ಫೆಬ್ರ 20, 2016

ಪಿ.ಸಾಯಿನಾಥ್: ನಿಮ್ಮ ಹೋರಾಟ ಭಿನ್ನಾಭಿಪ್ರಾಯಗಳನ್ನೇ ಅಪರಾಧ ಎಂದು ಸಾಧಿಸಲು ಹೊರಟಿರುವ ಶಕ್ತಿಗಳ ವಿರುದ್ಧ...ಭಾಗ 1

ದಿನಾಂಕ-19-02-2016 ರಂದು ಜೆ.ಎನ್.ಯು ನಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಪಿ. ಸಾಯಿನಾಥ್ ಮಾತನಾಡಿದ್ದರು. ಅದರ ಕನ್ನಡ ಭಾವಾನುವಾದದ ಮೊದಲ ಭಾಗ ಇಲ್ಲಿದೆ.
ಮೂಲ ಭಾಷಣ: ಪಿ ಸಾಯಿನಾಥ್ 
ಅನುವಾದ: ಡಾ.ಕಿರಣ್ ಎಂ ಗಾಜನೂರು
ಇದುವರೆಗೂ ನನ್ನನ್ನು ಪರಿಚಯಿಸಿದವರು ನನ್ನ ಕುರಿತು ಬಹಳಷ್ಟು ವಿಷಯಗಳನ್ನು ಹೇಳಿದ್ದಾರೆ; ಅದಕ್ಕೆ, ನಾನು ಸಹ ಒಬ್ಬ ಜೆ.ಎನ್.ಯು ದ ಹಿರಿಯ ವಿದ್ಯಾರ್ಥಿಯಾಗಿದ್ದೇನೆ ಎಂಬ ಹೆಮ್ಮೆಯ ವಿಷಯವನ್ನು ಸೇರಿಸ ಬಯಸುತ್ತೇನೆ. ಆ ನಂತರ ಸುಮಾರು 25 ರಿಂದ 30 ವರ್ಷಗಳ ನಂತರ ಈ ವಿಶ್ವವಿದ್ಯಾನಿಲಯದ ಕಾರ್ಯಕಾರಿ ಮಂಡಳಿಯ ಸದಸ್ಯನಾಗಿ 5 ವರ್ಷಗಳ ಕಾಲ ಸೇವೆ ಸಲ್ಲಿಸಲು ಮತ್ತೆ ಇಲ್ಲಿಗೆ ಬಂದೆ. ಆದರೆ ನನ್ನ ಸೇವೆಯ ಶೇ 80 ರಷ್ಟು ಸಮಯ ಸುಪ್ರೀಂ ಕೋರ್ಟ್ ತೀರ್ಪು, ಸಂಸತ್ತಿನ ಕಾಯ್ದೆ ಎಲ್ಲವನ್ನೂ ಧಿಕ್ಕರಿಸಿ ಹಿಂದುಳಿದ ವರ್ಗಗಳಿಗೆ ನೀಡಬೇಕಿದ್ದ 27ಶೇ ಮೀಸಲಾತಿಯನ್ನು ಅಲ್ಲಗಳೆಯುತ್ತಿದ್ದ ಕೆಲವು ಜನರನ್ನು ಎದುರಿಸುವುದರಲ್ಲಿಯೇ ಕಳೆದು ಹೋಯಿತು. ಅಂತಿಮವಾಗಿ ನಾವು ಗೆದ್ದೆವು, ಅದು ಬೇರೆ ವಿಚಾರ. ನಿಜ ಹೇಳಬೇಕು ಎಂದರೆ ನಾನು ವಿದ್ಯಾರ್ಥಿಯಾಗಿ ಇಲ್ಲಿನ ಗಂಗಾ ವಸತಿ ನಿಲಯದ ಅಧ್ಯಕ್ಷನಾಗಿದ್ದಾಗ ಇದ್ದಷ್ಟು ಸಂತೋಷ ಇಲ್ಲಿನ ಕಾರ್ಯಕಾರಿ ಮಂಡಳಿಯ ಸದಸ್ಯನಾಗಿದ್ದಾಗ ಇರಲಿಲ್ಲ . .

ನಾನು ಇಂದು ದೆಹಲಿಗೆ ನಿಮಗಾಗಿಯೇ ಬಂದಿದ್ದೇನೆ. ನನಗೆ ದೆಹಲಿಯಲ್ಲಿ ಬೇರೆ ಯಾವ ಕೆಲಸವೂ ಇಲ್ಲ. ನಾನು ಏಕೆ ಇಂದು ನಿಮ್ಮ ಎದುರು ನಿಂತಿದ್ದೇನೆ ಎಂದರೆ ಇಂದು ನೀವು ಮಾಡುತ್ತಿರುವ ಹೋರಾಟ ನಿಮ್ಮ ಬೇಡಿಕೆಗಳಿಗೆ ಮಾತ್ರ ಸೀಮಿತವಾಗಿರದೆ ಅದಕ್ಕಿಂತಲೂ ಮೀರಿದ ವಿಶಾಲವಾದ ಸಂಗತಿಯೊಂದರ ಕಡೆಗೆ ನಮ್ಮನ್ನು ಸೆಳೆಯುತ್ತಿದೆ.

ಈ ದೇಶದಲ್ಲಿ ಇಂದು ನಡೆಯುತ್ತಿರುವ ಹೋರಾಟಗಳ ಕುರಿತು ಅದ್ಯತಾ ಪಟ್ಟಿಯೊಂದನ್ನು ತಯಾರು ಮಾಡಿಕೊಂಡರೆ ನಿಮ್ಮ ಹೋರಾಟ 3ನೇ ಸ್ಥಾನದಲ್ಲಿ ಇದೆ. ಆದರೆ ನಿಮಗೆ ನೆನಪಿರಲಿ ಈ ಹೋರಾಟವನ್ನು ಈ ದೇಶದ ಸಾಮಾನ್ಯ, ಬಡವ, ದಲಿತ ಕಳೆದ ಎರಡು ದಶಕಗಳಿಂದ ನಡೆಸುತ್ತಲೇ ಬರುತ್ತಿದ್ದಾರೆ. ಇಂದು ಆ ಹೋರಾಟ ಜೆ.ಎನ್.ಯು ಅಂತಹ ಎಲೈಟ್ ವಿಶ್ವವಿದ್ಯಾನಿಲಯಗಳ ಅಂಗಳವನ್ನು ತಲುಪಿದೆ ಅಷ್ಟೆ! ಇದು ನಿಮಗೆ ಅರ್ಥವಾಗಬೇಕು. ನೀವು ನಿಜವಾಗಿಯೂ ಹೋರಾಡುತ್ತಿರುವುದು ಭಿನ್ನಾಭಿಪ್ರಾಯಗಳನ್ನೆ ಅಪರಾಧ ಎಂದು ಸಾಧಿಸಲು ಹೊರಟಿರುವ ಪ್ರಕ್ರಿಯೆಯ ವಿರುದ್ಧ. ನಮ್ಮ ನಡುವೆ ನಡೆಯುತ್ತಿರುವ ಈ ಸಂಗತಿ ಕೇವಲ ಸಂವಿಧಾನಿಕ ಕಾನೂನಿನ ವಿರೋಧ ಅಥವಾ ಅತಿಕ್ರಮಣದ ಪ್ರಕ್ರಿಯೆ ಮಾತ್ರ ಆಗಿ ನೋಡಲಾಗದು, ಬದಲಾಗಿ ಇದು ನಮ್ಮ ನಡುವಿನ ಅಭಿಪ್ರಾಯ ಭಿನ್ನತೆ ಹೊಂದುವುವವರನ್ನು ಅಪರಾಧಿಗಳೆಂದು ವಿವರಿಸುತ್ತಿರುವ ಮಾದರಿಯ ವಿರುದ್ಧದ ಹೋರಾಟ ಎಂಬ ವಿಶಾಲ ಅರ್ಥದಲ್ಲಿ ನೋಡಬೇಕಿದೆ.

ಇಂದು ನೀವು ಬದುಕುತ್ತಿರುವ ಕಾಲಘಟ್ಟ ಕೇವಲ ಅಸಮಾನತೆಯ ಕಾಲ ಮಾತ್ರವಲ್ಲ ಬದಲಾಗಿ ಕಾರ್ಪೊರೇಟ್ ಶಕ್ತಿಗಳ ದಮನಕಾರಿ ನೀತಿಯನ್ನು ಎದುರಿಸುತ್ತಿದ್ದ ಧ್ವನಿಗಳನ್ನು ಹತ್ತಿಕ್ಕುತ್ತಿರುವ ಕಾಲಘಟ್ಟವೂ ಹೌದು. ಜೀವನದಲ್ಲಿ ಎಂದಿಗೂ ಪೋಲಿಸ್ ಠಾಣೆಯ ಮೆಟ್ಟಿಲು ಹತ್ತಿರದ ಒರಿಸ್ಸಾದ ಕಳಿಂಗಾ ನಗರದಲ್ಲಿನ, ಉತ್ಕಲ್ ವಿಶ್ವವಿದ್ಯಾನಿಲಯದಿಂದ ಪದವಿ ಪಡೆದಿರುವ ಅದಿವಾಸಿ ಕುಟುಂಬವೊಂದು ಟಾಟಾ ಕಂಪೆನಿಯನ್ನು ತಮ್ಮ ಭೂಮಿಯ ಹಕ್ಕಿಗಾಗಿ ಎದುರಿಸುತ್ತದೆ ಮತ್ತು ಅನ್ನ ನೀಡುವ ಭೂಮಿಯನ್ನು ಕೊಡಲು ನಿರಾಕರಿಸುತ್ತದೆ. ಪರಿಣಾಮ ಇಂದು ಆ ಕುಟುಂಬದ ಮೇಲೆ 91 ಪ್ರಕರಣಗಳು ದಾಖಲಾಗಿವೆ! ಎಷ್ಟು 91 ಪ್ರಕರಣಗಳು!

ಒಡಿಸ್ಸಾದ ಜಗತ್ ಸಿಂಗ್ಪುರ್ ನಲ್ಲಿ ಪೋಸ್ಕೋ ವಿರುದ್ಧದ ಹೋರಾಟದ ನಾಯಕ ಅಭಯ್ ಸಾಹು, ನಿಮಗೆ ನೆನಪಿರಲಿ ಈತ ಹೋರಾಡಿ ಪೋಸ್ಕೋವನ್ನು ಮಣಿಸಿದ್ದಾನೆ; ಪ್ರತಿಬಾರಿ ಅವನನ್ನು ಬೇಟಿ ಮಾಡಿದಾಗ ನಾನು ಎಷ್ಟಾದವು ಎಂದು ಆತನನ್ನು ಕೇಳುತ್ತೇನೆ, ಆತ ತನ್ನ ಮೇಲೆ ದಾಖಲಾಗಿರುವ ಪ್ರಕರಣಗಳ ಮಾಹಿತಿಯನ್ನು ನೀಡುತ್ತಿರುತ್ತಾನೆ ಕಳೆದ ಬಾರಿಯ ಭೇಟಿಯಲ್ಲಿ ಆತನ ಮೇಲೆ 56 ರಿಂದ 58 ಪ್ರಕರಣಗಳು ದಾಖಲಾಗಿದ್ದವು. ಆ ಹಳ್ಳಿಯ ಜನ ಪ್ರಕರಣಗಳಿಗೆ ಹೆದರಿ ಹಳ್ಳಿಯಿಂದ ಹೊರಬರುವುದನ್ನೆ ಬಿಟ್ಟು ಬಿಟ್ಟಿದ್ದಾರೆ ಆ ಕಾರಣಕ್ಕೆ ಅವರುಗಳಿಗೆ ಅಣ್ಣ, ತಮ್ಮ ಬಂಧುಗಳನ್ನು ಭೇಟಿಯಾಗಲು ಸಾಧ್ಯವಾಗುತ್ತಿಲ್ಲ.

ನೀವು ರಿಲಯನ್ಸ್ ಮತ್ತು ಎಸ್.ಇ.ಝೆಡ್ (ವಿಶೇಷ ಆರ್ಥಿಕ ವಲಯ) ಪ್ರಾಜೆಕ್ಟ್ ಗಳನ್ನು ವಿರೋಧಿಸುತ್ತಿರುವ ದೇಶದ ಯಾವುದೇ ಭಾಗವನ್ನು ಸಂದರ್ಶಿಸಿ ಇದು ನಿಮಗೆ ಕಾಣಿಸುತ್ತದೆ. ಇಂದು ಪ್ರಕರಣಗಳನ್ನು ದಾಖಲಿಸಿ ಹೋರಾಟಗಳನ್ನು ಹತ್ತಿಕ್ಕುವುದು ಒಂದು ತಂತ್ರವಾಗಿಬಿಟ್ಟಿದೆ. ಇದು ಇಲ್ಲಿ ಮಾತ್ರ ನಡೆಯುತ್ತಿಲ್ಲ, ಬದಲಾಗಿ ದೇಶದ ಎಲ್ಲಾ ಕಡೆ ನಡೆಯುತ್ತಿದೆ ಉದಾಹರಣೆಗೆ ನೀವು ಒಂದು ಸಂಗತಿಯನ್ನು ಎದುರಿಸಿ ಪ್ರತಿಭಟನೆ ನಡೆಸಿದರೆ ಪೋಲಿಸರು ಕನ್ಹಯ್ಯ ಕುಮಾರ್ ಮತ್ತು 800 ಇತರರು ಎಂದು ಪ್ರಕರಣ ದಾಖಲಿಸಿಬಿಡುತ್ತಾರೆ. ಇದು ಅವರಿಗೆ ಸುತ್ತ ಮುತ್ತಲಿನ ಹಳ್ಳಿಗಳನ್ನು ಮುಂದಿನ ಮೂರು ವರ್ಷಗಳ ಕಾಲ ದಾಳಿ ಮಾಡಲು ಮತ್ತು ಜನರನ್ನು ಹೆದರಿಸಲು ಸಹಕಾರಿಯಾಗುತ್ತದೆ ಎ.ಬಿ.ಸಿ ಮತ್ತು 800 ಇತರರು ಪೋಲಿಸರ ಮೇಲೆ ಹಲ್ಲೆ ನಡೆಸಿದರು ಎಂದು ಪ್ರಕರಣ ದಾಖಲಾಗುತ್ತದೆ.

ಕೋರಾಪುರದ ಜೈಲಿನಲ್ಲಿ ನಾನು ಒಬ್ಬರನ್ನು ಬೇಟಿಯಾಗಲು ಹೋಗಿದ್ದೆ. ವೃತ್ತಿಯಲ್ಲಿ ಅವರು ರಸಾಯನಶಾಸ್ತ್ರದ ಪ್ರಾಧ್ಯಾಪಕರು. ಆದರೆ ನಮಗೆ ಅವರನ್ನು ಬೇಟಿಯಾಗಲು ಸಾಧ್ಯವಾಗಲಿಲ್ಲ. ಆದರೆ ಅವರ ವಕೀಲರು ನಮ್ಮೊಡನೆ ಮಾತನಾಡಿದರು. ನಿಮಗೆ ಕೇಳಿ ಆಶ್ಚರ್ಯವಾಗುತ್ತದೆ, ಒಬ್ಬ ರಸಾಯನ ಶಾಸ್ತ್ರದ ಪ್ರಾಧ್ಯಾಪಕರ ಮೇಲೆ ಎಮ್ಮೆ ಕದ್ದ ಆರೋಪ ಹೋರಿಸಿ ಪ್ರಕರಣ ದಾಖಲಿಸಲಾಗಿದೆ. ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಈ ರೀತಿಯ ಪ್ರಕರಣಗಳು ನಮ್ಮಗಳ ಮೇಲೆಯೂ ದಾಖಲಾಗಿವೆ. ಇಲ್ಲಿ ಆ ಪ್ರಾಧ್ಯಾಪಕರನ್ನು ಮತ್ತು ಎಮ್ಮೆಯನ್ನು ನಮಗೆ ಭೇಟಿಯಾಗಲು ಸಾಧ್ಯವಾಗಲಿಲ್ಲ ಅದು ಬೇರೆ ವಿಚಾರ.

ಸಿತಾಕುಲಂ ಜಿಲ್ಲೆಯಲ್ಲಿನ ಪೋರ್ಟ್ ವಿರುಧ್ಧದ ಹೋರಾಟದಲ್ಲಿ 78 ವರ್ಷದ ಮಹಿಳೆಯ ಮೇಲೆ, ಈ ವರ್ಷ ಆಕೆಗೆ 80 ವರ್ಷ ತುಂಬುತ್ತದೆ. ಆಕೆಯ ಮೇಲೆ ಪೋಲಿಸರನ್ನು ಕೊಲ್ಲುವುದಕ್ಕೆ ಪ್ರಯತ್ನಿಸಿದ್ದು ಸೇರಿದಂತೆ 23 ಪ್ರಕರಣಗಳು ದಾಖಲಾಗಿವೆ. ಆಕೆ ಸುಮಾರು ಐದು ಅಡಿ ಇರಬಹುದು. 35 ಕೆ.ಜಿ ತೂಕವನ್ನು ಹೊಂದಿರಬಹದು. ಆಕೆ ದಾಳಿ ಮಾಡಲು ಬಂದ 20 ರಿಂದ 23 ಜನ ಪೋಲಿಸರನ್ನು ಕೊಲ್ಲಲು ಯತ್ನಿಸಿದಳು ಎಂಬ ಆರೋಪವನ್ನು ಹೊರಿಸಲಾಗಿದೆ. ಈ ಪ್ರವೃತ್ತಿಯೀಗ ಎಲೈಟ್ ವಿಶ್ವವಿದ್ಯಾನಿಲಯವನ್ನು ತಲುಪಿರುವುದನ್ನು ಸ್ವಾಗತಿಸಬೇಕಿದೆ ಮತ್ತು ಇಂತಹದರ ವಿರುಧ್ಧ ನಾವು ಪ್ರತಿಭಟಿಸಬೇಕಿದೆ.

ನಾನು ನಾಳೆಗೆ ಎಲ್ಲವೂ ಸರಿಹೋಗಿಬಿಡುತ್ತದೆ ಎಂದು ಹೇಳುತ್ತಿಲ್ಲ. ನನಗೆ ಅನ್ನಿಸುವಂತೆ ಮುಂದಿನ ದಿನಗಳಲ್ಲಿ ಪರಿಸ್ಥಿತಿ ಇನ್ನೂ ಭೀಕರವಾಗಲಿದೆ. ಆದರೆ ಭವಿಷ್ಯದಲ್ಲಿ ಖಂಡಿತ ಪರಿಸ್ಥಿತಿ ಉತ್ತಮಗೊಳ್ಳುತ್ತದೆ, ಆದರೆ ಅದಕ್ಕೂ ಮುಂಚೆ ಅತ್ಯಂತ ದುರ್ಗಮ ದಾರಿಯನ್ನು ಪರಿಸ್ಥಿತಿಯನ್ನು ನಾವು ನೋಡಬೇಕಿದೆ. ಆದರೆ ಭವಿಷ್ಯ ಹೇಗೆ ಬದಲಾಗುತ್ತದೆ ಎಂಬುದು ನಾವು ಮತ್ತು ನಮ್ಮ ಕಾನೂನು ಹೇಗೆ ಕೆಲಸ ಮಾಡುತ್ತೇವೆ ಎಂಬುದು ನಿರ್ಧರಿಸಲಿದೆ. ನನಗೆ ಜೆ.ಎನ್.ಯು ವಿಧ್ಯಾರ್ಥಿ ಸಮುದಾಯದಲ್ಲಿ ಅಪಾರವಾದ ನಂಬಿಕೆಯಿದೆ. ಆ ಕಾರಣಕ್ಕೆ ನಾನು ನಿಮ್ಮೊಳಗೆ ಒಬ್ಬನಾಗಿ ಇಂದು ಇಲ್ಲಿ ನಿಂತಿದ್ದೇನೆ ಈ ಹೋರಾಟದಲ್ಲಿ ನೀವು ಗೆದ್ದೇ ಗೆಲ್ಲುತ್ತೀರಾ ಎಂಬ ನಂಬಿಕೆ ನನಗಿದೆ.

ನೀವು ಇಂದು ಈ ದೇಶದ ಎಂದೂ ಕಂಡಿರದ ಅಸಮಾನತೆಯ ಕಾಲದಲ್ಲಿ ನಿಂತಿದ್ದೀರಾ ಜೊತೆಗೆ ಹೆಚ್ಚುತ್ತಿರುವ ಮೂಲಭೂತವಾದಿ ಶಕ್ತಿಗಳು ನಮ್ಮ ಮುಂದಿವೆ. ನನ್ನ ದೃಷ್ಟಿಯಲ್ಲಿ ಇಂದು ಭಾರತ ಸಾಮಾಜಿಕ ಮತ್ತು ಧಾರ್ಮಿಕ ಮೂಲಭೂತವಾದಿಗಳು ಮಾರುಕಟ್ಟೆ ಶಕ್ತಿಗಳೊಂದಿಗೆ ಸೇರಿ ಮಾಡಿಕೊಂಡಿರುವ ಮೈತ್ರಿಕೂಟದಿಂದ ಆಳಲ್ಪಡುತ್ತಿದೆ, ಇದು ನನ್ನ ಅಭಿಪ್ರಾಯ ಆಗಿದೆ ಈ ಕುರಿತ ಚರ್ಚೆಗೆ ನಾನು ಸಿದ್ಧನಿದ್ದೇನೆ. ಆ ಎರಡು ಶಕ್ತಿಗಳು (ಸಾಮಾಜಿಕ ಮತ್ತು ಧಾರ್ಮಿಕ ಮೂಲಭೂತವಾದಿಗಳು ಮತ್ತು ಮಾರುಕಟ್ಟೆ ಶಕ್ತಿಗಳು) ಪರಸ್ಪರ ಹೊಂದಿಕೊಂಡೆ ಸಾಗುವ ಅನಿವಾರ್ಯತೆಯನ್ನು ಹೊಂದಿವೆ. ತುಂಬಾ ಸಾರಿ ಬಹಳ ದೊಡ್ಡ ಸಂಖ್ಯೆಯ ಜನರು ಮಾರುಕಟ್ಟೆ ಮೂಲಭೂತವಾದಿಗಳು ಮತ್ತು ಧಾರ್ಮಿಕ ಮೂಲಭೂತವಾದಿಗಳಾಗಿರುವುದನ್ನು ನಾವು ಕಾಣಬಹುದಾಗಿದೆ . . .

ಮೊದಲು ನಾವು ಮಾರುಕಟ್ಟೆ ಮೂಲಭೂತವಾದಿಗಳು, ಯಾವ ಧಾರ್ಮಿಕ ಮೂಲಭೂತವಾದಿಗಳಿಂದ ಕಡಿಮೆ ಇಲ್ಲ ಎಂಬುದನ್ನು ಅರ್ಥಮಾಡಿಕೊಳ್ಳಬೇಕಿದೆ. ಈ ಎರಡು ಶಕ್ತಿಗಳು ತಮ್ಮದೇ ಆದ ಪವಿತ್ರ ಗ್ರಂಥಗಳು, ಪುರಾಣಗಳು, ದೈವವಾಣಿಗಳು ಮತ್ತು ಪಂಡಿತರನ್ನು ಹೊಂದಿವೆ. ಮಾರುಕಟ್ಟೆ ಮೂಲಭೂತವಾದಿಗಳು, ಧಾರ್ಮಿಕ ಮೂಲಭೂತವಾದಿಗಳಿಗಿಂತ ಹೆಚ್ಚು ಟಿ.ವಿ ವಕ್ತಾರರನ್ನು ಹೊಂದಿದ್ದಾರೆ ಅವರು ಪ್ರತಿದಿನ ಸಂಜೆ ಎಲ್ಲಾ ಚಾನೆಲ್ ಗಳಲ್ಲಿಯೂ ಕಾಣಲು ಸಿಗುತ್ತಾರೆ. . .

ಅಭಿವೃದ್ಧಿ, ಆಯ್ಕೆ ಎಂಬ ಮಾರುಕಟ್ಟೆ ಮೂಲಭೂತವಾದಿಗಳ ದೈವವಾಣಿಗಳು ಜೆ.ಎನ್.ಯು ವಿಧ್ಯಾರ್ಥಿಗಳಾದ ನಿಮಗೆ ಗೊತ್ತಿರುತ್ತವೆ. ಮಾರುಕಟ್ಟೆ ನಿಜಕ್ಕೂ ನಮಗೆ ಆಯ್ಕೆಯ ಸ್ವಾತಂತ್ರ‍್ಯ ನೀಡುತ್ತದೆಯೇ? ಈ ಕುರಿತು ವಿಸ್ತೃತ ಚರ್ಚೆಗಳು ಆಗುತ್ತಿರುತ್ತವೆ, ಇತ್ತೀಚೆಗೆ ವಾರ ಅಥವಾ ಹತ್ತು ದಿನಗಳ ಹಿಂದೆ ನಮ್ಮ ನಡುವಿನ ಇಬ್ಬರು ಮಾರುಕಟ್ಟೆ ಮೂಲಭೂತವಾದಿಗಳು ಒಂದು ಟಿ.ವಿ ವಾಹಿನಿಯಲ್ಲಿ ಥಾಮೇಸ್ ಪೀಕೆಟಿ ಅವರೊಂದಿಗೆ ಚರ್ಚಿಸುತ್ತಾ ಅಸಮಾನತೆ ಎಂಬುದು ಅಂಥ ತಲೆಕೆಡಿಸಿಕೊಳ್ಳಬೇಕಾದ ಸಂಗತಿಯಲ್ಲ ಮತ್ತು ಜನರ ಸಂಪತ್ತು ಮುಳುಗುತ್ತಿರುವುದು ದೊಡ್ಡ ವಿಷಯವಾಗಬೇಕಿಲ್ಲ ಎಂದು ವಾದಿಸುತ್ತಿದ್ದರು. ಹೀಗೆ ವಾದಿಸುತ್ತಿದ್ದವರು ವಿವೇಕ್ ಡಿಬ್ರಾಯ್ ಮತ್ತು ನಮ್ಮ ಸರ್ಕಾರದ ಮುಖ್ಯ ಆರ್ಥಿಕ ಸಲಹೆಗಾರರಾದ ಅರವಿಂದ ಸುಬ್ರಮ್ಹಣ್ಯ. ನನಗೆ ನೀತಿ ಅಯೋಗದ ವಿವೇಕ್ ಡಿಬ್ರಾಯ್ ಅವರೊಂದಿಗೆ ಯಾವುದೇ ಸಮಸ್ಯೆಗಳಿಲ್ಲ, ತಮಿಳುನಾಡಿನ ನನ್ನ ಸ್ನೇಹಿತರು “ನೀತಿ ಅಯೋಗ”ವನ್ನು “ನೀತಿ ಅಯ್ಯೂ” ಎಂದು ಕರೆಯುತ್ತಾರೆ. ಇವರು ಹೇಳುತ್ತಿದ್ದರು ಇಂದು ಮಾರುಕಟ್ಟೆಯಲ್ಲಿ ಹೂಡಿದ ಹಣವನ್ನು ಜನರು ಕಳೆದುಕೊಳ್ಳುತ್ತಿದ್ದರೆ ಅದು ಅವರ ವ್ಯವಹಾರ, ಅದಕ್ಕೂ ನಮಗೂ ಸಂಬಂಧವಿಲ್ಲ ಎನ್ನುತ್ತಿದ್ದಂತೆ ಅರವಿಂದ ಸುಬ್ರಮ್ಹಣ್ಯ ಅವರು ‘ವಿವೇಕ್ ಸರಿಯಾಗಿ ಹೇಳುತ್ತಿದ್ದಾರೆ’ ಎನ್ನುತ್ತಿದ್ದರು. ಅವರ ಇಬ್ಬರ ಅಲೋಚನೆಗಳು ಒಂದೆ ಆಗಿವೆ . . .

ನಾವು ಮಾರುಕಟ್ಟೆ ಮೂಲಭೂತವಾದದ ಕುರಿತು ನಮ್ಮೆದುರು ಬರುತ್ತಿರುವ ಅಸಮಾನತೆಯ ಮಾದರಿಗಳ ಕುರಿತು ಮಾತನಾಡುವಾಗ ಯುಪಿಎ ಮತ್ತು ಎನ್.ಡಿ.ಎ ನಿಲುವುಗಳಲ್ಲಿ ಅಂತಹ ಅಂತರ ಕಾಣಲಾಗುವುದಿಲ್ಲ. ಈ ಸಂದರ್ಭದಲ್ಲಿ ವೃತ್ತಿಯಲ್ಲಿ ನನ್ನ ಸಹೋದ್ಯೋಗಿಯಾದ ಅರುಣ್ ಶೌರಿ ಅವರ ಮಾತೊಂದು ನೆನಪಿಸಿಕೊಳ್ಳಬೇಕು. ಅವರು ಬಿ.ಜೆ.ಪಿ ಎಂದರೆ ಕಾಂಗ್ರೆಸ್+ಗೋವು ಎಂಬ ವಿಮರ್ಶೆಯನ್ನು ಅರುಣ್ ಶೌರಿ ಮಾಡಿದ್ದರು. ಅವರ ಪ್ರಕಾರ ದೇಶದ ನೀತಿಗಳ ರಚನೆಯ ವಿಷಯದಲ್ಲಿ ಬಿ.ಜೆ.ಪಿ ಎಂದರೆ ದನದ ವಿಷ್ಯವನ್ನು ಸೇರಿಸಿಕೊಂಡ ಮತ್ತೊಂದು ಕಾಂಗ್ರೆಸ್ ಅಷ್ಟೆ ಎಂದುಬಿಟ್ಟಿದ್ದರು. . . .

ನಾವು ಮಹಾರಾಷ್ಟ್ರಕ್ಕೆ ಬಂದರೆ ನೀವು ಪತ್ರಿಕೆಗಳಲ್ಲಿ ನೋಡುತ್ತಲೇ ಇರುತ್ತೀರ, ಅಲ್ಲಿ ಗೋಮಾಂಸ ಸೇವನೆಯನ್ನು ನಿಷೇಧಿಸಲಾಗಿದೆ. ಈ ನಿಷೇಧದ ಹಿಂದಿರುವ ಬಹಳ ಪ್ರಮುಖವಾದ ನಂಬಿಕೆ ಮೂಲಭೂತವಾದಿಗಳು ಗೋವನ್ನು ಪವಿತ್ರ ಎಂದು ಭಾವಿಸುತ್ತಾರೆ ಎಂಬುದು. ಉಳಿದೆಡೆಗಳಲ್ಲಿಯೂ ಗೋವನ್ನು ಬಹಳ ಪವಿತ್ರ ಎಂದು ಗುರುತಿಸಲಾಗುತ್ತದೆ. ಅದಕ್ಕಿಂತ ಮುಖ್ಯವಾಗಿ ಕೃಷಿ ಪ್ರಧಾನ ಸಮುದಾಯಗಳನ್ನು ಹೊಂದಿರುವ ಭಾರತದಲ್ಲಿ ಗೋವು ಕೃಷಿ ಆರ್ಥಿಕತೆಯಲ್ಲಿ ಮಹತ್ವದ ಸ್ಥಾನ ಹೊಂದಿದೆ. ಅದರಲ್ಲಿ ಯಾವುದೇ ಸಂಶಯವಿಲ್ಲ. . .

ಅದರೆ ಇಂದು ಜಾರಿಯಲ್ಲಿರುವ ಗೋವುಗಳನ್ನು ಮಾಂಸಕ್ಕಾಗಿ ಕೊಲ್ಲುವುದು ಮತ್ತು ಮಾರಾಟ ಮಾಡುವುದರ ಮೇಲಿನ ನಿಷೇಧ (ಈ ನಿಷೇಧ ಎಮ್ಮೆ ಕೋಣಗಳ ಮೇಲೂ ಹೆರಲಾಗುತ್ತಿದೆ) ಮೂಲಭೂತವಾದಿಗಳ ಅಲೋಚನೆಯಾಗಿದೆ. ಈ ಕುರಿತಂತೆ ನಾವು ಸ್ಪಲ್ಪ ತಿಳಿದುಕೊಳ್ಳಬೇಕಿದೆ. ನೀವು ನಮ್ಮ ಇತ್ತೀಚಿನ ಜನಸಂಖ್ಯೆ ವರದಿಯ ಅಂಕಿ-ಅಂಶಗಳನ್ನು ನೋಡಿದರೆ ಐಡಿಯಾಲಜಿಕಲಿ ಮತ್ತು ಧಾರ್ಮಿಕವಾಗಿ ಈ ದೇಶದ ಶೇ 42ರಷ್ಟು ಜನಸಂಖ್ಯೆಗೆ ಗೋ ಮಾಂಸ ಸೇವನೆಗೆ ಯಾವುದೇ ತಕರಾರು ಇಲ್ಲ. ಅದರಾಚೆಗೆ ಹಿಂದೂ ಎಂದು ಕರೆಯಲ್ಪಡಬಹುದಾದ ಬಹುದೊಡ್ಡ ಜನಸಂಖ್ಯೆಯ ಬಹಳಷ್ಟು ಮಂದಿಗೆ ಗೋ ಮಾಂಸ ಒಂದು ಸಮಸ್ಯೆಯೇ ಅಲ್ಲ! ಕೇರಳದಲ್ಲಿ ಬಿ.ಜೆ.ಪಿಯ ನಾಯಕರು ಗೋ ಮಾಂಸ ತಿನ್ನುತ್ತಿರುವ ವೀಡಿಯೋ ಅಂತರ್ಜಾಲದಲ್ಲಿ ಸಂಚಲನ ಸೃಷ್ಟಿಸಿದೆ. ಅದಕ್ಕೆ ಪ್ರತಿಯಾಗಿ ನಾನು ಗೋ ಮಾಂಸ ತಿನ್ನುತ್ತಿರುವುದು ಮೂರು ವರ್ಷಗಳ ಹಿಂದೆ! ಇಲ್ಲ ಇಲ್ಲ ಇದು ಗೋ ಮಾಂಸ ಅಲ್ಲ ಇದು ಈರುಳ್ಳಿ ಪಕೋಡಾ! ಎಂಬ ಕೆಲವು ವೀಡಿಯೋಗಳನ್ನು ಹರಿಬಿಡಲಾಗಿದೆ. ಆದರೆ ಈ ಸಂಗತಿಯಿಂದ ನಾವು ಅರ್ಥಮಾಡಿಕೊಳ್ಳಬಹುದಾದ ವಿಷಯ ಕೇರಳದಲ್ಲಿ ಬಹುಪಾಲು ಜನ ಪಕ್ಷಾತೀತವಾಗಿ ಗೋ ಮಾಂಸ ಸೇವಿಸುತ್ತಾರೆ ಎಂಬುದು . . . .

ಇನ್ನು ಮಹಾರಾಷ್ಟ್ರಕ್ಕೆ ಬರುವುದಾದರೆ ಅಲ್ಲಿ ಗೋ ಮಾಂಸ ನಿಷೇಧಿಸಿದ ಮೊದಲ ವಾರ ಭಜರಂಗ ದಳದ ಹುಡುಗರು ಎಲ್ಲಾ ರಸ್ತೆಗಳಲ್ಲಿ ನಿಂತು ವಾಹನಗಳಲ್ಲಿ ಯಾವ ಮಾಂಸ ಇದೆ ಎಂದು ಪರಿಶೀಲಿಸುತ್ತಿದ್ದರಿಂದ ಮುಂಬಯಿಯ ಮೃಗಾಲಯಗಳಲ್ಲಿನ ಹುಲಿ ಮತ್ತು ಸಿಂಹಗಳಿಗೆ ಚಿಕನ್ ಸರಬರಾಜು ಮಾಡಲಾಯಿತು. ಇಲ್ಲಿ ಇನ್ನೊಂದು ವಿಷಯವಿದೆ. ಈ ಬಿ.ಜೆ.ಪಿ ಭಜರಂಗದಳ, ವಿಶ್ವಹಿಂದೂ ಪರಿಷದ್, ಆರ್.ಎಸ್.ಎಸ್ ಎಲ್ಲವೂ ಬೇರೆ ಬೇರೆ ಸಂಘಟನೆಗಳು ಎಂಬ ಒಂದು ವಾದವನ್ನು ಮುಂದಿಡಲಾಗುತ್ತದೆ. ನಮ್ಮ ಸೆಕ್ಯಲಾರ್ ಮಿತ್ರರು ಇಲ್ಲ ಇಲ್ಲ ಅವೆಲ್ಲವೂ ಒಂದೆ ಎಂದು ಗಟ್ಟಿಯಾಗಿ ಹೇಳುತ್ತಿರುತ್ತಾರೆ. ಆದರೆ ವಾಸ್ತವದಲ್ಲಿ ಈ ಎಲ್ಲಾ ಸಂಘಟನೆಗಳು ಒಂದೇ ಅಲ್ಲ ಬದಲಾಗಿ ಬೇರೆ ಬೇರೆ, ಈ ಸತ್ಯವನ್ನು ನಾವು ಅರ್ಥಮಾಡಿಕೊಳ್ಳಬೇಕಿದೆ. ಇವರೆಲ್ಲಾ ಯಾರು ಎಂದು ನಾವು ನೋಡಿದರೆ ಬಿ.ಜೆ.ಪಿ ರಾಜಕೀಯ ರಂಗದಲ್ಲಿನ ಆರ್.ಎಸ್.ಎಸ್ ಆಗಿದ್ದರೆ, ವಿಶ್ವಹಿಂದೂ ಪರಿಷತ್ ಹುಡುಗರ ತಲೆಯಲ್ಲಿ ಧಾರ್ಮಿಕ ನಶೆಯನ್ನು ತುಂಬುವಲ್ಲಿ ಬಿ.ಜೆ.ಪಿ ತರ ಕೆಲಸ ಮಾಡುತ್ತದೆ, ಇನ್ನು ಭಜರಂಗದಳ ಕಟ್ಟಡಗಳನ್ನು, ಬದುಕುಗಳನ್ನು ಒಡೆಯುವುದರಲ್ಲಿ ವಿಶ್ವಹಿಂದೂ ಪರಿಷದ್ ನಂತೆ ಕೆಲಸ ಮಾಡುತ್ತದೆ. ಆದ್ದರಿಂದ ನಾವು ಇವುಗಳ ನಡುವಿನ ಈ ವ್ಯತ್ಯಾಸವನ್ನು ಗುರುತಿಸಬೇಕಿದೆ. . ..

ಇನ್ನು ನಾವು ಹುಲಿ ಸಿಂಹಗಳಿಗೆ ಚಿಕನ್ ತಿನ್ನಿಸಿದ ಘಟನೆಗೆ ಮರಳುವುದಾದರೆ ಮುಂಬಯಿಯ ಮೃಗಾಲಯದಲ್ಲಿ ಒಂದು ವಾರಗಳ ಕಾಲ ಹುಲಿ ಸಿಂಹಗಳಿಗೆ ಚಿಕನ್ ತಿನ್ನಿಸಿದ ಪರಿಣಾಮ ಸಮಸ್ಯೆಯಾಗಿ ಇಡಿ ಮಹಾರಾಷ್ಟ್ರದಲ್ಲಿನ ಪಶುಗಳ ಮಾರುಕಟ್ಟೆ ಕುಸಿದು ಬಿತ್ತು. ಹಿಂದೂ, ಮುಸ್ಲಿಂ,ಕ್ರಿಶ್ಚಿಯನ್ ಮತ್ತು ದಲಿತರು ಸೇರಿದಂತೆ ಸಾವಿರ ಸಾವಿರ ಜನ ತೊಂದರೆಗೆ ಅತಂಕಕ್ಕೆ ಒಳಗಾದರು. ಇವರ‍್ಯಾರಿಗೂ ಗ್ರಾಮೀಣ ಆರ್ಥಿಕತೆಯಲ್ಲಿ ಗೋವಿನ ಪಾತ್ರದ ಕುರಿತ ಕೊಂಚವೂ ಅರಿವಿರಲಿಲ್ಲ. ಹಾಗೆ ನೋಡಿದರೆ ಗ್ರಾಮೀಣ ಭಾರತದ ಆರ್ಥಿಕತೆಯಲ್ಲಿ ಗೋವು ಮಹತ್ವದ ಪಾತ್ರ ವಹಿಸುತ್ತದೆ. . .

ಇದನ್ನೆಲ್ಲಾ ಆಧರಿಸಿ ಮೊನ್ನೆ ಟೈಮ್ಸ್ ಆಫ್ ಇಂಡಿಯಾ ಕೊಲ್ಲಾಪುರದ ಚಪ್ಪಲಿ ಉದ್ಯಮ ಕುಸಿದು ಬಿದ್ದಿರುವ ಕುರಿತು ಬಹಳ ಅಧ್ಬುತವಾದ ವರದಿಗಳನ್ನು ಪ್ರಕಟಿಸಿತು. ಇದು ಒಂದು ಅರ್ಥದಲ್ಲಿ ಮೇಕ್ ಇನ್ ಇಂಡಿಯಾ, ಬ್ರೇಕ್ ಇನ್ ಇಂಡಿಯಾ ಎನ್ನುವಂತಿದೆ. ನಿಮಗೆ ಗೊತ್ತಿರಲಿ ಕೊಲ್ಲಾಪುರದ ಚಪ್ಪಲಿಗಳು ಅಂತರಾಷ್ಟ್ರೀಯ ಬ್ರಾಂಡ್ ಹೊಂದಿವೆ, ಜಾಗತೀಕರಣ, ಉದಾರಿಕರಣಕ್ಕೂ ಪೂರ್ವದಲ್ಲಿಯೇ ಜಗತ್ತಿನ ಎಲ್ಲಾ ಭಾಗಗಳಿಗೆ ತಮ್ಮ ಉತ್ಪನ್ನಗಳನ್ನು ರಫ್ತು ಮಾಡಿದ ಹಿರಿಮೆ ಕೊಲ್ಲಾಪುರದ ಚಪ್ಪಲಿ ಉದ್ಯಮಕ್ಕೆ ಇತ್ತು. ಆದರೆ ಇಂದು ಪ್ರಾಣಿ ಮತ್ತು ಗೋ ಹತ್ಯೆ ನಿಷೇಧದಿಂದ ಅ ನಿಷೇಧವನ್ನು ಎಮ್ಮೆ ಮತ್ತು ಕೋಣಗಳಿಗೂ ವಿಸ್ತರಿಸಿರುವುದರಿಂದ ಕೊಲ್ಲಾಪುರದ ಚಪ್ಪಲಿ ಉದ್ಯಮ ನೆಲ ಕಚ್ಚಿದೆ. ನಿಜವಾಗಿಯೂ ಕೊಲ್ಲಾಪುರದ ಚಪ್ಪಲಿ ಉದ್ಯಮವನ್ನು ನಡೆಸುತ್ತಿದ್ದವರು ಮುಸ್ಲಿಂ ಜನರಲ್ಲ ಬದಲಾಗಿ ದಲಿತರು. ಸರ್ಕಾರದ ಈ ಕ್ರಮದಿಂದ ಒಂದು ಕಡೆ ಮುಸ್ಲಿಮರು ತೊಂದರೆಗೆ ಒಳಗಾದರೆ ಮತ್ತೊಂದು ಕಡೆ ದಲಿತರನ್ನು ತುಳಿದು ಹಾಕಲಾಗಿದೆ. ಅದರ ಜೊತೆಗೆ ಪಶುಗಳ ಉದ್ಯಮಗಳಲ್ಲಿ ತೊಡಗಿದ್ದ ಮರಾಠ ಇತ್ಯಾದಿ ಹಿಂದುಳಿದ ವರ್ಗಗಳನ್ನು ನಾಶಮಾಡಲಾಗಿದೆ. ಒಂದು ಗುಂಪಿನ ದಾಳಿಗೆ/ಕೆಲಸಕ್ಕೆ ಇಂದು ನಾವು ಎಲ್ಲಾ ಕಡೆಗಳಿಂದ ಬಂಧನಕ್ಕೆ ಒಳಗಾಗುತ್ತಿದ್ದೇವೆ. . .

ನಾನು ಇಲ್ಲಿನ ವಿಷಯಕ್ಕೆ ಮರಳುವುದಾದರೆ ಕಳೆದ ಕೆಲ ದಿನಗಳಿಂದ ಕೆಲ ಸ್ನೇಹಿತರು ನನಗೆ ಕರೆ ಮಾಡಿ ನಿಜಕ್ಕೂ ಈ ಸಂಗತಿಗಳು ಘಟಿಸುತ್ತಿವೆಯೇ ಎಂದು ಕೇಳುತ್ತಿದ್ದಾರೆ ನಾವು ಅವರಿಗೆ ಬನ್ನಿ ಗೊತ್ತಾಗುತ್ತದೆ ಇವು ನಮ್ಮ ನಡುವೆ ಘಟಿಸುತ್ತಿರುವ ಸಂಗತಿಗಳೆಂದು ಹೇಳುತ್ತಿದ್ದೇನೆ. . .

ನಾನು ಇದನ್ನು ಹೀಗೆ ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತೇನೆ. ಇಂದು ಜೆ.ಎನ್.ಯು ಮತ್ತು ದೇಶದ ಇತರ ಕಡೆಗಳಲ್ಲಿ ನಡೆಯುತ್ತಿರುವ ಹೋರಾಟಗಳಿಂದ ಕೆಲವು ಜನ ಅತಂಕಕ್ಕೆ, ಬೇಸರಕ್ಕೆ ಒಳಗಾದಂತೆ ಕಾಣುತ್ತಾರೆ. ಆದರೆ ಈ ಘಟನೆಗಳು ಅವರಿಗೆ ಆಶ್ಚರ್ಯ ಉಂಟು ಮಾಡಿಲ್ಲ. ಅವರಿಗೆ ಇಂತಹ ಘಟನೆಗಳಿಂದ ಅತಂಕವಾಗುತ್ತದೆ. ಆದರೆ ಆಶ್ಚರ್ಯಕ್ಕೆ ಆಗುವುದಿಲ್ಲ. ಇದನ್ನು ಅರ್ಥಮಾಡಿಕೊಳ್ಳಲು ನಾವು ಸಮಕಾಲೀನ ಭಾರತದ ರಾಜಕೀಯದಲ್ಲಿ ಆದ ಬದಲಾವಣೆಗಳನ್ನು ಗುರುತಿಸಬೇಕು. ದಶಕಗಳ ಕಾಲ ಭಾರತದ ರಾಜಕಾರಣದಲ್ಲಿ ಅನೇಕ ಬದಲಾವಣೆಗಳು ಆಗಿವೆ. ಆದರೆ ಇಂದು ಈ ದೇಶದ ರಾಜಕಾರಣದಲ್ಲಿ ಆಗಿರುವ ಬಹಳ ಬದಲಾವಣೆಯ ಕುರಿತು ನಾವು ಯೋಚಿಸಬೇಕು. ಚಿಂತಿಸಬೇಕು. ಆ ಬದಲಾವಣೆ ಒಬ್ಬ ಸಕ್ರಿಯ ಆರ್.ಎಸ್.ಎಸ್. ಪ್ರಚಾರಕ ಬಹುಮತ ಪಡೆದು ಪ್ರಧಾನಿಯಾಗಿರುವುದು. ಇದು ಭಾರತದ ರಾಜಕಾರಣದಲ್ಲಿ ಆಗಿರುವ ಬಹಳ ದೊಡ್ಡ ಬದಲಾವಣೆ. ಈ ಹಿಂದೆಯೂ ಆರ್.ಎಸ್.ಎಸ್. ಪ್ರಚಾರಕರು ನಮ್ಮ ನಾಯಕರಾಗಿದ್ದಾರೆ, 40 ವರ್ಷಗಳ ಕಾಲ ಪ್ರಚಾರಕರಾಗಿದ್ದವರು. ಆದರೆ ಅವರು ಬಹುಮತವಿಲ್ಲದ ಸರ್ಕಾರವನ್ನು ನಡೆಸುತ್ತಿದ್ದರು. ಆ ಕಾರಣಕ್ಕೆ ಅವರು ಏನು ಮಾಡಬೇಕು, ಏನು ಮಾಡಬಾರದು ಎಂಬುದರ ಕುರಿತು ಕೆಲವು ಮಿತಿಗಳು ಇದ್ದವು. ಆ ಕಾರಣಕ್ಕೆ ಅವರು “ಸಮ್ಮಿಶ್ರ ಸರ್ಕಾರದ ಧರ್ಮ” ಇತ್ಯಾದಿ ಮಾತುಗಳನ್ನು ಆಡುತ್ತಿದ್ದರು. ಆದರೆ ಇಂದು ನಾವು ಬಹುಮತ ಪಡೆದಿರುವ ಒಬ್ಬ ಸಂಘದ ಪ್ರಚಾರಕ ಪ್ರಧಾನಿಯಾಗಿರುವುದನ್ನು ನೋಡುತ್ತಿದ್ದೇವೆ. ಈ ಅಂಶ ಅವರನ್ನು ನಿಜವಾಗಿಯೂ ತಾವು ಏನು ಎಂಬುದನ್ನು ವ್ಯಕ್ತಪಡಿಸಲು ವಾತಾವರಣ ಸೃಷ್ಟಿಮಾಡಿಕೊಟ್ಟಿದೆ. ಅದನ್ನೆ ಅವರು ಮಾಡುತ್ತಿದ್ದಾರೆ ಮತ್ತು ಮಾಡುತ್ತಾರೆ ಕೂಡಾ. ಇದರಿಂದ ನಾವು ಈ ಕುರಿತು ಅತಂಕಕ್ಕೆ ಒಳಗಾಗಿ ಚರ್ಚೆ ಮಾಡಬಹುದೇ ಹೊರತು ಆಶ್ಚರ್ಯಕ್ಕೆ ಒಳಗಾಗುಗುವ ಅಗತ್ಯ ಇಲ್ಲ. ಏಕೆಂದರೆ ಇದು ನೀರಿಕ್ಷಿತ. . .

ನಾವು ಇಂದು ಎಲ್ಲಾ ಕಡೆಗಳಿಂದ ನಂಬಲಾರದಂತಹ ಅಸಮಾನತೆ ಇರುವ ದೇಶದಲ್ಲಿ ಬದುಕುತ್ತಿದ್ದೇವೆ. ನಿಮ್ಮ ನೀತಿ ಅಯೋಗದ ಜನ, ನಿಮ್ಮ ಆರ್ಥಿಕ ಸಲಹೆಗಾರರು ಈ ಹೆಚ್ಚುತ್ತಿರುವ ಅಸಮಾನತೆಯನ್ನು ದೊಡ್ಡ ಸಮಸ್ಯೆಯಾಗಿ ಪರಿಗಣಿಸುವುದೇ ಇಲ್ಲ ಬದಲಾಗಿ, ಮಾರುಕಟ್ಟೆ ಭಾರತವನ್ನು ಬಿಡುಗಡೆಗೊಳಿಸಿದೆ, ಅಲ್ಪ ಪ್ರಮಾಣದ ಅಸಮಾನತೆ ಇರಬೇಕು, ಇದರಿಂದ ಸ್ಪರ್ಧಾತ್ಮಕ ಮನೋಭಾವ ಬೆಳೆಯುತ್ತದೆ ಎಂಬಿತ್ಯಾದಿ ಮಾತುಗಳನ್ನು ಆಡುತ್ತಿದ್ದಾರೆ . .

ಇಂದು ಈ ದೇಶದಲ್ಲಿ 2011ರ ಜನಗಣತಿಯ ಅಂಕಿ-ಅಂಶಗಳನ್ನು ಮುಂದಿರಿಸಿ ಕಳೆದ ಇಪ್ಪತ್ತನಾಲ್ಕು ತಿಂಗಳಲ್ಲಿ ಮಹತ್ವ ಎನ್ನಿಸುವ ನಾಲ್ಕರಿಂದ ಐದು ಅಂಕಿ-ಆಂಶ ಮತ್ತು ಮಾಹಿತಿಗಳ ವರದಿಗಳು ಬಂದಿವೆ. ಅವುಗಳಲ್ಲಿ ಬಹಳ ಪ್ರಮುಖವಾದವು ಜಾತಿಗಳ ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆಯ ಅಂಕಿ-ಅಂಶ. ವಾಸ್ತವದಲ್ಲಿ ಜಾತಿಗಳ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗತಿಗಳ ಮಾಹಿತಿ ಬಿಡುಗಡೆಗೊಳಿಸಿಲ್ಲ. ಆ ಕಾರಣಕ್ಕೆ ನಮಗೆ ಜಾತಿ ಆಧಾರಿತ ವಿಶ್ಲೇಷಣೆ ಸಾಧ್ಯವಿಲ್ಲ. ಆದರೆ ಇಂದು ವರ್ಗಗಳ ಆಧಾರದಲ್ಲಿನ ಮಾಹಿತಿಗಳನ್ನು, ಅಂಕಿ-ಅಂಶಗಳನ್ನು ನೋಡಿದರೆ ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆಯ ಅಂಕಿ-ಅಂಶ ಗಳ ಪ್ರಕಾರ ಇಂದು ದೇಶದ ಶೆ 75 ರಷ್ಟು ಗ್ರಾಮೀಣ ಕುಟುಂಬಗಳ ಮುಖ್ಯಸ್ಥ ಐದು ಸಾವಿರಕ್ಕಿಂತ ಕಡಿಮೆ ಮಾಸಿಕ ಅದಾಯ ಹೊಂದಿದ್ದಾನೆ. ಇದನ್ನು ನಾವು 10 ಸಾವಿರಕ್ಕೆ ಏರಿಸಿದರೆ ಈ ದೇಶದ 90ಶೇ ಗ್ರಾಮೀಣ ಕುಟುಂಬಗಳು 10 ಸಾವಿರಕ್ಕಿಂತ ಕಡಿಮೆ ವರಮಾನ ಹೊಂದಿವೆ. ಆದರೆ ಇದೇ ದೇಶದಲ್ಲಿ ಪೋರ್ಬ್ ಸಮೀಕ್ಷೆಯ ಶ್ರಿಮಂತರ ಪಟ್ಟಿಯಲ್ಲಿ ಈ ದೇಶದ ಮಿನಿಮಮ್ ಶ್ರೀಮಂತ 3.5 ಕೋಟಿ ಡಾಲರ್ ಹೊಂದಿದ್ದಾನೆ ಅತಿ ಹೆಚ್ಚು ಸಂಪತ್ತನ್ನು ಹೊಂದಿರುವ ದೇಶಗಳ ಪಟ್ಟಿಯಲ್ಲಿ ಈ ದೇಶ 4 ರಿಂದ 5ನೇ ಸ್ಥಾನದಲ್ಲಿದೆ. ನನ್ನ ಪ್ರಕಾರ ನಾವು ಎರಡನೆಯ ಸ್ಥಾನದಲ್ಲಿ ಇದ್ದೇವೆ. ಸದ್ಯಕ್ಕೆ ಐದನೇ ಸ್ಥಾನ ಎಂದುಕೊಳ್ಳಿ. ಯಾವ ದೇಶ ಒಂದು ಕಡೆ ಜಗತ್ತಿನ ಶ್ರಿಮಂತರ ಪಟ್ಟಿಯಲ್ಲಿ 5ನೇ ಸ್ಥಾನ ಗಳಿಸಿದೆಯೋ ಅದೇ ದೇಶ ವಿಶ್ವ ಸಂಸ್ಥೆಯ ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ 135ನೇ ಸ್ಥಾನ ಹೊಂದಿದೆ. ಲ್ಯಾಟೀನ್ ಅಮೇರಿಕಾದ ಎಲ್ಲಾ ದೇಶಗಳು ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಭಾರತಕ್ಕಿಂತ ಮೇಲಿವೆ. 30 ವರ್ಷಗಳ ಕಾಲ ನಾಗರೀಕ ಯುದ್ಧವನ್ನು ಅನುಭವಿಸಿದ ಶ್ರೀಲಂಕಾ, ಅಭಿವೃದ್ಧಿ ಸೂಚ್ಯಂಕದಲ್ಲಿ ನಮಗಿಂತ 20 ಸ್ಥಾನ ಮೇಲಿದ್ದರೆ ಜಗತ್ತಿನಲ್ಲಿಯೇ ಅತ್ಯಂತ ಕ್ರೌರ್ಯಯುತ ಯುಧ್ಧಕ್ಕೆ ಒಳಗಾಗಿ ಯುದ್ಧದಲ್ಲಿ ಬಳಸಿದ ರಾಸಾಯನಿಕ ಮತ್ತು ಅಸ್ತ್ರಗಳ ಕಾರಣಕ್ಕೆ ಇಂದಿಗೂ ಹಲವು ಪೀಳಿಗೆಗಳು ತೊಂದರೆಗೊಳಗಾಗಿರುವ ವಿಯೆಟ್ನಾಂ ನಮಗಿಂತ 50 ಸ್ಥಾನ ಮೇಲಿದೆ. ಈ ಎಲ್ಲಾ ದೇಶಗಳು ಮಾನವನ ಅಭಿವೃದ್ಧಿ ಸೂಚ್ಯಂಕದಲ್ಲಿ ನಮಗಿಂತ ಮುಂದಿವೆ ಇದಕ್ಕೆ ಕಾರಣ ಆ ದೇಶಗಳಲ್ಲಿ ಡಾಲರ್ ಮಿಲೇನಿಯರ್ ಗಳ ಉತ್ಪಾದನೆ ಆಗುತ್ತಿಲ್ಲ . . .

ನಿಮಗೆ ಆಶ್ಚರ್ಯ ಆಗಬಹದು. ನಾರ್ಡಿಕ್ ಮತ್ತು ಸ್ಕಾಂಡಿನೇವಿಯನ್ ದೇಶಗಳಾದ ಡೆನ್ಮಾರ್ಕ್, ಸ್ವೀಡೆನ್, ಫೀನ್ಲೆಂಡ್, ಐಸ್ಲೆಂಡ್, ನಾರ್ವೆ ಎಲ್ಲಾ ದೇಶಗಳಲ್ಲಿ ಭಾರತದ ಒಟ್ಟು ಡಾಲರ್ ಬಿಲೇನಿಯರ್ ಗಳ ಪೈಕಿ ಶೇ 3 ರಷ್ಟ ಮಾತ್ರ ಬಿಲೆನಿಯರ್ಗಳಿದ್ದಾರೆ. ಚೀನಾದಲ್ಲಿ ನಮಗಿಂತ ಜಾಸ್ತಿ ಇರಬಹದು. ರಷ್ಯದಲ್ಲಿ ಪ್ರತಿ ಐದು ವರ್ಷಕ್ಕೂಮ್ಮೆ ಎಲ್ಲಾ ಬಿಲೇನಿಯರ‍್ಗಳನ್ನು ಜೈಲಿಗೆ ಕಳುಹಿಸುತ್ತಾರೆ, ನಾವು ಪಾರ್ಲಿಮೆಂಟಿಗೆ ಕಳುಹಿಸುತ್ತೇವೆ ಅಷ್ಟೆ ವ್ಯತ್ಯಾಸ. ಹೌದು ಈ ಅರ್ಥದಲ್ಲಿ ನಮ್ಮದು ಪ್ರೌಢ ಪ್ರಜಾತಂತ್ರ. . .

ಇದರ ಜೊತೆಯಲ್ಲಿಯೇ ಪಾರ್ಲಿಮೆಂಟಿನಲ್ಲಿ ಇರುವ ಅಸಮಾನತೆಯ ಕುರಿತು ಕೆಲವು ವಿಷಯಗಳನ್ನು ನಾನು ನಿಮಗೆ ಹೇಳುತ್ತೇನೆ. 2014ರ ಚುನಾವಣೆಯ ಪ್ರಮಾಣ ಪತ್ರದಲ್ಲಿ ಘೋಷಿಸಿಕೊಂಡಂತೆ ನಮ್ಮ ದೇಶದ ಲೋಕಸಭೆಯ ಶೇ 82 ಸಂಸದರು ಕೋಟ್ಯಾಧಿಪತಿಗಳು. ಇದು ಅವರೇ ಸ್ವ-ಘೋಷಿಸಿಕೊಂಡಿರುವ ಸಂಗತಿ. ಹಾಗಾದರೆ ಐದು ಮತ್ತು ಹತ್ತು ವರ್ಷಗಳ ಹಿಂದಿನ ಪ್ರಮಾಣ ಏನಿತ್ತು ಎಂದು ನೋಡಿದರೆ 2004ರ ಸಂಧರ್ಭದಲ್ಲಿ ಒಟ್ಟು ಸಂಸದರಲ್ಲಿ ಶೇ 32 ಮಂದಿ ಕೋಟ್ಯಾಧಿಪತಿಗಳಿದ್ದರೆ 2009 ರಲ್ಲಿ ಅದು 53 ಶೇ ಕ್ಕೆ ಏರಿದೆ. 2014ರಲ್ಲಿ ನಾನು ಆಗಲೇ ಹೇಳಿದಂತೆ 82 ಶೇ ಸಂಸದರು ಕೋಟ್ಯಾಧಿಪತಿಗಳಿದ್ದಾರೆ. ಇದು ಚುನಾವಣೆಯ ಸಂದರ್ಭದಲ್ಲಿ ಸಲ್ಲಿಸಬೇಕಾದ ಪ್ರಮಾಣ ಪತ್ರಗಳನ್ನು ಆಧರಿಸಿದ ಲೆಕ್ಕ. ಇಲ್ಲಿ ನೀವು ಎಷ್ಟು ಬೇಕಾದರು ಬರೆಯಬಹದು. ನಿಮ್ಮ ಆದಾಯ ತೆರಿಗೆಯ ದಾಖಲೆಗಳನ್ನೇನು ಇಲ್ಲಿ ಕೇಳುವುದಿಲ್ಲ. ನಮ್ಮ ನಡುವಿನ ಸತ್ಯವಂತ ರಾಜಕಾರಣಿಯಾದ ಚಂದ್ರಬಾಬು ನಾಯ್ಡು ಅವರು 2014 ರಲ್ಲಿ ಘೋಷಿಸಿಕೊಂಡಿರುವ ಆಸ್ತಿ 2004ಕ್ಕಿಂತ ಕಡಿಮೆ ಇದೆ. ಇದು ನಿಜವಾದ ನಿಸ್ವಾರ್ಥ ಜೀವನ ಇದಕ್ಕೆ ಅವರು ಕೊಡುವ ಕಾರಣ ಕಳೆದ ಸಾರಿ ನನ್ನ ಮನೆಯನ್ನು ಮಾರುಕಟ್ಟೆಯ ಮೌಲ್ಯದಲ್ಲಿ ಲೆಕ್ಕ ಹಾಕಿದ್ದರು, ಆದರೆ ಈ ಬಾರಿ ಅದನ್ನು ನಾನು ಕೊಂಡ ಬೆಲೆಯಲ್ಲಿ ಲೆಕ್ಕ ಹಾಕಿದ್ದಾರೆ ಎಂದಿದ್ದಾರೆ. ಅದಕ್ಕೆ ನಾನು ಹೇಳಿದ್ದು ಮಾರುಕಟ್ಟೆ ನಿಮಗೆ ಆಯ್ಕೆಗಳನ್ನು ಕೊಡುತ್ತದೆ ಎಂದು ಹೇಳಿದ್ದು. . .. . 

ನಾವು ಮಾರುಕಟ್ಟೆ ಕೊಡುವ ಆಯ್ಕೆಗಳ ಕುರಿತಂತೆ ಮಾತನಾಡುತ್ತಿದ್ದೆವು. ಇಂದು ಜಗತ್ತಿನಾದ್ಯಂತ ಒಂದು ಬಿಲಿಯನ್ ಜನರು (‌ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಮಂಡಳಿ ಬೇರೆ ಬೇರೆ ವ್ಯಾಖ್ಯೆಗಳನ್ನು ನೀಡುವ ಮೂಲಕ ಆ ಸಂಖ್ಯೆಯನ್ನು 850 ಮಿಲಿಯನ್ ಎಂದು ಹೇಳುತ್ತಿದೆ) ಪ್ರತಿ ರಾತ್ರಿ ಹಸಿವಿನಿಂದಲೇ ಮಲಗುತ್ತಿದ್ದಾರೆ. ನಿಜವಾಗಲೂ ಮಾರುಕಟ್ಟೆ ಹಸಿವಿನಿಂದ ಕಂಗೆಟ್ಟರುವ ಒಂದು ಬಿಲಿಯನ್ ಜನರಿಗೆ ಆಯ್ಕೆಯ ಸ್ವಾತಂತ್ಯವನ್ನು ನೀಡಿದ್ದರೆ ಅವರ ಆಯ್ಕೆ ಆ ಹೊತ್ತಿನ ಆಹಾರವಾಗಿರುತ್ತಿತ್ತು. ಆದರೆ ಅದು ಸಾಧ್ಯವಾಗುತ್ತಿಲ್ಲ. ಆ ಕಾರಣಕ್ಕೆ ನಾವು ಮಾರುಕಟ್ಟೆ ಆಯ್ಕೆಯ ಸ್ವಾತಂತ್ರ‍್ಯವನ್ನು ನೀಡಿದೆ ಎಂಬ ಮಿಥ್ಯೆಯನ್ನು ತಿರಸ್ಕರಿಸಬೇಕಿದೆ. . .

ನಾವು ಆಗಲೇ ಚರ್ಚಿಸಿದಂತೆ ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆಯ ಅಂಕಿ-ಅಂಶ ಗಳ ಪ್ರಕಾರ ಇಂದು ದೇಶದ ಶೆ 75 ರಷ್ಟು ಗ್ರಾಮೀಣ ಕುಟುಂಬಗಳ ಮುಖ್ಯಸ್ಥ ಐದು ಸಾವಿರಕ್ಕಿಂತ ಕಡಿಮೆ ಅದಾಯ ಹೊಂದಿದ್ದಾನೆ. ಈ ದೇಶದ 90ಶೇ ಗ್ರಾಮೀಣ ಕುಟುಂಬಗಳು 10 ಸಾವಿರಕ್ಕಿಂತ ಕಡಿಮೆ ವರಮಾನ ಹೊಂದಿವೆ. ಕೇವಲ ಶೇ 8 ರಷ್ಟು ಗ್ರಾಮೀಣ ಕುಟುಂಬಗಳ ಮುಖ್ಯಸ್ಥ 10 ಸಾವಿರಕ್ಕಿಂತ ಹೆಚ್ಚಿನ ಅದಾಯವನ್ನು ಪಡೆಯುತ್ತಿದ್ದಾನೆ. ಇದು ನಮ್ಮ ನಡುವಿನ ಸ್ಥಿತಿ. . .

ಇನ್ನು ನ್ಯಾಷನಲ್ ಸ್ಯಾಂಪೆಲ್ ಸರ್ವೇ ಇಂಡಿಯಾದ ಅಂಕಿ-ಅಂಶಗಳನ್ನು ನೋಡುವುದಾದರೆ ಭಾರತದಲ್ಲಿನ ಐದು ಸದಸ್ಯರುಳ್ಳ ಕೃಷಿ ಕುಟುಂಬ ಕೃಷಿ ಮತ್ತು ಕೃಷೀಯೇತರ ಮೂಲಗಳಿಂದ ಗಳಿಸುವ ಮಾಸಿಕ ಅದಾಯ 6426 ರೂಪಾಯಿಗಳು. ಇದು ಇಂದಿನ 97 ಯು.ಎಸ್ ಡಾಲರ್ ಗೆ ಸಮನಾಗಿದೆ. ಒಂದು ಕಡೆ ಈ 6426 ರುಪಾಯಿ ಕೇರಳ, ಪಂಜಾಬ್ ನ ಕುಟುಂಬಗಳ ಸರಾಸರಿ ಗಳಿಕೆಯನ್ನು ತೋರಿಸಿದರೆ ಇನ್ನೂಂದು ಕಡೆ ಛತ್ತಿಸ್ಗಡ್, ಬಿಹಾರ್ ಕಡೆ ಆ ಪ್ರಮಾಣ 3500/4000 ಸಾವಿರ ಇದೆ. ಇದರ ಅರ್ಥ 3500 ರಿಂದ 9000 ದಿಂದ ಹತ್ತು ಸಾವಿರದ ಮಧ್ಯದ ಸರಾಸರಿಯಲ್ಲಿ ಗಳಿಸುವ ಎಲ್ಲಾ ಕೃಷಿ ಕುಟುಂಬಗಳನ್ನು 6426 ರೂಪಾಯಿ ಗಳಿಸುತ್ತಿವೆ ಎಂಬ ಈ ಲೆಕ್ಕದಲ್ಲಿ ನೋಡಲಾಗುತ್ತಿದೆ. ನಮ್ಮ ಗ್ರಾಮೀಣ ಭಾರತದ ಸ್ಥಿತಿ ಇಷ್ಟು ಕೆಟ್ಟದಾಗಿದೆ. ಅದು ಹಳ್ಳಿಯಲ್ಲಿನ ಜನ ಕೃಷಿಕರಾಗಿರಿಲಿ, ಕೃಷಿ ಕಾರ್ಮಿಕರಾಗಿರಿ ಏನಾದರೂ ಆಗಿರಲಿ, ಇದು ಕೆಟ್ಟ ಸ್ಥಿತಿ ಈ ರೀತಿಯ ಅಸಮಾನತೆ ಒಂದು ಕಡೆ ಇದ್ದರೆ. . .

ಮತ್ತೊಂದು ಕಡೆ 1991 ರಲ್ಲಿ ನಮ್ಮ ದೇಶದಲ್ಲಿ ಒಬ್ಬೆ ಒಬ್ಬ ಡಾಲರ್ ಬಿಲೇನಿಯರ್ ಇರಲಿಲ್ಲ. ಆದರೆ 2015ರ ಹೊತ್ತಿಗೆ ಪೋರ್ಬ್ ಪಟ್ಟಿಯಲ್ಲಿ ಭಾರತದ ನೂರು ಡಾಲೆರ್ ಬಿಲೇನಿಯರ‍್ಗಳು ಸ್ಥಾನ ಪಡೆದಿದ್ದಾ.ರೆ ಇತ್ತೀಚಿಗಿನ ಮಾರುಕಟ್ಟೆಯ ಹೊಡೆತಕ್ಕೆ ಅದರಲ್ಲಿ ಕೆಲವರ ಸ್ಪಲ್ಪ ಪ್ರಮಾಣದ ಸಂಪತ್ತು ಕರಗಿರಬಹುದು. ಇದು ನಮ್ಮ ದೇಶದ ಸ್ಥಿತಿ . . .

ಇದನ್ನೆ ನಾನು ಬೆಂಗಳೂರಿನ ಐಐಎಮ್ ವಿಧ್ಯಾರ್ಥಿಗಳೊಂದಿಗೆ ಹಂಚಿಕೊಳ್ಳುತ್ತಿದ್ದೆ. ನಾನು ಗ್ರಾಮೀಣ ಭಾರತದ ಕುರಿತು ಮಾಹಿತಿಗಳನ್ನು ಒಟ್ಟಾಗಿಸುವ ಕೆಲಸವೊಂದನ್ನು ಮಾಡುತ್ತಿದ್ದೇನೆ. ನೀವು ಎಷ್ಟು ಸುಂದರವಾದ ಸಮುದಾಯಗಳನ್ನು ಹಾಳು ಮಾಡುತ್ತಿದ್ದೀರಾ ಎಂದರೆ ಇಲ್ಲಿ ನಾವು ಭಯಪಡುವ, ಅಯ್ಯೋ ಹೀಗಿದೆಯಲ್ಲ ಸ್ಥಿತಿ ಎನ್ನುವ ಸಂಗತಿಗಳು ಇವೆ ಮತ್ತು ನಾವು ಆಶ್ಚರ್ಯಕ್ಕೆ ಒಳಗಾಗುವ ನಮ್ಮನ್ನು ಚಕಿತತೆಯ ಕಡೆಗೆ ನೂಕುವ ಸಂಗತಿಗಳು ಇವೆ ಆಶ್ಚರ್ಯ ಎಂದರೆ ಎರಡೂ ಭಾರತೀಯ ಮೂಲದವುಗಳು ಮತ್ತು ಇವು ನಮ್ಮ ವಾಸ್ತವಗಳಾಗಿವೆ. . .

ಇಲ್ಲಿ 833 ಮಿಲಿಯನ್ ಜನರು 718 ಜೀವಂತ ಭಾಷೆಗಳನ್ನು ಮಾತನಾಡುತ್ತಿದ್ದಾರೆ. ಅವುಗಳಲ್ಲಿ ಐದು ಬಾಷೆಗಳನ್ನು 15 ಮಿಲಿಯನ್ ಗೂ ಹೆಚ್ಚು ಮಂದಿ ಮಾತನಾಡುತ್ತಿದ್ದಾರೆ. 3 ಭಾಷೆಗಳನ್ನು ಸುಮಾರು 80 ಮಿಲಿಯನ್ ಜನರು ಮಾತನಾಡುತ್ತಿದ್ದಾರೆ. ಒಂದು ಭಾಷೆಯನ್ನು 600 ಮಿಲಿಯನ್ ಜನರು ಮಾತನಾಡುತ್ತಿದ್ದಾರೆ. ಒಂದು ಬಾಷೆಯನ್ನು 1ಶೇ ಜನರು ಅಂಡಮಾನ್ ನಲ್ಲಿ ಮಾತನಾಡುತ್ತಿದ್ದಾರೆ. ಒಂದು ಭಾಷೆಯನ್ನು 7 ಮಿಲಿಯನ್ ಜನರು ಸೈಮಾರ್ ಮತ್ತು ತ್ರಿಪುರಾಗಳಲ್ಲಿ ಮಾತನಾಡುತ್ತಿದ್ದಾರೆ. ಇದು ನಿಜಕ್ಕೂ ಆಶ್ಚರ್ಯ ಉಂಟುಮಾಡಬಹುದಾದ ವಿಭಿನ್ನತೆಗಳನ್ನು ಒಳಗೊಂಡಿರುವ ಸಮಾಜ. ಈ ಮಾದರಿಯನ್ನು ಜಗತ್ತಿನ ಇನ್ನೆಲ್ಲೂ ಕಾಣಲು ಸಾಧ್ಯವಿಲ್ಲ. ಕೆಲವು ಜನರಿಗೆ ಈ ವಿಭಿನ್ನತೆ ಭಯವನ್ನು ಹುಟ್ಟಿಸುತ್ತಿದೆ. ಆ ಕಾರಣಕ್ಕೆ ಅವರು ಒಂದು ಭಾಷೆಯನ್ನು ಎಲ್ಲರ ಮೇಲೆ ಹೇರುವ ಪ್ರಯತ್ನ ಮಾಡುತ್ತಿದ್ದಾರೆ. ಅವರಿಗೆ ಅವರದೇ ಸಂಸ್ಕೃತಿಯ ಮಹತ್ವ ಅರ್ಥವಾಗುತ್ತಿಲ್ಲ. ಹಿಂದಿ ಇವರಿಗೆ ಭಾಷೆಯಂತೆ ಕಾಣುತ್ತದೆ, ಆದರೆ ಉತ್ತರ ಭಾರತದ ಅತ್ಯುತ್ತಮ ಭಾಷೆಗಳಾದ ಭೋಜ್ ಪುರಿ, ಮಿಥಿಲಾ,ಬ್ರೀಜ್ ಬಾಷಾ, ಅವಧಿ ಇವರಿಗೆ ಡಯಲೆಕ್ಟ್ ರೀತಿ ಕಾಣುತ್ತದೆ. ಹಾಗೆ ನೋಡಿದರೆ ಹಿಂದಿಗೆ 150 ವರ್ಷಗಳ ಇತಿಹಾಸವೂ ಇಲ್ಲ. ಉತ್ತರ ಭಾರತದ ಮಹತ್ವದ ಸಾಹಿತ್ಯ ರಚನೆಯಾಗಿರುವುದು ಭೋಜ್ ಪುರಿ, ಮಿಥಿಲಾ, ಬ್ರೀಜ್ ಬಾಷಾ, ಅವಧಿ ಭಾಷೆಗಳಲ್ಲಿ ಇವು ಉತ್ತರ ಭಾರತದ ಪ್ರಾಚೀನ ಭಾಷೆಗಳು ಅವುಗಳನ್ನು ಗೌರವಿಸಿ, ಹೆಮ್ಮೆಪಡಿ . . . .

ಆದರೆ ಎರಡು ಬದಿಯ ಮೂಲಭೂತವಾದಿಗಳು ಸ್ಥಳೀಯ ಭಾಷೆಗಳನ್ನು ಕಡೆಗಣಿಸಿ ಉರ್ದುವನ್ನೂ ಪರ್ಶಿಯನ್ ಗೆ ಹತ್ತಿರ ಮಾಡಿದ್ದಾರೆ. ಎಲ್ಲಾ ಉರ್ದು ಮತ್ತು ಪರ್ಶಿಯನ್ ಪದಗಳನ್ನು ತೆಗೆದುಕೊಂಡು ಹಿಂದೂಸ್ಥಾನಿ ಅಥವಾ ಹಿಂದಿಯನ್ನು ಕಟ್ಟಲು ಬಳಸಲಾಯಿತು. ಈ ಪ್ರಕ್ರಿಯೆ ಕಳೆದ 100 ವರ್ಷಗಳಿಂದ ನಡೆಯುತ್ತಲೇ ಇದೆ. 60ರ ದಶಕದಲ್ಲಿ ನಾನು ಹುಡುಗನಾಗಿದ್ದಾಗ ಆಲ್ ಇಂಡಿಯಾ ರೇಡಿಯೋದ ಕುರಿತಂತೆ ಒಂದು ಹಾಸ್ಯ ಪ್ರಚಲಿತದಲ್ಲಿತ್ತು. ಅದು ಏನೆಂದರೆ ಆಲ್ ಇಂಡಿಯಾ ರೇಡಿಯೋ ಯಾರು ಮಾತನಾಡದ ಮೂರು ಭಾಷೆಗಳಲ್ಲಿ ಪ್ರಸಾರವಾಗುತ್ತದೆ. ಅವು ಕ್ವೀನ್ಸ್ ಇಂಗ್ಲೀಷ್, ಪರ್ಶೀಯನ್ ಉರ್ದು ಮತ್ತು ಸಂಸ್ಕೃತಿಕರಣಗೊಂಡ ಹಿಂದಿ! ಮೂಲಭೂತವಾದಿಗಳು ವಿವಿಧತೆಗೆ ಹೆದರುತ್ತಾರೆ. ಅವರಿಗೆ ಅರ್ಥವಾಗದ ತ್ರಿಪುರಾ, ನಾಗಾಲ್ಯಾಂಡ್ ಜನರ ಭಾಷೆಗಳು ಭಯ ಹುಟ್ಟಿಸುತ್ತವೆ. ಆದರೆ ನಾನು, ನೀವು ಅವು ಎಷ್ಟು ಸಮೃದ್ಧವಾಗಿವೆ ಅಲ್ಲವೇ ಎಂದು ಅಲೋಚಿಸುತ್ತೇವೆ. ನಾನು ಇಲ್ಲಿ ಗಂಗಾ ಹಾಸ್ಟೆಲ್ಲಿನಲ್ಲಿ ಇದ್ದಾಗ 24 ಭಾಷೆ ಮಾತನಾಡುವ ಸ್ನೇಹಿತರಿದ್ದರು. ಎಷ್ಟು ಸುಂದರ ಪ್ರಪಂಚ ಅದು. ಇದು ಸಹ ಜೆ.ಎನ್.ಯು ಭಾಗವೇ. ಒಂದು ವಿಷಯ ನಾನು ನಿಮಗೆ ಹೇಳಲೇ ಬೇಕು. ನಾನು ಈ ಕಾಲೇಜಿನ ಅವರಣದಲ್ಲಿ ನನ್ನ ಸ್ವಂತಕ್ಕಿಂತ ಮಿಗಿಲಾಗಿ ಬದುಕುವ ಗುಣ ಕಲಿತಿದ್ದೇನೆ. ವೃತ್ತಿ ಎಂದರೆ ಕೇವಲ ನನ್ನ ಪರಿಚಯ ಪತ್ರವಲ್ಲ ಮತ್ತು ಜೀವನದಲ್ಲಿ ಬೆಳೆಯುವುದು ಯಶಸ್ವಿಯಾಗೋದು ಅಂದರೆ ಅದರ ಪುಟಗಳನ್ನು ಹೆಚ್ಚಿಸಿಕೊಳ್ಳುವುದಲ್ಲ ಎಂಬುದನ್ನು ನಾವು ಕಲಿಯಬೇಕಿದೆ. . .

ಮುಂದುವರೆಯುವುದು. . . .

ಫೆಬ್ರ 19, 2016

ಮೇಕಿಂಗ್ ಹಿಸ್ಟರಿ: ವಸಾಹತುಶಾಹಿಯ ಆಳ್ವಿಕೆಗೆ ಫ್ಯೂಡಲಿಸಮ್ಮೇ ತಳಹದಿ

ಸಾಕೇತ್ ರಾಜನ್
ಕನ್ನಡಕ್ಕೆ: ಡಾ. ಅಶೋಕ್. ಕೆ. ಆರ್
ಈ ಅಧ್ಯಾಯ ಕಣ್ತಪ್ಪಿನಿಂದಾಗಿ ಅವಗಣನೆಗೊಳಗಾದ ಇತಿಹಾಸದ ಕಡೆಗೆ ಗಮನಹರಿಸುತ್ತದೆ. ಬ್ರಿಟೀಷ್ ಆಳ್ವಿಕೆಯ ಪ್ರಾರಂಭ ವಸಾಹತುಶಾಹಿ ಮತ್ತು ಫ್ಯೂಡಲ್ ಪದ್ಧತಿಯ ನಡುವೆ ಒಂದು ಗಟ್ಟಿ ಭಾಂದವ್ಯವನ್ನು ಸ್ಥಾಪಿಸಿತು. ಒಂದೆಡೆ ವಿದೇಶಿ ಬಂಡವಾಳಶಾಹಿತನ, ಮತ್ತೊಂದೆಡೆ ದೇಶೀ ಫ್ಯೂಡಲಿಸಂ; ಎರಡು ಭಿನ್ನ ಮತ್ತು ಐತಿಹಾಸಿಕವಾಗಿ ವಿರುದ್ಧ ನೆಲೆಯಲ್ಲಿ ಕಾರ್ಯನಿರ್ವಹಿಸಿದ ಶಕ್ತಿಗಳ ಸಂಬಂಧ ಭಾರತ ಮತ್ತು ಕರ್ನಾಟಕದ ಸಾಮಾಜಿಕ ಬೆಳವಣಿಗೆಯ ರೀತಿ ಮತ್ತು ವೇಗವನ್ನು ನಿರ್ಧರಿಸಿದವು, ಇವತ್ತಿಗೂ ನಿರ್ಧರಿಸುತ್ತಿವೆ. ಕರ್ನಾಟಕ ಮತ್ತು ಭಾರತದ ಇತಿಹಾಸದಲ್ಲಿ ಆರ್ಥಿಕ ಬದಲಾವಣೆಗಳು ಮತ್ತದಕ್ಕೆ ಸಂಬಂಧಪಟ್ಟಂತ ರಾಜಕೀಯ ಏರಿಳಿತಗಳಿಂದ ಮೂಡಿದ ಸಮುದಾಯದ ಚಳುವಳಿಗಳು ಫ್ಯೂಡಲಿಸಂನ ಸಾಮಾಜಿಕ ಬೇರುಗಳನ್ನು ಅಲುಗಾಡಿಸಿದ್ದನ್ನು ಮೇಕಿಂಗ್ ಹಿಸ್ಟರಿಯ ಮೊದಲ ಸಂಪುಟದಲ್ಲಿ ನೋಡಿದ್ದೇವೆ. ವಸಾಹತುಶಾಹಿ ಆಕ್ರಮಣ ಇದರ ವೇಗವನ್ನು ಬದಲಿಸಿತು. ಸಾಯುತ್ತಿದ್ದ ಫ್ಯೂಡಲ್ ವ್ಯವಸ್ಥೆಯ ಜೊತೆ ಹೊಂದಾಣಿಕೆ ಮಾಡಿಕೊಂಡ ವಸಾಹತುಶಾಹಿ ಫ್ಯೂಡಲಿಸಂನ ಅಂತ್ಯ ತಡೆಗಟ್ಟಲು ಬಂಡವಾಳಶಾಹಿತನದ ಗೆಳೆತನವನ್ನು ಉಪಯೋಗಿಸಿಕೊಂಡಿತು. ಈ ಅಧ್ಯಾಯದಲ್ಲಿ ಫ್ಯೂಡಲಿಸಂ ಮತ್ತು ವಸಾಹತುಶಾಹಿ ನಡುವಿನ ಅನೈತಿಕ ಮದುವೆ ಹುಟ್ಟಿಸುವ ಪ್ರಶ್ನೆಗಳ ಕಡೆಗೆ, ಅವರ ಸಂಬಂಧದ ರೀತಿ ನೀತಿಗಳು, ಒಬ್ಬರು ಮತ್ತೊಬ್ಬರನ್ನು ಪ್ರಭಾವಿಸಿದ ಬಗೆ, ಇಬ್ಬರೂ ಸೇರಿದ್ದರಿಂದ ರಾಜ್ಯದ ಮೇಲಾದ ಪರಿಣಾಮ, ಐತಿಹಾಸಿಕ ವೈರುಧ್ಯದ ಎರಡು ಶಕ್ತಿಗಳು ಒಂದೇ ಹಾಸಿಗೆ ಹಂಚಿಕೊಳ್ಳುವಷ್ಟು ಹತ್ತಿರವಾದ ಕಾರಣ ಮತ್ತು ಈ ಸಂಬಂಧದಿಂದ ದೇಶೀ ಫ್ಯೂಡಲಿಸಂ ವಿದೇಶಿ ವಸಾಹತುಶಾಹಿಯ ಅಧಿಕೃತ ವಕ್ತಾರನಾಗಿ ರೂಪುಗೊಂಡ ರೀತಿಯ ಕುರಿತು ಗಮನ ಹರಿಸೋಣ.

1. ವಸಾಹತುಶಾಹಿ ಮತ್ತು ಫ್ಯೂಡಲಿಸಂ ನಡುವಿನ ಕಲ್ಯಾಣ

ಬ್ರಿಟೀಷರು ಸಹಕಾರಿ ಒಪ್ಪಂದಕ್ಕೆ ಧಾರವಾಡ, ಬೆಳಗಾವಿ ಮತ್ತು ಬಿಜಾಪುರ ಜಿಲ್ಲೆಯ ದೇಸಾಯಿಗಳ ಜೊತೆಗೆ, ಮೈಸೂರಿನ ಒಡೆಯರು ಮತ್ತು ಹೈದರಾಬಾದಿನ ನಿಜಾಮರ ಜೊತೆಗೆ ಸಹಿ ಹಾಕಿದ್ದನ್ನು ನಾವೀಗಾಗಲೇ ನೋಡಿದ್ದೇವೆ. ಅವರೆಲ್ಲರೂ ಒಂದೋ ಊಳಿಗಮಾನ್ಯ ಪದ್ಧತಿಯನ್ನು ನೇರವಾಗಿ ಪ್ರತಿನಿಧಿಸಿದವರು ಅಥವಾ ಊಳಿಗಮಾನ್ಯ ನೆಲೆಯಿಂದ ಹುಟ್ಟಿಬಂದ ರಾಜರು. ವರುಷಗಳಿಂದ ಬೆಳೆದು ನಿಂತಿದ್ದ ಈ ಪ್ರತಿನಿಧಿಗಳು, ದೊರೆಯುವ ಸವಲತ್ತುಗಳಿಗಾಗಿ ಬ್ರಿಟೀಷರೊಡನೆ ಸಹಕಾರಿ ಒಪ್ಪಂದಕ್ಕೆ ಸಹಿ ಹಾಕಿದರು. ಮೈಸೂರಿನ ಹೈದರಾಲಿ ಮತ್ತು ಟಿಪ್ಪುವಿನಿಂದ ಸೋಲನುಭವಿಸಿ ತಮ್ಮ ನೆಲೆ ಕಳೆದುಕೊಂಡು ಓಡಿಹೋಗಿದ್ದ ಪಾಳೇಗಾರರು ಬ್ರಿಟೀಷರ ಆಶ್ರಯ ಪಡೆದರು. ವಸಾಹತುಶಾಹಿಯನ್ನು ಅಪ್ಪಿಕೊಳ್ಳಲು ತೋಳಗಲಿಸಿದವರಿಗೆ ಬ್ರಿಟೀಷರ ಸ್ನೇಹವಷ್ಟೇ ತಮ್ಮ ವರ್ಗವನ್ನು ಉಳಿಸಿಕೊಳ್ಳಲಿಕ್ಕಿರುವ ಕೊನೆಯ ಮಾರ್ಗ ಎನ್ನುವುದರ ಅರಿವಿತ್ತು. ಈ ಊಳಿಗಮಾನ್ಯ ದೊರೆಗಳು ಬ್ರಿಟೀಷರ ರಾಜಕೀಯ ವಿಸ್ತರಣೆಗೆ ಅತ್ಯಂತ ಮುಖ್ಯವಾದರು. ಇತಿಹಾಸದ ಚಲನೆಯಲ್ಲಿ ಅಸ್ತಿತ್ವವನ್ನೇ ಕಳೆದುಕೊಳ್ಳುತ್ತಿದ್ದ ಒಂದು ಸಾಮಾಜಿಕ ವರ್ಗಕ್ಕೆ ಬ್ರಿಟೀಷ್ ವಸಾಹತುಶಾಹಿ ಆಶ್ರಯ ಕೊಟ್ಟು, ಮುದ್ದಿಸಿ, ಮರಣಮಂಚದ ಮೇಲಿದ್ದ ವ್ಯಕ್ತಿ ಮತ್ತಷ್ಟು ವರುಷಗಳ ಕಾಲ ಬದುಕುಳಿಯುವಂತೆ ಮಾಡಿತು. ಪಾಳೇಗಾರರು ಮತ್ತು ದೇಶಗತಿಗಳ ಉಸಿರು ಕಾಪಾಡಿದ ವಸಾಹತುಶಾಹಿ ವಿದ್ರೋಹದ ಚಿಂತನೆಗಳು ಮತ್ತೆ ಮೊಳಕೆಯೊಡೆಯದಿರುವ ಕಡೆಗೂ ಗಮನ ಹರಿಸಿತು.

ಬೆಂಗಳೂರಿನ ಬಳಿಯ ಬಟ್ಟೆ ಉದ್ಯಮದ ಊರಾದ ವಲ್ಲೂರಿನ ಬಗ್ಗೆ ಫ್ರಾನ್ಸಿಸ್ ಬುಚನನ್ ಹೀಗೆ ಹೇಳುತ್ತಾನೆ: “ವಲ್ಲೂರಿನಲ್ಲಿ ಅರಮನೆಯಂತಹ ಒಂದು ಮನೆ, ಕೋಟೆ, ಕೋಟೆಯೊಳಗೊಂದು ನಗರ ಮತ್ತು ಪುಟ್ಟ ಉಪನಗರವಿತ್ತು. ಅರಮನೆಯಲ್ಲಿ ಹದಿನೈದು ಜನರ ರಾಜಪೂತ ಕುಟುಂಬವಿತ್ತು. ಇವರ ಹಿರೀಕರು ಈ ಜಾಗದ ಮತ್ತು ನೆರೆಹೊರೆಯ ಹಳ್ಳಿಗಳ ಜಾಗೀರುದಾರರಾಗಿದ್ದು; ಅವರ ವಾರ್ಷಿಕ ಆದಾಯ 11,000 ಪಗೋಡಾಗಳಷ್ಟಿತ್ತು (33,000 ರುಪಾಯಿ). ಹೈದರಾಲಿಯಿಂದ ಅವರು ಉಚ್ಛಾಟಿತರಾದರು; ಆದರೆ ಲಾರ್ಡ್ ಕಾರ್ನ್ ವಾಲ್ಲಿಸ್ ನಡೆಸಿದ ಯುದ್ಧದ ಸಂದರ್ಭದಲ್ಲಿ ಅವರನ್ನು ಮತ್ತೆ ಜಾಗೀರುದಾರರನ್ನಾಗಿ ಮಾಡಿದ್ದು ಕೊಲೊನಲ್ ರೀಡ್. ಶಾಂತಿಯ ದಿನಗಳ ನಂತರ ಪುನಃ ಅವರನ್ನು ಉಚ್ಛಾಟಿಸಿದ್ದು ಟಿಪ್ಪು….. ಈಗಿನ ಮೈಸೂರು ಸರಕಾರ (ಅಸಲಿಗೆ ಬ್ರಿಟೀಷರೇ ಆಡಳಿತ ನಡೆಸುತ್ತಿದ್ದವರು ಎನ್ನುವುದನ್ನು ಯಾವಾಗಲೂ ನೆನಪಿನಲ್ಲಿಟ್ಟುಕೊಳ್ಳಬೇಕು) ಆ ಕುಟುಂಬ ವಂಶಸ್ಥರಿಗೆ ವಾರ್ಷಿಕ 400 ಪಗೋಡಾಗಳನ್ನು (1200 ರುಪಾಯಿ) ನಿವೃತ್ತಿ ವೇತನದಂತೆ ನೀಡುತ್ತಾ ಅರಮನೆಯಲ್ಲಿ ಬದುಕು ನಡೆಸಲು ಅವಕಾಶ ಮಾಡಿಕೊಟ್ಟಿದೆ.” (37)

ಬುಚನನ್ನಿನ ಬರಹಗಳು ಮೈಸೂರಿನ ಪಾಳೇಗಾರರ ಇಂತಹ ಅನೇಕ ಕಥನಗಳನ್ನು ತೆರೆದಿಡುತ್ತದೆ. ಹೈದರಾಲಿ ಮತ್ತು ಟಿಪ್ಪುವಿನ ಆಡಳಿತಾವಧಿಯಲ್ಲಿ ಕೊನೆಯ ಉಸಿರನ್ನು ಬಿಗಿ ಹಿಡಿದುಕೊಂಡಿದ್ದವರು ಬ್ರಿಟೀಷರ ವಿಜಯದೊಂದಿಗೆ ಶಾಂತಿ ಒಪ್ಪಂದಗಳನ್ನು ಮಾಡಿಕೊಂಡು ಅಳಿದುಳಿದ ಊಳಿಗಮಾನ್ಯ ಪದ್ಧತಿಯ ವೈಭವಗಳನ್ನು ಮರಳಿ ಗಳಿಸಿಕೊಂಡರು.

ಕಿರ್ಮಾನಿ ಹೇಳುತ್ತಾರೆ: “ಗುಪ್ತಚರ ವಿಭಾಗದ ಮುಖ್ಯಸ್ಥ ಕೊಲೊನಲ್ ರೀಡ್ ಅಂಬೂರಿನ ಹೊಣೆ ಹೊತ್ತಿಕೊಂಡಾಗ ಹಣ, ಸಿಹಿ ಮಾತುಗಳು ಮತ್ತು ಕಾರುಣ್ಯದ ಕೆಲಸಗಳಿಂದ ಬಾಳಗಾಟಿನ ಎಲ್ಲಾ ಪಾಳೇಗಾರರನ್ನು ತನ್ನ ಕಡೆಗೆ ಸೆಳೆದುಕೊಳ್ಳುತ್ತಾನೆ. ನವಾಬರ ಕ್ರೌರ್ಯ ಮತ್ತು ದಬ್ಬಾಳಿಕೆಯಿಂದ ಸುಲ್ತಾನನ ನಿರಂಕುಶ ವ್ಯಕ್ತಿತ್ವ ಸಹಿಸಲಾಗದೆ ತಮ್ಮ ಸ್ವಂತ ದೇಶ ತೊರೆದಿದ್ದ ಪಾಳೇಗಾರರು ಕರ್ನಾಟಿಕ್ ಪಯನಗಾಟಿನಲ್ಲಿ ನಿರಾಶ್ರಿತರಾಗಿ ನೆಲೆ ಕಂಡುಕೊಂಡಿದ್ದರು. ಗುಂಗೂಂಡಿ ಪಾಳದ ಪಾಳೇಗಾರ, ಬೈರೇ ಕೋರಿನ ಮಕ್ಕಳು, ಚಿಕ್ಕಬಳ್ಳಾಪುರದ ಪಾಳೇಗಾರ, ವೆಂಕಟಗಿರಿ ಕೋಟೆಯ ಪಾಳೇಗಾರ ಪುದು ನಾಯರ್, ಪುಂಗಾನೂರಿನ ಮುಖ್ಯಸ್ಥರ ಜೊತೆಗೆ ಮದನಪಲ್ಲಿ, ಆನೇಕಲ್ಲಿನ ಪಾಳೇಗಾರರು ತಮ್ಮ ನೆಲೆ – ನೆಲವನ್ನು ಕಳೆದುಕೊಂಡಿದ್ದರು. ಇವರೆಲ್ಲರಿಗೂ ರಕ್ಷಣೆ ನೀಡುವುದಾಗಿ ಲಿಖಿತ ಭರವಸೆ ನೀಡಲಾಯಿತು. ಅವರವರ ಜಿಲ್ಲೆಗಳಿಗೆ ಸಂಪನ್ಮೂಲ ಮತ್ತು ಆಹಾರ ಪದಾರ್ಥಗಳನ್ನು ಸಂಗ್ರಹಿಸಿ ಬ್ರಿಟೀಷ್ ಸೈನ್ಯಕ್ಕೆ ರವಾನಿಸುವ ಶರತ್ತಿನ ಮೇಲೆ ಕಳುಹಿಸಲಾಯಿತು. ಯಾವುದೇ ಮಾರ್ಗದಿಂದ ತಮ್ಮ ತಮ್ಮ ಜಿಲ್ಲೆ ಮತ್ತು ತಾಲ್ಲೂಕುಗಳನ್ನು ವಶಪಡಿಸಿಕೊಳ್ಳುವ ಅಧಿಕಾರವೂ ದೊರೆಯಿತು….” (38)

ಮದ್ರಾಸಿನ ಗವರ್ನರ್ ಮೆಕ್ ಕಾರ್ಟ್ನಿ 1782ರಲ್ಲಿ ಬರೆದ ಪತ್ರದಲ್ಲಿ: “ಪಾಳೇಗಾರರ ಸಹಾಯದೊಂದಿಗೆ ನಿರೀಕ್ಷಿಸಬಹುದಾದ ಮುನ್ನಡೆಗಾಗಿ…… (ಪದಗಳು ಅಳಿಸಿಹೋಗಿವೆ)……..ಅವರಿಗೆ ಎಲ್ಲಾ ರೀತಿಯ ಪ್ರೋತ್ಸಾಹವನ್ನು ನೀಡಲಾಗುತ್ತಿದೆ……ಅವರ ನ್ಯಾಯಬದ್ಧ ಹಕ್ಕುಗಳನ್ನು ಕಂಪನಿ ಸರಕಾರ ರಕ್ಷಿಸುವುದೂ ಇದರ ಭಾಗವಾಗಿದೆ” (39)

ಪತ್ರದ ಮುಂದಿನ ಭಾಗದಲ್ಲಿ ಮೆಕ್ ಕಾರ್ಟ್ನಿ ಮತ್ತು ಚಾರ್ಲ್ಸ್ ಸ್ಮಿತ್ 1782ರಲ್ಲಿ 13 ಪಾಳೇಗಾರರಿಗೆ ನೀಡಿದ ಕರಾರು ಪತ್ರದ ವಿವರಗಳಿವೆ.

1782ರ ನವೆಂಬರಿನಲ್ಲಿ ಬರೆದ ಮತ್ತೊಂದು ಪತ್ರದಲ್ಲಿ ಮೆಕ್ ಕಾರ್ಟ್ನಿ: “ಹೈದರಾಲಿಯಿಂದ ನೆಲೆ ಕಳೆದುಕೊಂಡಿದ್ದ ಅನೇಕ ಪಾಳೇಗಾರರು ಮತ್ತು ಮುಖ್ಯಸ್ಥರಲ್ಲಿ ಕೆಲವರನ್ನು ಕಳೆದ ವರುಷ ಒಪ್ಪಂದಕ್ಕೆ ಒಳಪಡಿಸಿತ್ತು. ಇವರಿಗೆ ಹೈದರಾಲಿಯ ಸಾಮ್ರಾಜ್ಯದ ಮೇಲೆ ಪೂರ್ಣಪ್ರಮಾಣದ ಯುದ್ಧವನ್ನಲ್ಲದಿದ್ದರೂ ತಕ್ಕಮಟ್ಟಿಗಿನ ಗಲಭೆ – ಗೊಂದಲಗಳನ್ನು ಸೃಷ್ಟಿಸುವ ಆಸೆ ಮತ್ತು ಮನಸ್ಸಿದೆ….”(40)

ಹೈದರಾಲಿ ಮತ್ತು ಟಿಪ್ಪುವಿನ ವಿರುದ್ಧ ವಸಾಹತುಶಾಹಿ ಮತ್ತು ಫ್ಯೂಡಲಿಸಂ ಜೊತೆಯಾಗಿ ಯುದ್ಧ ಮಾಡಿತು.

ಬಳ್ಳಾರಿ ಜಿಲ್ಲೆಯಲ್ಲಿ ಪಾಳೇಗಾರ ಕುಟುಂಬಗಳಿಗೆ ಬ್ರಿಟೀಷರು ಘೋಷಿಸಿದ ಸವಲತ್ತುಗಳ ಬಗ್ಗೆ ಜೆ.ಸಿ.ದುವಾ ವಿವರವಾಗಿ ಬರೆಯುತ್ತಾರೆ. (41) ಪಾಳೇಗಾರರಿಗೆ ಕೊಡಲಾಗುತ್ತಿದ್ದ ಪಿಂಚಣಿ ಎಷ್ಟು ನಿರಂತರವಾಗಿತ್ತೆಂದರೆ ‘ಸ್ವಾತಂತ್ರ್ಯ’ ಬಂದ ಎರಡು ದಶಕಗಳ ನಂತರ 1969ರಲ್ಲಿ ತಹಸೀಲ್ದಾರ್ ಕಛೇರಿಗೆ ಭೇಟಿ ಕೊಟ್ಟಾಗ ಪಾಳೇಗಾರರ ವಂಶಸ್ಥರು ಸರಕಾರದಿಂದ ಇನ್ನೂ ಪಿಂಚಣಿ ನೀಡುತ್ತಿದ್ದ ವಿಷಯ ತಿಳಿಯಿತು! (42)

ಬುಚನನ್ ಹೇಳುತ್ತಾರೆ: “ಎಲ್ಲಾ ಪಾಳೇಗಾರರಿಗೆ ಅವರವರ ಆಸ್ತಿಪಾಸ್ತಿಯನ್ನು ಹಿಂದಿರುಗಿಸಲಾಯಿತು ಮತ್ತು ಬಂಗಾಲದ ಜಮೀನುದಾರರಿಗೆ ರೂಪಿಸಿದ ನೀತಿಗಳನ್ನು ಹೇರಲಾಯಿತು. ಒಂದು ನಿರ್ದಿಷ್ಟ ಮೊತ್ತವನ್ನು ಬಾಡಿಗೆಯಾಗಿ ನೀಡಬೇಕಿತ್ತು ಅಥವಾ ಕಪ್ಪಕಾಣಿಕೆಯನ್ನು ಒಪ್ಪಿಸಬೇಕಿತ್ತು. ಆದರೆ ಜನರ ಮೇಲೆ ಇವರಿಗೆ ಯಾವುದೇ ನ್ಯಾಯಾಧಿಕಾರ ನೀಡಲಿಲ್ಲ; ಜನರ ರಕ್ಷಣೆಗೆ ಶಿರಸ್ತೇದಾರರನ್ನು ಸಂಬಳದ ಮೇಲೆ ಸರಕಾರವೇ ನೇಮಿಸಿತು. ರೆವೆನ್ಯೂ ಮತ್ತು ಪೋಲೀಸ್ ಅಧಿಕಾರಿಗಳ ಖರ್ಚನ್ನು ಪಾಳೇಗಾರರು ನೋಡಿಕೊಳ್ಳಬೇಕಿತ್ತು. ಮೊದಲಿನ ಆದಾಯಕ್ಕೆ ಹೋಲಿಸಿದರೆ ಈಗವರಿಗೆ ಆಗುತ್ತಿದ್ದ ಲಾಭ ನಾಲ್ಕರಲ್ಲಿ ಒಂದರಷ್ಟಾದರೂ ದೇಶದ ಪರಿಸ್ಥಿತಿ ಸುಧಾರಿಸಿದಂತೆ ಆದಾಯ ಬಹಳಷ್ಟು ಹೆಚ್ಚಾಗುತ್ತದೆ.” (43)

ಹಳೆಯ ಮೈಸೂರಿನಲ್ಲಿ ಎರಡು ರೀತಿಯಿಂದ ವಸಾಹತುಶಾಹಿ ಫ್ಯೂಡಲಿಸಮ್ಮಿನ ಜೊತೆ ಹೊಂದಿಕೊಂಡಿತು. ಒಂದೆಡೆ ಮೈಸೂರು ಸಾಮ್ಯಾಜ್ಯದ ಹೃದಯ ಭಾಗದಲ್ಲಿ ಪಾಳೇಗಾರರ ನಿರ್ನಾಮವಾಗಿಬಿಟ್ಟಿತ್ತು. ಉಳಿದ ಕೆಲವೇ ಕೆಲವು ಪಾಳೇಗಾರರಿಗೆ ಪಿಂಚಣಿ ನೀಡಿ ಹಳ್ಳಿಗಳ ಪಟೇಲರನ್ನಾಗಿ ಮಾಡಲಾಯಿತು. ಮತ್ತೊಂದೆಡೆ ತಮಿಳುನಾಡು ಮತ್ತು ಆಂಧ್ರಪ್ರದೇಶದ ಗಡಿಗಳಿಗೆ ಹೊಂದಿಕೊಂಡ ಭಾಗಗಳಲ್ಲಿ ಪಾಳೇಗಾರ ಪದ್ಧತಿ ಇನ್ನೂ ಸಶಕ್ತವಾಗಿತ್ತು; ಕಾರಣ ಟಿಪ್ಪು ಸುಲ್ತಾನ ಅವರ ವಿರುದ್ಧ ಹೋರಾಡಲಾರಂಭಿಸಿದ್ದು ತುಂಬ ತಡವಾಗಿ. ಈ ಪಾಳೇಗಾರರು ಜಮೀನ್ದಾರರಾದರು ಮತ್ತು ರೈತ – ಕೂಲಿಯವರಿಂದ ತೆರಿಗೆ ವಸೂಲಿ ಮಾಡುತ್ತಿದ್ದರು.

ಮೇಕಿಂಗ್ ಹಿಸ್ಟರಿಯ ಮೊದಲ ಸಂಪುಟದಲ್ಲಿ ನೋಡಿದಂತೆ ಮಲೆನಾಡು ಮತ್ತು ಕರಾವಳಿ ದೊಡ್ಡ ದೊಡ್ಡ ಭೂಮಾಲೀಕರ ಪ್ರದೇಶವಾಗಿತ್ತು. ಕರಾವಳಿಯಲ್ಲಿ ದೊಡ್ಡ ಭೂಮಾಲೀಕರನ್ನು ಹೈದರಾಲಿ ಮತ್ತು ಟಿಪ್ಪು ಸುಲ್ತಾನ್ ಸಾಯಿಸಿದರು, ಬಂಧಿಸಿದರು, ಓಡಿಸಿದರು, “ಸ್ಥಳೀಯ ತೆರಿಗೆ ಸಂಗ್ರಹಕಾರರ ಜಾಗದಲ್ಲಿ ಹೈದರಾಲಿ ಮತ್ತು ಟಿಪ್ಪು ಸುಲ್ತಾನನ ಸೈನಿಕ ಅಧಿಕಾರಿಗಳು ನೇಮಕವಾಗಿದ್ದರು”; ಭೂಮಿಯನ್ನು ಗುತ್ತಿಗೆಗೆ ಪಡೆದಿದ್ದ ಮೂಲಗೇಣಿದಾರರು ಕೃಷಿ ಮಾಡುತ್ತಿದ್ದುದು ಕಡಿಮೆ. (44) ಉಪಗುತ್ತಿಗೆ ನೀಡುತ್ತದ್ದ ಮೂಲಗೇಣಿದಾರರು ಭೂಮಾಲೀಕರ ಅನುಪಸ್ಥಿತಿಯಲ್ಲಿ ತಾವೇ ಒಡೆಯರಾದರು. ಮೂಲಗೇಣಿದಾರರ ಬಳಿ ಜೀತದ ಕೆಲಸಗಾರರಿದ್ದರು.

ಕರಾವಳಿ 1800-1802ರಲ್ಲಿ ಬ್ರಿಟೀಷರ ಕೈವಶವಾದ ತಕ್ಷಣ ಅದರ ಕುರಿತು ನಿರ್ಣಯಗಳನ್ನು ತೆಗೆದುಕೊಂಡ ಮನ್ರೋ ತನ್ನ ಕೆಲಸವನ್ನು ಪೂರ್ಣಗೊಳಿಸಿದ ಕುರಿತು ಈ ರೀತಿ ಹೇಳುತ್ತಾನೆ: “ದೇಶವನ್ನು ದೊಡ್ಡ ಎಸ್ಟೇಟುಗಳಾಗಿ ವಿಭಾಗಿಸಿದ ಮೇಲೆ, ಪಟೇಲರಿಗೆ ಮತ್ತು ಚಿಕ್ಕ ಎಸ್ಟೇಟಿನ ಮಾಲೀಕರಿಗೆ ಒಪ್ಪಿಸಬೇಕು. ತನ್ನ ಭೂಭಾಗವನ್ನು ಬಿಟ್ಟು ಉಳಿದೆಡೆಯ ಸ್ಥಿರಾಸ್ತಿಯಲ್ಲಿ ಯಾವುದೇ ಪಾಲಿಲ್ಲದ ಕಾರಣ ಇವರು ಅವರ ಜಹಗೀರಿಗಷ್ಟೇ ದೊರೆಯ ರೀತಿ ಉಳಿಯುತ್ತಾರೆ. ವೈಫಲ್ಯಗಳಿಗೂ ಅವರೇ ಹೊಣೆಗಾರರಾಗುವುದರಿಂದ ಈ ಕೆಳಗಿನ ಸವಲತ್ತುಗಳನ್ನು ಅವರಿಗೆ ನೀಡಲಾಗುವುದು. ಮೊದಲನೆಯದಾಗಿ ಜಮಾ ಆದ ಹಣದಲ್ಲಿ ಎರಡು ಪರ್ಸೆಂಟಿನಷ್ಟು ರಿಯಾಯತಿಯನ್ನು ಈಗಾಗಲೇ ನಾನು ಪ್ರಸ್ತಾಪಿಸಿರುವ ಕಡಿತದಲ್ಲಿ ಸೇರಿಸಬೇಕು. ಉಳಿದದ್ದು ಚಿಕ್ಕ ಭೂಮಾಲೀಕರು ಮತ್ತು ರೈತರು ತುಂಬಿ ಕೊಡಬೇಕು. ಎರಡನೆಯದಾಗಿ ಒಣ ಭೂಮಿಯ ಮಾಲೀಕತ್ವ ಹೊಂದಿರುವವರೊಡನೆ ಏರ್ಪಾಟು ಮಾಡಿಕೊಂಡು ವ್ಯವಸಾಯ ಪ್ರಾರಂಭಿಸಿದ ಎರಡನೇ ವರ್ಷದಿಂದ ಬಿದನೂರು ಕಾಯ್ದೆಯ ಪ್ರಕಾರ ಹಣ ಪಾವತಿಸಬೇಕು. ಮೂರನೆಯದಾಗಿ ಕೆಳಜಾತಿಯವರಿಗೆ ಉತ್ತರಾಧಿಕಾರಿಗಳಿಲ್ಲದಿದ್ದಲ್ಲಿ ಇದುವರೆಗೆ ತಮ್ಮ ಆಸ್ತಿಯನ್ನು ಸರಕಾರಕ್ಕೆ ವಹಿಸುತ್ತಿದ್ದರು; ಇನ್ನು ಮುಂದೆ ಪಟೇಲರಿಗೆ ಒಪ್ಪಿಸಬೇಕು. ಮತ್ತು ಆ ಆಸ್ತಿ ಪಟೇಲರ ಸ್ವಂತ ಆಸ್ತಿಯಂತಾಗುತ್ತದೆ. 

…. ನಾನು ಅನುಮೋದಿಸಿದ ಈ ನಿಯಮಗಳು ಕೆನರಾದ ಎಲ್ಲಾ ಭಾಗಗಳಿಗೆ ಮತ್ತು ಅಂಕೋಲಾ, ಸುಂಡಾ ಹಾಗೂ ಬಿಳಗಿಯ ಬಹುತೇಕ ಭಾಗಗಳಿಗೆ ಅನ್ವಯಿಸುತ್ತದೆ….” (45) 

ಬ್ರಿಟೀಷರ ಎಲ್ಲಾ ಯತ್ನಗಳು ಸ್ಥಳೀಯ ಆಡಳಿತದಲ್ಲಿ ಭೂಮಾಲೀಕರ ವರ್ಗವನ್ನು ಸಬಲಗೊಳಿಸುವುದಾಗಿತ್ತು. ಈ ಭೂಮಾಲೀಕರು ಕೆಲವೇ ದಶಕಗಳ ಹಿಂದೆ ಹೈದರ್ ಅಲಿ ಮತ್ತು ಟಿಪ್ಪು ಸುಲ್ತಾನನ ಆಡಳಿತಾವಧಿಯಲ್ಲಿ ನಿರ್ನಾಮವಾಗಿಬಿಟ್ಟಿದ್ದರು. 

ಮೂಡಬಿದಿರೆಯಲ್ಲಿನ ಭೂವ್ಯಾಜ್ಯಗಳನ್ನು ಪರಿಹರಿಸುವ ಸಂದರ್ಭದಲ್ಲಿ (ಅಕ್ಟೋಬರ್ 1800) ಮನ್ರೋ ಬರೆದ ಪತ್ರವೊಂದರಲ್ಲಿ: “ಭೂವ್ಯಾಜ್ಯಗಳ ಪರಿಹಾರವನ್ನು ಭೂಮಾಲೀಕರೊಡನೆ ಮಾಡಲಾಯಿತು. ಭೂಮಾಲೀಕರಿಲ್ಲದ ಕಡೆಗಳಲ್ಲಿ ಮೂಲಗೇಣಿದಾರರೊಡನೆ ಭೂವ್ಯವಹಾರ ನಡೆಸಲಾಯಿತು….” (46) 

ಕುರುಪ್ ನ ಮಾತುಗಳನ್ನು ಉಲ್ಲೇಖಿಸುತ್ತ ಶಾಮ್ ಭಟ್ ಮನ್ರೋನ ಪರಿಹಾರಗಳ ಬಗ್ಗೆ: “ಕಾಸರಗೋಡಿನ (ಹಳೆಯ ಬೇಕಲ್) ಭೂಮಾಲೀಕತ್ವ ಮತ್ತು ಕೃಷಿ ವ್ಯವಸ್ಥೆಯ ಬಗ್ಗೆ ಅಧ್ಯಯನ ನಡೆಸಿದ ಕೆ.ಕೆ.ಎನ್.ಕುರುಪ್ ಹೇಳುತ್ತಾರೆ: ‘ವಿದ್ವಾಂಸರಾದ ಆರ್.ಸಿ.ದತ್ ರವರು ಮನ್ರೋನ ರೈತವಾರಿ ಪದ್ಧತಿ ಭೂಮಿಯ ಮಾಲೀಕತ್ವವನ್ನು ಗೇಣಿ ಮಾಡುತ್ತಿದ್ದ ರೈತರಿಗೆ ಮತ್ತು ಕೂಲಿಯವರಿಗೆ ನೀಡುವುದೆಂದು ಅಭಿಪ್ರಾಯ ಪಟ್ಟರೂ ಅಸಲಿಗೆ ಮನ್ರೋನ ರೈತವಾರಿ ಪದ್ಧತಿ ಭೂಮಿಯ ಏಕಸ್ವಾಮ್ಯವನ್ನು ಸಾರುತ್ತ, ಸಾವಿರಾರು ಎಕರೆ ಜಮೀನುಗಳನ್ನು ವ್ಯವಸಾಯವೇ ಮಾಡದ ಜಮೀನ್ದಾರರ ಪಾಲು ಮಾಡಿತ್ತು. 

ದಕ್ಷಿಣ ಕನ್ನಡದಲ್ಲಿ ಮನ್ರೋ ಮಾಡಿದ್ದೂ ಇದನ್ನೇ. 

ಕೆನರಾದಲ್ಲಿ ಥಾಮಸ್ ಮನ್ರೋ ಪರಿಚಯಿಸಿದ ರೈತವಾರಿ ಪದ್ಧತಿಯಲ್ಲಿ ‘ಭೂಮಿಯ ಮಾಲೀಕತ್ವದ ನಿರ್ಧಾರವಾಗುತ್ತಿದ್ದುದು ಹಕ್ಕು ಪತ್ರ ಅಥವಾ ಮೂಲಪಹಣಿ ಹೊಂದಿದ್ದ ಆಧಾರದ ಮೇಲೆ. ಕೃಷಿ ಮಾಡುತ್ತಿದ್ದರೇ ಇಲ್ಲವೇ ಎನ್ನುವುದು ಮುಖ್ಯವಾಗುತ್ತಿರಲಿಲ್ಲ’.” (47)

ಫೆಬ್ರ 18, 2016

ದೇಶದ್ರೋಹಿಗಳೆಂದರೆ ಯಾರು?

ಸಂಪತ್. ಜಿ
ದಿ ಹಿಂದೂ, 17/02/2015
ಕನ್ನಡಕ್ಕೆ: ಡಾ. ಅಶೋಕ್. ಕೆ. ಆರ್.

ರೋಹಿತ್ ವೇಮುಲ ಮತ್ತು ಕನ್ಹಯ್ಯ ಕುಮಾರ್ ಇಬ್ಬರಿಗೂ ರಾಷ್ಟ್ರೀಯತೆ ಎಂದರೆ ಭಾರತದ ಜನರ ಅಭಿವೃದ್ಧಿಯೇ ಹೊರತು ಭಾರತ ಸರಕಾರದ್ದಲ್ಲ. ಇವರ ಈ ರಾಜಕೀಯ ದೃಷ್ಟಿಕೋನ ಗೂಂಡಾ ರಾಷ್ಟ್ರೀಯವಾದಿಗಳ ಕಣ್ಣಲ್ಲವರನ್ನು ಅಪಾಯಕಾರಿಯಂತೆ ಚಿತ್ರಿಸಿತು.

ಪ್ರಪಂಚದ ಇತರೆಡೆ ಇತಿಹಾಸದ ಪುನರಾವರ್ತನೆ ಮೊದಲು ದುರಂತದಂತೆ ನಡೆದು ನಂತರ ಪ್ರಹಸನವಾಗುತ್ತದೆ. 21ನೇ ಶತಮಾನದ ಭಾರತದಲ್ಲಿ ಇತಿಹಾಸ ಪ್ರಹಸನದಂತೆ ಪುನರಾವರ್ತನೆಯಾಗಿ ನಂತರ ಪ್ರೈಮ್ ಟೈಮಿನಲ್ಲಿ ಮುಂದುವರೆಯುತ್ತದೆ!

ಉನ್ಮತ್ತ ಟಿವಿ ನಿರೂಪಕರ ಒಂದು ಸಣ್ಣ ಗುಂಪು ದೇಶದ ಅತ್ಯುತ್ತಮ ವಿಶ್ವವಿದ್ಯಾನಿಯಲದ ಪ್ರತಿಭಾವಂತ ವಿದ್ಯಾರ್ಥಿಗಳನ್ನು "ದೇಶದ್ರೋಹಿ"ಗಳೆಂದು ಮತ್ತವರನ್ನು ಹಿಡಿದು ಬಡಿಯಬಯಸುವವರನ್ನು "ರಾಷ್ಟ್ರೀಯವಾದಿಗಳೆಂದು" ಇಡೀ ದೇಶವನ್ನು ಮೂರ್ಖರನ್ನಾಗಿ ಮಾಡಿಬಿಡಲು ಸಾಧ್ಯವಾ? 'ದೇಶದ್ರೋಹಿ'ಗಳನ್ನಿಡಿಯುವ ಹಳೆಯ ಆಟದಲ್ಲಿ ಭಾರತದ ಕುಸಿತವನ್ನು, ಭಾರತದ 'ವೈವಿದ್ಯತೆ' - ಕೊನೇ ಪಕ್ಷ ಬುದ್ಧಿವಂತಿಕೆಯ ಮಟ್ಟದಲ್ಲಿನ ವೈವಿಧ್ಯತೆ - ತಡೆಯಬಲ್ಲದಾ? ಆಡಳಿತ ವೈಖರಿಯನ್ನು ನೋಡುತ್ತಿದ್ದರೆ ತಡೆಯುವ ಸಾಧ್ಯತೆಗಳು ಕಡಿಮೆ.

ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಕಾಂಗ್ರೆಸ್ಸಿನ ಉಪಾಧ್ಯಕ್ಷ ರಾಹುಲ್ ಗಾಂಧಿಯನ್ನು ರಾಷ್ಟ್ರದ್ರೋಹಿ ಎಂದು ಕರೆದದ್ದನ್ನು ನಾವೆಲ್ಲರೂ ಕೇಳಿದ್ದೇವೆ. ಯಾಕೆ? ಯಾಕೆಂದರೆ ರಾಹುಲ್ ಗಾಂಧಿ ಜೆ.ಎನ್.ಯು (Jawaharlal Nehru University)ನ ರಾಷ್ಟ್ರವಿರೋಧಿ ವಿದ್ಯಾರ್ಥಿಗಳ ಜೊತೆ ನಿಂತ ಕಾರಣಕ್ಕೆ. ಶಾರವರ ಆರೋಪದ ಹಿಂದಿರುವ ರಾಜಕೀಯ ಉದ್ದೇಶಗಳನ್ನು ತಪ್ಪಾಗಿ ಅರ್ಥೈಸುವುದು ಸಾಧ್ಯವಾಗದು. ದುರದೃಷ್ಟವಶಾತ್ ರಾಹುಲ್ ಗಾಂಧಿಯನ್ನು ದೇಶದ್ರೋಹಿ ಎಂದು ಕರೆಯುವ ಅಮಿತ್ ಶಾರವರ ಯೋಚನೆ ಹೆಚ್ಚೆಂದರೆ ಒಂದು ಅಚ್ಚರಿ; ಕಡಿಮೆಯೆಂದರೆ ಅವರ ಎದುರಿರುವ ಕಲ್ಪಿತ ಮಾದರಿ.

ಈಗಾಗಲೇ, ಸಂಘ ಪರಿವಾರದ ರಾಷ್ಟ್ರೀಯತೆಯ ವರ್ಗೀಕರಣದ ಪ್ರಕಾರ, ಮಧ್ಯ ಭಾರತದ ಆದಿವಾಸಿಗಳು, ದಲಿತ ವಿದ್ಯಾರ್ಥಿಗಳು, ಎಡ ಪಂಥೀಯ ಬುದ್ಧಿಜೀವಿಗಳು, ಮಾನವ ಹಕ್ಕು ಹೋರಾಟಗಾರರು, ಒಂದು ನಿರ್ದಿಷ್ಟ ಧಾರ್ಮಿಕ ಅಲ್ಪಸಂಖ್ಯಾತರು, ಅಣು ವಿರೋಧಿ ಕಾರ್ಯಕರ್ತರು, ಬೀಫ್ ತಿನ್ನುವವರು, ಪಾಕಿಸ್ತಾನವನ್ನು ದ್ವೇಷಿಸದವರು, ಅಂತರ ಧರ್ಮೀಯ ದಂಪತಿಗಳು, ಸಲಿಂಗಕಾಮಿಗಳು ಮತ್ತು ಕಾರ್ಮಿಕ ಹೋರಾಟಗಾರರೆಲ್ಲ ದೇಶದ್ರೋಹಿಗಳು. ಸೋಮವಾರ ನವದೆಹಲಿಯ ಪಟಿಯಾಲ ಹೌಸಿನಲ್ಲಿ ನಡೆದ ಗೂಂಡಾ ರಾಷ್ಟ್ರೀಯತೆಯನ್ನು ಪರಿಗಣಿಸುವುದಾದರೆ ಈ ಪಟ್ಟಿಗೆ ಪತ್ರಕರ್ತರು, ಜೆ ಎನ್ ಯು ವಿದ್ಯಾರ್ಥಿಗಳ ರೀತಿ ಬಟ್ಟೆ ಧರಿಸಿದವರು, ಐಡೆಂಟಿಟಿ ಕಾರ್ಡ್ ಇಲ್ಲದವರು, ಗೂಂಡಾ ರಾಷ್ಟ್ರೀಯವಾದಿಗಳ ಕಾರ್ಯವನ್ನು ರೆಕಾರ್ಡ್ ಮಾಡುತ್ತಿದ್ದವರು ಮತ್ತು ಗೂಂಡಾ ರಾಷ್ಟ್ರೀಯವಾದಿಗಳ ಮಾತನ್ನು ವಿರೋಧಿಸುವವರನ್ನೆಲ್ಲ ದೇಶದ್ರೋಹಿಗಳ ಪಟ್ಟಿಗೆ ಸೇರಿಸಬಹುದು.

ಇದ ವೇಗದಲ್ಲಿ ಮುಂದುವರೆದರೆ, ಎನ್.ಡಿ.ಎ ತನ್ನ ಅಧಿಕಾರಾವಧಿಯನ್ನು ಮುಗಿಸುವಷ್ಟರಲ್ಲಿ ‘ದುರದೃಷ್ಟ’ವಶಾತ್ ಸಂಘ ಪರಿವಾರದ ಸದಸ್ಯರಾಗದವರೆಲ್ಲರೂ ದೇಶದ್ರೋಹಿಗಳಾಗಿಬಿಟ್ಟಿರುತ್ತಾರೆ. ಈ ದೇಶದ್ರೋಹಕ್ಕಿರುವ ಒಂದೇ ಮುಲಾಮೆಂದರೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ರಾಷ್ಟ್ರೀಯತೆಯ ದಬ್ಬಾಳಿಕೆ ಅಥವಾ ಬಹಿರಂಗವಾಗಿ ಹಲ್ಲೆ ನಡೆಸುವ ಭಜರಂಗ ದಳ; ಈ ಸಂದರ್ಭದಲ್ಲಿ ಭಾರತದ ದೇಶಪ್ರೇಮಿ ಪೋಲೀಸರು ಶಾಂತಿಯಿಂದ ಹೆಜ್ಜೆ ಹಾಕುತ್ತಿರುತ್ತಾರೆ, ಹಲ್ಲೆಕೋರರ ಜೊತೆಗೆ.

ಏನಿದು ಗೂಂಡಾ ರಾಷ್ಟ್ರೀಯವಾದವೆಂದರೆ? ದೇಶದ ಪ್ರಜೆಗಳಿಗೆ ದೇಶದ್ರೋಹಿ ಸರ್ಟಿಫಿಕೇಟು ಕೊಡುವ ಕೆಲಸವನ್ನು ತನ್ನ ಮೇಲೆ ತಾನೇ ಅಹಂನಿಂದ ಹೊತ್ತುಕೊಂಡಿರುವಾತನೇ ಗೂಂಡಾ ರಾಷ್ಟ್ರೀಯವಾದಿ. ಬೀದಿಯಲ್ಲಿ ನೀವು ಹೋಗುತ್ತಿರುವಾಗ ನಿಮ್ಮ ಬಳಿಗೆ ಬಂದು, ಕೆನ್ನೆಗೊಂದು ಹೊಡೆದು, ನಿಮ್ಮ ಕಾಲರ್ ಪಟ್ಟಿಯನ್ನಿಡಿದೆಳೆದು ನೀವು ದೇಶದ್ರೋಹಿ ಎಂದು ಹೇಳಿದರೆ ನಾನು ಗೂಂಡಾ ರಾಷ್ಟ್ರೀಯವಾದಿ.

ಗೂಂಡಾ ರಾಷ್ಟ್ರೀಯತೆ ಹೊಸದೇನಲ್ಲ. ಜರ್ಮನಿಯ ಇತಿಹಾಸಕಾರ ಆರ್ಥರ್ ರೋಸ್ ಬರ್ಗ್, ತನ್ನ Fascism as a mass movement ಪುಸ್ತಕದಲ್ಲಿ ಫ್ಯಾಸಿಸಂನ ಹೆಚ್ಚಳವನ್ನು ಗುರುತಿಸುವುದಕ್ಕಿರುವ ಎರಡು ಸ್ಥಿತಿಗಳ ಬಗ್ಗೆ (ಉಳಿದ ಸ್ಥಿತಿಗಳ ಜೊತೆಗೆ) ತಿಳಿಸುತ್ತಾನೆ: ಒಂದು ಬಲಪಂಥೀಯ ರಾಷ್ಟ್ರೀಯತೆಯ ಹೆಚ್ಚಳ, ಮತ್ತೊಂದು ವ್ಯಕ್ತಿತ್ವದ ಮೇಲೆ ದಾಳಿ ನಡೆಸುವವರ ಕುರಿತು ಮೌನ ಸಮ್ಮತಿ ನೀಡುವ ಆಳ್ವಿಕೆ. ಕಳೆದ ಒಂದು ತಿಂಗಳಿನಿಂದ ಭಾರತ ಸಾಕ್ಷಿಯಾಗಿರುವ ಎರಡು ಘಟನೆಗಳು, ಮೊದಲು ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾನಿಲಯದಲ್ಲಿ ಮತ್ತೀಗ ಜೆ.ಎನ್.ಯುನಲ್ಲಿ ನಡೆದ ಘಟನೆಗಳು, ಮೇಲೆ ತಿಳಿಸಿದ ಎರಡು ಸ್ಥಿತಿಗಳ ಪ್ರಾರಂಭಿಕ ಹಂತಗಳು; ಗುಪ್ತ ನೀತಿಯನ್ನು ಮುಂದಕ್ಕೋಯ್ಯಲು ನಡೆಯುತ್ತಿರುವ ಈ ಘಟನೆಗಳನ್ನು ನಾವು ಫ್ಯಾಸಿಸ್ಟ್ ಎಂದು ಕರೆಯುವುದಿಲ್ಲ ಯಾಕೆಂದರೆ ಭಾರತದ ಖ್ಯಾತ ಉದಾರವಾದಿಗಳು ನಮಗೆ ಪದೇ ಪದೇ ಭರವಸೆ ನೀಡಿದ್ದಾರೆ, ಭಾರತ ತುಂಬ ವೈವಿಧ್ಯವಿರುವ ದೇಶ ಮತ್ತು ಭಾರತದ ಪ್ರಜಾಪ್ರಭುತ್ವಕ್ಕೆ ಚೇತರಿಸಿಕೊಳ್ಳುವ ಶಕ್ತಿ ತುಂಬಾ ಇದೆ ಎಂಬ ಭರವಸೆಗಳ ಕಾರಣಕ್ಕೆ ಫ್ಯಾಸಿಸ್ಟ್ ಪದವನ್ನು ಬಳಸದಿರೋಣ.

ಆದರೂ ಈ ನಮೂನೆ ಎಷ್ಟು ಕರಾರುವಕ್ಕಾಗಿಯೆಂದರೆ ಗಮನಿಸದಿರುವುದು ಕಷ್ಟ. ಹೈದರಾಬಾದಿನಲ್ಲಿ ಬಿಕ್ಕಟ್ಟಿನ ಕಿಡಿ ಪ್ರಾರಂಭವಾಗಿದ್ದು ವಿದ್ಯಾರ್ಥಿ ಸಂಘ ಯಾಕೂಬ್ ಮೆಮನನಿಗೆ ಅನುಕಂಪ ತೋರಿದಾಗ, ಕಾನೂನು ಬಲ್ಲ ಅನೇಕ ಪ್ರಭಾವಶಾಲಿಗಳು ಯಾಕೂಬನ ನೇಣನ್ನು ಪ್ರಶ್ನಿಸಿದ್ದಾರೆ. ಹೈದರಾಬಾದ್ ವಿಶ್ವವಿದ್ಯಾಲಯದ ಎಬಿವಿಪಿ ಘಟಕ ಈ ವಿದ್ಯಾರ್ಥಿಯನ್ನು ರಾಷ್ಟ್ರದ್ರೋಹಿ ಎಂದು ಕರೆಯುತ್ತ ಶಿಕ್ಷಿಸಬೇಕೆಂದು ಒತ್ತಾಯಿಸಲಾರಂಭಿಸಿದರು. ಈ ಸಂಗತಿಯನ್ನು ಕೈಗೆತ್ತಿಕೊಂಡ ಬಿಜೆಪಿಯ ಸಂಸದ ಬಂಡಾರು ದತ್ತಾತ್ರೇಯ, ಕೇಂದ್ರಕ್ಕೊಂದು ದೂರು ಕಳಿಸುತ್ತಾರೆ. ಪರಿಣಾಮ: ವಿಧೇಯ ಉಪಕುಲಪತಿ ಮತ್ತು ವಿಧೇಯ ಪೋಲೀಸರು ಎಬಿವಿಪಿ ಬೆರಳು ತೋರಿದ ವಿದ್ಯಾರ್ಥಿಗಳನ್ನು ಗುರಿಯಾಗಿಸುತ್ತಾರೆ. ಈ ಘಟನೆ ರಾಷ್ಟ್ರವ್ಯಾಪಿ ಸುದ್ದಿಯಾಗಿದ್ದು ರೋಹಿತ್ ವೇಮುಲನ ಆತ್ಮಹತ್ಯೆಯೊಂದಿಗೆ. ರೋಹಿತ್ ವೇಮುಲ ಎಬಿವಿಪಿಯನ್ನು ಮತ್ತದರ ಬಹುಸಂಖ್ಯಾತ ಹಿಂಸೆಯನ್ನು ಖಂಡಿಸುತ್ತಿದ್ದ.

ಜೆ.ಎನ್.ಯುನಲ್ಲಿ, ಬಿಕ್ಕಟ್ಟಿನ ಕಿಡಿ ಪ್ರಾರಂಭವಾಗಿದ್ದು ವಿದ್ಯಾರ್ಥಿಗಳ ಗುಂಪೊಂದು ಅಫ್ಜಲ್ ಗುರುವಿಗೆ ಬೆಂಬಲವಾಗಿ ಪ್ರತಿಭಟನಾ ಸಭೆಯನ್ನು ಆಯೋಜಿಸಿದಾಗ, ಕಾನೂನು ಬಲ್ಲ ಹಲವು ಪ್ರಭಾವಶಾಲಿಗಳು ಅಫ್ಜಲನ ನೇಣನ್ನು ಪ್ರಶ್ನಿಸಿದ್ದಾರೆ. ಎಬಿವಿಪಿ ಘಟಕ ಈ ವಿದ್ಯಾರ್ಥಿಗಳನ್ನು ರಾಷ್ಟ್ರದ್ರೋಹಿಗಳು ಎಂದು ಕರೆಯುತ್ತ ಶಿಕ್ಷಿಸಬೇಕೆಂದು ಒತ್ತಾಯಿಸಲಾರಂಭಿಸಿದರು. ಈ ಘಟನೆಯನ್ನು ಕೈಗೆತ್ತಿಕೊಂಡ ಬಿಜೆಪಿ ಸಂಸದ ಮಹೇಶ್ ಗಿರಿ, ದೂರು ನೀಡುತ್ತಾರೆ, ಆ ದೂರಿನನ್ವಯ ಎಫ್.ಐ.ಆರ್ ದಾಖಲಾಗುತ್ತದೆ. ಪರಿಣಾಮ: ವಿಧೇಯ ಉಪಕುಲಪತಿ ಮತ್ತು ವಿಧೇಯ ಪೋಲೀಸರು ಎಬಿವಿಪಿ ಬೆರಳು ತೋರಿಸಿದ ವಿದ್ಯಾರ್ಥಿಗಳನ್ನು ಗುರಿಯಾಗಿಸುತ್ತಾರೆ. ಈ ಘಟನೆ ರಾಷ್ಟ್ರವ್ಯಾಪಿ ಸುದ್ದಿಯಾಗಿದ್ದು ಜೆ.ಎನ್.ಯು ವಿದ್ಯಾರ್ಥಿ ಘಟಕದ ಅಧ್ಯಕ್ಷ ಕನ್ಹಯ್ಯ ಕುಮಾರನ ಬಂಧನದೊಂದಿಗೆ. ಕನ್ಹಯ್ಯ ಕುಮಾರ್ ಎಬಿವಿಪಿಯನ್ನು ಮತ್ತದರ ಬಹುಸಂಖ್ಯಾತ ಹಿಂಸೆಯನ್ನು ಖಂಡಿಸುತ್ತಿದ್ದ.

ಈ ಎರಡೂ ಘಟನೆಗಳಲ್ಲಿ ವಿದ್ಯಾರ್ಥಿಗಳನ್ನು ಬಡಿಯಲುಪಯೋಗಿಸಿದ ಬೆತ್ತ ರಾಷ್ಟ್ರೀಯವಾದದ್ದು – ಯಾವುದೋ ಒಂದು ರೀತಿಯ ರಾಷ್ಟ್ರೀಯವಾದವಲ್ಲ, ದೇಶದ ಒಂದು ನಿರ್ದಿಷ್ಟ ಗುಂಪಿನ ಜನರ ರಾಷ್ಟ್ರೀಯತೆಯನ್ನು ಅವರದೇ ದೇಶದಲ್ಲಿ ಅನುಮಾನದಿಂದ ನೋಡುವ ಬಲಪಂಥೀಯತೆಯ ರಾಷ್ಟ್ರೀಯವಾದ. ರೋಸನ್ ಬರ್ಗ್ ಗಮನಿಸಿದಂತೆ ಈ ಬೆತ್ತಕ್ಕೆ ರಕ್ಷಣೆ ಕೊಡುತ್ತಿರುವುದು ಸರಕಾರ, ರಕ್ಷಣೆ ಕೊಡುತ್ತಿರುವುದು ಎಬಿವಿಪಿಗೆ.

ಹಿಂದೆ ಈ ರೀತಿಯ ದಾಳಿ ಮಾಡುವವರ ಗುಂಪು ಸಂಘ ಪರಿವಾರದ ಬಹುಮುಖಗಳಲ್ಲಿ ಒಂದಾಗಿತ್ತು – ರಾಷ್ಟ್ರೀಯ ಸ್ವಯಂಸೇವಕ ಸಂಘ, ಭಜರಂಗ ದಳ, ವಿಶ್ವ ಹಿಂದೂ ಪರಿಷತ್ …… ಭಾರತದ ಉದಾರವಾದಿ ಬುದ್ಧಿಜೀವಿಗಳು – ಭಾರತದಲ್ಲಿ ಎಡಪಂಥೀಯರೆಂದು ಯಾರನ್ನು ಕರೆಯುತ್ತಾರೋ ಅವರು ರಾಜಕೀಯದಲ್ಲಿ ಉದಾರವಾದಿಗಳೇ ಹೊರತು ಎಡಪಂಥೀಯರಲ್ಲ – ರಾಜಕಾರಣಿಗಳ ಮುಖವಾಡಗಳನ್ನು ಹೊರಗೆಳೆಯಲು, ದಬ್ಬಾಳಿಕೆಯ ಹಿಂಸೆಯನ್ನು ಉಂಟುಮಾಡಿದವರಿಗೆ ಅವಮರ್ಯಾದೆ ತರಲು ಅಸಹಿಷ್ಣುತೆಯ ಅಸ್ತ್ರವನ್ನು ಉಪಯೋಗಿಸುವುದಕ್ಕೇ ತೃಪ್ತರಾಗಿಬಿಟ್ಟರು.

ಜೆ.ಎನ್.ಯು ಕ್ಯಾಂಪಸ್ಸಿನಲ್ಲಿ ನಡೆಯುತ್ತಿರುವ ಪೋಲೀಸು ರೈಡುಗಳು, ಜೊತೆಗೆ ಪಟಿಯಾಲ ಹೌಸಿನಲ್ಲಿ ಪತ್ರಕರ್ತರ ಮೇಲೆ ನಡೆದ ಹಲ್ಲೆ, ಎನ್.ಡಿ.ಎ ಸರಕಾರ ಸಹಿಷ್ಣುತೆಯನ್ನು ಎತ್ತಿಹಿಡಿಯದೇ ಇದ್ದಿದ್ದಕ್ಕಾಗಿ ಅನುಭವಿಸಿದ ಸಾರ್ವಜನಿಕ ಮುಖಭಂಗದ ನಂತರ ನಡೆದಂತವು. ಅಸಹಿಷ್ಣುತೆಯ ಬಗ್ಗೆ ಉದಾರವಾದಿಗಳ ಹಿಂಬಡಿತ ಎನ್.ಡಿ.ಎ ಮೇಲೆ ಯಾವುದೇ ಪರಿಣಾಮ ಬೀರಿಲ್ಲ. ಬಹುಶಃ ಪ್ರಶಸ್ತಿ ವಾಪಸಾತಿ ಚಳುವಳಿಯಿಂದ ಅದಕ್ಕೆ ಮತ್ತಷ್ಟು ಪ್ರೋತ್ಸಾಹ ಸಿಕ್ಕಿತೇನೋ. ಈಗ ಪ್ರಶಸ್ತಿಗಳು ವಾಪಸ್ಸಾಗಿದೆ, ಪಿಟಿಷನ್ನುಗಳಿಗೆ ಸಹಿ ಬಿದ್ದಾಗಿದೆ, ಪ್ರತಿಭಟನಾ ಮೆರವಣಿಗೆಗಳು ನಡೆದಾಗಿದೆ, ಸಹಿಷ್ಣುತೆಯ ಬಗ್ಗೆ ಸಂಪಾದಕೀಯಗಳನ್ನು ಬರೆದಾಗಿದೆ, ಉದಾರವಾದಿ ಬಹುತ್ವ ಭಾರತ ನಿರ್ದಯವಾಗಿ ಮುನ್ನಡೆಯುತ್ತಿರುವ ವಿಭಜನಾತ್ಮಕ ಏಕ ಸಂಸ್ಕೃತಿ ರಾಷ್ಟ್ರೀಯವಾದಕ್ಕೆ ಮತ್ತೇನು ಮಾಡಬಹುದು?

ನಂಬಿಕೆ ಉಳಸಿಕೊಳ್ಳದ ಉದಾರವಾದಿಗಳು

ಭಾರತದ ಕೇಡೆಂದರೆ, ಸ್ವಘೋಷಿತ ಸಂವಿಧಾನಾತ್ಮಕ ಉದಾರವಾದಿಗಳು ಹಿಂದುತ್ವದ ಶಕ್ತಿಗಳು ಮತ್ತು ಆರ್ಥಿಕ ಉದಾರವಾದಿತನ ಜೊತೆಯಾಗೇ ಬರುತ್ತದೆ ಎಂಬುದನ್ನು ಗುರುತಿಸಲು ವಿಫಲರಾಗಿರುವುದು. ಈ ವೈಫಲ್ಯದ ಕಾರಣದಿಂದಾಗಿಯೇ ಇಂತಹ ಹಿಂಸೆಯನ್ನು ಪದೇ ಪದೇ ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲಿನ ಹಲ್ಲೆ ಎಂದು ಸರಳವಾಗಿ ಹೇಳಿಬಿಡುತ್ತಾರೆ, ಈ ದಬ್ಬಾಳಿಕೆಯಲ್ಲಿರುವ ಆರ್ಥಿಕ ರಾಜಕೀಯದ ಕ್ಲಿಷ್ಟತೆಯೆಡೆಗೆ ಕುರುಡಾಗಿಬಿಡುತ್ತಾರೆ.

ಆರ್ಥಿಕ ಉದಾರೀಕರಣವನ್ನು ಅಪ್ಪಿಕೊಳ್ಳುವ ಭರದಲ್ಲಿ ಭಾರತದ ಉದಾರವಾದಿ ಮೇಲ್ವರ್ಗ, ಸರಕಾರ ಕಾರ್ಮಿಕರ, ನಗರ ಪ್ರದೇಶದ ಬಡವರ, ರೈತರ, ಭೂರಹಿತರ, ಭೂಮಿಯಿದ್ದ ಬಡವರ –ಇವರಲ್ಲಿನ ಹೆಚ್ಚಿನವರು ಸಾಮಾಜಿಕವಾಗಿ ಅಂಚಿನಲ್ಲಿದ್ದ ಜಾತಿಯವರು- ವಿರುದ್ಧ ನಡೆದುಕೊಂಡಾಗ ಅಥವಾ ಅವರನ್ನು ನಿರ್ಲಕ್ಷಿಸಿದಾಗ ಕತ್ತು ತಿರುಗಿಸಿದರು. ಈಗ ಅವರದೇ ಉದಾರವಾದಿ ಸ್ವಾತಂತ್ರ್ಯಗಳನ್ನು ಸರಕಾರ ಬೆಂಬಲಿತ ಶಕ್ತಿಗಳು ಹತ್ತಿಕ್ಕುತ್ತಿರುವಾಗ ಸರಕಾರ ಕತ್ತು ತಿರುಗಿಸುತ್ತಿರುವುದನ್ನು ನೋಡುತ್ತಿದ್ದಾರೆ.

ಆಕಸ್ಮಿಕವೆಂಬಂತೆ, ಹೈದರಾಬಾದ್ ವಿಶ್ವವಿದ್ಯಾಲಯದ ರೋಹಿತ್ ವೇಮುಲ ಮತ್ತು ಜೆ.ಎನ್.ಯುನ ಕನ್ಹಯ್ಯ ಕುಮಾರ್ ಇಬ್ಬರಿಗೂ ಸ್ವಹಿತಾಸಕ್ತಿಯ ಉದಾರವಾದಿಗಳ ಭ್ರಮೆಗಳನ್ನರಿಯುವ ಸ್ಪಷ್ಟತೆಯಿತ್ತು. ವೇಮುಲ ಎರಡು ಅಲ್ಪಸಂಖ್ಯಾತ ಸಮುದಾಯಗಳಾದ ದಲಿತರು ಮತ್ತು ಮುಸ್ಲಿಮರನ್ನು ಹೈದರಾಬಾದ್ ಕ್ಯಾಂಪಸ್ಸಿನಲ್ಲಿ ಒಂದುಗೂಡಿಸುವ ಪ್ರಯತ್ನ ಮಾಡಿದ. ಜೆ.ಎನ್.ಯುದೊಳಗೆ ಎಬಿವಿಪಿಯ ವಿಭಜನಾತ್ಮಕ ರಾಜಕೀಯದ ವಿರುದ್ಧ ಮತ್ತು ಹೊರಗೆ ನವ ಉದಾರವಾದಿ ಆರ್ಥಿಕ ನೀತಿಗಳ ವಿರುದ್ಧ ವಿದ್ಯಾರ್ಥಿ ಸಮೂಹ ಮತ್ತು ಅಸಂಘಟಿತ ಕಾರ್ಮಿಕ ವಲಯವನ್ನು ಒಂದುಗೂಡಿಸುವುದು ಕನ್ಹಯ್ಯ ಕುಮಾರನ ಉದ್ದಿಶ್ಯವಾಗಿತ್ತು. ಇವರ ಈ ತೀಕ್ಷ್ಣ ರಾಜಕೀಯ ದೃಷ್ಟಿಕೋನದ ಸ್ಪಷ್ಟತೆ ಗೂಂಡಾ ರಾಷ್ಟ್ರೀಯವಾದಿಗಳ ಕಣ್ಣಲ್ಲಿ ಅಪಾಯಕಾರಿ ಶಕ್ತಿಗಳಂತೆ ಕಾಣುವಂತೆ ಮಾಡಿತು.

ಪೋಲೀಸರು ವಿಶ್ವವಿದ್ಯಾಲಯದ ಕ್ಯಾಂಪಸ್ಸಿನ ತುಂಬೆಲ್ಲ ಬೇಟೆ ಹುಡುಕುತ್ತಾ ಅಲೆಯುವ ಕ್ಲೀಷೆಯ ಸಂಗತಿ ನೂರಾರು ಬಾರಿ ನಮ್ಮ ಸ್ವತಂತ್ರ ದೇಶದ ಸರಕಾರಗಳಡಿಯಲ್ಲಿ ನಡೆದು ಹೋಗಿದೆ. ಶೋಷಿತ ಜನರ ಆಸಕ್ತಿಯನ್ನು ಮರೆತು ಶೋಷಕ ಸರಕಾರೀ ಯಂತ್ರವನ್ನು ಸ್ಥಾಪಿಸುವುದಕ್ಕೆ ಉಗ್ರ ರಾಷ್ಟ್ರೀಯವಾದವನ್ನು ಉಪಯೋಗಿಸುವುದೂ ಕೂಡ ಅನೇಕ ಬಾರಿ ನಡೆದು ಹೋಗಿರುವ ಸಂಗತಿ. ಮತ್ತೊಂದು ರೀತಿಯಲ್ಲಿ ಹೇಳುವುದಾದರೆ, ರಾಷ್ಟ್ರೀಯತೆ ಎಂಬುದು ಭಾರತದ ಜನರ ಅಭ್ಯುದಯವಾ ಅಥವಾ ಭಾರತದ ಕಾರ್ಮಿಕರಿಗಿಂತ ವಿದೇಶಿ ಬಂಡವಾಳವನ್ನು ಎತ್ತಿ ಹಿಡಿಯುವ ಭಾರತ ಸರಕಾರದ ಅಭ್ಯುದಯವಾ? 

ಈ ಸಂದರ್ಭದಲ್ಲಿ ಕೇಳಿಕೊಳ್ಳಬೇಕಾದ ಬಹುಮುಖ್ಯ ಪ್ರಶ್ನೆಯೆಂದರೆ: ದೇಶದ್ರೋಹಿ ಎಂಬ ಹಣೆಪಟ್ಟಿ ಹಚ್ಚುವ ಹಕ್ಕು ಯಾರಿಗಿದೆ? ಮತ್ತು ಭಾರತದ ಸಾಮಾನ್ಯ ಪ್ರಜೆ ದೇಶದ್ರೋಹಿ ಎಂಬ ಆರೋಪ ಬಂದಾಗ ಹೇಗೆ ಪ್ರತಿಕ್ರಿಯಿಸಬೇಕು?

ದೇಶದ್ರೋಹದ ಆರೋಪ ಸುಳ್ಳು ಎಂದು ಉತ್ತರ ಕೊಡಬೇಕೆಂದು ಬಯಸುವುದೇ ಈ ಯುದ್ಧದಲ್ಲಿನ ಸೋಲು. ಸರಿಯಾದ ಪ್ರತಿಕ್ರಿಯೆ ಹೇಗಿರಬೇಕೆಂದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಕನ್ಹಯ್ಯ ಕುಮಾರನ ಅದ್ಭುತ ಭಾಷಣ ಉದಾಹರಣೆ. ಆಕ್ರಮಣಕಾರಿಯಾಗಿ, ಗೂಂಡಾ ರಾಷ್ಟ್ರೀಯವಾದಿಗಳಿಗೆ ದೇಶಭಕ್ತಿಯ ಸರ್ಟಿಫಿಕೇಟುಗಳನ್ನು ಕೊಡುವುದಕ್ಕಿರುವ ಯೋಗ್ಯತೆ ಏನೆಂದು ಪ್ರಶ್ನಿಸಿ ಮತ್ತು ಸರ್ಟಿಫಿಕೇಟು ಕೊಡಲವರನ್ನು ಬಿಟ್ಟ ಸರಕಾರದ ಉದ್ದೇಶಗಳನ್ನು ಪ್ರಶ್ನೆ ಮಾಡಿ.
(Article was first published in The Hindu on 17/02/2016, Translated to kannada with permission)

ಫೆಬ್ರ 13, 2016

ಬಂಧನಕ್ಕೂ ಮುನ್ನ ಜೆ.ಎನ್.ಯು ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ನಯ್ಯ ಕುಮಾರ್ ಹೇಳಿದ್ದೇನು?

ಜೆ.ಎನ್.ಯು ಸಾಮಾನ್ಯವಾಗಿ ಇಂತಹ ಗಲಭೆಗಳಿಂದಲೇ ಸುದ್ದಿಯಾಗಿಬಿಡುತ್ತದೆ. ಅಫ್ಜಲ್ ಗುರುನನ್ನು ನೇಣಿಗೇರಿಸಿದ ದಿನ ಸಭೆ ಆಯೋಜಿಸಿ ಭಾರತದ ವಿರುದ್ದ, ಪಾಕಿಸ್ತಾನದ ಪರವಾಗಿ, ಉಗ್ರಗಾಮಿಗಳ ಪರವಾಗಿ ಘೋಷಣೆ ಕೂಗಿದರೆಂಬ ಕಾರಣಕ್ಕೆ ವಿದ್ಯಾರ್ಥಿ ಸಂಘದ ಹಲವರ ಮೇಲೆ ಕೇಸು ಬಿದ್ದಿದೆ. Ofcourse ಸಂವಿಧಾನಬದ್ಧವಾಗಿ ನಡೆದ ವಿಚಾರಣೆಯಿಂದ ಗಲ್ಲು ಶಿಕ್ಷೆಗೊಳಗಾದ (ಗಲ್ಲು ಶಿಕ್ಷೆ ಸರಿಯೋ ತಪ್ಪೋ ಎನ್ನುವುದು ಬೇರೆಯೇ ಚರ್ಚೆ) ಅಪರಾಧಿಯೊಬ್ಬನ ಪರವಾಗಿ ಸಭೆ ನಡೆಸುವುದು, ದೇಶದ ವಿರುದ್ಧ ಘೋಷಣೆ ಕೂಗುವುದು, ವೈರಿ ರಾಷ್ಟ್ರದ ಪರವಾಗಿ ಕೂಗುವುದೆಲ್ಲವೂ ತಪ್ಪು ಕೆಲಸವೇ. ಆದರದು ವಿದ್ಯಾರ್ಥಿ ಸಂಘದ ಅಧ್ಯಕ್ಷನನ್ನು ರಾಷ್ಟ್ರದ್ರೋಹದ ಆರೋಪದಲ್ಲಿ ಬಂಧಿಸುವಷ್ಟು ಗಂಭೀರದ್ದೇ? ಹೌದೆನ್ನುವರು ನೀವಾದರೆ ಹದಿನೈದು ದಿನದ ಹಿಂದೆ ಜನವರಿ ಮೂವತ್ತರಂದು ಮಹಾತ್ಮ ಗಾಂಧಿಯನ್ನು ಕೊಂದ ಉಗ್ರ ನಾಥೂರಾಮ್ ಗೋಡ್ಸೆಯನ್ನು ಹೊಗಳುವ ಕಾರ್ಯಕ್ರಮವೊಂದನ್ನು ಅಖಿಲ ಭಾರತ ಹಿಂದೂ ಮಹಾಸಭಾ ಹಮ್ಮಿಕೊಂಡಿತ್ತು. ಅವರನ್ನೂ ರಾಷ್ಟ್ರದ್ರೋಹದ ಆರೋಪದ ಮೇಲೆ ಬಂಧಿಸಲಾಗಿದೆಯಾ? ಒಂದು ತಪ್ಪನ್ನು ಮತ್ತೊಂದು ತಪ್ಪಿನಿಂದ ಸಮರ್ಥಿಸಬಾರದು ಎಂಬ ಅರಿವಿನೊಂದಿಗೇ ಕೇಂದ್ರ ಸರಕಾರ ಉಗುರಲ್ಲಿ ಹೋಗುವುದಕ್ಕೆ ಕೊಡಲಿ ತೆಗೆದುಕೊಂಡಿದೆಯಾ ಎಂಬ ಅನುಮಾನ ಬರುವುದಂತೂ ಸಹಜ. ತಪ್ಪು ಯಾರು ಮಾಡಿದರೂ ತಪ್ಪೇ ಅಲ್ಲವೇ? ಒಂದು ಕಣ್ಣಿಗೆ ಬೆಣ್ಣೆ ಮತ್ತೊಂದು ಕಣ್ಣಿಗೆ ಸುಣ್ಣ ಹಚ್ಚುವ ವ್ಯವಸ್ಥೆ ಸರಿಯಾ ಎಂದು ಕೇಳಿಕೊಳ್ಳಬೇಕಾದ ಸಮಯವಿದು.

ಬಂಧನಕ್ಕೂ ಮುನ್ನ ಜೆ.ಎನ್.ಯು ವಿದ್ಯಾರ್ಥಿಗಳನ್ನುದ್ದೇಶಿಸಿ ಜೆ.ಎನ್.ಯು ವಿದ್ಯಾರ್ಥಿ ಸಂಘದ ಅಧ್ಯಕ್ಷ ಮಾಡಿದ ಭಾಷಣದ ಕನ್ನಡ ರೂಪವಿದು. ಇದನ್ನು ಕನ್ನಡಕ್ಕೆ ಅನುವಾದಿಸಿ ಹಿಂಗ್ಯಾಕೆಯಲ್ಲಿ ಪ್ರಕಟಿಸುತ್ತಿರುವುದಕ್ಕೆ ಮೂರು ಕಾರಣವಿದೆ. ಒಂದು ಜೆ.ಎನ್.ಯು ವಿದ್ಯಾರ್ಥಿ ಸಂಘದ ಅಧ್ಯಕ್ಷ ಸ್ಥಾನದಲ್ಲಿರುವವರನ್ನು ಬಂಧಿಸಿರುವುದು ಇದು ಎರಡನೇ ಸಲವಂತೆ. ಮೊದಲ ಸಲ ಬಂಧನವಾಗಿದ್ದು ಭಾರತದ ಕರಾಳ ಅಧ್ಯಾಯವಾದ ಕಾಂಗ್ರೆಸ್ಸಿನ ಇಂದಿರಾ ಗಾಂಧಿಯ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ. ಎರಡನೇ ಕಾರಣ ಭಾಷಣದ ವೀಡಿಯೋ ಮಾಡಿದಾತ ಗೆಳೆಯನೊಟ್ಟಿಗೆ ಇಷ್ಟು ವೀಡಿಯೋ ಸಾಕಾ? ಎಂದು ಕೇಳುತ್ತಾನೆ. ಅವನ ಗೆಳೆಯ ಮಾಧ್ಯಮದವರಿದನ್ನು ಹಾಕುವುದಿಲ್ಲ ಪೂರ್ತಿ ರೆಕಾರ್ಡ್ ಮಾಡಿಕೊಂಡು ಯೂಟ್ಯೂಬಿಗೆ ಹಾಕೋಣ ಅನ್ನುತ್ತಾನೆ. ಮುಖ್ಯವಾಹಿನಿಯ ಮಾಧ್ಯಮಗಳಲ್ಲಿ ಇದರ ಬಗ್ಗೆ ಯಾವುದೇ ಸುದ್ದಿಯಿಲ್ಲ. ದೇಶದ್ರೋಹದ ಕೂಗಷ್ಟೇ ಇದೆ. ಮೂರನೆಯ ಕಾರಣ ಜೆ.ಎನ್.ಯುನಲ್ಲಿ ಮಾರ್ಚಿ ತಿಂಗಳಿನಲ್ಲಿ ಚುನಾವಣೆ ಇದೆಯೆಂದು ಈ ಭಾಷಣದಲ್ಲಿ ಕನ್ನಯ್ಯ ಹೇಳುತ್ತಾನೆ. ಇದು ಎಬಿವಿಪಿಯ ಚುನಾವಣಾ ತಯಾರಿಯಾ? ಎಂಬ ಅನುಮಾನದೊಂದಿಗೆ ಕನ್ನಡ ರೂಪಕ್ಕಿಳಿಸಲಾಗಿದೆ. ದೇಶದ್ರೋಹಿಗಳನ್ನು, ಆತಂಕವಾದಿಗಳನ್ನು ವಿಶ್ವವಿದ್ಯಾನಿಲಯವೊಂದು ಸೃಷ್ಟಿಸಬಾರದು ಎಂಬ ಎಚ್ಚರಿಕೆಯೊಂದಿಗೇ ವಿಶ್ವವಿದ್ಯಾಲಯಗಳು ಹುಸಿ ರಾಷ್ಟ್ರೀಯತೆಯನ್ನು ಪೋಷಿಸುತ್ತ ಅರೆಬೆಂದ ದೇಶಭಕ್ತರನ್ನು ಬೆಳೆಸಬಾರದೆಂದ ಎಚ್ಚರಿಕೆಯೂ ಇರಬೇಕು – ಡಾ. ಅಶೋಕ್.ಕೆ.ಆರ್ 

ಜೆ.ಎನ್.ಯು,ಎಸ್.ಯುದ ಅಧ್ಯಕ್ಷ ಕನ್ನಯ್ಯ ಕುಮಾರ್
……….ಬ್ರಿಟೀಷರಿಂದ ಕ್ಷಮೆ ಕೇಳಿದ್ದ ಸಾವರ್ಕರನ ಚೇಲಾಗಳಿವರು. ಹರಿಯಾಣದಲ್ಲಿರುವ ಕಟ್ಟರ್ ಸರ್ಕಾರ ಶಹೀದ್ ಭಗತ್ ಸಿಂಗನ ಹೆಸರಲ್ಲಿದ್ದ ವಿಮಾನ ನಿಲ್ದಾಣಕ್ಕೆ ಸಂಘಿಯ ಹೆಸರನ್ನಿಟ್ಟುಬಿಟ್ಟರು. ನಾನು ಹೇಳುತ್ತಿರುವುದೇನೆಂದರೆ ನಮಗೆ ದೇಶಭಕ್ತಿಯ ಸರ್ಟಿಫಿಕೇಟ್ ಆರ್.ಎಸ್.ಎಸ್ ನಿಂದ ಬೇಕಾಗಿಲ್ಲ. ನಮಗೆ ನ್ಯಾಷನಲಿಷ್ಟ್ ಎಂಬ ಸರ್ಟಿಫಿಕೇಟ್ ಆರ್.ಎಸ್.ಎಸ್ ನಿಂದ ಬೇಕಾಗಿಲ್ಲ. ನಾವು ಈ ದೇಶದವರು, ಇದರ ಮಣ್ಣಿನ ಬಗ್ಗೆ ನಮಗೆ ಪ್ರೀತಿಯಿದೆ, ಈ ದೇಶದ ಒಳಗಿರುವ 80% ಬಡವರ ಪರವಾಗಿ ನಾವು ಹೋರಾಡುತ್ತೇವೆ. ನಮಗೆ ಇದೇ ದೇಶಪ್ರೇಮ. ನಮಗೆ ಸಂಪೂರ್ಣ ನಂಬಿಕೆಯಿದೆ ಬಾಬಾ ಸಾಹೇಬರ ಬಗ್ಗೆ, ನಮಗೆ ಸಂಪೂರ್ಣ ನಂಬಿಕೆಯಿದೆ ದೇಶದ ಸಂವಿಧಾನದ ಮೇಲೆ, ಬಹಳ ಸ್ಪಷ್ಟವಾಗಿ ಹೇಳುತ್ತೇನೆ ಈ ದೇಶದ ಸಂವಿಧಾನದ ಮೇಲೆ ಯಾರಾದರೂ ಬೆರಳ ತೋರಿಸಿದರೆ, ಆ ಬೆರಳು ಸಂಘಿಯದ್ದಾಗಲೀ ಆ ಬೆರಳು ಇನ್ಯಾರದೇ ಆಗಲಿ ನಾವದನ್ನು ಸಹಿಸುವುದಿಲ್ಲ. ನಾವು ಸಂವಿಧಾನವನ್ನ ನಂಬುತ್ತೇವೆ, ಆದರೆ ನಾಗಪುರದಲ್ಲಿ ಹೇಳಿಕೊಡಲಾಗುವ ಸಂವಿಧಾನದ ಮೇಲೆ ನಮಗೆ ಭರವಸೆಯಿಲ್ಲ. ನಮಗೆ ಮನುಸ್ಮ್ರತಿಯ ಬಗ್ಗೆ ಯಾವುದೇ ಭರವಸೆಯಿಲ್ಲ ನಮಗೆ ಈ ದೇಶದ ಒಳಗಿರುವ ಜಾತಿವಾದದ ಮೇಲೆ ಯಾವುದೇ ಭರವಸೆಯಿಲ್ಲ. 

ಇದೇ ಸಂವಿಧಾನದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರರು ಗಲ್ಲು ಶಿಕ್ಷೆಯನ್ನು ರದ್ದು ಮಾಡುವ ಬಗ್ಗೆ ಹೇಳುತ್ತಾರೆ, ಇದೇ ಬಾಬಾ ಸಾಹೇಬ್ ಅಂಬೇಡ್ಕರರು ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಹೇಳುತ್ತಾರೆ. ನಾವು ಸಂವಿಧಾನವನ್ನು ಎತ್ತಿ ಹಿಡಿಯುತ್ತಾ ನಮ್ಮ ಮೂಲಭೂತ ಹಕ್ಕನ್ನು ಸಾಂವಿಧಾನಿಕ ಹಕ್ಕನ್ನು ಎತ್ತಿ ಹಿಡಿಯಲು ಬಯಸುತ್ತೇವೆ. ಆದರಿದು ನಾಚಿಕೆಗೇಡಿನ ವಿಷಯ, ದುಃಖದ ವಿಷಯ ಇವತ್ತು ಎಬಿವಿಪಿ ತಮ್ಮ ಮಾಧ್ಯಮ ಮಿತ್ರರ ಜೊತೆ ಸೇರಿ ಪೂರ್ತಿ ವಿಷಯವನ್ನು ತಿರುಚಿಬಿಟ್ಟಿದೆ, ತೆಳುವಾಗಿಸಿಬಿಟ್ಟಿದೆ. ನಿನ್ನೆ ಎಬಿವಿಪಿಯ Joint secretary ಹೇಳ್ತಿದ್ರು ಫೆಲ್ಲೋಶಿಪ್ಪಿಗೆ ಹೋರಾಟ ನಡೆಸುತ್ತೀವೆಂದು. ಇದು ಎಷ್ಟು ಹಾಸ್ಯಾಸ್ಪದವೆಂದರೆ ಇವರದೇ ಸರಕಾರದ ಮೇಡಮ್ ಮನು ಸ್ಮೃತಿ ಇರಾನಿ ಫೆಲ್ಲೋಶಿಪ್ಪನ್ನು ರದ್ದು ಮಾಡಿಬಿಟ್ಟಿದ್ದಾರೆ. ಇವರೇಳುತ್ತಾರೆ ಫೆಲ್ಲೋಶಿಪ್ಪಿಗೆ ಹೋರಾಡುತ್ತೇವೆಂದು. ಇವರ ಸರಕಾರ ಉನ್ನತ ಶಿಕ್ಷಣಕ್ಕೆ ಮೀಸಲಿಡುವ ಹಣದಲ್ಲಿ 70% ಕಡಿತಗೊಳಿಸಿಬಿಟ್ಟಿದೆ. ಇದರಿಂದ ನಮ್ಮ ಹಾಸ್ಟೆಲ್ ಕಳೆದ ನಾಲ್ಕು ವರ್ಷದಿಂದ ಪೂರ್ಣವಾಗಿಲ್ಲ. ಇವತ್ತಿನವರೆಗೂ ವೈಫೈ ಕೊಡಲಾಗಿಲ್ಲ……………………… ಎಬಿವಿಪಿಯ ಜನರು ದೇವಾನಂದನ ತರ ಪೋಸು ಕೊಡುತ್ತಾ ಹಾಸ್ಟೆಲ್ ಕಟ್ಟಿಸುತ್ತೇವೆ, ವೈಫೈ ಕೊಡಿಸುತ್ತೇವೆ, ಫೆಲ್ಲೋಶಿಪ್ ಕೊಡಿಸುತ್ತೇವೆ ಎಂದು ಹೇಳುತ್ತಾರೆ. ಮೂಲಭೂತ ಹಕ್ಕಿನ ಬಗ್ಗೆ ಚರ್ಚೆಯಾದರೆ ಇವರ ಸತ್ಯಗಳೆಲ್ಲ ಹೊರಗೆ ಬಂದುಬಿಡುತ್ತವೆ. ಗೆಳೆಯರೇ ನಮಗೆ ಹೆಮ್ಮೆಯಿದೆ ಜೆ.ಎನ್.ಯು ಬಗ್ಗೆ. ನಾವು ಮೂಲಭೂತ ಹಕ್ಕಿನ ಬಗ್ಗೆ ಚರ್ಚೆ ನಡೆಸುತ್ತೇವೆ. ಇದರ ಬಗ್ಗೆ ಪ್ರಶ್ನೆ ಕೇಳುತ್ತೇವೆ. …………. ಆ ಸ್ವಾಮಿ ಹೇಳ್ತಾರೆ ಜೆ.ಎನ್.ಯುನಲ್ಲಿ ಜಿಹಾದಿಗಳಿದ್ದಾರೆ. ಜೆ.ಎನ್.ಯುನಲ್ಲಿರುವ ಜನ ಹಿಂಸೆ ಹಬ್ಬಿಸುತ್ತಾರೆ ಎಂದು. ಜೆ.ಎನ್.ಯುನಲ್ಲಿರುವ ಆರ್.ಎಸ್‍.ಎಸ್ ಹಿಂಬಾಲಕರಿಗೆ ನಾನು ಸವಾಲ ಹಾಕುತ್ತೇನೆ. ಬನ್ನಿ ಡಿಬೇಟ್ ಮಾಡೋಣ. ಹಿಂಸೆಯ ಬಗ್ಗೆ ಚರ್ಚಿಸೋಣ …………………….. ಎಬಿವಿಪಿ ನಾಚಿಕೆಯಿಲ್ಲದೆ ಹೇಳುತ್ತೆ ರಕ್ತದ ತಿಲಕ ಮಾಡಿ ಗುಂಡುಗಳಿಂದ ಆರತಿ ಎತ್ತಿ ಎಂದು. ಯಾರ ರಕ್ತ ಹರಿಸಬೇಕೆಂದಿದ್ದೀರಿ ಈ ಮಣ್ಣಿನಲ್ಲಿ? ನೀವು ಗುಂಡು ಹಾರಿಸಿದ್ದೀರಿ, ಬ್ರಿಟೀಷರ ಜೊತೆ ಸೇರಿಕೊಂಡು ಈ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿದ್ದವರ ಮೇಲ ಗುಂಡು ಹಾರಿಸಿದ್ದೀರಿ. ಈ ಮಣ್ಣಿನಲ್ಲಿ ಬಡವರು ಅನ್ನದ ಬಗ್ಗೆ ಮಾತನಾಡಿದಾಗ, ಹಕ್ಕಿನ ಬಗ್ಗೆ ಮಾತನಾಡಿದಾಗ ಅವರ ಮೇಲೆ ಗುಂಡು ಹಾರಿಸುತ್ತೀರಿ. ಮುಸ್ಲಿಮರ ಮೇಲೆ ಗುಂಡು ಹಾರಿಸಿದ್ದೀರಿ. ತಮ್ಮಧಿಕಾರದ ಬಗ್ಗೆ ಮಹಿಳೆಯರು ಮಾತನಾಡಿದಾಗ ನೀವೇಳುತ್ತೀರಿ ಐದು ಬೆರಳುಗಳು ಸಮನಾಗಿರುವುದಿಲ್ಲವೆಂದು. ಮಹಿಳೆಯರು ಸೀತೆಯ ಆಗಿರಬೇಕು ಮತ್ತು ಸೀತೆಯ ತರ ಅಗ್ನಿಪರೀಕ್ಷೆಗೊಳಗಾಗಬೇಕೆಂದು ಹೇಳುತ್ತೀರಿ. ಈ ದೇಶದಲ್ಲಿ ಲೋಕತಂತ್ರವಿದೆ, ಈ ಲೋಕತಂತ್ರ ಎಲ್ಲರಿಗೂ ಸಮಾನ ಹಕ್ಕು ನೀಡುತ್ತದೆ. ಅದು ವಿದ್ಯಾರ್ಥಿಯೇ ಇರಲಿ, ಕರ್ಮಚಾರಿಯೇ ಇರಲಿ, ಬಡವ – ಬಲ್ಲಿದನಿರಲಿ, ಕೂಲಿಯವನಿರಲಿ, ರೈತನಿರಲಿ, ಅಂಬಾನಿಯಿರಲಿ, ಅದಾನಿಯಿರಲಿ ಎಲ್ಲರಿಗೂ ಸಮಾನ ಹಕ್ಕಿದೆ. ಮಹಿಳೆಯ ಸಮಾನತೆಯ ಬಗ್ಗೆ ಮಾತನಾಡಿದರೆ ಹೇಳುತ್ತಾರೆ ಭಾರತೀಯ ಸಂಸ್ಕೃತಿಯನ್ನು ಹಾಳುಮಾಡುತ್ತಿದ್ದಾರೆಂದು. ನಾವು ಹಾಳುಮಾಡಬೇಕೆಂದಿದ್ದೇವೆ, ಶೋಷಣೆಯ ಸಂಸ್ಕೃತಿಯನ್ನು, ಜಾತಿವಾದದ ಸಂಸ್ಕೃತಿಯನ್ನು, ಮನುವಾದ ಮತ್ತು ಬ್ರಾಹ್ಮಣವಾದದ ಸಂಸ್ಕೃತಿಯನ್ನು ……………………….. ಇವರಿಗೆ ಕಷ್ಟವಾಗುವುದು ಈ ಮಣ್ಣಿನ ಜನರು ಲೋಕತಂತ್ರದ ಬಗ್ಗೆ ಮಾತನಾಡಿದಾಗ, ಲಾಲ್ ಸಲಾಮಿನ ಜೊತೆ ಜನರು ನೀಲಿ ಸಲಾಮ್ ಮಾಡಿದಾಗ, ಮಾರ್ಕ್ಸ್ ಜೊತೆ ಬಾಬಾ ಸಾಹೇಬ್ ಅಂಬೇಡ್ಕರ್ ಹೆಸರು ತೆಗೆದುಕೊಂಡಾಗ ………………….. ಇವರ ಹೊಟ್ಟೆಯಲ್ಲಿ ತಳಮಳವೇಳುತ್ತದೆ. ಇವರ ಕುತಂತ್ರವಿದು, ಇವರು ಬ್ರಿಟೀಷರ ಚಮಚಾಗಳು …….. ಹಾಕಿ ದೇಶದ್ರೋಹದ ಕೇಸನ್ನು. ನಾನೇಳುತ್ತೇನೆ ಆರ್.ಎಸ್.ಎಸ್ ಇತಿಹಾಸ ಬ್ರಿಟೀಷರ ಜೊತೆಗೆ ನಿಂತ ಇತಿಹಾಸ. ಈ ದೇಶದ್ರೋಹಿಗಳು ಇವತ್ತು ದೇಶಪ್ರೇಮದ ಸರ್ಟಿಫಿಕೇಟ್ ಕೇಳುತ್ತಿದ್ದಾರೆ. ನನ್ನ ಮೊಬೈಲ್ ನೋಡಿ ಗೆಳೆಯರೇ ನನ್ನ ತಾಯಿ ಮತ್ತು ತಂಗಿಗೆ ಕೆಟ್ಟಕೆಟ್ಟದಾಗಿ ಬಯ್ದಿದ್ದಾರೆ, ಬಯ್ಯುತ್ತಿದಾರೆ. ಯಾವ ಭಾರತ ಮಾತೆಯ ಬಗ್ಗೆ ಮಾತನಾಡುತ್ತಿದ್ದಿರಾ? ನಿಮ್ಮ ಭಾರತ ಮಾತೆಯಲ್ಲಿ ನಮ್ಮ ತಾಯಿ ಇಲ್ಲದಿದ್ದರೆ ನನಗೆ ಆ ಭಾರತ ಮಾತೆಯ ಪರಿಕಲ್ಪನೆ ಒಪ್ಪಿತವಲ್ಲ. ಈ ದೇಶದ ಬಡ ಮಹಿಳೆಯರು, ನನ್ನಮ್ಮ ಅಂಗನವಾಡಿಯಲ್ಲಿ ಕೆಲಸಕ್ಕಿದ್ದಾರೆ, ಮೂರು ಸಾವಿರದ ಮೇಲೆ ನಮ್ಮ ಕುಟುಂಬ ನಡೆಯುತ್ತದೆ. ಮತ್ತಿವರು ಅವರ ವಿರುದ್ಧ ಬಯ್ಗುಳ ಸುರಿಸುತ್ತಿದ್ದಾರೆ. ಇಂತಹ ದೇಶದ ಬಗ್ಗೆ ನನಗೆ ನಾಚಿಕೆಯಿದೆ. ಈ ದೇಶದೊಳಗಿರುವ ದಲಿತ, ಕಾರ್ಮಿಕ, ರೈತರ ತಾಯಿ ಭಾರತ ಮಾತೆಯಲ್ಲ. ನಾನು ಜೈಕಾರ ಹಾಕುತ್ತೇನೆ, ಭಾರತದ ತಾಯಂದರಿಗ, ಅಪ್ಪಂದರಿಗೆ, ತಾಯಿ ಸಹೋದರಿಗೆ ಜೈ, ರೈತ ಕಾರ್ಮಿಕ, ದಲಿತ ಆದಿವಾಸಿಗಳಿಗೆ ಜೈ. ನಿಮ್ಮಲ್ಲಿ ತಾಕತ್ತಿದ್ದರೆ ಹೇಳಿ ಇಂಕ್ವಿಲಾಬ್ ಜಿಂದಾಬಾದ್, ಹೇಳಿ ಭಗತ್ ಸಿಂಗ್ ಜಿಂದಾಬಾದ್, ಹೇಳಿ ಸುಖದೇವ್ ಜಿಂದಾಬಾದ್, ಹೇಳಿ ಅಶ್ವಾಕುಲ್ಲಾ ಖಾನ್ ಜಿಂದಾಬಾದ್, ಹೇಳಿ ಬಾಬಾ ಸಾಹೇಬ್ ಜಿಂದಾಬಾದ್.

ನೀವು ಬಾಬಾ ಸಾಹೇಬರ 125ನೇ ವರ್ಷಾಚರಣೆಯನ್ನಾಚರಿಸುವ ನಾಟಕವಾಡುತ್ತೀರಿ. ನಿಮ್ಮಲ್ಲಿ ತಾಕತ್ತಿದೆಯಾ? ಬಾಬಾ ಸಾಹೇಬರು ಜಾತಿವಾದ ಈ ದೇಶದ ದೊಡ್ಡ ಸಮಸ್ಯೆಯೆಂದು ಹೇಳಿದ್ದರು…………….. ಖಾಸಗಿ ಕ್ಷೇತ್ರದಲ್ಲಿ ಮೀಸಲಾತಿ ತೆಗೆದುಕೊಂಡು ಬನ್ನಿ …………… ದೇಶ ಕಟ್ಟುವಿಕೆ ನಡೆಯುವುದು ಅಲ್ಲಿರುವ ಜನರಿಂದ. ಈ ದೇಶದಲ್ಲಿ ಬಡವ – ಕಾರ್ಮಿಕರಿಗೆ ಜಾಗವಿಲ್ಲ……….. ನಿನ್ನೆ ಟಿವಿ ಡಿಬೇಟಿನಲ್ಲಿ ದೀಪಕ್ ಚೌರಾಸಿಯಾರವರಿಗೆ ಈ ಮಾತು ಹೇಳುತ್ತಿದ್ದೆ ‘ಇದು ಗಂಭೀರ ಸಮಯವೆಂದು ನೆನಪಿಟ್ಟುಕೊಳ್ಳಿ. ಇದೇ ರೀತಿಯ ಮೂಲಭೂತವಾದತನ ಮುಂದುವರೆದರೆ ಮಾಧ್ಯಮ ಕೂಡ ಸುರಕ್ಷಿತವಾಗಿರುವುದಿಲ್ಲ. ಸಂಘದ ಆಫೀಸಿನಿಂದ ಸ್ಕ್ರಿಪ್ಟ್ ಬರೆದುಕೊಂಡು ಬರುತ್ತಾರೆ. ಇಂದಿರಾಗಾಂಧಿಯ ಸಮಯದಲ್ಲಿ ಕಾಂಗ್ರೆಸ್ ಆಫೀಸಿನಿಂದ ಸ್ಕ್ರಿಪ್ಟ್ ಬರುತ್ತಿದ್ದಂತೆ ಬರುತ್ತದೆ ಎಂದು ನೆನಪಿರಲಿ’ ನೀವು ನಿಜಕ್ಕೂ ಈ ದೇಶದಲ್ಲಿರುವ ದೇಶಭಕ್ತಿಯನ್ನು ತೋರಿಸಬೇಕೆಂದರೆ, ಕೆಲವು ಮಾಧ್ಯಮಮಿತ್ರರು ಹೇಳುತ್ತಿದ್ದರು, ನಮ್ಮ ತೆರಿಗೆ ಹಣದಲ್ಲಿ, ಸಬ್ಸಿಡಿ ಹಣದಲ್ಲಿ ಜೆ.ಎನ್.ಯು ನಡೆಯುತ್ತಿದೆಯೆಂದು. ಹೌದು ನಿಜ, ತೆರಿಗೆ ಹಣದಲ್ಲಿ, ಸಬ್ಸಿಡಿಯ ಹಣದಲ್ಲಿ ಜೆ.ಎನ್.ಯು ನಡೆಯುತ್ತಿದೆ ಎನ್ನುವುದು ಸತ್ಯ. ಆದರೊಂದು ಪ್ರಶ್ನೆ ಕೇಳಬಯಸುತ್ತೇನೆ, ಈ ವಿಶ್ವವಿದ್ಯಾನಿಯಲಗಳು ಇರುವುದಾದರೂ ಏತಕ್ಕೆ, ಸಮಾಜದ ಆಗುಹೋಗುಗಳನ್ನು ವಿಶ್ಲೇಷಣೆ ಮಾಡಲು ……………… ವಿಶ್ವವಿದ್ಯಾನಿಲಯಗಳು ಇದರಲ್ಲಿ ವಿಫಲವಾದರೆ ದೇಶ ನಿರ್ಮಾಣವಾಗುವುದಿಲ್ಲ. ಆ ದೇಶದಲ್ಲಿ ಜನರ ಭಾಗವಹಿಸುವಿಕೆ ಇರುವುದಿಲ್ಲ………………….. ಲೂಟಿ ಮತ್ತು ಶೋಷಣೆಯೇ ಆ ದೇಶದಲ್ಲಿರುತ್ತದೆ. ದೇಶದೊಳಗಿನ ಜನರ ಸಂಸ್ಕೃತಿ, ವಿವಿಧತೆಯನ್ನು ಒಳಗೊಳ್ಳದಿದ್ದರೆ ಆ ದೇಶದ ನಿರ್ಮಾಣವಾಗುವುದಿಲ್ಲ. ನಾವು ದೇಶದ ಜೊತೆಗಿದ್ದೇವೆ. ಭಗತ್ ಸಿಂಗ್ ಮತ್ತು ಬಾಬಾ ಸಾಹೇಬ್ ಅಂಬೇಡ್ಕರರ ಕನಸುಗಳ ಜೊತೆಗಿದ್ದೇವೆ…………….ಸಮಾನತೆಯ ಹಕ್ಕು ಸಿಗಬೇಕು, ಎಲ್ಲರಿಗೂ ಜೀವಿಸುವ ಹಕ್ಕಿರಬೇಕೆಂಬ ಕನಸಿನ ಜೊತೆಗಿದ್ದೇವೆ. ಎಲ್ಲರಿಗೂ ಆಹಾರದ ಹಕ್ಕಿರಬೇಕೆಂಬ ಕನಸಿನ ಜೊತೆಗಿದ್ದೇವೆ. ಆ ಕನಸಿನ ಜೊತೆ ನಿಲ್ಲುವ ಕಾರಣಕ್ಕೆ, ರೋಹಿತ ತನ್ನ ಪ್ರಾಣ ನೀಡಿದ್ದಾನೆ. ಈ ಸಂಘಿಗಳಿಗೆ ನಾನು ಹೇಳಬಯಸುತ್ತೇನೆ ………………ರೋಹಿತನ ವಿಷಯದಲ್ಲಿ ನೀವು ಮಾಡಿದ್ದನ್ನು ಜೆ.ಎನ್.ಯು ವಿಷಯದಲ್ಲಿ ನಡೆಯಲು ಬಿಡುವುದಿಲ್ಲ………………….. ರೋಹಿತನ ತ್ಯಾಗವನ್ನು ನೆನೆಯುತ್ತಾ ನಾವು ಅಭಿವ್ಯಕ್ತಿ ಸ್ವಾತಂತ್ರ್ಯದ ಪರ ನಿಲ್ಲುತ್ತೇವೆ. ಪಾಕಿಸ್ತಾನದ ವಿಷಯ ಬಿಟ್ಟುಬಿಡಿ, ಬಾಂಗ್ಲಾದೇಶದ ವಿಷಯ ಬಿಟ್ಟುಬಿಡಿ, ನಾವು ಹೇಳುತ್ತೇವೆ ಇಡೀ ಜಗತ್ತಿನ ಬಡವರು ಒಂದು, ಜಗತ್ತಿನ ಕಾರ್ಮಿಕರು ಒಂದು, ಮಾನವೀಯತೆ ಜಿಂದಾಬಾದ್ ………………. ಮಾನವೀಯತೆಯ ವಿರುದ್ಧ ನಿಂತಿರುವವರಾರೆಂದು ನಾವಿವತ್ತು ಗುರುತಿಸಿಬಿಟ್ಟಿದ್ದೇವೆ. ಜಾತಿವಾದ, ಮನುವಾದ, ಬ್ರಾಹ್ಮಣವಾದದ ಮುಖಗಳನ್ನು ನಾವು ಬಹಿರಂಗಗೊಳಿಸಬೇಕು. ನಿಜವಾದ ಲೋಕತಂತ್ರ ನಿಜವಾದ ಸ್ವಾತಂತ್ರ್ಯವನ್ನು ದೇಶದಲ್ಲಿ ಸ್ಥಾಪಿಸಬೇಕಾಗಿದೆ. ……………. ಆ ಸ್ವಾತಂತ್ರ್ಯ ಬರುವುದು ಸಂವಿಧಾನದಿಂದ, ಲೋಕತಂತ್ರದಿಂದ, ಸಂಸತ್ತಿನಿಂದ ಎಂದು ಹೇಳಲಿಚ್ಛಿಸುತ್ತೇವೆ. ಇದಕ್ಕಾಗಿ ಇಲ್ಲಿರುವ ಕೇಳುಗರಲ್ಲಿ ವಿನಂತಿಸುತ್ತೇನೆ, ಸಣ್ಣಪುಟ್ಟ ಭಿನ್ನಾಭಿಪ್ರಾಯಗಳಿದ್ದರೂ ನಾವು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ, ನಮ್ಮ ಸಂವಿಧಾನ, ನಮ್ಮ ಭೂಮಿಯ ಏಕತೆಗಾಗಿ ನಾವು ಒಗ್ಗಟ್ಟಿನಿಂದರಬೇಕು. ದೇಶ ಒಡೆಯುವ, ಆತಂಕವಾದ ಹರಡುವ ಜನರಿಗೆ ಒಂದು ಪ್ರಶ್ನೆ, ಕೊನೆಯ ಪ್ರಶ್ನೆ ಕೇಳುತ್ತಾ ನನ್ನ ಮಾತು ಮುಗಿಸುತ್ತೇನೆ. ‘ಈ ಕಸಾಬ್ ಯಾರು? ಅಫ್ಜಲ್ ಗುರು ಯಾರು? ಇಂತಹ ಪರಿಸ್ಥಿತಿಯಲ್ಲಿರುವ ಈ ಜನರ್ಯಾರು? ತಮ್ಮ ದೇಹಕ್ಕೆ ಬಾಂಬು ಸಿಕ್ಕಿಸಿಕೊಂಡು ಕೊಲೆ ಮಾಡಲು ತಯಾರಾಗುವ ಈ ಜನರಾರು? ಈ ಪ್ರಶ್ನೆ ವಿಶ್ವವಿದ್ಯಾನಿಲಯದಲ್ಲಿ ಹುಟ್ಟದಿದ್ದರೆ ವಿಶ್ವವಿದ್ಯಾನಿಲಯಕ್ಕೆ ಅರ್ಥವೇ ಇಲ್ಲ ………. ನಾವು ನ್ಯಾಯವನ್ನು ವ್ಯಾಖ್ಯಾನಿಸದಿದ್ದರೆ, ನಾವು ಹಿಂಸೆಯನ್ನು ವ್ಯಾಖ್ಯಾನಿಸದಿದ್ದರೆ, ಹಿಂಸೆಯೆಂದರೆ ಬಂದೂಕೆತ್ತಿಕೊಂಡು ಕೊಲ್ಲುವುದಷ್ಟೇ ಅಲ್ಲ. ಸಂವಿಧಾನ ದಲಿತರಿಗೆ ಕೊಟ್ಟಿರುವ ಹಕ್ಕನ್ನು ಜೆ.ಎನ್.ಯು ಆಡಳಿತ ಕೊಡದಿರುವುದೂ ಹಿಂಸೆಯೇ, ವ್ಯವಸ್ಥೆಯ ಹಿಂಸೆ …………. ನ್ಯಾಯದ ಮಾತನಾಡುತ್ತೇವೆ, ಯಾರು ನಿರ್ಧರಿಸುತ್ತಾರೆ ಈ ನ್ಯಾಯವೇನೆಂಬುದನ್ನು. ಬ್ರಾಹ್ಮಣವಾದದ ವ್ಯವಸ್ಥೆಯಿದ್ದಾಗ ದಲಿತರನ್ನು ಮಂದಿರದೊಳಗೆ ಬಿಡುತ್ತಿರಲಿಲ್ಲ, ಅದೇ ನ್ಯಾಯವಾಗಿತ್ತು. ಬ್ರಿಟೀಷರಿದ್ದಾಗ ನಾಯಿಗಳಿಗೆ ಮತ್ತು ಭಾರತೀಯರಿಗೆ ಹೋಟೆಲ್ಲುಗಳೊಳಗೆ ಬಿಡುತ್ತಿರಲಿಲ್ಲ, ಅದೇ ನ್ಯಾಯವಾಗಿತ್ತು. ಈ ‘ನ್ಯಾಯ’ವನ್ನು ನಾವು ಪ್ರಶ್ನಿಸಿದೆವು ಮತ್ತಿವತ್ತೂ ಎಬಿವಿಪಿ ಮತ್ತು ಆರ್.ಎಸ್.ಎಸ್ ನ ನ್ಯಾಯವನ್ನು ಪ್ರಶ್ನಿಸುತ್ತೇವೆ………………..ನಿಮ್ಮ ನ್ಯಾಯದಲ್ಲಿ ನಮ್ಮ ನ್ಯಾಯಕ್ಕೆ ಜಾಗವಿರದಿದ್ದರೆ ನಿಮ್ಮ ನ್ಯಾಯವನ್ನು ನಾವು ಮಾನ್ಯ ಮಾಡುವುದಿಲ್ಲ. ನಿಮ್ಮ ಸ್ವತಂತ್ರವನ್ನು ನಾವು ಮಾನ್ಯ ಮಾಡುವುದಿಲ್ಲ. ಪ್ರತಿಯೊಬ್ಬನಿಗೂ ಅವನ ಸಂವಿಧಾನಿಕ ಹಕ್ಕು ಸಿಕ್ಕ ದಿನ ಸ್ವಾತಂತ್ರ್ಯ ಮಾನ್ಯ ಮಾಡುತ್ತೇವೆ. ಸಂವಿಧಾನದ ಹಕ್ಕು ಎಲ್ಲರಿಗೂ ಸಿಕ್ಕು ಸಮಾನರಾದ ದಿನ ನ್ಯಾಯವನ್ನು ಒಪ್ಪುತ್ತೇವೆ. ಗೆಳೆಯರೇ ತುಂಬಾ ಗಂಭೀರ ಪರಿಸ್ಥಿತಿಯಿದೆ. ಜೆ.ಎನ್.ಯು.ಎಸ್.ಯು ಯಾವುದೇ ಹಿಂಸೆ, ಆತಂಕವಾದ, ದೇಶದ್ರೋಹದ ಯಾವ ಕೆಲಸವನ್ನೂ ಸಮರ್ಥಿಸುವುದಿಲ್ಲ……………………..ಕೆಲವು ಅನಾಮಿಕ ಆಗುಂತಕರು ಪಾಕಿಸ್ತಾನ ಜಿಂದಾಬಾದ್ ಎಂದು ಕೂಗಿದ್ದಾರೆ. ಜೆ.ಎನ್.ಯು.ಎಸ್.ಯು ಅದನ್ನು ಕಠಿಣ ಮಾತುಗಳಲ್ಲಿ ಖಂಡಿಸುತ್ತದೆ. ಜೊತೆಜೊತೆಗೆ ಜೆ.ಎನ್.ಯು ಆಡಳಿತ ಮತ್ತು ಎಬಿವಿಪಿಗೊಂದು ಸವಾಲು. ಈ ಕ್ಯಾಂಪಸ್ಸಿನಲ್ಲಿ ಸಾವಿರ ತರಹದ ಘಟನೆಗಳು ನಡೆಯುತ್ತವೆ, ಗಮನವಿಟ್ಟು ಎಬಿವಿಪಿಯ ಘೋಷಣೆಗಳನ್ನು ಕೇಳಿಸಿಕೊಳ್ಳಿ, ಅವರು ಹೇಳುತ್ತಾರೆ ಕಮ್ಯುನಿಷ್ಟ್ ನಾಯಿ, ಹೇಳುತ್ತಾರೆ ಅಫ್ಜಲ್ ಗುರುವಿನ……….ಹೇಳುತ್ತಾರೆ ಜಿಹಾದಿಗಳ ಮಕ್ಕಳು……….. ಈ ಸಂವಿಧಾನ ನಮಗೆ ನಾಗರೀಕರಾಗುವ ಅಧಿಕಾರ ನೀಡಿದ್ದರೆ ನನ್ನ ತಂದೆಯನ್ನು ನಾಯಿಯೆಂದು ಕರೆಯುವುದು ಸಂವಿಧಾನದ ಹರಣವೇ ಅಲ್ಲವೇ? ಈ ಪ್ರಶ್ನೆ ನಾನು ಎಬಿವಿಪಿಗೆ ಕೇಳುತ್ತೇನೆ. ನೀವು ಯಾರಿಗಾಗಿ ಕೆಲಸ ಮಾಡುತ್ತಿದ್ದೀರೆಂದು ಜೆ.ಎನ್.ಯು ಆಡಳಿತಕ್ಕೆ ಕೇಳಬಯಸುತ್ತೇನೆ. ಯಾರ ಜೊತೆ ಕೆಲಸ ಮಾಡುತ್ತಿದ್ದೀರಾ? ಮತ್ತು ಯಾವ ಆಧಾರದ ಮೇಲೆ ಕೆಲಸ ಮಾಡುತ್ತಿದ್ದೀರಾ? ಇವತ್ತು ಒಂದಂಶ ಸ್ಪಷ್ಟವಾಗಿ ತಿಳಿದುಹೋಗಿದೆ. ಈ ಜೆ.ಎನ್.ಯು ಆಡಳಿತ ಮೊದಲು ಅನುಮತಿ ಕೊಡುತ್ತದೆ. ನಂತರ ನಾಗಪುರದಿಂದ ಫೋನ್ ಬಂದ ಮೇಲೆ ಅನುಮತಿಯನ್ನು ನಿರಾಕರಿಸಲಾಗುತ್ತದೆ. ಅನುಮತಿ ಕೊಡುವ ಮತ್ತು ವಾಪಸ್ಸು ತೆಗೆದುಕೊಳ್ಳುವ ಈ ಪ್ರಕ್ರಿಯೆಗಳು ಫೆಲ್ಲೋಶಿಪ್ ಕೊಡುವ ತೆಗೆದುಕೊಳ್ಳುವ ಪ್ರಕ್ರಿಯೆಯಂತೆಯೇ ಇದೆ. ಫೆಲ್ಲೋಶಿಪ್ ಜಾಸ್ತಿ ಮಾಡುತ್ತೇವೆಂದು ಘೋಷಣೆ ಮಾಡಲಾಗುತ್ತದೆ ಮತ್ತು ನಂತರ ಫೆಲ್ಲೋಶಿಪ್ ನಿಲ್ಲಿಸಿಬಿಡಲಾಗುತ್ತದೆ. ಇದು ಸಂಘಿಗಳ ರೀತಿ, ಎಬಿವಿಪಿ ಮತ್ತು ಆರ್.ಎಸ್.ಎಸ್ ರೀತಿ. ಈ ರೀತಿಯಿಂದ ಅವರು ದೇಶ ಮುನ್ನಡೆಸಬೇಕೆಂದಿದ್ದಾರೆ. ಮತ್ತಿದೇ ರೀತಿಯಿಂದ ಜೆ.ಎನ್.ಯು ಆಡಳಿತವನ್ನು ನಡೆಸಲಿಚ್ಛಿಸಿದ್ದಾರೆ. ಜೆ.ಎನ್.ಯು ಉಪಕುಲಪತಿಗಳಿಗೆ ನಮ್ಮ ಪ್ರಶ್ನೆಯಿದೆ, ಪೋಸ್ಟರ್ ಹಾಕಲಾಗಿತ್ತು ಗೋಡೆಗಳ ಮೇಲೆ, ಮೆಸ್ಸಿನಲ್ಲಿ; ತೊಂದರೆಯೆನಿಸಿದ್ದರೆ ಅನುಮತಿ ನೀಡಬಾರದಿತ್ತು. ಅನುಮತಿ ಕೊಟ್ಟ ಮೇಲೆ ಯಾರ ಮಾತು ಕೇಳಿ ಅನುಮತಿ ರದ್ದು ಮಾಡಿದಿರಿ? ಈ ವಿಷಯವನ್ನು ಜೆ.ಎನ್.ಯು ಆಡಳಿತ ಸ್ಪಷ್ಟಪಡಿಸಬೇಕೆಂದು ನಾನು ಕೇಳುತ್ತೇನೆ…………. ಜೊತೆಗೆ ಈ ಜನರ ಸತ್ಯಾಂಶವನ್ನು ತಿಳಿದುಕೊಳ್ಳಿ. ಇವರನ್ನು ದ್ವೇಷಿಸಬೇಡಿ. ಯಾಕೆಂದರೆ ದ್ವೇಷಿಸುವುದು ನಮ್ಮ ಗುಣವಲ್ಲ. ಇವರ ಪರಿಸ್ಥಿತಿಯ ಬಗ್ಗೆ ನನ್ನಲ್ಲಿ ದಯೆಯ ಭಾವನೆಯಿದೆ. ಇವರಿಷ್ಟೊಂದು ಕುಣಿಯುತ್ತಿದ್ದಾರೆ ಯಾಕೆ? ಇವರಿಗನ್ನಿಸುತ್ತೆ ಗಜೇಂದ್ರ ಚೌಹಾಣರನ್ನು ಕೂರಿಸಿದಂತೆ ಎಲ್ಲಾ ಕಡೆ ಚೌಹಾಣ್, ದಿವಾನ್, ಫರ್ಮಾನರನ್ನು ಕೂರಿಸ…………………. ಇವರು ಜೋರಾಗಿ ಭಾರತ ಮಾತಾಕಿ ಜೈ ಎಂದಾಗ ನೀವು ತಿಳಿದುಕೊಂಡುಬಿಡಿ ನಾಳೆ ಅವರಿಗೆ ಕೆಲಸದ ಸಂದರ್ಶನವಿದೆಯೆಂದು…………ಕೆಲಸ ಸಿಗುತ್ತಿದ್ದಂತೆ ದೇಶಭಕ್ತಿ ಹಿಂದಾಗಿಬಿಡುತ್ತದೆ. ಕೆಲಸ ದಕ್ಕುತ್ತಿದ್ದಂತೆ ಭಾರತ ಮಾತೆಯ ಚಿಂತೆಯಿರುವುದಿಲ್ಲ. ಕೆಲಸ ಸಿಗುತ್ತಿದ್ದಂತೆ…………….ತ್ರಿವರ್ಣದ ಧ್ವಜವನ್ನಿವರ್ಯಾವತ್ತೂ ಮಾನ್ಯ ಮಾಡಿಲ್ಲ. ಅವರಿಗೆ ಭಗವಾ ಧ್ವಜವಷ್ಟೇ ಮುಖ್ಯ. ನಾನು ಸವಾಲು ಹಾಕುತ್ತೇನೆ. ಇದು ಎಂತಹ ದೇಶಭಕ್ತಿ? ಮಾಲೀಕ ತನ್ನ ನೌಕರನೊಂದಿಗೆ ಸರಿಯಾಗಿ ನಡೆದುಕೊಳ್ಳದಿದ್ದರೆ, ರೈತ ತನ್ನ ಕಾರ್ಮಿಕನೊಂದಿಗೆ ಸರಿಯಾಗಿ ನಡೆದುಕೊಳ್ಳದಿದ್ದರೆ………………..ವಿವಿಧ ಚಾನೆಲ್ಲುಗಳಲ್ಲಿ ಹತ್ತದಿನೈದು ಸಾವಿರ ರುಪಾಯಿಗಳಿಗೆ ಪತ್ರಕರ್ತರ ಕೆಲಸ ಮಾಡುವವರೊಂದಿಗೆ ಅವರ ಸಿ.ಇ.ಓಗಳು ಸರಿಯಾಗಿ ನಡೆದುಕೊಳ್ಳದಿದ್ದರೆ…………… ಇವರ ದೇಶಭಕ್ತಿ ಭಾರತ ಪಾಕಿಸ್ತಾನದ ನಡುವಿನ ಮ್ಯಾಚಿನ ದಫನು ನಡೆಸುತ್ತದೆ. ಹೀಗಾಗಿ ರಸ್ತೆಯಲ್ಲಿ ನಡೆವಾಗ ಬಾಳೆಹಣ್ಣು ಮಾರುವವನೊಂದಿಗೆ ಕೆಟ್ಟದಾಗಿ ಅಹಂಕಾರದಿಂದ ಮಾತನಾಡುತ್ತಾರೆ. ಬಾಳೆಹಣ್ಣಿನವನು ಹೇಳುತ್ತಾನೆ ಒಂದು ಡಜನ್ನಿಗೆ ನಲವತ್ತು ರುಪಾಯಿ, ಇವರು ಹೇಳುತ್ತಾರೆ ನಡಿ ಅತ್ಲಾಗೆ, ನೀವು ಲೂಟಿ ಮಾಡುತ್ತಿದ್ದೀರಿ ಕಮ್ಮಿಗೆ ನೀಡು. ಬಾಳೆ ಮಾರುವವನು ನೀವೇ ದೊಡ್ಡ ಲೂಟಿಕೋರರು, ಕೋಟ್ಯಂತರ ಲೂಟಿ ಮಾಡಿದ್ದೀರಿ ಎಂದು ತಿರುಗಿಸಿ ಹೇಳಿದರೆ ಅವನನ್ನು ದೇಶದ್ರೋಹಿ ಎಂದುಬಿಡುತ್ತಾರೆ………………

ಎಬಿವಿಪಿಯ ಅನೇಕರು ನನಗೆ ಪರಿಚಿತರು. ಅವರಲ್ಲಿ ಕೇಳುತ್ತೇನೆ. ನಿಮ್ಮಲ್ಲಿ ನಿಜಕ್ಕೂ ದೇಶಭಕ್ತಿಯ ಭಾವನೆ ಪುಟಿಯುತ್ತದೆಯಾ? ಅವರು ಹೇಳುತ್ತಾರೆ ‘ಏನ್ ಮಾಡೋದಣ್ಣ ಐದು ವರ್ಷದ ಸರಕಾರ, ಎರಡು ವರ್ಷ ಮುಗಿದು ಹೋಗಿದೆ, ಮೂರು ವರ್ಷದ ಟಾಕ್ ಟೈಮ್ ಉಳಿದಿದೆ. ಏನೆಲ್ಲ ಮಾಡಬೇಕೋ ಅದನ್ನೀಗಲೇ ಮಾಡಿಬಿಡಬೇಕು.’ ನಾನು ಹೇಳಿದೆ ಸರಿ, ಮಾಡಿಕೊಳ್ಳಿ. ಜೆ.ಎನ್.ಯು ಬಗ್ಗೆ ಸುಳ್ಳು ಹೇಳಿದರೆ ನಾಳೆ ನಿಮ್ಮ ಸಂಗಾತಿಯೇ ನಿಮ್ಮ ಕುತ್ತಿಗೆ ಹಿಡಿದು, ಟ್ರೇನಿನಲ್ಲಿ ಬೀಫ್ ಹುಡುಕುವ ಸಂಗಾತಿ ನಿಮ್ಮ ಕುತ್ತಿಗೆ ಹಿಡಿದು ಹೇಳುತ್ತಾನೆ ‘ನೀನು ಜೆ.ಎನ್.ಯು ವಿದ್ಯಾರ್ಥಿ. ಹಾಗಾಗಿ ನೀನು ದೇಶದ್ರೋಹಿ’. ಇದರ ಅಪಾಯದ ಅರಿವಿದೆಯಾ ನಿನಗೆ? ಅದಕ್ಕವನು ಹೇಳುತ್ತಾನೆ ‘ಅರ್ಥವಾಗುತ್ತೆ ಅಣ್ಣ. ಇದೇ ಕಾರಣಕ್ಕೆ ನಾವು JNUShutdown ಎಂಬ ಹ್ಯಾಷ್ ಟ್ಯಾಗನ್ನು ವಿರೋದಿಸುತ್ತೇವೆ. ನಾನೇಳಿದೆ ತುಂಬ ಒಳ್ಳೆ ಕೆಲಸ ಸಾಹೇಬರೆ. ಮೊದಲು JNUShutdown ಎಂಬ ಹ್ಯಾಷ್ ಟ್ಯಾಗನ್ನು ಮಾಡಿ ಪ್ರಚಾರ ಮಾಡಿ ನಂತರ ಅದನ್ನು ವಿರೋಧಿಸುತ್ತೀರಿ. ಯಾಕೆಂದರೆ ಜೆ.ಎನ್.ಯುನಲ್ಲೇ ಇರಬೇಕಲ್ಲವೇ?! ಈ ಕಾರಣಕ್ಕೆ ನಾನು ಜೆ.ಎನ್.ಯುಗಳಿಗೆ ಹೇಳಲು ಬಯಸುತ್ತೇನೆ. ಮಾರ್ಚಿನಲ್ಲಿ ಚುನಾವಣೆಯಿದೆ. ಎಬಿವಿಪಿಯ ಜನರು ಓಂನ ಬಾವುಟ ತೆಗೆದುಕೊಂಡು ನಿಮ್ಮ ಬಳಿ ಬರುತ್ತಾರೆ. ಆಗವರಿಗೆ ಕೇಳಿ ‘ನಾವು ದೇಶದ್ರೋಹಿಗಳು. ನಾವು ಜಿಹಾದಿಗಳು. ನಾವು ಆತಂಕವಾದಿಗಳು. ನಮ್ಮ ಮತ ತೆಗೆದುಕೊಂಡು ನೀವು ದೇಶದ್ರೋಹಿಗಳಾಗುತ್ತೀರಾ?’ ಇದನ್ನವರಲ್ಲಿ ಖಂಡಿತವಾಗಿ ಕೇಳಿ. ಆಗವರು ಹೇಳುತ್ತಾರೆ ‘ಇಲ್ಲ ಇಲ್ಲ. ನೀವಲ್ಲ. ಯಾರೋ ಕೆಲವರು ಮಾತ್ರ’ ಆಗ ನಾವು ಹೇಳುತ್ತೇವೆ ‘ಅವರು ಕೆಲವರಿದ್ದರು ಎಂದು ನೀವು ಮಾಧ್ಯಮದಲ್ಲಿ ಹೇಳಲಿಲ್ಲ. ನಿಮ್ಮ ಕುಲಪತಿಗಳು ಹೇಳಲಿಲ್ಲ. ನಿಮ್ಮ ರಿಜಿಸ್ಟ್ರಾರ್ ಕೂಡ ಹೇಳುತ್ತಿಲ್ಲ. ಮತ್ತು ಆ ಕೆಲವರೇ ಹೇಳುತ್ತಿದ್ದಾರೆ ‘ಪಾಕಿಸ್ತಾನ್ ಜಿಂದಾಬಾದ್’ ಎಂದು ಕೂಗಲಿಲ್ಲವೆಂದು, ಆ ಕೆಲವರೇ ಹೇಳುತ್ತಿದ್ದಾರೆ ನಾವು ಆತಂಕವಾದಿಗಳ ಪಕ್ಷದವರಲ್ಲವೆಂದು. ಆ ಕೆಲವರೇ ಹೇಳುತ್ತಿದ್ದಾರೆ ನಮಗೆ ಅನುಮತಿ ಕೊಟ್ಟು ರದ್ದು ಮಾಡಿದ್ದು ಪ್ರಜಾಪ್ರಭುತ್ವದ ಹಕ್ಕಿನ ಮೇಲಿನ ಹಲ್ಲೆಯೆಂದು. ಈ ದೇಶದೊಳಗಿನ ಹೋರಾಟಗಳ ಜೊತೆಯಿರುತ್ತೇವೆಂದು ಆ ಕೆಲವರೇ ಹೇಳುತ್ತಿದ್ದಾರೆ. ಇಷ್ಟೆಲ್ಲ ಅವರಿಗೆ (ಎಬಿವಿಪಿ) ಅರ್ಥವಾಗುವುದಿಲ್ಲ. ನನಗೆ ಪೂರ್ಣ ನಂಬಿಕೆಯಿದೆ. ಅತಿ ಶೀಘ್ರ ನೋಟೀಸಿಗೆ ಇಷ್ಟೊಂದು ಜನರಿಲ್ಲಿ ಬಂದಿದ್ದೀರಿ. ಎಬಿವಿಪಿ ಈ ದೇಶವನ್ನು, ಜೆ.ಎನ್.ಯು ಅನ್ನು ಒಡೆಯುತ್ತಿದೆ ಎಂದು ತಿಳಿಸೋಣ. ಜೆ.ಎನ್.ಯು ಒಡೆಯಲು ನಾವು ಬಿಡುವುದಿಲ್ಲ. ಜೆ.ಎನ್.ಯು ಜಿಂದಾಬಾದ್, ಈ ದೇಶದೊಳಗಿನ ಸಂಘರ್ಷಗಳಲ್ಲಿ ಭಾಗವಹಿಸುತ್ತೇವೆ. ಈ ದೇಶದೊಳಗಿನ ಲೋಕತಂತ್ರದ ದನಿಯನ್ನು ಗಟ್ಟಿಗೊಳಿಸುತ್ತ ಸ್ವಾತಂತ್ರ್ಯದ ದನಿಯನ್ನು ಗಟ್ಟಿಗೊಳಿಸುತ್ತ, ಅಭಿವ್ಯಕ್ತಿ ಸ್ವಾತಂತ್ರ್ಯದ ದನಿಯನ್ನು ಗಟ್ಟಿಗೊಳಿಸುತ್ತ ಈ ಸಂಘರ್ಷವನ್ನು ಮುಂದುವರೆಸುತ್ತೇನೆ. ಸಂಘರ್ಷ ನಡೆಸುತ್ತೇವೆ, ಗೆಲ್ಲುತ್ತೇವೆ, ದೇಶದ ದ್ರೋಹಿಗಳನ್ನು ಮಟ್ಟ ಹಾಕುತ್ತೇವೆ.

ಧನ್ಯವಾದ.
ಇಂಕ್ವಿಲಾಬ್ ಜಿಂದಾಬಾದ್
ಜೈ ಭೀಮ್.
ಲಾಲ್ ಸಲಾಮ್.
ವೀಡಿಯೋ ಕೊಂಡಿ: https://www.youtube.com/watch?v=KMi0D__l7IE
(ಸುತ್ತಲಿದ್ದವರ ಚಪ್ಪಾಳೆ, ಘೋಷಣೆಗಳ ಕೂಗುವಿಕೆಯ ಸಮಯದಲ್ಲಿ ಒಂದಷ್ಟು ಮಾತುಗಳು ಸ್ಪಷ್ಟವಾಗಿ ಕೇಳಿಸಲಿಲ್ಲ. ಹಾಗಾಗಿ ಆ ಜಾಗಗಳನ್ನು .......... ಖಾಲಿ ಬಿಡಲಾಗಿದೆ. ನಿಮಗೆ ಗೊತ್ತಾದರೆ ತಿಳಿಸಿ - ಹಿಂಗ್ಯಾಕೆ)


ಫೆಬ್ರ 12, 2016

ಮೇಕಿಂಗ್ ಹಿಸ್ಟರಿ: ಬ್ರಿಟೀಷರ ವಿದೂಷಕ

saket rajan
ಸಾಕೇತ್ ರಾಜನ್
ಕನ್ನಡಕ್ಕೆ: ಡಾ. ಅಶೋಕ್. ಕೆ. ಆರ್
1857, ಭಾರತದ ಮೊಟ್ಟ ಮೊದಲ ಸ್ವಾತಂತ್ರ್ಯ ಸಂಗ್ರಾಮ ಸಾಧ್ಯವಾಗಿದ್ದು ಶಸ್ತ್ರಸಜ್ಜಿತ ದೀರೋದ್ದಾತ ಸೈನಿಕರು, ರೈತರು, ಕುಶಲಕರ್ಮಿಗಳಿಂದ ಮತ್ತವರಿಗೆ ಜೊತೆಯಾದ ಕೆಲವು ರಾಜ – ರಾಣಿಯರಿಂದ. ಬ್ರಿಟೀಷ್ ಸಾಮ್ರಾಜ್ಯವನ್ನು ಭಾರತದಿಂದ ಕಿತ್ತೊಗೆಯುವ ಬೆದರಿಕೆ ಹಾಕಿದ್ದ ಸಂಗ್ರಾಮವದು. ನಗರ ಪ್ರದೇಶದಲ್ಲಿ ಸಂಗ್ರಾಮವನ್ನು ಹತ್ತಿಕ್ಕಿದ ನಂತರ ಉತ್ತರ ಭಾರತದಲ್ಲಿ ಹೋರಾಟ ಹಳ್ಳಿಗಳಿಗೆ ತಲುಪಿತ್ತು. ಕರ್ನಾಟಕದ ಫ್ಯೂಡಲ್ ದೊರೆಗಳಾದ ದೇಸಾಯಿ ಮತ್ತು ದೇಶಮುಖರು ಬ್ರಿಟೀಷರ ವಿರುದ್ಧ ಹೋರಾಡುವ ಛಾತಿ ತೋರಿಸಿದರು; ಶತಮಾನಗಳಿಂದ ತಮ್ಮದಾಗಿದ್ದ ಭೂಮಿಯ ಒಡೆತನವನ್ನು ಮತ್ತೆ ದಕ್ಕಿಸಿಕೊಳ್ಳಲು. ಹೆಸರಿಗೆ ಮಾತ್ರ ಇದ್ದ ಚೂರು ಪಾರು ಅಧಿಕಾರವನ್ನೂ 1831ರಲ್ಲಿ ಬ್ರಿಟೀಷರು ಕಿತ್ತುಕೊಂಡಾಗ ಮೈಸೂರಿನ ಸಾಮ್ರಾಜ್ಯರಹಿತ ರಾಜರಾಗಿದ್ದ ಮೂರನೇ ಕೃಷ್ಣರಾಜ ಒಡೆಯರ್ ಒಳಗಣ ಕತ್ತಲ ಕೋಣೆಗಳಲ್ಲಿ ಬ್ರಾಹ್ಮಣ ಸಲಹೆಗಾರರೊಂದಿಗೆ ತನ್ನನ್ನು ಮತ್ತೆ ಪೀಠದ ಮೇಲೆ ಕುಳ್ಳಿರಿಸಬೇಕೆಂದು ಬ್ರಿಟೀಷರ ಬಳಿ ಹೇಗೆಲ್ಲಾ ಬೇಡಿಕೊಳ್ಳಬೇಕು ಎಂದು ತಾಲೀಮು ನಡೆಸದ ದಿನವೇ ಇರಲಿಲ್ಲ. 1857ರ ಸಂಗ್ರಾಮ, ಸಹಕಾರಿ ಒಪ್ಪಂದಕ್ಕೆ ಸಹಿ ಹಾಕಿದ್ದ ಕರ್ನಾಟಕದ ಅನೇಕ ಸೇವಕ ರಾಜರಿಗೆ ತಮ್ಮ ಸಾಮ್ರಾಜ್ಯವನ್ನು ಮರಳಿ ತಮ್ಮದಾಗಿಸಿಕೊಳ್ಳಲು ಅವಕಾಶ ಒದಗಿಸಿದರೆ ಮೈಸೂರಿನ ಕೈಗೊಂಬೆ ರಾಜ ಬ್ರಿಟೀಷರೆಡೆಗಿದ್ದ ತನ್ನ ನಿಯತ್ತನ್ನು ಇಂಚೂ ಸಡಿಲಿಸಲಿಲ್ಲ. ತನ್ನ ಅಸಹನೆಯನ್ನು ತುಂಬ ಜಾಗರೂಕ ಗೊಣಗಾಟದಿಂದ ತೋರಿಸುತ್ತಿದ್ದ; ಅದು ಪ್ರತಿಭಟನೆಯ ಕೂಗಿನಂತೆ ತೋರಬಾರದೆಂಬ ಎಚ್ಚರಿಕೆ ಇರುತ್ತಿತ್ತು. ಪ್ರತಿಭಟಿಸುವುದು ಅತ್ಲಾಗಿರಲಿ ಮೈಸೂರಿನ ರಾಜ ಬ್ರಿಟೀಷರ ಪರ ವಕಾಲತ್ತು ವಹಿಸುತ್ತ ಬ್ರಿಟೀಷರ ಪರವಾಗಿ ಇತರೆ ರಾಜರಿಗೆ ಪತ್ರ ಬರೆಯುತ್ತಿದ್ದ! ಬ್ರಿಟೀಷ್ ರಾಜ್ ಅಪಾಯದಲ್ಲಿರುವ ಈ ಸಂದರ್ಭದಲ್ಲಿ ಹಣ, ಸೈನ್ಯವನ್ನು ಕೊಟ್ಟು ವಸಾಹತುಶಾಹಿಯನ್ನು ರಕ್ಷಿಸಬೇಕು ಎಂದು ಕೇಳಿಕೊಳ್ಳುತ್ತಿದ್ದ!

ಶಾಮ ರಾವ್ ಬರೆಯುತ್ತಾರೆ: “1857ರಲ್ಲಿ ಭಾರತ ಸರ್ಕಾರ ಇನ್ನೂರು ಮಂದಿ ಸಿಲ್ಲೇದಾರರು ಈ ತಕ್ಷಣ ಹಿಂದೂಸ್ಥಾನಕ್ಕೆ ಹೋಗಬೇಕೆಂದು ನಿರ್ದೇಶಿಸಿತು. ಈ ನಿರ್ದೇಶನ ಮುಂದೆ ಅನೂರ್ಜಿತವಾದರೂ ಮೈಸೂರಿನ ಉತ್ತರಕ್ಕಿರುವ ಸುರಪುರದಲ್ಲಿ ಅಷ್ಟೇ ಸಂಖೈಯ ಜನರನ್ನು ನೇಮಿಸಲಾಗಿತ್ತು ಮತ್ತು ಆ ಭಾಗದಲ್ಲಿ 1857 – 58ರಲ್ಲಿ ನಡೆದ ಸಣ್ಣ ಪುಟ್ಟ ಯುದ್ಧಗಳಲ್ಲಿ ಭಾಗವಹಿಸಿದ್ದರು.” (32)

ಕರ್ನಾಟಕದ ಸುರಪುರದಲ್ಲಿ ನಡೆದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸತ್ತ ಐನೂರರಷ್ಟು ಜನರ ದೇಹಹೊಕ್ಕಿದ್ದು ಮೈಸೂರಿನ ಕೈಗೊಂಬೆ ರಾಜನ ಜನರ ಕೈಯಲ್ಲಿದ್ದ ಬಂದೂಕಿನ ಗುಂಡುಗಳು.

“ಗವರ್ನರ್ ಜನರಲ್ ರವರ ಪತ್ರಮುಖೇನ ದೆಹಲಿಯ ಬಂಡಾಯವನ್ನು ಹತ್ತಿಕ್ಕಿದ ಸುದ್ದಿ ತಲುಪಿದಾಗ ಮೈಸೂರಿನ ಮಹಾರಾಜ 1857ರ ಡಿಸೆಂಬರ್ 9ರಂದು ಅಭಿನಂದನಾ ಪತ್ರವನ್ನು ಬರೆದ. ‘ಬಂಗಾಲದ ದಂಗೆಕೋರರು ಮತ್ತು ಬಂಡಾಯಗಾರರು ನಡೆಸಿದ ವಿದ್ರೋಹದ ಬಗ್ಗೆ ತಿಳಿದಾಗ ನನಗಾದ ದುಃಖ ಸಣ್ಣದಲ್ಲ. ಭಾರತದಾಗಸದಲ್ಲಿ ಕಾರ್ಮೋಡಗಳು ಕವಿಯಿತಾದರೂ ಬ್ರಿಟೀಷರೆಂಬ ಪ್ರಖರ ಸೂರ್ಯ ಈ ಕಾರ್ಮೋಡಗಳನ್ನು ಸರಿಸಿಯೇ ಸರಿಸುತ್ತಾರೆ ಎನ್ನುವುದು ನನ್ನ ದೃಡ ನಂಬುಗೆಯಾಗಿತ್ತು. ಬ್ರಿಟೀಷರ ಬಲಶಾಲಿ ಸೈನ್ಯ ಸರಕಾರದ ವಿರುದ್ಧ ಬಂಡಾಯವೆದ್ದಿರುವ ದಂಗೆಕೋರರನ್ನು ಸದೆಬಡಿಯುತ್ತಾರೆ ಎಂಬ ನನ್ನ ನಿರೀಕ್ಷೆ ಸಂಪೂರ್ಣ ವಾಸ್ತವವಾಗಿ ಬದಲಾಗಿರುವುದು ನಿಮ್ಮ ಪತ್ರದಿಂದ ತಿಳಿದು ಕುಣಿದಾಡುವಷ್ಟು ಸಂತಸವಾಗಿದೆ. ಅನೇಕ ದೇಶೀ ರಾಜರು ಈ ದುರಿತ ಕಾಲದಲ್ಲಿ ಬ್ರಿಟೀಷ್ ಸರಕಾರಕ್ಕೆ ನಿಷ್ಟರಾಗಿದ್ದು ತಮ್ಮಿಂದಾದ ಸಹಾಯವನ್ನು ಮಾಡಿದ್ದನ್ನು ತಿಳಿದು ಸಮಾಧಾನವಾಯಿತು. ಹಿಂದೆ ಬ್ರಿಟೀಷರು ವಿಜಯಿಯಾದ ಸಂದರ್ಭದಲ್ಲಿ ಮಾಡಿದಂತೆಯೇ ಈ ಬಾರಿಯೂ ರಾಯಲ್ ಸೆಲ್ಯೂಟ್ ಸಲ್ಲಿಸಿ ಮೈಸೂರಿನ ಬೀದಿಗಳಲ್ಲಿ ಸಿಹಿ ಹಂಚಿದ್ದೇವೆ’.” (33)

ಮತ್ತೆ 1858ರ ಫೆಬ್ರವರಿಯಲ್ಲಿ, ಇಪ್ಪತ್ತು ವರುಷದ ಮುಂಚೆ ಮೈಸೂರಿನ ರೆಸಿಡೆಂಟರಾಗಿದ್ದ ಜನರಲ್ ಜೆ.ಎಸ್. ಫ್ರೇಸರ್ ಗೆ ಬರೆದ ಪತ್ರದಲ್ಲಿ ರಾಜ ತನ್ನ ಭಾವನೆಗಳನ್ನು ತೋಡಿಕೊಂಡಿದ್ದು ಹೀಗೆ: “ಈ ದೇಶದಲ್ಲಿ ನಡೆದ ದಂಗೆ ತಣ್ಣಗಾಗಿ ಶಾಂತಿಯ ಮರುಸ್ಥಾಪನೆಯಾಗುತ್ತಿರುವುದು ತೃಪ್ತಿಕರ ಸಂಗತಿ. ಉತ್ತರ ಮತ್ತು ಪಶ್ಚಿಮ ಪ್ರಾಂತ್ಯಗಳಲ್ಲಿ ಕವಿದಿದ್ದ ದಟ್ಟ ಮೋಡಗಳು ನಿಧಾನಕ್ಕೆ ಚದುರುತ್ತಿದೆ ಮತ್ತು ವಿದ್ರೋಹಿಗಳನ್ನು ಪ್ರತೀ ಹಳ್ಳಿ – ಪಟ್ಟಣಗಳಲ್ಲಿ ಹಿಡಿದು ಸದೆಬಡಿಯಲಾಗುತ್ತಿದೆ. ನನ್ನ ಸ್ವಂತ ದೇಶ (ಮೈಸೂರು) ಇಂತಹ ಮಲಿನ ಮನಸ್ಸಿನ ಜನರಿಂದ ಮುಕ್ತವಾಗಿದೆ ಎಂದು ತಿಳಿಸಲು ಹರ್ಷವಾಗುತ್ತಿದೆ; ಈ ಖುಷಿಗೆ ಬುದ್ಧಿವಂತ, ನ್ಯಾಯಪರ ನಿರ್ಣಯಗಳನ್ನು ತೆಗೆದುಕೊಂಡ ಸರ್ ಮಾರ್ಕ್ ಕಬ್ಬನ್ ಕಾರಣ. ಈ ದಂಗೆಯಿಂದ ನಡೆದ ರಕ್ತಪಾತದ ಭಯಭೀತ ದೃಶ್ಯಗಳು, ಮತ್ತೀ ದಂಗೆಯನ್ನತ್ತಿಕ್ಕಲು ಇಂಗ್ಲೆಂಡಿನ ಅತ್ಯುತ್ತಮ ಧೈರ್ಯಶಾಲಿ ಆಫೀಸರುಗಳು ಮಾಡಿದ ತ್ಯಾಗದ ಬಗ್ಗೆ ಸದ್ಯಕ್ಕೆ ಹೆಚ್ಚು ಹೇಳುವುದಿಲ್ಲ. ನನ್ನ ಏಳಿಗೆ ಮತ್ತು ಸಂತಸ ಬ್ರಿಟೀಷ್ ಸರಕಾರದ ಯಶಸ್ಸು ಮತ್ತು ಅಧಿಕಾರವನ್ನು ಅವಲಂಬಿಸಿರುವ ಕಾರಣ ಬ್ರಿಟೀಷ್ ಸರಕಾರವನ್ನು ನನ್ನ ಆಪ್ತ ಗೆಳೆಯನೆಂದೇ ಪರಿಗಣಿಸಿದ್ದೇನೆ.” (34)

ಆಕ್ರಮಣಕಾರರ ವಿರುದ್ಧ ಧೀರೋದ್ದಾತ ಹೋರಾಟ ನಡೆಸಿ ಹುತಾತ್ಮರಾದವರ ಬಗ್ಗೆ ಸಂತಸ ವ್ಯಕ್ತಪಡಿಸಿದ ಕೈಗೊಂಬೆ ರಾಜನ ಅಪಾರ ನಿಷ್ಠೆಗೆ ಬ್ರಿಟೀಷರ ಪ್ರತಿಕ್ರಿಯೆ ಹೇಗಿತ್ತು? 

ಭಾರತ ಸರಕಾರಕ್ಕೆ 1860ರ ಜೂನ್ ನಲ್ಲಿ ಬರೆದ ಪತ್ರದಲ್ಲಿ ಕಬ್ಬನ್: “ಈ ದುರಿತಕಾಲದುದ್ದಕ್ಕೂ ಮಹಾರಾಜರು ನಿಷ್ಟೆಯನ್ನು ತೋರಿಸಿದರು. ಬ್ರಿಟೀಷ್ ಆಳ್ವಿಕೆ ಸ್ಥಿರವಾಗಿರಬೇಕೆಂಬ ಆಸೆಯನ್ನು ಸಂದರ್ಭ ಸಿಕ್ಕಾಗಲೆಲ್ಲ ತೋರಿಸಿದರು. ಬ್ರಿಟೀಷ್ ಸರಕಾರಕ್ಕೆ ದ್ರೋಹವೆಸಗುವ, ನಮ್ಮ ವೈರಿಗಳಿಗೆ ಸಹಾಯ ಮಾಡುವ ಯಾವ ಕೆಲಸವನ್ನೂ ಮಹಾರಾಜ ಮಾಡಲಿಲ್ಲ.” (35)

ಕಬ್ಬನ್ನಿನ ಪತ್ರ ತಲುಪಿದ ನಂತರ ಆಗ ವೈಸರಾಯ್ ಆಗಿದ್ದ ಕ್ಯಾನಿಂಗ್ ಕೈಗೊಂಬೆ ರಾಜರಿಗೆ: “ಇತ್ತೀಚೆಗಷ್ಟೇ ಮೈಸೂರಿನ ಕಮಿಷನರ್ ರಿಂದ ಬಂದ ಪತ್ರದಲ್ಲಿ ಅವರ ಅಧಿಕಾರವಿದ್ದ ಜಿಲ್ಲೆಗಳಲ್ಲಿ ಶಾಂತಿ ಕಾಪಾಡಲು ನೀವು ಮಾಡಿದ ಸಹಾಯದ ಬಗ್ಗೆ ಉಲ್ಲೇಖಿಸಿದ್ದಾರೆ. ಈ ದಂಗೆಯ ಪ್ರಾರಂಭದಿಂದಲೂ ಮಹಾರಾಜರು ಬ್ರಿಟೀಷ್ ಸರಕಾರದ ಜೊತೆಯಲ್ಲಿರುತ್ತಾರೆಂಬ ಬಗ್ಗೆ ನನಗೆ ಅರಿವಿತ್ತು. ಪ್ರತೀ ಸಂದರ್ಭದಲ್ಲೂ ಇದು ಎದ್ದು ಕಾಣುತ್ತಿತ್ತು. ಮಹಾರಾಜರು ಬ್ರಿಟೀಷ್ ಆಳ್ವಿಕೆಯಲ್ಲಿಟ್ಟಿರುವ ನಂಬುಗೆ, ಆ ನಂಬಿಕೆಯ ಬಹಿರಂಗ ತೋರ್ಪಡಿಸುವಿಕೆ, ಬ್ರಿಟೀಷರೆಡೆಗೆ ನೀವು ತೋರಿದ ಕಾರುಣ್ಯ ಮತ್ತು ರಾಣಿಯ ಸೈನಿಕರಿಗೆ ನೀವು ಕೊಟ್ಟ ಅಪರಿಮಿತ ತತ್ ಕಾಲೀನ ಸಹಾಯವೆಲ್ಲವನ್ನೂ ತುಂಬು ಹೃದಯದ ಮೆಚ್ಚುಗೆಯೊಂದಿಗೆ ಕಮಿಷನರ್ ವಿವರಿಸಿ ಬರೆದಿದ್ದಾರೆ.” (36)

ಹೀಗೆ ಕೃಷ್ಣರಾಜ ಒಡೆಯರ್ ಬ್ರಿಟೀಷರು ಭಾರತವನ್ನು ಲೂಟಿ ಮಾಡುವುದಕ್ಕೆ, ಸಹವರ್ತಿ ಕನ್ನಡಿಗರು ಮತ್ತು ಭಾರತೀಯರನ್ನು ಕೊಲ್ಲುವುದಕ್ಕೆ ತಮ್ಮ ಕೈಲಾದ ಸಹಾಯ ಮಾಡಿದರು. 1857ರ ಸ್ವಾತಂತ್ರ್ಯ ಸಂಗ್ರಾಮವನ್ನು ಹತ್ತಿಕ್ಕಿದ್ದನ್ನು ಮೈಸೂರಿನ ಬೀದಿಬೀದಿಗಳಲ್ಲಿ ಸಿಹಿ ಹಂಚುವ ಮೂಲಕ ಸಂಭ್ರಮಿಸಿದರು. ಆದರವರನ್ನು ಚೂರೂ ಕರುಣೆಯಿಲ್ಲದೆ ವಿಮರ್ಶಿಸುವುದು ಸರಿಯಲ್ಲ. ಆ ಮನುಷ್ಯನಿಗೂ ಭಾವನೆಗಳಿದ್ದವು. ಉಳಿದ ಮನುಷ್ಯರಂತೆ ದುಃಖ ತೋಡಿಕೊಳ್ಳುತ್ತಿದ್ದ, ಕಣ್ಣೀರಿಡುತ್ತಿದ್ದ. ಆದರಾತನ ದುಃಖ ಬ್ರಿಟೀಷ್ ಆಫೀಸರುಗಳಿಗೆ ಮತ್ತು ವಸಾಹತುಶಾಹಿಯ ದುರಾಸೆಗೆ ಪೂರಕವಾಗಿದ್ದ ಜನರ ಸಾವಿಗಷ್ಟೇ ಸೀಮಿತವಾಗಿತ್ತು. ಅನುಮಾನವೇ ಬೇಡ, ಕರ್ನಾಟಕ ಕಂಡ ಅತ್ಯಂತ ಕೆಟ್ಟ ರಾಜರಲ್ಲಿ ಈತನೂ ಒಬ್ಬ. ರಕ್ತದ ಕಣಕಣದಲ್ಲೂ ಗುಲಾಮತ್ವವನ್ನು ಆವಾಹಿಸಿಕೊಂಡಿದ್ದ ರಾಜ ಕೊನೆಯುಸಿರೆಳೆಯುವ ಘಳಿಗೆಯಲ್ಲೂ ಬ್ರಿಟೀಷರ ಹೊಗಳುಭಟನಾಗಿಯೇ ಉಳಿದುಹೋದ.

ಕೊನೆಯ ಉಸಿರಿನವರೆಗೂ ದೇಶಪ್ರೇಮಿಯಾಗಿಯೇ ಇದ್ದ ಧೀರ ಟಿಪ್ಪು ಸುಲ್ತಾನನಿಗೂ ಈತನಿಗೂ ಜಿಗುಪ್ಸೆ ಮೂಡಿಸುವ ವ್ಯತ್ಯಾಸ.

ಬಹುಶಃ ಇತಿಹಾಸದ ವ್ಯಂಗ್ಯವೆಂದರೆ ಅಸಲಿ ವಜ್ರದ ಯೋಗ್ಯತೆಯನ್ನರಿಲು ಸಾಣೆ ಹಿಡಿದಾಗ ತುದಿಯ ಮತ್ತೊಂದು ಬದಿಯಲ್ಲಿ ಇಂತಹ ಮಾಗದ ತುರಿಕೆ ಗಾಯಗಳೂ ಇರುತ್ತವೆ.
ಅಧ್ಯಾಯ 1 ರ ಮುಕ್ತಾಯ.

ಫೆಬ್ರ 11, 2016

ಸೂಟು ವಾಚಿನ ಗದ್ದಲದಲ್ಲಿ ಚರ್ಚೆಯಾಗದ ಸಂಗತಿಗಳು

Dr Ashok K R
ಒಂದಂಶವಂತೂ ನಿಕ್ಕಿಯಾಗಿದೆ, ಆಕರ್ಷಣೀಯವಲ್ಲದ, ಮನೋರಂಜನೆಯ ಅಂಶವಿಲ್ಲದ ಯಾವುದೇ ಚರ್ಚೆಗಳ ಬಗೆಗಿನ ಆಸಕ್ತಿ ಸತ್ತು ಹೋಗಿದೆ. ನರೇಂದ್ರ ಮೋದಿ ಹತ್ತು ಲಕ್ಷದ ಬಟ್ಟೆಯ, ಪೂರ್ತಿ ತಮ್ಮ ಹೆಸರನ್ನೇ ಬರೆದಿರುವ ಸೂಟನ್ನು ಧರಿಸಿದ್ದು ಎಷ್ಟು ತಪ್ಪೋ ಸಿದ್ಧರಾಮಯ್ಯ ಐವತ್ತು ಲಕ್ಷದ್ದೋ ಎಪ್ಪತ್ತು ಲಕ್ಷದ್ದೋ ಬೆಲೆಯ ಕೈಗಡಿಯಾರವನ್ನು ಧರಿಸಿದ್ದೂ ಅಷ್ಟೇ ತಪ್ಪು. ಇಬ್ಬರೂ ಅದು ಉಡುಗೊರೆಯಾಗಿ ಸಿಕ್ಕಿದ್ದು ಎಂದು ಹೇಳಿದ್ದಾರಾದರೂ ಸಿಕ್ಕ ಉಡುಗೊರೆಯನ್ನು ತಿರಸ್ಕರಿಸುವ ಹಕ್ಕು ಇಬ್ಬರಿಗೂ ಇತ್ತು ಎನ್ನುವುದು ಸುಳ್ಳಲ್ಲವಲ್ಲ. ಉಡುಗೊರೆ ಸಿಕ್ಕಿದ್ಯಾಕೆ, ಒಂದು ಉನ್ನತ ಸ್ಥಾನದಲ್ಲಿರುವವರು ಹೀಗೆ ಬೆಲೆಬಾಳುವ ಉಡುಗೊರೆಗಳನ್ನು ಪಡೆಯುವುದು ಕೂಡ ಭ್ರಷ್ಟಾಚಾರದ ಮತ್ತೊಂದು ರೂಪವಲ್ಲವೇ ಎನ್ನುವ ಪ್ರಶ್ನೆಗಳನ್ನು ಕೇಳಿ ಅದಕ್ಕೆ ಉತ್ತರ ಪಡೆಯುವ ರೀತಿಯಲ್ಲೂ ಚರ್ಚೆಗಳು ನಡೆಯುವುದಿಲ್ಲ. ಕಾಂಗ್ರೆಸ್ ಬೆಂಬಲಿಗರಿಗೆ ಮತ್ತು ಮೋದಿ ವಿರೋಧಿಗಳಿಗೆ ಹತ್ತು ಲಕ್ಷದ ಸೂಟು ಮೋದಿಯನ್ನು ಆಡಿಕೊಳ್ಳುವ ವಿಷಯವಾಗಿತ್ತು; ಈಗ ಮೋದಿ ಬೆಂಬಲಿಗರಿಗೆ ಮತ್ತು ಕಾಂಗ್ರೆಸ್ ವಿರೋಧಿಗಳಿಗೆ ನೋಡಿ ನಿಮ್ ಸಿಎಮ್ಮು ದುಬಾರಿ ವಾಚು ಧರಿಸಿದ್ದಾರೆ ಈಗೇನಂತೀರಾ? ಎಂದು ಮೋದಿ ಸೂಟಿಗೆ ಪ್ರತಿಕ್ರಿಯೆಯಾಗಿ ಕೇಳಲೊಂದು ಪ್ರಶ್ನೆ ಸಿಕ್ಕಿತಲ್ಲ ಎಂಬ ಸಮಾಧಾನ! ಪ್ರಶ್ನೆ ಕೇಳಿದ ಕುಮಾರಸ್ವಾಮಿಗೆ ಉತ್ತರ ಹೇಳುವ ಬದಲು ನಿಮ್ ಮಗ ಐದು ಕೋಟಿಯ ಕಾರು ಖರೀದಿಸಿಲ್ಲವಾ? ಎಂಬ ಮಕ್ಕಳಾಟದ ಪ್ರಶ್ನೆಯನ್ನು ನಮ್ಮ ಮುಖ್ಯಮಂತ್ರಿಗಳು ಕೇಳುತ್ತಿದ್ದಾರೆ! ಈ ಎಲ್ಲಾ ಮನೋರಂಜನಾತ್ಮಕ ಚರ್ಚೆಗಳ ನಡುವೆ ಕರ್ನಾಟಕದಲ್ಲೊಂದು ಇನ್ವೆಸ್ಟ್ ಕರ್ನಾಟಕ ಸಮಾವೇಶ ನಡೆದಿದೆ, ಬರೋಬ್ಬರಿ ಮೂರು ಲಕ್ಷ ಕೋಟಿಗಳಷ್ಟು ಹಣ ಕರ್ನಾಟಕಕ್ಕೆ ಹರಿದರಿದು ಬರಲಿದೆ ಎಂದು ಭರವಸೆ ನೀಡಲಾಗಿದೆ. ಅಷ್ಟೆಲ್ಲ ದುಡ್ಡು ನಿಜಕ್ಕೂ ಬಂದೇ ಬಿಟ್ಟರೆ ಕರ್ನಾಟಕದ ಕೃಷಿ ಕ್ಷೇತ್ರ ಹರಿದು ಹೋಗಲಿದೆ ಎನ್ನುವುದೂ ಸತ್ಯವೇ!

ಇನ್ವೆಸ್ಟ್ ಕರ್ನಾಟಕದಂತಹ ಸಮಾವೇಶದಿಂದ ಉಪಯೋಗವಾಗುವುದ್ಯಾರಿಗೆ, ಅನಾನುಕೂಲವಾಗುವುದ್ಯಾರಿಗೆ ಎನ್ನುವುದನ್ನು ಗಮನಿಸಲು ಆ ಹಣ ಬಂದಾಗ ವಶಪಡಿಸಿಕೊಳ್ಳುವ ಭೂಮಿ ಯಾರದು, ಅಲ್ಲಿ ಕೆಲಸ ಸಿಗುವುದ್ಯಾರಿಗೆ ಎಂದೆಲ್ಲಾ ತಲೆಕೆಡಿಸಿಕೊಳ್ಳುವ ಅವಶ್ಯಕತೆಯಿಲ್ಲ. ಕರ್ನಾಟಕ ಸರಕಾರ ಇನ್ವೆಸ್ಟ್ ಕರ್ನಾಟಕಕ್ಕೆ ಮಾಡಿಕೊಂಡ ತಯಾರಿಯನ್ನು ನೋಡಿಯೇ ಇದು ಯಾರ ಅನುಕೂಲತೆಗೆ ನಡೆಯುತ್ತಿರುವ ಸಮಾವೇಶ ಎನ್ನುವುದು ಅರ್ಥವಾಗಿಬಿಡುತ್ತದೆ. ದಿನನಿತ್ಯದ ಪ್ರಯಾಣಿಕರಿಗೆ ರಸ್ತೆ ಸರಿ ಮಾಡಲು ಹಣದ ಕೊರತೆ, ಮತ್ತೊಂದು ಮಗದೊಂದು ನೆಪ ಹೇಳುವ ಅಧಿಕಾರಸ್ಥರು ಇಂತಹ ಸಮಾವೇಶ ನಡೆದಾಗ ರಪ್ಪಂತ ಎಲ್ಲಾ ರಸ್ತೆಗಳನ್ನೂ ಲಕ ಲಕ ಎಂದು ಹೊಳೆಯುವಂತೆ ಮಾಡಿಬಿಡಲ್ಲರು. ಜೊತೆಗೆ ರಸ್ತೆಯ ಮಧ್ಯೆ ರಸ್ತೆಯ ಇಕ್ಕೆಲಗಳಲ್ಲೆಲ್ಲಾ ಚೆಂದ ಚೆಂದದ ಹೂವಿನ ಗಿಡಗಳು. ರಸ್ತೆ ಮೇಲೆ ಧೂಳಿರಬಾರದೆಂದು ಲಕ್ಷಗಟ್ಟಲೆ ನೀರನ್ನು ಉಪಯೋಗಿಸಿ ತಿಕ್ಕಿ ತಿಕ್ಕಿ ತೊಳೆಯುವುದು ಬೇರೆ. ಇವೆಲ್ಲ ಬಿಡಿ, ಮನೆಗೆ ನೆಂಟ್ರು ಬರ್ತಾರೆಂದಾಗ ಒಂದಷ್ಟು ಹೆಚ್ಚು ಮುತುವರ್ಜಿಯಿಂದ ಮನೆ ಕಿಲೀನು ಮಾಡಿ, ಶೋಕೇಸಿನಲ್ಲಿ ಧೂಳಿಡಿದು ಕೂತಿದ್ದ ಕಪ್ಪು ಸಾಸರುಗಳನ್ನೆಲ್ಲ ಹೊರಗೆ ತೆಗೆಯುವುದಿಲ್ಲವೇ! ಇದನ್ನೂ ಹಾಗೇ ಎಂದುಕೊಳ್ಳೋಣ. ಆದರೆ ಟ್ರಾಫಿಕ್ಕನ್ನು ನಿಯಂತ್ರಿಸಲು ಮತ್ತು ಮಾಲಿನ್ಯವನ್ನು ತಡೆಗಟ್ಟಲು ಬಸ್ಸುಗಳನ್ನು ಊರ ಹೊರಗೇ ನಿಲ್ಲಿಸಿದ್ದು ಯಾವ ಪುರುಷಾರ್ಥಕ್ಕೆ? ಈ ನಿರ್ಧಾರದಿಂದ ತೊಂದರೆಯಾಗಿದ್ಯಾರಿಗೆ?

ಮೊದಲು ಸರಕಾರಿ ಮತ್ತು ಖಾಸಗಿ ಬಸ್ಸುಗಳೆರಡನ್ನೂ ವಾರದ ಮಟ್ಟಿಗೆ ಊರ ಹೊರಗೆ ನಿಲ್ಲಿಸಿಬಿಡುವ ನಿರ್ಧಾರ ಮಾಡುತ್ತಾರೆ. ಒಂದಷ್ಟು ವಿರೋಧ ವ್ಯಕ್ತವಾದಾಗ ಖಾಸಗಿ ಬಸ್ಸುಗಳನ್ನು ಮಾತ್ರ ಮೂರು ದಿನದ ಮಟ್ಟಿಗೆ ಊರ ಹೊರಗೆ ನಿಲ್ಲಿಸುವ ನಿರ್ಧಾರ ಮಾಡುತ್ತಾರೆ. ಈ ಖಾಸಗಿ ಬಸ್ಸಿನ ಪ್ರಯಾಣಿಕರಾರು ಎಂದು ಗಮನಿಸಿದರೆ ತೊಂದರೆಗೊಳಗಾಗಿದ್ಯಾರು ಎಂದು ಅರಿವಾಗುತ್ತದೆ. ನಮ್ಮ ಕೆ.ಎಸ್.ಆರ್.ಟಿ.ಸಿ ಬಸ್ಸುಗಳು ಉಳಿದ ರಾಜ್ಯದ ಸರಕಾರಿ ಬಸ್ಸುಗಳಿಗೆ ಹೋಲಿಸಿದರೆ ಅತ್ಯುತ್ತಮ ಸೇವೆ ನೀಡುತ್ತಿರುವುದು ಹೌದಾದರೂ ದರ ಮಾತ್ರ ಆಕಾಶದಲ್ಲೇ ಇರುತ್ತದೆ. ಇವಕ್ಕೆ ಹೋಲಿಸಿದರೆ ಖಾಸಗಿ ಬಸ್ಸುಗಳಲ್ಲಿ ದರ ಅತ್ಯಂತ ಕಡಿಮೆ. ಜೊತೆಗೆ ಹೆದ್ದಾರಿಗಳಲ್ಲಿ ಸಿಗುವ ಚಿಕ್ಕಪುಟ್ಟ ಹಳ್ಳಿಗಳಲ್ಲೂ ನಿಲ್ಲಿಸಿ ಜನರ ಜೊತೆಗೆ ಕೋಳಿ ಪಿಳ್ಳೆ, ಕೃಷಿ ಉತ್ಪನ್ನವನ್ನೂ ಹತ್ತಿಸಿಕೊಂಡು ಬರುತ್ತವೆ. ಹಣ ಕಡಿಮೆಯಿರುವವರು, ಸರಕಾರೀ ಎಕ್ಸ್ ಪ್ರೆಸ್ ಬಸ್ಸುಗಳು ಕ್ಯಾರೇ ಎನ್ನದ ಹಳ್ಳಿಗಳ ಜನರು ಹತ್ತುವ ಖಾಸಗಿ ಬಸ್ಸುಗಳನ್ನು ತಡೆದು ನಿಲ್ಲಿಸಿಬಿಟ್ಟಿತು ಸರಕಾರ. ಮಾಲಿನ್ಯದ ಹೆಸರು, ಟ್ರಾಫಿಕ್ ಜಾಮಿನ ಹೆಸರಿನಲ್ಲಿ ಯಾವ ಕೆಲಸ ಮಾಡಿದರೂ ತುಂಬಾ ವಿರೋಧವೇನು ಬರುವುದಿಲ್ಲ ಎನ್ನುವುದವರಿಗೆ ಗೊತ್ತಿತ್ತಲ್ಲ. ಜೊತೆಗೆ ಈ ಬಸ್ಸುಗಳ ಪ್ರಯಾಣಿಕರು ಪತ್ರಿಕೆಗಳಿಗೆ ಬರೆದು, ಟಿವಿಯೊಳಗೆ ಕುಳಿತು, ಸಾಮಾಜಿಕ ಮಾಧ್ಯಮಗಳಲ್ಲಿ ಗುಲ್ಲೆಬ್ಬಿಸಿ ಸರಕಾರವನ್ನು ಮುಜುಗರಪಡಿಸುವುದಿಲ್ಲ ಎನ್ನುವುದರ ಅರಿವೂ ಅವರಿಗಿತ್ತಲ್ಲ. ಮೆಜೆಸ್ಟಿಕ್ಕಿನಿಂದ ಇಪ್ಪತ್ತು ಮೂವತ್ತು ಕಿಲೋಮೀಟರು ದೂರದಲ್ಲಿ ಎಲ್ಲಾ ಖಾಸಗಿ ಬಸ್ಸುಗಳನ್ನೂ ತಡೆದು ನಿಲ್ಲಿಸಿಯೇ ಬಿಟ್ಟರು. ‘ಬದಲಿ ವ್ಯವಸ್ಥೆ’ಯನ್ನು ಮಾಡಿದ್ದೇವೆ ಎಂಬ ಸಮಾಧಾನ ಬೇರೆ. ಮಾರನೇ ದಿನ ಬಹಳಷ್ಟು ಪತ್ರಿಕೆಗಳಲ್ಲಿ ಖಾಸಗಿ ಬಸ್ಸುಗಳು ನಗರ ಪ್ರವೇಶಿಸದ್ದಕ್ಕೆ ಟ್ರಾಫಿಕ್ ಜಾಮೇ ಇರಲಿಲ್ಲ ಕಣ್ರೀ ಅನ್ನುವ ವರದಿಗಳು ಬೇರೆ. ಟ್ರಾಫಿಕ್ಕು ತಡೆಯುವುದೇ ಸರಕಾರದ ಉದ್ದೇಶವಾಗಿದ್ದರೆ, ಮಾಲಿನ್ಯ ನಿಯಂತ್ರಿಸುವುದೇ ಅದರ ಗುರಿಯಾಗಿದ್ದರೆ ಕಾರುಗಳ್ಯಾವೂ ರಸ್ತೆಗಿಳಿಯಕೂಡದು, ಎಲ್ಲರೂ ಬಸ್ಸಿನಲ್ಲೇ ಪಯಣಿಸಿ, ಅದಕ್ಕಾಗಿ ‘ಬದಲಿ ವ್ಯವಸ್ಥೆಯನ್ನು’ ಮಾಡಿದ್ದೇವೆ ಎಂದು ನಿರ್ಧಾರ ತೆಗೆದುಕೊಳ್ಳಬಹುದಿತ್ತಲ್ಲ? ಅರವತ್ತು ಕಾರುಗಳಲ್ಲಿ ಅರವತ್ತರಿಂದ ನೂರು ಜನರು ಪಯಣಿಸುವುದು ಟ್ರಾಫಿಕ್ಕು ಹೆಚ್ಚಿಸುತ್ತದೋ ಅಥವಾ ಅದೇ ಅರವತ್ತರಿಂದ ನೂರು ಜನರು ಎರಡು ಬಸ್ಸುಗಳಲ್ಲಿ ಹೋಗುವುದು ಟ್ರಾಫಿಕ್ಕು ಹೆಚ್ಚಿಸುತ್ತದೋ? ಹಾಗೆ ಮಾಡಿಬಿಟ್ಟರೆ ಸ್ಮಾರ್ಟ್ ಫೋನ್ ಧಾರಿಗಳೆಲ್ಲರೂ ಹ್ಯಾಷ್ ಟ್ಯಾಗು, ಟ್ವಿಟರ್ ಟ್ರೆಂಡು, ಆನ್ ಲೈನ್ ಪಿಟಿಷನ್ನು ಅಂತೆಲ್ಲ ಶುರುಮಾಡಿ ಸರಕಾರದ ಮರ್ಯಾದೆ ತೆಗೆದುಬಿಟ್ಟರೆ? ಹಾಗಾಗಿ ಅಂತಹ ಯಾವ ಅಪಾಯವನ್ನು ಒಡ್ಡದ ಖಾಸಗಿ ಬಸ್ಸಿನ ಪ್ರಯಾಣಿಕರ ಮೇಲೆ ಸರಕಾರದ ಕಣ್ಣು. ಇನ್ವೆಸ್ಟ್ ಕರ್ನಾಟಕ ಯಾರಿಗಾಗಿ ಎನ್ನುವುದು ಈ ಒಂದು ಸಣ್ಣ ನಿರ್ಧಾರದಿಂದಲೇ ತಿಳಿದುಬಿಡಬಹುದಲ್ಲವೇ? ಇನ್ನು ಮೂರು ಲಕ್ಷ ಕೋಟಿಗಳೂ ಹರಿದು ಬಂದು ಬಿಟ್ಟರೆ ಎಪ್ಪತ್ತೈದು ಸಾವಿರ ಎಕರೆಗಳಷ್ಟು ಭೂಮಿಯ ಜೊತೆಗೆ ಎಷ್ಟು ಲಕ್ಷ ಜನರ ಬದುಕು ಮೂರಾಬಟ್ಟೆಯಾದೀತೋ?

ಫೆಬ್ರ 10, 2016

ದೇವರ ನಾಡಲ್ಲಿ ಪ್ರತಿಯೊಬ್ಬರೂ ಕತೆ ಹೆಣೆಯುವವರೇ!

Dr Ashok K R
ದೃಶ್ಯ 1: ಪ್ರಮುಖ ಪಾತ್ರಧಾರಿ ಶರತ್ ಶೆಟ್ಟಿ ತನ್ನ ಸಹಪಾಠಿ ಶಬ್ಬೀರ್ ಮನೆಯ ಕಡೆಗೆ ಹೋಗುತ್ತಾನೆ. ಅಲ್ಲಿರುವ ಬಾವಿಯ ಬಳಿಗೆ ನೀರು ಸೇದಿಕೊಳ್ಳಲು ಬರುವ ಸವಿತಾಳ ಜೊತೆಗೆ ಬಳಿಯಿದ್ದ ಮುಸ್ಲಿಂ ಮಹಿಳೆ ಹರಟುತ್ತಾಳೆ. ಮುಂದೊಂದು ದೃಶ್ಯದಲ್ಲಿ ಸವಿತಾ ‘ಕೆಳ ಜಾತಿಯ’ ಹುಡುಗಿ ಎಂದು ನಿರ್ದೇಶಕರು ತೋರಿಸುತ್ತಾರಾದರೂ ಮುಸ್ಲಿಮರ ಜೊತೆ ಜೊತೆಗೆ ಬದುಕುತ್ತಿರುವವರು ನಮ್ಮ ದೇಶದ ದಲಿತರು ಎಂದು ನೀರ ಬಾವಿಯ ಮೂಲಕ ತೋರಿಸಿಕೊಡುತ್ತಾರೆ. ಚಿತ್ರದಲ್ಲಿ ಈ ಮಟ್ಟಿಗಿನ ವಾಸ್ತವಿಕ ಸೂಕ್ಷ್ಮತೆಗಳಿವೆ.

ದೃಶ್ಯ 2: ರಿಚರ್ಡ್ ಸಂಗಡಿಗರೊಂದಿಗೆ ವಿಶೇಷ ಆರ್ಥಿಕ ವಲಯದ (SEZ) ವಿರುದ್ಧ ಸಚಿವರು ಮತ್ತು ಉದ್ಯಮಪತಿಗಳ ನಡುವೆ ನಡೆಯುತ್ತಿದ್ದ ಮೀಟಿಂಗಿನ ಕಟ್ಟಡದ ವಿರುದ್ಧ ಪ್ರತಿಭಟಿಸುತ್ತಿರುತ್ತಾರೆ. ಸಭೆ ಮುಗಿದ ನಂತರ ಸಚಿವ ಸಿ.ಎಂ.ನಾಯ್ಕ ಹೊರಬಂದು ಪ್ರತಿಭಟನಕಾರರೊಂದಿಗೆ ಮಾತನಾಡುತ್ತಿರುವಾಗ ಉದ್ಯಮಪತಿ ಪದ್ಮನಾಭ ಶೆಟ್ಟಿ ಎಲ್ಲರ ಮುಂದೆಯೇ ತನ್ನ ಕಡೆಯ ಗೂಂಡಾಗಳನ್ನು ಕರೆದು ಹೋಗಿ ಗಲಾಟೆ ಮಾಡಿ ಎಂದು ಕಣ್ಸನ್ನೆ ಮಾಡುತ್ತಾನೆ. ಅವನ ಮುಂದೆ ತಲೆಯಾಡಿಸಿ ಹೋದ ಗೂಂಡಾಗಳು ಜನರ ನಡುವೆ ಸೇರಿ ಮಂತ್ರಿಗಳ ಕಡೆಗೆ ಚಪ್ಪಲಿ ಮೊಟ್ಟೆ ಎಸೆಯುತ್ತಾರೆ. ಎಲ್ಲರ ಮುಂದೆಯೇ ಪದ್ಮನಾಭ ಶೆಟ್ಟಿ ಇದನ್ನು ಮಾಡಿದರು ಪ್ರತಿಭಟನಕಾರರಲ್ಲಿ ಒಬ್ಬರಿಗೂ ಇದು ಶೆಟ್ಟಿ ಮಾಡಿದ ಕೆಲಸ ಎನ್ನುವ ಅನುಮಾನ ಬರುವುದಿಲ್ಲ! ಚಿತ್ರದಲ್ಲಿ ಅಲ್ಲೊಂದು ಇಲ್ಲೊಂದು ಎಂಬಂತೆ ಇಂತಹ ಅವಾಸ್ತವಿಕ ಅಸೂಕ್ಷ್ಮತೆಗಳೂ ಇವೆ!

ಇಡೀ ಚಿತ್ರ ನಡೆಯುವುದು ಒಂದೂವರೆ ದಿನ. ಪೂರಕವಾಗಿ ಒಂದಷ್ಟು ಫ್ಲ್ಯಾಷ್ ಬ್ಯಾಕುಗಳು, ಮತ್ತು ಕತೆ ಕಟ್ಟುವವರ ಕತೆಗಳು! ಒಟ್ಟಾರೆ ಒಂದು ಸರಳ ಕತೆಯನ್ನು ಉತ್ತಮವೆನ್ನಿಸುವಂತೆ ಮಾಡಿರುವುದು ಚಿತ್ರಕತೆ. ಚಿತ್ರಕತೆಯ ಶೈಲಿಯಲ್ಲಿ ಹೊಸತನವಿದೆ. ಬರುವ ಯಾವೊಂದು ಪಾತ್ರವೂ ಒಂದು ದೃಶ್ಯಕ್ಕೆ ಸೀಮಿತವಾಗದೆ ಮುಂದೊಂದು ದೃಶ್ಯದಲ್ಲಿ ಕತೆಯನ್ನು ಮುಂದಕ್ಕೋಡಿಸುವ ಚಾಲಕ ಶಕ್ತಿಯಾಗುತ್ತಾರೆ. ಸಚಿವ ಸಿ.ಎಂ.ನಾಯ್ಕರು ಕಾಲೇಜಿನ ಕಾರ್ಯಕ್ರಮಕ್ಕೆ ಬರಬೇಕಿದ್ದ ದಿನವೇ ಕ್ಲಾಸ್ ರೂಮಿನಲ್ಲಿ ಸ್ಪೋಟವಾಗುತ್ತದೆ. ಕೆಳ ಜಾತಿಯ ಪ್ರಾಧ್ಯಾಪಕ ಸಿದ್ದು ಗಾಯಗೊಳ್ಳುತ್ತಾನೆ. ಈ ಸ್ಪೋಟ ಸಿ.ಎಂ.ನಾಯ್ಕರ ವಿರುದ್ಧದ ಸಂಚಾ ಅಥವಾ ಕೋಮು ದಳ್ಳುರಿಗೆ ಕಾರಣವೇ ಬೇಕಿಲ್ಲದ ಊರೊಂದರಲ್ಲಿ ನಡೆದ ವಿದ್ವಂಸಕ ಕೃತ್ಯವಾ? ಎನ್ನುವುದರ ಸುತ್ತಲೇ ಕತೆ ಸಾಗುತ್ತದೆ. ಸ್ಪೋಟದ ಹಿಂದಿನ ಸಂಚನ್ನು ಹುಡುಕುವ ಹೊಣೆ ಎಸ್.ಪಿ ಪಾತ್ರದಲ್ಲಭಿನಯಿಸಿರುವ ಪ್ರಕಾಶ್ ರೈರವರದು. ಒಬ್ಬೊಬ್ಬ ಪ್ರಾಧ್ಯಾಪಕರೂ ಒಂದೊಂದು ಕತೆ ಹೇಳುತ್ತಾರೆ. ಕೆಲವರ ಪ್ರಕಾರ ಇದು ಕಮ್ಯುನಿಷ್ಟರ ಕೆಲಸ, ಹಲವರಿದನ್ನು ಮುಸ್ಲಿಂ ಮೂಲಭೂತವಾದಕ್ಕೆ ಅಂಟಿಸಿದರೆ ಮತ್ತೆ ಕೆಲವರು ಇದು ಹಿಂದೂ ಮೂಲಭೂತವಾದ ಸಿದ್ದು ಎಂಬ ಕೆಳಜಾತಿಯ ಪ್ರಾದ್ಯಾಪಕನನ್ನು ಮುಗಿಸಲು ಮಾಡಿದ ಯತ್ನ ಎಂದು ಖಡಾಖಂಡಿತವಾಗಿ ಹೇಳುತ್ತಾರೆ. ಆಗಿದ್ದರೆ ಬಾಂಬ್ ಸಿಡಿಸಿದ್ದು ಯಾರು? ಎನ್ನುವ ತನಿಖೆಯಲ್ಲಿ ತೆರೆದುಕೊಳ್ಳುವುದು ಶರತ್ ಶೆಟ್ಟಿ, ಮ್ಯಾಡಿ ಮತ್ತು ರಾಮಚಂದ್ರ ಭಟ್ಟರ ನಡುವಿನ ಗೆಳೆತನ.

ಶರತ್ ಶೆಟ್ಟಿ ಉದ್ಯಮಪತಿ ಪದ್ಮನಾಭ ಶೆಟ್ಟಿಯವರ ಮಗ, ಬಂಡವಾಳಶಾಹಿತನದ ಪ್ರತೀಕ; ಮ್ಯಾಡಿ ಅಲಿಯಾಸ್ ಮೈಖೆಲ್ ಮಡಗಾಸ್ಕರ್ ಕಮ್ಯುನಿಷ್ಟ್ ಹೋರಾಟಗಾರ ರಿಚರ್ಡ್ ಮಗ, ಇವರ ಹೋರಾಟವಿರುವುದು ಪದ್ಮನಾಭ ಶೆಟ್ಟಿಯವರ ವಿರುದ್ಧ!; ಇನ್ನು ರಾಮಚಂದ್ರ ಭಟ್ಟ ಆರೆಸ್ಸೆಸ್ಸಿನ ಕಟ್ಟಾಳು, ಹಿಂದೂ ಮೂಲಭೂತವಾದತನದ ಪ್ರತೀಕ! ಸೈದ್ಧಾಂತಿಕವಾಗಿ ಒಂದೊಂದು ದಿಕ್ಕಿನಲ್ಲಿರುವ ಈ ಮೂವರನ್ನೂ ಜೊತೆಯಾಗಿಸಿರುವುದು ಗೆಳೆತನವೆಂಬ ಬಂಧ! ಗೆಳೆತನಕ್ಕೂ ಸಿದ್ಧಾಂತಗಳಿಗೂ ಸಂಬಂಧವಿಲ್ಲ ಎನ್ನುವ ಅಂಶವನ್ನು ನಿರ್ದೇಶಕರು ಬಹಳ ಸ್ಪಷ್ಟವಾಗಿ ತೋರಿಸಿದ್ದಾರೆ. ಆದರೆ ಮುಂದೆ ಸಾಗುತ್ತಿದ್ದಂತೆ ಹೇಗೆ ಬಂಡವಾಳಶಾಹಿತನ ತನ್ನ ಅನುಕೂಲಕ್ಕೆ ಧರ್ಮ ಮತ್ತು ಹೋರಾಟಗಳನ್ನು ಬಳಸಿಕೊಳ್ಳುತ್ತದೆ ಎನ್ನುವುದನ್ನೂ ತೋರಿಸಿದ್ದಾರೆ. ಪದ್ಮನಾಭ ಶೆಟ್ಟರು ರಾಮಚಂದ್ರನ ಭಟ್ಟನ ಗುರು ಅತ್ರಾಡಿ ಗೋವಿಂದನ ಸಿದ್ಧಾಂತಗಳ ಬಗ್ಗೆ ಚೂರೂ ಗೌರವ ಕೊಡದಿದ್ದರೂ ಹಣ ಸಹಾಯ ಮಾಡುತ್ತಾನೆ. ತನ್ನನುಕೂಲಕ್ಕೆ ರಾಜಕಾರಣಿಗಳನ್ನು ಉಪಯೋಗಿಸಿಕೊಳ್ಳುತ್ತಾನೆ. ಗೆಳೆತನದ ಬಂಧವಿದ್ದರೂ ಚಿತ್ರ ಸಾಗಿದಂತೆ ಶರತ್ ಶೆಟ್ಟಿ ತನ್ನನುಕೂಲಕ್ಕೆ ರಾಮಚಂದ್ರ ಭಟ್ಟ ಮತ್ತು ಮ್ಯಾಡಿಯನ್ನು ಉಪಯೋಗಿಸಿಕೊಳ್ಳುತ್ತಾನೆ. ಚಿತ್ರದ ಓಘದಲ್ಲಿ ಸವಿತಾಳೊಡನೆ ಪ್ರೀತಿಯಲ್ಲಿ ಬಿದ್ದ ಶರತ್ ಶೆಟ್ಟಿ ಆ ಪ್ರೀತಿ ಸಫಲವಾಗಲು ತನ್ನ ಗೆಳೆಯರಿಂದ ನೆರವು ಪಡೆದುಕೊಳ್ಳುತ್ತಿದ್ದಾನೆ ಎಂದಷ್ಟೇ ಅಂದುಕೊಂಡರೂ ನಡೆದುಬಿಡುತ್ತೆ. ಆದರೆ ಪ್ರತಿಯೊಬ್ಬನಿಗೂ ಒಂದು ಸೈದ್ಧಾಂತಿಕ ಹಿನ್ನೆಲೆಯಿರುವ ಕಾರಣ ಅರ್ಥವ್ಯಾಪ್ತಿಯನ್ನು ಕೊಂಚ ಹಿಗ್ಗಿಸಿಕೊಂಡರೆ ಒಳ್ಳೆಯದೇನೋ? ಪ್ರಾರಂಭದಲ್ಲಿ ವಿರುದ್ಧ ದಿಕ್ಕಿನ ರಾಮಚಂದ್ರ ಭಟ್ಟ (ಹಿಂದೂ ಮೂಲಭೂತವಾದ) ಮತ್ತು ಮ್ಯಾಡಿಯನ್ನು (ಕಮ್ಯುನಿಷ್ಟ್) ಜೊತೆಗೂಡಿಸುವುದು ಶರತ್ ಶೆಟ್ಟಿ (ಬಂಡವಾಳಶಾಹಿ). ಕೊನೆಗೆ ಎಲ್ಲವನ್ನೂ ಛಿದ್ರಛಿದ್ರವಾಗಿಸುವುದೂ ಕೂಡ ಅದೇ ಬಂಡವಾಳಶಾಹಿತನ. ತುಂಬ ಗೆಳೆಯನಲ್ಲದ ಆದರೆ ಸಹಪಾಠಿಯಾದ ಶಬ್ಬೀರ್ ಮತ್ತವನ ತಂದೆ ಕೂಡ ಶರತ್ ಶೆಟ್ಟಿಯ ಕಾರಣಕ್ಕೆ ಸಿಕ್ಕಿಬೀಳುತ್ತಾರೆ. ಒಂದು ಪಟಾಕಿ ಹೊಡೆದ್ರೂ ನಮ್ಮೋರನ್ನೇ ಹಿಡಿದುಕೊಳ್ತಾರೆ ಎಂದು ಟೀ ಅಂಗಡಿಯ ಸಾಬಿ ಸಹಜವಾಗಿ ಹೇಳಿಬಿಡುವುದು ಮುಸ್ಲಿಮರೊಳಗೆ ಸ್ಪೋಟದ ನಂತರದ ವಿಚಾರಣೆಗಳ ಕುರಿತು ಬೆಳೆದು ಬಿಟ್ಟಿರುವ ಜಡತೆಯ ಸಂಕೇತವಾ? ಟೀ ಅಂಗಡಿಯೊಳಗೆ, ಪಾನ್ ಶಾಪಿನೊಳಗೆ, ಕಾಲೇಜಿನ ಪ್ರಾದ್ಯಾಪಕ ಮಂಡ್ಯ ರಮೇಶ್, ಪ್ರಾದ್ಯಾಪಕಿ ಮಂಜು ಭಾಷಿಣಿ ತಮ್ಮನುಕೂಲಕ್ಕೆ ತಕ್ಕಂತಹ ಕತೆಗಳನ್ನು ಹೆಣೆಯುತ್ತಾರೆ. ಮತ್ತಾ ಕತೆಗೆ ಪೂರಕವಾದ ಸಾಕ್ಷಿಗಳನ್ನು ಸೃಷ್ಟಿಸಿಕೊಳ್ಳುತ್ತಾರೆ.

ಈ ಬಾಂಬ್ ಸ್ಪೋಟ, ಸೈದ್ಧಾಂತಿಕ ತಾಕಲಾಟಗಳನ್ನೆಲ್ಲ ಒಂದು ಕ್ಷಣ ಮರೆತು ನಿಂತರೆ ಒಂದು ನವಿರಾದ ಪ್ರೇಮ ಕತೆಯಿದೆ. ಪ್ರೀತಿ ಪ್ರೇಮವೆಂಬುದು ಕೂಡ ಪೌರುಷದ ಸಂಕೇತದಂತೆಯೇ ಹೆಚ್ಚೆಚ್ಚು ಚಿತ್ರಿತವಾಗುವಾಗ ದೊಡ್ಡ ತೆರೆಯಲ್ಲಿ ಹದಿಹರೆಯದ ನವಿರು ಪ್ರೀತಿಯ ಮುದ್ದು ದೃಶ್ಯಗಳನ್ನು ಕಣ್ತುಂಬಿಕೊಳ್ಳುವುದು ಖುಷಿ ಕೊಡುತ್ತದೆ. ಕೊನೆಗೀ ಪ್ರೀತಿಯೂ ಜಾತಿಯ ಬಲೆಗೆ ಸಿಕ್ಕಿಕೊಳ್ಳುತ್ತದೆ. ಶೆಟ್ಟಿ, ಭಟ್ಟ, ರಿಚರ್ಡ್, ನಾಯರ್, ಶಬ್ಬೀರ್ ಎಂದೆಲ್ಲ ಜಾತಿ ಮತ್ತು ಧರ್ಮದ ಐಡೆಂಟಿಟಿಯನ್ನು ಖಡಕ್ಕಾಗಿ ಗುರುತಿಸುವಂತೆ ಮಾಡುವ ನಿರ್ದೇಶಕರು (ಬಿ.ಸುರೇಶ್) ಸಿದ್ದು ಮತ್ತು ಸವಿತಾಳ ವಿಷಯಕ್ಕೆ ಬಂದಾಗ ಮಾತ್ರ ಕೆಳಜಾತಿ ಎಂದಷ್ಟೇ ಹೇಳಿ ಸುಮ್ಮನಾಗಿಬಿಡುತ್ತಾರೆ. ಅವರ ಜಾತಿಯ ಐಡೆಂಟಿಟಿ ತಿಳಿಯುವುದಿಲ್ಲ. ತುಂಬಾ ವಿಷಯಗಳನ್ನು ಎರಡು ಘಂಟೆಯಲ್ಲೇ ಹೇಳಿ ಮುಗಿಸುವುದು ಸಾಧ್ಯವಾ ಎಂಬ ಪ್ರಶ್ನೆಗೆ ಉತ್ತರವಾಗಿಯೂ ಈ ಚಿತ್ರವಿದೆ. ಕರಾವಳಿಯ ಕೋಮುವಾದದ ಮುಖಗಳ ಪರಿಚಯ, ಬಂಡವಾಳಶಾಹಿತನ ಹೇಗೆ ಪ್ರತಿಯೊಂದನ್ನೂ ನಿಯಂತ್ರಿಸಬಯಸುತ್ತಿದೆ ಎಂಬುದರ ಅರಿವಿದ್ದರೆ ಚಿತ್ರದ ಸೂಕ್ಷ್ಮಗಳು ಹೆಚ್ಚು ಸ್ಪಷ್ಟವಾಗಿ ಅರ್ಥವಾಗುತ್ತವೆ. ಈ ಸೂಕ್ಷ್ಮಗಳ ಗೊಡವೆ ಮರೆತರೂ ಚಿತ್ರವನ್ನು ಒಮ್ಮೆ ನೋಡಲಡ್ಡಿಯೇನಿಲ್ಲ. 

ಮರೆತಿದ್ದೆ, ಚಿತ್ರದಲ್ಲಿನ ಅನೇಕ ಘಟನೆಗಳಿಗೆ ಸಾಕ್ಷಿಯಾಗಿ ಗಾಂಧಿಯ ಮೂಕ ಪ್ರತಿಮೆ ಮತ್ತು ನವಿಲುಗರಿ ಸಿಕ್ಕಿಸಿಕೊಂಡು ಕೆಟ್ಟು ಹೋದ ಟ್ಯೂಬ್ ಲೈಟಿನಲ್ಲಿ ಕೊಳಲು ನುಡಿಸುವ ಹುಚ್ಚನ ಪಾತ್ರಕ್ಕೂ ಉಳಿದವರಿಗಿರುವಷ್ಟೇ ಮಹತ್ವವಿದೆ. ಬಿಗಿ ಚಿತ್ರಕತೆಗೆ ಪೂರಕವಾಗಿ ಛಾಯಾಗ್ರಹಣವಿದೆ. ದೇವರ ನಾಡಲ್ಲಿ ‘ಕಲಾತ್ಮಕ’ ಚಿತ್ರವೆಂಬ ಬ್ರ್ಯಾಂಡಿಗೆ ಸಿಕ್ಕಿ ಹಾಕಿಕೊಳ್ಳದಿರುವುದಕ್ಕೆ ಛಾಯಾಗ್ರಹಣದ ಪಾತ್ರ ಬಹಳವಿದೆ; ‘ಕಲಾತ್ಮಕ’ವೆಂಬ ಚಿತ್ರದಲ್ಲಿ ಅದೊಂದು ಅಘೋಷಿತ ನಿಯಮವೆಂಬಂತೆ ಕ್ಯಾಮೆರಾ ಚಲಿಸುವುದೇ ಇಲ್ಲ, ಚಲಿಸಿದರೂ ಭಯಂಕರ ನಿಧಾನ. ಕೆಲವೊಂದು ದೃಶ್ಯಕ್ಕೆ ನಿಧಾನಗತಿಯ ನಿಂತೇ ಹೋಗಿರುವ ಕ್ಯಾಮೆರಾ ಚೆಂದವಾದರೂ ಚಿತ್ರದ ತುಂಬ ಅಂತಹುದೇ ದೃಶ್ಯಗಳು ಅವಶ್ಯಕತೆಯಿಲ್ಲದಿದ್ದರೂ ಇದ್ದುಬಿಟ್ಟರೆ ನೋಡಲು ಬೇಸರವೇ. ಕರಾವಳಿಯ ಸುಂದರ ತಾಣಗಳನ್ನು ಛಾಯಾಗ್ರಹಕರು ಸೊಬಗಿನೊಂದಿಗೆ ಖುಷಿ ಮೂಡಿಸುವಂತೆ ಸೆರೆಹಿಡಿದಿದ್ದಾರೆ. ಹಾಡುಗಳಲ್ಲಿ ಸಾಹಿತ್ಯ ಚೆನ್ನಾಗಿದೆ, ಇದೇ ಮಾತನ್ನು ಸಂಗೀತದ ಬಗ್ಗೆ ಹೇಳುವಂತಿಲ್ಲ. ಹಾಡುಗಳು ನೆನಪಲ್ಲುಳಿಯದಂತೆ ಮಾಡಲು ಸಂಗೀತದ ಕೊಡುಗೆ ಜಾಸ್ತಿ. ಜೊತೆಗೆ ಇಂತಹ ಚಿತ್ರಗಳಲ್ಲಿ ಒಂದು ಮೂಡು ಸೃಷ್ಟಿಸಬೇಕಾದ ಅನಿವಾರ್ಯತೆ ಹಿನ್ನೆಲೆ ಸಂಗೀತಕ್ಕಿರುತ್ತದೆ. ಅಲ್ಲಲ್ಲಿ ಬಿಟ್ಟರೆ ಉಳಿದೆಡೆಯೆಲ್ಲ ಹಿನ್ನೆಲೆ ಸಂಗೀತ ಸಾಧಾರಣವೇ.

ಫೆಬ್ರ 7, 2016

ಸಾಹಿತ್ಯ ಪರಿಷತ್ತಿನ ಅದ್ಯಕ್ಷ ಚುನಾವಣಾ ಸ್ಪರ್ದಿಗಳಿಗೊಂದಿಷ್ಟು ಪ್ರಶ್ನೆಗಳು

ಕು.ಸ.ಮಧುಸೂದನ್
1.ಸಾಹಿತ್ಯ ಪರಿಷತ್ತಿನ ಚುನಾವಣೆಗೆ ನಿಂತಿರೊ ಸ್ಪರ್ದಿಗಳಿಗೆ ವೆಚ್ಚ ಮಾಡುವ ಹಣದ ಮಿತಿಯೇನಾದರು ಇದೆಯೇ?
2.ಹೋಗಲಿ ನಾಮಪತ್ರ ಹಾಕುವ ಮುಂಚೆ ರಾಜಕಾರಣಿಗಳಂತೆ ತಮ್ಮ ಸ್ಥಿರ-ಚರಾಸ್ತಿಗಳನ್ನು ಘೋಷಿಸಿಕೊಳ್ಳಬೇಕೆ?
3. ಗೆದ್ದಮೇಲೆ ಲೋಕಾಯುಕ್ತಕ್ಕೂ ಆಸ್ತಿ ವಿವರ ಸಲ್ಲಿಸಬೇಕೇ?
4.ಇವ್ಯಾವು ಇಲ್ಲವೆಂದಾದರೆ ತಾವುಗಳು ಈ ವಿಚಾರದಲ್ಲಿ ಯಾರಿಗೆ ಹೊಣೆಗಾರರಾಗಿರುತ್ತೀರಿ?
5.ಇನ್ನು ಮತದಾರರ ಸಂಖ್ಯೆ ಕನಿಷ್ಠ ಒಂದು ಲಕ್ಷವಿದ್ದರೆ, ನೀವು ಅವರಿಗೆ ಪತ್ರ ಬರೆಯಲೇ ಸುಮಾರು 5 ಲಕ್ಷ ರೂಪಾಯಿ ಬೇಕಾಗುತ್ತದೆ. ಅಷ್ಟು ದುಡ್ಡನ್ನು ಎಲ್ಲಿಂದ ತರುತ್ತೀರಿ?
6. ಪ್ರತಿ ತಾಲೂಕಿಗೂ ನಿಮ್ಮ ಕಾರಲ್ಲಿ ಬೇಟಿ ಕೊಡುವುದೇ ಆದಲ್ಲಿ ಕನಿಷ್ಠ 5 ಲಕ್ಷ ರೂಪಾಯಿ ಖರ್ಚಾಗುತ್ತದೆ. ಈ ದುಡ್ಡಿಗೇನು ಮಾಡುತ್ತೀರಿ?
7.ಹೋಗಲಿ ಚುನಾವಣೆ ಖರ್ಚಿಗೆಂದು ನೀವುಗಳೇನಾದರು ಪಾರ್ಟಿ ಫಂಡ್ ತರಾ ಹಣ ಸಂಗ್ರಹಿಸುತ್ತೀರಾ? ಹಾಗೆ ಸಂಗ್ರಹಿಸಿದರೆ ಕೊಟ್ಟವರ ಹೆಸರುಗಳನ್ನು ಸಾರ್ವಜನಿಕವಾಗಿ ಪ್ರಕಟಿಸುತ್ತೀರಾ?
8.ಯಾವುದಾದರು ರಾಜಕೀಯ ಪಕ್ಷಗಳ ಬೆಂಬಲ ನಿಮಗೆ ಇದೆಯಾ? ಇದ್ದರೆ ಯಾವ ಪಕ್ಷ ಯಾವ ಕಾರಣ ವಿವರಿಸುತ್ತೀರಾ?
9. ಇಷ್ಟೆಲ್ಲಾ ಖರ್ಚುಮಾಡಿ ಗೆದ್ದ ಮೇಲೆ ಕಳೆದುಕೊಂಡ ಹಣವನ್ನು ಮರಳಿ ಗಳಿಸಲು ಏನೆಲ್ಲಾ ಮಾಡುತ್ತೀರಿ
ಕೊನೆಯ ಪ್ರಶ್ನೆಗೆ ಕ್ಷಮೆಯಿರಲಿ: ಯಾಕೆಂದರೆ ನೀವು ಚುನಾವಣೆಗೆ ಖರ್ಚು ಮಾಡುತ್ತಿರುವು ಕಡಲೆಬೀಜಗಳಲ್ಲ ಲಕ್ಷಲಕ್ಷ ರೂಪಾಯಿಗಳು!
ಉತ್ತರ ಕೊಡಲೇ ಬೇಕೆಂಬ ಕಡ್ಡಾಯವೇನಿಲ್ಲ. ಇಂತಹ ಪ್ರಶ್ನೆಗಳನ್ನು ರಾಜಕಾರಣಿಗಳಿಗೆ ಕೇಳಿಕೇಳಿ ನಮಗೆ ಅಭ್ಯಾಸವಾಗಿ ಹೋಗಿದೆ........

ಫೆಬ್ರ 6, 2016

ಇದು ಜನಾಂಗೀಯ ನಿಂದನೆಯಲ್ಲದೆ ಮತ್ತೇನು?

ಡಾ. ಅಶೋಕ್. ಕೆ. ಆರ್
ಒಂದು ನಿರ್ದಿಷ್ಟ ಜಾತಿಯ ಹುಡುಗನೊಬ್ಬ ಮಾಡಿದ ಸಣ್ಣದೊಂದು ತಪ್ಪಿಗೆ ಆ ಹುಡುಗನಿಗೆ ಶಿಕ್ಷೆ ನೀಡುವುದಕ್ಕಷ್ಟೇ ತೃಪ್ತಿ ಪಡದೆ ಆ ಇಡೀ ಜಾತಿಯ ಜನರನ್ನು ಅಟ್ಟಾಡಿಸಿ ಹೊಡೆಯುವ ಹತ್ತಲವು ಪ್ರಕರಣಗಳು ಹಲವಾರು ನಡೆಯುತ್ತಲೇ ಇರುತ್ತವೆ. ಅದು ಜಾತಿ ತಾರತಮ್ಯದಿಂದ ನಡೆದ ಕೃತ್ಯವೆಂದು ಸಲೀಸಾಗಿ ಒಪ್ಪಿಬಿಡುತ್ತೇವೆ. ಬೆಂಗಳೂರಿನ ಪ್ರಕರಣದಲ್ಲಿ ಆಫ್ರಿಕಾ ಖಂಡದ ಕಪ್ಪು ಹುಡುಗನೊಬ್ಬ ಕುಡಿದ ಅಮಲಿನಲ್ಲಿ ಶಬಾನಾ ಎಂಬ ಮಹಿಳೆ ಮೇಲೆ ಕಾರು ಚಲಾಯಿಸಿ ಆಕೆಯ ಸಾವಿಗೆ ಕಾರಣವಾಗಿಬಿಡುತ್ತಾನೆ. ಕಾರು ಚಲಾಯಿಸಿದವನಿಗೆ ಹೊಡೆದು ಪೋಲೀಸರಿಗೆ ಕೊಟ್ಟಿದ್ದರೆ ಅದು ಆ ಕ್ಷಣದ ಕೋಪದ ಪರಿಣಾಮವಾಗುತ್ತಿತ್ತು. ಅದಾಗಿ ಅರ್ಧ ಮುಕ್ಕಾಲು ಘಂಟೆಯ ನಂತರ ಅದೇ ದಾರಿಯಲ್ಲಿ ಬಂದ ಮತ್ತೊಂದು ಕಾರಿನಲ್ಲಿದ್ದ, ಆ ಅಪಘಾತಕ್ಕೆ ಸಂಬಂಧವೇ ಇಲ್ಲದ ತಾಂಜೇನಿಯಾದ ಮಹಿಳೆಯೊಬ್ಬಳನ್ನು ಎಳೆದಾಡಿದ್ದಾರೆ, ಹೊಡೆದಿದ್ದಾರೆ (ಮೊದಮೊದಲು ನಗ್ನವಾಗಿಸಿ ಪೆರೇಡ್ ಮಾಡಿದ್ದಾರೆ ಎಂಬಂತಹ ವರದಿಗಳು ಬಂದವಾದರೂ ದೂರಿನಲ್ಲಿ ಆ ಮಹಿಳೆ ಹೊಡೆದು ಎಳೆದಾಡಿದ್ದಾರೆ ಎಂದಷ್ಟೇ ತಿಳಿಸಿದ್ದಾರೆ). ಘಟನೆಗೆ ಸಂಬಂಧವಿರದಿದ್ದರೂ ಆಕೆಯನ್ನು ಎಳೆದು ಹೊಡೆದದ್ದು ಆಕೆಯ ಮೈಬಣ್ಣದ ಕಾರಣಕ್ಕೇ ಎಂದ ಮೇಲೆ ಇದು ಜನಾಂಗೀಯ ನಿಂದನೆ ಆಗದಿರಲು ಹೇಗೆ ಸಾಧ್ಯ? ಕೆಲವೊಮ್ಮೆ ಕಹಿ ಸತ್ಯಗಳನ್ನು ಒಪ್ಪಿಕೊಳ್ಳುವುದರಲ್ಲೇ ದೊಡ್ಡತನವಿದೆ.

ರಾಷ್ಟ್ರೀಯ ಹೆಸರಿನ ಆಂಗ್ಲ ಸ್ಥಳೀಯ ಮಾಧ್ಯಮಗಳು ಪ್ರಕರಣಕ್ಕೆ ಅಗತ್ಯಕ್ಕಿಂತ ಹೆಚ್ಚು ಪ್ರಚಾರ ಕೊಟ್ಟು ‘ಶೇಮ್ ಆನ್ ಬೆಂಗಳೂರು’ ಎಂದೆಲ್ಲ ಕೂಗೆಬ್ಬಿಸಿರುವುದನ್ನು ಖಂಡಿಸುವ ಭರದಲ್ಲಿ ವಿದೇಶಿ ವಿದ್ಯಾರ್ಥಿಗಳು ಡ್ರಗ್ಸ್ ಜಾಲದಲ್ಲಿ ಭಾಗಿಯಾಗಿದ್ದಾರೆ, ಕುಡಿದು ಮೂರೊತ್ತು ಗಲಾಟೆ ಮಾಡುತ್ತಾರೆ ಅದನ್ನೆಲ್ಲ ಯಾಕೆ ಹೇಳುವುದಿಲ್ಲ ಎಂದು ವಾದಿಸುವುದು ಎಷ್ಟರ ಮಟ್ಟಿಗೆ ಸರಿ? ಹೌದು ಅವರು ಡ್ರಗ್ಸ್ ಜಾಲದಲ್ಲಿದ್ದಾರೆ, ಮನೆಯಿಂದ ದೂರವಿರುವ ಬಹಳಷ್ಟು ವಿದ್ಯಾರ್ಥಿಗಳು ಮಾಡುವಂತೆ ಅವರೂ ಮನಬಂದಂತೆ ಇರುತ್ತಾರೆ ಎನ್ನುವುದೆಲ್ಲವೂ ಸತ್ಯವೇ, ಆದರದನ್ನು ಈ ಹಲ್ಲೆಗೆ ಸಮರ್ಥನೆಯಂತೆ ಉಪಯೋಗಿಸಿಕೊಳ್ಳುವುದು ತಪ್ಪು. ಅವರು ಅಷ್ಟೆಲ್ಲ ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದರೆ ನಾವು ಮೊದಲು ಪ್ರಶ್ನಿಸಬೇಕಾದದ್ದು ನಮ್ಮದೇ ಪೋಲೀಸರ ನಿಷ್ಕ್ರಿಯತೆಯನ್ನು. ಯಾರೋ ಯಾವತ್ತೋ ಮಾಡಿದ ತಪ್ಪಿಗೆ ಮತ್ತೆಲ್ಲೋ ಮತ್ಯಾರನ್ನೋ ಅವರ ಬಣ್ಣದ ಕಾರಣಕ್ಕೆ, ಜನಾಂಗೀಯವಾಗಿ ಸಾಮ್ಯತೆ ಇರುವ ಕಾರಣಕ್ಕೆ ಹಿಡಿದು ಬಡಿದು ಬಿಡುವ ಪ್ರವೃತ್ತಿಯನ್ನು ಜನಾಂಗೀಯ ನಿಂದನೆಯೆಂದು ಒಪ್ಪಿಕೊಳ್ಳದೆ ಏನೇನೋ ಸಬೂಬುಗಳನ್ನು ಹೇಳಿಬಿಡುವುದು ನಮ್ಮೊಳಗಿರುವ ಜನಾಂಗೀಯ ಮೇಲ್ಮೆಯ ಸಂಕೇತವೇ ಹೊರತು ಮತ್ತೇನಲ್ಲ.

ತಾಂಜೇನಿಯಾದ ಮಹಿಳೆ ಪೋಲೀಸರಿಗೆ ಮೊದಲು ದೂರು ನೀಡಲು ಹೋದಾಗ ದೂರು ಸ್ವೀಕರಿಸಲೂ ಪೋಲೀಸರು ನಿರಾಕರಿಸಿದರೆಂಬ ಸುದ್ದಿ ಮತ್ತೆ ಪೋಲೀಸರ ನಿಷ್ಕ್ರಿಯತೆಯನ್ನು ಎತ್ತಿ ತೋರಿಸುತ್ತಿದೆ. ಶಬಾನಾಳ ಸಾವಿಗೆ ಕಾರಣವಾದವನನ್ನೂ ಬಂಧಿಸಿರುವ ಸುದ್ದಿ ವರದಿಯಾಗಿಲ್ಲ; ಮತ್ತಿಲ್ಲಿ ಪೋಲೀಸರ ನಿಷ್ಕ್ರಿಯತೆಯನ್ನೇ ನಾವು ಪ್ರಶ್ನಿಸಬೇಕು. ಘಟನೆಗೆ ಸಂಬಂಧಿಸಿದಂತೆ ತಡವಾಗಿಯಾದರೂ ಪೋಲೀಸರು ಒಂದಷ್ಟು ಸಕ್ರಿಯವಾಗಿ ಸಿಸಿಟಿವಿಯ ಆಧಾರದಲ್ಲಿ ಕೆಲವರ ಬಂಧನವಾಗಿದೆ. ಗೃಹ ಸಚಿವ ಪರಮೇಶ್ವರ್ ತಾಂಜೇನಿಯಾದ ಹುಡುಗಿಯನ್ನೂ ಭೇಟಿಯಾಗಿದ್ದಾರೆ, ಶಬಾನಾಳ ಮನೆಯವರನ್ನೂ ಭೇಟಿಯಾಗಿದ್ದಾರೆ. ಅವರ ಮಟ್ಟದಲ್ಲಿ ದೇಶದ ಮಾನ ಕಾಪಾಡಲೋ ವಿದೇಶಿ ವ್ಯವಹಾರಗಳ ಸಲುವಾಗೋ ಇದು ಜನಾಂಗೀಯ ನಿಂದನೆಯಲ್ಲ ಎಂದು ಹೇಳಿಕೊಳ್ಳುವುದು ಅನಿವಾರ್ಯವೇನೋ. ಆಂಗ್ಲ ಮಾಧ್ಯಮಗಳ ಅತ್ಯುತ್ಸಾಹವನ್ನು ವಿರೋಧಿಸುತ್ತಲೇ ಇದು ಜನಾಂಗೀಯ ನಿಂದನೆಯಲ್ಲ ಎಂದು ವಾದಿಸುವುದಕ್ಕೆ ಸಬೂಬುಗಳನ್ನು ಹುಡುಕುವುದನ್ನು ನಾವಾದರೂ ನಿಲ್ಲಿಸೋಣ. ತಪ್ಪಿಗೊಂದು ಕ್ಷಮೆ ಕೇಳುವುದರಲ್ಲಿ ತಪ್ಪಿದೆಯೇ?

ಫೆಬ್ರ 5, 2016

ಚಿತ್ರೋತ್ಸವ ಕರ್ನಾಟಕದ್ದಾಗಲಿ: ಅಭಿ ಹನಕೆರೆ.

ಪತ್ರಿಕಾ ಪ್ರಕಟಣೆ
ಗೆ,
1. ಮಾನ್ಯ ಮುಖ್ಯಮಂತ್ರಿಗಳು, ಕರ್ನಾಟಕ ಸರ್ಕಾರ.
2. ವಾರ್ತಾ ಸಚಿವರು, ಕರ್ನಾಟಕ ಸರ್ಕಾರ.
3. ಕಾರ್ಯದರ್ಶಿಗಳು, ವಾರ್ತಾ ಇಲಾಖೆ, ಕರ್ನಾಟಕ ಸರ್ಕಾರ.
4. ನಿರ್ದೇಶಕರು, ವಾರ್ತಾ ಇಲಾಖೆ, ಕರ್ನಾಟಕ ಸರ್ಕಾರ.
5. ಅಧ್ಯಕ್ಷರು, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ.
6. ಅಧ್ಯಕ್ಷರು, ಕರ್ನಾಟಕ ಚಲನಚಿತ್ರ ಅಕಾಡಮಿ.
ಮಾನ್ಯರೇ,

ಮೈಸೂರು ರಾಜ್ಯ ಅಂತ ಇದ್ದಿದ್ನ ಕರ್ನಾಟಕ ರಾಜ್ಯ ಅಂತ ಮಾಡಿರುವ ವಿಚಾರವನ್ನು ಮರೆತು ಬೆಂಗಳೂರು ರಾಜ್ಯ ಮಾಡಲು ಹೊರಟಂತಿದೆ, ಅಂತರರಾಷ್ಟ್ರೀಯ ಚಿತ್ರೋತ್ಸವದ ವಿಷಯದಲ್ಲಿ, ಇಡೀ ಕರ್ನಾಟಕಕ್ಕೆ ಸಂಬಂಧಪಟ್ಟ ಚಿತ್ರ್ಸೋತ್ಸವಕ್ಕೆ ಇಲ್ಲಿಯವರೆಗು, “ಬೆಂಗಳೂರು ಅಂತರ ರಾಷ್ಟ್ರೀಯ ಚಿತ್ರ್ಸೋತ್ಸವ” ಅಂತಲೇ ಆಚರಿಸಿಕೊಂಡು ಬಂದಿದ್ದೀರಿ, ಬೆಂಗಳೂರು ಕರ್ನಾಟಕಕ್ಕಿಂತ ದೊಡ್ಡದೇ? ಇದರ ಜೊತೆಗೆ ಬೆಂಗಳೂರಿನ ಹೆಸರಿನ ಉತ್ಸವವನ್ನು ಮೈಸೂರಿನಲ್ಲಿ ಆಯೋಜಿಸಿದ್ದೀರಿ! ಈ ಕ್ರಮ ಸರಿಯಿಲ್ಲ. ಆದ್ದರಿಂದ ಇನ್ನುಮುಂದೆ “ಬೆಂಗಳೂರು ಅಂತರರಾಷ್ಟ್ರೀಯ ಚಿತ್ರೋತ್ಸವ” ಎಂದು ಆಚರಿಸುವ ಕಾರ್ಯಕ್ರಮಕ್ಕೆ “ಕರ್ನಾಟಕ ಅಂತರರಾಷ್ಟ್ರೀಯ ಚಿತ್ರೋತ್ಸವ” ಎಂದು ಮರುನಾಮಕರಣ ಮಾಡಬೇಕೆಂದು ಒತ್ತಾಯಿಸುತ್ತಿದ್ದೇವೆ.

• ಚಿತ್ರೋತ್ಸವದಲ್ಲಿ ಪ್ರದರ್ಶನವಾಗುವ ಪ್ರತಿಚಿತ್ರವು ಬಹು ಮುಖ್ಯವಾಗಿರುವುದರಿಂದ ಒಂದು ಸಮಯಕ್ಕೆ ಒಂದೇ ಸಿನಿಮಾ ಪ್ರದರ್ಶನ ಮಾಡುವಂತಾಗಲೀ (ಹಲವು ಸ್ಕ್ರೀನ್ ಗಳಿದ್ದರೆ ಎಲ್ಲದರಲ್ಲೂ ಒಂದು ಸಮಯಕ್ಕೆ ಒಂದೇ ಸಿನಿಮಾ ಪ್ರದರ್ಶನವಿರಲಿ)

• ಕಲಾವಿದರು ಮತ್ತು ಜನ ಸಾಮಾನ್ಯರು ಒಟ್ಟುಗೂಡುವ ಇಂತ ಸುಸಂದರ್ಭವನ್ನು ಒಂದಕ್ಕಿಂತ ಹೆಚ್ಚು ಊರಿಗೆ ಭಾಗ ಮಾಡದೇ ಒಂದೇ ಊರಿನಲ್ಲಿ ನಡೆಸುವಂತಾಗಬೇಕು. 

• ಈ ಬಾರಿಯಂತೆ ಮುಂದೆಂದು ಮಾಲ್ ಗಳಲ್ಲಿ ಆಯೋಜಿಸಿ ಶಾಪಿಂಗ್ ಮಾಲ್ ಗಳು ಜನರಿಂದ ಹಣ ಸುಲಿಯುವ ಸಂಸ್ಕೃತಿಗೆ ಸಹಾಯ ಮಾಡಬೇಡಿ.

• ತಾಲ್ಲೂಕು-ಹೋಬಳಿ ಮಟ್ಟದಲ್ಲಿ ಸಿನಿಮಾ ಮಂದಿರಗಳ ಸ್ಥಿತಿ ಶೋಚನೀಯವಾಗಿ ಬಾಗಿಲು ಮುಚ್ಚುತ್ತಿರುವ ಸಂದರ್ಭದಲ್ಲಿ, ಅದನ್ನು ಉಳಿಸಿ ಬೆಳೆಸುವ ಜವಾಬ್ದಾರಿಯ ದೃಷ್ಟಿಯಿಂದ ತಾಲ್ಲೂಕು-ಹೋಬಳಿ ಮಟ್ಟದಲ್ಲಿ “ ಕರ್ನಾಟಕ ಅಂತರರಾಷ್ಟ್ರೀಯ ಚಿತ್ರೋತ್ಸವ” ನಡೆಯುವಂತಾಗಲೀ.

• ಮುಂದಿನ ವರ್ಷದಿಂದ ಬೆಂಗಳೂರು ಅಂತರರಾಷ್ಟ್ರೀಯ ಚಿತ್ರೋತ್ಸವಕ್ಕೆ, “ಕರ್ನಾಟಕ ಅಂತರರಾಷ್ಟ್ರೀಯ ಚಿತ್ರೋತ್ಸವ” ಎಂದು ಮರುನಾಮಕರಣ ಮಾಡಿ, ಪ್ರತಿ ವರ್ಷವೂ ಒಂದೊಂದು ಊರಿನಲ್ಲಿ “ಕರ್ನಾಟಕ ಸಾಹಿತ್ಯ ಸಮ್ಮೇಳನ”ದ ಮಾದರಿಯಲ್ಲಿ ಆಯೋಜಿಸಬೇಕೆಂದು ಈ ಮೂಲಕ ಒತ್ತಾಯಿಸುತ್ತಿದ್ದೇವೆ. 

• ಇಂತಹ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲೂ ಕೂಡ ಬೆಂಗಳೂರು ಹೆಸರನ್ನು ಪ್ರಾಮುಖ್ಯತೆ ಮಾಡಿ ವಿದೇಶದಿಂದ ಬೆಂಗಳೂರಿಗೆ ಮಾತ್ರ ಬಂಡವಾಳ ತರುವ ಹುನ್ನಾರ ಮಾಡಬೇಡಿ. ಮತ್ತು ಬೆಂಗಳೂರಿನ ಹೊರಗಿನ ಕರ್ನಾಟಕದವರಿಗೆ ಬೆಂಗಳೂರೇ ದೊಡ್ಡದ್ದು ಎನ್ನುವ ಮನಸ್ಥಿತಿಯನ್ನು ತರಬೇಡಿ.

• ಹಳ್ಳಿಗಳು, ಸಣ್ಣಪುಟ್ಟ ನಗರಗಳಲ್ಲಿ ಕರೆಂಟಿಲ್ಲದೇ, ರಸ್ತೆಗಳಿಲ್ಲದೇ, ಕುಡಿಯುವ ನೀರಿಲ್ಲದೇ, ಗಂಡುಮಕ್ಕಳಿಗೆ ಮದುವೆಯಾಗಲು ಹೆಣ್ಣು ಕೊಡದಂತಹ ಪರಿಸ್ಥಿತಿ ಯಲ್ಲಿ ವಾಸಿಸುತ್ತಿರುವ ನಮಗೆ ಚಿತ್ರೋತ್ಸವಗಳಾದರೂ ಕೊಡಿ.

• ಮಾಡೋದು ಕರ್ನಾಟಕದಲ್ಲಿ ಚಿತ್ರೋತ್ಸವ. ಆದರೆ ಮೊದಲಿನಿಂದ ಕೊನೆಯವರೆಗೂ ಎಲ್ಲಾ ಹಂತದಲ್ಲೂ ಇಂಗ್ಲೀಷನ್ನೇ ಬಳಸಿದ್ದೀರಿ, ಚಿತ್ರೋತ್ಸವದ ಹೆಸರು, ಗುರುತಿನ ಚೀಟಿ, ಸಿನಿಮೋತ್ಸವದ ಕೈಪಿಡಿ ಮುಂತಾದವುಗಳಲ್ಲಿ ಕೇವಲ ಆಂಗ್ಲ ಭಾಷೆಯನ್ನೇ ಬಳಸಿದ್ದೀರಿ, ಪ್ರತ್ಯೇಕ್ಷವಾಗಿ, ಬಲವಂತವಾಗಿ ಆಂಗ್ಲ ಭಾಷೆಯನ್ನು ಕನ್ನಡಿಗರ ಮೇಲೆ ಏರಿದ್ದೀರಿ. ಬೆಂಗಳೂರು ಕರ್ನಾಟಕದಲ್ಲಿದೆಯೋ ಅಥವಾ ಬ್ರಿಟನ್ ದೇಶದಲ್ಲಿದೆಯೋ! ಬ್ರಿಟಿಷರ ಗುಲಾಮಗಿರಿಯಿಂದ ಆಚೆ ಬಂದಿರುವವರನ್ನು ಚಿತ್ರೋತ್ಸವಕ್ಕೆ ಆಯೋಜಕರನ್ನಾಗಿ ಮಾಡಿ, ಕರ್ನಾಟಕದಲ್ಲಿ ವಾಸಿಸುವ ಪ್ರತಿಯೊಬ್ಬನಿಗೂ ಕನ್ನಡ ಭಾಷೆಯು ಅನಿವಾರ್ಯವಾಗುವಂತೆ ಮಾಡಲು ಒತ್ತಾಯಿಸುತ್ತಿದ್ದೇವೆ. 
ಇಂತಿ,
ಎಸ್.ಅಭಿಹನಕೆರೆ(9886756172)