ ಪಾಲಿಸಲಾಗುತ್ತಿತ್ತು. ಕಿತ್ತೂರು ಪ್ರದೇಶದಲ್ಲಿನ ಅಸಂಖ್ಯಾತ ಜನಪದ ಹಾಡುಗಳು ರಾಯಣ್ಣನ ಹೆತ್ತವರನ್ನು ಶೋಷಿಸಿದ್ದನ್ನು ತಿಳಿಸುತ್ತದೆ. ಒಬ್ಬ ಬಾಕಿದಾರನನ್ನು ಮತ್ತೊಬ್ಬ ಕಿವಿ ಹಿಡಿದು ಎತ್ತುವುದು, ಛಡಿ ಏಟು ನೀಡುವುದು, ಉರಿಬಿಸಿಲಿನಲ್ಲಿ ಮೊಣಕಾಲೂರಿ ನಿಲ್ಲುವುದು ಮತ್ತು ಶೋಷಕರ ಪುರುಷಹಂಕಾರವನ್ನು ತಣಿಸುವ ಸಲುವಾಗಿ ಮಹಿಳೆಯರ ಎದೆಯ ಮೇಲೆ ಭಾರವನ್ನೇರಲಾಗುತ್ತಿತ್ತು. ಇವೆಲ್ಲವೂ ಕಡಿಮೆ ಪ್ರಮಾಣದ ಶಿಕ್ಷೆಗಳಷ್ಟೇ. ಶಿಕ್ಷೆಗೊಳಪಟ್ಟ ವ್ಯಕ್ತಿ ಒಂದಷ್ಟು ದಿಟ್ಟತನ ತೋರಿದಾಗ ಶಿಕ್ಷೆಯ ರೀತಿ ಗಂಭೀರವಾಗಿರುತ್ತಿತ್ತು, ಇನ್ನಷ್ಟು ಹಿಂಸಾತ್ಮಕವಾಗುತ್ತಿತ್ತು. ಮುಖಕ್ಕೆ ಬೆಂಕಿಯಿಡುವುದು, ಕಿವಿ, ಮೂಗು, ಮೊಲೆಯನ್ನು ಹರಿದು ಹಾಕುವುದು. 

ಈ ಎಲ್ಲಾ ಕಾರಣದಿಂದ ಹಳ್ಳಿಗಳ ಪಟೇಲರು ಮತ್ತು ಶಾನುಭೋಗರು, ಅವರ ಕೈಗೊಂಬೆ ರಾಜ, ರಾಜನಾಸ್ಥಾನದ ಆಪ್ತರು ಮತ್ತೀ ಪ್ರತಿಗಾಮಿ ವ್ಯವಸ್ಥೆಯನ್ನು ಪೋಷಿಸುತ್ತಿದ್ದ ವಸಾಹತು ದೊರೆಗಳು ಜನರ ದ್ವೇಷಕ್ಕೆ ಗುರಿಯಾಗಿದ್ದರಲ್ಲಿ ಯಾವುದೇ ಅಚ್ಚರಿಯಿಲ್ಲ. ಕರ್ನಾಟಕದ ಶೋಷಿತರು ಈ ಶೋಷಕರಿಗೆ ಬಿಸಿ ಮುಟ್ಟಿಸಲು ಕಾಯುತ್ತಿದ್ದದ್ದು ಹೌದು. ಅವರಿಗೆ ರಕ್ತ ಬೇಕಿತ್ತು ಮತ್ತು ತಮ್ಮ ಬಾಕಿಯನ್ನು ವಸೂಲಿ ಮಾಡಬೇಕಿತ್ತು. 

ನಗರದ ಬಂಡಾಯ ರೈತರು, ಹೊಸಂತೆಯಲ್ಲಿನ ತಮ್ಮ ಸಮಾವೇಶದ ನಂತರ “ಎಲ್ಲಾ ರೈತ ಕಾರ್ಮಿಕರು ಶೋಷಣೆಯ ವಿರುದ್ಧ ಒಂದಾಗಬೇಕು” ಎಂದು ಘೋಷಿಸಿದ್ದನ್ನು ಅರ್ಥ ಮಾಡಿಕೊಳ್ಳಬಹುದು. (247) ಮತ್ತು, ರೈತರು ಹೆಚ್ಚೆಚ್ಚು ಬಂಡಾಯವೆದ್ದಷ್ಟು, ತಮ್ಮ ಮೆರವಣಿಗೆಯಲ್ಲಿ ಒಬ್ಬ ನಿರ್ದಿಷ್ಟ ಅಮಲ್ದಾರ ಅಥವಾ ಶಿರಸ್ತೇದಾರನನ್ನು ತಮ್ಮ ಕೈವಶಕ್ಕೆ ಒಪ್ಪಿಸಬೇಕು ಎಂದು ಕೇಳುವುದು ಸಾಮಾನ್ಯವಾಯಿತು. ಜನರ ಗುಂಪೀಗ ಸಮೂಹವಾಗಿ ಬದಲಾಗಿತ್ತು. ಇಂಗ್ಲೀಷರ ಭಾಷೆ ಈ ರೀತಯ ಸೂಕ್ಷ್ಮತೆಗಳನ್ನೇ ತುಂಬಿಕೊಂಡಿದೆ. ಹೌದು, ಅವರು ತಮ್ಮ ಹಸಿ ಕೈಗಳನ್ನುಪಯೋಗಿಸಿ ಈ ಜನರನ್ನು ಸೀಳಿ ಸಾರ್ವಜನಿಕವಾಗಿ ನೇಣಿಗಾಕಬೇಕಿತ್ತು.

ಮುಂದಿನ ವಾರ
ಉತ್ಪಾದನೆಯ ನಾಶ

ಜುಲೈ 11, 2016

ದೇಶ ದ್ರೋಹವೂ ಇಲ್ಲಿ ಪುಣ್ಯದ ಕೆಲಸ!

ಸಾಂದರ್ಭಿಕ ಚಿತ್ರ
S Abhi Hanakere
11/07/2016
ನನ್ನ ತಮಿಳು ಚಿತ್ರದ ಕೆಲಸದ ನಿಮಿತ್ತ ನಾನು ಚೆನ್ನೈನಲ್ಲಿದ್ದೆ. ಕಾಲ್ ಬಂತು. ಮೈಸೂರಿನ ಗೆಳೆಯ ಕರೆ ಮಾಡಿದ್ದ. ಮಾತನಾಡಬಹುದ, ಫ್ರೀ ಇದ್ದೀರಾ ಅಂದ. ಅದು ಎಷ್ಟು ಕ್ಲೋಸ್ ಫ್ರೆಂಡ್ ಆದರೂ ಪಾರ್ಮಲಿಟಿಸ್ ಫಾಲೋ ಮಾಡೋ ವಿನಯದ ಬುದ್ಧಿ, ಮತ್ತಾತ ಮುಗ್ದ ಕೂಡ.

ಈ ಕಡೆಯಿಂದ "ಬ್ಯುಸಿ ಇದ್ದೀನಿ, ಚೆನ್ನೈನಲ್ಲಿದ್ದೀನಿ ಬೆಳಿಗ್ಗೆ ಮಾಡ್ಲಾ" ಅಂದೆ. "ಸ್ವಲ್ಪ ಅರ್ಜೆಂಟು ಮಿಸ್ ಮಾಡ್ದೆ ಮಾಡಿ" ಎಂದು ಕಾಲ್ ಕಟ್ ಮಾಡಿದ. ಯಾಕೋ ಮನಸ್ಸು ತಡಿಲಿಲ್ಲ. ನಾನಿದ್ದ ರಜಿನಿಕಾಂತರ ಕಬಾಲಿ ಡೈರೆಕ್ಟರ್ ಪರಂಜೀತ್‍ನ ಆಫೀಸ್‍ನಿಂದ ಈಚೆ ಬಂದು ಮತ್ತೆ ಕಾಲ್ ಮಾಡಿದೆ. “ಸಾರ್ ಏನಿಲ್ಲ ಪುನೀತ್ ರಾಜ್‍ಕುಮಾರ್ ಕಾಂಟೆಕ್ಟ್ ಮಾಡಬೇಕಿತ್ತು. ನಮ್ಮ ಫ್ರೆಂಡ್ಸ್ ಎಲ್ಲಾ ಸೇರಿ ಒಂದು ಎನ್‍ಜಿಓ ಮಾಡಿಕೊಂಡಿದ್ದಾರೆ. ಅದಕ್ಕೆ ಬ್ರಾಂಡ್ ಅಂಬಾಸಿಡರಾಗಿ ಪುನೀತ್‍ನ ಹಾಕಬೇಕು ಅಂತಾ, ಯಾಕಂದ್ರೆ ಎನ್‍ಜಿಓದು ತುಂಬಾ ಒಳ್ಳೆ ಉದ್ದೇಶ, ಈ ಸ್ಟಾರ್ ಹೋಟ್ಲು ಮತ್ತೆ ಮದುವೆ, ರಿಸೆಪ್ಷನ್ ಅಲ್ಲಿ ಊಟ ಉಳಿದು ಬಿಡುತ್ತಲ್ಲಾ ಅದ್ನ ತಕ್ಕೊಂಡ್ ಹೋಗಿ ಬಡವರಿಗೆ ಕೊಡೋದು, ತುಂಬ ಪುಣ್ಯದ ಕೆಲಸ’’ ಅಂದ. ನನಗೆ ಸರ್ರನೆ ಕೋಪ ಬಂದ್ ಬಿಡ್ತು, ಕಂಟ್ರೋಲ್ ಮಾಡಿಕೊಂಡು ಸಾರಿ, ನಂಗೆ ಪುನೀತ್ ರಾಜ್‍ಕುಮಾರ್ ಲಿಂಕ್ ಇಲ್ಲಾ ಎಂದು ತಪ್ಪಿಸಿಕೊಳ್ಳಲು ನೋಡಿದೆ, ಇಲ್ಲಾ ಅವರ ಮ್ಯಾನೇಜರ್ ಅಥವಾ ಯಾರ ಮುಖಾಂತರನಾದ್ರು ಕಾಂಟೆಕ್ಟ್ ಮಾಡ್ಸಿ ತುಂಬಾ ಒಳ್ಳೇ ಉದ್ದೇಶ ಅಂದು ಬಿಟ್ಟ ಮತ್ತೆ, ನನಗೆ ಕೋಪ ಜಾಸ್ತಿಯಾಗಿ ಬಾಯಿ ಬಿಡುವ ಮುನ್ನವೆ ಮಣ್ಣಿವಣ್ಣನ್ ಅಂತವರೆಲ್ಲಾ ಸಪೋರ್ಟ್ ಮಾಡ್ತಿದ್ದಾರೆ ಅಂದ..

ಓಹೋ ಇದ್ಯಾವುದೋ ಆಗಲೇ ಬೆಳೆದು - ಬಲಿತು ಬಿಟ್ಟಿರುವ ಎನ್.ಜಿ.ಓ. ಗುಂಪೇ ಇರಬೇಕು, ಸುಮ್ಮನ್ನೆ ನಮಗ್ಯಾಕೆ ಅಂತ ನನಗೆ ಆಗದ್ದನ್ನ ಸಹಿಸಿಕೊಳ್ಳುವುದ ಕಲಿಯುವ ಅವಶ್ಯಕತೆಯಿಲ್ಲ ಅನ್ನಿಸಿ "ಅಲ್ಲಾ ಇದು ಯಾವ ಒಳ್ಳೇ ಕೆಲಸ, ಯಾವ ಪುಣ್ಯದ ಕೆಲಸ, ಇವರಿಗೆ ಅಷ್ಟೊಂದು ಕಾಳಜಿ ಇದ್ರೆ ಫಂಕ್ಷನ್ ನಲ್ಲಿ ಉಳಿದ ದವಸ ಧಾನ್ಯವನ್ನು ಕೊಡಲಿ, ಇಲ್ಲಾಂದ್ರೆ ಆ ರೀತಿ ತಮ್ಮ ಧಿಮಾಕಿಗಾಗಿ ಆಹಾರವನ್ನು ಅಗತ್ಯಕ್ಕಿಂತ ಹೆಚ್ಚಾಗಿ ಮಾಡುವವರಿಗೆ ಶಿಕ್ಷೆ ಕೊಡಸಲಿ, ಅದ್ ಬಿಟ್ಟು ಈ ರೀತಿ ಉಳಿದ ಆಹಾರವನ್ನು ಬಡವರಿಗೆ ಕೊಟ್ಟು ಅವರನ್ನು ಇನ್ನು ಮಾನಸಿಕವಾಗಿ ಗುಲಾಮಗಿರಿಗೆ ತಳ್ಳ ಬೇಡಿ" ಅಂದೆ. ಆ ಕಡೆ ಯಿಂದ ಅವನು "ಸ್ವಾಭಿಮಾನ ಇರೋರು ಈಸ್ ಕೊಳ್ಳಲ್ಲ ಸರ್" ಅಂದ. ಇಷ್ಟೊತ್ತು ನನ್ನ ಆಡು ಭಾಷೆ ತಡೆದುಕೊಂಡೆ ಮಾತಾಡ್ತಿದ್ದೆ. "ಲೋ, ನೀನೆ ಹೇಳ್ತಿದೀಯಾ, ಸ್ವಾಭಿಮಾನ ಇರೋರು ಈಸಿಕೊಳ್ಳಲ್ಲ ಅಂತ. ಯೋಚನೆ ಮಾಡು ಆ ರೀತಿ ನೀವು ತಕೊಂಡ್ ಹೋಗಿ ಕೊಟ್ರೆ ಸ್ವಾಭಿಮಾನ ಕುಂದುತ್ತೆ ಹೊರತು ಬೆಳೆಯೋ ಮಾತೆಲ್ಲಿ, ಒಂದ್ ಕೆಲಸ ಮಾಡಿ ಯಾರು ಅಗತ್ಯಕ್ಕಿಂತ ಹೆಚ್ಚಾಗಿ ಅಡಿಗೆ ಮಾಡಿ ಈ ರೀತಿ ವೇಸ್ಟ್ ಮಾಡ್ತರೋ ಆ ಬೋಳಿ ಮಕ್ಳಿಗೆ ಚಪ್ಪಲೀಲಿ ಹೋಡೀರಿ ಫಸ್ಟ್" ಅಂದೆ. ಮಂಡ್ಯ ಸ್ಟೈಲ್ ಅಲ್ಲಿ ಕೋಪದಿಂದ, ಮೃದು ಸ್ವಭಾವದ ಅವನು ಬೇಜಾರ್ ಮಾಡಿ ಕೊಂಡ, ಏನೇನೋ ಸಮಜಾಯಿಸಿ ಕೊಟ್ಟ, ಆ ಮೇಲೆ "ನೀವೇಳಿದ್ದು ಸರಿ. ಆದ್ರೆ ಎಲ್ಲಾ ಒಂದೆ ದಿನಕ್ಕೆ ಸರಿ ಮಾಡೋಕೆ ಆಗಲ್ಲ- ನಾವ್ ಒಬ್ಬರೆ ಏನು ಮಾಡೋಕೆ ಆಗಲ್ಲ". ಇಂಥವೆ ಸೋಗಲಾಡಿತನದ ಡೈಲಾಗ್ ಹೇಳಿದ.

ನೀನು ಅವರನ್ನ ಸಪೋರ್ಟ್ ಮಾಡ್ ಬೇಡ ಅವರನ್ನ ನಾನ್ ಹೇಳಿದ ರೀತಿ ಹೇಳಿ ಎಜುಕೇಟ್ ಮಾಡು. ಅವರೇನಾದ್ರು ನಿಜವಾಗ್ಲು ಬಡವರ ಬಗ್ಗೆ ಕಾಳಜಿ ಇದ್ರೆ ಕೇಳ್ತಾರೆ, ಇಲ್ಲಾ ಸುಮ್ನೆ ಅವರು ಸಮಾಜ ಸೇವಕರು ಅನ್ನೋ ಬಿಲ್ಡ್ ಅಪ್ ತಕೋಳ್ಳೋಕೆ ಮಾಡೋರಾದ್ರೆ ಕೇಳಲ್ಲ. ಆ ರೀತಿ ಅವರೇನಾದ್ರು ಮುಂದುವರಿದರೆ ಪುನೀತ್ ರಾಜ್‍ಕುಮಾರ್‍ನ ತಲುಪೋದು ಅವರಿಗೂ ನಾವು ಪುಣ್ಯದ ಕೆಲಸ ಮಾಡ್ತಿದಿವಿ ಅಂತ ಭ್ರಮೆ ಹುಟ್ಟಿಸೋದು ಏನು ಕಷ್ಟ ಅಲ್ಲಾ.

ಯಾಕೆಂದರೆ ನಾನು ಕೂಡ ಮೊದಲು ಅದೇ ರೀತಿ ಯೋಚಿಸಿದ್ದೆ ಅಂತ ಮನಸ್ಸಿನಲ್ಲಿ ಅಂದುಕೊಂಡು ಅಪ್ಪಿ-ತಪ್ಪಿ ಪುನೀತ್ ಒಪ್ಪಿ ಬ್ರಾಂಡ್ ಅಂಬಾಸಿಟರ್ ಆಗ್ ಬಿಟ್ರೆ ದೇಶ ದ್ರೋಹಿಗಳು ಇನ್ನು ಆಹಾರ ಜಾಸ್ತಿ ವೇಸ್ಟ್ ಮಾಡಿ ಬಡವರನ್ನ ನಾಯಿ ಥರ ನೋಡಿ ಅವರ ಸ್ವಾಭಿಮಾನವನ್ನ ಇನ್ನು ಪಾತಾಳಕ್ಕೆ ತಳ್ಳಿ ಬಿಡುತ್ತಾರೆ. ನಿಮ್ಮ ಮಾತ್ ಕೇಳಲಿಲ್ಲ ಅಂದ್ರೆ ನನಗೆ ಆ ಎನ್‍ಜಿಓ ಹೆಸರು ಹೇಳಿ ಪ್ಲೀಸ್ ಕನ್ವಿನ್ಸ್ ಮಾಡ್ತಿನಿ ಅಂದೆ. ಮಾತು ಬದಲಿಸಿ ಕ್ಯಾಷುವಲ್ ಆಗಿ ಮಾತನಾಡಿ ಕಾಲ್ ಕಟ್ ಮಾಡಿದ. ನನಗೆ ನನ್ನ ಸ್ನೇಹಿತನ ಮೇಲೆ ನಂಬಿಕೆ ಇದೆ. ಆತ ಅವರನ್ನ ಎಜುಕೇಟ್ ಮಾಡ್ತನೆ ಅಂತ. ಈ ವಿಚಾರದಲ್ಲಿ ನನ್ನ ಯೋಚನ ಲಹರಿ ಬದಲಿಸಿದ ಎರಡು ಸನ್ನಿವೇಶಗಳನ್ನ ಹೇಳ್ತಿನಿ.

ಮೊದಲ ಸನ್ನಿವೇಶ- ಸ್ಲಂ ಅಲ್ಲೇ ಹುಟ್ಟಿ ಬೆಳೆದು, ಈಗ ಒಂದು ಒಳ್ಳೇ ಹುದ್ದೇಲಿ ಇರುವ ನನ್ನ ಸ್ನೇಹಿತ ಸಂತೋಷ್ ಹೇಳಿದ್ದ: 'ಒಮ್ಮೆ ಚಿಕ್ಕಂದಿನಲ್ಲಿ ನನಗೆ ಮುದ್ದೆ ತಿನ್ನುವ ಆಸೆ ಆಗಿತ್ತು. ಒಂದು ದಿನ ನಿಮ್ಮಂಥ ಸಾಹುಕಾರರ ಮನೇಲಿ ಏನೋ ಫಂಕ್ಷನ್ ಅಂತ ಅನ್ನ, ಬಾತು, ಪಲ್ಯ ಎಲ್ಲಾ ಉಳಿದು ಬಿಟ್ಟಿತ್ತು. ಅದು ನೇರವಾಗಿ ನಮ್ಮ ಸ್ಲಂಗೆ ನಮ್ಮ ಮನೆಗೆ ತಲುಪಿತ್ತು, ನಮ್ಮವ್ವ ಊಟಕ್ಕೆ ಕೊಟ್ಲು ನಾನು ಬೇಡ ಇದು ಅಂದೆ, ಅದ್ಕೆ ನಮ್ಮವ್ವ ಯಾರೋ ಪುಣ್ಯಾತ್ಮರು ಕೊಟ್ಟವರೆ ತಿನ್ನು ಅಂದ್ಲು, ಅವ್ವ ಅವರು ನಮ್ಮ ಮೇಲಿನ ಕಾಳಜಿಯಿಂದ ಕೊಟ್ಟಿಲ್ಲ ಅವರ ಪ್ರತಿಷ್ಠೆಗೆ ಇದ್ನ ಮಾಡಿ, ನಾಯಿಗಳು ತಿನ್ನೊಲ್ಲ ಎಂದು ನನಗೆ ಕೊಟ್ಟಿದ್ದಾರೆ ಅಂದೆ ಅದ್ಕೆ ನಮ್ಮವ್ವ ವಿದ್ಯೆ ಕಲಿತಿದಿನಿ ಅಂತ ನಿಂಗೆ ಕೊಬ್ಬು ಅಂದ್ಲು. ನನ್ನ ಮನಸ್ಸಿನಲ್ಲಿ ಇದ್ಕೆ ಅಲ್ಲವೆ ನಮಗೆ ವಿದ್ಯೆ ಸಿಗಬಾರ್ದು ಅಂತ ಸಂಚು ಮಾಡೋದು, ನಿಮ್ಮ ವೇಸ್ಟ್ ನ ತಿನ್ನೋರಿಲ್ಲ ಬಳಿಯೋರಿಲಲ್ಲ ಎಂದು' ಅಂದ. ನಾನು ಮೌನಕ್ಕೆ ಶರಣಾಗಿದ್ದೆ. ಅವನು ಮುಂದುವರಿಸಿದ 'ಅವತ್ತು ನನ್ನ ಮುದ್ದೆ ತಿನ್ನುವ ಆಸೆಗೆ ಕಲ್ಲು ಬಿತ್ತು, ಹಸಿವು ನೀಗಿಸಲು ಆ ಕ್ರಿಮಿನಲ್ ಸಾಹುಕಾರರ ವೇಸ್ಟ್ ನೆ ತಿಂದೆ'. ಅಂದು ಬಿಟ್ಟ ಪುಣ್ಯದ ಕೆಲಸ ಅಂತಿದ್ದ ಭಾವನೆ ಒಂದೇ ಏಟಿಗೆ ಅಗತ್ಯಕ್ಕಿಂತ ಹೆಚ್ಚಾಗಿ ಅಡಿಗೆ ಮಾಡುವುದು ದೇಶದ್ರೋಹ ಮತ್ತೆ ಆ ರೀತಿ ಪ್ರತಿಷ್ಟೆಗಾಗಿ ವೇಸ್ಟ್ ಮಾಡೋರು ಮತ್ತು ಬಡವರಿಗೆ ಹಂಚುವವರು ದೇಶ ದ್ರೋಹಿಗಳು ಅಂತ ಬದಲಾಯ್ತು.

ಎರಡನೆ ಸನ್ನಿವೇಶ- ಭಾರತದ ಶ್ರೀಮಂತ ಕುಟುಂಬ ಒಂದು ಯಾವುದೋ ದೇಶದಲ್ಲಿ ಮೆನುಲಿ ಇರೋ- ಬರೋದ್ನೆಲ್ಲಾ ಆರ್ಡರ್ ಮಾಡಿ ಸ್ವಲ್ಪ ತಿಂದು, ಪ್ಲೇಟ್ ಅಲ್ಲೇ ಜಾಸ್ತಿ ಬಿಟ್ಟು ಬಿಲ್ ಕೇಳಿದಾಗ ಹೋಟ್ಲಿನವನು ಎಲ್ಲವನ್ನು ತಿನ್ನಿ ಆ ಮೇಲೆ ಕೊಡ್ತಿನಿ ಅಂದನಂತೆ, ಅದ್ಕೆ ಸಾಲಗಾರ ಭಾರತ ದೇಶದ ಶ್ರೀಮಂತ ಕುಟುಂಬದವರು ದುಡ್ಡು ನಮ್ದು ನಮಗೆ ಇಷ್ಟ ಬಂದಷ್ಟು ತಿಂತಿವಿ ಅಂದ್ರಂತೆ. ಹೋಟೆಲ್ ನವನು ಯಾರಿಗೋ ಕಾಲ್ ಮಾಡಿದ್ನಂತೆ 10 ನಿಮಿಷದಲ್ಲಿ ಗ್ರೀನ್ ಪೋಲೀಸ್‍ನವರು ಅಂತ ಬಂದು ಭಾರತೀಯ ಶ್ರೀಮಂತರಿಗೆ ದುಡ್ಡು ನಿಮ್ಮದೆ ಇರಬಹುದು ಸಂಪನ್ಮೂಲ ಎಲ್ಲರದು ಈ ರೀತಿ ವೇಸ್ಟ್ ಮಾಡ ಬಾರದು ಅಂತ ಹೇಳಿ 50 ಸಾವಿರ ರೂಪಾಯಿ ದಂಡ ಹಾಕಿ 3 ದಿನ ಜೈಲಿಗೆ ಹಾಕಿದ್ರಂತೆ. ಈ ಕಥೆ ಕೇಳಿದ ಮೇಲೆ, ಪುಣ್ಯದ ಕೆಲಸ ಅಂತಿದ್ದ ಭಾವನೆ ದೇಶ ದ್ರೋಹ ಅಂತ ಬದಲಾಗಿದ್ದು ಇನ್ನೂ ಬಲವಾಯ್ತು.

ನಿಮಗು ಈ ಪುಣ್ಯದ ಕೆಲಸ ಅಂತಿರೋ ಭಾವನೆ, ದೇಶ ದ್ರೋಹ ಅಂತೆನಿಸಿದರೆ, ಈ ಬರಹವನ್ನು ಬೇರೆಯವರಿಗೂ ಓದುವಂತೆ ಪ್ರೇರೇಪಿಸಿ ಅಥವಾ ನಿಮ್ಮದೆ ರೀತಿಯಲ್ಲಿ ಈ ವಿಚಾರವನ್ನು ಸ್ಪ್ರೆಡ್ ಮಾಡಿ ಎಜುಕೇಟ್ ಮಾಡಿ…

ಕಡೆಯಾದಾಗಿ ಕುವೆಂಪುರವರ ಕೆಲವು ಸಾಲುಗಳನ್ನು ನೆನಪು ಮಾಡಲು ಇಚ್ಚಿಸುತ್ತೀನಿ.,.. ಪ್ರತಿಯೊಬ್ಬನ ಜೀವನದಲ್ಲಿಯೂ ಒಂದು ಸಂಧಿಕಾಲ ಬರುತ್ತದೆ. ಚಿಕ್ಕಂದಿನಲ್ಲಿ ತಂದೆತಾಯಿಗಳಿಂದಲೂ ಇತರರಿಂದಲೂ ವಿಮರ್ಶೆಯಿಲ್ಲದೆ- ವಿಚಾರವಿಲ್ಲದೆ- ಸಂಶಯವಿಲ್ಲದೆ ಸ್ವೀಕರಿಸಿದ ಭಾವನೆ, ಆಲೋಚನೆ, ಶ್ರದ್ಧೆ, ಕಥೆ, ನಂಬುಗೆ ಇತ್ಯಾದಿಗಳ ಶ್ರುತಿ (ಹೇಳಿದೊಡನೆ ನಂಬುವುದು)ಗೂ ತರುವಾಯ ತಾರುಣ್ಯದಲ್ಲಿ ಬುದ್ಧಿ ಪ್ರಬುದ್ಧವಾದ ಮೇಲೆ ಮೂಡುವ ವಿಮರ್ಶೆಯ- ವಿಚಾರದ- ಸಂಶಯದ ಪ್ರತಿಭಟನೆಯ ಮತಿಗೂ (ಹೇಳಿದ್ದು ಸಕಾರಣವಾಗಿದ್ದರೆ ಮಾತ್ರ ನಂಬುವುದು) ಗದಾಯುದ್ಧವಾಗುವ ಕ್ರಾಂತಿಕಾಲದಿಂದ ಬುದ್ಧಿಯಿರುವವರು ಯಾರೂ ತಪ್ಪಿಸಿಕೊಳ್ಳಲಾರರು. ಅಂತಹ ಮಾನಸಿಕ ಕ್ರಾಂತಿ ಹೊಸ ಬಾಳಿಗೆ ಕಾರಣವಾಗುತ್ತದೆ ಹಾಗೆ ಎರಡನೆಯ ಸಾರಿ ಹೊಸತಾಗಿ ಹುಟ್ಟಿದವರೆಲ್ಲರೂ ನಿಜವಾಗಿ ದ್ವಿಜರಾಗುತ್ತಾರೆ.

ಪ್ರತಿಷ್ಟೆಗಾಗಿ ಅಗತ್ಯಕ್ಕಿಂತ ಹೆಚ್ಚು ಆಹಾರವನ್ನ ತಯಾರಿಸಿ, ಉಳಿದ ಮೇಲೆ ಅದನ್ನು ಬಡವರಿಗೆ ಹಂಚುವುದು ದೇಶದ್ರೋಹದ ಕೆಲಸವೆಂದು ನಾವೆಲ್ಲರು ಪರಿಗಣಿಸ ಬೇಕಾದ ಅನಿವಾರ್ಯತೆ ಇದೆ ಮತ್ತು ಸರ್ಕಾರ ಈ ವಿಚಾರವಾಗಿ strict ಆಗಿ ಕಾನೂನು ಮಾಡೋವರೆಗೆ ನಾವೆಲ್ಲರು ಈ ನಿಟ್ಟಿನಲ್ಲಿ ಸರ್ಕಾರದ ಮೇಲೆ ಒತ್ತಡ ಹೇರಬೇಕಾಗಿದೆ.

ಜುಲೈ 10, 2016

ಹಿಜ್ಡಾಗಳಿಗೊಂದು ಪ್ರತ್ಯೇಕ ಟಾಯ್ಲೆಟ್ಟು.

ಸಾಂದರ್ಭಿಕ ಚಿತ್ರ
10/07/2016
ಹಿಜ್ಡಾಗಳ ಬದುಕೇ ವಿಚಿತ್ರ ವಿಕ್ಷಿಪ್ತವಾಗಿ ಕಾಣುತ್ತದೆ. ನಗರಗಳು ದೊಡ್ಡದಾದಷ್ಟೂ ಇವರು ಹೆಚ್ಚು ಕಾಣುತ್ತಾರೆ. ಅಂಗಡಿ ಮುಂಗಟ್ಟುಗಳಿಂದ, ರೈಲುಗಳಲ್ಲಿ ಭಿಕ್ಷೆ ಪಡೆಯುತ್ತಿದ್ದವರು ಟ್ರಾಫಿಕ್ ಸಿಗ್ನಲ್ಲುಗಳಿಗೆ ತಮ್ಮ ಕಾರ್ಯಕ್ಷೇತ್ರವನ್ನು ವಿಸ್ತರಿಸಿದ್ದಾರೆ. ಹಲವು ಮದುವೆಗಳಲ್ಲಿ ಇವರನ್ನು ಕರೆಸಿ ದುಡ್ಡು ಕೊಟ್ಟು ಕಳುಹಿಸುವುದು ಸಂಪ್ರದಾಯದಂತೆ ನಡೆಯಲಾರಂಭಿಸಿದೆ. ಹಲವೆಡೆ ಇವರೇ ಮದುವೆ ಮನೆಗೆ ಬಂದು ದುಡ್ಡು ಪಡೆದು ಹೋಗುವುದೂ ನಡೆಯುತ್ತಿದೆ. ಈ ಕಾರಣಕ್ಕೇ ಏನೋ ಇವರನ್ನು ಸೌಜನ್ಯದ ರೂಪದಲ್ಲಿ 'ಮಂಗಳಮುಖಿ' ಎಂದು ಬರೆಯುವುದು ಹೆಚ್ಚೆಚ್ಚು ನಡೆಯುತ್ತಿದೆ. ಮುಖದಲ್ಯಾವ ಮಂಗಳ ಅಮಂಗಳ? ಮಾತನಾಡುವಾಗ ಹಿಜ್ಡಾ ಚಕ್ಕಾ ಎಂದು ಹೇಳಿದರೂ ಬರೆಯುವಾಗ ಅದೇಕೆ ಮಂಗಳಮುಖಿ ಎಂದು ಬರೆಯುತ್ತಾರೋ? ತೃತೀಯಲಿಂಗಿಗಳು ಎಂದು ಕರೆಯುವುದು ಹೆಚ್ಚು ಸೂಕ್ತವೇನೋ.

ಮುಂಚೆಲ್ಲ ಹಿಜ್ಡಾಗಳು ಹಣ ಕೇಳಿದ ತಕ್ಷಣ ಕೊಡದೇ ಹೋದರೆ ದುಡ್ಡು ಕೊಡುವವರೆಗೂ ಪೀಡಿಸುತ್ತಿದ್ದರು, ಈಗ ಪರವಾಯಿಲ್ಲ ಮುಂದೆ ಹೋಗಿ ಎಂದ ತಕ್ಷಣ ಹೊರಟುಹೋಗುತ್ತಾರೆ. ಆ ಕ್ಷಣಕ್ಕೆ 'ಏನ್ ಬದುಕಪ್ಪ ಇವರ್ದು' ಎಂದು ಬಯ್ದುಕೊಂಡರೂ ಮತ್ಯಾವ ಬದುಕನ್ನು ಸಮಾಜ ಇವರಿಗೆ ಕೊಟ್ಟಿದೆ ಎಂಬ ಪ್ರಶ್ನೆಯೂ ಉತ್ತರ ಸಿಗದಂತೆ ಕಾಡುತ್ತದೆ. ಅಲ್ಲೆಲ್ಲೋ ಒಬ್ಬರು ಪದ್ಮಿನಿ ಪ್ರಕಾಶ್ ಎನ್ನುವ ತೃತೀಯಲಿಂಗಿ ಸುದ್ದಿ ಓದುವವರಾಗಿ ಕೆಲಸಕ್ಕೆ ಸೇರಿದರು. ಮತ್ತೆಲ್ಲೋ ಅಪರೂಪಕ್ಕೆ ತೃತೀಯಲಿಂಗಿಗಳು ಚುನಾವಣೆಗೆ ನಿಂತರು ಎನ್ನುವ ವರದಿಗಳು ಆಗೀಗ ಕಾಣಿಸಿಕೊಳ್ಳುತ್ತವೆಯಾದರೂ ಹೆಚ್ಚಿನಂಶ ತೃತೀಯಲಿಂಗಿಗಳೆಂದರೆ ಹಣಕ್ಕಾಗಿ ಪೀಡಿಸುವವರು ಮತ್ತು ವೇಶ್ಯಾವಾಟಿಕೆಯಲ್ಲಿರುವವರು ಎನ್ನುವುದೇ ನಮಗೆ ತೋಚುವ ಸತ್ಯ.

ಪಶ್ಚಿಮ ಬಂಗಾಳ ಸರಕಾರ ತೃತೀಯಲಿಂಗಿಗಳಿಗೆ ಶಾಲೆಗಳಲ್ಲಿ ಪ್ರತ್ಯೇಕ ಶೌಚಾಲಯ ಕಟ್ಟಬೇಕೆಂದು ನಿರ್ಧರಿಸಿರುವುದರ ಬಗೆಗಿನ ಸುದ್ದಿ ಓದಿದಾಗ ಭಾರತ ಹತ್ತು ವರುಷದ ನಂತರ ಏನನ್ನು ಯೋಚಿಸುತ್ತದೋ ಅದನ್ನು ಬಂಗಾಳ ಇವತ್ತು ಯೋಚಿಸುತ್ತದೆ ಎನ್ನುವ ಮಾತು ನೆನಪಾಯಿತು. ಅಲ್ಲಿನ ಉನ್ನತ ಶಿಕ್ಷಣ ಇಲಾಖೆ ಸರಕಾರಿ ಶಾಲಾ ಕಾಲೇಜುಗಳ ಪ್ರಿನ್ಸಿಪಾಲರಿಗೆ ತೃತೀಯಲಿಂಗಿಗಳಿಗೆ ಪ್ರತ್ಯೇಕ ಶೌಚಾಲಯ ಕಟ್ಟುವಂತೆ ಆದೇಶ ಕಳುಹಿಸಿದೆ. ಕೊಲ್ಕತ್ತಾದ ಲಾಲ್ ಬಜಾರಿನ ಪೋಲೀಸ್ ಠಾಣೆಯಲ್ಲೀಗಾಗಲೇ ತೃತೀಯಲಿಂಗಿಗಳಿಗೊಂದು ಶೌಚಾಲಯ ಕಟ್ಟಲಾಗುತ್ತಿದೆ ಎಂದು ಇಂಡಿಯನ್ ಎಕ್ಷ್ ಪ್ರೆಸ್ ವರದಿ ಮಾಡಿದೆ. ತೃತೀಯಲಿಂಗಿಗಳು ಶಾಲಾ ಕಾಲೇಜುಗಳಲ್ಲಿ ಓದುತ್ತಾರೆ ಎನ್ನುವುದೇ ನಮ್ಮ ಯೋಚನಾಲಹರಿಗೆ ದಕ್ಕದೇ ಇರುವಾಗ, ಅವರನ್ನು ಮನುಷ್ಯರೆಂದು ಪರಿಗಣಿಸುವುದೇ ನಮಗೆ ಕಷ್ಟಕರವಾಗಿರುವಾಗ ಪಶ್ಚಿಮ ಬಂಗಾಳದ ನಿರ್ಧಾರ ತೃತೀಯಲಿಂಗಿಗಳ ಬದುಕಿಗೊಂದು ಘನತೆ ಕೊಡುವಂತೆ ಮಾಡಿದೆ. ತೃತೀಯಲಿಂಗಿಗಳ ಬದುಕೂ ಬದಲಾಗಲಿ.

ಜುಲೈ 8, 2016

ಮೇಕಿಂಗ್ ಹಿಸ್ಟರಿ: ಕೃಷಿ ಕಂದಾಯ ಮತ್ತದರ ಶೋಷಕ ಶರಾತ್: ಭಾಗ 3

ashok k r saketh rajan
ಸಾಕೇತ್ ರಾಜನ್ 
ಕನ್ನಡಕ್ಕೆ: ಡಾ. ಅಶೋಕ್. ಕೆ. ಆರ್
08/07/2016
ಬಾಂಬೆ ಪ್ರಾಂತ್ಯದಲ್ಲಿ, ಈ ಆರ್ಥಿಕ ಸಂಕಷ್ಟಗಳು ಭೂ ಕಂದಾಯ ಪದ್ಧತಿಯ ಕಾರಣದಿಂದ ಮತ್ತಷ್ಟು ಹೆಚ್ಚಾಯಿತು, ಅದರಲ್ಲೂ 1820ರ ಕೊನೆಯ ಭಾಗ ಮತ್ತು 1830ರ ದಶಕದ ಪ್ರಿಂಗಲ್ ವಸಾಹತಿನಲ್ಲಿ ಇದನ್ನು ಗಮನಿಸಬಹುದು. ಪ್ರಿಂಗಲ್ ಅವಾಸ್ತವಿಕವಾಗಿ ಬೆಳೆಯಿಂದ ಬರುವ ಲಾಭದ ಅಂದಾಜಿನ ಮೇಲೆ ಭೂಕಂದಾಯವನ್ನು ನಿರ್ಧರಿಸಿದ್ದ. ಜೊತೆಗೆ, ಇವು ಮತ್ತಿತರ ವಸಾಹತುಗಳಲ್ಲಿ ಮಾಡಿದ ಮತ್ತೊಂದು ತಪ್ಪೆಂದರೆ, ಕೊನೆಯ ಪೇಶ್ವೆಗಳು ನಿಗದಿಪಡಿಸಿದ್ದ ಭೂಕಂದಾಯವನ್ನು ಮೂಲಾಧಾರವಾಗಿಟ್ಟುಕೊಂಡು ಬ್ರಿಟೀಷರು ಕಂದಾಯವನ್ನು ನಿಗದಿಪಡಿಸಿದ್ದು. ಪರಿಣಾಮವಾಗಿ, ವಿಪರೀತದ ಭೂಕಂದಾಯ ನಿಗದಿಯಾಗಿಬಿಟ್ಟಿತು. ಧಾರವಾಡ ಜಿಲ್ಲೆಯ ಬಂಕಾಪುರ ತಾಲ್ಲೂಕಿನ ಅಧಿಕಾರಿಯೊಬ್ಬ 1846ರಲ್ಲಿ, ‘ಬಂಕಾಪುರ ನಮ್ಮಾಡಳಿತದ ಅವಧಿಯುದ್ದಕ್ಕೂ ವಿಪರೀತದ ಭೂಕಂದಾಯದಿಂದ ನರಳಿತ್ತು’ ಎಂದು ಹೇಳಿರುವುದು ದಕ್ಷಿಣದಲ್ಲಿರುವ ಒಂದು ಉದಾಹರಣೆ. ಶೋಷಣೆ ಮತ್ತು ಹೆಚ್ಚಿನ ಕಂದಾಯ ಕೃಷಿಯನ್ನು ನರಳಿಸಿತು. ನಾವು ಗಮನಿಸಿರುವಂತೆ, ಡೆಕ್ಕನ್ನಿನ ಭೂಮಿ ಅದರ ಜನಸಂಖೈಗೆ ಹೋಲಿಸಿದರೆ ಸಾಕಷ್ಟಿದೆ, ಆದರೆ ಈಗ ಕೃಷಿ ಯೋಗ್ಯ ಭೂಮಿಯ ಬಹಳಷ್ಟು ಪಾಲು ಬೇಡಿಕೆಯಲ್ಲಿನ ಕುಸಿತ ಮತ್ತು ಭೂಕಂದಾಯದ ಕಾರಣದಿಂದಾಗಿ ಉಳುಮೆಯೇ ಆಗದೆ ಕರಾಬು ಬಿದ್ದಿದೆ. ಹತ್ತಿ ಬೆಳೆಯಲು ಉತ್ತಮ ಭೂಮಿ ಹೊಂದಿರುವ ಬಂಕಾಪುರದಲ್ಲಿ, 1846ರ ಸಮಯದಲ್ಲಿ ನಡೆದ ಕೃಷಿ ಹಿಂದೆಂದಿಗಿಂತಲೂ ಕಡಿಮೆಯಾಗಿದೆ, ಕಳೆದ ಮೂವತ್ತು ವರುಷಗಳ ಶಾಂತಿ ಮತ್ತು ಭದ್ರತೆಯ ಕಾರಣದಿಂದ ಇಲ್ಲಿ ಸಹಜವಾಗಿ ಕೃಷಿ ಚಟುವಟಿಕೆಗಳಲ್ಲೂ ಹೆಚ್ಚಳವಾಗಬೇಕಿತ್ತು, ಆದರದು ಸಾಧ್ಯವಾಗಿಲ್ಲ’. ಇದೇ ಸಮಯದಲ್ಲಿ, ಬ್ರಿಟೀಷರ ತೆರಿಗೆ ಬೇಡಿಕೆಗಳು ಬಹಳಷ್ಟು ಸಲ ಕಟ್ಟಲಾಗದಷ್ಟಿತ್ತು ಮತ್ತು ಶೋಷಕವಾಗಿತ್ತು. ಬಂಕಾಪುರದಲ್ಲಿ, ಕೃಷಿ ಭೂಮಿಗೆ ಎಕರೆಗೆ ನಲವತ್ತು ರುಪಾಯಿಯಷ್ಟು ನಿಗದಿಪಡಿಸಲಾಗಿತ್ತು ಮತ್ತಿದರ ಪರಿಣಾಮವಾಗಿ, ‘ಭೂಮಿಯೊಡೆಯ ದಿವಾಳಿಯಾಗುತ್ತಿದ್ದ, ಆದರೆ ತಾಲ್ಲೂಕಿನ ಇತರೆ ಭಾಗದಲ್ಲಿರುವ ದೊಡ್ಡ ದೊಡ್ಡ ಭೂಮಾಲೀಕರು ಏನನ್ನೂ ಕಟ್ಟದೆ ಅಥವಾ ಚೂರೇ ಚೂರು ಮೊತ್ತವನ್ನು ಕಟ್ಟಿ ತಪ್ಪಿಸಿಕೊಳ್ಳುತ್ತಿದ್ದರು; ತಪ್ಪಿಸಿಕೊಳ್ಳಲು ಅಧಿಕಾರಿಗಳಿಗೆ ಲಂಚವನ್ನು ಕೊಡುತ್ತಿದ್ದರೆಂಬುದು ಸತ್ಯ. 1830ರ ದಶಕದಲ್ಲಿ ವಿನ್ ಗೇಟ್ ಎಂಬ ಅಧಿಕಾರಿಯ ದಿನಚರಿಯ ಪುಸ್ತಕದಲ್ಲಿ ಇಂತಹ ಹತ್ತಲವು ಉದಾಹರಣೆಗಳಿರುವುದು ಬಂಕಾಪುರದ ಅನುಭವಗಳು ವಿಶೇಷವಾದದ್ದೇನಲ್ಲ ಎನ್ನುವುದನ್ನು ತಿಳಿಸುತ್ತದೆ. 

ಇವೆಲ್ಲವೂ ಉಂಟುಮಾಡಿದ ಸಾಮಾಜಿಕ ಪರಿಣಾಮಗಳು ಮುಖ್ಯವಾದವು. ಹೆಚ್ಚಿನ ಭೂಕಂದಾಯವು ಈಗಾಗಲೇ ಅಸ್ತಿತ್ವದಲ್ಲಿ ಭೂಮಿಯೊಡೆಯರ ಗುಂಪುಗಳನ್ನು ನಿಶ್ಯಕ್ತಗೊಳಿಸಿತು ಅಥವಾ ನಾಶಗೊಳಿಸಿತು. ಇದೇ ಸಮಯದಲ್ಲಿ ಕೃಷಿ ಯೋಗ್ಯ ಭೂಮಿಯು ಕೃಷಿ ಕಾಣದೆ ಕರಾಬಾಯಿತು, ಹೊಸಬರು ಪ್ರವೇಶಿಸಲು ಅನುವು ಮಾಡಿಕೊಟ್ಟಿತು. ಮತ್ತೊಂದೆಡೆ, ಬಹಳಷ್ಟು ಭೂ ಮಾಲೀಕರು, ಬಂಕಾಪುರದ ತೆರಿಗೆ ಕಳ್ಳರಂತೆ, ಪರಿಸ್ಥಿತಿಯನ್ನು ತಮ್ಮನುಕೂಲಕ್ಕೆ ತಕ್ಕಂತೆ ಬದಲಿಸಿಕೊಂಡರು….” (230) 

ಸರಕಾರದ ಈ ದುಬಾರಿ ಕಂದಾಯದ ಬಗ್ಗೆ ದಕ್ಷಿಣ ಮರಾಠ ಪ್ರದೇಶದ ಕಲೆಕ್ಟರ್ ಥಾಕ್ರೆಯೇ ಚೆಂದವಾಗಿ ಒಪ್ಪಿಕೊಳ್ಳುತ್ತಾನೆ. ನಿರ್ಬಿಡೆಯಿಂದ ಅವನು ಹೇಳುತ್ತಾನೆ: “ತನ್ನ ಸಲಹೆಗಳೇ ಮುಖ್ಯವೆಂದೆಣಿಸುವ ಕಲೆಕ್ಟರ್ ದೊಡ್ಡ ಮೊತ್ತವನ್ನು ನಿಗದಿಪಡಿಸುತ್ತಾನೆ, ಮತ್ತವನ ಅಮಲ್ದಾರರು, ಅವನ ಉದಾಹರಣೆಯನ್ನು ತೆಗೆದುಕೊಂಡು, ಕುರುಡಾಗಿ ಮತ್ತು ಗಡುಸಾಗಿ ಪೂರ್ತಿ ಮೊತ್ತ ಕಟ್ಟಿಸಿಕೊಳ್ಳುತ್ತಾರೆ. ಒಂದು ಕೆಟ್ಟ ಹವಾಮಾನದ ಪರಿಸ್ಥಿತಿಯಲ್ಲಿ ಇದು ಬಿಕ್ಕಟ್ಟನ್ನು ಸೃಷ್ಟಿಸುತ್ತದೆ; ಆದರೆ ಕಲೆಕ್ಟರ್ ಅಸಂತುಷ್ಟಗೊಂಡುಬಿಡಬಹುದೆಂದು ಹೆದರುವ ಮತ್ತು ಮನ್ನಾ ಮಾಡುವ ಬಗ್ಗೆ ಖಚಿತತೆ ಇಲ್ಲದ ಅಮಲ್ದಾರರು ಈ ಬಡತನಕ್ಕೆ ತಾನು ಕಾರಣಕರ್ತನಾಗಬಹುದೆಂಬುದನ್ನು ಯೋಚಿಸುವ ಮೊದಲೇ ರೈತರಿಂದ ಎಷ್ಟು ಸಾಧ್ಯವೋ ಅಷ್ಟು ಹಣವನ್ನು ಹಿಂಜಿ ಬಿಡುತ್ತಾರೆ. ಬೇಡಿಕೆಯನ್ನು ಸರಿಯಾಗಿ ಅವನು ಜಾರಿಗೊಳಿಸುವಂತೆ ಮಾಡುವುದೇ ನಮ್ಮ ಸರಕಾರದ ಶಕ್ತಿ….” (231) 

ಚಾರ್ಲ್ಸ್ ವರ್ಥ್ ಪದೇ ಪದೇ ವೈಯಕ್ತಿಕ ಆಯಾಮಗಳನ್ನು ಕೊಟ್ಟು ವಸಾಹತು ಲೂಟಿಗೆ ಮಾನವೀಯ ಮುಖವಾಡ ತೊಡಿಸುವಂತೆ, ಇದು ಅಮಲ್ದಾರ ಮತ್ತು ಕಲೆಕ್ಟರ್ ನಡುವೆ ಇತ್ಯರ್ಥವಾಗಿಬಿಡಬಹುದಾದ ಪ್ರಶ್ನೆಯಲ್ಲ. ಬದಲಿಗಿದು ಆಕ್ರಮಣಕಾರಿ ವಸಾಹತುಶಾಹಿ ತನ್ನಿಬ್ಬರು ದಲ್ಲಾಳಿಗಳನ್ನು ರೈತರ ಮೇಲೆ ಯಾವುದೇ ಅಡೆತಡೆಯಿಲ್ಲದ ಶೋಷಣೆ ಮಾಡಲು ಪ್ರೋತ್ಸಾಹ ಕೊಟ್ಟ ಪ್ರಶ್ನೆಯಾಗಿದೆ. 

ಎಲ್ಲಾ ವಿಧಾನಗಳಲ್ಲೂ, ಬಹುಶಃ, ಈ ಭೂಕಂದಾಯಕ್ಕಿಂತಲೂ ಹೆಚ್ಚಿನ ವಿನಾಶಕಾರಿ ಪದ್ಧತಿಯೆಂದರೆ ಮೈಸೂರಿನ ಕೈಗೊಂಬೆ ಸರಕಾರ ಇಡಿ ಇಡೀ ತಾಲ್ಲೂಕುಗಳನ್ನೇ ಅಮಲ್ದಾರರಿಗೆ ವಾರ್ಷಿಕ ಹರಾಜಿನಲ್ಲಿ ಕೊಟ್ಟುಬಿಡುತ್ತಿದ್ದುದು. ಇದು ಶರಾತ್ ವ್ಯವಸ್ಥೆ ಎಂಬೆಸರಿನಲ್ಲಿ ವ್ಯಾಪಕವಾಯಿತು. ಶಾಂತ ದೇಹದ ಮೇಲಿನ ಸೋಮಾರಿ ಗಾಯವಾದ ಈ ಶರಾತ್ ವ್ಯವಸ್ಥೆ, ವಸಾಹತು ಬಿರುಗಾಳಿಯ ಕಣ್ಣಿನಂತಿತ್ತು, ಇದು ಕರ್ನಾಟಕವನ್ನು ಪುನಶ್ಚೇತನಗೊಳ್ಳಲಾಗದ ಬಿಕ್ಕಟ್ಟಿಗೆ ದೂಡಿಬಿಟ್ಟಿತು. 

ಶರಾತ್ ವ್ಯವಸ್ಥೆಯನ್ನು ಪರಿಚಯಿಸಿದ್ದು ಇನ್ನೇನು ಪೂರ್ಣಯ್ಯನವರು ನಿವೃತ್ತರಾಗುತ್ತಾರೆ ಎನ್ನುವಾಗ, 1811ರಲ್ಲಿ. ರೈಸ್ ನಮಗೆ ಹೇಳುತ್ತಾರೆ: “ಎಲ್ಲಾ ರೀತಿಯ ಪ್ರಯತ್ನಗಳೂ ರಾಜನ ಕುಸಿತವನ್ನು ತಡೆಯುವಲ್ಲಿ ವಿಫಲವಾಗಿದ್ದವು. ರಾಜ್ಯದ ಉನ್ನತ ಕಛೇರಿಗಳನ್ನು ಹೆಚ್ಚಿನ ಮೊತ್ತ ಕೂಗಿದ ಹರಾಜುದಾರನಿಗೆ ಮಾರಿಬಿಡಲಾಗುತ್ತಿತ್ತು; ಪೂರ್ಣಯ್ಯನವರ ಆಡಳಿತಾವಧಿಯಲ್ಲಿ ಹುಟ್ಟಿಕೊಂಡ ಶರಾತ್ ವ್ಯವಸ್ಥೆಯಿಂದ ಜನರನ್ನು ಶೋಷಿಸಲಾಗುತ್ತಿತ್ತು. ಶರಾತ್ ಎಂಬುದು ಅಮಲ್ದಾರ ಮಾಡಿಕೊಳ್ಳುವ ಗುತ್ತಿಗೆ, ಸರಕಾರಕ್ಕೆ ಒಂದು ನಿರ್ದಿಷ್ಟ ಮೊತ್ತದ ಆದಾಯವನ್ನು ತರುತ್ತೇನೆಂಬ ಒಪ್ಪಿಗೆಯ ಗುತ್ತಿಗೆಯದು; ಅಷ್ಟು ಮೊತ್ತವನ್ನು ಸಂಗ್ರಹಿಸುವಲ್ಲಿ ವಿಫಲವಾದರೆ ಉಳಿಕೆ ಮೊತ್ತವನ್ನು ತನ್ನ ಕೈಯಿಂದಲೇ ಕಟ್ಟಿ ಮೊತ್ತವನ್ನು ಸರಿಪಡಿಸಬೇಕಿತ್ತು, ಮತ್ತು ಹೇಳಿದ ಮೊತ್ತಕ್ಕಿಂತ ಹೆಚ್ಚಿನ ಮೊತ್ತ ಸಂಗ್ರಹವಾದರೆ ಅಧಿಕ ಮೊತ್ತವನ್ನು ಸರಕಾರಕ್ಕೆ ಕಟ್ಟಬೇಕಿತ್ತು. ಅಮಲ್ದಾರರು ಸಂಗ್ರಹಿಸಬೇಕಿದ್ದ ಮೊತ್ತ ಸಾಮಾನ್ಯವಾಗಿ ಹಿಂದಿನ ವರುಷ ಸಂಗ್ರಹಿಸಿದ ಮೊತ್ತಕ್ಕಿಂತ ಅಧಿಕವಾಗಿರುತ್ತಿತ್ತು. ಮುಚ್ಚಳಿಕೆಯಲ್ಲಿ, ಅಮಲ್ದಾರ ರೈತರನ್ನು ಶೋಷಣೆಗೆ ಒಳಪಡಿಸುವುದಿಲ್ಲ, ಹೊಸ ಹೊಸ ತೆರಿಗೆಗಳನ್ನು ವಿಧಿಸುವುದಿಲ್ಲ, ಸರಕಾರೀ ಶೇರುಗಳನ್ನು ಕೊಳ್ಳಲು ಒತ್ತಾಯಿಸುವುದಿಲ್ಲ ಎಂದು ಬರೆದುಕೊಡಬೇಕಿತ್ತು; ಆದರಿದು ಕೇವಲ ಹೆಸರಿಗೆ ಮಾತ್ರ. ಈ ಅಂಶಗಳನ್ನು ಅಮಲ್ದಾರರು ಮೀರಿದರು ಎಂಬ ಯಾವುದೇ ದೂರನ್ನು ಸರಕಾರ ಗಮನಕ್ಕೆ ತೆಗೆದುಕೊಳ್ಳುತ್ತಿರಲಿಲ್ಲ. ಪರಿಣಾಮವಾಗಿ ರೈತರು ಬಡವರಾದರು….ಈ ಪರಿಸ್ಥಿತಿಯಿಂದ ಬಿಕ್ಕಟ್ಟು ಸೃಷ್ಟಿಯಾಯಿತು…..ಬಿಕ್ಕಟ್ಟು ರೈತರ ಮೇಲೆ ಬಿತ್ತು, ಸರ್ವಾಧಿಕಾರಿ ಶರಾತಿ ಫೌಜಿದಾರ ಮತ್ತು ಅಮಲ್ದಾರರ ಕಾರಣದಿಂದ ಅವರು ನರಳಲಾರಂಭಿಸಿದರು.” (232) 

ಮುಖ್ಯ ಕಾರ್ಯದರ್ಶಿಗೆ ಬರೆದ ಪತ್ರದಲ್ಲಿ, ಕಾಸಾಮೈಯೂರ್ (casamaijor) ಶರಾತ್ ವ್ಯವಸ್ಥೆಯ ಮತ್ತೊಂದು ವಿನಾಶಕಾರಿ ಲಕ್ಷಣವನ್ನು ವಿವರಿಸಿದರು: “ಸರಕಾರವು ಬೆಳೆಯ ವಿಷಯದಲ್ಲಿ ಭದ್ರತೆಯನ್ನೂ ಕೇಳುವ ಅಭ್ಯಾಸ ಮಾಡಿಕೊಂಡಿತ್ತು, ಒಂದು ಪಕ್ಷ ರೈತ ಸತ್ತರೆ ಅಥವಾ ವಲಸೆ ಹೋದರೆ ಕಂದಾಯದಲ್ಲುಂಟಾಗುತ್ತಿದ್ದ ಕೊರತೆಯನ್ನು ಸ್ವಇಚ್ಛೆಯಿಂದ ಇತರೆ ರೈತರಿಗೆ ಅಥವಾ ಇಡೀ ಊರಿಗೆ ಭದ್ರತೆ ಕೊಟ್ಟ ರೈತರು ತಮ್ಮ ಕೈಯಿಂದ ತುಂಬಬೇಕಿತ್ತು….” (233) 

ಶರಾತ್ ವ್ಯವಸ್ಥೆ ಕೆಲಸ ಮಾಡಿದ ಬಗೆ ಮತ್ತದರ ಪರಿಣಾಮಗಳನ್ನು ವಿವರಿಸುತ್ತಾ ಎಂ.ಎಚ್.ಗೋಪಾಲ್ ಬರೆಯುತ್ತಾರೆ: “ನಗರ ವಿಭಾಗದಲ್ಲಿ ಕೃಷಿಕ ತೆರಿಗೆಯನ್ನು ನೇರವಾಗಿ ಸರಕಾರಕ್ಕೆ ಕಟ್ಟುತ್ತಿರಲಿಲ್ಲ. ಕೆಲವು ತಾಲ್ಲೂಕುಗಳಲ್ಲಿ (ಶಿವಮೊಗ್ಗ, ತರೀಕರೆ, ಹೋಲಿ ಹೊನ್ನೂರು, ಅಜ್ಜಂಪುರ, ಹೊನ್ನಾಳಿ, ಚಂದಗೆರೆ, ಶಿಕಾರಿಪುರ, ಬಸವಾಪಟ್ಟಣ, ಕುಂಸಿ, ಲಕ್ಕವಳ್ಳಿ, ಮಂದಗಟ್ಟಿ ಮತ್ತು ಅನವಟ್ಟಿಯಂತಹ ತಾಲ್ಲೂಕುಗಳಲ್ಲಿ) ಬಾಡಿಗೆಯನ್ನು ಹಳ್ಳಿಗಳ ಪಟೇಲರಿಗೆ ಕೊಡಲಾಗುತ್ತಿತ್ತು, ಅವರು ಅಮಲ್ದಾರರೊಂದಿಗೆ ಲೆಕ್ಕಾ ಪಕ್ಕಾ ಮಾಡಿಕೊಳ್ಳುತ್ತಿದ್ದರು. ಇನ್ನು ಕೆಲವು ತಾಲ್ಲೂಕುಗಳಲ್ಲಿ (ನಗರ, ಅನಂತಪುರ, ಕವಲೆದುರ್ಗ, ಕೊಪ್ಪ, ಸಾಗರ, ಚಂದ್ರಗುತ್ತಿ ಮತ್ತು ಸೊರಬ) ಬಾಡಿಗೆಯನ್ನು ಗುತ್ತಿಗೆದಾರರೆಂಬ ವರ್ಗದ ಜನರ ಮೂಲಕ ಕೊಡಲಾಗುತ್ತಿತ್ತು. ಇನ್ನುಳಿದ ಭಾಗಗಳಲ್ಲಿ, ಪಟೇಲರ ಮೂಲಕ ದುಡ್ಡು ಕೊಡುವುದು ಮತ್ತು ನೇರವಾಗಿ ರೈತರು ಅಮಲ್ದಾರರಿಗೇ ಕೊಡುವುದು ಚಾಲ್ತಿಯಲ್ಲಿತ್ತು. ಅಮಲ್ದಾರರು, ಒಂದು ಹಳ್ಳಿಯ ಕಂದಾಯವನ್ನು ತಮ್ಮಾಲೋಚನೆಯ ಸಾಮರ್ಥ್ಯದನುಸಾರ ನಿರ್ಧರಿಸುತ್ತಿದ್ದರು ಮತ್ತು ಪಟೇಲರು ಹಾಗೂ ಗುತ್ತಿಗೆದಾರರಿಗೆ ಅಷ್ಟು ಮೊತ್ತವನ್ನು ಸಂಗ್ರಹಿಸುವಂತೆ ಒತ್ತಾಯಿಸುತ್ತಿದ್ದರು. ಮುಂದೆ ಪಟೇಲ ಅಥದಾ ಗುತ್ತಿಗೆದಾರ ಭಾರವನ್ನು ರೈತರ ಮೇಲೆ ವರ್ಗಾಯಿಸುತ್ತಿದ್ದರು. ಕೆಲವೊಮ್ಮೆ ಪಟೇಲ ಮತ್ತು ಅಮಲ್ದಾರ ಜೊತೆಯಾಗಿ ರೈತರನ್ನು ಸುಲಿಯಲು ಸಂಚು ರೂಪಿಸುತ್ತಿದ್ದರು. ರೈತರೊಂದಿಗೆ ಅಮಲ್ದಾರ ನೇರ ಸಂಪರ್ಕದಲ್ಲಿದ್ದಾಗ ಮೊತ್ತವನ್ನು ರೈತರ ಭೂಮಿಯ ಆಧಾರದ ಮೇಲೆ ನಿರ್ಧರಿಸುತ್ತಿದ್ದರು. ಬೆಳೆಯನ್ನು ಸರಕಾರ ಮತ್ತು ಕೃಷಿಕನ ನಡುವೆ ಭಾಗ ಮಾಡುವಾಗ, ದೊಡ್ಡ ಮೊತ್ತದ ಬೇಳೆ ಕಾಳುಗಳನ್ನು ಸರಕಾರಕ್ಕಾಗಿ ತೆಗೆದುಕೊಳ್ಳಲಾಗುತ್ತಿತ್ತು. ಅಮಲ್ದಾರರು ಸರಕಾರೀ ಭಾಗದ ಬೇಳೆಕಾಳುಗಳನ್ನು ಮಾರುಕಟ್ಟೆಯ ಬೆಲೆಗಿಂತ ಹೆಚ್ಚಿನ ಬೆಲೆಯಲ್ಲಿ ತೆಗೆದುಕೊಳ್ಳುವಂತೆ ರೈತರನ್ನು ಒತ್ತಾಯಿಸುತ್ತಿದ್ದರು. ಈ ಧಾನ್ಯಗಳು, ಸರಕಾರೀ ಖಜಾನಗೆ ಹೋಗದೆ ಅಮಲ್ದಾರರ ಜೇಬಿಗೆ ಸೇರುತ್ತಿತ್ತಷ್ಟೇ. 

….ಕೃಷಿಕ ಕಟ್ಟದಿದ್ದರೆ, ಬಹುಶಃ ಅವನ ಅಸಹಾಯಕತೆಯಿಂದ, ಅವನ ವಸ್ತುಗಳು ಮತ್ತು ಆಕಳುಗಳನ್ನು ವಶಪಡಿಸಿಕೊಂಡು ಮಾರಾಟ ಮಾಡಲಾಗುತ್ತಿತ್ತು, ಅವನ ಹೆಂಡತಿ ಮಕ್ಕಳನ್ನು ಬಂಧನದಲ್ಲಿಡಲಾಗುತ್ತಿತ್ತು. ಪರಿಣಾಮವಾಗಿ ರೈತ ದಿವಾಳಿಯಾದ ಮತ್ತು ಕೃಷಿ ಕಡಿಮೆಯಾಯಿತು”. (234) 

ಶರಾತ್ ವ್ಯವಸ್ಥೆ ರೂಪುಗೊಂಡಿದ್ದು ಮತ್ತು ಅಸ್ತಿತ್ವದಲ್ಲುಳಿದದ್ದು ನಿರ್ದಿಷ್ಟ ಐತಿಹಾಸಿಕ ಕಾರಣಗಳಿಂದ. ಮುಖ್ಯ ಕಾರಣ ವಸಾಹತುಶಾಹಿ. ನಿಯಂತ್ರಣವಿಲ್ಲದ ಬ್ರಿಟೀಷ್ ವಸಾಹತಿನ ದುರಾಸೆಯೆ ಈ ಕ್ಯಾನ್ಸರ್ರಿಗೆ ಮೂಲ ಕಾರಣ. ಬ್ರಿಟೀಷ್ ರಾಜ್ ಊಳಿಗಮಾನ್ಯತೆಯ ಏಜೆಂಟನನ್ನು ರಾಜನೆಂದು ಪೀಠಾರೋಹಣ ಮಾಡಿಸಿತು. ರಾಜನ ಕಮಿಷನ್ ಏಜೆಂಟ್ ದಿವಾನ. ಫೌಜಿದಾರರು ದಿವಾನನ ಏಜೆಂಟರು. ಅವರಿಗೆ ಅಮಲ್ದಾರರು ಏಜೆಂಟರು. ಮತ್ತು ಕೊನೆಗೆ ಪಟೇಲ್ ಮತ್ತು ಶಾನುಭಾಗರು ಊಳಿಗಮಾನ್ಯತೆಯ ದಲ್ಲಾಳಿಗಳಾಗಿ ಕೃಷಿಕರನ್ನು ಮತ್ತು ಕಸುಬುದಾರರನ್ನು ಹಿಂಡಿ ಹಿಪ್ಪೆ ಮಾಡಿದರು. ಶರಾತ್ ವ್ಯವಸ್ಥೆ ಬ್ರಿಟೀಷರ ಸೃಷ್ಟಿ. ಕೆಳಗಿನಿಂದ ಮೇಲಿನವರೆಗೆ, ಈ ವ್ಯವಸ್ಥೆ ಸಜೀವವಾಗಿ ಕಾರ್ಯನಿರ್ವಹಿಸಿದ್ದು ಒಂದೇ ಒಂದು ಪ್ರೋತ್ಸಾಹದಿಂದ: ಹೆಚ್ಚಿನ ಕಂದಾಯ ತನ್ನಿ, ಹೆಚ್ಚಿನ ಆದಾಯ ಪಡೆದುಕೊಳ್ಳಿ. ಈಸ್ಟ್ ಇಂಡಿಯಾ ಕಂಪನಿ ಮೈಸೂರು ಸಾಮ್ರಾಜ್ಯವನ್ನು ಒಂದು ದಲ್ಲಾಳಿ ಸಂಸ್ಥೆಯಂತೆ ನಡೆಸಿತು. ರಾಜನಿಗೆ 1830ರಲ್ಲಿ ನಿವೃತ್ತಿ ವೇತನ ಕೊಟ್ಟ ಸಂದರ್ಭದಲ್ಲಿ ಮಾರ್ಕ್ಸ್ ವ್ಯಂಗ್ಯವಾಗಿ ಹೇಳುತ್ತಾನೆ “ಅರ್ಧ ಬ್ರಿಟೀಷ್ ರಾಜ್ ನಲ್ಲಿ ದಂಗೆಯ ಪರಿಸ್ಥಿತಿಯಿದ್ದಾಗ, ನಲವತ್ತು ಸಾವಿರ ಪೌಂಡು ಸಂಗ್ರಹಿಸಿ ಮತ್ತು ದೇಶದ ವರಮಾನದ ಐದನೇ ಒಂದಂಶಷ್ಟನ್ನು ಸಂಗ್ರಹಿಸಲಾಗಿದೆ (ಮೈಸೂರು ಸಾಮ್ರಾಜ್ಯದಲ್ಲಿ). ತೆರಿಗೆಯಲ್ಲಿನ ಹೆಚ್ಚಳ ಬಹಳವೇ ಪ್ರಾಮುಖ್ಯತೆ ಉಳ್ಳದ್ದು.” ಮತ್ತು ಕೊನೆಯಲ್ಲವನು ಹೇಳುತ್ತಾನೆ: “ಹಾಗಾಗಿ ಅವರಿಗೆ ನಿವೃತ್ತಿ ವೇತನ ಕೊಡುವ ಮೂಲಕ…. ಇಂಗ್ಲೀಷರು ಬಡ ಹಿಂದೂಗಳ ಮೇಲೆ ಭಾರವನ್ನಾಕಿದ್ದಾರೆ, ಅವರ ರಾಜರು ಮತ್ತು ರಾಜವಂಶಸ್ಥರಿಗೆ ಅನುಕೂಲ ಮಾಡಿಕೊಡುವ ಸಲುವಾಗಿ.” (235) 

1830ರಷ್ಟರಲ್ಲಿ ನಗರದ ರೈತರು ಸರಕಾರಕ್ಕೆ ಕೊಡಬೇಕಿದ್ದ ಬಾಕಿ ಕಂದಾಯದ ಮೊತ್ತು ಹದಿಮೂರು ಲಕ್ಷ ರುಪಾಯಿಗಳಷ್ಟಾಗಿತ್ತು. (236) ನಗರದ ರೈತರು ಅದೇ ವರ್ಷ ರೆಸೆಡೆಂಟರಿಗೆ ತಮ್ಮ ಕಷ್ಟಗಳನ್ನೇಳಿಕೊಂಡು ಭಿನ್ನಹ ಮಾಡಿದರು: “ಟಿಪ್ಪು ಸುಲ್ತಾನ್ ಈ ದೇಶದ ಸಾಮ್ರಾಟನಾಗಿದ್ದಾಗ, ಅವರೆಲ್ಲರೂ ಶಾಂತಿ ಮತ್ತು ಸಮೃದ್ಧಿಯೊಂದಿಗೆ ಬದುಕುತ್ತಿದ್ದರು. ಆದರೆ ರಾಜನ ಸರಕಾರದ (ಮೈಸೂರು ರಾಜ) ಅಧಿಕಾರಿಗಳು ನಡೆಸುವ ಶೋಷಣೆ ಮತ್ತು ಕ್ರೌರ್ಯ ಎಷ್ಟರ ಮಟ್ಟಿಗೆ ಇದೆಯೆಂದರೆ ಅವರು ಇನ್ನೂ ಹೆಚ್ಚು ಕಾಲ ಅಸ್ತಿತ್ವದಲ್ಲಿರುವುದೇ ಕಷ್ಟಕರವಾಗಿಬಿಟ್ಟಿದೆ. ಅಧಿಕಾರಿಗಳ ಕಿರುಕುಳ ಎಷ್ಟಿರುತ್ತಿತ್ತೆಂದರೆ ಕೆಲವೊಮ್ಮ ತಮ್ಮ ಮಕ್ಕಳನ್ನೇ ಮಾರಾಟ ಮಾಡಲು ಸಹಮತಿಸುವಷ್ಟು.” (237) 

ಆ ಸಮಯದಲ್ಲಿನ ಅಂದಾಜುಗಳು, ಮೈಸೂರು ಪ್ರಾಂತ್ಯಕ್ಕೆ ಹೊರಗಿನವರಾದ ಮರಾಠಾ ಬ್ರಾಹ್ಮಣರು, ಹೆಚ್ಚು ಕಡಿಮೆ ಮೂವತ್ತು ಪ್ರತಿಶತಃದಷ್ಟು ಅಧಿಕಾರಶಾಹಿಯನ್ನು ಆಕ್ರಮಿಸಿಕೊಂಡಿತ್ತೆಂದು ತಿಳಿಸುತ್ತವೆ. ಈ ಮುಂಚಿನ ಅಧ್ಯಾಯದಲ್ಲಿ (ಜಾತಿ ದೌರ್ಜನ್ಯದ ಹೆಚ್ಚಳ) ಪ್ರಸ್ತಾಪಿಸಿದ ಕುಟುಂಬಗಳೆಲ್ಲವೂ ಈ ವರ್ಗಕ್ಕೆ ಸೇರಿದವರು. ಒಡೆಯರ್ ಗಳ ಸಮ್ಮುಖದಲ್ಲಿ ತಾಲ್ಲೂಕುಗಳನ್ನು ವಾರ್ಷಿಕ ಗುತ್ತಿಗೆಗೆ ಹರಾಜು ಕೂಗುವ ಪದ್ಧತಿ ಸ್ಮಾರ್ಥ ಬ್ರಾಹ್ಮಣರ ಏಕಸ್ವಾಮ್ಯತೆ ಹೆಚ್ಚಲು ಪ್ರಮುಖ ಕಾರಣವಾಯಿತು. ಸೆಬಾಸ್ಟಿಯನ್ ಜೋಸೆಫ್ ತನ್ನ ಪ್ರಬಂಧ A Service Elite Against the Peasantsನಲ್ಲಿ ಹೇಳುತ್ತಾನೆ: “ಪೂರ್ಣಯ್ಯನ ನಿರ್ಗಮನದ ನಂತರದ ವರುಷಗಳಲ್ಲಿ ಆರ್ಥಿಕ ಗೊಂದಲಗಳು ಮೂಡಿದ್ದಕ್ಕೆ ಪ್ರಮುಖ ಕಾರಣ ಜನರ ಮೇಲಾಗುವ ಪರಿಣಾಮಗಳನ್ನು ಯೋಚಿಸದೆ ತಾಲ್ಲೂಕುಗಳನ್ನು ಹೆಚ್ಚು ಮೊತ್ತ ಕೂಗುವ ಹರಾಜುದಾರನಿಗೆ ಬಾಡಿಗೆಯಾಗಿ ನೀಡಿಬಿಟ್ಟಿದ್ದು. ಅಮಲ್ದಾರಿಯಷ್ಟೇ ಮಾರಾಟವಾಗುತ್ತಿರಲಿಲ್ಲ. ಎಲ್ಲಾ ಸರಕಾರೀ ಕಛೇರಿಗಳು ಮಾರಾಟವಾಗುತ್ತಿದ್ದವು; ಫೌಜುದಾರನ ಕಛೇರಿಯನ್ನು ಹತ್ತು ಸಾವಿರ ರುಪಾಯಿಗೆ ಮಾರಾಟ ಮಾಡಿದರೆ, ಶೇಕ್ ದಾರನ ಕಛೇರಿ ನೂರು ರುಪಾಯಿಗೆ ಮಾರಾಟವಾಗುತ್ತಿತ್ತು. 

ಈ ರೀತಿಯ ಮಾರಾಟದ ಪುನರಾವರ್ತನೆ ಮತ್ತು ಫಲವತ್ತಾದ ಈ ಕಛೇರಿಗಳ ಅಧಿಕಾರಿಗಳನ್ನು ಸಲಾಸಲ ತೆಗೆದುಬಿಡುತ್ತಿದ್ದುದು ಉಳಿದ ಅಧಿಕಾರಿಗಳಿಗೆ ಪಾಠ ಕಲಿಸಿತು. ಅವರು ಕೊಡಬೇಕಾದ ಮೊತ್ತವನ್ನು ಸುದೀರ್ಘ ಕಾಲದವರೆಗೆ ಕೊಡದೆ ಸತಾಯಿಸುತ್ತಿದ್ದರು. ಒಂದೇ ಬಾರಿ ಕೊಡದೆ ಕಂತುಗಳಲ್ಲಿ ಕೊಡಲಾರಂಭಿಸಿದರು. ಮತ್ತು ಕೊನೆಗೆ ವಾರ್ಷಿಕವಾಗಿ ಒಂದು ನಿರ್ದಿಷ್ಟ ಮೊತ್ತವನ್ನು ನಿಗದಿಪಡಿಸಿಕೊಂಡರು. 

ಪ್ರತಿಯೊಬ್ಬ ಹೊಸ ಗುತ್ತಿಗೆದಾರ ತನ್ನ ಕಛೇರಿಯನ್ನು ಉಳಿಸಿಕೊಳ್ಳಲೇ ಪ್ರಯತ್ನಿಸಬೇಕಿತ್ತು. ಮತ್ಯಾರೋ ಇನ್ನೂ ಹೆಚ್ಚಿನ ಮೊತ್ತವನ್ನು ಕೊಡುವುದಾಗಿ ಹೇಳಿಬಿಟ್ಟರೆ ಹಳೆಯ ಬಾಡಿಗೆದಾರನನ್ನು ಅವನ ಆಡಳಿತ ವೈಖರಿ ಮೇಲಿನ ‘ದೂರುಗಳ’ ಕಾರಣದಿಂದ ತೆಗೆದುಹಾಕಲಾಗುತ್ತಿತ್ತು; ಸಾಮ್ರಾಜ್ಯ ಅನುಕೂಲಕ್ಕೆ ತಕ್ಕಂತೆ ಇಂತಹ ದೂರುಗಳನ್ನು ರೂಪಿಸಿ ಮುಂದೆ ಮಾಡುವುದು ಕಷ್ಟದ ಕೆಲಸವೇನಾಗಿರಲಿಲ್ಲ”. (238) 

ಹೀಗಾಗಿ ಕೊಳ್ಳಲು ಮತ್ತು ಮಾರಾಟ ಮಾಡಲು ವಿಪರೀತ ಜನಸಂದಣಿ ಇರುತ್ತಿತ್ತು, ತಾಲ್ಲೂಕಿನದ್ದಷ್ಟೇ ಅಲ್ಲ, ಸರಕಾರೀ ಕೆಲಸಗಳದ್ದೂ ಕೂಡ. ಮೈಸೂರನ್ನು ಬ್ರಿಟೀಷ್ ವಸಾಹತು ಹರಾಜು ಹಾಕಿಬಿಟ್ಟಿತ್ತು. 

ಆಗ ಮೈಸೂರಿನ ರೆಸಿಡೆಂಟಾಗಿದ್ದ, ಬ್ರಿಟೀಷ್ ವಸಾಹತುಶಾಹಿಯ ಸ್ಥಳೀಯ ಪ್ರತಿನಿಧಿಯಾಗಿದ್ದ ಕಾಸಾಮೈಯೂರ್, ಬಹಳಷ್ಟು ಸಲ ರಾಜನ ಬಳಿಗೆ ಹೋಗಿ ಕಂದಾಯ ಅಧಿಕಾರಿಗಳ ಭ್ರಷ್ಟಾಚಾರದ ಕುರಿತು, ಬೃಹತ್ ಮೊತ್ತದ ಹಣದ ದುರುಪಯೋಗದ ಕುರಿತು ತಿಳಿಸುತ್ತಿದ್ದ. ಈ ದೂರುಗಳು, ಸಹಜವಾಗಿ ಕಡೆಗಣಿಸಲ್ಪ್ಟವು. 1831ರಲ್ಲಿ ಬ್ರಿಟೀಷರ ನೇರ ಆಡಳಿತ ಜಾರಿಗೆ ಬಂದ ಮೇಲಷ್ಟೇ ರೆಸೆಡೆಂಟ್ ತನ್ನ ತಪ್ಪುಗಳಿರಲಿಲ್ಲವೆಂದು ತೋರಿಸಿಕೊಳ್ಳುವುದಕ್ಕೆ, ಸರಕಾರ ಅಕ್ಷರಶಃ ಮಾರಾಟವಾಗಿಬಿಡುತ್ತಿದ್ದುದನ್ನು ತಡೆಯಲು ಯಾವ್ಯಾವ ಪ್ರಯತ್ನಗಳನ್ನು ಮಾಡಲಾಯಿತು ಎಂದು ತಿಳಿಸಿದ್ದು. ಅವನದೇ ಮಾತುಗಳ ಪ್ರಕಾರ ನೋಡಿದರು, ಕಾಸಾಮೈಯೂರ್ ತೆರಿಗೆ ಹಣವನ್ನು ಅಮಲ್ದಾರರು ಮತ್ತು ಪೌಜುದಾರರು ದುರುಪಯೋಗ ಪಡಿಸಿಕೊಂಡ ಹಲವಾರು ಪ್ರಕರಣಗಳನ್ನು ರಾಜನ ಗಮನಕ್ಕೆ ತಂದಿದ್ದ “ಕ್ರಮ ಕೈಗೊಳ್ಳಲು ರಾಜನ ಗಮನಕ್ಕೆ ತರಲಾಗಿದೆ”. ತದನಂತರ 1828,1829 ಮತ್ತು 1830ರಲ್ಲಿ ತನ್ನ ಪ್ರಾಮಾಣಿಕತೆ ಹೇಗೆಲ್ಲ ಇತ್ತು ಎಂದೊಂದು ಪಟ್ಟಿ ಕೊಡುತ್ತಾನೆ. (239) 

ಸೆಬಾಸ್ಟಿಯನ್ ಬರೆಯುತ್ತಾರೆ: “ಈ ಕುಲಗೆಟ್ಟ ಅಧಿಕಾರಶಾಹಿಯ ಸೇವೆಯ ಮೇಲೆ ಮಹಾರಾಜ ಅವಲಂಬಿತವಾದ ಕಾರಣ ಅವರ ಭ್ರಷ್ಟ ವಿಧಾನಗಳನ್ನು ಪಾಲಿಸುವಂತಾಯಿತು. ಒಂದು ಹಂತದಲ್ಲಿ, ಬ್ರಿಟೀಷ್ ರೆಸಿದೆಂಟ್, ಮಹಾರಾಜರೇ ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪ ಹೊರಿಸಿದ್ದ; ಮಹಾರಾಜ ತಾನು ನೇಮಿಸಿದ ಅಧಿಕಾರಿಗಳಿಗೆ ನಿಮ್ಮ ಹಣವನ್ನು ನೀವು ಪಡೆದುಕೊಳ್ಳಲು ನಿಮಗೆ ಸ್ವಾತಂತ್ರ್ಯವಿದೆ ಎಂದು ತಿಳಿಸಿದ್ದ. ತಾಲ್ಲೂಕುಗಳಲ್ಲಿ ಅಮಲ್ದಾರರು ದಾಖಲೆಗಳನ್ನು ತಿದ್ದುವುದು ಕೂಡ ನಡೆದಿತ್ತು, ಅಮಲ್ದಾರರು ಲಾಭ ಮಾಡಿಕೊಂಡರೆ ಸರಕಾರಕ್ಕೆ ನಷ್ಟವಾಗುತ್ತಿತ್ತು. ವರುಣ ತಾಲ್ಲೂಕಿನಲ್ಲಿ ಬೆಳೆಯನ್ನು ಸರಕಾರ ಮತ್ತು ಕೃಷಿಕರ ನಡುವೆ ಭಾಗ ಮಾಡಲಾಗುತ್ತಿತ್ತು, ಅಮಲ್ದಾರರು ಕೈಯಾಡಿಸಿ ಸರಕಾರದ ಭಾಗದ ಧಾನ್ಯಗಳನ್ನು ಮಂಗಮಾಯ ಮಾಡಿಬಿಡುತ್ತಿದ್ದರು. 1832ರಲ್ಲಿ ಹಿರಿಯ ಕಮಿಷನರ್ರಾದ ಲೆಫ್ಟಿನೆಂಟ್ ಕಲೋನಲ್ ಬ್ರಿಗ್ಸ್ ಹೇಳುತ್ತಾರೆ ‘…ಕಳೆದ ಕೆಲವು ವರುಷಗಳಿಂದ ಅಮಲ್ದಾರರ ಆಫೀಸಿನಲ್ಲಿರುವವರು ಮತ್ತು ಎಂಟತ್ತು ತಿಂಗಳಿಗೊಮ್ಮೆ ಕೆಲಸದಿಂದ ತೆಗೆಯಲ್ಪಟ್ಟವರ ಬಗ್ಗೆಯೆಲ್ಲ ನಾನು ನಡೆಸಿದ ವಿಚಾರಣೆಯು ನನಗೇನನ್ನು ತಿಳಿಸಿತೆಂದರೆ, ಇವರೆಲ್ಲರೂ ಭ್ರಷ್ಟಾತಿಭ್ರಷ್ಟರಷ್ಟೇ ಅಲ್ಲ, ಜೊತೆಗೆ ಸರಕಾರಕ್ಕೆ ಈ ಕ್ಷಣದಲ್ಲಿ ಬಹಳಷ್ಟು ದುಡ್ಡನ್ನು ಕಟ್ಟಬೇಕಿದೆ, ಅದನ್ನು ದಾಖಲೆಗಳಲ್ಲೂ ನಮೂದಿಸಿಲ್ಲ ಮತ್ತು ಈಗ ಕಛೇರಿಯನ್ನಲಂಕರಿಸಿರುವವರೂ ಕೂಡ ಇದೇ ರೀತಿಯ ಸಂಕಟದಲ್ಲಿದ್ದಾರೆ.’” (240) 

ಅಮಲ್ದಾರರ ಉನ್ನತ ಮತ್ತದೇ ಸಮಯಕ್ಕೆ ನಿರಂಕುಶ ನಿಲುವುಗಳ ಬಗ್ಗೆ ಬರೆಯುತ್ತಾ ಸೆಬಾಸ್ಟಿಯನ್ ಹೇಳುತ್ತಾರೆ: “ಅವನು ತನ್ನಧಿಕಾರವನ್ನು ಹಳ್ಳಿ ಮತ್ತು ಪಟ್ಟಣಗಳೆರಡರಲ್ಲೂ ನಡೆಸಿದ…..ಸ್ಥಳೀಯ ಮಟ್ಟದಲ್ಲಿ ಅಮಲ್ದಾರ ಅಧಿಕಾರಶಾಹಿಯ ಮುಖ್ಯಸ್ಥನೂ ಹೌದು, ಉನ್ನತ ನ್ಯಾಯಾಧೀಶನೂ ಹೌದು. ಅವನ ಮೂಲಕವಷ್ಟೇ ರೈತನು ಸರಕಾರೀ ಶಕ್ತಿಗೆ ಎದುರಾಗಬೇಕಿತ್ತು. ಅಮಲ್ದಾರ ಸರಕಾರಕ್ಕೂ ಸ್ಥಳೀಯರಿಗೂ ಮಧ್ಯೆ ಕೊಂಡಿಯಾಗಿದ್ದ. ಸಹಜವಾಗಿ, ಅಮಲ್ದಾರರೇ ಕುಲಗೆಟ್ಟು ಶೋಷಕರಾಗಿ ಬದಲಾದಾಗ, ಅದರ ನೇರ ಮತ್ತು ತತ್ ಕ್ಷಣದ ಪರಿಣಾಮವಾಗಿದ್ದು ರೈತರ ಮೇಲೆ. ಅಮಲ್ದಾರ ತನ್ನ ಅಧಿಕಾರವನ್ನು ಬಳಸಿ, ಶರಾತ್ ವ್ಯವಸ್ಥೆಯ ಅನ್ವಯ ಸಂಗ್ರಹವಾಗಬೇಕಿದ್ದ ನಿಗದಿಯಾದ ವಾರ್ಷಿಕ ಮೊತ್ತವನ್ನು ಸಂಗ್ರಹಿಸಲು ಎಲ್ಲಾ ನಿರಂಕುಶ ರೀತಿಗಳನ್ನೂ ಬಳಸಬಹುದಿತ್ತು. ಆದರೆ ಕೃಷಿಕನಿಗೆ ತನ್ನ ಮೇಲಾಗುತ್ತಿದ್ದ ದೌರ್ಜನ್ಯ ಮತ್ತು ಅನ್ಯಾಯವನ್ನು ಪ್ರಶ್ನಿಸಲು ಸೂಕ್ತ ವೇದಿಕೆಯೇ ಇರಲಿಲ್ಲ; ಕಾರಣ ಅಮಲ್ದಾರನ ವಿರುದ್ಧದ ದೂರುಗಳನ್ನು ಪರಿಶೀಲಿಸಲಿದ್ದ ನ್ಯಾಯಾಧಿಕರಣದ ಮುಖ್ಯಸ್ಥ ಕೂಡ ಅದೇ ಅಮಲ್ದಾರನಾಗಿರುತ್ತಿದ್ದ. 

ಸೇವೆಯಲ್ಲಿದ್ದ ಗಣ್ಯರ ಈ ಶಕ್ತಿಯುತ ವರ್ಗ ತನ್ನ ಮೋಸ ಮತ್ತು ದೋಚುವಿಕೆಯ ಜೊತೆ ಜೊತೆಗೆ ದರೋಡೆಕೋರರೊಂದಿಗೆ ಸೇರಿ ರೈತರನ್ನು ಲೂಟಿ ಮಾಡುತ್ತಿದ್ದರು. ಮೇಜರ್ ಜೆನರಲ್ ಹಾಕ್ಸ್ ಮೊರಿಸನ್, ಮೆಕ್ ಲಿಯಾಡ್ ಮತ್ತು ಮಾರ್ಕ್ ಕಬ್ಬನ್ 1830 – 32ರ ನಗರದ ಬಂಡಾಯದ ಬಗ್ಗೆ ಮಾಡಿದ ತನಿಖೆಯಲ್ಲಿ ಹೇಳುತ್ತಾರೆ ‘ನಗರದ ಫೌಜುದಾರರಾದ ಸರ್ವೋತ್ತಮ ರಾವ್ ಮತ್ತು ಕಿಷೆನ್ ರಾವ್ ತುಂಬು ವಿಶ್ವಾಸದಿಂದ ಕಳ್ಳರ ನಾಯಕ ಗೂಂಡಾನನ್ನು ನೇಮಿಸಿಕೊಂಡಿದ್ದರು, ಲೂಟಿ ಮಾಡುವ ಸಲುವಾಗಿ. ನಂತರದ ದಿನಗಳಲ್ಲಿ ಬಂಧನಕ್ಕೊಳಗಾದ ಕಳ್ಳರೇ ವಿಚಾರಣೆಯ ವೇಳೆ ಫೌಜಿದಾರ ಸರ್ವೋತ್ತಮ ರಾವ್ ಆಗಮನದ ನಂತರ 73 ಮನೆಗಳನ್ನು ದೋಚಿದ್ದಾಗಿ ಒಪ್ಪಿಕೊಂಡಿದ್ದಾರೆ; ಫೌಜಿದಾರರ ಸೂಚನೆಯಂತೆ ಅವರು ಅ ಮನೆಗಳಿಗೆ ಹೋಗುತ್ತಿದ್ದರು ಮತ್ತು ದೋಚಿದ ಸಂಪತ್ತನ್ನೆಲ್ಲ ಫೌಜಿದಾರನಿಗೆ ತಲುಪಿಸುತ್ತಿದ್ದರು. ಅಚ್ಚರಿಯೆಂದರೆ, ರೈತರನ್ನು ಲೂಟಿ ಮಾಡಿದ ಇದೇ ಜನ, ಪ್ರಾರಂಭದ ಹಂತದಲ್ಲಿ ರೈತರು ಬಂಡಾಯ ಹೇಳಲು ಪ್ರೋತ್ಸಾಹಿಸಿದರು, ತಮ್ಮ ಗುರಿಗಳನ್ನು ಸಾಧಿಸಿಕೊಳ್ಳಲು”. (241) 

ಬಿಕ್ಕಟ್ಟು ಆಳವಾಗಿ, ಅಧಿಕಾರಶಾಹಿ – ಊಳಿಗಮಾನ್ಯ ಆಸಕ್ತಿಗಳು ಎಷ್ಟು ದೃಡವಾಗಿ ಬೇರೂರಿತ್ತೆಂದರೆ, ಆಳುವ ವರ್ಗದೊಳಗೇ ಶಾಂತಿಯುತ ದೋಚುವಿಕೆ ಹಿಂಸಾತ್ಮಕ ರೂಪ ಪಡೆದುಕೊಳ್ಳುತ್ತಿತ್ತು.

ಮುಂದಿನ  ವಾರ
ತೆರಿಗೆ ವಸೂಲು ಮಾಡಲು ನಡೆಸಿದ ಶೋಷಣೆ

ಜುಲೈ 2, 2016

ಸಮಾಜವಾದಿ ಪಕ್ಷದಿಂದ ದೂರಸರಿಯುತ್ತಿರುವ ಮುಸ್ಲಿಂ ಸಮುದಾಯ: ಒಂದು ಟಿಪ್ಪಣಿ.

ಕು.ಸ.ಮಧುಸೂದನನಾಯರ್
ಈ ದೇಶದ ಅಲ್ಪಸಂಖ್ಯಾತರಾದ ಮುಸ್ಲಿಮರನ್ನು ಎಲ್ಲಾ ರಾಜಕೀಯ ಪಕ್ಷಗಳು ಮತಬ್ಯಾಂಕನ್ನಾಗಿ ಮಾತ್ರ ನೋಡುತ್ತಿವೆಯೆಂಬ ಮಾತನ್ನು ನಾವು ಒಪ್ಪಿಕೊಳ್ಳುತ್ತಲೇ ಉತ್ತರಪ್ರದೇಶದ ರಾಜಕೀಯ ಲೆಕ್ಕಾಚಾರಗಳನ್ನು, ಮತ್ತು ಅಲ್ಲಿನ ಮುಸ್ಲಿಮರ ರಾಜಕೀಯ ನಡವಳಿಕೆಯನ್ನು ವಿಶ್ಲೇಷಣೆಗೊಳಪಡಿಸಬೇಕಾದುದು ಅಗತ್ಯವೆಂದು ನನ್ನ ಬಾವನೆ. ಉತ್ತರ ಪ್ರದೇಶದ ಒಟ್ಟು ಮತದಾರರ ಪೈಕಿ ಶೇಕಡಾ ೨೮ರಷ್ಟು ಮತದಾರರು ಮುಸ್ಲಿಂ ಸಮುದಾಯದವರಾಗಿದ್ದು ಸುಮಾರು ೭೫ ಕ್ಷೇತ್ರಗಳಲ್ಲಿ ಅವರ ಮತಗಳೇ ನಿರ್ಣಾಯಕವಾಗಿರುವುದು ಸುಳ್ಳಲ್ಲ. ಈ ಹಿನ್ನೆಲೆಯಲ್ಲಿ ೨೦೧೭ರಲ್ಲಿ ನಡೆಯಲಿರುವ ವಿದಾನಸಭಾ ಚುನಾವಣೆಗಳಲ್ಲಿ ಮುಸ್ಲಿಂ ಸಮುದಾಯ ಒಂದು ಸಂಘಟಿತ ಗುಂಪಾಗಿ ಮತ ಚಲಾಯಿಸುವುದೇ ಆದರೆ, ಯಾವ ಪಕ್ಷವನ್ನು ಯಾಕೆ ಬೆಂಬಲಿಸಬಹುದೆಂಬುದನ್ನೂ ನಾವೊಂದಿಷ್ಟು ನೋಡೋಣ.

ಕಳೆದ ವಿದಾನಸಭಾ ಚುನಾವಣೆಯಲ್ಲಿ ಮುಲಾಯಂ ಸಿಂಗ್ ಯಾದವರ ಸಮಾಜವಾದಿ ಪಕ್ಷ ಶೇಕಡಾ ೫೮ ರಷ್ಟು ಮುಸ್ಲಿಂ ಮತದಾರರ ಬೆಂಬಲನ್ನು ಗಳಿಸಿದ್ದರ ಪರಿಣಾಮವಾಗಿ ಆ ಪಕ್ಷ ಬಹುಮತ ಪಡೆದು ಅದಿಕಾರದ ಗದ್ದುಗೆ ಹಿಡಿದಿತ್ತು. ಆದರೆ ತದನಂತರದ ೨೦೧೪ರ ಲೋಕಸಭಾ ಚುನಾವಣೆಯಲ್ಲಿ ಮುಸ್ಲಿಂ ಮತಗಳು ಕಾಂಗ್ರೆಸ್, ಬಹುಜನ ಪಕ್ಷ, ಸಮಾಜವಾದಿ ಪಕ್ಷಗಳ ನಡುವೆ ಹಂಚಿ ಹೋಗಿದ್ದರಿಂದಾಗಿ ಬಾಜಪದ ಹಿಂದು ಮತಗಳನ್ನು ದೃವೀಕರಣಗೊಳಿಸಿ ಗೆಲ್ಲಲು ಸಾದ್ಯವಾಗಿತ್ತು. ಇದೀಗ ಪರಿಸ್ಥಿತಿ ಬಹಳ ಬದಲಾವಣೆಗಳನ್ನು ಕಂಡಿದೆ. ಹಿಂದಿನ ಹಾಗೆ ಮುಸ್ಲಿಂ ಸಮುದಾಯ ಸಮಾಜವಾದಿ ಪಕ್ಷವನ್ನು ಬೆಂಬಲಿಸುವಂತಹ ಸ್ಥಿತಿಯಲ್ಲಿಲ್ಲ. ಕಳೆದ ನಾಲ್ಕು ವರ್ಷಗಳಲ್ಲಿ ಮುಸ್ಲಿಂ ಸಮುದಾಯವು ಸಮಾಜವಾದಿ ಪಕ್ಷದ ವಿರುದ್ದ ಮುನಿಸಿಕೊಳ್ಳುವಂತಹ ಹಲವಾರು ಘಟನೆಗಳು ನಡೆದು ಹೋಗಿದ್ದು, ಆ ಸಮುದಾಯ ಅಖಿಲೇಶ್ ಆಳ್ವಿಕೆಯಿಂದ ಭ್ರಮನಿರಸನಗೊಂಡಿದೆ. ಹಾಗಾದರೆ ಯಾಕೆ ಮುಂದಿನ ಚುನಾವಣೆಯಲ್ಲಿ ಮುಸ್ಲಿಂ ಮತದಾರರು ಸಮಾಜವಾದಿ ಪಕ್ಷದ ವಿರುದ್ದ ಮತ ಚಲಾಯಿಸುತ್ತಾರೆಂಬುದನ್ನು ಒಂದಿಷ್ಟು ವಿಶ್ಲೇಷಿಸೋಣ:

1.ಮುಸ್ಲಿಂ ಮತವಿಭಜನೆ ತಡೆಯಲು:

ಮುಸ್ಲಿಮರು ಯಾವಾಗಲೂ ಒಂದು ಸಂಘಟಿತ ಗುಂಪಾಗಿ ಒಂದೇ ಪಕ್ಷಕ್ಕೆ ಮತಚಲಾಯಿಸತ್ತಾರೆಂಬ ಜನಪ್ರಿಯ ಅನಿಸಿಕೆಯನ್ನೂ ಮೀರಿ ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್, ಬಹುಜನಪಕ್ಷ, ಬಾಜಪ ಮತ್ತು ಸಮಾಜವಾದಿ ಪಕ್ಷಗಳಿಗೆ ಬಿಡಿಬಿಡಿಯಾಗಿ ಮತಚಲಾಯಿಸಿದ್ದರು. ಬಾಜಪ ಮುಸ್ಲಿಂ ಮತ ಪಡೆಯುವಲ್ಲಿ ಸಮಾಜವಾದಿ ಪಕ್ಷದ ನಂತರದ ಸ್ಥಾನದಲ್ಲಿತ್ತು. ಹೀಗಾಗಿಯೇ ಮುಸ್ಲಿಂ ಮತದಾರರೇ ನಿರ್ಣಾಯಕವಾದ ಸ್ಥಾನಗಳ ಪೈಕಿ ಬಾಜಪ ಶೇಕಡಾ ೨೩ರಷ್ಟನ್ನು ಗೆಲ್ಲುವಂತಾಗಿತ್ತು. ಹಾಗಾಗಿ ಈ ಬಾರಿ ಮುಸ್ಲಿಂ ಮತದಾರರು ಸಮಾಜವಾದಿ ಪಕ್ಷವನ್ನು ಬೆಂಬಲಿಸಲು ಹಿಂದೆ ಮುಂದೆ ನೋಡುವುದೇ ಆದರೆ, ಅದರ ಬದಲಿಗೆ ಅವರ ಕಣ್ಮುಂದಿರುವ ಮತ್ತೊಂದು ಪಕ್ಷವೆಂದರೆ ಬಹುಜನ ಪಕ್ಷ ಮಾತ್ರ.

2. ಸಮಾಜವಾದಿ ಪಕ್ಷದಿಂದಾದ ಭ್ರಮನಿರಸನ:

ಮುಜಾಫರ್ ನಗರದ ಕೋಮುಗಲಭೆಗಳ ನಂತರ ಸಮಾಜವಾದಿ ಪಕ್ಷದ ಬಗ್ಗೆ ಮುಸ್ಲಿಮರಿಗಿದ್ದ ಒಲವು ಕಡಿಮೆಯಾಗಿದೆ. ಅಧಿಕಾರದಲ್ಲಿರುವ ಸಮಜವಾದಿ ಪಕ್ಷ ಕೋಮುಗಲಭೆಯ ಸಂದರ್ಭದಲ್ಲಿ ನಿಷ್ಪಕ್ಷಪಾತವಾಗಿ ವರ್ತಿಸಲಿಲ್ಲವೆಂದು ಅವರು ಬಾವಿಸಿದ್ದಾರೆ. ಜೊತೆಗೆ ಗಲಭೆಗಳು ತೀವ್ರಸ್ವರೂಪ ಪಡೆದುಕೊಂಡ ನಂತರವೂ ಸ್ಥಳಕ್ಕೆ ಪಕ್ಷದ ಮುಖ್ಯ ನಾಯಕರಾದ ಶ್ರೀ ಮುಲಾಯಂ ಸಿಂಗ್ ಯಾದವರಾಗಲಿ, ಮುಖ್ಯಮಂತ್ರಿ ಅಖಿಲೇಶ್ ಯಾದವರಾಗಲಿ ದಾವಿಸಲಿಲ್ಲವೆಂಬುದು ಮುಸ್ಲಿಮರ ಮುಖ್ಯ ಆರೋಪ. ಮುಲಾಯಂ ಮತ್ತು ಅಖಿಲೇಶ್ ಮುಜಾಫರ್ ನಗರಕ್ಕೆ ಬೇಟಿ ನೀಡಿದ್ದು ಗಲಭೆಗಳಾದ ಆರು ತಿಂಗಳ ನಂತರ, ಅದೂ ಲೋಕಸಭಾ ಚುನಾವಣೆಗೆ ಮತ ಕೇಳಲು. ಇದು ರಾಜ್ಯದ ಬಹುತೇಕ ಮುಸ್ಲಿಂ ನಾಯಕರುಗಳನ್ನು ಕೆರಳಿಸಿದ್ದರಲ್ಲಿ ಅಚ್ಚರಿಯೇನಿಲ್ಲ. ನಂತರ ನಡೆದ ದಾದ್ರಿ ಪ್ರಕರಣ ಮುಸ್ಲಿಮರನ್ನು ಇನ್ನಷ್ಟು ಕೆರಳಿಸಿತು. ಸಮಾಜವಾದಿ ಪಕ್ಷವು ದಾದ್ರಿ ಪ್ರಕರಣವನ್ನು ನಿಬಾಯಿಸಿದ ರೀತಿ ಬಾಜಪದ ಪರವಾಗಿತ್ತೆಂಬ ಅನುಮಾನವೂ ಮುಸ್ಲಿಮರಲ್ಲಿ ಮೂಡಿತ್ತು. ಇತ್ತೀಚಗೆ ಎಬಿಪಿ ಸಂಸ್ಥೆಯು ನಡೆಸಿದ ಸಮೀಕ್ಷೆಯಲ್ಲಿ ಶೇಕಡಾ ೬೫ ರಷ್ಟು ಮುಸ್ಲಿಮರು ಸಮಾಜವಾದಿ ಪಕ್ಷವನ್ನು ಈ ವಿಷಯಗಳಲ್ಲಿ ಟೀಕಿಸಿದ್ದಾರೆ.

3. ಬಾಜಪವನ್ನು ಅಧಿಕಾರದಿಂದ ದೂರವಿಡಲು:

ಉತ್ತರ ಪ್ರದೇಶದ ಮುಸ್ಲಿಂ ಮತದಾರರು ವಿದಾನಸಭಾ ಚುನಾವಣೆಗಳಲ್ಲಿ ಬಾಜಪ ಕೇಂದ್ರಿತವಾದ ನಕಾರಾತ್ಮಕ ಮತಚಲಾವಣೆಯನ್ನು ಹಿಂದಿನಿಂದಲೂ ಮಾಡುತ್ತಾ ಬಂದಿದ್ದಾರೆ. ಬಾಜಪವನ್ನು ಸೋಲಿಸಲು ಶಕ್ತಿ ಹೊಂದಿರಬಹುದಾದ ಪಕ್ಷಕ್ಕವರು ಮತ ಚಲಾಯಿಸುವುದು ಹಿಂದಿನಿಂದ ನಡೆದುಬಂದ ರೀತಿ. ಈಗ ಸಮಾಜವಾದಿ ಪಕ್ಷದ ವಿರುದ್ದ ಅವರಿಗಿರುವ ಮುನಿಸು, ಜೊತೆಗೆ ಅದಕ್ಕಿರುವ ಆಡಳಿತ ವಿರೋಧಿ ಅಲೆಯಲ್ಲಿ ಸಮಾಜವಾದಿ ಪಕ್ಷ ಬಾಜಪವನ್ನು ಸೋಲಿಸುವುದು ಸಾದ್ಯವಿಲ್ಲವೆಂಬ ನೆಲೆಯಲ್ಲಿ ಉತ್ತರ ಪ್ರದೇಶದ ಮುಸ್ಲಿಮರು ಬಹುಜನ ಪಕ್ಷದತ್ತ ವಾಲುತ್ತಿದ್ದಾರೆ. ಇದನ್ನು ಅರ್ಥ ಮಾಡಿಕೊಂಡಿರುವ ಮಾಯಾವತಿ ಈಗಾಗಲೇ ಸುಮಾರು ೧೦೦ ಸ್ಥಾನಗಳನ್ನು ಮುಸ್ಲಿಮರಿಗೆ ಮೀಸಲಿಟ್ಟು ಅವರನ್ನು ಸೆಳೆಯುವ ಕಾರ್ಯಕ್ಕೆ ಕೈ ಹಾಕಿದ್ದಾರೆ. ಜೊತೆಗೆ ತಾವು ಯಾವತ್ತಿಗೂ ಬಾಜಪವನ್ನು ಬೆಂಬಲಿಸುವುದಿಲ್ಲವೆಂಬ ಘೋಷಣೆಯನ್ನೂ ಮಾಡಿದ್ದಾರೆ. ಇದರೊಂದಿಗೆ ಉತ್ತರ ಪ್ರದೇಶದ ಮಟ್ಟಿಗೆ ಕಾಂಗ್ರೆಸ್ ತೀರಾ ದುರ್ಬಲವಾಗಿದ್ದು ಅದನ್ನು ಬೆಂಬಲಿಸುವುದರಲ್ಲಿ ಪ್ರಯೋಜನವಿಲ್ಲವೆಂಬ ಅಭಿಪ್ರಾಯಕ್ಕೆ ಮುಸ್ಲಿಮರು ಬಂದಿದ್ದಾರೆ.

4.ಮುಸ್ಲಿಮರ ಶೋಚನೀಯ ಸ್ಥಿತಿಗತಿಗಳು.

ಹಾಗೆ ನೋಡಿದರೆ ಕಳೆದ ಎರಡೂವರೆ ದಶಕಗಳಿಂದ ಅಂದರೆ ೧೯೯೦ರಿಂದ ಅರ್ದಕ್ಕಿಂತ ಹೆಚ್ಚು ಅವಧಿಯಲ್ಲಿ ಮುಸ್ಲಿಮರ ಸಂಪೂರ್ಣ ಬೆಂಬಲದೊಂದಿಗೆ ಅಧಿಕಾರ ಅನುಭವಿಸಿರುವ ಸಮಾಜವಾದಿ ಪಕ್ಷ ಆ ಸಮುದಾಯಕ್ಕೆ ಸೂಕ್ತ ನ್ಯಾಯ ಒದಗಿಸಿಲ್ಲವೆಂಬುದು ಆ ಸಮುದಾಯದ ಜನರ ಆಕ್ರೋಶವಾಗಿದೆ. ಬಹಳ ಮಟ್ಟಿಗೆ ಅದು ನಿಜವೂ ಆಗಿದೆ. ಇಡೀ ರಾಷ್ಟ್ರದಲ್ಲಿ ಮುಸ್ಲಿಂ ಮಕ್ಕಳ ಶಾಲಾ ದಾಖಲಾತಿ ಪ್ರಮಾಣ ಶೇಕಡಾ ೧೨.೮ ಇದ್ದರೆ ಉತ್ತರ ಪ್ರದೇಶದಲ್ಲಿ ಕೇವಲ ಶೇಕಡಾ ೯.೬೪ ಮಾತ್ರವಿದೆ. ಕೇಂದ್ರದ ಮಾನವ ಸಂಪನ್ಮೂಲ ಖಾತೆಯೇ ನೀಡಿರುವ ಅಂಕಿಅಂಶಗಳ ಪ್ರಕಾರ ಮುಸ್ಲಿಮರ ಸಾಕ್ಷರತಾ ಪ್ರಮಾಣ ಇಡೀ ದೇಶಕ್ಕೆ ಹೋಲಿಸಿದರೆ ತೀರಾ ಕೆಳಮಟ್ಟದಲ್ಲಿದ್ದು ಸರಕಾರಿ ನೌಕರಿಗಳಲ್ಲು ಅವರದು ತೀರಾ ಶೋಚನೀಯ ಪರಿಸ್ಥಿತಿ. ಇನ್ನು ಮುಸ್ಲಿಂ ಮಹಿಳೆಯರ ಸಾಮಾಜಿಕ ಸ್ಥಾನಮಾನವಂತು ಇತರೇ ರಾಜ್ಯಗಳಿಗೆ ಹೋಲಿಸಿದರೆ ಅತ್ಯಂತ ತಳಮಟ್ಟದಲ್ಲಿದೆ.ಇನ್ನು ಸಾಮಾಜಿಕವಾಗಿ ಕೋಮುಗಲಭೆಗಳ ಪ್ರಮಾಣವೂ ಬೇರೆ ರಾಜ್ಯಗಳಿಗಿಂತ ಹೆಚ್ಚಿದ್ದು ಇದು ಮುಸ್ಲಿಮರಲ್ಲಿ ಸದಾ ಅಭದ್ರತೆಯ ಬಾವ ಮೂಡಿಸಿರುತ್ತದೆ. ಈ ಎಲ್ಲ ಕಾರಣಗಳ ಹಿನ್ನೆಲೆಯಲ್ಲಿ ಸಮಾಜವಾದಿ ಪಕ್ಷ ಮುಸ್ಲಿಂ ಸಮುದಾಯದ ಬೆಂಬಲವನ್ನು ಕಳೆದುಕೊಳ್ಳುತ್ತಾ ಸಾಗುತ್ತಿದೆ

ಇವೆಲ್ಲವನ್ನೂ ಸೂಕ್ಷ್ಮವಾಗಿ ಗಮನಿಸಿದರೆ ಮುಂದಿನ ಚುನಾವಣೆಯ ಹೊತ್ತಿಗೆ ಮುಸ್ಲಿಂ ಸಮುದಾಯ ಸಮಾಜವಾದಿ ಪಕ್ಷದಿಂದ ದೂರ ಸರಿಯುವುದರಲ್ಲಿ ಸಂದೇಹವೇ ಇಲ್ಲ. ಒಂದು ಸಮುದಾಯವಾಗಿ ತನ್ನ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳಲು ಅದು ಬಾಜಪ ಕೇಂದ್ರಿತ ನಕಾರಾತ್ಮಕವಾಗಿಯೇ ಮತ ಚಲಾವಣೆ ಮಾಡುವುದೇ ಆದರೆ ಅದರ ಮುಂದಿರುವ ಉತ್ತಮ ಆಯ್ಕೆಯೆಂದರೆ ಬಹುಜನ ಪಕ್ಷ ಮಾತ್ರವೆನಿಸುತ್ತದೆ.

ಜುಲೈ 1, 2016

ಮೇಕಿಂಗ್ ಹಿಸ್ಟರಿ: ಕೃಷಿ ಕಂದಾಯ ಮತ್ತದರ ಶೋಷಕ ಶರಾತ್: ಭಾಗ 2

saketh rajan ashok kr
ಸಾಕೇತ್ ರಾಜನ್ 
ಕನ್ನಡಕ್ಕೆ: ಡಾ. ಅಶೋಕ್. ಕೆ. ಆರ್
01/07/2016
1809 – 10ರಲ್ಲಿ ಇಡೀ ಕೆನರಾ ಪ್ರಾಂತ್ಯದಲ್ಲಿ ಬೆಳೆ ಕಡಿಮೆಯಾಗಿತ್ತು ಮತ್ತದರ ಬೆಲೆಯೂ ಕುಸಿದು ಬಿದ್ದಿತ್ತು. ಈ ಕುಸಿದ ಆರ್ಥಿಕ ಪರಿಸ್ಥಿತಿಯ ಕಾರಣದಿಂದಾಗಿ ದಕ್ಷಿಣ ಕೆನರಾದ ರೈತರು ಸರಕಾರಕ್ಕೆ ಕಟ್ಟಬೇಕಾದ ತೆರಿಗೆಯನ್ನು ಮನ್ನಾ ಮಾಡಬೇಕೆಂದು ಒತ್ತಾಯಿಸಿದರು. ಕರ ನಿರಾಕರಣೆಯ ಅವರ ಹೋರಾಟ ಆ ಕ್ಷಣದ ಅವರ ತೊಂದರೆಗಳಿಗೆ ಮತ್ತು ಕಂದಾಯ ನೀತಿಗಳು ಮತ್ತು ಕಂಪನಿ ಸರಕಾರದ ಆಡಳಿತ ವೈಖರಿಯ ಕಾರಣಕ್ಕೆ ಶುರುವಾಯಿತು. ಪರಿಣಾಮವಾಗಿ ಭೂಕಂದಾಯದ ಸಂಗ್ರಹ ಮತ್ತು ಇತರೆ ಆದಾಯವೂ ಗಮನಾರ್ಹವಾಗಿ ಕಡಿಮೆಯಾಯಿತು….1820 ಮತ್ತು 1825ರ ನಡುವೆ ಭೂ ಕಂದಾಯದ ಸಂಗ್ರಹ ನಿಧಾನಕ್ಕೆ ಏರಿಕೆ ಕಂಡಿತು, ಆದರೆ ನಂತರ ಕಡಿಮೆಯಾಗುತ್ತಾ ಸಾಗಿ 1830-31ರಲ್ಲಿ ಕನಿಷ್ಟ ಮಟ್ಟ ತಲುಪಿತು”. (220) 

ಆಗಿನ ಜಿಲ್ಲಾಧಿಕಾರಿ ಹ್ಯಾರಿಸ್ ಅನ್ನು ಉಲ್ಲೇಖಿಸುತ್ತ ಶ್ಯಾಮ್ ಭಟ್ ಬರೆಯುತ್ತಾರೆ: “’ಇದು ಬೇಳೆ ಕಾಳುಗಳು ಬೆಲೆ ಕಡಿಮೆಯಾಗಿರುವ ಮೂರನೇ ವರುಷ; ಮತ್ತು ಕಳೆದ ಮೂರು ವರ್ಷಗಳಿಗೆ ಹೋಲಿಸಿದರೆ ಈ ಬಾರಿಯ ಬೆಲೆ ಕನಿಷ್ಟವಾಗಿದೆ, ರೈತರನ್ನು ಪುನಶ್ಚೇತನಗೊಳ್ಳಲಾಗದ ದೈನೇಸಿ ಸ್ಥಿತಿ ದೂಡಿಬಿಟ್ಟಿದೆ; ಕೆಲವು ಉತ್ತಮವಾಗಿರುವ ರೈತರು ಭೂಕಂದಾಯವನ್ನು ಕಟ್ಟಿದ್ದಾರಾದರೂ, ಅವರಲ್ಲೂ ಅನೇಕರು ಆ ಮೊತ್ತವನ್ನು ಕಟ್ಟಿರುವುದು ತಮ್ಮ ಭೂಮಿಯನ್ನು ಮಾರಾಟ ಮಾಡಿ ಅಥವಾ ಅಡ ಇಟ್ಟು’. ಕೆಲವು ಸಂದರ್ಭದಲ್ಲಿ ಮಾರಾಟಕ್ಕಿಟ್ಟ ಭೂಮಿಯ ಬೆಲೆ ಅದರ ಬೆಲೆಯ ಅರ್ಧಕ್ಕಿಂತಲೂ ಕಡಿಮೆಗೆ ಮಾರಾಟವಾಗಿತ್ತು. ಜಿಲ್ಲೆಯ ರೈತರ ಈ ಹೀನಾಯ ಪರಿಸ್ಥಿತಿಗೆ ಹೆಚ್ಚಾಗಿ ಅಂದಾಜಿಸಿದ್ದಷ್ಟೇ ಕಾರಣವಲ್ಲವೆನ್ನುವುದು ಹ್ಯಾರಿಸ್ ಅಭಿಪ್ರಾಯವಾಗಿತ್ತು. ಅವನ ಪ್ರಕಾರ ಇದು ವ್ಯಾಪಾರ ವಹಿವಾಟಿನಲ್ಲಾದ ಸ್ಥಗಿತತೆ ಮತ್ತು ಸಮಾಜದ ಬಡ್ಡಿವ್ಯಾಪಾರಿಗಳ ಪಾತ್ರವೂ ಇತ್ತು. 

ಆದರೆ ಹೆಚ್ಚಾಗಿ ಅಂದಾಜಿಸಿದ್ದ ಪರಿಣಾಮ ಮತ್ತು ಬಾಕಿ ಮನ್ನಾ ಸಲೀಸಾಗಿ ಮಾಡದೇ ಇದ್ದ ಕಾರಣದಿಂದ ರೈತರ ಮೇಲೀಗಾಗಲೇ ಇದ್ದ ತೊಂದರೆಗಳ ಜೊತೆಗೆ ಆರ್ಥಿಕ ಬಿಕ್ಕಟ್ಟೂ ಜೊತೆಯಾಗುವಂತಾಯಿತು. ರೈತರ ಬಡತನ ಅವರನ್ನು ಬಡ್ಡಿವ್ಯಾಪಾರಿಗಳ ಬಳಿಗೋಗುವಂತೆ ಮಾಡಿತು. ಸರಕಾರದ ಬೇಡಿಕೆಗಳನ್ನು ಈಡೇರಿಸುವ ಸಲುವಾಗಿ ರೈತರು ತಮ್ಮ ಭೂಮಿಯನ್ನು ಬಡ್ಡಿವ್ಯಾಪಾರಿಗಳ ಬಳಿ ಅಡವಿಟ್ಟರು. ದಕ್ಷಿಣ ಕೆನರಾದಲ್ಲಿ ಎರಡು ರೀತಿಯ ಅಡವುಗಳಿದ್ದವು; ಭೂಮಿ ಮತ್ತದರ ಬೆಳೆಯನ್ನು ಪ್ರತ್ಯೇಕವಾಗಿ ಅಡಕ್ಕೆ ಇಟ್ಟುಕೊಳ್ಳಲಾಗುತ್ತಿತ್ತು. ಭೂಮಿಯನ್ನು ಅಡಕ್ಕೆ ಇಟ್ಟುಕೊಂಡರೆ ಅದಕ್ಕೆ ಭೋಗ್ಯವೆಂದು ಅಥವಾ ಜೀವಂತ ಒತ್ತೆಯೆಂದು ಕರೆಯುತ್ತಿದ್ದರು ಮತ್ತು ಬೆಳೆಯನ್ನು ಒತ್ತೆ ಇಟ್ಟುಕೊಂಡರೆ ತೊರದೂ ಅಥವಾ ತೊರದೂವೂ ಅಥವಾ ಸತ್ತ ಒತ್ತೆಯೆಂದು ಕರೆಯುತ್ತಿದ್ದರು. 

ಕೊಟ್ಟ ಸಾಲಕ್ಕೆ ಬಡ್ಡಿವ್ಯಾಪಾರಿಗಳು ವಿಧಿಸುತ್ತಿದ್ದ ಬಡ್ಡಿ ವಾರ್ಷಿಕ 6 ರಿಂದ 12%ವರೆಗಿರುತ್ತಿತ್ತು; ಇದು ನಿರ್ಧರಿತವಾಗುತ್ತಿದ್ದುದು ಸಾಲದ ಮೊತ್ತವೆಷ್ಟು ಎನ್ನುವುದರ ಮೇಲೆ; ಸಾಲದ ಮೊತ್ತ ಕಡಿಮೆಯಾಗಿದ್ದರೆ ಬಡ್ಡಿ ಅಧಿಕವಾಗಿರುತ್ತಿತ್ತು ಮತ್ತು ಸಾಲದ ಮೊತ್ತ ಹೆಚ್ಚಿನದ್ದಾಗಿದ್ದರೆ ಬಡ್ಡಿ ಕಡಿಮೆಯಿರುತ್ತಿತ್ತು. ಬಹುತೇಕ ಪ್ರಕರಣಗಳಲ್ಲಿ ರೈತರು ಸಾಲ ತೀರಿಸುವಲ್ಲಿ ವಿಫಲರಾಗುತ್ತಿದ್ದರು ಮತ್ತು ಕೊನೆಗೆ ವಿಧಿ ಇಲ್ಲದೆ ತಮ್ಮ ಭೂಮಿಯನ್ನು ಬಡ್ಡಿವ್ಯಾಪಾರಿಗಳಿಗೆ ಮಾರಿಬಿಡುತ್ತಿದ್ದರು, ಇಡೀ ಗ್ರಾಮೀಣ ಭಾರತದಲ್ಲಿ ಕಾಣಬರುವ ಸಾಮಾನ್ಯ ಚಿತ್ರವಿದು. 1820ರ ಸಮಯದಲ್ಲಿ ಕಂಡುಬಂದ ಮತ್ತೊಂದು ಚಿತ್ರವೆಂದರೆ ತೆರಿಗೆ ಬಾಕಿಯನ್ನು ವಸೂಲು ಮಾಡುವ ಸಲುವಾಗಿ ಸರಕಾರವೇ ಭೂಮಿಯನ್ನು ಸಾರ್ವಜನಿಕ ಹರಾಜಿನ ಮೂಲಕ ಮಾರಾಟ ಮಾಡುತ್ತಿದ್ದುದು. 

ಈ ರೀತಿಯ ಸತತ ಕಡೆಗಣನೆಯ ಸಂದರ್ಭದಲ್ಲಿ ರೈತರು ಜೇಡರ ಬಲೆಯಲ್ಲಿ ಸಿಕ್ಕಂತಾದರು ಮತ್ತು 1820ರ ಕೊನೆಯ ಭಾಗದಲ್ಲಿ, ಪುರಾತನ ಮೂಲಗಾರರ ಆಸ್ತಿ ಬಡ್ಡಿವ್ಯಾಪಾರಿಗಳ ದೋಚುವ ಕೈಗಳ ವಶವಾಗುತ್ತಿದ್ದದ್ದು ಕೆನರಾ ಜಿಲ್ಲೆ ಮತ್ತು ಕೆನರಾ ಪ್ರಾಂತ್ಯದರೆಡರಲ್ಲೂ ಸಾಮಾನ್ಯವಾದ ಸಂಗತಿಯಾಗಿಬಿಟ್ಟಿತ್ತು. 

1831ರ ಫೆಬ್ರವರಿ 1ರಂದು ಕೆನರಾದ ಜಿಲ್ಲಾಧಿಕಾರಿ ಡಿಕಿನ್ಸನ್ ನಿರ್ದೇಶಕ ಮಂಡಳಿಗೆ ಬರೆಯುತ್ತಾರೆ. ‘ಈ ಜಿಲ್ಲೆಯ ಕಂದಾಯ ಸಂಗ್ರಹ ಮೇಲೆ ಕಳೆದ ಮೂರು ಅಥವಾ ನಾಲ್ಕು ವರ್ಷದ ಮಾರುಕಟ್ಟೆಯಿಂದ ಪ್ರಭಾವಿತವಾಗಿದೆ ಎಂದು ಸರಕಾರಕ್ಕೆ ತಿಳಿಸುವುದು ನನ್ನ ಕರ್ತವ್ಯವೆನ್ನುವುದು ಸತ್ಯ. ಕಂದಾಯ ಎಷ್ಟು ಹೆಚ್ಚಿದೆಯೆಂದರೆ ರೈತರಿಗೆ ಅದನ್ನು ಕಟ್ಟುವುದು ಅಸಾಧ್ಯವೇ ಆಗಿದೆ. ಅವರಲ್ಲೀಗ ಗರಿಷ್ಟ ಮಟ್ಟದ ಬಿಕ್ಕಟ್ಟಿನ ಪರಿಸ್ಥಿತಿಯಿದೆ ಮತ್ತು ಅವರನ್ನು ಉಳಿಸುವ ಸಲುವಾಗಿ ಹಾಗೂ ಅವರು ದಿವಾಳಿಯಾಗುವುದನ್ನು ತಡೆಯುವ ಸಲುವಾಗಿ ಕಂದಾಯದ ದೊಡ್ಡ ಮೊತ್ತವನ್ನು ಮನ್ನಾ ಮಾಡುವುದು ಅತ್ಯವಶ್ಯಕ ಎಂದು ಹೇಳುವುದಕ್ಕೆ ನನಗೆ ಯಾವುದೇ ರೀತಿಯ ಹಿಂಜರಿಕೆಯಿಲ್ಲ….ಕೆನರಾದ ಕೆಲ ಪ್ರದೇಶಗಳಲ್ಲಿನ ಜನರ ಬಡತನ ಮತ್ತವರ ಬಿಕ್ಕಟ್ಟಿನ ಪರಿಸ್ಥಿತಿಯನ್ನು ಕಣ್ಣಾರೆ ಕಾಣುವುದು ಅಪಾರ ನೋವಿನ ಸಂಗತಿ; ಪೂರ್ವ ಕರಾವಳಿಯ ರೈತರನ್ನಷ್ಟೇ ನೋಡಿರುವ ಮಹನೀಯರಿಗೆ ಇಲ್ಲಿನ ಪರಿಸ್ಥಿತಿಯ ಕಲ್ಪನೆಯೂ ಮೂಡಲಾರದು…’ 

ಕೂಟಿನ ಪ್ರತಿರೋಧದ ಸದ್ದಡಗಿಸಿದ ನಂತರ ಮಂಡಳಿ ದ್ವಿಮುಖ ನೀತಿಯನ್ನು ಅನುಸರಿಸಲಾರಂಭಿಸಿತು, ಸಂತ್ರಸ್ತ ರೈತರ ವಾರ್ಷಿಕ ಬಾಕಿ ಮನ್ನಾ ಮಾಡುತ್ತಿತ್ತು ಅಥವಾ ನಾಲ್ಕು ಅಥವಾ ಐದು ವರುಷದಷ್ಟು ಸುದೀರ್ಘ ಅವಧಿಗೆ ಬಾಕಿ ಉಳಿಸಿಕೊಂಡ ರೈತರ ಭೂಮಿಯನ್ನು ವಶಪಡಿಸಿಕೊಳ್ಳುತ್ತಿತ್ತು. ನೀತಿಯಲ್ಲಾದ ಈ ಬದಲಾವಣೆಯನ್ನು ಸ್ಪಷ್ಟವಾಗಿ 1830ರ ಆಡಳಿತಾತ್ಮಕ ದಾಖಲೆಗಳಲ್ಲಿ ಕಾಣಬಹುದು, ಹೆಚ್ಚಾಗಿ ಭೂಮಿಯನ್ನು ವಶಪಡಿಸಿಕೊಳ್ಳಲಾಗುತ್ತಿತ್ತು. ಸಾರ್ವಜನಿಕ ಹರಾಜನ್ನು ಸರಕಾರವೇ ನಡೆಸುತ್ತಿತ್ತು ಮತ್ತು ಬಹುತೇಕ ಪ್ರಕರಣಗಳಲ್ಲಿ ಮಾಲೀಕತ್ವ ಹಣವಿದ್ದವರ ವರ್ಗಕ್ಕೆ ಹೋಗುತ್ತಿತ್ತು, ಬಡ್ಡಿವ್ಯಾಪಾರಿಗಳಂತವರಿಗೆ. ಈ ರೀತಿಯ ಬಲವಂತದ ಮಾರಾಟ ಪ್ರಕರಣಗಳು ಬಡತನ ಹೆಚ್ಚಿದ್ದ ತಾಲ್ಲೂಕುಗಳಾದ ಬಂಟ್ವಾಳ, ಬೇಕಲ್ ಮತ್ತು ಮಂಗಳೂರಿನಲ್ಲಿ ಅಧಿಕವಾಗಿ ಕಾಣಬಹುದಿತ್ತು…. 

ಸರಕಾರೀ ಅಧಿಕಾರಿಗಳು ಮತ್ತು ಬಡ್ಡಿವ್ಯಾಪಾರಿಗಳ ನಡುವಿದ್ದ ಸಂಬಂಧ ಕೆನರಾದ ಉಪ ಜಿಲ್ಲಾಧಿಕಾರಿಯಾಗಿದ್ದ ಎ.ಎಫ್. ಹಡಲ್ ಸ್ಟೋನ್ 1826ರ ಜುಲೈ 29ರಂದು ಮಂಡಳಿಗೆ ಬರೆದ ವರದಿಯಿಂದ ಸ್ಪಷ್ಟವಾಗುತ್ತದೆ: 

‘ಬಾರ್ಕೂರು ತಾಲ್ಲೂಕಿನಲ್ಲಿ ಮುಂದಾಗಿ ಕೊಳ್ಳುವ ಪದ್ಧತಿ ಕೆಲವು ವರುಷಗಳಿಂದ ಸಂಪೂರ್ಣವಾಗಿತ್ತು. ಕರಾವಳಿಯ ವರ್ತಕರ ದಲ್ಲಾಳಿ, ಒಂದಷ್ಟು ಹಣದೊಂದಿಗೆ ಶಾನುಬಾಗರ ಜೊತೆಗೂಡುತ್ತಿದ್ದ; ಶಾನುಬಾಗರು ತೆರಿಗೆ ಸಂಗ್ರಹಿಸಲೋಗುವ ದಿನಗಳಲ್ಲಿ. ಈ ಎರಡೂ ಪಕ್ಷಗಳು ಒಬ್ಬರನ್ನೊಬ್ಬರು ಚೆನ್ನಾಗಿ ಅರಿತುಕೊಂಡಿದ್ದರು. ಶಾನುಬಾಗರು ಈಗಾಗಲೇ ಬಿಕ್ಕಟ್ಟಿನಲ್ಲಿದ್ದ ರೈತನಿಗೆ ತೆರಿಗೆ ಕಟ್ಟದೇ ಇದ್ದಲ್ಲಿ ಯಾವ ರೀತಿಯ ಅನಪೇಕ್ಷಿತ ಪರಿಣಾಮಗಳಾಗುತ್ತವೆ ಎಂದು ಹೇಳಿದರೆ ದಲ್ಲಾಳಿ ಈ ಪರಿಣಾಮಗಳನ್ನು ತಡೆಯುವ ಸಲುವಾಗಿ ತಾನು ಕೊಡಲು ಸಿದ್ಧವಾಗಿರುವ ಸಾಲವನ್ನು ಪಡೆದರಾಯಿತು, ಮುಂದಿನ ವರುಷದ ಬೆಳೆಯ ಆಧಾರದ ಮೇಲೆ ಎಂದು ತಿಳಿಸುತ್ತಿದ್ದ. ಇವೆಲ್ಲವನ್ನೂ ಪಕ್ಕಾ ಮಾಡಿಕೊಳ್ಳಲು, ವರ್ತಕ ಮುಂದಿನ ವರುಷದ ಜುಮ್ಮಾಬಂಧಿಯನ್ನು ಕೊಡುವ ಜವಾಬ್ದಾರಿಯನ್ನು ಹೊತ್ತುಕೊಳ್ಳುತ್ತಿದ್ದ ಮತ್ತಿದರಿಂದ ಬೆಳೆಯ ಮೇಲೆ ಸಂಪೂರ್ಣ ಹಕ್ಕನ್ನು ಹೊಂದಿಬಿಡುತ್ತಿದ್ದ. ಒಂದು ಬಾರಿ ಬಡ್ಡಿವ್ಯಾಪಾರಿಗಳ ಹಿಡಿತಕ್ಕೆ ಸಿಕ್ಕಿಬಿಟ್ಟರೆ ಅದರಿಂದ ಬಿಡಿಸಿಕೊಳ್ಳಲು ರೈತನಿಗೆ ಸಾಧ್ಯವೇ ಆಗುತ್ತಿರಲಿಲ್ಲ – ಅವನ ಸಂಕಷ್ಟಗಳು ಹೆಚ್ಚುತ್ತಿತ್ತು, ಮತ್ತು ಕೊನೆಗೆ ವರ್ತಕ ಆ ಭೂಮಿಯನ್ನು ವಶಕ್ಕೆ ಪಡೆದುಕೊಳ್ಳುತ್ತಿದ್ದ ಮತ್ತಾ ರೈತನನ್ನು ಅಲ್ಲೇ ಗುತ್ತಿಗೆಗೆ ನೇಮಿಸಿಕೊಳ್ಳುತ್ತಿದ್ದ’.” (221) 

ಬೆಂಜಮಿನ್ ಹೇನ್ಸ್ 1802ರಷ್ಟು ಮೊದಲೇ ಬರೆದಿದ್ದ Report relative to the Mysore Surveyಯಲ್ಲಿ ಊಳಿಗಮಾನ್ಯತೆಯ ಸಾಲದಿಂದುಂಟಾದ ಪರಿಸ್ಥಿತಿಯನ್ನು ಮುಂಗಂಡಿದ್ದಾನೆ. ಅವನು ಬರೆಯುತ್ತಾನೆ: “ಕರಾವಳಿಯಲ್ಲಿ ಕೃಷಿಯನ್ನು ಹಾಳುಗೆಡವಿದ ದೊಡ್ಡ ತಲೆಬಿಸಿ ಸಂಗತಿಯೆಂದರೆ ಸರಕಾರಕ್ಕೆ ತೆರಿಗೆ ಹಣವನ್ನು ಮುಂಗಡವಾಗಿ ನೀಡುವುದು, ಬಿತ್ತನೆ ನಡೆಯುವ ಮೊದಲೇ ನೀಡುವುದು ಮತ್ತು ಪುನಃ ಬೆಳೆ ಕಟಾವಾಗುವ ಮೊದಲೇ ನಿಗದಿತ ಸಮಯಕ್ಕೆ ಹಣವನ್ನು ನೀಡುವುದು. ಯಾವ ಜಮೀನ್ದಾರ, ಗುತ್ತಿಗೆದಾರ ಅಥವಾ ಕೃಷಿಕನ ಬಳಿ ಮುಂಗಡವಾಗಿ ಕೊಡಲು ಹಣವಿರುತ್ತಿರಲಿಲ್ಲವಾದ್ದರಿಂದ ಹಣಕ್ಕಾಗಿ ಅವರು ಸಾಹುಕಾರರ ಅಥವಾ ಬಡ್ಡಿವ್ಯಾಪಾರಿಗಳ ಬಳಿಯೇ ಕೈಚಾಚಬೇಕಿತ್ತು. ಹಣ ಬೇಡುತ್ತಿರುವ ವ್ಯಕ್ತಿಯ ಪ್ರಾಮಾಣಿಕತೆಗೆ ಅನುಗುಣವಾಗಿ ಹಣವನ್ನು ಮುಂಗಡವಾಗಿ ನೀಡುತ್ತಿದ್ದರು, 2% ಬಡ್ಡಿ ಪ್ರತಿ ತಿಂಗಳಿಗೆ ನಿಗದಿಯಾಗುತ್ತಿತ್ತು ಮತ್ತು ಮುಂಗಡ ಹಣದಲ್ಲಿ ಐದು ಪ್ರತಿಶತಃದಷ್ಟನ್ನು ಮುರಿದುಕೊಳ್ಳುತ್ತಿದ್ದರು. ಎರಡನೇ ಮತ್ತು ಮೂರನೇ ಕಂತಿಗೆ (ಅಷ್ಟರಲ್ಲಿ ಬೆಳೆಗಳು ಬೆಳೆದಿರುತ್ತಿದ್ದವು) ಮುಂಗಡ ಹಣದಲ್ಲೇನನ್ನೂ ಮುರಿದುಕೊಳ್ಳುತ್ತಿರಲಿಲ್ಲ, ಆದರೆ ನಾಲ್ಕನೇ ಬಾರಿ ಹಣ ಪಡೆಯುವಾಗ ಬೆಳೆಯನ್ನು ಒತ್ತೆ ಇಡಬೇಕಿತ್ತು. ಬಹಳಷ್ಟು ಬಡ್ಡಿವ್ಯಾಪಾರಿಗಳು ತತ್ ಕ್ಷಣ ಮಾರುವುದಕ್ಕೆ ಒತ್ತಾಯಿಸುತ್ತಿದ್ದರು ಮತ್ತು ತಾವೇ ಖರೀದಿದಾರರಾಗಿಬಿಡುತ್ತಿದ್ದರು, ಮಾರುಕಟ್ಟೆಯಲ್ಲಿರುವ ಮೌಲ್ಯಕ್ಕಿಂತ ಐದರಿಂದ ಹತ್ತು ಪರ್ಸೆಂಟಿನಷ್ಟು ಕಡಿಮೆ ಬೆಲೆಗೆ ಕೊಂಡುಕೊಳ್ಳುತ್ತಿದ್ದರು”. (222) 

ವಸಾಹತುಶಾಹಿಯ ಕೃಷಿ ಕಂದಾಯ ಒಂದೆಡೆ ಕಂಪನಿಯನ್ನು ಶ್ರೀಮಂತಗೊಳಿಸಿದರೆ ಮತ್ತೊಂದೆಡೆ ಕೃಷಿ ಭೂಮಿಯನ್ನು ಆಕ್ರಮಣಕಾರಿ ಹದ್ದಿನಂತಹ ಬಡ್ಡಿವ್ಯಾಪಾರಿಗಳ ಕೈವಶ ಮಾಡಿಬಿಟ್ಟಿತು; ಈ ಬಡ್ಡಿವ್ಯಾಪಾರಿಗಳು ಕರಾವಳಿಯ ಭೂಮಾಲೀಕರಾಗಿ ಹೊರಹೊಮ್ಮಿದರು, ವಸಾಹತು ಲೂಟಿಯಿಂದ ಉದ್ಭವವಾದ ಹೊಸ ಊಳಿಗಮಾನ್ಯ ವರ್ಗ. ಭಟ್ ಮತ್ತು ಹಡಲ್ ಸ್ಟೋನ್ ಉಲ್ಲೇಖಿಸುವ ಈ ಬಡ್ಡಿ ವ್ಯಾಪಾರಿಗಳು ಬೇರ್ಯಾರೂ ಅಲ್ಲ, ಕರಾವಳಿಯ ವರ್ತಕರು – ನಾವೀಗಾಗಲೇ ಉಲ್ಲೇಖಿಸಿರುವ ಮಧ್ಯಮವರ್ತಿ ಗೌಡ ಸಾರಸ್ವತ ಬ್ರಾಹ್ಮಣರು. ಮೊದಲಿಗೆ ಬಂದರು ಪಟ್ಟಣದ ಮಧ್ಯಮವರ್ತಿ ವರ್ತಕರಾಗಿದ್ದ, ನಂತರ ಬಡ್ಡಿವ್ಯಾಪಾರಿಗಳಾಗಿ ಪೂರ್ವದ ಹಳ್ಳಿಗಳತ್ತ ವಲಸೆ ಹೋದ ಗೌಡ ಸಾರಸ್ವತ ಬ್ರಾಹ್ಮಣರು ಭೂಮಿಯನ್ನು ಕಬಳಿಸುತ್ತ ಊಳಿಗಮಾನ್ಯ ಭೂಮಾಲೀಕರ ಹೊಸ ಪದರವಾದರು; ಅವರ ಶೋಷಕ ಹಿಡಿತದಲ್ಲಿ ಕರಾವಳಿಯ ಬಹಳಷ್ಟು ಜನರು ಬಂಧಿಯಾದರು. ಈ ಪೂರ್ವದ ಪಯಣದಲ್ಲಿ, ಕೆಲವರು ಘಟ್ಟದ ಮೇಲೇರಿ ಸಮೃದ್ಧ ಮಲೆನಾಡಿನಲ್ಲೂ ಮೇಯಲಾರಂಭಿಸಿದರು. 

ವಸಾಹತು – ಮಧ್ಯಮವರ್ತಿ – ಊಳಿಗಮಾನ್ಯ ಬಂಧವನ್ನು ಮತ್ತಷ್ಟು ವಿವರವಾಗಿ ತಿಳಿಸುತ್ತಾ, ಶ್ಯಾಮ್ ಭಟ್ ಹೇಳುತ್ತಾರೆ: “ಈ ಬಡ್ಡಿವ್ಯಾಪಾರಿಗಳ ಜನನ ಮತ್ತವರು ಸಮಾಜದಲ್ಲಿ ವಿಶಿಷ್ಟ ಪ್ರಭಾವಿ ಗುಂಪಾಗಿ ಬೆಳೆದದ್ದು ವಿಚಿತ್ರವಾದ ವಸಾಹತು ಪರಿಸ್ಥಿತಿಯ ಕಾರಣದಿಂದ… 

ಹೊಸ ಭೂಮಾಲೀಕರು, ಬಡ್ಡಿವ್ಯಾಪಾರಿಗಳು ಮತ್ತು ಅಧಿಕಾರಿಗಳು (ಬ್ರಾಹ್ಮಣ, ಸಾರಸ್ವತ ಮತ್ತು ಬಂಟ್ ಕುಟುಂಬಗಳಿಂದ ಬಂದವರು) ಬ್ರಿಟೀಷ್ ಅಧಿಕಾರಶಾಹಿಯ ಜೊತೆಗೆ ಹತ್ತಿರದ ನಂಟನ್ನು ಬೆಳೆಸಿಕೊಂಡಿದ್ದರು; ಬ್ರಿಟೀಷರ ಕಂದಾಯ ಮತ್ತು ನ್ಯಾಯಂಗ ತಮಗೆ ಎಲ್ಲ ವಿಧದಲ್ಲೂ ಅನುಕೂಲಕರವಾಗಿರುವಂತೆ ನೋಡಿಕೊಂಡರು. 1799 – 1800 ನಂತರ ಅಸ್ತವ್ಯಸ್ತಗೊಂಡ ರಾಜಕೀಯ ವ್ಯವಸ್ಥೆಯು, ಭೂಮಿ ಹೊಂದಿದ ಬ್ರಾಹ್ಮಣರಿಗೆ, ಬಂಟರಿಗೆ ಮತ್ತು ವರ್ತಕರಿಗೆ ಕಂಪನಿ ಮತ್ತು ಕೃಷಿಕರ ನಡುವೆ ಪ್ರಭಾವಿ ಮತ್ತು ಸಂಕೀರ್ಣ ವ್ಯಕ್ತಿಗಳಾಗಿ ಬೆಳೆಯುವ ಎಲ್ಲಾ ಸಾಧ್ಯತೆಗಳನ್ನೂ ಒದಗಿಸಿಕೊಟ್ಟಿತು. 1826ರಲ್ಲಿ ಕೊಟ್ಟ ವರದಿಯೊಂದರಲ್ಲಿ ಕೆನರಾದ ಉಪಜಿಲ್ಲಾಧಿಕಾರಿ ಎ.ಎಫ್. ಹಡಲ್ ಸ್ಟೋನ್ ದಕ್ಷಿಣ ಕೆನರಾದ ಶಾನುಭಾಗರು ನಡೆಸಿದ ಮೋಸದ ಕೆಲಸಗಳನ್ನು ತಿಳಿಸುತ್ತಾರೆ. ಕೃಷಿಕರ ಅಜ್ಞಾನವನ್ನೇ ಬಂಡವಾಳ ಮಾಡಿಕೊಂಡು ಒತ್ತೆ ಪತ್ರಗಳನ್ನು ಮಾರಾಟ ಪತ್ರಗಳನ್ನಾಗಿ ಪರಿವರ್ತಿಸಿ, ಅವರ ಸಹಿ ಪಡೆದುಕೊಂಡು ಮೋಸ ಮಾಡಿದರು. ಈ ಸ್ಥಳೀಯ ಕಂದಾಯ ಅಧಿಕಾರಿಗಳು ಮಾಡಿದ ಇನ್ನೂ ಹೆಚ್ಚಿನ ಅನಾಹುತಕಾರಿ ಕಾರ್ಯವೆಂದರೆ ಸ್ಥಳೀಯ ವರ್ತಕ ಬಡ್ಡಿವ್ಯಾಪಾರಿಗಳ ಜೊತೆಗೆ ಅನೈತಿಕ ಮೈತ್ರಿ ಮಾಡಿಕೊಂಡಿದ್ದು…. ವರ್ತಕ ವರ್ಗಕ್ಕೆ ಸೇರಿದ ಕೆಲವರು ಆಡಳಿತದಲ್ಲಿದ್ದರು, ಮತ್ತವರು ಸರಕಾರೀ ಅಧಿಕಾರಿಗಳಾಗಿ ಹಾಗು ಬಡ್ಡಿವ್ಯಾಪಾರಿಗಳಾಗಿ ಎರಡೆರಡು ಕೆಲಸ ಮಾಡುತ್ತಿದ್ದ ಎಲ್ಲಾ ಸಾಧ್ಯತೆಗಳೂ ಇತ್ತು. ಈ ವರ್ತಕ ಬಡ್ಡಿ ವ್ಯಾಪಾರಿಗಳು ಕಂದಾಯ ಅಧಿಕಾರಿಗಳೇ ಆಗಿರಲಿಲ್ಲ ಎನ್ನುವುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಅವರಲ್ಲಿ ಕೆಲವರು, ಉದಾಹರಣೆಗೆ ಬಂಟ್ವಾಳದ ಕೊಂಕಣಿಗಳು ಆ ಪ್ರದೇಶದಲ್ಲಿ ಉನ್ನತಿ ಹೊಂದುತ್ತಿದ್ದ ವರ್ತಕರಾಗಿದ್ದರು”. (223) 

ತುಳುನಾಡಿನ ಪರಿಸ್ಥಿತಿಯನ್ನು ಒಟ್ಟಾರೆಯಾಗಿ ಅವಲೋಕಿಸುತ್ತ, ಶ್ಯಾಮ್ ಭಟ್ “ವಸಾಹತು ಮಾಲೀಕರ ಸ್ಪಷ್ಟ ಆಸಕ್ತಿ ಸ್ಥಳೀಯರು ಸಂಪೂರ್ಣವಾಗಿ ಕುಸಿಯುವಂತೆ ಮಾಡುವುದಾಗಿತ್ತು” ಎಂದ್ಹೇಳಿ ಮುಕ್ತಾಯಗೊಳಿಸುತ್ತಾರೆ. (224) 

ನೇರವಾಗಿ ಮದ್ರಾಸ್ ಪ್ರಾಂತ್ಯದ ಆಡಳಿತದಲ್ಲಿದ್ದ ಬಳ್ಳಾರಿಯ ಪರಿಸ್ಥಿತಿ, ದಕ್ಷಿಣ ಕನ್ನಡದ ಪರಿಸ್ಥಿತಿಗಿಂತ ಬೇರೆಯಾಗಿರಲಿಲ್ಲ. 1824ರಲ್ಲಿ ದಕ್ಷಿಣದ ಜಿಲ್ಲೆಗಳಲ್ಲಿದ್ದ ಪರಿಸ್ಥಿತಿಯ ಬಗ್ಗೆ ಪ್ರಾಂತ್ಯದ ಗವರ್ನರ್ ಆಗಿದ್ದ ಮನ್ರೋ ಟಿಪ್ಪಣಿ ಮಾಡಿಕೊಂಡಿದ್ದ; ಇಲ್ಲಿನ ಕಂದಾಯ ಪದ್ಧತಿಯನ್ನು ಎರಡು ದಶಕಗಳ ಹಿಂದೆ ಕಿರಿಯ ಅಧಿಕಾರಿಯಾಗಿದ್ದಾಗ ಮನ್ರೋನೇ ನಿರ್ಧರಿಸಿದ್ದ. “ಬಳ್ಳಾಯಿಯಲ್ಲಿ….. ಸತತವಾದ ಶಾಂತಿಯ ದಿನಗಳಲ್ಲಿ ಉತ್ತಮಗೊಳ್ಳಬೇಕಿದ್ದ ಇಲ್ಲಿನ ಜನರ ಪರಿಸ್ಥಿತಿ ಕಳೆದ ಇಪ್ಪತ್ತು ವರುಷಗಳಿಂದ ಕುಸಿದು ಹೋಗಿದೆ. ಇದಕ್ಕೆ ಹತ್ತಲವು ಕಾರಣಗಳನ್ನು ನೀಡಬಹುದು…. (ಒಂದು) ಮೂರು ಮತ್ತು ಹತ್ತು ವರುಷದ ಗುತ್ತಿಗೆ ಪದ್ಧತಿಯಲ್ಲಿ, ಗುತ್ತಿಗೆಯ ಮೊತ್ತ ಎಲ್ಲಾ ವರುಷಗಳಿಗೂ ಒಂದೇ ಇರುತ್ತಿತ್ತು, ಇದು ಹವಾಮಾನದಲ್ಲಾಗುತ್ತಿದ್ದ ವೈಪರೀತ್ಯಗಳ ಸಂದರ್ಭವನ್ನು ಪರಿಗಣನೆಗೆ ತೆಗೆದುಕೊಳ್ಳದಿದ್ದ ಕಾರಣ ಗುತ್ತಿಗೆದಾರನಿಗೆ ಯಾವುದೇ ಸಹಾಯವಾಗುತ್ತಿರಲಿಲ್ಲ. ಹವಾಮಾನ ವೈಪರೀತ್ಯ ಕಂಡ ಸಂದರ್ಭದಲ್ಲೆಲ್ಲ ರೈತರು ದಿವಾಳಿಯಾದರು….” (225) 

ಮುಂದಿನ ತಿಂಗಳಿನಲ್ಲೇ, ಬಳ್ಳಾರಿಯ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿದ್ದರಿಂದ ಎಚ್ಚರಗೊಂಡು, on the depressed condition in the bellari district ಎಂಬ ಮತ್ತೊಂದು ಟಿಪ್ಪಣಿಯಲ್ಲಿ ಈ ವಿಷಯಗಳನ್ನು ಗಮನಿಸುತ್ತಾನೆ: “ಭೂ ಕಂದಾಯವನ್ನು ಐದನೇ ಒಂದಂಶದಷ್ಟು ಹೆಚ್ಚಿಸಿದ ಕಾರಣದಿಂದ ಬಡ ರೈತರಲ್ಲಿ ಕೆಲವೇ ಕೆಲವರು ಮಾತ್ರ ಪೂರ್ತಿ ಬಾಡಿಗೆಯನ್ನು ಕಟ್ಟಿದ್ದಾರೆ – ಬಹಳಷ್ಟು ಮಂದಿ 10 ರಿಂದ 50% ಅಥವಾ 60% ಮನ್ನಾ ಮಾಡಿಸಿಕೊಂಡಿದ್ದಾರೆ; ಇಷ್ಟೆಲ್ಲ ಆದ ನಂತರವೂ ಬಹಳಷ್ಟು ಮಂದಿ ಮತ್ತೆ ಸುಧಾರಿಸಿಕೊಳ್ಳಲೇ ಆಗಲಿಲ್ಲ, ಬಾಡಿಗೆ ಕಟ್ಟುವುದು ದೂರದ ಮಾತು. ಬಹುತೇಕರು ಪ್ರತಿ ವರುಷವೂ ಹಣ ಕಟ್ಟಲು ವಿಫಲರಾದರು, ಮತ್ತವರ ಭೂಮಿಯನ್ನು ತೊರೆದು ನಿಂತರು….ಗುತ್ತಿಗೆಯ ಸಮಯದಲ್ಲಿ ಬಡ ರೈತರ ಸಂಖೈ ಹೇರಿಕೆ ಕಂಡಿರುವುದು ಹೌದು, ಮತ್ತು ಭೂಮಿಯನ್ನು ತೊರೆದುಬಿಡುವ ಮತ್ತು ಭೂಮಿಯನ್ನು ಹಸ್ತಾಂತರಿಸುವ ಸಂದರ್ಭಗಳು ಹೆಚ್ಚಾದವು”. (226) 

ಬಾಂಬೆ ಸರಕಾರದ ಕೈಕೆಳಗೆ ಬಂದ ಉತ್ತರ ಕರ್ನಾಟಕದಲ್ಲೂ ಕೂಡ ಇಂತಹುದೇ ವಿದ್ಯಮಾನ ಕಂಡುಬಂತು. ಕಿತ್ತೂರಿನ ದೇಸಾಯಿಗಳು 1818ರಲ್ಲಿ ಬ್ರಿಟೀಷರಿಗೆ ವಾರ್ಷಿಕವಾಗಿ 1,75,000 ರುಪಾಯಿಗಳನ್ನು ಕಕ್ಕಲು ಒಪ್ಪಿಕೊಂಡಿದ್ದನ್ನು ನಾವೀಗಾಗಲೇ ನೋಡಿದ್ದೇವೆ. ಈ ಮೊತ್ತ ಕಿತ್ತೂರಿನ ದೇಸಾಯಿಗಳು ಪೇಶ್ವೆಗಳಿಗೆ ಕೊಡುತ್ತಿದ್ದ ಮೊತ್ತಕ್ಕಿಂತ ಎರಡು ಪಟ್ಟಷ್ಟಿತ್ತು ಮತ್ತು ಕಿತ್ತೂರಿನ ವಾರ್ಷಿಕ ಆದಾಯ 3,50,000 ರುಪಾಯಿಗಳಷ್ಟಿತ್ತು. ಇದರಿಂದ ಸ್ಪಷ್ಟವಾಗುವುದೇನೆಂದರೆ ಬ್ರಿಟೀಷರು ಕರ್ನಾಟಕದಲ್ಲಿದ್ದ ತಮ್ಮ ಕೈಗೊಂಬೆ ಸರಕಾರಗಳ ಅರ್ಧದಷ್ಟು ಆದಾಯವನ್ನು ದೋಚುತ್ತಿತ್ತು, ಕಡಿಮೆ ಮೊತ್ತವನ್ನಲ್ಲ. (227) 

ಇದೇ ಸಮಯದಲ್ಲಿ ಬಾಂಬೆ ಕರ್ನಾಟಕದಲ್ಲಿ ಬ್ರಿಟೀಷ್ ಕಂದಾಯ ಆಡಳಿತದ ಬಗ್ಗೆ ಫುಕಝಾವಾ ಹೇಳುತ್ತಾರೆ: “….1818ರಲ್ಲಿ ಭೂಕಂದಾಯ ನಿಗದಿಪಡಿಸುವಾಗ ಬ್ರಿಟೀಷರು ಮರಾಠರ ಕಾಲದ ಕೊನೆಯಲ್ಲಿದ್ದ ಅಧಿಕ ಕಂದಾಯವನ್ನು ಆಧಾರವಾಗಿಟ್ಟುಕೊಂಡರು. ರೈತರು ತಮ್ಮಿಡೀ ಬೆಳೆಯನ್ನು ಬಡ್ಡಿವ್ಯಾಪಾರಿಗಳ ಬಳಿ ಒತ್ತೆ ಇಡಬೇಕಾಗಿತ್ತು. ಬೆಳೆ ವೈಫಲ್ಯ ಸಾಮಾನ್ಯವಾಗಿತ್ತು ಮತ್ತು ಬೆಳೆ ಉತ್ತಮವಾಗಿ ಬಂದಾಗ ಬೆಲೆ ಕುಸಿದುಬಿಡುತ್ತಿತ್ತು. ಇಪ್ಪತ್ತು ವರುಷಗಳ ಕಾಲ ಈ ರೀತಿಯ ಹೆಚ್ಚಿನ ಕಂದಾಯದ ಕಾರಣದಿಂದ ಇಡೀ ಡೆಕ್ಕನ್ ಕಷ್ಟವನ್ನನುಭವಿಸಿತು ಎಂದು ಅಧಿಕೃತವಾಗಿಯೇ ಒಪ್ಪಿಕೊಳ್ಳಲಾಗಿತ್ತು, ಜನರು ಬಡತನದಿಂದ ನರಳಿದರು, ಹಳ್ಳಿಗಳು ನಾಶವಾಗಿದ್ದವು ಮತ್ತು ಭೂಮಿಯಲ್ಲಿ ಕೃಷಿ ಚಟುವಟಿಕೆಗಳೇ ನಿಂತುಹೋಗಿತ್ತು. ತೆರಿಗೆ ಮನ್ನಾ ಮಾಡುವುದವಶ್ಯಕವಾಗಿತ್ತು, ಆದರೆ ಈ ಮನ್ನಾ ನಿಜವಾಗಿಯೂ ರೈತರಿಗೆ ತಲುಪುವುದರ ಬಗ್ಗೆ ಯಾವ ಖಾತರಿಯೂ ಇರಲಿಲ್ಲ. ಹತ್ತಿ ಬೆಳೆಗೆ ಸೂಕ್ತವಾಗಿದ್ದ, ಕೃಷಿ ಮತ್ತಷ್ಟು ವಿಸ್ತರಿಸುವುದು ಸಾಧ್ಯವಿದ್ದ ಧಾರವಾಡದ ಪರಿಸ್ಥಿತಿಯಿದು. ಕರಾಬು ಭೂಮಿಯಲ್ಲಿ ಕೃಷಿ ಮಾಡಲೊರಡುವ ರೈತರಿಗೆ ಕೆಲವು ವರುಷಗಳ ಕಾಲ ಕಡಿಮೆ ಕಂದಾಯವನ್ನು ವಿಧಿಸುತ್ತಿದ್ದರಾದರೂ ನೆರೆಹೊರೆಯ ರಾಜರಾಳ್ವಿಕೆಯ ರಾಜ್ಯಗಳಲ್ಲಿ ಈ ಭೂ ಕಂದಾಯ ಮತ್ತಷ್ಟು ಕಡಿಮೆಯಿರುತ್ತಿತ್ತು. ಆದ್ದರಿಂದ ಈ ಹೊಸ ನೀತಿಗಳು ಕೃಷಿಯನ್ನೆಚ್ಚಿಸಲು ಹೆಚ್ಚಿನ ಸಹಾಯವನ್ನು ಮಾಡಲಿಲ್ಲ. ಹತ್ತೊಂಬತ್ತನೇ ಶತಮಾನದ ಮಧ್ಯಭಾಗದವರೆಗೂ ಧಾರವಾಡದ ಮೂರನೇ ಒಂದರಷ್ಟು ಸರಕಾರೀ ಭೂಮಿ ಕರಾಬಾಗಿ ಉಳಿದಿತ್ತು, ಜನಸಂಖೈಯಲ್ಲಿ ಅಪಾರ ಹೆಚ್ಚಳವಾಗಿದ್ದರೂ ಕೂಡ”. (228) 

ಧರ್ಮ ಕುಮಾರ್ ನಮಗೆ ಆ ಪ್ರದೇಶದ ರೈತರ ವಸ್ತುಸ್ಥಿತಿಯನ್ನು ಕುರಿತು ತಿಳಿಸುತ್ತಾರೆ: “ಭೂಕಂದಾಯ ಪ್ರಮಾಣ ಜಿಲ್ಲೆಯಿಂದ ಜಿಲ್ಲೆಗೆ ಬಹಳವೇ ವ್ಯತ್ಯಾಸವಾಗುತ್ತಿತ್ತು, ಮತ್ತು ಹಳ್ಳಿಯಿಂದ ಹಳ್ಳಿಗೂ ವ್ಯತ್ಯಾಸವಿರುತ್ತಿತ್ತು. ಯಾಕೆಂದರೆ ಕಂದಾಯ ಇಲಾಖೆ ಇನ್ನೂ ಅವ್ಯವಸ್ಥಿತವಾಗಿತ್ತು ಮತ್ತು ನಿರಂಕುಶವಾಗಿತ್ತು. ಭೂಕಂದಾಯ ಮತ್ತು ಸಮುದಾಯದ ಉಪಯೋಗಕ್ಕೆ ಹಾಗೂ ಹಳ್ಳಿಯ ಅಧಿಕಾರಿಗಳಿಗೆ ಅಧಿಕೃತವಾಗಿ ನಿಗದಿಮಾಡಿದ್ದ ಹಣವನ್ನೊರತುಪಡಿಸಿ ಕಂದಾಯ ಇಲಾಖೆಗಳು ಮಾಡುತ್ತಿದ್ದ ಸುಲಿಗೆ ಕೂಡ ಇತ್ತು. ಹೀಗಾಗಿ ಕೃಷಿಕನಿಗೆ ಕೊನೆಯಲ್ಲಿ ಉಳಿಯುತ್ತಿದ್ದುದು ಅತ್ಯಲ್ಪವಷ್ಟೇ; ಕಂದಾಯ ಮಂಡಳಿಯೇ 1818ರಲ್ಲಿ ಒಪ್ಪಿಕೊಂಡಂತೆ ಕೃಷಿಕನಿಗೆ ದಕ್ಕುತ್ತಿದ್ದುದು ಬೆಳೆಯ ಐದನೇ ಒಂದಂಶದಷ್ಟು ಅಥವಾ ಅದಕ್ಕಿಂತಲೂ ಕಡಿಮೆ”. (229) 

ಇದೇ ಪ್ರಶ್ನೆ ಮತ್ತು ಇದೇ ಪ್ರದೇಶದ ಬಗ್ಗೆ ಬರೆಯುತ್ತ, ನೀಲ್ ಚಾರ್ಲ್ಸ್ ವರ್ಥ್ ಹೇಳುತ್ತಾನೆ: “ಪುಣೆಯ ಪೇಶ್ವೆಗಳನ್ನು 1818ರಲ್ಲಿ ಪದಚ್ಯುತಿಗೊಳಿಸಿದ ನಂತರದ ಎರಡು ಮೂರು ದಶಕಗಳಲ್ಲಿ ಕಂಡು ಬಂದ ಪ್ರಮುಖ ಸಂಗತಿಯೆಂದರೆ ಕೃಷಿಯ ವ್ಯಾಪಕ ಕುಸಿತ….

ಮುಂದಿನ ವಾರ
ಕೃಷಿ ಕಂದಾಯ ಮತ್ತದರ ಶೋಷಕ ಶರಾತ್: ಭಾಗ 3

ಜೂನ್ 30, 2016

ಖುಲಾಸೆಗೊಂಡ ‘ಬಾಂಬ್ ಎಸ್.ಐ’ ನೆನಪಿಸಿದ ದಿನಗಳು

ಡಾ. ಅಶೋಕ್. ಕೆ. ಆರ್.
ಆಗಿನ್ನೂ ಎರಡನೇ ವರುಷದ ಎಂ.ಬಿ.ಬಿ.ಎಸ್ ವಿದ್ಯಾರ್ಥಿ. ಮಾವೋವಾದದ ಎಬಿಸಿಡಿಯಾಗಲೀ ನಕ್ಸಲ್ ವಾದದ ಅಆಇಈಯಾಗಲೀ ಸರಿಯಾಗಿ ಗೊತ್ತಿರಲಿಲ್ಲವಾದರೂ ನಿಧಾನಕ್ಕೆ ಮನಸ್ಸು ಅವೆರಡೂ ವಾದಗಳೆಡೆಗೆ ಆಕರ್ಷಿತವಾಗುತ್ತಿದ್ದ ದಿನಗಳವು. ಚುನಾವಣೆ ಪ್ರಕ್ರಿಯೆಗಳಿಂದಾಗಲೀ, ಮತದಾನದ ಮೂಲಕವಾಗಲೀ ಯಾವುದೇ ಬದಲಾವಣೆ ಸಾಧ್ಯವೇ ಇಲ್ಲ ಎಂದು ಧೃಡವಾಗಿ ನಂಬಿದ್ದ ದಿನಗಳವು. ಕ್ರಾಂತಿಯೆಂಬುದು ಬಂದೂಕಿನ ನಳಿಕೆಯ ಮೂಲಕವೇ ಆಗುವಂತದ್ದು ಎಂಬ ನಂಬಿಕೆ ಕಚ್ಚಿಕೊಂಡಿತ್ತು. ಸಿದ್ಧಾಂತಗಳ ಗಾಢ ಪ್ರಭಾವಗಳೇನು ಇರದಿದ್ದ ಹೊತ್ತಿನಲ್ಲಿ ಬಂದೂಕಿನ ಮೂಲಕ ಕ್ರಾಂತಿಯೆಂಬುದು ಭ್ರಷ್ಟ ರಾಜಕಾರಣಿಗಳು ಮತ್ತು ಅಧಿಕಾರಿಗಳನ್ನು ಗುಂಡಿಟ್ಟು ಕೊಂದುಬಿಟ್ಟರೆ ಸಾಕು, ಕ್ರಾಂತಿ ಸಫಲವಾಗಿ ದೇಶ ಫಳ ಫಳ ಹೊಳೆಯುತ್ತ ನಳನಳಿಸುತ್ತದೆ ಎಂಬುದಷ್ಟೇ ಯೋಚನೆ. ಬಂದೂಕೆಲ್ಲಿ ಹೊಂದಿಸೋದು, ಯಾವ ರಾಜಕಾರಣಿಯನ್ನು – ಅಧಿಕಾರಿಯನ್ನು ಮೊದಲು ಮುಗಿಸೋದು ಎನ್ನುವ ಕನಸುಗಳಲ್ಲಿ ತೇಲುತ್ತಿದ್ದಾಗಲೇ ರೋಮಾಂಚನಗೊಳಿಸುವಂತ ಸುದ್ದಿ ಬೆಂಗಳೂರಿನಿಂದ ಬಂತಲ್ಲ: “ಶಾಸಕರ ಭವನದಲ್ಲಿ ಬಾಂಬ್ ಪತ್ತೆ!”. ಆ ಸುದ್ದಿ ಓದಿದ ನಂತರ ಮೂಡಿದ ಒಂದೇ ಬೇಸರವೆಂದರೆ ಆ ಬಾಂಬ್ ಸ್ಪೋಟಗೊಳ್ಳುವ ಮೊದಲೇ ಪತ್ತೆಯಾಗಿಬಿಟ್ಟಿದ್ದು. ಎರಡೋ ಮೂರೋ ದಿನದ ನಂತರ ಬಾಂಬ್ ಇಟ್ಟವನ ಪತ್ತೆಯೂ ಆಯಿತು, ಪೋಲೀಸ್ ಇಲಾಖೆಯಲ್ಲೇ ಇದ್ದ ಎಸ್.ಐ ಆಗಿ ಕಾರ್ಯವನಿರ್ವಹಿಸುತ್ತಿದ್ದ ಗಿರೀಶ್ ಮಟ್ಟೆಣ್ಣನವರ್ ಬಾಂಬ್ ಇಟ್ಟಿದ್ದು.

ಆಗಿನ್ನೂ ಕೈಯಲ್ಲಿ ಮೊಬೈಲಿರಲಿಲ್ಲ. ಸ್ಮಾರ್ಟ್ ಫೋನುಗಳ ಭರಾಟೆಯೂ ಇರಲಿಲ್ಲ. ಗೂಗಲಿಸಿ ಗಿರೀಶ್ ಮಟ್ಟೆಣ್ಣನವರ್ ಬಗ್ಗೆ ತಿಳಿದುಕೊಳ್ಳಲು ಇಂಟರ್ನೆಟ್ ಸೆಂಟರ್ರಿಗೆ ಹೋಗಬೇಕಿತ್ತು. ಘಂಟೆಗೆ ಇಪ್ಪತ್ತು ರುಪಾಯಿ ತೆತ್ತು ಇಂಟರ್ನೆಟ್ಟಿನಲ್ಲಿ ಹುಡುಕುವುದಕ್ಕಿಂತ ಮಾರನೇ ದಿನದ ಎಲ್ಲಾ ಪತ್ರಿಕೆಗಳನ್ನು ತೆಗೆದುಕೊಂಡರೆ ಹೆಚ್ಚಿನ ವಿಷಯಗಳು ತಿಳಿಯುತ್ತವೆ ಎಂಬುದರ ಅರಿವಿತ್ತು. ಒಂದು ದಿನ ತಡೆದು ಕನ್ನಡದ ಅಷ್ಟೂ ದಿನಪತ್ರಿಕೆಗಳನ್ನು ಗುಡ್ಡೆ ಹಾಕಿಕೊಂಡು ಕುಳಿತೆ. ಪ್ರಾಮಾಣಿಕ ಅಧಿಕಾರಿ, ವ್ಯವಸ್ಥೆಯಿಂದ ಬೇಸತ್ತು ಇಂತಹ ಕೆಲಸ ಮಾಡಿದ್ದಾನೆ ಎಂಬ ವರದಿ ಎಲ್ಲಾ ಪತ್ರಿಕೆಗಳಲ್ಲೂ ಇತ್ತು. ಗಿರೀಶ್ ಮಟ್ಟೆಣ್ಣನವರ್ ಬಗ್ಗೆ ಒಂದಷ್ಟು ಅನುಕಂಪದಿಂದಲೇ ಬರೆದಿದ್ದರು. ವರದಿಯ ಕೊನೆಗೆ ಆದರೂ ಬಾಂಬಿಡುವುದು ಪ್ರಜಾಪ್ರಭುತ್ವದಲ್ಲಿ ಸರಿಯಾದ ಕೆಲಸವಲ್ಲ, ಹೋರಾಡಲು ಪ್ರಜಾಪ್ರಭುತ್ವದಲ್ಲಿ ಅನೇಕಾನೇಕ ದಾರಿಗಳಿವೆ ಎಂಬರ್ಥದ ಸಾಲುಗಳಿರುತ್ತಿದ್ದವು. ಥೂತ್ತೇರಿಕೆ ಇಂತಹ ಪತ್ರಿಕೆಗಳಿರೋವರ್ಗೂ ಕ್ರಾಂತಿಯಾಗಲ್ಲ ಅಂತ ಬಯ್ಕೊಂಡು ಇನ್ನೊಂದು ಸುತ್ತು ಗಿರೀಶ್ ಮಟ್ಟೆಣ್ಣನವರ್ ಬಗ್ಗೆ ಓದಿಕೊಂಡಿದ್ದಾಯಿತು. ಗಿರೀಶ್ ಮಟ್ಟೆಣ್ಣನವರ್ ಬಗ್ಗೆ ಅಭಿಮಾನ ಮೂಡಿತು.

ಕೆಲವು ದಿನಗಳಲ್ಲಿ ಗಿರೀಶ್ ಮಟ್ಟೆಣ್ಣನವರ್ ಜಾಮೀನಿನ ಮೇಲೆ ಬಿಡುಗಡೆಗೊಂಡರು. ವಾರಕ್ಕೊಮ್ಮೆ ಹಾಯ್ ಬೆಂಗಳೂರ್, ಲಂಕೇಶ್ ಪತ್ರಿಕೆ ಓದುವ ಹವ್ಯಾಸವಿತ್ತಲ್ಲ. ಹಾಯ್ ಬೆಂಗಳೂರಿನ ಸಂಪಾದಕೀಯ ‘ಹಲೋ’ದಲ್ಲಿ ಗಿರೀಶ್ ಮಟ್ಟೆಣ್ಣನವರ್ ಎಂಬ ಪ್ರಾಮಾಣಿಕನ ಪ್ರಾಮಾಣಿಕತೆ ಹೀಗೆ ಬಾಂಬು ಇಡುವಂತಹ ದುಸ್ಸಾಹಸದಲ್ಲಿ ಕಳೆದುಹೋಗಬಾರದು, ಜನರ ದನಿಯಾಗುವಂತಹ ವ್ಯಕ್ತಿಯಾಗಿ ಆತ ಬೆಳೆಯಬೇಕು ಎಂದು ತುಂಬಾ ಕಕ್ಕುಲಾತಿಯಿಂದ ರವಿ ಬೆಳೆಗೆರೆ ಬರೆದುಕೊಂಡಿದ್ದರು. ಜೊತೆಗೆ ಹಾಯ್ ಬೆಂಗಳೂರ್ ಕಛೇರಿಯಿಂದಲೇ ಗಿರೀಶ್ ಮಟ್ಟೆಣ್ಣನವರ್ ನೇತೃತ್ವದಲ್ಲಿ ‘ನಿಮ್ಮೊಂದಿಗೆ’ ಎಂಬ ಸಂಘಟನೆ ಮಾಡುವ, ನೀವು ಬನ್ನಿ ಕೈ ಜೋಡಿಸಿ, ಭ್ರಷ್ಟಾಚಾರದ ವಿರುದ್ಧ ಹೋರಾಡುವ ಎಂಬ ಕರೆಯೂ ಇತ್ತು. ಒಂದು ಸಂಜೆ ಆರಕ್ಕೆ ಹಾಯ್ ಬೆಂಗಳೂರ್ ಕಛೇರಿಯಲ್ಲಿ ಸಭೆ ಕರೆಯಲಾಗಿತ್ತು. ಕ್ರಾಂತಿ ಆಗೋ ಸಮಯದಲ್ಲಿ ಸುಮ್ನೆ ಕೂರೋಕ್ಕಾಗುತ್ಯೇ? ಕಾಲೇಜಿಗೆ ಬಂಕ್ ಹೊಡೆದು, ಮೈಸೂರು ಬಸ್ ಸ್ಟ್ಯಾಂಡಿಗೆ ಹೋಗಿ ‘ಮೈಸೂರು ಮಲ್ಲಿಗೆ – 180’ ಹತ್ತಿದೆ. ಒಂದರಷ್ಟೊತ್ತಿಗೆ ನಾಯಂಡನಹಳ್ಳಿಯಲ್ಲಿ ಇಳಿದು ಅಲ್ಲೇ ರಸ್ತೆ ಬದಿಯಿದ್ದ ಹೋಟೆಲ್ಲೊಂದರಲ್ಲಿ ಅನ್ನ ಸಾಂಬಾರ್ ತಿಂದು ದೇವೇಗೌಡ ಪೆಟ್ರೋಲ್ ಬಂಕಿನ ಕಡೆಗೋಗುವ ಬಿಎಂಟಿಸಿ ಹತ್ತಿದೆ. ಪೆಟ್ರೋಲ್ ಬಂಕ್ ಸ್ಟಾಪಿನಲ್ಲಿ ಇಳಿದು ಅವರಿವರನ್ನು ಹಾಯ್ ಬೆಂಗಳೂರ್ ಆಫೀಸಿನ ವಿಳಾಸ ಕೇಳಿಕೊಂಡು ಅದರ ಹತ್ತಿರ ಹೋದಾಗ ಎರಡೂವರೆಯಾಗಿತ್ತು. ಸಭೆಗಿನ್ನೂ ಸಾಕಷ್ಟು ಸಮಯವಿತ್ತು. ಅಲ್ಲಿಲ್ಲಿ ಅಡ್ಡಾಡುತ್ತ, ಯಾವುದೋ ಪಾರ್ಕಿನಲ್ಲಿ ಕುಳಿತು ಬ್ಯಾಗಿನಲ್ಲಾಕಿಕೊಂಡು ಬಂದಿದ್ದ ಪುಸ್ತಕವನ್ನೋದುತ್ತಾ ಕಾಲ ಕಳೆದು ಸಭೆಯ ಸಮಯಕ್ಕೆ ಹಾಯ್ ಬೆಂಗಳೂರು ಆಫೀಸಿಗೆ ಬಂದೆ. ಟೆರೇಸಿನಲ್ಲಿ ಸಭೆಯಿತ್ತು. ಇನ್ನೂರು ಮುನ್ನೂರು ಜನ ಸೇರಿದ್ದರು. ದೂರದ ಬೀದರ್ರಿನಿಂದಲೂ ಜನರು ಬಂದಿದ್ದರು; ಬಳ್ಳಾರಿ, ಹೊಸಪೇಟೆ, ಗುಲ್ಬರ್ಗ, ಮಂಗಳೂರು ಹೀಗೆ ಹತ್ತಲವು ಜಿಲ್ಲೆಗಳಿಂದ ಜನರು ಬಂದಿದ್ದರು. ಯುವಕರೇ ಹೆಚ್ಚಿದ್ದದ್ದು, ನಿವೃತ್ತರಾಗಿದ್ದ ಆಯುರ್ವೇದಿಕ್ ವೈದ್ಯರೊಬ್ಬರೂ ಬಂದಿದ್ದರು. ಒಂದಷ್ಟೊತ್ತು ರವಿ ಬೆಳಗೆರೆ ಮಾತನಾಡಿದರು. ನಂತರ ಗಿರೀಶ್ ಮಟ್ಟೆಣ್ಣನವರ್ ಮಾತನಾಡಿದರು. ಸಂಘಟನೆ ಯಾವ ರೀತಿ ಇರಬೇಕು, ಯಾವ ರೀತಿಯಲ್ಲಿ ಭ್ರಷ್ಟಾಚಾರದ ವಿರುದ್ಧ ಹೋರಾಡಬೇಕು. ಮೊದಲಿಗೆ ಪ್ರತಿ ಜಿಲ್ಲೆಯಲ್ಲಿ, ನಂತರ ಪ್ರತಿ ತಾಲ್ಲೂಕಿನಲ್ಲಿ ಐದಾರು ಜನರ ಪುಟ್ಟ ಪುಟ್ಟ ತಂಡಗಳನ್ನು ಮಾಡಿಕೊಂಡು ಹೋರಾಡಬೇಕಾದ ರೀತಿಯ ಬಗ್ಗೆ ಮಾತನಾಡಿದರು. ಒಂದು ಒಂದೂವರೆ ಘಂಟೆಯ ನಂತರ ಕಾರ್ಯಕ್ರಮ ಮುಗಿಯಿತು. ಬಂದೂಕಿನ ನಳಿಕೆಯ ಮೂಲಕ ಬರುವ ಕ್ರಾಂತಿಯಷ್ಟು ಪ್ರಖರವಾಗಿರುವುದಿಲ್ಲ, ಆದರೂ ಇದ್ದುದರಲ್ಲೇ ವಾಸಿ ಎಂದುಕೊಳ್ಳುತ್ತ ಜೇಬಿನಲ್ಲಿದ್ದ ಚಿಕ್ಕ ಪುಸ್ತಕಕ್ಕೆ ಗಿರೀಶ್ ಮಟ್ಟೆಣ್ಣನವರ ಆಟೋಗ್ರಾಫ್ ಪಡೆದುಕೊಂಡೆ. ನಾನು ಪಡೆದುಕೊಂಡ ಮೊಟ್ಟಮೊದಲ ಹಾಗೂ ಕಟ್ಟಕಡೆಯ ಆಟೋಗ್ರಾಫದು! ಆ ಪುಸ್ತಕ ಎಲ್ಲಿದೆಯೋ ಈಗ ಮರೆತುಹೋಗಿದೆ. ಮತ್ತೆ ನಾಯಂಡನಹಳ್ಳಿಗೆ ಬಂದು ಮೈಸೂರಿನ ಬಸ್ ಹತ್ತಿ ರೂಮು ಸೇರಿದಾಗ ಮಧ್ಯರಾತ್ರಿಯಾಗಿತ್ತು. ಇನ್ನೇನು ನಾಳೆಯಿಂದ ಕ್ರಾಂತಿ ಶುರುವಾಯ್ತಲ್ಲ ಎಂದುಕೊಂಡು ಮಲಗಿದೆ.

ನಿಮ್ಮೊಂದಿಗೆ ಸಂಘಟನೆಯ ಹೋರಾಟ ಯಾವ ರೀತಿ ಇರುತ್ತದೆ, ಯಾವ ರೀತಿ ಇರಬೇಕು ಎಂದು ಹಗಲುಗನಸು ಕಾಣುವುದೂ ಸರಿಯಾಗಿ ಪ್ರಾರಂಭವಾಗಿರಲಿಲ್ಲ, ಗಿರೀಶ್ ಮಟ್ಟೆಣ್ಣನವರ್ ‘ನಿಮ್ಮೊಂದಿಗೆ’ ಇರುವುದಿಲ್ಲ ಎಂದು ನಿರ್ಧರಿಸಿ ಬಿಜೆಪಿ ಪಕ್ಷಕ್ಕೆ ಹಾರಿಬಿಟ್ಟರು! ಅಲ್ಲಿಗೆ ಶಾಸಕರ ಭವನಕ್ಕೆ ಬಾಂಬಿಟ್ಟಿದ್ದು ಪ್ರಚಾರಕ್ಕೇ ಹೊರತು ಬೇರೆ ಕಾರಣಕ್ಕಲ್ಲ ಎಂದರಿವಾಗಿ ಪಿಗ್ಗಿ ಬಿದ್ದಿದ್ದಕ್ಕೆ ಬಯ್ದುಕೊಂಡು ಸುಮ್ಮನಾದೆ. ಮುಂದೆ ಬರೆದ ‘ಆದರ್ಶವೇ ಬೆನ್ನು ಹತ್ತಿ’ ಕಾದಂಬರಿಯಲ್ಲಿ ಒಂದು ಪಾತ್ರಕ್ಕೆ ಪ್ರೇರಣೆಯಾದರು ಗಿರೀಶ್ ಮಟ್ಟೆಣ್ಣನವರ್. ಇಷ್ಟೆಲ್ಲ ನೆನಪಾಗಿದ್ದು ಮೊನ್ನೆ ನ್ಯಾಯಾಲಯ ಸಾಕ್ಷ್ಯಾಧಾರದ ಕೊರತೆಯಿಂದಾಗಿ ಗಿರೀಶ್ ಮಟ್ಟೆಣ್ಣನವರನ್ನು ಖುಲಾಸೆಗೊಳಿಸಿ ತೀರ್ಪು ಪ್ರಕಟಿಸಿದಾಗ.

ಉತ್ತರಪ್ರದೇಶ: ಮಾಯಾವತಿ ಮತ್ತು ಮುಸ್ಲಿಂ ಸಮುದಾಯ!

ಕು.ಸ.ಮಧುಸೂದನ ನಾಯರ್

ದೇಶದ ಹಿಂದಿ ಹೃದಯಭಾಗವಾದ ಬಿಹಾರವನ್ನು ಕಳೆದುಕೊಂಡ ನಂತರದಲ್ಲಿ ಉತ್ತರಪ್ರದೇಶ ರಾಜ್ಯವನ್ನು ಗೆಲ್ಲಲೇಬೇಕಾಗಿರುವುದು ಪ್ರದಾನಮಂತ್ರಿಗಳಾದ ಶ್ರೀ ನರೇಂದ್ರಮೋದಿಯವರು ಮತ್ತು ಬಾಜಪದ ರಾಷ್ಟ್ರಾದ್ಯಕ್ಷರಾದ ಶ್ರೀ ಅಮಿತ್ ಷಾರವರಿಗೆ ಪ್ರತಿಷ್ಟೆಯ ಪ್ರಶ್ನೆಯಾಗಿಬಿಟ್ಟಿದೆ. ಈ ದಿಸೆಯಲ್ಲವರು ಹಲವು ಚುನಾವಣಾ ಪೂರ್ವ ತಂತ್ರಗಳನ್ನು ಹೆಣೆಯುತ್ತ ಸಾದ್ಯವಿರಬಹುದಾದ ಎಲ್ಲ ನಡೆಗಳನ್ನೂ ನಡೆಸಲು ಪ್ರಾರಂಬಿಸಿದ್ದಾರೆ. ಮೊದಲಿನಿಂದಲೂ ಉತ್ತರಪ್ರದೇಶ ಜಾತಿಯಾಧಾರಿತ ರಾಜಕಾರಣಕ್ಕೆ ಹೆಸರು ವಾಸಿಯಾಗಿದ್ದು, ತೊಂಬತ್ತರ ದಶಕದ ನಂತರ ಜಾತಿ ರಾಜಕಾರಣದ ಜೊತೆಗೆ ಧರ್ಮ ರಾಜಕಾರಣವೂ ದೊಡ್ಡ ಮಟ್ಟದಲ್ಲಿ ಕೆಲಸ ಮಾಡುತ್ತಿದೆ. ಹೀಗಾಗಿ ಉತ್ತರಪ್ರದೇಶದಲ್ಲಿರುವ ಶೇಕಡಾ 28 ರಷ್ಟು ಮುಸ್ಲಿಂ ಮತದಾರರು ಮುಂದಿನ ವಿದಾನಸಭಾ ಚುನಾವಣೆಯಲ್ಲಿ ಬಹುಮುಖ್ಯ ಪಾತ್ರ ವಹಿಸಲಿದ್ದಾರೆಂಬುದು ಖಚಿತ. ಅದೂ ಅಲ್ಲದೆ ಸುಮಾರು 73 ಕ್ಷೇತ್ರಗಳಲ್ಲಿ ಅವರ ಮತಗಳೇ ನಿರ್ಣಾಯಕವೂ ಆಗಿದೆ. ಹಾಗಾಗಿ ಈ 28ರಷ್ಟು ಮತವನ್ನು ಯಾವ ಪಕ್ಷ ಹೆಚ್ಚು ಸೆಳೆಯುತ್ತದೆಯೊ ಆ ಪಕ್ಷ ಬಹುಮತ ಪಡೆಯುವುದು ಸಾದ್ಯವಾಗುತ್ತದೆಯೆಂಬುದು ಒಂದು ಲೆಕ್ಕಾಚಾರ. ಈ ದೃಷ್ಠಿಯಿಂದ ಎಲ್ಲ ಪಕ್ಷಗಳು ಮುಸ್ಲಿಂ ಮತದಾರರನ್ನು ಓಲೈಸುವ ಮಾತುಗಳನ್ನಾಡುತ್ತಿವೆ.

ಇದುವರೆಗೂ ಬಹುತೇಕ ಮುಸ್ಲಿಂ ಮತದಾರರು ಸಮಾಜವಾದಿ ಪಕ್ಷದ ಕಟ್ಟಾ ಬೆಂಬಲಿಗರಾಗಿದ್ದರು. ಕಳೆದ ವಿದಾನಸಭಾ ಚುನಾವಣೆಯಲ್ಲಿ ಅಂದರೆ 2012ರಲ್ಲಿ ಸಮಾಜವಾದಿ ಪಕ್ಷವು ಶೇಕಡಾ 54ರಷ್ಟು ಮುಸ್ಲಿಂ ಮತಗಳನ್ನು ಪಡೆದು ನಿಚ್ಚಳ ಬಹುಮತ ಪಡೆದಿತ್ತು. ಆದರೆ 2014ರ ಲೋಕಸಭಾ ಚುನಾವಣೆಗಳ ನಂತರ ಈ ಸಮೀಕರಣ ಬಹಳಷ್ಟು ಬದಲಾದಂತೆ ಕಾಣುತ್ತಿದೆ. ಈ ಹಿಂದಿನಂತೆ ಮುಸ್ಲಿಂ ಸಮುದಾಯ ಸಂಪೂರ್ಣವಾಗಿ ಸಮಾಜವಾದಿ ಪಕ್ಷದ ಜೊತೆಗಿಲ್ಲ. ಅದು ಕಳೆದ ನಾಲ್ಕೂವರೆ ವರುಷಗಳ ಅಖಿಲೇಶ್ ಯಾದವ್ ಆಳ್ವಿಕೆಯಿಂದ ಭ್ರಮನಿರಸವಗೊಂಡಿದೆ. ಸಮಾಜವಾದಿ ಪಕ್ಷವು ಮುಜಾಫರ್ ನಗರದ ಗಲಬೆಗಳನ್ನು, ಮತ್ತು ದಾದ್ರಿ ಪ್ರಕರಣವನ್ನು ನಿರ್ವಹಿಸಿದ ರೀತಿ ಮುಸ್ಲಿಂ ಸಮುದಾಯದ ಕೋಪಕ್ಕೆ ಕಾರಣವಾಗಿದೆ. ಮುಜಾಫರ್ ನಗರದ ಗಲಬೆಗಳಾದ ಸುಮಾರು ಆರು ತಿಂಗಳ ನಂತರ ಮುಲಾಯಂ ಸಿಂಗ್ ಯಾದವ್ ಮತ್ತು ಅಖಿಲೇಶ್ ಅಲ್ಲಿಗೆ ಬೇಟಿ ನೀಡುವ ಮನಸ್ಸು ಮಾಡಿದ್ದರು, ಅದೂ ಲೋಕಸಭಾ ಚುನಾವಣೆಗೆ ಮತ ಕೇಳಲು. ಹೀಗಾಗಿ ಗಲಬೆಯಾದ ತಕ್ಷಣ ಸ್ಥಳಕ್ಕೆ ದಾವಿಸದ ಸಮಾಜವಾದಿ ಪಕ್ಷದ ತಂದೆ ಮಕ್ಕಳ ಬಗ್ಗೆ ಮುಸ್ಲಿಂ ಸಮುದಾಯ ತೀವ್ರ ಅಸಮಾದಾನಗೊಂಡಿದೆ. ನಂತರದಲ್ಲಿ ನಡೆದ ದಾದ್ರಿ ಪ್ರಕರಣವನ್ನು ಬಾಜಪಕ್ಕೆ ಅನುಕೂಲವಾಗುವ ರೀತಿಯಲ್ಲಿ ನಿರ್ವಹಿಸಿದ ಉತ್ತರಪ್ರದೇಶದ ಸರಕಾರದ ಬಗ್ಗೆ ಆ ಸಮುದಾಯ ಮತ್ತಷ್ಟು ಕೋಪಗೊಂಡು ದೂರ ಸರಿಯುವಲ್ಲಿ ಕಾರಣವಾಯಿತು. ಇದರ ಜೊತೆಗೆ ಬಿಹಾರದಲ್ಲಿ ನಡೆದ ಮಹಾಘಟಬಂದನ್ ಜೊತೆ ಸೇರದೆ ಬಾಜಪಕ್ಕೆ ಅನುಕೂಲ ಮಾಡಿಕೊಡುವ ರೀತಿಯಲ್ಲಿ ನಡೆದುಕೊಂಡ ಮುಲಾಯಂ ಸಿಂಗ್ ಅವರ ನಡವಳಿಕೆ ಮುಸ್ಲಿಂ ಸಮುದಾಯಕ್ಕೆ ಸಮಾಜವಾದಿ ಪಕ್ಷದ ಬಗ್ಗೆ ದಶಕಗಳಿಂದ ಇದ್ದ ನಂಬಿಕೆ ಕುಸಿಯುವಂತೆ ಮಾಡಿತು.

ಇಂತಹ ಪರಿಸ್ಥಿತಿಯಲ್ಲ್ಲಿ ಬಾಜಪವನ್ನು ಸೋಲಿಸಬಲ್ಲ ಒಂದು ಪಕ್ಷವನ್ನು ಮುಸ್ಲಿಂ ಸಮುದಾಯ ಬೆಂಬಲಿಸುವ ಯೋಚನೆಯಲ್ಲಿದೆ ಮತ್ತು ಅಂತಹ ಪಕ್ಷದ ಹುಡುಕಾಟದಲ್ಲಿ ತೊಡಗಿರುವಾಗಲೇ ಬಹುಜನ ಪಕ್ಷದ ಮಾಯಾವತಿಯವರು ಮುಸ್ಲಿಂ ಸಮುದಾಯದ ಬೆಂಬಲ ಪಡೆಯಲು ಬೇಕಾದ ತಂತ್ರಗಾರಿಕೆಯಲ್ಲಿ ತೊಡಗಿದ್ದಾರೆ. ಈ ಕಾರ್ಯಕ್ಕೆ ಪೂರ್ವಬಾವಿಯಾಗಿಯೇ ಅವರು ಉತ್ತರಕಾಂಡದಲ್ಲಿ ಇತ್ತೀಚೆಗೆ ನಡೆದ ವಿಶ್ವಾಸ ಮತ ಯಾಚನೆಯಲ್ಲಿ ತಮ್ಮ ಪಕ್ಷದ ಶಾಸಕರುಗಳು ಕಾಂಗ್ರೆಸ್ಸಿಗೆ ಮತಚಲಾಯಿಸುವಂತೆ ನೋಡಿಕೊಂಡರು. ಹೀಗೆ ತಾನು ಕಾಂಗ್ರೆಸ್ಸಿನ ಪರವಾಗಿರುವುದನ್ನು ಸಾರ್ವಜನಿಕವಾಗಿ ತೋರಿಸಿಕೊಡುವುದರ ಮೂಲಕ ತಮ್ಮ ಪಕ್ಷ ಭವಿಷ್ಯದಲ್ಲಿ ಬಾಜಪವನ್ನು ಯಾವ ಕಾರಣಕ್ಕೂ ಬೆಂಬಲಿಸುವುದಿಲ್ಲವೆಂಬ ಸ್ಪಷ್ಟ ಸಂದೇಶವನ್ನು ಮುಸ್ಲಿಂ ಸಮುದಾಯಕ್ಕೆ ನೀಡುವಲ್ಲಿ ಯಶಸ್ವಿಯಾದರು. ಸಮಾಜವಾದಿ ಪಕ್ಷದಿಂದ ದೂರ ಸರಿಯುತ್ತಿರುವ ಮುಸ್ಲಿಂ ಸಮುದಾಯವನ್ನು ಸೆಳೆಯಲು ನಿರ್ದರಿಸಿರುವ ಮಾಯಾವತಿಯವರು ತಾವು ಹಿಂದೆ ಪ್ರಯೋಗಿಸಿದ ದಲಿತ ಮತ್ತು ಮುಸ್ಲಿಂ ಸಮೀಕರಣವನ್ನು ಮತ್ತೊಮ್ಮೆ ಪ್ರಯೋಗಿಸಲು ಸಿದ್ದತೆ ನಡೆಸಿದ್ದಾರೆ. 2007ರಲ್ಲಿ ಅವರು 206 ಸ್ಥಾನಗಳನ್ನು ಗೆದ್ದು ಮುಖ್ಯಮಂತ್ರಿಯಾಗಲು ಸಹಾಯ ಮಾಡಿದ್ದೇ ಈ ದಲಿತ-ಮುಸ್ಲಿಂ-ಬ್ರಾಹ್ಮಣ ಸಮೀಕರಣ. ಈಗಾಗಲೇ ಟಿಕೇಟ್ ಹಂಚಿಕೆಯನ್ನು ಪ್ರಾರಂಬಿಸಿರುವ ಬಹುಜನ ಪಕ್ಷವು ಸುಮಾರು 100 ಸ್ಥಾನಗಳನ್ನು ಮುಸ್ಲಿಮರಿಗು, 50 ಸ್ಥಾನಗಳನ್ನು ಬ್ರಾಹ್ಮಣರಿಗೂ ಮೀಸಲಿಟ್ಟಿದ್ದು ಒಟ್ಟು ಸ್ಥಾನಗಳ ಪೈಕಿ ಶೇಕಡಾ ಇಪ್ಪತ್ತೈದರಷ್ಟನ್ನು ಮುಸ್ಲಿಂ ಸಮುದಾಯಕ್ಕೆ ಮೀಸಲಿಟ್ಟು , ತಾನು ಅಧಿಕಾರಕ್ಕೆ ಬಂದರೆ ಅಲ್ಪಸಂಖ್ಯಾತರಿಗೆ ಮೀಸಲಾತಿ ಕಲ್ಪಿಸುವ ನಿಟ್ಟಿನಲ್ಲಿ ಕೆಲಸ ಮಾಡುವಂತಹ ಸೂಚನೆಯನ್ನು ನೀಡಿದ್ದಾರೆ. 

ಈ ದಿಸೆಯಲ್ಲಿ ಅವರು ಬಾಜಪವನ್ನು ಸೋಲಿಸಲು ಕಾಂಗ್ರೆಸ್ ಜೊತೆಗೆ ಕೈಜೋಡಿಸುವ ಇರಾದೆಯನ್ನು ಹೊಂದಿದ್ದಾರೆ. ಇಂತಹ ಮೈತ್ರಿಯ ವಿಚಾರದಲ್ಲಿ ಕಾಂಗ್ರೆಸ್ ತಗೆದುಕೊಳ್ಳಬಹುದಾದ ನಿರ್ದಾರ ಬಹಳ ಮುಖ್ಯವಾಗಿರುತ್ತದೆ. ಈ ನಿಟ್ಟಿನಲ್ಲಿ ನೋಡಿದರೆ ಮುಂದಿನ ವಿದಾನಸಭಾ ಚುನಾವಣೆಗಳಲ್ಲಿ ಜಾತಿ ಲೆಕ್ಕಾಚಾರದ ಜೊತೆಜೊತೆಗೆ ಧಾರ್ಮಿಕ ಧ್ರವೀಕರಣಗಳೂ ನಡೆಯುವುದು ಖಂಡಿತಾ. ಪ್ರಜಾಪ್ರಭುತ್ವದ ಆರೋಗ್ಯದ ದೃಷ್ಠಿಯಿಂದ ಇಂತಹ ಬೆಳವಣಿಗೆಗಳು ಒಳ್ಳೆಯದಲ್ಲವಾದರೂ, ಇಂಡಿಯಾದ ರಾಜಕಾರಣ ನಡೆಯುತ್ತಿರುವುದೇ ಇಂತಹ ಜಾತಿ ಧರ್ಮಗಳ ಆಧಾರದ ಮೇಲೆ ಎನ್ನುವುದು ವಿಷಾದದ ವಿಷಯವಾಗಿದೆ.