ಮಾರ್ಚ್ 29, 2020

ಒಂದು ಬೊಗಸೆ ಪ್ರೀತಿ - 58

ಬಹಳ ದಿನಗಳ ನಂತರ ಆಸ್ಪತ್ರೆಯಲ್ಲಿ "ಭಾನುವಾರ ರಜೆ ತಕೋ ಹೋಗಮ್ಮ" ಅಂದಿದ್ರು. ಅಮ್ಮನ ಮನೆಯಲ್ಲಿದ್ದು ಕೂಡ ತುಂಬಾ ದಿನವಾಗಿತ್ತಲ್ಲ ಎಂದು ಶನಿವಾರವೇ ಅಮ್ಮನ ಮನೆಗೆ ಹಾಜರಾಗಿಬಿಟ್ಟೆ. ಏನೇ ಅಮ್ಮನ ಮನೆ ಅಂದ್ರೂ ಅಪರೂಪಕ್ಕೆ ಹೋದಾಗ ಸಿಗೋ ಮರ್ಯಾದೆಯೇ ಬೇರೆ! ರಾಜೀವನಿಗೂ ʼಬನ್ರೀ ಹೋಗುವʼ ಎಂದಿದ್ದೆ. "ಇಲ್ಲ, ನನಗೆ ಕೆಲಸವಿದೆ. ನೀ ಹೋಗಿರು" ಎಂದು ಸಾಗ ಹಾಕಿದ್ದರು. ಇನ್ನೇನು ಕೆಲಸ? ಗೆಳೆಯರೊಟ್ಟಿಗೆ ಸೇರಿ ಕುಡಿಯೋದು ಅಷ್ಟೇ! ಬಹಳ ದಿನಗಳ ನಂತರ ಮಗಳು ಮನೆಯಲ್ಲುಳಿಯುತ್ತಿದ್ದಾಳೆಂದು ಅಪ್ಪ ಒಂದೆರಡು ಕೆಜಿ ಚಿಕನ್‌ ತಂದಿದ್ದರು. ಹೆಚ್ಚು ಕಡಿಮೆ ನಾ ಹೋಗುವಷ್ಟೊತ್ತಿಗೆ ಸೋನಿಯಾ ಅಮ್ಮ ಸೇರಿಕೊಂಡು ಒಂದು ಕೆಜಿಯಷ್ಟು ಚಿಕನ್ನನ್ನು ಚಾಪ್ಸ್‌ ಮಾಡಿದ್ದರು. ಇನ್ನುಳಿದ ಒಂದು ಕೆಜಿ ಚಿಕನ್‌ ನನ್ನ ಬರುವಿಕೆಗಾಗಿ ಕಾಯುತ್ತಿತ್ತು. ಬಿರಿಯಾನಿಯಾಗಲು ಬಿರಿಯಾನಿ ಸ್ಪೆಷಲಿಸ್ಟ್‌ಗೆ ಕಾಯುತ್ತಿತ್ತು. "ಫ್ರೈ ಏನಾದ್ರೂ ಮಾಡಿ. ಬಿರಿಯಾನಿ ಮಾತ್ರ ನನ್ನ ಮಗಳೇ ಬಂದು ಮಾಡಬೇಕು" ಎಂದು ತಾಕೀತು ಮಾಡಿದ್ದರಂತೆ. ʼಏನೋ ಅಪ್ರೂಪಕ್ಕೆ ಅಮ್ಮನ ಮನೆಗೆ ಬಂದರೆ ನನ್ನ ಬಿರಿಯಾನಿ ಮಾಡೋಳನ್ನಾಗಿ ಮಾಡ್ಬಿಟ್ರಲ್ಲʼ ಎಂದು ನಗಾಡುತ್ತಾ ಮಗಳನ್ನೆತ್ತಿ ಮುತ್ತಿಟ್ಟು ಅಪ್ಪನ ಬಳಿ ಬಿಟ್ಟು ಅಡುಗೆ ಮನೆಗೆ ಹೋದೆ. ಅಮ್ಮ ಅವರ ದೂರದ ನೆಂಟರ ವಿಷಯಗಳೇನನ್ನೋ ಹೇಳುತ್ತಿದ್ದರು. ಅವರಲ್ಲರ್ಧ ಜನ ಯಾರ್ಯಾರು ಅಂತ ನನಗೆ ಗೊತ್ತೇ ಇರಲಿಲ್ಲ. ಆದರೂ ಎಲ್ಲಾ ಗೊತ್ತಾದವಳಂತೆ ಹೂ ಹೂ ಎಂದು ತಲೆದೂಗುತ್ತಿದ್ದೆ. ನನಗೇ ಅರ್ಥವಾಗದ ಮೇಲೆ ಇನ್ನು ಸೋನಿಯಾಗೇನು ಅರ್ಥವಾಗಬೇಕು! ಸುಮ್ನೆ ತಲೆತಗ್ಗಿಸಿಕೊಂಡು ಮೊಸರುಬಜ್ಜಿಗೆ ಈರುಳ್ಳಿ ಟೊಮೋಟೊ ಕತ್ತರಿಸುತ್ತಿದ್ದಳು. "ಈ ಅತ್ತೆ ಏನ್‌ ಹಿಂಗ್‌ ತಲೆ ತಿಂತಾರೆ" ಅಂತ ಮನಸ್ಸಲ್ಲೇ ಅಂದುಕೊಳ್ಳುತ್ತಿದ್ದಳೋ ಏನೋ. ಅತ್ತೆಯಷ್ಟೇ ಯಾಕೆ? ನಮ್ಮ ಮನೆಯಲ್ಲಿ ನಾನು, ಅಮ್ಮ, ಅಪ್ಪ ಎಲ್ಲಾ ಮಾತೋ ಮಾತು. ಶಶೀನೇ ಮುಂಚಿಂದಾನೂ ಗೂಬೆ ತರ, ಮಾತಿರಲ್ಲ, ಕತೆ ಇರಲ್ಲ ಅವನದು. ಹೂ, ಸರಿ, ಇಲ್ಲ, ಆಯ್ತುಗಳಲ್ಲೇ ದಿನ ದೂಡಿಬಿಡ್ತಾನೆ! ಕುಕ್ಕರ್‌ ಮುಚ್ಚಳ ಮುಚ್ಚಿ ವಿಷಲ್‌ ಮೇಲಿಟ್ಟು ʼಏನ್‌ ಇವತ್ತು ಇಷ್ಟೊತ್ತಾದರೂ ಆಸ್ಪತ್ರೆಯಿಂದ ಯಾರೂ ಯಾವುದಕ್ಕೂ ಫೋನೇ ಮಾಡಲಿಲ್ಲವಲ್ಲʼ ಎಂದುಕೊಳ್ಳುತ್ತಾ ವ್ಯಾನಿಟಿ ಬ್ಯಾಗ್‌ ತೆರೆದು ನೋಡಿದರೆ ಎಲ್ಲಿದೆ ಫೋನು? ಎಲ್ಲೋ ಬಿಟ್ಟು ಬಂದುಬಿಟ್ಟಿದ್ದೀನಿ. ಎಲ್ಲಿ? ಆಸ್ಪತ್ರೆಯಿಂದ ಬರುವಾಗ ತಂದಿದ್ದೆ. ಮನೆಗೆ ತಲುಪಿ ಹತ್ತು ನಿಮಿಷದಲ್ಲಿ ಆಸ್ಪತ್ರೆಯಿಂದ ಫೋನು ಬಂದಿತ್ತು. ಫೋನು ರಿಸೀವ್‌ ಮಾಡಿದ ಮೇಲೆ ಬ್ಯಾಟರಿ ಕಡಿಮೆಯಾಗಿದೆ ಎನ್ನುವುದರಿವಾಗಿ ಚಾರ್ಜಿಗೆ ಇಟ್ಟೆ. ಚಾರ್ಜಿಗೆ ಇಟ್ಟವಳು ಅಲ್ಲೇ ಬಿಟ್ಟು ಬಂದೆ! ಶಶಿ ಫೋನ್‌ ತೆಗೆದುಕೊಂಡು ರಾಜೀವನಿಗೆ ಫೋನ್‌ ಮಾಡಿದೆ, ಒಂದು ಸಲ, ಎರಡು ಸಲ, ಮೂರು ಸಲ. ಫೋನ್‌ ರಿಸೀವೇ ಮಾಡಲಿಲ್ಲ. ಎಲ್ಲೋ ಹೊರಗೆ ಗಾಡಿ ಓಡಿಸ್ತಿದ್ದಾರೋ ಏನೋ. 

ಮಾರ್ಚ್ 25, 2020

ದಿ ಕ್ಯೂರಿಯಸ್‌ ಕೇಸ್‌ 1: ಟ್ಯಾಕ್ಸೋಪ್ಲಾಸ್ಮ ಮತ್ತು ಇಲಿ.

ಡಾ. ಅಶೋಕ್.‌ ಕೆ. ಆರ್ 
ಸದ್ಯಕ್ಕೆ ಎಲ್ಲಿ ನೋಡಿದರೂ ಕೊರೋನಾದೇ ಸುದ್ದಿ. ಹಂಗಾಗಿ ಕೊರೋನಾ ಮೂಲಕವೇ ಈ ಕೇಸನ್ನು ಪ್ರಾರಂಭಿಸೋಣ. ಈ ಕೊರೋನಾ ಎಂಬ ವೈರಸ್ಸು ನಮ್ಮ ದೇಹ ಪ್ರವೇಶಿಸಿದಾಗ ಏನಾಗ್ತದೆ? ಕೊರೋನಾ ಇನ್‌ಫೆಕ್ಷನ್ನಿನಿಂದ ಸದ್ಯಕ್ಕೆ ಮನುಷ್ಯರಲ್ಲಿ ಸಾಮಾನ್ಯವಾಗಿ ಕಂಡುಬರುವ ರೋಗಲಕ್ಷಣಗಳೆಂದರೆ ಜ್ವರ, ನೆಗಡಿ, ಕೆಮ್ಮು, ಭೇದಿ. ನಮ್ಮ ಸದ್ಯದ ತಿಳುವಳಿಕೆಯ ಪ್ರಕಾರ ಈ ರೀತಿಯ ರೋಗಲಕ್ಷಣಗಳಿಗೆ ಕಾರಣ ವೈರಸ್ಸಿಗೆ ಪ್ರತಿರೋಧ ತೋರುವ ನಮ್ಮ ದೇಹದ ರಕ್ಷಣಾ ವ್ಯವಸ್ಥೆ, ಅಂದರೆ ಇಮ್ಯುನಿಟಿ ಸಿಸ್ಟಮ್ಮು. ವೈರಸ್ಸನ್ನು ದೇಹದಿಂದ ಹೊರಗೋಡಿಸುವ ನಿಟ್ಟಿನಲ್ಲಿ ದೇಹ ತನ್ನೆಲ್ಲಾ ಪ್ರಯತ್ನವನ್ನೂ ಈ ಇಮ್ಯುನಿಟಿ ವ್ಯವಸ್ಥೆಯ ಮೂಲಕ ಮಾಡಲೆತ್ನಿಸುತ್ತದೆ. ಈ ಪ್ರತಿರೋಧ ಕಡಿಮೆ ಇದ್ದರೆ ‍ಶ್ವಾಸಕೋಶದೊಳಗೆ ನುಗ್ಗುವ ವೈರಸ್ಸುಗಳು ನಿಧಾನಕ್ಕೆ ಮನುಷ್ಯನನ್ನು ಸಾವಿನಂಚಿಗೆ ದೂಡುತ್ತದೆ. 

ಇದಿಷ್ಟೂ ಮನುಷ್ಯನ ದೃಷ್ಟಿಯಿಂದ ವೈರಸ್ಸಿನ ದಾಳಿಯನ್ನು ಕಂಡಾಗ ಅರ್ಥವಾಗುವ ಸಂಗತಿಗಳು. ಅದೇ ಕಣ್ಣಿಲ್ಲದ ವೈರಸ್ಸಿನ ದೃಷ್ಟಿಯಿಂದ ನೋಡಿದರೆ? ವೈರಸ್ಸಿಗೆ ನಮ್ಮಗಳ ಹಾಗೆ ಮನೆ ಕಟ್ಟು, ಬೈಕ್‌ ತಗೋ, ಕಾರ್‌ ತಗೋ, ಮೊಬೈಲ್‌ ತಗೋ, ಇಪ್ಪತ್ತೈದು ದಾಟಿದ ಮೇಲೆ ಮದುವೆಯಾಗು, ಮನಸ್ಸಾದರೆ ಒಂದೋ ಎರಡೋ ಮಕ್ಕಳು ಮಾಡಿಕೋ, ಸೆಟಲ್‌ ಆಗು ಅನ್ನೋ ಯೋಚನೆಗಳೆಲ್ಲ ಇರೋದಿಲ್ಲ. ಪ್ರಕೃತಿಯ ಲೆಕ್ಕದಲ್ಲಿ ವೈರಸ್ಸಿಗಿರುವ ಒಂದೇ ಒಂದು ಗುರಿ ಸಾಧ್ಯವಾದಷ್ಟು ತನ್ನ ಬಳಗವನ್ನು ಹೆಚ್ಚಿಸಿಕೊಳ್ಳುತ್ತ ಪರಿಸರದಲ್ಲಿ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳುವುದು ಮಾತ್ರ! ಮನುಷ್ಯನ ದೇಹದೊಳಗೆ ಪ್ರವೇಶಿಸುತ್ತಿದ್ದಂತೆ ವೈರಸ್ಸು ತನ್ನ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುತ್ತದೆ. ಒಬ್ಬ ಮನುಷ್ಯನಲ್ಲಿ ತನ್ನ ಸಂಖೈಯನ್ನು ಹೆಚ್ಚಿಸಿಕೊಂಡರೆ ಸಾಕಾಗುವುದಿಲ್ಲವಲ್ಲ? ಮತ್ತಷ್ಟು ಅಭಿವೃದ್ಧಿಯಾಗಲು ಆ ಮನುಷ್ಯನಿಂದ ಬಿಡುಗಡೆಯಾಗಿ ಮತ್ತೊಬ್ಬ ಮನುಷ್ಯನನ್ನು ಅಪ್ಪಿಕೊಳ್ಳುವ ಅನಿವಾರ್ಯತೆ ವೈರಸ್ಸಿಗೆ. ಆಗ ವೈರಸ್ಸು ಮನುಷ್ಯನ ದೇಹದ ರಕ್ಷಣಾ ವ್ಯವಸ್ಥೆಯನ್ನು ತನ್ನ ಸುಪರ್ದಿಗೆ ತೆಗೆದುಕೊಂಡು ʻನೋಡಪ್ಪಾ ಇಮ್ಯುನಿಟಿ. ಈಗ ನೀನೇನು ಮಾಡಬೇಕಂದ್ರೆ ವಿಪರೀತ ಯಾಕ್ಟೀವ್‌ ಆಗು. ಆಗ್ಬಿಟ್ಟು ನಿನ್ನ ಹಳೆ ಯಜಮಾನ ಮನುಷ್ಯ ಕೆಮ್ಮುವಂತೆ ಮಾಡು, ಸಿಂಬಳ ಸುರಿಯುವಷ್ಟು ನೆಗಡಿ ಬರಿಸು, ಸೀನುವಂಗೆ ಮಾಡು, ವಾಂತಿ ಭೇದಿಯಾಗುವಂತೆ ನೋಡಿಕೊ. ನಾ ಆರಾಮ್ವಾಗಿ ನನ್ನ ಸಂಖೈ ಹೆಚ್ಚಿಸಿಕೊಳ್ತೀನಿʼ ಅಂತ ತಾಕೀತು ಮಾಡುತ್ತದೆ. ವೈರಸ್ಸಿಗೆ ಸಂಪೂರ್ಣ ಶರಣಾಗತವಾದ ನಮ್ಮ ದೇಹದ ಇಮ್ಯುನಿಟಿ ವ್ಯವಸ್ಥೆ ವೈರಸ್ಸಿನ ಆಜ್ಞೆಗೆ ತಲೆಬಾಗುತ್ತಾ ಅದೇಳಿದ್ದನ್ನೆಲ್ಲವನ್ನೂ ಚಾಚೂ ತಪ್ಪದೆ ಪಾಲಿಸುತ್ತದೆ. ವೈರಸ್ಸಿಗೂ ಪಾಪ ಮನುಷ್ಯನನ್ನು ಸಾಯಿಸುವ ಉದ್ದೇಶವಿರುವುದಿಲ್ಲ. ಸತ್ತ ಮನುಷ್ಯನಿಗಿಂತ ನಿರಂತರವಾಗಿ ಕೆಮ್ಮುತ್ತಾ ಸೀನುತ್ತಾ ಸಿಂಬಳ ಸುರಿಸುತ್ತಿರುವ ಮನುಷ್ಯನೇ ವೈರಸ್ಸಿಗೆ ಹೆಚ್ಚು ಪ್ರಿಯ. ವೈರಸ್ಸಿನ ದೃಷ್ಟಿಯಲ್ಲಿ ಮನುಷ್ಯನ ಸಾವಿಲ್ಲಿ ಕೊಲ್ಯಾಟರಲ್‌ ಡ್ಯಾಮೇಜ್‌ ಅಷ್ಟೇ! 

ಮಾರ್ಚ್ 22, 2020

ಒಂದು ಬೊಗಸೆ ಪ್ರೀತಿ - 57

ನಾಮಕರಣ ಹುಟ್ಟಿದ ಹಬ್ಬ ಮುಗಿದ ಮೇಲೆ ಹೆಚ್ಚು ದಿನ ಕಾಯದೆ ನಮ್ಮ ಪುಟ್ಟ ಮನೆಗೆ ಸಾಮಾನು ಸಾಗಿಸಿದೆ. ಮಗಳ ಸಾಮಾನೇ ರಾಶಿಯಾಗಿತ್ತು. ಅರ್ಧ ನಮ್ಮ ಮನೆಗೆ ಸಾಗಿಸಿ ಇನ್ನರ್ಧ ಅಮ್ಮನ ಮನೆಯಲ್ಲೇ ಇಟ್ಟೆ. ಅಮ್ಮನ ಮನೆಯಲ್ಲಿ ದಿನಕ್ಕರ್ಧ ದಿನ ಇರ್ತಾಳಲ್ಲ ಮಗಳು. ರಾಜೀವನಿಗೆ ನಾ ಮನೆಗೆ ಹಿಂದಿರುಗುವುದು, ಇಷ್ಟು ಬೇಗ ಹಿಂದಿರುಗುವುದು ನೆಚ್ಚಿನ ಸಂಗತಿಯೇನಾಗಿರಲಿಲ್ಲ. ʼಇಷ್ಟು ಬೇಗ ಯಾಕೆ? ಇನ್ನಷ್ಟು ದಿನ ಕಳೀಲಿ ಬಿಡುʼ ಎಂದು ಪದೇ ಪದೇ ಹೇಳುತ್ತಲೇ ಇದ್ದರು. ಎಲ್ಲ ಕಾರಣವನ್ನೂ ಅವರಿಗೆ ಬಿಡಿಸಿ ಬಿಡಿಸಿ ಹೇಳುವುದಕ್ಕಾಗ್ತದಾ? ಒಂದಷ್ಟು ಜಗಳ ಮಾಡಿಕೊಂಡೇ ಮನೆಗೆ ಬಂದೆ. ಅಮ್ಮ ನಾ ಹೋಗೋದನ್ನೇ ಕಾಯ್ತಿದ್ದಿದ್ದೇನೋ ಹೌದು, ಆದರೆ ಹೊರಟ ಮೊದಲ ದಿನ ರಾತ್ರಿ ನನಗೆ ನಿದ್ರೆ ಬರುವವರೆಗೂ ಐದೈದು ನಿಮಿಷಕ್ಕೊಮ್ಮೆ ಫೋನು ಮಾಡಿ ವಿಚಾರಿಸಿಕೊಳ್ಳುತ್ತಿದ್ದರು. “ಬೆಳಿಗ್ಗೆ ಬೇಗ ಕರೆತಂದುಬಿಡು, ಪಾಪ ರಾಧ, ನಮಗೆಲ್ಲ ಒಗ್ಗಿ ಹೋಗಿದ್ದಳು. ಈಗ ನಾವ್ಯಾರೂ ಕಾಣದೇ ಹೋದರೆ ಬೇಸರಿಸಿಕೊಳ್ತದೆ” ಎಂದರು. ʼಸರಿ ಅಮ್ಮ. ಫೋನ್‌ ಇಡು. ನಿದ್ರೆ ಬರ್ತಿದೆʼ ಎಂದು ಫೋನಿಟ್ಟ ಮರುಕ್ಷಣವೇ ಮತ್ತೆ ಫೋನ್‌ ರಿಂಗಣಿಸಿತು “ತಿಂಡಿ ಎಲ್ಲ ಮಾಡಿಕೊಳ್ಳೋಕ್‌ ಹೋಗ್ಬೇಡ. ಇಲ್ಲೇ ಬಂದ್ಬಿಡಿ”. ನಾನೆಲ್ಲಿ ತಿಂಡಿ ಎಲ್ಲಾ ಮಾಡ್ಕೋತೀನಿ ಅಂದಿದ್ದೆ? ಮನೇಲ್ಯಾವ ಸಾಮಾನೂ ಇಲ್ಲ ತಿಂಡಿ ಮಾಡಬೇಕೆಂದರೆ. ಒಂದಷ್ಟು ಹಣ್ಣು ತರಕಾರಿ ತಂದಿಡಿ ಅಂತ ಇವರಿಗೆ ಹೇಳಿದ್ದೇ ಬಂತು. ಏನೂ ತಂದಿರಲಿಲ್ಲ. ಕೊನೆಗೆ ಮಗಳು ಮಧ್ಯರಾತ್ರಿ ಎದ್ದರೆ ಕುಡಿಸಲೊಂದಷ್ಟು ಹಾಲಾದರೂ ತೆಗೆದುಕೊಂಡು ಬನ್ನಿ ಎಂದ್ಹೇಳಿದ್ದಾಯಿತು. ಇರೋ ಹಾಲಲ್ಲಿ ತಿಂಡಿ ಏನ್‌ ಮಾಡ್ಕೋತಿದ್ದೆ ಬೆಳಿಗ್ಗೆ ಬೆಳಿಗ್ಗೆ? ಇನ್ನೂ ಒಂದಷ್ಟು ತಿಂಗಳು ಅಮ್ಮನ ಮನೆಯಲ್ಲೇ ತಿಂಡಿ ಊಟ, ಕೊನೇ ಪಕ್ಷ ಸಾರಂತೂ ಅಮ್ಮನ ಮನೆಯದ್ದೇ ಹೌದು. 

ಮಾರ್ಚ್ 15, 2020

ಒಂದು ಬೊಗಸೆ ಪ್ರೀತಿ - 56

ಸೋನಿಯಾ ಮನೆಗೆ ಬಂದ ಮೇಲೆ ಹೆಚ್ಚು ದಿನ ಅಮ್ಮನ ಮನೆಯಲ್ಲಿರಲು ನನ್ನ ಮನಸೊಪ್ಪಲಿಲ್ಲ. ಪಾಪ, ಸೋನಿಯಾ ಆಗಲೀ ಶಶಿ ಆಗಲೀ ನನ್ನೆಡೆಗೆ ಅಸಡ್ಡೆಯಿಂದಲೋ ತಾತ್ಸಾರದಿಂದಲೋ ನೋಡಿದವರಲ್ಲ. ಹಾಗೆ ನೋಡಿದರೆ ಸೋನಿಯಾ ಬಂದ ಮೇಲೆ ನನಗೆ ಹೆಚ್ಚು ವಿಶ್ರಾಂತಿ ಸಿಗಲಾರಂಭಿಸಿದ್ದು ಸುಳ್ಳಲ್ಲ. ಮಗಳನ್ನಾಡಿಸುತ್ತಿದ್ದಳು, ಅಡುಗೆಯಲ್ಲಿ ಸಹಾಯ ಮಾಡುತ್ತಿದ್ದಳು, ನನ್ನ ಕೆಲಸವನ್ನವಳು ಹಂಚಿಕೊಂಡಿದ್ದಳು. ಹಂಗಂತ ಪೂರ್ತಿ ಅಲ್ಲೇ ಇರೋದಿಕ್ಕಾಗುವುದಿಲ್ಲವಲ್ಲ. ಮನೆಗೆ ಹಿಂದಿರುಗುವ ಯೋಚನೆಯನ್ನು ಅಪ್ಪ - ಅಮ್ಮನ ಬಳಿ ಇವತ್ತೇಳೋಣ, ಇವತ್ತು ಬೇಡ ನಾಳೆ ಹೇಳೋಣ ಅಂತಂದುಕೊಂಡೇ ಹತ್ತಿರತ್ತಿರ ತಿಂಗಳಾಯಿತೇನೋ. ಮನೆಗೆ ಹೋದ ಮೇಲೆ ಮಗಳನ್ನ ನೋಡಿಕೊಳ್ಳುವುದೇಗೆ? ಯಾರನ್ನಾದ್ರೂ ಗೊತ್ತು ಮಾಡಬೇಕಾ? ಅದು ಖರ್ಚಿನ ಬಾಬ್ತು. ಈಗೆಲ್ಲ ತಿಂಗಳೊಪ್ಪತ್ತಿನ ಕೂಸನ್ನು ನೋಡಿಕೊಳ್ಳಲೂ ಡೇ ಕೇರ್‌ಗಳಿದ್ದಾವೆ. ಇಷ್ಟು ಪುಟ್ಟ ಮಗುವನ್ನಲ್ಲಿ ಬಿಡಲು ನನಗಂತೂ ಇಷ್ಟವಿಲ್ಲ. ಅತ್ತೆ ಮನೇಲಿ ಬಿಡೋಕಾಗಲ್ಲ. ಮಗ ಸೊಸೆಯ ಬಗ್ಗೆಯೇ ಕಾಳಜಿ ವಹಿಸದವರು ಮೊಮ್ಮಗಳ ಬಗ್ಗೆ ಅಕ್ಕರೆ ತೋರುತ್ತಾರಾ? ಇರುವುದೊಂದೇ ಆಯ್ಕೆ. ಡ್ಯೂಟಿಗೆ ಹೋಗುವ ಮುಂಚೆ ಮಗಳನ್ನು ಅಮ್ಮನ ಮನೆಗೆ ಬಿಟ್ಟು ಸಂಜೆ ಬರುವಾಗ ಮತ್ತೆ ಕರೆದುಕೊಂಡು ಹೋಗಬೇಕು. ಅಮ್ಮನಿಗೆ ಹೊರೆಯಾಗ್ತದೆ, ಹೌದು. ಆದರೆ ಬೇರೆ ದಾರಿಯೇನಿದೆ? 

ತಳ್ಳಾಡಿಕೊಂಡು ತಳ್ಳಾಡಿಕೊಂಡು ಕೊನೆಗೂ ಒಂದು ದಿನ ಅಪ್ಪ ಅಮ್ಮ ಇಬ್ಬರೇ ಇದ್ದಾಗ ವಿಷಯ ಪ್ರಸ್ತಾಪಿಸಿದೆ. “ಇನ್ನೆರಡು ತಿಂಗಳಿಗೆ ಒಂದ್ ವರ್ಷ ಆಗ್ತದಲ್ಲ. ಹುಟ್ಟಿದಬ್ಬ ನಾಮಕರಣ ಎಲ್ಲಾ ಒಟ್ಟಿಗೇ ಮುಗಿಸ್ಕಂಡು ಹೋಗುವಂತೆ ಇರು” ಎಂದೇಳಿ ಮನೆಗೋಗುವ ವಿಷಯವನ್ನಲ್ಲಿಗೇ ಸಮಾಪ್ತಿಗೊಳಿಸಿದರು ಅಪ್ಪ. ಈಗ್ಲೇ ಎಲ್ಲಿಗ್ ಹೋಗ್ತಿ? ಇನ್ನೆರಡು ತಿಂಗಳಿಲ್ಲೇ ಇರು ಅಂತರ್ಥೈಸಿಕೊಂಡು ಖುಷಿ ಪಡಬೇಕಾ ಅಥವಾ ಇನ್ನೆರಡು ತಿಂಗಳು ಇಲ್ಲಿರು ಸಾಕು, ಆಮೇಲೆ ಹೊರಡು ಎಂತರ್ಥೈಸಿಕೊಂಡು ಸಂಕಟವನ್ನನುಭವಿಸಬೇಕಾ ತಿಳಿಯಲೊಲ್ಲದು. ಹೆಂಗೋ ಇನ್ನೊಂದೆರಡು ತಿಂಗಳು ಏನು ಮಾಡೋದೆಂಬ ತಲೆ ನೋವು ತಪ್ಪಿತಲ್ಲ ಎಂದು ಸಮಾಧಾನಿಸಿಕೊಂಡೆ. ಶಶಿಗೆ ಅಮ್ಮ ವಿಷಯ ತಿಳಿಸಿದ್ದಿರಬೇಕು. “ಇದ್ಯಾಕಕ್ಕ ಹೊರಡ್ತೀನಿ ಅಂತಿದ್ಯಂತೆ. ಸೋನಿಯಾ ಬಂದ್ಲೂ ಅಂತಾನ” ಅಂತ ನಗೆಸಾರದಿಂದ ಮಾತನಾಡಿದ. ‘ನಿನ್ನ ಪಿಜಿ ಮುಗಿಯೋವರೆಗೂ ಇಲ್ಲೇ ಇರು’ ಅಂತಾನೇನೋ ಅಂತ ಕಾದೆ. ಕಾದಿದ್ದೇ ಲಾಭ, ಅವನೇನನ್ನೂ ಹೇಳಲಿಲ್ಲ. ಅಮ್ಮ ಕೂಡ ಬಾಯ್ಬಿಟ್ಟು ಇರು, ಹೋಗು, ಮಗಳದ್ದೆಂಗೆ ಅಂತ ಕೇಳದೇ ಹೋದದ್ದು ನಿಜಕ್ಕೂ ಗಾಬರಿ ಮೂಡಿಸಿತು. ‘ಸದ್ಯ. ಮೊಮ್ಮಗಳನ್ನ ನೋಡಿಕೊಳ್ಳೋ ಕಷ್ಟ ತಪ್ತು’ ಅಂತ ಅವರಂದುಕೊಂಡುಬಿಟ್ಟರೆ? ಅವರಂಗೆಲ್ಲ ಅಂದುಕೊಳ್ಳುವುದಕ್ಕಿಂತ ಮುಂಚಿತವಾಗಿಯೇ ಹಿಂಗಿಂಗೆ ಬೆಳಿಗ್ಗೆ ಬಿಟ್ಟು ಸಂಜೆ ಕರೆದುಕೊಂಡು ಹೋಗ್ತೀನಿ ಅಂತೇಳಿಬಿಟ್ಟೆ. “ಇನ್ನೇನ್ ಮತ್ತೆ. ಹಂಗೇ ಮಾಡಬೇಕಲ್ಲ” ಎಂದವರ ಬಳಿ ನಿರಾಕರಿಸುವ ಅವಕಾಶವಾದರೂ ಎಲ್ಲಿತ್ತು! 

ಮಾರ್ಚ್ 3, 2020

ಒಂದು ಬೊಗಸೆ ಪ್ರೀತಿ - 55

ಡಾ. ಅಶೋಕ್.‌ ಕೆ. ಆರ್.‌
ಚಿಕನ್ನಿನ ಮೂರು ಡ್ರೈ, ಮಟನ್ ಚಾಪ್ಸು, ಮಟನ್ ಬಿರಿಯಾನಿ, ನಾಟಿ ಕೋಳಿ ಸಾರು, ಮಲೆನಾಡು ಶೈಲಿಯ ಪೋರ್ಕು, ಅಣಬೆಯದೆರಡು ಡ್ರೈ, ನಾನ್ ವೆಜ್ ತಿನ್ನದವರಿಗೆ ಘೀ ರೈಸು, ದಾಲು, ಇದರ ಜೊತೆಗೆ ಮಾಮೂಲಿ ಸಾಂಬಾರು, ರಸಮ್ಮು, ಮೊಸರನ್ನ. ಕೊನೆಗೊಂದಷ್ಟು ಐಸ್ ಕ್ರೀಮು, ಐಸ್ ಕ್ರೀಮಿನ ಜೊತೆಗೆ ತಿನ್ನಲು ಬಿಸಿ ಬಿಸಿ ಜಾಮೂನು. ಹೊರಗೋಗುವ ಬಾಗಿಲಿನ ಬಳಿ ಥರಾವರಿ ಬೀಡ. ಮತ್ತೊಂದು ಕಡೆ ದೊಡ್ಡ ಬಾರ್ ಕೌಂಟ್ರು. ಕಿರುಬೆರಳ ಗಾತ್ರದ ಬಾಟಲಿಯಿಂದ ಹಿಡಿದು ಎರಡು ಲೀಟರ್ ಗಾತ್ರದ ಬಾಟಲಿಗಳೂ ಇದ್ದವು. ಅದೇನೇನು ಡ್ರಿಂಕ್ಸೋ ಏನು ಸುಡುಗಾಡೋ. ಊಟದ ಹಾಲಿನಲ್ಲಿ ಮೇಲಿದ್ದ ಜನರಿಗಿಂತ ಹೆಚ್ಚು ಜನರಿದ್ದರು. ಇಷ್ಟೆಲ್ಲ ತಿನ್ನೋಕೆ ಕುಡಿಯೋಕೆ ಇಟ್ರೆ ಪಾಪ ಗಂಡು ಹೆಣ್ಣೇ ಅನಾಥರಾಗ್ಬಿಡ್ತಾರೆ! ಮತ್ತೊಂದು ಮೂಲೆಯಲ್ಲಿ ಸ್ಪೀಕರ್‌ಗಳನ್ನು ಜೋಡಿಸುತ್ತಿದ್ದರು. ಇಷ್ಟೊತ್ತಾದರೂ ಯಾಕೆ ರೆಡಿ ಮಾಡಿಲ್ಲ ಅಂತ ಒಬ್ಬರು ಜೋರು ಮಾಡುತ್ತಿದ್ದರು. ಡ್ಯಾನ್ಸ್ ಕೂಡ ಇರ್ತದೆ. ಅಲ್ಲಿಗೆ ರಾಜೀವ ಹೊರಡುವುದು ತಡವೇ. ‘ಕೊನೇಪಕ್ಷ ರಾತ್ರಿ ಹೋಟೆಲಿಗೆ ಕಾರು ಓಡಿಸಿಕೊಂಡು ಹೋಗುವಷ್ಟಾದರೂ ಜ್ಞಾನ ಉಳಿಸಿಕೊಳ್ಳಿ!’ ಎಂದೆ. ನಗಾಡುತ್ತಾ ಬಾರ್ ಕೌಂಟರ್ ಕಡೆಗೆ ಅವರು ಹೋಗುವುದಕ್ಕೂ ಮಗಳು ಕಿಟಾರೆಂದು ಕಿರುಚಿ ಅಳಲಾರಂಭಿಸುವುದಕ್ಕೂ ಸರಿ ಹೋಯಿತು. ಹೊಟ್ಟೆ ಹಸಿವೋ ಏನೋ. ಒಂಚೂರು ಹಾಲು ಕುಡಿಸಿ, ಬ್ಯಾಗಿನಲ್ಲಿದ್ದ ಹಣ್ಣುಗಳನ್ನು ತಿನ್ನಿಸಿ ಬರುವ ಎಂದು ಮೇಲೆ ಬಂದೆ. ಸುಮಾಳ ಅಕ್ಕನನ್ನು ಹುಡುಕಿ ‘ಯಾವ್ದಾದರೂ ರೂಮು ಕೀ ಕೊಡಿ. ಮಗಳಿಗೆ ಹಾಲು ಕುಡಿಸಬೇಕು’ ಎಂದೆ. "ಸುಮ ನಿಮಗೇ ಅಂತಾನೆ ಒಂದು ರೂಮು ಖಾಲಿ ಇರಿಸಿದ್ಲು. ನೀವೇ ಇಟ್ಕೊಂಡಿರಿ” ಎಂದೇಳಿ ಕೀ ಕೊಟ್ಟರು. ಛೇ! ಛತ್ರದಲ್ಲೇ ರೂಮಿದೆ ಅಂದಿದ್ರೆ ಹೋಟೆಲ್ ಮಾಡ್ತಾನೇ ಇರಲಿಲ್ಲ. ಸುಮ್ನೆ ದುಡ್ದು ದಂಡವಾಯ್ತು. ಹಾಲು ಕುಡಿದ ಮಗಳು ಸಿಪ್ಪೆ ತೆಗೆದು ಚೆನ್ನಾಗಿ ಹಿಸುಕಿದ್ದ ಸೇಬಿನಹಣ್ಣಿನ ಎರಡು ತುಂಡು ತಿಂದು ನೀರು ಕುಡಿದಳು. ಇನ್ನುಳಿದ ಹಣ್ಣನ್ನು ನಾ ತಿಂದುಕೊಂಡೆ. ಹಂಗೇ ಇಟ್ಟರೆ ಕಪ್ಪಾಗಿ ಕೆಡ್ತದೆ. 

ಮಗಳನ್ನು ಎತ್ತಿಕೊಂಡು ಕೆಳಗೆ ಹೋದರೆ ಇವರಾಗಲೇ ಟೈಟು. ಎರಡನೇ ಪೆಗ್ಗೋ ಮೂರನೇ ಪೆಗ್ಗೋ. ರಾಮ್‌ಪ್ರಸಾದ್ ಜೊತೆ ಕುಳಿತು ಜೋರು ದನಿಯಲ್ಲಿ ಮಾತು - ನಗು. ಮಾತೆಲ್ಲ ರಾಜೀವನದೇ…… ರಾಮ್‌ಪ್ರಸಾದ್ ಮಧ್ಯೆ ಮಧ್ಯೆ ಹೂ…..ಹೂ...... ಎನ್ನುತ್ತಿದ್ದರು. ಅದರ ಮಧ್ಯೆ ಒಂದೊಂದು ಗುಟುಕೇರಿಸುತ್ತಾ ಮುಗುಳ್ನಗುತ್ತಿದ್ದರು. ‘ಈ ಯಪ್ಪ ಏನ್ ಪರಿಚಯವಾದ ಮೊದಲ ದಿನವೇ ಇಷ್ಟೊಂದು ತಲೆ ತಿಂತಿದ್ದಾನೆ’ ಎಂದು ಕಷ್ಟಪಟ್ಟು ನಗುತ್ತಿದ್ದಂತಿತ್ತು. ರಾಜೀವನ ಅವತಾರಕ್ಕೆ, ನಮ್ ಆಸ್ಪತ್ರೆಯ ಸಿಬ್ಬಂದಿಯ ಜೊತೆ ಬಿಡುಬೀಸಾಗಿ ಕುಳಿತಿರುವುದನ್ನು ಕಂಡು ನನಗೆ ಸಿಟ್ಟೇ ಬಂತು. ನನ್ನ ಜೊತೆ ಕೂತು ಡೀಸೆಂಟಾಗಿ ಎರಡು ಪೆಗ್ ಹಾಕಿಕೊಂಡು ರೂಮಿಗೆ ವಾಪಸ್ಸಾಗಿದ್ರೆ ಆಗ್ತಿರಲಿಲ್ವ ಇವರಿಗೆ? ದುಮುಗುಡುತ್ತಲೇ ಮುಖದ ಮೇಲೊಂದು ನಗುವನ್ನೊತ್ತಿಕೊಂಡು ಅವರು ಕುಳಿತಿದ್ದ ಟೇಬಲ್ಲಿನ ಕಡೆಗೋದೆ. ರಾಮ್ ಪ್ರಸಾದ್ ಕಡೆಗೆ ನೋಡಿ ಸಾರಿ ಎನ್ನುವಂತಹ ನಗು ಚೆಲ್ಲಿ ರಾಜೀವನೆಡೆಗೆ ಸಿಟ್ಟಿನಲ್ಲಿ ನೋಡಿದೆ. ನನ್ನ ಕಣ್ಣಲ್ಲಿದ್ದ ಸಿಟ್ಟನ್ನರಿಯುವ ಮಿತಿಯಿಂದಾಚೆ ಇದ್ದರು. “ಬಂದ್ಯಾ..... ತಗೋ ….. ಏನಾದ್ರೂ…. ವೈನ್ ಇದೆ….. ಬ್ರೀಝರ್ ಇದೆ…..” 

ಫೆಬ್ರ 25, 2020

ಒಂದು ಬೊಗಸೆ ಪ್ರೀತಿ - 54

ಡಾ. ಅಶೋಕ್.‌ ಕೆ. ಆರ್.‌
ಒಂದೊಂದೇ ಎಪಿಸೋಡು ಹುಡುಕುಡುಕಿ ಓದೋಕೆ ಬೇಸರವಾ? ಪೂರ್ತಿ ಇ - ಪುಸ್ತಕ ತೆಗೆದುಕೊಳ್ಳಲು ಇಲ್ಲಿ ಕ್ಲಿಕ್ಕಿಸಿ.

‘ಇಷ್ಟು ಬೇಗ ಮದುವೆ ಬಂದ್ಬಿಡ್ತೇನೆ ನಿಂದು! ನಿನ್ನೆ ಮೊನ್ನೆ ಫಿಕ್ಸ್ ಆದಂಗ್ ಇತ್ತು’ ಸುಮ ಮದುವೆಯ ಮೊದಲ ಕಾರ್ಡನ್ನು ಕೊಟ್ಟಾಗ ಅಚ್ಚರಿಯಿಂದ ಹೇಳಿದೆ. 

“ಅಲ್ವ! ಇನ್ ಇಪ್ಪತ್ ದಿನ ಇದೆ ಅಷ್ಟೇ. ಶಾಪಿಂಗ್ ಮಾಡಿಲ್ಲ. ಬಟ್ಟೆ ತಗಂಡಿಲ್ಲ……. ಒಡವೆ ತಗೋಬೇಕು. ಉಫ್ ಇನ್ನೂ ಎಷ್ಟೊಂದು ಕೆಲಸ ಬಾಕಿ ಇದೆ! ಅದಿಕ್ಕೆ ಮದುವೆಗೆ ಹತ್ ದಿನ ಇರೋವಾಗ್ಲೇ ರಜಾ ಹಾಕ್ತಿದ್ದೀನಿ” ಸುಮಳ ತಲೆಯಲ್ಲಿ ಥರಾವರಿ ಬಣ್ಣದ ಸೀರೆಗಳು ವಿವಿಧ ಡಿಸೈನಿನ ಒಡವೆಗಳೇ ಸುಳಿದಾಡುತ್ತಿದ್ದವು. 

‘ಮದ್ವೆ ಆದ ಮೇಲೆ ಜಾಸ್ತಿ ದಿನ ರಜಾ ಹಾಕೋಬೇಕು ಕಣೇ' ಕಣ್ಣು ಮಿಟುಕಿಸಿದೆ. 

“ಆಗ್ಲೂ ಹಾಕಿದ್ದೀನ್ ಬಿಡು” ಕೀಟಲೆಯ ದನಿಯಲ್ಲಿ ಹೇಳುತ್ತಾ “ಲೇ ಬಾಸು. ನಿನ್ ಹಬ್ಬಿ ಎಷ್ಟ್ ಘಂಟೆಗ್ ಬರ್ತಾರೆ ನಿಮ್ಮಮ್ಮನ ಮನೆಗೆ” 

‘ಆಗ್ತದೆ ಏಳು ಎಂಟರ ಮೇಲೆ. ಯಾಕೆ’ 

“ಸರಿ ಹಾಗಿದ್ರೆ. ಇವತ್ ರಾತ್ರಿ ಫೋನ್ ಮಾಡ್ಕಂಡ್ ಬರ್ತೀನಿ ಬಿಡು. ನಾನ್ ವೆಜ್ ಏನಾದ್ರೂ ಮಾಡ್ಸಿರು. ನಿಮ್ಮ ಮನೆಯವರನ್ನೆಲ್ಲ ಕರಿಯೋಕ್ ಬರ್ತೀನಿ” 

‘ಅಲ್ಲಿಗೆಲ್ಲ ಬಂದು ಏನ್ ಕೊಡೋದ್ ಬಿಡೆ. ನನಗ್ ಕೊಟ್ಟಿದ್ದೀಯಲ್ಲ ಸಾಕು. ನಾನು ನನ್ ಗಂಡ ಬರ್ತೀವಿ. ನೋಡುವ, ಅಮ್ಮ ಒಪ್ಪಿದ್ರೆ ಮಗಳನ್ನೂ ಕರ್ಕಂಡ್ ಬರ್ತೀವಿ’ ರಾಜೀವ ಬರಲ್ಲವೆಂದು ಗೊತ್ತಿತ್ತು. 

“ಅಲ್ಲ ಏನೋ ಇನ್ವಿಟೇಶನ್ ಕೊಡೋ ನೆಪದಲ್ಲಿ ಒಂದ್ ನಾನ್ ವೆಜ್ ಊಟ ಬಾರ್ಸೋಣ ಅಂದ್ಕಂಡ್ರೆ ಮನೆಗೇ ಬರ್ಬೇಡ ಅನ್ನೋರೆಲ್ಲ ನಮ್ ಫ್ರೆಂಡ್ಸು….. ಕರ್ಮ" 

‘ಹೆ... ಹೆ…. ಹಂಗಲ್ವೇ! ಬಾ ಬಾ. ನಿನಗ್ ಊಟ ಇಲ್ಲ ಅನ್ನೋಕಾಗ್ತದಾ…..’ 

ಆ ಕೂಡಲೆ ಅವಳ ಮುಂದೆಯೇ ಅಪ್ಪನಿಗೆ ಫೋನ್ ಮಾಡಿ ಸಂಜೆ ಚಿಕನ್ನೋ ಮಟನ್ನೋ ಅಥವಾ ಎರಡೂ ತಗಂಡ್ ಬನ್ನಿ ಮನೆಗೆ ಬರುವಾಗ ಅಂತೇಳಿ ಸುಮಳ ಕಡೆಗೆ ತಿರುಗಿ ‘ಹ್ಯಾಪಿ’ ಎಂದೆ. ಮುಖ ಊರಗಲವಾಗಿತ್ತು. 

ಒಂದು ಬೊಗಸೆ ಪ್ರೀತಿಯ ಹಿಂದಿನ ಅಧ್ಯಾಯಗಳನ್ನು ಓದಲು ಇಲ್ಲಿ ಕ್ಲಿಕ್ಕಿಸಿ.

ಫೆಬ್ರ 17, 2020

ಒಂದು ಬೊಗಸೆ ಪ್ರೀತಿ - 53

ಡಾ. ಅಶೋಕ್.‌ ಕೆ. ಆರ್.‌
ಒಂದು ಬೊಗಸೆ ಪ್ರೀತಿಯ ಹಿಂದಿನ ಅಧ್ಯಾಯಗಳನ್ನು ಓದಲು ಇಲ್ಲಿ ಕ್ಲಿಕ್ಕಿಸಿ.
ಮದುವೆಯ ಸಂಭ್ರಮವೆಲ್ಲ ಮುಗಿಸಿ ಮನೆಗೆ ಬಂದಾಗ ಐದೂವರೆ. ಶಶಿ – ಸೋನಿಯಾ ಇಬ್ಬರೂ ಹಿಂದಿನ ರಾತ್ರಿ ರಿಸೆಪ್ಶನ್‌ ಬೇಡ, ಹೇಗಿದ್ರೂ ಭಾನುವಾರ ಅಲ್ವ ಮದುವೆ, ಮುಹೂರ್ತ ಕೂಡ ಬೆಳಿಗ್ಗೆ ಏಳಕ್ಕೇ ಇದೆ. ರಾತ್ರಿ ರಿಸೆಪ್ಶನ್‌ ಮುಗಿಸಿ ಬೆಳಿಗ್ಗೆ ಅಷ್ಟೊತ್ತಿಗೆ ಏಳೋದು ಎಲ್ಲರಿಗೂ ತಲೆ ನೋವು. ಭಾನುವಾರವೇ ಹತ್ತೂವರೆಯಿಂದ ಹನ್ನೆರಡು ಒಂದರವರೆಗೆ ರಿಸೆಪ್ಶನ್‌ ಇಟ್ಟುಕೊಂಡರೆ ಸಾಕು ಅಂದಿದ್ದರು. ಇರೋ ಒಬ್ಬಳು ಮಗಳ ಮದುವೆಯಲ್ಲಿ ರಾತ್ರಿ ರಿಸೆಪ್ಶನ್‌ ಇಟ್ಟುಕೊಳ್ಳದಿದ್ದರೆ ಹೇಗೆಂದು ಮೊದಮೊದಲಿಗೆ ರಾಮೇಗೌಡ ಅಂಕಲ್‌ ಗೊಣಗಾಡಿದರು…. ಕೊನೆಗೆ ಒಪ್ಪಿಕೊಂಡರು. ಬೆಳಿಗ್ಗೆ ಮುಹೂರ್ತ ಏಳಕ್ಕಿದ್ದಿದ್ದರಿಂದ ಐದೂವರೆಗೆಲ್ಲ ಎದ್ದು ತಯಾರಾಗಿ ಧಾರೆ ಮುಗಿದ ನಂತರ ಮತ್ತೊಂದು ಸುತ್ತು ಬಟ್ಟೆ ಬದಲಿಸಿ ರಿಸೆಪ್ಶನ್ನಿನಲ್ಲಿ ನಿಂತು ಓಡಾಡಿ ಮಾತನಾಡಿ ಎಲ್ಲರಿಗೂ ಸುಸ್ತಾಗಿತ್ತು. ಮಧ್ಯೆ ಮಧ್ಯೆ ಮಗಳನ್ನು ಎತ್ತಿಕೊಂಡು ಸಮಾಧಾನಿಸಿ ಹಾಲುಣಿಸಲು ಖಾಲಿಯಿದ್ದ ರೂಮಿಗೆ ಓಡಾಡಿ……ನನಗಂತೂ ಉಳಿದವರಿಗಿಂತ ಒಂದು ಕೈ ಜಾಸ್ತಿಯೇ ಸುಸ್ತಾಗಿತ್ತು. ಸೋನಿಯಾ ಕಡೆ ಜನರು ಜಾಸ್ತಿ. ʼಲವ್‌ ಮ್ಯಾರೇಜಂತೆ, ಹುಡುಗ ಎಸ್ಸಿಯಂತೆʼ ಅನ್ನುವ ಗುಸುಗುಸುಗಳ ನಡುವೆಯೂ ಜನರು ಜಾಸ್ತಿಯೇ ಇದ್ದರು. "ಹುಡುಗ ನಮ್ಮೋನೆ ಅಂದ್ರೆ ಇದರ ನಾಲ್ಕು ಪಟ್ಟು ಜನ ಇರ್ತಿದ್ರು” ಅಂತ ಸೋನಿಯಾಳ ಸಂಬಂಧಿಕೊಬ್ಬರು ಹೇಳಿದ ಮಾತು ಕಿವಿಗೆ ಬಿದ್ದರೂ ಬೀಳದಂತೆ ನಟಿಸಿದೆ. ಸೋನಿಯಾರ ಮನೆಯವರಿರಲಿ, ಮದುವೆಗೆ ಮುನ್ನ ನಮ್ಮತ್ತೆ ಮನೆಯವರನ್ನು ಸಂಭಾಳಿಸುವುದೇ ಶ್ರಮದ ಕೆಲಸವಾಗಿಬಿಟ್ಟಿತ್ತು. ಮದುವೆಗೆ ಕರೆಯುವುದರಿಂದಲೇ ಕೊಂಕು ಮಾತು ಶುರುವಾಗಿತ್ತು. “ಯಾಕ್‌ ನಮ್‌ ಪೈಕಿ ಯಾರೂ ಇರಲಿಲ್ವೇನೋ” ಎಂದು ಮದುವೆಗೆ ಕರೆಯಲು ಹೋಗಿದ್ದ ನಮ್ಮಮ್ಮ ಮುಖಕ್ಕೆ ಹೊಡೆದಂತೆ ಹೇಳಿಬಿಟ್ಟಿದ್ದರಂತೆ. ಅಪ್ಪನಿಗೆ ಅಮ್ಮ ಈ ವಿಷಯ ತಿಳಿಸಿರಲಿಲ್ಲ. ತಿಳಿದ ಮೇಲೆ ಇವರೊಂದು ಹೇಳಿ ಅದಕ್ಕವರೊಂದು ಹೇಳಿ…..ಜಗಳವಾಗೋದ್ಯಾಕೆ. ʼಅವರಿರೋದೇ ಹಂಗೆ ಬಿಡಮ್ಮʼ ಅಂತ ಸಮಾಧಾನಿಸಿದ್ದೆ. ಅವರನ್ನು ಸಮಾಧಾನಿಸಿದ್ದೆ. ನನ್ನಲ್ಲಿ ಕೋಪ ಮೂಡಿತ್ತು. ರಾಜೀವ ರಾತ್ರಿ ಊಟಕ್ಕೆ ಬಂದಾಗ ಆ ವಿಷಯವನ್ನೆತ್ತಿಕೊಂಡು ಕೆಣಕದೆ ಇರಲಿಲ್ಲ.

ʼಲಗ್ನಪತ್ರಿಕೆ ಕೊಡೋಕ್‌ ಹೋದವರತ್ರ ಎಷ್ಟ್‌ ಬೇಕೋ ಅಷ್ಟ್‌ ಮಾತಾಡೋದ್‌ ಬಿಟ್ಟು ಅದೇನಲ್ಲ ಅಧಿಕಪ್ರಸಂಗ ಮಾಡಿದ್ದಾರೆ ನಿಮ್ಮಮ್ಮʼ ಸಿಟ್ಟಲ್ಲೇಳಬೇಕೆಂದುಕೊಂಡವಳು ವ್ಯಂಗ್ಯಕ್ಕೆ ದನಿಯನ್ನು ಸೀಮಿತಗೊಳಿಸಿಕೊಂಡೆ.

ಒಂದೊಂದೇ ಎಪಿಸೋಡು ಹುಡುಕುಡುಕಿ ಓದೋಕೆ ಬೇಸರವಾ? ಪೂರ್ತಿ ಇ - ಪುಸ್ತಕ ತೆಗೆದುಕೊಳ್ಳಲು ಇಲ್ಲಿ ಕ್ಲಿಕ್ಕಿಸಿ.

ಫೆಬ್ರ 13, 2020

ಒಂದು ಬೊಗಸೆ ಪ್ರೀತಿ - 52

ಡಾ. ಅಶೋಕ್.‌ ಕೆ. ಆರ್.‌
ಒಂದು ಬೊಗಸೆ ಪ್ರೀತಿಯ ಹಿಂದಿನ ಅಧ್ಯಾಯಗಳನ್ನು ಓದಲು ಇಲ್ಲಿ ಕ್ಲಿಕ್ಕಿಸಿ.
ಒಳ್ಳೆದಿನ ಕೂಡಿ ಬಂದಿಲ್ಲವಿನ್ನು ಎಂಬ ನೆಪದಿಂದ ಮುಂದೂಡುತ್ತಲೇ ಹೋಗಲಾಗಿದ್ದ ಶಶಿ ಸೋನಿಯಾಳ ಮದುವೆ ಅಂತೂ ಇಂತೂ ಇನ್ನೊಂದು ತಿಂಗಳಿಗೆ ನಿಕ್ಕಿಯಾಗಿತ್ತು. ಪ್ರೀತಿ ಹುಟ್ಟಲನವಶ್ಯಕವಾದ ಮುಹೂರ್ತ ಮದುವೆಗಾಗಿ ಅನಿವಾರ್ಯವಾಗಿದ್ಯಾಕೆ ಅಂತ ಯಾರಿಗೂ ತಿಳಿದಿರಲಿಲ್ಲ. ಪ್ರೀತಿ ಹುಟ್ಟಿದ್ದೂ ಒಂದು ಸುಮುಹೂರ್ತದಲ್ಲೇ, ಅದು ನಮ್ಮರಿವಿನ ಪರಿಧಿಯಲ್ಲಿರಲಿಲ್ಲ ಎಂಬ ಉತ್ತರ ಸಿಗುತ್ತಿತ್ತೋ ಏನೋ. ಬಹುಶಃ ನನ್ನ ಪುರುಷೋತ್ತಮನ ಪ್ರೀತಿ ಯಾವುದೋ ದುರ್ಮುಹೂರ್ತದಲ್ಲಿ ಜನಿಸಿದ್ದಿರಬೇಕು. ಒಂದು ಮಟ್ಟಿಗೆ ಶಶಿ ಸೋನಿಯಾರ ಮದುವೆ ತಡವಾಗಿದ್ದೇ ಒಳಿತಾಯಿತು. ಯಾರಿಗಲ್ಲದಿದ್ದರೂ ಸೋನಿಯಾಳ ತಾಯಿಗೆ ಈ ಮದುವೆಯನ್ನು ಮನಸಾರೆ – ಪೂರ್ಣವಾಗಲ್ಲದಿದ್ದರೂ ಅಪೂರ್ಣವಾಗಿಯಾದರೂ ಒಪ್ಪಿಕೊಳ್ಳುವುದಕ್ಕೆ – ಈ ಸಮಯದಲ್ಲಿ ಸಾಧ್ಯವಾಯಿತು. ಬಯ್ಕಂಡು ಬಯ್ಕಂಡೇ ಅವರ ಹತ್ತಿರದ ನೆಂಟರೂ ʼಏನಾದ್ರೂ ಮಾಡ್ಕಂಡು ಹಾಳಾಗೋಗಿʼ ಎಂದು ಹರಸಲೂ ಈ ಕಾಲಾವಧಿ ಸಹಾಯ ಮಾಡಿತು. ನಮ್ಮಪ್ಪ ಅಮ್ಮನದೇ ಲವ್‌ ಮ್ಯಾರೇಜ್‌ ಆಗಿದ್ದರಿಂದ ನಮ್ಮ ಮನೆಯ ಕಡೆ ಯಾರದೂ ಅಂತಹ ವಿರೋಧವೇನಿರಲಿಲ್ಲ. ʼಮತ್ತೊಂದ್‌ ಗೌಡ್ರುಡಿಗೆಗೆ ಈ ಗತಿ ಬಂತಾʼ ಅಂತ ನಮ್ಮಮ್ಮನ ಕಡೆಯ ಜಾತಿನಿಷ್ಠ ಬಂಧುಗಳು ಒಂದಷ್ಟು ಲೊಚಗುಟ್ಟಿರಬಹುದು. ಮನೆಯಲ್ಲಿ ಮದುವೆಯ ತಯಾರಿ ಜೋರಾದಷ್ಟು ಅಮ್ಮನ ಓಡಾಟ ಜಾಸ್ತಿಯಾಗಿ ರಾಧಳನ್ನು ನೋಡಿಕೊಳ್ಳುವ ಹೆಚ್ಚಿನ ಜವಾಬ್ದಾರಿ ನನ್ನ ತಲೆಯ ಮೇಲೇ ಬೀಳುತ್ತಿತ್ತು. ಎಷ್ಟು ಬೇಗ ಈ ಮದುವೆ ಮುಗಿದು ನಾ ಹೆಚ್ಚು ಓದಲು ಪ್ರಾರಂಭಿಸುತ್ತೀನೋ ಎನ್ನಿಸಲಾರಂಭಿಸಿತ್ತು.

ಮದುವೆಗಿನ್ನು ಇಪ್ಪತ್ತು ದಿನಗಳಿರುವಾಗ ಸಾಗರನಿಗೆ ಮೆಸೇಜು ಮಾಡಿದ್ದೆ. ʼಮುಂದಿನ ತಿಂಗಳ ಹತ್ತನೇ ತಾರೀಖು, ಭಾನುವಾರ ಬಿಡುವು ಮಾಡಿಕೋʼ

“ಯಾಕೆ? ನಿಮ್ಮನೇಲ್ಯಾರೂ ಇರೋದಿಲ್ವಾ? ಬಂದು ನಿನ್ನ ಸೆಕ್ಸ್‌ ನೀಡ್ಸ್‌ ಪೂರೈಸಬೇಕಿತ್ತಾ? ಈ ಸಲ ದುಡ್ಡಾಗ್ತದೆ” ಸಾಗರ ಮೆಸೇಜು ನೋಡಿ ಜಿಗುಪ್ಸೆಯಾಯಿತು, ಅಸಹ್ಯ ಮೂಡಿತು. ಅವನ ಮೇಲಲ್ಲ. ನನ್ನ ಮೇಲೆ. ಇಷ್ಟೊಂದು ಕೆಟ್ಟ ವ್ಯಕ್ತಿತ್ವವಾ ನನ್ನದು? ಬೇಸರವಾಯಿತು. ಯಾರೇ ನನ್ನನ್ನು ಅಪಾರ್ಥ ಮಾಡಿಕೊಂಡರೂ ಸಾಗರ ನನ್ನನ್ನು, ನನ್ನ ಮನಸ್ಸಿನ ಏರಿಳಿತಗಳನ್ನು ಸೂಕ್ತ ರೀತಿಯಲ್ಲಿ ಅರ್ಥೈಸಿಕೊಳ್ಳುತ್ತಾನೆ ಏನೋ ನನ್ನ ಜೊತೆ ಅವನು ಜಗಳವಾಡಿದರೂ ಹೆಚ್ಚಿನಂಶ ಆ ಜಗಳ ನಾ ಅವನಿಗೆ ಸಿಗಲಿಲ್ಲ, ಪೂರ್ಣವಾಗಿ ಅವನವಳಾಗಲಿಲ್ಲ ಅನ್ನೋ ಸಿಟ್ಟಿಗೆ ಅಂತಂದುಕೊಂಡಿದ್ದು ಇವತ್ತಿನವನ ಮೆಸೇಜಿನಿಂದ ನುಚ್ಚುನೂರಾಯಿತು. ನನ್ನ ತಾಳ್ಮೆಗೂ ಒಂದು ಮಿತಿ ಇರಲೇಬೇಕಲ್ಲ.

ಒಂದೊಂದೇ ಎಪಿಸೋಡು ಹುಡುಕುಡುಕಿ ಓದೋಕೆ ಬೇಸರವಾ? ಪೂರ್ತಿ ಇ - ಪುಸ್ತಕ ತೆಗೆದುಕೊಳ್ಳಲು ಇಲ್ಲಿ ಕ್ಲಿಕ್ಕಿಸಿ.

ಫೆಬ್ರ 6, 2020

ಒಂದು ಬೊಗಸೆ ಪ್ರೀತಿ - 51

ಡಾ. ಅಶೋಕ್.‌ ಕೆ. ಆರ್.‌
ಒಂದು ಬೊಗಸೆ ಪ್ರೀತಿಯ ಹಿಂದಿನ ಅಧ್ಯಾಯಗಳನ್ನು ಓದಲು ಇಲ್ಲಿ ಕ್ಲಿಕ್ಕಿಸಿ.
ಬಿಡುವಿನ ಭಾನುವಾರ ವಾರ್ಡುಗಳಲ್ಲಿ ರೋಗಿಗಳೆಚ್ಚಿರಲಿಲ್ಲ. ಓಪಿಡಿ ಡ್ಯೂಟಿ ಕೂಡ ನನ್ನದಿರಲಿಲ್ಲ. ರೌಂಡ್ಸು ಮುಗಿಸಿ ಹತ್ತು ಘಂಟೆಗೆಲ್ಲ ಮನೆ ಸೇರಿಬಿಟ್ಟಿದ್ದೆ. ಕೆಲಸ ಓದು ಮಗಳು ಕೆಲಸ ಓದು ಮಗಳು… ದಿನಚರಿ ಏಕತಾನತೆ ಮೂಡಿಸಿಬಿಟ್ಟಿತ್ತು. ಇವತ್ತು ಸುಮ್ಮನೆ ಮಗಳನ್ನು ಹಾಲಿನಲ್ಲಿ ಸೋಫಾದ ಮೇಲೆ ಮಲಗಿಸಿಕೊಂಡು ದಿನಪೂರ್ತಿ ಟಿವಿ ನೋಡ್ತಾ ಕೂತುಬಿಡಬೇಕು. ಎಷ್ಟು ದಿನವಾಗೋಯ್ತು ಟಿವಿ ಎಲ್ಲಾ ನೋಡಿ ಅಂದ್ಕೊಂಡು ಮಗಳಿಗೆ ರೂಮಿನಲ್ಲಿ ಹಾಲು ಕುಡಿಸುತ್ತಿರುವಾಗ ಗೇಟು ತೆರೆದ ಸದ್ದಾಯಿತು. ಇಷ್ಟೊತ್ತಿಗ್ಯಾರು? ರಾಜೀವನೇ ಇರಬೇಕು. ಭಾನುವಾರ ಅವರು ಎದ್ದೇಳೋದು ಲೇಟು. ತಿಂಡಿಗೆ ಬಂದ್ರೂ ಬಂದ್ರೆ ಇಲ್ಲಾಂದ್ರೆ ಇಲ್ಲ. ಇವತ್ತೇನೋ ಅಪರೂಪಕ್ಕೆ ತಿಂಡಿಗೆ ಬಂದುಬಿಟ್ಟಿದ್ದಾರೆ. ನಿನ್ನೆ ಪಾರ್ಟಿ ಮಾಡಿರಲಿಲ್ಲವೇನೋ. ಏನ್‌ ಗಂಡಸರೋ ಏನೋಪ, ದಿನಾ ಇಲ್ಲೇ ಇದ್ದು, ಕೊನೇಪಕ್ಷ ರಾತ್ರಿ ಇಲ್ಲೇ ಇದ್ದು ಕಷ್ಟಪಟ್ಟು ಹುಟ್ಟಿರೋ ಮಗಳನ್ನ ಇಷ್ಟಪಟ್ಟು ನೋಡಿಕೊಳ್ಳೋದು ಬಿಟ್ಟು ಪುಸಕ್ಕಂತ ಉಂಡು ವಾಪಸ್ಸಾಗಿಬಿಡುತ್ತಾರೆ. ಹೋಗಲ್ಲೇನ್‌ ಮಾಡ್ತಾರೆ. ಹೋಗ್ತಾ ದಾರೀಲೊಂದು ಸಿಗರೇಟು ಸೇದ್ಕಂಡು ಫ್ರೆಂಡ್ಸ್‌ ಜೊತೆ ಒಂದಷ್ಟು ಹರಟೆ ಹೊಡ್ಕಂಡು ಮನೆಗೋಗಿ ಹನ್ನೆರಡರವರೆಗೆ ಯಾವ್ದಾದ್ರೂ ಇಂಗ್ಲೀಷ್‌ ಪಿಚ್ಚರ್‌ ನೋಡ್ಕಂಡು ಮಲಗಿಬಿಡ್ತಾರೆ. 

ಸೀದಾ ರೂಮಿಗೇ ಬಂದರು. ʼತಿಂಡಿ ತಿನ್ನೋಗಿʼ ಎಂದೆ. 

“ಇಲ್ಲ. ಮನೆಯತ್ರ ಒಂದ್ಕಡೆ ಮಲ್ಲಿಗೆ ಇಡ್ಲಿ ಚಟ್ನಿ ಚೆನ್ನಾಗ್‌ ಮಾಡ್ತಾರೆ. ಅಲ್ಲೇ ತಿಂದ್ಕಂಡ್‌ ಬಂದೆ" 

ʼನಂಗೂ ತರೋದಲ್ವ! ಮಲ್ಲಿಗೆ ಇಡ್ಲಿ ಅಂದ್ರೆ ಇಷ್ಟ ನಂತೆ ಅಂತ ಗೊತ್ತಲ್ಲ. ಎರಡ್‌ ವರ್ಷದಿಂದೆ ಎಕ್ಸಿಬಿಷನ್‌ನಲ್ಲಿ ತಿಂದದ್ದೇ ಕೊನೆʼ 

“ತರೋಣ ಅಂತಾನೇ ಹೋಗಿದ್ದು. ಇದೇ ಕೊನೇ ಒಬ್ಬೆ. ಪಾರ್ಸೆಲ್‌ಗಿಲ್ಲ ಸರ್.‌ ಇಲ್ಲಿ ಬರೋರಿಗೆ ಮಾತ್ರ ಅಂದ್ಬಿಟ್ಟ"

ಒಂದೊಂದೇ ಎಪಿಸೋಡು ಹುಡುಕುಡುಕಿ ಓದೋಕೆ ಬೇಸರವಾ? ಪೂರ್ತಿ ಇ - ಪುಸ್ತಕ ತೆಗೆದುಕೊಳ್ಳಲು ಇಲ್ಲಿ ಕ್ಲಿಕ್ಕಿಸಿ.

ಜನ 29, 2020

ಒಂದು ಬೊಗಸೆ ಪ್ರೀತಿ - 50

ಡಾ. ಅಶೋಕ್.‌ ಕೆ. ಆರ್.‌
ಓಪಿಡಿಯಲ್ಲಿ ಬಿಡುವಿನ ವೇಳೆಯಲ್ಲಿ ಓದುತ್ತಾ ಕುಳಿತಿದ್ದಾಗ ರಾಮ್‌ಪ್ರಸಾದ್‌ ಒಳಬರುವುದು ಕಾಣಿಸಿತು. ರಿತಿಕಾಳನ್ನು ವಾರ್ಡಿನಲ್ಲಿ ನೋಡಲೋಗುತ್ತಿದ್ದಾಗ ಆಗೊಮ್ಮೆ ಈಗೊಮ್ಮೆ ಎದುರಿಗೆ ಸಿಕ್ಕು ಹಾಯ್‌ ಬಾಯ್‌ ಹೇಳಿದ್ದರು. ಇವತ್ತೇನು ಓಪಿಡೀಗೆ? ಅದೂ ನಿನ್ನೆ ರಿತಿಕಾ ಡಿಸ್ಚಾರ್ಜ್‌ ಆಗಿದ್ದಳಲ್ಲ? ಅವರ ಬೆನ್ನ ಹಿಂದೆಯೇ ರಿತಿಕಾ ಅಮ್ಮನ ಜೊತೆ ಪುಟ್ಟ ಪುಟ್ಟ ಹೆಜ್ಜೆಹಾಕುತ್ತಾ ನಡೆದು ಬರುತ್ತಿದ್ದರು. ಹೆಜ್ಜೆ ಎತ್ತಿಡುವುದರಲ್ಲಿ ಸುಸ್ತಿರುವುದು ಎದ್ದು ಕಾಣಿಸುತ್ತಿತ್ತಾದರೂ ಮುಖದಲ್ಲಿ ಉತ್ಸಾಹದ ಲೇಪನವಿತ್ತು, ಹತ್ತು ದಿನದ ಆಸ್ಪತ್ರೆವಾಸ ಮೂಡಿಸಿದ ಬೇಸರದ ಮೇಲೆ. ಎರಡ್ಮೂರು ದಿನ ಅಥವಾ ನಾಲ್ಕೈದು ದಿನಕ್ಕೆ ಡಿಸ್ಚಾರ್ಜ್‌ ಮಾಡುವ ಎಂದಿದ್ದರು ಮೋಹನ್‌ ಸರ್.‌ ಆದರೆ ಹೊಟ್ಟೆ ನೋವು ಕಡಿಮೆಯಾಗುವುದಕ್ಕೇ ವಾರ ತೆಗೆದುಕೊಂಡಿತ್ತು. ಪುಣ್ಯಕ್ಕೆ ಕಿಡ್ನಿಗೇನೂ ಹಾನಿಯಾಗಿರಲಿಲ್ಲ. ಹೆಚ್ಚೇ ರಿಸ್ಕಿದೆ ಅನ್ನಿಸಿದರೂ ಹೆಚ್ಚಿನ ಪ್ರಮಾಣದ ಸ್ಟಿರಾಯ್ಡ್‌ ಮಾತ್ರೆಗಳನ್ನು ಕೊಡಲಾರಂಭಿಸಿದ ಮೇಲಷ್ಟೇ ಹೊಟ್ಟೆ ನೋವು ಕಡಿಮೆಯಾಗಿದ್ದು. ರಕ್ತ ಪರೀಕ್ಷೆಗೆ ಬ್ಲಡ್‌ ತೆಗೆದುಕೊಳ್ಳಲು ಚುಚ್ಚುವ ಸೂಜಿ, ಡ್ರಿಪ್‌ಗಾಗಿ ಹಾಕಲಾದ ವ್ಯಾಸೋಫಿಕ್ಸ್‌ ಮೂರು ದಿನಕ್ಕೊಮ್ಮೆ ಬ್ಲಾಕ್‌ ಆಗುತ್ತಿತ್ತು, ಹೊಸ ವ್ಯಾಸೋಫಿಕ್ಸ್‌ ಹಾಕುವಾಗಾಗುತ್ತಿದ್ದ ನೋವೇ ಮಕ್ಕಳಿಗೆ ಆಸ್ಪತ್ರೆಯೆಂದರೆ ಭಯ.…… ಭಯಕ್ಕಿಂತ ಹೆಚ್ಚಾಗಿ ವಾಕರಿಕೆ ಮೂಡಿಸಿಬಿಡುತ್ತದೆ. ನೋವಾಗದಂತೆ ವ್ಯಾಸೋಫಿಕ್ಸ್‌ ಹಾಕುವಂತ, ಸೂಚಿ ಚುಚ್ಚುವಂತ ಔಷಧವ್ಯಾಕಿನ್ನೂ ಕಂಡುಹಿಡಿದಿಲ್ಲವೋ? 

ಫಾಲೋ ಅಪ್‌ಗೆ ಬಂದಿರಬೇಕೇನೋ, ಮೋಹನ್‌ ಸರ್‌ ಬರ ಹೇಳಿರಬೇಕೇನೋ ಅಂದುಕೊಂಡು ಪುಸ್ತಕದಲ್ಲಿ ತಲೆತಗ್ಗಿಸಿದೆ. ಉಹ್ಞೂ.. ಅವರು ನಾನಿದ್ದ ಕೊಠಡಿಗೇ ಬಂದರು. ನೋಡಿ ನಕ್ಕು ಮೇಲೆದ್ದೆ. ಎಷ್ಟೇ ಆಗ್ಲಿ ಹೆಚ್.ಆರ್‌ ಮ್ಯಾನೇಜರ್ರು. ಮುಂದೆ ನಾ ಡಿ.ಎನ್.ಬಿ ಮುಗಿಸಿ ಕೆಲಸಕ್ಕೆ ಸೇರಿದಾಗ ಇವರ ಸಹಾಯವೆಲ್ಲ ಆಗೀಗ ಬೇಕೇ ಆಗ್ತದಲ್ಲ ಅಂತ ನಿಂತೆನೋ ಏನೋ. 

“ಹಲೋ ಡಾಕ್ಟರ್‌ ಡಿಸ್ಟರ್ಬ್‌ ಮಾಡಿದ್ನಾ.…” 

ʼಹಂಗೇನಿಲ್ಲ ಸರ್.‌ ಓಪಿಡಿ ಬಿಡುವಾಗಿತ್ತಲ್ಲ. ಓದ್ತಿದ್ದೆʼ 

ಓದ್ತಿರೋದು ನನ್ನ ಕಣ್ಣಿಗೂ ಕಾಣಿಸಿತ್ತಲ್ಲ ಎನ್ನುವಂತೆ ನಕ್ಕು ರಿತಿಕಾ ಕಡೆಗೆ ನೋಡಿದರು. ರಿತಿಕಾ ತನ್ನ ಕೈಯಲ್ಲಿದ್ದ ಕವರನ್ನು ತಂದು ನನ್ನ ಕೈಗಿತ್ತಳು. ಕವರ್‌ ತೆಗೆದುಕೊಳ್ಳುತ್ತಾ ʼಏನಿದು?ʼ ಎಂದು ರಾಮ್‌ಪ್ರಸಾದ್‌ ಕಡೆಗೆ ನೋಡಿದೆ. 

"ನಮ್ಮಕ್ಕ ನಿಮಗೊಂದು ಬಾಕ್ಸ್‌ ಸ್ವೀಟ್‌ ಕೊಡಲೇಬೇಕೆಂದು ಹೇಳಿದರು. ನಿನ್ನೆ ಡಿಸ್ಚಾರ್ಜ್‌ ಆಗೋದು ತಡವಾಯ್ತು. ಇನ್ಶೂರೆನ್ಸ್‌ ಇತ್ತಲ್ಲ. ಹಾಗಾಗಿ ತಡವಾಯ್ತು. ಆಗಲೇ ನೀವಿದ್ದೀರ ಹೆಂಗೆ ಅಂತ ವಿಚಾರಿಸಿದೆ. ಹೊರಟೋಗಿದ್ರಿ ಮನೆಗೆ” 

ʼಅಯ್ಯೋ ಸ್ವೀಟೆಲ್ಲ ಯಾಕ್‌ ತರೋಕೋದ್ರಿʼ ರಿತಿಕಾಳ ಅಮ್ಮನ ಕಡೆಗೆ ನೋಡುತ್ತಾ ಕೇಳಿದೆ. ಮೇಲ್ಮೇಲ್‌ ಹಂಗ್‌ ಹೇಳಿದ್ರೂ ಒಳಗೊಳಗೇ ಖುಷಿಯಾಗಿತ್ತು. ಏನೋ ಸ್ವಲ್ಪ ಅಪರೂಪದ ರೋಗವನ್ನು ಶೀಘ್ರವಾಗಿ ಕಂಡುಹಿಡಿದದ್ದಕ್ಕೆ ಇಷ್ಟಾದರೂ ಪುರಸ್ಕಾರ ಸಿಕ್ಕಿತಲ್ಲ ಎಂದು. ಅದನ್ನೆಲ್ಲಾ ತೋರಿಸಿಕೊಳ್ಳಲಾದೀತೇ. ʼತಗೊಳಿ ತಗೊಳಿ. ಮಗಳಿಗೇ ಕೊಡಿʼ ಎಂದು ವಾಪಸ್ಸು ರಿತಿಕಾಳ ಕೈಗೇ ಕವರನ್ನು ಕೊಡಲೆತ್ನಿಸಿದೆ. ತನ್ನೆರಡೂ ಕೈಗಳನ್ನು ತಟ್ಟಂತ ಬೆನ್ನಹಿಂದೆ ಕಟ್ಟಿಕೊಂಡ ರಿತಿಕಾ “ಇಲ್ಲ ಆಂಟಿ. ಇದು ನಿಮಗೇಂತಲೇ ತಂದಿದ್ದು. ನೀವೇ ತಿನ್ನಬೇಕು. ಮೇಲಾಗಿ ನೀವ್‌ ನಂಗ್‌ ವಾಪಸ್‌ ಕೊಟ್ರೂ ನಾನಿದನ್ನ ತಿನ್ನೋ ಹಂಗಿಲ್ಲ" ಎಲಾ ಚುರುಕ್‌ ಮೆಣಸಿನಕಾಯಿ ಅಂದ್ಕೋತಾ ʼಯಾಕ್‌ ತಿನ್ನಂಗಿಲ್ವೋ ಮೇಡಮ್ಮೋರುʼ ಎಂದಾಕೆಯ ಕೆನ್ನೆ ಚಿಗುಟಿದೆ. ಹತ್ತು ದಿನದ ಖಾಯಿಲೆಯಿಂದ ಪಾಪ ಕೆನ್ನೆಯೆಲ್ಲ ಒಳಗೋಗಿಬಿಟ್ಟಿತ್ತು. 

“ಬೇಕರಿ ಐಟಮ್ಸು, ಐಸ್‌ಕ್ರೀಮು, ತುಪ್ಪ, ಬೆಣ್ಣೆ – ಎಣ್ಣೆ, ಮೊಟ್ಟೆ – ಮೀನು – ಮಾಂಸ ಏನೂ ತಿನ್ನಬಾರದು ಅಂತ ಹೇಳಿದ್ದಾರಲ್ಲ. ತಿಂದ್ರೆ ಮತ್ತೆ ಹುಷಾರು ತಪ್ತೀನಂತಲ್ಲ. ಮತ್ತೆ ಹುಷಾರು ತಪ್ಪಿ ಅಷ್ಟೆಲ್ಲ ಹೊಟ್ಟೆ ನೋವಾಗೋದಕ್ಕಿಂತ ತಿನ್ನದೇ ಇರೋದೇ ಗುಡ್‌ ಅಲ್ವ ಅಮ್ಮ”. ಹು ಮಗಳೆ ಅಂತ ಅವರಮ್ಮ ತಲೆಯಾಡಿಸಿದರು. 

ಅಮ್ಮನ ಕಡೆಗೆ ತಿರುಗಿದವಳ ತಲೆ ಸವರುತ್ತಾ ʼಸರಿ ಪುಟ್ಟ. ನಾನೇ ತಕೋತೀನಿ. ನೀ ಪೂರ್ತಿ ಹುಷಾರಾದ ಮೇಲೊಂದು ದಿನ ಬರ್ಬೇಕು. ಆಗ ನೀ ಹೇಳಿದ್ದೆಲ್ಲ ಕೊಡಿಸ್ತೀನಿʼ

ಒಂದೊಂದೇ ಎಪಿಸೋಡು ಹುಡುಕುಡುಕಿ ಓದೋಕೆ ಬೇಸರವಾ? ಪೂರ್ತಿ ಇ - ಪುಸ್ತಕ ತೆಗೆದುಕೊಳ್ಳಲು ಇಲ್ಲಿ ಕ್ಲಿಕ್ಕಿಸಿ.