ಏಪ್ರಿ 16, 2016

ಆ ಜ್ಯೂಸಂಗಡಿ ಬಾಗಿಲು ಹಾಕೊಂಡಿದ್ಯಾಕೆ?

untouchability
ಡಾ. ಅಶೋಕ್. ಕೆ. ಆರ್
16/04/2016

ಮೊನ್ನೆ ದಿನ ಅಂಬೇಡ್ಕರ್ ಜಯಂತಿಯಂದು ಮಲ್ಲಿಕಾರ್ಜುನ ಖರ್ಗೆ ಹೇಳಿದೊಂದು ಮಾತು ಇನ್ನೂ ಕಾಡುತ್ತಿದೆ. ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ ‘ನಮ್ಮ ಪ್ರಧಾನಿ ಯಾವಾಗಲೂ ನಾನು ಚಹಾ ಮಾರುತ್ತಿದ್ದೆ ಎನ್ನುತ್ತಿರುತ್ತಾರೆ, ನಾನೊಮ್ಮೆ ಹೇಳಿದೆ – ನಾವು ಚಹಾ ಮಾರಿದರೆ ಅದನ್ನು ಯಾರೂ ತೆಗೆದುಕೊಳ್ಳುತ್ತಲೇ ಇರಲಿಲ್ಲ’ ಎಂದು ಹೇಳಿದ್ದಾರೆ ಖರ್ಗೆ. ಖರ್ಗೆ ಹಾಲಿ ವಿರೋಧ ಪಕ್ಷದ ನಾಯಕ, ಅಂಬೇಡ್ಕರ್ ಜಯಂತಿಯ ಸಂದರ್ಭದಲ್ಲೂ ಮೋದಿಯವರನ್ನು ಗೇಲಿ ಮಾಡುತ್ತ ರಾಜಕೀಯ ಮಾಡುತ್ತಿದ್ದಾರೆ ಎಂದು ಮೇಲ್ನೋಟಕ್ಕೆ ಅನ್ನಿಸಬಹುದು, ಅದು ಭಾಗಶಃ ಸತ್ಯವೂ ಇರಬಹುದು. ಆದರೆ ‘ನಾವು ಚಹಾ ಮಾರಿದರೆ ಅದನ್ನು ಯಾರೂ ತೆಗೆದುಕೊಳ್ಳುತ್ತಲೇ ಇರಲಿಲ್ಲ’ ಎಂಬ ಮಾತಿದೆಯಲ್ಲ ಅದು ಕೇವಲ ರಾಜಕೀಯದ ಮಾತಲ್ಲ. ದಲಿತನೊಬ್ಬನ ನೋವಿನ, ಅಸಹಾಯಕತೆಯ ಮಾತದು. ಎಷ್ಟೇ ವರ್ಷದ ರಾಜಕೀಯ ಅನುಭವ, ಶ್ರೀಮಂತಿಕೆ ಇದ್ದರೂ ಮಲ್ಲಿಕಾರ್ಜುನ ಖರ್ಗೆ ಕೂಡ ದಲಿತರೇ ಅಲ್ಲವೇ? ಯಾಕೋ ಮಲ್ಲಿಕಾರ್ಜುನ ಖರ್ಗೆಯವರ ಮಾತನ್ನು ರಾಜಕೀಯ ಹೇಳಿಕೆ ಎಂದು ಕಡೆಗಣಿಸಿಬಿಡಲಾಗಿದೆಯೇ ಹೊರತು ತುಂಬ ಹೆಚ್ಚು ಚರ್ಚೆಗೊಳಪಡಲಿಲ್ಲ. ಸಮಾಜದ ಮನಸ್ಥಿತಿಯ ವಿಶ್ಲೇಷಣೆ ನಡೆಯಲಿಲ್ಲ. ಖರ್ಗೆಯವರ ಹೇಳಿಕೆ ಮಂಡ್ಯದ ಘಟನೆಯೊಂದರ ಬಗ್ಗೆ ಗೆಳೆಯ ಎಸ್.ಅಭಿ ಗೌಡ ಹನಕೆರೆ ನೀಡಿದ ಮಾಹಿತಿಯೊಂದನ್ನು ಮತ್ತೆ ನೆನಪಿಸಿತು.

ಆ ಹುಡುಗರು ಅಲ್ಲಿ ಇಲ್ಲಿ ದುಡ್ಡು ಕೂಡಿಸಿ, ಚೂರು ಪಾರು ಸಾಲ ಮಾಡಿಕೊಂಡು ಒಂದು ವ್ಯಾಪಾರ ಪ್ರಾರಂಭಿಸಿಯೇಬಿಡಬೇಕೆಂದು ನಿರ್ಧಾರ ಮಾಡಿದರು. ನಿರ್ಧಾರವನ್ನು ಕಾಯಿಸದೆ ಅತಿ ಶೀಘ್ರವಾಗೇ ಜನನಿಬಿಡ ಸ್ಥಳದಲ್ಲಿ ಒಂದು ಅಂಗಡಿ ಬಾಡಿಗೆಗೆ ಹಿಡಿದು ತಾಜಾ ಹಣ್ಣಿನ ಜ್ಯೂಸ್ ಅಂಗಡಿಯನ್ನು ತೆರೆದರು. ಮಂಡ್ಯದಲ್ಲೇನು ಬಿಸಿಲ ಝಳಕ್ಕೆ ಕೊರತೆಯಿಲ್ಲವಲ್ಲ. ತಾಜಾ ಹಣ್ಣಿನ ಜ್ಯೂಸ್ ಅಂಗಡಿಯಲ್ಲಿ ವ್ಯಾಪಾರ ಕಚ್ಚಿಕೊಳ್ಳಲು ಹೆಚ್ಚು ಸಮಯವೇನು ಬೇಕಾಗಲಿಲ್ಲ. ಜ್ಯೂಸ್ ಅಂಗಡಿಯನ್ನು ಸ್ವಚ್ಛವಾಗಿಡದಿದ್ದರೆ ನೊಣ, ಜೇನ್ನೊಣಗಳೆಲ್ಲ ಮುತ್ತಿಬಿಡುತ್ತವೆಂದು ಗೊತ್ತಿತ್ತಲ್ಲ, ಈ ಉತ್ಸಾಹಿ ಹುಡುಗರು ಸ್ವಚ್ಛತೆಯನ್ನು ಮುತುವರ್ಜಿ ವಹಿಸಿ ಕಾಪಾಡಿದರು. ವ್ಯಾಪಾರ ಜೋರಿತ್ತು. ಜೋರಿದ್ದ ವ್ಯಾಪಾರ ಕೆಲವು ದಿನಗಳ ನಂತರ ಇದ್ದಕ್ಕಿದ್ದಂತೆ ಕುಸಿಯಲಾರಂಭಿಸಿತು. ಜ್ಯೂಸ್ ಅಂಗಡಿ ಸ್ವಚ್ಛವಾಗಿಲ್ಲವಾ? ಸ್ವಚ್ಛವಾಗೇ ಇದೆ. ತಾಜಾ ಜ್ಯೂಸ್ ಕೊಡ್ತಿಲ್ಲವಾ? ತಾಜಾ ಜ್ಯೂಸೇ ಸಿಗ್ತಿದೆ. ದುಡ್ಡು ಜಾಸ್ತಿ ಮಾಡಿಬಿಟ್ಟರಾ? ಇಲ್ಲ, ದುಡ್ಡು ಮೊದಲಿನಷ್ಟೇ ಇದೆ. ಹತ್ತಿರದಲ್ಲಿ ಮತ್ಯಾವುದಾದರೂ ಜ್ಯೂಸ್ ಅಂಗಡಿ ಶುರುವಾಗಿ ಹೋಯಿತಾ? ಯಾವುದೂ ಇಲ್ಲ. ಹಾಗಿದ್ದರೆ ಜೋರಿದ್ದ ವ್ಯಾಪಾರ ಕೆಲವೇ ದಿನಗಳ ನಂತರ ಕುಸಿತ ಕಂಡಿದ್ದಾದರೂ ಯಾಕೆ?

ಆ ಹುಡುಗರ ಜಾತಿ ಬಗ್ಗೆ ಮೊದಲಿಗೆ ಯಾರಿಗೂ ಗೊತ್ತಿರಲಿಲ್ಲ. ಮಂಡ್ಯದಂತಹ ಚಿಕ್ಕ ನಗರದಲ್ಲಿ ಅಂಗಡಿ ನಡೆಸುವವರ ಜಾತಿ ಗೊತ್ತಾಗುವುದಕ್ಕೆ ಹೆಚ್ಚಿನ ಸಮಯವೇನು ಬೇಕಿಲ್ಲವಲ್ಲ. ಅಂಗಡಿಗೆ ಬಂದು ಜ್ಯೂಸು ಕುಡಿದವನೊಬ್ಬ ತನ್ನ ಗೆಳೆಯನಿಗೆ ‘ಇದು ದಲಿತ್ರು ಅಂಗ್ಡಿ’ ಅಂದಿದ್ದಾನೆ. ದಲಿತ್ರು ಅಂಗ್ಡಿ ಅನ್ನೋ ಮಾತು ಹಣ್ಣಿನ ಪರಿಮಳಕ್ಕಿಂತ ವೇಗವಾಗಿ ಹಬ್ಬಿಬಿಟ್ಟಿದೆ. ಊಳಿಗಮಾನ್ಯತೆಯನ್ನು ಹೊದ್ದು ಮಲಗಿರುವ ಒಕ್ಕಲಿಗರ ಸಂಖೈ ಅಧಿಕವಾಗಿರುವ ಮಂಡ್ಯದ ಜಾತಿ ವ್ಯವಸ್ಥೆಯಲ್ಲಿ ಜ್ಯೂಸ್ ಕುಡಿಯಲು ಬರುತ್ತಿದ್ದವರು ‘ದಲಿತ್ರು ಅಂಗ್ಡಿ’ ಅಂತ ಗೊತ್ತಾಗುತ್ತಿದ್ದಂತೆ ಬಿಸಿಲ ಝಳಕ್ಕೆ ಸತ್ತರೂ ಸರಿ ದಲಿತ್ರು ಅಂಗ್ಡಿಗೆ ಕಾಲಿಡಬಾರದು ಎಂದು ನಿರ್ಧರಿಸಿಬಿಟ್ಟಿದ್ದಾರೆ! ಪರಿಣಾಮ, ಉತ್ಸಾಹಿ ಹುಡುಗರ ಜ್ಯೂಸಂಗಡಿ ಬಾಗಿಲು ಹಾಕೊಂಡಿದೆ. ಅಸ್ಪೃಶ್ಯತೆ ಈಗಿಲ್ಲ ಎಂದರೆ ಅದು ಆ ಜ್ಯೂಸಂಗಡಿಯ ದಲಿತ ಹುಡುಗರಲ್ಲಿ ಯಾವ ಭಾವನೆ ಮೂಡಿಸಬಹುದು?

ತುಂಬಾ ನಿರಾಶೆಯೂ ಬೇಕಿಲ್ಲ ಅನ್ನಿಸುತ್ತೆ. ಮೊದಮೊದಲು ಬ್ರಾಹ್ಮಣ್ ಕೆಫೆ, ಹಾಸನ ಅಯ್ಯಂಗಾರರ ಬೇಕರಿಗಳ ಹೆಸರುಗಳಷ್ಟೇ ಇತ್ತು, ಜೊತೆಗೆ ಸಾಬರ ಹೆಸರಿನ ಬಿರಿಯಾನಿ ಹೋಟೆಲ್ಲುಗಳಿದ್ದವು; ಉತ್ತರ ಕರ್ನಾಟಕದಲ್ಲಿ ಹೆಚ್ಚಾಗಿ ಕಾಣುತ್ತಿದ್ದ ಲಿಂಗಾಯತ ಖಾನಾವಳಿಗಳು ಈಗೀಗ ಬೆಂಗಳೂರಿನಲ್ಲೂ ಕಾಣಿಸುತ್ತಿವೆ. ಕಳೆದೊಂದೈದು ವರುಷಗಳಿಂದ ಗೌಡ್ರು ಮುದ್ದೆ ಮನೆ, ಗೌಡ್ರು ಮಿಲಿಟ್ರಿ ಹೋಟೆಲ್ಲು ಕಾಣಿಸಿಕೊಳ್ಳಲಾರಂಭಿಸಿವೆ. ಇದೇ ಲೆಕ್ಕದಲ್ಲಿ ನೋಡಿದರೆ ಇನ್ನೊಂದೈದತ್ತು ವರುಷಕ್ಕೆ ಕುರುಬರ ಕೋಳಿ ಕಾರ್ನರ್ ಶುರುವಾಗಬಹುದು. ಮಾದಿಗರ ಮಾಂಸದ ಹೋಟೆಲ್, ಮಾದಿಗರ ಮುದ್ದೆ ಮನೆ ಕೂಡ ಮುಂದೊಂದು ದಿನ ಬರಬಹುದೆಂದು ನಿರೀಕ್ಷಿಸಬಹುದು. ಈ ಜಾತಿ ವ್ಯವಸ್ಥೆಯಲ್ಲಿ ಅದು ಹತ್ತಿರದಲ್ಲಿ ನಡೆಯುವ ಸಾಧ್ಯತೆಗಳು ಇಲ್ಲವೆನ್ನಿಸುತ್ತಾದರೂ ನಿರೀಕ್ಷೆ ಮಾಡುವುದರಲ್ಲಿ ತಪ್ಪೇನಿದೆ ಅಲ್ಲವೇ…..ನಲವತ್ತು ವರುಷದಿಂದ ಒಂದಿಲ್ಲೊಂದು ಅಧಿಕಾರದಲ್ಲಿದ್ದ, ಕಡೇ ಪಕ್ಷ ವಿರೋಧ ಪಕ್ಷದಲ್ಲಿದ್ದ ಮಲ್ಲಿಕಾರ್ಜುನ ಖರ್ಗೆ ಅಂತಹ ದಲಿತರೇ ‘ನಾವು ಚಹಾ ಮಾರಿದರೆ ಯಾರು ತೆಗೆದುಕೊಳ್ಳುವುದಿಲ್ಲ’ ಎಂದು ಹೇಳುತ್ತಾರೆಂದರೆ ಆ ನಿರೀಕ್ಷೆ ಸತ್ಯವಾಗುವುದೇ ಸುಳ್ಳು ಎಂಬನುಮಾನವೂ ಬಂದುಬಿಡುತ್ತದೆ. ಜಾತಿ ಹೆಸರಿನ ಹೋಟೆಲ್ಲುಗಳು ಮತ್ತಷ್ಟು ಜಾತೀಯತೆಯನ್ನು ತುಂಬಿಬಿಡುತ್ತದೆ ಎಂಬ ಪ್ರಶ್ನೆಯೂ ಮೂಡಬಹುದು. ಭಾರತದ ಸಮಾಜದಲ್ಲಿನ ಮನಸ್ಥಿತಿಯಲ್ಲಿ ಜಾತಿ ನಾಶವೆಂಬುದು ಹಗಲುಗನಸಷ್ಟೇ, ಭೂಮಿ ನಾಶವಾಗುವವರೆಗೂ ಇಲ್ಲಿ ಜಾತಿ ನಾಶವಾಗುವುದು ಅನುಮಾನ. ಜಾತಿಯ ಅಸ್ತಿತ್ವವನ್ನು ಒಪ್ಪಿಕೊಳ್ಳುತ್ತಲೇ ಜಾತಿ ಸಮಾನತೆಗಾಗಿ ನಾವು ಹೋರಾಡಬೇಕು.

ಏಪ್ರಿ 15, 2016

ನೀ ಸಿಗದ ಬಾಳೊಂದು ಬಾಳೆ

Praveen Goni

ದಿವಿನಾಗಿ ನಿನ್ನ ಕಂಗಳಲಿ
ತುಂಬಿಕೊಳಬೇಕು ಆ ಹೊಳಪಲ್ಲೇ
ಹೊಸ ಹುರುಪ ನನ್ನೆದೆಯ
ಗೂಡಲ್ಲಿ ಮೊಳೆಯಿಸಿ ಕೊಳಬೇಕು .

ನಿನ್ನ ಅನುಪಸ್ತಿತಿಯಲಿ
ಸೊಗಸಿಗೆಲ್ಲಿಯ ಹಾದಿ
ನೆನಪ ಮಜ್ಜನದಲೇ
ಮನದ ಮಬ್ಬ ನೀಗಿಸಿಕೊಳಬೇಕು .

ನಿನ್ನ ಬರುವೆಗೆ ಹೃದಯ
ಕಾತರಿಸಿ ಕೂತಿಹುದು
ಕೂಗಲದು ಕೋಗಿಲೆಯು
ವಸಂತದ ಹಾದಿಯ ಕಾಯ್ವಂತೆ .

ಎದೆಯ ಅಂಗಳದಿ ನಿನ್ನ
ಸವಿ ನೆನಪ ರಂಗೋಲಿ
ನೀ ಇರಲು ಬದುಕು ಅರಳಿ
ತಾ ನಿಲ್ಲುವುದು ಬಾಡದ ಸುಮವಾಗಿ .

ಮೇಕಿಂಗ್ ಹಿಸ್ಟರಿ: ಕೃಷಿಗೆ ಲಕ್ವ ಹೊಡೆದದ್ದು ಭಾಗ 1

making history
ಸಾಕೇತ್ ರಾಜನ್
ಕನ್ನಡಕ್ಕೆ: ಡಾ. ಅಶೋಕ್. ಕೆ. ಆರ್
15/04/2016


ಹೊಸ ಮೈತ್ರಿ ಅಧಿಕಾರಕ್ಕೆ ಬಂದ ನಂತರ ಕೃಷಿ ವಿಭಾಗ ಅನೇಕ ಏಳುಬೀಳುಗಳನ್ನು ಕಂಡಿತು, ತಿರುಚಿದ ಸ್ಥಿತಿಗೆ ತಲುಪಿತು. ಇದರ ಒಟ್ಟು ಪರಿಣಾಮವೆಂದರೆ ಬಿಕ್ಕಟ್ಟಿನ ಸ್ಥಿತಿ ಉಂಟಾಗಿ ರೈತ – ಕಾರ್ಮಿಕರನ್ನು ವಿಚಲಗೊಳಿಸಿದ್ದು.

ಅ. ಬೆಳೆ ತೆರಿಗೆಯನ್ನು ಭೂತೆರಿಗೆಯನ್ನಾಗಿಸಿದ್ದು (Taxing land in place of yield)

ಬ್ರಿಟೀಷ್ ರಾಜ್ ನ ಮೊದಲ ಪರಿಣಾಮ ಕೃಷಿ ತೆರಿಗೆಯ ರೀತಿಯಲ್ಲಾದ ಬದಲಾವಣೆ. ಹೊಸ ಆಡಳಿತಶಾಹಿ ರೈತರೊಡನೆ ನಡೆಸಿದ ಎಲ್ಲಾ ಮಾತುಕತೆಗಳು, ಒಪ್ಪಂದಗಳನ್ನೂ ಪ್ರೇರೇಪಿಸಿದ್ದು ಬೆಲೆಕಟ್ಟುವಿಕೆಯ ವಿಧಾನವನ್ನು ಬದಲಿಸಬೇಕೆಂಬ ಹಂಬಲ.

ಈ ಹೊಸ ವಿಧಾನದಲ್ಲಿ “ರಾಜ್ಯದೆಲ್ಲೆಡೆ ಇದ್ದ ಒಣ ಭೂಮಿಯವರು ಸರಕಾರಕ್ಕೆ ಒಂದು ನಿರ್ದಿಷ್ಟ ಮೊತ್ತವನ್ನು ಪಾವತಿಸಬೇಕಿತ್ತು. ಈ ಮೊತ್ತ ಬೆಳೆಯ ಮೌಲ್ಯದ ಮೂರನೇ ಒಂದಂಶದಷ್ಟಿತ್ತು” ಎಂದು ಶಾಮ ರಾವ್ ತಿಳಿಸುತ್ತಾರೆ. (116)

ಬ್ರಿಟಿಷರ ಪರಾವಲಂಬಿ ಮನಸ್ಥಿತಿ ಖಾಯಂ ಗುತ್ತ (ಗುತ್ತಿಗೆ) ಎಂಬ ಹೊಸ ಗೇಣಿ ಪದ್ಧತಿಯನ್ನು ಹುಟ್ಟು ಹಾಕಿತು. ಖಾಯಂ ಗುತ್ತಿಗೆಯಲ್ಲಿ ನಿಗದಿಪಡಿಸಿದ ಮೊತ್ತದಲ್ಲಿ ಏರುಪೇರುಗಳಿಗೆ ಅವಕಾಶವಿರಲಿಲ್ಲ. (117)

ಬೆಲೆಕಟ್ಟುವಿಕೆಯ ಈ ಹೊಸ ವಿಧಾನ ಹಿಂದಿನಂತಿರಲಿಲ್ಲ. ಮುಂಚೆ ತೆರಿಗೆಯನ್ನಂದಾಜಿಸಲು ಬಿತ್ತಿದ ಬೀಜಗಳೆಷ್ಟು ಎಂಬುದನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತಿತ್ತು; ಆದರೂ ಕಟಾವಾದ ನಂತರ ಬಂದ ಬೆಳೆಯ ಪ್ರಮಾಣವನ್ನು ನೋಡಿಕೊಂಡು ತೆರಿಗೆಯನ್ನು ಅಂತಿಮಗೊಳಿಸಲಾಗುತ್ತಿತ್ತು. ಈ ರೀತಿಯ ಕೃಷಿ ತೆರಿಗೆ ಪದ್ಧತಿ ಕರ್ನಾಟಕದಲ್ಲಷ್ಟೇ ಅಲ್ಲ, ವಸಾಹತುಪೂರ್ವ ಭಾರತದಾದ್ಯಂತ ಕಾಣಬಹುದಾಗಿತ್ತು. ಪ್ರದೇಶದಿಂದ ಪ್ರದೇಶಕ್ಕೆ ಎಷ್ಟು ಪ್ರತಿಶತಃ ತೆರಿಗೆ ಎಂಬುದರಲ್ಲಿ ವ್ಯತ್ಯಾಸವಿರುತ್ತಿತ್ತು. ವಸಾಹತು ಪೂರ್ವ ಕರ್ನಾಟಕದಲ್ಲಿ ಸಾಮಾನ್ಯವಾಗಿ ಆರನೇ ಒಂದಂಶದಷ್ಟನ್ನು ಸರಕಾರಕ್ಕೆ ಕೊಡಬೇಕಿತ್ತು. ಆರರಲ್ಲಿ ಎರಡು ಅಥವಾ ಮೂರಂಶದಷ್ಟನ್ನು ವಿವಿಧ ಊಳಿಗಮಾನ್ಯ ದೊರೆಗಳಿಗೆ ನೀಡಿದರೆ ಉಳಿದಿದ್ದು ಕೃಷಿ ಮಾಡಿದ ರೈತನಿಗೆ.

ಹೊಸ ವಿಧಾನ ಬೆಳೆಯ ಪ್ರಮಾಣವನ್ನು ಲೆಕ್ಕಕ್ಕೆ ಇಟ್ಟುಕೊಳ್ಳಲಿಲ್ಲ. ಕಾರಣ? ಕೃಷಿಯಿಂದ ಏರುಮುಖದ ವಾರ್ಷಿಕ ಆದಾಯದ ಹುಡುಕಾಟದಲ್ಲಿದ್ದದ್ದು.

ಹಳೆಯ ವಿಧಾನ ಲೂಟಿ ಮಾಡುವಂತೆ, ಪೀಡಿಸುವಂತೆ ಇದ್ದರೂ ಕೆಟ್ಟ ವರ್ಷಗಳಲ್ಲಿ ರೈತರಿಗೊಂದಷ್ಟು ಉಸಿರಾಡಲು ಅವಕಾಶ ಮಾಡಿಕೊಡುತ್ತಿತ್ತು. ಬೆಳೆಯ ಪ್ರಮಾಣವನ್ನು ಲೆಕ್ಕಕ್ಕೆ ತೆಗೆದುಕೊಳ್ಳದ ಹೊಸ ವಿಧಾನ ಇರುವ ಎಕರೆಗಳ ಆಧಾರದಲ್ಲಿ ತೆರಿಗೆಯನ್ನು ವಿಧಿಸಿತು. ಜೊತೆಗೆ ಸರಕಾರಕ್ಕೆ ಸಿಗಬೇಕಾದ ಮೊತ್ತದ ಶೇಕಡಾವನ್ನು ಹೆಚ್ಚಿಸಿತು. ಹಾಗಾಗಿ ಬೆಳೆ ಕೈಹತ್ತದ ವರ್ಷಗಳಲ್ಲೂ ತನ್ನ ಪಾಲಿನ ತೆರಿಗೆ ಹಣವನ್ನು ಕಟ್ಟಲೇಬೇಕಾದ ಒತ್ತಡಕ್ಕೆ ರೈತ ಸಿಲುಕಿದ್ದ. ತೆರಿಗೆ ಭಾಗ್ಯದಲ್ಲಿ ಕಡಿಮೆಯಾಗಬಹುದೆಂದು ಕಾಯುತ್ತಿದ್ದ ಅಥವಾ ಸಶಕ್ತ ವಸಾಹತುಶಾಹಿಯ ಪೆಟ್ಟು ಅನುಭವಿಸುತ್ತಿದ್ದ.

ಆ. ರೈತವಾರಿ ಪದ್ಧತಿ, ಇಲ್ಲಿ ಕರುಣೆಗೆ ಅವಕಾಶವಿಲ್ಲ (Ryotwari: nothing benign)

ಬ್ರಿಟೀಷರು ಪರಿಚಯಿಸಿದ ರೈತವಾರಿ ತೆರಿಗೆ ಸಂಗ್ರಹ ವ್ಯವಸ್ಥೆಯ ಬಗ್ಗೆ ಸ್ವಲ್ಪ ಗೊಂದಲಗಳಿವೆ ಮತ್ತು ಅನೇಕ ತಪ್ಪು ಅಭಿಪ್ರಾಯಗಳಿವೆ. ‘ಮಾಂಸಾಹಾರಿ’ ಜಮೀನ್ದಾರಿ ತೆರಿಗೆ ಪದ್ಧತಿಗೆ ಹೋಲಿಸಿದರೆ ‘ಸಸ್ಯಾಹಾರಿ’ ರೈತವಾರಿ ಪದ್ಧತಿ ರೈತರ ‘ಹಕ್ಕುಗಳನ್ನು ಗುರುತಿಸಿದ’ ‘ಪ್ರಗತಿಪರ’ ‘ನ್ಯಾಯಸಮ್ಮತ’ ವ್ಯವಸ್ಥೆ ಎಂಬಭಿಪ್ರಾಯವನ್ನು ಅನೇಕರು ವ್ಯಕ್ತಪಡಿಸಿದ್ದಾರೆ. ಕರ್ನಾಟಕದ ಎಲ್ಲಾ ಇತಿಹಾಸಕಾರರು ಕೆ.ಎನ್.ವೆಂಕಟಸುಬ್ಬ ಶಾಸ್ತ್ರಿಯವರ ಸ್ವಾಮಿಭಕ್ತಿ ಮತ್ತು ಲಿಖಿತ ಸಮರ್ಥನೆಯನ್ನು ಸರಿಗಟ್ಟಲಾರರು. ನಮ್ಮ ಭೂಮಿಯ ಮೇಲಿನ ಬ್ರಿಟೀಷ್ ಆಳ್ವಿಕೆಯನ್ನು ಮಧ್ಯವರ್ತಿ ದೃಷ್ಟಿಕೋನದಿಂದ ಸಮರ್ಥಿಸಿಕೊಂಡ ಇತಿಹಾಸದ ಪುಸ್ತಕಗಳಲ್ಲಿ ಅವರ ಪುಸ್ತಕಗಳು ಅತಿ ಉತ್ತಮ ಉದಾಹರಣೆ.

ರೈತವಾರಿ ತೆರಿಗೆ ಪದ್ಧತಿಯನ್ನು ಪ್ರಾರಂಭಿಸಿದ್ದು ಕೊಲೋನಲ್ ರೀಡ್. ರೀಡ್ 1792ರಲ್ಲಿ ಬರ್ಮಹಲ್ ಜಿಲ್ಲೆಯ ಪ್ರಥಮ ಬ್ರಿಟೀಷ್ ಕಲೆಕ್ಟರ್ ಆಗಿದ್ದ. ತಮಿಳು ದೇಶದ ಬರ್ಮಹಲ್ ಅನ್ನು ಬ್ರಿಟೀಷರು ಮೂರನೇ ಮೈಸೂರು ಯುದ್ಧದಲ್ಲಿ ಟಿಪ್ಪು ಸುಲ್ತಾನನನ್ನು ಸೋಲಿಸಿದ ನಂತರ ವಶಪಡಿಸಿಕೊಂಡಿದ್ದರು. ಮನ್ರೋ, ರೀಡ್ ನ ಕೈಕೆಳಗೆ ಕೆಲಸ ಮಾಡಿದ್ದ. ರೈತವಾರಿ ಪದ್ಧತಿಯ ಬಗ್ಗೆ ಮನ್ರೋ ರೀಡ್ ನ ಕಿವಿಯೂದಿದನೋ ಅಥವಾ ರೀಡ್ ಮನ್ರೋನ ಕಿವಿಕಚ್ಚಿದನೋ ನಮಗೆ ಅಷ್ಟೊಂದು ಮುಖ್ಯವಲ್ಲ. ಇಲ್ಲಿ ಟಿಪ್ಪಣಿ ಮಾಡಿಕೊಳ್ಳಬೇಕಾದ ಅಂಶವೆಂದರೆ ಮೈಸೂರು ಸಾಮ್ರಾಜ್ಯದ ಭಾಗವೊಂದನ್ನು ಆಕ್ರಮಿಸಿದ ಕ್ಷಣವೇ ಬ್ರಿಟೀಷರಿಗೆ ಜಮೀನ್ದಾರಿ ತೆರಿಗೆ ಪದ್ಧತಿಯನ್ನು ಮುಂದುವರಿಸುವುದು ಸಾಧ್ಯವಿಲ್ಲ ಎನ್ನುವುದರ ಅರಿವಾಗಿತ್ತು. ಕಾರಣ ಸ್ಪಷ್ಟವಿತ್ತು. ಮೈಸೂರಿನಲ್ಲಾಗಲೇ ಹಳೆಯ ಜಮೀನ್ದಾರರು ನಿರ್ನಾಮವಾಗಿದ್ದರು. ಅವರ ನಿರ್ನಾಮದ ನಂತರ ತೆರಿಗೆ ಸಂಗ್ರಹಿಸುತ್ತಿದ್ದುದು ಮೈಸೂರು ಕಂದಾಯ ಇಲಾಖೆಯೇ ಹೊರತು ಪಾಳೇಗಾರರಲ್ಲ. ರೈತವಾರಿ ಪದ್ಧತಿಯ ರೀತಿಯಲ್ಲಿಯೇ – ಸರಕಾರ ಕೃಷಿಕರಿಂದ ನೇರವಾಗಿ ತೆರಿಗೆ ಕಟ್ಟಿಸಿಕೊಳ್ಳುವುದು, ಊರ ಪಟೇಲರ ಮತ್ತು ಶಾನುಭೋಗರ ಸಹಾಯದಿಂದ – ಒಂದು ಪದ್ಧತಿ ಅದಾಗಲೇ ರೂಢಿಯಲ್ಲಿತ್ತು. ವಾಸ್ತವದಲ್ಲಿ ಬ್ರಿಟೀಷರು ಕೊಯಮತ್ತೂರು ಜಿಲ್ಲೆಯಲ್ಲಿ ಜಮೀನ್ದಾರಿ ಪದ್ಧತಿಯನ್ನು ಜಾರಿಗೆ ತರಲು ಪ್ರಯತ್ನಿಸಿದರು. ಅದಕ್ಕೆ ತಕ್ಷಣವೇ ಪ್ರತಿರೋಧ ಎದುರಾಯಿತು. ಜಿಲ್ಲೆಯ ಗೆಜೆಟೀಯರ್ ಹೇಳುತ್ತಾರೆ – ಹಳ್ಳಿಗಳ ಭೂಮಾಲೀಕರು ಮತ್ತು ಕೃಷಿ ಕಾರ್ಮಿಕರು ಈ ಪದ್ಧತಿಯನ್ನು ವಿರೋಧಿಸಿದ್ದಕ್ಕೆ ಕಾರಣ ಭೂಮಿಯ ಮೇಲಿನ ಅವರ ಹಕ್ಕುಗಳಿಗೆ ಚ್ಯುತಿ ಬರುತ್ತದೆ ಎಂಬುದು. ಈ ಹಳೆಯ ತೆರಿಗೆ ಪದ್ಧತಿಯನ್ನೇ ಮುಂದುವರಿಸಿದ ಥಾಮಸ್ ಮನ್ರೋ ಕೆಲವು ನವೀನ ಅಂಶಗಳನ್ನು ಸೇರಿಸಿ ಬ್ರಿಟೀಷ್ ಗುರುತು ಅಚ್ಚಾಗುವಂತೆ ಮಾಡುವಲ್ಲಿ ಸಫಲನಾದ. ಉದಾಹರಣೆಗೆ ಹಿಂದಿನ ಭಾಗದಲ್ಲಿ ನೋಡಿದಂತೆ ಕೃಷಿ ತೆರಿಗೆ ಪದ್ಧತಿ ಭೂಮಿಯ ಮೇಲೆ ನಿರ್ಧರಿಸಲಾಯಿತೇ ಹೊರತು ಬೆಳೆಯ ಮೇಲಲ್ಲ. ರೈತವಾರಿ ಪದ್ಧತಿಯಲ್ಲಿ ಭೂತೆರಿಗೆಯನ್ನು ನಿರ್ಧರಿಸುವಲ್ಲಿ ಬ್ರಿಟೀಷರ ನಿರಂಕುಶ ವ್ಯಕ್ತಿತ್ವ ಎದ್ದು ಕಾಣಿಸಿತು.

ಕುರುಪ್ ಮತ್ತು ಶ್ಯಾಮ್ ಭಟ್ ಹೇಳುವಂತೆ ರೈತವಾರಿ ಪದ್ಧತಿ ಉಳುವವನೊಡನೆ ಸರಕಾರ ಮಾಡಿಕೊಂಡ ಒಪ್ಪಂದವಾಗಿರಲಿಲ್ಲ. ರೈತವಾರಿ ಪದ್ಧತಿ ಭೂಮಾಲೀಕನೊಡನೆ ಒಪ್ಪಂದ ಮಾಡಿಕೊಂಡಿತು. ಹತ್ತೊಂಬತ್ತನೇ ಶತಮಾನದ ಮೊದಲ ಭಾಗದಲ್ಲಿ ಭೂಮಿಯ ಒಡೆತನ ಪ್ರಮುಖವಾಗಿದ್ದದ್ದು ಭೂಮಾಲೀಕರ ಬಳಿ; ಸ್ವಲ್ಪ ಭಾಗ ಮಾತ್ರ ನೇರವಾಗಿ ರೈತರ ಒಡೆತನದಲ್ಲಿತ್ತು. ತುಳುನಾಡಿನ ಕೃಷಿ ಸಂಬಂಧಗಳ ಬಗ್ಗೆ ಅಧ್ಯಯನ ನಡೆಸಿದ ಚಂದ್ರಶೇಖರ ಬಿ ದಾಮ್ಲೆ ಹೇಳುತ್ತಾರೆ: “…. ಅಸ್ತಿತ್ವದಲ್ಲಿದ್ದ ಭೋಗ್ಯವನ್ನು ನಿಯಮದಡಿ ತರುವ ಮೂಲಕ ಪಟ್ಟೇದಾರರು ಮತ್ತು ಭೂಮಾಲೀಕರ ಅಂತಸ್ತನ್ನು ಮರುಸ್ಥಾಪಿಸಲಾಯಿತು. ಗುತ್ತಿಗೆದಾರ/ ಬಾಡಿಗೆದಾರರ ವಿಚಾರವನ್ನು ಇತ್ಯರ್ಥಗೊಳಿಸಲಿಲ್ಲ.” (119A) ಹಾಗಾಗಿ ರೈತವಾರಿ ಪದ್ಧತಿಯಲ್ಲಿ “ಪ್ರಗತಿಪರ” “ನ್ಯಾಯಪರ” “ರಾಜನೀತಿ”ಗಳ್ಯಾವುದೂ ಇರಲಿಲ್ಲ. ಜಮೀನ್ದಾರಿ ಪದ್ಧತಿ ಮಾಡಿದಂತೆಯೇ ಈ ರೈತವಾರಿ ಪದ್ಧತಿಯೂ ಅಸ್ತಿತ್ವದಲ್ಲಿದ್ದ ಭೂಮಾಲೀಕರ ಕಡೆಗೆ ಸ್ನೇಹಹಸ್ತ ಚಾಚಿತು; ಭಾರತದ ಇತರೆ ಭಾಗಗಳಲ್ಲಿ ಮಹಲ್ ವಾರಿ ಮತ್ತು ಮಿರಸ್ ದಾರಿ ಪದ್ಧತಿಗಳು ಮಾಡಿದಂತೆ. ತೆರಿಗೆಯಲ್ಲಿನ ಅಪಾರ ಏರಿಕೆ ರೈತರನ್ನು ಸಾಲಗಾರರನ್ನಾಗಿ ಮಾಡಿತು ಮತ್ತು ನಿಧಾನವಾಗಿ ಭೂಮಿಯು ಬಡ್ಡಿ ವ್ಯಾಪಾರಿಗಳ ಕೈಸೇರಿತು. ಮತ್ತೊಂದು ರೀತಿಯಲ್ಲಿ ಹೇಳುವುದಾದರೆ ಬಾಂಬೆ, ಮದ್ರಾಸ್ ಪ್ರಾಂತ್ಯದಲ್ಲಿ ಮತ್ತು ಮೈಸೂರು ಸಾಮ್ರಾಜ್ಯದಲ್ಲಿ ಜಾರಿಗೆ ಬಂದ ರೈತವಾರಿ ಪದ್ಧತಿ ಅರೆಊಳಿಗಮಾನ್ಯ ಪದ್ಧತಿಯ ಚಲನೆಗೆ ನೆರವಾಯಿತು.

ಥಾಮಸ್ ಮನ್ರೋ ಜೊತೆಗೆ ಹೊರಬಂದ ಮತ್ತೊಬ್ಬ ಮದ್ರಾಸ್ ಮೂಲದ ಇಂಗ್ಲೀಷ್ ತಿಮಿಂಗಲ ಆರ್. ರಿಚರ್ಡ್ಸ್ ರೈತವಾರಿ ಪದ್ಧತಿಯ ಕಾರ್ಯವೈಖರಿಯ ಬಗ್ಗೆ ಹಲವಾರು ಉಪಯುಕ್ತ ಒಳನೋಟಗಳನ್ನು ನೀಡುತ್ತಾನೆ. ಸೆಂಟ್ ಜಾರ್ಜ್ ಕೋಟೆಯೊಳಗೆ ನಡೆಯುತ್ತಿದ್ದ ಹಾರಾಟಗಳ ಬಗ್ಗೆ ಬ್ರಿಟೀಷನೊಬ್ಬ ಹೀಗೂ ಬರೆದುಬಿಡಬಹುದಾ? ಎಂಬ ಅಚ್ಚರಿ ಮೂಡಿಸುತ್ತಾನೆ: “ರೈತವಾರಿ ಪದ್ಧತಿಯ ಮೂಲೋದ್ದೇಶ ದೇಶದಿಂದ ಸಾಧ್ಯವಾದಷ್ಟು ಹೆಚ್ಚಿನ ಆದಾಯವನ್ನು ಲೂಟಿ ಮಾಡುವುದು…..ಈ ಪದ್ಧತಿಯಲ್ಲಿ ತೆರಿಗೆ ಕಟ್ಟುವುದು ವರುಷದಿಂದ ವರ್ಷಕ್ಕೆ ಕಷ್ಟವಾಗುತ್ತದೆಂಬ ಅರಿವು ನಿಧಾನಕ್ಕೆ ಆಗುತ್ತದೆ. ವ್ಯವಸ್ಥೆ ಕೊಳೆಯುವುದನ್ನು ಯಾರೂ ತಡೆಗಟ್ಟಲಾರರು.” (118)

ತಲೆತೂರಿಸಿದ ಈ ರೈತವಾರಿ ಪದ್ಧತಿ ಮತ್ತಷ್ಟು ಹೀನವಾದ ಶರಾತ್ (Sharat) ಪದ್ಧತಿಗೆ ಕೆಂಪು ಹಾಸಿನ ಸ್ವಾಗತವನ್ನು ಕೋರಿತು ಎಂಬುದರ ಕುರಿತು ಕುರುಡಾಗಲು ಸಾಧ್ಯವಿಲ್ಲ.

ರೈತವಾರಿ ಪದ್ಧತಿಯ ಮೂಲಕ ಊಳಿಗಮಾನ್ಯತೆಯ ಕಡೆ ಸ್ನೇಹ ಹಸ್ತ ಚಾಚಲಾಯಿತು. ಮಾಜಿ ಭೂಮಾಲೀಕರ ಬೆಳವಣಿಗೆಯ ಜೊತೆಗೆ ಹೊಸ ಬಡ್ಡಿವ್ಯಾಪಾರಿ ಭೂಮಾಲೀಕರು ತಲೆಎತ್ತಿದರು, ಸ್ವಾರ್ಥದ ಪಕ್ಕೆಯಿಂದ.

ಕಟಾವಿನ ಮೊದಲೇ ಸರಕಾರಕ್ಕೆ ಹಣ ಪಾವತಿಸಬೇಕಾದ ಅನಿವಾರ್ಯತೆಯಿಂದ ರೈತರ ಮೇಲಾದ ಹೊರೆಯ ಬಗ್ಗೆ ಸಿದ್ಧಲಿಂಗ ಸ್ವಾಮಿ ವಿವರಿಸುತ್ತಾರೆ. ಹಣ ತುಂಬಲು ರೈತರು ಸಾಹುಕಾರರ ಮೊರೆ ಹೋದರು ಮತ್ತು ಸ್ವಲ್ಪ ಸಮಯದಲ್ಲೇ ಈ ಬಡ್ಡಿ ವ್ಯಾಪಾರಿಗಳ ಬಳಿ ದೊಡ್ಡ ಸಾಲಗಾರರಾಗಿಬಿಟ್ಟರು. ರೈತರು ತಮ್ಮ ‘ಹುಜೂರ್’ (ಮೈಸೂರು ರಾಜ) ಬಳಿಗೆ ಗುಂಪಿನಲ್ಲೋಗಿ ದೂರು ನೀಡಿದರು. ವ್ಯಂಗ್ಯವೆಂದರೆ 1826ರಲ್ಲಿ ಮೈಸೂರು ಪೀಠದ ಮೇಲೆ ಆಸೀನರಾಗಿದ್ದ ಇವರ ‘ಜೀ ಹುಜೂರ್’ ಬಡ್ಡಿವ್ಯಾಪಾರಿಗಳ ಬಳಿ 4 ಲಕ್ಷ ಕೆಪಿ (ಕಂತಾರೇಯ ಪಗೋಡ) ಸಾಲ ಮಾಡಿಕೊಂಡಿದ್ದ! (119)

ಕರಾವಳಿಯಲ್ಲಿನ ಬೆಳವಣಿಗೆಗಳು ಇದೇ ರೀತಿಯಲ್ಲಿದ್ದವು ಎಂದು ತಿಳಿಸುತ್ತಾರೆ ಮಾಲತಿ ಕೆ ಮೂರ್ತಿ. 1800ರ ಸ್ಟೋಕ್ಸ್ ವರದಿಯ ಆಧಾರದಲ್ಲಿ ಮಾಲತಿ ನಿರ್ದಿಷ್ಟವಾಗಿ ಗೌಡ ಸಾರಸ್ವತರ ಬಗ್ಗೆ ಬರೆಯುತ್ತಾರೆ: “ಜಿಲ್ಲೆಗೆ ವರ್ತಕರಾಗಿ ಬಂದ ಜನರಿಗೆ ಭೂಮಿ ಖರೀದಿಸುವುದು ಲಾಭದಾಯಕ ಮತ್ತು ಗೌರವ ತರುವಂತದು ಎನ್ನಿಸಿತು. ಭೂಮಿಯನ್ನು ಹೊಂದಿದ್ದರೆ ನಿರ್ದಿಷ್ಟ ಮೊತ್ತವನ್ನು ಪಾವತಿಸಿದ ನಂತರ ಒಟ್ಟು ಉತ್ಪಾದನೆಯ ಬಹುಭಾಗವನ್ನು ಸಂತಸದಿಂದನುಭವಿಸಬಹುದೆಂದು ತಿಳಿದುಕೊಂಡರು. ಹಾಗಾಗಿ ಭೂಮಿ ಖರೀದಿಸುವುದು ಅವರಿಗೆ ಪ್ರಿಯವಾದ ಕೆಲಸವಾಯಿತು. ಸರಕಾರೀ ಕೆಲಸದಲ್ಲಿರುವವರೂ ಭೂಮಿ ಖರೀದಿಸುವ ಸ್ಪರ್ಧೆಯ ಮುಂಚೂಣಿಯಲ್ಲಿದ್ದರು. ಈ ಪ್ರಕ್ರಿಯೆಯಲ್ಲಿ ಅರಿವಿಲ್ಲದ ರೈತರು ಹೊರದೂಡಲ್ಪಟ್ಟರು; ಭೂಮಿಯ ಹೆಚ್ಚಿನ ಭಾಗ ಕೃಷಿಕ ವರ್ಗದ ಕೈಯಿಂದ ವರ್ತಕ ವರ್ಗ ಮತ್ತು ಇತರೆ ವರ್ಗಗಳ ಕೈಸೇರಿತು.” (120)

ರೈತವಾರಿ ಪದ್ಧತಿ ಪೀಡಿಸುವ ಪದ್ಧತಿ. ಅದರಲ್ಲಿ ಕರುಣೆಯ ಅಂಶವಿರಲಿಲ್ಲ. ಅದೇ ರೀತಿ ಥಾಮಸ್ ಮನ್ರೋನ ಬಗ್ಗೆ ‘ಗೌರವಾನ್ವಿತ’ ಅಂಶಗಳಿಲ್ಲ. ಅಡಿಯಾಳಾಗಿದ್ದ ಭಾರತದ ರೈತರ ಮೇಲೆ ಯುದ್ಧ ಸಾರಿದ್ದ ಬ್ರಿಟೀಷ್ ‘ಝಾರ್’ ಆಗಿದ್ದನಾತ. (ಝಾರ್/czar: ರಷ್ಯಾದ ಚಕ್ರವರ್ತಿ) 
 
ಮುಂದಿನ ವಾರ :
ಕೃಷಿಗೆ ಲಕ್ವ ಹೊಡೆದದ್ದು ಭಾಗ 2

ಏಪ್ರಿ 12, 2016

ಸಿದ್ಧು ಕೆಲಸ ಸಲೀಸಾಗಿಸಲು ಯಡ್ಡಿ ಪ್ರವೇಶ!

ಡಾ. ಅಶೋಕ್. ಕೆ. ಆರ್
12/04/2016
ಕರ್ನಾಟಕ ರಾಜಕೀಯದಲ್ಲಿ ಎಲ್ಲವೂ ಒಂದು ಸುತ್ತು ತಿರುಗಿ ನಿಂತಿದೆ. ಲೋಕಾಯುಕ್ತದವರು ಬಿಜೆಪಿ ಸರಕಾರದ ವ್ಯಕ್ತಿಗಳ ವಿರುದ್ಧ ದಾಖಲಿಸಿಕೊಂಡಿದ್ದ ಪ್ರಕರಣಗಳು, ನಡೆಸಿದ ತನಿಖೆಗಳ ಆಧಾರದಲ್ಲಿ ಆಗ ವಿರೋಧ ಪಕ್ಷದಲ್ಲಿದ್ದ ಕಾಂಗ್ರೆಸ್ಸಿನ ಸಿದ್ಧರಾಮಯ್ಯ ಬಳ್ಳಾರಿಯವರೆಗೆ ಪಾದಯಾತ್ರೆ ನಡೆಸಿದ್ದರು. ಇದೊಂದು ಸಂದರ್ಭ ಬಿಟ್ಟರೆ ಕಾಂಗ್ರೆಸ್ ಸಶಕ್ತ ವಿರೋಧ ಪಕ್ಷವಾಗಿ ಕೆಲಸ ನಿರ್ವಹಿಸಿದ್ದೇ ಕಡಿಮೆ. ಒಂದು ಹಂತದವರೆಗೆ ವಿರೋಧ ಪಕ್ಷವಾಗಿ ಕೆಲಸ ಮಾಡಿದ್ದು ಜೆ.ಡಿ.ಎಸ್ಸಿನ ಕುಮಾರಸ್ವಾಮಿ. ನಂತರದ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಲು ಬಿಜೆಪಿ ಸರಕಾರದ ಭ್ರಷ್ಟ ಕೆಲಸಗಳ ಪಾಲು ಒಂದತ್ತು ಪರ್ಸೆಂಟ್ ಇರಬಹುದಷ್ಟೇ. ಉಳಿದಂತೆ ಕಾಂಗ್ರೆಸ್ ಅಧಿಕಾರದ ಗದ್ದುಗೆ ಹಿಡಿದು ಬಿಜೆಪಿ ಅಧಿಕಾರ ಕಳೆದುಕೊಳ್ಳುವಂತೆ ಮಾಡಿದ್ದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ. ಯಾವ ಲೋಕಾಯುಕ್ತದ ವರದಿಯ ಆಧಾರದಲ್ಲಿ ಭ್ರಷ್ಟರನ್ನು ಸೋಲಿಸಿ ಎಂದು ಸಿದ್ಧು ಮತ ಕೇಳಿದರೋ ಇವತ್ತು ಅದೇ ಸಿದ್ಧು ಲೋಕಾಯುಕ್ತವನ್ನ ಶಾಶ್ವತವಾಗಿ ಇಲ್ಲವಾಗಿಸಲು ಪಣ ತೊಟ್ಟು ನಿಂತಿದ್ದಾರೆ. ಅಂದು ಬಿಜೆಪಿಯ ಸೋಲಿಗೆ ಅದೇ ಪಕ್ಷದಿಂದ ಮುಖ್ಯಮಂತ್ರಿಯಾಗಿದ್ದ ಯಡ್ಡಿಯೇ ಕಾರಣವಾಗಿದ್ದರೆ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಸೋಲಲು ಅದೇ ಪಕ್ಷದಿಂದ ಮುಖ್ಯಮಂತ್ರಿಯಾಗಿರುವ ಸಿದ್ಧು ಕಾರಣವಾಗುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ. ಅದಕ್ಕೆ ಪೂರಕವಾಗುವಂತೆ ಬಿಜೆಪಿಯ ಹೈಕಮಾಂಡ್ ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ಯಡಿಯೂರಪ್ಪನವರನ್ನು ನೇಮಿಸಿದೆ. ಭ್ರಷ್ಟ ಕಾಂಗ್ರೆಸ್ ಸರಕಾರ ತೊಲಗಿಸುವುದೇ ನನ್ನ ಗುರಿ ಎಂದು ಕೂಗುವ ಸರದಿಯೀಗ ಯಡಿಯೂರಪ್ಪನವರದು!

ಕಳೆದ ಸಾಲಿನಲ್ಲಿ ಎಷ್ಟೆಲ್ಲ ಭ್ರಷ್ಟಾಚಾರದ ಆರೋಪಗಳನ್ನು ಹೊತ್ತಿದ್ದಾಗ್ಯೂ ಬಿಜೆಪಿ ಸೋಲುವುದು ಕಷ್ಟವಿತ್ತು. ಕಾರಣ, ಕಾಂಗ್ರೆಸ್ಸಿನವರಿಂದ ಅಂತಹ ಹೇಳಿಕೊಳ್ಳುವಂತಹ ಚಟುವಟಿಕೆಯಿರಲಿಲ್ಲ. ಬಿಜೆಪಿಗೆ ದೊಡ್ಡ ಹೊಡೆತ ಕೊಟ್ಟಿದ್ದು ಭ್ರಷ್ಟಾಚಾರದ ಆರೋಪದ ಮೇಲೆ ಅಧಿಕಾರ ಕಳೆದುಕೊಂಡು ಜೈಲಿಗೂ ಹೋಗಿಬಂದಿದ್ದ ಯಡಿಯೂರಪ್ಪ ಬಿಜೆಪಿ ತೊರೆದು ಕೆಜೆಪಿ ಸೇರಿದ್ದು, ತಮ್ಮ ಕಟ್ಟಾ ಬೆಂಬಲಿಗರನ್ನೂ ಕೆಜೆಪಿಗೆ ಎಳೆದುಕೊಂಡು ಹೋಗಿದ್ದು. ಜನರಿಗೆ ಭ್ರಷ್ಟಾಚಾರದ ಆರೋಪಗಳಿಗಿಂತ, ಕಣ್ಣಿಗೆ ರಾಚುವ ಭ್ರಷ್ಟಾಚಾರಕ್ಕಿಂತ ಜಾತಿ ಪ್ರೀತಿಯೇ ಮುಖ್ಯ ಎನ್ನುವುದೂ ಕಳೆದ ಚುನಾವಣೆಯಲ್ಲಿ ಸಾಬೀತಾಯಿತು. ಕೆಜೆಪಿ ಬಿಜೆಪಿಯ ಮತಗಳನ್ನು ಕಿತ್ತುಕೊಂಡು ಕಾಂಗ್ರೆಸ್ ಗೆಲುವು ಕಾಣುವುದರಲ್ಲಿ ಪ್ರಮುಖ ಪಾತ್ರ ವಹಿಸಿತು. ಯಡಿಯೂರಪ್ಪ ಬಿಜೆಪಿ ತೊರೆಯದೇ ಹೋಗಿದ್ದರೆ ಬಿಜೆಪಿಯೇ ಮತ್ತೆ ಅಧಿಕಾರವಿಡಿಯುವ ಎಲ್ಲಾ ಸಾಧ್ಯತೆಗಳೂ ಇತ್ತು. ಇದರ ಅರಿವು ಬಿಜೆಪಿ ಮುಖಂಡರಿಗೂ ಇತ್ತಲ್ಲ. ಲೋಕಸಭಾ ಚುನಾವನೆಯೊತ್ತಿಗೆ ಯಡಿಯೂರಪ್ಪನವರನ್ನು ಬಿಜೆಪಿಗೆ ಕರೆತರುವ ಸಕಲ ಪ್ರಯತ್ನಗಳೂ ನಡೆದವು. ಒಂದೆಡೆ ಬಿಜೆಪಿ ಕೇಂದ್ರ ಮಟ್ಟದಲ್ಲಿ ಯುಪಿಎ ಸರಕಾರದ ಭ್ರಷ್ಟಾಚಾರದ ವಿರುದ್ಧ ದೊಡ್ಡ ದನಿಯಲ್ಲಿ ಮಾತನಾಡುತ್ತಿದ್ದರೆ ಇಲ್ಲಿ ಕರ್ನಾಟಕದಲ್ಲಿ ಭ್ರಷ್ಟಾಚಾರದ ಆರೋಪ ಹೊತ್ತ ಯಡ್ಡಿಯನ್ನ ಮತ್ತೆ ಪಾರ್ಟಿಗೆ ಸೇರಿಸಿಕೊಳ್ಳಲು ತುದಿಗಾಲಲ್ಲಿ ನಿಂತಿತ್ತು. ಭ್ರಷ್ಟಾಚಾರ, ಅಭಿವೃದ್ಧಿಯ ಮಾತುಗಳಿಗಿಂತ ಜಾತಿ ಸಮೀಕರಣವೇ ಮುಖ್ಯ ಎಂಬರಿವು ಬಿಜೆಪಿಯವರಿಗೂ ಇತ್ತು, ಆರಕ್ಕೇರದ ಮೂರಕ್ಕಿಳಿಯದ ಜೆ.ಡಿ.ಎಸ್ಸಿನಂತೆ ಆಗುವುದು ಒಮ್ಮೆ ಅಧಿಕಾರದ ಸವಿ ಕಂಡಿದ್ದ ಯಡ್ಡಿಗೂ ಬೇಡವಾಗಿತ್ತು. ಯಡ್ಡಿಯ ಬಿಜೆಪಿ ಪುನರ್ ಪ್ರವೇಶ ಕರ್ನಾಟಕದಲ್ಲಿ ಬಿಜೆಪಿಯ ಲೋಕಸಭಾ ಗೆಲುವನ್ನು ಮತ್ತಷ್ಟು ಸುಗಮವಾಗಿಸಿತು. ಕೇಂದ್ರ ಸಚಿವ ಸಂಪುಟಕ್ಕೆ ಸೇರುವ ಅರ್ಹತೆಗಳನ್ನು ಹೊಂದಿದ್ದಾಗ್ಯೂ ಯಡ್ಡಿಯನ್ನು ಸಂಪುಟಕ್ಕೆ ಸೇರಿಸಿಕೊಳ್ಳದೇ ಇದ್ದುದಕ್ಕೆ ಅವರ ಮೇಲಿನ ಭ್ರಷ್ಟಾಚಾರ ಆರೋಪಗಳೇ ಕಾರಣವೆಂದರೆ ಸುಳ್ಳಲ್ಲ. ಮತಕ್ಕೆ ಬೇಕಿದ್ದ ಯಡ್ಡಿ ಸಂಪುಟಕ್ಕೆ ಬೇಡವಾದರು. ಪಕ್ಷದಲ್ಲೊಂದು ಹುದ್ದೆಯನ್ನು ನೀಡಿದರಾದರೂ ಅವರಿಗದು ಬೇಕಿರಲಿಲ್ಲ. ಸಂಪುಟ ಸ್ಥಾನ ಸಿಗದಿದ್ದರಷ್ಟೇ ಹೋಯ್ತು ಮತ್ತೆ ಕರ್ನಾಟಕದ ಬಿಜೆಪಿ ಅಧ್ಯಕ್ಷನಾಗುವ ಆಸೆಯನ್ನು ಬಹಿರಂಗವಾಗಿಯೇ ವ್ಯಕ್ತಪಡಿಸಿದ್ದರು. ಕಾಂಗ್ರೆಸ್ಸಿನ ಹೈಕಮಾಂಡ್ ಮನಸ್ಥಿತಿಯನ್ನು ಹೀನಾಮಾನವಾಗ ಟೀಕಿಸುತ್ತಿದ್ದ ಬಿಜೆಪಿಯಲ್ಲೀಗ ಹೈಕಮಾಂಡ್ ಪರಿಸ್ಥಿತಿ ಜೋರಾಗಿಯೇ ಇದೆಯಲ್ಲವೇ!

ಹೈಕಮಾಂಡಿನವರು ಅಳೆದು ತೂಗಿ ನೋಡಿದ್ದಾರೆ, ಯಾವ ಲೆಕ್ಕಾಚಾರದಿಂದ ನೋಡಿದರೂ ರಾಜ್ಯ ಬಿಜೆಪಿಗೆ ಯಡ್ಡಿಯೇ ಸೂಕ್ತವಾಗಿ ಕಂಡಿದ್ದಾರೆ. ಲಿಂಗಾಯತರ ಮತಗಳನ್ನು ಸೆಳೆಯುವುದಕ್ಕೆ ಯಡ್ಡಿಯೇ ಬಿಸ್ಟು ಎನ್ನುವುದವರಿಗೆ ಅರ್ಥವಾಗಿದೆ. ಭ್ರಷ್ಟಾಚಾರದ ಆರೋಪಗಳು, ಆಡಳಿತದಲ್ಲಿದ್ದಾಗ ನಡೆಸಿದ ಅನಾಚಾರಗಳನ್ನೆಲ್ಲ ಮರೆತುಬಿಡಲು ಜನರಿಗೆ ಐದು ವರುಷ ಸಾಕು, ಕಾರಣ ಆ ಐದು ವರುಷದ ಹೊಸ ಆಡಳಿತದಲ್ಲಿ ಹೊಸ ಹೊಸ ಅನಾಚಾರಗಳನ್ನು ಜನರು ಅನುಭವಿಸಿರುತ್ತಾರೆ. ಮತಬ್ಯಾಂಕಿನ ಆಧಾರದಲ್ಲಿ ಲಿಂಗಾಯತ ಸಮುದಾಯ ಸಶಕ್ತವಾಗಿದೆ. ಬಿಜೆಪಿಗೆ ಲಿಂಗಾಯತರ ಬಹುತೇಕ ಮತಗಳು ಬೀಳುವುದರಲ್ಲಿ ಹೆಚ್ಚಿನ ಸಂಶಯ ಬೇಡ. ಇದು ಮುಂದಿನ ಚುನಾವಣೆಯಲ್ಲಿ ಬಿಜೆಪಿ ಗೆಲುವಿಗೆ ಸಹಾಯ ಮಾಡಬಹುದು. ಜೊತೆಗೆ ಹೇಳಿಕೊಳ್ಳುವಂತಹ ಕೆಲಸ ಮಾಡದ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರದ ನಡೆನುಡಿಗಳೂ ಕೂಡ ಬಿಜೆಪಿಯ ಗೆಲುವಿಗೆ ಪೂರಕವಾಗಿ ಕೆಲಸ ಮಾಡುತ್ತದೆ, ಉಳಿದಿರುವ ಎರಡು ವರುಷಗಳಲ್ಲೂ ಕಾಂಗ್ರೆಸ್ ಇದೇ ರೀತಿಯ ಕೆಲಸ ಮಾಡಿದರೆ ಕಾಂಗ್ರೆಸ್ ಸೋಲುವುದರಲ್ಲಿ ಯಾವುದೇ ಅನುಮಾನ ಬೇಡ. ಒಂದು ಪ್ರಬಲ ಪ್ರಾದೇಶಿಕ ಪಕ್ಷವಾಗಿ ಬೆಳೆಯಬಹುದಾದ ಎಲ್ಲಾ ಸಾಧ್ಯತೆಗಳಿದ್ದ ಜೆ.ಡಿ.ಎಸ್, ಅಪ್ಪ ಮಕ್ಕಳ ಅಹಂನಲ್ಲಿ ಮಂಡ್ಯ ಮತ್ತು ಹಾಸನ ಜಿಲ್ಲೆಯ ಒಕ್ಕಲಿಗರ ಪ್ರಾಬಲ್ಯವಿರುವ ಪ್ರದೇಶಗಳಲ್ಲಷ್ಟೇ ರಾಷ್ಟ್ರೀಯ ಪಕ್ಷವಾಗಿ ಉಳಿದುಬಿಟ್ಟಿದೆ. ಅಲ್ಲೂ ತನ್ನ ನೆಲೆಯನ್ನು ಕಳೆದುಕೊಳ್ಳುವುದಕ್ಕೆ ಹೆಚ್ಚಿನ ಸಮಯದ ಅವಶ್ಯಕತೆಯಿಲ್ಲ ಎನ್ನುವುದರರಿವು ಆ ಪಕ್ಷದ ಮುಖಂಡರಿಗಿನ್ನೂ ಬಂದಿಲ್ಲ. ಬಿಜೆಪಿಯ ಸರಾಗ ಗೆಲುವಿಗೆ ಅಡ್ಡಗಾಲಾಕುವ ಸಾಧ್ಯತೆ ಇರುವುದೂ ಯಡಿಯೂರಪ್ಪನವರಿಗೇ! ಬಿಜೆಪಿಗೆ ಲಿಂಗಾಯತರ ಮತಗಳು ಕ್ರೋಡೀಕರಣವಾಗಿ ಮತ್ತೊಮ್ಮೆ ಯಡಿಯೂರಪ್ಪ ಮುಖ್ಯಮಂತ್ರಿಯಾಗಿಬಿಡಬಹುದು ಎನ್ನುವ ಯೋಚನೆ ಉಳಿದ ಜಾತಿಗಳ ಮತಗಳ ಕ್ರೋಡೀಕರಣಕ್ಕೂ ಕಾರಣವಾಗುತ್ತದೆ ಎನ್ನುವುದನ್ನು ಮರೆಯಬಾರದು. ಹಂಚಿ ಹೋಗಬಹುದಾದ ಅಹಿಂದ ಮತಗಳು, ಜೆ.ಡಿ.ಎಸ್ಸಿಗೆ ಚೂರು ಪಾಲು ಕೊಡುತ್ತಿದ್ದ ಮುಸ್ಲಿಂ ಮತಗಳು ಬಿಜೆಪಿಯ ಸೋಲಿನ ಸಲುವಾಗಿ ಇನ್ನೊಂದ್ಸಲ ಸಿದ್ಧು ಬರ್ಲಿ ಬಿಡಿ ಎಂದು ಕಾಂಗ್ರೆಸ್ಸಿಗೇ ಮತವಾಕಿಬಿಡಬಹುದು! ಚುನಾವಣೆ ಇನ್ನೂ ದೂರವಿರುವಾಗ ಇವೆಲ್ಲವೂ ಸದ್ಯಕ್ಕೆ ಲೆಕ್ಕಾಚಾರಗಳಷ್ಟೇ ಬಿಡಿ! ಇನ್ನೆರಡು ವರುಷದ ಘಟನಾವಳಿಗಳ ಮೇಲೆ ಮುಂದಿನ ಚುನಾವಣೆಯ ಭವಿಷ್ಯ ನಿರ್ಧರಿತವಾಗುತ್ತೆ. ಕಳೆದ ಮೂರು ವರ್ಷದಿಂದ ಬಿಜೆಪಿ ಸಶಕ್ತ ವಿರೋಧ ಪಕ್ಷದಂತೆ ಕಾರ್ಯನಿರ್ವಹಿಸಿದ್ದು ಧರ್ಮಾಧಾರಿತ ಸಂಗತಿಗಳಿಗೆ ಸಂಬಂಧಪಟ್ಟಂತೆ ಮಾತ್ರ. ಯಡ್ಡಿಯ ನೇತೃತ್ವದಲ್ಲಾದರೂ ಬಿಜೆಪಿ ವಿಷಯಾಧಾರಿತ ಸಂಗತಿಗಳನ್ನೆತ್ತಿಕೊಂಡು ಆಡಳಿತ ಪಕ್ಷಕ್ಕೆ ಬಿಸಿ ಮುಟ್ಟಿಸುವ ಕೆಲಸ ಮಾಡುತ್ತ ಬಿಜೆಪಿ ಸಶಕ್ತ ವಿರೋಧ ಪಕ್ಷವಾಗಿಯೂ ಕೆಲಸ ಮಾಡಬಲ್ಲದು ಎನ್ನುವುದನ್ನು ನಿರೂಪಿಸಲಿ.

ಏಪ್ರಿ 8, 2016

ಮೇಕಿಂಗ್ ಹಿಸ್ಟರಿ: ಅಧ್ಯಾಯ 3 - ಜನಸಮೂಹದ ಮೇಲೆ ವಸಾಹತುಶಾಹಿ ಮಾಡಿದ ಪರಿಣಾಮ

saketh rajan
ಸಾಕೇತ್ ರಾಜನ್
ಕನ್ನಡಕ್ಕೆ: ಡಾ. ಅಶೋಕ್. ಕೆ. ಆರ್
08/04/2016

ಹಿಂದಿನ ಅಧ್ಯಾಯದಲ್ಲಿ ಬ್ರಿಟೀಷ್ ವಸಾಹತುಶಾಹಿ ಕರ್ನಾಟಕದ ಆಳುವ ವರ್ಗಗಳ ಮೇಲುಂಟು ಮಾಡಿದ ಪರಿಣಾಮಗಳನ್ನು ನೋಡಿದೆವು. ಈಗ ಜನಸಮೂಹದ ಮೇಲೆ ವಸಾಹತುಶಾಹಿ ಉಂಟುಮಾಡಿದ ಪರಿಣಾಮವನ್ನು ನೋಡೋಣ. ಸಾಮಾಜಿಕ ಜೀವನದ ವಿವಿಧ ವರ್ಗಗಳ ಮೇಲುಂಟು ಮಾಡಿದ ಪರಿಣಾಮ ಮತ್ತು ಹೇಗೆ ವಸಾಹತು ತನ್ನಾಡಳಿತದ ಮೊದಲ ಕೆಲ ದಶಕಗಳಲ್ಲಿ ಮುನ್ನಡೆಯನ್ನು ಹಿನ್ನಡೆಯಾಗಿಸಿತು ಮತ್ತು ವಸಾಹತುಶಾಹಿ ಪೂರ್ವದ ದಿನಗಳ ಮುನ್ನಡೆಯನ್ನು ಉಲ್ಟಂಪಲ್ಟ ಮಾಡಿತು ಎನ್ನುವುದನ್ನು ಗಮನಿಸೋಣ.

1. ಸೈನ್ಯದ ವಿಸರ್ಜನೆ
(Dissolution of the Army)
ವಸಾಹತಿನ ಪ್ರಭಾವಳಿ ಬೆಳಗಲಾರಂಭಿಸಿದಾಗಾದ ಮೊದಲ ಮತ್ತು ಕಣ್ಣಿಗೆ ರಾಚಿದ ಪರಿಣಾಮವೆಂದರೆ ಶೀಘ್ರವಾಗಿ ಸೈನ್ಯವನ್ನು - ಊಳಿಗಮಾನ್ಯ ದೊರೆಗಳಿಗಿಂತ ಹೆಚ್ಚಾಗಿ ಮೈಸೂರಿನದ್ದು – ಭಗ್ನಗೊಳಿಸಿದ್ದು. ಈ ಸೈನ್ಯವನ್ನು ವಿಸರ್ಜಿಸಲು ತೋರಿಸಿದ ಅತ್ಯಾತುರಕ್ಕೆ ಕಾರಣ ಕಳೆದ ನಾಲ್ಕು ವರ್ಷಗಳಿಂದ ಇದೇ ಸೈನ್ಯ, ವಸಾಹತು ವಿರೋಧಿ ಹೋರಾಟದ ಮುಂಚೂಣಿಯಲ್ಲಿತ್ತು. ಬ್ರಿಟೀಷರಿಗೆ ಪೆಟ್ಟು ಕೊಡಲು ಮೈಸೂರು ಸೈನ್ಯವೇ ಕೇಂದ್ರ ಸಂಸ್ಥೆಯಾಗಿತ್ತು. ಅದಕ್ಕೆ ತಕ್ಕ ಸಾಮರ್ಥ್ಯವಿತ್ತು, ಆಂತರಿಕ ಒಗ್ಗಟ್ಟು ಮತ್ತು ವಸಾಹತು ವಿರೋಧಿ ಅಸ್ತಿತ್ವಕ್ಕೆ ಬೇಕಾದ ನಿಯಂತ್ರಿತ ಕ್ರಮಾಗತ ವ್ಯವಸ್ಥೆ (Hierarchy) ಈ ಸಾಮರ್ಥ್ಯಕ್ಕೆ ಕಾರಣ. ಟಿಪ್ಪುವಿನ ಸೋಲಿನ ನಂತರವೂ ಹೋರಾಟ ಮುಂದುವರೆಯುವ ಸಾಧ್ಯತೆ ಇತ್ತು. ಹಾಗಾಗಿ ಸೈನ್ಯವನ್ನು ಒಡೆದುಹಾಕುವುದು ಸುಲ್ತಾನನ ಸಾವಿನ ನಂತರ ಬ್ರಿಟೀಷರು ಮಾಡಬೇಕಿದ್ದ ಮೊದಲ ಕೆಲಸವಾಗಿತ್ತು.

ಟಿಪ್ಪು ಸುಲ್ತಾನನ ಸೈನ್ಯದಲ್ಲಿ ಸುಮಾರು 1.4 ಲಕ್ಷ ಜನರಿದ್ದರು. (107) ಇದನ್ನು ವಿಸರ್ಜಿಸಿದ ನಂತರ ಮೈಸೂರು ರಾಜನ ಬಳಿ ಉಳಿದ ಜನರ ಸಂಖೈ ಕೇವಲ ಹನ್ನೆರಡು ಸಾವಿರ. ಟಿಪ್ಪುವಿನ ಕಾಲದಲ್ಲಿ ಕಂದಚಾರ ಸೈನ್ಯದಲ್ಲಿ 1,80,000 ಜನರಿದ್ದರು. (108) ಇದನ್ನೂ ವಿಸರ್ಜಿಸಲಾಯಿತು. ಅವರು ಗಲಭೆಗೆ ಕಾರಣವಾಗಿಬಿಡಬಹುದು ಎಂಬ ಭಯದಿಂದ ಕೈಗೊಂಬೆ ಸರಕಾರ ಮೊದಲ ವರ್ಷದ ಆಳ್ವಿಕೆಯಲ್ಲಿ ಇಪ್ಪತ್ತು ಸಾವಿರ ಜನರನ್ನು ಉಳಿಸಿಕೊಂಡಿತ್ತು. (109)

ಸೈನ್ಯವನ್ನು ಛಿದ್ರಗೊಳಿಸುವ ಕಾರ್ಯ ವಹಿಸಿದ್ದು ಲೆಫ್ಟಿನೆಂಟ್ ಕೊಲೊನಲ್ ಕ್ಲೋಸ್. ಕ್ಲೋಸ್ ನಂತರ ಒಡೆಯರ್ ಅರಮನೆಯ ರಕ್ಷಿತ ಕೊಠಡಿಯಲ್ಲಿ ರೆಸಿಡೆಂಟರಾಗಿ ಕಾರ್ಯನಿರ್ವಹಿಸಿದರು. ಕಮೀಷನರರೊಬ್ಬರಿಗೆ ಬರೆದ ಪತ್ರದಲ್ಲಿ ಈ ಛಿದ್ರಗೊಳಿಸುವ ಪ್ರಕ್ರಿಯೆಯನ್ನು ಹೇಗೆ ಸಂಭ್ರಮದ ವಾತಾವರಣದಲ್ಲಿ ಮತ್ತು ಹುಚ್ಚು ವಸಾಹತು ಹೆಮ್ಮೆಯಿಂದ ಮಾಡಲಾಯಿತು ಎನ್ನುವುದನ್ನು ವಿವರಿಸುತ್ತಾನೆ: “ತನ್ನ ಸರಕಾರದ ವಿವಿಧ ಇಲಾಖೆಗಳಲ್ಲಿ ಬಲಿಷ್ಠ ಮುಸಲ್ಮಾನರನ್ನು ಟಿಪ್ಪು ನೇಮಿಸಿದ್ದನ್ನು ನಿರಾಕರಿಸಲು ಆಗುವುದಿಲ್ಲ, ಆದರೆ ಅವನ ಆಳ್ವಿಕೆಯ ವಿಶೇಷವೆಂದರೆ ಎಲ್ಲಾ ಅಧಿಕಾರವನ್ನು ತನ್ನ ಕೈಯಲ್ಲೇ ಇಟ್ಟುಕೊಳ್ಳುತ್ತಿದ್ದ ಮತ್ತು ವಂಶಪಾರಂಪರ್ಯಕ್ಕೆ ಅಥವಾ ಒಂದೇ ಕಛೇರಿಯಲ್ಲಿ ತಳವೂರಿಬಿಡುವುದಕ್ಕೆ ಅವಕಾಶ ಕೊಡುತ್ತಿರಲಿಲ್ಲ…… ಪ್ರಮುಖ ಕಛೇರಿಗಳಲ್ಲಿದ್ದ ವ್ಯಕ್ತಿಗಳು ಅಧಿಕಾರ ಚಲಾಯಿಸುತ್ತಿದ್ದುದರ ಬಗ್ಗೆ ಅನುಮಾನ ಬೇಡ ಮತ್ತಾ ಅಧಿಕಾರದಿಂದ ಅವರು ಸ್ವಲ್ಪ ಪ್ರಭಾವಶಾಲಿಗಳೂ ಆಗಿದ್ದರು. ಆದರಿವರಲ್ಲಿ ಎಷ್ಟು ಜನ ಉಳಿದಿದ್ದಾರೆ? ಬಹರುದ್ದೀನ್ ಶ್ರೀರಂಗಪಟ್ಟಣದಲ್ಲಿ ಹತನಾದ. ಬೆಂಕಿ ನವಾಬ ಸಿದ್ದೇಶ್ವರದಲ್ಲಿ ಸೋತ. ಸೈಯದ್ ಸಾಹಿಬ್, ಮೀರ್ ಸಾದಿಕ್ ಮತ್ತು ಸೈಯದ್ ಗಫರ್ ಶ್ರೀರಂಗಪಟ್ಟಣದ ಬಿರುಗಾಳಿಯಲ್ಲಿ ಉರುಳಿಹೋದರು. ಪೂರ್ಣಯ್ಯ ನಮ್ಮ ಇಷ್ಟಾನಿಷ್ಟದ ಮೇಲೆ ನಿಂತಿದ್ದಾರೆ. ಕಮ್ರುದ್ದೀನ್ ನಮ್ಮ ಔದಾರ್ಯದ ಮೇಲಿದ್ದಾರೆ ಮತ್ತು ನಮ್ಮ ಭಕ್ತಮಂಡಳಿಯವರಾಗಿದ್ದಾರೆ.”(110)

ಕಮ್ರುದ್ದೀನ್ ಗೆ ಗುರ್ರಂಕೊಂಡದಲ್ಲಿ ಜಾಗೀರುಗಳನ್ನು ಉಡುಗೊರೆಯಾಗಿ ನೀಡಲಾಗಿತ್ತು: ಕಂಪನಿಯಿಂದೊಂದು, ಮತ್ತೊಂದು ನಿಜಾಮರಿಂದ. ‘ಮೈಸೂರು ಸೈನ್ಯದ ಮುಖ್ಯ ಕಮಾಂಡರ್’ ಶರತ್ತಿಲ್ಲದೆ ಶರಣಾಗಲು 2000 ಪೌಂಡ್ ನೀಡಲಾಗಿತ್ತು ಎಂದು ಮಾರ್ಕ್ಸ್ ದಾಖಲಿಸುತ್ತಾರೆ. ಮಾರ್ಕ್ಸ್ ಹೇಳುತ್ತಿರುವುದು ವಿದ್ರೋಹಕ್ಕಾಗಿ ಸಾಯಿಸಲಾದ ಮೀರ್ ಸಾದಿಕ್ ಬಗ್ಗೆಯಾ ಎನ್ನುವುದು ಸ್ಪಷ್ಟವಾಗುವುದಿಲ್ಲ. ಕಮ್ರುದ್ದೀನ್ ಅಷ್ಟೊಂದು ದೊಡ್ಡ ಮೊತ್ತವನ್ನು ಪಡೆದಿರುವ ಸಾಧ್ಯತೆಗಳು ಕಡಿಮೆ. (111)

ಅದು ಎಂತಹ ಪರಿಸ್ಥಿತಿಯಾಗಿತ್ತೆಂದರೆ ಕ್ಲೋಸ್ ಮತ್ತೆ ಹೇಳುತ್ತಾರೆ: “ನಮ್ಮನ್ನು ಮುಜುಗರಗೊಳಿಸಲು ಅಥವಾ ರಾಜಕೀಯಕ್ಕೊಂದು ತಿರುವು ಕೊಡಲು ಮೊಹಮ್ಮದೀಯರು ಎಲ್ಲಿದ್ದಾರೆ? ಟಿಪ್ಪುವಿನ ಕಾಲಾಳು ಸೈನ್ಯವನ್ನು ವಿಸರ್ಜಿಸಲಾಯಿತು. ಅವನ ಸಿಲ್ಲೇದಾರ ಕುದುರೆಗಳನ್ನು ಕರಗಿಸಲಾಯಿತು, ಅವನ ಕಿಲ್ಲೇದಾರರು ನಮಗೆ ಮುಜುರೆ ಸಲ್ಲಿಸುತ್ತಾರೆ. ಅವನ ಅಸೋಫರಿಗೆ (asophs) ನಮ್ಮನ್ನು ಎದುರಿಸಲು ಅವಕಾಶಗಳಿಲ್ಲ, ಶಕ್ತ ಕುದುರೆಗಳು ಉಳಿದಿವೆ ಮತ್ತು ಉಳಿಯುವಿಕೆಗೆ ನಮ್ಮೆಡೆಗೆ ನೋಡುತ್ತಿವೆ. ಬಿಡಿ ಬಿಡಿ ವ್ಯಕ್ತಿಗಳಿದ್ದಾರೆ, ತಲೆಯಿಲ್ಲದೆ, ವಿವಿಧ ಉದ್ದೇಶಗಳಿಂದ ಬೇರೆ – ಬೇರೆಯಾಗಿ. ಅವರು ನಮ್ಮ ಸೇವೆಗೈಯಲು ಒಂದು ಇಶಾರೆ ಸಾಕು.” (112)

ಪೂರ್ಣಯ್ಯನವರ ಸೃಷ್ಟಿಯಲ್ಲೊಬ್ಬರಾದ ನರಸಿಂಹ ಮೂರ್ತಿ ಮೈಸೂರು ಪ್ರಾಂತ್ಯದ ಸೈನ್ಯಕ್ಕೊಂದು ಗತಿ ಕಾಣಿಸಬೇಕೆಂದು ಕಮಿಷನರ್ರಿಗೆ ಪತ್ರ ಬರೆಯುತ್ತಾನೆ. ಮೈಸೂರು ಪ್ರಾಂತ್ರದ ಸದಸ್ಯರಾದ ಬ್ರಾರ್ರಿ ಕ್ಲೋಸ್ ರನ್ನು 8 ಜೂನ್ 1799ರಂದು ಶ್ರೀರಂಗಪಟ್ಟಣದಲ್ಲಿ ಭೇಟಿಯಾಗುತ್ತಾನೆ. ಕಮ್ರುದ್ದೀನ್ ತಾನು ಪಡೆದುಕೊಂಡಿದ್ದಕ್ಕೆ ಪ್ರತಿಯಾಗಿ ನೆಮ್ಮದಿಯಿಂದ ಹಿಂದೆ ಸರಿದರೆ, ಇತರ ಮುಖ್ಯ ಅಧಿಕಾರಿಗಳು ತಮ್ಮ ಹಳೆಯ ಸಂಬಳದ ಮೇಲೆ ನಿವೃತ್ತರಾದರು. ಯುದ್ಧದಲ್ಲಿ ಸಾವನ್ನಪ್ಪಿದ ಅಧಿಕಾರಿಗಳ ಕುಟುಂಬಳಿಗೆ ಸೂಕ್ತ ಸವಲತ್ತನ್ನು ನೀಡಲಾಯಿತು, ಅಸಹನೆ ಬೆಳೆಯುವುದನ್ನು ತಡೆಗಟ್ಟಲು. ಟಿಪ್ಪುವಿನ ನಾಗರೀಕ ಸೇವೆಯ ಅಧಿಕಾರಿಗಳಿಗೆ ಪಿಂಚಣಿ ನೀಡಲಾಯಿತು ಮತ್ತು ಫ್ರೆಂಚರನ್ನು ಯುದ್ಧಖೈದಿಗಳನ್ನಾಗಿ ಬಂಧಿಸಲಾಯಿತು. (113)

ತಮ್ಮ ಗ್ರಂಥದಲ್ಲಿ ಮೀರಾ ಸೆಬಾಸ್ಟಿಯನ್ ಉಳಿಕೆ ಸೈನ್ಯವನ್ನು ಹೇಗೆ ನಿರ್ನಾಮ ಮಾಡಲಾಯಿತು ಎಂದು ತಿಳಿಸುತ್ತಾರೆ. 1831ರಷ್ಟರಲ್ಲಿ ಅದು ಪರಿಣಾಮಕಾರಿಯಲ್ಲದ ಇತಿಹಾಸದ ಸ್ಮಾರಕವಾಗಷ್ಟೇ ಉಳಿದಿತ್ತು. (114)

ಮಿಲಿಟರಿಯ ಉನ್ನತಾಧಿಕಾರಿಗಳನ್ನು ಖರೀದಿಸಲಾಯಿತು. ಕೆಳಹಂತದ ಸೈನಿಕರನ್ನು ಸುಮ್ಮನೆ ಪ್ರಪಾತಕ್ಕೆ ತಳ್ಳಿಬಿಡಲಾಯಿತು. ವಸಾಹತುಶಾಹಿಯ ವಿರುದ್ಧದ ಸೈನ್ಯ ರಾತ್ರಿ ಬೆಳಗಾಗುವುದರಲ್ಲಿ ನಿರುದ್ಯೋಗಿಗಳ ಸೈನ್ಯವಾಗಿಬಿಟ್ಟಿತ್ತು. ಸಂಪನ್ಮೂಲ ನಾಶವಾಯಿತು.

ಬ್ರಿಟೀಷರ ಮೊದಲ ಹೊಡೆತ ಮೈಸೂರಿನ ಮುಸ್ಲಿಮರಿಗೆ. ಆಳ್ವಿಕೆಯಲ್ಲಿದ್ದ, ವಿದೇಶೀ ಆಕ್ರಮಣಕಾರನ ವಿರುದ್ಧದ ಹೋರಾಟಕ್ಕೆ ಸಾವಿರಾರು ಮಕ್ಕಳನ್ನು ಕಳೆದುಕೊಂಡ, ಶೋಷಿತ ಜಾತಿಗಳಿಗೆ ಆಸರೆಯಾಗಿದ್ದ ವೀರ ಸಮುದಾಯ ವಸಾಹತು ಶಕ್ತಿಯ ಏಳಿಗೆಯೊಂದಿಗೆ ಬ್ರಿಟೀಷ್ ರಾಜ್ ನ ಕೋಟೆಯಡಿಯಲ್ಲಿ ಸಿಲುಕಿ ನಲುಗಿತು. ಮುಸ್ಲಿಂ ಸಮುದಾಯ ಇದ್ದಕ್ಕಿದ್ದಂತೆ ಸಾವನ್ನಪ್ಪಿತು. ಯುರೋಪಿನ ಆಕ್ರಮಣ ಸೈನ್ಯವನ್ನು ವಿಸರ್ಜಿಸಿತು; ಇದು ಒಂದೇ ಏಟಿನಲ್ಲಿ ಸೈನ್ಯಕ್ಕೆ ಸೇರಿ ಅಭ್ಯುದಯ ಹೊಂದುತ್ತಿದ್ದ ಮೈಸೂರಿನ ಮುಸ್ಲಿಮರ ಭವಿಷ್ಯದ ಮೇಲೆ ಮಂಕು ಕವಿಸಿತು. ಸೈನ್ಯ ಮೈಸೂರು ಮುಸ್ಲಿಮರಿಗೆ ಬಹುಮುಖ್ಯ ನೌಕರಿಯ ಸೆಲೆಯಾಗಿತ್ತು. ಮೈಸೂರಿನ ಸೋಲು ಮುಸ್ಲಿಮರ ಐತಿಹಾಸಿಕ ಕುಸಿತಕ್ಕೆ ಕಾರಣವಾಯಿತು. ಆ ಕುಸಿತ ಮೂಡಿಸಿದ ಮಂಪರಿನ ಚಿನ್ಹೆಗಳನ್ನು ಇವತ್ತಿಗೂ ಕಾಣಬಹುದು……

ಮುಸ್ಲಿಮರು ಅಸ್ಪ್ರಶ್ಯರಾದರು, ಸಮಾಜದ ಕಸಕ್ಕೆ ದೂಡಲ್ಪಟ್ಟರು. 1799ರ ವಸಾಹತು ಆಕ್ರಮಣ ತನ್ನ ಪ್ರಭಾವವನ್ನು ಎರಡು ಶತಮಾನದ ನಂತರವೂ ಉಳಿಸಿದೆ. ಮುಸ್ಲಿಮರು ಆರ್ಥಿಕತೆಯ ಒಂದು ನಿರ್ದಿಷ್ಟ ವಿಭಾಗದಲ್ಲಿ ಇವತ್ತಿಗೂ ‘ಏಕಸ್ವಾಮ್ಯತೆ’ ಹೊಂದಿದ್ದಾರೆ – ಕಸವಾಯುವ ಕಾಯಕದಲ್ಲಿ.

ಈ ಕುಸಿತಕ್ಕೆ ಬುಚನನ್ ಆಗಲೇ ಸಾಕ್ಷಿಯಾಗಿದ್ದ. ಒಂದು ಚಿಟಿಕೆ ಅನುಕಂಪ, ಚೂರು ತಿರಸ್ಕಾರದೊಂದಿಗೆ ಬುಚನನ್ ಹುಣಸೂರು ತಾಲ್ಲೂಕಿನ ಹುಸೇನ್ ಪುರ ಮತ್ತು ಮುಲ್ಲೂರಿನ ಬಗ್ಗೆ ಬರೆಯುತ್ತಾನೆ: “ಟಿಪ್ಪುವಿನ ಸೇವೆಯಲ್ಲಿದ್ದ ಮುಸಲ್ಮಾನರು ಪ್ರತಿ ನಿತ್ಯ ದೇಶದ ಈ ಭಾಗಕ್ಕೆ ಬರುತ್ತಿದ್ದಾರೆ. ಸಾಧ್ಯವಿದ್ದವರು ಕಾಳುಗಳನ್ನು ತಂದು ಸಣ್ಣಪುಟ್ಟ ವ್ಯಾಪಾರ ಮಾಡುತ್ತಿದ್ದಾರೆ; ಬಡವರಾದವರು ರೈತರ ಬಳಿ ಸೇವಕರಾಗೋ ಅಥವಾ ದಿನಗೂಲಿಯಾಗೋ ಕೆಲಸ ಮಾಡುತ್ತಿದ್ದಾರೆ. ಕೃಷಿ ಕೆಲಸ ಗೊತ್ತಿಲ್ಲದ ಇವರನ್ನು ಕೆಲಸಕ್ಕೆ ಬೇರ್ಯಾರೂ ಸಿಗದಿದ್ದಾಗಷ್ಟೇ ನೇಮಿಸಿಕೊಳ್ಳಲಾಗುತ್ತದೆ. ಅವರಿಗೆ ಸಿಗುವ ಸಂಬಳ ಕಡಿಮೆ. ಅವರಿಗೆ ತಿಂಗಳಿಗೆ ಮೂವತ್ತು ಸೇರು ಕಾಳು ನೀಡಲಾಗುತ್ತಿದೆ (ಮೂರು ಫನಂಗೆ ಸಮ) ಹಾಗು ಒಂದು ಫನಂ ಹಣವನ್ನು ನೀಡಲಾಗುತ್ತದೆ…….ಅದಾಗ್ಯೂ ಈ ಮುಸ್ಲಿಮರು ತಮ್ಮ ನಾಯಕನನ್ನು ಕೊಂದ ಕಾಫಿರ ಬ್ರಿಟೀಷರ ಸೇವೆ ಮಾಡುವುದಕ್ಕಿಂತ ಇದನ್ನೇ ಉತ್ತಮವೆಂದು ಭಾವಿಸಿದ್ದಾರೆ.” (115)

ಬೆಂಗಳೂರಿನ ಮುಸ್ಲಿಮರಲ್ಲೂ ಇದೇ ರೀತಿಯ ವ್ಯಥೆಯಿರುವುದನ್ನು ಬುಚನನ್ ಗಮನಿಸಿದ್ದಾರೆ. ನಗರ ಆರ್ಥಿಕತೆಯ ಭಾಗವಾಗುವ ಭರದಲ್ಲಿ ಸಣ್ಣ ಪುಟ್ಟ ವ್ಯಾಪಾರ ಮಾಡಲಾರಂಭಿಸಿದರು. ಈ ವ್ಯಾಪಾರ ಕೆಳಮುಖವಾಗಿ ಚಲಿಸುತ್ತ ಅವರನ್ನು ಶೀಘ್ರವಾಗಿ ಕಸದ ವರ್ತಕರನ್ನಾಗಿಸಿತು.
ಮುಂದಿನ ವಾರ:
ಕೃಷಿಗೆ ಲಕ್ವ ಹೊಡೆದದ್ದು

ಏಪ್ರಿ 1, 2016

ಮೇಕಿಂಗ್ ಹಿಸ್ಟರಿ: ಶೋಷಕ ತ್ರಿಮೂರ್ತಿಗಳು ಮತ್ತು ಪ್ರತಿಗಾಮಿ ಸರಕಾರ

saket rajan ashok kr
ಸಾಕೇತ್ ರಾಜನ್
ಕನ್ನಡಕ್ಕೆ: ಡಾ. ಅಶೋಕ್. ಕೆ. ಆರ್
01/04/2016
ವಸಾಹತಿನ ವಿಜಯ ಆಳ್ವಿಕೆಯ ಮೈತ್ರಿಗಳನ್ನು ಬದಲಿಸಿತು. ಬ್ರಿಟೀಷ್ ಆಳ್ವಿಕೆಗೂ ಮುನ್ನ ಊಳಿಗಮಾನ್ಯ ಮತ್ತು ವರ್ತಕ ವರ್ಗ ಮೈಸೂರು ಸಾಮ್ರಾಜ್ಯದ ಅಧಿಕಾರಗಳನ್ನಂಚಿಕೊಂಡಿತ್ತು. ಕರ್ನಾಟಕದ ಉಳಿದ ಭಾಗಗಳಲ್ಲಿ ಊಳಿಗಮಾನ್ಯ ವರ್ಗ ಏಕಸಾಮ್ಯತೆ ಮೆರೆದಿತ್ತು. ಬ್ರಿಟೀಷರ ಆಗಮನ ಇದನ್ನು ಬದಲಿಸಿತು. ಊಳಿಗಮಾನ್ಯ ವರ್ಗಗಳನ್ನು ಉಳಿಸಿಕೊಂಡ ಬ್ರಿಟೀಷರು ವರ್ತಕರ ಒಂದು ವರ್ಗವನ್ನಷ್ಟೇ ಉಳಿಸಿಕೊಂಡು ಉಳಿದವರನ್ನು ಬುಡಸಮೇತ ಕಿತ್ತುಹಾಕಿದರು. ಇಡೀ ಕರ್ನಾಟಕದಲ್ಲಿ ಆಳ್ವಿಕೆಯ ಜಾಗಕ್ಕೆ ಬಂದದ್ದು ವಸಾಹತು – ಮಧ್ಯವರ್ತಿ – ಊಳಿಗಮಾನ್ಯ ಮೈತ್ರಿ.

ಹದಿನೆಂಟನೇ ಶತಮಾನದ ಕೊನೆಯಲ್ಲಿ ಮೈಸೂರು ಸಂಸ್ಥಾನದ ಭೂಮಾಲೀಕ ವರ್ಗ – ಈಗಾಗಲೇ ವರ್ತಕರ ಜೊತೆಗಿದ್ದ ಭೂಮಾಲೀಕ ವರ್ಗ – ಹೊಸ ಮೈತ್ರಿಯ ನಾಯಕತ್ವಕ್ಕೆ ಶರಣಾಯಿತು.

ಈ ಹೊಸ ವಿಧಾನದಲ್ಲಿ, ವಸಾಹತು ಆಕ್ರಮಣದ ನಂತರ ಮೈತ್ರಿಯ ಮುಂದಾಳತ್ವ ವಹಿಸಿದ್ದು ವಸಾಹತುಶಾಹಿ; ತ್ರಿಮೂರ್ತಿಗಳ ಆಳ್ವಿಕೆಯಲ್ಲಿ ಊಳಿಗಮಾನ್ಯ ದೊರೆಗಳು ಮತ್ತು ಮಧ್ಯವರ್ತಿಗಳು ಸಹಕಾರ ನೀಡುತ್ತ ತಮ್ಮ ಮಿತಿಯಿದ್ದ ಸ್ಥಾನದಲ್ಲೇ ಸಂತಸ ಕಂಡುಕೊಂಡರು.

ಈ ಎರಡು ಯುಗಗಳ ಮಧ್ಯೆ ಸರಕಾರದ ರಚನೆ ಮತ್ತು ನೀತಿಯಲ್ಲಿ ಗಮನಾರ್ಹ ಬದಲಾವಣೆಗಳಾಗಿತ್ತು.

ಈ ಮೈತ್ರಿಯನ್ನು ಮುನ್ನಡೆಸುತ್ತಿದ್ದವರಲ್ಲಿದ್ದ ಪ್ರಮುಖ ಅಂಶವೆಂದರೆ, ಮೈತ್ರಿಯನ್ನು ಕಟ್ಟುವುದಕ್ಕೂ ಅವರು ಮುಖ್ಯ ಕಾರಣವಾಗಿದ್ದರು. ಜೊತೆಗೆ ತಮ್ಮ ರಾಜಕೀಯ ಮತ್ತು ಆರ್ಥಿಕ ಅವಶ್ಯಕತೆಗಳಿಗನುಗುಣವಾಗಿ ಮೈತ್ರಿಯ ಪಾಲುದಾರರಾಗಿದ್ದರು. ಇಲ್ಲಿ ವಸಾಹತು ಬಂಡವಾಳದ ಅವಶ್ಯಕತೆಗಳಿಗನುಗುಣವಾಗಿ. ನಾವೀಗಾಗಲೇ ನೋಡಿದಂತೆ, ವಿವಿಧ ಊಳಿಗಮಾನ್ಯ ದೊರೆಗಳು ಮೈತ್ರಿಯ ಭಾಗವಾಗಿದ್ದು ಬ್ರಿಟೀಷ್ ಕೈಗಾರಿಕಾ ಬಂಡವಾಳದ ಪರವಾಗಿರುತ್ತೇವೆಂದು ಒಪ್ಪಿದ ಮೇಲೆ ಮಾತ್ರ. ಈ ಋಣದ ಕಾರಣದಿಂದ ಊಳಿಗಮಾನ್ಯತೆಯಲ್ಲಿ ಬದಲಾವಣೆಗಳಾಯಿತು. ಭೂಮಾಲೀಕರು ತಮ್ಮ ಸೈನ್ಯವನ್ನು ಬಿಟ್ಟುಕೊಡಬೇಕಾಯಿತು, ತಮ್ಮ ನ್ಯಾಯದಾನದ ರೀತಿಯನ್ನು ವಸಾಹತಿನ ನ್ಯಾಯಾಲಯಗಳಿಗೆ ಬಿಟ್ಟುಕೊಟ್ಟರು, ಮುಂಚೆ ಅನುಭವಿಸುತ್ತಿದ್ದ ಅನೇಕ ಊಳಿಗಮಾನ್ಯ ಸೌಲತ್ತುಗಳನ್ನು ಶರಣಾಗಿಸಿದರು. ಊಳಿಗಮಾನ್ಯತೆಯ ಈ ಆಯ್ದ ಬದಲಾವಣೆಗಳು ಇತಿಹಾಸದುದ್ದಕ್ಕೂ ನಡೆದುಕೊಂಡು ಬಂದಿದೆ, ಮತ್ತು ಇಪ್ಪತ್ತನೇ ಶತಮಾನದಲ್ಲಿನ ಅಂತರಾಷ್ಟ್ರೀಯ ಬಂಡವಾಳದ ಏಕಸ್ವಾಮ್ಯತೆ ಮತ್ತು ಅರೆವಸಾಹತುಶಾಹಿತನದ ದಿನಗಳಲ್ಲಿ ಬದಲಾವಣೆ ಮತ್ತಷ್ಟು ಚುರುಕುಗೊಂಡಿದೆ; ಅದನ್ನು ಮೇಕಿಂಗ್ ಹಿಸ್ಟರಿಯ ಮೂರನೇ ಸಂಪುಟದಲ್ಲಿ ನೋಡೋಣ. ಉದಾಹರಣೆಗೆ, ಮಧ್ಯವರ್ತಿ ಬಂಡವಾಳಶಾಹಿಗಳು ಫ್ಯೂಡಲ್ ಮೂಲದಿಂದ ಬಂದಿದ್ದು ಸಾಮಾಜಿಕ ಹೊಕ್ಕುಬಳಕೆಯ ಕಾರಣದಿಂದ; ಫ್ಯೂಡಲ್ ದೊರೆಗಳು ತಮ್ಮ ಹಳೆಯ ವರ್ಗಸ್ಥಾನವನ್ನು ತ್ಯಜಿಸಿ ಸಂಪೂರ್ಣ ಹೊಸ ಸ್ಥಾನದಲ್ಲಿ ಸ್ಥಾಪಿತರಾಗಿ ಉತ್ಪಾದನೆಯ ಜೊತೆ ಹೊಸ ಸಂಬಂಧವೇರ್ಪಡಿಸಿಕೊಂಡರು. ಆದಾಗ್ಯೂ ಊಳಿಗಮಾನ್ಯತೆಯಲ್ಲಿ ಬದಲಾವಣೆಗಳನ್ನು ತಂದ ವಸಾಹತುಶಾಹಿ ಊಳಿಗಮಾನ್ಯ ಪದ್ಧತಿಯನ್ನು ಇಲ್ಲವಾಗಿಸುವ ಪ್ರಯತ್ನವನ್ನು ಮಾಡಿರಲಿಲ್ಲ ಎಂಬಂಶವನ್ನು ಮರೆಯಬಾರದು.

ವಸಾಹತುಶಾಹಿ ಭಾರತದಲ್ಲಿನ ಸರಕಾರಗಳ ರಚನೆಯನ್ನು ಮಾರ್ಪಡಿಸಿತು. ಭಾರತದ ಇತಿಹಾಸದಲ್ಲಿಯೇ ಪ್ರಥಮ ಬಾರಿಗೆ ಐಕ್ಯತೆಯ ಕೇಂದ್ರ ಸರಕಾರವೊಂದರ ರಚನೆಯಾಯಿತು. ಚದುರಿಹೋಗಿದ್ದ, ಭಾಗಗಳಾಗಿದ್ದ ಊಳಿಗಮಾನ್ಯ ರಾಜ್ಯಗಳನ್ನು ಪುನರ್ ರಚಿಸುವ ಮೂಲಕ ಈ ಹೊಸ ಕೇಂದ್ರ ಸರಕಾರದ ರಚನೆಯಾಯಿತು. ಈ ಸರಕಾರದ ರೂಪುಗೊಳ್ಳುವಿಕೆಗೆ ಕಾರಣವಾದದ್ದು ವಿಕೇಂದ್ರೀಕರಣದ ಆಧಾರದಲ್ಲಿ ರಚಿತವಾಗಿದ್ದ ಊಳಿಗಮಾನ್ಯ ಸೈನ್ಯದ ಅಳಿವು. ಕೆಲವರು ಇದು ಊಳಿಗಮಾನ್ಯತೆಯನ್ನು ನಿಶ್ಯಕ್ತಗೊಳಿಸಿತು ಎಂದು ಭಾವಿಸಿದರು. ಆದರೆ ವಾಸ್ತವವೆಂದರೆ ಇದು ಊಳಿಗಮಾನ್ಯತೆಗೆ ಹೊಸ ಶಕ್ತಿ ತುಂಬಿತು. ಮೇಲ್ನೋಟಕ್ಕೆ ಊಳಿಗಮಾನ್ಯರ ಸೈನ್ಯದ ಅಳಿವು ಊಳಿಗಮಾನ್ಯತೆಯನ್ನು ಬಲಹೀನರಂತೆ ಮಾಡಿದರೂ ವಾಸ್ತವ ಅದರ ವಿರುದ್ಧದಂತಿತ್ತು ಎನ್ನುವುದು ಸತ್ಯ. ಊಳಿಗಮಾನ್ಯ ಸೈನ್ಯವನ್ನು ವಿಸರ್ಜಿಸಿದ್ದು ಹೊಸ ಕೇಂದ್ರೀಕೃತ, ಶಕ್ತಿಶಾಲಿ ಸೈನ್ಯದ ನಿರ್ಮಾಣಕ್ಕಾಗಿ. ಭೂಮಾಲೀಕರನ್ನು ಪ್ರತಿಗಾಮಿ ವರ್ಗಗಳ ಮೈತ್ರಿಯ ಕಡೆಗೆ ಸೆಳೆದುಕೊಂಡ ಬ್ರಿಟೀಷ್ ವಸಾಹತುಶಾಹಿ ಹೊಸದಾಗಿ ರಚಿತವಾದ ಕೇಂದ್ರ ಸರಕಾರದ ನೆರವಿನಿಂದ ಊಳಿಗಮಾನ್ಯತೆಯನ್ನು ತಾನೇ ಮುಂದೆ ನಿಂತು ರಕ್ಷಿಸಿತು. ವಸಾಹತುಶಾಹಿ, ಭೂಮಾಲೀಕರು ಮತ್ತು ಮಧ್ಯವರ್ತಿಗಳ ಪರವಾಗಿತ್ತು. ವಸಾಹತುಶಾಹಿ ಭಾರತದ ಜನಸಮೂಹಕ್ಕೆ ಕೊಟ್ಟ ಬಹುದೊಡ್ಡ ಐತಿಹಾಸಿಕ ಹೊಡೆತವಾಗಿತ್ತಿದು. ಈಗಿನಿಂದ, ದೇಶದ ಯಾವುದೇ ಭಾಗದಲ್ಲಿ ಒಬ್ಬ ಸಣ್ಣ ಭೂಮಾಲೀಕನ ವಿರುದ್ಧದ ಹೋರಾಟವನ್ನು ದಮನಿಸಲು ಭಾರತದ ಕೇಂದ್ರ ಸರಕಾರವೇ ತತ್ ಕ್ಷಣ ಮಧ್ಯಪ್ರವೇಶಿಸುತ್ತಿತ್ತು. ಸಾಯುತ್ತಿದ್ದ ಭೂಮಾಲೀಕ ವರ್ಗಕ್ಕೆ ಹೊಸದಾಗಿ ಬಲ ತುಂಬಿ ಪುನರ್ಜನ್ಮ ನೀಡಲಾಯಿತು. ವಸಾಹತು ಬಂಡವಾಳದ ಶಕ್ತಿ ಮತ್ತು ಪ್ರತಿಗಾಮಿ ಭಾರತ ಸರಕಾರದ ಅಗಾಧ ಸಂಪನ್ಮೂಲಗಳು ಊಳಿಗಮಾನ್ಯತೆಯನ್ನು ರಕ್ಷಿಸಿ, ಎಚ್ಚೆತ್ತ ರೈತ ಕಾರ್ಮಿಕರನ್ನು ದಮನಿಸಲು ಉಪಯೋಗಿಸಬಹುದಾಗಿತ್ತು. ಕೆಲಸಕ್ಕೆ ಬಾರದ ಭೂಮಾಲೀಕರೆಲ್ಲ ರಾಣಿಯ ಪಾದದ ಬಳಿ ಎದ್ದು ನಿಂತರು. ಈ ಪ್ರಮುಖ ಐತಿಹಾಸಿಕ ಬದಲಾವಣೆಗಳು ಭಾರತದ ಜನಸಮೂಹದಲ್ಲಿನ ಊಳಿಗಮಾನ್ಯತೆ ವಿರೋಧಿ ಅಲೆಗಳ ಅಬ್ಬರವನ್ನು ಕಡಿಮೆಗೊಳಿಸಿಬಿಟ್ಟಿತು.

ಹದಿನೇಳನೇ ಶತಮಾನದ ಅಂತ್ಯದಲ್ಲಿ ಚಿಕ್ಕದೇವರಾಜ ಒಡೆಯರ್ ಪ್ರಾರಂಭಿಸಿದ್ದ ಸ್ಥಳೀಯತೆಯ ರೀತಿಯನ್ನು (Regional Phenomenon) ಇನ್ನು ಮುಂದೆ ನಿರೀಕ್ಷಿಸಲು ಸಾಧ್ಯವಿಲ್ಲ. ಕಾರಣ ಭಾರತದ ಭೂಮಾಲೀಕರೆಲ್ಲ ಆಂತರಿಕ ಬಂಧದ ಹೆಸರಿನಲ್ಲಿ ಒಂದಾಗಿಬಿಟ್ಟಿದ್ದರು. (106)

ಚಿಕ್ಕ ಪುಟ್ಟ ಪ್ರದೇಶಗಳು ಪ್ರತ್ಯೇಕ ರಾಷ್ಟ್ರೀಯತೆ ಘೋಷಿಸಿಕೊಂಡು ಸ್ವತಂತ್ರಕ್ಕಾಗಿ ಹೋರಾಡುವ ಕಾಲವೂ ಮುಗಿಯಿತು ಎನ್ನುವುದು ಇದರರ್ಥವಾಗಿತ್ತು. ರಾಷ್ಟ್ರೀಯತೆಯ ಭವಿಷ್ಯ ಪರಸ್ಪರರ ನಡುವಿನ ಐಕ್ಯತೆಯ ಮೇಲೆ ಅವಲಂಬಿತವಾಗಿತ್ತು. ಭಾರತದಾದ್ಯಂತ ಚದುರಿಹೋಗಿದ್ದ ರೈತ – ಕಾರ್ಮಿಕರಲ್ಲೂ ಏಕತೆಯ ಅವಶ್ಯಕತೆಯಿತ್ತು. ಊಳಿಗಮಾನ್ಯತೆ ವಿರೋಧಿ ಹೋರಾಟಗಳು ಇನ್ನೂ ಶೈಶಾವಸ್ಥೆಯಲ್ಲಿದ್ದ ಸಂದರ್ಭದಲ್ಲಿ ಊಳಿಗಮಾನ್ಯತೆ ರದ್ದಾಗಬೇಕಾದ ಅನಿವಾರ್ಯತೆಯಿತ್ತು. ಇತಿಹಾಸದ ದೃಷ್ಟಿಯಿಂದ ಹೇಳುವುದಾದರೆ ಸಮಗ್ರ ಭಾರತದ ಪ್ರಜ್ಞೆ ಕೆಲಸ ಮಾಡಿ ರೈತ ಕಾರ್ಮಿಕರಿಗೆ ಹಾದಿ ತೋರಬೇಕಿತ್ತು.

ಈ ಹೊಸ ಸರಕಾರದ ರಚನೆಯಿಂದ ಊಳಿಗಮಾನ್ಯ ವಿರೋಧಿ ಹೋರಾಟ ವಸಾಹತಿನ ವಿರುದ್ಧದ ಹೋರಾಟದೊಂದಿಗೆ ಮಿಳಿತವಾಗಬೇಕಾಯಿತು. ಒಂದನ್ನೊರತುಪಡಿಸಿ ಮತ್ತೊಂದಿರಲು ಸಾಧ್ಯವಿರಲಿಲ್ಲ, ಒಂದನ್ನು ಬುಡಸಮೇತ ಕಿತ್ತು ಹಾಕದೆ ಮತ್ತೊಂದನ್ನು ಇಲ್ಲವಾಗಿಸುವುದು ಸಾಧ್ಯವಿರಲಿಲ್ಲ. ಅದೇನು ಪ್ರಜ್ಞಾಪೂರ್ವಕವಾಗಿ ನಡೆಯಿತೋ ಅಥವಾ ತಕ್ಷಣದ ಪ್ರತಿಕ್ರಿಯೆಯೋ ಗೊತ್ತಿಲ್ಲ, ಈ ಅಂಶ ಸ್ವತಂತ್ರಕ್ಕಾಗಿ ಹಂಬಲಿಸಿದ ಕರ್ನಾಟಕ ಮತ್ತು ಭಾರತದ ಜನಸಮೂಹದಲ್ಲಿ ಅಚ್ಚಾದಂತೆ ಕಂಡುಬಂತು. ಇದು ದ್ವಂದ್ವ ಹೋರಾಟವಲ್ಲ, ಬದಲಿಗೆ ಒಗ್ಗಟ್ಟಾಗಿ ಶತ್ರುವನ್ನು ಎದುರಿಸಲು ಮಾಡಲೇಬೇಕಿದ್ದ ಎರಡು ಪದರಿನ ಹೋರಾಟ.

ಅಧ್ಯಾಯ 2 ಮುಗಿಯಿತು

ಮುಂದಿನ ವಾರ: 
ಅಧ್ಯಾಯ 3: ಜನಸಮೂಹದ ಮೇಲೆ ವಸಾಹತುಶಾಹಿ ಮಾಡಿದ ಪರಿಣಾಮ

Disclaimer: ಮೇಕಿಂಗ್ ಹಿಸ್ಟರಿ ಆಂಗ್ಲ ಪುಸ್ತಕದ ಅನುವಾದಿಸಲು ಬೇಕಾದ ಅಧಿಕೃತ ಹಕ್ಕುಗಳು ನನ್ನಲ್ಲಿಲ್ಲ. ಅನುವಾದದ ಹಕ್ಕನ್ನು ಕೊಡುವವರಲ್ಲನೇಕರು ಜೈಲಿನಲ್ಲಿದ್ದಾರಂತೆ. ಯಾರಲ್ಲಾದರೂ ಅಧಿಕೃತ ಅನುವಾದದ ಹಕ್ಕುಗಳು ಇದ್ದು ಆಕ್ಷೇಪಣೆ ಎತ್ತಿದರೆ ಕ್ಷಮಾಪಣೆಯೊಂದಿಗೆ ಅನುವಾದದ ಕಾರ್ಯವನ್ನು ನಿಲ್ಲಿಸಲಾಗುವುದು. ಸಾಕೇತ್ ರಾಜನ್ ದೃಷ್ಟಿಯ ಕರ್ನಾಟಕದ ಇತಿಹಾಸ ಕನ್ನಡ ಬಲ್ಲವರಿಗೂ ತಲುಪಲಿ ಎಂಬ ಉದ್ದೇಶದಿಂದ ಇದನ್ನು ಪ್ರಕಟಿಸಲಾಗುತ್ತಿದೆಯೇ ಹೊರತು ಯಾವುದೇ ವಾಣಿಜ್ಯ ಉದ್ದೇಶದಿಂದಲ್ಲ - ಡಾ. ಅಶೋಕ್. ಕೆ. ಆರ್.

ಮಾರ್ಚ್ 27, 2016

ಅನುಕಂಪದ ಪ್ರಕೃತಿ ಮತ್ತು ದುರಂಹಕಾರಿ ಮನುಷ್ಯ

ಡಾ. ಅಶೋಕ್.ಕೆ.ಆರ್.
27/03/2016
ಇಂಡಿಪೆಂಡೆನ್ಸ್ ಡೇ ಎನ್ನುವ ಇಂಗ್ಲೀಷ್ ಚಿತ್ರದಲ್ಲಿ ಪರಗ್ರಹ ಜೀವಿಗಳು ಒಂದು ಗ್ರಹದಿಂದ ಮತ್ತೊಂದು ಗ್ರಹಕ್ಕೆ ವಲಸೆ ಹೋಗುತ್ತ ಆ ಗ್ರಹದ ಸಮಸ್ತ ಸಂಪನ್ಮೂಲವನ್ನು ಗೋರಿ ಬಳಿದಾದ ಮೇಲೆ ಮತ್ತೊಂದು ಗ್ರಹದೆಡೆಗೆ ಹೋಗಿಬಿಡುತ್ತಾರೆ. ಈ ಏಲಿಯನ್ನುಗಳ ಅಧ್ಯಯನದಲ್ಲಿ ತೊಡಗಿಕೊಂಡ ಕೆಲವರ ಪ್ರಕಾರ ಮನುಷ್ಯ ಜೀವಿಯೇ ಈ ಭೂಮಿಗೆ ಏಲಿಯನ್ನು, ಬೇರೆ ಗ್ರಹದಿಂದ ಇಲ್ಲಿಗೆ ಬಂದಿದ್ದಾನವನು ಎನ್ನುವ ಗುಮಾನಿಯನ್ನು ವ್ಯಕ್ತಪಡಿಸುತ್ತಾರೆ! ಇಂಡಿಪೆಂಡೆನ್ಸ್ ಡೇ ಚಿತ್ರದಲ್ಲಿ ಭೂಮಿಯನ್ನು ಕಬಳಿಸಲು ಬಂದ ಏಲಿಯನ್ನಿಗೂ ಭೂಮಿ ಮೇಲಿದ್ದು ಭೂಮಿಯನ್ನು ಕಬಳಿಸುತ್ತ ಅನ್ಯಗ್ರಹದೆಡೆಗೆ ದೃಷ್ಟಿ ಹರಿಸಿರುವ ಮನುಷ್ಯನಿಗೂ ಸಾಮ್ಯತೆ ಇದೆಯಲ್ಲವೇ?! 

ಈ ಬಾರಿ ರಣ ಬಿಸಿಲು, ಪ್ರತೀ ಬಾರಿಯೂ ಹಿಂದಿನ ಸಲಕ್ಕಿಂತ ಹೆಚ್ಚು ಬಿಸಿಲಿದೆ ಎಂಬನುಭವವಾಗುತ್ತಿದೆ. ‘ಅಯ್ಯೋ ಬಳ್ಳಾರಿ ರಾಯಚೂರಿನಲ್ಲಿ ಟೆಂಪರೇಚರ್ರು ನಲವತ್ತು ದಾಟುತ್ತಂತೆ ಅದೆಂಗೆ ಇರ್ತಾರೋ!’ ಎಂದಚ್ಚರಿ ವ್ಯಕ್ತಪಡಿಸುತ್ತಿದ್ದ ಹಳೇ ಮೈಸೂರಿಗರಿಗೂ ಈಗ ನಲವತ್ತು ಡಿಗ್ರಿ ನೋಡುವ ಸಂಭ್ರಮ ಹತ್ತಿರದಲ್ಲೇ ಇದೆ ಎಂಬ ಭಾವನೆ ಬರುತ್ತಿದೆ. ಇನ್ನು ಏಪ್ರಿಲ್ ಮೇ ತಿಂಗಳಿನಲ್ಲಿ ನಲವತ್ತು ನೋಡುತ್ತಿದ್ದ ಉತ್ತರ ಕರ್ನಾಟಕದಲ್ಲಿ ಫೆಬ್ರವರಿ ತಿಂಗಳಲ್ಲೇ ನಲವತ್ತೊಂದು ನಲವತ್ತೆರಡು ನೋಡುವ ಕರ್ಮ ಎದುರಾಗಿದೆ. ಶಿವರಾತ್ರಿವರ್ಗೂ ಚಳಿ ಇರುತ್ತೆ ಅನ್ನೋ ನಂಬಿಕೆ ಸುಳ್ಳಾಗಿಬಿಟ್ಟಿದೆ ಈ ವರ್ಷ. ಈ ರೀತಿಯ ಹವಾಮಾನ ವೈಪರೀತ್ಯಗಳು ಕೂಡ ಪ್ರಕೃತಿಯ ನಿಗೂಡ ನೀತಿ ನಿಯಮಗಳ ಅನುಸಾರವಾಗಿಯೇ ಇರುತ್ತದೆ ಎನ್ನುವುದು ಹೌದಾದರೂ ಮನುಷ್ಯ ತನ್ನ ಪ್ರತಿ ಹೆಜ್ಜೆಯಲ್ಲೂ ಪ್ರಕೃತಿಯ ಮೇಲೆ ನಡೆಸುತ್ತಿರುವ ಅನಾಚಾರಗಳು ಈ ಹವಾಮಾನ ವೈಪರೀತ್ಯಕ್ಕೆ ತನ್ನದೇ ಆದ ಕೊಡುಗೆ ನೀಡುತ್ತಿದ್ದಾನೆ. ಏನೇ ಆದ್ರೂ ಪ್ರಕೃತಿಗೆ ತನ್ನದೇ ಒಡಲ ಕುಡಿಯಾದ ಮನುಷ್ಯನ ಬಗೆಗೂ ಒಂದಷ್ಟು ಪ್ರೀತಿ, ಕನಿಕರ, ಅನುಕಂಪವಿದ್ದೇ ಇದೆ. ಆ ಅನುಕಂಪವನ್ನೂ ದುರಹಂಕಾರದಿಂದ ಕಡೆಗಣಿಸುವಷ್ಟು ನಾವು ನೀಚರಾಗಿಬಿಟ್ಟಿದ್ದೇವೆ ಎನ್ನುವುದಕ್ಕೆ ಸಾಕ್ಷಿಯಾಗಿ ದಾವಣಗೆರೆಯ ಜಗಳೂರು ತಾಲ್ಲೂಕಿನ ದೊಣೆಹಳ್ಳಿಯ ಕಲ್ಲು ಕ್ವಾರಿಯ ಉದಾಹರಣೆಯಿದೆ.

ಒಂದು ರೌಂಡು ಭೂಮಿ ಮೇಲಿನ ನೀರನ್ನೆಲ್ಲ ಮಲಿನಗೊಳಿಸಿ, ಉಪಯೋಗಿಸಲು ಯೋಗ್ಯವಾಗದಂತೆ ಮಾಡಿ, ಖಾಲಿಮಾಡಿ ಅಂತರ್ಜಾಲಕ್ಕೆ ಕೈ ಹಾಕಿ ಬಹಳಷ್ಟು ದಶಕಗಳೇ ಕಳೆದುಹೋದವು. ನೂರಡಿಯಲ್ಲಿ ನೀರು ದೊರಕುತ್ತಿದ್ದ ನದಿ ಪಾತ್ರಗಳಲ್ಲೂ ಈಗ ಸಾವಿರ ಅಡಿಯವರೆಗೆ ಕೊರೆಸಬೇಕಾದ ಅನಿವಾರ್ಯತೆ. ಸಾವಿರ ಅಡಿ ಕೊರಸಿದ ಮಾತ್ರಕ್ಕೇ ನೀರು ಸಿಕ್ಕೇಬಿಡುತ್ತದೆನ್ನುವ ಗ್ಯಾರಂಟಿಯೇನಿಲ್ಲ. ಒಂದಾದ ಮೇಲೊಂದು ಬೋರ್ ವೆಲ್ ಕೊರೆಸಿ ಕೊರೆಸಿ ಸಾಲ ಹೆಚ್ಚಾಗಿ ಆರಂಭ ತೊರೆದು ಬೆಂಗಳೂರು ಸೇರಿರುವವರ ಸಂಖೈ ಕಡಿಮೆಯೇನಲ್ಲ. ಭೂಮಿ ಮೇಲೆ ಭೂಮಿ ಕೆಳಗೆ ಮನುಷ್ಯನಿಂದ ಇಷ್ಟೆಲ್ಲ ತೊಂದರೆ ಅನುಭವಿಸಿದ ನೀರಿಗೂ ಈ ಬಿಸಿಲಿನ ಝಳಕ್ಕೆ ಮನುಷ್ಯ ಮತ್ತು ಇನ್ನಿತರೆ ಪ್ರಾಣಿಗಳು ಅನುಭವಿಸುತ್ತಿರುವ ಕಷ್ಟಗಳನ್ನು ನೋಡಿ ಅನುಕಂಪ ಮೂಡಿರಬೇಕು. ಕೊಳವೆ ಬಾವಿಗಳ ಬಾಯಿಗೆ ಸಿಗದೇ ತಪ್ಪಿಸಿಕೊಂಡು ಜಗಳೂರು ತಾಲ್ಲೂಕಿನ ದೊಣೆಹಳ್ಳಿ ಎಂಬ ಊರಿನಲ್ಲಿ ನವ ಭಾರತ ಬಿಲ್ಡಿಂಗ್ ಕಂಪನಿಯವರ ಕಲ್ಲು ಕ್ವಾರಿಯ ಹೊಂಡದ ಸಂದಿಯಲ್ಲಿ ಆಕಾಶ ನೋಡಿತು ನೀರು! ನೋಡನೋಡುತ್ತಿದ್ದಂತೆಯೇ ಇಡೀ ಕಲ್ಲು ಕ್ವಾರಿಯಲ್ಲಿ ಬೇಸಿಗೆಯಿಡೀ ಸುತ್ತಮುತ್ತಲಿನ ಹಳ್ಳಿಗಳ ಜನ – ಜಾನುವಾರುಗಳಿಗೆಲ್ಲ ಪೂರೈಸಲು ಸಾಕಾಗುವಷ್ಟು ನೀರು ತುಂಬಿಕೊಂಡಿಬಿಟ್ಟಿತು. ಊರಿನ ಜನರಿಗೆಲ್ಲ ಸಂತಸ, ಆದರೆ ಈ ಸಂತಸ ಎಲ್ಲರಲ್ಲೂ ಕಾಣಲಿಲ್ಲ.

ಕಲ್ಲು ಕ್ವಾರಿಯ ಮೇಲಿನ ಅಧಿಕಾರವಿದ್ದಿದ್ದು ಖಾಸಗಿ ಕಂಪನಿಗೆ. ಕಾನೂನಿನ ಪ್ರಕಾರ ಅದು ಅವರ ಜಾಗ, ಅವರ ಜಾಗದಲ್ಲಿನ ನೀರನ್ನು ಅವರು ಏನು ಬೇಕಾದರೂ ಮಾಡಬಹುದು. ಸುತ್ತಮುತ್ತಲಿನ ಊರಿನವರಿಗೆಲ್ಲ ನೀರು ಕೊಟ್ಟು ಕಂಪನಿಯವರಿಗೇನಾಬೇಕಿತ್ತು? ದೊಡ್ಡ ದೊಡ್ಡ ಮೋಟಾರು ಪಂಪುಗಳನ್ನು ತರಿಸಿ ಕಲ್ಲು ಕ್ವಾರಿಯ ಹೊಂಡದಲ್ಲಿ ತುಂಬಿದ ಸಿಹಿ ನೀರನ್ನು ರಸ್ತೆಗೆ ಹರಿಸಲಾರಂಭಿಸಿದರು. ಇದು ಸಾರ್ವಜನಿಕ ಆಸ್ತಿ ಎಂದು ಘೋಷಿಸಿ, ಆ ಕಂಪನಿಗೆ ಒಂದಷ್ಟು ಪರಿಹಾರವನ್ನೂ ಕೊಟ್ಟು ನೀರು ಹೊಂಡವನ್ನು ರಕ್ಷಿಸಬೇಕಾದ ಆಡಳಿತ ಯಂತ್ರ ಕೂಡ ಕಲ್ಲು ಕ್ವಾರಿಯ ‘ಒಡೆಯರ’ ನಿರ್ಧಾರಗಳಿಗೇ ಮಣೆ ಹಾಕಿತು. ಸಾವಿರ ಸಾವಿರ ನೀರು ರಸ್ತೆಯ ಮೇಲೆ ಹರಿಯಲಾರಂಭಿಸಿತು. ಪ್ರಕೃತಿಯೇ ಕುಡೀರಪ್ಪ ಅಂತ ಹೊರಹಾಕಿದ ನೀರನ್ನು ಮತ್ತೆ ಅಂತರ್ಜಲಕ್ಕೇ ಕಳಿಸುವ ಹುನ್ನಾರ! ಬೇಸತ್ತ ಅಲ್ಲಿನ ಜನತೆ ಹೊಂಡಕ್ಕೆ ಮುತ್ತಿಗ ಹಾಕಿ ಪಂಪುಗಳನ್ನು ವಶಪಡಿಸಿಕೊಂಡಿದ್ದಾರೆ ಎಂದಿವತ್ತಿನ ಪ್ರಜಾವಾಣಿ ವರದಿ ಹೇಳುತ್ತಿದೆ. ಈ ಮುತ್ತಿಗೆ ಕಾನೂನಿನ ಬೆಂಬಲ ಸದ್ಯಕ್ಕಿಲ್ಲವೇನೋ, ಆದರೆ ಆಡಳಿತಾಧಿಕಾರಿಗಳು ಮನಸ್ಸು ಮಾಡಿದರೆ ದೊಣೆಹಳ್ಳಿ ಮತ್ತು ಸುತ್ತಮುತ್ತಲಿನ ಊರುಗಳ ನೀರಿನ ದಾಹ ಕಡೇ ಪಕ್ಷ ಈ ವರ್ಷವಾದರೂ ನೀಗುತ್ತದೆಯಲ್ಲವೇ? ದುರಹಂಕಾರಿ ಮನುಷ್ಯ ಏನು ಮಾಡುತ್ತಾನೋ ಕಾದು ನೋಡೋಣ.
Update: ಕಲ್ಲುಕ್ವಾರಿಯ ಹೊಂಡದಲ್ಲಿನ ನೀರನ್ನು ಕುಡಿಯುವ ಉದ್ದೇಶಕ್ಕೆ ಬಳಸಬೇಕೆಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ದಾವಣಗೆರೆಯ ಜಿಲ್ಲಾಧಿಕಾರಿಗೆ ಸೂಚಿಸಿದ್ದಾರೆ.

ಮಾರ್ಚ್ 25, 2016

ಮೇಕಿಂಗ್ ಹಿಸ್ಟರಿ: ಮಧ್ಯವರ್ತಿ – ಖರೀದಿದಾರ ವರ್ಗದ ಉಗಮಕ್ಕಿದ್ದ ಸಾಮಾಜಿಕ ಸ್ಥಿತಿಗತಿ:- 2

making history ashok kr
ಸಾಕೇತ್ ರಾಜನ್
ಕನ್ನಡಕ್ಕೆ: ಡಾ. ಅಶೋಕ್. ಕೆ. ಆರ್
25/03/2016
ಅಡಿಕೆ ಮತ್ತು ತಂಬಾಕು ವ್ಯಾಪಾರದಲ್ಲಿ ಮಧ್ಯವರ್ತಿ ವ್ಯಕ್ತಿತ್ವ ಬೆಳೆಸಿಕೊಳ್ಳದ ಕನ್ನಡಿಗ ವರ್ತಕರ ಏಕಸಾಮ್ಯವನ್ನು ಹಾಳು ಮಾಡಿದ ವಸಾಹತು ಶಕ್ತಿ ತನ್ನ ಮಧ್ಯವರ್ತಿಗಳನ್ನು ಬೆಳೆಸಿದ ರೀತಿಯನ್ನು ಸ್ಪಷ್ಟವಾಗಿ ಕಾಣಬಹುದು. 

ನರೇಂದ್ರ ಪಣಿ ಹೇಳುತ್ತಾರೆ: “ವರ್ತಕರಲ್ಲಿ ಮತ್ತಷ್ಟು ಅಸಹನೆ ಉಂಟಾಗಿತ್ತು; ಕಬ್ಬನ್ (ಬ್ರಿಟೀಷರ ನೇರ ಆಡಳಿತ ಜಾರಿಯಾದ ಮೇಲೆ ಮೈಸೂರು ರಾಜ್ಯದ ಕಮಿಷನರ್ ಕಬ್ಬನ್) ವರ್ತಕರು ಒಂದು ಮಿತಿಗಿಂತ ಮೇಲೆ ಬೆಳೆಯದಂತೆ ಮಾಡಿದ ಮೇಲೆ. ಇದರಿಂದ ತಂಬಾಕು ಮತ್ತು ಅಡಿಕೆ ವ್ಯಾಪಾರ ನಡೆಸಿಕೊಂಡು ಬಂದಿದ್ದ ಶ್ರೀಮಂತ ವರ್ತಕರ ಒಂದು ವರ್ಗದ ಪಾರಂಪರಿಕ ಏಕಸಾಮ್ಯತೆ ಮುರಿದುಬಿತ್ತು. ಬೆಂಗಳೂರು ಮತ್ತು ಸುತ್ತಮುತ್ತಲಿನ ತಂಬಾಕು ಏಕಸಾಮ್ಯತೆಯನ್ನು ಮುರಿಯಲು ಮೊದಲು ಕಟ್ಟಳೆ ವಿಧಿಸಿ ನಂತರ ಉತ್ತಮ ಗುಣಮಟ್ಟದ ವಿದೇಶಿ ತಂಬಾಕನ್ನು ಕಡಿಮೆ ಬೆಲೆಗೆ ಮಾರುಕಟ್ಟೆಗೆ ಪರಿಚಯಿಸಿ ಮತ್ತು ಒಂದು ಮಣ ತಂಬಾಕಿಗೆ ಮೂರುವರೆ ರುಪಾಯಿ ಸಾಯರ್ ತೆರಿಗೆಯನ್ನು ಮಾರಾಟವಾಗುವ ಎಲ್ಲಾ ತಂಬಾಕಿನ ಮೇಲೂ ವಿಧಿಸಿದರು.” (89) 

ಹೀಗೆ ಸ್ವತಂತ್ರವಾಗಿದ್ದ ಕನ್ನಡ ವರ್ತಕರನ್ನು ಬುಡಸಹಿತ ಕೀಳಲಾಯಿತು. ಮೊದಲ ಸಂಪುಟದಲ್ಲಿ ಬಣಜಿಗ ವರ್ತಕ ಸಮುದಾಯ ಉನ್ನತಿಯಿಂದ ಜಾರಿಬಿದ್ದಿದ್ದನ್ನು ನಾವು ನೋಡಿದ್ದೇವೆ. (90) ಮೂರನೇ ಸಂಪುಟದಲ್ಲಿ ಈ ಬೆಳವಣಿಗೆಗಳು ಕರ್ನಾಟಕದ ರಾಷ್ಟ್ರೀಯ ಪ್ರಶ್ನೆಯ ಮೇಲುಂಟು ಮಾಡಿದ ಪರಿಣಾಮಗಳನ್ನು ನೋಡೋಣ. ಸದ್ಯಕ್ಕೆ ಇದೇ ರೀತಿಯ ವಿದ್ಯಮಾನ ಬೇರೊಂದು ಪ್ರದೇಶದಲ್ಲಿ ನಡೆದದ್ದರ ಬಗ್ಗೆ ಉಲ್ಲೇಖಿಸುವ ಸುನಿತಿ ಘೋಷರ ಬರಹ ನೋಡೋಣ: “ವಸಾಹತು ಆಳ್ವಿಕೆಯ ಮೊದಲ ಕೆಲವು ವರ್ಷಗಳಲ್ಲಿ ಪೂರ್ವ ಭಾರತದ ಹಳೆಯ ದೊಡ್ಡ ವರ್ತಕರು ಮತ್ತು ಬ್ಯಾಂಕರ್ಗಳು ದಿವಾಳಿಯಾದರೆ ಬ್ರಿಟೀಷರ ದಲ್ಲಾಳಿಗಳಾಗಿ ಕಾರ್ಯನಿರ್ವಹಿಸಿದವರು ಮತ್ತು ಬನಿಯಾಗಳು ಉನ್ನತಿ ಕಂಡರು. ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತಿದ್ದ ಭಾರತೀಯ ವರ್ತಕರನ್ನು ವಿದೇಶಿ ವಹಿವಾಟಿನ ಜೊತೆಗೆ ದೇಶೀ ವ್ಯಾಪಾರದಿಂದಲೂ ಮೂಲೋಚ್ಛಾಟನೆ ಮಾಡಲಾಯಿತು.” (91) 

ಮತ್ತೊಂದು ವಿಧದ ಮಧ್ಯವರ್ತಿತನವನ್ನು ಅಧಿಕಾರಶಾಹಿಯಲ್ಲಿ ಕಾಣಬಹುದು. ವಸಾಹತುಶಾಹಿಯ ಪ್ರಾರಂಭದ ದಿನಗಳಲ್ಲಿ ನಕಲಿ ಅಧಿಕಾರಶಾಹಿಯನ್ನು ಹುಟ್ಟುಹಾಕುವ ವಸಾಹತಿನ ಪ್ರಯತ್ನವನ್ನು ಕಾಣಬಹುದು; ಇದು ಮಧ್ಯವರ್ತಿಯ ರೂಪವನ್ನು ಹೊಂದಿತ್ತು. ಈ ವರ್ಗದ ಜನನವಾಗದೆ ತಮ್ಮ ಆಳ್ವಿಕೆ ಅಭದ್ರವೆಂದು ನಿರ್ಧರಿಸಿದ್ದರು. 

ರಾಜಾ ಎಂಬ ನಾಮಕಾವಸ್ಥೆ ಆಡಳಿತಗಾರನನ್ನು ಕಿತ್ತು ಹಾಕಿ 1831ರಲ್ಲಿ ಈಸ್ಟ್ ಇಂಡಿಯಾ ಕಂಪನಿ ನೇರ ಆಳ್ವಿಕೆಯನ್ನು ನಡೆಸಲಾರಂಭಿಸಿದಾಗ: “ಸಾಮ್ರಾಜ್ಯವನ್ನು ವಶಪಡಿಸಿಕೊಂಡ ಪ್ರಾರಂಭದಲ್ಲಿ ಗವರ್ನರ್ ಜೆನರಲ್ ಮದ್ರಾಸಿನ ಸರಕಾರಕ್ಕೆ ಕೊಟ್ಟ ಮೊದಲ ಸೂಚನೆ – ಕಮಿಷನರ್ ಗಳ ಕೆಳಗೆ ಕಾರ್ಯನಿರ್ವಹಿಸುವ ಏಜೆಂಟರು ದೇಶೀಯರಾಗಿರಬೇಕು…” (92) 

ಬ್ರಿಟೀಷರ ಈ ನಿರ್ಣಯಕ್ಕೆ ಕಾರಣ ಮನ್ರೋ ಕೈಗೊಂಡ ನಿರಂತರ ಪ್ರಚಾರ; ವಸಾಹತು ಸೌಧವನ್ನುಳಿಸಲು ಮಧ್ಯವರ್ತಿ ಅಧಿಕಾರಶಾಹಿಯ ಪಾತ್ರದ ಬಗೆಗಿನ ಮನ್ರೋನ ದೂರದರ್ಶಿ ಒಳನೋಟವನ್ನು ವಸಾಹತಿನ ಸಮರ್ಥಕರು “ಮನ್ರೋ ಲಿಬರಲಿಸಂ” (ಮನ್ರೋನ ಪ್ರಗತಿಪರತೆ) ಎಂದು ಕರೆದರು.” (93) 

1822ರಲ್ಲಿ ಎಲ್ಫಿನ್ ಸ್ಟೋನಿಗೆ ಬರೆದ ಪತ್ರದಲ್ಲಿ ಮನ್ರೋ: “ಕಂದಾಯ ಮಂಡಳಿಗೆ ಸಂಪೂರ್ಣ ದೇಶೀ ಸ್ಪರ್ಶ ನೀಡಿದ್ದೇನೆ….. ಇದು ಸಮರ್ಥ ಮತ್ತು ಮಹತ್ವಾಕಾಂಕ್ಷೆಯುಳ್ಳ ಸ್ಥಳೀಯರಿಗೆ ಹೊಸ ಅವಕಾಶಗಳನ್ನು ತೆರೆಯುತ್ತದೆ ಮತ್ತು ಅರ್ಧ ಶತಮಾನ ಅಥವಾ ಮುಂದಿನ ಒಂದು ಶತಮಾನದವರೆಗೆ ಸರ್ಕಾರ ಅವರಿಗೊಂದು ಪಾಲು ಕೊಡುವುದಕ್ಕೆ ದಾರಿ ತಯಾರುಮಾಡುತ್ತದೆ.” (95) 

ವಸಾಹತುಶಾಹಿ ಸ್ವಲ್ಪ ತಡವಾಗಿ ವಶಪಡಿಸಿಕೊಂಡ ಕರ್ನಾಟಕ ಪ್ರಾಂತ್ಯಕ್ಕೆ ಈಗಾಗಲೇ ‘ಅಭಿವೃದ್ಧಿ’ ಹೊಂದಿದ ಮದ್ರಾಸ್ ಮತ್ತು ಬಾಂಬೆಯ ಮಧ್ಯವರ್ತಿ ಅಧಿಕಾರಿಗಳು ಪ್ರವೇಶಿಸಿದರು. ಬ್ರಿಟೀಷ್ ಆಡಳಿತದ ವಕ್ತಾರರಾದ ಈ ಮೇಲ್ಮಟ್ಟದ ಅಧಿಕಾರಿಶಾಹಿ ಚಿಕ್ಕ ಸಂಖೈಯಲ್ಲಿದ್ದರೂ ಕರ್ನಾಟಕಕ್ಕೆ ಮಧ್ಯವರ್ತಿ ಅಧಿಕಾರಿಗಳನ್ನು ಪೂರೈಸುವ ಪ್ರಮುಖ ಮೂಲವಾದರು. 

ರಾಜ್ಯದ ಎರಡು ತೋಳುಗಳಂತಿದ್ದ ರೆವಿನ್ಯೂ ಆಡಳಿತ (ಪೋಲೀಸ್ ಮತ್ತು ಮ್ಯಾಜಿಸ್ಟ್ರೇಟ್ ಕಾರ್ಯ ಜೊತೆಗೂಡಿದ) ಮತ್ತು ಸೈನ್ಯ, ವಸಾಹತುಶಾಹಿಯ ಮೊದಲ ದಶಕಗಳಲ್ಲಿ ಮಧ್ಯವರ್ತಿ ಅಧಿಕಾರಿಗಳನ್ನು ಅಂದಗೊಳಿಸಿದರು. ಈ ಎರಡೂ ವ್ಯವಸ್ಥೆಗೆ ಹಸಿ ಮಾಂಸವನ್ನೇ ಭಕ್ಷಿಸುವಷ್ಟು ಹಸಿವಿತ್ತು. ಕರ್ನಾಟಕದ ರೆವೆನ್ಯೂ ಆಡಳಿತದಲ್ಲಿ, ಅದು ತಳಮಟ್ಟದಲ್ಲಿರಬಹುದು ಮೇಲ್ಮಟ್ಟದಲ್ಲಿರಬಹುದು, ಶ್ರೀಮಂತ ಭೂಮಾಲೀಕರೇ ಇದ್ದರು. ರೆವೆನ್ಯೂ ವ್ಯವಸ್ಥೆಯಲ್ಲಿ ಬ್ರಾಹ್ಮಣರ ಪ್ರಾಬಲ್ಯವಿತ್ತು. ಹತ್ತಲವು ಬಣ್ಣಗಳಲ್ಲಿ ತಮ್ಮನ್ನು ತಾವು ತೋರ್ಪಡಿಸಿಕೊಳ್ಳುತ್ತಿದ್ದರು. ಆದರೆ ಲಂಬ ಕಪ್ಪು ಪಟ್ಟಿಯವರು ತೆರಿಗೆ ವಸೂಲಿಯ ಶರಾತ್ ವ್ಯವಸ್ಥೆ ಜಾರಿಗೆ ಬಂದಾಗ ಮೈಸೂರು ಸರಕಾರದ 30% ಜಾಗಗಳನ್ನಾಕ್ರಮಿಸಿಕೊಂಡುಬಿಟ್ಟಿದ್ದರು. ಪ್ರತಿರೋಧ ಎದ್ದ ನಂತರ ನಗರದ ಸೈನ್ಯದ ಮುಂದಾಳತ್ವ ವಹಿಸಿದ ಹೆಚ್. ಸ್ಟೋಕ್ಸ್ ಅಧಿಕಾರಶಾಹಿಯಲ್ಲಿ ಲಿಂಗಾಯತರನ್ನು ಸೇರಿಸಿಕೊಳ್ಳಬೇಕೆಂದು ಶಿಫಾರಸು ಮಾಡಿದ. (96) ಅಧಿಕಾರಶಾಹಿಯು, ಕಟ್ಟಿಕೊಂಡ ಚರಂಡಿಯಾಗಿದ್ದನ್ನು ನೋಡಿದ ಕೆಲವು ಸಮಕಾಲೀನ ಲೇಖಕರಿಗೆ ಇದು ಬ್ರಿಟೀಷರ ಬ್ರಾಹ್ಮಣ ವಿರೋಧಿ ನ್ಯಾಯಪರತೆಯಂತೆ ಕಂಡಿತು. ಆದರಿದು ಕುತಂತ್ರಿ ಬ್ರಿಟೀಷರು ಆಳ್ವಿಕೆಯ ಚಕ್ರ ಮುಂದೋಡಲು ಕಂಡುಕೊಂಡ ಅವಕಾಶವಾದಿ ಅನುಕೂಲತೆಯಾಗಿತ್ತು. ಕೆಳಮಟ್ಟದ ಅಧಿಕಾರಿಗಳಲ್ಲಿ ಹೆಚ್ಚಿನವರು ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯಕ್ಕೆ ಸೇರಿದವರಾಗಿದ್ದರು. ಮೇಲಿನ ಅಧಿಕಾರ, ಬ್ರಹ್ಮನ ಆದೇಶದಂತೆಯೇ, ಬ್ರಾಹ್ಮಣರ ವಶವಾಗಿತ್ತು. 

ಈ ಸಂಪುಟ ನಿಷ್ಠವಾಗಿರುವ ವಸಾಹತಿನ ಮೊದಲ ದಶಕಗಳಲ್ಲಿ ಅಧಿಕಾರಶಾಹಿಯನ್ನು ಭೂಮಾಲೀಕರಿಂದ ಬೇರ್ಪಡಿಸುವ ನಿರೀಕ್ಷೆಯನ್ನು ಕಲ್ಪಿಸುವುದೂ ಸಾಧ್ಯವಿಲ್ಲ. ಕೊಬ್ಬಿದ ಅಧಿಕಾರಶಾಹಿಗಳು ಅದೇ ಸಮಯದಲ್ಲಿ ವಿಸ್ತಾರ ಭೂಪ್ರದೇಶದ ಮಾಲೀಕರಾಗಿಯೂ ಏಳಿಗೆ ಹೊಂದಿದರು. ಹಾಗಾಗಿ ಇವರನ್ನು ‘ಊಳಿಗಮಾನ್ಯ – ಮಧ್ಯವರ್ತಿ ಅಧಿಕಾರಿಗಳು’ ಎಂದು ಕರೆದರೆ ತಪ್ಪಾಗಲಾರದು. 

ಮೈಸೂರಿನ ಆಡಳಿತಶಾಹಿಯ ಕಟ್ಟುವಿಕೆಯ ಬಗ್ಗೆ ಶಾಮ ರಾವ್ ಹೇಳುತ್ತಾರೆ: “ಮೂರನೇ ಕೃಷ್ಣರಾಜ ಒಡೆಯರ ನೇತೃತ್ವದಲ್ಲಿ ಹೊಸ ಸರಕಾರದ ಸ್ಥಾಪನೆಯಾದಾಗ ಹಲವು ಪಾಳೇಗಾರರು ದೇಶದ ವಿವಿಧ ಭಾಗಗಳಿಗೆ ನಿವೃತ್ತರಾದರು, ಭವಿಷ್ಯದ ಗೊಂದಲಗಳಿಂದ ಸಿಗಬಹುದಾದ ಅವಕಾಶಗಳ ನಿರೀಕ್ಷೆಯಲ್ಲಿ. ಪ್ರತಿರೋಧದ ವ್ಯಕ್ತಿತ್ವದ ಚಿಕ್ಕ ಸಂಖೈಯ ಪಾಳೇಗಾರರನ್ನು ಬಂಧಿಸಲಾಯಿತು, ರಾಜಿ ಸೂತ್ರಕ್ಕೆ ಒಪ್ಪಿಕೊಂಡವರಿಗೆ (ಇವರ ಸಂಖೈಯೇ ಅಧಿಕ) ಸೂಕ್ತ ಸರಕಾರಿ ಪಿಂಚಣಿ ನೀಡಲಾಯಿತು ಅಥವಾ ಸಾರ್ವಜನಿಕ ಆಡಳಿತ/ ಸೈನ್ಯಕ್ಕೆ ನೇಮಕ ಮಾಡಿಕೊಳ್ಳಲಾಯಿತು…… ಪೂರ್ಣಯ್ಯ ಇವರ ಭಾವನೆಗಳಿಗೆ ಯಾವಾಗಲೂ ಗೌರವ ಕೊಡುತ್ತ ದಯಾಳುತನದಿಂದ ಮತ್ತು ಕೃಪಾ ದೃಷ್ಟಿಯಿಂದ ನೋಡಿಕೊಂಡರು.” (97) 

ಮಧ್ಯವರ್ತಿ ಅಧಿಕಾರಶಾಹಿಯ ಸಂಯೋಜನೆ ಮತ್ತು ಅದಕ್ಕಿದ್ದ ಊಳಿಗಮಾನ್ಯತೆಯ ಬೇರುಗಳ ಬಗ್ಗೆ ಶ್ಯಾಮ್ ಭಟ್ ಹೀಗೆ ತಿಳಿಸುತ್ತಾರೆ: “ರೆವೆನ್ಯೂ ಆಡಳಿತವನ್ನು ಬ್ರಿಟೀಷರು ಪರಿಚಯಿಸಿದಾಗ ಅದರ ಕಾರ್ಯನಿರ್ವಹಣೆಗೆ ಸ್ಥಳೀಯ ವೈಶಿಷ್ಟ್ಯಗಳನ್ನು ಚೆನ್ನಾಗಿ ಬಲ್ಲ ಜನರ ಅವಶ್ಯಕತೆಯಿತ್ತು. ಕಂಪನಿಯ ಅಧಿಕಾರಿಗಳಿಗೆ ಆ ರೀತಿಯ ಜನರು ಬ್ರಾಹ್ಮಣ, ಸಾರಸ್ವತ ಬ್ರಾಹ್ಮಣ ಮತ್ತು ಬಂಟ್ ಸಮುದಾಯದಲ್ಲಿ ಸಿಕ್ಕಿದರು. ಇವರಲ್ಲಿ ಬ್ರಿಟೀಷರ ಕೃಷಿ ಪದ್ಧತಿಯನ್ನು ನಿರ್ವಹಿಸಲು ಬೇಕಿದ್ದ ಗುಣಗಳಿದ್ದವು.” (98) 

ಕರಾವಳಿ ಜಿಲ್ಲೆಗಳಲ್ಲಿ ಹುಟ್ಟಿಕೊಂಡ ಅಧಿಕಾರಶಾಹಿಯ ಬಗ್ಗೆ ನಮಗೆ ಮಾಹಿತಿ ನೀಡುತ್ತ ಸೂರ್ಯಕಾಂತ್ ಕಾಮತ್ ಚಿತ್ರಾಪುರ ಬ್ರಾಹ್ಮಣರ ಬಗ್ಗೆ ಹೀಗೆ ಹೇಳುತ್ತಾರೆ: “ಕೆಲವು ವಿಶಿಷ್ಟ ಐತಿಹಾಸಿಕ ಮತ್ತು ಸಾಮಾಜಿಕ ಕಾರಣಗಳಿಂದಾಗಿ, ಈ ಗುಂಪಿನ ಜನರು ಆಂಗ್ಲ ಶಿಕ್ಷಣವನ್ನು ಕೆನರಾದ ಉಳಿದೆಲ್ಲ ಸಮುದಾಯಗಳಿಗಿಂಗಲೂ ಮುಂಚೆ ಪಡೆದುಕೊಂಡರು. ಹಾಗಾಗಿ ಈ ಎರಡೂ ಸಮುದಾಯಗಳು ಕೆನರಾ ಜಿಲ್ಲೆಗಳಲ್ಲಿನ ಬ್ರಿಟೀಷ್ ಸೇವೆಯಲ್ಲಿ ಪ್ರಾಬಲ್ಯ ಮೆರೆದರು.” (98A) 

ಮತ್ತೆ, ಬಾಂಬೆ ಕರ್ನಾಟಕ ಭಾಗದ ಮುಂಡರಗಿಯ ಭೀಮರಾವಿನ ಉದಾಹರಣೆಯೂ ಇದೆ. ಅವನ ತಾತ ದಂಬಲ್ ದೇಸಾಯಿಯ ನ್ಯಾಯಾಲಯದಲ್ಲಿ ಮುಖ್ಯ ಸಲಹೆಗಾರರಾಗಿದ್ದರು ಮತ್ತವರ ತಂದೆ ಪೇಶ್ವೆ ಆಡಳಿತದಲ್ಲಿ ನ್ಯಾಯಾಧೀಶರಾಗಿದ್ದರು. (99) ಮತ್ತೊಂದು ಮಜಲಿನಲ್ಲಿ ಹೇಳುವುದಾದರೆ ಭೀಮರಾವ್ ನ ವಂಶಾವಳಿ ಪ್ರಭುತ್ವದ ಜೊತೆಗಿನ ಸಂಬಂಧವನ್ನು ಸಲೀಸುಗೊಳಿಸಿತ್ತು. ಬ್ರಿಟೀಷರು ದಯಪಾಲಿಸಿದ ಹನ್ನೆರಡು ಇನಾಮುಗಳನ್ನು ಭೀಮಾರಾವ್ ಸಂತೋಷದಿಂದ ಅನುಭವಿಸಿದ. ಆದರೆ ಭೀಮರಾವ್, ತನ್ನ ಪೂರ್ವಜರಂತೆ ಸರಳ ಭೂಮಾಲೀಕನಾಗಿರಲಿಲ್ಲ. ಬ್ರಿಟೀಷರ ಅಧಿಕಾರಿಯಾಗಿಯೂ ಸೇವೆಗೈದ. ಮೊದಲು ಹರಪನಹಳ್ಳಿಯ ತಹಸೀಲ್ದಾರನಾಗಿ, ನಂತರ ಬಳ್ಳಾರಿಯ ತಹಸೀಲ್ದಾರನಾಗಿ ನೇಮಕಗೊಂಡಿದ್ದ ಭೀಮಾರಾವನ ರೀತಿ ಅನೇಕರಿದ್ದರು. ಅವನಂತಲ್ಲದ ಕೆಲವೇ ಕೆಲವರು ಬ್ರಿಟೀಷರ ಜೊತೆಗಿನ ಸಂಬಂಧವನ್ನು ಮುರಿದುಕೊಂಡಿದ್ದರು. ಇರಲಿ, ಅದು ಈಗ ಸದ್ಯ ಬೇಕಿಲ್ಲದ ಅಂಶ; ಈ ಸಂಪುಟದ ಎರಡನೇ ಭಾಗ ಅದರ ಬಗ್ಗೆ ಹೆಚ್ಚು ತಿಳಿಸಿಕೊಡುತ್ತದೆ. 

ಮಧ್ಯವರ್ತಿ ಅಧಿಕಾರಿಗಳ ರೂಪುಗೊಳ್ಳುವಿಕೆಗೆ ಎರಡನೇ ಮೂಲ ಸೈನ್ಯ. ಬ್ರಿಟೀಷರ ಭಾರತೀಯ ಸೈನ್ಯ ಟಿಪ್ಪು ಸುಲ್ತಾನನ ಸೈನ್ಯದಿಂದ ಯಾರನ್ನೂ ನೇಮಿಸಿಕೊಳ್ಳದಿರುವ ನೀತಿಯನ್ನು ಅಳವಡಿಸಿಕೊಂಡಿತು, ಕಮಾಂಡರುಗಳಿಗೆ ನಿವೃತ್ತಿ ಕೊಟ್ಟು ಉಳಿದ ಸೈನಿಕರನ್ನು ಕೆಲಸದಿಂದ ತೆಗೆದುಹಾಕಿದರು. (100) ಇದಾದ ನಂತರವೂ ಸುಮಾರು ಅರ್ಧ ಲಕ್ಷದಷ್ಟು ಜನರು ಮೈಸೂರು ರಾಜ, ಕೊಡಗು ರಾಜ ಮತ್ತು ವಿವಿಧ ಪಾಳೇಗಾರರು ಹಾಗೂ ದೇಶಗತಿಗಳ ಸೈನ್ಯದಲ್ಲಿದ್ದರು. ಈ ಸೈನ್ಯದ ಮೇಲ್ಮಟ್ಟದ ಅಧಿಕಾರಿಗಳು ಮಧ್ಯವರ್ತಿಗಳಾಗಿ ಬೆಳೆದರು. ಕೊಡಗಿನಿಂದ ಸೆಳೆದುಕೊಂಡ ಕೆಲವು ಉನ್ನತ ಸೇನಾಧಿಕಾರಿಗಳನ್ನು ನೇರವಾಗಿ ಬ್ರಿಟೀಷರ ಭಾರತೀಯ ಸೈನ್ಯಕ್ಕೆ ಸೇರಿಸಿಕೊಳ್ಳಲಾಯಿತು. ಆದಾಗ್ಯೂ ಈ ವಿಭಾಗದಲ್ಲಿ ಬ್ರಾಹ್ಮಣರ ಸಂಖೈ ಕಡಿಮೆಯಿತ್ತು; ಕಡಿಮೆಯಿತ್ತು, ಗಣನೆಗೆ ಬಾರದಷ್ಟೇನಲ್ಲ. ಅರಸು, ಕೊಡವ ಮತ್ತು ಲಿಂಗಾಯತರು ಬ್ರಿಟೀಷರು ಕೊಟ್ಟ ಬಣ್ಣಬಣ್ಣದ ರಿಬ್ಬನ್ನು ಮತ್ತು ಪದಕಗಳನ್ನು ಸಂತಸದಿಂದ, ಹೆಮ್ಮೆಯಿಂದ ತಮ್ಮ ಸಮವಸ್ತ್ರದ ಮೇಲೆ ಹಾಕಿಕೊಂಡರು. 

ಮಧ್ಯವರ್ತಿಗಳ ರೂಪುಗೊಳ್ಳುವಿಕೆ ನೇರ ರೇಖೆಯಂತೆ ಸಾಗಿತೆಂದು ನೋಡಬಾರದೆನ್ನುವ ಎಚ್ಚರಿಕೆ ಇರಬೇಕು. ವಸಾಹತು ಕರ್ನಾಟಕದ ಪ್ರಾರಂಭದಲ್ಲಿ ಈ ಪ್ರಕ್ರಿಯೆ ಅಂಕುಡೊಂಡು ದಾರಿಯಲ್ಲಿ ಸಾಗಿದೆ. ಮಧ್ಯವರ್ತಿ ಅಧಿಕಾರಿಯೊಬ್ಬ ಪುನಃ ಅರೆಊಳಿಗಮಾನ್ಯ ದೊರೆಯಾಗಿಬಿಟ್ಟಿದ್ದಾನೆ, ಪೂರ್ಣಯ್ಯನ ಪ್ರಕರಣದಲ್ಲಾದಂತೆ. ಅಥವಾ ವರ್ತಕನೊಬ್ಬ ಕೃಷಿ ದಾರಿಯಲ್ಲಿ ಸಾಗಿ ಭೂಮಾಲೀಕನಾಗಿ ನೆಲೆಕಂಡುಕೊಂಡಿದ್ದಾನೆ, ತುಳುನಾಡಿನ ಕೃಷಿ ಕ್ಷೇತ್ರದಲ್ಲಿ ನೆಲೆ ಕಂಡುಕೊಂಡ ಗೌಡ ಸಾರಸ್ವತರಂತೆ. (101) 

ಮಧ್ಯವರ್ತಿ ವರ್ತಕ ಮತ್ತು ಮಧ್ಯವರ್ತಿ ಅಧಿಕಾರಿಯನ್ನು ಒದಗಿಸಿದ್ದು ಊಳಿಗಮಾನ್ಯತೆ. ಜೊತೆಯಾಗಿ ಈ ಮಧ್ಯವರ್ತಿಗಳು ಕರ್ನಾಟಕ ಮತ್ತು ಭಾರತದಲ್ಲಿ ಬ್ರಿಟೀಷರ ಆರ್ಥಿಕ ಮತ್ತು ರಾಜಕೀಯ ನೀತಿಗಳಿಗೆ ಪೂರಕವಾಗಿ ಕೆಲಸ ಮಾಡುವವರಾದರು. ಅವರ ಅವಶ್ಯಕತೆಗಳನ್ನು ಹೆಣೆದಿದ್ದು ಈ ಮಧ್ಯವರ್ತಿಗಳು. ಊಳಿಗಮಾನ್ಯತೆ ಮತ್ತು ವಸಾಹತಿನ ನಡುವೆ ಬೇಕಿದ್ದ ಬಂಧ ಸಾಧ್ಯವಾಗಿದ್ದು ಮಧ್ಯವರ್ತಿಗಳಿಂದ. 

ಗೌಡ ಸಾರಸ್ವತ ಬ್ರಾಹ್ಮಣರ ಬಗ್ಗೆ ಸ್ಟರ್ರಾಕ್(Sturrock)ನನ್ನು ಉಲ್ಲೇಖಿಸುತ್ತ ಸೂರ್ಯಕಾಂತ್ ಕಾಮತ್ ಕೊಡುವ ಈ ವಿವರಣೆ, ಅರೆಊಳಿಗಮಾನ್ಯತೆಯ ಭೂಮಾಲೀಕರು, ಬಡ್ಡಿ ವ್ಯಾಪಾರಿಗಳು ಮತ್ತು ಅಧಿಕಾರಿಗಳ ನಡುವಿನ ಬಂಧವನ್ನು ತಿಳಿಸಿಕೊಡುತ್ತದೆ: “ಕೊಂಕಣಿಗಳಲ್ಲನೇಕರು ಅಂಗಡಿ ಇಟ್ಟಿದ್ದಾರೆ ಮತ್ತು ಜಿಲ್ಲೆಯ ಪ್ರತಿ ಪೇಟೆಯಲ್ಲೂ ಅವರನ್ನು ಕಾಣಬಹುದು……ಜಿಲ್ಲೆಯ ಶ್ರೀಮಂತ ಭೂಮಾಲೀಕರವರು…..ಕೆಲವರು ಸರಕಾರಿ ನೌಕರಿಯಲ್ಲಿ ಉನ್ನತ ಹುದ್ದೆಯಲ್ಲಿದ್ದಾರೆ……” (101A) 

ಮಧ್ಯವರ್ತಿ ವರ್ಗದ ಸಾಂಸ್ಕೃತಿಕ ರೂಪ ಊಳಿಗಮಾನ್ಯ – ಪ್ರತಿಗಾಮಿ ನೆಲೆಯಿಂದ ಬಂದ ಕಾರಣ ಅವರು ಜನ ವಿರೋಧಿಗಳಾಗಿದ್ದರು. ತಮ್ಮ ಕೊಳೆತ ಪ್ರಣಾಳಿಕೆ ಮತ್ತು ಚೇತನವಿಲ್ಲದ ಸಿದ್ಧಾಂತಗಳನ್ನು ಎತ್ತಿ ಹಿಡಿಯುತ್ತ ಬಿಳಿ ದೇವರನ್ನು ದಿನನಿತ್ಯ ಪೂಜಿಸುತ್ತಿದ್ದರು. 

ಮಧ್ಯಮವರ್ಗದ ಮಧ್ಯವರ್ತಿಗಳು ಆರ್ಥಿಕತೆಯಲ್ಲಿ ಬಹುಮುಖ್ಯ ಕೆಲಸ ಮಾಡಬೇಕಿತ್ತು. ವಸಾಹತುಶಾಹಿ, ಆಡಳಿತ ವಹಿಸಿಕೊಂಡ ಮೊದಲ ಹಂತಗಳಲ್ಲಿ, ಮಧ್ಯವರ್ತಿ ಅಧಿಕಾರಶಾಹಿಗಳ ಆರ್ಥಿಕತೆಯ ಪಾತ್ರ ವಸಾಹತುಶಾಹಿ ಮತ್ತು ಊಳಿಗಮಾನ್ಯ ಪದ್ಧತಿಯ ತೆರಿಗೆ ನೀಡುವ ರೈತನನ್ನು ಸಂಪರ್ಕಿಸುವುದಕ್ಕೆ ಸೀಮಿತವಾಗಿತ್ತು. ಭಾರತದಲ್ಲಿ ಬ್ರಿಟೀಷರ ಕೈಗಾರಿಕಾ ಬಂಡವಾಳ ಹೆಚ್ಚುತ್ತಿದ್ದಂತೆ ಮಧ್ಯವರ್ತಿ ವರ್ತಕರ ಪ್ರಾಮುಖ್ಯತೆಯೂ ಹೆಚ್ಚಿತು. ಮಧ್ಯವರ್ತಿ ವರ್ತಕರು ಕರ್ನಾಟಕವನ್ನು ಕೊಳ್ಳೆ ಹೊಡೆಯಲು ಬಹುಮುಖ್ಯ ಕೊಂಡಿಯಾದರು; ಬ್ರಿಟೀಷ್ ಉತ್ಪನ್ನಗಳನ್ನು ಬಹುದೂರದ ಪ್ರದೇಶಗಳಿಗೆ ಸಾಗಿಸಿದ ಮಧ್ಯವರ್ತಿಗಳು ವಾಪಸ್ಸಾಗುವಾಗ ವಸಾಹತು ರಾಕ್ಷಸನ ಹಸಿವು ನೀಗಿಸಲು ಕಚ್ಚಾ ವಸ್ತುಗಳನ್ನು ಮತ್ತು ಕೃಷಿ ಉತ್ಪನ್ನಗಳನ್ನು ತೆಗೆದುಕೊಂಡು ಹೋದರು. 

ಅದಾಗ್ಯೂ ಇದರ ರಾಜಕೀಯ ಪಾತ್ರ ಮಹತ್ವದ್ದಾಗಿತ್ತು; ವಸಾಹತುಶಾಹಿ ಸರಕಾರವನ್ನು ಆ ಸದ್ಯದಲ್ಲಿ ಸುಭದ್ರಗೊಳಿಸಲು ಮತ್ತು ದೂರಗಾಮಿಯಲ್ಲಿ ವಸಾಹತನ್ನು ಜನರು ಸಹಿಸುವಂತಾಗಲು. ಈ ಸ್ಪಷ್ಟ ಕಾರಣಕ್ಕಾಗಿ, ಪೂರ್ಣಯ್ಯನವರಂತಹ ವಿದ್ರೋಹಿಗಳನ್ನು ಬ್ರಿಟೀಷರು ಹೊಗಳಿ ಅಟ್ಟಕ್ಕೇರಿಸಿ ಉಡುಗೊರೆಗಳನ್ನು ನೀಡುತ್ತಿದ್ದರು. ಮಧ್ಯವರ್ತಿ ಅಧಿಕಾರಶಾಹಿಯ ರಾಜಕೀಯ ಮಹತ್ವದ ಬಗ್ಗೆ ಮನ್ರೋ ಬರೆಯುತ್ತಾನೆ: “ನಮ್ಮ ಯುರೋಪಿಯನ್ ಸಂಸ್ಥೆಗಳನ್ನು ಹೆಚ್ಚಿಸಿ ಭದ್ರವಾಗುವ ಪ್ರಯತ್ನ ಮಾಡಬಹುದು. ತುಂಬ ಹೆಚ್ಚಿನ ಖರ್ಚಾಗುತ್ತದೆ, ಪಾಪದ ಕೆಲಸಗಳು ಕೆಲಸಮಯ ಇಲ್ಲವಾಗಲೂಬಹುದು. ಆದರೆ ಯುರೋಪಿಯನ್ನರ ಹೆಚ್ಚಳ ನಮ್ಮ ಪ್ರಾಬಲ್ಯದ ಅಸ್ತಿತ್ವವನ್ನು ಹೆಚ್ಚು ದಿನಗಳ ಕಾಲ ಉಳಿಸಲಾಗದು. ಆ ರೀತಿ ಮಾಡಿದರೆ ಸ್ಥಳೀಯರಿಂದ ಯಾವುದೇ ಸಹಾಯವನ್ನು ನಿರೀಕ್ಷಿಸಬಾರದು. ದೇಶೀ ಸೈನ್ಯಕ್ಕೆ ಈಗ ನಿರುದ್ಯೋಗಿಗಳಾಗಿರುವ ಕಂದಾಯ ಮತ್ತು ಪೋಲೀಸ್ ಇಲಾಖೆಗಳಲ್ಲಿದ್ದ ಸಕ್ರಿಯ ಜನರ ವರ್ಗ ಸೇರಿಬಿಡುತ್ತಾರೆ. ಜೊತೆಗೆ ಈಗ ಆ ಇಲಾಖೆಗಳಲ್ಲಿರುವ ಉನ್ನತ ಸ್ಥಾನ ಬಯಸುತ್ತಿರುವವರೂ ಸೇರಿಬಿಡುತ್ತಾರೆ. ಈ ಜನರ ಮೂಲಕ ತಮ್ಮನ್ನು ತಾವೇ ಸ್ವತಂತ್ರ ದೇಶಗಳ ದೊರೆಗಳೆಂದು ಘೋಷಿಸಿಕೊಂಡು ಅಲ್ಲಿನ ಆದಾಯವನ್ನು ತೆಗೆದುಕೊಂಡುಬಿಡುತ್ತಾರೆ; ಜನ ಸಮೂಹ ಮೌನವಾಗಿರುತ್ತದೆ. ಸಿಕ್ಕಿರುವ ವ್ಯವಹಾರಿಕ ಅನುಕೂಲಗಳ ಕಾರಣದಿಂದ ವ್ಯಾಪಾರಿಗಳು ನಮ್ಮ ಯಶಸ್ಸಿಗೆ ಶುಭಕೋರಬಹುದು, ಆದರೆ ಅದಕ್ಕಿಂತ ಹೆಚ್ಚೇನನ್ನು ಅವರು ಮಾಡುವುದಿಲ್ಲ. ಯುದ್ಧಕ್ಕೆ ಸನ್ನದ್ಧರಾಗಿರುವವರನ್ನು ಹೊಂದಿರುವ ಹಳ್ಳಿಗಳ ಮುಖ್ಯಸ್ಥರು ನಮ್ಮ ಉದ್ದೇಶವನ್ನು ಬೆಂಬಲಿಸುವುದಕ್ಕಿಂತ ತಮ್ಮ ದೇಶದವರ ಜೊತೆಗೆ ಸೇರುವ ಸಾಧ್ಯತೆಯೇ ಹೆಚ್ಚು. ಸ್ಥಳೀಯರ ಆಳ್ವಿಕೆಗೊಳಪಟ್ಟಾಗ ಅವರು ನಮ್ಮ ಆಳ್ವಿಕೆಯನ್ನು ಬರಮಾಡಿಕೊಳ್ಳಲು ಇಚ್ಛೆಪಟ್ಟಿದ್ದು ಸತ್ಯವೇ ಆದರೂ ಆ ಭಾವನೆ ತಾತ್ಕಾಲಿಕ ಕಾರಣಗಳಿಗಾಗಿತ್ತು – ದುರ್ಬಲ, ಕೇಡುಗ ಸರಕಾರದಿಂದ ಬಿಡುಗಡೆಯೊಂದಿ ತಮ್ಮ ಏಳಿಗೆಯಾಗಬಹುದೆಂಬ ಭರವಸೆಯಿಂದ ಬದಲಾವಣೆಯನ್ನು ಬೆಂಬಲಿಸಿದ್ದರು. ಈಗ ನಮ್ಮ ಸರಕಾರದ ವೈಖರಿಯನ್ನವರು ನೋಡಿದ್ದಾರೆ; ಅವರ ಮತ್ತವರ ಆಸ್ತಿಪಾಸ್ತಿಯ ರಕ್ಷಣೆಯಾಗಿದ್ದರೂ ಸಹ ಸಡಿಲ ತೆರಿಗೆ ವ್ಯವಸ್ಥೆಯಿಂದಾಗಿ ಅವರಿಗೆ ಸಿಗುತ್ತಿದ್ದ ಹೆಚ್ಚುವರಿ ಹಣವೀಗ ತಪ್ಪಿ ಹೋಗಿದೆ. ಜೊತೆಗೆ ಸ್ಥಳೀಯ ನಿವಾಸಿಗಳ ಮೇಲಿದ್ದ ತಮ್ಮ ಅಧಿಕಾರದಲ್ಲಿ ಹೆಚ್ಚಿನಂಶವನ್ನು ನಮ್ಮ ನ್ಯಾಯಾಲಯಗಳು, ಮ್ಯಾಜಿಸ್ಟ್ರೇಟರು, ಕಲೆಕ್ಟರುಗಳ ಕಾರಣದಿಂದ ಕಳೆದುಕೊಂಡಿದ್ದಾರೆ. ತಮ್ಮ ಹಳೆಯ ಅಧಿಕಾರ ಮತ್ತು ಪ್ರಭಾವವನ್ನು ಮರಳಿಸುವ ಭರವಸೆಯೊಂದೇ ಸಾಕು ಅವರಲ್ಲಿನ ಹೆಚ್ಚಿನವರು ನಮ್ಮ ಆಳ್ವಿಕೆಯನ್ನು ಪದಚ್ಯುತಗೊಳಿಸುವ ಯೋಜನೆಗಳಿಗೆ ಸಹಕರಿಸಲು. ಅವರನ್ನು ರಕ್ಷಿಸಿದ್ದಕ್ಕೆ ಕೃತಜ್ಞತೆಯಾಗಿ ಅಥವಾ ನಮ್ಮ ಮೃದು ಸರಕಾರದ ಜೊತೆಗಿನ ಬಾಂಧವ್ಯದ ಕಾರಣಕ್ಕಾಗಿ ಈ ಜನರು ದೇಶಿ ಸೈನ್ಯದ ವಿರುದ್ಧದ ಹೋರಾಟದಲ್ಲಿ ನಮಗೆ ಜೊತೆಯಾಗುತ್ತಾರೆ ಎಂದು ನಂಬುವುದು ನಮ್ಮನ್ನು ನಾವೇ ವಂಚಿಕೊಂಡಂತೆ.” (102) 

ಇದು 1857ರ ಹೋರಾಟದ ಬಗ್ಗೆ ಮನ್ರೋಗಿದ್ದ ನಿರೀಕ್ಷೆ, ಜನಸಮೂಹದ ಪಾತ್ರವನ್ನು ಅಂದಾಜಿಸುವಲ್ಲಿ ಆತ ಎಡವಿದ್ದ. ಹಾಗಾಗಿ ಬ್ರಿಟೀಷ್ ರಾಜ್ ನ ನಿರಂತರ ಆಳ್ವಿಕೆಗೆ ಮಧ್ಯವರ್ತಿ ಅಧಿಕಾರಶಾಹಿ ಅತ್ಯವಶ್ಯ ಎಂಬುದನ್ನಾತ ಕಂಡುಕೊಂಡಿದ್ದ. ಮನ್ರೋ ಬರೆಯುತ್ತಾನೆ: “ಈ ವಿಷಯದಲ್ಲಿ (ತೆರಿಗೆ) ಬುದ್ಧಿವಂತ ಮತ್ತು ಅನುಭವಿ ಸ್ಥಳೀಯರನ್ನು ರೆವೆನ್ಯೂ ಮುಖ್ಯಸ್ಥರನ್ನಾಗಿ ಮಾಡಿ ರೆವೆನ್ಯೂ ಮಂಡಳಿಗೆ ಸಹಾಯ ಮಾಡುವಂತೆ ನೋಡಿಕೊಳ್ಳಬೇಕು. ಬೇರೆ ಇಲಾಖೆಗಳಲ್ಲಿ ಯುರೋಪಿನ ಅಧಿಕಾರಿಗಳಿಗೆ ಸಹಾಯ ಮಾಡಲು ಅನುಭವಿ ಸ್ಥಳೀಯರನ್ನು ನೇಮಿಸಿರುವಾಗ ತುಂಬಾ ಕಷ್ಟದ ಮತ್ತು ಅತ್ಯಂತ ಪ್ರಮುಖವಾದ ಕೆಲಸವಿರುವ ರೆವಿನ್ಯೂ ಇಲಾಖೆಯಲ್ಲಿ ಮಾಡದಿರುವುದು ಸಾಧುವಾ? ಅವರನ್ನು ಹೊರಗಿಡುವುದು ನಮಗೂ ಅವರಿಗೂ ಹಾನಿಯುಂಟುಮಾಡುತ್ತದೆ; ಅವರಿಲ್ಲದೆ ಇಲಾಖೆಯನ್ನು ಸಮರ್ಥವಾಗಿ ನಡೆಸುವುದು ಸಾಧ್ಯವಿಲ್ಲ. ಅವರನ್ನು ನೇಮಿಸಿಕೊಂಡ ಮೇಲೂ ತೆರಿಗೆ ವಿಧಿಸುವ ವ್ಯಾಪಾರದಲ್ಲಿ ಅವರಿಗೂ ಒಂದು ಭಾಗ ಕೊಡಬೇಕು. ಇದು ಅವರ ಮತ್ತು ಸರಕಾರದ ನಡುವೆ ಬಂಧವನ್ನೇರ್ಪಿಡುಸುತ್ತದೆ, ಅವರ ದೃಷ್ಟಿಯಲ್ಲಿ ಅವರು ಮೇಲ್ಮೆಗೇರುತ್ತಾರೆ ಮತ್ತು ಉನ್ನತ ಸ್ಥಾನ ಪಡೆಯುವ ಸಲುವಾಗಿ ತಮ್ಮ ಕರ್ತವ್ಯವನ್ನು ಉತ್ಸುಕತೆಯಿಂದ ಮಾಡಲು ಪ್ರೋತ್ಸಾಹಿಸುತ್ತದೆ. ದೇಶಕ್ಕೆ ತೆರಿಗೆ ವಿಧಿಸುವ ಅಧಿಕಾರವನ್ನು ಸಂಪೂರ್ಣವಾಗಿ ಸ್ಥಳೀಯರ ಕೈಗೆ ಕೊಡುವುದು ಸಾಧ್ಯವಿಲ್ಲವಾದರೂ ನಮ್ಮ ಮೇಲ್ವಿಚಾರಿಕೆಯಲ್ಲಿ ಅವರನ್ನು ಎಷ್ಟು ನಂಬಿ ಕೆಲಸ ವಹಿಸಬಹುದೋ ಅಷ್ಟನ್ನೂ ವಹಿಸಬಹುದು. “(103) 

1831ರಲ್ಲಿ ಮೂರನೇ ಕೃಷ್ಣರಾಜ ಒಡೆಯರನ ಆಳ್ವಿಕೆಯನ್ನು ರದ್ದು ಆಡಿ ಮೈಸೂರಿನಲ್ಲಿ ಬ್ರಿಟೀಷರು ನೇರ ಆಡಳಿತ ನಡೆಸಿದಾಗ ಕಮಿಷನರ್ರಾಗಿದ್ದ ಎಲ್.ಬಿ.ಬೌರಿಂಗ್ ಮನ್ರೋನ ಯೋಜನೆಗಳನ್ನು ಪುರಸ್ಕರಿಸುತ್ತಾನೆ. ಬೌರಿಂಗ್ ಬರೆಯುತ್ತಾನೆ: “ಪ್ರಸ್ತುತ ಪರಿಸ್ಥಿತಿಯಲ್ಲಿ ಮೈಸೂರು ಸರಕಾರದ ಆಡಳಿತ ನಡೆಸುತ್ತಿರುವುದು ಮಹಾರಾಜನ ಪರವಾಗಿ ಎನ್ನುವುದರ ನೆನಪು ನಮಗಿರಬೇಕು. ದಾರಿತೋರುವ ಕೈ ಯುರೋಪಿನ ಅಧಿಕಾರಿಗಳದಾದರೂ ಸೂಕ್ತ ಸಂಖೈಯಲ್ಲಿ ಸ್ಥಳೀಯ ಅಧಿಕಾರಿಗಳನ್ನು ನಂಬಿಕಸ್ಥ ಮತ್ತು ಪ್ರಮುಖ ಸ್ಥಾನಗಳಲ್ಲಿರುಸುವುದು ನ್ಯಾಯಯುತವಾದ ಉತ್ತಮ ನೀತಿಯಾಗಿದೆ. ಈ ನಿರ್ಧಾರಗಳು ಮಹಾರಾಜನನ್ನೊರತುಪಡಿಸಿ ಬೇರೆ ಆಳ್ವಿಕೆಯ ಬಗ್ಗೆ ಯೋಚಿಸದ ಸ್ಥಳೀಯ ಅಧಿಕಾರಿಗಳಿಗೆ ಸಮಾಧಾನ ಕೊಡುತ್ತದೆ, ನಮ್ಮ ಪ್ರಭಾವವನ್ನು ಹೆಚ್ಚಿಸುತ್ತದೆ ಎಂದು ನನ್ನ ಅನಿಸಿಕೆ.” (104) 

ಭಾರತೀಯರನ್ನು ‘ಬೆಳೆಸಲು’ದ್ದೇಶಿಸಿದ ಬ್ರಿಟೀಷರಿಗಿದ್ದ ಗ್ರಹಿಕೆಯಿದು; ಭಾರತೀಯರು ಕೂಡ ಅವರ ಉದ್ದೇಶಗಳಿಗೆ ಜೊತೆಯಾಗಿ ವಸಾಹತಿನ ಜೊತೆ ನಿಲ್ಲಲಿ ಎಂಬ ನಿರೀಕ್ಷೆ. ಮನ್ರೋಗಿದು ಬ್ರಿಟೀಷ್ ವಸಾಹತುಶಾಹಿಯ ನಿರಂತರತೆಗೆ ಬೇಕೇ ಬೇಕಿದ್ದ ಅಂಶವೆನ್ನಿಸಿತ್ತು. ಕೊನೆಗೆ ದೇಶದಲ್ಲಿ ಬ್ರಿಟೀಷರೇ ಇಲ್ಲದಿದ್ದರೂ ಪರೋಕ್ಷ ಆಡಳಿತ ನೀತಿಯಿಂದ ವಸಾಹತುಶಾಹಿಯ ಪ್ರಭಾವ ಇದ್ದೇ ಇರಬೇಕೆಂಬ ದೂರಗಾಮಿ ಆಲೋಚನೆ. ಅಂಥ ಪರಿಸ್ಥಿತಿ ಇನ್ನೂ ಉದಯಿಸಿರಲಿಲ್ಲವಾದರೂ ಜನಪ್ರಿಯ ವಾಂಛೆಗಳನ್ನು ಅಭ್ಯಸಿಸಿದ್ದ ಮನ್ರೋಗೆ ಅಂತದೊಂದು ಮುಕ್ತಾಯವಿರಬಹುದೆಂದು ಅನ್ನಿಸಿತ್ತು. ಒಬ್ಬ ನಿಜವಾದ ವಸಾಹತುಶಾಹಿಯಾಗಿ, ಕಡಲಾಚೆ ಇರುವ ವಸಾಹತು ದೊರೆಯ ಪ್ರಭಾವ ಅಚ್ಚಳಿಯದಂತಿರಲು ಮಧ್ಯವರ್ತಿಗಳ ಪಾತ್ರದ ಪ್ರಾಮುಖ್ಯತೆಯನ್ನಾತ ಅರಿತಿದ್ದ. 

ಮನ್ರೋ ಬರೆಯುತ್ತಾನೆ: “ಭಾರತವನ್ನು ವಶಪಡಿಸಿಕೊಂಡಿರುವುದನ್ನು ತಾತ್ಕಾಲಿಕ ಪ್ರಕ್ತಿಯೆ ಎಂಬಂತೆ ನೋಡಬಾರದು. ಎಲ್ಲಿಯವರೆಗೆ ಸ್ಥಳೀಯರು ತಮ್ಮ ಗತಕಾಲದ ಮೂಢನಂಬಿಕೆಗಳನ್ನು ಮತ್ತು ಪೂರ್ವಾಗ್ರಹಗಳನ್ನು ಸಂಪೂರ್ಣವಾಗಿ ತೊಡೆದು ಹಾಕಿ ಒಂದು ಸುಭದ್ರ ಸರಕಾರವನ್ನು ರಚಿಸಿ ನಿರ್ವಹಿಸುವುದಕ್ಕೆ ಯೋಗ್ಯರಾಗುತ್ತಾರೋ ಅಲ್ಲಿಯವರೆಗೂ ಭಾರತ ನಮ್ಮ ವಶದಲ್ಲಿಯೇ ಇರಬೇಕು. ಅಂತಹುದೊಂದು ಸಮಯ ಬಂದಾಗ ಬ್ರಿಟೀಷರು ನಿಧಾನಕ್ಕೆ ಹಂತಹಂತವಾಗಿ ಭಾರತದ ಮೇಲಿನ ತಮ್ಮ ನಿಯಂತ್ರಣ ಹಿಂತೆಗೆದುಕೊಳ್ಳುವುದು ಬಹುಶಃ ಎರಡೂ ದೇಶಗಳ ದೃಷ್ಟಿಯಿಂದ ಒಳ್ಳೆಯದು.” (105) 

ಮಧ್ಯವರ್ತಿಗಳನ್ನು ಬೆಳೆಸಲು ಬ್ರಿಟೀಷ್ ವಸಾಹತಿಗಿದ್ದ ಕಾರಣವಿದು. ಬಂಡವಾಳಶಾಹಿ ನಾಗರೀಕತೆಗೆ ಕೆಲಸಗಳನ್ನು ನಿರ್ವಹಿಸಲು ಸಮರ್ಥನಿರದ ಫ್ಯೂಡಲ್ ದೊರೆ ಅವಲಕ್ಷಣದಂತಿದ್ದ. ಮೇಕಿಂಗ್ ಹಿಸ್ಟರಿಯ ಮೂರನೇ ಸಂಪುಟದಲ್ಲಿ ಮಧ್ಯವರ್ತಿಗಳಿಗೆ ಅಧಿಕಾರ ಹಸ್ತಾಂತರಿಸಿದ ಕಾರ್ಯ ಹೇಗೆ ವಸಾಹತು ನಮ್ಮನ್ನು ಲೂಟಿ ಮಾಡಲು ಅನುವು ಮಾಡಿಕೊಟ್ಟಿತು ಮತ್ತು ಬ್ರಿಟೀಷರು ಕಾಲ್ತೆಗೆದ ಮೇಲೂ ಹೇಗದು ಧಕ್ಕೆಯಾಗದೆ ಉಳಿಯಿತು ಎಂಬುದನ್ನು ನೋಡೋಣ. 

ಮುಂದಿನ ವಾರ:
ಶೋಷಕ ತ್ರಿಮೂರ್ತಿಗಳು ಮತ್ತು ಪ್ರತಿಗಾಮಿ ಸರಕಾರ

Disclaimer: ಮೇಕಿಂಗ್ ಹಿಸ್ಟರಿ ಆಂಗ್ಲ ಪುಸ್ತಕದ ಅನುವಾದಿಸಲು ಬೇಕಾದ ಅಧಿಕೃತ ಹಕ್ಕುಗಳು ನನ್ನಲ್ಲಿಲ್ಲ. ಅನುವಾದದ ಹಕ್ಕನ್ನು ಕೊಡುವವರಲ್ಲನೇಕರು ಜೈಲಿನಲ್ಲಿದ್ದಾರಂತೆ. ಯಾರಲ್ಲಾದರೂ ಅಧಿಕೃತ ಅನುವಾದದ ಹಕ್ಕುಗಳು ಇದ್ದು ಆಕ್ಷೇಪಣೆ ಎತ್ತಿದರೆ ಕ್ಷಮಾಪಣೆಯೊಂದಿಗೆ ಅನುವಾದದ ಕಾರ್ಯವನ್ನು ನಿಲ್ಲಿಸಲಾಗುವುದು. ಸಾಕೇತ್ ರಾಜನ್ ದೃಷ್ಟಿಯ ಕರ್ನಾಟಕದ ಇತಿಹಾಸ ಕನ್ನಡ ಬಲ್ಲವರಿಗೂ ತಲುಪಲಿ ಎಂಬ ಉದ್ದೇಶದಿಂದ ಇದನ್ನು ಪ್ರಕಟಿಸಲಾಗುತ್ತಿದೆಯೇ ಹೊರತು ಯಾವುದೇ ವಾಣಿಜ್ಯ ಉದ್ದೇಶದಿಂದಲ್ಲ - ಡಾ. ಅಶೋಕ್. ಕೆ. ಆರ್.

ಮಾರ್ಚ್ 22, 2016

ಸಿದ್ದು ತಂದ “ಸೌಭಾಗ್ಯ”!

ಡಾ. ಅಶೋಕ್. ಕೆ. ಆರ್
22/03/2016
ಹೆಚ್ಚೇನು ಹಿಂದಿನ ಮಾತಲ್ಲ, ವರುಷಗಳ ಹಿಂದೆ ಬಿಜೆಪಿ ಕರ್ನಾಟಕದಲ್ಲಿ ಅಧಿಕಾರದಲ್ಲಿದ್ದಾಗ ವಿರೋಧ ಪಕ್ಷದ ಸ್ಥಾನದಲ್ಲಿದ್ದ ಕಾಂಗ್ರೆಸ್ ಸಿದ್ಧರಾಮಯ್ಯನವರ ನೇತೃತ್ವದಲ್ಲಿ ಬಳ್ಳಾರಿಗೆ ಪಾದಯಾತ್ರೆ ಬೆಳೆಸಿತ್ತು. ಬಿಜೆಪಿಯ ಭ್ರಷ್ಟಾಚಾರ, ಬಳ್ಳಾರಿಯ ರೆಡ್ಡಿ ಸಹೋದರರ ಭ್ರಷ್ಟತೆ, ಆಪರೇಷನ್ ಕಮಲ ಮತ್ತು ಬಳ್ಳಾರಿ ರೆಡ್ಡಿ ಸಹೋದರರ ರಿಪಬ್ಲಿಕ್ ನಂತೆ ಆಗಿಬಿಟ್ಟಿದ್ದನ್ನು ವಿರೋಧಿಸಿ ಬೆಂಗಳೂರಿನಿಂದ ಬಳ್ಳಾರಿಗೆ ಸಿದ್ಧರಾಮಯ್ಯ ಪಾದಯಾತ್ರೆ ನಡೆಸಿದ್ದರು. ವೈಯಕ್ತಿಕವಾಗಿ ಸಿದ್ಧರಾಮಯ್ಯ ಕೂಡ ಭ್ರಷ್ಟರಲ್ಲ ಎಂದು ಅಲ್ಲಿಯವರೆಗಿನ ನಂಬಿಕೆಯಾಗಿತ್ತು. ಬಿಜೆಪಿಯ ಐದು ವರುಷದ ಆಡಳಿತಾವಧಿಯಲ್ಲಿ ಕಾಂಗ್ರೆಸ್ ವಿರೋಧ ಪಕ್ಷದ ಕೆಲಸ ಮಾಡಿದ್ದು ಇದೊಂದೇ ಬಾರಿ. ಅಧಿಕೃತ ವಿರೋಧ ಪಕ್ಷವಲ್ಲದಿದ್ದರೂ ಜೆ.ಡಿ.ಎಸ್ ನ ಕುಮಾರಸ್ವಾಮಿ ಬಿಜೆಪಿಯ ಭ್ರಷ್ಟಾಚಾರ ಪ್ರಕರಣಗಳನ್ನು ಒಂದಾದ ಮೇಲೊಂದರಂತೆ ಬಯಲಿಗೆಳೆಯುತ್ತ (ಇವರ ಬಯಲಿಗೆಳೆಯುವಿಕೆಯು ಕೂಡ ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನದಿಂದ ಇಳಿದು ಸದಾನಂದಗೌಡ ಮುಖ್ಯಮಂತ್ರಿಯಾದ ತಕ್ಷಣ ನಿಂತುಹೋಗಿತ್ತು!) ಕಾಂಗ್ರೆಸ್ಸಿನ ಗೆಲುವಿಗೆ ಮುನ್ನುಡಿ ಬರೆದರು. ಹೆಚ್ಚೇನೂ ಕಷ್ಟಪಡದೆ ಬಿಜೆಪಿಯ ಸ್ವಯಂಕೃತ ಅಪರಾಧ, ಯಡಿಯೂರಪ್ಪ ಕೆಜೆಪಿ ಸೇರಿದ್ದರ ಲಾಭ ಪಡೆದ ಕಾಂಗ್ರೆಸ್ ಸರಳ ಬಹುಮತ ಪಡೆದು ಅಧಿಕಾರವಿಡಿಯಿತು. ಮತ್ತೇನಲ್ಲದಿದ್ದರೂ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಹಿಂದಿನ ಬಿಜೆಪಿಯಷ್ಟು ಭ್ರಷ್ಟವಾಗಲಾರದು ಎಂದೊಂದು ನಂಬಿಕೆಯಿತ್ತು. ವೈಯಕ್ತಿಕವಾಗಿ ಯಾರ್ಯಾರು ಎಷ್ಟೆಷ್ಟು ಭ್ರಷ್ಟರಾದರೋ ಬಿಟ್ಟರೋ ಭ್ರಷ್ಟರಿಗೆಲ್ಲ ರಕ್ಷಣೆ ನೀಡುವಂತೆ ಕರ್ನಾಟಕ ಲೋಕಾಯುಕ್ತದ ಬಲ ಕುಗ್ಗಿಸಿಬಿಡಲು ಅಧಿಸೂಚನೆ ಹೊರಡಿಸಿಬಿಟ್ಟಿದೆ ಸಿದ್ಧು ನೇತೃತ್ವದ ಕಾಂಗ್ರೆಸ್ ಸರಕಾರ. ಭ್ರಷ್ಟರ ರಕ್ಷಣೆ ನಮ್ಮ ಗುರಿಯಲ್ಲ ಎಂಬುದನ್ನು ತೋರ್ಪಡಿಸಲು ಮುಖ್ಯಮಂತ್ರಿ, ಮುಖ್ಯ ಕಾರ್ಯದರ್ಶಿಗಳ ಮೂಗಿನಡಿ ಕಾರ್ಯನಿರ್ವಹಿಸುವ ಭ್ರಷ್ಟಾಚಾರ ನಿಗ್ರಹ ದಳವನ್ನು (Anticorruption bureau – ಎಸಿಬಿ) ಸ್ಥಾಪಿಸಲಾಗಿದೆ. ನಿನ್ನೆ ವಿಧಾನಸಭೆಯಲ್ಲಿ ಬಿಜೆಪಿಯ ಜಗದೀಶ್ ಶೆಟ್ಟರ್ ಹೇಳಿರುವಂತೆ ಇದು ಎಸಿಬಿಯಲ್ಲ ಸಿಪಿಬಿ – corruption protection bureau. 

ಕರ್ನಾಟಕ ಲೋಕಾಯುಕ್ತ ಸಂಸ್ಥೆಯ ಕಾರ್ಯಾರಂಭವಾಗಿದ್ದು 1986ರಲ್ಲಿ. ಎರಡು ವರ್ಷಕ್ಕೆ ಮೊದಲು 1984ರಲ್ಲಿ ಕರ್ನಾಟಕ ಲೋಕಾಯುಕ್ತ ಕಾಯ್ದೆ ಅನುಷ್ಠಾನಗೊಂಡಿತ್ತು. ಮಹಾರಾಷ್ಟ್ರ 1971ರಲ್ಲಿ ಲೋಕಾಯುಕ್ತ ಸ್ಥಾಪಿಸಿದ್ದರೆ ಕರ್ನಾಟಕ 1984ರಲ್ಲಿ ಸ್ಥಾಪಿಸಿತ್ತು. 1966ರಲ್ಲಿಯೇ ಇಂತಹುದೊಂದು ಅಗತ್ಯವನ್ನು ಮನಗಂಡಿದ್ದ administrative reforms commission ಕೇಂದ್ರದ ಮಟ್ಟದಲ್ಲಿ ಲೋಕಪಾಲ ಸಂಸ್ಥೆ ಮತ್ತು ರಾಜ್ಯ ಮಟ್ಟದಲ್ಲಿ ಲೋಕಾಯುಕ್ತವನ್ನು ಸ್ಥಾಪಿಸಲು ಸಲಹೆ ನೀಡಿತ್ತು. ಕರ್ನಾಟಕದಲ್ಲಿ ಆಡಳಿತದಲ್ಲಿದ್ದ ಕಾಂಗ್ರೆಸ್ ಸರಕಾರಗಳ ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸಿದ್ದ ಜನತಾ ಪರಿವಾರ 1983ರ ಚುನಾವಣೆಯಲ್ಲಿನ ತನ್ನ ಪ್ರಣಾಳಿಕೆಯಲ್ಲಿ ಲೋಕಾಯುಕ್ತ ಕಾಯ್ದೆಯನ್ನು ಜಾರಿಗೆ ತರುವುದಾಗಿ ತಿಳಿಸಿತ್ತು. ರಾಮಕೃಷ್ಣ ಹೆಗಡೆ ನೇತೃತ್ವದಲ್ಲಿ ಅಧಿಕಾರವಿಡಿದ ಜನತಾ ಪರಿವಾರ ಕೊಟ್ಟ ಮಾತಿನಂತೆಯೇ ಮುಂದಿನ ವರುಷ ಲೋಕಾಯುಕ್ತ ಕಾಯ್ದೆಯನ್ನು ಜಾರಿಗೆ ತಂದಿತು. ಜನತಾ ಪರಿವಾರದಿಂದ ಜಾರಿಯಾದ ಲೋಕಾಯುಕ್ತ ಸಂಸ್ಥೆಯನ್ನು ಹಿಂದೊಮ್ಮೆ ಜನತಾ ಪರಿವಾರದ ನಾಯಕನಾಗಿದ್ದ ಸಿದ್ಧರಾಮಯ್ಯ ಮಣ್ಣು ಮಾಡಲು ಹೊರಟಿದ್ದಾರೆ.

ಲೋಕಾಯುಕ್ತದ ಸ್ಥಾಪನೆಯೊಂದಿಗೆ ಭ್ರಷ್ಟಾಚಾರವೇನೂ ಅಂತ್ಯ ಕಾಣಲಿಲ್ಲ. ಲೋಕಾಯುಕ್ತವೆಂಬುದು ಸ್ವಾಯತ್ತ ಸಂಸ್ಥೆಯಾದರೂ ಲೋಕಾಯುಕ್ತ, ಉಪಲೋಕಾಯುಕ್ತರ ನೇಮಕದಲ್ಲಿ ರಾಜಕೀಯ ನಡೆದೇ ನಡೆಯುತ್ತದೆ. ಜೊತೆಗೆ ಆಯ್ಕೆಯಾದ ಲೋಕಾಯುಕ್ತರು ‘ಸರಿಯಾಗಿ’ ಕಾರ್ಯನಿರ್ವಹಿಸಲೇಬೇಕು ಎಂದೇನೂ ಒತ್ತಡವಿರುವುದಿಲ್ಲವಲ್ಲ. ಭ್ರಷ್ಟಾಚಾರ ತಡೆಗಟ್ಟಲು ಲೋಕಾಯುಕ್ತ ಸಂಸ್ಥೆಯೊಂದು ಅಸ್ತಿತ್ವದಲ್ಲಿದೆ ಎಂದು ಬಹುತೇಕ ಜನರ ಅರಿವಿಗೆ ಬಂದಿದ್ದೇ 2001ರಲ್ಲಿ ವೆಂಕಟಾಚಲಯ್ಯ ಅಧಿಕಾರವಿಡಿದಾಗ. ವಿವಿಧ ಕಛೇರಿಗಳಿಗೆ, ಆಸ್ಪತ್ರೆಗಳಿಗೆ ದಿಡೀರ್ ಎಂದು ಭೇಟಿ ನೀಡಿ ಲಂಚಕೋರರನ್ನು ಜನರ, ಮಾಧ್ಯಮದ ಎದುರಿಗೇ ಬಯ್ದಾಗಷ್ಟೇ ಜನರಿಗೆ ಲೋಕಾಯುಕ್ತದ ಅಸ್ತಿತ್ವದ ಅರಿವಾಗಿದ್ದು. ವೆಂಕಟಾಚಲಯ್ಯ ಭ್ರಷ್ಟತೆ ತಡೆಯುವುದಕ್ಕಿಂತ ಪ್ರಚಾರಕ್ಕೇ ಹೆಚ್ಚು ಆದ್ಯತೆ ಕೊಟ್ಟುಬಿಟ್ಟರು ಎಂದನ್ನಿಸುವುದು ಹೌದಾದರೂ ಲೋಕಾಯುಕ್ತ ಸಂಸ್ಥೆಯ ಶಕ್ತಿಯನ್ನು ಲೋಕಾಯುಕ್ತಕ್ಕೆ ತೋರಿಸಿಕೊಟ್ಟದ್ದೇ ವೆಂಕಟಾಚಲಯ್ಯ ಎಂದರದು ತಪ್ಪಲ್ಲ. ನಂತರ ಲೋಕಾಯುಕ್ತರಾದ ಸಂತೋಷ್ ಹೆಗಡೆ ಗಣಿ ದೋಚುವವರ ಬೆವರಿಳಿಸಿದರು. ರಾಜ್ಯದ ಗಣಿ ಲೂಟಿಯ ಬಗ್ಗೆ ವಿಸ್ತೃತ ವರದಿ ಕೊಟ್ಟರು. ನಂತರ ಲೋಕಾಯುಕ್ತರಾದ ಶಿವರಾಜ್ ಪಾಟೀಲ್ ಸರಕಾರದಿಂದ ಅಕ್ರಮವಾಗಿ ಭೂಮಿ ಪಡೆದುಕೊಂಡಿರುವ ಆರೋಪದ ಕಾರಣದಿಂದ ಮೂರು ತಿಂಗಳಿಗೇ ರಾಜೀನಾಮೆ ಕೊಟ್ಟುಬಿಟ್ಟರು. ಆಮೇಲೆ ನೇಮಕಗೊಂಡಿದ್ದ ವೈ.ಭಾಸ್ಕರ್ ರಾವ್ ಲೋಕಾಯುಕ್ತ ಸಂಸ್ಥೆ ಹತ್ತು ವರುಷದಿಂದ ಗಳಿಸಿಕೊಂಡಿದ್ದ ಚೂರುಪಾರು ವಿಶ್ವಾಸವನ್ನು ಮಣ್ಣು ಮಾಡಲು ಪ್ರಾರಂಭಿಸಿಬಿಟ್ಟಿತು. ಭಾಸ್ಕರ್ ರಾವರ ಭ್ರಷ್ಟಾಚಾರ, ಅವರ ಮಗ ಲೋಕಾಯುಕ್ತ ಸಂಸ್ಥೆಯನ್ನು ಭ್ರಷ್ಟವಾಗಿಸಿದ್ದರ ಬಗ್ಗೆ ಒಂದರ ಹಿಂದೊಂದರಂತೆ ವರದಿಗಳು ಬರಲಾರಂಭಿಸಿದವು. ಭ್ರಷ್ಟರಿಗ ಶಿಕ್ಷೆಯಾಗುವಂತೆ ಮಾಡಿ ಲೋಕಾಯುಕ್ತ ಸಂಸ್ಥೆಯ ಘನತ ಮರಳ ಗಳಿಸಬೇಕಿದ್ದ ರಾಜ್ಯ ಸರಕಾರ ಲೋಕಾಯುಕ್ತ ಸಂಸ್ಥೆಯನ್ನೇ ನಾಶ ಪಡಿಸಲು ಹೊರಟು ಬಿಟ್ಟಿದೆ. 

ಲೋಕಾಯುಕ್ತ ಸಂಸ್ಥೆ ತನ್ನೆಲ್ಲ ಅಧಿಕಾರಗಳೊಂದಿಗೆ ಅಸ್ತಿತ್ವದಲ್ಲಿರುತ್ತದೆ, ಜೊತೆಗೆ ಎಸಿಬಿ ಕೂಡ ಇರುತ್ತದೆ ಎಂಬ ನೆಪವನ್ನು ಕಾಂಗ್ರೆಸ್ಸಿನ ಸಿದ್ಧರಾಮಯ್ಯ, ಟಿ.ಬಿ.ಜಯಚಂದ್ರ ಹೇಳುತ್ತಿದ್ದಾರಾದರೂ ಮುಖ್ಯಮಂತ್ರಿಯ, ಮುಖ್ಯಕಾರ್ಯದರ್ಶಿಗಳ ಅಧೀನದಲ್ಲಿರುವ ಸಂಸ್ಥೆಯೊಂದು ಅದು ಹೇಗೆ ನಿಷ್ಪಕ್ಷವಾಗಿರಲು ಸಾಧ್ಯ? ಲೋಕಾಯುಕ್ತ ಅಸ್ತಿತ್ವದಲ್ಲಿರುತ್ತದೆ ಎಂದ್ಹೇಳುತ್ತಲೇ ಲೋಕಾಯುಕ್ತದ ಅಡಿ ಇದ್ದ ಏಳು ನೂರಕ್ಕೂ ಅಧಿಕ ಪ್ರಕರಣಗಳನ್ನು ಎಸಿಬಿಗೆ ವರ್ಗಾಯಿಸಿದ್ಯಾಕೆ? ಲೋಕಾಯುಕ್ತಕ್ಕಿಂತ ಶಿಸ್ತಿನ ಭ್ರಷ್ಟಾಚಾರ ನಿಗ್ರಹ ಪಡೆಯನ್ನು ಕಟ್ಟುವುದೇ ರಾಜ್ಯ ಸರಕಾರದ ಉದ್ದೇಶವಾಗಿದ್ದರೆ ಇಷ್ಟೊಂದು ತಡಬಡಿಸಿ ಶೀಘ್ರವಾಗಿ ಎಸಿಬಿಯನ್ನು ರಚಿಸಿದ್ಯಾಕೆ? ಸ್ವಾಯತ್ತ ಸಂಸ್ಥೆಗಳನ್ನೇ ಆಡಳಿತ ಪಕ್ಷಗಳ ಉದ್ದಿಶ್ಯಗಳಿಗೆ ಬಳಸಿಕೊಳ್ಳುವಾಗ ಸ್ವಾಯತ್ತತೆ ಇಲ್ಲದ ಸಂಸ್ಥೆಯೊಂದು ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಸಾಧ್ಯವೇ? ಕೊನೇ ಪಕ್ಷ, ಲೋಕಾಯುಕ್ತದ ಅಸ್ತಿತ್ವ ಜನರಿಗೊಂದು ನೈತಿಕ ಬಲವನ್ನಾದರೂ ಕೊಡುತ್ತಿತ್ತು. ಈಗಲೂ ನೈತಿಕ ಬಲ ಸಿಕ್ಕಿದೆ, ಸಾಮಾನ್ಯರಿಗಲ್ಲ ಭ್ರಷ್ಟಾಚಾರಿಗಳಿಗೆ, ಲಂಚಕೋರರಿಗೆ. ಆಡಳಿತ ಪಕ್ಷದ ಜೊತೆ ‘ಚೆನ್ನಾಗಿದ್ದರೆ’ ಸಾಕು ಎಂಬ ಸೌಭಾಗ್ಯವನ್ನು ಸಿದ್ಧು ದಯಪಾಲಿಸಿಬಿಟ್ಟಿದ್ದಾರೆ. 

ಆಕರ: ವಿಕಿಪೀಡಿಯಾ, lokayukta.kar.nic.in