ಜೂನ್ 12, 2009

ನಿರೀಕ್ಷೆ.

ನಿನ್ನೆ
ಬರಿದಾದರು
ನಾಳೆ
ಬೆಳಕಿಲ್ಲವೇ?
- ಪ್ರಶಾಂತ್ ಅರಸ್.

ವ್ಯಸನ.

ಮರೆಯದ ಮನಸಿನ
ಮಾತು
ಮತ್ತೆ ಮತ್ತೆ ಕರೆದಿದೆ;
ಹೃದಯದ ಕೋಟೆಯ
ಇಂಚು ಇಂಚು
ಕೊರೆಯುತ್ತಲಿದೆ.
- ಪ್ರಶಾಂತ್ ಅರಸ್.

ಲಹರಿ.

ನೀರಿನ ಮೇಲೆ ಮುನಿಸಿಕೊಂಡರೆ
ನಾರುವವರು ನಾವು ತಾನೆ!!
- ಪ್ರಶಾಂತ್ ಅರಸ್.

circle.

ಓಡಿದೆ ಓಡಿದೆ
ಕೊನೆ ಮುಟ್ಟುವ
ತನಕ
ಎಲ್ಲಿಯೂ ನಿಲ್ಲದೆ;
ಕೊನೆಗೂ ಕೊನೆ
ಸಿಗಲಿಲ್ಲ,
ಜೀವನದ circle ಅದುವೇ!!
-ಪ್ರಶಾಂತ್ ಅರಸ್ 

ಅವಳೇ ಕಾರಣ.

ನೆನಪಿನಂಗಳದಿ
ಚಂದಿರನ
ಬೆಳದಿಂಗಳು
ಅವಳ ನಗು;
ವಾಸ್ತವದಲ್ಲಿ ನನ್ನನ್ನು
ಆವರಿಸಿದ
ಅಂಧಕಾರದ
ಅಮಾವಾಸ್ಯೆಯ ಕತ್ತಲು
ಕೂಡ ಅವಳೇ!!
- ಪ್ರಶಾಂತ್ ಅರಸ್ 
- ಪ್ರಶಾಂತ್ ಅರಸ್.

ಮೇ 5, 2009

ಮರೀಚಿಕೆ.

ಕಾಡುವ ಕನಸು ಕಂಗಳಲ್ಲಿ
ಬೇಡುವ ಬಯಕೆ ಮನದ
ಮೂಲೆಯಲ್ಲಿ,
ಸಿಗಲಾರದು ಎನ್ನುವ
ಕಟು ವಾಸ್ತವದಲ್ಲಿ
ದಿನಗಳು ಉರುಳುತಿದೆ
ಶರವೇಗದಲ್ಲಿ.

- ಅರಸ್ .

ಏಪ್ರಿ 13, 2009

ಭಾವ.

ಭಾವನೆಗಳೇ ಹೀಗೆ

ಭಾವುಕನೇ ಹೀಗೆ

ಒಮ್ಮೆ ಭಾವನೆಗಳ

ಸುಳಿಯಲ್ಲಿ ಜಾರುವ;

ಒಮ್ಮೆ ನಲಿವ;

ಜಾರಿದರೂ

ನಲಿದರೂ

ಭಾವವೇ ಜೀವಾಳ

ಇದೇ ನನ್ನ

ಬದುಕು.

-ವಿನಯ್ ಬಿ ಎಸ್

ನೆರಳು.

ಇಲ್ಲ, ಸರಿಯಾಗಿ ಇಂಥದೇ ದಿನದಿಂದ ಈ ತೊಂದರೆ ಆರಂಭವಾಗಿತ್ತು ಎಂದ್ಹೇಳಲು ಕಷ್ಟವಾಗಿತ್ತು ರಾಜೀವನಿಗೆ. ಮೊದಲು ಅನುಭವಕ್ಕೆ ಬಂದಿದ್ದು ಇತ್ತೀಚಿಗೆ ಮೈಸೂರಿನಿಂದ ಬೆಂಗಳೂರಿಗೆ ಹೋಗುವಾಗ. ಶ್ರೀರಂಗಪಟ್ಟಣ ದಾಟಿ ಹತ್ತು ನಿಮಿಷವಾಗಿದ್ದಾಗ ಕಾರು ಕೆಟ್ಟು ನಿಂತಿತ್ತು. ಈ ಬಾರಿ ಯಾಕೋ ಪ್ರಚಂಡ ಬಿಸಿಲು. ಕಾರಿನ ಎ.ಸಿಯೂಬಂದಾಗಿತ್ತು. 'ಅಲ್ಲೇ ಮರದ ನೆರಳಲ್ಲಿ ನಿಂತಿರಿ ಸರ್. ಏನಾಗಿದೆ ನೋಡ್ತೀನಿ' ಎಂದ ಡ್ರೈವರ್. ಸರಿ ಎಂದುಕೊಂಡು ಮರದ ಬಳಿ ಬಂದ. ಘಂಟೆ ಎರಡಾಗಿತ್ತು. ಸೂರ್ಯ ಪ್ರಖರವಾಗಿದ್ದ. ಮರದ ನೆರಳು ಕಾಣಲಿಲ್ಲ!!. ತಲೆಯೆತ್ತಿ ನೋಡಿದ. ಸೂರ್ಯ ನಕ್ಕಂತಾಯಿತು. ರಾತ್ರಿ ಕುಡಿದಿದ್ದು ಜಾಸ್ತಿಯಾಯಿತೇನೋ ಎಂದುಕೊಂಡು ನಗು ಬಂತು. ಗಾಬರಿಯಾಗಿದ್ದು ತನ್ನ ನೆರಳು ಕಾಣದಿದ್ದಾಗ!

ಅಂದಿನಿಂದ ರಾಜೀವ ಹುಡುಕುತ್ತಲೇ ಇದ್ದಾನೆ. ನೆರಳೇ ಕಾಣಸಿಗುತ್ತಿಲ್ಲ. ದೂರದಲ್ಲೆಲ್ಲೋ ಜನ ಮರದ ಕೆಳಗೆ ನಿಂತಿದ್ದರೆ ಆಸೆಗಣ್ಣುಗಳಿಂದ ಹತ್ತಿರ ಹೋಗುತ್ತಾನೆ ,ನೆರಳಿನ ಗುರುತಿಲ್ಲ. ಯಾರೊಡನೆ ಹೇಳಿಕೊಳ್ಳುವುದೆಂದು ತಿಳಿಯಲಿಲ್ಲ. ತಿಂಗಳ ಹಿಂದೆ ಹೆಂಡತಿಯೊಡನೆ ಜಗಳವಾಡಿದ್ದ. ಮಾತಿನ ನಡುವೆ 'ನನ್ನ ನೆರಳನ್ನೇ ನಂಬೋದಿಲ್ಲ ನಾನು, ಇನ್ನು ನಿನ್ನನ್ನು ನಂಬ್ತೀನಾ?' ಎಂದಿದ್ದ. ಕೋಪಗೊಂಡು ತವರಿಗೆ ಹೋದವಳು ಇನ್ನು ತಿರುಗಿ ಬಂದಿಲ್ಲ. ಸೈಕಿಯಾಟ್ರಿಸ್ಟನಾದರೂ ನೋಡೋಣವೆನ್ದುಕೊನ್ಡ, ಭಯವಾಯಿತು. ಕಾಲೇಜಿನ ದಿನಗಳಲ್ಲಿ ಓದಿದ್ದ ಜೋಗಿಯ ಕಥೆ ನೆನಪಾಯಿತು. ಅ ಕಥೆಯಲ್ಲಿ ಪಾತ್ರವಾಗಿದ್ದ ಗಳಗನಾಥರಿಗೆ ಕನ್ನಡಿಯಲ್ಲಿ ಪ್ರತಿಬಿಂಬ ಕಾಣುವುದಿಲ್ಲ. ಅದು ಸಾವಿನ ಮುನ್ಸೂಚನೆಯಾಗಿತ್ತು ಅದರಲ್ಲಿ. ನನಗೂ.....ತಲೆ ಕೊಡವಿದ.

ರಾತ್ರಿ ಸರಿಯಾಗಿ ನಿದ್ರೆಯಾಗಿರಲಿಲ್ಲ. ಡ್ರೈವರ್ ರಜೆಯಿದ್ದ ಕಾರಣ ಕಾರನ್ನು ತೆಗೆದುಕೊಂಡು ಜೆ.ಎಸ್.ಎಸ್. ಕಾಲೇಜಿನ ಹಿಂದಿನ ರಸ್ತೆಯಲ್ಲಿ ಸಯ್ಯಾಜಿರಾವ್ ರಸ್ತೆಯೆಡೆಗೆ ಹೊರಟಿದ್ದ. ಬಲಭಾಗದಲ್ಲಿದ್ದ ಮಸಣದಲ್ಲಿ ಮರದ ಬುಡದಲ್ಲಿ ಮೈಚಾಚಿ ಮಲಗಿತ್ತು ನೆರಳು. ಖುಷಿ ತಡೆಯಲಾಗದೆ ಕಿಟಕಿಯ ಗಾಜಿಳಿಸಿ ಕತ್ತು ಹೊರಹಾಕಿದ; ಸ್ಟೀರಿಂಗ ಕೈ ತಪ್ಪಿತು.....ಎದುರಿಗೆ ದೊಡ್ಡ ಲಾರಿ.......

- ಅಶೋಕ್.

ಏಪ್ರಿ 10, 2009

ಹಿಂಗ್ಯಾಕೆ?

ನನಗೆ ಬೆಳಕಾಗಿದ್ದು
ಅವಳಿಗೆ
ಬಿಸಿಲಾಯಿತು;
ನನಗೆ ನೆರಳಾಗಿದ್ದು
ಅವಳಿಗೆ
ಕತ್ತಲಾಯಿತು;
ನಮ್ಮಿಬ್ಬರಲ್ಲಿ
ಹೊಂದಾಣಿಕೆಎಂಬುದು
ಮರಿಚಿಕೆಯಾಯಿತು.
- ಅಭಿ ಹನಕೆರೆ.

ಮಾರ್ಚ್ 27, 2009

ನೆಪ

ಉಸಿರು ನೀನೆ,
ಜೀವವು ನೀನೆ
ಅವೆರಡರ ಮಿಲನಕ್ಕೆ ಇರೋ
ನಾನು
ಬರಿ ನೆಪ ಮಾತ್ರ ,
ನೀನಿಲ್ಲದಿರೆ ನಾನಿಲ್ಲ ,,,,
- ವಿನಯ್ ಬಿ ಎಸ್