ಅಕ್ಟೋ 3, 2020

ಒಂದು ಬೊಗಸೆ ಪ್ರೀತಿ - 82

ರಾಮ್‌ಪ್ರಸಾದ್‌ ಮುಜುಗರದಿಂದ ಮುದುಡಿ ಕುಳಿತಿದ್ದರು. ಬಿಯರ್‌ ಬಾಟಲಿನ ಮುಚ್ಚಳದಂಚಿದ ಕೆಳಗೆ ಜಾರಿ ಬೀಳುತ್ತಿದ್ದ ನೀರ ಹನಿಗಳನ್ನೊಮ್ಮೆ ನೋಡ್ತಾರೆ, ಬಾಗಿಲ ಕಡೆಗೊಮ್ಮೆ ನೋಡ್ತಾರೆ, ನಂತರ ಟಿವಿಯ ಕಡೆ ಕಣ್ಣಾಡಿಸಿ ಮತ್ತೆ ಬಿಯರ್ರು ಬಾಟಲುಗಳೆಡೆಗೆ ಕಣ್ಣೋಟ ಹರಿಸಿಬಿಡುತ್ತಾರೆ. ಅವರಿಗೇನು! ಹಿಂದೂ ಗೊತ್ತಿಲ್ಲ, ಮುಂದೂ ಗೊತ್ತಿಲ್ಲ! ಮನೇಲ್ಯಾರೂ ಇಲ್ಲ, ಕುಡಿದೋಗುವ ಅಂತ ಬಂದಿದ್ದಾರೆ ಅಷ್ಟೇ! ಮೇಲ್ನೋಟಕ್ಕೆ ಶಾಂತವಾಗಿ ಕುಳಿತಿದ್ದವಳ ಮನದಲ್ಲಿದ್ದ ಚಿಂತೆಯ ಆಳ ಅಗಲವ್ಯಾವೂ ರಾಮ್‌ಗೆ ಗೊತ್ತೇ ಇಲ್ಲ! ಟೇಬಲ್‌ ಮೇಲೇನೋ ಎರಡೇ ಬಿಯರ್‌ ಇದೆ. ಇವರೊಂದು ಅವರೊಂದು ಕುಡಿದು ಅಲ್ಲಿಗೆ ಮುಗಿಸಿದರೆ ಸರಿ. ಇದರೊಟ್ಟಿಗೆ ಮತ್ತೊಂದಷ್ಟು ಬಿಯರನ್ನು ರಾಜೀವ ಗಂಟಲೊಳಗಿಳಿಸಿದರೆ ಮುಗೀತು ಕತೆ. ನಶೆಯೇರಿದ ಮೇಲೆ ಅವರ ಮಾತುಗಳು ಎತ್ತೆತ್ತಲಿಗೋ ಹೋಗುವುದು ಅಪರೂಪವೇನಲ್ಲ. ಏನಾಗ್ತದೋ ಏನಾಗ್ತದೋ ಅನ್ನೋ ಚಿಂತೆಯಲ್ಲೇ ನನ್ನ ನಿದ್ರೆ ಹಾರಿ ಹೋಗಿತ್ತು. ನಿಮಿಷಕ್ಕೆರಡೆರಡು ಬಾರಿ ರಾಮ್‌ ಕಡೆಗೊಮ್ಮೆ, ಬಾಗಿಲು ಕಡೆಗೊಮ್ಮೆ, ಟಿವಿ ಕಡೆಗೊಮ್ಮೆ ನೋಡುತ್ತಾ ಕುಳಿತೆ. 

ಕೊನೆಗೂ ರಾಜೀವ್‌ ಬಂದರು. ಅದೇನು ಎರಡೇ ನಿಮಿಷಕ್ಕೆ ಬಂದರೋ ಹತ್ತು ನಿಮಿಷಕ್ಕೆ ಬಂದರೋ ಅರ್ಧ ಘಂಟೆಯ ನಂತರ ಬಂದರೋ ಒಂದೂ ತಿಳಿಯಲಿಲ್ಲ ನನಗೆ. ಒಂದು ಯುಗವೇ ಕಳೆದುಹೋದಂತನ್ನಿಸಿತು. ಒಳಗೆ ಕಾಲಿಡುತ್ತಿದ್ದಂತೆಯೇ ನನ್ನನ್ನು ಕಂಡು ಮುಖ ಕಿವುಚಿಕೊಂಡರು. ಥೂ ಅನಿಷ್ಟವೇ ಯಾಕ್‌ ಬಂದೆ ಇವತ್ತು ಅಂದಂತಾಯಿತು. ಅಷ್ಟೆಲ್ಲ ಮುಖ ಕಿವುಚಿಕೊಂಡು ಸಿಟ್ಟು ತೋರಿಬಿಟ್ಟು ನಾ ಅವರಿಬ್ಬರಿಗೂ ಕುಡಿಯುವುದಕ್ಕೇ ಅವಕಾಶ ಕೊಡದಂತೆ ಓಡಿಸಿಬಿಟ್ಟರೆ! ಮುಳುಗುವ ಸೂರ್ಯ ಕೂಡ ಅಷ್ಟು ವೇಗವಾಗಿ ಮೋಡಗಳ ಮೇಲೆ ಬಣ್ಣವನ್ನೆರಚಿರಲಾರ. ಅಷ್ಟು ವೇಗವಾಗಿ ಮುಖದ ಮೇಲೊಂದು ನಗು ಎರಚಿಕೊಂಡು "ಅರೆರೆ... ಇದೇನ್‌ ಬಂದುಬಿಟ್ಟಿದ್ದಿ. ಸುಮಾರ್‌ ಲೇಟಾಯ್ತಲ್ಲ. ಬರೋಲ್ಲವೇನೋ ನೀನು ಅಂದುಕೊಂಡೆ" ಎಂದರು. 

ʻಅಂದುಕೊಳ್ಳೋ ಬದಲು ಫೋನ್‌ ಮಾಡಿದ್ರಾಗಿರೋದುʼ ಎಂದುಕೊಳ್ಳುತ್ತಾʼ ಪಾಪು ಮಲಗಿಬಿಟ್ಟಿದ್ದಳು. ಹಂಗಾಗಿ ತಡವಾಯ್ತುʼ ಎಂದೆ. 

"ಹೌದಾ.... ಹೋಗ್ಲಿ ಬಿಡು. ಒಳ್ಳೇದೇ ಆಯ್ತು. ರಾಮ್‌ ಸಿಕ್ಕಿ ಸುಮಾರು ದಿನಗಳಾಗಿದ್ದವಲ್ಲ. ಇವತ್ಯಾಕೋ ನೆನಪಾಯಿತು. ನೀನೂ ಬರೋ ಹಂಗೆ ಕಾಣಿಸಲಿಲ್ಲವಲ್ಲ. ಫೋನ್‌ ಮಾಡಿ ಕರೆಸಿಕೊಂಡೆ ಅಷ್ಟೇ" 

ʻಮ್.‌ ಏನೇನ್‌ ತಂದ್ರಿ ಪಾರ್ಸಲ್ಲುʼ 

"ಜಾಸ್ತಿ ಇಲ್ಲ. ಒಂದ್‌ ಪ್ಲೇಟ್‌ ಕಬಾಬು, ಒಂದ್‌ ಚಿಲ್ಲಿ ಪೋರ್ಕು, ಎರಡ್‌ ಬಿರಿಯಾನಿ ಅಷ್ಟೇ. ಹೋಗ್ಲಿ ಬಿಡು. ಫ್ರಿಜ್ಜಲ್ಲಿರ್ತದೆ. ನಾಳೆಗಾಗುತ್ತೆ" 

ʻಫ್ರಿಜ್ಜಲ್ಲಿ? ಯಾಕ್‌ ತಿನ್ನಲ್ವ ಈಗʼ 

"ಹೇ... ನೀ ಬರಲ್ಲ ಅಂದ್ಕಂಡು ಮನೇಲೇ ಕೂರೋಣ ಅಂದ್ಕಂಡಿದ್ದೆ. ನೀ ಬಂದುಬಿಟ್ಟಿದ್ದೀಯಲ್ಲ. ಹೊರಗೆ ಎಲ್ಲಾದ್ರೂ ಹೋಗಿ ಕೂರ್ತೀವಿ" 

ಸೆಪ್ಟೆಂ 26, 2020

ಒಂದು ಬೊಗಸೆ ಪ್ರೀತಿ - 81

ತಿಂಗಳು ಕಳೆಯಿತು ಜಗಳವಾಗಿ, ಅವಮಾನಿತಳಾಗಿ. ಎಲ್ಲ ಕಡೆಯಲ್ಲೂ ಒಂದಷ್ಟು ಶಾಂತಿ ನೆಲೆಸಿತ್ತು. ಅಮ್ಮ ನಿಧಾನಕ್ಕಾದರೂ ಮಾತಿಗೆ ತೊಡಗಿಕೊಂಡಿದ್ದಳು. ಅಮ್ಮನ ಮನೆಯೊಳಗೆ ನಾಲ್ಕೈದು ನಿಮಿಷ ಇದ್ದು ಬರುವುದನ್ನು ನಾನೂ ರೂಢಿಸಿಕೊಂಡೆ. ಎದುರಿಗೆ ಸಿಕ್ಕಾಗ ಮುಖ ತಿರುಗಿಸಿಕೊಳ್ಳುತ್ತಿದ್ದ ಸೋನಿಯಾ ಕಾಟಾಚಾರಕ್ಕಾದರೂ ಸರಿಯೇ ಒಂದು ನಗು ಬಿಸಾಕುವಷ್ಟು ಮೃದುವಾಗಿದ್ದಳು. ಶಶಿ ಅಪ್ಪ ಆರಾಮಾಗೇ ಇದ್ದರು ನನ್ನ ಜೊತೆ. ರಾಜೀವನದೇ ಭಯ ನನಗೆ. ಅಚ್ಚರಿಯೆಂಬಂತೆ ಎಲ್ಲರಿಗಿಂತ ಮುಂಚಿತವಾಗೆ ನನ್ನೊಂದಿಗೆ ರಾಜಿ ಮಾಡಿಕೊಂಡವರಂತೆ ಬದಲಾದದ್ದು ಅವರೇ. ಅಫ್‌ಕೋರ್ಸ್‌ ಒಂದದಿನೈದು ದಿನ ಮಾತುಕತೆಯೇನೂ ಇರಲಿಲ್ಲ. ಆ ಹೂ ಉಹ್ಞೂ ಅಂತ ಶುರುವಾದ ಮಾತುಗಳು ಮತ್ತೊಂದು ವಾರ ಕಳೆಯುವಷ್ಟರಲ್ಲಿ ತೀರ ಮೊದಲಿನಷ್ಟು ಅಲ್ಲವಾದರೂ ಮೊದಲಿದ್ದ ಮಾತುಗಳಲ್ಲಿ ಅರ್ಧಕ್ಕೆ ಬಂದು ನಿಂತಿತ್ತು. ಕಳೆದೆರಡು ದಿನಗಳಿಂದಂತೂ ವಿಪರೀತವೆನ್ನಿಸುವಷ್ಟೇ ಮಾತನಾಡುತ್ತಿದ್ದರು. ಅವರ ಮಾತುಗಳಲ್ಲೆಲ್ಲ ಬೆಂಗಳೂರಿಗೆ ಹೋಗಿದ ನಂತರದ ಜೀವನಗಳ ಕುರಿತೇ ಇರುತ್ತಿತ್ತು. ಇನ್ನೇನು ರಿಸಲ್ಟ್‌ ಬರ್ತದೆ ಈ ತಿಂಗಳೋ ಮುಂದಿನ ತಿಂಗಳೋ. ಹೆಚ್ಚು ಕಮ್ಮಿ ಪಾಸ್‌ ಆಗೋದ್ರಲ್ಲಿ ಅನುಮಾನವೇನಿಲ್ಲ. ಈಗಾಗಲೇ ಒಂದು ತಿಂಗಳ ಬಾಂಡ್‌ ಮುಗಿದೇ ಹೋಗಿದೆ. ಇನ್ನೊಂದು ಹತ್ತು ತಿಂಗಳು ಕಳೆದುಬಿಟ್ಟರೆ ಮುಗೀತು, ಆರಾಮು ಬೆಂಗಳೂರಿಗೆ ಹೋಗಿಬಿಡಬಹುದು. ಮಗಳ ನೋಡಿಕೊಳ್ಳುವುದೊಂದು ಸಮಸ್ಯೆಯಾಗಬಹುದು. ಅಷ್ಟರಲ್ಲಿ ಮಗಳೂ ದೊಡ್ಡವಳಾಗಿರ್ತಾಳಲ್ಲ? ನಡೀತದೆ. ಬೆಂಗಳೂರಿನಲ್ಲೇನು ಹೆಜ್ಜೆಗೊಂದು ಡೇ ಕೇರ್‌ಗಳಿವೆಯಂತೆ. ಒಂದಷ್ಟು ಖರ್ಚಾಗ್ತದೆ ಹೌದು, ಆದರೂ ಹೆಂಗೋ ನಿಭಾಯಿಸಬಹುದು. ರಾಜೀವ ಒಂದಷ್ಟು ನೆಮ್ಮದಿ ಕಂಡುಕೊಂಡರೆ ಮಿಕ್ಕಿದ್ದೆಲ್ಲ ಸಲೀಸಾಗಿ ನಡೆದು ಹೋಗ್ತದೆ. 

ಆದ್ರೂ ಮೈಸೂರು ಬಿಟ್ಟು ಬೆಂಗಳೂರಿಗೆ ಸೆಟಲ್‌ ಆಗಲು ಹೋಗುವುದು ಬಾಲಿಶ ನಿರ್ಧಾರದಂತೇ ತೋರ್ತದೆ. ಅದೂ ಮೈಸೂರಿನಲ್ಲೇ ಕೈ ತುಂಬಾ ಸಂಬಳ ಸಿಗುವ ಕೆಲಸ ದಕ್ಕುವಾಗ. ಮಗಳನ್ನು ನೋಡಿಕೊಳ್ಳಲು ಅಪ್ಪ ಅಮ್ಮ ಇದ್ದಾರೆ. ಜೊತೆಗೆ ಫಸ್ಟ್‌ ಹೆಲ್ತ್‌ ಒಂಥರಾ ಎರಡನೇ ಮನೆಯಂತೆಯೇ ಆಗಿ ಹೋಗಿದೆ. ಎಲ್ಲರೊಡನೆಯೂ ಒಗ್ಗಿ ಹೋಗಿದ್ದೇನೆ. ಕಷ್ಟ ಸುಖ ಹಂಚಿಕೊಂಡು ಕಿತ್ತಾಡೋಕೆ ಸುಮ ಇದ್ದಾಳೆ. ರಾಮ್‌ನಂತಹ ಒಳ್ಳೆ ಗೆಳೆಯ ಕೂಡ ಇದ್ದಾನೆ. ಇರೋದ್ರಲ್ಲಿ ನಮ್‌ ಡಿಪಾರ್ಟ್‌ಮೆಂಟೇ ಕಿರಿಕಿರಿ ಇಲ್ಲದೆ ನಡೀತಿರೋದು. ಇಷ್ಟೆಲ್ಲ ಸೌಕರ್ಯಗಳಿರುವಾಗ ಮೈಸೂರು ಬಿಟ್ಟು ಹೋಗಲು ಮನಸ್ಸಾಗುವುದಾದರೂ ಹೇಗೆ? ಸುಮ್ಮನೆ ಕ್ಲಿನಿಕ್‌ ಮಾಡಿಕೊಂಡು ಇವರಿಗೊಂದು ಫಾರ್ಮಸಿ ಇಟ್ಟುಕೊಟ್ಟರೆ ಆಗ್ತದೋ ಏನೋ? ಅಂತನ್ನಿಸ್ತದೆ. ಆದರೆ ಕ್ಲಿನಿಕ್‌ ಇಡೋದಂದ್ರೆ ಭಯ. ಕ್ಲಿನಿಕ್ಕು ಚೆನ್ನಾಗಿ ನಡೆಯುವಂತಾಗಲು ವರುಷ ಎರಡು ವರುಷವಾದರೂ ಕಾಯಬೇಕು. ಅಷ್ಟು ಕಾದರೂ ಕ್ಲಿಕ್‌ ಆಗೇ ಆಗ್ತದೆ ಅಂತೇನೂ ಇಲ್ಲ. ಕ್ಲಿಕ್‌ ಆದರೂ ಬೇರೆಯವರು ಎಲ್ಲಿ ಹೊಸ ಕ್ಲಿನಿಕ್‌ ತೆಗೆದು ಸ್ಪರ್ಧೆ ನೀಡಿಬಿಡ್ತಾರೋ ಅನ್ನೋ ಭಯ ಇದ್ದೇ ಇದೆ. ಇನ್ನು, ಕ್ಲಿನಿಕ್‌ ನಿರೀಕ್ಷೆಗೂ ಮೀರಿ ಗೆದ್ದು ಬಿಟ್ಟರೆ ಮನೆಯ ಕಡೆಗೆ, ಮಗಳ ಕಡೆಗೆ ಗಮನವೇ ಕೊಡದಷ್ಟು ಕೆಲಸವಾಗಿಬಿಡ್ತದೆ. ರಜಾ ಹಾಕೋಕಾಗಲ್ಲ, ಅಯ್ಯೋ ಇವತ್‌ ಯಾಕೋ ಬೋರು ಮನೇಲೇ ಇದ್ದು ಬಿಡುವ ಅನ್ನುವಂಗಿಲ್ಲ, ಜನ ಬರಲಿ ಬರದೇ ಹೋಗಲಿ ಘಂಟೆ ಹೊಡೀತಿದ್ದಂಗೇ ಹೋಗಿ ಕ್ಲಿನಿಕ್ಕಿನ ಬಾಗಿಲು ತೆರೆದು ಕುಳಿತುಕೊಳ್ಳಲೇಬೇಕು. ಯಪ್ಪ! ಬೆಂಗಳೂರಿಗೆ ಹೋಗಿ ಯಾವುದಾದರೂ ಆಸ್ಪತ್ರೆಯಲ್ಲಿ ನೆಲೆ ಕಂಡುಕೊಳ್ಳುವುದು ಉತ್ತಮ, ಕ್ಲಿನಿಕ್‌ ಗ್ಲಿನಿಕ್‌ ಆಟ ನನಗಲ್ಲ. 

ಸೆಪ್ಟೆಂ 19, 2020

ಒಂದು ಬೊಗಸೆ ಪ್ರೀತಿ - 80

"ಇದ್ಯಾಕೆ? ಪರೀಕ್ಷೆ ಮುಗಿದ ಮೇಲೆ ಓದೋಕೇನೂ ಇಲ್ಲ ಅಂತ ತುಂಬಾ ಬೇಸರಕ್‌ ಹೋಗ್ಬಿಟ್ಟಂಗಿದ್ದಿ" ಬೆಳಗಿನ ರೌಂಡ್ಸು ಮುಗಿಸಿ ಕ್ಯಾಂಟೀನಿನಲ್ಲಿ ಕಾಫಿ ಕುಡಿಯುತ್ತ ಕುಳಿತಿದ್ದಾಗ ಒಳಬಂದ ಸುಮಾ ಕೇಳಿದ ಪ್ರಶ್ನೆಗೆ ಮುಗುಳ್ನಕ್ಕೆ, ಉತ್ತರಿಸಲಿಲ್ಲ. ಇವತ್ತಿಗೆ ಇಪ್ಪತ್ತು ದಿನವೇ ಆಯಿತು ಮನೆಯಲ್ಲಿ ಗಲಾಟೆ ನಡೆದು. ಅವತ್ತಿನಿಂದ ಇವತ್ತಿನವರೆಗೂ ಮನಸ್ಸು ಸರಿ ಹೋಗಿಲ್ಲ. ಯಾಂತ್ರಿಕವಾಗಿ ಬೆಳಿಗ್ಗೆ ಮಗಳನ್ನು ಅಪ್ಪನ ಮನೆಗೆ ಬಿಟ್ಟು ಕೆಲಸಕ್ಕೆ ಬಂದು ಸಂಜೆ ಹೋಗುವಾಗ ಮಗಳನ್ನು ಮನೆಗೆ ಕರೆದುಕೊಂಡು ಹೋಗುತ್ತಿದ್ದೀನಷ್ಟೇ. ಅಪ್ಪನ ಮನೆಯೊಳಗೂ ಕಾಲಿಟ್ಟಿಲ್ಲ ಅಷ್ಟು ದಿನದಿಂದ. ಬೆಳಿಗ್ಗೆ ಹೋಗಿ ಮನೆ ಮುಂದೆ ನಿಂತು ಹಾರ್ನ್‌ ಹೊಡೆದ್ರೆ ಅಪ್ಪನೋ ಅಮ್ಮನೋ ಶಶೀನೋ ಹೊರಬಂದು ಮಗಳನ್ನು ಕರೆದುಕೊಂಡು ಹೋಗುತ್ತಾರೆ, ಸಂಜೆ ಮತ್ತೊಂದು ಸುತ್ತು ಹಾರ್ನ್‌ ಹೊಡೆದ್ರೆ ಅಮ್ಮ ಒಳಗಡೆ ಬಾಗಿಲು ತೆರೆಯುತ್ತಾರೆ. ರಾಧ ಹೊರಬರುತ್ತಾಳೆ. ಅಮ್ಮ ಹೊರಬಂದು ನನ್ನನ್ನು ಮಾತನಾಡಿಸುವುದಿಲ್ಲ, ನಾನು ಒಳಗೋಗಿ ಅವರನ್ನು ವಿಚಾರಿಸಿಕೊಳ್ಳುವುದಿಲ್ಲ. ಅಪರೂಪಕ್ಕೆ ಸಂಜೆ ಅಪ್ಪ ಮನೆಯಲ್ಲೇ ಇದ್ದರೆ "ಬಾ ಒಳಗೆ" ಎನ್ನುತ್ತಾರೆ. ʻಇರ್ಲಿ ಪರವಾಗಿಲ್ಲ ಕೆಲಸವಿದೆʼ ಎಂದ್ಹೇಳಿ ನಾ ಹೊರಟುಬಿಡುತ್ತೇನೆ. ಅಪ್ಪನಿಗೂ ನನ್ನ ಮನಸ್ಥಿತಿಯ ಅರಿವಿದೆಯಲ್ಲ, ಬಲವಂತಿಸುವುದಿಲ್ಲ. ಇನ್ನು ಮನೆಗೆ ಬಂದು ಅಡುಗೆ ಪಾತ್ರೆ ಕ್ಲೀನಿಂಗು ಅಂತ ಸಮಯ ಹೋಗುವುದು ತಿಳಿಯುವುದಿಲ್ಲ. ರಾಜೀವ ಬರೋದು ತಡವಾಗಿ, ಹತ್ತು ಹತ್ತೂವರೆಯ ಸುಮಾರಿಗೆ. ಅಷ್ಟೊತ್ತಿಗೆ ಹೆಚ್ಚಿನ ದಿನ ನಾನೂ ಮಗಳು ಮಲಗಿ ಬಿಟ್ಟಿರುತ್ತೇವೆ. ಅವರ ಬಳಿ ಇರುವ ಕೀಯಿಂದ ಬಾಗಿಲು ತೆಗೆದುಕೊಂಡು ಒಳಬಂದು ಹಾಲಿನಲ್ಲೇ ಮಲಗಿಬಿಡುತ್ತಾರೆ. ಬೆಳಿಗ್ಗೆ ನಾ ಎದ್ದ ಮೇಲೆ ರೂಮಿನೊಳಗೆ ಬಂದು ಮಗಳ ಪಕ್ಕ ಮಲಗಿದರೆ ನಾನೂ ಮಗಳು ಹೊರಗೆ ಕಾಲಿಡುವವರೆಗೂ ಎದ್ದೇಳುವ ಯಾವ ಸೂಚನೆಯನ್ನೂ ತೋರಿಸುವುದಿಲ್ಲ. ಅವರಿಗೇನೋ ಮುಂಚೆಯಿಂದಾನೂ ಹೆಚ್ಚು ಮಲಗುವ ಅಭ್ಯಾಸವಿರುವುದು ಹೌದು. ಆದರೆ ತೀರ ಇಷ್ಟೊಂದೆಲ್ಲ ಅಲ್ಲ. ನನ್ನ ಜೊತೆ ಯಾವುದೇ ಮಾತುಕತೆ ನಡೆಸಬಾರದೆಂಬ ಕಾರಣಕ್ಕಷ್ಟೇ ಈ ರೀತಿಯ ವರ್ತನೆ. ನಾನೂ ಪ್ರಶ್ನಿಸಲೋಗಲಿಲ್ಲ. "ನಿನಗೆ ಬೇಕಾಗುವವರೆಗೆ, ನಿನಗೆ ಅವಶ್ಯಕತೆ ಇರುವವರೆಗೆ ನೀನು ನಾ ಕೋಪಗೊಂಡರೂ, ಸಿಟ್ಟುಗೊಂಡರೂ, ನಿನ್ನನ್ನು ಹಿಗ್ಗಾಮುಗ್ಗಾ ಬಯ್ದರೂ ಮತ್ತೆ ಮೆಸೇಜು ಮಾಡಿಕೊಂಡು ಫೋನ್‌ ಮಾಡಿಕೊಂಡು ಗೋಳಾಡಿ ಮುದ್ದಾಡಿ ಸಮಾಧಾನ ಪಡಿಸುತ್ತಿದ್ದೆ. ಇವಾಗ ನಾ ನಿನಗೆ ಬೇಡ, ಹಂಗಾಗಿ ನಾ ಚೂರು ಸಿಡುಕಿದರೂ ಸುಮ್ಮನಾಗಿಬಿಡುತ್ತಿ. ನನ್ನನ್ನು ಸಮಾಧಾನ ಪಡಿಸುವ ಅನಿವಾರ್ಯತೆ ನಿನಗೀಗಿಲ್ಲ" ಎಂದಿದ್ದ ಸಾಗರ. ಒಟ್ರಾಸಿ, ನೀ ಮನುಷ್ಯರನ್ನು ಬಳಸಿ ಬಿಸಾಡುವುದರಲ್ಲಿ ಪ್ರವೀಣೆ ಎಂದು ತಿಳಿಸಿಕೊಟ್ಟಿದ್ದ. ಇರಬಹುದು. ನನ್ನನ್ನು ಸಾಗರನಿಗಿಂತ ಚೆನ್ನಾಗಿ ಅರ್ಥ ಮಾಡಿಕೊಂಡವರು ಯಾರಿದ್ದಾರೆ. ಅವನ ಸ್ನೇಹವನ್ನೂ ಉಳಿಸಿಕೊಳ್ಳಲಿಲ್ಲ ನಾನು. ಇವತ್ತಿನ ಪರಿಸ್ಥಿತಿಯಲ್ಲಿ ಅವನ ಜೊತೆ ಮಾತನಾಡಿದ್ದರೆ, ಕಷ್ಟ ಹಂಚಿಕೊಂಡಿದ್ದರೆ ಅರ್ಧಕ್ಕರ್ಧ ಸಮಾಧಾನವಾಗಿಬಿಡುತ್ತಿತ್ತು. ಯಾವ ಮುಚ್ಚುಮರೆಯಿಲ್ಲದೆಯೇ ಇದ್ದುದೆಲ್ಲವನ್ನೂ ಇದ್ದಂತೆಯೇ ಹೇಳಿಕೊಳ್ಳಲು ಸಾಧ್ಯವಾಗೋದು ಅವನ ಜೊತೆ ಮಾತ್ರ. ಒಂದು ಫೋನ್‌ ಮಾಡೇಬಿಡಲಾ? ಅಥವಾ ಅದಕ್ಕೂ ಮುಂಚೆ ಒಂದು ಮೆಸೇಜ್‌ ಕಳಿಸಿಯೇಬಿಡಲಾ? ಎಂದಂದುಕೊಂಡು ಕೈಗೆ ಫೋನೆತ್ತಿಕೊಂಡಿದ್ದಕ್ಕೆ ಲೆಕ್ಕವಿಲ್ಲ. "ನಿನಗೆ ಬೇಸಿಕಲಿ ನಿನ್ನ ದುಃಖ ಹಂಚಿಕೊಳ್ಳೋಕೆ ಒಂದು ಜೊತೆ ಕಿವಿಗಳು ಬೇಕಿತ್ತಷ್ಟೇ. ಬೇರೆಯವರ ದುಃಖ ಕೇಳಿಸಿಕೊಳ್ಳೋ ತಾಳ್ಮೆ ನಿನ್ನಲ್ಲಿಲ್ಲ. ತುಂಬಾ ಸೆಲ್ಫ್‌ ಸೆಂಟರ್ಡ್‌ ಪರ್ಸನ್‌ ನೀನು" "ನನ್ನ ಹುಟ್ಟಿದಹಬ್ಬಕ್ಕಲ್ಲ, ನಾನು ಸತ್ತರೂ ನನಗೆ ಮೆಸೇಜು ಮಾಡಬೇಡ" ಅವನ ಮಾತುಗಳು ನೆನಪಾಗುತ್ತಿತ್ತು. ಫೋನನ್ನು ಪಕ್ಕಕ್ಕಿಡುತ್ತಿದ್ದೆ. ಕಾಲೇಜು ದಿನಗಳೇ ಚೆಂದಿದ್ದವಪ್ಪ. ಇನ್ನೇನಿಲ್ಲ ಅಂದ್ರೂ ಕಷ್ಟ ಸುಖ ಹಂಚಿಕೊಳ್ಳೋಕೆ ಅಂತಾನೇ ಗೆಳತಿಯರಿದ್ದರು. ದುಃಖಕ್ಕೆ ಹೆಗಲು ಬೇಡೋ, ಹೆಗಲಾಗೋ ಗೆಳೆಯರೂ ಇರ್ತಿದ್ರೇನೋ, ಪುರುಷೋತ್ತಮ ನನ್ನ ಜೀವನದಲ್ಲಿ ಇಲ್ಲದೇ ಹೋಗಿದ್ದರೆ. ಈಗ್ಯಾರಿದ್ದಾರೆ? ಈಗಿರಲಿ ನಾ ಮೆಡಿಕಲ್‌ ಮುಗಿಸಿದ ಮೇಲೆ ಯಾರೊಬ್ಬರಾದರೂ ನನ್ನ ಗೆಳೆಯರಾಗಿದ್ದಾರಾ? ಸಾಗರ ಗೆಳೆಯನ ಗಡಿಗಳನ್ನು ದಾಟಿ ಹತ್ತಿರಾದವನು. ಸುಮ ಒಬ್ಬಳಿದ್ದಳು, ನನ್ನ ರಾಮ್‌ಪ್ರಸಾದ್‌ ಬಗ್ಗೆ ಕೇಳಿದ ವದಂತಿಗಳನ್ನೇ ಬಳಸಿಕೊಂಡು ನೋವುಂಟು ಮಾಡಿದಳು. ಅವತ್ತಿನ ನಂತರ ಸುಮಾಳೊಂದಿಗೆ ಎಷ್ಟು ಬೇಕೋ ಅಷ್ಟೇ ಮಾತು. ಅವಳೇನೋ ಪಾಪ ರೇಗಿಸಲೇ ಹೇಳಿರಬಹುದು, ಆದರದು ಮನಸ್ಸು ಮುರಿದು ಹಾಕಿತು. ರಾಜೀವನ ಗೆಳೆಯರನೇಕರು ಪರಿಚಯ, ಅದು ಪರಿಚಯದ ಮಿತಿ ದಾಟಲಿಲ್ಲ. ರಾಮ್‌ಪ್ರಸಾದ್‌ ಒಬ್ಬನನ್ನು ಹೊರತುಪಡಿಸಿ. ತೀರ ಖಾಸಗಿ ವಿಷಯಗಳನ್ನೇನೂ ರಾಮ್‌ ಜೊತೆಗೆ ಇಲ್ಲಿಯವರೆಗೆ ಹಂಚಿಕೊಂಡವಳಲ್ಲ ನಾನು, ಆದರೆ ಗೆಳೆತನ ದೃಡವಾಗುತ್ತಿದ್ದ ಎಲ್ಲಾ ಸೂಚನೆಗಳು ಸ್ಪಷ್ಟವಾಗಿದ್ದವು. ಈ ವಿಷಯದಲ್ಲಿ ರಾಮ್‌ಪ್ರಸಾದ್‌ ಕೂಡ ನನ್ನ ಜೊತೆಗೆ ಆರೋಪಿ ಸ್ಥಾನದಲ್ಲಿ ನಿಂತಿದ್ದಾರೆ. ಬೇರೆ ಯಾರೋ ಆಗಿದ್ದರೂ ರಾಮ್‌ ಜೊತೆ ಒಮ್ಮೆ ಚರ್ಚಿಸಬಹುದಿತ್ತೋ ಏನೋ. ಹೇಗೆ ಇದನ್ನು ಸರಿ ಮಾಡೋದು, ಹೇಗೆ ರಾಜೀವನಿಗೆ ನಮ್ಮ ಮನೆಯವರಿಗೆ ನನ್ನ ಅವರ ಮಧ್ಯೆ ಸಂಬಂಧ ಇಲ್ಲ ಅಂತ ವಿವರಿಸೋದು ಅಂತಲಾದರೂ ಸಲಹೆ ಪಡೆಯಬಹುದಿತ್ತು. ಅದೀಗ ಸಾ‍ಧ್ಯವಿಲ್ಲ. ಎಷ್ಟೇ ಆದ್ರೂ ಸುಮಾ ಗುಡ್‌ ಫ್ರೆಂಡು. ಅವಳ ಹತ್ತಿರವೇ ಹೇಳಿಕೊಂಡುಬಿಡಲಾ ಅನ್ನೋ ಯೋಚನೆಯೂ ಸುಳಿಯದೆ ಇರಲಿಲ್ಲ. ಅವಳತ್ತಿರ ಹೇಳುವುದೋ ಬೇಡವೋ ತಿಳಿಯುತ್ತಿಲ್ಲ. ಒಟ್ಟಾರೆ ಯಾವ ಸಣ್ಣ ಪುಟ್ಟ ನಿರ್ಧಾರಗಳನ್ನೂ ಖಚಿತವಾಗಿ ತೆಗೆದುಕೊಳ್ಳುವ ಪರಿಸ್ಥಿತಿಯಲ್ಲಿ ನಾನಿಲ್ಲ. 

ಸೆಪ್ಟೆಂ 12, 2020

ಒಂದು ಬೊಗಸೆ ಪ್ರೀತಿ - 79

ಒಂದರ್ಧ ಘಂಟೆ ಕಾಲ ಮಾತ್ರ ಯೋಚನೆಗಳು ಬಿಡುವು ಕೊಟ್ಟಿತ್ತು. 

ನನ್ನ ರಾಮ್‌ಪ್ರಸಾದ್‌ ಮಧ್ಯೆ ಯಾವುದೇ ಸಂಬಂಧವಿಲ್ಲವೆಂದು ರಾಜೀವನಲ್ಲಿ ನಂಬುಗೆ ಮೂಡಿಸುವುದೇಗೆ? ಯಾರೋ ಯಾವ ಕಾರಣಕ್ಕೋ ನಮ್ಮಿಬ್ಬರ ಮಧ್ಯೆ ಸಂಬಂಧವಿದೆ ಎಂದು ಸುಳ್ಳುಸುಳ್ಳೇ ಆರೋಪ ಮಾಡಿಬಿಟ್ಟರು. ಅದು ನಿಜವಲ್ಲ ಎಂದು ಸಾಬೀತುಪಡಿಸುವ ಅನಿವಾರ್ಯ ಕರ್ಮ ನನ್ನ ಹೆಗಲೇರಿಬಿಟ್ಟಿದೆ. ರಾಮ್‌ಪ್ರಸಾದ್‌ ಜೊತೆ ಹಿಂಗಿಂಗೆ ಅಂತೇಳಿ ಅವರೇ ಸಮಜಾಯಿಷಿ ಕೊಡುವಂತೆ ಹೇಳಲಾ? ಪಾಪ! ಅವರಿಗಾದರೂ ಈ ರೀತಿಯೆಲ್ಲ ನಮ್ಮ ಬಗ್ಗೆ ಆಸ್ಪತ್ರೆಯಲ್ಲಿ ಮಾತನಾಡಿಕೊಳ್ಳುತ್ತಾರೆ ಎನ್ನುವುದು ಗೊತ್ತೋ ಇಲ್ಲವೋ.... ಒಂದು ವೇಳೆ ಗೊತ್ತಿದ್ದರೂ ಸುಮ್ಮನಿದ್ದುಬಿಟ್ಟಿದ್ದರೆ? ಆ ಮಾತುಗಳೇ ಅವರಿಗೂ ಪ್ರಿಯವಾಗಿಬಿಟ್ಟಿದ್ದರೆ? ಅವರೇ ಈ ಗಾಳಿ ಸುದ್ದಿಗಳನ್ನು ಹಬ್ಬಿಸಿದ್ದರೆ? ಇಲ್ಲಿಲ್ಲ. ಅವರ ವರ್ತನೆ ಒಂದು ದಿನಕ್ಕೂ ನನಗೆ ಅನುಮಾನ ಮೂಡಿಸಿಲ್ಲ. ಆದರೂ ಅವರ ಮೂಲಕ ರಾಜೀವನಿಗೆ ಸಮಜಾಯಿಷಿ ಕೊಡುವುದು ಸರಿಯಾಗಲಾರದು. ನಮ್ಮಿಬ್ಬರ ನಡುವಿನ ವಿಷಯ, ನಮ್ಮ ಮನೆಯಲ್ಲಿ ನಡೆದ ವಿಷಯಗಳನ್ನೆಲ್ಲ ಅವನತ್ರ ತಗೊಂಡು ಹೋಗಿ ಹೇಳ್ಕೋತೀಯ ಅಂತ ಮತ್ತೊಂದು ಸುತ್ತು ಜಗಳ ಶುರುವಾಗಿಬಿಡಬಹುದು. ಅಲ್ಲ, ನನಗೆ ನಿಜಕ್ಕೂ ಒಂದು ಅನೈತಿಕ.... ಅನೈತಿಕವಲ್ಲ.... ಮದುವೆಯಾಚೆಗಿನ ಸಂಬಂಧ ಅಂಥ ಇದ್ದದ್ದು ಸಾಗರನೊಟ್ಟಿಗೆ ಮಾತ್ರ. ಸಾಗರ ನಮ್ಮ ಮನೆಗೆ ಬಂದು ರಾಜೀವನನ್ನು ಭೇಟಿಯಾದಾಗ, ನಾವವನ ಮದುವೆಗೆಂದು ಹೋಗಿದ್ದಾಗ ನಮ್ಮಿಬ್ಬರ ಮುಖಚರ್ಯೆಯನ್ನು ಗಮನಿಸಿಬಿಟ್ಟಿದ್ದರೇ ಸಾಕಿತ್ತು ಇಬ್ಬರ ನಡುವೆ ಸಂಬಂಧವಿದೆ ಎನ್ನುವುದು ತಿಳಿದು ಹೋಗುತ್ತಿತ್ತು. ನನ್ನ ಸಾಗರನ ಸಂಬಂಧವನ್ನು ಸ್ನೇಹವೆಂದೇ ಇವತ್ತಿಗೂ ನಂಬಿರುವ - ಆ ಸ್ನೇಹ ಸತ್ತು ಎಷ್ಟು ತಿಂಗಳುಗಳಾಯಿತು? - ರಾಜೀವ ನನ್ನ ರಾಮ್‌ನ ಸ್ನೇಹವನ್ನು, ಅದೂ ಅವರಿಂದಾಗಿಯೇ ಬಲವಂತವಾಗೆಂಬಂತೆ ಹುಟ್ಟಿದ ಸ್ನೇಹವನ್ನು ಅನುಮಾನಿಸುತ್ತಿದ್ದಾರಲ್ಲ? ಸಾಗರನ ಜೊತೆಗಿದ್ದಾಗಲೇ ಈ ಅನುಮಾನ ಇವರಲ್ಲಿ ಬಂದುಬಿಟ್ಟಿದ್ದರೆ ಅಚ್ಚುಕಟ್ಟಾಗಿ ಡೈವೋರ್ಸ್‌ ತೆಗೆದುಕೊಂಡು ಸಾಗರನನ್ನು ಮದುವೆಯಾಗಿಬಿಡಬಹುದಿತ್ತು. ಸಾಗರ ಕೂಡ ಒಂದಷ್ಟು ಪೊಸೆಸಿವ್ವೇ ಹೌದು. ತೀರ ಪುರುಷೋತ್ತಮನಷ್ಟಲ್ಲ, ಆದರೂ ಪೊಸೆಸಿವ್ವೇ. ಜೊತೆಗೆ ನನ್ನ ಮೇಲೆ ಬೆಟ್ಟದಷ್ಟು ಅನುಮಾನ ಬೇರೆ ಇದೆ ಅವನಿಗೆ. ಮದುವೆಯಾಗಿ ಬೇರೆ ಕಡೆ ಸಂಬಂಧ ಬೆಳೆಸುವವರ ಮೇಲೆ ಇಂತಹ ಅನುಮಾನ ಸಹಜವೋ ಏನೋ. ಯೋಚನೆಗಳಿಗೆ ತಡೆಹಾಕಿದ್ದು ಶಶಿಯ ಆಗಮನ. ಮನೆಯಲ್ಲಿನ ಮೌನದಲ್ಲಿದ್ದ ಅಸಹಜತೆಯ ವಾಸನೆ ಅವನಿಗೂ ಬಡಿಯಲೇಬೇಕಲ್ಲ. 

"ಏನಾಯ್ತು? ಎಲ್ಲಿ ಎಲ್ಲ" 

ʻಎಲ್ರೂ ಅವರವರ ರೂಮುಗಳಲ್ಲಿ ಸೇರಿಕೊಂಡಿದ್ದಾರೆʼ 

ಆಗ 29, 2020

ಒಂದು ಬೊಗಸೆ ಪ್ರೀತಿ - 77

"ಯಾಕ್ ನಿಂಗೂ ಸೋನಿಯಾಗೂ ಏನಾದ್ರೂ ಜಗಳ ಆಯ್ತಾ ಅವಳು ಆಸ್ಪತ್ರೆಯಲ್ಲಿದ್ದಾಗ?" ಬೆಳಿಗ್ಗೆ ಶೇವ್ ಮಾಡಿಕೊಳ್ಳುವಾಗ ರಾಜೀವ್ ಕೇಳಿದ ಪ್ರಶ್ನೆ ಕೈಲ್ಲಿದ್ದ ಕಾಫಿ ಲೋಟ ಕೆಳಕ್ಕೆ ಬೀಳುವಂತೆ ಮಾಡಿತು. ಪುಣ್ಯಕ್ಕೆ ನಿನ್ನೆ ಸಂಜೆಯ ಪಾತ್ರೆಗಳನ್ನು ತೊಳೆದಿರದ ಕಾರಣ ಗಾಜಿನ ಲೋಟ ಸಿಂಕಿನಲ್ಲೇ ಇತ್ತು, ಕೈಯಲ್ಲಿದ್ದ ಸ್ಟೀಲಿನ ಲೋಟದ ಕಾಫಿ ಚೆಲ್ಲಿತಷ್ಟೆ. ʻಹೇಳೇಬಿಟ್ಟಳಾ ಸೋನಿಯಾ?' ಎಂಬ ಅನುಮಾನ ಮೂಡದೆ ಇರಲಿಲ್ಲ. ರಾಜೀವ ತುಂಬಾ ಸಹಜವಾಗಿ ಕೇಳಿದಂತಿತ್ತೇ ಹೊರತು ಅವರ ದನಿಯಲ್ಲಿ ಕೋಪ ಅಸಹನೆಗಳು ಕಾಣಲಿಲ್ಲ. ಯಾರಿಗೆ ಗೊತ್ತು ನಿಧಾನಕ್ಕೆ ತಮಾಷೆಯಾಗೇ ಕೇಳಿ ಜಗಳಕ್ಕೊಂದು ಬುನಾದಿ ಹಾಕುತ್ತಿದ್ದಾರೋ ಏನೋ? 

ʻಹಂಗೇನಿಲ್ಲವಲ್ಲ ಯಾಕೆ?' ಮನದ ಉದ್ವೇಗ ಆದಷ್ಟು ದನಿಯಲ್ಲಿ ಪ್ರತಿಫಲನಗೊಳ್ಳದಂತೆ ಪ್ರಯತ್ನಿಸಿದೆ. 

"ಓ ಓ! ಏನ್ ದಡ್ಡನ ತರ ಕಾಣಿಸ್ತೀನೇನು! ನನ್ ಕಣ್ಣಿಗ್ ಏನೂ ಗೊತ್ತಾಗೋದಿಲ್ಲ ಅಂತ ಎಣಿಸಿದ್ದೀಯೇನು?" 

ಕನ್ಫರ್ಮ್! ಹೇಳಿಬಿಟ್ಟಿದ್ದಾಳೆ ಸೋನಿಯಾ...ಅನುಮಾನವೇ ಇಲ್ಲ. 

ʻಅಂತದ್ದೇನ್‌ ಕಾಣಿಸ್ತು ನಿಮಗೆʼ ಆದಷ್ಟು ನಗುಮುಖವನ್ನು ಆರೋಪಿಸಿಕೊಳ್ಳುವ ಪ್ರಯತ್ನ ಮುಂದುವರೆದಿತ್ತು. 

"ಕಾಣೋದಿಲ್ಲೇನು! ನಾನೂ ನೋಡ್ತಾನೇ ಇದ್ದೀನಲ್ಲ ಕಳೆದ ಹದಿನೈದು ದಿನದಿಂದ. ಬೆಳಿಗ್ಗೆಯಿಂದ ನನ್ನ ಜೊತೆ, ರಾಧ ಜೊತೆ, ನಿಮ್ಮಮ್ಮನ ಜೊತೆ ಅಚ್ಚುಕಟ್ಟಾಗೇ ಮಾತಾಡಿಕೊಂಡು ಇರ್ತಾಳೆ. ನಿಮ್ಮಪ್ಪನ ಜೊತೆ ಮಾತು ಕಮ್ಮೀನೇ ಅನ್ನು. ಸಂಜೆ ನೀ ಬರ್ತಿದ್ದ ಹಾಗೆ ಮುಗುಮ್ಮಾಗಿಬಿಡ್ತಾಳೆ. ಅದೂ ನೀ ಅಲ್ಲೇ ಹಾಲಲ್ಲೇ ಕುಳಿತುಬಿಟ್ಟರಂತೂ ನಮ್ಮಗಳ ಜೊತೆಗೂ ಮಾತಾಡಲ್ಲಪ್ಪ" 

ಉಫ್‌! ಸೋನಿಯಾ ಇನ್ನೂ ಹೇಳಿಲ್ಲ ಅನ್ನೋದು ತಿಳಿದೇ ಅರ್ಧ ಜೀವ ವಾಪಸ್ಸಾದಂತಾಯ್ತು. 

ʻಹೌದಾ? ನನಗೇನು ಹಂಗ್‌ ಅನ್ನಿಸಿಲ್ಲಪ್ಪʼ 

"ನಿನಗ್‌ ಅನ್ನಿಸಿರೋಲ್ವ? ಮುಂಚೆಯಿಂದಾನೂ ಇಬ್ಬರ ನಡುವೆ ಮಾತು ಕಡಿಮೆ ಅಂದ್ರೆ ಬೇರೆ ಪ್ರಶ್ನೆ. ಮುಂಚೆ ತಲೆಚಿಟ್ಟಿಡಿಯುವಷ್ಟು ಮಾತನಾಡುತ್ತಿದ್ದವರು ಇದ್ದಕ್ಕಿದ್ದಂತೆ ಮಾತು ನಿಲ್ಲಿಸಿಬಿಟ್ಟಂತೆ ಕಾಣಿಸ್ತದೆ ನಂಗೆ. ಅದೂ ಕರೆಕ್ಟಾಗಿ ಅವಳು ಆಸ್ಪತ್ರೆಯಲ್ಲಿ ಸೇರಿದ ಮೇಲೆ" 

ʻಹೌದಾ? ನನಗೇನು ಹಂಗ್‌ ಅನ್ನಿಸಿಲ್ಲಪ್ಪʼ 

"ಹೋಗ್ಲಿ ಬಿಡು. ನಿನಗ್‌ ಹೇಳೋಕ್‌ ಇಷ್ಟವಿಲ್ವೋ ಏನೋ" 

ಆಗ 22, 2020

ಒಂದು ಬೊಗಸೆ ಪ್ರೀತಿ - 76

ರಾತ್ರಿಯೆಲ್ಲ ಕನಸುಗಳು. ಪರಶು, ಸಾಗರ ಕನಸುಗಳನ್ನಾಳಿಬಿಟ್ಟರು. ನನ್ನವೇ ಮಾತುಗಳನ್ನು ತಿರುಗಿಸಿ ಮುರುಗಿಸಿ ನನಗೇ ಹೇಳುತ್ತಿದ್ದುದನ್ನು ಬಿಟ್ಟರೆ ಅವರವೇ ಮಾತುಗಳನ್ನು ಹೇಳಲೇ ಇಲ್ಲ. ಹೇಳಿದ್ದೆಲ್ಲವೂ ನನ್ನದೇ ದನಿಯಲ್ಲಿ ಕೇಳಿ ಮತ್ತಷ್ಟು ಹಿಂಸೆ. ನೀನ್‌ ಸರಿಯಿಲ್ಲ ಅಂತ ಹೇಳಿದವರೇ ಸರಿಯಾ? ನನ್ನ ಮನಸ್ಸು ಅಷ್ಟೊಂದು ಚಂಚಲವಾ? ನನಗೇ ಅನುಮಾನ ಮೂಡಿಸಿಬಿಟ್ಟ ಶಶಿ. ಎಷ್ಟೇ ವಿಶ್ಲೇಷಿಸಿದರೂ ರಾಮ್‌ ಬಗ್ಗೆ ನನ್ನಲ್ಲಿ ಯಾವತ್ತಿಗೂ ಸ್ನೇಹದ ಭಾವನೆ ಬಿಟ್ಟು ಮತ್ತೊಂದು ಮೂಡಲಿಲ್ಲ. ಸರಿಯಾಗಿ ನೆನಪಿಗೆ ತಂದುಕೊಂಡರೆ ಅವರ ಕುರಿತು ಸ್ನೇಹದ ಭಾವನೆ ಹುಟ್ಟಿದ್ದು ಕೂಡ ಅನಿವಾರ್ಯ ಕಾರಣಗಳಿಂದಾಗಿ. ರಾಜೀವ್‌ ಮನೆಯಿಂದ ದೂರವಿದ್ದಾಗ, ನಮ್ಮ ಮನೆಯವರೆಲ್ಲರೂ ಟ್ರಿಪ್ಪಿಗೆ ಹೋಗಿದ್ದಾಗ ಮಗಳು ಆಸ್ಪತ್ರೆಯಲ್ಲಿದ್ದ ಸಂದರ್ಭದಲ್ಲಿ ರಾಮ್‌ ಮಾಡಿದ ಸಹಾಯದಿಂದಲ್ಲವೇ ಅವರೊಡನೆ ಸ್ನೇಹ ಹಸ್ತ ಚಾಚಿದ್ದು. ಆ ಘಟನೆ ನಡೆಯದೇ ಹೋಗಿದ್ದಲ್ಲಿ ನಾ ರಾಮ್‌ ಜೊತೆಗೆ ಇನ್ನೂ ಅವರು ನಮ್ಮ ಮನೆಯಲ್ಲಿ ಬಂದು ಕುಡಿದ ಕಾರಣವನ್ನಿಟ್ಟುಕೊಂಡೇ ಮುನಿಸು ಸಾಧಿಸುತ್ತಿದ್ದುದೌದು. ರಾಮ್‌ ಇಸ್‌ ಸ್ಮಾರ್ಟ್‌, ಹ್ಯಾಂಡ್ಸಮ್....‌ ಇಲ್ಲ ಅನ್ನಲ್ಲ. ಆದರೆ ಅವರೊಟ್ಟಿಗೆ ಸಂಬಂಧ ಬೆಳೆಸಬೇಕು ಅಂತೆಲ್ಲ ಯಾವತ್ತೂ ಯೋಚನೆಯೂ ಸುಳಿದಿಲ್ಲ. ಇನ್ನೂ..... ಈಗಲ್ಲ...... ರಾಧ ಹುಟ್ಟುವ ಮುನ್ನ..... ಸಾಗರ ಪರಿಚಯವಾಗುವುದಕ್ಕೆ ಮೊದಲು......ಅಲ್ಲೆಲ್ಲೋ ಒಬ್ಬ ಅಪರಿಚಿತ ಕಂಡಾಗ ಪಟ್ಟಂತ ಇಷ್ಟವಾಗಿಬಿಟ್ಟರೆ...... ಅವನೊಡನೆ ಕಾಮಿಸಿದಂತೆ ಕಲ್ಪನೆ ಮೂಡುತ್ತಿತ್ತು......ಆ ಕಲ್ಪನೆ ಕೂಡ ನಿಜವಾಗಬೇಕೆಂಬ ಅನ್ನಿಸಿಕೆಯೇನೂ ಇರುತ್ತಿರಲಿಲ್ಲ.....ರಾಜೀವನೊಡನೆ ಮಲಗುವಾಗಲೂ ಆ ಅಪರಿಚಿತ ವ್ಯಕ್ತಿ ಸ್ಮೃತಿಪಟಲದಲ್ಲಿ ಮೂಡುತ್ತಿರಲಿಲ್ಲ. ಅದು ಸಹಜವಾಗಿ ಎಲ್ಲರಲ್ಲೂ ಮೂಡುವ ಭಾವನೆಗಳೇ ಹೌದು ಎಂದು ನಂಬಿದ್ದೆ. ಅಂತ ಯಾವ ಕಲ್ಪನೆ ಕೂಡ ರಾಮ್‌ ಬಗ್ಗೆ ನನಗಿದುವರೆಗೂ ಬಂದಿಲ್ಲ. ಆತನಿಗೆ ಬಂದಿರಬಹುದಾ? ಬಂದಿರಬಹುದು. ಬಂದಿದ್ದರೂ ಅದೇನೂ ತಪ್ಪಲ್ಲವಲ್ಲ. ಅವರೇ ಏನಾದರೂ ಆಸ್ಪತ್ರೆಯಲ್ಲಿ ಗುಲ್ಲೆಬ್ಬಿಸಲು ಸಹಕರಿಸಿಬಿಟ್ಟರಾ? ಗೆಳೆಯರ ಬಳಿ ಮಾತನಾಡುತ್ತಾ "ನಾನೂ ಅವ್ಳೂ ತುಂಬಾ ಕ್ಲೋಸು" ಅಂತೇಳಿ ಕಣ್ಣು ಹೊಡೆದುಬಿಟ್ಟರೂ ಸಾಕು.....ದೊಡ್ಡ ಸುದ್ದಿಯಾಗ್ತದೆ. ಆದರೆ ನನಗೆ ಗೊತ್ತಿರುವಂತೆ ರಾಮ್‌ ಅಂತಹ ಕೆಲಸ ಮಾಡುವವರಲ್ಲ. ಕಲ್ಪನೆಯಲ್ಲಿ ನನ್ನೊಡನೆ ಕಾಮಿಸಿದ್ದರೂ ಇರಬಹುದೇನೋ ಆದರೆ ಆ ಕಲ್ಪನೆ ನಿಜವಾಗಲಿ ಎಂಬುದ್ದೇಶ ಅವರಿಗೂ ಇದ್ದಿರಲಾರದು. ಮತ್ಯಾಕೆ ಜನರೀ ರೀತಿ ಸುಳ್ಳು ಸುಳ್ಳೇ ಸುದ್ದಿ ಹಬ್ಬಿಸುತ್ತಾರೆ? ನಾ ಸುಮಾಳೊಡನೆ ಹೋಗಿ ಕಾಫಿ ಕುಡಿದು ಹರಟೋದು ಎಷ್ಟು ಸಹಜವೋ ರಾಮ್‌ ಜೊತೆಗೆ ಹೋಗಿ ಕಾಫಿ ಕುಡಿದು ಹರಟೋದು ಕೂಡ ಅಷ್ಟೇ ಸಹಜ ಅಂತ ಇವರ್ಯಾಕೆ ಅರ್ಥೈಸಿಕೊಳ್ಳುವುದಿಲ್ಲ? ಕೆಲಸಕ್ಕೆ ಹೋಗಲೇ ಮನಸ್ಸು ಬಾರದಷ್ಟು ತಲೆ ನೋವು. ಕೆಲಸಕ್ಕೆ ಹೋಗಲಲ್ಲ ತಲೆ ನೋವು, ಕೆಲಸಕ್ಕೆ ಹೋದರೆ ಸೋನಿಯಾಳನ್ನು ಕಾಣಬೇಕಾಗುತ್ತದೆ ಎನ್ನುವ ಕಾರಣಕ್ಕೆ ತಲೆ ನೋವು. ಅವಳ ಮನದಲ್ಲೀಗ ನಾ ಕೆಟ್ಟವಳಾಗಿ ಹೋಗಿದ್ದೀನಿ. ಇವತ್ತಲ್ಲದಿದ್ದರೆ ನಾಳೆ, ನಾಳೆಯಲ್ಲದಿದ್ದರೆ ಮತ್ತೊಂದು ದಿನ ಅವಳನ್ನು ಎದುರಿಸಲೇಬೇಕಲ್ಲ ಎಂದು ಧೈರ್ಯ ತಂದುಕೊಳ್ಳುತ್ತಾ ಮೇಲೆದ್ದು ತಯಾರಾದೆ. 

ಆಸ್ಪತ್ರೆಗೆ ಹೋಗಿ ನನ್ನ ಬೆಳಗಿನ ವಾರ್ಡ್‌ ಕೆಲಸಗಳನ್ನೆಲ್ಲ ಮುಗಿಸಿ ಸೋನಿಯಾಳ ರೂಮಿನ ಬಳಿ ಹೋದೆ. ನಿನ್ನೆಯ ಮುನಿಸು ಇವತ್ತಿಗೂ ಮುಂದುವರೆದಿತ್ತು. ಶಶಿಯ ಕಡೆಗೆ ನೋಡಿದೆ. ಅವನ ಕಣ್ಣುಗಳಲ್ಲೂ ನಾನು ಚಿಕ್ಕವಳಾಗಿ, ಎಲ್ಲಾ ರೀತಿಯ ಅನುಮಾನಗಳಿಗೆ ಅರ್ಹಳಾದ ರೀತಿಯಲ್ಲಿ ಕಂಡು ಕಸಿವಿಸಿಯಾಯಿತು. ಕೊನೇಪಕ್ಷ ಅವನಿಗಾದರೂ ನಾ ಯಾಕೆ ಪರಶುನನ್ನು ಬಿಟ್ಟು ರಾಜೀವನನ್ನು ಮದುವೆಯಾದೆ ಎನ್ನುವುದರ್ಥವಾಗಿದೆ ಎಂದುಕೊಂಡಿದ್ದೆ. ನಾವು ನಂಬಿದ್ದೆಲ್ಲವೂ ಸುಳ್ಳೆಂದು ಸಾಬೀತಾಗುವವರೆಗಷ್ಟೇ ಅದು ಸತ್ಯ. ನಮ್ಮ ಮೂವರ ನಡುವೆ ಉಸಿರುಕಟ್ಟಿಸುವಂತಿದ್ದ ಮೌನಕ್ಕೆ ಪರಿಹಾರವೆಂಬಂತೆ ಅಂದು ಜಯಂತಿ ಮೇಡಂ ಎಂದಿಗಿಂತ ಮುಂಚಿತವಾಗಿಯೇ ರೌಂಡ್ಸಿಗೆ ಬಂದರು. ಮೇಡಂ ಆಗಮನದೊಂದಿಗೆ ಸ್ಮಶಾನ ಕಳೆಯನ್ನೊತ್ತುಕೊಂಡಿದ್ದ ಮೂವರ ಮುಖದಲ್ಲೂ ಕಪಟ ನಗು ವಿಜೃಂಭಿಸಿತು. 

ಆಗ 15, 2020

ಒಂದು ಬೊಗಸೆ ಪ್ರೀತಿ - 75

"ನೀವ್‌ ಹೋಗಿ ಅಕ್ಕ. ಇವರಿರ್ತಾರೆ ರಾತ್ರಿಗೆ" ಸೋನಿಯಾಳ ದನಿ ಎಂದಿನಂತಿರಲಿಲ್ಲ ಎನ್ನುವುದೇನೋ ಅರಿವಿಗೆ ಬಂತು. ಆಸ್ಪತ್ರೆ ವಾಸ, ಅದರಲ್ಲೂ ಗರ್ಭ ನಿಲ್ಲದೇ ಹೋದರೆ ಅನ್ನೋ ಟೆನ್ಶನ್ನು ಎಲ್ಲಾ ಸೇರಿದಾಗ ದನಿ ಮಾಮೂಲಿನಂತಿರಲು ಸಾಧ್ಯವಿಲ್ಲವಲ್ಲ. ಗಂಡ ಇದ್ರೆ ಧೈರ್ಯ ಜಾಸ್ತಿಯಿರ್ತದೋ ಏನೋ. 

ʻಪರವಾಗಿಲ್ಲ ಬಿಡು ಸೋನಿಯಾ. ನಾನೇ ಇರ್ತೀನಿʼ 

"ಹೇಳಿದ್ನಲ್ಲಕ್ಕ. ಇವರಿರ್ತಾರೆ ಅಂತ. ನೀವಿದ್ದು ನನ್ನ ನೋಡೋದೇನು ಬೇಡ. ನೀವ್‌ ದಯವಿಟ್ಟು ಹೋಗಿ" ಎಂದವಳು ಖಂಡತುಂಡವಾಗಿ ಹೇಳಿದಾಗ ಎಲ್ಲೋ ಏನೋ ತಪ್ಪಾಗಿದೆ, ಏನಂತ ಗೊತ್ತಾಗದ ಪರಿಸ್ಥಿತಿಯಲ್ಲಿ ನಾನಿದ್ದೀನಿ ಅನ್ನುವುದರ ಅರಿವಾಯಿತು. ಅವಳಿಷ್ಟು ಕಟುವಾಗಿ ಹೇಳಿದ ಮೇಲೆ ಮತ್ತೆ ಅಲ್ಲಿ ನಿಲ್ಲುವ ಮನಸ್ಸಾಗಲಿಲ್ಲ ನನಗೆ. ʻಟೇಕ್‌ ಕೇರ್‌ʼ ಎಂದ್ಹೇಳಿದಾಗಲೂ ಅವಳ ಮುಖದಲ್ಲೊಂದು ನಗು ಮೂಡಲಿಲ್ಲ. ಹೊರಬಿದ್ದೆ. ನಿನ್ನೆ ರಾತ್ರಿಯೆಲ್ಲ ಚೆಂದವಾಗಿ ಮಾತನಾಡುತ್ತಾ ಗರ್ಭದ ದಿನಗಳ ಭಯ ಸಂತಸ ಖುಷಿ ಆತಂಕದ ಬಗ್ಗೆಯೆಲ್ಲ ಲವಲವಿಕೆಯಿಂದ ಮಾತನಾಡುತ್ತಿದ್ದವಳಿಗೆ ಒಂದೇ ದಿನದಲ್ಲಿ ನನ್ನ ಮೇಲೆ ಸಿಟ್ಟು ಮಾಡಿಕೊಳ್ಳುವಂತದ್ದೇನಾಯಿತು? ತಿಳಿಯಲಿಲ್ಲ. ನನ್ನಿಂದೇನಾದರೂ ತಪ್ಪಾಯಿತಾ? ನನ್ನ ಪ್ರಜ್ಞೆಗೆ ಬಂದಂತೆ ಯಾವ ತಪ್ಪೂ ಆಗಿಲ್ಲ. ರಾತ್ರಿ ಮಾತನಾಡುತ್ತಾ ಮಲಗಿದ್ದು ಹನ್ನೊಂದೂವರೆಯ ಮೇಲಾಗಿತ್ತು. ಬೆಳಿಗ್ಗೆ ಎದ್ದಾಗ ಮತ್ತೊಂದಷ್ಟು ರಕ್ತಸ್ರಾವವಾಗಿತ್ತು. ಜಯಂತಿ ಮೇಡಮ್ಮಿಗೆ ಫೋನ್‌ ಮಾಡಿದ್ದೆ. "ತೊಂದರೆಯೇನಿರಲ್ಲಮ್ಮ. ಕೆಲವರಿಗೆ ವಾರದವರೆಗೆ ರಕ್ತ ಹೋಗ್ತದೆ. ಬಂದು ನೋಡ್ತೀನಿ. ನೋಡುವ. ಬೇಕಿದ್ರೆ ನಿಮ್ಮ ಸಮಾಧಾನಕ್ಕೆ ಮತ್ತೊಂದು ಸ್ಕ್ಯಾನ್‌ ಮಾಡಿಸುವ" ಎಂದರು. 

ಆಗ 8, 2020

ಒಂದು ಬೊಗಸೆ ಪ್ರೀತಿ - 74

“ಹೇಳಿದ್ನಪ್ಪ. ಬರಲಿಲ್ಲ ನಿಮ್ಮಮ್ಮ” ಮೂರು ಪದ ಜೊತೆಗೂಡಿಸಲು ಮೂರು ನಿಮಿಷದಷ್ಟು ಸಮಯ ತೆಗೆದುಕೊಂಡು ರಾಮೇಗೌಡ ಅಂಕಲ್‌ ಹೇಳುವಾಗ ಆಸ್ಪತ್ರೆಯ ರೂಮಿನೊಳಗಿದ್ದವರೆಲ್ಲರ ಕಣ್ಣಲ್ಲಿ ನೀರಾಡಿತ್ತು. ಸೋನಿಯಾಳನ್ನೊಬ್ಬಳನ್ನ ಹೊರತುಪಡಿಸಿ. 

"ಆ ಪಾಪಿ ಪಿಂಡ ಹೋದ್ರೆ ಹೋಗ್ಲಿ ಬಿಡಿ" ಅಂದಿರಬೇಕಲ್ಲ ಎಂದು ವ್ಯಂಗ್ಯದಿಂದ ಕೇಳಿದ್ದಕ್ಕೆ ಅಂಕಲ್‌ ಪ್ರತಿಯಾಡಲಿಲ್ಲ. ಸೋನಿಯಾಳ ವ್ಯಂಗ್ಯದಲ್ಲಿ ಸತ್ಯವಿದ್ದಿರಲೇಬೇಕು. ಅಲ್ಲ, ತೀರ ತಾಯಿ ಆದವಳಿಗೆ ಇಷ್ಟರಮಟ್ಟಿಗೆ ದ್ವೇಷ ಇರೋದಕ್ಕಾದರೂ ಹೇಗೆ ಸಾಧ್ಯ? ಮಗಳೂ ತಾಯಿಯಾಗುವುದರಲ್ಲಿದ್ದಾಳೆ. ಅದೇನೋ ರಕ್ತ ಹೋಗ್ತಿದ್ಯಂತೆ. ಅಬಾರ್ಷನ್‌ ಆದರೂ ಆಗಿಬಿಡಬಹುದು. ಮಗಳೂ ಅಂತ ಬೇಡ, ಗೊತ್ತಿರೋ ಒಬ್ಬ ಹೆಣ್ಣುಮಗಳು ಅಂತಾದರೂ ಮನ ಕರಗಲಾರದಾ? ಕರಗಬಾರದಾ? ಸೋನಿಯಾಳ ಕಣ್ಣಲ್ಲಿ ಮೂಡದ ಕಣ್ಣೀರು ಮುಂದಿನ ದಿನಗಳಲ್ಲಿ ಅವಳು ಅವರಮ್ಮನ ಜೊತೆ ನಡೆದುಕೊಳ್ಳುವ ರೀತಿಯನ್ನು ವಿವರಿಸುತ್ತಿತ್ತು. 

ಅಂಕಲ್‌ ಮತ್ತು ಸೋನಿಯಾಳನ್ನು ಮಾತನಾಡಿಕೊಳ್ಳಲು ಬಿಟ್ಟು ನಾನೂ, ಶಶಿ, ಅಪ್ಪ, ಅಮ್ಮ ಹೊರಬಂದೆವು. ಮೌನ ಅಸಹನೀಯವಾಗಿತ್ತು. ಮೌನ ಮುರಿಯುತ್ತ ಅಮ್ಮ "ರಾತ್ರಿ ನಾನೇ ಉಳಿದುಕೊಳ್ಳಲಾ ಇಲ್ಲಿ?" ಎಂದು ಕೇಳಿದರು. 

"ಏನ್‌ ಬೇಡ. ನಾನೇ ಇರ್ತೀನಿ ಬಿಡಿ" ಎಂದ ಶಶಿ. 

"ಹಂಗಲ್ವೋ.... ನಾವ್ಯಾರಾದ್ರೂ ಹೆಂಗಸ್ರು ಇದ್ರೆ ಉತ್ತಮ ಅಲ್ವ" 

"ಯಾಕ್‌ ಗಂಡಸ್ರು ಇಂಥ ವಿಷಯ ಎಲ್ಲಾ ನೋಡ್ಕೋಬಾರ್ದು ಅಂತಾನಾ?" 

ಆಗ 1, 2020

ಒಂದು ಬೊಗಸೆ ಪ್ರೀತಿ - 73

ಮೆಸೇಜ್ ಮಾಡ್ಲೋ ಬೇಡ್ವೋ ಮಾಡ್ಲೋ ಬೇಡ್ವೋ ಅನ್ನೋ ಆಲೋಚನೆಗಳಲ್ಲೇ ಅರ್ಧ ದಿನ ಕಳೆದು ಹೋಯಿತು. ಎಫ್.ಬೀಲಿ ಅನ್ ಫ್ರೆಂಡ್ ಮಾಡಿದ್ದ, ಬ್ಲಾಕ್ ಮಾಡಿರಲಿಲ್ಲ. ವಾಟ್ಸಪ್ ಅಲ್ಲೇನೂ ಬ್ಲಾಕ್ ಮಾಡಿರಲಿಲ್ಲ. ಮೆಸೇಜ್ ಗಿಸೇಜ್ ಬೇಡ ಒಟ್ಗೇ ಫೋನೇ ಮಾಡಿಬಿಟ್ಟರೆ? ಧೈರ್ಯ ಸಾಲಲಿಲ್ಲ. ಪೂರ್ತಿ ದಿನ ಹೀಗೇ ಕಳೆದುಹೋದರೆ ಎಂದು ದಿಗಿಲಾಯಿತು. ಏನಾಗಿಬಿಡ್ತದೆ? ಎಂತದೂ ಆಗೋದಿಲ್ಲ. ಸುಮ್ಮನೆ ನಾ ಅನಾವಶ್ಯಕ ಗಾಬರಿ ಬಿಳ್ತಿದೀನಿ ಅಷ್ಟೇ ಎಂದುಕೊಂಡು ಮೊಬೈಲ್ ಕೈಗೆತ್ತಿಕೊಂಡು ವಾಟ್ಸಪ್ ತೆರೆದೆ. ಉಹ್ಞೂ... ವಾಟ್ಸಪ್ ಅಲ್ ಬೇಡ. ಅವ ಯಾವಾಗಲೋ ನೋಡಿ ಏನೇನೋ ರಿಪ್ಲೈ ಮಾಡಿಬಿಟ್ಟರೆ? ಮನೆಗೋದ ಮೇಲೆ ಮಗಳ ದೇಖರೇಖಿಯಲ್ಲಿ ಮೊಬೈಲು ನೋಡುವುದ್ಯಾವಾಗಲೋ. ರಾಜೀವನೋ ನಮ್ಮಮ್ಮನಿಗೋ ಮೆಸೇಜು ಕಂಡು ಗಬ್ಬೆಬ್ಬಿಬಿಟ್ಟರೆ? ಎಫ್.ಬಿ ಮೆಸೆಂಜರ್ ಆದ್ರೆ ಪರವಾಗಿಲ್ಲ.‌ ಹೆಂಗಿದ್ರೂ ನೋಟಿಫಿಕೇಶನ್ ಆಫ್ ಮಾಡಿಟ್ಟಿದ್ದೀನಿ. ಪಟ್ಟಂತ ಮೆಸೇಜು ಯಾರ ಕಣ್ಣಿಗೂ ಕಾಣೋದಿಲ್ಲ. ಥೂ! ಇದೇನಾಗಿದೆ ನಂಗೆ. ಸಾಗರನ ಹುಟ್ಟುಹಬ್ಬಕ್ಕೊಂದು ವಿಶಸ್ ಕಳಿಸೋದಿಕ್ಕೆ ಇಷ್ಟೆಲ್ಲ ಅತಿರೇಕದಿಂದ ಯೋಚಿಸೋ ಅಗತ್ಯವಾದರೂ ಏನಿದೆ? ಯಾಕೀ ರೇ ಪ್ರಪಂಚದಲ್ಲಿ ಇಲ್ಲದಿರುವುದನ್ನೆಲ್ಲ ಯೋಚಿಸುತ್ತಾ ಕುಳಿತಿದ್ದೀನಿ. ಎಫ್.ಬಿ ತೆರೆದು ಸಾಗರನ ಪ್ರೊಫೈಲ್ ತೆರೆದು ʻಹ್ಯಾಪಿ ಬರ್ತ್ ಡೇ ಕಣೋ' ಎಂದು ಮೆಸೇಜು ಕಳುಹಿಸಿದೆ. ಅವನ ಮೆಸೆಂಜರ್ನಲ್ಲಿ ಅದರ್ಸ್ ಫೋಲ್ಡರಿಗೆ ಹೋಗಿರ್ತದೆ ಮೆಸೇಜು. ಇನ್ಯಾವಾಗ ನೋಡ್ತಾನೋ ಏನೋ ಎಂದುಕೊಂಡವಳಿಗೆ ಸಾಗರ್ ಇಸ್ ಟೈಪಿಂಗ್ ಅನ್ನೋದು ಕಾಣಿಸಿ ಖುಷಿಯಾಯಿತು. ಏನ್ ಟೈಪಿಸುತ್ತಿರಬಹುದು? ಸದ್ಯ, ಇನ್ನೂ ಮರೆತಿಲ್ಲವಲ್ಲ ನನ್ನ ಅಂತ ಕಾಲೆಳಿಯಬಹುದು.... ಯಾರಿದು ಅಂತ ರೇಗಿಸಬಹುದು ಅಥವಾ ಎಂತದೂ ಬೇಡ ಅಂತ ಸುಮ್ಮನೊಂದು ಥ್ಯಾಂಕ್ಯು ಹೇಳಿ ಮಾತುಕತೆ ಮುಗಿಸಬಹುದು ಎಂಬ ನಿರೀಕ್ಷೆಯಲ್ಲೇ ಕಣ್ಣನ್ನು ಮೊಬೈಲಿನ ಸ್ಕ್ರೀನಿಗೆ ನೆಟ್ಟು ಕುಳಿತಿದ್ದೆ. ಒಂದಷ್ಟೇನೋ ಟೈಪ್ ಮಾಡಿದವನು ಮತ್ತೆ ಡಿಲೀಟು ಮಾಡಿದನೇನೋ.... ಕ್ಷಣ ಕಾಲ ಸುಮ್ಮನಿದ್ದ ಆ್ಯಪು ಮತ್ತೊಮ್ಮೆ ಸಾಗರ್ ಇಸ್ ಟೈಪಿಂಗ್ ಅಂತ ತೋರಿಸಿತು. ಒಂದು ನಿಮಿಷದ ಟೈಪಿಂಗಿನ ನಂತರ ಮೆಸೇಜು ಕಾಣಿಸಿತು "ನನ್ನ ಹುಟ್ಟುಹಬ್ಬಕ್ಕಲ್ಲ, ನಾ ಸತ್ರೂ ಮೆಸೇಜು ಮಾಡಬೇಡ. ಅಪ್ಪಿತಪ್ಪಿ ನಾ ಸತ್ತ ವಿಷ್ಯ ಗೊತ್ತಾದ್ರೂ ನೋಡೋಕ್ ಬರಬೇಡ. ಅಷ್ಟು ನಡೆಸಿಕೊಡು ಸಾಕು". 

ನಿಟ್ಟುಸಿರುಬಿಡುವುದನ್ನೊರತುಪಡಿಸಿದರೆ ಮತ್ತೇನು ತಾನೇ ಮಾಡಲು ಸಾಧ್ಯವಿತ್ತು ನನಗೆ. ಸಾಮಾನ್ಯವಾಗಿ ಈ ರೀತಿ ಮೆಸೇಜು ಮಾಡಿದ ತಕ್ಷಣವೇ ಸಾರಿ ಯಾವ್ದೋ ಮೂಡಲ್ಲಿದ್ದೆ, ಎಷ್ಟೆಲ್ಲ ಕಾಟ ಕೊಡ್ತಿ ನನಗೆ ಅಂತಂದು ಒಂದಷ್ಟಾದರೂ ಮಾತನಾಡುತ್ತಿದ್ದ. ಕೊನೇಪಕ್ಷ ವ್ಯಂಗ್ಯವನ್ನಾಡುತ್ತ ಚುಚ್ಚು ಮಾತುಗಳನ್ನಾದರೂ ಆಡುತ್ತಿದ್ದ. ಇವತ್ತೂ ಹಂಗೇ ಆಗಬಹುದೇನೋ ಅಂದುಕೊಂಡು ಕಾದೆ. ಉಹ್ಞೂ. ಯಾವ ಮೆಸೇಜೂ ಬರಲಿಲ್ಲ. ನಾನೇ ಮೆಸೇಜು ಮಾಡಲಾ? ಸತ್ರೂ ಮೆಸೇಜು ಮಾಡಬೇಡ ಅಂದುಬಿಟ್ಟಿದ್ದಾನಲ್ಲ. ಆದರೇನಂತೆ? ಮುಂಚೆ ಎಷ್ಟು ಸಲ ಈ ರೀತಿಯಾಗಿ ಮೆಸೇಜು ಮಾಡಿದ ಮೇಲೆ ನಾನೇ ದುಃಖ ತೋಡಿಕೊಂಡಿಲ್ಲ. ಮತ್ತೇನಿಲ್ಲದಿದ್ದರೂ ನನ್ನ ದುಃಖಕ್ಕಂತೂ ಹುಡುಗ ಕರಗಿಬಿಡ್ತಾನೆ. ನಿನ್ನ ದುಃಖದ ಕತೆಗಳನ್ನು ಕೇಳೋಕೊಂದು ಕಿವಿ ಬೇಕಷ್ಟೇ ನಿನಗೆ ಅಂತ ಎಷ್ಟು ಸಲ ಆಡಿಕೊಂಡಿದ್ದಾನೆ.‌ ಕೇಳುವದಕ್ಕೊಂದಷ್ಟು ಕಿವಿಗಳು ಎಲ್ಲರಿಗೂ ಬೇಕೇ ಬೇಕಲ್ಲ. ಮತ್ತೊಂದು ರೌಂಡು ಬಯ್ದರೂ ಪರವಾಗಿಲ್ಲ ಮೆಸೇಜು ಮಾಡೇಬಿಡುವ ಎಂದು ಧೃಡ ನಿರ್ಧಾರ ಮಾಡಿ ಫೋನ್ ಕೈಗೆತ್ತಿಕೊಂಡರೆ ಅಮ್ಮನ ಫೋನು ಬಂತು.‌ ನಂತರ ಮೆಸೇಜಿಸುವ ಅಂದುಕೊಂಡು ಫೋನೆತ್ತಿಕೊಂಡೆ.