ಬೆಳಿಗ್ಗೆಯಿಂದ ಓದು ಚೆಂದ ಸಾಗ್ತಿತ್ತು. ಮಧ್ಯಾಹ್ನ ರಾಮ್ ಜೊತೆ ಊಟ ಮುಗಿಸಿ ಮತ್ತೆ ಓದಲು ಕುಳಿತವಳಿಗೆ ಹಿಂದಿನ ವಾರವಷ್ಟೇ ಓದಿದ್ದ ಪಾಠ ಮನಸ್ಸಲ್ಲಿ ಮೂಡಿತು. ಕಳೆದ ವಾರವಷ್ಟೇ ಓದಿದ್ದ ಸಂಗತಿಗಳು ಹೆಚ್ಚು ಕಡಿಮೆ ಮರೆತೇ ಹೋದಂತಾಗಿಬಿಟ್ಟಿತ್ತು! ಇಲ್ಲ ಇಲ್ಲ ನೆನಪಿರ್ತದೆ, ಸುಮ್ನೆ ಹಂಗೆ ಮರೆತಂಗಾಗಿದೆ ಅಷ್ಟೇ ಅಂದಕೊಂಡು ಪುಸ್ತಕ ಮುಚ್ಚಿ ಕಣ್ಣು ಮುಚ್ಚಿ ಓದಿದ್ದ ಪಾಠವನ್ನು ನೆನಪಿಸಿಕೊಳ್ಳಲು ಪ್ರಯತ್ನಿಸಿದೆ. ಉಹ್ಞೂ... ನೆನಪಾಗಲೊಲ್ಲದು! ನೂರರಷ್ಟು ಬೇಡ, ಐವತ್ತು ಪರ್ಸೆಂಟ್ ಹೋಕ್ಕೊಳ್ಳಿ ಹತ್ತು ಪರ್ಸೆಂಟ್, ಬೇಡ ಐದು ಪರ್ಸೆಂಟ್... ಉಹ್ಞೂ... ಪಾಠದ ಹೆಸರು ಬಿಟ್ಟು ಮತ್ತೇನೂ ನೆನಪಾಗುತ್ತಿಲ್ಲ. ಸಬ್ ಹೆಡ್ಡಿಂಗ್ಸ್ ನೋಡ್ಕಂಡರೆ ಎಲ್ಲಾ ಪಟ್ಟಂತ ನೆನಪಾಗಿಬಿಡ್ತದೆ ಅಂತ ಧೈರ್ಯ ತಂದುಕೊಂಡು ನಿಧಾನಕ್ಕೆ ಭಯದಿಂದಲೇ ಪಾಠದ ಪುಟ ತಿರುವಿ ಬೇರ್ಯಾವುದರ ಮೇಲೂ ಕಣ್ಣಾಡಿಸದೆ ಇದ್ದ ಆರು ಸಬ್ ಹೆಡ್ಡಿಂಗಿನ ಮೇಲೆ ಕಣ್ಣಾಡಿಸಿದೆ. ಉಹ್ಞೂ.... ಸಬ್ ಹೆಡ್ಡಿಂಗುಗಳಿಗೆ ಕೂಡ ತಲೆಯಲ್ಲಿನ ಬಲ್ಬು ಉರಿಸುವ ಶಕ್ತಿ ಇರಲಿಲ್ಲ. ಅಳುವೇ ಬಂದಂತಾಯಿತು. ಇದು ಹೊಸ ಟಾಪಿಕ್, ಪರೀಕ್ಷೆಗಷ್ಟೇ ಮುಖ್ಯವಾದ ಟಾಪಿಕ್ಕೇನೋ ಹೌದು. ಆದರೆ ಕಳೆದ ವಾರವಷ್ಟೇ ಓದಿದ್ದ ಪಾಠದ ಗತಿಯೇ ಈ ರೀತಿಯಾದರೆ ಇನ್ನೊಂದದಿನೈದು ದಿನದಲ್ಲಿರುವ ಪರೀಕ್ಷೆಯಲ್ಲಿ ಏನು ಬರೆಯುವುದು? ಕಳೆದ ತಿಂಗಳು ಓದಿದ ಪಾಠಗಳ ಗತಿಯೇನು? ಕಳೆದ ತಿಂಗಳು ಓದಿದ ಪಾಠಗಳೆಲ್ಲವೂ ಸ್ಮೃತಿ ಪಟಲದಲ್ಲಿ ಮಿಂಚಿತು, ಪಾಠದೊಳಗಿನ ವಿಷಯಗಳೆಲ್ಲ ಮರೆಯಾಗಿತ್ತು. ಅಳು ಬಂದಂತಾಗುವುದೇನು, ಬಂದೇಬಿಟ್ಟಿತು. ಪುಸ್ತಕವನ್ನು ಬದಿಗೆ ಸರಿಸಿ ಮೇಜಿಗೆ ಹಣೆಕೊಟ್ಟು ಮೇಜನ್ನೊಂದಷ್ಟು ತೇವವಾಗಿಸಿದೆ. ʻಪರವಾಗಿಲ್ಲ ಧರಣಿ, ಇದು ಪರೀಕ್ಷೆ ಸಮಯದಲ್ಲಿ ಮಾಮೂಲಿ. ಎಂಬಿಬಿಎಸ್ನಲ್ಲೂ ಇಂತದ್ದು ಎಷ್ಟು ಸಲ ಆಗಿಲ್ಲ. ಕೊನೆಗೆ ಪರೀಕ್ಷೆಯ ದಿನ ಎಲ್ಲವೂ ನೆನಪಾಗೇ ಆಗ್ತದೆ ಅನ್ನೋದನ್ನ ಮರೀಬೇಡ. ಇಲ್ಲೂ ಅಷ್ಟೇ ಆಗಿರೋದು. ಮತ್ತೇನೂ ಅಲ್ಲ. ಗಾಬರಿ ಆಗೋದೇನೂ ಇಲ್ಲ. ಗಾಬರಿ ಆದರೆ ಮುಂದಕ್ಕೆ ಓದಲಾಗುವುದಿಲ್ಲ. ಓದದೇ ಹೋದರೆ ಮತ್ತಷ್ಟು ಗಾಬರಿ ಆಗ್ತದೆ. ಮತ್ತೆ ಓದೋದಿಕ್ಕಾಗುವುದಿಲ್ಲ. ಮತ್ತಷ್ಟು ಗಾಬರಿ. ಅಂತ್ಯವಾಗದ ವೃತ್ತದ ಸುಳಿಗೆ ಸಿಲುಕಬೇಡ. ಒಂದಷ್ಟು ಪಾಠಗಳು ಮರೆತರೇನು, ಇನ್ನೊಂದಷ್ಟು ಪಾಠ ಓದಿ ನಾಳೆ ಹಳೇ ಪಾಠಗಳ ಮೇಲೊಮ್ಮೆ ಕಣ್ಣಾಡಿಸಿದರಾಯಿತು. ಹಳೇದೇ ನೆನಪಿಲ್ಲ, ಹೊಸತು ಮತ್ತೆಲ್ಲಿ ನೆನಪಾಗ್ತದೆ? ಇಲ್ಲಿಲ್ಲ ಇಂತ ಆಲೋಚನೆಗಳನ್ನು ದೂರಕ್ಕೆ ತಳ್ಳುವುದೇ ಸರಿ. ಇಲ್ಲಾಂದ್ರೆ ಮುಗೀತು ಕತೆ. ಫೇಲಾಗ್ತೀನಿ. ಫೇಲಾದ್ರೆ ಮನೇಲಿ ರಾಜೀವನ ಕಿರಿಕಿರಿ! ಹಣದ ಸಮಸ್ಯೆ! ಅಯ್ಯಪ್ಪ... ಅದನ್ನೆಲ್ಲಾ ನೆನೆಸಿಕೊಂಡರೇನೇ ಭಯವಾಗ್ತದೆ. ಸಮಸ್ಯೆಗಳಿಗೊಂದಷ್ಟು ಪರಿಹಾರ ಸಿಗಬೇಕೆಂದರೆ ನಾ ಪಾಸಾಗಲೇಬೇಕು. ಅದಕ್ಕೋಸ್ಕರನಾದರೂ ಓದು ಮುಂದುವರಿಸಲೇಬೇಕು. ಇನ್ನದಿನೈದು ದಿನವಿರುವಾಗ ಅರ್ಧ ದಿನವನ್ನು ಕಳೆದುಕೊಳ್ಳುವುದು ಯುಕ್ತಿಯ ಕೆಲಸವಲ್ಲ. ಕಮಾನ್ ಧರಣಿ ಯು ಕ್ಯಾನ್ ಡು ಇಟ್. ಕಮಾನ್' ಅಂತ ನನಗೆ ನಾನೇ ಹುರಿದುಂಬಿಸಿಕೊಂಡು ತಲೆ ಮೇಲೆತ್ತುವಷ್ಟರಲ್ಲಿ ಅಳು ನಿಂತಿತ್ತು. ಬಿಡದಂತೆ ಒಂದು ಪುಟ ಓದಿ ಮುಗಿಸಿದೆ, ಅದಕ್ಕಿಂತ ಮುಂದಕ್ಕೋಗಲಾಗಲಿಲ್ಲ. ಮನದಲ್ಲಿ ವಿವರಿಸಲಾಗದ ಭೀತಿ. ʻಏನ್ ಅಬ್ಬಬ್ಬಾ ಅಂದ್ರೆ ಆರು ತಿಂಗಳು ಹೋಗ್ತದೆ ಅಷ್ಟೇ. ಅದಕ್ಯಾಕೆ ಇಷ್ಟೊಂದು ಚಿಂತೆ' ಸುಳ್ಳು ಸುಳ್ಳೇ ವೈರಾಗ್ಯದ ಮೊರೆ ಹೊಕ್ಕು ನೋಡಿದೆ. ಉಪಯೋಗವಾಗಲಿಲ್ಲ. ಒಂದ್ ಕಾಫಿ ಕುಡಿದ್ರೆ ಎಲ್ಲಾ ಸರಿ ಹೋಗಿಬಿಡ್ತದೆ ಅನ್ನೋ ಸಂಗತಿ ಹೊಳೆದು ಲವಲವಿಕೆಯಿಂದ ಎದ್ದು ಟಾಯ್ಲೆಟ್ಟಿಗೆ ಹೋಗಿ ಹೊಟ್ಟೆ ಹಗುರಾಗಿಸಿಕೊಂಡು ಕ್ಯಾಂಟೀನಿನಲ್ಲಿ ಒಂದು ಸ್ಟ್ರಾಂಗ್ ಫಿಲ್ಟರ್ ಕಾಫಿ ಮಾಡಿಸಿಕೊಂಡು ಕುಡಿದೆ. ಓದುವ ಉತ್ಸಾಹ ಮೂಡಿತು. ಲೈಬ್ರರಿಗೆ ಹಿಂದಿರುಗಿದೆ. ಮತ್ತರ್ಧ ಘಂಟೆ ಹಂಗೂ ಹಿಂಗೂ ಕಷ್ಟ ಪಟ್ಟು ಓದಿದೆ. ಮತ್ತದೇ ಹೇಳತೀರದ ಗೋಳು.
ಜೂನ್ 23, 2020
ಜೂನ್ 11, 2020
ಒಂದು ಬೊಗಸೆ ಪ್ರೀತಿ - 67
ಮೊದಲಿಂದಾನೂ ಚೆನ್ನಾಗಿ ಕೆಲ್ಸ ಮಾಡಿದ್ದಾಳೆ ಅನ್ನೋ ಕಾರಣಕ್ಕೋ, ನಮ್ ಆಸ್ಪತ್ರೆಯಲ್ಲೇ ಇದ್ದೋಳಲ್ವ ಅನ್ನೋ ಕಾರಣಕ್ಕೋ ಅಥವಾ ಪಾಪ ಚಿಕ್ ಮಗು ಇಟ್ಕಂಡು ಇಷ್ಟೊಂದ್ ದುಡ್ದಿದ್ದಾಳೆ, ಓದೋಕ್ ಟೈಮ್ ಕೊಡೋದ್ ಬೇಡ್ವೇ ಅನ್ನೋ ಅನುಕಂಪದಿಂದಲೋ ಒಟ್ನಲ್ಲಿ ಥಿಯರಿ ಪರೀಕ್ಷೆಗೆ ಇನ್ನೂ ಎರಡು ತಿಂಗಳು ಇರುವಾಗಲೇ ಡ್ಯೂಟಿಯಿಂದ ರಿಲೀವ್ ಮಾಡಿದ್ರು. "ಅಯ್ಯೋ ಹೆಣ್ಮಕ್ಳಿಗೆ ಬಿಡಪ್ಪ ಸಲೀಸು' ಅಂತ ಜೂನಿಯರ್ ಹುಡುಗ್ರು ಪಿಜಿಗಳು, ʻಅವಳೇನ್ ಕಿಸ್ಕಂಡ್ ಮಾತಾಡ್ತಾಳಲ್ಲ ಅದ್ಕೆ ' ಅಂತ ಜೂನಿಯರ್ ಹುಡ್ಗೀರ್ ಪೀಜಿಗಳು ನಾನಿಲ್ಲದಾಗ ಮಾತಾಡಿಕೊಂಡಿದ್ದು ಸುಮಾಳ ಮೂಲಕ ಕಿವಿಗೆ ಬಿತ್ತು. ಯಾರ್ ಏನ್ ಮಾತಾಡ್ಕಂಡ್ರೇನು, ನನಗೆ ಓದೋಕೆ ಸಮಯ ಸಿಕ್ತಲ್ಲ ಅಷ್ಟು ಸಾಕಿತ್ತು ನನಗೆ. ಡಿ.ಎನ್.ಬಿಯಲ್ಲಿ ಥಿಯರಿ ಪಾಸೋಗೋದ್ ಸಲೀಸು, ಪ್ರ್ಯಾಕ್ಟಿಕಲ್ಸೇ ತಲೆನೋವು ಅಂತ ಎಲ್ರೂ ಹೇಳ್ತಾರೆ. ನಾನೀಗ ಓದಿರೋ ಮಟ್ಟಕ್ಕೆ ಪ್ರ್ಯಾಕ್ಟಿಕಲ್ಸ್ ಇರಲಿ ಥಿಯರಿ ಪಾಸಾಗೋದು ಕೂಡ ಅನುಮಾನವೇ ಸರಿ. ಇನ್ನೆರಡು ತಿಂಗಳು ಬಿಡದೆ ಓದಿದರೆ ತೊಂದರೆಯಿಲ್ಲ ಅನ್ಕೋತೀನಿ. ಆದರೆ ಓದೋದೆಲ್ಲಿ? ಮನೇಲಿ ಕುಳಿತು ಓದಲು ಕಷ್ಟ ಕಷ್ಟ. ಮನೇಲೇ ಇದ್ದೀಯಲ್ಲ, ಮಗಳನ್ನು ಸ್ವಲ್ಪ ಹೊತ್ತು ನೋಡ್ಕೋ ಅಂತ ಅಮ್ಮ ಹೇಳದೆ ಇರಲಾರರು. ಇನ್ನು ರಾಜೀವನಿಗೆ ತಿಂಡಿ ಊಟ ಕಾಫಿ ಟೀ ಅಂತ ಒಂದಷ್ಟು ಸಮಯ ಹಾಳಾಗೋದು ಖಂಡಿತ. ಇಲ್ಲಿ ಆಸ್ಪತ್ರೆಯಲ್ಲಿರೋ ಲೈಬ್ರರಿಗೇ ಬಂದು ಓದಬೇಕು. ಇನ್ನೆಲ್ಲಿ ಕುಳಿತರೂ ಕೆಲಸ ಕೆಡ್ತದೆ ಅಂದುಕೊಂಡೆ. ರಾಜೀವನಿಗೂ ಅದನ್ನೇ ಹೇಳಿದೆ. "ಅದೇ ಸರಿ. ಇಲ್ಲಾಂದ್ರೆ ಎಲ್ಲಿ ಓದೋಕಾಗುತ್ತೆ ಬಿಡು" ಅಂದರು. ಇತ್ತೀಚಿನ ದಿನಗಳಲ್ಲಿ ನಾನು ಅವರು ಯಾವ ಕಿತ್ತಾಟವೂ ಇಲ್ಲದೆ ಒಪ್ಪಿಕೊಂಡ ಸಂಗತಿಯಿದು! "ಸದ್ಯಕ್ಕೆ ನಿಮ್ಮ ಅಮ್ಮನಿಗೆ ಡ್ಯೂಟಿ ರಿಲೀವ್ ಮಾಡಿದ ಬಗ್ಗೆ ಹೇಳಬೇಡ. ಬಿಡುವಾಗಿದ್ರೂ ಬಂದು ಮಗಳನ್ನ ನೋಡದೆ ಓದ್ತಾ ಕೂತಿದ್ದಾಳೆ ಅಂತಂದ್ರೂ ಅಂದ್ರೆ" ಎಂದು ನಕ್ಕರು. ಪರವಾಗಿಲ್ಲ ಚೆನ್ನಾಗೇ ಅರ್ಥ ಮಾಡಿಕೊಂಡಿದ್ದಾರೆ ಅತ್ತೇನ!
ರಾಜೀವ ಹೇಳಿದಂತೆಯೇ ಅಮ್ಮನಿಗೆ ಹೇಳಲೋಗಲಿಲ್ಲ. ʻಇನ್ನು ಮೇಲೆ ನೈಟ್ ಡ್ಯೂಟಿ ಇರಲ್ಲ. ಸಂಜೆ ಕೆಲಸ ಮುಗಿದ ಮೇಲೆ ಒಂದಷ್ಟು ಸಮಯ ಓದಿಕೊಂಡು ರಾತ್ರಿ ಎಂಟರಷ್ಟೊತ್ತಿಗೆ ಬರ್ತೀನಿ' ಎಂದಿದ್ದಕ್ಕೇ ಅಮ್ಮ ಉರ ಉರ ಅಂದು ಸುಮ್ಮನಾದರು. ಅಮ್ಮ ಏನಂದ್ರೂ ಏನ್ ಬಿಟ್ರು ಸುಮ್ಮನಿರಲೇಬೇಕಾಗಿತ್ತು, ನನ್ನ ಅನಿವಾರ್ಯತೆ. ಲೈಬ್ರರಿಯಲ್ಲಿ ಕುಳಿತು ಓದಿ ಅಭ್ಯಾಸವೇ ಇರಲಿಲ್ಲ ನನಗೆ. ಮುಂಚೆಯಿಂದ ಓದಿದ್ದೆಲ್ಲ ಮನೆಯಲ್ಲೇ. ಈಗ ವಿಧಿಯಿಲ್ಲ, ಹೊಸ ಜಾಗದಲ್ಲಿನ ಓದಿಗೆ ಹೊಂದಿಕೊಳ್ಳಲೇಬೇಕು. ಬೆಳಿಗ್ಗೆ ಐದಕ್ಕೆಲ್ಲ ಎದ್ದು ಒಂದು ಘಂಟೆ ಕಾಲ ಓದಿ, ಕಸ ಗುಡಿಸಿ, ಮನೆ ಒರಸಿ, ಬೆಳಗಿನ ತಿಂಡಿ ಮಾಡಿ ತಿಂದು ನನಗೂ ರಾಜೀವನಿಗೂ ಬಾಕ್ಸಿಗೆ ಹಾಕುವಷ್ಟರಲ್ಲಿ ಎದ್ದಿರುತ್ತಿದ್ದ ಮಗಳಿಗೆ ಸ್ನಾನ ಮಾಡಿಸಿ ಅವಳು ತಿಂದರೊಂದಷ್ಟು ತಿನ್ನಿಸಿ ಅಮ್ಮನ ಮನೆಗೋಗಿ ಮಗಳನ್ನು ಬಿಟ್ಟು ಆಸ್ಪತ್ರೆಯ ಲೈಬ್ರರಿಯನ್ನು ಒಂಭತ್ತಕ್ಕೆ ಮುಂಚೆ ಸೇರಿದರೆ ಮತ್ತೆ ಮೇಲೇಳುತ್ತಿದ್ದದ್ದು ಹನ್ನೊಂದೂವರೆಗೆ ಒಂದು ಕಾಫಿ ಕುಡಿಯುವ ನೆಪದಿಂದ. ಅಪರೂಪಕ್ಕೆ ಸುಮಾ ಜೊತೆಯಗುತ್ತಿದ್ದಳು. ಹೆಚ್ಚಿನ ದಿನ ಅವಳು ಮನೆಯಲ್ಲೇ ಓದಿಕೊಳ್ಳುತ್ತಿದ್ದಳು. ಕೆಲವೊಮ್ಮೆ ರಾಮ್ ಪ್ರಸಾದ್ ದಾರಿಯಲ್ಲಿ ಸಿಕ್ಕರೆ ಜೊತೆಗೆ ಬರುತ್ತಿದ್ದರು. ಲೋಕಾಭಿರಾಮ ಒಂದಷ್ಟು ಮಾತಾಡಿ ಕಾಫಿ ಕುಡಿದು ಮತ್ತೆ ಲೈಬ್ರರಿ ಸೇರಿ ಪುಸ್ತಕದೊಳಗೆ ತಲೆ ತೂರಿಸಿದರೆ ಮತ್ತೆ ತಲೆಯೆತ್ತುತ್ತಿದ್ದದ್ದು ಮಧ್ಯಾಹ್ನ ಒಂದೂವರೆಗೆ ಊಟಕ್ಕೆಂದು ಎದ್ದಾಗ. ತಂದಿದ್ದ ಒಂದು ಪುಟ್ಟ ಬಾಕ್ಸಿನ ತಿಂಡಿ ಸಾಲುತ್ತಿರಲಿಲ್ಲ, ಜೊತೆಗೊಂದು ಬೋಂಡಾನೋ ಮಂಗಳೂರು ಗೋಳಿಬಜ್ಜೀನೊ ತೆಗೆದುಕೊಳ್ಳಲೇಬೇಕು. ಹೆಚ್ಚು ಕಮ್ಮಿ ಪ್ರತಿ ಮಧ್ಯಾಹ್ನ ರಾಮ್ ಪ್ರಸಾದ್ ಅದೇ ಸಮಯಕ್ಕೆ ಕ್ಯಾಂಟೀನಿಗೆ ಬರೋರು, ಜೊತೆಯಾಗೋರು. ಲೈಬ್ರರಿಗೆ ಬಂದರೂ ಹೆಚ್ಚಿನ ಸಮಯ ಮನೆಗೆ ಊಟಕ್ಕೆ ಹೋಗಿಬಿಡುತ್ತಿದ್ದ ಸುಮಾ ಅಪರೂಪಕ್ಕೆ ನನ್ನ ಜೊತೆ ಕ್ಯಾಂಟೀನಿಗೆ ಬಂದಾಗೆಲ್ಲ ರಾಮ್ ಪ್ರಸಾದ್ ಇರೋದನ್ನ ನೋಡಿ "ಅದೇನ್ ನೀ ಊಟಕ್ ಬರೋ ಟೈಮಿಗೇ ಬರ್ತಾರಲ್ಲ ಅವರೂನು" ಅಂತ ಕಾಲೆಳೆಯೋಳು. ʻಅಯ್ಯೋ ಗೂಬೆ. ಕೊ ಇನ್ಸಿಡೆನ್ಸ್ ಅಷ್ಟೆ' ಅಂದರೆ "ಬರೀ ಕೋ ಇನ್ಸಿಡೆನ್ಸಾ...." ಅಂತ ರೇಗಿಸದೆ ಸುಮ್ಮನಿರುತ್ತಿರಲಿಲ್ಲ.
ಜೂನ್ 4, 2020
ಬೇಸಿಕಲಿ ವಿ ಆರ್ ಬ್ಲಡಿ ಹಿಪೋಕ್ರೈಟ್ಸ್…
ಇತ್ತೀಚೆಗೆ ಚನ್ನಪಟ್ಟಣದಲ್ಲಿ ಕರಡಿಯೊಂದು ಮಹಿಳೆಯೊಬ್ಬರ ಮೇಲೆ ದಾಳಿ ನಡೆಸಿತು… ತುಮಕೂರು ಸಮೀಪದ ಊರಿನಲ್ಲಿ ಮೂರು ವರ್ಷದ ಮಗುವನ್ನು ಚಿರತೆ ಹೊತ್ತೊಯ್ದಿತು…. ಕುಣಿಗಲ್ ಸುತ್ತಮುತ್ತ ಹಸು, ಸಾಕಿದ ನಾಯಿಯನ್ನೊತ್ತಯ್ಯಲು ಬರುವ ಚಿರತೆಗಳ ಸಂಖೈ ಹೆಚ್ಚುತ್ತಿದೆ…. ಮೊನ್ನೆ ಕೇರಳದಲ್ಲಿ ಆನೆಯೊಂದು ಸತ್ತಿದೆ….
ಕೆಂಗೇರಿ ಹತ್ತಿರ ಕೊಮ್ಮಘಟ್ಟ ಅನ್ನೋ ಊರಿದೆ. ಆ ಊರಿಂದ ಹಿಡಿದು ಒಂದ್ಕಡೆ ಮೈಸೂರು ರಸ್ತೆಯವರೆಗೆ ಇನ್ನೊಂದ್ಕಡೆ ತಾವರೆಕೆರೆಯ ಗಡಿಯವರೆಗೆ ಬೃಹತ್ತಾದ (ಏಷಿಯಾಗೆ ದೊಡ್ಡದು ಅಂತಾರೆ, ಸರಿ ತಿಳಿದಿಲ್ಲ) ಕೆಂಪೇಗೌಡ ಲೇಔಟ್ ಆಗಿ ಪರಿವರ್ತನೆ ಆಗಿದೆ. ಗೆಳೆಯ ಅಭಿ ಆ ಕಡೆಯಲ್ಲೊಂದಷ್ಟು ದಿನ ತೋಟವೊಂದನ್ನು ಬಾಡಿಗೆ ಹಿಡಿದಿದ್ದ. ತೆಂಗು, ಮಾವು, ಹಲಸು, ಸಪೋಟಾ ಮರಗಳಿದ್ದ ತೋಟಗಳಲ್ಲೀಗ ಜೆಸಿಬಿಗಳದೇ ಕಲರವ. ತೋಟಗಳ ನಡುವೆ ಅಲ್ಲಲ್ಲಿ ಅನೇಕಾನೇಕ ಕುರುಚಲು ಕಾಡುಗಳೂ ಇದ್ದವು. ʻಇಲ್ ಸೈಟ್ ಮಾಡಿ, ಜನಕ್ ಅವಶ್ಯಕತೆ ಇದೆʼ ಅಂತ ಯಾರಾದ್ರೂ ಅರ್ಜಿ ಹಾಕಿದ್ರಾ? ಖಂಡಿತ ಇಲ್ಲ. ಬಿಡಿಎ ಸೈಟ್ ಮಾಡ್ತು, ಆ ಸೈಟುಗಳನ್ನ ಜನ ಕೊಂಡ್ಕೊಂಡೂ ಆಗಿದೆ. ಇನ್ನೇನೀಗ ವಿಶಾಲ ವೆಲ್ ಪ್ಲ್ಯಾನ್ಡ್ ರಸ್ತೆಗಳೂ, ದೊಡ್ಡ ಮನೆಗಳು, ಶಾಪಿಂಗ್ ಕಾಂಪ್ಲೆಕ್ಸುಗಳು ಬರೋ ಸಮಯ. ಅಷ್ಟೊಂದ್ ಒಳ್ಳೆ ಫಲವತ್ತಾದ ಭೂಮೀನ ಯಾಕ್ರೀ ಹಾಳುಗೆಡವ್ತೀರ ಅಂತ ಯಾರೂ ಮಾತಾಡಲಿಲ್ಲ. ಆ ಹಳ್ಳಿಗಳಲ್ಲಿನ ಜನ ಕೂಡ ಅದಕ್ಕೆ ವಿರೋಧ ವ್ಯಕ್ತಪಡಿಸಲಿಲ್ಲ. ಕಾರಣ ಎಕರೆಗೆ ತೊಂಭತ್ತು ಲಕ್ಷದವರೆಗೂ ಹಣ ನೀಡುತ್ತಿದ್ದರು. ಹೆಚ್ಚು ಎಕರೆ ಇರುವ ವ್ಯಕ್ತಿ ಒಂದಷ್ಟು ಗುಂಟೆ ಭೂಮಿಯನ್ನು ತನ್ನಲ್ಲೇ ಇಟ್ಟುಕೊಳ್ಳಬಹುದಿತ್ತು. ಅರ್ಧ ಮುಕ್ಕಾಲು ಎಕರೆ ಇದ್ದವರೂ ಕೂಡ ಲಕ್ಷಾಧೀಶರಾದರು. ಎಕರೆಗಿಂತ ಹೆಚ್ಚಿದ್ದವರೆಲ್ಲ ಕೋಟ್ಯಾಧೀಶರಾದರು. ಒಳ್ಳೇ ಅಮೌಂಟು ಸಿಗುವಾಗ ಮಾರುವುದು ಬುದ್ಧಿವಂತಿಕೆಯ ಲಕ್ಷಣ ಎನ್ನುವುದೇ ನಮ್ಮ ಆರ್ಥಿಕತೆಯ ಬುನಾದಿಯಲ್ಲವೇ?
ಕುಣಿಗಲ್ ಮಾಗಡಿ ತುಮಕೂರಿನ ಕಡೆಯ ಎಷ್ಟೋ ಬೆಟ್ಟಗುಡ್ಡಗಳಲ್ಲಿ ಜಲ್ಲಿ ಕಲ್ಲು ಕ್ವಾರಿಗಳಿವೆ. ರಸ್ತೆಗಾಗಿ ಬೇಕಾದ ಜಲ್ಲಿ ಉತ್ಪಾದಿಸಲು ಸ್ಥಳೀಯವಾಗಿ ಶುರುವಾದ ಘಟಕಗಳು ರಸ್ತೆ ಮುಗಿದು ಎಷ್ಟೋ ವರ್ಷ ಕಳೆದ ನಂತರವೂ ಪರವಾನಗಿ ಪಡೆದುಕೊಂಡೋ ಲಂಚ ಕೊಟ್ಟುಕೊಂಡೋ ಕಲ್ಲು ಒಡೆಯುತ್ತಿವೆ. ರಾತ್ರೋ ರಾತ್ರಿ ಸಿಡಿವ ಡೈನಮೈಟು ಶಬ್ದಕ್ಕೆ ಎಲ್ಲರೂ ಬೆಚ್ಚಲೇಬೇಕು. ಇವರ್ಯಾಕೆ ಜಲ್ಲಿ ಹೊಡೀತಿದ್ದಾರೆ? ಇಲ್ಲಿ ಕಟ್ಟಿಸೋ ಹೊಸ ಹೊಸ ಸೈಟು ಅಪಾರ್ಟುಮೆಂಟುಗಳಿಗೆ ಜಲ್ಲಿ ಬೇಕೇ ಬೇಕಲ್ಲ. ಇಷ್ಟೊಂದ್ಯಾಕೆ ಅಪಾರ್ಟ್ಮೆಂಟು ಸೈಟು? ಒಂದಾದ ಮೇಲೆ ಒಂದನ್ನು ನಾವು ಕೊಂಡುಕೊಳ್ಳುತ್ತಾ ನಾವು ಸ್ಥಿತಿವಂತರಾಗಬೇಕಲ್ಲ? ಆಗಲೇ ತಾನೇ ಸಮಾಜದಲ್ಲಿ ನಮಗೂ ಒಂದು ʻಸ್ಥಾನಮಾನʼ ಅಂತ ಸಿಗೋದು….
ಒಂದು ಬೊಗಸೆ ಪ್ರೀತಿ - 66
ಸದ್ಯ ರಾಧ ಯಾವುದೇ ಹೆಚ್ಚು ತೊಂದರೆಗಳಿಲ್ಲದೆ ಎರಡು ದಿನದಲ್ಲಿ ಗೆಲುವಾಗಿಬಿಟ್ಟಳು. ಅಷ್ಟರಮಟ್ಟಿಗೆ ನನಗೂ ನಿರಾಳ. ಇಲ್ಲವಾದರೆ ಆಸ್ಪತ್ರೆಗೆ ರಜೆ ಹಾಕಿ ಮಗಳನ್ನು ನೋಡಿಕೊಳ್ಳುವುದು ಕಷ್ಟವಾಗಿಬಿಡುತ್ತಿತ್ತು. ರಾಜೀವ ನೆಪಕ್ಕೆ ನಿನ್ನೆ ಬಂದು ಹೋಗಿದ್ದ. ನನ್ನೊಡನೆ ಮಾತುಕತೆಯಿರಲಿಲ್ಲ. ಅಮ್ಮನೊಡನೆ ಹು ಉಹ್ಞೂ ಎಂದಷ್ಟೇ ಮಾತನಾಡಿ ಹೊರಟುಬಿಟ್ಟ. ಏನಕ್ಕೆ ಈ ರೀತಿಯಾಗ್ತಿದೆಯೋ ಗೊತ್ತಿಲ್ಲ. ತೀರ ಜಗಳವಾಗುವಂತದ್ದೇನೂ ಇತ್ತೀಚೆಗೆ ನಡೆದೂ ಇಲ್ಲ. ಆದರೂ ಯಾಕೋ ನನ್ನ ಕಂಡರೆ ಅವರಿಗೆ ಮುನಿಸು, ಮಗಳನ್ನು ಕಂಡರಂತೂ ಬೇಡದ ಸಿಟ್ಟು. ಅವರಿಗೆ ಓದಿಗೆ ತಕ್ಕ ಕೆಲಸ ಸಿಗದಿದ್ದರೆ ನಾ ಹೇಗೆ ಹೊಣೆಯಾಗ್ತೀನಿ? ಅನ್ನೋ ಪ್ರಶ್ನೆಗೆ ಮದುವೆಯಾದಂದಿನಿಂದ ಉತ್ತರ ಹುಡುಕಲೆತ್ನಿಸುತ್ತಿದ್ದೀನಿ, ಇನ್ನೂ ಸಿಕ್ಕಿಲ್ಲ. ಒಂದು ವೇಳೆ ಅವರ ಓದಿಗೆ ತಕ್ಕ ಕೆಲಸ ಸಿಕ್ಕಿ, ನನ್ನ ಓದಿಗೆ ತಕ್ಕ ಕೆಲಸ ಸಿಗದೇ ʻನಡೀರಿ ಈ ಊರು ಬೇಡ. ಬೇರೆ ಊರಿಗೆ, ನನಗೆ ಸರಿಯಾದ ಕೆಲಸ ಸಿಗುವ ಊರಿಗೆ ಹೋಗುವʼ ಎಂದೇನಾದರೂ ನಾ ಹೇಳಿದ್ದರೆ ಅವರು ಒಪ್ಪಿ ಬಿಡುತ್ತಿದ್ದರಾ? ಖಂಡಿತ ಇಲ್ಲ. "ನಾ ದುಡೀತಿಲ್ವ. ಮುಚ್ಕಂಡ್ ಮನೇಲ್ ಬಿದ್ದಿರು, ಮಗು ನೋಡ್ಕಂಡು" ಅಂತಾನೋ ಅಥವಾ ಮೂಡು ಚೆನ್ನಾಗಿದ್ದಾಗ "ನಾ ದುಡೀತಿದ್ದೀನಲ್ಲ ಡಾರ್ಲಿಂಗ್. ನೀ ಆರಾಮಿರು ಮನೇಲಿ" ಅಂತಾನೋ ಹೇಳಿ ಪುಸಲಾಯಿಸುತ್ತಿದ್ದರು.
ಹೊಕ್ಕೊಳ್ಲಿ ನನಗೇನೂ ತೀರ ಮೈಸೂರಲ್ಲೇ ಇರಬೇಕು, ಬೆಂಗಳೂರಿಗೆ ಯಾವುದೇ ಕಾರಣಕ್ಕೂ ಹೋಗಲೇಬಾರದು ಅಂತೇನೂ ಇಲ್ಲ. ಒಳ್ಳೆ ಕೆಲಸ ಸಿಕ್ಕಿದರೆ ಮೈಸೂರಾದರೇನು, ಬೆಂಗಳೂರಾದರೇನು? ಎರಡೂ ಕಡೆ ನಡೀತದೆ. ಬರೀ ಎಂ.ಬಿ.ಬಿ.ಎಸ್ ಇಟ್ಕಂಡು ಬೆಂಗಳೂರಿಗೆ ಹೋಗೋ ಯೋಚನೆ ನನ್ನಲಿರಲಿಲ್ಲ. ಈ ಡಿ.ಎನ್.ಬಿಗೆ ಸೇರುವಾಗಲಾದರೂ ಪೂರ್ತಿ ಫೀಸು ಕಟ್ಟಿಬಿಟ್ಟಿದ್ದರೆ ಮುಗಿಸಿದ ತಕ್ಷಣ ಹೊರಡಬಹುದಿತ್ತೇನೋ, ಪೂರ್ತಿ ಫೀಸು ಕಟ್ಟಲು ಹಣವಿರಲಿಲ್ಲ, ಅವರಪ್ಪನ ಮನೇಲಿ ಹಣ ತರುವ ಮನಸ್ಸು ಇವರಿಗೂ ಇರಲಿಲ್ಲ. ಈಗ ವಿಧಿಯಿಲ್ಲ, ಇದೇ ಆಸ್ಪತ್ರೆಯಲ್ಲಿ ಬಾಂಡ್ ಪೂರೈಸಲೇಬೇಕು. ಒಂದ್ ವೇಳೆ ಪೂರ್ತಿ ಫೀಸು ಕಟ್ಟಿದ್ರೆ ತಾನೇ ಮೈಸೂರು ಬಿಟ್ಟೋಗಲು ಸಾಧ್ಯವಾಗ್ತಿತ್ತಾ? ಚಿಕ್ಕ ಮಗಳನ್ನು ಕಟ್ಟಿಕೊಂಡು. ಹೆಂಗೋ ಅಮ್ಮನ ಮನೆ ಹತ್ತಿರವಿದೆ, ಮಗಳನ್ನು ನೋಡಿಕೊಳ್ತಾರೆ. ಈ ಕಾರಣದಿಂದಲೇ ಅಲ್ಲವೇ ನಾನು ಓದಿಕೊಂಡು ಆಸ್ಪತ್ರೆಗೆ ಹೋಕ್ಕೊಂಡು ಇರೋಕೆ ಆಗಿರೋದು. ಅಮ್ಮನ ಮನೆ ಬೇರೆ ಕಡೆಯಿದ್ದಿದ್ದರೆ ಇದು ತಾನೇ ಎಲ್ಲಿ ಸಾಧ್ಯವಾಗುತ್ತಿತ್ತು. ರಾಜೀವನ ಮನೆಯವರಂತೂ ಮೊಮ್ಮಗಳನ್ನು ನೋಡಲು ಬರುವುದು ಅಪರೂಪದಲ್ಲಿ ಅಪರೂಪ. ಮಗಳಿಗಿಂಗೆ ಹುಷಾರಿಲ್ಲ ಅಂತ ರಾಜೀವ ಅವರ ಮನೆಯವರಿಗೆ ಹೇಳದೇ ಇರ್ತಾರಾ? ಹೇಳೇ ಇರ್ತಾರೆ. ಆದರೂ ನೋಡಲೊಬ್ಬರೂ ಬಂದಿಲ್ಲ. ಅಥವಾ ಇವರೇ ಹೇಳಿಲ್ಲವೋ? ತಿಳಿದುಕೊಳ್ಳುವುದೇಗೆ? ತಿಳಿದು ಆಗಬೇಕಾಗಿರುವುದಾದರೂ ಏನು.
ಮೇ 24, 2020
ಒಂದು ಬೊಗಸೆ ಪ್ರೀತಿ - 65
ರಾಜೀವ ಅವತ್ತು ರಾತ್ರಿಯಾದರೂ ಬರಲಿಲ್ಲ. ಫೋನೂ ಮಾಡಲಿಲ್ಲ. ಮನೆಯಲ್ಲಿ ಅಮ್ಮ ಎಲ್ಲಿ ಅವರು ಎಲ್ಲಿ ಅವರು? ಎಂದು ಕೇಳಿದ್ದೇ ಕೇಳಿದ್ದು. ʻಅವರ ನಂಬರ್ ನಿಮ್ಮತ್ರವೇ ಇದ್ಯಲ್ಲ. ನೀವೇ ಫೋನ್ ಮಾಡಿ ವಿಚಾರಿಸಿಕೊಳ್ಳಿʼ ಎಂದು ರೇಗಿದ ಮೇಲೆಯೇ ಅಮ್ಮ ಸುಮ್ಮನಾಗಿದ್ದು. ಸುಮ್ಮನಾಗುವ ಮುಂಚೆ "ಗಂಡ ಹೆಂಡತಿ ಗಲಾಟೆ ಏನಾದ್ರೂ ಇರಲಿ. ಮಗಳು ಹುಷಾರಿಲ್ಲಾಂತನಾದ್ರೂ ಬರಬಾರದಾ?" ಎಂದು ಗೊಣಗಿಕೊಂಡರು.
ಬೆಳಿಗ್ಗೆ ಎದ್ದವಳೇ ಮೊಬೈಲ್ ಕೈಗೆತ್ತಿಕೊಂಡು ʻಮಗಳನ್ನು ನೋಡೋಕಂತೂ ಬರಲಿಲ್ಲ. ಕೊನೇ ಪಕ್ಷ ಬಂದು ಕೈಗೊಂದಷ್ಟು ದುಡ್ಡಾದರೂ ಕೊಟ್ಟು ಹೋಗಿ. ರಾಮ್ಪ್ರಸಾದ್ಗೆ ಹಣ ವಾಪಸ್ಸು ಮಾಡಬೇಕು. ಅಪ್ಪನಿಗೂ ದುಡ್ಡು ಕೊಡೋದಿದೆʼ ಎಂದು ಮೆಸೇಜು ಮಾಡಿದೆ. ಪ್ರತಿಕ್ರಿಯೆ ಬರಲಿಲ್ಲ. ಬರುವ ನಿರೀಕ್ಷೆಯೂ ಇರಲಿಲ್ಲ. ಹಣ ತೆಗೆದುಕೊಂಡೂ ಇವರು ಬರದೇ ಹೋದಲ್ಲಿ ಶಶಿ ಹತ್ರ ದುಡ್ಡು ತೆಗೆದುಕೊಂಡು ರಾಮ್ಪ್ರಸಾದ್ಗೆ ಕೊಟ್ಟುಬಿಡಬೇಕು ಎಂದುಕೊಂಡೆ. ಮಗಳು ಲವಲವಿಕೆಯಿಂದಿದ್ದಳು. ʻಡ್ಯೂಟಿಗೆ ಹೋಗ್ಲಾ ಪುಟ್ಟʼ ಎಂದಿದ್ದಕ್ಕೆ ಹು ಎಂಬಂತೆ ತಲೆಯಾಡಿಸಿದ್ದಳು. "ಇವತ್ತೊಂದಿನ ರಜಾ ಹಾಕಂಡಿದ್ರಾಗ್ತಿರಲಿಲ್ಲವಾ" ಎಂಬ ಅಮ್ಮನ ಸಲಹೆಗೆ ಅಪ್ಪ "ಅವಳಿಗೆಂಗಿದ್ರೂ ಮಗು ನೋಡ್ಕೊಳ್ಳೋಕ್ ಬರಲ್ವಲ್ಲೇ. ಅವಳಿದ್ದು ಏನಾಗಬೇಕಿದೆ. ನೀನಿದೀಯಲ್ಲ ಎಕ್ಸ್ಪರ್ಟು" ಎಂದು ನಗಾಡಿದ್ದರು. "ನಾನು ಅಂದ್ರೆ ನಿಮ್ಮಲ್ರಿಗೂ ಸಸಾರ" ಅಮ್ಮ ನಕ್ಕು ನುಡಿದಿದ್ದಳು. ತಿಂಡಿ ತಿನ್ನುವ ಹೊತ್ತಿಗೆ ರಾಜೀವ ಮನೆಗೆ ಬಂದು ಮಗಳ ಬಳಿ ಹೋಗಿ ಹೆಸರಿಗೊಮ್ಮೆ ಮಾತನಾಡಿಸಿ ಅಲ್ಲೇ ಟೀಪಾಯಿಯ ಮೇಲೆ ದುಡ್ಡಿಟ್ಟು ಹೊರಟುಹೋದರು. ನನ್ನ ಜೊತೆ ಒಂದು ಮಾತಿಲ್ಲದೆ, ತಿಂಡಿ ತಿನ್ನಿ ಅಂದ ಅಮ್ಮನ ಮಾತಿಗೂ ಉತ್ತರ ನೀಡದೆ ಹೊರಟು ಹೋದರು. ಕೋಪದಲ್ಲಿ ನನ್ನ ಡೆಬಿಟ್ ಕಾರ್ಡನ್ನೂ ಇಟ್ಟುಬಿಟ್ಟಿದ್ದಾರೋ ಏನೋ ಎಂದುಕೊಂಡು ಟೀಪಾಯಿಯ ಕಡೆಗೆ ಕಣ್ಣಾಡಿಸಿದೆ. ಇರಲಿಲ್ಲ. ಹಣ ಮಾತ್ರವಿತ್ತು.
ಮೇ 10, 2020
ಒಂದು ಬೊಗಸೆ ಪ್ರೀತಿ - 64
ಡಾ. ಅಶೋಕ್. ಕೆ. ಆರ್.
ರಾಧ ಬೇಗ ಚೇತರಿಸಿಕೊಂಡಳು. ವಾಂತಿ ಪೂರ್ತಿ ನಿಂತು ಹೋಗಿತ್ತು. ಚೂರ್ ಚೂರ್ ಭೇದಿಯಾಗುತ್ತಿತ್ತು. ಅಮ್ಮ ತಂದ ಅಷ್ಟೂ ಗಂಜಿಯನ್ನು ತಿಂದು ಮುಗಿಸಿದ್ದಳು. ಜೊತೆಗೊಂದು ಸೇಬಿನಹಣ್ಣು ತಿಂದಳು. ಸಾಕಷ್ಟು ನೀರು ಕುಡಿದಳು. ಪ್ರಶಾಂತ್ ಡಾಕ್ಟರ್ ಹನ್ನೊಂದರಷ್ಟೊತ್ತಿಗೆ ರೌಂಡ್ಸಿಗೆ ಬಂದವರು. "ಆರಾಮಿದ್ದಾಳಲ್ಲ ಮಗಳು. ಸಾಕಿನ್ನು ಆಸ್ಪತ್ರೆ. ನಿಮಗೇ ಗೊತ್ತಿರುತ್ತಲ್ಲ. ಆಸ್ಪತ್ರೆಯಲ್ಲೇ ಅರ್ಧ ಹೊಸ ಹೊಸ ಖಾಯಿಲೆ ಶುರುವಾಗಿಬಿಡ್ತವೆ ಈಗೆಲ್ಲ. ಡಿಸ್ಚಾರ್ಜ್ ಮಾಡಿಸಿಕೊಂಡು ಹೋಗಿ. ಬೇಕಿದ್ರೆ ಇವತ್ತೊಂದಿನ ವ್ಯಾಸೋಫಿಕ್ಸ್ ಇರಲಿ. ಜಾಸ್ತಿ ಏನೂ ತಿನ್ನಲಿಲ್ಲ ಕುಡಿಯಲಿಲ್ಲ ಅಂದ್ರೆ ಮನೆಯಲ್ಲೇ ಒಂದು ಐ.ವಿ ಹಾಕೊಳ್ಳಿ. ಬೇಕಾಗಲ್ಲ. ಇರಲಿ ಒಂದು ದಿನದ ಮಟ್ಟಿಗೆ" ಎಂದೇಳಿ ಹೋದರು.
ಅಪ್ಪ ಹೋಗಿ ಉಳಿಕೆ ಬಿಲ್ಲು, ಫಾರ್ಮಸಿಯ ಬಿಲ್ಲನ್ನು ಕಟ್ಟಿ ಬರುವಷ್ಟರಲ್ಲಿ ಡಿಸ್ಚಾರ್ಜ್ ಸಮ್ಮರಿ ತಯಾರಾಗಿತ್ತು. ಹನ್ನೆರಡರಷ್ಟೊತ್ತಿಗೆ ಆಸ್ಪತ್ರೆಯಿಂದ ಹೊರಟೆವು.
"ನಿಮ್ಮ ಮನೆಗ್ಯಾಕೆ ನಮ್ಮಲ್ಲೇ ಇರಲಿ. ನಿನಗೆಲ್ಲಿ ಗಂಜಿ ಅಂಬಲಿ ಎಲ್ಲಾ ನೆಟ್ಟಗೆ ಮಾಡೋಕೆ ಬರ್ತದೆ" ಅಮ್ಮನ ಮಾತಿಗೆ ನಾನು ಅಪ್ಪ ನಕ್ಕೆವು. ಅಮ್ಮನ ಮನೆಗೇ ಮಗಳನ್ನು ಕರೆದುಕೊಂಡು ಹೋದೆ. ಮಗಳ ಬಟ್ಟೆ ಬರೆ ವಗೈರೆಗಳೆಲ್ಲವೂ ನಮ್ಮ ಮನೆಯಲ್ಲೇ ಇದ್ದುವಲ್ಲ. ಮಗಳು ಇನ್ನೊಂದು ಸ್ವಲ್ಪ ಗಂಜಿ ಕುಡಿದು ಮಲಗಿದ ಮೇಲೆ ಮನೆ ಕಡೆ ಹೋಗಿ ಬರ್ತೇನೆ ಎಂದ್ಹೇಳಿ ಹೊರಟೆ. ಮನೆ ತಲುಪಿ ನಿನ್ನೆ ಮಾಡಿದ್ದ ಅಡುಗೆಯ ಪಾತ್ರೆಗಳನ್ನೆಲ್ಲ ತೊಳೆದಿಡುವಾಗ ರಾಜೀವನ ಫೋನು ಬಂತು "ಎಲ್ಲಿದ್ದೀಯಾ? ಯಾವ ರೂಮು?"
ʻರೂಮಾ?! ನಾವಾಗಲೇ ಡಿಸ್ಚಾರ್ಜ್ ಮಾಡಿಸಿಕೊಂಡು ಮನೆಗೆ ಬಂದೊ!ʼ
"ಡಿಸ್ಚಾರ್ಜ್ ಮಾಡಿಸಿಕೊಂಡೋದ್ರ..... ಎಲ್ಲಿದ್ದೀರಾ ಈಗ?"
ʻಅಮ್ಮನ ಮನೆಗೆ ಹೋದೆವು. ರಾಧ ಅಲ್ಲೇ ಮಲಗಿದ್ದಾಳೆ. ನಾ ಮನೆಗೆ ಬಂದೆ, ಒಂದಷ್ಟು ಬಟ್ಟೆ ಬರೆ ಮಾತ್ರೆಗಳನ್ನೆಲ್ಲ ತೆಗೆದುಕೊಂಡು ಹೋಗಬೇಕಿತ್ತುʼ
"ಸರಿ ಬರ್ತೀನಿರು ಅಲ್ಲಿಗೇ"
ಪಾತ್ರೆ ತೊಳೆದಿಟ್ಟು ಸ್ಟೌವ್ ಒರೆಸಿ ಮಗಳ ಬಟ್ಟೆ, ನನ್ನವೊಂದೆರಡು ಜೊತೆ ಬಟ್ಟೆ ಜೋಡಿಸಿಕೊಳ್ಳುವಾಗ ರಾಜೀವ ಮನೆಗೆ ಬಂದರು. ಬಾಗಿಲು ತೆಗೆದು ಒಂದೂ ಮಾತನಾಡದೆ ರೂಮಿನೊಳಗೋದೆ.
ಮೇ 4, 2020
ಒಂದು ಬೊಗಸೆ ಪ್ರೀತಿ - 63
ಡಾ. ಅಶೋಕ್. ಕೆ. ಆರ್.
ಸಿಸ್ಟರ್ ಹೋದ ಮೇಲೆ ಹೊರಗೆ ಬಂದು ನೋಡಿದೆ. ರಾಮ್ ಪ್ರಸಾದ್ ಅಲ್ಲೇ ಹೊರಗಿದ್ದ ಬೆಂಚಿನಂತ ಕುರ್ಚಿಯ ಮೇಲೆ ಕುಳಿತು ನಿದ್ರೆ ಹೋಗಿದ್ದರು. ಅಯ್ಯೋ ಪಾಪ, ಇವರ ಬಗ್ಗೆ ಸುಖಾಸುಮ್ಮನೆ ಮುನಿಸು ಬೆಳೆಸಿಕೊಂಡಿದ್ನಲ್ಲ. ರಾಜೀವನ ಜೊತೆ ಒಂದಷ್ಟು ಕುಡಿದಿರುವುದು ಬಿಟ್ಟರೆ ನಮಗಿರುವ ಪರಿಚಯ ಅಷ್ಟಕಷ್ಟೇ. ಆಸ್ಪತ್ರೆಯಲ್ಲಿ ಅಪರೂಪಕ್ಕೆ ಸಿಕ್ಕಾಗ ಒಂದು ನಗು, ಒಂದು ಹಾಯ್ ಹೊರತುಪಡಿಸಿದರೆ ಮಾತನಾಡಿದ್ದೂ ಇಲ್ಲ. ತೀರ ಇತ್ತೀಚೆಗೆ ನಮ್ಮ ಮನೆಯಲ್ಲೇ ಕುಳಿತು ಕುಡಿಯುತ್ತಿದ್ದುದನ್ನು ನೋಡಿ ಸಿಟ್ಟು ಬಂದ ಮೇಲೆ ಎದುರಿಗೆ ಸಿಕ್ಕಾಗ ಪರಿಚಯದ ನಗು ನಗುವುದನ್ನೂ ಕಡಿಮೆ ಮಾಡಿಬಿಟ್ಟಿದ್ದೆ. ಹತ್ತಿರ ಹೋಗಿ ʼರಾಮ್ಪ್ರಸಾದ್ʼ ಎಂದು ಕೂಗಿದೆ. ಅರೆನಿದ್ರೆಯಲ್ಲಿದ್ದರೆನ್ನಿಸುತ್ತೆ ಪಟ್ಟಂತ ಎದ್ದು ಬಿಟ್ಟರು.
"ಈಸ್ ಎವೆರಿತಿಂಗ್ ಓಕೆ" ಎಂದವರ ದನಿಯಲ್ಲಿ ರಾಧಳ ಕುರಿತು ಕಾಳಜಿಯಿತ್ತು.
ʼಹು. ಮಗಳು ಮಲಗಿದ್ದಾಳೆ. ಸಿಸ್ಟರ್ ಈಗಷ್ಟೇ ಮತ್ತೊಂದು ಡ್ರಿಪ್ ಬದಲಿಸಿ ಹೋದರು. ಪುಣ್ಯಕ್ಕೆ ಆಗಿಂದ ವಾಂತಿ ಭೇದಿಯಾಗಿಲ್ಲ. ಅಷ್ಟರಮಟ್ಟಿಗೆ ಹುಷಾರಾದಂತಿದ್ದಾಳೆʼ
"ಗುಡ್ ಗುಡ್. ಹೆಂಗೋ ಸರಿ ಹೋದರೆ ಸಾಕು. ಚಿಕ್ಕ ಮಕ್ಕಳು ಹುಷಾರು ತಪ್ಪಿದರೆ ವಿಪರೀತ ಗಾಬರಿಯಾಗ್ತದೆ"
ʼಅದ್ ಹೌದು. ನೀವ್ಯಾಕೆ ಮನೆಗೆ ಹೋಗದೆ ಇಲ್ಲೇ ಕುಳಿತುಬಿಟ್ರಿʼ
"ಅಯ್ಯೋ. ನೀವೂ ಒಬ್ಬರೇ ಇದ್ರಲ್ಲ. ಏನಾದ್ರೂ ಬೇಕಾದರೆ ಅಂತ ಇಲ್ಲೇ ಉಳಿದೆ"
ʼಒಳಗೇ ಇನ್ನೊಂದು ಮಂಚವಿತ್ತಲ್ಲ. ಅಲ್ಲೇ ಮಲಗೋದಲ್ವʼ
"ಹೇ ಇರಲಿ. ಪರವಾಗಿಲ್ಲ"
ʼಈಗೇನು ಹುಷಾರಾಗಿದ್ದಾಳಲ್ವ. ನೀವ್ ಹೋಗಿ ಮನೆಗೆ. ವೃಥಾ ತೊಂದರೆಯಾಯಿತು ನಮ್ಮಿಂದ ನಿಮಗೆʼ
"ಅಯ್ಯೋ. ತೊಂದರೆ ಏನಿದೆ. ಮನೆ ಎಲ್ಲಿದೆ. ನಾ ರೂಂ ಮಾಡಿಕೊಂಡಿರೋದು ಇಲ್ಲಿ"
ʼಓʼ
ಸಮಯ ನೋಡಿದರು. ಒಂದೂವರೆಯಾಗಿತ್ತು. "ಸರಿ ಆಗಿದ್ರೆ. ನಾ ರೂಮಿಗೆ ಹೋಗಿ ಬರ್ತೀನಿ. ಹೇಗೂ ಹುಷಾರಾಗಿದ್ದಾಳಲ್ಲ. ಏನಾದ್ರೂ ಇದ್ರೆ ಫೋನ್ ಮಾಡಿ. ಇಲ್ಲೇ ಕಾಲು ಘಂಟೆ ನನ್ನ ರೂಮಿರೋದು. ಪಟ್ಟಂತ ಬಂದುಬಿಡ್ತೀನಿ"
ಏಪ್ರಿ 26, 2020
ಒಂದು ಬೊಗಸೆ ಪ್ರೀತಿ - 62
ಡಾ. ಅಶೋಕ್. ಕೆ. ಆರ್.
ಪ್ರಶಾಂತ್ ನರ್ಸಿಂಗ್ ಹೋಮ್ ತಲುಪುವಷ್ಟರಲ್ಲಿ ರಾಜೀವ ಆಸ್ಪತ್ರೆಯ ಫಾರ್ಮಸಿಯಲ್ಲಿದ್ದ ತನ್ನ ಗೆಳೆಯನಿಗೆ ನಾ ಬರುವ ವಿಷಯ ತಿಳಿಸಿದ್ದರು. ನಾ ಅಡ್ಮಿಶನ್ ಮಾಡಿಸುವಾಗ ಆದರ್ಶ್ ಹೆಸರಿನ ಆ ವ್ಯಕ್ತಿ ಬಂದು "ಔಷಧಿ ದುಡ್ಡೆಲ್ಲ ಆಮೇಲ್ ಕೊಡೂರಿ ಮೇಡಂ. ಸದ್ಯ ಅಡ್ಮಿಷನ್ ದುಡ್ಡು ಕೊಟ್ಟುಬಿಡಿ. ಇಲ್ಲಾಂದ್ರೆ ಸುಮ್ನೆ ತರ್ಲೆ ಮಾಡ್ತಾರೆ ಇಲ್ಲಿ" ಎಂದು ಬಿಟ್ಟಿ ಸಲಹೆ ನೀಡಿದರು. ಅಡ್ಮಿಷನ್ನಿಗೆ ಐದು ಸಾವಿರ ಕಟ್ಟಬೇಕೆಂದರು. ನನ್ನ ಪರ್ಸಿನಲ್ಲಿದ್ದಿದ್ದು ಒಂದೂವರೆ ಸಾವಿರ ರುಪಾಯಿ ಮಾತ್ರ. ಹಿಂಗಿಂಗೆ, ನಾನೂ ಡಾಕ್ಟರ್ರೇ. ಅರ್ಜೆಂಟಲ್ಲಿ ಕಾರ್ಡೆಲ್ಲ ತರೋದು ಮರೆತೆ. ನನ್ನ ಹಸ್ಬೆಂಡು ಬಂದು ಕಟ್ತಾರೆ ಅಂದೆ. ಡಾಕ್ಟರ್ ಅಂತ ತಿಳಿದ ಮೇಲೆ ಮುಖದ ಮೇಲೆ ನಗು ತಂದುಕೊಂಡು "ಓಕೆ ಮೇಡಂ. ಟ್ರೀಟ್ಮೆಂಟ್ ಹೇಗಿದ್ರೂ ಶುರುವಾಗಿದ್ಯಲ್ಲ. ಆಮೇಲ್ ಬಂದ್ ಕಟ್ಟಿ. ಸದ್ಯ ಇರೋದನ್ನ ಕಟ್ಟಿರಿ ಸಾಕು ಎಂದರು"
ರಾಧಳ ಕೈಯಿಗೆ ವ್ಯಾಸೋಫಿಕ್ಸ್ ಹಾಕಿ ಐ.ವಿ ಫ್ಲೂಯಿಡ್ಸ್ ಶುರು ಮಾಡಿದರು. ಇನ್ನೇನು ವಾಂತಿ ಭೇದಿಗೆ ಹೆಚ್ಚು ಔಷಧಿಯಿಲ್ಲವಲ್ಲ. ದೇಹದ ನೀರಿನಂಶ ಅಪಾಯ ಮಟ್ಟಕ್ಕೆ ಕುಸಿಯದಂತೆ ನೋಡಿಕೊಂಡರೆ ಸಾಕು. ಜ್ವರ ಇದ್ದಿದ್ದರಿಂದ ಒಂದು ಯಾಂಟಿಬಯಾಟಿಕ್, ವಾಂತಿಗೊಂದು ಇಂಜೆಕ್ಷನ್ ನೀಡಿದರು. ಸುಸ್ತಿನಿಂದ ನಿದ್ರೆ ಹೋಗಿದ್ದಳು ರಾಧ. ಅಲ್ಲಿಂದಲೇ ರಾಜೀವನಿಗೊಂದು ಫೋನು ಮಾಡಿದೆ ಸುಮಾರೊತ್ತು ರಿಂಗಾದ ಬಳಿಕ ಫೋನೆತ್ತಿಕೊಂಡರು.
ʼಎಲ್ಲಿದ್ದೀರಾ?ʼ
"ಇಲ್ಲೇ"
ʼಬಂದ್ರಾʼ
"ಇಲ್ಲ"
ʼಯಾಕೆ?ʼ
"ಯಾಕೋ ಕುಡಿದಿದ್ದು ಜಾಸ್ತಿ ಆದಂಗಿದೆ. ಬರೋಕಾಗಲ್ಲ"
ಏಪ್ರಿ 19, 2020
ಒಂದು ಬೊಗಸೆ ಪ್ರೀತಿ - 61
ಡಾ. ಅಶೋಕ್. ಕೆ. ಆರ್.
ಊಟಿ, ಕೊಡೈ, ಮುನ್ನಾರ್, ಕೊಡಗು ನೋಡಿದ್ದ ನನಗಾಗಲೀ ರಾಜೀವನಿಗಾಗಲೀ ಯರ್ಕಾಡು ಅಷ್ಟೇನೂ ಆಕರ್ಷಣೀಯವೆನ್ನಿಸಲಿಲ್ಲ. ಇಲ್ಲೆಲ್ಲ ಇರುವಷ್ಟು ದಟ್ಟ ಕಾಡುಗಳಾಗಲೀ ಕಣ್ಣು ಚಾಚುವವರೆಗೂ ಹರಡಿಕೊಂಡಿರುವ ಟೀ ಕಾಫಿ ಎಸ್ಟೇಟುಗಳಾಗಲೀ ಯರ್ಕಾಡಿನಲ್ಲಿರಲಿಲ್ಲ. ನಮಗೆ ರುಚಿಸದ ಯರ್ಕಾಡು ಮಗಳಿಗೆ ವಿಪರೀತ ಇಷ್ಟವಾಯಿತು. ಕಿರಿಯೂರು ಜಲಪಾತವನ್ನು ಅಚ್ಚರಿಯ ಕಂಗಳಿಂದ ನೋಡಿದಳು, ಅದಕ್ಕಿಂತ ಹೆಚ್ಚು ಇಷ್ಟವಾಗಿದ್ದು ಎಮೆರಾಲ್ಡ್ ಕೆರೆಯಲ್ಲಿ ಬೋಟಿಂಗ್ ಹೋಗಿದ್ದು. ಕುಣಿದು ಕುಪ್ಪಳಿಸಿದ್ದೇ ಕುಪ್ಪಳಿಸಿದ್ದು. ಸಾಗರನ ಮದುವೆ ಮೂಡಿಸಿದ ಮಿಶ್ರಭಾವಗಳನ್ನು ರಾಧಳ ಖುಷಿ ದೂರಾಗಿಸಿತು. ಅದಕ್ಕಿಂತ ಖುಷಿ ರಾಜೀವ ರಾಧಳೊಡನೆ ಖುಷಿಖುಷಿಯಾಗಿ ಆಟವಾಡಿದ್ದು. ಅಪ್ಪ ಮಗಳು ಹಿಂಗೇ ಇರಬಾರದಾ?
ಯರ್ಕಾಡಿನಿಂದ ಹೊರಟಾಗ ಮಧ್ಯಾಹ್ನ ಮೂರರ ಮೇಲಾಗಿತ್ತು. 'ಬೆಂಗಳೂರು ತಲುಪೋದೆ ಸುಮಾರೊತ್ತಾಗ್ತದೆ ನಡೀರಿ ನನ್ನ ಕಸಿನ್ ಮನೆಗೆ ಹೋಗಿ ನಾಳೆ ಬೆಳಿಗ್ಗೆ ಹೋಗುವ' ಅಂದಿದ್ದೇ ತಡ ರಾಜೀವನ ಗೊಣಗಾಟ ಸಣ್ಣದಾಗಿ ಶುರುವಾಯಿತು. ತೀರ ಅನಿರೀಕ್ಷಿತವೇನಲ್ಲ! ನಮ್ಮ ಕಡೆಯವರ ಮನೆಗೆ ಹೋಗುವ ಸಂದರ್ಭ ಬಂದಾಗೆಲ್ಲ ರಾಜೀವ ಹಿಂಗಾಡೋದು ಸಾಮಾನ್ಯ! ನಾ ಅವರ ಮನೆಯವರ ಕಡೆಗೆ ಹೋಗುವಾಗ ಆಡ್ತೀನಲ್ಲ ಥೇಟ್ ಹಂಗೆ! ನನ್ನ ಕಸಿನ್ ಮನೆಯಿದ್ದಿದ್ದು ಮಲ್ಲೇಶ್ವರದಲ್ಲಿ. ಹೊಸೂರುವರೆಗೇನೋ ಆರಾಮಾಗಿ ತಲುಪಿಬಿಟ್ಟೊ. ಅಲ್ಲಿಂದ ವಿಪರೀತ ಟ್ರಾಫಿಕ್ಕು. ಎಲೆಕ್ಟ್ರಾನಿಕ್ ಸಿಟಿಗೆ ಬರುವಷ್ಟರಲ್ಲಿ ಸಾಕು ಸಾಕಾಗಿತ್ತು. ಇನ್ನು ಮಲ್ಲೇಶ್ವರಕ್ಕೆ ಹೋಗುವಷ್ಟರಲ್ಲಿ ಮತ್ತಷ್ಟು ಸುಸ್ತಾಗ್ತದೆ. ನೈಸ್ ರೋಡಲ್ ಮೈಸೂರ್ ರಸ್ತೆ ತಲುಪಿ ಮನೆಗೆ ಹೋಗುವ ಅಂತ ರಾಜೀವ ಹೇಳಿದಾಗ ನನಗೂ ಹೌದೆನ್ನಿಸಿತು. ಕಸಿನ್ನಿಗೆ ಫೋನ್ ಮಾಡಿ 'ಸಡನ್ನಾಗಿ ಯಾವ್ದೋ ಅರ್ಜೆಂಟ್ ಕೆಲಸ ಬಂದಿದೆ. ಊರಿಗೆ ಹೊರಟುಬಿಟ್ಟೊ. ಇನ್ನೊಂದ್ಸಲ ಬರ್ತೀವಿ' ಅಂತೊಂದು ನೆಪ ಹೇಳಿ ಅವಳಿಂದ ಒಂದೈದು ನಿಮಿಷ ಬಯ್ಯಿಸಿಕೊಂಡಿದ್ದಾಯಿತು.
'ಖುಷಿಯೇನಪ್ಪ ಈಗ' ಅಂತ ಕಿಚಾಯಿಸಿದೆ.
"ಹು. ಡಾರ್ಲಿಂಗ್" ಅಂತ ಕೆನ್ನೆ ಗಿಲ್ಲಿದರು.
ಏಪ್ರಿ 12, 2020
ಒಂದು ಬೊಗಸೆ ಪ್ರೀತಿ - 60
ಡಾ. ಅಶೋಕ್. ಕೆ. ಆರ್.
ರಾಜೀವ ಮೊದಲು ನಾನ್ಯಾಕೆ ಮದುವೆಗೆ? ನೀ ಬೆಳಿಗ್ಗೆ ಹೋಗಿ ಬಂದುಬಿಡು ಸಂಜೆಯಷ್ಟೊತ್ತಿಗೆ ಎಂದು ರಾಗ ಎಳೆದನಾದರೂ ʼನಡೀರಿ. ಹಂಗೆ ಒಂದೆರಡ್ ದಿನ ಸುತ್ತಾಡ್ಕಂಡ್ ಬರೋಣ. ಅದೇ ಕೆಲಸ ಅದೇ ಮನೆ ಅದದೇ ಜಗಳಗಳು ಬೋರಾಗೋಗಿದೆʼ ಅಂದಿದ್ದಕ್ಕೆ ನಕ್ಕು "ಬೆಂಗಳೂರಿನವರೇ ಇತ್ಲಾಕಡೆಗೆ ಬರ್ತಾರೆ ಸುತ್ತೋಕೆ. ನಾವಿನ್ನೆಲ್ಲಿ ಅಲ್ಲಿ ಸುತ್ತೋದು?" ಎಂದರು.
ʼಬೆಂಗಳೂರಿಂದ ಇನ್ನೂರ್ ಇನ್ನೂರೈವತ್ ಕಿಲೋಮೀಟ್ರು ದೂರದಲ್ಲಿ ಯರ್ಕಾಡ್ ಅಂತ ಯಾವ್ದೋ ಜಾಗ ಇದ್ಯಂತೆ. ಚೆನ್ನಾಗಿದೆ ಅಂತಿದ್ರು. ಮದುವೆ ಮುಗ್ಸಿ ಮಧ್ಯಾಹ್ನ ಹೊರಟರೆ ರಾತ್ರಿ ತಲುಪಬಹುದು. ರಾತ್ರಿ ಇದ್ದು ಮಾರನೇ ದಿನ ಅಲ್ಲೇನೇನಿದ್ಯೋ ನೋಡಿಕೊಂಡು ಸಂಜೆಯಂಗೊರಡೋಣ. ಆದ್ರೆ ಅವತ್ತೇ ಮೈಸೂರು ತಲುಪೋಣ. ಇಲ್ಲ ಬೆಂಗಳೂರಲ್ಲಿ ನನ್ ಕಸಿನ್ ಮನೇಲಿದ್ದು ಮಾರನೇ ದಿನ ಹೊರಟರಾಯಿತುʼ
"ಅಷ್ಟೆಲ್ಲ ರಜ ಸಿಗುತ್ತಾ ನಿನಗೆ"
ʼಎಲ್ರೀ! ರಜಾನೇ ಹಾಕಿಲ್ಲ ನಾನು. ಅಕಸ್ಮಾತ್ ರಾಧ ಹುಷಾರು ತಪ್ಪಿದರೆ ಅಂತ ಇರೋ ಚೂರುಪಾರು ರಜೆಗಳನ್ನೆಲ್ಲ ಹಂಗೇ ಇಟ್ಟುಕೊಂಡಿದ್ದೀನಿ. ನಿಮಗೆ ಸಿಗುತ್ತಾ?ʼ
"ನಂದೇನ್ ಲಾರ್ಡ್ ಲಬಕ್ ದಾಸ್ ಕೆಲಸ ನೋಡು. ರಜ ಸಿಗದೇ ಹೋದ್ರೆ ರಾಜೀನಾಮೆ ಬಿಸಾಕ್ ಬರೋದಪ್ಪ"
ʼಈ ಅದದೇ ಮಾತುಗಳು ಮರೆಯಾಗ್ಲಿ ಅಂತಲೇ ಈ ಚಿಕ್ಕ ಟ್ರಿಪ್ಪು. ಅಪ್ಪಿ ತಪ್ಪಿ ರಾಜೀನಾಮೆ ಕೊಟ್ಬಿಟ್ಟೀರಾ ಮತ್ತೆ ಈಗ. ನನ್ ಪಿಜಿ ಮುಗಿಯೋವರ್ಗಾದ್ರೂ ಕಾಯಿರಿʼ
"ಅದಕ್ಕೇ ಕಾಯ್ತಿರೋದು ನಾನು" ಅಂತ ಕಣ್ಣು ಹೊಡೆದರು.