ಮೇ 6, 2016

ಮೇಕಿಂಗ್ ಹಿಸ್ಟರಿ: ಕೈಗಾರಿಕೆಯ ಸ್ಥಾನ ಪಲ್ಲಟ

Making history by saketh rajan
ಸಾಕೇತ್ ರಾಜನ್
ಕನ್ನಡಕ್ಕೆ: ಡಾ. ಅಶೋಕ್. ಕೆ. ಆರ್
06/05/2016


ಭಾರತ ಮತ್ತು ಇಂಗ್ಲೆಂಡಿನ ನಡುವಿನ ಮುಕ್ತ ವ್ಯಾಪಾರ ಭಾರತಕ್ಕೆ ಅನುಕೂಲಕರವಾಗಿಯೇ ಇತ್ತು. ಯುರೋಪಿನ ಕೈಗಾರಿಕಾ ಉತ್ಪನ್ನಗಳಿಗೆ ಭಾರತದಲ್ಲಿ ಬೇಡಿಕೆ ಕಡಿಮೆಯಿತ್ತು. ಹದಿನೇಳನೇ ಶತಮಾನದ ಮಧ್ಯಭಾಗದಲ್ಲಿ ನಡೆದುದ್ದರ ಬಗ್ಗೆ ಪಿಜೆ ಥಾಮಸ್ ತಿಳಿಸುತ್ತಾರೆ: “ದೇಶದ ಕೈಗಾರಿಕೆಗಳನ್ನು ಪ್ರೋತ್ಸಾಹಿಸುವುದಕ್ಕೆ ಮತ್ತು ದೇಶದ ಸಂಪನ್ಮೂಲವನ್ನು ರಕ್ಷಿಸುವುದಕ್ಕೆ ಕಂಪನಿ ಇಂಗ್ಲೆಂಡಿನ ಉತ್ಪನ್ನಗಳನ್ನು ಪೂರ್ವದ ದೇಶಗಳಿಗೆ ರಫ್ತು ಮಾಡಬೇಕೆಂದು ನಿರ್ಧರಿಸಲಾಯಿತು. ಅದರ ಪ್ರಕಾರ ಉಣ್ಣೆ ಬಟ್ಟೆ, ಕಬ್ಬಿಣ, ಸೀಸ, ಸಿಲ್ವರ್, ಕತ್ತಿ ಅಲಗುಗಳನ್ನು ಭಾರತದ ಕಾರ್ಖಾನೆಗಳಿಗೆ ರವಾನಿಸಲಾಯಿತು. ಈ ವಸ್ತುಗಳಿಗೆ ಅಲ್ಲಿ ಬೇಡಿಕೆ ಕಡಿಮೆಯಿತ್ತು. ಕಂಪನಿಯ ಕಬ್ಬಿಣ ಮತ್ತು ಟಿನ್ ಭಾರತದ ಗ್ರಾಹಕನಿಗೆ ತುಂಬಾ ದುಬಾರಿಯದ್ದಾಗಿತ್ತು ಮತ್ತು ಇತರೆ ವಸ್ತುಗಳು ತುಂಬಾ ಕಡಿಮೆ ಪ್ರಮಾಣದಲ್ಲವರಿಗೆ ಬೇಕಾಗಿತ್ತು. ಇಂಗ್ಲೆಂಡಿನ ಉಣ್ಣೆ ಬಟ್ಟೆಗಳಿಗೆ ಭಾರತದಲ್ಲಿ ವ್ಯಾಪಾರ ಕುದುರಿಸಲು ಕಂಪನಿಗೆ ಆಸಕ್ತಿಯಿತ್ತಾದರೂ ಸಿಕ್ಕ ಪ್ರತಿಕ್ರಿಯೆ ಆಶಾದಾಯಕವಾಗಿರಲಿಲ್ಲ. ಭಾರತದ ದೊಡ್ಡ ಸಂಖೈಯ ಜನರು ಹತ್ತಿ ಬಟ್ಟೆಯನ್ನಷ್ಟೇ ಉಡುತ್ತಿದ್ದರು. ಅವರಿಗೊಂದೋ ಎರಡೋ ಕಂಬಳಿ ಬೇಕಿತ್ತು, ಆದರೆ ಭಾರತದಲ್ಲೇ ಗುಣಮಟ್ಟದ ಕಡಿಮೆ ಬೆಲೆಯ ವಸ್ತು ಸಿಗುತ್ತಿತ್ತು.

ಭಾರತದಲ್ಲಿ ಉಣ್ಣೆ ಬಟ್ಟೆಗಳ ವ್ಯಾಪಾರ ಹೆಚ್ಚಿಸಬೇಕೆಂದು ಕಂಪನಿಯ ನಿರ್ದೇಶಕರು ಪದೇ ಪದೇ ಭಾರತಕ್ಕೆ ಆದೇಶ ಕಳುಹಿಸುತ್ತಿದ್ದರು. ವ್ಯಾಪಾರ ಹೆಚ್ಚಿಸಲು ಶ್ರಮ ಹಾಕಿದರಾದರೂ ಸಿಕ್ಕ ಪ್ರತಿಫಲ ಮಾತ್ರ ತುಂಬಾನೇ ಕಡಿಮೆ.” (156)

ಫೆಬ್ರವರಿ 1818ರಲ್ಲಿ ಥಾಮಸ್ ಮನ್ರೋ ತನ್ನ ಟಿಪ್ಪಣಿ On opening the trade with india to the outposts of the great britainನಲ್ಲಿ ಹೆಚ್ಚು ಕಡಿಮೆ ಎರಡು ಶತಮಾನಗಳ ಹಿಂದೆ ಪಿಜೆ ಥಾಮಸ್ ವ್ಯಕ್ತಪಡಿಸಿದ್ದ ಅಭಿಪ್ರಾಯವನ್ನೇ ಪ್ರತಿಧ್ವನಿಸುತ್ತಾನೆ. “ಯಾವುದೇ ದೇಶವು ತನ್ನಲ್ಲೇ ಕಡಿಮೆ ಮತ್ತು ಉತ್ತಮ ಗುಣಮಟ್ಟದ ಉತ್ಪನ್ನಗಳು ಉತ್ಪಾದನೆಯಾಗುತ್ತಿರುವಾಗ ಅನ್ಯದೇಶದಿಂದ ಆಮದು ಮಾಡಿಕೊಳ್ಳುವುದಿಲ್ಲ. ಭಾರತದಲ್ಲಿ, ಇಲ್ಲಿನವರಿಗೆ ಬೇಕಾದ ಹೆಚ್ಚು ಕಡಿಮೆ ಪ್ರತಿಯೊಂದು ವಸ್ತುವನ್ನೂ ಕಡಿಮೆ ದುಡ್ಡಿಗೆ ಮತ್ತು ಯುರೋಪಿಗಿಂತ ಉತ್ತಮ ಗುಣಮಟ್ಟದಲ್ಲಿ ತಯಾರು ಮಾಡಲಾಗುತ್ತಿದೆ. ಇದರಲ್ಲಿ ಹತ್ತಿ ಮತ್ತು ರೇಷ್ಮೆ ಉತ್ಪಾದಕರು, ಚರ್ಮೋದ್ಯಮ, ಪೇಪರ್, ಕಬ್ಬಿಣ ಮತ್ತು ತಾಮ್ರದ ಅಡುಗೆ ಸಾಮಗ್ರಿಗಳು ಮತ್ತು ಕೃಷಿ ಉಪಕರಣಗಳು ಸೇರಿದೆ. ಅವರ ಕಂಬಳಿಗಳು, ಅಷ್ಟೇನೂ ಚೆನ್ನಾಗಿಲ್ಲದಿದ್ದರೂ, ತುಂಬಾ ಕಡಿಮೆ ಬೆಲೆಯ ಕಾರಣ ಅಸ್ತಿತ್ವ ಉಳಿಸಿಕೊಳ್ಳುತ್ತವೆ; ಅವರ ಕಂಬಳಿಗಳು ನಮ್ಮದಕ್ಕಿಂತ ಹೆಚ್ಚು ಬೆಚ್ಚಗೆ ಮಾಡುತ್ತವೆ ಮತ್ತು ಹೆಚ್ಚು ಕಾಲ ಬಾಳಿಕೆ ಬರುತ್ತದೆ….

ಜಾತಿ ಮತ್ತು ವಾತಾವರಣದಿಂದ ನಿರ್ದೇಶಿತವಾಗಿರುವ ಅವರ ಸರಳ ಜೀವನ ನಮ್ಮೆಲ್ಲ ಪೀಠೋಪಕರಣಗಳು ಮತ್ತು ಮನೆಯ ಅಂದ ಹೆಚ್ಚಿಸುವ ಅಲಂಕಾರಿಕ ವಸ್ತುಗಳನ್ನು ಹಿಂದೂಗಳಿಗೆ ನಿರುಪಯುಕ್ತವಾಗಿಸಿಬಿಡುತ್ತದೆ.

ಇತಿಹಾಸದಿಂದ ಭವಿಷ್ಯದ ಕಡೆಗೆ ನೋಡಿದರೆ ನಮ್ಮ ರಫ್ತು ಪ್ರಮಾಣವನ್ನು ಹೆಚ್ಚಿಸುವಂತಹ ಯಾವ ನಿರೀಕ್ಷೆಯನ್ನೂ ಇಟ್ಟುಕೊಳ್ಳುವುದು ಸಾಧುವಲ್ಲ. ವಿದೇಶಿ ವಸ್ತುಗಳನ್ನು ಪರಿಚಯಿಸಬೇಕು ಎಂದು ಕೆಲವರು ಹೇಳುತ್ತಿರುವುದನ್ನು ಕೇಳಿದರೆ ಅದನ್ನು ಬಹಳಷ್ಟು ಹಿಂದೆಯೇ ಮಾಡಬಹುದಿತ್ತಲ್ಲವೇ?” (157)

ಮೇಲಿನ ಎರಡು ಹೇಳಿಕೆಗಳು ಮಿಷಿನ್ನುಗಳ ಅಭಿವೃದ್ಧಿಯಿಂದ ಹೆಚ್ಚೆಚ್ಚು ಉತ್ಪಾದನೆಯನ್ನು ಕಡಿಮೆ ವೆಚ್ಚಕ್ಕೆ ತಯಾರಿಸಲಾರಂಭಿಸಿದ ಹತ್ತೊಂಬತ್ತನೇ ಶತಮಾನದಲ್ಲಿ ಉತ್ಪನ್ನಗಳ ಬೆಲೆಯನ್ನು ಹೆಚ್ಚಿಡಲಾಗಿತ್ತು, ಕರ್ನಾಟಕದ ಗುಡಿ ಕೈಗಾರಿಕೆಗಳ ಉತ್ಪನ್ನಕ್ಕಿಂತ ಮಿಷಿನ್ನಿನ ಉತ್ಪನ್ನದ ಬೆಲೆ ಜಾಸ್ತಿಯಿತ್ತು ಎಂಬುದು ಸ್ಪಷ್ಟವಾಗುತ್ತದೆ. ಜೊತೆಗೆ, ಇಂಗ್ಲೆಂಡಿನ ವಸ್ತುಗಳನ್ನು ಭಾರತಕ್ಕೆ ಸಾಗಿಸುವುದಕ್ಕಾಗುವ ಖರ್ಚು ಉತ್ಪನ್ನದ ಬೆಲೆಯನ್ನು ಮತ್ತಷ್ಟು ಹೆಚ್ಚಿಸಿಬಿಡುತ್ತಿತ್ತು. ಬೆಲೆಗಳು ಸಮನಾಗುವುದಕ್ಕೆ ಮತ್ತು ಬ್ರಿಟೀಷ್ ವಸಾಹತುಶಾಹಿಗೆ ‘ನ್ಯಾಯ’ಬದ್ಧ ಪೈಪೋಟಿ ನೀಡಲು ಮತ್ತಷ್ಟು ವರುಷಗಳು ಬೇಕಿತ್ತು.

ಮಾರ್ಕ್ಸ್ ನೀಡುವ ಅಂಕಿಅಂಶಗಳು ನಮಗೆ ಕಲಿಸುವುದೇನೆಂದರೆ: “1818ರಿಂದ 1836ರವರೆಗೆ ಬ್ರಿಟನ್ನಿನಿಂದ ಭಾರತಕ್ಕೆ ರಫ್ತಾಗುವ ಸಾಮಗ್ರಿಗಳ ಪ್ರಮಾಣ ಒಂದರಿಂದ ಐದು ಸಾವಿರದ ಎರಡು ನೂರಕ್ಕೆ ಏರಿಕೆ ಕಂಡಿತು. 1824ರಲ್ಲಿ ಭಾರತಕ್ಕೆ ರಫ್ತಾಗುತ್ತಿದ್ದ ಮಸ್ಲಿನ್ನಿನ ಪ್ರಮಾಣ 10,00,000 ಯಾರ್ಡುಗಳಿದ್ದರೆ 1837ರಲ್ಲಿ ಅದು 6,40,00,000ಯಾರ್ಡುಗಳಿಗಿಂತಲೂ ಹೆಚ್ಚಾಗಿತ್ತು. ಅದೇ ಸಮಯದಲ್ಲಿ ಡಾಕಾದ ಜನಸಂಖೈ 1,50,000ದಿಂದ 20,000ಕ್ಕೆ ಇಳಿದುಹೋಗಿತ್ತು.” (158)

ಈ ಸಾಧನೆಯನ್ನು ವಿವರಿಸುವುದೇಗೆ?

ಈ ಪ್ರಶ್ನೆಗೆ ಉತ್ತರ ಹುಡುಕಲೊರಟಾಗ ವಸಾಹತುಶಾಹಿಯ ತತ್ವಗಳು ಮತ್ತು ಬ್ರಿಟೀಷ್ ಕೈಗಾರಿಕೆಯ ಯಶಸ್ಸಿನಲ್ಲಿ ಭಾರತದ ಪಾತ್ರದ ಪಾತ್ರದ ಬಗ್ಗೆ ಮಾಹಿತಿ ಸಿಗುತ್ತದೆ.

ಸದ್ಯದಲ್ಲೇ ನಾವು ನೋಡುವಂತೆ, ಇಂತಹ ಅತ್ಯದ್ಭುತ ಯಶಸ್ಸಿಗೆ ತಾಟಸ್ಥ್ಯ ಧೋರಣೆ ಕಾರಣವಲ್ಲ, ಬದಲಿಗೆ ವಸಾಹತುಶಾಹಿಯನ್ನು ಭದ್ರಗೊಳಿಸಲು ಬಲ ಮತ್ತು ಹಿಂಸೆಯನ್ನು ಯಥೇಚ್ಛವಾಗಿ ಉಪಯೋಗಿಸಿದ್ದು ಮತ್ತು ವಸಾಹತು ಅಧಿಕಾರವನ್ನು ನಿರ್ಬಂಧಗಳನ್ನು ಜಾರಿಗೊಳಿಸಲು ಬಳಸಿಕೊಂಡು ದೇಶೀಯ ಗುಡಿಕೈಗಾರಿಕೆಗಳನ್ನು ನಾಶಪಡಿಸಿದ್ದು ಈ ಅತ್ಯದ್ಭುತ ಯಶಸ್ಸಿಗೆ ಕಾರಣ. ಬ್ರಿಟೀಷ್ ಕೈಗಾರಿಕೆಯ ಯಶಸ್ಸು ಅದರ ಬಂಡವಾಳಶಾಹಿ ವ್ಯಕ್ತಿತ್ವದಲ್ಲಷ್ಟೇ ಇಲ್ಲ – ಬಂಡವಾಳಶಾಹಿತನದಲ್ಲಿ ಹೆಚ್ಚೆಚ್ಚು ಉತ್ಪಾದನೆ ಮಾಡುವುದಷ್ಟೇ ಆರ್ಥಿಕ ನೀತಿ; ಜೊತೆ ಜೊತೆಗೆ ರಾಜಕೀಯ ದಾರಿಗಳಿಂದ ಹಿಂಸೆಯನ್ನನುಸರಿಸಿ ದೇಶವನ್ನು ಗುಲಾಮಸ್ಥಿತಿಗೆ ದೂಡಿದ್ದು ಮತ್ತು ನಮ್ಮ ಕೈಗಾರಿಕೆಗಳನ್ನು ಉಸಿರುಗಟ್ಟಿಸಲು ಭೀತಿ ಮತ್ತು ತೆರಿಗೆಯನ್ನು ಹೇರಿದ್ದು. ಬ್ರಿಟೀಷ್ ಉತ್ಪನ್ನಗಳ ಯಶಸ್ಸು ಸಾಧಿಸಲಾಗಿದ್ದು ಕರ್ನಾಟಕ ಮತ್ತು ಭಾರತದ ಕೈಗಾರಿಕೆಗಳನ್ನು ನಾಶ ಪಡಿಸಿದ ನಂತರ. ನಮ್ಮ ಕೈಗಾರಿಕಾ ಉಪಕರಣಗಳನ್ನು ಕಸಕ್ಕೆ ಸೇರುವಂತೆ ಮಾಡಿ, ಭಾರತದ ಕೈಗಾರಿಕೆಗಳ ಐತಿಹಾಸಿಕ ಮುನ್ನಡೆಯ ಅಂತ್ಯಸಂಸ್ಕಾರ ನಡೆಸಿದ ಮೇಲಷ್ಟೇ ರಫ್ತಾದ ಬ್ರಿಟೀಷ್ ಉತ್ಪನ್ನಗಳು ಭಾರತದಲ್ಲಿ ನೆಲೆಕಂಡುಕೊಳ್ಳಲು ಸಾಧ್ಯವಾಯಿತು. ಇತಿಹಾಸದ ನಂತರದ ಘಟ್ಟದಲ್ಲಷ್ಟೇ ಕಾರಣಗಳು ಪರಿಣಾಮದ ಜಾಗಕ್ಕೆ ಬಂದು, ಗುಡಿ ಕೈಗಾರಿಕೆಯ ಎಲ್ಲಾ ಉತ್ಪನ್ನಗಳನ್ನು ನಾಶಪಡಿಸಲಾರಂಭಿಸಿದ್ದು. ಮಾರ್ಕ್ಸ್ ಹೇಳಿದಂತೆ “ಬ್ರಿಟೀಷ್ ಆಕ್ರಮಣಕಾರ ಭಾರತದ ನೇಕಾರಿಕೆಯನ್ನು, ಚರಕದ ತಿರುಗುವಿಕೆಯನ್ನು ನಾಶ ಪಡಿಸಿದ. ಇಂಗ್ಲೆಂಡ್ ಭಾರತದ ಹತ್ತಿಯನ್ನು ಯುರೋಪಿನ ಮಾರುಕಟ್ಟೆಗೆ ತರಲಾರಂಭಿಸಿತು; ನಂತರ ಹತ್ತಿಯ ಮಾತೃದೇಶವಾದ ಹಿಂದೂಸ್ಥಾನಕ್ಕೇ ಹತ್ತಿಯನ್ನು ರವಾನಿಸಲಾರಂಭಿಸಿದರು!” (159)

ವಸಾಹತು ರಾಜ್ಯ ಬೆಂಗಳೂರಿನ ಸಾಂಪ್ರದಾಯಿಕ ವರ್ತಕರನ್ನು ಕಂಟೋನ್ಮೆಂಟ್ ಪ್ರದೇಶಕ್ಕೆ ಬರದಂತೆ ತಡೆದದ್ದನ್ನು ನಾವೀಗಾಗಲೇ ನೋಡಿದ್ದೇವೆ. ಬೆಂಗಳೂರು ನಗರದ ಒಂದು ಭಾಗದ ಉತ್ಪಾದಕರು ಮತ್ತೊಂದು ಭಾಗದಲ್ಲಿ ಮಾರುಕಟ್ಟೆ ಸೃಷ್ಟಿಸಿಕೊಳ್ಳಲು ಅವಕಾಶ ಕೊಡದೇ ಇದ್ದದ್ದು ಆ ಭಾಗವು ಬ್ರಿಟೀಷ್ ಕೈಗಾರಿಕೆಯ ಭಾಗವನ್ನಾಗಿಸಿತು, ಬೇರೊಬ್ಬ ವ್ಯಾಪಾರಿ ಬರಲಾಗದ ಭಾಗವಾಯಿತು.

ಬ್ರಿಟೀಷ್ ಕೈಗಾರಿಕೆಗೆ ಹೊಸ ಮಾರುಕಟ್ಟೆಯನ್ನು ಬಲವಂತವಾಗಿ ತೆರೆಸಿದ ಸಂದರ್ಭದಲ್ಲಿಯೇ ನಮ್ಮ ಗುಡಿ ಕೈಗಾರಿಕೆಗಳನ್ನು ಮುಟ್ಟುಗೋಲು ಹಾಕಿಕೊಂಡ ಬಗ್ಗೆ ಫಣಿ, ಆನಂದ್ ಮತ್ತು ವ್ಯಾಸುಲು ತಿಳಿಸುತ್ತಾರೆ. “ಟಿಪ್ಪು ಸುಲ್ತಾನ್ ಮಸ್ಕತ್ (musquat), ಓರ್ಮಿ (ormy) ಯಲ್ಲಿ ಸ್ಥಾಪಿಸಿದ ಕೈಗಾರಿಕೆಗಳನ್ನು 1801ರಲ್ಲಿ ಮುಚ್ಚಲಾಯಿತು ಮತ್ತು ಮೈಸೂರಿಗರು ತಮ್ಮ ತಮ್ಮ ಪಟ್ಟಣಕ್ಕೆ ವಾಪಸ್ಸು ಬಂದರು. ಇದರ ಪರಿಣಾಮವಾಗಿ ರೇಷ್ಮೆ, ಹತ್ತಿ, ಶ್ರೀಗಂಧದ ರಫ್ತು ರದ್ದಾಗಿಬಿಟ್ಟಿತು, ಇದರಲ್ಲಿ ಹೆಚ್ಚಿನ ಪಾಲು ಬೆಂಗಳೂರಿನದ್ದಾಗಿತ್ತು. ಐಷಾರಾಮಿ ಗ್ರಾಹಕರಿಗೆ ಬಟ್ಟೆ ಒದಗಿಸುತ್ತಿದ್ದ ಈ ಮಾರುಕಟ್ಟೆಯ ಬೆಲೆ ವಿಪರೀತವಾಗಿ ಕುಸಿದು ಬಿದ್ದ ಕಾರಣ ಈ ಮಾರುಕಟ್ಟೆಗೆ ಉತ್ಪನ್ನಗಳನ್ನು ಕಳುಹಿಸುತ್ತಿದ್ದವರ ಮೇಲೆ ಕೆಟ್ಟ ಪರಿಣಾಮ ಬೀರಿತು. ಬೆಂಗಳೂರಿನ ವಸ್ತ್ರೋದ್ಯಮದಲ್ಲಿದ್ದವರು ಇದರ ದುಷ್ಪರಿಣಾಮಗಳನ್ನನುಭವಿಸಿದರವರಲ್ಲಿ ಮೊದಲಿಗರು. ಈ ಲಾಭಕರ ಮಾರುಕಟ್ಟೆಗೆ ಬದಲಿ ಉದ್ಯಮ ಸೃಷ್ಟಿಸುವಲ್ಲಿ ಬ್ರಿಟೀಷರಿಗೆ ಆಸಕ್ತಿಯಿರಲಿಲ್ಲ ಎನ್ನುವುದು ಹೆಚ್ಚು ಸ್ಪಷ್ಟವಾಗುತ್ತ ಹೋಗುತ್ತದೆ.” (160)

ಸೈನ್ಯ ಮತ್ತು ಶ್ರೀರಂಗಪಟ್ಟಣ ಬೆಂಗಳೂರಿನ ಬಟ್ಟೆ ಉದ್ಯಮಕ್ಕೆ ಪ್ರಮುಖ ಮಾರುಕಟ್ಟೆಯಾಗಿತ್ತು. ಸೈನ್ಯದ ವಿಸರ್ಜನೆ ಮತ್ತು ಶ್ರೀರಂಗಪಟ್ಟಣದ ಜನಸಂಖೈಯಲ್ಲಾದ ಗಣನೀಯ ಇಳಿಕೆಗಳೆರಡೂ ಬೆಂಗಳೂರಿನ ಬಟ್ಟೆ ಉದ್ಯಮಕ್ಕೆ ದೊಡ್ಡ ಪೆಟ್ಟು ನೀಡಿತು. ಬಹುಶಃ ಟಿಪ್ಪು ಸುಲ್ತಾನನ ದೇಶಪ್ರೇಮಿ ಸರಕಾರದ ಪತನದಿಂದಾ ಆರ್ಥಿಕ ಪರಿಣಾಮ ಬಟ್ಟೆ ಉದ್ಯಮದಲ್ಲಿ ಕಂಡಂತೆ ಬೇರೆಲ್ಲೂ ಕಾಣಸಿಗುವುದಿಲ್ಲ. ಬಟ್ಟೆ ಉದ್ಯಮ ಕರ್ನಾಟಕದ ಬೆಳೆಯುತ್ತಿದ್ದ ಕೈಗಾರಿಕೆಗೆ ಜೀವಧಾರೆಯಾಗಿತ್ತು.

ಟಿಪ್ಪುವಿನ ಪತನದ ಕೆಲವೇ ತಿಂಗಳ ಬಳಿಕ ಉಂಟಾದ ಪರಿಣಾಮಗಳನ್ನು ಬುಚನನ್ ವಿವರಿಸುತ್ತಾನೆ. ಬೆಂಗಳೂರಿನ ಬಟ್ಟೆ ಉದ್ಯಮದ ಉಪನಗರವಾಗಿ ಬೆಳೆಯುತ್ತಿದ್ದ ಸರ್ಜಾಪುರದ ಬಗ್ಗೆ ಆತ ಹೇಳುತ್ತಾನೆ: “ಮೊದಲಿಲ್ಲಿ ಅತ್ಯುತ್ತಮ ಗುಣಮಟ್ಟದ ಬಟ್ಟೆಯನ್ನು ತಯಾರಿಸಲಾಗುತ್ತಿತ್ತು ಆದರೀಗ ಒರಟು ಉತ್ಪನ್ನಗಳನ್ನಷ್ಟೇ ತಯಾರಿಸಲಾಗುತ್ತಿದೆ.”(161) ನಂತರ ಬೆಂಗಳೂರಿನ ಬಗ್ಗೆ ಹೇಳುತ್ತಾನೆ: “ಬೆಂಗಳೂರಿನ ನೇಕಾರರು ನೈಪುಣ್ಯ ವರ್ಗಕ್ಕೆ ಸೇರಿದ ಜನರು. ಒಂದಷ್ಟು ಪ್ರೋತ್ಸಾಹ ಸಿಕ್ಕರೆ ಅವರು ಬೇಡಿಕೆಯಿರುವ ನಯ ನಾಜೂಕಿನ ಅತ್ಯುತ್ತಮ ಗುಣಮಟ್ಟದ ಬಟ್ಟೆಯನ್ನು ತಯಾರಿಸಬಲ್ಲರು. ಅವರು ಶ್ರೀರಂಗಪಟ್ಟಣಕ್ಕೆ ಇಂತಹ ವಸ್ತುಗಳನ್ನು ತಯಾರಿಸಿಕೊಡುವುದರಲ್ಲಿ ಮುಂದಿದ್ದರು. ಆದರೀಗವರಿಗೆ ಬರೀ ಅನಾನುಕೂಲಗಳೇ ಇವೆ; ಮೈಸೂರಿನ ಬೇಡಿಕೆ ಶ್ರೀರಂಗಪಟ್ಟಣದಷ್ಟಿರುವುದು ಅನುಮಾನ, ಇಂಗ್ಲೀಷ್ ಅಧಿಕಾರಿಗಳು ಮುಸ್ಲಿಂ ಸರದಾರರಂತೆ ಸ್ಥಳೀಯ ಉತ್ಪನ್ನಗಳನ್ನು ಖರೀದಿಸುವುದಿಲ್ಲ. ಹೈದರಿನ ಕಾಲದಲ್ಲಿ ಉತ್ಪಾದಿಸಿದಂತಹ ವಸ್ತುಗಳನ್ನು ತಯಾರಿಸುವುದನ್ನು ಈಗಿನ ಉತ್ಪಾದಕರು ನಿರೀಕ್ಷಿಸುವಂತಿಲ್ಲ, ತಮ್ಮ ಉತ್ಪನ್ನಗಳಿಗೆ ವಿದೇಶಿ ಮಾರುಕಟ್ಟೆಯನ್ನು ಸೃಷ್ಟಿಸಿಕೊಳ್ಳುವುದರ ಹೊರತಾಗಿ.” (162)

ಸೈತಾನನೊಬ್ಬ ರಾಕ್ಷಸನಿಗೆ ಅಮಾಯಕರನ್ನು ನ್ಯಾಯಕ್ಕೋಸ್ಕರ ನರಕಕ್ಕೆ ಕರೆದೊಯ್ಯಬೇಕೆಂದು ಸಲಹೆ ನೀಡುವಂತೆ ಬುಚನನ್ ಮುಂದುವರಿಸುತ್ತಾನೆ: “ಈ ನಗರವನ್ನು ಪುನರ್ ಸ್ಥಾಪಿಸಲು ಅಪಾರ ಆಸಕ್ತಿ ಹೊಂದಿರುವ ಪೂರ್ಣಯ್ಯ, ಸಂಗ್ರಹಿಸಿದ್ದ ಹತ್ತಿ ಮತ್ತು ರೇಷ್ಮೆಯ ಬಟ್ಟೆಗಳನ್ನು ನನಗೆ ಕಳುಹಿಸಿದ್ದಾರೆ; ಅವರ ಹೆಸರಿನಲ್ಲೇ ಮಾರ್ಕ್ವಿಸ್ ವೆಲ್ಲೆಸ್ಲಿಗೆ ಉಡುಗೊರೆಯಾಗಿ ಕೊಡಬೇಕೆಂಬ ವಿನಂತಿಯೊಂದಿಗೆ. ಇದರಿಂದ ವ್ಯಾಪಾರ ವ್ಯವಹಾರದ ನಿರ್ದೇಶಕರ ಗಮನ ಇತ್ತ ಸರಿದು, ಸಂಕಟವನ್ನುಭವಿಸಿದ ದೇಶವೊಂದನ್ನು ಪುನಃ ಕಟ್ಟಲು ವ್ಯಾಪಾರದ ಸಹಕಾರ ಸಿಗಬಹುದೆಂಬ ಕಾರಣದಿಂದ ಈ ಬೇಡಿಕೆ.” (163)

ಫಣಿ ಮತ್ತು ಸಹವರ್ತಿ ಲೇಖಕರು ಹೇಳುತ್ತಾರೆ: “….ಬಟ್ಟೆ ಉದ್ಯಮದ ಮಾರುಕಟ್ಟೆಯಲ್ಲಾದ ಈ ಏರುಪೇರುಗಳು ವರ್ತಕರು ವ್ಯಾಪಾರದ ಅಪಾಯಗಳಿಗೆ ಎದುರಾಗಲು ಹಿಂಜರಿಯುವಂತೆ ಮಾಡಿತು, ಬಂಡವಾಳ ಸುಭದ್ರವಾಗಿರುತ್ತದೆ ಎಂಬ ಭಾವನೆ ಮೂಡಿಸಿದ ಕಡೆ ಮಾತ್ರ ಅವರು ಹಿಂಜರಿಯುತ್ತಿರಲಿಲ್ಲ. ವರ್ತಕರ ಬಂಡವಾಳದ ಹರಿಯುವಿಕೆಯಲ್ಲಾದ ಈ ಅಡೆತಡೆಗಳು ಸಮೃದ್ಧ ಬಟ್ಟೆ ಉದ್ಯಮ ಬಟ್ಟೆ ತಯಾರಿಸುವುದರ ಮೇಲೆ ದುಷ್ಪರಿಣಾಮ ಬೀರಿತು. ಲೇವಾದೇವಿ ವ್ಯವಹಾರ ನಡೆಸುವವರ ಮೇಲಿನ ಅವಲಂಬನೆ ಹೆಚ್ಚಾಯಿತು.” (164)

ಇದೇ ಲೇಖಕರು ಈ ಕುಸಿತದ ರೀತಿಯನ್ನು ಮತ್ತಷ್ಟು ವಿಸ್ತಾರವಾಗಿ ವಿವರಿಸುತ್ತಾರೆ: “ಆರ್ಥಿಕತೆಯನ್ನು ಮುಕ್ತವಾಗಿಸುವ ಬ್ರಿಟೀಷರ ನೀತಿ ವ್ಯಾಪಾರವನ್ನು ವೃದ್ಧಸಿತು…. ಬ್ರಿಟೀಷರ ವ್ಯಾಪಾರವನ್ನು. ವರ್ತಕ ಬಂಡವಾಳ ಒಂದು ನಿರ್ದಿಷ್ಟ ಮಿತಿಯ ನಂತರ ಬೆಳೆಯಲಿಲ್ಲ. ಮತ್ತು ಈ ನಿಯಮಿತ ವರ್ತಕ ಬಂಡವಾಳ ಕೂಡ ಸ್ಥಳೀಯ ಬಟ್ಟೆ ಉದ್ಯಮವದ ಉತ್ಪನ್ನದ ಹೆಚ್ಚಳಕ್ಕೆ ಉಪಯೋಗವಾಗಲಿಲ್ಲ, ಅಷ್ಟೊತ್ತಿಗಾಗಲೇ ಬಟ್ಟೆ ಉದ್ಯಮಕ್ಕೆ ಹಣ ತೊಡಗಿಸುವುದು ಅನುಪಯುಕ್ತವಾಗಿತ್ತು. ಬ್ರಿಟೀಷರ ಮೊದಲ ಆರ್ಥಿಕ ನೀತಿಗಳಿಂದಾಗಿಯೇ ತೊಂದರೆ ಅನುಭವಿಸಿದ್ದ ಬೆಂಗಳೂರಿನ ಬಟ್ಟೆ ಉದ್ಯಮ ಈಗ ಮತ್ತಷ್ಟು ಕುಸಿಯಿತು. ತೊಂದರೆಗೊಳಗಾಗಿದ್ದ ಬೆಂಗಳೂರಿನ ರೇಷ್ಮೆ ಉದ್ಯಮ ವಿದೇಶಿ ರೇಷ್ಮೆ – ಕಡಿಮೆ ಹಣ ಮತ್ತು ಉತ್ತಮ ಗುಣಮಟ್ಟದ, ಹೆಚ್ಚು ಜನಪ್ರಿಯವಾಗಿದ್ದ ‘ನೂಲ್ ರೇಷ್ಮೆ’(Nool rashom) - ಯ ಆಮದಿನಿಂದ ಮತ್ತಷ್ಟು ಸಂಕಟಕ್ಕೀಡಾಯಿತು. ಅದಾಗಲೇ ಕುಸಿತದ ಹಾದಿಯಲ್ಲಿದ್ದ ರೇಷ್ಮೆ ಉದ್ಯಮಕ್ಕೆ ಮತ್ತೊಂದು ದೊಡ್ಡ ಹೊಡೆತ ಬಿದ್ದಿದ್ದು ವಸಾಹತು ತೆರಿಗೆ ಪದ್ಧತಿಯಿಂದ. ಮೈಸೂರಿಗೆ ಆಮದಾಗುವ ವಿದೇಶಿ ರೇಷ್ಮೆಯ ಮೇಲೆ ಯಾವುದೇ ಆಮದು ತೆರಿಗೆಯನ್ನು ವಿಧಿಸದೆ ಮೈಸೂರಿನಿಂದ ಇಂಗ್ಲೆಂಡಿಗೆ ರಫ್ತಾಗುವ ಎಲ್ಲಾ ರೀತಿಯ ರೇಷ್ಮೆ ಉತ್ಪನ್ನದ ಮೇಲೆ ತೆರಿಗೆ ವಿಧಿಸಲಾಗುತ್ತಿತ್ತು. ನಂತರದ ದಿನಗಳಲ್ಲಿ ರೇಷ್ಮೆಯ ಮೇಲಿನ ಸೇಯರ್ ತೆರಿಗೆ (sayer duty)ಯನ್ನು ರದ್ದುಪಡಿಸಿದರಾದರೂ ರೇಷ್ಮೆ ಉದ್ಯಮ ಮತ್ತೆ ಚೇತರಿಸಿಕೊಳ್ಳಲಿಲ್ಲ.

ಸ್ಥಳೀಯ ಹತ್ತಿ ಉದ್ಯಮ ಕೂಡ ಬೆಂಗಳೂರಿಗೆ ಆಮದಾಗುವ ಯುರೋಪಿನ ಹತ್ತಿ ದಾರದ ಮೇಲಿನ ಸೇಯರ್ ತೆರಿಗೆ ರದ್ದು ಮಾಡಿದ್ದರಿಂದ ಹೊಡೆತ ಅನುಭವಿಸಿತು. ಬೂರ್ಬೋನ್ (Bourbon) ಹತ್ತಿಯನ್ನು ಪರಿಚಯಿಸಿದ್ದು ಕೂಡ ಆ ಹತ್ತಿಯನ್ನು ಉಪಯೋಗಿಸಿ ನೇಯ್ಗೆ ಮಾಡುವುದು ನೇಕಾರರಿಗೆ ಹೊಸದಾಗಿದ್ದ ಕಾರಣದಿಂದ ಹತ್ತಿ ಉದ್ಯಮಕ್ಕೆ ಪೆಟ್ಟು ಕೊಟ್ಟಿತು.” (165)

ಈ ವಿನಾಶದ ಪರಿಣಾಮ 1849 – 50ರಲ್ಲಿ ನಡೆದ ಮಗ್ಗದ ಸೆನ್ಸಸ್ಸಿನಲ್ಲಿ ಪ್ರತಿಬಿಂಬಿತವಾಗಿದೆ. ಬೆಂಗಳೂರಿನಲ್ಲಿ ನಡೆದ ಗಣತಿಯಲ್ಲಿ ಇಡೀ ನಗರದಲ್ಲಿ 2,921 ಮಗ್ಗಗಳಿರುವ ಅಂಶ ತಿಳಿಯಿತು. ಇದರಲ್ಲೂ ಹಲವನ್ನು ಭಾಗಶಃ ಉಪಯೋಗಿಸಲಾಗುತ್ತಿತ್ತಷ್ಟೇ. 1800ಕ್ಕೆ ಹೋಲಿಸಿದರೆ ಮಗ್ಗಗಳ ಸಂಖೈಯಲ್ಲಿ ಅರ್ಧದಷ್ಟು ಕಡಿಮೆಯಾಗಿಬಿಟ್ಟಿತ್ತ. (166)

ಕೊಂಚ ನಂತರ ಕಾಲಘಟ್ಟದಲ್ಲಿ ಬಟ್ಟೆ ಉದ್ಯಮ ಅನುಭವಿಸಿದ ಕಷ್ಟಗಳ ಬಗ್ಗೆ ಥರ್ಸ್ಟನ್ ತಿಳಿಸುತ್ತಾರೆ, ಬಳ್ಳಾರಿಯ ದೇವಾಂಗರು ಮಾಡಿದ ಅಪಹಾಸ್ಯದ ಕುರಿತು ಹೇಳುತ್ತಾರೆ: “ಬಳ್ಳಾರಿ ಜಿಲ್ಲೆಯಲ್ಲಿ ನಾನು ಅಧ್ಯಯನ ಮಾಡಿದವರು……ನಾವು ವೃತ್ತಿಪರ ನೇಕಾರರು, ಆದರೆ ಯುರೋಪಿನ ಬಟ್ಟೆಗಳನ್ನು ಧರಿಸುವುದೇ ನಮಗೆ ಕಡಿಮೆ ಖರ್ಚಿನ ಬಾಬ್ತು ಎಂದು ನಗುತ್ತಾ ಹೇಳಿದರು.” (167)

ಬಾಂಬೆ ಪ್ರಾಂತ್ಯದ ದಕ್ಷಿಣ ಭಾಗದ ಸ್ಥಿತಿಯನ್ನು ವಿವರಿಸುತ್ತ ಆರನೇ ಪಾವ್ಲಾವ್ ಹೇಳುತ್ತಾರೆ: “ದೀರ್ಘ ಕಾಲೀನ ಯುದ್ಧಗಳಿಂದ ಮಹಾರಾಷ್ಟ್ರ ಹಾಳಾಗಿದ್ದು ಇಲ್ಲಿನ ಆರ್ಥಿಕತೆಯಲ್ಲಾದ ಕುಸಿತಕ್ಕೊಂದು ಕಾರಣ. ಸಾಮಾಜಿಕ – ಆರ್ಥಿಕ ಸಂಬಂಧಗಳು, ಮರಾಠ ರಾಜ್ಯ ವ್ಯವಸ್ಥೆಯ ರದ್ದತಿಯೊಂದಿಗೆ ಮತ್ತು ಬ್ರಿಟೀಷರ ಹೊಸ ತೆರಿಗೆ ಪದ್ಧತಿಯ ಜಾರಿಯೊಂದಿಗೆ ತನ್ನ ಅಸ್ತಿತ್ವ ಕಳೆದುಕೊಂಡಿತು. ಅರಮನೆಗೆ ಮತ್ತು ಸೈನ್ಯಕ್ಕೆ ವಸ್ತುಗಳನ್ನು ಪೂರೈಸುತ್ತಿದ್ದ ನಗರ ಕೈಗಾರಿಕೆಗಳಿಗೆ ಗ್ರಾಹಕರೇ ಇಲ್ಲದಂತಾಯಿತು. ಹಳ್ಳಿಗಳೊಂದಿಗಿದ್ದ ಸಶಕ್ತ ಮಾರುಕಟ್ಟೆ ಬಂಧವನ್ನು ಆಮದಾದ ಬ್ರಿಟೀಷ್ ವಸ್ತುಗಳು ನೀಡಿದ ಪೈಪೋಟಿ ಸಡಿಲಗೊಳಿಸಿತು. ಬ್ರಿಟೀಷ್ ವಸ್ತುಗಳಿಗೆ ಆಮದು ತೆರಿಗೆಯಿಂದ ವಿನಾಯಿತಿ ನೀಡಲಾಗಿತ್ತು ಮತ್ತವು ಹಳ್ಳಿಯ ಮಾರುಕಟ್ಟೆಯನ್ನು ಪ್ರವೇಶಿಸಲಾರಂಭಿಸಿತ್ತು. ಬಟ್ಟೆಗಳುತ್ಪಾದನೆ ಹಳ್ಳಿಗಳಲ್ಲಿ ಚೆನ್ನಾಗಿತ್ತು ಮತ್ತಲ್ಲಿನ ನೇಕಾರರು ಬ್ರಿಟೀಷ್ ನೂಲನ್ನು ಉಪಯೋಗಿಸಲಾರಂಭಿಸಿದ್ದರು…..

ತಮ್ಮ ಪೂರ್ವಜರ ಉದ್ಯಮವನ್ನೇ ಮುಂದುವರಿಸಿದವರು ಅರೆ ಹೊಟ್ಟೆಯಿಂದ ಬಳಲುವಂತಾಯಿತು. ಬ್ರಿಟೀಷ್ ಆಡಳಿತದ ಅಂದಾಜಿನಂತೆ 1830ರ ಮೊದಲ ಭಾಗದಲ್ಲಿ ನೇಕಾರರ ಕುಟುಂಬವೊಂದು ವರುಷಕ್ಕೆ 84 ರುಪಾಯಿಗಳನ್ನು ಬೇಳೆ ಕಾಳುಗಳ ಮೇಲೆ ವ್ಯಯಿಸಬೇಕಾಗಿತ್ತು; ಅವರ ವಾರ್ಷಿಕ ಆದಾಯ 108 ರುಪಾಯಿಗಳಷ್ಟಿತ್ತು.

ಮನುಷ್ಯರಿಗೆ ಬದುಕಲು ಇನ್ನಿತರೆ ಆಹಾರ ಪದಾರ್ಥಗಳು, ಬಟ್ಟೆ, ಉರುವಲು, ಪಾತ್ರೆ ಪಗಡೆಗಳೆಲ್ಲ ಬೇಕೆನ್ನುವುದನ್ನು ಗಣನೆಗೆ ತೆಗೆದುಕೊಂಡಾಗ ನೇಕಾರರ ಸಂಕಷ್ಟಗಳೆಂತದ್ದಿರಬಹುದೆನ್ನುವುದನ್ನು ಕಲ್ಪಿಸಿಕೊಳ್ಳಬಹುದು. ನೆನಪಿನಲ್ಲಿಟ್ಟುಕೊಳ್ಳಬೇಕಾದದ್ದೇನೆಂದರೆ ಇದು ವಿದೇಶಿ ಆಳ್ವಿಕೆಯ ಪ್ರಾರಂಭದ ವರುಷಗಳು ಮತ್ತು ಮುಂದಿನ ದಿನಗಳಲ್ಲಿ ನೇಕಾರರ ಪರಿಸ್ಥಿತಿ ಮತ್ತಷ್ಟು ಹದ ತಪ್ಪುತ್ತಿತ್ತು. ಬೆಳಗಾವಿ ಜಿಲ್ಲೆಯ ನೇಕಾರರನ್ನು 1849ರಲ್ಲಿ ಸರ್ವೇ ಮಾಡಿದ ಬ್ರಿಟೀಷ್ ಅಧಿಕಾರಿ ನೇಕಾರರ ಆದಾಯ ಇಪ್ಪತ್ತು ವರ್ಷದ ಹಿಂದಕ್ಕೆ ಹೋಲಿಸಿದರೆ ಮೂರನೇ ಒಂದು ಭಾಗಕ್ಕೆ ಇಳಿದುಬಿಟ್ಟಿತ್ತು ಎಂದು ಒಪ್ಪಿಕೊಳ್ಳುತ್ತಾನೆ. (1849ರಲ್ಲಿ ಬೆಳಗಾವಿ ಜಿಲ್ಲೆಯ ನೇಕಾರರು ದಿನಕ್ಕೆ ಎರಡು ಅನ್ನಾಗಳನ್ನಷ್ಟೇ ಗಳಿಸುತ್ತಿದ್ದರು, ವಾರ್ಷಿಕ 36 ರುಪಾಯಿಗಳಾಗುತ್ತಿತ್ತಷ್ಟೇ)

ಬಾಗಲಕೋಟೆಯ ಪರಿಸ್ಥಿತಿ ಆರ್ಥಿಕತೆಯನ್ನು ಆಕ್ರಮಿಸುವಾಸೆಯ ವಿಧ್ವಂಸಕ ಪರಿಣಾಮಗಳನ್ನು ತೋರಿಸುತ್ತದೆ…..

ಟಿ.ಮಾರ್ಷಲ್ ಪ್ರಕಾರ ಬಾಗಲಕೋಟೆಯ ಸಮೃದ್ಧಿಗೆ ಅಲ್ಲಿನ ಸ್ಥಳೀಯ ಆಡಳಿತಗಾರರ ಆಳ್ವಿಕೆಯ ಪದ್ಧತಿ ಮತ್ತು ಜನರ ಸಾಮಾನ್ಯ ಪರಿಸ್ಥಿತಿ ಕಾರಣವಾಗಿತ್ತು. ಅಲ್ಲಿನ ಜನರ ಆರ್ಥಿಕತೆ ಉತ್ತಮವಾಗಿದ್ದ ಕಾರಣ ಗುಡಿ ಕೈಗಾರಿಕೆಯ ವಸ್ತುಗಳಿಗೆ ಬೇಡಿಕೆಯಿತ್ತು. ಅಲ್ಲಿನ ಬಜಾರಿನಲ್ಲಿ ಬಿಕರಿಗಿದ್ದ ವಸ್ತುಗಳಲ್ಲಿ ದುಬಾರಿ ಬಟ್ಟೆಗಳೂ ಇದ್ದವು, 50,000 ರುಪಾಯಿ ಬೆಲೆಬಾಳುವ ವಸ್ತುವನ್ನು ಧಾರ್ಮಿಕ ಕಾರ್ಯಕ್ರಮದ ಸಂದರ್ಭದಲ್ಲಿ ಮಾತ್ರ ಮಾರಾಟ ಮಾಡಲಾಗುತ್ತಿತ್ತು. ಅಂದಾಜು 1822ರಷ್ಟರಲ್ಲಿ ಉನ್ನತ ಹುದ್ದೆಯ ಜನರೂ ಕೂಡ ಎಲ್ಲಾ ರೀತಿಯ ಖರೀದಿಯನ್ನು ನಿಲ್ಲಿಸಿಬಿಟ್ಟಿದ್ದರು ಎನ್ನುತ್ತಾರೆ ಮಾರ್ಷಲ್. ದುಬಾರಿ ವಸ್ತುಗಳನ್ನು ಖರೀದಿಸುವ ಚೈತನ್ಯವಿದ್ದವರೂ ಕೂಡ ಕಡಿಮೆ ಬೆಲೆಯ ವಸ್ತುಗಳಿಗೆ ತೃಪ್ತಿ ಪಟ್ಟುಕೊಂಡರು, ಯಾಕೆಂದರೆ ಉತ್ತಮವಾಗಿ ಬಟ್ಟೆ ಧರಿಸುವುದಕ್ಕೆ ಅವರಿಗೀಗ ಯಾವುದೇ ಪ್ರೋತ್ಸಾಹ ಧನ ದಕ್ಕುತ್ತಿರಲಿಲ್ಲ, ಅವರ ಹುದ್ದೆಗಳನ್ನು ಕಿತ್ತುಕೊಳ್ಳಲಾಗಿತ್ತು ಮತ್ತಾ ದುಬಾರಿ ಧಿರಿಸುಗಳನ್ನು ಧರಿಸುವ ಸಂದರ್ಭಗಳೂ ಈಗ ಇರಲಿಲ್ಲ. ಇನ್ನೂ ಹೆಚ್ಚಿನ ಸಂಖೈಯ ಜನರ ಎಲ್ಲಾ ರೀತಿಯ ಪೋಷಣ ಶಕ್ತಿಯನ್ನು ಕಸಿಯಲಾಗಿತ್ತು. ಬ್ರಿಟೀಷರು ತೆರಿಗೆಗಳು ಬಾಗಲಕೋಟೆಯ ಕೈಗಾರಿಕೆ ಮತ್ತು ವ್ಯಾಪಾರಕ್ಕೆ ಮತ್ತೊಂದು ಪೆಟ್ಟು ನೀಡಿತು. ಭಾರತೀಯರ ಆಳ್ವಿಕೆಯಲ್ಲಿ ಹದಿನೆಂಟು ಉತ್ಪಾದಕ ಘಟಕಗಳು 400ರುಪಾಯಿ ತೆರಿಗೆ ಕಟ್ಟುತ್ತಿದ್ದವು, ಅತಿ ಹೆಚ್ಚು ತೆರಿಗೆ ಕಟ್ಟುತ್ತಿದ್ದ ಘಟಕ ವಾರ್ಷಿಕ 88 ರುಪಾಯಿ ಕಟ್ಟುತ್ತಿತ್ತು. ಬ್ರಿಟೀಷರ ತೆರಿಗೆ ಪದ್ಧತಿಯಡಿಯಲ್ಲಿ ಇವರು 1900 ರುಪಾಯಿ ಮತ್ತು 3000 ರುಪಾಯಿಯವರೆಗೆ ತೆರಿಗೆ ಏರಿಕೆಯಾಯಿತು. ಪರಿಣಾಮವಾಗಿ ನಗರದ ವ್ಯಾಪಾರ ಮತ್ತು ಕೈಗಾರಿಕೆಗಳು ಕುಸಿತ ಕಂಡವು.” (168)

ಸಕ್ಕರೆ ಉದ್ಯಮ ಆ ಸಮಯದ ಉತ್ಪಾದನೆ ಮತ್ತು ಸಂಘಟನೆಯಲ್ಲಿ ಹೊಸ ಶಕ್ತಿಯಾಗಿ ಹೊರಹೊಮ್ಮುತ್ತಿದ್ದುದನ್ನು ನಾವು ನೋಡಿದ್ದೇವೆ. ಬ್ರಿಟೀಷ್ ಕಾನೂನುಗಳು ಸಕ್ಕರೆ ಉದ್ಯಮವನ್ನು ಕಬ್ಬನ್ನಿಂಡುವಂತೆ ಹಿಂಡಿಬಿಟ್ಟಿತು. ಶಾಮ ರಾವ್ ಹೇಳುತ್ತಾರೆ: “1843ರಲ್ಲಿ, 1839ರ ಹದಿನೈದನೇ ಕಾಯಿದೆ ಮತ್ತು 1842ರ ಹನ್ನೊಂದನೇ ಕಾಯಿದೆಗಳು ಮೈಸೂರಿನ ಆದಾಯಕ್ಕೆ ದೊಡ್ಡ ಪೆಟ್ಟು ನೀಡಿದವು. ಈ ಕಾಯಿದೆಗಳ ಪ್ರಕಾರ ಮದ್ರಾಸ್ ಪ್ರಾಂತ್ಯ ವಿದೇಶಿ ಸಕ್ಕರೆಯನ್ನು ಆಮದು ಮಾಡಿಕೊಳ್ಳುವಂತಿರಲಿಲ್ಲ, ಮೈಸೂರು ಕೂಡ ವಿದೇಶಿ ಪ್ರಾಂತ್ಯವಾದ ಕಾರಣ ಸಕ್ಕರೆ ಆಮದನ್ನು ನಿಷೇಧಿಸಲಾಯಿತು. ಮೈಸೂರಿನಲ್ಲಿ ಉತ್ಪಾದಿಸಲಾಗುವ ಯಾವುದೇ ಸಕ್ಕರೆಯನ್ನು ಪಕ್ಕದ ಕೆನರಾ ಜಿಲ್ಲೆಯವರ ಸ್ಥಳೀಯರ ಉಪಯೋಗಕ್ಕೂ ರವಾನಿಸುವಂತಿಲ್ಲ ಎಂದು ಕಾನೂನು ರೂಪಿಸಲಾಯಿತು.” (169) ಈ ನಿಯಮಗಳನ್ನು ಹೇರಿದ್ದಕ್ಕೆ ಕಾರಣ ಆಯಾ ಪ್ರಾಂತ್ಯಗಳಲ್ಲಿ ಬ್ರಿಟೀಷ್ ಉತ್ಪಾದಿಸಿದ ಸಕ್ಕರೆಗೆ ಮಾರುಕಟ್ಟೆ ಸೃಷ್ಟಿಯಾಗಲಿ ಎಂಬ ಕಾರಣದಿಂದ.

ಇದೇ ರೀತಿ ತಂಬಾಕು ಉದ್ಯಮ ಕೂಡ ಹೊಗೆ ಹಾಕಿಸಿಕೊಂಡಿದ್ದನ್ನು ನೋಡಬಹುದು. “ಇದೇ ಮಾದರಿಯಲ್ಲಿ ಮೈಸೂರಿನಿಂದ ಮಲಬಾರಿಗೆ ತಂಬಾಕನ್ನು ರಫ್ತು ಮಾಡುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಯಿತು. ಮತ್ತು ಕಾಫಿಯನ್ನು ರಫ್ತು ಮಾಡಲು ಹೆಚ್ಚಿನ ತೆರಿಗೆಯನ್ನು ಕಟ್ಟಬೇಕಿತ್ತು. ಇದೆಲ್ಲವೂ ನಡೆಯುತ್ತಿರುವಾಗಲೂ ಮೈಸೂರು ಬ್ರಿಟೀಷರ ಎಲ್ಲಾ ಉತ್ಪನ್ನಗಳನ್ನೂ ಮುಕ್ತವಾಗಿ ಆಮದು ಮಾಡಿಕೊಂಡಿತು ಮತ್ತು ಕಂಪನಿಯ ಉತ್ಪನ್ನಗಳಿಗೂ ತನ್ನ ಪ್ರಾಂತ್ಯದೊಳಗಿನ ಉತ್ಪನ್ನಗಳಿಗೆ ವಿಧಿಸುತ್ತಿದ್ದ ತೆರಿಗೆಯನ್ನೇ ಹಾಕುತ್ತಿತ್ತು.” (170)

ಇದು ವಸಾಹತಿನ ಆರ್ಥಿಕತೆಯ ಸಾರ ಮತ್ತು ಕೆ.ಆರ್.ಒಡೆಯರ್ ಎಂಬ ಕೈಗೊಂಬೆ ರಾಜನನ್ನು ಮೈಸೂರು ಪೀಠದಲ್ಲಿ ಕೂರಿಸಿದ ಹಿಂದಿರುವ ರಾಜಕೀಯ ಉದ್ದೇಶ.

1805ರಲ್ಲಿ ರಾಜ ಉಪ್ಪಿನ ಮೇಲಿನ ಎಲ್ಲಾ ತೆರಿಗೆಯನ್ನು ರದ್ದು ಪಡಿಸಿ ಬ್ರಿಟೀಷರ ಉಪ್ಪು ಮೈಸೂರಿಗೆ ರಫ್ತಾಗುವುದಕ್ಕೆ ಅನುಕೂಲ ಮಾಡಿಕೊಟ್ಟಿದ್ದರ ಕುರಿತು ಕೆ.ಎನ್.ವಿ ಶಾಸ್ತ್ರಿ ತಿಳಿಸುತ್ತಾರೆ. ಈ ನಿರ್ಣಯ ಮೈಸೂರು ಸಾಮ್ರಾಜ್ಯದ ಒಳನಾಡಿನಲ್ಲಿ ಉಪ್ಪು ತಯಾರಿಸುತ್ತಿದ್ದ ಹಲವು ಸಾವಿರ ಜನರ ಬದುಕನ್ನು ಹಾಳುಗೆಡವಿತು. ಇದು “ಸಮುದ್ರದ ಉಪ್ಪನ್ನು ಮೈಸೂರಿಗೆ ಬರುವುದನ್ನು ನಿಷೇಧಿಸಿ ಸ್ಥಳೀಯ ಉತ್ಪಾದನೆಯನ್ನು ಪ್ರೋತ್ಸಾಹಿಸಿದ” ಟಿಪ್ಪುವಿನ ನೀತಿಗೆ ಸಂಪೂರ್ಣ ತದ್ವಿರುದ್ದವಾಗಿತ್ತು. (171)

ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಯ ಅವಸ್ಥೆ ಬಟ್ಟೆ ಉದ್ಯಮಕ್ಕಿಂತ ಭಿನ್ನವಾಗಿರಲಿಲ್ಲ. ಮಳವಳ್ಳಿಯ ಕುಲುಮೆಗಳ ಬಗ್ಗೆ ಬೆಂಜಮಿನ್ ಹೇಯ್ನ್ ಅದಾಗಲೇ ವರದಿಕೊಟ್ಟಿದ್ದರು. ಹಿಂದಿನ ದೇಶಪ್ರೇಮಿ ಮೈಸೂರು ಸರಕಾರ ಕಬ್ಬಿಣವನ್ನು ಹೆಚ್ಚೆಚ್ಚು ಖರೀದಿಸುತ್ತಿತ್ತು ಮತ್ತು ಮೈಸೂರಿನ ಅಭಿವೃದ್ಧಿಗೆ ಇದು ಅತ್ಯಂತ ಪ್ರಮುಖ ಕಾರಣಗಳಲ್ಲಿ ಒಂದಾಗಿತ್ತು ಎನ್ನುವಂಶ ಬ್ರಿಟೀಷರಿಗೆ ದಿಗ್ಬ್ರಮೆ ಮೂಡಿಸಿರಲೇಬೇಕು.

ಹಾಗಾಗಿ ಮುನ್ನಡೆಯಲ್ಲಿದ್ದ ಬಟ್ಟೆ ಉದ್ಯಮ, ಎಣ್ಣೆ, ಕಬ್ಬಿಣ, ಸಕ್ಕರೆ ಮತ್ತು ಉಣ್ಣೆ ಉದ್ಯಮದಲ್ಲಿ ಬಿಕ್ಕಟ್ಟನ್ನು ಸೃಷ್ಟಿಸಲಾಯಿತು ಮತ್ತು ಇದರಿಂದಾದ ನಾಶದ ತೀವ್ರವಾಗಿತ್ತು, ಸಂಪೂರ್ಣವಾಗಿತ್ತು. 
ಮುಂದಿನ ವಾರ:
ಸ್ಥಳೀಯ ಮಾರುಕಟ್ಟೆಯ ನಾಶ: ಎಚ್ಚರಗೊಂಡ ಕನ್ನಡ ದೇಶದ ಸಂಕಟ

ಮೇ 5, 2016

ಬೆಂಗಳೂರಿನ ಗಿಡಗಳ್ಳರು!

(ಸಾಂದರ್ಭಿಕ ಚಿತ್ರ)
ಡಾ. ಅಶೋಕ್. ಕೆ.ಆರ್.
ಬೆಂಗಳೂರಿನಲ್ಲಿ ಸರಗಳ್ಳರಿದ್ದಾರೆ, ಅವರ ಬಗ್ಗೆ ಎಚ್ಚರಿಕೆಯ ಪೋಸ್ಟರುಗಳು ನಗರದಾದ್ಯಂತ ತುಂಬಿಕೊಂಡಿವೆ. ಬೆಂಗಳೂರಿನಲ್ಲಿ ನೆಲಗಳ್ಳರಿದ್ದಾರೆ, ಅವರಲ್ಲಿ ಹೆಚ್ಚಿನವರು ಬಿಳಿ ಬಿಳಿ ಪೋಷಾಕು ಧರಿಸಿ ರಾಜಕೀಯದಲ್ಲೋ ಸಿನಿಮಾದಲ್ಲೋ ಬ್ಯುಸಿ ಬ್ಯುಸಿಯಾಗಿ ಸಮಾಜಸೇವೆ ಮಾಡಿಕೊಂಡಿದ್ದಾರೆ. ಇನ್ನು ಬೈಕು, ಪರ್ಸು, ಕಾರು ಕದಿಯುವವರ ಸಂಖೈ ಅವಸಾನ ಕಾಣದಿರುವಷ್ಟು ಬಲವಾಗಿಯೇ ಇದೆ. ಈ ಪಟ್ಟಿಗೆ ಹೊಸ ಸೇರ್ಪಡೆ ಗಿಡಗಳ್ಳರು!
ಮಂಡ್ಯದ ಮನೆ ಮುಂದಲಿದ್ದ ಮರದಿಂದ ತಂದಿದ್ದ ಹೊಂಗೆ ಬೀಜಗಳಲ್ಲೊಂದನ್ನು ಖಾಲಿಯಾದ ಒಂದು ಲೀಟರ್ ಹಾಲಿನ ಕವರ್ರಿಗೆ ಹಾಕಿದ್ದೆ. ಹೊಂಗೆ ಗಿಡ ಚಿಗುರಿ ಎರಡಡಿ ಎತ್ತರಕ್ಕೆ ಬೆಳೆದಿತ್ತು. ನಾವಿರುವ ಈ ಬಾಡಿಗೆ ಮನೆಯೆದುರಿಗೆ ಪಕ್ಕದಲ್ಲೆಲ್ಲ ಖಾಲಿ ಸೈಟುಗಳಿವೆ! (ಬೆಂಗಳೂರಿನಲ್ಲಿ ಖಾಲಿ ಸೈಟುಗಳಿರುವುದೇ ಅಚ್ಚರಿಯ ಸಂಗತಿ. ಹಂಗಾಗಿ !) ನಮ್ ಪಕ್ಕದ ಮನೆಯವರಿಗೂ ಗಿಡ ನೆಡುವ ಖಯಾಲಿ, ಖಾಲಿ ಸೈಟಿನ ಮುಂದೆ ನಾಕೈದು ಹೊಂಗೆ ಸಸಿ, ಒಂದೆರಡು ಹಳದಿ ಹೂವಿನ ಗಿಡಗಳನ್ನು ನೆಟ್ಟಿದ್ದಾರೆ. ನಮ್ ಮನೆ ಪಕ್ಕದ ಖಾಲಿ ಸೈಟಿನ ಮುಂದೆಯೂ ಎರಡು ಹೊಂಗೆ ಸಸಿ ಒಂದು ಹೂವಿನ ಗಿಡ ನೆಟ್ಟಿದ್ದರು. ಅವರೋ ನಾನೋ ಎರಡು ಮೂರು ದಿನಕ್ಕೊಮ್ಮೆ ನೀರುಣಿಸುತ್ತಿದ್ದೆವು. ಆ ಗಿಡಗಳಲ್ಲಿ ಬಹಳಷ್ಟು ಈಗ ಅರ್ಧ ಆಳೆತ್ತರಕ್ಕೆ ಬೆಳೆದಿವೆ. ಈ ಸಲದ ಬಿರುಬೇಸಿಗೆಯಲ್ಲೂ ಅವೇನು ನೀರು ಕೇಳುವುದಿಲ್ಲ. ವಾರದವರೆಗೆ ನೀರುಣಿಸದಿದ್ದರೂ ಒಣಗದೆ ಆರೋಗ್ಯವಂತವಾಗಿಯೇ ಉಳಿದಿವೆ. ಸಂಜೆ ಹೊತ್ತು ಒಂದಷ್ಟು ತಂಪಾದ ಗಾಳಿಗೆ ಕಾರಣವಾಗಿವೆ. ಆ ಗಿಡಗಳ ನಡುವೆ ಪುಟ್ಟ ಪುಟ್ಟ ಹೂವಿನ ಗಿಡಗಳನ್ನು ನೆಟ್ಟಿದ್ದೇನೆ. ಅವಕ್ಕೆ ಎರಡು ಅಬ್ಬಬ್ಬಾ ಎಂದರೆ ಮೂರು ದಿನಕ್ಕೊಮ್ಮೆ ನೀರು ಬೇಕು.

ಪ್ಲಾಸ್ಟಿಕ್ ಕವರ್ರುಗಳಲ್ಲಿ ಹೊಂಗೆ ಗಿಡ ಬೆಳೆದಿತ್ತಲ್ಲ. ಹತ್ತು ದಿನದ ಕೆಳಗೆ ಒಂದರ್ಧ ಘಂಟೆ ಸುರಿದ ಮೊದಲ ಮಳೆಯ ಮಾರನೇ ದಿನ ಪಕ್ಕದ ಖಾಲಿ ಸೈಟಿನ ಮುಂದೆ, ಇದ್ದ ಎರಡು ಹೊಂಗೆ ಗಿಡದಿಂದ ಸ್ವಲ್ಪ ದೂರದಲ್ಲಿ ಗುಂಡಿ ತೆಗೆದು, ಕವರ್ ಹರಿದು ಹಾಕಿ ಹೊಂಗೆ ಗಿಡವನ್ನು ನೆಟ್ಟು ಸುತ್ತಲೊಂದಷ್ಟು ಒಣ ಎಲೆಗಳನ್ನು ಹಾಕಿ ಒಂದು ಚೊಂಬು ನೀರು ಸುರಿದು ಬಂದೆ. ಗಿಡ ಚೂರು ದೊಡ್ಡದಿದ್ದುದರಿಂದ ಹೊಸ ನೆಲಕ್ಕೆ ಹೊಂದಿಕೊಳ್ಳುವುದು ಕಷ್ಟವಾಗಲಿಲ್ಲ. ಎರಡು ಮೂರು ದಿನಕ್ಕೊಮ್ಮೆ ಅರ್ಧ ಚೊಂಬು ನೀರು ಹಾಕಿದರೂ ಸಾಕಿತ್ತು. ಗಿಡ ನೆಟ್ಟು ವಾರ ಕಳೆದಿತ್ತು, ಹೊಸ ಎಲೆಗಳು ಚಿಗುರಿದ್ದವು. ಅವತ್ತೊಂದು ದಿನ ಬೆಳಿಗ್ಗೆ ನೀರುಣಿಸಿ ಕಾಲೇಜಿಗೆ ಹೋಗಿ ಸಂಜೆ ಬಂದು ನೋಡಿದರೆ ಗಿಡವೇ ಇಲ್ಲ! ಒಣಗಿ ಬಿದ್ದು ಹೋಯಿತಾ? ಬೆಳಿಗ್ಗೆ ಚೆನ್ನಾಗೇ ಇತ್ತುಲ್ಲ, ಯಾರಾದರೂ ಕಿತ್ತು ಬಿಸಾಡಿದರಾ? ಉಹ್ಞೂ ಹತ್ತಿರದಲ್ಲೆಲ್ಲೂ ಕಿತ್ತ ಗಿಡವಿಲ್ಲ. ಆಗೀಗ ನಮ್ ಏರಿಯಾದ ಕ್ಷೇಮಸಮಾಚಾರವನ್ನು ವಿಚಾರಿಸುವ ಹಸುಗಳೇನಾದರೂ ತಿಂದುಬಿಟ್ಟವಾ? ಹೊಂಗೆಯನ್ನವು ತಿನ್ನುವುದಿಲ್ಲ. ಏನಾಯ್ತು ಅಂತ ಸ್ಪಾಟ್ ಇನ್ಸ್ ಪೆಕ್ಷನ್ ಮಾಡಿದರೆ ಗಿಡವಿದ್ದ ಸುತ್ತಲೂ ಮಣ್ಣು ಅಗೆಯಲಾಗಿತ್ತು, ಹೆಚ್ಚು ಕಡಿಮೆ ಅರ್ಧ ಅಡಿಯಷ್ಟು ಮಣ್ಣು ಕೆರೆದು ಇಡೀ ಹೊಂಗೆ ಗಿಡವನ್ನೇ ಕಿತ್ತುಕೊಂಡು ಹೋಗಿಬಿಟ್ಟಿದ್ದರು!

ನೆಟ್ಟ ಗಿಡವನ್ನು ಕಿತ್ತುಕೊಂಡದ್ದಕ್ಕೆ ಬೇಸರವಾಗಬೇಕಾ? ಕೋಪಗೊಳ್ಳಬೇಕಾ? ಕಿತ್ಕೊಂಡು ಹೋಗಿಬಿಟ್ಟಿದ್ದಾರೆ, ಬೇರಿಗೆ ಏಟು ಮಾಡದೆ ಕಿತ್ತುಕೊಂಡಿದ್ದು, ಇನ್ನೆಲ್ಲೋ ನೆಟ್ಟರೂ ಅದು ಮತ್ತೊಂದು ಹೊಸ ಭೂಮಿಗೆ ಹೊಂದಿಕೊಂಡು ಬೆಳೆದರಷ್ಟೇ ಸಾಕೆಂದು ಸುಮ್ಮನಾಗಬೇಕಾ? ಏನೋ ಈ ಬಿರುಬೇಸಿಗೇನಾದರೂ ಒಂದಷ್ಟು ಜನರಿಗೆ ಗಿಡ ಮರ ನೆಡಲು, ಕದ್ದಾದರೂ ನೆಡಲು ಪ್ರೇರೇಪಿಸುತ್ತಿದೆಯಲ್ಲ, ಅದೇ ಪುಣ್ಯ! 

ಅಂದಹಾಗೆ ಇನ್ನೈದು ವರುಷಕ್ಕೆ ಬೆಂಗಳೂರು ವಾಸಯೋಗ್ಯವಾಗಿರುವುದಿಲ್ಲವೆಂದು ಐ.ಐ.ಎಸ್.ಸಿಯ ಅಧ್ಯಯನವೊಂದು ಭವಿಷ್ಯ ನುಡಿದಿದೆ. ಬೆಂಗಳೂರು ಸಾವು ಕಂಡರೆ ಅದಕ್ಕೆ ನಮ್ಮ ಸರಕಾರಗಳ ಕೇಂದ್ರೀಕೃತ ಯೋಜನೆಗಳು ಎಷ್ಟು ಕಾರಣವೋ ನಮ್ಮಂಥ ವಲಸಿಗರೂ ಅಷ್ಟೇ ಕಾರಣ. ಪಾಪ ಪರಿಹಾರ್ಥವಾಗಿ ವಲಸಿಗರು ಒಂದೊಂದು ಗಿಡ ನೆಟ್ಟರೂ ಸಾಕು ಹತ್ತಿರತ್ತಿರ ಕೋಟಿ ಲೆಕ್ಕದ ಗಿಡಗಳು ಬೆಂಗಳೂರಿನಲ್ಲಿ ನಳನಳಿಸುತ್ತವೆ. ಕದ್ದಾದರೂ ಗಿಡ ನೆಡಿ!

ಮೇ 3, 2016

ಅಕಾಡೆಮಿ ಬಹುಮಾನ ಪಡೆವಾಗ ಆಡಿದ ಮಾತು: ಡಾ. ಅನುಪಮ. ಎಚ್. ಎಸ್.

Anupama H S
ಮನ್ನಣೆ = ಜವಾಬ್ದಾರಿ
ಒಬ್ಬ ಕವಿ, ಬರಹಗಾರ, ಕಲಾವಿದನಿಗೆ ಸಾವಿರ ಯೋಧರಿಗಿಂತ ಹೆಚ್ಚು ಶಕ್ತಿಯಿರುತ್ತದೆ. ಅದು ಅಕ್ಷರ ಕೊಟ್ಟ ಶಕ್ತಿ. ಜನಸಮುದಾಯ ತನ್ನ ಪ್ರತಿನಿಧಿಯಾಗಿ ಅವರಿಗೆ ಕೊಟ್ಟ ಶಕ್ತಿ. ಈ ಶಕ್ತಿಯ ಅರಿವಿರುವುದರಿಂದಲೇ ಅವರ ಬಾಯಿ ಮುಚ್ಚಿಸುವುದು ಸಾಂಕೇತಿಕವಾಗಿ ಸಮಾಜದ ಎಲ್ಲ ಜನರ ಬಾಯಿ ಮುಚ್ಚಿಸುವಷ್ಟು ಶಕ್ತಿಶಾಲಿ ಎಂದು ಭಾವಿಸಲಾಗಿದೆ. ಎಂದೇ ನುಡಿ, ಸಾಹಿತ್ಯ, ಸಾಹಿತಿ ಮತ್ತು ಸಾಹಿತ್ಯ ಅಕಾಡೆಮಿ ಕೆಲ ಬಿಕ್ಕಟ್ಟುಗಳನ್ನು ಕಾಲಕಾಲಕ್ಕೆದುರಿಸಿವೆ. ಈಗಲೂ ಅಂತಹ ಘಟನೆಗಳು ಸಂಭವಿಸುತ್ತಲೇ ಇವೆ. ಇತ್ತೀಚೆಗೆ ಮಾತು/ಬರಹ/ಅಭಿವ್ಯಕ್ತಿ ಸ್ಕ್ರುಟಿನಿಗೆ ಒಳಗಾದವು. ಪ್ರತಿಯೊಂದೂ ಸ್ಕ್ಯಾನರಿನ ಅಡಿ ಬಂತು. ಸಾಹಿತ್ಯ ಅಕಾಡೆಮಿ ಕಾರ್ಯಕ್ರಮ ಪೊಲೀಸ್ ರಕ್ಷಣೆಯಲ್ಲಿ ನಡೆಯಬೇಕಾದಂತಹ ಪರಿಸ್ಥಿತಿ ಉಂಟಾಯಿತು. ಅಷ್ಟೆ ಅಲ್ಲ,

• ಭಾವನೆಗಳಿಗೆ ಧಕ್ಕೆ ಮಾಡಿದರು ಎಂದು ಎಂದೋ ಬರೆದ ಕಾದಂಬರಿಯ ಒಂದು ಪುಟದ ಆಧಾರದ ಮೇಲೆ ಕೆಲವರು ಕೋರ್ಟು ಕಚೇರಿ ಹತ್ತಿದರು.
• ಭಾವನೆಗಳಿಗೆ ಧಕ್ಕೆ ಮಾಡಿದರು ಎಂದು ಯುವಕವಿಯೊಬ್ಬನನ್ನು ಹಿಡಿದು ಥಳಿಸಿದರು.
• ಭಾವನೆಗಳಿಗೆ ಧಕ್ಕೆ ಮಾಡಿದರು ಎಂದು ಈ ಧಾರವಾಡ ನೆಲದ ಒಂದು ಅಮೂಲ್ಯ ಜೀವ ತನ್ನ ಪ್ರಾಣವೊಪ್ಪಿಸಬೇಕಾಯಿತು.
• ಭಾವನೆಗಳಿಗೆ ಧಕ್ಕೆ ಮಾಡಿದರು ಎಂದು ಈಗಲೂ ಪ್ರತಿದಿನವೂ ಏನೇನೋ ನಡೆಯುತ್ತಲೇ ಇದೆ.

ಅದಕ್ಕೆ ಅಕ್ಷರಲೋಕ ಸುಮ್ಮನಿರಲಿಲ್ಲ. ಅಭಿವ್ಯಕ್ತಿಯೇ ಒಂದು ಪ್ರತಿರೋಧವಾದರೂ ತನ್ನ ಪ್ರತಿಕ್ರಿಯೆಯನ್ನು ತೀವ್ರವಾಗಿಸಿ ನೀಡಿತು:

• ತಮ್ಮ ಭಾವನೆಗಳಿಗೆ ಧಕ್ಕೆ ಮಾಡಿದರು ಎಂದು ಸಾಹಿತಿಗಳು ಪ್ರಶಸ್ತಿ ಹಿಂತಿರುಗಿಸತೊಡಗಿದರು.
• ಕಲಾವಿದರು, ಬರಹಗಾರರು, ನಟರು, ಮತ್ತಿತರ ಸಂವೇದನಾಶೀಲ ಜೀವಗಳು ಬರಹಗಾರರಾರು ಕೊಟ್ಟ ಸಮ್ಮಾನಗಳನ್ನು ವಾಪಸು ಕೊಟ್ಟರು.
• ಹಲವು ಗೌರವಗಳನ್ನು ಬೇಡವೆನ್ನಲಾಯಿತು.

ಇವೆಲ್ಲ ಸಾಮಾಜಿಕ ಆಗುಹೋಗುಗಳ ಕುರಿತ ಅವರ ನೈತಿಕ ಸಿಟ್ಟನ್ನೂ, ಕಳಕಳಿಯನ್ನೂ ತೋರಿಸಿದವು. ಭಿನ್ನಮತದಿಂದಲೇ ನಮ್ಮನ್ನು ನಾವು ಗುರುತಿಸಿಕೊಳುವ ಕಾಲ ಎದುರಾದಾಗ ತಮಗೆ ಸಾಧ್ಯವಿದ್ದ ಎಲ್ಲ ರೀತಿಯಿಂದ ಅದನ್ನು ವ್ಯಕ್ತಪಡಿಸಿದರು.

ಅವರೆಲ್ಲರನ್ನು ಗೌರವದಿಂದ ನೆನೆಯುತ್ತಲೇ, ಎಲ್ಲವೂ ಸಾಂಕೇತಿಕ ಎನ್ನುವುದನ್ನೂ ನಾವು ನೆನಪಿಡಬೇಕು. `ಪ್ರಶಸ್ತಿ ಪಡೆಯುವುದು, ಹೊಡೆಯುವುದರ ಹಾಗೆಯೇ ಪ್ರಶಸ್ತಿ ವಾಪಸಾತಿಯೂ ಇವರಿಗೊಂದು ಗೀಳಾಗಿದೆ’ ಎಂದು ಜನಸಾಮಾನ್ಯರಿಗೆ ಅನಿಸಬಾರದು. ಏಕೆಂದರೆ ನನ್ನ ಪ್ರಕಾರ ಪ್ರಶಸ್ತಿ ಎನ್ನುವುದು ನಿಮ್ಮ ಜವಾಬ್ದಾರಿಯನ್ನು ಹೆಚ್ಚಿಸಲು, ನೆನಪಿಸಲು ಸಮಾಜ ಇಟ್ಟುಕೊಂಡ ಒಂದು ತಂತ್ರ. ಖ್ಯಾತಿ ಹುಟ್ಟಿಸುವ ಕಷ್ಟ ಎಂಥದೆಂದರೆ ಅದು ನಿಮ್ಮ ಯೋಗ್ಯತೆಯನ್ನು ನಿಮಗೆ ನೀವೇ ಮತ್ತೆಮತ್ತೆ ಸಾಬೀತುಮಾಡಿಕೊಳ್ಳುತ್ತ ಹೋಗುವಂತೆ ಮಾಡುತ್ತದೆ. ಅದಕ್ಕೇ ಈ ಕಷ್ಟಕಾಲದಲ್ಲಿ ಮನ್ನಣೆ ಪಡೆಯುವುದು ಎಂದರೆ ನಿಮ್ಮ ಬದ್ಧತೆಯನ್ನು, ಜವಾಬ್ದಾರಿಯನ್ನು ನೀವು ಗಟ್ಟಿಗೊಳಿಸಿಕೊಳ್ಳುತ್ತ ಹೋಗುವುದೇ ಆಗಿದೆ.

ಅದಕ್ಕೇ ಪ್ರಶಸ್ತಿ ಪಡೆದ ಸಂಭ್ರಮವು ಹೆಮ್ಮೆಯಾಗದಂತೆ, ಬಯೋಡೇಟಾದಲ್ಲಿ ಸೇರದಂತೆ ನೋಡಿಕೊಳ್ಳಬೇಕು. ಪ್ರಶಸ್ತಿ ಮರೆತು ಅದು ನೀಡುವ ಜವಾಬ್ದಾರಿಯನಷ್ಟೆ ಮುಂದೆ ಹೊತ್ತು ಸಾಗಬೇಕು. ಗುರುತಿಸುವಿಕೆ ನಮ್ಮ ಸಮಯ, ಶ್ರಮವನ್ನು ಇನ್ನಷ್ಟು ದಕ್ಷವಾಗಿ ನಿರ್ವಹಿಸಿ ಜನಪರವಾಗಿಸುವಂತೆ ಆಗಬೇಕು. ಇವತ್ತು ಬರವಿದ್ದರೆ ಅದು ಕೇವಲ ನೀರಿಗಲ್ಲ, ಕೇವಲ ಆಹಾರಕ್ಕೂ ಅಲ್ಲ; ಆದರೆ ಒಂದು ಹಿಡಿ ಪ್ರೀತಿಗಾಗಿ ಇವತ್ತು ತೀವ್ರ ಬರಗಾಲವಿದೆ. ನಮ್ಮ ಸಂವೇದನೆಯು ಪ್ರೀತಿ ಹಂಚುವ, ಜೊತೆಗೆ ನೇರವಾಗಿ ದಿಟ್ಟವಾಗಿ ಜನರ ಅನಿಸಿಕೆ ವ್ಯಕ್ತಪಡಿಸುವ ಮಾರ್ಗವೂ ಆಗಬೇಕು. ಆಗಮಾತ್ರ ಯಾವುದು ಬಿಕ್ಕಟ್ಟಿಗೆ ಕಾರಣವಾಗಿದೆಯೋ ಅದೇ ಪರಿಹಾರಕ್ಕೆ ಕಾರಣವೂ ಆಗಿ ಒದಗಿಬಂದೀತು.

ಧಾರವಾಡ ನೆಲದಲ್ಲಿ ಆಡಲು ಸಾಧ್ಯವಾದ, ಸಾಧ್ಯವಾಗದ, ಮೌನವಾಗಿಸಲ್ಪಟ್ಟ ಎಲ್ಲ ಜೀವಗಳ ನೆನೆಯುತ್ತ ನನ್ನ ಜವಾಬ್ದಾರಿ ಸ್ವೀಕರಿಸುತ್ತಿದ್ದೇನೆ. ಅಂಡಮಾನ್ ಕುರಿತಷ್ಟೆ ಅಲ್ಲ ಸಕಲ ಜೀವರಾಶಿ-ಜನಜೀವನದ ಕುರಿತು ನನ್ನ ಆಸಕ್ತಿ ಕೆರಳಿಸಿದ ನನ್ನಿಬ್ಬರು ಗುರುಗಳಾದ ಪೂರ್ಣಚಂದ್ರ ತೇಜಸ್ವಿ ಹಾಗೂ ರಹಮತ್ ತರೀಕೆರೆಯವರಿಗೆ ಈ ಗೌರವವನ್ನು ಅರ್ಪಿಸಬಯಸುವೆ. ನನ್ನ ಎಲ್ಲಕ್ಕು ಬೆಂಬಲವಾಗಿ ನಿಲ್ಲುವ, ಪುಸ್ತಕ ಬಹುಮಾನ ಪಡೆದ ಈ ಪುಸ್ತಕವನ್ನು ಪ್ರಕಟಿಸಿದ ಬಸೂ; ನನ್ನ ಜೀವನಪ್ರೀತಿಯನ್ನು ಕಾಪಿಟ್ಟ ಕೃಷ್ಣ, ಪುಟ್ಟಿ, ಪವಿ, ಕನಸು, ಅಮ್ಮ, ಅಣ್ಣ, ಗೆಳೆಯರ ಬಳಗ ಇವರೆಲ್ಲರನ್ನು ಈ ಹೊತ್ತು ಪ್ರೀತಿಯಿಂದ ನೆನೆಯುತ್ತೇನೆ.

- ಅನುಪಮಾ

ಮೇ 1, 2016

ಭಾರತ್ ಮಾತಾಕಿ ಜೈ, ಐ.ಪಿ.ಎಲ್ ಎಂಬ ದೇಶಪ್ರೇಮಿ ಚಟುವಟಿಕೆಗಳ ನಡುವೆ ಬರಗಾಲವೆಂಬ ಮಾರಿಹಬ್ಬ!

ಕು.ಸ.ಮಧುಸೂದನ ರಂಗೇನಹಳ್ಳಿ
01/05/2016 
ದೇಶಪ್ರೇಮವನ್ನು ಯಾರೂ
ಘೋಷಣೆ ಕೂಗಿ ಸಾಬೀತು ಪಡಿಸಬೇಕಿಲ್ಲ!
ಹೆರಿಗೆ ವಾರ್ಡಿನಲ್ಲಿ ಯಾರೂ ‘ಸ್ತ್ರೀಯರಿಗೆ ಮಾತ್ರ’
ಎಂದು ಬರೆಯಬೇಕಾಗಿಲ್ಲ!---
· ಜೀರ್ಮುಖಿ

ದೇಶಭಕ್ತಿಯನ್ನು ಸಾಬೀತು ಪಡಿಸಲು ಕೂಗಿ ಬೋಲೋ ‘ಭಾರತ್ ಮಾತಾಕಿ ಜೈ’ ಇದನ್ನು ಕೂಗದೇ ಇದ್ದವರ ಮೇಲೆ ದೇಶದ್ರೋಹದ ಕೇಸು ಹಾಕಬೇಕು. ಇಲ್ಲ,ತಲೆ ಕಡಿದರೂ ಇದನ್ನು ನಾವು ಕೂಗಲಾರೆವು, ಲೋಕಸಭಾ ಸದಸ್ಯನೊಬ್ಬ ಅಸಂಬದ್ದ ಪ್ರಲಾಪ!

ಐ.ಪಿ.ಎಲ್. ಕ್ರಿಕೇಟ್ ಪಂದ್ಯಗಳ ಯಶಸ್ಸಿಗೆ ಟೊಂಕ ಕಟ್ಟಿ ನಿಂತ ಬಿ.ಸಿ.ಸಿ.ಐ.ಮತ್ತು ಸರಕಾರಗಳು. ಒಂದು ಪಂದ್ಯಕ್ಕೆ ಲಕ್ಷಗಟ್ಟಲೆ ಕುಡಿಯುವ ನೀರಿನ ಬಳಕೆ. ಪಂದ್ಯಗಳನ್ನು ರದ್ದುಪಡಿಸಲು ಕೋರ್ಟ್ ಮಧ್ಯಪ್ರವೇಶ!

ಬರಗಾಲದ ಬಿಸಿಲ ಬೇಗೆಗೆ ಸತ್ತವರ ಸಂಖ್ಯೆ ಸಾವಿರಗಳನ್ನು ದಾಟುತ್ತಿದೆ! ಜನರಿಗೆ ಕುಡಿಯುವ ನೀರು ಒದಗಿಸಲು ಟ್ಯಾಂಕರುಗಳಲ್ಲಿ ನೀರು ಪೂರೈಕೆ ಮಾಡಲಾಗದೆ ಅಸಹಾಯಕ ಸ್ಥಿತಿಯಲ್ಲಿ ಕುಂತಿರುವ ಸರಕಾರಗಳು!

ಈ ಮೂರೂ ವಿಭಿನ್ನ ಸುದ್ದಿಗಳನ್ನೂ ಒಂದೇ ಸಮಯದಲ್ಲಿ ಓದುವ ಕೇಳುವ ಸೌಭಾಗ್ಯ, ನಾವು ಭಾರತೀಯರಿಗಲ್ಲದೆ ಬೇರ್ಯಾರಿಗೂ ದೊರೆಯುವ ಸಾದ್ಯತೆಯಿಲ್ಲ. ನಾವೇ ಧನ್ಯರು!!!

ಮೊದಲಿಗೆ ಭಾರತ ಮಾತೆಗೆ ಜೈಕಾರ ಹಾಕುವ ಬಗ್ಗೆ ನೋಡೋಣ. ಸ್ವಾತಂತ್ರ ಹೋರಾಟದ ಸಮಯದಲ್ಲಿ ಜನರನ್ನು ಭಾವನಾತ್ಮಕವಾಗಿ ಒಗ್ಗೂಡಿಸಲು ಇಂತಹ ಘೋಷಣೆಗಳು ಅಗತ್ಯವಾಗಿದ್ದಿರಬಹುದು. ಇವತ್ತಿನ ಹಾಗೆ ಅವತ್ತು ಕೋಮುಗಳ ನಡುವಣ ಸಾಮರಸ್ಯ ಇಷ್ಟೊಂದು ಹದಗೆಟ್ಟಿರಲಿಲ್ಲ. ಹೀಗಾಗಿ ಅದನ್ನು ಕೂಗಲು ಯಾವ ಧರ್ಮದವರೂ ನಿರಾಕರಿಸಿರಲಿಲ್ಲ. ಮೊನ್ನೆ ಮೊನ್ನೆಯವರೆಗೂ ಅಂದರೆ 2014 ರಲ್ಲಿ ಬಾಜಪ ಕೇಂದ್ರದಲ್ಲಿ ಅಧಿಕಾರ ಹಿಡಿಯುವ ತನಕ ಈ ಘೋಷಣೆಯನ್ನು ಸಹಜವಾಗಿಯೇ ಕೂಗಲಾಗುತ್ತಿತ್ತು. ಶಾಲೆ ಕಾಲೇಜುಗಳಲ್ಲಿ, ರಾಷ್ಟ್ರೀಯ ಹಬ್ಬದ ದಿನಗಳಂದು, ಬಹುತೇಕ ರಾಜಕೀಯ ಪಕ್ಷಗಳ ಸಮ್ಮೇಳನಗಳಲ್ಲಿ, ಮುಷ್ಕರಗಳಲ್ಲಿ, ಧರಣಿಗಳಲ್ಲಿ ಧರ್ಮಾತೀತರಾಗಿ ಜನ ಈ ಘೋಷಣೆ ಕೂಗುತ್ತಿದ್ದರು. ಯಾವೊಬ್ಬ ಕ್ರಿಶ್ಚಿಯನ್, ಸಿಕ್, ಮುಸ್ಲಿಮನೂ ನಾನಿದನ್ನು ಕೂಗಲಾರೆನೆಂದು ಹೇಳಿದ ಉದಾಹರಣೆಯಿರಲಿಲ್ಲ. ಯಾವಾಗ ಬಲಪಂಥೀಯ ಸಂಘಪರಿವಾರದ ವ್ಯಕ್ತಿಯೊಬ್ಬರು ಭಾರತ್ ಮಾತಾ ಕಿ ಜೈ ಎಂದು ಕೂಗುವುದು ದೇಶಭಕ್ತಿಯ ಪ್ರತೀಕ, ಮತ್ತದನ್ನು ಕೂಗಲು ಎಲ್ಲರನ್ನೂ ಪ್ರೇರೇಪಿಸುವುದು ಸಹ ದೇಶಭಕ್ತಿಯ ಒಂದು ಕರ್ತವ್ಯವೆಂದು ಹೇಳಿದರೊ ತಗೋ ಶುರುವಾಯಿತು ಪರ ವಿರೋಧದ ಹೇಳಿಕೆಗಳು. ಭಾರತ್ ಮಾತಾಕಿ ಜೈ ಎನ್ನದವರನ್ನು ದೇಶದ್ರೋಹಿಗಳೆಂದು ಪರಿಗಣಿಸಿ ಮೊಕದ್ದಮೆ ಹೂಡುವಂತ ಕಾನೂನು ಜಾರಿಯಾಗಬೇಕೆಂದು ಕೆಲವರು ವಾದಿಸಿದರೆ, ನನ್ನ ಕತ್ತು ಕತ್ತರಿಸಿದರು ಅದನ್ನು ಕೂಗಲಾರೆನೆಂದು ಇನ್ನೊಬ್ಬ ಮತಿಗೆಟ್ಟ ರಾಜಕೀಯ ಮುಖಂಡ ಸವಾಲು ಹಾಕಿದ. ಹೀಗೆ ಇಡೀ ದೇಶದಾದ್ಯಂತ ದೇಶಭಕ್ತಿ ಎಂದರೇನು ಎನ್ನುವ ಬಗ್ಗೆ ಚರ್ಚೆಯೊಂದು ಶುರುವಾಯಿತು. ಬಲಪಂಥೀಯರು ಎಡಪಂಥೀಯರು ತಮ್ಮ ತಮ್ಮ ಅನಿಸಿಕೆಗಳನ್ನು ಹೇಳ ತೊಡಗಿದರು. ಎಲ್ಲರೂ ಅವರವರಿಗೆ ತೋಚಿದ ರೀತಿಯಲ್ಲಿ ಅರ್ಥೈಸುತ್ತ ನನ್ನಂತವರಿಗೆ ಗೊಂದಲ ಉಂಟು ಮಾಡಿದರು.

ಇಂತಹ ಚರ್ಚೆಗಳು ನಡೆಯುತ್ತಿರುವಾಗಲೇ ದೇಶಕ್ಕೆ ಬರಗಾಲ ಬಂದೆರಗಿದ್ದನ್ನು ಯಾರೂ ಗಮನಿಸಲೇ ಇಲ್ಲ. ಯಾಕೆಂದರೆ ಹೀಗೆ ದೇಶಭಕ್ತಿಯನ್ನು ವ್ಯಾಖ್ಯಾನ ಮಾಡಲು ಹೊರಟವರಿಗೆ, ಆ ಚರ್ಚೆಯ ಕಾವಿನಲ್ಲಿ ಬೇಸಿಗೆಯ ಬೇಗೆ ಅರಿವಾಗಲೇ ಇಲ್ಲ. ಇದು ಅರ್ಥವಾಗುವಷ್ಟರಲ್ಲಿ ಏಪ್ರಿಲ್ ತಿಂಗಳು ಶುರುವಾಗಿ ಇಡೀ ದೇಶದಲ್ಲಿ ಬರಗಾಲ ತಾಂಡವವಾಡುತ್ತ ಜನರಿಗೆ ಕುಡಿಯಲು ನೀರೂ ಸಿಗದ ಬೀಕರ ಪರಿಸ್ಥಿತಿ ಬಂದೊದಗಿತ್ತು.

ದೇಶದ 330 ಬಿಲಿಯನ್ ಜನರು ಈ ಬರದ ಬೇಗೆಗೆ ಸಿಲುಕಿದ್ದು, ಹಗಲಿನ ಉಷ್ಣಾಂಶ ಅಂದಾಜು 40 ಡಿಗ್ರಿಗಳನ್ನೂದಾಟಿ ಜನ ಬಿಸಿಲಿನ ಹೊಡೆತಕ್ಕೆ ಸಾಯುತ್ತಿದ್ದಾರೆಂದು ಬಹುತೇಕ ರಾಜ್ಯ ಮತ್ತು ಕೇಂದ್ರ ಸರಕಾರಗಳೇ ಅಧಿಕೃತವಾಗಿ ಹೇಳಬೇಕಾಯಿತು. ಜನರಿಗೆ ಕುಡಿಯುವ ನೀರನ್ನು ರಾಜ್ಯದಿಂದ ರಾಜ್ಯಕ್ಕೆ ಸಾಗಿಸಲು ರೈಲ್ವೇ ವ್ಯಾಗನ್ನುಗಳನ್ನು ಬಳಸಕೊಳ್ಳಬೇಕಾಯಿತು. ಬರ ಅದ್ಯಯನ ಮಾಡಿದ್ದೇವೆ ಎಂದು ಹೇಳಿಕೊಂಡ ಹಲವು ರಾಜ್ಯಸರಕಾರಗಳು ಕೇಂದ್ರಕ್ಕೆ ಪರಿಹಾರ ನೀಡುವಂತೆ ಪತ್ರ ಬರೆದು ಮೊರೆಯಿಟ್ಟವು. ಕೇಂದ್ರವೊ ರಾಜ್ಯಗಳು ಕೇಳಿದ್ದರಲ್ಲಿ ಅರ್ದದಷ್ಟನ್ನು ದಾನವೇನೊ ಎಂಬಂತೆ ನೀಡಿತು.. ಆಡಳಿತ ಪಕ್ಷದ ಸರಕಾರಗಳಿಗೆ ಹೆಚ್ಚು ಪರಿಹಾರ ನೀಡಿ ವಿರೋಧ ಪಕ್ಷಗಳ ಸರಕಾರಗಳ ರಾಜ್ಯಗಳಿಗೆ ಕಡಿಮೆ ಪರಿಹಾರ ನೀಡಿ ಮಲತಾಯಿ ಧೋರಣೆ ಅನುಸರಿಸಿದೆಯೆಂದು ಕೇಂದ್ರ ಸರಕಾರದ ಮೇಲೆ ಆರೋಪ ಮಾಡಲಾಯಿತು. ಇಲ್ಲ ಇಲ್ಲ ನಾವು ಕೊಟ್ಟ ಪರಿಹಾರವನ್ನೇ ಸರಿಯಾಗಿ, ಪೂರ್ಣವಾಗಿ ರಾಜ್ಯಗಳು ಬಳಸಿಕೊಂಡಿಲ್ಲವೆಂದು ಕೇಂದ್ರ ಉತ್ತರ ನೀಡಿತು. ಇವೆರಡರ ಕಿತ್ತಾಟಗಳ ನಡುವೆ ಬರದಿಂದ ತತ್ತರಿಸುತ್ತಿದ್ದ ಜನತೆ ಪರಿಹಾರ ಇವತ್ತು ದೊರಯಬಹುದು ನಾಳೆ ದೊರೆಯಬಹುದೆಂದು, ಮುಖಮುಖ ನೋಡುತ್ತಾ ಕಾಯುತ್ತಾಕೂತಿದ್ದಾರೆ ಮೂರ್ಖರಂತೆ! ಹೀಗೆ ಜನ ಸಹಾಯಹಸ್ತದ ನಿರೀಕ್ಷೆಯಲ್ಲಿರುವಾಗಲೇ ದೇಶಭಕ್ತಿ ಪ್ರದರ್ಶಿಸಲು ಜನರಿಗೆ ಮತ್ತೊಂದು ಅವಕಾಶ ದೊರೆಯುವ ವಿಶೇಷವೂ ಬಂತು.

ಅದು ದೇಶವಿದೇಶದ ಪ್ರಖ್ಯಾತ ಆಟಗಾರರನ್ನೊಳಗೊಂಡ ಎಂಟು ಕ್ರಿಕೇಟ್‍ ತಂಡಗಳು ಪರಸ್ಪರ ಸೆಣೆಸಲಿರುವ ಇಂಡಿಯನ್ ಪ್ರೀಮೀಯರ್ ಲೀಗ್(ಐ.ಪಿ.ಎಲ್.) ಈ ಪಂದ್ಯಗಳನ್ನು ಹಾಗೇ ಸುಮ್ಮನೇ ಬರಿ ನೆಲದಲ್ಲಿ ಆಡಲಾಗುವುದಿಲ್ಲ ಕೆಳಗೆ ಬಿದ್ದರೆ ಕೈಕಾಲು ಮುರಿದುಕೊಳ್ಳಲು ಆಟಗಾರರೇನು ರೈತರೆ! ಸರಿ, ಕ್ರಿಕೇಟ್ ಮೈದಾನಗಳಲ್ಲಿ ಬೆಳೆಸಿರುವ ಹಸಿರು ಹುಲ್ಲನ್ನು ಕಾಪಾಡಿಕೊಳ್ಳಬೇಕು, ಅದಕ್ಕಾಗಿ ಮುಂಗಾರು ಮಳೆಗಾಗಿ ಕಾಯಲಿಕ್ಕಾಗುತ್ತದೆಯೇ? ಹೇಗಿದ್ದರೂ ಖ್ಯಾತ ನಗರಗಳಲ್ಲಿ ನೀರು ಸರಬರಾಜು ಮಾಡುವ ಕೇಂದ್ರಗಳಿವೆಯಲ್ಲ, ಅದರಿಂದ ಒಂದಷ್ಟು ಲಕ್ಷ ಲೀಟರು ನೀರು ಬಳಸಿಕೊಂಡರಾಯಿತೆಂದು ಕೊಂಡ ಕ್ರಿಕೇಟ್ ಸಂಸ್ಥೆಗಳು ಕೆಲಸ ಶುರು ಹಚ್ಚಿಕೊಂಡವು. ಜನರಿಗೆ ಕುಡಿಯಲು ನೀರಿಲ್ಲವೆಂದ ಮಾತ್ರಕ್ಕೆ ದೇಶಭಕ್ತಿಯ ಆಟವನ್ನು ಆಡದೇ ನಿಲ್ಲಿಸಲಾಗುತ್ತದೆಯೇ? ದೇಶದ ಎಂಟು ಉದ್ಯಮಿಗಳು ಸಾವಿರಾರು ಕೋಟಿ ರೂಪಾಯಿಗಳನ್ನು ಬಂಡವಾಳವನ್ನಾಗಿ ಹೂಡಿ ತಂಡಗಳನ್ನು, ಆಟಗಾರರರನ್ನು ಖರೀದಿಸಿಲ್ಲವೇ? ಅವರಿಗಾಗುವ ನಷ್ಟವನ್ನು ಭರಿಸಿ ಕೊಡುವವರು ಯಾರು?

ತಲೆಕೆಟ್ಟ ದೇಶದ್ರೋಹಿಯೊಬ್ಬ ಮಹರಾಷ್ಟ್ರದ ಕೋರ್ಟಿಗೆ ಈ ಬಗ್ಗೆ ಅಂದರೆ ನೀರನ್ನು ಮೈದಾನಕ್ಕೆ ಬಳಸಿಕೊಳ್ಳುವ ಬಗ್ಗೆ ಮೊಕದ್ದಮೆ ಹೂಡಿದ!. ಪಾಪದ ನ್ಯಾಯಾಧೀಶರಿಗೂ ದೇಶಪ್ರೇಮದ ಅರಿವಿಲ್ಲವೆನಿಸುತ್ತೆ, ಸರಿ, ಮಹಾರಾಷ್ಟ್ರದಲ್ಲಿ ನಡೆಯುವ ಪಂದ್ಯಗಳನ್ನು ಬೇರೇ ರಾಜ್ಯಗಳಿಗೆ ವರ್ಗಾಯಿಸುವಂತೆ ಆದೇಶಿಸಿಬಿಟ್ಟರು.. ಸರಿ ಕ್ರಿಕೇಟ್ ಮಂಡಳಿ ಅಕ್ಕಪಕ್ಕದ ರಾಜ್ಯಗಳ ಮಂಡಳಿಗಳ ಜೊತೆ ಮಾತಾಡಿ ಪಂದ್ಯ ನಡೆಸಲು ಕೋರಿಕೊಂಡಿತು, ಇದಕ್ಕೆ ಕಾದಿದ್ದವರಂತೆ ಅವೂ ಸಹ ನಮಗೆ ಇನ್ನಷ್ಟು ಲಾಭ ಬರಲೆಂದು ಒಪ್ಪಿಕೊಂಡವು. ಹೀಗಾಗಿ ಕರ್ನಾಟಕದ ಬೆಂಗಳೂರಿಗೂ ಇನ್ನಷ್ಟು ಪಂದ್ಯಗಳು ದೊರಕಿದಂತಾಗಿ ಕಾವೇರಿ ತಾಯಿಗೆ ಆನಂದವಾಯಿತು. ಕರ್ನಾಟಕದಲ್ಲೂ ಬರವಿದೆಯೆಲ್ಲ, ಇಲ್ಲಿ ನೀರು ಪೋಲಾಗುವುದಿಲ್ಲವ ಅಂತ ಯಾವನೊ ತಲೆಮಾಸಿದವ ಕೇಳಿದ್ದಕ್ಕೆ, ವಿಶ್ವಕನ್ನಡ ಸಮ್ಮೇಳನದ ಸಮಯದಲ್ಲಿ ಸನ್ಮಾನ್ಯ ಶಿವರಾಮ ಕಾರಂತರು ಬರ ಇದೆಯೆಂದು ನೀವು ಮಸಾಲೆ ದೋಸೆ ತಿನ್ನೋದನ್ನು ಬಿಡ್ತೀರೇನ್ರಿ ಅಂತ ಕೇಳಿದ್ದನ್ನು ನೆನಪು ಮಾಡಿದ ಮಹಾನುಭಾವರೊಬ್ಬರು ಮತ್ತೆ ಸಿಗದಂತೆ ಮಾಯವಾದರು.

ಇದೀಗ ಮಹಾನ್ ದೇಶದ ದೇಶಪ್ರೇಮಿ ಪ್ರಜೆಗಳಿಗೆ ಎರಡೆರಡು ಸ್ಕೋರ್ ನೋಡುವ ಅವಕಾಶ ಲಭ್ಯವಾಗಿದೆ. ಒಂದು ಬರದಿಂದ ತತ್ತರಿಸಿರುವ ಹಳ್ಳಿಗಳ ಸಂಖ್ಯೆ ಮತ್ತು ಬಿಸಿಲಿಗೆಸಾವಿಗೀಡಾದವರ ಅಂಕಿಸಂಖ್ಯೆಯಾದರೆ, ಇನ್ನೊಂದು ಐ.ಪಿ.ಎಲ್. ನಲ್ಲಿ ವಿರಾಟ್ ಕೋಹ್ಲಿ ಹೊಡೆದ ಬೌಂಡರಿ ಸಿಕ್ಸರ್‍ಗಳ ಅಂಕಿಸಂಖ್ಯೆ. ಹೀಗೆ ಎರಡನ್ನು ನೋಡುತ್ತಾ ಕುಳಿತ ದೇಶ ಪ್ರೇಮಿಗಳ ದೇಶಭಕ್ತಿಗೆ ಮೆಚ್ಚಿದ ಸರಕಾರಗಳು ಮತ್ತಿನ್ಯಾವ ಭಾಗ್ಯಗಳನ್ನು ದಯಪಾಲಿಸುತ್ತವೆಯೊ ಕಾದು ನೋಡಬೇಕಿದೆ.

ಇದೀಗ ಬಂದ ಬ್ರೇಕಿಂಗ್ ನ್ಯೂಸ್:

ಬೆಂಗಳೂರು ತಂಡದ ದೇಶಪ್ರೇಮಿ ಆಟಗಾರ ವಿರಾಟ್ ಕೋಹ್ಲಿಯವರು ಬೆಳೆನಾಶದಿಂದ ಸತ್ತ ರೈತರ ಒಟ್ಟು ಸಂಖ್ಯೆಯನ್ನು ದಾಟುವ ಎಲ್ಲ ಲಕ್ಷಣಗಳನ್ನೂ ತೋರಿಸುತ್ತಿದ್ದಾರೆ. ಈಗ ಐದು ಪಂದ್ಯಗಳಿಂದ ಅವರು 367 ರನ್ ಹೊಡೆದಿದ್ದಾರೆ. ಲಂಡನ್ನಿನಲ್ಲಿರುವ ಅದರ ಮಾಲೀಕರಾದ ಶ್ರೀ ವಿಜಯ ಮಲ್ಯರವರು ಕೋಹ್ಲಿಯವರನ್ನು ಅಭಿನಂದಿಸಲು ಕೊಹ್ಲಿಯವರನ್ನೇ ಲಂಡನ್ನಿಗೆ ಆಹ್ವಾನಿಸಿರುವ ಬಗ್ಗೆ ನಮ್ಮ ವರದಿಗಾರರು ಅಧಿಕೃತ ಮಾಹಿತಿ ತಂದಿದ್ದಾರೆ

ಬೋಲೋ ಭಾರತ್ ಮಾತಾಕಿ ಜೈ
ಬೋಲೋ ವಿರಾಟ್ ಕೊಹ್ಲಿಕಿ ಜೈ!
ಬೋಲೋ ಬರಗಾಲಾಕಿ ಜೈ!

ಏಪ್ರಿ 30, 2016

ಪಿ.ಎಫ್. ಕಾನೂನು ತಿದ್ದುಪಡಿಯ ವಿರುದ್ಧದ ಬೆಂಗಳೂರಿನ ಚಳುವಳಿ ಮತ್ತು ಕಾರ್ಮಿಕ ಸಂಘಟನೆಗಳ ಮುಂದಿನ ಹೆಜ್ಜೆ: ಒಂದು ಟಿಪ್ಪಣಿ

pf protest at bangalore
ಕು.ಸ.ಮಧುಸೂದನ ರಂಗೇನಹಳ್ಳಿ
30/04/2016

ಯಾವುದೇ ಸಮಾಜ ಜೀವಂತವಾಗಿದೆ ಎಂದು ನಂಬುವುದಕ್ಕೆ ಸಾಕ್ಷಿಯಾಗಿ ಕೆಲಸ ಮಾಡುವುದು ಆ ಸಮಾಜದಲ್ಲಿನ ಸಾಮಾಜಿಕ ಕಳಕಳಿಯ ಚಳುವಳಿಗಳು. ಒಂದು ಸಮುದಾಯದ ಸಾಕ್ಷಿ ಪ್ರಜ್ಞೆಯಾದ ಹೋರಾಟಗಳು ಇರುವಲ್ಲಿ ಮಾತ್ರ ಸದಾ ಹೊಸತನದ ತುಡಿತವೊಂದನ್ನು, ಬದಲಾವಣೆಯ ಕನಸನ್ನು ಕಾಣಬಹುದಾಗಿದೆ. ನಿಷ್ಕ್ರಿಯವಾದ ಜನಸಮುದಾಯವೊಂದು ಯಥಾ ಸ್ಥಿತಿಯನ್ನು ಒಪ್ಪಿಕೊಂಡು ಬದುಕಿದೆಯೆಂದರೆ ಅದು ಪ್ರತಿಭಟಿಸುವ ತನ್ನ ಗುಣವನ್ನು ಕಳೆದುಕೊಂಡಿದೆಯೆಂದೂ, ಬದಲಾವಣೆ ಬಯಸುವ ಆಕಾಂಕೆಯನ್ನು ಬಿಟ್ಟು ಕೊಟ್ಟಿದೆಯೆಂದು ಅರ್ಥ.

ಕಳೆದೊಂದು ದಶಕದಿಂದಲೂ ಕರ್ನಾಟಕವೂ ಸಹ ಇಂತಹ ಕ್ರಿಯಾಹೀನತೆಯ ಸ್ಥಿತಿಯನ್ನು ತಲುಪಿದೆ. ಜಾಗತೀಕರಣದ ನಂತರ ನಮ್ಮ ಸಾಮಾಜಿಕ ಬದುಕಿನಲ್ಲಿ ಉಂಟಾದ ಆರ್ಥಿಕ ಪಲ್ಲಟಗಳು ಇದಕ್ಕೆ ಬಹಳಷ್ಟು ಮಟ್ಟಿಗೆ ಕಾರಣ. ಖಾಸಗಿ ಕ್ಷೇತ್ರದಲ್ಲಿ ದೊರೆತ ಉದ್ಯೋಗಾವಕಾಶಗಳು, ಹೆಚ್ಚಾದ ಮದ್ಯಮ ವರ್ಗದ ಕೊಳ್ಳುವ ಶಕ್ತಿ, ದಿಡೀರನೆ ನಮ್ಮ ಮದ್ಯಮವರ್ಗದ ಚಿಂತನೆಯ ದಿಕ್ಕುಗಳನ್ನೇ ಬದಲಾಯಿಸಿಬಿಟ್ಟಿತು. ಯಾಕೆಂದರೆ ತೊಂಭತ್ತರ ದಶಕದವರೆಗೂ ನಮ್ಮ ಬಹುತೇಕ ಚಳುವಳಿಗಳ ಮೂಲ ಶಕ್ತಿಯೇ ಈ ಮದ್ಯಮವರ್ಗವಾಗಿತ್ತು. ಅಕ್ಷರಸ್ಥ ಮದ್ಯಮವರ್ಗ ತಾವು ಓದಿಕೊಂಡ ಎಡಪಂಥೀಯ ಮತ್ತು ಸಮಾಜವಾದಿ ಧೋರಣೆಗಳಿಂದ ಪ್ರೇರೇಪಿತರಾಗಿದ್ದು, ಸಮುದಾಯದ ಯಾವುದೇ ಚಳುವಳಿಗಳಲ್ಲಿಯೂ ಸಕ್ರಿಯವಾಗಿ ಪಾಲ್ಗೊಳ್ಳುತ್ತಿತ್ತು. ಅದು ದಲಿತ ಚಳುವಳಿಯಿರಲಿ, ರೈತ ಚಳುವಳಿಯಿರಲಿ, ಕನ್ನಡಪರ ಹೋರಾಟವಿರಲಿ, ಕಾರ್ಮಿಕ ಸಂಘಟನೆಗಳ ಮುಷ್ಕರಗಳಿರಲಿ ಇಲ್ಲ ಸರಕಾರಗಳ ಜನವಿರೋಧಿ ಕ್ರಮಗಳ ವಿರುದ್ಧದ ಚಳುವಳಿಯೇ ಇರಲಿ ಪ್ರತ್ಯಕ್ಷವಾಗಿ ಪರೋಕ್ಷವಾಗಿ ಪಾಲ್ಗೊಂಡು ತನ್ನ ಇರುವಿಕೆಯನ್ನು ಪ್ರದರ್ಶಿಸುತ್ತಿತ್ತು. ಶಿವಮೊಗ್ಗದಂತಹ ಪುಟ್ಟ ನಗರಗಳಲ್ಲಿ ಹೋಟಲಿನವರು ಇಡ್ಲಿ ಬೆಲೆಯನ್ನು 5 ಪೈಸೆ ಹೆಚ್ಚಿಸಿದರೂ ಜನ ಬೀದಿಗೆ ಬಂದು ಹೋರಾಟ ಮಾಡುತ್ತಿದ್ದರು. ಅಂದಿನ ವಿದ್ಯಾರ್ಥಿ ಸಂಘಟನೆಗಳು ಸಹ ಸಕ್ರಿಯವಾಗಿದ್ದು ತಮಗೆ ಸಂಬಂದಿಸಿರದ ಹಲವು ಸಾಮಾಜಿಕ ಹೋರಾಟಗಳಲ್ಲಿ ಬಾಗವಹಿಸುತ್ತಿತ್ತು. ನಂತರ ಪಶ್ಚಿಮ ಮಾದರಿಯ ಅಭಿವೃದ್ದಿಯೇ ಶ್ರೇಷ್ಠವೆಂದು ಭಾವಿಸಿದ ನಮ್ಮ ಸರಕಾರಗಳು ನಿರಂತರವಾಗಿ ಜಾರಿಗೆ ತಂದ ಮುಕ್ತ ಆರ್ಥಿಕ ನೀತಿಯ ಫಲವಾಗಿ ಸಮಾಜದ ಅಕ್ಷರಸ್ಥ ಮದ್ಯಮವರ್ಗ ಉಳಿದ ವರ್ಗಗಳಿಂದ ದೂರ ಸರಿಯತೊಡಗಿತು. ಮಾರುಕಟ್ಟೆ ನೀತಿಯಿಂದಾಗಿ ಸೃಷ್ಠಿಯಾದ ಖಾಸಗಿ ಕ್ಷೇತ್ರದ ಬಹುಪಾಲು ಉದ್ಯೋಗಗಳನ್ನು ತನ್ನ ಮಡಿಲಿಗೆ ಹಾಕಿಕೊಂಡ ಅದು ತನ್ನ ಕೊಳ್ಳುವ ಶಕ್ತಿಯನ್ನು ಹೆಚ್ಚು ಮಾಡಿಕೊಂಡ ಕೂಡಲೇ ತನ್ನ ಸಮಾಜವಾದಿ ಮತ್ತು ಎಡಪಂಥೀಯ ಚಿಂತನೆಗಳಿಂದ ದೂರಾಗಿ ಮಾರುಕಟ್ಟೆಯ ಗುಲಾಮಗಿರಿಯಲ್ಲಿ ತೊಡಗಿಸಿಕೊಂಡಿತು. ಹೀಗೆ ಇಂಡಿಯಾದೊಳಗೆ ಕಾಲಿಟ್ಟ ಖಾಸಗಿ ಬಹುರಾಷ್ಟ್ರೀಯ ಕಂಪನಿಗಳಲ್ಲಿ ಕಾರ್ಮಿಕ ಸಂಘಟನೆಗಳ ಮಾತೇ ಇರಲಿಲ್ಲ. ನಮ್ಮ ಸರಕಾರಗಳು ಸಹ ನಿದಾನವಾಗಿ ಶಬ್ದವೇ ಆಗದಂತೆ ನಮ್ಮ ಸಾರ್ವಜನಿಕ ಉದ್ಯಮಗಳ ಕತ್ತು ಹಿಚುಕ ತೊಡಗಿತು. ಗ್ರಾಹಕ ಸಂಸ್ಕೃತಿಯಲ್ಲಿ ಮೈಮರೆತ ಇಡೀ ಸಮಾಜ ತನ್ನ ಹಕ್ಕುಗಳನ್ನು ಕೇಳುವುದಕ್ಕಿಂತ ಸಿಕ್ಕ ಅವಕಾಶಗಳನ್ನು ಉಪಯೋಗಿಸಿಕೊಂಡು ದುಡ್ಡು ಮಾಡುವ ಸುಲಭೋಪಾಯಕ್ಕೆ ಶರಣಾಯಿತು. ಹೀಗಾಗಿ ಕಳೆದೆರಡು ದಶಕಗಳು ಯಾವುದೇ ಚಳುವಳಿಗಳಾಗಲಿ ಹೋರಾಟಗಳಾಗಲಿ ಇರದೆ ಆಳುವ ಶೋಷಕ ಶಕ್ತಿಗಳ ಕೈ ಮೇಲಾಗ ತೊಡಗಿತು. ಹೀಗಾಗಿಯೇ ಕೇಂದ್ರ ಸರಕಾರ ಅಮೇರಿಕಾದಂತಹ ರಾಷ್ಟ್ರದ ಜೊತೆ ನಾಗರೀಕ ಅಣ್ವಸ್ತ್ರ ನೀತಿಯಂತಹ ಒಪ್ಪಂದಕ್ಕೆ ಸಹಿ ಹಾಕಿತು. ನಂತರ ಜನವಿರೋಧಿಯಾದ ಹಲವು ಒಡಂಬಡಿಕೆಗಳಿಗೆ ಸಹಿ ಹಾಕುತ್ತಾ ಇವತ್ತಿಗೆ ಇಡೀ ದೇಶವನ್ನು ಬಂಡವಾಳಶಾಹಿ ಶಕ್ತಿಗಳ ಕೈಲಿಟ್ಟು ತಾವು ನೆಪ ಮಾತ್ರಕ್ಕೆ ಅಧಿಕಾರದ ಕುರ್ಚಿಯಲ್ಲಿ ಕುಳಿತಿದ್ದಾರೆ.
 
ಹೀಗಾಗಿ ಇವತ್ತು ಕೇಂದ್ರ ಮತ್ತು ರಾಜ್ಯ ಸರಕಾರಗಳು ಮಂಡಿಸುವ ಬಜೆಟ್ಟುಗಳು ಸಹ ಇವೇ ಬಂಡವಾಳಶಾಹಿ ಶಕ್ತಿಗಳ ಪ್ರಭಾವಕ್ಕೆ ಒಳಗಾಗಿ ಮಂಡಿಸಲ್ಪಡುವುದನ್ನು ನಾವು ಕಾಣಬಹುದಾಗಿದೆ. ಇದಕ್ಕೆ ನಮ್ಮ ಎಡಪಕ್ಷಗಳ ಪಾತ್ರವೂ ಕೆಲಮಟ್ಟಿಗೆ ಕಾರಣವೆನ್ನಬಹುದು. ಅವೂ ಸಹ ಸತತವಾಗಿ ನಡೆಯಲ್ಪಡುತ್ತಿರುವ ಶಕ್ತಿ ರಾಜಕಾರಣದ ಸುಳಿಯೊಳಗೆ ಸಿಲುಕಿ ಚುನಾವಣೆಗಳಲ್ಲಿಯೇ ಹೆಚ್ಚು ಹೆಚ್ಚಾಗಿ ತೊಡಗಿಸಿಕೊಳ್ಳುತ್ತಾ ಸಂಘಟನೆಯ ಕಡೆ ಗಮನ ಕೊಡುತ್ತಿಲ್ಲ. ಹಲವಾರು ಅಸಂಘಟಿತ ಕ್ಷೇತ್ರಗಳಿದ್ದು ಅಲ್ಲಿಯಾದರು ತಮ್ಮ ಸಂಘಟನೆಗಳನ್ನು ಶುರು ಮಾಡಿ ತಮ್ಮ ಸಿದ್ದಾಂತಗಳನ್ನು ಪ್ರಚಾರ ಪಡಿಸುವಲ್ಲಿ ವಿಫಲವಾಗುತ್ತಿವೆ. ಈಗಾಗಲೇ ಅಸ್ಥಿತ್ವದಲ್ಲಿರುವ ಒಂದಷ್ಟು ಸಾರ್ವಜನಿಕ ವಲಯವನ್ನು ಬಿಟ್ಟರೆ ಉಳಿದಂತೆ ಅದು ಕೃಷಿಯಂತಹ ಅಸಂಘಟಿತ ಕ್ಷೇತ್ರಕ್ಕೆ ಕಾಲಿಟ್ಟಿಲ್ಲ. ಹೀಗಾಗಿ ಒಂದು ಪೀಳಿಗೆಯ ಯುವಜನತೆಗೆ ಎಡಪಂಥೀಯ ಧೋರಣೆಗಳ ಬಗ್ಗೆ ಸರಿಯಾದ ಜ್ಞಾನವಿಲ್ಲದಂತಾಗಿದೆ. ಇಂತಹ ಅವಕಾಶವನ್ನು ಬಳಸಿಕೊಂಡ ಸಂಘ ಪರಿವಾರದಂತಹ ಬಲಪಂಥೀಯ ಸಂಘಟನೆಗಳು ಧರ್ಮ, ದೇಶಭಕ್ತಿಯಂತಹ ಬಾವನಾತ್ಮಕ ವಿಷಯಗಳನ್ನು ಅವರುಗಳ ತಲೆಗೆ ತುಂಬುತ್ತಾ, ಅವರನ್ನು ದಾರಿತಪ್ಪಿಸುತ್ತಿವೆ. ಇದರಿಂದಾಗಿ ನಮ್ಮ ಯುವ ಪೀಳಿಗೆ ಮತಾಂಧತೆಯತ್ತ ವಾಲುತ್ತಿದ್ದಾರೆ.
 
ಇವೆಲ್ಲ ಕಾರಣಗಳಿಂದಾಗಿ ಇಂದಿನ ಸರಕಾರಗಳು ಕಾರ್ಮಿಕ ಸಂಘಟನೆಗಳ, ಜನಸಮುದಾಯದ ಸಂಘಟಿತ ಹೋರಾಟದ ಬಗ್ಗೆ ಯಾವುದೇ ಭಯ ಹೊಂದಿಲ್ಲ. ತಮಗಿನ್ಯಾವ ಪ್ರತಿರೋಧವೂ ಇಲ್ಲವೆಂದುಕೊಂಡ ಅವು ಕಾರ್ಪೋರೇಟ್ ವಲಯದ ಪರವಾಗಿ ತಮಗೆ ಬೇಕಾದ ಹಾಗೆ ಹಳೆಯ ಕಾನೂನುಗಳನ್ನುತಿದ್ದುಪಡಿ ಮಾಡುತ್ತಾ ಹೊಸ ಕಾನೂನುಗಳನ್ನು ಜಾರಿಗೊಳಿಸುತ್ತಾ ನಡೆಯುತ್ತಿವೆ. ಇಂತಹದೊಂದು ಅಹಂಕಾರದ ಫಲವಾಗಿಯೇ ಈ ವರ್ಷ ಎರಡು ಕಾನೂನುಗಳಿಗೆ ತಿದ್ದುಪಡಿ ತರಲಾಯಿತು.

ಮೊದಲನೆಯದು, ಅಂಚೆಕಛೇರಿಗಳಲ್ಲಿ ಮದ್ಯಮವರ್ಗ ಮಾಡುವ ಅಲ್ಪಾವಧಿ ಮತ್ತು ದೀರ್ಘಾವಧಿ ಉಳಿತಾಯಗಳ ಮೇಲಿನ ಬಡ್ಡಿ ದರವನ್ನು ಕಡಿತ ಮಾಡಿ ಆದೇಶ ಹೊರಡಿಸಿತು. ಬಹು ದೊಡ್ಡ ಪ್ರತಿರೋಧವನ್ನು ಒಡ್ಡ ಬೇಕಾಗಿದ್ದ ಸಮುದಾಯ ಯಾವುದೇ ಸಂಘಟನೆಯೂ ಇಲ್ಲದೆ ಸುಮ್ಮನೆ ಅದನ್ನು ಒಪ್ಪಿಕೊಳ್ಳಬೇಕಾಯಿತು.
 
ಇನು ಎರಡನೆಯದು, ನೌಕರರ ಪ್ರಾವಿಡೆಂಟ್ ಫಂಡ್ ಬಗೆಗಿನ ಕಾನೂನು ತಿದ್ದು ಪಡಿಯ ವಿಚಾರ. ಈ ತಿದ್ದುಪಡಿಗೆ ಮುನ್ನುಡಿ ಬರೆದ ವಾರಗಳ ನಂತರವೂ ನಮ್ಮ ಸಂಘಟನೆಗಳು ಹೋರಾಟದ ರೂಪು ರೇಷೆಯ ಬಗ್ಗೆ ಚರ್ಚೆಯಲ್ಲಿಯೇ ಮುಳುಗಿ ಹೋಗಿ ತಕ್ಷಣದ ಯಾವುದೇ ಪ್ರತಿರೋಧ ಒಡ್ಡಲು ವಿಫಲವಾದವು. ಆದರೆ ಬೆಂಗಳೂರಿನ ಅಸಂಖ್ಯಾತ ಗಾರ್ಮೆಂಟ್ಸ್ ಮತ್ತು ಇತರೇ ಅಸಂಘಟಿತ ಉದ್ಯಮಗಳ ನೌಕರರು ಸುಮ್ಮನೇ ಕೂರಲಿಲ್ಲ. ಅಧಿಕೃತವಾಗಿ ಅವರಿಗ ತಮ್ಮದೇ ಆದ ಯೂನಿಯನ್ ಎಂಬುದಿಲ್ಲದಿದ್ದರೂ, ಸ್ಥಳೀಯವಾಗಿಯೇ ಒಂದು ನಾಯಕತ್ವವನ್ನು ರೂಪಿಸಿಕೊಂಡು ಕಳೆದ ವಾರ ದಿಡೀರನೆ ಮುಷ್ಕರಕ್ಕೆ ಇಳಿದು ಬಿಟ್ಟರು. ಬಹಳ ವರ್ಷಗಳ ನಂತರ ಬೆಂಗಳೂರಿನ ಬೀದಿಗಳಲ್ಲಿ ಸರಕಾರದ ವಿರುದ್ದ ಘೋಣೆಗಳು ಮೊಳಗಿದವು. ಯಾವ ಒತ್ತಡಕ್ಕೂ ಮಣಿಯದೆ, ಪೋಲಿಸರ ಬಲಪ್ರಯೋಗಕ್ಕೂ ಬಾಗದೆ ಎರಡು ದಿನಗಳ ಕಾಲ ಇಡೀ ನಗರವನ್ನು ತಮ್ಮ ವಶಕ್ಕೆ ಪಡೆದು ಆಡಳಿತ ಯಂತ್ರವನ್ನೇ ಕಂಗಾಲು ಮಾಡಿಬಿಟ್ಟರು. ಈ ಹೋರಾಟ ಇತರೇ ನಗರಗಳಿಗೂ ವಿಸ್ತರಿಸುವ ಭಯದಿಂದ ಕೇಂದ್ರ ಸರಕಾರ ತನ್ನ ನಿರ್ದಾರವನ್ನು ಹಿಂಪಡೆಯಬೇಕಾಯಿತು. ಗಾರ್ಮೆಂಟ್ಸ್ ಮಹಿಳೆಯರೇ ಹೆಚ್ಚಿದ್ದ ಈ ಹೋರಾಟಕ್ಕೆ ಯಾವ ಸಂಘಟನೆಯ ಬೆಂಬಲವಿಲ್ಲದ್ಯಾಗು ಸಹ ತಮ್ಮ ಚಳುವಳಿಯನ್ನು ಯಾಶಸ್ವಿಗೊಳಿಸುವಲ್ಲಿ ಸಫಲರಾದರು. ಬಹುಶ: ಕಾರ್ಮಿಕರು ಗುಡುಗಿದರೆ ಸರಕಾರ ನಡುಗುತ್ತದೆ ಎನ್ನುವ ಹಳೆಯ ಮಾತು ಮತ್ತೊಂದು ಬಾರಿ ಸಾಭೀತಾಯಿತು. ಈ ಹೋರಾಟ ನಮ್ಮ ಎಡಪಂಥೀಯ ಸಂಘಟನೆಗಳೂ ಸೇರಿದಂತೆ ಉಳಿದೆಲ್ಲ ಅಂದರೆ ರೈತ ಸಘಟನೆಗಳಿಗೆ, ಕನ್ನಡಪರ ಸಂಘಟನೆಗಳಿಗೆ, ದಲಿತ ಸಂಘಟನೆಗಳಿಗೆ ಪಾಠವಾಗಬೇಕು. ಎಲ್ಲ ನಿಷೇಧಗಳ ನಡುವೆಯೂ ಒಂದು ಚಳುವಳಿಯನ್ನು ಹುಟ್ಟು ಹಾಕಿ ಹೋರಾಡಬಹುದೆಂಬುದನ್ನು ಅರ್ಥ ಮಾಡಿಕೊಂಡು ಮುಂದಿನ ನಡೆಗಳನ್ನು ಇಡಬೇಕಾಗಿದೆ. ಹಾಗೆ ಮಾಡಿದರೆ ಮಾತ್ರ ಜಾಗತೀಕರಣದ ಪ್ರಭಾವದಿಂದ ಜನವಿರೋಧಿಯಾಗುತ್ತಿರುವ ಸರಕಾರಗಳನ್ನು ಬಗ್ಗಿಸಬಹುದಾಗಿದೆ. ಇಲ್ಲದೇ ಹೋದಲ್ಲಿ ಬಂಡವಾಳಶಾಹಿಗಳ ಜೊತೆ ಸೇರಿಕೊಳ್ಳುವ ಮತೀಯ ಶಕ್ತಿಗಳು ಈ ನಾಡಿನ ಜಾತ್ಯಾತೀತ ಚಿತ್ರಣವನ್ನು, ದುಡಿಯುವ ವರ್ಗಗಳ ಬದುಕನ್ನು ನಾಶ ಮಾಡುವುದು ಖಂಡಿತಾ!

ಏಪ್ರಿ 29, 2016

ಮೇಕಿಂಗ್ ಹಿಸ್ಟರಿ: ಕೃಷಿಗೆ ಲಕ್ವ ಹೊಡೆದದ್ದು ಭಾಗ 3

Making history
ಸಾಕೇತ್ ರಾಜನ್
ಕನ್ನಡಕ್ಕೆ: ಡಾ. ಅಶೋಕ್. ಕೆ. ಆರ್
29/04/2016

ಈ. ಕೆರೆಗಳ ನಾಶ

ಕೃಷಿಯ ಬೆಳವಣಿಗೆಯಲ್ಲಿ ಕೆರೆಗಳು ಮತ್ತು ನದಿ ನೀರಾವರಿ ಪಾತ್ರದ ಪ್ರಾಮುಖ್ಯತೆಯನ್ನು ನಾವೀಗಾಗಲೇ ಮೇಕಿಂಗ್ ಹಿಸ್ಟರಿಯ ಒಂದನೇ ಸಂಪುಟದಲ್ಲಿ ನೋಡಿದ್ದೇವೆ. ಹದಿನೆಂಟನೇ ಶತಮಾನದ ಕೊನೆಯ ಭಾಗದಲ್ಲಿ ಈ ಕೆರೆಗಳು ವ್ಯಾಪಾರ ವಹಿವಾಟಿಗೆ ಸಹಕಾರಿಯಾಗಿದ್ದನ್ನು, ಪಟ್ಟಣ ಮತ್ತು ನಗರಗಳು ಈ ನೀರ ನಾಗರೀಕತೆಯ ಮೇಲೆ ಅವಲಂಬಿತವಾಗಿದ್ದನ್ನು ಕಂಡಿದ್ದೇವೆ. ಆದರೆ ಕೊಳ್ಳೆ ಹೊಡೆಯುವುದೇ ಉದ್ದಿಶ್ಯವಾಗಿದ್ದ ವಸಾಹತುಶಾಹಿ, ಇಡೀ ವ್ಯವಸ್ಥೆಯನ್ನೇ ಹಾಳುಗೆಡವಿತು; ಪರಿಣಾಮವಾಗಿ ನೀರಾವರಿ ಪ್ರದೇಶದ ವ್ಯಾಪ್ತಿ ಕಡಿಮೆಯಾಗಿಬಿಟ್ಟಿತು.

ಶ್ವಾರ್ಟ್ರ್ಝ್ (Schwartz) ಎಂಬ ಪಾದ್ರಿ ಹೈದರನ ಮೈಸೂರು ಬ್ರಿಟೀಷ್ ಆಳ್ವಿಕೆಯ ಮದ್ರಾಸಿನಲ್ಲಿದ್ದ ವ್ಯತ್ಯಾಸಗಳ ಬಗ್ಗೆ ಬರೆಯುತ್ತಾನೆ: “ಪ್ರತಿ ಮಳೆಯ ನಂತರವೂ, ಆ ಭಾಗದ ಅಮಲ್ದಾರ ತನ್ನ ಜನರನ್ನು ಕಳುಹಿಸಿ ಕೊಚ್ಚಿಹೋದ ಮಣ್ಣಿನ ಜಾಗಕ್ಕೆ ಮತ್ತೆ ಮಣ್ಣು ತುಂಬಿಸಬೇಕಿತ್ತು. ಹೈದರನ ಆರ್ಥಿಕ ನೀತಿಯಲ್ಲಿ, ಎಲ್ಲಾ ತರಹದ ಹಾನಿಗಳನ್ನು ಅತಿ ಶೀಘ್ರವಾಗಿ ಸಮಯ ಕಳೆಯದೆ ಸರಿಮಾಡಿಬಿಡಬೇಕಿತ್ತು, ಕಡಿಮೆ ಖರ್ಚಿನಲ್ಲಿ ಉತ್ತಮ ಸ್ಥಿತಿಗೆ ತರಬೇಕಿತ್ತು. ಆದರೆ ಯುರೋಪಿಯನ್ನರು ಕರ್ನಾಟಿಕ್ ನಲ್ಲಿ ಎಲ್ಲವನ್ನೂ ಪಾಳು ಬೀಳಲು ಬಿಟ್ಟುಬಿಟ್ಟರು.” (145)

ಹಳೇ ಮೈಸೂರಿನ ನೀರಾವರಿಯ ಬಗ್ಗೆ ಅಧ್ಯಯನ ನಡೆಸಿದ ಶಾಮ ರಾವ್, ವಿಲ್ಕ್ಸ್ 1804ರಲ್ಲಿದ್ದ ನೀರಾವರಿ ಜಮೀನು 1789ರಲ್ಲಿ ಇದ್ದಿದ್ದಕ್ಕಿಂತ ಕಡಿಮೆ ಎಂಬ ತೀರ್ಮಾನಕ್ಕೆ ಬಂದಿದ್ದರ ಬಗ್ಗೆ ತಿಳಿಸುತ್ತಾರೆ.(146)

ಒಂದೆಡೆ ವಸಾಹತು ಆಳ್ವಿಕೆ ಜಾರಿಗೆ ಬಂದ ಐದು ವರುಷದೊಳಗೆ ನೀರಾವರಿ ಭೂಮಿಯ ವ್ಯಾಪ್ತಿಯಲ್ಲಿ ಅಗಾಧ ಕಡಿತವಾಗಿದ್ದರೆ (ಇದು ಕೈಗೊಂಬೆ ರಾಜರು ಈ ವಿಷಯಕ್ಕೆ ಕೊಟ್ಟ ಆಸಕ್ತಿಯ ಉದಾಹರಣೆಯೂ ಹೌದು); ಮತ್ತೊಂದೆಡೆ ಅರಮನೆಗೆ ಮತ್ತರಮನೆಗೆ ಜೋತು ಬಿದ್ದವರಿಗೆ ಕುಡಿಯುವ ನೀರು ಒದಗಿಸುವ ಸಲುವಾಗಿ ಸಾಗರಕಟ್ಟೆಯಿಂದ ಮೈಸೂರಿಗೆ ಒಂದು ಚಾನೆಲ್ಲು ಕೊರೆಯುವ ಪ್ರಯತ್ನ (ಅದು ವಿಫಲವಾಯಿತು) ಬಿಟ್ಟರೆ ಮತ್ತಿನ್ಯಾವ ನೀರಾವರಿ ಯೋಜನೆಗಳ ರೂಪುಗೊಳ್ಳುವಿಕೆಯೂ ನಡೆಯಲಿಲ್ಲ.

ಕಡೆಗಣನೆ ಸ್ಪಷ್ಟವಾಗಿತ್ತು, ಪೂರ್ಣವಾಗಿತ್ತು. ಕೆಳಗಿನ ಅಂಕಿಅಂಶಗಳು ಹನ್ನೊಂದು ಹನ್ನೆರಡನೇ ಶತಮಾನದಿಂದಲೂ ಸ್ಥಳೀಯವಾಗಿ ಅಭಿವೃದ್ಧಿ ಕಂಡಿದ್ದ ನೀರಾವರಿಯ ವ್ಯವಸ್ಥೆಯೆಡೆಗೆ ತೋರಿದ ನಿರ್ಲಕ್ಷ್ಯದಿಂದ ಹೇಗದು ಪತನ ಕಂಡಿತು ಎಂಬುದನ್ನು ಸೂಚಿಸುತ್ತದೆ. ಆಂತರಿಕ ಆಡಳಿತದ ಬಗ್ಗೆ ವಿಲ್ಕ್ಸ್ ನ ವರದಿಯಲ್ಲಿ ಈ ಕೆಳಗಿನ ಅಂಕಿಅಂಶಗಳು ಲಭಿಸುತ್ತವೆ. 


ನಂತರ ಆತ ವಸಾಹತುಶಾಹಿ ಸಾಮಾನ್ಯವಾಗಿ ಉಪಯೋಗಿಸುವ ಎಲ್ಲಾ ನೆಪಗಳ ಬಗ್ಗೆಯೂ ಹೇಳುತ್ತಾನೆ. “ಮೈಸೂರು ದೇಶ ಉಬ್ಬುತಗ್ಗಿನ ಪ್ರದೇಶವಾಗಿದೆ. ಇದರ ಪರಿಣಾಮವಾಗಿ ಕೆರೆಕಟ್ಟೆಗಳಲ್ಲಿ ನೀರಿನ ಜೊತೆಗೆ ಹೂಳೂ ಸೇರಿಬಿಡುತ್ತದೆ. ಹೂಳನ್ನು ಮತ್ತೆ ಮತ್ತೆ ತೆಗೆಯಬೇಕಾಗಿರುವುದು, ಸಮತಟ್ಟು ಪ್ರದೇಶಗಳಲ್ಲಿನ ಕೆರೆಕಟ್ಟೆಗಳಿಗೆ ಹೋಲಿಸಿದರೆ ಇಲ್ಲಿನವನ್ನು ನಿರ್ವಹಣೆ ಮಾಡುವುದು ಕಷ್ಟವಾಗಿಬಿಡುತ್ತದೆ.

ಅಪರೂಪಕ್ಕೆ ನಡೆಯುವ ದುರ್ಘಟನೆಗಳು ಈ ಖರ್ಚನ್ನು ಹೆಚ್ಚು ಮಾಡುತ್ತದೆ. ಈ ವರ್ಷ (1804) ಅಕ್ಟೋಬರಿನ ಮೊದಲ ಭಾಗದಲ್ಲಿ ಬಂದ ಅನಿರೀಕ್ಷಿತ ಪ್ರಮಾಣದ ಮಳೆಯಿಂದಾಗಿ ಹೆಚ್ಚು ಕಡಿಮೆ ನಾಲ್ಕು ನೂರು ಕೆರೆಗಳ ಕಟ್ಟೆ ಒಡೆದು ಹೋಯಿತು. ಅದರ ರಿಪೇರಿಗೆ ಒಂದು ಲಕ್ಷ ಪಗೋಡಾವಾದರೂ (ಮೂರು ಲಕ್ಷ ರುಪಾಯಿ) ಬೇಕೇ ಬೇಕು. ಮತ್ತಿದು ನಿಗದಿತ ಮೊತ್ತದ ಮೇಲಿನ ಖರ್ಚು.”(148)

ವಾಸ್ತವವೆಂದರೆ ಮೈಸೂರು ದೇಶದ ಉಬ್ಬುತಗ್ಗುಗಳೇ ಕೆರೆಕಟ್ಟೆಗಳನ್ನು ಕಟ್ಟುವುದಕ್ಕೆ ಕಾರಣವಾಗಿದ್ದು!

ವಿಲ್ಕ್ಸ್ ನ ಅಂಕಿಅಂಶಗಳನ್ನು ಮತ್ತಷ್ಟು ವಿಸ್ತರಿಸುವ ಎಂ.ಹೆಚ್.ಗೋಪಾಲ್ 1829ರಷ್ಟರಲ್ಲಿ ಕೆರೆಗಳ ನಿರ್ವಹಣೆಗೆ ಮಾಡುವ ಖರ್ಚು 1,28,115 ರುಪಾಯಿಗಳಿಗೆ ಇಳಿದುಬಿಟ್ಟಿತ್ತು ಎಂದು ತಿಳಿಸುತ್ತಾರೆ. (149) ಸ್ವತಃ ಸಾಕ್ಷೀಕರಿಸುವ ಇಂತಹ ಅಂಶಗಳು ಇರುವಾಗಲೂ, ಸಿದ್ಧಲಿಂಗ ಸ್ವಾಮಿ ಹೇಳುತ್ತಾರೆ: “ಕೆರೆಗಳ ನಿರ್ಮಾಣಕ್ಕೆ ಮತ್ತು ರಿಪೇರಿಗೆ, ಚಾನೆಲ್ಲುಗಳಿಗೆ, ರಸ್ತೆ – ಸೇತುವೆಗಳಿಗೆ ಮತ್ತು ಕೃಷಿಯ ಅಭಿವೃದ್ಧಿ ಮತ್ತು ಉನ್ನತಿಗೆ ಬೇಕಾದ ಇತರೆ ಕೆಲಸಗಳಿಗೆ ದಿವಾನರು ಹಣ ಲಭ್ಯವಾಗುವಂತೆ ಮಾಡುತ್ತಿದ್ದರು.” (150) ಈ ರೀತಿಯ ಪೂರ್ವಾಗ್ರಹ ಪೀಡಿತ ಬರವಣಿಗೆಗಳು ಬ್ರಿಟೀಷ್ ವಸಾಹತುಶಾಹಿ ಮತ್ತವರ ಸ್ಥಳೀಯ ಪ್ರತಿಗಾಮಿಗಳ ಮುಖಕ್ಕಂಟಿದ ಕಳಂಕವನ್ನು ಮರೆಯಾಗಿಸುವ ಪ್ರಯತ್ನವಷ್ಟೇ.

ದೂರದ ಲಂಡನ್ನಿನಲ್ಲಿ, ಈ ಬೆಳವಣಿಗೆಗಳನ್ನು ಗಮನಿಸಿದ ಕಾರ್ಲ್ ಮಾರ್ಕ್ಸ್, 1853ರಲ್ಲಿ ಬರೆದ The British Rule in India ಲೇಖನದಲ್ಲಿ ಏಷ್ಯಾದ ಸರಕಾರಗಳ ಸಾರ್ವಜನಿಕ ಕೆಲಸಗಳು ಹೇಗೆ ಹಳ್ಳ ಹಿಡಿದವು ಎಂದು ಬರೆಯುತ್ತಾನೆ. “ಇಲ್ಲಿನ ವಾತಾವರಣ ಮತ್ತು ಭೌಗೋಳಿಕ ಪರಿಸ್ಥಿತಿ, ಅದರಲ್ಲೂ ಸಹಾರ, ಅರೇಬಿಯಾ, ಪರ್ಷಿಯಾ, ಭಾರತ ಮತ್ತು ಟರ್ತಾರಿಯ ಉದ್ದಕ್ಕೂ ಹರಡಿರುವ ಮರುಭೂಮಿಯಿಂದ ಹಿಡಿದು ಏಷಿಯಾದ ಎತ್ತರೆತ್ತರದ ಪ್ರದೇಶದವರೆಗೂ ನೀರಾವರಿ ಕಾಲುವೆಗಳು ಮತ್ತು ನೀರಿನ ಕೆಲಸಗಳೇ ಪೂರ್ವದ ಕೃಷಿಗೆ ಪೂರಕವಾಗಿದ್ದಂತವು. ಭಾರತ ಮತ್ತು ಇಜಿಪ್ಟಿನಂತೆಯೇ, ಮಿಸೊಪೊಟೋಮಿಯಾ, ಪರ್ಷಿಯಾ ಇತರೆಡೆಗಳಲ್ಲಿ ನೀರು ಹರಿಸಿ ಭೂಮಿಯನ್ನು ಫಲವತ್ತಾಗಿ ಉಳಿಸಿಕೊಳ್ಳಲಾಗುತ್ತಿತ್ತು. ನೀರಾವರಿ ಕಾಲುವೆಗಳಿಗೆ ನೀರು ಹರಿಸಲು ಎತ್ತರದ ಪ್ರದೇಶಗಳಿದ್ದದ್ದು ಅನುಕೂಲಕರವಾಗಿತ್ತು. ಈ ಕೃತಕ ಫಲವತ್ತತೆಯ ಸೃಷ್ಟಿ ಕೇಂದ್ರ ಸರಕಾರದ ಮೇಲೆ ಅವಲಂಬಿತವಾಗಿತ್ತು. ನೀರಾವರಿಯೆಡೆಗಿನ ನಿರ್ಲಕ್ಷ್ಯದಿಂದಾಗಿ ಒಂದು ಕಾಲದಲ್ಲಿ ಫಲವತ್ತತೆಯಿಂದ ತುಂಬಿತುಳುಕುತ್ತಿದ್ದ ಪಾಲ್ಮೈರಾ, ಪೆಟ್ರಾ, ಯೆಮೆನ್ ಮತ್ತು ಇಜಿಪ್ಟ್, ಪರ್ಷಿಯಾ ಹಾಗೂ ಹಿಂದುಸ್ಥಾನದ ಬಹುಭಾಗಗಳು ಇಂದು ಬಂಜರಾಗಿ ಮರುಭೂಮಿಯಾಗಿದೆ. ವಿನಾಶದ ಒಂದು ಯುದ್ಧ ಹೇಗೆ ಒಂದಿಡೀ ದೇಶದ ಜನರು ಶತಮಾನಗಳ ಕಾಲ ತೊರೆದುಬಿಡುವಂತೆ ಮಾಡುತ್ತದೆ ಎನ್ನುವುದನ್ನೂ ಇದು ವಿವರಿಸುತ್ತದೆ; ಆ ದೇಶದ ಎಲ್ಲಾ ನಾಗರೀಕತೆಯನ್ನು ನಾಶ ಪಡಿಸುತ್ತದೆ.

ಈಗ ಭಾರತದಲ್ಲಿರುವ ಬ್ರಿಟೀಷರು ಸಾರ್ವಜನಿಕ ಕೆಲಸಗಳನ್ನು ಸಂಪೂರ್ಣವಾಗಿ ಕಡೆಗಣಿಸಿದ್ದಾರೆ. ಬ್ರಿಟೀಷರ ತಾಟಸ್ಥ್ಯ ಧೋರಣೆಯ ಆಧಾರದಲ್ಲಿ ನಡೆಯಲಾಗದ ಕೃಷಿ ಪತನ ಕಂಡಿತು…..”(151)

ಈ. ಟಕವಿ ಕೊನೆ ಕಂಡಿತು
 
ಹೆಚ್ಚಿನ ಬಡ್ಡಿಗೆ ಸಾಲ ಕೊಡುವುದು ಹೆಚ್ಚುತ್ತಿದ್ದಂತೆ ಟಕವಿ ಅನುಪಯುಕ್ತವಾಯಿತು. 1810ರ ನಂತರ ತುಳು ನಾಡಿನ ಕಡತಗಳಲ್ಲಿ ಸರಕಾರ ನೀಡುವ ಟಕವಿ ಸಾಲದ ಬಗ್ಗೆ ಪ್ರಸ್ತಾಪಗಳೇ ಇಲ್ಲ ಎಂದು ತಿಳಿಸುತ್ತಾರೆ ಶ್ಯಾಮ್ ಭಟ್. (152)

ಆದಾಗ್ಯೂ, ಹಳೆ ಮೈಸೂರಿನಲ್ಲಿ ಈ ಪದ್ಧತಿ ಮತ್ತಷ್ಟು ವರುಷಗಳ ಕಾಲ ಮುಂದುವರಿಯಿತು. ಅಪಾರ ಹಸಿವಿನ ಬಡ್ಡಿದಾರ ‘ಕ್ಷೇಮ ವಿಚಾರಿಸಿದಾಗೆಲ್ಲ’ ಶೋಷಿತ ರೈತ ಕಾರ್ಮಿಕರಿಗೆ ಟಕವಿಯ ಕನಸು ಬೀಳುತ್ತಿತ್ತು!

ಮೇಲಿನ ಪಟ್ಟಿಯಿಂದ ಸ್ಪಷ್ಟವಾಗುವ ಅಂಶವೆಂದರೆ 1836-37 ರಿಂದ 1860-61ರವರೆಗೆ ರೈತರಿಗೆ ಕೊಟ್ಟ ಒಟ್ಟು ಸಾಲದ ಮೊತ್ತ 8,76,100 ರುಪಾಯಿಗಳಾದರೆ ಅದೇ ಸಮಯದಲ್ಲಿ ವಸೂಲಾದ ಮೊತ್ತ 9,49,250. ವಸಾಹತು ಸರಕಾರದ ಕಮಿಷನರ್ರುಗಳು, ರಕ್ತ ಹೀರುವ ಲೇವಾದೇವಿಯವರಂತೆಯೇ ರೈತರಿಂದ ಎಷ್ಟು ಸಾಧ್ಯವೋ ಅಷ್ಟು ಹೆಚ್ಚು ಮೊತ್ತವನ್ನು ವಸೂಲು ಮಾಡಿದರು. ಟಕವಿ ಪದ್ಧತಿಯ ಪತನದ ಪರಿಣಾಮವಾಗಿ ಹಳ್ಳಿಗಳ ಕಡೆ ಕೃಷಿ ಉತ್ಪಾದನೆಯೂ ಕುಂಠಿತಗೊಂಡಿತು.
 
ಉ. ವಾಣಿಜ್ಯ ಕೃಷಿಯ ವಿನಾಶ

ಕೃಷಿಯನ್ನು ಊಳಿಗಮಾನ್ಯತೆಯ ಕೈಗೆ ಕೊಟ್ಟಿದ್ದು ಮತ್ತು ನೀರಾವರಿಯನ್ನು ಹಾಳುಗೆಡವಿದ್ದು ಹಾಗೂ ನಗರದಲ್ಲಿ ಉತ್ಪಾದನೆಯ ಕುಸಿತ ಮತ್ತು ನಗರದ ಜನರು ಹಳ್ಳಿಗಳೆಡೆಗೆ ಗುಳೇ ಹೋದದ್ದು ವಾಣಿಜ್ಯ ಕೃಷಿಯನ್ನು ನಾಶಪಡಿಸಿತು. ಹತ್ತಿ, ಭತ್ತ, ಕಬ್ಬು, ಎಣ್ಣೆ ಬೀಜಗಳು ಮತ್ತು ಅಡಿಕೆಯ ಕೃಷಿಯನ್ನು ಹಾಳುಗೆಡವುವಲ್ಲಿ ಮೇಲಿನ ಎಲ್ಲಾ ಅಂಶಗಳೂ ಕಾರಣ, ಇದರಿಂದುಟಾದ ನಾಶದ ಪರಿಣಾಮ ಎಷ್ಟಿತ್ತಿಂದರೆ ಮತ್ತೆ ಈ ಕೃಷಿ ಚಿಗುರಲು ಕಷ್ಟವಾಗುವಷ್ಟು. ವಾಣಿಜ್ಯ ಬೆಳೆಗಳಿಂದ ಬೇಳೆ ಕಾಳುಗಳನ್ನು ಬೆಳೆಯುವುದರ ಕಡೆಗೆ ಕೃಷಿ ಕ್ಷೇತ್ರ ಹೊರಳಿದ್ದು ಮತ್ತೆ ಹಳ್ಳಿಗಳು ಊಳಿಗಮಾನ್ಯತೆಯ ಕಡೆಗೆ ಸಾಗುವಂತೆ ಮಾಡಿದವು.

ಈ ಕಾರಣಗಳಿಂದಾಗಿ, ಬ್ರಿಟೀಷ್ ಆಕ್ರಮಣ ನಡೆಸಿದ ಕೆಲವೇ ವರುಷಗಳಲ್ಲಿ ಮತ್ತು ಪೀಠದಲ್ಲಿ ಪ್ರತಿಗಾಮಿ ಕೈಗೊಂಬೆ ರಾಜನೊಬ್ಬ ಕೂತ ನಂತರ ಕೃಷಿ ಕ್ಷೇತ್ರಕ್ಕೆ ಪಾರ್ಶ್ವವಾಯು ಹೊಡೆಯಿತು.

ಸುಮಿತ್ ಗುಹಾ, ತಮ್ಮ The Agrarian economy of the Bombay deccan, 1818-1941 ಪುಸ್ತಕದಲ್ಲಿ ಬಾಂಬೆ ಕರ್ನಾಟಕ ಭಾಗದಲ್ಲಿ ಕೃಷಿ ಕೆಲಸಗಳು ಸ್ಥಗಿತವಾಗಿದ್ದರ ಬಗ್ಗೆ ಬರೆಯುತ್ತಾನೆ. “ಸಿಕ್ಕಿರುವ ಮಾಹಿತಿ ಇಡೀ ಕೃಷಿ ವಲಯವೇ 1840ರ ಮುಂಚೆ ಸ್ಥಗಿವಾಗಿದ್ದನ್ನು ತೋರಿಸುತ್ತದೆ. ಈ ಅಂಕಿ ಅಂಶಗಳು ಹೆಚ್ಚು ಕಡಿಮೆ ಇಡೀ ಡೆಕ್ಕನ್ನಿನಿಂದ ತೆಗೆದುಕೊಂಡದ್ದು. ಧಾರವಾಡದ ಫಲವತ್ತ ಮತ್ತು ಸುಭದ್ರ ತಾಲ್ಲೂಕುಗಳ ಅಂಕಿಅಂಶಗಳು ಬರಪೀಡಿತ ಸೊಲ್ಲಾಪುರ ತಾಲ್ಲೂಕಿನ ಅಂಕಿಅಂಶಗಳಿಗಿಂತ ಉತ್ತಮವಾಗೇನಿಲ್ಲ. ಇದು ಕೃಷಿ ಯೋಗ್ಯ ಭೂಮಿಯ ಕೊರತೆಯಿಂದಾದದ್ದಲ್ಲ. ವಿಸ್ತಾರದ ಕೃಷಿ ಭೂಮಿ ಅನುಪಯುಕ್ತವಾಗಿ ಬಿದ್ದಿತ್ತು ಎಂದು ವರದಿಗಳು ತಿಳಿಸುತ್ತದೆ.” (155)

ಮುಂದಿನ ವಾರ
ಕೈಗಾರಿಕೆಯ ಸ್ಥಾನ ಪಲ್ಲಟ