ಸೆಪ್ಟೆಂ 7, 2016

ಕಾವೇರಿದರೆ ಪ್ರಯೋಜನವಿದೆಯೇ?

ಡಾ. ಅಶೋಕ್. ಕೆ. ಆರ್
07/09/2016
ಪ್ರಜಾಪ್ರಭುತ್ವದಲ್ಲಿ ಬಂದ್, ಮುಷ್ಕರ, ಕೆಲಸಕ್ಕೆ ಹಾಜರಾಗದೇ ಇರುವುದು, ರಸ್ತೆತಡೆ, ರೈಲುತಡೆಗಳೆಲ್ಲವೂ ಪ್ರತಿಭಟಿಸುವ ವಿವಿಧ ಮಾರ್ಗಗಳು. ಬೇಡಿಕೆ ಈಡೇರಲು, ಆಳುವ ಸರ್ಕಾರದ, ಕಂಪನಿಗಳ ತಪ್ಪು ನಡೆಗಳನ್ನು ಖಂಡಿಸಲು – ಆ ನಡೆಯನ್ನು ಅವರು ಪುನರ್ ಪರಿಶೀಲಿಸುವಂತೆ ಮಾಡಲು ಈ ಪ್ರತಿಭಟನೆಯ ಮಾರ್ಗಗಳು ಇರಲೇಬೇಕು. ಬೆಂಗಳೂರಿನ ಗಾರ್ಮೆಂಟ್ ನೌಕರರು ಎರಡು ದಿನ ನಡೆಸಿದ ಪ್ರತಿಭಟನೆಯು ಸರಕಾರವು ಪಿ.ಎಫ್ ನೀತಿಯನ್ನು ಪುನರ್ ಪರಿಶೀಲಿಸುವಂತೆ ಮಾಡಿದ್ದು, ರಸ್ತೆ ಸಾರಿಗೆ ನೌಕರರು ನಡೆಸಿದ ಪ್ರತಿಭಟನೆಯಿಂದ ಒಂದಷ್ಟು ಬೇಡಿಕೆಗಳನ್ನಾದರೂ ಸರಕಾರ ಒಪ್ಪುವಂತೆ ಮಾಡಿದ ಇತ್ತೀಚಿನ ಉದಾಹರಣೆಗಳು ನಮ್ಮ ಕಣ್ಣ ಮುಂದಿದೆ. ಸರ್ಕಾರದ ವಿರುದ್ಧ, ಖಾಸಗಿ ಕಂಪನಿಗಳ ವಿರುದ್ಧ ನಡೆಯುವ ಪ್ರತಿಭಟನೆಗಳು ಯಶಸ್ವಿಯಾಗಬಹುದು, ಒಂದು ಮಟ್ಟದ ಒಪ್ಪಂದಕ್ಕಾದರೂ ಕಾರಣವಾಗಬಹುದು. ಆದರೆ ನ್ಯಾಯಾಧೀಕರಣದ, ನ್ಯಾಯಾಲಯದ ವಿರುದ್ಧ ನಡೆಯುವ ಪ್ರತಿಭಟನೆಗಳಿಂದ ಪ್ರಯೋಜನವಿದೆಯೇ? ಪ್ರತಿಭಟನೆಯ ಬಿಸಿಯಿಂದಾಗಿ ನ್ಯಾಯಾಲಯಗಳು ಯಾವುದೇ ಕಾರಣಕ್ಕೂ ತಮ್ಮ ತೀರ್ಪನ್ನು ಪುನರ್ ಪರಿಶೀಲಿಸುವುದಾಗಲೀ, ನೀಡಿದ ತೀರ್ಪನ್ನು ವಾಪಸ್ಸು ಪಡೆದುಬಿಡುವುದಾಗಲೀ ಸಾಧ್ಯವಿದೆಯೇ? ಸಾಧ್ಯವಿಲ್ಲ ಎನ್ನುವುದು ಸ್ಪಷ್ಟವಾಗಿರುವಾಗ ಕಾವೇರಿಯ ವಿಚಾರದಲ್ಲಿ ನಮ್ಮ ಕಾವೇರಿದ ಪ್ರತಿಭಟನೆಯು, ಶುಕ್ರವಾರ ಕರೆ ನೀಡಲಾಗಿರುವ ಬಂದ್ ಯಾವುದಕ್ಕಾಗಿ? ಯಾರ ವಿರುದ್ಧ?

ನಿನ್ನೆ ಮಂಡ್ಯದಲ್ಲಿ ನಡೆದ ಬಂದ್ ಇರಬಹುದು, ರಾಜ್ಯದ ವಿವಿದೆಡೆ ನಡೆದ ಪ್ರತಿಭಟನೆಗಳಿರಬಹುದು ಅದು ರಾಜ್ಯ ಸರಕಾರ ನೀರು ಬಿಡಬಾರದು ಎಂಬ ಬೇಡಿಕೆಯನ್ನೊಳಗೊಂಡಿದೆ. 1991ರಲ್ಲಿ ಮುಖ್ಯಮಂತ್ರಿಯಾಗಿದ್ದ ಬಂಗಾರಪ್ಪ ನ್ಯಾಯಾಧೀಕರಣದ ತೀರ್ಪನ್ನು ಧಿಕ್ಕರಿಸಿದ್ದರು, ಸಿದ್ಧರಾಮಯ್ಯ ಕೂಡ ಅದೇ ರೀತಿ ಮಾಡಬೇಕು ಎನ್ನುವ ಬೇಡಿಕೆಗಳೂ ಇವೆ. ಧಿಕ್ಕರಿಸುವುದು ಸಾಧ್ಯವೇ? ಒಂದು ವೇಳೆ ಸಿದ್ಧರಾಮಯ್ಯ ನೀರು ನೀಡದೇ ಹೋದರೆ, ಸಹಜವಾಗಿ ತಮಿಳುನಾಡು ಮತ್ತೆ ಸುಪ್ರೀಂ ಕೋರ್ಟಿನ ಮೊರೆ ಹೋಗುತ್ತದೆ, ಕರ್ನಾಟಕದ ಮೇಲೆ ನ್ಯಾಯಾಂಗ ನಿಂದನೆಯ ಆಪಾದನೆ ಬರುತ್ತದೆ. ರಾಜ್ಯ ಸರಕಾರ ವಜಾಗೊಳ್ಳಬಹುದು, ಕೆ.ಆರ್.ಎಸ್ ಕೇಂದ್ರದ ಸುಪರ್ದಿಗೆ ಅಂದರೆ ಮಿಲಿಟರಿ/ಪ್ಯಾರಾ ಮಿಲಟರಿ ಪಡೆಗಳು ಅಣೆಕಟ್ಟನ್ನು ವಶಕ್ಕೆ ತೆಗೆದುಕೊಳ್ಳಬಹುದು. ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ನೀರು ಬಿಡುವ ಎಲ್ಲಾ ಸಾಧ್ಯತೆಗಳೂ ಇವೆ. ಈಗಾಗಲೇ ಸುಪ್ರೀಂ ಕೋರ್ಟಿನ ಆದೇಶದಂತೆ 15,000 ಕ್ಯುಸೆಕ್ಸ್ ನೀರು ಹರಿದು ಹೋಗಿರಲಿಕ್ಕೂ ಸಾಕು. ಎಸ್.ಎಂ.ಕೃಷ್ಣ ಮುಖ್ಯಮಂತ್ರಿಯಾಗಿದ್ದ ಸಮಯದಲ್ಲೂ ನೀರು ಬಿಡೆನು ಎಂದು ಬೆಂಗಳೂರಿನಿಂದ ಮಂಡ್ಯದವರೆಗೂ ಪಾದಯಾತ್ರೆ ನಡೆಸಿದರು, ನಂತರ ಕದ್ದು ಮುಚ್ಚಿ ನೀರು ಬಿಟ್ಟುಬಿಟ್ಟಿದ್ದರು. 

ಕಾವೇರಿಯ ವಿಷಯದಲ್ಲಿ ಕರ್ನಾಟಕ ಸಂಪೂರ್ಣವಾಗಿ ಸೋತು ಹೋಗಿ ಬಹಳ ಕಾಲವಾಗಿದೆ ಎನ್ನುವುದನ್ನು ಮೊದಲು ಅರ್ಥೈಸಿಕೊಳ್ಳಬೇಕು. ಸ್ವಾತಂತ್ರಪೂರ್ವದಲ್ಲೂ ಸೋತಿದೆ, ಸ್ವಾತಂತ್ರ್ಯಾನಂತರದಲ್ಲಿ 2007ರಲ್ಲಿ ನ್ಯಾಯಾಧೀಕರಣ ಕೊಟ್ಟ ತೀರ್ಪಿನ ನಂತರ ಪೂರ್ಣವಾಗಿ ಸೋತು ಹೋಗಿದೆ. ಸ್ವಾತಂತ್ರ್ಯ ಪೂರ್ವದಲ್ಲಿ ಟಿಪ್ಪು ಸುಲ್ತಾನನ್ನು ಬ್ರಿಟೀಷರು ಸೋಲಿಸಿದ ನಂತರ ಸ್ಥಾಪನೆಯಾಗಿದ್ದು ಮೈಸೂರು ಒಡೆಯರ್ ಗಳ ಆಡಳಿತ. ಹೆಸರಿಗಿಲ್ಲಿ ಮೈಸೂರಿನ ಒಡೆಯರ್ ಗಳು ರಾಜರಾದರೂ ಪರೋಕ್ಷವಾಗಿ ಆಡಳಿತ ನಡೆಸುತ್ತಿದ್ದಿದ್ದು ಬ್ರಿಟೀಷರು. ಅತ್ತ ಕಡೆ ಮದ್ರಾಸಿನಲ್ಲಿ ಬ್ರಿಟೀಷರದೇ ನೇರ ಆಡಳಿತವಿತ್ತು. ಸಹಜವಾಗಿ ಕಾವೇರಿಯ ವಿಷಯದಲ್ಲಿ ಬ್ರಿಟೀಷರು ತಮ್ಮ ನೇರ ಆಳ್ವಿಕೆಯಿದ್ದ ಪ್ರದೇಶಕ್ಕೆ ಹೆಚ್ಚು ಅನುಕೂಲ ಮಾಡಿಕೊಡುವಂತಹ ಕಾನೂನುಗಳನ್ನು ಜಾರಿಗೆ ತಂದರು. ಬ್ರಿಟೀಷರ ಕೃಪೆಯಲ್ಲಿದ್ದ ಮೈಸೂರು ರಾಜರಿಗೆ ಅದನ್ನು ಒಪ್ಪದೇ ಬೇರೆ ನಿರ್ವಾಹವಿರಲಿಲ್ಲ. ಕೆ.ಆರ್.ಎಸ್ ಅಣೆಕಟ್ಟೆಯನ್ನು ಕಟ್ಟುವಾಗಲೂ ಬ್ರಿಟೀಷರ ಅರ್ಥಾತ್ ಮದ್ರಾಸಿನ ಕಟ್ಟಪ್ಪಣೆಗಳಿಗೆ ಒಪ್ಪಲಾಗಿತ್ತು. ಸ್ವಾತಂತ್ರ್ಯ ನಂತರದಲ್ಲಾದರೂ ನಮಗೆ ಬೇಕಾದಂತೆ ಅಣೆಕಟ್ಟೆ ಕಟ್ಟುವುದು ಸಾಧ್ಯವಾಯಿತೇ? ಇಲ್ಲ. 1968ರಲ್ಲಿ ಹಾರಂಗಿ ಮತ್ತು ಕಬಿನಿ ಜಲಾಶಯಗಳನ್ನು ‘ಆರು ತಿಂಗಳಿಗಿಂತ ಹೆಚ್ಚಾಗಿ ಈ ಅಣೆಕಟ್ಟೆಗಳಲ್ಲಿ ನೀರು ಇಟ್ಟುಕೊಳ್ಳುವುದಿಲ್ಲ’ ಎನ್ನುವ ಶರತ್ತಿನೊಂದಿಗೇ ಕಟ್ಟಿದ್ದು. ಕರ್ನಾಟಕ ಸರಿಯಾಗಿ ನೀರು ಬಿಡುತ್ತಿಲ್ಲ ಎಂದು ಆರೋಪಿಸಿ ತಮಿಳುನಾಡು ನ್ಯಾಯಾಲಯಕ್ಕೆ ಹೋಯಿತು. ನೆಲ ಜಲ ಭಾಷೆಯ ವಿಷಯ ಬಂದಾಗ ತಮಿಳರಿಗೆ ತಮಿಳರೇ ಸಾಟಿ. ಪಕ್ಷ ಬೇಧ ಮರೆತು ಸಂಸತ್ತಿನಲ್ಲಿ ಒಗ್ಗಟ್ಟು ಪ್ರದರ್ಶಿಸುತ್ತಾರೆ, ಕೇಂದ್ರ ಸರಕಾರದ ಮೇಲೆ ಒತ್ತಡ ಹೇರುತ್ತಾರೆ, ಪ್ರಬಲವಾಗಿ ಲಾಬಿ ಮಾಡುತ್ತಾರೆ. ತಮಿಳುನಾಡಿನ ಪಕ್ಷಗಳಿಗಿರುವ ಮತ್ತೊಂದು ಅನುಕೂಲತೆಯೆಂದರೆ, ‘ನೀವು ಈ ವಿಷಯ ಮಾತಾಡ್ಬೇಡಿ, ಬಾಯ್ಮುಚ್ಚಿ’ ಎಂದು ಅಲ್ಲಿನ ಶಾಸಕ – ಸಂಸದರಿಗೆ ಹೇಳಲು ದೆಹಲಿಯಲ್ಲಿ ಯಾವುದೇ ಹೈಕಮ್ಯಾಂಡ್ ಇಲ್ಲ. ಅವರ ಹೈಕಮ್ಯಾಂಡುಗಳೆಲ್ಲ ಚೆನ್ನೈನಲ್ಲೇ ಇವೆ. ಪ್ರಾದೇಶಿಕ ಪಕ್ಷವಿಲ್ಲದ ಕರ್ನಾಟಕ ಹೈಕಮ್ಯಾಂಡಿನ ಮರ್ಜಿಗೆ ಬಿದ್ದಿರುವುದು ನಾವು ಸೋತು ಹೋಗಿರುವುದಕ್ಕೆ ಕಾರಣವೆಂದರೆ ತಪ್ಪಲ್ಲ. ಇನ್ನು ನ್ಯಾಯಾಲಯಗಳಲ್ಲಿ, ಟ್ರಿಬ್ಯುನಲ್ ಗಳ ಮುಂದೆ ಕರ್ನಾಟಕದ ವಕೀಲರು ಯಾವತ್ತೂ ಸರಿಯಾಗಿ ವಾದಿಸುವುದೇ ಇಲ್ಲ ಎನ್ನುವ ಆರೋಪವೂ ಇದೆ. ಜಲದ ವಿಷಯದಲ್ಲಿ ನಾವು ಪದೇ ಪದೇ ಸೋಲುತ್ತಿರುವುದು ನೋಡಿದರೆ ವಕೀಲರ ಅದಕ್ಷತೆಯೂ ನಮ್ಮ ಸೋಲಿಗೆ ಕಾರಣ ಎನ್ನಿಸದೇ ಇರದು. ಮೊನ್ನಿನ ತೀರ್ಪಿನ ಸಂದರ್ಭದಲ್ಲೂ ಕರ್ನಾಟಕ ಹತ್ತು ಸಾವಿರ ಕ್ಯೂಸೆಕ್ಸ್ ನೀರು ಬಿಡುತ್ತೇವೆ ಎಂದು ಹೇಳಿಕೆ ನೀಡಿತು, ತಮಿಳುನಾಡು ಇಪ್ಪತ್ತು ಸಾವಿರ ಕ್ಯುಸೆಕ್ಸ್ ನೀರು ಕೇಳಿತು. ಚೌಕಾಶಿ ಮಾಡಿದ ನ್ಯಾಯಾಲಯ ಹದಿನೈದು ಸಾವಿರ ಕ್ಯುಸೆಕ್ಸ್ ನೀರು ಬಿಡಬೇಕೆಂದು ತೀರ್ಪು ನೀಡಿತು. ನ್ಯಾಯಾಧೀಕರಣದ ಅಂತಿಮ ತೀರ್ಪಿನ ಪ್ರಕಾರ ಇನ್ನೂ ಬಹಳಷ್ಟು ನೀರು ಬಿಡಬೇಕಿದ್ದ ಕರ್ನಾಟಕವು ಬರ ಬಿದ್ದ ಕಾರಣ ನೀರು ಬಿಟ್ಟಿರಲಿಲ್ಲ. ನೀರು ಕೊಡುವುದಕ್ಕೆ ಸಾಧ್ಯವೇ ಇಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಿಬಿಟ್ಟರೆ, ನ್ಯಾಯಾಲಯ ಅದನ್ನು ಅಮಾನವೀಯ ನಿರ್ಣಯ ಎಂದು ತೀರ್ಮಾನಿಸಿ ತಮಿಳುನಾಡಿನ ಬೇಡಿಕೆಯನ್ನೇ ಮನ್ನಿಸಿಬಿಡಬಹುದು ಎನ್ನುವ ಕಾರಣಕ್ಕೆ ಹತ್ತು ಸಾವಿರ ಕ್ಯುಸೆಕ್ಸ್ ನೀರು ಬಿಡುವ ಮಾತನಾಡಿತಾ? 

ಒಟ್ಟಿನಲ್ಲಿ ಇವೆಲ್ಲದರಿಂದಲೂ ಸ್ಪಷ್ಟವಾಗುವ ಅಂಶವೆಂದರೆ ಕಾವೇರಿ ಕರ್ನಾಟಕದಲ್ಲೇ ಹುಟ್ಟಿ, ತಮಿಳುನಾಡಿಗಿಂತ ಹೆಚ್ಚಾಗಿ ಕರ್ನಾಟಕದಲ್ಲೇ ಹರಿದರೂ ಕೂಡ ಕಾವೇರಿ ನದಿ ನೀರಿನ ಮೇಲೆ ಹೆಚ್ಚು ಹಕ್ಕು ಹೊಂದಿರುವುದು ತಮಿಳುನಾಡು. ಟ್ರಿಬ್ಯುನಲ್ಲಿನ ಕೊನೆಯ ತೀರ್ಪು ತಮಿಳುನಾಡಿನ ಪರವಾಗೇ ಬಂದಿದೆ, ನಾವದರಲ್ಲಿ ಸೋತುಹೋಗಿದ್ದೇವೆ ಎನ್ನುವುದನ್ನು ಒಪ್ಪಿಕೊಳ್ಳಲೇಬೇಕು. ಮಳೆಯಾದ ದಿನಗಳಲ್ಲಿ ಇವ್ಯಾವುದೂ ನೆನಪಾಗುವುದಿಲ್ಲವಾದರೂ ಬರ ಬಿದ್ದ ಸಮಯದಲ್ಲಿ ಮತ್ತೆ ಭಾವನಾತ್ಮಕವಾಗಿ ನಾವೆಷ್ಟೇ ಪ್ರತಿಭಟಿಸಿದರೂ ಕೊನೆಗೆ ನೀರು ಬಿಡಲೇಬೇಕು ಎನ್ನುವ ವಾಸ್ತವವನ್ನು ಅರ್ಥೈಸಿಕೊಂಡಾದ ಮೇಲೆ ಇದಕ್ಕೆ ಯಾವುದೇ ರೀತಿಯ ಪರಿಹಾರವೂ ಇಲ್ಲವೇ ಎನ್ನುವ ಪ್ರಶ್ನೆಗಳೇಳುತ್ತವೆ. ನನ್ನ ಪ್ರಕಾರ ಕಾವೇರಿ ಸಮಸ್ಯೆಗೆ ಮೂರು ರೀತಿಯ ಪರಿಹಾರವಿದೆ.

1. ಕರ್ನಾಟಕ ರಾಜ್ಯವು ಭಾರತದಿಂದ ಬೇರ್ಪಟ್ಟು ಪ್ರತ್ಯೇಕ ದೇಶವಾಗುವುದು

ತಮಿಳುನಾಡು ಕೇಂದ್ರದ ಮಟ್ಟದಲ್ಲಿ ಮಾಡುವ ಲಾಬಿ, ಅಲ್ಲಿನ ಪ್ರಾದೇಶಿಕ ಪಕ್ಷಗಳು ಕೇಂದ್ರದ ಮೇಲೆ ನಡೆಸುವ ಸವಾರಿ, ನಮ್ಮಲ್ಲಿ ಯಾವುದೇ ಪ್ರಾದೇಶಿಕ ಪಕ್ಷವಿಲ್ಲದಿರುವುದರಿಂದ ಭಾರತ ದೇಶದೊಳಗೆ ಕರ್ನಾಟಕ ಒಂದು ರಾಜ್ಯವಾಗಿ ಇರುವವರೆಗೂ ಈ ಸಮಸ್ಯೆ ಬಗೆಹರಿಯುವುದಿಲ್ಲ. ಕರ್ನಾಟಕ ಪ್ರತ್ಯೇಕ ದೇಶವಾಗಿಬಿಟ್ಟರೆ ಈಗಿರುವ ಯಾವ ಕಾನೂನೂ ಅನ್ವಯವಾಗುವುದಿಲ್ಲ, ಅಂತರರಾಷ್ಟ್ರೀಯ ಟ್ರಿಬ್ಯುನಲ್ ಗಳಲ್ಲಿ ವಾದ ವಿವಾದ ನಡೆಯಬಹುದು. ಕರ್ನಾಟಕ ದೇಶದ ಸೈನ್ಯ ಬಲವಾಗಿದ್ದರೆ ಆ ಟ್ರಿಬ್ಯುನಲ್ಲಿನ ತೀರ್ಪನ್ನು ಒಪ್ಪಬೇಕೆಂಬ ಕಟ್ಟಪ್ಪಣೆಯೂ ಇರುವುದಿಲ್ಲ. ಕಾವೇರಿಯ ನೀರು ಬರ್ತಾ ಬರ್ತಾ ಬೆಂಗಳೂರಿನ ಕುಡಿಯುವ ನೀರಾಗಷ್ಟೇ ಉಳಿದುಹೋಗುತ್ತಿದೆ. ಇದಕ್ಕೆ ಅನ್ಯರಾಜ್ಯಗಳ ವಲಸಿಗರ ಹೆಚ್ಚಳವೂ ಕಾರಣ. ಪ್ರತ್ಯೇಕ ದೇಶವಾಗಿಬಿಟ್ಟರೆ ಆ ಸಮಸ್ಯೆಗೂ ಪರಿಹಾರ ಸಿಗುತ್ತದೆ. 

2. ಅಣೆಕಟ್ಟೆಗಳನ್ನು ರೈತರ – ಜನರ ಸುಪರ್ದಿಗೆ ಬಿಟ್ಟುಬಿಡುವುದು

ರಾಜಕೀಯವೇ ಮುಖ್ಯವಾದ ರಾಜಕಾರಣಿಗಳು ಇದಕ್ಕೊಂದು ಪರಿಹಾರ ಕಂಡುಹಿಡಿಯುವುದಿಲ್ಲ, ನ್ಯಾಯಾಲಯಗಳು ಕೊಡುವ ಪರಿಹಾರ ನ್ಯಾಯಬದ್ಧವಾಗಿದೆಯೆಂದು ಎರಡೂ ಕಡೆಯವರಿಗೆ ಅನ್ನಿಸುವುದಿಲ್ಲ. ಸರಕಾರ ಮತ್ತು ನ್ಯಾಯಾಲಯದ ಮಟ್ಟದಲ್ಲಿ ಪರಿಹಾರವಾಗದ ಸಮಸ್ಯೆಯನ್ನು ಜನರೇ ಪರಿಹರಿಸಿಕೊಳ್ಳಲು ಸರಕಾರಗಳ ನಿಯಂತ್ರಣದಲ್ಲಿರುವ ಅಣೆಕಟ್ಟೆಗಳನ್ನು ರೈತರ – ಜನರ ಸುಪರ್ದಿಗೆ ಬಿಟ್ಟುಬಿಡಬೇಕು. ಎರಡೂ ರಾಜ್ಯಗಳ ರೈತರು – ಜನರು ಎರಡೂ ರಾಜ್ಯಗಳಲ್ಲಾಗಿರುವ ಮಳೆ, ಅಣೆಕಟ್ಟೆಯಲ್ಲಿರುವ ನೀರನ್ನು ಅಳೆದು ತೂಗಿ ಆಯಾ ವರುಷಕ್ಕೆ ನಿಯಮಗಳನ್ನು ರೂಪಿಸಿಕೊಳ್ಳುವುದು. ನದಿಪಾತ್ರದ ಜನರು ಈ ವರ್ಷ ಯಾವ ಯಾವ ಬೆಳೆಗಳನ್ನು ಬೆಳೆಯಬಹುದು, ಎಷ್ಟು ಬೆಳೆ ಬೆಳೆಯಬಹುದು ಎನ್ನುವ ಒಪ್ಪಂದವು ಪ್ರತಿ ವರುಷ ನವೀಕರಣವಾಗುತ್ತಲೇ ಇರಬೇಕು. ಇಲ್ಲಿನ ರೈತರ ಕಷ್ಟ ಅಲ್ಲಿನವರಿಗೆ, ಅಲ್ಲಿನ ರೈತರ ಕಷ್ಟ ಇಲ್ಲಿನವರಿಗೆ ಅರ್ಥವಾದರೆ ಅರ್ಧಕ್ಕರ್ಧ ಸಮಸ್ಯೆ ಪರಿಹಾರವಾಗಿಬಿಡುತ್ತದೆ. 

3. ತಮಿಳುನಾಡಿನ ಮಾದರಿಯನ್ನು ಅನುಸರಿಸುವುದು

ಮೇಲಿನೆರಡೂ ಪರಿಹಾರಗಳು ಎಷ್ಟು ಅವಾಸ್ತವಿಕ ಎನ್ನುವುದು ನಿಮ್ಮ ಅರಿವಿಗೂ ಬಂದಿರಬೇಕು. ಕರ್ನಾಟಕ ಭಾರತದಿಂದ ಬೇರ್ಪಟ್ಟು ಪ್ರತ್ಯೇಕ ದೇಶವಾಗುವುದಿಲ್ಲ, ಭಾವನಾತ್ಮಕವಾಗಿ ಉಪಯೋಗಕ್ಕೆ ಬರುವ ವಿಷಯದಲ್ಲಿ ತಟಸ್ಥರಾಗಿ ನೀವೇ ಪರಿಹರಿಸಿಕೊಳ್ಳಿ ಎಂದು ಯಾವ ಸರಕಾರವೂ –ಯಾವ ಪಕ್ಷವೂ ಈ ಸಂಗತಿಯನ್ನು ಜನರೇ ಪರಿಹರಿಸಿಕೊಳ್ಳುವುದಕ್ಕೆ ಬಿಡುವುದಿಲ್ಲ. ಮತ್ತಿದಕ್ಕಿರುವ ಪರಿಹಾರವೇನು? ತಮಿಳುನಾಡಿನ ಮಾದರಿಯೇ ಇದಕ್ಕೆ ಪರಿಹಾರ! ತಮಿಳುನಾಡು ನಡೆಸುವ ಲಾಬಿ, ಚಾಕಚಕ್ಯತೆಯಿಂದ ವಾದ ಮುಂದಿಡುವ ಅವರ ವಕೀಲರು, ನೆಲ-ಜಲ-ಭಾಷೆಯ ವಿಷಯಲ್ಲಿ ಅಲ್ಲಿನ ರಾಜಕಾರಣಿಗಳಲ್ಲಿರುವ ಒಗ್ಗಟ್ಟಿನ ಮಾದರಿಯನ್ನು ಕರ್ನಾಟಕವೀಗ ಅನುಸರಿಸಿದರೂ ಹೆಚ್ಚಿನ ಪ್ರಯೋಜನವಿಲ್ಲ. ಯಾಕೆಂದರೆ ಈಗಾಗಲೇ ಹೇಳಿರುವಂತೆ, ಕಾವೇರಿ ವಿಷಯದಲ್ಲಿ ಕರ್ನಾಟಕ ಸೋತು ಹೋಗಿ ಬಹಳ ವರುಷಗಳಾಗಿಬಿಟ್ಟಿದೆ. ಮತ್ಯಾವುದಿದು ನಾವು ಅನುಸರಿಸಬೇಕಿರುವ ತಮಿಳುನಾಡು ಮಾದರಿ?

ಗೂಗಲ್ ಮ್ಯಾಪ್ ತೆರೆಯಿರಿ. ಕಾವೇರಿ ಉಗಮವಾಗುವ ತಲಕಾವೇರಿಯಿಂದ ಕಾವೇರಿ ಸಮುದ್ರ ಸೇರುವವರೆಗೂ ಸ್ಕ್ರಾಲ್ ಮಾಡಿಕೊಂಡು ಸಾಗಿ. ನದಿಯ ಅಕ್ಕಪಕ್ಕದಲ್ಲಿ ಹಲವು ನೀಲಿ ಪ್ರದೇಶಗಳು ಕಾಣುತ್ತವೆ. ಕರ್ನಾಟಕದಲ್ಲಿ ವಿರಳವಾಗಿ ಕಂಡುಬರುವ ಈ ನೀಲಿ ಪ್ರದೇಶಗಳು, ಕಾವೇರಿ ನದಿ ತಮಿಳುನಾಡಿಗೆ ಪ್ರವೇಶಿಸಿದ ನಂತರ ಹೆಚ್ಚಾಗುತ್ತದೆ. ಮೆಟ್ಟೂರು ದಾಟಿ ಸಮುದ್ರದ ಬಳಿ ಸಾಗುತ್ತಿದ್ದಂತೆ ಮತ್ತಷ್ಟು ಮಗದಷ್ಟು ಹೆಚ್ಚಾಗುತ್ತದೆ. ಏನಿದು ನೀಲಿ ಪ್ರದೇಶಗಳು? ಚಿಕ್ಕ ಚಿಕ್ಕ ಕೆರಗಳನ್ನು ಸೂಚಿಸುತ್ತವೆ ಈ ನೀಲಿ ಪ್ರದೇಶಗಳು. ಕಾವೇರಿ ನದಿಯ ವಿಷಯದಲ್ಲಿ ಕರ್ನಾಟಕಕ್ಕೆ ಏನಾದರೂ ಪರಿಹಾರ ಅಂತ ಇದ್ದರೆ ಅದು ಕೆರೆಗಳಲ್ಲಿದೆ. ನಮ್ಮ ನೀರಾವರಿ ತಜ್ಞರು, ಜಲ ತಜ್ಞರು, ನೀರಾವರಿ ಇಲಾಖೆಯ ಅಧಿಕಾರಿಗಳು ನೀರಿನ ವಿಷಯದಲ್ಲಿ ಮುಂದಾಗಿ ಯೋಚಿಸದೆ ಹಲವು ಶತಮಾನಗಳ ಹಿಂದಾಗಿ ಯೋಚಿಸಿದರಷ್ಟೇ ನೀರಿನ ಸಮಸ್ಯೆಗೊಂದು ಪರಿಹಾರ ಕಂಡುಕೊಳ್ಳಬಹುದು. ಕರ್ನಾಟಕದಲ್ಲಿ ಕಾವೇರಿ ನದಿ ಹರಿಯುವ ಊರುಗಳಲ್ಲಿನ ಕೆರೆಗಳು ಮಾಯವಾಗಿಬಿಟ್ಟಿವೆ, ನಾಲೆ ನೀರು ಕೊಂಡೊಯ್ಯುವ ಪ್ರದೇಶಗಳಲ್ಲಿನ ಬಹುತೇಕ ಕೆರೆಗಳಲ್ಲಿ ಒಂದೋ ಹೂಳು ತುಂಬಿಕೊಂಡಿದೆ, ಇಲ್ಲಾ ಒತ್ತುವರಿಯಾಗಿಬಿಟ್ಟಿದೆ. ಮಂಡ್ಯ ನಗರದಲ್ಲಿರುವ ನಮ್ಮ ಮನೆಯಲ್ಲಿರುವ ಬಾವಿಯಲ್ಲಿ ನೀರು ಬತ್ತಿದ್ದೇ ಇಲ್ಲ. ಆ ಬಾವಿಯೇನೂ ಆಳವಾದದ್ದಲ್ಲ, ಕೇವಲ ಹದಿಮೂರು ಅಡಿಯ ಬಾವಿಯದು. ಮಂಡ್ಯದ ಬಸ್ ನಿಲ್ದಾಣದಿಂದ ಎರಡು ಕಿಲೋಮೀಟರುಗಳ ಅಂತರದಲ್ಲಿದ್ದ ಚಿಕ್ಕಮಂಡ್ಯ ಕೆರೆಯನ್ನು ಮುಚ್ಚಿ ಹಾಕಿ ಅಲ್ಲಿ ನಿವೇಶನಗಳನ್ನು ಮಾಡಿಬಿಡೋಣ ಎಂಬ ಭಯಂಕರ ಯೋಚನೆ ಯಾರಿಗೆ ಬಂತೋ ಏನೋ ಕೆರೆ ಮುಚ್ಚಿ ಹೋಯಿತು. ನಮ್ಮ ಮನೆಯ, ಮಂಡ್ಯದ ಬಹುತೇಕ ಮನೆಗಳ ಕಡಿಮೆ ಆಳದ ಬಾವಿಗಳೂ ನೀರಿಲ್ಲದಂತಾಗಿಬಿಟ್ಟವು. ಈಗ ಮಂಡ್ಯಕ್ಕೂ ಪೈಪುಗಳ ಮೂಲಕ ಬರುವ ಕಾವೇರಿ ನೀರೇ ಬೇಕು, ಇಲ್ಲಾ ಅಂತರ್ಜಲವನ್ನು ಮೇಲೆತ್ತುವ ಬೋರ್ ವೆಲ್ಲುಗಳೇ ಬೇಕು. ಬೆಂಗಳೂರಿನಲ್ಲಿನ ಕೆರೆ ಒತ್ತುವರಿಯೂ ಇಲ್ಲಿನ ನೀರಿನ ಸಮಸ್ಯೆಗೆ ಕಾರಣವೆನ್ನುವುದು ತಿಳಿದೇ ಇದೆಯಲ್ಲ. ಇರೋ ಕೆರೆಗಳ ಹೂಳೆತ್ತುವುದಕ್ಕೆ ಆಸಕ್ತಿ ತೋರಿಸದ ಸರಕಾರ, ಊರಲ್ಲಿರುವ – ಊರಲ್ಲಿದ್ದ ಕೆರೆಗಳನ್ನು ಉಳಿಸಿಕೊಳ್ಳುವುದಕ್ಕೆ ಆಸಕ್ತಿ ತೋರಿಸದ ಸ್ಥಳೀಯರ ಸಂಖೈ ಹೆಚ್ಚಿರುವಾಗ ತಮಿಳುನಾಡಿನ ಮಾದರಿಯನ್ನು ಅನುಸರಿಸುತ್ತೀವಾ? ಹಳೆಯ ಕೆರೆಗಳನ್ನೇ ಉಳಿಸಿಕೊಳ್ಳದವರು ಹೊಸ ಕೆರೆಗಳನ್ನು ನಿರ್ಮಿಸಿ ಶಾಶ್ವತ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡುತ್ತೀವಾ? ಕೆರೆಗಳ ಬಗ್ಗೆ ಯೋಚಿಸದ ಸರಕಾರ ಮೇಕೆದಾಟುವಿನಲ್ಲಿ ಮತ್ತೊಂದು ಅಣೆಕಟ್ಟೆ ಕಟ್ಟುವ ಮಾತನ್ನಾಡುತ್ತದೆ. ಮತ್ತೊಂದು ಅಣೆಕಟ್ಟೆಯೆಂದರೆ ತಮಿಳುನಾಡಿನ ಜೊತೆಗೆ ಮತ್ತೊಂದು ಸುತ್ತಿನ ವಾದ ವಿವಾದಕ್ಕೆ ದಾರಿಯೆಂದೇ ಅರ್ಥವಲ್ಲವೇ? 

ಕೆರೆಗಳನ್ನು ನಿರ್ಮಿಸುವುದರಿಂದ ನೀರಿನ ಸಮಸ್ಯೆ ಅರ್ಧಕ್ಕರ್ಧ ಬಗೆಹರಿಯುತ್ತದೆ. ಆದರದಲ್ಲಿ ಅಣೆಕಟ್ಟೆಯ ನಿರ್ಮಾಣಕ್ಕೆ ಖರ್ಚಾಗುವಷ್ಟು ದುಡ್ಡಿಲ್ಲ, ಭಾವನಾತ್ಮಕವಾಗಿಯೂ ಕೆರೆಯ ನೀರು ನಮ್ಮನ್ನು ತಟ್ಟುವುದಿಲ್ಲ. ಮುಂದಿನ ವರುಷ ಮಳೆ ಚೆನ್ನಾಗಿ ಆದಾಗ ಕಾವೇರಿ ಸಮಸ್ಯೆಯೂ ಮರೆತುಹೋಗಿರುತ್ತದೆ, ತಮಿಳುನಾಡೂ ಮರೆತುಹೋಗಿರುತ್ತದೆ – ಐದಾರು ವರುಷಗಳ ನಂತರ ಮತ್ತೆ ಬರ ಬಿದ್ದಾಗ ಮತ್ತಿದೇ ಘಟನೆಗಳು ಪುನರಾವರ್ತನೆಯಾಗುತ್ತವೆ……

ಕಾವೇರಿಯ ವಿಷಯದಲ್ಲಿ ನಾವು ಸೋತು ಬಹಳ ಕಾಲವಾಗಿದೆ…… ಹೊಸ ಕೆರೆಗಳ ನಿರ್ಮಾಣ ಮತ್ತು ಇರುವ ಕೆರೆಗಳ ನವೀಕರಣದಿಂದಷ್ಟೇ ನಮ್ಮ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಸಾಧ್ಯ…….

(ಕಾವೇರಿ ನದಿ ವಿವಾದದ ಬಗ್ಗೆ ಪೂರ್ಣವಾಗಿ ತಿಳಿದುಕೊಳ್ಳಲು ವಸಂತಬಂದಾ ಬ್ಲಾಗಿನ ಈ ಲೇಖನಗಳನ್ನೂ ಓದಿ: ಭಾಗ 1, ಭಾಗ 2, ಭಾಗ 3, ಭಾಗ 4)

ಸೆಪ್ಟೆಂ 2, 2016

ಮೇಕಿಂಗ್ ಹಿಸ್ಟರಿ: ವೆಲ್ಲೂರಿನ ಬಂಡಾಯ (1806)

ಸಾಕೇತ್ ರಾಜನ್ 
ಕನ್ನಡಕ್ಕೆ: ಡಾ. ಅಶೋಕ್. ಕೆ. ಆರ್
02/09/2016
ಮುಂದಿನ ಭಾಗದಲ್ಲಿ 1800-1801ರ ಸಮಯದಲ್ಲಿ ಊಳಿಗಮಾನ್ಯ ದೊರೆಗಳು, ಈ ಮುಂಚೆ ಮೈಸೂರು ಸೈನ್ಯದಲ್ಲಿದ್ದ, ಪಾಳೇಗಾರರೊಡನೆ ಸೇರಿ ಬ್ರಿಟೀಷರೊಡನೆ ದಕ್ಷಿಣ ಕನ್ನಡದಲ್ಲಿ ಹೋರಾಡಿದ್ದ ಸುಬ್ಬಾ ರಾವ್ ಮತ್ತು ಮಹತಾಬ್ ಖಾನನ ನೇತೃತ್ವದಲ್ಲಿ ನಡೆಸಿದ ಸಶಸ್ತ್ರ ಪ್ರತಿರೋಧದ ಬಗ್ಗೆ ಚರ್ಚಿಸೋಣ. 

ಕಾರ್ಲ್ ಮಾರ್ಕ್ಸ್ ನ್ಯೂ ಯಾರ್ಕ್ ಡೈಲಿ ಟ್ರಿಬ್ಯೂನಿಗೆ 1857ರ ಭಾರತದ ಬಂಡಾಯದ ಬಗ್ಗೆ ಬರೆದ ಲೇಖನ, ಕೆಲವು ಪ್ರಶ್ನೆಗಳ ತೀಕ್ಷ್ಣ ವಿಶ್ಲೇಷಣೆ ನಡೆಸಿರುವುದು ವೆಲ್ಲೂರಿನ ಬಂಡಾಯವನ್ನು ಅರ್ಥೈಸಿಕೊಳ್ಳಲು ನಮಗೆ ಸಹಾಯ ಮಾಡುತ್ತದೆ. ಇಪ್ಪತ್ತು ಕೋಟಿ ಜನರನ್ನು ಎರಡು ಲಕ್ಷ ಜನರ ಸೈನ್ಯವೊಂದು ಆಳುತ್ತಿರುವ ದೇಶ ಭಾರತ ಎಂದು ಮಾರ್ಕ್ಸ್ ಬರೆಯುತ್ತಾರೆ. ಮತ್ತಿದರಲ್ಲಿ, ಬ್ರಿಟೀಷರ ಸಂಖೈ ಕೇವಲ ನಲವತ್ತು ಸಾವಿರ. (12) 

ಬಂಗಾಳದ ಸೈನ್ಯದ ರಚನೆಯಲ್ಲಿ ಮತ್ತು ಮದ್ರಾಸ್ – ಬಾಂಬೆಯ ಸೈನ್ಯದ ರಚನೆಯಲ್ಲಿ ವ್ಯತ್ಯಾಸಗಳಿದ್ದವು. 

ಬಂಗಾಳದ ಸೈನ್ಯದಲ್ಲಿದ್ದ 80,000 ಜನರಲ್ಲಿ, 30,000ದಷ್ಟು ಬ್ರಿಟೀಷರಿದ್ದರು, 28,000 ರಜಪೂತರು, 23,000 ಬ್ರಾಹ್ಮಣರು, 13,000 ಮುಸ್ಲಿಮರು ಮತ್ತು ಕೇವಲ 5,000ದಷ್ಟು “ಕೆಳಜಾತಿಯವರು”. (13) 

ಮಾರ್ಕ್ಸ್ ಬರೆಯುತ್ತಾರೆ “ಬಾಂಬೆ ಮತ್ತು ಮದ್ರಾಸಿನ ಸೈನ್ಯದಲ್ಲಿದ್ದ ಹೆಚ್ಚಿನವರು ಕೆಳ ಜಾತಿಯ ಜನರು”. (14) ಮದ್ರಾಸ್ ಸೈನ್ಯದಲ್ಲಿದ್ದ ಯುರೋಪಿಯನ್ ಪ್ರಾಬಲ್ಯ ಬಂಗಾಳದ ಸೈನ್ಯಕ್ಕೆ ಹೋಲಿಸಿದರೆ ಬಹಳವೇ ಕಡಿಮೆಯಿತ್ತು. 

ಟಿಪ್ಪುವಿನ ಮಕ್ಕಳನ್ನು ಬ್ರಿಟೀಷರು ತಮಿಳುನಾಡಿನ ವೆಲ್ಲೂರು ಜೈಲಿನಲ್ಲಿಟ್ಟಿದ್ದರು. ಅಲ್ಲಿ ಕಾವಲಿಗಿದ್ದ ಮದ್ರಾಸ್ ಸೈನ್ಯದಲ್ಲಿದ್ದ ಹೆಚ್ಚಿನವರು ಶೋಷಿತ ಜಾತಿಗೆ ಸೇರಿದ್ದವರು. ಆದ್ದರಿಂದಾಗಿ, ವಸ್ತುನಿಷ್ಠವಾಗಿ ನೋಡಿದರೆ, ಕೆಲವೇ ಕೆಲವು ಸಂಖೈಯಲ್ಲಿದ್ದ ಯುರೋಪಿಯನ್ ಅಧಿಕಾರಿಗಳು ಮತ್ತು ಸೈನಿಕರನ್ನು ಇಲ್ಲವಾಗಿಸಲು ಹೆಚ್ಚು ಸಮಯವೂ ಬೇಕಿರಲಿಲ್ಲ, ಯೋಜನೆಯೂ ಮಾಡಬೇಕಿರಲಿಲ್ಲ. 

“ಮೊದಲ ನೋಟದಲ್ಲಿ, ಭಾರತದ ಜನರ ನಿಷ್ಠೆ ಸ್ಥಳೀಯ ಸೈನ್ಯದ ನಿಷ್ಠೆಯ ಮೇಲವಲಂಬಿತವಾಗಿದೆ ಎಂದು ತೋರುತ್ತದೆ, ಭಾರತದ ಜನರಲ್ಲಿದ್ದ ಪ್ರತಿಭಟನೆಯ ಮನೋಭಾವವನ್ನು ಕೇಂದ್ರೀಕೃತಗೊಳಿಸಿದ್ದು ಬ್ರಿಟೀಷ್ ಆಳ್ವಿಕೆ” ಎಂದು ಮಾರ್ಕ್ಸ್ ಪರಿಸ್ಥಿತಿಯನ್ನು ಸರಿಯಾಗಿ ಅವಲೋಕಿಸುತ್ತಾರೆ. (15) 

ಬ್ರಿಟೀಷ್ ಸೈನ್ಯದಲ್ಲಿ ಭಾರತೀಯ ಸೈನಿಕರಿಗಿದ್ದ ಶೋಷಣಾತ್ಮಕ ಪರಿಸ್ಥಿತಿ ಸೈನಿಕರಲ್ಲಿ ಆಗಾಗ ಉಂಟಾಗುವ ಅಸಮಾಧಾನಕ್ಕೆ ಕಾರಣವಾಗಿತ್ತು ಮತ್ತಿದು ದಂಡನಾತ್ಮಕ ಕೋರ್ಟ್ ಮಾರ್ಷಲ್ಲುಗಳಲ್ಲಿ ಅಂತ್ಯವಾಗುತ್ತಿತ್ತು. 1857ರ ಸ್ವಾತಂತ್ರ್ಯದ ಯುದ್ಧವನ್ನಾರಂಭಿಸಿದ್ದು ಬ್ರಿಟೀಷ್ ಸೈನ್ಯದಲ್ಲಿ ಭಾರತೀಯ ಸಿಪಾಯಿಗಳು, ಅವರಲ್ಲಿದ್ದ ವಸಾಹತು ವಿರೋಧಿ ಕ್ರಾಂತಿಕಾರತೆಯನ್ನು 1857ರ ಸ್ವಾತಂತ್ರ್ಯ ಹೋರಾಟ ಹೊರಗೆಳೆದಿತ್ತು. ಟಿಪ್ಪುವಿನ ಮಗ ಫತಾ ಹೈದರನ ನೇತೃತ್ವದಲ್ಲಿ ವೆಲ್ಲೂರಿನ ಸಿಪಾಯಿಗಳ ರೋಷವನ್ನು ಕ್ರೋಡೀಕರಿಸಲಾಯಿತು, ಫತಾ ಹೈದರನ ನೇತೃತ್ವವನ್ನು ಅವರು ತತ್ ಕ್ಷಣ ಒಪ್ಪಿಕೊಂಡರು; ಪರಿಣಾಮವಾಗಿ ನಗರದ ಜನರ ಬೆಂಬಲದೊಂದಿಗೆ ಬಂಡಾಯ ಪ್ರಾರಂಭವಾಯಿತು. 

ಈ ದಂಗೆಯ ಬಗ್ಗೆ ನಂತರದಲ್ಲಿ ನಡೆದ ತನಿಖಾ ಸಮಿತಿ ಕೊಟ್ಟ ವರದಿಯನ್ನಾಧರಿಸಿ ಚೋಪ್ರಾ, ರವಿಚಂದ್ರನ್ ಮತ್ತು ಸುಬ್ರಮಣಿಯನ್ ಬರೆಯುತ್ತಾರೆ: “ಭಾರತೀಯ ಸೈನಿಕರಿಗೆ ಬಡ್ತಿ ಸಿಗುವ ಸಾಧ್ಯತೆಗಳು ಕಡಿಮೆಯಿರುತ್ತಿತ್ತು; ಸುಬೇದಾರನ ಸ್ಥಾನದಿಂದ ಮೇಲೇರಲು ಅವರಿಗೆ ಸಾಧ್ಯವೇ ಇರಲಿಲ್ಲ. ಚಿಕ್ಕ ಪುಟ್ಟ ತಪ್ಪಿಗೂ ಭಾರತೀಯ ಅಧಿಕಾರಿಗಳನ್ನು ಅವಮಾನಿಸಿ ಹಿಂಬಡ್ತಿ ನೀಡಲಾಗುತ್ತಿತ್ತು. ಅವರಿಗೆ ಸಿಗುತ್ತಿದ್ದ ಪಗಾರವೂ ತುಂಬಾ ಕಮ್ಮಿ; ನಿಜಾಮ್ ಮತ್ತು ಮರಾಠ ಮುಖ್ಯಸ್ಥರ ಕೆಳಗಿದ್ದ ಸಾಮಾನ್ಯ ಸಿಪಾಯಿಗಳಿಗೂ ಕಂಪನಿಯ ಕೆಳಗಿದ್ದ ಸುಬೇದಾರರು ಮತ್ತು ಜಮಾದಾರರಿಗಿಂತ ಹೆಚ್ಚಿನ ಸಂಬಳ ಸಿಗುತ್ತಿತ್ತು ಎಂದವರು ಆರೋಪಿಸುತ್ತಾರೆ. ಆದಾಗ್ಯೂ, ಈ ಅಸಮಾಧಾನಗಳೆಲ್ಲವೂ ಮೇಲ್ ಬಂದಿದ್ದು ಸಿಪಾಯಿಗಳಿಗೆ ಹೊಸ ತಲೆ ವಸ್ತ್ರವನ್ನು ಕಂಪನಿ ಪರಿಚಯಿಸಲು ಪ್ರಯತ್ನಿಸಿದಾಗ”. (16) 

1857ರ ದಂಗೆಯ ರೋಷಕ್ಕೆ ಕಿಡಿ ಹಚ್ಚಲು ಬೀಫ್ ಮತ್ತು ಪೋರ್ಕ್ ಕಾರಣವಾದ ರೀತಿಯಲ್ಲೇ, ನಾಮಕಾವಾಸ್ಥೆ ವಿಷಯವಾದ ತಲೆ ವಸ್ತ್ರದ ಕಾರಣದಿಂದ ಇಲ್ಲಿನ ಅಸಮಾಧಾನ ಸ್ಪೋಟಗೊಂಡಿತು. ಬ್ರಿಟೀಷ್ ತನಿಖಾ ಸಮಿತಿಯ ದಾಟಿಯಲ್ಲೇ ಬರೆಯುತ್ತಾ ಈ ಭಾರತೀಯ ಲೇಖಕರು ಬರೆಯುತ್ತಾರೆ: “ಸಿಪಾಯಿಗಳು ಹೆಚ್ಚು ಆಕರ್ಷಕವಾಗಿ ಕಾಣುವಂತೆ ಮಾಡಲು, ಯುರೋಪಿನ ಟೋಪಿಯಂತೆ ಕಾಣುವ ಹೊಸ ತಲೆ ವಸ್ತ್ರವನ್ನು ಪರಿಚಯಿಸಲಾಯಿತು. ಕಿವಿ ಓಲೆ ಮತ್ತು ಹಣೆಯ ಮೇಲೆ ಜಾತಿ ಸೂಚಕ ಚಿಹ್ನೆಗಳನ್ನು ನಿಷೇಧಿಸಲಾಯಿತು…. ಆದರೆ ಸಿಪಾಯಿಗಳು ಹೊಸ ತಲೆ ವಸ್ತ್ರವನ್ನು ಒಪ್ಪಲು ನಿರಾಕರಿಸಿದರು ಮತ್ತು ಬಂಧನದ ಭೀತಿಯ ಹೊರತಾಗಿಯೂ ಈ ಆದೇಶದ ವಿರುದ್ಧ ಬಹಿರಂಗವಾಗಿ ಪ್ರತಿಭಟಿಸಿದರು. ತತ್ಪರಿಣಾಮವಾಗಿ ಕೆಲವರನ್ನು ಬಂಧಿಸಲಾಯಿತು. 1806ರ ಮೇ 7ರಂದು ಬೆಳಗಿನ ಪೆರೇಡಿನ ಸಮಯದಲ್ಲಿ ಹೊಸ ತಲೆ ವಸ್ತ್ರವನ್ನು ಧರಿಸುವಂತೆ ಸಿಪಾಯಿಗಳಿಗೆ ಆದೇಶಿಸಿದಾಗ, ಆದೇಶವನ್ನು ಧಿಕ್ಕರಿಸಿದ ಸಿಪಾಯಿಗಳು ತಲೆಯ ಮೇಲೊಂದು ಕೈಚೌಕವನ್ನು ಹಾಕಿಕೊಂಡು ಇಂಗ್ಲೀಷ್ ಅಧಿಕಾರಿಗಳನ್ನು ‘ನಾಯಿ’ಗಳೆಂದು ಹೀಗಳೆದರು…. 

ವೆಲ್ಲೂರಿನಲ್ಲಿ ಈ ಘಟನೆ ಶುರುವಾದ ಕೆಲವೇ ದಿನಗಳಲ್ಲಿ ಉತ್ತರ ಆರ್ಕಾಟಿನ ವಲ್ಲಜಾಬಾದಿನಲ್ಲಿದ್ದ ಸಿಪಾಯಿಗಳು ಇದೇ ರೀತಿಯ ಪ್ರತಿಭಟನೆಯನ್ನು ನಡೆಸಿದರು. ಈ ಪ್ರಕರಣ ಸಾರ್ವಜನಿಕರ ನೇತೃತ್ವದಿಂದ ಪ್ರಾರಂಭವಾಗಿತ್ತು; ಯುರೋಪಿಯನ್ ಶೈಲಿಯ ಟೋಪಿಗಳನ್ನು ಹಾಕಿದ್ದ ಸಿಪಾಯಿಗಳನ್ನು ಅವರು ಹೀಯಾಳಿಸಿದ್ದರು. ಪರಿಣಾಮವಾಗಿ ಸಿಪಾಯಿಗಳು ಆ ಟೋಪಿಗಳನ್ನು ತೆಗೆದೆಸೆದರು ಮತ್ತಿನ್ನೂ ಅದನ್ನು ಧರಿಸಿದವರನ್ನು ತೆಗಳಿದರು. 

ಈ ಸಂದರ್ಭವನ್ನು ವೆಲ್ಲೂರಿನಲ್ಲಿ ಬಂಧನದಲ್ಲಿದ್ದ ಟಿಪ್ಪುವಿನ ಮಕ್ಕಳು ಸಂಪೂರ್ಣವಾಗಿ ಉಪಯೋಗಿಸಿಕೊಂಡರು….ಈ ದಂಗೆಗೊಂದು ರಾಜಕೀಯ ಗುರಿ ನೀಡುವ ಪ್ರಯತ್ನ ಮಾಡಿದರು….ಮತ್ತು ಸಿಪಾಯಿಗಳೊಡನೆ ಗುಪ್ತ ಸಂಪರ್ಕವನ್ನು ಬೆಳೆಸಿಕೊಂಡು, ಅವರ ಅಸಮಾಧಾನವನ್ನು ಇಂಗ್ಲೀಷರ ವಿರುದ್ಧದ ಹಿಂಸಾತ್ಮಕ ಹೋರಾಟಕ್ಕೆ ತಿರುಗಿಸಿದರು, ದಕ್ಷಿಣ ಭಾರತದದಿಂದ ಬ್ರಿಟೀಷರನ್ನು ಓಡಿಸುವ ಸ್ಪಷ್ಟ ಉದ್ದೇಶದೊಂದಿಗೆ…..ಟಿಪ್ಪುವಿನ ನಾಲ್ಕನೇ ಮಗನಾದ ಮೊಯಿನುದ್ದೀನನ ನೇತೃತ್ವದಲ್ಲಿ, ದಕ್ಷಿಣ ಭಾರತದ ವಿವಿಧ ಭಾಗಗಳಿಂದ ದೊರೆಯುವ ಬೆಂಬಲದಿಂದ ಬಂಡಾಯ ನಡೆಯುತ್ತದೆ ಎಂದು ಸಿಪಾಯಿಗಳಿಗೆ ತಿಳಿಸಲಾಯಿತು. ಬಂಡಾಯವನ್ನು ಹಿಂಸಾತ್ಮವಾಗಿ ಪ್ರಾರಂಭಿಸಬೇಕೆಂದು ರಹಸ್ಯವಾಗಿ ನಿರ್ಧರಿಸಲಾಯಿತು ಮತ್ತು ಇದರಾರಂಭಕ್ಕೆ 1806ರ ಜುಲೈ 10ನೇ ತಾರೀಖನ್ನು ನಿಗದಿಗೊಳಿಸಲಾಯಿತು. ರಾತ್ರಿಯಷ್ಟರಲ್ಲಿ ಸಿಪಾಯಿಗಳು ಕಾರ್ಯಾಚರಣೆಗೆ ಇಳಿದಿದ್ದರು; ಮುಖ್ಯ ದ್ವಾರದಲ್ಲಿದ್ದ ಇಂಗ್ಲೀಷ್ ಕಾವಲುಗಾರರನ್ನು ಅವರು ಕೊಂದರು ಮತ್ತು ಸೇನಾ ಉಗ್ರಾಣವನ್ನು ವಶಕ್ಕೆ ಪಡೆದುಕೊಂಡರು. ಇದರ ನಂತರ ಯುರೋಪಿಯನ್ ಪಡೆಯ ಸೈನಿಕರ ಮತ್ತು ಅಧಿಕಾರಿಗಳ ಮಾರಣಹೋಮ ನಡೆಯಿತು, ಹೆಂಗಸರು ಮತ್ತು ಮಕ್ಕಳನ್ನು ಹೊರತುಪಡಿಸಿ…..ಲೂಟಿ ಮತ್ತು ನಿಧಿ ಹುಡುಕುವಿಕೆ ಅವ್ಯಾಹತವಾಗಿ ನಡೆಯಿತು. ರಕ್ಷಣೆಯಿಲ್ಲದ ಇಂಗ್ಲೀಷರ ಸಂಪತ್ತನ್ನು ದೋಚಲಾಯಿತು ಮತ್ತು ಎಲ್ಲೆಡೆ ಗೊಂದಲಗಳಿದ್ದವು”. (17) 

ಒಟ್ಟಾರೆ, 14 ಬ್ರಿಟೀಷ್ ಅಧಿಕಾರಿಗಳು ಮತ್ತು ಸೈನಿಕರನ್ನು ಕೊಲ್ಲಲಾಯಿತು ಮತ್ತು 76 ಮಂದಿ ಗಾಯಗೊಂಡರು. “ಕಗ್ಗೊಲೆ”ಯನ್ನು ಚೆನ್ನಾಗಿ ನಿಯಂತ್ರಿಸಿ ನಿರ್ವಹಿಸಲಾಯಿತು. ಬ್ರಿಟೀಷ್ ಭಾರತದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಭಾರತೀಯ ಸೈನಿಕರು ದಂಗೆಯೆದ್ದು ತಮ್ಮ ಯುರೋಪಿಯನ್ ಅಧಿಕಾರಿಗಳನ್ನು ಹತ್ಯೆ ಮಾಡಿದ್ದರು. ವೆಲ್ಲೂರಿನ ಜನತೆ ಈ ದಂಗೆಗೆ ತುಂಬು ಹೃದಯದ ಬೆಂಬಲ ನೀಡಿದರು ಮತ್ತು ಸೈನಿಕರಿಗೆ ಬೇಕಾದ ಎಲ್ಲಾ ರೀತಿಯ ಸಹಾಯವನ್ನೂ ಮಾಡಿದರು. ದಂಗೆಯನ್ನು ಇತರೆ ರಕ್ಷಣಾ ಕೋಟೆಗಳೆಡೆಗೂ ಹಬ್ಬಿಸುವ ಯೋಜನೆಗಳನ್ನು ರೂಪಿಸಲಾಗಿತ್ತಾದರೂ, ಬ್ರಿಟೀಷರು ವೆಲ್ಲೂರನ್ನು ಸುತ್ತುವರಿದರು ಮತ್ತು ಯುದ್ಧದಿಂದ ಕೋಟೆಯನ್ನು ಪುನರ್ ವಶಪಡಿಸಿಕೊಂಡರು. ಕೋಟೆಯ ಹೊರಗಡೆ ಅಸಂಖ್ಯಾತ ಜನರನ್ನು ಹತ್ಯೆಗೈದ ನಂತರ ಅವರು ಕೋಟೆಯೊಳಗಿನಿಂದ 800 ದೇಹಗಳನ್ನು ಎಳೆದು ಬಿಸಾಡಿದರು, ವಿದೇಶಿಗರಿಂದ ಓಡಿಸಲ್ಪಟ್ಟ ಮೈಸೂರು ಸುಲ್ತಾನರಿಗೆ ಮತ್ತೆ ಅಧಿಕಾರ ನೀಡಲು ನಡೆದ ಬಂಡಾಯವನ್ನು ಶಮನ ಮಾಡಿಬಿಟ್ಟರು. ವ್ಯಂಗ್ಯದ ವಿಷಯವೆಂದರೆ ತನಿಖಾ ಸಮಿತಿಗೆ ಈ “ಸ್ವೇಚ್ಛಾಚಾರದ ಹತ್ಯಾಕಾಂಡದ” ಬಗ್ಗೆ ಯಾವ ಸುಳಿವೂ ಸಿಗಲಿಲ್ಲ! ಕೊಲೊನೆಲ್ ಗಿಲೆಸ್ಪಿ ತನ್ನ 

ಡ್ರಾಗನ್ ರೆಜಿಮೆಂಟಿನೊಂದಿಗೆ ಹಲವರನ್ನು ಕೊಂದ ಎಂದು ಮಾರ್ಕ್ಸ್ ಹೇಳುತ್ತಾನೆ, ವೆಲ್ಲೂರನ್ನು ವಶಪಡಿಸಿಕೊಳ್ಳುವಾಗ, ಗವರ್ನರ್ ಜೆನರಲ್ ಮಿಂಟೋ, ಬಂಡಾಯವೆದ್ದವರಿಗೆ “ಕುಲೀನ” ಉಪಚಾರ ನೀಡುತ್ತಾನೆ. ಒಬ್ಬ ಪರಿಪೂರ್ಣ ಸಭ್ಯಸ್ಥನಂತೆ, ಆತ ಹಲವಾರು ಜನರನ್ನು ಸಾವಿನ ಮನೆಗೆ ಕಳುಹಿಸಿರಬೇಕು. (18) 

ಹಾಗಿದ್ದರೂ, ಬ್ರಿಟೀಷರು ನಡೆಸಿದ ಹತ್ಯಾಕಾಂಡವನ್ನು ಮೌನದಿಂದ ನೋಡುತ್ತಾ ಕೂರಲಿಲ್ಲ. ಬ್ರಿಟೀಷರು ನಡೆಸಿದ ಮನುಷ್ಯಹರಣವನ್ನು ಸಮರ್ಥಿಸುವ ಅನೇಕಾನೇಕ ವಸಾಹತುಶಾಹಿ ನೆಲೆಯ ಬರಹಗಳಿವೆ. ಇಲ್ಲೊಂದು ಗಿಲೆಸ್ಪಿಯ ಕಾರ್ಯಗಳನ್ನು ವಿವರಿಸುವ ಬರಹವಿದೆ: “ಹತ್ತೊಂಬತ್ತನೆಯ ಹಾಗೂ ಮದ್ರಾಸಿನ ಸೈನ್ಯ ತನ್ನ ಹಾದಿಗೆ ಅಡ್ಡ ಬಂದ ಪ್ರತಿಯೊಬ್ಬರ ಮೇಲೂ ದಾಳಿ ನಡೆಸಿ ಕೊಂದು ಹಾಕಿತು. ಅಸಹಾಯಕ ಯುರೋಪಿಯನ್ನಿನ ರೋಗಿಗಳನ್ನೂ ಹತ್ಯೆ ಮಾಡಿದ್ದು ಬ್ರಿಟೀಷರಿಗೆ ಎಷ್ಟು ಕೋಪ ತರಿಸಿತ್ತೆಂದರೆ ಯಾವುದೇ ವಿಧದ ಕರುಣೆಯನ್ನೂ ಅವರು ತೋರಲಿಲ್ಲ; ಅರಮನೆಯಲ್ಲಿ ಆಸರೆ ಪಡೆದಿದ್ದ ನೂರು ಮಂದಿ ಸಿಪಾಯಿಗಳನ್ನು ಹೊರಗೆಳೆದು ತಂದು, ಗೋಡೆಗೊರಗಿ ನಿಲ್ಲಿಸಿ, ಎಲ್ಲರೂ ಸಾಯುವವರೆಗೂ ಗುಂಡಿನ ಮಳೆಗೆರೆಯಲಾಯಿತು. ಕೋಟೆಯ ದ್ವಾರಗಳನ್ನು ಒಡೆದು ಹಾಕುವ ಯೋಜನೆ ಹಾಕಿದ ಇಂಜಿನಿಯರ್ ಜಾನ್ ಬ್ಲಾಕಿಸ್ಟನ್ ಆ ದಿನಗಳನ್ನು ನೆನಪಿಸಿಕೊಳ್ಳುತ್ತ, ಈ ರೀತಿಯ ಶಿಕ್ಷೆ ಕೊಡುವುದು ನಾಗರೀಕ ಸಮಾಜದ ಎಲ್ಲಾ ನಂಬುಗೆಗಳಿಗೆ ವಿರುದ್ಧವಾದುದು, ‘ಈ ಭೀಬತ್ಸ ದೃಶ್ಯವನ್ನು ನಾನು, ಹೇಳಬೇಕೆಂದರೆ ತುಂಬಾ ಸಮಚಿತ್ತದಿಂದ ನೋಡುತ್ತಿದೆ. ಇದು ನ್ಯಾಯಕ್ಕಾಗಿ ನಡೆಯುತ್ತಿರುವ ಕೃತ್ಯ ಮತ್ತು ಎಲ್ಲಾ ಕೋನದಿಂದಲೂ ಇದು ಸರಿಯಾದುದು.’ ಭಾರತದಲ್ಲಿ ನಡೆಯುತ್ತಿದ್ದ ಯುದ್ಧದ ಗುಣಲಕ್ಷಣಗಳಿವು, ಇಲ್ಲಿ ಯುರೋಪಿನ ಯುದ್ಧದಲ್ಲಿನ ‘ನಾಗರೀಕ’ ನಡವಳಿಕೆಗಳನ್ನು ಅಳವಡಿಸಲಾಗುವುದಿಲ್ಲ.” (19) 

ಸೋಲಿಸಿದ ತಕ್ಷಣವೇ, ಬ್ರಿಟೀಷರು ಟಿಪ್ಪುವಿನ ಮಕ್ಕಳನ್ನು ಕಲ್ಕತ್ತಾಗೆ ಕಳುಹಿಸಿದರು. ಬ್ರಿಟೀಷ್ ಅಧಿಕಾರದ ಶಕ್ತಿ ಕೇಂದ್ರವಾಗಿತ್ತು ಕಲ್ಕತ್ತ. ಬ್ರಿಟೀಷರ ಅಭಿಪ್ರಾಯದಲ್ಲಿ, ಟಿಪ್ಪುವಿನ ಮಕ್ಕಳು ಮೈಸೂರಿಗೆ ಹತ್ತಿರವಿದ್ದಷ್ಟೂ ಜನಸಮೂಹವನ್ನು ಕಲುಷಿತಗೊಳಿಸಿ ವಸಾಹತುಶಾಹಿಯ ವಿರುದ್ಧದ ಹೋರಾಟಕ್ಕೆ ಸ್ಫೂರ್ತಿ ತುಂಬುತ್ತಾರೆ. 

ವೆಲ್ಲೂರು ಬಂಡಾಯದ ಗಂಭೀರತೆ ಮತ್ತು ಬ್ರಿಟೀಷ್ ಆಳ್ವಿಕೆಯ ಭವಿಷ್ಯತ್ತಿನ ಮೇಲೆ ಅದು ಉಂಟು ಮಾಡಬಹುದಾದಂತಹ ಪರಿಣಾಮಗಳ ಬಗ್ಗೆ ಮದ್ರಾಸಿನ ಗವರ್ನರ್ ವಿಲಿಯಂ ಬೆಂಟಿಕ್, ಥಾಮಸ್ ಮನ್ರೋಗೆ ಆಗಷ್ಟ್ 1806ರಲ್ಲಿ ಒಂದು ರಹಸ್ಯ ಪತ್ರ ಬರೆಯುತ್ತಾನೆ: “ಟಿಪ್ಪು ಸುಲ್ತಾನನ ಮಕ್ಕಳ ಗುಪ್ತಚರರು ಮತ್ತು ಅನುಯಾಯಿಗಳು ಘಟ್ಟದ ಕೆಳಗೆ ಹೆಚ್ಚು ಕಾರ್ಯಪ್ರವೃತ್ತರಾಗಿದ್ದಾರೆ ಎಂದು ಅನುಮಾನವಿಲ್ಲದೇ ನಂಬಲು ನಮಗೆ ಎಲ್ಲಾ ಕಾರಣಗಳೂ ಇವೆ. ಅದೇ ರೀತಿಯ ಪಿತೂರಿಗಳನ್ನು ಘಟ್ಟದ ಮೇಲೂ ಕೈಗೊಳ್ಳುತ್ತಾರೆ ಎನ್ನಲಾಗಿದೆ. ಗುರ್ರಂಕೊಂಡದ ಪಾಳೇಗಾರರ ಮೇಲೆ ಯುವರಾಜರು ಹೆಚ್ಚಿನ ನಂಬುಗೆ ಇಟ್ಟಿದ್ದಾರೆ ಎನ್ನಲಾಗುತ್ತಿದೆ. ಅತೀವ ಜಾಗರೂಕತೆ ಮತ್ತು ಮುನ್ನೆಚ್ಚರಿಕೆಯನ್ನು ತೆಗೆದುಕೊಳ್ಳಬೇಕೆಂದು ನಾನು ನಿಮಗೆ ಶಿಫಾರಸು ಮಾಡುತ್ತಿದ್ದೇನೆ; ಮತ್ತು ಆ ರೀತಿಯ ಬಂಡಾಯದ ಯಾವುದೇ ಮುನ್ಸೂಚನೆ ಅಥವಾ ಚಿಹ್ನೆಗಳು ಕಂಡ ಕೂಡಲೇ, ನಿಮ್ಮ ಅನ್ನಿಸಿಕೆಯ ಪ್ರಕಾರ ಅವಶ್ಯವಿರುವ ಕ್ರಮಗಳನ್ನು ಯಾವುದೇ ಹಿಂಜರಿತವಿಲ್ಲದಂತೆ ತೆಗೆದುಕೊಳ್ಳಲು ಈ ಮೂಲಕ ನಿಮಗೆ ಅಧಿಕಾರ ನೀಡುತ್ತಿದ್ದೇನೆ. ಸ್ಥಳೀಯ ಪಡೆಗಳ ಮೇಲೆ ತುಂಬ ಹೆಚ್ಚಿನ ಅವಲಂಬನೆ ಬೇಡ ಎನ್ನುವುದು ನನ್ನ ಸಲಹೆ. ಈ ಸಂದರ್ಭದಲ್ಲಿ, ಸ್ಥಳೀಯ ಪಡೆಗಳು ಅವಶ್ಯಕತೆ ಬಿದ್ದಾಗ ಎಷ್ಟರ ಮಟ್ಟಿಗೆ ನಮ್ಮ ಪರವಾಗಿ ನಿಲ್ಲುತ್ತವೆ ಎಂದು ಹೇಳುವುದು ಅಸಾಧ್ಯ. ಸೈನಿಕರು ನಮ್ಮ ಬಗ್ಗೆ ಅಸಂತುಷ್ಟಗೊಂಡಿದ್ದಾರೆ, ಅಸಮಾಧಾನಗೊಂಡಿದ್ದಾರೆ ಮತ್ತು ಈ ಭಾವನೆಗಳ ಮೇಲೆ ಮುಸಲ್ಮಾನರ ಸರಕಾರವನ್ನು ಮರು ಸ್ಥಾಪಿಸುವ ಪ್ರಯತ್ನಗಳು ನಡೆಯುತ್ತಿವೆ, ಟಿಪ್ಪು ಸುಲ್ತಾನನ ಒಬ್ಬ ಮಗನ ನೇತೃತ್ವದಲ್ಲಿ: ಇದನ್ನು ನಮ್ಮರಿವಿಗೆ ಬರದಂತೆ ಮತ್ತು ತುಂಬಾ ಕಡಿಮೆ ಸಮಯದಲ್ಲಿ ಮಾಡುವುದು ಅಸಾಧ್ಯವೇ ಸರಿ. ಆದರೆ, ನನ್ನನ್ನು ನಂಬಿ, ಪಿತೂರಿಗಳು ನಮ್ಮೆಲ್ಲಾ ನಂಬಿಕೆಯನ್ನು ಮೀರಿ ನಡೆದಿದೆ ಮತ್ತು ದೂರದೂರಲ್ಲಿರುವ ಸೈನ್ಯವನ್ನೂ ತಲುಪಿಬಿಟ್ಟಿದೆ; ಮತ್ತು ಒಳಸಂಚುಗಳನ್ನು ಎಲ್ಲೆಡೆಯೂ ಯಶಸ್ವಿಯಾಗಿ ನಡೆಸಿದಂತೆ ಕಾಣುತ್ತದೆ. ವೆಲ್ಲೂರನ್ನು ಆಕ್ರಮಿಸಿದ್ದು ಮತ್ತು ಇತರೆ ಚಿಂತನಾ ಕ್ರಮಗಳನ್ನು ಜಾರಿಗೆ ತಂದು ಎಲ್ಲೆಡೆಯೂ ಕಣ್ಗಾವಲನ್ನು ಹೆಚ್ಚಿಸಿದರೆ, ನನ್ನ ನಂಬಿಕೆಯ ಪ್ರಕಾರ ದೊಡ್ಡ ಮಟ್ಟದ ಸ್ಪೋಟವನ್ನು ತಡೆಗಟ್ಟಬಹುದು”. (20) 

ಬೆಂಟಿಕ್ ಇದೇ ರೀತಿಯ ದಂಗೆಗಳನ್ನು ನಿರೀಕ್ಷಿಸುತ್ತಿದ್ದನಷ್ಟೇ ಅಲ್ಲ, ಜೊತೆಗೆ, ಪತ್ರದಲ್ಲಿ ಬ್ರಿಟೀಷ್ ಸೈನ್ಯದಲ್ಲಿದ್ದ ಭಾರತೀಯ ಸೈನಿಕರ ನಿಯತ್ತಿನ ಬಗ್ಗೆ ಅವನಲ್ಲಿದ್ದ ಸಂಪೂರ್ಣ ಅಪನಂಬಿಕೆ, ಆತ ಬಹುಶಃ ಮನ್ರೋನಂತಹ ಬ್ರಿಟೀಷ್ ಅಧಿಕಾರಿಗಳ ಸುರಕ್ಷತೆಯ ಬಗ್ಗೆ ಚಿಂತಿಸುತ್ತಿದ್ದ ಎನ್ನಿಸುತ್ತದೆ. ಆಗ ಲೆಫ್ಟಿನೆಂಟ್ ಕಲೋನಲ್ ಆಗಿದ್ದ ಥಾಮಸ್ ಮನ್ರೋ, ಸಂಪೂರ್ಣವಾಗಿ, ತನ್ನ ಚಿಕ್ಕ ಪುಟ್ಟ ವೈಯಕ್ತಿಕ ಕೆಲಸಕ್ಕೂ ಭಾರತೀಯ ಸೈನಿಕರ ಮೇಲೆಯೇ ಅವಲಂಬಿತನಾಗಿದ್ದ. 

ವೆಲ್ಲೂರಿನ ಬಂಡಾಯದ ಕಾರಣಗಳನ್ನು ಆಳವಾಗಿ ಗಮನಿಸಿ ಮತ್ತು ಇನ್ನೂ ನಿರ್ದಿಷ್ಟವಾಗಿ ಭಾರತದಲ್ಲಿನ ಬ್ರಿಟೀಷ್ ಸೈನ್ಯದ ಇರುವಿಕೆಯ ಬಗ್ಗೆ ಅಧ್ಯಯನ ನಡೆಸಿದ ಥಾಮಸ್ ಮನ್ರೋ, 1822ರಲ್ಲಿನ ಬರಹದಲ್ಲಿ, ಮದ್ರಾಸಿನಲ್ಲಿ ಬ್ರಿಟೀಷ್ ಪತ್ರಿಕೆಗಳಿಗೆ ಅನುಮತಿ ನೀಡುವ ಪ್ರಶ್ನೆ ಎದ್ದಾಗ, ಆ ಪ್ರಸ್ತಾಪವನ್ನು ತಿರಸ್ಕರಿಸುತ್ತಾನೆ, ಕಾರಣ ಈ ರೀತಿಯ ಅನುಮತಿಗಳು ಭಾರತದಲ್ಲಿನ ಸ್ಪೋಟಕ ಪರಿಸ್ಥಿತಿಗೆ ಕಿಡಿ ಹಚ್ಚುವ ಕೆಲಸ ಮಾಡಿ ಬ್ರಿಟೀಷರನ್ನು ಗಂಟುಮೂಟೆ ಕಟ್ಟಿಕೊಂಡು ಹೋಗುವಂತೆ ಮಾಡುತ್ತಿತ್ತು ಮತ್ತು ಮನ್ರೋನ ಅಂದಾಜಿನಂತೆ ಈ ಕಾರ್ಯದಲ್ಲಿ ಸೈನ್ಯದ ಬಹುಮುಖ್ಯ ಪಾತ್ರವಿರುತ್ತಿತ್ತು. ಬಹಳ ವಿಧದಲ್ಲಿ, ವೆಲ್ಲೂರಿನಲ್ಲಿ ನಡೆದ ಘಟನೆ 1857ರ ಬಂಡಾಯದ ಚಿಕ್ಕ ಪ್ರತಿಕೃತಿಯಂತಿತ್ತು ಮತ್ತು ಮನ್ರೋ, ವಸಾಹತು ಗುಂಪಿನ ದೊಡ್ಡ ಅಯೋಗ್ಯ, ಅದರ ವಾಸ್ತವವನ್ನು ಬಹು ಚೆನ್ನಾಗಿ ಗ್ರಹಿಸಿಬಿಟ್ಟಿದ್ದ. ಕೆ.ಎನ್.ವಿ. ಶಾಸ್ತ್ರಿ ಮತ್ತು ಇತರೆ ಬ್ರಿಟೀಷ್ ಎಸೆದ ಬ್ರೆಡ್ಡು ತಿಂದ ‘ಸ್ಥಳೀಯ’ ಇತಿಹಾಸಕಾರರು ಮನ್ರೋನನ್ನು “ಪ್ರಗತಿಪರ” ಎಂದು ಕರೆಯಲಿಚ್ಛಿಸುತ್ತಾರೆ. ಇದು ಪೈಶಾಚಿಕ ಪ್ರಭುತ್ವದ ಕಾರ್ಯಗಳನ್ನು ಮರೆಮಾಚುವ ‘ಸ್ಥಳೀಯ’ ಬಣ್ಣಗಳಷ್ಟೇ. ಮನ್ರೋ ಬ್ರಿಟೀಷ್ ಮಾಧ್ಯಮಕ್ಕೆ ಅನುಮತಿ ಕೊಡುವುದರಿಂದಾಗುವ ಪರಿಣಾಮಗಳ ಬಗ್ಗೆ ನೀಡಿರುವ ಈ ಕೆಳಗಿನ ಹೇಳಿಕೆ ಅಂತಹ ಇತಿಹಾಸಕಾರರಿಗೆ ಸರಿಯಾಗಿ ಕಪಾಳ ಮೋಕ್ಷ ಮಾಡುತ್ತದೆ. ಇಂಗ್ಲೆಂಡಿನ ಮಧ್ಯಮವರ್ಗೀಯ ಪ್ರಜಾಪ್ರಭುತ್ವ ಕ್ರಾಂತಿ ನೀಡಿದ ರಾಜಕೀಯ ಕೊಡುಗೆಗಳನ್ನೊಂದನ್ನು ಮನ್ರೋ ಬಿಟ್ಟುಬಿಟ್ಟಿದ್ದು ಬಣ್ಣದ ಖಂಡದಲ್ಲಿ ಬಿಳಿ ಜನರ ನಾಗರೀಕತೆಯನ್ನು ಮುಂದೊಯ್ಯುವುದಕ್ಕಾಗಿ. ಥಾಮಸ್ ಮನ್ರೋ ಒಬ್ಬ ನಾಜೂಕಾಗಿ ಬೆಳೆದ ಪಟ್ಟುಬಿಡದ ವಸಾಹತುಶಾಹಿಯಾಗಿದ್ದ, ಯಾವುದೇ ಸಂಕೋಚವಿಲ್ಲದೆ. ಅವನು ಬರೆಯುತ್ತಾನೆ: “ನಮ್ಮ ಬಗ್ಗೆ ಸ್ಥಳೀಯರಿಗಿರುವ ಉನ್ನತಾಭಿಪ್ರಾಯಗಳು ಮತ್ತು ನಮ್ಮಧಿಕಾರದ ಬಗ್ಗೆ ಅವರು ಕೊಡುವ ಮಾನ್ಯತೆ ಹಾಗೂ ಗೌರವ, ಇದುವರೆಗೆ ಇದು ನಮ್ಮೊಳಗಷ್ಟೇ ಇತ್ತು, ಈ ದೇಶದೊಳಗೆ ನಾವು ಯಶಸ್ಸು ಕಂಡಿರುವುದಕ್ಕೆ ಪ್ರಮುಖ ಕಾರಣ; ಆದರೆ ಈ ತತ್ವಗಳಾಧಾರ ಅಲುಗಲಾರಂಭಿಸಿದರೆ ಅಥವಾ ಮುಕ್ತ ಮಾಧ್ಯಮದ ಮೂಲಕ ಕೊಚ್ಚಿ ಹೋದರೆ, ನಮ್ಮ ಜ್ಯೂರಿಗಳ ಪ್ರೋತ್ಸಾಹದಿಂದ ವಿಷಯಲಂಪಟತನವಾಗಿಬಿಟ್ಟರೆ, ಬದಲಾವಣೆ ಅತಿ ವೇಗದಲ್ಲಿ ಇಡೀ ಸ್ಥಳೀಯ ಸೈನ್ಯಕ್ಕೆ ತಲುಪಿಬಿಡುತ್ತದೆ. ಸ್ಥಳೀಯ ಸೈನ್ಯ ಪಡೆಗಳಷ್ಟೇ ಯುರೋಪಿಯನ್ನರ ಜೊತೆಗೆ ಯಾವಾಗಲೂ ಬೆರೆತು ಇರುವುದು, ಮತ್ತು ಅವರ ಬಗ್ಗೆ ಪತ್ರಿಕೆಗಳಲ್ಲಿ ಬಂದ ವಿಷಯಗಳನ್ನು, ಸಿದ್ಧಾಂತಗಳನ್ನು ಮೊದಲು ಅವರೇ ತಿಳಿದುಕೊಂಡುಬಿಡುತ್ತಾರೆ; ಯಾಕೆಂದರೆ ಈ ವಿಷಯ – ಸಿದ್ಧಾಂತಗಳು, ಯುರೋಪಿಯನ್ ಅಧಿಕಾರಿಗಳ ಚರ್ಚೆಯ ವಿಷಯವಾಗಿರುತ್ತದೆ, ಸ್ಥಳೀಯ ಅಧಿಕಾರಿಗಳಿಗೆ ಮತ್ತು ಸೈನಿಕ ಪಡೆಗಳಿಗೆ ಈ ವಿಷಯಗಳು ತಿಳಿಯುವುದಕ್ಕೆ ಹೆಚ್ಚೇನು ಸಮಯ ಬೇಕಾಗುವುದಿಲ್ಲ. ಆ ಜನರು ಬಹುಶಃ ಹಾನಿಯ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಲಾರರು, ಜನರ ಹಕ್ಕುಗಳ ಬಗ್ಗೆಯಾಗಲೀ, ಸರಕಾರ ರಚಿಸುವುದರ ಬಗ್ಗೆಯಾಗಲೀ ಜಾಸ್ತಿ ಯೋಚಿಸಲಾರರು, ಆದರೆ ತಮಗೆ ತತ್ ಕ್ಷಣಕ್ಕೆ ಸಂಬಂಧಪಟ್ಟ ಸಂಗತಿಗಳು ಯಾವುವು ಎನ್ನುವುದನ್ನು ತಾವು ಕೇಳುವುದರ ಮೂಲಕ ಅರಿತುಕೊಂಡುಬಿಡುತ್ತಾರೆ, ಮತ್ತು ಇದಕ್ಕೆ ಅವರಿಗೆ ಚೂರೇ ಚೂರು ಪ್ರೇರೇಪಣೆ ಸಾಕು. ತಮಗೆ ಸಿಗುತ್ತಿರುವ ಕಡಿಮೆ ಸಂಬಳ ಮತ್ತು ಕೆಳ ದರ್ಜೆಯನ್ನು ಯುರೋಪಿಯನ್ ಅಧಿಕಾರಿಗಳಿಗೆ ಹೋಲಿಸಿ ನೋಡುವುದನ್ನವರು ಕಲಿತುಕೊಳ್ಳುತ್ತಾರೆ, - ಯಾವ ಆಧಾರದ ಮೇಲೆ ಈ ವಿಸ್ತಾರದ ವ್ಯತ್ಸಾಸವಿದೆ ಎಂದು ಪರೀಕ್ಷಿಸುತ್ತಾರೆ – ತಮ್ಮದೇ ಶಕ್ತಿಯನ್ನು ಮತ್ತು ಸಂಪನ್ಮೂಲವನ್ನು ಪರೀಕ್ಷಿಸುತ್ತಾರೆ, ವಿದೇಶಿ ನೊಗವನ್ನು ಅಲುಗಾಡಿಸುವುದು ತಮ್ಮ ಕರ್ತವ್ಯವೆಂದು ನಂಬುತ್ತಾರೆ ಮತ್ತು ತಮ್ಮ ದೇಶದ ಗೌರವ ಹಾಗೂ ಘನತೆಯನ್ನು ರಕ್ಷಿಸುವ ಸಲುವಾಗಿ ತಯಾರಾಗುತ್ತಾರೆ. ಮಾಧ್ಯಮ ಮುಕ್ತವಾಗಿಬಿಟ್ಟರೆ, ಅವರು ಅತಿ ಶೀಘ್ರವಾಗಿ ಇವೆಲ್ಲಕ್ಕೂ ಮತ್ತು ಇನ್ನೂ ಹೆಚ್ಚಿನದಕ್ಕೆ ಹಾನಿಯುಂಟು ಮಾಡಬೇಕಾಗುತ್ತದೆ. ಶಸ್ತ್ರಗಾರಗಳಲ್ಲಿ ಮತ್ತು ದಂಡು ಪ್ರದೇಶಗಳಲ್ಲಿ ಅವರು ಜೊತೆ ಸೇರುವುದು ಅವರ ಕೆಲಸವನ್ನು ಸಲೀಸು ಮಾಡಿಬಿಡುತ್ತದೆ; ತಮ್ಮನ್ನು ಮುನ್ನಡೆಸಬಲ್ಲ ಯೋಗ್ಯ ನಾಯಕರಾರು ಎನ್ನುವುದನ್ನು ತಿಳಿಯುವುದು ಅವರಿಗೆ ಅಂತ ಕಷ್ಟದ ಕೆಲಸವೇನಲ್ಲ; ಅವರ ಸಹನೆ, ಅವರ ಶಿಸ್ತಿನ ಅಭ್ಯಾಸ ಮತ್ತು ಯುದ್ಧದಲ್ಲಿ ಅವರ ಅನುಭವಗಳೆಲ್ಲವೂ ಅವರಿಗೆ ಯಶ ತಂದು ಕೊಡುವ ಎಲ್ಲಾ ಸಾಧ್ಯತೆಗಳಿವೆ; ಅಧಿಕಾರ ಮತ್ತು ಸ್ವಾತಂತ್ರ್ಯದೆಡೆಗಿನ ಪ್ರೀತಿ ಅವರನ್ನು ಉತ್ತೇಜಿಸುತ್ತದೆ, ಹಾಗೂ ಹಣದಾಸೆ ಮತ್ತು ಮಹತ್ವಾಕಾಂಕ್ಷೆಗಳು ಅವರ ಯೋಜನೆಗಳನ್ನು ಕಾರ್ಯರೂಪಕ್ಕೆ ತರುವಂತೆ ಮಾಡುತ್ತದೆ. ಈ ಪ್ರಯತ್ನಗಳು ಅಪಾಯಕಾರಿ ಎಂಬ ಬಗ್ಗೆ ಅನುಮಾನ ಬೇಡ; ಆದರೆ ಶ್ರೀಮಂತ ರಾಜ್ಯದ ಸಂಬಂಧವಾಗಿ ನಡೆಯುತ್ತಿರುವ ಸ್ಪರ್ಧೆಯಾದ್ದರಿಂದ ಆ ಅಪಾಯಗಳು ಅವರನ್ನು ಹಿಮ್ಮೆಟ್ಟಿಸಲಾರದು. ಅವರು ತಮ್ಮ ಮೊದಲ ಯತ್ನಗಳಲ್ಲಿ ವಿಫಲವಾಗಬಹುದು, ಆದರೆ ಅವರ ವಿಫಲತೆಯೂ ಸಹಿತ, ಕೇಂದ್ರ ಸರಕಾರವಾದ ನಮ್ಮ ಅಧಿಕಾರದ ಬುಡವನ್ನೇ ಅಲುಗಾಡಿಸಿಬಿಡುತ್ತದೆ. ಸೈನ್ಯದಲ್ಲಿನ ಅವಿಧೇಯತೆ ತಾತ್ಕಾಲಿಕ ಕಾರಣಕ್ಕಾಗಿ ಆಗಿದ್ದರೆ ಅದನ್ನು ನಿವಾರಿಸಿಬಿಡಬಹುದು, ಆದರೆ ಸೈನಿಕ ಪಡೆಯಲ್ಲಿನ ಗುಣ – ವ್ಯಕ್ತಿತ್ವದಲ್ಲಾಗುವ ಬದಲಾವಣೆಯಿಂದ ಮೂಡುವ ಅವಿಧೇಯತೆ, ವ್ಯವಸ್ಥಿತ ರೀತಿಯಲ್ಲಿ ವಿರೋಧಿಸುವ ಗುಣ ಮೂಡಿಸುತ್ತದೆ, ಅದನ್ನು ಹತ್ತಿಕ್ಕಲಾಗುವುದಿಲ್ಲ, ನಮ್ಮ ವರ್ತಮಾನದ ಏಳ್ಗೆಯನ್ನು ನಾವು ಮತ್ಯಾವತ್ತೂ ಮರಳಿ ಪಡೆಯಲಾಗುವುದಿಲ್ಲ; ಅವರು ನಮ್ಮ ಮೇಲಿಟ್ಟಿರುವ ಎಲ್ಲಾ ನಂಬಿಕೆಗಳೂ ನಾಶವಾಗಿಬಿಡುತ್ತದೆ; ಕೊನೆಗೊಮ್ಮೆ ಯಶಸ್ಸು ಸಿಗುವವರೆಗೂ ಅವರು ಪಟ್ಟು ಸಡಿಲಿಸದೆ ತಮ್ಮ ಕಾರ್ಯಗಳನ್ನು ಮಾಡಬಹುದು; ಮತ್ತು ಒಂದು ರಕ್ತಪಿಪಾಸು ಅಂತರ್ಯುದ್ಧದ ನಂತರ, ಅಥವಾ ಸಾಲು ಸಾಲು ಬಂಡಾಯ ಮತ್ತು ಸಾಮೂಹಿಕ ಹತ್ಯೆಯ ನಂತರ, ನಾವು ದೇಶವನ್ನು ಬಿಡಬೇಕಾದ ಪರಿಸ್ಥಿತಿ ಬರಬಹುದು”. (21) 

ಇದು ಖಂಡಿತವಾಗಿ 1857ರ ಪೂರ್ವ ನಿರೀಕ್ಷಣೆ, 1806ರಲ್ಲಿ ವೆಲ್ಲೂರಿನಲ್ಲಿ ನಡೆದಿದ್ದು ಅದರ ಪ್ರಾರಂಭವಷ್ಟೇ. ಮಾವೋ ಹೇಳುತ್ತಾರೆ: “ಎಲ್ಲಾ ಸಾಮ್ರಾಜ್ಯವಾದಿಗಳೂ ಕಾಗದದ ಮೇಲಿನ ಹುಲಿಗಳು”. “ಯುದ್ಧ” ಅಥವಾ “ಸಾಲು ಸಾಲು ಬಂಡಾಯಗಳು” ವಸಾಹತುಶಾಹಿಯನ್ನು ಗುರಿ ಮಾಡಿಕೊಂಡಾಗ ಬ್ರಿಟೀಷರು ಭಾರತವನ್ನು ಆಳಲು ಸಾಧ್ಯವೇ ಇಲ್ಲ, ಈ ನೆಲದಿಂದ ವಿದೇಶಿಗರು ಕೊನೆಗೆ ಹೊರಗೋಗಲೇ ಬೇಕಾಗುತ್ತದೆ ಎಂದು ಮಾನ್ಯತೆ ಪಡೆದ ವಸಾಹತುಶಾಹಿ ಥಾಮಸ್ ಮನ್ರೋನಂತವರೇ ಒಪ್ಪಿಕೊಳ್ಳುವುದು ಮಾವೋನ ಅಭಿಪ್ರಾಯವನ್ನು ಧೃಡೀಕರಿಸುತ್ತದೆ.

ಮುಂದಿನ ವಾರ:
ಊಳಿಗಮಾನ್ಯ ದೊರೆಗಳು ಮುನ್ನಡೆಸಿದ ಸಶಸ್ತ್ರ ಹೋರಾಟ

ಸೆಪ್ಟೆಂ 1, 2016

ಗೋಹತ್ಯೆ – ಒಂದು ಪರಾಮರ್ಶೆ: ಭಾಗ 2.

ನಾಗೇಶ್ ಹೆಗಡೆ.
01/09/2016
ಗೋಹತ್ಯೆ – ಒಂದು ಪರಾಮರ್ಶೆ: ಭಾಗ 1 ಓದಲು ಇಲ್ಲಿ ಕ್ಲಿಕ್ಕಿಸಿ
ಆದರೂ ಬುದ್ಧ – ಗಾಂಧೀಜಿಯವರಂಥ ಅಹಿಂಸಾವಾದಿಗಳ ನಾಡಿನಲ್ಲಿ ಗೋವಧೆ ಸರಿಯಲ್ಲ ತಾನೆ?
ಎಲ್ಲಿದ್ದೀರಿ? ಬುದ್ಧನ ಅನುಯಾಯಿಗಳು ಬಿಡುಬೀಸಾಗಿ ಗೋಮಾಂಸ ಭಕ್ಷಣೆ ಮಾಡುತ್ತಾರೆ! ಥಾಯ್ಲೆಂಡ್, ಜಪಾನ್, ಕೊರಿಯಾಗಳಲ್ಲಷ್ಟೇ ಅಲ್ಲ, ನಮ್ಮ ನಾಡಿನಲ್ಲೇ ಇರುವ ಟಿಬೆಟನ್ ಜನರು ನಿತ್ಯ ಊಟದಲ್ಲಿ ಗೋಮಾಂಸ ಬಳಸುತ್ತಾರೆ. ಅವರು ಗೋವುಗಳನ್ನು ಪ್ರೀತಿಯಿಂದಲೇ ಸಾಕುತ್ತಾರೆ ಕೂಡ. ಮಹಾತ್ಮಾ ಗಾಂಧಿಯವರು ಮಾಂಸಾಹಾರ ಸೇವನೆ ಮಾಡುತ್ತಿರಲಿಲ್ಲ. ಆದರೆ ಎಂದೂ ಅವರು ಇತರ ಧರ್ಮೀಯರ ಮೇಲೆ ತಮ್ಮ ಕಟ್ಟುಪಾಡುಗಳನ್ನು ಹೇರುತ್ತಿರಲಿಲ್ಲ.

ಇನ್ನು ಹಿಂಸೆಯ ಪ್ರಶ್ನೆ ಬಂದಾಗ, ನಾವು ತುಸು ಕಣ್ತೆರೆದು ವಾಸ್ತವದ, ಅಂದರೆ ನೈಸರ್ಗಿಕ ಜಗತ್ತನ್ನು ನೋಡಬೇಕಾಗುತ್ತದೆ. ಒಂದು ಜೀವಿ ಇನ್ನೊಂದಕ್ಕೆ ಆಹಾರವಾಗಿರುವುದೇ ನಿಸರ್ಗದ ಮೂಲಧರ್ಮ. ಅಲ್ಲಿ ಹಿಂಸೆ ಅಥವಾ ಅಹಿಂಸೆ ಎಂಬ ಪದಗಳೇ ಇಲ್ಲ. ಹಲ್ಲು, ಉಗುರು, ವಿಷ, ಉರುಳು ಎಲ್ಲವೂ ಅಲ್ಲಿವೆ. ಊಜಿನೊಣವೊಂದು ರೇಷ್ಮೆಹುಳದ ಬೆನ್ನಮೇಲೆ ರಂಧ್ರ ಮಾಡಿ ಮೊಟ್ಟೆ ಇಟ್ಟು ಹೋಗುತ್ತದೆ. ಊಜಿಮೊಟ್ಟೆಯಿಂದ ಹೊರಬಿದ್ದ ಲಾರ್ವಾ ಹುಳ ಮೆಲ್ಲಗೆ ರೇಷ್ಮೆಹುಳುವಿನ ಬೆನ್ನನ್ನು, ನಂತರ ಹೊಟ್ಟೆಯನ್ನು, ಭುಜವನ್ನು ಹಂತಹಂತವಾಗಿ ಮೂರು ದಿನಗಳವರೆಗೆ ತಿನ್ನುತ್ತ, ಅದುವರೆಗೂ ತನ್ನ ಬಲಿಯನ್ನು ಜೀವಂತ ಇಟ್ಟು ಕೊನೆಗೆ ತಿನ್ನಲು ಇನ್ನೇನೂ ಉಳಿದಿಲ್ಲ ಎನ್ನುವಾಗ ರೇಷ್ಮೆಹುಳದ ಹೃದಯ, ಶ್ವಾಸಕೋಶ ಮತ್ತು ಮಿದುಳನ್ನು ತಿಂದು ಮುಗಿಸುತ್ತದೆ. ಅಲ್ಲಿ ಕರುಣೆ, ದಯೆ ಎಂಬ ಪದಗಳೂ ಇಲ್ಲ. ಇದ್ದಿದ್ದರೆ ಮೊದಲ ದಿನವೇ ಮಿದುಳನ್ನು ತಿಂದು, ರೇಷ್ಮೆ ಹುಳಕ್ಕೆ ನೋವೇ ಗೊತ್ತಾಗದಂತೆ ಅದನ್ನು ಪ್ರಜ್ಞಾಶೂನ್ಯ ಮಾಡಿ ನಂತರವೇ ಊಜಿಲಾರ್ವಾ ತನ್ನ ಊಟವನ್ನು ಮುಂದುವರಿಸಬಹುದಿತ್ತು. ‘ಬೆಕ್ಕು ಇಲಿಯನ್ನು ಅತ್ತ ಇತ್ತ ತಿರುಗಿಸಿ ಗೋಳಾಡಿಸಿದಂತೆ ಅನ್ನಿಸಿದರ ಇಲಿಗೆ ನೋವಿನ ಅನುಭವ ಆಗುವುದಿಲ್ಲ’ ಎಂದು ಹೆಸರಾಂತ ವೈದ್ಯ – ಚಿಂತಕ ಡಾ. ಲೀವಿಸ್ ಥಾಮಸ್ ಹೇಳುತ್ತಾರೆ. ಅದಕ್ಕೆ ಕಾರಣವನ್ನು ಕೊಡುತ್ತಾರೆ: ನೋವಿನ ಅನುಭವ ಮಿದುಳಿಗೆ ಏಕೆ ರವಾನೆ ಆಗುತ್ತದೆಂದರೆ ಶರೀರವನ್ನು ಬಚಾವು ಮಾಡಲಿಕ್ಕೆ ಮಾತ್ರ. ಶರೀರಕ್ಕೆ ಪೆಟ್ಟು ಬಿದ್ದರೆ ಓಡಬೇಕು, ಇಲ್ಲವೆ ಎದುರಾಳಿಯ ಜತೆ ಹೋರಾಡಿ ಆತನನ್ನು ಓಡಿಸಬೇಕು. ಅಂತೂ ಬಚಾವಾಗಬೇಕು. ಓಟ ಇಲ್ಲವೇ ಹೋರಾಟ ಎರಡೂ ಸಾಧ್ಯವಿಲ್ಲ ಎಂಬಂಥ ‘ಶರಣಾಗತ’ ಸ್ಥಿತಿಗೆ ತಲುಪಿದಾಗ ಇಲಿಯ ಮಿದುಳಿಗೆ ನೋವನ್ನು ರವಾನಿಸುವ ರಸಸಂಜ್ಞೆ ಸ್ವಿಚಾಫ್ ಆಗುತ್ತದೆ. ಏಕೆಂದರೆ ಚಿತ್ರಹಿಂಸೆ ಅನುಭವಿಸುವುದರಿಂದ ಜೀವಿಗೆ ಯಾವ ಲಾಭವೂ ಇಲ್ಲ. ಪುರುಷಾರ್ಥವೂ ಇಲ್ಲ. ಹಾಗಾಗಿ ಅಲ್ಲಿ ನೋವಿನ ಪ್ರಶ್ನೆ ಬರುವುದೇ ಇಲ್ಲ.

ಆದರೆ ಹಸುವನ್ನು ಹಿಂಸಿಸಿದಾಗ ನಮ್ಮ ಮನಸ್ಸಿಗೇ ನೋವಾಗುತ್ತದಲ್ಲ?
ಒಪ್ಪೋಣ. ಹಿಂಸೆ ಕೊಡಬಾರದು. ಸಾಕುಪ್ರಾಣಿಗಳಿಗೆ ಛಡಿ ಏಟು ಕೊಡುವುದು, ಬರೆ ಹಾಕುವುದು, ನೊಗ ಹೊತ್ತು ಹುಣ್ಣಾದ ಹೆಗಲಿಗೇ ಮತ್ತೆ ನೊಗ ಹೇರುವುದು..... ಹೀಗೆ ನಿಸರ್ಗದಲ್ಲಿ ಇಲ್ಲದಂಥ ಚಿತ್ರಹಿಂಸೆಗಳನ್ನು ನಾವು ಕೊಡುತ್ತೇವೆ. ಮನುಷ್ಯಪ್ರಾಣಿಯನ್ನು ಯಾರಾದರೂ ಕಟ್ಟಿ ಹಾಕಿ ಈ ರೀತಿ ಹಿಂಸೆ ಕೊಟ್ಟರೆ ಆತ, ‘ನನ್ನನ್ನು ಕೊಂದುಬಿಡ್ರಪ್ಪಾ’ ಎಂದು ಬೇಡಿಕೊಳ್ಳಬಹುದು. ರಾಸುಗಳಿಗೆ ನಾವು ಅಂಥ ಮುಕ್ತಿಯನ್ನೂ ಕೊಡುವುದಿಲ್ಲ. ಇನ್ನು ಕರುವಿಗೆ ಹಾಲೂಡಿಸುತ್ತಿರುವಾಗ ತಾಯಿಯಿಂದ ಕರುವನ್ನು ಹಿಂದಕ್ಕೆಳೆದು ಗೂಟಕ್ಕೆ ಕಟ್ಟಿ, ನಮ್ಮ ಸ್ವಾರ್ಥಕ್ಕಾಗಿ ನಾವು ಹಾಲು ಹಿಂಡಲು ತೊಡಗಿದರೆ ಅದೂ ಮಾನಸಿಕ ಹಿಂಸೆಯ ಕೃತ್ಯವೇ ಆಗುತ್ತದೆ. ಹೋರಿ ಕರು ಹುಟ್ಟಿದರೆ ಅದನ್ನೂ ಎಳೆಗರುವಾಗಿದ್ದಾಗಲೇ ತಾಯಿಯಿಂದ ಶಾಶ್ವತವಾಗಿ ಬೇರ್ಪಡಿಸಿ ದೂರ ಸಾಗಿಸುವುದೂ ಕ್ರೌರ್ಯವೇ ಆಗುತ್ತದೆ. ಅಷ್ಟೇಕೆ, ಕೆಲವು ಗೋಪ್ರೇಮಿಗಳು ವಾರಕ್ಕೊಮ್ಮೆ ಗೋಶಾಲೆಗಳಿಗೆ ಹೋಗಿ ಪ್ರೀತಿಯಿಂದಲೇ ಅವಕ್ಕೆ ತುಪ್ಪದಲ್ಲಿ ತಯಾರಿಸಿ ಲಡ್ಡೂ, ಒಬ್ಬಟ್ಟು ತಿನ್ನಿಸಿ ಅವು ಗ್ಯಾಸ್ ಟ್ರಬಲ್, ಹೊಟ್ಟೆನೋವಿನಿಂದ ಸಂಕಟಪಟ್ಟು ಒದ್ದಾಡುವ, ಸಾಯುವ ಉದಾಹರಣೆಗಳೂ ಇವೆ. ಆದರೆ ನಾವು ಅವನ್ನೆಲ್ಲ ಒಪ್ಪಿಕೊಂಡಿದ್ದೇವೆ. ಹೀಗೆ, ‘ಬದುಕಿರುವಾಗ ಹಿಂಸೆ ಕೊಟ್ಟು ಕೊಟ್ಟು ಜೀವಂತ ಇಟ್ಟಿರುವುದು ಸರಿ, ಆದರೆ ಸಾವಿನ ಮುಂಚಿನ ಕ್ಷಣಗಳಲ್ಲಿ ಹಿಂಸೆ ಮಾತ್ರ ಬೇಡ’ ಎನ್ನುವುದು ಅದೆಷ್ಟು ಸರಿ? ಅಥವಾ, ‘ಆಡು – ಕುರಿ – ಹಂದಿ – ಕೋಳಿಗಳನ್ನು ಕೊಂದರೆ ಸರಿ, ದನಗಳನ್ನು ಮಾತ್ರ ಕೊಲ್ಲುವುದು ಸಲ್ಲ’ ಎಂದು ವಾದಿಸುವುದೂ ಅದೆಷ್ಟು ತಾರ್ಕಿಕ? ಗೋವಿನ ಶರೀರದಲ್ಲಿ 33 ಕೋಟಿ ದೇವತೆಗಳಿರುವುದೇ ನಿಜವಾದರೆ ಮೇಕೆಯ ಶರೀರದಲ್ಲಿ 22 ಕೋಟಿಯಾದರೂ ಇರಬಹುದಲ್ಲ? ದೊಡ್ಡ ಜೀವಿಗಳಿಗೆ ಮಾತ್ರ ನೋವಿನ ಸಂವೇದನೆ ಇರುತ್ತದೆ ಎಂದು ಹೇಳಲು ಯಾವ ಆಧಾರ ಇದೆ? ಇಷ್ಟಕ್ಕೂ ಆಧುನಿಕ ಕಸಾಯಿಖಾನೆಗಳಲ್ಲಿ ದನದ ಕೆನ್ನೆಗಳಿಗೆ ವಿದ್ಯುತ್ ದಂಡವನ್ನು ಒತ್ತಿ ಆಘಾತ ಕೊಟ್ಟು ಪ್ರಜ್ಞೆ ತಪ್ಪಿಸಿ ಕೊಲ್ಲುವ ವ್ಯವಸ್ಥೆ ಇದೆ. ಧಾರ್ಮಿಕ ನಂಬುಗೆಗಳಿಗೆ ಅಡ್ಡಗಾಲು ಹಾಕದಂತೆ ನೋಡಿಕೊಂಡು, ಸಾಧ್ಯವಿದ್ದಲ್ಲೆಲ್ಲ ಹಿಂಸೆಯನ್ನು ಸಾಧ್ಯವಿದ್ದಷ್ಟೂ ಕಡಿಮೆ ಮಾಡಬಲ್ಲ ವ್ಯವಸ್ಥೆ ಎಲ್ಲೆಡೆ ಜಾರಿಗ ಬರಲೆಂದು ಒತ್ತಾಯಿಸೋಣ. ಸುಧಾರಿತ ದೇಶಗಳಲ್ಲಿ ದೃಶ್ಯಮಾಲಿನ್ಯವನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಅದು ನಮ್ಮಲ್ಲೂ ಜಾರಿಗೆ ಬರಬೇಕೆಂದು ಒತ್ತಾಯಿಸೋಣ. ಬೀದಿಯ ಕೊಳಕು ಸಂದುಗೊಂದುಗಳಲ್ಲಿ ಎಲ್ಲರಿಗೂ ಕಾಣುವಂತೆ ಪ್ರಾಣಿವಧೆ ಮಾಡಕೂಡದು. ಕತ್ತರಿಸಿದ ರುಂಡ ಮುಂಡ ಕಾಲು ಗೊರಸುಗಳನ್ನು (ಅದು ಕುರಿ – ಮೇಕೆಗಳದ್ದಾದರೂ) ಬೀದಿಬದಿಯಲ್ಲಿ ಇಲ್ಲವ ಅಂಗಡ ಮುಂಗಟ್ಟುಗಳಲ್ಲಿ ಪ್ರದರ್ಶಿಸಬಾರದು ಎಂದು ಒತ್ತಾಯಿಸೋಣ. ಕಂತೆಕಂತೆ ತರಕಾರಿಯ ಹಾಗೆ ಕೋಳಿಗಳನ್ನು ತಲೆಕೆಳಗಾಗಿ ತೂಗಾಡಿಸುತ್ತ ದ್ವಿಚಕ್ರ ವಾಹನಗಳಲ್ಲಿ ಬಹಿರಂಗವಾಗಿ ಸಾಗಿಸುವುದನ್ನು ನಿಷೇಧಿಸಬೇಕೆಂದು ಒತ್ತಾಯಿಸೋಣ. ಅಂಥ ಅನಾಗರಿಕ ಕೃತ್ಯಗಳ ನಡೆಯಕೂಡದು.

ತಥಾಕಥಿತ ಸುಧಾರಿತ ದೇಶಗಳಲ್ಲಿ ಬಹುಪಾಲು ಧಾನ್ಯವೆಲ್ಲ ಪಶು ಆಹಾರಕ್ಕೆಂದೇ ಬಳಕೆಯಾಗುತ್ತದೆ. ಜನರು ಕಾಳುಕಡಿ ತಿನ್ನುವ ಬದಲು ಮಾಂಸವನ್ನೇ ತಿನ್ನುತ್ತಾರೆ. ಒಂದು ಕಿಲೊ ಮಾಂಸ ಬೆಳೆಸಲು 150 ಕಿಲೋ ಧಾನ್ಯವನ್ನು ವ್ಯಯಿಸಬೇಕಾಗುತ್ತದೆ. ನಮ್ಮಲ್ಲೂ ಅದೇ ಸಂಸ್ಕೃತಿ ರೂಢಿಗೆ ಬಂದರೆ ಧಾನ್ಯದ ಅಭಾವ ತಲೆದೋರೀತಲ್ಲವೆ? ಭಾರತದ ಕೃಷಿಭೂಮಿಗೆ ಅಷ್ಟೊಂದು ಧಾರಣ ಸಾಮರ್ಥ್ಯ ಇದೆಯೆ?
ನಮ್ಮ ಚರ್ಚೆ ಈಗ ಆರ್ಥಿಕ ರಂಗದತ್ತ ತಿರುಗುತ್ತಿದೆ. ಔದ್ಯಮಿಕ ಮಾದರಿಯ ಪಶುಸಂಗೋಪನೆ ಎಂಬುದು ಇಡೀ ಭೂಮಿಗೆ ಅತಿ ದೊಡ್ಡ ಹೊರೆಯಾಗುತ್ತಿದೆ, ನಿಜ. ಜಗತ್ತಿನ ಒಟ್ಟು ಕೃಷಿಭೂಮಿಯ ಶೇಕಡಾ 70 ಭಾಗ ಬರೀ ಪಶುಗಳ ಆಹಾರ ಬೆಳೆಯುವ ಉದ್ದೇಶಕ್ಕೇ ಮೀಸಲಾಗಿದೆ. ಪ್ರತಿವರ್ಷ ಸರಾಸರಿ 50 ಲಕ್ಷ ಅರಣ್ಯಪ್ರದೇಶ ಹೊಸದಾಗಿ ಪಶುಸಂಗೋಪನೆಗೆಂದು ಬಲಿಯಾಗುತ್ತಿದೆ. ಅಂದಾಜು 84 ಕೋಟಿ ಟನ್ ಆಹಾರಧಾನ್ಯ ಅವುಗಳಿಗೆಂದೇ ಧ್ವಂಸವಾಗುತ್ತಿದೆ. ಸೋಯಾ ಅವರೆಯದ್ದಂತೂ ಇನ್ನೂ ದೊಡ್ಡ ಕತೆ. ಅದರ ಜಾಗತಿಕ ಉತ್ಪಾದನೆ 24 ಕೋಟಿ ಟನ್ ಇದ್ದು ಅದರ ಶೇಕಡಾ 95 ಭಾಗ ಪಶು ಆಹಾರಕ್ಕೆಂದೇ ಹೋಗುತ್ತಿದೆ. ಇನ್ನು ನೀರು? ಪ್ರಪಂಚದ ಪ್ರತಿ ವ್ಯಕ್ತಿ ದಿನಕ್ಕೆ ಎಂಟು ಬಾರಿ ಸ್ನಾನ ಮಾಡಿದರೆ ಬೇಕಾಗುವಷ್ಟು ನೀರು (ಪ್ರತಿ ಸೆಕೆಂಡ್ ಗೆ 28 ಲಕ್ಷ ಲೀಟರ್) ಪಶುಸಂಗೋಪನೆಗೆ ವ್ಯಯವಾಗುತ್ತಿದೆ ಎಂದು ಅಂಕಿಸಂಖೈಗಳು ಹೇಳುತ್ತಿವೆ. ಒಂದು ಲೀಟರ್ ಹಾಲಿನ ಉತ್ಪಾದನೆಗೆ ಸರಾಸರಿ 900 ಲೀಟರ್ ನೀರು ವ್ಯಯವಾಗುತ್ತಿದೆ.

ನಮ್ಮ ದೇಶದ ಪಶುಸಂಗೋಪನೆಯ ಚಿತ್ರ ತುಸು ಭಿನ್ನವಾಗಿದೆ. ಇಲ್ಲಿ ಮಾಂಸಕ್ಕೆಂದು ದನಗಳನ್ನು ಬೆಳೆಸುವುದಿಲ್ಲ. ಆದರೆ ಹೈನು ಉದ್ಯಮವೇ ದೇಶಕ್ಕೆ ಬಹುದೊಡ್ಡ ಹೊರೆಯಾಗಿ ಪರಿಣಮಿಸುತ್ತಿದೆ. ಕರ್ನಾಟಕವಂತೂ ಇಡೀ ದೇಶದಲ್ಲೇ ಹೈನು ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿದೆ. ಸರಕಾರ ಹೈನು ಕ್ರಾಂತಿಗೆ ಅಷ್ಟೆಲ್ಲ ಒತ್ತುಕೊಟ್ಟಿದ್ದರಿಂದ ಹಳ್ಳಿ ಹಳ್ಳಿಗಳಲ್ಲಿ ಡೇರಿ ಉದ್ಯಮ ವಿಕಾಸವಾಗಿದೆ. ಐದು ವರ್ಷಗಳ ಹಿಂದೆ ಬ್ರಿಟನ್ನಿನ ಹೆಸರಾಂತ ‘ನ್ಯೂ ಸೈಂಟಿಸ್ಟ್’ ಪತ್ರಿಕೆಯ ವರದಿಗಾರ ಫ್ರೆಡ್ ಪಿಯರ್ಸ್ ಎಂಬಾತ ಗುಜರಾತಿಗೆ ಭೇಟಿಕೊಟ್ಟಿದ್ದ. ಅಮುಲ್ ಡೇರಿ ಇರುವ ಆನಂದ್ ಪಟ್ಟಣದ ಸುತ್ತಮುತ್ತ ಅಡ್ಡಾಡಿ “ಇಲ್ಲಿ ಪ್ರತಿ ಲೀಟರ್ ಹಾಲಿನ ಉತ್ಪಾದನೆಗೆ ಎರಡು ಸಾವಿರ ಲೀಟರ್ ನೀರನ್ನು ಬಳಸುತ್ತಾರೆ” ಎಂದು ಖಚಿತ ಲೆಕ್ಕಾಚಾರಗಳ ಮೂಲಕ ವರದಿ ಮಾಡಿದ್ದ. ನೀರು ಅವಿನಾಶಿ ನಿಜ. ಆದರೆ ಪ್ರತಿ ಬಾರಿ ಕೊಳವೆ ಬಾವಿಯಿಂದ ನೀರನ್ನು ಎತ್ತಿ ಬಳಸಿದಾಗಲೂ ಒಂದಿಷ್ಟು ನೀರು ಆವಿಯಾಗಿ ಆಕಾಶಕ್ಕೆ ಹೋಗುತ್ತದೆ. ನಾವು ಅಗಾಧ ಪ್ರಮಾಣದಲ್ಲಿ ಹಾಲಿಗಾಗಿ ನೀರನ್ನು ಎತ್ತಿ ಬಳಸುತ್ತ ಋತುಮಾನದ ಅಸಮತೋಲಕ್ಕೆ ಕಾರಣರಾಗುತ್ತಿದ್ದೇವೆ.

ಹೈನುಗಾರಿಕೆಗೆ ಅತಿ ಆದ್ಯತೆ ಕೊಟ್ಟಿದ್ದರಿಂದ ಇನ್ನೂ ಅನೇಕ ಬಗೆಯ ಅಸಮತೋಲನ ಕಾಣಿಸಿಕೊಳ್ಳುತ್ತಿದೆ. ಹಿಂದೆಲ್ಲ ಪಶುಸಂಗೋಪನೆ ಎಂಬುದು ಒಟ್ಟಾರೆ ಗ್ರಾಮೀಣ ಬದುಕಿನ ಭಾಗವಾಗಿತ್ತು. ಸ್ಥಳೀಯ ತಳಿಗಳಿದ್ದವು. ಗೋಮಾಳವಿತ್ತು. ಕೆರೆಗಳಿದ್ದವು. ಹೊಲದಲ್ಲಿ, ಬೆಟ್ಟದಲ್ಲಿ ಮೇವಿರುತ್ತಿತ್ತು. ಹೋರಿಗಳಿಗೆ ಹೊಲದಲ್ಲಿ ಕೆಲಸವಿರುತ್ತಿತ್ತು. ಈಗ ಎಲ್ಲವೂ ಏರುಪೇರಾಗಿವೆ. ಸ್ಥಳೀಯ ಗೋ – ತಳಿಗಳು ಕಣ್ಮರೆಯಾಗುತ್ತಿವೆ. ಹೊಲಗಳಿಗೆ ಟ್ರ್ಯಾಕ್ಟರ್, ಟಿಲ್ಲರ್ ಗಳು ಬಂದಿವೆ. ಜರ್ಸಿ ಅಥವಾ ಎಚ್ ಎಫ್ ಹಸುಗಳಿಗೆ ಹೊರಿ ಕರು ಹುಟ್ಟಿದರೆ ಅದನ್ನು ಇಟ್ಟುಕೊಳ್ಳುವಂತಿಲ್ಲ. ಏಕೆಂದರೆ ಚಕ್ಕಡಿಗೆ ಕಟ್ಟುವಂತಿಲ್ಲ, ನೇಗಿಲಿಗೆ ಹಚ್ಚುವಂತಿಲ್ಲ. ಇನ್ನು ಇತ್ತ ಗೋಮಾಳವೂ ಇಲ್ಲ. ಬೆಟ್ಟಗಳಲ್ಲಿ ಜಾಲಿ, ಲಂಟಾನಾ ತುಂಬಿದೆ. ಇಂಥ ಸ್ಥಿತಿಯಲ್ಲಿ ಹೈನುಗಾರಿಕೆಗೆ ನಾವು ಅತಿ ಹೆಚ್ಚಿನ ಪ್ರಾಶಸ್ತ್ಯ ಕೊಟ್ಟಿದ್ದೇವೆ. ಅವುಗಳಿಗೆ ನೀಡುವ ಮೇವು ಎಂಥದ್ದು? ಹೊಲದ ಭತ್ತ – ರಾಗಿಯ ಹುಲ್ಲಿನಲ್ಲಿ ಯೂರಿಯಾ, ಡಿಎಪಿ ಮತ್ತು ಪೀಡೆನಾಶಕ ವಿಷ ಸಂಚಯವಾಗಿರುತ್ತದೆ. ಸರಕಾರಿ ಗೋದಾಮುಗಳಲ್ಲಿ ಕೊಳೆಯುತ್ತಿರುವ ಕಾಳುಕಡಿಗೆ ಕಸಾಯಿಖಾನೆಯ ತ್ಯಾಜ್ಯಗಳನ್ನು ಸೇರಿಸಿ ಫ್ಯಾಕ್ಟರಿಗಳಲ್ಲಿ ತಯಾರಿಸಿದ ಪಶು ಆಹಾರವನ್ನು ಹಸುಗಳಿಗೆ ತಿನ್ನಿಸಿ, ಆಗಾಗ ಹಾರ್ಮೋನ್ ಚುಚ್ಚುಮದ್ದು ಕೊಟ್ಟು, ಕೃತಕ ಗರ್ಭಧಾರಣೆ ಮಾಡಿಸಿ ಹಾಲು ಉತ್ಪಾದನೆ ಮಾಡುತ್ತಿದ್ದೇವೆ. ಹಾಲನ್ನು ತಾಜಾ ಇಡಲೆಂದು ಹೈಡ್ರೊಜನ್ ಪೆರಾಕ್ಸೈಡ್ ಸೇರಿಸಿ, ಯೂರಿಯಾ ಬೆರೆಸಿ, ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬಿ..... ಅಂಥ ಅನೈಸರ್ಗಿಕ ಹಾಲು ಸೇವಿಸಿ ನಗರವಾಸಿಗಳ ಯಾರ ಆರೋಗ್ಯ ಎಷ್ಟು ಸುಧಾರಿಸಿತೋ ಗೊತ್ತಿಲ್ಲ. ಆದರೆ ಗ್ರಾಮೀಣ ಜನರಿಗೂ ಈಗ ದಪ್ಪ ಹೊಟ್ಟೆ, ಬಿಪಿ, ಡಯಾಬಿಟೀಸ್, ಹೃದ್ರೋಗ, ಲಕ್ವ, ಕಿಡ್ನಿ ವೈಫಲ್ಯ, ಎಲ್ಲ ಕಾಯಿಲೆಗಳೂ ಅಮರಿಕೊಳ್ಳುತ್ತಿವೆ.

ಲಯತಪ್ಪಿದ ಗ್ರಾಮೀಣ ಅರ್ಥವ್ಯವಸ್ಥೆಯಲ್ಲಿ ವಿದೇಶೀ ದನಗಳಿಗೆ, ಅದರಲ್ಲೂ ಹಸುಗಳಿಗೆ ಮಾತ್ರ ಅತಿಯಾದ ಆದ್ಯತೆ ನೀಡಿದ್ದರಿಂದ ಹಳ್ಳಿಯ ಸಮಗ್ರ ಬದುಕಿನ ಸಮತೋಲವೇ ಏರುಪೇರಾಗಿದೆ. ಇಂಥ ಅಸಮತೋಲ ಸ್ಥಿತಿಯಲ್ಲಿ ನಿರುಪಯುಕ್ತ ದನಗಳ ಸಂಖೈಯನ್ನು ಕಡಿಮೆ ಮಾಡುವುದೇ ಸೂಕ್ತವೆಂದು ದೇಶದ ಹೆಸರಾಂತ ಅರ್ಥತಜ್ಞ ವಿ.ಎಮ್. ದಾಂಡೇಕರ್ ಇಪ್ಪತ್ತು ವರ್ಷಗಳ ಹಿಂದೆಯೇ ಹೇಳಿದ್ದರು. ಇದ್ದುದರಲ್ಲಿ ಒಂದು ನೆಮ್ಮದಿಯ ಸಂಗತಿ ಏನಿತ್ತೆಂದರೆ ಯಾರಿಗೂ ಬೇಡವಾದ ಹೋರಿಗಳ ಮತ್ತು ಕರಾವು ಮುಗಿದಿರುವ ಹಸುಗಳ ವಿಲೆವಾರಿ ತಂತಾನೆ ನಡೆದು ಹೋಗುತ್ತಿತ್ತು. ಅವು ಮಾಂಸಾಹಾರಿಗಳ ಹೊಟ್ಟೆಗೆ ಹೋಗುತ್ತಿದ್ದವು. “ನಮ್ಮ ದೇಶದಲ್ಲಿ ಮಾರಾಟಕ್ಕೆ ಲಭಿಸುವ ಮಾಂಸದಲ್ಲಿ ಶೇಕಡಾ 60ಕ್ಕೂ ಹೆಚ್ಚು ಪಾಲು ರಾಸುಗಳಿಂದಲೇ (ಅಂದರೆ ಎತ್ತು, ಆಕಳು, ಎಮ್ಮೆ, ಕೋಣ) ಬರುತ್ತಿದೆ” ಎಂದು ಐಸೆಕ್ ನ ಇಕಾಲಜಿ ಅರ್ಥತಜ್ಞ ಡಾ. ಸಯ್ಯದ್ ಪಾಷಾ ಹೇಳುತ್ತಾರೆ. ನಾವು ವಿದೇಶಗಳಿಗೆ ರಫ್ತು ಮಾಡುವ ಒಟ್ಟೂ ಕೃಷಿ ಉತ್ಪನ್ನಗಳಲ್ಲಿ ರಾಸುಮಾಂಸದ ಪ್ರಮಾಣ ಶೇಕಡಾ 20ರಷ್ಟಿದೆ. ಇದು ತುಂಬ ಮಹತ್ವದ ಸಂಗತಿ. ಗೋಹತ್ಯೆಯನ್ನು ನಿಷೀಧಿಸಿದರೆ, ಇಷ್ಟು ದೊಡ್ಡ ಪ್ರಮಾಣದ ಆಹಾರ ಮೂಲವನ್ನು, ಡಾಲರ್ ಗಳಿಸುವ ಸಂಪನ್ಮೂಲವನ್ನು ನಾವು ವ್ಯರ್ಥವಾಗಿ ಹೂಳಬೇಕಾಗುತ್ತದೆ. ಅದೂ ಸುಲಭದ ಕೆಲಸವಲ್ಲ. ರಾಸುಗಳು ನಿರುಪಯುಕ್ತವಾಗಿ ಬದುಕಿರುವಷ್ಟು ವರ್ಷವೂ ಅವಕ್ಕೆ ಮೇವು ನೀರು ಒದಗಿಸುತ್ತಿರಬೇಕಾಗುತ್ತದೆ. ಹಾಗೆ ವ್ಯರ್ಥ ವ್ಯಯವಾಗುವ ರಾಸುಮಾಂಸಕ್ಕೆ ಬದಲಿಯಾಗಿ, ಅಷ್ಟೇ ದೊಡ್ಡ ಪ್ರಮಾಣದ ಮಾಂಸವನ್ನು ಬೇರೆ ಮೂಲಗಳಿಂದ ಒದಗಿಸಬೇಕಾಗುತ್ತದೆ. ಬೇರೆ ಮೂಲ ಎಂದರೆ ಮತ್ತೇನಲ್ಲ, ಆಡು – ಕುರಿಗಳನ್ನು ಬೆಳೆಸುವುದು.

ದನದ ಮಾಂಸಕ್ಕೆ ಬದಲಿಯಾಗಿ ಆಡು – ಕುರಿಗಳ ಮಾಂಸವನ್ನು ದೇಶಕ್ಕೆಲ್ಲ ಒದಗಿಸಬೇಕೆಂದರೆ ನಿಸರ್ಗ ಸಮತೋಲ ಇನ್ನಷ್ಟು ಹದಗೆಡುತ್ತದೆ. ಏಕೆಂದರೆ ಅವುಗಳನ್ನು ಕಟ್ಟಿ ಬೆಳೆಸುವ ಪರಿಪಾಠ ನಮ್ಮಲ್ಲಿಲ್ಲ. ಗುಡ್ಡಬೆಟ್ಟಗಳಲ್ಲಿ ಆಡು – ಮೇಕೆಗಳು ಲಂಗುಲಗಾಮಿಲ್ಲದೆ ಓಡಾಡುವುದರಿಂದಲೇ ನಮ್ಮ ಬಹುಪಾಲು ಸಸ್ಯಸಂಪತ್ತು ಹೇಳಹೆಸರಿಲ್ಲದೆ ನಾಶವಾಗಿದೆ. ಅವು ಚಲಿಸಿದಲ್ಲೆಲ್ಲ ಮಣ್ಣು ಸವಕಳಿಯಾಗಿ, ಕೆಂದೂಳೆದ್ದು ಬರಸದೃಶ ಪ್ರದೇಶ ನಿರ್ಮಾಣಗೊಳ್ಳುತ್ತದೆ. ಇನ್ನು ಗೋಹತ್ಯೆ ನಿಲ್ಲಿಸಿದರೆ ಆ ಪ್ರಮಾಣದ ಮಾಂಸಕ್ಕಾಗಿ ಇವುಗಳನ್ನು ಬೆಳೆಸಬೇಕೆಂದರೆ ಈಗಿಗಿಂತ ಆರು ಪಟ್ಟು ಹೆಚ್ಚು ಕುರಿಮೇಕೆಗಳಿಗೆ ಬೇಡಿಕೆ ಬರುತ್ತದೆ. ಆಗ ದೇಶದ ಇದ್ದಬದ್ದ ಧಾರಣ ಸಾಮರ್ಥ್ಯವೂ ಕುಸಿಯುತ್ತದೆ. ಹಸಿರುಕವಚದ ಸ್ಥಿತಿ ಏನಾದೀತೆಂದು ಯಾರೂ ಊಹಿಸಬಹುದು. ಇದು ಜೀವಜಾಲದ (ಇಕಾಲಜಿ) ಪ್ರಶ್ನೆಯಾದರೆ, ಇದರೊಟ್ಟಿಗೆ ಅರ್ಥವ್ಯವಸ್ಥೆ (ಇಕಾನಮಿ) ಕೂಡ ಬಿಗಡಾಯಿಸುತ್ತದೆ. ದನ – ಎಮ್ಮೆಗಳ ಮಾಂಸದ ಬೆಲೆಗೆ ಹೋಲಿಸಿದರೆ ಈಗ ಆಡುಕುರಿಗಳ ಮಾಂಸದ ಬೆಲೆ ಐದು ಪಟ್ಟು ಹೆಚ್ಚಿಗೆ ಇದೆ. ಅದು ಸಾಮಾನ್ಯರಿಗೆ ಎಟಕುವಂಥದ್ದಲ್ಲ. ಮಾಂಸಾಹಾರಿಗಳಿಗೆಲ್ಲ ಕಡ್ಡಾಯವಾಗಿ ದುಬಾರಿಯ ಕುರಿಕೋಳಿಗಳನ್ನು ತಿನ್ನಿಸುವುದು ಪ್ರಜಾಪ್ರಭುತ್ವ ವ್ಯವಸ್ಥೆಯ ಅಣಕವಾಗುತ್ತದೆ. ಇದರ ಪರಿಣಾಮ ಏನೆಂದರೆ ವನ್ಯಜೀವಿಗಳ ಮೇಲೆ ಇನ್ನಷ್ಟು ಒತ್ತಡ ಬೀಳುತ್ತದೆ. ದೇಶದ ಮೃಗಾಯಲಗಳಲ್ಲಿರುವ ಮಾಂಸಾಹಾರಿ ಪ್ರಾಣಿಗಳಿಗೆ ಇಷ್ಟು ದಿನ ದನದ ಮಾಂಸವನ್ನೇ ಕೊಡಲಾಗುತ್ತಿತ್ತು – ಅದು ಅಗ್ಗದ್ದೆಂಬ ಕಾರಣದಿಂದ. ಆದರೆ ಇನ್ನುಮೇಲೆ ಅಲ್ಲಿಗೂ ಹಂದಿ ಮಾಂಸವನ್ನೋ, ಆಡುಕುರಿಗಳ ಮಾಂಸವನ್ನೋ ನೀಡಲು ಹೊರಟರೆ ಅದರ ವೆಚ್ಚವೂ ನಾಲ್ಕಾರು ಪಟ್ಟು ಹೆಚ್ಚಾಗುತ್ತದೆ.

ಮುಂದುವರೆಯುವುದು.....

ಆಗ 30, 2016

ವೇಮುಲನ ಬದುಕನ್ನಾಧರಿಸಿದ 'ನಕ್ಷತ್ರದ ಧೂಳು'

ಡಾ. ಅಶೋಕ್. ಕೆ. ಆರ್
30/08/2016
ಏಕವ್ಯಕ್ತಿ ರಂಗಪ್ರಯೋಗವನ್ನು ನೋಡುವುದು ಎಷ್ಟು ಕಷ್ಟವೋ ಅದನ್ನು ನೋಡಿಸಿಕೊಳ್ಳುವಂತೆ ರಂಗದ ಮೇಲೆ ತರುವುದು ಅದಕ್ಕಿಂತಲೂ ಕಷ್ಟ. ರಂಗದ ಮೇಲೆ ಹತ್ತಾರು ಜನರಿದ್ದು, ಐದತ್ತು ನಿಮಿಷಕ್ಕೊಮ್ಮೆ ರಂಗದ ಮೇಲಿನ ಪರಿಕರಗಳು ಬದಲಾಗಿ, ಕ್ಷಣಕ್ಕೊಮ್ಮೆ ಬದಲಾಗುವ ಬಣ್ಣಗಳಿರುವ ನಾಟಕಗಳೇ ಕೆಲವೊಮ್ಮೆ ಆಕಳಿಕೆ ತರಿಸಿಬಿಡುತ್ತವೆ. ಇನ್ನು ಏಕವ್ಯಕ್ತಿ ರಂಗಪ್ರಯೋಗದ ಕಷ್ಟಗಳೆಷ್ಟಿರಬೇಕೆಂದು ಊಹಿಸಿಕೊಳ್ಳಿ. ನಾಟಕವನ್ನು ರಚಿಸಿದವರು, ನಿರ್ದೇಶಿಸಿದವರು, ಬೆಳಕು, ಸಂಗೀತ ನೀಡಿದವರೆಲ್ಲರಿಗಿಂತಲೂ ಏಕವ್ಯಕ್ತಿ ರಂಗಪ್ರಯೋಗದಲ್ಲಿ ಕಲಾವಿದನಿಗೇ ಹೆಚ್ಚು ಪ್ರಾಮುಖ್ಯತೆ. ಉಳಿದ ನಾಟಕಗಳಲ್ಲಿ ಒಬ್ಬರ ಕಳಪೆ ನಟನೆ ಇನ್ನುಳಿದವರ ಉತ್ತಮ ನಟನೆಯ ನಡುವೆ ಮರೆಯಾಗಿಬಿಡುತ್ತದೆ ಆದರಿಲ್ಲಿ ಒಂದು ಒಂದೂವರೆ ತಾಸು ವೀಕ್ಷಕರನ್ನು ಹಿಡಿದಿಟ್ಟುಕೊಳ್ಳಬೇಕಾದ ಜವಾಬುದಾರಿ ಕಲಾವಿದನದ್ದು ಮಾತ್ರ. ವ್ಯವಸ್ಥೆಯ ವ್ಯವಸ್ಥಿತ ಅವ್ಯವಸ್ಥೆಗೆ ಬಲಿಯಾಗಿ ದುರದೃಷ್ಟವಶಾತ್ ಆತ್ಮಹತ್ಯೆ ಮಾಡಿಕೊಂಡ ರೋಹಿತ್ ವೇಮುಲನ ಬದುಕನ್ನಾಧರಿಸಿದ ‘ನಕ್ಷತ್ರದ ಧೂಳೂ’ ಏಕವ್ಯಕ್ತಿ ರಂಗಪ್ರಯೋಗ ವೀಕ್ಷಕರನ್ನು ಒಂದೂವರೆ ಘಂಟೆಗಳ ಕಾಲ ಹಿಡಿದಿಟ್ಟುಕೊಂಡಿತಾ? 

ರೋಹಿತ್ ವೇಮುಲ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಬರೆದ ಪತ್ರದಲ್ಲಿ ಕಾರ್ಲ್ ಸೇಗಾನ್ ನ ಕುರಿತು ಬರೆಯುತ್ತಾನೆ. 'ನಕ್ಷತ್ರದ ಧೂಳು' ನಾಟಕ ಪ್ರಾರಂಭವಾಗುವುದು ಪ್ರೊಜೆಕ್ಟರಿನಲ್ಲಿ ಕಾರ್ಲ್ ಸೇಗಾನ್‍ ನ ಮಾತುಗಳು ಬರುವುದರೊಂದಿಗೆ. ಪ್ರಯೋಗದಲ್ಲಿ ಏಕವ್ಯಕ್ತಿಯ ಅಭಿನಯವಷ್ಟೇ ಇದ್ದರೂ ಆಧುನಿಕ ತಂತ್ರಜ್ಞಾನದ ನೆರವಿನಿಂದ ಲ್ಯಾಪ್ ಟಾಪ್ ಪ್ರೊಜೆಕ್ಟರ್ ಅನ್ನು ಸಮರ್ಥವಾಗಿ ಬಳಸಿ ಒಂದಷ್ಟು ಏಕತಾನತೆಯನ್ನು ದೂರ ಮಾಡುವುದೀಗ ಸಾಧ್ಯವಿದೆ. 'ನಕ್ಷತ್ರದ ಧೂಳು' ನಾಟಕದಲ್ಲೂ ಇದೇ ತಂತ್ರ ಉಪಯೋಗಿಸಲಾಗಿದೆ. ತಕ್ಕಮಟ್ಟಿಗೆ ಈ ತಂತ್ರ ಯಶಸ್ವಿಯೂ ಆಗಿದೆ. ಕಾರ್ಲ್ ಸೇಗಾನ್ ನ ಪುಸ್ತಕವನ್ನು ಓದುತ್ತಿರುವ ರೋಹಿತ್ ವೇಮುಲ (ವೇಮುಲನಾಗಿ ನಟಿಸಿರುವುದು ಕಿರಣ್ ಮಾರಶೆಟ್ಟಿಹಳ್ಳಿ) ತನ್ನ ಪರಿಚಯವನ್ನು ಹೇಳಿಕೊಳ್ಳುವುದರೊಂದಿಗೆ ನಾಟಕದ ಏಕಪಾತ್ರಾಭಿನಯದ ಪ್ರಾರಂಭವಾಗುತ್ತದೆ. ತನ್ನ ಬಾಲ್ಯದ ದುಃಖಕರ ಸಂಗತಿಗಳನ್ನು, ಯೌವನಕ್ಕೆ ಕಾಲಿಡುತ್ತಿದ್ದಾಗ ನಡೆದ ಘಟನೆಗಳನ್ನು, ಜಾತಿಯ ಕಾರಣಕ್ಕೆ ಅನುಭವಿಸಿದ ತಾರತಮ್ಯವನ್ನು, ಜಾತಿಯ ಕಾರಣಕ್ಕೆ 'ಹೊಲತಿಯ ಮಕ್ಕಳು' ಎಂದು ಅಪ್ಪನಿಂದಲೇ ಅವಮಾನಕ್ಕೀಡಾಗಿದ್ದನ್ನು, ಇದೆಲ್ಲದರ ಮಧ್ಯೆ ಓದುವುದರ ಕಡೆಗಿನ ಅತೀವ ಆಸಕ್ತಿಗಳೆಲ್ಲವೂ ಮಾತಿನ ರೂಪದಲ್ಲಿ, ಕತೆಯ ರೂಪದಲ್ಲಿ ನೋಡುಗರನ್ನು ಹಿಡಿದಿಡುತ್ತವೆ. ಮಾತಿನ ಓಘದ ನಡುವೆ ಒಂದು ವಿರಾಮದಂತೆ ರೋಹಿತ್ ವೇಮುಲ ತೆಗೆದ ಅವನ ಮನೆಯ ಚಿತ್ರಗಳನ್ನು ಪ್ರೊಜೆಕ್ಟರ್ ಮೂಲಕ ತೋರಿಸಲಾಗಿದೆ. ಈ ಚಿತ್ರಗಳು ನೋಡುಗರ ಮನದಲ್ಲೊಂದು ವಿಷ್ಯುಯಲ್ ಇಂಪಾಕ್ಟ್ ಮೂಡಿಸುವುದರಲ್ಲಿ ಯಶಸ್ವಿಯಾಗಿವೆ. ನಂತರ ಹೈದರಾಬಾದ್ ವಿಶ್ವವಿದ್ಯಾನಿಲಯವನ್ನು ಸೇರಿದ ರೋಹಿತನ ದಿನಗಳ ಪ್ರಾರಂಭವಾಗುತ್ತದೆ. ವಿಶ್ವವಿದ್ಯಾಲಯದ ದಿನಗಳಲ್ಲಿ ರೋಹಿತ್ ವೇಮುಲನ ಜೀವನದಲ್ಲಿ ನಡೆದ ಅನೇಕ ಘಟನೆಗಳು ಬಹುತೇಕ ವೀಕ್ಷಕರಿಗೆ ಗೊತ್ತಿರುವಂತದ್ದೇ.

ವೀಕ್ಷಕರಿಗೆ ಗೊತ್ತಿರುವ ವಿಷಯಗಳು ಚೌಕಟ್ಟಿನ ರೂಪದಲ್ಲಿ ತೆರೆಯ ಮೇಲೆ ಮೂಡಿಬರುತ್ತದೆ. ಜಾತಿ ತಾರತಮ್ಯ, ಅಂಬೇಡ್ಕರ್ ಸ್ಟಡಿ ಸರ್ಕಲ್, ದೇಶದ ವಿವಿದೆಡೆ ನಡೆದ ವೈಚಾರಿಕ ಜನರ ಕಗ್ಗೊಲೆಯೆಲ್ಲವೂ ರೋಹಿತ್ ವೇಮುಲನ ಪಾತ್ರಧಾರಿಯ ಮೂಲಕ ಮತ್ತೆ ನೆನಪಾಗುತ್ತದೆ. ಕೊನೆಗೆ ಇವೆಲ್ಲವಕ್ಕೂ ಕಾರಣವಾಗುವುದು ರೋಹಿತ್ ವೇಮುಲನ ಜಾತಿ. ವೇಮುಲನ ಪಾತ್ರಧಾರಿ ಕಿರಣ್ ಮೊದಲರ್ಧದಲ್ಲಿ ಲವಲವಿಕೆಯ ಬಾಲಕನಾಗಿ, ಸಂಕಷ್ಟಗಳ ನಡುವೆಯೂ ಆಶಾಭಾವದ ಹುಡುಗನಾಗಿ ಮಾತಾಡಿ ವೇಮುಲನ ಪಾತ್ರಕ್ಕೊಂದು ನ್ಯಾಯ ಒದಗಿಸುತ್ತಾರೆ. ಮಧ್ಯ ಭಾಗದಲ್ಲಿ ಯಾಕೊ ಸಂಭಾಷಣೆಯನ್ನು ಅತಿ ವೇಗವಾಗಿ ಹೇಳಿಬಿಡುತ್ತಾರೆ. ನೋಡುಗರ ಕಿವಿ ಚುರುಕಿರದಿದ್ದರೆ ಚೂರು ಕಷ್ಟವೇ! ಅಭಿನಯದ ಈ ದುರ್ಬಲತೆ ಮತ್ತೆ ಮರೆಯಾಗುವುದು ಕೊನೆಯ ಭಾಗದಲ್ಲಿ. ಹಾಸ್ಟೆಲ್ಲಿನಿಂದ ಕ್ಷುಲ್ಲಕ ಕಾರಣಕ್ಕೆ ಹೊರದೂಡಿಸಿಕೊಂಡು ವಿಶ್ವ ವಿದ್ಯಾಲಯದ ಆವರಣದಲ್ಲೇ ಪ್ರತಿಭಟನೆಗೆ ಕುಳಿತರೂ ಯಾರೂ ಕ್ಯಾರೇ ಅನ್ನುವುದಿಲ್ಲ. ಹೊರಗಿನಿಂದ ಯಾರೂ ಬಂದು ನಿಮ್ಮೊಂದಿಗೆ ನಾವಿದ್ದೇವೆ ಎನ್ನುವುದಿಲ್ಲ ಎಂಬ ಮಾತುಗಳ ಮೂಲಕ ಮತ್ತೆ ಕಿರಣ್ ಸಶಕ್ತ ಪಾತ್ರಧಾರಿಯಾಗಿ ಇಡೀ ನಾಟಕದ ಜವಾಬುದಾರಿ ಹೊತ್ತ ನಟರಾಗಿ ಎದ್ದು ನಿಲ್ಲುತ್ತಾರೆ. ಗೆಳೆಯರ ಸಮಾಧಾನದ ಮಾತುಗಳಿಂದ ವೇಮುಲನ ನಿರಾಶಾಭಾವನೆ ಮರೆಯಾಗುವುದಿಲ್ಲ. ವ್ಯವಸ್ಥೆಯ ಅವ್ಯವಸ್ಥೆಗೆ ಸಾವಿನ ಮೂಲಕ ಪರಿಹಾರ ಹುಡುಕಲೊರಟು ಬಿಡುತ್ತಾನೆ. ರೋಹಿತ್ ವೇಮುಲ ಕೊನೆಯಲ್ಲಿ ಬರೆದ ಪತ್ರದೊಂದಿಗೆ ನಾಟಕ ಅಂತ್ಯ ಕಂಡಿದ್ದರೆ ಆತ್ಮಹತ್ಯೆಯನ್ನೇ ವೈಭವೀಕರಿಸಿಬಿಟ್ಟಂತಾಗುತ್ತಿತ್ತಾ? ನಾಟಕ ರಚಿಸಿದ ಹರ್ಷಕುಮಾರ್ ಕುಗ್ವೆ - ಸಂಜ್ಯೋತಿ ವಿ.ಕೆ ಹಾಗೂ ನಿರ್ದೇಶಿಸಿದ ಸ್ವರ ಆತ್ಮಹತ್ಯೆ ವೈಭವೀಕರಣಗೊಳ್ಳದಂತೆ ಎಚ್ಚರ ವಹಿಸಿದ್ದಾರೆ. ಆತ್ಮಹತ್ಯೆಯೊಂದಿಗೇ ನಾಟಕ ಮುಗಿದು ಹೋಗಿದ್ದರೆ ವಿಷಣ್ಣ ಭಾವವಷ್ಟೇ ಉಳಿದು ಹೋಗುತ್ತಿತ್ತೇನೋ. ಇಲ್ಲಿ ಮತ್ತೆ ತಂತ್ರಜ್ಞಾನದ ನೆರವು ಪಡೆಯಲಾಗಿದೆ. ರೋಹಿತ್ ವೇಮುಲನ ಸಾವಿನ ನಂತರ ಹೈದರಾಬಾದ್ ವಿಶ್ವವಿದ್ಯಾಲಯದಲ್ಲಿ ಆತನ ಸಹವರ್ತಿಗಳು ಮುಂದುವರೆಸಿದ ಹೋರಾಟಗಳನ್ನು ತೋರಿಸಿದ್ದಾರೆ. ಆತನ ಹೊದಿಕೆಯನ್ನು ಕೇಂದ್ರ ಬಿಂದುವಾಗಿಸಿಕೊಂಡು ಕಟ್ಟಲಾಗುತ್ತಿರುವ ಟೆಂಟಿನೊಂದಿಗೆ "ಮತ್ತೆ ಕಟ್ಟುತ್ತಿದ್ದೇವೆ" ಎಂಬ ಆಶಯದೊಂದಿಗೆ ನಾಟಕ ಮುಗಿಯುತ್ತದೆ.

ಏಕವ್ಯಕ್ತಿ ನಾಟಕದಲ್ಲಿ ಮಾತುಗಳು ಹೆಚ್ಚಿರಬೇಕಾದದ್ದು ಅಗತ್ಯವೇ. ಆದರೂ ನಾಟಕದಲ್ಲಿ ಹಲವೆಡೆ ಮೌನವೇ ಮಾತಾಗುವ ಸಾಧ್ಯತೆಯಿರುವ ಕಡೆಯೂ ಮಾತು ಬಳಸಿಬಿಟ್ಟಿರುವುದು ನಾಟಕದ ಗ್ರಹಿಕೆಗೊಂದಷ್ಟು ಅಡೆತಡೆ ಉಂಟು ಮಾಡುತ್ತದೆ. ರೋಹಿತ್ ವೇಮುಲ ತನ್ನ ಕೊನೆಯ ಪತ್ರವನ್ನು ಬರೆಯುವಾಗ ಕೂಡ ಪಾತ್ರಧಾರಿಯೇ ಮಾತನಾಡುವುದಕ್ಕಿಂತ ಮುದ್ರಿತ ದನಿ ಕೇಳಿಬಂದಿದ್ದರೆ, ಪಾತ್ರಧಾರಿ ಭಾವನೆಗಳ ಮೂಲಕವೇ ಇನ್ನಷ್ಟು ಮಾತನಾಡಿದ್ದರೆ ಮತ್ತಷ್ಟು ಮನಸ್ಸಿಗೆ ಹತ್ತಿರವಾಗುತ್ತಿತ್ತು. ಆತ್ಮಹತ್ಯಾ ಪತ್ರ ಬರೆಯುವ ಸಂದರ್ಭ ಮನಸ್ಸಿಗೆ ಹತ್ತಿರವಾಗುವಂತೆ ಮಾಡುವುದೂ ಅಷ್ಟು ಸರಿಯಲ್ಲವೇನೋ!

ಬಲಪಂಥೀಯ ಬಾಜಪದ ವಿರುದ್ದ ಸೃಷ್ಠಿಯಾಗಬೇಕಿರುವ ಒಂದು ಮಹಾ ಮೈತ್ರಿಕೂಟ: ಯಾಕೆ ಮತ್ತು ಹೇಗೆ? - ಒಂದು ಅವಲೋಕನ

ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
30/08/2016
ಇದೀಗ ರಾಷ್ಟ್ರದಲ್ಲಿ ಅಧಿಕಾರದ ಗದ್ದುಗೆಯನ್ನೇರಿ ಕೂತಿರುವ ಬಲಪಂಥೀಯ ಪಕ್ಷವಾದ ಬಾಜಪವನ್ನು ಮುಂದಿನ ಅಂದರೆ 2019 ರ ಸಾರ್ವತ್ರಿಕ ಚುನಾವಣೆಯ ವೇಳೆಗಾದರು ಎದುರಿಸಿ ನಿಂತು ಗೆಲ್ಲಬಲ್ಲ ರಾಜಕೀಯ ವೇದಿಕೆಯೊಂದನ್ನು ರಚಿಸಿಕೊಳ್ಳುವುದು ಇವತ್ತಿನ ಅನಿವಾರ್ಯವಾಗಿದೆ. ಜನಮಾನಸದಲ್ಲಿನ ಇಂತಹ ಆಶಯವನ್ನು ಕಾರ್ಯರೂಪಕ್ಕೆ ತರುವಲ್ಲಿ ನಮ್ಮ ರಾಜಕೀಯ ಪಕ್ಷಗಳು ಮನಸ್ಸು ಮಾಡುವುದು ಅಗತ್ಯವಾಗಿದೆ. ಇದು ಹೇಗೆ ಸಾದ್ಯವಾಗಬಲ್ಲದೆಂಬುದನ್ನು ಈ ಲೇಖನದಲ್ಲಿ ಚರ್ಚಿಸಲು ಯತ್ನಿಸಿದ್ದೇನೆ. ಇದಕ್ಕೆ ಪೂರಕವಾಗಿ ಬಾಜಪ ಒಂದು ಪಕ್ಷವಾಗಿ, ಮತಾಂಧ ರಾಜಕಾರಣದ ಸಂಕೇತವಾಗಿ ಬೆಳೆದು ಬಂದ ರೀತಿಯನ್ನು ಒಂದಷ್ಟು ನೆನಪಿಸಿಕೊಳ್ಳುವ ಪ್ರಯತ್ನವನ್ನೂ ಮಾಡಿದ್ದೇನೆ. ಯಾಕೆಂದರೆ ಆಗಾಗ ಇತಿಹಾಸವನ್ನು ತಿರುವಿ ಹಾಕದೇ ಹೋದರೆ ವರ್ತಮಾನದಲ್ಲಿ ಸರಿಯಾದ ಹೆಜ್ಜೆಗಳನ್ನಿಡುವಲ್ಲಿ ಕಷ್ಟವಾಗುತ್ತದೆಯೆಂಬ ಬಾವನೆಯಿಂದ. ಹೀಗಾಗಿ ಈ ಲೇಖನ ಸಾಕಷ್ಟು ದೀರ್ಘವೂ, ಮತ್ತು ಹಲವು ವಿಚಾರಗಳ ಪುನರಾವರ್ತನೆ ಎನಿಸಿದರೆ ಕ್ಷಮಿಸಬೇಕಾಗಿ ಓದುಗರಲ್ಲಿ ನನ್ನ ನಮ್ರ ವಿನಂತಿ:

ಬಹುಶ: ಇಂಡಿಯಾ ಒಂದು ದೇಶವಾಗಿ ಹಿಂದೆಂದಿಗಿಂತಲೂ ಹೆಚ್ಚು ಅಪಾಯಕಾರಿಯಾದ ಆತಂಕದ ದಳ್ಳುರಿಯಲ್ಲಿ ಒಳಗೊಳಗೇ ಬೇಯುತ್ತಿದೆ. ಸ್ವಾತಂತ್ರ ಸಿಕ್ಕ ಸರಿಸುಮಾರು ಏಳು ದಶಕಗಳಿಂದ ನಾವು ಜತನದಿಂದ ಕಾಪಾಡಿಕೊಂಡು ಬಂದಿದ್ದ ಜಾತ್ಯಾತೀತ ಸಮಾಜವೊಂದು ಅಪ್ಪಟ ಮತಾಂಧ ಸಮುದಾಯವಾಗಿ ಪರಿವರ್ತನೆಯಾಗುತ್ತಿರುವಂತೆ ಗೋಚರವಾಗುತ್ತಿದೆ. ಈ ತಕ್ಷಣಕ್ಕೆ ಎಚ್ಚರಗೊಂಡು ಜಾತ್ಯಾತೀತವಾಗಿ, ಧರ್ಮಾತೀತವಾಗಿ ಬಲಪಂಥೀಯ ಕೋಮುಶಕ್ತಿಗಳ ರಾಜಕೀಯ ಪಡೆಯ ಜೊತೆ ಹೋರಾಡಿ ಅದನ್ನು ಹಿಮ್ಮಟ್ಟಿಸದೆ ಹೋದರೆ ಕೆಲವೇ ದಿನಗಳಲ್ಲಿ ಇಂಡಿಯಾಕೂಡ ಇನ್ನೊಂದು ಮತಾಂಧರಾಷ್ಟ್ರವಾಗಿ ಜಗತ್ತಿನ ಭೂಪಟದಲ್ಲಿ ಗುರುತಿಸಿಕೊಳ್ಳುವ ಸಾದ್ಯತೆ ಹೆಚ್ಚಾಗಿದೆ. ಎಂಭತ್ತರ ದಶಕದಲ್ಲಿ ಪ್ರಾರಂಭವಾದ ಬಾಜಪದ ಕೋಮುವಾದಿ ರಾಜಕಾರಣ ಅಂತಿಮವಾಗಿ ರಾಷ್ಟ್ರವನ್ನು ಆಳುವ ಅಧಿಕಾರವನ್ನು 2014ರ ಚುನಾವಣೆಯಲ್ಲಿ ಪಡೆದು, ಜಾತಿ ಧರ್ಮಗಳನ್ನು ಮೀರಿ ಬದುಕುತ್ತಿರುವ ಕೋಟ್ಯಾಂತರ ಭಾರತೀಯರ ಆತಂಕಕ್ಕೆ ಕಾರಣವಾಗಿದೆ. ಹಾಗಾದರೆ ಬಾಜಪದಂತಹ ಬಲಪಂಥೀಯ ರಾಜಕೀಯ ಪಕ್ಷವೊಂದು ಇಂಡಿಯಾದಂತಹ ಬಹುಸಂಸ್ಕೃತಿಯ ರಾಷ್ಟ್ರದಲ್ಲಿ ಅಧಿಕಾರ ಪಡೆಯುವುದು ಹೇಗೆ ಸಾದ್ಯವಾಯಿತು ಎಂಬುದನ್ನು ಸೂಕ್ಷ್ಮವಾಗಿ ವಿಶ್ಲೇಷಿಸುತ್ತ ಹೋದರೆ ಅಚ್ಚರಿಯೇನಾಗುವುದಿಲ್ಲ. ಇವತ್ತು ಅದರ ಕಾರಣಗಳನ್ನು ಹುಡುಕುತ್ತ ಹೋಗುವುದು ಹಲವರ ದೃಷ್ಠಿಯಲ್ಲಿ ಅನಗತ್ಯವೆನಿಸಿದರೂ ಭವಿಷ್ಯದಲ್ಲಿ ಮತ್ತೆ ಅಂತಹ ಪ್ರಮಾದಗಳಾಗದಂತೆ ನೋಡಿಕೊಳ್ಳಲಾದರೂ ಆ ಕಾರಣಗಳನ್ನು ನೆನಪು ಮಾಡಿಕೊಳ್ಳಲೇ ಬೇಕಾಗುತ್ತದೆ. ಬಾಜಪದ ಬೆಳವಣಿಗೆಯನ್ನು ನಾವು ಎರಡು ಹಂತದಲ್ಲಿ ಅದ್ಯಯನ ಮಾಡಬೇಕಾಗುತ್ತದೆ. 1975ರಿಂದ 2004 ರವರೆಗೆ ಅದರ ಮೊದಲ ಭಾಗವಾದರೆ 2004ರಿಂದ 2014ರವರೆಗಿನದು ಮತ್ತೊಂದು ಭಾಗ.

ಬಾಜಪದ ಬೆಳವಣಿಗೆ (1975 ರಿಂದ 2004)

1975ರಲ್ಲಿ ಅಂದಿನ ಪ್ರದಾನಮಂತ್ರಿ ಶ್ರೀಮತಿ ಇಂದಿರಾಗಾಂದಿಯವರು ರಾಷ್ಟ್ರದ ಮೇಲೆ ತುರ್ತು ಪರಿಸ್ಥಿತಿಯನ್ನು ಹೇರಿದಾಗ ಎಲ್ಲ ರಾಜಕೀಯ ಪಕ್ಷಗಳು ಜಯಪ್ರಕಾಶ್ ನಾರಾಯಣರ ನೇತೃತ್ವದಲ್ಲಿ ಇಂದಿರಾರವರ ಸರ್ವಾಧಿಕಾರಿ ನಡವಳಿಕೆಯ ಬಗ್ಗೆ, ವಂಶಪಾರಂಪರ್ಯ ಆಡಳಿತದ ಬಗ್ಗೆ ಪ್ರತಿಭಟನೆ ನಡೆಸತೊಡಗಿದವು. ಇದಕ್ಕಾಗಿ ಅಂದಿನ ಬಹುತೇಕ ರಾಜಕೀಯ ಪಕ್ಷಗಳು ಕಾಂಗ್ರೇಸ್ಸೇತರ ರಾಜಕೀಯ ವೇದಿಕೆಯೊಂದನ್ನು ರಚಿಸಿಕೊಳ್ಳಲು ಸಿದ್ದವಾದವು. ಇವತ್ತಿನ ಬಾಜಪ ಅವತ್ತು ಜನಸಂಘದ ಹೆಸರಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಸಂಘಪರಿವಾರದ ಕಾರಣದಿಂದಾಗಿ ಅದು ಜನಮನ್ನಣೆ ಗಳಿಸುವಲ್ಲಿ ವಿಫಲ ಯತ್ನ ನಡೆಸುತ್ತಿತ್ತು. ಯಾವಾಗ ಕಾಂಗ್ರೆಸ್ಸೇತರ ವಿರೋಧಪಕ್ಷಗಳೆಲ್ಲ ಒಗ್ಗೂಡಿ ಜನತಾ ಪಕ್ಷವನ್ನು ಸ್ಥಾಪಿಸಿಕೊಂಡವೊ ಆಗ ಜನಸಂಘವು ಸಹ ಜನತಾಪಕ್ಷದೊಳಗೆ ಸೇರಿಕೊಂಡು ತನ್ನ ಅಸ್ಪೃಶ್ಯತೆಯನ್ನು ಸ್ವಲ್ಪ ಮಟ್ಟಿಗೆ ಕಳೆದುಕೊಳ್ಳಲು ಪ್ರಯತ್ನಿಸಿತು. ಹೀಗೆ ಹಲವು ಪಕ್ಷಗಳು ಸೇರಿ ರಚಿಸಿಕೊಂಡ ಜನತಾಪಕ್ಷ 1977 ರ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ಸನ್ನು ಸೋಲಿಸಿ ಕೇಂದ್ರದಲ್ಲಿ ಅಧಿಕಾರದ ಗದ್ದುಗೆ ಏರಿತು. ಹೀಗೆ ತಾನು ಕನಸಿನಲ್ಲಿಯೂ ನಿರೀಕ್ಷಿಸದ ರೀತಿಯಲ್ಲಿ ಜನಸಂಘವು ಜನತಾಪಕ್ಷದ ಒಂದು ಭಾಗವಾಗಿ ಮೊಟ್ಟಮೊದಲ ಬಾರಿಗೆ ಅಧಿಕಾರದ ರುಚಿ ನೋಡಿತು. ಅವತ್ತು ಅಟಲ್ ಬಿಹಾರಿ ವಾಜಪೇಯಿ ಮತ್ತು ಲಾಲ್ ಕೃಷ್ಣ ಅದ್ವಾನಿಯವರು ಕೇಂದ್ರದಲ್ಲಿ ಸಚಿವರುಗಳಾಗಿಯೂ ಕಾರ್ಯ ನಿರ್ವಹಿಸಿದರು. ಹೀಗೆ ಜನಸಂಘಕ್ಕೆ ಒಂದು ಮಾನ್ಯತೆ ತಂದುಕೊಡುವಲ್ಲಿ ಜಯಪ್ರಕಾಶ್ ನಾರಾಯಣರ ಮತ್ತು ಸಮಾಜವಾದಿಗಳ ಪಾತ್ರದ ಬಗ್ಗೆ ಇವತ್ತು ಯಾರೇನೇ ಸಮರ್ಥನೆ ಮಾಡಿಕೊಂಡರೂ ಚಾರಿತ್ರಿಕ ಪ್ರಮಾದವೊಂದು ಜರುಗಿ ಹೋಗಿತ್ತು. ಅದುವರೆಗು ಇಂಡಿಯಾದ ರಾಜಕಾರಣದಲ್ಲಿ ಯಾವುದೇ ಜನಮನ್ನಣೆಯನ್ನಾಗಲಿ, ಯಶಸ್ಸನ್ನಾಗಲಿ ಪಡೆಯದಿದ್ದ ಸಂಘಪರಿವಾರ ಸಮಾಜವಾದಿಗಳ ಹೆಗಲ ಮೇಲೆ ಕೂತು ತನ್ನ ಭವಿಷ್ಯವನ್ನು ಕಂಡುಕೊಳ್ಳುವ ಪ್ರಯತ್ನದಲ್ಲಿ ಸಾಕಷ್ಟರ ಮಟ್ಟಿಗೆ ಸಫಲವಾಯಿತೆನ್ನಬಹುದು.

ದುರಂತವೆಂದರೆ ಬೇರೆ ಪಕ್ಷಗಳ ಕೃಪೆಯಿಂದ ಯಾವ ಸಂಘಪರಿವಾರಿಗಳು ಮೊದಲ ಬಾರಿಗೆ ಅಧಿಕಾರದ ರುಚಿ ನೋಡಿದರೋ ಅದೇ ಪರಿವಾರಿಗಳು ಸರಕಾರ ಪತನಗೊಂಡು, ಜನತಾ ಪಕ್ಷ ಹೋಳಾಗಲು ಕೂಡಾ ಕಾರಣರಾದರು. ಮಧುಲಿಮಯೆ ಅಂತವರು ಎತ್ತಿದ ರಾಷ್ಟ್ರೀಯ ಸ್ವಯಂಸಂಘದ ದ್ವಿಸದಸ್ಯನೀತಿಯ ಭಿನ್ನಭಿಪ್ರಾಯಗಳಿಂದಾಗಿ ಪತನಗೊಂಡ ಜನತಾಸರಕಾರ 1980ರಲ್ಲಿ ನಡೆದ ಮತ್ತೊಂದು ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ಸಿನ ಎದುರು ಸೋಲನ್ನಪ್ಪಿ ಮತ್ತೆ ಇಂದಿರಾಗಾಂದಿಯವರ ಕೈಗೆ ಅಧಿಕಾರ ಒಪ್ಪಿಸಬೇಕಾಯಿತು. ಜನತಾ ಪಕ್ಷದಿಂದ ಹೊರಬಂದ ಜನಸಂಘ ಬಾರತೀಯ ಜನತಾ ಪಕ್ಷ ಎನ್ನುವ ಹೊಸ ಹೆಸರಿನಲ್ಲಿ ಪುನರ್ ಸ್ಥಾಪಿತವಾಗಿ ತನ್ನ ರಾಜಕಾರಣವನ್ನು ಪ್ರಾರಂಬಿಸಿತು. ಈಗಾಗಲೇ ಅಧಿಕಾರದ ರುಚ ನೋಡಿದ್ದ ಬಾಜಪ ತನ್ನ ಹೊಸ ಅವತಾರದಲ್ಲಿ ಆಕ್ರಮಣಕಾರಿ ರಾಜಕೀಯ ಶುರು ಮಾಡಿತು. ಅಲ್ಲಿಯವರೆಗು ಗಾಂದಿ ಹತ್ಯೆಯ ಕಳಂಕದ ಹಿಂಜರಿಕೆಯಲ್ಲಿದ್ದ ಜನಸಂಘ ಬಾಜಪವಾಗಿ ಬದಲಾದ ನಂತರ ಮುಕ್ತವಾಗಿ ಹಳೆಯದನ್ನೆಲ್ಲ ಜನ ಮರೆತು ಹೋಗುವಂತೆ ತನ್ನ ಸಂಘಪರಿವಾರದ ಬಿಳಲುಗಳನ್ನು ಹೆಚ್ಚಿಸುತ್ತ ಮತ್ತಷ್ಟು ಹೊಸ ಮತೀಯ ಅಂಗಸಂಸ್ಥೆಗಳನ್ನು ಪ್ರಾರಂಬಿಸಿ ಕೋಮುವಾದಿ ರಾಜಕೀಯದಲ್ಲಿ ತೊಡಗಿತು. ಇಂದಿರಾಗಾಂದಿಯವರ ಹತ್ಯೆಯ ನಂತರ ಅಧಿಕಾರಕ್ಕೆ ಬಂದ ರಾಜೀವ್ ಗಾಂದಿಯವರ ಕಾಲದಲ್ಲಿ ದಶಕಗಳಿಂದಲು ನೆನಗುದಿಗೆ ಬಿದ್ದಿದ್ದ ಬಾಬ್ರಿ ಮಸೀಧಿಯ ವಿವಾದಕ್ಕೆ ಮತ್ತೆ ಜೀವ ತುಂಬಿ ತನ್ನ ಅಂಗಸಂಸ್ಥೆಗಳ ಮೂಲಕ ರಾಮಮಂದಿರ ನಿರ್ಮಾಣಕ್ಕೆ ಹೋರಾಡತೊಡಗಿತು. ದಶಕಗಳಿಂದ ಬೀಗಮುದ್ರೆ ಹಾಕಿಸಿಕೊಂಡಿದ್ದ ಮಂದಿರದ ಬೀಗವನ್ನು ತೆಗೆದು ಪೂಜೆಗೆ ಅವಕಾಶ ಕೊಟ್ಟ ರಾಜೀವರ ಅವಿವೇಕಿ ನಿರ್ದಾರ ಕೂಡ ಬಾಜಪಕ್ಕೆ ಸುವರ್ಣಾವಕಾಶವನ್ನು ಒದಗಿಸಿತು. ನಂತರ ಜನರ ಧಾರ್ಮಿಕ ಬಾವನೆಗಳನ್ನು ಕೆರಳಿಸಿ ಅವುಗಳನ್ನು ಮತಗಳನ್ನಾಗಿ ಪರಿವರ್ತಿಸುವ ಹೊಸ ಕಾರ್ಯಕ್ರಮವೊಂದನ್ನು ರೂಪಿಸಿದ ಬಾಜಪ ಅದ್ವಾನಿಯವರ ನೇತೃತ್ವದಲ್ಲಿ ಅಯೋದ್ಯೆಗೆ ರಥಯಾತ್ರೆಯನ್ನು ಆಯೋಜಿಸಿತು. ಗುಜರಾತಿನ ಸೋಮನಾಥದಿಂದ ಹೊರಟ ಈಯಾತ್ರೆಯ ಮೂಲಕ ಮಂದಿರ ನಿರ್ಮಾಣಕ್ಕೆ ಇಟ್ಟಿಗೆ ಸಂಗ್ರಹಿಸುವ ಹೆಸರಿನಲ್ಲಿ ಪ್ರತಿ ರಾಜ್ಯಗಳಲ್ಲೂ ಕೋಮುಸಂಘರ್ಷದ ಬೀಜಗಳನ್ನು ಬಿತ್ತುತ್ತ ಹೋಯಿತು. ಈ ರಥಯಾತ್ರೆ ಬಿಹಾರಕ್ಕೆ ಕಾಲಿಟ್ಟಾಗ ಬಿಹಾರದ ಆಗಿನ ಮುಖ್ಯಮಂತ್ರಿಗಳಾಗಿದ್ದ ಲಾಲು ಪ್ರಸಾದ್ ಯಾದವರು ಅದ್ವಾನಿಯವರನ್ನು ಬಂದಿಸಿ ರಥಯಾತ್ರೆಗೆ ವಿರಾಮವೊಂದನ್ನು ಇಟ್ಟರು. ಆದರೆ ಇಷ್ಟರಲ್ಲಾಗಲೇ ಸಂಘಪರಿವಾರದ ಗುಪ್ತ ಕಾರ್ಯಸೂಚಿಯಂತೆ ಕರ್ನಾಟಕ, ಗುಜರಾತ್, ಉತ್ತರ ಪ್ರದೇಶ, ಆಂದ್ರಪ್ರದೇಶಗಳಲ್ಲಿ ಕೋಮುಗಲಭೆಗಳು ನಡೆಯ ತೊಡಗಿದ್ದವು. ಈ ಅವಧಿಯಲ್ಲಿ ಮಂಡಲ್ ಆಯೋಗದ ವರದಿ ಅನುಷ್ಠಾನ ವಿರೋಧಿಸಿ ನಡೆದ ಹೋರಾಟದಲ್ಲಿ ಮೀಸಲಾತಿಯನ್ನು ವಿರೋಧಿಸುತ್ತಿದ್ದ ಮೇಲ್ಜಾತಿಯವರ ಪರ ನಿಂತ ಬಾಜಪ ಹಿಂದುಗಳ ಅದರಲ್ಲು ಮೇಲ್ಜಾತಿಗಳ ಮತಗಳ ದೃವೀಕರಣಕ್ಕೆ ಮುಂದಾಯಿತು. ನಂತರ 1991ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಗಳಲ್ಲಿ 120 ಸ್ಥಾನಗಳನ್ನು ಪಡೆದ ಬಾಜಪ ತನ್ನ ಬೇರುಗಳನ್ನು ಉತ್ತರ ಭಾರತದಲ್ಲಿ ಬಿಡಲು ಪ್ರಾರಂಬಿಸಿತು. ಹೀಗೆ ಧಾರ್ಮಿಕ ಬಾವನೆಗಳನ್ನು ಕೆರಳಿಸುವುದರಿಂದ ಮತಗಳಿಸಬಹುದೆಂಬ ಸತ್ಯವನ್ನು ಅರ್ಥಮಾಡಿಕೊಂಡ ಬಾಜಪ ಅಲ್ಲಿಂದಾಚೆಗೆ ಯಾವ ಸಂಕೋಚವೂ ಇಲ್ಲದೆ ತನ್ನ ಹಿಂದೂಪರ ಬಲಪಂಥೀಯ ರಾಜಕಾರಣವನ್ನು ಮುಂದುವರೆಸತೊಡಗಿತು.

ಹೀಗೆ ಹಂತಹಂತವಾಗಿ ಬೆಳೆಯತೊಡಗಿದ ಬಾಜಪ 1999ರಲ್ಲಿ ಎನ್.ಡಿ.ಎ. ಮೈತ್ರಿಕೂಟವನ್ನು ರಚಿಸಿಕೊಂಡು ಅಧಿಕಾರಕ್ಕೆ ಬಂದಿತು. ಈ ಪ್ರಕ್ರಿಯೆಯಲ್ಲಿ ಅದುವರೆಗು ತೃತೀಯ ರಂಗದಲ್ಲಿದ್ದು ಜಾತ್ಯಾತೀತ ರಾಜಕೀಯದ ಬಗ್ಗೆ ಬೊಗಳೆ ಬಿಡುತ್ತಿದ್ದ ಅನೇಕ ಪಕ್ಷಗಳು ಬಾಜಪದ ಪರವಾಗಿ ಹೋದವು. ಕಾಂಗ್ರೆಸ್ಸಿನಲ್ಲಿನ ಸಮರ್ಥ ನಾಯಕತ್ವದ ಕೊರತೆ ಮತ್ತು ತೃತೀಯರಂಗದ ನಾಯಕರುಗಳ ಸ್ವಪ್ರತಿಷ್ಠೆಗಳು, ಅವರ ಪಾಳೆಯಗಾರಿಕೆಯ ಹಮ್ಮಿನ ಒಳಜಗಳಗಳು ಬಾಜಪದ ಬೆಳವಣಿಗೆಗೆ ನೀರು ಗೊಬ್ಬರ ಹಾಕಿ ಪೋಷಿಸಿದವು. ತದನಂತರದ ಬೆಳವಣಿಗೆಗಳು ಬಾಜಪಕ್ಕೆ ಪೂರಕವಾಗಿಯೇ ನಡೆಯುತ್ತ ಹೋಗಿದ್ದು ಇಂಡಿಯಾದ ದುರಂತವೆನ್ನಬಹುದಾದರು ನಂತರದ ಹತ್ತು ವರ್ಷಗಳ ಕಾಲ ಅದು ಕಾಂಗ್ರೇಸ್ಸಿನ ಎದುರು ಸೋಲೊಪ್ಪಿಕೊಂಡು ಸುಮ್ಮನಿರಬೇಕಾಯಿತು. ಇದು ಬಾಜಪ ಬೆಳೆದ ಮೊದಲ ಹಂತ. 

ಬಾಜಪದ ಬೆಳವಣಿಗೆ(2004 ರಿಂದ 2014)

2001 ರಿಂದ2014ರ ಮೇತಿಂಗಳವರೆಗು ಗುಜರಾತಿನ ಮುಖ್ಯಮಂತ್ರಿಯಾಗಿದ್ದ ಶ್ರೀ ನರೇಂದ್ರಮೋದಿಯವರ ಆಡಳಿತದಲ್ಲಿ ನಡೆದ ಗೋದ್ರಾ ಹತ್ಯಾಕಾಂಡ ಮತ್ತಿತರೇ ಕೋಮು ಸಂಘರ್ಷಗಳ ನಡುವೆಯೂ 2014 ರ ಹೊತ್ತಿಗೆ ಅದೇ ಮೋದಿಯವರು ಇಂಡಿಯಾದ ಯುವಜನತೆಯ ಐಕಾನ್ ಆಗಿ ತಮ್ಮದೇ ಆದ ಅಲೆಯೊಂದನ್ನು ಬಾಜಪದ ಪರವಾಗಿ ಸೃಷ್ಠಿಸುವಲ್ಲಿ ನೆರವಾದ ಅಂಶಗಳನ್ನು ನಾವು ಗಮನಿಸಬೇಕಕು. ಇದನ್ನು ನಾವು ಕೇವಲ ರಾಜಕೀಯವಾಗಿ ಮಾತ್ರವಲ್ಲದೆ, ನಮ್ಮ ಸಾಮಾಜಿಕ ಹಿನ್ನೆಲೆಯಲ್ಲಿಯೂ ನೋಡಬೇಕಿದೆ.

2004ರ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದಲ್ಲಿ ಯು.ಪಿ.ಎ. ಅಧಿಕಾರಕ್ಕೆ ಬಂದು ಶ್ರೀ ಮನಮೋಹನ್ ಸಿಂಗ್ ಅವರು ಪ್ರದಾನಿಯಾದರೂ ಸಹ ಅವರೆಂದೂ ಜನಸಮುದಾಯದ ನಾಯಕರಾಗಿರಲಿಲ್ಲ. ಎಂದೂ ನೇರ ಚುನಾವಣೆಯನ್ನು ಎದುರಿಸಿರದ ಅವರು ಪ್ರದಾನಿಯಾದ ನಂತರವೂ ಜನನಾಯಕರಾಗುವ ಪ್ರಯತ್ನವನ್ನು ಮಾಡಲಿಲ್ಲ. ಹಾಗೆ ಮಾಡಲು ಅವರು ಪ್ರಯತ್ನಿಸಿದ ನಿದರ್ಶನಗಳೂ ಇಲ್ಲ. ಹಾಗೆ ಪ್ರಯತ್ನಿಸಿದ್ದರೂ ಕಾಂಗ್ರೆಸ್ ಅದಕ್ಕೆ ಅವಕಾಶ ನೀಡಲೂ ಇಲ್ಲ ಎಂಬುದು ಕೂಡ ಸತ್ಯ. ಹೀಗಾಗಿ 2014ರ ಚುನಾವಣೆಯವರೆಗು ಅಧಿಕಾರ ನಡೆಸಿದ ಕಾಂಗ್ರೆಸ್ ಒಬ್ಬ ಜನನಾಯಕನ್ನು ರೂಪಿಸಲು ಸಫಲವಾಗಲಿಲ್ಲ. ಸೋನಿಯಾಗಾಂದಿಯವರು ತಮ್ಮ ಪುತ್ರ ರಾಹುಲ್ ಗಾಂದಿಯನ್ನು ರಾಜಕೀಯಕ್ಕೆ ಕರೆತಂದು 2004ರಲ್ಲಿಯೇ ಸಂಸತ್ ಸದಸ್ಯರನ್ನಾಗಿ ಮಾಡಿದರೂ ಸಹ, ಅವರು ಸರಕಾರದ ಯಾವುದೇ ಹುದ್ದೆಯನ್ನೂ ನಿರ್ವಹಿಸಲು ನಿರಾಕರಿಸಿ ರಾಷ್ಟ್ರದಲ್ಲಿ ಯುವನಾಯಕರಾಗಿ ಬೆಳೆಯಬಹುದಾಗಿದ್ದ ಅವಕಾಶವೊಂದನ್ನು ಕೈಚೆಲ್ಲಿ ಕೂತರು.ಇನ್ನು ಕಾಂಗ್ರೇಸ್ ಮತ್ತು ಬಾಜಪೇತರ ಪಕ್ಷಗಳ ಯಾವ ಪ್ರಾದೇಶಿಕ ನಾಯಕರುಗಳು ಸಹ ತಮ್ಮ ರಾಜ್ಯದ ಮಿತಿಯನ್ನು ಮೀರಿ ರಾಷ್ಟ್ರ ರಾಜಕಾರಣದಲ್ಲಿ ತಮ್ಮ ಅಸ್ಥಿತ್ವವನ್ನು ಸ್ಥಾಪಿಸುವ ಪ್ರಯತ್ನ ಮಾಡಲೇ ಇಲ್ಲ. ಮಾಜಿ ಪ್ರದಾನಿ ಶ್ರೀ ದೇವೇಗೌಡರಂತವರು ಸಹ ಕರ್ನಾಟಕದಲ್ಲಿ ತಮ್ಮ ಪಕ್ಷದ ಅಸ್ಥಿತ್ವವನ್ನು ಉಳಿಸಿಕೊಳ್ಳುವ ಹೋರಾಟದಲ್ಲಿಯೇ ಕಳೆದು ಹೋದರು. ಬಿಹಾರದ ಲಾಲೂ ಪ್ರಸಾದ್ ತಮ್ಮ ಮೇಲಿನ ಕೇಸುಗಳನ್ನು ನಿಬಾಯಿಸುವಲ್ಲಿ ಮಗ್ನರಾದರೆ ಮುಲಾಯಂಸಿಂಗ್ ತಮ್ಮ ಮಗನನ್ನು ಉತ್ತರಪ್ರದೇಶದ ಮುಖ್ಯಮಂತ್ರಿಯನ್ನಾಗಿ ಮಾಡುವಲ್ಲಿಯೇ ಮುಳುಗಿ ಹೋದರು. ಇನ್ನು ಆಂದ್ರದ ಚಂದ್ರಬಾಬು ನಾಯ್ಡುರವರು ಸಹ ತಮ್ಮ ರಾಜ್ಯದಲ್ಲೆದುರಾದ ಶತ್ರುಗಳನ್ನು ಹಣಿಯುವಲ್ಲೇ ಸುಸ್ತಾದಂತೆ ಕಂಡರು ಮಾಯಾವತಿಯವರು ತಮ್ಮ ದಲಿತ ಇಮೇಜಿನಿಂದ ಹೊರಬಂದು ರಾಜಕೀಯ ಮಾಡುವಲ್ಲಿ ಸೋತರು. ಜಯಲಲಿತಾಗು ಸಹ ತಮ್ಮ ಕೇಸುಗಳನ್ನು ಬಗೆಹರಿಸಿಕೊಳ್ಳುವುದೇ ದುಸ್ತರದ ಕಾರ್ಯವಾಗಿತ್ತು. ಹೀಗೆ ಇಂಡಿಯಾದ ರಾಜಕಾರಣ ಸ್ವಪ್ರತಿಷ್ಠೆಯ ಮತ್ತು ಜಾತ್ಯಾಧಾರಿತ ಪ್ರಾದೇಶಿಕ ಪಕ್ಷಗಳಿಂದ ತುಂಬಿ ಹೋಗಿ ಒಬ್ಬನೇ ಒಬ್ಬ ಜನನಾಯಕನೂ ಸೃಷ್ಠಿಯಾಗಲಿಲ್ಲ. 

ಬರ್ಟೋಲ್ಡ್ ಬ್ರೆಕ್ಟ್ ಹೇಳಿದಂತೆ ನಾಯಕನಿಲ್ಲದ ನಾಡಿಗೆ ದುರಂತ ಖಾತ್ರಿ ಅನ್ನುವ ಮಾತು ಇಂಡಿಯಾದ ಮಟ್ಟಿಗೆ ನಿಜವಾಗುತ್ತ ಹೋಯಿತು. ನಾಯಕನಿಲ್ಲದ ಒಂದು ನಾಡಿನಲ್ಲಿ ಯಾವಾಗಲು ಶೂನ್ಯತೆಯೊಂದು ಆವರಿಸುತ್ತ ಹೋಗುತ್ತದೆ. ಆ ಶೂನ್ಯವನ್ನು ಧರ್ಮ ಮತ್ತು ಸರ್ವಾಧಿಕಾರ ಮಾತ್ರ ತುಂಬಬಲ್ಲದು. ಇದನ್ನು ಅರ್ಥಮಾಡಿಕೊಂಡಂತೆ ಬಾಜಪ ತನ್ನ ಕೋಮುವಾದದ ವಿಷವನ್ನು ನಾಡಿನಾದ್ಯಂತ ಬಿತ್ತ ತೊಡಗಿತು. ಈ ಅವಧಿಯಲ್ಲಿ ಜನತೆ ಸಿನಿಕತನದತ್ತ ವಾಲತೊಡಗಿದ್ದರು. ತಮಗೆ ಸಂಬಂದಿಸಿಲ್ಲದ ಯಾವುದೇ ಸಮಸ್ಯೆಗಳಿಗು ಸ್ಪಂದಿಸುವ ಪ್ರತಿಕ್ರಿಯಿಸುವ ಆಸಕ್ತಿ ತೋರದೆ ಸಿನಿಕತನದಿಂದ ವರ್ತಿಸತೊಡಗಿದರು. ಸಮುದಾಯಗಳಲ್ಲಿ ಚಳುವಳಿಗಳು ಹೋರಾಟಗಳು ಮಾಯವಾಗುತ್ತ ಹೋದವು.ಜನತೆ ರಾಜಕಾರಣವನ್ನು ನಿರಾಸಕ್ತಿಯಿಂದ ಅಸಡ್ಡೆಯಿಂದ ನೋಡತೊಡಗಿತು. ಹೀಗೆ ಜನ ಮೌನಕ್ಕೆ ಶರಣಾಗುತ್ತ ಹೋದಂತೆ ನಮ್ಮ ಕಾರ್ಯಾಂಗ ಶಾಸಕಾಂಗ ನ್ಯಾಯಾಂಗಗಳು ಸಹ ಪಾಶ್ರ್ವವಾಯುವಿಗೆ ತುತ್ತಾದಂತೆ ವರ್ತಿಸತೊಡಗಿದವು. ರಾಷ್ಟದಲ್ಲಿ ಎಂತಹ ದುರಂತಗಳು ಸಂಭವಿಸಿದರು ಅವು ತಮಗೆ ಸಂಬಂದಿಸಿಯೇ ಇಲ್ಲವೆಂಬಂತೆ ಜನ ಮಂಪರಿನಲ್ಲಿ ಬದುಕ ತೊಡಗಿದಾಗ, ಸಣ್ಣಪುಟ್ಟ ಬಾವನಾತ್ಮಕ ವಿಚಾರಗಳಿಗು ಜನ ಬಾವೋದ್ರೇಕಗೊಳ್ಳುತ್ತ ಹೋಗುತ್ತಾರೆ. ಹೀಗೆ ನಾಯಕನಿರದ ಒಂದು ನಾಡಿನ ಜನತೆ ಒಬ್ಬ ಬಲಿಷ್ಠನಾಯಕನನ್ನು ಎದುರು ನೋಡತೊಡಗುತ್ತಾರೆ. ತಮ್ಮೆಲ್ಲ ಸಮಸ್ಯೆಗಳನ್ನು ಬಗೆಹರಿಸಬಲ್ಲಂತಹ ಒಬ್ಬ ನಾಯಕನ ಆಗಮನವಾಗದೇ ಇದ್ದಾಗ ಅಂತಹ ಶೂನ್ಯವನ್ನು ಧರ್ಮವೊಂದು ಸಮರ್ಥವಾಗಿ ತುಂಬಿ ಜನರ ಆಶೋತ್ತರಗಳನ್ನು ತಾನು ಮಾತ್ರ ಪೂರೈಸಬಲ್ಲೆನೆಂಬ ಭರವಸೆ ನೀಡತೊಡಗಿ ನಿದಾನವಾಗಿ ಅದು ತಾನೇ ಪ್ರಭುತ್ವವಾಗುವ ದಾರಿಯಲ್ಲಿ ಸಾಗತೊಡಗುತ್ತದೆ. 2000ದ ನಂತರ ಇಂಡಿಯಾದಲ್ಲಿ ಆದದ್ದು ಇಂತಹುದೇ ಬೆಳವಣಿಗೆ: ನಾಯಕನ ಕೊರತೆಯಿದ್ದ ನಾಡಿನಲ್ಲಿ ತನ್ನ ಧರ್ಮರಾಜಕಾರಣ ಶುರು ಮಾಡಿದ ಬಾಜಪ ಬಹುಸಂಖ್ಯಾತ ಹಿಂದೂ ಧರ್ಮೀಯರನ್ನು ಓಲೈಸುತ್ತ ಅಲ್ಪಸಂಖ್ಯಾತರಿಂದ ಧರ್ಮ ನಾಶವಾಗುವ ಭಯವನ್ನು ಬಿತ್ತತೊಡಗಿ ಇತಿಹಾಸವನ್ನು ತನಗೆ ಅನುಕೂಲಕರವಾಗುವ ರೀತಿಯಲ್ಲಿ ಬಳಸಿಕೊಂಡು ಜನತೆಯಲ್ಲಿ ಮತೋನ್ಮಾದವನ್ನು ಸೃಷ್ಠಿಸುತ್ತ ಹೋಯಿತು. ಅದಕ್ಕಾಗಿ ಅದು ಕಾಶ್ಮೀರದ ಸಮಸ್ಯೆಯಿಂದ ಹಿಡಿದು ಬಾಬಾಬುಡನ್ಗಿರಿ, ಬಾಬ್ರಿಮಸೀದಿ ಮುಂತಾದವನ್ನು ತನ್ನ ಕಾರ್ಯತಂತ್ರಕ್ಕೆ ಬಳಸಿಕೊಂಡಿತು. 

ಇದಕ್ಕೆ ಪೂರಕವಾಗಿ ತೊಂಭತ್ತರ ದಶಕದಲ್ಲಿ ಪ್ರಾರಂಭವಾದ ಜಾಗತೀಕರಣ ಮದ್ಯಮವರ್ಗದ ಬದುಕನ್ನು ಸಂಪೂರ್ಣವಾಗಿ ಬದಲಾಯಿಸಿ, ಇಂಡಿಯಾದ ಸಮಾಜವನ್ನು ಒಂದು ಮಾರುಕಟ್ಟೆಯನ್ನಾಗಿ ಮಾಡುವಲ್ಲಿ ಯಶಸ್ವಿಯಾಯಿತು. ತೊಂಭತ್ತರ ದಶಕದ ನಂತರ ಹುಟ್ಟಿದ ಯುವಜನತೆಗೆ  ಇತಿಹಾಸವಾಗಲಿ, ಸ್ವಾತಂತ್ರ ಹೋರಾಟದ ಅರಿವಾಗಲಿ, ಸಮಾಜವಾದಿ ಚಿಂತನೆಗಳ ಸಂಪರ್ಕವಾಗಲಿ ಇಲ್ಲದೆ ಬೆಳೆಯುತ್ತ ಹೋಯಿತು. ಈ ವಯೋಮಾನದ ಯುವಕರಿಗೆ ಸಹಜವಾಗಿ ಹಿಂದೂ ಮೂಲಭೂತವಾದಿಗಳ ಮತಾಂಧ ಮಾತುಗಳು ಆಕರ್ಷಕವಾಗಿ ಕಂಡಿದ್ದರೆ ಅಚ್ಚರಿಯೇನಿಲ್ಲ. ಯುವಜನತೆಯ ಈ ದೌರ್ಬಲ್ಯವನ್ನು ಬಳಸಿಕೊಂಡ ಬಾಜಪ ಇತಿಹಾಸವನ್ನು ತಿರುಚುತ್ತ, ಅನ್ಯಧರ್ಮಗಳ ಮೇಲೆ ಇಲ್ಲಸಲ್ಲದ ಗೂಬೆಗಳನ್ನು ಕೂರಿಸುತ್ತ ಯುವಜನತೆಯಲ್ಲಿ ಮತಾಂಧತೆಯ ವಿಷವನ್ನು ಹರಡುತ್ತ ಹೋಯಿತು. ಇವತ್ತು ನೀವು ಯಾವುದೇ ಸಾಮಾಜಿಕ ಜಾಲತಾಣವನ್ನು ಸೂಕ್ಷ್ಮವಾಗಿ ಗಮನಿಸಿದರೆ ಹಿಂದೂ ಮತೀಯವಾದದ ಕುರಿತಾಗಿ ಮುವತ್ತು ವರ್ಷದೊಳಗಿನ ಯುವಕರೇ ಹೆಚ್ಚಾಗಿ ಬರೆಯುತ್ತಿರುವುದು ಮತ್ತು ತಾವು ಓದಿಕೊಂಡ ಸಂಘ ಪರಿವಾರ ಮರುಸೃಷ್ಠಿಸಿದ ಇತಿಹಾಸವನ್ನೆ ಸತ್ಯವೆಂದು ನಂಬಿರುವ ಬಲಪಂಥೀಯರ ಒಂದು ಕಾರ್ಯಪಡೆಯನ್ನೇ ಕಾಣಬಹುದು. ಹೀಗೆ ಬಾಜಪ ಮತ್ತು ಅದರ ಸಂಘಪರಿವಾರದ ಸದಸ್ಯ ಸಂಸ್ಥೆಗಳು ಯುವಜನತೆಯನ್ನು ಗುರಿಯಾಗಿಸಿಟ್ಟುಕೊಂಡು ದೇಶಭಕ್ತಿ ಮತ್ತು ಧರ್ಮ ಎರಡೂ ಒಂದೇ ಎನ್ನುವ ಹೊಸ ಸಿದ್ದಾಂತವನ್ನು ಹರಡುತ್ತ ಹೋದವು. ಹೀಗಾಗಿ ದೇಶದ ಒಟ್ಟು ಮತದಾರರ ಪೈಕಿ ಶೇಕಡಾ ಐವತ್ತಕ್ಕೂ ಹೆಚ್ಚಿರುವ ಯುವಪೀಳಿಗೆ ಸಹಜವಾಗಿ ಬಾಜಪದತ್ತ ವಾಲಿತು.

ಈ ಸಂದರ್ಭದಲ್ಲಿಯೇ ಗುಜರಾತಿನ ಮುಖ್ಯಮಂತ್ರಿಯಾಗಿದ್ದ ನರೇಂದ್ರಮೋದಿಯವರನ್ನು ಹಿಂದೂ ಧರ್ಮ ರಕ್ಷಕನೆಂದೂ, ಅಭಿವೃದ್ದಿಯ ಹರಿಕಾರನೆಂದು ಬಿಂಬಿಸಿದ ಬಾಜಪ, ನಾಯಕನೊಬ್ಬನ ನಿರೀಕ್ಷೆಯಲಿದ್ದ ಜನತೆಗೆ ಬಲಪಂಥೀಯ ನಾಯಕನೊಬ್ಬನ್ನು ನೀಡಿತು. ಇದನ್ನು ತನ್ನ ಅನುಕೂಲಕ್ಕೆ ಬಳಸಿಕೊಂಡ ಮೋದಿಯವರು ಒಬ್ಬ ಬಲಿಷ್ಠ,ಬಲಪಂಥೀಯ ನಾಯಕ ಬಳಸುವ ಬಾಷೆಯನ್ನು, ಬಾಷಣ ಮಾಡುವ ಶೈಲಿಯನ್ನು, ಅದಕ್ಕೆ ತಕ್ಕಂತಹ ದೈಹಿಕ ವರ್ತನೆಗಳನ್ನು ಆವಾಹಿಸಿಕೊಂಡು ದೇಶಭಕ್ತಿಯ ಬಗ್ಗೆ, ಹಿಂದಿನವರ ಭ್ರಷ್ಟಾಚಾರದ ಬಗ್ಗೆ, ಮುಂದೆ ತಾವು ತರಲಿರುವ ಅಮೂಲಾಗ್ರ ಬದಲಾವಣೆಗಳ ಬಗ್ಗೆ ವೀರಾವೇಶದಿಂದ ಮಾತಾಡಿ ರಾಷ್ಟ್ರ ಸುತ್ತಲು ಪ್ರಾರಂಬಿಸಿದರು. ಹೀಗೆ ಜನರ ಕನಸುಗಳನ್ನು ತಮ್ಮ ಅನುಕೂಲಕ್ಕೆ ಬಳಸಿಕೊಂಡ ಬಾಜಪ ಜನತೆಗೆ ಒಬ್ಬ ಬಲಪಂಥೀಯ ನಾಯಕನನ್ನು ನೀಡಿತು. ತನ್ನನ್ನು ಬೆಂಬಲಿಸುವ ಉದ್ಯಮಿಗಳನ್ನು, ಮಾಧ್ಯಮಗಳನ್ನೂ ಬಳಸಿಕೊಂಡ ಬಾಜಪ ಮೋದಿ ಪರವಾದ ಅಲೆಯೊಂದನ್ನು ಸೃಷ್ಠಿಸುವಲ್ಲಿ ಯಶಸ್ವಿಯಾಯಿತು. ಮೋದಿ ಅಲೆ ಎನ್ನುವುದು ಸಮೂಹ ಸನ್ನಿಯ ರೂಪ ಪಡೆದು 2014 ರ ಹೊತ್ತಿಗೆ ಅಧಿಕಾರ ಪಡೆಯುವಲ್ಲಿಗೆ ಬಂದು ನಿಂತಿತು.

ಹೀಗೆ ಬಾಜಪ ವಿರೋಧಪಕ್ಷಗಳ ಪ್ರತಿರೋಧವಿರದೆ ಅಧಿಕಾರ ಪಡೆಯುವಲ್ಲಿ ಪೂರಕವಾದ ಅಂಶಗಳು ಈ ಕೆಳಕಂಡಂತಿವೆ: 

ಬಾಜಪದ ಮತಾಂಧರಾಜಕಾರಣ, ಸಮರ್ಥನಾಯಕನನನ್ನು ಸೃಷ್ಠಿಸಿ ಹೋರಾಡಲಾಗದ ಕಾಂಗ್ರೆಸ್ಸಿನ ದೌರ್ಬಲ್ಲ, ಒಂದಾಗಿ ರಾಜಕರಣ ಮಾಡದ ವಿರೋಧಪಕ್ಷಗಳ ಒಳಜಗಳಗಳು, ಬಂಡವಾಳಶಾಹಿ ಉದ್ಯಮಪತಿಗಳ ಹಣಕಾಸಿನ ಬೆಂಬಲ, ತಮ್ಮನ್ನು ತಾವೇ ಮಾರಿಕೊಂಡ ಬಹುತೇಕ ರಾಷ್ಟ್ರೀಯ ಮಾಧ್ಯಮಗಳೆಲ್ಲ ಸೇರಿ ಬಾಜಪದ ಪರವಾಗಿ ಕೆಲಸ ಮಾಡಿ ಅದನ್ನು ಕೇಂದ್ರದ ಗದ್ದುಗೆಯಲ್ಲಿ ಕೂರಿಸಲು ಯಶಸ್ವಿಯಾದವು. ಇಷ್ಟಾದರು ಇನ್ನೂ ಇಂಡಿಯಾದ ಹಲವು ಭಾಗಗಳು ಬಾಜಪದ ತೆಕ್ಕೆಗೆ ಬಂದಿಲ್ಲ. ಉತ್ತರದ ಅನೇಕ ರಾಜ್ಯಗಳಲ್ಲಿ ಈಗಾಗಲೇ ಅಧಿಕಾರ ನಡೆಸುತ್ತಿರುವ ಬಾಜಪ ಬರಲಿರುವ ರಾಜ್ಯವಿದಾನಸಭಾ ಚುನಾವಣೆಗಳಲ್ಲಿ ಗೆಲುವು ಸಾದಿಸಲು ಇನ್ನಿಲ್ಲದ ಪ್ರಯತ್ನ ಮಾಡುತ್ತಿದೆ. 

ಬಾಜಪದ ಕೋಮುರಾಜಕಾರಣದ ವಿರುದ್ದ ಸೃಷ್ಠಿಯಾಗಬೇಕಿರುವ ಮಹಾಮೈತ್ರಿಕೂಟ

ಮತಾಂಧ ರಾಜಕಾರಣದ ಚುಂಗು ಹಿಡಿದು ಕೊಂಡು, ಸಂಘಪರಿವಾರದ ಗುಪ್ತ ಕಾರ್ಯಸೂಚಿಯ ಆಣತಿಯಂತೆ ರಾಜಕಾರಣ ಮಾಡುತ್ತ ಬಂದಿರುವಬಾಜಪದ ಸಿದ್ದಾಂತಗಳು ನಮ್ಮ ಬಹು ಸಂಸ್ಕೃತಿಯ ಸಮಾಜದ ಮಟ್ಟಿಗೆ ಪ್ರತಿಗಾಮಿಯಾಗಿರುತ್ತವೆ. ಪಶ್ಚಿಮದ ಏಕಧರ್ಮ, ಏಕಬಾಷೆ, ಏಕರಾಷ್ಟ ಎಂಬ ಸಿದ್ದಾಂತಗಳಿಗೆ ಪೂರಕವಾಗಿ ತನ್ನ ಮತಾಂಧ ರಾಜಕಾರಣವನ್ನು ಮಾಡುತ್ತಿರುವ ಬಾಜಪ ತನ್ನ ಉದ್ದೇಶಗಳನ್ನು ಈಡೇರಿಸಿಕೊಳ್ಳಲು ಇಂತಹ ಸನ್ನಿವೇಶವನ್ನು ಸೂಕ್ತವಾಗಿ ಬಳಸಿಕೊಳ್ಳಲು ಯತ್ನಿಸುವುದು ಖಚಿತ. ಯಾವುದೇ ಬಲಪಂಥೀಯ ರಾಜಕೀಯ ಕೂಟವೂ ವಿರೋಧಿಗಳ ಇರುವಿಕೆಯನ್ನು ಬಯಸುವುದಿಲ್ಲ. ಆದರಿಂದ ಅದು ದುರ್ಬಲಗೊಂಡ ಕಾಂಗ್ರೆಸ್ಸಿನ ಜೊತೆಜೊತೆಗೆ ಪ್ರಾದೇಶಿಕ ಪಕ್ಷಗಳನ್ನೂ ದುರ್ಬಲಗೊಳಿಸುವ ಪ್ರಯತ್ನ ಮಾಡುತ್ತ ಹೋಗುತ್ತದೆ. ಅದರ ಇಂತಹ ಸಂಚಿಗೆ ಬಲಿಯಾದ ಪ್ರಾದೇಶಿಕ ಪಕ್ಷಗಳು ಅನಿವಾರ್ಯವಾಗಿ ರಾಷ್ಟ್ರ ಮಟ್ಟದಲ್ಲಿ ಅದರ ನೇತೃತ್ವವನ್ನು ಒಪ್ಪಿಕೊಳ್ಳಬೇಕಾಗುತ್ತದೆ. ಇಂತಹ ಬೆಳವಣಿಗೆಯಿಂದ ಪ್ರಾದೇಶಿಕ ಹಿತಾಸಕ್ತಿಗಳು ನಗಣ್ಯವಾಗಿ ಐಕ್ಯತೆ ಮತ್ತು ಬಲಿಷ್ಠ ರಾಷ್ಟ್ರದಹೆಸರಲ್ಲಿ ಸ್ಥಳೀಯವಾದ ಎಲ್ಲ ಪ್ರಜಾತಂತ್ರದ ವ್ಯವಸ್ಥೆಗಳನ್ನು ಅದು ನಾಶಪಡಿಸುತ್ತ ಹೋಗುತ್ತದೆ. ಇಂತಹದೊಂದು ಅಪಾಯ ಒಂದೆರಡು ದಿನಗಳಲ್ಲಿ ವರ್ಷಗಳಲ್ಲಿ ಆಗದಿರಬಹುದು. ಆದರೆ ಒಂದು ರಾಷ್ಟ್ರದ ಇತಿಹಾಸದಲ್ಲಿ ತೀರಾ ದೀರ್ಘವೆನಿಸದ ಐದರಿಂದ ಹತ್ತು ವರ್ಷಗಳಲ್ಲಿ ಈ ಬೆಳವಣಿಗೆಗಳು ಕ್ಷಿಪ್ರಗತಿಯಲ್ಲಿ ನಡೆದು ಬಿಡಬಹುದು.

ಆದ್ದರಿಂದ ನಮ್ಮ ಪ್ರಜಾಪ್ರಭುತ್ವವನ್ನು ಉಳಿಸಿಕೊಳ್ಳಲು, ಇಂಡಿಯಾದ ಎಲ್ಲ ಸಮುದಾಯ -ಸಂಸ್ಕೃತಿಗಳ ಉಳಿವಿಗಾಗಿ ಬಾಜಪಕ್ಕೆ ಸವಾಲೊಡ್ಡಬಲ್ಲ ಒಂದು ಪ್ರಬಲ ಶಕ್ತಿಯ ಅಗತ್ಯ ಇವತ್ತು ಹಿಂದೆಂದಿಗಿಂತಲೂ ಹೆಚ್ಚಿದೆ. ಹೀಗಾಗಿಯೇ ಇವತ್ತು ಪ್ರಾದೇಶಿಕ ಪಕ್ಷಗಳು ಸಮಾನಮನಸ್ಕ ರಾಜಕೀಯ ವೇದಿಕೆಯೊಂದನ್ನು ರಚಿಸಿಕೊಂಡು ತಮ್ಮತಮ್ಮ ರಾಜ್ಯಗಳಲ್ಲಿ ಬಾಜಪವನ್ನು ಎದುರಿಸಿ ನಿಲ್ಲುವ ಸವಾಲನ್ನು ಸ್ವೀಕರಿಸಬೇಕಾಗಿದೆ. 

ಬಾಜಪವನ್ನು ಎದುರಿಸುವಲ್ಲಿ ಕಾಂಗ್ರೆಸ್ ವಿಫಲವಾದರೂ ಪ್ರಾದೇಶಿಕ ಪಕ್ಷಗಳು ಮಾತ್ರ ಗಟ್ಟಿಯಾಗಿ ನೆಲೆ ನಿಂತು ಬಾಜಪವನ್ನು ಹಿಮ್ಮೆಟ್ಟಿಸಬಲ್ಲವು. ಬಾಜಪದ ಮತಾಂಧ ರಾಜಕಾರಣದ ಮತ್ತು ಸಾಂಸ್ಕೃತಿಕ ರಾಜಕಾರಣದ ತಂತ್ರಗಾರಿಕೆಗೆ ಉತ್ತರ ನೀಡುವಲ್ಲಿ ಕಾಂಗ್ರೇಸ್ ಸೋತ ಕಡೆ ಪ್ರಾದೇಶಿಕ ಪಕ್ಷಗಳು ಖಡಕ್ಕಾಗಿ ಉತ್ತರ ನೀಡುತ್ತಿವೆ. 2015ರಲ್ಲಿ ನಡೆದ ಬಿಹಾರ ರಾಜ್ಯ ವಿದಾನಸಭಾ ಚುನಾವಣೆಯಲ್ಲಿ ನಿತೀಶ್ ಲಾಲೂ ಸೇರಿ ರಚಿಸಿಕೊಂಡ ಮಹಾಘಟಬಂದನ್ ಇದಕ್ಕೊಂದು ತಾಜಾ ಉದಾಹರಣೆ.ಆದರೆ ಇದನ್ನು ಅರ್ಥ ಮಾಡಿಕೊಳ್ಳಬೇಕಾದ ಉಳಿದ ಪ್ರಾದೇಶಿಕ ಪಕ್ಷಗಳ ನಾಯಕರುಗಳಿನ್ನೂ ಎಚ್ಚರಗೊಂಡಂತೆ ಕಾಣುತ್ತಿಲ್ಲ. ಕಾಂಗ್ರೆಸ್ಸನ್ನು ಹೊರತು ಪಡಿಸಿಯೂ ಪ್ರಾದೇಶಿಕ ಪಕ್ಷಗಳು ಬಾಜಪವನ್ನು ಎದುರಿಸುವ ಬಹುದೊಡ್ಡ ಶಕ್ತಿಯನ್ನು ಹೊಂದಿವೆ. ಇನ್ನುಳಿದ ರಾಜ್ಯಗಳಲ್ಲಿಯೂ ಪ್ರಾದೇಶಿಕ ನಾಯಕರುಗಳು ಇದ್ದು ಮುಂದಿನ ದಿನಗಳಲ್ಲಿ ಅವರ ರಾಜ್ಯಗಳಲ್ಲಿ ನಡೆಯುವ ವಿದಾನಸಭೆಯ ಚುನಾವಣೆಗಳು ಅವರ ಬಲಪ್ರದರ್ಶನಕ್ಕೆ ಸಾಕ್ಷಿಯಾಗಲಿವೆ. ಅಂದರೆ ಎಂಬತ್ತನೇ ದಶಕದ ಅಂತ್ಯದಲ್ಲಿ ರಚನೆಯಾದ ಕಾಂಗ್ರೇಸ್ ವಿರೋಧಿ ಮೈತ್ರಿಕೂಟದ ರೀತಿಯೇ ಇವತ್ತು ಬಾಜಪೇತರ ಪಕ್ಷಗಳ ಮೈತ್ರಿಕೂಟವೊಂದು ರಚನೆಯಾಗಬೇಕಿದೆ. ಆ ದಿನಗಳಲ್ಲಿ ಅಂತಹದೊಂದು ಕೂಟ ರಚನೆಗೆ ಬಾರಿ ಉತ್ಸಾಹದಿಂದ ಮತ್ತು ಪ್ರಾಮಾಣಿಕವಾಗಿ ಪ್ರಯತ್ನ ನಡೆಸಿದ್ದು ನಮ್ಮ ಎಡಪಕ್ಷಗಳೇ.ಇವತ್ತಿನ ಸನ್ನಿವೇಶದಲ್ಲಿಯೂ ಮತ್ತೆ ಎಡಪಕ್ಷಗಳೇ ಇಂತಹದೊಂದು ವೇದಿಕೆ ರಚನೆಗೆ ಮುಂದಾಗಿ ಮುನ್ನಡಿ ಬರೆಯಬೇಕಾಗಿದೆ. ಯಾಕೆಂದರೆ ಈಗಿರುವ ಪ್ರಾದೇಶಿಕ ಪಕ್ಷಗಳ ನಾಯಕರುಗಳನ್ನು ಒಂದೇ ವೇದಿಕೆಯಡಿ ಕರೆತಂದು ಮಾತುಕತೆಗೆ ಕೂರಿಸಲು ಬೇರಾವ ಶಕ್ತಿಗಳಿಗೂ ಸಾದ್ಯವಿಲ್ಲ. ನನಗನ್ನಿಸುವಂತೆ ತನ್ನ ಕೋಮುವಾದಿ ವಿರೋಧಿ ಮತ್ತು ಬಂಡವಾಳಶಾಹಿ ವಿರೋಧಿ ತತ್ವಗಳ ಬಗ್ಗೆ ಕಿಂಚಿತ್ತೂ ರಾಜಿಯಾಗದೆ ರಾಜಕಾರಣ ಮಾಡುತ್ತಿರುವ ಎಡಪಕ್ಷಗಳಿಗೆ ಮಾತ್ರ ಅಂತಹದೊಂದು ನೈತಿಕ ಶಕ್ತಿಯಿದೆಯೆಂದು ನಾನು ನಂಬಿದ್ದೇನೆ.

ಮುಂದಿನ ವರ್ಷ ಎದುರಾಗಲಿರುವ ಚುನಾವಣೆಗಳಿಗೂ ಮುನ್ನ ಇಂತಹ ಮೈತ್ರಿ ಸಾದ್ಯವಾಗುವುದಾದರೆ?

ಮುಂದಿನ ವರ್ಷಕ್ಕೆ ಅಂದರೆ 2017ಕ್ಕೆ ಉತ್ತರಪ್ರದೇಶ, ಉತ್ತರಾಕಾಂಡ್, ಪಂಜಾಬ್, ಗೋವಾ, ಮಣಿಪುರಗಳಲ್ಲಿ ಚುನಾವಣೆಗಳು ನಡೆಯ ಬೇಕಾಗಿದ್ದು ಬಾಜಪದ ಶಕ್ತಿಯನ್ನು ಅವು ಮತ್ತೊಮ್ಮೆ ಒರೆಹಚ್ಚಲಿವೆ. ಅಷ್ಟರ ಒಳಗಾಗಿ ಆಯಾ ರಾಜ್ಯಗಳಿಗೆ ಸೀಮಿತವಾಗಿ ಇಂತಹದೊಂದು ಮಹಾ ಮೈತ್ರಿಕೂಟ ರಚನೆಯಾಗುವುದೇ ಆದರೆ ಅದು ಬಾಜಪದ ಪಾಲಿಗೆ ಕಷ್ಟಕರ ಚುನಾವಣೆಗಳಾಗಬಹುದು.ಅದರಲ್ಲೂ ಮುಖ್ಯವಾಗಿ ಉತ್ತರ ಪ್ರದೇಶದ ವಿದಾನಸಭಾ ಚುನಾವಣೆಗಳು ತೀವ್ರ ಕುತೂಹಲ ಮೂಡಿಸಿವೆ. ಕಾರಣ ಕಳೆದ ಸಾರ್ವತ್ರಿಕ ಚುನಾವಣೆಯಲ್ಲಿ ಬಾಜಪ ಬಾರಿ ಜಯಗಳಿಸಿದ್ದು, ಅಲ್ಲೀಗ ಸಮಾಜವಾದಿ ಪಕ್ಷ ಅಧಿಕಾರದಲ್ಲಿರುವುದು. ಜೊತೆಗೆ ಮುಲಾಯಂಸಿಂಗ್ ಯಾದವ್ ಮತ್ತು ಮಾಯಾವತಿಯವರಂತಹ ಘಟಾನುಘಟಿ ನಾಯಕರುಗಳು ಎರಡು ಪ್ರಾದೇಶಿಕ ಪಕ್ಷಗಳನು ಮುನ್ನಡೆಸುತ್ತಿರುವುದಾಗಿದೆ.ಬಹುಜನಪಕ್ಷ ಮತ್ತು ಸಮಾಜವಾದಿ ಪಕ್ಷಗಳು ಬಾಜಪವನ್ನು ಹೇಗೆ ಎದುರಿಸಿ ನಿಲ್ಲುತ್ತವೆಯೆಂಬುದೇ ಸದ್ಯಕ್ಕಿರುವ ಪ್ರಶ್ನೆ. ಬಾಜಪದ ಮತಾಂಧ ರಾಜಕಾರಣದ ವಿರುದ್ದದ ಹೋರಾಟದಲ್ಲಿ ಈ ಎರಡೂ ಪಕ್ಷಗಳ ಜೊತೆ ರಾಜ್ಯದ ಗಡಿಭಾಗದಲ್ಲಿ ಪ್ರಬಲವಾಗಿರುವ ನಿತೀಶರ ಸಂಯುಕ್ತ ಜನತಾದಳ,ಲಾಲೂ ಪ್ರಸಾದ್ ಯಾದವರ ರಾಷ್ಟ್ರೀಯ ಜನತಾದಳ,ಅಜಿತ್ ಸಂಗ್ ರವರ ಲೋಕದಳ ಪಕ್ಷಗಳು ಸೇರಿಕೊಂಡರೆ ಬಾಜಪದ ಜಯವನ್ನು ತಡೆಯ ಬಹುದಾಗಿದೆ. ಇಲ್ಲಿ ಗಂಬೀರವಾದ ಸಮಸ್ಯೆ ಇರುವುದು ಮಾಯಾವತಿ ಮತ್ತು ಮುಲಾಯಂ ನಡುವಿನ ಜಟಾಪಟಿ. ಇವರಿಬ್ಬರೂ ರಾಷ್ಟ್ರದ ಹಿತದೃಷ್ಠಿಯಿಂದ ತಮ್ಮ ಪ್ರತಿಷ್ಠೆಯನ್ನು ಬಿಟ್ಟು ಮೈತ್ರಿಗೆ ಮುಂದಾದರೆ ಬಹುಶ: ಬಾಜಪ ಅತ್ಯಂತ ಹೀನಾಯವಾಗಿ ಸೋಲುವುದು ಶತಸಿದ್ದ.

ಇನ್ನು ಪಂಜಾಬಿನಲ್ಲಿ ಆಮ್ ಆದ್ಮಿ ಪಕ್ಷ ಆಳವಾಗಿ ಬೇರು ಬಿಡುತ್ತಿದ್ದು ಕಳೆದ ಲೋಕಸಭಾ ಚುನಾವಣೆಯಲ್ಲಿ ಉತ್ತಮ ಸಾಧನೆ ಮಾಡಿತ್ತು. ಇದೀಗ ಅಲ್ಲಿನ ಅಕಾಲಿದಳ ಮತ್ತು ಬಾಜಪ ಮೈತ್ರಿಕೂಟಕ್ಕೆ ಗೆಲುವು ಸುಲಭಸಾದ್ಯವೇನಲ್ಲ. ಇದುವರೆಗು ಕಾಂಗ್ರೇಸ್ ಮತ್ತು ಅಕಾಲಿದಳ ಮೈತ್ರಿಕೂಟದ ನಡುವೆ ನಡೆಯುತ್ತಿದ್ದ ನೇರ ಹಣಾಹಣಿಯ ಬದಲು ತ್ರಿಕೋನ ಸ್ಪರ್ದೆ ಏರ್ಪಡಲಿದ್ದು ಅಕಾಲಿದಳದ ಮೈತ್ರಿಕೂಟ ಗೆಲ್ಲಲು ಕಷ್ಟಪಡಬೇಕಾಗಿದೆ.

ಇನ್ನು ಉತ್ತರಕಾಂಡದಲ್ಲಿ ಸದ್ಯ ಕಾಂಗ್ರೆಸ್ ಆಳ್ವಿಕೆ ನಡೆಸುತ್ತಿದ್ದು ಇತ್ತೀಚೆಗೆ ಬಾಜಪ ಅಲ್ಲಿ ಕಾಂಗ್ರೆಸ್ ಶಾಸಕರನ್ನು ಪಕ್ಷಾಂತರಕ್ಕೆ ಪ್ರಚೋದಿಸಿ, ರಾಷ್ಟ್ರಪತಿ ಆಳ್ವಿಕೆ ಹೇರಿದ್ದನ್ನು ನ್ಯಾಯಾಲಯ ಅನೂರ್ಜಿತಗೊಳಿಸಿದ ಪ್ರಕರಣ ಮತದಾರರ ಮನಸಿನಲ್ಲಿ ಬಾಜಪದ ಬಗ್ಗೆ ಬೇಸರವುಂಟು ಮಾಡಿದ್ದು. ಕಾಂಗ್ರೇಸ್ಸಿಗೆ ಅನುಕಂಪದ ಆಸರೆ ದೊರೆಯಬಹುದಾಗಿದೆ. ಅದೂ ಅಲ್ಲದೆ ಮುಖ್ಯಮಂತ್ರಿ ರಾಬತ್ ವಿಶ್ವಾಸ ಮತ ಯಾಚಿಸುವ ಸಂದರ್ಭದಲ್ಲಿ ಬಹುಜನ ಪಕ್ಷದ ಶಾಸಕರು ಅವರಿಗೆ ಬೆಂಬಲ ನೀಡಿದ್ದರು. ಇದರ ಹೊರತಾಗಿಯು ಅಲ್ಲಿ ಸಾಕಷ್ಟು ಪ್ರಬಾವ ಹೊಂದಿರುವ ಲಾಲೂ ಪ್ರಸಾದ್, ಮುಲಾಯಂ, ಮಾಯಾವತಿಯವರು ಒಂದಾಗಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದರೆ ಕಾಂಗ್ರೇಸ್ ಮತ್ತು ಬಾಜಪದ ಸೋಲಿಗೆ ಕಾರಣವಾಗಬಹುದಾಗಿದೆ.ಇನ್ನು ಗೋವಾದಲ್ಲಿ ಬಾಜಪ ಅಧಿಕಾರದಲ್ಲಿದ್ದರೂ ಮನೋಹರ್ ಪಣಿಕ್ಕರ್ ರಾಷ್ಟ್ರ ರಾಜಕೀಯಕ್ಕೆ ಬಂದ ನಂತರ ಅಲ್ಲಿನ ಬಾಜಪ ಶಕ್ತಿಕಳೆದುಕೊಂಡಂತೆ ಕಾಣುತ್ತದೆ. ಆಡಳಿತ ವಿರೋಧಿ ಅಲೆಯೇನಾದರು ಅಲ್ಲಿ ಬೀಸಿದರೆ ಬಾಜಪ ಗೆಲ್ಲುವುದು ಕಷ್ಟವಾಗಲಿದೆ.ಮಣಿಪುರದಲ್ಲಿ ಕಾಂಗ್ರೇಸ್ ಆಳ್ವಿಕೆ ನಡೆಸುತ್ತಿದ್ದು ಸ್ಥಳೀಯ ಪಕ್ಷಗಳು ಸಹ ಬಲಾಡ್ಯವಾಗಿವೆ..

ಇವೆಲ್ಲವನ್ನೂ ಸೂಕ್ಷ್ಮವಾಗಿ ಯಾವುದೇ ಪೂರ್ವಾಗ್ರಹವಿಲ್ಲದೆ ನೋಡಿದರೆ ಮುಂದಿನ ದಿನಗಳಲ್ಲಿ ಬಾಜಪ ತಾನಂದು ಕೊಂಡಂತೆ ಸಲೀಸಾಗಿ ಗೆಲ್ಲುತ್ತಾ ಹೋಗುವುದು ಅಸಾದ್ಯದ ಮಾತು. ಮುಂದೆ ನಡೆಯಲಿರುವ ವಿದಾನಸಭಾ ಚುನಾವಣೆಗಳ ಪಲಿತಾಂಶಗಳೇನೇ ಆಗಿರಲಿ, ಪ್ರಾದೇಶಿಕ ಪಕ್ಷಗಳ ಕಾರ್ಯತಂತ್ರದ ಆಧಾರದ ಮೇಲೆ 2019ರ ಲೋಕಸಭಾ ಚುನಾವಣೆಯಲ್ಲಿ ಬಾಜಪದ ಸೋಲು ಗೆಲುವು ನಿರ್ದಾರವಾಗಲಿದೆ. ಆದರೆ ಇಂತಹ ಕಾರ್ಯತಂತ್ರ ಹೇಗಿರಬೇಕೆಂದರೆ ಬಾಜಪೇತರ ಪಕ್ಷಗಳು ಒಂದಾಗಿ ನಿಲ್ಲುವಂತಿರಬೇಕು

ಬಿಹಾರದಲ್ಲಿ ನಡೆದ ಮಹಾಘಟಬಂದನ್ ರಾಷ್ಟ್ರ ಮಟ್ಟದಲ್ಲೇನಾದರು ನಡೆದರೆ ಮುಂದಿನ ಚುನಾವಣೆಯ ದಿಕ್ಕೇ ಬದಲಾಗುವ ಸಂಭವವಿದೆ. ಆದರೆ ಈ ಮೈತ್ರಿ ಬಾಜಪ ಮತ್ತು ಕಾಂಗ್ರೆಸ್ ಎರಡರಿಂದಲೂ ಸಮಾನಾಂತರ ಕಾಪಾಡಿಕೊಳ್ಳಬೇಕಾದ ಅನಿವಾರ್ಯತೆಯೂ ಇದೆ. ಏಕೆಂದರೆ ತಮ್ಮನ್ನು ಕಳೆದ ವಿದಾನಸಭೆ ಚುನಾವಣೆಯಲ್ಲಿ ಶತಾಯ ಗತಾಯ ವಿರೋದಿಸಿದ ಕಾಂಗ್ರೇಸ್ಸನ್ನು ಮಮತಾ ಬ್ಯಾನರ್ಜಿಯಾಗಲಿ ಜಯಲಲಿತಾ ಆಗಲಿ ಒಪ್ಪಿಕೊಳ್ಳಲಾರರು. ಈ ದಿಸೆಯಲ್ಲಿ ಎರಡೂ ರಾಷ್ಟ್ರೀಯ ಪಕ್ಷಗಳನ್ನು ದೂರವಿಟ್ಟು ಪ್ರಾದೇಶಿಕ ಪಕ್ಷಗಳು ಒಂದು ಮಹಾಮೈತ್ರಿಕೂಟವನ್ನು ರಚಿಸಿಕೊಂಡದ್ದೇ ಆದಲ್ಲಿ ಪ್ರದಾನಮಂತ್ರಿ ನರೇಂದ್ರ ಮೋದಿಯವರ ಮುಂದಿನ ಹಾದಿ ಕಠಿಣವಾಗಲಿದೆ. 

ನಿತೀಶ್ ಕುಮಾರ್, ಜಯಲಲಿತಾ ಹಾಗು ಮಮತಾ ಬ್ಯಾನರ್ಜಿಯವರು ಸದ್ಯದ ಮಟ್ಟಿಗೆ ತಮ್ಮ ರಾಜ್ಯಗಳಲ್ಲಿ ಬಾಜಪ ಮತ್ತು ಕಾಂಗ್ರೆಸ್ ಎನ್ನುವ ಎರಡೂ ರಾಷ್ಟ್ರೀಯ ಪಕ್ಷಗಳನ್ನು ತಡೆಯುವಲ್ಲಿ ಯಶಸ್ವಿಯಾಗಿದ್ದು ಮುಂದಿನ ದಿನಗಳಲ್ಲಿ ರಾಷ್ಟ್ರ ಮಟ್ಟದಲ್ಲಿಯೂ ಅವರುಗಳು ಒಂದಾಗಿ ಕಾರ್ಯನಿರ್ವಹಿಸುವ ಸಾದ್ಯತೆ ಹೆಚ್ಚಿದೆ. ಯಾಕೆಂದರೆ ಎಲ್ಲಿಯವರಗು ಈ ರಾಷ್ಟ್ರೀಯ ಪಕ್ಷಗಳು ಬಲಾಢ್ಯವಾಗಿರುತ್ತವೆಯೊಅಲ್ಲಿಯವರೆಗು ಪ್ರಾದೇಶಿಕ ಪಕ್ಷಗಳನ್ನು ನೆಮ್ಮದಿಯಾಗಿರಲು ಅವು ಬಿಡಲಾರವು ಎನ್ನುವ ಸತ್ಯ ಅವರಿಗೆ ಗೊತ್ತಿದೆ. ಇದರಲ್ಲಿ ಬಹಳ ಮುಖ್ಯವಾಗಿ ನಿತೀಶ್ ಕುಮಾರ್ ಬಹಳ ಆಕ್ರಮಣಕಾರಿಯಾಗಿ ಎರಡೂಪಕ್ಷಗಳನ್ನು ಎದುರಿಸಿ ನಿಂತು ರಾಷ್ಟ್ರ ಮಟ್ಟದಲ್ಲಿ ಬೆಳೆಯುವ ಇರಾದೆ ಹೊದಿದ್ದಾರೆ. ಬಿಹಾರದ ಆಚೆಗೂ ಅವರ ಆಸಕ್ತಿ ಇರುವುದರಿಂದಲೇ ಅವು ಮೊನ್ನೆ ನಡೆದ ಚುನಾವಣೆಗಳಲ್ಲಿ ಪಶ್ಚಿಮ ಬಂಗಾಳ ಮತ್ತು ಅಸ್ಸಾಂಗಳಲ್ಲಿ ತಮ್ಮ ಉಮೇದುವಾರರನ್ನು ಹಾಕಿದ್ದರು. ಇನ್ನು ಸಮಯ ಸರಿಯೆನ್ನಿಸಿದರೆ ಜಯಲಲಿತಾಸಹ ರಾಷ್ಟ್ರ ರಾಜಕಾರಣಕ್ಕೆ ದುಮುಕಲು ಸಿದ್ದರಾಗಿದ್ದಾರೆ. ಇನ್ನು ಮಮತಾ ಬ್ಯಾನರ್ಜಿ ಕೇಂದ್ರಸಚಿವೆಯಾಗಿದ್ದು ಇಡೀರಾಷ್ಟ್ರವನ್ನೇ ಸುತ್ತಿದವರು, ಅವರಿಗೂ ರಾಷ್ಟ್ರ ರಾಜಕಾರಣ ಹೊಸದೇನಲ್ಲ. ಇನ್ನು ಉತ್ತರ ಪ್ರದೇಶದಲ್ಲಿ ಮುಂದಿನ ಚುನಾವಣೆಯಲ್ಲಿ ಉತ್ತಮ ಸಾಧನೆ ಮಾಡಿದ್ದೇ ಆದರೆ ಮಾಯಾವತಿಯವರೂ ಸಹ ಇವರೊಂದಿಗೆ ಕೈ ಜೋಡಿಸಬಹುದಾಗಿದೆಇನ್ನು ಮುಲಾಯಂ ಸಿಂಗ್ ಸಹ ರಾಷ್ಟ್ರವ್ಯಾಪಿ ಗೊತ್ತಿರುವ ನಾಯಕರೇ ಆಗಿದ್ದು ಕರ್ನಾಟಕದಂತ ರಾಜ್ಯದಲ್ಲಿಯೂ ಸ್ವಲ್ಪ ಮಟ್ಟಿಗೆ ಅವರ ಪ್ರಬಾವವಿದೆ

ಇಂತಹದೊಂದು ಮೈತ್ರಿಕೂಟ ಸೃಷ್ಠಿಯಾಗುವುದೇ ಆದಲ್ಲಿ ಅದಕ್ಕೆ ರಾಷ್ಟ್ರದ ಇತರೇ ರಾಜ್ಯಗಳ ಹಲವಾರು ಬಲಾಢ್ಯ ನಾಯಕರುಗಳ ಪ್ರಾದೇಶಿಕ ಪಕ್ಷಗಳೂ ಸೇರಬಹುದಾದ ಸಾದ್ಯತೆಯಿದ್ದು, ಅವುಹೀಗಿವೆ: ಬಿಜುಜನತಾದಳ (ನವೀನ್ಪಟ್ನಾಯಕ್,), ಜನತಾದಳ (ಹೆಚ್.ಡಿ.ದೇವೇಗೌಡ), ವೈ.ಎಸ್.ಆರ್. ಕಾಂಗ್ರೆಸ್ (ಜಗನ್ಮೋಹನ ರೆಡ್ಡಿ), ತೆಲಂಗಾಣ ರಾಷ್ಟ್ರೀಯ ಸಮಿತಿ (ಚಂದ್ರಶೇಖರರಾವ್), ನ್ಯಾಷನಲ್ ಕಾನ್ಫರೆನ್ಸ್ (ಉಮರ್ ಅಬ್ದುಲ್ಲಾ) ಆಮ್ಆದ್ಮಿ (ಅರವಿಂದಕೇಜ್ರೀವಾಲ್), ಎನ್.ಸಿ.ಪಿ. (ಶರದಪವಾರ್), ರಾಷ್ಟ್ರೀಯ ಜನತಾದಳ (ಲಾಲೂಪ್ರಸಾದ್ ಯಾದವ್) ಬಹುಜನಪಕ್ಷ ( ಮಾಯಾವತಿ), ಅಸ್ಸಾಮಿನ ಏ.ಐ.ಯು.ಡಿ.ಎಫ್ ಹಾಗು ಕೇರಳದ ಕೆಲವು ಸಣ್ಣಪುಟ್ಟ ಪಕ್ಷಗಳು ಇಂತಹದೊಂದು ಮೈತ್ರಿಯಾಗುವುದಾದರೆ ಅದರ ಪಾಲುದಾರರಾಗಬಹುದಾದ ಸಾದ್ಯತೆಗಳಿವೆ.ಇಷ್ಟೆಲ್ಲ ಹೇಳಿದ ಮೇಲೂ ಬಗೆಹರಿಯದೆ ಉಳಿಯುವ ಒಂದು ಪ್ರಶ್ನೆಯೆಂದರೆ ಇಂತಹ ಮೈತ್ರಿಕೂಟದ ಪ್ರದಾನಮಂತ್ರಿ ಯಾರಾಗಬೇಕೆಂಬುದಾಗಿ.ಬಹುಶ: ಅದನ್ನು ಚುನಾವಣೆಯ ನಂತರವೇ ನಿರ್ದರಿಸುವುದು ಕ್ಷೇಮವೆನಿಸುತ್ತದೆ.

ಇಲ್ಲಿಯವರೆಗೂ ನಾನು ಹೇಳಿದ್ದೆಲ್ಲ ಒಂದು ರಾಜಕೀಯ ಬದಲಾವಣೆಯ, ದೃವೀಕರಣದ ಸಾದ್ಯತೆಯ ಬಗ್ಗೆಯೇ ಹೊರತು ಬೇರೇನಲ್ಲ. ಯಾಕೆಂದರೆ ಇದುವರೆಗೂ ಅಧಿಕೃತವಾಗಿ ಯಾವೊಂದು ಪಕ್ಷವೂ, ಯಾರೊಬ್ಬ ನಾಯಕರೂ ಈ ಬಗ್ಗೆ ಒಂದು ಹೆಜ್ಜೆಯನ್ನೂ ಇಟ್ಟಿಲ್ಲ. ಆದರೆ ತಮ್ಮಗಳ ಪಕ್ಷಗಳನ್ನು ಉಳಿಸಿಕೊಳ್ಳುವ ಮತ್ತು ತಮ್ಮ ರಾಜ್ಯಗಳಲ್ಲಿ ತಮಗಿರುವ ನೆಲೆಯನ್ನು ಉಳಿಸಿಕೊಳ್ಳುವ ದಿಕ್ಕಿನಲ್ಲಿ ಪ್ರಾದೇಶಿಕ ಪಕ್ಷಗಳು ಇಂದಲ್ಲಾ ನಾಳೆ ಇಂತಹದೊಂದು ಪ್ರಯೋಗಕ್ಕೆ ಮುಂದಾದರೆ ಅಚ್ಚರಿಯೇನಿಲ್ಲ. ಇಂತಹದೊಂದು ಮೈತ್ರಿಯೇನಾದರು ಉಂಟಾದರೆಕಾಂಗ್ರೇಸ್ ಇರಲಿ, ಬಾಜಪ ಮತ್ತು ಮೋದಿಯವರಿಗೆ ಬಹಳಷ್ಟು ಹಿನ್ನಡೆಯುಂಟಾಗುವುದು ಖಚಿತ. ಏಕೆಂದರೆಬಾಜಪ ನಡೆಸುತ್ತಿರುವ ಸಾಂಸ್ಕೃತಿಕ ಮತ್ತು ಮತಾಂಧ ರಾಜಕಾರಣಕ್ಕೆ ಪರ್ಯಾಯವಾದ ರಾಜಕೀಯ ಮಾಡುವ ಶಕ್ತಿಯೊಂದನ್ನು ಜನತೆ ಬಯಸುತ್ತಿದೆ. ಆದರೆ ಮೋದಿ ಮತ್ತು ಅಮಿತ್ ಷಾರವರ ತಂತ್ರಗಾರಿಕೆಗಳನ್ನು, ಸಂಘರಿವಾರದ ರಹಸ್ಯ ಕಾರ್ಯಸೂಚಿಗಳನ್ನೂ ಎದುರಿಸಲು ಬೇಕಾದತನ್ನದೇ ಆದ ಕಾರ್ಯತಂತ್ರವನ್ನು ರೂಪಿಸಲು ಇಲ್ಲಿಯವರೆಗು ಕಾಂಗ್ರೇಸ್ ವಿಫಲವಾಗಿದ್ದು ಜನರಿಗೆ ಅದರ ಬಗ್ಗೆ ವಿಶ್ವಾಸ ಕಡಿಮೆಯಾಗುತ್ತಿದೆ. ಹೀಗಾಗಿ ಪ್ರಾದೇಶಿಕ ಪಕ್ಷಗಳು ಎಲ್ಲಿಯವರೆಗು ಬಲವಾದ ರಾಜಕೀಯ ಶಕ್ತಿಗಳಾಗಿರುತ್ತವೆಯೊ ಅಲ್ಲಿಯವರೆಗೂ ಬಾಜಪರಾಷ್ಟ್ರದಾದ್ಯಂದ ಬೆಳೆಯುವುದು ಕಷ್ಟದ ಕೆಲಸ. ಈ ದಿಕ್ಕಿನಲ್ಲಿ ಯೋಚಿಸಿ ಎಲ್ಲ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮಾತುಕತೆ ನಡೆಸಬಲ್ಲಂತಹ ರಾಜಕೀಯ ಮುತ್ಸದ್ದಿಯೊಬ್ಬರ ಅಗತ್ಯವಿದೆ. ವ್ಯಕ್ತಿಯಾಗಲ್ಲದೆ ಪಕ್ಷವಾಗಿ ಎಡಪಕ್ಷಗಳು ಇಂತಹದೊಂದು ಮುತ್ಸದ್ದಿತನದ ಕೆಲಸ ಮಾಡಬೇಕಾಗಿದೆ. ರಾಷ್ಟ್ರದ ಕೋಮು ಸಾಮರಸ್ಯವನ್ನು ,ಬಹುಸಂಸ್ಕೃತಿಯ ನಮ್ಮ ಸಮಾಜ ವಿಚ್ಚಿದ್ರವಾಗದಂತೆ ಕಾಪಾಡುವ ನಿಟ್ಟಿನಲ್ಲಿ ಇಂತಹ ಪ್ರಯತ್ನವೊಂದು ನಡೆಯದೇ ಹೋದರೆ ಭವಿಷ್ಯದಲ್ಲಿ ಬಲಪಂಥೀಯರ ಕಪಿಮುಷ್ಠಿಯಲ್ಲಿ ಸಿಲುಕುವ ರಾಷ್ಟ್ರವನ್ನು ಕಾಪಾಡಲು ಯಾರಿಂದಲೂ ಸಾದ್ಯವಿಲ್ಲ.

ಆದರೆ ಅಧಿಕಾರದ ರುಚಿ ಕಂಡಿರುವ ಕಾಂಗ್ರೆಸಾಗಲಿ, ಬಾಜಪವಾಗಲಿ ಇಂತಹದೊಂದು ಮೈತ್ರಿಕೂಟ ರಚನೆಯಾಗದಂತೆ ನೋಡಿಕೊಳ್ಳಲು ತಾವು ಕಲಿತ ವಿದ್ಯೆಯನ್ನೆಲ್ಲ ಖರ್ಚು ಮಾಡುವುದು ಖಂಡಿತಾ. ಇದನ್ನು ಅರ್ಥ ಮಾಡಿಕೊಂಡೇ ಮುಂದಿನ ಹೆಜ್ಜೆ ಇಡಬೇಕಾಗಿದೆ.

(ಈ ಲೇಖನ ಬರೆಯುವ ಹೊತ್ತಿಗೆ ನನ್ನ ಮನಸಿನಲ್ಲಿದ್ದುದು ಇಂಡಿಯಾದ ಒಬ್ಬ ಸಾಮಾನ್ಯ ಮತದಾರ ಏನನ್ನು ಬಯಸುತ್ತಾನೆಂಬುದನ್ನು ಮಾತ್ರ ಗಮನದಲ್ಲಿಟ್ಟುಕೊಂಡು ಮಾತ್ರ. ಹಾಗಾಗಿ ಲೇಖನದ ಎರಡನೇ ಭಾಗ ಅತಿಯಾದ ನಿರೀಕ್ಷೆಯ ಆದರ್ಶದ ಅಂಶಗಳನ್ನು ಹೊಂದಿರಬಹುದಾಗಿದೆ. ಹಾಗಾಗಿ ಸಾಮಾನ್ಯನೊಬ್ಬ ಚಿಂತಿಸಬಹುದಾದ ರೀತಿಯಲ್ಲಿ ಸರಳವಾಗಿ ಬರೆದಿರುವೆ)

ಆಗ 28, 2016

ಧಾರವಾಡದಲ್ಲಿ ಬಂದೂಕಿನೆದುರು ರಾಷ್ಟ್ರೀಯ ಜನದನಿ ಜಾಥಾ

ಡಾ. ಕಲಬುರ್ಗಿ ಪಾನ್ಸರೆ ದಾಭೋಲ್ಕರ್ ಹತ್ಯಾವಿರೋಧಿ ಹೋರಾಟ ಸಮಿತಿ ಧಾರವಾಡ

ಡಾ. ಕಲಬುರ್ಗಿ ಪನ್ಸಾರೆ ದಾಭೋಲ್ಕರ್ ಹತ್ಯೆ ವಿರೋಧಿಸಿ
ಮತ್ತು ಸರಕಾರದ ತನಿಖಾ ವಿಳಂಭ ನೀತಿಯನ್ನು ಖಂಡಿಸಿ
ಕೋಮುವಾದಿ ಮತ್ತು ಪ್ಯಾಸಿಸ್ಟ್ ಶಕ್ತಿಗಳಿಗೆ ಉತ್ತರ ಹೇಳುವ

ಬಂದೂಕಿನೆದುರು ರಾಷ್ಟ್ರೀಯ ಜನದನಿ ಜಾಥಾ
ಹಾಗೂ
ಅಭಿವ್ಯಕ್ತಿ ಪರ ರಾಷ್ಟ್ರೀಯ ಸಮಾವೇಶ

೨೦೧೬ ಆಗಸ್ಟ್ ೩೦ ಧಾರವಾಡದಲ್ಲಿ

ಜಾಥಾ
ಕಲ್ಯಾಣನಗರದ ಡಾ. ಎಂ. ಎಂ. ಕಲಬುರ್ಗಿ ಅವರ ಮನೆ ಸೌಜನ್ಯದ ಆವರಣದಿಂದ ಮುಂಜಾನೆ ೧೦ ಗಂಟೆಗೆ ಆರಂಭ
ಸಮಾವೇಶ
ಟೌನ ಹಾಲ್ ಮೈದಾನ (ಆರ್ ಎಲ್ ಎಸ್ ಕಾಲೇಜ ಮೈದಾನ) ಮಧ್ಯಾಹ್ನ ೧೨ ಗಂಟೆಗೆ

ಪ್ರಖರ ಚಿಂತನೆಗೆ ಹೆಸರಾದ ಡಾ. ಎಂ.ಎಂ. ಕಲಬುರ್ಗಿ ಅವರು ಸಾಂಸ್ಕೃತಿಕರಂಗದಲ್ಲಿ ಎಷ್ಟೇ ಪ್ರತಿರೋಧ ಹುಟ್ಟಿಕೊಂಡರೂ ಅವರು ನಂಬಿಕೊಂಡ ಸತ್ಯವನ್ನು ಪ್ರತಿಪಾದಿಸುತ್ತ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಬದ್ಧರಾದವರು. ಆರೋಗ್ಯವಂತ ಸಮಾಜಕ್ಕೆ ಮಾರಕವಾದ ಗೊಡ್ಡು ಸಂಪ್ರದಾಯ, ಮೂಢನಂಬಿಕೆ, ಧರ್ಮಾಂಧತೆ, ಕೋಮುವಾದ, ಮನುವಾದ ಮುಂತಾದವು ಅವರು ವಿರೋಧಿಸುವ ವಿಚಾರಗಳಾಗಿದ್ದವು. ಅಂಥ ಪ್ರಖರ ಚಿಂತನೆಯ ನಾಡು ಹೆಮ್ಮೆ ಪಡುವ ಸಂಶೋಧಕರು ಅಪ್ಪಟ ಬಸವ ಅನುಯಾಯಿಗಳೂ ಆಗಿದ್ದ ೭೭ ವರ್ಷದ ಎಂ. ಎಂ. ಕಲಬುರ್ಗಿಯವರನ್ನು ಧಾರವಾಡದಲ್ಲಿ ೨೦೧೫, ಆಗಸ್ಟ್ ೩೦ರಂದು ಗುಂಡಿಟ್ಟು ಕೊಲ್ಲಲಾಯಿತು. ಇದು ಕಲಬುರ್ಗಿಯವರ ಕೊಲೆ ಮಾತ್ರವಾಗಿರದೆ ಅದು ಮಾನವೀಯತೆ, ಪ್ರಜಾಪ್ರಭುತ್ವ, ಬಸವ ವಾದ, ನಾಗರಿಕತೆ, ವೈಚಾರಿಕತೆಯ ಕೊಲೆಯೂ ಆಗಿದೆ. ಅವರನ್ನು ಕೊಂದ ಕ್ರಿಯೆ ಸ್ಪಷ್ಟವಾಗಿ ಕರ್ನಾಟಕದಲ್ಲಿ ಮತೀಯ ಭಯೋತ್ಪಾದನೆ ಹುಟ್ಟಿಕೊಂಡಿರುವದಕ್ಕೆ ಪುರಾವೆಯಾಗಿದೆ. ಇದು ಸಾಂಸ್ಕೃತಿಕ ಭಯೋತ್ಪಾದನೆಯೂ ಆಗಿದೆ. ಅದು ವೈಚಾರಿಕ ಭಿನ್ನಾಭಿಪ್ರಾಯವನ್ನು ಸಹಿಸದ ಮನಸ್ಥಿತಿಗಳು ಅದನ್ನು ಹಿಂಸೆಯಿಂದ ಎದುರಿಸಲು ಮುಂದಾಗಿರುವದರ ನಿಖರ ಸೂಚನೆಯಾಗಿದೆ. ಇದು ಕನ್ನಡ ಸಾಂಸ್ಕೃತಿಕ ಲೋಕದ ಆತಂಕಕಾರಿ ಬೆಳವಣಿಗೆಗೆ.

ಹಿಂದೂ-ಲಿಂಗಾಯತ-ವೀರಶೈವ ಧರ್ಮ ಕುರಿತು ಕೆಲವು ಅಪ್ರಿಯ ವಾದಗಳ ಕಟ್ಟಾ ಪ್ರತಿಪಾದಕರಾಗಿದ್ದ; ಕನ್ನಡ ನುಡಿಯ, ಜನ ಬದುಕಿನ ದೇಸೀ ಆಕರಗಳನ್ನು ಹುಡುಕಿ, ಅರ್ಥೈಸಿ, ವಿಶ್ಲೇಷಣೆಗೆ ಒಡ್ಡುತ್ತಿದ್ದ ಸತ್ಯನಿಷ್ಠ ಸಂಶೋಧಕನ ಬದುಕನ್ನು ಅನುಚಿತ ರೀತಿಯಲ್ಲಿ ಕೊನೆಗೊಳಿಸಲಾಯಿತು. ಗುರುವೇ ಎಂದು ಒಳಬಂದವರೇ ಗುಂಡು ಹಾಕಿ ಹೋದರು. ಪ್ರಜ್ಞಾವಂತ ಜನ ದಿಗ್ಭ್ರಮೆಗೊಂಡರು, ಅವರನ್ನು ನೆನಪಿಸಿಕೊಂಡರು, ದುಃಖಗೊಂಡರು, ಆಕ್ರೋಶಗೊಂಡರು. ಹತ್ಯೆಯನ್ನು ದೇಶಾದ್ಯಂತ ಸಾಹಿತಿ-ಚಿಂತಕರು ಖಂಡಿಸಿ ಹಲವರು ತಮ್ಮ ಪ್ರಶಸ್ತಿ, ಪಾರಿತೋಷಕಗಳನ್ನು ಹಿಂತಿರುಗಿಸಿದರು.

ಕಲಬುರ್ಗಿ ಅವರ ಹತ್ಯೆ ವಿಚಾರ ವಿರೋಧಿಗಳ ಕೃತ್ಯ. ಆದರೆ ವಿಚಾರಕ್ಕೆ ವಿಚಾರ ಉತ್ತರವಾಗಬೇಕೇ ವಿನಹ ಹತ್ಯೆಯಲ್ಲ. ವಿಚಾರದ ಮೂಲಕ ಪ್ರತ್ಯುತ್ತರ ನೀಡಲಾರದ ಹೀನ ಮನಸುಗಳು ಕಲ್ಬುರ್ಗಿಯವರಂತೆಯೇ ಹಲವಾರು ಶ್ರೇಷ್ಠ ಚಿಂತಕರನ್ನು ಹತ್ಯೆ ಮಾಡಿದವು. ಮಹಾರಾಷ್ಟ್ರದ ಅಂಧಶ್ರದ್ಧಾ ನಿರ್ಮೂಲನ ಸಮಿತಿಯ ಹೋರಾಟಗಾರ ಡಾ. ನರೇಂದ್ರ ದಾಭೋಲ್ಕರ್,ಕೊಲ್ಲಾಪುರದ ಹೋರಾಟಗಾರ ಗೋವಿಂದ ಪಾನ್ಸರೆ ಅವರೂ ಕಲ್ಬುರ್ಗಿಯವರಿಗಿಂತ ಮೊದಲು ಅದೇರೀತಿ ಹತ್ಯೆಗೊಳಗಾಗಿದ್ದರು. ಆದರೆ ದಾಭೋಲ್ಕರ್ -ಪಾನ್ಸರೆ-ಕಲ್ಬುರ್ಗಿ ಅವರ ಹತ್ಯೆ ಸಂಭವಿಸಿ ವರ್ಷಗಟ್ಟಲೆ ಕಳೆದರೂ ಕೊಲೆಗಾರರ ಸುಳುಹು ದೊರೆತಿಲ್ಲ ಎನ್ನುವುದು ಹಂತಕ ವ್ಯವಸ್ಥೆಯ ಬೇರುಗಳು ಎಷ್ಟು ಆಳದ ತನಕ ಇಳಿದಿವೆ ಎನ್ನಲು ಸಾಕ್ಷಿಯಾಗಿವೆ.

ಇವತ್ತು ಎಲ್ಲೆಡೆ ಹಿಂಸೆಯನ್ನು ವೈಭವೀಕರಿಸುವ, ಒಪ್ಪಿಕೊಳ್ಳುವ ಉನ್ಮಾದದ ಮನಸ್ಥಿತಿ ಸೃಷ್ಟಿಸಲಾಗುತ್ತಿದೆ. ಪರಸ್ಪರರನ್ನು ಸಹಿಸಿಕೊಳ್ಳುವುದು ಅಪರೂಪದ ಮೌಲ್ಯವಾಗತೊಡಗಿದೆ. ಧರ್ಮ, ದೇವರು, ಜಾತಿ, ದೇಶ, ಭಾಷೆ ಕುರಿತ ಸಣ್ಣ ವಿಮರ್ಶೆಯೂ ತೀವ್ರ ಪ್ರತಿಕ್ರಿಯೆಗೆ ಕಾರಣವಾಗುತ್ತಿದೆ. ಅದಕ್ಕೆ ಪ್ರಸಕ್ತ ರಾಜಕೀಯ ಮತ್ತು ಮಾರುಕಟ್ಟೆ ವ್ಯವಸ್ಥೆಗಳು ಸೇರಿ ಹುಟ್ಟುಹಾಕಿರುವ ಹುಸಿ ಧಾರ್ಮಿಕತೆಯ ವಾತಾವರಣ ಕಾರಣವಾಗಿದೆ.

ಈಗ ದೇಶವು ಫ್ಯಾಸಿಸ್ಟರ ಕೈಯಲ್ಲಿ ಸಿಕ್ಕು ಒದ್ದಾಡುತ್ತಿರುವುದು ಎಲ್ಲರಿಗೂ ತಿಳಿದ ಸಂಗತಿಯಾಗಿದೆ. ಒಂದೆಡೆ ಕೋಮುವಾದದ ದಳ್ಳುರಿ ಇನ್ನೊಂದೆಡೆ ಭಯೋತ್ಪಾದನೆಯ ಕಿಚ್ಚು ಇವುಗಳ ನಡುವೆ ಜನಸಾಮಾನ್ಯರು ನಲುಗಿ ಹೋಗುತ್ತಿದ್ದಾರೆ. ಇತ್ತೀಚೆಗೆ ಸಂಸ್ಕೃತಿ ಧರ್ಮದ ನೆಪದಲ್ಲಿ ಗೋರಕ್ಷರೆನಿಸಿಕೊಂಡಿರುವ ನರಭಕ್ಷಕರು ದಲಿತರು, ಅಲ್ಪಸಂಖ್ಯಾತರು ಮಹಿಳೆಯರು ಮತ್ತು ದುಡಿಯವ ಜನರ ಮೇಲೆ ರಣಹದ್ದಿನಂತೆ ಎರಗುತ್ತಿದ್ದಾರೆ. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಇವರ ಗೂಂಡಾಗಿರಿ ದಿನದಿನಕ್ಕೆ ಹೆಚ್ಚಾಗುತ್ತಿದೆ. ಈವರೆಗೆ ಕೋಮುವಾದಿಗಳು ತೆರೆಮರೆಯಲ್ಲಿ ತಮ್ಮ ರಾಕ್ಷಸಿತನ ಮೆರೆಯುತ್ತಿದ್ದರು. ಆದರೆ ಈಗ ಖುಲ್ಲಂಖುಲ್ಲಾ ಎಲ್ಲೆಂದರಲ್ಲಿ ಜನಸಾಮಾನ್ಯರ ಮೇಲೆ ಎರಗು ಬೀಳುತ್ತಿದ್ದಾರೆ. ಕಾರಣ ಆಳುವ ಸರಕಾರವು ಕೋಮುವಾದಿಗಳ ಕೈಗೊಂಬೆಯಾಗಿದೆ. ಅಷ್ಟೆ ಅಲ್ಲ ಉಗ್ರ ಕೋಮುವಾದಿಗಳೇ ಪ್ರಭುತ್ವದ ಚುಕ್ಕಾಣಿ ಹಿಡಿದಿದ್ದಾರೆ.

ಹೀಗಾಗಿಯೇ ದೇಶದಾದ್ಯಂತ ಸಮಾನತೆ ಸಾರುವ ಬುದ್ದಿಜೀವಿ, ಕಲಾವಿದರು, ಸಮಾಜಕಾರ್ಯಕರ್ತರನ್ನು ಅಟ್ಟಾಡಿಸಿಕೊಂಡು ಕೊಲ್ಲಲಾಗುತ್ತಿದೆ. ಕೋಮುವಾದಿಗಳ ಕುತಂತ್ರಕ್ಕೆ ಬಲಿಯಾದ ಹುತಾತ್ಮರ ಸಂಖ್ಯೆ ಬೆಳೆಯುತ್ತಲೇ ಇದೆ. ಮಹಾತ್ಮಾ ಗಾಂಧಿಯಿಂದ ಹಿಡಿದು ನರೇಂದ್ರ ದಾಬೋಲ್ಕರ್, ಗೋವಿಂದ ಪಾನ್ಸಾರೆ ಮತ್ತು ಎಂ.ಎಂ.ಕಲಬುರ್ಗಿ ಇವರನ್ನು ಕೊಂದ ಘೋಡ್ಸೆಗಳು ಎಲ್ಲೆಲ್ಲಿಯೂ ರಾಜಾರೋಷವಾಗಿಯೇ ತಲೆಯೆತ್ತಿದ್ದಾರೆ.

ಇಷ್ಟೆಲ್ಲ ನಡೆದರೂ ಕರ್ನಾಟಕ ಸರಕಾರವು ಕಲಬುರ್ಗಿ ಹಂತಕರನ್ನು ಇನ್ನುವರೆಗೆ ಬಂಧಿಸಿಲ್ಲ. ಇದು ಖಂಡನಾರ್ಹ. 

ಈಗಾಗಲೇ ಸರಕಾರಕ್ಕೆ ಕಲಬುರ್ಗಿ ಹಂತಕರ ಸುಳಿವು ಸಿಕ್ಕ ಅಂದಾಜು ಇದೆ. ಅದಾಗ್ಯೂ ಅಪರಾಧಿಗಳನ್ನು ಪತ್ತೆ ಹಚ್ಚುವಲ್ಲಿ ವಿಳಂಬ ನೀತಿ ಅನುಸರಿಸುತ್ತಿರುವುದು ಸರ್ವಥಾ ಖಂಡನೀಯ.

ಹಾಗಾದರೆ ಕರ್ನಾಟಕ ಸರಕಾರವು ತನಗರಿವಿಲ್ಲದೆ ಕೋಮುವಾದಿಗಳ ಕುತಂತ್ರಕ್ಕೆ ಬಲಿಯಾಗುತ್ತಿದೆಯೇ? ಅಥವ ಕೇಂದ್ರದಲ್ಲಿರುವ ಕೋಮುವಾದಿ ಸರಕಾರದ ಹಿಟ್ಲರಿಜಂಗೆ ಭಯ ಬೀಳುತ್ತಿದೆಯೇ? ಎಂಬ ಪ್ರಶ್ನೆಗಳು ಕನ್ನಡಿಗರನ್ನು ಕಾಡುತ್ತಿವೆ. ಈ ದಿಸೆಯಲ್ಲಿ ಬರಲಿರುವ ಆಗಸ್ಟ್ ಮೂವ್ವತ್ತಕ್ಕೆ ಕಲಬುರ್ಗಿಯವರ ಹತ್ಯೆಯಾಗಿ ಬರೋಬ್ಬರಿ ಒಂದು ವರ್ಷ ಗತಿಸುತ್ತದೆ. ಒಂದು ವರ್ಷದ ಅವಧಿ ಸಣ್ಣದೇನಲ್ಲ. ಕನ್ನಡಿಗರ ಸಹನೆಗೂ ಒಂದು ಮಿತಿ ಇದೆ. ಈಗ ನಮ್ಮ ಮಿತಿಯ ಕಟ್ಟೆ ಒಡೆದಿದೆ. ಇನ್ನು ಕನ್ನಡ ನಾಡು ಒಳಗೊಂಡಂತೆ ದೇಶವನ್ನು ಫ್ಯಾಸಿಸಮ್ಮಿನಿಂದ ಮುಕ್ತಗೊಳಿಸಲೇಬೇಕಾಗಿದೆ.

ಆದ್ದರಿಂದ ದಿನಾಂಕ ೩೦.೮.೨೦೧೬ರಂದು ಮುಂಜಾನೆ ಹತ್ತು ಗಂಟೆಗೆ ಧಾರವಾಡದ ಎಂ.ಎಂ.ಕಲಬುರ್ಗಿಯವರ ಮನೆಯಿಂದ ರಾಷ್ಟ್ರಮಟ್ಟದ ಬೃಹತ್ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ. ಆರ್ ಎಲ್ ಎಸ್ ಕಾಲೇಜ್ ಗ್ರೌಂಡಿನಲ್ಲಿ ೧೨ ಗಂಟೆಗೆ ’ಅಭಿವ್ಯಕ್ತಿ ಪರ ರಾಷ್ಟ್ರೀಯ ಸಮಾವೇಶ’ ನಡೆಯಲಿದೆ. ಪ್ರತಿಭಟನಾ ಮೆರವಣಿಗೆ ಮತ್ತು ಸಮಾವೇಶದಲ್ಲಿ ದೇಶದಾದ್ಯಂತ ಹೋರಾಟಗಾರಿರು, ವಿಚಾರವಾದಿಗಳು, ಸಾಹಿತಿಗಳು, ವಿಜ್ಞಾನಿಗಳೂ, ಕಲಾವಿದರು, ಚಲನಚಿತ್ರ ನಿರ್ದೇಶಕರು,ನಿರ್ಮಾಪಕರು, ಕ್ರೀಡಾಪಟುಗಳು, ವಿದ್ಯಾರ್ಥಿಗಳು, ಯುವಕರು, ಮಹಿಳೆಯರು ಮತ್ತ ಸಮಾಜದ ಎಲ್ಲ ಸ್ತರದ ವಿವೇಕವಂತರು ಭಾಗವಹಿಸುತ್ತಿದ್ದಾರೆ. ೮೧ಕ್ಕೂ ಹೆಚ್ಚು ಸಂಘಟನೆಗಳು ಪಾಲ್ಗೊಳ್ಳುತ್ತಿವೆ. ನೀವೂ ಬನ್ನಿ ನಿಮ್ಮ ಸಂಘಟನೆಗಳ ಜೊತೆಗೆ

ಪಾಲ್ಗೊಳ್ಳುವ ಸಂಘಟನೆಗಳು:

೧) ಕರ್ನಾಟಕ ಸ್ವಾಭಿಮಾನಿ ವೇದಿಕೆ ಬೆಂಗಳೂರು
೨) ರಾಜ್ಯ ರೈತ ಸಂಘ ಕರ್ನಾಟಕ
೩) ಕರ್ನಾಟಕ ಲೇಖಕಿಯರ ಸಂಘ ಬೆಂಗಳೂರು
೪) ಜನವಾದಿ ಮಹಿಳಾ ಸಂಘಟನೆ ಕರ್ನಾಟಕ
೫) ಲಡಾಯಿ ಪ್ರಕಾಶನ ಗದಗ
೬) ಡಾ ಕಲಬುರ್ಗಿ ಪನ್ಸಾರೆ ಧಾಬೋಲ್ಕರ್ ಹತ್ಯಾ ವಿರೋಧಿ ಹೋರಾಟ ಸಮಿತಿ ಗದಗ
೭) ಪಂಪಕವಿ ಸಾಹಿತ್ಯ ವೇದಿಕೆ ಅಣ್ಣಿಗೇರಿ
೮) ಭಾರತ ಜ್ಞಾನ ವಿಜ್ಞಾನ ಸಮಿತಿ ಕರ್ನಾಟಕ
೯) ಚಿಂತನ ಉತ್ತರ ಕನ್ನಡ
೧೦) ಸಮಾನತೆಗಾಗಿ ಜನಾಂದೋಲನ ಕರ್ನಾಟಕ
೧೧) ಕರ್ನಾಟಕ ಕೋಮು ಸೌಹಾರ್ಧ ವೇದಿಕೆ
೧೨) ಅಭಿಮತ ಮಂಗಳೂರು
೧೩) ಸಮುದಾಯ ಕರ್ನಾಟಕ
೧೪) ದಲಿತ ಸಂಘರ್ಷ ಸಮಿತಿ ಕರ್ನಾಟಕ
೧೫) ಡಾ ಕಲಬುರ್ಗಿ ಪನ್ಸಾರೆ ಧಾಬೋಲ್ಕರ್ ಹತ್ಯಾ ವಿರೋಧಿ ಹೋರಾಟ ಸಮಿತಿ ಗೌರಿಬಿದನೂರು
೧೬) ಡಾ ಕಲಬುರ್ಗಿ ಪನ್ಸಾರೆ ಧಾಬೋಲ್ಕರ್ ಹತ್ಯಾ ವಿರೋಧಿ ಹೋರಾಟ ಸಮಿತಿ ಗುಲಬುರ್ಗಾ
೧೭) ಡಾ ಕಲಬುರ್ಗಿ ಪನ್ಸಾರೆ ಧಾಬೋಲ್ಕರ್ ಹತ್ಯಾ ವಿರೋಧಿ ಹೋರಾಟ ಸಮಿತಿ ಶಿವಮೊಗ್ಗ
೧೮) ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ ಕರ್ನಾಟಕ
೧೯) ಕರ್ನಾಟಕ ಜನಶಕ್ತಿ
೨೦) ಎ ಐ ಎಸ್ ಎಫ್ ಕರ್ನಾಟಕ
೨೧) ಎಸ್ ಎಪ್ ಐ ಕರ್ನಾಟಕ
೨೨) ಐಸಾ ಕರ್ನಾಟಕ
೨೩) ಕೆ ಎಸ್ ಎಪ್ ಕರ್ನಾಟಕ
೨೪) ಎ ಐ ಡಿ ಎಸ್ ಓ ಕರ್ನಾಟಕ
೨೫) ಬಿ ವಿ ಎಸ್ ಕರ್ನಾಟಕ
೨೬) ಹೊಸತು ಪತ್ರಿಕೆ ಬೆಂಗಳೂರು
೨೭) ಜನಶಕ್ತಿ ಪತ್ರಿಕೆ ಬೆಂಗಳೂರು
೨೮) ಕೆಂಬಾವುಟ ಪತ್ರಿಕೆ ಬೆಂಗಳೂರು
೨೯) ಸಾಕೇತ ಪತ್ರಿಕೆ ಬೆಂಗಳೂರು
೩೦) ಅಗ್ನಿ ಪತ್ರಿಕೆ ಬೆಂಗಳೂರು
೩೧) ಅವಿಷ್ಕಾರ ಪ್ರಗತಿಪರ ಸಾಂಸ್ಕೃತಿಕ ವೇದಿಕೆ ಧಾರವಾಡ
೩೨) ಏ ಐ ಡಿ ವೈ ಓ ಕರ್ನಾಟಕ
೩೩) ದಕ್ಷಿಣಾಯನ 
೩೪) ಇಪ್ಟಾ ಕರ್ನಾಟಕ
೩೫) ಸಹಮತ ಫಿಲ್ಮ್ ಸೊಸೈಟಿ ಮಂಗಳೂರು 
೩೬) ಪಿಯುಸಿಎಲ್ ಕರ್ನಾಟಕ
೩೭) ಅಭಿನವ ಪ್ರಕಾಶನ ಬೆಂಗಳೂರು
೩೮) ಝೆನ್ ಟೀಮ್ ತುಮಕೂರು
೩೯) ಸಹಯಾನ ಕೆರೆಕೋಣ
೪೦) ಮಾನವ ಬಂಧುತ್ವ ವೇದಿಕೆ ಕರ್ನಾಟಕ
೪೧) ಭಾರತೀಯ ಮಹಿಳಾ ಒಕ್ಕೂಟ ಕರ್ನಾಟಕ
೪೨) ವಿಮಾ ನೌಕರರ ಸಂಘ ಧಾರವಾಡ
೪೩) ಉತ್ತರ ಕರ್ನಾಟಕ ಲೇಖಕಿಯರ ಸಂಘ ಧಾರವಾಡ
೪೪) ಬಸವ ಕೇಂದ್ರ ಧಾರವಾಡ
೪೫) ಕರ್ನಾಟಕ ವಿದಾವರ್ಧಕ ಸಂಘ ಧಾರವಾಡ
೪೬) ಇಂಗ್ಲೀಷ ಅದ್ಯಾಪಕರ ಸಂಘ ಕವಿವಿ ಧಾರವಾಡ
೪೭) ಡಿವೈಎಫ್‌ಐ ಕರ್ನಾಟಕ
೪೮) ಎ ವೈ ಡಿ ಎಫ್ ಐ ಕರ್ನಾಟಕ
೪೯) ಗ್ರಾಮೀಣ ಕೂಲಿಕಾರರ ಸಂಘ ಧಾರವಾಡ
೫೦) ಸಾಧನಾ ಧಾರವಾಡ
೫೧) ಚಿಲಿಪಿಲಿ ಪ್ರಕಾಶನ ಧಾರವಾಡ
೫೨) ಕವಿ ಪ್ರಕಾಶನ ಕವಲಕ್ಕಿ
೫೩) ಕರ್ನಾಟಕ ಜನ ಸಾಹಿತ್ಯ ಸಂಘಟನೆ ಧಾರವಾಡ
೫೪) ಬಂಡಾಯ ಸಾಹಿತ್ಯ ಸಂಘಟನೆ ಕರ್ನಾಟಕ
೫೫) ಕ.ಸಾ.ಪ. ಜಿಲ್ಲಾ ಘಟಕ, ಹಾವೇರಿ
೫೬) ಕ.ಸಾ.ಪ. ಜಿಲ್ಲಾ ಘಟಕ, ಗದಗ
೫೭) ಕ.ಸಾ.ಪ. ಜಿಲ್ಲಾ ಘಟಕ, ಬೆಳಗಾವಿ
೫೮) ಕ.ಸಾ.ಪ. ಜಿಲ್ಲಾ ಘಟಕ, ವಿಜಯಪುರ
೫೯) ಕ.ಸಾ.ಪ. ಜಿಲ್ಲಾ ಘಟಕ, ಬಾಗಲಕೋಟೆ
೬೦) ಕ.ಸಾ.ಪ. ಜಿಲ್ಲಾ ಘಟಕ, ಧಾರವಾಡ
೬೧) ಕ.ಸಾ.ಪ. ಜಿಲ್ಲಾ ಘಟಕ, ಕಲಬುರ್ಗಿ
೬೨) ಕ.ಸಾ.ಪ. ಜಿಲ್ಲಾ ಘಟಕ, ಕೊಪ್ಪಳ
೬೩) ಕ.ಸಾ.ಪ. ಜಿಲ್ಲಾ ಘಟಕ, ಬಳ್ಳಾರಿ
೬೪) ಕ.ಸಾ.ಪ. ಜಿಲ್ಲಾ ಘಟಕ, ರಾಯಚೂರ
೬೫) ಕ.ಸಾ.ಪ. ಜಿಲ್ಲಾ ಘಟಕ, ಯಾದಗೀರ
೬೬) ಕರ್ನಾಟಕ ಥಿಂಕರ‍್ಸ್ ಪೋರಂ ಧಾರವಾಡ
೬೭) ಬಸವದಳ ಧಾರವಾಡ
೬೮) ಹೈಕೋರ್ಟ್ ವಕೀಲರ ಸಂಘ ಧಾರವಾಡ
೬೯) ಜಿಲ್ಲಾ ವಕೀಲರ ಸಂಘ ಧಾರವಾಡ
೬೯) ಎಸ್ಸಿ ಎಎಸ್ಟಿ ಸಂಶೋಧನಾ ಸಂಘಟನೆ ಕವಿವ್ರಿ ಧಾರವಾಡ
೭೦) ಸ್ವರಾಜ್ಯ ಅಭಿಯಾನ ಧಾರವಾಡ
೭೧) ಜನ ಸಂಗ್ರಾಮ ಪರಿಷತ್ ಕರ್ನಾಟಕ
೭೨) ಸಮಾಜ ಪರಿವರ್ತನಾ ಸಂಸ್ಥೆ ಕರ್ನಾಟಕ
೭೩) ಅಖಿಲ ಭಾರತ ಸಂಸ್ಕೃತಿಕ ಮಂಚ ಕರ್ನಾಟಕ
೭೪) ಅಖಿಲ ಭಾರತ ಕೃಷಿ ಕಾರ್ಮಿಕರ ಸಂಘ ಕರ್ನಾಟಕ 
೭೫) ಆಲ್ ಇಂಡಿಯಾ ಲಾಯರ‍್ಸ್ ಯುನಿಯನ್ ಕರ್ನಾಟಕ 
೭೬) ಕನ್ನಡ ಪರ ಸಂಘಟನೆಗಳ ಕೂಟ ಬೆಂಗಳೂರು
೭೭) ಅಖಿಲ ಭಾರತ ವಿಚಾರವಾದಿಗಳ ಸಂಘ ಬೆಂಗಳೂರು
೭೮) ಕರ್ನಾಟಕ ರಣಧೀರ ಪಡೆ ಬೆಂಗಳೂರು
೭೯) ದಲಿತ ಹಕ್ಕುಗಳ ಸಮಿತಿ ಕರ್ನಾಟಕ
೮೦) ಅರುಣೋದಯ ಕಲಾ ತಂಡ ಕೊತಬಾಳ
೮೧) ದಲಿತ ಸಂಘಟನೆಗಳ ಒಕ್ಕೂಟ ಕರ್ನಾಟಕ

(ಅಪೂರ್ಣ)
ನಿಮ್ಮ ಸಂಘಟನೆಗಳನ್ನೂ ಸೇರಿಸಿ. ನಿಮ್ಮ ಭಾಗವಹಿಸುವಿಕೆಯನ್ನು ನಮ್ಮ ಗಮನಕ್ಕೆ ತನ್ನಿ

ಆಗ 26, 2016

ನೀನು ಬಿಟ್ಟು ಹೋದ ಭಾರ ಹೊರಲಾಗದೆ………….

ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
26.08/2016
ಆಕಾಶ ಎಂದಿನಂತೆ ಬಿಳಿಚಿಕೊಂಡಿತ್ತು
ಕಳೆದ ವರ್ಷದ ಮಳೆ ಕೈಕೊಟ್ಟು ಭೂಮಿ ಬಿರಿದು ಬಿದ್ದುಕೊಂಡಿತ್ತು
ನಡೆವ ದಾರಿಯೊಳಗಿನ ಸಣ್ಣ ಮುಳ್ಳುಗಳೂ
ಮೊಳೆಗಳಂತೆ ಪಾದಗಳಿಗೆ ಚುಚ್ಚುತ್ತಿದ್ದವು.
ಅಂತಹದೊಂದು ದಿನ
ಕಾಡಿನಂಚಿನಲ್ಲಿ ನನಗೆ ವಿದಾಯ ಹೇಳಿ ಹೋದ ನೀನು 
ಮತ್ತೆ ಬರಬಹುದೆಂಬ ನಂಬಿಕೆ
ನಾಶವಾಗಿ ನಾನು ಕಾಯುವುದನ್ನೇ ನಿಲ್ಲಿಸಿಬಿಟ್ಟೆ!

ಅದೆಷ್ಟೋ ಕಾಲವಾದ ಮೇಲೆ 
ನೀನು ಇನ್ನಿಲ್ಲವೆಂಬ ಸುದ್ದಿ ಬಂದಾಗ
ನಾನು ಅದೇ ನಗರದ ಬೇವಾರ್ಸಿ ಗಲ್ಲಿಗಳಲ್ಲಿ
ಗೇಣು ಹೊಟ್ಟೆಗಾಗಿ
ಅದೆಷ್ಟು ಜನರ ಬೂಟುಗಳ ನೆಕ್ಕುತ್ತಾ
ಅವರೆಸೆದ ರೊಟ್ಟಿಯ ಚೂರುಗಳ ಹಿಡಿಯುತ್ತ
ಬದುಕುತ್ತಿದ್ದೆ ಎಂದರೆ
ನಿನಗಿಂತ ಮೊದಲೇ ನಾನು
ಸತ್ತು ಹೋಗಿದ್ದೆ.

ಇದೀಗ ನೀನು ಬಿಟ್ಟು ಹೋದ ಬೂಟುಗಳಲ್ಲಿ
ನನ್ನ ಕಾಲುಗಳು ಹಿಡಿಸುತ್ತಿಲ್ಲ…….
ನೀನು ಕೊಟ್ಟು ಹೋದ ಸಂದೇಶಗಳ ಬಾರವ ನನ್ನ
ಹೆಗಲುಗಳಿಂದ ಹೊರಲಾಗುತ್ತಿಲ್ಲ
ಸಾದ್ಯವಾದರೆ ಕ್ಷಮಿಸು! 

ಮೇಕಿಂಗ್ ಹಿಸ್ಟರಿ: ಸೈನ್ಯದ ಮುನ್ನಡೆ

Making history
ಸಾಕೇತ್ ರಾಜನ್ 
ಕನ್ನಡಕ್ಕೆ: ಡಾ. ಅಶೋಕ್. ಕೆ. ಆರ್
26/08/2016
ಮೇಕಿಂಗ್ ಹಿಸ್ಟರಿಯ ಮೊದಲ ಸಂಪುಟದಲ್ಲಿ ನೋಡಿದಂತೆ (1) ಮೈಸೂರು ಸೈನ್ಯಕ್ಕೆ ವಸಾಹತು ವಿರೋಧಿ ಯುದ್ಧದಲ್ಲಿ ದೊಡ್ಡ ಪರಂಪರೆಯೇ ಇದೆ. ಇದರ ಕಾರಣದಿಂದಾಗಿ, ಸೈನಿಕರಲ್ಲಿ ಗಮನಾರ್ಹ ಮಟ್ಟದ ವಸಾಹತು ವಿರೋಧಿ ಪ್ರಜ್ಞೆಯಿದೆ. ಈ ವಸಾಹತು ವಿರೋಧಿ ಭಾವನೆಗಳು ಶ್ರೀರಂಗಪಟ್ಟಣ ಕುಸಿತ ಕಂಡ ಕೆಲ ದಿನಗಳಲ್ಲೇ ಗಮನಕ್ಕೆ ಬಂತು. ನಗರ ಕುಸಿದರೂ ಸಹಿತ, ಮೀರ್ ಸಾದಿಕ್ ನಂತಹ ವಿದ್ರೋಹಿಗಳನ್ನು ಶಿಕ್ಷಿಸಲಾಯಿತು. ನಂತರದಲ್ಲಿ, ಎಲ್ಲೋ ಕಮ್ರುದ್ದೀನಿನಂತಹ ಕೆಲವು ಅಧಿಕಾರಿಗಳನ್ನು ಬಿಟ್ಟರೆ ಇಡೀ ಸೈನ್ಯ ಸೋಲನ್ನು ಒಪ್ಪಿಕೊಂಡಾಗ್ಯೂ ಬ್ರಿಟಿಷರಿಗೆ ಸಹಕರಿಸಲು ನಿರಾಕರಿಸಿತ್ತು. ಸೈನಿಕರನ್ನು ವಸಾಹತು ಸೈನ್ಯಕ್ಕೆ ಸೇರಿಸಿಕೊಳ್ಳುವ ಎಲ್ಲಾ ಪ್ರಯತ್ನಗಳನ್ನೂ ಬಹಿಷ್ಕರಿಸಲಾಗಿತ್ತು. ಸೈನ್ಯಕ್ಕೆ ಸೇರಿಸಿಕೊಳ್ಳುವ ಎಲ್ಲಾ ಪ್ರಯತ್ನಗಳನ್ನೂ ಹೇಗೆ ಸೈನಿಕರ ಸಮೂಹ ನಿರಾಕರಿಸಿತು, ನಿರುದ್ಯೋಗಿಯಾಗಿ ಹಳ್ಳಿಗಳಿಗೆ ಬಲವಂತಾಗಿ ವಲಸೆ ಹೋಗಿ ಕೂಲಿಯಾಳಾದರೂ ಪರವಾಯಿಲ್ಲ ಬ್ರಿಟನ್ ಸೈನ್ಯ ಸೇರುವುದಿಲ್ಲ ಎಂದು ನಿರ್ಧರಿಸಿದ ಬಗ್ಗೆ ಬುಚನನ್ ನಮಗೆ ತಿಳಿಸುತ್ತಾರೆ. ಹೆಚ್ಚಿನ ಸಂಖೈ ಮುಸ್ಲಿಂ ಸೈನಿಕರಿದ್ದ ಸೈನ್ಯ, ದೊಡ್ಡ ತ್ಯಾಗಗಳನ್ನು ಮಾಡಲು ಸಿದ್ಧವಾಗಿತ್ತು; ಟಿಪ್ಪುವಿನ ಪತನದ ನಂತರ ದೇಶಭಕ್ತಿಯನ್ನು ತೋರಿದ ಮೊದಲಿಗರಿವರು ಎನ್ನುವುದರಲ್ಲಿ ಯಾವುದೇ ಅನುಮಾನ ಬೇಡ. ಈ ನಿಯತ್ತು ಇದ್ದಕ್ಕಿದ್ದಂತೆ ಮೂಡಿಬಿಟ್ಟಿದ್ದಲ್ಲ. ಇದು ನಾಲ್ಕು ದಶಕಗಳಿಂದ ಸುಧಾರಣೆ ಕಂಡಿದ್ದ ಮೈಸೂರು ಸೈನ್ಯದ ಪರಂಪರೆ. ಯುದ್ಧದ ಸಂಕಷ್ಟದ ಸಮಯದಲ್ಲೂ ಓಡಿಹೋಗದೆ ಬ್ರಿಟೀಷರನ್ನು ಅಚ್ಚರಿಗೊಳಿಸಿದ ಸೈನ್ಯವಿದು. ಟಿಪ್ಪುವಿನ ಹತ್ಯೆ ಸೈನಿಕರಲ್ಲಿನ ರೋಷವನ್ನು ಮತ್ತಷ್ಟು ಹೆಚ್ಚಿಸಿತ್ತಷ್ಟೇ. ವಸಾಹತು ಆಕ್ರಮಣದ ಬಗೆಗಿನ ಈ ಆಳದಲ್ಲಿನ ಸಿಟ್ಟೇ ಬ್ರಿಟೀಷರ ವಿರುದ್ಧ ಸಶಸ್ತ್ರ ಹೋರಾಟ ನಡೆಸಲು ಸೈನಿಕರನ್ನು ಕ್ರೋಡೀಕರಿಸಿ ಪ್ರೇರೇಪಿಸಿದ ಪ್ರಮುಖ ಅಂಶ. ಮೈಸೂರು ಸೈನ್ಯದಲ್ಲಿ ಕುದುರೆ ಓಡಿಸುವವನಾಗಿದ್ದ, ಅತಿಯಾಸೆಗಳ ಕಾರಣಕ್ಕೆ ಟಿಪ್ಪುವಿನಿಂದ ಬಂಧನಕ್ಕೊಳಗಾಗಿದ್ದ ದೊಂಡಿಯಾ ವಾಗ್ ನಂತವರೂ ಕೂಡ ಈ ಪ್ರತಿರೋಧದಲ್ಲಿ ಸಕ್ರಿಯರಾಗಿದ್ದರು. ಹೈದರ್ ಮತ್ತು ಟಿಪ್ಪು ಕಟ್ಟಿದ್ದ ಕೇಂದ್ರೀಕೃತ ಸರಕಾರದಲ್ಲಿ ಸೈನ್ಯವೇ ಪ್ರಮುಖವಾಗಿತ್ತು. ಅದು ತನ್ನ ಸದಸ್ಯರಲ್ಲಿ ಊಳಿಗಮಾನ್ಯ ಪಾಳೇಗಾರ ಶಕ್ತಿಗಳು ಬೆಳೆಸಿದ ಪ್ರಜ್ಞೆಗಿಂತ ಬಹಳ ಭಿನ್ನವಾದ ಪ್ರಜ್ಞೆಯನ್ನು ಬೆಳೆಸಿತ್ತು. ಆಧುನಿಕ ಮತ್ತು ಕೇಂದ್ರೀಕೃತವಾಗಿದ್ದ ಮೈಸೂರು ಸೈನ್ಯ, ತನ್ನ ವಿವಿಧ ಇಲಾಖೆಗಳ ನಡುವೆ ಅತ್ಯಂತ ಹೊಂದಾಣಿಕೆಯಿಂದ ಕಾರ್ಯನಿರ್ವಹಿಸುತ್ತಿತ್ತು. ಈ ಹೊಂದಾಣಿಕೆಯ ಪ್ರಯತ್ನಗಳು ಅದರ ಸದಸ್ಯರಲ್ಲೂ ಕಂಡುಬರುತ್ತಿತ್ತು ಮತ್ತು ಮಾಜಿ ಸೈನಿಕರು ಬ್ರಿಟೀಷರ ವಿರುದ್ಧ ಮುಂದಾಳತ್ವ ವಹಿಸಿ ನಡೆಸಿದ ಹೋರಾಟದಲ್ಲೂ, ಬ್ರಿಟೀಷರ ವಿರುದ್ಧ ಹೋರಾಡುತ್ತಿದ್ದ ಇನ್ನಿತರೆ ಊಳಿಗಮಾನ್ಯ ಶಕ್ತಿಗಳನ್ನು ಒಂದುಗೂಡಿಸುವ ಪ್ರಯತ್ನಗಳನ್ನು ಕಾಣಬಹುದು. ಮಾಜಿ ಸೈನಿಕರು – ಅದು ದೊಂಡಿಯಾ ಇರಬಹುದು ಅಥವಾ ದಕ್ಷಿಣ ಕನ್ನಡದ ಸುಬ್ಬಾ ರಾವ್ ಮತ್ತು ತಿಮ್ಮಾನಾಯಕರಿರಬಹುದು – ಪಾಳೇಗಾರರ ನಡುವಿನ ಹೊಂದಾಣಿಕೆಗೆ ಕೇಂದ್ರಬಿಂದುವಾದರು. ಮತ್ತೊಂದೆಡೆ, ಪಾಳೇಗಾರರ ಜೀವನ ಶೈಲಿ ಮತ್ತವರ ಯುದ್ಧತಂತ್ರಗಳು ಯಾವಾಗಲೂ ಮುಚ್ಚಿದ ಬಾಗಿಲಿನಿಂದೆ ಕಿರಿದಾಗಿರುತ್ತಿತ್ತು. 

1. ದೊಂಡಿಯಾ ವಾಗನ ಬಂಡಾಯ ಸೈನ್ಯ (1799 – 1800) 

ದೊಂಡಿಯಾ ಶಿವಮೊಗ್ಗದ ಚೆನ್ನಗಿರಿಯವನು. ತನ್ನ ಸೇನಾ ಸಾಮರ್ಥ್ಯವನ್ನು ಪಟವರ್ಧನರಿಗೆ, ಕೊಲ್ಲಾಪುರದ ರಾಜನಿಗೆ ಮತ್ತು ಧಾರವಾಡದ ಲಕ್ಷ್ಮೇಶ್ವರ ದೇಸಾಯಿಗೆ ಸಲ್ಲಿಸಿದ ಸೇವೆಯಲ್ಲಿ ಸಾಬೀತು ಪಡಿಸಿದ್ದ.(2) ಹೈದರ್ 1780ರಲ್ಲಿ ಉತ್ತರ ಕರ್ನಾಟಕದಲ್ಲಿ ನಡೆಸುತ್ತಿದ್ದ ಕಾರ್ಯಾಚರಣೆಯೊಂದರ ಸಂದರ್ಭದಲ್ಲಿ ದೊಂಡಿಯಾನ ಸಂಪರ್ಕಕ್ಕೆ ಬಂದ ನಂತರ ಆತನನ್ನು ಮೈಸೂರು ಸೈನ್ಯಕ್ಕೆ ಕುದುರೆಸವಾರನಾಗಿ ಆಯ್ಕೆಮಾಡಿದ, ಅದೇ ಸಮಯದಲ್ಲಿ ಆತನನ್ನು ಇಸ್ಲಾಮಿಗೆ ಮತಾಂತರಿಸಿದ. 1792ರ ಮೂರನೇ ವಸಾಹತು ವಿರೋಧಿ ಯುದ್ಧದ ಸಂದರ್ಭದಲ್ಲಿ, ದೊಂಡಿಯಾ ಸೈನ್ಯವನ್ನು ತೊರೆದು ಧಾರವಾಡದಲ್ಲಿ ಸ್ವತಂತ್ರವಾಗಿ ಅಸ್ತಿತ್ವ ಕಂಡುಕೊಳ್ಳಲು ಪ್ರಯತ್ನಿಸಿದ. 1794 ರಲ್ಲಿ ಟಿಪ್ಪು ಮತ್ತೆ ಅವನ ಮನಸ್ಸನ್ನು ಗೆದ್ದು ಸೈನ್ಯದಲ್ಲಾತನಿಗೆ ಬಡ್ತಿ ನೀಡಿದ. ಆದರೆ ಕೆಲವೇ ಸಮಯದಲ್ಲಿ, ತನ್ನದೇ ಸ್ವಂತ ಸಾಮ್ರಾಜ್ಯವನ್ನು ಸ್ಥಾಪಿಸಬೇಕೆಂಬ ದೊಂಡಿಯಾನ ಆಸೆ, ಅವನಿಗೆ ಜೈಲಿನ ಹಾದಿ ತೋರಿಸಿತು; ಅಲ್ಲವನಿಗೆ ಸಣ್ಣ ಮೊತ್ತದ ವೇತನ ನೀಡಲಾಗುತ್ತಿತ್ತು. ಶ್ರೀರಂಗಪಟ್ಟಣದ ಕುಸಿತದೊಂದಿಗೆ, ಇತರೆ ಖೈದಿಗಳ ಜೊತೆಗೆ ದೊಂಡಿಯಾನನ್ನೂ ಬಿಡುಗಡೆ ಮಾಡಲಾಯಿತು. ಅರವತ್ತರ ವಯಸ್ಸಿನಲ್ಲಿ ಸ್ವತಂತ್ರಗೊಂಡ ದೊಂಡಿಯಾ, ಶ್ರೀರಂಗಪಟ್ಟಣವನ್ನು ತೊರೆದು ಸೈನ್ಯವನ್ನು ಕಟ್ಟಲಾರಂಭಿಸಿ ಬ್ರಿಟೀಷರನ್ನು ಸದೆಬಡಿಯಬೇಕೆಂದುಕೊಂಡಿದ್ದ ಎಲ್ಲಾ ಪಾಳೇಗಾರರನ್ನು ಸೇರಿಸಿ ಒಂದು ರಾಜಕೀಯ ಒಕ್ಕೂಟವನ್ನು ರಚಿಸಲಾರಂಭಿಸಿದ. 

ಕೆ.ರಾಜಯ್ಯಮರ South Indian Rebellion ಮತ್ತವರ Rise and fall of the Palegaras of Tamil Nadu ಪುಸ್ತಕ ತಮಿಳುನಾಡು, ಕೇರಳ, ಕರ್ನಾಟಕ ಮತ್ತು ಮಹಾರಾಷ್ಟ್ರದ ಪಾಳೇಗಾರರ ಒಕ್ಕೂಟದ ಬಗ್ಗೆ ಒಂದು ಸ್ಥೂಲ ಚಿತ್ರಣವನ್ನು ನೀಡುತ್ತದೆ. ಈ ಪ್ರದೇಶಗಳನ್ನು ಒಂದಾಗಿಸಲು ದೊಂಡಿಯಾ ವಹಿಸಿದ ಪಾತ್ರ ಹಿರಿದು. ಹಾಗಾಗ್ಯೂ, ಒಂದೆಡೆ ಪ್ರದೇಶದ ವಿಸ್ತೀರ್ಣತೆ ಮತ್ತು ಒಕ್ಕೂಟದಲ್ಲಿ ಎಲ್ಲಾ ಸೈನ್ಯಗಳ ದುರ್ಬಲತೆಗಳು ಮತ್ತೊಂದೆಡೆ ಅವರಲ್ಲಿದ್ದ ವರ್ಗಾಧಾರಿತ ಮಿತಿಗಳು ಈ ಒಕ್ಕೂಟವನ್ನು ಅದಕ್ಷವನ್ನಾಗಿ ಮಾಡಿಬಿಟ್ಟಿತು, ಸಮನ್ವತೆಯಿಂದ ಏಕತೆಯಿಂದ ಕಾರ್ಯನಿರ್ವಹಿಸಲು ವಿಫಲವಾಯಿತು. 

ಶ್ರೀರಂಗಪಟ್ಟಣ ತೊರೆದ ನಂತರ, ದೊಂಡಿಯಾ ಹಾಸನದ ಮಲೆನಾಡಿನ ಐಗೂರಿಗೆ ಹೋಗಿ ಅಲ್ಲಿನ ಪಾಳೇಗಾರರೊಂದಿಗೆ ಮಾತುಕತೆ ನಡೆಸಿ ಅಲ್ಲಿಂದ ಉತ್ತರಕ್ಕಿದ್ದ ಮರಾಠ ಪ್ರಾಂತ್ಯಕ್ಕೆ ತೆರಳಿದ. ರಾಜಯ್ಯಮ್ ಹೇಳುತ್ತಾರೆ: “ಅಲ್ಲಿಂದ ಟಿಪ್ಪುವಿನ ಸೈನ್ಯದಲ್ಲಿ ಕಾರ್ಯನಿರ್ವಹಿಸಿದ್ದ ಸರದಾರರೊಡನೆ ಪತ್ರವ್ಯವಹಾರ ನಡೆಸಿ, ಸಶಸ್ತ್ರ ಸೈನಿಕರ ತಂಡವನ್ನು ಮತ್ತು ಮೈಸೂರು ಸೈನ್ಯದ ಉಳಿಕೆಯಿಂದ ಐದು ಸಾವಿರ ಕುದುರೆಗಳನ್ನು ಒಟ್ಟುಗೂಡಿಸಿದ….. ಹೆಚ್ಚುಕಡಿಮೆ ಮೈಸೂರಿನ ಎಲ್ಲಾ ಮುಸ್ಲಿಮರೂ ಬಂಡಾಯಗಾರರ ಜೊತೆಗೆ ಗುರುತಿಸಿಕೊಂಡರು. ದೊಂಡೋಜಿ ವಾಗ್ ಶಿವಮೊಗ್ಗವನ್ನಾಕ್ರಮಿಸಿ ತಮ್ಮನ್ನು ತಾವೇ ‘ಎರಡು ಪ್ರಪಂಚದ ರಾಜ’ನೆಂದು ಘೋಷಿಸಿಕೊಂಡರು.’ 

ಶಿವಮೊಗ್ಗದಲ್ಲಿ ಕೇಂದ್ರ ಕಛೇರಿಯನ್ನು ಸ್ಥಾಪಿಸಿದ ನಂತರ, ದೊಂಡಾಜಿ ವಾಗ್ ಮೈಸೂರಿನಿಂದ ಬ್ರಿಟೀಷ್ ಅಧಿಕಾರವನ್ನು ಕಿತ್ತೊಗೆಯಲು ತಂತ್ರಗಳನ್ನು ರೂಪಿಸಿದ. ವಾಯುವ್ಯದಲ್ಲೊಂದಷ್ಟು ಸುಲಿಗೆ ಮಾಡಿ, ಬ್ರಿಟೀಷ್ ಸಂಗ್ರಹದಲ್ಲಿದ್ದ ಯುದ್ಧ ಸಾಮಗ್ರಿಗಳನ್ನು ವಶಪಡಿಸಿಕೊಂಡು ತನ್ನದೇ ಸ್ವಂತ ಫಿರಂಗಿ ದಳವನ್ನು ರಚಿಸಿದ. ಇದರ ನಂತರ ಕಂಪನಿಯಿಂದ ನಗರ ಮತ್ತು ಬೆದನೂರನ್ನು ವಶಪಡಿಸಿಕೊಳ್ಳಲಾಯಿತು. ಬಂಡಾಯಗಾರರ ಒಂದು ತಂಡ ಪೂರ್ವಕ್ಕೆ ತೆರಳಿ ನಿಜಾಮನ ಸಾಮ್ರಾಜ್ಯದಲ್ಲಿ ಗೂಟಿಯನ್ನು ವಶಪಡಿಸಿಕೊಂಡರು. ಮೈಸೂರಿನಲ್ಲಿದ್ದ ಬ್ರಿಟೀಷ್ ಸೈನ್ಯದ ಕಮಾಂಡರ್ ಕೊಲೊನಲ್ ವೆಲ್ಲೆಸ್ಲಿಯನ್ನು ಅಪಹರಿಸಲು ಯೋಜನೆಗಳನ್ನು ಹಾಕಿದ…. ಸೋತ ಸುಲ್ತಾನನ ಉದ್ದಿಶ್ಯಗಳನ್ನು ತೊರೆದು ಹೋಗಿದ್ದ ಪೂರ್ಣಯ್ಯನನ್ನು ಕೊಲೆ ಮಾಡುವ ಸಂಚು ರೂಪಿಸಿದ….” (3) 

ಜೂನ್ 1799ರಲ್ಲಿ, ಮೈಸೂರು ಸಾಮ್ರಾಜ್ಯ ಕುಸಿದ ಎರಡೇ ತಿಂಗಳಿನಲ್ಲಿ ದೊಂಡಿಯಾ ಸೈನಿಕ ದಾಳಿಯನ್ನಾರಂಭಿಸಿ ದೊಡ್ಡ ಪ್ರದೇಶವನ್ನೇ ವಶಪಡಿಸಿಕೊಂಡಿದ್ದ; ವರುಷ ಕಳೆಯುವುದರಳೊಗೆ ಶಿವಮೊಗ್ಗ, ಚಿತ್ರದುರ್ಗ, ಧಾರವಾಡ ಮತ್ತು ಬಳ್ಳಾರಿ ಜಿಲ್ಲೆಯ ಬಹುಭಾಗಗಳು ದೊಂಡಿಯಾನ ವಶದಲ್ಲಿತ್ತು. ಜೂನ್ 1800ರಲ್ಲಿ, ದೊಂಡಿಯಾನ ಪಡೆಗಳು ಹತ್ತು ಸಾವಿರ ಅಶ್ವಾರೋಹಿಗಳು, ಐದು ಸಾವಿರ ಕಾಲಾಳುಗಳು ಮತ್ತು ಎಂಟು ಗನ್ನುಗಳನ್ನೊಂದಿದ್ದ ಮರಾಠಾ ಕಮಾಂಡರ್ ದೊಂಡೋಜಿ ಪಂತ್ ಗೋಕಲೆಯನ್ನು ಕೊಂದು ಹಾಕಿದರು.(4) ರಾಮದುರ್ಗ, ಸೊಲ್ಲಾಪುರ, ಕೊಲ್ಲಾಪುರ, ಆನೆಗುಂದಿ ಮತ್ತು ಗ್ವಾಲಿಯರ್ರಿನ ರಾಜರ ಬೆಂಬಲವನ್ನೂ ಗಳಿಸಿಕೊಂಡ. (5) 

ಕೇವಲ ಇನ್ನೂರು ಅಶ್ವಾರೋಹಿಗಳಿಂದ ಪ್ರಾರಂಭಗೊಂಡ ದೊಂಡಿಯಾನ ಸೈನ್ಯ, (6) ಚಿಕ್ಕ ಸಮಯದಲ್ಲೇ 5,000 ಅಶ್ವಾರೋಹಿಗಳಷ್ಟಾಯಿತು ಮತ್ತು ಉತ್ತುಂಗದ ದಿನಗಳಲ್ಲಿ 70,000 ದಿಂದ 80,000 ದಷ್ಟಿತ್ತು. (7) 

ಈ ಗಮನಾರ್ಹ ಬೆಳವಣಿಗೆಗೆ ಮತ್ತು ತತ್ ಕ್ಷಣದ ನೇಮಕಕ್ಕೆ ಕಾರಣ ಮೈಸೂರಿನ ಸೈನಿಕರು ದೊಂಡಿಯಾನ ಸೈನ್ಯ ಸೇರಲು ಮೆರವಣಿಗೆ ಹೊರಟಿದ್ದು. ಶ್ರೀರಂಗಪಟ್ಟಣದ ಸೋತ ಸೈನಿಕರು ತಮ್ಮ ಶಸ್ತ್ರಾಸ್ತ್ರಗಳನ್ನು ಉಳಿಸಿಕೊಂಡಿದ್ದರು, ಅಶ್ವಾರೋಹಿಗಳು ತಮ್ಮ ಕುದುರೆಗಳನ್ನು. ಅವರು ದೊಡ್ಡ ಸಂಖೈಯಲ್ಲಿ ವಲಸೆ ಹೋದರು ಮತ್ತು ಬ್ರಿಟೀಷರಿಗೆ ಸೋತಿಲ್ಲದ ಕೋಟೆಗಳಲ್ಲೆವೂ ತಮ್ಮ ದಿಡ್ಡಿ ಬಾಗಿಲುಗಳನ್ನು ತೆರೆದು ದೊಂಡಿಯಾನ ಸೈನ್ಯವನ್ನು ಸ್ವಾಗತಿಸಿ ಅವನೊಡನೆ ಕೈಜೋಡಿಸಿದವು. 

ಶ್ರೀರಂಗಪಟ್ಟಣ ಮೇ 1799ರಲ್ಲಿ ಕುಸಿದು ಬಿದ್ದರೂ, ಅದು ಬ್ರಿಟೀಷರಿಗೆ ಸಿಕ್ಕ ಗೆಲುವಾಗಿತ್ತೇ ಹೊರತು ಮೈಸೂರು ಸೈನ್ಯದೊಂದಿಗೆ ಯುದ್ಧ ಕೊನೆಯಾಗಿರಲಿಲ್ಲ. ಕರ್ನಾಟಕದ ದಕ್ಷಿಣಕ್ಕಿದ್ದ, ಪ್ರಮುಖ ಕೇಂದ್ರಗಳಾಗಿದ್ದ ಶ್ರೀರಂಗಪಟ್ಟಣ ಮತ್ತು ಬೆಂಗಳೂರನ್ನು ಬ್ರಿಟೀಷರು ವಶಪಡಿಸಿಕೊಂಡಿದ್ದರು, ಆದರೆ ಕೇಂದ್ರ ಮತ್ತು ಉತ್ತರ ಭಾಗಗಳಿನ್ನೂ ದೊಂಡಿಯಾ ಮತ್ತವನ ಮೈತ್ರಿಯ ಮರಾಠ ಸೈನ್ಯದ ವಶದಲ್ಲಿತ್ತು. 1799ರ ಜೂನ್ ತಿಂಗಳಿನಲ್ಲೇ ಬ್ರಿಟೀಷರು ತಮ್ಮ ಸೈನ್ಯವನ್ನು ದೊಂಡಿಯಾನನ್ನು ಹುಡುಕಿ ಹಿಡಿಯಲಟ್ಟಿದರು, ಮೈಸೂರಿನ ಇತರೆ ಭಾಗಗಳನ್ನೂ ತನ್ನ ವಶಕ್ಕೆ ಪಡೆದುಕೊಳ್ಳುವ ಸಲುವಾಗಿ. 

ಈ ಕಾರ್ಯವನ್ನು ಯಶಸ್ವಿಯಾಗಿ ಪೂರ್ಣಗೊಳಿಸಲು ಬ್ರಿಟೀಷರು ಕಳುಹಿಸಿದ್ದು ಕೊಲೊನೆಲ್ ವೆಲ್ಲೆಸ್ಲಿಯನ್ನು. ಬ್ರಿಟೀಷ್ ಆಳ್ವಿಕೆ ಪೂರ್ಣವಾಗಿ ಸಂಯೋಜಿತಗೊಳ್ಳತೇ ಇದ್ದುದರಿಂದ ಉಂಟಾದ ಗಂಭೀರ ಪರಿಸ್ಥಿತಿಯು ಮನ್ರೋ ವೆಲ್ಲೆಸ್ಲಿಗೊಂದು ಪತ್ರ ಬರೆಯುವಂತೆ ಮಾಡುತ್ತದೆ: “ದೊಂಡಿಯಾ ಸ್ವತಂತ್ರ ಮತ್ತು ಶಕ್ತಿಶಾಲಿ ರಾಜನಾಗುವುದರಲ್ಲಿ ಮತ್ತು ಕ್ರೂರ ವಿಶ್ವಾಸಘಾತುಕ ಸುಲ್ತಾನರನ್ನೊಳಗೊಂಡ ಸಾಮ್ರಾಜ್ಯದ ಸ್ಥಾಪಕನಾಗುವುದರಲ್ಲಿ ಯಾವುದೇ ಅನುಮಾನ ಬೇಡ” (8) (ಬ್ರೀಟಿಷರೆಡೆಗೆ “ಕ್ರೂರ” ಮತ್ತು ಬ್ರಿಟೀಷರ ಆಕ್ರಮಣಶಾಲಿತನಕ್ಕೆ “ವಿಶ್ವಾಸಘಾತುಕ”ತನ ಎಂಬುದು ವಸಾಹತುಶಾಹಿಗಳ ಇಂತಹ ಹಲವಾರು ಹೇಳಿಕೆಗಳನ್ನು ಓದಿರುವ ನಮ್ಮ ಓದುಗರಿಗೆ ಇಷ್ಟೊತ್ತಿಗೆ ಅರ್ಥವಾಗಿರಬೇಕು) 

ದೊಂಡಿಯಾನ ಪಡೆಗಳ ಮುಖಂಡನನ್ನು ಏಕಾಂಗಿಯಾಗಿಸಿ ಕುಗ್ಗಿಸಬೇಕೆಂಬ ಬ್ರಿಟೀಷರ ಕಾರ್ಯತಂತ್ರದ ಕಾರಣ ಅವರು ದೊಂಡಿಯಾನ ವಿರುದ್ಧ ಜೂನ್ 1799ರಲ್ಲಿ ಕಾರ್ಯಾಚರಣೆ ಪ್ರಾರಂಭಿಸಿದರು. ಆದಾಗ್ಯೂ, ಹಲವಾರು ಕದನಗಳವರಿಗೆ ಬೇಕಾಯಿತು ಮತ್ತು ಒಂದು ವರ್ಷಕ್ಕಿಂತ ಹೆಚ್ಚು ಸಮಯ ತೆಗೆದುಕೊಂಡ ನಂತರವಷ್ಟೇ ಅವರಿಗೆ ದೊಂಡಿಯಾನ ಪಡೆಗಳನ್ನು ಸೋಲಿಸಲಾಗಿದ್ದು ಮತ್ತು ರಾಯಚೂರಿನ ಕೃಷ್ಣಾ ನದಿ ತೀರದಲ್ಲಿ ದೊಂಡಿಯಾನನ್ನು ಕೊನೆಗೊಳಿಸಲಾಗಿದ್ದು. 

ಬ್ರಿಟೀಷರ ಕಾರ್ಯತಂತ್ರವೆಂದರೆ, ಮನ್ರೋನ ಸಿಹಿ ತುಂಬಿದ ಶಬುದಗಳಾದ ‘ಕ್ರೂರ’ ಮತ್ತು ‘ವಿಶ್ವಾಸಘಾತುಕ’ ಪದಗಳನ್ನು ಉಪಯೋಗಿಸಿಕೊಳ್ಳುವುದು. 1799ರ ಜುಲೈ 14ರಂದು ಡಾರ್ಲಿಂಪೈಲ್ ನೇತೃತ್ವದಲ್ಲಿ ಚಿತ್ರದುರ್ಗವನ್ನು ವಶಪಡಿಸಿಕೊಂಡಾಗ, ಅವರಿಗೆ ದೊಂಡಿಯಾನ ಸೈನ್ಯವೊಂದು ಎದುರಾಯಿತು, ಈ ಸೈನ್ಯವನ್ನು ಶಾಮ ರಾವ್ ಹೇಳುವಂತೆ, “ತಕ್ಷಣ ದಾಳಿ ಮಾಡಿಲಾಯಿತು, ಸೋಲಿಸಾಯಿತು ಮತ್ತು ಚದುರಿಸಲಾಯಿತು……ಬಂಧಿತರಾದ ನಲವತ್ತು ಜನರಲ್ಲಿ ಮೂವತ್ತೊಂಭತ್ತು ಮಂದಿಯನ್ನು ನೇಣಿಗೇರಿಸಲಾಯಿತು ಮತ್ತು ಒಬ್ಬನನ್ನು ಬಿಡುಗಡೆ ಮಾಡಲಾಯಿತು. ಬಿಡುಗಡೆ ಮಾಡಿದಾತ ತನ್ನ ಜೊತೆಗಾರ ನೇಣಿಗೇರಿದ್ದಕ್ಕೆ ಸಾಕ್ಷಿಯಾಗಿದ್ದ, ದೊಂಡಿಯಾನ ಜನರಿಗೆ ಆದ ಈ ವಿಧಿಯನ್ನು ಊರೂರುಗಳಲ್ಲಿ ಹೇಳಿ ಭಯಭೀತಿಯ ವಾತಾವರಣ ಸೃಷ್ಟಿಸುವ ಸಲುವಾಗಿಯೇ ಆತನನ್ನು ಬಿಡುಗಡೆ ಮಾಡಲಾಗಿತ್ತು”. (9) 

ಒಂದು ವರುಷದವರೆಗೆ ರಕ್ತ ಹರಿಸಿದ ಯುದ್ಧಗಳಲ್ಲಿ ಬ್ರಿಟೀಷ್ ಸೈನ್ಯ ಭಾಗವಹಿಸಿದಾಗ್ಯೂ ಮತ್ತು ದೊಂಡಿಯಾನ ನಿಯಂತ್ರಣವಿದ್ದ ಹಲವಾರು ಕೋಟೆಗಳನ್ನು – ಉದಾಹರಣೆಗೆ ಹೊನ್ನಾಳಿ, ಶಿಕಾರಿಪುರ ಮತ್ತು ಚೆನ್ನಗಿರಿ - ವಶಪಡಿಸಿಕೊಂಡಾಗ್ಯೂ ಬ್ರಿಟೀಷರಿಗೆ ದೊಂಡಿಯಾನನ್ನು ಕೊನೆಗಾಣಿಸುವುದು ಕಷ್ಟದ ಸಂಗತಿಯಾಗಿತ್ತು. ಈ ಕಾರ್ಯಾಚರಣೆಯ ಬಗ್ಗೆ ನಡೆದ ಬ್ರಿಟೀಷ್ ಸೈನ್ಯದ ಪತ್ರವ್ಯವಹಾರವನ್ನು ಉದ್ಧರಿಸುತ್ತಾ ಶಾಮ ರಾವ್ ಹೇಳುತ್ತಾರೆ ದೊಂಡಿಯಾ “ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಹೋಗುತ್ತ ಹುಡುಕುತ್ತಿದ್ದ ಶತ್ರುಗಳಿಂದ ಜಾರಿಕೊಳ್ಳುತ್ತಿದ್ದರು ಮತ್ತು ಕದನವನ್ನು ತಪ್ಪಿಸಿಕೊಳ್ಳುತ್ತಿದ್ದರು.” (10) 

ದೊಂಡಿಯಾ ಭೂಭಾಗವನ್ನು ವಶಪಡಿಸಿಕೊಂಡು, ತನ್ನ ಸೈನ್ಯವನ್ನು ಕೋಟೆಯಲ್ಲಿರಿಸಿದರೂ ತಮಗಿಂತ ಉನ್ನತ ಮಟ್ಟದಲ್ಲಿದ್ದ ಬ್ರಿಟೀಷ್ ಸೈನ್ಯದ ವಿರುದ್ಧ ಕೋಟೆಯೊಳಗಿಂದ ಯುದ್ಧಗೈಯಲಿಲ್ಲ. ನಿರ್ಧಾರ ಮಾಡಿಬಿಡುವ ಯುದ್ಧಗಳಲ್ಲಿ ಭಾಗವಹಿಸುವುದೇ ಸಣ್ಣ ಚಕಮಕಿಯ ನಂತರ ಹಿಂದಡಿ ಇಡುತ್ತಿದ್ದರು. ಮೇಲ್ನೋಟಕ್ಕಿದು ದೊಂಡಿಯಾ ವಸಾಹತು ದಾಳಿಯ ಸಮಯದಲ್ಲಿ ಕದನರಂಗದಿಂದ ‘ಓಡಿಹೋಗುತ್ತಿದ್ದರು’ ಎಂದು ತೋರುತ್ತದಾದರೂ, ನಿಜಾರ್ಥದಲ್ಲಿ ದೊಂಡಿಯಾ ತನ್ನ ಸೈನ್ಯ ಬಲವನ್ನು ಉಳಿಸಿಕೊಳ್ಳುತ್ತ ಹೆಚ್ಚೆಚ್ಚು ಸೈನಿಕರನ್ನು ತನ್ನ ಕಡೆಗೆ ಸೇರಿಸಿಕೊಳ್ಳುತ್ತಿದ್ದ, 200 ಅಶ್ವಾರೋಹಿಗಳಿಂದಾರಂಭವಾದ ಪಡೆ 80,000 ಸೈನಿಕರ ಶಕ್ತಿಯುತ ಸೈನ್ಯವಾಯಿತು, ಅದರಲ್ಲಿ 5000ದಷ್ಟು ಕುದುರೆಸವಾರರೇ ಇದ್ದರು. ಸಾವಿರಾರು ಚದುರ ಕಿಮಿಗಳಲ್ಲಿ ಹರಡಿಹೋಗಿದ್ದ ಅರಣ್ಯ, ಕಣಿವೆ ಮತ್ತು ಬಯಲನ್ನುಪಯೋಗಿಸಿಕೊಂಡು ದೊಂಡಿಯಾ ಜಂಗಮ ಯುದ್ಧ ತಂತ್ರವನ್ನು ಅಳವಡಿಸಿಕೊಂಡಿದ್ದ. ಕೋಟೆಯೊಳಗಿನಿಂದ ನಡೆಸುವ ಯುದ್ಧಕ್ಕಿಂತ ಬಯಲಿನ ಕಾರ್ಯಾಚರಣೆಗೆ ಪ್ರಾಮುಖ್ಯತೆ ಕೊಟ್ಟಿದ್ದ. ಶಕ್ತಿಯುತ ಕುದುರೆಸವಾರರ ತಂಡದಿಂದ ಸಬಲವಾಗಿದ್ದ ದೊಂಡಿಯಾನನ್ನು ಹುಡುಕಲು ಮತ್ತವನನ್ನು ಸುತ್ತುವರಿಯಲು ಬ್ರಿಟೀಷರಿಗೆ ಯಾವಾಗಲೂ ಕಷ್ಟವಾಗುತ್ತಿತ್ತು. 

ಆದರೆ ಕೊನೆಗೆ, ದೊಂಡಿಯಾನ ಶಕ್ತಿಯೇ ಅವನ ಸೋಲಿಗೂ ಕಾರಣವಾಗಿಬಿಟ್ಟಿತು. ಎಲ್ಲಿಯವರೆಗೆ ದೊಂಡಿಯಾನ ಪಡೆಗಳು ಚಿಕ್ಕವಾಗಿದ್ದವೋ ಅಲ್ಲಿಯವರೆಗೆ ಅವುಗಳು ವೇಗವನ್ನುಳಿಕೊಂಡಿದ್ದವು ಮತ್ತು ಮಿಂಚಿನ ವೇಗದಲ್ಲಿ ಸ್ಥಳಾಂತರ ಮಾಡುತ್ತ, ಬ್ರಿಟೀಷ್ ಸೈನ್ಯಕ್ಕೆ ಇವರನ್ನುಡುಕುವುದನ್ನು ಅಸಾಧ್ಯವಾಗಿಸಿಬಿಡುತ್ತಿದ್ದವು; ಗೆರಿಲ್ಲಾ ಯುದ್ಧದ ಚಲನಶೀಲತೆಗೆ ಉತ್ತಮ ಉದಾಹರಣೆಯಾಗಿತ್ತು. ದೊಂಡಿಯಾ ತನ್ನ ಸೈನಿಕ ಶಕ್ತಿಯನ್ನು ಹೆಚ್ಚಿಸುತ್ತಿದ್ದಂತೆ ಎಲ್ಲಾ ಪಡೆಗಳನ್ನೂ ಒಂದೇ ತುಕಡಿಯಾಗಿ ರೂಪಿಸಿದನು. ಕುದುರೆಸವಾರರು ಕಾಲಾಳುಗಳ ಜೊತೆಗೆ ಬೆರೆತಿದ್ದರು ಮತ್ತವರು ಆಡಳಿತ ನಡೆಸುತ್ತಿದ್ದವರ ಜೊತೆಗೆ. ಚಲಿಸುವ ಸೈನ್ಯಕ್ಕೆ ಬೇಕಾದ ಸಾಮಗ್ರಿಗಳನ್ನು ಮತ್ತಿತರೆ ವಸ್ತುಗಳನ್ನು ಪೂರೈಸಲು ಮರಾಠ ಸೈನ್ಯದ ಮಾದರಿಯನ್ನು ಉಪಯೋಗಿಸಲಾಗುತ್ತಿತ್ತು. ಈಗ ದೊಂಡಿಯಾನ ಸೈನ್ಯ ಚಲಿಸಲಾರಂಭಿಸಿದರೆ ದಟ್ಟ ಧೂಳೇಳುತ್ತಿತ್ತು ಮತ್ತವನ ಪಡೆ ಕ್ಯಾಂಪು ಮಾಡಿದಾಗ ಒಂದು ಚಿಕ್ಕ ನಗರದಂತೆ ಕಾಣುತ್ತಿತ್ತು. ಇದು ಗೆರಿಲ್ಲಾ ಯುದ್ಧ ತಂತ್ರಕ್ಕೆ ಹೊಂದಾಣಿಕೆಯಾಗದೇ ದೊಂಡಿಯಾನ ಸೈನ್ಯ ಸ್ಥಿರ ಯುದ್ಧವನ್ನು ಅಳವಡಿಸಿಕೊಳ್ಳುವಂತೆ ಮಾಡಿತು. ಆದರೆ ಈ ಹೊಸ ತಂತ್ರವನ್ನು ಕಾರ್ಯರೂಪಕ್ಕೆ ತರಲು ದೊಂಡಿಯಾ ಅಸಮರ್ಥನಾಗಿದ್ದ, ಯಾಕೆಂದರೆ ದೊಂಡಿಯಾ ಪ್ರಾಂತ್ಯವನ್ನು ಏಕೀಕೃತಗೊಳಿಸಿರಲಿಲ್ಲ ಮತ್ತವನ ಬಳಿ ಮೇಲ್ ದರ್ಜೆಯ ಸೈನ್ಯವನ್ನು ಎದುರಿಸಲು ಬೇಕಾದ ಶಸ್ತ್ರಾಸ್ತ್ರಗಳೂ ಇರಲಿಲ್ಲ. ದೊಂಡಿಯಾನ ಸೈನಿಕ ಪಡೆ ಹೆಚ್ಚಾದಷ್ಟೂ ಸಿಕ್ಕಿಹಾಕಿಕೊಳ್ಳುವ ಸಾಧ್ಯತೆಗಳು ಜಾಸ್ತಿಯಾದವು, ದೊಂಡಿಯಾನನ್ನು ಹುಡುಕುವುದು – ಗುರುತಿಸುವುದು ಸುಲಭವಾಯಿತು. ವೆಲ್ಲೆಸ್ಲಿ ಪಡೆಗಳ ನಿರಂತರ ಕಾರ್ಯಾಚರಣೆಯಿಂದಾಗಿ, ಕೊನೆಗೆ ದೊಂಡಿಯಾ ಕೃಷ್ಣಾ ನದಿಯ ದಂಡೆಗೆ ಬಂದ, ಬಿರುಸಾಗಿ ಹರಿಯುತ್ತಿರುವ ನದಿಯ ಅಂಚಿಗೆ ಬಂದುಬಿಟ್ಟ. ಒಂದೆಡೆ ಆಳ ಸಮುದ್ರ ಮತ್ತೊಂದೆಡೆ ಸೈತಾನನಿಂದ ಸುತ್ತುವರಿದಂತೆ ದೊಂಡಿಯಾನನ್ನು ಸುತ್ತುವರಿಯಲಾಯಿತು ಮತ್ತು ಮೇಲ್ ದರ್ಜೆಯ ಸೈನಿಕ ಪಡೆಯಿಂದ ಅವನನ್ನು ಮಣಿಸಲಾಯಿತು. 1800ರ ಸೆಪ್ಟೆಂಬರ್ 10ರಂದು ದೊಂಡಿಯಾ ಬ್ರಿಟೀಷರ ಎದುರಿನ ಕದನದಲ್ಲಿ ಹುತಾತ್ಮನಾದ. 

ಈ ಪರಿಸ್ಥಿತಿಗಿಂತ ಹೆಚ್ಚೇನೂ ಭಿನ್ನವಲ್ಲದ ಪರಿಸ್ಥಿತಿಯ (ದೆಹಲಿ ಸೋತ ನಂತರ ಬಂಡಾಯ ಸೈನಿಕರು ಹಳ್ಳಿಗಳ ಕಡೆಗೆ ಚದುರಿಹೋದಾಗ) ಬಗ್ಗೆ ಫ್ರೆಡರಿಕ್ ಏಂಜೆಲ್ಸ್ ಬರೆಯುತ್ತಾರೆ: “ಎಲ್ಲಿಯವರೆಗೆ ಬಂಡಾಯ ಸೈನಿಕರು ದೊಡ್ಡ ಸಂಖೈಯಲ್ಲಿದ್ದರೋ, ಎಲ್ಲಿಯವರೆಗೆ ಇದು ಆಕ್ರಮಣದ ಮತ್ತು ದೊಡ್ಡ ಮಟ್ಟದ ತೀಕ್ಷ್ಣ ಯುದ್ಧದ ಪ್ರಶ್ನೆಯಾಗಿತ್ತೋ, ಇಂಗ್ಲೀಷ್ ಪಡೆಗಳಿಗೆ ಇಂತಹ ಕಾರ್ಯಾಚರಣೆಯಲ್ಲಿದ್ದ ಉನ್ನತಿ ಅವರಿಗೆ ಅನುಕೂಲಕರವಾಗಿತ್ತು.” (11)

ಮುಂದಿನ ವಾರ:
ವೆಲ್ಲೂರಿನ ಬಂಡಾಯ

ಆಗ 25, 2016

ಗೋಹತ್ಯೆ – ಒಂದು ಪರಾಮರ್ಶೆ: ಭಾಗ 1.

(ಕಳೆದ ಬಾರಿ ಕರ್ನಾಟಕದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ ಗೋಹತ್ಯೆಯನ್ನು ನಿಷೇಧಿಸುವ ಕಾಯ್ದೆಯನ್ನು ಜಾರಿಗೆ ತರುವ ಸಂದರ್ಭದಲ್ಲಿ 'ನವ ಕರ್ನಾಟಕ ಪ್ರಕಾಶನ' ಪ್ರಕಟಿಸಿದ ಕಿರು ಪುಸ್ತಕ "ಗೋಹತ್ಯೆ - ಒಂದು ಪರಾಮರ್ಶೆ". 2010ರಲ್ಲಿ ಮೊದಲು ಪ್ರಕಟವಾಗಿದ್ದ ನಾಗೇಶ್ ಹೆಗಡೆಯವರ ಈ ಪುಸ್ತಕ ಅವತ್ತಿಗಿಂತಲೂ ಇವತ್ತಿಗೇ ಹೆಚ್ಚು ಪ್ರಸ್ತುತ. ದನದ ಹೆಸರಿನಲ್ಲಿ ಜನರನ್ನು ಸಾಯಿಸುವ ಪ್ರವೃತ್ತಿ ಅಲ್ಲೆಲ್ಲೋ ದೂರದ ಊರಿನ ಘಟನೆಯಾಗಿ ಉಳಿದಿಲ್ಲ. ನಮ್ಮ ಕರಾವಳಿಯಲ್ಲೇ ಒಂದು ಬಲಿ ಪಡೆದುಕೊಂಡಿದೆ ಈ ಗೋ - ರಾಜಕೀಯ. ಈ ಸಂದರ್ಭದಲ್ಲಿ ನಾಗೇಶ್ ಹೆಗಡೆಯವರು ವೈಜ್ಞಾನಿಕ - ಆರ್ಥಿಕ - ಸಾಮಾಜಿಕ ದೃಷ್ಟಿಕೋನದಿಂದ ಬರೆದಿರುವ "ಗೋಹತ್ಯೆ - ಒಂದು ಪರಾಮರ್ಶೆ"ಯನ್ನು ಹಿಂಗ್ಯಾಕೆಯಲ್ಲಿ ಮೂರು ಕಂತುಗಳಲ್ಲಿ ಪ್ರಕಟಿಸಲಾಗುತ್ತಿದೆ. ಪ್ರಶ್ನೋತ್ತರ ರೂಪದಲ್ಲಿರುವ ಈ ಕಿರುಪುಸ್ತಕವನ್ನು ಮರುಪ್ರಕಟಿಸಲು ಅನುಮತಿ ನೀಡಿದ ನಾಗೇಶ್ ಹೆಗಡೆಯವರಿಗೆ ಧನ್ಯವಾದಗಳು - ಹಿಂಗ್ಯಾಕೆ.)
ನಾಗೇಶ್ ಹೆಗಡೆ
25/08/2016
ಕರ್ನಾಟಕದಲ್ಲಿ ಗೋಹತ್ಯೆಯನ್ನು ನಿಷೇಧಿಸಬೇಕೆಂದು ಬಿಜೆಪಿ ಸರಕಾರ ನಿರ್ಧರಿಸಿರುವಾಗ ಅದನ್ನು ಏಕೆ ವಿಚಾರವಾದಿಗಳು ವಿರೋಧಿಸುತ್ತಿದ್ದಾರೆ? ರೈತರ ಹೆಸರಿನಲ್ಲೇ ಪ್ರಮಾಣ ಮಾಡಿ ಅಧಿಕಾರಕ್ಕೆ ಬಂದು ‘ರೈತಪರ’ ಎಂದು ಹೇಳಿಕೊಳ್ಳುವವರು ರೈತರ ಹಿತಾಸಕ್ತಿಗೆ ಧಕ್ಕೆ ತರುವಂತಹ ಕೆಲಸವನ್ನು ಎಂದಾದರೂ ಮಾಡುತ್ತಾರೆಯೆ?
ಮೊದಲನೆಯದಾಗಿ, ಇದರಲ್ಲಿ ರೈತರ ಹಿತಾಸಕ್ತಿ ಒಂದೇ ಅಲ್ಲ, ಇಡೀ ಸಮಾಜದ ಹಿತಾಸಕ್ತಿಯ ಪ್ರಶ್ನೆಯಿದೆ. ಅವನ್ನು ಮುಂದೆ ನೋಡೋಣ. ಸದ್ಯಕ್ಕೆ ರೈತರ ವಿಚಾರವನ್ನೇ ಮೊದಲು ಚರ್ಚಿಸೋಣ. ರೈತರಿಗೆ ಪಶು ಎಂದರೆ ಕೇವಲ ದನ ಅಲ್ಲ, ಅದು ಪಶು’ಧನ’ ಎನ್ನಿಸಿತ್ತು. ರೈತ ಸಮುದಾಯಕ್ಕೆ ಜಮೀನು – ಮನೆ ಇವು ಶಾಶ್ವತ ಆಸ್ತಿ ಆಗಿದ್ದಂತೆ, ಗಿಡಮರ ಮತ್ತು ಸಾಕುಪ್ರಾಣಿಗಳು ಚರಾಸ್ತಿ (ಲಿಕ್ವಿಡ್ ಅಸೆಟ್) ಎನಿಸಿದ್ದವು. ಕಷ್ಟ ಬಂದಾಗ, ಇವನ್ನು ಮಾರಿ ನಂತರ ಕಷ್ಟಗಳೆಲ್ಲ ನೀಗಿದ ಮೇಲೆ ಮತ್ತೆ ಅವನ್ನು ಗಳಿಸಿ, ಬೆಳೆಸಿಕೊಳ್ಳುವ ಒಂದು ಸುಭದ್ರ ವ್ಯವಸ್ಥೆ ಇದಾಗಿತ್ತು. ತಾನು ಬೆಳೆಸಿದ ಮರಗಳ ಬಗ್ಗೆ ಅಥವಾ ಹಸು – ಹೋರಿಗಳ ಬಗ್ಗೆ ಅದೆಷ್ಟೇ ಪ್ರೀತಿ ಇದ್ದರೂ ಅನಿವಾರ್ಯ ಪ್ರಸಂಗಗಳಲ್ಲಿ ಅವುಗಳಿಗೆ ವಿದಾಯ ಹೇಳುವ ಒಂದು ಸುಸ್ಥಿರ ವ್ಯವಸ್ಥೆಯನ್ನು ರೈತ ಸಮುದಾಯ ರೂಢಿಸಿಕೊಂಡಿತ್ತು. ದಯೆ, ಪ್ರೀತಿ, ಮಮಕಾರದ ಬಂಧನಗಳ ನಡುವೆಯೇ ವಾಸ್ತವದ ಅರಿವೂ ಅವರಿಗಿತ್ತು. ಕಾಯಿಲೆ ಬಿದ್ದ ಪತ್ನಿಯನ್ನು ಉಳಿಸಿಕೊಳ್ಳುವುದು ಮುಖ್ಯವೋ ಅಥವಾ ಕೊಟ್ಟಿಗೆಯ ಪ್ರೀತಿಯ ದನ ಮುಖ್ಯವೋ ಎಂಬ ಪ್ರಶ್ನೆ ಎದುರಾದಾಗ ದನವನ್ನು ಮಾರಿ ಪತ್ನಿಗೆ ಚಿಕಿತ್ಸೆ ಕೊಡುವ ಸ್ವಾತಂತ್ರ್ಯ ರೈತನಿಗಿತ್ತು. ಈಗಿನ ಸರಕಾರ ಅವನ ಆ ಮೂಲಭೂತ ಸ್ವಾತಂತ್ರ್ಯವನ್ನೇ ಪರೋಕ್ಷವಾಗ ಕಿತ್ತುಕೊಳ್ಳುತ್ತಿದೆ. 

ಹಾಗೇನಿಲ್ಲವಲ್ಲ? ಹಸು ಅಥವಾ ಎತ್ತನ್ನು ಈಗಲೂ ಮಾರಬಹುದು. ಆದರೆ ಕಟುಕರಿಗೆ ಮಾರಬಾರದು......
ಐದನೇ ಸೂಲು ಮುಗಿದ ಹಸುವನ್ನು ಬೇರೆ ಯಾರು ಯಾಕೆ ಕೊಳ್ಳುತ್ತಾರೆ? ರೈತನ ಕೊಟ್ಟಿಗೆಯಲ್ಲೇ ಅದು ಮುದಿಯಾಗಬೇಕು. ಹಾಲು ಕೊಡದಿದ್ದರೂ ಬದುಕಿದ್ದಷ್ಟು ದಿನವೂ ಅದಕ್ಕೆ ಮೇವು ಹಾಕಬೇಕು. ಕಾಯಿಲೆ ಬಿದ್ದರೆ ಪಶುವೈದ್ಯರನ್ನು ಕರೆಸಬೇಕು. ದಿನವೂ ಅದರ ಸೆಗಣಿ ಗಂಜಳ ಬಾಚಬೇಕು. ಮೈ ತೊಳೆಸಬೇಕು. ಬಿಸಿಲಲ್ಲಿ ಓಡಾಡಿಸಬೇಕು. ಪ್ರತಿ ತಿಂಗಳು ಕನಿಷ್ಠ ಸಾವಿರ ರೂಪಾಯಿಗಳನ್ನು ಅದಕ್ಕೆಂದು ವೆಚ್ಚ ಮಾಡಬೇಕು.

ಸೆಗಣಿ – ಗಂಜಳ ಗೊಬ್ಬರವನ್ನು ಮಾರಿದರೆ ಹಣ ಬರುತ್ತದಲ್ಲ
ಹಿಂದೆಲ್ಲ ಅದು ಸಾಧ್ಯವಿತ್ತು. ಹಗಲೆಲ್ಲ ಅದು ತನ್ನ ಪಾಡಿಗೆ ಗುಡ್ಡಬೆಟ್ಟ ಮೇಯ್ದು ಬಂದು ರಾತ್ರಿ ತಂಗಿದರೂ ತುಸುಮಟ್ಟಿಗೆ ಲಾಭದಾಯಕವೇ ಆಗಿತ್ತು. ಆದರೆ ಈಗ ಮೇಯಲು ಏನಿದೆ? ಗೋಮಾಳ ಎಲ್ಲಿ ಉಳಿದಿವೆ? ಇತ್ತ ಹೋದರೆ ಜಾಲಿಮರ, ಅತ್ತ ಹೋದರೆ ನೀಲಗಿರಿ. ಹಾಗಾಗಿ ಕಟ್ಟಿಯೇ ಮೇವು ಹಾಕಬೇಕು. ಹಣಕೊಟ್ಟು ಖರೀದಿಸಿದ ಮೇವು ಹಾಕಬೇಕು. ಒಂದು ದಿನ ಆ ಹಸು ಸತ್ತುಹೋಗುತ್ತದೆ. ಏನು ಮಾಡುವುದು? ಅದನ್ನು ಎಳೆದು ದೂರ ಬಿಸಾಕಲು ಹಳ್ಳಿಯಲ್ಲಿ ನಾಲ್ಕು ಜನ ಸಹಾಯಕರು ಸಿಗುವುದಿಲ್ಲ. ಹಿಂದಿನ ಕಾಲದಲ್ಲಿ ಹೆಣವನ್ನು ರಣಹದ್ದುಗಳು, ನರಿ – ಕಿರುಬಗಳು ಎರಡೇ ದಿನದಲ್ಲಿ ಖಾಲಿ ಮಾಡುತ್ತಿದ್ದವು. ಈಗ ಅವು ಯಾವುವೂ ಇಲ್ಲ. ಕೊಳೆತ ಭಾಗಗಳು ನಾರುವುದಲ್ಲದೇ ರೋಗಗಳನ್ನು ಹಬ್ಬಿಸುತ್ತವೆ. ಅಂಥ್ರಾಕ್ಸ್ ರೋಗಾಣುಗಳು ಮನುಷ್ಯರಿಗೆ ಪ್ರಾಣಾಪಾಯ ಉಂಟುಮಾಡುತ್ತವೆ. ಊರ ನಾಯಿಗಳು ರೋಗಗ್ರಸ್ತ ಕೊಳೆತ ಬಿಡಿಭಾಗಗಳನ್ನು ಎಳೆದಾಡಿ, ಊರಿನೊಳಕ್ಕೂ ತಂದು ರಗಳ ಆಗುತ್ತದೆ. ಇವೆಲ್ಲವನ್ನೂ ಅನುಭವಿಸಿದ ಊರಿನ ಜನರು ಸತ್ತ ದನವನ್ನು ಸಮೀಪವೆಲ್ಲೂ ಬಿಸಾಕಲು ಬಿಡುವುದಿಲ್ಲ. ಹತ್ತಿರದಲ್ಲೇ ಎಲ್ಲಾದರೂ ಗುಂಡಿ ತೋಡ ಹೂಣಬೇಕೆಂದರೆ ಆರಡಿ ಉದ್ದದ, ನಾಲ್ಕಡಿ ಆಳದ ಗುಂಡಿ ತೋಡಲು ಜನರು ಸಿಗುವುದಿಲ್ಲ. ‘ಜೆಸಿಬಿ ತರಿಸಿ’ ಎನ್ನುತ್ತಾರೆ. ಅವರಿವರನ್ನು ಬೇಡಿಕೊಂಡು ಜೆಸಿಬಿ ತರಿಸಿದರೆ ಕನಿಷ್ಠ ಅದು ಬೇಸಿಗೆಯ ಕಾಲವಾಗಿದ್ದರೆ ಎರಡು ಸಾವಿರ ರೂಪಾಯಿ ತೆರಬೇಕು. ಸೆಗಣಿ ಗಂಜಳದಿಂದ ಗಳಿಸಿದ ಹಣವೆಲ್ಲ ಅದರ ಸಂಸ್ಕಾರಕ್ಕೇ ಹೋಗುತ್ತದೆ. ಅಂತೂ ಒಂದು ಮುದಿ ದನ ಮನೆಯಲ್ಲಿದ್ದರೂ ಕಷ್ಟ, ಸತ್ತರೆ ಇನ್ನೂ ಕಷ್ಟ ಎಂಬ ಸ್ಥಿತ ಬರುತ್ತದೆ.

ಸತ್ತ ದನವನ್ನು ಮಾರಬಹುದಲ್ಲ? ಅದಕ್ಕೆ ಹೊಸ ಕಾನೂನಿನಲ್ಲಿ ಅವಕಾಶ ಇದ್ದೇ ಇರುತ್ತದೆ.
ಮಾರುವುದು ಸುಲಭವೇ? ದನವೊಂದು ಸತ್ತ ತಕ್ಷಣ ಪಶುವೈದ್ಯರನ್ನು ಕರೆಸಿ, (ಅವರು ತುರ್ತಾಗಿ ಬಂದರೆ) ದನ ಸತ್ತಿದೆ ಎಂದು ಪ್ರಮಾಣಪತ್ರವನ್ನು ಅವರಿಂದ ಬರೆಸಿಕೊಂಡು ಅದರ ದ್ವಿಪ್ರತಿ ಮಾಡಿಸಿ, ಕಳೇವರವನ್ನು ಖರೀದಿಸುವವರಿಗೆ ಒಂದು ಪ್ರತಿಯನ್ನು ಕೊಡಬೇಕು. ಇನ್ನೊಂದು ಪ್ರತಿಯನ್ನು ತಾನು ಕಾದಿರಿಸಬೇಕು. ಹೆಣ ದುರ್ವಾಸನೆ ಸೂಸುವ ಮುನ್ನ ಅವೆಲ್ಲ ಆಗಿಬಿಡಬೇಕು. ಅಷ್ಟೆಲ್ಲ ಮಾಡಿದರೂ ಸತ್ತ ದನವನ್ನು ಖರೀದಿ ಮಾಡಲು ಯಾರೂ ಬರದೇ ಇರಬಹುದು. ಏಕೆಂದರೆ, ದನ ತಾನಾಗಿ ಸತ್ತಿದ್ದರೂ, ಪ್ರಮಾಣಪತ್ರದ ಪ್ರತಿ ತನ್ನ ಬಳಿ ಇದ್ದರೂ ಪೋಲೀಸರ ತನಿಖೆ, ದಬ್ಬಾಳಿಕೆ ಎಲ್ಲ ಇದ್ದೇ ಇರುತ್ತದೆ. ರಗಳೆ ಯಾರಿಗೆ ಬೇಕು ಎಂದೆಲ್ಲ ಹಿಂದಿನ ಕಹಿ ಅನುಭವಗಳು ನೆನಪಾಗಿ, ಆತ ಖರೀದಿಗೆ ಬರಲು ನಿರಾಕರಿಸಬಹುದು. ಪಶುವೈದ್ಯರು ಸಮಯಕ್ಕೆ ಸರಿಯಾಗಿ ಬರದೇ ಇದ್ದರಂತೂ ಮೂಗು ಮುಚ್ಚಿಕೊಂಡು ಎಲ್ಲವನ್ನೂ ಸಹಿಸಿಕೊಳ್ಳಬೇಕು.

ದನ ಸಾಯುವ ದಿನ ಮನೆಯಲ್ಲಿ ಯುವಕರು ಯಾರೂ ಇಲ್ಲದಿದ್ದರೆ (ಈಗಂತೂ ಬಹಳಷ್ಟು ಹಳ್ಳಿಗಳಲ್ಲಿ ಯುವಕರೆಲ್ಲ ಪಟ್ಟಣ ಸೇರಿದ್ದಾರೆ) ವಯಸ್ಸಾದ ಹಿರಿಯರಿಗೆ ದೊಡ್ಡ ಸಂಕಟವೇ ಎದುರಾಗುತ್ತದೆ. ಮೈಯಲ್ಲಿ ತಾಕತ್ತಿಲ್ಲದಿದ್ದರೂ ಆತ ಜೀವಂತ ಇದ್ದಷ್ಟು ದಿನ ಮುದಿ ಹಸುವನ್ನು ಹೇಗೋ ಸಾಕಿಕೊಂಡಾನು, ಆದರೆ ಅದು ಸತ್ತರೆ ಅವನ ಕಷ್ಟಗಳು ಬೆಟ್ಟದಷ್ಟಾಗುತ್ತವೆ.


ಅಲ್ಲಲ್ಲಿ ಗೋಶಾಲೆಗಳನ್ನು ತೆರೆದು, ಮುದಿ ದನಗಳನ್ನು ಸರಕಾರವೇ ಸಾಕಿಕೊಳ್ಳುತ್ತದಂತಲ್ಲ?
ಸರಕಾರ? ಅದು ನಡೆಸುವ ವೃದ್ಧಾಶ್ರಮಗಳ ಸ್ಥಿತಿಗತಿ ನೋಡಿದ್ದೀರಾ? ಅಲ್ಲಿ ಅನಿವಾರ್ಯ ವಾಸಿಸುವ ಹಿರಿಯರ ನೋವು – ಸಂಕಟಗಳಿಗೆ ಸ್ಪಂದಿಸುವುದು ಹಾಗಿರಲಿ, ಅವರ ಪಾಲಿನ ಗಂಜಿಯನ್ನೂ ಕೊಳ್ಳೆಹೊಡೆದು ಮುಕ್ಕುವ ಅದೆಷ್ಟು ಉದಾಹರಣೆಗಳು ನಿಮಗೆ ಬೇಕು? ಇನ್ನು ಮೂಕಪ್ರಾಣಿಗಳನ್ನು ಒಂದೆಡೆ ಸಾಕುವುದೆಂದರೆ ಸುಲಭದ ಮಾತೆ? ಸಹೃದಯೀ ದಾನಿಗಳು ನಡೆಸುವ ‘ಗೋಶಾಲೆ’ಗಳಲ್ಲೇ ಮೇವು ನೀರಿಗೆ ತತ್ವಾರ ಇರುತ್ತದೆ. ಶುಚಿತ್ವದ ಅಭಾವ, ತುರ್ತು ಔಷಧಗಳ ಅಭಾವ, ವೈದ್ಯರ ಕಾಳಜಿಯ ಅಭಾವ ಇರುತ್ತದೆ. ಹಾಗಿರುವಾಗ ಇನ್ನು ಸರಕಾರಿ ಇಲಾಖೆಗಳು ಗೋಶಾಲೆಗಳನ್ನು ನಡೆಸುತ್ತವೆಂದರೆ ಮೇಲ್ವಿಚಾರಣೆ ಸುಲಭವೆ?


ಮೇಲ್ವಿಚಾರಣೆಗೆ ಮಠಾಧೀಶರು, ಧರ್ಮಾಧಿಕಾರಿಗಳು, ಹಿಂದೂ ಸ್ವಯಂಸೇವಕರು ಇರುತ್ತಾರಲ್ಲ? ಗೊಡ್ಡು ಗೋವುಗಳನ್ನು ಜೋಪಾನವಾಗಿ ರಕ್ಷಿಸುತ್ತೇವೆಂದು ಮಠಗಳು ಹೇಳುತ್ತಿವೆಯಲ್ಲ?
ಇಂದಿನ ಬಹುಪಾಲು ಮಠಗಳು ಗೊಡ್ಡು ಸಂಪ್ರದಾಯಗಳನ್ನಷ್ಟೇ ಜೋಪಾನವಾಗಿ ಕಾಪಾಡಿಕೊಂಡಿವೆ. ಅವು ಹಿಂದಿನ ಕಾಲದ ನೀತಿ, ನ್ಯಾಯ, ಧರ್ಮಗಳನ್ನಾಗಲೀ ಪರಂಪರೆಯನ್ನಾಗಲೀ ಪಾವಿತ್ರ್ಯವನ್ನಾಗಲೀ ಉಳಿಸಿಕೊಂಡಿಲ್ಲ. ಹಿಂದಿನ ಮೌಲ್ಯಗಳನ್ನಂತೂ ಉಳಿಸಿಕೊಂಡಿಲ್ಲ, ಇಂದಿನ ವೈಜ್ಞಾನಿಕ ದೃಷ್ಟಿಕೋನವನ್ನೂ ಬೆಳೆಸಿಕೊಂಡಿಲ್ಲ.

ಗೋರಕ್ಷಣೆ ಎಂಬುದು ಹಿಂದಿನ ಕಾಲದ ಮೌಲ್ಯವೇ ಆಗಿತ್ತಲ್ಲವೇ? ಅಂಥ ಸಭ್ಯ ಪ್ರಾಣಿಗಳನ್ನು ಹಿಂಸಿಸುವುದಾಗಲೀ ಕೊಲ್ಲುವುದಾಗಲೀ ಹಿಂದೂ ಸಂಪ್ರದಾಯಕ್ಕೆ ವಿರುದ್ಧವಲ್ಲವೆ?
ಇಲ್ಲಿ ಸಾಕಷ್ಟು ತಪ್ಪುಕಲ್ಪನೆಗಳಿವೆ. ಹಿಂದಿನವರು ಗೋವುಗಳನ್ನು ಸಾಕುತ್ತಿದ್ದರು ನಿಜ. ಹಾಲು ಹೈನಕ್ಕಾಗಿಯೂ ಸಾಕುತ್ತಿದ್ದರು. ಮಾಂಸಕ್ಕಾಗಿಯೂ ಸಾಕುತ್ತಿದ್ದರು. ವೇದಕಾಲದಲ್ಲಿ ಔತಣಕೂಟಗಳಲ್ಲಷ್ಟೇ ಅಲ್ಲ, ಯಾಗ – ಯಜ್ಞಗಳಂಥ ಪವಿತ್ರ ಕಾರ್ಯಗಳಲ್ಲೂ ಗೋವಧೆ, ಗೋಮಾಂಸ ನೈವೇದ್ಯ ಮತ್ತು ಭಕ್ಷಣೆಯಲ್ಲಿ ಋತ್ವಿಜರೂ ಪಾಲ್ಗೊಳ್ಳುತ್ತಿದ್ದರು. ಕುದುರೆಯ ಮಾಂಸವನ್ನು ಬೇಯಿಸುವಾಗಿನ ಪರಿಮಳ ಅದೆಷ್ಟು ದೂರ ಪಸರಿಸುತ್ತಿತ್ತು ಎಂಬುದರ ಬಗ್ಗೆ ವೇದಗಳಲ್ಲೇ ವಿವರ ವರ್ಣನೆಗಳಿವೆ. ಅಷ್ಟೇಕೆ, ಕಾಳಿದಾಸನ ಮೇಘದೂತದಲ್ಲಿ ರಂತಿದೇವನ ಸಾಮ್ರಾಜ್ಯದ ವರ್ಣನ ಬರುತ್ತದೆ. ರಾಜ ಆಗಾಗ ಏರ್ಪಡಿಸುತ್ತಿದ್ದ ಮೋಜಿನ ಕೂಟದಲ್ಲಿ ದನಗಳ ಮಾಂಸ ತೆಗೆದ ನಂತರ ಉಳಿಯುವ ಚರ್ಮವನ್ನು ನದಿಗಳಲ್ಲಿ ತೇಲಿಬಿಡುತ್ತಿದ್ದರಂತೆ. ಹಾಸು ಹಾಸು ಚರ್ಮಗಳು ತೇಲಾಡುವ ‘ಚರ್ಮಣ್ವತೀ’ ನದಿಯನ್ನು ಎತ್ತರದಿಂದಲೇ ಗುರುತಿಸಬಹುದು ಎಂದ ಅದರಲ್ಲಿ ವಿವರಗಳಿವೆ. ಕಾಲ ಬದಲಾದಂತೆ ಕ್ರಮೇಣ ಕೆಲವು ವರ್ಗದ ಜನರು ಮಾಂಸಭಕ್ಷಣೆಯನ್ನು ತ್ಯಜಿಸಿದರು. ಅವಕ್ಕೆ ಕಾರಣಗಳು ಅನೇಕ ಇರಬಹುದು. ಚಿಕ್ಕ ಸಮುದಾಯಗಳಲ್ಲಿ ಗೋವಧೆ ಮಾಡಿದರೆ ತಿಂದು ಮುಗಿಸುವುದು ಕಷ್ಟ. ಜಾಸ್ತಿ ತಿಂದರೂ ಕಷ್ಟ; ಎರಡು ಮೂರು ದಿನಗಳವರೆಗೆ ಅದನ್ನೇ ತಿನ್ನುತ್ತಿದ್ದರೆ ಇನ್ನೂ ಕಷ್ಟ. ಅದರಿಂದುಂಟಾಗುವ ರೋಗರುಜಿನಗಳ ಭಯ ಇರಬಹುದು ಅಥವಾ ಶ್ರೇಷ್ಠತೆಯ ವ್ಯಸನವೂ ಇರಬಹುದು. ತಾನು ಇತರರಿಗಿಂತ ಶ್ರೇಷ್ಠನೆಂದು ತೋರಿಸಿಕೊಳ್ಳುವವರು ಕೆಲವು ನಿತ್ಯಸುಖಗಳನ್ನು ತ್ಯಾಗ ಮಾಡಬೇಕಾಗುತ್ತದೆ. ಕಟ್ಟಳೆಗಳನ್ನು ಕಟ್ಟಿಕೊಂಡು ಕ್ರಮೇಣ ಅದೇ ಒಂದು ಸಂಪ್ರದಾಯವಾಗಿ ಬೆಳೆದುಬಂದಿರಬಹುದು. ಅದೇನೇ ಇರಲಿ, ಅವರ ಪಾಡಿಗೆ ಅವರಿರಲಿ. ಚಿಂತಕ ಡಾ. ಜಿ. ರಾಮಕೃಷ್ಣ ಹೇಳುವ ಹಾಗೆ, “ತಾನೇ ಶ್ರೇಷ್ಠ, ತನಗೆ ವರ್ಜ್ಯವಾದುದನ್ನು ಇತರರೂ ವರ್ಜಿಸಬೇಕು” ಎನ್ನುವುದು ಸರಿಯಲ್ಲ. ಗೋಮಾಂಸವನ್ನು ತ್ಯಜಿಸಿದವರು ತಮ್ಮ ಬಳ ಬಂದರೆ ಮೇಲ್ಜಾತಿಯ “ದೀಕ್ಷೆ ಕೊಡಿಸುತ್ತೇನೆ” ಎಂದು ಮಠಾಧೀಶರೊಬ್ಬರು ಹೇಳಿದ್ದಾಗಿ ವರದಿಯಾಗಿದೆ. ಅವರಿಗೂ ಅದೇ ಮಾತನ್ನು ಅನ್ವಯಿಸಬಹುದಲ್ಲ; “ಸ್ವಾಮೀಜಿ, ನೀವು ಮಾಂಸ ತಿನ್ನಲು ಆರಂಭಿಸಿದರೆ, ಬನ್ನಿ ನಾವೇ ನಿಮಗೆ ದೀಕ್ಷೆ ಕೊಟ್ಟು ದಲಿತ ಸಮುದಾಯಕ್ಕೆ ಸೇರಿಸಿಕೊಳ್ಳುತ್ತೇವೆ” ಎನ್ನಬಹುದಲ್ಲ? ತಮ್ಮ ಕಟ್ಟಳೆಗಳನ್ನೇ ಇತರರ ಮೇಲೂ ಹೇರಬೇಕು, ಅದೂ ಕಾನೂನಿನ ಮೂಲಕ ಹೇರಬೇಕು ಎನ್ನುವುದು ಸರಿಯಲ್ಲ.

ಅದೇನೇ ಇರಲಿ, ಮಠಾಧೀಶರೆನ್ನಿಸಿಕೊಂಡವರು ಹಿಂದೂ ಧರ್ಮದ ಮೂಲತತ್ವಗಳನ್ನು ಕಾಪಾಡಿಕೊಂಡು ಬರಬೇಕಲ್ಲವೇ? ಅವರದ್ದು ತಪ್ಪೆಂದು ಹೇಗೆ ಹೇಳುತ್ತೀರಿ?
ಬೇರೆಯವರ ಊಟವನ್ನು ಕಸಿಯುವುದು ಎಂದಿಗೂ ಯಾವ ಧರ್ಮದ್ದೂ ಮೂಲತತ್ವ ಆಗಿರಲು ಸಾಧ್ಯವಿಲ್ಲ. ಹಿಂದೂ ಧರ್ಮದ್ದಂತೂ ಅಲ್ಲವೇ ಅಲ್ಲ. ಮೇಲಾಗಿ ಹಿಂದೂ ಧರ್ಮದಲ್ಲೂ ವೈವಿಧ್ಯಮಯ ಆಹಾರ ಸೇವನೆ ಇದೆ. ಕೆಲವರು ಮಾತ್ರ ಮಾಂಸ ಭಕ್ಷಣೆ ಮಾಡುವುದಿಲ್ಲ; ಕೆಲವರು ಕುರಿ – ಕೋಳಿ ತಿನ್ನುತ್ತಾರೆ; ಕೆಲವರು ಹಂದಿಮಾಂಸ ಭಕ್ಷಣೆ ಮಾಡುತ್ತಾರೆ. ಇನ್ನು ಕೆಲವರು ಗೋಮಾಂಸ ಭಕ್ಷಣೆ ಮಾಡುತ್ತಾರೆ. ಅವರೆಲ್ಲರನ್ನೊಳಗೊಂಡ ಧರ್ಮ ಇದು.

ಮುಂದುವರೆಯುವುದು....