ಫೆಬ್ರ 13, 2020

ಒಂದು ಬೊಗಸೆ ಪ್ರೀತಿ - 52

ಡಾ. ಅಶೋಕ್.‌ ಕೆ. ಆರ್.‌
ಒಂದು ಬೊಗಸೆ ಪ್ರೀತಿಯ ಹಿಂದಿನ ಅಧ್ಯಾಯಗಳನ್ನು ಓದಲು ಇಲ್ಲಿ ಕ್ಲಿಕ್ಕಿಸಿ.
ಒಳ್ಳೆದಿನ ಕೂಡಿ ಬಂದಿಲ್ಲವಿನ್ನು ಎಂಬ ನೆಪದಿಂದ ಮುಂದೂಡುತ್ತಲೇ ಹೋಗಲಾಗಿದ್ದ ಶಶಿ ಸೋನಿಯಾಳ ಮದುವೆ ಅಂತೂ ಇಂತೂ ಇನ್ನೊಂದು ತಿಂಗಳಿಗೆ ನಿಕ್ಕಿಯಾಗಿತ್ತು. ಪ್ರೀತಿ ಹುಟ್ಟಲನವಶ್ಯಕವಾದ ಮುಹೂರ್ತ ಮದುವೆಗಾಗಿ ಅನಿವಾರ್ಯವಾಗಿದ್ಯಾಕೆ ಅಂತ ಯಾರಿಗೂ ತಿಳಿದಿರಲಿಲ್ಲ. ಪ್ರೀತಿ ಹುಟ್ಟಿದ್ದೂ ಒಂದು ಸುಮುಹೂರ್ತದಲ್ಲೇ, ಅದು ನಮ್ಮರಿವಿನ ಪರಿಧಿಯಲ್ಲಿರಲಿಲ್ಲ ಎಂಬ ಉತ್ತರ ಸಿಗುತ್ತಿತ್ತೋ ಏನೋ. ಬಹುಶಃ ನನ್ನ ಪುರುಷೋತ್ತಮನ ಪ್ರೀತಿ ಯಾವುದೋ ದುರ್ಮುಹೂರ್ತದಲ್ಲಿ ಜನಿಸಿದ್ದಿರಬೇಕು. ಒಂದು ಮಟ್ಟಿಗೆ ಶಶಿ ಸೋನಿಯಾರ ಮದುವೆ ತಡವಾಗಿದ್ದೇ ಒಳಿತಾಯಿತು. ಯಾರಿಗಲ್ಲದಿದ್ದರೂ ಸೋನಿಯಾಳ ತಾಯಿಗೆ ಈ ಮದುವೆಯನ್ನು ಮನಸಾರೆ – ಪೂರ್ಣವಾಗಲ್ಲದಿದ್ದರೂ ಅಪೂರ್ಣವಾಗಿಯಾದರೂ ಒಪ್ಪಿಕೊಳ್ಳುವುದಕ್ಕೆ – ಈ ಸಮಯದಲ್ಲಿ ಸಾಧ್ಯವಾಯಿತು. ಬಯ್ಕಂಡು ಬಯ್ಕಂಡೇ ಅವರ ಹತ್ತಿರದ ನೆಂಟರೂ ʼಏನಾದ್ರೂ ಮಾಡ್ಕಂಡು ಹಾಳಾಗೋಗಿʼ ಎಂದು ಹರಸಲೂ ಈ ಕಾಲಾವಧಿ ಸಹಾಯ ಮಾಡಿತು. ನಮ್ಮಪ್ಪ ಅಮ್ಮನದೇ ಲವ್‌ ಮ್ಯಾರೇಜ್‌ ಆಗಿದ್ದರಿಂದ ನಮ್ಮ ಮನೆಯ ಕಡೆ ಯಾರದೂ ಅಂತಹ ವಿರೋಧವೇನಿರಲಿಲ್ಲ. ʼಮತ್ತೊಂದ್‌ ಗೌಡ್ರುಡಿಗೆಗೆ ಈ ಗತಿ ಬಂತಾʼ ಅಂತ ನಮ್ಮಮ್ಮನ ಕಡೆಯ ಜಾತಿನಿಷ್ಠ ಬಂಧುಗಳು ಒಂದಷ್ಟು ಲೊಚಗುಟ್ಟಿರಬಹುದು. ಮನೆಯಲ್ಲಿ ಮದುವೆಯ ತಯಾರಿ ಜೋರಾದಷ್ಟು ಅಮ್ಮನ ಓಡಾಟ ಜಾಸ್ತಿಯಾಗಿ ರಾಧಳನ್ನು ನೋಡಿಕೊಳ್ಳುವ ಹೆಚ್ಚಿನ ಜವಾಬ್ದಾರಿ ನನ್ನ ತಲೆಯ ಮೇಲೇ ಬೀಳುತ್ತಿತ್ತು. ಎಷ್ಟು ಬೇಗ ಈ ಮದುವೆ ಮುಗಿದು ನಾ ಹೆಚ್ಚು ಓದಲು ಪ್ರಾರಂಭಿಸುತ್ತೀನೋ ಎನ್ನಿಸಲಾರಂಭಿಸಿತ್ತು.

ಮದುವೆಗಿನ್ನು ಇಪ್ಪತ್ತು ದಿನಗಳಿರುವಾಗ ಸಾಗರನಿಗೆ ಮೆಸೇಜು ಮಾಡಿದ್ದೆ. ʼಮುಂದಿನ ತಿಂಗಳ ಹತ್ತನೇ ತಾರೀಖು, ಭಾನುವಾರ ಬಿಡುವು ಮಾಡಿಕೋʼ

“ಯಾಕೆ? ನಿಮ್ಮನೇಲ್ಯಾರೂ ಇರೋದಿಲ್ವಾ? ಬಂದು ನಿನ್ನ ಸೆಕ್ಸ್‌ ನೀಡ್ಸ್‌ ಪೂರೈಸಬೇಕಿತ್ತಾ? ಈ ಸಲ ದುಡ್ಡಾಗ್ತದೆ” ಸಾಗರ ಮೆಸೇಜು ನೋಡಿ ಜಿಗುಪ್ಸೆಯಾಯಿತು, ಅಸಹ್ಯ ಮೂಡಿತು. ಅವನ ಮೇಲಲ್ಲ. ನನ್ನ ಮೇಲೆ. ಇಷ್ಟೊಂದು ಕೆಟ್ಟ ವ್ಯಕ್ತಿತ್ವವಾ ನನ್ನದು? ಬೇಸರವಾಯಿತು. ಯಾರೇ ನನ್ನನ್ನು ಅಪಾರ್ಥ ಮಾಡಿಕೊಂಡರೂ ಸಾಗರ ನನ್ನನ್ನು, ನನ್ನ ಮನಸ್ಸಿನ ಏರಿಳಿತಗಳನ್ನು ಸೂಕ್ತ ರೀತಿಯಲ್ಲಿ ಅರ್ಥೈಸಿಕೊಳ್ಳುತ್ತಾನೆ ಏನೋ ನನ್ನ ಜೊತೆ ಅವನು ಜಗಳವಾಡಿದರೂ ಹೆಚ್ಚಿನಂಶ ಆ ಜಗಳ ನಾ ಅವನಿಗೆ ಸಿಗಲಿಲ್ಲ, ಪೂರ್ಣವಾಗಿ ಅವನವಳಾಗಲಿಲ್ಲ ಅನ್ನೋ ಸಿಟ್ಟಿಗೆ ಅಂತಂದುಕೊಂಡಿದ್ದು ಇವತ್ತಿನವನ ಮೆಸೇಜಿನಿಂದ ನುಚ್ಚುನೂರಾಯಿತು. ನನ್ನ ತಾಳ್ಮೆಗೂ ಒಂದು ಮಿತಿ ಇರಲೇಬೇಕಲ್ಲ.

ಒಂದೊಂದೇ ಎಪಿಸೋಡು ಹುಡುಕುಡುಕಿ ಓದೋಕೆ ಬೇಸರವಾ? ಪೂರ್ತಿ ಇ - ಪುಸ್ತಕ ತೆಗೆದುಕೊಳ್ಳಲು ಇಲ್ಲಿ ಕ್ಲಿಕ್ಕಿಸಿ.

ಫೆಬ್ರ 6, 2020

ಒಂದು ಬೊಗಸೆ ಪ್ರೀತಿ - 51

ಡಾ. ಅಶೋಕ್.‌ ಕೆ. ಆರ್.‌
ಒಂದು ಬೊಗಸೆ ಪ್ರೀತಿಯ ಹಿಂದಿನ ಅಧ್ಯಾಯಗಳನ್ನು ಓದಲು ಇಲ್ಲಿ ಕ್ಲಿಕ್ಕಿಸಿ.
ಬಿಡುವಿನ ಭಾನುವಾರ ವಾರ್ಡುಗಳಲ್ಲಿ ರೋಗಿಗಳೆಚ್ಚಿರಲಿಲ್ಲ. ಓಪಿಡಿ ಡ್ಯೂಟಿ ಕೂಡ ನನ್ನದಿರಲಿಲ್ಲ. ರೌಂಡ್ಸು ಮುಗಿಸಿ ಹತ್ತು ಘಂಟೆಗೆಲ್ಲ ಮನೆ ಸೇರಿಬಿಟ್ಟಿದ್ದೆ. ಕೆಲಸ ಓದು ಮಗಳು ಕೆಲಸ ಓದು ಮಗಳು… ದಿನಚರಿ ಏಕತಾನತೆ ಮೂಡಿಸಿಬಿಟ್ಟಿತ್ತು. ಇವತ್ತು ಸುಮ್ಮನೆ ಮಗಳನ್ನು ಹಾಲಿನಲ್ಲಿ ಸೋಫಾದ ಮೇಲೆ ಮಲಗಿಸಿಕೊಂಡು ದಿನಪೂರ್ತಿ ಟಿವಿ ನೋಡ್ತಾ ಕೂತುಬಿಡಬೇಕು. ಎಷ್ಟು ದಿನವಾಗೋಯ್ತು ಟಿವಿ ಎಲ್ಲಾ ನೋಡಿ ಅಂದ್ಕೊಂಡು ಮಗಳಿಗೆ ರೂಮಿನಲ್ಲಿ ಹಾಲು ಕುಡಿಸುತ್ತಿರುವಾಗ ಗೇಟು ತೆರೆದ ಸದ್ದಾಯಿತು. ಇಷ್ಟೊತ್ತಿಗ್ಯಾರು? ರಾಜೀವನೇ ಇರಬೇಕು. ಭಾನುವಾರ ಅವರು ಎದ್ದೇಳೋದು ಲೇಟು. ತಿಂಡಿಗೆ ಬಂದ್ರೂ ಬಂದ್ರೆ ಇಲ್ಲಾಂದ್ರೆ ಇಲ್ಲ. ಇವತ್ತೇನೋ ಅಪರೂಪಕ್ಕೆ ತಿಂಡಿಗೆ ಬಂದುಬಿಟ್ಟಿದ್ದಾರೆ. ನಿನ್ನೆ ಪಾರ್ಟಿ ಮಾಡಿರಲಿಲ್ಲವೇನೋ. ಏನ್‌ ಗಂಡಸರೋ ಏನೋಪ, ದಿನಾ ಇಲ್ಲೇ ಇದ್ದು, ಕೊನೇಪಕ್ಷ ರಾತ್ರಿ ಇಲ್ಲೇ ಇದ್ದು ಕಷ್ಟಪಟ್ಟು ಹುಟ್ಟಿರೋ ಮಗಳನ್ನ ಇಷ್ಟಪಟ್ಟು ನೋಡಿಕೊಳ್ಳೋದು ಬಿಟ್ಟು ಪುಸಕ್ಕಂತ ಉಂಡು ವಾಪಸ್ಸಾಗಿಬಿಡುತ್ತಾರೆ. ಹೋಗಲ್ಲೇನ್‌ ಮಾಡ್ತಾರೆ. ಹೋಗ್ತಾ ದಾರೀಲೊಂದು ಸಿಗರೇಟು ಸೇದ್ಕಂಡು ಫ್ರೆಂಡ್ಸ್‌ ಜೊತೆ ಒಂದಷ್ಟು ಹರಟೆ ಹೊಡ್ಕಂಡು ಮನೆಗೋಗಿ ಹನ್ನೆರಡರವರೆಗೆ ಯಾವ್ದಾದ್ರೂ ಇಂಗ್ಲೀಷ್‌ ಪಿಚ್ಚರ್‌ ನೋಡ್ಕಂಡು ಮಲಗಿಬಿಡ್ತಾರೆ. 

ಸೀದಾ ರೂಮಿಗೇ ಬಂದರು. ʼತಿಂಡಿ ತಿನ್ನೋಗಿʼ ಎಂದೆ. 

“ಇಲ್ಲ. ಮನೆಯತ್ರ ಒಂದ್ಕಡೆ ಮಲ್ಲಿಗೆ ಇಡ್ಲಿ ಚಟ್ನಿ ಚೆನ್ನಾಗ್‌ ಮಾಡ್ತಾರೆ. ಅಲ್ಲೇ ತಿಂದ್ಕಂಡ್‌ ಬಂದೆ" 

ʼನಂಗೂ ತರೋದಲ್ವ! ಮಲ್ಲಿಗೆ ಇಡ್ಲಿ ಅಂದ್ರೆ ಇಷ್ಟ ನಂತೆ ಅಂತ ಗೊತ್ತಲ್ಲ. ಎರಡ್‌ ವರ್ಷದಿಂದೆ ಎಕ್ಸಿಬಿಷನ್‌ನಲ್ಲಿ ತಿಂದದ್ದೇ ಕೊನೆʼ 

“ತರೋಣ ಅಂತಾನೇ ಹೋಗಿದ್ದು. ಇದೇ ಕೊನೇ ಒಬ್ಬೆ. ಪಾರ್ಸೆಲ್‌ಗಿಲ್ಲ ಸರ್.‌ ಇಲ್ಲಿ ಬರೋರಿಗೆ ಮಾತ್ರ ಅಂದ್ಬಿಟ್ಟ"

ಒಂದೊಂದೇ ಎಪಿಸೋಡು ಹುಡುಕುಡುಕಿ ಓದೋಕೆ ಬೇಸರವಾ? ಪೂರ್ತಿ ಇ - ಪುಸ್ತಕ ತೆಗೆದುಕೊಳ್ಳಲು ಇಲ್ಲಿ ಕ್ಲಿಕ್ಕಿಸಿ.

ಜನ 29, 2020

ಒಂದು ಬೊಗಸೆ ಪ್ರೀತಿ - 50

ಡಾ. ಅಶೋಕ್.‌ ಕೆ. ಆರ್.‌
ಓಪಿಡಿಯಲ್ಲಿ ಬಿಡುವಿನ ವೇಳೆಯಲ್ಲಿ ಓದುತ್ತಾ ಕುಳಿತಿದ್ದಾಗ ರಾಮ್‌ಪ್ರಸಾದ್‌ ಒಳಬರುವುದು ಕಾಣಿಸಿತು. ರಿತಿಕಾಳನ್ನು ವಾರ್ಡಿನಲ್ಲಿ ನೋಡಲೋಗುತ್ತಿದ್ದಾಗ ಆಗೊಮ್ಮೆ ಈಗೊಮ್ಮೆ ಎದುರಿಗೆ ಸಿಕ್ಕು ಹಾಯ್‌ ಬಾಯ್‌ ಹೇಳಿದ್ದರು. ಇವತ್ತೇನು ಓಪಿಡೀಗೆ? ಅದೂ ನಿನ್ನೆ ರಿತಿಕಾ ಡಿಸ್ಚಾರ್ಜ್‌ ಆಗಿದ್ದಳಲ್ಲ? ಅವರ ಬೆನ್ನ ಹಿಂದೆಯೇ ರಿತಿಕಾ ಅಮ್ಮನ ಜೊತೆ ಪುಟ್ಟ ಪುಟ್ಟ ಹೆಜ್ಜೆಹಾಕುತ್ತಾ ನಡೆದು ಬರುತ್ತಿದ್ದರು. ಹೆಜ್ಜೆ ಎತ್ತಿಡುವುದರಲ್ಲಿ ಸುಸ್ತಿರುವುದು ಎದ್ದು ಕಾಣಿಸುತ್ತಿತ್ತಾದರೂ ಮುಖದಲ್ಲಿ ಉತ್ಸಾಹದ ಲೇಪನವಿತ್ತು, ಹತ್ತು ದಿನದ ಆಸ್ಪತ್ರೆವಾಸ ಮೂಡಿಸಿದ ಬೇಸರದ ಮೇಲೆ. ಎರಡ್ಮೂರು ದಿನ ಅಥವಾ ನಾಲ್ಕೈದು ದಿನಕ್ಕೆ ಡಿಸ್ಚಾರ್ಜ್‌ ಮಾಡುವ ಎಂದಿದ್ದರು ಮೋಹನ್‌ ಸರ್.‌ ಆದರೆ ಹೊಟ್ಟೆ ನೋವು ಕಡಿಮೆಯಾಗುವುದಕ್ಕೇ ವಾರ ತೆಗೆದುಕೊಂಡಿತ್ತು. ಪುಣ್ಯಕ್ಕೆ ಕಿಡ್ನಿಗೇನೂ ಹಾನಿಯಾಗಿರಲಿಲ್ಲ. ಹೆಚ್ಚೇ ರಿಸ್ಕಿದೆ ಅನ್ನಿಸಿದರೂ ಹೆಚ್ಚಿನ ಪ್ರಮಾಣದ ಸ್ಟಿರಾಯ್ಡ್‌ ಮಾತ್ರೆಗಳನ್ನು ಕೊಡಲಾರಂಭಿಸಿದ ಮೇಲಷ್ಟೇ ಹೊಟ್ಟೆ ನೋವು ಕಡಿಮೆಯಾಗಿದ್ದು. ರಕ್ತ ಪರೀಕ್ಷೆಗೆ ಬ್ಲಡ್‌ ತೆಗೆದುಕೊಳ್ಳಲು ಚುಚ್ಚುವ ಸೂಜಿ, ಡ್ರಿಪ್‌ಗಾಗಿ ಹಾಕಲಾದ ವ್ಯಾಸೋಫಿಕ್ಸ್‌ ಮೂರು ದಿನಕ್ಕೊಮ್ಮೆ ಬ್ಲಾಕ್‌ ಆಗುತ್ತಿತ್ತು, ಹೊಸ ವ್ಯಾಸೋಫಿಕ್ಸ್‌ ಹಾಕುವಾಗಾಗುತ್ತಿದ್ದ ನೋವೇ ಮಕ್ಕಳಿಗೆ ಆಸ್ಪತ್ರೆಯೆಂದರೆ ಭಯ.…… ಭಯಕ್ಕಿಂತ ಹೆಚ್ಚಾಗಿ ವಾಕರಿಕೆ ಮೂಡಿಸಿಬಿಡುತ್ತದೆ. ನೋವಾಗದಂತೆ ವ್ಯಾಸೋಫಿಕ್ಸ್‌ ಹಾಕುವಂತ, ಸೂಚಿ ಚುಚ್ಚುವಂತ ಔಷಧವ್ಯಾಕಿನ್ನೂ ಕಂಡುಹಿಡಿದಿಲ್ಲವೋ? 

ಫಾಲೋ ಅಪ್‌ಗೆ ಬಂದಿರಬೇಕೇನೋ, ಮೋಹನ್‌ ಸರ್‌ ಬರ ಹೇಳಿರಬೇಕೇನೋ ಅಂದುಕೊಂಡು ಪುಸ್ತಕದಲ್ಲಿ ತಲೆತಗ್ಗಿಸಿದೆ. ಉಹ್ಞೂ.. ಅವರು ನಾನಿದ್ದ ಕೊಠಡಿಗೇ ಬಂದರು. ನೋಡಿ ನಕ್ಕು ಮೇಲೆದ್ದೆ. ಎಷ್ಟೇ ಆಗ್ಲಿ ಹೆಚ್.ಆರ್‌ ಮ್ಯಾನೇಜರ್ರು. ಮುಂದೆ ನಾ ಡಿ.ಎನ್.ಬಿ ಮುಗಿಸಿ ಕೆಲಸಕ್ಕೆ ಸೇರಿದಾಗ ಇವರ ಸಹಾಯವೆಲ್ಲ ಆಗೀಗ ಬೇಕೇ ಆಗ್ತದಲ್ಲ ಅಂತ ನಿಂತೆನೋ ಏನೋ. 

“ಹಲೋ ಡಾಕ್ಟರ್‌ ಡಿಸ್ಟರ್ಬ್‌ ಮಾಡಿದ್ನಾ.…” 

ʼಹಂಗೇನಿಲ್ಲ ಸರ್.‌ ಓಪಿಡಿ ಬಿಡುವಾಗಿತ್ತಲ್ಲ. ಓದ್ತಿದ್ದೆʼ 

ಓದ್ತಿರೋದು ನನ್ನ ಕಣ್ಣಿಗೂ ಕಾಣಿಸಿತ್ತಲ್ಲ ಎನ್ನುವಂತೆ ನಕ್ಕು ರಿತಿಕಾ ಕಡೆಗೆ ನೋಡಿದರು. ರಿತಿಕಾ ತನ್ನ ಕೈಯಲ್ಲಿದ್ದ ಕವರನ್ನು ತಂದು ನನ್ನ ಕೈಗಿತ್ತಳು. ಕವರ್‌ ತೆಗೆದುಕೊಳ್ಳುತ್ತಾ ʼಏನಿದು?ʼ ಎಂದು ರಾಮ್‌ಪ್ರಸಾದ್‌ ಕಡೆಗೆ ನೋಡಿದೆ. 

"ನಮ್ಮಕ್ಕ ನಿಮಗೊಂದು ಬಾಕ್ಸ್‌ ಸ್ವೀಟ್‌ ಕೊಡಲೇಬೇಕೆಂದು ಹೇಳಿದರು. ನಿನ್ನೆ ಡಿಸ್ಚಾರ್ಜ್‌ ಆಗೋದು ತಡವಾಯ್ತು. ಇನ್ಶೂರೆನ್ಸ್‌ ಇತ್ತಲ್ಲ. ಹಾಗಾಗಿ ತಡವಾಯ್ತು. ಆಗಲೇ ನೀವಿದ್ದೀರ ಹೆಂಗೆ ಅಂತ ವಿಚಾರಿಸಿದೆ. ಹೊರಟೋಗಿದ್ರಿ ಮನೆಗೆ” 

ʼಅಯ್ಯೋ ಸ್ವೀಟೆಲ್ಲ ಯಾಕ್‌ ತರೋಕೋದ್ರಿʼ ರಿತಿಕಾಳ ಅಮ್ಮನ ಕಡೆಗೆ ನೋಡುತ್ತಾ ಕೇಳಿದೆ. ಮೇಲ್ಮೇಲ್‌ ಹಂಗ್‌ ಹೇಳಿದ್ರೂ ಒಳಗೊಳಗೇ ಖುಷಿಯಾಗಿತ್ತು. ಏನೋ ಸ್ವಲ್ಪ ಅಪರೂಪದ ರೋಗವನ್ನು ಶೀಘ್ರವಾಗಿ ಕಂಡುಹಿಡಿದದ್ದಕ್ಕೆ ಇಷ್ಟಾದರೂ ಪುರಸ್ಕಾರ ಸಿಕ್ಕಿತಲ್ಲ ಎಂದು. ಅದನ್ನೆಲ್ಲಾ ತೋರಿಸಿಕೊಳ್ಳಲಾದೀತೇ. ʼತಗೊಳಿ ತಗೊಳಿ. ಮಗಳಿಗೇ ಕೊಡಿʼ ಎಂದು ವಾಪಸ್ಸು ರಿತಿಕಾಳ ಕೈಗೇ ಕವರನ್ನು ಕೊಡಲೆತ್ನಿಸಿದೆ. ತನ್ನೆರಡೂ ಕೈಗಳನ್ನು ತಟ್ಟಂತ ಬೆನ್ನಹಿಂದೆ ಕಟ್ಟಿಕೊಂಡ ರಿತಿಕಾ “ಇಲ್ಲ ಆಂಟಿ. ಇದು ನಿಮಗೇಂತಲೇ ತಂದಿದ್ದು. ನೀವೇ ತಿನ್ನಬೇಕು. ಮೇಲಾಗಿ ನೀವ್‌ ನಂಗ್‌ ವಾಪಸ್‌ ಕೊಟ್ರೂ ನಾನಿದನ್ನ ತಿನ್ನೋ ಹಂಗಿಲ್ಲ" ಎಲಾ ಚುರುಕ್‌ ಮೆಣಸಿನಕಾಯಿ ಅಂದ್ಕೋತಾ ʼಯಾಕ್‌ ತಿನ್ನಂಗಿಲ್ವೋ ಮೇಡಮ್ಮೋರುʼ ಎಂದಾಕೆಯ ಕೆನ್ನೆ ಚಿಗುಟಿದೆ. ಹತ್ತು ದಿನದ ಖಾಯಿಲೆಯಿಂದ ಪಾಪ ಕೆನ್ನೆಯೆಲ್ಲ ಒಳಗೋಗಿಬಿಟ್ಟಿತ್ತು. 

“ಬೇಕರಿ ಐಟಮ್ಸು, ಐಸ್‌ಕ್ರೀಮು, ತುಪ್ಪ, ಬೆಣ್ಣೆ – ಎಣ್ಣೆ, ಮೊಟ್ಟೆ – ಮೀನು – ಮಾಂಸ ಏನೂ ತಿನ್ನಬಾರದು ಅಂತ ಹೇಳಿದ್ದಾರಲ್ಲ. ತಿಂದ್ರೆ ಮತ್ತೆ ಹುಷಾರು ತಪ್ತೀನಂತಲ್ಲ. ಮತ್ತೆ ಹುಷಾರು ತಪ್ಪಿ ಅಷ್ಟೆಲ್ಲ ಹೊಟ್ಟೆ ನೋವಾಗೋದಕ್ಕಿಂತ ತಿನ್ನದೇ ಇರೋದೇ ಗುಡ್‌ ಅಲ್ವ ಅಮ್ಮ”. ಹು ಮಗಳೆ ಅಂತ ಅವರಮ್ಮ ತಲೆಯಾಡಿಸಿದರು. 

ಅಮ್ಮನ ಕಡೆಗೆ ತಿರುಗಿದವಳ ತಲೆ ಸವರುತ್ತಾ ʼಸರಿ ಪುಟ್ಟ. ನಾನೇ ತಕೋತೀನಿ. ನೀ ಪೂರ್ತಿ ಹುಷಾರಾದ ಮೇಲೊಂದು ದಿನ ಬರ್ಬೇಕು. ಆಗ ನೀ ಹೇಳಿದ್ದೆಲ್ಲ ಕೊಡಿಸ್ತೀನಿʼ

ಒಂದೊಂದೇ ಎಪಿಸೋಡು ಹುಡುಕುಡುಕಿ ಓದೋಕೆ ಬೇಸರವಾ? ಪೂರ್ತಿ ಇ - ಪುಸ್ತಕ ತೆಗೆದುಕೊಳ್ಳಲು ಇಲ್ಲಿ ಕ್ಲಿಕ್ಕಿಸಿ.

ಜನ 20, 2020

ಒಂದು ಬೊಗಸೆ ಪ್ರೀತಿ - 49

ಡಾ. ಅಶೋಕ್.‌ ಕೆ. ಆರ್.‌
ಮದುವೆಯಾದ ಮೇಲೆ ಲವ್ವಾಗಲ್ವ ಅಂತ ಸುಮ ಕೇಳಿದ ಪ್ರಶ್ನೆಯಿಂದ ಸಾಗರನ ನೆನಪು ಬಹಳ ದಿನಗಳ ನಂತರ ಕಾಡುತ್ತಿತ್ತು. ಮನೆಗೆ ಹೊರಡುವ ಮುನ್ನ ʼಹೇಗಿದ್ದೀಯೋʼ ಅಂತೊಂದು ಮೆಸೇಜು ಹಾಕಿದೆ. ಇನ್ನೇನು, ಇಷ್ಟು ದಿನದ ನಂತರ ಮೆಸೇಜು ಮಾಡಿದ್ದಕ್ಕೆ ವಿಪರೀತದಷ್ಟು ವ್ಯಂಗ್ಯ ಮಾಡಿ ನನಗೆ ಬಯ್ದು ಅವನನ್ನೂ ಬಯ್ದುಕೊಂಡು ಇಬ್ಬರಿಗೂ ನೋವುಂಟುಮಾಡುವಂತಹ ಕೆಟ್ಟ ಕೆಟ್ಟ ಪದಗಳನ್ನು ಬಳಸಿಯೇ ಬಳಸುತ್ತಾನೆ. ಮೆಸೇಜೇ ಮಾಡ್ಬಾರ್ದಿತ್ತೋ ಏನೋ ಅಂತಂದುಕೊಳ್ಳುತ್ತಾ ಮನೆ ತಲುಪಿದೆ. 

ಅಮ್ಮ ಮತ್ತೊಂದು ಸುತ್ತು ಸುಸ್ತಾಗಿ ಕುಳಿತಿದ್ದಳು. ರಾಧಳಿಗಲ್ಲ, ಅಮ್ಮನಿಗೇ ಈಗ ಆರೈಕೆಯ ಅಗತ್ಯವಿದೆ. ಮಲಗೋಗಿ ಅಂತವರಿಗೆ ಹೇಳಿ ಮಗಳನ್ನೂ ಮಲಗಿಸಿ ಅಡುಗೆ ಕೆಲಸ ಮಾಡಿ ಮುಗಿಸಿದೆ. ಒಂದಾದರೂ ಅಮ್ಮ ಎದ್ದೇಳಲಿಲ್ಲ. ಎದ್ದಾಗ ಊಟ ಮಾಡ್ತಾರೆ ಬಿಡು ಅಂದ್ಕೊಂಡು ನಾ ಒಂದಷ್ಟು ತಿಂದು ರೂಮಿಗೆ ಬಂದು ಅಡ್ಡಾದೆ. ರಾತ್ರಿ ಸರಿ ನಿದ್ರೆ ಮಾಡಿರಲಿಲ್ಲವೋ ಏನೋ ರಾಧ ಅತ್ತಿತ್ತ ಮಿಸುಕಾಡದಂತೆ ನಿದ್ರೆ ಹೋಗಿದ್ದಳು. ನಿನ್ನೆ ಆಸ್ಪತ್ರೆಯಲ್ಲಿ ಎಚ್ಚರವಿಲ್ಲದೆ ಮಲಗಿದ್ದಕ್ಕೊ ಏನೋ ನನಗೆ ನಿದ್ರೆ ಹತ್ತಲಿಲ್ಲ. ಫೋನೆಲ್ಲ ನೋಡಿ ಎಷ್ಟು ದಿನಗಳಾಗಿ ಹೋಯ್ತಲ್ಲ ಅಂತ ಫೋನೆತ್ತಿಕೊಂಡು ಎಫ್.ಬಿ ತೆರೆದೆ. ಒಂದೈವತ್ತು ಫ್ರೆಂಡ್‌ ರಿಕ್ವೆಷ್ಟ್‌ಗಳಿದ್ದವು. ಅದರಲ್ಲಿ ಗೊತ್ತಿರೋರನ್ನ ಒಪ್ಪಿಕೊಳ್ತಿರಬೇಕಾದರೆ ಮತ್ತೊಂದು ರಿಕ್ವೆಷ್ಟ್‌ ಬಂತು. ರಾಮ್‌ಪ್ರಸಾದ್‌ದು. ʼಓಯ್!‌ ಆಗ್ಲೇ ನನ್ನೆಸ್ರು ಹುಡುಕಿ ರಿಕ್ವೆಷ್ಟ್‌ ಕಳಿಸಿಬಿಟ್ರಾ? ಅಥವಾ ಫ್ರೆಂಡ್‌ ಸಜೆಷನ್ಸ್‌ ಅಲ್ಲಿ ತೋರಿಸಿರಬೇಕು. ಅಥವಾ ಸುಮ ಹೇಳಿದಂಗೆ ನನ್‌ ಫ್ಯಾನೇ ಇರಬಹುದೇನೋಪʼ ಅಂತಂದುಕೊಂಡು ಒಪ್ಪಿಕೊಂಡೆ. ಎಫ್.ಬಿ ಸ್ಕ್ರಾಲ್‌ ಮಾಡ್ತಾ ಒಂದಷ್ಟು ಲೈಕುಗಳನ್ನೊತ್ತುತ್ತಿರಬೇಕಾದರೆ ಸಾಗರನ ಮೆಸೇಜು ಬಂದ ನೋಟಿಫೀಕೇಷನ್‌ ಕಾಣಿಸಿತು. ಒಟ್ಟೊಟ್ಟಿಗೇ ಮೂರು ಮೆಸೇಜು ಕಳಿಸಿದ್ದ. ತೆರೆಯಲು ಕೌತುಕ, ಜೊತೆಗೊಂದಷ್ಟು ಭಯ. ತೆರೆಯದೇ ಇರಲಾದೀತೆ! ತೆರೆದೆ. 

“ನಂದೇನಿದೆಯೇ. ಮಾಮೂಲಿ ನಡೀತಿದೆ” 

“ನೀ ಹೇಗಿದ್ದಿ” 

“ಮಗಳೇಗಿದ್ದಾಳೆ” 

ಕುಹಕವಿಲ್ಲದೆ, ವ್ಯಂಗ್ಯವಿಲ್ಲದೆ ಸಾಗರ ಮೆಸೇಜು ಮಾಡಬಲ್ಲ ಎನ್ನುವುದೇ ಮರೆತು ಹೋಗಿತ್ತು.

ಒಂದೊಂದೇ ಎಪಿಸೋಡು ಹುಡುಕುಡುಕಿ ಓದೋಕೆ ಬೇಸರವಾ? ಪೂರ್ತಿ ಇ - ಪುಸ್ತಕ ತೆಗೆದುಕೊಳ್ಳಲು ಇಲ್ಲಿ ಕ್ಲಿಕ್ಕಿಸಿ.

ಜನ 14, 2020

ಒಂದು ಬೊಗಸೆ ಪ್ರೀತಿ - 48

ಡಾ. ಅಶೋಕ್.‌ ಕೆ. ಆರ್.‌
ಪುಣ್ಯಕ್ಕೆ ಬೆಳಗಿನವರೆಗೂ ವಾರ್ಡಿನಿಂದಾಗಲೀ ಕ್ಯಾಷುಯಾಲ್ಟಿಯಿಂದಾಗಲೀ ಯಾವುದೇ ಕರೆ ಬರಲಿಲ್ಲ. ಮಗಳು ಹುಟ್ಟಿದ ಮೇಲೆ ಎಚ್ಚರವಿಲ್ಲದಂತೆ ನಿದ್ರೆ ಮಾಡಿದ್ದಿವತ್ತೇ! ಬೆಳಿಗ್ಗೆ ಐದೂವರೆಗೆ ಎಚ್ಚರವಾಗಿತ್ತು, ಅಲಾರಾಂ ಇಲ್ಲದೆ ಎಚ್ಚರವಾಗಿತ್ತು. ಸೊಂಪಾದ ನಿದ್ರೆ ಹೊಡೆದು ಎದ್ದ ಕಾರಣ ಮನಸ್ಸೂ ಉತ್ಸಾಹದಿಂದಿತ್ತು. ಅಭ್ಯಾಸಬಲವೆಂಬಂತೆ ಬಲಕ್ಕೆ ಕೈ ಹಾಕಿ ಮಗಳನ್ನು ಮುಟ್ಟಿ ನೋಡಿದ್ದೆ. ಮಗಳಿರಲಿಲ್ಲ. ಅರೆಕ್ಷಣ ಗಾಬರಿಯಾಗಿ ಡ್ಯೂಟಿ ಡಾಕ್ಟರ್‌ ರೂಮಲಲ್ಲವಾ ನಾ ಇರೋದು ಅಂತ ನೆನಪಾಗಿ ನಕ್ಕೆ. ಮಗಳು ರಾತ್ರಿ ಮಲಗಿದ್ಲೋ ಇಲ್ವೋ? ಅಮ್ಮನಿಗೆ ನಿದ್ರೆ ಆಯ್ತೋ ಇಲ್ವೋ? ಇಷ್ಟೊತ್ತಿಗೆ ಮಗಳು ಎದ್ದುಬಿಟ್ಟಿರುತ್ತಾಳೋ ಏನೋ? ಸಾಮಾನ್ಯ ಅವಳು ಬೆಳಿಗ್ಗೆ ಏಳೋದು ಆರೂವರೆ ಏಳರ ನಂತರವೇ. ಹಂಗಾಗಿ ಪರವಾಗಿಲ್ಲ. 

ನೈಟ್‌ ಡ್ಯೂಟಿ ಇದ್ದಾಗ ಮಾರನೇ ಬೇಳಿಗ್ಗೆ ರೌಂಡ್ಸ್‌ ಮುಗಿಯುವವರೆಗೆ ಇರಬೇಕಾಗ್ತದೆ. ಅಂದಾಜು ಹನ್ನೊಂದು ಹನ್ನೆರಡರವರೆಗೆ. ಇನ್ನೂ ಹೆಚ್ಚೇ ಸಮಯವಾದರೂ ಅಚ್ಚರಿಯೇನಿಲ್ಲ. ಅಲ್ಲಿವರೆಗೂ ಇಲ್ಲೇ ಇದ್ದುಬಿಟ್ಟರೆ ಮಗಳಿಗೆ ಹಾಲುಣಿಸೋದೇಗೆ? ಹಂಗಾಗಿ ಸುಮಾಳಿಗೆ ಆರೂವರೆಯಷ್ಟೊತ್ತಿಗೆ ಬರುವಂತೆ ಕೇಳಿಕೊಂಡಿದ್ದೆ. ಹೋಗಿ ರಾಧಳಿಗಾಲು ಕುಡಿಸಿ ರೆಡಿಯಾಗಿ ಎಂಟರ ಮೇಲೆ ಬಂದರೆ ಸಾಕಿತ್ತು. “ಅದಕ್ಕೇನ್‌ ಅಷ್ಟೊಂದ್‌ ಕೇಳ್ಕೋತಿ? ಬರ್ತೀನಿ ಬಿಡು" ಅಂದಿದ್ದಳು ಸುಮ. 

ಆರುಮುಕ್ಕಾಲಷ್ಟೊತ್ತಿಗೆ ಸುಮ ಬಂದಳು. “ಸಾರಿ ಧರಣಿ. ಎಚ್ಚರವಾಗೋದೊಂದಷ್ಟು ತಡವಾಯ್ತು” 

ʼಅಯ್ಯೋ ಅದಕ್ಯಾಕ್‌ ಸಾರಿ ಕೇಳ್ತಿ. ಲೆಕ್ಕ ನೋಡೋದಾದ್ರೆ ನಾ ಸಾರಿ ಕೇಳ್ಬೇಕು. ನಿನಗೆ ಇಷ್ಟೆಲ್ಲ ತೊಂದರೆ ಕೊಡ್ತಿರೋದಿಕ್ಕೆʼ 

“ಓಹೋ! ಬಹಳ ದೊಡ್‌ ತೊಂದರೆ ಕೊಡ್ತಿದ್ದಿ ಬಿಡಪ್ಪ"

ಒಂದೊಂದೇ ಎಪಿಸೋಡು ಹುಡುಕುಡುಕಿ ಓದೋಕೆ ಬೇಸರವಾ? ಪೂರ್ತಿ ಇ - ಪುಸ್ತಕ ತೆಗೆದುಕೊಳ್ಳಲು ಇಲ್ಲಿ ಕ್ಲಿಕ್ಕಿಸಿ.

ಜನ 6, 2020

ಒಂದು ಬೊಗಸೆ ಪ್ರೀತಿ - 47

ಡಾ. ಅಶೋಕ್.‌ ಕೆ. ಆರ್.‌
ಆಸ್ಪತ್ರೆಗೋಗಲಾರಂಭಿಸಿ ಎರಡು ತಿಂಗಳು ಕಳೆದಿತ್ತು. ಈ ತಿಂಗಳಿಂದ ನೈಟ್‌ ಡ್ಯೂಟಿ ಹಾಕೋದೇನಮ್ಮ ಅಂತ ಕೇಳಿದ್ದಕ್ಕೆ ಒಲ್ಲದ ಮನಸ್ಸಿನಿಂದಲೇ ಹ್ಞೂಗುಟ್ಟಿದ್ದೆ. ಹೂ ಎನ್ನದೆ ಬೇರೆ ದಾರಿಯೂ ಇರಲಿಲ್ಲವಲ್ಲ. ಎರಡು ತಿಂಗಳಿಂದ ನನ್ನ ಎಂಟು ನೈಟ್‌ ಡ್ಯೂಟಿಗಳನ್ನು ಪಾಪ ನನ್ನ ಜೊತೆಗಿದ್ದ ಪಿ.ಜಿಗಳೇ ಮಾಡಿದ್ದರು. ಎಷ್ಟೂಂತ ಅವರ ಸಹಾಯ ಬಯಸುವುದು, ಎಷ್ಟಂತ ಮಾಡುವುದಿವಳಿಗೆ ಅಂತ ಅವರು ಗೊಣಗುವುದಕ್ಕೆ ಮುಂಚಿತವಾಗಿಯೇ ನೈಟ್‌ ಡ್ಯೂಟಿ ಒಪ್ಪಿಕೊಳ್ಳುವುದು ಸೂಕ್ತವೆಂದು ನನಗೂ ಅನಿಸಿತು. ಐದಕ್ಕೆ ಮನೆಗೆ ಹೋಗಿ ಮತ್ತೆ ಏಳೂವರೆಯ ಸುಮಾರಿಗೆ ಹೊರಟುಬರ್ತೀನಿ, ಅಲ್ಲಿಯವರೆಗೂ ಸ್ವಲ್ಪ ನೋಡ್ಕೊ ಪ್ಲೀಸ್‌ ಎಂದು ಗೆಳತಿ ಸುಮಾಳಿಗೇಳಿದ್ದೆ. "ಏಳೂವರೆ ಇಲ್ಲದೇ ಹೋದರೆ ಎಂಟೂವರೆಗೇ ಬಾ. ತೊಂದರೆಯೇನಿಲ್ಲ” ಎಂದ್ಹೇಳಿ ಕಳುಹಿಸಿಕೊಟ್ಟಿದ್ದಳು. ಉತ್ತಮ ಸಹೋದ್ಯೋಗಿಗಳು ದೊರಕೋದು ಸಹಿತ ಒಂದು ಅದೃಷ್ಟವೇ ಸರಿ. ಅವಳ ಒಳ್ಳೇತನವನ್ನು ದುರುಪಯೋಗಪಡಿಸಿಕೊಳ್ಳುವುದು ತಪ್ಪಾಗ್ತದಲ್ಲ, ಏಳೂವರೆಗೆ ಐದು ನಿಮಿಷವಿರುವಂತೆಯೇ ಆಸ್ಪತ್ರೆ ತಲುಪಿ ಅವಳನ್ನು ಕಳುಹಿಸಿಕೊಟ್ಟೆ. 

ರಾತ್ರಿ ಹೊತ್ತು ಆಸ್ಪತ್ರೆಯಲ್ಲಿ ವೈದ್ಯರು ಸಿಕ್ತಾರೆ ಅನ್ನೋ ಕಾರಣಕ್ಕೆ ಬಿಡುವಾಗಿದ್ದರೂ ಬೆಳಗಿನ ಸಮಯ ಬಾರದೆ ಈಗ ಬರುವವರ ಸಂಖೈ ದಿನೇ ದಿನೇ ಹೆಚ್ತಿದೆ. ಬೆಳಿಗ್ಗೆ ಬಂದ್ರೆ ಓಪಿಡಿಯಲ್ಲಿ ಜನ ಜಾಸ್ತಿಯಿದ್ದರೆ ಕಾಯಬೇಕು, ಸೀದಾ ಕ್ಯಾಷುಯಾಲ್ಟಿಗೆ ಬಂದರೆ ಕೆಲಸ ಸಲೀಸು ಎಂಬ ಭಾವನೆ ಹಲವರಿಗೆ. ನಾಲ್ಕು ದಿನದಿಂದ ಇರುವ ಹೊಟ್ಟೆ ನೋವಿಗೆ, ಮೈಕೈ ನೋವಿಗೆ, ಕಿವಿನೋವಿಗೆ, ಜ್ವರಕ್ಕೆ ಮಧ್ಯರಾತ್ರಿ ಬಂದು ಆಸ್ಪತ್ರೆಯ ಕದ ಬಡಿಯುತ್ತಾರೆ. ಆಸ್ಪತ್ರೆ ಅಂದ ಮೇಲೆ ಜನ ಎಷ್ಟೊತ್ತಿಗಾದರೂ ಬರಬಹುದು ಎನ್ನುವುದೇನೋ ಸತ್ಯವೇ ಆದರೂ ಬೆಳಿಗ್ಗೆ ಬಂದು ತೋರಿಸುವಂತಹ ಖಾಯಿಲೆಗಳಿಗೆ ರಾತ್ರಿ ಬಂದು ನಿಜಕ್ಕೂ ತುರ್ತು ಗಮನ ಅಗತ್ಯವಿರುವವರಿಗೆ ಅನ್ಯಾಯ ಮಾಡುತ್ತಾರೆ. ಬಹಳ ತಿಂಗಳುಗಳ ನಂತರ ನಾ ಮಾಡ್ತಿದ್ದ ನೈಟ್‌ ಡ್ಯೂಟಿಯಿದು. ಎನ್.ಐ.ಸಿ.ಯುನಲ್ಲಿದ್ದ ರೋಗಿಗಳನ್ನು ನೋಡುವಾಗಲೂ ಮನಸ್ಸೆಲ್ಲ ರಾಧಳ ಬಗ್ಗೆಯೇ ಯೋಚಿಸುತ್ತಿತ್ತು. ಮಧ್ಯರಾತ್ರೀಲಿ ಎಚ್ಚರವಾದಾಗ ಕುಡಿಸಿ ಅಂತ ಹಾಲು ತೆಗೆದಿಟ್ಟು ಬಂದಿದ್ದೆ. “ಮಗಳಿಗೆ ಐದು ತಿಂಗಳು ತುಂಬ್ತಲ್ಲ. ಸೆರೆಲ್ಯಾಕೋ ಮೇಲ್‌ ಹಾಲೋ ಕೊಡೋಣ ಬಿಡು” ಅಂತ ಅಮ್ಮ ಹೇಳುತ್ತಲೇ ಇದ್ದಳು. ಇಲ್ಲಿ ಆಸ್ಪತ್ರೆಯಲ್ಲಿ ದಿನಂಪ್ರತಿ ʼಆರು ತಿಂಗಳವರೆಗೆ ಮಗುವಿಗೆ ತಾಯಿ ಹಾಲು ಬಿಟ್ಟು ಬೇರೇನನ್ನೂ ಕೊಡಬೇಡಿʼ ಅಂತ ಮಗುವಿನ ತಾಯಿಗೆ ಬೇಸರವಾಗುವಷ್ಟು ಸಲ ಹೇಳಿ ನನ್ನ ಮಗುವಿಗೇ ಮೇಲ್‌ ಆಹಾರ ಕೊಡಲು ಹೇಗೆ ಒಪ್ಪಲಿ? ʼಇನ್ನೊಂದು ತಿಂಗಳು ತಡ್ಕೋ. ಆಮೇಲೆ ನಿನ್ನಿಷ್ಟದಂತೆ ಮಾಡುವೆಯಂತೆʼ ಎಂದು ಸುಮ್ಮನಾಗಿಸುತ್ತಿದ್ದೆ.

ಒಂದೊಂದೇ ಎಪಿಸೋಡು ಹುಡುಕುಡುಕಿ ಓದೋಕೆ ಬೇಸರವಾ? ಪೂರ್ತಿ ಇ - ಪುಸ್ತಕ ತೆಗೆದುಕೊಳ್ಳಲು ಇಲ್ಲಿ ಕ್ಲಿಕ್ಕಿಸಿ.

ಡಿಸೆಂ 29, 2019

ಒಂದು ಬೊಗಸೆ ಪ್ರೀತಿ - 46

ಡಾ. ಅಶೋಕ್.‌ ಕೆ. ಆರ್.‌
“ಧರಣಿ….ಏ….ಧರಣಿ” ದೂರದಿಗಂತದಲ್ಲಿ ಕೇಳಿಸುತ್ತಿದ್ದ ಅಮ್ಮನ ದನಿ. ಅಮ್ಮ ನನ್ನಿಂದ ದೂರಾಗುತ್ತಿದ್ದರೋ ನಾ ಅಮ್ಮನಿಂದ ದೂರಾಗುತ್ತಿದ್ದೆನೋ ತಿಳಿಯದೆ ಎಲ್ಲವೂ ಗೊಂದಲಮಯ. ರಾಧ ಎಲ್ಲಿ ಕಾಣಿಸುತ್ತಲೇ ಇಲ್ಲವಲ್ಲ. 

“ಧರಣಿ……ಧರಣಿ” ಅಮ್ಮನ ದನಿ ಇನ್ನಷ್ಟು ಜೋರಾಯಿತು. ಇಲ್ಲ…….ನಾ ಅಮ್ಮನಿಂದ ಅಮ್ಮ ನನ್ನಿಂದ ದೂರಾಗುತ್ತಿಲ್ಲ ಹತ್ತಿರವಾಗುತ್ತಿದ್ದೇವೆಂಬುದರಿವಾಗಿ ಒಂದಷ್ಟು ಸಮಾಧಾನ. ಧರಣಿ ಧರಣಿ….. ಅಮ್ಮನ ಕೂಗು ಮಾತ್ರ ನಿಲ್ಲುತ್ತಲೇ ಇಲ್ಲ. ಇದ್ಯಾಕೆ ಅಮ್ಮ ಹೀಗೆ ಒಂದೇ ಸಮನೆ ಕೂಗುತ್ತಿದ್ದಾರೆ? ಅಪ್ಪನಿಗೇನಾದರೂ ಆಯಿತಾ? ಅಮ್ಮನಿಗೇ ಏನಾದರಾಯಿತಾ? ಅಥವಾ ರಾಧ…… ʼಅಯ್ಯೋ ರಾಧʼ ಎಂದು ಬೆಚ್ಚಿಬಿದ್ದವಳ ಬೆನ್ನ ಮೇಲೊಂದು ಬಲವಾದ ಹೊಡೆತ ಬಿತ್ತು. ʼಅಯ್ಯೋ ಅಮ್ಮʼ ಎಂದು ಕೂಗಿಕೊಳ್ಳುತ್ತಾ ಕಣ್ಣು ತೆರೆದು ಅಗಲಿಸಿ ನೋಡಿದರೆ ಕಂಡಿದ್ದು ನಮ್ಮ ಮನೆಯ ಡೈನಿಂಗ್‌ ಟೇಬಲ್ಲು. ಟೇಬಲ್ಲಿನ ಮೇಲಿದ್ದ ತಟ್ಟೆ, ತಟ್ಟೆಯೊಳಗೆ ಮುಕ್ಕಾಲು ಚಪಾತಿ ಒಂದು ಸೌಟಿನಷ್ಟು ಬೆಂಡೆಕಾಯಿ ಪಲ್ಯ, ನನ್ನ ಕೈಯೊಳಗೆ ಚಪಾತಿಯ ಒಂದು ತುಂಡು, ಎದುರಿಗೆ ನಗಾಡುತ್ತಾ ಕುಳಿತಿದ್ದ ಅಪ್ಪ. 

“ನಿಂಗೇನೇ ಬಂದು ದೊಡ್ರೋಗ. ಊಟ ಮಾಡ್ತಾ ಮಾಡ್ತಾನೇ ನಿದ್ರೆ ಹೋಗಿದ್ದೀಯಲ್ಲ” ಅಮ್ಮನ ನಗೆಮಿಶ್ರಿತ ಮಾತು.

ಒಂದೊಂದೇ ಎಪಿಸೋಡು ಹುಡುಕುಡುಕಿ ಓದೋಕೆ ಬೇಸರವಾ? ಪೂರ್ತಿ ಇ - ಪುಸ್ತಕ ತೆಗೆದುಕೊಳ್ಳಲು ಇಲ್ಲಿ ಕ್ಲಿಕ್ಕಿಸಿ.

ಡಿಸೆಂ 22, 2019

ಒಂದು ಬೊಗಸೆ ಪ್ರೀತಿ - 45

ಕನ್ನಡ ಕಾದಂಬರಿ
ಡಾ. ಅಶೋಕ್.‌ ಕೆ. ಆರ್.‌
ಸಾಗರ ಬಂದಿದ್ದಾಗ ರಾಜೀವ ಮನೆಯಲ್ಲಿರಲಿಲ್ಲ. ಅಪ್ಪನೂ ಹೊರಹೋಗಿದ್ದರು. ತಮ್ಮ ಸೋನಿಯಾಳೊಡನೆ ಹೊರಗೋಗಿದ್ದ. ಇದ್ದಿದ್ದು ನಾನು ಅಮ್ಮ ರಾಧ. ಸಾಗರ ಒಳಬಂದಾಗ ಮಗಳು ಮಲಗಿದ್ದಳು. ಸಾಗರನ ಜೊತೆ ಅಮ್ಮ ಎರಡು ನಿಮಿಷಗಳ ಕಾಲ ಕುಶಲೋಪರಿ ಮಾತನಾಡಿ ಕಾಫಿ ಮಾಡಲು ಒಳಗೋದರು. ʼಇರು ಮಗಳನ್ನ ಎತ್ಕೊಂಡ್‌ ಬರ್ತೀನಿʼ ಎಂದಿದ್ದಕ್ಕೆ "ಇರಲಿ ಬಿಡೆ. ಮಲಗಿರಲಿ. ಸುಮ್ನ್ಯಾಕೆ ಏಳಿಸ್ತಿ. ಎದ್ದಾಗ ನೋಡಿದರಾಯಿತಲ್ಲ” ಎಂದ. 

ʼಮತ್ತೆ…ಇನ್ನೇನ್‌ ಸಮಾಚಾರʼ ಎಂದು ಕೇಳಿದ್ದಕ್ಕೆ “ವಿಶೇಷವೇನಿಲ್ಲ” ಎಂದು ತಲೆಯಾಡಿಸಿದ. 

ʼಹುಡುಗಿ ಏನಾದ್ರೂ ನೋಡಿದ್ಯಾʼ 

“ಮ್.‌ ಒಂದೆರಡ್‌ ಫೋಟೋ ತೋರಿಸಿದ್ರು. ಇನ್ನೂ ಹೋಗಿಲ್ಲ ನೋಡೋದಿಕ್ಕೆ. ಹೋಗ್ಬೇಕು” 

ʼಮ್.‌ ಏನ್‌ ಮಾಡ್ಕೊಂಡಿದ್ದಾರೆ ಆ ಹುಡ್ಗೀರುʼ 

“ಏನೋ ಗೊತ್ತಿಲ್ವೇ. ನಾ ಕೇಳೋಕ್‌ ಹೋಗಿಲ್ಲ" 

ʼಅಯ್ಯೋ ನಿನ್ನ…. ವಿಚಾರಿಸಬೇಕಲ್ವೇ…..ʼ ಮಾತು ಮುಗಿಯುವುದಕ್ಕೆ ಮುನ್ನ ನನ್ನೆಡೆಗೆ ತೂರಿ ಬಂದ ಅವನ ತೀಕ್ಷ್ಣ ನೋಟ ಈ ವಿಷಯ ಬಿಟ್ಟು ಬೇರೆ ಮಾತನಾಡು ಎನ್ನುವಂತಿತ್ತು. 

ʼಹೋಗ್ಲಿ ಬಿಡು. ಮತ್ತೆ ಬೇರೆ ಫ್ರೆಂಡ್ಸ್ಯಾರಾದ್ರೂ ಸಿಕ್ಕಿದ್ರಾ ಮೈಸೂರಲ್ಲಿʼ 

“ಇಲ್ವೇ. ಯಾರೂ ಸಿಕ್ಕಿಲ್ಲ. ಎಲ್ರೂ ಬ್ಯುಸಿಯಲ್ವ ಈಗ. ಯಾರೂ ಸಿಗೋದಿಲ್ಲ” 

ಅದೇನು ಅವನ ಗೆಳೆಯರ ಕುರಿತಾಗಿ ಹೇಳಿದನೋ, ನನ್ನ ಬಗ್ಗೆ ಹೇಳಿದನೋ ಗೊತ್ತಾಗಲಿಲ್ಲ. ಅಷ್ಟರಲ್ಲಿ ಅಮ್ಮ ಕಾಫಿ ತಂದರು. ಜೊತೆಗೊಂದು ಪ್ಲೇಟಿನಲ್ಲಿ ಮಾರಿ ಬಿಸ್ಕೆಟ್ಟು. ಎರಡು ಬಿಸ್ಕೆಟ್ಟು ತಿಂದು ಕಾಫಿ ಕುಡಿದ. ಅವನು ಕಾಫಿ ಕಪ್ಪು ಮೇಜಿನ ಮೇಲಿಟ್ಟಾಗ ಮಗಳನ್ನು ತರಲು ಮೇಲೆದ್ದೆ. 

“ಮಲಗಿದ್ರೆ ಬಿಡೆ. ಇನ್ನೊಂದ್ಸಲ ಬರ್ತೀನಿ. ಸುಮ್ನೆ ಯಾಕೆ ಎಬ್ಬಿಸ್ತಿ”

ಒಂದೊಂದೇ ಎಪಿಸೋಡು ಹುಡುಕುಡುಕಿ ಓದೋಕೆ ಬೇಸರವಾ? ಪೂರ್ತಿ ಇ - ಪುಸ್ತಕ ತೆಗೆದುಕೊಳ್ಳಲು ಇಲ್ಲಿ ಕ್ಲಿಕ್ಕಿಸಿ.

ಕತ್ತಲು


️ಹರ್ಷಿತ.ಕೆ. ಟಿ 
ಬೆಳಕಿನ ದಾರಿಗೆಂದೂ 
ಅಡ್ಡಗಾಲು ಹಾಕದು 
ಬೆಳಕು ನುಗ್ಗಿಬಂದೊಡನೆ 
ತಲೆಬಾಗಿ ಹಿನ್ನೆಡೆದು ದಾರಿ ಕೊಡುವುದು 
ನುಂಗಿ ತೇಗಿದರೂ ಬೆಳಕು 
ಗಂಟಲಲಿ ಸಿಕ್ಕಿ ಬಿಕ್ಕಳಿಕೆಯಾಗದು 

ಡಿಸೆಂ 16, 2019

ಒಂದು ಬೊಗಸೆ ಪ್ರೀತಿ - 44

ಡಾ. ಅಶೋಕ್.‌ ಕೆ. ಆರ್.‌
ಮಗು ನಿರೀಕ್ಷೆಗಿಂತ ಹೆಚ್ಚು ಬೆಳೆದಿತ್ತು. ಜೊತೆಗೆ ನನ್ನ ಪೆಲ್ವಿಸ್ಸು ಮಾಮೂಲಿಗಿಂತ ಚಿಕ್ಕದಿದ್ದ ಕಾರಣ ನಾರ್ಮಲ್‌ ಡೆಲಿವರಿ ಕಷ್ಟವೆಂದು ತಿಳಿದು ವಾರವಾಗಿತ್ತು. ಇವತ್ತು ರಾತ್ರಿ ಆಸ್ಪತ್ರೆಗೆ ಸೇರುವಂತೆ ಸೂಚಿಸಿದ್ದರು, ನಾಳೆ ಬೆಳಿಗ್ಗೆ ಸಿಸೇರಿಯನ್‌ ಮಾಡುವವರಿದ್ದರು. ದಿನಾ ನೂರಾರು ಸಿಸೇರಿಯನ್‌ ನಡೀತವೆ, ಅಮ್ಮ ಮಕ್ಕಳು ಆರೋಗ್ಯವಾಗೂ ಇರ್ತಾರೆ, ಆದರೂ ದಿಗಿಲು. ಆಪರೇಷನ್‌ ಥಿಯೇಟರ್‌ನಲ್ಲೇ ಹೆಚ್ಚು ಕಡಿಮೆಯಾಗಿ ಸತ್ತು ಹೋದರೆ, ನಾ ಬದುಕಿ ಮಗು ಸತ್ತು ಹೋದರೆ, ಮಗು ಬದುಕಿ ನಾ ಸತ್ತು ಹೋದರೆ…… ಅಪರೂಪದಲ್ಲಪರೂಪದ ಖಾಯಿಲೆ ಕಸಾಲೆಗಳನ್ನು ದಿನನಿತ್ಯದ ಆಸ್ಪತ್ರೆಯ ಒಡನಾಟದಲ್ಲಿ ನೋಡುವುದಕ್ಕೋ ಏನೋ ವಿಧ ವಿಧದ ಯೋಚನೆಗಳು ಮೂಡುತ್ತವೆ. ಎಲ್ಲಾ ಡಾಕ್ಟ್ರುಗಳಿಗೂ ಹಿಂಗೇನಾ? ಎಂಟರ ಸುಮಾರಿಗೆ ಆಸ್ಪತ್ರೆಗೆ ಹೋಗಿ ಸೇರಿಕೊಂಡೆ. ಅಪ್ಪ ಅಮ್ಮ ಜೊತೆಯಲ್ಲಿ ಬಂದಿದ್ದರು. ರಾಜೀವ ಒಂಭತ್ತರ ಸುಮಾರಿಗೆ ಬಂದು ಒಂದರ್ಧ ಘಂಟೆ ಇದ್ದು ಹೊರಟು ಹೋದರು. ಬಾಯಿಮಾತಿಗೂ ನಾನೇ ಇರ್ಲಾ ಇವತ್ತು ರಾತ್ರಿ ಅಂತ ಕೇಳಲಿಲ್ಲ. ಒಂಭತ್ತೂವರೆಯಷ್ಟೊತ್ತಿಗೆ ಅಮ್ಮನಿಗೆ ಗಡದ್ದು ನಿದ್ರೆ. ಅಪ್ಪ ಮನೆಗೆ ಹೋದರು. ದಿಗಿಲಿಗೋ, ಉತ್ಸಾಹಕ್ಕೋ ನನಗೆ ನಿದಿರೆಯೇ ಸುಳಿಯುತ್ತಿಲ್ಲ. ಸಾಗರನ ನೆನಪಾಗಿ ಮೊಬೈಲ್‌ ಕೈಗೆತ್ತಿಕೊಂಡೆ. ಮೆಸೇಜು ವಿನಿಮಯವಾಗಿ ಬಹಳ ದಿನವಾಗಿತ್ತು. ಏನೆಂದು ಮೆಸೇಜಿಸಲಿ? ಮತ್ತಿದು ನನ್ನದೇ ಪುರಾಣ ಹೇಳುವುದಕ್ಕೆ ಮೆಸೇಜ್‌ ಮಾಡ್ತಿರೋದು. ಅವನೇನಾದರೂ ಹೇಳಿದರೆ ಕೇಳುವ ತಾಳ್ಮೆಯಿಲ್ಲದ ನಾನು ನನಗೇನಾದರೂ ಹೇಳಬೇಕೆನ್ನಿಸಿದಾಗ ಅವನಲ್ಲಿ ಕೇಳುವ ತಾಳ್ಮೆಯಿದೆಯೋ ಇಲ್ಲವೋ ಎನ್ನುವುದನ್ನೂ ಯೋಚಿಸದೆ ಮೆಸೇಜು ಮಾಡಿಬಿಡುತ್ತೇನಲ್ಲ. ಅವನೇಳಿದಂತೆ ನಾ ಅವನನ್ನು ಬಳಸಿಕೊಳ್ಳುತ್ತಿದ್ದೀನಾ? ಖಂಡಿತ ಇಲ್ಲ. ಅವನೇಳಿದ್ರಲ್ಲಿದ್ದ ಸತ್ಯವೆಂದರೆ ಮಗುವಿನ ಕಣ್ಣಲ್ಲಿ ಚಿಕ್ಕವಳಾಗಿ ಕಾಣಬಾರದೆಂದು ನಾ ಸಾಗರನಿಂದ ದೂರಾಗುತ್ತಿದ್ದೀನಿ ಅಷ್ಟೇ. ಅದನ್ನು ಬಿಟ್ಟರೆ ಸಾಗರನನ್ನು ದೂರ ತಳ್ಳಲು ಇನ್ಯಾವುದೇ ಸಕಾರಣವಿಲ್ಲ. 

ಇರಲಿ, ಕಿತ್ತಾಟಗಳೆಲ್ಲ ಇರಲಿ. ಈ ಸಮಯದಲ್ಲಿ ಸಾಗರನಿಗೆ ಮೆಸೇಜು ಮಾಡದೇ ಇರುವುದು ನನ್ನಿಂದ ಸಾಧ್ಯವಿಲ್ಲ ಎಂದುಕೊಳ್ಳುತ್ತ ʼಆಸ್ಪತ್ರೆ ಸೇರಿದ್ದೀನಿ ಕಣೋ. ನಾಳೆ ಬೆಳಿಗ್ಗೆ ಆರೂ ಆರೂವರೆಗೆ ಸಿಸೇರಿಯನ್ನಿದೆʼ ಮೆಸೇಜು ಕಳಿಸಿದೆ. ಹತ್ತದಿನೈದು ನಿಮಿಷವಾದರೂ ಅವನಿಂದ ಪ್ರತಿಕ್ರಿಯೆ ಬರಲಿಲ್ಲ. ಮುನಿಸಿನ್ನು ಆರಿಲ್ಲ ಹುಡುಗನಿಗೆ. ಇರಲಿ. ನನ್ನದೂ ತಪ್ಪಿದೆ. ಇನ್ನೇನು ನನಗೂ ನಿದ್ರೆ ಹತ್ತಬೇಕೆನ್ನುವಷ್ಟರಲ್ಲಿ ಅವನಿಂದ ಮೆಸೇಜು ಬಂತು. 

“ಸಾರಿ ಕಣೇ. ಮೊಬೈಲ್‌ ಚಾರ್ಜಿಗಿಟ್ಟಿದ್ದೆ. ಈಗ ನೋಡಿದೆ ಮೆಸೇಜ್ನ. ಏನ್‌ ಫುಲ್‌ ಟೆನ್ಶನ್‌ನಲ್ಲಿದ್ದೀಯ" 

ʼಹುʼ

ಒಂದೊಂದೇ ಎಪಿಸೋಡು ಹುಡುಕುಡುಕಿ ಓದೋಕೆ ಬೇಸರವಾ? ಪೂರ್ತಿ ಇ - ಪುಸ್ತಕ ತೆಗೆದುಕೊಳ್ಳಲು ಇಲ್ಲಿ ಕ್ಲಿಕ್ಕಿಸಿ.