ಜೂನ್ 15, 2016

ನಕ್ಷತ್ರದ ಧೂಳು

rohit vemula
15/06/2016
ಭಾರತದಲ್ಲಿ ತಳಸಮುದಾಯಗಳಿಂದ ಬಂದ ವಿದ್ಯಾರ್ಥಿಗಳು ಉನ್ನತ ಶಿಕ್ಷಣದ ಹಂತದವರಗೆ ತಲುಪುವುದೇ ಒಂದು ಸಾಹಸ. ಬದುಕಿನ ಸಂಕಷ್ಟಗಳ ಜೊತೆಯಲ್ಲಿ ಸಮಾಜ ಮತ್ತು ಶಿಕ್ಷಣ ವ್ಯವಸ್ಥೆಗಳು ಅಡಿಗಡಿಗೂ ಅವರನ್ನು ಜಗ್ಗುತ್ತಿರುತ್ತವೆ. ಆದರೆ ಎಲ್ಲಾ ಅಡೆತಡೆಗಳ ನಡುವೆಯೂ ಅದಮ್ಯ ಉತ್ಸಾಹ ಮತ್ತು ಕನಸುಗಳಿಂದ ಇಂತಹ ವಿದ್ಯಾರ್ಥಿಗಳು ಅಲ್ಲಿಗೆ ಪ್ರವೇಶಿಸುತ್ತಾರೆ. ಆದರೆ, ನಮ್ಮ ಜಾತಿ ಪೂರ್ವಗ್ರಹಗಳು ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ದಟ್ಟವಾಗಿರುವುದರಿಂದ ಅಲ್ಲಿ ಇಂತಹ ವಿದ್ಯಾರ್ಥಿಗಳನ್ನು ಸಂದಿಗ್ಧತೆಗೆ ತಳ್ಳಿಬಿಡುತ್ತವೆ.

ಈ ಸಂಗತಿಯನ್ನು ನಕ್ಷತ್ರದ ಧೂಳು ನಾಟಕ ಪ್ರತಿಫಲಿಸುತ್ತದೆ. ಇತ್ತೀಚೆಗೆ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ ಸಂಶೋಧನಾ ವಿದ್ಯಾರ್ಥಿ ರೋಹಿತ್ ವೇಮುಲನ ಬದುಕಿನ ಕಥೆಯನ್ನಿಟ್ಟುಕೊಂಡು ಈ ನಾಟಕ ರಚಿಸಲಾಗಿದೆ. ರೋಹಿತನ ಅದಮ್ಯ ಕನಸುಗಳು, ಸಾಮಾಜಿಕ ತುಡಿತಗಳನ್ನು ನಾಟಕ ಪ್ರತಿಫಲಿಸುತ್ತದೆ. ರೋಹಿತ್‌ನ ಬದುಕಿನಲ್ಲಿ ಸಮಾಜ, ಸಿದ್ಧಾಂತ, ಶಿಕ್ಷಣವ್ಯವಸ್ಥೆ ಮತ್ತು ರಾಜಕೀಯಗಳು ವಹಿಸಿದ ಪಾತ್ರಗಳನ್ನು ಇಲ್ಲಿ ತೆರೆದಿಡಲಾಗಿದೆ. ರೋಹಿತ್ ಬದುಕಿ‌ನ ಹೋರಾಟ, ಚಿಂತನೆ ಹಾಗೂ ಆಶಯಗಳನ್ನು ಅರಿಯುವ ಪ್ರಯತ್ನವನ್ನು ಈ ನಾಟಕದ ಮೂಲಕ ಮಾಡಲಾಗಿದೆ.

ಒಂದು ಸಮಾಜವಾಗಿ, ಒಂದು ವ್ಯವಸ್ಥೆಯಾಗಿ ರೋಹಿತ್ ನಂತಹ, ಕನಸುಗಣ್ಣಿನ, ಉತ್ಸಾಹಿ, ಪ್ರತಿಭಾವಂತ ವಿದ್ಯಾರ್ಥಿ ಗಳನ್ನು ಇಲ್ಲದಂತೆ ಮಾಡುವ ಬಗ್ಗೆ, ಕಳೆದುಕೊಂಡು ಬಿಡುವ ಬಗ್ಗೆ ನಮ್ಮನ್ನು ಚಿಂತಿಸಲು, ಮರುಚಿಂತಿಸಲು ಈ ನಾಟಕ ಪ್ರೇರೇಪಿಸುತ್ತದೆ.

ಜೂನ್ 14, 2016

ಗ್ರಾಮೀಣ ಪ್ರದೇಶದಲ್ಲಿ ಕೃಷಿಕರು ಮನೆ ಕಟ್ಟಿಸಬೇಕಾದರೂ ಎಷ್ಟೊಂದು ಕೆಂಪು ಪಟ್ಟಿಯ ನಿಯಮಗಳು!

ಸಾಂದರ್ಭಿಕ ಚಿತ್ರ
ಶಂಕರನಾರಾಯಣ ಪುತ್ತೂರು
14/06/2016
ಕರ್ನಾಟಕದಲ್ಲಿ ಕೃಷಿಕರು ತಮ್ಮ ಸ್ವಂತ ಪಟ್ಟಾ ಜಾಗದಲ್ಲಿ ತಮ್ಮ ಸ್ವಂತ ವಾಸಕ್ಕೆ ತಮ್ಮ ಸ್ವಂತ ಹಣದಲ್ಲಿ ಮನೆ ಕಟ್ಟಿಸಬೇಕಾದರೆ ಎಷ್ಟೊಂದು ಸಲ ಸರ್ಕಾರಿ ಕಛೇರಿಗಳಿಗೆ ಅಲೆಯಬೇಕು, ಅದಕ್ಕಾಗಿ ಎಷ್ಟೊಂದು ಸಮಯ ಕಾಯಬೇಕು ಎಂಬುದನ್ನು ನೋಡಿದರೆ ನಮಗೆ ಸ್ವಾತಂತ್ರ್ಯ ಸಿಕ್ಕಿದ್ದು ನಿಜವೇ ಎಂಬ ಅನುಮಾನ ಮೂಡುತ್ತದೆ. ಇದನ್ನು ನೋಡಿದಾಗ ಎಲ್ಲಿಗೆ ಬಂತು, ಯಾರಿಗೆ ಬಂತು ನಲವತ್ತೇಳರ ಸ್ವಾತಂತ್ರ್ಯಎಂದು ಕೇಳಬೇಕಾಗಿದೆ. ಕೃಷಿಕರು ತಮ್ಮ ಸ್ವಂತ ಜಾಗದಲ್ಲಿ ತಮ್ಮ ಸ್ವಂತ ವಾಸಕ್ಕೆ ಮನೆ ಕಟ್ಟಿಸಬೇಕಾದರೂ ಆ ಜಾಗವನ್ನು ಭೂಪರಿವರ್ತನೆ ಮಾಡಿಸಬೇಕು ಎಂಬ ಕೆಂಪು ಪಟ್ಟಿಯ ಅಧಿಕಾರಶಾಹೀ ನಿಯಮವಿದೆ. ಕೃಷಿಯೇತರ ವ್ಯಕ್ತಿಗಳು ಕೃಷಿಯೇತರ ಉದ್ದೇಶಗಳಿಗೆ ಉದಾಹರಣೆಗೆ ಉದ್ಯಮ, ವಾಣಿಜ್ಯ, ವಸತಿ ಸಮುಚ್ಚಯ ನಿರ್ಮಾಣ, ವಸತಿ ಬಡಾವಣೆ ನಿರ್ಮಾಣ, ಕೃಷಿಯಲ್ಲದ ಬೇರೆ ಬೇರೆ ಉದ್ಯೋಗದಲ್ಲಿ ಇರುವವರು ಮನೆ ಕಟ್ಟಿಸುವಾಗ ಸಂಬಂಧಪಟ್ಟ ಭೂಮಿಯ ಭೂಪರಿವರ್ತನೆ ಮಾಡಿಸಬೇಕು ಎಂಬ ನಿಯಮದಲ್ಲಿ ಅರ್ಥವಿದೆ ಆದರೆ ಕೃಷಿಕನು ತನ್ನ ಸ್ವಂತ ವಾಸಕ್ಕೆ ತನ್ನ ಸ್ವಂತ ಜಾಗದಲ್ಲಿ ಮನೆ ಕಟ್ಟಿಸುವುದು ಹೇಗೆ ಕೃಷಿಯೇತರ ಉದ್ದೇಶ ಆಗುತ್ತದೆ? ಕೃಷಿಕನು ಕೃಷಿ ಮಾಡಬೇಕಾದರೆ ಆ ಜಾಗದಲ್ಲಿ ತನ್ನ ಸ್ವಂತ ವಾಸಕ್ಕಾಗಿ ಮನೆ ಕಟ್ಟಿಸುವುದು ಅನಿವಾರ್ಯ. ಇದು ಕೃಷಿಯ ಅವಿಭಾಜ್ಯ ಅಂಗ. ಹೀಗಿರುವಾಗ ಇದನ್ನು ಕೃಷಿಯೇತರ ಎಂದು ವರ್ಗೀಕರಿಸಿ ಕೃಷಿಕರಿಗೆ ತೊಂದರೆ ಕೊಡುವ ಭೂಪರಿವರ್ತನೆ ಮಾಡಿಸಬೇಕಾಗಿರುವುದು ಕಡ್ಡಾಯ ಎಂಬ ಕಾನೂನು ಕರ್ನಾಟಕದಲ್ಲಿ ಜಾರಿಯಲ್ಲಿರುವುದಕ್ಕೆ ಯಾವುದೇ ವೈಜ್ಞಾನಿಕ ಸಮರ್ಥನೆ ಇರುವಂತೆ ಕಾಣುವುದಿಲ್ಲ. ಇಂಥ ಜನಪೀಡಕ ಕಾನೂನುಗಳನ್ನು ಯಾಕಾಗಿ ಯಾರು ಜಾರಿಗೆ ತಂದಿದ್ದಾರೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಂಬುದು ಗೊತ್ತಿಲ್ಲ ಆದರೆ ವಿಚಾರ ಮಾಡಿ ನೋಡಿದರೆ ಇಂಥ ಕೃಷಿಕಪೀಡಕ ಕಾನೂನಿನ ಅಗತ್ಯ ಇಲ್ಲ. ಇಂಥ ಕೃಷಿಕಪೀಡಕ ಕಾನೂನುಗಳಿಂದ ಕೃಷಿಕರಿಗೆ ವಿನಾಯತಿ ನೀಡಿದರೆ ತಮ್ಮ ಸ್ವಂತ ವಾಸಕ್ಕಾಗಿ ಮನೆ ಕಟ್ಟಿಸುವ ಕೃಷಿಕರು ಅನಾವಶ್ಯಕವಾಗಿ ಸರಕಾರಿ ಕಛೇರಿಗಳಿಗೆ ಅಲೆಯುವುದನ್ನು ತಪ್ಪಿಸಲು ಸಾಧ್ಯವಿದೆ.

ಭೂಪರಿವರ್ತನೆ ಮಾಡಿಸಬೇಕಾದರೆ ಹಲವು ದಾಖಲೆಗಳನ್ನು ಸರ್ಕಾರಿ ಕಛೇರಿಗಳಿಂದ ಪಡೆಯಬೇಕಾಗುತ್ತದೆ. ಇವುಗಳಲ್ಲಿ ಮೊದಲನೆಯದು ಭೂಮಾಪನ ಇಲಾಖೆಯಿಂದ ಭೂಪರಿವರ್ತನೆ ಮಾಡಿಸಬೇಕಾದ ಜಾಗದ ಅಳತೆ ಮಾಡಿಸಿ ನಕ್ಷೆ ಪಡೆಯುವುದು. ಇದಕ್ಕಾಗಿ ಭೂಮಾಪನ ಇಲಾಖೆಗೆ ಭೂಮಿಯ ಪಹಣಿಪತ್ರ ಇಟ್ಟು ಅರ್ಜಿ ಕೊಟ್ಟು ನಿಗದಿಪಡಿಸಿದ ಹಣ ಕಟ್ಟಬೇಕು. ಭೂಮಾಪಕರು ಕೂಡಲೇ ಬರುವುದಿಲ್ಲ. ಬರಲು ಅರ್ಜಿ ಕೊಟ್ಟು ಹತ್ತಿಪ್ಪತ್ತು ದಿವಸ ಕಾಯಿಸುತ್ತಾರೆ. ಇದಕ್ಕಾಗಿ ಅವರನ್ನು ಪುನಃ ಹೋಗಿ ಕಾಣಬೇಕು. ಪುನಃ ಹೋಗಿ ವಿಚಾರಿಸದಿದ್ದರೆ ಅವರು ಬರುವುದಿಲ್ಲ. ಭೂಮಾಪಕರು ಜಾಗಕ್ಕೆ ಬಂದು ಅಳತೆ ಮಾಡಿದ ನಂತರ ನಕ್ಷೆ ಮಾಡಿಕೊಡಲು ಮತ್ತೆ ಕೆಲವು ದಿನ ಬಿಟ್ಟು ಬರಲು ಹೇಳುತ್ತಾರೆ. ಹೀಗೆ ನಕ್ಷೆ ಸಿಗುವಾಗ ಅರ್ಜಿ ಕೊಟ್ಟು 15-20 ದಿನವಾದರೂ ಆಗುತ್ತದೆ. ಭೂಪರಿವರ್ತನೆಗೆ ಬೇಕಾದ ಎರಡನೇ ದಾಖಲೆ ಟೆನೆನ್ಸಿ ಸರ್ಟಿಫಿಕೇಟ್ (ಗೇಣಿರಹಿತ ದೃಢಪತ್ರ). ಇದಕ್ಕೆ ತಾಲೂಕು ಆಫೀಸಿನಲ್ಲಿ ಅರ್ಜಿ ಕೊಡಬೇಕು. ಅರ್ಜಿ ಕೊಟ್ಟು ಒಂದು ವಾರದ ನಂತರ ವಿಚಾರಿಸಲು ಹೇಳುತ್ತಾರೆ. ಒಂದು ವಾರ ಬಿಟ್ಟು ಹೋದರೆ ಇದು ಆಗಿರುವುದಿಲ್ಲ. ಮತ್ತೆ ಕೆಲವು ದಿನ ಬಿಟ್ಟು ಹೋಗಿ ವಿಚಾರಿಸಬೇಕು. ಹೀಗೆ ಇದು ಸಿಗಲು 10-15 ದಿವಸ ಆಗುತ್ತದೆ. ಭೂಪರಿವರ್ತನೆಗೆ ಬೇಕಾದ ಮೂರನೇ ದಾಖಲೆ ನೋ ಪಿಟಿಸಿಎಲ್ ಸರ್ಟಿಫಿಕೇಟ್ (ಪ್ರೋಹಿಬಿಶನ್ ಆಫ್ ಟ್ರಾನ್ಸ್ಫರ್ ಆಫ್ ಸರ್ಟನ್ ಲ್ಯಾಂಡ್ಸ್). ಇದಕ್ಕಾಗಿ ತಾಲೂಕು ಆಫೀಸಿನಲ್ಲಿ ಅರ್ಜಿ ಕೊಡಬೇಕು. ಅಲ್ಲಿ ಕೊಟ್ಟ ಅರ್ಜಿ ಕಂದಾಯ ನಿರೀಕ್ಷಕರ ಕಛೇರಿಗೆ ರವಾನೆಯಾಗುತ್ತದೆ. ಈ ಅರ್ಜಿ ಕೊಟ್ಟು ಸರ್ಟಿಫಿಕೇಟ್ ಕೊಡಲು ಅವರಿಗೆ 21 ದಿನದ ಗಡುವು ಇದೆ ಎಂದು ತಾಲೂಕು ಆಫೀಸಿನಲ್ಲಿ ಹೇಳುತ್ತಾರೆ. ಇದು ಯಾವಾಗ ಸಿಗುತ್ತದೆ ಎಂದು ಸ್ಪಷ್ಟವಾಗಿ ಹೇಳುವುದಿಲ್ಲ. ನಾಲ್ಕು ದಿನ ಬಿಟ್ಟು ಕಂದಾಯ ನಿರೀಕ್ಷಕರ ಕಛೇರಿಗೆ ಹೋಗಿ ವಿಚಾರಿಸಿ ಎಂದು ಹೇಳುತ್ತಾರೆ. ಇದಕ್ಕಾಗಿ ಪುನಃ ಗ್ರಾಮದಿಂದ ಕಂದಾಯ ಇಲಾಖೆ ಕಛೇರಿಗೆ ಅಲೆದು ವಿಚಾರಿಸಬೇಕು. ಅಲ್ಲಿ ಹೋಗಿ ಒಂದೆರಡು ಸಲ ವಿಚಾರಿಸಿದ ನಂತರ ಕಂದಾಯ ನಿರೀಕ್ಷಕರು ಸಂಬಂಧಪಟ್ಟ ದಾಖಲೆಗಳನ್ನು ನೋಡಿ ಟಿಪ್ಪಣಿ ಬರೆದು ಅರ್ಜಿಯನ್ನು ತಾಲೂಕು ಕಛೇರಿಗೆ ಕಳುಹಿಸುತ್ತಾರೆ. ಪುನಃ ಈ ಅರ್ಜಿಯ ಗತಿ ಏನಾಯಿತು ಎಂದು ತಾಲೂಕು ಆಫೀಸಿನಲ್ಲಿ ವಿಚಾರಿಸಬೇಕು. ಹೀಗೆ ತಾಲೂಕು ಆಫೀಸಿಗೆ ಒಂದೆರಡು ಸಲ ಅಲೆಸಿ ಸಂಬಂಧಪಟ್ಟ ಗುಮಾಸ್ತರು ನೋ ಪಿಟಿಸಿಎಲ್ ಸರ್ಟಿಫಿಕೇಟ್ ಕೊಡುತ್ತಾರೆ.

ಭೂಪರಿವರ್ತನೆಗೆ ಬೇಕಾದ ನಾಲ್ಕನೆಯ ದಾಖಲೆ ಭೂಪರಿವರ್ತನೆ ಮಾಡಿಸಬೇಕಾದ ಜಾಗದ ಸರ್ವೇ ನಂಬರ್ ಹೆಸರಿನಲ್ಲಿ ಯಾವುದಾದರೂ ಋಣ ಬಾಧೆ ಇದೆಯೇ ಎಂಬುದರ ಬಗ್ಗೆ ನೋಂದಣಿ ಇಲಾಖೆಯಿಂದ ದೃಢ ಪತ್ರ. ಇದಕ್ಕಾಗಿ ನೋಂದಣಿ ಇಲಾಖೆಗೆ ಜಾಗದ ಸರ್ವೇ ನಂಬರಿನ ಪಹಣಿ ಪತ್ರದ ಜೊತೆಗೆ ಅರ್ಜಿ ಕೊಟ್ಟು ಹುಡುಕುವ ವೆಚ್ಚ ಎಂದು 150 ರೂಪಾಯಿ ಕಟ್ಟಬೇಕು. ಅರ್ಜಿ ಕೊಟ್ಟ ಒಂದು ವಾರದ ನಂತರ ಇದು ಸಿಗುತ್ತದೆ. ಭೂಪರಿವರ್ತನೆಗೆ ಬೇಕಾದ ಐದನೇ ದಾಖಲೆ ಗ್ರಾಮಪಂಚಾಯತಿಯಿಂದ ನೋ ಒಬ್ಜೆಕ್ಷನ್ ಸರ್ಟಿಫಿಕೇಟ್. ಇದಕ್ಕಾಗಿ ಗ್ರಾಮಪಂಚಾಯತಿಗೆ ಜಾಗದ ಪಹಣಿ ಪತ್ರ ಹಾಗೂ ಗ್ರಾಮಕರಣಿಕರ ವರದಿ ಲಗತ್ತಿಸಿ ಅರ್ಜಿ ಕೊಡಬೇಕು. ಗ್ರಾಮಕರಣಿಕರ ವರದಿಯಲ್ಲಿ ಅರ್ಜಿಕೊಡುವ ವ್ಯಕ್ತಿ ಗ್ರಾಮಕರಣಿಕರ ಕಛೇರಿಗೆ ಯಾವುದೇ ಭೂಕಂದಾಯ ಇತ್ಯಾದಿ ಕೊಡಲು ಬಾಕಿ ಇಲ್ಲ ಎಂದು ಗ್ರಾಮಕರಣಿಕರು ಬರೆದು ಕೊಡಬೇಕು. ಗ್ರಾಮ ಪಂಚಾಯತಿಯಲ್ಲಿ ನೋ ಒಬ್ಜೆಕ್ಷನ್ ಸರ್ಟಿಫಿಕೇಟ್ ಅರ್ಜಿ ಕೊಟ್ಟ ಕೂಡಲೇ ಕೊಡುವುದಿಲ್ಲ. ಮಾಮೂಲಿ ಸರ್ಕಾರೀ ಕಛೇರಿಗಳ ಜನಸಾಮಾನ್ಯರನ್ನು ಅಲೆದಾಡಿಸುವ ಅಲಿಖಿತ ನಿಯಮದ ಪ್ರಕಾರ ಎರಡು ದಿನ ಬಿಟ್ಟು ಬರಲು ಹೇಳುತ್ತಾರೆ. ಭೂಪರಿವರ್ತನೆಗೆ ಬೇಕಾದ ಐದನೆಯ ದಾಖಲೆ ಗ್ರಾಮಕರಣಿಕರು ಭೂಮಾಪಕರು ಮಾಡಿಕೊಟ್ಟ ನಕ್ಷೆಯ ಹಿಂಭಾಗದಲ್ಲಿ ಇಂಡೆಕ್ಸ್ ಹಾಕಿ ಕೊಡಬೇಕು. ಇಂಡೆಕ್ಸ್ ಎಂದರೆ ಭೂಪರಿವರ್ತನೆ ಆಗಬೇಕಾದ ಜಾಗದ ಸುತ್ತಮುತ್ತ ಯಾವೆಲ್ಲ ವ್ಯಕ್ತಿಗಳ ಜಮೀನು ಇದೆ ಅವುಗಳ ಸರ್ವೇ ನಂಬರ್ ಹಾಗೂ ವಿಸ್ತೀರ್ಣವನ್ನು ಒಂದು ಕಾಲಮ್ಮಿನಲ್ಲಿ ಪಟ್ಟಿ ಮಾಡಿ ಕೊಡುವುದು. ಭೂಪರಿವರ್ತನೆ ಮಾಡಿಸಲು ಬೇಕಾದ ಆರನೆಯ ದಾಖಲೆ ಜಾಗದ ಪಹಣಿ ಪತ್ರ ಹಾಗೂ ಏಳನೆಯ ದಾಖಲೆ ಮ್ಯುಟೇಶನ್. ಇವೆರಡೂ ತಾಲೂಕು ಆಫೀಸಿನ ಪಹಣಿ ಪತ್ರ ನೀಡುವ ಕೌಂಟರಿನಲ್ಲಿ ದೊರೆಯುತ್ತವೆ.

ಈ ಎಲ್ಲ ದಾಖಲೆಗಳು ಸಿಕ್ಕಿದ ನಂತರ ನೂರು ರೂಪಾಯಿಯ ಸ್ಟ್ಯಾಂಪ್ ಪೇಪರ್ ಹಾಗೂ ಅರ್ಜಿಯ ಜೊತೆ ಎಲ್ಲಾ ದಾಖಲೆಗಳನ್ನು ಜೊತೆಗಿರಿಸಿ ತಾಲೂಕು ಕಛೇರಿಯಲ್ಲಿ ಭೂಪರಿವರ್ತನೆಗಾಗಿ ಅರ್ಜಿ ಕೊಡಬೇಕು. ಈ ಅರ್ಜಿಯನ್ನು ಕಂದಾಯ ನಿರೀಕ್ಷಕರ (ರೆವೆನ್ಯೂ ಇನ್ಸ್ಪೆಕ್ಟರ್) ಕಛೇರಿಗೆ ತನಿಖೆಗಾಗಿ ಕಳುಹಿಸಿಕೊಡಲಾಗುತ್ತದೆ. ನಾಲ್ಕು ದಿನ ಬಿಟ್ಟು ಆ ಅರ್ಜಿಯ ಕುರಿತು ಕಂದಾಯ ನಿರೀಕ್ಷಕರ ಕಛೇರಿಗೆ ಹೋಗಿ ವಿಚಾರಿಸಲು ಹೇಳುತ್ತಾರೆ. ಕಂದಾಯ ನಿರೀಕ್ಷಕರ ಕಛೇರಿಗೆ ಹೋಗಿ ವಿಚಾರಿಸಿದರೆ ಅವರು ತಾನು ಭೂಪರಿವರ್ತನೆ ಮಾಡಬೇಕಾದ ಜಾಗಕ್ಕೆ ಬಂದು ತನಿಖೆ ಮಾಡಬೇಕೆಂದು ಕಾನೂನಿನಲ್ಲಿ ಇದೆ, ಹೀಗಾಗಿ ತಾನು ತಾನು ಮುಂದಿನ ಬಾರಿ ಗ್ರಾಮದ ಕಡೆ ಬರುವಾಗ ಜಾಗದ ತನಿಖೆ ಮಾಡುತ್ತೇನೆ ಎಂದು ಹೇಳುತ್ತಾರೆ ಅಥವಾ ನಿಮಗೆ ಕೆಲಸ ಬೇಗನೆ ಆಗಬೇಕಿದ್ದರೆ ಅವರನ್ನು ನಮ್ಮ ಸ್ವಂತ ಖರ್ಚಿನಲ್ಲಿ ಗ್ರಾಮಕ್ಕೆ ತಾಲೂಕು ಕೇಂದ್ರದಿಂದ ಕರೆದುಕೊಂಡು ಹೋಗಲು ಹೇಳುತ್ತಾರೆ. ಹೀಗೆ ಕಂದಾಯ ನಿರೀಕ್ಷಕರು ಅರ್ಜಿ ಕೊಟ್ಟು ಜಾಗದ ತನಿಖೆಗೆ ಬರಲು ಒಂದು ತಿಂಗಳು ಅಥವಾ ಹೆಚ್ಚು ದಿನ ತೆಗೆದುಕೊಳ್ಳುತ್ತಾರೆ. ಇವರು ಜಾಗಕ್ಕೆ ಬಂದು ಮಾಡುವುದು ಏನೂ ಇಲ್ಲ, ಭೂಮಾಪನ ಇಲಾಖೆಯವರು ಕೊಟ್ಟ ಜಾಗದ ನಕ್ಷೆ ಸರಿಯಾಗಿದೆ ಎಂದು ಒಂದು ಟಿಪ್ಪಣಿ ಬರೆದು ಅದನ್ನು ಅವರು ತಾಲೂಕು ಆಫೀಸಿಗೆ ಕಳುಹಿಸಬೇಕು ಅಷ್ಟೇ. ಹೀಗೆ ತಾಲೂಕು ಆಫೀಸಿಗೆ ಬಂದ ಅರ್ಜಿ ಏನಾಯಿತು ಎಂದು ಮತ್ತೆ ವಿಚಾರಿಸಲು ತಾಲೂಕು ಆಫೀಸಿಗೆ ಅರ್ಜಿ ಕೊಟ್ಟ ವ್ಯಕ್ತಿ ಅಲೆಯಬೇಕು. ತಾಲೂಕು ಆಫೀಸಿನ ಗುಮಾಸ್ತರು ನಂತರ ಅರ್ಜಿಗೆ ಸೆಂಟ್ಸ್ ಜಾಗಕ್ಕೆ ಇಂತಿಷ್ಟು ಎಂದು ಲೆಕ್ಕ ಹಾಕಿ ಹಣವನ್ನು ಚಲನ್ ತೆಗೆದು ಬ್ಯಾಂಕಿನಲ್ಲಿ ಕಟ್ಟಲು ಹೇಳುತ್ತಾರೆ. ಹೀಗೆ ಹಣ ಕಟ್ಟಿದ ನಂತರ ಭೂಪರಿವರ್ತನೆಗೆ ಕೊಟ್ಟ ಅರ್ಜಿಯಲ್ಲಿ ತಹಶೀಲ್ದಾರರು ಸಹಿ ಹಾಕಿ ಕೊಡಬೇಕು. ಇದು ಯಾವಾಗ ಸಿಗುತ್ತದೆ ಎಂದು ವಿಚಾರಿಸಿದರೆ ಗುಮಾಸ್ತರು ಸರಿಯಾದ ಉತ್ತರ ಹೇಳುವುದಿಲ್ಲ. ಎರಡು ದಿವಸ ಬಿಟ್ಟು ಬರಲು ಹೇಳುತ್ತಾರೆ. ಜನಸಾಮಾನ್ಯರನ್ನು ಅಲೆಸದೆ ಕೆಲಸ ಶೀಘ್ರವಾಗಿ ಮಾಡಿಕೊಡುವ ವ್ಯವಸ್ಥೆ ತಾಲೂಕು ಆಫೀಸಿನಲ್ಲಿ ಇಲ್ಲ.

ತಾಲೂಕು ಆಫೀಸಿನಲ್ಲಿ ಯಾರಿಗೆ ಯಾವ ವಿಷಯಗಳಿಗೆ ಅರ್ಜಿ ಕೊಡಬೇಕು ಎಂಬ ಬಗ್ಗೆ ಯಾವುದೇ ಮಾಹಿತಿ ಇರುವುದಿಲ್ಲ. ತಾಲೂಕು ಆಫೀಸಿನಲ್ಲಿ ಕೆಲಸ ಮಾಡುವ ಗುಮಾಸ್ತರ ಯಾವ ವಿಷಯಕ್ಕೆ ಸಂಬಂಧಪಟ್ಟವರು, ಅವರು ಹೆಸರು, ಪದನಾಮ ಇತ್ಯಾದಿ ಯಾವೊಂದು ಫಲಕಗಳೂ ತಾಲೂಕು ಆಫೀಸಿನಲ್ಲಿ ಇಲ್ಲ. ಅಲ್ಲಿ ಇಲ್ಲಿ ವಿಚಾರಿಸಿಯೇ ಜನ ತಿಳಿದುಕೊಳ್ಳುವಂಥ ಅವ್ಯವಸ್ಥೆ ತಾಲೂಕು ಕಚೇರಿಯಲ್ಲಿದೆ. ಗುಮಾಸ್ತರ ಪದನಾಮ, ಹೆಸರು, ಅವರು ಯಾವ ಕೆಲಸಕ್ಕೆ ಸಂಬಂಧಪಟ್ಟ ಅರ್ಜಿ ತೆಗೆದುಕೊಳ್ಳುತ್ತಾರೆ ಎಂಬ ಬಗ್ಗೆ ಫಲಕ ಹಾಕಲೂ ಸರಕಾರದ ಸಂಬಂಧಪಟ್ಟ ಇಲಾಖೆಗಳಿಗೆ ಸಾಧ್ಯವಿಲ್ಲವೇ? ತಾಲೂಕು ಆಫೀಸಿನಲ್ಲಿ ಹತ್ತಿಪ್ಪತ್ತು ಜನ ಒಟ್ಟಿಗೆ ಒಂದೇ ಕಡೆ ಕುಳಿತು ಕೆಲಸ ಮಾಡುವಾಗ ಜನಸಾಮಾನ್ಯರು ತಮಗೆ ಸಂಬಂಧಪಟ್ಟ ವಿಷಯದ ಕೆಲಸಕ್ಕೆ ಯಾರಿಗೆ ಅರ್ಜಿ ಕೊಡಬೇಕು, ಯಾರನ್ನು ವಿಚಾರಿಸಬೇಕು ಎಂಬ ಗೊಂದಲಕ್ಕೆ ಒಳಗಾಗುವುದನ್ನು ತಪ್ಪಿಸಲು ಸೂಕ್ತ ಫಲಕಗಳನ್ನು ಅಳವಡಿಸುವ ವ್ಯವಸ್ಥೆಯನ್ನು ಸರಕಾರ ಜಾರಿಗೆ ತರಲು ಏನು ತೊಂದರೆ?

ಭೂಪರಿವರ್ತನೆಗಾಗಿ ನಾನು ಒಟ್ಟಿನಲ್ಲಿ 22 ಸಲ ನನ್ನ ಗ್ರಾಮದಿಂದ ತಾಲೂಕು ಕೇಂದ್ರಕ್ಕೆ ನನ್ನ ದೈನಂದಿನ ಕೆಲಸ ಬಿಟ್ಟು ಅಲೆಯಬೇಕಾಗಿ ಬಂತು. ಒಟ್ಟಿನಲ್ಲಿ ಇದಕ್ಕೆ ತಗಲಿದ ಸಮಯ ಎರಡೂವರೆ ತಿಂಗಳು. ಗ್ರಾಮೀಣ ಭಾಗಗಳಲ್ಲಿ ಮನೆ ಕಟ್ಟಿಸಲು ಕೂಡ ಗ್ರಾಮ ಪಂಚಾಯತಿಯಿಂದ ಪರವಾನಗಿ ಪಡೆಯುವುದನ್ನು ಕರ್ನಾಟಕ ಸರ್ಕಾರ ಕಡ್ಡಾಯ ಮಾಡಿರುವ ಕಾರಣ ಗ್ರಾಮ ಪಂಚಾಯತಿಗೆ ಅಲೆಯಬೇಕಾದ ಪರಿಸ್ಥಿತಿಯನ್ನು ಕೂಡ ಕೃಷಿಕರು ಎದುರಿಸಬೇಕಾಗುತ್ತದೆ. ಹಿಂದೆ ಕರ್ನಾಟಕದಲ್ಲಿ ಆಡಳಿತ ನಡೆಸಿದ ಬಿಜೆಪಿ ಸರ್ಕಾರ 9/11 ಎಂಬ ಕಾನೂನನ್ನು ಜಾರಿಗೆ ತಂದಿದ್ದು ಇದರಿಂದಾಗಿ ಮನೆ ಕಟ್ಟಿಸಲು ಪರವಾನಗಿ ಪಡೆಯಬೇಕಾದರೆ ಕೃಷಿಕರು ಮನೆ ಕಟ್ಟಿಸುವ ಜಾಗದ 9/11 ಎಂಬ ದಾಖಲೆಯನ್ನು ಕಡ್ಡಾಯವಾಗಿ ಮಾಡಿಸಬೇಕಾಗುತ್ತದೆ. ಇದಕ್ಕಾಗಿ ಗ್ರಾಮ ಪಂಚಾಯತಿಗೆ ಜಾಗದ ಪಹಣಿ ಪತ್ರ, ಭೂಪರಿವರ್ತನೆಯ ಆದೇಶದ ಪ್ರತಿ, ಜಾಗದ ಫೋಟೋ (ಮನೆ ಕಟ್ಟಿಸುವ ವ್ಯಕ್ತಿ ಜಾಗದಲ್ಲಿ ನಿಂತು ತೆಗೆಸಿದ ಫೋಟೋ), ಮನೆ ಕಟ್ಟಿಸುವ ವ್ಯಕ್ತಿಯ ಫೋಟೋ, ಜಾಗದ ದಾಖಲೆ ಪತ್ರದ ಪ್ರತಿ, ಆಧಾರ್ ಕಾರ್ಡ್ ಅಥವಾ ಇನ್ನಿತರ ಗುರುತು ಪತ್ರದ ಪ್ರತಿ, 100 ರೂಪಾಯಿಯ ಸ್ಟ್ಯಾಂಪ್ ಪೇಪರ್ ಮೇಲೆ ನೋಟರಿಯವರಿಂದ ದೃಡೀಕೃತ ಅಫಿದವಿತ್, ಸಿವಿಲ್ ಇಂಜಿನಿಯರ್ ಮೊಹರು ಹಾಗೂ ಸಹಿ ಇರುವ ಅವರು ಮಾಡಿಕೊಟ್ಟ ಮನೆಯ ಪ್ಲಾನ್ ಹಾಗೂ ನಕ್ಷೆ, ಬಡಾವಣೆ ನಕ್ಷೆಗಳ ನಾಲ್ಕು ಪ್ರತಿಗಳನ್ನು ನೋಟರಿಯವರ ಸಹಿ ಹಾಗೂ ಮೊಹರು ಸಹಿತ ಇಟ್ಟು ಅರ್ಜಿ ಕೊಡಬೇಕು. ಅರ್ಜಿಯ ಮೇಲೆ ಗ್ರಾಮ ಪಂಚಾಯತ್ ಅಧ್ಯಕ್ಷರ ಹಾಗೂ ಸಂಬಂಧಪಟ್ಟ ವಾರ್ಡಿನ ಗ್ರಾಮಪಂಚಾಯತ್ ಸದಸ್ಯರ ಸಹಿ ಹಾಕಿಸಿಕೊಳ್ಳಬೇಕು. ಹೀಗೆ ಕೊಟ್ಟ ಅರ್ಜಿಯನ್ನು ತಿಂಗಳಿಗೊಮ್ಮೆ ನಡೆಯುವ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಇಟ್ಟು ಅನುಮೋದನೆ ಪಡೆಯಬೇಕು. 9/11 ದಾಖಲೆಗೆ ಪಂಚಾಯತಿಗೆ ಜಾಗದ ವಿಸ್ತೀರ್ಣದ ಆಧಾರದಲ್ಲಿ ಹಣ ಕಟ್ಟಬೇಕು. 5 ಸೆಂಟ್ಸ್ ಜಾಗಕ್ಕೆ 500 ರೂಪಾಯಿ ತೆಗೆದುಕೊಳ್ಳುತ್ತಾರೆ. ಒಬ್ಬ ಕೃಷಿಕ ತನ್ನ ಖಾಸಗಿ ಜಾಗದಲ್ಲಿ ಮನೆ ಕಟ್ಟಿಸಲು ಪಂಚಾಯತಿನ ಸಾಮಾನ್ಯ ಸಭೆಯ ಒಪ್ಪಿಗೆ ಪಡೆಯಬೇಕು ಎಂಬ ನಿಯಮದ ಅಗತ್ಯವೇ ಇಲ್ಲ. ಇಂಥ ಕೆಂಪು ಪಟ್ಟಿಯ ಅಸಂಬದ್ಧ ನಿಯಮವನ್ನು ಕಾನೂನು ನಿರ್ಮಾಪಕರು ಜಾರಿಗೆ ತಂದು ಕೃಷಿಕರಿಗೆ ಯಾಕೆ ತೊಂದರೆ ಕೊಡಬೇಕು? ಇದರಿಂದಾಗಿ ಹಲವಾರು ದಿವಸ ಕೃಷಿಕರು ಕಾಯಬೇಕಾಗುತ್ತದೆ. ನಾನು ಅರ್ಜಿ ಕೊಟ್ಟು 9/11 ದಾಖಲೆಯನ್ನು ಪಂಚಾಯತಿನಲ್ಲಿ ಮಾಡಿ ಕೊಡಲು ಎರಡೂವರೆ ತಿಂಗಳು ತೆಗೆದುಕೊಂಡರು. ಇದಕ್ಕಾಗಿ ವಿಚಾರಿಸಲು ಹತ್ತು ಸಲ ಗ್ರಾಮ ಪಂಚಾಯತಿಗೆ ಅಲೆಯಬೇಕಾಯಿತು. ಈ ಸಂಬಂಧ ನಾನು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗೆ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗೆ, ಕರ್ನಾಟಕ ರಾಜ್ಯದ ಪಂಚಾಯತ್ ರಾಜ್ ಸಚಿವರಿಗೆ, ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಿಗೆ, ಮುಖ್ಯಮಂತ್ರಿಗಳಿಗೆ ಮಿಂಚಂಚೆ ಮೂಲಕ ತಿಳಿಸಿದರೂ ಯಾವುದೇ ಪ್ರಯೋಜನ ಆಗಲಿಲ್ಲ. ಇವರ್ಯಾರೂ ಮಿಂಚಂಚೆಗಳನ್ನು ನೋಡುವುದೇ ಇಲ್ಲ ಎಂದು ಕಾಣುತ್ತದೆ. ಮಿಂಚಂಚೆಗಳಿಗೆ ಯಾವುದೇ ಪ್ರತಿಕ್ರಿಯೆಯನ್ನೂ ಇವರು ನೀಡುವುದಿಲ್ಲ. ಕರ್ನಾಟಕದ ಅಂತರ್ಜಾಲ ಆಧಾರಿತ ದೂರು ದಾಖಲೆ ವೆಬ್ ಸೈಟ್ ಇ-ಜನಸ್ಪಂದನದಲ್ಲಿ ದೂರು ದಾಖಲಿಸಿದರೂ ಪ್ರಯೋಜನ ಆಗುವುದಿಲ್ಲ. ಕೇಂದ್ರ ಸರ್ಕಾರದ ದೂರು ದಾಖಲೆ ವೆಬ್ ಸೈಟಿನಲ್ಲಿ ದೂರು ದಾಖಲಿಸಿದರೂ ಯಾವುದೇ ಪ್ರಯೋಜನ ಆಗುವುದಿಲ್ಲ. ಇವುಗಳು ಕೃಷಿಕರ ಸಮಸ್ಯೆಗಳಿಗೆ ಸ್ಪಂದಿಸುವುದಿಲ್ಲ. ಕರ್ನಾಟಕದ ಹಾಗೂ ಕೇಂದ್ರ ಸರ್ಕಾರದ ಅಧಿಕಾರಶಾಹೀ ವ್ಯವಸ್ಥೆ ಬ್ರಿಟಿಷರ ಸರಕಾರದಂತೆ ಕೃಷಿಕರ ಶೋಷಣೆ ಮಾಡುವ ಅನವಶ್ಯಕ ಕೆಂಪು ಪಟ್ಟಿಯ ಕಾನೂನುಗಳನ್ನು ಮಾಡಿ ಕೃಷಿಕರನ್ನು ಕಛೇರಿಯಿಂದ ಕಛೇರಿಗೆ ಅಲೆಯುವಂತೆ ಮಾಡುತ್ತಿವೆಯೇ ವಿನಃ ವೈಜ್ಞಾನಿಕವಾಗಿ ಚಿಂತಿಸಿ ಅನವಶ್ಯಕ ಪೀಡಕ ಕಾನೂನುಗಳನ್ನು ತೆಗೆದುಹಾಕುವ ಯಾವ ಕ್ರಮಗಳನ್ನೂ ಕೈಗೊಳ್ಳುತ್ತಿಲ್ಲ. ನಮ್ಮ ರಾಜ್ಯದಲ್ಲಿ ಹಾಗೂ ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಬಹುತೇಕ ನಾಶವಾಗಿದೆ. ಜನಸಾಮಾನ್ಯರಿಗೆ ಮತ ಹಾಕುವ ಒಂದು ಹಕ್ಕು ಮಾತ್ರ ಇದೆಯೇ ಹೊರತು ಜನಸಾಮಾನ್ಯರ ದೂರುಗಳಿಗೆ ಸ್ಪಂದಿಸುವ ವ್ಯವಸ್ಥೆ ಸರಿಯಾಗಿ ಕೆಲಸಮಾಡುತ್ತಾ ಇಲ್ಲ. ಒಂದು ಉತ್ತಮ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನಸಾಮಾನ್ಯರ ದೂರುಗಳಿಗೆ ಕೂಡಲೇ ಸ್ಪಂದಿಸುವ, ಉತ್ತರಿಸುವ ವ್ಯವಸ್ಥೆ ಇರಬೇಕು. ನನ್ನ ಅನುಭವದ ಪ್ರಕಾರ ನಮ್ಮ ದೇಶದಲ್ಲಾಗಲಿ, ರಾಜ್ಯದಲ್ಲಾಗಲಿ ಇಂಥ ವ್ಯವಸ್ಥೆ ಹೆಸರಿಗೆ ಮಾತ್ರ ಇದೆ. ಜನಸಾಮಾನ್ಯರ ಮಿಂಚಂಚೆಗಳಿಗೆ ಉತ್ತರಿಸುವ ಸೌಜನ್ಯವಾಗಲಿ, ಕಾಳಜಿಯಾಗಲಿ ಇಡೀ ದೇಶದ ಹಾಗೂ ರಾಜ್ಯದ ಅಧಿಕಾರಶಾಹೀ ವ್ಯವಸ್ಥೆಯಲ್ಲಿ ಇಲ್ಲ.

ಗ್ರಾಮ ಪಂಚಾಯತಿಯಲ್ಲಿ 9/11 ದಾಖಲೆ ಮಾಡಿಕೊಡಲು ಏಕೆ ಇಷ್ಟು ವಿಳಂಬ ಎಂದು ಕೇಳಿದರೆ ಅಲ್ಲಿ ಅವರಿಗೆ ಕೆಲಸದ ಹೊರೆ ಇದೆ ಎಂದು ಹೇಳುತ್ತಾರೆ. ಪಂಚಾಯತಿಯಲ್ಲಿ ಸಮರ್ಪಕ ಸಿಬ್ಬಂದಿ ಇಲ್ಲ. ಖಾಯಂ ಪಂಚಾಯತ್ ಅಭಿವೃದ್ಧಿ ಅಧಿಕಾರಿಯನ್ನು ಸರಕಾರ ನೇಮಕ ಮಾಡುವುದಿಲ್ಲ. ಒಬ್ಬ ಪಂಚಾಯತ್ ಅಭಿವೃದ್ಧಿ ಅಧಿಕಾರಿಯನ್ನು ಎರಡೆರಡು ಗ್ರಾಮ ಪಂಚಾಯತಿಗೆ ನೇಮಕ ಮಾಡಿದೆ ಎಂದು ಹೇಳುತ್ತಾರೆ. ಸರ್ಕಾರವು ಜನರಿಗೆ ತೊಂದರೆದಾಯಕವಾದ ಯಾವ ಘನ ಉದ್ದೇಶವನ್ನೂ ಸಾಧಿಸದ 9/11 ದಾಖಲೆಯನ್ನು ಕಡ್ಡಾಯ ಮಾಡುವುದು ಯಾವ ಪುರುಷಾರ್ಥ ಸಾಧನೆಗಾಗಿ ಎಂದು ತಿಳಿಯುವುದಿಲ್ಲ. ಈ 9/11 ಎಂಬ ದಾಖಲೆ ಅಗತ್ಯವೇ ಇಲ್ಲ. ಹಿಂದೆ ನನ್ನ ತಂದೆಯವರು ಮನೆ ಕಟ್ಟಿಸಿದಾಗ 9/11 ಎಂಬ ದಾಖಲೆ ಆಗಬೇಕು ಎಂದು ಇರಲೇ ಇಲ್ಲ. ಆದರೂ ಅದು ಇಲ್ಲವೆಂದು ಯಾವುದೇ ತೊಂದರೆ ಆಗಿಲ್ಲ. ನೆರೆಯ ಕೇರಳ ರಾಜ್ಯದಲ್ಲಿ 9/11 ದಾಖಲೆ ಅಗತ್ಯ ಎಂಬ ಕಾನೂನು ಇಲ್ಲ. ಹಾಗೆಂದು ಅಲ್ಲಿ ಯಾವುದೇ ತೊಂದರೆ ಆಗಿಲ್ಲ. ಹೀಗಿರುವಾಗ ಕರ್ನಾಟಕವು ಯಾಕೆ ಜನರಿಗೆ ಅದರಲ್ಲೂ ಗ್ರಾಮೀಣ ಕೃಷಿಕರನ್ನು ಅನಾವಶ್ಯಕವಾಗಿ ಸರ್ಕಾರೀ ಕಛೇರಿಗಳಿಗೆ ಅಲೆದಾಡಿಸುವ ಕಾನೂನು ಮಾಡಿ ಜನಸಾಮಾನ್ಯರನ್ನು ಪೀಡಿಸುತ್ತಿದೆ? 9/11 ಕಾನೂನು ಬೇಕು ಎಂದು ಜನರು ಒತ್ತಾಯ ಮಾಡಿದ್ದಾರೆಯೇ? ಅಂಥ ಕಾನೂನು ಬೇಕೆಂದು ಜನರು ಒತ್ತಾಯ ಮಾಡಿಲ್ಲ. ಹೀಗಿದ್ದರೂ ಜನರ ಮೇಲೆ ಅನವಶ್ಯಕ ಕಾನೂನುಗಳನ್ನು ಹೇರುವುದು ಹೇಗೆ ಪ್ರಜಾಪ್ರಭುತ್ವ ಆಗುತ್ತದೆ?

ಕರ್ನಾಟಕ ಸರ್ಕಾರವು ಗ್ರಾಮೀಣ ಪ್ರದೇಶಗಳಲ್ಲಿಯೂ ಮನೆ ಕಟ್ಟಿಸಬೇಕಾದರೆ ಪರವಾನಗಿ ಪಡೆಯುವುದು ಅಗತ್ಯ ಎಂಬ ಕಾನೂನನ್ನು ಕಡ್ಡಾಯ ಮಾಡಿದೆ. ಪರವಾನಗಿ ಕೊಡಬೇಕಾದರೆ 9/11 ದಾಖಲೆ ಮಾಡಿಸಬೇಕಾಗಿರುವುದು ಕಡ್ಡಾಯ. ಮನೆ ಕಟ್ಟಿಸಲು ಪರವಾನಿಗೆಗೆ ಪಹಣಿ ಪತ್ರ, 9/11 ದಾಖಲೆ, ಮನೆ ಕಟ್ಟಿಸುವ ಜಾಗದ ದಾಖಲೆಯ ಪ್ರತಿ, ಗುರುತು ಪತ್ರದ ಪ್ರತಿ (ಆಧಾರ್ ಅಥವಾ ಇನ್ನಿತರ), ಸಿವಿಲ್ ಇಂಜಿನಿಯರ್ ಮಾಡಿಕೊಟ್ಟ ಮನೆಯ ಪ್ಲಾನಿನ ನಕ್ಷೆ, ಮನೆಯ ಅಂದಾಜು ಖರ್ಚಿನ ಪಟ್ಟಿ ಇತ್ಯಾದಿಗಳ ಪ್ರತಿಯನ್ನು ಪಂಚಾಯತಿಗೆ ಕೊಡಬೇಕು. ಇದಕ್ಕೆ ನಿಗದಿ ಪಡಿಸಿದ ಅರ್ಜಿ ನಮೂನೆಯಲ್ಲಿ ವಿವರಗಳನ್ನು ತುಂಬಿ ಸಿವಿಲ್ ಇಂಜಿನಿಯರ್ ಮೊಹರು ಹಾಗೂ ಸಹಿಯನ್ನು ಹಾಕಿಸಿ ಕೊಡಬೇಕು. ಮನೆ ವಿಸ್ತೀರ್ಣಕ್ಕೆ ಅನುಸಾರವಾಗಿ ಹಾಗೂ ಮನೆಯಲ್ಲಿ ಅಳವಡಿಸುವ ನೆಲ ಸಾರಣೆಯೋ ಅಥವಾ ಟೈಲ್ ಅಳವಡಿಸುದೋ ಎಂಬುದನ್ನು ಹೊಂದಿಕೊಂಡು ಕಟ್ಟಡ ಪರವಾನಿಗೆಗೆ ಪಂಚಾಯತಿಗೆ ಹಣ ಕಟ್ಟಬೇಕು. ಪಂಚಾಯತಿನವರು ಅರ್ಜಿ ಕೊಟ್ಟು ಪರವಾನಗಿ ಕೊಡಲು ಒಂದು ಒಂದೂವರೆ ತಿಂಗಳು ತೆಗೆದುಕೊಳ್ಳುತ್ತಾರೆ. ಇದಕ್ಕಾಗಿ ವಿಚಾರಿಸಲು ನಾನು ಪಂಚಾಯತಿಗೆ ನಾಲ್ಕೈದು ಸಲ ಅಲೆಯಬೇಕಾಯಿತು. ಈ ಅರ್ಜಿಯನ್ನು ಪಂಚಾಯತಿನ ತಿಂಗಳಿಗೊಮ್ಮೆ ಜರಗುವ ಸಾಮಾನ್ಯ ಸಭೆಯಲ್ಲಿ ಇಟ್ಟು ಒಪ್ಪಿಗೆ ಪಡೆದು ನಂತರ ಪರವಾನಗಿ ಕೊಡುವುದು ಎಂಬ ಕೆಂಪು ಪಟ್ಟಿಯ ನಿಯಮವನ್ನು ಮಾಡಿ ಅರ್ಜಿಗಳನ್ನು ಅನಾವಶ್ಯಕವಾಗಿ ವಿಳಂಬಿಸುವ ಕಾನೂನು ಅಗತ್ಯವೇನಿದೆ? ಕೃಷಿಕರು ಖಾಸಗಿ ಪಟ್ಟಾ ಜಮೀನಿನಲ್ಲಿ ಮನೆ ಕಟ್ಟಿಸುವಾಗ ಗ್ರಾಮದ ಇತರರ ಒಪ್ಪಿಗೆ ಬೇಕೆಂಬ ಅನವಶ್ಯಕ ಕಾನೂನು ತಂದು ಪರವಾನಗಿ ನೀಡುವುದನ್ನು ತಿಂಗಳುಗಳ ಕಾಲ ವಿಳಂಬ ಮಾಡಿ ಜನರಿಗೆ ಪೀಡೆ ಕೊಡುವ ಅಗತ್ಯವೇನು? ಸ್ವತಂತ್ರ ಹಾಗೂ ಪ್ರಜಾಪ್ರಭುತ್ವ ದೇಶದಲ್ಲಿ ಇಂಥ ಅಂಧ ಕಾನೂನುಗಳ ಅಗತ್ಯ ಇದೆಯೇ? ಇಂಥ ಕಾನೂನು ಬೇಕು ಎಂದು ಜನ ಒತ್ತಾಯ ಮಾಡಿದ್ದಾರೆಯೇ? ಇಂಥ ಒತ್ತಾಯವನ್ನು ಜನರು ಮಾಡಿಲ್ಲ. ಹೀಗಿದ್ದರೂ ಪ್ರಜಾಪ್ರಭುತ್ವದ ಹೆಸರಿನಲ್ಲಿ ಸರಕಾರ ಕೃಷಿಕಪೀಡಕ ಕಾನೂನುಗಳನ್ನು ಯಾಕೆ ಹೇರುತ್ತಿದೆ ಎಂದರೆ ನಾವು ಯಾವುದನ್ನೂ ಪ್ರಶ್ನಿಸುವ ಮನೋಭಾವ ಹೊಂದಿಲ್ಲ, ಕುರಿಗಳಂತೆ ಎಲ್ಲವನ್ನೂ ಒಪ್ಪಿಕೊಳ್ಳುತ್ತೇವೆ. ಹೀಗಾಗಿ ಜನರ ಮೇಲೆ ಅನವಶ್ಯಕ ಕಾನೂನುಗಳನ್ನು ಹಿಂದೆ ಬ್ರಿಟಿಷರು ಹೇರುತ್ತಿದ್ದಂತೆ ಇಂದು ನಮ್ಮದೇ ಸರ್ಕಾರ ಹೇರುತ್ತಿದೆ. ಒಟ್ಟಿನಲ್ಲಿ ಭೂಪರಿವರ್ತನೆ, 9/11 ದಾಖಲೆ ಮಾಡಿಸುವುದು, ಮನೆ ಕಟ್ಟಿಸಲು ಗ್ರಾಮ ಪಂಚಾಯತಿಯಿಂದ ಪರವಾನಗಿ ಪಡೆಯಲು ನಾನು 35 ಸಲ ಅಲೆಯಬೇಕಾಯಿತು ಹಾಗೂ ಇದಕ್ಕೆ ತೆಗೆದುಕೊಂಡ ಸಮಯ ಐದು ತಿಂಗಳು.

ನೆರೆಯ ಕೇರಳದಲ್ಲಿ ಇಂಥ ಪ್ರಜಾಪೀಡಕ ಕಾನೂನುಗಳು ಇಲ್ಲ. ಕೇರಳದಲ್ಲಿ ಕೃಷಿಕರು ತಮ್ಮ ಸ್ವಂತ ಪಟ್ಟಾ ಜಾಗದಲ್ಲಿ ಮನೆ ಕಟ್ಟಿಸಬೇಕಾದರೆ ಅದನ್ನು ಭೂಪರಿವರ್ತನೆ ಮಾಡಿಸಬೇಕು ಎಂಬ ನಿಯಮವಿಲ್ಲ, ಜಾಗದ 9/11 ದಾಖಲೆ ಆಗಬೇಕು ಎಂಬ ಕಾನೂನು ಇಲ್ಲ. 1000 ಚದರ ಅಡಿ ವಿಸ್ತೀರ್ಣಕ್ಕಿಂಥ ದೊಡ್ಡದಾದ ಮನೆ ಕಟ್ಟಿಸಬೇಕಾದರೆ ಮಾತ್ರ ಪಂಚಾಯತಿನಿಂದ ಪರವಾನಗಿ ಪಡೆಯಬೇಕು ಎಂಬ ನಿಯಮ ಕೇರಳದಲ್ಲಿ ಇದೆ. ಇದಕ್ಕಿಂತ ಕಡಿಮೆ ವಿಸ್ತೀರ್ಣದ ಮನೆ ಕಟ್ಟಿಸಬೇಕಾದರೆ ಕೃಷಿಕರು ಯಾವುದೇ ಪರವಾನಗಿ ಪಡೆಯಬೇಕಾದ ಅಗತ್ಯವೂ ಅಲ್ಲಿ ಇಲ್ಲ. ಅಲ್ಲಿ ಇಂಥ ಕಾನೂನು ಇಲ್ಲವೆಂದು ಯಾವುದೇ ತೊಂದರೆ ಆಗಿಲ್ಲ. ಹೀಗಿರುವಾಗ ಕರ್ನಾಟಕದ ಗ್ರಾಮೀಣ ಪ್ರದೇಶಗಳಲ್ಲಿ ಕೃಷಿಕರು ಮನೆ ಕಟ್ಟಿಸಬೇಕಾದರೆ ಜನರಿಗೆ ತೊಂದರೆದಾಯಕವಾದ ಕಾನೂನುಗಳನ್ನು ಹೇರಿ ಕೃಷಿಕರನ್ನು ಕಛೇರಿಯಿಂದ ಕಛೇರಿಗೆ ಅಲೆಸುವುದು ಏಕೆ? ಸರಕಾರಕ್ಕೆ ಹಣ ಸಂಗ್ರಹ ಮಾಡಬೇಕಿದ್ದರೆ ಪರವಾನಗಿ ಶುಲ್ಕ ಎಂದು ಹಣ ನಿಗದಿಪಡಿಸಿ ಕೂಡಲೇ ಪರವಾನಗಿ ಪಂಚಾಯತಿನಲ್ಲಿ ನೀಡುವ ಸರಳ ಪದ್ಧತಿ ತಂದರೆ ಸಾಕಾಗುವುದಿಲ್ಲವೇ? ಕರ್ನಾಟಕದ ಆಡಳಿತ ವ್ಯವಸ್ಥೆ ನನ್ನ ಅನುಭವದ ಪ್ರಕಾರ ಅತ್ಯಂತ ನಿಧಾನಗತಿಯ ನಿರ್ಲಜ್ಜ ವ್ಯವಸ್ಥೆಯಾಗಿದ್ದು ಈ ವ್ಯವಸ್ಥೆಯಲ್ಲಿ ಯಾರೂ ಯಾರಿಗೂ ಜವಾಬ್ದಾರಿಯಲ್ಲ ಎಂಬ ಪರಿಸ್ಥಿತಿ ಇದೆ. ಸರಕಾರ ಎಂಬುದು ಪ್ರಜೆಗಳಿಗೆ ತಾಯಿಯ ಸ್ಥಾನದಲ್ಲಿರಬೇಕು. ಪ್ರಜೆಗಳ ಬೇಕುಬೇಡಗಳಿಗೆ ಸರಕಾರ ಸ್ಪಂದಿಸಬೇಕು. ಹೀಗಾಗಬೇಕಾದರೆ ಪ್ರಜೆಗಳು ತನ್ನವರು ಎಂಬ ಕಾಳಜಿ ಆಡಳಿತ ವ್ಯವಸ್ಥೆಗೆ ಇರಬೇಕು. ಕರ್ನಾಟಕದಲ್ಲಿ ಆಡಳಿತಶಾಹಿ ಪ್ರಜೆಗಳನ್ನು ತನ್ನವರು ಎಂದು ತಿಳಿದು ಕಾನೂನುಗಳನ್ನು ರೂಪಿಸುವ ಮನೋಭಾವ ಹೊಂದಿಲ್ಲ. ಇಡೀ ಆಡಳಿತ ವ್ಯವಸ್ಥೆ ಪ್ರಜೆಗಳನ್ನು ಪರಕೀಯರು ಎಂದು ತಿಳಿದು ಕಾನೂನುಗಳನ್ನು ರೂಪಿಸಿರುವುದು ಕಂಡುಬರುತ್ತದೆ. ಇಲ್ಲದಿದ್ದರೆ ಯಾವ ದೇಶದಲ್ಲಿಯಾದರೂ ಗ್ರಾಮೀಣ ಪ್ರದೇಶಗಳಲ್ಲಿ ಮನೆ ಕಟ್ಟಬೇಕಾದರೆ ಕರ್ನಾಟಕದಲ್ಲಿ ಇರುವಂಥ ಅನವಶ್ಯಕ, ಅವೈಜ್ಞಾನಿಕ, ಅರ್ಥವಿಲ್ಲದ ಕಾನೂನುಗಳು ಇರಲು ಸಾಧ್ಯವೇ ಇಲ್ಲ.

ಜೂನ್ 10, 2016

ಮೇಕಿಂಗ್ ಹಿಸ್ಟರಿ: ಸಮಾಜದ ನೋವಿಗೆ ಔಷಧ

ಸಾಕೇತ್ ರಾಜನ್ 
ಕನ್ನಡಕ್ಕೆ: ಡಾ. ಅಶೋಕ್. ಕೆ. ಆರ್
10/06/2016
ಊಳಿಗಮಾನ್ಯತೆ – ವಸಾಹತು ಸಿದ್ಧಾಂತ ಜನಸಮೂಹವನ್ನು ಹದ್ದುಬಸ್ತಿನಲ್ಲಿಡಲು ಜಾತಿ ಮತ್ತು ಧರ್ಮವನ್ನು ಕೊರಳಪಟ್ಟಿಯಂತೆ ಬಳಸಿತು. ಪ್ರತಿಗಾಮಿ ಸರಕಾರ ಹೈದರ್ ಮತ್ತು ಟಿಪ್ಪುವಿನ ಆಳ್ವಿಕೆಯ ಕಾಲದಲ್ಲಿ ಸಾರಾಯಿಯ ಮೇಲೆ ಹೇರಲಾಗಿದ್ದ ನಿಷೇಧವನ್ನು ಹಿಂಪಡೆದುಕೊಂಡಿತು, ಅಧಿಕಾರಕ್ಕೆ ಬರುತ್ತಿದ್ದಂತೆಯೇ ಸಾರಾಯಿಯನ್ನು ಉತ್ಪಾದಿಸಲು ಮತ್ತು ಸೇವಿಸಲಿದ್ದ ಎಲ್ಲಾ ಅಡಚಣೆಗಳನ್ನು ತೆಗೆದುಹಾಕಿತು. ಈ ನಿರ್ಧಾರ, ರಾಜ್ಯಕ್ಕೆ ಆದಾಯ ಮೂಲವಾಗುವುದರ ಜೊತೆಗೆ ಶೇಂದಿ ಗುತ್ತಿಗೆದಾರರಿಗೆ ಒಳ್ಳೆ ವ್ಯಾಪಾರವೂ ಆಗುವುದಕ್ಕೆ ಅನುಕೂಲವಾಯಿತು. ನಿಷೇಧವನ್ನು ಹಿಂಪಡೆಯಲು ಇವಷ್ಟೇ ಕಾರಣವಲ್ಲ. ಬಹು ಮುಖ್ಯವಾಗಿ, ಧರ್ಮ ಮತ್ತು ಜಾತಿ ಶೋಷಣೆಯಿಂದ ಹೊರಬರಲಿಚ್ಛಿಸುವ ಜನಸಮೂಹವನ್ನು ಭ್ರಮೆಯ ಲೋಕಕ್ಕೆ ತಳ್ಳಿ ನಿದ್ರಾಹೀನ ಸ್ಥಿತಿಗೆ ನೂಕುವ ಸಂಸ್ಕೃತಿಯನ್ನು ಬೆಳೆಸಬೇಕಿತ್ತು. ಶೇಂದಿ ಉದ್ರಿಕ್ತ ಜನಸಮೂಹವನ್ನು ತಣ್ಣಗಾಗಿಸಿತು ಮತ್ತು ಊಳಿಗಮಾನ್ಯ ದೊರೆಗಳ ಹಾಗೂ ಬ್ರಿಟೀಷ್ ಸಾಮ್ರಾಜ್ಯದ ಆಳ್ವಿಕೆಯನ್ನು ಉಳಿಸಿ ಬೆಳೆಸಿತು. ಹಾಗಾಗಿ ಬ್ರಾಹ್ಮಣರು ಮತ್ತು ಲಿಂಗಾಯತರು ಕುಡಿಯದೇ ಇದ್ದರು, ಅವರದೇ ಪ್ರಾಬಲ್ಯವಿದ್ದ ರಾಜ್ಯದಲ್ಲಿ ಮದ್ಯಪಾನ ನಿಷೇಧವನ್ನು ಹಿಂತೆಗೆದುಕೊಂಡಿದ್ದು ತಮ್ಮ ವರ್ಗದ ಆಳ್ವಿಕೆ ಅಭಾದಿತವಾಗಿ ಮುಂದುವರೆಯಲಿ ಎಂಬ ಕಾರಣದಿಂದ.

ಈ ಸಾಂಸ್ಕೃತಿಕ ಎಳೆತದಿಂದಾದ ಪರಿಣಾಮವೆಂದರೆ ಬೆಂಗಳೂರು ನಗರವೊಂದರಲ್ಲೇ “1799 – 1800ರಲ್ಲಿ 487 ಕಾಂತರೇಯ ಪಗೋಡಾಗಳಷ್ಟು ಆದಾಯ ತರುತ್ತಿದ್ದ ಶೇಂದಿ ಮತ್ತು ಮದ್ಯ ವ್ಯವಹಾರ, 1800 – 1801ರಲ್ಲಿ 808 ಕಾಂತರೇಯ ಪಗೋಡಾಗಳಿಗೆ ಏರಿಕೆಯಾಯಿತು.” (202)

ವಸಾಹತು ಆಳ್ವಿಕೆಯ ಮೊದಲ ನಾಲಕ್ಕು ವರ್ಷ ಮೈಸೂರು ಆಡಳಿತದಲ್ಲಿದ್ದ ವಿಲ್ಕ್ಸ್ ಕೊಡುವ ಅಂಕಿಸಂಖೈಗಳು ಸಾರಾಯಿ ವ್ಯಾಪಾರದಿಂದ ರಾಜ್ಯಕ್ಕೆ ಬರುತ್ತಿದ್ದ ಆದಾಯದಲ್ಲಾದ ಏರಿಕೆಯ ಬಗ್ಗೆ ತಿಳಿಸುತ್ತದೆ. ಶೇಂದಿ ಮತ್ತು ಮದ್ಯದಿಂದ ಬಂದ ಒಟ್ಟು ಆದಾಯ 1799-1800ರ ಅವಧಿಯಲ್ಲಿ ಒಟ್ಟು 28,845 ಕಾಂತರೇಯ ಪಗೋಡಾಗಳಷ್ಟಿದ್ದರೆ ಮೂರು ವರ್ಷದೊಳಗೇ ಇದು 44,290 ಪಗೋಡಾಗಳಷ್ಟು ಜಾಸ್ತಿಯಾಯಿತು; ತಂಬಾಕಿನ ನಂತರ ರಾಜ್ಯಕ್ಕೆ ಅತಿ ಹೆಚ್ಚು ಆದಾಯ ತರುವ ಮೂಲವಾಯಿತು ಸಾರಾಯಿ. (203)


ಮುಂದಿನ ವಾರ: 
ಪುರುಷ ಸಮಾಜದ ದಬ್ಬಾಳಿಕೆ

ಜೂನ್ 4, 2016

ಪ್ರಾದೇಶಿಕ ಹಿತಾಸಕ್ತಿಗಳನ್ನು ಮಣ್ಣುಪಾಲು ಮಾಡುತ್ತಿರುವ ರಾಜ್ಯಸಭಾ ಚುನಾವಣೆಗಳು

ಕು.ಸ.ಮಧುಸೂದನರಂಗೇನಹಳ್ಳಿ
04/06/2016
ರಾಜ್ಯಸಭಾ ಚುನಾವಣೆಗಳು ನಡೆಯುತ್ತಿರುವ ಈ ಹೊತ್ತಿನಲ್ಲಿ ರಾಜ್ಯಸಭೆಯ ಅಸ್ಥಿತ್ವದ ಬಗ್ಗೆ ಮತ್ತು ಅದರ ಉಪಯುಕ್ತತೆಯ ಬಗ್ಗೆ ಹಾಗು ಅದಕ್ಕೆಸದಸ್ಯರುಗಳನ್ನು ಆಯ್ಕೆ ಮಾಡುವ ವಿದಾನಗಳ ಬಗ್ಗೆ ಕೆಲವು ಮೂಲಭೂತ ಪ್ರಶ್ನೆಗಳನ್ನು ಎತ್ತುವ ಅನಿವಾರ್ಯತೆ ಇವತ್ತು ಎಂದಿಗಿಂತ ಹೆಚ್ಚಾಗಿದೆ. 

ರಾಜ್ಯಗಳ ಹಿತಾಸಕ್ತಿಯನ್ನು ಕಾಪಾಡುವ ಮತ್ತು ಪ್ರಾದೇಶಿಕ ಸಮಸ್ಯೆಗಳ ಬಗ್ಗೆ ವಿದ್ವತ್‍ಪೂರ್ಣವಾಗಿ ಬೆಳಕು ಚೆಲ್ಲುವ ನಿಟ್ಟಿನಲ್ಲಿ ಪ್ರತಿ ರಾಜ್ಯದಿಂದಲೂ ಅಲ್ಲಿನ ಜನಸಂಖ್ಯೆಗನುಗುಣವಾಗಿ ಮತ್ತು ನೇರ ಚುನಾವಣೆಯಲ್ಲಿ ಗೆಲ್ಲಲಾಗದಂತಹವರನ್ನು ಲೋಕಸಬೆಗೆ ಸಮಾನಾಂತರವಾದ ರಾಜ್ಯಸಭೆಗೆ ಆಯ್ಕೆ ಮಾಡಿ ತರುವುದೇ ರಾಜ್ಯಸಭೆಯ ಮೂಲ ಉದ್ದೇಶವಾಗಿತ್ತು. ಹಾಗಾಗಿ ಪ್ರಾರಂಭದಲ್ಲಿ ಆಯಾ ರಾಜ್ಯದವರೆ ಆಯ್ಕೆಯಾಗಿ ಲೋಕಸಭೆಯಲ್ಲಿ ಪ್ರಸ್ತಾಪಿತವಾಗದಂತಹ ಹಲವಾರು ವಿಷಯಗಳನ್ನು ರಾಹ್ಯಸಭೆಯ ಸದಸ್ಯರುಗಳು ಚರ್ಚಿಸಿ ಸರಕಾರದ ಗಮನ ಸೆಳೆಯುವಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದರು. ಲೋಕಸಭೆಯಲ್ಲಿ ಅಂಗೀಕಾರವಾದ ಮಸೂದೆಯೊಂದನ್ನು ತಾವು ಚರ್ಚಿಸಿ ಪುನರ್ ಪರಿಶೀಲನೆಗೆ ಕಳಿಸುವ ಹಿರಿಯಣ್ನನ ಅಧಿಕಾರವೂ ಈ ಸದಸ್ಯರಿಗೆ ಇರುತ್ತದೆ. 

ಆದರೆ ಯಾವಾಗ ಶಕ್ತಿ ರಾಜಕಾರಣವು ದೇಶದ ಹಿತಾಸಕ್ತಿಯನ್ನೂ ಮೀರಿ ಬೆಳೆದು ನಿಂತಿತೊ ಆಗಿನಿಂದ ರಾಜ್ಯಸಭೆಗೆ ಸದಸ್ಯರನ್ನು ಆರಿಸುವ ರಾಜಕೀಯ ಪಕ್ಷಗಳ ಕಾರ್ಯವೈಖರಿ ಬದಲಾಗುತ್ತ ಹೋಗಿ ಅದಕ್ಕೆ ತಕ್ಕ ಹಾಗೆ ಕಾನೂನಿನಲ್ಲಿಯು ಬದಲಾವಣೆಗಳನ್ನು ತರಲಾಯಿತು. ಈ ವಿಚಾರದಲ್ಲಿ ಎಲ್ಲ ರಾಜಕೀಯ ಪಕ್ಷಗಳದೂ ಒಂದೇ ನಿಲುವು. ನಾನು ಮೊದಲಿಗೆ ಹೇಳಿದಂತೆ ಆಯಾ ರಾಜ್ಯದವರೆ ರಾಜ್ಯಸಭೆಯ ಅಭ್ಯರ್ಥಿಯಾಗಿ ಆಯ್ಕೆಯಾಗಬೇಕಿತ್ತು. ಆದರೆ ತದನಂತರದಲ್ಲಿ ಯಾವುದೇ ರಾಜ್ಯದ ವ್ಯಕ್ತಿಯೊಬ್ಬ ಇನ್ನೊಂದು ರಾಜ್ಯದ ಅಭ್ಯರ್ಥಿಯಾಗಿ ಸ್ಪರ್ದಿಸಬಲ್ಲ ಅವಕಾಶವನ್ನು ಕಾನೂನಿನ ಮೂಲಕ ತರಲಾಯಿತು. ಆದರದಕ್ಕೆ ಆತ ತಾನು ಸ್ಪರ್ದಿಸಲಿರುವ ರಾಜ್ಯದಲ್ಲಿ ವಾಸ ಮಾಡುತ್ತಿದ್ದೇನೆಂದು ಒದು ಪೂರಕ ವಿಳಾಸ ನೀಡಬೇಕಾಗಿತ್ತು ಅಷ್ಟೆ. ಈ ಹಿಂದೆ ರಾಂಜೇಠ್ಮಾಲಾನಿಯವರು ಕರ್ನಾಟಕದಿಂದ ಜನತಾ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ದಿಸಿದಾಗ ಮದ್ಯದ ವ್ಯಾಪಾರಿಯೊಬ್ಬರ ಅತಿಥಿ ಗೃಹದ ವಿಳಾಸವನ್ನು ನೀಡಿದ್ದನ್ನು ನಾವು ಸ್ಮರಿಸಬಹುದಾಗಿತ್ತು. ತದನಂತರ ಮಾಜಿ ಪ್ರದಾನಿ ಮನಮೋಹನ್ ಸಿಂಗ್ ಅಸ್ಸಾಮಿನಿಂದ ಸ್ಪರ್ದಿಸಿದಾಗ ನೀಡಿದ ಯಾವುದೋ ಅಪರಿಚಿತ ವಿಳಾಸ ಸಾಕಷ್ಟು ವಿವಾದ ಮತ್ತು ಚರ್ಚೆಗೆ ಗ್ರಾಸವಾಗಿತ್ತು. ಇಂತಹ ವಿಳಾಸ ನೀಡುವ ಪದ್ದತಿಯಿಂದ ಮುಜುಗರ ಎದುರಿಬೇಕಾಗುತ್ತದೆ ಎಂಬುದನ್ನು ಅರ್ಥ ಮಾಡಿಕೊಂಡ ರಾಜಕೀಯ ಪಕ್ಷಗಳು ವಿಳಾಸ ನೀಡುವ ಔಪಚಾರಿಕತೆಯ ಅಗತ್ಯವೂ ಇಲ್ಲವೆಂಬ ಕಾನೂನು ಜಾರಿಗೆ ತಂದು ಯಾರು ಯಾವ ರಾಜ್ಯದಲ್ಲಿ ಬೇಕಾದರು ಸ್ಪÀರ್ದಿಸಲು ಬಹಳ ಸುಲಭವಾದ ಮಾರ್ಗವನ್ನು ಕಲ್ಪಿಸಿಕೊಟ್ಟವು. ಹಾಗಾಗಿ ಆಯಾ ರಾಜ್ಯದವರೇ ಸ್ಪರ್ದಿಸಬೇಕೆಂಬ ಯಾವ ಕಾನೂನು ಇವತ್ತು ಇಲ್ಲವಾಗಿದ್ದು, ಅದೀಗ ಕೇವಲ ರಾಜಕೀಯ ಪಕ್ಷಗಳ ನೈತಿಕತೆಯ ಪ್ರಶ್ನೆಯಾಗಿದೆ. ಆದರೆ ನಮ್ಮ ರಾಜಕೀಯ ಪಕ್ಷಗಳಿಂದ ನೈತಿಕತೆಯನ್ನು ನಿರೀಕ್ಷಿಸುವುದು ಮತದಾರರ ಮೂರ್ಖತನವೆಂಬುದನ್ನು ಇದೀಗ ನಡೆಯಲಿರುವ ರಾಜ್ಯಸಭಾ ಚುನಾವಣೆ ಸಾಬೀತು ಮಾಡಿದೆ.

ಇವತ್ತು ನಮ್ಮ ಎರಡೂ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೇಸ್ ಮತ್ತು ಬಾಜಪ ನಿಲ್ಲಿಸಿರುವ ಅಭ್ಯರ್ಥಿಗಳನ್ನೂ ಮತ್ತು ಅವರುಗಳ ಮೂಲರಾಜ್ಯಗಳು ಹಾಗು ಸ್ಪರ್ದಿಸಿರುವ ರಾಜ್ಯಗಳತ್ತ ಒಂದಿಷ್ಟು ಕಣ್ಣು ಹಾಯಿಸಿದರೆ ಸಾಕು ನಮ್ಮ ರಾಜ್ಯಸಭಾ ಚುನಾವಣೆಗಳ ಹಣೇ ಬರಹ ಗೊತ್ತಾಗುತ್ತದೆ ಮೊದಲಿಗೆ ಅಧಿಕಾರರೂಢ ಬಾಜಪದ ಪಟ್ಟಿ ನೋಡಿ: ಆಂದ್ರಪ್ರದೇಶದ ವೆಂಕಯ್ಯನಾಯ್ಡುರವರು ರಾಜಾಸ್ಥಾನದಿಂದಲೂ, ನಿರ್ಮಲಾ ಸೀತಾರಾಮ್ ತಮಿಳುನಾಡಿನವರಾಗಿದ್ದು ಕರ್ನಾಟಕದಿಂದ ಸ್ಪರ್ದಿಸಿದ್ದಾರೆ. ಇನ್ನು ಕಾಂಗ್ರೇಸ್ ಸಹ ಇದರಿಂದ ಹೊರತಾದ್ದೇನಲ್ಲ: ಕಳೆದ ಬಾರಿ ಆಂದ್ರಪ್ರದೇಶದಿಂದ ಸ್ಪರ್ದಿಸಿದ್ದ ಜಯರಾಂರಮೇಶ್ ಈಗ ಕರ್ನಾಟಕದಿಂದ. ತಮಿಳುನಾಡು ಮೂಲದ ಪಿ.ಚಿದಂಬರಂ ಮಹಾರಾಷ್ಟದಿಂದಲೂ,ಪಂಜಾಬಿನ ಕಪಿಲ್ ಸಿಬಾಲ್ ಉತ್ತರಪ್ರದೇಶದಿಂದಲೂ ಸ್ಪರ್ದಿಸುತ್ತಿದ್ದಾರೆ. ಇನ್ನುಳಿದಂತೆ ಬಾಪದ ಪಿಯೂಶ್ ಗೋಯಲ್,ಮುಖ್ತಾರ್ ಅಬ್ಬಾಸ್ ನಕ್ವಿ ಮುಂತಾದವರು ಸಹ ಒಂದೊಂದು ಬಾರಿ ಒಂದೊಂದು ರಾಜ್ಯಗಳಿಗೆ ವಲಸೆ ಹೋಗಿ ಗೆದ್ದವರೆ ಆಗಿದ್ದಾರೆ.

ಹಾಗಿದ್ದರೆ ಹೀಗೆ ಬೇರೆ ರಾಜ್ಯಗಳಿಂದ ಗೆದ್ದು ಹೋದವರು ತಾವು ಪ್ರತಿನಿಧಿಸುವ ರಾಜ್ಯದ ಹಿತಾಸಕ್ತಿಯನ್ನು ಎಷ್ಟರ ಮಟ್ಟಿಗೆ ರಾಜ್ಯಸಭೆಯಲ್ಲಿ ಎತ್ತಿ ಹಿಡಿಯುತ್ತಾರೆಂಬುದೇ ನಮ್ಮ ಪ್ರಶ್ನೆಯಾಗಿದೆ. ತಾವು ಪ್ರನಿಧಿಸುವ ರಾಜ್ಯಗಳ ಬಾಷೆಯನ್ನೇ ಕಲಿಯದ ಅವರುಗಳು ಅದೆಷ್ಟರ ಮಟ್ಟಿಗೆ ಆ ರಾಜ್ಯದ ಸಂಸ್ಕøತಿಯನ್ನು ಪ್ರತಿನಿಧಿಸಬಲ್ಲರೊ ಅರ್ಥವಾಗದ ವಿಷಯವಾಗಿದೆ. ಇದಕ್ಕೊಂದಿಷ್ಟು ಉದಾಹರಣೆಗಳನ್ನು ನೋಡಬಹುದಾಗಿದೆ. ಬಾಜಪದಿಂದ ಕರ್ನಾಟಕವನ್ನು ನಾÀಲ್ಕುಬಾರಿ ಪ್ರತಿನಿದಿಸಿದ್ದ ಶ್ರೀ ವೆಂಕಯ್ಯನಾಯ್ಡುರವರು ಹದಿನೆಂಟು ವರ್ಷಗಳ ನಂತರವೂಕನ್ನಡ ಕಲಿತು ಮಾತನಾಡಲೇ ಇಲ್ಲ ಅದು ಹೋಗಲಿ ತಮಿಳು ನಾಡಿನ ಜೊತೆಕಾವೇರಿವಿವಾದ ತಾರಕಕ್ಕೇರಿದಾಗಲಾಗಲಿ, ಗೋವಾದೊಂದಿಗಿನ ಕಳಸಾ ಬಂಡೂರಿ ವಿವಾದದ ಬಗ್ಗೆ ಯಾಗಲಿ, ಆಂದ್ರದ ಜೊತೆಗಿನ ಕೃಷ್ಣಾ ನೀರು ಹಂಚಿಕೆಯ ವಿಷಯದಲ್ಲಾಗಲಿ ಅವರು ತಾವು ಪ್ರತಿನಿದಿಸುವ ರಾಜ್ಯಸಭೆಯಲ್ಲಿ ಒಂದೇ ಒಂದು ಮಾತನ್ನಾಡಲಿಲ್ಲ. ಇದರ ಬಗ್ಗೆ ಬಾಜಪವನ್ನು ಕೇಳಿದರೆ ಅವರು ರಾಷ್ಟ್ರೀಯ ನಾಯಕರು, ರಾಷ್ಟ್ರದ ಒಟ್ಟಾರೆ ಹಿತಾಸಕ್ತಿಯೇಅವರ ಮುಖ್ಯವೆಂದುಸಬೂಬು ಹೇಳುತ್ತಾರೆ. ಇನ್ನು ಬಹಳ ಹಿಂದೆ ಕರ್ನಾಟಕದಿಂದ ಆಯ್ಕೆಯಾಗಿದ್ದ ರಾಂಜೇಠ್ಮಾಲಿನಿಯವರುಸಹ ಒಂದೇ ಒಂದು ದಿನವೂ ಎದ್ದು ನಿಂತು ಕರ್ನಾಟಕದ ಪರ ಮಾತನಾಡಲಿಲ್ಲ.ಕಳೆದಬಾರಿ ಜನತಾದಳದ ಬೆಂಬಲದಿಂದ ಆಯ್ಕೆಯಾಗಿದ್ದ ತಮಿಳುನಾಡಿನ ರಾಮಸ್ವಾಮಿಯವರು ಕಾವೇರಿಯ ವಿವಾದ ಭುಗಿಲೆದ್ದಾಗ ಮಾಯವಾದವರು ಮತ್ತೆಂದೂ ಕಾಣಿಸಿಕೊಳ್ಳಲೇ ಇಲ್ಲ. ಕರ್ನಾಟಕವನ್ನು ಹಿಂದೆ ಬಾಜಪದ ಪರವಾಗಿ ಪ್ರತಿನಿದಿಸಿದ್ದ ಹೇಮಾ ಮಾಲಿನಿಯ ಮುಖವನ್ನು ಟಿ.ವಿ.ಜಾಹಿರಾತುಗಳಲ್ಲಿ ನೋಡಿದ್ದನ್ನು ಬಿಟ್ಟರೆ ಆಕೆಯೆಂದೂ ಕಾರ್ನಾಟಕದ ಒಳನಾಡಿಗೆ ಬರಲೇ ಇಲ್ಲ. ನೇರ ಚುನಾವಣೆಯಲ್ಲಿ ಗೆಲ್ಲಲಾಗದಂತಹ ಮುಖರಹಿತ ವ್ಯಕ್ತಿಗಳಿಗೆ ಮಣೆ ಹಾಕುತ್ತ ಪ್ರಜಾಸತ್ತೆಯ ನಿಜವಾದ ಆಶಯವನ್ನು ಗಾಳಿಗೆ ತೂರುತ್ತಿವೆ.ಜೊತೆಗೆ ಲೋಕಸಭಾ ಚುನಾವಣೆಯಲ್ಲಿ ಸೋತು ಮನೆ ಸೇರಿದವರಿಗೆ ರಾಜಕೀಯವಾಗಿ ಮರುಜನ್ಮ ನೀಡುವುದಕ್ಕೂ ಈ ಚುನಾವಣೆಗಳು ನೆರವಾಗುತ್ತಿವೆ. ಜೊತೆಗೆ ಬಂಡವಾಳಶಾಹಿ ಉದ್ಯಮಿಗಳಿಗೆ ತಮ್ಮ ವ್ಯವಹಾರಗಳನ್ನು ಸುಸೂತ್ರವಾಗಿ ನಡೆಸಿಕೊಂಡುಹೋಗಲು ಈ ಸದಸ್ಯತ್ವದ ದುರುಪಯೋಗವೂ É ನಡೆಯುತ್ತಿದೆ ಈ ಹಿಂದೆ ಗೆದ್ದ ವಿಜಯ ಮಲ್ಯ ಮತ್ತು ರಾಮಸ್ವಾಮಿಯವರ ಉದ್ದೇಶವೇ ತಮ್ಮ ವ್ಯಾಪಾರ ಉದ್ದಿಮೆಗಳಿಗೆ ಈ ಸದಸ್ಯತ್ವನೆರವಾಗಲಿಯೆಂಬುದಾಗಿತ್ತು.

ಆದ್ದರಿಂದ ಯಾವುದೋ ರಾಜ್ಯದವರನ್ನು ಇನ್ಯಾವುದೊ ರಾಜ್ಯದಿಮದ ಆರಿಸಿ ಕಳಿಸಿದರೆ ಆವ್ಯಕ್ತಿಯ ಆ ಪಕ್ಷದ ಹಿತಾಸಕ್ತಿ ಕಾಪಾಡಲ್ಪಡುತ್ತದೆಯೇ ಹೊರತು ಆ ರಾಜ್ಯದ ಹಿತಾಸಕ್ತಿಯಲ್ಲ. ತಾವುಆಯ್ಕೆಯಾದ ರಾಜ್ಯದ ನೆಲಜಲಗಳ ಬಗ್ಗೆ ದನಿಯೆತ್ತಬೇಕಾದ ಸದಸ್ಯರುಗಳು ತಮ್ಮ ಮೂಲರಾಜ್ಯಕ್ಕೆ ನಿಷ್ಠರಾಗಿರುತ್ತಾರೆ ಮತ್ತು ಪಕ್ಷದ ಹಿತದೃಷ್ಠಿಯಿಂದ ಮಾತ್ರ ಕೆಲಸ ನಿರ್ವಹಿಸಬಲ್ಲರು. ಕನಿಷ್ಠ ಪ್ರಾದೇಶಿಕ ಪಕ್ಷಗಳಾದರು ಇಂತಹ ಬೆಳವಣಿಗೆಗಳನ್ನು ವಿರೋದಿಸುತ್ತವೆಯೆಂದರೆ ಅವೂ ಸಹ ವಿವಿದ ಆಮೀಷಗಳಿಗೊಳಗಾಗಿ ಅನ್ಯರಾಜ್ಯದ ಉದ್ದಿಮೆದರರನ್ನು ಆರಿಸುವ ಕೆಟ್ಟಚಾಳಿಗೆ ಬಿದ್ದಿವೆ.

ವಿಪರ್ಯಾಸ ನೋಡಿ; ಕರ್ನಾಟಕದ ಜನತೆ ಅನ್ಯರಾಜ್ಯದ ಅಭ್ಯರ್ಥಿಗಳ ಬಗ್ಗೆ ಇಷ್ಟೊಂದು ವಿರೋಧ ವ್ಯಕ್ತ ಪಡಿಸುತ್ತಿರುವಾಗಲೇ ಪ್ರಾದೇಶಿಕ ಪಕ್ಷವಾದ (ಈ ಸತ್ಯ ಹೇಳಿದರೆ ದೇವೇಗೌಡರಿಗೆ ಕೋಪ ಬರಬಹುದು!)ಜನತಾದಳದ ಹೆಚ್.ಡಿ.ಕುಮಾರಸ್ವಾಮಿಯವರು ಬಾಜಪದ ನಾಯಕರಾದ ಶ್ರೀ ಆರ್ ಅಶೋಕ್ ಅವರೊಂದಿಗೆ ಚರ್ಚಿಸಿ ನಿರ್ಮಲಾ ಸೀತಾರಾಮ್ ಗೆಲ್ಲಬೇಕೆಂದು ಆಶಿಸಿದ್ದಾರೆ. ಕೇವಲ 40ಸ್ಥಾನಗಳನ್ನು ಇಟ್ಟುಕೊಂಡೇ ಒಬ್ಬ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಎದೆಗಾರಿಕೆ ತೋರಿಸಿದ ಕುಮಾರಸ್ವಾಮಿಯವರೀಗ ಬಾಜಪಕ್ಕೆ ಕೊರತೆಯಾಗಬಲ್ಲ ಮತಗಳನ್ನು ತುಂಬಿ ಕೊಡುವ ಹಾದಿಯಲ್ಲಿದ್ದಾರೆ. ಕೊನೆಗೂ ಅವರಿಗೆ ತಮ್ಮ ಪಕ್ಷ ಅಧಿಕಾರದ ಹತ್ತಿರಕ್ಕೆ ಹೋಗುವುದು ಬೇಕಾಗಿದೆÀಯೇ ಹೊರತು ರಾಜ್ಯದಹಿತಾಸಕ್ತಿಯಲ್ಲ ಎಂಬುದನ್ನುಸಾಬೀತು ಮಾಡಿದ್ದಾರೆ

ಆದ್ದರಿಂಲೇ ಇವತ್ತು ರಾಜ್ಯಸಬೆಯ ಚುನಾವಣೆಗಳನ್ನು ಗಂಬೀರವಾಗಿ ತೆಗೆದುಕೊಂಡು, ಚಿರ್ಚಿಸಬೇಕಾದ ಪ್ರಮೇಯವಿದೆ. ಒಕ್ಕೂಟ ವ್ಯವಸ್ಥೆಗೆ ಯಾವುದೇ ಧಕ್ಕೆ ಬರದಂತೆ ಮತ್ತು ರಾಜ್ಯಗಳ ಹಿತಾಸಕ್ತಿಗಳಿಗೂ ತೊಂದರೆಯಾಗದಂತೆ ರಾಜ್ಯಸಭಾಸದಸ್ಯರನ್ನು ಆಯ್ಕೆ ಮಾಡುವ ಹೊಸ ವ್ಯವಸ್ಥೆಯೊಂದನ್ನು ರೂಪಿಸಬೇಕಾಗಿದೆ. ಲೋಕಸಭೆಯಷ್ಟೆ ಪ್ರಬಾವಶಾಲಿಯಾಗಿರುವ ಮತ್ತು ಹಿರಿಯರ ಪ್ರತಿಭಾವಂತರ ಮನೆಯೆಂದು ಖ್ಯಾತಿ ಪಡೆದಿರುವ ರಾಜ್ಯಸಭೆಯ ಘನತೆಯನ್ನು ಕಾಪಾಡಲು ಹಾಗು ಪ್ರಜಾಸತ್ತೆಯ ಆಶಯವನ್ನು ಸಾಕಾರಗೊಳಿಸಲು ಹಾಲಿಇರುವ ಕಾನೂನುನ್ನು ತಿದ್ದುಪಡಿ ಮಾಡಿ, ರಾಜ್ಯಸಭಾ ಚುನಾವಣೆಯನ್ನು ಇನ್ನಷ್ಟು ಪಾರದರ್ಶಕವಾಗಿಯೂ, ರಾಜ್ಯಗಳ ಹಿತಕಾಪಾಡುವ ನಿಟ್ಟಿನಲ್ಲಿ ನಡೆಯುವಂತೆಯೂ ಮಾಡುವುದು ನಮ್ಮ ರಾಜಕೀಯ ಪಕ್ಷಗಳ ಆದ್ಯತೆಯಾಗಬೇಕಿದೆ. ಇಲ್ಲದೇ ಹೋದಲ್ಲಿ ಪ್ರಜಾಪ್ರಭುತ್ವದ ಪ್ರಮುಖ ಸಂಸ್ತೆಗಳ ಮೌಲ್ಯ ಕಡಿಮೆಯಾಗುತ್ತ ಹೋಗುವುದು ನಿಶ್ಚಿತ!

ಮನದಾಂಗಿಯೆ

04/06/2016
ಬಳಲಿಕೆಯಿಂದ ದಣಿದ ದೇಹವನ್ನ ಸುಳ್ಳೇ 
ಉಲ್ಲಾಸ ಗೊಂಡಿರುವಂತೆ ತೋರುತ್ತ
ಕಂಗಳಲ್ಲಿನ ನೋವಾಚೆ ಸರಿಸಿ
ಮಂದಹಾಸ ಬೀರುತ್ತ ಪೊರೆವ ಮನದಾಂಗಿ .

ಅಲ್ಲಿ ಇಲ್ಲಿ ನೋಡಲು ಅರಳಿ ನಿಲ್ಲುವ 
ಆಸೆಗಳನ್ನ ತನ್ನೊಳಗೇ ಅವಿತಿಟ್ಟು
ಎಲ್ಲಿ ಹೊರೆಯಾದೀತೊ ಎಂದು ಇರುವುದರಲೇ ಒಪ್ಪದಿಂದ ಹರುಶಪಡುವ ಮನದಾಂಗಿ .

ಎಲ್ಲ ಇಲ್ಲಗಳ ನಡುವೆ
ಸೊಲ್ಲೊಂದ ಎತ್ತದೆ ನಲಿವಿಂದ
ಸಂಸಾರದ ನೊಗ ಹೊತ್ತು ನಡೆಯುತ್ತಾ 
ಪ್ರೀತಿ ವಾತ್ಸಲ್ಯವ ಉಣಬಡಿಸುವ ಮನದಾಂಗಿ .

ಜರಿಯಲು ಸಾವಿರ ವೈಕಲ್ಯಗಳಿರಲು
ಅವನೆಲ್ಲ ಆಚೆ ಇರಿಸಿ
ಪರಿಪೂರ್ಣತೆಯ ಹೊಮ್ಮಿಸಲು ಸದಾ 
ಬೆನ್ನಿಗಿದ್ದು ಹೊಸಹುರುಪ ಬಿತ್ತುವಾ ಮನದಾಂಗಿ .
-ಪ್ರವೀಣಕುಮಾರ್ .ಗೋಣಿ
ಹುಬ್ಬಳ್ಳಿ

ಜೂನ್ 3, 2016

ಮೇಕಿಂಗ್ ಹಿಸ್ಟರಿ: ಜಾತಿ ದೌರ್ಜನ್ಯದ ಹೆಚ್ಚಳ

ಸಾಕೇತ್ ರಾಜನ್ 
ಕನ್ನಡಕ್ಕೆ: ಡಾ. ಅಶೋಕ್. ಕೆ. ಆರ್
03/06/2016
ಹೆಚ್ಚಿನಂಶ ಶೂದ್ರರು ಗುತ್ತಿಗೆಗೆ ಪಡೆದಿದ್ದ ಇನಾಮುಗಳನ್ನು ಮಠಗಳು ವಾಪಸ್ಸು ಗಳಿಸಿಕೊಂಡಿದ್ದು, ಮತ್ತು ಸೈನಿಕರು ಹಾಗು ಕರಕುಶಲ ಕಾರ್ಮಿಕರು ಹಳ್ಳಿಗಳಿಗೆ ಗುಳೇ ಹೋಗಿದ್ದು ಜಾತಿ ದೌರ್ಜನ್ಯದ ಮತ್ತೊಂದು ಮಜಲನ್ನು ಉದ್ಘಾಟಿಸಿತು. ಊಳಿಗಮಾನ್ಯ ಆಳುವ ವರ್ಗ ಜಾತಿ ವ್ಯವಸ್ಥೆಯ ರಕ್ಷಣೆಯಲ್ಲಿ ಕಾರ್ಮಿಕರಿಂದ ಗರಿಷ್ಠ ಮಟ್ಟದ ಕೆಲಸ ತೆಗೆದುಕೊಂಡರು.

ಸಮಾಜ, ಸಂಸ್ಕೃತಿ ಮತ್ತು ಧಾರ್ಮಿಕ ವೃತ್ತಗಳಲ್ಲಿದ್ದ ಪ್ರಗತಿಪರ, ಜಾತಿ ವಿರೋಧಿ ಚಿಂತನೆಗಳೆಲ್ಲವೂ ಕುಸಿದಿದ್ದನ್ನು ಕೈಗೊಂಬೆ ಆಡಳಿತ ‘ವಿಶೇಷ’ ನೋವಿನಿಂದ ಗಮನಿಸಿತು.

ಮೇಲುಕೋಟೆಯಲ್ಲಿ ಪುರಾಣಗಳ ನೆಪದಲ್ಲಿ ಅಲ್ಲಿನ ಹೊಲೆಯರಿಗೆ ಶ್ರೀನಿವಾಸ ಬ್ರಾಹ್ಮಣರಿಂದ ಸಿಕ್ಕ ವಿಶೇಷ ಹಕ್ಕುಗಳ ಕುರಿತು ಥರ್ಸ್ಟನ್ (Thurston) ತಿಳಿಸುತ್ತಾರೆ. ಹೊಲೆಯರ ಹೋರಾಟದಿಂದ, ಅವರಿಗೆ ವಿಶೇಷ ಹಕ್ಕುಗಳು ದಕ್ಕಿತ್ತು; ದೇವಸ್ಥಾನಕ್ಕೆ ಪ್ರವೇಶ ಪಡೆವ ಹಕ್ಕನ್ನು ಪಡೆದುಕೊಂಡದ್ದು ಅದರಲ್ಲೊಂದು, ರಾಮಾನುಜಾಚಾರ್ಯ ಅವರನ್ನು ತಿರುಕುಲಂ ಅಥವಾ ‘ಪೂಜನೀಯ ಜಾತಿ’ ಎಂದು ಹೊಗಳಿದ್ದರು. ಮೈಸೂರಿನಲ್ಲಿ ಕೈಗೊಂಬೆ ಆಡಳಿತ ಶುರುವಾದ ನಂತರ ಇದು ಶೀಘ್ರವಾಗಿ ಬದಲಾವಣೆಯಾಯಿತು ಎಂದು ಥರ್ಸ್ಟನ್ ತಿಳಿಸುತ್ತಾರೆ. “1799ರಲ್ಲಿ, ದಿವಾನ್ ಪೂರ್ಣಯ್ಯ ಈ ಪವಿತ್ರ ಸ್ಥಳಕ್ಕೆ ಭೇಟಿ ಕೊಟ್ಟಾಗ ದಲಿತರಿಗೆ ದೇವಸ್ಥಾನದೊಳಗಡೆ ಹೋಗಲಿದ್ದ ಹಕ್ಕನ್ನು ಮೊಟಕುಗಳಿಸಿ ಅವರನ್ನು ಧ್ವಜಾಸ್ಥಂಭದಲ್ಲೇ ನಿಲ್ಲಿಸಲಾಯಿತು, ಧ್ವಜಾಸ್ಥಂಭದಿಂದಷ್ಟೇ ಅವರು ದೇವರ ದರ್ಶನ ಮಾಡಬೇಕಿತ್ತು.” (191)

ಪೂರ್ಣಯ್ಯನವರಿದ್ದ ಇಂತದ್ದೇ ಮತ್ತೊಂದು ಉದಾಹರಣೆಯನ್ನು ಸೆಬಾಸ್ಟಿಯನ್ ಜೋಸೆಫ್ ತಿಳಿಸುತ್ತಾರೆ. ಇದ್ಯಾಕೆ ಪ್ರಮುಖವೆಂದರೆ, ಊಳಿಗಮಾನ್ಯತೆಯ ವಿರೋಧಿ ಸಂಸ್ಕೃತಿಯ ನೆಲೆಯಾಗಿದ್ದ ಕರ್ನಾಟಕ ಭಕ್ತಿ ಪಂಥದ ಐತಿಹಾಸಿಕ ಮುನ್ನಡೆಯನ್ನು ತಡೆದ ನಿರ್ಧಾರವಿದು. “1807 – 08ರಲ್ಲಿ ಕಳುಹಿಸಿದ ಸುತ್ತೋಲೆಯಲ್ಲಿ ದಿವಾನ್ ಪೂರ್ಣಯ್ಯ ದೇವಾಂಗರು ತಮ್ಮ ಜಾತಿಯ ನಿಯಮಗಳನ್ನು ಮೀರಿ ಬ್ರಾಹ್ಮಣರ ರೀತಿರಿವಾಜುಗಳನ್ನು ಪಾಲಿಸುವುದನ್ನು ಕಠಿಣ ದನಿಯಲ್ಲಿ ಖಂಡಿಸುತ್ತಾರೆ. ದೇವಾಂಗರ ಸ್ವಘೋಷಿತ ಗುರು ಒಬ್ಬರು ದೇವಾಂಗರಿಗೆ ಜನಿವಾರವನ್ನು ತೊಡಿಸಿ ಧಾರ್ಮಿಕ ಶಿಕ್ಷಣವನ್ನು ಕೊಡುತ್ತಾರೆನ್ನುವ ಬಗ್ಗೆ ಪೂರ್ಣಯ್ಯನವರಿಗೆ ವರದಿಯಾಗಿತ್ತು. ಪೂರ್ಣಯ್ಯ ಬರೆಯುತ್ತಾರೆ: ‘ಒಬ್ಬ ಅನಾಮಿಕ ಶೂದ್ರ, ದೇವಾಂಗರ ಗುರು ಎನ್ನಿಸಿಕೊಳ್ಳುವಾತ ದೇವಾಂಗರು ಜನಿವಾರ ತೊಡಬೇಕೆಂದು, ಧಾರ್ಮಿಕ ಶಿಕ್ಷಣವನ್ನು ಪಡೆಯಬೇಕೆಂದು ಹೇಳುತ್ತಾ ಬೇಡದ ತೊಂದರೆಗಳನ್ನು ಸೃಷ್ಟಿಸುತ್ತಿದ್ದಾನೆ. ಶೂದ್ರರಿಗೆ ಜನಿವಾರವೆಲ್ಲಿದೆ? ಧಾರ್ಮಿಕ ಶಿಕ್ಷಣವೆಂದು ಹೇಳುತ್ತಿದ್ದಾರಲ್ಲ, ಅದರರ್ಥವೇನು? ಇದು ಶೂದ್ರರು ಮಾಡಬೇಕಾದ ಕೆಲಸವಲ್ಲ. ಅವನನ್ನು ಶಿಕ್ಷಿಸಬೇಕು. ಈ ದೇವಾಂಗರು ಶ್ರಂಗೇರಿ ಮಠದ ಭಕ್ತರಾಗಬೇಕಾದವರು. ಹಾಗಾಗಿ, ಮಠದ ಜನರು ದೇವಾಂಗರಿಗೆ ಇಂತಹ ಕೆಲಸಗಳ ಬಗ್ಗೆ ಎಚ್ಚರಿಕೆ ಕೊಟ್ಟು ಸೂಕ್ತ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು. ಹೊಸದಾಗಿ ಬಂದಿರುವ ಈ ಶೂದ್ರ ತನ್ನ ನಿರ್ಧಾರಕ್ಕೆ ಗಟ್ಟಿಯಾಗಿ ಅಂಟಿಕೊಂಡು ಸಮಸ್ಯೆಯುಂಟು ಮಾಡಿದರೆ, ಆಗ ಅವನನ್ನು ದೇಶದಿಂದ ಆಚೆಗಟ್ಟಬೇಕು.’ ಜಾತಿ ಮತ್ತು ವರ್ಣದ ಮೂಲಭೂತ ಪ್ರಶ್ನೆಗಳ ಬಗ್ಗೆ ಶೃಂಗೇರಿ ಮಠದ ಅಭಿಪ್ರಾಯವನ್ನು ದಿವಾನ್ ಪೂರ್ಣಯ್ಯರ ಆಡಳಿತದ ಮೈಸೂರು, ರಾಜ್ಯ ನೀತಿಯಾಗಿ ಸಂಪೂರ್ಣವಾಗಿ ಒಪ್ಪಿಕೊಂಡಿತ್ತು ಎಂದು ಇದರಿಂದ ಸ್ಪಷ್ಟವಾಗುತ್ತದೆ. ಹಿಂದುಳಿದ ಜಾತಿಯವರು ಸಾಮಾಜಿಕ ಮೆಟ್ಟಿಲ ಮೇಲೇರಲು ನಡೆಸುವ ಯಾವುದೇ ಪ್ರಯತ್ನವನ್ನು ಅಸ್ತಿತ್ವದಲ್ಲಿದ್ದ ಸಾಮಾಜಿಕ ವ್ಯವಸ್ಥೆಗೆ ಅಪಾಯಕಾರಿಯಂತೆ ಪರಿಗಣಿಸಿ ರಾಜ್ಯದ ತಕ್ಷಣದ ಮಧ್ಯಪ್ರವೇಶಕ್ಕೆ ವಿನಂತಿಸಲಾಗುತ್ತಿತ್ತು ಮತ್ತು ಯಥಾಸ್ಥಿತಿಯನ್ನು ಕಾಯ್ದಿಡಲು ಬಯಸುವ ಶಕ್ತಿಗಳ ಬೆಂಬಲವನ್ನು ರಾಜ್ಯ ಪಡೆದುಕೊಳ್ಳುತ್ತಿತ್ತು.” (192)

ಮೊದಲ ಸಂಪುಟದಲ್ಲಿ ನೋಡಿದಂತೆ ಬ್ರಾಹ್ಮಣರ ಮೇಲ್ಮೆಗೆ ಸೆಡ್ಡುಹೊಡೆದವರಲ್ಲಿ ದೇವಾಂಗ ಜಾತಿ ಪ್ರಮುಖವಾದುದು. ಅವರ ಪಾತ್ರವಿಲ್ಲದೇ ಹೋಗಿದ್ದರೆ ಭಕ್ತಿ ಚಳುವಳಿ ಸಾಧ್ಯವಾಗುತ್ತಿರಲಿಲ್ಲ ಮತ್ತು ನಗರಗಳಲ್ಲಿ ಬ್ರಾಹ್ಮಣಿಕೆಯನ್ನು ಹೇರುವುದಕ್ಕೆ ಬಂದ ಪ್ರತಿರೋಧಗಳು ಸಾಧ್ಯವಾಗುತ್ತಿರಲಿಲ್ಲ. ಪೂರ್ಣಯ್ಯ ಒಂದು ಬಹುಮುಖ್ಯ ಜಾತಿಯನ್ನು ಗುರಿಯಾಗಿಸಿಕೊಂಡಿದ್ದರು ಎನ್ನುವುದು ಸ್ಪಷ್ಟವಾಗುತ್ತದೆ. ಜಾತಿ ವ್ಯವಸ್ಥೆಯ ಭಾರವನ್ನು ಹೆಗಲ ಮೇಲಿಂದಿಳಿಸಲು ಮುಂದಾಗುತ್ತಿದ್ದ ದೇವಾಂಗ ಜಾತಿಯನ್ನು ಗುರಿಯಾಗಿಸುವ ಮೂಲಕ ಎಲ್ಲಾ ರೀತಿಯ ಶೂದ್ರರನ್ನು ಹತ್ತಿಕ್ಕುವ ಉದ್ದೇಶ.

ಜಾತಿ ದೌರ್ಜನ್ಯ ಮತ್ತು ಬ್ರಾಹ್ಮಣ್ಯದ ಒಟ್ಟುಗೂಡುವಿಕೆಯ ಮತ್ತೊಂದು ರೂಪವನ್ನು ಆಡಳಿತಶಾಹಿಯಲ್ಲಾದ ಬದಲಾವಣೆಗಳಲ್ಲಿ ಗಮನಿಸಬಹುದು.

1800ರಲ್ಲಿ ಟಿಪ್ಪುವಿನ ಪತನದ ನಂತರ ಬುಚನನ್ ಬ್ರಾಹ್ಮಣರು “ಹೆಚ್ಚುಕಡಿಮೆ ಎಲ್ಲಾ ಕಛೇರಿಗಳ ಉನ್ನತ ಹುದ್ದೆಗಳಲ್ಲಿದ್ದ” ಬಗ್ಗೆ ತಿಳಿಸುತ್ತಾನೆ. (193)

ಆಡಳಿತಶಾಹಿಯ ಪುನರ್ ರಚನೆ ಎಲ್ಲೆಡೆಯೂ ನಡೆಯಿತು. ಮುಸ್ಲಿಮರು ಮತ್ತು ಶೂದ್ರರನ್ನು ಎಲ್ಲೆಡೆಯಿಂದಲೂ ಓಡಿಸಿಬಿಡಲಾಯಿತು ಮತ್ತಿವೆಲ್ಲ ಕಡೆಗಳಲ್ಲಿ ಬ್ರಾಹ್ಮಣ ಅಧಿಕಾರಿಗಳು ಬಂದರು. ಶಾಮ ರಾವರ ಈ ಎರಡು ಉಲ್ಲೇಖಗಳು ಎಷ್ಟು ವೇಗವಾಗಿ ಬ್ರಾಹ್ಮಣರು ಆಡಳಿತಶಾಹಿಯಲ್ಲಿ ಏಕಸ್ವಾಮ್ಯತೆ ಮೆರೆದರು ಎನ್ನುವುದನ್ನು ಸೂಚಿಸುತ್ತದೆ. ಇದರಿಂದ ಬ್ರಾಹ್ಮಣ ಜಾತಿ ಮುಂದಿನ ಶತಮಾನದುದ್ದಕ್ಕೂ ಕರ್ನಾಟಕದ ಮಧ್ಯವರ್ತಿ ಅಧಿಕಾರಶಾಹಿಯ ಮೂಲವಾಗಿದ್ದನ್ನು ಅರಿಯಬಹುದು. ಮೈಸೂರಿನ ಮೂರನೇ ದಿವಾನರಾಗಿದ್ದ ರಾಮ ರಾವ್ ಬಗ್ಗೆ ಶಾಮ ರಾವ್ ತಿಳಿಸುತ್ತಾರೆ: 

“ರಾಮ ರಾವ್ ಮೂಲತಃ ಮರಾಠ ದೇಶದಲ್ಲಿದ್ದ ಬಾದಾಮಿಯೆಂಬ ಸ್ಥಳದಿಂದ ಬಂದಿದ್ದರು. ಜೊತೆಗೆ ಅವರ ಸಂಬಂಧಿಕರಾದ ಅಣ್ಣಿಗೇರಿಯ ಭೀಮಾ ರಾವ್ ಮತ್ತು ಹಾನಗಲ್ಲಿನ ಕೃಷ್ಣಾ ರಾವ್ ಬಂದಿದ್ದರು. ರಾಮ ರಾವರನ್ನು ಪೂರ್ಣಯ್ಯ ನಗರದ ಫೌಜುದಾರನನ್ನಾಗಿ 1799ರಲ್ಲಿ ನೇಮಿಸಿದರು. 1805ರವರೆಗೂ ಅಲ್ಲಿಯೇ ಕೆಲಸ ನಿರ್ವಹಿಸಿದರು. ಅವರ ಪ್ರಭಾವದಿಂದಾಗಿ ಫೌಜುದಾರಿಯಲ್ಲಿ ತಮ್ಮ ನಂತರದ ಪ್ರಮುಖ ಸ್ಥಾನಗಳಲ್ಲೆದರಲ್ಲೂ ತಮ್ಮ ಬಂಧುಗಳನ್ನು, ಅಣ್ಣಿಗೇರಿ ಮತ್ತು ಹಾನಗಲ್ಲಿನ ಕುಟುಂಬಸ್ಥರನ್ನೇ ತುಂಬಿಸಿಕೊಂಡರು. ಅವರ ಆಸಕ್ತಿಯ ಶಕ್ತಿಯುತ ಪಕ್ಷವೊಂದು ಈ ರೀತಿಯಾಗಿ ರಾಜ್ಯದ ಈ ಭಾಗದಲ್ಲಿ ರೂಪುಗೊಂಡು 1830ರಲ್ಲಿ ನಡೆದ ಹೋರಾಟದವರೆಗೂ ಮುಂದುವರೆಯಿತು. ಕೆಲವು ತಿಂಗಳುಗಳನ್ನೊರತುಪಡಿಸಿದರೆ 1805ರಿಂದ 1825ರವರೆಗೆ ಫೌಜುದಾರ್ ಕಛೇರಿಯಲ್ಲಿ ರಾಮ ರಾವರ ರಕ್ತ ಸಂಬಂಧಿಕರು ಅಥವಾ ಬೀಗರ ಕಡೆಯವರೇ ಇದ್ದರು. ಎರಡು ಬಾರಿ ಫೌಜುದಾರರಾಗಿದ್ದ ಸರ್ವೋತ್ತಮ ರಾವರ ಮಗ ರಾಮರಾವರ ಸೋದರಸೊಸೆಯನ್ನು ಮದುವೆಯಾಗಿದ್ದನು. ಪೊಂಪಯ್ಯ, ಕೃಷ್ಣರಾವ್ ಮತ್ತು ಬಾಲಕೃಷ್ಣರಾವ್ ರಾಮ ರಾವಿನ ಸೋದರಳಿಯಂದಿರು.” (194)

ಕೆಲವು ಬ್ರಾಹ್ಮಣ ಕುಟುಂಗಳು ಆಡಳಿತಶಾಹಿಯ ಮೇಲೆ ಹೊಂದಿದ್ದ ಏಕಸ್ವಾಮ್ಯತೆ ಎಷ್ಟು ಪ್ರಬಲವಾಗಿತ್ತೆಂಬುದಕ್ಕೆ ಮೋಟಿಕಾನೆಯ ನರಸಿಂಗ ರಾವರ ಪ್ರಕರಣ ಉದಾಹರಣೆ: “ಅವನ ಏಳು ತಮ್ಮಂದಿರು ಕೆಲಸದಲ್ಲಿದ್ದರು ಮತ್ತು ಸ್ವತಃ ಅವನು ಹತ್ತು ತಾಲ್ಲೂಕುಗಳ ರಹಸ್ಯ ಮೇಲ್ವಿಚಾರಕನಾಗಿದ್ದ. ವೀಣೆ ವೆಂಕಟಸುಬ್ಬಯ್ಯರ ಸಂಬಂಧಿಕರು ನಗರ ವಿಭಾಗದ ಏಳು ತಾಲ್ಲೂಕುಗಳ ಅಮಲ್ದಾರರಾಗಿದ್ದರು. 1816ರಿಂದ 1826ರವರೆಗೆ ನಗರದ ಫೌಜುದಾರನಾಗಿದ್ದ ಸರ್ವೋತ್ತಮ ರಾವ್ ಹತ್ತು ವರ್ಷದ ತನ್ನ ಸುದೀರ್ಘ ಆಡಳಿತಾವಧಿಯಲ್ಲಿ ತನ್ನ ಸಂಬಂಧಿಕರನ್ನು ಸರಕಾರಿ ಸೇವೆಗೆ ನಗರ ವಿಭಾಗದಲ್ಲಿ ಸೇರಿಸಿದ.” (195)

ಕರ್ನಾಟಕದ ಜನತೆಯ ಮೇಲೆ ಬ್ರಾಹ್ಮಣ ಶಕ್ತಿಗಳು ಪರಮಾಧಿಕಾರ ಸಾಧಿಸುವುದಕ್ಕೆ ಮೂರನೇ ಕೃಷ್ಟರಾಜ ಒಡೆಯರ್ ನ ಆಳ್ವಿಕೆ ಕಾರಣ ಎಂದರದು ಅತಿಶಯೋಕ್ತಿಯೇನಲ್ಲ. ಕರ್ನಾಟಕದಲ್ಲಾಗಲೀ, ಭಾರತದ ಇತರೆ ಭಾಗಗಳಲ್ಲಾಗಲೀ ಬ್ರಿಟೀಷ್ ವಸಾಹತುಶಾಹಿ ಬ್ರಾಹ್ಮಣರ ಅಧಿಕಾರವನ್ನು ಮೊಟಕುಗೊಳಿಸಿದೆಯೆಂದು ಬ್ರಾಹ್ಮಣೇತರ ಮತ್ತು ದಲಿತ ಚಳುವಳಿಗಳು ಅರ್ಥೈಸಿಕೊಂಡಿರುವುದು ಸರಿಯಲ್ಲ. ಬದಲಿಗೆ, ಮೈಸೂರಿನ ಉದಾಹರಣೆ ಸ್ಪಷ್ಟವಾಗಿ ತಿಳಿಸುವಂತೆ ವಸಾಹತುಶಾಹಿ ಬ್ರಾಹ್ಮಣ ಅಧಿಕಾರವನ್ನು ಮತ್ತಷ್ಟು ಸಶಕ್ತಗೊಳಿಸಿತು. ವಸಾಹತುಶಾಹಿ ಯಾವಾಗಲೂ ಬ್ರಾಹ್ಮಣ ಪ್ರತಿಗಾಮಿಗಳ ಜೊತೆಗೆ ನಿಂತಿತು. ಹೈದರ್ ಅಲಿ ಮತ್ತು ಅದಕ್ಕಿಂತ ಹೆಚ್ಚಾಗಿ ಟಿಪ್ಪು ಸುಲ್ತಾನನ ಕಾಲದಲ್ಲಿ ಕುಸಿತದ ಹಾದಿಯಿಡಿದಿದ್ದ ಬ್ರಾಹ್ಮಣ ಅಧಿಕಾರ ಶಕ್ತಿಯನ್ನು ಮತ್ತೆ ಪುನರ್ ಸ್ಥಾಪಿಸುವುದಕ್ಕೆ ಬ್ರಿಟೀಷರು ಕಾರಣಕರ್ತರಾದರು.

ಎಡ ಬಲ ಜಾತಿಯ ಉಗಮ ಮತ್ತು ಅವರ ಅಭಿವೃದ್ಧಿ ಹೇಗೆ ಜಾತಿ ವ್ಯವಸ್ಥೆಯನ್ನು ನಾಶಪಡಿಸುತ್ತಿತ್ತು ಎನ್ನುವುದನ್ನು ಮೇಕಿಂಗ್ ಹಿಸ್ಟರಿಯ ಒಂದನೇ ಸಂಪುಟದಲ್ಲಿ ಗಮನಿಸಿದ್ದೀವಿ. (196) ಕರ್ನಾಟಕ ವಸಾಹತಿನ ಆಳ್ವಿಕೆಗೆ ಒಳಪಟ್ಟ ನಂತರ, ಜಾತಿ ವ್ಯವಸ್ಥೆ ಮಗ್ಗಲು ಬದಲಿಸಿತು; ಅದರ ಸದಸ್ಯರು ವಸಾಹಿತನ ದೌರ್ಜನ್ಯದ ಜೊತೆಗೆ ಬ್ರಾಹ್ಮಣರ ಜಾತಿ ಶೋಷಣೆಗೂ ಒಳಪಟ್ಟರು. ಸ್ಥಳೀಯ ಮಾರುಕಟ್ಟೆಯ ನಾಶ ಮತ್ತು ಸ್ಥಳೀಯ ವರ್ತಕ ಜಾತಿಗಳನ್ನು ಗುರಿಯಾಗಿಸಿದ್ದು ಬಲದವರ ರಕ್ತ ಹರಿಸಿದ್ದು ಒಂದೆಡೆಯಾದರೆ, ಎಡದವರಾದ ಕಸುಬುದಾರ ಜಾತಿಯವರು ಹಾಗೂ ಏಳ್ಗೆ ಹೊಂದುತ್ತಿದ್ದ ಪಂಚಾಚಾರಿಗಳ ಮೇಲಿನ ಹಲ್ಲೆ ಮತ್ತೊಂದೆಡೆ ಆರ್ಥಿಕ ಪ್ರಗತಿಗೆ ಬೇಕಾದ ವಸ್ತುವಿನಾಧಾರವನ್ನೇ ನಾಶಪಡಿಸಿ ಅವರ ಸಾಮಾಜಿಕ ದನಿಯನ್ನೇ ಇಲ್ಲವಾಗಿಸಿತು. ಹಾಗಾಗಿ ವಸಾಹತು ಪೂರ್ವದ ಸಾಹಿತ್ಯದಲ್ಲಿ ಆವರಿಸಿಕೊಂಡಿದ್ದ ಎಡ ಮತ್ತು ಬಲ ಸಹೋದರತ್ವ ಬ್ರಿಟೀಷರ ಆಳ್ವಿಕೆಯ ಪ್ರಾರಂಭದೊಂದಿಗೆ ಮರೆಯಾಗಿಹೋಯಿತು. ಅದಾಗ್ಯೂ, ವಿಜಯ ರಾಮಸ್ವಾಮಿಯವರು ಸೇಂಟ್ ಜಾರ್ಜ್ ಕೋಟೆಯ ಸುತ್ತ ಬ್ರಿಟೀಷರ ಬಟ್ಟೆ ಉದ್ಯಮಕ್ಕೆ ಪೂರಕವಾಗಿ ಸೃಷ್ಟಿಸಲಾಗಿದ್ದ ಕಪ್ಪು ನಗರದ (black town) ಉದಾಹರಣೆ ಕೊಡುತ್ತ “ಬ್ರಿಟಿಷ್ ಬಟ್ಟೆ ಉದ್ಯಮ ಒಡ್ಡಿದ ಸ್ಪರ್ಧೆ, ಅವರ ಅಸ್ತಿತ್ವಕ್ಕೇ ಸಂಚುಕಾರ ತಂದಿತ್ತು. ಅವರು (ಬಲಕ್ಕೆ ಸೇರಿದ ಚೆಟ್ಟಿ ಜಾತಿಯವರು) ನೇಕಾರರೊಂದಿಗೆ ಸೇರಿ (ಎಡಕ್ಕೆ ಸೇರಿದವರು) ಬ್ರಿಟೀಷ್ ವಸಾಹತುಶಾಹಿಗೆ ಪ್ರತಿರೋಧ ಒಡ್ಡಿದರು” ಎಂದು ತಿಳಿಸುತ್ತಾರೆ. (197)

ಬ್ರಿಟೀಷರ ಮುನ್ನುಗ್ಗುವಿಕೆಗೆ ತಡೆ ಒಡ್ಡುವಲ್ಲಿ ಸಫಲತೆ ಕಾಣದ ಕಾರಣ ಅವರ ಐತಿಹಾಸಿಕ ಹೋರಾಟ ಉಂಟುಮಾಡಿದ ಬದಲಾವಣೆಗಳ ಬಗ್ಗೆ ವಿಜಯಾ ರಾಮಸ್ವಾಮಿ ತಿಳಿಸುತ್ತಾರೆ: “ಹದಿನೇಳನೇ ಶತಮಾನದಲ್ಲಿ ನೇಕಾರರ ಸಾಲು…..ಯುರೋಪಿನ ಕೈಗಾರಿಕೆಗಳ ಮತ್ತು ಕಪ್ಪು ನಗರದ ಸುತ್ತ ಸುತ್ತುತ್ತಿತ್ತು. (198) ಎಡ ಮತ್ತು ಬಲ ಜಾತಿಯ ನಡುವಿನ ಜಗಳಗಳ ಬಹುಮುಖ್ಯ ಪ್ರಶ್ನೆ ಕಂಪನಿಯ ಬಟ್ಟೆ ಗುತ್ತಿಗೆಯನ್ನು ಯಾರು ಪಡೆಯಬೇಕು ಎನ್ನುವುದರ ಕುರಿತಾಗಿರುತ್ತಿತ್ತು. ಕಂಪನಿಯ ಮಧ್ಯವರ್ತಿ ವರ್ತಕರು ತೋರಿದಂತೆ ಕೆಲಸ ಮಾಡಬೇಕಾದ ವ್ಯವಸ್ಥೆಯಲ್ಲಿ ನೇಕಾರರು ನಿಧಾನವಾಗಿ ಚೌಕಾಶಿ ಮಾಡುವ ಶಕ್ತಿಯನ್ನು ಮತ್ತು ಸ್ವಾತಂತ್ರ್ಯವನ್ನು ಕಳೆದುಕೊಂಡರು.” (199)

ತಮಿಳುನಾಡಿನ ಉದಾಹರಣೆಯಲ್ಲಿ, ಮಧ್ಯವರ್ತಿಗಳ ಮೂಲಕ ಕಾರ್ಯನಿರ್ವಹಿಸಿದ ವಸಾಹತುಶಾಹಿ ಎಡ ಮತ್ತು ಬಲ ಜಾತಿಯ ನಡುವಿನ ಸಹೋದರತ್ವವನ್ನು ನಾಶಪಡಿಸಿತು.

ತಮಿಳುನಾಡಿಗೆ ಹೋಲಿಸಿದರೆ, ಕರ್ನಾಟಕದಲ್ಲಿ ಈ ಪ್ರಕ್ರಿಯೆ ನಿಧಾನಗತಿಯಲ್ಲಿ ನಡೆಯಿತು. ಸೆಂಟ್ ಜಾರ್ಜ್ ಕೋಟೆಯ ಸುತ್ತ ಕಪ್ಪು ನಗರಗಳ ಸೃಷ್ಟಿಯಾದ ನಂತರದ ಶತಮಾನದಲ್ಲಿ ಬ್ರಿಟೀಷ್ ವಸಾಹತುಶಾಹಿ ಪ್ರಪಂಚದಾದ್ಯಂತ ಪ್ರಶ್ನಿಸಲಾಗದ ಶಕ್ತಿಯಾಗಿ ಬೆಳೆಯಿತು. ಲೂಟಿಯಿಂದ ಕೊಬ್ಬಿದ ವಸಾಹತುಶಾಹಿ ವರುಷಗಳು ಕಳೆದಂತೆ ಮತ್ತಷ್ಟು ಆಕ್ರಮಣಕಾರನಾಗಿ, ತಾಳ್ಮೆ ಕಳೆದುಕೊಂಡ. ಈ ವ್ಯಾಪಾರಗಳ ಸಂದರ್ಭದಲ್ಲಿ ಬ್ರಿಟೀಷ್ ವಸಾಹತುಶಾಹಿ, ವಸಾಹತುಗಳು ಉತ್ಪಾದಿಸಿದ ಉತ್ಪನ್ನಗಳ ಮೇಲೆ ಅವಲಂಬಿತವಾಗಿತ್ತು. ಎಡ ಮತ್ತು ಬಲ ಜಾತಿಗಳ ಹುಟ್ಟುವಿಕೆಗೆ ವಸ್ತುವಿನ ಉತ್ಪಾದನೆ ಮತ್ತು ವ್ಯವಹಾರ ಕಾರಣವಾಗಿತ್ತು. ಆದರೆ ಬ್ರಿಟನ್ನಿನಲ್ಲಿ ಕೈಗಾರಿಕಾ ಬೂರ್ಜ್ವಾಶಾಹಿಯ ಬೆಳವಣಿಗೆ ಸಂದರ್ಭವನ್ನು ಬದಲಿಸಿತು ಮತ್ತು ಭಾರತದಲ್ಲಿ ಉತ್ಪಾದನೆಯಾದ ವಸ್ತುಗಳನ್ನು ತೆಗೆದುಕೊಳ್ಳುವುದಕ್ಕೆ ಬದಲಾಗಿ ಭಾರತದಿಂದ ಕಚ್ಛಾ ವಸ್ತುಗಳನ್ನಷ್ಟೇ ತನ್ನ ಕೈಗಾರಿಕೆಗಳಿಗೆ ತೆಗೆದುಕೊಳ್ಳುವ ಆದೇಶ ಹೊರಡಿಸಿತು. ವ್ಯಾಪಾರೀ ಬಂಡವಾಳ ಮತ್ತು ಕೈಗಾರಿಕಾ ಬಂಡವಾಳದ ಎರಡು ಕಾಲಘಟ್ಟಗಳನ್ನು ಹೋಲಿಸುತ್ತ, ಮಾರ್ಕ್ಸ್ ಹೇಳುತ್ತಾರೆ: “1813ರವರೆಗೂ ಭಾರತ ಪ್ರಮುಖ ರಫ್ತುದಾರ ದೇಶವಾಗಿತ್ತು, ಈಗ ಅದು ಆಮದು ದೇಶವಾಗಿದೆ.” (200)

ಈ ಎಲ್ಲಾ ಅಂಶಗಳ ಒಟ್ಟಾಗಿ ಕಾರ್ಯನಿರ್ವಹಿಸಿದ ಪರಿಣಾಮವಾಗಿ, ವಸ್ತುವಿನಾಧಾರದ ಮೇಲೆ ಅವಲಂಬಿಸಿದ್ದ ಎಡ ಮತ್ತು ಬಲ ಜಾತಿಗಳು ಮಗುಚಿಕೊಂಡವು: ಶತಮಾನಗಳ ಕಾಲ ಎಡ ಮತ್ತು ಬಲ ಸಾಮಾಜಿಕತೆಯನ್ನು ಇತಿಹಾಸದ ಪುಟಗಳಲ್ಲಿ ದಾಖಲಿಸಿದ್ದವರು, ಬಹುಬೇಗ ಅಂತ್ಯ ಕಂಡರು ಮತ್ತು ತಮ್ಮ ಕೋಪ ಮತ್ತು ನೋವಿನ ಕೂಗನ್ನು ಪ್ರೇಕ್ಷಕರ ಮುಂದೆ ತೋಡಿಕೊಳ್ಳಲಾರಂಭಿಸಿದರು.

ಮೈಸೂರನ್ನು ಬ್ರಿಟೀಷರು ಆಕ್ರಮಿಸಿಕೊಂಡ ಎಂಟು ದಶಕಗಳ ನಂತರ, ಎಡ ಮತ್ತು ಬಲದವರ ಸ್ಥಿತಿಗತಿಗಳ ಬಗ್ಗೆ ‘ವಿವರಿಸುತ್ತ ಲೆವಿಸ್ ರೈಸ್ ದಾಖಲಿಸುತ್ತಾರೆ “ಎರಡು ವರ್ಗಗಳ ನಡುವಿನ ವಿರೋಧಗಳು ಇನ್ನೂ ಇದ್ದಾವೆ, ಆದರೆ ಮುಂಚಿನ ದಿನಗಳಲ್ಲಿದ್ದ ಕಹಿ ಈಗಿಲ್ಲ”. (201) ಜಾತಿ ವ್ಯವಸ್ಥೆ ತನ್ನುದ್ದೇಶಕ್ಕಿಂತ ಹೆಚ್ಚಾಗಿಯೇ ಮುಂದುವರಿಯಿತು, ಅದರಲ್ಲೂ ನಾಮಧೇಯದಿಂದ ಚೂರು ಪ್ರಯೋಜನವಿಲ್ಲದ ಹೊಲೆಯ ಮತ್ತು ಮಾದಿಗ ಜಾತಿಯವರಲ್ಲಿ. ಮೇಲ್ಜಾತಿಯವರಿಗೆ ಇದು ಅವರನ್ನು ಮೂರ್ಖರನ್ನಾಗಿಸಲು ಉಪಯೋಗವಾಯಿತು. ದಲಿತರ ನಡುವೆ ಸತತವಾಗಿ ದ್ವೇಷವಿರುವಂತೆ ನೋಡಿಕೊಳ್ಳುವ ಸಾಂಸ್ಕೃತಿ ಸ್ಮೃತಿಯನ್ನು ಉಳಿಸಿಕೊಳ್ಳಲಾಗಿತ್ತು.

ಮುಂದಿನ ವಾರ: 
ಸಮಾಜದ ನೋವಿಗೆ ಔಷಧ

ಮೇ 30, 2016

ಆತಂಕದ ಸುಳಿಯಿಂದೊರಬಂದ ಬದುಕಿನ ಸುಂದರತೆ

ಡಾ. ಅಶೋಕ್. ಕೆ. ಆರ್
30/05/2016
ಮಲೆನಾಡಿನ ಮಡಿಲಲ್ಲಿರುವ ಸುಂದರ ಹಳ್ಳಿಯದು. ಒಂದಷ್ಟು ಸಾಬರಿದ್ದಾರೆ ಒಂದಷ್ಟು ಹಿಂದೂಗಳಿದ್ದಾರೆ. ಒಂದು ಮಸೀದಿಯಿದೆ ಒಂದು ಮಠವಿದೆ. ಒಬ್ಬ ಮೌಲ್ವಿಯಿದ್ದಾನೆ ಒಬ್ಬ ಮಠದಯ್ಯನಿದ್ದಾನೆ. ಇದೇ ಊರಿನಲ್ಲಿ ಜನರ ಸುಲಿಯುವ ಬಡ್ಡಿ ವ್ಯಾಪಾರಿ ಶೆಟ್ಟಿಯಿದ್ದಾನೆ. ನಗರದಿಂದ ದೂರವಿರುವ ಬೆಟ್ಟದ ಮೇಲಿರುವ ಹಳ್ಳಿಯ ಜನರಿಗೆ ಸಾಮಾನು ಸರಂಜಾಮನ್ನು ಕತ್ತೆ ಮೇಲೆ ಹೊತ್ತು ತರುವ ಅದೇ ಊರಿನ ಬುಡೇನ ಸಾಬನಿದ್ದಾನೆ. ಇಂತಿಪ್ಪ ಬುಡೇನ ಸಾಬನಿಗೆ ಮೂವರು ಹೆಣ್ಣುಮಕ್ಕಳು, ಅವರೆಲ್ಲರೂ ನಿಖಾ ವಯಸ್ಸಿಗೆ ಬಂದಿದ್ದಾರೆ. ಎರಡನೇ ಮಗಳಿಗೆ ನಿಖಾ ಗೊತ್ತಾಗಿದೆ. ಮೊದಲ ಮಗಳು ಶಬ್ಬುವಿನ ಮದುವೆಯಾಗದೆ ಎರಡನೇ ಮಗಳ ಮದುವೆ ಮಾಡಲು ಬುಡೇನ ಸಾಬನಿಗೆ ಮನಸ್ಸಿಲ್ಲ. ಮೊದಲ ಮಗಳಿಗೆ ನಿಖಾ ನಿಕ್ಕಿಯಾಗುತ್ತಿಲ್ಲ. ಕಾರಣ ಆಕೆ ಮೂಗಿ. ಮಾತು ಬರದ ಒಳ್ಳೆ ಮನಸ್ಸಿನ ಹುಡುಗಿಯ ಮದುವೆಯ ಚಿಂತೆ ಬುಡೇನ ಸಾಬನ ಜೀವನೋತ್ಸಾಹವನ್ನೇನೂ ಕಸಿದಿರುವುದಿಲ್ಲ. 

ಬೆಟ್ಟದ ಮೇಲಿನ ದರ್ಗಾಕ್ಕೆ ಹೋಗುವವರು ಮಸೀದಿಯಲ್ಲಿ ತಂಗಿ ಹೋಗುವುದು ಸಾಮಾನ್ಯ. ಹೀಗೇ ದರ್ಗಾಕ್ಕೆಂದು ಹೋಗಲು ಬಂದ ವಾಸೀಮನೆಂಬ ಅನಾಥ ಹುಡುಗ ಮಸೀದಿಯಲ್ಲೇ ಉಳಿದುಕೊಳ್ಳುತ್ತಾನೆ. ಮೌಲ್ವಿ ಸಾಹೇಬರಿಗೆ ಹುಷಾರಿಲ್ಲದಾಗ ಊರಿನ ಜನರಿಗೆ ನಮಾಜು ಮಾಡಿಸುವುದಕ್ಕೆ ಮುಂದಾಳತ್ವ ವಹಿಸುತ್ತಾನೆ. ನಮಾಜು ಮಾಡಿಸಿದರಷ್ಟೇ ಸಾಲದು, ಜನರ ಕಷ್ಟಕ್ಕೂ ನೆರವಾಗಬೇಕು ಎಂದು ಹೇಳುತ್ತಾ ಬಡ್ಡಿ ವ್ಯಾಪಾರಿ ಶೆಟ್ಟಿಯಿಂದ ಸಾಲಕ್ಕೆ ದುಡ್ಡು ತೆಗೆದುಕೊಂಡು ತೊಂದರೆಗೀಡಾಗಿದ್ದ ಮುಶ್ತಾಕನ ಕುಟುಂಬಕ್ಕೆ ನೆರವಾಗುತ್ತಾನೆ. ಮುಶ್ತಾಕನನ್ನು ಅರಬ್ಬಿಗೆ ದುಡ್ಡು ದುಡಿಯಲು ಕಳುಹಿಸುತ್ತಾನೆ. ಊರಿನ ಇತರ ಸಾಬರು ನಮ್ಮನ್ನೂ ಅರಬ್ಬಿಗೆ ಕಳುಹಿಸಿ ಪುಣ್ಯ ಕಟ್ಟಿಕೋ ಎನ್ನುತ್ತಾರೆ. ಈ ಮಧ್ಯೆ ಮೌಲ್ವಿಯ ಸಲಹೆಯಂತೆ ಬುಡೇನ ಸಾಬನ ದೊಡ್ಡ ಮಗಳ ನಿಖಾ ವಾಸೀಮನೊಂದಿಗೆ ನಡೆಯುತ್ತದೆ. ವಾಸೀಮ ಮನೆ ಅಳಿಯನಾಗಿ, ಬುಡೇನ ಸಾಬನ ಕೆಲಸಗಳನ್ನೆಲ್ಲ ಇಚ್ಛೆಯಿಂದ ಮಾಡುತ್ತ ಎಲ್ಲರ ಮೆಚ್ಚುಗೆ ಗಳಿಸುತ್ತಾನೆ. ಕಡಿಮೆ ಮಾತಿನ, ಸಹಾಯ ಮನೋಭಾವದ, ಧರ್ಮಬೀರು ವಾಸೀಮನೇ ಆತಂಕದ ಸುಳಿಯನ್ನೊತ್ತು ತರುತ್ತಾನೆ ಎಂಬ ಸುಳಿವೂ ಬುಡೇನ ಸಾಬನ ಕುಟುಂಬಕ್ಕಾಗಲೀ ಊರವರಿಗಾಗಲೀ ತಿಳಿಯುವುದೇ ಇಲ್ಲ.
ಹಿಂಗ್ಯಾಕೆ' ವೆಬ್ ಪುಟಕ್ಕೆ ಬೆಂಬಲವಾಗಿ ನಿಮ್ಮಿಂದ ಸಾಧ್ಯವಾದಷ್ಟು ಹಣವನ್ನು ಕಳಿಸಿಕೊಡಲು ಕೆಳಗಿರುವ ಲಿಂಕ್ ಕ್ಲಿಕ್ಕಿಸಿ.

ವಾಸೀಮ ಧರ್ಮಬೀರುವಲ್ಲ, ಧರ್ಮಾಂಧ ಎಂದು ಒಂದೇ ದೃಶ್ಯದಲ್ಲಿ ತೋರಿಸಿಬಿಡುತ್ತಾರೆ ನಿರ್ದೇಶಕರಾದ ಪಿ.ಎಚ್.ವಿಶ್ವನಾಥ್. ಬುಡೇನ ಸಾಬರಿಗೆ ಮಠದಯ್ಯ ಆಪ್ತ. ಮಠದಲ್ಲಿ ಕುಳಿತು ಮಠದಯ್ಯನವರೊಡನೆ ಹರಟುತ್ತ ಕಡ್ಲೆಕಾಯಿ ಮೆಲ್ಲುತ್ತಿರುವಾಗ ವಾಸೀಮ್ ಮತ್ತು ಶಬ್ಬು ಬರುತ್ತಾರೆ. ಹಿಂದೂ ಮಠದಲ್ಲಿ ಸಾಬರು ಕುಳಿತು ಮಾತನಾಡುವುದು, ತನ್ನ ಹೆಂಡತಿ ಆ ಮಠದಯ್ಯನಿಗೆ ಬೇಕಾದ ಗಿಡಮೂಲಿಕೆಗಳನ್ನು ತಂದುಕೊಡುವುದು ವಾಸೀಮನಿಗೆ ಸರಿ ಕಾಣುವುದಿಲ್ಲ. ತಗಪ್ಪ ತಿನ್ನು ಎಂದು ಮಠದಯ್ಯ ವಾಸೀಮನಿಗೆ ಎರಡು ಬಾಳೆಹಣ್ಣು ಕೊಡುತ್ತಾನೆ. ನಾನು ಹೊರಗಿರ್ತೀನಿ ಎಂದ್ಹೇಳಿ ಬರುವ ವಾಸೀಮ್ ಅದನ್ನು ತಿನ್ನದೆ ಹಾಗೇ ಜಗುಲಿಯ ಮೇಲಿಡುತ್ತಾನೆ. ಅನ್ಯ ಮತದವರು ಕೊಟ್ಟಿದ್ದನ್ನೂ ತಿನ್ನದಷ್ಟೂ ಮತಾಂಧ ವಾಸೀಮ್. ಆತ ಈ ಕಾಡಳ್ಳಿಗೆ ಬಂದ ಉದ್ದೇಶ ನಗರದಲ್ಲಿ ಬಾಂಬು ಸ್ಪೋಟಿಸಿ ಅಮಾಯಕರನ್ನು ಹತ್ಯೆಗೈದು ಮತ್ತೆ ಕಾಡಳ್ಳಿಯಲ್ಲಿ ಸುಲಭವಾಗಿ ತಲೆಮರೆಸಿಕೊಂಡುಬಿಡಬಹುದೆಂದು. ಆಗೀಗ ಅವನ ಭಯೋತ್ಪಾದಕ ಗೆಳೆಯರೂ ಬರುತ್ತಾರೆ. ಕೊನೆಗೊಂದು ದಿನ ಬುಡೇನ ಸಾಬನಿಗೆ ತನ್ನಳಿಯನ ನಿಜರೂಪ ತಿಳಿಯುತ್ತದೆ, ಆಕಸ್ಮಿಕವಾಗಿ ಬುಡೇನ ಸಾಬನ ಕೈಯಿಂದಲೇ ವಾಸೀಮನೆಂಬ ಕ್ರಿಮಿಯ ಹತ್ಯೆಯಾಗಿಬಿಡುತ್ತದೆ. ಮನೆಯಲ್ಲಿ ಶಬ್ಬು ಗರ್ಭಿಣಿ, ಆಕೆಯ ಗಂಡ, ತನ್ನಳಿಯನನ್ನೇ ಕೊಲೆ ಮಾಡಿದ ಬುಡೇನ ಸಾಬನ ಮಾನಸಿಕ ಸ್ಥಿತಿಯಲ್ಲಿ ಏರುಪೇರಾಗಿ ಕೊನೆಗೇನು ಆತ ಹುಚ್ಚನಾಗುತ್ತಾನಾ? ಶಬ್ಬುವಿಗೆ ವಿಷಯ ತಿಳಿಯುತ್ತದಾ? ಊರವರ ದೃಷ್ಟಿಯಲ್ಲಿ ಎತ್ತರದ ಸ್ಥಾನದಲ್ಲಿದ್ದ ಬುಡೇನ ಸಾಬ ಅಳಿಯನ ಕೃತ್ಯದಿಂದ ಪಾತಾಳಕ್ಕಿಳಿದುಬಿಡುತ್ತಾನಾ? 

ಭಯೋತ್ಪಾದನೆಯ ಬಗೆಗಿನ ಚಿತ್ರವಿದು, ಆದರೆ ಆತಂಕದೊಂದಿಗೇ ನೋಡುವ ಚಿತ್ರವಲ್ಲ. ಇಡೀ ಚಿತ್ರದಲ್ಲೊಂದು ಲವಲವಿಕೆಯಿದೆ. ನಾಯಕ ಬುಡೇನ ಸಾಬನ ಪಾತ್ರವೇ ಹೊಸತನದ್ದು. ಕತ್ತೆ ಮೇಲೆ ಸಾಮಾನು ಹೊತ್ತು ತರುವ ಎಷ್ಟು ಪ್ರಮುಖ ಪಾತ್ರಗಳನ್ನು ನಾವು ಚಿತ್ರಗಳಲ್ಲಿ ನೋಡಿದ್ದೇವೆ ಹೇಳಿ? ಇನ್ನು ಅಕ್ಕ – ತಂಗಿಯರ ಪ್ರೀತಿ, ಮುನಿಸು, ಹಾಸ್ಯವೆಲ್ಲವೂ ಚಿತ್ರದಲ್ಲಿದೆ. ಕೋಮುಸಾಮರಸ್ಯವೆಂಬುದು ಬಲವಂತವಾಗಿ ಹೇರಿಕೊಳ್ಳುವಂತದ್ದಲ್ಲ, ಅದು ಸಹಜವಾಗಿ ಜನರ ನಡುವೆ ಅಸ್ತಿತ್ವದಲ್ಲಿರುವಂತದ್ದು ಎಂದು ತುಂಬಾ ನೈಜವಾಗಿ ತೋರಿಸಿದ್ದಾರೆ ನಿರ್ದೇಶಕರು. ಚಿತ್ರದ ಕೆಲವು ದೃಶ್ಯಗಳು, ಆಟದ ಪಿಸ್ತೂಲಿನ ಬಳಕೆ ಚಿತ್ರದ ಬಜೆಟ್ಟು ತುಂಬಾ ಕಡಿಮೆಯಿತ್ತೇನೋ ಎಂಬ ಭಾವ ಮೂಡಿಸಿದರೆ ಬಜೆಟ್ಟಿನ ಬಗ್ಗೆ ಮತ್ತಷ್ಟು ಯೋಚನೆ ಬರದಂತೆ ಮಾಡುವುದು ಛಾಯಾಗ್ರಹಣ. ಮತ್ತಿಡೀ ಚಿತ್ರಕ್ಕೊಂದು ದೃಶ್ಯಕಾವ್ಯದ ಭಾವವನ್ನು ಕೊಟ್ಟಿರುವುದು ಮಲೆನಾಡ ಹಸಿರ ಚಿತ್ರಣ. ಇನ್ನು ನಮ್ಮ ಪ್ರಣಯರಾಜ ಶ್ರೀನಾಥ್ ಬುಡೇನ ಸಾಬರ ಪಾತ್ರದಲ್ಲಿ ಒಂದಾಗಿಬಿಟ್ಟಿದ್ದಾರೆ. ಅವರ ಚಿತ್ರಜೀವನದಲ್ಲಿನ ಅತ್ಯುತ್ತಮ ಅಭಿನಯಗಳಲ್ಲಿ ಇದೂ ಒಂದು. ಶಬ್ಬು, ಮಠದಯ್ಯ ಮತ್ತು ಶೆಟ್ಟಿ ನೆನಪಿನಲ್ಲುಳಿಯುವಂತೆ ಅಭಿನಯಿಸಿದ್ದಾರೆ. ವಾಸೀಮನ ತಣ್ಣನೆಯ ಕ್ರೌರ್ಯ ಕಣ್ಣಲ್ಲೇ ವ್ಯಕ್ತವಾಗುವಷ್ಟು ಶಕ್ತವಾಗಿದೆ. ಇನ್ನುಳಿದ ಪಾತ್ರಗಳ ಅಭಿನಯವೂ ಚಿತ್ರಕ್ಕೆ ಪೂರಕವಾಗಿದೆ. ಚಿತ್ರದಲ್ಲಿ ಕೊರತೆಗಳೇ ಇಲ್ಲವೆಂದೇನಲ್ಲ. ತಾಂತ್ರಿಕ ಲೋಪಗಳು ಹಲವಿವೆ. ಪಕ್ಕದ ನಗರದಲ್ಲೇ ಬಾಂಬು ಸ್ಪೋಟ ನಡೆದು ಅಮಾಯಕ ಮಕ್ಕಳು ಸಾವಿಗೀಡಾದರೂ ಊರಿನವರಲ್ಲಿ ಏನೊಂದೂ ಬದಲಾಗದಿರುವುದು ಕೊಂಚ ಅಚ್ಚರಿ ಮೂಡಿಸುತ್ತದೆ. ಅಲ್ಲಲ್ಲಿ ಚಿತ್ರಕತೆ ಕೊಂಚ ಬಿಗಿಯಾಗಿರಬೇಕೆಂದೆನ್ನಿಸುವುದು ಸುಳ್ಳಲ್ಲ. 

ಪ್ರಸ್ತುತ ವಿಷಯವೊಂದರ ಮೇಲೆ ಬೆಳಕು ಚೆಲ್ಲುವ ‘ಸುಳಿ’ ಸಿನಿಮಾ ಬಹುತೇಕರಿಗೆ ತಲುಪುವುದೇ ಇಲ್ಲ. ನಾನು ಸಿನಿಮಾ ಮಂದಿರಕ್ಕೆ ಹೋದಾಗ ನಮ್ಮನ್ನೂ ಸೇರಿಸಿ ಚಿತ್ರಮಂದಿರದಲ್ಲಿದ್ದದ್ದು ಎಂಟು ಮಂದಿಯಷ್ಟೇ. ಈ ಚಿತ್ರದ ಸೋಲಿಗೆ ಮೂವರು ಕಾರಣರು. ಚಿತ್ರದ ಬಗ್ಗೆ ಹೆಚ್ಚೇನು ಪ್ರಚಾರ ಕೊಡದೆ ಸಾಯಿಸಿದ ಚಿತ್ರತಂಡ, ಅನ್ಯಭಾಷೆಯ ಚಿತ್ರಗಳಿಗೆ ಸಲ್ಲದ ಪ್ರಚಾರ ಕೊಡುವ ದೃಶ್ಯವಾಹಿನಿಗಳಲ್ಲಿ ನಮ್ಮದೇ ಚಿತ್ರದೆಡೆಗಿರುವ ಅಸಡ್ಡೆ ಹಾಗೂ ಗೊತ್ತೇ ಇರದ ಭಾಷೆಯ ಉತ್ತಮ ಸಿನಿಮಾಗಳನ್ನು ಹುಡುಕುಡುಕಿ ನೋಡುವ ‘ಪ್ರಜ್ಞಾವಂತ’ ಪ್ರೇಕ್ಷಕರೂ ಈ ಚಿತ್ರವನ್ನು ನೋಡಿ ಇತರರಿಗೆ ತಿಳಿಸುವ ತೊಂದರೆ ತೆಗೆದುಕೊಳ್ಳದೇ ಇರುವುದು. ಆಮೇಲಿದ್ದೇ ಇದೆಯಲ್ಲ, ಕನ್ನಡದಲ್ಲಿ ಎಲ್ರೀ ಒಳ್ಳೆ ಸಿನಿಮಾಗಳು ಅನ್ನೋ ಹಳಹಳಿಕೆ. ಇಡೀ ಚಿತ್ರದಲ್ಲಿ ಸಾಬರ ಪಾತ್ರಗಳೇ ಇರುವುದು ಕೂಡ ಚಿತ್ರದ ಬಗ್ಗೆ ಎಲ್ಲೂ ಹೆಚ್ಚೂ ಚರ್ಚೆಯಾಗದಿರುವುದಕ್ಕೆ ಕಾರಣವೆಂದರೆ ತಪ್ಪಾಗಲಾರದು. ಕೊನೆಗೆ ಭಯೋತ್ಪಾದಕನನ್ನು ಸಾಬಿಯಲ್ಲದೇ, ಮಠದಯ್ಯನೋ ಶೆಟ್ಟಿಯೋ ಒಂದಷ್ಟು ವೀರಾವೇಶದಿಂದ ಕೊಂದುಬಿಟ್ಟಿದ್ದರೂ ಚಿತ್ರ ಗೆದ್ದುಬಿಡುತ್ತಿತ್ತೇನೋ! ಇರೋದ್ರಲ್ಲಿ ನಮ್ಮ ಕನ್ನಡ ಪತ್ರಿಕೆಗಳೇ ವಾಸಿ, ಈ ಚಿತ್ರದ ಬಗ್ಗೆ ಚೆಂದದ ವಿಮರ್ಶೆಗಳನ್ನು ಬರೆದು ಒಂದು ನಾಲಕ್ಕು ಜನರಿಗಾದರೂ ತಿಳಿಸಿವೆ. 6-5=2 ಯಿಂದ ಕನ್ನಡ ಸಿನಿಮಾರಂಗಕ್ಕೆ ಶುರುವಾದ ದೆವ್ವದ ಕಾಟ ಇನ್ನೂ ಮುಗಿದಂತೆ ಕಾಣಿಸುತ್ತಿಲ್ಲ. ದೆವ್ವದ ಚಿತ್ರಗಳ ಸುಳಿಯಲ್ಲಿ ಸಿಲುಕಿಹಾಕಿಕೊಂಡಿರುವ ಪ್ರೇಕ್ಷಕನಿಗೆ ಮನುಷ್ಯನೇ ದೆವ್ವ ಮನುಷ್ಯನೇ ದೈವ ಎಂದು ತಿಳಿಸುವ ‘ಸುಳಿ’ ಚಿತ್ರ ಪ್ರಿಯವಾಗುವುದು ಹೇಗೆ ಸಾಧ್ಯ ಅಲ್ಲವೇ? ಚಿತ್ರಮಂದಿರದಿಂದತೂ ಸುಳಿ ಬೇಗ ಮರೆಯಾಗುತ್ತದೆ, ಟಿವಿಯಲ್ಲಿ ಬಂದಾಗಲಾದರೂ ನೋಡಿ.

ಮೇ 27, 2016

ಮತದಾರರಿಗೂ ಒಂದು ಬಾಂಡ್ ಪೇಪರ್ ಬರೆದು ಕೊಡಿ!

bond paper congress
ಡಾ. ಅಶೋಕ್. ಕೆ. ಆರ್
27/05/2016
ಪಶ್ಚಿಮ ಬಂಗಾಳದಲ್ಲೊಂದು ಅಭೂತಪೂರ್ವ ಘಟನೆ ಸಂಭವಿಸಿದೆ. ನೆಹರೂ ಕುಟುಂಬದ ಮುಂದೆ ದೇಹಬಾಗಿಸಿ ಜೀ ಹುಜೂರ್ ಎಂಬ ಸಂಸ್ಕೃತಿಯನ್ನು ಹಾಸಿ ಹೊದ್ದಿಕೊಂಡಿರುವ ಕಾಂಗ್ರೆಸ್ಸಿನಲ್ಲಿ ಈ ಘಟನೆ ಸಂಭವಿಸುವುದರಿಂದ ಇದೇನು ತುಂಬಾ ಅಚ್ಚರಿಯ ಘಟನೆಯಲ್ಲ, ಗಾಬರಿಗೆ ಎದೆ ಹಿಡಿದುಕೊಂಡುಬಿಡುವಂತಹ ಆಘಾತದ ಘಟನೆಯೂ ಅಲ್ಲ! ಸೋನಿಯಾ ಗಾಂಧೀ ‘ಜೀ’ಗೆ, ರಾಹುಲ್ ಗಾಂಧೀ ‘ಜೀ’ಗೆ ಕೈಮುಗೀರಿ ಅಂದ್ರೆ ಕಾಲಿಗೆ ಬೀಳೋ ಜನರೇ ಹೆಚ್ಚಿರುವ ಕಾಂಗ್ರೆಸ್ಸಿನಲ್ಲಿ ದೇಶದಲ್ಲೇ ಮೊಟ್ಟ ಮೊದಲ ಬಾರಿಗೆ ‘ಬಾಂಡ್ ಪೇಪರ್’ ರಾಜಕಾರಣ ಶುರುವಾಗಿದೆ! 

ಇತ್ತೀಚೆಗಷ್ಟೇ ನಡೆದ ಪಂಚರಾಜ್ಯಗಳ ಚುನಾವಣೆಯಲ್ಲಿ ಉಸಿರೇ ನಿಂತು ಹೋಗಿದ್ದ ಕಾಂಗ್ರೆಸ್ಸಿಗೆ ಒಂದಷ್ಟು ಗಾಳಿ ಪಶ್ಚಿಮ ಬಂಗಾಳದಲ್ಲೂ ದಕ್ಕಿದೆ. ತೃಣಮೂಲ ಕಾಂಗ್ರೆಸ್ಸಿನ ಅಬ್ಬರದ ನಡುವೆಯೂ ನಲವತ್ತನಾಲ್ಕು ಸ್ಥಾನಗಳನ್ನು ಗಳಿಸಿಕೊಂಡು ಎಡಪಕ್ಷಗಳನ್ನು ಮೂರನೇ ಸ್ಥಾನಕ್ಕೆ ತಳ್ಳಿ ಅಧಿಕೃತ ವಿರೋಧ ಪಕ್ಷವಾಗಿದೆ. ಬಹುಶಃ ಈ ಸಾಧನೆ ಕಾಂಗ್ರೆಸ್ಸಿಗೇ ಆಶ್ಚರ್ಯ ಮೂಡಿಸಿರಬೇಕು. 2011ರ ಚುನಾವಣೆಯಲ್ಲಿ ಕಾಂಗ್ರೆಸ್ಸಿನಿಂದ ಗೆದ್ದ ಶಾಸಕರು ಚುನಾವಣೆ ಮುಗಿಯುತ್ತಿದ್ದಂತೆಯೇ ಗಂಟು ಮೂಟೆ ಕಟ್ಟಿಕೊಂಡು ತೃಣಮೂಲ ಕಾಂಗ್ರೆಸ್ಸಿನ ತೆಕ್ಕೆಗೆ ಬಿದ್ದುಬಿಟ್ಟಿದ್ದರು. ಈ ಸಲವೂ ಅಂತಹುದೇನಾದರೂ ನಡೆದು ಬಿಟ್ಟೀತೆಂದು ಹೆದರಿ ಬಂಗಾಳದ ಕಾಂಗ್ರೆಸ್ ಘಟಕ ಬಾಂಡ್ ಪೇಪರ್ ರಾಜಕಾರಣವನ್ನು ಪರಿಚಯಿಸಿದ್ದಾರೆ. ಬಾಂಡ್ ಪೇಪರ್ ಕಾಂಗ್ರೆಸ್ಸಿನ ಅಧ್ಯಕ್ಷೆ ಸೋನಿಯಾ ಗಾಂಧೀ ‘ಜೀ’ಯವರಿಗೆ ಮತ್ತು ಉಪಾಧ್ಯಕ್ಷ ರಾಹುಲ್ ಗಾಂಧೀ ‘ಜೀ’ಯವರಿಗೆ. ‘ನಾನು ಯಾವುದೇ ಪಕ್ಷವಿರೋಧಿ ಚಟುವಟಿಕೆ ನಡೆಸುವುದಿಲ್ಲ, ಪಕ್ಷದ ರೀತಿ ನೀತಿಗಳು, ಪಕ್ಷದ ನಿರ್ಧಾರಗಳು ನನಗೆ ಒಪ್ಪಿತವಾಗದೇ ಹೋದರೂ ಅವುಗಳ ವಿರುದ್ಧ ನಾನು ಮಾತನಾಡುವುದಿಲ್ಲ. ಒಂದು ವೇಳೆ ಅಂತದ್ದೇನನ್ನಾದರೂ ಮಾಡಬೇಕೆಂದರೆ ನನ್ನ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ. ನನ್ನ ಸಂಪೂರ್ಣ ನಿಷ್ಠೆ ಅಧ್ಯಕ್ಷೆ ಸೋನಿಯಾ ಗಾಂಧೀ ‘ಜೀ’ಯವರಿಗೆ ಮತ್ತು ಉಪಾಧ್ಯಕ್ಷ ರಾಹುಲ್ ಗಾಂಧೀ ‘ಜೀ’ಯವರಿಗೆ’ ಎಂಬ ಗುಲಾಮತ್ವದ ಸಾಲುಗಳು ಎರಡು ಪುಟದ ಬಾಂಡು ಪೇಪರಿನುದ್ದಕ್ಕೂ ತುಂಬಿದೆ. ಕಾಂಗ್ರೆಸ್ಸಿನೊಳಗಿನ ಗುಲಾಮತ್ವ ಮನಸ್ಥಿತಿ ಮತ್ತೊಂದು ಮಜಲನ್ನೇ ತಲುಪಿದೆ ಎಂದು ಹೇಳಬಹುದು.

ಪಕ್ಷದಲ್ಲಿ ಸ್ಥಾನ ಕೊಟ್ಟಿದ್ದಕ್ಕೆ, ಚುನಾವಣೆಗೆ ನಿಲ್ಲಲು ಟಿಕೇಟು ಕೊಟ್ಟಿದ್ದಕ್ಕೆ, ಮತ್ತು ಅಲ್ಲಿ ಇಲ್ಲಿ ಪಕ್ಷದ ಹೆಸರಿನಿಂದಲೇ ಗೆದ್ದಿದ್ದಕ್ಕೆ ಶಾಸಕರು ತಮ್ಮ ಪಕ್ಷದ ಮುಖಂಡರ ಅಣತಿಯಂತೆ ಇಂತಹುದೊಂದು ಬಾಂಡ್ ಪೇಪರ್ರಿಗೆ ಸಹಿ ಹಾಕುತ್ತಾರೆಂದ ಮೇಲೆ ಅವರಿಗೆ ಮತ ಹಾಕಿ ಗೆಲ್ಲಿಸಿದ ಮತದಾರರಿಗೂ ಒಂದು ಬಾಂಡ್ ಪೇಪರ್ ಬರೆದುಕೊಡುವುದು ನ್ಯಾಯಯುತವಾದುದಲ್ಲವೇ? ‘ನನಗೆ ನೀವೆಲ್ಲರೂ ಮತ ಹಾಕಿದ್ದಕ್ಕೆ ಧನ್ಯವಾದ. ನಾನು ಯಾವುದೇ ಜನವಿರೋಧಿ ಚಟುವಟಿಕೆ ನಡೆಸುವುದಿಲ್ಲ, ಭ್ರಷ್ಟನಾಗುವುದಿಲ್ಲ, ನಿಮ್ಮ ಜನಪರ ಸಲಹೆಗಳು ನನಗೆ ಒಪ್ಪಿತವಾಗದೇ ಹೋದರೂ ಅವುಗಳ ವಿರುದ್ಧ ನಾನು ಮಾತನಾಡುವುದಿಲ್ಲ. ಒಂದು ವೇಳೆ ಅಂತದ್ದೇನನ್ನಾದರೂ ಮಾಡಬೇಕೆಂದರೆ ನನ್ನ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ. ನನ್ನ ಸಂಪೂರ್ಣ ನಿಷ್ಠೆ ಮತದಾರರಿಗೆ’ ಎಂಬ ಬಾಂಡು ಪೇಪರನ್ನ್ಯಾಕೆ ಶಾಸಕ – ಸಂಸದರು ಆಯ್ಕೆಯಾದ ತಕ್ಷಣ ಕೊಡುವಂತಾಗಬಾರದು?

ಮೇಕಿಂಗ್ ಹಿಸ್ಟರಿ: ಧರ್ಮದ ಪುನರುಜ್ಜೀವನ

ಸಾಕೇತ್ ರಾಜನ್ 
ಕನ್ನಡಕ್ಕೆ: ಡಾ. ಅಶೋಕ್. ಕೆ. ಆರ್
27/05/2016

ಈ ಸಂಪುಟದ ಪ್ರಾರಂಭದಲ್ಲಿ ನಾವೀಗಾಗಲೇ ನೋಡಿರುವಂತೆ ಬ್ರಿಟೀಷ್ ವಸಾಹತುಶಾಹಿ ಮೈಸೂರಿನಲ್ಲಿ ಕೈಗೊಂಬೆ ರಾಜನನ್ನು ಕೂರಿಸಿದ ತಕ್ಷಣ ಮಾಡಿದ ಕೆಲಸವೆಂದರೆ, ಟಿಪ್ಪು ರದ್ದುಮಾಡಿದ್ದ ಮಠ ಮತ್ತು ಬ್ರಾಹ್ಮಣರಿಗೆ ಕೊಡಲಾಗಿದ್ದ ಇನಾಮು ಮತ್ತು ದಾನಧರ್ಮದ ಹಣವನ್ನು ಮತ್ತೆ ಕೊಡುವಂತೆ ಮಾಡಿದ್ದು. ಜೊತೆಗೆ ಈ ಪ್ರತಿಗಾಮಿ ಸಂಸ್ಥೆಗಳಿಗೆ ಹೊಸದಾಗಿ ಮತ್ತಷ್ಟು ಸಹಾಯಧನವನ್ನು ನೀಡಲಾಯಿತು. ಇದು ಬ್ರಾಹ್ಮಣ ದಿವಾನನನ್ನು ನೇಮಿಸಲಾಗಿದ್ದ ಮೈಸೂರಿಗಷ್ಟೇ ಸೀಮಿತವಾಗಿದ್ದ ಪ್ರಕ್ರಿಯೆಯಾಗಿರದೆ ಉಪಖಂಡದಲ್ಲಿ ಬ್ರಿಟೀಷ್ ವಸಾಹತುಶಾಹಿ ಅಳವಡಿಸಿಕೊಂಡ ಸಾಮಾನ್ಯ ನೀತಿಗಳಲ್ಲೊಂದಾಗಿತ್ತು. ಉತ್ತರ ಕರ್ನಾಟಕ ಸುತ್ತುತ್ತಿದ್ದ ಥಾಮಸ್ ಮನ್ರೋ, 1818ರಲ್ಲಿ ಎಲ್ಫಿನ್ ಸ್ಟೋನಿಗೆ ಬರೆದ ಪತ್ರದಲ್ಲಿ ಊಳಿಗಮಾನ್ಯತೆಯ ಸಾಂಸ್ಕೃತಿಕ ಸಂಸ್ಥೆಗಳೆಡೆಗೆ ಬ್ರಿಟೀಷರ ನೀತಿಗಳೇನಿರಬೇಕೆಂದು ತಿಳಿಸುತ್ತಾನೆ: “ಎಲ್ಲಾ ದಾನ ಧರ್ಮಗಳು ಮತ್ತು ಧಾರ್ಮಿಕ ಖರ್ಚುಗಳು, ಅದೆಷ್ಟೇ ಮೊತ್ತದ್ದಾಗಿರಬಹುದು, ನನ್ನ ಯೋಚನೆಯಂತೆ ಅದನ್ನು ಮುಂದುವರಿಸಬೇಕು; ಅದರಲ್ಲಿನ ಬಹುತೇಕ ಭಾಗ ಕಾಲ ಸವೆದಂತೆ ಪ್ರತ್ಯೇಕವಾಗಿಬಿಡುತ್ತದೆ ಮತ್ತು ಖಾಸಗಿ ಹಕ್ಕುಗಳನ್ನು ಉಲ್ಲಂಘಿಸದೆ ಹಾಗೂ ಧಾರ್ಮಿಕ ಪೂರ್ವಾಗ್ರಹಗಳನ್ನು ತೊಡೆಯದೆ ಅದನ್ನು ಮುಟ್ಟಲಾಗುವುದಿಲ್ಲ. ಇದರಲ್ಲಿನ ಹೆಚ್ಚಿನ ಭಾಗ ಕೂಡ, ಅನಧಿಕೃತ ಸಹಾಯಧನ ಮತ್ತು ಮೋಸದಿಂದ ಪಡೆಯಲಾಗಿರುತ್ತದೆ ಎನ್ನುವುದರ ಬಗ್ಗೆ ಯಾವುದೇ ಅನುಮಾನ ಬೇಡ. 

ನಾವು, ನನ್ನ ಯೋಚನೆಯಂತೆ ಧಾರ್ಮಿಕ ಸಂಸ್ಥೆಗಳು, ದಾನಧರ್ಮಗಳು, ಜಾಗೀರುಗಳು, ದೇಶಮುಖರು ಮತ್ತು ಇತರೆ ಸಾರ್ವಜನಿಕ ನೌಕರರನ್ನು ಇರುವಂತೆಯೇ ಉಳಿಸಬೇಕು….” (182) 

ಬುಚನನ್ನನ ತನಿಖೆಗಳು ಬ್ರಾಹ್ಮಣ ಮತ್ತು ಲಿಂಗಾಯತ ಮಠಗಳನ್ನು ಪೂರ್ಣಯ್ಯ ಮರುಸ್ಥಾಪಿಸಿದ ಅನೇಕ ದೃಷ್ಟಾಂತಗಳನ್ನು ನೀಡುತ್ತಾನೆ. ಇಕ್ಕೇರಿ ಪಾಳೇಗಾರರ ಲಿಂಗಾಯತ ಗುರುಗಳ ಉತ್ತರಾಧಿಕಾರಿಗಳಾದ ಹುಜಿನಿ ಸ್ವಾಮಿಯವರ ಉದಾಹರಣೆಯಾಗಿ ನೋಡಬಹುದು. (183) ಅದೇ ರೀತಿ ಕೋಲಾರದ ಜಾಮಗಲ್ಲಿನ ಜಂಗಮರಿಗೆ ಹೊಸದಾಗಿ ಸಹಾಯಧನವನ್ನು ನೀಡಲಾಯಿತು. (184) ಪೂರ್ಣಯ್ಯನ ಆಡಳಿತಾವಧಿಯಲ್ಲಿಯೇ ಕುಮಾರಪುರದ ಶ್ರೀವೈಷ್ಣವ ಬ್ರಾಹ್ಮಣರಿಗೆ ಬಿಳಿಗಿರಿರಂಗನಬೆಟ್ಟದ 22,300 ಎಕರೆ ದಟ್ಟ ಕಾಡನ್ನು ಸರ್ವಮಾನ್ಯವಾಗಿ ಉಡುಗೊರೆ ನೀಡಲಾಯಿತು, ಸೋಲಿಗ ಆದಿವಾಸಿಗಳ ಬದುಕನ್ನು ಆಕ್ರಮಿಸಲಾಯಿತು. (185) ಇದೇ ರೀತಿ ಶೃಂಗೇರಿ ಮಠಕ್ಕೆ 150 ಹಳ್ಳಿಗಳನ್ನು ಅಧಿಕೃತವಾಗಿ ಜಾಗೀರಾಗಿ ನೀಡಲಾಯಿತು. ಮಠದವರು ರೈತರ ಮೇಲೆ ಪರಾವಲಂಬಿಗಳಾಗಿ ಅಸ್ತಿತ್ವ ಉಳಿಸಿಕೊಂಡರು. 

ಮೈಸೂರು, ಬ್ರಿಟೀಷ್ ಆಕ್ರಮಣದ ವಿರುದ್ಧ ನಡೆಸಿದ ನಾಲ್ಕು ದಶಕದ ದೀರ್ಘ ಕದನದ ಸಮಯದಲ್ಲಿ, ವೈದಿಕ ಬ್ರಾಹ್ಮಣರ ಮತ್ತು ಮಠಾಧಿಪತಿಗಳಿಗಿದ್ದ ಸವಲತ್ತುಗಳನ್ನು ಕಿತ್ತುಕೊಂಡಿದ್ದ ಟಿಪ್ಪುವಿನ ವಿರುದ್ಧ ಪಾಳೇಗಾರರು ಮಾಡಿದಂತೆಯೇ ಈ ಬ್ರಾಹ್ಮಣರೂ ಮೋಸ ಮಾಡಿ ವಸಾಹತು ಆಕ್ರಮಣಕಾರರನ್ನು ಪ್ರೋತ್ಸಾಹಿಸಿದರು. ಧರ್ಮಸ್ಥಳದ ಹೆಗ್ಗಡೆ ಧರ್ಮಾಧಿಕಾರಿಗಳು ಉಜಿರೆಯ ಕೋಟೆಯನ್ನು ಟಿಪ್ಪು ಸುಲ್ತಾನನಿಂದ ವಶಪಡಿಸಿಕೊಳ್ಳಲು ಬ್ರಿಟೀಷರಿಗೆ ಕೊಟ್ಟ ಸಹಕಾರದ ಬಗ್ಗೆ ರಾಮಕೃಷ್ಣ ಮತ್ತು ಗಾಯಿತ್ರಿ ನಮಗೆ ತಿಳಿಸುತ್ತಾರೆ. (186) ಹಿಂದೂ ಊಳಿಗಮಾನ್ಯ ಪುರೋಹಿತರು ಬ್ರಿಟೀಷರು ಕರ್ನಾಟಕವನ್ನು ಅತಿಕ್ರಮಿಸುವುದಕ್ಕೆ ಶುಭ ಕೋರುವುದಷ್ಟೇ ಅಲ್ಲದೆ, ಜನರನ್ನು ಮತ್ತು ಸಾಮಗ್ರಿಗಳನ್ನು ಪೂರೈಸಿದರು; ಮೈಸೂರು ಸಂಪೂರ್ಣವಾಗಿ ವಿದೇಶಿ ಆಕ್ರಮಣಕಾರರ ವಶವಾಗುವುದಕ್ಕೆ ಮೊದಲೇ ವಸಾಹತುಶಾಹಿಯ ಮುಂದಾಳತ್ವದ ಪ್ರತಿಗಾಮಿ ಮೈತ್ರಿಕೂಟದ ಪ್ರಮುಖ ಭಾಗವಾದರು. 

ನಗರದ ಫೌಜದಾರಿಯೊಂದರಲ್ಲೇ ಬ್ರಾಹ್ಮಣರ 120 ಅಗ್ರಹಾರಗಳಿದ್ದವು ಎಂದು ಸಿದ್ಧಲಿಂಗಸ್ವಾಮಿ ತಿಳಿಸುತ್ತಾರೆ. (187) 

ಸೆಬಾಸ್ಟಿಯನ್ ಜೋಸೆಫರ ಗ್ರಂಥ State and the ritual in the nineteenth century Mysore ಪುಸ್ತಕ ಹೀಗೆ ಕೊನೆಯಾಗುತ್ತದೆ: “ವಸಾಹತು ಶಕ್ತಿಗಳು ನೇರವಾಗಿ ಮತ್ತು ಪರೋಕ್ಷವಾಗಿ ಸಂಪ್ರದಾಯಗಳ ಜೊತೆಗೆ ಹೊಂದಾಣಿಕೆ ಮಾಡಿಕೊಂಡಿತು, ಸಮಾಜವನ್ನು ಮೂಢನಂಬಿಕೆಯ ದಾಸ್ಯದಲ್ಲಿ, ಅಜ್ಞಾನದಲ್ಲಿ ಹಿಂದುಳಿಯುವಂತೆ ಮಾಡಲು”. (188) ಈ ಪ್ರಕ್ರಿಯೆಯ ವಿವರಗಳನ್ನು ಒದಗಿಸುತ್ತ ಸೆಬಾಸ್ಟಿಯನ್ ಹೇಳುತ್ತಾರೆ: “ಪೂರ್ಣಯ್ಯ ಬ್ರಿಟೀಷರ ಆಳ್ವಿಕೆಯಲ್ಲಿ ದಿವಾನರಾಗಿ ಅಧಿಕಾರ ವಹಿಸಿಕೊಂಡ ನಂತರ ದೊಡ್ಡ ಮಟ್ಟದಲ್ಲಿ ಹಣಕ್ಕೆ ಬದಲಾಗಿ ಭೂಮಿಯನ್ನು ವಿನಿಮಯ ಮಾಡಿಸಿದ್ದರು. ದೇವಸ್ಥಾನದ ಜಾಗಗಳನ್ನು, ಭಟ್ಟಮಾನ್ಯ ಅಥವಾ ಅಗ್ರಹಾರದ ಭೂಮಿಗಳನ್ನು ಪುನರ್ ಸ್ಥಾಪಿಸಿದರು. ಪೂರ್ಣಯ್ಯನವರ ಕೆಲವು ವರ್ಷದ ಆಳ್ವಿಕೆ ಪವಾಡದ ರೀತಿಯಲ್ಲಿ ದೇವಸ್ಥಾನಗಳ, ಛತ್ರಗಳ, ಮುಸಾಫಿರ್ ಖಾನಗಳ ಸಂಖೈಯನ್ನು ಹೆಚ್ಚಿಸಿತು. 

ಈ ಕೆಳಗಿನ ಪಟ್ಟಿ 1801ರಲ್ಲಿ ಮತ್ತು 1804ರಲ್ಲಿದ್ದ ಧಾರ್ಮಿಕ ಸಂಸ್ಥೆಗಳ ಅಂಕಿಸಂಖೈಯನ್ನು ನೀಡುತ್ತದೆ”. (188)


ಜಿ.ಹೆಚ್. ಗೋಪಾಲ್ ಊಳಿಗಮಾನ್ಯತೆಯ ಪುರೋಹಿತವರ್ಗದೆಡೆಗಿದ್ದ ಭಕ್ತಿಭಾವದ ಬಗೆಗಿನ ಮಾಹಿತಿಯನ್ನು ನೀಡುತ್ತಾರೆ. (189)



ದಾನದತ್ತಿಯ ಸಂಸ್ಥೆಗಳಿಗೆ ಕೊಡುವ ಮೊತ್ತ 1810-1811ರಲ್ಲಿ 18,825 ಪಗೋಡಾಗಳಷ್ಟಿದ್ದರೆ 1829-30ರಷ್ಟೊತ್ತಿಗೆ 3,11,414 ಪಗೋಡಾ ಗಳಾಗಿತ್ತು (ಅಂದರೆ 9,34,242 ರುಪಾಯಿ). (190) ವಸಾಹತಿನ ಕೈಗೊಂಬೆ ಆಡಳಿತದ ಅರೆಊಳಿಮಾನ್ಯ ರಾಜರ ಅತ್ಯಂತ ದೊಡ್ಡ ಖರ್ಚು ಧರ್ಮದೆಡೆಗಾಗಿತ್ತು. 1829-30ರಲ್ಲಿ ಕೃಷ್ಣರಾಜ ಒಡೆಯರ್ ದಾನಕ್ಕೆಂದು ಕೊಟ್ಟ ಮೊತ್ತ, ಇದು ಧಾರ್ಮಿಕ ಕಾರ್ಯಗಳೆಡೆಗೆ ಮಾಡಿದ ಖರ್ಚಿನ ಒಂದಂಶ ಮಾತ್ರ, ಬ್ರಿಟೀಷರಿಗೆ ಕಕ್ಕುತ್ತಿದ್ದ ಮೊತ್ತದ ಮೂರನೇ ಒಂದಂಶಕ್ಕಿಂತ ಹೆಚ್ಚಿನದಾಗಿತ್ತು. ವಸಾಹತುಶಾಹಿಗಳ ಮುನ್ನಡೆ ಈ ಧಾರ್ಮಿಕ ಪ್ರತಿಗಾಮಿಗಳಿಗೆ ದೈವದತ್ತ ವರದಂತಾಯಿತು. ರಾಜ್ಯದ ಜೊತೆಗಿನ ಸಂಬಂಧ ಗಟ್ಟಿಗೊಳಿಸಿಕೊಂಡ ಈ ಧಾರ್ಮಿಕ ಪ್ರತಿಗಾಮಿಗಳು ಶತಮಾನದಿಂದ ಇಲ್ಲದಿದ್ದ ಬಲ ಪಡೆದರು ಮತ್ತು ತಮ್ಮ ಸಿದ್ಧಾಂತವನ್ನು ನೆಲೆಗೊಳಿಸಿಕೊಂಡರು.

ಈ ಧಾರ್ಮಿಕ ಪುನರುತ್ಥಾನ ಆ ಕಾಲದ ಸಾಮಾಜಿಕ ಜೀವನದ ಮೇಲೆ ಹೆಚ್ಚಿನ ಪರಿಣಾಮ ಬೀರಿತು. ವಸಾಹತು ಆಕ್ರಮಣದ ಅಘಾತವನ್ನು ಕಡಿಮೆಗೊಳಿಸಿದಂತೆ ಮಾಡಿತು. ವಸಾಹತು ಆಳ್ವಿಕೆ ಮತ್ತು ಊಳಿಗಮಾನ್ಯತೆಯ ಮರುಕಳಿಕೆಯ ಪರಿಣಾಮಗಳನ್ನು ತಗ್ಗಿಸುವ ಪ್ರತಿಔಷಧದಂತೆ ಕೆಲಸ ಮಾಡಿತು. ಈ ಧಾರ್ಮಿಕ ಸಂಸ್ಥೆಗಳು ಮಾರಣಾಂತಿಕ ಕರ್ಮ ಸಿದ್ಧಾಂತವನ್ನು ವೈಭವದ ಔದಾರ್ಯದೊಂದಿಗೆ ಪ್ರಸರಿಸದಿದ್ದರೆ ಕರ್ನಾಟಕವನ್ನು ವಸಾಹತುಶಾಹಿ ಶಕ್ತಿಗಳು ಇಷ್ಟು ಸುಲಭವಾಗಿ ವಶದಲ್ಲಿಟ್ಟುಕೊಳ್ಳುತ್ತಿದ್ದುದು ಅನುಮಾನವೇ.

ಟಿಪ್ಪು ಸುಲ್ತಾನನನ್ನು ದ್ರೋಹಿ ಎಂದು ಆರೋಪಿಸುವ ಹಿಂದೂ ಕೋಮುವಾದಿಗಳು ಒಡೆಯರ್ ಧಾರ್ಮಿಕ ಪ್ರತಿಗಾಮಿತನವನ್ನು ಪುನರ್ ಸ್ಥಾಪಿಸಿದ್ದರ ಬಗ್ಗೆ ಮೌನವಾಗಿದ್ದುಬಿಡುತ್ತಾರೆ. ಟಿಪ್ಪುವಿನ ವಿರುದ್ಧದ ತಮ್ಮ ದ್ವೇಷವನ್ನು ಹತ್ತಿಕ್ಕಲಾಗದೆ ಬಡಬಡಿಸುತ್ತಾರೆ.

ಮುಂದಿನ ವಾರ:
ಜಾತಿ ದೌರ್ಜನ್ಯದ ಹೆಚ್ಚಳ

ಮೇ 26, 2016

ಧಾರವಾಡದಲ್ಲಿ ಮೇ ಸಾಹಿತ್ಯ ಮೇಳ 28 ಮತ್ತು 29ರಂದು

26/05/2016
ವಿಷಯ - ಸಮಕಾಲೀನ ಸವಾಲುಗಳು : ಹೊಸ ತಲೆಮಾರಿನ ಪ್ರತಿಸ್ಪಂದನೆ
೨೦೧೬, ಮೇ ೨೮ ಮತ್ತು ೨೯,
ಆಲೂರು ವೆಂಕಟರಾವ್ ಸಭಾಭವನ, ಧಾರವಾಡ
ಲಡಾಯಿ ಪ್ರಕಾಶನ, ಗದಗ
ಕವಿ ಪ್ರಕಾಶನ, ಕವಲಕ್ಕಿ
ಚಿತ್ತಾರ ಕಲಾ ಬಳಗ

ಬೆಳಗ್ಗೆ 10 ಗಂಟೆಗೆ ಆರಂಭ. ಬನ್ನಿ ಗೆಳೆಯರೊಂದಿಗೆ.. ಹೊರಗಿನಿಂದ ಬರುವವರೆಗೆ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ. ವಸತಿ ಸಮಿತಿಯ ಸಂಚಾಲಕ ಸಮಿತಿ ಸಂಪರ್ಕಿಸಿ. ಡಾ. ಡಿ. ಬಿ ಗವಾನಿ(ಸಂಚಾಲಕರು) -9482931100
ಮೆಹಬೂಬ ನದಾಫ - 9844444826
ರಾಜಕುಮಾರ ಮಡಿವಾಳರ - 9886436020 
ಡಾ. ಶೌಕತ್ ಅಲಿ ಮೇಗಲಮನಿ -9448529867
ಪ್ರೇಮಾ ನಡುವಿನಮನಿ -9035261701 
ಬಸವರಾಜ ಮ್ಯಾಗೇರಿ-9972977789
ಮಧು ಬಿರಾದಾರ -9686645263