ಕು.ಸ.ಮಧುಸೂದನ ರಂಗೇನಹಳ್ಳಿ
ವರ್ತಮಾನದ ರಾಜಕಾರಣದಲ್ಲಿ ಇದ್ದಕ್ಕಿದ್ದಂತೆ ಯೂಟರ್ನ್ ಹೊಡೆದು ತನ್ನ ಅಧಿಕಾರದಾಹವನ್ನು ಪ್ರದರ್ಶಿಸಿ, ಅದಕ್ಕೆ ಪೂರಕವಾಗಿ ಸಂವಿದಾನದತ್ತವಾಗಿ ಜನತೆ ನೀಡಿದ ಐದು ವರ್ಷದ ಅಧಿಕಾರಾವಧಿಯನ್ನು ತಿರಸ್ಕರಿಸಿ, ವಿದಾನಸಭೆಯನ್ನು ವಿಸರ್ಜಿಸಿದ ತೆಲಂಗಾಣದ ಮಾಜಿ ಮುಖ್ಯಮಂತ್ರಿ ಶ್ರೀ ಕೆ.ಚಂದ್ರಶೇಖರ್ ರಾವ್ ತಮ್ಮ ರಾಜ್ಯದ ಜನತೆಗೆ ಮಾತ್ರವಲ್ಲದೆ ಸಂವಿದಾನಕ್ಕೂ ದ್ರೋಹ ಬಗೆದಿದ್ದಾರೆ. ಈ ಹಿಂದೆಯೂ ಇಂಡಿಯಾದ ರಾಜಕಾರಣದಲ್ಲಿ ಹಲವಾರು ಮುಖ್ಯಮಂತ್ರಿಗಳು ಅವಧಿಗು ಮುನ್ನವೇ ವಿದಾನಸಭೆ ವಿಸರ್ಜಿಸಿ ಚುನಾವಣೆಗೆ ಹೋಗಿದ್ದಿದೆ. ಆದರೆ ಅವರೆಲ್ಲರಿಗೂ ಹೇಳಿಕೊಳ್ಳಲು ಒಂದೊಂದು ಕಾರಣಗಳಿರುತ್ತಿದ್ದವು. ಸ್ಪಷ್ಟ ಬಹುಮತ ಇಲ್ಲದಿರುವುದು, ಸರಕಾರದ ಒಳಗೆ ಹಲವು ರೀತಿಯ ಭಿನ್ನಮತೀಯ ಚಟುವಟಿಕೆಗಳಿರುವುದು, ಸರಕಾರವೇ ದೊಡ್ಡ ಹಗರಣಗಳ ಸುಳಿಗೆ ಸಿಲುಕುವುದು ಹೀಗೇ ವಿದಾನಸಭೆ ವಿಸರ್ಜನೆ ಸಮರ್ಥಿಸಿಕೊಳ್ಳಲು ಅವರುಗಳಿಗೆ ಗಟ್ಟಿ ಕಾರಣಗಳಿರುತ್ತಿದ್ದವು.
ಈ ಹಿನ್ನೆಲೆಯಲ್ಲಿ ನೋಡಿದರೆ ಚಂದ್ರಶೇಖರ್ರಾವ್ ಅವರಿಗೆ ಇಂತಹ ಯಾವುದೇ ಕಾರಣಗಳೂ ಇರಲಿಲ್ಲ ಮತ್ತು ಅವರ ಸರಕಾರದ ಭದ್ರತೆಗೆ ಯಾವುದೇ ಆಂತರೀಕ ಮತ್ತು ಬಾಹ್ಯ ಬೆದರಿಕೆಯೂ ಇರಲಿಲ್ಲ. ನೂರಾ ಹತ್ತೊಂಭತ್ತು ಸಂಖ್ಯಾಬಲದ ವಿದಾನಸಭೆಯಲ್ಲಿ ಅವರ ಟಿ.ಆರ್.ಎಸ್.ಪಕ್ಷಕ್ಕೆ ತೊಂಭತ್ತು ಸ್ಥಾನಗಳ ರಾಕ್ಷಸ ಬಹುಮತ ಲಭ್ಯವಿತ್ತು. ಜೊತೆಗೆ ಅಂತಹ ಯಾವುದೇ ಭಿನ್ನಮತೀಯ ಚಟುವಟಿಕೆಯಾಗಲಿ, ಹಗರಣಗಳ ಆರೋಪವಾಶಗಲಿ ಇರಲಿಲ್ಲ. ಇಷ್ಟೆಲ್ಲ ಇದ್ದಾಗ್ಯೂ ಚಂದ್ರಶೇಖರ್ ರಾವ್ ಮುಂದಿನ ವರ್ಷದ ಮೇ-ಜೂನ್ ತಿಂಗಳಲ್ಲಿ ಅಂತ್ಯಗೊಳ್ಳಬೇಕಿದ್ದ ವಿದಾನಸಭೆಯನ್ನು ಹೆಚ್ಚೂಕಡಿಮೆ ಹತ್ತು ತಿಂಗಳಿಗೂ ಮುನ್ನವೇ ವಿಸರ್ಜನೆ ಮಾಡಿ ತಮ್ಮ ರಾಜ್ಯವನ್ನು ಚುನಾವಣೆಗೆ ನೂಕಿದ್ದಾರೆ.